ಮಂಗಳವಾರ, ಡಿಸೆಂಬರ್ 10, 2013

ಕೇಳದೆ ಉಳಿದ ಒಂದು ಸ್ವರ ಮಾಧುರ್ಯ



2012 ಡಿಸಂಬರ್ 12ನೆಯ ದಿನಾಂಕ  ಒಂದು ಸ್ಮರಣೀಯ ದಿನ. 12-12-12 ಸಂಖ್ಯೆಯನ್ನು ನಾವು ಜೀವಿತದಲ್ಲಿ ಮತ್ತೊಮ್ಮೆ ನೋಡಲಾರದ ದಿನವಾಗಿ ನೆನಪಲ್ಲಿ  ಉಳಿದುಹೋಯಿತು. ಅದೇ ದಿನ ಭಾರತೀಯರಿಗೆ ಇನ್ನೊಂದು ರೀತಿಯ ನೆನಪಿನಲ್ಲಿ ಉಳಿಯುವಂತೆ ಮಾಡಿತು. ಭಾರತೀಯ ಸಂಗೀತಲೋಕದ ಮೇರು ಶಿಖರಗಳಲ್ಲಿ ಒಬ್ಬರಾದ ಸಿತಾರ್ ಮಾಂತ್ರಿಕ ಪಂಡಿತ್ ರವಿಶಂಕರ್ ದೂರದ ಅಮೇರಿಕಾದ ಕ್ಯಾಲಿಪೋರ್ನಿಯಾ ನಗರದಲ್ಲಿ ಅಸ್ತಂಗತರಾಗುವ ಮೂಲಕ ಸಂಗೀತ ಪ್ರೇಮಿಗಳ ಹೃದಯದಲ್ಲಿ ಅಳಿಸಲಾಗದ ನೆನಪಾಗಿ ದಾಖಲಾದರು.
ಸಿತಾರ್ ವಾದನವೆಂದರೆ, ಪಂಡಿತ್ ರವಿಶಂಕರ್ ಎಂದು ಜಾಗತಿಕ ಮಟ್ಟದಲ್ಲಿ ಗುರುತಿಸುವಷ್ಟು ಎತ್ತರಕ್ಕೆ ಬೆಳೆದ ಪಂಡಿತ್ ರವಿಶಂಕರ್ ಭಾರತೀಯ ಸಂಗೀತವನ್ನು ಜಗತ್ತಿಗೆ ಪರಿಚಯಿಸಿ, ಎಲ್ಲರೂ ಭಾರತದತ್ತ ತಿರುಗಿ ನೋಡುವಂತೆ ಮಾಡಿದವರಲ್ಲಿ ಪ್ರಮುಖರು
ತಮ್ಮ ತೊಂಬತ್ತು ವರ್ಷಗಳ ಸುಧೀರ್ಘ ಬದುಕಿನಲ್ಲಿ ಸತತ ಏಳು ದಶಕಗಳ ಕಾಲ ಸಿತಾರ್ ವಾದನವನ್ನು ಉಸಿರಾಗಿಸಿಕೊಂಡು ಬದುಕಿದ ಅನನ್ಯ ಪ್ರತಿಭೆ ಅವರದು. ಇಂತಹ ಮಹಾನ್ ವ್ಯಕ್ತಿಯ ಸಾಧನೆಯ ಹಿಂದೆ ಒಬ್ಬ ಹೆಣ್ಣು ಮಗಳ ಸಂಗೀತ ಮತ್ತು ಬದುಕಿನ ತ್ಯಾಗ ಅಡಗಿದೆ ಎಂಬ ಕಠೋರ ಸತ್ಯ ಮಾತ್ರ ಹೊರಜಗತ್ತಿಗೆ ಇವತ್ತಿಗೂ ಅಪರಿಚಿತವಾಗಿ ಉಳಿದುಹೋಯಿತು. ಏಕೆಂದರೆ, ರವಿಶಂಕರ್ ಸಾಧನೆಗೆ ಅಡ್ಡಿಯಾಗಬಾರದೆಂಬ ಏಕೈಕ ನಿಲುವಿನಿಂದ ಕಳೆದ ಅರ್ಧಶತಮಾನದಿಂದ ಮೌನಕ್ಕೆ ಶರಣಕ್ಕಾಗಿ, ಹೊರ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಿರುವ ಅನ್ನಪೂರ್ಣದೇವಿ ಎಂಬ ರವಿಶಂಕರ್ರವರ ಮೊದಲ ಪತ್ನಿಯೂ ಹಾಗೂ ಅವರ ಗುರು ಬಾಬಾ ಅಲ್ಲಾವುದ್ದೀನ್ ಖಾನ್ರವರ ಪುತ್ರಿಯೂ ಆದ ಮಹಾತಾಯಿಯೊಬ್ಬಳ  ಸಾಧನೆ ಮತ್ತು ಪರಿತ್ಯಕ್ತ ಬದುಕು ಇವೆಲ್ಲವೂ ಶಬ್ಧಗಳಲ್ಲಿ ಹಿಡಿದಿಡಲಾಗದ ಸಂಕಟಗಳು.


ಮುಂಬೈ ನಗರದ ವಾರ್ಡನ್ ರಸ್ತೆಯಲ್ಲಿ ಸಮುದ್ರಕ್ಕೆ ಎದುರಾಗಿ ನಿಂತಿರುವ ಆಕಾಶ್ಗಂಗ ಎಂಬ ವಸತಿ ಸಂಕೀರ್ಣದ ಆರನೆಯ ಮಹಡಿಯಲ್ಲಿ ನಾಲ್ಕು ಗೋಡೆಯ ಮಧ್ಯದ ವಾಸಕ್ಕೆ ತಮ್ಮ ಬದುಕನ್ನು ಸೀಮೀತಗೊಳಿಸಿಕೊಂಡ ಭಾರತೀಯ ಸಂಗೀತದ ಇನ್ನೊಂದು ಅನನ್ಯ ಮೇರು ಪ್ರತಿಭೆ ಅನ್ನಪೂರ್ಣದೇವಿ.
ನಾವು ವಾಸಿಸುತ್ತಿರುವ ಕಟ್ಟಡದಲ್ಲಿ ಭಾರತೀಯ ಸಂಗೀತಲೋಕದ ಹಿರಿಯ ಜೀವವೊಂದು ಬದುಕಿದೆ ಎಂಬ ಸುಳಿವನ್ನೂ ಸಹ ನೆರೆಹೊರೆಯವರಿಗೆ ನೀಡದೆ ಬದುಕಿರುವ ಅನ್ನಪೂರ್ಣದೇವಿ, ಎಂದೂ ಹೊರಜಗತ್ತಿಗೆ ಮುಖ ತೋರಿಸಿದವರಲ್ಲ ಅಥವಾ ಮಾತನಾಡಿದವರಲ್ಲ. ಒಂದು ಘೋರ ಕಠಿಣ ತಪಸ್ಸಿನಂತೆ, ವ್ರತದಂತೆ ನಿಯಮವನ್ನು ಪಾಲಿಸಿಕೊಂಡು ಬಂದಿರುವ ಅವರ ನಿರ್ಧಾರದ ಹಿಂದೆ ಹೇಳಿಕೊಳ್ಳಲಾಗದ ನೋವುಗಳಿವೆ, ದುಖಃ ದುಮ್ಮಾನಗಳಿವೆ. ಆದರೆ, ಇವೆಲ್ಲವನ್ನೂನಾನು ನನ್ನೊಂದಿಗೆ ಸಮಾಧಿಗೆ ಕೊಂಡೊಯ್ಯುತ್ತೇನೆಎಂದು ಪತ್ರಕರ್ತರÀ ಪ್ರಶ್ನೆಗಳಿಗೆ ಕಾಗದದ ಮೂಲಕ ಉತ್ತರಿಸಿದ್ದಾರೆ.
ಇವರ ಬಳಿ ಸಂಗೀತ ಸಾಧನೆ ಮಾಡಿದ ಶಿಷ್ಯ ಸ್ವಪನ್ಕುಮಾರ್ ಬಂಡೋಪಾಧ್ಯಾಯ ಎಂಬವರುAn Unherd Melodyಎನ್ನುವ ಕೃತಿಯನ್ನು ಬರೆಯದಿದ್ದರೆ, ಇವರ ಬದುಕಿನತ್ಯಾಗ, ಸಂಗೀತಸಾಧನೆ, ಇವೆಲ್ಲವೂ ಇತಿಹಾಸದ ಕಾಲ ಗರ್ಭದಲ್ಲಿ ಹೂತು ಹೋಗುತ್ತಿದ್ದವು. ಭಾರತದ ಸಂಗೀತ ಕ್ಷೇತ್ರದಲ್ಲಿರುವ ಎಲ್ಲಾ ಪ್ರಶಸ್ತಿಗಳು, ಗೌರವ ಡಾಕ್ಟರೇಟ್ ಪದವಿಗಳು ಇವರ ಮನೆ ಬಾಗಿಲ ಬಳಿ ಹೋಗಿ ತಮ್ಮ ಹಿರಿಮೆಯನ್ನು ಹೆಚ್ಚಿಸಿಕೊಂಡಿವೆ. 1977ರಲ್ಲಿ ಭಾರತ ಸರ್ಕಾರ ನೀಡಿದ ಪದ್ಮಭೂಷಣ ಪ್ರಶಸ್ತಿಯನ್ನು ಸಹ ಇವರ ಮನೆಗೆ ಕೊಡೊಯ್ದು ಅರ್ಪಿಸಲಾಯಿತು.

ಪತಿಗೆ ಕೊಟ್ಟ ವಚನದಂತೆ ಸಾರ್ವಜನಿಕ ಸಂಗೀತ ಪ್ರದರ್ಶನಕ್ಕೆ  ತಮ್ಮ ಮೇಲೆ ಮಿತಿ ಹೇರಿಕೊಂಡಿದ್ದರೂ ಸಹ ಜೀವನ ನಿರ್ವಹಣೆಗಾಗಿ ಆಯ್ಕೆ ಮಾಡಿಕೊಂಡ ಶಿಕ್ಷಕ ವೃತ್ತಿಯಿಂದಾಗಿ ಸಂಗೀತವನ್ನು ಶಿಷ್ಯರಿಗೆ ಧಾರೆಯೆರೆಯುವ ಮೂಲಕ ಅನ್ನಪೂರ್ಣದೇವಿಯವರು ಭಾರತದ ಶ್ರೇಷ್ಠ ಸಂಗೀತ ಗುರುಗಳಲ್ಲಿ ಒಬ್ಬರಾಗಿದ್ದಾರೆ. ಇವರ ಬಳಿ ಶಿಷ್ಯ ವೃತ್ತಿ ಕೈಗೊಂಡ ಕೊಳಲು ವಾದನದ ಮಾಂತ್ರಿಕ ಹರಿ ಪ್ರಸಾದ್ ಚೌರಾಸಿಯ, ಸಿತಾರ್ವಾದಕ ನಿಖಿಲ್ಬ್ಯಾನರ್ಜಿ, ಪಂಡಿತ್ ನಿತ್ಯಾನಂದ್, ಸುಧೀರ್ ಪಡ್ಕೆ,  ಹೀಗೆ ಪ್ರತಿಭೆಗಳ ಪಟ್ಟಿಯೇ ಮುಂದವರಿಯುತ್ತದೆ.
1942 ರಲ್ಲಿ ರವಿಶಂಕರ್ ಜೊತೆ ನಡೆದ ವಿವಾಹ ಮತ್ತು ಇಪ್ಪತ್ತು ವರ್ಷಗಳ ದಾಂಪತ್ಯ ಜೀವನದ ನಂತರ  1962 ರಲ್ಲಿ ವಿವಾಹ ವಿಚ್ಚೇಧನದ ಮೂಲಕ ಅಂತ್ಯಗೊಂಡು ಅವರೊಂದಿಗಿನ ಸಂಬಂಧ ಕಡಿದು ಹೋಗಿದ್ದರೂ ಕೊಟ್ಟ ಮಾತಿನಂತೆ ಸಂಗೀತ ಪ್ರದರ್ಶನದಿಂದ ದೂರ ಉಳಿದು, ರವಿಶಂಕರ್ರವರ ಖ್ಯಾತಿಗೆ ತನ್ನ ಕಾಯವನ್ನು, ಜೀವನವನ್ನು ಕರ್ಪೂರದ ಹಾಗೆ ಉರಿಸಿಕೊಂಡವರು ಮಹಾತಾಯಿ.
ಪಂಡಿತ್ ರವಿಶಂಕರ್ ಮತ್ತು ಅನ್ನಪೂರ್ಣ ದೇವಿಯವರ ಬಾಲ್ಯದ ಬದುಕು, ಸಂಗೀತದ ಸಾಧನೆಯನ್ನು ಕಣ್ಣಾರೆ ನೋಡಿದವರ ಪ್ರಕಾರ, ಅನ್ನಪೂರ್ಣರವರ ಸಿತಾರ್ವಾದನ ರವಿಶಂಕರ್ ಸಾಧನೆಯನ್ನು, ಪ್ರತಿಭೆಯನ್ನು ಮೀರಿಸುವಂತಹದ್ದು. ಪ್ರದರ್ಶನದ ವೇದಿಕೆಗಳಲ್ಲಿ ತನಗಿಂತ ಹೆಚ್ಚು ಪ್ರಶಂಸೆ ಗಿಟ್ಟುಸುತ್ತಿದ್ದ ಪತ್ನಿಯ ಬಗ್ಗೆ ರವಿಶಂಕರ್ರವರಿಗೆ ಅಸಮಾಧಾನವಿತ್ತು.
ಸಂಗೀತ ಸಾಧನೆಯ ವಿಷಯದಲ್ಲಿ ಇಬ್ಬರದೂ ವಿಭಿನ್ನ ದಾರಿಯಾಗಿತ್ತು. ಅಂತಿಮವಾಗಿ ಸಂಗೀತ ಇಬ್ಬರೂ ಬೇರ್ಪಡಲು ಕಾರಣವಾದದ್ದು ಮಾತ್ರ ದುರಂತ. ಪಂಡಿತ್ ರವಿಶಂಕರ್ ಜಗತ್ ಪ್ರಸಿದ್ಧ ಸಂಗೀತ ಸಾಧಕರಾಗಿದ್ದರೂ ಕೂಡ ಅವರೊಳಗೆ ಇದ್ದ ಹೆಣ್ಣುಬಾಕತನದ ಪ್ರವೃತ್ತಿ ಅವರಿಂದ ಅನ್ನಪೂರ್ಣದೇವಿ ದೂರವಾಗಲು ಪ್ರಮುಖ ಕಾರಣವಾಯಿತು. ಪಾಶ್ಚಿಮಾತ್ಯ ಸಂಸ್ಕøತಿಯಲ್ಲಿ ಬೆಳೆದ ರವಿಶಂಕರ್ಗೂ, ಮುಸ್ಲಿಂ ಕುಟುಂಬದಲ್ಲಿ ಜನಿಸಿದರೂ ಅಪ್ಪಟ ಭಾರತೀಯ ಸಂಸ್ಕøತಿಯನ್ನು ಮೈಗೂಡಿಸಿಕೊಂಡಿದ್ದ ಅನ್ನಪೂರ್ಣದೇವಿಯವರಿಗೂ ಆಚಾರ ವಿಚಾರ ಮತ್ತು ಆಲೋಚನೆಗಳಲ್ಲಿ ಕಂದಕವೇರ್ಪಟ್ಟಿತ್ತು.

