ಶುಕ್ರವಾರ, ಆಗಸ್ಟ್ 15, 2014

ಭಾರತದ ಕೃಷಿ ಮತ್ತು ಕುಲಾಂತರಿ ತಳಿಗಳ ಅವಾಂತರ


ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ದಿನಗಳಲ್ಲಿ ಭಾರತದ ಬೆನ್ನೆಲುಬು ಎಂದು ಪರಿಗಣಿಸಲಾಗಿದ್ದ ಕೃಷಿಲೋಕ ಇದೀಗ ತನ್ನ ಅಸ್ಮಿತೆ ಹಾಗೂ ಅಸ್ತಿತ್ವವನ್ನು ಕಳೆದುಕೊಂಡು ಕವಲು ಹಾದಿಯಲ್ಲಿದೆ.   ಸಂದರ್ಭದಲ್ಲಿ ಭಾರತದ ಕೃಷಿವಲಯಕ್ಕೆ ಹೊಸದಾಗಿ ಅಪ್ಪಳಿಸಿರುವ ಕುಲಾಂತರಿ ತಳಿಗಳ (Genetical modified Crops) ಪ್ರಯೋಗಕ್ಕೆ ತೆರೆದುಕೊಳ್ಳುತ್ತಿರುವ ಸಂದಿಗ್ಧ ಸ್ಥಿತಿಯಲ್ಲಿ ರೈತ ಸಮುದಾಯ ತೊಳಲಾಡುತ್ತಿದೆ. ಈಗಾಗಲೇ ಕೃಷಿ ಎಂಬುದು ಲಾಭದಾಯಕ ವೃತ್ತಿಯಲ್ಲ ಎಂಬ ನಿರ್ಧಾರಕ್ಕೆ ರೈತ ಸಮುದಾಯ ಬಂದಿರುವಾಗ ಕುಲಾಂತರ ತಳಿ ಎಂಬ ಪ್ರಯೋಗಕ್ಕೆ ಒಡ್ಡಿಕೊಳ್ಳಬೇಕಾದ ಅನಿವಾಂರ್i ಸ್ಥಿತಿಗೆ ಭಾರತದ ರೈತ ಸಿಲುಕಿದ್ದಾನೆ. ಇದು ಕೇವಲ ಅವನೊಬ್ಬನ ಬದುಕಿನ ಅಳಿವು-ಉಳಿವಿನ ಪ್ರಶ್ನೆಯಾಗಿರದೆ ಭಾರತದ ಆಹಾರ ಭಧ್ರತೆಯ ಪ್ರಶ್ನೆಯಾಗಿ ಕೂಡ ಪರಣಮಿಸಿದೆ. ಜಾಗತಿಕ ಮಟ್ಟದಲ್ಲಿ ಕಳೆದೊಂದು ದಶಕದಿಂದ ಹಲವು ವಾದ ವಿವಾದಗಳನ್ನು ಸೃಷ್ಟಿಸಿ ಜಿಜ್ಞಾಸೆಗೆ ಕಾರಣವಾಗಿರುವ ಜೈವಿಕ ತಂತ್ರಜ್ಞಾನದ ಕುಲಾಂತರಿ ತಳಿಗಳ ಪ್ರಯೋಗ ಇದೀಗ ಭಾರತದಲ್ಲಿಯೂ ಸಹ ವಿಜ್ಞಾನಿಗಳ ಮತ್ತು ಪರಿಸರ ವಾದಿಗಳ ನಡುವಿನ ಬೌದ್ಧಿಕ ಸಂಘರ್ಷಕ್ಕೆ ಕಾರಣವಾಗಿದೆ.
ಕಳೆದ ಜುಲೈ ಹದಿನೆಂಟರಂದು ಭಾರತದ ಕುಲಾಂತರಿ ತಂತ್ರಜ್ಞಾನ ಅನುಮತಿ ಸಮಿತಿಯು (Genetic Engineering Appraisal Committeeಭಾರತದಲ್ಲಿ ಅರವತ್ತು ಬಗೆಯ ಹಣ್ಣು, ತರಕಾರಿ ಮತ್ತು ಆಹಾರ ಬೆಳೆಗಳ ಕುಲಾಂತರಿ ತಳಿಗಳ ಪ್ರಯೋಗಕ್ಕೆ ಅನುಮತಿ ನೀಡಿದಾಗ ಭಾರತದ ಕೃಷಿ ವಲಯದಲ್ಲಿ ದೊಡ್ಡ ಸಂಚಲನ ಉಂಟಾಯಿತು. ಈಗಾಗಲೇ ಬಳಕೆಯಲ್ಲಿರುವ ಆಹಾರ ಬೆಳೆಯಲ್ಲದ ಬಿ.ಟಿ. ಹತ್ತಿ ಬೆಳೆಯ ಪ್ರಯೋಗವು ಭಾರತದ ರೈತ ಸಮುದಾಯವನ್ನು ಅವನತಿಯ ಹಾದಿಗೆ ಕೊಂಡೊಯ್ದಿರುವಾಗ, ಇಂತಹ ಅನುಮತಿ ದೇಶಕ್ಕೆ ಅಗತ್ಯವಿತ್ತೆ? ಎಂಬ ಪ್ರಶ್ನೆ ಎಲ್ಲರನ್ನು ಕಾಡತೊಡಗಿದೆ.


ಕೇಂದ್ರದಲ್ಲಿ ಅಸ್ತಿತ್ವದಲ್ಲಿರುವ, ನರೇಂದ್ರ ಮೋದಿ ನೇತೃತ್ವದ ಎನ್.ಡಿ.. ಸರ್ಕಾರದ ಆಡಳಿತ ವ್ಯವಸ್ಥೆಯನ್ನು  ನಿಯಂತ್ರಿಸುತ್ತಿರುವ ಸಂಘಪರಿವಾರದ ಶಾಖೆಗಳಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಸ್ವದೇಶಿ ಜಾಗರಣ್ ಮಂಚ್ ಮತ್ತು ಭಾರತೀಯ ಕಿಸಾನ್ ಸಂಘ ಇವುಗಳ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ತೀವ್ರ ವಿರೋಧ ವ್ಯಕ್ತ ಪಡಿಸಿದ ಹಿನ್ನಲೆಯಲ್ಲಿ ಕುಲಾಂತರಿ ತಳಿಗಳ ಪ್ರಯೋಗಕ್ಕೆ ಇದೀಗ ತಾತ್ಕಾಲಿಕ ತಡೆಯಾಜ್ಞೆ ಬಿದ್ದಿದೆ. ಆದರೆ ಇದು ಯಾವುದೇ ಕ್ಷಣದಲ್ಲಿ ತೆರವಾದರೂ ಆಶ್ಚರ್ಯವಿಲ್ಲ. ಕಳೆದ ವರ್ಷ ಯು.ಪಿ.. ನೇತೃತ್ವದ ಕೇಂದ್ರ ಸರ್ಕಾರದಲ್ಲಿ  ಪರಿಸರ ಖಾತೆ ಸಚಿವರಾದ ಜೈರಾಂ ರಮೇಶ್ರವರು ದೇಶದ ವಿವಿದೆಡೆ ಕುಲಾಂತರಿ ತಳಿಗಳ ಪ್ರಯೋಗ ಕುರಿತಂತೆ ಸಾರ್ವಜನಿಕ ಅಭಿಪ್ರಾಯಗಳನ್ನು ಸಂಗ್ರಹಿಸಿ ಜೊತೆಗೆ ಕೆಲವು ವಿಜ್ಞಾನಿಗಳ ಶಿಫಾರಸ್ಸನ್ನು ಪರಿಗಣಿಸಿ ಅಂತಿಮವಾಗಿ ಬಿ.ಟಿ. ಬದನೆ ಒಳಗೊಂಡಂತೆ ಇತರೆ ತರಕಾರಿ ಮತ್ತು ಆಹಾರ ಬೆಳೆಗಳ ಪ್ರಯೋಗಕ್ಕೆ ತಡೆಯೊಡ್ಡಿದ್ದರು. ಇಂತಹ ಅಡೆತಡೆಗಳ ನಡುವೆಯೂ ಸಹ ಭಾರತದ ಕೆಲವು ಕೃಷಿ ವಿಜ್ಞಾನಿಗಳು ಕುಲಾಂತರಿ ತಳಿಗಳು ಕುರಿತಂತೆ ತೋರುತ್ತಿರುವ ಅಪಾರ ಆಸಕ್ತಿ ಮತ್ತು  ಉತ್ಸಾಹ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈಗಾಗಲೇ ಕೇಂದ್ರ ಸರ್ಕಾರದ ಅನುಮತಿ ಪಡೆಯದೆ ಕರ್ನಾಟಕ ಧಾರವಾಡ ಕೃಷಿ ವಿಶ್ವ ವಿದ್ಯಾಲಯವು ಬಿಟಿ.ಬದನೆ ಪ್ರಯೋಗ ಕೈಗೊಂಡು ವಿವಾದದಲ್ಲಿ ಸಿಲುಕಿದೆ. ಇದರ ಜೊತೆಗೆ ಬೆಂಗಳೂರಿನ ಕೃಷಿ ವಿ.ವಿ. ಸೇರಿದಂತೆ ಕೊಯಮತ್ತೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ  ಬಿ.ಟಿ. ಬತ್ತ ಕುರಿತು ಸಂಶೋಧನೆ ಮತ್ತು ಹರಿಯಾಣದ ಕರ್ನಾಲ್ ನಲ್ಲಿ ಅಲ್ಲಿನ ಕೃಷಿ ವಿ.ವಿ. ನೇತೃತ್ವದಲ್ಲಿ  ಗೋಧಿ ಕುರಿತಂತೆ ರಹಸ್ಯವಾಗಿ ನಡೆಯುತ್ತಿದ್ದ ಪ್ರಯೋಗಗಳನ್ನು ರೈತ ಸಮುದಾಯ ಪತ್ತೆ ಹಚ್ಚಿದೆ. ಇದು ಜಾಗತಿಕ ಮಟ್ಟದಲ್ಲಿ ಕುಲಾಂತರಿ ತಳಿಗಳ ಮಾತೃ ಸಂಸ್ಥೆಯಾದ ಮಾನ್ಸಂಟೊ ಮತ್ತು ಭಾರತದ ಕೃಷಿ ವಿಜ್ಞಾನಿಗಳ ಅನೈತಿಕ ಸಂಬಂಧವನ್ನು ಅನಾವರಣಗೊಳಿಸಿದೆ.

