ಶುಕ್ರವಾರ, ಮಾರ್ಚ್ 31, 2017

ಸ್ವರಾಜ್ ಇಂಡಿಯ: ಒಂದಿಷ್ಟು ಆಸೆ ಮತ್ತು ಆತಂಕಗಳು


ಇದೇ 25 ರಂದು ಬೆಂಗಳೂರು ನಗರದಲ್ಲಿ ಒಂದು ಅಪರೂಪದ ರಾಜಕೀಯ ವಿದ್ಯಾಮಾನ ಜರುಗಿತು. ಕಳೆದ ಒಂದು ದಶಕದಿಂದ ನಮ್ಮ ನಡುವಿನ ಸೂಕ್ಷ್ಮ ಸಂವೇದನೆಯ ಬರಹಗಾರರಾದ ದೇವನೂರು ಮಹಾದೇವ ಅಧ್ಯಕ್ಷರಾಗಿದ್ದ ಹಾಗೂ ರಾಜಕೀಯವಾಗಿ ಅಷ್ಟೇನೂ ಕ್ರಿಯಾಶೀಲವಾಗಿ  ಇರದಿದ್ದ ಕರ್ನಾಟಕ ಸರ್ವೋದಯ ಪಕ್ಷವು ಅಮ್ ಆದಿ ಪಕ್ಷದಿಂದ ಸಿಡಿದು ಹೊರಬಂದ ದೇಶದ ಅತ್ಯುತ್ತಮ ರಾಜಕೀಯ ಚಿಂತಕರಲ್ಲಿ ಒಬ್ಬರಾದ ಯೋಗೇಂದ್ರ ಯಾದವ್ ಮತ್ತು ಪ್ರಖ್ಯಾತ ವಕೀಲರಾದ ಪ್ರಶಾಂತ್ ಭೂಷಣ್ ಇವರು ನೂತನವಾಗಿ ಹುಟ್ಟು ಹಾಕಿರುವ ಸ್ವರಾಜ್ ಇಂಡಿಯಾ ಪಕ್ಷದೊಂದಿಗೆ ವಿಲೀನಗೊಂಡಿತು.
ಕರ್ನಾಟಕದ ಮಟ್ಟಿಗೆ ಇದೋಂದು ಆಶಾದಾಯಕ ಬೆಳವಣಿಗೆ ಎನ್ನಲೇಬೇಕು. ಈಗಾಗಲೇ ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಗಾಗಿ ಮತ್ತು ಶುದ್ಧೀಕರಣಕ್ಕಾಗಿ ಹೋರಾಡುತ್ತಿರುವ ಎಸ್.ಆರ್. ಹಿರೇಮಠ್, ಹೆಚ್,ಎಸ್, ದೊರೆಸ್ವಾಮಿ, ರವಿಕೃಷ್ಣಾರೆಡ್ಡಿ  ಸೇರಿದಂತೆ ಅನೇಕರು ಇದೀಗ ಸ್ವರಾಜ್ ಇಂಡಿಯಾ ಪಕ್ಷದ ಅಭಿಯಾನಕ್ಕೆ ಕೈ ಜೊಡಿಸಿದ್ದಾರೆ. ಇದಕ್ಕೆ ಪೂರಕವಾಗಿ ಹಿರಿಯ ಮಿತ್ರರಾದ ದೇವನೂರು ಮಹಾದೇವು ಹೊಸ ಪಕ್ಷದ ಬಗ್ಗೆ ತಮ್ಮ ಕನಸು ಮತ್ತು ಹಲವು ಯೋಜನೆಗಳನ್ನು ಪತ್ರಿಕೆಗಳ ಮೂಲಕ ಹಂಚಿಕೊಂಡಿದ್ದಾರೆ.( ದಿನಾಂಕ 28-3-17 ರ ಪ್ರಜಾವಾಣಿ)  ಮೂರು ವರ್ಷದ ಹಿಂದೆ ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಹುಟ್ಟು ಹಾಕಿದ ಹೋರಾಟದ ಇತಿಹಾಸ, ಆನಂತರ ಇದಕ್ಕೆ ಕೈ ಜೋಡಿಸಿದ್ದ ಅರವಿಂದ್ ಕೇಜ್ರಿವಾಲ್ ಇಡೀ ಹೋರಾಟವನ್ನು ಹೈ ಜಾಕ್ ಮಾಡಿ, ಅಮ್ ಆದ್ಮಿ ಪಕ್ಷವನ್ನಾಗಿ ಪರಿವರ್ತಿಸಿದ ರೀತಿಯಿಂದ ಹಿಡಿದು, ಈ ಪಕ್ಷವು ಉಂಟು ಮಾಡಿದ ರಾಜಕಿಯ ಸಂಚಲನ, ಇವುಗಳಿಗೆ ದೇಶದ ಪ್ರಜ್ಞಾವಂತ ನಾಗರೀಕರು ಸಾಕ್ಷಿಯಾಗಿದ್ದಾರೆ.. ಅಮ್ ಆದ್ಮಿ ಪಕ್ಷವು ದೆಹಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಗೆದ್ದ ಮೇಲೆ ಹೊರಾಟಗಾರರ ನಡುವೆ ಸೃಷ್ಟಿಯಾದ  ಆಂತರೀಕ ಬಿಕ್ಕಟ್ಟು ಮತ್ತು ಕೇಜ್ರಿವಾಲ್ ರವರ ಸರ್ವಾಧಿಕಾರಿಯ ಧೋರಣೆ ಇವುಗಳಿಂದಾಗಿ ಭ್ರಷ್ಟಾಚಾರ ಮುಕ್ತ ಭಾರತದ ಬಗ್ಗೆ ಕನಸ್ಸು ಕಂಡಿದ್ದ ಬಹುತೇಕ ನಾಗರೀಕರು ಭ್ರಮ ನಿರಸನಗೊಂಡರು. ಹಾಗಾಗಿ ಇಂದಿನ ಎಲ್ಲಾ ಬಗೆಯ ಜನಪರ ಹೋರಾಟಗಳನ್ನು ಪ್ರಜ್ಞಾವಂತರು ಸಂಶಯ ದೃಷ್ಟಿಯಿಂದ ನೋಡತೊಡಗಿದ್ದಾರೆ. ಈಗ ಪಕ್ಷ ಮತ್ತು ಸಂಘಟನೆಗಿಂತ ಜನತೆಯ ವಿಶ್ವಾಸವನ್ನು ಗಳಿಸುವುದು ಪ್ರತಿಯೊಂದು ಸಾಮಾಜಿಕ ಹೋರಾಟಕ್ಕೂ ಅಗ್ನಿ ಸಾಕ್ಷಿಯಾಗಿದೆ.
1980 ರಲ್ಲಿ ಕರ್ನಾಟಕದಲ್ಲಿ ರೈತ ಸಂಘಟನೆಯನ್ನು ಹುಟ್ಟು ಹಾಕಿದ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು ನಂತರದ ದಿನಗಳಲ್ಲಿ ದಿಡೀರನೆ ಲೋಕಸಭೆಗೆ ರೈತ ಸಂಘದ ಅಭ್ಯರ್ಥಿಗಳನ್ನು ನಿಲ್ಲಿಸುವುದಾಗಿ ಘೋಷಿಸಿದ್ದರು. ಇದು ಒಂದು ರೀತಿಯಲ್ಲಿ  ಕಟ್ಟಡವನ್ನು ತಳಪಾಯದ ಮೂಲಕ ಕಟ್ಟುವುದರ ಬದಲಾಗಿ ಮೇಲ್ಚಾವಣೆಯ ಮೂಲಕ ಕಟ್ಟುವ ಅವಸರದ ಪ್ರಯೋಗವಾಗಿತ್ತು. ಅವರಿಗೆ ಯಾರ ಮಾತನ್ನೂ ಕೇಳಿಸಿಕೊಳ್ಳುವ ಸಹನೆಯಾಗಲಿ, ಸಲಹೆಯನ್ನು ವಿಶ್ವಾಸಪೂರ್ವಕವಾಗಿ ತೆಗೆದುಕೊಳ್ಳುವ ಉಧಾರತನವಾಗಲಿ  ಇರಲಿಲ್ಲ. ಅವರೊಳಗೊಬ್ಬ ಅದ್ಭುತ ಸಂಘಟನಗಾರ ಇದ್ದ ಹಾಗೆ, ವಿಧ್ವಂಸಕನೂ ಇದ್ದ. ಇದರಿಂದಾಗಿ ರೈತ ಸಂಘ ಹೋಳಾಗುವುದರ ಜೊತೆಗೆ ಅನೇಕ ಪ್ರಗತಿಪರರು ಅವರ ಜೊತೆಗಿನ ಸಂಪರ್ಕ ಕಡಿದುಕೊಂಡರು. ಇದರಿಂದಾಗಿ ಕರ್ನಾಟಕದ ಬದಲಾವಣೆಗೆ ಇದ್ದ ಅಪೂರ್ವವಾದ ಅವಕಾಶವೊಂದು ಕಳೆದು ಹೋಯಿತು.
ಈ ಎಲ್ಲಾ ಚರಿತ್ರೆಯ ದೋಷಗಳನ್ನು ಮನಗಂಡಿರುವ ಮಹಾದೇವ  ಅವರು ಬಹಳ ಅರ್ಥಪೂರ್ಣವಾಗಿ ಸ್ವರಾಜ್ ಇಂಡಿಯಾ ಪಕ್ಷದ ರೂಪು ರೇಷೆಗಳನ್ನು ತಯಾರಿಸಿದ್ದಾರೆ. ಈ ಅಭಿಯಾನದ ನಾಯಕತ್ವವನ್ನು ಮಹಿಳೆಯರು ಮತ್ತು ಯುವಕರು ವಹಿಸಿಕೊಳ್ಳಬೇಕೆಂದು ನಿರ್ಧರಿಸಿದ್ದಾರೆ. ಜೊತೆಗೆ ಅವರು ಪ್ರಸ್ತಾಪಿಸಿರುವ “ ನಮಗೂ ಒಂದು ದಾರಿಯಿದೆ. ಅದೆಂದರೆ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ನಮ್ಮ ಅಸ್ತಿತ್ವವನ್ನು ವ್ಯಾಪಕವಾಗಿ ಸ್ಥಾಪಿಸುವುದು. ಉದಾಹರಣೆಗೆ ರಾಯಚೂರು ಜಿಲ್ಲೆಯಲ್ಲಿ ನವಜೀವನ ಮಹಿಳಾ ಒಕ್ಕೂಟ ಮತ್ತು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಗಳು ಒಗ್ಗೂಡಿ 474 ಗ್ರಾಮ ಪಂಚಾಯಿತಿ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಿ 286 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ. ಐದು ಪಂಚಾಯಿತಿಗಳಲ್ಲಿ ಬಹು ಮತ ಪಡೆದಿವೆ. ರಾಜಕಾರಣದ ವಾಸ್ತವಕ್ಕೆ ಹೀಗೆ ತಳಪಾಯ ಕಟ್ಟುವುದು ನಮಗೆ ದಾರಿಯಾಗಬೇಕು. ಹಾಗೇ ಎಲ್ಲಾ ಜನಾಂಧೋಲನಗಳಿಗೂ ಕೂಡ. ಜನವಷ್ಟೇ ಅಲ್ಲ, ಆ ಜನಗಳ ಮತಗಳು ತಮಗಿವೆ ಎಂದದಾಗ ಮಾತ್ರವೇ ಜನಾಂದೋಲನಗಳ ಧ್ವನಿಗೂ ಸತ್ಯ ಬರುತ್ತದೆ” ಎಂಬ ಮಾತುಗಳನ್ನು ಗಮನಿಸಿದಾಗ ಮಹಾದೇವ ಅವರ ಕನಸು ಮತ್ತು ಆಸೆಗಳು ಕಟು ವಾಸ್ತವಗಳಿಂದ ಕೂಡಿವೆ ಎಂದು ನಿಸ್ಸಂದೇಹವಾಗಿ ಹೇಳಬಹುದು.
ಭಾರತದ ಸ್ವಾಂತಂತ್ರ್ಯದ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು ಸಹ ಇದೇ ಮಾರ್ಗವನ್ನು ಅನುಸರಿಸಿದ್ದರು ಎಂಬುದು ಗಮನಾರ್ಹ ಸಂಗತಿ. 1930 ರ ಉಪ್ಪಿನ ಸತ್ಯಾಗ್ರಹ ಚಳುವಳಿ ನಡೆಯುವವರೆಗೂ ಅವರಿಗೆ ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಯಾವುದೇ ಸ್ಪಷ್ಟ ಕಲ್ಪನೆಗಳಿರಲಿಲ್ಲ. 1915 ರಲ್ಲಿ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂತಿರುಗಿ ನಂತರ  ಅವರು 1917 ರಲ್ಲಿ ನಡೆದ ಚಂಪಾರಣ್ಯ ಸತ್ಯಾಗ್ರಹ, ಖೇಡಾ ರೈತರ ಸತ್ಯಾಗ್ರಹ, ಅಹಮದಾಬಾದ್ ಜವಳಿ ಮಿಲ್ ಕಾರ್ಮಿಕರ ಸತ್ಯಾಗ್ರಹ ಹೀಗೆ ಅನೇಕ ಹೋರಾಟಗಳಲ್ಲಿ ಪಾಲ್ಗೊಂಡರೂ ಸಹ ಅವರಿಗೆ ಭಾರತದ ಸ್ವಾತಂತ್ರ್ಯದ ಹೋರಾಟವನ್ನು ಯಾವ ಮಾರ್ಗದಲ್ಲಿ ಕೊಂಡೊಯ್ಯಬೇಕು ಎಂಬುದರ ಕುರಿತು ನಿರ್ಧಿಷ್ಟ ಕಲ್ಪನೆಗಳಿರಲಿಲ್ಲ. ಏಕೆಂದರೆ, ಅಲ್ಲಿಯವರೆಗೆ ಅವರು ಭಾಗವಹಿಸಿದ್ದ ಸತ್ಯಾಗ್ರಹಗಳು  ಕೇವಲ ನಿರ್ಧಿಷ್ಟ ಸಮುದಾಯಗಳ ( ರೈತರು ಮತ್ತು ಕಾರ್ಮಿಕರು) ಆಶೋತ್ತರಗಳನ್ನು ಈಡೇರಿಸುವುದಕ್ಕೆ ಸೀಮಿತವಾಗಿದ್ದವು.  ಆದರೆ ಭಾರತದ ಸ್ವಾತಂತ್ರ್ಯ ಹೋರಾಟ ಒಳಗೊಳ್ಳಬೇಕಾದ ದೇಶದ ಎಲ್ಲಾ ವರ್ಗ, ಜಾತಿ ಮತ್ತು ಧರ್ಮಗಳ ಜನರನ್ನು ಅವುಗಳು ಒಳಗೊಂಡಿರಲಿಲ್ಲ.. ಗಾಂಧೀಜಿಯವರ ಮೊಮ್ಮಗ ರಾಜ್ ಮೋಹನ್ ಗಾಂಧಿಯವರು ರಚಿಸಿರುವ ಮಹತ್ವದ ಕೃತಿಗಳಲ್ಲಿ ಒಂದಾಗಿರುವ ಸುಮಾರು ಏಳನೂರು ಪುಟಗಳಷ್ಟಿರುವ “ Gandhi: The Man, his people, and the Empire” ಪುಸ್ತಕದ   “ Assault with Salt” ಎಂಬ 31 ಪುಟಗಳಷ್ಟಿರುವ ಉಪ್ಪಿನ ಸತ್ಯಾಗ್ರಹ ಕುರಿತಾದ ಅಧ್ಯಾಯದಲ್ಲಿ ಮಹತ್ವದ ಮಾಹಿತಿಗಳಿವೆ.
1930 ರ ಜನವರಿ 18 ರಂದು  ಅಹಮದಾಬಾದ್ ನಗರದ ಸಬರಮತಿ ಆಶ್ರಮದಿಂದ ಕವಿ ರವೀಂದ್ರನಾಥ ಟ್ಯಾಗೂರ್ ಅವರಿಗೆ ಪತ್ರ ಬರೆದ ಗಾಂಧೀಜಿಯವರು, “ಸ್ವಾತಂತ್ರ್ಯ ಹೋರಾಟ ಕುರಿತಂತೆ “ನಾನಿನ್ನೂ ಕತ್ತಲಿನಲ್ಲಿ ಇದ್ದೀನಿ. ಯಾವೊಂದು ಬೆಳಕಿನ ಹಾದಿ ತೋರುತ್ತಿಲ್ಲ” ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.. ಅದೇ ವರ್ಷ ಪೆಬ್ರವರಿ ತಿಂಗಳಿನಲ್ಲಿ ಬ್ರಿಟೀಷ್ ಸರ್ಕಾರ ಭಾರತೀಯರ ಮೇಲೆ ಉಪ್ಪಿನ ಮೇಲೆ ತೆರಿಗೆ ವಿಧಿಸುತ್ತದೆ. ನೈಸರ್ಗಿಕವಾಗಿ ಉಚಿತವಾಗಿ ದೊರೆಯುವ ಹಾಗೂ ಬಡವ, ಬಲ್ಲಿದ ಎಂಬ ಬೇಧ ಭಾವವಿಲ್ಲದೆ ಎಲ್ಲರೂ ಉಪಯೋಗಿಸುವ ಉಪ್ಪನ್ನು ಯಾರೂ ತಯಾರಿಸಬಾರದು ಎಂಬ ಸರ್ಕಾರದ ನಿಲುವು ಗಾಂಧೀಜಿಯವರ ಪಾಲಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಅಸ್ತ್ರ ಸಿಕ್ಕಂತಾಗುತ್ತದೆ. ಈ ವಿಷಯ ಇಡೀ ಬಹು ಸಂಸ್ಕೃತಿಯ ಭಾರತಕ್ಕೆ ಸಂಬಂಧಪಟ್ಟದ್ದು ಎಂದು ತೀರ್ಮಾನಿಸಿದ ಅವರು ಮಾರ್ಚ್ 12 ರಂದು ಸಬರಮತಿ ಆಶ್ರಮದಿಂದ ಸೂರತ್ ಬಳಿಯ ಕಡಲ ತೀರದ ದಂಡಿಗೆ ಕಾಲ್ನಡಿಗೆಯ ಜಾಥ ಹೊರಟು ಏಪ್ರಿಲ್ ಮೊದಲ ವಾರ ಒಂದು ಹಿಡಿ ಉಪ್ಪನ್ನು ಕೈ ಯಲ್ಲಿ ಎತ್ತಿ ಹಿಡಿಯುವುದರ ಮೂಲಕ ಬ್ರಿಟಿಷ್ ಸಾಮ್ರಾಜ್ಯಕ್ಕೆ ಮೊದಲ ಕೊಡಲಿ ಪೆಟ್ಟು ನೀಡುತ್ತಾರೆ.
241 ಮೈಲು ಉದ್ದದ ಕಾಲ್ನಡಿಗೆಯ ಜಾಥಕ್ಕೆ ತಮ್ಮೊಂದಿಗೆ ಕರೆದೊಯ್ದ 78 ಮಂದಿ ಅನುಯಾಯಿಗಳಿಗೆ ಪ್ರತಿಯೊಬ್ಬರು, ಪೆನ್ಸಿಲ್, ನೋಟ್ ಬುಕ್, ಚರಕ ಮತ್ತು ಹೊದಿಕೆಯನ್ನು ತರಬೇಕೆಂದು ಆದೇಶ ನೀಡುತ್ತಾರೆ.. ಪ್ರತಿ ದಿನ ತಾವು ಉಳಿದುಕೊಳ್ಳುತ್ತಿದ್ದ ಹಳ್ಳಿಗಳಲ್ಲಿ ಅನುಯಾಯಿಗಳನ್ನು ಪ್ರತಿ ಬೀದಿ, ಪ್ರತಿ ಮನೆಗೆ ಕಳುಹಿಸಿ, ಹಳ್ಳಿಯ ಮಾಹಿತಿ ಅಂದರೆ, ರೈತರು, ಕೃಷಿ ಕಾರ್ಮಿಕರು, ವ್ಯಾಪಾರಸ್ಥರು, ದಲಿತರು, ಅವರ  ದುಡಿಮೆ,ಆದಾಯ,ಇತ್ಯಾದಿಗಳ ಮಾಹಿತಿಗಳನ್ನು ಕಲೆ ಹಾಕುತ್ತಾರೆ. ಇದು ಅವರಿಗೆ ಒಂದು ನಾಡನ್ನು ಅರ್ಥಮಾಡಿಕೊಳ್ಳುವ ಕ್ರಿಯೆಯಾಗಿರುತ್ತದೆ. ಇಂತಹದ್ದೇ ಕಾರ್ಯಕ್ರಮವನ್ನು ಇದೀಗ ಸ್ವರಾಜ್ ಇಂಡಿಯಾದ ಕಾರ್ಯಕರ್ತರು ಹಮ್ಮಿಕೊಳ್ಳಬೇಕಿದೆ. ನಗರಗಳಲ್ಲಿ ಕುಳಿತು ಮಾತನಾಡುವ ಬದಲು, ಹಳ್ಳಿ-ಹಳ್ಳಿ ಗಳಿಗೆ ತೆರಳಿ, ಅಲ್ಲಿನ ಜಗುಲಿ, ಅರಳಿ ಕಟ್ಟೆಯ ಮೇಲೆ ಜನರೊಂದಿಗೆ ಕುಳಿತು ಸಾರ್ವತ್ರಿಕಗೊಂಡಿರುವ ಭ್ರಷ್ಟಾಚಾರದ ಬಗ್ಗೆ, ಜನಪ್ರತಿನಿಧಿಗಳ ನಿಷ್ಟ್ರಿಯತೆಯ ಬಗ್ಗೆ, ನಮ್ಮ ಕೇರಿ, ನಮ್ಮ ಊರು, ನಮ್ಮ ಕೆರೆ ನಮ್ಮ ಕಟ್ಟೆಗಳನ್ನು ಉದ್ಧಾರಮಾಡುವ ಕುರಿತು ಮಾತನಾಡಬೇಕಿದೆ. ಯಾವುದೇ ಚಳುವಳಿ ಜನಪರವಾಗಬೇಕಾದರೆ, ಅದು ಮೊದಲು ಜನತೆಯ ಮನಸ್ಸನ್ನು ಮತ್ತು ವಿಶ್ವಾಸವನ್ನು ಗೆಲ್ಲಬೇಕಿದೆ. ನಮ್ಮ ರಾಜಕೀಯ ಪಕ್ಷಗಳು ಚುನಾವಣೆಗಳ ಮುಖಾಂತರ ಹಲವಾರು ಆಮೀಷಗಳನ್ನು ಒಡ್ಡಿ ತಾವು ಭ್ರಷ್ಟವಾಗುದರ ಜೊತೆಗೆ ಜನರ ಮನಸ್ಸನ್ನು ಹೇಗೆ ಭ್ರಷ್ಟಗೊಳಿಸಿವೆ ಎಂಬುದನ್ನು ವಿವರಿಸಬೇಕಿದೆ. ಈ ಕ್ರಿಯೆ ನಿಜಕ್ಕೂ ಎಲ್ಲಾ ಜನಪರ ಸಂಘಟನೆಗಳಿಗೆ ಸವಾಲಿನ ಕೆಲಸವಾಗಿದೆ. ಆದರೆ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಅನಿವಾರ್ಯವಾಗಿದೆ.