ರವಿಶಂಕರ್ರವರ ತಂದೆ ಶ್ಯಾಮ್ಶಂಕರ್ ಬಂಗಾಳಿ ಬ್ರಾಹ್ಮಣರಾಗಿದ್ದು ಕಾಲಕ್ಕೆ ಬ್ಯಾರಿಸ್ಟರ್ ಪದವಿ ಪಡೆದು ರಾಜಸ್ಥಾನದ ಜಾರ್ವಾರ್ ಸಂಸ್ಥಾನದಲ್ಲಿ ದಿವಾನರಾಗಿದ್ದರು. ವಾರಣಾಸಿಯಲ್ಲಿ ಅವರ ಕುಟುಂಬವಿದ್ದ ಕಾರಣ ಮೊದಲ ಹತ್ತುವರ್ಷಗಳ ಬಾಲ್ಯವನ್ನು ರವಿಶಂಕರ್ ವಾರಣಾಸಿಯಲ್ಲಿ ಕಳೆದಿದ್ದರು. ನಂತರ ಅವರ ತಂದೆ ಜಿನಿವಾ ವಿ.ವಿ.ಯಿಂದ ಡಾಕ್ಟರೇಟ್ ಪದವಿ ಪಡೆದು ವಕೀಲಿ ವೃತ್ತಿಗಾಗಿ ನ್ಯೂಯಾರ್ಕ್ ನಗರಕ್ಕೆ ತೆರಳಿದಾಗ, ತಮ್ಮ ಕುಟುಂಬವನ್ನು ಜೊತೆಗೆ  ಕೊಂಡೊಯ್ದರು. ಒಡ ಹುಟ್ಟಿದ ಏಳು ಜನ ಸಹೋದರರ ಪೈಕಿ ಹಿರಿಯ ಸಹೋದರ ಉದಯ ಶಂಕರ್ ಕಾಲಕ್ಕೆ ಪ್ರಖ್ಯಾತ ನೃತ್ಯ ಪಟುವಾಗಿ ಪ್ರಸಿದ್ಧಿಯಾಗಿ ತಮ್ಮದೇ ನೃತ್ಯತಂಡವೊಂದನ್ನು ಕಟ್ಟಿಕೊಂಡು ಅಮೇರಿಕಾ, ಕೆನಡಾ ಸೇರಿದಂತೆ ಯುರೊಪ್ ರಾಷ್ಟ್ರಗಳಲ್ಲಿ ಪ್ರದರ್ಶನ ನೀಡುತ್ತಿದ್ದರು. ರವಿಶಂಕರ್ ಕೂಡ ಆರಂಭದಲ್ಲಿ ನೃತ್ಯಪಟುವಾಗಿ ಅಣ್ಣನ ತಂಡದಲ್ಲಿ ತೊಡಗಿಸಿಕೊಂಡಿದ್ದರು.
1934 ರಲ್ಲಿ ಕೊಲ್ಕತ್ತ ನಗರದಲ್ಲಿ ನಡೆದ ಸಂಗೀತ ಉತ್ಸವದಲ್ಲಿ ಪಾಲ್ಗೊಂಡಿದ್ದ ಉದಯಶಂಕರ್, ಮಧ್ಯಪ್ರದೇಶದ ಮಯಹಾರ್ ಎಂಬ ಸಂಸ್ಥಾನದಲ್ಲಿ ಗಾಯಕರಾಗಿದ್ದ ಬಾಬಾ ಅಲ್ಲಾವುದ್ದೀನ್ಖಾನ್ ಸಿತಾರ್ ಗಾಯನವನ್ನು ಕೇಳಿ ಅದಕ್ಕೆ  ಮಾರು ಹೋಗಿದ್ದರು. ಮಯಹಾರ್ ಸಂಸ್ಥಾನದ ಮಹಾರಾಜನ ಅನುಮತಿ ಪಡೆದು ಅಲ್ಲಾವುದ್ದೀನ್ ಖಾನರನ್ನು  1935 ರಲ್ಲಿ ತಮ್ಮ ನೃತ್ಯ ತಂಡಕ್ಕೆ ¸ಸಂಗೀತ ನೀಡಲು  ಲಂಡನ್ಗೆ ಆಹ್ವಾನಿಸಿದ್ದರು. ಲಂಡನ್ ಪ್ಯಾರಿಸ್, ರೋಮ್ ನಗರ ಒಳಗೊಂಡಂತೆ ಹಲವು ನಗರಗಳಲ್ಲಿ ನಡೆದ ನೃತ್ಯನಾಟಕ ಪ್ರದರ್ಶನಗಳಲ್ಲಿ ಅಲ್ಲಾವುದ್ದೀನ್ಖಾನ್ ಸಿತಾರ್ ನುಡಿಸಿದ್ದರು. ಇವರ ಸಿತಾರ್ ವಾದನಕ್ಕೆ ಮನಸೋತ ರವಿಶಂಕರ್ ತಮ್ಮ ಹದಿನೆಂಟನೆಯ ವಯಸ್ಸಿನಲ್ಲಿ ನೃತ್ಯವನ್ನು ತ್ಯಜಿಸಿ, 1938 ರಲ್ಲಿ ಮಯಹಾರ್ಗೆ ಬಂದು ಅಲ್ಲಾವುದ್ದೀನ್ ಅವರ ಬಳಿ ಶಿಷ್ಯತ್ವವನ್ನು ಸ್ವೀಕರಿಸಿದರು. ಅವರ ಮನೆಯಲ್ಲಿ ಉಳಿದುಕೊಂಡು ಗುರುಕುಲ ಪದ್ಧತಿಯಲ್ಲಿ ಸಿತಾರ್ ವಾದನ ಕಲಿಯತೊಡಗಿದರು.



ಅನ್ನಪೂರ್ಣದೇವಿಯ ಮೂಲ ಹೆಸರು ರೋಷನಾರ. ಅವರು  ಚೈತ್ರ ಹುಣ್ಣಿಮೆಯ ದಿನ ಜನಿಸಿದ್ದರಿಂದ ಮಯಹಾರದ ( ಈಗಿನ ಜಬಲ್ಪುರ ನಗರದ ಸಮೀಪ ಇರುವ ಪಟ್ಟಣ) ಮಹರಾಜ ಬ್ರಿಜನಾಥ ಸಿಂಗ್  ಅನ್ನಪೂರ್ಣ ಎಂದು ರೋಷನಾರಳಿಗೆ ಪುನರ್ ನಾಮಕರಣ ಮಾಡಿದ್ದ. ಇದಕ್ಕೆ ಅವರ ತಂದೆ ಯಾವ ವಿರೋಧವನ್ನು ವ್ಯಕ್ತಪಡಿಸಲಿಲ್ಲ. ಏಕೆಂದರೆ ಪ್ರತಿ ನಿತ್ಯ ಐದು ಬಾರಿ ನಮಾಜು ಮಾಡುವುದರ ಜೊತೆಗೆ ಶಾರದದೇವಿಯನ್ನು ಪೂಜಿಸಿ ಆರಾಧಿಸುತಿದ್ದ ಅಲ್ಲಾವುದ್ದೀನ್ ಅಂದಿನ ದಿನಗಳಲ್ಲಿ ಹಿಂದು-ಮುಸ್ಲಿಂ ಧರ್ಮಗಳ ಐಕ್ಯತೆಯ ಸಂಕೇತದಂತೆ ಜೀವಿಸಿದ್ದರು.
ಕಾಲದ ಹಿಂದೂಸ್ಥಾನಿ ಸಂಗೀತದಲ್ಲಿ ಮಯಹಾರ ಘರಾನ ಎಂಬ ಪ್ರತ್ಯೇಕ ಹಿಂದೂಸ್ಥಾನಿ ಸಂಗೀತದ ಪ್ರಕಾರವನ್ನು ಹುಟ್ಟುಹಾಕಿದ್ದ ಅಲ್ಲಾವುದ್ದೀನರು ಭಾರತದ ಪ್ರಸಿದ್ದ ಸುರ್ಬಹಾರ್ ಮತ್ತು ಸಿತಾರ್ ವಾದಕರಾಗಿದ್ದರು. ಸುರ್ಬಹಾರ್ ಎನ್ನುವುದು ಸಿತಾರ್ ಮೂಲ ವಾದ್ಯದ ಒಂದು ರೂಪ. ವೀಣೆಯಲ್ಲಿ ರುದ್ರ ವೀಣೆ ಇರುವ ಹಾಗೆ ಅತಿ ತೂಕ ಮತ್ತು ಎತ್ತರ ಇದ್ದ ಸುರ್ಬಹಾರ್ ಅನ್ನು ನುಡಿಸಲು ಏಕಾಗ್ರತೆ ಮತ್ತು ಧ್ಯಾನಸ್ಥ ಮನಸ್ಸು ಬೇಕಾಗಿರುತ್ತಿತ್ತು. ಅಲ್ಲಾವುದ್ದೀನ್ಖಾನ್ ತಮ್ಮ ಪುತ್ರ ಅಲಿ ಅಕ್ಬರ್ಖಾನ್ಗೆ ಮನೆಯಲ್ಲಿ  ಸಂಗೀತ ವಿದ್ಯೆ ಕಲಿಸುತ್ತಿದ್ದರು( ಆಲಿ ಅಕ್ಬರ್ ಖಾನ್ ನಮ್ಮ ಕನ್ನಡದ ಸೀತಾರ್ ವಾದಕರಾದ ಪಂಡಿತ್ ರಾಜೀವ್ ತಾರಾನಾಥ್ ಅವರ ಗುರುಗಳು)  ಮನೆಯೊಳಗೆ ಇದ್ದುಕೊಂಡು ಇವೆಲ್ಲವನ್ನು ಗಮನಿಸುತ್ತಿದ್ದ ಅನ್ನಪೂರ್ಣದೇವಿ ಏಕಲವ್ಯನಂತೆ ಹಿಂದೂಸ್ತಾನಿ ಸಂಗೀತದ ಜೊತೆಗೆ ಸಿತಾರ್ ವಾದನವನ್ನು ಕರಗತ ಮಾಡಿಕೊಳ್ಳುತ್ತಿದ್ದರು. ಒಮ್ಮೆ ಅಲ್ಲಾವುದ್ದೀನರು ಮಗನಿಗೆ ಅಭ್ಯಾಸ ಮಾಡಲು ಹೇಳಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಅಣ್ಣ ತಪ್ಪಾಗಿ ಶೃತಿ ನುಡಿಸಿದ್ದನ್ನು ಕೇಳಿಸಿಕೊಂಡ ಅನ್ನಪೂರ್ಣದೇವಿ, ಅಣ್ಣನ ಶೃತಿಯನ್ನು ತಿದ್ದುತ್ತಾ ಸೀತಾರ್ ನುಡಿಸುತ್ತಿದ್ದರು. ಮನೆಗೆ ಬಂದ  ಅಲ್ಲಾವುದ್ದೀನ್ ಮಗಳಿಗೆ ಗೊತ್ತಾಗದಂತೆ ಬಾಗಿಲ ಬಳಿ ನಿಂತು ಆಕೆಯ ಪ್ರತಿಭೆಯನ್ನು ಗಮನಿಸಿ ಭಾವುಕರಾಗಿದ್ದರು. ಮಾರನೆಯ ದಿನದಿಂದ ಮಕ್ಕಳಿಬ್ಬರಿಗೂ ಸಂಗೀತದ ವಿದ್ಯಾಭ್ಯಾಸ ಮುಂದುವರಿಯಿತು. ಅನ್ನಪೂರ್ಣರವರು ತಂದೆಯಂತೆ ಸಿತಾರ್ ಜೊತೆಗೆ ಸುರ್ ಬಹಾರ್ ನುಡಿಸುವಲ್ಲಿ ನೈಪುಣ್ಯತೆ ಸಾಧಿಸಿದ್ದರು.(ಸಧ್ಯ ಭಾರತದಲ್ಲಿ ಸುರ್ ಬಹಾರ್ ವಾದನ ನುಡಿಸುವ ಏಕೈಕ ಜೀವ ಅನ್ನಪೂರ್ಣ ದೇವಿ ಮಾತ್ರ.)ಚಿಕ್ಕ ವಯಸ್ಸಿನಲ್ಲಿ ಅವರು ಸಂಗೀತದಲ್ಲಿ ಮಾಡಿದ ಸಾಧನೆ ಮುಂದಿನ ದಿನಗಳಲ್ಲಿ ಅವರ ಪಾಲಿಗೆ ಶಾಪವಾಗಿ ಪರಿಣಮಿಸಿತು.


