ಬುಧವಾರ, ಅಕ್ಟೋಬರ್ 3, 2018

ಗಾಂಧಿವಾದಿಯೊಂದಿಗೆ ಮಾತುಕತೆ : ಗಾಂಧಿ ವಿಚಾರಗಳಿಗಿಂತ ಆಚಾರಗಳ ಅನುಷ್ಠಾನ ಮುಖ್ಯ : ಪ್ರಸನ್ನ ಹೆಗ್ಗೋಡು



ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೆಗ್ಗೋಡು ಎಂಬ ಗ್ರಾಮ  ಭೌಗೂಳಿಕ ನಕ್ಷೆಯಲ್ಲಿ ಒಂದು ಪುಟ್ಟ ಹಳ್ಳಿ. ಆದರೆ, ಇಂದು ಗ್ರಾಮವು  ರಂಗಭೂಮಿ ಚಟುವಟಿಕೆ, ಸಾಹಿತ್ಯ ಮತ್ತು ಸಂಸ್ಕøತಿಗಳ ಚಟುವಟಿಕೆಗಳು ಮತ್ತು ಗಾಂಧಿಜಿಯ ಪರಿಕಲ್ಪನೆಗಳ ಅನುಷ್ಠಾನಗಳ  ಕೇಂದ್ರ ಬಿಂದುವಾಗಿ ಇಡೀ ಭಾರತವನ್ನು ಸೂಜಿಗಲ್ಲಿನಂತೆ  ಆಕರ್ಷಿಸುತ್ತಿದೆ. ಇದಕ್ಕೆ ಕಾರಣ ರಾದವರು ನಾಡಿನ ಸುಪ್ರಸಿದ್ಧ ಸಾಂಸ್ಕøತಿಕ ಚಿಂತಕರಾಗಿದ್ದ ಕೆ.ವಿ. ಸುಬ್ಬಣ್ಣನವರು. ಅವರು ಹುಟ್ಟು ಹಾಕಿದ ಭವ್ಯ ಪರಂಪರೆಯನ್ನು ರಂಗಭೂಮಿ, ಸಾಹಿತ್ಯ ಮತ್ತು ಸಾಂಸ್ಕøತಿಕ ಚಟುವಟಿಕೆಗಳ ಮೂಲಕ ಅವರ ಪುತ್ರ  ಕೆ.ವಿ. ಅಕ್ಷರ ಮುಂದುವರಿಸಿದ್ದಾರೆ. ಅದೇ ರೀತಿ ಹೆಗ್ಗೋಡಿನ ಈಚೆಗಿನ ಭೀಮನಕೋಣೆ ಗ್ರಾಮದಲ್ಲಿ ಚರಕ ಸಂಸ್ಥೆಯನ್ನು ಮತ್ತು ಆಚೆಗಿನ ಊರಾದ ಹೊನ್ನೆಸರದಲ್ಲಿ ಶ್ರಮಜೀವಿಗಳ ಆಶ್ರಮವನ್ನು ಸ್ಥಾಪಿಸುವುದರ ಮೂಲಕ ಸುಪ್ರಸಿದ್ಧ ರಂಗಕರ್ಮಿ ಪ್ರಸನ್ನ ರವರು ಗಾಂಧಿಯವರ ಸಿದ್ಧಾಂತಗಳನ್ನು ಪ್ರಯೋಗದ ಮೂಲಕ ಆಚರಣೆಗೆ ತರುವುದರ ಮೂಲಕ ಮಹಾತ್ಮನ ಚಿಂತನೆಗಳನ್ನು ಜೀವಂತವಾಗಿರಿಸಿದ್ದಾರೆ.
ತಮ್ಮ ವೈಶಿಷ್ಟಪೂರ್ಣ ಚಿಂತನೆಗಳ ಮೂಲಕ ನಾಡಿನ ಗಮನ ಸೆಳೆದಿದ್ದ ಕೆ.ವಿ.ಸುಬ್ಬಣ್ಣನವರು "ಹಳ್ಳಿಯೆಂಬುದು ಮೂಲಭೂತವಾಗಿ ಒಂದು ವಿಶ್ವ" ಎಂಬುದನ್ನು ತಮ್ಮ ಕ್ರಿಯೆಗಳ ಮೂಲಕ ಮಾಡಿ ತೋರಿಸಿಕೊಟ್ಟವರು. ಮುಂಬೈ ಮೂಲದ ಖ್ಯಾತ ರಂಗಕರ್ಮಿ ಅತುಲ್ ತಿವಾರಿಯವರು ಸುಬ್ಬಣ್ಣನವರ  ಹೆಗ್ಗೋಡು ಗ್ರಾಮವನ್ನು ಹೀಗೆ ಬಣ್ಣಿಸಿದ್ದಾರೆ. " ನಾವು ಒಂದಷ್ಟು ಗೆಳೆಯರು ಪ್ರಥಮ ಬಾರಿಗೆ ಹೆಗ್ಗೋಡಿಗೆ ಹೊರಟಾಗ ಮುಂಬೈನಿಂದ ಬೆಂಗಳೂರಿಗೆ ವಿಮಾನ ಪ್ರಯಾಣ ಮಾಡಿದೆವು. ನಂತರ ಬೆಂಗಳೂರಿನಿಂದ ಶಿವಮೊಗ್ಗಕಗಕೆ ರೈಲಿನಲ್ಲಿ ಸಂಚರಿಸಿ, ಅಲ್ಲಿಂದ ಸಾಗರಕ್ಕೆ ಬಸ್ ನಲ್ಲಿ ಪ್ರಯಾಣಿಸಿದೆವು. ಸಾಗರದಿಂದ ಹೆಗ್ಗೋಡಿಗೆ ಎತ್ತಿನ ಬಂಡಿಯಲ್ಲಿ ಪ್ರಯಾಣ ಮಾಡಿ ಊರು ತಲುಪಿದಾಗ  " ಗ್ಲೋಬಲ್ ವಿಲೇಜ್" ಎಂಬ ಪರಿಕಲ್ಪನೆಯನ್ನು ಸುಬ್ಬಣ್ಣನವರು ಅಕ್ಷರಶಃ ಆಚರಣೆಗೆ ತಂದಿದ್ದಾರೆ ಎನಿಸಿತು" ತಿವಾರಿಯವರ   ಮಾತು ರೂಪಕದ ಭಾಷೆಯಂತೆ ಕಂಡು ಬಂದರೂ ಸಹ, ಕೆ.ವಿ.ಸುಬ್ಬಣ್ಣ ಮತ್ತು ಪ್ರಸನ್ನ ರಂತಹ ರಂಗಭೂಮಿಯ ಚಿಂತಕರಿಂದಾಗಿ ಗಾಂಧೀಜಿಯವರು ಕನಿಸಿದ್ದ " ಗ್ರಾಮಭಾರತ" ಹೆಗ್ಗೋಡು ಗ್ರಾಮದಲ್ಲಿ ಸಾಕ್ಷತ್ಕಾರಗೊಂಡಿದೆ ಎನ್ನಬಹುದು.
ಕಳೆದ ಎರಡೂವರೆ ದಶಕಗಳಿಂದ ಪ್ರಸನ್ನ ಹೆಗ್ಗೊಡು ಎಂದು ಚಿರಪರಿಚಿತರಾಗಿರುವ ರಂಗಕರ್ಮಿ ಪ್ರಸನ್ನರವರು ದೇಶಕಂಡ ಅತ್ಯುತ್ತಮ ರಂಗಕರ್ಮಿಗಳಲ್ಲಿ ಒಬ್ಬರು. ಲೇಖಕರಾಗಿ, ನಾಟಕಕಾರರಾಗಿ ಎಡಪಂಥಿಯ ಚಿಂತನೆಗಳೊಂದಿಗೆ ಗುರುತಿಸಿಕೊಂಡು ಸಮುದಾಯ ತಂಡದ ಮೂಲಕ ನೂರಾರು ನಾಟಕಗಳನ್ನು ನಾಡಿಗೆ ನೀಡಿದ್ದಾರೆ.  ತಮ್ಮ ರಂಗಚಟುವಟಿಕೆಯ ನಡುವೆ  ಇಪ್ಪತ್ತೈದು ವರ್ಷಗಳ ಹಿಂದೆ ಹೆಗ್ಗೋಡಿನ ಬಳಿ ಚರಕ ಸಂಸ್ಥೆಯನ್ನು ಆರಂಭಿಸಿ ಕೈ ಮಗ್ಗದ ಉತ್ಪನ್ನಗಳಿಗೆ ಚಾಲನೆ ನೀಡುವುದರ ಮೂಲಕ  ಮಹಿಳಾಸಬಕಲೀಕರಣ, ದೇಶಿವಾದ ಹಾಗೂ ಗ್ರಾಮಾಭಿವೃದ್ಧಿ ಮತ್ತು ಗ್ರಾಮೋದ್ಯೋಗ ಚಟುವಟಿಕೆಗಳಿಗೆ ಒತ್ತು ನೀಡುವುದರೊಂದಿಗೆ ಗಾಂದಿಯವರü ಚಿಂತನೆಗಳಿಗೆ ಮರುಜೀವ ನೀಡಿದ್ದಾರೆ.
ಮಾತು ಮತ್ತು ಕೃತಿಯ ನಡುವೆ ಕಂದಕವಿರಬಾರದೆಂದು ಬಲವಾಗಿ ನಂಬಿರುವ ಪ್ರಸನ್ನರವರು ಸರಳವಾದ ಬದುಕಿಗೆ ತಮ್ಮನ್ನು ಒಗ್ಗಿಸಿಕೊಂಡು ಅಪ್ಪಟ ಗಾಂಧೀಜಿಯ ವಾರಸುದಾರರಂತೆ ಸರಳವಾದ ಮಾರ್ಗದಲ್ಲಿ ಬದುಕುತ್ತಿರುವವರಲ್ಲಿ ಮುಖ್ಯರಾದವರು. ಗಾಂಧಿ ಚಿಂತನೆಗಳೊಂದಿಗೆ ನಿರಂತರ ಅನುಸಂಧಾನ ಮಾಡುತ್ತಿರುವ ಪ್ರಸನ್ನರವರು  ತಮ್ಮ ಪ್ರಯೋಗ ಹಾಗೂ ತಾವು ನಡೆದು ಬಂದ ಹಾದಿಯ ಹೆಜ್ಜೆಯ ಗುರುತುಗಳನ್ನು ಇಲ್ಲಿ  ಮಾತುಗಳ ಮೂಲಕ ಹಂಚಿಕೊಂಡಿದ್ದಾರೆ.