ಕಳೆದ ಮೂರು ದಶಕಗಳಿಂದ ಸಮುದಾಯದ ಏಳಿಗೆಗಿಂತ ತಮ್ಮ ಏಳಿಗೆಯನ್ನು ಕಾಯಕವನ್ನಾಗಿ ಮಾಡಿಕೊಂಡ ಜನನಾಯಕರ ಸ್ವಾರ್ಥದಿಂದಾಗಿ ಜನಪರ ಚಳುವಳಿಗಳು ವಿಪಲಗೊಂಡಿವೆ ಜೊತೆಗೆ ವಿಶ್ವಾಸವನ್ನು ಕಳೆದುಕೊಂಡಿವೆ. ಇವು ಈ ನಾಡಿನ ಎಲ್ಲಾ ಪ್ರಜ್ಞಾವಂತರ ಆತಂಕಕ್ಕೆ ಕಾರಣವಾಗಿದ್ದು. ದೇವನೂರು ಮಹಾದೇವ ಕನಸಿರುವ ಸ್ವರಾಜ್ ಇಂಡಿಯಾ ಅಭಿಯಾನವನ್ನು ಒಂದಿಷ್ಟು ಆಸೆಗಣ್ಣಿನಿಂದ ಮತ್ತು ಆತಂಕದಿಂದ ನೋಡುವಂತಾಗಿದೆ. ಗಾಂಧೀಜಿಯವರು ಬಿಹಾರದ ಚಂಪಾರಣ್ಯದ ಸತ್ಯಾಗ್ರಹದಲ್ಲಿ ಪಾಲ್ಗೊಂಡ ನಂತರವಷ್ಟೇ ಅವರಿಗೆ ಗ್ರಾಮ ಭಾರತದ ಬಡತನ, ಬೌದ್ಧಿಕ ದಾರಿದ್ರ್ಯ, ಅಸ್ಪೃಶ್ಯತೆ, ಅನಾರೋಗ್ಯ ಮತ್ತು ಕೊಳೆತನ ಇವುಗಳ ಪರಿಚಯವಾಯಿತು. ಈ ಹಿನ್ನಲೆಯಲ್ಲಿ ಈಗಿನ ಎಲ್ಲಾ ಬಗೆಯ ಹೋರಾಟಗಳು ಗ್ರಾಮಗಳಿಂದ  ಆರಂಭವಾಗುವುದು ಅನಿವಾರ್ಯವಾಗಿದೆ.
( ಕರಾವಳಿ ಮುಂಜಾವು ಪತ್ರಿಕೆಯ "ಜಗದಗಲ" ಅಂಕಣಕ್ಕೆ ಬರೆದ ಲೇಖನ)

ಗುರುವಾರ, ಮಾರ್ಚ್ 23, 2017

ಮಾನಿನಿಯರ ಹೋರಾಟದ ಮುಂದೆ ಬೆತ್ತಲಾದ ಕರ್ನಾಟಕದ ಜನಪರ ಚಳುವಳಿಗಳು



ಈ ವಾರ ಬೆಂಗಳೂರು ನಗರದ ಫ್ರೀಡಂ ಪಾರ್ಕ್ ಆವರಣದಲ್ಲಿ ಕರ್ನಾಟಕದ  ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಒಗ್ಗೂಡಿ  ತಮ್ಮ   ವೇತನದ  ಹೆಚ್ಚಳಕ್ಕಾಗಿ ನಡೆಸಿದ ಹೋರಾಟ ಹಲವು ರೀತಿಯಲ್ಲಿ ಸಾಮಾಜಿಕ ಚಳುವಳಿಗಳ ಅಧ್ಯಯನಕ್ಕೆ ಮತ್ತು ನಮ್ಮ ಸಾಮಾಜಿಕ ಚಳುವಳಿಗೆ ಬಡಿದಿರುವ ಶಾಪವನ್ನು ಮರು ವಿಮರ್ಶೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ.
ಕಳೆದ ವರ್ಷ ಬೆಂಗಳೂರು ನಗರದಲ್ಲಿರುವ ಸಿದ್ಧ ಉಡುಪು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಅಸಂಘಟಿತ ಮಹಿಳಾ ಕಾರ್ಮಿಕರು  ಇಂತಹದ್ದೇ ಹೋರಾಟವನ್ನು ನಡೆಸಿದ್ದರು. ಎಂಪ್ಲಾಯ್ ಮೆಂಟ್ ಪ್ರಾವಿಡೆಮಟ್ ಫಂಡ್  ಹಣವನ್ನು ಹಿಂತೆಗೆಯದಂತೆ ಕೇಂದ್ರ ಸರ್ಕಾರ ನಿಯಮಾವಳಿ ರೂಪಿಸಿದೆ ಎಂಬ ಸುದ್ಧಿ ಹರಡಿದ ಪರಿಣಾಮವಾಗಿ  ಧಿಡೀರನೆ ಬೀದಿಗಿಳಿದು ಅಕ್ಷರಶಃ ಬೆಂಗಳೂರು ನಗರವನ್ನು ನಡುಗಿಸಿದ್ದರು. ಎರಡು ದಿನಗಳ ಕಾಲ ನಡೆದ  ಈ ಹೋರಾಟಕ್ಕೆ ಬೆಚ್ಚಿ ಬಿದ್ದ ಕೇಂದ್ರ ಸರ್ಕಾರ ತನ್ನ ಯೋಜನೆಯನ್ನು ಕೈ ಬಿಟ್ಟಿತು. ಜೊತೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಮಾಧ್ಯಮಗಳ ಮುಂದೆ ಈ ಕುರಿತು ಸೃಷ್ಟೀಕರಣ ನೀಡ ಬೇಕಾಯಿತು.
ಅಂದು ಬೀದಿಗಿಳಿದ್ದಿದ್ದ ಸಿದ್ಧ ಉಡುಪುಗಳ ಕಾರ್ಖಾನೆಯ ಮಹಿಳಾ ನೌಕರರಿಗೆ ಯಾವೊಬ್ಬ ನಾಯಕನಿರಲಿಲ್ಲ. ಅವರೆಂದೂ ತಮ್ಮ ಏಳಿಗೆಗಾಗಿ ಸಂಘಟನೆಯ ನಾಯಕರನ್ನು ಆಶ್ರಯಿಸಲಿಲ್ಲ, ಅವಲಿಂಬಿಸಲಿಲ್ಲ. ತಮಗೆ ಅನ್ಯಾಯವಾದಾಗ ಪ್ರತಿಭಟಿಸುವುದು ನಮ್ಮ ಜನ್ಮ ಸಿದ್ಧ ಹಕ್ಕು ಎಂಬುದು ಮಾತ್ರ ಅವರೆಲ್ಲರ ಧೋರಣೆಯಾಗಿತ್ತು. ಇವೆಲ್ಲಕ್ಕಿಂತ ಮಿಗಿಲಾಗಿ ಈ ಮಹಿಳಾ ಕಾರ್ಮಿಕರು ಹೆಚ್ಚಿನ ವಿದ್ಯಾವಂತರಲ್ಲ. ಪಿ.ಯು.ಸಿ. ಅಥವಾ ಪದವಿ ಓದಿರುವ ಹೆಣ್ಣು ಮಕ್ಕಳು ಕೇವಲ ಬೆರಳೆಣಿಕೆಯಷ್ಟು ಇರಬಹುದು. ಇಂದು ಬೆಂಗಳೂರೆಂಬ ಮಾಯಾ ನಗರಿಯಲ್ಲಿ ಸುಮಾರು ಹದಿನಾಲ್ಕು ಲಕ್ಷ ಮಂದಿ ಬಡ ಹೆಣ್ಣು ಮಕ್ಕಳು ಸಿದ್ಧ ಉಡುಪು ಕಾರ್ಖಾನೆಗಳಲ್ಲಿ ಅಸಂಘಟಿತರಾಗಿ ದುಡಿಯುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಇವರೆಲ್ಲರೂ ತಮಗೆ ಅನ್ಯಾಯವಾದಾಗ ವ್ಯವಸ್ಥೆಯ ವಿರುದ್ಧ ಮತ್ತು ಸರ್ಕಾರದ ವಿರುದ್ಧ ಸಂಘಟಿತರಾಗಿ ಸಿಡಿದೇಳುವ ಸಾತ್ವಿಕ ಸಿಟ್ಟನ್ನು ಒಮ್ಮ ಒಡಲೊಳಗೆ ಕಾಪಿಟ್ಟುಕೊಂಡಿದ್ದಾರೆ,
ಈ ರೀತಿಯ ಸಾತ್ವಿಕ ಸಿಟ್ಟು ಇದೀಗ ಕರ್ನಾಟಕದ ಅಸಂಖ್ಯಾತ  ಅಂಗನವಾಡಿ ಕಾರ್ಯಕರ್ತೆಯರಿಂದ ವ್ಯೆಕ್ತವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರ  ನೇತೃತ್ವದ ಕಾಂಗ್ರೇಸ್ ಸರ್ಕಾರ  ನಡುಗಿ ಹೋಗುವಂತೆ ಗರ್ಜಿಸಿದ್ದಾರೆ. ದೂರದ ಊರು ಕೇರಿಗಳಿಂದ ತಮ್ಮ ಹಸಗೂಸುಗಳು ಮತ್ತು ಕಂದಮ್ಮಗಳ  ಜೊತೆ ಬಂದ ಈ ತಾಯಂದಿರು ಹಗಲು, ರಾತ್ರಿ ಎನ್ನದೆ, ಚಳಿ, ಮಳೆ ಬಿಸಿಲು ಎನ್ನದೆ ನಾಲ್ಕು ದಿನಗಳ ಕಾಲ ಬೀದಿಯಲ್ಲಿ ಕುಳಿತು ಅಲ್ಲಿಯೇ ಮಲಗಿ ಪ್ರತಿಭಟಿಸಿದರು. ಇವರ ನೋವು ಸಂಕಟ ನೋಡಲಾರದೆ, ಇವರಿಗೆ ನೀರು, ಮಜ್ಜಿಗೆ ನೀಡಲು ಬಂದ ಸಂಘಟನೆಗಳ ನೆರವನ್ನು ನಿರಾಕರಿಸಿದರು. “ನಮಗೆ ನಿಮ್ಮ ಅನುಕಂಪವಾಗಲಿ, ಸಹಾಯ ಹಸ್ತವಾಗಲಿ ಬೇಕಿಲ್ಲ. ವೇತನ ಹೆಚ್ಚು ಮಾಡಲಾಗದ ಈ ಕುರುಡು ಸರ್ಕಾರಕ್ಕೆ ಬುದ್ಧಿ ಹೇಳಿ, ಸಾಧ್ಯವಾದರೆ ಹೋರಾಟಕ್ಕೆ  ನಮ್ಮ ಜೊತೆ ಕೈ ಜೊಡಿಸಿ” ಎಂಬ ನಿಷ್ಟುರ ನಿಲುವು ಇವರದಾಗಿತ್ತು. ಇವರ ಜತೆ ಹಲವು ಮಹಿಳಾ ಪರ ಸಂಘಟನೆಗಳು ಮತ್ತು ಎಡಪಂಥೀಯ ಸಂಘಟನೆಗಳು ಕೈ ಜೋಡಿಸಿದವು.

