ಗುರುವಾರ, ಅಕ್ಟೋಬರ್ 10, 2013

ವಾರ್ಧಾದ ಸೇವಾಗ್ರಾಮದಲ್ಲಿ ಗಾಂಧೀಜಿಯ ನೆನಪುಗಳು



ರಜನಿ ಭಕ್ಷಿಯವರ ಯವರ  ಬಾಪು ಕುಟಿಕೃತಿಯನ್ನು ಓದಿದ ನಂತರ ಕಳೆದ ಹತ್ತು ವರ್ಷಗಳಿಂದ ವಾರ್ಧಾ ಸಮೀಪದ  ಸೇವಾಗ್ರಾಮಕ್ಕೆ ಬೇಟಿ ನೀಡಬೇಕೆಂಬ ಅಸೆಯೊಂದು  ಮನಸ್ಸಿನೊಳಗೆ ಕಾಡುತ್ತಲೇ ಇತ್ತು. ಕಳೆದ ವರ್ಷ ನಾಲ್ಕುಬಾರಿ ಮಧ್ಯ ಪ್ರದೇಶ ಮತ್ತು ಛತ್ತೀಸ್‍ಗಡ ರಾಜ್ಯಗಳಿಗೆ  ಪ್ರವಾಸ ಹೋದ ಸಂದರ್ಭದಲ್ಲಿ  ಪೂನಾ ದಿಂದ ಗೊಂಡಿಯ ಮತ್ತು ರಾಯ್ ಪುರಕ್ಕೆ ರೈಲಿನಲ್ಲಿ ಪ್ರಯಾಣಿಸುವಾಗ, ಅಶ್ರಮದ ಮುಂದೆ ರೈಲು  ಹಾದು ಹೋಗುವಾಗ, ಈ ಆಶ್ರಮಕ್ಕೆ ಬೇಟಿ ನೀಡಲಿಲ್ಲವಲ್ಲಾ ಎಂಬ ಪಾಪ ಪ್ರಜ್ಞೆ ನನ್ನನ್ನು ಸದಾ  ಕಾಡುತ್ತಿತ್ತು. ಈ ಕೊರತೆಯ  ಎದೆಯ ಭಾರ ಇಳಿಸಿಕೊಳ್ಳಲೆಂಬಂತೆ ಈ ವರ್ಷದ ಜನವರಿಯಲ್ಲಿ ಪೂನಾನಗರಲ್ಲಿರುವ  ಆಗಾ ಖಾನ್ ಅರಮನೆ ಮತ್ತು ನಾಗಪುರ ಸಮೀಪದ ವಾರ್ಧಾ ಬಳಿಯ ಸೇವಾಗ್ರಾಮಕ್ಕೆ ದಿನ ಬೇಟಿ ನೀಡಿ ಬಂದೆ.
ಮಹಾರಾಷ್ರದ ನಾಗಪುರದಿಂದ ಎಪ್ಪತ್ತೈದು ಕಿಲೋಮೀಟರ್ ದೂರದಲ್ಲಿರುವ ಹಾಗೂ ವಾರ್ಧಾ ಪಟ್ಟಣದಿಂದ ದಿಂದ ಕೇವಲ ಎಂಟು ಕಿಲೋಮೀಟರ್ ದೂರದಲ್ಲಿ, ಮುನ್ನೂರು ಎಕರೆ ವಿಸ್ತೀರ್ಣ ಪ್ರದೇಶ ಹೊಂದಿರುವ ಈ ಸೇವಾಗ್ರಾಮ 1934 ರಿಂದ 1942 ರವರೆಗೆ ಗಾಂಧೀಜಿಯವರ ಕರ್ಮಭೂಮಿಯಾಗಿತ್ತು. 1930ರಲ್ಲಿ ಉಪ್ಪಿನ ಸತ್ಯಾಗ್ರಹ ಕೈಗೊಂಡ ಸಂದರ್ಭದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭ್ಯವಾಗುವವರೆಗೂ ಇಲ್ಲಿಗೆ ಕಾಲಿಡುವುದಿಲ್ಲ ಎಂದು ಶಪಥ ತೊಡುವುದರ ಮೂಲಕ  ಅಹಮದಾಬಾದಿನ ಸಬರಮತಿ ಆಶ್ರಮ ತೊರೆದ ಗಾಂಧೀಜಿ,  ಮತ್ತೆಂದೂ ಸಬರಮತಿ ಆಶ್ರಮಕ್ಕೆ ಕಾಲಿಡಲಿಲ್ಲ. ಸ್ವಾತಂತ್ಯ ಚಳವಳಿಗೆ ಕಾರ್ಯಕರ್ತರನ್ನು ರೂಪಿಸುವ ನಿಟ್ಟಿನಲ್ಲಿ ಸಬರಮತಿ ಅಶ್ರಮ ಪ್ರಮುಖ ಪಾತ್ರ ವಹಿಸಿತ್ತು. ಆನಂತರ ಗಾಂಧೀಜಿ ತಮ್ಮ ಕಾರ್ಯ ಚಟುವಟಿಕೆಗಳಿಗಾಗಿ ಮಧ್ಯ ಭಾರತದಲ್ಲಿ ನೆಲೆಗೊಳ್ಳಲು ಪ್ರಶಸ್ತವಾದ ಜಾಗಕ್ಕಾಗಿ ಹುಡುಕಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಗಾಂಧೀಜಿ ಅನುಯಾಯಿ ಮತ್ತು ಮೂಲತಃ ವಾರ್ಧಾ ಪಟ್ಟಣದವರಾದ ಸೇಠ್ ಜಮ್ನಲಾಲ್ ಬಜಾಜ್ ಅವರು  ಗಾಂಧಿ ಕನಸನ್ನು ಸಾಕಾರಗೊಳಿಸಿದರು. ಸೇವಾಗ್ರಾಮದ ಆಶ್ರಮಕ್ಕಾಗಿ ಬಜಾಜ್ ಅವರು ಮುನ್ನೂರು ಎಕರೆ ಭೂಮಿಯನ್ನು ಖರೀದಿಸಿ ಗಾಂಧೀಜಿಯವರಿಗೆ ಬಳುವಳಿಯಾಗಿ ನೀಡಿದ್ದರು.
ಸಬರಮತಿ ಆಶ್ರಮ ಸ್ವಾತಂತ್ರ್ಯ ಚಳುವಳಿಗೆ ಕಾರ್ಯಕರ್ತರನ್ನು ತಯಾರು ಮಾಡುವ ಕೇಂದ್ರವಾಗಿದ್ದರೆ, ಸೇವಾ ಗ್ರಾಮ, ಗಾಂಧೀಜಿಯವರ ಕನಸಿದ್ದ ಗ್ರಾಮ ಭಾರತ ಹಾಗೂ ಗುಡಿ ಕೈಗಾರಿಕೆಗಳಿಗೆ ಪುನಶ್ಚೇತನ ನೀಡುವ ಚಿಂತನೆಗಳ ಗರ್ಭ ಗುಡಿಯಾಗಿತ್ತು. ಸುಮಾರು  ವರ್ಷಗಳ ಕಾಲ ಇಲ್ಲಿನ ಭಾಪು ಕುಟಿಯಲ್ಲಿ ಕಸ್ತೂರಬಾ ಜೊತೆ ವಾಸವಾಗಿದ್ದ ಗಾಂಧೀಜಿಯವರ ಜೊತೆ, ವಿನೋಭಾ, ಮೀರಾಬೆಹನ್  ಜಮ್ನಲಾಲ್ ಬಜಾಜ್, ಜೆ.ಸಿ. ಕುಮಾರಪ್ಪ, ಮಹದೇವ ದೇಸಾಯಿ  ಮುಂತಾದವರು ವಾಸಿಸುತ್ತಾ ತಾವು ಕನಸಿದ್ದ ಗ್ರಾಮ ಭಾರತಕ್ಕೆ ಅಸ್ತಿಭಾರ ಹಾಕಿದರು. ಇದೇ ವೇಳೆಯಲ್ಲಿ ಗಾಧಿಜಿಯವರ ಸಹೋದರನ ಪುತ್ರ ಮಗನ್ ಲಾಲ್ ಸೇವಾಗ್ರಾಮ ಆಶ್ರಮದಲ್ಲಿ ಗ್ರಾಮೀಣ ಕೈಗಾರಿಕೆಗಳ ಸಂಶೋಧನಾ ಕೇಂದ್ರವೊಂದನ್ನು ಸ್ಥಾಪಿಸಿದರು. ಅವರು ತೀರಾ ಚಿಕ್ಕ ವಯಸ್ಸಿನಲ್ಲಿ ಅಕಾಲ ಮರಣ ಹೊಂದುದರಿಂದ ಮುಂದಿನ ದಿನಗಳಲ್ಲಿ ಅದನ್ನು ಜೆ.ಸಿ. ಕುಮಾರಪ್ಪ ಮುನ್ನಡೆಸಿದರು. ಮಗನ್ ಲಾಲ್ ನೆನಪಿನಲ್ಲಿ ಆಶ್ರಮದ ಪಕ್ಕದ ಜನ ವಸತಿಪ್ರದೇಶಕ್ಕೆ ಮಗನ್ ವಾಡಿ ಎಂದು ಹೆಸರಿಟ್ಟು ಕರೆಯಲಾಗುತ್ತಿದೆ.





1942 ರ ಜಗತ್ತಿನ  ಎರಡನಯ ಮಹಾಯುದ್ಧದ ಆತಂಕದ ಸಮಯದಲ್ಲಿ ದೂರದ ಅಮೇರಿಕಾದಿಂದ ಬಂದ ಪತ್ರಕರ್ತ ಲೂಯಿಫಿಶರ್ ಬೇಸಿಗೆಯಲ್ಲಿ ಬೆಂಕಿಯ ಮಳೆ ಸುರಿಯವ ಜೂನ್ ತಿಂಗಳಿನಲ್ಲಿ ಸೇವಾ ಗ್ರಾಮಕ್ಕೆ ಬೇಟಿ ನೀಡಿ ಒಂದು ವಾರ ತಂಗಿದ್ದರು. ಗಾಂಧಿಯ ಜೊತೆ ಒಡನಾಡಿ, ಆನಂತರ ಮಹಾತ್ಮನ ಜೊತೆ ಒಂದು ವಾರಎಂಬ ಲೇಖನ ಬರೆದಿದ್ದರು. ಗಾಂಧೀಜಿಯ ವ್ಯಕ್ತಿತ್ವದಿಂದ ತೀವ್ರವಾಗಿ ಪ್ರಭಾವಿತರಾದ ಲೂಯಿ ಫಿಶರ್ ನಂತರದ ದಿನಗಳಲ್ಲಿ ಬರೆದ ಮಹಾತ್ಮ ಗಾಂಧಿ ಕುರಿತ ಆತ್ಮ ಕಥೆ ಜಗತ್ ಪ್ರಸಿದ್ದ ಕೃತಿಯಾಯಿತು. ಪಾಶ್ಚಿಮಾತ್ಯ ಜಗತ್ತಿಗೆ ಗಾಂಧಿ ಮತ್ತು ಅವರ ಚಿಂತನೆಗಳನ್ನು ಪರಿಚಯಿಸಿತು. ಇದೇ ಕೃತಿಯನ್ನು ಆಧರಿಸಿ ಗಾಂಧಿ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ ರಿಚರ್ಡ ಅಟನ್‍ಬರೋ ಎಂಬ ನಿರ್ಧೇಶಕ, ಬರೋಬ್ಬರಿ ಹದಿನೇಳು ವರ್ಷಗಳ ಕಾಲ ಧ್ಯಾನಿಸಿ, ಚಿತ್ರ ಕಥೆ ಸಿದ್ಧ ಪಡಿಸಿ 1982ರಲ್ಲಿ ಗಾಂಧಿ ಚಿತ್ರ ನಿರ್ಮಾಣ ಮಾಡಿದರು. ಹೀಗೆ ಹಲವು ಕ್ರಾಂತಿಗಳಿಗೆ, ಮನುಕುಕ್ಕೆ ಒಳಿತನ್ನು ಬಯಸುವ ಹಲವಾರು ಯೋಜನೆ ಮತ್ತು ಯೋಚನೆಗಳಿಗೆ
ಸಾಕ್ಷಿಯಾದ ಸೇವಾಗ್ರಾಮ ಇಂದಿಗೂ ತನ್ನ ಒಡಲೊಳಗೆ ಇತಿಹಾಸದ ಕುರುಹುಗಳನ್ನು ಹೊತ್ತುಕೊಂಡು ನಿಂತಿದೆ.
ಸೇವಾಗ್ರಾಮದ ಆಶ್ರಮವನ್ನು ಮತ್ತು ಅಲ್ಲಿನ ಚಟುವಟಿಕೆಗನ್ನು ಅಣಕಿಸುವಂತೆಮಹಾರಾಷ್ಟ್ರ ಸರ್ಕಾರ ಕೈಗಾರಿಕಾ ಬಡಾವಣೆಯನ್ನು ಸ್ಥಾಪಿಸಿದ  ಫಲವಾಗಿ ವಾರ್ಧ ಸುತ್ತ ಮುತ್ತ ತಲೆ ಎತ್ತಿ ನಿಂತಿರುವ ಬೃಹತ್ ಕೈಗಾರಿಕೆಗಳು ಸೇವಾ ಗ್ರಾಮದ ಆಶ್ರಮದ ಚಟುವಟಿಕೆಗಳನ್ನು ಮರೆ ಮಾಚುವಂತೆ  ಚಿಮಣಿಗಳಿಂದ ಹೊಗೆ ಉಗುಳುತ್ತಿವೆ. ಈ ಹೊಗೆ ಗುಡಿ ಕೈಗಾರಿಕೆಗಳ ವಿರುದ್ಧದ ದ್ವೇಷದ ಹೊಗೆಯೋ ? ಅಥವಾ ಬಂಡವಾಳಶಾಹಿ ಪ್ರಭುತ್ವದ ದಿಗ್ವಿಜಯದ ಸಂಕೇತವೂ ಒಂದೂ ಅರ್ಥವಾಗದ ಸ್ಥಿತಿ. ಇಡೀ ಸೇವಾಗ್ರಾಮದ ಚಟುವಟಿಕೆಯನ್ನು ಗಮನಿಸಿದಾಗ, ಇದನ್ನು ರೂಪಕದ ಭಾಷೆಯಲ್ಲಿ ಹೇಳುವುದಾದರೆ, “ ಮರ ಕಡಿದ ನಂತರವೂ, ಬುಡ ಚಿಗುರುತ್ತದಲ್ಲಾ ಹಾಗಿದೆ.ಸೇವಾ ಗ್ರಾಮದ ಆಶ್ರಮದಲ್ಲಿ  ಇವೊತ್ತಿಗೂ ಚರಕದ ಗಾಲಿ ತಿರುಗುವುದು ನಿಂತಿಲ್ಲ, ಭಾರತದ ವಿವಿಧ ಪ್ರದೇಶಗಳಿಗೆ, ಪರಿಸರಕ್ಕೆ ಎರವಾಗದಂತೆ, ಕಡಿಮೆ ಬಂಡವಾಳ ಬಯಸುವ ಹಾಗೂ ಅತಿ ಹೆಚ್ಚು ಮಾನವರ ಕೈಗಳಿಗೆ  ಕೆಲಸ ನೀಡುವ ತಂತ್ರಜ್ಙಾನಗಳ ಅನ್ವೇಷಣೆ ಮತ್ತು ಅವಿಷ್ಕಾರ ಕಾರ್ಯಗಳು ಮುಂದುವರಿದಿವೆ.
ಈ ಇಪ್ಪತ್ತೊಂದನೇಯ ಶತಮಾನದಲ್ಲೂ ಗಾಧೀಜಿಯ ಚಿಂತನೆಗಳಿಗೆ ಮೌಲ್ಯಗಳು ಇದೆಯಾ? ಎಂದು ಪ್ರಶ್ನಿಸಿಕೊಂಡು  ನಿರಾಸೆ ವ್ಯಕ್ತಪಡಿಸುವವರು ಒಮ್ಮೆ ಈ ಆಶ್ರಮಕ್ಕೆ ಬೇಟಿ ನೀಡಬೇಕು. ಬೆಳಿಗ್ಗೆ 4-30 ರಿಂದ ಆರಂಭ ವಾಗುವ ಚಟುವಟಿಕೆ ಸಂಜೆ 7 ಗಂಟೆಗೆ ಮುಕ್ತಾಯವಾಗುತ್ತದೆ. ಬೆಳಿಗ್ಗೆ ಪ್ರಾರ್ಥನೆ, ಆಶ್ರಮನ್ನು ಶೌಚಿಗೊಳಿಸುವ ಕಾರ್ಯ ಕ್ರಮಗಳು ಆರಂಭವಾಗಿ, 8 ಗಂಟೆಗೆ ಲಘು ಉಪಹಾರ, ಮಧ್ಯಾಹ್ನ 11 ಗಂಟೆಗೆ ಭೋಜನ ಹಾಗೂ 12 ರಿಂದ 2 ಗಂಟೆಯವರೆಗೆ ವಿಶ್ರಾಂತಿ, ಮತ್ತೇ ಎರಡು ಗಂಟೆಯಿಂದ ಚರಕದಿಂದ ನೂಲು ನೇಯುವುದು, ಕೈ ಮಗ್ಗ ದಲ್ಲಿ ಹತ್ತಿ ಬಟ್ಟೆಗಳನ್ನು ತಯಾರಿಸುವುದು,ಮುಂತಾದ ಚಟುವಟಿಕೆಗಳು ನಡೆಯುತ್ತವೆ. ಸಂಜೆ ಪ್ರಾರ್ಥನೆ, ಉಪನ್ಯಾಸ ಇವುಗಳೊಂದಿಗೆ ಮುಕ್ತಾಯವಾಗಿ ಏಳು ಗಂಟೆಗೆ ನೀಡುವ ರಾತ್ರಿ ಭೋಜನದೊಂದಿಗೆ  ದಿನದ ಕಾರ್ಯಕ್ರಮ ಮುಕ್ತಾಯವಾಗುತ್ತದೆ.
ವರ್ತಮಾನದ ಜಂಜಡದ ಜಗತ್ತಿನಿಂದ ನೊಂದವರು ಹಾಗೂ  ಬೇಸರವಾದವರು ತಂಡೋಪಾದಿಯಲ್ಲಿ ಅಶ್ರಮಕ್ಕೆ ಬಂದು ವಾರಗಟ್ಟಲೆ ಕಾರ್ಯಕರ್ತರಾಗಿ ಇದ್ದು ಸೇವೆ ಸಲ್ಲಿಸಿ ಹೋಗುತ್ತಾರೆ. ಈ ಕಾರಣಕ್ಕಾಗಿ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳು ಆಶ್ರಮದ ಸ್ಟೇಶನ್ ನಲ್ಲಿ ಎರಡು ನಿಮಿಷ ನಿಂತು ಚಲಿಸುತ್ತವೆ. ಭಾರತ ನಾಲ್ಕು ಮೂಲೆಗಳ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರೈಲು ನಿಲ್ದಾಣವಾಗಿರುವ ನಾಗಪುರ ಹತ್ತಿರವಿರುವದರಿಂದ ಪ್ರತಿ ದಿನ ಸಾವಿರಾರು ಗಾಂಧಿ ಅಭಿಮಾನಿಗಳು ಇಲ್ಲಿಗೆ ಬೇಟಿ ನೀಡುತ್ತಾರೆ.
ಸೇವಾಶ್ರಮ ಟ್ರಸ್ಟ್ ನಿಂದ ನಡೆಯುತ್ತಿರುವ ಮಹಾತ್ಮ ಗಾಂಧಿ ಮೆಡಿಕಲ್ ಕಾಲೇಜು ಮತ್ತು ಇಂಜಿನಿಯರಿಂಗ್ ಕಾಲೇಜುಗಳು, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಗ್ರಾಮಗಳ ಬದುಕನ್ನು ಪರಿಚಯ ಮಾಡಿಕೊಡುತ್ತವೆ. ಮೆಡಿಕಲ್ ವಿದ್ಯಾರ್ಥಿಗಳಿಗೆ ಗ್ರಾಮ ಸೇವೆಯನ್ನು ಕಡ್ಡಾಯ ಗೊಳಿಸಲಾಗಿದೆ. ಅದೇ ರೀತಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಗ್ರಾಮ ಭಾರತಕ್ಕೆ ಅನುಕೂಲವಾಗುವಂತೆ, ವ್ಯವಸಾಯದ ಉಪಕರಣಗಳು, ನೀರೆತ್ತುವ ಸಾಧನಗಳು, ಚಕ್ಕಡಿ ಇವುಗಳ ತಂತ್ರ ಜ್ಙಾನ ಅಭಿವೃದ್ಧಿಯಲ್ಲಿ ನಿರತರಾಗಿದ್ದಾರೆ, ಯಾವುದೇ ಕ್ಯಾಪಿಟೇಶನ್ ಶುಲ್ಕ ಅಥವಾ ಮರೆ ಮಾಚಿದ ಶುಲ್ಕವಿಲ್ಲದೆ, ಮಹಾರಾಷ್ಟ್ರ ಸರ್ಕಾರ ನಿಗಧಿಪಡಿಸಿದ ಶಿಕ್ಷಣ ಶುಲ್ಕವನ್ನು ಮಾತ್ರ ವಿದ್ಯಾರ್ಥಿಗಳಿಂದ ಪಡೆದು ಕೊಳ್ಳಲಾಗುತ್ತಿದೆ. ಇಲ್ಲಿ ಐದು ವರ್ಷಗಳ ಕಾಲ ತಯಾರಾದ ವಿದ್ಯಾರ್ಥಿಗಳು ತಮಗೆ ಅರಿವಿಲ್ಲದಂತೆ, ಗ್ರಾಮಭಾರತದ ಬಗ್ಗೆ ಒಲವು ಮತ್ತು ನೈತಿಕ ಪ್ರಜ್ಙೆಯನ್ನು ಮೈಗುಡಿಸಿಕೊಳ್ಳುತ್ತಿರುವುದು ನೆಮ್ಮದಿಯ ಸಂಗತಿ. ಒಬ್ಬ ದಾರ್ಶನಿಕನ ಚಿಂತನೆಗಳು, ಆತ ಅಳಿದ ನಂತರವೂ ಹೇಗೆ ಕಾಲಘಟ್ಟಕ್ಕೆ ತಕ್ಕಂತೆ ಮರುಹುಟ್ಟು ಪಡೆಯಬಲ್ಲವು ಎಂಬುದಕ್ಕೆ ಸೇವಾಶ್ರಮ ನಮ್ಮದುರು ಸಾಕ್ಷಿಯಾಗಿದೆ.












ಸೋಮವಾರ, ಅಕ್ಟೋಬರ್ 7, 2013

ಗಾಂಧೀಜಿಯ ನೆಪದಲ್ಲಿ ಶೂ ಮಾಕರ್ ನೆನಪುಗಳು

ಇಪ್ಪತ್ತನೇಯ ಶತಮಾನದಲ್ಲಿ ತನ್ನ ವ್ಯಕ್ತಿತ್ವ ಮತ್ತು ಚಿಂತನೆಗಳಿಂದ ಜಗತ್ತನ್ನು ನಿರಂತರವಾಗಿ ಕಾಡಿದ ವ್ಯಕ್ತಿ ಮಹಾತ್ಮ ಗಾಂಧಿ ಎಂದರೆ, ತಪ್ಪಾಗಲಾರದು. ಮಾರುಕಟ್ಟೆಯ ಪ್ರಭುತ್ವವನ್ನು ನಂಬಿ, ಜಾಗತೀಕರಣದ ಹುಚ್ಚು ಕುದೇರೆಯೇರಿ ಹೊರಟವರೆಲ್ಲಾ ಅಭಿವೃದ್ಧಿಯ ದಾರಿ ತಪ್ಪಿ ಅಂಡಲೆಯುತ್ತಿರುವ ಈ ಇಪ್ಪತ್ತೊಂದನೇಯ ಶತಮಾನದಲ್ಲೂ ನಮಗೆ ಪದೇ ಪದೆ ಗಾಂಧಿ ನೆನಪಾಗುತ್ತಾರೆ. ಹಾಗಾಗಿ ದೆಹಲಿಯ ಸಂಸತ್ ಭವನದ ಸೆಂಟ್ರಿಲ್ ಹಾಲ್ ನಿಂದ ಹಿಡಿದು, ಜಗತ್ತಿನ ದೊಡ್ಡಣ್ಣನಾದ ಅಮೇರಿಕಾದ ನ್ಯೂಯಾರ್ಕ್ ನಗರದ ಯೂನಿಯನ್ ಸ್ಕ್ವೇರ್ ಪಾರ್ಕ್ ವರೆಗೆ ಅವರ ಪ್ರತಿಮೆ, ಭಾವಚಿತ್ರಗಳು, ದೇಶ, ಭಾಷೆ, ಧರ್ಮಗಳ ಹಂಗಿಲ್ಲದೆ ರಾರಾಜಿಸುತ್ತಿವೆ. ಒಂದು ಕಾಲಕ್ಕೆ ಅಪ್ರಸ್ತುತ ಎಂದು ತಿರಸ್ಕರಿಸಲಾಗಿದ್ದ ಅವರ ಚಿಂತನೆಗಳು ಈಗ ದಿಕ್ಕೆಟ್ಟ ಜಗತ್ತಿಗೆ ದಿಕ್ಕು ದಿಶೆಯೇನೊ ಎಂಬಂತೆ ಅನಿಸತೊಡಗಿವೆ. ಈ ಕಾರಣಕ್ಕಾಗಿ ಇಪ್ಪತ್ತನೆಯ ಶತಮಾನದಲ್ಲಿ  ಉಗ್ರವಾದಿತನದಿಂದ ಕೂಡಿವೆ ಎಂದು ಅನಿಸುತ್ತಿದ್ದ ಅವರ ಪರಿಸರಕ್ಕೆ ಪೂರಕವಾದ ಚಿಂತನೆಗಳು, ಇಪ್ಪೊತ್ತೊಂದನೆಯ ಶತಮಾನದಲ್ಲಿ ಹಲವು ರೂಪಗಳಲ್ಲಿ ವಿವಿಧ ವ್ಯಕ್ತಿಗಳ ಚಿಂತನೆಯ ಮೂಲಕ ಹೊಸಹುಟ್ಟು ಪಡೆದಿವೆ.  ಅಂತಹ ವ್ಯಕ್ತಿಗಳಲ್ಲಿ ಗಾಂಧೀಜಿಯ ಚಿಂತನೆಗಳ ವಾರಸುದಾರ ಎಂದು ಕರೆಯಬಹುದಾದ ,ಜರ್ಮನಿ ಮೂಲದ ಅರ್ಥಶಾಸ್ತ್ರಜ್ಙ ಮತ್ತು ಚಿಂತಕ , ಪರಿಸರವಾದಿ ಹೀಗೆ ಹಲವು ವಿಶೇಷಣಗಳನ್ನು ಹೊಂದಿರುವ  ಇ.ಎಫ್. ಶೂಮಾಕರ್ ಒಬ್ಬರು.
ತಾವು ಬರೆದ Small is Beautiful (ಸಣ್ಣದು ಸಂದರ) ಎಂಬ ಕೃತಿಯಿಂದ ವಿಶ್ವ ಮನ್ನಣೆಗಳಿಸಿದ ಶೂ ಮಾಕರ್ ತಮ್ಮ ಬದುಕಿನುದ್ದಕ್ಕೂ ಗಾಂಧೀಜಿಯಂತೆ ನಡೆ ನುಡಿಗಳ ನಡುವೆ ಕಂದಕವಿಲ್ಲದಂತೆ ಬದುಕಿದ ಅಪರೂಪದ ವ್ಯಕ್ತಿ. ತಾವು ತೀರಿ ಹೋದ ಮುವತ್ತೈದು ವರ್ಷಗಳ ನಂತರವೂ (1977) ತಮ್ಮ ಚಿಂತನೆಗಳ ಮೂಲಕ ಆಧುನಿಕ ಜಗತ್ತನ್ನೂ ಸದಾ ಕಾಡುತ್ತಲೇ ಇದ್ದಾರೆ. ಅವರ ಕೃತಿಯನ್ನು (Small is Beautifull) ಇಪ್ಪತ್ತೊಂದನಯ ಶತಮಾನದ ಕ್ಲಾಸಿಕ್ ಕೃತಿ ಎಂದು ಜಗತ್ತು ಪರಿಗಣಿಸಿದೆ. ಬೃಹತ್ ಕೈಗಾರಿಕೆ,  ಮತ್ತು ಬಂಡವಾಳ, ಅತಿ ಹೆಚ್ಚು ಮಾನವನ ಶ್ರಮವನ್ನು ಬೇಡದ ನೂತನ ತಾಂತ್ರಿಕ ಅವಿಷ್ಕಾರ ಇವುಗಳಿಗಿಂತ, ಸ್ಥಳೀಯ ಸಂಪನ್ಮೂಲ, ಸಂಪತ್ತು ಮತ್ತು ಮಾನವ ಶ್ರಮವನ್ನು ಬಳಸಿಕೊಂಡು ಸೃಷ್ಟಿಯಾಗುವ ಸಣ್ಣ ಯೋಜನೆಗಳು ಸೂಕ್ತ ಎಂದು ಶೂಮಾಕರ್ ಪ್ರತಿಪಾದಿಸಿದ್ದರು.
ಹಸಿರು ಚಳವಳಿಯ ಹರಿಕಾರ ಎಂದು ಯುರೋಪ್ ನಲ್ಲಿ ಪ್ರಸಿದ್ಧವಾಗಿರುವ ಶೂ ಮಾಕರ್, 1911 ರಲ್ಲಿ ಜರ್ಮನಿಯ ಬಾನ್ ನಗರದಲ್ಲಿ ಜನಿಸಿದವರು. ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ, ಶೂಮಾಕರ್, ಜರ್ಮನಿಯ ಅರ್ಥಶಾಸ್ತ್ರಜ್ಞರಾಗಿದ್ದ ರೊಡ್ಸ್ ಹೆಸರಿನಲ್ಲಿ ಸ್ಥಾಪಿಸಿದ್ದ ಸ್ಕಾಲರ್ ಶಿಪ್ ಅನ್ನು ಪಡೆದು, ಇಂಗ್ಲೆಂಡಿನ ಆಕ್ಸ್ಪೆಪರ್ಡ್ ವಿ.ವಿಯಲ್ಲಿ ಪದವಿ ಪಡೆದರು. ಎರಡನೆಯ ಮಹಾಯುದ್ಧದ ವೇಳೆಗೆ ಮುನ್ನ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ನ ಆಡಳಿತದಲ್ಲಿ ಬದುಕುವುದನ್ನು ವಿರೋಧಿಸಿ, ತನ್ನ ಪತ್ನಿ ಮತ್ತು ಪುಟ್ಟ ಮಗುವಿನೊಡನೆ ಇಂಗ್ಲೆಂಡಿಗೆ ಬಂದು, ತನ್ನ ಜರ್ಮನಿಯ ಪೌರತ್ವವನ್ನು ಮರೆ ಮಾಚಿ, ನಾರ್ಥ್ ಹ್ಯಾಂಪ್ಟನ್ ಷೈರ್ ನಗರದಲ್ಲಿ ಜೇಮ್ಸ್ ಎಂಬ ಬ್ರಿಟೀಷ್ ಹೆಸರಿನಲ್ಲಿ ಕೃಷಿ ತೋಟವೊಂದರ ಕೂಲಿಯಾಳಾಗಿ ಬದುಕು ಕಟ್ಟಿಕೊಂಡವರು.