ಸಂಗೀತ ಎಂಬುದು ಕೇವಲ ಹವ್ಯಾಸ ಅಥವಾ ವೃತ್ತಿಯಲ್ಲ, ಅದೊಂದು ಧ್ಯಾನ, ದೇವರನ್ನು ಓಲೈಸುವ ಪರಿ, ಆಧ್ಯಾತ್ಮದತ್ತ ತೆರಳುವ ಮಾರ್ಗಇದು ಅಲ್ಲಾವುದ್ದೀನ್ ಅಚಲ ನಂಬಿಕೆಯಾಗಿತ್ತು. ತಂದೆಯಿಂದ ಸಂಗೀತದ ಜೊತೆಗೆ ಇಂತಹ ಬದ್ಧತೆಯನ್ನು ಅನ್ನಪೂರ್ಣದೇವಿ ತಮ್ಮದಾಗಿಸಿಕೊಂಡಿದ್ದರು. ಅಲ್ಲಾವುದ್ದೀನ್ ತಮ್ಮ ಮಕ್ಕಳಾದ ಅನ್ನಪೂರ್ಣ, ಅಲಿ ಅಕ್ಬರ್ ಖಾನ್ ಮತ್ತು ಶಿಷ್ಯ ರವಿಶಂಕರ್ರವರಿಗೆ ಸಂಗೀತವನ್ನು ಧಾರೆಯೆರೆಯುತ್ತಿದ್ದ ಸಂದರ್ಭದಲ್ಲಿ ರವಿಶಂಕರ್ ಅಣ್ಣ ಉದಯಶಂಕರ್ ಅನ್ನಪೂರ್ಣರವರನ್ನು ತನ್ನ ತಮ್ಮ ರವಿಶಂಕರ್ಗೆ ವಿವಾಹ ಮಾಡಿಕೊಳ್ಳುವ ಪ್ರಸ್ತಾಪವನ್ನು ಗುರುವಿನ ಮುಂದಿಟ್ಟರು. ತೆರೆದ ಮನಸ್ಸಿನ ಅಲ್ಲಾವುದ್ದೀನ್ ಖಾನ್ ಆಹ್ವಾನವನ್ನು ನಿರಾಕರಿಸಲಿಲ್ಲ, ಒಪ್ಪಿಗೆ ಸೂಚಿಸಿದರು. 1942 ರಲ್ಲಿ ಹಿಂದೂ ಪದ್ಧತಿಯಂತೆ ರವಿಶಂಕರ್ ಮತ್ತು ಅನ್ನಪೂರ್ಣರವರ ವಿವಾಹ ಹಿಮಾಲಯ ತಪ್ಪಲಿನ ನೈನಿತಾಲ್ ಗಿರಿಧಾಮದ ಸಮೀಪದ ಅಲ್ಮೊರದಲ್ಲಿ ನೆರೆವೇರಿತು. ಅದು ಕಾಲಕ್ಕೆ ಅಂತರ್ಧರ್ಮ ಮತ್ತು ಜಾತಿಯ ಅಪೂರ್ವ ವಿವಾಹವಾಗುವುದರ ಮೂಲಕ ಸಂಗೀತಕ್ಕೆ ಭಾಷೆ, ಜಾತಿ, ಧರ್ಮದ ಹಂಗಿಲ್ಲ ಎಂಬುದನ್ನು ನಿರೂಪಿಸಿತ್ತು.
ಗುರುಗಳ ಬಳಿ ನಾಲ್ಕು ವರ್ಷಗಳ ಕಾಲ ವಿದ್ಯಾಭ್ಯಾಸ ಮುಗಿಸಿದ ರವಿಶಂಕರ್ ಆಕಾಶವಾಣಿ ಕಲಾವಿದರಾಗಿ ಮತ್ತು  ಸತ್ಯಜಿತ್ ರಾಯ್ ಸಿನಿಮಾಗಳ ಸಂಗೀತ ನಿರ್ದೆಶಕರಾಗಿ ತೊಡಗಿಕೊಂಡು ಸಂಗೀತದಲ್ಲಿ ಹಲವು ಪ್ರಯೋಗಗಳನ್ನು ಕೈಗೊಳ್ಳುತ್ತಾ ನಡೆದರು. ಅವರು ಅಲೆಕ್ಷಾಂಡರನಂತೆ ಜಗತ್ತನ್ನು ಗೆಲ್ಲುವ ಮಹತ್ವಾಕಾಂಕ್ಷಿಯಾಗಿದ್ದರು. ಆದರೆ ಅನ್ನಪೂರ್ಣದೇವಿ ಪಂಡಿತ್ ರವಿಶಂಕರ್ಗಿಂತ ಭಿನ್ನವಾಗಿ ಆಲೋಚಿಸುತ್ತಾ ತಾವು ಇರುವ ಸ್ಥಳದಲ್ಲಿ ಜಗತ್ತನ್ನು ಸೃಷ್ಟಿಸಿಕೊಳ್ಳಬಲ್ಲವರಾಗಿದ್ದರು. ಅವರಿಗೆ ಸಂಗೀತವೆಂಬುದು ಪ್ರದರ್ಶನದ ಅಥವಾ ಆಡಂಬರದ ಪ್ರಕಾರವಾಗಿರಲಿಲ್ಲ, ಅದು ತನ್ನನ್ನು ತಾನು ಅರಿಯುವ, ಬೆಳೆಯುವ ಹಾದಿ ಎಂದು ನಂಬಿದ್ದರು. ಇಂತಹ ಒಂದು ನಂಬಿಕೆ ಅವರನ್ನು ಕಾಲದಲ್ಲಿ ಅದ್ವಿತೀಯ ಕಲಾವಿದೆಯನ್ನಾಗಿ ರೂಪಿಸಿತ್ತು. ರವಿಶಂಕರ್ ಅನ್ನಪೂರ್ಣದೇವಿ ಜೊತೆಯಾಗಿ ಹಲವಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದರು. ರವಿಶಂಕರ್ರವರ ಸಿತಾರ್ ವಾದನದಲ್ಲಿ ಹುಚ್ಚು ಹೊಳೆಯ ವೇಗ, ಮತ್ತು ರಭಸವಿದ್ದರೆ, ಅನ್ನಪೂರ್ಣ ನುಡಿಸುತ್ತಿದ್ದ ಸಿತಾರ್ ವಾದನದಲ್ಲಿ ನಿರ್ಜನ ಅರಣ್ಯದಲ್ಲಿ ನಿಶ್ಯಬ್ಧದಿಂದ ತಂತಾನೆ ಜುಳು ಜುಳು ಹರಿಯುವ ನದಿಯ ನಿನಾದವಿತ್ತು. ತನ್ನ ಪತ್ನಿಯ ಪ್ರತಿಭೆ ತನ್ನ ಭವಿಷ್ಯಕ್ಕೆ ಅಡ್ಡಿಯಾಗುವ ಸೂಚನೆಯಿಂದ ಕಸಿವಿಸಿಗೊಂಡ  ರವಿಶಂಕರ್, ಅನ್ನಪೂರ್ಣ ಅವರನ್ನು ತೆರೆಯ ಹಿಂದಕ್ಕೆ ಸರಿಸಿ, ತಾವು ವೇದಿಕೆಯಲ್ಲಿ ಪ್ರತಿಷ್ಟಾಪನೆಗೊಂಡರು. ವೇಳೆಗಾಲೆ ಅವರಿಗೆ ಒಬ್ಬ ಪುತ್ರ ಜನಿಸಿದ್ದರಿಂದ ಪತಿಯ ಏಳಿಗೆಗಾಗಿ ಸಾರ್ವಜನಿಕ ಸಂಗೀತ ಕಾರ್ಯಕ್ರಮವನ್ನು ತ್ಯಜಿಸಿದ ಅನ್ನಪೂರ್ಣ ತಮ್ಮಳಗಿದ್ದ ಪ್ರತಿಭೆಯನ್ನು ಪುತ್ರ ಶುಭೇಂದ್ರನಿಗೆ ಧಾರೆಯರೆಯತೊಡಗಿದರು.
ಭಾರತೀಯ ಸಂಗೀತ ಲೋಕ ಕೂಡ ರವಿಶಂಕರ್ರವರ ಸಿತಾರ್ ನಾದದ ಮಾಧುರ್ಯಕ್ಕೆ ತಲೆತೂಗುತ್ತಾ ಅನ್ನ ಪೂರ್ಣದೇವಿಯವರನ್ನು ಮರೆಯತೊಡಗಿತು. ಇದು ಜಗದ ನಿಯಮವೂ ಹೌದು. ಮೆರವಣಿಗೆಯಲ್ಲಿ ಮದುಮಗನ ಮುಖ ಕಾಣಲಿ ಎಂದು ತಲೆಯ ಮೇಲೆ ಮೇಲೆ ಉರಿಯುವ ದೀಪ ಹೊತ್ತು ಸಾಗುವ ಅನಾಮಿಕರನ್ನು ಯಾರೂ ಗಮನಿಸುವುದಿಲ್ಲ. ಎಲ್ಲರ ಗಮನ  ಮದುಮಗನ ಮೇಲೆ ಮಾತ್ರವೇ ಹೊರತು, ಕತ್ತಲೆಯಲ್ಲಿ ಮುಖ ಹುದುಗಿಸಿಕೊಂಡವರದಲ್ಲ, ಅನ್ನಪೂರ್ಣದೇವಿಯವರದು ಇದೇ ಸ್ಥಿತಿಯಾಯಿತು.
ರವಿಶಂಕರ್ರವರ ಸಂಗೀತ ಸಾಧನೆಗೆ ಅಡ್ಡಿಯಾಗದೆ ಅವರ ಜೊತೆ ಸುಧೀರ್ಘ ಇಪ್ಪತ್ತು ವರ್ಷ ದಾಂಪತ್ಯ ಜೀವನ ನಡೆಸಿದ ಅನ್ನಪೂರ್ಣರವರಿಗೆ ಕೊನೆಗೆ ಅವರ ಜೊತೆ ಸಂಬಂಧ ಕಡಿದುಕೊಳ್ಳಬೇಕಾದ ಅನಿವಾರ್ಯತೆ ಒದಗಿ ಬಂತು. ರವಿಶಂಕರ್ರವರ ಪರ ಸ್ತ್ರೀ ವ್ಯಾಮೋಹದ ಪ್ರವೃತ್ತಿ ಹಾಗೂ ದಾಂಪತ್ಯದಾಚೆಗಿನ ಸಂಬಂಧ ಕುರಿತು ಮೊದಲಿನಿಂದಲೂ ಹಲವಾರು ಮಾತುಗಳನ್ನು ಕೇಳಿಸಿಕೊಂಡದ್ದ ಅವರಿಗೆ ಕೊನೆಗೊಮ್ಮೆ ಅದು ಸಾಭೀತಾಯಿತು. ತನ್ನ ಅಣ್ಣ ಅಲಿ ಅಕ್ಬರ್ ಖಾನ್ರವರ ನಾದಿನಿ ಕಮಲ ಜೊತೆ ತನಗಿರುವ ಸಂಬಂಧವನ್ನು ರವಿಶಂಕರ್ ಸ್ವತಃ ಒಪ್ಪಿಕೊಂಡ ಮೇಲೆ 1962 ರಲ್ಲಿ ಅವರಿಂದ ಬೇರ್ಪಟ್ಟರು. ರವಿಶಂಕರ್ ತಮ್ಮ ಸಂಗೀತದ ಚೈತ್ರಯಾತ್ರೆಯಂತೆ ಹೆಣ್ಣುಗಳ ಶಿಕಾರಿಯನ್ನು ಬದುಕಿನುದ್ದಕ್ಕೂ ಮುಂದುವರಿಸಿದರು. ಅವರ ಪಾಲಿಗೆ ಹೆಣ್ಣೆಂದರೆ ಕ್ಷಣಕ್ಕೆ ತೃಪ್ತಿ ನೀಡಬಲ್ಲ ಒಂದು ಭೋಗದ ವಸ್ತು. ಕಾರಣಕ್ಕಾಗಿ ಹೆಣ್ಣಿನ ವಯಸ್ಸಿನ ಬಗ್ಗೆಯಾಗಲಿ, ಆಕೆ ಇನ್ನೊಬ್ಬರ ಪತ್ನಿ ಎಂಬ ನೈತಿಕತೆಯಾಗಲಿ ಅವರನ್ನು ಎಂದೂ ಕಾಡಲಿಲ್ಲ. ಇದಕ್ಕೆ ಅವರು ಬಾಲ್ಯದಿಂದ ಮೈಗೂಡಿಸಿಕೊಂಡಿದ್ದ ಪಾಶ್ಚಿಮಾತ್ಯ ಜಗತ್ತಿನ ಭೋಗ ಸಂಸ್ಕøತಿ ಸಹ ಪರೋಕ್ಷವಾಗಿ ಕಾರಣವಾಗಿತ್ತು.