ಕರ್ನಾಟಕದ  ಹಳ್ಳಿಗಳಲ್ಲಿ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮಕ್ಕಳಿಗೆ ಬಿಸಿಯೂಟ, ಹಾಲು ಸಿದ್ಧಪಡಿಸಿಕೊಡುವ ಸಹಾಯಕಿಯರು ಇವರೆಲ್ಲಾ ಸೇರಿ ಒಂದು ಲಕ್ಷದ ಇಪ್ಪತ್ತು ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕರ್ತೆಯರಿದ್ದಾರೆ. ಕಳೆದ ಏಳೆಂಟು ವರ್ಷಗಳಿಂದ ಇವರೆಲ್ಲರ ಏಕೈಕ ಬೇಡಿಕೆ ಎಂದರೆ ವೇತನ ಹೆಚ್ಚು ಮಾಡಿ ಎಂಬುದಾಗಿದೆ. ಈ ಬಾರಿ  ಅಂಗನವಾಡಿಯ ಶಿಕ್ಷಕಿಯರಿಗೆ ಒಂದು ಸಾವಿರ ಮತ್ತು ಸಹಾಯಕಿಯರಿಗೆ ಐನೂರು ರೂಪಾಯಿ ಹೆಚ್ಚಳ ಮಾಡುವುದಾಗಿ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.  ಸಧ್ಯಕ್ಕೆ ಶಿಕ್ಷಕಿಯರು ಆರು ಸಾವಿರ ಹಾಗೂ ಸಹಾಯಕಿಯರು ಮೂರು ಸಾವಿರ ರೂಪಾಯಿ ವೇತನ ಪಡೆಯುತ್ತಿದ್ದಾರೆ. ಆದರೆ ಶಿಕ್ಷಕಿಯರಿಗೆ ಹತ್ತು ಸಾವಿರ ಹಾಗೂ ಸಹಾಯಕಿಯರಿಗೆ ಏಳೂವರೆ ಸಾವಿರ ರೂಪಾಯಿ ವೇತನ ನಿಗದಿ ಪಡಿಸಿ ಎಂಬುದು ಇವರೆಲ್ಲರ ಬೇಡಿಕೆಯಾಗಿದೆ. ಪಂಜಾಬ್ ರಾಜ್ಯದಲ್ಲಿ ಹದಿನಾಲ್ಕು ಸಾವಿರ ಹಾಗೂ ನೆರೆಯ ತಮಿಳುನಾಡಿನಲ್ಲಿ ಹತ್ತೂವರೆ ಸಾವಿರ ಮತ್ತು ಸಂಕ್ರಾಂತಿ ಹಬ್ಬದ ಪ್ರಯುಕ್ತ ಒಂದು ತಿಂಗಳ ಬೋನಸ್ ನೀಡಲಾಗುತ್ತಿದೆ. ಇವುಗಳನ್ನು ಗಮನಿಸಿದಾಗ ಮುಷ್ಕರ ನಡೆಸಿದ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತೆಯರ ಬೇಡಿಕೆ ನ್ಯಾಯ ಸಮ್ಮತವಾಗಿದೆ ಎಂದು ಹೇಳಲೇಬೇಕು. ದಿನ ನಿತ್ಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವಾಗ ಕನಿಷ್ಟ ಗೌರವಯುತವಾದ ವೇತನ ನೀಡುವುದು ಸರ್ಕಾರದ ನೈತಿಕ ಜವಾಬ್ದಾರಿಯಾಗಿದೆ. ಪಕ್ಷ ಬೇಧವಿಲ್ಲದೆ ಎಲ್ಲಾ ಶಾಸಕರು, ಸಚಿವರು ತಮ್ಮ ವೇತನ ಹಾಗೂ ಭತ್ಯೆಯನ್ನು ಶೇಕಡ ನೂರರಷ್ಟು ಹೆಚ್ಚು ಮಾಡಿಕೊಳ್ಳುವಾಗ ತೋರುವ ಕಾಳಜಿಯನ್ನು ಈ ಹೆಣ್ಣು ಮಕ್ಕಳ ಬಗ್ಗೆಯೂ ತೋರಬೇಕಿದೆ. ಈಗಾಗಲೇ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಇವರುಗಳ ಬೇಡಿಕೆಯನ್ನು ಪೂರೈಸುವುದಾಗಿ ವಾಗ್ದಾನ ನೀಡಿದ್ದಾರೆ.

ಈ ಅಂಗನವಾಡಿ ಮತ್ತು ಸಿದ್ಧ ುಡುಪುಗಳ ಕಾರ್ಖಾನೆಯ ಮಹಿಳಾ ನೌಕರರ ಹೋರಾಟವನ್ನು ಚರ್ಚೆಗೆ  ಹಿನ್ನಲೆಯಾಗಿ ಇಟ್ಟುಕೊಂಡು, ರಾಜ್ಯದಲ್ಲಿ ಮಕಾಡೆ ಮಲಗಿರುವ ಅಥವಾ ತುಕ್ಕು ಹಿಡಿದು ನೈತಿಕವಾಗಿ ದಿವಾಳಿ ಎದ್ದು ಹೋಗಿರುವ ರೈತ ಹೋರಾಟ, ದಲಿತ ಪರ ಹೋರಾಟ ಮತ್ತು ಕನ್ನಡ ಪರ ಹೋರಾಟಗಳಂತಹ ಸಾಮಾಜಿಕ ಚಳುವಳಿಗಳನ್ನು ಪರಾಮರ್ಶೆಗೆ ಒಡ್ಡಿದಾಗ  ನಿರಾಸೆಯಾಗುತ್ತದೆ. ಈ ದಿನ ಕರ್ನಾಟಕದಲ್ಲಿ ಜಿಲ್ಲೆಗೊಬ್ಬ, ಪ್ರಾಂತ್ಯಕ್ಕೊಬ್ಬ ಮತ್ತು ಪ್ರತಿ ಬೆಳೆಗೊಬ್ಬ ರೈತನಾಯಕನಿದ್ದಾನೆ. ಜೊತೆಗೆ ಒಂದು ಡಜನ್ ಗೂ ಹೆಚ್ಚು ರೈತ ಸಂಘಟನೆಗಳಿವೆ. ಮೂರೂ ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲಿ 2.400 ಕ್ಕೂ ಹೆಚ್ಚು ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ರೈತ ಬೆಳೆದ ಬೆಳೆಗೆ ಇವೊತ್ತಿಗೂ ಸೂಕ್ತ ಬೆಲೆಯಿಲ್ಲ. ಬರಗಾಲದ ನಡುವೆ ಜಾನುವಾರುಗಳಿಗೆ ಕುಡಿಯುವ ನೀರು, ಮೇವಿಲ್ಲದೆ ಕಟುಕರಿಗೆ ಜಾನುವಾರುಗಳನ್ನು ಮಾರುತ್ತಿದ್ದಾನೆ. ರಾಜ್ಯದಲ್ಲಿ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರಕ್ಕೆ ಮತ್ತು ವಿರೋಧ ಪಕ್ಷಗಳಿಗೆ ರೈತರ ಹಿತಕ್ಕಿಂತ ಉಪಚುನಾವಣೆಯು ಪ್ರತಿಷ್ಟೆಯ ಪ್ರಶ್ನೆಯಾಗಿದೆ. ಇನ್ನು, ರಾಜ್ಯದಲ್ಲಿ ಇಪ್ಪತ್ತೊಂದಕ್ಕೂ ಹೆಚ್ಚು ಅಂಬೇಡ್ಕರ್ ಹೆಸರಿನಲ್ಲಿ ದಲಿತ ಸಂಘಟನೆಗಳಿವೆ. ಇವುಗಳಲ್ಲಿ ಬಹುತೇಕ ಲೆಟರ್ ಹೆಡ್ ಸಂಘಟನೆಗಳಾಗಿವೆ. ದಲಿತರ ಮೇಲೆ ದೌರ್ಜನ್ಯ ಮಾತ್ರ ನಿರಂತರವಾಗಿ ಸಾಗಿದೆ. ನಾಯಕರೆನಿಸಿಕೊಂಡವರು ಜಿಲ್ಲಾ ಮಟ್ಟದ ಕಛೇರಿಗಳಲ್ಲಿ ಚಂದಾ ವಸೂಲಿಯಲ್ಲಿ ನಿರತರಾಗಿದ್ದಾರೆ.  ಕರ್ನಾಟಕದಲ್ಲಿ ಕನ್ನಡ ಪರ ಸಂಘಟನೆಗಳು ನಾಯಿಕೊಡೆ ಅಣಬೆಯ ರೀತಿಯಲ್ಲಿ ಹುಟ್ಟಿಕೊಂಡ ನಂತರ ರಾಜ್ಯದಲ್ಲಿ ಕನ್ನಡ ಭಾಷೆ ಎಲ್ಲಿ ತಲೆ ಎತ್ತಿದೆ ಎಂಬುದನ್ನು ದೀಪ ಹಾಕಿಕೊಂಡು ಹುಡುಕಬೇಕಿದೆ. ಕನ್ನಡ ಮಾಧ್ಯಮದ ಶಾಲೆಗಳು  ಪ್ಪ್ರತಿ ಹಳ್ಳಿಗಳಲ್ಲಿ ಮುಚ್ಚುತ್ತಾ ಸಾಗಿವೆ.

ಈ ಮೂರು ಸಂಘಟನೆಗಳ  ನಾಯಕರನ್ನು ಎದುರು ನಿಲ್ಲಿಸಿಕೊಂಡು ನಿಮ್ಮ ಸಾಧನೆ ಏನು? ಎಂದು  ಒಮ್ಮೆ ಕೇಳಿ ನೋಡಿ? ದಶಕದ ಪ್ರೊ. ನಂಜುಂಡಸ್ವಾಮಿಯಂತಹವರು, ದಲಿತ ಸಂಘರ್ಷ ಸಮಿತಿಯ ಬಿ.ಕೃಷ್ಣಪ್ಪನಂತಹವರು ಮತ್ತು ಕನ್ನಡದ ಪರವಾಗಿ ಡಾ. ರಾಜ್ ಕುಮಾರ್ ನಂತಹ ಸಮುದಾಯದ ನಾಯಕರು  ಒಂದು ಕರೆ ನೀಡಿದರೆ, ಸಭೆಗೆ ಅಥವಾ ಪ್ರತಿಭಟನೆಗೆ ಸಾವಿರಾರು ಮಂದಿ ನೆರೆಯುತ್ತಿದ್ದರು. ಈಗಿನ ಸಂಘಟನೆಗಳ ನಾಯಕರು ನೂರು ಜನರನ್ನು ಸೇರಿಸಲು ಅಸಮರ್ಥರಾಗಿದ್ದಾರೆ. ಈ ನಾಯಕರ ಸಾಮರ್ಥ್ಯವೆಲ್ಲಾ  ಕೇವಲ ಮಾಧ್ಯಮಗಳ ಮುಂದೆ ಗಾಳಿಯಲ್ಲಿ ಕತ್ತಿ ತಿರುಗುವ ಸಾಹಸಕ್ಕೆ ಮಾತ್ರ ಸೀಮಿತವಾಗಿದೆ.  ಇಂತಹ ನೋವಿನ ಸ್ಥಿತಿಯಲ್ಲಿ ಯಾವೊಂದು ಚಳುವಳಿಯೂ ಯಶಸ್ವಿಯಾಗುತ್ತಿಲ್ಲ. ಈ ನಾಡಿನ ದಲಿತರು, ಹಿಂದುಳಿದವರು, ರೈತರು ಇಂತಹ ನಕಲಿ  ನಾಯಕರನ್ನು ಹಾಳು ಬಾವಿಗೆ ದೂಡಿ, ನಾಯಕತ್ವವಿಲ್ಲದ ಹಾಗೂ ಸಾಮೂಹಿಕ ನಾಯಕತ್ವದಡಿ ಹೊಸ ಹೊಸ ಹೋರಾಟಗಳನ್ನು ರೂಪಿಸಬೇಕಿದೆ. ಇಂತಹ ಹೋರಾಟಕ್ಕೆ ನಮ್ಮ ಕನ್ನಡದ ಹೆಣ್ಣು ಮಕ್ಕಳು ಮತ್ತು ತಾಯಂದಿರು  ಇದೀಗ ನಮಗೆ ಮಾದರಿಯಾಗಿದ್ದಾರೆ.
( ಕರಾವಳಿ ಮುಂಜಾವು ದಿನಪತ್ರಿಕೆಯ " ಜಗದಗಲ" ಅಂಕಣಕ್ಕಾಗಿ ಬರೆದ ಲೇಖನ)