ಕುಲಾಂತರಿ ತಳಿಗಳ ಬಗ್ಗೆ ಅತ್ಯುತ್ಸಹಾದಿಂದ ಮಾತನಾಡುವ ನಮ್ಮ ಕೃಷಿ ವಿಜ್ಞಾನಿಗಳು  ಕಳೆದ ಒಂದು ದಶಕದಿಂದ ಭಾರತದಲ್ಲಿ ನಡೆಯುತ್ತಿರುವ ಬಿ.ಟಿ. ಹತ್ತಿಯ ಪ್ರಯೋಗದ ಪ್ರತಿಫಲವೇನು ಎಂಬುದರ ಕುರಿತು ದೇಶದ ರೈತ ಸಮುದಾಯಕ್ಕೆ ಉತ್ತರ ನೀಡಬೇಕಾಗಿದೆ. ಸಾಂಪ್ರದಾಯಿಕ ದೇಶಿ ಹತ್ತಿ ಬೆಳೆಯನ್ನು ಕಾಡುತ್ತಿದ್ದ ಕಾಯಿಕೊರಕ ಹುಳುಗಳ ಬಾಧೆಯನ್ನು ಬಿ.ಟಿ. ಹತ್ತಿ ಅಲ್ಪಮಟ್ಟಿಗೆ ನಿವಾರಿಸಿದ್ದರೂ ಸಹ, ಬಿ.ಟಿ. ಹತ್ತಿಯ ಇಳುವರಿ ಪ್ರಮಾಣ ಪ್ರತಿ ವರ್ಷ ಕಡಿಮೆಯಾಗುತ್ತಿದೆ. ಇದರ ಜೊತೆಗೆ ಅತ್ಯಂತ ದುಬಾರಿಯಾದ  ಬಿ.ಟಿ. ಹತ್ತಿಯ ಬಿತ್ತನೆ ಬೀಜವೂ ಸೇರಿದಂತೆ, ರಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಗೆ ವಿನಿಯೋಗಿಸಿದ ಕೃಷಿ ಬಂಡವಾಳವನ್ನು ವಾಪಸ್ ಪಡೆಯಲಾರದೆ ರೈತ ಸಮುದಾಯ ಅತಂತ್ರರಾಗಿ ಆತ್ಮಹತ್ಯೆಯ ಹಾದಿ ತುಳಿದಿದ್ದಾರೆ. ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯ ಸೇರಿದಂತೆ ಆಂಧ್ರದ ಮೇಡಕ್ ಹಾಗೂ ಅದಿಲಾಬಾದ್ ಜಿಲ್ಲೆಗಳಲ್ಲಿ ತರಗೆಲೆಗಳಂತೆ ನೆಲಕ್ಕುರುಳುತ್ತಿರುವ ಬಹುತೇಕ ರೈತರು ಬಿ.ಟಿ. ಹತ್ತಿ ಬೆಳೆದ ರೈತರೇ ಆಗಿರುವುದು ವಿಶೇಷ. ಇದೀಗ ಬಿ. ಟಿ. ಹತ್ತಿಗೂ ಸಹ  ದಾಳಿಯಿಡುತ್ತಿರುವ ಕಾಯಿಕೊರಕ ಹುಳ ಹಾಗೂ  ತಿಗಣೆ, ಹೇನು ಮುಂತಾದ ಕೀಟಗಳು ರಸಾಯನಿಕ ಕೀಟನಾಶಕವನ್ನು  ಜೀರ್ಣಿಸಿಕೊಳ್ಳುವ  ಶಕ್ತಿಯನ್ನು ವೃದ್ಧಿಸಿಕೊಂಡಿರುವುದನ್ನು ಸ್ವತಃ ಕೃಷಿ ವಿಜ್ಞಾನಿಗಳೇ ಒಪ್ಪಿಕೊಂಡಿದ್ದಾರೆ.
ಅಮೇರಿಕಾ ಮೂಲದ  ಮಾನ್ಸಂಟೊ, ಕಾರ್ಗಿಲ್ ಸೇರಿದಂತೆ ಹಲವಾರು ಬಹು ರಾಷ್ಟ್ರಿಯ ಕಂಪನಿಗಳು ಜಗತ್ತಿನಲ್ಲಿರುವ  ವೈವಿಧ್ಯಮಯ ದೇಶಿ ತಳಿಗಳನ್ನು ನಾಶಪಡಿಸಿ, ಪರಂಪರಾನುಗತವಾಗಿ ಬಂದಿರುವ ರೈತರ ಬೀಜ ಸ್ವಾಂತಂತ್ರ್ಯದ ಮೇಲೆ ಏಕ ಸ್ವಾಮ್ಯ ಹಕ್ಕು ಸ್ಥಾಪಿಸಲು ಹೊರಟಿರುವುದು ವರ್ತಮಾನದ ಜಗತ್ತಿನಲ್ಲಿ ಗುಟ್ಟಾಗಿ ಉಳಿದಿಲ್ಲ. ಕಂಪನಿಗಳ ಆಮೀಷಕ್ಕೆ ಒಳಗಾದ ವಿಜ್ಞಾನಿಗಳು ರೈತ ಸಮುದಾಯವನ್ನು ಮತ್ತು ಜಾಗತಿಕ ಜೀವ ಜಾಲದ ಪರಿಸರವನ್ನು ಬಲಿಕೊಡಲು ಹೊರಟಿರುವುದು ಮಾತ್ರ ನಿಜಕ್ಕೂ ವಿಪರ್ಯಾಸ.
ಭಾರತದಂತಹ ಕೃಷಿ ಪ್ರಧಾನವಾದ ದೇಶದಲ್ಲಿ ಆಹಾರ ಬೆಳೆಗಳ ಜೊತೆಗೆ ಹಣ್ಣು, ತರಕಾರಿಗಳ ಬೆಳೆಗಳ ಕುರಿತು ಕುಲಾಂತರಿ ಪ್ರಯೊಗಕ್ಕೆ  ಇನ್ನಿಲ್ಲದ ಉತ್ಸಾಹ ತೋರುತ್ತಿರುವ ಕೃಷಿ ವಿಜ್ಞಾನಿಗಳು ಪ್ರಯೋಗಕ್ಕೆ ಮೊದಲು ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ.