ಪ್ರಶ್ನೆ- ನೀವು ಎಡಪಂಥೀಯ ಚಿಂತಕರಾಗಿ ಗುರುತಿಸಿಕೊಂಡಿದ್ದವರು. ತಟ್ಟನೆ ಗಾಂಧಿಮಾರ್ಗದತ್ತ ಹೊರಳಿದ್ದು ಏಕೆ? ಟರ್ನಿಂಗ್ ಪಾಯಿಂಟ್ ಎನ್ನಬಹುದಾದ ಅನಿರೀಕ್ಷಿತ ತಿರುವಿಗೆ ಪ್ರೇರಣೆಯಾದ ಅಂಶಗಳು ಯಾವುವು?
ಪ್ರಸನ್ನ- ನನ್ನ ಪಾಲಿಗೆ ಇದು ಅನಿರೀಕ್ಷಿತ ತಿರುವೇನಲ್ಲ. ನಾನು ಭಾಗಿಯಾಗಿದ್ದ ಸಮುದಾಯ ನಾಟಕ ಚಳುವಳಿಯಲ್ಲಿ ಇಂತಹ ಅಂಶಗಳು ಒಳಗೊಂಡಿದ್ದವು. ಅಲ್ಲಿ ಎಡಪಂಥೀಯ ಚಿಂತನೆಗಳೊಂದಿಗೆ ಸಮತಾವಾದ, ಸಮಾಜವಾದ ಮತ್ತು ಗಾಂಧಿವಾದದ ತಿರುಳುಗಳು ಮಿಳಿತಗೊಂಡಿದ್ದವು. ಹಾಗಾಗಿ ಗಾಂಧೀಜಿಯವರ ಚಿಂತನೆಗಳ ಕುರಿತಾದ ಒಲವು ನನಗೆ ಮೊದಲಿನಿಂದಲೂ ಇತ್ತು. ಅದೇ ರೀತಿಯಲ್ಲಿ ನನ್ನ ಎಡಪಂಥಿಯ ಚಿಂತಕ ಗೆಳೆಯರೊಂದಿಗಿನ ನನ್ನ ಕೆಲವು  ತಕರಾರುಗಳು ಸಹ ಇದ್ದವು.
ನನಗೆ ಮೂರು ವಿಷಯಗಳಲ್ಲಿ ಎಡಪಂಥಿಯ ಸಿದ್ಧಾಂತಗಳೊಂದಿಗೆ ಭಿನ್ನಾಭಿಪ್ರಾಯವಿದೆ. ಒಂದು ದೇವರು, ಎರಡನೆಯದಾಗಿ ಯಂತ್ರ ಮತ್ತು ಮೂರನೆಯದಾಗಿ ಹಿಂಸೆ. ಇವುಗಳ ಕುರಿತಾಗಿ ಅವರು ಸ್ಪಷ್ಟವಾಗಿಲ್ಲ.
ದೇವರ ಕುರಿತಂತೆ ಅವರಿಗೆ ಖಚಿತ ನಿಲುಗಳಿಲ್ಲ. ಅದೇ ರೀತಿ ಯಂತ್ರ ನಾಗರೀಕತೆ ಕುರಿತಂತೆ ಅವರ ಚಿಂತನೆಗಳಲ್ಲಿ ಗೊಂದಲವಿದೆ. ಅವರ ದೃಷ್ಟಿಕೋನ ಬಂಡವಾಳಶಾಹಿ ಜಗತ್ತು ನಶಿಸಿ, ಕಾರ್ಮಿಕರ ಕೈಗೆ ಪ್ರಭುತ್ವ ದೊರಕಬೇಕೆಂಬುದೇ ಆಗಿದೆ. ಆದರೆ, ಬದಲಾದ ಕಾಲಘಟ್ಟದಲ್ಲಿ ಯಂತ್ರನಾಗರೀಕತೆ ದುಡಿಯುವ ಕೈಗಳಿಂದ ಅನ್ನದ ಬಟ್ಟಲನ್ನು ಕಸಿದುಕೊಳ್ಳುತ್ತಿದೆ ಎಂಬುದನ್ನು ಅವರು ಗಮನಿಸಿಲ್ಲ. ಇವುಗಳ ಜೊತೆಗೆ ದೇಶ ಅತಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವ ಹಿಂಸೆಯ ಕುರಿತಾಗಿ ದೇಶದ ಯಾವುದೇ ಎಡರಂಗದ ಸಂಘಟನೆಗಳಿಂದ ಸ್ಪಷ್ಟೀಕರಣ ಬಹಿರಂಗಗೊಂಡಿಲ್ಲ. ನಕ್ಸಲರು ನಡೆಸುತ್ತಿರುವ ಹಿಂಸಾತ್ಮಕ ಚಟುವಟಿಕೆಗಳ ಕುರಿತು ಮೌನ ವಹಿಸಿರುವುದು ನನ್ನ ತಕರಾರಿಗೆ ಮೂಲಕಾರಣವಾಗಿತ್ತು. ಇವಿಷ್ಟನ್ನು ಹೊರತುಪಡಿಸಿದರೆ, ನಾನು ಸಂಪೂರ್ಣವಾಗಿ ಬದಲಾಗಿಲ್ಲ. ಎಲ್ಲಾ ಪ್ರಗತಿಪರ ಸಂಘನೆUಳೊಂದಿಗೆ ನನ್ನ ಬಾಂಧವ್ಯ ಇಂದಿಗೂ ಮುಂದುವರಿದಿದೆ.
ಪ್ರಶ್ನೆ- ನಿಮ್ಮ ಮೇಲೆ ಪ್ರಭಾವಿಸಿದ ಗಾಂಧೀಜಿಯವರ ಚಿಂತನೆಗಳು ಯಾವುವು?
ಪ್ರಸನ್ನ- ಕ್ರೈಸ್ತ ಧರ್ಮದಲ್ಲಿ ನೋವಾ ಎಂಬ ಸಂತನೊಬ್ಬನ ಕಥೆಯೊಂದಿದೆ. ಒಮ್ಮೆ ಜಗತ್ತಿನಲ್ಲಿ ಪ್ರಳಯವಾಗಲು ಆರಂಭಿಸಿತು. ನೋವಾ ದೇವರನ್ನು ಪ್ರಾರ್ಥಿಸತೊಡಗಿದ. ದೇವರು ಪ್ರತ್ಯಕ್ಷನಾಗಿ ಪ್ರಳಯ ಮತ್ತು ಪ್ರವಾಹದಿಂದ ಪಾರಾಗಲು ಅವನಿಗೆÉಂದಿಗೂ ಮುಳಗದ ದೋಣಿಯೊಂದನ್ನು ವರವಾಗಿ ನೀಡಿದನಂತೆ. ನೋವಾ ತಾನೊಬ್ಬನೇ ದೋಣಿಯಲ್ಲಿ ಕುಳಿತು ಪ್ರಯಾಣಿಸಿದೆ, ತನ್ನ ಸುತ್ತ ಮುತ್ತ ಇದ್ದ ಸಕಲೆಂಟು ಜೀವರಾಶಿಗಳನ್ನು ದೋಣಿಯಲ್ಲಿ ಹಾಕಿಕೊಂಡು ಪ್ರಳಯದಿಂದ ಪಾರಾದನು ಎಂಬ ಕಥೆ ನನಗೆ ಯಾವಾಗಲೂ ಮಹಾತ್ಮರನ್ನು ನೆನಪಿಸುತ್ತದೆ. ಗಾಂಧಿ ತಾವು ಬದುಕಿದ್ದ ಕಾಲಘಟ್ಟದಲ್ಲಿ ತಮ್ಮೊಬ್ಬರ ಬಗ್ಗೆ ಅಥವಾ ತಮ್ಮ ಕುಟುಂಬದ ಕುರಿತಾಗಿ ಚಿಂತಿಸಲಿಲ್ಲ. ತಮ್ಮ ಕಣ್ಣೆದುರುಗಿನ ಎಲ್ಲಾ ಸಂಕಟ, ನೋವುಗಳನ್ನು ತನ್ನ ನೋವು ಎಂದು ಪರಿಭಾವಿಸಿದರು. ಅದೇ ರೀತಿ ಅಸಮಾನತೆಯನ್ನು ತನಗಾಗುತ್ತಿರುವ ಅಪಮಾನವೆಂದು ಪರಿಗಣಿಸಿ ಹೋರಾಡಿದರು. ಇದು ನನಗೆ ಬಹಳವಾಗಿ ಕಾಡಿದ ಮತ್ತು ಇಂದಿಗೂ ಕಾಡುತ್ತಿರುವ ಮಹಾತ್ಮನ ಗುಣ.
ಪ್ರಶ್ನೆ- ಗಾಂಧೀಜಿಯವರ ಯಂತ್ರನಾಗರೀಕತೆಯ ವಿರೋಧವನ್ನು ತಪ್ಪಾಗಿ ಗ್ರಹಿಸಿದವರು ಹೆಚ್ಚು ಮಂದಿ ಇದ್ದಾರೆ. ನೀವು " ಯಂತ್ರಗಳನ್ನು ಕಳಚೋಣ  ಬನ್ನಿ" ಎಂಬ ಕೃತಿ ರಚಿಸಿದಾಗ ಅದೇ ವಿರೋಧಾಭಾಸಗಳನ್ನು ಎದುರಿಸಬೇಕಾಯಿತು. ಸಿಂಗರ್ ತನ್ನ ಮಡದಿ ಬಟ್ಟೆಗೆ ಹೊಲಿಗೆ ಹಾಕಲು ಕಷ್ಟಪಡುವುದನ್ನು ನೋಡಲಾರದೆ ಹೊಲಿಗೆ ಯಂತ್ರವನ್ನು ಅವಿಷ್ಕರಿಸಿದ. ಇದನ್ನು ಸ್ವತಃ ಗಾಂಧಿಯವರು ಪ್ರಸ್ತಾಪಿಸಿ ಸಿಂಗರ್ನನ್ನು ಕೊಂಡಾಡಿದ್ದಾರೆ. ಹಾಗಾಗಿ ಗಾಂಧೀಜಿಯವರ ಯಂತ್ರಗಳ ಕುರಿತಾದ ಚಿಂತನೆಗಳನ್ನು ಕಾಲಘಟ್ಟದಲ್ಲಿ ಸಮಾಜಕ್ಕೆ ಮನದಟ್ಟು ಮಾಡಿಕೊಡುವ ಬಗೆ  ಹೇಗೆ?
ಪ್ರಸನ್ನ- ನಾವು ಯಂತ್ರಗಳ ತಾತ್ವಿಕತೆ ಮತ್ತು ಅವುಗಳ ಉಪಯೋಗದ ಸಾಧ್ಯತೆಗಳನ್ನು ಸರಿಯಾದ ನೆಲೆಯಲ್ಲಿ ಗ್ರಹಿಸುವುದರ ಮೂಲಕ ಅರ್ಥಮಾಡಿಕೊಳ್ಳಬೇಕು.  ತಾತ್ವಿಕ ದೃಷ್ಟಿಯಿಂದ ನೋಡಿದಾಗ ಯಂತ್ರಗಳಿಗೆ ಜಾತಿ,ಧರ್ಮ, ಮೇಲು, ಕೀಳು ಎಂಬ ಹಂಗಿಲ್ಲ ಅಥವಾ ಅರಿವಿಲ್ಲ. ವಿಷಯದಲ್ಲಿ ಅವುಗಳು ಮುಕ್ತವಾಗಿವೆ. ಆದರೆ, ಮನುಷ್ಯನ ಲಾಭಕೋರತನದಿಂದಾಗಿ ಅವುಗಳು ದುರುಪಯೋಗವಾಗುತ್ತಿವೆ. ಕಮ್ಯೂನಿಷ್ಟರಿಗೂ ಸಹ ವಿಷಯದಲ್ಲಿ ತಪ್ಪು ಗ್ರಹಿಕೆಗಳಿವೆ. ಬಂಡವಾಳಶಾಹಿಗಳ ಕಪಿಮುಷ್ಟಿಯಿಂದ ಯಂತ್ರಗಳನ್ನು ಬಿಡಿಸಿ ಅವುಗಳನ್ನು ಕಾರ್ಮಿಕರ ಕೈಗೆ ಒಪ್ಪಿಸಬೇಕೆಂದು ಅವರು ಬಯಸುತ್ತಾರೆ. ಆದರೆ, ಇದೇ ಯಂತ್ರಗಳು ದುಡಿಯುವ ಕೈಗಳಿಂದ ಕೆಲಸವನ್ನು ಕಿತ್ತುಕೊಳ್ಳುತ್ತವೆ ಎಂಬುವುದನ್ನು ಅವರು ಯೋಚಿಸುವುದಿಲ್ಲ. ಬಸವಣ್ಣನವರು ಕಾಯಕಕ್ಕೆ ಮಹತ್ವ ನೀಡಿದ ಹಿನ್ನಲೆ ಅಥವಾ ಗಾಂಧೀಜಿಯವರ ಗ್ರಾಮಸ್ವರಾಜ್ಯ ಕಲ್ಪನೆಯ ಹಿನ್ನಲೆಯನ್ನು ನಾವು ಸ್ಪಷ್ಟವಾಗಿ ಗ್ರಹಿಸಬೇಕು.
ಮನುಷ್ಯನ ಅಗತ್ಯತೆಗೆ ಎಂತಹ ಯಂತ್ರಗಳು ಬೇಕು ಎಂಬುದನ್ನುನಾವು ಅರಿತುಕೊಳ್ಳಬೇಕು. ಇಂದು ಯಾವುದೇ ಆಸ್ಪತ್ರೆಗೆ ಹೋಗಿ ನೋಡಿ ಅತ್ಯಾಧುನಿಕ ಯಂತ್ರಗಳು ಕಾಣುತ್ತವೆ. ನೋವಿಲ್ಲದೆ ಶಸ್ತ್ರಚಿಕಿತ್ಸೆ ಮಾಡುವುದರಿಂದ ಹಿಡಿದು ನಮ್ಮ ಅಂಗಾಂಗಗಳನ್ನು ಪರೀಕ್ಷಿಸಿ ಫಲಿತಾಂಶ ನೀಡುವ ಯಂತ್ರಗಳು, ರಕ್ತವನ್ನು ಹೀರಿ ಬೇರ್ಪಡಿಸುವ ಯಂತ್ರಗಳು ಹೀಗೆ ತರಾವರಿ ಯಂತ್ರಗಳು ಕಾಣಸಿಗುತ್ತವೆ. ಆದರೆ, ಇದರ ಅಂತಿಮ ಫಲಿತಾಶ ಏನು ಎಂದರೆ, ಇವುಗಳು ಮನುಷ್ಯನ ಸಾವನ್ನು ಮುಂದೂಡಬಲ್ಲ ಯಂತ್ರಗಳೇ ಹೊರತು ಅವನ ಆರೋಗ್ಯವನ್ನು ಕಾಪಾಡುವ ಅಥವಾ ಸದಾ ಸುಸ್ಥಿಯಲ್ಲಿಡುವ ಯಂತ್ರಗಳಲ್ಲ. ಮನುಷ್ಯನ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವುದು ದೈಹಿಕ ಶ್ರಮ ಅಂದರೆ, ಕಾಯಕವೇ ಹೊರತು ಯಂತ್ರಗಳಲ್ಲ. ಹಿತಮಿತವಾದ ಆಹಾರ ಸೇವನೆಯಿಂದ ಹಿಡಿದು ಎಲ್ಲಾ ವಿಷಯಗಳಲ್ಲಿ ಮಿತವಾದ ಹಾಗೂ ಸರಳವಾದ ಬದುಕು ಮಾತ್ರ ಮನುಷ್ಯನನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸುಸ್ಥಿಯಲ್ಲಿ ಇಡಬಲ್ಲವು.
ಉದಾಹರಣೆಗೆ ಹೇಳುವುದಾರೆ, ನಾವೀಗ ಕುಳಿತಿರುವ ಶ್ರಮಜೀವಿ ಆಶ್ರಮದಿಂದ ಹೆಗ್ಗೋಡಿಗೆ ಕೇವಲ ಒಂದು ಕಿಲೊಮೀಟರ್ ಅಂತರವಿದೆ. ಸಾಗರಕ್ಕೆ  ಬಸ್ ಹಿಡಿಯಲು ನಾವು ಇಲ್ಲಿಂದ ಹೆಗ್ಗೋಡಿಗೆ ಹೋಗಲು ದ್ವಿಚಕ್ರ ವಾಹನ ಅಥವಾ ಕಾರು ಬೇಕೆ? ಕಾಲ್ನಡಿಗೆಯಲ್ಲಿ ಕೇವಲ ಐದಾರು ನಿಮಿಷದ  ದೂರದ ಪ್ರಯಾಣಕ್ಕೆ ನಾವು ಯಂತ್ರಗಳ ಮೊರೆ ಹೋಗುತ್ತೇವೆ. ಗಾಂಧೀಜಿಯವರಿಗೆ ಇಂತಹ ವಿಷಯಗಳಲ್ಲಿ ವಿರೋಧವಿತ್ತು. ಅವರ ದೃಷ್ಟಿಯಲ್ಲಿ ಚರಕ, ರಾಟೆ, ಕುಡುಗೋಲು, ನೇಗಿಲು, ಕೈ ಮಗ್ಗ, ಕಂಬಾರಿಕೆಯ ಚಕ್ರ ಇವೆಲ್ಲವೂ ಮನುಷ್ಯನ ಬಹುಪಯೋಗಿ ಯಂತ್ರಗಳಾಗಿದ್ದವು. ಬೃಹತ್ ಯಂತ್ರನಾಗರೀಕತೆ ಮನುಷ್ಯನಿಗಷ್ಟೇ ಅಲ್ಲದೆ, ನಿಸರ್ಗಕ್ಕೆ ಮತ್ತು ಜೀವಸಂಕುಲಕ್ಕೆ ಅಪಾಯಕಾರಿಯಾದುದು ಎಂಬುದು ಅವರ ನಿಲುವಾಗಿತ್ತು.
 