ಆಕ್ಸ್ ಪರ್ಡ್ ವಿ.ವಿ, ಯಲ್ಲಿ ಓದುತ್ತಿದ್ದಾಗ, ಶೂ ಮಾಕರ್ ನ ಚಿಂತನೆ ಹಾಗೂ ಬುದ್ಧಿವಂತಿಕೆಯನ್ನು ಗಮನಿಸಿದ್ದ ಜಗತ್ ಪ್ರಸಿದ್ಧ ಅರ್ಥಶಾಸ್ತ್ರಜ್ಙರಾದ ಜಾನ್ ಮೇನಾರ್ಡ್ ಕೇನ್ಸ್ , ಇವರಿಗೆ ಆಕ್ಸ್ ಪರ್ಡ್ ವಿ.ವಿ.ಯ ಅರ್ಥಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ವಿಭಾಗದಲ್ಲಿ ಕೆಲಸ ಕೊಡಿಸಿದರು. ಆರ್ಥಿಕ ಬೆಳವಣಿಗೆಯ ಹಿನ್ನಡೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಇಂಗ್ಲೆಂಡ್ ಸರ್ಕಾರಕ್ಕೆ , ಮಹತ್ವದ ಸಲಹೆಗಳನ್ನು ನೀಡಿದ ತಜ್ಙರ ತಂಡದಲ್ಲಿ ಶೂ ಮಾಕರ್ ಇದ್ದರೂ ಸಹ, ಅವರು ಜರ್ಮನಿಯ ಮೂಲದವರು ಎಂಬ ಏಕೈಕ ಕಾರಣಕ್ಕಾಗಿ ಅವರಿಗೆ ಸಲ್ಲಬೇಕಾದ ಗೌರವವನ್ನು ತಡೆ ಹಿಡಿಯಲಾಯಿತು. ಆನಂತರ ಕಲ್ಲಿದ್ದಲು ಮಂಡಳಿಯಲ್ಲಿ ಅವರಿಗೊಂದು ಹುದ್ದೆ ನೀಡಲಾಯಿತು. ಆಂತರೀಕವಾಗಿ ಮತ್ತು ಬಹಿರಂಗವಾಗಿ ಹಾಗೂ ನಡೆ ಮತ್ತು ನುಡಿಯಲ್ಲಿ ಕಿಂಚಿತ್ತೂ ಕಂದಕವಿರಬಾರದು ಎಂದು ನಂಬಿದವರು ಶೂ ಮಾಕರ್. ಜಗತ್ತಿನ ಟನ್ ಗಟ್ಟಲೆ ಸಿದ್ಧಾಂತಗಳಿಗಿಂತ ನನಗೆ ಒಂದು ಚಮಚೆಯಷ್ಟು ಪ್ರಯೋಗದಿಂದ ಸಿಗುವ ಫಲಿತಾಂಶ ಮುಖ್ಯ ಎಂದು ಪ್ರತಿಪಾದಿಸಿದವರು. ತಮ್ಮ ಬದುಕಿನುದ್ದಕ್ಕೂ ಹಲವು ಪ್ರಶ್ನೆಗಳನ್ನು ಎತ್ತಿ , ಅವುಗಳಿಗೆ  ಉತ್ತರ ಕಂಡುಕೊಳ್ಳುವುದರ ಮೂಲಕ ಜಗತ್ತಿಗೆ ತಾವು ಕಂಡುಕೊಂಡ ಸತ್ಯಗಳನ್ನು ಪರಿಚಯಿಸಿದರು. ಪಾಶ್ಚಿಮಾತ್ಯ ಧೋರಣೆಯ ಆರ್ಥಿಕ ನೀತಿ, ಬಂಡವಾಳಶಾಹಿಯ ಧೋರಣೆ ಇವೆಲ್ಲವೂ ನಿಸರ್ಗಕ್ಕೆ ಎರವಾಗುವ ಸಂಗತಿಗಳು ಎಂದು ತಿಳಿದಿದ್ದ ಶೂ ಮಾಕರ್, ಪಶ್ಚಿಮ ಜಗತ್ತಿನ ಚಿಂತನಾ ಮಾದರಿಗಳನ್ನು ತಿರಸ್ಕರಿಸುವುದರ ಜೊತೆಗೆ ಪ್ರಶ್ನಿಸಿದರು. ಪ್ರಭುತ್ವದ ಕೈ ಕೆಳಗೆ ರೂಪುಗೊಳ್ಳುವ ಕಾನೂನುಗಳು, ಆರ್ಥಿಕ ನೀತಿ, ವಿಜ್ಙಾನದ ಅವಿಷ್ಕಾರ ಇವೆಲ್ಲವೂ ತಿರಸ್ಕಾರ ಯೋಗ್ಯ ಸಂಗತಿಗಳು ಎಂದು ಶೂ ಮಾಕರ್ ನಂಬಿದ್ದರು.  ನಿಜವಾದ  ಹಣದ ಮೌಲ್ಯ ಯಾವುದು?  ಹಣ ಮತ್ತು ಸಮಯದ ನಡುವಿನ ಸಂಬಂಧವೇನು? ನಿಜವಾದ ಶ್ರಮದ ಮಹತ್ವ ಅಂದರೆ ಏನು? ಅಭಿವೃದ್ಧಿಯ ಅಭಿವೃದ್ಧಿಯ ಅರ್ಥಗಳೇನು? ಇವು ಶೂ ಮಾಕರ್ ಆಧುನಿಕ ಜಗತ್ತಿಗೆ ಎಸೆದ ಸವಾಲುಗಳು. ನಿಸರ್ಗದ ನೈಜ ಕೊಡುಗೆಗಳನ್ನು ಸರಕಿನಂತೆ ನೋಡುವ ಆಧುನಿಕ ಜಗತ್ತಿನ ಆರ್ಥಿಕ ಮನೋಭಾವದ ಬಗ್ಗೆ ಶೂ ಮಾಕರ್ ತೀವ್ರ ಕಳವಳಗೊಂಡಿದ್ದರು. ಹಾಗಾಗಿ ಅವರು ಧ್ಯಾನಿಸುತ್ತಿದ್ದ ಮತ್ತು ರೂಪಿಸುತ್ತಿದ್ದ ಚಿಂತನೆಗಳೆಲ್ಲವೂ ಪರಿಸರಕ್ಕೆ ಎರವಾಗದಂತೆ ಪೂರಕವಾಗಿದ್ದವು. ಕೇವಲ ಮಾತನಾಡುವುದಕ್ಕೆ ಸೀಮಿತವಾಗದೆ, 1931 ರಲ್ಲಿ ಇಂಗ್ಲೆಂಡಿನಲ್ಲಿ ತಮ್ಮ ಮನೆಗೆ ಪ್ರಪಥಮವಾಗಿ ಸೋಲಾರ್ ದೀಪಗಳನ್ನು ಅಳವಡಿಸಿಕೊಂಡಿದ್ದರು. ಜೊತೆಗೆ ತಮ್ಮ ಬಿಡುವಿನ ವೇಳೆಯಲ್ಲಿ ತೋಟದಲ್ಲಿ ಕೆಲಸ ಮಾಡುತ್ತಾ ನಿಸರ್ಗದ ಕೊಡುಗೆಗಳನ್ನು ಗಮನಿಸುತ್ತಿದ್ದರು.
ತಮ್ಮ ಯವ್ವನದ ದಿನಗಳಿಂದ ರೂಡಿಯಲ್ಲಿದ್ದ ನಂಬಿಕೆಗಳನ್ನು, ಆಚರಣೆಗಳನ್ನು ಪ್ರಶ್ನಿಸುತ್ತಾ ಬಂದಿದ್ದ ಶೂ ಮಾಕರ್ ಗೆ ಮನುಷ್ಯ ಮತ್ತು ನಿಸರ್ಗದ ನಡುವಿನ ಕುರಿತಾದ ಚಿಂತನೆಯಲ್ಲಿ ಆಧ್ಯಾತ್ಮಿಕ ಸ್ಪರ್ಶವಿತ್ತು. ಹಾಗಾಗಿ ಅವರು. ಮನುಷ್ಯನ್ ದುರಾಸೆ, ಮಿತಿಯಲ್ಲದೆ ಅನುಭೋಗದ ಪ್ರವೃತ್ತಿ ಇವುಗಳನ್ನು ವಿರೋಧಿಸುತ್ತಿದ್ದರು. ನಿಸರ್ಗದ ಕೊಡುಗೆಗಳಾದ ನೀರು, ಗಾಳಿ, ಮಣ್ಣು, ಹಸಿರು ಇವೆಲ್ಲವೂ ಭೂಮಿಯ ಮೇಲಿರುವ ಪ್ರತಿಯೊಬ್ಬ ಜೀವಿಯ ಹಕ್ಕು ಆದರೆ, ಇವುಗಳು ಈಗ ಉಳ್ಳವರ ಸ್ವತ್ತಾಗಿವೆ ಎಂದು ವ್ಯಾಖ್ಯಾನಿಸುತ್ತಿದ್ದರು. ಸುಸ್ಥಿರ ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡಿದ್ದ ಶೂ ಮಾಕರ್, “ ನೀವು ನಿಸರ್ಗದ ಕೊಡುಗೆಗಳಿಗೆ ಪ್ರತಿಯಾಗಿ ಏನೂ ಕೊಡಲಾರದವರಾಗಿದ್ದರೆ, ಅವುಗಳನ್ನು ಅನುಭೋಗಿಸುವ ನೈತಿಕ ಹಕ್ಕು ನಿಮಗಿಲ್ಲ’ ಎಂದು ಭೋಧಿಸುತ್ತಿದ್ದರು. ಇಂಗ್ಲೆಂಡಿನ ಕಲ್ಲಿದ್ದಲು ಮಂಡಳಿಯಲ್ಲಿ ಇದ್ದಕೊಂಡು, 1940 ರ ದಶಕದಲ್ಲಿ, “ಮುಂದಿನ ದಿನಗಳಲ್ಲಿ ತೈಲ ಮತ್ತು ಆಹಾರಕ್ಕಾಗಿ ಮನುಷ್ಯ ಮನುಷ್ಯರ ನಡುವೆ ಯುದ್ಧಗಳು ನಡೆಯುತ್ತವೆ” ಎಂದು ಭವಿಷ್ಯ ನುಡಿದು, ಇವುಗಳ ಬಳಕೆಯಲ್ಲಿ ಮಿತಿ ಇರಬೇಕೆಂದು ಎಚ್ಚರಿಕೆ ನೀಡಿದ್ದರು.