1969 ರಲ್ಲಿ ಅವರು ಭಾರತ ತೊರೆದು ಜಗತ್ತಿನಾದ್ಯಂತ ಸಂಗೀತ ಪ್ರದರ್ಶನ ನೀಡಲು ಹೊರಟಾಗ ಅವರ ಪುತ್ರ ಶುಭೇಂದ್ರ ಕೂಡ ಅವರ ಜೊತೆಯಾಗಿದ್ದುಕೊಂಡು ಅವರ ಪ್ರದರ್ಶನಗಳಲ್ಲಿ ಸಾಥಿಯಾಗಿ ಕಾರ್ಯನಿರ್ವಹಿಸಿದ. ಸಂಗೀತ ಕುರಿತಂತೆ ತಾಯಿಯ ಏಕಾಗ್ರತೆ ಮತ್ತು ಮೌನ ಮತ್ತು ತಂದೆಯ ಪ್ರಯೋಗಶೀಲತೆ ಮತ್ತು ಚಂಚಲತೆ ಇವುಗಳ ನಡುವೆ ಅವನು ತಂದೆಯನ್ನು ಆರಿಸಿಕೊಂಡಿದ್ದ.
ಇತ್ತ ಮುಂಬೈ ನಗರದಲ್ಲಿ ಅನ್ನಪೂರ್ಣ ದೇವಿ ಅಜ್ಞಾತವಾಸದಲ್ಲಿ ಅನಾಮಿಕಳಂತೆ ಬದುಕುತ್ತಿದ್ದಾಗ ವಾಪಸ್ ತವರಿಗೆ ಮರಳುವಂತೆ ಆಕೆಯ ಕುಟುಂಬದವರು ಒತ್ತಾಯ ಹೇರಿದಾಗ ವಾಪಸ್ ಮಯಹಾರ್ಗೆ ಹೋಗಲು ನಿರಾಕರಿಸಿದರು. ತಂದೆ ಬಳುವಳಿಯಾಗಿ ನೀಡಿದ್ದ ಸಂಗೀತವನ್ನು ಗುರುವಾಗಿದ್ದುಕೊಂಡು ಶಿಷ್ಯರಿಗೆ ಧಾರೆಯೆರೆಯಲು ನಿರ್ಧರಿಸಿದರು. ಏಕೆಂದರೆ, ಅವರೊಳಗೆ ಒಬ್ಬ ಶಿಲ್ಪಿಗೆ ಇರಬಹುದಾದ ಕುಶಲತೆ ಮತ್ತು ಕೈಚಳಕ ಎರಡೂ ಇತ್ತು. ಶಿಲ್ಪಿಯ ಕೈಗೆ ಸಿಕ್ಕ ಕಾಡುಗಲ್ಲು ಮೋಹಕ ಮೂರ್ತಿಯಾಗಿ ಮೈದಾಳುವಂತೆ ಅವರಿಂದ ಸಂಗೀತದ ಶಿಕ್ಷಣ ಪಡೆದ ಎಲ್ಲರೂ ಭಾರತದ ಸಂಗೀತ ಲೋಕದ ಮುಕುಟಮಣಿಗಳಾದರು.
ಇಂತಹ ಏಕಾಂಗಿ ಜೀವನ ನಡೆಸುತ್ತಿದ್ದ ಅವರ ಬದುಕಿನಲ್ಲಿ 1982 ಒಂದು ದಿನ ಒಂದು ಆಕಸ್ಮಿಕ ಘಟನೆಯೂ ನಡೆದು ಹೋಯಿತು. ಅಮೇರಿಕಾದಲ್ಲಿದ್ದ ಅವರ ಸಹೋದರ ಅಲಿ ಅಕ್ಬರ್ ಖಾನ್ರವರು ತಮ್ಮ ಬಳಿ ಬಳಿ ಶಿಷ್ಯ ವೃತ್ತಿ ಸ್ವೀಕರಿಸಿ ಸಿತಾರ್ ಕಲಿಯುತ್ತಿದ್ದ ಋಷಿಕುಮಾರ್ ಪಾಂಡೆ ಎಂಬುವರಿಗೆ ಅನಾರೋಗ್ಯದ ನಿಮಿತ್ತ ಸಂಗೀತ ಕಲಿಸಲಾರದೆ, ಮುಂಬೈ ನಗರಕ್ಕೆ ಸಹೋದರಿಯ ಬಳಿಗೆ ಕಳಿಸಿಕೊಟ್ಟಿದ್ದರು. ಮುಂಬೈ ನಗರಕ್ಕೆ ಬಂದ ಪಾಂಡೆ ಅನ್ನಪೂರ್ಣ ದೇವಿ ಮನೆಯಲ್ಲಿ ಇದ್ದುಕೊಂಡು ಎಂಟು ವರ್ಷಗಳ ಕಾಲ ಸಂಗೀತಾಭ್ಯಾಸ ಮಾಡಿದರು. ಅನ್ನಪೂರ್ಣದೇವಿಯವರ  ಏಕಾಂಗಿ ಬದುಕು, ಅಜ್ಞಾತವಾಸ ಎಲ್ಲವನ್ನೂ ನೋಡಿ, ಅವರಿಗಿಂತ 14 ವರ್ಷ ಚಿಕ್ಕವರಾದರೂ ಸಹ, ಪಾಂಡೆ ಒಂದು ದಿನ  ವಿವಾಹವಾಗುವ ಪ್ರಸ್ತಾಪವನ್ನು ಅವರ ಮುಂದಿಟ್ಟರು. ಅನಿರೀಕ್ಷಿತ ಆಹ್ವಾನವನ್ನು ಅನ್ನಪೂರ್ಣದೇವಿಗೆ ಜೀರ್ಣಿಸಿಕೊಳ್ಳಲಾರದ ಸ್ಥಿತಿ. ನಾಲ್ಕು ದಿನಗಳ ಕಾಲ ಯೋಚಿಸಿ, ಅಂತಿಮವಾಗಿ ತಮ್ಮ ಕೊನೆಯ ಕಾಲದಲ್ಲಿ ಆರೈಕೆಗೆ ಒಂದು ಜೀವ ಇರಲಿ ಎಂದು ಋಷಿಕುಮಾರ್ ಪಾಂಡೆಯನ್ನು ಸಂಗಾತಿಯಾಗಿ ಸ್ವೀಕರಿಸಿದರು.
ಸ್ವತಃ ಪಾಂಡೆಯವರು,  ಅನ್ನಪೂರ್ಣದೇವಿ ಲೋಕದ ಕಣ್ಣಲ್ಲಿ ನನಗೆ ಪತ್ನಿಯಾದರೂ, ಅದಕ್ಕಿಂತ ಹೆಚ್ಚಾಗಿ ಅವರು ನನಗೆ ಗುರುಎಂದಿದ್ದಾರೆ. ಪತ್ರಕರ್ತೆಗೆ ನೀಡಿರುವ ಉತ್ತರದಲ್ಲಿ ಅನ್ನಪೂರ್ಣದೇವಿ ಸಹ ನಾನು ಎಂಬತ್ಮೂರನೇ ವಯಸ್ಸಿನಲ್ಲಿ ಆರೋಗ್ಯವಾಗಿರಲು ಪಾಂಡೆಯವರ ಕಾಳಜಿ ಕಾರಣ ಎಂದು ಹೇಳಿಕೊಂಡಿದ್ದಾರೆ.

1962 ರಲ್ಲಿ ರವಿಶಂಕರ್ ಜೊತೆ ವಿಚ್ಛೇಧನ ಪಡೆದ ನಂತರ ಇಬ್ಬರ ಮನಸ್ಸಿನಲ್ಲಿ ಯಾವುದೇ ದ್ವೇಷ ಅಥವಾ ಕಹಿಭಾವನೆ ಉಳಿದಿರಲಿಲ್ಲ. 1980ರಲ್ಲಿ ರಿಚರ್ಡ್ ಆಟನ್ಬರೊ ಅವರ ಗಾಂಧಿ ಚಿತ್ರಕ್ಕೆ ಸಂಗೀತ ಸಂಯೋಜಿಸಲು ಮುಂಬೈ ನಗರಕ್ಕೆ  ಬಂದಿದ್ದ ರವಿಶಂಕರ್ ಅನ್ನಪೂರ್ಣರವರ ಮನೆಗೆ ಹೋಗಿ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿ ಬಂದಿದ್ದರು. ಅದನ್ನು ಹೊರತು ಪಡಿಸಿದರೆ ತಮ್ಮ ಬದುಕಿನ ಐವತ್ತು ವರ್ಷಗಳ ಕಾಲ ಅವರ ಮುಖ ನೋಡದ, ಮಾತನಾಡದ ವ್ಯಕ್ತಿತ್ವ ಅನ್ನಪೂರ್ಣರವರದು.

ಕಳೆದ ಡಿಸಂಬರ್ 12 ರಂದು ತಮ್ಮ ತೊಂಬತ್ತನೆಯ ವಯಸ್ಸಿನಲ್ಲಿ ತೀರಿಹೋದ ಪಂಡಿತ್ ರವಿಶಂಕರ್ ನಿಧನ ವಾರ್ತೆ ಅನ್ನಪೂರ್ಣದೇವಿಯವರಿಗೆ ಅವರ ಎರಡನೆಯ ಪತಿ ಪಾಂಡೆ  ಮೂಲಕ ತಿಳಿದಾಗ, ಕಣ್ಣೀರು ಮತ್ತು ಭಾವನೆಗಳೆಲ್ಲವನ್ನು ಅದುಮಿಟ್ಟುಕೊಂಡು ಮೌನಕ್ಕೆ  ಮೊರೆಹೋದರು. ಮಾರನೆಯ ದಿನ ಕೊಲ್ಕತ್ತ ನಗರದ ಟೆಲಿಗ್ರಾಫ್ಇಂಗ್ಲೀಷ್ ದಿನಪತ್ರಿಕೆಗೆ ದೂರವಾಣಿಯಲ್ಲಿ ಮೊಟ್ಟ ಮೊದಲ ಹೇಳಿಕೆಯನ್ನು ಅವರು ಕೊಟ್ಟರು.
ಅನ್ನಪೂರ್ಣದೇವಿಯವರ ಹೇಳಿಕೆ ಹೀಗಿತ್ತುಪಂಡಿತ್ಜಿರವರ ಸಂಗೀತ ಕುರಿತಂತೆ ಅವರಲ್ಲಿದ್ದ ತ್ಯಾಗಮನೋಬಾವ, ಮತ್ತು ಎಲ್ಲಾ ಸಂಗೀತದ ಪ್ರಕಾರಗಳ ಕುರಿತು ಅವರಿಗಿದ್ದ ಆಸಕ್ತಿ ಮಕ್ಕಳಿಗೆ ಇರುವ ಕುತೂಹಲದಂತೆ ಇರುತ್ತಿತ್ತು. ಅವರಿಗಿದ್ದ ಹಾಸ್ಯ ಪ್ರವತ್ತಿ ಮತ್ತ್ರು ಅವರ ಗುರುಗಳು ಹಾಗೂ ನನ್ನ ತಂದೆಯವರಾದ ಬಾಬಾ ಅಲಿಖಾನ್ ಬಗ್ಗೆ ಇದ್ದ ಪೂಜ್ಯಭಾವನೆಗಳನ್ನು ಮರೆಯಲಾಗದು, ಅವರ ಇಂತಹ ಗುಣಗಳು ನನ್ನ ಬದುಕಿಗೆ ಪ್ರೇರಣೆಯಾಗಿವೆ. ಇದಕ್ಕಾಗಿ ನಾನು ಅವರಿಗೆ ಕೃತಜ್ಞಳಾಗಿದ್ದೀನಿ.”




ಮುಂಬೈ ನಗರದ ಆರನೆಯ ಅಂತಸ್ತಿನ ಅನ್ನಪೂರ್ಣರವರ ಮನೆಯ ಬಾಗಿಲಿಗೆ ಒಂದು ನಾಮಫಲಕವನ್ನು ತೂಗುಹಾಕಲಾಗಿದೆ. “ದಯಮಾಡಿ ಮೂರುಬಾರಿ ಮಾತ್ರ ಕಾಲಿಂಗ್ ಬೆಲ್ ಒತ್ತಿರಿ. ಬಾಗಿಲು ತೆರೆಯದಿದ್ದರೆ, ತಡಮಾಡದೆ  ಹಿಂತಿರುಗಿರಿ. ತೊಂದರೆಗಾಗಿ ವಿಷಾಧಿಸುತ್ತೇನೆ
ಬೆಳಿಗ್ಗೆ ಮೂರು ಗಂಟೆಗೆಯಿಂದ ಆರಂಭವಾಗುವ ಅವರ ದಿನಚರಿ ಅವರ ಮೆಚ್ಚಿನ ಕೌಶಿಕಿ ರಾಗವನ್ನು ಸಿತಾರ್ ವಾದನದೊಂದಿಗೆ ನುಡಿಸುವುದರೊಂದಿಗೆ ಆರು ಗಂಟೆಗೆ ಮುಕ್ತಾಯವಾಗುತ್ತದೆ. ಅದರ ನಿನಾದ ಕೂಡ ನಮ್ಮ ಮಲ್ಲಿಗೆಯ ಕವಿ ಕೆ.ಎಸ್. ನರಸಿಂಹ ಸ್ವಾಮಿ ಹೇಳುವ ಹಾಗೆ ನೀರೊಳಗೆ ವೀಣೆ ಮಿಡಿದಂತೆ ಇರುತ್ತದೆ. ಸಣ್ಣನೆಯ ಅಲೆಯೊಂದಿಗೆ ತೇಲಿಬರುವ ಸ್ವರ ಮಾಧುರ್ಯ ಮನೆಯೆದುರುಗಿನ ಸಮುದ್ರದ ಗಾಳಿಯೊಂದಿಗೆ ಮಿಳಿತವಾಗುವುದರ ಮೂಲಕ ಲೀನವಾಗುತ್ತದೆ. ನೆರೆಹೊರೆಯವರು ಏಳುವ ಮುನ್ನವೆ, ಮನೆಯ ತಾರಸಿಗೆ ಹೋಗಿ ಪಾರಿವಾಳಗಳಿಗೆ ಒಂದಿಷ್ಟು ಕಾಳು ಹಾಕಿ ಮನೆಗೆ ಬಂದು ಬಾಗಿಲು ಹಾಕಿಕೊಂಡರೆ ಅವರ ಅಂದಿನ ದಿನಚರಿ ಮುಗಿಯಿತು. ಅವರು, ಅವರ ಏಕಾಂತ, ಮೌನ ಮತ್ತು ಆಯ್ದ ಶಿಷ್ಯರಿಗೆ ಒಂದಿಷ್ಟು ಹಿಂದೂಸ್ಥಾನಿ ಸಂಗೀತದ ಪಾಠ. ಇವಿಷ್ಟೇ ಅವರ ಲೋಕ. ವಾರಕ್ಕೆ ಎರಡು ದಿನ ಮೌನ ಮತ್ತು ಏಕಾಂತ.