ಪ್ರಶ್ನೆ- ಗಾಂಧೀಜಿಯವರು ಪ್ರತಿಪಾದಿಸಿದ ಸಹಕಾರಿ ತತ್ವ ಮನುಷ್ಯನ ಒಳಿತು ಮತ್ತು ಅಭಿವೃದ್ಧಿಗೆ ಮಾತ್ರವಲ್ಲದೆ, ಸಾಮಾಜಿಕ ಅಭಿವೃದ್ಧಿ ಹಾಗೂ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಮೂಲಾಧಾರ ಎಂಬಂತಿತ್ತು. ಆದರೆ, ಈಗಿನ ಸಹಕಾರ ಸಂಘಗಳು ರಾಜಕೀಯ ಪುಡಾರಿಗಳನ್ನು ಹುಟ್ಟುಹಾಕುವ ಸಂಸ್ಥೆಗಳಾಗಿವೆ.   ಕುರಿತು ನಿಮ್ಮ ಅಭಿಪ್ರಾಯ ಏನು?
ಪ್ರಸನ್ನ- ಸಹಕಾರ ತತ್ವ ಹೊಸದೇನಲ್ಲ. ಅದು ಗಾಂಧೀಜಿಯವರಿಗಿಂತ ಮೊದಲು ಹಲವು ರೂಪಗಳಲ್ಲಿ  ಯುರೋಪ್ ರಾಷ್ಟ್ರಗಳಲ್ಲಿ ಜಾರಿಯಲ್ಲಿತ್ತು. ಸಮತಾವಾದ, ಸಮಾಜವಾದ ಚಿಂತನೆಯ ಬೇರುಗಳು ಇದರಲ್ಲಿ ಅಡಕವಾಗಿವೆ. ನಿಮ್ಮ ಮಾತು ನಿಜ; ಸರ್ಕಾರದ ಮಧ್ಯಪ್ರವೇಶದಿಂದಾಗಿ ಸಹಕಾರಿ ತತ್ವದ ಮೂಲ ಆಶಯಗಳು ಮಣ್ಣು ಪಾಲಾಗಿವೆ. 1947 ನಂತರದ ಭಾರತದಲ್ಲಿ ರೂಪಿತವಾಗಿರುವ ಕಾನೂನುಗಳು ಬಹಳಷ್ಟು ಗಟ್ಟಿಯಾಗಿವೆ. ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದರೆ,ಇಂದು ನಾವು ಎದುರಿಸುತ್ತಿರುವ ಲಿಂಗ ಅಸಮಾನತೆ, ಅಸ್ಪøಶ್ಯತೆ ಅಥವಾ ಭ್ರಷ್ಟಾಚಾರ ಇಂತಹುಗಳು ಇರುತ್ತಿರಲಿಲ್ಲ. ಗಾಂಧೀಜಿಯವರ ಶಿಷ್ಯ ಹಾಗೂ ಭಾರತ ಕಂಡ ನೈಜ ಅರ್ಥಶಾಸ್ತ್ರಜ್ಞ ಜೆ.ಸಿ. ಕುಮಾರಪ್ಪನವರು ಭಾರತದ ಸಂವಿಧಾನ ಕುರಿತಂತೆ ಒಂದು ಕಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ, ನಾಗರೀಕ ಹಕ್ಕುಗಳ ಕುರಿತಾಗಿ ಒತ್ತಿ ಹೇಳಿದ ಸಂವಿಧಾನವು, ಅದೇ ರೀತಿಯಲ್ಲಿ ನಾಗರೀಕರ ಜವಬ್ದಾರಿಗಳ ಕುರಿತಾಗಿ ಒತ್ತಿ ಹೇಳಬೀಕಿತ್ತು ಎಂಬುದು ಅವರ ಅಭಿಪ್ರಾಯವಾಗಿತ್ತು
ಸರ್ಕಾರದ ಹಸ್ತಕ್ಷೇಪವಿಲ್ಲದ ಜಾಗದಲ್ಲಿ ಅನೇಕ ಸಹಕಾರಿ ಸಂಘ ಸಂಸ್ಥೆಗಳು ಇಂದಿಗೂ ಅಸ್ತಿತ್ವದಲ್ಲಿದ್ದು ಮಾದರಿಯಾಗಿವೆ. ಆದರೆ, ಅವುಗಳು ಅಲ್ಲಲ್ಲಿ ಸಣ್ಣಪ್ರಮಾಣದಲ್ಲಿ ಕಂಡು ಬರುತ್ತವೆ. ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆ ಹಾಗೂ ಮಲೆನಾಡಿನ ಪ್ರದೇಶಗಳಲ್ಲಿ ಗಾಂಧೀಜಿಯವರ ಆಶಯದಂತೆ ಸಹಕಾರದ ತತ್ವವನ್ನು ಪಾಲಿಸುತ್ತಾ ಯಶಸ್ವಿನ ಮಾರ್ಗದಲ್ಲಿ ಮುಂದುವರಿದಿವೆ.
ಪ್ರಶ್ನೆ_ ಇಂದಿನ ಇಪ್ಪತ್ತೊಂದನೆಯ ಜಾಗತೀರಣದ ಭರಾಟೆಯ ಮಾರುಕಟ್ಟೆಯ ಪ್ರಭುತ್ವದಲ್ಲಿ ಗಾಂಧೀಜಿಯವರ ವಿಚಾರಧಾರೆಗಳನ್ನು ಕಾಪಾಡಿಕೊಳ್ಳುವುದು ಹೇಗೆ? ಮತ್ತು  ಅವುಗಳನ್ನು ಯುವ ತಲೆ ಮಾರಿಗೆ ದಾಟಿಸುವ ಬಗೆ ಹೇಗೆ?
ಪ್ರಸನ್ನ- ನಿಜ ಹೇಳಬೇಕೆಂದರೆ, ಗಾಂಧಿ ವಿಚಾರಧಾರೆಯನ್ನು ಉಪನ್ಯಾಸದ ಮೂಲಕವಾಗಲಿ, ಪುಸ್ತಕದ ಮೂಲಕವಾಗಲಿ ಪ್ರಚಾರ ಮಾಡುವ ಅವಶ್ಯಕತೆ ಇಲ್ಲ. ಅವರ ಆಚಾರಗಳನ್ನು ಅಂದರೆ, ಸಿದ್ಧಾಂತಗಳನ್ನು ಆಚರಣೆಗೆ ತಂದರೆ ಸಾಕು, ಅವುಗಳು ತಂತಾನೆ ವಿಚಾರಗಳಾಗಿ ಪ್ರಸಾರಗೊಳ್ಳುತ್ತವೆ. ಗಾಂಧೀಜಿಯವರು ಮಾತನಾಡಿದ್ದಕ್ಕಿಂತ ಹೆಚ್ಚಾಗಿ ಅವರಿಗೆ ಒಪ್ಪಿಗೆಯಾದ ವಿಚಾರಗಳನ್ನು ಆಚರಣೆಗೆ ತಂದರು. ಕಾರಣಕ್ಕಾಗಿ ನಾನು ಹೇಳುವುದಿಷ್ಟೇ, ಗಾಂಧಿ ಸಾಹಿತ್ಯವನ್ನು ಪ್ರಕಟಿಸುವುದನ್ನು ನಿಲ್ಲಿಸಿದರೆ ಕಾಗದದ ಉಳಿತಾಯದ ಜೊತೆಗೆ ಮರಗಳನ್ನು ನಾವು ಉಳಿಸಬಹುದು.
ಪ್ರಶ್ನೆ- ನಾನು ಗಮನಿಸಿದ ಹಾಗೆ ಈಗಿನ ಯುವತಲೆಮಾರು ಗಾಂಧೀಜಿ ಕುರಿತಂತೆ ತುಂಬಾ ಆಸಕ್ತಿ ತಾಳಿದ್ದಾರೆ. ನಿಮ್ಮ ಅನುಭವಕ್ಕೆ ಇದು ಬಂದಿದೆಯಾ?
ಪ್ರಸನ್ನ- ಹೌದು. ನಮ್ಮಲ್ಲಿಗೆ ನೂರಾರು ಮಂದಿ ಬರುತ್ತಿದ್ದಾರೆ. ಚರಕ ಸಂಸ್ಥೆಗೆ ಹಾಗೂ ಶ್ರಮಜೀವಿಗಳ ಆಶ್ರಮಕ್ಕೆ ಭೇಟಿ ಕೊಟ್ಟು, ಇಲ್ಲಿ ನೇಕಾರಿಕೆ, ಕೈ ಮಗ್ಗ, ಸಹಜ ಕೃಷಿ, ನೈಜ ಬಣ್ಣಗಳ ತಯಾರಿಕೆ, ಗ್ರಾಮಾಭಿವೃದ್ಧಿಯ ಚಟುವಟಿಕೆಗಳು ಇವುಗಳನ್ನು ಆಸಕ್ತಿಯಿಂದ ಗಮನಿಸುತ್ತಿದ್ದಾರೆ. ಜೊತೆಗೆ ಆಶ್ರಮದಲ್ಲಿ ಎರಡು-ಮೂರು ದಿನ ಇದ್ದು ಚಟುವಟಿಕೆಗಳಲ್ಲಿ ತಾವು ಸಹ ಪಾಲ್ಗೊಳ್ಳುತ್ತಿದ್ದಾರೆ.
ಪ್ರಶ್ನೆ- ನೀವು ಆಸಕ್ತರಿಗೆ  ಕುರಿತಂತೆ ನಿರಂತರವಾಗಿ ತರಬೇತಿ ಶಿಬಿರವನ್ನು ಏಕೆ ಏರ್ಪಡಿಸಬಾರದು?
ಪ್ರಸನ್ನ- ನನಗೂ ಆಸಕ್ತಿ ಇದೆ. ಆದರೆ. ಯಾವ ಕಾರಣಕ್ಕೂ  ಅದು ವ್ಯವಹಾರದ ಕಾರ್ಯಕ್ರಮವಾಗಬಾರದು ಎಂದು ನಿರ್ಧರಿಸಿದ್ದೀನಿ. ತಾವಾಗಿಯೇ ಆಸಕ್ತಿ ವಹಿಸಿ ಬರುವ ಉತ್ಸಾಹಿಗಳಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿದ್ದೇವೆ. ಇದಕ್ಕಾಗಿ ಶ್ರಮ ಜೀವಿ ಆಶ್ರಮದಲ್ಲಿ ಮುವತ್ತು ಮಂದಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

