ಮಂಗಳವಾರ, ಜೂನ್ 16, 2015

ಮಹಾರಾಷ್ಟ್ರದಲ್ಲಿ ಸಿಕ್ಕಿದ ಒಂದು ಮುತ್ತಿನ ಕಥೆ



ಮೊನ್ನೆ ಜೂನ್ 12 ರಂದು ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದ ಪ್ರಮುಖ ಜಿಲ್ಲಾ ಕೇಂದ್ರವಾದ ಲಾತೂರ್ ಜಿಲ್ಲಾಧಿಕಾರಿಯ ಕಛೇರಿಯಲ್ಲಿ ಅಲ್ಲಿನ ರೈತರ ಆತ್ಮ ಹತ್ಯೆ ಕುರಿತಂತೆ ದಾಖಲೆಗಳನ್ನು ಜೆರಾಕ್ಸ್ ಮಾಡಿಸಿಕೊಳ್ಳುತ್ತಿದ್ದೆ. ನನ್ನ ಜೊತೆ ಪ್ರವಾಸ ಬಂದಿದ್ದ ನನ್ನ ಮಿತ್ರ ಹಾಗೂ ಕರ್ನಾಟಕ ಮುಜರಾಯಿ ಇಲಾಖೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ, ಇದೇ ಮೇ 31 ರಂದು ನಿವೃತ್ತರಾಗಿದ್ದ ಬೆಳಗಾವಿ ಮೂಲದ ದೇವು ನಿಂಬಾಳ್ ಜೊತೆಗಿದ್ದರು. “ ಜಗಣ್ಣಾ ನಿಮಗೆ ಒಬ್ಬ ಅಪರೂಪದ ಯುವ ಅಧಿಕಾರಿಯನ್ನು ಪರಿಚಯಿಸುತ್ತೇನೆ ಬನ್ನಿ” ಎನ್ನುತ್ತಾ ಒಂದು ಕಛೇರಿಗೆ ನನ್ನನ್ನು ಕರೆದೊಯ್ದರು. ಮಹಾರಾಷ್ಟ್ರದ ಅತ್ಯಂತ ಹಿಂದುಳಿದ ಹಾಗೂ ಅನಕ್ಷರಸ್ತ ವಡ್ಡರ ( ಕಲ್ಲು ಕುಟಿಗರ ಜಾತಿ) ಸಮುದಾಯದಿಂದ ಮೇಲೆದ್ದು ಬಂದಿದ್ದ ಶಶಿಕಾಂತ್ ಹೆರ್ಲೇಕರ್ ಎಂಬ 34 ವರ್ಷದ ಯುವ ಪ್ರತಿಭೆಯೊಂದು ಮರಾಠವಾಡ ಪ್ರಾಂತ್ಯದ ಏಳು ಜಿಲ್ಲೆಗಳಿಗೆ ಧಾರ್ಮಿಕ ದತ್ತಿ ಇಲಾಖೆಯ ಜಂಟಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿತ್ತು.  ಆ ಯುವಕ ತನ್ನ ಮಾತೃಭಾಷೆಯಾದ ಮರಾಠಿಯಲ್ಲಿ ಪೂರ್ತಿ ಶಿಕ್ಷಣ ಪಡೆದ ಫಲವಾಗಿ ಇಂಗ್ಲೀಷ್ ಭಾಷೆಯಲ್ಲಿ ಸಂವಹನ ತನಗೆ ಸಾಧ್ಯವಿಲ್ಲವೆಂದು ಮುಚ್ಚು ಮರೆಯಿಲ್ಲದೆ ಒಪ್ಪಿಕೊಂಡ. ತದ ನಂತರ ಮರಾಠಿ ಭಾಷೆಯಲ್ಲಿ ತನ್ನ ಬಾಲ್ಯದ ಬದುಕನ್ನು, ತಂದೆ ತಾಯಿಗಳ ನೆನಪನ್ನು ಹಾಗೂ ತನ್ನ ಸಾಧನೆಯನ್ನು ನಮ್ಮೆದುರು ತಣ್ಣನೆಯ ಧ್ವನಿಯಲ್ಲಿ ತೆರದಿಟ್ಟ. ಆ ಯುವ ಅಧಿಕಾರಿಯ ಯಶೋಗಾಥೆಯನ್ನು ಆತನ ಮಾತುಗಳಲ್ಲಿ ಇಲ್ಲಿ ಹಿಡಿದಿಟ್ಟಿದ್ದೀನಿ.
“ ನಾನು 1981 ರಲ್ಲಿ ಕೊಲ್ಲಾಪುರ ಜಿಲ್ಲೆಯ ಹರ್ಲೇಕರ್ ಎಂಬ ಕುಗ್ರಾಮದಲ್ಲಿ  ಕಲ್ಲುಗಳನ್ನು ಹೊಡೆದು ಜಲ್ಲಿ ಕಲ್ಲುಗಳನ್ನಾಗಿ ಪರಿವರ್ತಿಸುವ ವಡ್ಡರ ಕುಟುಂಬದಲ್ಲಿ ಜನಿಸಿದೆ. ನನ್ನಪ್ಪ ಮತ್ತು ಅವ್ವ ಕೊಲ್ಲಾಪುರ, ಸಾಂಗ್ಲಿ, ಮೀರಜ್ ನಗರಗಳ ಮಧ್ಯ ಇರುವ ರಾಜ್ಯ ಹೆದ್ದಾರಿ ರಸ್ತೆಗಳಿಗೆ ಜಲ್ಲಿ ಕಲ್ಲುಗಳನ್ನು ಹೊಡೆದು ಸಿದ್ಧಪಡಿಸುತ್ತಿದ್ದರು. ಅವ್ವ  ತನ್ನ ಹರಕಲು ಸೀರೆಯೊಂದನ್ನು ರಸ್ತೆ ಬದಿಯ ಜಾಲಿ ಮರಕ್ಕೆ ಕಟ್ಟಿ, ಅದನ್ನು ತೊಟ್ಟಿಲಾಗಿ ಪರಿವರ್ತಿಸಿ, ಅದರೊಳಗೆ ನನ್ನನ್ನು ಕೂರಿಸಿ, ಇಲ್ಲವೆ ಮಲಗಿಸಿ ದಿನವಿಡಿ ಅಪ್ಪನ ಜೊತೆ ರಸ್ತೆ ಬದಿಯಲ್ಲಿ ಕುಳಿತು ಉರಿವ ಬಿಸಿನಲ್ಲಿ ಕಲ್ಲುಗಳನ್ನು ಹೊಡೆಯುತ್ತಿದ್ದಳು. ತಿಂಗಳಾನುಗಟ್ಟಲೆ  ರಸ್ತೆ ಬದಿಯಲ್ಲಿ  ಒಣಗಿದ ಜೋಳದ ಕಡ್ಡಿಗಳಿಂದ ಕಟ್ಟಿಕೊಂಡ ಪುಟ್ಟ ಗುಡಿಸಲಿನಲ್ಲಿ ನಾವು ವಾಸವಾಗಿರುತ್ತಿದ್ದೆವು. ಒಣಗಿದ ಜೋಳದ ರೊಟ್ಟಿಯನ್ನು ಹಸಿ ಮೆಣಸಿನ ಕಾಯಿ ಮತ್ತು ಈರುಳ್ಳಿ ಜೊತೆ ತಿಂದು, ಹೊಟ್ಟೆ ತುಂಬಾ ನೀರು ಕುಡಿದು ನಾವು ದಿನಗಳನ್ನು ದೂಡುತ್ತಿದ್ದೆವು. ಅವ್ವ ಮತ್ತು ಅಪ್ಪ ಇಬ್ಬರೂ ಪಂಢರಾಪುರದ ವಿಠಲನ ಪರಮ ಭಕ್ತರಾಗಿದ್ದರು. ಹಾಗಾಗಿ ನಾವು ಹೋದ ಕಡೆಯಲ್ಲೆಲ್ಲಾ ನಮ್ಮ ಜೊತೆ ವಿಠಲನ ಪೋಟೊ ಜೊತೆಯಲ್ಲಿ ಇರುತ್ತಿತ್ತು. ಮರದ ಬುಡದಲ್ಲಿ ವಿಠಲನ ಫೋಟೊ ಇಟ್ಟುಕೊಂಡು, ಬೆಳಿಗ್ಗೆ ಎದ್ದ ತಕ್ಷಣ ಅವನಿಗೆ ಇಬ್ಬರೂ ಪೂಜೆ ಸಲ್ಲಿಸಿ ನಂತರ ತಮ್ಮ ಕಾಯಕ ಶುರುಮಾಡುತ್ತಿದ್ದರು.
ಒಮ್ಮೆ ರಸ್ತೆ ವೀಕ್ಷಣೆಗೆ ಬಂದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಒಬ್ಬರು ( ಅವರೂ ಸಹ ವಿಠಲನ ಪರಮ ಭಕ್ತರು) ಅಪ್ಪ ಮತ್ತು ಅವ್ವನ ಕಾಯಕ ನಿಷ್ಟೆಗೆ ಮೆಚ್ಚಿ, ಅಪ್ಪನಿಗೆ ಸಾಂಗ್ಲಿಯ ಲೋಕೋಪಯೋಗಿ ಕಛೇರಿಯಲ್ಲಿ ರಾತ್ರಿ ಕಾವಲುಗಾರನ ಹುದ್ದೆಯನ್ನು ಕೊಡಿಸಿದರು. ನಂತರ ಸಾಂಗ್ಲಿ ಪಟ್ಟಣ ನಮ್ಮ ಖಾಯಂ ವಾಸ ಸ್ಥಾನವಾಯಿತು. ನಾನು ಸರ್ಕಾರಿ ಶಾಲೆಗೆ ದಾಖಲಾದೆ. ನನ್ನ ಹನ್ನೆರೆಡನೇ ವಯಸ್ಸಿನಲ್ಲಿ ಅಪ್ಪ ತೀರಿಕೊಂಡ. ಅವ್ವನಿಗೆ ಅಪ್ಪನ ಪಿಂಚಣಿ ಹಣ ತಿಂಗಳಿಗೆ ಸುಮಾರು 80 ರೂಪಾಯಿ ಬರುತ್ತಿತ್ತು. ಅದನ್ನು ನನ್ನ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಿ, ಮತ್ತೇ ಕೂಲಿ ಕೆಲಸಕ್ಕೆ ಹೊರಟಳು. ಅಪ್ಪ ಬದುಕಿದ್ದಾಗ, ಬಡವರು ವಾಸಿಸುತ್ತಿದ್ದ ಬಡಾವಣೆಯೊಂದರ ತಗಡಿನ ಛಾವಣಿಯ ಒಂದು ಕೊಠಡಿಯಲ್ಲಿ ನಾವು ವಾಸವಾಗಿದ್ದವು. ಅಪ್ಪನ ಸಾವಿನ ನಂತರ ನಾವಿಬ್ಬರೂ ಸಾಂಗ್ಲಿಯ ಕೊಳೆಗೇರಿಯ ಗುಡಿಸಲಿಗೆ ಸ್ಥಳಾಂತರಗೊಂಡೆವು. ಆ ಕೊಳೆಗೇರಿಯು ಕಳ್ಳಬಟ್ಟಿಯ ದಂಧೆಗೆ. ವೇಶ್ಯಾವಾಟಿಕೆಗೆ, ತಲೆ ಹಿಡುಕರಿಗೆ, ಜೇಬುಕಳ್ಳರಿಗೆ ಆಶ್ರಯ ತಾಣವಾಗಿತ್ತು. ಇಂತಹ ನರಕ ಸದೃಶ್ಯ ಲೋಕದಲ್ಲಿ, ಬದುಕುತ್ತಾ, ಗುಡಿಸಲಿನ ಚಿಮಣಿ ಎಣ್ಣೆ ಬುಡ್ಡಿಯ ಬೆಳಕಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿ, ಎಲ್ಲಾ ತರಗತಿಗಳಲ್ಲೂ ಪ್ರಥಮ ದರ್ಜೆಯಲ್ಲಿ ಪಾಸಾಗುತ್ತಿದ್ದೆ.
ಎಸ್.ಎಸ್.ಎಲ್.ಸಿ. ನಂತರ ನನಗೆ ಸರ್ಕಾರದಿಂದ ಬರುತ್ತಿದ್ದ ವಿದ್ಯಾರ್ಥಿ ವೇತನದ ನೆರವಿನಿಂದ ಬಿ.ಎ. ಪಡೆದೆ. ಜೊತೆಗೆ ಮೂರು ವರ್ಷದ ಕಾನೂನು ಪದವಿಯನ್ನು ಪಡೆದು ವಕೀಲನಾದೆ. ವಕೀಲ ವೃತ್ತಿಯನ್ನು ಆರಂಭಿಸಿದ ನಂತರ ಬಹುತೇಕ ಬಡಜನರು, ದೀನ ದಲಿತರು ನನ್ನ ಕಕ್ಷಿದಾರರಾಗಿದ್ದರು. ಅವರು ತಮ್ಮ ಜೇಬಿನಿಂದ ಇಲ್ಲವೆ ರವಿಕೆಯಿಂದ ಹಣ ತೆಗೆದು ನನ್ನ ವಕೀಲಿ ಶುಲ್ಕವನ್ನು ನೀಡುವಾಗ, ಆ ನೋಟುಗಳು ಅವರ ಮೈ ಬೆವರಿನಿಂದ ಒದ್ದೆಯಾಗಿರುತ್ತಿದ್ದವು. ಅವರಿಂದ ಹಣ ಪಡೆಯುವಾಗ, ಬಡವರ ರಕ್ತವನ್ನು ಹೀರುವ ಶೋಷಕನಾಗುತ್ತಿದ್ದೀನಿ ಎಂಬ ಪಾಪ ಪ್ರಜ್ಞೆಯೊಂದು ನನ್ನನ್ನು ಕಾಡುತ್ತಿತ್ತು. ಆದರೆ ಜೀವನೋಪಾಯಕ್ಕೆ ವಕೀಲಿ ವೃತ್ತಿ ನನಗೆ ಅನಿವಾರ್ಯವಾಗಿತ್ತು. ಈ ವೃತ್ತಿಯನ್ನು ತ್ಯಜೆಸಿ, ಸರ್ಕಾರಿ ಹುದ್ದೆಗೆ ಸೇರಬೇಕೆಂದು ನಿಶ್ಚಯಿಸಿದೆ. ಮಹಾರಾಷ್ಟ್ರ ಸರ್ಕಾರ ನಡೆಸುವ ಲೋಕ ಸೇವಾ ಆಯೋಗದ ಪರೀಕ್ಷೆ ಬರೆದೆ. ಆದರೆ ಮೊದಲ ಬಾರಿ ಮತ್ತು ಎರಡನೆಯ ಬಾರಿ ಪರೀಕ್ಷೆಯಲ್ಲಿ  ಫೇಲಾದೆ. ಮೂರನೆಯ ಬಾರಿಗೆ ಪರೀಕ್ಷೆಗೆ ಸಿದ್ಧಗೊಳ್ಳುತ್ತಿದ್ದಾಗ, ನನ್ನವ್ವ ಕ್ಯಾನ್ಸರ್ ಕಾಯಿಲೆಗೆ ತುತ್ತಾದಳು. ಅವಳನ್ನ ಮೀರಜ್ ನ ಆಸ್ಪತ್ರೆಗೆ ಸೇರಿಸಿ, ರಾತ್ರಿಯ ವೇಳೆ ಆಸ್ಪತ್ರೆಯ ಹೊರಗಿನ ಮೆಟ್ಟಿಲುಗಳ ಮೇಲೆ ಕುಳಿತು ವಿದ್ಯುತ್ ದೀಪದ ಬೆಳಕಿನಲ್ಲಿ ಬೆಳಗಿನ ಜಾವ ಮೂರು ಗಂಟೆಯವರೆಗೆ ಓದಿ, ಅಲ್ಲಿಯೇ ಮಲಗುತ್ತಿದ್ದೆ. ಅವ್ವ ಆಸ್ಪತ್ರೆಯ ಹೆಂಗಸರ ವಾರ್ಡ್ ನಲ್ಲಿ ನೋವಿನಿಂದ ನರಳುವಾಗ, ನಾನು ವಾರ್ಡ್ ನ ಒಳಕ್ಕೆ ಹೋಗಿ ಅವಳನ್ನು ಸಂತೈಸಲಾಗದ ಅಸಹಾಯಕತೆಯಿಂದ ಮೆಟ್ಟಿಲುಗಳ ಮೇಲೆ ಮುಖವಿಟ್ಟು ಮೌನವಾಗಿ ಅಳುತ್ತಿದ್ದೆ. ಇಂತಹ ನೋವು, ನಿರಾಸೆ ಮತ್ತು ತಬ್ಬಲಿತನಗಳ ನಡುವೆ ನಾನು ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಅತ್ಯುತ್ತಮ ದರ್ಜೆಯಲ್ಲಿ ಪಾಸಾಗಿ ಅಧಿಕಾರಿಯಾಗಿ ಆಯ್ಕೆಯಾದೆ. ಆದರೆ ಮಗನ ಸಾಧನೆಯನ್ನಾಗಲಿ, ಸಂಭ್ರಮವನ್ನಾಗಲಿ ನೋಡಲು ಅವ್ವ ನನ್ನ ಪಾಲಿಗೆ ಉಳಿಯಲಿಲ್ಲ. ಇಬ್ಬರನ್ನೂ ಕಳೆದುಕೊಂಡ ನೋವಿನ ನಡುವೆ ನಾನು 2012 ರಲ್ಲಿ ಮಹಾರಾಷ್ಟ್ರದ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಜಂಟಿ ಆಯುಕ್ತನಾಗಿ ಸೇರ್ಪಡೆಗೊಂಡು, ಪ್ರೊಭೆಷನರಿ ಅವಧಿಯನ್ನು ಮುಗಿಸಿ, ಕಳೆದ ಏಳು ತಿಂಗಳಿನಿಂದ ಮರಾಠವಾಡ ಪ್ರಾಂತ್ಯದ ಜಂಟಿ ಆಯುಕ್ತನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಕೈ ಕೆಳಗೆ ಏಳು ಜಿಲ್ಲೆಗಳ  ಸಾವಿರಾರು ಶಿಕ್ಷಣ ಸಂಸ್ಥೆಗಳು, ಮಠಗಳು, ಆಸ್ಪತ್ರೆಗಳು, ದೇವಸ್ಥಾನಗಳು ಕಾರ್ಯ ನಿರ್ವಹಿಸುತ್ತಿವೆ. ಇವೆಲ್ಲವೂ ಟ್ರಸ್ಟ್ ಆಡಳಿತ ಮಂಡಲಿಯಿಂದ ನಡೆಯುವ ಸಂಸ್ಥೆಗಳಾಗಿರುವುದರಿಂದ, ಅವುಗಳ ಬೈಲಾ ತಿದ್ದುಪಡಿ, ಆಡಳಿತ ಮಂಡಳಿಯ ಸದಸ್ಯರ ನಡುವಿನ ಭಿನ್ನಾಭಿಪ್ರಾಯ, ಇತ್ಯಾದಿ ಇವುಗಳನ್ನು ಪರಿಹರಿಸುವ ಜವಾಬ್ದಾರಿ ನನ್ನದಾಗಿದೆ. ನನ್ನ ಅಧೀನದಲ್ಲಿ ನಾಲ್ವರು ಉಪ ವಿಭಾಗಾಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ನನ್ನ ಅಧಿಕಾರವನ್ನು ಉಪಯೋಗಿಸಿಕೊಂಡು, ಪ್ರತಿ ಶಿಕ್ಷಣ ಸಂಸ್ಥೆಯು ಪ್ರತಿ ವರ್ಷ ಹತ್ತು ಮಂದಿ ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವಂತೆ ಮನವೊಲಿಸುತ್ತಿದ್ದೇನೆ. ನನ್ನ ಮನವಿಯನ್ನು ಬಹತೇಕ ಶಿಕ್ಷಣ ಸಂಸ್ಥೆಗಳು ಪುರಸ್ಕರಿಸಿವೆ. ಜೊತೆಗೆ ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣಕ್ಕೆ ನಾನು ನನ್ನ ವೇತನದ ಅಲ್ಪ ಭಾಗವನ್ನು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿನಿಯೋಗಿಸುತ್ತಿದ್ದೇನೆ.