ಬಿ.ಟಿ. ಬದನೆ  ಸೇರಿದಂತೆ ಟಮೋಟೊ, ಬೆಂಡೆಕಾಯಿ ಹೀಗೆ ವಿವಿಧ ತರಕಾರಿ ಬೆಳೆಗಳ ಕುಲಾಂತರಿ ಪ್ರಯೋಗ ಅವಶ್ಯಕತೆ ಇದೆಯಾ? ಇವು ಆಹಾರದ ಒಂದು ಭಾಗವೇ ಹೊರತು ಮನುಷ್ಯನ ಹಸಿವು ನೀಗಿಸುವ ಆಹಾರ ಬೆಳೆಗಳಲ್ಲಕುಲಾಂತರಿ ತಳಿಯ ಹಣ್ಣು, ತರಕಾರಿ ಬೆಳೆಗಳಿಂದ ಅಧಿಕ ಇಳುವರಿ ಪಡೆದ ರೈತ ಸಮುದಾಯ ಇವುಗಳನ್ನು ಎಲ್ಲಿ ಮಾರಾಟ ಮಾಡಬೇಕು? ಈಗಾಗಲೇ ಭಾರತದಿಂದ ರಫ್ತಾಗುವ ಹಣ್ಣು ಮತ್ತು ತರಕಾರಿಗಳಲ್ಲಿ ಅಧಿಕ ಮಟ್ಟದ ರಸಾಯನಿಕ ವಿಷವಸ್ತುಗಳಿವೆ ಎಂಬ ನೆಪ ಒಡ್ಡಿ ಅಮೇರಿಕಾ ಸೇರಿದಂತೆ ಐರೋಪ್ಯ ರಾಷ್ಟ್ರಗಳು ನಿಷೇಧ ಹೇರಿವೆ. ಸಂದರ್ಭದಲ್ಲಿ ಬಿ.ಟಿ. ಹಣ್ಣು ಮತ್ತು ತರಕಾರಿ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಹೇಗೆ ರೂಪಿಸುತ್ತೀರಿ? ಉತ್ತರ ಕರ್ನಾಟಕದ  ಹಲವು ಜಿಲ್ಲೆಗಳಲ್ಲಿ ಕಳೆದ ವರ್ಷ ಕನಕ ಎಂಬ ಹೆಸರಿನ  ಬಿ.ಟಿ. ಹತ್ತಿಯನ್ನು ಬೆಳೆದು ಕೈ ಸುಟ್ಟುಕೊಂಡ ರೈತರಿಗೆ ನಿಮ್ಮ ಪರಿಹಾರ ಮತ್ತು ಮಾರ್ಗೋಪಾಯವೇನು? ಕಳಪೆ ಹತ್ತಿಬೀಜ ಮಾರಿದ ಫಲವಾಗಿ ಕರ್ನಾಟಕ ಸರ್ಕಾರದಿಂದ ನಿಷೇಧಿಷಲ್ಪಟ್ಟ  ಮಹಾರಾಷ್ಟ್ರ ಮೂಲದ  ಮಹಿಕೊ ಬೀಜ ಕಂಪನಿಯು ಮಾನ್ಸಂಟೊ ಬಹುರಾಷ್ಟ್ರೀಯ ಕಂಪನಿಯ ಅಂಗ ಸಂಸ್ಥೆ ಎಂದು ನಿಮಗೆ ತಿಳಿದಿಲ್ಲವೆ? ಅಮೇರಿಕಾ ಸೇರಿದಂತೆ ಜಗತ್ತಿನಾದ್ಯಂತ ಕುಲಾಂತರಿ ತಳಿಗಳ ಆಹಾರ ಮತ್ತು ಹಣ್ಣು ತರಕಾರಿಗಳನ್ನು ತಿರಸ್ಕರಿಸಿರುವಾಗ ಭಾರತದಲ್ಲಿ ನಿಮಗೆ ಇವುಗಳ ಕುರಿತು ವ್ಯಾಮೋಹವೇಕೆ?   ಎರಡು ವರ್ಷಗಳ ಹಿಂದೆ ಅಮೇರಿಕಾ  ಉಚಿತವಾಗಿ ನೀಡಲು ಹೊರಟ ಬಿ.ಟಿ. ಮೆಕ್ಕೆ ಜೋಳವನ್ನು  ಹಸಿವಿಂದ ಬಳಲುತ್ತಿದ್ದರೂ ಸಹ ಪಶ್ಚಿಮ ಆಫ್ರಿಕಾದ ಬಡರಾಷ್ಟ್ರಗಳು ತಿರಸ್ಕರಿಸಿದ ಸಂಗತಿ ವಿಜ್ಞಾನಿಗಳಾದ ನಿಮಗೆ ತಿಳಿದಿಲ್ಲವೆ? ಆಯಾ ಪ್ರದೇಶದ ಭೌಗೂಳಿಕ ಪರಿಸರ ಮತ್ತು ಅಲ್ಲಿನ ಜನತೆಯ ಆಹಾರ ಸಂಸ್ಕøತಿಗೆ ಅನುಗುಣವಾಗಿ ಬೆಳೆಯುತ್ತಿದ್ದ  ರೋಗ ನಿರೋಧಕ ಶಕ್ತಿ ಪಡೆದ ಹಾಗೂ  ಬರಗಾಲ ಅಥವಾ ಮಳೆಗಾಲದಂತಹ ಅತಿವೃಷ್ಟಿ, ಅನಾವೃಷ್ಟಿ ತಡೆದುಕೊಳ್ಳುವ ದೇಶಿ ಬಿತ್ತನೆ ಬೀಜಗಳು ನಿಮ್ಮ ಕುಲಾಂತರಿ ತಳಿ ಪ್ರಯೋಗದಲ್ಲಿ ಕಲುಷಿತಗೊಂಡಿಲ್ಲವೆಅವುಗಳ ಪರಿಶುದ್ಧತೆ ಮತ್ತು ಮೂಲಗುಣ ನಾಶವಾದರೆ ಇದಕ್ಕೆ ಪರಿಹಾರ ಏನು?
ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರವನ್ನು ಉತ್ಪಾದಿಸುವುದು ಮತ್ತು ಜಾಗತಿಕ ಹಸಿವನ್ನು ನೀಗಿಸುವುದು ನಮ್ಮ ಗುರಿ ಎಂಬ ಪೊಳ್ಳು ಘೋಷಣೆಗಳನ್ನು ಸಾರುತ್ತಿರುವ ಬಹುರಾಷ್ಟ್ರೀಯ ಕಂಪನಿಗಳು ಜಗತ್ತಿನ ರೈತರ ಬೀಜ ಸ್ವಾತಂತ್ರ್ಯವನ್ನು ಕಸಿಯುವುದರ ಮೂಲಕ ಏಕರೂಪಿ ಬೆಳೆ ಮತ್ತು ಏಕರೂಪದ ಆಹಾರ ಸಂಸ್ಕøತಿಯನ್ನು ಹೇರುತ್ತಿರುವುದು ಸುಳ್ಳಲ್ಲ.