ಅನ್ನಪೂರ್ಣ ದೇವಿಯವರ ಕಠೋರ ನಿಲುವಿನಿಂದಾಗಿ ಭಾರತದ ಸಂಗೀತ ರಸಿಕರ ಲೋಕವೊಂದು ಅವರ ಸ್ವರ ಮಾಧುರ್ಯದಿಂದ ವಂಚಿತವಾಗಿದೆ. 1960 ದಶಕದಲ್ಲಿ ಅವರು ನುಡಿಸಿದ ಸಿತಾತ್ ವಾದನದ ತುಣುಕುಗಳು ಯೂ ಟ್ಯೂಬ್ನಲ್ಲಿ  ಇಂದಿಗೂ ಹರಿದಾಡುತ್ತಿವೆ. ಅದನ್ನು ಆಲಿಸಿದಾಗ ನಾದದಿಂದ ವಂಚಿತರಾದ ನಾವು ನತದೃಷ್ಟರು ಎಂಬ ವಿಷಾಧದ ಛಾಯೆ ಮನಸ್ಸನ್ನು ಆವರಿಸಿಕೊಳ್ಳುತ್ತದೆ.

ಶುಕ್ರವಾರ, ಡಿಸೆಂಬರ್ 6, 2013

ವಚನ ಪಿತಾಮಹಾ ಫ.ಗು. ಹಳಕಟ್ಟಿ. ಒಂದು ನೋವಿನ ನೆನಪು

ಅದೊಂದು ಧಾರವಾಡದ ಕಡು ಬೇಸಿಗೆಯ ದಿನ. ೧೯೫೫ರ ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ವಚನ ಸಾಹಿತ್ಯದ ಪಿತಾಮಹನೆಂಬ ಬಿರುದಿಗೆ ಪಾತ್ರರಾಗಿದ್ದ ಫ. ಗು. ಹಳಕಟ್ಟಿಯವರಿಗೆ ಗೌರವ ಡಾಕ್ಟರೇಟ್ ನೀಡಿದ ದಿನ. ಘಟಿಕೋತ್ಸವ ಕಾರ್ಯಕ್ರಮದ ನಂತರ ಅತಿಥಿಗಳಿಗೆ ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ ಭೋಜನಕೂಟ ಏರ್ಪಡಿಸಲಾಗಿತ್ತು. ಡಾಕ್ಟರೇಟ್ ಪದವಿ ಸ್ವೀಕರಿಸಲು ಕೋಟು, ಕಚ್ಚೆ , ಪೇಟ ಧರಿಸಿ ಬಂದಿದ್ದ ಹಳಕಟ್ಟಿಯವರು ಔತಣಕೂಟದಲ್ಲಿ ಪಾಲ್ಗೊಂಡು ಊಟಕ್ಕೆ ಕುಳಿತರು. ಆಗ ವಿ.ವಿ.ಯ ರಿಜಿಸ್ಟ್ರಾರ್ ಆಗಿದ್ದ ಒಡೆಯರ್ ಹಳಕಟ್ಟಿಯವರನ್ನು ಉದ್ದೇಶಿಸಿ ‘ಸಾರ್ ಸೆಖೆ ಬಾಳಾ ಇದೆ. ಕೋಟ್ ತೆಗೆದು ಆರಾಮಾಗಿ ಊಟ ಮಾಡ್ರಲಾ’ ಎಂದರು. ಆಗ ಹಳಕಟ್ಟಿಯವರು ಒಡೆಯರ್‌ರವರನ್ನು ಹತ್ತಿರ ಕರೆದು ‘ತಮ್ಮಾ ಕೋಟಿನ ಒಳಗಾ ಅಂಗಿ ಪೂರಾ ಹರಿದು ಹೋಗದ, ಅದಕ್ಕ ನಾ ಕೋಟ್ ಹಾಕ್ಕಂಡಿದೀನಿ. ನಾನು ಸಖೆ ತಡಿತೀನಿ ತಮ್ಮಾ ಆದರ ಅವಮಾನ ತಡಿಯಾಂಗಿಲ್ಲ’ ಎಂದಾಗ ಒಡೆಯರ್ ಮೂಕ ವಿಸ್ಮಿತರಾಗಿ ನಿಂತರು.

೧೯೦೪ರಲ್ಲಿ ಮುಂಬೈನಲ್ಲಿ ವಕೀಲಿ ಶಿಕ್ಷಣ ಮುಗಿಸಿ, ಪದವಿಯೊಂದಿಗೆ ಬಿಜಾಪುರಕ್ಕೆ ಬಂದ ಹಳಕಟ್ಟಿಯವರು ಬಯಸಿದ್ದರೆ ವಕೀಲಿ ವೃತ್ತಿಯಲ್ಲೇ ಶ್ರೀಮಂತರಾಗುವ ಅವಕಾಶವಿತ್ತು. ಆದರೆ ಎಲ್ಲದಕ್ಕೂ ತಿಲಾಂಜಲಿ ಇತ್ತು, ಸಮಾಜಸೇವೆ, ವಚನ ಸಾಹಿತ್ಯದ ಸಂಗ್ರಹ ಮತ್ತು ಪ್ರಕಟಣೆಗಾಗಿ ತಮ್ಮ ಬದುಕನ್ನು ಮೀಸಲಾಗಿರಿಸಿ, ಗಂಧದ ಕೊರಡಿನಂತೆ ಜೀವ ತೆಯ್ದು ತಮ್ಮ ಕೊನೆಯ ದಿನಗಳಲ್ಲಿ ಬಡತನವನ್ನೇ ಹಾಸಿ-ಹೊದ್ದು ಬದುಕಿದ ಫ.ಗು. ಹಳಕಟ್ಟಿ ಎಂಬ ನಿಷ್ಕಳಂಕ ಕರ್ಮಯೋಗಿಯ ಕರುಣಾಜನಕ ಕಥನವಿದು.
ಹಳಕಟ್ಟಿಯವರ ಜನ್ಮಭೂಮಿ ಧಾರವಾಡ. ಆದರೆ ಕರ್ಮಭೂಮಿಯನ್ನಾಗಿ ಅವರು ಆರಿಸಿಕೊಂಡಿದ್ದು ಬಿಜಾಪುರವನ್ನು. ೧೮೬೦ರ ಜುಲೈ ೨ರಂದು ಧಾರವಾಡದಲ್ಲಿ ಗುರುಬಸಪ್ಪ, ದಾನಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಹಳಕಟ್ಟಿಯವರು ಪ್ರೌಢಶಾಲೆಯವರೆಗೆ ಧಾರವಾಡದಲ್ಲೆ ಓದಿದರು. ಆ ಕಾಲದಲ್ಲಿ ಅವರ ತಂದೆ ಗುರುಬಸಪ್ಪ ಧಾರವಾಡದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಧಾರವಾಡದ ಲಿಂಗಾಯಿತ ವಿದ್ಯಾ ಅಭಿವೃದ್ಧಿ ಸಂಸ್ಥೆ ಹಾಗೂ ವಿದ್ಯಾವರ್ಧಕ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.

ಮುಂಬೈ ನಗರದಲ್ಲಿ ಬಿ.ಎ. ಪದವಿ ಹಾಗೂ ಎಲ್.ಎಲ್.ಬಿ. ಪದವಿ ಪೂರೈಸಿ ವಕೀಲ ವೃತ್ತಿಗಾಗಿ ೧೯೦೪ರಲ್ಲಿ ಬಿಜಾಪುರಕ್ಕೆ ಬಂದ ಫ.ಗು. ಹಳಕಟ್ಟಿಯವರು ತಮ್ಮ ಕಡೆಯ ಉಸಿರಿರುವ ತನಕ ಬಿಜಾಪುರವನ್ನು ಕಾಯಕ ಭೂಮಿಯನ್ನಾಗಿಸಿಕೊಂಡರು.

ಇಪ್ಪತ್ತನೇ ಶತಮಾನದ ಪ್ರಾರಂಭದ ಆ ದಿನಗಳಲ್ಲಿ ಆಂಗ್ಲರ ಆಡಳಿತ ಹಾಗೂ ಅವರು ತಂದಿತ್ತ ಶಿಕ್ಷಣದ ಸುಧಾರಣೆಗಳಿಂದ ಸಮಾಜದಲ್ಲಿ ಎಚ್ಚರಿಕೆ ಮೂಡುತ್ತಿದ್ದ ಕಾಲವಾಗಿತ್ತು. ಆಧುನಿಕ ಶಿಕ್ಷಣ ಪಡೆದಿದ್ದ ಹಳಕಟ್ಟಿ ಮನಸ್ಸು ಮಾಡಿದ್ದರೆ ಸರ್ಕಾರದಲ್ಲಿ ಘನತರವಾದ ಹುದ್ದೆ ಪಡೆಯಬಹುದಿತ್ತು. ಇಲ್ಲವೆ ತಮ್ಮ ವಕೀಲಿ ವೃತ್ತಿಯಿಂದ ಶ್ರೀಮಂತಿಕೆ ದಕ್ಕಿಸಿಕೊಳ್ಳ ಬಹುದಿತ್ತು. ಆದರೆ ಬಿಜಾಪುರಕ್ಕೆ ಬಂದ ಅವರು ಅಲ್ಲಿ ತಾಂಡವವಾಡುತ್ತಿದ್ದ ಬಡತನ, ಅನಕ್ಷರತೆ, ರೈತರು ಕೃಷಿ ಉತ್ಪನ್ನ ಮಾರಾಟಕ್ಕೆ ಪರದಾಡುತ್ತಿದ್ದ ಪರಿ ಇವೆಲ್ಲವನ್ನು ಮನಗಂಡು ಸಮಾಜ ಸೇವೆಗೆ ತಮ್ಮ ಬದುಕನ್ನು ಮೀಸಲಾಗಿಸಿದರು.

ತಮ್ಮ ತಂದೆಯಂತೆ ಬಿಜಾಪುರದಲ್ಲಿ , ಬಿಜಾಪುರ ಲಿಂಗಾಯಿತ ವಿದ್ಯಾಭಿವೃದ್ಧಿ ಸಂಸ್ಥೆ ಹುಟ್ಟುಹಾಕಿದರಲ್ಲದೆ, ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಸ್ಥಾಪಿಸಿದರು. ಸಮಾಜ ಸೇವೆಯ ಜೊತೆ ಜೊತೆಗೆ ಸಾಹಿತ್ಯದಲ್ಲಿ ಆಸಕ್ತಿ ಇದ್ದ ಹಳಕಟ್ಟಿ ಮೊದಲಿಗೆ ಬಸವಣ್ಣನವರ ವಚನಗಳನ್ನು ಇಂಗ್ಲೀಷ್‌ಗೆ ಅನುವಾದ ಮಾಡುವುದರ ಮೂಲಕ (೧೯೨೨) ವಚನ ಸಾಹಿತ್ಯ ಸಂಗ್ರಹಣೆ, ಪ್ರಕಟಣೆಗೆ ಕೈಹಾಕಿದರು. ಮುಂದೆ ಈ ಪ್ರವೃತ್ತಿಯೇ ಅವರಿಗೆ ಧ್ಯಾನವಾಯಿತು. ಹನ್ನೆರಡನೇ ಶತಮಾನದ ಶಿವಶರಣರ ವಚನಗಳನ್ನು ಸಂಗ್ರಹಿಸುವುದು ಅವುಗಳಲ್ಲಿ ಇರಬಹುದಾದ ಧಾರ್ಮಿಕ ಹಾಗೂ ವೈಚಾರಿಕ ಮಹತ್ವದ ಚಿಂತನೆಗಳನ್ನು ಸಾದರಪಡಿಸುವುದು ಇದು ಫ.ಗು. ಹಳಕಟ್ಟಿಯವರ ಜೀವನ ಮಂತ್ರವಾಯಿತು.

೧೯೧೦ರಲ್ಲಿ ಬಿ.ಎಲ್.ಡಿ.ಇ. ಸಂಸ್ಥೆ, ೧೯೧೨ರಲ್ಲಿ ಸಿದ್ದೇಶ್ವರ ಸಂಸ್ಥೆ, ೧೯೧೩ರಲ್ಲಿ ಸಹಕಾರಿ ಸಂಘ, ೧೯೧೪ರಲ್ಲಿ ಸಿದ್ದೇಶ್ವರ ಹೈಸ್ಕೂಲು ಸ್ಥಾಪಿಸಿ ೧೯೧೯ರಲ್ಲಿ ಬಿಜಾಪುರದ ನಗರಸಭಾ ಸದಸ್ಯರಾಗಿ, ೧೯೨೦ರಲ್ಲಿ ಮುಂಬೈ ವಿಧಾನಸಭಾ ಸದಸ್ಯರಾಗಿ ಹಳಕಟ್ಟಿಯವರು ಕಾರ್ಯ ನಿರ್ವಹಿಸಿದ್ದರೂ ಸಹ ಎಲ್ಲೆಡೆ ತಮ್ಮ ಶುದ್ಧ ಹಸ್ತ ಮತ್ತು ಪ್ರಾಮಾಣಿಕ ಹಾಗೂ ಪಾರದರ್ಶಕ ಬದುಕಿನೊಂದಿಗೆ ಗುರುತಿಸಿಕೊಂಡರು.