ಇದೀಗ ನನ್ನ ಬಳಿ ಎಲ್ಲವೂ ಇದೆ. ವಿದ್ಯೆ, ಉದ್ಯೋಗ, ಸಮಾಜದಲ್ಲಿ ಮತ್ತು ಸರ್ಕಾರದಲ್ಲಿ ಉನ್ನತ ಅಧಿಕಾರಿ ಎಂಬ ಗೌರವ ಪ್ರಾಪ್ತಿಯಾಗಿದೆ ನಿಜ. ಆದರೆ, ನನ್ನನ್ನು ಈ ಸ್ಥಾನಕ್ಕೆ ತಂದು ಕೂರಿಸಲು ಕಾರಣರಾದ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ 48 ಡಿಗ್ರಿ ಬಿಸಿಲಿನಲ್ಲಿ ಕುಳಿತು ಕಲ್ಲು ಹೊಡೆದ ಅಪ್ಪ, ಅಪ್ಪ ಸದಾ ನೆನಪಾಗುತ್ತಾರೆ.  ನಾನು ವಾಸಿಸುವ ಸರ್ಕಾರಿ ಬಂಗಲೆಯಲ್ಲಿ ಅವರನ್ನು ಇರಿಸಿಕೊಂಡು ಅವರಿಗೆ ಹೊಟ್ಟೆ ತುಂಬಾ ಊಟ, ಮೈ ತುಂಬಾ ಬಟ್ಟೆ ಕೊಡುವ ಭಾಗ್ಯ ನನಗೆ ಸಿಗಲಿಲ್ಲವಲ್ಲಾ ಎಂಬ ನೋವು ಸದಾ ನನ್ನನ್ನು ಕಾಡುತ್ತಿದೆ” ಎನ್ನುತ್ತಾ. ಶಶಿಕಾಂತ್,  ಜೇಬಿನಿಂದ ಕರ ವಸ್ತ್ರ ತೆಗೆದು ಕಣ್ಣೀರು ಒರೆಸಿಕೊಂಡರು.ಅವರ ಕಥೆಯನ್ನು ಕೇಳುತ್ತಿದ್ದ ನನಗೆ  ಮತ್ತು ಗೆಳೆಯರಿಗೆ ಕಣ್ಣು ಮತ್ತು ಎದೆ ಎರಡೂ ಒದ್ದೆಯಾಗಿ, ಮಾತುಗಳು ಎದೆಯೊಳಗೆ ಹೂತು ಹೋಗಿದ್ದವು. ಅವರು ನೀಡಿದ ಚಹಾ ಕುಡಿದು, ಅವರ ಕೈ ಕುಲುಕಿ, ಭುಜವನ್ನು ತಟ್ಟಿ ಸಾಂತ್ವನಗೊಳಿಸಿ ಕಛೇರಿಯಿಂದ ಹೊರ ಬಂದೆ.
( ಅವಧಿ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಭಾನುವಾರ, ಜೂನ್ 14, 2015