ಭಾರತದಲ್ಲಿ ಅಸ್ತಿತ್ವದಲ್ಲಿರುವವ ಕುಲಾಂತರಿ ತಂತ್ರಜ್ಞಾನ ಅನುಮೋದನೆ ಸಮಿತಿಯ ಸದಸ್ಯರ ವರ್ತನೆಗಳು ಸಹ ಇತ್ತೀಚೆಗೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ. ಭಾರತದ ಶ್ರೇಷ್ಠ ಕೃಷಿ ವಿಜ್ಞಾನಿಗಳಲ್ಲಿ ಒಬ್ಬರಾದ ಡಾ.ಎಂ.ಎಸ್. ಸ್ವಾಮಿನಾಥನ್ ಅವರು, ಭಾರತದಲ್ಲಿ ಕುಲಾಂತರಿ ಬೆಳೆಗಳ ಪ್ರಯೋಗಕ್ಕೆ ಮುನ್ನ, ದೇಶದಲ್ಲಿರುವ ಎಲ್ಲಾ ಬಗೆಯ  ಆಹಾರ ಬೆಳೆಗಳನ್ನೂ ಒಳಗೊಂಡಂತೆ ಹಣ್ಣು ಮತ್ತು ತರಕಾರಿಗಳ ಸಾಂಪ್ರದಾಯಕ ದೇಶಿ ಬಿತ್ತÀನೆ ಬೀಜಗಳನ್ನು ಜೋಪಾನವಾಗಿ  ಸಂಗ್ರಹಿಸಿಡಬೇಕು ಹಾಗೂ  ಇವುಗಳ ರಕ್ಷಣೆಗಾಗಿ ದೇಶದ ಹಲವು ಭಾಗಗಳಲ್ಲಿ  ದೇಶಿ ಬಿತ್ತನೆ ಬೀಜಗಳ ಬ್ಯಾಂಕ್ ಗಳನ್ನು ಸ್ಥಾಪಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದರು. ಆದರೆಈವರೆಗೂ ಯಾರೊಬ್ಬರೂ ದೇಶಿ ಬಿತ್ತನೆ ಬೀಜದ ತಳಿಗಳ ಬಗ್ಗೆ ತಲೆಕೆಡಿಸಿಕೊಂಡ ಉದಾಹರಣೆಗಳಿಲ್ಲ. ಕಾರಣಕ್ಕಾಗಿ ಭಾರತದ ಸರ್ವೋಚ್ಛ ನ್ಯಾಯಾಲಯವು ಕಳೆದ ವರ್ಷ ಹಿರಿಯ ವಿಜ್ಞಾನಿ ಡಾ. ಪುಷ್ಪಾ ಭಾರ್ಗವ ಅವರನ್ನು ಕುಲಾಂತರಿ ತಂತ್ರಜ್ಞಾನ ಅನುಮೋದನಾ ಸಮಿತಿಗೆ ವಿಶೇಷ ಆಹ್ವಾನಿತರಾಗಿ ನೇಮಿಸಿತು. ಇವರು ನೇಮಕಗೊಂಡನಂತರ ಅನುಮೋದನಾ ಸಮಿತಿಯ ಹುಳುಕುಗಳು ಮತ್ತು ತಪ್ಪು ನಿರ್ಧಾರಗಳು ಒಂದೊಂದಾಗಿ ಹೊರಬರುತ್ತಿವೆ.
ಬಿ.ಟಿ. ಬದನೆ ಕುರಿತು ಇಲಿಗಳ ಮೇಲೆ ನಡೆಸಿರುವ ಪ್ರಯೋಗವು ನಿಖರವಾಗಿಲ್ಲ ಮತ್ತು ಡಾ. ಶಶಿಕೇರನ್ ಎಂಬ ವಿಜ್ಞಾನಿಯ ನೇತೃತ್ವದಲ್ಲಿ ಕೇವಲ ಇಪ್ಪತ್ತು ಇಲಿಗಳ ಮೇಲೆ ನಡೆಸಿರುವ ಪ್ರಯೋಗವಾಗಲಿ, ಫಲಿತಾಂಶವಾಗಲಿ ನಂಬಿಕೆಗೆ ಅರ್ಹವಲ್ಲ ಎಂದಿರುವ ಡಾ, ಪುಪ್ಷಭಾರ್ಗವ, ತಂತ್ರಜ್ಞಾನ ಸಮಿತಿಯ ಮಾರ್ಗದರ್ಶಿ ಸೂತ್ರಗಳು ಸಹ  ಪರಿಣಾಮಕಾರಿಯಾಗಿರದೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದಿದ್ದಾರೆ.
1960 ಮತ್ತು 70 ದಶಕದಲ್ಲಿ ಭಾರತದಲ್ಲಿ ನಡೆದ ಹಸಿರು ಕ್ರಾಂತಿಯ ಪ್ರಯೋಗಗಳು ಸಕಾರದ ಸಾರ್ವಜನಿಕ ಸಂಸ್ಥೆಗಳಲ್ಲಿ ಪಾರದರ್ಶಕವಾಗಿ ನಡೆದಿದ್ದವು. ಗೋಧಿ ಮತ್ತು ಬತ್ತದ ಬೆಳೆಗಳ ಕುರಿತ ಪ್ರಯೋಗಗಳು ಫಲಿತಾಂಶಗಳು ಎಲ್ಲರಿಗೂ ದೊರಕುವಂತಿದ್ದವು. ಆದರೆ, ಕಳೆದ ಒಂದು ದಶಕದಿಂದ ಕೃಷಿ ಕುರಿತ ಎಲ್ಲಾ ವಿಧವಾದ ಸಂಶೋಧನೆಗಳು ಮತ್ತು ಪ್ರಯೋಗಗಳು ಖಾಸಾಗಿ ಕಂಪನಿಗಳ ಪಾಲಾಗಿರುವ ಪರಿಣಾಮ ನಮ್ಮ ಬಹುತೇಕ ಕೃಷಿ ವಿಜ್ಞಾನಿಗಳು ಇವುಗಳ ಫಲಾನುಭವಿಗಳಾಗಿದ್ದಾರೆ. ಇವರಿಗೆ ಒಂದು ನೆಲದ ಸಂಸ್ಕøತಿ.ಗಿಂತ ಅಥವಾ ಸಮುದಾಯದ ಹಿತಾಸಕ್ತಿಗಿಂತ  ತಮ್ಮ ವೈಯಕ್ತಿಕ ಹಿತಾಸಕ್ತಿಗಳು ಮುಖ್ಯವಾದಂತಿದೆ. ಹಾಗಾಗಿ ರಹಸ್ಯವಾಗಿ ನಡೆಯುತ್ತಿರುವ ಕುಲಾಂತರಿ ತಳಿಗಳ ಪ್ರಯೋಗ ಮತ್ತು ಪ್ರಮಾದಕ್ಕೆ ಜಗತ್ತಿನ ರೈತ ಸಮುದಾಯ ನೇರವಾಗಿ ನೇರ ಬಲಿಯಾಗುತ್ತಿದ್ದರೆ, ನಾವು ಮೂಕ ಸಾಕ್ಷಿಗಳಾಗುತ್ತಿದ್ದೆವೆ.


ಮಂಗಳವಾರ, ಆಗಸ್ಟ್ 12, 2014

ಮೇಲುಕೋಟೆಯ ಗಾಂಧಿ- ಸುರೇಂದ್ರ ಕೌಲಗಿಗೆ ಜಮ್ನಲಾಲ್ ಬಜಾಜ್ ಪ್ರಶಸ್ತಿ



ಮೇಲುಕೋಟೆಯೆಂಬುದು ಮಂಡ್ಯ ಜಿಲ್ಲೆಯ ಪ್ರಸಿದ್ಧ ಯಾತ್ರ ಸ್ಥಳವಷ್ಟೇ ಅಲ್ಲ, ಅಲ್ಲಿ ನನ್ನಂತಹವನ ಪಾಲಿಗೆ ಇನ್ನಷ್ಟು ಆಕರ್ಷಣಿಯ ಸ್ಥಳಗಳಿವೆ. ಬೆಟ್ಟದ ಮೇಲಿರುವ ಚಲುವ ನಾರಾಯಣಸ್ವಾಮಿ ದೇಗುಲ, ಬೆಟ್ಟದ  ತಡಿಯಲ್ಲಿರುವ  ಲೋಕ ಪ್ರಸಿದ್ಧ ಕಲ್ಯಾಣಿ, ಯೋಗನರಸಿಂಹ ಸ್ವಾಮಿ ದೇಗುಲ ಮತ್ತು  ಅರ್ಧಕ್ಕೆ ನಿಂತ ರಾಜಗೋಪುರದ ಹೆಬ್ಬಾಗಿಲು, ಅದರ ಪಕ್ಕದ ಅಕ್ಕ-ತಂಗಿ ಕೊಳಗಳು, ರಾಜಗೋಪುರದ ಹಿಂದಿನ ಗುಡ್ಡದ ಮೇಲಿರುವ ಸಂಸ್ಕೃತ ಸಂಶೋಧನಾ ಕೇಂದ್ರದ ಬಳಿ ನಲಿದಾಡುವ ನವಿಲುಗಳು, ಮಾಮರದ ಮರೆಯಲ್ಲಿ ಕುಳಿತು ಕೂಗುವ ಕೋಗಿಲೆಗಳು, ಮೇಲುಕೋಟೆಯ ಅಯ್ಯಂಗಾರ್ ಬೀದಿಗಳಲ್ಲಿ ಯಾತ್ರಿಕರಿಗಾಗಿ ಮನೆಯಲ್ಲಿ ಸಿದ್ಧಪಡಿಸಿದ ಪುಳಿಯೊಗರೆಯ ವಾಸನೆ ಮತ್ತು ಸಿಹಿ ಪೊಂಗಲ್, ಕಾಫಿಯ ಸುವಾಸನೆ ಹಾಗೂ ಮೇಲುಕೋಟೆಯ ಸಮೀಪದ ಬೇಬಿ ಎಂಬ ಹಳ್ಳಿಯ ದಲಿತರ ಕೇರಿಗಳಲ್ಲಿ ಚಲುವನಾರಾಯಣಸ್ವಾಮಿ ಮತ್ತು ಬೇಬಿ ನಾಚ್ಚಿಯಾರ್ ಕುರಿತು ಹಾಡುವ ಸುಶ್ರಾವ್ಯ ಜನಪದಗೀತೆಗಳು  ಇವೆಲ್ಲವೂ  ಮೇಲುಕೋಟೆಯ ನೆನಪಿನ ಭಾಗಗಳಾಗಿ ಉಳಿದುಕೊಂಡಿವೆ.

