ಭಾನುವಾರ, ಜುಲೈ 29, 2018

ಅಲ್ಲಮನ ವಿಶ್ವರೂಪ ದರ್ಶನ



ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತಿನಲ್ಲಿ ತಮ್ಮದೇ ಆದ ವಿಶಿಷ್ಠ ಚಿಂತನೆಗಳ ಮೂಲಕ ಮುಂಚೂಣಿಯಲ್ಲಿರುವ ನಮ್ಮ ನಡುವಿನ ಚಿಂತಕ ಡಾ.ಎಸ್.ನಟರಾಜ ಬೂದಾಳರು ಕನ್ನಡದ ದೇಶಿ ಜ್ಞಾನ ಪರಂಪರೆಯ ವಕ್ತಾರರಂತೆ ತಮ್ಮನ್ನು ತಾವು ತೊಡಗಿಸಿಕೊಂಡು ನೆಲಮೂಲ ಸಂಸ್ಕೃತಿಯ ಹುಡುಕಾಟದಲ್ಲಿ ನಿರಂತರವಾಗಿ ಕ್ರಿಯಾಶೀಲರಾಗಿದ್ದಾರೆ. ಈಗಾಗಲೇ ಬೌದ್ಧ ಧರ್ಮದ ತಾತ್ವಿಕ ನೆಲೆಗಳನ್ನು ನಿಖರವಾಗಿ ಗುರುತಿಸುವುದರೊಂದಿಗೆ “ ನಾಗಾರ್ಜುನ ಮೂಲ ಮಧ್ಯಮಕಾರಿಕಾ ಮತ್ತು ಸರಹಪಾದ”  ನಾಗಾರ್ಜುನ-ಅಲ್ಲಮ ಪ್ರಭು ಒಂದು ತೌಲನಿಕ ಅಧ್ಯಯನ, ಮತ್ತು ಕನ್ನಡ ಕಾವ್ಯ ಮೀಮಾಂಸೆ ಎಂಬ ವಿದ್ವತ್ ಪೂರ್ಣವಾದ ಕೃತಿಗಳನ್ನು ನಮ್ಮ ಮುಂದಿರಿಸಿದ್ದಾರೆ. ನಟರಾಜ ಬೂದಾಳರ ಚಿಂತನೆಯ ವೈಶಿಷ್ಟವೆಂದರೆ, ಈವರೆಗೆ ನಮ್ಮಗಳ ಮುಂದಿದ್ದ ಸಿದ್ಧ ಮಾದರಿಗಳನ್ನು ಅವರು ತಿರಸ್ಕರಿಸುವುದರ ಮೂಲಕ ಹೊಸದಾದ ಹಾಗೂ ಗಟ್ಟೆ ನೆಲೆಯ ದೇಶಿ ಚಿಂತನಾ ಮಾದರಿಗಳನ್ನು ಹುಟ್ಟು ಹಾಕುವುದರ ಮೂಲಕ ಕನ್ನಡದ ಸಾಂಸ್ಕೃತಿಕ ಜಗತ್ತಿಗೆ ಭದ್ರ ಬುನಾದಿ ಹಾಕಿದ್ದಾರೆ.  ಇಷ್ಟು ಮಾತ್ರವಲ್ಲದೆ;ನಟರಾಜ ಬೂದಾಳರು ನಾವು ಈವರೆಗೆ ನಂಬಿಕೊಂಡು ಬಂದಿದ್ದ ಭಾರತೀಯ ಕಾವ್ಯ ಮೀಮಾಂಸೆಗೆ ಪರ್ಯಾಯವಾಗಿ ನಮ್ಮೆದುರು ತೆರೆದಿಟ್ಟಿರುವ ಕನ್ನಡದ ತತ್ವಪದಕಾರರ ಹಾಡುಗಳು, ಅಲ್ಲಮನ ವಚನಗಳು ಬೆರಗು ಮೂಡಿಸುತ್ತವೆ. ಯಾವುದೇ ಬೌದ್ಧಿಕ  ಅಹಂ ಇಲ್ಲದೆ, ಆದರೆ, ಆಧಾರ ಸಹಿತವಾಗಿ ಅವರು ನಮ್ಮ ಮುಂದಿಡುವ ದಾಖಲೆಗಳು ನಾವು ಕಳೆದುಕೊಂಡಿರುವ ನಮ್ಮ ಪೂರ್ವಿಕರ ಜ್ಞಾನ ಶಿಸ್ತುವಿಗೆ ಕೈ ದೀವಿಗೆಯಂತೆ ಗೋಚರವಾಗುತ್ತವೆ. ಏಕೆಂದರೆ, ನಾವುಗಳು ಇದುವರೆಗೆ ನಮ್ಮ ಚಿಂತನಾ ಮಾದರಿಗಳನ್ನು ಉತ್ತರದ ಭಾರತದ  ಮೂಲಕ ಕಟ್ಟಿಕೊಳ್ಳುತ್ತಾ, ನಾವು ನಿಂತು ನಡೆದಾಡಿದ ಜ್ಞಾನ ಶಿಸ್ತುಗಳನ್ನು ಶೋಧಿಸಲಾರದ ವಿಸ್ಮೃತಿಗೆ ದೂಡಲ್ಪಟ್ಟಿದ್ದೆವು. ಹಾಗಾಗಿ ಬೂದಾಳರು ಪ್ರತಿಯೊಂದು ಕೃತಿಯೂ ನಾವು ನಡೆಯಬೇಕಾಗಿರುವ ಹೊಡ ಹಾದಿಗೆ ಮಾರ್ಗ ಸೂಚಿಯಂತೆ ಕಾಣುತ್ತದೆ.  ಇತ್ತೀಚೆಗೆ ಪ್ರಕಟವಾದ ಅವರ “ ಪ್ರತ್ಯೇಕಕ ಬುದ್ಧ ಅಲ್ಲಮ ಪ್ರಭು “ ಎಂಬ ಕೃತಿಯುನಮಗೆ ಹನ್ನೆರಡನೇ ಶತಮಾನದ ಪ್ರಖರ ಪ್ರತಿಭೆಯ ವಚನಕಾರ ಹಾಗೂ ಚಿಂತಕನಾದ ಅಲ್ಲಮನ ವಿಶ್ವರೂಪವನ್ನು ಅನಾವರಣಗೊಳಿಸುವ ಅಮೂಲ್ಯ ಕೃತಿಯಾಗಿದೆ.
ಕನ್ನಡದ ಸಾಹಿತ್ಯ ಲೋಕಕ್ಕೆ ಬಸವಯುಗದ ವಚನಕಾರರು ಮತ್ತು ವಚನಕಾರ್ತಿಯರು ಹೊಸಬರೇನಲ್ಲ. ಅವರುಗಳ ವಚನಗಳ ವಾಖ್ಯಾನ , ಮರುವ್ಯಾಖ್ಯಾನ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಅದರಲ್ಲೂ ವಿಶೇಷವಾಗಿ ಕನ್ನಡದ ಪ್ರಜ್ಞಾವಂತ ಓದುಗರು, ಬರಹಗಾರರು, ಕವಿಗಳಿಗೆ ಅಲ್ಲಮ ಪ್ರಭುವಿನ ವಚನಗಳು, ಆತನ ಶಬ್ದ ಸಂಪತ್ತು, ಇವುಗಳ ಕುರಿತು ವಿಶೇಷ ಆಸಕ್ತಿ. ಏಕೆಂದರೆ, ಅವನು ಬರಹಗಾರರ ಪಾಲಿಗೆ ಅಗೆದಷ್ಟು ಸಿಗುತ್ತಲೇ ಇರುವ ನಿಧಿಯಂತಾಗಿದ್ದಾನೆ. ಈ ಕಾರಣದಿಂದಾಗಿ ಚಿಕಿತ್ಸಾ ಮನೋಧರ್ಮದ ಅಲ್ಲಮನ ಕುರಿತು ನಿರಂತರವಾಗಿ ಅಧ್ಯಯನಗಳು ನಡೆಯುತ್ತಲೇ ಬಂದಿವೆ. ಚಾಮರಸನ ಪ್ರಭುಲಿಂಗೆ ಕೃತಿಯಿಂದ ಹಿಡಿದು ಆನಂತರ ಸೃಷ್ಟಿಯಾದ ನಾಲ್ಕು ಶೂನ್ಯ ಸಂಪಾದನೆಯ ಕೃತಿಗಳೊಂದಿಗೆ ಅಧ್ಯಯನ ಪರಂಪರೆ ಆರಂಭಗೊಂಡು, 1970 ರಲ್ಲಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಹಳೆಯೂರು ಗ್ರಾಮದ ವಿಜಯಕುಮಾರ್ ಎಂಬುವವರ ಅಧ್ಯಯನ ಹಾಗೂ ಡಾ.ಎಲ್.ವೃಷಭೇಂದ್ರ ಸ್ವಾಮಿಯವರ ಪಿ.ಹೆಚ್.ಡಿ. ಅಧ್ಯಯನದವರೆಗೆ ಮುಂದುವರಿಯಿತು.