ರೈತರ ಪಾಲಿಗೆ ಮಸಣದ ಮನೆಯಾದ ಮಹಾರಾಷ್ಟ್ರ



ನನ್ನ ಬಿಜಾಪುರದ ವಾಣಿಜ್ಯೋದ್ಯಮಿ ಮಿತ್ರ ಸೋಮಶೇಖರ್ ಅವರ ಹೋಂಡ ಸಿಟಿ ಕಾರಿನಲ್ಲಿ ನಾಲ್ಕು ದಿನಗಳ ಅವಧಿಯಲ್ಲಿ ಮಹಾರಾಷ್ಟದ ಏಳೆಂಟು ಜಿಲ್ಲೆಗಳಲ್ಲಿ ( ವಿಧರ್ಭ ಮತ್ತು ಮರಾಠವಾಡ ಪ್ರಾಂತ್ಯದ ) ಕಲೆ ಹಾಕಿದ ಚಿತ್ರಗಳು ಮತ್ತು ದಾಖಲೆಗಳನ್ನು ಜೊತೆಗಿಟ್ಟು ಕೊಂಡು ಅಧ್ಯಯನ ಲೇಖನ ಬರೆಯಲು ಕುಳಿತಿದ್ದೀನಿ. ರೈತರ ಆತ್ಮಹತ್ಯೆ ಕುರಿತು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಅವರ ಪಾರಂಪರಿಕ ಕೃಷಿ ವ್ಯವಸ್ಥೆಯಲ್ಲಾದ ಪಲ್ಲಟಗಳು ಇವುಗಳ ಆಧಾರದ ಹದಿನಾಲ್ಕು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಕ್ಷೇತ್ರ ಕಾರ್ಯ ನಡೆಸಿದೆ

ಇದನ್ನು ವ್ಯವಸ್ಥೆಯ ಕ್ರೌರ್ಯ ಎನ್ನಲೊ, ವ್ಯಂಗ್ಯ ಎನ್ನಲೋ ತಿಳಿಯುತ್ತಿಲ್ಲ. ಕಳೆದ ಹತ್ತು ವರ್ಷದ ಅವಧಿಯಲ್ಲಿ ಅಂದರೆ 2004 ರಿಂದ 2014 ಡಿಸಂಬರ್ ವರೆಗೆ ಮಹಾರಾಷ್ಟ ರಾಜ್ಯವೊಂದರಲ್ಲಿ 32 ಸಾವಿರ ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. 2015 ಜನವರಿಯಿಂದ ಮೇ 30 ಐದು ತಿಂಗಳ ಅವಧಿಯಲ್ಲಿ 1088 ಮಂದಿ ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ವರ್ದ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ 487 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. 32 ಸಾವಿರ ರೈತರ ಪೈಕಿ ವಿಧರ್ಭ ಪ್ರಾಂತ್ಯದಲ್ಲಿ 20 ಸಾವಿರ ಮತ್ತು ಮರಾಠವಾಡ ಪ್ರಾಂತ್ಯದಲ್ಲಿ 12 ಸಾವಿರ ಸಾವಿರ ರೈತರು ಸಾವಿಗೆ ಶರಣಾಗಿದ್ದಾರೆ.


ಪ್ರದೇಶಗಳನ್ನು ಪ್ರತಿನಿಧಿಸಿದ ಹಾಗೂ ಪ್ರತಿ ನಿಧಿಸುತ್ತಿರುವ ಜನನಾಯಕರ ಪಟ್ಟಿ ಇಲ್ಲಿದೆ. ಸುಮ್ಮನೆ ಒಮ್ಮೆ ಕಣ್ಣಾಡಿಸಿ

1) ಪ್ರತಿಭಾ ಪಾಟೀಲ್ (ರಾಷ್ಟಪತಿಯಾಗಿದ್ದವರು) ಜಾಲ್ನ ಜಿಲ್ಲೆ, ವಿಧರ್ಭ ಪ್ರಾಂತ್ಯ.

2) ಫಡ್ನಾವಿಸ್ (ಮಹಾರಾಷ್ಟ್ರ ಮುಖ್ಯಮಂತ್ರಿ) ನಾಗಪುರ, ವಿಧರ್ಭ ಪ್ರಾಂತ್ಯ.

3) ವಿಲಾಸ್ ರಾವ್ ದೇಶ್ ಮುಖ್( ಮಾಜಿ ಮುಖ್ಯ ಮಂತ್ರಿ) ಲಾತೂರ್, ಮರಾಠವಾಡ ಪ್ರಾಂತ್ಯ

4) ಸುಶೀಲ್ ಕುಮಾರ್ ಶಿಂದೆ, (ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರಸಚಿವ) ಸೊಲ್ಲಾಪುರ, ಮರಾಠವಾಡ

5) ಗೋಪಿನಾಥ್ ಮುಂಡೆ ( ಮಾಜಿ ಸಚಿವ) ಬೀಡ್ ಜಲ್ಲೆ ( ಮರಾಠವಾಡ ಪ್ರಾಂತ್ಯ.