ಇವುಗಳ ಜೊತೆ ಜೊತೆಗೆ ತಮ್ಮ ಜೀವನ ಪೂರ್ತಿ ಕವಿತೆಗಳಲ್ಲಿ ಮೇಲುಕೋಟೆಯನ್ನು ಧ್ಯಾನಿಸಿದ ಕನ್ನಡದ  ಹಿರಿಯ ಕವಿ ಪು.ತಿ.ನ. ನೆನಪು ಹಾಗೂ ಅವರ ನಿವಾಸ, ಕನ್ನಡ ಪತ್ರಿಕೋದ್ಯಮಕ್ಕೆ ಘನತೆ ತಂದುಕೊಟ್ಟ ಖಾದ್ರಿ ಶಾಮಣ್ಣ ನವರ ಜೊತೆ ಜನಪದಸೇವಾ ಟ್ರಸ್ಟ್ ನ ಸುರೇಂದ್ರ ಕೌಲಗಿ ಇವರ ನೆನಪುಗಳು ಸಹ ಮೇಲುಕೋಟೆಯೊಂದಿಗೆ ತಳುಕುಹಾಕಿಕೊಂಡಿವೆ.
ಮೇಲುಕೋಟೆಯ ಗಾಂಧೀಜಿ ಎಂದು ನನ್ನ ತಲೆಮಾರಿನ ಗೆಳೆಯರು ಪ್ರೀತಿ ಮತ್ತು ಗೌರವದಿಂದ ಕರೆಯುವ ಜನಪದಸೇವಾ ಟ್ರಸ್ಟ್ ನ ರೂವಾರಿ ಸುರೇಂದ್ರ ಕೌಲಗಿಯವರಿಗೆ ಈ ಬಾರಿಯ ಪ್ರತಿಷ್ಟಿತ ಜಮ್ನಲಾಲ್ ಬಜಾಜ್ ಪ್ರಶಸ್ತಿಯ ಗೌರವ ದೊರೆತಿದೆ. ಗಾಂಧೀಜಿಯವರ ತತ್ವ ಮತ್ತು ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಾ, ನಡೆ ಮತ್ತು ನುಡಿಯಲ್ಲಿ ಒಂದಾಗಿ ಬದುಕುತ್ತಿರುವ ಆದರ್ಶ ವ್ಯಕ್ತಿಗಳಿಗೆ ಕೊಡಮಾಡುವ ಈ ರಾಷ್ಟ್ರ ಮಟ್ಟದ ಪ್ರಶಸ್ತಿಯು ಈ ಬಾರಿ ಸುರೇಂದ್ರ ಕೌಲಗಿಯವರಿಗೆ ದೊರಕಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ.


ಮೇಲುಕೋಟೆಯನ್ನು ತಮ್ಮ ಸುಧೀರ್ಘ ಅರವತ್ತು ವರ್ಷಗಳಿಂದ ಕರ್ಮಭೂಮಿಯನ್ನಾಗಿ ಮಾಡಿಕೊಂಡಿರುವ ಹಾಗೂ ನಿಜ ಭಾರತದ ಆತ್ಮವೆನಿಸಿರುವ ಗ್ರಾಮಭಾರತದ ಕಲ್ಪನೆಯನ್ನು ಸಾಕಾರಗೊಳಿಸಲು ತಮ್ಮ ಈ ಎಂಬತ್ತನೇಯ ವಯಸ್ಸಿನಲ್ಲೂ ಶ್ರಮಿಸುತ್ತಿರುವ ಸುರೇಂದ್ರಕೌಲಗಿಯವರು ನನ್ನ ತಲೆಮಾರಿಗೆ ಬಹು ದೊಡ್ಡ ಆದರ್ಶ. ಮೂಲತಃ ಧಾರವಾಡ ಜಿಲ್ಲೆಯ ಗುಡಿಗೇರಿ ಗ್ರಾಮದವರಾದ ಸುರೇಂದ್ರ ಕೌಲಗಿಯವರು ಸುಮಾರು ಐದು ವರ್ಷಗಳ ಕಾಲ ಜಯಪ್ರಕಾಶ್ ನಾರಾಯಣ್ ಅವರಿಗೆ 1954 ರಿಂದ 59 ರವರೆಗೆಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದವರು. ನಂತರ ವಿನೋಭಾ ಅವರ ಜೊತೆ ಕೂಡ ಒಡನಾಡಿದರು. ಈ ಸಂದರ್ಭದಲ್ಲಿ ಗಾಂಧಿಜಿಯವರ ತತ್ವ ಮತ್ತು ಆದರ್ಶಗಳನ್ನು ತಮ್ಮ ಎದೆಗೆ ಇಳಿಸಿಕೊಂಡ ಇವರು , ಅವುಗಳನ್ನು ಸಾಕಾರಗೊಳಿಸಲು ಮಂಡ್ಯ ಜಿಲ್ಲೆಯ ಮೇಲುಕೋಟೆಯ ಎಂಬ ಪುಟ್ಟ ಗಿರಿಧಾಮವನ್ನು ತಮ್ಮ ಕರ್ಮಭೂಮಿಯನ್ನಾಗಿ ಆರಿಸಿಕೊಂಡರು.

1960 ರ ದಶಕದಲ್ಲಿ ಜನಪದ ಸೇವಾ ಟ್ರಸ್ಟ್ ಅನ್ನು ಸ್ಥಾಪಿಸಿದ ಕೌಲಗಿಯವರು, ಟ್ರಸ್ಟ್ ನ ಅಡಿ ಅಂಗವಿಕಲ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ವಸತಿ ಸೌಲಭ ನೀಡುವ ಉದ್ದೇಶದಿಂದ ಆರಂಭಿಸಿದ “ ಕರುಣಾಗೃಹ “ ಹಾಗೂ ದುಡಿಯುವ ಕೈಗಳಿಗೆ ಆಸರೆಯಾಗಲು ಗ್ರಾಮೋದ್ಯೋಗ ಕ್ಕೆ ದಾರಿಯಾಗುವಂತೆ ಸ್ಥಾಪಿಸಿದ  “ ಹೊಸ ಜೀವನ ದಾರಿ” ಎಂಬ ಸಂಸ್ಥೆ ಈಗಾಗಲೇ ಐವತ್ತು ವರ್ಷಗಳನ್ನು ಪುರೈಸಿವೆ. ಚರಕ ಮತ್ತು ಖಾದಿಯನ್ನು ತಮ್ಮ ಜೀವದ ಉಸಿರಿನಂತೆ ಪ್ರೀತಿಸುವ ಮತ್ತು ಗೌರವಿಸುವ ಸುರೇಂದ್ರ ಕೌಲಗಿಯವರ ಸಂಸ್ಥೆಯಲ್ಲಿ ಚರಕ ಮತ್ತು ಕೈ ಮಗ್ಗದ ಚಟುವಟಿಕೆಗಳು  ನಿರಂತರವಾಗಿ ಕ್ರಿಯಾಶೀಲವಾಗಿವೆ. ಜನಪದ ಎಂಬ ಮಾಸಪತ್ರಿಕೆಯನ್ನು ಪ್ರಕಟಿಸುತ್ತಿದ್ದ ಕೌಲಗಿಯವರು ಈ ಪತ್ರಿಕೆಯಲ್ಲಿ ಕೃಷಿ, ಪರಿಸರ ಕುರಿತಂತೆ ಅನೇಕ ಮೌಲಿಕ ಲೇಖನಗಳನ್ನು ಪ್ರಕಟಿಸುತ್ತಿದ್ದರು. ಸಹಜ ಮತ್ತು ನೈಸರ್ಗಿಕ ಕೃಷಿಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಜಪಾನಿನ ನೈಸರ್ಗಿಕ ಕೃಷಿ ತಜ್ಞ ಪುಕಾವೊಕ ಅವರ “ ಒಂದು ಹುಲ್ಲಿನ ಕ್ರಾಂತಿ” ಎಂಬ ಅಪರೂಪದ ಕೃತಿಯನ್ನು ಕನ್ನಡಕ್ಕೆ ತಂದ ಕೀರ್ತಿ ಇವರದು. 