1955 ರಲ್ಲಿ ಆಗಿನ ಬರ್ಮಾ ಸರ್ಕಾರದ ಆಹ್ವಾನದ ಮೇರೆಗೆ ಮೂರು ತಿಂಗಳ ಕಾಲ ಬರ್ಮಾ ದೇಶದಲ್ಲಿ ಪ್ರವಾಸ ಮಾಡಿ ಆ ದೇಶಕ್ಕೆ ಆರ್ಥಿಕ ನೀತಿಯನ್ನು ರೂಪಿಸಿಕೊಟ್ಟರು. ಅಲ್ಲಿನ ಜನಗಳಿಗೆ ಉದ್ಯೋಗ, ಆಹಾರ, ವಸತಿ ಇವುಗಳಿಗೆ ಕೊರತೆಯಾಗದಂತೆ, ಆರ್ಥಿಕ ನೀತಿಗಳು ಇರಬೇಕು ಜೊತೆಗೆ ಪಾಶ್ಚಿಮಾತ್ಯದ ಆಧುನಿಕತೆಯನ್ನು ಒಳಗೊಂಡಿದ್ದು, ಅದು ಯಾವ ಕಾರಣಕ್ಕೂ ಬೌದ್ಧ ಧರ್ಮದ ಸಂಸ್ಕೃತಿಗೆ  ಧಕ್ಕೆಯಾಗದಂತೆ ಇರಬೇಕೆಂಬುದು ಬರ್ಮಾ ಸರ್ಕಾರ ಅಪೇಕ್ಷೆಯಾಗಿತ್ತು. ಆಧುನಿಕತೆ ಮತ್ತು ನಿಸರ್ಗದ ಆರಾಧನೆ ಹಾಗೂ ಅಧ್ಯಾತ್ಮಿಕತೆ ಎರಡನ್ನೂ ಒಳಗೊಂಡಿದ್ದ ಶೂ ಮಾಕರ್ ನ ವರದಿಯನ್ನು ಬರ್ಮಾ ಸರ್ಕಾರ ಪೂರ್ಣ ಮನಸ್ಸಿನಿಂದ ಒಪ್ಪಿಕೊಳ್ಳದಿದ್ದರೂ, ಜಗತ್ತಿನಲ್ಲಿ ಪ್ರಥಮ ಬಾರಿಗೆ “ ಬುದ್ಧನ ಅರ್ಥಶಾಸ್ತ್ರ” ರೂಪುಗೊಳ್ಳಲು ಸಹಕಾರಿಯಾಯಿತು.
ಶೂ ಮಾಕರ್, ಗಾಂಧೀಜಿಯಿಂದ ನೇರ ಪ್ರಭಾವಿತರಾಗದಿದ್ದರೂ, ಅವರ ಚಿಂತನೆ ಮತ್ತು , ನಿಸರ್ಗ ಕುರಿತ ಕಾಳಜಿ ,ಮತ್ತು ಆರ್ಥಿಕ ನೀತಿಗಳಲ್ಲಿನ ದೂರ ದೃಷ್ಟಿಕೋನ ಇವೆಲ್ಲವೂ ಗಾಂಧೀಯವರ ಮುಂದುವರೆದ ಪರಂಪರೆಯ ಭಾಗಗಳೆಂದು ಕರೆಯಬಹುದು. ಗಾಂಧಿ ಹುಟ್ಟಿದ ನೆಲ ಎಂಬ ಕಾರಣಕ್ಕಾಗಿ ಭಾರತದ ಮೇಲೆ ಅಪಾರ ಪ್ರೀತಿ, ಗೌರವ ಮತ್ತು ಕುತೂಹಲ ಇಟ್ಟುಕೊಂಡಿದ್ದ ಶೂ ಮಾಕರ್ 1970 ರಲ್ಲಿ ಭಾರತ ಸರ್ಕಾರದ ಆಹ್ವಾನದ ಮೇರೆಗೆ ಪಂಚವಾರ್ಷಿಕ ಯೋಜನೆಗಳ ಸಲಹಾ ಮಂಡಳಿಯಲ್ಲಿ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದರು.
ಭಾರತಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿನ ಬಡತನ ಮತ್ತು ಬಡವರನ್ನು ನೋಡಿದ ಶೂ ಮಾಕರ್, “ “ಇವರು ತಮ್ಮದಲ್ಲದ ತಪ್ಪಿಗೆ ತಮ್ಮ  ಬದುಕಿನಲ್ಲಿ ಆತ್ಮವಿಶಾಸವನ್ನು ಕಳೆದುಕೊಂಡ ಅಸಹಾಯಕ ಮುಗ್ಧರು,” ಎಂದು ಬಣ್ಣಿಸಿದ್ದರು. ಇವರೊಳಗಿನ ಕರಕುಶಲತೆ, ವೃತ್ತಿ ಕೌಶಲ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗದ ಭಾರತದ ಸರ್ಕಾರದ ಅಸಮರ್ಥತೆಗೆ ತೀವ್ರವಾಗಿ ನೊಂದುಕೊಂಡಿದ್ದರು. ನಂತರ ತಾವೇ ಅಭಿವೃದ್ಧಿ ಪಡಿಸಿದ ಅಂತರ್ಗತ ತಂತ್ರಜ್ಙಾನ ( Inter mediate technology) ವನ್ನು ಭಾರತಕ್ಕೆ ಪರಿಚಯಿಸಿದರು. ಬಡವರಿಗೆ ತಾವಿರುವ ಪ್ರದೇಶಗಳಲ್ಲಿ, ತಮ್ಮ ಪರಿಮಿತಿಯೊಳಗೆ ಇರುವ ಜ್ಙಾನಕ್ಕೆ ಅನುಗುಣವಾಗಿ ಸಿಗುವ ಸಂಪನ್ಮೂಲಗಳನ್ನು ಹೇಗೆ ಪರಿಣಾಮಕಾರಿಯಾಗಿ ಗುಡಿಕೈಗಾರಿಕೆ ಗಳ ಮೂಲಕ ಬಳಸಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟರು. ಹೆಚ್ಚು ಬಂಡವಾಳವನ್ನು ಬೇಡದ ಹಾಗೂ ದುಡಿಯುವ ಕೈಗಳಿಗೆ ಕೆಲಸ ನೀಡುವ ಈ ಪರಿಕಲ್ಪನೆ ಗಾಂಧೀಜಿ ಚಿಂತನೆಗೆ ತೀರಾ ಹತ್ತಿರವಾಗಿತ್ತು, ಬಡ ಕುಶಲ ಕರ್ಮಿಗಳಿಗೆ ನೆರವಾಗುವ ದೃಷ್ಟಿಯಿಂದ ದೆಹಲಿ ಮತ್ತು ಲಕ್ನೊ ನಗರಗಳಲ್ಲಿ “ ಶೂ ಮಾಕರ್ ತರಬೇತಿ ಕೇಂದ್ರಗಳನ್ನುತೆರೆಯಲಾಯಿತು.( ಈ ಕೇಂದ್ರಗಳು ಈಗ ಇಂಗ್ಲೆಂಡ್ ನ ಜೀವಿಕ ಟ್ರಸ್ಟ್ ಮೂಲಕ ನಡೆಯುತ್ತಿವೆ, ಜೀವಿಕ ಟ್ರಸ್ಟ್ ಶೂ ಮಾಕರ್ ಕುಟುಂಬದ ಸದಸ್ಯರು ಸ್ಥಾಪಿಸಿರುವ ಸಂಸ್ಥೆ)
ಶೂ ಮಾಕರ್ ರವರ ಚಿಂತನೆ ಈಗ ನಮ್ಮ ನೆರೆಯ ಬಂಗ್ಲಾದ ಅರ್ಥಶಾಸ್ತ್ರಜ್ಙ ಮಹಮ್ಮದ್ ಯೂನಸ್ ಮೂಲಕ ಮುಂದುವರಿದಿದೆ. ಬಂಗ್ಲಾದ ಕಡುಬಡವರನ್ನು ಗುರುತಿಸಿ ಅವರ ವೃತ್ತಿ ಕೌಶಲ್ಯಕ್ಕೆ ನೆರವಾಗುವುದರ ಮೂಲಕ ಗ್ರಾಮೀಣ ಬ್ಯಾಂಕ್ ಅನ್ನು ಸ್ಥಾಪಿಸಿ, ಇಡೀ ವಿಶ್ವವನ್ನು ತಮ್ಮತ್ತ ತಿರುಗಿ ನೋಡುವಂತೆ ಮಾಡಿದ ಅಪ್ರತಿಮ ಸಾಹಸಿ ಡಾ.ಮಹಮ್ಮದ್ ಯೂನಸ್.
ಮನುಕುಲದ ಒಳಿತಿಗಾಗಿ ಜಾನ್ ರಸ್ಕಿನ್ ಅವರ ಎದೆಯಲ್ಲಿ ಹುಟ್ಟಿಕೊಂಡ ಪ್ರಬುದ್ಧ ಚಿಂತನೆಯೊಂದು, ಗಾಂಧಿಯ ಎದೆಗೆ ಹರಿದು, ಆನಂತರ ಜೆ.ಸಿ. ಕುಮಾರಪ್ಪ, ಶೂಮಾಕರ್ , ಮಹಮ್ಮದ್ ಯೂನಸ್ ಮುಂತಾದ ಮಹಾತ್ಮರ ಎದೆಗೆ ಗುಪ್ತ ನದಿಯಾಗಿ ಹರಿದು, ಈಗಲೂ ಹಲವರ ಎದೆಯೊಳಗೆ ಬತ್ತದ ಗಂಗೆಯಾಗಿ ಹರಿಯುತ್ತಿರುವು ನನ್ನ ಪಾಲಿಗೆ ಸೋಜಿಗದ ಸಂಗತಿಯಾಗಿದೆ.





ಶುಕ್ರವಾರ, ಅಕ್ಟೋಬರ್ 4, 2013

ಗಾಂಧೀಜಿ ಮತ್ತು ಭಗತ್ ಸಿಂಗ್


ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಭಗತ್ ಸಿಂಗ್ ಹೆಸರು ಅಜರಾಮರವಾದುದು. ಕೇವಲ ತನ್ನ ಇಪ್ಪತ್ಮೂರನೇ ವಯಸ್ಸಿಗೆ ಬ್ರಿಟೀಷರ ವಿರುದ್ದ ದಂಗೆಯೆದ್ದು ಸಾವಿಗೂ ಅಂಜದೆ, ಸಂಗಾತಿಗಳ ಜೊತೆ ನೇಣುಗಂಬವನ್ನೇರುವುದರ ಮೂಲಕ ತನ್ನ ಜೀವವನ್ನು ಬಲಿದಾನ ಮಾಡಿದ ಅಪ್ರತಿಮ ದೇಶ ಭಕ್ತ.
ಭಗತ್ ಸಿಂಗ್ ನ ಜೀವನ ಚರಿತ್ರೆ ಮತ್ತು ಆತನ ವಿಚಾರಧಾರೆಗಳು ಕನ್ನಡಿಗರಿಗೆ ಈಗಾಗಲೇ ಕನ್ನಡ ಭಾಷೆಯಲ್ಲಿ ಪ್ರಕಟವಾಗಿರುವ ಕೃತಿಗಳ ಮೂಲಕ ತಲುಪಿವೆ. ಅವುಗಳಲ್ಲಿ ನಾನೇಕೆ ನಾಸ್ತಿಕಎಂಬ ಕೃತಿ ಮುಖ್ಯವಾದುದು.
ಜೊತೆಗೆ ಭಗತ್ ಸಿಂಗ್ ಬರಹ ಮತ್ತು ಭಾಷಣಗಳುಕೃತಿಯ ವಿಶೇಷವೆಂದರೆ, ಭಗತ್ ಸಿಂಗ್ ನ ಭಾಷಣಗಳು ಮತ್ತು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ನೀಡಿದ ಹೇಳಿಕೆಗಳು, ತನ್ನ ತಂದೆ, ಹಾಗೂ ಗೆಳೆಯರು ಮತ್ತು ಸರ್ಕಾರಕ್ಕೆ ಬರೆದ ಪತ್ರಗಳು ಇವುಗಳ ಜೊತೆ ಜೊತೆಗೆ ಬ್ರಿಟೀಷ್ ಸರ್ಕಾರ, ಗಾಂಧಿ ಮತ್ತು ಅವರ ಚಿಂತನೆಗಳು, ದೇವರು, ಧರ್ಮ, ಕುರಿತಂತೆ ಭಗತ್ ಸಿಂಗ್ ನ ಮನೋಧರ್ಮ ಈ ಕೃತಿಯಲ್ಲಿ ಅಡಕವಾಗಿದೆ.
ದೇಶ ಭಕ್ತಿಯೆನ್ನುವುದು ಅನುಮಾನ ಮತ್ತು ಅಪಹಾಸ್ಯಕ್ಕೆ ಈಡಾಗಿರುವ ಈ ದಿನಗಳಲ್ಲಿ ಭಗತ್ ಸಿಂಗ್ ನಂತಹ ದೇಶ ಭಕ್ತರ ಬದುಕನ್ನು ಯಾವ ನೆಲೆಯಲ್ಲಿ ಗ್ರಹಿಸಬೇಕು ಎಂಬ ಪ್ರಶ್ನೆಗಳು ಕೂಡ ನಮ್ಮನ್ನು ಕಾಡುತ್ತಿವೆ. ಎಂದೋ ಬರೆದಿಟ್ಟ ಇತಿಹಾಸಗಳನ್ನು ಈಗ  ಪ್ರತಿಯೊಂದನ್ನು ಪ್ರಶ್ನಿಸಿ ಒಪ್ಪಿಕೊಳ್ಳುವ ಆಧುನಿಕ ಜಗತ್ತಿಗೆ ಬೈಬಲ್  ಅಥವಾ ಭಗವದ್ಗೀತೆ ಅಲ್ಲ. ಹಾಗಾಗಿ ಚರಿತ್ರೆಯನ್ನು ಮುರಿದು ಕಟ್ಟಬೇಕಾದ ಇಂದಿನ ಸಂದರ್ಭದಲ್ಲಿ ಯಾವುದೇ  ಘಟನೆಗಳ ಬಗ್ಗೆಯಾಗಲಿ, ವ್ಯಕ್ತಿಯ ಬಗ್ಗೆಯಾಗಲಿ ರಾಗ ದ್ವೇಷಗಳಿಲ್ಲದ, ನಿರ್ಲಿಪ್ತ, ಹಾಗೂ ನಿಷ್ಕಲ್ಮಷ ಮನೋಭಾವದಿಂದ ಪರಿಶೀಲಿಸುವ ಅಗತ್ಯವಿದೆ.ಆದ್ದರಿಂದ ಇತಿಹಾಸವನ್ನು ಮುರಿದ ಕಟ್ಟುವ ಸಂದರ್ಭದಲ್ಲಿ, ಸಂಭ್ರಮಕ್ಕಾಗಲಿ, ಸಂಕಟಗಳಿಗಾಗಲಿ ಎಡೆ ಇರಬಾರದು.
ಭಗತ್ ಸಿಂಗನ ನ ಬದುಕಿನಲ್ಲಿ ಬ್ರಿಟೀಷ್ ಸರ್ಕಾರದಿಂದ ಹಿಡಿದು, ಗಾಂಧಿ ಮತ್ತು ಕಮ್ಯೂನಿಷ್ಟರು ಹಾಗೂ ದೇಶ ಭಕ್ತರ ನಡೆದುಕೊಂಡ ಕೆಲವು ನಡೆಗಳನ್ನು ಮಾತ್ರ ಇಲ್ಲಿ ಪ್ರಸ್ತಾಪಿಸಲು ಬಯಸುತ್ತೇನೆ.
ಭಗತ್ ಸಿಂಗ್ ನ ವಿಚಾರಧಾರೆಗಳನ್ನು ಗಮನಿಸಿದಾಗ ಕೇವಲ ತನ್ನ ಇಪ್ಪತ್ಮೂರನೇ ವಯಸ್ಸಿಗೆ ಆತ ಇಂತಹ ಪ್ರಖರ ವೈಚಾರಿಕತೆಯ ಮನೋಭಾವವನ್ನು ಹೊಂದಲು ಸಾದ್ಯವಾಗಿತ್ತಾ? ಎಂದು ಆಶ್ಚರ್ಯವಾಗುತ್ತೆ. ಭಗತ್‍ಸಿಂಗ್‍ನ ಬಹುತೇಕ ಚಿಂತನೆಗಳು ಸೆರಮನೆಯ ವಾಸಬದುಕಿನಲ್ಲಿ ರೂಪುಗೊಂಡಿರುವುದು ವಿಶೇಷ.