ಮಂಗಳವಾರ, ಜೂನ್ 9, 2015

ಕೊಬಡ್ ಗಾಂಡಿ ಎಂಬ ನಕ್ಸಲ್ ಚಳುವಳಿಯ ಗಾಂಧೀಜಿ




ಗೆಳೆಯರೇ, ಮೊನ್ನೆ ನನ್ನ ಕಿರಿಯ ಮಿತ್ರ ಹಾಗೂ ದೆಹಲಿಯಲ್ಲಿ ಪ್ರಜಾವಾಣಿ ಪತ್ರಿಕೆಯ ವರದಿಗಾರ ಹೊನಕೆರೆ ನಂಜುಂಡೇಗೌಡ ಬರೆದ ಕೋಬಡ್ ಗಾಂಡಿ ಕುರಿತು ಬರೆದ ಲೇಖನವನ್ನು ನೀವು ಗಮನಿಸಿರಬಹುದು. ಮಾವೋವಾದಿ ಚಿಂತನೆಯಲ್ಲಿ ಬೆಳೆದು, ಇದೀಗ ದೆಹಲಿಯ ತಿಹಾರ್ ಜೈಲಿನಲ್ಲಿ ಕೊಳೆಯುತ್ತಾ,  ಅಲ್ಲಿನ ವ್ಯವಸ್ಥೆಯ ಕ್ರೌರ್ಯದ ವಿರುದ್ಧ ಗಾಂಧಿ ಮಾದರಿಯಲ್ಲಿ ಉಪವಾಸ ಸತ್ಯಾಗ್ರಹದ ಮೂಲಕ ದೇಶದ ಗಮನ ಸೆಳೆದ ಎಡಪಂಥೀಯ ನಾಯಕನೊಬ್ಬನ ಬದ್ಧತೆ ಮತ್ತು ದುರಂತ ಗಾಥೆಯ ಕುರಿತು ಮೂರು ವರ್ಷಗಳ ಹಿಂದೆ ನಾನು ಬರೆದ “ ಎಂದೂ ಮುಗಿಯದ ಯುದ್ಧ” ಎಂಬ ಭಾರತದ ನಕ್ಸಲ್ ಇತಿಹಾಸದ ಕಥನದಲ್ಲಿ ದಾಖಲಿಸಿದ್ದೆ. ಅದರ ಒಂದು ಅಧ್ಯಾಯ ಇಲ್ಲಿದೆ ಗಮನಿಸಿ. ವಿಸ್ಮಯದ ಸಂಗತಿಯೆಂದರೆ, ಕೊಬಡ್ ಗಾಂಡಿಯವರ ಪತ್ನಿ ಅನುರಾಧ ಶ್ಯಾನಭಾಗ್ ಎಂಬ ಹೆಣ್ಣು ಮಗಳು, ಕನ್ನಡತಿ ಎಂಬುವುದು ವಿಶೇಷ.
ಪ್ರಜಾ ಸಮರ ದಳಂ ಅಥವಾ ಪೀಪಲ್ಸ್ ವಾರ್ ಗ್ರೂಪ್ ಹೆಸರಿನಲ್ಲಿ 80 ದಶಕದಲ್ಲಿ ಆಂಧ್ರಪ್ರದೇಶದಲ್ಲಿ ಆರಂಭವಾದ ನಕ್ಸಲ್ ಹೋರಾಟಕ್ಕೆ ಹಲವಾರು ಆಯಾಮಗಳಿವೆ. ಹೋರಾಟಕ್ಕೆ ಪ್ರೇರಣೆಯಾದ ಸಂಗತಿಗಳು ಮತ್ತು ನೆರೆಯ ರಾಜ್ಯಕ್ಕೆ ವಿಸ್ತರಿಸಲು ಕಾರಣವಾದ ಮೂರು ಘಟನೆಗಳನ್ನು ಪ್ರಜಾಸಮರದ ಇತಿಹಾಸಕ್ಕೆ ಮೊದಲು ನಿಮ್ಮ ಮುಂದೆ ಇಡುತ್ತಿದ್ದೇನೆ.
ಅದು 2009 ಸೆಪ್ಟಂಬರ್ 20. ದೆಹಲಿಯಲ್ಲಿ ಮಳೆಗಾಲದ ದಿನ. ಹೈದರಾಬಾದ್ ನಗರದಿಂದ ಬಂದಿದ್ದ ಆಂಧ್ರದ ವಿಶೇಷ ಪೋಲಿಸರ ತಂಡ ಹಾಗೂ ದೆಹಲಿಯ ಗುಪ್ತಚರ ಇಲಾಖೆಯ ಪೋಲಿಸರು ನಡು ಮಧ್ಯಾಹ್ನ ದೆಹಲಿಯ ರಾಯಭಾರಿ ಕಚೇರಿಗಳ ಹತ್ತಿರವಿರುವ ಪ್ರತಿಷ್ಠಿತ ಬಿಕಾಜಿಕಾಮ ಎಂಬ ವಾಣಿಜ್ಯ ಕಟ್ಟಡದ ಮುಂಭಾಗ ಅಂಬಾಸೆಡರ್ ಕಾರಿನಲ್ಲಿ ಬೆಳಿಗ್ಗೆಯಿಂದ ಕಾದು ಕುಳಿತಿದ್ದರು. ಎರಡು ದಶಕಗಳ ಕಾಲ  ನಕ್ಸಲ್ ಚಳವಳಿಯಲ್ಲಿ ವಿಶೇಷವಾಗಿ 1980 ದಶಕದಲ್ಲಿ ಆಂಧ್ರದಲ್ಲಿ ಆರಂಭವಾದ  ಕೊಂಡಪಲ್ಲಿ ಸೀತಾರಾಮಯ್ಯ ನೇತೃತ್ವದ  ಪ್ರಜಾಸಮರ ದಳಂ ಎಂಬ ನಕ್ಸಲ್ ಹೋರಾಟದ ಸಂಘಟನೆಗೆ ರೂಪು ರೇಷೆಗಳ ಜೊತೆಗೆ ವಿಚಾರಧಾರೆಗಳನ್ನು ಸೇರ್ಪಡಿಸಿ, ಅವುಗಳನ್ನು ಸಿದ್ಧಾಂತಗಳ ಆಧಾರದ ಮೇಲೆ ಮುನ್ನಡೆಸಿದ ವ್ಯಕ್ತಿಯೊಬ್ಬ ಅವರಿಗೆ ಬೇಕಾಗಿದ್ದ. ಮಹಾರಾಷ್ಟ್ರ, ಮಧ್ಯಪ್ರದೇಶ, ಒರಿಸ್ಸಾ, ಬಿಹಾರ ರಾಜ್ಯಗಳಲ್ಲಿ ಸೈದ್ಧಾಂತಿಕ ನೆಲೆಯಲ್ಲಿ ನಕ್ಸಲ್ ಹೋರಾಟದ ಬೀಜವನ್ನು ಬಿತ್ತಿ, ವಿಸ್ತರಿಸಿದ ಬಳಿಕ ಬಳಲಿ ಸೋತು ಸುಣ್ಣವಾಗಿದ್ದ  ಹಿರಿಯ ಜೀವವೊಂದನ್ನು ಬೇಟೆಯಾಡುವುದು ಅವರ ಗುರಿಯಾಗಿತ್ತು. ಆದರೆ, ವ್ಯಕ್ತಿಯ ಮುಖ ಪರಿಚಯವಿಲ್ಲದ ಪೊಲೀಸರು 20 ವರ್ಷಗಳ ಹಿಂದೆ ಅರಣ್ಯದಲ್ಲಿ ನಾಯಕನಿಗೆ ಸಹಾಯಕನಾಗಿ ದುಡಿದು ಈಗ ಬಂಧನದಲ್ಲಿದ್ದ ವ್ಯಕ್ತಿಯೊರ್ವನನ್ನು ಆಂಧ್ರ ಪೊಲೀಸರು ಗುರುತು ಪತ್ತೆ ಹಚ್ಚುವುದಕ್ಕಾಗಿ ವಿಶಾಖಪಟ್ಟಣದಿಂದ ಜೊತೆಯಲ್ಲಿ ಕರೆತಂದಿದ್ದರು.
ಹಲವು ಗಂಟೆಗಳ ಕಾಲ ಕಾದಿದ್ದ ಪೋಲಿಸರ ನಿರೀಕ್ಷೆ ಹುಸಿಯಾಗಲಿಲ್ಲ. ವಾಣಿಜ್ಯ ಕಟ್ಟಡದ ಯಾವುದೋ ಒಂದು ಕಛೇರಿಯಿಂದ ಹೊರಬಂದ ತೆಳ್ಳನೆಯ ಶರೀರದ ಆರು ಅಡಿ ಎತ್ತರವಿದ್ದ, ಖಾದಿ ಜುಬ್ಬ ಮತ್ತು ಪೈಜಾಮ ಧರಿಸಿದ್ದ ಹಿರಿಯ ಜೀವ ನಿಧಾನವಾಗಿ ಹೆಗಲಿನಲ್ಲಿ ಇದ್ದ ಕೈಚೀಲವನ್ನು ಸರಿ ಪಡಿಸಿಕೊಳ್ಳುತ್ತಾ, ಕೋಲೂರುತ್ತಾ ಸಮೀಪದ ಹ್ಯಾಬಿಟೇಟ್ ಸೆಂಟರ್ ಬಸ್ ನಿಲ್ದಾಣದ ಬಳಿ ಬಂದು  ನಿಂತುಕೊಂಡಿತು. ತಡಮಾಡದೆ ಕಾರಿನಿಂದ ಕೆಳಗಿಳಿದು ಬಂದ ಪೊಲೀಸರು, ವ್ಯಕ್ತಿಯನ್ನು ಕೂಡಲೆ ಕಾರಿಗೆ ಎತ್ತಿ ಹಾಕಿಕೊಂಡು ಕ್ಷಣಾರ್ಧದಲ್ಲಿ ಸ್ಥಳದಿಂದ ಮರೆಯಾದರು.
ಮಾರನೆಯ ದಿನ ಹಿರಿಯ ಜೀವವನ್ನು ನ್ಯಾಯಧೀಶರ ಮುಂದೆ ರಹಸ್ಯವಾಗಿ ಹಾಜರುಪಡಿಸಿ ನಂತರ  ತಮ್ಮ ವಶಕ್ಕೆ ತೆಗೆದುಕೊಂಡ ದಹಲಿಯ ಪೊಲೀಸರುಸುದ್ಧಿಗೋಷ್ಠಿಯಲ್ಲಿ ನಾಯಕನ ಬಂಧನದ ವಿಷಯವನ್ನು ಪ್ರಕಟಿಸಿದರು. ಭಾರತದ ಅತ್ಯಂತ ಪ್ರಮುಖ ನಕ್ಸಲ್ ನಾಯಕ ಹಾಗೂ ಹತ್ತಕ್ಕೂ ಹೆಚ್ಚು ರಾಜ್ಯಗಳ ನಕ್ಸಲರು ಮತ್ತು ಆದಿವಾಸಿಗಳ ಆರಾಧ್ಯ ದೈವವಾಗಿದ್ದ ಮತ್ತು ಭಾರತದ ಅಖಂಡತೆಗೆ ಮತ್ತು ಸಾರ್ವಭೌಮತ್ವಕ್ಕೆ ಕಂಟಕವಾಗಿದ್ದ ಕೊಬದ್ ಗಾಂಡಿ ಎಂಬ 76 ವರ್ಷದ ನಾಯಕನನ್ನು ಬಂಧಿಸಿರುವುದಾಗಿ  ಬಹಿರಂಗಪಡಿಸಿದರು.
ಪೂರ್ವ ಮತ್ತು ಮಧ್ಯ ಭಾರತದ ಆದಿವಾಸಿಗಳ ಬಾಯಲ್ಲಿ ಗಾಂಧಿ ಎಂತಲೂ, ನಕ್ಸಲೀಯರಿಂದ ಕೆ.ಜಿ. ಸರ್ ಎಂತಲೂ ಕರೆಸಿಕೊಳ್ಳುತ್ತಿದ್ದ ಕೋಬದ್ ಗಾಂಡಿಯ ಹೋರಾಟದ ಬದುಕು ಹೀಗೆ ಆಂಧ್ರ ಮತ್ತು ದೆಹಲಿ ಪೊಲೀಸರ ಬಂಧನದೊಂದಿಗೆ ಅಂತ್ಯಗೊಂಡಿತು. ಕೋಬಡ್ ಗಾಂಡಿಯ ಬಂಧನ ಬಿ.ಬಿ.ಸಿ.ಛಾನಲ್ ಸೇರಿದಂತೆ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ದೊಡ್ಡ ಸುದ್ಧಿಯಾಯಿತು. ಏಕೆಂದರೆ, ಬಂಧನಕ್ಕೆ ಎರಡು ವರ್ಷದ ಮುಂಚೆ ವ್ಯಕ್ತಿಯನ್ನು ಲಂಡನ್ನಿನ ಬಿ.ಬಿ.ಸಿ.ಛಾನಲ್ ತಂಡ ಪೊಲೀಸರ ಕಣ್ಣು ತಪ್ಪಿಸಿ ಮಧ್ಯ ಭಾರತದ ದಂಡಕಾರಣ್ಯದಲ್ಲಿ  ಸಂದರ್ಶನ ಮಾಡಿ ಅರ್ಧ ಗಂಟೆಯ ಸಂದರ್ಶನವನ್ನು ಪ್ರಸಾರ ಮಾಡಿತ್ತುಕೊಬಡ್ ಗಾಂಡಿ ಒಬ್ಬ ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ. ಇವರು ನಕ್ಸಲ್ ಚಳವಳಿಗೆ ಪ್ರವೇಶ ಮಾಡದಿದ್ದರೆ, ಅಂತರಾಷ್ಟ್ರೀಯ ಮಟ್ಟದ ದೊಡ್ಡ ಆರ್ಥಿಕ ತಜ್ಞನಾಗುವ ಎಲ್ಲಾ ಅವಕಾಶಗಳು ಅವರಿಗಿದ್ದವು. 1970 ದಶಕದಲ್ಲಿ ಲಂಡನ್ ನಗರದಲ್ಲಿ  ಚಾರ್ಟಡ್ ಅಕೌಟೆಂಟ್ ಪದವಿಗೆ ಓದುತಿದ್ದಾಗಲೆ, ಬ್ರಿಟೀಷರು ಭಾರತೀಯ ವಿದ್ಯಾರ್ಥಿಗಳ ಬಗ್ಗೆ ತೋರುತಿದ್ದ ವರ್ಣ ಬೇಧ ನೀತಿಯನ್ನು ಪ್ರತಿಭಟಿಸಿ, ಒಂದು ತಿಂಗಳ ಕಾಲ ಜೈಲುವಾಸ ಅನುಭವಿಸಿ, ಅಲ್ಲಿನ ಮಾಧ್ಯಮಗಳಲ್ಲಿ ಸುದ್ಧಿಯಾಗಿ ನಂತರ ಭಾರತಕ್ಕೆ ಮರಳಿದ್ದರು.
ಮುಂಬೈ ನಗರದ ಶ್ರೀಮಂತ ಪಾರ್ಸಿ ಕುಟುಂಬದಲ್ಲಿ ಜನಿಸಿದ್ದ ಕೊಬದ್ ಗಾಂಡಿಗೆ ಜೀವನ ನಿರ್ವಹಣೆಗಾಗಿ ದುಡಿಯುವ ಅವಶ್ಯಕತೆ ಇರಲಿಲ್ಲ. ಅವರ ತಂದೆ ಆದಿಗಾಂಡಿ ಕಾಲಕ್ಕೆ ಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿಯಾದ ಗ್ಲಾಸ್ಕೊ ಕಂಪನಿಯಲ್ಲಿ ಮುಖ್ಯ ವ್ಯವಸ್ಥಾಪಕರಾಗಿದ್ದವರು. ಮುಂಬೈ ನಗರದ ಪ್ರತಿಷ್ಠಿತ ಹಾಗೂ ಕಡಲಿಗೆ ಮುಖ ಮಾಡಿರುವ ವರ್ಲಿ ಬಡಾವಣೆಯ ಪ್ರದೇಶದಲ್ಲಿ ನಾಲ್ಕು ಸಾವಿರ ಚದುರ ಅಡಿ ವಿಸ್ತಾರವಾದ ಜಾಗÀದಲ್ಲಿ ಬಂಗಲೆಯನ್ನು ನಿರ್ಮಿಸಿದ್ದರು. ಸಿರಿವಂತ ಕುಟುಂಬದಲ್ಲಿ ಜನಿಸಿದ್ದರೂ ಬಾಲ್ಯದಿಂದಲೂ ಕೊಬದ್ ಗಾಂಡಿಗೆ ಬಡವರೆಂದರೆ ಅಪಾರ ಪ್ರೀತಿ ಮತ್ತು ಕಾಳಜಿಯಿತ್ತು. ಒಮ್ಮೆ ತನ್ನ ತಂದೆಯ ಚಿನ್ನದ ಚೈನ್ ಒಳಗೊಂಡಿದ್ದ ಕೈಗಡಿಯಾರವನ್ನು ಹೇಳದೆ ಕೇಳದೆ ಮನೆಯ ಸೇವಕನಿಗೆ ದಾನ ಮಾಡಿದ ವ್ಯಕ್ತಿತ್ವ ಇವರದು. ಪರರ ಸಂಕಷ್ಟಕ್ಕೆ ಮರುಗುವ ಇಂತಹ ವ್ಯಕ್ತಿತ್ವವೇ ಅಂತಿಮವಾಗಿ ಕೊಬಡ್ ಗಾಂಡಿಯನ್ನು ಅರಣ್ಯದ ಅಂಚಿಗೆ ತಂದು ನಿಲ್ಲಿಸಿಬಿಟ್ಟಿತು. ಐಷಾರಾಮಿ ಬದುಕು, ಊಟ ತಿಂಡಿ ಎಲ್ಲವನ್ನೂ ತೊರೆದು ದಂಡಕಾರಣ್ಯದ ದಟ್ಟ ಕಾನನದ ನಡುವೆ ಪ್ಲಾಸ್ಟಿಕ್ ಗುಡಾರದ ಒಳಗೆ ಅದೇ ಪ್ಲಾಸ್ಟಿಕ್ ಹಾಳೆಯನ್ನು ಹೊದ್ದು, ಹಾಸಿ ಮಲಗುವಂತೆ ಮಾಡಿತು.
ಸತತ ಮುವತ್ತು ವರ್ಷಗಳ ಕಾಲ ಕೊಬಡ್ ಗಾಂಡಿಯ ಹೋರಾಟದ ಬದುಕಿಗೆ ಬಾಳ ಸಂಗಾತಿಯಾಗಿ ಹೆಗಲುಕೊಟ್ಟು ಶ್ರಮಿಸಿದ ಜೀವವೆಂದರೆ, ಅನುರಾಧ ಶ್ಯಾನ್ಬಾಗ್ ಎಂಬ ಕನ್ನಡದ ಹೆಣ್ಣು ಮಗಳು. 1980 ದಶಕದಲ್ಲಿ ಆರಂಭವಾದ ಪ್ರಜಾಸಮರ ದಳÀ ಎಂಬ ನಕ್ಸಲ್ ಸಂಘಟನೆಯ ಚಳುವಳಿಯಲ್ಲಿ ಕೊಂಡಪಲ್ಲಿ ಸೀತಾರಾಮಯ್ಯ£ವರÀಷ್ಟೆ ಗೌರವವನ್ನು ಹೊಂದಿದ್ದ ಅಪೂರ್ವ ಜೋಡಿ ಇವರದು. ಇವರ ತ್ಯಾಗ ಮನೋಭಾವದ ಕಥನ ಸಮಾಜದ ಮುಖ್ಯವಾಹಿನಿಗೆ ಬಾರದೆ ಕೇವಲ ಅರಣ್ಯದ ನಡುವೆ ಆದಿವಾಸಿಗಳು ಮತ್ತು ನಕ್ಸಲೀಯರ ಬಾಯಲ್ಲಿಗಾಂಧಿ ದಂಪತಿಗಳುಎಂದು ದಂತಕಥೆಯಾಗಿ ಇಂದಿಗೂ ಪ್ರತಿಧ್ವನಿಸುತ್ತಿದೆ..