 ಆನಂತರದ ದಿನಗಳಲ್ಲಿ ಮುಂಡರಗಿಯ ಅನ್ನದಾನೇಶ್ವರ ಮಠದಲ್ಲಿ ನಡೆದ ಮೂರು ದಿನಗಳ ಚರ್ಚಾಗೋಷ್ಟಿಯಲ್ಲಿ ಮಂಡಿತವಾದ ಪ್ರಬಂಧಗಳು, , ಬಿಜಾಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳು, ಡಾ.ಎಲ್. ಬಸವರಾಜು ಸೇರಿದಂತೆ ಅನೇಕ ವಿದ್ವಾಂಸರಿಂದ ವ್ಯಾಖ್ಯಾನಗೊಂಡಿತು. ಇವುಗಳ ಜೊತೆಗೆ ನಾಡಿನ ಪ್ರಮುಖ ಸಾಂಸ್ಕತಿಕ ಚಿಂತಕರಲ್ಲಿ ಒಬ್ಬರಾಗಿದ್ದ ಡಾ.ಡಿ.ಆರ್. ನಾಗರಾಜ್ ಅವರ " ಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆ" ಕೃತಿಯ ಮೂಲಕ ಅಲ್ಲಮನ ಇನ್ನೊಂದು ಜಗತ್ತು ಕನ್ನಡದ ಸಾಂಸ್ಕøತಿಕ ಲೋಕದೆದುರು ಅನಾವರಣಗೊಂಡರೂ ಸಹ ಅಲ್ಲಮ ಇನ್ನೂ ಪೂರ್ತಿಯಾಗಿ ಯಾರಿಗೂ ದಕ್ಕಿಲ್ಲ ಎಂಬ ಅತೃಪ್ತಿ ಪ್ರಜ್ಞಾವಂತರನ್ನು ಕಾಡುತ್ತಲೇ ಇತ್ತು. ಇದೀಗ ಬೂದಾಳ ಈ ಕೃತಿಯು ಡಿ.ಆರ್. ನಾಗರಾಜು ಅವರ ಕೃತಿಯ ಮುಂದುವರಿದ ಅಧ್ಯಯನ ಎಂಬಂತೆ ಕಾಣುತ್ತದೆ. ಏಕೆಂದರೆ, ನಾಗರಾಜ್ ಅವರು ಅಲ್ಲಮನ್ನು ಕಾಶ್ಮೀರದ ಶೈವ ಪಂvಥದೊಂದಿಗೆ ಸಮೀಕರಿಸಿ ಅಧ್ಯಯನ ಮಾಡಿದ್ದರು. ಆದರೆ, ಈ ಕೃತಿಯಲ್ಲಿ ಬೂದಾಳರು ಅದಕ್ಕೂ ಹಿಂದೆ ಹೋಗಿ ಬೌದ್ಧರ ತಾತ್ವಿಕ ನೆಲೆಗಳೊಂದಿಗೆ ಮತ್ತು ದೇಶದ ಇತರೆ ಅನುಭಾವಿ ಪರಂಪರೆಗಳೊಂದಿಗೆ ಅಲ್ಲಮನ ಚಿಂತನೆಗಳನ್ನು ಇಟ್ಟು ಚರ್ಚೆ ಮಾಡುವುದರ ಮೂಲಕ ಕನ್ನಡದ ಚಿಂತನಾ ಜಗತ್ತನ್ನು ವಿಸ್ತರಿಸಿದ್ದಾರೆ.
ಅಲ್ಲಮಪ್ರಮ ಪ್ರಭು ಭಾರತೀಯ ಶ್ರಮಣಧಾರೆಗಳಲ್ಲಿ ಎದ್ದು ಕಾಣುವ ವ್ಯಕ್ತಿತ್ವ. ಏಕೆಂದರೆ ಅವನು ಕನ್ನಡದ ನೆಲದಲ್ಲಿ ಹುಟ್ಟಿ ಉತ್ತರದ ನೆಲದಲ್ಲಿ ನಡೆದಾಡುತ್ತಾ  ಎಲ್ಲಾ ಅನುಭವಗಳನ್ನು ದಕ್ಕಿಸಿಕೊಂಡವನು. ಅಲ್ಲಿನ ಜೈನ, ಬೌದ್ಧ, ಕಾಳಾಮುಖ. ಸಿದ್ಧ, ನಾಥ,ಚಾರ್ವಾಕ ಪರಂಪರೆಯ ಜೊತೆ ಒಡನಾಡಿ ಅವೆಲ್ಲವುಗಳನ್ನು ಒರೆಗಲ್ಲಿಗೆ ಹಚ್ಚಿದವನು. ಹಾಗಾಗಿ ಕನ್ನಡದಲ್ಲಿ ನಡೆದಿರಬಹುದಾದ ಬಹುತೇಕ ಅನುಸಂಧಾನಗಳು ಅಲ್ಲಮನ ಬೆಳಕಿನಲ್ಲಿ ನಡೆದಿವೆ ಎನ್ನುವ   ಲೇಖಕರ ಮಾತುಗಳನ್ನು ಆಧಾರವಾಗಿ ಇಟ್ಟುಕೊಂಡು ಬುದ್ಧನ ಮಧ್ಯಮ ಮಾರ್ಗ, ಅಲ್ಲಮನ ನಿರಸನ ಮಾರ್ಗ, ಝೆನ್ ಮತ್ತು ಸೂಫಿ ಪರಂಪರೆ, ಕೊಡೆಕಲ್ಲು ಹಾಗೂ ಮಂಟೆಸ್ವಾಮಿ ಪರಂಪರೆಗಳನ್ನು ಅವಲೋಕಿಸಿದಾಗ  ಇವೆಲ್ಲವೂ ಆಯಾ ಧರ್ಮಗಳ ವಿರುದ್ಧ ನಡೆದ ಆಂತರೀಕ ಬಂಡಾಯ ಎಂಬುದನ್ನು ನಾವು ಮನದಟ್ಟು ಮಾಡಿಕೊಳ್ಳಬಹುದು. ಈ ಕೃತಿಯಲ್ಲಿ ಹನ್ನೆರೆಡು ಅಧ್ಯಾಯಗಳಿದ್ದು ಇವುಗಳಲ್ಲಿ ಅಲ್ಲಮನು ಕೇಂದ್ರ ವ್ಯಕ್ತಿಯಾಗಿದ್ದಾನೆ. ಅಲ್ಲಮ ಮತ್ತು ಝೆನ್, ವಿಮಲಕೀರ್ತಿ ಮತ್ತು ಅಲ್ಲಮಪರಂಪರೆ, ಸರಹಪಾದ ಮತ್ತು ಅಲ್ಲಮ ಪ್ರಭು, ಅಲ್ಲಮ ಪ್ರಭು ಮತ್ತು ಅಶ್ವಘೋಷ,  ಅಲ್ಲಮಪ್ರಭು ಮತ್ತು ಅನುಭಾವಿಕನೆಲೆಗಳು, ಬೌದ್ಧಧರ್ಮ ಮತ್ತು ಅಲ್ಲಮಪ್ರಭು, ಕನ್ನಡ ಕಾವ್ಯಮೀಮಾಂಸೆ ಮತ್ತು ಅಲ್ಲಮ, ಅಲ್ಲಮಪ್ರಭು ಮತ್ತು ಪ್ರಸ್ತುತತೆ ಹೀಗೆ ಹಲವು ಆಯಾಮಗಳಲ್ಲಿ ಅಲ್ಲಮನ ತಾತ್ವಿಕತೆಯನ್ನು ಚರ್ಚಿಸಿರುವುದು ಲೇಖಕರ ಆಳವಾದ ಹಾಗೂ ಶ್ರದ್ಧೆಯಿಂದ ಕೂಡಿದ ಅಧ್ಯಯನ ಓದುಗರಿಗೆ ಮನದಟ್ಟಾಗುತ್ತದೆ. ಈ ಕೃತಿಯಲ್ಲಿನ ವಿಮಲಕೀರ್ತಿ ಮತ್ತು ಅಲ್ಲಮ ಎಂಬ ಅಧ್ಯಾಯದಲ್ಲಿನ ವಿಷಯ ಅತ್ಯಂತ ಕುತೂಹಲಕಾರಿಯಾಗಿದೆ. ಏಕೆಂದರೆ, ಕ್ರಿಸ್ತಪೂರ್ವದ ಬುದ್ಧನ ಕಾಲದಲ್ಲಿ ಬದುಕಿದ್ದವನು  ಎಂದು ಹೇಳಲಾಗುವ ವಿಮಲಕೀರ್ತಿ ಮತ್ತು ಅಲ್ಲಮನ ವಚನಗಳ ನಡುವೆ ಇರುವ ಸಾಮ್ಯತೆಯನ್ನು ಲೇಖಕರು ಇಲ್ಲಿ ಎತ್ತಿ ತೋರಿಸಿದ್ದಾರೆ. ಲೇಖಕರೇ ಹೇಳುವ ಹಾಗೆ "ಅಲ್ಲಮನ ಮಾರ್ಗವೆಂದರೆ ಮತ್ತೇನೊ ಒಂದನ್ನು ಪಡೆಯುವುದಲ್ಲ, ಬದಲಿಗೆ ಇರುವ ಕೇಡನ್ನು ದೂರವಾಗಿಸಿಕೊಳ್ಳುವ ಪ್ರಯತ್ನ. ಕನ್ನಡದ ನಿಜದನಿಯನ್ನು ಹಾಗೂ ಕನ್ನಡದ ಮೀಮಾಂಸೆಯನ್ನು ಕಂಡುಕೊಳ್ಳಲು ಇರುವ ಮಾರ್ಗ' ಈ ಕೃತಿಯನ್ನು ಓದಿದಾಗ ಈ ಮಾತು  ಸತ್ಯವೆಂಬುದು ನಮ್ಮ ಅರಿವಿಗೆ ಬರುತ್ತದೆ. ಏಕೆಂದರೆ,  ಅಲ್ಲಮನೆಂಬುದು ಪರಂಜ್ಯೋತಿ ಮತ್ತು ಜಂಗಮಪ್ರಜ್ಞೆ. ಎಲ್ಲಿಯೂ ನಿಲ್ಲದೆ ನಿರಂತರವಾಗಿ ದಾಟಬೇಕಾದ ಸ್ಥಿತಿ. ಅಲ್ಲಮನನ್ನು ಕೇವಲ ಒಬ್ಬ ಶರಣನಾಗಿ, ವಚನಕಾರನಾಗಿ, ಅನುಭಾವಿ ಪಂಥದ ಪಥಿಕನಾಗಿ ನೋಡುವ ಬದಲು ಈ ಕೃತಿಯಲ್ಲಿ ಲೇಖಕರು ಅಲ್ಲಮನನ್ನು ನಾಥ ಪಂಥದವರ ಅಲ್ಲಮನಾಥನಾಗಿ, ವಚನಕಾರರ ಶೂನ್ಯ ಸಿಂಹಾಸನದ ಪೀಠಾಧಿಪತಿಯಾಗಿ, ಸೂಫಿಗಳ ಪಾಲಿನ ಆಲಂಪ್ರಭುವಾಗಿ, ತತ್ವಪದಕಾರರ ಪಾಲಿನ ಶಿವನಾಗಿ,  ಜನಪದರ ಮಂಟೆಸ್ವಾಮಿಯಾಗಿ ನೋಡುತ್ತಾ ಹಲವು ತಾತ್ವಿಕ ನೆಲೆಗಳಲ್ಲಿ ಚರ್ಚಿಸುವುದರ ಮೂಲಕ ಕನ್ನಡಕ್ಕೆ ಹೊಸ ಜ್ಞಾನಪರಂಪರೆಯೊಂದನ್ನು ಜೋಡಿಸಿದ್ದಾರೆ.
ವರ್ತಮಾನದ ಜಗತ್ತಿನಲ್ಲಿ ಜಾತಿ, ಧರ್ಮಗಳು ದ್ರುವೀಕರಣಗೊಳ್ಳುತ್ತಿರುವ ಮೂಲಕ ಅಜ್ಞಾನ ತಾಂಡವಾಡುತ್ತಿರುವ ಈ ಹೊತ್ತಿನಲ್ಲಿ ಇಂತಹ ಕೃತಿಗಳು ನಮ್ಮಗೆ ಬೆಳಕಿನ ದಾರಿಯಾಗಬಲ್ಲವು.
( ಹೊಸತು ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಮಂಗಳವಾರ, ಜುಲೈ 10, 2018

ಗಾಂಧೀಜಿಯನ್ನು ಒರೆಗಲ್ಲಿಗೆ ಹಚ್ಚಿದ ಪರಮ ಶಿಷ್ಯನೊಬ್ಬನ ಉದಾತ್ತ ಚರಿತ್ರೆ




ಪ್ರಿಯ ಓದುಗರೇ ಕ್ಷಮಿಸಿ. ಗಾಂಧಿ ಮತ್ತು ಗಾಂಧಿ ಚಿಂತನೆಗಳು ಎಂಬುವುದು ನನ್ನ ಪಾಲಿಗೆ ವ್ಯಸನ ಮತ್ತು ತೀರದ ದಾಹ. ಏಕೆಂದರೆ, ಮಹಾತ್ಮ  ನಿಧನವಾಗಿ ಎಪ್ಪತ್ತು ವರ್ಷ ಕಳೆದು ಹೋದರೂ ಸಹ ಇಂದಿಗೂ ಸಹ ಪತ್ರಿ ದಿನ ಮತ್ತು ಪ್ರತಿಕ್ಷಣ ಹಲವು ರೂಪಗಳಲ್ಲಿ   ಜಗತ್ತನ್ನು ಕಾಡುತ್ತಲೇ ಇದ್ದಾರೆ.
ಇಂತಹ ಸನ್ನಿವೇಶದಲ್ಲಿ ನನ್ನಂತಹ ಪಾಮರನನ್ನು ಕಾಡುವುದರಲ್ಲಿ ಯಾವ ವಿಶೇಷವೂ ಇಲ್ಲ.
ನಾನು ಕಳೆದರೆಡು ವರ್ಷಗಳಿಂದ  ಆಗಾಗ್ಗೆ ದಾಖಲಿತ್ತಾ ಬಂದಿರುವಗಾಂಧಿಗಿರಿಯ ಫಸಲುಗಳುಎಂಬ ಕೃತಿಗಾಗಿ ಕಳೆದ ವಾರದಲ್ಲಿ ಎರಡು ಹೊಸ ಲೇಖನಗಳನ್ನು ಸೇರ್ಪಡೆ ಮಾಡಿದೆ. ಅವುಗಳಲ್ಲಿ ಜಮ್ನಾಲಾಲ್ ಬಜಾಜ್ ಮತ್ತು ಪಶ್ಚಿಮ ಬಂಗಾಳದ ನಿರ್ಮಲ್ ಕುಮಾರ್ ಬೋಸ್ ಎಂಬ ಗಾಂಧಿವಾದಿಗಳ ಕುರಿತು ಬರೆಯುವಾಗ ಸ್ವತಃ ನಾನೇ ಆಶ್ಚರ್ಯಗೊಂಡಿದ್ದೀನಿ. ಒಬ್ಬ ಮನುಷ್ಯ ತನ್ನ ನಡೆ, ನುಡಿ ಮತ್ತು ವ್ತಕ್ತಿತ್ವದ ಚಾರಿತ್ರ್ಯದ ಮೂಲಕ ಇನ್ನೊಬ್ಬ ಮೇಲೆ ಹೀಗೂ ಪರಿಣಾಮ ಬೀರಬಹುದೆ? ಎಂದು ಆಶ್ಚರ್ಯವಾಗುತ್ತದೆ.