 ಪ್ರಶ್ನೆ- ನಿಮ್ಮ ಚರಕ ಸಂಸ್ಥೆ ಕುರಿತು ಹೇಳಿ? ಅದರ ಚಟುವಟಿಕೆಯನ್ನು ರಾಜ್ಯಾದಂತ ವಿಸ್ತರಿಸಬಹುದಲ್ಲವೆ?
ಪ್ರಸನ್ನ- ಚರಕ ಸಂಸ್ಥೆಗೆ 24 ವರ್ಷ ತುಂಬಿ ಇದೀಗ 25 ವರ್ಷಕ್ಕೆ ಕಾಲಿಟ್ಟಿದೆ. ಚರಕ ¸ಂಸ್ಥೆಯು ಪ್ರತ್ಯೇಕ್ಷ ಮತ್ತು ಪರೋಕ್ಷವಾಗಿ ಏಳನೂರು ಮಂದಿಗೆ ಉದ್ಯೋಗ ನೀಡಿದೆ. ಗ್ರಾಮೋದ್ಯೋಗ ಚಟುವಟಿಕೆ ತಂತಾನೆ ಹರಡಬೇಕು.  ಚರಕ ಸಂಸ್ಥೆಯನ್ನು ಅಲ್ಲಿನ ಮಹಿಳೆಯರು ಮತ್ತು ಸಹೋದ್ಯೋಗಿಗಳು ತಮ್ಮ ಸ್ವಂತ ಜವಾಬ್ದಾರಿಯ ಮೇಲೆ ನಿರ್ವಹಿಸುತ್ತಿದ್ದಾರೆ. ಅದರ ವಿಸ್ತರಣೆಗೆ ಹೊರಟರೆ, ಅದಕ್ಕೊಬ್ಬ ಮೇನೇಜರ್, ಸೂಪರ್ ವೈಸರ್ ಹೀಗೆ ವ್ಯಕ್ತಿಗಳು ಬೇಕಾಗುತ್ತದೆ.  ರೀತಿಯಲ್ಲಿ ವಿಸ್ತರಿಸಲು ಹೊರಟರೆ ಚರಕ ಸಂಸ್ಥೆಯು ಸಮಾನತೆ ಆಧಾರ ಮೇಲೆ ಕಟ್ಟಿದ ಸಂಸ್ಥೆಯಾಗುವ ಬದಲು ಕಾರ್ಪೊರೇಟ್ ಸಂಸ್ಥೆಯಾಗುವ ಅಪಾಯವಿದೆ. ಹಾಗಾಗಿ ಅದನ್ನು ಸ್ವಯಂ ಅಭಿವೃದ್ಧಿ ಮತ್ತು ವಿಸ್ತರಿಸಿಕೊಳ್ಳುವ ಸಂಸ್ಥೆಯಾಗಬೇಕೆಂದು ಬಯಸಿದ್ದೇನೆ.
ಪ್ರಶ್ನೆ- ಈಗಿನ ವಾತಾವರಣದಲ್ಲಿ ಕೈಮಗ್ಗ ಉತ್ಪನ್ನಗಳಿಗೆ ಮತ್ತು  ನೇಕಾರಿಕೆ ವೃತ್ತಿಗೆ ಆಶಾದಾಯಕವಾದ ವಾತಾವರಣ ಇದೆಯಾ?

ಪ್ರಸನ್ನ- ಕೈ ಮಗ್ಗದ ಉತ್ಪನ್ನಗಳಿಗೆ ಒಳ್ಳೆಯ ಬೇಡಿಕೆ ಇದೆ. ಇತ್ತೀಚೆಗೆ ಎಲ್ಲರೂ ಆಸಕ್ತಿ ತೋರುತ್ತಿದ್ದಾರೆ. ಉಳಿದ ವೃತ್ತಿಗೆ ಹೋಲಿಸಿದರೆ, ನೇಕಾರಿಕೆ ವೃತ್ತಿಯಿಂದ ಹಲವರು ವಿಮುಖರಾಗುತ್ತಿರುವುದು ನಿಜ. ಆದರೆ, ಮಹಿಳೆಯರು ಹಾಗೂ ಇತರೆ ವರ್ಗದವರು ಅಂದರೆ, ದಲಿತರು ಮತ್ತು ಬ್ರಾಹ್ಮಣರು ಸಹ ಜಾತಿ ಬೇಧವಿಲ್ಲದೆ ಕೈ ಮಗ್ಗ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಏಕೆಂದರೆ, ವೃತ್ತಿ ಮನೆಯೊಳಗೆ ಕುಳಿತು ಮಾಡುವಂತಹದ್ದು. ಸಾಮಾನ್ಯವಾಗಿ ಮಹಿಳೆಯರು ಇಂತಹ ವೃತ್ತಿಗಳನ್ನು ಹೆಚ್ಚು ಇಷ್ಟಪಡುತ್ತಾರೆ. ನೇಕಾರಿಕೆ ವೃತ್ತಿ ತೊರೆದು ಹೋದವರು ಮರಳಿ ಬರುತ್ತಿದ್ದಾರೆ. ಒಂದಿಷ್ಟು ಆದಾಯ ಕಡಿಮೆ ಎನಿಸಿದರೂ ಸಹ ವೃತ್ತಿಯ ಜೊತೆಗೆ ಇತರೆ ಉಪಕಸುಬುಗಳನ್ನು ಮಾಡುವ ಅವಕಾಶ ಇರುವುದರಿಂದ  ಆಶಾದಾಯಕವಾಗಿದೆ. ಆದರೆ, ಕೇಂದ್ರ ಸರ್ಕಾರ ಜಿ.ಎಸ್.ಟಿ. ತೆರಿಗೆಯ ಮೂಲಕ ಸಣ್ಣ ಘಟಕಗಳು ಮತ್ತು ಕೈಮಗ್ಗದ ಉದ್ದಿಮೆದಾರರ ಕುತ್ತಿಗೆ ಹಿಸುಕುತ್ತಿದೆ. ಈಗಿನ ತೆರಿಗೆ ನಿಯಮದಲ್ಲಿ ಒಬ್ಬ ಸಣ್ಣ ಉದ್ದಿಮೆದಾರ ಪಕ್ಕದ ರಾಜ್ಯಕ್ಕೆ ಹೋಗಿ  ತನ್ನ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ನಿಯಮ ಬದಲಾಗಬೇಕು. ಕೈ ಮಗ್ಗದ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ ತೆರಿಗೆಯಲ್ಲಿ ಸಂಪೂರ್ಣ ರಿಯಾಯಿತಿ ನೀಡಬೇಕಿದೆ. ಇದು ಕೇವಲ  ನನ್ನೊಬ್ಬನ ಬೇಡಿಕೆ ಮಾತ್ರವಾಗಿರದೆ, ಇಡೀ ದೇಶದ  ಸಣ್ಣ ವ್ಯಾಪರಸ್ಥರು ಮತ್ತು ಕೈ ಮಗ್ಗ ಘಟಕಗಳ ಬೇಡಿಕೆಯಾಗಿದೆ.