ದೆಹಲಿಯಲ್ಲಿ ಬಂಧನವಾಗಿ ಪೊಲೀಸ್ ವಿಚಾರಣೆಯ ನಂತರ ಮತ್ತೇ ನ್ಯಾಯಾಲಯಕ್ಕೆ ಕೊಬಡ್ ಗಾಂಡಿಯನ್ನು ಹಾಜರು ಪಡಿಸಿದಾಗ, ಕಿಕ್ಕಿರಿದು ತುಂಬಿದ್ದ ಮಾಧ್ಯಮ ಮಂದಿಯ ನಡುವೆ ನ್ಯಾಯಾಧೀಶರ ಎದುರು ಹಿರಿಯ ವೃದ್ಧ ಜೀವ ಯಾವುದೇ ಅಳುಕಿಲ್ಲದೆಭಗತ್ಸಿಂಗ್ ಜಿಂದಾಬಾದ್ಅನುರಾಧ ಗಾಂಡಿ ಅಮರ್ ಹೈಎಂಬ ಘೋಷಣೆ ಹಾಕಿತು.
ಕೇವಲ ಆರು ತಿಂಗಳ ಹಿಂದೆಯಷ್ಟೇ ದೆಹಲಿಗೆ ಬಂದಿದ್ದ ಕೊಬಡ್ ಗಾಂಡಿ ವೃದ್ಧಾಪ್ಯದ ಕಾರಣ ಹಲವು ಕಾಯಿಲೆಯಿಂದ ಬಳಲುತ್ತಿದ್ದರು. ನಕ್ಸಲ್ ಸಂಘಟನೆಗಳ ಸಹಾಯದಿಂದ  ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗಾಗಿ ದಿಲಿಪ್ ಪಟೇಲ್ ಎಂಬ ಹೆಸರಿನಲ್ಲಿ ನಕಲಿ ಮತದಾರರ ಚೀಟಿಯನ್ನು ಪಡೆದಿದ್ದರುಕೂಲಿಕಾರ್ಮಿಕರು ಮತ್ತು ಬಿಕ್ಷುಕರು, ಹಾಗೂ ಸೈಕಲ್ ರಿಕ್ಷಾವಾಲಾಗಳು ವಾಸಿಸುತ್ತಿದ್ದ ಮೊಲರ್ಬಂದ್ ಎಂಬ ಬಡವರ ಕಾಲೋನಿಯ ತಗಡಿನ ಶೀಟಿನ ಮನೆಯೊಂದರಲ್ಲಿ ವಾಸಿಸುತ್ತಾ ಬದುಕು ದೂಡುತ್ತಿದ್ದರು. ಇವರ ಸೇವೆಗಾಗಿ  ನಕ್ಸಲರು ಒಬ್ಬ ನಿಷ್ಠಾವಂತ ಸೇವಕನನ್ನು ನೇಮಕ ಮಾಡಿದ್ದರು. ಗೌಪ್ಯತೆಯ ದೃಷ್ಟಿಯಿಂದ ಮೊಬೈಲ್ ಬಳಕೆ ಮಾಡುತ್ತಿರಲಿಲ್ಲ. ಎಲ್ಲಾ ಸಂದೇಶಗಳು ಅವರಿಗೆ ಮಾರು ವೇóಷದ ನಕ್ಸಲೀಯರ ಮೂಲಕ ರವಾನೆಯಾಗುತಿದ್ದವು. ಅದೇ ರೀತಿ ಹಣಕಾಸು ಸಹಾಯದ ಜೊತೆಗೆ ಚಟುವಟಿಕೆಯ ವಿಷಯಗಳು ಇವರಿಗೆ ತಲುಪುತಿದ್ದವು.( ಇವತ್ತಿಗೂ ದಂಡಕಾರಣ್ಯದ ಮಧ್ಯೆ ಸುರಕ್ಷಿತ ಪ್ರದೇಶದಲ್ಲಿ 70 ವರ್ಷದ ದಾಟಿದ, 17 ಕ್ಕೂ ಹೆಚ್ಚು ಮಂದಿ  ಹಿರಿಯ ನಕ್ಸಲ್ ಹೋರಾಟಗಾರರನ್ನು ಅತ್ಯಂತ ಜತನದಿಂದ ಕಾಪಾಡಿಕೊಂಡು ಬರಲಾಗಿದೆ. ಅವರ ಸಲಹೆ ಸಹಕಾರವನ್ನು ಮಾವೋವಾದಿ ನಕ್ಸಲ್ಸಂಘಟನೆ ಪಡೆದುಕೊಳ್ಳುತ್ತಿದೆ)
ಬಾಲ್ಯದಲ್ಲಿ ಡೆಹರಾಡೂನ್ ಗಿರಿಧಾಮದ ವಸತಿಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಅಂದಿನ ಬಾಂಬೆಯ ಪ್ರತಿಷ್ಠಿತ ಕ್ಷೇವಿಯರ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ ಕೊಬಡ್ ನಂತರ ಇಂಗ್ಲೆಂಡ್ಗೆ ತೆರಳಿ ಚಾರ್ಟಡ್ ಅಕೌಟೆಂಟ್ ಪದವಿ ಪಡೆದರು. ಮರಳಿ ಭಾರತಕ್ಕೆ ಬಂದ ಕೊಬಡ್ ಗಾಂಡಿಯವರಿಗೆ ವೃತ್ತಿಯ ಸೆಳೆತಕ್ಕೆ ಬದಲಾಗಿ ಎಡಪಂಥೀಯ ಚಿಂತನೆಗಳು ಆಕರ್ಷಿಸಿದವು.   ಶ್ರಮಿಕರ ಬಗ್ಗೆ ಬಡವರ ಬಗ್ಗೆ ಕಾಳಜಿ ತೋರುತ್ತಾ ನಕ್ಸಲ್ ಚಳುವಳಿಯತ್ತ ಒಲವು ಬೆಳೆಸಿಕೊಂಡÀರು. ಇದಕ್ಕೆ  ಮುಂಬೈ ನಗರದಲ್ಲಿ ದಿನಗಳಲ್ಲಿ ಅಸ್ತಿತ್ವದಲ್ಲಿದ್ದಪ್ರಗತಿ ಪರ ವಿದ್ಯಾರ್ಥಿ ಸಂಘಟನೆಕೂಡ ಪರೋಕ್ಷವಾಗಿ ಕಾರಣವಾಯ್ತು. ಅವರ ಅಂದಿನ ಹೋರಾಟಗಳ ದಿನಗಳಲ್ಲಿ ಪ್ರಗತಿ ಪರ ಮುಸ್ಲಿಂ ಚಿಂತಕ ಅಸ್ಗರ್ ಆಲಿ ಇಂಜಿನಿಯರ್ ಇವರ ಒಡನಾಡಿಯಾಗಿದ್ದರು. ಇಂತಹ ಕ್ರಾಂತಿಯ ದಿನಗಳಲ್ಲಿ ಕೊಬಡ್ ಒಂದು ದಿನ ಅನುರಾಧ ಶಾನ್ಬಾಗ್ರನ್ನು ಭೇಟಿಯಾದರು.
ಅನುರಾಧರವರ ತಂದೆ ಗಣೇಶ್ ಶಾನ್ಬಾಗ್ ಮೂಲತಃ ಕರ್ನಾಟಕದವರು. ಕೊಡಗು ಜಿಲ್ಲೆಯಲ್ಲಿ ವಕೀ¯ರಾಗಿದ್ದ ಇವರು ತಮ್ಮ ಯವ್ವನದ ದಿನಗಳಲ್ಲಿ ಸುಭಾಷ್ಚಂದ್ರ ಭೋಸರಿಂದ ಪ್ರಭಾವಿತರಾಗಿ ಮನೆ ಬಿಟ್ಟು ಕೊಲ್ಕತ್ತ ನಗರಕ್ಕೆ ತೆರಳಿದವರು, ಅಲ್ಲಿದ್ದ ದಿನಗಳಲ್ಲಿ ಎಡಪಂಥೀಯ ಚಂತನೆಗಳ ಪ್ರಭಾವಕ್ಕೆ ಒಳಗಾಗಿ, ನಂತರ ಮುಂಬೈ ನಗರಕ್ಕೆ ಬಂದು ನೆಲೆ ನಿಂತರು. ಮುಂಬೈ ನಗರದಲ್ಲಿ ಆರಂಭಿಸಿದ ತಮ್ಮ ವಕೀಲ ವೃತ್ತಿಯಲ್ಲಿ ಸರ್ಕಾರದಿಂದ ಬಂಧಿತರಾಗುತ್ತಿದ್ದ ಕಾರ್ಮಿಕ ಸಂಘಟನೆಗಳ ನಾಯಕರ ಬಿಡುಗಡೆಗಾಗಿ ತಮ್ಮ ಬಹುಭಾಗದ ಸಮಯವನ್ನು ವ್ಯಯಮಾಡುತ್ತಿದ್ದರು. ಇವರ ಪತ್ನಿ ಕುಮುದಾ ಸಹ ಪ್ರಗತಿಪರ ಮನೋಭಾವವುಳ್ಳ ಗೃಹಿಣಿಯಾಗಿದ್ದರು. ಇಂತಹ ದಂಪತಿಗಳ ಪುತ್ರಿಯಾಗಿ ಜನಸಿದ್ದ ಅನೂರಾಧ ಬಾಲ್ಯದಿಂದಲೇ ತಂದೆಯ ಕ್ರಾಂತಿಕಾರಿಕ ಗುಣಗಳನ್ನು ಮೈಗೂಡಿಸಿಕೊಂಡಿದ್ದರುಶಾಲಾ ದಿನಗಳಲ್ಲಿ  ತಮ್ಮ ಸುಂದರ ಕೈ ಬರೆವಣಿಗೆಯಿಂದ ಪ್ರಸಿದ್ಧಿಯಾಗಿದ್ದ ಅನುರಾಧ ಶ್ರಮಿಕರ ಪರವಾಗಿ ಭಿತ್ತಿ ಪತ್ರಗಳನ್ನು ಬರೆದು ರಸ್ತೆ ಬದಿಯ ವಿದ್ಯುತ್ ಕಂಬಗಳಿಗೆ ಅಂಟಿಸುತ್ತಿದ್ದರು. ಪ್ರತಿಷ್ಠಿತ ಎಲ್ಪಿಸ್ಟೋನ್ ಕಾಲೇಜಿನಲ್ಲಿ ಪದವಿ, ಹಾಗೂ ಮುಂಬೈ ವಿಶ್ವ ವಿದ್ಯಾನಿಲಯಲ್ಲಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರಪದವಿ ಹಾಗೂ ಎಂ.ಫಿಲ್ ಪಧವೀಧರೆಯಾದ ಅನುರಾಧ ಶಿಕ್ಷಣದ ನಂತರ ಮುಂಬೈನಗರದ ಕೊಳಚೆಗೇರಿಗಳಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. 1970 ದಶಕದಲ್ಲಿ ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ದಲಿತ ಪ್ಯಾಂಥರ್ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದರು. ಅಂದಿನ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯ ಕುರಿತು ಈಕೆ ಬರೆದ ನೂರಾರು ಲೇಖನಗಳು ಅನೇಕ ಯುವ ದಲಿತ ಲೇಖಕ, ಲೇಖಕಿಯರ ಹುಟ್ಟಿಗೆ ಪ್ರೇರಣೆಯಾದವು.