ಗುರುವಾರ, ಮಾರ್ಚ್ 16, 2017

ಮಾನವ ನಿರ್ಮಿತ ಬರದ ಬೇಗೆಯನ್ನು ಬಿಚ್ಚಿಡುವ ಮನೋಜ್ಞ ಕೃತಿ: ಕ್ಷಾಮ ಡಂಗುರ


ಕಳೆದ ಮೂರು ವರ್ಷಗಳಿಂದ ಸತತವಾಗಿ ಕರ್ನಾಟಕವನ್ನು ಆವರಿಸಿಕೊಂಡಿರುವ ಬರಗಾಲ ಎಲ್ಲಾ ಜೀವಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದೆ. ರಾಜ್ಯದ ನೂರ ಅರವತ್ತೆರೆಡಕ್ಕೂ ಹೆಚ್ಚು ತಾಲ್ಲೂಕುಗಳು ಬರದ ಬೇಗೆಯಲ್ಲಿ ಬೇಯುತ್ತಿವೆ. ಪ್ರಕೃತಿಯ ಸೃಷ್ಟಿಯ ಒಂದು ಭಾಗವಾಗಿರುವ ಬರವು ಈ ದೇಶಕ್ಕಾಗಲಿ ಅಥವಾ ರಾಜ್ಯಕ್ಕಾಗಲಿ ಹೊಸತಲ್ಲ. 1943 ರಲ್ಲಿ ಭಾರತದಲ್ಲಿ ಸಂಭವಿಸಿದ ಭೀಕರ ಬರಗಾಲಕ್ಕೆ ಬಿಹಾರ, ಒಡಿಸ್ಸಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಜನತೆ ಹಸಿನಿಂದ ಕಂಗಾಲಾಗಿ ತರಗಲೆಗಳಂತೆ ಭೂಮಿಗೆ ಉದುರಿ ಹೋದ ದುರಂತದ ಇತಿಹಾಸವು ಚರಿತ್ರೆಯ ಪುಟಗಳಲ್ಲಿ ಚಿತ್ರಗಳ ಸಮೇತ ದಾಖಲಾಗಿದೆ. ಈ ಘಟನೆಯ ನಂತರ 1970 ರ ದಶಕದಲ್ಲಿ ಕರ್ನಾಟಕವೂ ಸೇರಿದಂತೆ ಭಾರತದಲ್ಲಿ ಮತ್ತೊಮ್ಮೆ ಭೀಕರವಾದ ಕ್ಷಾಮ ಆವರಿಸಿಕೊಂಡಿತ್ತು. ನಲವತ್ತು ವರ್ಷಗಳ ಹಿಂದೆ ಬರದ ಲಕ್ಷಣಗಳಲ್ಲಿ ಪ್ರಮುಖವಾಗಿ ಆಹಾರದ ಕೊರತೆ ಎದ್ದು ಕಾಣುತ್ತಿತ್ತು. ನಂತರದ ದಿನಗಳಲ್ಲಿ  ಕುಡಿಯುವ ನೀರಿನ ಕೊರತೆಯಿಂದಾಗಿ ಜನ ಮತ್ತು ಜಾನುವಾರುಗಳಿಗೆ ತೊಂದರೆಯಾಗಿ ಜನತೆ ನೀರು ಮತ್ತು ಆಹಾರ ಅರಸಿಕೊಂಡು ಗುಳೆ ಹೋಗುವುದು ಸಾಮಾನ್ಯ ಸಂಗತಿಯಾಗಿತ್ತು.
ಇತ್ತೀಚೆಗಿನ ಅಂದರೆ ಕಳೆದ ಮುವತ್ತು ವರ್ಷಗಳಲ್ಲಿ ಬರದ ಚಿತ್ರಣವೇ ಬದಲಾಗಿ ಹೋಗಿದೆ. ಬರ ಎನ್ನುವುದು ಪ್ರಕೃತಿಯ ಸೃಷ್ಟಿಗಿಂತ ಹೆಚ್ಚಾಗಿ ಮಾನವ ನಿರ್ಮಿತ ಬರ ಪದೇ ಪದೇ ಈ ದೇಶದ ಹಲವಾರು ರಾಜ್ಯಗಳಲ್ಲಿ ತಲೆದೋರತೊಡಗಿದೆ. ಮನುಷ್ಯರು ಮತ್ತು ಪ್ರಾಣಿಗಳ ಕುಡಿಯುವ ನೀರಿಗಾಗಿ ಬಳಕೆಗೆ ತರಲಾದ ಕೊಳವೆ ಬಾವಿ ತಂತ್ರಜ್ಞಾನವು ಇಡೀ ಭೂಮಿಯ ಅಂತರ್ಜಲವನ್ನು ಹೀರಿ ಹಾಕುವುದರ ಮೂಲಕ  ನಮ್ಮ ಪ್ರಾಚೀನ ದೇಶಿ ಸಂಸ್ಕೃತಿಯ ಜಲಮೂಲಗಳ ತಾಣಗಳಾಗಿದ್ದ ಕೆರೆ ಕಟ್ಟೆ, ಬಾವಿಗಳನ್ನು ನುಂಗಿ ಹಾಕಿದೆ. ಈಗಿನ ಬರದಲ್ಲಿ ತಿನ್ನುವ ಆಹಾರಕ್ಕಿಂತ ಕುಡಿಯುವ ನೀರಿನದು ಅತಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕರ್ನಾಟಕದ ಯಾವುದೇ ಪ್ರದೇಶಕ್ಕೆ ಹೋದರೂ ಕೇವಲ ನಲವತ್ತು, ಐವತ್ತು ಅಡಿಗಳ ಆಳದಲ್ಲಿ ತೆರೆದ ಬಾವಿಯ ಮೂಲಕ ದೊರೆಯುತ್ತಿದ್ದ ನೀರು ಈಗ ಎರಡು ಸಾವಿರ ಅಡಿಗಳ ಆಳಕ್ಕೆ ಇಳಿದರೂ ದೊರೆಯುತ್ತಿಲ್ಲ.  ಭೂಮಿಯ ಅಂತರ್ಜಲದ ಮಟ್ಟವನ್ನು ಹೆಚ್ಚಿಸುತ್ತಿದ್ದ ಕೆರೆಗಳು, ಕಟ್ಟೆಗಳು, ಒಡ್ಡುಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡಿವೆ. ಕೆಲವು ಕರೆ ಕಟ್ಟೆಗಳು ಹೂಳು ಮತ್ತು ಕಸ ಹಾಗೂ ಕಳೆಗಳಿಂದ ತುಂಬಿಕೊಂಡಿದ್ದರೆ, ಇನ್ನರ್ಧ ಕೆರೆಗಳು ಕೃಷಿಭೂಮಿಯಾಗಿ ಇಲ್ಲವೆ ನಿವೇಶನಗಳಾಗಿ ಮಾರ್ಪಾಡಾಗಿವೆ. ಕೆರೆಗಳ ಮತ್ತು ಕಟ್ಟೆಗಳ ಹೂಳೆತ್ತೆವುದು ಒಂದು ಕಾಲದಲ್ಲಿ ಪ್ರತಿ ಊರಿನ ಸಮುದಾಯದ ಚಟುವಟಿಕೆಯಾಗಿತ್ತು. ಈಗ ಅದು ಸರ್ಕಾರ ಕೆಲಸ ಎಂಬ ಉದಾಸೀನ ಭಾವನೆ ಜನರಲ್ಲಿ ಮನೆ ಮಾಡಿದೆ. ಯಾವುದೇ ಗ್ರಾಮಗಳಿಗೆ ಹೋದರೂ ದೇವಸ್ಥಾನಗಳ ಮುಂದೆ ಅಥವಾ ಅಕ್ಕ ಪಕ್ಕದಲ್ಲಿ ಇರುತ್ತಿದ್ದ ಕಲ್ಯಾಣಿಗಳಲ್ಲಿ  ಶುದ್ಧ ತಿಳಿಯಾದ ನೀರು ಸಿಗುತ್ತಿತ್ತು. ಈಗ ಪಾಚಿಗಟ್ಟಿದ ನೀರು ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳು ಭಕ್ತರನ್ನು ಸ್ವಾಗತಿಸುತ್ತಿವೆ.
ನಿಸರ್ಗದ ಕೊಡುಗೆಗಳನ್ನು ಮನಸ್ಸೋ ಇಚ್ಚೆ ಬಳಸಿ, ಹಾಳು ಮಾಡುವುದು ನಮ್ಮ ಪಾರಂಪರಿಕ ಪರಮ ಹಕ್ಕು ಎಂಬ ಅಹಂಕಾರದಲ್ಲಿ  ಬದುಕುತ್ತಿರುವ ಆಧುನಿಕ ಜಗತ್ತಿಗೆ ಭವಿಷ್ಯದಲ್ಲಿ ಕಾಡಬಹುದಾದ ಅತ್ಯಂತ ಭೀಕರ ಸಮಸ್ಯೆಗಳೆಂದರೆ ಒಂದು ಕುಡಿಯುವ ನೀರು , ಮತ್ತೊಂದು ಸೃಷ್ಟಿಯಾಗುತ್ತಿರುವ ಕಸದ ಸಮಸ್ಯೆ. ಈಗಾಗಲೇ ಇದರ ಲಕ್ಷಣಗಳು ಎಲ್ಲೆಡೆ ಕಾಣಿಸಿಕೊಂಡಿವೆ. ಮನುಷ್ಯನ ಇಂತಹ ಸ್ವಯಂ ಕೃತ ಅಪರಾಧದಿಂದಾಗಿ ಮೂಕ ಪ್ರಾಣಿಗಳು ಕುಡಿಯುವ ನೀರು ಮತ್ತು ಆಹಾರಕ್ಕಾಗಿ ಪರಿತಪಿಸುತ್ತಿವೆ. ಅರಣ್ಯದಲ್ಲಿ ಜಲಮೂಲಗಳು ಬತ್ತಿ ಹೋಗಿ, ಹಸಿರು ಮಾಯವಾಗಿದೆ. ಪ್ರಾಣಿಗಳು ನಾಡಿನತ್ತ ಮುಖಮಾಡಿ ಪ್ರಾಣ ಕಳೆದುಕೊಳ್ಳುತ್ತಿವೆ. ಮನುಷ್ಯ ನಾಗರೀಕತೆ ಹುಟ್ಟಿದಾಗಿನಿಂದ ಅವನ ಜೊತೆಯಲ್ಲಿ ಪಳಗಿದ ಮುಖ್ಯ ಪ್ರಾಣಿಗಳಲ್ಲಿ ನಾಯಿ, ಕುದುರೆ ಮತ್ತು ಹಸು ಅಥವಾ ದನ  ಇವುಗಳು ಮುಖ್ಯವಾದವುಗಳು. ಜಾನುವಾರುಗಳು ಕೃಷಿಯ ಚಟುವಟಿಕೆಯಲ್ಲಿ ಮುಖ್ಯವಾದ ಪಾತ್ರ ವಹಿಸತೊಡಗಿದ ಮೇಲೆ ಅವು ಮನುಷ್ಯನ ಸಂಗಾತಿಗಳಾಗಿ ಈವರೆಗೆ ಬದುಕಿದ್ದವು. ಆದರೆ, ಕೃಷಿ ಚಟುವಟಿಕೆಗೆ ಅಧುನಿಕ ತಂತ್ರಜ್ಞಾನ ಕಾಲಿರಿಸಿದ ಮೇಲೆ ರೈತರಿಗೆ ಅವುಗಳ ಮೇಲಿದ್ದ ಕಾಳಜಿ ಮತ್ತು ಕಳ್ಳು ಬಳ್ಳಿಯ ಸಂಬಂಧ ಕಡಿದು ಹೋಯಿತು. ಟ್ರಾಕ್ಟರ್ ಮತ್ತು ಟಿಲ್ಲರ್ ಬಳಕೆ ಬಂದ ಮೇಲೆ ಜಾನುವಾರುಗಳೆಂದರೆ, ಮಾಂಸದ ಪ್ರಾಣಿಗಳು ಎಂಬ ಭಾವನೆ ಬೆಳೆಯತೊಡಗಿತು. ಇದಕ್ಕೆ ಉದಾಹರಣೆ ಎಂಬಂತೆ ನಾಡಿನೆಲ್ಲಡೆ ರಸ್ತೆಗಳಲ್ಲಿ ನಾವು ಬಿಡಡಿ ದನಕರುಗಳನ್ನು ಕಾಣುತ್ತಿದ್ದೇವೆ. ನಗರಗಳಲ್ಲಿ ಕುಡಿಯಲು ಒಂದು ಹನಿ ನೀರಿಲ್ಲದೆ, ಅಂಬಾ ಎಂದು ಆರ್ತನಾದದಲ್ಲಿ ಕೂಗುತ್ತಾ ಓಡಾಡುವ ದನಕರುಗಳನ್ನು ನೋಡಿದಾಗ ಕರುಳು ಕಿತ್ತು ಬಂದ ಅನುಭವವಾಗುತ್ತದೆ. ಇಂತಹ ಮೂಕ ಪ್ರಾಣಿಗಳಿಗೆ ಒಂದಿಡಿ ಮೇವು, ಒಂದು ಕೊಡ ನೀರು ಕೊಡಲಾಗದ ದೇಶ ಭಕ್ತರು “ ಗೋ ಸಂಕ್ಷರಣೆಯ” ಹೆಸರಿನಲ್ಲಿ ಮಾದ್ಯಮಗಳಲ್ಲಿ ಮಿಂಚುತ್ತಿದ್ದಾರೆ. ಹಲವರಿಗೆ ಇದು ಕೇಂದ್ರ ಸರ್ಕಾರದ ಹಣ ದೋಚುವ ದಂಧೆಯಾಗಿದೆ ಎಂದರೆ ಅತಿಶಯದ ಮಾತಲ್ಲ.
ಇಂತಹ ಸಂಕಟದ ಕ್ಷಣಗಳಲ್ಲಿ ನಮ್ಮ ನಡುವಿನ ಬಲು ಸೂಕ್ಷ್ಮತೆಯ ಬರಹಗಾರ ಹಾಗೂ ನಾಡಿನ ಜಲತಜ್ಞ ಎಂದು ಕರೆಯಬಹುದಾದ ಶಿರಸಿ ಬಳಿಯ ಕಳವೆ ಗ್ರಾಮದ ಶಿವಾನಂದ ಕಳವೆ ಅವರು ಇತ್ತೀಚೆಗೆ ಹೊರ ತಂದಿರುವ “ ಕ್ಷಾಮ ಡಂಗುರ” ಎಂಬ ಕೃತಿ ನಮ್ಮೆಲ್ಲರ ಅವಿವೇಕತನಕ್ಕೆ ಮತ್ತು ಮನುಷ್ಯನ ವಿಕಾರಗಳಿಗೆ ಕನ್ನಡಿ ಹಿಡಿದಂತಿದೆ. ತನ್ನೂರಿನಲ್ಲಿ  ನಿರ್ಮಿಸಿಕೊಂಡಿರುವ ಕಾನ್ಮನೆ ಎಂಬ ಕುಟಿರದಲ್ಲಿ ಪರಿಸರ ಪ್ರಜ್ಞೆಯಯನ್ನು ನಾಡಿನ ಮಕ್ಕಳ ಎದೆಯಲ್ಲಿ ಬಿತ್ತುವ ಕ್ರಿಯೆಯನ್ನು ಕಾಯಕ ಮಾಡಿಕೊಂಡಿರುವ ಮಿತ್ರ ಕಳವೆಯವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ಕನ್ನಡ ನಾಡನ್ನು ತಿರುಗುತ್ತಾ ಪ್ರತಿ ಪ್ರದೇಶದ ಮಣ್ಣಿನ ವಾಸನೆಯನ್ನು ಬಲ್ಲವರಾಗಿದ್ದಾರೆ.  ಕನ್ನಡನಾಡಿನ  ನೆಲ. ಜಲ, ವಾಯು,, ಗಿಡ, ಮರ , ಪಕ್ಷಿ ಮತ್ತು ಪ್ರಾಣಿಗಳ ಕುರಿತು ಅಧಿಕೃತವಾಗಿ ಮಾತನಾಡಬಲ್ಲವರಾಗಿದ್ದಾರೆ. ಹಾಗಾಗಿ ಈ ಕೃತಿಯಲ್ಲಿ ಪ್ರಸ್ತಾವನೆಯ ಮಾತುಗಳನ್ನು ಬರೆಯುತ್ತಾ, “ ಈಗ ಕರ್ನಾಟಕಕ್ಕೆ ಬಂದಿರುವ ಬರವನ್ನು ವಿಶ್ಲೇಷಿಸುತ್ತಾ ಇದನ್ನು ನೀರಿನ ಟ್ಯಾಂಕರ್ ಗಳ ಸುಗ್ಗಿಗಾಗಿ ಸೃಷ್ಟಿಯಾದ ಬರ” ಎಂಬ ಅರ್ಥಪೂರ್ಣವಾದ ಮಾತುಗಳನ್ನು ದಾಖಲಿಸಿದ್ದಾರೆ.
ಉತ್ತರದ ಬೀದರ್ ನಿಂದ ದಕ್ಷಿಣದ  ಚಾಮರಾಜನಗರದ ವರೆಗೆ ಮತ್ತು ಪೂರ್ವದ ಬೆಳಗಾವಿ ಜಿಲ್ಲೆಯ ಖಾನಾಪುರದಿಂದ ಹಿಡಿದು ಪಶ್ಚಿಮ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲುಕಿನ ವರೆಗೆ ನಾಡಿ ಮಿಡಿತವನ್ನು ಬಲ್ಲ ಶಿವಾನಂದ ಕಳವೆಯವರು ಈ ಕೃತಿಯಲ್ಲಿ ಮುವತ್ತೆರೆಡು ಲೇಖನಗಳನ್ನು ದಾಖಲಿಸಿದ್ದು, ಈ ನಾಡಿನ ಐತಿಹಾಸಿಕ ಕೆರೆಗಳಗಳಿಂದ ಸಣ್ಣ ಕರೆಗಳ ದುಸುತ್ಥಿಯನ್ನು ಮನ ಮುಟ್ಟವಂತೆ ವಿವರಿಸಿದ್ದಾರೆ. ಇವಿಷ್ಟು ಸಾಲದೆಂಬಂತೆ ಕಾವೇರಿ ಕಣಿವೆಯುದ್ದಕ್ಕೂ ತಿರುಗಾಡಿ ಅಲ್ಲಿನ ಸ್ಥಿತಿಗತಿಗಳ ಅವಲೋಕನವನ್ನು ಮಾಡುತ್ತಾ, ನಾವು ಜಲ ಸಂರಕ್ಷಣೆಯಲ್ಲಿ ಎಲ್ಲಿ ದಾರಿ ತಪ್ಪಿದ್ದೇವೆ ಎಂಬುದನ್ನು ಬೊಟ್ಟು ಮಾಡಿ ತೋರಿಸಿದ್ದಾರೆ.  ಇಷ್ಟೇ ಕಾಳಜಿಯಿಂದ ಮಲೆನಾಡಿನ ಮಳೆಯ ಕೊರತೆಯನ್ನು ಚರ್ಚಿಸುವುದರ ಜೊತೆಗೆ ತಾವು ಹುಟ್ಟಿ ಬೆಳೆದ ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿಯ ನೆಲೆಯಾದ ಲಾಲ್ ಗುಳಿ  ಸಮೀಪದ ಗಿರಿ ಗಿರಿ ಪಾತರ್ ಎಂಬ ಸ್ಥಳದಿಮದ ಹಿಡಿದು, ಹಳಿಯಾಳ ತಾಲ್ಲೂಕಿನ ಭಗವತಿ ಎಂಬ ಅರಣ್ಯ ಪ್ರದೇಶದಲ್ಲಿ ಬೀಳುತ್ತಿದ್ದ ಮಳೆಯ ಪ್ರಮಾಣ ಹಾಗೂ ನೀರನ್ನು ಹಿಡಿದಿಡುವ ಅಲ್ಲಿನ ಮಣ್ಣಿನ ಗುಣವನ್ನು ವಿಶ್ಲೇಷಿಸಿದ್ದಾರೆ.
ಕಳವೆಯ ಜಲಕ್ಷಾಮದ ಕುರಿತ ಚಿಂತನೆಯ ವಿಶೇಷವೇನೆಂದರೆ, ಅವರು ಕೇವಲ ಸಮಸ್ಯೆಗಳ ಮಾತ್ರ ಬೊಟ್ಟು ಮಾಡದೆ,ಪರಿಹಾರಕ್ಕು ಸಹ ಮಾರ್ಗೋಪಾಯಗಳನ್ನು ಸೂಚಿಸುತ್ತಾರೆ. ಇದರ ಜೊತೆಗೆ ಆ ಪ್ರದೇಶದ ಮಳೆಯ ಪ್ರಮಾಣದ ಇತಿಹಾಸ,ಹಾಗೂ ಈ ಹಿಂದೆ ಇದ್ದ ಜಲಮೂಲ ತಾಣಗಳ ಬಗ್ಗೆ ಗಮನ ಸೆಳೆಯುತ್ತಾರೆ. “ ನೀರಿನ ಸಮಸ್ಯೆ ಇರುವ ಹಳ್ಳಿಗಳು ನಿಧಾನಕ್ಕೆ ತಮ್ಮ ಕೃಷಿ ಜೀವನದ ಅವಲೋಕನ ನಡೆಸಬೇಕು. ನೀರಿನ ಬಳಕೆಯ ತಿಳುವಳಿಕೆ ಪಡೆಯಬೇಕು. ನೀರು ಕಣ್ಮರೆಯಾದದ್ದು ಹೇಗೆ? ಎಂದು ಗಮನಿಸುತ್ತಾ ಹಿಂದಕ್ಕೆ ಹೋದರೆ, ಊರಲ್ಲಿ ನೀರು ಹಿಡಿಯುವ ಮುಂದಿನ ದಾರಿಗಳು ಕಾಣಿಸುತ್ತವೆ” ಎಂಬ ವಿವೇಕದ ಮಾತನ್ನಾಡುವ ಲೇಖಕರು. ಮಲೆನಾಡಿನ ಜಲಕ್ಷಾಮ ಕುರಿತಂತೆ ಬರೆಯುತ್ತಾ, “ ಗುಡ್ಡಗಾಡಿನ ತುಂಬಾ ಮರದಮ್ಮನ ನೆಲೆಯಾಗಿ ನೀರಿನಲ್ಲಿ ನಗುತ್ತಿದ್ದ ಮಲೆನಾಡಿನ ೂರುಗಳಿಗೆ ಬರದಮ್ಮನ ಆಗಮನವಾಗಿದೆ. ಕಳೆದ ವರ್ಷ ವಾಡಿಕೆಯ ಅರ್ಧದಷ್ಟು ಮಳೆ ಸುರಿಯದ ಕಾರಣ ಜಲ ಸಮಸ್ಯೆ ಬೆಳೆದಿದೆ. ಕಾಡುಗುಡ್ಡಗಳಲ್ಲಿ ನಿಸರ್ಗ ಬಚ್ಚಿಟ್ಟ ನೀರಿನ ಠೇವಣಿಯನ್ನು ಖಾಲಿ ಮಾಡುವ ತಂತ್ರವನ್ನು ಕಳೆದ ನಲವತ್ತು ವರ್ಷಗಳಿಂದ ಅನುಸರಿಸಿದ ಪರಿಣಾಮ ಜಲನಿಧಿಗಳು ಬರಿದಾಗಿವೆ” ಎಂಬ ಎಚ್ಚರಿಕೆಯ ಸಂದೇಶವನ್ನೂ ಸಹ ಈ ಕೃತಿಯಲ್ಲಿ ನೀಡಿದ್ದಾರೆ.