( ಕರ್ನಾಟಕ ವಾರ್ತಾ ಮತ್ತು ಪ್ರಸಾರ ಇಲಾಖೆಯ ಗಾಂಧೀಜಿ ವಿಶೇಷ ಸಂಚಿಕೆ “ ಜನಪದ “ ಮಾಸಪತ್ರಿಕೆಗಾಗಿ ನಡೆಸಿದ ಸಂದರ್ಶನ)

ಶುಕ್ರವಾರ, ಸೆಪ್ಟೆಂಬರ್ 28, 2018

ದಾಸ್ಯದಿಂದ ಆಚೆಗೆ: ಮಹಾನ್ ಹೋರಾಟಗಾರನೊಬ್ಬನ ಕಥನ ಕೃತಿ ಕುರಿತು

¸

ಕನ್ನಡ ವಾಜ್ಮಯ ಜಗತ್ತಿನಲ್ಲಿ ಡಾ,ಕೆ.ಪುಟ್ಟಸ್ವಾಮಿಯವರ ಹೆಸರು ಎದ್ದುಕಾಣುವಂತಹ ಹೆಸರು. ಪತ್ರಕರ್ತರಾಗಿ, ಲೇಖಕರಾಗಿ ವಿಭಿನ್ನ ಹಾಗೂ ಆಸಕ್ತಿದಾಯಕದಾಯಕ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಬರೆಯುತ್ತಾ ಬಂದವರಲ್ಲಿ ಮತ್ತು ಅನುವಾದಿಸುವವರಲ್ಲಿ ಮುಖ್ಯರಾದವರು. ಸ್ವಾತಂತ್ರ್ಯ ಪೂರ್ವದದಲ್ಲಿ ಡಿ.ವಿ. ಗುಂಡಪ್ಪ ಮತ್ತು ಸಿದ್ದವನಹಳ್ಳಿ ಕೃಷ್ಣ ಶರ್ಮ ಈ ಇಬ್ಬರು ಮಹನೀಯರು ಹುಟ್ಟು ಹಾಕಿದ ಈ ಭವ್ಯ ಪರಂಪರೆಯನ್ನು  ಪಿ.ಲಂಕೇಶರು ಎತ್ತಿ ಹಿಡಿಯುವುದರ ಮೂಲಕ ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕೆ ಬೆಸುಗೆ ಹಾಕಿದರು. ಆನಂತರದ ದಿನಗಳಲ್ಲಿ ನನ್ನ ತಲೆಮಾರಿನ ನಡುವೆ ನಮಗೆ ಎನ್.ಎಸ್.ಶಂಕರ್ ಮತ್ತು ಡಾ,ಕೆ,ಪುಟ್ಟಸ್ವಾಮಿ ಗಮನಾರ್ಹ ಬರಹಗಾರರಾಗಿ, ಅನುವಾದಕರಾಗಿ ಕಾಣುತ್ತಾರೆ.
ಮೂಲತಃ ವಿಜ್ಞಾನ ಪದವೀಧರರಾದ ಪುಟ್ಟಸ್ವಾಮಿಯವರು ಪತ್ರಕರ್ತರಾಗಿ ವೃತ್ತಿಯನ್ನು ಆರಂಭಿಸಿದ ದಿನಗಳಲ್ಲಿ ತಮ್ಮ ಕ್ರೀಡಾ ವರದಿಗಳು,  ಲೇಖನಗಳು ಹಾಗೂ ಸಿನಿಮಾ ಕುರಿತ ವಿಶ್ಲೇಷಣೆಗಳ ಮೂಲಕ  ಪ್ರಭಾವ ಬೀರಿದವರು.  ಕಥೆಗಳನ್ನು ಸಹ ಬರೆಯುತ್ತಿದ್ದ ಪುಟ್ಟಸ್ವಾಮಿಯವರು 1990 ರ ದಶಕದ ಆರಂಭದ ದಿನಗಳಲ್ಲಿ ಚಾರ್ಲ್ಸ್ ಡಾರ್ವಿನ್ನನ " ಅರಿಜನ್ ಆಫ್ ಸ್ಪೈಸಿಸ್' ಕೃತಿಯನ್ನು ಜೀವ ಸಂಕುಲಗಳ ಉಗಮ ಎಂಬ ಹೆಸರಿನಲ್ಲಿ ಅನುವಾದ ಮಾಡುವುದರ ಮೂಲಕ ತಮ್ಮಲ್ಲಿದ್ದ ದೈತ್ಯ ಪ್ರತಿಭೆಯನ್ನು ಕನ್ನಡದ ಜಗತ್ತಿನೆದುರು ಅನಾವರಣ ಮಾಡಿದರು. ಇದರ ಹಿಂದೆ ಬಂದ ಹಾಗೂ ಕೃಪಾಕರ್ ಸೇನಾನಿ ಜೊತೆಗೂಡಿ ರಚಿಸಿದ  ಕೃತಿ ಜೀವ ಜಾಲ ಪುಟ್ಟಸ್ವಾಮಿಯವರನ್ನು ಕನ್ನಡದ ಅತ್ಯುತ್ತಮ ವಿಜ್ಞಾನ ಲೇಖಕರಲ್ಲಿ ಮುಖ್ಯರು ಎಂಬುದನ್ನು ಸಾಭೀತು ಪಡಿಸಿತು. ಆರ್ಕಿಡ್ ಸಸ್ಯಗಳನ್ನು ಒಳಗೊಂಡತೆ ನಿಸರ್ಗದ ಜೀವ ಜಗತ್ತಿನ ಕುರಿತು ನೂರಾರು ಲೇಖನಗಳನ್ನು ಬರೆದಿರುವ ಇವರು, ತಾವು ಬರೆಯುತ್ತಿರುವ ಕೃತಿಗಳ ಮೂಲಕ ವೈವಿಧ್ಯತೆಯನ್ನೂ ಕಾಪಾಡಿಕೊಂಡವರು.
ವರ್ತಮಾನದ ಈ ದಿನಗಳಲ್ಲಿ ಕೃತಿಗಳ ಸಂಖ್ಯೆಯನ್ನು ಬೆನ್ನಿಗಿಟ್ಟುಕೊಂಡು ಬೀಗುವ ಟೊಳ್ಳು ಲೇಖಕರ ನಡುವೆ ಡಾ,ಕೆ,ಪುಟ್ಟಸ್ವಾಮಿ ಏಕೆ ಗಮನಾರ್ಹ ಲೇಖಕರಾಗಿ ಕಾಣುತ್ತಾರೆ ಎಂದರೆ, ಅವರು ಕನ್ನಡದ ಜಗತ್ತಿಗೆ ನೀಡಿದ ಬಹುತೇಕ ಕೃತಿಗಳು ಅಮೂಲ್ಯ ಕೃತಿಗಳಾಗಿ ಉಳಿದುಕೊಂಡಿವೆ. ಜೀವಸಂಕುಲಗಳ ಉಗಮ, ಕ್ರೀಡಾ ಲೋಕ ಕುರಿತಂತೆ ಬರೆದ " ಭುವನದ ಭಾಗ್ಯ" ಕನ್ನಡ ಸಿನಿಮಾ ಜಗತ್ತಿನ ಇತಿಹಾಸ ಕುರಿತ : ಸಿನಿಮಾ ಯಾನ" ( ಈ ಕೃತಿಗೆ ರಾಷ್ಟ್ರ ಪ್ರಶಸ್ತಿ ದೊರಕಿದೆ) ಗಾಂಧೀಜಿ ಕುರಿತಂತೆ ಕನ್ನಡ ಬಂದಿರುವ ಶ್ರೇಷ್ಟ ಕೃತಿಗಳಲ್ಲಿ ಒಂದಾಗಿರುವ ಸಹಸ್ರಬುದ್ಧೆಯವರ " ಆಧುನಿಕ ವಿಜ್ಞಾನಕ್ಕೆ ಗಾಂಧಿಯ ಸವಾಲುಗಳು" ಎಂಬ ಅನುವಾದಿತ ಕೃತಿ. ಇವೆಲ್ಲವೂ ಪುಟ್ಟಸ್ವಾಮಿಯವರ ಹೆಸರನ್ನು ಕನ್ನಡದ ಸಾಂಸ್ಕೃತಿಕ ಜಗತ್ತಿನಲ್ಲಿ ಚಿರಸ್ಥಾಯಿಗೊಳಿಸಿವೆ. ಇದೀಗ ಇದೇ ಸಾಲಿನಲ್ಲಿ ನಿಲ್ಲಬಲ್ಲ "ದಾಸ್ಯದಿಂದ ಆಚೆಗೆ" ಎಂಬ ಅಮೇರಿಕಾದ ಕಪ್ಪು ಜನಾಂಗದ ಜನನಾಯಕನೊಬ್ಬನ ಆತ್ಮ ಚರಿತ್ರೆಯ ಕೃತಿಯನ್ನು ನಮ್ಮ ಮುಂದಿರಿಸಿದ್ದಾರೆ. ( ಅಭಿನವ ಪ್ರಕಾಶನದ ಪ್ರಕಟಣೆ)  ಈವರೆಗೆ ನಾವು ಕೇಳದ, ಓದದ ಬೂಕರ್ ಟಿ.ವಾಷಿಂಗ್ ಟನ್ ಎಂಬ ದಾರ್ಶನಿಕ ಮನೋಭಾದ ವ್ಯಕ್ತಿಯ ಈ ಆತ್ಮಕಥೆ ಹಲವು ಕಾರಣಗಳಿಗಾಗಿ ಮುಖ್ಯ ಕೃತಿಯಾಗಿ ನಿಲ್ಲುತ್ತದೆ.