ಕೊಬಡ್ ಮತ್ತು ಅನೂರಾಧ ಒಂದೇ ಬಗೆಯ ನಿಲುವುಗಳನ್ನು ಹೊಂದಿದ್ದರಿಂದ ಮತ್ತು ಮುಂಬೈ ಕೊಳಚೆಗೇರಿಗಳಲ್ಲಿ ಹಾಗೂ ಹರಿಜನರ ಬಸ್ತಿಗಳಲ್ಲಿ (ಕೇರಿ) ಒಟ್ಟಿಗೆ ದುಡಿಯುತ್ತಿದ್ದ ಸಂದರ್ಭದಲ್ಲಿ ಪರಸ್ಪರ ಆಕರ್ಷಿತರಾಗಿ, ತಮ್ಮ ಪೋಷಕರ ಒಪ್ಪಿಗೆ ಪಡೆದು 1977 ನವಂಬರ್ 5 ರಂದು ವಿವಾಹವಾದರು. ವೇಳೆಗಾಗಲೆ ಕೊಬಡ್ ಗಾಂಡಿಯವರ ತಂದೆಯವರು  ಗ್ಲಾಸ್ಕೊ ಕಂಪನಿಯ ಸೇವೆಯಿಂದ ನಿವೃತ್ತರಾಗಿ ಪೂನಾ ಸಮೀಪದ ಮಹಾಬಲೇಶ್ವರ್ ಎಂಬ ಗಿರಿಧಾಮದಲ್ಲಿ ಎಸ್ಟೇಟ್ ಒಂದನ್ನು ಖರೀದಿಸಿ ಅಲ್ಲಿ ವಾಸವಾಗಿದ್ದರು.
ಕೇವಲ ಏಳುದಿನಗಳ ಕಾಲ  ಮಹಾಬಲೇಶ್ವರ ಗಿರಿಧಾಮದ ತಂದೆಯ ಎಸ್ಟೇಟ್ನಲ್ಲಿ ಕಾಲ ಕಳೆದ ನವ ದಂಪತಿಗಳು ಮುಂಬೈ ನಗರಕ್ಕೆ ವಾಪಸ್ ಬಂದು ಸುಮಾರು ನಾಲ್ಕು ವರ್ಷಗಳ ಕಾಲ ಕಾರ್ಮಿಕ ಸಂಘಟನೆಗಳ ಪರವಾಗಿ ಮತ್ತು ದಲಿತರ ಪರವಾಗಿ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ತಮ್ಮ ಭವಿಷ್ಯದ ಬದುಕಿನ ಬಗ್ಗೆ ಸುಧೀರ್ಘವಾಗಿ  ಚರ್ಚಿಸಿದ ದಂಪತಿಗಳು ಅಂತಿಮವಾಗಿ ಒಂದು ನಿರ್ಧಾರಕ್ಕೆ ಬಂದರು. ಬಂಧು ಮಿತ್ರರ ಎದುರು ತಮ್ಮ ಭವಿಷ್ಯದ ಕಾರ್ಯ ಕ್ಷೇತ್ರದ ವಿವರವನ್ನು ಬಹಿರಂಗ ಪಡಿಸಿದರು.  1956  ರಲ್ಲಿ ಡಾ. ಅಂಬೇಡ್ಕರ್ ತಾವು ನಿಧನರಾಗುವ ಕೆಲವು ದಿನಗಳ ಮುನ್ನ ಬೌದ್ಧ ಧರ್ಮ ಸ್ವೀಕರಿಸಿದ್ದ ಮಹಾರಾಷ್ಟ್ರದ ನಾಗಪುರವನ್ನು ತಮ್ಮ ಕರ್ಮಭೂಮಿಯನ್ನಾಗಿ ಆರಿಸಿಕೊಂಡಿದ್ದರು. ದಲಿತರು ಮತ್ತು ಕೂಲಿ ಕಾರ್ಮಿಕರ ಪರ ದುಡಿಯಲು ಕೊಬಡ್ ಮತ್ತು ಅನುರಾಧ ನಿರ್ಧರಿಸಿದ್ದರು. ಅದರಂತೆ ಇಬ್ಬರೂ ನಾಗಪುರಕ್ಕೆ ಬಂದು ಹರಿಜನ ಕೇರಿಯಲ್ಲಿ ಒಂದು ಹೆಂಚಿನ ಮನೆಯನ್ನು ಬಾಡಿಗೆ ಪಡೆದು ವಾಸಿಸತೊಡಗಿದರು.
ನಾಗಪುರದ ವಿಶ್ವ ವಿದ್ಯಾಲಯದಲ್ಲಿ ಅನುರಾಧರವರಿಗೆ ಉಪನ್ಯಾಸಕಿಯಾಗಿ ಉದ್ಯೋಗ ಸಿಕ್ಕಿದ್ದರಿಂದ ತಮ್ಮ ವೃತ್ತಿಯ ನಡುವೆ ನಾಗಪುರ ನಗರದಿಂದ 20 ಕಿಲೋಮೀಟರ್ ದೂರವಿರುವ ಕಾಂಪ್ಟಿ ಎಂಬ ಕಾಲೋನಿಯಲ್ಲಿ ನೇಕಾರಿಕೆಯಲ್ಲಿ ತೊಡಗಿದ್ದ ಬಡ ಮುಸ್ಲಿಂ ಕುಟುಂಬಗಳ ಕ್ಷೇಮಾಭಿವೃದ್ಧಿಗೆ ಶ್ರಮಿಸುತ್ತಿದ್ದರು. ರಾತ್ರಿ ಮನೆಗೆ ಬಂದ ನಂತರ ಮಧ್ಯರಾತ್ರಿ 12 ಗಂಟೆಯವರೆಗೆ ತಾವು ವಾಸವಾಗಿದ್ದ ಹರಿಜನ ಕೇರಿಯ ಜನರ ಸಂಕಷ್ಟಗಳಿಗೆ ಕಣ್ಣು ಮತ್ತು ಕಿವಿಯಾಗುತ್ತಿದ್ದರು.ಇದೇ ವೇಳೆಗೆ ಮಹಾರಾಷ್ಟ್ರದ ಗಡಿ ಜಿಲ್ಲೆಗಳಾದ ಗೊಂಡಿಯ, ಭಂಡಾರ ಚಂದ್ರಾಪುರ್ ಮತ್ತು ಗಡ್ಚಿರೋಲಿ ಜಿಲ್ಲೆಯ ಪ್ರದೇಶಗಳಿಗೆ ನೆರೆಯ ಆಂಧ್ರದ ಪ್ರಜಾ ಸಮರಂ ತಂಡದ ನಕ್ಸಲರು ಪ್ರವೇಶ ಪಡೆದಿದ್ದರಿಂದ ಸ್ಥಳಿಯ ಗೊಂಡಾ ಆದಿವಾಸಿಗಳು ಮತ್ತು ನಕ್ಸಲರ ನಡುವೆ ಸಂವಹನ ಸೇತುವೆಯಾಗಿ ಕೊಬಡ್ ಗಾಂಡಿ ಕಾರ್ಯನಿರ್ವಹಿಸಲು ಆರಂಭಿಸಿದರು.
ಮುಂಬೈ ನಗರದಲ್ಲಿ ಪ್ರಗತಿಪರ ವಿದ್ಯಾರ್ಥಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ವೇಳೆಯಲ್ಲಿ  1981 ರಲ್ಲಿ ಆಂಧ್ರದ ವಿಜಯವಾಡ ಸಮೀಪದ ಗುಂಟೂರಿನಲ್ಲಿ ನಡೆದ ವಿದ್ಯಾರ್ಥಿ ಸಮ್ಮೇಳನದಲ್ಲಿ ಭಾಗವಹಿಸಿದ್ದ ಕೊಬಡ್ ಗಾಂಡಿ, ಸಮಾವೇಶದಲ್ಲಿ ಕೊಂಡಪಲ್ಲಿ ಸೀತಾರಾಮಯ್ಯನವರ ಸಂಪರ್ಕ ಬಂದ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ಪ್ರಜಾ ಸಮರ ದಳಂ ( ಪೀಪಲ್ಸ್ ವಾರ್ ಗ್ರೂಪ್) ನಕ್ಸಲ್ ಸಂಘಟನೆಗೆ ಒಂದು ಸಂವಿಧಾನ ರಚನೆ ಮಾಡಿದರು. ವೈಯಕ್ತಿಕ ನೆಲೆಯಲ್ಲಿ ಹಿಂಸೆಯನ್ನು ವಿರೋಧಿಸುತಿದ್ದ ಕೊಬಡ್ ಗಾಂಡಿ ತಮ್ಮ ಎರಡು ದಶಕಗಳ ನಕ್ಸಲರ ಒಡನಾಟದಲ್ಲಿ ಎಂದೂ ಬಂದೂಕವನ್ನು ಕೈಗೆತ್ತಿಕೊಳ್ಳಲಿಲ್ಲ. ಆದರೆ, ಅರಣ್ಯದ ನಡುವೆ ಮೂಕ ಪ್ರಾಣಿಗಳಂತೆ ಬದುಕಿ ವ್ಯವಸ್ಥೆಯಿಂದ ಶೋಷಣೆಗೆ ಒಳಗಾಗುತ್ತಿದ್ದ ಅರಣ್ಯವಾಸಿ ಆದಿವಾಸಿಗಳಿಗೆ ನಕ್ಸಲ್ ಹೋರಾಟದಿಂದ ಮಾತ್ರ ಮುಕ್ತಿ ಎಂದು ಅವರು ನಂಬಿದ್ದರು. ಕೊಬಡ್ಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಮತ್ತು ಗಾಂಧೀಜಿಯ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಕುರಿತಂತೆ ಅಪಾರ ನಂಬಿಕೆಯಿದ್ದರೂ ಕೂಡ, ಭಾರತಕ್ಕೆ ಅಂಟಿಕೊಂಡಿದ್ದ ಪ್ಯೂಡಲ್ ವ್ಯವಸ್ಥೆ ಮತ್ತು ತಲೆ ಎತ್ತುತ್ತಿದ್ದ ಬಂಡವಾಳ ವ್ಯವಸ್ಥೆಯ ಕುರಿತು ತೀವ್ರ ಆಕ್ರೋಶವಿತ್ತುಅಮಾಯಕರ ಮುಕ್ತಿಗಾಗಿ  ನಕ್ಸಲ್ ಹೋರಾಟ ಹಿಂಸೆಯ ಹಾದಿ ತುಳಿದರೂ ನಾನು ಅದನ್ನು ಬೆಂಬಲಿಸ ಬೇಕಾದ್ದು ನನಗೆ ಅನಿವಾರ್ಯ ಎಂದು ಬಿ.ಬಿ.ಸಿ. ಚಾನಲ್ ಗೆ 2008 ಸೆಪ್ಟಂಬರ್ ತಿಂಗಳಿನಲ್ಲಿ ನೀಡಿದ್ದ ಸಂದರ್ಶನದಲ್ಲಿ ಅವರು ಹೇಳಿಕೊಡಿದ್ದರು.  “ನಕ್ಸಲ್ ಚಳುವಳಿಯನ್ನು ನಿಗ್ರಹಿಸಲು ಎನ್ ಕೌಂಟರ್ ಒಂದೇ ಗುರಿ ಎಂದು ಸರ್ಕಾರ ನಂಬಿಕೊಂಡಿರುವಾಗ, ನೆಲದ ದಲಿತರು, ಆದಿವಾಸಿಗಳ ರಕ್ಷಣೆಗೆ ಹಿಂಸೆಯೊಂದೇ ಹಾದಿ ಎಂದು ನಕ್ಸಲರು ನಂಬಿಕೊಂಡಿದ್ದಾರೆ. ಎರಡೂ ತಪ್ಪು ಹಾದಿಗಳು ನಿಜ, ಆದರೆ, ತಪ್ಪು ಸರಿಪಡಿಸುವ ನೈತಿಕ ಜವಬ್ದಾರಿ ಸರ್ಕಾರದ ಮೇಲಿದೆಎಂದು ನಕ್ಸಲ್ ಹೋರಾಟ ಕುರಿತ ತಮ್ಮ ಅನಿಸಿಕೆಯನ್ನು ಹೊರಜಗತ್ತಿನ ಜೊತೆ ಹಂಚಿಕೊಂಡಿದ್ದರು.
1990 ರಿಂದ ದಂಪತಿಗಳ ಮೇಲೆ ನಿರಂತರವಾಗಿ ಕಣ್ಣಿಟ್ಟಿದ್ದ ಮಹಾರಾಷ್ಟ್ರದ ಪೊಲೀಸರು ಇವರನ್ನು ಹಲವಾರು ಪ್ರಕರಣಗಳಲ್ಲಿ ಆರೋಪಿಗಳಾನ್ನಾಗಿ ಸಿಲುಕಿಸಲು ಪ್ರಯತ್ನಿಸಿತು. 1992 ರಲ್ಲಿ ನಾಗಪುರ ನಗರದಲ್ಲಿ ಸರ್ಕಾರದ ನಿಷೇಧಾಜ್ಞೆಯ ನಡುವೆ ಇವರು ಏರ್ಪಡಿಸಿದ್ದ ತೆಲುಗಿನ ಕ್ರಾಂತಿಕಾರಿ ಕವಿ ಹಾಗೂ ಗಾಯಕ  ಗದ್ದಾರ್ ಹಾಡು ಮತ್ತು ನೃತ್ಯದ ಕಾರ್ಯಕ್ರಮಕ್ಕೆ ಐವತ್ತು ಸಾವಿರಕ್ಕೂ ಹೆಚ್ಚು ದಲಿತ ಮತ್ತು ಆದಿವಾಸಿಗಳು ಸೇರಿದ್ದರು. ಪೊಲೀಸರ ಪ್ರತಿಭಟನೆ ನಡುವೆ ವೇದಿಕೆ ಏರಿದ ಗಾಯಕ ಗದ್ದಾರ್ ಹಾಡಲು ಆರಂಭಿಸುತ್ತಿದ್ದಂತೆ ಪೊಲೀಸರು ಅವರನ್ನು ಬಂಧಿಸಿದರು. ಪ್ರತಿಭಟಿಸಿದ ಜನರಿಗೆ ಲಾಠಿ ಏಟಿನ ರುಚಿ ತೋರಿಸಿದರು. ಇದೊಂದು ಕಾರ್ಯಕ್ರಮವನ್ನು ನೆಪವಾಗಿರಿಸಿಕೊಂಡು ಮಹಾರಾಷ್ಟ್ರ ಸರ್ಕಾರ ಕೊಬಡ್ ಮತ್ತು ಅನುರಾಧ ಮೇಲೆ ಸಮಾಜದ ಶಾಂತಿಗೆ ಅಡ್ಡಿ ಉಂಟುಮಾಡುತ್ತಿದ್ದಾರೆ ಎಂಬ ಮೊಕದ್ದಮೆಯೊಂದನ್ನು ದಾಖಲಿಸಿತು. ನಿರಂತರ ಪೊಲೀಸರ ಕಿರುಕುಳದಿಂದ ಬೇಸತ್ತು ಹೋಗಿದ್ದ  ದಂಪತಿಗಳು ಅಂತಿಮವಾಗಿ ನಾಡನ್ನು ತೊರೆದು ಬಸ್ತಾರ್ ವಲಯದ ಕಾಡನ್ನು ಸೇರಿಕೊಂಡರು.


