ಶುಕ್ರವಾರ, ಡಿಸೆಂಬರ್ 20, 2013

ಮಣಿಪುರ ಮಾನಿನಿಯರ ನೋವಿನ ಕಥನ



ಸಲಿಂಗ ಕಾಮ ಅಪರಾಧ ಎಂಬ ತೀರ್ಪು ಸರ್ವೋಚ್ಚ ನ್ಯಾಯಾಲಯದಿಂದ ಹೊರಬಿದ್ದ ಮೇಲೆ ಕಳೆದ ಹದಿನೈದು ದಿನಗಳಿಂದ ದೇಶಾದ್ಯಂತ ನಡೆಯುತ್ತಿರುವ ಚರ್ಚೆ ಮತ್ತು ಪ್ರತಿಭಟನೆ ಹಾಗೂ ಈ ತೀರ್ಪಿಗೆ ಪರ್ಯಾಯ ಕಂಡುಕೊಳ್ಳುವಲ್ಲಿ ನಡೆಸುತ್ತಿರುವ ಕೇಂದ್ರ ಸರ್ಕಾರದ ಗಂಭೀರ ಚಿಂತನೆಗಳನ್ನು ನೀವೆಲ್ಲಾ ಗಮನಿಸುತ್ತಿದ್ದೀರಿ, ಈಗಾಗಲೇ  ತೀರ್ಪು ಮರಿಪರಿಶೀಲಗೆಗಾಗಿ ಸರ್ಕಾರ, ನ್ಯಾಯಾಲಯಕ್ಕೆ  ಅರ್ಜಿ ಸಲ್ಲಿಸಿದೆ
ಮನುಷ್ಯನೊಬ್ಬನ ವಿಕೃತಿಯ ಪರಮಾವಧಿಯ ಹಂತ ಎನ್ನ ಬಹುದಾದ ಈ ಅಸಹಜ ಕ್ರಿಯೆಗೆ ದೇವಾಲಯದ ಶಿಲ್ಪಗಳನ್ನು ಮತ್ತು ಪುರಾಣ, ಇತಿಹಾಸದ ಸಂಗತಿಗಳನ್ನು ಆಧಾರವಾಗಿಟ್ಟು ಸಮರ್ಥನೆ ಮಾಡುತ್ತಿರುವವರ ನಡೆವಳಿಕೆಗಳನ್ನು ಗಮನಿಸಿದರೆ, ನಾವು ಎತ್ತ ಸಾಗುತ್ತಿದ್ದೇವೆ ಎಂಬುದು ಅರ್ಥವಾಗುವುದಿಲ್ಲ. ಇತ್ತೀಚೆಗೆ ತಮಿಳುನಾಡಿನ ದೇವಾಲಯದ ಗೋಡೆಗಳಲ್ಲಿ ಯೋಧನೊಬ್ಬ ತನ್ನ ಕುದುರೆಯೊಂದಿಗೆ ಮೈಥುನದಲ್ಲಿ ತೊಡಗಿರುಕೊಂಡಿರುವ ಶಿಲ್ಪವನ್ನು ಗಮನಿಸಿದೆ. ರಾಜನೊಬ್ಬನ ಯುದ್ಧದ ದಾಹಕ್ಕೆ ಹಲವಾರು ದಿನಗಳ ಕಾಲ ಮನೆ ತೊರೆದು ಬಂದು ಯುದ್ಧ ಭೂಮಿಯಲ್ಲಿ ಹೋರಾಡುವ ಸೈನಿಕನೊಬ್ಬನ ಕಾಮದ ವಾಂಚೆ ಮತ್ತು ದುರಂತ ಇದೆಂದು ನನಗೆ ಆ ಶಿಲ್ಪ ತೋರಿತು.
ಇವೊತ್ತು ಪ್ರಗತಿಪರ ಚಿಂತಕರು ಎನಿಸಿಕೊಳ್ಳಬೇಕಾದರೆ, ಲಿಂಗ ತಾರಾತಮ್ಯ ಹೋಗಲಾಡಿಸುವುದರ ಜೊತೆಗೆ, ಸಲಿಂಗ ಕಾಮವನ್ನು ಸಮರ್ಥಿಸಿಕೊಳ್ಳಬೇಕು ಎಂಬ ಭಾವನೆ ದಟ್ಟವಾಗಿ ಸಮಾಜದಲ್ಲಿ ಬೇರೂರುತ್ತಿದೆ. ಮದುವೆಯಾದ ಗಂಡು ಹೆಣ್ಣು ಒಟ್ಟಿಗೆ ಬಾಳಿ ಬದುಕಲಾಗದೆ ದಾಂಪತ್ಯ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸುವವರ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಿರುವ ಸಂಗತಿ ಒಂದು ಕಡೆಯಾದರೆ, ಈ ವಿಕೃತ ಕಾಮಿಗಳು ಇನ್ನೊಂದು ಕಡೆ.  ಸಲಿಂಗ ಕಾಮದ ಬಗ್ಗೆ ಯಾರ ಒಲವು ಏನೇ ಆಗಿರಲಿ, ನಾನು ಆ ಕುರಿತು ಯೋಚಿಸುವುದು ಸಹ ಅಸಹ್ಯಕರ ಸಂಗತಿ ಮತ್ತು ಅದೊಂದು  ಅನೈಸರ್ಗಿಕ ಕ್ರಿಯೆ  ಎಂಬುದು ನನ್ನ ವೈಯಕ್ತಿಕ ನಿಲುವು. ಇಲ್ಲಿ ಆ ಕುರಿತು ಚರ್ಚೆ ಅನಾವಶ್ಯಕ.
ಭಾರತದ ಬಡತನ, ಹಸಿವು, ಅನಕ್ಷರತೆಯಷ್ಟೇ ಸಮನಾಗಿ ಸಲಿಂಗಕಾಮ ಕೂಡ  ಒಂದು ಜ್ವಲಂತ ಸಮಸ್ಯೆ ಎಂದು ಪರಿಗಣಿಸಿರುವ  ಈ ಸಮಾಜಕ್ಕೆ  ನನ್ನದೊಂದಿಷ್ಟು ಪ್ರಶ್ನೆಗಳಿವೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ  ಈಶಾನ್ಯ ರಾಜ್ಯಗಳ ಸಮಸ್ಯೆಗಳೇನು ಅಥವಾ  ಅಲ್ಲಿನ ಜನ ಅನುಭವಿಸುತ್ತಿರುವ ನೋವು ನಲಿವುಗಳೇನು ಎಂಬುದರ ಕುರಿತು ಚರ್ಚೆಗಳಾಗಿವೆಯೆ? ಮಣಿಪುರದ ಮಾನಿನಿಯರು ಅನುಭವಿಸುತ್ತಿರುವ ಅಪಮಾನ, ಅತ್ಯಾಚಾರ, ಹಿಂಸೆ ಮತ್ತು ಸಾವುಗಳಿಗಿಂತ  ಈ ಸಲಿಂಗ ಕಾಮ ಆದ್ಯತೆಯ ವಿಚಾರವೆ? ಅಲ್ಲಿನ ಮಹಿಳೆಯರ ಮೇಲೆ ಭಾರತದ ಮಿಲಿಟರಿ ಪಡೆಯಿಂದ  ನಡೆಯುತ್ತಿರುವ  ದೌರ್ಜನ್ಯ , ಕೊಲೆ , ಅತ್ಯಾಚಾರ ಪ್ರತಿಭಟಿಸಿ, ಕಳೆದ ಹದಿಮೂರು  ವರ್ಷಗಳಿಂದ ( 2 -11- 2000) ಅನ್ನ, ನೀರು ತ್ಯಜಿಸಿ, ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಮಣಿಪುರದ ಇವೊನ್ ಶರ್ಮಿಳಾ ಎಂಬ ಹೋರಾಟಗಾರ್ತಿಯ ನೋವು, ಸಂಕಟ ನಮ್ಮಗಳ ಎದೆಯ ಕದವೆನ್ನೇಕೆ ತಟ್ಟುತ್ತಿಲ್ಲ.?
ಈಶಾನ್ಯ ರಾಜ್ಯಗಳಾದ ಅಸ್ಸಾಂ , ಅರುಣಾಚಲಂ, ಮಣಿಪುರ, ನಾಗಲ್ಯಾಂಡ್, ಮಿಜೋರಾಂ,ರಾಜ್ಯಗಳ ಸಮಸ್ಯೆಗೆ ಹಲವು ಆಯಾಮಗಳಿವೆ. ಆದರೆ, ಅಲ್ಲಿನ ಬುಡಕಟ್ಟು ಜನಾಂಗಗಳ ಹಿಂಸೆ, ಸಂಘರ್ಷ ಮತ್ತು ಪ್ರತಿಭಟನೆಯ ಹುಟ್ಟಡಗಿಸಲು ಕೇಂದ್ರ ಸರ್ಕಾರ, 1952 ರ ಮೇ 22 ರಂದು ವಿಶೇಷ ಕಾನೂನನ್ನು ಜಾರಿಗೆ ತಂದಿತು, ಇದರ ಅನ್ವಯ ಜಮ್ಮು ಕಾಶ್ಮಿರ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಭಾರತೀಯ ಸೇನೆಗೆ ನೀಡಿದ ವಿಶೇಷ ಪರಮಾಧಿಕಾರ ( Armed forces Special powers Act)  ( AFSPA)  ಈಶಾನ್ಯ ರಾಜ್ಯಗಳ ಮಾನಿನಿಯರ ಮಾನ ಮತ್ತು ಪ್ರಾಣ ಹತ್ಯೆಗೆ ಕಾರಣವಾಗಿದೆ. ಆದರೆ, ನಮ್ಮನ್ನಾಳಿದ ಕೇಂದ್ರ ಸರ್ಕಾರಗಳು ಈಶಾನ್ಯ ರಾಜ್ಯಗಳು ಭಾರತದ ಅವಿಭಾಜ್ಯ ಅಂಗ ಎಂಬ ಅಂಶವನ್ನು ಮರೆತು ಎಷ್ಟೋ ವರ್ಷಗಳಾಗಿವೆ. ಈ ಪ್ರದೇಶಗಳು ನೆನಪಾಗುವುದು, ಚೀನಾ ಅರುಣಾಚಲ ಪ್ರದೇಶವನ್ನು ಆಕ್ರಮಿಸಿಕೊಂಡಾಗ ಮಾತ್ರ.

ಇಡೀ ನಾಗರೀಕ ಜಗತ್ತು ಬೆಚ್ಚಿ ಬೀಳುವಂತೆ 2004 ರಲ್ಲಿ ಮಣಿಪುರದ ರಾಜಧಾನಿ ಇಂಪಾಲ್ ನಗರದಲ್ಲಿ ಹನ್ನೆರೆಡು ಮಂದಿ ಮಧ್ಯ ವಯಸ್ಸಿನ ಮಹಿಳೆಯರು ಸಂಪೂರ್ಣವಾಗಿ ಬೆತ್ತಲಾಗಿ  ಭಾರತ ಸೇನಾ ಪಡೆಯ ಅಂಗವಾದ ಅಸ್ಸಾಂ ರೈಫಲ್ ತುಕುಡಿಯ ಕಛೇರಿ ಪ್ರದರ್ಶನ ನಡೆಸಿದರು. ಮಹಿಳೆಯರ  ಸಿಟ್ಟು, ಮತ್ತು ಆಕ್ರೋಶ ಅವರನ್ನು ಬೆತ್ತಲಾಗುವವರೆಗೆ ಕೊಂಡೊಯ್ದ ಅಂಶಗಳನ್ನು ಗಮನಿಸಿ, ವಿವೇಚಿಸಿದಾಗ ಮನಸ್ಸು ಮೌನವನ್ನು ಅಪ್ಪಿಕೊಳ್ಳುತ್ತದೆ. ಮಣಿಪುರದ ಒಂದೊಂದು ಮನೆ ಮತ್ತು ಊರಿನಲ್ಲಿ ಈ ವರೆಗೆ ಹೊರಜಗತ್ತಿಗೆ ಕಾಣಿಸದೆ ಉಳಿದುಕೊಂಡಿರುವ ಕ್ರೌರ್ಯಗಳು ಅನಾವರಣಗೊಳ್ಳುತ್ತವೆ. ಇವು ನಮ್ಮ ಸಾಮಾಜಿಕ ಚಳುವಳಿಗಳ ಪೊಳ್ಳತನ ಮತ್ತು ಹುಸಿ ಹೋರಾಟಗಾರರ ಮುಖವಾಡಗಳನ್ನು ಸಹ ಕಳಚಿಡುತ್ತವೆ.
ಈಶಾನ್ಯ ರಾಜ್ಯಗಳಲ್ಲಿ ತಲೆ ಎತ್ತಿರುವ ಹಿಂಸಾಚಾರ ಮತ್ತು ಜನಾಂಗೀಯ ಘರ್ಷಣೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೇನಾಪಡೆಗೆ ನೀಡಿದ ಪರಮಾಧಿಕಾರ. ಅನೇಕ  ಅಮಾಯಕ ಹೆಣ್ಣು ಮಕ್ಕಳ ಅತ್ಯಾಚಾರ ಮತ್ತು ಕೊಲೆಗೆ ಕಾರಣವಾಗಿವೆ. ಯಾವುದೇ ಅನುಮತಿಯಿಲ್ಲದೆ, ಯಾರನ್ನು ಬೇಕಾದರೂ ಬಂಧಿಸಬಹುದು, ಯಾರ ಮನೆಯನ್ನಾದರೂ ಪ್ರವೇಶಿಸಬಹುದು, ವಿಚಾರಣೆ ನಡೆಸಬಹುದು, ಬಂಧಿಸಿದ ವ್ಯಕ್ತಿ ಅಪಾಯಕಾರಿ ಎನಿಸಿದರೆ, ಗುಂಡಿಟ್ಟು ಕೊಲ್ಲಬಹುದು ಇಂತಹ ಅಧಿಕಾರ ಈಶಾನ್ಯ ರಾಜ್ಯಗಳ ಹೆಣ್ಣು ಮಕ್ಕಳ ಶೀಲಗಳ ಹರಣಕ್ಕೆ ರಹದಾರಿಯಾಗಿದೆ.
2004 ರಲ್ಲಿ ಇಮಪಾಲ್ ನಗರದ ಕೋಟೆ ಪ್ರದೇಶದ ಮನೆಯಲ್ಲಿದ್ದ ಮನೋರಮಾ ಎಂಬ ಮಹಿಳೆಯನ್ನು ಆಕೆಯ ಮನೆಗೆ ನುಗ್ಗಿ ಸಹೋದರ ಮತ್ತು ತಾಯಿಯ ಎದುರು ಮಿಲಿಟರಿ ಕ್ಯಾಂಪಿಗೆ ಎಳೆದೊಯ್ದ ಸೈನಿಕರು, ಆನಂತರ  ಅವಳ ಶವವನ್ನು ರಸ್ತೆ ಬದಿ ಬಿಸಾಡಿದ್ದರು. ಆಕೆಯನ್ನು ಗುಂಡಿಟ್ಟು ಕೊಲ್ಲುವ ಮುನ್ನ ಆಕೆಯ ಮೇಲೆ ಅನೇಕರು ಅತ್ಯಾಚಾರ ನಡೆಸಿರುವ ಸಂಗತಿ ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿತು. ಆದರೆ. ಈ ವಿಚಾರವಾಗಿ ಯಾವುದೇ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಶ್ನಿಸುವ  ಅಥವಾ ನ್ಯಾಯಾಲಯದ ಮೆಟ್ಟಿಲೇರುವ ಅವಕಾಶ ಅಲ್ಲಿನ ನಾಗರೀಕರಿಗೆ ಇಲ್ಲ.( ಮನೋರಮಾ ದುರಂತ ಕುರಿತು, 2012 ರ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸುವ ‘ಇಂಡಿಯನ್ ಲಿಟರೇಚರ್” ದ್ವೈಮಾಸಿಕ ಪತ್ರಿಕೆಯಲ್ಲಿ ವಿಶೇಷ ಲೇಖನ ಪ್ರಕಟವಾಗಿದೆ) 