ಸದಾ ಖಾದಿ ಜುಬ್ಬ, ಪಂಚೆ, ಹೆಗಲಿಗೆ ಒಂದು ಬ್ಯಾಗ್, ಮುಖದ ತುಂಬಾ ಮಾಸದ ಮುಗುಳ್ನಗೆ ಇವು ಸುರೇಂದ್ರ ಕೌಲಗಿಯವರ ಚಹರೆಗಳು. ಸಾಮಾಜಿಕ ಸ್ವಾಸ್ಥವನ್ನು ಕಾಪಾಡಬಲ್ಲ ಯಾವುದೇ ಚಳುವಳಿಗಳು, ಸಭೆ ಸಮಾರಂಭಗಳು  ಮಂಡ್ಯ ನಗರದಲ್ಲಿ ನಡೆಯುವಾಗ ತಪ್ಪದೇ ಹಾಜಾರಾಗುತ್ತಿದ್ದ ಇವರು, ಕಳೆದ ಇತ್ತೀಚೆಗೆ ಅನಾರೋಗ್ಯದಿಂದ ತಮ್ಮ ಚಟುವಟಿಕೆಗಳನ್ನು ಜನಪದ ಸೇವಾ ಟ್ರಸ್ಟ್ ಗೆ ಮಾತ್ರ ಸೀಮಿತವಾಗಿರಿಸಿಕೊಂಡಿದ್ದಾರೆ. ತಂದೆಯವರ ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ಅವರ ಪುತ್ರ ಸಂತೋಷ್ ಕೌಲಗಿ  ಟ್ರಸ್ ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಕರ್ನಾಟಕಕ್ಕೆ ಎರಡನೇಯ ಬಾರಿಗೆ ಜಮ್ನ ಲಾಲ್ ಪ್ರಶಸ್ತಿ ಸುರೇಂದ್ರ ಕೌಲಗಿ ಮೂಲಕ ದೊರೆತಿರುವುದು ಕನ್ನಡಿಗರ ಪಾಲಿಗೆ ಹೆಮ್ಮೆಯ ಸಂಗತಿಯಷ್ಟೇ ಅಲ್ಲ, ಜೊತೆಗೆ ಗಾಂಧೀಜಿ ಚಿಂತನೆಗಳಿಗೆ ಮತ್ತು ಕನಸುಗಳಿಗೆ ಸಾವಿಲ್ಲವೆಂಬುದಕ್ಕೆ ಇದು ಸಾಕ್ಷಿಯಾಗಿದೆ. 

ಶುಕ್ರವಾರ, ಆಗಸ್ಟ್ 8, 2014

ಕಾಡುವ ಕಸ್ತೂರ ಬಾ ಏಕ ವ್ಯಕ್ತಿ ಪ್ರದರ್ಶನ ನಾಟಕ



ದಿನಾಂಕ 4-8-14 ಸೋಮವಾರ  ಬೆಂಗಳೂರಿನ ರವಿಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿತಗೊಂಡಕಸ್ತೂರ ಬಾಏಕ ವ್ಯಕ್ತಿ ಪ್ರದರ್ಶನÀ ಪ್ರಯೋಗವು ಮೈಸುರು ರಂಗಾಯಣದ ಪ್ರಬುದ್ಧ ಕಲಾವಿದೆ ಶಶಿಕಲಾ ಅವರಿಂದ ಸಮರ್ಥವಾಗಿ ಅನಾವರಣಗೊಳ್ಳುವುದರ ಮೂಲಕ ಪ್ರೇಕ್ಷಕರ ಮನದೊಳಗೆ ಬಿರುಗಾಳಿಯ ಅಲೆಯನ್ನೆಬ್ಬಿಸಿತು.
ಯಾವುದೇ ಒಬ್ಬ ರಂಗ ನಟ ಅಥವಾ ನಟಿಗೆ ಏಕ ವ್ಯಕ್ತಿ ಪ್ರದರ್ಶನವೆಂಬುದು  ಪ್ರತಿಭೆಗೆ ಸವಾಲೊಡ್ಡುವ ಕ್ರಿಯೆ ಕೂಡ ಹೌದು. ಪ್ರದರ್ಶನದುದ್ದಕ್ಕೂ ಅಭಿನಯದಲ್ಲಿ ತೊಡಗಿಸಿಕೊಳ್ಳುವುದರ ಜೊತೆ ಜೊತೆಗೆ ಸನ್ನಿವೇಶಕ್ಕೆ ತಕ್ಕಂತೆ ಹಲವು ಭಾವಗಳನ್ನು ಅಭಿವ್ಯಕ್ತಿಗೊಳಿಸುತ್ತಾ ಪ್ರೇಕ್ಷಕರನ್ನು ಏಕಾಗ್ರತೆಯ ಮನಸ್ಸಿನಲ್ಲಿ ಹಿಡಿದಿಟ್ಟುಕೊಳ್ಳುವುದು ಅವರ ಪಾಲಿಗೆ ಅಗ್ನಿ ಪರೀಕ್ಷೆ ಎನ್ನಬಹುದು. ನಿಟ್ಟಿನಲ್ಲಿ ಮಹಾತ್ಮ ಗಾಂಧಿಯವರ ಪತ್ನಿ ಕಸ್ತೂರಬಾರವರ ಅಂತರಂಗದ ತುಮಲ, ತಲ್ಲಣ ಮತ್ತು ತಳಮಳಗಳನ್ನು ಅಚ್ಚುಕಟ್ಟಾಗಿ ಮತ್ತು ಪರಿಣಾಮಕಾರಿಯಾಗಿ ಪ್ರೇಕ್ಷಕರ ಎದೆಗೆ ದಾಟಿಸುವಲ್ಲಿ ಶಶಿಕಲಾ ಯಶಸ್ವಿಯಾದರು.
ಕನ್ನಡ ರಂಗಭೂಮಿಗೆ ಏಕವ್ಯಕ್ತಿ ಪ್ರದರ್ಶನ ಪ್ರಕಾರ ಹೊಸದೇನಲ್ಲ. ಆದರೆ ಯಶಸ್ವಿಯಾದ ನಾಟಕಗಳು ಮಾತ್ರ ತೀರಾ ವಿರಳ ಎನ್ನಬಹುದು. ಬಹುಮುಖ ಪ್ರತಿಭೆಯ ಕನ್ನಡ ರಂಗಭೂಮಿಯ ಹಿರಿಯ ಕಲಾವಿದ ಹಾಗೂ ನಟ ದಿ. ಸಿಂಹ ರವರು ಎರಡು ದಶಕದ ಹಿಂದೆಟಿಪಿಕಲ್ ಕೈಲಾಸಂಎಂಬ ಏಕ ವ್ಯಕ್ತಿ ಪ್ರಯೋಗದ ಮೂಲಕ ನಾಂದಿ ಹಾಡಿದ ನಾಟಕ ಪ್ರಕಾರಕ್ಕೆ ಆರಂಭದಲ್ಲಿ ಒಳ್ಳೆಯ ಪ್ರತಿಕ್ರಿಯೆ ಕೂಡ ಲಭ್ಯವಾಯಿತು. ಅನಂತರ ಸಿಂಹರವರು ಕುವೆಂಪು ಕುರಿತ ನಾಟಕವನ್ನು ಕೂಡ ಪ್ರಯೋಗ ಮಾಡಿದರು. ಸಿ.ಆರ್. ಸಿಂಹ ರವರಿಂದ ಪ್ರೇರೆಣೆಗೊಂಡ ಅನೇಕ ರಂಗ ಕಲಾವಿದರು ನಮ್ಮ ಪೌರಾಣಿಕ ಕಥೆಗಳ ಹಲವು ನಾಯಕ/ ನಾಯಕಿಯರ ಕುರಿತಾದ ಏಕ ವ್ಯಕ್ತಿ ಪ್ರದರ್ಶನ ನೀಡತೊಡಗಿದ್ದಾರೆ. ಮಹಿಳಾ ಕಲಾವಿದೆಯರಲ್ಲಿ ಶ್ರೀಮತಿ ಲಕ್ಷ್ಮಿ ಚಂದ್ರಶೇಖರ್ ಈಗಾಗಲೆ ಗಮನ ಸೆಳೆಯುವಂತಹ ಹಲವು ಪ್ರಯೋಗಳನ್ನು ರಾಜ್ಯಾದ್ಯಂತ ಪ್ರದರ್ಶಿಸಿದ್ದಾರೆ.
ಇದೀಗ ಕಳೆದ ಒಂದು ವರ್ಷದಿಂದ ಇಂತಹ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿರುವ ಮೈಸೂರು ರಂಗಾಯಣದ ಕಲಾವಿದೆ ಶಶಿಕಲಾ ತಮ್ಮ ಪ್ರಬುದ್ಧ ಅಭಿನಯದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಯಾವುದೇ ಒಂದು ಪ್ರಯೋಗಕ್ಕೆ ಕಲಾವಿದನ ಅಥವಾ ಕಲಾವಿದೆಯ ಅಭಿನಯ ಎಷ್ಟು ಮುಖ್ಯವೊ, ಗಟ್ಟಿಯಾದ ಕಥೆಯ ಹಂದರ ಮತ್ತು ಸಂಭಾಷಣೆ ಕೂಡ ಅಷ್ಟೇ ಮುಖ್ಯವಾದವು. ನಿಟ್ಟಿನಲ್ಲಿ ಕಸ್ತೂರ ಬಾ ಯಶಸ್ವಿ ಪ್ರಯೋಗ ಎಂದು ಹೇಳಬಹುದು.