ನಕ್ಸಲರ  ಬೆಂಬಲದಿಂದ ಅಂದಿನ ಅವಿಭಜಿತ ಮಧ್ಯ ಪ್ರದೇಶದ ( ಛತ್ತೀಸ್ ಗಡ ಸೇರಿದಂತೆ) ಆದಿವಾಸಿ ಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ಕೊಬಡ್ ಗಾಂಡಿ ಮತ್ತು ಅನುರಾಧ ತಮ್ಮನ್ನು ಸಮರ್ಪಿಸಿಕೊಂಡರುಲಿಪಿಯಿಲ್ಲದ ಗೊಂಡಿ ಭಾಷೆಯಲ್ಲಿ ಮಕ್ಕಳಿಗೆ ಪಾಠ ಹೇಳುವುದು ನಿಜಕ್ಕೂ ಅವರಿಗೆ ಸವಾಲಿನ ಕೆಲಸವಾಗಿತ್ತು. ಕಾರಣಕ್ಕಾಗಿ ಇಬ್ಬರೂ ಅರಣ್ಯದ ನಡುವೆ ನಕ್ಸಲರ ಗುಡಾರದಲ್ಲಿ ವಾಸವಾಗಿದ್ದುಕೊಂಡು ಚಿತ್ರಗಳ ಮೂಲಕ ಶಿಕ್ಷಣ ನೀಡಬಹುದಾದ ಪಠ್ಯ ಮತ್ತು ಚಿತ್ರಗಳನ್ನು ತಯಾರಿಸಿದರು. ಬಸ್ತರ್ ಅರಣ್ಯ ಪ್ರದೇಶದಲ್ಲಿ ನೂರಾರು ಟೆಂಟ್ ಶಾಲೆಗಳನ್ನು ಆರಂಭಿಸಿ, ಮಕ್ಕಳಿಗೆ ಅಕ್ಷರ ಕಲಿಸಿಕೊಡುವುದರ ಜೊತೆಗೆ ಗೊಂಡ ಮತ್ತು ಮುರಿಯ ಜನಾಂಗದ ಹೆಣ್ಣು ಮಕ್ಕಳಿಗೆ ಆರೋಗ್ಯ ಮತ್ತು ಶುಚಿತ್ವದ ಪಾಠ ಹೇಳಿಕೊಟ್ಟರು. ಪ್ರಾಥಮಿಕ ಚಿಕಿತ್ಸೆಯ ಬಗ್ಗೆ ವಿವರಗಳನ್ನು ನೀಡಿ ಔಷಧಗಳನ್ನು ಉಚಿತವಾಗಿ ಹಂಚಿದರು. (ಇವತ್ತಿಗೂ ಮಧ್ಯಭಾರತದ ಅರಣ್ಯ ವಾಸಿಗಳ ಸರಾಸರಿ ವಯಸ್ಸು ಕೇವಲ 55 ವರ್ಷ ಮಾತ್ರ. ತಾವು ಯಾವ ಕಾಯಿಲೆಗೆ ಬಲಿಯಾಗಿದ್ದೇವೆ ಎಂಬುದನ್ನು ತಿಳಿಯಲಾರದೆ ಸಾವನ್ನಪ್ಪುತಿದ್ದಾರೆ). ಕೊಬಡ್ ಗಾಂಡಿ ಶಿಕ್ಷಣಕ್ಕೆ ಒತ್ತು ಕೊಟ್ಟು ದುಡಿಯುತ್ತಿದ್ದ ಸಂದರ್ಭದಲ್ಲಿ ಅನುರಾಧ ಮಹಿಳೆಯರ ಅರೋಗ್ಯ ಕುರಿತಂತೆ ಹೆಚ್ಚಿನ ಕಾಳಜಿ ವಹಿಸಿದರು. ಇವರ ಎಲ್ಲಾ ಚಟುವಟಿಕೆಗಳಿಗೆ ನಕ್ಸಲರು ಆರ್ಥಿಕ ನೆರವನ್ನು ಒದಗಿಸುತ್ತಿದ್ದರು.
1998 ವೇಳೆಗೆ  ನಕ್ಸಲರ ನೆರವಿನಿಂದ ಆದಿವಾಸಿ ಕುಟುಂಬಗಳು ವಾಸಿಸುತ್ತಿದ್ದ ಹಾಡಿ (ಹಳ್ಳಿಗಳು) ಬಳಿ ಕೆರೆಗಳನ್ನು ನಿರ್ಮಿಸಲು ನಿರ್ಧರಿಸಿದ ಅನುರಾಧ, ಶ್ರಮಧಾನದ ಮೂಲಕ 158 ಕೆರೆಗಳನ್ನು ನಿರ್ಮಿಸಿದರು. ಪ್ರತಿ ದಿನದ ಕೂಲಿಯಾಗಿ ಒಬ್ಬೊಬ್ಬ ಆದಿವಾಸಿ ಮಹಿಳೆ ಅಥವಾ ಪುರುಷನಿಗೆ ಒಂದು ಕೆ.ಜಿ. ಅಕ್ಕಿಯನ್ನು ವಿತರಿಸಲಾಗುತ್ತಿತ್ತು. ಇದರಿಂದ ಮುಜುಗರಕ್ಕೆ ಒಳಗಾದ ಮಧ್ಯ ಪ್ರದೇಶ ಸರ್ಕಾರ ಕೆರೆಗಳ ನಿರ್ಮಾಣ ಮತ್ತು ಅಭಿವೃದ್ಧಿಗೆ 20 ಲಕ್ಷರೂಪಾಯಿ ನೀಡಲು ಮುಂದೆ ಬಂದಾಗ ಅನುರಾಧ ನಿರ್ಧಾಕ್ಷಿಣ್ಯವಾಗಿ ಅದನ್ನು ತಿರಸ್ಕರಿಸಿದರು.
ನಗರದ ವಾತಾವರಣದಲ್ಲಿ ಬೆಳೆದಿದ್ದ ಎರಡು ಜೀವಗಳು ತಾವು ನಂಬಿದ್ದ ಸಿದ್ಧಾಂತಗಳಿಗೆ ಬದ್ಧರಾಗಿ ಬದಕಲು ಅರಣ್ಯ ಜೀವನವನ್ನು ಆರಿಸಿಕೊಂಡ ಫಲವಾಗಿ 15 ವರ್ಷಗಳ ಅರಣ್ಯದ ಬದುಕಿನಲ್ಲಿ ಗುರುತು ಸಿಗಲಾರದಷ್ಟು ಬದಲಾಗಿ ಹೋಗಿದ್ದರು. ಅಕಾಲ ವೃದ್ಧಾಪ್ಯ ಅವರಿಬ್ಬರನ್ನು ಆವರಿಸಿಕೊಂಡಿತ್ತು. ಊಟ ನಿದ್ರೆ, ಆರೋಗ್ಯದ ಬಗೆಗಿನ ಕಾಳಜಿ ಎಲ್ಲವೂ ಏರು ಪೇರಾಗಿತ್ತು. ಸದಾ ಪೊಲೀಸರ ಗುಂಡಿನ ದಾಳಿಯ ತೂಗುಕತ್ತಿಯ ಕೆಳೆಗೆ ಬದುಕು ದೂಡಬೇಕಾಗಿ ಬಂದ ಕಾರಣ ಹಲವು ಸಂದರ್ಭಗಳಲ್ಲಿ ಅರಣ್ಯದಲ್ಲಿ ದಿನವೊಂದಕ್ಕೆ 20 ಕಿಲೋಮೀಟರ್ ನಡೆಯಬೇಕಾದ್ದು ಅನಿವಾರ್ಯವಾಯಿತು. 2007 ವೇಳೆಗೆ ಮಲೇರಿಯಾ ಕಾಯಿಲೆಗೆ ತುತ್ತಾದ ಅನುರಾಧ ನಂತರದ ದಿನಗಳಲ್ಲಿ ಅಂಗಾಂಗ ವೈಫಲ್ಯದ ಕಾಯಿಲೆಗೆ ಬಲಿಯಾಗಬೇಕಾಯಿತು. ಎರಡು ಬಾರಿ ರಹಸ್ಯವಾಗಿ ಮುಂಬೈ ನಗರಕ್ಕೆ ಬಂದು ತನ್ನ ಸಹೋದರ ಪ್ರಸಿದ್ಧ ರಂಗಕರ್ಮಿ ಸುನಿಲ್ ಶಾನ್ಬೋಗ್ ನೆರವಿನಿಂದ ಚಿಕಿತ್ಸೆ ಪಡದರೂ ಕೂಡ ವೇಳೆಗಾಗಲೆ ಕಾಲ ಮೀರಿ ಹೋಗಿತ್ತು. 2008 ಏಪ್ರಿಲ್ 8 ರಂದು ಬಸ್ತಾರ್ ಅರಣ್ಯ ನಿವಾಸಿಗಳ ಎದುರಲ್ಲಿ ಕೊನೆಯವರೆಗೂ ಅವರ ಸೇವೆ ಮಾಡಿದ ಸಂತೃಪ್ತಿಯಲ್ಲಿ ಅನುರಾಧ ಪ್ರಾಣಬಿಟ್ಟರು. ತನ್ನ ಬಾಳಸಂಗಾತಿಯ ಸಾವು ಕೊಬಡ್ ಗಾಂಡಿಯ ಬದುಕಿನಲ್ಲಿ ದುಖಃಕ್ಕಿಂತ ಹೆಚ್ಚಾಗಿ ಇನ್ನಷ್ಟು ಬದ್ಧತೆಯನ್ನು ಹೆಚ್ಚಿಸಿತು. ಆಕೆಯ ಛಲ, ಬಾಯಿಲ್ಲದವರ ಪರವಾಗಿ ಅನುರಾಧ ಎತ್ತಿದ ಪ್ರತಿಭಟನೆಯ ಧ್ವನಿ ಇವೆಲ್ಲವೂ ಕೊಬಡ್ ಗಾಂಡಿಯ ಮನಸ್ಸನ್ನು ಮತ್ತಷ್ಟು ಗಟ್ಟಿಗೊಳಿಸಿದ್ದವು. ಆದರೆ, ವೇಳೆಗಾಗಲೇ ಅವರ ಮನಸ್ಸು ಮತ್ತು ದೇಹ ಎರಡೂ ಕೂಡ ದಣಿದಿದ್ದವು. ಮರು ವರ್ಷ ಅಂದರೆ, 2009 ರಲ್ಲಿ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟಿತು. ಚಿಕಿತ್ಸೆಗಾಗಿ ದೆಹಲಿಗೆ ಬಂದು, ಪೊಲೀಸರ ಬಂಧಿಯಾಗಿ ತಿಹಾರ್ ಸೆರೆಮನೆಯಲ್ಲಿ ಅತ್ಯಂತ ಸುರಕ್ಷಿವಾದ ಜಾಗದಲ್ಲಿ ವಿಚಾರಣಾ ಕೈದಿಯಾಗಿ ದಿನ ನೂಕುತ್ತಿದ್ದಾರೆ. ಆದರೆ, ಅವರ ಚಿಂತನೆಯಾಗಲಿ, ಪ್ರಖರ ವೈಚಾರಿಕತೆಯಾಗಲಿ, ಭವಿಷ್ಯ ಭಾರತದ ಬಗೆಗಿನ ಕನಸುಗಳಾಗಲಿ ಸೆರೆಮನೆಯ ವಾಸದಿಂದ ಒಂದಿಷ್ಟೂ ಮುಕ್ಕಾಗಿಲ್ಲ, ಬದಲಾಗಿ ಮತ್ತಷ್ಟು ಬಲಿಷ್ಟವಾಗಿವೆ. 2012 ಏಪ್ರಿಲ್ ತಿಂಗಳಿನಲ್ಲಿ ದೆಹಲಿ ಮೂಲದ ಪತ್ರಕರ್ತ ರಾಹುಲ್ ಪಂಡಿತ್ ಎಂಬುವರಹಲೋ ಬಸ್ತರ್ಕೃತಿಗೆ ಇವರು ಬರೆದಿರುವ ಒಂದು ಪತ್ರ ಅಭಿವೃದ್ಧಿಯ ಅಂಧಯುಗದಲ್ಲಿ ಹಾದಿ ತಪ್ಪಿರುವ ಭಾರತ ದೇಶಕ್ಕೆ  ಬೆಳಕಾಗಬಲ್ಲದು.