ಭಗತ್ ಸಿಂಗ್‍ನಲ್ಲಿದ್ದ ಆತ್ಮ ಗೌರವ ಮತ್ತು ದೇಶ ಭಕ್ತಿ ವಿಚಾರಗಳ ಹಿಂದೆ ಆತನ ಕುಟುಂಬದ ಪ್ರಭಾವ ದಟ್ಟವಾಗಿದೆ. ಲಾಹೋರಿನ ಖಾಲ್ಸ ಹೈಸ್ಕೂಲಿಗೆ ಭಗತ್ ಸಿಂಗ್ ದಾಖಲಾಗುವ ಸಂದರ್ಭದಲ್ಲಿ  ಬ್ರಿಟೀಷ್ ಸರ್ಕಾರವನ್ನು ಓಲೈಸುತ್ತಿರುವ ಆ ಶಾಲೆಗೆ ಮೊಮ್ಮಗ ನನ್ನು ಸೇರಿಸಲು ಆತನ ತಾತ ವಿರೋಧಿಸಿದ್ದರು.  ಆರ್ಯ ಸಮಾಜವ ವತಿಯಿಂದ ನಡೆಯುತಿದ್ದ ದಯಾನಂದ ಆಂಗ್ಲೊ ನೇಟಿವ್ ಶಾಲೆಗೆ  ಭಗತ್ ನನ್ನು ಸೇರಿಸಿದ್ದರು. ನಂತರ ಭಗತ್ ಸಿಂಗ್ ಲಾಹೋರಿನ ನ್ಯಾಷನಲ್ ಕಾಲೇಜ್ ಸೇರುವ ವೇಳೆಗೆ ಅಪ್ರತಿಮ ಚರ್ಚಾಪಟುವಾಗಿ,  ದೇಶಪ್ರೇಮಿಯಾಗಿ, ಹಾಗೂ ನಾಟಕಕಾರನಾಗಿ ರೂಪುಗೊಂಡಿದ್ದ. 
ಕುತೂಹಲದ ಸಂಗತಿಯೆಂದರೇ ಆತ ಗಾಂಧೀಜಿ ವಿಚಾರಧಾರೆಗಳಿಗೆ ಹೈಸ್ಕೂಲಿನಲ್ಲಿ ಓದುತ್ತಿದ್ದಾಗಲೇ ಮನಸೋತು ಬ್ರಿಟೀಷ್ ಸರ್ಕಾರದ ಪಠ್ಯ ಪುಸ್ತಕಗಳು ಮತ್ತು ವಿದೇಶಿ ವಸ್ತ್ರಗಳನ್ನು ಬಹಿರಂಗವಾಗಿ ಸುಟ್ಟುಹಾಕಿದ್ದ. ಅವರ ಅಸಹಕಾರ ಚಳುವಳಿಗೆ 1920ರ  ಕಾಲೇಜು ದಿನಗಳಲ್ಲಿ ಕೈ ಜೋಡಿಸಿದ್ದ. 1921ರಲ್ಲಿ ಈಗಿನ ಪಾಕಿಸ್ಥಾನದಲ್ಲಿರುವ ನಾಂತನಾ ಸಾಹಿಬ್ ಗುರುದ್ವಾರದಲ್ಲಿ ಪ್ರತಿಭಟಿಸುತಿದ್ದ ಸಿಖ್ ಭಕ್ತರ ಮೇಲೆ ಗುಂಡು ಹಾರಿಸಿ ಕೊಂದು ಹಾಕಿದ ಪೊಲೀಸರ ವಿರುದ್ಧ ಗಾಂಧೀಜಿ ಪ್ರತಿಭಟಿಸಿದೆ ಮೌನ ತಾಳಿದಾಗ ಸಿಡಿದೆದ್ದ ಭಗತ್‍ಸಿಂಗ್  ಗಾಂಧಿಯ ವಿಚಾರ ಧಾರೆ ಮತ್ತು ಅಹಿಂಸೆ ಕುರಿತಾದ ನಂಬಿಕೆಗಳಿಗೆ ವಿದಾಯ ಹೇಳಿದ್ದ.
ಸ್ವಾತಂತ್ರ್ಯ ಪೂರ್ವದ ಕಾಂಗ್ರೇಸ್ ಪಕ್ಷದ ಬಗ್ಗೆ ಭ್ರಮ ನಿರಶನಗೊಂಡಿದ್ದ ಭಗತ್ ಸಿಂಗ್ ತನ್ನ ಮನೋಭಾವಕ್ಕೆ ತಕ್ಕಂತೆ ಅಂತಿಮವಾಗಿ  ಚಂದ್ರಶೇಖರ್ ಅಜಾದ್ ಮತ್ತು ಇತರರು ಸ್ಥಾಪಿಸಿದ್ದ ಹಿಂದೂಸ್ಥಾನ್ ರಿಪಬ್ಲಿಕ್ ಅಸೋಸಿಯೇಷನ್ಎಂಬ ಸಂಸ್ಥೆಯ ಜೊತೆ ಗುರುತಿಸಿಕೊಂಡಿದ್ದ.  ಈ ಸಂಘಟನೆಯ ಜೊತೆಗೂಡಿ ಅವನ ಸಂಗಾತಿಗಳು ಮತ್ತು ಅವನು ನಡೆಸಿದ ಎಲ್ಲಾ ಸಾಹಸಗಳು, ಕೃತ್ಯಗಳು ಈಗಾಗಲೇ ಭಗತ್ ಸಿಂಗ್ ಭಾಷಣಗಳು ಮತ್ತು ಬರಹಗಳು ಕೃತಿಯಲ್ಲಿ ದಾಖಲಾಗಿವೆ.
ಲಾಲಾಲಜಪತ್ ರಾಯ್ ಹತ್ಯೆಗೆ ಪ್ರತಿಯಾಗಿ ಬ್ರಿಟೀಷ್ ಸರ್ಕಾರದ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಪೊಲೀಸ್ ಅಧಿಕಾರಿಯ ಹತ್ಯೆ ಮತ್ತು ಕೇಂದ್ರ ಅಸೆಂಬ್ಲಿ ಸಭಾಂಗಣದಲ್ಲಿ ಬಾಂಬ್ ಸ್ಪೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಯಾದ ನಂತರ ಭಗತ್‍ಸಿಂಗ್ ನ ನಿಜವಾದ ವೈಚಾರಿಕತೆ ಮತ್ತು ಆತನ ದೇಶಪ್ರೇಮ  ಬೆಳಕಿಗೆ ಬಂತು.
ಲಾಹೋರ್ ಸೆರೆಮನೆಯಲ್ಲಿ ಬಂಧಿತರಾದ ಭಾರತೀಯರನ್ನು ಪ್ರಾಣಿಗಳಂತೆ ಉಪಚರಿಸುತಿದ್ದ ಬ್ರಿಟೀಷರ ಧೋರಣೆಯ ವಿರುದ್ಧ  ಸಿಡಿದೆದ್ದ ಭಗತ್ ಸಿಂಗ್ 116 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿ  ಬ್ರಿಟೀಷ್ ಸರ್ಕಾರವನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದ. ಖೈದಿಗಳಿಗೆ ಉತ್ತಮ ದರ್ಜೆಯ ಆಹಾರ, ವಸತಿ ಮತ್ತು ಆರೋಗ್ಯ ಸೇವೆ ದೊರೆಯಲು  ಕಾರಣಕರ್ತನಾಗಿದ್ದ. ನ್ಯಾಯಾಲಯದಲ್ಲಿ ವಿಚಾರಣೆ ಸಂದರ್ಭದಲ್ಲಿ ಭಗತ್ ಸಿಂಗ್ ಮಂಡಿಸಿದ ವಾದಗಳು, ನೀಡಿದ ಹೇಳಿಕೆಗಳು, ನಂತರ ವಿವಿಧ ಸಂದರ್ಭದಲ್ಲಿ ಆತ ಬರೆದ ಅನೇಕ ಪತ್ರಗಳು, ವಿವಿಧ ವಿಷಯಗಳ ಮೇಲೆ ಪತ್ರಿಕೆಗಳಿಗೆ ಸೆರೆಮನೆಯಿಂದಲೇ ಬರೆದ ಲೇಖನಗಳು ಪರೋಕ್ಷವಾಗಿ ಬ್ರಿಟೀಷ್ ಸರ್ಕಾರಕ್ಕೆ ನಡುಕವನ್ನುಂಟು ಮಾಡಿದ್ದವು.
ಈ ಕಾರಣಕ್ಕಾಗಿ ನಿಧನವಾಗಿ ನಡೆಯುತಿದ್ದ ವಿಚಾರಣೆಯನ್ನು ತ್ವರಿತಗೊಳಿಸಿದ ಸರ್ಕಾರ ಕೆಲವೇ ತಿಂಗಳ ಅವಧಿಯಲ್ಲಿ ಭಗತ್ ಸಿಂಗ್ ಮತ್ತು ಆತನ ಸಂಗಡಿಗರನ್ನು ನೇಣುಗಂಬಕ್ಕೇರಿಸಿತು.  ಅಂದಿನ ವೈಸ್ ರಾಯ್ ಲಾರ್ಡ್ ಇರ್ವಿನ್ 1930ರ ಮೇ 1ರಂದು ಭಾರತದಲ್ಲಿ ತುರ್ತು ಪರಿಸ್ಥಿತಿಯನ್ನು  ಘೋಷಿಸಿ, ಮೇ 5ರಿಂದ ತ್ವರಿತ ವಿಚಾರಣೆಗೆ ಆದೇಶ ನೀಡಿದ್ದನು. ಅದರಂತೆ ಲಾಹೋರ್ ನಗರದ ಪೂಂಚ್ ಹೌಸ್ ನಲ್ಲಿ ವಿಚಾರಣೆ ಆರಂಭವಾಯಿತು. ಜುಲೈ 2ರಂದು ನ್ಯಾಯಮಂಡಳಿಯಲ್ಲಿದ್ದ ನ್ಯಾಯಾಧೀಶರನ್ನು ಬದಲಿಸಿ, ಮೂವರು ಬ್ರಿಟೀಷ್ ನ್ಯಾಯಧೀಶರರು ಇರುವಂತೆ ನೋಡಿಕೊಂಡಿದ್ದ ವೈಸ್‍ರಾಯ್ ಇರ್ವಿನ್ ಬ್ರಿಟೀಷ್ ಸರ್ಕಾರಕ್ಕೆ  ಇದ್ದ ಸೇಡಿನ ಮನೋಭಾವವನ್ನು ಬಹಿರಂಗಗೊಳಿಸಿದ್ದ.
ಭಗತ್ ಸಿಂಗ್ ಮತ್ತು ಅವನ ಸಂಗಾತಿಗ ವಿಚಾರಣೆಯ ನಂತರ 1930ರ ಅಕ್ಟೋಬರ್ 31 ರಂದು ಈ ಮೂವರು ಬ್ರಿಟೀಷ್ ನ್ಯಾಯಧೀಶರನ್ನು ಒಳಗೊಂಡಿದ್ದ ಪೀಠ 300 ಪುಟಗಳ ತೀರ್ಪನ್ನು  ಪ್ರಕಟಿಸಿತು. ಬಾಂಬ್ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಇವರಿಗೆ ಮರಣದಂಡನೆಯನ್ನು ವಿಧಿಸಿ, ಉಳಿದ ಹನ್ನೆರೆಡು ಮಂದಿಗೆ ಕಠಿಣ ಜೀವಾವಧಿ ಶಿಕ್ಷೆಯನ್ನು  ನೀಡಲಾಗಿತ್ತು. ಶಿಕ್ಷೆ ಪ್ರಕಟವಾದ ಸಂದರ್ಭದಲ್ಲಿ ಗಲ್ಲುಶಿಕ್ಷೆಗೆ ಎದೆಗುಂದ ಭಗತ್ ಸಿಂಗ್ ನನ್ನ ಬಾಯಿಗೆ ಬಂದೂಕ ಇಟ್ಟು ಗುಂಡು ಹಾರಿಸಿದರೂ ನಾನು ಚಿಂತಿಸುವುದಿಲ್ಲ ಏಕೆಂದರೆ, ನಾನು ಸಾವಿನ ಭಯದಿಂದ ದೂರವಾಗಿದ್ದೇನೆಎಂದಿದ್ದ.
ಅಂತಿಮವಾಗಿ 1931 ಮಾರ್ಚ್ 24ರಂದು ಮ್ಯಾಜಿಸ್ಟ್ರೇಟ್ ಅನುಪಸ್ಥಿತಿಯಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ ಬ್ರಿಟೀಷ್ ಸರ್ಕಾರ ಸಂಜೆ 7.30ರ ಸಮಯದಲ್ಲಿ ಮೂವರನ್ನು ಗಲ್ಲಿಗೇರಿಸಿತು. ನಂತರ ಮಧ್ಯರಾತ್ರಿ ಸಟ್ಲೇಜ್ ನದಿಯ ದಡದ ಹುಸೇನಿವಾಲ ಎಂಬ ಸ್ಥಳದಲ್ಲಿ ಗುಪ್ತವಾಗಿ ಭಗತ್ ಸಿಂಗ್ ಮತ್ತು ಸಹಚರರಅಂತ್ಯಸಂಸ್ಕಾರವನ್ನು ನೆರೆವೇರಿಸಲಾಯಿತು.
 ಭಗತ್ ಸಿಂಗ್ ನನ್ನು ನೇಣಿಗೆ ಹಾಕುವ ಕೆಲವೇ ಗಂಟೆಗಳ ಹಿಂದೆ ಆತನಿಗೆ ಮಾಹಿತಿ ನೀಡಲಾಗಿತ್ತು. ಆ ದಿನ ಅವನು ಸೆರೆಮನೆಯಲ್ಲಿ ರಷ್ಯಾದ ಕ್ರಾಂತಿ ಕಾರಿ ನಾಯಕ ಲೆನಿನ್ರವರ ಆತ್ಮ ಚರಿತ್ರೆ ಓದುತಿದ್ದ.
ಘಟನೆಗೆ ಸಂಬಂಧಿಸಿದಂತೆ ಬ್ರಿಟೀಷ್ ಸರ್ಕಾರದ ಕ್ಷಮೆ ಕೇಳಲು ನಿರಾಕರಿಸಿದ್ದ ಭಗತ್ ಕೊನೆಯ ದಿನಗಳಲ್ಲಿ ತನ್ನ ಗೆಳೆಯ ಕಾಮ್ರೇಡ್ ಬ್ರಿಜೋನ್ ಕುಮಾರ್ ಸಿನ್ಹಾ ಇವರ ಒತ್ತಾಯ ಮಣಿದು, ತೀರ್ಪು ಕುರಿತಂತೆ ಮರುಪರಿಶೀಲನೆಗಾಗಿ ಬ್ರಿಟೀಷ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದ.