ಗಾಂಧೀಜಿ ಬದುಕಿದ್ದಾಗ ಮಾತ್ರವಲ್ಲದೆ  ನಿಧನಾನಂತರವೂ ಪ್ರಶ್ನಾರ್ಹ ವ್ಯಕ್ತಿಯಾಗಿ ಉಳಿದು ಹೋದರು.. ಅವರನ್ನು ಹಿಂದೂ ರಾಷ್ಟ್ರವಾದಿಗಳು ನಂಬಲಿಲ್ಲ. ಮುಸ್ಲಿಂರಿಗೆ ಅವರ ಜಾತ್ಯಾತೀತ ಹಾಗೂ ಧರ್ಮಾತೀತ ಮನೋಭಾವದ ಬಗ್ಗೆ ಸಂಶಯಗಳಿದ್ದವು.  ಸಮಾಜವಾದಿಗಳಿಗೆ ಮತ್ತು ಎಡಪಂಥೀಯರಿಗೆ ಗಾಂಧೀಜಿಯವರ ಚರಕದಿಂದ ಹಿಡಿದು ಅಹಿಂಸೆಯ ಪರಿಕಲ್ಪನೆಗಳ ಕುರಿತು ನಂಬಿಕೆ ಇರಲಿಲ್ಲ. ಇನ್ನೂ ಭಾರತದ ದಲಿತರಿಗೆ ಗಾಂಧಿಯನ್ನು ಪೂನಾ ಒಪ್ಪಂಧದ ಘಟನೆಯನ್ನು ಆಧಾರವಾಗಿಟ್ಟುಕೊಂಡು ದ್ವೇಷ ಮಾಡುವುದೇ ಅಂಬೇಡ್ಕರ್ ವಾದ ಎಂಬ ನಂಬಿಕೆ ಬಲವಾಗಿ ಬೆಳೆಯತೊಡಗಿತು. ದುರಂತವೆಂದರೆ, ಗಾಂಧೀಜಿಯವರನ್ನು ಯಾರೊಬ್ಬರೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ. ಅವರು ತಮ್ಮ ಬದುಕನ್ನು ಸತ್ಯದೊಂದಿಗೆ ನನ್ನ ಪ್ರಯೋಗ ಏಕೆ ಕರೆದರು?  ಎಂದು ಯಾರೊಬ್ಬರೂ ಪ್ರಶ್ನಿಸಿಕೊಳ್ಳಲಿಲ್ಲ.  ಗಾಂಧೀಜಿಯವರು ಎಲ್ಲಿಯೂ ತಮ್ಮ ಬದುಕನ್ನು ಸಾಧನೆ ಎಂದು ಕರೆದುಕೊಂಡಿಲ್ಲ. ಎಲ್ಲವನ್ನೂ ಪ್ರಯೋಗ ಎಂದು ಕರೆದುಕೊಂಡಿದ್ದಾರೆ. ಈ ಕಾರಣಕ್ಕಾಗಿ ಅವರು ತಪ್ಪು ಹೆಜ್ಜೆ ಇಟ್ಟಾಗ ತಿದ್ದುಕೊಂಡಿದ್ದಾರೆ. ಜೊತೆಗೆ ಭಾರತದ ಸ್ವಾತಂತ್ರ್ಯ ಹೋರಾಟ ದಿಕ್ಕು ತಪ್ಪಿದಾಗ ಚಳುವಳಿಯನ್ನು  ಸಹ ಹಲವಾರು ಬಾರಿ ಹಿಂತೆಗೆದುಕೊಂಡು ಸ್ಥಗಿತಗೊಳಿಸಿದ್ದಾರೆ. 

ಈ ನಿಟ್ಟಿನಲ್ಲಿ ಗಾಂಧೀಜಿಯವರನ್ನು ಪ್ರತಿ ಕ್ಷಣದಲ್ಲಿ ಅಗ್ನಿ ಪರೀಕ್ಷೆಗೆ ಒಳಪಡಿಸಿ, ಅವರೊಳಗಿನ ಪಾರದರ್ಶಕ ವ್ಯಕ್ತಿತ್ವನ್ನು ಮತ್ತು ಪ್ರಾಮಾಣಿಕತೆ ಮತ್ತು ಬದ್ಧತೆಯ ಜೊತೆಗೆ ಅವರ ದೌರ್ಬಲ್ಯವನ್ನು ಎತ್ತಿ ಹಿಡಿದವರಲ್ಲಿ ಪಶ್ವಿಮ ಬಂಗಾಳದ ಗಾಂಧಿವಾದಿ, ವಿದ್ವಾಂಸ ಮತ್ತು ಭಾರತದ ಪ್ರಖರ ಸಮಾಜ ಶಾಸ್ತ್ರಜ್ಙ ನಿರ್ಮಲ್ ಕುಮಾರ್ ಬೋಸ್ ಪ್ರಮುಖರಾಗಿದ್ದಾರೆ.  ಇವರ ಕುರಿತು ನನ್ನ ಕೃತಿಯಲ್ಲಿ ವಿವರವಾಗಿ ದಾಖಲಿಸುವುದರಿಂದ  ಇಲ್ಲಿ ಹೆಚ್ಚೇನು ಹೇಳಲಾರೆ.
ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಎರಡು ಬಗೆಯ ಶಿಷ್ಯರಿದ್ದರು.  ಮೊದಲನೆಯವರು ಗಾಂಧಿಯನ್ನು ಒಪ್ಪಿಕೊಂಡು, ಅವರ ಆದೇಶವನ್ನು ಪಾಲಿಸುವ ಅನುಯಾಯಿಗಳು.  ಎರಡನೆಯವರೆಂದರೆ, ಗಾಂಧಿ ಚಿಂತನೆಗಳು  ಅಥವಾ ಆಶಯಗಳು ಪ್ರಾಯೋಗಿಕವಾಗಿ ಅಳವಡಿಸಲು ಸಾಧ್ಯವೆ? ಎಂದು ಪ್ರಶ್ನಿಸಿಕೊಂಡು ಅವುಗಳನ್ನು ವಾಸ್ತವ ರೂಪದಲ್ಲಿ ನೋಡುತ್ತಾ ಅವುಗಳ ಮಹತ್ವವನ್ನು ಜಗತ್ತಿಗೆ ಸಾರಿದದವರು. ಇವರಲ್ಲಿ ಪ್ರಮುಖರೆಂದರೆ, ಜಿ.ಸಿ.ಕುಮಾರಪ್ಪ ಮತ್ತು ನಿರ್ಮಲ್ ಕುಮಾರ್ ಬೋಸ್. ಈ ಇಬ್ಬರನ್ನು  ಭಾರತದಲ್ಲಿ ಗಾಂಧಿವಾದಿಗಳೆಂದು ಪ್ರಥಮ ಬಾರಿಗೆ ಗುರುತಿಸಿಕೊಂಡ ತಜ್ಞ ವಿದ್ವಾಂಸರು ಮತ್ತು ಬುದ್ದಿ ಜೀವಿಗಳು ಎಂದು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅವರು 2012 ರಲ್ಲಿ ಹಿಂದೂ ಪತ್ರಿಕೆಯ ತಮ್ಮ ಅಂಕಣ ವೊಂದರಲ್ಲಿ ದಾಖಲಿಸಿದ್ದಾರೆ. ಇದಕ್ಕೆ ಪೂರಕವಾಗಿ  ತಮ್ಮ ವಿದ್ಯಾರ್ಥಿ ಜೀವನದಲ್ಲಿ  ಪದವಿ ಓದುತ್ತಿದ್ದಾಗ  ಉಪ್ಪಿನ ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯ ಚಳುವಳಿಗೆ ದುಮುಕಿದ ನಿರ್ಮಲ್ ಕುಮಾರ್ 1935 ರಲ್ಲಿ ಗಾಂಧೀಜಿಯವರ ಜೊತೆ ಅವರ ಚರಕದ ಪರಿಕಲ್ಪನೆ, ಭಾರತದ ಬಡತನ ಹಸಿವು ಮತ್ತು ಅಹಿಂಸೆ ಕುರಿತು ನಡೆಸಿದ ದೀರ್ಘವಾದ ಸಂದರ್ಶನ  ದೆಹಲಿಯ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದು  ಗಾಂಧೀಜಿಯವರನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇದಷ್ಟು ಮಾತ್ರವಲ್ಲದೆ ಅವರು ಗಾಂಧೀಜಿ ಮತ್ತು ಅವರ ಚಿಂತನೆಗಳ ಕುರಿತು  ಬರೆದ ಮೂರು ಕೃತಿಗಳು ನಮಗೆ ಗಾಂಧೀಜಿಯವರ ವ್ಯಕ್ತಿತ್ವದ ಎಲ್ಲಾ ಮಗ್ಗುಲುಗಳನ್ನು ಪರಿಚಯಿಸುತ್ತವೆ. 1946-47 ರ ಅವಧಿಯಲ್ಲಿ ಗಾಂಧೀಜಿಯವರೆಗೆ ಆಪ್ತ ಕಾರ್ಯದರ್ಶಿಯಾಗಿ ಹಾಗೂ ಪೂರ್ವ ಬಂಗಾಳದ ಹಳ್ಳಿಗಳು ಕೋಮುಜ್ವಾಲೆಯಲ್ಲಿ ಬೇಯುತ್ತಿದ್ದಾಗ  ಅವರಿಗೆ ನೌಕಾಲಿಯಲ್ಲಿ ಭಾಷಾಂತಕಾರರಾಗಿ ಕೆಲಸ ಮಾಡಿದ ಬೋಸ್ ಅವರು ಗಾಂಧೀಜಿಯವರು ತಮ್ಮ ಮೊಮ್ಮಕ್ಕಳ  ವಯಸ್ಸಿನ ಹೆಣ್ಣು ಮಕ್ಕಳ ಜೊತೆ ಮಲಗಿ ಬ್ರಹ್ಮ ಚರ್ಯ ವನ್ನು ಪರೀಕ್ಷಿಕೊಂಡಾಗ ಅದನ್ನು ಪ್ರತಿಭಟಿಸಿ  ಹೊರಬಂದರು. ಅಷ್ಟು ಮಾತ್ರವಲ್ಲದೆ ತಮ್ಮ ಗುರುವನ್ನು ಪ್ರಶ್ನೆಗಳ ಮೂಲಕ ನೇಣುಗಂಬಕ್ಕೆ ಏರಿಸಿದರು. ಗುರುಶಿಷ್ಯರ ಪತ್ರ ಸಂವಾದವನ್ನು ನಾವು ನಿರ್ಮಲ್ ಕುಮಾರು 1953 ರಲ್ಲಿ ಬರೆದು ಪ್ರಕಟಿಸಿದ :” ಮೈ ಡೇಸ್ ವಿತ್ ಗಾಂಧಿ”  ಎಂಬ ಕೃತಿಯನ್ನುಓದಿ ತಿಳಿಯಬೇಕು. ಗಾಂಧೀಜಿ ಕುರಿತಂತೆ ಬಂದಿರುವ ಶ್ರೇಷ್ಠ ಕೃತಿಗಳಲ್ಲಿ ಇದೂ ಕೂಡ ಒಂದಾಗಿದೆ.

