ಶನಿವಾರ, ಜೂನ್ 1, 2013

ಕೊಳಗೇರಿಗಳೆಂಬ ಕೂಪಗಳು

ಜಗತ್ತಿನ  ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಅತಿವೇಗವಾಗಿ ಆರ್ಥಿಕವಾಗಿ ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದು. ಜಗತ್ತಿನ ಶ್ರೀಮಂತ ರಾಷ್ಟ್ರಗಳ ಗುಂಪಿಗೆ ಚೀನಾ ಮತ್ತು ಭಾರತ ರಾಷ್ಟ್ರಗಳು ಶೀಘ್ರದಲ್ಲಿ ಸೇರ್ಪಡೆಯಾಗುವದರಲ್ಲಿ ಯಾವುದೇ ಸಂಶಯವಿಲ್ಲ. ಇವೆಲ್ಲವೂ ಭಾರತದ ಅಭಿವೃದ್ಧಿ ಕುರಿತಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹರಿದಾಡುತ್ತಿರುವ  ಮಾತುಗಳು. ಇದರಲ್ಲಿ ಅರ್ಧದಷ್ಟು ಮಾತ್ರ ಸತ್ಯ. ಉಳಿದರ್ಧ ಹಸಿ ಸುಳ್ಳು. ಈ ಹಸಿ ಸುಳ್ಳುಗಳೆಂಬ ಕಠೋರ ವಾಸ್ತವ ಸತ್ಯವವನ್ನು ಜಗತ್ತಿಗೆ ಎತ್ತಿ ತೋರಿಸುವ ಶಕ್ತಿ ಅಥವಾ ಹೃದಯ ಭಾರತದ ಯಾವ ಆಡಳಿತಗಾರನಿಗೂ ಇಲ್ಲ. ಏಕೆಂದರೆ, ಭ್ರಮೆಗಳನ್ನು ಸತ್ಯ ಮತ್ತು ವಾಸ್ತವ ಎಂದು ನಂಬಿಸುವ ಈ ಕಾಲದಲ್ಲಿ ಯಾರೂ ವಾಸ್ತವವನ್ನು ನಂಬಲಾರರು. ತಮ್ಮ ಬದುಕಿನಲ್ಲಿ ಎಂದೂ ತಮ್ಮ ಬೆನ್ನ ಹಿಂದಿನ ಕೊಳಕನ್ನು ನೋಡಲಾಗದ ಈ ಜನ ವಾಸ್ತವ ಕುರಿತು ಎಂದೂ ಚಿಂತಿಸಲಾರರು.
ಈ ನೆಲದ ನಿಜವಾದ ಬವಣೆಗಳ ಕುರಿತು ನಿಜವಾದ ಕಾಳಜಿ ಇದ್ದರೆ, ಭಾರತದ ಕೊಳಚೆಗೇರಿಗಳಲ್ಲಿ ವಾಸಿಸುತ್ತಿರುವ ಸುಮಾರು 37 ಕೋಟಿ, 70 ಲಕ್ಷ ಜನರ ಬದುಕು ಇಂತಹ ಧಾರುಣ ಸ್ಥಿತಿಗೆ ತಲುಪುತ್ತಿರಲಿಲ್ಲ.( ನಗರದ ಅಕ್ರಮ ಬಡಾವಣೆಗಳು ಸೇರಿ) ಹಿಂದೆ ನಮ್ಮನ್ನಾಳಿದ  ಈಸ್ಟ್ ಇಂಡಿಯಾ ಕಂಪನಿಗೂ, ಈಗಿನ  ಸರ್ಕಾರಗಳಿಗೂ ಅಂತಹ ಹೇಳಿಕೊಳ್ಳುವ ವೆತ್ಯಾಸವೇನೂ ಕಾಣುವುದಿಲ್ಲ.  ಬ್ರಿಟೀಷರನ್ನು ಬಿಳಿ ಸಾಹೇಬರೆಂದು ನಾವು  ಕರೆದಿದ್ದೆವು. ಈಗಿನವರನ್ನು ಕಂದು ಸಾಹೇಬರೆಂದು ಕರೆಯುತ್ತಿದ್ದೇವೆ  ಅಷ್ಟೇ.  ದೇಶದ ಸರಿಸುಮಾರು 30 ಮುಖ್ಯಮಂತ್ರಿಗಳು, 632 ಜಿಲ್ಲಾ ನ್ಯಾಯಾಧೀಶರು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಹಾಗೂ 542 ಸಂಸದರನ್ನು (ರಾಜ್ಯ ಸಭಾ ಸದಸ್ಯರು ಸೇರಿ) ಬಿಳಿಯಾನೆಗಳಂತೆ ಸಾಕುತ್ತಿರುವ ಭಾರತದ ಜನತೆಗೆ ಪ್ರಜ್ಙೆ ಅಥವಾ ಬುದ್ಧಿ ಎಂಬುದು ಈ  ಶತಮಾನದಲ್ಲಿಯಾದರೂ ಬರಬಹುದೆಂಬ ನಂಬಿಕೆಯಿಲ್ಲ. ಹಾಗೇ ನೋಡಿದರೆ, ಜಗತ್ತಿನ ಅತಿ ಶ್ರೇಷ್ಟ ಅರ್ಥಶಾಸ್ತ್ರಜ್ಙರಲ್ಲಿ ಒಬ್ಬರಾಗಿರುವ ಡಾ. ಮನಮೋಹನ್ ಸಿಂಗ್ ಮತ್ತು ಅವರ ಆರ್ಥಿಕ ಚಿಂತನೆಯ ಕೂಸುಗಳಲ್ಲಿ ಒಬ್ಬರಾದ ಮೊಂಟೆಕ್ ಸಿಂಗ್ ಕೂಡ ಸಧ್ಯದ ಸ್ಥಿತಿಯಲ್ಲಿ ಈ ದೇಶಕ್ಕೆ, ಮತ್ತು ನೆಲಕ್ಕೆ ಭಾರವಾದ ಜೀವಿಗಳು. ದೆಹಲಿ ನಗರದಲ್ಲಿ 200 ಎಂ.ಎಲ್ ನೀರಿನ ಭಾಟಲಿಗೆ  5 ರೂಪಾಯಿ ತೆರಬೇಕಾದ ಸ್ಥಿತಿ ಮತ್ತು ಅದೇ ದೆಹಲಿಯ ರಸ್ತೆಯ ಬದಿಯ ತಳ್ಳುವ ಗಾಡಿಗಳಲ್ಲಿ ಒಂದು ತರಕಾರಿ ಸಾಲಾಡ್ ಒಳಗೊಂಡಿರುವ ಬನ್ ಗೆ (ಬ್ರೆಡ್ಡು) 25 ರೂಪಾಯಿ ಇರುವಾಗ, ನಗರದಲ್ಲಿ ವಾಸಿಸುವ ವ್ಯಕ್ತಿ ದಿನವೊಂದಕ್ಕೆ 32 ರೂಪಾಯಿ ಸಂಪಾದಿಸಿದರೆ ಸಾಕು,  ಅವರು ಬಡವರಲ್ಲ ಎಂದು ವ್ಯಾಖ್ಯಾನಿಸುವ ಇವರನ್ನು ಹೊಟ್ಟೆಗೆ ಏನು ತಿನ್ನುತ್ತೀರಿ? ಎಂದು ಕೇಳಬೇಕಾಗಿದೆ. ತಮ್ಮ ಕಾಲ ಬಳಿಯ ಕಸವನ್ನು ಗುರುತಿಸಲಾಗದ ಇಂತಹವರಿಂದ ಭಾರತವೇ ಕೊಳಚೆಗುಂಡಿಯಾಗಿದೆ. ಇವರೆನ್ನೆಲ್ಲಾ ಒಮ್ಮೆ ತಮ್ಮ ಹವಾನಿಯಂತ್ರಣದ ಮನೆ ಬಿಟ್ಟು ಒಂದು ದಿನ ನಗರದ ಕೊಳಚೆಗೇರಿಗಳಲ್ಲಿ ವಾಸಿಸಿ ಎಂದು ಧ್ವನಿ ಎತ್ತಿ ಹೇಳಬೇಕಾದ ಕಾಲ ಈಗ ಕೂಡಿ ಬಂದಿದೆ. ಭಾರತದ ಕೊಳಗೇರಿಗಳ ಕುರಿತು ಈ ಕೆಳಗೆ ನೀಡಿರುವ ಅಂಕಿ ಅಂಶ ನಾನು ಸೃಷ್ಟಿ ಮಾಡಿದ್ದಲ್ಲ. ಇದೇ ಭಾರತ ಸರ್ಕಾರದ ನಗರ ವಸತಿ ಯೋಜನೆ ಮತ್ತು ಬಡತನ ನಿವಾರಣೆಯ ಇಲಾಖೆ ಪ್ರಕಟಿಸಿರುವ ಅಂಕಿ ಅಂಶ.
ಜಗತ್ತಿನ ಭೂಮಂಡಲದ ವ್ಯಾಪ್ತಿಯ ಪ್ರದೇಶದಲ್ಲಿ ಕೇವಲ ಶೇಕಡ 2.4 ರಷ್ಟು ಭೂಮಿಯನ್ನು ಹೊಂದಿರುವ ಭಾರತ, ಜಗತ್ತಿನ ಜನಸಂಖ್ಯೆಯ ಶೇಕಡ 16 ರಷ್ಟು ಪಾಲನ್ನು ಹೊಂದಿದೆ. ಇಲ್ಲಿನ ಜನಸಂಖ್ಯೆ ಸುಮಾರು ನೂರಿಪ್ಪತ್ತು ಕೋಟಿ ಜನಸಂಖ್ಯೆಯಲ್ಲಿ ಶೇಕಡ 7 ರಷ್ಟು ಮಂದಿ ನಗರವಾಸಿಗಳಾಗಿದ್ದಾರೆ. ನಗರ ವಾಸಿಗಳ ಬದುಕು ನೆಮ್ಮದಿಯಿಂದ ಕೂಡಿದೆಯಾ? ಇಲ್ಲ. ನಗರಗಳೆಂದರೆ ಭಾರತದ ನೆಲದ ಮೇಲಿನ ನರಕ ಎಂದರೆ,ಅತಿಶಯೋಕ್ತಿಯಲ್ಲ. ವಿಶ್ವಸಂಸ್ಥೆ ವ್ಯಾಖ್ಯಾನಿಸುವ ಪ್ರಕಾರ 20 ಸಾವಿರ ಜನಸಂಖ್ಯೆ ಪ್ರದೇಶ ಪಟ್ಟಣವೆಂತಲೂ, ಒಂದು ಲಕ್ಷ ಕ್ಕಿಂತ ಮೇಲ್ಪಟ್ಟು ಜನತೆ ವಾಸಿಸುವ ಪ್ರದೇಶಗಳನ್ನು ನಗರವೆಂದು ಕರೆಯಲಾಗುತ್ತಿದೆ. ಭಾರತದ 4041 ನಗರಗಳಲ್ಲಿ (ಐದು ಮೆಟ್ರೊ ನಗರಗಳು ಸೇರಿ) ಸುಮಾರು ಒಂದು ಲಕ್ಷದ ಮೂರು ಸಾವಿರ ಕೊಳಚೆಗೇರಿಗಳಲ್ಲಿ ,ಮಹಾರಾಷ್ಟ್ರ ರಾಜ್ಯವೊಂದರಲ್ಲೇ 21 ಸಾವಿರ ಕೊಳಚೆಗೇರಿಗಳಿವೆ. ದೇಶದ ಐದು ರಾಜ್ಯಗಳಲ್ಲಿ ನಗರೀಕರಣ ತೀವ್ರ ಗತಿಯಲ್ಲಿ ವ್ಯಾಪಿಸುತ್ತಿದ್ದು, ತಮಿಳುನಾಡು, ಕರ್ನಾಟಕ, ಗುಜರಾತ್, ಪಂಜಾಬ್, ಮಹಾರಾಷ್ಟ್ರ ರಾಜ್ಯಗಳು ಮುಂಚೂಣಿಯಲ್ಲಿವೆ. ಕೈಗಾರಿಕೆ, ರಿಯಲ್ ಎಸ್ಟೇಟ್ ವ್ಯವಹಾರ ಮತ್ತು ಇತರೆ ಸೇವೆಗಳಿಂದಾಗಿ ಕಾರ್ಮಿಕರ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಜೊತೆಗೆ ನೈಸರ್ಗಿಕ ಸಂಪತ್ತಿನ ಲೂಟಿ ಕೂಡ ಮಿತಿ ಮೀರಿದೆ.( ಮರಳು, ಕಲ್ಲು, ಇಟ್ಟಿಗೆ, ನೀರು ಇತ್ಯಾದಿ)

1971 ರ ಜನಸಂಖ್ಯಾ ಗಣತಿಯ ಪ್ರಕಾರ ನಗರವಾಸಿಗಳ ಸಂಖ್ಯೆ ಭಾರತದ ಜನಸಂಖ್ಯೆ ಶೇಕಡ 20 ರಷ್ಟು ಇತ್ತು 2011ರ ಸಮೀಕ್ಷೆಯ ಪ್ರಕಾರ ಶೇಕಡ 28 ಕ್ಕೆ ಏರಿರುವ ನಗರವಾಸಿಗಳ ಪ್ರಮಾಣ 2025 ಕ್ಕೆ ಶೇಕಡ 50 ಕ್ಕೆ ಏರಲಿದೆ ಎಂದು ಅಂದಾಜಿಸಲಾಗಿದೆ. ನಗರ ವಾಸಿಗಳ ಜನಸಂಖೆಯಲ್ಲಿ ಪ್ರತಿ ಆರು ಮಂದಿಗೆ ಒಬ್ಬರು ಕೊಳೆಗೇರಿಗಳಲ್ಲಿ ವಾಸ ಮಾಡುತ್ತಿದ್ದಾರೆ. 2011 ರ ಸಮೀಕ್ಷಾ ವರದಿಯ ಪ್ರಕಾರ ಭಾರತದಲ್ಲಿ 1..37 ಕೋಟಿ ಮನೆಗಳಲ್ಲಿ ವಾಸಿಸುವ ಜನ ಕೊಳೆಗೇರಿಗಳಲ್ಲಿದ್ದಾರೆ. ಮುಂಬೈನಗರದ 1.10 ಕೋಟಿ ಜನರಲ್ಲಿ ಶೇಕಡ 55 ರಷ್ಟು ಮಂದಿ ಕೊಳಗೇರಿ ಮತ್ತು ಅಕ್ರಮ ಬಡಾವಣೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಅಕ್ರಮ ಬಡಾವಣೆಗಳನ್ನು ಹೊರತು ಪಡಿಸಿ, ಕೊಳಚಗೇರಿಗಳಲ್ಲಿ ವಾಸಿಸುವ ಜನರ ಸಂಖ್ಯೆ ಆಯಾ ನಗರಗಳ ಜನಸಂಖ್ಯೆಗೆ ಅನುಗುಣವಾಗಿ, ಮುಂಬೈನಲ್ಲಿ ಶೇ.41.3, ಕೊಲ್ಕತ್ತ ನಗರದಲ್ಲಿ ಶೆ.30, ಚೆನ್ನೈ ನಲ್ಲಿ ಶೇ.28, ಹೈದರಾಬಾದ್ ನಲ್ಲಿ ಶೇ.19 ಇದ್ದು ಬೆಂಗಳೂರಿನಲ್ಲಿ ಈ ಪ್ರಮಾಣ ಶೇ,9 ರಷ್ಟು ಮಾತ್ರ ಇದೆ. ದೇಶದ ಐದು ಮಹಾ ನಗರಗಳಲ್ಲಿ (Metro Citys) ಬೆಂಗಳೂರು ನಗರದ ಸ್ಥಿತಿ ಸಮಾಧಾನ ಪಡುವಂತಿದೆ. 2001 ರಲ್ಲಿ 4ಕೋಟಿ 30 ಲಕ್ಷ ಇದ್ದ ಕೊಳಗೇರಿ ನಿವಾಸಿಗಳ ಸಂಖ್ಯೆ 2011ಕ್ಕೆ 9ಕೋಟಿ 30 ಲಕ್ಷಕ್ಕೆ ಎರಿಕೆಯಾಗುತ್ತಿದ್ದು. ಪ್ರತಿವರ್ಷ ಗ್ರಾಮೀಣ ಭಾಗದಿಂದ ಒಂದೂವರೆ ಕೋಟಿ ಜನ ದೇಶದ 7.742 ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಜಮೆಯಾಗುತ್ತಿದ್ದಾರೆ ಎಂದು ಕೇಂದ್ರ ನಗರ ವಸತಿ ಇಲಾಖೆ ಖಾತೆಯ ಕಾರ್ಯದರ್ಶಿ ಅರುಣ್ ಮಿಶ್ರಾ ತಿಳಿಸಿದ್ದಾರೆ

ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಕರ್ಯಗಳು ಮತ್ತು ಕೃಷಿ ಹಾಗೂ ಕೈಗಾರಿಕೆಗಳ ಕುರಿತು ನಮ್ಮ ಸರ್ಕಾರಗಳು ತಾಳಿದ ನಿರ್ಲಕ್ಷ್ಯ ಮನೋಭಾವದಿಂದಾಗಿ ಹಳ್ಳಿಗಳು ಸ್ಮಶಾನ ಸದೃಶ್ಯ ರೂಪ ತಾಳಿವೆ. ಇದರಿಂದಾಗಿ ನಗರಗಳತ್ತ ವಲಸೆ ಪ್ರಮಾಣ ಹೆಚ್ಚುತ್ತಿದ್ದು ಎಲ್ಲೆಡೆ ಕೊಳಚೆಗೇರಿಗಳು ಅಡೆತಡೆಯಿಲ್ಲದೆ ಸೃಷ್ಟಿಯಾಗುತ್ತಿವೆ. ಮುಂಬೈ ನಂತಹ ಕೊಳಚೆಗೇರಿಗಳಲ್ಲಿ ಪ್ರತಿ ಎಂಟು ಸಾವಿರ ಮಂದಿಗೆ ಒಂದು ಶೌಚಾಲಯವಿದೆ  ಎಂದರೆ, ಪರಿಸ್ತತಿಯನ್ನು ನೀವೇ ಊಹಿಸಿ. ಇಲ್ಲಿನ ಶೇಕಡ 70 ರಷ್ಟು ಮಂದಿ ಬೀದಿ ಬದಿಯ ಕೊಳಾಯಿ ನೀರನ್ನು ಆಶ್ರಯಿಸಿದ್ದು, ತಮ್ಮ ಬೇಡಿಕೆಯ ಶೇಕಡ 40 ರಷ್ಟು ಮಾತ್ರ ನೀರನ್ನು ಪಡೆಯುತ್ತಿದ್ದಾರೆ. ಇನ್ನೂ ಬೀದಿ ದೀಪ, ಒಳ ಚರಂಡಿ, ಆರೋಗ್ಯ, ಶಿಕ್ಣಣ  ಇಂತಹ ಸ್ಥಳಗಳಲ್ಲಿ ಮರೀಚಿಕೆಯಾಗಿವೆ. ಇಂದು ದೇಶಾದ್ಯಂತ ನೂರಾರು ಸ್ವಯಂ ಸೇವಾ ಸಂಘಟನೆಗಳ ಲಕ್ಷಾಂತರ ಕಾರ್ಯಕರ್ತರ ಸೇವಾ ಮನೋಭಾವದಿಂದ ಕೊಳಚೆಗೇರಿಯ ಮಕ್ಕಳು ಅಕ್ಷರ ಲೋಕದ ಭಾಗಿಲನ್ನು ತಟ್ಟುವಂತಾಗಿದೆ.ಇದೊಂದು ಸಮಾಧಾನಕರ ಸಂಗತಿ.

ಕಳೆದ ಇಪ್ಪತ್ತು ವರ್ಷಗಳಿಂದಲೂ ಪ್ರತಿವರ್ಷ ಕೊಳಚೆಗೇರಿಗಳನ್ನು ಹೊಕ್ಕು ಬರುವುದನ್ನು ವ್ಯಸನ ಮಾಡಿಕೊಂಡಿರುವ ನನಗೆ,  ಪ್ರತಿ ಬೇಟಿಯ ಸಂದರ್ಭದಲ್ಲಿ ಅಲ್ಲಿನ ವಯಸ್ಕ ಹೆಣ್ಣು ಮಕ್ಕಳನ್ನು ನೋಡಿದಾಗ ಎದೆಗೆ  ಚೂರಿ ಇಕ್ಕಿಸಿಕೊಂಡ ಅನುಭವವಾಗುತ್ತದೆ. ಕೇವಲ ಎಂಟು ಅಡಿ ಅಗಲ ಮತ್ತು ಹತ್ತು ಅಡಿ ಉದ್ದ ಪ್ಲಾಸ್ಷಿಕ್ ಮನೆಗಳಲ್ಲಿ ತಂದೆ, ತಾಯಿಗಳ  ಜೊತೆ ವಾಸಿಸುವ ಆ ಮಕ್ಕಳಿಗೆ ಶೌಚಾಲಯ, ಮತ್ತು ಸ್ನಾನಕ್ಕೆ ಏಕಾಂತ ಎಂಬುದು ಇಲ್ಲವಾಗಿದೆ. ತಂದೆ ತಾಯಿಗಳು ದುಡಿಯಲು ಹೊರಗೆ ಹೋದ ಸಂದರ್ಭದಲ್ಲಿ ಕಾಮುಕರ ಅಟ್ಟಹಾಸಕ್ಕೆ ಬಲಿಯಾದ ಈ ಬಾಲೆಯರ ದುಖಃ ದುಮ್ಮಾನಗಳಿಗೆ ಈ ದೇಶದಲ್ಲಿ  ಲೆಕ್ಕವಿಟ್ಟವರಿಲ್ಲ. ಆ ಕುರಿತು ಯೋಚಿಸಲು ನಮಗೆ ಬಿಡುವಿಲ್ಲ. ಏಕೆಂದರೆ,  ಸುರಕ್ಷಿತ ವಲಯದಲ್ಲಿ ಬದುಕುವುದನ್ನು ರೂಢಿಗತ ಮಾಡಿಕೊಂಡಿರುವ ನಮಗೆ ನಮ್ಮದೇ ಆದ ಖಾಸಾಗಿ ಕ್ಷಣಗಳಿವೆ, ನಮ್ಮ ಮನೆಗಳಲ್ಲಿ ಬೆರಳ ತುದಿಗೆ ಜಗತ್ತನ್ನು ತಂದು ಕೂರಿಸುವ ತಂತ್ರಜ್ಙಾನಗಳಿವೆ, ಟಿ.ವಿ.ಸೀರಿಯಲ್ ಗಳಿವೆ, ರಿಯಾಲಿಟಿ ಷೋಗಳಿವೆ, ಕ್ರಿಕೇಟ್ ಮ್ಯಾಚುಗಳಿವೆ, ಮನೆಯಲ್ಲಿ ತುಂಬಿದ ಬಿಯರ್ ಮತ್ತು ವಿಸ್ಕಿ, ಸೋಡಾ  ಬಾಟಲುಗಳಿವೆ .ರೆಪ್ರಿಜಿಯೆಟರ್ ಪ್ರಿಡ್ಜ್ ಗಳಲ್ಲಿ ನಿನ್ನೆ ಹುರಿದ ಕೋಳಿ ಮಾಂಸದ ತುಂಡುಗಳಿವೆ. ಇಷ್ಟೇಲ್ಲಾ ಇದ್ದು  ನಾವು ನೆಮ್ಮದಿಯಿಂದ ಬದುಕುವುದಕ್ಕೆ ಇನ್ನೇನು ಬೇಕು?