ಬರದ ಸಂದರ್ಭದಲ್ಲಿ ಸರ್ಕಾರ ಮತ್ತು ಜನಪ್ರತಿನಿದಿಗಳತ್ತ ಮುಖಮಾಡದೆ, ನಾವೇ ಸ್ವಯಂ ಪ್ರೇರಿತರಾಗಿ ಏನೆಲ್ಲಾ ಪರಿಹಾರೋಪಾಯ ಕಂಡುಕೊಳ್ಳಬಹುದು ಎಂಬುದಕ್ಕೆ ದಿಕ್ಷೂಜಿಯಂತಿರುವ  ಶಿವಾನಂದ ಕಳವೆಯವರ ಈ ಕೃತಿ ಕರ್ನಾಟಕದ ಪ್ರತಿ ಮನೆಯಲ್ಲಿರಬೇಕಾದ ಅಮೂಲ್ಯ ಕೃತಿಯಾಗಿದೆ.

ಮಂಗಳವಾರ, ಫೆಬ್ರವರಿ 28, 2017

ಕೋಮುವಾದದ ನೆಲೆಗಳು ಮತ್ತು ಗ್ರಹಿಕೆಯ ದೋಷಗಳು



ಹಲವಾರು ಭಾಷೆ ಮತ್ತು ಧರ್ಮಗಳ ಸಂಗಮದ ನೆಲವಾದ ಭಾರತವನ್ನು ನಾವು ಬಹುಸಂಸ್ಕತಿಯ ದೇಶವೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೆವೆ. ಆದರೆ,ಇಂತಹ ನಿಜವಾದ ಅರ್ಹತೆ ದೇಶಕ್ಕೆ ಇಂದಿನ ದಿನಮಾನಗಳಲ್ಲಿ ಇದೆಯಾ? ಎಂಬ ಪ್ರಶ್ನೆಯನ್ನು ನಮ್ಮ ನಮ್ಮ ಅಂತರಂಗಕ್ಕೆ ಹಾಕಿಕೊಂಡಾಗ ಮನಸ್ಸು ಮೌನ ಮತ್ತು ಮುಜುಗರದಿಂದ ಮುದುಡಿಹೋಗುತ್ತದೆ. ಭಾರತದನಿಜವಾದ ಚರಿತ್ರೆ ಯಾವುದು? ಎಂಬ ಪ್ರಶ್ನೆಯೂ ನಮ್ಮನ್ನು ತೀವ್ರವಾಗಿ ಕಾಡತೊಡಗುತ್ತದೆ.
ಇವೊತ್ತಿಗೂ ಭಾರತದ ನೈಜ ಇತಿಹಾಸವೆಂಬುದು ಪ್ರಾಮಾಣಿಕವಾಗಿ ದಾಖಲಾಗಿಲ್ಲ. ಕ್ರಿ.. ಒಂದನೆಯ ಶತಮಾನದಿಂದ ಹಿಡಿದು ಹದಿನಾರು ಅಥವಾ ಹದಿನೇಳನೆಯ ಶತಮಾನದವರೆಗೆ ಭಾರತದಲ್ಲಿ ಪ್ರವಾಸ ಮಾಡಿದ ಚೀನಾ ಯಾತ್ರಿಕರುಪೋರ್ಚುಗೀಸರು, ಡಚ್ಚರು  ಮುಂತಾದ ಪ್ರವಾಸಿಗರ ದಿನಚರಿಯ ಪುಟಗಳ ಆಧಾರದ ಮೇಲೆ ಭಾರತದ ಇತಿಹಾಸ ಮತ್ತು ವಸ್ತುಸ್ಥಿತಿಯನ್ನು ದಾಖಲಾಗಿದೆ. ಆನಂತರದ ದಿನಗಳಲ್ಲಿ ಬ್ರಿಟೀಷರ ಆಳ್ವಿಕೆಯಲ್ಲಿ ಬ್ರಿಟಿಷ್ ವಿದ್ವಾಂಸರು ಬರೆದ ಇತಿಹಾಸವೆಲ್ಲವೂ ಭಾರತದ ಅಧಿಕೃತ ಚರಿತ್ರೆಯಾಯಿತು.
ನೆಲದ ಸಂಸ್ಕತಿಗೆ ಸಂಬಂಧಪಡವರ ಹಾಗೂ ಪಾಶ್ಚಿಮಾತ್ಯ ಕಣ್ಣಿನಿಂದ ನೋಡಿದ ಹಾಗೂ ಹೃದಯದಿಂದ ಗ್ರಹಿಸಿದವರ ಚಿಂತನೆಗಳು ಮತ್ತು ಕೃತಿಗಳು ನಮ್ಮ ಪಾಲಿಗೆ ಇತಿಹಾಸ ಪಠ್ಯಗಳಾದವು. ಆದರೆ  ಅವುಗಳಲ್ಲಿ ಬಹುತೇಕ ಪಾಲು ಒಂದೇ ಮಗ್ಗುಲಿನ ಚರಿತ್ರೆಯಾಗಿ ರೂಪುಗೊಂಡಿರುವುದನ್ನು  ಅಲ್ಲಗೆಳೆಯಲಾಗದು. ಕಾರಣದಿಂದಾಗಿ ಭಾರತದ ಚರಿತ್ರೆಯ ಮೂಲ ನೆಲೆಗಳನ್ನು ತೆರೆದ ಹೃದಯದಿಂದ ಶೋಧಿಸಿ, ಹೊಸ ಇತಿಹಾಸವನ್ನು ಸೃಷ್ಟಿಸುವ ಅಗತ್ಯವಿದೆ.
ಭಾರತದ ಇತಿಹಾಸದ ಉದ್ದಕ್ಕೂ ಸಾಮ್ರಾಜ್ಯದ ವಿಸ್ತರಣೆಗಾಗಿ ಮತ್ತು  ಹೆಣ್ಣಿಗಾಗಿ ಹಾಗೂ ಧರ್ಮದ ಮೇಲುಗೈಗಾಗಿ ಅನೇಕ ರಕ್ತ ಪಾತಗಳು, ಕದನಗಳು  ಜರುಗಿಹೋಗಿವೆ. ಜೊತೆಗೆ  ಅವುಗಳಲ್ಲಿ ಕೆಲವು ಸಂಘರ್ಷಗಳಿಗೆ ಕೋಮುವಾದ ಲೇಪನ ವನ್ನು ಬಳಿಯಲಾಗಿದೆ. ಅದೇ ರೀತಿ ಭಾರತದ ಅಮೂಲ್ಯ ಸಂಪತ್ತಿನ ಲೂಟಿಗಾಗಿ ದಂಡೆತ್ತಿ ಬಂದ ವಿದೇಶಿ ದಾಳಿಕೋರರ ಕೃತ್ಯಗಳನ್ನು ( ಮಹಮ್ಮದ್ ಘಜನಿ, ಮಹಮ್ಮದ್ ಘೋರಿ, ತೈಮೂರ್ ಇತ್ಯಾದಿ) ಅವರು ದೇವಸ್ಥಾನಗಳ ಮೇಲೆ ದಾಳಿ ಮಾಡಿದ ಕಾರಣಕ್ಕಾಗಿ ಹಿಂದೂ ಧರ್ಮದ ಮೇಲಿನ ದಾಳಿ ಎಂದು ಇತಿಹಾಸದ ಪುಟಗಳಲ್ಲಿ ಬಣ್ಣಿಸಲಾಗಿದೆ. ಇಂತಹ ಅನೇಕ ಅರ್ಧಸತ್ಯದಿಂದ ಕೂಡಿದ ಘಟನೆಗಳು ನಮ್ಮ ಪಾಲಿಗೆ ಇತಿಹಾಸವಾಗಿ ಬೋಧಿಸಲ್ಪಡುತ್ತಿರುವುದು ನಮ್ಮ ಪಾಲಿನ ದುರಂತ.
ಭಾರತದಂತಹ ಬಹು ಸಂಸ್ಕತಿಯ ನೆಲದಲ್ಲಿ ಜನಾಂಗೀಯ ಘರ್ಷಣೆಗಳು, ಧರ್ಮ ಕುರಿತಂತೆ ಕೋಮು ಘರ್ಷಣೆಗಳು ಹೊಸ ಸಂಗತಿಗಳೇನಲ್ಲ. ಕ್ರಿಸ್ತಪೂರ್ವದ ಬುದ್ಧ ಮತ್ತು ಮಹಾವೀರರ ಅನುಯಾಯಿಗಳ ಬಡಿದಾಟ ಮತ್ತು ಸಾಮೂಹಿಕ ಕಗ್ಗೊಲೆಯಿಂದ  ಹಿಡಿದು ಇಪ್ಪತ್ತೊಂದನೆಯ ಶತಮಾನದ ಕೋಮುವಾದದ ಹಿಂಸೆಯ ಅಧ್ಯಾಯಗಳವರೆಗೂ ಮುಂದುವರಿದಿದೆ. ಭಾರತದ ಚರಿತ್ರೆಯಲ್ಲಿ ಬೌದ್ದರು -ಜೈನರು, ಹಿಂದೂಗಳ - ಸಿಖ್ಖರು, ಸಿಖ್ಖರು - ಮುಸ್ಲಿಮರು, ಹಿಂದೂಗಳು - ಕ್ರೈಸ್ತರುಹಿಂದೂಮುಸ್ಲಿಮರು ಹೀಗೆ ಎಲ್ಲರೂ ತಮ್ಮ ಧರ್ಮಗಳ ಹಿತಾಸಕ್ತಿಗಾಗಿ ಬದುಕಿನುದ್ದಕ್ಕೂ ಹೊಡೆದಾಡಿಕೊಂಡು ಬಂದಿದ್ದಾರೆ. ಅನ್ಯ ಧರ್ಮಗಳ ಬಗೆಗಿನ ಪ್ರೀತಿ, ಸಹಿಷ್ಣುತೆ ಮತ್ತು ಗೌರವ ಇವುಗಳಿಗಿಂತ ಹೆಚ್ಚಾಗಿ  ದ್ವೇಷವೇ ಧರ್ಮದ ಮೂಲವೆಂತಾಗಿರುವ ದಿನಮಾನಗಳಲ್ಲಿ ಧರ್ಮಗಳ ಕುರಿತಂತೆ ಮಾತನಾಡುವಾಗ ಅಥವಾ ಬರೆಯುವಾಗ ಜಾಗೃತ ಮನಸ್ಸಿನಿಂದ ನಾವು ಸದಾ ಎಚ್ಚರಗೊಂಡಿರಬೇಕು.
ಇಂದಿನ ದಿನಗಳಲ್ಲಿ ಕೋಮುವಾದ ಎಂದರೆ ಅದು ಹಿಂದೂ ಅಥವಾ ಮುಸ್ಲಿಂ ಧರ್ಮ ಕುರಿತಾಗಿ ಹೊಂದಿರುವ ಭಾವನೆಗಳು ಎಂದು ನಂಬಿಕೊಂಡು ಬರಲಾಗಿದೆ. ಇವೆರೆಡಕ್ಕೂ ಮೀರಿ ಅಂದರೆ ಜಾತ್ಯಾತೀತವಾಗಿ, ಧರ್ಮಾತೀತವಾಗಿ  ಬುದ್ಧನ ಮಧ್ಯಮ ಮಾರ್ಗದಲ್ಲಿ ನಡೆದು  ಧರ್ಮ ನಿರಪೇಕ್ಷ ಪ್ರಜ್ಞೆಯಿಂದ ಮತ್ತು ಮುಕ್ತ ಮನಸ್ಸಿನಿಂದ ಜಗತ್ತನ್ನು  ನೋಡುವ ವ್ಯಕ್ತಿಗಳನ್ನು ಮಾಕ್ರ್ಸ್ ಚಿಂತನೆಯ ವಾರಸುದಾರರು ಅಥವಾ ಎಡಪಂಥಿಯರು ಎಂಬ ಹಣೆಪಟ್ಟಿಯೊಂದಿಗೆ ಕರೆಯಲಾಗುತ್ತಿದೆ. ಜೊತೆಗ  ಇವರೆಲ್ಲರೂ ಇಸ್ಲಾಂ ಧರ್ಮದ ಸಹಾನುಭೂತಿಗಳು ಮತ್ತು ಹಿಂದೂ ಧರ್ಮದ ದಂಗೆಕೋರರು ಎಂದು ಬಣ್ಣಿಸಿಕೊಂಡು ಬರಲಾಗಿದೆ. ಇತಿಹಾಸವೆಂಬುದು ಕೇವಲ ಘಟಿಸಿಹೋದ ಘಟನೆಯೊಂದರ ಕುರಿತ ಮಾಹಿತಿ ಮಾತ್ರವಲ್ಲ, ಅದು ಮನುಷ್ಯ ಕುಲವು ತನ್ನ ಅವಿವೇಕತನದಿಂದ  ಎಸಗಿದ ಅಪರಾಧಗಳಿಗೆ ಸಾಕ್ಷಿ ಕೂಡ ಹೌದು. ಜೊತೆಗೆ ಅಂತಹ ತಪ್ಪುಗಳನ್ನು ಮಾನವಕುಲ ಮತ್ತೇ ಎಸಗದಂತೆ ದಾರಿ ತೋರಿಸುವ, ಎಚ್ಚರಿಸುವ ದಾರಿ ದೀಪ ಕೂಡ ಹೌದು. ಆದರೆ ಇಂದು ಇತಿಹಾಸ ಮಾಹಿತಿಗಳು ಭಾರತೀಯ ಸಮುದಾಯಗಳ ಪಾಲಿಗೆ ಜಾತಿ, ಧರ್ಮಗಳ ಬೇಧ ಭಾವವಿಲ್ಲದೆ  ತಮ್ಮ ಪೂರ್ವಿಕರು ಅನುಭವಿಸಿದ ನೋವಿಗೆ ಸೇಡು ತೀರಿಸಿಕೊಳ್ಳುವ ಆಯುಧಗಳಾಗಿ ಬಳಸಲ್ಪಡುತ್ತಿವೆ. ಇಂತಹ ಪೈಶಾಚಿಕ ಮನೋಭಾವವು ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಹೆಚ್ಚಾಗಿ ಸಾಮಾಜಿಕ ವ್ಯಾಧಿಯಾಗಿ, ನೋವಾಗಿ ಸುಸಂಸ್ಕತ ನಾಗರೀಕ ಸಮಾಜವನ್ನು ಕಾಡುತ್ತಾ ಬಾಧಿಸುತ್ತಿದೆ.
ಏಷ್ಯಾದ ಅಥವಾ ಅವಿಭಜಿತ ಭಾರತ ಉಪಖಂಡದ ಶತಮಾನದ ಅತಿಘೋರ ಮಾನವ ದುರಂತ ಎಂದು ಬಣ್ಣಿಸಲಾದ ಹಾಗೂ ಭಾರತದ ವಿಭಜನೆಯ ಸಂದರ್ಭದಲ್ಲಿ ಉಂಟಾದ ಹಿಂದೂಮುಸ್ಲಿಂ - ಸಿಖ್ಕರ ನಡುವಿನ ಕೋಮುಗಲಭೆಯಲ್ಲಿ ಸಾವಿರಾರು ಮಂದಿ ಕೊಲ್ಲಲ್ಪಟ್ಟರೆ, ಲಕ್ಷಾಂತರ ಕುಟುಂಬಗಳು ಬೀದಿಪಾಲಾದವು. ಇತಿಹಾಸದ ಇಂತಹ ಘೋರ ದುರಂತದಿಂದ ಭಾರತ, ಪಾಕ್ ನಾಗರೀಕರು ಎಂದಿಗೂ  ಪಾಠ ಕಲಿಯಲೇ ಇಲ್ಲ. 1947 ರಿಂದ ದೇಶದಲ್ಲಿ ನಿರಂತರ ನಡೆದ ಅಸಂಖ್ಯಾತ ಕೋಮುಘಲಭೆಗಳ ನಡೆದವು.  1984 ಅಕ್ಟೋಬರ್ 30 ರಂದು ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರ ಹತ್ಯೆಯ ನಂತರ  ರಾಜಧಾನಿ ದೆಹಲಿ ನಗರದ ಸೇರಿದಂತೆ ವಿವಿಧೆಡೆ ನಡೆದ ಸಿಖ್ಖರ ನರಮೇಧ ಹಾಗೂ 2002 ರಲ್ಲಿ ಗುಜರಾತಿನ ಗೋದ್ರಾದಲ್ಲಿ ನಡೆದ ಕೋಮುಗಲಭೆ ಇವೆಲ್ಲವೂ ಭಾರತದ ಇತಿಹಾಸಕ್ಕೆ ಅಂಟಿದ ಕಪ್ಪು ಚುಕ್ಕೆಗಳು ಎಂದು ದಾಖಲಿಸಬಹುದು. ಇಂತಹ ಅಮಾನವೀಯ ಘಟನೆಗಳಿಗೆ ಮತ್ತು ಧರ್ಮದ ಹೆಸರಿನಲ್ಲಿ ವಿಷಬೀಜ ಬಿತ್ತುತ್ತಿರುವ ಹಿಂದೂ - ಮುಸ್ಲಿಂ ಸಂಘಟನೆಗಳು ಇಂದಿಗೂ ತೆರೆ ಮರೆಯಲ್ಲಿ ಕ್ರಿಯಾಶೀಲವಾಗಿರುವುದು ಭಾರತದ ನಾಗರೀಕ ಜಗತ್ತು ತಲೆ ತಗ್ಗಿಸುವ ಸಂಗತಿಯಾಗಿದೆ.
ಮನುಷ್ಯ ಕುಡಿಯುವ ನೀರಿಗೆ, ಉಸಿರಾಡುವ ಗಾಳಿಗೆ ಅಥವಾ ಆತನ ಬಡತನ, ಅಪಮಾನ, ಹಸಿವು, ನೋವು ನಿಟ್ಟುಸಿರು ಮತ್ತು ಆತನ ದೇಹದಲ್ಲಿ ಹರಿಯುವ ಬಿಸಿನೆತ್ತರಿಗೆ ಜಾತಿ ಧರ್ಮದ ಹಣೆಪಟ್ಟಿಯಿಲ್ಲ ಎಂಬ  ವಿವೇಕ ಇದೀಗ ಎಲ್ಲರಲ್ಲೂ ಕಾಣೆಯಾಗಿದೆ. ಈ ಕಾರಣದಿಂದಾಗಿ ಯಾವುದೇ  ವ್ಯಕ್ತಿ , ಆತ ಮುಸ್ಲಿಂಆಗಿರಲಿ, ಹಿಂದೂ ಆಗಿರಲಿ ಅಂತಹವನು ಮಾತ್ರ ಧರ್ಮದ ಹೆಸರಿನಲ್ಲಿ  ಮೃಗದಂತೆ ವರ್ತಿಸಬಲ್ಲ. ಹಾಗಾಗಿ ವರ್ತಮಾನ ಜಗತ್ತಿನ ಧರ್ಮಗುರುಗಳು ನಮಗೆ ಆತ್ಮ ಸಾಕ್ಷಿ ಪ್ರಜ್ಞೆಯುಳ್ಳ ಮನುಷ್ಯರಂತೆ ಗೋಚರಿಸುವ ಬದಲಾಗಿ  ಧರ್ಮದೆಸರಿನಲ್ಲಿ ದ್ವೇಷ ಬಿತ್ತುವ ಪಿಶಾಚಿಗಳಂತೆ ಗೋಚರಿಸುತ್ತಾರೆ.
ಇತ್ತೀಚೆಗೆ ಲಂಡನ್ ಮೂಲದ ಬಿ.ಬಿ.ಸಿ. ಛಾನಲ್ ಮತ್ತು ಎಕನಾಮಿಸ್ಟ್ ಪತ್ರಿಕೆ ನಡೆಸಿರುವ ಅದ್ಯಯನಗಳು ಮುಸ್ಲಿಂ ಜಗತ್ತಿನ ಬಡತನವನ್ನು ಮತ್ತು ಮೌಡ್ಯವನ್ನು ಜಗತ್ತಿಗೆ ಪರಿಣಾಮಕಾರಿಯಾಗಿ ಅನಾವರಣಗೊಳಿಸಿವೆ. ತೀವ್ರ ಪೈಪೋಟಿಯಿಂದ  ಕೂಡಿರುವ ವರ್ತಮಾನದ ಸ್ಪರ್ಧಾತ್ಮಕ ಜಗತ್ತಿನಲ್ಲಿ  ಮಹುತೇಕ ಮುಸ್ಲಿಂರು ಶಿಕ್ಷಣದಿಂದ ವಂಚಿತರಾಗಿ  ಧರ್ಮದ ಪಂಜರದೊಳಗೆ ಬಂಧಿಯಾಗಿದ್ದಾರೆ. ಜಗತ್ತಿನಲ್ಲಿರುವ ಸುಮಾರು 162 ಕೋಟಿ ಮುಸ್ಲೀಮರಲ್ಲಿ ಶೇಕಡ 80 ರಷ್ಟು ಮಂದಿ ಬಡತನದ ರೇಖೆಯ ಕೆಳಗೆ ಬದುಕುತ್ತಿದ್ದಾರೆ. ಮುಸ್ಲಿಂ ಪ್ರಾಬಲ್ಯವಿರುವ 58 ರಾಷ್ಟ್ರಗಳಲ್ಲಿ ಅರಬ್ ರಾಷ್ಟ್ರಗಳನ್ನು ಹೊರತು ಪಡಿಸಿದರೆ, ಬಹುತೇಕ ರಾಷ್ಟ್ರಗಳು ಬಡತನದಲ್ಲಿ ಮುಳುಗಿಹೋಗಿವೆ. ಜಗತ್ತಿನ ಅತ್ಯಂತ ಬಡರಾಷ್ಟ್ರಗಳ ಪೈಕಿ ಪಾಕಿಸ್ಥಾನ, ಬಾಂಗ್ಲಾ, ಆಪ್ಘಾನಿಸ್ಥಾನ, ಸೋಮಾಲಿಯ, ನೈಜಿರಿಯಾ, ರುವಾಂಡ ಇವೆಲ್ಲವೂ ಮುಸ್ಲಿಂ ಧರ್ಮಗುರುಗಳು ಇಲ್ಲವೆ, ಬಂಡುಕೋರರು ಅಥವಾ ಮುಸ್ಲಿಂ ಭಯೋತ್ಪಾದಕ ಸಂಘಟನೆಗಳ ಮೂಲಕ ಪರೋಕ್ಷವಾಗಿ ಆಳಲ್ಪಡುತ್ತಿವೆ. ಒಟ್ಟು ಜಾಗತಿಕ ಸೇವೆ ಮತ್ತು ಸರಕುಗಳಲ್ಲಿ ಮುಸ್ಲಿಂ ರಾಷ್ಟ್ರಗಳ ಕೊಡುಗೆ ಕೇವಲ ಐದರಷ್ಟು ಮಾತ್ರ.
ಜಗತ್ತಿನ ವಾಸ್ತವ ಸ್ಥಿತಿ ಹೀಗಿರುವ ಸಂದರ್ಭದಲ್ಲಿ ಕೋಮುಗಲಭೆಯ ಬೇರುಗಳನ್ನು ಕುರಿತು ನಾವು ವಿವೇಚಿಸುವಾಗ ಇತಿಹಾಸದ ಘಟನೆಗಳ ಕುರಿತಂತೆ ನಮ್ಮಲ್ಲಿ ಪರಿಪೂರ್ಣವಾದ ಜ್ಞಾನ ಮತ್ತು ಅಂಕಿ ಅಂಶಗಳ ದಾಖಲೆಗಳಿರಬೇಕಾಗುತ್ತದೆ.
(ಕರಾವಳಿ ಮುಂಜಾವು ದಿನ ಪತ್ರಿಕೆಯ "ಜಗದಲ" ಅಂಕಣಕ್ಕೆ ಬರೆದ ಲೇಖನ)