೧೯೨೩ರಲ್ಲಿ ‘ವಚನಶಾಸ್ತ್ರಸಾರ’ ಎಂಬ ಬೃಹತ್ ವಚನ ಸಂಕಲನವನ್ನು ಹೊರತರುವ ಮೂಲಕ ವಚನಗಳ ಸಂಗ್ರಹಕ್ಕೆ ಕೈಹಾಕಿದ ಹಳಕಟ್ಟಿಯವರು ಇವುಗಳ ಪ್ರಕಟಣೆಗಾಗಿ ೧೯೨೬ರಲ್ಲಿ ‘ಹಿತಚಿಂತಕ’ ಎಂಬ ಮುದ್ರಣಾಲಯ ಪ್ರಾರಂಭಿಸಿ ‘ಶಿವಾನುಭಾವ’ ಎಂಬ ಪತ್ರಿಕೆಯನ್ನೂ ಆರಂಭಿಸಿದರು.

೧೯೨೬ರಿಂದ ೧೯೬೧ರವರೆಗೆ ನಿರಂತರವಾಗಿ ಈ ಪತ್ರಿಕೆಯಲ್ಲಿ ವಚನಗಳ ಬಗ್ಗೆ, ಶಿವಶರಣರ ಬಗ್ಗೆ ಹಳಕಟ್ಟಿಯವರು ಬರೆದ ಲೇಖನಗಳ ಸಂಗ್ರಹಗಳು ಒಟ್ಟು ೭೨ ಕೃತಿಗಳಾಗಿ ಹೊರಹೊಮ್ಮಿವೆ. ಇವುಗಳ ಜೊತೆ ಅನ್ಯರ ಕೃತಿಗಳು ಸೇರಿ ೧೦೫ ಕೃತಿಗಳನ್ನು ಪ್ರಕಟಿಸಿದ್ದಾರೆ. ಎಂದೂ ವ್ಯವಸ್ಥೆಯೊಂದಿಗೆ ರಾಜಿಯಾಗದೆ ವಚನಗಳಲ್ಲಿ ಅಡಗಿರುವ ಶಿವಶರಣರ ತತ್ವ ಮತ್ತು ಚಿಂತನೆಗಳನ್ನು ಜನತೆಗೆ ತಿಳಿಸುವುದೇ ಜೀವನದ ಪರಮ ಗುರಿ ಎಂದು ನಂಬಿಕೊಂಡಿದ್ದ ಹಳಕಟ್ಟಿಯವರು ತಮ್ಮ ಜೀವಿತದ ಕೊನೆಯವರೆಗೂ ಬಿಜಾಪುರದಲ್ಲಿ ಸ್ವಂತ ಮನೆ ಮಾಡಿಕೊಳ್ಳದೆ ಫಕೀರನಂತೆ ಬದುಕಿಬಿಟ್ಟರು. ತುಂಬ ಕಷ್ಟದಲ್ಲಿ ನಡೆಯುತ್ತಿದ್ದ ಪತ್ರಿಕೆಗೆ ಯಾರಾದರು ೨ರೂ ಸಹಾಯಧನ ಮಾಡಿದರೆ ಅದನ್ನು ಅವರ ಹೆಸರಿನೊಂದಿಗೆ ಪ್ರಕಟಿಸಿ ಕೃತಜ್ಞತೆ ಅರ್ಪಿಸುತ್ತಿದ್ದರು.
ತಾವು ಈ ರೀತಿ ಕಷ್ಟಗಳ ಸರಮಾಲೆಯ ನಡುವೆ ಬದುಕಿದ್ದರ ಬಗ್ಗೆ ಅವರು ಎಂದೂ ವಿಷಾದ ಪಡಲಿಲ್ಲ. ತಮ್ಮ ‘ನನ್ನ ೭೫ ವರ್ಷಗಳು’ ಎಂಬ ಕೃತಿಯಲ್ಲಿ ತನ್ನ ಸಾಧನೆಯ ಹಿಂದೆ ಬೆನ್ನೆಲುಬಾಗಿ ನಿಂತ ತಂದೆ ಗುರುಬಸಪ್ಪ ಹಾಗೂ ಹೆಣ್ಣು ಕೊಟ್ಟ ಮಾವ ತಮ್ಮಣ್ಣಪ್ಪ ಇವರನ್ನು ಹಳಕಟ್ಟಿಯವರು ತುಂಬು ಹೃದಯದಿಂದ ಸ್ಮರಿಸಿದ್ದಾರೆ.
 

ಇವತ್ತಿನ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಲಭ್ಯವಾಗುತ್ತಿರುವ ಸಮಗ್ರ ವಚನ ಸಾಹಿತ್ಯದ ಹಿಂದೆ ಫ.ಗು. ಹಳಕಟ್ಟಯವರ ಅರ್ಧ ಶತಮಾನದ ಶ್ರಮವಿದೆ. ಈ ಕಾರಣಕ್ಕಾಗಿ ಕನ್ನಡ ನಾಡು ಅವರನ್ನು ‘ವಚನ ಪಿತಾಮಹ’ ಎಂಬ ಬಿರುದು ನೀಡಿ ಗೌರವಿಸಿದೆ.


ಹಳಕಟ್ಟಿಯವರು ಸ್ಥಾಪಿಸಿದ ಬಿ.ಎಲ್.ಡಿ.ಇ. ಸಂಸ್ಥೆ ಇಂದು ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜು, ಆಸ್ಪತ್ರೆ ಸೇರಿದಂತೆ ೧೦೮ ಶಿಕ್ಷಣ ಸಂಸ್ಥೆಗಳೊಂದಿಗೆ ಹೆಮ್ಮರವಾಗಿ ಬೆಳೆದು ನಿಂತಿದೆ. ಈ ಕಾರಣಕ್ಕಾಗಿ ಸಂಸ್ಥೆಯ ಆಡಳಿತ ಚುಕ್ಕಾಣಿ ಹಿಡಿದಿರುವ ಎಂ.ಬಿ. ಪಾಟೀಲರು ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರ ಸ್ಥಾಪಿಸಿ ಅವರ ಸಮಗ್ರ ಸಾಹಿತ್ಯವನ್ನು ಖ್ಯಾತ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ನೇತೃತ್ವದಲ್ಲಿ ೧೫ ಬೃಹತ್ ಸಂಪುಟಗಳಲ್ಲಿ ಹೊರತಂದಿದ್ದಾರೆ.
ಕಳೆದ ಹತ್ತು ವರ್ಷಗಳ ಹಿಂದೆ ಬಿಜಾಪುರ ನಗರ ಸಭೆ, ಅಲ್ಲಿನ ಒಂದು ರಸ್ತೆಗೆ ಹಳಕಟ್ಟಿಯವರ ಹೆಸರಿಡಲು ಸಭೆ ಸೇರಿ , ಅವರು ವಾಸವಾಗಿದ್ದ ಪ್ರದೇಶಗಳ ಬಗ್ಗೆ ಮಾಹಿತಿ ಕಲೆ ಹಾಕಿತು. ಫ.ಗು. ಹಳಕಟ್ಟಿಯವರು ಬಿಜಾಪುರದ ಎಲ್ಲಾ ಬಡಾವಣೆಗಳಲ್ಲೂ ಒಂದು ಅಥವಾ ಎರಡು ವರ್ಷ ವಾಸವಾಗಿದ್ದರು. ಮನೆಯ ಬಾಡಿಗೆ ಹೆಚ್ಚಾಗುತ್ತಿದ್ದಂತೆ, ತಮ್ಮ ವರಮಾನಕ್ಕೆ ತಕ್ಕಂತೆ ಬಾಡಿಗೆ ಮನೆ ಹುಡುಕಿ ಹೊರಡುತ್ತಿದ್ದರು. ಇಡೀ ಬಿಜಾಪುರದ ರಸ್ತೆಗಳಿಗೆ ಹಳಕಟ್ಟಿಯವರ  ಹೆಸರಿಡಬೇಕಾದ ಸಮಸ್ಯೆ ಎದುರಾಯಿತು. ಅಂತಿಮವಾಗಿ ರಸ್ತೆಗೆ ಹೆಸರಿಡುವ ಬದಲು, ಅಲ್ಲಿನ ಪ್ರಸಿದ್ಧ ಸಿದ್ದೇಶ್ವರ ಗುಡಿ ಎದುರು ಅವರ ಪ್ರತಿಮೆ ಸ್ಥಾಪಿಸಲು ನಿರ್ಧಾರವಾಯಿತು.
ಬಿಜಾಪುರದಲ್ಲಿ ಬಿ.ಎಲ್.ಡಿ. ಸಂಸ್ಥೆ ಸ್ಥಾಪಿಸಿರುವ  ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ಹಳಕಟ್ಟಿಯವರ ಜೀವನ ಸಾಧನೆಯನ್ನು ಗಮನಿಸಿದಾಗ ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಇಂತಹ ಸಾಧನೆ ಮಾಡಲು ಸಾಧ್ಯವೆ ಎಂಬ ವಿಸ್ಮಯ ಮೂಡುತ್ತದೆ. ಈ ಕಾರಣಕ್ಕಾಗಿ ಬಿಜಾಪುರ ನಗರಸಭೆ ಸಿದ್ದೇಶ್ವರ ಬ್ಯಾಂಕ್‌ನ ಎದುರು ಹಳಕಟ್ಟಿಯವರ ಆಳೆತ್ತರದ ಪ್ರತಿಮೆ ನಿಲ್ಲಿಸಿ ಗೌರವ ಸೂಚಿಸಿದೆ
ಮಾಹಿತಿ ಸೌಜನ್ಯ- ಡಾ. ಎಂ.ಎಂ. ಕಲ್ಬರ್ಗಿ

ಬುಧವಾರ, ಡಿಸೆಂಬರ್ 4, 2013

ಬುದ್ಧನಿಗೆ ಸಾಸಿವೆ ತಂದ ತಂಗಿಯೊಬ್ಬಳ ತಳಮಳಗಳು



ಕನ್ನಡದ ಸಾಂಸ್ಕೃತಿಕ ಮತ್ತು ಸೃಜನಶೀಲ ಕ್ಷೇತ್ರದಲ್ಲಿ ವಿಶೇಷವಾಗಿ ಇತ್ತೀಚೆಗಿನ ದಿನಗಳಲ್ಲಿ  ಜರುಗುತ್ತಿರುವ ಅನೇಕ ಕ್ಷಿಪ್ರ ವಿದ್ಯಾಮಾನಗಳು, ನಿಜಕ್ಕೂ ನಮ್ಮಲ್ಲಿ ಗಾಬರಿಯನ್ನು ಹುಟ್ಟಿಸುತ್ತಿವೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಮುರಿದು ಕಟ್ಟುವ ಸಂಪ್ರದಾಯ ಅಥವಾ ಇತಿಹಾಸ ಇಂದು ನಿನ್ನೆಯದಲ್ಲ. ಅದಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ಅರಕೇಸರಿಯ ಆಸ್ಥಾನದಲ್ಲಿ ಇದ್ದುಕೊಂಡು ಅರಸೊತ್ತಿಗೆಯ ಕ್ರೌರ್ಯವನ್ನು ಟೀಕಿಸುವ ಧೈರ್ಯ  ಪಂಪ, ನಿಗಿತ್ತು.  ರನ್ನ ತನ್ನ  ಗಧಾಯುದ್ಧದ ಮಹಾಕಾವ್ಯದ ‘”ದುರ್ಯೋಧನ ವಿಲಾಪಂ” ಭಾಗದಲ್ಲಿ ಮಹಾಭಾರತದ ದುರ್ಯೋಧನನನ್ನು ಬುದ್ಧನಿಗೆ ಸಾಸಿವೆ ತಂದ ತಂಗಿಯೊಬ್ಬಳ ತಳಮಳಗಳು
ಹೊಸದಾಗಿ ಚಿತ್ರಿಸುವುದರ ಮೂಲಕ ಸೃಜನಶೀಲತೆಯ ಪರಾಕಾಷ್ಟೆಯನ್ನು ಮುಟ್ಟಿದ.  ಇದರ ಮುಂದುವರಿದ ಭಾಗವಾಗಿ ಶೂದ್ರ ತಪಸ್ವಿ ಎಂಬ ನಾಟಕ ರಚನೆ ಮಾಡುವುದರ ಜೊತೆಗೆ   ಶ್ರೀ ರಾಮಾಯಣ ದರ್ಶನಂ ಎಂಬ ಮಹಾಕಾವ್ಯದ ಮೂಲಕ ಮಂಥರೆ  ಪಾತ್ರಕ್ಕೆ ಹೊಸ ಜೀವ ಮತ್ತು ರೂಪ ಕೊಟ್ಟ ಕುವೆಂಪು ನಮ್ಮ ನಡುವೆ ಇದ್ದರು. ಇಂತಹ  ಮಹಾನೀಯರು ತಮ್ಮ ಸೃಜನಶೀಲತೆಯ ಮೂಲಕ  ಚರಿತ್ರೆಯನ್ನು ಮುರಿದು ಕಟ್ಟುವುದರ ಮೂಲಕ  ಹೊಸದೆಂಬಂತೆ  ರೂಪಿಸಿದ ವೈಖರಿ ಕನ್ನಡ ಸಾಹಿತ್ಯದಲ್ಲಿ  ಇವೊತ್ತಿಗೂ ಅಜರಾಮರವಾಗಿ ಉಳಿದಿದೆ.
ನಮ್ಮ ಪುರಾಣ ಮಹಾ ಕಾವ್ಯಗಳಾದ ಮಹಾ ಭಾರತ ಮತ್ತು ರಾಮಾಯಣ ಕೃತಿಗಳು ಇತಿಹಾಸದುದ್ದಕ್ಕೂ ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ  ಹಲವು ರೂಪಗಳಲ್ಲಿ ಮೈದಾಳಿವೆ. ಎ.ಕೆ. ರಾಮಾನುಜನ್ ಸಂಪಾದಿಸಿರುವ “ ಮುನ್ನೂರು ರಾಮಾಯಣಗಳು” ಕೃತಿಯಲ್ಲಿ ದಾಖಲಾಗಿರುವ ವಿಭಿನ್ನ ರಾಮಾಯಣದ ಕಥೆಗಳು ನಮ್ಮನ್ನು ದಂಗು ಬಡಿಸುತ್ತಿವೆ. ಇಂತಹ ಪರಂಪರೆಯ ಈ ನೆಲದಲ್ಲಿ ಕ್ಯಾನ್ಸರ್ ಕಾಯಿಲೆಯ ವಿರುದ್ಧ ಹೋರಾಡುತ್ತಿರುವ ದಿಟ್ಟ ಹೆಣ್ಣು ಮಗಳೊಬ್ಬಳು ( ಬಿ.ವಿ.ಭಾರತಿ) ತನ್ನ ಹೋರಾಟದ ಕಥನವನ್ನು ಅಕ್ಷರ ರೂಪದಲ್ಲಿ ಹಿಡಿದಿಟ್ಟು, ತಮ್ಮ  ಕೃತಿಗೆ ಅರ್ಥಪೂರ್ಣವಾದ ಹಾಗೂ ರೂಪಕ ಭಾಷೆಯಲ್ಲಿ “ ಬುದ್ಧನಿಗೆ ಸಾಸಿವೆ ತಂದವಳು” ಎಂಬ ಶಿರ್ಷಿಕೆ ನೀಡಿದ್ದರು. ಆದರೆ ಅದಕ್ಕೆ ಅಡಚಣೆ ಮತ್ತು ಬೆದರಿಕೆಯ ಮಾತುಗಳು ಕೇಳಿಬಂದವು. ಈ ಬೆಳವಣಿಗೆ ತಾಲಿಬಾನ್ ಗಳು ಕೇವಲ ಆಪ್ಘಾನಿಸ್ಥಾನ, ಅಥವಾ ಪಾಕಿಸ್ಥಾನದಲ್ಲಿ ಮಾತ್ರವಲ್ಲ, ಕರ್ನಾಟಕದಲ್ಲಿಯೂ ಇದ್ದಾರೆ ಎಂಬ ಅಪಾಯದ ಮುನ್ಸೂಚನೆ ನೀಡಿದಂತಿದೆ.