ಬುಧವಾರ, ಮೇ 29, 2013

ಮಹಾನಗರಗಳೆಂಬ ನರಕಗಳು

ಇದು ಈ ದೇಶದ ಮಹಾನಗರಗಳ ಅವಸಾನದ ಕಥೆ ಮಾತ್ರವಲ್ಲ, ಜಗತ್ತಿನ ಎಲ್ಲಾ ಮಹಾ ನಗರಗಳ ಅವಸಾನದ ಕಥನವೂ ಹೌದು. ಜಗತ್ತಿನ ಅಭಿವೃದ್ಧಿಗೆ ನಗರೀಕರಣವೊಂದೇ ಮದ್ದು ಎಂಬ ಚಿಂತನೆಯ ಕಸವನ್ನು ಜಾಗತೀಕರಣದ ರೂವಾರಿಗಳು ನಮ್ಮ ತಲೆಗೆ ತುಂಬಿದ ಫಲವಾಗಿ ನಗರಗಳು ಇಂದು ನರಕಗಳಾಗಿವೆ.ಪಶ್ಚಿಮದ ಜಗತ್ತು ಮತ್ತು ಅಲ್ಲಿನ ಬಹುರಾಷ್ಟ್ರೀಯ ಕಂಪನಿಗಳು ರಾಶಿ, ರಾಶಿ, ಉತ್ಪಾದನೆ ಮಾಡಿ ಗುಡ್ಡೆಹಾಕುತ್ತಿರುವ ವಸ್ತುಗಳಿಗೆ ಹಾಗೂ ಆಹಾರೊತ್ಪನ್ನಗಳಿಗೆ ತೃತೀಯ ಜಗತ್ತಿನ ಅಭಿವೃದ್ಧಿಶೀಲ ರಾಷ್ಟ್ರಗಳು ಪ್ರಮುಖ ಮಾರುಕಟ್ಟೆಯಾಗಿವೆ. ಅವರ ಸರಕುಗಳು ಬಿಕರಿಯಾಗಬೇಕಾದರೆ,ವರ್ತಮಾನದ  ಜಗತ್ತಿನಲ್ಲಿ ನಗರಗಳು ಸೃಷ್ಟಿಯಾಗಬೇಕು ಮತ್ತು ನಗರಗಳ ಮೂಲಕವಾಗಿ ಗ್ರಾಹಕ ಮಿಕಗಳು ಸಹ ಬೆಳೆಯುತ್ತಿರಬೇಕು. ಏಕೆಂದರೆ, ಹಳ್ಳಿಗಳಲ್ಲಿ ವಾಸಿಸುತ್ತಾ, ಚಡ್ಡಿ ತೊಟ್ಟು ಮುದ್ದೆ ತಿನ್ನುವ ಅಥವಾ ಪಂಚೆ, ಕಚ್ಚೆತೊಟ್ಟು ರೊಟ್ಟಿ ತಿನ್ನುವ ವ್ಯಕ್ತಿಗಳು ಅವರ ಪಾಲಿಗೆ ಗ್ರಾಹಕಲಾಗರಾರು. ಅವರಿಗೆ ಬರ್ಮುಡ ಚಡ್ಡಿ, ಟೀ ಶರ್ಟ್, ಬನಿಯನ್ ತೊಟ್ಟು ಬೆಳಿಗ್ಗೆ ತಿಂಡಿಗೆ ನ್ಯೂಡಲ್ಸ್ ಅಥವಾ ಕಾರ್ನ್ ಪ್ಲೆಕ್ಸ್ ತಿಂದು, ಮಧ್ಯಾಹ್ನ ಊಟಕ್ಕೆ ಪಿಜ್ಜಾ ಬರ್ಗರ್ ತಿಂದು, ಕೊಕಾಕೋಲಾ, ಪೆಪ್ಸಿ ಕುಡಿಯುವ, ರಾತ್ರಿ ಕೆಂಟಕಿ ಚಿಕನ್ ತಿಂದು ವಿದೇಶಿ ವಿಸ್ಕಿ ಹೀರುವ ಗಿರಾಕಿಗಳು ಬೇಕು. ಇದಲ್ಲದೆ, ಪ್ರತಿ ಆರುತಿಂಗಳಿಗೆ ಮೊಬೈಲ್, ಪ್ರತಿವರ್ಷಕ್ಕೆ ಕಾರು, ಬೈಕ್, ಲ್ಯಾಪ್ ಟಾಪ್ ಬದಲಿಸುತ್ತಿರುವ ಗ್ರಾಹಕರು ಬೇಕು. ಇಂತಹವರು ಸೃಷ್ಟಿಯಾಗುವುದು ನಗರಗಳಲ್ಲಿ ಮಾತ್ರ. ಹಾಗಾಗಿ ಜಗತ್ತಿನ ಗ್ರಾಮೀಣ ಜನತೆ ಜಾಗತೀಕರಣದ ವಕ್ತಾರರ ಪಾಲಿಗೆ ಅನುತ್ಪಾದಕ ಜೀವಿಗಳು. ( ಇತ್ತೀಚೆಗೆ ಗ್ರಾಮಗಳಿಗೂ ಸಹ ಎಲ್ಲಾ ಸಂಸ್ಕೃತಿ  ಹರಡುತ್ತಿದೆ.ಪ್ರತಿ ಹಳ್ಳಿಯ ಅಂಗಡಿಗಳಲ್ಲಿ, ಉಪ್ಪು ಬೇಳೆ ಇಲ್ಲದಿದ್ದರೂ, ಕೊಕಾಕೋಲಾ ಮತ್ತು ಮೊಬೈಲ್ ಗಳು ದೊರೆಯುತ್ತವೆ)
ನಾವು ಆಧುನಿಕ ಜಗತ್ತಿನ, ವಿಶೇಷವಾಗಿ ಪಾಶ್ಚಿಮಾತ್ಯ ಜಗತ್ತಿನ ಹುನ್ನಾರಗಳನ್ನು ಅರ್ಥಮಾಡಿಕೊಳ್ಳದಿದ್ದರೆ, ನಮ್ಮ ಭವಿಷ್ಯ ಖಂಡಿತಾ ಉಜ್ವಲವಾಗಿರುವುದಿಲ್ಲ ಎಂಬುದನ್ನು ಮೊದಲು ಮನಗಾಣಬೇಕಾಗುತ್ತದೆ.
ಭಾರತವನ್ನು ಸರಿ ಸುಮಾರು ಎರಡು ಶತಮಾನಗಳ ಕಾಲ ಆಳಿದ  ಬ್ರಿಟೀಷರು, ಪೋರ್ಚುಗೀಸರು, ಡಚ್ಚರ ಕುರಿತಂತ ನಮ್ಮ ಅಸಮಾಧಾನಗಳು ಏನೇ ಇರಲಿ, ಕಟ್ಟಡ ನಿರ್ಮಾಣ, ನಗರಗಳ ನಿರ್ಮಾಣ ಕುರಿತಂತೆ ಅವರಿಗೆ ಇದ್ದ ಅಭಿರುಚಿಗೆ ನಾವು ತಲೆ ಬಾಗಲೇಬೇಕು. ಪೋರ್ಚುಗೀಸರು ನಿರ್ಮಿಸಿದ ಪಾಂಡಿಚೇರಿ, ಡಚ್ಚರು ನಿರ್ಮಿಸಿದ ನಾಗಪಟ್ಟಣಂ  ಹಾಗೂ ಬ್ರಿಟೀಷರು ರೂಪಿಸಿದ ಕೊಲ್ಕತ್ತ, ಮುಂಬೈ, ದೆಹಲಿ, ಹಾಗೂ ಬೆಂಗಳೂರು ( ಕಂಟೊನ್ಮೆಂಟ್) ಚೆನ್ನೈ ನಗರದ ಕೆಲವು ಪ್ರದೇಶಗಳು ಇವೊತ್ತಿಗೂ ನಮ್ಮೆದುರು ಸಾಕ್ಷಿಯಾಗಿವೆ.
ಚೆನ್ನೈ ನಗರದ ಮದ್ರಾಸ್ ಹೈಕೋರ್ಟ್ ಕಟ್ಟಡ, ಬೆಂಗಳೂರಿನ ಸೆಂಟ್ರಿಲ್ ಕಾಲೇಜ್ ಮತ್ತು ಹೈಕೋರ್ಟ್ ಕಟ್ಟಡಗಳು, ಕೊಲ್ಕತ್ತನಗರದ ರೈಟರ್ಸ್ ಬಿಲ್ಟಿಂಗ್, ಮುಂಬೈನ ವಿಕ್ಟೋರಿಯ ಟರ್ಮಿನಲ್ ರೈಲ್ವೆ ನಿಲ್ದಾಣ, ದೆಹಲಿಯ ಕನಾಟ್ ಪ್ಲೆಸ್ ಮತ್ತು ಲೋಧಿ ಮಾರ್ಗದಲ್ಲಿರುವ ಕಟ್ಟಡಗಳು ಹಾಗೂ ರಾಷ್ಟ್ರಪತಿ ಭವನದ ಕಟ್ಟಡ ಮತ್ತು ಅವುಗಳ ವಾಸ್ತು ಶಿಲ್ಪ ಇವೊತ್ತಿಗೂ ನಮಗೆ ಮಾದರಿಯಾಗಿವೆ. ಅವರು ನಿರ್ಮಿಸಿದ ಬಹುತೇಕ ಕಟ್ಟಡಗಳ ವಿಶೇಷತೆ ಎಂದರೆ, ನೆಲದಿಂದ ಹನ್ನರೆಡು ಅಡಿ ಯಿಂದ ಹದಿನಾಲ್ಕು ಅಡಿ ಎತ್ತರಕ್ಕೆ ನಿರ್ಮಿಸಿದ ಮಾಳಿಗೆ ಮತ್ತು ಹತ್ತು ಅಡಿ ಎತ್ತರದ ಬಾಗಿಲುಗಳು, ಎಂಟು ಎತ್ತರ ಹಾಗೂ ನಾಲ್ಕು ಅಡಿ ಅಗಲದ ಕಮಾನುಗಳು ಇಲ್ಲವೆ, ಕಿಟಕಿಗಳು ಇವೆಲ್ಲವೂ, ಅವರು ಭಾರತದ ಹವಾಮಾನ ಮತ್ತು ಪ್ರಾದೇಶಿಕತೆ ತಕ್ಕಂತೆ ಭಿನ್ನವಾಗಿ ಇರುವ ಪ್ರಾಕೃತಿಕ ಲಕ್ಷಣಗಳಿಗೆ ಅನುಗುಣವಾಗಿ ನಿರ್ಮಾಣ ಮಾಡಿದ ವಾಸ್ತು ಶಿಲ್ಪದ ಪರಿಕಲ್ಪನೆಗಳಾಗಿವೆ.
1857 ರ ಸಿಪಾಯಿ ದಂಗೆ ಘಟನೆ ನಂತರ ಬ್ರಿಟೀಷರು, 1858ರಲ್ಲಿ ದೆಹಲಿ ನಗರವನ್ನು ಪುನರ್ ರೂಪಿಸಿದ ಬಗೆಯನ್ನು ಖ್ಯಾತ ಉರ್ದು ಹಾಗೂ ಪರ್ಶಿಯನ್ ಕವಿ ಮಿರ್ಜಾ ಗಾಲಿಬ್ ನ ಜೀವನ ಚರಿತ್ರೆ ಬರೆದಿರುವ, ಲೇಖಕ ಮತ್ತು ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯಾಗಿರುವ ಪವನ್ ಕುಮಾರ್ ವರ್ಮ ತಮ್ಮ ಕೃತಿಯಲ್ಲಿ ಸವಿವರವಾಗಿ ದಾಖಲಿಸಿದ್ದಾರೆ.
ಭಾರತದ ಸ್ವಾತಂತ್ರ್ಯಾನಂತರ ದೇಶದ ನಗರಗಳನ್ನು ಅಭಿವೃದ್ಧಿ ಪಡಿಸಲು , 1964 ಮತ್ತು 65 ರಲ್ಲಿ ಪ್ರಯತ್ನಿಸಲಾಯಿತು. ದೇಶದ ಬಹುತೇಕ ನಗರಗಳಲ್ಲಿ ಯೋಜನಾಬದ್ಧವಾದ ಬಡಾವಣೆಗಳನ್ನು ಅಭಿವೃದ್ಧಿ ಪಡಿಸಿ ನಾಗರೀಕರಿಗೆ ನೀಡಲಾಯಿತು. ನಂತರದ ದಿನಗಳಲ್ಲಿ ಆಳುವ ಸರ್ಕಾರಗಳ ನಿರ್ಲಕ್ಷ್ಯತನ ಮತ್ತು ಜನಪ್ರತಿನಿಧಿಗಳ ಅಯೋಗ್ಯತನದಿಂದಾಗಿ ಇಂತಹ ಯೋಜನೆಗಳು ಸರ್ಕಾರಗಳ ಕೈಯಿಂದ ಜಾರಿ ಭೂಮಾಫಿಯ ಜಗತ್ತಿನ ಅಂಗಳಕ್ಕೆ ಬಿದ್ದಿವೆ. ಸರ್ಕಾರಗಳು ಸಮರ್ಪಕವಾಗಿ ನಿರ್ವಹಿಸಲಾಗದ ಕ್ರೇತ್ರಗಳನ್ನು ಖಾಸಾಗಿಕರಣಗೊಳಿತ್ತಾ ನಡೆದಿವೆ. ಹಾಗಾಗಿ ಇಂದು ಶಿಕ್ಷಣ, ಆರೋಗ್ಯ ಮತ್ತು ವಸತಿ ಕ್ಷೇತ್ರಗಳು ಲೂಟಿಕೋರರ ಮತ್ತು ಲಫಂಗರ ಕೈಯಲ್ಲಿವೆ.
ನಗರಗಳ ಅಭಿವೃದ್ಧಿಯ ಕುರಿತಂತೆ  ವ್ಯಾಖ್ಯಾನಗಳು ಬದಲಾಗಿವೆ. ಮಾಲ್ ಗಳು, ಮಲ್ಟಿಪ್ಲಕ್ಷ್, ಚಿತ್ರಮಂದಿರಗಳು, ಪಂಚತಾರ ಹೋಟೆಲ್ ಗಳು, ಬೃಹತ್ ಕ್ರಿಕೇಟ್ ಸ್ಟಡಿಯಂಗಳಷ್ಟೇ ನಗರವಲ್ಲ, ಇದಕ್ಕಿಂತ ಮುಖ್ಯವಾಗಿ ಕುಡಿಯುವ ಸ್ವಚ್ಛನೀರು, ಒತ್ತಡವಿಲ್ಲದ ನಗರಸಾರಿಗೆ, ವಸತಿ ನಿವಾಸಗಳು, ಒಳಚರಂಡಿ ವ್ಯವಸ್ಥೆ, ಸಮರ್ಪಕ ಕಸವಿಲೆವಾರಿ, ಅಡೆತಡೆಯಿಲ್ಲದ ವಿದ್ಯುತ್ ಪೂರೈಕೆ ಇವೆಲ್ಲವೂ ಒದು ನಗರ ಹೊಂದಿರಬೇಕಾದ ಅವಶ್ಯಕವಾದ ಲಕ್ಷಣಗಳು. ಆದರೆ  ಈ ಲಕ್ಷಣಗಳನ್ನು ಹೊರತಪಡಿಸಿ ಉಳಿದೆಲ್ಲಾ ಲಕ್ಷಣಗಳನ್ನು ಮಹಾನಗರಗಳು ಒಳಗೊಂಡಿವೆ.
10 ಲಕ್ಷ ಜನತೆ ವಾಸಿಸುವ ನಗರಕ್ಕೆ ದಿನವೊಂದಕ್ಕೆ 6 ಲಕ್ಷ, 25ಸಾವಿರ ಟನ್ ನೀರು, 2ಸಾವಿರ ಟನ್ ಆಹಾರ ಧಾನ್ಯಗಳು, 9.500 ಟನ್ ಇಂಧನ, ಬೇಕಾಗುತ್ತದೆ ಎಂದು ಅಂದಾಜಿಸಿರುವ ತಜ್ಙರು, ಇದರಿಂದಾಗಿ ದಿನವೊಂದಕ್ಕೆ 5 ಲಕ್ಷ ಟನ್ ಕೊಳಚೆ ನೀರು, 2 ಸಾವಿರ ಟನ್ ಕಸ ಮತ್ತು 950 ಟನ್ ವಾಯು ಮಾಲಿನ್ಯ ಹೊರಬೀಳುತ್ತದೆ ಎಂದಿದ್ದಾರೆ.
ಭಾರತದ ನಗರಗಳಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಗೆ ದಿವೊಂದಕ್ಕೆ  ಸರಾಸರಿ 175 ರಿಂದ 204 ಲೀಟರ್ ಬೇಕಾಗಿದೆಯೆಂದು ಜಕಾರಿಯ ನೇತೃತ್ವದ ಸಮಿತಿ ಹೇಳಿದೆ. ಕೊಲ್ಕತ್ತ ನಗರದಲ್ಲಿ 274 ಲೀಟರ್, ಮುಂಬೈನಲ್ಲಿ 194 ಲೀಟರ್, ದೆಹಲಿಯಲ್ಲಿ 90 ಲೀಟರ್ ಬಳಕೆಯಾಗುತ್ತಿದೆ. ( ಅಮೇರಿಕಾದ ಚಿಕಾಗೊ ನಗರದಲ್ಲಿ ಪ್ರತಿ ಪ್ರಜೆ 1058 ಲೀಟರ್ ಮತ್ತು ಲಾಸ್ ಏಸಂಜಲಿಸ್ ನಗರದಲ್ಲಿ 1260 ಲೀಟರ್ ನೀರು ಬಳಕೆಯಾಗುತ್ತಿದೆ.)

ಇನ್ನು ಸಾರ್ವಜನಿಕ ಸಾರಿಗೆ ವ್ಯವ್ಸಸ್ಥೆಯಂತೂ ನಗರಗಳಲ್ಲಿ ಹೇಳ ತೀರದಾಗಿದೆ. ಪ್ರತಿ ಹತ್ತು ಸಾವಿರ ಚದುರ ಕಿಲೋಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ 1284 ಚದುರ ಕಿಲೋ ಮೀಟರ್ ವ್ಯಾಪ್ತಿಯ ರಸ್ತೆಯ ಪ್ರದೇಶಗಳಿರಬೇಕು ಎಂದು ನಗರಾಭಿವೃದ್ಧಿ ತಜ್ಙರು ಅಭಿಪ್ರಾಯಪಟ್ಟಿದ್ದಾರೆ. ಆದರೆ, 1970ರ ದಶಕದಲ್ಲಿ ಅಭಿವೃದ್ಧಿಪಡಿಸಿದ ಚಂಡಿಘರ್ ನಗರ 1260 ಚದುರ ಕಿ.ಮಿ. ಹೊಂದಿದ್ದರೆ, ಅಹಮ್ಮದಾಬಾದ್ 680, ಮುಂಬೈ 380 ಹೀಗೆ ಅರ್ಧದಷ್ಟು ರಸ್ತೆಯ ಪ್ರದೇಶಗಳನ್ನು ಭಾರತದ ನಗರಗಳು ಹೊಂದಿವೆ. ದಶಕದ ಹಿಂದೆ ಒಂದು ಗಂಟೆ ಅವಧಿಯಲ್ಲಿ ಒಂದು ಗಂಟೆಗೆ 6 ಸಾವಿರ ಎಲ್ಲಾ ವಿಧವಾದ ವಾಹನಗಳು ಸಂಚರಿಸುತ್ತಿದ್ದವು. ಇದೀಗ ಭಾರತದ ನಗರಗಳಲ್ಲಿ ಪ್ರತಿ ಗಂಟೆಗೆ 14 ಸಾವಿರ ವಾಹನಗಳು ಚಲಿಸುತ್ತವೆ. 2004ರಲ್ಲಿ ಬೆಂಗಳೂರಿನಲ್ಲಿ ಪ್ರತಿದಿನ 1215 ಹೊಸ ವಾಹನಗಳು ರಸ್ತೆಗಳಿಯುತ್ತಿದ್ದವು . ಬಹುಷಃ ಈ ಪ್ರಮಾಣ ಈಗ ಮೂರುಪಟ್ಟು ಹೆಚ್ಚಾಗಿರಬಹುದು. ನಗರಗಳಲ್ಲಿ ವಾಹನಗಳ ದಟ್ಟಣೆಯಿಂದಾಗಿ ವಾಯುಮಾಲಿನ್ಯದ ಜೊತೆಗೆ ಶಬ್ಧ ಮಾಲಿನ್ಯ ಕೂಡ ಹೆಚ್ಚುತ್ತಿದೆ. ಕನಿಷ್ಟ 70 ಡಿ.ಬಿ. ಇರಬೇಕಾದ ಶಬ್ಧ ಮಾಲಿನ್ಯನದ ಪ್ರಮಾಣ ಚೆನ್ನೈ ನಗರದಲ್ಲಿ 89, ಮುಂಬೈನಲ್ಲಿ 85. ದೆಹಲಿ 89 ಕೊಲ್ಕತ್ತ 87, ಬೆಂಗಳೂರು 83 , ಕೊಚ್ಚಿನ್ 80, ಕಾನ್ಪುರ ಮತ್ತು ಮಧುರೈ ನಗರಗಳಲ್ಲಿ 79 ಹಾಗೂ ತಿರುವನಂತಪುರದಲ್ಲಿ 70ರಷ್ಟಿದೆ.. 2011ರಲ್ಲಿ ನಡೆಸಲಾದ ಅಧ್ಯಯನದಲ್ಲಿ ಜಗತ್ತಿನ ಅತಿ ಹೆಚ್ಚು  ನಲವತ್ತೊಂದು ವಾಯುಮಾಲಿನ್ಯ ನಗರಗಳಲ್ಲಿ ದೆಹಲಿ ನಾಲ್ಕನೆಯ ಸ್ಥಾನ, ಕೊಲ್ಕತ್ತ ಆರನೇಯ ಸ್ಥಾನ ಮತ್ತು ಚೆನ್ನೈ ನಗರ ಹದಿನಾಲ್ಕನೇ ಸ್ಥಾನ ಪಡೆದಿವೆ. (ಇತ್ತೀಚೆಗಿನ ಅಧ್ಯಯನದಲ್ಲಿ ಬೆಂಗಳೂರು ನಗರ ಸ್ಥಾನ ಪಡೆದಿದ್ದರೆ, ಆಶ್ಚರ್ಯವಿಲ್ಲ.)
ಮಹಾನಗರಗಳ ಬಹುದೊಡ್ಡ ಸಮಸ್ಯೆಗಳಲ್ಲಿ ಪ್ರಮುಖವಾದವುಗಳೆಂದರೆ,, ವಸತಿ ಮತ್ತು ಕುಡಿಯುವ ನೀರಿನ ಸಮಸ್ಯೆಗಳು ಮುಖ್ಯವಾದವು. ಪ್ರತಿ ವರ್ಷ ದೇಶದ ಮಹಾನಗರಗಳಲ್ಲಿ 17 ಲಕ್ಷ ಮನೆಗಳ ಬೇಡಿಕೆಯಿದ್ದು, ಬೇಡಿಕೆಗೆ ತಕ್ಕಂತೆ ಮನೆಗಳನ್ನು ಪೂರೈಸಲು ಸರ್ಕಾರಗಳು ಸೋತಿವೆ. ಹಾಗಾಗಿ ದೇಶದೆಲ್ಲೆಡೆ  ವಸತಿ ಕ್ರೇತ್ರದಲ್ಲಿ ಭೂಮಾಫಿಯ ತಲೆ ಎತ್ತಿದೆ. ಬಣ್ಣ ಬಣ್ಣದ ಕರಪತ್ರಗಳಲ್ಲಿ ತಾವು ನಿರ್ಮಿಸುವ ಅಪಾರ್ಟ್ ಮೆಂಟ್ ಗಳ ಬಗ್ಗೆ, ಅಥವಾ ಮನೆಗಳ ಬಗ್ಗೆ ನೂರಾರು ಆಮೀಷವೊಡ್ಡುವ ಬಿಲ್ಡರ್ ಗಳು ನಂತರದ ಸಮಸ್ಯೆಗಳನ್ನು ಗ್ರಾಹಕರ ತಲೆಗೆ ವರ್ಗಾಯಿಸುತ್ತಿದ್ದಾರೆ. 40 ರಿಂದ 60 ಲಕ್ಷರೂಪಾಯಿ ನೀಡಿ ಅಪಾರ್ಟ್ ಮೆಂಟ್ ಗಳಲ್ಲಿ ಮನೆಗಳನ್ನು ಖರೀದಿಸುವ ಗ್ರಾಹಕರು, ನಂತರ ನಿರ್ವಹಣಾ ವೆಚ್ಚವಾಗಿ ಎಂಟು ಸಾವಿರದಿಂದ ಹತ್ತು ಸಾವಿರ ರೂಪಾಯಿ ಹಾಗೂ ನೀರಿನ ಸಮಸ್ಯೆಯಿಂದಾಗಿ ತಿಂಗಳಿಗೆ ಮೂರರಿಂದ ನಾಲ್ಕು ಸಾವಿರ ರೂ.( ಬೆಂಗಳೂರಿನಲ್ಲಿ ನಾಲ್ಕು ಸಾವಿರ ಲೀಟರ್ ನೀರಿಗೆ 900ರೂಪಾಯಿ) ವಿದ್ಯುತ್ ಬಿಲ್ ಎರಡರಿಂದ ಮೂರು ಸಾವಿರ ಹೀಗೆ ಸ್ವಂತ ಮನೆ ಹೊಂದಿದ್ದರೂ ಕೂಡ ತಿಂಗಳಿಗೆ ಹನ್ನೆರಡರಿಂದ ಹದಿನೈದು ಸಾವಿರ ವೆಚ್ಚ ಮಾಡಬೇಕಾದ ಸ್ಥಿತಿ.