                                                     (ಎಸ್. ರಾಮನಾಥ್)

ಏಕ ವ್ಯಕ್ತಿ ಪ್ರದರ್ಶನದ  ಪ್ರಯೋಗಕ್ಕೆ ಕಥೆ ಮತ್ತು ಸಂಭಾಷಣೆ ಬರೆದಿರುವ ಮೈಸೂರು ರಂಗಾಯಣದ ಎಸ್. ರಾಮನಾಥ್ ತಾನೋರ್ವ ಕಲಾವಿದ ಮಾತ್ರವಲ್ಲ, ಅತ್ಯುತ್ತಮ ಬರಹಗಾರ ಎಂಬುದನ್ನು ನಾಟಕದಲ್ಲಿ ಸಾಬೀತು ಪಡಿಸಿದ್ದಾರೆ. ಮೈಸೂರು ರಂಗಾಯಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರಾಮನಾಥ್ ಎಂ.ಎಸ್ಸಿ. ಪದವಿಧರರಾಗಿದ್ದು ರಂಗ ಶಿಕ್ಷಣ ಕುರಿತಂತೆ ಇಂಗ್ಲೀಷ್ ಮತ್ತು ಕನ್ನಡ ಭಾಷೆಯÀಲ್ಲಿ ಕೃತಿಯನ್ನೂ ಸಹ ರಚಿಸಿದ್ದಾರೆ.

ಮಹಾತ್ಮ ಗಾಂಧಿಜಿಯವರನ್ನು ಬಲ್ಲವರಿಗೆ ಅಥವಾ ಓದಿಕೊಂಡವರಿಗೆ ಅವರ ಖಾಸಾಗಿ ಬದುಕಿನ ಬವಣೆಗಳಾಗಲಿ, ದುರಂತಗಳಾಗಲಿ ಅಪರಿಚಿತವಾಗಿ ಉಳಿದಿಲ್ಲ. ಏಕೆಂದರೆ, ಸ್ವತಃ ಗಾಂಧೀಜಿಯವರೆ ಜಗತ್ತನ್ನು ಬೆಚ್ಚಿ ಬೀಳಿಸುವಂತೆ ತಮ್ಮ ಖಾಸಾಗಿ ಬದುಕಿನ ವಿವರಗಳನ್ನು, ದೌರ್ಬಲ್ಯಗಳನ್ನು ತಮ್ಮ ಆತ್ಮ ಚರಿತ್ರೆಯಲ್ಲಿ ಸವಿವರವಾಗಿ ದಾಖಲಿಸಿದ್ದಾರೆ. ಕಾರಣಕ್ಕಾಗಿ ಅವರ ಆತ್ಮ ಕಥನ ಅತ್ಯಂತ ಪಾರದರ್ಶಕವಾದ ಆತ್ಮಕಥೆ ಎಂದು ಹೆಸರುವಾಸಿಯಾಗಿ ಜಗತ್ತಿನ ಹಲವಾರು ಭಾಷೆಗಳಿಗೆ ಅನುವಾದಗೊಂಡು ಇಂದಿಗೂ ಸಹ ಅತ್ಯಂತ ಹೆಚ್ಚು ಮಾರಾಟವಾಗುವ ಕೃತಿಗಳಲ್ಲಿ ಒಂದಾಗಿದೆ. ಗಾಂಧೀಜಿಯವರ ಬದುಕಿನ ದುರಂತ ಮತ್ತು ವ್ಯಂಗ್ಯವೆಂದರೆ, ನಾವೆಲ್ಲಾ ಅವರನ್ನುರಾಷ್ಟ್ರಪಿತಎಂದು ಕರೆದೆವು. ವಾಸ್ತವವಾಗಿ ಅವರು ತಮ್ಮ ಮಕ್ಕಳಿಗೆ ಒಳ್ಳೆಯ ತಂದೆಯಾಗಲು ಸಾಧ್ಯವಾಗಲೇ ಇಲ್ಲ. ತನ್ನ ಪತ್ನಿ ಕಸ್ತೂರ ಬಾ ಅವರ ಬೇಕು ಬೇಡಗಳಿಗೆ  ಕಿವಿಗೊಟ್ಟು ಒಳ್ಳೆಯ ಪತಿಯಾಗಲಿಲ್ಲ. ಗಾಂಧೀಜಿಯವರ ಸ್ವಾತಂತ್ರ್ಯ ಹೊರಾಟ ಮತ್ತು ಅವರ ಕುಟುಂಬದ ಖಾಸಾಗಿ ಬದುಕಿನ ನೋವು ಹಾಗೂ ದುರಂತಗಳನ್ನು, ರೂಪಕದ ಭಾಷೆಯಲ್ಲಿ ವರ್ಣಿಸುವುದಾದರೆ, ವ್ಯಕ್ತಿಯೊಬ್ಬ ತನ್ನ ತನ್ನ ಗುಡಿಸಲಿಗೆ ಬೆಂಕಿ ಹಚ್ಚಿ ಊರಿಗೆ ಬೆಳಕಾಗುವ ಪರಿಎಂದು ಬಣ್ಣಿಸಬಹುದು.