ದೇವರ ಅಸ್ತಿತ್ವದ ಬಗ್ಗೆ ಮೌನ ತಾಳಿದ, ಮತ್ತು  ಆಸೆಯೆಂಬುದು  ದುಃಖಕ್ಕೆ ಮೂಲ ಎಂಬ ಅರ್ಥಪೂರ್ಣ ಸಂದೇಶವನ್ನು ಜಗತ್ತಿಗೆ ಸಾರಿದ ಬುದ್ಧ  ಯಾವತ್ತಿಗೂ ಯಾರ ಆಸ್ತಿಯಾಗಿರಲಿಲ್ಲ. ಅವನ ಚಿಂತನೆಗಳು, ಯಾವೊಂದು ಸಮುದಾಯದ ಅಥವಾ ವ್ಯಕ್ತಿಯೊಬ್ಬನ ಸ್ವತ್ತಾಗಿರಲಿಲ್ಲ.  ವಿವೇಕದ ಪ್ರಜ್ಙೆಯನ್ನು ಕಳೆದುಕೊಂಡು, ಬುದ್ಧನ ಅಮಲನ್ನು ನೆತ್ತಿಗೇರಿಸಿಕೊಂಡವರು ಮಾತ್ರ ಈ ರೀತಿಯ ಪ್ರತಿರೋಧ ತೋರಬಲ್ಲರು. ಸಾವು ಕುರಿತ ಕಟು ವಾಸ್ತವನ್ನು ಜಗತ್ತಿಗೆ ಪರಿಚಯಿಸಲು ಬುದ್ಧ, ಸಾವಿಲ್ಲದ ಮನೆಯಿಂದ ಸಾಸಿವೆ ತರುವಂತೆ  ಕಿಸಗೌತಮಿಗೆ ಹೇಳಿರುವುದು ಕೂಡ ರೂಪಕದ ಭಾಷೆಯಲ್ಲಿ ಎಂಬುದನ್ನು ನಾವು ಮರೆಯಬಾರದು. ಅಂತಹದೇ ರೂಪಕವನ್ನು ಬಳಸಿರುವ ಲೇಖಕಿ ಭಾರತಿ ‘ ಸಾವಿನ ಹೊಸ್ತಿಲಲ್ಲಿ ತಲೆಇಟ್ಟು ಮಲಗಿದ್ದರೂ ಸಹ ತಮ್ಮ ಮನಸ್ಸಿನ ಇಚ್ಛಾಶಕ್ತಿಯಿಂದ ಕಾಯಿಲೆಯ ವಿರುದ್ಧ ಹೋರಾಡಿ ಗೆದ್ದು ಬಂದಿರುವುದು ವಿಶೇಷ,. ಈ ಕಾರಣಕ್ಕಾಗಿ ಅವರು ತಮ್ಮ ಅನುಭವಕ್ಕೆ ಅರ್ಥ ಪೂರ್ಣ ಶಿರ್ಷಿಕೆ ನೀಡಿದ್ದಾರೆ. ಹಾಗೆ ನೋಡಿದರೆ, ಲೇಖಕಿ ಭಾರತಿಯವರಾಗಲಿ, ಇದನ್ನು ಈ ಕ್ಷಣದಲ್ಲಿ ಬರೆಯುತ್ತಿರುವ ನಾನಾಗಲಿ, ಓದುತ್ತಿರುವ ನೀವಾಗಲಿ ಯಾರೂ ಈ ಭೂಮಿಯ ಮೇಲೆ ಶಾಶ್ವತವಲ್ಲ. ಆದರೂ ನಾವುಗಳು ನಮ್ಮ ಪುರಾಣದಲ್ಲಿ, ಇತಿಹಾಸದಲ್ಲಿ, ವರ್ತಮಾನದ ದೈನಂದಿನ ಬದುಕಿನಲ್ಲಿ ಬಳಕೆಯಲ್ಲಿರುವ “ ಸಾವಿಲ್ಲದವನು” ಅಥವಾ ಚಿರಂಜಿವಿ ಎಂಬ ಪದಗಳನ್ನು ಬಳಸಿದ್ದೇವೆ, ಬಳಸುತ್ತಿದ್ದೇವೆ, ಇವುಗಳನ್ನು ನಮ್ಮ ಶಬ್ಧಕೋಶದಿಂದ ಅಳಿಸಿ ಹಾಕಲು ಸಾಧ್ಯವೆ?
ಕಳೆದ ಶನಿವಾರ ರಾತ್ರಿ  ಹತ್ತು ಗಂಟೆ ವೇಳೆಯಲ್ಲಿ  ಊಟ ಮುಗಿಸಿ, ಆತ ತಾನೆ ರಾತ್ರಿಯ ಓದಿಗೆ ಪುಸ್ತಕ ಕೈಗೆತ್ತಿಕೊಳ್ಳುತ್ತಿದ್ದಂತೆ, ಭಾರತಿಯವರ ದೂರವಾಣಿ ಬಂತು. ಅವರು ಶಿರ್ಷಿಕೆಯ ವಿವಾದವನ್ನು ನನಗೆ ವಿವರಿಸಿದರು. ಯಾವ ಕಾರಣಕ್ಕೂ ಶಿರ್ಷಿಕೆ ಬದಲಾಯಿಸಬಾರದು, ಭಿನ್ನ ಆಲೋಚನೆಯ ಜನರ ಅಪಸ್ವರಗಳಿಗೆ ಬೆಲೆಕೊಡಬಾರದು, ಎಂದು ಸಮಾಧಾನ ಹೇಳಿ, ನಾವು ಸಮಾನ ಮನಸ್ಕರು ನಿಮ್ಮೊಂದಿಗೆ ಇದ್ದೀವಿ ಎಂದು ಭರವಸೆ ನೀಡಿದೆ. ಭಾನುವಾರ ಬೆಳಿಗ್ಗೆ ಕಛೇರಿಗೆ ಹೋದವನು ಮನಸ್ಸು ತಡೆಯಲಾರದೆ, ಮತ್ತೇ ಧೈರ್ಯ ತುಂಬಲು ಅವರಿಗೆ ಕರೆ ಮಾಡಿದಾಗ. ಅವರಿಂದ ಬಂದ ಮಾತುಗಳು ನನ್ನನ್ನು ಮೌನಕ್ಕೆ ದೂಡಿಬಿಟ್ಟವು. ತೀರಾ ಹತಾಶರಾಗಿ ಮಾತನಾಡಿದ ಅವರು, “ ಅಣ್ಣಾ,  ನನಗೆ ಬೇಕಾಗಿರುವುದು, ನೆಮ್ಮದಿ ಮತ್ತು ನಿಶ್ಚಿಂತೆ ಮಾತ್ರ. ಇವುಗಳಿಗಾಗಿ ಏನನ್ನೂ ತ್ಯಾಗ ಮಾಡಲು ಸಿದ್ಧಳಿದ್ದೀನಿ. ಎಂದೂ ದೇವರು, ಧರ್ಮ ಮತ್ತು ಜಾತಿಯನ್ನು ಅತಿಯಾಗಿ ಹಚ್ಚಿಕೊಳ್ಳದೆ, ಬುದ್ಧನ ಪ್ರಶಾಂತ ನಗೆ ಮತ್ತು ಮೌನದ ಮೂರ್ತಿಯಂತಿರುವ  ಅವನ ಪ್ರತಿಮೆಯಲ್ಲಿ ಒಂದಿಷ್ಟು ಸುಖ ಕಂಡಿದ್ದೆ.  ಅದು ಕೆಲವರ ಪಾಲಿಗೆ ನೋವು ತರುವುದಿದ್ದರೆ, ಇಂದಿನಿಂದ ನನಗೆ ಬುದ್ದನೂ ಬೇಡ, ಬಸವನೂ ಬೇಡ. ಬೇಕಿರುವುದು ನೆಮ್ಮದಿ  ಮಾತ್ರ ಎಂದರು. ಅವರ ಮನೆಗೆ, ಅವರ ಹತ್ತಿರದ ಗೆಳತಿಯರಿಗೆ, ಬಂಧುಗಳಿಗೆ ಫೋನ್  ಕರೆ ಮಾಡಿ ಬೆದರಿಕೆ ಹಾಕುವಂತಹ ತಪ್ಪನ್ನು ಈ ಅಮಾಯಕ ಹೆಣ್ಣು ಮಗಳು ಮಾಡಿದ್ದಾದರೂ ಏನು? ಬುದ್ಧನಿಗೆ ಮಾಡಿದ ಅಪಮಾನವಾದರೂ ಏನು?