ಈ ಘಟನೆಗೂ ಮುನ್ನ, ಶರ್ಮಿಳಾ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಕಾರಣವಾದ ಘಟನೆ ಕೂಡ ನಾಗರೀಕ ಜಗತ್ತು ತಲೆ ತಗ್ಗಿಸುವಂತಹದ್ದು. 1987 ರಲ್ಲಿ ಮಣಿಪುರದಲ್ಲಿ ನಡೆದ ಬಾಂಬ್ ಸ್ಪೋಟದ ಸಂದರ್ಭದಲ್ಲಿ ತನ್ನ ಜೀವವನ್ನು ಲೆಕ್ಕಿಸದೆ. ಸ್ಥಳದಲ್ಲಿ ಹಲವರ ಪ್ರಾಣ ಉಳಿಸಿದ ಬಾಲಕಿ ಚಂದ್ರಮಣಿ ಎಂಬಾಕೆಗೆ 1988 ರಲ್ಲಿ ಬಾಲಕ-ಬಾಲಕಿಯರಿಗೆ ನೀಡುವ ಶೌರ್ಯ ಪ್ರಶಸ್ತಿಯನ್ನು ನೀಡಿದ ಕೇಂದ್ರ ಸರ್ಕಾರ, ಆಕೆಯನ್ನು ಜನವರಿ 26 ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ದೆಹಲಿಯಲ್ಲಿ ಆನೆಯ ಮೇಲೆ ಕೂರಿಸಿ ಮೆರವಣಿಗೆ ಮಾಡಿತ್ತು. ಸದಾ ತನ್ನೊಂದಿಗೆ ಸರ್ಕಾರ ನೀಡಿದ್ದ ಶೌರ್ಯ ಪ್ರಶಸ್ತಿಯೊಂದಿಗೆ ಓಡಾಡುತ್ತಿದ್ದ ಈ ಅಮಾಯಕಕ ಬಾಲಕಿ 2000 ದಲ್ಲಿ  ಸೈನಿಕರ ಗುಂಡಿಗೆ ಬಲಿಯಾದಳು. 
ಈ ಯುವತಿಯ ಸಾವು ಶರ್ಮಿಳಾ ಅವರನ್ನು ಉಪವಾಸ ಸತ್ಯಾಗ್ರಹಕ್ಕೆ ನೂಕಿತು. ಇದಲ್ಲದೆ, ನೂರಾರು ಅಮಾಯಕ ನಾಗರೀಕರ ಮತ್ತು ಸರ್ಕಾರಿ ನೌಕರರ ಹತ್ಯೆಗೆ ಮಣಿಪುರದಲ್ಲಿ ಲೆಕ್ಕವಿಟ್ಟವರಿಲ್ಲ. ಈ ಕಾರಣದಿಂದಾಗಿ ಸತತ  ಐನೂರಕ್ಕೂ ಹೆಚ್ಚು ವಾರಗಳ ಕಾಲ ಅನ್ನ, ನೀರು ತ್ಯೆಜಿಸಿ, ಅಲ್ಲಿನ ಹೆಣ್ಣು ಮಕ್ಕಳ ನೆಮ್ಮದಿಯ ಬದುಕಿಗಾಗಿ ಹೋರಾಡುತ್ತಾ ಉಕ್ಕಿನ ಮಹಿಳೆ ಎಂಬ ಬಿರುದಿಗೆ ಪಾತ್ರರಾಗಿರುವ ಶರ್ಮಿಳಾ ಅವರ ಒಡಲಾಳದ ಕಿಚ್ಚು ನಮ್ಮ ನಾಗರೀಕ ಸಮಾಜಕ್ಕೆ ತಾಗಲೇ ಇಲ್ಲ. ಒಬ್ಬ ನಿಷ್ಣಾವಂತ ಅಮಾಯಕ ಹೆಣ್ಣು ಮಗಳು. ತನ್ನ ಜೀವವನ್ನು ಪಣಕ್ಕಿಟ್ಟು. ಹೋರಾಟ ಮಾಡುತ್ತಿರುವಾಗ, ಈಕೆಯ ಮೇಲೆ ಸತತವಾಗಿ ಆತ್ಮಹತ್ಯೆ ಪ್ರಯತ್ನ ಎಂಬ ಆರೋಪದಡಿ ಐ.ಪಿ.ಸಿ. ಸೆಕ್ಷನ್ 309 ರ ಅಡಿ ಮೊಕೊದ್ದಮೆ ದಾಖಲಿಸಿ ಹಲವಾರು ಬಾರಿ ಜೈಲಿಗೆ ತಳ್ಳಲಾಗಿದೆ. (2011 ರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ನ್ಯಾಯಲಯ ಈಕೆಗೆ ಮೊನ್ನೆ ಡಿಸಂಬರ್ 19 ರಂದು ನೋಟೀಸ್ ಜಾರಿ ಮಾಡಿದೆ)


ಈಶಾನ್ಯ ರಾಜ್ಯಗಳ ನಿಸರ್ಗ, ಅಲ್ಲಿನ ಪ್ರಾಕೃತಿಕ ಸೊಬಗು, ಹಸಿರು, ಜಲಪಾತ ಇವೆಲ್ಲವೂ ನೆಲದ ಮೇಲಿನ ಸ್ವರ್ಗ ಎಂಬ ಭಾವನೆ ಮೂಡಿಸುತ್ತಿದ್ದ ಕಾಲ ಒಂದಿತ್ತು. ಈಗ ಈಶಾನ್ಯ ಭಾರತ ನೆಲದ ಮೇಲಿನ ನರಕವೆಂಬಂತಾಗಿದೆ. ಅಸ್ಸಾಂ ರಾಜ್ಯದಲ್ಲಿ ಬೇರೆ ರಾಜ್ಯಗಳಿಂದ ವಲಸೆ ಬಂದ (ವಿಶೇಷವಾಗಿ ಬಿಹಾರ) ಸ್ಥಳಿಯರ ಉದ್ಯೋಗದ ಅವಕಾಶ ಕಿತ್ತುಕೊಳ್ಳುತ್ತಿದ್ದಾರೆ ಎಂಬ ಆಕ್ರೋಶ, ನಾಗಾಲ್ಯಾಂಡ್ ನಲ್ಲಿ ನಾಗ ಬುಡಕಟ್ಟು ಜನರ ಸಂಘರ್ಷ. ಅರುಣಾಚಲ ಪ್ರದೇಶ ಮಿಜೋರಾ ರಾಜ್ಯಗಳಲ್ಲಿ ಬಂಗ್ಲಾದಿಂದ ವಲಸೆ ಬಂದ ಚಕ್ಮಾ ನಿರಾಶ್ರಿತರ ಸಮಸ್ಯೆ, ಮಣಿಪುರದಲ್ಲಿ ಮಾನಿನಿಯರ ಮಾನ ಪ್ರಾಣ ದ ಹರಣಗಳ ಸಮಸ್ಯೆ ಇವುಗಳ ಕುರಿತು ನಮ್ಮ ಜನಪ್ರತಿನಿದಿಗಳು, ಅಥವಾ ಕೇಂಧ್ರ ಸರ್ಕಾರ ಇಲ್ಲವೆ, ಸಚಿವರು ಗಂಭೀರವಾಗಿ ಮಾತನಾಡಿದ್ದನ್ನು, ವಿಷಯ ಪ್ರಸ್ತಾಪಿಸಿದ್ದನ್ನು ನಾವು ನೊಡಲು ಸಾಧ್ಯವಾಗಲೇ ಇಲ್ಲ, ಏಕೆಂದರೆ, ನಮ್ಮ ಘನ ಕೇಂದ್ರ ಸರ್ಕಾರ ಈಶಾನ್ಯ ಭಾರತವನ್ನು ಭಾರತದ ಅವಿಭಾಜ್ಯ ಭಾಜ್ಯ ಅಂಗ ಎಂದು ಪರಿಗಣಿಸಿದಂತೆ ಕಾಣುವುದಿಲ್ಲ.

ಮಂಗಳವಾರ, ಡಿಸೆಂಬರ್ 17, 2013

ಕೊಟ್ಟ ಕುದುರೆಯನೇರಲಾರದ ಕೇಜ್ರಿವಾಲ್




ಭಾರತದ ಭವಿಷ್ಯದ ದಿಕ್ಸೂಜಿ ಎಂದು ಭಾವಿಸಲಾಗಿದ್ದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮಿಜೋರಾಂ ರಾಜ್ಯವೊಂದನ್ನು ಹೊರತುಪಡಿಸಿ,ಉಳಿದೆಡೆ ರಾಷ್ಟ್ರೀಯ ಕಾಂಗ್ರೇಸ್ ಪಕ್ಷ ನೆಲಕಚ್ಚಿರುವುದು, ಅನಿರೀಕ್ಷಿತ ಘಟನೆಯೇನಲ್ಲ. ತನ್ನ ದೂರದೃಷ್ಟಿಯ ಕೊರತೆ, ನಾಯಕತ್ವದ ಅರಾಜಕತೆ, ಇವೊತ್ತಿಗೂ ಪಕ್ಷದ ಸಂಘಟನೆಯೊಳಗೆ ತಳಮಟ್ಟದಲ್ಲಿ ಬೇರು ಬಿಟ್ಟಿರುವ ಗುಲಾಮಗಿರಿತನ ಮತ್ತು ವಂಶಪಾರಂಪರ್ಯ ಆಳ್ವಿಕೆಯಲ್ಲಿ ನಲುಗಿಹೋದ ಪಕ್ಷದ ರಾಜಕೀಯ ಚಟುವಟಿಕೆ ಮತ್ತು ಅಭ್ಯರ್ಥಿಯ ಆಯ್ಕೆ ಇವುಗಳಲ್ಲದೆ, ಪ್ರಧಾನಿ ಮನಮೋಹನ್ ಸಿಂಗರ ಕೊನೆಯ ಅವಧಿಯಲ್ಲಿ ಅನಾವರಣಗೊಂಡ ಅವರ ನಿಷ್ಕ್ರೀಯತೆ ಇವೆಲ್ಲವೂ ಕಾಂಗ್ರೇಸ್ ಪತನಕ್ಕೆ ಕಾರಣವಾದವು. ಇದರ ಲಾಭ ಪೂರ್ಣವಾಗಿ ಮತ್ತೊಂದು ಪ್ರಭಲ ರಾಷ್ಟ್ರೀಯ ಪಕ್ಷವಾದ ಬಿ.ಜೆ.ಪಿ. ಗೆ ದಕ್ಕಿತು. ಆದರೆ, ರಾಷ್ಟ್ರ ರಾಜಕಾರಣದ ಚದುರಂಗದ ಅಖಾಡ ಅಖಾಡ ಎಂದೇ ಬಿಂಬಿಸಲ್ಪಡುವ ದೆಹಲಿ ಚುನಾವಣಾ ಫಲಿತಾಂಶ ಮಾತ್ರ  ಕಾಂಗ್ರೇಸ್ ಮತ್ತು ಬಿ.ಜೆ.ಪಿ. ಹಾಗೂ ಪ್ರಾದೇಶಿಕ ಪಕ್ಷಗಳ ನೆಪದಲ್ಲಿ ವಂಶರಾಜಕಾರಣ ಮಾಡುತ್ತಿರುವ ಎಲ್ಲಾ ಹಿರಿಯ ರಾಜಕಾರಣಿಗಳಿಗೆ , ಮುಂದಿನ ದಿನಗಳಲ್ಲಿ ನಿಮ್ಮ ಅಡಿಪಾಯ ಕುಸಿಯಲಿದೆ ಎಂಬ ಸಂದೇಶವನ್ನು ರವಾನಿಸಿದೆ.


ಕಳೆದ ಎರಡು ದಶಕಗಳಿಂದ ದೇಶಾದ್ಯಂತ  ಚಲಾವಣೆಯಲ್ಲಿದ್ದ ನೈತಿಕತೆಯಿಲ್ಲದ ರಾಜಕಾರಣದಿಂದಾಗಿ ಭಾರತದ ಬಹುತೇಕ ಪ್ರಜ್ಙಾವಂತರು  ದೇಶದ ರಾಜಕೀಯದ ಬಗ್ಗೆ ನಂಬಿಕೆ ಕಳೆದುಕೊಂಡಿದ್ದರು. ಇದಕ್ಕೆ ಪೂರಕವಾಗಿ ದೇಶದ ಬಹುತೇಕ ಸಾಮಾಜಿಕ ಹೋರಾಟಗಳೂ ಸಹ ಸಂಘಟನೆಗಳ ನಾಯಕರ ವೈಯಕ್ತಿಕ ಹಿತಾಸಕ್ತಿಗೆ ಬಲಿಯಾಗಿ ಕಣ್ಣೆದುರು ಕರಗಿಹೋದವು.  ಬಹುತೇಕ ಸಾಮಾಜಿಕ ಹೋರಾಟಗಳು ನೆಲಕಚ್ಚುತ್ತಿದ್ದಂತೆ, ಈ ದೇಶದಲ್ಲಿ ರೂಪುಗೊಳ್ಳುವ ಕಾನೂನುಗಳಾಗಲಿ, ಅಥವಾ ಮಸೂದೆಗಳಾಗಲಿ, ಇವೆಲ್ಲವೂ, ಭಾರತದ ಸಂವಿಧಾನಕ್ಕೆ ಮತ್ತು ನಾಗರೀಕರ ಹಕ್ಕುಗಳಿಗೆ ಪೂರಕವಾಗಿ ಇರುವ ಬದಲು, ಭ್ರಷ್ಟ ರಾಜಕಾರಣಿಗಳಿಗೆ ಮತ್ತು ತಮ್ಮ ಹಣ ಹಾಗೂ ತೋಳ್ಬಲದಿಂದ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳನ್ನು ನಿಯಂತ್ರಿಸುತ್ತಿರುವ ಬಂಡವಾಳಶಾಹಿಗಳಿಗೆ ಕಾಲೊರಸುಗಳಾಗಿ (Foot Rug) ರೂಪುಗೊಂಡವು. ಇಂತಹ ನಿರಾಸೆಯ ವಾತಾವರಣದಲ್ಲಿ ಮಹಾರಾಷ್ಟ್ರದ ಅಹಮದಾಬಾದ್ ಜಿಲ್ಲೆಯ  ರಾವಳ್ಗಾಂವ್ ಸಿದ್ಧಿ ಎಂಬ ಪುಟ್ಟ ಗ್ರಾಮದಿಂದ ಎದ್ದು ಬಂದ ಗಾಂಧಿವಾಧಿ ಅಣ್ಣಾ ಹಜಾರೆ ಎಂಬ ಸಾಮಾನ್ಯ ಮನುಷ್ಯ ಭ್ರಹ್ಮಾಂಡ ಭ್ರಷ್ಟಾಚಾರದ ನಿಯಂತ್ರಣಕ್ಕಾಗಿ ಲೋಕ್ ಪಾಲ್ ಮಸೂದೆಯನ್ನು ಜಾರಿಗೆ ತರಬೇಕೆಂದು ಹುಟ್ಟು ಹಾಕಿದ ಹೋರಾಟ ದೇಶದಲ್ಲಿ, ವಿಶೇಷವಾಗಿ ವಿದ್ಯಾವಂತರು ಮತ್ತು ಯುವ ಜನರಲ್ಲಿ ಹೊಸ ಸಂಚಲನವನ್ನುಂಟು ಮಾಡಿತು

ಅಣ್ಣಾ ಹಜಾರೆ ಹುಟ್ಟು ಹಾಕಿದ ಈ ಕ್ರಾಂತಿಯಲ್ಲಿ ಉದಯಿಸಿದ ಮತ್ತೊಂದು ಪ್ರತಿಭೆ ಅರವಿಂದ್ ಕೇಜ್ರಿವಾಲ್. ಮೂಲತಃ ಕೇಂದ್ರ ಸರ್ಕಾರದಲ್ಲಿ ಕಂದಾಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು ವ್ಯವಸ್ಥೆಯ ಲೋಪದೋಷಗಳನ್ನು ತಿದ್ದಲಾಗದ ಅಸಹಾಯಕತೆಯಿಂದ ತಮ್ಮ  ಹುದ್ದೆ ತೊರೆದು ಬಂದರು. ದೆಹಲಿಯಲ್ಲಿ ತನ್ನದೇ ಆದ ಒಂದು ಸ್ವಯಂ ಸೇವಾ ಸಂಘಟನೆಯನ್ನು ಕಟ್ಟಿಕೊಂಡು, ಮಾಹಿತಿ ಹಕ್ಕುಗಳ ಮೂಲಕ ದೆಹಲಿ ಆಢಳಿತ ಹುಳುಕುಗಳನ್ನು ಹೊರತೆಗೆದು, ಅಧಿಕಾರಿಶಾಹಿ ವ್ಯವಸ್ಥೆಗೆ ಮೈ ಚಳಿ ಬಿಡಿಸಿದರು. ಇವರ ಈ ಸಾಮಾಜಿಕ ಸೇವೆಗೆ ಪ್ರತಿಷ್ಟಿತ ಏಷ್ಯಾದ ಮ್ಯಾಗ್ಸಸೆ  ಪ್ರಶಸ್ತಿ ದೊರೆತಾಗ, ಅರವಿಂದ್ ಕೇಜ್ರಿವಾಲ್ ದೇಶದ ಗಮನ ಸೆಳೆದರು. ಅಣ್ಣಾ ಹಜಾರೆಯ ಹೋರಾಟ ತನ್ನ ಹಳ್ಳಿಯಿಂದ ದೆಹಲಿಗೆ ವರ್ಗಾವಣೆಗೊಂಡಾಗ, ಇಡೀ ಹೋರಾಟದ ರೂಪು ರೇಶೆಗಳ ಹೊಣೆ ಹೊತ್ತ ಅರವಿಂದ ಕೇಜ್ರಿವಾಲ್, ರಾಜಕೀಯ ವ್ಯವಸ್ಥೆಯ ಒಂದು ಭಾಗವೇ ಆಗಿ ಹೋಗಿದ್ದ  ಭ್ರಷ್ಠಾಚಾರಕ್ಕೆ ಅಣ್ಣಾ ಹಜಾರೆ ಮೂಲಕ ದೊಡ್ಡ ಪೆಟ್ಟುಕೊಟ್ಟರು. ಅಲ್ಲದೆ ರಾಜಕೀಯ ಪಕ್ಷಗಳ ಪಾಲಿಗೆ ನುಂಗಲಾರದ ತುತ್ತಾದರು.
ದೇಶಾದ್ಯಂತ ಲೋಕ ಪಾಲ್ ಮಸೂದೆ ಜಾರಿಗೆ ತರಬೇಕೆಂಬ ಅಣ್ಣಾ ಹಜಾರೆಯವರ ಹೋರಾಟ ತಾರ್ಕಿಕ ಅಂತ್ಯದ ಘಟ್ಟ ತಲುಪುವ ವೇಳೆಗೆ ಭ್ರಷ್ಟ ವ್ಯವಸ್ಥೆಯಿಂದ  ಮುಕ್ತವಾದ ಸಮಾಜದ  ಮತ್ತು ರಾಜ್ಯ ನಿರ್ಮಾಣದ ಕನಸು ಹೊತ್ತ ಅರವಿಂದ ಕೇಜ್ರಿವಾಲ್ ‘ ಅಮ್ ಆದ್ಮಿ “ ಎಂಬ ಪಕ್ಷ ಕಟ್ಟಿದಾಗ, ಪಕ್ಷ ರಾಜಕಾರಣದಿಂದ ದೂರವಿರುವ ತಮ್ಮ ನಿರ್ಧಾರಕ್ಕೆ ಅಂಟಿಕೊಂಡ ಅಣ್ಣ ಹಜಾರೆ, ಸಹಜವಾಗಿ ಕೇಜ್ರಿವಾಲ್ ಅವರಿಂದ ಮತ್ತು  ಅವರ ಅಮ್ ಆದ್ಮಿ ಪಕ್ಷದಿಂದ ತಮ್ಮ ಅಂತರ ಕಾಪಾಡಿಕೊಂಡರು