ಕೊನೆಯ ಮಾತು. 1947 ರಲ್ಲಿ ಗಾಂಧೀಜಿಯವರಿಂದ ದೂರವಾಗಿದ್ದ ನಿರ್ಮಲ್ ಕುಮಾರ್ ಬೋಸ್ 1948 ರ ಜನವರಿಯಲ್ಲಿ ಕೊಲ್ಕತ್ತ ವಿ.ವಿ.ಯಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು.  ಗಾಂಧಿ ಹತ್ಯೆಯಾದ ವಿಷಯ ತಿಳಿದ ಬಳಿಕ ವಿ.ವಿ.ಯಿಂದ ತಮ್ಮ  ನಿವಾಸಕ್ಕೆ ಸೈಕಲ್ ತುಳಿಯುತ್ತಾ ಈ ಸುದ್ಧಿ ಸುಳ್ಳು ಸುದ್ದಿಯಾಗಲಿ ಎಂದು ದಾರಿಯುದ್ದಕ್ಕೂ ಹಂಬಲಿಸಿದರು. ಮನೆಗೆ ಬಂದು ರೇಡಿಯೊದಲ್ಲಿ ಸುದ್ದಿ ಪ್ರಸಾರವಾಗುತ್ತಿರುವುದನ್ನು ಕೇಳಿ ಕುಸಿದು ಬಿದ್ದರು. ಆನಂತರ ಚೇತರಿಸಿಕೊಂಡ ಬೋಸರು ತಮ್ಮ ಜೀನನದುದ್ದಕ್ಕೂ ಅಂದರೆ 1972 ರ ವರೆಗೆ ಗಾಂಧಿ ಚಿಂತನೆಗಳ ವಾರಸು ದಾರರಾಗಿ ಬದುಕುತ್ತಾ ಹಲವು ಕೃತಿಗಳನ್ನು ರಚಿಸಿದರು.


ಭಾನುವಾರ, ಜುಲೈ 1, 2018

ಹರಿಲಾಲ್ ಗಾಂಧಿ ಕಥನ-ನಾಲ್ಕು : ಕುಟುಂಬವನ್ನು ತ್ಯೆಜಿಸಿದ ಹರಿಲಾಲ್



ಮಹಾತ್ಮ ಗಾಂಧಿಯವರು ಇಂಗ್ಲೆಂಡ್ನಲ್ಲಿ ಬ್ಯಾರಿಸ್ಟರ್ ಪದವಿ ಅಧ್ಯಯನ ಮಾಡುತ್ತಿದ್ದಾಗ ಡಾ. ಪ್ರೇಮ್ ಜೀವನ್ ದಾಸ್ ಎಂಬುವರು ಗಾಂಧೀಜಿಗೆ ಆತ್ಮೀಯರಾಗಿದ್ದರು. ನಂತರದ ದಿನಗಳಲ್ಲಿಯೂ ಸಹ ಅವರಿಬ್ಬರ ನಡುವೆ  ಸಂಬಂಧ ಮುದುವರಿದಿತ್ತು. ದಕ್ಷಿಣಾ ಆಫ್ರಿಕಾದಲ್ಲಿ ಗಾಂಧಿಜಿಯವರು ನಡೆಸುತ್ತಿದ್ದ ಹೋರಾಟವನ್ನು ಗಮನಿಸುತ್ತಾ ಬಂದಿದ್ದ ಡಾ. ಮಿಶ್ರಾ ಅವರು ಗಾಂಧೀಜಿಗೆ ಪತ್ರ ಬರೆದು ನಿಮ್ಮ ಒಬ್ಬ ಪುತ್ರ ಮತ್ತು ಫಿನಿಕ್ಸ್ ಆಶ್ರಮದ ಒಬ್ಬ ನಿವಾಸಿ ಇವರುಗಳಿಗೆ ಇಂಗ್ಲೆಂಡಿನಲ್ಲಿ ನಾನು ವಿದ್ಯಾಭ್ಯಾಸದ ಖರ್ಚು ಭರಿಸಲು ಸಿದ್ಧನಿದ್ದೆನೆ ಎಂದು ಪತ್ರ ಬರೆದು  ತಿಳಿಸಿದರು. ಜೊತೆಗೆ ನಿಮ್ಮ ಪುತ್ರ ಮಣಿಲಾಲ್ಗೆ ಇಂಗ್ಲೆಂಡಿನಲ್ಲಿ ಶಿಕ್ಷಣ ಪಡೆಯವಂತಹ ಅರ್ಹತೆ ಇದೆ ಎಂಬುದಾಗಿಯೂ ಸಹ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದರು.