ಹದಿನೈದು ವರ್ಷಗಳ ಹಿಂದೆ ಮರಾಠಿ ರಂಗಭೂಮಿಯಲ್ಲಿ ಯಶಸ್ವಿಯಾದ ಗಾಂಧಿ ವಿರುದ್ಧ ಗಾಂಧಿ ಎಂಬ ನಾಟಕವನ್ನು  ಬೆಳಗಾವಿಯ ಗೆಳೆಯ ಡಿ.ಎಸ್.ಚೌಗುಲೆ ಕನ್ನಡಕ್ಕೆ ತಂದಿದ್ದರು. ನಾಟಕ ರಾಜ್ಯಾದ್ಯಂತ ನೂರಾರು ಪ್ರಯೋಗಗಳನ್ನು ಕಂಡು ಅತ್ಯಂತ ಯಶಸ್ವಿ ನಾಟಕಗಳಲ್ಲಿ ಒಂದಾಗಿದೆ. ನಾಟಕದಲ್ಲಿ ಗಾಂಧೀಜಿ ಮತ್ತು ಅವರ ಹಿರಿಯ ಪುತ್ರ ಹರಿಲಾಲ್ ಗಾಂಧಿ ನಡುವಿನ ಸಂಘರ್ಷದ ಚಿತ್ರಣವಿದೆ.
ಕನ್ನಡದಲ್ಲಿ ರಚಿತವಾಗಿರುವ  ಕಸ್ತೂರಬಾ ನಾಟಕದಲ್ಲಿ ಹರೆಯಕ್ಕೆ ಕಾಲಿಡುವ ಮುನ್ನವೇ  ಗಾಂಧೀಜಿಯವರ ಪತ್ನಿಯಾಗಿ, ಅವರ ಮಕ್ಕಳಿಗೆ ತಾಯಿಯಾಗಿ ಕಸ್ತೂರಬಾ  ಅನುಭವಿಸಿದ ದುಃಖ ದುಮ್ಮಾನಗಳಿವೆ. ಒಂದೆಡೆ ನಾಟಕದಲ್ಲಿ ಕಸ್ತೂರಬಾ ಹೇಳುವನಾನು ಮಹಾತ್ಮನಿಗೆ ಪತ್ನಿಯಾಗಿದ್ದೆ, ಮೋಹನ ಕರಮಚಂದ ಗಾಂಧಿಗೆ   ಪತ್ನಿಯಾಗಲು ಸಾಧ್ಯವಾಗಲೇ ಇಲ್ಲಎನ್ನುವಂತಹ ಮಾತುಗಳು ಅರ್ಥಗರ್ಭಿತವಾಗಿದ್ದು, ಮಾತುಗಳು ಇಡೀ ಕಸ್ತೂರಬಾ ಬದುಕಿನ ಪ್ರತಿಬಿಂಬಗಳÀಂತೆ ಗೋಚರವಾಗುತ್ತವೆ. ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂತಿರುಗುವ ವೇಳೆ ಅಲ್ಲಿನ ಜನತೆ ಪ್ರೀತಿಯಿಂದ ಕೊಟ್ಟ ಹಣ, ಚಿನ್ನ, ಉಡುಗೊರೆ ಇತ್ಯಾದಿಗಳನ್ನು ಮಕ್ಕಳ ಭವಿಷ್ಯದ ದೃಷ್ಟಿಯಲ್ಲಿ ತಮ್ಮ ಕುಟುಂಬಕ್ಕೆ ಇಟ್ಟುಕೊಳ್ಳುವುದಕ್ಕೆ ಬದಲಾಗಿ ಅಲ್ಲಿನ ಟ್ರಸ್ಟ್ ದಾನ ಮಾಡುವ ಗಾಂಧೀಜಿಯವರ ನಿರ್ಧಾರ ಮತ್ತು ದಕ್ಷಿಣ ಆಫ್ರಿಕಾದಲ್ಲಿ ವಿದ್ಯಾಭ್ಯಾಸ ಮುಂದುವರಿಸುವ ಕುರಿತು ಗಾಂಧಿ ಮತ್ತು ಹರಿಲಾಲ್ ನಡುವೆ ಉಧ್ಬವಿಸುವ ಭಿನ್ನಾಭಿಪ್ರಾಯ ಎಲ್ಲವೂ ನಾಟಕದಲ್ಲಿ ಪರಿಣಾಮಕಾರಿಯಾಗಿ ಮೂಡಿ ಬಂದಿವೆಶಶಿಕಲಾ ಅವರು ಕಸ್ತೂರಬಾ ಅವರ ನೋವು ಸಂಕಟಗಳನ್ನು ತಮ್ಮ ಎದೆಯೊಳಕ್ಕೆ ಇಳಿಸಿಕೊಂಡು ಕಸ್ತೂರಬಾ ಪಾತ್ರದಲ್ಲಿ ಅಭಿನಯಿಸುವುದರ ಬದಲು ಸ್ವತಃ ಅನುಭವಿಸಿದ್ದಾರೆ. ಹಾಗಾಗಿ ಪ್ರತಿಯೊಂದು ಮಾತು, ದೃಶ್ಯ ಹಾಗೂ ಘಟನಾವಳಿಗಳ ಮೆಲುಕು ಇವೆಲ್ಲವೂ ನೆನಪಿನಲ್ಲಿ ಉಳಿಯುತ್ತವೆ.
ಕೊನೆಯ ಭಾಗದಲ್ಲಿ  ಕಸ್ತೂರಬಾ 1942 ರಲ್ಲಿ ಗಾಂಧೀಜಿಯವರ ಜೊತೆ ಬಂಧನಕ್ಕೊಳಗಾಗಿ ಪುಣೆಯ ಆಗಾಖಾನ್ ಅರಮನೆಯಲ್ಲಿ ಬಂಧನದಲ್ಲಿದ್ದಾಗ, ತಾವು ಸಾಯುವ ಕೆಲವೇ ದಿನಗಳ ಮುಂಚೆ ಮನೆ ಬಿಟ್ಟು ಹೋಗಿದ್ದ ತಮ್ಮ ಹಿರಿಯ ಮಗ ಹರಿಲಾಲ್ ನನ್ನು ನೊಡುವ ಆಸೆಯಾಗಿ ಪೊಲೀಸರಲ್ಲಿ ವಿನಂತಿಸಿಕೊಳ್ಳುತ್ತಾರೆ. ಘಟನೆಯನ್ನು ಕಸ್ತೂರ ಬಾ ವಿವರಿಸುವುದು ಹೀಗೆಅಂದು ಆಗ ಖಾನ್ ಅರಮನೆಯ ಮುಂದೆ ಸಾವಿರಾರು ಜನ ನೆರೆದುಮಹಾತ್ಮ ಗಾಂಧೀಜಿಕಿ ಜೈಎಂದು ಘೋಷಣೆ ಕೂಗುತ್ತಿದ್ದರು. ಘೋಷಣೆಗಳ ನಡುವೆ ಗಟ್ಟಿಯಾದ ದ್ವನಿಯಲ್ಲಿಮಾತಾ ಕಸ್ತೂರ ಬಾ ಕಿ ಜೈಎಂಬ ಘೋಷಣೆ ಕೂಗುತ್ತಾ , ಮಾಸಿದ ಉಡುಪು, ಕೆದರಿದ ತಲೆಗೂದಲಿನ ವ್ಯಕ್ತಿಯೊಬ್ಬ ನನ್ನ ಹತ್ತಿರ ಬಂದ. ಅವನು ನನ್ನ ಮಗ ಹರಿಲಾಲನಾಗಿದ್ದ, ಅವನ ಬಾಯಿಂದ ಮದ್ಯದ ವಾಸನೆ ಬರುತ್ತಿತ್ತು. ಅವನನ್ನು ನೋಡುವ ಆಸೆಯಾಗಿ ಕರೆತರುವಂತೆ ನಾನೇ ಪೊಲೀಸರಿಗೆ ತಿಳಿಸಿದ್ದೆ. ಹತ್ತಿರ ಬಂದ ಹರಿಲಾಲ್, ನನ್ನ ಪಕ್ಕ ಇದ್ದ ತನ್ನ ತಂದೆ ಬಾಪುವಿನತ್ತ ತಿರುಗಿಯೂ ನೋಡಲಿಲ್ಲ. ಬಾಪು ತಲೆ ತಗ್ಗಿಸಿಕುಳಿತ್ತಿದ್ದರು. ಪೊಲಿಸರು ಮತ್ತೇ ಅವನ ತೋಳು ಹಿಡಿದು ಕರೆದೊಯ್ಯುವಾಗ ನನ್ನತ್ತ ತಿರುಗಿ ನೋಡುತ್ತಾಮಾತಾ ಕಸ್ತೂರ ಬಾ ಕಿ ಜೈಎಂದು ಗಟ್ಟಿಯಾಗಿ ಘೋಷಣೆ ಕೂಗುತ್ತಾ ಜನ ಜಂಗುಳಿಯಲ್ಲಿ ಮರೆಯಾದ. ಅವನ ಘೊಷಣೆಯ ದನಿಯಲ್ಲಿ ಬಾಪು ವಿರುದ್ಧ ಸಿಟ್ಟು, ಆಕ್ರೋಶ ಎಲ್ಲವೂ ಪ್ರತಿಧ್ವನಿಸುತ್ತಿದ್ದವು



ಸಂಭಾಷಣೆಯನ್ನು  ಕಸ್ತೂರ ಬಾ ಪಾತ್ರಧಾರಿಯಾಗಿ ನೆಲದ ಮೇಲಿನ ಹಾಸಿಗೆಯಲ್ಲಿ  ಅಂಗಾತ ಮಲಗಿ ಶಶಿಕಲಾ ಅವರು ಕರುಳು ಬಗೆದಂತೆ  ಸಂಭಾಷಣೆಯನ್ನು ಒಪ್ಪಿಸುತ್ತಿದ್ದಾಗ ಪ್ರೇಕ್ಷಕರ ಕಣ್ಣುಗಳು ಹನಿಗೂಡಿದ್ದವು.
ವರ್ತಮಾನದ ಜಗತ್ತಿನಲ್ಲಿ ಭಾರತದ ಬಹುತೇಕ ನಾಯಕರು ಒಂದೊಂದು ಸಮುದಾಯದ ಭಾಗವಾಗಿ ಪ್ರತಿಮೆ ರೂಪದಲ್ಲಿ ಬಂಧಿಯಾಗಿರುವಾಗ, ಅವರ ಬದುಕಿನ ಕುರಿತಾಗಲಿ, ಅವರ ವಿಚಾರ ಧಾರೆಗಳ ಕುರಿತಾಗಲಿ ಮರು ವಿಮರ್ಶೆ ಸಾಧ್ಯವಾಗದ ಸ್ಥಿತಿ ಸೃಷ್ಟಿಯಾಗಿದೆ. ಗಾಂಧೀಜಿಯೊಬ್ಬರು ಮಾತ್ರ ಆಯಾ ಕಾಲಘಟ್ಟಕ್ಕೆ ತಕ್ಕಮತೆ ವಿಮರ್ಶೆಯ ಒರೆಗಲ್ಲಿಗೆ ಸಿಲುಕಿ ನಮಗೆ ಮತ್ತಷ್ಟು ಸ್ಪಷ್ಟವಾಗುತ್ತಿದ್ದಾರೆ ಜೊತೆಗೆ ಹತ್ತಿರವಾಗುತ್ತಿದ್ದಾರೆ. ನಿಟ್ಟಿನಲ್ಲಿ ಗಾಂಧಿ ವಿರುದ್ಧ ಗಾಂಧಿ ಮತ್ತು ಕಸ್ತೂರ ಬಾ ನಾಟಕಗಳು ನಮಗೆ ಪೂರಕವಾಗಿವೆ. ಕಾರಣಕ್ಕಾಗಿ ಕಸ್ತೂರ ಬಾ ನಾಟಕ ರಚಿಸಿದ ಎಸ್.ರಾಮನಾಥ್, ನಿರ್ದೇಶನ ಮಾಡಿದ ಶಶಿಧರ್ಭಾರಿಘಾಟ್ ಮತ್ತು ಅಭಿನಯಿಸಿದ ಕಲಾವಿದೆ ಶಶಿಕಲಾ ಇವರು  ನಿಜಕ್ಕೂ ಅಭಿನಂದಾರ್ಹರು.


(9-8-14 ರ ಅವಧಿ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದ ಬರಹ)