ಈ ದಿನಗಳಲ್ಲಿ ನಗರದ ಹೃದಯ ಭಾಗ ಅಥವಾ ಹತ್ತಿರದಲ್ಲಿ ಇರುವ ಬಢಾವಣೆಗಳಲ್ಲಿ ತಲೆ ಎತ್ತುತ್ತಿರುವ ವಸತಿ ಸಂಕೀರ್ಣಗಳಲ್ಲಿ ಎಲ್ಲರೂ ಮನೆ ಪಡೆಯಲು ಆಶಿಸುತ್ತಾರೆ. ಆದರೆ, ನಲವತ್ತು ವರ್ಷಗಳ ಹಿಂದೆ ಕೇವಲ ಒಂದು ಸಾವಿರ ಮನೆಗಳಿಗೆ ಅಥವಾ ಅದರಲ್ಲಿ ವಾಸಿಸಬಹುದಾದ ಐದು ಸಾವಿರ ಜನತೆಗಾಗಿ, ಕುಡಿಯುವ ನೀರಿನ ಕೊಳವೆ, ಓಳಚರಂಡಿ ಚರಂಡಿ ಗಳನ್ನು ನಿರ್ಮಿಸಲಾಗಿರುತ್ತದೆ. ಈಗ ಐದು ಮಂದಿ ವಾಸಿಸುತ್ತಿದ್ದ ಮನೆಯನ್ನು ತೆಗೆದು, ನಲವತ್ತು ಕುಟುಂಬಗಳು ವಾಸಿಸುವ ಅಪಾರ್ಟ್ ಮೆಂಟ್ ನಿರ್ಮಾಣವಾದರೆ, ಐದು ಮಂದಿಗೆ ಇದ್ದ ನೀರು, ವಿದ್ಯುತ್  ಪೂರೈಕೆ, ಅಥವಾ ಒಳ ಚರಂಡಿ ವ್ಯವಸ್ಥೆ ಇನ್ನೂರು ಐವತ್ತು ಮಂದಿಗೆ ಸಾಧ್ಯವೆ? ಹಾಗಾಗಿ ಇಂದು 25 ಸಾವಿರ ಮಂದಿ ವಾಸಿಸ ಬಹುದಾದ ಬಡಾವಣೆಗಳಲ್ಲಿ 2.5 ಲಕ್ಷ ವಾಸಿಸುವ ಹಾಗೆ ವಸತಿ ಸಂಕೀರ್ಣಗಳನ್ನು ನಿರ್ಮಿಸಿ , ಬಿಲ್ಡರ್ ಗಳು ಮುಂದೆ ಬರುಬಹುದಾದ ಎಲ್ಲಾ ಸಮಸ್ಯೆಗಳನ್ನು ಗ್ರಾಹಕರ ಹೆಗಲಿಗೆ ವರ್ಗಾಯಿಸುತ್ತಿದ್ದಾರೆ. ನಗರಗಳ ಅಭಿವೃದ್ಧಿ ಕುರಿತು ಕ್ರಮಬದ್ಧ ಯೋಜನೆಗಳ ಬಗ್ಗೆ ಸರ್ಕಾರಗಳಿಗೆ ಯಾವುದೇ ದೂರದೃಷ್ಟಿಯ ಆಲೋಚನೆಗಳು ಇಲ್ಲದಿರುವ ಕಾರಣ ನಗರಗಳು ನರಕಗಳಾಗಿ ಅಲ್ಲಿ ವಾಸಿಸುವ ಜನ ಒತ್ತಡದ ಬದುಕಿನಲ್ಲಿ ಮುಳುಗಿ ಏಳುವಂತಾಗಿದೆ. ನಗರಗಳಲ್ಲಿ ಪ್ರತಿ ಐವತ್ತು ಅಡಿಯಿಂದ ನೂರು ಅಡಿ ಅಂತರದಲ್ಲಿ ಕೊಳವೆ ಬಾವಿಗಳಿದ್ದು ಅಂತರ್ಜಲ ಸಾವಿರಾರು ಅಡಿಗಳ ಆಳಕ್ಕೆ ಇಳಿದಿದೆ. ಅಂತರ್ಜಲ ಹೆಚ್ಚಿಸುತ್ತಿದ್ದ ಕೆರೆಗಳೆಲ್ಲಾ ಬಡಾವಣೆಗಳಾಗಿವೆ. ಒಂದು ಕಾಲದಲ್ಲಿ ಎಂಬತ್ತು ಕೆರೆಗಳಿದ್ದ ಬೆಂಗಳೂರಿನಲ್ಲಿ ಈಗ ಹುಡುಕಿದರೆ, ಎಂಟರಿಂದ ಹತ್ತು ಕೆರೆಗಳು ಸಿಗಬಹುದು. ಹೋಗಲಿ ಮಳೆ ನೀರು ಇಂಗಲು ಭೂಮಿಯಾದರೂ ಇದೆಯಾ? ಉದ್ಯಾನವನಗಳನ್ನು ಹೊರತು ಪಡಿಸದರೆ, ಉಳಿದೆಲ್ಲಾ ಭೂ ಭಾಗವನ್ನು ರಸ್ತೆ, ಪುಟ್ ಬಾತ್, ಮತ್ತು ವಸತಿ ನಿರ್ಮಾಣದ ನೆಪದಲ್ಲಿ ಕಾಂಕ್ರಿಟ್ ಮತ್ತು ಟಾರ್ ನಿಂದ ಮುಚ್ಚಲಾಗಿದೆ. ನಮ್ಮ ಮನಸ್ಥಿತಿ ಎಲ್ಲಿಗೆ ತಲುಪಿದೆಯೆಂದರೆ, ನಾವು ವಾಸಿಸುವ ಮನೆಗಳ ಸುತ್ತ ಬಿಡಲಾಗಿರುವ ಖಾಲಿ ಜಾಗವನ್ನು ಸಹ ಕಲ್ಲುಚಪ್ಪಡಿ ಇಲ್ಲವೆ ಸಮೆಂಟ್ ಸ್ಲಾಬ್ ಗಳಿಂದ ಮುಚ್ಚಲು ಹೊರಟಿದ್ದಿವೆ. ನಮ್ಮ ಪಾದಗಳಿಗೆ ಮಣ್ಣು ತಾಗುವುದು ಅಸಹ್ಯ ಎಂಬ ಪ್ರಜ್ಙೆ ನಮ್ಮೊಳಗೆ ಬೆಳೆದು ನಿಂತಿದೆ.
ಇವುಗಳ ಜೊತೆಗೆ ಕಸವಿಲೆವಾರಿ ಸಮಸ್ಯೆ ಇತ್ತೀಚೆಗಿನ ದಿನಗಳಲ್ಲಿ ಮಹಾನಗರಗಳ ಅತಿ ದೊಡ್ಡ ಸವಾಲಾಗಿದೆ. ಬದಲಾದ ನಮ್ಮ ಅನುಭೋಗದ ವೈಖರಿ, ಪ್ಲಾಸ್ಟಿಕ್ ಬಳಕೆಯ ವ್ಯಾಮೋಹ. ಪದೇ ಪದೇ ಬಲಾಯಿಸುವ ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ಮಮತೆ ಇವೆಲ್ಲಾ ಪರೋಕ್ಷವಾಗಿ ಕಸವಿಲೆವಾರಿಗೆ ತೊಡಕಾಗಿವೆ. ಭಾರತದ ಪ್ರಮುಖ 40 ನಗರಗಳಲ್ಲಿ ಪ್ರತಿ ನಿತ್ಯ 55 ಸಾವಿರ ಟನ್ ಕಸ ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಬೆಂಗಳೂರು ನಗರದಲ್ಲಿ 4.500 ಟನ್, ದೆಹಲಿಯಲ್ಲಿ 6000 ಟನ್, ಕೊಲ್ಕತ್ತದಲ್ಲಿ 5.500 ಟನ್ ಮುಂಬೈನಲ್ಲಿ 4.800 ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಕೇವಲ ಶೇಕಡ ಎಪ್ಪತ್ತರಷ್ಟು ಮಾತ್ರ ವಿಲೆವಾರಿಯಾಗುತ್ತಿದೆ. ಉಳಿದ ಕಸ ಅಲ್ಲಿಯೇ ಕೊಳೆತು ನಾರುತ್ತಿದೆ.
ಇಂದಿನ ಆತುರದ ದಿನಗಳಲ್ಲಿ ಯಾರಿಗೂ ನಗರಗಳ ಕುರಿತು ಯೋಚಿಸುವ ವ್ಯವಧಾನವಿಲ್ಲ. ಇನ್ನೂ ಸದಾ ಓಡುತ್ತಿರಬೇಕಾದ ದಾವಂತದ ಬದುಕಿನಲ್ಲಿ ಸಿಲುಕಿರುವ ನಗರದ ಜನತೆ ತಾವು ಇಟ್ಟ ಹೆಜ್ಜೆಯನ್ನು ಹಿಂತಿರುಗಿ ನೋಡಲಾರದಷ್ಟು ಅಸಹಾಯಕರಾಗಿದ್ದಾರೆ. ಇನ್ನು ನಗರಗಳ ಭವಿಷ್ಯಗಳ ಯಾರು ಚಿಂತಿಸಿ ಫಲವೇನು? ಅಭಿವೃದ್ಧಿಯ ವಿಕಾರಗಳ ಕುರಿತು ಬರೆಯುವುದು ಅಥವಾ ಮಾತನಾಡುವುದು ಸಿನಿಕತನ ಎಂಬಂತಾಗಿರುವ ಈ ವರ್ತಮಾನದ ದಿನಗಳು ನಿಜಕ್ಕೂ ದಿಗಿಲು ಹುಟ್ಟಿಸುವಂತಿವೆ.


ಶುಕ್ರವಾರ, ಮೇ 24, 2013

ನೆಲದ ತಾಯಿಗೆ ನಮಸ್ಕಾರ



                         ಕಟ್ಟಕಡೆಯ ಮರವನ್ನು ಕತ್ತರಿಸಿ ಹಾಕಿದ ನಂತರ
                         ಕಟ್ಟಕಡೆಯ ನದಿಗೆ ವಿಷವಿಕ್ಕಿದ ನಂತರ
                         ಕಟ್ಟಕಡೆಯ ಮೀನನ್ನು ಹಿಡಿದ ನಂತರ
                         ಆಗಷ್ಟೇ ನಿನಗೆ ಗೊತ್ತಾಗುತ್ತದೆ,
                         ಹಣವನ್ನು ತಿನ್ನಲಾಗುವುದಿಲ್ಲ ಎಂದು.
                                                ( ವಂದನಾ ಶಿವ ಅವರ ಕೃತಿಯಿಂದ)
ಡಾ.ವಂದನಾ ಶಿವ ಎಂಬ ಹೆಸರು ಈ ದೇಶದ ಜನಸಾಮಾನ್ಯರಿಗೆ ಅಪರಿಚಿತವಾದರೂ, ಪರಿಸರಪ್ರಿಯರಿಗೆ ಮತ್ತು ಸುಸ್ಥಿರ ಕೃಷಿಯಲ್ಲಿ ಪ್ರೀತಿ ಇರುವ ಎಲ್ಲರಿಗೂ ಪ್ರಿಯವಾದ ಮತ್ತು ಆತ್ಮೀಯವಾದ ಹೆಸರು. ಜಾಗತೀಕರಣದ ನೆಪದಲ್ಲಿ ತೃತೀಯ ರಾಷ್ಟ್ರಗಳನ್ನು ಕೊಳ್ಳೆ ಹೊಡೆಯಲು ನಿಂತ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಅವುಗಳ ಮಾಲೀಕರು ಕನಸಿಲ್ಲೂ ಬೆಚ್ಚಿಬೀಳಬಹುದಾದ ಹಾಗೂ  ಜಾಗತಿಕ ಮಟ್ಟದಲ್ಲಿ ಸದಾ ಎಚ್ಚರದ ಸ್ಥಿತಿಯಲ್ಲಿ  ಚಾಲ್ತಿಯಲ್ಲಿರುವ ಹೆಸರು.
ತಮ್ಮ ಮಾರುಕಟ್ಟೆಯ ವಿಸ್ತರಣೆಗೋಸ್ಕರ ವಿಶ್ವ ವಾಣಿಜ್ಯ ಮಂಡಳಿಯನ್ನು ಹುಟ್ಟು ಹಾಕಿ , ದೇಶ-ದೇಶಗಳ ನಡುವಿನ ಗಡಿರೇಖೆಯನ್ನು ಅಳಿಸಿ ಹಾಕುವುದರ ಮೂಲಕ ಮಾರುಕಟ್ಟೆಯ ಸಾಮ್ರಾಜ್ಯವನ್ನು ವಿಸ್ತರಿಸುತ್ತಿರುವ ಮುಂದುವರಿದ ರಾಷ್ಟ್ರಗಳ ಮುಖವಾಡವನ್ನು ಕಳಚಿ ಹಾಕುತ್ತಾ, ಕಳೆದ ಮೂರು ದಶಕಗಳಿಗಿಂದ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಜಗತ್ತನ್ನು ಸುತ್ತುತ್ತಿರುವ ವಂದನಾ ಶಿವ ಅವರ ಹೋರಾಟವನ್ನು ಹತ್ತಿರದಿಂದ ಗಮನಿಸಿದ ನನಗೆ , ತಾಯಿಕೋಳಿಯೊಂದು  ರಣ ಹದ್ದುಗಳಿಂದ ತನ್ನ ಮರಿಗಳನ್ನು ಕಾಪಾಡಿಕೊಳ್ಳಲು ನಡೆಸುವ ಹೋರಾಟ ನೆನಪಿಗೆ ಬರುತ್ತದೆ. ( 12 ವರ್ಷದ ಹಿಂದೆ ಜಾಗತೀಕರಣ ಕುರಿತ ನನ್ನ ಅಧ್ಯಯನದ ಸಂದರ್ಭದಲ್ಲಿ  ಭೌದ್ಧಿಕ ಆಸ್ತಿ  ಹಕ್ಕುಗಳ ಕುರಿತು ಇವರ ಬಳಿ ದೆಹಲಿಯಲ್ಲಿ ಒಂದು ವಾರ ಪಾಠ ಹೇಳಿಸಿಕೊಂಡಿದ್ದೆ. )
ಭಾರತ ಮತ್ತು ಅಫ್ರಿಕಾ ಸೇರಿದಂತೆ ಕೃಷಿಯ ಪಾರಂಪರಿಕ ಹಕ್ಕುಗಳನ್ನು ಬಹುರಾಷ್ರೀಯ ಕಂಪನಿಗಳಿಂದ ರಕ್ಷಿಸುವುದು ನನ್ನ ಬದುಕಿನ ಪರಮ ಗುರಿ ಎಂಬಂತೆ ಹೋರಾಡುತ್ತಿರುವ ವಂದನಾ ಶಿವ, ಕೃಷಿಜಗತ್ತು; ಜಗತ್ತಿನಿಂದ ಮಹಿಳೆಯರನ್ನು ಹೊರಗಿಟ್ಟ ನಂತರ ಆಗಿರುವ, ಆಗುತ್ತಿರುವ ದುರಂತ ಕಥನಗಳನ್ನು ಜಗತ್ತಿಗೆ ಮನಮುಟ್ಟುವಂತೆ ವಿವರಿಸುತ್ತಿದ್ದಾರೆ. ಬೀಜ ಸ್ವಾತಂತ್ರ್ಯ ವೆಂಬುದು ಜಗತ್ತಿನ ರೈತರ ಜನ್ಮಸಿದ್ಧ ಹಕ್ಕು ಎಂಬುದನ್ನು ಪ್ರತಿಪಾದಿಸಿ, ನಮ್ಮ ಬೀಜ ಸ್ವಾತಂತ್ರ್ಯವನ್ನು ಕಸಿದ ಮಾನ್ಸಂಟೊ, ಕಾರ್ಗಿಲ್ ಮುಂತಾದ ಕಂಪನಿಗಳ ಕಳ್ಳತನವನ್ನು ಜಗತ್ತಿಗೆ  ಅನಾವರಣಗೊಳಿಸಿದ ಕೀರ್ತಿ ಡಾ. ವಂದನಾಶಿವಗೆ ಸಲ್ಲುತ್ತದೆ. ಇವರು ಬರೆದಿರುವ ಸ್ಟೋಲನ್ ಹಾರ್ವೆಸ್ಟ್ ( ಕದ್ದ ಫಸಲು) ಬಯೋ ಪೈರಸಿ ( ಜೈವಿಕ ನಕಲು) ಕೃತಿಗಳು  ಹಾಗೂ ವೈಲೆನ್ಸ್ ಇನ್ ದ ಗ್ರೀನ್ ರೆವ್ಯುಲೂಷನ್ ( ಹಸಿರು ಕ್ರಾಂತಿಯೊಳಗಿನ ಹಿಂಸೆ) ಹಾಗೂ ಮೊನೊಕಲ್ಷರ್ ಇನ್ ದ ಮೈಂಡ್ ( ಮನಸ್ಸಿನೊಳಗಿನ ಏಕರೂಪಿ ಸಂಸ್ಕೃತಿ) , ವಾಟರ್ ವಾರ್ಸ್ ( ನೀರಿನ ಯುದ್ಧಗಳು) ಇವೆಲ್ಲವೂ ಜಾಗತಿಕ ಕೃಷಿಲೋಕದ ಸಂಕಟಗಳನ್ನು ವಿವರಿಸುವ ಅಧ್ಯಯನಗಳು, ಮೂಲತಃ ಭೌತಶಾಸ್ತ್ರದ ವಿಜ್ಙಾನಿಯಾದ ಡಾ. ವಂದನಾ ಶಿವ , ಕೃಷಿ ಜಗತ್ತಿನತ್ತ ಮುಖಮಾಡಿದ್ದು ಈ ನೆಲದ ಪುಣ್ಯವೆಂದೇ ಭಾವಿಸಬೇಕು.