ಆದರೆ, ಗಾಂಧೀಜಿಯವರು ತಮ್ಮ ಮಕ್ಕಳು ಇಂಗ್ಲೆಂಡಿನಲ್ಲಿ ಶಿಕ್ಷಣ ಪಡೆಯುವುದಕ್ಕೆ ವಿರೋಧ ವ್ಯಕ್ತ ಪಡಿಸಿದರು. ಇದಕ್ಕೆ ಎರಡು ಪ್ರಬಲ ಕಾರಣಗಳಿದ್ದವು. ಪಾಶ್ಚಿಮಾತ್ಯ ಶಿಕ್ಷಣ ನೀತಿಯ ಕುರಿತಂತೆ ಗಾಂಧಿಜಿಗೆ ಒಲವಿರಲಿಲ್ಲ. ಮತ್ತೊಂದು ಕಾರಣವೆಂದರೆ, ಅನ್ಯರ ನೆರವಿನಿಂದ ಶಿಕ್ಷಣ ಪಡೆದ ನಂತರ ವಿದ್ಯಾರ್ಥಿಯು ಜೀವನ ಪೂರ್ತಿ ಸಾರ್ವಜನಿಕ ಸೇವೆಗೆ ಕಂಕಣ ಬದ್ಧನಾಗಿರಬೇಕೆಂದು ಅವರು ಬಯಸಿದ್ದರು. ಕಾರಣಕ್ಕಾಗಿ ತಮ್ಮ ಸಂಬಂಧಿ ಛಗನ್ ಲಾಲ್ ನನ್ನು ಆಯ್ಕೆ ಮಾಡಿದರು. ಇಂಗ್ಲೆಂಡಿಗೆ ತೆರಳುವ ಮುನ್ನ ಭಾರತಕ್ಕೆ ಹೋಗಿ ಇಡೀ ದೇಶವನ್ನು ತಮ್ಮ ಮಿತ್ರ ಪೊಲ್ಲಾಕ್ ಜೊತೆ ಸುತ್ತಿ ಬರಬೇಕೆಂದು ಛಗ ನ್ ಲಾಲ್ ಗೆ ಆದೇಶಿಸಿದ್ದರು. ಅದರಂತೆ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ನಂತರ ಛಗನ್ಲಾಲ್ ತಮ್ಮ ನಿರ್ಧಾರವನ್ನು ಬದಲಿಸಿ, ತಾನು ಇಂಗ್ಲೆಂಡ್ ಗೆ ಉನ್ನತ ಶಿಕ್ಷಣಕ್ಕೆ ತೆರಳಲಾರೆ ಎಂದು ಗಾಂಧೀಜಿಗೆ ಪತ್ರ ಬರೆದರು. ಪತ್ರ ಗಾಂಧೀಜಿಯವರನ್ನು ತೀವ್ರವಾಗಿ ಕೆರಳಿಸಿತು. ಏಕೆಂದರೆ, ತಮ್ಮ ಪುತ್ರರಾದ ಹರಿಲಾಲ್ ಮತ್ತು ಮಣಿಲಾಲ್ ಇಬ್ಬರಿಗೂ ಅವಕಾಶವನ್ನು ತಪ್ಪಿಸಿ, ಉನ್ನತ ಶಿಕ್ಷಣದ ಅವಕಾಶವನ್ನು ಛಗನ್ ಲಾಲ್ ಗೆ ನೀಡಿದ್ದರು. ಆನಂತರ  ಗಾಂಧಿಯವರು ಛಗನ್ ಲಾಲ್ ಪತ್ರ ಬರೆದುನೀನು ನನಗೆ ಮೀರ್ ಆಲಂ ಗಿಂತ ಹೆಚ್ಚು ಬಲವಾದ ಪೆಟ್ಟು ನೀಡಿದ್ದೀಯಾಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು. ( ಭಾರತ ಮೂಲದ ಮೀರ್ ಆಲಂ ಎಂಬ ವ್ಯಕ್ತಿಯು ಒಮ್ಮೆ ದಕ್ಷಿಣ ಆಫ್ರಿಕಾದಲ್ಲಿ  ಗಾಂಧೀಜಿ ಮೇಲೆ ಹಲ್ಲೆ ಮಾಡಿತೀವ್ರತರವಾಗಿ ಗಾಯಗೊಳಿಸಿದ್ದನು)

ಎಲ್ಲಾ ಬೆಳವಣಿಗೆಗಳು ಹರಿಲಾಲ್ ಗಾಂಧಿಗೂ ಸಹ ಗೊತ್ತಿದ್ದ ಸಂಗತಿಗಳು ಎಂದು ಹೇಳುವುದಕ್ಕೆ ಯಾವುದೇ ಸಾಕ್ಷಾಧಾರಗಳಿಲ್ಲ. ಏಕೆಂದರೆ, ಛಗನ್ ಲಾಲ್ ಅವರು 1909 ರಲ್ಲಿ ದಕ್ಷಿಣ ಆಫ್ರಿಕಾವನ್ನು ತೊರೆದು ಭಾರತಕ್ಕೆ ಹಿಂತಿರುಗಿದಾಗ ಹರಿಲಾಲ್ ಜೈಲಿನಲ್ಲಿದ್ದರು. ಗಾಂಧೀಜಿಯವರು ಕಾರ್ಯನಿಮಿತ್ತ ಇಂಗ್ಲೆಂಡಿನಲ್ಲಿದ್ದರು. ಹರಿಲಾಲ್ ಗೆ ಇತರೆ ವಿದ್ಯಾಮಾನಗಳಿಗಿಂತ ಹೆಚ್ಚಾಗಿ ಸತ್ಯಾಗ್ರಹದ ಹೋರಾಟ ಮುಖ್ಯವಾಗಿತ್ತು. ಕಾರಣಕ್ಕಾಗಿ ತಮ್ಮ ಕಿರಿಯ ಸಹೋದರ ಮಣಿಲಾಲ್ ಗೆ ಕುಟುಂಬದ ಜವಾಬ್ದಾರಿಯನ್ನು ವಹಿಸಿ, ಟ್ರಾನ್ಸ್ ವಾಲ್ ನಗರಕ್ಕೆ ತೆರಳಿ ಅಲ್ಲಿನ ಕಾನೂನು ಉಲ್ಲಂಘಿಸುತ್ತಾ ಜೈಲುವಾಸ ಅನುಭವಿಸುತ್ತಿದ್ದರು. 1909 ನವಂಬರ್ ತಿಂಗಳಿನಲ್ಲಿ ಹರಿಲಾಲ್ಗಾಂಧಿಯವರು ಟ್ರಾನ್ಸ್ ವಾಲ್ ನಗರದಲ್ಲಿ ಕಾನೂನು ಉಲ್ಲಂಘಿಸಿದ ಕಾರಣ ಅಲ್ಲಿನ ಸರ್ಕಾರ ಅವರನ್ನು ಬಂಧಿಸಿ, ಆರು ತಿಂಗಳ ಕಾಲ ಶಿಕ್ಷೆ ವಿಧಿಸಿ ಸೆರೆಮನಗೆ ನೂಕಿತು. ಇಂಗ್ಲೆಂಡಿನಲ್ಲಿದ್ದ ಗಾಂಧೀಜಿ ವಿಷಯ ತಿಳಿದು ಸಂತೋಷಪಟ್ಟರು.
ಇಂಗ್ಲೆಂಡಿನಿಂದ ದಕ್ಷಿಣಾ ಆಫ್ರಿಕಾಕ್ಕೆ ಹಿತಿರುಗಿದ ನಂತರ ಗಾಂಧೀಜಿಯವರು ಫಿನಿಕ್ಸ್ ಆಶ್ರಮದ ನಿರ್ವಹಣೆಗೆ ಟ್ರಸ್ಟ್ ಒಂದನ್ನು ಸ್ಥಾಪಿಸಿ, ಅದಕ್ಕೆ ಕೆಲವು ನಿಯಾಮಾವಳಿಗಳನ್ನು ರೂಪಿಸಿದರು. ಟ್ರಸ್ಟಿನ ಪದಾಧಿಕಾರಿಗಳು ಮತ್ತು ಆಶ್ರಮವಾಸಿಗಳು ಹೇಗಿರಬೇಕು ಮತ್ತು ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದರ ಕುರಿತು ನಿಯಮಾವಳಿಗಳಲ್ಲಿ ಕೆಲವು ಮಾರ್ಗದರ್ಶಿ ಸ್ರತ್ರಗಳಿದ್ದವು. ಹರಿಲಾಲ್ ಕೂಡ ಇವುಗಳಿಗೆ ಸಂಪೂರ್ಣ ಸಹಮತ ವ್ಯಕ್ತ ಪಡಿಸಿದರು. ವೊಲ್ಕ್ ಸ್ರಸ್ಟ್ ನಗರದ ಜೈಲಿನಲ್ಲಿದ್ದ ಹರಿಲಾಲ್ ಅವರನ್ನು ಕೆಲವು ದಿನಗಳ ನಂತರ ಜೋಹಾನ್ಸ್ ಬರ್ಗ್ ಜೈಲಿಗೆ ಸ್ಥಳಾಂತರಿಸಲಾಯಿತು. ಸಂದರ್ಭದಲ್ಲಿ ಒಬ್ಬ ಕ್ರಿಮಿನಲ್ ಅಪರಾಧಿಗೆ ಕೈ ತೋಳ ತೊಡಿಸುವ ಹಾಗೆ ಅವರಿಗೆ ಕೈಗಳಿಗೆ ತೋಳವನ್ನು ಹಾಕುವುದರ ಮೂಲಕ, ಅವರ ವಸû್ರಗಳು, ಪುಸ್ತಕಗಳು ಹಾಗೂ ಇನ್ನಿತರೆ ವಸ್ತುಗಳೊಂದಿಗೆ ಜೈಲಿನ ವಾರ್ಡನ್ ರಕ್ಷಣೆಯಲ್ಲಿ ರೈಲಿನಲ್ಲಿ ಜೋಹಾನ್ಸ್ ಬರ್ಗ್ ಜೈಲಿಗೆ ಕರದೊಯ್ಯಲಾಗಿತ್ತು.