ದೆಹಲಿ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿ, ಕಳೆದ ಒಂದು ವರ್ಷದಿಂದ ಅಮ್ ಆದ್ಮಿ ಪಕ್ಷವನ್ನು ಕೇಜ್ರಿವಾಲ್ ತಮ್ಮ ತಂಡದ ಸದಸ್ಯರೊಂದಿಗೆ , ಜನಸಾಮಾನ್ಯರ ಬಳಿ ಕೊಂಡೊಯ್ದಾಗ ಮಾಧ್ಯಮ ಪಂಡಿತರು ಮತ್ತು ರಾಜಕೀಯ ಪಕ್ಷಗಳನ್ನು ಒಳಗೊಂಡಂತೆ ಯಾರೊಬ್ಬರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ, ದೆಹಲಿಯ ಚುನಾವಣೆಯ ಫಲಿತಾಂಶ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ರಾಷ್ರೀಯ ಕಾಂಗ್ರೇಸ್ ಪಕ್ವವನ್ನು, ಮತ್ತು ಕಳೆದ ಮೂರು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತರನ್ನು, ಅಮ್ ಆದ್ಮಿ ಪಕ್ದ ಚಿಹ್ನೆಯಾದ ಪೊರಕೆ ಗುಡಿಸಿ ಹಾಕಿತ್ತು. ಆದರೆ ಯಾರಿಗೂ ಸ್ಪೃಷ್ಟ ಬಹುಮತ ದೊರಕದೆ, ಅತಂತ್ರ ಸ್ಥಿತಿ ನಿರ್ಮಾಣವಾಯಿತು. ಮಾಧ್ಯಮಗಳ ಮೊರೆ ಹೋಗದೆ, ಸುದ್ಧಿ ಛಾನಲ್ ಗಳ ತೌಡು ಕುಟ್ಟುವ ಚರ್ಚೆಯಲ್ಲಿ ಭಾಗವಹಿಸದೆ, ನೇರವಾಗಿ ಕೂಲಿ ಕಾರ್ಮಿಕರು, ಆಟೋರಿಕ್ಷಾ ಚಾಲಕರು, ಮಧ್ಯಮ ವರ್ಗದ ಜನ ಮತ್ತು ಯುವಜನತೆಯ ಬಳಿ ಹೋಗಿ ತಮ್ಮ ಪಕ್ಷದ ಆಶಯ ಮತ್ತು ತಮ್ಮ ಕನಸುಗಳನ್ನು ಬಿಚ್ಚಿಟ್ಟರು. ಅವರ ಪ್ರಯತ್ನ ನಿರೀಕ್ಷೆಗೆ ಮೀರಿ ಯಶಸ್ಸು ತಂದುಕೊಟ್ಟಿತು
70 ಸ್ಥಾನಗಳ ದೆಹಲಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿ.ಜೆ.ಪಿ. 32 ಅಮ್ ಆದ್ಮಿ ಪಕ್ಷ 28 ಕಾಂಗ್ರೇಸ್ 8 ಸ್ಥಾನ ಗಳಿಸಿದರೆ,ಉಳಿದ 2 ಸ್ಥಾನಗಳು ಪಕ್ಷೇತರರ ಪಾಲಾದವು. ಸ್ಪೃಷ್ಟ ಬಹುಮತಕ್ಕೆ 36 ಸದಸ್ಯರ ಬಲದ  ಅವಶ್ಯಕತೆ ಇದ್ದ ಕಾರಣ ಬಿ.ಜೆ.ಪಿ. ಸರ್ಕಾರ ರಚಿಸುವ ಕ್ರಿಯೆಯಿಂದ ದೂರ ಉಳಿಯಿತು. ಈ ಸಂದರ್ಭದಲ್ಲಿ ಪಕ್ಷೇತತರು ಮತ್ತು ಕಾಂಗ್ರೇಸ್ ಪಕ್ಷ ಯಾವುದೇ ಪೂರ್ವ ಷರತ್ತುಗಳಿಲ್ಲದೆ, ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ  ಅಮ್ ಆದ್ಮಿ ಪಕ್ಷಕ್ಕೆ ಬೆಂಬಲ ಘೋಷಿಸಿದವು. ಆದರೆ, ಈ ಸಂದರ್ಭದಲ್ಲಿ ಅರವಿಂದ ಕೇಜ್ರಿವಾಲರ ನಡುವಳಿಕೆ ಅವರ  ಅಭಿಮಾನಿಗಳಿಗೆ ಮತ್ತು ಆಸೆಗಣ್ಣಿನಿಂದ ನೋಡುತ್ತಿದ್ದವರಿಗೆ ತೀವ್ರ ಬೇಸರ ಮತ್ತು ಜಿಗುಪ್ಸೆ ಮೂಡಿಸಿದವು.



ಆದರ್ಶಗಳು ಬೇರೆ, ವಾಸ್ತವಗಳು ಬೇರೆ. ನಾವು ಆದರ್ಶಗಳನ್ನು ವಾಸ್ತವದ ಒರೆಗಲ್ಲಿಗೆ ಹಚ್ಚಿದಾಗ ಮಾತ್ರ ನಿಜವಾದ ಫಲಿತಾಂಶಗಳು ದೊರೆಯುವುದು. ದಿಲ್ಲಿಯ ಜನತೆಯಿಂದ ಸಂಪೂರ್ಣ ಬೆಂಬಲ ಸಿಗದ ಹಿನ್ನಲೆಯಲ್ಲಿ ಜೊತೆಗೆ ಯಾವುದೇ ಷರತ್ತುಗಳಿಲ್ಲದೆ ಕಾಂಗ್ರೇಸ್ ಪಕ್ಷ, ಅಮ್ ಆದ್ಮಿ ಪಕ್ಷಕ್ಕೆ  ಬೆಂಬಲ ಘೊಷಿರುವಾಗ, ಅಧಿಕಾರದ ಚುಕ್ಕಾಣಿಯನ್ನು ಕೈಗೆ ತೆಗೆದುಕೊಂಡು, ತಾನು ಏನು ಕನಸು ಕಂಡಿದ್ದಾರೋ ಅದನ್ನು ಸಾಕಾರಗೊಳಿಸಬೇಕಾದ್ದು ಕೇಜ್ರಿವಾಲರ ನೈತಿಕ ಕರ್ತವ್ಯ,  ದಿಲ್ಲಿಯ ಜನತೆಯ ಮನಸ್ಸಿನಲ್ಲಿ ಸಂಪೂರ್ಣ ವಿಶ್ವಾಸ ಹುಟ್ಟಿಸುವ ಕೆಲಸ ಮಾಡುವುದನ್ನು ಬಿಟ್ಟು , ಮತ್ತೇ ಚುನಾವಣೆಯನ್ನು ಜನತೆಯ ಮೇಲೆ ಹೇರುವುದು ತರವಲ್ಲ. ಇದು ಭವಿಷ್ಯದಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ನಿರಾಸಕ್ತಿ ಮೂಡಿಸಬಹುದು, ಏಕೆಂದರೆ, ದಿಲ್ಲಿಯ ನಗರದಲ್ಲಿ ಹಗಲಿರಳು ದುಡಿದ ಕಾರ್ಯಕರ್ತರು, ಕಾಂಗ್ರೇಸ್ ಅಥವಾ ಬಿ.ಜೆ.ಪಿ. ಪಕ್ಷಗಳ  ಬಾಡಿಗೆ ಕಾರ್ಯಕರ್ತರ ಹಾಗೆ ದಿನಗೂಲಿ ಲೆಕ್ಕದಲ್ಲಿ ಬಂದು ಘೋಷಣೆ ಕೂಗಿದವರಲ್ಲ. ವ್ಯವಸ್ಥೆಯ ವಿರುದ್ಧ, ರೋಸಿ ಹೋದ ಜನ ಸಾಮಾನ್ಯರು, ಬದಲಾವಣೆಗಾಗಿ ಮತ್ತು ರಾಜಕೀಯದಲ್ಲಿ ಹೊಸಗಾಳಿಗಾಗಿ ಆಸೆ ಕಣ್ಣುಗಳಿಂದ ಅರವಿಂದ್ ಕೇಜ್ರಿವಾಲರತ್ತ ನೋಡುತ್ತಾ ಅವರ ಜೊತೆ ಕೈಜೋಡಿಸಿದ್ದಾರೆ,


ಅತಿಯಾದರೆ, ಹಾಲು ಕೂಡ ವಿಷವಾಗುತ್ತೆ ಎಂಬ ಅಂಶವನ್ನು ಕೇಜ್ರಿವಾಲ್ ಮೊದಲು ಗ್ರಹಿಸಬೇಕಾಗಿದೆ. ಒಂದು ರಾತ್ರಿಯಲ್ಲಿ, ಒಂದು ದಿನದಲ್ಲಿ, ಅಥವಾ ಒಂದು ವಾರ, ತಿಂಗಳಳಗೆ ಸಮಾಜದಲ್ಲಿ  ಬದಲಾವಣೆ ತರಲು ಸಾಧ್ಯವಿಲ್ಲ. ಸಿಕ್ಕ ಅವಕಾಶದಲ್ಲಿ ಮೊದಲು ಅವರ ತಾಕತ್ತು, ಪ್ರತಿಭೆ, ಆಡಳಿತ ನಡೆಸುವ ಗುಣ ಇವುಗಳನ್ನು ದೆಹಲಿ ಜನತೆ ಎದುರು ಸಾಭೀತು ಪಡಿಸಬೇಕಿದೆ. ಒಬ್ಬ ನಾಯಕನಾದವನಿಗೆ ತನ್ನ ಸಹಚರ ಮತ್ತು ಸಮುದಾಯದ ಆಶೋತ್ತರಗಳಿಗೆ ಕಣ್ಣಾಗುವ, ಕಿವಿಯಾಗುವ ಹೃದಯವಿರಬೇಕು. ಎಲ್ಲಾ ವಿಷಯಗಳಲ್ಲಿ ತಾನು ನಂಬಿದ ತತ್ವಗಳನ್ನು ಹೇರಲು ಹೊರಟರೆ, ಅದು ನಾಯಕತ್ವದ ಗುಣ ಎನಿಸಿಕೊಳ್ಳುವುದಿಲ್ಲ,ಬದಲಾಗಿ ಸರ್ವಾಧಿಕಾರಿಯ ವ್ಯಕ್ತಿತ್ವವಾಗಿಬಿಡುವ ಅಪಾಯವಿರುತ್ತದೆ. ಈ ಸತ್ಯವನ್ನು ಅರವಿಂದ ಕೇಜ್ರಿವಾಲ್ ಅರಿಯದಿದ್ದರೆ, ಇವರು ಕೂಡ ಇತಿಹಾಸದ ಕಸದಬುಟ್ಟಿ ಸೇರುವ ದಿನ ದೂರವಿಲ್ಲ.

ಕೊನೆಯ ಮಾತು- ಇದನ್ನು ಬರೆಯುವ ವೇಳೆ ದೆಹಲಿಯಲ್ಲಿ ಪತ್ರಿಕಾ ಘೋಷ್ಠಿ ನಡೆಸಿದ ಅರವಿಂದ ಕೇಜ್ರಿವಾಲ್ 25 ಲಕ್ಷ ಕರಪತ್ರಗಳ ಮೂಲಕ ದೆಹಲಿ ಜನರ ಅಭಿಪ್ರಾಯ ಕೇಳಿದ್ದಾರೆ.