ಇಂತಹ ಘಟನೆಗಳ ಕುರಿತಂತೆ ಆವೇಶದ ಪ್ರತಿಭಟನೆಗಳು, ವಿರೋಧಗಳು ಭಾರತದ ನೆಲದ ಸಂಸ್ಕೃತಿಗೆ ಹೊಸ ಸಂಗತಿಗಳೇನಲ್ಲ. ಆದರೆ, ಇದರಿಂದ ನಮ್ಮ ಸಾಂಸ್ಕೃತಿಕ ಜಗತ್ತಿಗೆ ಆದ ನಷ್ಟ ಮಾತ್ರ ಅಗಣಿತವಾದುದು. ಇಂತಹ ಅನೇಕ ಗಂಭೀರ ಸಂಗತಿಗಳು ನಮ್ಮ ಅರಿವಿಗೆ ಬಾರದಂತೆ ಸದ್ದಿಲ್ಲದೆ ಈ ಜಗತ್ತಿನಲ್ಲಿ ಜರುಗುತ್ತಿವೆ. ಇದಕ್ಕೆ  ಈ ಉದಾಹರಣೆ ಸಾಕು.
ಕೆಲ ದಿನಗಳ ಹಿಂದೆ  ಪಠ್ಯ ಪುಸ್ತಕವೊಂದರಲ್ಲಿ ಅಂಬೇಡ್ಕರ್ ವ್ಯಂಗ್ಯ ಚಿತ್ರದ ಕುರಿತಾಗಿ ಎದ್ದ ಪ್ರತಿಭಟನೆಯ ಸಂದರ್ಭದಲ್ಲಿ ನಮ್ಮ ಕಣ್ಣಿಗೆ ಕಾಣದ ವಾಸ್ತವ ಸಂಗತಿಯೊಂದನ್ನು ಸಮಾಜ ವಿಜ್ಙಾನಿ ಯೋಗೇಂದ್ರ ಯಾದವ್ ಚರ್ಚೆಯ ಸಂದರ್ಭದಲ್ಲಿ ಅಂಕಿ ಅಂಶಗಳ ಮೂಲಕ ನಮ್ಮ ಮುಂದಿಟ್ಟರು. 1980 ರ ದಶಕದಲ್ಲಿ ಮಹಾರಾಷ್ಟದಲ್ಲಿ ಹುಟ್ಟಿಕೊಂಡ ದಲಿತ ಪ್ರಜ್ಙೆ ಇಡೀ ದೇಶವನ್ನು ಆವರಿಸಿದ ಫಲವಾಗಿ ಅಂಬೇಡ್ಕರ್ ಮತ್ತು ಅವರ ಚಿಂತನೆಗಳು ಮುಂಚೂಣಿಗೆ ಬಂದವು. ಇವುಗಳ ಜೊತೆ ಜೊತೆಯಲ್ಲಿ ಅಂಬೇಡ್ಕರ್ ಕುರಿತಂತೆ ಯಾವೊಂದು ಟೀಕೆಯನ್ನು ಸಹಿಸಿದ ದಲಿತರ ಪ್ರತಿಭಟನೆಗೆ ಹೆದರಿದ ಮೇಲ್ವರ್ಗದ ಜನ ಭಾರತದ ಶಾಲಾ ಕಾಲೇಜು ಮತ್ತು ವಿಶ್ವ ವಿದ್ಯಾನಿಯಗಳಲ್ಲಿ ಅಂಬೇಡ್ಕರ್ ಅವರ ಜೀವನ ಮತ್ತು ಚಿಂತನೆಗಳು ಪಠ್ಯವಾಗದಂತೆ ನೋಡಿಕೊಂಡರು. ಇದಕ್ಕೆ ಅವರು ನೀಡಿದ ಉತ್ತರ ದಲಿತರ ಪ್ರತಿಭಟನೆಯಾಗಿತ್ತು ಅವರ ಉತ್ತರ ನಮಗೆ ಹುನ್ನಾರದಂತೆ ತೋಚಿದರೂ ಸಹ  ಅದನ್ನು ನಾವು ಸಂಪೂರ್ಣ ನಿರಾಕರಿಸುವಂತಿಲ್ಲ.
ಸ್ವಾತಂತ್ರ್ಯಾ ನಂತರದ ಭಾರತವನ್ನು ತನ್ನ ಪ್ರಖರ ವೈಚಾರಿಕತೆಯಿಂದ  ಎಚ್ಚರಿಸಿದ ಮತ್ತು ಪ್ರಭಾವಿಸಿದ ಹಾಗೂ ಗಾಂಧೀಜಿಯ ಪಾಲಿಗೆ ನೈತಿಕ ಪ್ರಜ್ಙೆಯಂತಿದ್ದ ಅಂಬೇಡ್ಕರ್ ಕುರಿತಾಗಲಿ ಅವರ ಚಿಂತನೆಗಳ ಕುರಿತು ವಿಮರ್ಶಾತ್ಮಕ ಕೃತಿಗಳಾಗಲಿ, ಲೇಖನಗಳಾಗಲಿ ದಲಿತ ಹಾಗೂ ಪ್ರಗತಿಪರ ಲೇಖಕರನ್ನು ಹೊರತು ಪಡಿಸಿ ಬೇರೆ ಲೇಖಕರಿಂದ  ಹೊರ ಬರಲು ಸಾಧ್ಯವಾಗಿಲ್ಲ. ಅಂಬೇಡ್ಕರ್  ಎಂದರೆ, ದಲಿತರ ಸ್ವತ್ತು ಎಂಬ ಹುಸಿ ನಂಬಿಕೆಯೊಂದನ್ನು ಸಮಾಜದಲ್ಲಿ ವ್ಯವಸ್ಥಿತವಾಗಿ ಬಿತ್ತಿಕೊಂಡು ಬರಲಾಯಿತು. ಜೊತೆಗೆ ಬಲಪಂಥೀಯರು, ಮತ್ತು ಮೇಲಗವರ್ಗದ ಜನ ಅಂಬೇಡ್ಕರ್ ಅವರನ್ನು ವ್ಯವಸ್ತಿತ ವಾಗಿ ಮುಂಚೂಣಿಗೆ ಬರದಂತೆ ನೊಡಿಕೊಂಡರು. ಇದರಿಂದಾಗಿ ಗಾಂಧೀಜಿ ಸಕಲ ಸಮುದಾಯಕ್ಕೆ ತಲುಪಿದ ಹಾಗೆ ಅಂಬೇಡ್ಕರ್ ಈವರೆಗೂ ಎಲ್ಲಾ ಸಮುದಾಯಗಳಿಗೆ ತಲುಪಲು ಸಾದ್ಯವಾಗಲಿಲ್ಲ. ಇದಕ್ಕೆ ಪರೋಕ್ಷವಾಗಿ ಅಂಬೇಡ್ಕರ್ ಅಭಿಮಾನಿಗಳ ಆರಾಧನೆಯ  ಮನೋಭಾವ ಕೂಡ ಕಾರಣವಾಯಿತು.

 ಮಹಾನ್ ದಾರ್ಶನಿಕನ ವ್ಯಕ್ತಿತ್ವವನ್ನು ನಾವು ಧ್ಯಾನಿಸಬೇಕೇ ಹೊರತು ಆರಾಧಿಸುವುದಲ್ಲ. ಆರಾಧನೆಗೂ, ಧ್ಯಾನಕ್ಕೂ ಅಜಗಜಾಂತರ ವೆತ್ಯಾಸವಿದೆ. ಆರಾಧನೆ  ನಮ್ಮಲ್ಲಿ ಕುರುಡುತನವನ್ನು ಮಾತ್ರ ಬೆಳಸಬಲ್ಲದು. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಇವರುಗಳು ಆರಾಧಿಸುವ ವ್ಯಕ್ತಿಗಳಲ್ಲ, ಬದಲಾಗಿ ನಮ್ಮ ಮನಸ್ಸಿನೊಳಕ್ಕೆ ಇಳಿಸಿಕೊಂಡು, ಧ್ಯಾನಿಸುವ ವ್ಯಕ್ತಿತ್ವಗಳು. ಇಂತಹ ಸಮಷ್ಟಿ ಪ್ರಜ್ಙೆಯನ್ನು ನಾವು ಮರೆತ ಫಲವಾಗಿ ವರ್ತಮಾನದ ಜಗತ್ತಿನಲ್ಲಿ ಅನೇಕ ದುರಂತಗಳಿಗೆ ನಾವು ಸಾಕ್ಷಿಯಾಗುತ್ತಿದ್ದೇವೆ.
ಭಾರತದ ಬಹುತೇಕ ವಿಶ್ವ ವಿದ್ಯಾನಿಲಯಗಳ ಪಠ್ಯ ಪುಸ್ತಕ ಸಮಿತಿಗಳು, ವಿವಾದಕ್ಕೆ ಎಡೆಮಾಡಿಕೊಡುವುದು ಬೇಡ ಎಂಬ ಕಾರಣಕ್ಕಾಗಿ ಅಂಬೇಡ್ಕರ್ ಅವರ ಚಿಂತನೆಗಳನ್ನು ದೂರವಿಡುತ್ತಿದ್ದಾರೆ. ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡ ಬಲಪಂಥೀಯ ಮನಸ್ಸುಗಳು, ತಮ್ಮ ಮರೆ ಮಾಚಿದ ಅಜೆಂಡಾಗಳನ್ನುಸದ್ದು ಮತ್ತು ಸುದ್ಧಿ ಮಾಡದೆ  ಜಾರಿಗೆ ತರುತ್ತಿದ್ದಾರೆ, ಕಳೆದ ವರ್ಷ ದೆಹಲಿಯ ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಪದವಿ ಕಾಲೇಜುಗಳಿಗೆ ಪಠ್ಯವಾಗಿದ್ದ ಎ.ಕೆ. ರಾಮಾನುಜನ್ ಅವರ “ ಮುನ್ನೂರು ರಾಮಾಯಣಗಳು” ಕೃತಿಯನ್ನು ನಿಷೇಧಿಸುವಲ್ಲಿ  ಅವರು ಯಶಸ್ವಿಯಾದರು.
ಯಾವುದನ್ನೂ ಹಿಂದೆ ಮುಂದೆ ಯೋಚಿಸದೆ, ಅತಾರ್ಕಿಕ ನೆಲೆಯಲ್ಲಿ ಸಾಗುವ ನಾವು ಅರಿಯಬೇಕಾದ ಇನ್ನೊಂದು ಸಂಗತಿಯೊಂದಿದೆ. ನಮ್ಮ ಕಣ್ಣೆದುರು, ಅಂಬೇಡ್ಕರ್ ಮತ್ತು ಗಾಂಧಿಯನ್ನು ಮುಖಾ ಮುಖಿಯಾಗಿಸಿ, ಪರಸ್ಪರ ನಿಂದಿಸುವಲ್ಲಿ ತಮ್ಮ ಆಯಸ್ಸನ್ನು ಸೆವೆಸಿ ಮಣ್ಣಾದವರ ಕಥನ ಇನ್ನೂ ಜೀವಂತವಾಗಿದೆ. ಗಾಂಧಿ ಮತ್ತು ಅಂಬೇಡ್ಕರ್ ವಿಭಿನ್ನ ಸಂಸ್ಕೃತಿ ಮತ್ತು ನೆಲೆಗಳಿಂದ ಬಂದ ಕಾರಣಕ್ಕಾಗಿ, ಇಬ್ಬರ ಗುರಿ ಒಂದೇ ಆಗಿದ್ದರೂ ಅವರ ಆಲೋಚನಾ ಕ್ರಮಗಳು ಬೇರೆ ಬೆರೆಯಾಗಿದ್ದವು.
ಬಡವರ ಮೈ ಮೇಲೆ ಬಟ್ಟೆ ಬರುವವರೆಗೂ ಅರಬೆತ್ತಲೆಯಾಗಿರಲು ಗಾಂಧೀಜಿ ನಿರ್ಧರಿಸಿದರೆ, ಮೈ ತುಂಬಾ ಬಟ್ಟೆ ಧರಿಸುವುದು, ಸ್ವಾಭಿಮಾನದ ಸಂಕೇತ ಎಂದು ಅಂಬೇಡ್ಕರ್ ಭಾವಿಸಿದರು. ಅಂತಿಮವಾಗಿ ತಮ್ಮ ಕೊನೆಯ ದಿನಗಳಲ್ಲಿ ಈ ಇಬ್ಬರು ನಾಯಕರೂ ಬುದ್ದ ತೋರಿದ ಪಥದಲ್ಲಿ ಸಾಗಿದರು.  ಇಬ್ಬರ ಕೈಯಲ್ಲಿ . ಅದೇ ಊರುಗುಲು, ಮತ್ತು ಮೈ ಮೇಲೆ ಅದೇ  ತುಂಡು ಉಡುಗೆ ಮಾತ್ರ. ಇದು ಬುದ್ದನ ಬದುಕಿನ ಶೈಲಿ, ಬುದ್ಧನ ಚಿಂತನೆಯ ಮಾದರಿ. ಇಂತಹ ಸೂಕ್ಷ್ಮತೆಗಳನ್ನು ನಾವು ಗಮನಿಸದಿದ್ದರೆ, ಮುಂದಿನ ದಿನಗಳಲ್ಲಿ ನಮ್ಮ ನಡುವಿನ ಬುದ್ದ, ಬಸವ, ಗಾಂಧಿ, ಅಂಬೇಡ್ಕರ್,ಮುಂತಾದ ದಾರ್ಶನಿಕರು  ವಿಕ್ಷಿಪ್ತ ಮನಸ್ಸುಗಳ ಆಸ್ತಿಯಾಗುವ ಅಪಾಯವುಂಟು.
ಕೊನೆಯ ಮಾತು- ಲೇಖಕಿ, ಬಿ.ವಿ. ಭಾರತಿಯವರು  ಹಲವರ ಬೆದರಿಕೆಗೆ  ಮಣಿದು, ತಮ್ಮ ಕೃತಿಯ ಶಿರ್ಷಿಕೆಯನ್ನು ‘ ಸಾಸಿವೆ ತಂದವಳು” ಎಂದು ಬದಲಾಯಿಸಿದ್ದಾರೆ. ಜೊತೆಗೆ  ಕಳೆದ ಎರಡೂವರೆ ವರ್ಷಗಳಿಂದ ಫೇಸ್ ಬುಕ್ ನಲ್ಲಿ ಸಕ್ರಿಯಾಗಿದ್ದ ಅವರು,  ನಿನ್ನೆಯಿಂದ ತಮ್ಮ ಅಕೌಂಟ್ ಮುಚ್ಚಿಹಾಕಿದ್ದಾರೆ. ಮುಂದಿನ ಭಾನುವಾರ ಬೆಂಗಳೂರಿನಲ್ಲಿ. ಶಿವಮೊಗ್ಗದ ಅಹರ್ನಿಶಿ ಪ್ರಕಾಶನದಿಂದ ಬಿಡುಗಡೆಯಾಗುವ ಭಾರತಿಯವರ ಕೃತಿ ಬಿಡುಗಡೆ ಸಮಾರಂಭದಲ್ಲಿ ನಾವೆಲ್ಲರೂ ಭಾಗವಹಿಸಿ, ತನ್ನ ಒಡಲಿನಲ್ಲಿ ಸಾವಿನ ಕರೆಗಂಟೆಯೊಂದನ್ನು ಇಟ್ಟುಕೊಂಡು ಓಡಾಡುತ್ತಿರುವ ಈ ಹೆಣ್ಣು ಮಗಳಿಗೆ ನೈತಿಕ ಸ್ಥೈರ್ಯ ತುಂಬಬೇಕಾಗಿದೆ.ಈ ಸಹೋದರಿಯರ ಜೊತೆ ನೀವಿರುತ್ತೀರಿ ಎಂದು ನಾನು ಭಾವಿಸಿದ್ದೇನೆ,