ಅಸಮಾನತೆ, ಲಿಂಗತಾರತಮ್ಯ, ವರ್ಣತಾರತಮ್ಯ, ಜನಾಂಗೀಯ ದ್ವೇಷ ಇವುಗಳ ನಿವಾಎರಣೆಗೆ ಸಂಘರ್ಷ, ಉಗ್ರ ಹೋರಾಟಗಳು ಆಯುಧ ಎಂದು ನಂಬಿಕೊಂಡಿದ್ದ ಕಾಲಘಟ್ಟದಲ್ಲಿ ತಮ್ಮನ್ನು ತುಳಿಯುತ್ತಿದ್ದ ಬಿಳಿಯರ ಜೊತೆ ಅನುಸಂಧಾನ ನಡೆಸುತ್ತಾ, ಮಾನವೀಯ ಗುಣವುಳ್ಳ ಬಿಳಿಯರನ್ನು ಗುರುತಿಸುತ್ತಾ, ಅವರ ನೆರವು ಪಡೆದು, ಕಪ್ಪು ಜನಾಂಗಕ್ಕೆ ದೊರಕಿಸಿಕೊಡಬಹುದಾದ ಶಿಕ್ಷಣ ಮತ್ತು ಜ್ಞಾನ ಬಹು ದೊಡ್ಡ ಆಯಧ ಎಂದು ಬದುಕಿ ತೋರಿಸಿದ ಈ ಮಹಾತ್ಮನ ಕಥೆ ಕನ್ನಡ ಲೋಕಕ್ಕೆ ಬಂದಿರುವುದು ನಿಜಕ್ಕೂ ಶ್ಲಾಘನೀಯವಾದುದು.
ಇಡೀ ಮನುಕುಲವೇ ನಾಚಿ ತಲೆತಗ್ಗಿಸುವಂತಹ ಗುಲಾಮರ ವ್ಯಾಪಾರ ಹಾಗೂ ಅವರ ಶೋಷಣೆಯ ಇತಿಹಾಸವು  ಜಗತ್ತಿನ ಚರಿತ್ರೆಯ ಪುಟಗಳಲ್ಲಿ  ಕರಾಳ ಹಾಗೂ ಕಪ್ಪು ಅಧ್ಯಾಯವಾಗಿ ದಾಖಲಾಗಿದೆ. 1492 ರಲ್ಲಿ ಕೊಲಂಬಸ್ ಅಮೇರಿಕಾವನ್ನು ಕಂಡು ಹಿಡಿದ ನಂತರ, ಈ ಗುಲಾಮಗಿರಿಯ ವೃತ್ತಿ  ತನ್ನ ಪರಾಕಾಷ್ಟೆಯನ್ನು ಮುಟ್ಟಿತು. ಆಫ್ರಿಕಾದ ಮುಗ್ಧ ಹಾಗೂ ಅನಕ್ಷರಸ್ತ ಕಪ್ಪು ಜನರನ್ನು ಅಮೇರಿಕಾ ಮತ್ತು ಇಂಗ್ಲೇಂಡ್ ರಾಷ್ಟ್ರಗಳು ತಮ್ಮ ಗುಲಾಮರನ್ನಾಗಿ ಮಾಡಿಕೊಂಡು ತಮ್ಮ ತೋಟಗಳಲ್ಲಿ ಪ್ರಾಣಿಗಳಂತೆ ದುಡಿಸಿಕೊಂಡಿವು. . ಇಂತಹ ನತದೃಷ್ಟರ ನಡುವೆ  ಅಮೇರಿಕಾದ ತೋಟವೊಂದರಲ್ಲಿ ಜೀತದಾಳಾಗಿದ್ದ ನತದೃಷ್ಟ ಕಪ್ಪು ಹೆಣ್ಣು ಮಗಳೊಬ್ಬಳ ಉದರಲ್ಲಿ ಜನಿಸಿದ ಬೂಕರ್ ಟಿ.ವಾಷಿಂಗ್ ಟನ್ ಮುಂದಿನ ದಿನಗಳಲ್ಲಿ  ಕಪ್ಪುಜನರ ಘನತೆ, ಸ್ವಾಭಿಮಾನ ಹಾಗೂ ಮಾನವೀತೆಯ ಪ್ರತೀಕವಾಗಿ ಬದುಕಿ ಬಾಳುವುದರ ಮೂಲಕ  ಯಾವುದೋ ಒಂದು ಪುರಾಣ ಮಹಾಕಾವ್ಯದ ನಾಯಕನಂತೆ ಗೋಚರಿಸುತ್ತಾರೆ. ಬೂಕರ್ ವಾಷಿಂಗ್ ಟನ್  ಬದುಕಿದ್ದು 1856ರಿಂದ 1915 ರವರೆಗೆ ಮಾತ್ರ. ಆದರೆ, ತನ್ನ ಐವತ್ತೊಂಬತ್ತು ವರ್ಷಗಳ  ಅವಧಿಯಲ್ಲಿ ಉಪ್ಪಿನ ಗಣಿಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ತನ್ನ ಮಲತಂದೆಯ ಆಶ್ರಯದಲ್ಲಿ ಗಣಿ ಮಾಲಿಕನೊಬ್ಬ  ತಂದೆಗೆ ನೀಡಿದ್ದ 18 ಎಂಬ ಗುಲಾಮಗಿರಿಯ ಸಂಖ್ಯೆಯ ಮೇಲೆ ಮೋಹಗೊಂಡು, ಬಾಲ್ಯದಲ್ಲಿ ತಾನು ಪತ್ರಿಕೆ ಓದುವಷ್ಟು ವಿದ್ಯಾವಂತನಾಗಬೇಕೆಂದು ಕನಸು ಕಾಣುತ್ತಾ ಅಕ್ಷರ ಲೋಕಕ್ಕೆ ಕಾಲಿರಿಸಿದವನು.ನಂತರ 1875 ರ ವೇಳೆಗೆ  ಪದವಿ ಪಡೆದು ನಿಗ್ರೋ ಜನಾಂಹಕ್ಕೆ ಹೆಮ್ಮೆಯ ಪುತ್ರ ಎನಿಸಿದವರು.
ಆ ಕಾಲಘಟ್ಟದಲ್ಲಿ ಪದವಿ ಪಡೆದವರೆಲ್ಲಾ ಅಮೇರಿಕಾದಲ್ಲಿ ಶ್ರೇಷ್ಟ ಹಾಗೂ ಉನ್ನತ ಹುದ್ದೆ ಅಲಂಕರಿಸುತ್ತ ದಿನಗಳು. ವಾಷಿಂಗ್ಟನ್ .ಮನಸ್ಸು ಮಾಡಿದ್ದರೆ, ಬಿಳಿಯರ ಮನವೊಲಿಸಿ ಉನ್ನತ ಹುದ್ದೆಯಲ್ಲಿ ವೈಭವದ ಜೀವನ ನಡೆಸಬಹುದಿತ್ತು. ಆದರೆ, ಅವರು ಹಸಿವು, ಅಪಮಾನ ಮತ್ತು ದಾರಿದ್ರ್ಯ ಕೂಪದಿಂದ ತಾನು ಮತ್ತು ತನ್ನ ಕುಟುಂಬ ಪಾರಾದರೆ ಸಾಲದು, ಇಡೀ ಸಮುದಾಯ ಗುಲಾಮಗಿರಿಯ ದಾಸ್ಯದಿಂದ ಮತ್ತು ಅಜ್ಞಾನದಿಂದ ಆಚೆಗೆ ಬರಬೇಕೆಂದು ಕನಸು ಕಾಣುವುದರ ಮೂಲಕ ತ್ಯಾಗದ ಜೀವನಕ್ಕೆ ಬದುಕನ್ನು ಮುಡಿಪಾಗಿಟ್ಟರು.
ನಿಗ್ರೊ ಮಕ್ಕಳ ಶಿಕ್ಷಣಕ್ಕೆ ಟೆಸ್ಕಜೀ ಎಂಬಲ್ಲಿ ವಸತಿ ಶಾಲೆಯನ್ನು ಸ್ಥಾಪಿಸಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸ್ವಾವಲಂಬಿ ಬದುಕನ್ನು ಬುದುಕುವ ಮಾರ್ಗವನ್ನು ತೋರಿದರು. ನಿಗ್ರೋ ಸಮುದಾಯದ ಅಭ್ಯುದಯಕ್ಕಾಗಿ ಉದಾರ ಮನಸ್ಸಿನ ಬಿಳಿಯರ ಮನವೊಲಿಸಿ ಅವರ ಸಹಕಾರದಿಂದ ಸಾವಿರಾರು ಮಕ್ಕಳಿಗೆ ಶಿಕ್ಷಣವನ್ನು ಧಾರೆಯೆರೆದರು. ದಾಸ್ಯದಿಂದ ಬಿಡುಗಡೆಗಾಗಿ ಹಿಂಸೆಯ ಹಾದಿ ತುಳಿದಿದ್ದ ಹಲ ಕಪ್ಪು ಜನಾಂಗದ ನಾಯಕರಿಗೆ ಬೂಕರ್ ವಾಷಿಂಗ್ ಟನ್ ಅವರ ನಿಲುವುಗಳ ಬಗ್ಗೆ ಸಹಮತವಿರಲಿಲ್ಲ. ಆದರೆ, ಸಂಘರ್ಷವಿದ್ದಲ್ಲಿ ಮನುಷ್ಯ-ಮನುಷ್ಯ ನಡುವೆ ಸಂವಹನ ಮತ್ತು ಸಂಬಂಧ ಸಾಧ್ಯವಿಲ್ಲ ಎಂಬಿದ್ದ ಅವರು ತಮ್ಮ ಜನಾಂಗದ ಏಳಿಗೆಗಾಗಿ ದುಡಿಯುತ್ತಾ ಶಿಕ್ಷಣ ಸಂಸ್ಥೆಯನ್ನು ಅಭಿವೃದ್ಧಿ ಪಡಿಸಿದ ಕಥನ ಈ ಕೃತಿಯಲ್ಲಿ ರೋಚಕವಾಗಿ ಮೂಡಿ ಬಂದಿದೆ.

ಅಂದಿನ ಅಮೇರಿಕಾದ ಅಧ್ಯಕ್ಷ ರೂಸ್ ವೆಲ್ಟ್ ಅವರನ್ನು ತಮ್ಮ ಶಾಲೆಗೆ ಆಹ್ವಾನಿಸಿದ ವಾಷಿಂಗ್ ಟನ್ ಅಧ್ಯಕ್ಷರ ಶ್ವೇತಭವನಕ್ಕೆ ಅತಿಥಿಯಾಗಿ ಆಹ್ವಾನ ಪಡೆದ ಪ್ರಥಮ ಕರಿಯ ಜನಾಂಗದ ನಾಯಕ ಎಂಬ ಕೀರ್ತಿಗೆ ಪಾತ್ರರಾದರು. ಅತ್ಯುತ್ತಮ ವಾಗ್ಮಿಯಾಗಿದ್ದ ಅವರು ಮಾತಿನ ಮೂಲಕ ಎಲ್ಲರ ಮನಗೆದ್ದಿದ್ದರು. ವಾಷಿಂಗ್ ಟನ್ ಅವರ ಪ್ರಭಾವ ಅಮೇರಿಕಾದಲ್ಲಿ ಹೇಗಿತ್ತು ಎಂಬುದಕ್ಕೆ ಅವರು ತಮ್ಮ ಆತ್ಮಕಥೆಯ ಕೊನೆಯ ಪುಟದಲ್ಲಿ ದಾಖಲಿಸಿರುವ ಮಾತುಗಳಿವು.
" ಈಗ ರಿಚ್ಮಂಡ್ ನಗರಕ್ಕೆ ಅತಿಥಿಯಾಗಿ ಬಂದಿದ್ದೇನೆ.ನಗರದ ಅತಿ ದೊಡ್ಡ ಹಾಗೂ ಸುಂದರವಾದ ಅಕಾಡೆಮಿ ಆಫ್ ಮ್ಯೂಸಿಕ್ ಸಂಸ್ಥೆಯ ಸಭಾಂಗಣದಲ್ಲಿ ನನ್ನ ಎರಡು ಜನಾಂಗವಿದ್ದ  ಸಭೆಯನ್ನು ಉದ್ದೇಶಿಸಿ ಉಪನ್ಯಾಸ ಮಾಡಿದೆ. ಕರಿಯರಿಗೆ ಈ ಸಭಾಂಗಣಕ್ಕೆ ಪ್ರವೇಶ ದೊರೆತದ್ದು ಇದೇ ಮೊದಲ ಬಾರಿ. ನಾನು ಇಲ್ಲಿಗೆ ಬರುವ ಹಿಂದಿನ ದಿನ ನಗರ ಸಭೆಯ ಎಲ್ಲಾ ಸದಸ್ಯರೆಲ್ಲರೂ ಹಾಜರಿರಬೇಕೆಂದು ನಿರ್ಣಯವಾಗಿತ್ತು.  ಅದೇ ರೀತಿ ರಾಜ್ಯ ಶಾಸನ ಸಭೆ ಮತ್ತು ಸೆನೆಟ್ ಸದಸ್ಯರು ಭಾಗವಹಿಸಬೇಕೆಂದು ಠರಾವು ನೀಡಲಾಗಿತ್ತು. ನೂರಾರು ಕರಿಯರಿದ್ದ, ಅನೇಕ ಬಿಳಿಯ ಪ್ರತಿಷ್ಟಿತರಿದ್ದ ನಗರ ಸಭೆ, ಶಾಸನಸಭೆಯ ಸೆನೆಟ್ ನ ಸದಸ್ಯರು ಉಪಸ್ಥಿತರಿದ್ದ ಸಭೆಯಲ್ಲಿ ನಾನು ಭರವಸೆ ಮತ್ತು ಸಂತೋಷವನ್ನು ಬಿತ್ತುವ ಸಂದೇಶದ ಉಪನ್ಯಾಸ ನೀಡಿದೆ. ನನಗೆ ಜನ್ಮ ನೀಡಿದ ರಾಜ್ಯಕ್ಕೆ, ವಾಪಸ್ ಕರೆಸಿದ ಎರೆಡೂ ಜನಾಂಗದ ಸಜ್ಜನರಿಗೆ ನಾನು ಹೃದಯತುಂಬಿದ ವಂದನೆಗಳನ್ನು ಸಲ್ಲಿಸಿದೆ"

ವಾಷಿಂಗ್ ಟನ್ ತನ್ನ ಬಡತನ, ಅಪಮಾನಗಳನ್ನು ಮೀರಿ ಸಂಯಮದ ದೃಷ್ಟಿಕೋನದಿಂದ ಬದುಕನ್ನು ಸ್ವೀಕರಿಸಿ ಯಶಸ್ವಿಯಾದ ಒಂದು ಶತಮಾನದ ಹಿಂದಿನ ಆತ್ಮಕಥನವನ್ನು ಲೇಖಕ ಮಿತ್ರ ಪುಟ್ಟಸ್ವಾಮಿಯವರು ಅಷ್ಟೇ ಪರಿಣಾಮಕಾರಿಯಾಗಿ ಅನುವಾದಿಸಿದ್ದಾರೆ. ಈ ಕೃತಿ ಒಬ್ಬ ಕೇವಲ  ಕಪ್ಪು ಜನಾಂಗದ ನಾಯಕನೊಬ್ಬನ ಕಥೆಯಾಗಿರದೆ, ಅಮೇರಿಕಾದಲ್ಲಿ ನಡೆದ ಕಪ್ಪು ವರ್ಣಿಯರ ಹೋರಾಟದ ಕಥನವನ್ನು ಸಹ ಒಳಗೊಂಡಿದೆ. ಇಲ್ಲಿನ ಅನೇಕ ಮಹನೀಯರ ಭಾವಚಿತ್ರಗಳೊಂದಿಗೆ ಇರುವ ವಿವರಗಳು ಇಡೀ ಹೋರಾಟದ ಇತಿಹಾಸಕ್ಕೆ ಪೂರಕವಾಗಿವೆ. ಈ ಮಾಹಿತಿ ಕೃತಿಯ ಘನತೆಯನ್ನು ಹೆಚ್ಚಿಸಿದೆ. ಕನ್ನಡದ ಜಗತ್ತಿಗೆ ಇಂತಹ ಅಪರೂಪದ ಕೃತಿ ನೀಡಿದ ಲೇಖಕರು ನಿಜಕ್ಕೂ ಅಭಿನಂದನಾರ್ಹರು.