ಬುಧವಾರ, ಡಿಸೆಂಬರ್ 11, 2013

ಡಾ.ವಿವೇಕ್ ರೈ ಎಂಬ ಸಾಕ್ಷಿ ಪ್ರಜ್ಙೆಯ ನೆಪದಲ್ಲಿ ಕನ್ನಡದ ಪ್ರಶ್ನೆಗಳು




ಕನ್ನಡದ ಹಿರಿಯ ವಿಧ್ವಾಂಸ ಮತ್ತು ಸಾಕ್ಷಿ ಪ್ರಜ್ಙೆಯಂತಿರುವ ಡಾ.ವಿವೇಕ್ ರೈ ಈ ಬಾರಿಯ ಆಳ್ವಾಸ್ ಸಿರಿನುಡಿಯ ಆಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಹು ದೊಡ್ಡ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾಗಿರುವ ಮೋಹನ್ ಆಳ್ವ ಅವರು ಕಳೆದ ಒಂಬತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಆಳ್ವಾಸ್ ಸಿರಿನುಡಿ ಕಾರ್ಯಕ್ರಮ ಈ ಬಾರಿ ದಶಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ತಮ್ಮ ತುಳುನಾಡಿನವರೇ ಆದ ವಿವೇಕ್ ರೈ ಅವರನ್ನು ಈ ಬಾರಿಯ ಸಿರಿನುಡಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ದ್ರಾವಿಡ ಭಾಷೆಗಳ ಉಪಭಾಷೆಗಳಲ್ಲಿ ಒಂದಾದ ತುಳು ಭಾಷೆ ಮತ್ತು ಸಂಸ್ಕೃತಿ ಕುರಿತು ಅಪಾರ ಒಳನೋಟಗಳಿರುವ ವಿವೇಕ್ ರೈ ಕನ್ನಡದ ಹಿರಿಯ ಜಾನಪದ ವಿಧ್ವಾಂಸರು ಕೂಡ ಹೌದು. ತುಳುನಾಡಿನ ಗೋವಿಂದ ಪೈ,ಮತ್ತು ಕು.ಶಿ. ಹರಿದಾಸಭಟ್ಟರ ನಂತರ, ಕನ್ನಡನಾಡಿನ ( ತುಳುನಾಡು ಸೇರಿದಂತೆ) ಜಾನಪದ ಸಂಸ್ಕೃತಿಯನ್ನು ತಮ್ಮ ಅದ್ಯಯನದ ಉಸಿರಾಗಿಸಿಕೊಂಡವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದ ಪ್ರಮುಖ ವಿಧ್ವಾಂಸರಲ್ಲಿ ಡಾ.ವಿವೇಕ್ ರೈ ಮತ್ತು ಡಾ.ಪುರುಷೋತ್ತಮ ಬಿಳಿಮಲೆ ಪ್ರಮುಖರು.
1970 ರ ದಶಕದಲ್ಲಿ ಮಂಗಳೂರಿನಲ್ಲಿ ವಿಶ್ವವಿದ್ಯಾನಿಲಯ ಆರಂಭಗೊಂಡಾಗ ಕನ್ನಡ ಉಪನ್ಯಾಸಕ ವೃತ್ತಿಯೊಂದಿಗೆ ನೆಲದ ಸಂಸ್ಕೃತಿಯ ಚಿಂತನೆಯನ್ನು  ಆರಂಭಿಸಿದ ವಿವೇಕ್ ರೈ ಅವರು ಆರಂಭದಿಂದಲೂ ಸಾಕ್ಷಿ ಪ್ರಜ್ಙೆಯಂತೆ ನಮ್ಮ ನಡುವೆ ಬದುಕಿದವರು. ಪುತ್ತೂರು ತಾಲ್ಲೂಕಿನ ಪುಣಜೆ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ವಿವೇಕ್ ರೈ ರವರ ತಂದೆ ಪುರಂಧರ ರೈ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ ಕಂಡ ಮತ್ತೊಬ್ಬ ದಿಗ್ಗಜ ಶಿವರಾಮ ಕಾರಂತರ ಪರಮ ಶಿಷ್ಯರು. ಹಾಗೂ ಆರಾಧಕರು. ಹಾಗಾಗಿ ಬಾಲ್ಯದಿಂದಲೂ ಕಾರಂತರ ಹೆಜ್ಜೆ ಗುರುತುಗಳನ್ನು ಅವಲೋಕಿಸುತ್ತಾ ಬಂದ ಇವರು, ತಮ್ಮ ಬದುಕಿನುದ್ದಕ್ಕೂ ಕಾರಂತರ ದೃಷ್ಟಿಕೋನವನ್ನು ಬೆಳಸಿಕೊಂಡವರು.
ನಲವತ್ತು ವರ್ಷಗಳ ಹಿಂದೆ ಮಂಗಳೂರಿನ ವಿ.ವಿಯ. ಪ್ರಥಮ ಎಂ.ಎ. ಬ್ಯಾಚಿನ ವಿದ್ಯಾರ್ಥಿಗಳಲ್ಲಿ ನನ್ನ ಮಂಡ್ಯದ ಆತ್ಮೀಯ ಗೆಳೆಯ ಹಾಗೂ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಬಿ.ಜಯಪ್ರಕಾಶಗೌಡ ಮತ್ತು ಲೇಖಕಿ ಸಂಧ್ಯಾರೆಡ್ಡಿ  ಇವರ ಶಿಷ್ಯರು. ಇವರಿಬ್ಬರ ಬಾಯಿಂದ ಸದಾ ವಿವೇಕ್ ರೈ ಅವರ ಗುಣಗಾನಗಳನ್ನು ಕೇಳುತ್ತಿದ್ದ ನಾನು, ದಶಕದ ಹಿಂದೆ ಮೇಲಿಂದ ಮೇಲೆ ಶಿಷ್ಯನ ಆಹ್ವಾನದ ಮಂಡ್ಯಕ್ಕೆ ಬರುತ್ತಿದ್ದ ಸಂದರ್ಭದಲ್ಲಿ  ಇವರ ಗುಣ,  ಮತ್ತು ಪ್ರತಿಭೆಯನ್ನು  ತೀರಾ ಹತ್ತಿರದಿಂದ ಪರಿಚಯ ಮಾಡಿಕೊಳ್ಳಲು ಸಾಧ್ಯವಾಯಿತು.
ಕಿರಿಯರು ಎಂಬ ಬೇಧ ಭಾವವಿಲ್ಲದೆ ಬೆರೆಯುವ ಇವರ ದೊಡ್ಡತನ ಮತ್ತು ಈ ನೆಲದ ಸಂಸ್ಕೃತಿಯ ಕುರಿತಂತೆ ಇವರಿಗಿದ್ದ  ಅಪಾರ ಒಳನೋಟಗಳ ಉಪನ್ಯಾಸಕ್ಕೆ  ನಾನು ಮತ್ತು ಜಯಪ್ರಕಾಶಗೌಡ ಬೆಳಗಿನ ಜಾವ ಎರಡು ಗಂಟೆಯ ವರೆಗೂ ಮೈಯನ್ನು ಕಿವಿಯಾಗಿಸಿಕೊಂಡು ಕೂರುತ್ತಿದ್ದೆವು.( ಕಳೆದ ಎಂಟು ವರ್ಷಗಳಿಂದ ಅವರನ್ನು ಬೇಟಿಯಾಗಲು, ಮಾತನಾಡಲು  ಸಾಧ್ಯವಾಗಿಲ್ಲ)
 2004 ರಿಂದ 2007 ರಲ್ಲಿ ಹಂಪಿಯ ಕನ್ನಡ ವಿಶ್ವ ವಿದ್ಯಾನಿಯದ ಉಪಕುಲಪತಿಗಳಾದ ಸಂದರ್ಭದಲ್ಲಿ . ವಿ.ವಿಯ ಆವರಣದೊಳಕ್ಕೆ ರೈತರ ಸಮಸ್ಯೆಯನ್ನು  ಪ್ರಪಥಮವಾಗಿ ಆಹ್ವಾನಿಸಿಕೊಂಡವರು. ಬೀಜ ಮೇಳವನ್ನು ಏರ್ಪಡಿಸಿ, ರೈತರ ನಡುವೆ ಬೇಸಾಯ ಕುರಿತ ಮಾಹಿತಿ ವಿನಿಮಯ ಮತ್ತು ಬೀಜ ವಿನಿಮಯಕ್ಕೆ ಅನುವು ಮಾಡಿಕೊಡುವುದರ ಮೂಲಕ ತಮ್ಮ ನೆಲದ ಸಂಸ್ಕೃತಿಯ ಕಾಳಜಿಯನ್ನು ಅನಾವರಣಗೊಳಿಸಿದರು. 2007 ರಲ್ಲಿ ಮೈಸೂರು ಮುಕ್ತ ವಿ.ವಿ.ಯ ಉಪಕುಲಪತಿ ಸ್ಥಾನ ಅಲಂಕರಿಸಿ, ಅವಧಿ ಮುಗಿಯುವ ಮುನ್ನವೇ ಜರ್ಮನಿಯ ವೂತ್ ಬರ್ಗ್ಸ್ ಎಂಬ ವಿ.ವಿಯ ಇಂಡಾಲಜಿ ವಿಭಾಗಕ್ಕೆ ಕನ್ನಡ ಪ್ರಾಧ್ಯಾಪಕರಾಗಿ ಹೊರಟರು. ವಿವೇಕ್ ರೈ ಅವರಿಗೆ ಒಂದು ಅತಿ ದೊಡ್ಡ ಮುಕ್ತ ವಿಶ್ವ ವಿದ್ಯಾನಿಲಯದ ಉಪಕುಲಪತಿ ಹುದ್ದೆಗಿಂತ, ಜರ್ಮನಿಯಲ್ಲಿ ವಿದೇಶಿಯರಿಗೆ ಕನ್ನಡ ಕಲಿಸುವ ಹುದ್ದೆ ಇಷ್ಟವಾಯಿತು. ಇದು ಅವರೊಳಗಿದ್ದ ಕನ್ನಡದ ಬಗೆಗಿನ  ಪ್ರೀತಿಗೆ ಸಾಕ್ಷಿ

.
ಇಂತಹ  ಹಲವು ಸಾಧನೆಗಳ ಸಾಧಕರಿಂತಿರುವ ಕನ್ನಡದ ಹಿರಿಯ ಈ ಹಿರಿಯ ಜೀವಕ್ಕೆ ಅಪರೂಪಕ್ಕೆ ತಾನಾಗಿಯ ಹುಡುಕಿಕೊಂಡು ಬಂದ  ಸಿರಿನುಡಿ ಹಬ್ಬದ ಅಧ್ಯಕ್ಷ ಪದವಿ ಈಗ ತೀರಾ ಬೇಸರ ಮತ್ತು ಜಿಜ್ಙಾಸೆಗೆ ದೂಡಿಬಿಟ್ಟಿದೆ. ತನ್ನದೇ ನೆಲದಲ್ಲಿ ಅತಾರ್ಕಿಕ ನೆಲೆಯಲ್ಲಿ ಹುಟ್ಟಿಕೊಂಡ ಅನಿರೀಕ್ಷಿತ ಪ್ರತಿರೋಧ, ನಾಡಿನ ಪ್ರಜ್ಙಾವಂತರಲ್ಲಿ ಹಲವು ಜಿಜ್ಙಾಸೆಗಳನ್ನು ಮತ್ತು ಪ್ರಶ್ನೆಗಳನ್ನು ಸಹ ಹುಟ್ಟು ಹಾಕಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಕಾಣದ ಪ್ರತಿಭಟನೆ ಈ ವರ್ಷ ಮಾತ್ರ ಏಕೆ? ಈವರೆಗೆ ಸಿರಿನುಡಿಗೆ ಹೋದ ಲೇಖಕರು, ಕವಿಗಳಾಗಲಿ, ಅಥವಾ ಹಿರಿಯ ಸಾಹಿತಿಗಳು ಯಾರು ಎಂಬ ಪ್ರಶ್ನೆಗಿಂತ, ಈಗ ಹೋಗದೆ ಉಳಿದುಕೊಂಡ ಮಹಾನುಭಾವರು ಯಾರು ಎಂಬ ಪ್ರಶ್ನೆ ಮುಖ್ಯವಾಗಿದೆ. ವಿವೇಕ್ ರೈ ನಿಯೋಜಿತರಾಗಿರುವ ಅಧ್ಯಕ್ಷತೆ ಪಟ್ಟದ ಬಗ್ಗೆಯಾಗಲಿ ಅಥವಾ ನೀವು ಪಲ್ಲಕ್ಕಿಯಲ್ಲಿ ಹೂಗುತ್ತೀರಾ ಎಂಬ ಅಸಂಬದ್ಧ ಪ್ರಶ್ನೆಗಳನ್ನು ಕೇಳುವ ಮೊದಲು ಈ ಪ್ರಶ್ನೆಗಳನ್ನು ಎತ್ತುತ್ತಿರುವವರು ಯಾರು? ಎಂಬುದನ್ನು  ಗಮನಿಸಿದಾಗ,  ಮನಸ್ಸಿಗೆ ತೀರಾ ನಿರಾಸೆಯಾಗುತ್ತದೆ.. ಯಾರು ಇವರನ್ನು ನೈತಿಕವಾಗಿ ಪ್ರಶ್ನಿಸುತ್ತಿದ್ದಾರೋ, ಅದೇ ವ್ಯಕ್ತಿಗಳು  ಆಳ್ವರ ಆಸ್ಥಾನದಲ್ಲಿ ಸಲಹೆಗಾರರಾಗಿ ಇದ್ದವರು, ಸಿರಿನುಡಿಯಲ್ಲಿ ಪಾಲ್ಗೊಂಡು, ಆಳ್ವರಿಂದ ತಾಂಬೂಲ, ಸಂಭಾವನೆ ಪಡೆದವರಾಗಿದ್ದಾರೆ. ಜೊತೆಗೆ  ಈಗ ತಾತ್ವಿಕವಾಗಿ ವಿರೋಧಿಸಿ ಮಂಗಳೂರಿನಲ್ಲಿ  ನಡೆಯುತ್ತಿರುವ ಜನನುಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಮೇಜು ಕುಟ್ಟಿ ಮಾತನಾಡುವವರಿದ್ದಾರೆ.
ಆಳ್ವರ ಬಂಡವಾಳಶಾಹಿ ನೀತಿ ಅರಿಯಲು ಈ ಪ್ರಜ್ಙಾವಂತ ಸಮಾಜಕ್ಕೆ ಹತ್ತು ವರ್ಷ ಬೇಕಾಯಿತೆ? ಅಳ್ವರ ಶಿಕ್ಷಣ ಸಂಸ್ಥೆಯ ವ್ಯಾಪಾರೀಕರಣದ ಬಗ್ಗೆ ನಮಗೆ ಅಸಮಾಧಾನವಿದ್ದರೆ, ಅದನ್ನು ವಿರೋಧಿಸಲು ಪರ್ಯಾಯ ಮಾರ್ಗಗಳಿರಲಿಲ್ಲವೆ?
ಈ ದಿನ  ಆಳ್ವರ ಬಂಡವಾಳಶಾಹಿತನ ಕುರಿತು ಪ್ರಶ್ನಿಸುವ ಜರೂರಿಗಿಂತ, ಆದ್ಯತೆಗಳಿಗಳಿರುವ ಕನ್ನಡದ ಬಗೆಗಿನ ಪ್ರಶ್ನೆಗಳು ನಮ್ಮ ಅಂಗೈನ ಕೆಂಡದುಂಡೆಗಳಾಗಿವೆ. ಅಂತಹ ಪ್ರಶ್ನೆಗಳು ಏಕೆ ನಮ್ಮನ್ನು ಕಾಡುತ್ತಿಲ್ಲ? ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನ ದೊರೆತು, ಮೂರು ವರ್ಷಗಳಾದವು. ಕೇಂದ್ರ ಸರ್ಕಾರದ ಅನುದಾನ ಬಳಸಿಕೊಳ್ಳುವಲ್ಲಿ ನಾವು ಏನು ಮಾಡಿದ್ದೀವಿ? ನನ್ನ ಹಿರಿಯಣ್ಣನಂತಿದ್ದ ಲಿಂಗದೇವರು ಹಳೆಮನೆ ನಿಧನರಾದ ನಂತರ ಯಾವ ಕನ್ನಡ ಸಂಸ್ಕೃತಿ ಚಿಂತಕರು ಈ ಕುರಿತು ಯೋಚಿಸಿದ್ದಾರೆ? ಯೋಜನೆ ರೂಪಿಸಿದ್ದಾರೆ?  ಯಾವ ಯೋಜನೆಗಳು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿವೆ? ಯಾರಾದರೂ  ಈ ಬಗ್ಗೆ ಮಾಹಿತಿ ನೀಡಿದರೆ, ಅವರ ಪದತಲದಲ್ಲಿ ಕುಳಿತು ಮಾಹಿತಿ ಸ್ವೀಕರಿಸಬಲ್ಲೆ. ನಮ್ಮ ನೆರೆಯ ತಮಿಳುನಾಡು ಸರ್ಕಾರ  ಈವರೆಗೆ ಹದಿಮೂರು ಸಾವಿರ ಕೋಟಿ ರೂಪಾಯಿಗಳ ಕೇಂದ್ರ ಸರ್ಕಾರದ ಅನುದಾನವನ್ನು ತಮಿಳು ಭಾಷೆಗಾಗಿ, ತಂಜಾವೂರಿನ ತಮಿಳು ವಿ.ವಿ. ಮಧುರೈನ ಕಾಮರಾಜ್ ವಿ.ವಿ. ಮತ್ತು ನಮ್ಮ ಬಂಗಾರ ಪೇಟೆ ಸಮೀಪದ ಕುಪ್ಪಂ ನಲ್ಲಿ ( ಆಂಧ್ರ ಮಾಜಿ ಮುಖ್ಯ ಮಂತ್ರಿ ಚಂದ್ರ ಬಾಬು ನಾಯ್ಡು ಅವರ ವಿಧಾನಸಭಾ ಕ್ಷೇತ್ರ)ಸ್ಥಾಪಿಸಲಾಗಿರುವ ದ್ರಾವಿಡ ವಿಶ್ವ ವಿದ್ಯಾಲಯದಲ್ಲಿ ಹೇಗೆ ವಿನಿಯೋಗಿಸಿದೆ ಎಂಬುದನ್ನು ನಮ್ಮ ಕನ್ನಡದ ವಿಧ್ವಾಂಸರು ಒಮ್ಮೆ 
ನೋಡಿ ಬರುವುದು ಒಳಿತು.