1910 ಏಪ್ರಿಲ್ 30 ರಂದು ಜೈಲಿನಿಂದ ಬಿಡುಗಡೆಯಾದ ಹರಿಲಾಲ್  ಮೇ 6 ರಂದು ಫಿನಿಕ್ಸ್ ಆಶ್ರಮಕ್ಕೆ ತೆರಳಿ ತಾಯಿ ಕಸ್ತೂರಬಾ ಮತ್ತು ಪತ್ನಿ ಹಾಗೂ ಮಗಳನ್ನು ಭೇಟಿ ಮಾಡಿ ಅವರೊಂದಿಗೆ ಕೆಲವು ದಿನಗಳ ಕಾಲ ಇದ್ದರು. ವೇಳೆಗಾಗಲೇ ಗಾಂಧೀಜಿಯವರು ಜೋಹಾನ್ಸ್ ಬರ್ಗ್ ನಗರದಿಂದ ಸುಮಾರು 36 ಕಿಲೊಮೀಟರ್ ದೂರದಲ್ಲಿ ತಮ್ಮ ಮಿತ್ರರಾದ ಹರ್ಮನ್ ಕಲ್ಲೆನ್ಬಚ್ ಎಂಬುವವರ ಒಂದು ಸಾವಿರ ನೂರು ಎಕರೆ ವಿಸ್ತೀರ್ಣದ ಭೂಮಿಯಲ್ಲಿ ಟಾಲ್ಸ್ ಟಾಯ್ ಫಾರಂ ಎಂಬ ಎರಡನೇ ಆಶ್ರಮವನ್ನು ಆರಂಭಿಸಿ, ಅಲ್ಲಿ ವಾಸವಾಗಿದ್ದರು. ( 1910 ರಲ್ಲಿ ಗಾಂಧೀಜಿಯವರ ಪರಿಕಲ್ಪನೆಗಳಾದ ಸಹಬಾಳ್ವೆ ಮತ್ತು ಶ್ರಮದಾನ ತತ್ವಗಳ ಆಧಾರದ ಮೇಲೆ ಆಶ್ರಮವನ್ನು ಸ್ಥಾಪಿಸಲಾಯಿತು. ಆದರೆ, 1913 ರಲ್ಲಿ ಇದನ್ನು ಸ್ಥಗಿತಗೊಳಿಸಿ ಆಶ್ರಮವಾಸಿಗಳನ್ನು ಫಿನಿಕ್ಸ್ ಆಶ್ರಮಕ್ಕೆ ಸ್ಥಳಾಂತರಿಸಲಾಯಿತು) ಇದೇ ಸಂದರ್ಭದಲ್ಲಿ ಹರಿಲಾಲ್ ಪತ್ನಿ ಗುಲಾಬ್ ಬೆನ್
ಎರಡನೆಯ ಬಾರಿಗೆ ಗರ್ಭವತಿಯಾದರು.  ಮಗಳು ರಾಮಿಯೊಂದಿಗೆ ಗುಲಾಬ್ ಬೆನ್ ಅವರನ್ನು ತವರು ಮನೆಗೆ ಕಳಿಸಿಕೊಡಲು ಗಾಂಧೀಜಿ ನಿರ್ಧರಿಸಿದರು. ಹರಿಲಾಲ್ ಅಪೇಕ್ಷೆಯಂತೆ ಅವರನ್ನು ಭಾರತಕ್ಕೆ ಮೂರನೆಯ ದರ್ಜೆಯ ಪ್ರಯಾಣಿಕರ ಕ್ಯಾಬಿನ್ ನಲ್ಲಿ ಕಳಿಸಿಕೊಡುವುದರ ಬದಲಾಗಿ ಎರಡನೇ ದರ್ಜೆಯ ವರ್ಗದದಲ್ಲಿ ಗಾಂಧೀಜಿಯವರು ಕಳುಹಿಸಿಕೊಟ್ಟರು. ಆದರೆ, ಪತ್ನಿ ಮತ್ತು ಪುತ್ರಿಯೊಂದಿಗೆ ಭಾರತಕ್ಕೆ ಹೋಗಿ ಬರುವ ತಮ್ಮ ಪುತ್ರನ ಆಕಾಂಕ್ಷೆಯನ್ನು ಗಾಂಧೀಜಿಯವರು ನೇರವಾಗಿ ತಿರಸ್ಕರಿಸಿದರು. ನಿನ್ನ ಪ್ರಯಾಣದ ವೆಚ್ಚವನ್ನು ಭರಿಸುವ ಶಕ್ತಿ ನನ್ನಲ್ಲಿ ಇಲ್ಲ ಎಂದು ಗಾಂಧೀಜಿಯವರು ತಮ್ಮ ಪುತ್ರ ಹರಿಲಾಲ್ ಗೆ ನೇರವಾಗಿ ತಿಳಿಸಿದರು. ಘಟನೆಯು ಪ್ರಥಮ ಬಾರಿಗೆ ತಂದೆ ಮತ್ತು ಮಗನ ನಡುವೆ ಬಾಂಧವ್ಯದಲ್ಲಿ  ಬಿರುಕು ಕಾಣಿಸಿಕೊಳ್ಳಲು ಕಾರಣವಾಯಿತು.
ಹರಿಲಾಲ್ ಪುನಃ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿ ಟ್ರಾನ್ಸ್ವಾಲ್ ನಗರದತ್ತ ಹೊರಟರು. 1910 ಜೂನ್ 10 ರಂದು ನಗರವನ್ನು ಪ್ರವೇಶ ಮಾಡಿ 23 ರಂದು ಬಂಧನಕ್ಕೆ ಒಳಗಾದರು. ಮೂರು ತಿಂಗಳ ಕಾಲ ಸೆರೆಮನೆ ವಾಸ ಅನುಭವಿಸಿ ಸೆಪ್ಟಂಬರ್ 22 ರಂದು ಬಿಡುಗಡೆಯಾದರು. ವೇಳೆಗೆ ಅವರ ಪತ್ನಿ ಗುಲಾಬ್ ಬೆನ್ ಮತ್ತು ಪುತ್ರಿ ರಾಮಿ ಭಾರತದಲ್ಲಿ ತಮ್ಮ ತವರು ಮನೆಗೆ ಸುರಕ್ಷಿತವಾಗಿ ತಲುಪಿದ್ದರು. ಇತ್ತ ದಕ್ಷಿಣಾ ಆಫ್ರಿಕಾದಲ್ಲಿ ಹರಿಲಾಲ್ ರವರು ಜೈಲಿನಿಂದ ಬಿಡುಗಡೆಯಾದ ನಂತರ ಫಿನಿಕ್ಸ್ ಹಾಗೂ ಟಾಲ್ಸ್ ಟಾಯ್ ಎರಡೂ ಆಶ್ರಮಗಳಲ್ಲಿ ಸೇವೆ ಸಲ್ಲಿಸುತ್ತಾ ಕಾಲಕಳೆಯುತ್ತಿದ್ದರು. ವೇಳೆಯಲ್ಲಿ ದಕ್ಷಿಣಾ ಆಫ್ರಿಕಾ ಸರ್ಕಾರವು ನೂತನ ಕಾನೂನನ್ನು ಜಾರಿಗೆ ತರಲು ಸಿದ್ಧತೆ ನಡೆಸಿರುವ ವಿಷಯ ತಿಳಿದ ಗಾಂಧೀಜಿಯವರು ಕುರಿತಂತೆ ಮುಂದಿನ ಹೋರಾಟದ ಸ್ವರೂಪ ಕುರಿತಂತೆ ಚರ್ಚಿಸಲು ಕೇಪ್ ಟೌನ್ ನಗರದತ್ತ ಹೊರಟರು. ಸಂದರ್ಭದಲ್ಲಿ ತಂದೆಯ ಹೊಣೆಗಾರಿಕೆಯನ್ನು ಹರಿಲಾಲ್ ತಮ್ಮ ಹೆಗಲಿಗೆ ವರ್ಗಾಯಿಸಿಕೊಂಡರು.