ಇಂದಿಗೂಗೂ ಭಗತ್‍ಸಿಂಗ್ ನ ಸಾವು ಮತ್ತು ಕಾಂಗ್ರೇಸ್ ಪಕ್ಷ ಹಾಗೂ ಮಹಾತ್ಮ ಗಾಂಧಿಯವರ ನಡುವಳಿಕೆ  ಕುರಿತಂತೆ ಅಸಮಾಧಾನ ಮತ್ತು ವಿವಿಧ ಬಗೆಯ ಹೇಳಿಕೆಗಳು ಇತಿಹಾಸದಲ್ಲಿ ದಾಖಲಾಗಿವೆ. ಇವೆಲ್ಲವನ್ನು  ಕೂಲಂಕುಶವಾಗಿ ಪರಿಶೀಲಿಸಿದಾಗ ಭಗತ್ ಸಿಂಗ್ ನ ಜೀವ ಉಳಿಸಲು ಗಾಂಧಿ ಮತ್ತು ಕಾಂಗ್ರೇಸ್ ಪಕ್ಷದ ಪದಾಧಿಕಾರಿಗಳು ಎಲ್ಲರೂ ಶ್ರಮಿಸಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.. 1931 ರ ಪೆಬ್ರವರಿ 14 ರಂದು ಕಾಂಗ್ರೇಸ್ ಪಕ್ಷದ  ಅಧ್ಕಕ್ಷ್ಷರಾಗಿದ್ದ ಮದನ್ ಮೋಹನ್ ಮಾಳವೀಯ ವೈಸ್ ರಾಯ್ ಇರ್ವಿನ್ ನನ್ನು ಬೇಟಿ ಮಾಡಿ,ಭಗತ್ ಸಿಂಗ್ ಗೆ  ಜೀವಧಾನ ನೀಡುವಂತೆ ಮನವಿ ಸಲ್ಲಿಸಿದ್ದರು.
ಗಲ್ಲು ಶಿಕ್ಷೆ ಜಾರಿಗೆ ತರುವ ಉದ್ದೇಶದಿಂದ ಸಿಮ್ಲಾ ಪ್ರವಾಸವನ್ನು ಮೊಟಕುಗೊಳಿಸಿ ದೆಹಲಿಗೆ ವಾಪಸ್ಸಾಗಿದ್ದ ಲಾರ್ಡ್‍ಇರ್ವಿನ್ ನನ್ನು ಮಾರ್ಚ್ 19 ರಂದು ಗಾಂಧೀಜಿ ಸಹ ಬೇಟಿಯಾಗಿ ಮನವಿ ಮಾಡಿರುವುದನ್ನು ವೈಸ್ ರಾಯ್ ತನ್ನ ದಿನಚರಿಯಲ್ಲಿ ದಾಖಲಿಸಿಕೊಂಡಿದ್ದಾನೆ. ಗಾಂಧಿಯವರ ಬೇಟಿಯಿಂದ ನನಗೆ ಇರಿಸು ಮುರುಸು ಉಂಟಾಯಿತು. ಅವರ ಬೇಡಿಕೆಗೆ ಯಾವ ಭರವಸೆಯನ್ನೂ ನೀಡಲಿಲ್ಲ. ಕಾನೂನಿನ  ಪ್ರಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದೆ ಎಂದು ಇರ್ವಿನ್ ತನ್ನ ದಿನಚರಿಯಲ್ಲಿ ದಾಖಲಿಸಿದ್ದಾನೆ. ಅದರೂ ಕೂಡ ಭಗತ್ ಸಿಂಗ್ ಮರಣಾ ನಂತರ ಗಾಂಧೀಜಿ ಮತ್ತು ಕಾಂಗ್ರೇಸ್ ಪಕ್ಷ ದೇಶ್ಯಾದಂತ ತೀವ್ರ ಟೀಕೆ ಮತ್ತು ಪ್ರತಿಭಟನೆಗಳನ್ನು ಎದುರಿಸಬೇಕಾಯಿತು. ಮಾರ್ಚ್ ಕೊನೆಯ ವಾರ ಕರಾಚಿ   ನಗರದಲ್ಲಿ ನಡೆದ ಕಾಂಗ್ರೇಸ್ ಸಮಾವೇಶದಲ್ಲಿ ಗಾಂಧೀಜಿ ಕಪ್ಪು ಬಾವುಟದ ಪ್ರದರ್ಶನ ಎದುರಿಸಬೇಕಾಯಿತು. ಓರ್ವ ಯುವಕ ಗಾಂಧಿ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದ.
1931ರ ಮಾರ್ಚ್ ತಿಂಗಳ 29ಯಂಗ್ ಇಂಡಿಯ ಪತ್ರಿಕೆಯಲ್ಲಿ ಭಗತ್‍ಸಿಂಗ್ ಮತ್ತು ಸಂಗಾತಿಗಳ ಮರಣ ದಂಡನೆಯನ್ನು ಪ್ರಸ್ತಾಪಿಸಿರುವ ಗಾಂಧೀಜಿ, ಭಗತ್ ಅಸಹಾಯಕತೆಯಿಂದಾಗಿ ಅನಿವಾರ್ಯವಾಗಿ ಹಿಂಸೆಯ ಹಾದಿಯನ್ನು ತುಳಿಯಬೇಕಾಯಿತೇ ಹೊರತು ಆತ ಎಂದೂ ಹಿಂಸೆಯ ಪ್ರತಿಪಾದಕನಾಗಿರಲಿಲ್ಲ ಎಂದಿದ್ದಾರೆ. ಆತನ ಧೈರ್ಯವನ್ನು, ದೇಶ ಭಕ್ತಿಯನ್ನು ಶ್ಲಾಘನೆ ಮಾಡಿರುವ ಅವರು ಯಾರೂ ಆತನ ಹಾಗೆ ಹಿಂಸೆಯ ಹಾದಿ ತುಳಿಯಬಾರದು ಎಂದಿದ್ದಾರೆ, ಅನಕ್ಷರಸ್ತರು, ಅಂಗವಿಕಲರು ಅಪಾರ ಸಂಖ್ಯೆಯಲ್ಲಿ ಇರುವ ಈ ದೇಶದ ಸ್ವಾತಂತ್ರ್ಯದ ಹೋರಾಟಕ್ಕೆ ಹಿಂಸೆಯಿಂದ ಯಾವುದೇ ಪ್ರತಿಫಲ ಸಿಗಲಾರದು ಎಂದಿದ್ದಾರೆ. ಗಾಂಧೀಜಿಯವರ ಈ ನಿಷ್ಟುರ ಅಭಿಪ್ರಾಯದಮಾತುಗಳಿಗೆ ನಮ್ಮ ಸಹಮತ ಇದೆಯಾದರೂ ಅವರು ಬ್ರಿಟೀಷರ ಮೇಲೆ ಒತ್ತಡ ಹೇರುವುದರ ಮೂಲಕ  ಮೂವರ ಪ್ರಾಣ ಉಳಿಸಬಹುದಿತ್ತು ಎಂಬ ಸಣ್ಣ ಅಸಮಾಧಾನದ ಭಾವವೊಂದು ಮನಸ್ಸಿನಲ್ಲಿ ಹಾಗೇಯೇ ಉಳಿದು ಬಿಡುತ್ತದೆ.
ಭಗತ್ ಸಿಂಗ್‍ನ ಈ ದುರಂತದ ಬದುಕು ಮತ್ತು ಬಲಿದಾನ ಅಂದಿನ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ  ಹೊಸ ಆಯಾಮವನ್ನು ತಂದುಕೊಟ್ಟಿತು. ಹೋರಾಟಗಾರರಿಗೆ ಸ್ಪೂರ್ತಿಯಾಯಿತು. ದುರಂತವೆಂದರ, ತನ್ನ ಪ್ರಖರ ವಿಚಾರಗಳಿಂದ ಪ್ರಸಿದ್ದಿ ಪಡೆದ ಹುತಾತ್ಮ ಭಗತ್ ಸಿಂಗ್ ವರ್ತಮಾನದ  ಈ ದಿನಗಳಲ್ಲಿ ಹಲವು ಸಂಘಪರಿವಾರದ ಸಂಘಟನೆಗಳ ಖಾಸಾಗಿ ಸ್ವತ್ತಾಗಿದ್ದಾನೆ.
ನಾನೇಕೆ ನಾಸ್ತಿಕ ಎಂಬ ಕೃತಿಯ ಮೂಲಕ ದೇವರು, ಧರ್ಮ ಇವುಗಳ ಕುರಿತು ಮಾತನಾಡಿರುವ ವೈಚಾರಿಕ ಪ್ರತಿಭೆ ಭಗತ್ ಸಿಂಗ್ ಈಗ ಹಿಂದೂ ದೇಶ ಭಕ್ತರು ಎಂಬ ಆರೋಪ ಹೊತ್ತಿರುವ ಕೋಮುವಾದಿ ಸಂಘಟನೆಗಳಿಗೆ ಮಾದರಿಯಾಗಿದ್ದಾನೆ. ಅದೇ ರೀತಿ ಖ್ಯಾತ ಇತಿಹಾಸಕಾರ ಕೆ.ಎನ್. ಪಣಿಕ್ಕರ್ ಹೇಳುವಂತೆ ಭಗತ್ ಸಿಂಗ್ ಭಾರತದ ಮೊಟ್ಟ ಮೊದಲ ಮಾರ್ಕ್ಸ್ ವಾದಿ ಎಂಬ ಮಾತನ್ನು  ಒಪ್ಪುವದಾದರೂ, ಆತ ಎಂದೂ ತನ್ನ ಜೀವಿತದಲ್ಲಿ ಕಮ್ಯೂನಿಷ್ಟ್ ಪಕ್ಷದ ಕಾರ್ಯಕರ್ತನಾಗಿರಲಿಲ್ಲ. ಆದರ ಎಡ ಪಂಥೀಯ ವಿಚಾರಧಾರೆ ಅದರಲ್ಲೂ ರೈತರು, ಕೂಲಿಕಾರ್ಮಿಕರು ಇವರ ಬಗ್ಗೆ ಕಮ್ಯೂನಿಷ್ಟರಂತೆ ಕಾಳಜಿ ಹೊಂದಿದ್ದ. ಜೊತೆಗೆ  ರಷ್ಯಾ ಕ್ರಾಂತಿಯಿಂದ ಸ್ಪೂತಿಗೊಂಡಿದ್ದ ಇದೇ ಕಾರಣಕ್ಕಾಗಿ ಇಂದು ಹಿಂಸೆ ಮತ್ತು ನೆತ್ತರಿನ ನದಿಯಲ್ಲಿ ಮಿಂದೇಳುತ್ತಿರುವ ಮಾವೋವಾದಿ ನಕ್ಸಲರಿಗೂ ಸಹ ಭಗತ್ ಸಿಂಗ್ ಸ್ಪೂರ್ತಿಯಾಗಿದ್ದಾನೆ.
ಈ ದೇಶದ ದುರಂತವೆಂದರೇ, ಮನುಕುಲಕ್ಕೆ ಬೆಳಕಾಗ ಬಲ್ಲ ಚಿಂತನೆಗಳನ್ನ ನೀಡಿದ ಎಲ್ಲಾ ಮಹಾತ್ಮರನ್ನ, ಮತ್ತು ದಾರ್ಶನೀಕರನ್ನ ನಾವು  ಮತ್ತೆ ಮತ್ತೇ ಅವರವರ ಕುಲ, ಜಾತಿಯ ನೆಲೆಗಳಿಗೆ   ಕೊಂಡೊಯ್ದು ಬಂಧಿಸಿ ಇಡುತ್ತಿದ್ದೇವೆ. ಇಂತಹ  ನಾಯಕರನ್ನು ಜಾತಿ ಮತ್ತು ಧರ್ಮದ ಹಾಗೂ ಸ್ವಾರ್ಥದ ಸಂಕೋಲೆಗಳಿಂದ ಬಿಡುಗಡೆಗೊಳಿಸಿ,  ಅವರ ವಿಚಾರಗಳನ್ನು ಈ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ನಾವು ಯೋಜನೆಗಳನ್ನು ಅನುಷ್ಟಾನಗೊಳಿಸಬೇಕಿದೆ. ಭಗತ್ ಸಿಂಗ್ ನ ಬದುಕು ಹೋರಾಟ ಒಂದು ರೀತಿಯಲ್ಲಿ ಮಾದರಿಯಾದರೇ, ಮತ್ತೊಂದು ರೀತಿಯಲ್ಲಿ ಅವನು ಹಿಡಿದ ಹಿಂಸೆಯ ಹಾದಿ ಎಚ್ಚರಿಕೆಯ ಸಂದೇಶವಾಗಬಲ್ಲದು. ಈ ಕಾರಣಕ್ಕಾಗಿಯೇ ಇದನ್ನು ನಾನು ಚರಿತ್ರೆಯನ್ನುಮುರಿದು ಕಟ್ಟುವ ಸಂಭ್ರಮ ಮತ್ತು ಸಂಕಟ ಎಂದು ಕರೆಯಲು ಇಚ್ಚಿಸುತ್ತೀನಿ.
ಭಗತ್ ಸಿಂಗ್ ನ ಎಲ್ಲಾ ವಿಚಾರಗಳು ಮತ್ತು ಆ ದಿನಗಳ ಗಾಂಧೀಜಿಯ ನಡುವಳಿಕೆಗಳು ವಿಶೇಷವಾಗಿ, ಪೂನಾ ಒಪ್ಪಂಧ, ಕಾಂಗ್ರೇಸ್ ಪಕ್ಷದ ಅದ್ಯಕ್ಷ ಸ್ಥಾನಕ್ಕೆಸುಭಾಷ್ ಚಂದ್ರಬೋಸ್ ರನ್ನು ಒಪ್ಪಿಕೊಳ್ಲಲು ನಿರಾಕರಿಸಿದ್ದು, ಹಾಗೂ ಭಗತ್ ಸಿಂಗ್ ಜೀವ ಉಳಿಸುವಲ್ಲಿ ತೀವ್ರವಾಗಿ ಪ್ರತಿಭಟಿಸುವ ಸಾದ್ಯತೆಗಳು ಇದ್ದರೂ ಕೂಡ ನಿಸ್ತೇಜರಾದ ಸಂಗತಿ ಹೀಗೆ ಇವೆಲ್ಲವೂ   ದಿನಗಳಿಗೆ ಪ್ರಸ್ತುತ ಎಂದು ಅನಿಸದಿದ್ದರೂ ಕೂಡ , ಗಾಂಧಿ ಮತ್ತು ಭಗತ್ ಸಿಂಗ್ ನನ್ನು ಅರಿಯಲು,, ಮತ್ತು ಇಂದಿನ ಯುವ ಜನಾಂಗ ತಮ್ಮ  ಹೋರಾಟದ ಹಾದಿ ಕುರಿತಂತೆ ಸ್ಪಷ್ಟತೆಯನ್ನು  ಕಂಡು ಕೊಳ್ಳಲು ಸಹಾಯವಾಗುತ್ತವೆ.