ಯಾವುದೇ ಒಂದು ರಂಗದಲ್ಲಿ ಇಂತಹ ಆರೋಗ್ಯ ಚರ್ಚೆಗಳು ಅವಶ್ಯಕ ನಿಜ. ಆದರೆ, ಅವುಗಳಿಗೆ ತಾರ್ಕಿಕ ನೆಲೆಯ ಚೌಕಟ್ಟುಗಳಿದ್ದಾಗ, ಮಾತ್ರ ಅವುಗಳಿಗೆ  ಅರ್ಥ ಸಿಗಬಲ್ಲದು.  ನಮ್ಮ ಬಳ್ಳಾರಿ ಜಿಲ್ಲೆಯ ಹಿರಿಯ ನಾಟಕಕಾರ ಮತ್ತು ಕಲಾವಿದ ಜೋಳದ ರಾಶಿ ದೊಡ್ಡನಗೌಡರ ಸಮಗ್ರ ಸಾಹಿತ್ಯವನ್ನು ತಿರುಪತಿಯ ವೆಂಕೇಟೇಶ್ಚರ ವಿಶ್ವ ವಿದ್ಯಾನಿಲಯ ಕೊಂಡಯ್ದು ತೆಲುಗು ಭಾಷೆಗೆ ತರ್ಜುಮೆ ಮಾಡುತ್ತಿದೆ. ಇಂತಹ ಸತ್ಯಗಳ ಅರಿವಿಲ್ಲದ ನಾವು, ಕನ್ನಡ ಪರ ಸಂಘಟನೆಗಳ ಬೀದಿ ಬದಿಯ ಪ್ರತಿಭಟನೆಗಳ  ಮುಂದುವರಿದ ಮಾದರಿಯಂತೆ ಹೆಜ್ಜೆ ಹಾಕುತ್ತಿದ್ದೇವೆ.ಸಿರಿನುಡಿಯ ಕನ್ನಡದ ಹಬ್ಬ ಕುರಿತು ಚಕಾರವೆತ್ತುವ ನಮಗೆ  ಕನ್ನಡ ಸಾಹಿತ್ಯ ಪರಿಷತ್ತು ಭ್ರಷ್ಟ ರಾಜಕಾರಣಿಗಳ ಕೃಪಾಕಟಾಕ್ಷದಲ್ಲಿ ನಡೆಸುವ ಸಾಹಿತ್ಯ ಸಮ್ಮೇಳನವೆಂಬ ಎಲ್ಲಮ್ಮನ ಜಾತ್ರೆ ಎಂಬ  ಅಸಹನೆ ಏಕಿಲ್ಲ?  ಆಳ್ವಾ ಅಷ್ಟೇ ಅಲ್ಲ,  ಬೆಂಗಳೂರಿನಲ್ಲಿ ನಡೆಯುವ ಬೆಂಗಳೂರು ಹಬ್ಬದ ಬಗ್ಗೆ ನಾವು ಎಂದಾದರೂ ಈ ಪ್ರಶ್ನೆಗಳನ್ನು ಎತ್ತಿದ ಉದಾಹರಣೆಗಳುಂಟಾ? ಕಳೆದ ಏಳೆಂಟು ವರ್ಷಗಳಲ್ಲಿ ಕರ್ನಾಟಕದಲ್ಲಿ ನಡೆದಿರುವ ಸಾಹಿತ್ಯ ಸಮ್ಮೆಳನಗಳ ಮಾಹಿತಿಯನ್ನು ಇಲ್ಲಿ ಕೊಡಬಲ್ಲೆ. ಅದಕ್ಕೆ ಹಣ ಹಾಕಿದವರು ಯಾರು? ಹೈರಾಣಾದವರು ಯಾರು? ಎಂಬುದನ್ನು ಗಮನಿಸಿದಾಗ, ಇಡೀ ಕನ್ನಡದ ಮನಸ್ಸುಗಳು ಭ್ರಷ್ಟಗೊಂಡಿವೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ?
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ, ಉಪಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ( ನಿಸಾರ್ ಆಹಮದ್ ಅಧ್ಯಕ್ಷರು) ಯಡಿಯೂರಪ್ಪನವರು ವೈಯಕ್ತಿವಾಗಿ ಹೆಚ್ಚವರಿಯಾಗಿ ಭರಿಸಿದ ಮೊತ್ತ, ಎರಡು ಕೋಟಿ ತೊಂಬತ್ತು ಲಕ್ಷರೂಪಾಯಿಗಳು. ಆನಂತರ ಜಿ.ಎಸ್ ವೆಂಕಟಸುಬ್ಬಯ್ಯ ಅಧ್ಯಕ್ಷರಾಗಿ ಆಯ್ಕೆಯಾಗಿ ಬೆಂಗಳೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಹೆಚ್ಚವರಿ ನಾಲ್ಕೂವರೆ ಕೋಟಿ ರೂಪಾಯಿಗಳ ಸಾಲವನ್ನು ಆರ್.ಅಶೋಕ್ ಒಂದು ವರ್ಷಗಳ ಅವಧಿಯಲ್ಲಿ ತೀರಿಸಿದರು.ಯಡಿಯೂರಪ್ಪನವರ ಮಂತ್ರಿ ಮಂಡಲದಲ್ಲಿ ಗೃಹ ಸಚಿವ ಮತ್ತು ಸಾರಿಗೆ ಸಚಿವರಾಗಿದ್ದ ಅಶೋಕ್ ತಮ್ಮ ಮನೆಯಿಂದ ಹಣ ತಂದು ಸಾಲ ತೀರಿಸಿದರು ಎಂದು ನಾವು ನಂಬಲು ಸಾಧ್ಯವೆ? ಗದಗದಲ್ಲಿ ಗೀತಾ ನಾಗಭೂಷಣ್ ಅಧ್ಯಕ್ಷರಾಗಿದ್ದ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಗಣಿದಣಿ ರಾಮುಲು ; ಗೀತಾ ನಾಗಭೂಷಣ್  ಅವರಿಗೆ ಹನ್ನೊಂದು ಲಕ್ಷ ರೂಪಾಯಿ ದೇಣಿಗೆ ನೀಡಿದಾಗ ನಮಗ್ಯಾಕೆ ನೈತಿಕ ಪ್ರಜ್ಙೆ ಕಾಡಲಿಲ್ಲ? ರಾಮುಲು ಖರ್ಚು ಮಾಡಿದ ಏಳು ಕೋಟಿ ರೂಪಾಯಿ ಯಾವ ಮೂಲದಿಂದ ಬಂದಿದ್ದು ಎಂಬುದನ್ನು ತಿಳಿಯಲಾರದಷ್ಟು ಅಜ್ಙಾನ ನಮ್ಮನ್ನು ಆವರಿಸಿಕೊಂಡಿತ್ತೆ? ಮುಂದಿನ ಜನವರಿಯ ಮಡಕೇರಿಯ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರದಿಂದ ಬಿಡುಗಡೆಯಾದ ಹಣ ಕೇವಲ ಒಂದು ಕೋಟಿ ಮಾತ್ರ. ಇನ್ನುಳಿದ ಮೂರು ಕೋಟಿ ಹಣದ ಉಸ್ತುವಾರಿಯನ್ನು  ಈಗಿನ ಲೋಕೋಪಯೋಗಿ  ಸಚಿವ ಡಾ.ಮಹಾದೇವಪ್ಪ ಹೊತ್ತಿದ್ದಾರೆ. ಅವರು ಎಲ್ಲಿಂದ ಹಣ ತರುತ್ತಾರೆ? ಸಾಹಿತ್ಯ ಸಮ್ಮೇಳನಕ್ಕೆ ಹಣ ನೀಡುವ ಕಂಟ್ರಾಕ್ಟರುಗಳು, ಭ್ರಷ್ಟ ಇಂಜಿನೀಯರ್ ಗಳು, ಇವರೆಲ್ಲಾ  ಬಂಡವಾಳ ಶಾಹಿಯ ಪ್ರತಿನಿಧಿ ನಾವು ಆರೋಪ ಹೊರಿಸುತ್ತಿರುವ ಆಳ್ವರಿಗಿಂತ ಶ್ರೇಷ್ಟರೆ?

?
ಜನನುಡಿ ಪರಿವಾರ ಎತ್ತಿರುವ  ಪ್ರಶ್ನೆಗಳು ಸ್ವಸ್ಥ ಸಮಾಜದ ಪುನರ್ ನಿರ್ಮಾಣಕ್ಕೆ  ಪೂರಕವಾಗಿರುವಂತೆ ಕಂಡರೂ , ವಾಸ್ತವ ನೆಲೆಗಟ್ಟಿನಲ್ಲಿ ಗಮನಿಸಿದಾಗ, ಅಥವಾ  ಅವರದೇ ದೃಷ್ಟಿಕೋನದಲ್ಲಿ ಅವಲೋಕಿಸಿದಾಗ  ಇಡೀ ಕನ್ನಡದ ಸಾಹಿತ್ಯ ಜಗತ್ತಿನ  ಲೇಖಕರನ್ನು ನಾವು ತಿರಸ್ಕರಿಸಬೇಕಾಗುತ್ತೆ.  ಅದು ಸಾಧ್ಯವೆ? ಆಳ್ವರ ಪ್ರಶ್ನೆಗಿಂತ,ಮುಖ್ಯವಾಗಿ ಕನ್ನಡದ ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತನ್ನು ವ್ಯಾಪಾರೀಕರಣ ಮತ್ತು ಅದ್ದೂರಿನತನ ಹುಚ್ಚಿನಿಂದ ಬಿಡಿಸಬೇಕಿದೆ . ಆದರೆ, ಅವುಗಳ ಬಗ್ಗೆ ಪ್ರಶ್ನೆ ಎತ್ತುವ ವ್ಯಕ್ತಿಯ ನೈತಿಕತೆಯನ್ನೂ ಸಹ ನಮ್ಮ ಪ್ರಜ್ಙಾವಂತ ಓದುಗರ ಜಗತ್ತು ಅವಲೋಕಿಸುತ್ತಿದೆ ಎಂಬ ಎಚ್ಚರ ನಮ್ಮಲ್ಲಿರ ಬೇಕು. . ಯಾವುದೇ ಆತ್ಮ ಸಾಕ್ಷಿಯ ಪ್ರಜ್ಙೆಯಿಲ್ಲದೆ ಮಡೆ ಸ್ನಾನ ದಂತಹ ಅನಿಷ್ಟ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡ ವೈದೇಹಿಯವರ ಮಾತುಗಳನ್ನು ಸಹಿಸಿಕೊಳ್ಳುವುದರ ಜೊತೆಗೆ, ಅವರು 2010 ರಲ್ಲಿ ಆಳ್ವಾಸ್ ಸಿರಿನುಡಿಗೆ ಅಧ್ಯಕ್ಷರಾದಾಗ ಕಾಣದಿದ್ದ ಅಸಹನೆ, ದಿಡೀರನೆ  ಮಂಗಳೂರಿನಲ್ಲಿ ಈಗ ಹೇಗೆ ಹುಟ್ಟಿಕೊಂಡಿತು? ಯಾರದೋ ಹೆಗಲ ಮೇಲೆ, ಮತ್ಯಾರೋ ಬಂದೂಕವಿಟ್ಟು ಗುಂಡು ಹಾರಿಸುತ್ತಿರವ ಹುನ್ನಾರವೆ?     ಅನುಮಾನ ನನ್ನನ್ನು ತೀವ್ರವಾಗಿ ಕಾಡುತ್ತಿದೆ. ಏಕೆಂದರೆ, ಕಳೆದ ವರ್ಷ ಧಾರವಾಡದಲ್ಲಿ ನಡೆದ ಜನಸಾಹಿತ್ಯ ಸಮ್ಮೇಳನದಲ್ಲಿ ಹಲವರ ಹುನ್ನಾರಗಳಿಗೆ ಬಲಿಯಾಗಿ, ಹುಂಬನಂತೆ ಇಂತಹದ್ದೇ ಪ್ರಕ್ರಿಯೆಗೆ ಹೆಗಲು ಕೊಟ್ಟು   ಬಲಿಯಾದ ಉದಾಹರಣೆಗೆ ನಾನೇ ಸ್ವತಃ ಸಾಕ್ಷಿಯಾಗಿದ್ದೀನಿ. ಈ ಅನುಭವದಿಂದಾಗಿ “ನಮ್ಮ ಎದೆಯೊಳಗಿನ ವಿಷ ಮತ್ತು ತಲೆಯೊಳಗಿನ ಕಸ ಕಡಿಮೆಯಾದಾಗ ಮಾತ್ರ  ನಮ್ಮ ಚಿಂತನೆಗೆ ಒಂದಿಷ್ಟು ಸ್ಪೃಷ್ಟತೆ ಸಿಗಬಲ್ಲದು” ಎಂದು ನಂಬಿಕೊಂಡಿದ್ದೇನೆ.
(ಕೊನೆಯ ಮಾತು – ಇದು  ನನ್ನ ಆತ್ಮಕ್ಕೆ ನಾನೇ ಹಾಕಿಕೊಂಡ ಪ್ರಶ್ನೆಗಳು ಮತ್ತು ಕಂಡುಕೊಂಡ ಉತ್ತರಗಳು. ಹಾಗಾಗಿ ಇವು ವೈಯಕ್ತಿಕ ಅನಿಸಿಕೆ ಮಾತುಗಳು ಮಾತ್ರ.)


ಮಂಗಳವಾರ, ಡಿಸೆಂಬರ್ 10, 2013

ಕೇಳದೆ ಉಳಿದ ಒಂದು ಸ್ವರ ಮಾಧುರ್ಯ



2012 ಡಿಸಂಬರ್ 12ನೆಯ ದಿನಾಂಕ  ಒಂದು ಸ್ಮರಣೀಯ ದಿನ. 12-12-12 ಸಂಖ್ಯೆಯನ್ನು ನಾವು ಜೀವಿತದಲ್ಲಿ ಮತ್ತೊಮ್ಮೆ ನೋಡಲಾರದ ದಿನವಾಗಿ ನೆನಪಲ್ಲಿ  ಉಳಿದುಹೋಯಿತು. ಅದೇ ದಿನ ಭಾರತೀಯರಿಗೆ ಇನ್ನೊಂದು ರೀತಿಯ ನೆನಪಿನಲ್ಲಿ ಉಳಿಯುವಂತೆ ಮಾಡಿತು. ಭಾರತೀಯ ಸಂಗೀತಲೋಕದ ಮೇರು ಶಿಖರಗಳಲ್ಲಿ ಒಬ್ಬರಾದ ಸಿತಾರ್ ಮಾಂತ್ರಿಕ ಪಂಡಿತ್ ರವಿಶಂಕರ್ ದೂರದ ಅಮೇರಿಕಾದ ಕ್ಯಾಲಿಪೋರ್ನಿಯಾ ನಗರದಲ್ಲಿ ಅಸ್ತಂಗತರಾಗುವ ಮೂಲಕ ಸಂಗೀತ ಪ್ರೇಮಿಗಳ ಹೃದಯದಲ್ಲಿ ಅಳಿಸಲಾಗದ ನೆನಪಾಗಿ ದಾಖಲಾದರು.
ಸಿತಾರ್ ವಾದನವೆಂದರೆ, ಪಂಡಿತ್ ರವಿಶಂಕರ್ ಎಂದು ಜಾಗತಿಕ ಮಟ್ಟದಲ್ಲಿ ಗುರುತಿಸುವಷ್ಟು ಎತ್ತರಕ್ಕೆ ಬೆಳೆದ ಪಂಡಿತ್ ರವಿಶಂಕರ್ ಭಾರತೀಯ ಸಂಗೀತವನ್ನು ಜಗತ್ತಿಗೆ ಪರಿಚಯಿಸಿ, ಎಲ್ಲರೂ ಭಾರತದತ್ತ ತಿರುಗಿ ನೋಡುವಂತೆ ಮಾಡಿದವರಲ್ಲಿ ಪ್ರಮುಖರು
ತಮ್ಮ ತೊಂಬತ್ತು ವರ್ಷಗಳ ಸುಧೀರ್ಘ ಬದುಕಿನಲ್ಲಿ ಸತತ ಏಳು ದಶಕಗಳ ಕಾಲ ಸಿತಾರ್ ವಾದನವನ್ನು ಉಸಿರಾಗಿಸಿಕೊಂಡು ಬದುಕಿದ ಅನನ್ಯ ಪ್ರತಿಭೆ ಅವರದು. ಇಂತಹ ಮಹಾನ್ ವ್ಯಕ್ತಿಯ ಸಾಧನೆಯ ಹಿಂದೆ ಒಬ್ಬ ಹೆಣ್ಣು ಮಗಳ ಸಂಗೀತ ಮತ್ತು ಬದುಕಿನ ತ್ಯಾಗ ಅಡಗಿದೆ ಎಂಬ ಕಠೋರ ಸತ್ಯ ಮಾತ್ರ ಹೊರಜಗತ್ತಿಗೆ ಇವತ್ತಿಗೂ ಅಪರಿಚಿತವಾಗಿ ಉಳಿದುಹೋಯಿತು. ಏಕೆಂದರೆ, ರವಿಶಂಕರ್ ಸಾಧನೆಗೆ ಅಡ್ಡಿಯಾಗಬಾರದೆಂಬ ಏಕೈಕ ನಿಲುವಿನಿಂದ ಕಳೆದ ಅರ್ಧಶತಮಾನದಿಂದ ಮೌನಕ್ಕೆ ಶರಣಕ್ಕಾಗಿ, ಹೊರ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಿರುವ ಅನ್ನಪೂರ್ಣದೇವಿ ಎಂಬ ರವಿಶಂಕರ್ರವರ ಮೊದಲ ಪತ್ನಿಯೂ ಹಾಗೂ ಅವರ ಗುರು ಬಾಬಾ ಅಲ್ಲಾವುದ್ದೀನ್ ಖಾನ್ರವರ ಪುತ್ರಿಯೂ ಆದ ಮಹಾತಾಯಿಯೊಬ್ಬಳ  ಸಾಧನೆ ಮತ್ತು ಪರಿತ್ಯಕ್ತ ಬದುಕು ಇವೆಲ್ಲವೂ ಶಬ್ಧಗಳಲ್ಲಿ ಹಿಡಿದಿಡಲಾಗದ ಸಂಕಟಗಳು.