ಶುಕ್ರವಾರ, ಜನವರಿ 27, 2017

ಗಾಂಧಿವಾದವೆಂದರೆ, ಗಂಟೆ-ಜಾಗಟೆ-ಶಂಖಗಳ ನೀನಾದವಲ್ಲ



ಇದನ್ನು ನೀವು ಮಹಾತ್ಮ ಗಾಂಧಿಯವರ  ಶಕ್ತಿ ಎಂದಾದರೂ ಭಾವಿಸಿ ಅಥವಾ ಅವರ ವ್ಯೆಕ್ತಿತ್ವದ ವೈರುಧ್ಯವೆಂದಾದರೂ ಕರೆಯಿರಿ ಚಿಂತೆಯಿಲ್ಲ.  ಗಾಂಧೀಜಿಯವರು ತಾವು ಬದುಕಿದ್ದಾಗ ತಮ್ಮ ಪ್ರಖರ ನಿಲುವು ಮತ್ತು ಚಿಂತನೆಗಳ ಮೂಲಕ  ಪಾಶ್ಚಿಮಾತ್ಯ ಜಗತ್ತನ್ನು ಇನ್ನಿಲ್ಲದಂತೆ ಕಾಡಿದ್ದರು.   ಅದೇ ರೀತಿ ಅವರು ತಮ್ಮ ನಿಧನಾನಂತರವು ಸಹ ಹುಟ್ಟಿ ಬೆಳೆದ ಭಾರತದ ನೆಲವನ್ನು   ಕಾಡುತ್ತಿದ್ದಾರೆ ಇದು ಅವರ ವ್ಯೆಕ್ತಿತ್ವದ ಗುಣ ಮತ್ತು ವಿಶೇಷ.
ಭಾರತದ ಜನ ಮಾನಸದಲ್ಲಿ ಗಾಂಧೀಜಿ ಎಂದರೆ ಚರಕ    ಎಂಬ ಮಾತು ಮನೆ ಮಾತಾಗಿದೆ ಅದೇ ರೀತಿ  ಸತ್ಯ ಹಾಗೂ  ಅಹಿಂಸೆಗೆ ಪರ್ಯಾಯ ಹೆಸರೇ ಗಾಂಧೀಜಿ ಎಂಬ ನಂಬಿಕೆ ಬಲವಾಗಿ ಬೇರೂರಿದೆ.  ಅವುಗಳೊಂದಿಗೆ ಗಾಂಧೀಜಿಯವರಿಗೆ ಇರುವ ನಂಟನ್ನು ಅಷ್ಟೊಂದು ಸುಲಭವಾಗಿ ಕಳಚಲಾಗದು. ಈ ಕಾರಣಕ್ಕಾಗಿ  ಸ್ವಾತಂತ್ರ್ಯಾನಂತರದ ದಿನಗಳಿಂದ ಖಾದಿ ಮತ್ತು ಖಾದಿ ಗ್ರಾಮೋದ್ಯೋಗ ಕೇಂದ್ರದ ಕ್ಯಾಲೆಂಡರ್ ಗಳು ಮತ್ತು ದಿನಚರಿ ಪುಸ್ತಕ ಇವುಗಳಲ್ಲಿ  ಚರಕದಿಂದ ನೂಲು ನೇಯುತ್ತಿದ್ದ ಗಾಂಧಿಯವರ ಭಾವ ಚಿತ್ರಗಳು  ಶಾಶ್ವತ ಸ್ಥಾನ ಪಡೆದಿವೆ. ಆದರೆ, .ಈ ವರ್ಷ ಮಾತ್ರ ಗಾಂಧೀಜಿಯ ಚಿತ್ರ ಪಲ್ಲಟಗೊಂಡಿದೆ. ಅವರ ಜಾಗದಲ್ಲಿ ಒಂಟಿ ಕೈಯಲ್ಲಿ  ಚರಕದಿಂದ ನೂಲು ನೇಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಭಾವ ಚಿತ್ರ ಕಾಣಿಸಿಕೊಂಡು ಹಲವು ವಿವಾದ ಹಾಗೂ ವಾಗ್ವಾದಕ್ಕೆ ಕಾರಣವಾಗಿದೆ. ಇಲ್ಲಿಯವರೆಗೆ ಯಾವೊಬ್ಬ ಪ್ರಧಾನಿಯೂ ಗಾಂಧೀಜಿಯವರ ಭಾವಚಿತ್ರವನ್ನು ಬದಲಿಸುವ ದುಸ್ಸಾಹಸಕ್ಕೆ ಕೈ ಹಾಕಿರಲಿಲ್ಲ. ಆದರೆ ಈ ಬಾರಿ ನರೇಂದ್ರ ಮೋದಿಯವರ  ಭಕ್ತರು ಈ ಸಾಹಸಕ್ಕೆ ಕೈ ಹಾಕಿದರು. ಇದು ಪ್ರಜ್ಞಾವಂತ ನಾಗರೀಕರ ಪಾಲಿಗೆ ಅನಿರೀಕ್ಷಿತ ಘಟನೆಯಾಗಿರಲಿಲ್ಲ ಏಕೆಂದರೆ,   ಗಾಂಧೀಜಿಯನ್ನು ಕೊಂದ ಪಾತಕಿಯನ್ನು ಹುತಾತ್ಮನ ಪಟ್ಟಕ್ಕೆ ಏರಿಸಿ ಗುಡಿ ಕಟ್ಟುತ್ತಿರುವ ಈ ವರ್ತಮಾನದ ಭಾರತದಲ್ಲಿ ಸಾಮಾಜಿಕ ಮೌಲ್ಯಗಳು ಯಾವ ಕ್ಷಣದಲ್ಲಾದರೂ ಪಲ್ಲಟಗೊಳ್ಳಬಲ್ಲವು ಎಂಬುದನ್ನು ಅವರೆಲ್ಲರೂ ಅರಿತಿದ್ದಾರೆ.
ಈ ಘಟನೆಗೆ ಪೂರಕವಾಗಿ ಹರಿಯಾಣದ ಬಿ.ಜೆ.ಪಿ. ಸರ್ಕಾರದ ಸಚಿವನೊಬ್ಬ ನೀಡಿದ ಹೇಳಿಕೆ ಇವೆರೆಲ್ಲರ ಮನಸ್ಥಿತಿಗೆ ಕನ್ನಡಿ ಹಿಡಿದಂತಿದೆ. “ಖಾದಿ ಉತ್ಪನ್ನಗಳಿಗೆ ಬೇಡಿಕೆ ಇಲ್ಲದಿರುವ ಪ್ರಯುಕ್ತ, ಗಾಂಧಿ ಚಿತ್ರವನ್ನು ಬದಲಾಯಿಸಿ, ಮೋದಿಯವರ ಚಿತ್ರವನ್ನು ಹಾಕಲಾಗಿದೆ” ಎಂಬ ಸಚಿವನ ಮಾತು, ಭಾರತದ ಸಂದರ್ಭದಲ್ಲಿ ಖಾದಿ ಮತ್ತು ಚರಕ ಕುರಿತಂತೆ ಎಳ್ಳಷ್ಟು ಮಾಹಿತಿ ಇರದ ಅಜ್ಞಾನಿಗಳು ಮಾತ್ರ ಆಡಬಹುದಾದ ಮಾತುಗಳು ಎಂಬುದಕ್ಕೆ ಸಾಕ್ಷಿಯಾಗಿವೆ. ಈ ದೇಶದ . ಖಾಸಾಗಿ ದೈತ್ಯ ಕಂಪನಿಯೊಂದರ ಮೊಬೈಲ್ ಜಾಹಿರಾತಿಗೆ ( ಮುಖೇಶ್ ಅಂಬಾನಿಯವರ ಜಿಯೋ ಮೊಬೈಲ್) ಈ ದೇಶದ ಪ್ರಧಾನಿಯ ಚಿತ್ರ ಬಳಕೆಯಾಗುತ್ತದೆ ಎಂದರೆ,  ಸರಳತೆ ಮತ್ತು ಸ್ವಾಭಿಮಾನದ ಪ್ರತೀಕವಾದ ಖಾದಿಗೂ ಮತ್ತು ಐಷಾರಾಮಿ ಹಾಗೂ ಉಪಭೋಗ ಸಂಸ್ಕೃತಿಯ ಪ್ರತೀಕವಾದ  ಮೊಬೈಲ್ ಗೂ ಇದೀಗ  ವೆತ್ಯಾಸವಿಲ್ಲದಂತಾಗಿದೆ ಅಂದರೆ, . ದೇಶಿಯತೆ ಮತ್ತು ಆಧುನಿಕತೆಯ ಗಡಿ ರೇಖೆಗಳು ಅಳಿಸಿಹೋಗಿವೆ ಎಂದರ್ಥ. ಆಶ್ಚರ್ಯದ ಸಂಗತಿಯೆಂದರೆ, ಈ ವಿವಾದ ಕುರಿತು ಪ್ರಧಾನಿ ಮೋದಿಯವರು ಈವರೆಗೆ ತುಟಿ ಬಿಚ್ಚಿಲ್ಲ. ದೇಶ ಭಕ್ತರು  ಗಾಂಧಿವಾದ ವೆಂಬುದು ಗುಡಿಯೊಳಗಿನ  ಗಂಟೆ, ಜಾಗಟೆಗಳ  ಶಬ್ಧವೆಂದುಕೊಂಡಿದ್ದಾರೆ.  ಅದು ಈ ನೆಲದ ದುರಂತವೆಂದರೆ ತಪ್ಪಾಗಲಾರದು.
 ಗಾಂಧಿ ಅಥವಾ ಗಾಂಧಿವಾದವೆಂಬುದು  ಕೇವಲ ವಿಚಾರ ಧಾರೆ ಮಾತ್ರವಲ್ಲ, ಅದು ಶಬ್ದದೊಳಗಿನ ನಿಶಬ್ದ.  ಗಾಂಧಿವಾದವೆಂಬುದು ಮಾತಿನ ಸಂಗತಿಯಲ್ಲ, ಒಂದು ಜೀವನ ಕ್ರಮ ಅಥವಾ ಬದುಕಿನ ತಾತ್ವಿಕ ಸಿದ್ದಾಂತ. ಇಂತಹ  ತಿಳುವಳಿಕೆಯಿಲ್ಲದ ಮಂದಿಯಿಂದ ಇದೀಗ ಗಾಂಧೀಜಿಯವರ  ವ್ಯೆಕ್ತಿತ್ವದ ಮತ್ತು ಅವರ ವಿಚಾರಧಾರೆ ಮೌಲ್ಯ ಮಾಪನ ನಡೆಯುತ್ತಿರುವುದು ಈ ನೆಲದ ದುರಂತ. ತಮ್ಮ ಜೀವಿತದಲ್ಲಿ  ಎಂದೂ ಗಾಂಧಿಯನ್ನು ನೋಡದ, ಕೇಳದ, ಗಾಂಧಿಯನ್ನು ಓದದ ಕೋಟ್ಯಾಂತರ ಭಾರತದ ಜನತೆ ಅದರಲ್ಲೂ ಅನಕ್ಷರತೆ ಮತ್ತು ಬಡತನ ತಾಂಡವಾಡುತ್ತಿದ್ದ ಸ್ವಾತಂತ್ರ್ಯ ಪೂರ್ವ ಭಾರತದ ಜನತೆ ಗಾಂಧೀಜಿಯವರು  ನೀಡುತ್ತಿದ್ದ ಹೋರಾಟದ ಕರೆಗೆ ಪ್ರವಾಹೋಪಾದಿಯಲ್ಲಿ ಬೀದಿಗಳಿಯುತ್ತಿದ್ದರು. ಹಲವು ಭಾಷೆ, ಸಂಸ್ಕೃತಿಗಳ ನಾಡಾದ ಈ ದೇಶದಲ್ಲಿ ಜನಸಾಮಾನ್ಯರ ಮನಸ್ಸು ಗೆಲ್ಲುವುದು ಅಷ್ಟು ಸುಲಭದ ಸಂಗತಿಯಲ್ಲ. ಒಂದು ಸಮುದಾಯದ ನೋವನ್ನು ತನ್ನ ವ್ಯಯಕ್ತಿಕ ನೋವೆಂದು ಭಾವಿಸಿಕೊಳ್ಳುವ ಮತ್ತು ಒಬ್ಬ ವ್ಯೆಕ್ತಿಗಾದ ಅಪಮಾನವನ್ನು ತನ್ನ ವ್ಯಯಕ್ತಿಕ ಅಪಮಾನವೆಂದು ಭಾವಿಸಿಕೊಳ್ಳುವ ಮಾತೃಹೃದಯ ಗಾಂಧೀಜಿಯವರಿಗಿತ್ತು. ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದೊಡನೆ ದಿಡಿರ್ ನಾಯಕರಾಗಿ ಉದ್ಭವಿಸಲಿಲ್ಲ. ಭಾರತದುದ್ದಕ್ಕೂ ಓಡಾಡಿ ಇಲ್ಲಿನ ಜನರ ಸುಖ ದುಃಖಗಳನ್ನು ಅರಿತರು. ಅನೇಕ ಪ್ರಾಮಾಣಿಕ ದೇಶಭಕ್ತ ಯುವಕರನ್ನು ಗುರುತಿಸಿ, ಅವರ ಎದೆಯೊಳಗೆ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿ, ಅದನ್ನು ಆರದಂತೆ ನೋಡಿಕೊಂಡರು. ಹಿರಿಯರು, ಕಿರಿಯರು ಎಂಬ ಬೇಧ ಭಾವವಿಲ್ಲದೆ ಎಲ್ಲರ ಅಭಿಪ್ರಾಯಗಳಿಗೆ ಕಿವಿಗೊಟ್ಟು ಆಲಿಸುವ ಗುಣ ಅವರಲ್ಲಿತ್ತು. ತನ್ನೊಂದಿಗೆ ಶಾಶ್ವತವಾಗಿ ಸೈದ್ಧಾಂತಿಕವಾಗಿ  ಭಿನ್ನಾಭಿಯ ಹೊಂದಿದ್ದ  ಅಂಬೇಡ್ಕರ್, ಲೋಹಿಯಾ ಮತ್ತು ನಿರ್ಮಲ್ ಕುಮಾರ್ ಬೋಸ್ ಮುಂತಾದ ಕಿರಿಯ ಮಿತ್ರರ ಜೊತೆ ನಿಕಟ ಸಂಬಂಧವನ್ನು ಉಳಿಸಿಕೊಂಡು ಬಂದಿದ್ದರು.