1952 ರ ನವಂಬರ್ 5 ರಂದು ಡೆಹರಾಡೂನ್ ಗಿರಿಧಾಮದಲ್ಲಿ ಅರಣ್ಯಾಧಿಕಾರಿಯ ಮಗಳಾಗಿ ಜನಿಸಿದ ವಂದನಾ, ಬಾಲ್ಯದ ಶಿಕ್ಷಣವನ್ನು ನೈನಿತಾಲ್ ನ ಸೆಂಟ್ ಮೇರಿ ಕಾನ್ವೆಂಟ್ ನಂತರ ದೆಹರಾಡೂನಿನ ಜೀಸಸ್- ಮೇರಿ ಶಾಲೆಯಲ್ಲಿ ಪೂರೈಸಿದರು. ಆನಂತರ ಚಂಡಿಗಡದಲ್ಲಿ ಪದವಿ ಹಾಗೂ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, ಕೆನಡಾದಲ್ಲಿ “ಪೌಂಡೇಶನ್ ಆಫ್ ಕ್ವಾಂಟಂ ಥಿಯರಿ” ವಿಷಯ ಕುರಿತು ಪಿ.ಹೆಚ್.ಡಿ. ಮುಗಿಸಿದರು. ಹಿಮಾಲಯದ ತಪ್ಪಲಲ್ಲಿ ಬೆಳೆದು, ಕೃಷಿಗೆ ಬೆನ್ನೆಲುಬಾಗಿದ್ದ ಅಲ್ಲಿನ ಮಹಿಳೆಯರ ಕಷ್ಟಗಳನ್ನು ಬಾಲ್ಯದಿಂದ ಸ್ವತಃ ಕಣ್ಣಾರೆ ನೋಡಿದ್ದ ವಂದನಾ ಅವರಿಗೆ ವಿದ್ಯಾಭ್ಯಾಸ ಮುಗಿಸುತ್ತಿದ್ದ ವೇಳೆಗೆ ಆರಂಭವಾದ ಚಿಪ್ಕೋ ( ಅಪ್ಪಿಕೊ) ಚಳವಳಿ ಸೂಜಿಗಲ್ಲಿನಂತೆ ಸೆಳೆಯಿತು. ಹಿಮಾಲಯದ ತಪ್ಪಲಿನ ಅರಣ್ಯದ ಮರಗಳು ಕಂಟ್ರಾಕ್ಟರ್ ಗಳ  ಕೊಡಲಿಗೆ ಬಲಿಯಾಗಿ ನೆಲಕ್ಕೆ ಉರುಳುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ರೈತ ಮಹಿಳೆಯರು ಮರಗಳನ್ನು ಅಪ್ಪಿಕೊಂಡು ಅವುಗಳ ಉಳಿಸಿದ ಪರಿ ವಂದನಾ ಶಿವ ಅವರ ಮೇಲೆ ತೀವ್ರ ಪರಿಣಾಮ ಬೀರಿತು. ಈ ಕಾರಣಕ್ಕಾಗಿ ಭಾರತದ ಪರಿಸರ ಮತ್ತು ಕೃಷಿ ಜಗತ್ತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ವಿದೇಶದಲ್ಲಿನ ಉದ್ಯೋಗದ ಆಮೀಷವನ್ನು ನಿರಾಕರಿಸಿ, ಡೆಹರಾಡೂನ್ ನಲ್ಲಿ ನೆಲೆ ನಿಂತರು. ಗಿರಿಧಾಮದ ಹೊರ ವಲಯದಲ್ಲಿ ಕಣಿವೆಯೊಂದರ ಬಳಿ ಐದು ಎಕರೆ ಪ್ರದೇಶವನ್ನು ಖರೀದಿಸಿ, 1982 ರಲ್ಲಿ “ಪೌಂಡೇಷನ್ ಪಾರ್ ಸೈನ್ಸ್, ಟೆಕ್ನಾಲಜಿ ಅಂಡ್ ಎಕಾಲಾಜಿ ‘ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ನಂತರ 1991 ರಲ್ಲಿ ಇದೇ ಸ್ಥಳದಲ್ಲಿ “ ನವಧಾನ್ಯ ಟ್ರಸ್ಟ್’ ಎಂಬ ಸಂಸ್ಥೆ ಆರಂಭಿಸಿ, ತೃತೀಯ ಜಗತ್ತಿನ ಎಲ್ಲಾ ರಾಷ್ಟ್ರಗಳ ಪಾರಂಪರಿಕವಾಗಿ ಕೃಷಿಯಲ್ಲಿ ಬಳಕೆ ಮಾಡುತ್ತಾ ಬಂದಿದ್ದ ಬೀಜಗಳನ್ನು ಸಂರಕ್ಷಿಸುವ ಕಾರ್ಯ ಕೈಗೊಂಡರು. ಈಗ ಆಫ್ರಿಕಾ ರಾಷ್ರಗಳ ಮೆಕ್ಕೆಜೋಳ, ಅನೇಕ ಕಿರಿಧಾನ್ಯಗಳು ಸೇರಿದಂತೆ ಮೂರು ಸಾವಿರಕ್ಕೂ ಹೆಚ್ಚಿನ ವಿವಿಧ ಆಹಾರ ಬೆಳೆಗಳ ಬೀಜಗಳನ್ನು ರಕ್ಷಿಸಿ ಇಡಲಾಗಿದೆ.ಜೊತೆಗೆ ಇತ್ತೀಚೆಗೆ ದೆಹಲಿಯಲ್ಲಿ ಕಛೆರಿ ತೆರೆಯಲಾಗಿದ್ದು, ಸಾವಯವ ಕೃಷಿ ಕುರಿತು ಪ್ರಚಾರೋಂಧಲನವನ್ನು ಕೈಗೊಳ್ಳಲಾಗುತ್ತಿದೆ.
ನಮ್ಮದೇಶದಿಂದ ಕದ್ದೋಯ್ದಿದ್ದ  ಬಸುಮತಿ ಅಕ್ಕಿಯ ತಳಿಗಳು ಮತ್ತು ಅರಿಶಿನದ ಮೇಲೆ ಅಮೇರಿಕಾ ದ ಬಹುರಾಷ್ಟ್ರೀಯ ಕಂಪನಿಗಳು ಪಡೆದುಕೊಂಡಿದ್ದ ಪೇಟೆಂಟ್ ಹಕ್ಕಿನ ವಿರುದ್ಧ  ಅಂತರಾಷ್ಟ್ರೀಯ ನ್ಯಾಯಲಯದಲ್ಲಿ ದಾವೆ ಹೂಡಿ ಗೆದ್ದ ಕೀರ್ತಿ ಇವರದು.
ಎಂಟು ವರ್ಷದ ಹಿಂದೆ ಇವರು ಆಫ್ರಿಕಾ ರಾಷ್ಟ್ರಗಳಲ್ಲಿ ತಿರುಗಾಟ ನಡೆಸಿ, ಮಳೆಯ ಅಭಾವ, ಮತ್ತು ಬರಗಾಲದಲ್ಲೂ ಬೆಳೆಯುವ ಅನೇಕ ಜೋಳದ ಬೆಳಯ ಬೀಜಗಳನ್ನು ಸಂಗ್ರಹಿಸಿ, ನಮ್ಮ ಅಪರೂಪದ ಕೆಲವು ತಳಿಗಳ ಬೀಜಗಳನ್ನು ಅವರಿಗೆ ನೀಡಿ, ಅಲ್ಲಿನ ಜೋಳದ ಬೀಜಗಳನ್ನು ಭಾರತಕ್ಕೆ ತಂದಿದ್ದರು. ಇದನ್ನು ಪ್ರತಿಭಟಿಸಿ ವಿಶ್ವ ವಾಣಿಜ್ಯ ಮಂಡಳಿಯಲ್ಲಿ ಇವರ ಮೇಲೆ ಅನೇಕ ಕಂಪನಿಗಳು ದೂರು ದಾಖಲಿಸಿದ್ದವು. ಈ ಸಂದರ್ಭದಲ್ಲಿ ಪಶ್ಚಿಮದ ಜಗತ್ತಿಗೆ ಮುಟ್ಟಿನೋಡಿಕೊಳ್ಳುವಂತೆ ವಂದನಾ ಶಿವ ಉತ್ತರ ನೀಡಿದ್ದರು. “ಬೀಜ ವಿನಿಮಯ ಪದ್ಧತಿಯಲ್ಲಿ ಬೀಜಗಳು ಮಾರಾಟದ ಸರಕಲ್ಲ, ಅದು ತೃತೀಯ ಜಗತ್ತಿನ ಜ್ಞಾನ ಪರಂಪರೆಯ ಶಿಸ್ತುಗಳಲ್ಲಿ ಒಂದು. ನಮ್ಮ ಪೂರ್ವಿಕರ ಜ್ಞಾನವನ್ನು ಯಾರೂ ಬೇಕಾದರೂ ಹಂಚಿಕೊಳ್ಳಬಹುದು. ಇದಕ್ಕೆ ಬಹುರಾಷ್ಟ್ರೀಯ ಕಂಪನಿಗಳೆಂಬ ದೊಣ್ಣೆ ನಾಯಕರ ಅನುಮತಿ ಬೇಕಾಗಿಲ್ಲ” ಎಂದು ಮರ್ಮಕ್ಕೆ ತಾಗುವಂತೆ ಹೇಳಿದ್ದರು.
ಇವೊತ್ತಿಗೂ ತಿಂಗಳಿಗೆ ಇಪ್ಪತ್ತು ದಿನ ಜಗತ್ತಿನ ಯಾವುದಾದರೊಂದು ರಾಷ್ಟ್ರದ ವಿ.ವಿ.ಯಲ್ಲಿ ಉಪನ್ಯಾಸ ಮಾಡುತ್ತಾ, ಇಲ್ಲವೆ ಜೈವಿಕ ತಂತ್ರಜ್ಞಾನದ ಕೃಷಿ ಮತ್ತು ಕುಲಾಂತರಿ ತಳಿಗಳ ವಿರುದ್ಧ ಹೋರಾಡುತ್ತಿರುವ ಸಂಘಟನೆಗಳಿಗೆ ಕೈ ಜೋಡಿಸಿ, ಪ್ರತಿಭಟಿಸುತ್ತಾ ದಣಿವರಿಯದ ತಾಯಿಯ ಹಾಗೆ ಬದುಕುತ್ತಿರುವ ವಂದನಾ ಶಿವರನ್ನು ನಾನು, ಧ್ವನಿಯಿಲ್ಲದವರ ತಾಯಿ ಎಂದು ಕರೆಯಲು ಇಚ್ಚಿಸುತ್ತೇನೆ.
ಈವರೆಗೆ ನೊಬಲ್ ಪ್ರಶಸ್ತಿ ಹೊರತು ಪಡಿಸಿ ಜಗತ್ತಿನ ಅನೇಕ ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ. 1993ರಲ್ಲಿ ರೈಟ್ ಲಿವ್ ಹುಡ್ ಪ್ರಶಸ್ತಿ, 1995 ರಲ್ಲಿ ವಿಶ್ವಸಂಸ್ಥೆಯ ಗ್ಲೋಬಲ್ 500 ಪ್ರಶಸ್ತಿ, 1997 ರಲ್ಲಿ ಡೆನ್ಮಾರ್ಕ್ ರಾಷ್ಟ್ರದ ಗೋಲ್ಡನ್ ಪ್ಲಾಂಟ್ ಪ್ರಶಸ್ತಿ, 1998 ರಲ್ಲಿ ಥೈಲಾಂಡ್ ರಾಣಿಯವರಿಂದ ವಿಶೇಷ ಪ್ರಶಸ್ತಿ, ಮತ್ತು ಜಗತ್ತಿನ ಮಹಿಳಾ ಚಳವಳಿಗೆ ನೀಡಿದ ಅತ್ಯಮೂಲ್ಯ ಕೊಡುಗೆಗಾಗಿ ಸ್ಪೇನ್ ಸರ್ಕಾರದ ಅಲ್ಪನ್ಯೂ ಕೆಮಿನ್ ಪ್ರಶಸ್ತಿಸೇರಿದಂತೆ ನೂರಾರು ಪ್ರಶಸ್ತಿಗಳು ಮತ್ತು ಅನೇಕ ಗೌರವ ಡಾಕ್ಟರೇಟ್ ಪದವಿಗಳು ಲಭ್ಯವಾಗಿವೆ

ಜಾಗತಿಕ ಕೃಷಿಲೋಕದಲ್ಲಿ ಘಟಿಸುತ್ತಿರುವ ವಂಚನೆಗಳ ಕುರಿತಂತೆ ಇವರು ಬರೆಯುತ್ತಿರುವ ಅನೇಕ ಲೇಖನಗಳು ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ನಿಯತವಾಗಿ ಪ್ರಕಟಗೊಳ್ಳುತ್ತಿವೆ.ಇತ್ತೀಚೆಗೆ ಇವರು ಬರೆದ “ ಇಂಡಿಯ ಡಿವೈಡೆಡ್ “ ಕೃತಿ ಭಾರತದ ಎಲ್ಲಾ ರಂಗಗಳ ( ಸಾಮಾಜಿಕ, ರಾಜಕೀಯ, ಧಾರ್ಮಿಕ ವಲಯ) ಹುಳುಕುಗಳತ್ತ ಬೊಟ್ಟು ಮಾಡಿ ತೋರಿಸುತ್ತದೆ. ಜಾಗತೀಕರಣವನ್ನು ಹಾಡಿ ಹೊಗಳಿ, “ ದಿ ವರ್ಲ್ಡ್ ಈಸ್ ಪ್ಲಾಟ್” ಎಂಬ ಕೃತಿ ಬರೆದ ಪುಲಿಟ್ಜರ್ ಪ್ರಶಸ್ತಿ ವಿಜೇತ ಹಾಗೂ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಅಂಕಣಕಾರ ಥಾಮಸ್ ಪ್ರೈಡ್ ಮನ್ ನನ್ನು ಇನ್ನಿಲ್ಲದಂತೆ ತರಾಟೆಗೆ ತೆಗೆದುಕೊಂಡು ಆತನ ಭೌದ್ಧಿಕ ಮಿತಿಯನ್ನು ಎತ್ತಿ ತೋರಿಸಿ ಬರೆದ ಲೇಖನಗಳು, ಅಂತರಾಷ್ಟ್ರೀಯ ಮಟ್ಟದಲ್ಲಿ ಡಾ. ವಂದನಾ ಶಿವ ಅವರ ಪ್ರಖರ ಪ್ರತಿಭೆಯನ್ನು ಎತ್ತಿ ತೋರಿಸಿದವು
ಕೊನೆಯ ಮಾತು- ಇದು ಹತ್ತು ವರ್ಷದ ಹಿಂದೆ ನಡೆದ ಘಟನೆ.. ಮಂಡ್ಯ ನಗರದಲ್ಲಿ ಏರ್ಪಡಿಸಲಾಗಿರುವ    ರೈತ ಮಹಿಳೆಯರ ಸಮಾವೇಶಕ್ಕೆ ಬರುತ್ತಿದ್ದೇನೆ. ಬಂದು ಕಾಣು ಎಂದು  ಒಂದು ಸಂದೇಶವನ್ನು ವಂದನಾಶಿವ, ನನಗೆ ದೆಹಲಿಯಿಂದ  ರವಾನಿಸಿದ್ದರು. ಹುಬ್ಬಳ್ಳಿಯಿಂದ ಹಿಂದಿನ ದಿನವೇ  ಮಂಡ್ಯ ತಲುಪಿ , ಸಮಾವೇಶ ಆಯೋಜಿಸಿದ್ದ ಸಹೋದರಿಯರಾದ ಸುನಂದಾ ಜಯರಾಮ್ ಮತ್ತು ನಾಗರೇವಕ್ಕ ಜೊತೆ ಕೈಜೋಡಿಸಿದ್ದೆ. ಬೆಳಿಗ್ಗೆ  ಹತ್ತು ಗಂಟೆಗೆ ರೈತ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮಕ್ಕೆ , ಎಂಟು ಗಂಟೆಗೆ ಬೆಂಗಳೂರು ನಗರ ಬಿಟದಟರೆ ಸಾಕು  ಎಂದು ಅವರಿಗೆ ಸೂಚಿಸಿದ್ದೆ. ಅದರಂತೆ ಎಂಟುಗಂಟೆಗೆ ಬೆಂಗಳೂರಿನಿಂದ ಕಾರಿನಲ್ಲಿ ಹೊರಟ ವಂದನಾಶಿವ ಅವರಿಗೆ ಚನ್ನಪಟ್ಟಣದಲ್ಲಿ ನಡೆಯುತ್ತಿದ್ದ ರಸ್ತೆ ತಡೆ ಚಳವಳಿಯಿಂದ ನಿಗದಿತ ಸಮಯಕ್ಕೆ ಬರಲಾಗಲಿಲ್ಲ. ಒಂದು ಗಂಟೆ ತಡವಾಗಿ ಬಂದ ಅವರು, ವೇದಿಕೆಯ ಹಿಂಭಾಗದ ಕೊಠಡಿಯಲ್ಲಿ ಅವರಿಗಾಗಿ ತಂದು ಇಡಲಾಗಿದ್ದ  .ಕಾಫಿ, ಬಿಸ್ಕೆಟ್ ಗಳನ್ನು ತಿನ್ನಲು ನಿರಾಕರಿಸಿ ನೇರವಾಗಿ ವೇದಿಕೆಗೆ ಹೋದರು. ಕಾರ್ಯಕ್ರಮ ಮುಗಿಯಲು ಹತ್ತಿರವಾಗುತ್ತಿದ್ದಂತೆ, ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ನನ್ನನ್ನು ವೇದಿಕೆ ಹಿಂಭಾಗಕ್ಕೆ ಬರುವಂತೆ ಕಣ್ಸನ್ನೆಯಲ್ಲಿ ಸೂಚಿಸಿದರು. ಹತ್ತಿರಕ್ಕೆ ಹೋಗುತ್ತಿದ್ದಂತೆ” ಭಯ್ಯಾ ಹೊಟ್ಟೆಗೆ ಬೆಂಕಿ ಬಿದ್ದಂತಾಗಿದೆ. ತಿಂಡಿ ತರಿಸು ಎಂದರು.ಕೂಡಲೇ ನಮ್ಮ ಉದಯ ಟಿ.ವಿ. ವರದಿಗಾರನನ್ನು ಕಳಿಸಿ ಎರಡು ರವೆ ಇಡ್ಲಿ, ಚಹಾ ತರಿಸಿದೆ. ತಿಂಡಿ ತಂದ ನಂತರ ನಾನೇ “ ಮೇಡಂ, ನೀವು ತಿಂಡಿ ತಿಂದು ನಂತರ ವೇದಿಕೆ ಹತ್ತ ಬಹುದಾಗಿತ್ತು” ಎಂದೆ. ಆ ಕ್ಷಣದಲ್ಲಿ ಅವರು ನೀಡಿದ ಉತ್ತರ ಹೀಗಿತ್ತು. “ತಮ್ಮಾ, ನೀವು ಗಂಡಸರು ಗೂಳಿಗಳ ಹಾಗೆ ಸಿಕ್ಕ ಹೊಟೇಲ್ ಗಳಿಗೆ ನುಗ್ಗಿ ಹಸಿವನ್ನು ಹಿಂಗಿಸಿಕೊಳ್ಳುತ್ತೀರಿ. ಆದರೆ, ನಮ್ಮ ಮಹಿಳೆಯರು ಸಮಾವೇಶ ಮುಗಿಸಿ, ತಮ್ಮ ಹಳ್ಳಿಗಳ ಮನೆಗೆ ಹೋಗಿ ಊಟ ಮಾಡುತ್ತಾರೆ,ಮತ್ತು  ತಡೆ ಹಿಡಿದ ಮೂತ್ರ ವಿಸರ್ಜಿಸುತ್ತಾರೆ. ಇಂತಹ ಸಂಕಟಗಳ ಅರಿವು ಇರುವ ನಾನು, ಒಂದು ಗಂಟೆ ಕಾರ್ಯಕ್ರಮಕ್ಕೆ ತಡವಾಗಿ ಬಂದು ತಿಂಡಿ ತಿನ್ನುತಾ ಕೂರುವುದು ಸರಿಯೆ? “ ಇಂತಹ ಆಲೋಚನೆಯನ್ನು ಎಂದೂ ಜನ್ಮದಲ್ಲಿ ಯೋಚಿಸಿರದ ನಾನು ಆ  ಕ್ಷಣಕ್ಕೆ ಮೌನದಲ್ಲಿ ಹೂತು ಹೋದೆ.

ಬುಧವಾರ, ಮೇ 22, 2013

ಮಲೀನ ಗಂಗೆಯ ಗಾಥೆ- ಭಾಗ -2


ಭಾರತದ ನಾಲ್ಕು ರಾಜ್ಯಗಳಲ್ಲಿ ( ಇತ್ತೀಚೆಗೆ ಬಿಹಾರದಿಂದ ಪ್ರತ್ಯೇಖವಾದ ಜಾರ್ಖಂಡ್ ಸೇರಿ ಐದುರಾಜ್ಯ) ನಾಲ್ಕು ಕೋಟಿ ಇಪ್ಪತ್ತು ಲಕ್ಷ ಜನತೆಗೆ ನೀರುಣಿಸಿ ಪೊರೆಯುತ್ತಿರುವ ಗಂಗಾ ನದಿಗೆ ಅವಳ ಮಕ್ಕಳು ವಿಷವುಣಿಸುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ,ಹಾಲುಣಿಸಿದ ಹೆತ್ತ ತಾಯಿಗೆ ಮಕ್ಕಳು ವಿಷವುಣಿಸುವ ದುರಂತ ಕಥನ. ಭಾರತದ ಅಭಿವೃದ್ಧಿಯು ಪಡೆದುಕೊಂಡಿರುವ  ವೇಗ ಮತ್ತು ಧಾರ್ಮಿಕ ಮೌಡ್ಯ  ಈ ಎರಡೂ  ಸಂಗತಿಗಳು ಪರೋಕ್ಷವಾಗಿ ಗಂಗಾ ನದಿಯ ಪತನಕ್ಕೆ ಕಾರಣವಾಗಿವೆ. ಕಲುಷಿತ ಗೊಂಡಿರುವ ಗಂಗಾ ನದಿಯ ಶುದ್ಧೀಕರಣದ ಯೋಜನೆ ಕಳೆದ ಕಾಲು ಶತಮಾನದಿಂದ ನಮ್ಮ ರಾಜಕಾರಣಿಗಳಿಗೆ, ಭ್ರಷ್ಟ ಅಧಿಕಾರಿಗಳಿಗೆ ಲಾಭದಾಯಕ ದಂಧೆಯಾಗಿದೆ. ಹೆಸರಾಂತ ಪತ್ರಕರ್ತ ಪಿ.ಸಾಯಿನಾಥ್ ಹೇಳುತ್ತಾರಲ್ಲ, “ಬರ ಅಂದ್ರೆ ಎಲ್ಲರಿಗೂ ಇಷ್ಟ.” ಹಾಗೆ ನಮ್ಮ ರಸ್ತೆಗಳು ಸದಾ ಕಿತ್ತು ಹೋಗಿರಬೇಕು, ಕೆರೆ, ಕಾಲುವೆ, ಜಲಾಶಯಗಳು ಹೂಳು ತುಂಬಿರಬೇಕು, , ಸರ್ಕಾರಿ ಕಛೇರಿಗಳು ಸೋರುತ್ತಿರಬೇಕು, ಸೇತುವೆಗಳು, ಕುಸಿಯುತ್ತಿರಬೇಕು. ಇವೆಲ್ಲವೂ ನಮ್ಮ ರಾಜಕಾರಣಿಗಳ ಪಾಲಿಗೆ ಸಂಭ್ರಮ ಪಡುವ ಸಂಗತಿಗಳು. ಮಲೀನಗೊಂಡ ಗಂಗಾ ನದಿ ಕೂಡ ತನ್ನ ತಟದಲ್ಲಿರುವ ಜನತೆಗೆ ನೀರುಣಿಸಿದ ಹಾಗೆ, ಕಲುಷಿತಗೊಂಡು , ರಾಜಕಾರಣಿ ಮತ್ತು ಅಧಿಕಾರಿಗಳ ಪಾಲಿಗೆ ಹಣದ ಹೊಳೆಯನ್ನೇ ಹರಿಸುವ  ಅಕ್ಷಯ ಪಾತ್ರೆಯಾಗಿದೆ.
ಗಂಗಾ ನದಿಯ ಹರಿವಿನುದ್ದಕ್ಕೂ ಪ್ರಮುಖ ನದಿಗಳು ಸೇರಿದಂತೆ ಉಪನದಿಗಳು ಸೇರಿ ಸುಮಾರು  ಮುವತ್ತು ನದಿಗಳು ಗಂಗೆಯನ್ನು ಸೇರಿಕೊಳ್ಳುತ್ತಿವೆ. ಇವುಗಳಲ್ಲಿ ಯಮುನಾ, ಗೋಮತಿ, ಆರತಿ, ಭಿಲಾಂಗ್, ರಾಮ್ ಗಂಗಾ, ಭೂರಿಗಂಡತ್, ತಮಸಿ  ದಾಮೋದರ್, ಮಹಾನಂದ, ಗಾಗಾರ, ಸೊನ್, ಕೋಶಿ, ಗಂಡತ್, ಬುಚಿಯ, ನಹರ್, ಕಾಳಿ ಪ್ರಮುಖ ನದಿಗಳು. ಈ ನದಿಗಳು ಸಹ ಕೊಳಚೆಯನ್ನು ತಂದು ಗಂಗಾ ನದಿಗೆ ವಿಲೀನಗೊಳಿಸುತ್ತಿವೆ.
ಇವುಗಳಲ್ಲಿ ಅತ್ಯಂತ ಪ್ರಮುಖ ಕೊಳಚೆ ನದಿಗಳೆಂದರೆ, ಯಮುನಾ, ಗೊಮತಿ, ದಾಮೋದರ್, ಮಹಾನದಿ, ಗಾಗಾರ, ಮತ್ತು ಕೋಶಿ ಮುಖ್ಯವಾದವುಗಳು.