ಮುಂಬೈ ನಗರದ ವಾರ್ಡನ್ ರಸ್ತೆಯಲ್ಲಿ ಸಮುದ್ರಕ್ಕೆ ಎದುರಾಗಿ ನಿಂತಿರುವ ಆಕಾಶ್ಗಂಗ ಎಂಬ ವಸತಿ ಸಂಕೀರ್ಣದ ಆರನೆಯ ಮಹಡಿಯಲ್ಲಿ ನಾಲ್ಕು ಗೋಡೆಯ ಮಧ್ಯದ ವಾಸಕ್ಕೆ ತಮ್ಮ ಬದುಕನ್ನು ಸೀಮೀತಗೊಳಿಸಿಕೊಂಡ ಭಾರತೀಯ ಸಂಗೀತದ ಇನ್ನೊಂದು ಅನನ್ಯ ಮೇರು ಪ್ರತಿಭೆ ಅನ್ನಪೂರ್ಣದೇವಿ.
ನಾವು ವಾಸಿಸುತ್ತಿರುವ ಕಟ್ಟಡದಲ್ಲಿ ಭಾರತೀಯ ಸಂಗೀತಲೋಕದ ಹಿರಿಯ ಜೀವವೊಂದು ಬದುಕಿದೆ ಎಂಬ ಸುಳಿವನ್ನೂ ಸಹ ನೆರೆಹೊರೆಯವರಿಗೆ ನೀಡದೆ ಬದುಕಿರುವ ಅನ್ನಪೂರ್ಣದೇವಿ, ಎಂದೂ ಹೊರಜಗತ್ತಿಗೆ ಮುಖ ತೋರಿಸಿದವರಲ್ಲ ಅಥವಾ ಮಾತನಾಡಿದವರಲ್ಲ. ಒಂದು ಘೋರ ಕಠಿಣ ತಪಸ್ಸಿನಂತೆ, ವ್ರತದಂತೆ ನಿಯಮವನ್ನು ಪಾಲಿಸಿಕೊಂಡು ಬಂದಿರುವ ಅವರ ನಿರ್ಧಾರದ ಹಿಂದೆ ಹೇಳಿಕೊಳ್ಳಲಾಗದ ನೋವುಗಳಿವೆ, ದುಖಃ ದುಮ್ಮಾನಗಳಿವೆ. ಆದರೆ, ಇವೆಲ್ಲವನ್ನೂನಾನು ನನ್ನೊಂದಿಗೆ ಸಮಾಧಿಗೆ ಕೊಂಡೊಯ್ಯುತ್ತೇನೆಎಂದು ಪತ್ರಕರ್ತರÀ ಪ್ರಶ್ನೆಗಳಿಗೆ ಕಾಗದದ ಮೂಲಕ ಉತ್ತರಿಸಿದ್ದಾರೆ.
ಇವರ ಬಳಿ ಸಂಗೀತ ಸಾಧನೆ ಮಾಡಿದ ಶಿಷ್ಯ ಸ್ವಪನ್ಕುಮಾರ್ ಬಂಡೋಪಾಧ್ಯಾಯ ಎಂಬವರುAn Unherd Melodyಎನ್ನುವ ಕೃತಿಯನ್ನು ಬರೆಯದಿದ್ದರೆ, ಇವರ ಬದುಕಿನತ್ಯಾಗ, ಸಂಗೀತಸಾಧನೆ, ಇವೆಲ್ಲವೂ ಇತಿಹಾಸದ ಕಾಲ ಗರ್ಭದಲ್ಲಿ ಹೂತು ಹೋಗುತ್ತಿದ್ದವು. ಭಾರತದ ಸಂಗೀತ ಕ್ಷೇತ್ರದಲ್ಲಿರುವ ಎಲ್ಲಾ ಪ್ರಶಸ್ತಿಗಳು, ಗೌರವ ಡಾಕ್ಟರೇಟ್ ಪದವಿಗಳು ಇವರ ಮನೆ ಬಾಗಿಲ ಬಳಿ ಹೋಗಿ ತಮ್ಮ ಹಿರಿಮೆಯನ್ನು ಹೆಚ್ಚಿಸಿಕೊಂಡಿವೆ. 1977ರಲ್ಲಿ ಭಾರತ ಸರ್ಕಾರ ನೀಡಿದ ಪದ್ಮಭೂಷಣ ಪ್ರಶಸ್ತಿಯನ್ನು ಸಹ ಇವರ ಮನೆಗೆ ಕೊಡೊಯ್ದು ಅರ್ಪಿಸಲಾಯಿತು.

ಪತಿಗೆ ಕೊಟ್ಟ ವಚನದಂತೆ ಸಾರ್ವಜನಿಕ ಸಂಗೀತ ಪ್ರದರ್ಶನಕ್ಕೆ  ತಮ್ಮ ಮೇಲೆ ಮಿತಿ ಹೇರಿಕೊಂಡಿದ್ದರೂ ಸಹ ಜೀವನ ನಿರ್ವಹಣೆಗಾಗಿ ಆಯ್ಕೆ ಮಾಡಿಕೊಂಡ ಶಿಕ್ಷಕ ವೃತ್ತಿಯಿಂದಾಗಿ ಸಂಗೀತವನ್ನು ಶಿಷ್ಯರಿಗೆ ಧಾರೆಯೆರೆಯುವ ಮೂಲಕ ಅನ್ನಪೂರ್ಣದೇವಿಯವರು ಭಾರತದ ಶ್ರೇಷ್ಠ ಸಂಗೀತ ಗುರುಗಳಲ್ಲಿ ಒಬ್ಬರಾಗಿದ್ದಾರೆ. ಇವರ ಬಳಿ ಶಿಷ್ಯ ವೃತ್ತಿ ಕೈಗೊಂಡ ಕೊಳಲು ವಾದನದ ಮಾಂತ್ರಿಕ ಹರಿ ಪ್ರಸಾದ್ ಚೌರಾಸಿಯ, ಸಿತಾರ್ವಾದಕ ನಿಖಿಲ್ಬ್ಯಾನರ್ಜಿ, ಪಂಡಿತ್ ನಿತ್ಯಾನಂದ್, ಸುಧೀರ್ ಪಡ್ಕೆ,  ಹೀಗೆ ಪ್ರತಿಭೆಗಳ ಪಟ್ಟಿಯೇ ಮುಂದವರಿಯುತ್ತದೆ.
1942 ರಲ್ಲಿ ರವಿಶಂಕರ್ ಜೊತೆ ನಡೆದ ವಿವಾಹ ಮತ್ತು ಇಪ್ಪತ್ತು ವರ್ಷಗಳ ದಾಂಪತ್ಯ ಜೀವನದ ನಂತರ  1962 ರಲ್ಲಿ ವಿವಾಹ ವಿಚ್ಚೇಧನದ ಮೂಲಕ ಅಂತ್ಯಗೊಂಡು ಅವರೊಂದಿಗಿನ ಸಂಬಂಧ ಕಡಿದು ಹೋಗಿದ್ದರೂ ಕೊಟ್ಟ ಮಾತಿನಂತೆ ಸಂಗೀತ ಪ್ರದರ್ಶನದಿಂದ ದೂರ ಉಳಿದು, ರವಿಶಂಕರ್ರವರ ಖ್ಯಾತಿಗೆ ತನ್ನ ಕಾಯವನ್ನು, ಜೀವನವನ್ನು ಕರ್ಪೂರದ ಹಾಗೆ ಉರಿಸಿಕೊಂಡವರು ಮಹಾತಾಯಿ.
ಪಂಡಿತ್ ರವಿಶಂಕರ್ ಮತ್ತು ಅನ್ನಪೂರ್ಣ ದೇವಿಯವರ ಬಾಲ್ಯದ ಬದುಕು, ಸಂಗೀತದ ಸಾಧನೆಯನ್ನು ಕಣ್ಣಾರೆ ನೋಡಿದವರ ಪ್ರಕಾರ, ಅನ್ನಪೂರ್ಣರವರ ಸಿತಾರ್ವಾದನ ರವಿಶಂಕರ್ ಸಾಧನೆಯನ್ನು, ಪ್ರತಿಭೆಯನ್ನು ಮೀರಿಸುವಂತಹದ್ದು. ಪ್ರದರ್ಶನದ ವೇದಿಕೆಗಳಲ್ಲಿ ತನಗಿಂತ ಹೆಚ್ಚು ಪ್ರಶಂಸೆ ಗಿಟ್ಟುಸುತ್ತಿದ್ದ ಪತ್ನಿಯ ಬಗ್ಗೆ ರವಿಶಂಕರ್ರವರಿಗೆ ಅಸಮಾಧಾನವಿತ್ತು.
ಸಂಗೀತ ಸಾಧನೆಯ ವಿಷಯದಲ್ಲಿ ಇಬ್ಬರದೂ ವಿಭಿನ್ನ ದಾರಿಯಾಗಿತ್ತು. ಅಂತಿಮವಾಗಿ ಸಂಗೀತ ಇಬ್ಬರೂ ಬೇರ್ಪಡಲು ಕಾರಣವಾದದ್ದು ಮಾತ್ರ ದುರಂತ. ಪಂಡಿತ್ ರವಿಶಂಕರ್ ಜಗತ್ ಪ್ರಸಿದ್ಧ ಸಂಗೀತ ಸಾಧಕರಾಗಿದ್ದರೂ ಕೂಡ ಅವರೊಳಗೆ ಇದ್ದ ಹೆಣ್ಣುಬಾಕತನದ ಪ್ರವೃತ್ತಿ ಅವರಿಂದ ಅನ್ನಪೂರ್ಣದೇವಿ ದೂರವಾಗಲು ಪ್ರಮುಖ ಕಾರಣವಾಯಿತು. ಪಾಶ್ಚಿಮಾತ್ಯ ಸಂಸ್ಕøತಿಯಲ್ಲಿ ಬೆಳೆದ ರವಿಶಂಕರ್ಗೂ, ಮುಸ್ಲಿಂ ಕುಟುಂಬದಲ್ಲಿ ಜನಿಸಿದರೂ ಅಪ್ಪಟ ಭಾರತೀಯ ಸಂಸ್ಕøತಿಯನ್ನು ಮೈಗೂಡಿಸಿಕೊಂಡಿದ್ದ ಅನ್ನಪೂರ್ಣದೇವಿಯವರಿಗೂ ಆಚಾರ ವಿಚಾರ ಮತ್ತು ಆಲೋಚನೆಗಳಲ್ಲಿ ಕಂದಕವೇರ್ಪಟ್ಟಿತ್ತು.

ರವಿಶಂಕರ್ರವರ ತಂದೆ ಶ್ಯಾಮ್ಶಂಕರ್ ಬಂಗಾಳಿ ಬ್ರಾಹ್ಮಣರಾಗಿದ್ದು ಕಾಲಕ್ಕೆ ಬ್ಯಾರಿಸ್ಟರ್ ಪದವಿ ಪಡೆದು ರಾಜಸ್ಥಾನದ ಜಾರ್ವಾರ್ ಸಂಸ್ಥಾನದಲ್ಲಿ ದಿವಾನರಾಗಿದ್ದರು. ವಾರಣಾಸಿಯಲ್ಲಿ ಅವರ ಕುಟುಂಬವಿದ್ದ ಕಾರಣ ಮೊದಲ ಹತ್ತುವರ್ಷಗಳ ಬಾಲ್ಯವನ್ನು ರವಿಶಂಕರ್ ವಾರಣಾಸಿಯಲ್ಲಿ ಕಳೆದಿದ್ದರು. ನಂತರ ಅವರ ತಂದೆ ಜಿನಿವಾ ವಿ.ವಿ.ಯಿಂದ ಡಾಕ್ಟರೇಟ್ ಪದವಿ ಪಡೆದು ವಕೀಲಿ ವೃತ್ತಿಗಾಗಿ ನ್ಯೂಯಾರ್ಕ್ ನಗರಕ್ಕೆ ತೆರಳಿದಾಗ, ತಮ್ಮ ಕುಟುಂಬವನ್ನು ಜೊತೆಗೆ  ಕೊಂಡೊಯ್ದರು. ಒಡ ಹುಟ್ಟಿದ ಏಳು ಜನ ಸಹೋದರರ ಪೈಕಿ ಹಿರಿಯ ಸಹೋದರ ಉದಯ ಶಂಕರ್ ಕಾಲಕ್ಕೆ ಪ್ರಖ್ಯಾತ ನೃತ್ಯ ಪಟುವಾಗಿ ಪ್ರಸಿದ್ಧಿಯಾಗಿ ತಮ್ಮದೇ ನೃತ್ಯತಂಡವೊಂದನ್ನು ಕಟ್ಟಿಕೊಂಡು ಅಮೇರಿಕಾ, ಕೆನಡಾ ಸೇರಿದಂತೆ ಯುರೊಪ್ ರಾಷ್ಟ್ರಗಳಲ್ಲಿ ಪ್ರದರ್ಶನ ನೀಡುತ್ತಿದ್ದರು. ರವಿಶಂಕರ್ ಕೂಡ ಆರಂಭದಲ್ಲಿ ನೃತ್ಯಪಟುವಾಗಿ ಅಣ್ಣನ ತಂಡದಲ್ಲಿ ತೊಡಗಿಸಿಕೊಂಡಿದ್ದರು.
1934 ರಲ್ಲಿ ಕೊಲ್ಕತ್ತ ನಗರದಲ್ಲಿ ನಡೆದ ಸಂಗೀತ ಉತ್ಸವದಲ್ಲಿ ಪಾಲ್ಗೊಂಡಿದ್ದ ಉದಯಶಂಕರ್, ಮಧ್ಯಪ್ರದೇಶದ ಮಯಹಾರ್ ಎಂಬ ಸಂಸ್ಥಾನದಲ್ಲಿ ಗಾಯಕರಾಗಿದ್ದ ಬಾಬಾ ಅಲ್ಲಾವುದ್ದೀನ್ಖಾನ್ ಸಿತಾರ್ ಗಾಯನವನ್ನು ಕೇಳಿ ಅದಕ್ಕೆ  ಮಾರು ಹೋಗಿದ್ದರು. ಮಯಹಾರ್ ಸಂಸ್ಥಾನದ ಮಹಾರಾಜನ ಅನುಮತಿ ಪಡೆದು ಅಲ್ಲಾವುದ್ದೀನ್ ಖಾನರನ್ನು  1935 ರಲ್ಲಿ ತಮ್ಮ ನೃತ್ಯ ತಂಡಕ್ಕೆ ¸ಸಂಗೀತ ನೀಡಲು  ಲಂಡನ್ಗೆ ಆಹ್ವಾನಿಸಿದ್ದರು. ಲಂಡನ್ ಪ್ಯಾರಿಸ್, ರೋಮ್ ನಗರ ಒಳಗೊಂಡಂತೆ ಹಲವು ನಗರಗಳಲ್ಲಿ ನಡೆದ ನೃತ್ಯನಾಟಕ ಪ್ರದರ್ಶನಗಳಲ್ಲಿ ಅಲ್ಲಾವುದ್ದೀನ್ಖಾನ್ ಸಿತಾರ್ ನುಡಿಸಿದ್ದರು. ಇವರ ಸಿತಾರ್ ವಾದನಕ್ಕೆ ಮನಸೋತ ರವಿಶಂಕರ್ ತಮ್ಮ ಹದಿನೆಂಟನೆಯ ವಯಸ್ಸಿನಲ್ಲಿ ನೃತ್ಯವನ್ನು ತ್ಯಜಿಸಿ, 1938 ರಲ್ಲಿ ಮಯಹಾರ್ಗೆ ಬಂದು ಅಲ್ಲಾವುದ್ದೀನ್ ಅವರ ಬಳಿ ಶಿಷ್ಯತ್ವವನ್ನು ಸ್ವೀಕರಿಸಿದರು. ಅವರ ಮನೆಯಲ್ಲಿ ಉಳಿದುಕೊಂಡು ಗುರುಕುಲ ಪದ್ಧತಿಯಲ್ಲಿ ಸಿತಾರ್ ವಾದನ ಕಲಿಯತೊಡಗಿದರು.