ಒಂದು ಕಾಲದಲ್ಲಿ ಮಹಾತ್ಮ ಗಾಂಧಿಯವರ ನಿಕಟ ಅನುಯಾಯಿಯಾಗಿದ್ದ ರಾಮಮನೋಹರ ಲೋಹಿಯಾರವರು ಸ್ವಾತಂತ್ರ್ಯ ಹತ್ತಿರವಾಗುತ್ತಿದ್ದಂತೆ, ಗಾಂಧಿಜಿಯವರು ನೆಹರೂ ಮತ್ತು ಪಟೇಲ್ ಮುಂತಾದವರ ಮಾತುಗಳಿಗೆ  ನೀಡುತ್ತಿದ್ದ ಆದ್ಯತೆ ಮತ್ತು ನೆಹರೂ ಅವರ ಧೋರಣೆಗಳನ್ನು ಖಂಡಿಸಿ ಗಾಂಧಿಯವರಿಂದ ಮಾನಸಿಕವಾಗಿ ದೂರವಾಗಿದ್ದರು. ಆದರೆ 1948 ರ ಜನವರಿ 30 ರಂದು ಗಾಂಧೀಜಿ ಹಂತಕನ ಗುಂಡಿಗೆ ಬಲಿಯಾದ ಸಂದರ್ಭದಲ್ಲಿ ತೀರಾ ಅಘಾತಕ್ಕೆ ಒಳಗಾದ ಲೋಹಿಯಾ ರವರು ನೆಹರೂ ಜೊತೆಗಿನ ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ತಮ್ಮ ನಾಯಕನ ಅಂತಿಮ ಸಂಸ್ಕಾರದಿಂದ ಹಿಡಿದು, ಚಿತಾಭಸ್ಮ ವಿಸರ್ಜನೆ ಮಾಡುವವರೆಗೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗಾಂಧೀಜಿಯವರು  ನಿಧನರಾದ ನಾಲ್ಕು ದಿನಗಳ ನಂತರ ಅವರ ಚಿತಾಭಸ್ಮವನ್ನು ಅಲಹಾಬಾದಿನ ಗಂಗಾ,ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸಲು ದೆಹಲಿಯಿಂದ ವಿಶೇಷ ರೈಲನ್ನು ಏರ್ಪಾಡು ಮಾಡಲಾಗಿತ್ತು. ಚಿತಾಭಸ್ಮದ ಜೊತೆ ಗಾಂಧಿಯವರ ಪುತ್ರ ದೇವದಾಸ್, ನೆಹರೂ ಹಾಗೂ ಪಟೇಲ್ ಸಹ ಇದ್ದರು. ಇವರೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಲೋಹಿಯಾರವರು ಗಾಂಧೀಜಿಯ ನಿಧನದಿಂದ ಮಾತು ಕಳೆದುಕೊಂಡು ಮೌನವಾಗಿ ರೈಲಿನ ಕಿಟಕಿಯ ಬಳಿ ಕುಳಿತು ಹೊರಗಿನ ದೃಶ್ಯಗಳನ್ನು ವೀಕ್ಷಿಸುತ್ತಿದ್ದರು.
ಗಾಂಧೀಜಿಯ ಚಿತಾ ಬಸ್ಮವನ್ನು ಹೊತ್ತು ಅಲಹಾಬಾದ್ ನತ್ತ  ಸಾಗುತ್ತಿದ್ದ ರೈಲಿನ ಹಳಿಗಳ ಪಕ್ಕದ ಹೊಲದಲ್ಲಿ ನಿಂತಿದ್ದ ರೈತನೊಬ್ಬ ತನ್ನ ಹೊಲದಲ್ಲಿ ಬೆಳದಿದ್ದ ಸೂರ್ಯಕಾಂತಿಯ ಹೂಗಳನ್ನು ಕಿತ್ತು  ಚಲಿಸುತ್ತಿದ್ದ ರೈಲಿನತ್ತ ತೂರಿ ಕೈ ಮುಗಿಯುತ್ತಾ ನಿಂತಿದ್ದ ದೃಶ್ಯವನ್ನು ನೋಡಿ ಅವಕ್ಕಾದ ಲೋಹಿಯಾರವರ ಕಣ್ಣುಗಳಲ್ಲಿ ಕಣ್ಣೀರ ಧಾರೆ ಕೆನ್ನೆಗಳ ಮೇಲೆ ಹರಿದು ಅವರ ಎದೆಯನ್ನು ತೋಯಿಸಿದವು. ಅನಾಮಿಕ ರೈತನೊಬ್ಬ ಗಾಂಧಿಗೆ ಸಲ್ಲಿಸಿದ ಅಂತಿಮ ಪ್ರಣಾಮವು ಗಾಂಧೀಜಿಯವರ ಜೊತೆಗಿದ್ದ ಲೋಹಿಯಾ ಅವರ ಭಿನ್ನಾಭಿಪ್ರಾಯಗಳನ್ನು ಕರಗಿಸಿಬಿಟ್ಟಿದ್ದವು. ಈ ನಾಡಿನ ಅನಕ್ಷರಸ್ತರಿಗೆ , ಬಡವರಿಗೆ ಮತ್ತು ಜನಸಾಮಾನ್ಯರಿಗೆ ಗಾಂಧೀಜಿಯವರು ತಲುಪಿದ್ದ ಬಗೆಯನ್ನು ಅವರು ವಿಶ್ಲೇಷಿಸುತ್ತಾ ತಮ್ಮ ಆತ್ಮಕಥೆಯಲ್ಲಿ ಪರಿಣಾಮಕಾರಿಯಾಗಿ ಬಣ್ಣಿಸಿದ್ದಾರೆ.
ಅದೇ ರೀತಿ 1942 ರ ಅವದಿಯಲ್ಲಿ ಗಾಂಧೀಜಿಯವರ ಸಂಪರ್ಕಕ್ಕೆ ಬಂದ ಪಶ್ಚಿಮ ಬಂಗಾಳದ ಪ್ರೊ.ನಿರ್ಮಲ್ ಕುಮಾರ್ ಬೋಸ್ ರವರು ಗಾಂಧೀಜಿಯವರು ತಮ್ಮ ಮೊಮ್ಮಕ್ಕಳ ಸಮಾನರಾದ ಮನುಬೆಹನ್ ಅವರ ಜೊತೆ ನಡೆಸಿದ ಬ್ರಹ್ಮ ಚರ್ಯೆಯ ಪ್ರಯೋಗ ಕುರಿತು ನಾಯಕನೊಂದಿಗೆ ಬಿನ್ನಾಭಿಪ್ರಾಯ ತಳೆದರು. ಅಷ್ಟೇ ಅಲ್ಲದೆ ತಮ್ಮ ತೀಕ್ಷ್ಣ ಹಾಗೂ ಹರಿತವಾದ ಮಾತುಗಳು ಮತ್ತು ವೈಜ್ಞಾನಿಕ ವಿಶ್ಲೇಷಣೆಗಳ ಮೂಲಕ ಗಾಂಧಿ ಜೊತೆ ಪತ್ರ ವ್ಯವಹಾರ ನಡೆಸಿ, ಅವರನ್ನು ಆತ್ಮಸಾಕ್ಷಿಯ ನೇಣುಗಂಬಕ್ಕೇರಿಸಿದರು. ಗಾಂಧೀಜಿಯವರು ಮನಸ್ಸು ಮಾಡಿದ್ದರೆ, ತಮ್ಮ ಶಿಷ್ಯ ನಿರ್ಮಲ್ ಕುಮಾರ್ ಬೋಸ್ ರವರ ಪತ್ರಗಳನ್ನು ನಿರ್ಲಕ್ಷಿಸಬಹುದಿತ್ತು. ಆದರೆ. ಬೋಸ್ ಎತ್ತಿದ ಎಲ್ಲಾ ಪ್ರಶ್ನೆಗಳಿಗೆ ಒಬ್ಬ ವಿಧೇಯ ವಿದ್ಯಾರ್ಥಿಯಂತೆ ಉತ್ತರ ನೀಡಿದರು. ಇದರಿಂದ ತೃಪ್ತರಾಗದ ನಿರ್ಮಲ್ ಕುಮಾರ್ ಬೋಸ್ ಗಾಂಧೀಜಿಯವರಿಂದ ದೂರವಾದರು. 1948 ರಲ್ಲಿ ಗಾಂಧೀಜಿ ಹತ್ಯೆಯಾದ ನಂತರ ತಮ್ಮ ಮತ್ತು ಗಾಂಧೀಜಿ ಜೊತೆಗಿನ ಸಂಬಂಧವನ್ನು ಮರು ವಿಮರ್ಶೆಗೆ ಒಳಪಡಿಸಿಕೊಂಡ ಬೋಸ್ 1953 ರಲ್ಲಿ “ ಮೈ ಡೇಸ್ ವಿತ್ ಗಾಂಧಿ” ಎಂಬ ಕೃತಿಯನ್ನು ಹೊರ ತಂದರು. ಈ ಕೃತಿಯಲ್ಲಿ ಗುರು-ಶಿಷ್ಯರ ನಡುವೆ ನಡೆದ ಪತ್ರ ಸಂವಾದವೆಲ್ಲವೂ ವಿವರವಾಗಿ ದಾಖಲಾಗಿವೆ. ಈ ಮೊದಲು ಈ ಕೃತಿಯನ್ನು ಪ್ರಕಟಿಸಲು ಒಪ್ಪಿಗೆ ನೀಡಿದ್ದ ನವಜೀವನ ಟ್ರಸ್ಟ್ ಸಂಸ್ಥೆ ಕೆಲವು ಆಯ್ದ ಪತ್ರಗಳ ಭಾಗಗಳನ್ನು ತೆಗೆದು ಹಾಕುವಂತೆ ಬೊಸ್ ರವರಿಗೆ ಸೂಚಿಸಿತ್ತು. ಆದರೆ ಇದನ್ನು ನಿರಾಕರಿಸಿದ ನಿರ್ಮಲ್ ಕುಮಾರ್ ಬೋಸ್ ತಾವೇ ಸ್ವತಃ ಕೃತಿಯನ್ನು ಪ್ರಕಟಿಸಿದರು. ಈವರೆಗೆ ಗಾಂಧೀಜಿ ಕುರಿತಂತೆ ಬಂದಿರುವ ಶ್ರೇಷ್ಠ ಕೃತಿಗಳಲ್ಲಿ ಇದೂ ಕೂಡ ಒಂದಾಗಿದೆ.
ಲೋಹಿಯಾ ಮತ್ತು ಬೋಸ್ ರವರ ಈ ಎರಡು ಘಟನೆಗಳು ಮಹಾತ್ಮ ಗಾಂಧಿಯವರನ್ನು ಇನ್ನೊಂದು ದಿಕ್ಕಿನಲ್ಲಿ  ಅರ್ಥಮಾಡಿಕೊಳ್ಳಲು ನಮಗೆ ಮಾದರಿಯಾಗಿವೆ ಎಂದರೆ ತಪ್ಪಾಗಲಾರದು. ಗಾಂಧಿಜಿಯವರ ವ್ಯೆಕ್ತಿತ್ವವೇ ಅಂತಹದ್ದು. ಅದು ದಾರ್ಶನಿಕನ ಸ್ಥಾನಕ್ಕೇರಿದ ದೈವ ಸ್ವರೂಪದ್ದು. ಅವರೊಂದಿಗೆ ಯಾರಾದರು ಹೋಲಿಸಿಕೊಳ್ಳುವುದು ಇಲ್ಲವೆ ಅವರ ಚಿತ್ರ ಕದಲಿಸುವುದರ ಮೂಲಕ ಮರೆ ಮಾಚುತ್ತೇನೆ ಎನ್ನುವುದು ಕೇವಲ ನಗೆಪಾಟಿಲಿನ ಸಂಗತಿ ಮಾತ್ರ ಆಗಬಲ್ಲದು.
( ಕರಾವಳಿ ಮುಂಜಾವು ದಿನಪತ್ರಿಕೆಯ " ಜಗದಗಲ" ಅಂಕಣಕ್ಕಾ ಬರೆದ ಲೇಖನ)