.

ಮಂಗಳವಾರ, ಅಕ್ಟೋಬರ್ 1, 2013

ಗಾಂಧಿ ಎಂಬ ಧ್ಯಾನ

ಗಾಂಧೀಜಿ ನಮ್ಮನ್ನಗಲಿ 65 ವರ್ಷ ಕಳೆದರೂ, ಭಾರತದಲ್ಲಿ ಮಾತ್ರವಲ್ಲ ವಿಶ್ವದೆಲ್ಲೆಡೆ ಅನೇಕ ಪ್ರಜ್ಞಾವಂತರಲ್ಲಿ ಇಂದಿಗೂ ಕಾಡುತ್ತಿರುವ ವಿಶಿಷ್ಟ ವ್ಯಕ್ತಿತ್ವ ಅವರದು.
                        ನಮ್ಮ ಬದುಕಿನಲ್ಲಾದ ಬದಲಾವಣೆ, ಆಲೋಚನಾ ಕ್ರಮ, ತಲೆಮಾರುಗಳ ದೃಷ್ಟಿಕೋನದಲ್ಲಿರುವ ಅಂತರ ಹಾಗು ಸ್ಮøತಿಗೆ ತಂದುಕೊಳ್ಳಲಾರದಷ್ಟು ಅಸಹಾಯಕತೆಗೆ ದೂಡಲ್ಪಟ್ಟಿರುವ ಸ್ವಾತಂತ್ರ್ಯ ಹೋರಾಟದ ನೆನಪುಗಳು ಇವೆಲ್ಲವುಗಳ ನಡುವೆಯೂ ಗಾಂಧೀಜಿ ಇನ್ನೂ ಎಲ್ಲರೆದೆಯಲ್ಲಿ ಹಸಿರಾಗಿದ್ದಾರೆ.
                        ಬೆಂಕಿಯಷ್ಟೇ ಮನುಷ್ಯನನ್ನು ಕೊಲ್ಲಬಲ್ಲದು ಎಂದುಕೊಂಡಿದ್ದ ಜಗತ್ತಿಗೆ, ತಣ್ಣಗಿನ ಮಂಜುಗೆಡ್ಡೆಯೂ ಮನುಷ್ಯನನ್ನು ಕೊಲ್ಲಬಲ್ಲದು ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟವರು ಗಾಂಧೀಜಿ.
                        20 ನೇ ಶತಮಾನದ ಅದ್ವಿತೀಯ ವ್ಯಕ್ತಿಯಾಗಿ ಲಂಡನ್‍ನ ಟೈಮ್ಸ್ ಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ ಗಾಂಧೀಜಿ ಆಯ್ಕೆಯಾದಾಗ ಯಾರಿಗೂ ಅಚ್ಚರಿಯಾಗಲಿಲ್ಲ. ಅಷ್ಟೇ ಏಕೆ? ಇಂಗ್ಲೀಷ್ ಪಾಕ್ಷಿಕ `ದಿ ವೀಕ್'’ ಪತ್ರಿಕೆಯ ಸಮೀಕ್ಷೆಯಲ್ಲಿ ಇಂದಿನ ಯುವ ಜನಾಂಗ ವಿಶೇಷವಾಗಿ ಉನ್ನತ ವ್ಯಾಸಂಗದಲ್ಲಿ ನಿರತರಾಗಿರುವ ವಿದ್ಯಾರ್ಥಿಗಳು ಗಾಂಧೀಜಿಯ ಬಗ್ಗೆ ಆಸಕ್ತಿ ತಳೆದಿರುವುದು ಕಂಡುಬಂದಿದೆ.
                        ಇಂದಿಗೂ ಅಂತರಾಷ್ಟ್ರೀಯ ಪ್ರಕಾಶನ ಸಂಸ್ಥೆಗಳಲ್ಲಿ ಪ್ರತಿ ವರ್ಷ ಗಾಂಧಿ ಬಗೆಗಿನ ಕೃತಿಗಳ ಲಕ್ಷಾಂತರ ಪ್ರತಿಗಳು ಮಾರಾಟವಾಗುತ್ತಿವೆ. ನಿಧಾನವಾಗಿಯಾದರೂ ಜಗತ್ತಿಗೆ ಗಾಂಧೀಜಿಯಂತಹ ವ್ಯಕ್ತಿತ್ವಗಳು ಅರ್ಥವಾಗುತ್ತಿರುವುದು ಸಮಾಧಾನಕರ ಸಂಗತಿ.
                        ಈ ದೇಶ, ಸಮುದಾಯ, ಸಮಾಜ ದಾರಿಕಾಣದೆ ದಿಕ್ಕೆಟ್ಟಾಗಲೆಲ್ಲಾ ನಮಗೆ ನೆನಪಾಗುವುದು ಗಾಂಧಿ ಮತ್ತು ಅವರ ಚಿಂತನೆಗಳು.
                        1948 ರ ಜನವರಿಯಲ್ಲಿ ಹಂತಕನ ಗುಂಡಿಗೆ ಬಲಿಯಾಗುವ ಮುನ್ನ `ಗಾಂಧಿವಾದ' ಎಂಬುದು ತಲೆಯೆತ್ತಬಾರದು ಎಂದು ಗಾಂಧೀಜಿ ಅಪೇಕ್ಷಿಸಿದ್ದರು. `ಯಾವುದೇ ತತ್ವ-ಸಿದ್ಧಾಂತಗಳನ್ನು ನಾನು ಹುಟ್ಟುಹಾಕಿದೆನೆಂದು ಜಗತ್ತು ಹೇಳಬಾರದು. ಶಾಶ್ವತ ಸತ್ಯಗಳನ್ನು ನಮ್ಮ ದಿನ ನಿತ್ಯದ ಬದುಕು ಮತ್ತು ಸಮಸ್ಯೆಗಳಿಗೆ ನನ್ನದೇ ಆದ ರೀತಿಯಲ್ಲಿ ಅನ್ವಯಿಸಲು ನಾನು ಪ್ರಯತ್ನಿಸಿದೆ ಅಷ್ಟೆ' ಎಂಬುದು ಗಾಂಧಿಯವರ ನಿಲುವಾಗಿತ್ತು.
                        ಮಾನವ ಸಹಜ ಪ್ರವೃತ್ತಿಗಳಾದ ಹಲವಾರು ದೌರ್ಬಲ್ಯಗಳನ್ನು ಹೊಂದಿದ್ದ ಗಾಂಧಿ `ರಾಷ್ಟ್ರಪಿತ'ನೆಂದುಎಲ್ಲರಿಂದ ಕರೆಸಿಕೊಂಡರೂ, ಅವರು ತಮ್ಮ ಕುಟುಂಬದ ಜೊತೆ ಪತಿಯಾಗಿ, ತಂದೆಯಾಗಿ ನಡೆದುಕೊಂಡ ರೀತಿಇಂದಿಗೂ ಚರ್ಚೆಗೆ ಒಳಪಟ್ಟಿದೆ. ದೇಶದ ಹಿತಾಸಕ್ತಿಗಾಗಿ ತಮ್ಮ ಕುಟುಂಬದ ಹಿತಾಸಕ್ತಿಯನ್ನು ಬಲಿಕೊಟ್ಟ ಗಾಂಧೀಜಿಯ ಬದುಕೆಂದರೆ ಅದೊಂದು ರೀತಿ, `ತನ್ನ ಗುಡಿಸಲಿಗೆ ಬೆಂಕಿ ಹಚ್ಚಿಕೊಂಡು ಊರಿಗೇ ಬೆಳಕಾಗುವ ಪರಿ'. ಅಲ್ಲಿ ಸ್ವಾರ್ಥಕ್ಕೆ ಎಡೆಯಿಲ್ಲ.
               
         ಆಫ್ರಿಕಾದ ಡರ್ಬಾನ್ ರೈಲು ನಿಲ್ದಾಣದಲ್ಲಿ ವರ್ಣಬೇಧ ನೀತಿಯ ದೌರ್ಜನ್ಯಕ್ಕೆ ಸಿಲುಕಿ ರೈಲಿನ ಬೋಗಿಯಿಂದ ಹೊರಗೆ ಎಸೆಯಲ್ಪಟ್ಟಾಗ, ಗಾಂಧಿ ಅದರಲ್ಲೂ ಬ್ಯಾರಿಸ್ಟರ್ ಆಗಿದ್ದ ಗಾಂಧಿ ಅದೊಂದು ವೈಯಕ್ತಿಕ ನೋವು-ಅಪಮಾನ ಎಂದು ಭಾವಿಸಿದ್ದರೆ, ದಕ್ಷಿಣ ಆಫ್ರಿಕಾದ ಜನತೆಗೆ ಬಿಳಿಯರಿಂದ ಮೋಕ್ಷವೆಂಬುದು ಸಿಗುತ್ತಲೇ ಇರಲಿಲ್ಲ. ವೈಯಕ್ತಿಕ ನೋವಿಗಿಂತ ಸಮುದಾಯದ ನೋವು ಮುಖ್ಯವೆಂದು ಗಾಂಧಿ ಪರಿಗಣಿಸಿದರು. ಈ ಗುಣವೇ ಅವರನ್ನು ಜಗದ್ವಿಖ್ಯಾತರನ್ನಾಗಿಮಾಡಿತು.
                        ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿದ್ದ ನೆಲ್ಸನ್ ಮಂಡೇಲಾ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ಪತ್ರಕರ್ತನೊಬ್ಬ, ಗಾಂಧೀಜಿಯಿಂದಾಗಿ ದಕ್ಷಿಣ ಆಫ್ರಿಕಾದಲ್ಲಿ ಕರಿಯರಿಗೆ ಬಿಳಿಯರಿಂದ ಬಿಡುಗಡೆ ಸಿಕ್ಕಿತು ಎಂದಾಗ,ಮಂಡೇಲಾ ಹೌದು ನೀವು ಆಫ್ರಿಕಾಕ್ಕೆ ಮೋಹನದಾಸ ಕರಮಚಂದ ಗಾಂಧಿಯನ್ನು ಕಳಿಸಿಕೊಟ್ಟಿರಿ, ನಾವು ಅವರನ್ನು ಮಹಾತ್ಮ ಗಾಂಧೀಜಿಯನ್ನಾಗಿ ಕಳಿಸಿಕೊಟ್ಟೆವು ಎಂದು ಅರ್ಥಪೂರ್ಣವಾಗಿ ವ್ಯಾಖ್ಯಾನಿಸಿದ್ದರು.
                        `ಶಕ್ತಿಯೇ ಸರ್ವಸ್ವ' ಎಂದು ನಂಬಿರುವ ಆಧುನಿಕ ಜಗತ್ತಿಗೆ ಗಾಂಧೀಜಿಯ ತತ್ವ ಹಾಗು ಚಿಂತನೆಗಳನ್ನು ಅರಗಿಸಿಕೊಳ್ಳುವುದು ಕಷ್ಟ. ಸಮಾಜದಲ್ಲಿ ಎಲ್ಲರಿಗೂ ಸಮಾನತೆ, ಸಮೃದ್ಧಿ, ನ್ಯಾಯ ದೊರಕಿಸಿ ಕೊಡುವುದು ರಾಮರಾಜ್ಯದ ಕಲ್ಪನೆ. ವ್ಯಕ್ತಿಯೊಬ್ಬನ ಉನ್ನತಿಯ ಜೊತೆಗೆ ಸಮುದಾಯದ ಅಭಿವೃದ್ಧಿಗೆ ಜೀವನಾಂಶ ಒದಗಿಸಿ ಕೊಡುವುದು ಅಗತ್ಯ ಎಂದು ಗೌತಮ ಬುದ್ಧ ಪ್ರತಿಪಾದಿಸಿದ್ದ. ದಾರ್ಶನಿಕ ಜಾನ್ ರಸ್ಕಿನ್ ಸರಳ ಬದುಕು ಅಗತ್ಯವೆಂದು ಒತ್ತಿಹೇಳುತ್ತಾ, ಮನುಷ್ಯನನ್ನು ದುರ್ಬಲಗೊಳಿಸುವ, ಸ್ವಾರ್ಥಿಯನ್ನಾಗಿ ರೂಪಿಸುತ್ತಿರುವ ಆಧುನಿಕ ಅರ್ಥವ್ಯವಸ್ಥೆಯನ್ನು ಟೀಕಿಸಿದ್ದನು. ಇವೆಲ್ಲವುಗಳಿಂದ ಗಾಂಧೀಜಿ ಪ್ರಭಾವಿತರಾಗಿದ್ದರು. ಈ ಕಾರಣಕ್ಕಾಗಿ ನೂರು ವರ್ಷಗಳ (1908) ಹಿಂದೆ ಅವರು ಹಿಂದ್ ಸ್ವರಾಜ್ ಕೃತಿ ಬರೆಯುವ ಮುನ್ನವೇ ಆಧುನಿಕ ಬದುಕಿನ ಎಲ್ಲಾ ಆಡಂಬರಕ್ಕೆ ಬೆನ್ನು ತಿರುಗಿಸಿ,ಪೂರ್ಣತೆಯ ಬದುಕಿನ ಹಾದಿಯ ಅನ್ವೇಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
                        ಬ್ರಿಟೀಷರ ಗುಲಾಮಗಿರಿಯಲ್ಲಿ ಸಿಲುಕಿ ನರಳುತ್ತಿರುವ ಭಾರತಕ್ಕೆ ಹಿಂಸೆ ಮಂತ್ರದಂಡವಲ್ಲ, ಅದಕ್ಕೆ ಪರ್ಯಾಯವಾಗಿ ಭಾರತೀಯ ಸಂಸ್ಕøತಿಯ ಹಿನ್ನೆಲೆಯಲ್ಲಿ ಶ್ರೇಷ್ಟವಾದ ಅಸ್ತ್ರವೊಂದು ಭಾರತಕ್ಕೆ ಬೇಕಾಗಿದೆ ಎಂದು ನಂಬಿದ್ದ ಗಾಂಧಿ, ಅಣುಬಾಂಬ್‍ಗಿಂತ ಪ್ರಭಲವಾದ `ಅಹಿಂಸೆ' ಎಂಬ ಅಸ್ತ್ರವನ್ನು ಜಗತ್ತಿಗೆ ಕೊಟ್ಟರು.
                        ಯಾರನ್ನೂ ಹಿಂಸಿಸದೆ, ತನ್ನನ್ನು ತಾನು ಹಿಂಸಿಸಿಕೊಳ್ಳುವುದರ ಮೂಲಕ (ಉಪವಾಸ, ಧರಣಿ) ಎದುರಾಳಿ ಯ ಮನೋಸ್ಥೈರ್ಯವನ್ನು ಕುಗ್ಗಿಸುವ, ಮಣಿಸುವ ಈ ಅಹಿಂಸಾ ಸತ್ಯಾಗ್ರಹದ ಪರಿಕಲ್ಪನೆ ಗಾಂಧೀಜಿ ಜಗತ್ತಿಗೆನೀಡಿದ ಬಹುದೊಡ್ಡ ಕೊಡುಗೆಯಾಗಿದೆ.
     