ಶುಕ್ರವಾರ, ಸೆಪ್ಟೆಂಬರ್ 21, 2018

ಮಧ್ಯಮ ಮಾರ್ಗದ ಪ್ರತಿಪಾದಕ : ಗಿರಡ್ಡಿ ಗೋವಿಂದರಾಜರ ನೆನಪುಗಳು






ಕನ್ನಡ ಸಾಂಸ್ಕøತಿಕ ಲೋಕದ ಪರಿಚಾರಕರಂತಿದ್ದ ಡಾ.ಗಿರಡ್ಡಿ ಗೋವಿಂದರಾಜರು ನಿಧನರಾಗಿ ಐದು ತಿಂಗಳಾಯಿತು. ಅವರ ನಿರ್ಗಮನದೊಂದಿಗೆ ಧಾರವಾಡ ಮತ್ತು ಕನ್ನಡದ ಸಾಹಿತ್ಯಲೋಕದಲ್ಲಿ ಸೃಷ್ಟಿಯಾದ ಶೂನ್ಯ ಬಹುಕಾಲ ನಮ್ಮನ್ನೆಲ್ಲಾ ಕಾಡುವಂತಹದ್ದು. ಸಂಶೋಧನೆಯ ಕ್ಷೇತ್ರದಲ್ಲಿ ಮಾರ್ಗದರ್ಶಕರಂತಿದ್ದ ಡಾ.ಎಂ.ಎಂ.ಕಲ್ಬುರ್ಗಿ ಮತ್ತು ವಿಮರ್ಶೆಯ ಲೋಕದಲ್ಲಿ ಮಾದರಿಯಾಗಿದ್ದ ಗಿರಡ್ಡಿ  ಇಬ್ಬರು ದಿಗ್ಗಜರ ಅಗಲಿಕೆಯ ನೋವನ್ನು ಜೀರ್ಣಿಸಿಕೊಳ್ಳುವುದು ಅವರ ಒಡನಾಡಿಗಳ ಪಾಲಿಗೆ ಸುಲಭದ ಸಂಗತಿಯಲ್ಲ.
ಧಾರವಾಡ ಮಣ್ಣಿನ ಹಾಗೂ ಇಲ್ಲಿನ ನೆಲಮೂಲ ಸಂಸ್ಸøತಿಯ  ವಾರಸುದಾರರಂತೆ ಬದುಕಿದ್ದ ಇಂತಹ  ಮಹಾನ್ ವಿದ್ವಾಂಸರ ಜೀವನ ಮತ್ತು ಸಾಧನೆಯನ್ನು ಸ್ಮರಣೆಯ ನೆಪದಲ್ಲಿ ಜೀವಂತವಾಗಿಡಲು ಅವರ ಅನೇಕ ಒಡನಾಡಿಗಳು ಮತ್ತು ಶಿಷ್ಯರು ಶ್ರಮಿಸುತ್ತಿದ್ದಾರೆ. ನಿಟ್ಟಿನಲ್ಲಿ ಗಿರಡ್ಡಿ ಗೋವಿಂದರಾಜರ ಜನ್ಮ ದಿನವಾದ ಇಂದು (22-9-2018) ಧಾರವಾಡದಲ್ಲಿಗಿರಡ್ಡಿ ಗೋವಿಂದರಾಜ ಪ್ರತಿಷ್ಟಾನಎಂಬ ಸಾಂಸ್ಕೃತಿಕ ಸಂಸ್ಥೆ ಆರಂಭಗೊಳ್ಳುತ್ತಿದೆ. ಇದರ ಜೊತೆಗೆ ಅವರ ಆಸಕ್ತಿಯ ವಿಷಯಗಳಲ್ಲಿ ಒಂದಾದಬದಲಾಗುತ್ತಿರುವ ಜಗತ್ತುಕುರಿತು ರಾಷ್ಟ್ರೀಯ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿದೆ. ಇದಲ್ಲದೆ, ಸಂಜೆ ಅವರ ಸಾಹಿತ್ಯ ಕೃತಿಗಳ ಆಧಾರಿತಆಮುಖ- ಮುಖನಾಟಕವನ್ನು  ಸಹ ಆಯೋಜಿಸಲಾಗಿದೆ.
ಅರವತ್ತು ವರ್ಷಗಳ ಸುಧೀUರ್ಘ  ಕಾಲ ಡಾ. ಗಿರಡ್ಡಿಗೋವಿಂದರಾಜು ಕನ್ನಡ ಸಾಹಿತ್ಯ ಮತ್ತು ರಂಗಭೂಮಿ ಹಾಗೂ ಜಾನಪದ ಕ್ಷೇತ್ರದಲ್ಲಿ ಒಡನಾಟವಿರಿಸಿಕೊಂಡು ಸೃಷ್ಟಿಸಿದ ಸಾಹಿತ್ಯ, ನೀಡಿದ ಉಪನ್ಯಾಸಗಳು ಮತ್ತು ಸಂಪಾದಿಸಿಕೊಟ್ಟ ಕೃತಿಗಳು ಇವೆಲ್ಲವೂ ಕನ್ನಡದ ಸಾಂಸ್ಕತಿಕ ಲೋಕವನ್ನು ಶ್ರೀಮಂತಗೊಳಿಸಿವೆ. ಗಿರಡ್ಡಿಯವರು ಕೈ ಆಡಿಸದೆ ಇರುವ ಕ್ಷೇತ್ರಗಳಿಲ್ಲ. ಕಥೆ, ಕಾವ್ಯ, ನಾಟಕ, ವಿಮರ್ಶೆ, ಪ್ರಬಂಧ, ಸಂಪಾದನೆ, ಅನುವಾದ ಹಾಗೂ ಸಾಹಿತ್ಯ ಪತ್ರಿಕೆಯ ಸಂಪಾದಕ ಹೀಗೆ ಹಲವು ಕ್ಷೇತ್ರಗಳಲ್ಲಿ ಅವರ ದೈತ್ಯ ಪ್ರತಿಭೆಯ ಹರವು ಹರಡಿದೆ. ತಾವು ಕೈ ಆಡಿಸಿದ ಪ್ರಕಾರದಲ್ಲಿ ತಮ್ಮ ವ್ಯಕ್ತಿತ್ವ ಹಾಗೂ ಪ್ರತಿಭೆಯ ಛಾಪನ್ನು ಒತ್ತುವುದರ ಮೂಲಕ ಕನ್ನಡದ ಎಲ್ಲಾ ಕ್ಷೇತ್ರಗಳಲ್ಲೂ ಗಿರಡ್ಡಿಯವರು ತಮ್ಮ ಹೆಸರನ್ನು ಅವಿಸ್ಮರಣೀಯಗೊಳಿಸಿದ್ದಾರೆ.
ತಮ್ಮ ಸಾಹಿತ್ಯ ಕೃಷಿಯ  ಆರಂಭದ ದಿನಗಳಲ್ಲಿ  ಎರಡು ಕವನ ಸಂಕಲಗಳನ್ನು ಹೊರ ತಂದಿದ್ದ ಗಿರಡ್ಡಿಯವರು ಮರ್ಲಿನ್ ಮನ್ರೊ ಕಾವ್ಯ ಸಂಕಲನದ ಮೂಲಕ ಸಾಹಿತ್ಯ ಲೋಕದ ಗಮನ ಸೆಳೆದಿದ್ದರು. ಆನಂತರದ ದಿನಗಳಲ್ಲಿ  ಅವರು ಕಥಾ ಕ್ಷೇತ್ರದತ್ತ ಹೊರಳಿ, ಬರೆದ ಹಂಗು ಮತ್ತು ಮಣ್ಣು ಎಂಬ ನೀಳ್ಗತೆ ಇವುಗಳು ಕನ್ನಡ ಕಥಾಲೋಕದಲ್ಲಿ ಅನನ್ಯ ಕಥೆಗಳಾಗಿ ಉಳಿದುಕೊಂಡವು. ಇವುಗಳಲ್ಲಿ ಹಂಗು ಕಥೆ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲರು 1976 ರಲ್ಲಿ ನಿರ್ಮಿಸಿದ  ಕಥಾ ಸಂಗಮಎಂಬ ಸಿನಿಮಾದ ಮೂರು ಕಥೆಗಳಲ್ಲಿ ಒಂದಾಗಿರುವುದು ವಿಶೇಷ. ( ಸಿನಿಮಾ ರಜನಿಕಾಂತ್ ಅವರ ಮೊದಲ ಸಿನಿಮಾ ಕೂಡ ಹೌದು)  ಧಾರವಾಡದ ಕರ್ನಾಟಕ ವಿ.ವಿ.ಯಿಂದ ಕನ್ನಡದಲ್ಲಿ ಎಂ..  ಪದವಿ ಹಾಗೂ  ಇಂಗ್ಲೆಂಡಿನಲ್ಲಿ ಇಂಗ್ಲೀ ಷ್ ವಿಷಯದ ಭಾಷಾ ಶಾಸ್ತ್ರದಲ್ಲಿ ಎಂ.. ಪದವಿ ಪಡೆದಿದ್ದ ಗಿರಡ್ಡಿಯವರು ನಂತರ ಗುಲ್ಬರ್ಗಾ ವಿ.ವಿ.ಯಲ್ಲಿ ಶೈಲಿ ಶಾಸ್ತ್ರ ಕುರಿತಂತೆ ಪಿ.ಹೆಚ್.ಡಿ ಪದವಿ ಹಾಗೂ ಹೈದರಾಬಾದಿನ ಸೆಂಟ್ರಿಲ್ ಇನ್ಸಿಟ್ಯೂಟ್ ಆಫ್ ಇಂಗ್ಲೀಷ್ ಸಂಸ್ಥೆಯಿಂದ ಡಿಪ್ಲಮೊ ಇನ್ ಇಂಗ್ಲೀಷ್ನಲ್ಲಿ  ಪದವಿಯನ್ನು ಪಡೆದಿದ್ದರು. ಹೀಗೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಯ ಮೇಲೆ ಅವರಿಗಿದ್ದ ಆಳವಾದ ಜ್ಞಾನ ಮತ್ತು ವಿದ್ವತ್ತು ಕನ್ನಡದ ವಿಮರ್ಶೆಯ ಲೋಕಕ್ಕೆ ವರವಾಗಿ ಪರಿಣಮಿಸಿತು.
1970 ದಶಕದಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ವಿಮರ್ಶೆಯ ಪರಂಪರೆಯನ್ನು ಹುಟ್ಟು ಹಾಕಿದ ಆದ್ಯರಲ್ಲಿ ಒಬ್ಬರಾದ ಡಾ.ಗಿರಡ್ಡಿ ಗೋವಿಂದರಾಜರು ತಮ್ಮ ವಸ್ತುನಿಷ್ಟ ಶೈಲಿಯಿಂದ ಕನ್ನಡ  ಕಥೆ ಮತ್ತು ಕಾವ್ಯ ಹಾಗೂ ಕಾದಂಬರಿ ಇವುಗಳ ಕಥಾವಸ್ತು, ಭಾಷೆ ಮತ್ತು ಶೈಲಿ ಇವುಗಳನ್ನು ವಿಮರ್ಶಿಸುತ್ತಾ, ಲೇಖಕ ಮತ್ತು ಓದುಗನ ನಡುವೆ ಸಂವಹನ ಸೇತುವೆಯಾಗಿ ಕಾರ್ಯನಿರ್ವಹಿಸುವುದರ ಜೊತೆಗೆ  ಓದುಗರ ಅಭಿರುಚಿಯ ದಿಕ್ಕನ್ನು ಬದಲಿಸಿದವರಲ್ಲಿ ಮುಖ್ಯರು. 70 ಮತ್ತು 80 ದಶಕದಲ್ಲಿ ನಿರಂತರವಾಗಿ ಹದಿನೈದು ವಿಮರ್ಶಾ ಕೃತಿಗಳನ್ನು ಬರೆದ ಕೀರ್ತಿ ಗಿರಡ್ಡಿಯವರದು. ತಾವು ಇಂಗ್ಲೆಂಡಿನಲ್ಲಿದ್ದ ಸಮಯದಲ್ಲಿ ಅಲ್ಲಿನ ರಂಗಭೂಮಿ ಕುರಿತಂತೆ ಆಸಕ್ತಿ ಬೆಳೆಸಿಕೊಂಡಿದ್ದ ಅವರು ಭಾರತಕ್ಕೆ ಹಿಂತಿರುಗಿದ ನಂತರ ರಚಿಸಿದ ಇಂಗ್ಲೇಡಿನ ರಂಗಭೂಮಿಎಂಬ ಕೃತಿ ಕನ್ನಡ ರಂಗಭೂಮಿಗೆ ಅಮೂಲ್ಯ ಕೊಡುಗೆಯಾಗಿದೆ.. ವೃತ್ತಿಯಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದರೂ ಸಹ ತಮ್ಮ ಬದುಕಿನುದ್ದಕ್ಕೂ ಕನ್ನಡವನ್ನು ಧ್ಯಾನಿಸಿದ ಗಿರಡ್ಡಿಯವರು ವಚನ ಸಾಹಿತ್ಯ ಕುರಿತಂತೆ ಹಾಗೂ ಜಾನಪದ ಸಾಹಿತ್ಯ ಕುರಿತಂತೆ ಅಧಿಕಾರಯುತವಾಗಿ ಮಾತನಾಡಬಲ್ಲ, ಬರೆಯಬಲ್ಲ ವಿದ್ವಾಂಸರಲ್ಲಿ ಒಬ್ಬರಾಗಿದ್ದರು.
 ಬದುಕು, ಬರೆವಣಿಗೆ ಹಾಗೂ  ಸಾಮಾಜಿಕ ಚಟುವಟಿಕೆ ಇವುಗಳಲ್ಲಿ ನಿರಂತವಾಗಿ ಅರವತ್ತು ವರ್ಷಗಳ ಕಾಲ ತೊಡಗಿಸಿಕೊಂಡಿದ್ದರೂ ಸಹ ಗಿರಡ್ಡಿಯವರದು ಎಂದಿಗೂ  ಆರ್ಭಟ ಅಥವಾ ಅಬ್ಬರದ ನಡುವಳಿಕೆಯಲ್ಲ.  ತಮ್ಮ ವಸ್ತು ನಿಷ್ಟ ನೆಲೆಯಿಂದ ಅತ್ತ ಇತ್ತ ಕದಲದೆ ಹೇಳಬೇಕಾದ ನಿಷ್ಟುರ ಸತ್ಯಗಳನ್ನು ಅತ್ಯಂತ ಮೆದುಮಾತಿನಲ್ಲಿ ಹೇಳುತ್ತಾ ಬಂದರು. ಬೀದಿಗಳಿದು ಘೋಷಣೆ ಕೂಗಿದರೆ ಮಾತ್ರ ಪರಿವರ್ತನೆಯ ಹರಿಕಾರರು ಮತ್ತು ಕ್ರಾಂತಿಕಾರರು ಎಂದು ನಂಬಿರುವ ಕಾಲಘಟ್ಟದಲ್ಲಿ ಅವರು ತಮ್ಮ ಸಾಹಿತ್ಯ ಮತ್ತು ಸಾಂಸ್ಕøತಿಕ ಚಿಂತನೆಗಳ ಮೂಲಕ ಸಮಾಜದಲ್ಲಿ ಸದ್ದಿಲ್ಲದೆ ಮೌನ ಕ್ರಾಂತಿಯನ್ನು ಸೃಷ್ಟಿಸಿದರು. ಕಾರಣಕ್ಕಾಗಿ ಅತಿರೇಖದ ತುತ್ತ ತುದಿಗಳಂತಿರುವ ಎಡ ಮತ್ತು ಬಲಗಳ ತಾತ್ವಿಕ ಮಾರ್ಗವನ್ನು ತುಳಿಯಲು ನಿರಾಕರಿಸಿದ ಅವರು ಬುದ್ಧ ಮತ್ತು ಗಾಂಧೀಜಿಯವರು ಪ್ರತಿಪಾದಿಸಿದ ಮಧ್ಯಮ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ನನ್ನ ತಲೆ ಮಾರಿನ ಅನೇಕರಿಗೆ ಮಾಗದರ್ಶಕರಾಗಿದ್ದರು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುಬೆ ಸಂವಹನ, ಮಾತುಕತೆ ಅಥವಾ  ಚರ್ಚೆ ಇಂತಹ ಕ್ರಿಯೆಗಳು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿರುವ ಕಾಲಘಟ್ಟದಲ್ಲಿ ಅಸಹಿಷ್ಣುತೆ ಮತ್ತು ಹಿಂಸೆಯ ಹಿಂದಿನ ಕಾರಣಗಳನ್ನು ಗ್ರಹಿಸಲಾರದಷ್ಟು ಅಸೂಕ್ಷಮತೆ ನಾವು ಒಳಗಾಗಿದ್ದೆವೆ. ಈಕಾರಣದಿಂದಾಗಿ   ನಮಗಿನ್ನೂ ಗಿರಡ್ಡಿಯವರು ಪ್ರತಿಪಾದಿಸಿದ ಮಧ್ಯಮ ಮಾರ್ಗ ಸಮಗ್ರವಾಗಿ ಅರ್ಥವಾಗಿಲ್ಲ. ಧರ್ಮ ಅಥವಾ ಪಂಥಗಳ ನಡುವಿನ ಚಿಂತನೆಗ¼ ಕೊಡುಕೊಳೆಗೆ ಆಸ್ಪದವಿಲದೆ ಅನೇಕ ಬಗೆಯ ತಲ್ಲಣಗಳಿಗೆÀ ಪಲ್ಲಟಗಳಿಗೆ ಕಾರಣವಾಗುತ್ತಿರುವ ದಿನಮಾನಗಳಲ್ಲಿ ಗಿರಡ್ಡಿಯರ ಮಧ್ಯಮ ಮಾರ್ಗದ ಮಹತ್ವ  ಅರಿವಾಗತೊಡಗಿದೆ.