ಹಿಮಾಲಯದ ಯಮುನೋತ್ರಿಯಲ್ಲಿ ಹುಟ್ಟಿ, 1378 ಕಿಲೋಮೀಟರ್ ಉದ್ದ ಹರಿಯುವ ಯಮುನಾ ನದಿ, ದೆಹಲಿ ಮತ್ತು ಆಗ್ರಾ ನದಿಯ ಸಮಸ್ತ ಕೊಳಚೆಯನ್ನು ತಂದು ಅಲಹಾಬಾದಿನ ಸಂಗಮದ ಬಳಿ ಗಂಗೆಯೊಂದಿಗೆ ವಿಲೀನಗೊಳ್ಳುವುದರ ಮೂಲಕ ತನ್ನ ಪಾಲಿನ ವಿಷವನ್ನು ಗಂಗೆಗೆ ಧಾರೆಯೆರೆಯುತ್ತಿದೆ.  ಉತ್ತರ ಪ್ರದೇಶದ ಪಿಬಿಟ್ ಬಳಿಯ ಗೋಮತಿ ತಾಲ್ (ಸರೋವರ) ನಲ್ಲಿ ಹುಟ್ಟುವ ಗೋಮತಿ ನದಿ 600 ಕಿ.ಮಿ.ದೂರ ಹರಿದು ಉತ್ತರ ಪ್ರದೇಶದ ರಾಜಧಾನಿ ಲಕ್ನೋ ನಗರ ಸೇರಿದಂತೆ, ಸುಲ್ತಾನ್ ಪುರ್ , ಭಾನುಪುರ್ ಪಟ್ಟಣಗಳ ಕೊಳಚೆಯನ್ನು ತಂದು ಗಾಜಿಪುರ್ ಬಳಿ ಗಂಗೆಯನ್ನು ಸೇರುತ್ತದೆ.
ಜಾರ್ಖಾಂಡ್ ರಾಜ್ಯದ ಪಾಲಮು ಎಂಬಲ್ಲಿ ಹುಟ್ಟುವ ದಾಮೋದರ್ ನದಿ 600 ಕಿ.ಮಿ. ಹರಿದು, ಜಾರ್ಖಾಂಡ್ ರಾಜ್ಯದ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು ಹೊರ ಹಾಕಿದ ಕೊಳಚೆಯನ್ನು ತಂದು ಪಶ್ಚಿಮ ಬಂಗಾಳದ ಹೂಗ್ಲಿ ಬಳಿ ಗಂಗೆಯೊಂದಿಗೆ ಕೂಡಿಕೊಳ್ಳತ್ತದೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ನಲ್ಲಿ ಜನ್ಮ ತಾಳುವ ಮಹಾನಂದ ನದಿ 360 ಕಿ.ಮಿ. ಹರಿದು ಸಿಲುಗುರಿ ನಗರ ಕೊಳಚೆ ಹೊತ್ತು ಬಂಗ್ಲಾದೇಶದ ಗಡಗಿರಿ ಎಂಬಲ್ಲಿ ಗಂಗಾನದಿಯನ್ನು ಸೇರಿಕೊಳ್ಳತ್ತದೆ.
 ಹಿಮಾಲಯದ ಕಾಲಾಪಾನಿ ಎಂಬಲ್ಲಿ ಹುಟ್ಟುವ ಗಾಗಾರ ನದಿ 323 ಕಿ.ಮಿ. ಹರಿದು ಬಿಹಾರದ ಡೋರಿಗಂಜ್ ಬಳಿ ಗಂಗಾ ನದಿಯನ್ನು ಸೇರಿದರೆ, ಬಿಹಾರದ ದುಃಖದ ನದಿ ಎಂದು ಕರೆಯಲ್ಪಡುವ ಕೋಶಿ ನದಿ, ನೇಪಾಳ ಮತ್ತು ಭಾರತದ ಗಡಿಭಾಗದಲ್ಲಿ ಜನಿಸಿ, 729 ಕಿ.ಮಿ. ಹರಿದು ಗಂಗಾ ನದಿಯೊಂದಿಗೆ ವಿಲೀನಗೊಳ್ಳುತ್ತದೆ. ಈ ಎರಡು ನದಿಗಳಿಂದ ಗಂಗಾ ನದಿಗೆ ಕೊಳಚೆ ಮತ್ತು ಕಸ ಸೇರುತ್ತಿರುವ ಪ್ರಮಾಣದಲ್ಲಿ ಶೇಕಡ 16 ರಷ್ಟು ಕೊಡುಗೆ ಇದೆ. ಹೀಗೆ ಉಪನದಿಗಳ ಕೊಡುಗೆಯ ಜೊತೆಗೆ ವಿಷಕನ್ಯೆಯಾಗಿ ಹರಿಯುತ್ತಿರುವ ಗಂಗಾ ನದಿಯ ಶುದ್ಧೀಕರಣ ಕಾರ್ಯ ಯೋಜನೆ ನಿನ್ನೆ ಮೊನ್ನೆಯದಲ್ಲ. ಇದಕ್ಕೆ 27 ವರ್ಷಗಳ ಸುಧೀರ್ಘ ಇತಿಹಾಸವಿದೆ. 1985 ರಲ್ಲಿ ಅಂದಿನ ಪ್ರದಾನಿ ರಾಜೀವ ಗಾಂಧಿಯವರು ಗಂಗಾ ಕ್ರಿಯಾ ಯೋಜನೆ ( Ganga Action Plan) ಎಂಬ ಯೋಜನೆಯಡಿ ನದಿಯನ್ನು ಶುಚಿಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲು 450 ಕೋಟಿ ರೂ. ಹಣ ನೀಡಿ ಹಸಿರು ನಿಶಾನೆ ತೋರಿಸಿದರು. ಅಂದಿನಿಂದ ಇಂದಿನವರೆಗೆ ಸುಮಾರು 20 ಸಾವಿರ ಕೋಟಿ ರೂಪಾಯಿಗಳನ್ನು ಗಂಗಾ ನದಿಯ ಶುದ್ಧೀಕರಣಕ್ಕಾಗಿ ವೆಚ್ಚ ಮಾಡಲಾಗಿದೆ. ಯೋಜನೆಯ ನೀಲ ನಕ್ಷೆ ತಯಾರಿಸಿ, ಸಲಹೆ ನೀಡುವ ಕಂಪನಿಗಳಿಗೆ 1100 ಕೋಟಿ ರೂಪಾಯಿಗಳನ್ನು ವ್ಯಯಮಾಡಲಾಗಿದೆ.
ಗಂಗಾ ನದಿಯ ತಟದಲ್ಲಿರುವ ನಗರ ಮತ್ತು ಪಟ್ಟಣಗಳ ಕೊಳಚೆ ನೀರನ್ನು ಸಂಸ್ಕರಿಸಿ ನದಿಗೆ ಬಿಡುವುದು, ಕಾರ್ಖಾನೆಗಳ ತ್ಯಾಜ್ಯವನ್ನು ತಡೆಗಟ್ಟುವುದು, ಮತ್ತು ಎಲ್ಲಾ ಪಟ್ಟಣಗಳ ಮತ್ತು ನಗರಗಳ ಒಳಚರಂಡಿಗಳನ್ನು ದುರಸ್ತಿ ಪಡಿಸುವುದು, ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತಾಧಿಗಳಿಂದ ಸೃಷ್ಟಿಯಾಗುವ ಕಸ ಮತ್ತು ಪ್ಲಾಸ್ಟಿಕ್ ಕೈಚೀಲಗಳನ್ನು ಸಂಗ್ರಹಿಸಿ ಸಂಸ್ಕರಿಸುವುದು ಹೀಗೆ ನೂರಾರು ಯೋಜನೆಗಳ ಕನಸುಗಳನ್ನು ಯೋಜನೆಯ ಸಂದರ್ಭದಲ್ಲಿ ಹರಿಯ ಬಿಡಲಾಯಿತು. ಆದರೆ, ಸರ್ಕಾರಗಳ ನಿತ್ಲಕ್ಷ್ಯ ಮತ್ತು ವಿದ್ಯುತ್ ಅಭಾವದಿಂದ ಬಹುತೇಕ ಸಂಸ್ಕರಣಾ ಘಟಕಗಳು ಸ್ಥಗಿತಗೊಂಡಿವೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ ಚರ್ಮ ಹದ ಮಾಡುವ ಕೈಗಾರಿಕೆಗಳಿಂದ ಪ್ರತಿದಿನ 42 ದಶಲಕ್ಷ ರಸಾಯನಿಕಯುಕ್ತ ನೀರು ನದಿಗೆ ಸೇರುತ್ತದೆ. ಕಾನ್ಪುರದಲ್ಲಿರುವ ಸಂಸ್ಕರಣಾ ಘಟಕದ ಸಾಮರ್ಥ್ಯ ದಿನವೊಂದಕ್ಕೆ 9 ದಶಲಕ್ಷ ಕೊಳಚೆ ನೀರನ್ನು ಮಾತ್ರ ಸಂಸ್ಕರಿಸಬಲ್ಲದು. ಈ ಕಾರಣಕ್ಕಾಗಿ 2001 ರಲ್ಲಿ ಅಲಹಾಬಾದ್ ಹೈಕೋರ್ಟ್ ನಲ್ಲಿ  ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಗೆ ಸ್ಪಂದಿಸಿದ ನ್ಯಾಯಾಲಯ ಕಾನ್ಪುರದಲ್ಲಿ 142 ಚರ್ಮ ಹದ ಮಾಡುವ ಕೈಗಾರಿಕೆಗಳನ್ನು ಮುಚ್ಚಿಸಿದೆ.
ಹಿಂದೂ ಧರ್ಮದ ಭಕ್ತರ ಪಾಲಿಗೆ ಸ್ವರ್ಗಕ್ಕೆ ಇರುವ ಏಕೈಕ ಹೆಬ್ಬಾಗಿಲು ಎಂದು ನಂಬಿಕೆ ಪಾತ್ರವಾಗಿರುವ ವಾರಾಣಾಸಿಯಲ್ಲಿ ದಿನವೊಂದಕ್ಕೆ 350 ದಶಲಕ್ಷ ಕೊಳಚೆ ನೀರು ಉತ್ಪಾದನೆಯಾಗುತ್ತಿದೆ. ಸಂಸ್ಕರಿಸುವ ಸಾಮರ್ಥ್ಯ ಕೇವಲ 122 ದಶಲಕ್ಷ ಲೀಟರ್ ಮಾತ್ರ. ಉಳಿದ ನೀರು ನೇರವಾಗಿ ನದಿಯ ಒಡಲು ಸೇರುತ್ತಿದೆ. ಎರಡನಯ ಗಂಗಾ ನದಿಯ ಶುದ್ಧೀಕರಣ ಯೋಜನೆ ಕುಂಟುತ್ತಾ ಸಾಗಿದ ಪರಿಣಾಮ, 2009ರಲ್ಲಿ ಪ್ರದಾನಿ ಡಾ.ಮನಮೋಹನ್ ಸಿಂಗ್ , ಗಂಗಾ ನದಿಯನ್ನು ರಾಷ್ಟ್ರೀಯ ನದಿ ಎಂದು ಘೋಷಿಸಿ, ರಾಷ್ಟ್ರೀಯ ನದಿ ರಕ್ಷಣಾ ಪ್ರಾಧಿಕಾರವನ್ನು ಸ್ಥಾಪಿಸಿದ್ದಾರೆ. ಈ ಮಂಡಳಿಯಲ್ಲಿ 24 ಮಂದಿ ತಜ್ಞರು ಸೇರಿದಂತೆ ಗಂಗಾ ನದಿ ಹರಿಯುವ ಐದು ರಾಜ್ಯಗಳ ಪ್ರದಾನ ಕಾರ್ಯದರ್ಶಿಗಳು, ಕೇಂದ್ರ ನೀರಾವರಿ ಸಚಿವ ಮತ್ತು ಪರಿಸರ ಖಾತೆಯಸಚಿವರು ಸಹ ಸದಸ್ಯರಾಗಿರುತ್ತಾರೆ. 2011 ರಲ್ಲಿ ನದಿ ಶುದ್ಧೀಕರಣಕ್ಕಾಗಿ 14 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಇದೀಗ ವಿಶ್ವ ಬ್ಯಾಂಕ್ ನಿಂದ ಗಂಗಾ ನದಿಯ ಯೋಜನೆಗೆ ಒಂದು ಲಕ್ಷ ಕೋಟಿ ರೂಪಾಯಿಗಳ  ಸಾಲದ ಒಡಂಬಡಿಕೆ ಏರ್ಪಟ್ಟಿದೆ. ಆದರೆ ನದಿಯ ಚಹರೆಯಾಗಲಿ, ಲಕ್ಷಣವಾಗಲಿ ಬದಲಾಗಲಿಲ್ಲ. ಬದಲಾಗುವುದು ನಮ್ಮ ರಾಜಕಾರಣಿಗಳಿಗೆ ಬೇಕಾಗಿಲ್ಲ. ಏಕೆಂದರೆ, ಜಗತ್ತಿನ ಪ್ರಮುಖ ಐದು ಮಲೀನ ನದಿಗಳಲ್ಲಿ ಒಂದಾಗಿರುವ ಗಂಗಾ ನದಿ ಸದಾ ಹಣದ ಹಾಲು ಕರೆಯುವ ಹಸು. ಭಾರತದ ನದಿಗಳಲ್ಲಿ ಹರಿಯುವ ಕೊಳಚೆ ಮತ್ತು ಕಸ ಕೂಡ ನಮ್ಮ ರಾಜಕಾರಣಿಗಳು, ಪಕ್ಷಗಳಿಗೆ ಲಾಭದಾಯಕ ದಂಧೆಯಾಗಿದೆ.
 ಒಂದು ಕ್ವಾರ್ಟರ್ ಅಗ್ಗದ ಸಾರಾಯಿಗೆ, ಒಂದು ದೊನ್ನೆ ಮಾಂಸಕ್ಕೆ,ಮೂರು ಕಾಸಿನ  ಕಳಪೆ ಸೀರೆಗೆ,ಮತ್ತು  ಐದು ನೂರು ಆರತಿ ತಟ್ಟೆಯ ಕಾಸಿಗೆ ನಮ್ಮ ಜನ ಚುನಾವಣೆಗಳಲ್ಲಿ ಮಾರಾಟವಾಗುತ್ತಿರುವಾಗ, ರಾಜಕಾರಣಿಗಳು ಚುನಾವಣೆಗೆ ಹಾಕಿದ ಬಂಡವಾಳವನ್ನು ಯೋಜನೆ ಮುಖಾಂತರ ಬಡ್ಡಿ ಸಮೇತ ಹಿಂದಕ್ಕೆ ಪಡೆಯುತ್ತಿದ್ದಾರೆ. ಗಂಗೆ ಮಾತ್ರ ಮೌನವಾಗಿ ಮಲೀನಗೊಂಡು ಹರಿಯುತ್ತಿದ್ದಾಳೆ., ಮುಂದೆಯೂ ಹರಿಯುತ್ತಾಳೆ.
                                               (ಮುಗಿಯಿತು)

ಸೋಮವಾರ, ಮೇ 20, 2013

ಮಲೀನ ಗಂಗೆಯ ಗಾಥೆ-1





1990 ರಿಂದ 2000 ದ ಇಸವಿಯವರೆಗೆ ಪತ್ರಿಕೋದ್ಯಮ ಬಿಟ್ಟು ಊರಿನಲ್ಲಿ ವಾಸವಾಗಿದ್ದೆ. 2005ರಲ್ಲಿ ನರ್ಮದಾ ನದಿಗೆ ನಿರ್ಮಿಸಲಾದ  ಅಣೆಕಟ್ಟು ಮತ್ತು ಮುಳುಗಡೆಯಿಂದ ಸಂತ್ರಸ್ತರಾದ ರೈತರ ಬವಣೆ ಕುರಿತು ಲೇಖಕಿ ಅರುಂಧತಿ ರಾಯ್ ಬರೆದ “The greter common Good”  ಎಂಬ ಕೃತಿಯನ್ನು ಓದುತ್ತಿದ್ದೆ. ಲೇಖಕಿ ತನ್ನ ಕೃತಿಗೆ ಬರೆದ ಪ್ರಸ್ತಾವನೆಯಲ್ಲಿ  “ ಈ ಕ್ಷಣಕ್ಕೆ ನನ್ನ ಕೃತಿಯನ್ನು ನೀವು ಕೆಳಗಿಟ್ಟರೂ ಚಿಂತೆಯಿಲ್ಲ ಆದರೆ, ಪೆಟ್ರಿಕ್ ಮ್ಯಾಕುಲೆಯವರ “ Silenced Rivers” ಕೃತಿಯನ್ನು ಓದಲು ಮರೆಯಬೇಡಿ” ಎಂದು ಬರೆದಿದ್ದ  ಮಾತು ನನ್ನನ್ನು ಆ ಕ್ಷಣಕ್ಕೆ ಹಿಡಿದು ನಿಲ್ಲಿಸಿಬಿಟ್ಟಿತು. ಆ ಕೃತಿಗಾಗಿ ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಓರಿಯಂಟ್  ಲಾಂಗ್ ಮನ್ ಪ್ರಕಾಶನ ಸಂಸ್ಥೆಗೆ ಐದು ಬಾರಿ ಬೇಟಿನೀಡಿದ್ದೆ. ನನ್ನ ಕುತೂಹಲ, ನಿರಾಶೆ ನೋಡಲಾರದೆ. ಪ್ರಕಾಶನ ಸಂಸ್ಥೆ ಒಂದು ಪುಸ್ತಕವನ್ನು ಹೈದರಾಬಾದಿನಿಂದ ತರಿಸಿಕೊಟ್ಟಿತು. ಆ ವೇಳೆಗೆ ಕೃತಿಗಳು ಮುಗಿದುಹೋಗಿದ್ದವು. ಮರು ಮುದ್ರಣಗೊಂಡಿರಲಿಲ್ಲ. ಆ ಕೃತಿಯನ್ನು ಓದಿದ ನಂತರ ನದಿಗಳ ಕುರಿತು ನನ್ನ ಮನೋಭಾವ ಬದಲಾಯಿತು. ಅಣೆಕಟ್ಟುಗಳ ನೆಪದಲ್ಲಿ ಜಗತ್ತಿನ ಜೀವನದಿಗಳನ್ನು ಕೊಲ್ಲುವ ಬಗೆ, ಆಳುವ ಸರ್ಕಾರಗಳ ಬ್ರಹ್ಮಾಂಡ ಭ್ರಷ್ಟಾಚಾರ, ಮುಗ್ಧಜನರಿಗೆ ಆದ ವಂಚನೆಗಳು, ಅತಂತ್ರರಾದ ಆದಿವಾಸಿಗಳು, ಮುಳುಗಡೆಯಾದ ಅರಣ್ಯಪ್ರದೇಶ ಹೀಗೆ ಸತತ ಇಪ್ಪತ್ತು ವರ್ಷ ಜಗತ್ತನ್ನು ಸುತ್ತಿ ನದಿಗಳ ನೋವಿನ ಕಥನವನ್ನು ದಾಖಲಿಸಿದ್ದಾನೆ. ಈ ಕೃತಿಯಿಂದ ಪ್ರೇರಣೆಗೊಂಡು ನಾನು ಇತ್ತೀಚೆಗೆ “ ಜೀವನದಿಗಳ ಸಾವಿನ ಕಥನ” ಎಂಬ ಕೃತಿಯನ್ನು ಬರೆದೆ.