                 1960 ರ ದಶಕದಲ್ಲಿ ಇಂಗ್ಲೆಂಡಿನ ಪ್ರಸಿದ್ಧ ಅರ್ಥಶಾಸ್ತ್ರಜ್ಞ `ಶೊಮಾಕರ್' ನನ್ನ ಸಿದ್ಧಾಂತಗಳಲ್ಲಿ ಗಾಂಧೀಜಿಯವರ ಅಹಿಂಸಾ ತತ್ವಗಳನ್ನು ಕಾಣಬಹುದಾಗಿದೆ ಎಂದನಲ್ಲದೆ, ಗಾಂಧಿಯ ತತ್ವಗಳನ್ನು ಪಾಶ್ಚಾತ್ಯ ಬುದ್ಧಿಜೀವಿಗಳಿಗೆಅರ್ಥೈಸಲು ಪ್ರಯತ್ನಿಸಿದ. ಅಷ್ಟೇ ಅಲ್ಲದೆ `ಸಣ್ಣದು ಸುಂದರ' (ಸ್ಮಾಲ್ ಈಸ್ ಬ್ಯೂಟಿಫುಲ್) ಎಂಬ ಅರ್ಥಶಾಸ್ತ್ರದ ಕೃತಿ ರಚಿಸಿ ಜಗತ್ತನ್ನು ತಲ್ಲಣಗೊಳಿಸಿದ. ಶೊಮಾಕರ್ ಗಾಂಧೀಜಿಯವರಿಂದ ಪ್ರಭಾವಿತನಾಗುವಷ್ಟು ಅವರ ತತ್ವ-ಸಿದ್ಧಾಂತಗಳು ಪರಿಣಾಮಕಾರಿಯಾಗಿದ್ದವು. ಅವುಗಳನ್ನು ಅರ್ಥಮಾಡಿಕೊಂಡವರಲ್ಲಿ ಶೊಮಾಕರ್ ಮತ್ತು ಕುಮಾರಪ್ಪಪ್ರಮುಖರು.
                        ಗಾಂಧೀಜಿಯ ಗ್ರಾಮಸ್ವರಾಜ್ಯದ ಪರಿಕಲ್ಪನೆಯಲ್ಲಿ ಜನತಾಂತ್ರಿಕ ರಾಜಕೀಯ ಆಶಯಗಳು ಮತ್ತು ಮಾರುಕಟ್ಟೆ ಆರ್ಥಿಕತೆಯ ಆಶಯಗಳು ಪರಸ್ಪರ ವಿರುದ್ಧ ದಿಕ್ಕಿನ ಭಿನ್ನ ನೆಲೆಗಳಲ್ಲಿ ಚಲಿಸುತ್ತವೆ. ತಮ್ಮ ಏಳಿಗೆಗೆಅವಶ್ಯಕವಾದ ನಿರ್ಧಾರಗಳನ್ನು ಜನರೇ ತೆಗೆದುಕೊಳ್ಳುತ್ತಾರೆ. ಇದು ಜನತಾಂತ್ರಿಕ ವ್ಯವಸ್ಥೆಯಲ್ಲಿ ಮಾತ್ರ ಸಾಧ್ಯ. ಇಂತಹ ಸಾಮೂಹಿಕ ನಿರ್ಧಾರ ತಳಮಟ್ಟದ ಸಮುದಾಯಗಳದ್ದು, ಈ ಪ್ರತಿಕ್ರಿಯೆ ಶಕ್ತಿಶಾಲಿಯಾಗಿರುತ್ತದೆ. ಮಾರುಕಟ್ಟೆ ಆಶಯ ಇದಕ್ಕೆ ತದ್ವಿರುದ್ಧವಾದುದು. ಜನತೆ ತಮ್ಮ ಬದುಕನ್ನು ತಾವೇ ರೂಪಿಸಿಕೊಳ್ಳುವ ಸಾಧ್ಯತೆ ಬಗ್ಗೆ ಚಿಂತಿಸುವುದಾದರೆ, ಮಾರುಕಟ್ಟೆ ವ್ಯವಸ್ಥೆ ಸ್ಥಳೀಯ ನೆಲೆಗಳಿಗೆ ವಿಕೇಂದ್ರೀಕರಣಗೊಳ್ಳುವುದು ಅನಿವಾರ್ಯವಾಗುತ್ತದೆ.
ಇಂತಹ ಸ್ಥಳೀಯ ನೆಲೆಗಳು ಜೀವಂತವಿರುವುದು ದೇಶೀ ಸಂಸ್ಕøತಿಯಲ್ಲಿ ಮಾತ್ರ. ಗ್ರಾಮ ಸಂಸ್ಕøತಿಯು ನಮ್ಮ ಪೂರ್ವಿಕರ ದರ್ಶನದಲ್ಲಿ ಅಡಕವಾಗಿರುವ ಮಾನವೀಯ ಮುಖವುಳ್ಳದ್ದಾಗಿದ್ದು ಅದು ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದಿದೆ.
ಶೈಕ್ಷಣಿಕ ಅಥವಾ ಅರ್ಹತೆಯ ಹಂಗಿಲ್ಲದ ಜನಪದರ ಪ್ರಾದೇಶಿಕ ತಿಳುವಳಿಕೆಯ ರೂಪವಾದ ದೇಶೀಯ ಪಾರಂಪರಿಕ ವಿಜ್ಞಾನ-ತಂತ್ರಜ್ಞಾನಗಳು ನಮ್ಮ ಪಾಲಿಗೆ ಲೋಕದರ್ಶನಗಳಾಗಿವೆ. ಈ ಸತ್ಯವನ್ನು ಗಾಂಧೀಜಿ ಮನಗಂಡಿದ್ದರು. ನಮ್ಮ ಪೂರ್ವಿಕರ ಈ ಜ್ಞಾನ ಶಾಖೆಗಳ ವೈಶಿಷ್ಟ್ಯವೆಂದರೆ, ಇವುಗಳು ಸ್ಥಳೀಯ ಸಂದರ್ಭ-ಅಗತ್ಯಗಳಿಗೆ ತಕ್ಕಂತೆ ರೂಪಾಂತರಗೊಳ್ಳುವ ಶಕ್ತಿ ಪಡೆದಿವೆ. ಇಂತಹ ಲೋಕವಿದ್ಯೆ ಪೂರ್ಣ ಪ್ರಮಾಣದಲ್ಲಿ ವಿಕಾಸವಾಗಿ, ಕ್ರಿಯಾರೂಪದಲ್ಲಿ ಪ್ರಕಟಗೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತ್ರ ಎಂಬುದು ಗಾಂಧೀಜಿಯವರ ಅಚಲ ನಂಬಿಕೆಯಾಗಿತ್ತು.
  21 ನೇ ಶತಮಾನದ ಬಂಡವಾಳಶಾಹಿ ಹಾಗು ಮಾರುಕಟ್ಟೆ ಪ್ರಭುತ್ವದ ಏಕಮುಖ ನೀತಿಯ ಕೂಸಾದ ಜಾಗತೀಕರಣ ಪ್ರಭಾವದ ಈ ಸಂದರ್ಭದಲ್ಲಿ ಬೇಸಾಯಗಾರರು, ಕಸುಬುದಾರರು, ದಲಿತರು, ಆದಿವಾಸಿಗಳು, ಮಹಿಳೆಯರು, ಬುಡಕಟ್ಟು ಜನಾಂಗದವರು ಸೇರಿದಂತೆ, ಶೇ.80 ರಷ್ಟು ಗ್ರಾಮಭಾರತದ ಜನತೆ ಈ ಪಾರಂಪರಿಕ ಜ್ಞಾನದಮೂಲ ವಾರಸುದಾರರಾಗಿದ್ದಾರೆ. ಇದನ್ನು ನಿರ್ಲಕ್ಷಿಸಿ, ಗಾಂಧಿಯನ್ನು ಮರೆತು ಆತ್ಮಹತ್ಯೆಯ ಹಾದಿಯಲ್ಲಿ ನಾವು ಸಾಗಿದ್ದೇವೆ.
                        ವರ್ತಮಾನದ ಜಗತ್ತು ಅನುಭವಿಸುತ್ತಿರುವ ಆರ್ಥಿಕ ಹಿಂಜರಿತ, ನಿರುದ್ಯೋಗ, ಬಡತನ, ಭಯೋತ್ಪಾದನೆ, ಹಿಂಸೆ ಇವೆಲ್ಲಕ್ಕೂ ಗಾಂಧೀಜಿಯ ಚಿಂತನೆಗಳಲ್ಲಿ, ಸಿದ್ಧಾಂತಗಳಲ್ಲಿ ಪರಿಹಾರ ಇದೆ ಎಂಬುದನ್ನು ಆಧುನಿಕ ಜಗತ್ತು ಮರೆತಿದೆ.
                        ಗಾಂಧಿಯವರಿಂದ ಪ್ರಭಾವಿತರಾದ ಜೆ.ಸಿ.ಕುಮಾರಪ್ಪ ಬರೆದ ಶಾಶ್ವತ ಅರ್ಥಶಾಸ್ತ್ರ ಎಂಬ ಕೃತಿ ಈ ಕ್ಷಣದಎಲ್ಲಾ ಸವಾಲುಗಳಿಗೆ ಪರಿಹಾರವಾಗಬಲ್ಲದು. ಅದನ್ನು ಅರ್ಥಮಾಡಿಕೊಳ್ಳುವ ಮನಸ್ಸುಗಳು ಬೇಕಾಗಿವೆ ಅಷ್ಟೆ.
                        ತಮಿಳುನಾಡು ಮೂಲದ ಕುಮಾರಪ್ಪ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಪದವಿ ಪಡೆದುಆಧುನಿಕ ಅರ್ಥಶಾಸ್ತ್ರಜ್ಞರಾಗಿ ರೂಪುಗೊಂಡಿದ್ದರು. ಮುಂಬೈ ನಗರದಲ್ಲಿ ಅಕೌಂಟೆಂಟ್ ಆಗಿ ತಮ್ಮದೇ ಸಂಸ್ಥೆ ಸ್ಥಾಪಿಸಿಕೊಂಡಿದ್ದ ಇವರು ಗಾಂಧೀಜಿಯವರ ಸಂಪರ್ಕಕ್ಕೆ ಬಂದ ನಂತರ ತಮ್ಮ ಪಾಶ್ಚಿಮಾತ್ಯ ಶೈಲಿಯ ಉಡುಪಿಗೆ ವಿದಾಯ ಹೇಳಿ ಖಾದಿಗೆ ಶರಣು ಹೋದರು. ಮನುಷ್ಯ ಸಂಪತ್ತು ಸೃಷ್ಟಿಸುವವನು ಮಾತ್ರವಲ್ಲ, ರಾಜಕೀಯ, ಆಧ್ಯಾತ್ಮಿಕ,ನೈತಿಕ ಜವಾಬ್ದಾರಿ ಹೊಂದಿದ ಸಮಾಜದ ಸದಸ್ಯ ಎಂಬುದು ಕುಮಾರಪ್ಪನವರ ನಂಬಿಕೆಯಾಗಿತ್ತು.
           
           ಗಾಂಧೀಜಿಯವರಂತೆ ಅವರಿಗೆ ಹೊಸದಾಗಿ ಹೇಳಲು ಏನೂ ಇರಲಿಲ್ಲ. ನಿಸರ್ಗದಲ್ಲಿ ಜೀವ ಜಂತುಗಳುಹೇಗೆ ಪರಸ್ಪರ ಪರಾವಲಂಬಿಗಳಾಗಿ ಬದುಕುತ್ತವೆ ಎಂಬುದನ್ನು ಗಮನಿಸಿದರು. ಇದರಿಂದ ಮನುಷ್ಯ ಕಲಿಯಬಹುದಾದಪಾಠವನ್ನು ಗ್ರಹಿಸಿದರು. ಪ್ರಕೃತಿ ತನ್ನ ಎಲ್ಲಾ ಘಟಕಗಳ ಸಹಕಾರ ಬಯಸುತ್ತದೆ. ಪ್ರತಿಯೊಂದು ತನ್ನಷ್ಟಕ್ಕೆ ತಾನು ಕೆಲಸ ಮಾಡುತ್ತಾ, ಈ ಪ್ರಕ್ರಿಯೆಯಲ್ಲಿ ಸಮಾಜದ ಬೇರೆ ಬೇರೆ ಘಟಕಗಳು ಅದರದರ ಕೆಲಸ ಮಾಡಲು ಅನುವುಮಾಡಿಕೊಡುತ್ತದೆ. ಓಡಾಡಬಲ್ಲವರು ಓಡಾಡದವರಿಗೆ, ಬುದ್ಧಿ ಇರುವವರು ಬುದ್ಧಿ ಇಲ್ಲದವರಿಗೆ ನೆರವು ನೀಡುವಂತೆ,ನಿಸರ್ಗದಲ್ಲಿ ಪ್ರತಿಯೊಂದೂ ಸಾಮಾನ್ಯ ಉದ್ದೇಶಕ್ಕಾಗಿ ಒಂದನ್ನೊಂದು ಹೊಂದಿಕೊಂಡಿರುತ್ತವೆ. ಹಿಂಸೆ ಎಂಬುದು ಈಸರಪಳಿಯನ್ನು ಒಡೆಯದೆ, ಇವೆಲ್ಲವೂ ಸುಸೂತ್ರವಾಗಿ ನಡೆದಲ್ಲಿ ಶಾಶ್ವತ ಅರ್ಥಶಾಸ್ತ್ರ ಜನ್ಮ ತಾಳುತ್ತದೆ. ಕುಮಾರಪ್ಪನವರು ಶಾಶ್ವತ ಅರ್ಥಶಾಸ್ತ್ರದೊಂದಿಗೆ ನಶ್ವರ ಅರ್ಥಶಾಸ್ತ್ರವನ್ನು ಹೋಲಿಸಿದರು. ದೊಡ್ಡ ಪ್ರಮಾಣದಲ್ಲಿ ರಸಾಯನಿಕಗೊಬ್ಬರ, ಕೀಟ ನಾಶಕ ಬಳಸಿ ಆ ಮೂಲಕ ಅಲ್ಪ ಕಾಲದವರೆಗೆ ಅತಿಹೆಚ್ಚು ಇಳುವರಿ ಪಡೆಯುವ ನಾಟಕೀಯ ದೃಶ್ಯವಾಗಿ ನಶ್ವರ ಅರ್ಥಶಾಸ್ತ್ರ ಗೋಚರಿಸುತ್ತದೆ. ಇದರ ಪರಿಣಾಮವಾಗಿ ಭೂಮಿ ನಾಶವಾಗುತ್ತದೆಂದು, ಆಹಾರದಲ್ಲಿ ಸ್ವಾವಲಂಬಿಯಾಗುವ ಬದಲು ವಾಣಿಜ್ಯ ಬೆಳೆಗಳಿಗೆ ಆದ್ಯತೆ ನೀಡಿದಲ್ಲಿ ಮುಂದಾಗುವ ಅಪಾಯದ ಬಗ್ಗೆ ಅವರುಎಚ್ಚರಿಸಿದ್ದರು.
                        `ಪೂರ್ಣವಾಗಿ ಹಣ ಅಥವಾ ಲೌಕಿಕ ವಸ್ತುಗಳ ಮೌಲ್ಯದ ಆಧಾರದ ಮೇಲೆ ಕಟ್ಟಿದ ಅರ್ಥಶಾಸ್ತ್ರ ಸಮಯಮತ್ತು ಸ್ಥಳೀಯ ವಾಸ್ತವಿಕ ಹಿನ್ನೆಲೆಯನ್ನು ಪಡೆದುಕೊಳ್ಳುವುದಿಲ್ಲ. ಇದರಿಂದ ಹಿಂಸೆ ಮತ್ತು ನಾಶ ಆರಂಭವಾಗಿಜಗತ್ತು ಈ ಸಂಕಷ್ಟದಿಂದ ಪಾರಾಗಲು ಯಾವ ಮಾರ್ಗವೂ ಇರಲಾರದು'. ಇದು ಕುಮಾರಪ್ಪ ಹಾಗು ಗಾಂಧೀಜಿಯ ವರ ಅಚಲ ನಂಬಿಕೆಯಾಗಿತ್ತು.
                        ಆಧುನಿಕ ಜಗತ್ತು ಹಿಂಸೆಗೆ ದೂಡಲ್ಪಟ್ಟಿರುವ ಈ ಸಂದರ್ಭದಲ್ಲಿ, ಸ್ವಾತಂತ್ರ್ಯೋತ್ತರ ಭಾರತದ ರಾಜಕಾರಣದಲ್ಲಿ ಗಾಂಧೀಜಿ ಮತ್ತವರ ಚಿಂತನೆಗಳು ನಿರ್ಲಕ್ಷ್ಯಕ್ಕೊಳಗಾದ ಪರಿಣಾಮದ ಫಲವನ್ನು ನಾವು ಅನುಭವಿಸುತ್ತಿದ್ದೇವೆ. ಸರಳತೆ-ಸಮಾನತೆ- ಸ್ವಾವಲಂಬನೆ ಮುಂತಾದ ಗಾಂಧೀಜಿಯವರ ಪರಿಕಲ್ಪನೆಗಳು ಸನ್ಯಾಸತ್ವದ ಲಕ್ಷಣಗಳಲ್ಲ ಎಂಬುದನ್ನು ಆಧುನಿಕ ಜಗತ್ತು ಅರಿಯಬೇಕಿದೆ.
ಈ ಅರಿವು ನಮ್ಮನ್ನು ಆವರಿಸಿಕೊಂಡಾಗಲೇ ಮಹಾತ್ಮ ಗಾಂಧೀಜಿ ನಮಗೆ ಅರ್ಥವಾಗಲು ಸಾಧ್ಯ.
             
                          (ಮಾಹಿತಿ ಸೌಜನ್ಯ :- ರಜನಿ ಭಕ್ಷಿಯವರ `ಬಾಪು ಕುಟಿ' ಕೃತಿಯಿಂದ)  

(ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. ಇವರು ಪ್ರಕಟಿಸುರುವ ನನ್ನ ಕೃತಿ” ಗಾಂಧಿ ಎಂಬ ಧ್ಯಾನ” ಪುಸ್ತಕದಿಂದ )