ಅನ್ನಪೂರ್ಣದೇವಿಯ ಮೂಲ ಹೆಸರು ರೋಷನಾರ. ಅವರು  ಚೈತ್ರ ಹುಣ್ಣಿಮೆಯ ದಿನ ಜನಿಸಿದ್ದರಿಂದ ಮಯಹಾರದ ( ಈಗಿನ ಜಬಲ್ಪುರ ನಗರದ ಸಮೀಪ ಇರುವ ಪಟ್ಟಣ) ಮಹರಾಜ ಬ್ರಿಜನಾಥ ಸಿಂಗ್  ಅನ್ನಪೂರ್ಣ ಎಂದು ರೋಷನಾರಳಿಗೆ ಪುನರ್ ನಾಮಕರಣ ಮಾಡಿದ್ದ. ಇದಕ್ಕೆ ಅವರ ತಂದೆ ಯಾವ ವಿರೋಧವನ್ನು ವ್ಯಕ್ತಪಡಿಸಲಿಲ್ಲ. ಏಕೆಂದರೆ ಪ್ರತಿ ನಿತ್ಯ ಐದು ಬಾರಿ ನಮಾಜು ಮಾಡುವುದರ ಜೊತೆಗೆ ಶಾರದದೇವಿಯನ್ನು ಪೂಜಿಸಿ ಆರಾಧಿಸುತಿದ್ದ ಅಲ್ಲಾವುದ್ದೀನ್ ಅಂದಿನ ದಿನಗಳಲ್ಲಿ ಹಿಂದು-ಮುಸ್ಲಿಂ ಧರ್ಮಗಳ ಐಕ್ಯತೆಯ ಸಂಕೇತದಂತೆ ಜೀವಿಸಿದ್ದರು.
ಕಾಲದ ಹಿಂದೂಸ್ಥಾನಿ ಸಂಗೀತದಲ್ಲಿ ಮಯಹಾರ ಘರಾನ ಎಂಬ ಪ್ರತ್ಯೇಕ ಹಿಂದೂಸ್ಥಾನಿ ಸಂಗೀತದ ಪ್ರಕಾರವನ್ನು ಹುಟ್ಟುಹಾಕಿದ್ದ ಅಲ್ಲಾವುದ್ದೀನರು ಭಾರತದ ಪ್ರಸಿದ್ದ ಸುರ್ಬಹಾರ್ ಮತ್ತು ಸಿತಾರ್ ವಾದಕರಾಗಿದ್ದರು. ಸುರ್ಬಹಾರ್ ಎನ್ನುವುದು ಸಿತಾರ್ ಮೂಲ ವಾದ್ಯದ ಒಂದು ರೂಪ. ವೀಣೆಯಲ್ಲಿ ರುದ್ರ ವೀಣೆ ಇರುವ ಹಾಗೆ ಅತಿ ತೂಕ ಮತ್ತು ಎತ್ತರ ಇದ್ದ ಸುರ್ಬಹಾರ್ ಅನ್ನು ನುಡಿಸಲು ಏಕಾಗ್ರತೆ ಮತ್ತು ಧ್ಯಾನಸ್ಥ ಮನಸ್ಸು ಬೇಕಾಗಿರುತ್ತಿತ್ತು. ಅಲ್ಲಾವುದ್ದೀನ್ಖಾನ್ ತಮ್ಮ ಪುತ್ರ ಅಲಿ ಅಕ್ಬರ್ಖಾನ್ಗೆ ಮನೆಯಲ್ಲಿ  ಸಂಗೀತ ವಿದ್ಯೆ ಕಲಿಸುತ್ತಿದ್ದರು( ಆಲಿ ಅಕ್ಬರ್ ಖಾನ್ ನಮ್ಮ ಕನ್ನಡದ ಸೀತಾರ್ ವಾದಕರಾದ ಪಂಡಿತ್ ರಾಜೀವ್ ತಾರಾನಾಥ್ ಅವರ ಗುರುಗಳು)  ಮನೆಯೊಳಗೆ ಇದ್ದುಕೊಂಡು ಇವೆಲ್ಲವನ್ನು ಗಮನಿಸುತ್ತಿದ್ದ ಅನ್ನಪೂರ್ಣದೇವಿ ಏಕಲವ್ಯನಂತೆ ಹಿಂದೂಸ್ತಾನಿ ಸಂಗೀತದ ಜೊತೆಗೆ ಸಿತಾರ್ ವಾದನವನ್ನು ಕರಗತ ಮಾಡಿಕೊಳ್ಳುತ್ತಿದ್ದರು. ಒಮ್ಮೆ ಅಲ್ಲಾವುದ್ದೀನರು ಮಗನಿಗೆ ಅಭ್ಯಾಸ ಮಾಡಲು ಹೇಳಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಅಣ್ಣ ತಪ್ಪಾಗಿ ಶೃತಿ ನುಡಿಸಿದ್ದನ್ನು ಕೇಳಿಸಿಕೊಂಡ ಅನ್ನಪೂರ್ಣದೇವಿ, ಅಣ್ಣನ ಶೃತಿಯನ್ನು ತಿದ್ದುತ್ತಾ ಸೀತಾರ್ ನುಡಿಸುತ್ತಿದ್ದರು. ಮನೆಗೆ ಬಂದ  ಅಲ್ಲಾವುದ್ದೀನ್ ಮಗಳಿಗೆ ಗೊತ್ತಾಗದಂತೆ ಬಾಗಿಲ ಬಳಿ ನಿಂತು ಆಕೆಯ ಪ್ರತಿಭೆಯನ್ನು ಗಮನಿಸಿ ಭಾವುಕರಾಗಿದ್ದರು. ಮಾರನೆಯ ದಿನದಿಂದ ಮಕ್ಕಳಿಬ್ಬರಿಗೂ ಸಂಗೀತದ ವಿದ್ಯಾಭ್ಯಾಸ ಮುಂದುವರಿಯಿತು. ಅನ್ನಪೂರ್ಣರವರು ತಂದೆಯಂತೆ ಸಿತಾರ್ ಜೊತೆಗೆ ಸುರ್ ಬಹಾರ್ ನುಡಿಸುವಲ್ಲಿ ನೈಪುಣ್ಯತೆ ಸಾಧಿಸಿದ್ದರು.(ಸಧ್ಯ ಭಾರತದಲ್ಲಿ ಸುರ್ ಬಹಾರ್ ವಾದನ ನುಡಿಸುವ ಏಕೈಕ ಜೀವ ಅನ್ನಪೂರ್ಣ ದೇವಿ ಮಾತ್ರ.)ಚಿಕ್ಕ ವಯಸ್ಸಿನಲ್ಲಿ ಅವರು ಸಂಗೀತದಲ್ಲಿ ಮಾಡಿದ ಸಾಧನೆ ಮುಂದಿನ ದಿನಗಳಲ್ಲಿ ಅವರ ಪಾಲಿಗೆ ಶಾಪವಾಗಿ ಪರಿಣಮಿಸಿತು.


ಸಂಗೀತ ಎಂಬುದು ಕೇವಲ ಹವ್ಯಾಸ ಅಥವಾ ವೃತ್ತಿಯಲ್ಲ, ಅದೊಂದು ಧ್ಯಾನ, ದೇವರನ್ನು ಓಲೈಸುವ ಪರಿ, ಆಧ್ಯಾತ್ಮದತ್ತ ತೆರಳುವ ಮಾರ್ಗಇದು ಅಲ್ಲಾವುದ್ದೀನ್ ಅಚಲ ನಂಬಿಕೆಯಾಗಿತ್ತು. ತಂದೆಯಿಂದ ಸಂಗೀತದ ಜೊತೆಗೆ ಇಂತಹ ಬದ್ಧತೆಯನ್ನು ಅನ್ನಪೂರ್ಣದೇವಿ ತಮ್ಮದಾಗಿಸಿಕೊಂಡಿದ್ದರು. ಅಲ್ಲಾವುದ್ದೀನ್ ತಮ್ಮ ಮಕ್ಕಳಾದ ಅನ್ನಪೂರ್ಣ, ಅಲಿ ಅಕ್ಬರ್ ಖಾನ್ ಮತ್ತು ಶಿಷ್ಯ ರವಿಶಂಕರ್ರವರಿಗೆ ಸಂಗೀತವನ್ನು ಧಾರೆಯೆರೆಯುತ್ತಿದ್ದ ಸಂದರ್ಭದಲ್ಲಿ ರವಿಶಂಕರ್ ಅಣ್ಣ ಉದಯಶಂಕರ್ ಅನ್ನಪೂರ್ಣರವರನ್ನು ತನ್ನ ತಮ್ಮ ರವಿಶಂಕರ್ಗೆ ವಿವಾಹ ಮಾಡಿಕೊಳ್ಳುವ ಪ್ರಸ್ತಾಪವನ್ನು ಗುರುವಿನ ಮುಂದಿಟ್ಟರು. ತೆರೆದ ಮನಸ್ಸಿನ ಅಲ್ಲಾವುದ್ದೀನ್ ಖಾನ್ ಆಹ್ವಾನವನ್ನು ನಿರಾಕರಿಸಲಿಲ್ಲ, ಒಪ್ಪಿಗೆ ಸೂಚಿಸಿದರು. 1942 ರಲ್ಲಿ ಹಿಂದೂ ಪದ್ಧತಿಯಂತೆ ರವಿಶಂಕರ್ ಮತ್ತು ಅನ್ನಪೂರ್ಣರವರ ವಿವಾಹ ಹಿಮಾಲಯ ತಪ್ಪಲಿನ ನೈನಿತಾಲ್ ಗಿರಿಧಾಮದ ಸಮೀಪದ ಅಲ್ಮೊರದಲ್ಲಿ ನೆರೆವೇರಿತು. ಅದು ಕಾಲಕ್ಕೆ ಅಂತರ್ಧರ್ಮ ಮತ್ತು ಜಾತಿಯ ಅಪೂರ್ವ ವಿವಾಹವಾಗುವುದರ ಮೂಲಕ ಸಂಗೀತಕ್ಕೆ ಭಾಷೆ, ಜಾತಿ, ಧರ್ಮದ ಹಂಗಿಲ್ಲ ಎಂಬುದನ್ನು ನಿರೂಪಿಸಿತ್ತು.
ಗುರುಗಳ ಬಳಿ ನಾಲ್ಕು ವರ್ಷಗಳ ಕಾಲ ವಿದ್ಯಾಭ್ಯಾಸ ಮುಗಿಸಿದ ರವಿಶಂಕರ್ ಆಕಾಶವಾಣಿ ಕಲಾವಿದರಾಗಿ ಮತ್ತು  ಸತ್ಯಜಿತ್ ರಾಯ್ ಸಿನಿಮಾಗಳ ಸಂಗೀತ ನಿರ್ದೆಶಕರಾಗಿ ತೊಡಗಿಕೊಂಡು ಸಂಗೀತದಲ್ಲಿ ಹಲವು ಪ್ರಯೋಗಗಳನ್ನು ಕೈಗೊಳ್ಳುತ್ತಾ ನಡೆದರು. ಅವರು ಅಲೆಕ್ಷಾಂಡರನಂತೆ ಜಗತ್ತನ್ನು ಗೆಲ್ಲುವ ಮಹತ್ವಾಕಾಂಕ್ಷಿಯಾಗಿದ್ದರು. ಆದರೆ ಅನ್ನಪೂರ್ಣದೇವಿ ಪಂಡಿತ್ ರವಿಶಂಕರ್ಗಿಂತ ಭಿನ್ನವಾಗಿ ಆಲೋಚಿಸುತ್ತಾ ತಾವು ಇರುವ ಸ್ಥಳದಲ್ಲಿ ಜಗತ್ತನ್ನು ಸೃಷ್ಟಿಸಿಕೊಳ್ಳಬಲ್ಲವರಾಗಿದ್ದರು. ಅವರಿಗೆ ಸಂಗೀತವೆಂಬುದು ಪ್ರದರ್ಶನದ ಅಥವಾ ಆಡಂಬರದ ಪ್ರಕಾರವಾಗಿರಲಿಲ್ಲ, ಅದು ತನ್ನನ್ನು ತಾನು ಅರಿಯುವ, ಬೆಳೆಯುವ ಹಾದಿ ಎಂದು ನಂಬಿದ್ದರು. ಇಂತಹ ಒಂದು ನಂಬಿಕೆ ಅವರನ್ನು ಕಾಲದಲ್ಲಿ ಅದ್ವಿತೀಯ ಕಲಾವಿದೆಯನ್ನಾಗಿ ರೂಪಿಸಿತ್ತು. ರವಿಶಂಕರ್ ಅನ್ನಪೂರ್ಣದೇವಿ ಜೊತೆಯಾಗಿ ಹಲವಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದರು. ರವಿಶಂಕರ್ರವರ ಸಿತಾರ್ ವಾದನದಲ್ಲಿ ಹುಚ್ಚು ಹೊಳೆಯ ವೇಗ, ಮತ್ತು ರಭಸವಿದ್ದರೆ, ಅನ್ನಪೂರ್ಣ ನುಡಿಸುತ್ತಿದ್ದ ಸಿತಾರ್ ವಾದನದಲ್ಲಿ ನಿರ್ಜನ ಅರಣ್ಯದಲ್ಲಿ ನಿಶ್ಯಬ್ಧದಿಂದ ತಂತಾನೆ ಜುಳು ಜುಳು ಹರಿಯುವ ನದಿಯ ನಿನಾದವಿತ್ತು. ತನ್ನ ಪತ್ನಿಯ ಪ್ರತಿಭೆ ತನ್ನ ಭವಿಷ್ಯಕ್ಕೆ ಅಡ್ಡಿಯಾಗುವ ಸೂಚನೆಯಿಂದ ಕಸಿವಿಸಿಗೊಂಡ  ರವಿಶಂಕರ್, ಅನ್ನಪೂರ್ಣ ಅವರನ್ನು ತೆರೆಯ ಹಿಂದಕ್ಕೆ ಸರಿಸಿ, ತಾವು ವೇದಿಕೆಯಲ್ಲಿ ಪ್ರತಿಷ್ಟಾಪನೆಗೊಂಡರು. ವೇಳೆಗಾಲೆ ಅವರಿಗೆ ಒಬ್ಬ ಪುತ್ರ ಜನಿಸಿದ್ದರಿಂದ ಪತಿಯ ಏಳಿಗೆಗಾಗಿ ಸಾರ್ವಜನಿಕ ಸಂಗೀತ ಕಾರ್ಯಕ್ರಮವನ್ನು ತ್ಯಜಿಸಿದ ಅನ್ನಪೂರ್ಣ ತಮ್ಮಳಗಿದ್ದ ಪ್ರತಿಭೆಯನ್ನು ಪುತ್ರ ಶುಭೇಂದ್ರನಿಗೆ ಧಾರೆಯರೆಯತೊಡಗಿದರು.
ಭಾರತೀಯ ಸಂಗೀತ ಲೋಕ ಕೂಡ ರವಿಶಂಕರ್ರವರ ಸಿತಾರ್ ನಾದದ ಮಾಧುರ್ಯಕ್ಕೆ ತಲೆತೂಗುತ್ತಾ ಅನ್ನ ಪೂರ್ಣದೇವಿಯವರನ್ನು ಮರೆಯತೊಡಗಿತು. ಇದು ಜಗದ ನಿಯಮವೂ ಹೌದು. ಮೆರವಣಿಗೆಯಲ್ಲಿ ಮದುಮಗನ ಮುಖ ಕಾಣಲಿ ಎಂದು ತಲೆಯ ಮೇಲೆ ಮೇಲೆ ಉರಿಯುವ ದೀಪ ಹೊತ್ತು ಸಾಗುವ ಅನಾಮಿಕರನ್ನು ಯಾರೂ ಗಮನಿಸುವುದಿಲ್ಲ. ಎಲ್ಲರ ಗಮನ  ಮದುಮಗನ ಮೇಲೆ ಮಾತ್ರವೇ ಹೊರತು, ಕತ್ತಲೆಯಲ್ಲಿ ಮುಖ ಹುದುಗಿಸಿಕೊಂಡವರದಲ್ಲ, ಅನ್ನಪೂರ್ಣದೇವಿಯವರದು ಇದೇ ಸ್ಥಿತಿಯಾಯಿತು.
ರವಿಶಂಕರ್ರವರ ಸಂಗೀತ ಸಾಧನೆಗೆ ಅಡ್ಡಿಯಾಗದೆ ಅವರ ಜೊತೆ ಸುಧೀರ್ಘ ಇಪ್ಪತ್ತು ವರ್ಷ ದಾಂಪತ್ಯ ಜೀವನ ನಡೆಸಿದ ಅನ್ನಪೂರ್ಣರವರಿಗೆ ಕೊನೆಗೆ ಅವರ ಜೊತೆ ಸಂಬಂಧ ಕಡಿದುಕೊಳ್ಳಬೇಕಾದ ಅನಿವಾರ್ಯತೆ ಒದಗಿ ಬಂತು. ರವಿಶಂಕರ್ರವರ ಪರ ಸ್ತ್ರೀ ವ್ಯಾಮೋಹದ ಪ್ರವೃತ್ತಿ ಹಾಗೂ ದಾಂಪತ್ಯದಾಚೆಗಿನ ಸಂಬಂಧ ಕುರಿತು ಮೊದಲಿನಿಂದಲೂ ಹಲವಾರು ಮಾತುಗಳನ್ನು ಕೇಳಿಸಿಕೊಂಡದ್ದ ಅವರಿಗೆ ಕೊನೆಗೊಮ್ಮೆ ಅದು ಸಾಭೀತಾಯಿತು. ತನ್ನ ಅಣ್ಣ ಅಲಿ ಅಕ್ಬರ್ ಖಾನ್ರವರ ನಾದಿನಿ ಕಮಲ ಜೊತೆ ತನಗಿರುವ ಸಂಬಂಧವನ್ನು ರವಿಶಂಕರ್ ಸ್ವತಃ ಒಪ್ಪಿಕೊಂಡ ಮೇಲೆ 1962 ರಲ್ಲಿ ಅವರಿಂದ ಬೇರ್ಪಟ್ಟರು. ರವಿಶಂಕರ್ ತಮ್ಮ ಸಂಗೀತದ ಚೈತ್ರಯಾತ್ರೆಯಂತೆ ಹೆಣ್ಣುಗಳ ಶಿಕಾರಿಯನ್ನು ಬದುಕಿನುದ್ದಕ್ಕೂ ಮುಂದುವರಿಸಿದರು. ಅವರ ಪಾಲಿಗೆ ಹೆಣ್ಣೆಂದರೆ ಕ್ಷಣಕ್ಕೆ ತೃಪ್ತಿ ನೀಡಬಲ್ಲ ಒಂದು ಭೋಗದ ವಸ್ತು. ಕಾರಣಕ್ಕಾಗಿ ಹೆಣ್ಣಿನ ವಯಸ್ಸಿನ ಬಗ್ಗೆಯಾಗಲಿ, ಆಕೆ ಇನ್ನೊಬ್ಬರ ಪತ್ನಿ ಎಂಬ ನೈತಿಕತೆಯಾಗಲಿ ಅವರನ್ನು ಎಂದೂ ಕಾಡಲಿಲ್ಲ. ಇದಕ್ಕೆ ಅವರು ಬಾಲ್ಯದಿಂದ ಮೈಗೂಡಿಸಿಕೊಂಡಿದ್ದ ಪಾಶ್ಚಿಮಾತ್ಯ ಜಗತ್ತಿನ ಭೋಗ ಸಂಸ್ಕøತಿ ಸಹ ಪರೋಕ್ಷವಾಗಿ ಕಾರಣವಾಗಿತ್ತು.