ನನ್ನ ಪಾಲಿಗೆ ನದಿಗಳೆಂದರೆ, ಒಂದು ರೀತಿ ವ್ಯಸನದಂತಾಗಿದೆ. ದೇಶದ ಅನೇಕ ನದಿಗಳನ್ನು ಹಿಂಬಾಲಿಸಿಕೊಂಡು ಹುಚ್ಚನಂತೆ ಅಲೆದಾಡಿದ್ದುಂಟು. ಕಾಶ್ಮೀರದ ಜೀಲಂ, ಪಂಜಾಬಿನ ಸೆಟ್ಲೇಜ್, ಅಸ್ಸಾಮಿನ ಬ್ರಹ್ಮಪುತ್ರ, ಮಧ್ಯಭಾರತದ ನರ್ಮದಾ ಇವುಗಳನ್ನು ಹೊರತುಪಡಿಸಿ ಉಳಿದ ಯಾವ ನದಿಗಳು ನನ್ನ ಪಾಲಿಗೆ ಅಪರಿಚಿತವಾಗಿ ಉಳಿದಿಲ್ಲ. ಭಾರತದ ನದಿಗಳಲ್ಲಿ ಕಾವೇರಿ, ಗೋದಾವರಿ, ಗಂಗಾ ನದಿಗಳ ಮೇಲೆ ನನಗೆ ಇನ್ನಿಲ್ಲದ ಮೋಹ. ಕಾವೇರಿಯನ್ನು ಭಾಗಮಂಡಲದ ತಲಕಾವೇರಿಯಿಂದ ತಮಿಳುನಾಡಿನ ಕಾವೇರಿಪಟ್ಟಣದ ಪೂಂಪುಹಾರ್ ಬಳಿ ಸಮುದ್ರ ಸೇರುವವರೆಗೆ ಹಿಂಬಾಲಿಸಿದ್ದೇನೆ. ಗೋದಾವರಿಯನ್ನು ಮಹಾರಾಷ್ಟ್ರದ ನಾಸಿಕ್ ಬಳಿಯ ತ್ರಯಂಭಕೇಶ್ವರದಿಂದ ಹಿಡಿದು ಆಂಧ್ರದ ರಾಜಮಂಡ್ರಿಯವರೆಗೆ ಬೆಂಬತ್ತಿದ್ದೇನೆ. ಅದೇ ರೀತಿ  ಉತ್ತರಾಂಚಲದ ರುದ್ರಪ್ರಯಾಗದದಿಂದ ಹಿಡಿದು ಪಶ್ಚಿಮ ಬಂಗಾಳದ ಕೊಲ್ಕತ್ತ ನಗರದವರೆಗೆ ಸುಧೀರ್ಘ 2.500 ಕಿಲೋಮೀಟರ್ ವರೆಗೆ, ಮೋಹಿಸಿದ ಹುಡುಗಿಯನ್ನು ಬೆನ್ನು ಹತ್ತುವ ಹುಚ್ಚು ಪ್ರೇಮಿಯ ಹಾಗೆ ಸತತ ನಾಲ್ಕು ವರ್ಷಗಳ ಕಾಲ ಗಂಗಾ ನದಿಯ ತಟದ ಉದ್ದಕ್ಕೂ ತಿರುಗಾಡಿ ಎದೆಭಾರವಾಗುವಷ್ಟು ನೋವನ್ನು ತುಂಬಿಕೊಂಡು ಬಂದಿದ್ದೇನೆ.

ಇಂದು ದೇಶದ ಮಹಾನಗರಗಳ ನಡುವೆ ಹರಿದು ಅವಶೇಷಗಳಂತೆ ಕಾಣುವ ಹಾಗೂ   ಕಾಣೆಯಾದ ನದಿಗಳ ಇತಿಹಾಸವ ಒಂದು ಸಂಪುಟವಾಗಬಲ್ಲದು. ಬೆಂಗಳೂರಿನ ವೃಷಭಾವತಿ, ಚೆನ್ನೈ ನಗರದ ಕೂವಂ ಮತ್ತು ಅಡ್ಯಾರ್ ನದಿಗಳು, ಮಧುರೈ ನಗರದ ವೈಗೈ ನದಿ, ಅಹಮದಾಬಾದ್ ನಡುವೆ ಇರುವ ಸಬರಮತಿ, ಗೋವಾದ ಪಣಜಿ ಸಮೀಪ ಹರಿಯುವ ಮಾಂಡೊವಿ, ದೆಹಲಿ ಮತ್ತು ಆಗ್ರಾ ನಗರಗಳ ತಟದಲ್ಲಿ ಹರಿಯುವ ಯುಮುನಾ. ಹೈದರಾಬಾದಿನ ಮೂಸಾ ನದಿ ಇವುಗಳನ್ನು ಗಮನಿಸಿದರೆ, ಇವುಗಳು ನದಿಗಳಾ?  ಅಥವಾ ಮಹಾನ್ ಗಟಾರಗಳೊ? ಎಂಬ ಸಂಶಯ ಉಂಟಾಗುತ್ತದೆ.
ಇವೊತ್ತಿನ ದಿನಗಳಲ್ಲಿ ಪರಿಸರ ಕುರಿತು ಮಾತನಾಡುವುದು ಅಥವಾ ಬರೆಯುವುದು ಸಿನಿಕತನವೆಂಬಂತೆ ತೋರುತ್ತದೆ. ಆಧುನಿಕ ಬದುಕಿನ ಉಪಭೋಗದಲ್ಲಿ ಮುಳುಗಿ ಏಳುವವರ ದೃಷ್ಟಿಯಲ್ಲಿ ಪಕೃತಿ ಇರುವುದೆ; ನಮ್ಮ ವೈಯಕ್ತಿಕ ಭೋಗಕ್ಕೆ ಎಂಬಂತಾಗಿದೆ. ಈ ದಿನಗಳಲ್ಲಿ  ನಾವು ಜಗತ್ತನ್ನು ನೋಡಲು ದೇಹಕ್ಕೆ  ಇರುವ ಎರಡು ಕಣ್ಣುಗಳಷ್ಟೇ ಸಾಲದು, ಹೃದಯದ ಒಳಗಣ್ಣನ್ನು ತೆರೆದು ನೋಡಬೇಕಾಗಿದೆ. ಈ ನದಿಗಳಿಗೆ ಮಾತು ಅಥವಾ ಅಕ್ಷರ ಬಂದಿದ್ದರೆ, ಲಿಖಿತ ಇಲ್ಲವೆ ಮೌಖಿಕ ಪಠ್ಯದ ರೂಪದಲ್ಲಿ ಮನುಕುಲದ ಬೃಹತ್ ಹೀನ ಚರಿತ್ರೆಯೊಂದು ಈ ಜಗತ್ತಿನಲ್ಲಿ ಸೃಷ್ಟಿಯಾಗುತ್ತಿತ್ತು.

ಮನುಷ್ಯನ ಏಳುಬೀಳುಗಳಿಗೆ, ಸಾಮ್ರಾಜ್ಯದ ಉದಯ ಮತ್ತು ಪತನಗಳಿಗೆ, ಅರಮನೆ ಮತ್ತು ಗುಡಿಸಲುಗಳ ದುಃಖ ದುಮ್ಮಾನಗಳಿಗೆ, ಜನಸಾಮಾನ್ಯರ ನಿಟ್ಟುಸಿರುಗಳಿಗೆ ಮೌನ ಸಾಕ್ಷಿಯಾಗಿ, ಶತಮಾನಗಳುದ್ದಕ್ಕೂ   ತಣ್ಣಗೆ ಹರಿದ ನದಿಗಳ ಒಡಲೊಳಗೆ ಎಂತಹ ಚರಿತ್ರೆಗಳಿರಬಹುದು? ಒಮ್ಮೆ ಯೋಚಿಸಿನೋಡಿ. ಇಂತಹ ಬೃಹತ್ ಚರಿತ್ರೆಯನ್ನು ತನ್ನೊಡಲೊಳಗೆ ಪೋಷಿಸಿಕೊಂಡು ಬಂದಿರುವ  ನಮ್ಮ ಗಂಗಾ ನದಿಯ ದುರಂತ ಕಥನ ಅಕ್ಷರ ಮತ್ತು ಮಾತಿಗೆ ಮೀರುವಂತಹದ್ದು. ಜಗತ್ತಿನ ಮಹಾ ನದಿಗಳಾದ ನೈಲ್ ಮತ್ತು ಅಮೆಜಾನ್ ನದಿಗಳ ಜೊತೆ ಪ್ರಖ್ಯಾತಿ ಹೊಂದಿರುವ ಗಂಗಾ ನದಿಗೆ ಅಂಟಿಕೊಂಡ ಪುರಾಣ ಕಥೆಗಳು, ಐತಿಹ್ಯಗಳು, ಧಾರ್ಮಿಕ ನಂಬಿಕೆಗಳು, ಅದರ ಆಳ, ಉದ್ದ, ವಿಸ್ತಾರ ಇವೆಲ್ಲವೂ ಶಾಪವಾಗಿ ಪರಿಣಮಿಸಿದವು

ಸಮುದ್ರ ಮಟ್ಟದಿಂದ 12 ಸಾವಿರ ಎತ್ತರದ ಹಿಮಾಲಯ ತಪ್ಪಲಲ್ಲಿ ಹುಟ್ಟಿ, 255 ಕಿಲೋಮೀಟರ್ ಉದ್ದ ಕೆಳ ಭಾಗಕ್ಕೆ ಭಾಗಿರಥಿ ನದಿಯಾಗಿ ಹರಿದು, ಉತ್ತರಕಾಂಡದ ರುದ್ರಪ್ರಯಾಗದ ಸಮೀಪ ಅಲಕನಂದಾ  ಮತ್ತು ಮಂದಾಕಿನಿ ನದಿಗಳನ್ನು ಕೂಡಿಕೊಂಡು ಗಂಗಾನದಿಯಾಗಿ ಹರಿಯುತ್ತದೆ. ನಂತರ ಅಲಹಾಬಾದ್ ನಗರದಲ್ಲಿ ಮತ್ತೊಂದು ಪ್ರಮುಖ ನದಿಯಾದ ಯಮುನೆಯನ್ನು ಸೇರಿಕೊಂಡು, 2500 ಕಿಲೋ ಮೀಟರ್ ಉದ್ದ ಹರಿಯುವ ಗಂಗಾ ನದಿ ಈ ದೇಶದ 42 ಕೋಟಿ ಜನರ ಜೀವನಾಡಿಯಾಗಿದೆ. ಪ್ರತಿ ದಿನ ಈ ನದಿಯಲ್ಲಿ ಒಂದುಕೋಟಿ ಹಿಂದೂ ಭಕ್ತರು ಪವಿತ್ರ ಸ್ನಾನದ ಹೆಸರಿನಲ್ಲಿ ಮುಳುಗಿ ಏಳುತ್ತಿದ್ದಾರೆ. ತಾನು ಹರಿಯುವ ನಾಲ್ಕು ರಾಜ್ಯಗಳಾದ ಉತ್ತರಕಾಂಡ, ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳದ ಜನರ ನೀರಿನ ದಾಹ ತೀರಿಸಿ, ಅವರ ನೆಲಗಳಿಗೆ ನೀರುಣಿಸಿ, ಅವರು ವಿಸರ್ಜಿಸಿದ ಮಲ, ಮೂತ್ರ ಮತ್ತು ಅಪಾಯಕಾರಿ ವಿಷಯುಕ್ತ ತ್ಯಾಜ್ಯಗಳನ್ನು ಹೊತ್ತು ಕಡಲು ಸೇರುವ ಗಂಗಾ ನದಿ ಈಗ ಜೀವನದಿಯಾಗುವ ಬದಲು ವಿಷಕನ್ಯೆಯಂತಹ ನದಿಯಾಗಿದೆ.
ಕಳೆದ 25 ವರ್ಷಗಳಲ್ಲಿ ನದಿಗೆ ಸೇರುತ್ತಿರುವ ತ್ಯಾಜ್ಯ ಮೂರು ಸಾವಿರ ಪಟ್ಟು ಹೆಚ್ಚಾಗಿದೆ. ಈ ಕೆಳಗಿನ ಅಂಶಗಳು  ನಮ್ಮನ್ನು ಬೆಚ್ಚಿ ಬೀಳಿಸುತ್ತದೆ.
ಪ್ರತಿ ದಿನ ಉತ್ತರಕಾಂಡದ 14 ಮಹಾನ್ ಚರಂಡಿ ಅಥವಾ ಗಟಾರಗಳಿಂದ 440 ದಶಲಕ್ಷ ಲೀಟರ್ ಕೊಳಚೆ ನೀರು, 42 ಟನ್ ಕಸ ಹಾಗೂ ಉತ್ತರ ಪ್ರದೇಶದ 45 ಗಟಾರಗಳಿಂದ 3289 ದಶಲಕ್ಷ ಲೀಟರ್ ಕೊಳಚೆ ಮತ್ತು 761 ಟನ್ ಕಸ ಗಂಗೆಯ ಒಡಲು ಸೇರುತ್ತಿದೆ. ಅದೇ ರೀತಿ ಬಿಹಾರದಲ್ಲಿ 25 ಗಟಾರಗಳಿಂದ 579 ದಶಲಕ್ಷ ಲೀಟರ್ ಕೊಳಚೆ ಮತ್ತು 99 ಟನ್ ಕಸ, ಮತ್ತು ಪಶ್ಚಿಮ ಬಂಗಾಳ ರಾಜ್ಯದ 54 ಗಟಾರಗಳಿಂದ 1779 ದಶಲಕ್ಷ ಲೀಟರ್ ಕೊಳಚೆ, 97 ಟನ್ ಕಸ ನದಿಗೆ ಸೇರುತ್ತಿದೆ. ಇದರಿಂದಾಗಿ ನದಿಯ ನೀರಿನಲ್ಲಿ ಆಮ್ಲಜನಕದ ಬಿಡುಗಡೆಯ ಪ್ರಮಾಣ  ಮೈನಸ್ ಆರಕ್ಕೆ ಕುಸಿದಿದೆ.

ಗಂಗಾ ನದಿಯ ಒಡಲು ಸೇರುತ್ತಿರುವ  ಕೊಳಚೆ ನೀರು ಮತ್ತು ವಿಷಯುಕ್ತ ವಸ್ತುಗಳಲ್ಲಿ ಜವಳಿ ಉದ್ಯಮದಿಂದ ಶೇಕಡ 2, ಚರ್ಮ ಹದ ಮಾಡುವ ಕೈಗಾರಿಕೆಗಳಿಂದ ಶೇಕಡ 5, ಸಕ್ಕರೆ ಕಾರ್ಖಾನೆಗಳಿಂದ ಶೇಕಡ 19, ರಸಾಯನಿಕ ಕಾರ್ಖಾನೆಗಳಿಂದ ಶೇಕಡ 20 , ಮದ್ಯಸಾರ ತಯಾರಿಸುವ ಡಿಸ್ಟಲರಿಗಳಿಂದ ಶೇಕಡ 7 ರಷ್ಟು, ಕಾಗದ ಕಾರ್ಖಾನೆಗಳಿಂದ ಶೇಕಡ 40 ರಷ್ಟು, ಆಹಾರ ಮತ್ತು ತಂಪು ಪಾನಿಯ ಘಟಕಗಳಿಂದ ಶೇಕಡ 1 ರಷ್ಟು ಮತ್ತು ಇತರೆ ಘಟಕಗಳಿಂದ ಶೇಕಡ 6 ರಷ್ಟು ಪಾಲು ಇದೆ ಎಂದು ವಿಜ್ಙಾನಿಗಳು ಅಧ್ಯಯನದಿಂದ ದೃಢಪಡಿಸಿದ್ದಾರೆ. ಹೀಗಾಗಿ ದಿವೊಂದಕ್ಕೆ 138 ಮಹಾನ್ ಚರಂಡಿಯ ಕಾಲುವೆಗಳಿಂದ 6087 ದಶಲಕ್ಷ ಲೀಟರ್ ಕೊಳಚೆ ಮತ್ತು 999 ಟನ್ ಕಸ ಗಂಗಾ ನದಿಯ ಪಾಲಾಗುತ್ತಿದೆ ಎಂದು ಅಂದಾಜಿಸಲಾಗಿದೆ.


ನಮ್ಮನ್ನಾಳುವ ಸರ್ಕಾರಗಳಿಗೆ ಕೈಗಾರಿಕಾ ನೀತಿಯಲ್ಲಿ ಕಡಿವಾಣವಿಲ್ಲದ ಅವಿವೇಕತನ ಮತ್ತು ಸಾಮಾಜಿಕ ಹಾಗೂ ಧಾರ್ಮಿಕ ನಂಬಿಕೆಗಳು ಗಂಗಾನದಿಯ ಪಾಲಿಗೆ ಶತ್ರುಗಳಾಗಿವೆ. ಅಕ್ರಮ ಸಂತಾನದಿಂದ ಹುಟ್ಟಿದ ಹಸುಗೂಸುಗಳು, ಸತ್ತು ಹೋದ ದನಕರುಗಳ ಕಳೆಬರಗಳು ಹಾಗೂ ಗಂಗಾ ನದಿಗೆ ಎಸೆದರೆ, ಸತ್ತವರು ಸ್ವರ್ಗ ಸೇರುತ್ತಾರೆ ಎಂಬ ಮೂಡ ನಂಬಿಕೆಗಳಿಂದ ನದಿಗೆ ಬಿಸಾಡಿದ ಹೆಣಗಳು ಇವೆಲ್ಲವನ್ನೂ ನೋಡಿದರೆ, ಪುಣ್ಯ ನದಿ ಎನಿಸಿಕೊಳ್ಳುವ, ಪಾಪನಾಶಿನಿ ಎನ್ನುವ ಗಂಗೆಯ ನೀರನ್ನು ಕೊಲ್ಕತ್ತ ನಗರದ ಬಳಿ ಕೈಯಿಂದ ಮುಟ್ಟಲು ಅಸಹ್ಯವಾಗುತ್ತದೆ. ರುದ್ರಪ್ರಯಾಗದ ಬಳಿ ಸ್ಪಟಿಕದ ನೀರಿನಂತೆ ಹರಿಯುವ ಗಂಗಾನದಿ, ಕೊಲ್ಕತ್ತ ನಗರದ ತಟದಲ್ಲಿ ಹೂಗ್ಲಿ ನದಿ ಹೆಸರಿನಲ್ಲಿ ಕಪ್ಪಗೆ ಹರಿಯುತ್ತದೆ. ಕೊಲ್ಕತ್ತದ ಹೌರ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಅಥವಾ ಬೇಲೂರು ಮಠದ ರಾಮಕೃಷ್ಣ ಆಶ್ರಮದ ಹಿಂದೆ ಹರಿಯುವ ನದಿಯ ನೀರು ನೋಡಿದಾಗ ಕಣ್ಣಲ್ಲಿ ನೀರು ಬರುತ್ತದೆ.
       ( ಮುಂದುವರಿಯುವುದು)


ಶನಿವಾರ, ಮೇ 18, 2013

ಮಾನ್ಸಂಟೊ ಮಹಾ ಮಾರಿಯ ಕಥನ-3

  1. ಕಳೆದ ಆರು ತಿಂಗಳಿಂದ  ಪಾಶ್ಚಿಮಾತ್ಯ ರಾಷ್ಟ್ರಗಳು ಏಷ್ಯಾ ರಾಷ್ಟ್ರಗಳ ಮೇಲೆ ಶತಮಾನಗಳ ಕಾಲ ನಡೆಸಿದ ದೌರ್ಜನ್ಯ ಕುರಿತಂತೆ ಅಧ್ಯಯನ ಮಾಡುತ್ತಿದ್ದೇನೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯಾಗಿರುವ ಲೇಖಕ ಹಾಗೂ ನ್ಯೂಯಾರ್ಕ್ ಟೈಮ್ಸ್ ಮತ್ತು ಗಾರ್ಡಿಯನ್ ಪತ್ರಿಕೆಗಳಿಗೆ ಅಂಕಣಕಾರರಾಗಿರುವ ಪಂಕಜ್ ಮಿಶ್ರಾ ಬರೆದಿರುವ “ From The Ruins Of Empire’ ( The Revolt Against The West And The Remaking of Asaia) ಎಂಬ ಕೃತಿ ಪಶ್ಚಿಮದ ಜಗತ್ತು ನಮ್ಮ ಏಷ್ಯಾ ರಾಷ್ಟ್ರಗಳ ಸಂಸ್ಕೃತಿ ,ಇಲ್ಲಿನ ಸಂಪತ್ತು ಮತ್ತು ಜೀವ ಜಗತ್ತನ್ನು ದೋಚಿದ ಬಗ್ಗೆ ಲೇಖಕ ತುಂಬಾ ರೋಚಕವಾಗಿ  ಬರೆದಿದ್ದಾನೆ.  ಈ ಕೃತಿಯಲ್ಲಿ 18 ನೇ ಶತಮಾನದಲ್ಲಿ ಪ್ರಾನ್ಸಿನ ನೆಪೋಲಿಯನ್, ಈಜಿಪ್ತ ರಾಷ್ಟ್ರದ ಮೇಲೆ ದಂಡೆತ್ತಿ ಹೋಗಿ ಅಲ್ಲಿನ ಇಸ್ಲಾಂ ಧರ್ಮವನ್ನು ಹಾಗೂ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕನ್ನು ಕಲುಷಿತಗೊಳಿಸಿದ ಬಗ್ಗೆ ಕೂಡ ಒಂದು ಅಧ್ಯಾಯವಿದೆ. ಈ ಸಂಗತಿಯನ್ನು ಪಂಕಜ್ ಮಿಶ್ರಾ, ನಮ್ಮ ನಡುವಿನ ಪ್ರಖ್ಯಾತ ಚಿಂತಕ ಎಡ್ವರ್ಡ್ ಸೈಯದ್ ರವರ “ ಓರಿಯಂಟಲಿಸಂ” ಕೃತಿಯಿಂದ ಚರ್ಚೆಗೆ ಎತ್ತಿಕೊಂಡಿದ್ದಾನೆ. ಎಡ್ವರ್ಡ್ ಸೈಯದ್ ಎಲ್ಲಾ ಸಂಗತಿಗಳನ್ನು ಅತ್ಯಂತ  ತಣ್ಣನೆಯ ಧ್ವನಿಯಲ್ಲಿ ಚರ್ಚೆ ಮಾಡಿದರೆ, ಪಂಕಜ್ ಮಿಶ್ರಾ ಅತ್ಯಂತ ಭಾವಾವೇಶದಿಂದ ಚರ್ಚಿಸಿದ್ದಾನೆ. ಈಸ್ಟ್ ಇಂಡಿಯಾ ಕಂಪನಿ, ಪೋರ್ಚುಗೀಸರು, ಡಚ್ಚರು, ಪ್ರೆಂಚರು ಏಷ್ಯಾವನ್ನು ದೋಚಿದ ಸಂಗತಿಯ ವಿವರಗಳನ್ನು ಕೊಡುತ್ತಾ ಹೋಗುವ ಪರಿ ನಮ್ಮನ್ನು ಬೆರುಗುಗೊಳಿಸುತ್ತದೆ.. ಈ ಇಪ್ಪತ್ತೊಂದನೇ ಶತಮಾನದಲ್ಲಿ ನಿಂತು ಅಂದಿನ ಚರಿತ್ರೆಯ ದುರಂತಗಳನ್ನು ಅವಲೋಕಿಸಿದಾಗ, ನನಗೆ ಏನೇನೂ ಬದಲಾವಣೆ ಕಾಣುವುದಿಲ್ಲ. ಅಂದು ಬ್ರಿಟೀಷರು, ಪ್ರೆಂಚರು, ಪೋರ್ಚುಗೀಸರು, ಡಚ್ಚರು ಇದ್ದರು ಇಂದು ಅವರ ಮುಂದುವರಿದ ಸಂತತಿಯ ಹಾಗೆ ಅಥವಾ ಪ್ರತಿನಿಧಿಗಳ ಹಾಗೆ ಬಹುರಾಷ್ಟ್ರೀಯ ಕಂಪನಿಗಳು ಇವೆ ಅಷ್ಟೆ.