1911 ಏಪ್ರಿಲ್ ತಿಂಗಳಿನಲ್ಲಿ ಸ್ಥಳಿಯ ಆಸ್ಪತ್ರೆಯಿಂದ ಆಶ್ರಮಕ್ಕೆ ದೂರವಾಣಿ ಕರೆಯೊಂದು ಬಂದಿತು. ಅನಾಮಧೇಯ ಭಾರತೀಯ ನಾಗರೀಕನೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಆತನ ವಿಳಾಸ ಮತ್ತು ಗುರುತು ಪತ್ತೆಯಾಗದ ಕಾರಣ ಆಸ್ಪತ್ರೆಯ ಅಧಿಕಾರಿಗಳು ಫಿನಿಕ್ಸ್ ಆಶ್ರಮಕ್ಕೆ ಕರೆ ಮಾಡಿದ್ದರು. ಹರಿಲಾಲ್ ಆಸ್ಪತ್ರೆಗೆ ತೆರಳಿ ಅನಾಥ ಶವವನ್ನು ಪಡೆದು ಅಂತಿಮ ಸಂಸ್ಕಾರ ನೆರವೇರಿಸಿದರು.

ಸ್ಥಳಿಯಟ್ರಾನ್ಸ್ ವಾಲ್ ಲೀಡರ್ಎಂಬ ಪತ್ರಿಕೆಯ ಸಂಪಾದಕರಾಗಿದ್ದ ರೆವರೆಂಡ್ ಫಿಲಿಪ್ಸ್ ಮತ್ತು ಆಲ್ಬರ್ಟ್ ಕಾರ್ಟ್ವೈಟ್ ಎಂಬುವವರು ದಕ್ಷಿಣ ಆಫ್ರಿಕಾದಲ್ಲಿ ಭಾರತೀಯ ನಾಗರೀಕರ ಬಗ್ಗೆ ಸಹಾನುಭೂತಿಯುಳ್ಳವರಾಗಿ ಗಾಂಧೀಜಿಯವರ ಹೋರಾಟಕ್ಕೆ ಪತ್ರಿಕೆಯ ಮೂಲಕ ನೈತಿಕ ಬೆಂಬಲ ವ್ಯಕ್ತಪಡಿಸುತ್ತಿದ್ದರು. ಅವರಿಬ್ಬರೂ ಇಂಗ್ಲೆಂಡ್ ಗೆ ತೆರಳುವ ಸಂದರ್ಭದಲ್ಲಿ ಹರಿಲಾಲ್ ತಾವೇ ಸ್ವತಃ ಮುಂದಾಳತ್ವ ವಹಿಸಿ, ಅವರಿಬ್ಬಗೆ ಆಶ್ರಮದಲ್ಲಿ ಬೀಳ್ಕೊಡಿಗೆ ಸಮಾರಂಭ ಏರ್ಪಡಿಸುವುದರ ಮೂಲಕ ಗೌರವಿಸಿದರು. ಸತ್ಯಾಗ್ರಹಿಗಳು ಜೈಲಿನಿಂದ ಬಿಡುಗಡೆಯಾಗುವ ಸಂದರ್ಭದಲ್ಲಿ ಜೈಲಿನ ಮುಖ್ಯ ದ್ವಾರದಲ್ಲಿ ನಿಂತು ಅವರಿಗೆ ಹೂ ಮಾಲೆ ಹಾಕಿ ಸ್ವಾಗತಿಸುತ್ತಿದ್ದರು. ಒಟ್ಟಾರೆ ಹರಿಲಾಲ್ ಅವರ ಕಾರ್ಯಚಟುವಟಿಕೆಗಳು ಗಾಂಧೀಜಿಗೆ ಒಬ್ಬ ಸಮರ್ಥನಾದ ಪುತ್ರ ಹಾಗೂ ಹೋರಾಟದ ಉತ್ತರಾಧಿಕಾರಿ ದೊರೆತನು ಎಂಬ ಅಭಿಪ್ರಾಯ ಎಲ್ಲಡೆ ಮೂಡಿಬರಲು ಕಾರಣವಾದವು. ಇದರ ಜೊತೆಗೆ ಗಾಂಧೀಜಿಯವರ ಸಹವರ್ತಿಗಳಲ್ಲಿ ಒಬ್ಬರಾಗಿದ್ದ ಜೋಸೆಪ್ ರಾಯಪ್ಪನ್ ಎಂಬುವರು ಟ್ರಾನ್ಸ್ವಾಲ್ ನಗರದಲ್ಲಿ ನಡೆಯುತ್ತಿದ್ದ ಸತ್ಯಾಗ್ರಹದಲ್ಲಿ  ಪಾಲ್ಗೊಳ್ಳಲು ಇಚ್ಛಿಸಿದಾಗ ಗಾಂಧೀಜಿಯವರ ನೇತೃತ್ವದಲ್ಲಿ ಅವರನ್ನು ಗೌರವಿಸಿ ಕಳುಹಿಸಿಕೊಡಲಾಯಿತು. ಸಮಾರಂಭದಲ್ಲಿಯೂ ಕೂಡ ಹರಿಲಾಲ್ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ದಕ್ಷಿಣಾ ಆಫ್ರಿಕಾದಲ್ಲಿ ನಡೆಯುತ್ತಿದ್ದ ಹೋರಾಟದಲ್ಲಿ ಭಾಗವಹಿಸಿ ಎಲ್ಲರಿಗೂ ಸ್ಪೂರ್ತಿಯಾಗಿದ್ದ ಹರಿಲಾಲ್ ಒಳಗೊಳಗೆ ತನ್ನ ತಂದೆಯ ಹಲವು ನಿರ್ಧಾರಗಳ ವಿರುದ್ಧ ಅಸಹನೆಯಿಂದ ಕುದಿಯುತ್ತಿದ್ದರು. ಅವುಗಳಲ್ಲಿ ಪ್ರಮುಖವಾಗಿ  ವಿವಾಹ ಕುರಿತಂತೆ ಬಾಪು ವ್ಯಕ್ತ ಪಡಿಸಿದ ಅಭಿಪ್ರಾಯ ಹಾಗೂ ಮಕ್ಕಳ ಶಿಕ್ಷಣ ಕುರಿತಂತೆ ಗಾಂಧೀಜಿಗೆ ಇದ್ದ ಖಚಿತ ನಿಲುವುಗಳ ಕುರಿತಂತೆ ಹರಿಲಾಲ್ ಗೆ ಸಹಮತವಿರಲಿಲ್ಲ. ಹರಿಲಾಲ್ ಹಾಗೂ ಸೊಸೆ ದಕ್ಷಿಣ ಆಫ್ರಿಕಾಕ್ಕೆ ತೆರಳಿ ಫಿನಿಕ್ಸ್ ಆಶ್ರಮವಾಸಿಗಳಾಗಿದ್ದ ಸಂದರ್ಭದಲ್ಲಿಯೂ ಸಹ ಗಾಂಧೀಜಿಯವರು ಒಮ್ಮೆ ತಮ್ಮ ಪುತ್ರನ ವಿವಾಹ ಕುರಿತಂತೆ ಪ್ರಸ್ತಾಪಿಸುತ್ತಾಈಗ ಹರಿಲಾಲ್ ನಿರ್ಧಾರ ಬಗ್ಗೆ ಹೇಳಲು ನನಗೇನೂ ಉಳಿದಿಲ್ಲ, ಅದು ಸರಿಯಾದ ನಿರ್ಧಾರ ಎಂದೂ ಸಹ ನಾನು ಹೇಳಲಾರೆಎಂದು  ಆಡಿದ ಮಾತುಗಳು ಹರಿಲಾಲ್ ಅವರನ್ನು ಘಾಸಿಗೊಳಿಸಿದವು.  ನಂತರ ಮಕ್ಕಳ ಶಿಕ್ಷಣ ಕುರಿತಂತೆ ಅವರು ತೆಗೆದುಕೊಂಡ ಕಠಿಣ ನಿಲುವುಗಳು ಹರಿಲಾಲ್ ಗೆ ತನ್ನ ತಂದೆಯ ವಿರುದ್ಧ ಸಿಡಿದೇಳುವಂತೆ ಉದ್ದೇಪಿಸಿದವು.
(ಮುಂದುವರಿಯುವುದು)
(  ಮೇಲು ಕೋಟೆಯ ಜನಪದ ಟ್ರಸ್ಟ್ ನ  "ಜನಪದ ವಿಚಾರ" ಮಾಸಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಹರಿಲಾಲ್ ಕಥನದ ಸರಣಿ )