1969 ರಲ್ಲಿ ಅವರು ಭಾರತ ತೊರೆದು ಜಗತ್ತಿನಾದ್ಯಂತ ಸಂಗೀತ ಪ್ರದರ್ಶನ ನೀಡಲು ಹೊರಟಾಗ ಅವರ ಪುತ್ರ ಶುಭೇಂದ್ರ ಕೂಡ ಅವರ ಜೊತೆಯಾಗಿದ್ದುಕೊಂಡು ಅವರ ಪ್ರದರ್ಶನಗಳಲ್ಲಿ ಸಾಥಿಯಾಗಿ ಕಾರ್ಯನಿರ್ವಹಿಸಿದ. ಸಂಗೀತ ಕುರಿತಂತೆ ತಾಯಿಯ ಏಕಾಗ್ರತೆ ಮತ್ತು ಮೌನ ಮತ್ತು ತಂದೆಯ ಪ್ರಯೋಗಶೀಲತೆ ಮತ್ತು ಚಂಚಲತೆ ಇವುಗಳ ನಡುವೆ ಅವನು ತಂದೆಯನ್ನು ಆರಿಸಿಕೊಂಡಿದ್ದ.
ಇತ್ತ ಮುಂಬೈ ನಗರದಲ್ಲಿ ಅನ್ನಪೂರ್ಣ ದೇವಿ ಅಜ್ಞಾತವಾಸದಲ್ಲಿ ಅನಾಮಿಕಳಂತೆ ಬದುಕುತ್ತಿದ್ದಾಗ ವಾಪಸ್ ತವರಿಗೆ ಮರಳುವಂತೆ ಆಕೆಯ ಕುಟುಂಬದವರು ಒತ್ತಾಯ ಹೇರಿದಾಗ ವಾಪಸ್ ಮಯಹಾರ್ಗೆ ಹೋಗಲು ನಿರಾಕರಿಸಿದರು. ತಂದೆ ಬಳುವಳಿಯಾಗಿ ನೀಡಿದ್ದ ಸಂಗೀತವನ್ನು ಗುರುವಾಗಿದ್ದುಕೊಂಡು ಶಿಷ್ಯರಿಗೆ ಧಾರೆಯೆರೆಯಲು ನಿರ್ಧರಿಸಿದರು. ಏಕೆಂದರೆ, ಅವರೊಳಗೆ ಒಬ್ಬ ಶಿಲ್ಪಿಗೆ ಇರಬಹುದಾದ ಕುಶಲತೆ ಮತ್ತು ಕೈಚಳಕ ಎರಡೂ ಇತ್ತು. ಶಿಲ್ಪಿಯ ಕೈಗೆ ಸಿಕ್ಕ ಕಾಡುಗಲ್ಲು ಮೋಹಕ ಮೂರ್ತಿಯಾಗಿ ಮೈದಾಳುವಂತೆ ಅವರಿಂದ ಸಂಗೀತದ ಶಿಕ್ಷಣ ಪಡೆದ ಎಲ್ಲರೂ ಭಾರತದ ಸಂಗೀತ ಲೋಕದ ಮುಕುಟಮಣಿಗಳಾದರು.
ಇಂತಹ ಏಕಾಂಗಿ ಜೀವನ ನಡೆಸುತ್ತಿದ್ದ ಅವರ ಬದುಕಿನಲ್ಲಿ 1982 ಒಂದು ದಿನ ಒಂದು ಆಕಸ್ಮಿಕ ಘಟನೆಯೂ ನಡೆದು ಹೋಯಿತು. ಅಮೇರಿಕಾದಲ್ಲಿದ್ದ ಅವರ ಸಹೋದರ ಅಲಿ ಅಕ್ಬರ್ ಖಾನ್ರವರು ತಮ್ಮ ಬಳಿ ಬಳಿ ಶಿಷ್ಯ ವೃತ್ತಿ ಸ್ವೀಕರಿಸಿ ಸಿತಾರ್ ಕಲಿಯುತ್ತಿದ್ದ ಋಷಿಕುಮಾರ್ ಪಾಂಡೆ ಎಂಬುವರಿಗೆ ಅನಾರೋಗ್ಯದ ನಿಮಿತ್ತ ಸಂಗೀತ ಕಲಿಸಲಾರದೆ, ಮುಂಬೈ ನಗರಕ್ಕೆ ಸಹೋದರಿಯ ಬಳಿಗೆ ಕಳಿಸಿಕೊಟ್ಟಿದ್ದರು. ಮುಂಬೈ ನಗರಕ್ಕೆ ಬಂದ ಪಾಂಡೆ ಅನ್ನಪೂರ್ಣ ದೇವಿ ಮನೆಯಲ್ಲಿ ಇದ್ದುಕೊಂಡು ಎಂಟು ವರ್ಷಗಳ ಕಾಲ ಸಂಗೀತಾಭ್ಯಾಸ ಮಾಡಿದರು. ಅನ್ನಪೂರ್ಣದೇವಿಯವರ  ಏಕಾಂಗಿ ಬದುಕು, ಅಜ್ಞಾತವಾಸ ಎಲ್ಲವನ್ನೂ ನೋಡಿ, ಅವರಿಗಿಂತ 14 ವರ್ಷ ಚಿಕ್ಕವರಾದರೂ ಸಹ, ಪಾಂಡೆ ಒಂದು ದಿನ  ವಿವಾಹವಾಗುವ ಪ್ರಸ್ತಾಪವನ್ನು ಅವರ ಮುಂದಿಟ್ಟರು. ಅನಿರೀಕ್ಷಿತ ಆಹ್ವಾನವನ್ನು ಅನ್ನಪೂರ್ಣದೇವಿಗೆ ಜೀರ್ಣಿಸಿಕೊಳ್ಳಲಾರದ ಸ್ಥಿತಿ. ನಾಲ್ಕು ದಿನಗಳ ಕಾಲ ಯೋಚಿಸಿ, ಅಂತಿಮವಾಗಿ ತಮ್ಮ ಕೊನೆಯ ಕಾಲದಲ್ಲಿ ಆರೈಕೆಗೆ ಒಂದು ಜೀವ ಇರಲಿ ಎಂದು ಋಷಿಕುಮಾರ್ ಪಾಂಡೆಯನ್ನು ಸಂಗಾತಿಯಾಗಿ ಸ್ವೀಕರಿಸಿದರು.
ಸ್ವತಃ ಪಾಂಡೆಯವರು,  ಅನ್ನಪೂರ್ಣದೇವಿ ಲೋಕದ ಕಣ್ಣಲ್ಲಿ ನನಗೆ ಪತ್ನಿಯಾದರೂ, ಅದಕ್ಕಿಂತ ಹೆಚ್ಚಾಗಿ ಅವರು ನನಗೆ ಗುರುಎಂದಿದ್ದಾರೆ. ಪತ್ರಕರ್ತೆಗೆ ನೀಡಿರುವ ಉತ್ತರದಲ್ಲಿ ಅನ್ನಪೂರ್ಣದೇವಿ ಸಹ ನಾನು ಎಂಬತ್ಮೂರನೇ ವಯಸ್ಸಿನಲ್ಲಿ ಆರೋಗ್ಯವಾಗಿರಲು ಪಾಂಡೆಯವರ ಕಾಳಜಿ ಕಾರಣ ಎಂದು ಹೇಳಿಕೊಂಡಿದ್ದಾರೆ.

1962 ರಲ್ಲಿ ರವಿಶಂಕರ್ ಜೊತೆ ವಿಚ್ಛೇಧನ ಪಡೆದ ನಂತರ ಇಬ್ಬರ ಮನಸ್ಸಿನಲ್ಲಿ ಯಾವುದೇ ದ್ವೇಷ ಅಥವಾ ಕಹಿಭಾವನೆ ಉಳಿದಿರಲಿಲ್ಲ. 1980ರಲ್ಲಿ ರಿಚರ್ಡ್ ಆಟನ್ಬರೊ ಅವರ ಗಾಂಧಿ ಚಿತ್ರಕ್ಕೆ ಸಂಗೀತ ಸಂಯೋಜಿಸಲು ಮುಂಬೈ ನಗರಕ್ಕೆ  ಬಂದಿದ್ದ ರವಿಶಂಕರ್ ಅನ್ನಪೂರ್ಣರವರ ಮನೆಗೆ ಹೋಗಿ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿ ಬಂದಿದ್ದರು. ಅದನ್ನು ಹೊರತು ಪಡಿಸಿದರೆ ತಮ್ಮ ಬದುಕಿನ ಐವತ್ತು ವರ್ಷಗಳ ಕಾಲ ಅವರ ಮುಖ ನೋಡದ, ಮಾತನಾಡದ ವ್ಯಕ್ತಿತ್ವ ಅನ್ನಪೂರ್ಣರವರದು.

ಕಳೆದ ಡಿಸಂಬರ್ 12 ರಂದು ತಮ್ಮ ತೊಂಬತ್ತನೆಯ ವಯಸ್ಸಿನಲ್ಲಿ ತೀರಿಹೋದ ಪಂಡಿತ್ ರವಿಶಂಕರ್ ನಿಧನ ವಾರ್ತೆ ಅನ್ನಪೂರ್ಣದೇವಿಯವರಿಗೆ ಅವರ ಎರಡನೆಯ ಪತಿ ಪಾಂಡೆ  ಮೂಲಕ ತಿಳಿದಾಗ, ಕಣ್ಣೀರು ಮತ್ತು ಭಾವನೆಗಳೆಲ್ಲವನ್ನು ಅದುಮಿಟ್ಟುಕೊಂಡು ಮೌನಕ್ಕೆ  ಮೊರೆಹೋದರು. ಮಾರನೆಯ ದಿನ ಕೊಲ್ಕತ್ತ ನಗರದ ಟೆಲಿಗ್ರಾಫ್ಇಂಗ್ಲೀಷ್ ದಿನಪತ್ರಿಕೆಗೆ ದೂರವಾಣಿಯಲ್ಲಿ ಮೊಟ್ಟ ಮೊದಲ ಹೇಳಿಕೆಯನ್ನು ಅವರು ಕೊಟ್ಟರು.
ಅನ್ನಪೂರ್ಣದೇವಿಯವರ ಹೇಳಿಕೆ ಹೀಗಿತ್ತುಪಂಡಿತ್ಜಿರವರ ಸಂಗೀತ ಕುರಿತಂತೆ ಅವರಲ್ಲಿದ್ದ ತ್ಯಾಗಮನೋಬಾವ, ಮತ್ತು ಎಲ್ಲಾ ಸಂಗೀತದ ಪ್ರಕಾರಗಳ ಕುರಿತು ಅವರಿಗಿದ್ದ ಆಸಕ್ತಿ ಮಕ್ಕಳಿಗೆ ಇರುವ ಕುತೂಹಲದಂತೆ ಇರುತ್ತಿತ್ತು. ಅವರಿಗಿದ್ದ ಹಾಸ್ಯ ಪ್ರವತ್ತಿ ಮತ್ತ್ರು ಅವರ ಗುರುಗಳು ಹಾಗೂ ನನ್ನ ತಂದೆಯವರಾದ ಬಾಬಾ ಅಲಿಖಾನ್ ಬಗ್ಗೆ ಇದ್ದ ಪೂಜ್ಯಭಾವನೆಗಳನ್ನು ಮರೆಯಲಾಗದು, ಅವರ ಇಂತಹ ಗುಣಗಳು ನನ್ನ ಬದುಕಿಗೆ ಪ್ರೇರಣೆಯಾಗಿವೆ. ಇದಕ್ಕಾಗಿ ನಾನು ಅವರಿಗೆ ಕೃತಜ್ಞಳಾಗಿದ್ದೀನಿ.”




ಮುಂಬೈ ನಗರದ ಆರನೆಯ ಅಂತಸ್ತಿನ ಅನ್ನಪೂರ್ಣರವರ ಮನೆಯ ಬಾಗಿಲಿಗೆ ಒಂದು ನಾಮಫಲಕವನ್ನು ತೂಗುಹಾಕಲಾಗಿದೆ. “ದಯಮಾಡಿ ಮೂರುಬಾರಿ ಮಾತ್ರ ಕಾಲಿಂಗ್ ಬೆಲ್ ಒತ್ತಿರಿ. ಬಾಗಿಲು ತೆರೆಯದಿದ್ದರೆ, ತಡಮಾಡದೆ  ಹಿಂತಿರುಗಿರಿ. ತೊಂದರೆಗಾಗಿ ವಿಷಾಧಿಸುತ್ತೇನೆ
ಬೆಳಿಗ್ಗೆ ಮೂರು ಗಂಟೆಗೆಯಿಂದ ಆರಂಭವಾಗುವ ಅವರ ದಿನಚರಿ ಅವರ ಮೆಚ್ಚಿನ ಕೌಶಿಕಿ ರಾಗವನ್ನು ಸಿತಾರ್ ವಾದನದೊಂದಿಗೆ ನುಡಿಸುವುದರೊಂದಿಗೆ ಆರು ಗಂಟೆಗೆ ಮುಕ್ತಾಯವಾಗುತ್ತದೆ. ಅದರ ನಿನಾದ ಕೂಡ ನಮ್ಮ ಮಲ್ಲಿಗೆಯ ಕವಿ ಕೆ.ಎಸ್. ನರಸಿಂಹ ಸ್ವಾಮಿ ಹೇಳುವ ಹಾಗೆ ನೀರೊಳಗೆ ವೀಣೆ ಮಿಡಿದಂತೆ ಇರುತ್ತದೆ. ಸಣ್ಣನೆಯ ಅಲೆಯೊಂದಿಗೆ ತೇಲಿಬರುವ ಸ್ವರ ಮಾಧುರ್ಯ ಮನೆಯೆದುರುಗಿನ ಸಮುದ್ರದ ಗಾಳಿಯೊಂದಿಗೆ ಮಿಳಿತವಾಗುವುದರ ಮೂಲಕ ಲೀನವಾಗುತ್ತದೆ. ನೆರೆಹೊರೆಯವರು ಏಳುವ ಮುನ್ನವೆ, ಮನೆಯ ತಾರಸಿಗೆ ಹೋಗಿ ಪಾರಿವಾಳಗಳಿಗೆ ಒಂದಿಷ್ಟು ಕಾಳು ಹಾಕಿ ಮನೆಗೆ ಬಂದು ಬಾಗಿಲು ಹಾಕಿಕೊಂಡರೆ ಅವರ ಅಂದಿನ ದಿನಚರಿ ಮುಗಿಯಿತು. ಅವರು, ಅವರ ಏಕಾಂತ, ಮೌನ ಮತ್ತು ಆಯ್ದ ಶಿಷ್ಯರಿಗೆ ಒಂದಿಷ್ಟು ಹಿಂದೂಸ್ಥಾನಿ ಸಂಗೀತದ ಪಾಠ. ಇವಿಷ್ಟೇ ಅವರ ಲೋಕ. ವಾರಕ್ಕೆ ಎರಡು ದಿನ ಮೌನ ಮತ್ತು ಏಕಾಂತ.



ಅನ್ನಪೂರ್ಣ ದೇವಿಯವರ ಕಠೋರ ನಿಲುವಿನಿಂದಾಗಿ ಭಾರತದ ಸಂಗೀತ ರಸಿಕರ ಲೋಕವೊಂದು ಅವರ ಸ್ವರ ಮಾಧುರ್ಯದಿಂದ ವಂಚಿತವಾಗಿದೆ. 1960 ದಶಕದಲ್ಲಿ ಅವರು ನುಡಿಸಿದ ಸಿತಾತ್ ವಾದನದ ತುಣುಕುಗಳು ಯೂ ಟ್ಯೂಬ್ನಲ್ಲಿ  ಇಂದಿಗೂ ಹರಿದಾಡುತ್ತಿವೆ. ಅದನ್ನು ಆಲಿಸಿದಾಗ ನಾದದಿಂದ ವಂಚಿತರಾದ ನಾವು ನತದೃಷ್ಟರು ಎಂಬ ವಿಷಾಧದ ಛಾಯೆ ಮನಸ್ಸನ್ನು ಆವರಿಸಿಕೊಳ್ಳುತ್ತದೆ.