    ಬಹು ರಾಷ್ಟ್ರೀಯ ಕಂಪನಿಗಳ ಹುನ್ನಾರಗಳು ಅರ್ಥ ನಾವು ಮಾಡಿಕೊಳ್ಳಲು ಸಾಧ್ಯವಾಗದಷ್ಟು ಸಂಕೀರ್ಣವಾಗಿವೆ. ಉದಾಹರಣೆಗೆ ಮಾನ್ಸಂಟೊ ಅಥವಾ ಇನ್ನಿತರೆ ಕಂಪನಿಗಳು ತಮ್ಮ ಬೀಜ ಸಾಮ್ರಾಜ್ಯದ ವಿಸ್ತಾರಕ್ಕಾಗಿ  ಹೊರಡಿಸಿರುವ ಹೇಳಿಕೆಗಳನ್ನು ಗಮನಿಸಿ. ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಧಾನ್ಯಗಳನ್ನು ಬೆಳೆಯಬೇಕು. ಸಾಂಪ್ರದಾಯಕ ಬೀಜಗಳಿಂದ ಆಹಾರ ಉತ್ಪಾದನೆಯನ್ನು ದ್ವಿಗುಣಗೊಳಿಸಲು ಸಾಧ್ಯವಿಲ್ಲ ಹಾಗಾಗಿ ಟರ್ಮಿನೇಟರ್ ತಂತ್ರಜ್ಙಾನ ದಿಂದ ( ನಿರ್ಬೀಜಿಕರಣ) ತಯಾರಿಸಿದ ಹೈಬ್ರಿಡ್ ಬೀಜಗಳು ಮತ್ತು ಜೈವಿಕ ತಂತ್ರಜ್ಞಾನದಿಂದ ತಯಾರಿಸಲಾದ ಕುಲಾಂತರಿ ತಳಿಗಳ ಬೀಜ ಗಳಿಂದ ಕೃಷಿ ಉತ್ಪಾದನೆಯನ್ನು ಹೆಚ್ಚಿಸಿ ಜಗತ್ತಿನ ಹಸಿವನ್ನು ನೀಗಿಸುವುದು ನಮ್ಮ ಗುರಿ ಎಂದು ಬಹುತೇಕ ಕಂಪನಿಗಳು ಹೇಳಿಕೊಂಡಿವೆ, ( ಇವುಗಳಲ್ಲಿ ಮಾನ್ಸಂಟೊ, ಕಾರ್ಗಿಲ್ ಪಿಪ್ಜರ್ ಕಂಪನಿಗಳು ಮುಂಚೂಣಿಯಲ್ಲಿವೆ)
    ಈ ಕಂಪನಿಗಳ ಆಶಯ ನಿಜವೇ ಆಗಿದ್ದರೆ, ಹಸಿವನ್ನು ನೀಗಿಸಲು, ಭತ್ತ, ಗೋಧಿ, ಮೆಕ್ಕೆಜೋಳ ಬೆಳೆಗಳ ಮೇಲೆ ಮಾತ್ರ ತಮ್ಮ ಗಮನವನ್ನು ಕೇಂದ್ರೀಕರಿಸಬೇಕಿತ್ತು. ತರಕಾರಿ ಬೆಳೆಗಳು, ಎಣ್ಣೆಕಾಳು ಬೆಳೆಗಳ ಬೀಜಗಳನ್ನು ಕುಲಾತರ ಗೊಳಿಸುವ ಅಗತ್ಯವೇನಿತ್ತು?

    ಜಗತ್ತಿನ ಕೃಷಿಲೋಕದ ಸರಪಳಿಯ ಕೊಂಡಿಯಾಗಿರುವ ಮತ್ತು ರೈತರ ಜೀವನಾಡಿಯಾಗಿರುವ ಬೀಜ ಸ್ವಾತಂತ್ರ್ಯವನ್ನು ಹರಣ ಮಾಡಿದರೆ, ಈ ಕಂಪನಿಗಳು ಇಡೀ ವಿಶ್ವವನ್ನು ಗೆದ್ದಂತೆ. ಹಾಗಾಗಿ ಜಗತ್ತಿನ ಎಲ್ಲಾ ವಿಧವಾದ ಸಾಂಪ್ರದಾಯಿಕ ಬೀಜಗಳಿಗೆ ಇತರೆ ಪ್ರಾಣಿ ಇಲ್ಲವೆ ಸಸ್ಯ ಪ್ರಭೇದಗಳ ವಂಶವಾಹಿಗಳನ್ನು  ಜೋಡಿಸಿ, ಬೀಜಗಳನ್ನು ನಿರ್ಬೀಜಿಕರಣಗೊಳಿಸುವುರ ಮೂಲಕ ಅವುಗಳ ಪುನರತ್ಪತ್ತಿಯ ಶಕ್ತಿಯನ್ನು ಕೊಲ್ಲಲಾಗುತ್ತಿದೆ.
    ಮಾನ್ಸಂಟೊ ಸೇರಿದಂತೆ ಬಹುರಾಷ್ಟ್ರೀಯ ಕಂಪನಿಗಳದು ಒಂದೇ ಅಜೆಂಡಾ. ಅದು ಜಗತ್ತಿನೆಲ್ಲೆಡೆ, ಏಕರೂಪಿ ಬೆಳೆ ಸಂಸ್ಕೃತಿ,, ಏಕರೂಪಿ ಆಹಾರ ಸಂಸ್ಕೃತಿ, ಏಕರೂಪಿ ಉಡುಪಿನ ಸಂಸ್ಕತಿ ಇರಬೇಕು. ಅಲ್ಲಿ ವೈವಿದ್ಯತೆಗೆ ಅವಕಾಶವಿಲ್ಲ. ಹಾಗಾಗಿ ನಮ್ಮ ಕೈಗೆ  ತಿನ್ನಲು ಪಿಜ್ಜಾ, ಬರ್ಗರ್, ಕೆಂಟುಕಿ ಚಿಕನ್  ಕೊಟ್ಟಿವೆ, ಕುಡಿಯಲು ಪೆಪ್ಸಿ, ಕೊಕಾ ಕೋಲಗಳನ್ನು ನೀಡಿವೆ, ಉಡಲು ಜೀನ್ಸ್, ಬರ್ಮುಡ ಚಡ್ಡಿಗಳಿವೆ. ಇನ್ನೇನು ಬೇಕು? ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಆಧುನಿಕ ತಲೆಮಾರನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ. ಇದರ ಹಿಂದೆ ಇಡೀ ಜಗತ್ತನ ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ಹುನ್ನಾರವಿದೆ. ಅದನ್ನು ಅರ್ಥ ಮಾಡಿಕೊಳ್ಳುವ ಮನಸ್ಸುಗಳು ಬೇಕಾಗಿವೆ. ಹಿಂದಿನ ಕಾಲದಲ್ಲಿ ಒಂದು ರಾಷ್ಟ್ರವನ್ನು ವಶಪಡಿಸಿಕೊಳ್ಳಲು ಅಪಾರ ಪ್ರಮಾಣದ ಸೇನೆ, ಯುದ್ಧ ಸಾಮಾಗ್ರಿಗಳಾದ ಶಸ್ತ್ರಾಸ್ತ್ರಗಳು ಬೇಕಿತ್ತು. ಈಗ ಅವುಗಳ ಅಗತ್ಯವಿಲ್ಲ. ಆಹಾರ ಸಂಸ್ಕೃತಿಯೊಂದನ್ನು ಬದಲಿಸಿದರೆ ಸಾಕು ಇಡೀ ರಾಷ್ಟವನ್ನು ಗೆಲ್ಲಬಹುದು. ಇವೊತ್ತು ಮಾನ್ಸಮಟೊ ಸೇರಿದಂತೆ ಬಹುತೇಕ ಕಂಪನಿಗಳು ಈ ಕೆಲಸವನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಿಸುತ್ತಿವೆ.
    ಭಾರತದಲ್ಲಿ ಅತ್ಯಧಿಕ ಗೋಧಿ ಬೆಳೆಯುವ ಪಂಜಾಬಿನ ರೈತರನ್ನು ದಿಕ್ಕು ತಪ್ಪಿಸುವ ನಿಟ್ಟಿನಲ್ಲಿಯಶಸ್ವಿಯಾದ  ಪೆಪ್ಸಿ ಕಂಪನಿ ಹತ್ತು ವರ್ಷದ ಹಿಂದೆ ಗೋಧಿ ಬದಲಾಗಿ ರಪ್ತು ಆಧಾರಿತ ಯೋಜನೆಯಡಿ ಹಣ್ಣು ತರಕಾರಿ ಬೆಳೆಯಲು ಪ್ರೋತ್ಸಾಹಿಸಿತು. ರೈತರು ಕಂಪನಿಯ ಮಾತುಗಳನ್ನು ನಂಬಿ, ಹೈಬ್ರಿಡ್ ಬೀಜಗಳನ್ನು ಬಿತ್ತಿ, ಅಪಾರ ಮಟ್ಟದ ರಸಾಯನಿಕ ಗೊಬ್ಬರವನ್ನು ಭೂಮಿಗೆ ಸುರಿದು, ಬೆಳೆಗೆ ಕ್ರಿಮಿ ನಾಶಕ ಸಿಂಪಡಿಸಿ ಹಣ್ಣು ತರಕಾರಿಗಳನ್ನು ಬೆಳೆದರು. ಜೊತೆಗೆ ಫಲವತ್ತಾದ ತಮ್ಮ ಭೂಮಿಯನ್ನು ಚೌಳು ಭೂಮಿಯನ್ನಾಗಿ ಪರಿವರ್ತಿಸಿಕೊಂಡರು. ಅಮೇರಿಕಾದಲ್ಲಿ ಅಧಿಕ ಮಟ್ಟದಲ್ಲಿ ಬೆಳೆಯುವ ಗೋಧಿಯನ್ನು ಭಾರತ ಆಮದು ಮಾಡಿಕೊಳ್ಳುವಂತೆ ಮಾಡಲು, ಪಂಜಾಬಿನ ರೈತರಿಂದ ಗೋಧಿ ಬೆಳೆಯನ್ನು ಕೈ ತಪ್ಪಿಸುವ ಹುನ್ನಾರ ಈ ಯೋಜನೆಯ ಹಿಂದೆ ಅಡಗಿತ್ತು.


    ಭಾರತದ ಭ್ರಷ್ಟ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಳ್ಳತ್ತಿರುವ ಬಹುರಾಷ್ತ್ರೀಯ ಕಂಪನಿಗಳು ಇಲ್ಲಿನ ವಿಜ್ಞಾನಿಗಳನ್ನು ಹಣದ ಆಮೀಷದ ಮೂಲಕ ಭ್ರಷ್ಟರನ್ನಾಗಿ ಮಾಡಿ ಭಾರತದ ಕೃಷಿ ವ್ಯವಸ್ತೆಯ ಅಡಿಪಾಯಕ್ಕೆ ಅಪಾಯವನ್ನು ತಂದೊಡ್ಡಿದ್ದಾರೆ.
    ಭಾರತದಲ್ಲಿ  ರಾಷ್ಟ್ರಿಯ ಜೀವ ವೈವಿಧ್ಯತಾ ಪ್ರಾಧಿಕಾರ ಮಂಡಳಿ ಅಸ್ತಿತ್ವದಲ್ಲಿದ್ದು, ಕೃಷಿ ಅಥವಾ ಜೈವಿಕ ತಂತ್ರಜ್ಙಾನ ಕುರಿತ ಯಾವುದೇ ಪ್ರಯೋಗಕ್ಕೆ ಮುನ್ನ ಈ ಮಂಡಳಿಯಿಂದ ಅನುಮತಿ ಪಡೆಯಬೇಕು. ಆದರೆ, ನಮ್ಮ ಧಾರವಾಡದ ಕೃಷಿ ವಿ.ವಿ.ಯ ವಿಜ್ಞಾನಿಗಳು ಮಾನ್ಸಂಟೊ ಕಂಪನಿಯ ಜೊತೆ ಶಾಮೀಲಾಗಿ ಬಿ.ಟಿ. ಬದನೆ ಪ್ರಯೋಗ ಕೈಗೊಂಡರು. ಇದೇ ರೀತಿ ಕೊಯಮತ್ತೂರಿನ ಕೃಷಿ.ವಿ.ವಿ. ವಿಜ್ಞಾನಿಗಳು ಬಿ.ಟಿ.ಭತ್ತದ ಪ್ರಯೋಗ ಕೈಗೊಂಡರು. ಭಾರತದಲ್ಲಿನ ಕಾನೂನುಗಳು ಸಡಿಲಗೊಂಡಿರುವಾಗ ಮಾನ್ಸಂಟೊ ಕಂಪನಿಗೆ ಇಲ್ಲಿನ ರೈತರು ಮತ್ತು ವಿಜ್ಞಾನಿಗಳು ಪುಟ್ ಬಾಲ್ ಆಟಗಾರನ ಕಾಲ್ಚೆಂಡುಗಳಾಗಿದ್ದಾರೆ.
    ಮಾನ್ಸಂಟೊ ಮತ್ತು ಇತರೆ ಕಂಪನಿಗಳಿಗೆ ನಮ್ಮ ಆಹಾರ ಭೆಳೆಗಳು  ಮತ್ತು ತರಕಾರಿಗಳ ಮೇಲೆ ಮಾತ್ರ ಕಣ್ಣು ಬಿದ್ದಿಲ್ಲ, ನಮ್ಮ ಎಣ್ಣೆಕಾಳುಗಳ ಬೆಳೆಗಳನ್ನು ನಾಶ ಮಾಡಲು ಅವು ಹೊರಟಿವೆ. 1970 ರ ದಶಕದಲ್ಲಿ ಭಾರತಕ್ಕೆ ಅಪರಿಚಿತವಾಗಿದ್ದ ಸೋಯಾ ಅವರೆಯನ್ನು ಈ ಕಂಪನಿಗಳು ಅಮೇರಿಕಾದಿಂದ ತಂದು ಇಲ್ಲಿ ಪರಿಚಯ ಮಾಡಿದವು. ನಿಜಕ್ಕೂ ಇದು ಅನುತ್ಪಾದಕ ಬೆಳೆ ಎಂದರೆ, ತಪ್ಪಾಗಲಾರದು. ಭಾರತದಲ್ಲಿ ಬೆಳೆಯಲಾಗುತ್ತಿರುವ ಸಾಸಿವೆ ಬೆಳೆಯಲ್ಲಿ ಒಂದು ಹೆಕ್ಟೇರ್ ಗೆ 175 ಕೆ.ಜಿ.ಎಣ್ಣೆ ಸಿಗುತ್ತದೆ. ಶೇಂಗಾ ಬೆಳೆಯಿಂದ 150 ಕೆ.ಜಿ. ಎಣ್ಣೆ ಸಿಗುತ್ತಿದೆ, ಸೋಯಾ ಅವರೆಯಿಂದ ಸಿಗುತ್ತಿರುವುದು ಕೇವಲ 115ರಿಂದ 125 ಕೆ.ಜಿ. ಎಣ್ಣೆ ಮಾತ್ರ. ಎಣ್ಣೆ ತೆಗೆದ ನಂತರ ಉಳಿಯುವ ಹಿಂಡಿಯ ಪ್ರಮಾಣ ಸಾಸಿವೆಯಲ್ಲಿ325 ಕೆ.ಜಿ. ಶೇಂಗಾದಲ್ಲಿ 200 ಕೆ.ಜಿ. ಯಾದರೆ, ಸೋಯಾ ಅವರೆಯಲ್ಲಿ 645 ಕೆ.ಜಿ. ಹಿಂಡಿ ಉತ್ಪಾದನೆಯಾಗುತ್ತಿದೆ.

     ಸೋಯಾ ಅವರೆಯ ಹಿಂಡಿಯನ್ನು ಮಾಂಸಕ್ಕಾಗಿ ಬೆಳಸುವ ಗೋವುಗಳ ಆಹಾರವಾಗಿ ಯುರೋಪಿಯನ್ ರಾಷ್ಟ್ರಗಳು ಆಮದು ಮಾಡಿಕೊಳ್ಳುತ್ತಿವೆ. ಅಲ್ಲಿನ ಗೋಮಾಂಸಕ್ಕೆ ಭಾರತದ ರೈತರು ಹಿಂಡಿ ಸರಬರಾಜು ಮಾಡುವ ವ್ಯವಸ್ಥೆಯ ವಿಷವರ್ತುಲಕ್ಕೆ ಸಿಲುಕಿದ್ದಾರೆ. ಖ್ಯಾದ್ಯ ತೈಲದ ಕೊರತೆ ಎದುರಿಸುತ್ತಿರುವ ಭಾರತ ನೆರೆಯ ಇಂಡನೇಷಿಯಾ ದಿಂದ ತಾಳೆ ಎಣ್ಣೆಯನ್ನು( ಪಾಮ್ ಆಯಿಲ್) ಭಾರಿ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದೆ. ಸೋಯಾ ಅವರೆಯ ಹಿಂಡಿ ರಫ್ತಿನಿಂದ ಸಿಗುವ ಆದಾಯದ ಎಂಟು ಪಟ್ಟು ಹೆಚ್ಚಿನ ಹಣವನ್ನು ತಾಳೆ ಎಣ್ಣೆಯ ಆಮದಿಗಾಗಿ ಸುರಿಯಲಾಗುತ್ತಿದೆ.
    ಮೂಲಭೂತವಾಗಿ ನಾವು ಅರಿಯಬೇಕಾದ ಸತ್ಯವೊಂದಿದೆ. ಯಾವುದೇ ಒಂದು ಅವಿಷ್ಕಾರ ಅಥವಾ ತಂತ್ರಜ್ಙಾನ ಶೂನ್ಯದಿಂದ ಸೃಷ್ಟಿಯಾಗುವುದಿಲ್ಲ. ಈ ದಿನ ಮಾನ್ಸಂಟೊ ಕಂಪನಿ ಬಿ.ಟಿ. ಬೀಜಗಳು ಮತ್ತು ಹೈಬ್ರಿಡ್ ಬಿತ್ತನೆ ಬೀಜಗಳ ಮೇಲೆ ಹಕ್ಕಿನ ಸಾಮ್ಯ ಸ್ಥಾಪಿಸಲು ಹೊರಟಿರುವುದು ಅನೈತಿಕತೆಯ ಪರಮಾವಧಿ.
    ಭೂಮಿಯ ಮೇಲಿನ ಜೀವ ಸಂಪತ್ತು ಮತ್ತು ಸಸ್ಯ ಸಂಪತ್ತಿನ  ತಳಿ ನಕ್ಷೆಯನ್ನು  ಬಿಡಿಸಿ ಅವುಗಳ ವಂಶವಾಹಿ ಕೋಶಗಳನ್ನು ಬೆಸೆದು ಇಲ್ಲವೆ ಕತ್ತರಿಸಿ ಹೊಸ ಬೀಜ ಸೃಷ್ಟಿ ಮಾಡುವುದು ನೈಸರ್ಗಿಕ ನಿಯಮಕ್ಕೆ ವಿರುದ್ದವಾದುದು. ವಿಜ್ಙಾನಿಗಳು ಎರವಲು ಪಡೆದುಕೊಂಡಿರುವ ಸಸ್ಯದ ಕೋಶಗಳು ನಮ್ಮ ಅರಣ್ಯಗಳಲ್ಲಿ ಇರುವ ಅಪರೂಪದ ಗಿಡಗಳ ಜೀವಕೋಶಗಳೇ ಹೊರುತು, ವಿಜ್ಞಾನಿಗಳ ಸ್ವಯಂ ಸೃಷ್ಟಿಯೇನಲ್ಲ. ಇಂತಹ  ಅನೈತಿಕ ಕೃತ್ಯಗಳಿಗೆ ಕಡಿವಾಣ ಹಾಕಲು ನಮಗಿರುವ ಏಕೈಕ ಮಾರ್ಗವೆಂದರೆ, ಕುಲಾಂತರಿ ಬೀಜಗಳು ಮತ್ತು ಇಂತಹ ಬೀಜಗಳನ್ನು ಸೃಷ್ಟಿ ಮಾಡುವ ಕಂಪನಿಗಳನ್ನು ಸಾರಾ ಸಗಟಾಗಿ ತಿರಸ್ಕರಿಸುವುದು. ಇದನ್ನು ಜಗತ್ತಿನ ಅತಿ ಹಿಂದುಳಿದ ರಾಷ್ಟ್ರವಾದ ಆಫ್ರಿಕಾದ ಇಥಿಯೋಪಿಯಾದ ಮಹಿಳೆಯರು ಮಾಡಿ ತೋರಿಸುವುದರ ಮೂಲಕ ನಮಗೆ ಮಾದರಿಯಾಗಿದ್ದಾರೆ.