ಇತ್ತ ಮಹಾರಾಷ್ಟ್ರದ ನಾಗಪುರ ನಗರದಲ್ಲಿ ದಂಪತಿಗಳು ವಾಸವಾಗಿದ್ದ ಅಂಚೆ ಕಚೇರಿಯ ದಲಿತ ನೌಕರನೊಬ್ಬನ ಬಾಡಿಗೆ ಮನೆ ಈಗಲೂ ಖಾಲಿ ಉಳಿದಿದೆ. ದೀದಿ ( ಅನುರಾಧ) ಸಾವಿನ ಸುದ್ಧಿ ತಿಳಿದ ಮನೆಯ ಮಾಲಿಕ ಗಾಂಧಿ ಸಾಹೇಬ್ ಬಂದರೆ,(ಕೊಬಡ್ ಗಾಂಡಿ) ಅವರಿಗಾಗಿ ಮನೆ ಇರಲಿ ಎಂದು ಕಾಯ್ದಿರಿಸಿದ್ದಾನೆ. ಮನೆಯ ಬಾಗಿಲಿಗೆ ಅಂಟಿಸಿದ್ದ ಭಗತ್ ಸಿಂಗ್ ಚಿತ್ರ ಕೂಡ ಹಾಗೆಯೇ ಉಳಿದಿದೆ. ಇವೊತ್ತಿಗೂ ಭಂಡಾರ, ಗಡ್ಚಿರೋಲಿ, ಚಂದ್ರಾಪುರ್ ಗೊಂಡಿಯಾ, ಬಾಳ್ಘಾಟ್ ಬಸ್ತಾರ್ ಜಿಲ್ಲೆಗಳ ಅರಣ್ಯ ಪ್ರದೇಶಗಳಲ್ಲಿ ಅಲ್ಲಿನ ಬುಡಕಟ್ಟು ಜನಾಂಗ ಅನುರಾಧ ದೀದಿಯ ನೆನಪಲ್ಲಿ ಕಾಂತಿಕಾರಿ ಹಾಡೊಂದನ್ನು ರಚಿಸಿ ಗೊಂಡಿ ಭಾಷೆಯಲ್ಲಿ ಹಾಡುತ್ತಾರೆ, ಹಾಡಿನ ಅರ್ಥ ಹೀಗಿದೆ
                    ನಾನು ಹಾಡುವ ಹಾಡಿಗೆ ಸಾವಿರ ವರ್ಷಗಳ ಇತಿಹಾಸವಿದೆ
                    ದುಖಃ ದುಮ್ಮಾನದ ನಡುವೆ ಅದಕೆ ಅಷ್ಟೇ ಸಿಟ್ಟು ಕೂಡ ಇದೆ
                    ನಾನು ಹಾಡುವ  ಕಹಿ ರುಚಿಯ ಹಾಡಿನ ಅರ್ಥ ಹಳೆಯದು
                    ಆದರೆ ಹಾಡುವ ರಾಗ ಮಾತ್ರ ಹೊಸದು. ಅದು ನನ್ನದು.
                    ಇದರಿಂದ ನಿಮಗೆ ಭಯವಾದರೆ ಕಾರಣ ನಾನಲ್ಲ,
                    ಕ್ರೂರ ವ್ಯವಸ್ಥೆಯದು, ಅದರ ಭಾಗವಾದ ನಿಮ್ಮದು.


ನಕ್ಸಲ್ ಹೋರಾಟದ ಕಥನದಲ್ಲಿ ಬೆಳಕಿಗೆ ಬಾರದ ಇಂತಹ ನೂರಾರು ಮನಕರಗುವ ಘಟನೆಗಳಿವೆ. ನಮ್ಮ ಕನ್ನಡಿಗ ಸಾಕೇತ್ರಾಜನ್ ಮತ್ತು ಅವರ ಪತ್ನಿ ರಾಜೇಶ್ವರಿ ಎಂಬ ಹೆಣ್ಣು ಮಗಳ ಹೋರಾಟದ ಬದುಕು ಕೂಡ  ಕೊಬಡ್ ಗಾಂಡಿ ದಂಪತಿಗಳ ಬದುಕಿಗಿಂತ ಭಿನ್ನವಾಗಿಲ್ಲ. ಆದರೆ ನಿಜವಾದ ಪ್ರಶ್ನೆಯಿರುವುದೇ ಇಲ್ಲಿ ನೆಲದ ವಿದ್ಯಾವಂತರು, ಬುದ್ಧಿಜೀವಿಗಳು ನಕ್ಸಲರ ಹೋರಾಟಕ್ಕೆ ಏಕೆ ಕೈ ಜೋಡಿಸುತ್ತಿದ್ದಾರೆ ಎಂಬುದಕ್ಕೆ  ಭಾರತದ ಆದಿವಾಸಿಗಳ ನೋವಿನ ಹಾಗೂ ಧಾರುಣವಾದ ಬದುಕಿನಲ್ಲಿ ಉತ್ತರವಿದೆ.