ಸಾಹಿತ್ಯದದಲ್ಲಿ ಅನೇಕ ಪಂಗಡಗಳಾಗಿ ದ್ವೀಪದಂತೆ ಬರಹಗಾರರು ಬದುಕುತ್ತಿದ್ದ ಸಂದರ್ಭದಲ್ಲಿ ಹಾಗೂ ಸಾಹಿತ್ಯ ಸಮ್ಮೇಳನಗಳು ಜಾತ್ರೆಯ ಸ್ವರೂಪ ಪಡೆದುಕೊಡು ಸಾಹಿತ್ಯ ಸಂವಾದ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ,  ಆರು ವರ್ಷಗಳ ಹಿಂದೆ ಧಾರವಾಡದಲ್ಲಿ ಗಿರಡ್ಡಿಯವರು ತಮ್ಮ ಸಹಪಾಠಿ ಎಂ.ಎಂ.ಕಲ್ಬುರ್ಗಿಯವರ ಜೊತೆಗೂಡಿ  ಪ್ರಜಾವಾಣಿ ಸಹಭಾಗಿತ್ವದಲ್ಲಿ ಹುಟ್ಟು ಹಾಕಿದಧಾರವಾಡ ಸಾಹಿತ್ಯ ಸಂಭ್ರಮಎಂಬ ಕಾರ್ಯಕ್ರಮ ಇದೀಗ ಸಾಹಿತ್ಯದ ಮೈಲಿಗಲ್ಲಾಗಿದೆ. ಎಲ್ಲಾ ಬಗೆಯ ನಂಬಿಕೆ ಮತ್ತು ದೃಷ್ಟಿಕೋನದ ಬರಹಗಾರರು ಹಾಗೂ ಓದುಗರು ಒಂದೆಡೆ ಕಲೆತು ಸಾಹಿತ್ಯ, Àಂಸ್ಕøತಿ ಮತ್ತು ಕಲೆ ಹೀಗೆ ವಿವಿಧ ವಿಷಯಗಳ ಕುರಿತು ಮೂರು ದಿನಗಳ ಕಾಲ  ಗಂಭೀರವಾಗಿ ಚರ್ಚಿಸುವುದು ಸುಲಭದ ಮಾತಲ್ಲ., ಇಂತಹ ಪರಂಪರೆಯನ್ನು ಹುಟ್ಟು ಹಾಕಿದ ಕೀರ್ತಿ ಗಿರಡ್ಡಿಯವರದು.
ಇತ್ತೀಚೆಗಿನ ದಿನಗಳಲ್ಲಿ ವಿಮರ್ಶೆಯಿಂದ ಕಳಚಿಕೊಂಡು ಲಲಿತ ಪ್ರಬಂಧಗಳನ್ನು ರಚಿಸುತ್ತಾ ಓದುಗರಲ್ಲಿ ಆಹ್ಲಾದಕರ ಹಾಗೂ ಪ್ರಫುಲ್ಲವಾದ ಮನಸ್ಸನ್ನು ಸೃಷ್ಟಿ ಮಾಡಿದ್ದ ಅವರು,  ದೇವದತ್ತ ಪಟ್ನಾಯಕ್ ಅವರ ಜಯ ಎಂಬ ಮಹಾಭಾರತz ಇಂಗ್ಲೀಷ್À ಕೃತಿಯನ್ನು ಕನ್ನಡಕ್ಕೆ ಅನುವಾದಿಸುವುದರ ಮೂಲಕ  ಅನುವಾದದ ಶೈಲಿ ಮತ್ತು ಕ್ರಿಯೆ ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟಿದ್ದರು. ಇದು ಅವರ ಪಾಲಿಗೆ ಕೊನೆಯ ಕೃತಿಯಾಯಿತು.
ಇಂದು ಗಿರಡ್ಡಿಗೋವಿಂದರಾಜರು ನಮ್ಮೊಡನಿಲ್ಲ ಆದರೆ, ಅವರ ಸಾಹಿತ್ಯಕೃತಿಗಳು, ಅವರ ಗಂಭೀರವಾದ ಚರ್ಚೆ, ತಿಳಿಹಾಸ್ಯ, ತನ್ನ ಶಿಷ್ಯ ಬಳಗಕ್ಕೆ ಸಾಹಿತ್ಯವನ್ನು ಉಣಬಡಿಸುತ್ತಿದ್ದ ರೀತಿ ಇವೆಲ್ಲವೂ ಅವರ ನೆನಪುಗಳ ಜೊತೆ ನಮ್ಮೊಳಗೆ ಸದಾ ಹಸಿರಾಗಿರುತ್ತವೆ.
( ಇಂದು ಡಾ.ಗಿರಡ್ಡಿ ಗೋವಿಂದರಾಜರ ಜನ್ಮದಿನ.( 22-9-2018) ಈ ದಿನ ಧಾರವಾಡದಲ್ಲಿ ಅವರ ಹೆಸರಿನಲ್ಲಿ ಪ್ರತಿಷ್ಠಾನ ಆರಂಭಗೊಳ್ಳುತ್ತಿದೆ. ಇದರ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಪ್ರಜಾವಾಣಿ ಆವೃತ್ತಿಯ ಮೆಟ್ರೊ ಪುರವಣಿಗೆಗೆ ಬರೆದ ಲೇಖನ)
ಚಿತ್ರಗಳು ಸೌಜನ್ಯ- ಡೆಕ್ಕನ್ ಹೆರಾಲ್ಡ್ ಮತ್ತು ದ.ಹಿಂದೂ