    ಎಲ್ಲಾ ರೀತಿಯ ಅತ್ಯಾಧುನಿಕ ಬೀಜಗಳನ್ನು ತಿರಸ್ಕರಿಸಿದ ಅಲ್ಲಿನ ಮಹಿಳೆಯರು 1980ರ ದಶಕದಲ್ಲಿ ತಮ್ಮ ದೇಶಿ ಬಿತ್ತನೆ ಬೀಜಗಳನ್ನು ರಕ್ಷಿಸಲು ಬೀಜ ಬ್ಯಾಂಕ್ ಸ್ಥಾಪಿಸಿದರು. ಬ್ಯಾಂಕ್ ಮುಖಾಂತರ ರೈತರ ನಡುವೆ ಬೀಜ ವಿನಿಮಯ ಪದ್ಧತಿ ಮುಂದುವರಿಯಿತು. ನಂತರ ಈ ಚಳವಳಿ ಲ್ಯಾಟಿನ್ ಅಮೇರಿಕಾ ರಾಷ್ಟ್ರಗಳು, ಪೆರು, ಪಿಲಿಫೈನ್ಸ್ ಮುಂತಾದ ರಾಷ್ಟ್ರಗಳಿಗೆ ಹರಡಿ ಆನಂತರ  1990ರ ದಶಕದಲ್ಲಿ ಭಾರತಕ್ಕೆ ಕಾಲಿಟ್ಟಿತು. ಇದೀಗ ದೇಶ್ಯಾದಂತ ಮಹಿಳೆಯರ ನೇತೃತ್ವದಲ್ಲಿ ಸಾವಿರಾರು ಬೀಜಬ್ಯಾಂಕುಗಳು ತಲೆ ಎತ್ತಿ ದೇಶಿ ಬೀಜ ರಕ್ಷಣೆಯಲ್ಲಿ ತೊಡಗಿವೆ. ಜಗತ್ತಿನ ಕೃಷಿ ಪರಂಪರೆಯಲ್ಲಿ ಮಹಿಳೆಯರನ್ನು ಕೃಷಿಚಟುವಟಿಕೆಗಳಿಂದ ದೂರ ಇಟ್ಟ ಫಲವಾಗಿ ಇಷ್ಟೆಲ್ಲಾ ದುರಂತಗಳು ಕೃಷಿ ಲೋಕದಲ್ಲಿ ಸಂಭವಿಸುತ್ತಿವೆ ಎಂಬ ಕಟು ಸತ್ಯವನ್ನು ಕೂಡ ನಾವು ಈ ಸಂದರ್ಭದಲ್ಲಿ  ಮರೆಯಬಾರದು.
                                                   (ಮುಗಿಯಿತು)


ಗುರುವಾರ, ಮೇ 16, 2013

ಮಾನ್ಸಂಟೊ ಮಹಾ ಮಾರಿಯ ಕಥನ-2


1948ರಲ್ಲಿ ಹೈಬ್ರಿಡ್ ತಳಿಗಳ ಸಂಶೋಧನೆ ಮತ್ತು ತಯಾರಿಕೆಗೆ ಮುಂದಾದ ಮಾನ್ಸಂಟೊ ಕಂಪನಿ, 1975 ರಲ್ಲಿ ಜೀವಶಾಸ್ತ್ರದ ಸಂಶೋಧನಾ ಕೇಂದ್ರವೊಂದನ್ನು ಅಮೇರಿಕಾದಲ್ಲಿ  ಆರಂಭಿಸಿತು. 1987ರಲ್ಲಿ ಕುಲಾಂತರಿ ತಳಿಗಳ ಪ್ರಯೋಗಕ್ಕೆ ಇಳಿದು,  1994ರಲ್ಲಿ ಪ್ರಥಮವಾಗಿ ಕುಲಾಂತರಿ ತಳಿಯ ಮೆಕ್ಕೆಜೋಳವನ್ನು ಬಿಡುಗಡೆಮಾಡಿತು. ಅಲ್ಲಿಂದ ಇಲ್ಲಿಯವರೆಗೆ ವಿವಾದಗಳು ಹಾಗೂ ಸೃಷ್ಟಿಯಾದ ಅನೇಕ ಅವಾಂತರಗಳು ಕಂಪನಿಯನ್ನು ಬೆನ್ನಟ್ಟಿಕೊಂಡು ಬಂದಿವೆ.
ಕೆನಡಾದ ಕೃಷಿ ವಿಭಾಗದಲ್ಲಿ ತಜ್ಞರಾಗಿ ಸುಧೀರ್ಘ 35 ವರ್ಷಗಳ ಸೇವೆ ಸಲ್ಲಿಸಿದ, ಡಾ. ಥಿಯನೆ ವ್ರೈನ್ ಎಂಬುವರು, ಕುಲಾಂತರಿ ತಳಿಗಳು ಹೊರಬಿದ್ದಾಗ, ಜಾಗತಿಕ ಮಟ್ಟದಲ್ಲಿ ಮುಂದಾಗುವ ಅನಾಹುತಗಳ ಬಗ್ಗೆ, ವಿಶೇಷವಾಗಿ ಇವುಗಳ ಆಹಾರ ತಿಂದ ಮನುಷ್ಯರು ಮತ್ತು ಪ್ರಾಣಿಗಳ ದೇಹದಲ್ಲಿ ಆಗಬಹುದಾದ ವೆತ್ಯಾಸಗಳ ಕುರಿತು ಬಯೋಟೆಕ್ನಾಲಜಿ ಎಂಬ ಪತ್ರಿಕೆಯಲ್ಲಿ ಎಚ್ಚರಿಕೆ ನೀಡಿದ್ದರು. ಅವರು ನೀಡಿದ್ದ ಎಚ್ಚರಿಕೆಗಳು ಈಗ ನಿಜವಾಗತೊಡಗಿವೆ. ಪ್ರಾಣಿಗಳಲ್ಲಿ ವಿಶೇಷವಾಗಿ ಹಸುಗಳ ಗರ್ಭಧಾರಣೆಯಲ್ಲಿ ವೆತ್ಯಾಸವಾಗಿದೆ. ಮನುಷ್ಯನ ಕಿಡ್ನಿ, ಲಿವರ್,ಹಾಗೂ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುವ ಇನ್ಸುಲಿನ್ ಉತ್ಪಾದನಾ ಪ್ರಮಾಣದಲ್ಲಿ ವೆತ್ಯಯ ಉಂಟಾಟಾಗಿರುವುದು ಸಂಶೋಧನೆಯಿಂದ ಕಂಡು ಬಂದಿದೆ. 2011 ರಲ್ಲಿ ಕೆನಡಾದ ಶೇರ್ ಬ್ರೂಕ್ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾದ 93 ಗರ್ಭಿಣೆಯರಲ್ಲಿ 82 ಮಂದಿ ಸ್ತ್ರೀಯರ ರಕ್ತದಲ್ಲಿ ವಿಷಕಾರಿ ಅಂಶಗಳು ಇರುವುದು ದೃಢಪಟ್ಟಿದೆ.


ಇವರೆಲ್ಲಾ G.M Foods ಎಂದು ಕರೆಯಲಾಗುವ ಕುಲಾಂತರಿ ಬೆಳೆಗಳ ತರಕಾರಿ ಹಾಗೂ ಜೋಳವನ್ನು ತಿಂದವರಾಗಿದ್ದರು.( ಕೆಲ್ಲಾಗ್ಸ್ ಕಾರ್ನ್ ಪ್ಲೇಕ್ಸ್) ಈ ಕಾರಣದಿಂದಾಗಿ ಅಮೇರಿಕಾದ “ ಅಮೇರಿಕನ್ ಅಕಾಡೆಮಿ ಆಫ್ ಎನ್ವಿರಾನ್ಮೆಂಟಲ್ ಅಂಡ್ ಮೆಡಿಸನ್ ಎಂಬ ಸಂಸ್ಥೆ ಕುಲಾಂತರಿ ತಳಿಯ ಆಹಾರ ಮತ್ತು ತರಕಾರಿ, ಹಣ್ಣುಗಳನ್ನು ತೀವ್ರವಾಗಿ ಪರೀಕ್ಷೆಗೆ ಒಳಪಡಿಸಬೇಕು ಮತ್ತು ಇಂತಹ ಆಹಾರ ಪದಾರ್ಥಗಳ ಮೇಲೆ ಲೇಬಲ್ ಅಂಟಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದೆ. ಆದರೆ, ಮಾನ್ಸಂಟೊ ಕಂಪನಿ ಇಂತಹ ಪರೀಕ್ಷಗಳ ಅಗತ್ಯವಿಲ್ಲ ಎಂದು ಪ್ರತಿಪಾದಿಸುತ್ತಿದೆ.
ಇಂತಹ ಕಪ್ಪು ಇತಿಹಾಸ ಇರುವ ಮಾನ್ಸಂಟೊ ಕಂಪನಿ ಭಾರತಕ್ಕೆ ಬಂದು ತಳವೂರಿ 64 ವರ್ಷಗಳು ಸಂದಿವೆ. 1949ರಲ್ಲಿ ಸಣ್ಣ ಮಟ್ಟದಲ್ಲಿ ಹೈಬ್ರಿಡ್ ತಳಿಯ ಬೀಜಗಳನ್ನು ಮಾರಾಟ ಮಾಡುವುದರ ಮೂಲಕ ಭಾರತಕ್ಕೆ ಕಾಲಿಟ್ಟ ಮಾನ್ಸಂಟೊ ಕಂಪನಿಯ ವಹಿವಾಟು 1990 ದಶಕದಲ್ಲಿ 250 ಕೋಟಿ ರೂಪಾಯಿ ಇದ್ದದ್ದು, 2012 ರ ವೇಳೆಗೆ 1400 ಕೋಟಿ ರೂಪಾಯಿಗೆ ತಲುಪಿದೆ. ಆರಂಭದಲ್ಲಿ  26 ಮಂದಿ ಇದ್ದ ಉದ್ಯೋಗಿಗಳ ಸಂಖ್ಯೆ 800 ಮಂದಿಗೆ ಹೆಚ್ಚಿದೆ.

ಬಿ.ಟಿ. ತಳಿಯ ಬೀಜಗಳಾದ ಹತ್ತಿ ಮತ್ತು ತರಕಾರಿ ಬೀಜಗಳ ಮೇಲೆ ಸ್ವಾಮ್ಯ ಸಾಧಿಸುವ ನಿಟ್ಟಿನಲ್ಲಿ 1975 ರಲ್ಲಿ ಮಾನ್ಸಂಟೊ ಹೋಲ್ಡಿಂಗ್ ಪ್ರವೈಟ್ ಲಿಮಿಟೆಡ್ ಸಂಸ್ಥೆ ಪ್ರಾರಂಭಿಸಿದ ಕಂಪನಿ, ಆನಂತರ ಭಾರತದಲ್ಲಿ ಬಿತ್ತನೆ ಬೀಜಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿದ್ದ ಮಹಾರಾಷ್ಟ್ದ ಜಾಲ್ನ ಎಂಬ ಜಿಲ್ಲಾ ಕೇಂದ್ರದಲ್ಲಿದ್ದ ಮಹಿಕೊ ಎಂಬ ಸಂಸ್ಥೆಯನ್ನು ಖರೀದಿಸಿ, ಭಾರತದ ಬೀಜ ಸಾಮ್ರಾಜ್ಯದ ಮೇಲೆ ತನ್ನ ಅಧಿಪತ್ಯವನ್ನು ಸ್ಥಾಪಿಸಿತು.
2002 ರಲ್ಲಿ ಭಾರತದಲ್ಲಿ ಬಿ.ಟಿ. ಹತ್ತಿಬೆಳೆಯನ್ನು ಪರಿಚಯಿಸಿದ ಮಾನ್ಸಂಟೊ ಕಂಪನಿ ದೇಶಾದ್ಯಂತ ಲಕ್ಷಾಂತರ ಹತ್ತಿ ಬೆಳೆಗಾರರನ್ನು ಸಾಲದ ಸುಳಿಗೆ ಸಿಲುಕಿಸಿ ಸಾವಿಗೆ ಕಾರಣವಾಯಿತು. ಸದ್ಯ ಸ್ಥಿತಿಯಲ್ಲಿ ತಾನೇ ಸ್ವತಃ ಬೀಜ ತಯಾರಿಕೆಯಲ್ಲಿ ತೊಡಗಿರುವುದರ ಜೊತೆಗೆ ಭಾರತದಲ್ಲಿ 45 ಬೀಜ ಕಂಪನಿಗಳಿಗೆ ತನ್ನ ತಂತ್ರಜ್ಙಾನವನ್ನು ವರ್ಗಾಯಿಸಿ, ಅದರಿಂದ ಬರುವ ಲಾಭದಲ್ಲಿ ಶೇಕಡ 80 ರಷ್ಟನ್ನು ರಾಜಧನ (ರಾಯಲ್ಟಿ) ರೂಪದಲ್ಲಿ ಪಡೆಯುತ್ತಿದೆ. ಈ ಕಾರಣದಿಂದ ಭಾರತದ ಬಿತ್ತನೆ ಬೀಜಗಳ ದರ ಶೇಕಡ 200 ರಷ್ಟು ದುಬಾರಿಯಾಗಿದೆ. 2002 ರಲ್ಲಿ ಬಿಡುಗಡೆಯಾದ  ಭಾರತದಲ್ಲಿ ಮಾನ್ಸಂಟೊ ಇಂಡಿಯ ಕಂಪನಿಯ ಹತ್ತು ರೂ. ಮುಖಬೆಲೆಯ  ಶೇರುಗಳು ಆರಂಭದಲ್ಲಿ 438 ರೂಪಾಯಿಗೆ ಮಾರಾಟವಾಗಿದ್ದವು. ನಂತರ ಶೇರಿನ ಬೆಲೆ 2008 ರಲ್ಲಿ 2037 ರೂಪಾಯಿಗೆ ತಲುಪಿತ್ತು. ಇತ್ತೀಚೆಗಿನ ದಿನಗಳಲ್ಲಿ ಕಂಪನಿ ವಿವಾದಕ್ಕೀಡಾದ ಪರಿಣಾಮ, ಪ್ರತಿ ಶೇರಿನ ಬೆಲೆ 582 ರೂಪಾಯಿಗೆ ಕುಸಿದಿದೆ.
ಭಾರತದಲ್ಲಿ 2002ರಲ್ಲಿ ಬಿ.ಟಿ. ಹತ್ತಿ ಬೆಳೆಯನ್ನು ಪರಿಚಯಿಸುವ ಮುನ್ನ  65 ರಿಂದ 70ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ದೇಶಿ ಬಿತ್ತನೆ ಬೀಜಗಳ ಮೂಲಕ ಹತ್ತಿಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿತ್ತು. ಈಗ ಒಂದು ಕೊಟಿ ಹತ್ತು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿ.ಟಿ. ಹತ್ತಿ ಬೆಳೆಯಲಾಗುತ್ತಿದೆ. ಮೊದಲು ಹೆಕ್ಟೇರ್ ಒಂದಕ್ಕೆ 300 ಕೆ.ಜಿ. ಇಳುವರಿ ಇದ್ದದ್ದು, ಉತ್ಪಾದನೆ, ಬಿ.ಟಿ. ಹತ್ತಿಯಿಂದಾಗಿ 500 ಕೆ.ಜಿ.ಗೆ ಏರಿಕೆಯಾಗಿದೆ. ಆದರೆ ಕೃಷಿವೆಚ್ಚ ಮಾತ್ರ ನಾಲ್ಕು ಪಟ್ಟು ದುಪ್ಪಟ್ಟಾಗಿದೆ.
 ಪರಸ್ಪರ ಬೀಜ ವಿನಿಮಯದಿಂದ ಪುಕ್ಕಟೆಯಾಗಿ ಸಿಗುತ್ತಿದ್ದ ಹತ್ತಿ ಬೀಜಕ್ಕೆ ರೈತ ತಲಾ ಒಂದು ಕೆ.ಜಿ.ಗೆ ಒಂದೂವರೆ ಸಾವಿರ ರೂಪಾಯಿ ತೆರಬೇಕಾಗಿದೆ. ಜೊತೆಗೆ ಕಂಪನಿ ತಿಳಿಸಿದ ರೀತಿಯಲ್ಲಿ ಕರಾರುವಕ್ಕಾಗಿ ರಸಾಯನಿಕ ಗೊಬ್ಬರ, ಕೀಟನಾಶಕವನ್ನು ಬಳಸಬೇಕು. ವಿಶೇಷವೆಂದರೇ, ಕಂಪನಿ ಶಿಫಾರಸ್ಸು ಮಾಡುವ ಗೊಬ್ಬರ ಮತ್ತು ರಸಾಯನಿಕ ಔಷಧಗಳೆಲ್ಲವೂ ಮಾನ್ಸಂಟೊ ಕಂಪನಿಯ ಅಂಗಸಂಸ್ಥೆಗಳ ಉತ್ಪನ್ನಗಳಾಗಿರುತ್ತವೆ. ತಾನು ಹೆಚ್ಚುವರಿಯಾಗಿ ಬೆಳೆದ ಇಳುವರಿ ಬೆಳೆಯ ಲಾಭದ ಜೊತೆಗೆ, ಬೆಳೆದ ಫಸಲಿನ ಲಾಭವನ್ನು ಕಂಪನಿಗೆ ತೆರಬೇಕಾದ ಸ್ಥಿತಿ ರೈತನದು. ಇದಕ್ಕೆ ಒಂದು ಉದಾಹರಣೆಯೆಂದರೆ, ಒಂದು ಹೆಕ್ಟೇರದ ಪ್ರದೇಶದ ಕೀಟನಾಶಕಕ್ಕೆ ಮಾನ್ಸಂಟೊ ಕಂಪನಿ ಲೀಟರ್ ಗೆ 800 ರೂಪಾಯಿ ಬೆಲೆಯ ಔಷದವನ್ನು ಶಿಫಾರಸ್ಸು ಮಾಡುತ್ತದೆ. ಇದಕ್ಕೆ ಪ್ರತಿಯಾಗಿ ಆಂಧ್ರದಲ್ಲಿ ಸಹಜ ಕೃಷಿಗೆ ಪ್ರೋತ್ಸಾಹ ಕೊಡುತ್ತಿರುವ ಕೃಷಿ ತಜ್ಞ ರಾಮಾಂಜನೆಯಲು ಎಂಬುವರು, ಸುಮಾರು 2 ಅಡಿ ಅಗಲ-2 ಅಡಿ  ರಟ್ಟಿನ ಮೇಲೆ ಹಳದಿ ಬಣ್ಣದ ಕಾಗದವನ್ನು  ಅಂಟಿಸಿ, ಅದರ ಮೇಲೆ ಬಳಸಿ ಬಿಸಾಡಿದ ವಾಹನಗಳ ಇಂಜಿನ್ ಆಯಿಲ್ ಮತ್ತು ಗ್ರೀಸ್ ಲೇಪಿಸಿ. ಕೀಟಗಳನ್ನು ಆಕರ್ಷಿಸಿ ಕೊಲ್ಲುವ ಸಾಧನವನ್ನು ಕಂಡು ಹಿಡಿದಿದ್ದಾರೆ. ಇದರ ಬೆಲೆ ಕೇವಲ 12 ರೂಪಾಯಿ. ಇಂತಹ ರಟ್ಟುಗಳನ್ನು ಹೊಲದಲ್ಲಿ ಬಳಸಿದ  ರೈತರು ಹತ್ತಿಗೆ ಕಾಂಡ ಕೊರೆಯುವ ಕೀಟವನ್ನು ತಡೆಗಟ್ಟುವಲ್ಲಿ ಶೇಕಡ 85 ರಷ್ಟು ಯಶಸ್ವಿಯಾಗಿದ್ದಾರೆ. ಇಂತಹ ದೇಶಿ ತಂತ್ರಜ್ಞಾನದ ನಡುವೆಯೂ,  ಮತ್ತು  ಮಹಾರಾಷ್ಟ್ರದ ವಿಧರ್ಭ ಪ್ರಾಂತ್ಯ ಮತ್ತು ಅಂಧ್ರದ ಅದಿಲಾಬಾದ್ ಪ್ರಾಂತ್ಯದಲ್ಲಿ ಹತ್ತಿ ಬೆಳೆದ ಲಕ್ಷಾಂತರ ರೈತರು ಕೈ ಸುಟ್ಟಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರೂ, ನಮ್ಮ ರೈತರಿಗೆ ಮಾತ್ರ ಬುದ್ದಿ ಬಂದಂತೆ ಕಾಣುವುದಿಲ್ಲ.
ರೈತರನ್ನು ಬಿ.ಟಿ. ಬೆಳೆಗಳತ್ತ ಸೆಳೆಯಲು ಮಾನ್ಸಂಟೊ ಕಂಪನಿ ಇದೀಗ  ‘ ಡಾ. ದೆಕ್ಲಟ್ ಫಾರಂ ಕೇರ್ “ ಎಂಬ ಸಲಹಾ ಕೇಂದ್ರವನ್ನು ಸ್ಥಾಪಿಸಿದ್ದು, ಈ ಸಂಸ್ಥೆಯೊಂದಿಗೆ ಭಾರತದ 10 ಲಕ್ಷ ರೈತರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ,
ಭಾರತದಲ್ಲಿ ಬೆಳೆಯಲಾಗುತ್ತಿರುವ ಬಿ.ಟಿ. ಹತ್ತಿ ಬೆಳೆಯಿಂದಾಗಿ, ಗಾಳಿಯ ಮೂಲಕ ಸಸ್ಯ ಪ್ರಭೇದಗಳಲ್ಲಿ ಏರ್ಪಡುವ ಸ್ವಪರಾಗಸ್ಪರ್ಶ ಮತ್ತು ಜೇನು ನೊಣ ಮುಂತಾದವುಗಳಿಂದ ಏರ್ಪಡುವ ಪರಾಮಸ್ಪರ್ಶದಿಂದಾಗಿ ದೇಶಿಯ ಬೆಳೆಗಳು ಮತ್ತು ಇತರೆ ಸಸ್ಯಗಳಿಗೆ ಕುಲಾಂತರಿ ಸಸ್ಯದ ಜೀವಾಣುಗಳು ಸೇರಿಕೊಂಡು ಸಸ್ಯ ಸಂಪತ್ತು ಮತ್ತು ದೇಶಿ ಅಹಾರ ಬೆಳೆಗಳ ಬಿತ್ತನೆ ಬೀಜಗಳು ಕಲುಷಿತವಾಗಲು ಕಾರಣವಾಗಿವೆ. ಇಂತಹ ಒಂದು ಕಾರಣಕ್ಕಾಗಿ ಐರೋಪ್ಯ ಒಕ್ಕೂಟದ ರಾಷ್ಟ್ರಗಳು ವಿಶ್ವ ವಾಣಿಜ್ಯ ಮಂಡಳಿಯಲ್ಲಿ ಕುಲಾಂತರಿ ತಳಿ ಮತ್ತು ಆಹಾರಗಳಿಗೆ ಅವಕಾಶ ಕೊಡಬಾರದೆಂದು ತಕರಾರು ಸಲ್ಲಿಸಿದ್ದವು. ಆದರೆ, ಈ ಅರ್ಜಿಯನ್ನು ವಿಶ್ವ ವಾಣಿಜ್ಯ ಮಂಡಳಿ( W.T.O.) ತಿರಸ್ಕರಿಸಿತು. ಇಂತಹ ಆಹಾರ ತಿಂದ ಹಸುಗಳು ಹುಚ್ಚು ರೋಗಕ್ಕೆ ಬಲಿಯಾದವು. ಜಗತ್ತಿನ ರಾಷ್ಟ್ರಗಳನ್ನು ತನ್ನ ಹಣದಿಂದ ಮಣಿಸಿರುವ ಮಾನ್ಸಂಟೊ ಕಂಪನಿಯ ಪ್ರತಿ ಹೆಜ್ಜೆ ಗುರುತುಗಳನ್ನು ಗಮನಿಸುವಾಗ, 1955 ರಲ್ಲಿ “ ಟಾಪ್ ಸಾಯಿಲ್ ಅಂಡ್ ಸಿವಿಲೈಜೇಷನ್ ‘ ಎಂಬ ಕೃತಿ ಬರೆದಿರುವ ಟಾಮ್ ಡೆಲ್ ಮತ್ತು ವೆರ್ನಾನ್ ಗಿಲ್ ಕಾರ್ಟರ್ ಎಂಬ ಪ್ರಖ್ಯಾತ ಪರಿಸರ ತಜ್ಞರು, ಹೇಳಿರುವ’ Civilised man was nearly always able to become master of his environment temporarily. His Chief troubles came from his delusions that is temporary master ship was permanent.He thought of him self as “ master of the world’ while failing to understand fully the law of nature.” ಎಂಬ ಮಾತುಗಳು ನೆನಪಾಗುತ್ತಿವೆ,
       ( ಮುಂದುವರಿಯುವುದು)