ಸೋಮವಾರ, ಜನವರಿ 23, 2017

ಭಾರತ ಮತ್ತು ಬಯಲು ಶೌಚಾಲಯ


ಹದಿನೇಳು ವರ್ಷಗಳ ಹಿಂದೆ ಅಂದರೆ, ಇದೇ  ಎರಡು ಸಾವಿರದ ಇಸವಿಯಲ್ಲಿ F DzsÀĤPÀ ಜಗತ್ತು ಇಪ್ಪತ್ತೊಂದನೆಯ ಶತಮಾನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ವಿಶ್ವ ಸಂಸ್ಥೆಶತಮಾನದ ಅಭಿವೃದ್ಧಿಯ ಗುರಿಗಳು( Millenium Devlopments Goals) ಎಂಬ ಹದಿನೈದು ವರ್ಷಗಳ ಯೋಜನೆಯನ್ನು ರೂಪಿಸಿತು. ಯೋಜನೆಯಲ್ಲಿ ಜಾಗತಿಕವಾಗಿ ಸಾಧಿಸಬೇಕಾದ  ಎಂಟು ವಿಷಯಗಳನ್ನು ಗುರಿಗಳನ್ನಾಗಿ ನಿರ್ಧರಿಸಲಾಗಿತ್ತು. ಅವುಗಳಲ್ಲಿ ಪ್ರಮಖವಾದವುಗಳೆಂದರೆ, ಬಡತನ ನಿವಾರಣೆ, ಲಿಂಗತಾರತಮ್ಯ ನಿವಾರಣೆ, ಮಹಿಳೆಯರಿಗೆ ಪುರುಷರಿಗೆ ಸಮಾನವಾಗಿ ಇರುವ ಹಕ್ಕುಗಳನ್ನು ಅಸ್ತಿತ್ವಕ್ಕೆ ತರುವುದು, ಮಕ್ಕಳ ಅಪೌಷ್ಟಿಕತೆಯನ್ನು ನಿವಾರಿಸುವುದು, ಹೆರಿಗೆ ಸಂದರ್ಭದಲ್ಲಿನ ಮಹಿಳೆಯರ ಸಾವು ತಡೆಗಟ್ಟುವುದು, ಜಗತ್ತಿನ ಎಲ್ಲಾ ಪ್ರಜೆಗಳಿಗೆ ಶುದ್ಧವಾದ ಕುಡಿಯುವ ನೀರು ಮತ್ತು ಶೌಚಾಲಯ ನಿರ್ಮಾಣ ಹಾಗೂ ವಸತಿ ನಿರ್ಮಾಣಏಡ್ಸ್, ಹೆಚ್, , ವಿ ಒಳಗೊಂಡಂತೆ ಮಲೇರಿಯಾ, ವಾಂತಿ ಬೇಧಿ ಮುಂತಾದ ಕಾಯಿಲೆಗಳನ್ನು ತಡೆಗಟ್ಟುವುದು. ಹೀಗೆ ಜಗತ್ತಿನ ಐವತ್ತಕ್ಕೂ ಹೆಚ್ಚು ರಾಷ್ಟ್ರಗಳ ವಿವಿಧ ರಂಗಗಳ ತಜ್ಙರ ನೇತೃತ್ವದಲ್ಲಿ ಯೋಜನೆಯನ್ನು ಜಾರಿಗೆ ತರಲಾಯಿತು. ಯೋಜನೆ ಜಾರಿಗೆ ಬಂದ ಏಳೂವರೆ ವರ್ಷಗಳ ನಂತರ ಕ್ರಮಿಸಿದ ಅರ್ಧ ದಾರಿಯಲ್ಲಿ ನಿಂತು, ಗುರಿಗಳ ಸಾಧನೆ ಕುರಿತು ನಡೆಸಿದ ಅಧ್ಯಯನ  ವರದಿ 2008ರಲ್ಲಿ ಪ್ರಕಟವಾಯಿತು. ವರದಿಯಲ್ಲಿ ತಜ್ಙರು ನಿರಾಸೆ ಮತ್ತು ಸಾಧಿಸಲಾಗದ ಅಸಹಾಯಕತೆಯನ್ನು ವ್ಯಕ್ತ ಪಡಿಸಿದ್ದರು. ಕೆಲವು ರಂಗಗಳಲ್ಲಿ ಯೋಜನೆ ವಿಫಲವಾಗಿತ್ತು. ( ನೋಡಿ- Millenium Devlopment goals Report-2008)   ವಿಶೇಷವಾಗಿ ಏಷ್ಯಾ ರಾಷ್ಟ್ರಗಳಾದ ಭಾರತ, ಪಾಕಿಸ್ಥಾನ, ನೇಪಾಳ, ಬಂಗ್ಲಾ ಮುಂತಾದ ರಾಷ್ಟ್ರಗಳಲ್ಲಿ ಬಡತನ ನಿವಾರಣೆ ಮತ್ತು ಕುಡಿಯುವ ನೀರು, ಶೌಚಾಲಯ ಸಮಸ್ಯೆಗಳಲ್ಲಿ ಗಮನಾರ್ಹ ಬದಲಾವಣೆಯಾಗಿರಲಿಲ್ಲ. 2012 ವರದಿಯ ಪ್ರಕಾರ  ನೇಪಾಳ ಮತ್ತು ಶ್ರೀಲಂಕಾ ಒಂದಿಷ್ಟು ಪ್ರಗತಿ ಸಾಧಿಸಿವೆ. ಇಂತಹ ವೈಪಲ್ಯಗಳನ್ನು ಗುರಿಯಾಗಿಟ್ಟು ಕೊಂಡು ಭಾರತ ಸರ್ಕಾರ ಶೌಚಾಲಯ ನಿರ್ಮಾಣ ಮತ್ತು ಶುದ್ಧ ಕುಡಿಯುವ ನೀರಿನ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲುನಿರ್ಮಲ್ ಭಾರತ್ ಅಭಿಯಾನ್ಎಂಬ ಆಂಧೋಲನವನ್ನು ಆರಂಭಿಸಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಬಡವರಿಗಾಗಿ ಇಪ್ಪತ್ತು ಲಕ್ಷ ಮನೆಗಳನ್ನು 35 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಿಕೊಡುವುದಾಗಿ  »A¢£À ಯು.ಪಿ.. ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದ ಗಿರಿಜಾ ವ್ಯಾಸ್ ಘೋಷಿಸಿದ್ದರು.
ಭಾರತದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ನೇತಾರರು ಬಣ್ಣ ಬಣ್ಣದ ಮಾತು ಮತ್ತು ಅಕರ್ಷಕ ಯೋಜನೆಗಳನ್ನು ಘೋಷಿಸಬಲ್ಲರೆ ಹೊರತು ಜಾರಿಯಾದ ಯೋಜನೆಗಳನ್ನು ಸುಸ್ಥಿಯಲ್ಲಿ ಕಾಪಾಡಿಕೊಳ್ಳಲು ಅಸಮರ್ಥರು. ದೇಶದ ಎಲ್ಲಾ ಸಮಸ್ಯೆಗಳಿಗೆ ಖಾಸಾಗಿಕರಣವೇ ಮದ್ದು ಎಂದು ನಂಬಿರುವ ಮಹಾನುಭಾವರು ಆದ್ಯತೆಯ ಕ್ಷೇತ್ರಗಳಾದ ಶಿಕ್ಷಣ, ಆರೋಗ್ಯ, ವಸತಿ, ರಸ್ತೆ ಮತ್ತು ಒಳಚರಂಡಿ ನಿರ್ಮಾಣ ಮುಂತಾವುಗಳನ್ನು ಖಾಸಾಗಿ ಕ್ಷೇತ್ರಕ್ಕೆ ಒಪ್ಪಿಸಿ ಕಣ್ಮುಚ್ಚಿ ಕುಳಿತ್ತಿದ್ದಾರೆ. ಇಂತಹವರ ಅಸಮರ್ಥತೆಯಿಂದಾಗಿ ಭಾರತದಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ, ವಸತಿ, ಆರೋಗ್ಯ, ಶಿಕ್ಷಣ ಬಡವರ ಪಾಲಿಗೆ ಗಗನ ಕುಸುಮಗಳಾಗಿ ದೇಶದ ಜ್ವಲಂತ ಸಮಸ್ಯೆಗಳಾಗಿ ಉಳಿದಿವೆ, ಮುಂದಕ್ಕೂ ಉಳಿಯುತ್ತವೆ.
ಭಾರತದ ಶೌಚಾಲಯ ಸಮಸ್ಯೆಗಳನ್ನು ಕುರಿತು. 2009ರಲ್ಲಿ ಏಷ್ಯಾ ಡೆವಲಪ್ ಮೆಂಟ್ ಬ್ಯಾಂಕ್ ಪ್ರಕಟಿಸಿರುವ ಅಧ್ಯಯನ ವರದಿIndia sanitation for All” ಹಾಗೂ ವಿಶ್ವ ಬ್ಯಾಂಕ್ 2011ರಲ್ಲಿ ಪ್ರಕಟಿಸಿರುವWater and sanitation program-2011 ಎಂಬ ಅಧ್ಯಯನಗಳು ಇಲ್ಲಿನ ಸ್ಥಿತಿಗತಿಗಳಿಗೆ ಕನ್ನಡಿ ಹಿಡಿದಂತಿವೆ. ಜಗತ್ತಿನ ಇಪ್ಪತ್ತು ರಾಷ್ಟ್ರಗಳಲ್ಲಿ ಅಲ್ಲಿನ ಜನಸಂಖ್ಯೆಯ ಶೇಕಡ 35 ರಷ್ಟು ಜನ ಶೌಚಾಲಯದಿಂದ ವಂಚಿತರಾಗಿದ್ದರೆ, ಭಾರತದಲ್ಲಿ ಜನಸಂಖ್ಯೆಯ ಶೇಕಡ 53ರಷ್ಟು ಜನ ಶೌಚಾಲಯಗಳಲ್ಲದೆ ಬಯಲು ವಿಸರ್ಜನೆಯ ಮೊರೆ ಹೋಗುತ್ತಿದ್ದಾರೆ. ಇವರಲ್ಲಿ ಶೇಕಡ 74 ರಷ್ಟು ಜನಸಂಖ್ಯೆ ಭಾರತದ ಗ್ರಾಮಾಂತರ ಪ್ರದೇಶದ ನಿವಾಸಿಗಳಾಗಿದ್ದಾರೆ. ಭಾರತದ ಇಂತಹ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಐದು ವರ್ಷಗಳ ಕೆಳಗಿನ ಮಕ್ಕಳು ರೋಗರುಜಿನ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಕುತೂಹಲಕಾರಿಯಾದ ಅಧ್ಯಯನ ವರದಿಯೊಂದು ಪ್ರಕಟವಾಗಿದೆ. ಇಂಗ್ಲೆಂಡಿನ ಸಸ್ಸೆಕ್ಸ್ ವಿ.ವಿ. Institute of Devlopment studies ವಿಭಾಗದ ರಾಬರ್ಟ್ ಛೆಂಬರ್ಸ್ ಎಂಬುವರು ಕುರಿತು ಅಧ್ಯಯನ ನಡೆಸಿದ್ದಾರೆ. ಯೂನಿಸೆಫ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನಗಳು ಕೂಡ ಇದನ್ನು ದೃಢಪಡಿಸಿವೆ. ಬಯಲಿನಲ್ಲಿ ಮಲ ವಿಸರ್ಜನೆ ಮಾಡುವುದರಿಂದ , ನೈರ್ಮಲ್ಯದ ಕೊರತೆ ಹಾಗೂ ಜಲ ಮೂಲಗಳ ಶುಚಿತ್ವ ನಾಶಗೊಳ್ಳುತ್ತಿದ್ದು ಇವುಗಳ ನೇರ ಪರಿಣಾಮಕ್ಕೆ ಮಕ್ಕಳು  ಬಲಿಯಾಗುತ್ತಿದ್ದಾರೆ ಎಂದು ಅಧ್ಯಯನದಲ್ಲಿ ದೃಢಪಟ್ಟಿದೆ.
ಇದು ಭಾರತದ ವೈರುಧ್ಯವೆಂದರೂ ತಪ್ಪಾಗಲಾರದುಭಾರತದ ಸುಮಾರು 120ಕೋಟಿ ಜನಸಂಖ್ಯೆಗೆ 92 ಕೋಟಿ ಮೊಬೈಲ್ ಗಳಿಗೆ, ಆದರೆ,  ದೇಶದಲ್ಲಿ ಶೇಕಡ 50 ರಷ್ಟು ಶೌಚಾಲಯಗಳಿಲ್ಲ. ಈ ದೇಶದಲ್ಲಿ ಪ್ರತಿದಿನ ಅರ್ಥವಿಲ್ಲದ ಖಾಲಿಮಾತುಗಳಿಗೆ ಮೊಬೈಲ್ ಮೂಲಕ  ಜನ ಕೋಟ್ಯಾಂತರ ರೂಪಾಯಿ ಹಣ ವ್ಯಯಮಾಡುತ್ತಿದ್ದಾರೆ.   ಹಣದಲ್ಲಿ ತಮ್ಮ ಮನೆಗೊಂದು ಶೌಚಾಲಯ ಕಟ್ಟಿಸಬಹುದು ಎಂಬ ಜ್ಙಾನ ಕೂಡ ನಮ್ಮ ಜನರಿಗಿಲ್ಲ. ಪ್ರತಿದಿನ ಭಾರತದಲ್ಲಿ ಮೊಬೈಲ್ ಕಂಪನಿಗಳಿಗೆ ಹರಿದು ಹೋಗುತ್ತಿರುವ ಹಣದಲ್ಲಿ ಕನಿಷ್ಟ ದಿನವೊಂದಕ್ಕೆ ಒಂದು ಲಕ್ಷ ಶೌಚಾಲಯಗಳನ್ನು ನಿರ್ಮಿಸಬಹುದು. ಗ್ರಾಮಾಂತರ ಪ್ರದೇಶದಲ್ಲಿ ಬಯಲು ವಿಸರ್ಜನೆ ಗ್ರಾಮದಿಂದ ದೂರದ ಹೊಲ ಗದ್ದೆ, ಕೆರೆ ಕಟ್ಟೆ ಸಮೀಪ ನಡೆದರೆ, ನಗರಗಳಲ್ಲಿ ಮನೆಯ ಸಮೀಪ, ಅಥವಾ ರೈಲ್ವೆ ಹಳಿಗಳ ಸಮೀಪವೆ ನಡೆಯುತ್ತದೆ. ಮುಂಬೈ ನಗರಕ್ಕೆ ಬೆಳಗಿನ ಜಾವ ರೈಲಿನ ಮೂಲಕ ತಲುಪುವ ಪ್ರಯಾಣಿಕರಿಗೆ ನಗರದ ಹಳಿಗಳುದ್ದಕ್ಕೂ ಸಾಲಾಗಿ ಅಂಡು ತೋರಿಸುತ್ತಾ ಕುಳಿತ ಜನರು ಎದುರಾಗುತ್ತಾರೆ. ಇವರು ನಮಗೆ ಸ್ವಾಗತ ಕೋರುತ್ತಿದ್ದಾರಾ? ಅಥವಾ ಧಿಕ್ಕಾರದ ಪ್ರದರ್ಶನ ಮಾಡುತ್ತಿದ್ದಾರಾ? ಎಂಬ ಗೊಂದಲ ಕ್ಷಣಕಾಲ ಪ್ರಯಾಣಕರಲ್ಲಿ ಉಂಟಾದರೆ ಆಶ್ಚರ್ಯವಿಲ್ಲ.. ಕೊಳಗೇರಿಯಲ್ಲಿ ವಾಸಿಸುವ ಮಂದಿ ಎಷ್ಟು ನಿರ್ಲಿಪ್ತರೆಂದರೆ, ಅವರ ಗುಪ್ತಾಂಗಗಳನ್ನು ಪ್ರದರ್ಶನಕ್ಕಿಟ್ಟು ಕುಳಿತ ಅವರ ಮುಖದಲ್ಲಿ  ದಿಗಂಬರ ಜೈನ ಮುನಿಯ ಸ್ಥಿತಿ ಪ್ರಜ್ಙತೆ ಮನೆ ಮಾಡಿಕೊಂಡಿರುತ್ತದೆ.
ಇಂತಹ ಅಪಮಾನ ಹಾಗು ಆತಂಕಕಾರಿ ವಿಷಯಗಳನ್ನು ಒಡಲಲ್ಲಿ ಬಚ್ಚಿಟ್ಟುಕೊಂಡು ಭಾರತ ವಿಶ್ವದ ಬಲಿಷ್ಟ ಆರ್ಥಿಕ ಬೆಳವಣಿಗೆಯ ರಾಷ್ಟ್ರ ಎಂದು ಪ್ರತಿಬಿಂಬಿಸಿಕೊಳ್ಳುವುದು ನಿಜಕ್ಕೂ ಆತ್ಮವಂಚನೆಯ ಕೆಲಸವಾಗುತ್ತದೆ. ಭಾರತದಲ್ಲಿ ಶೌಚಾಲಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಹಾಗೂ ಪ್ರತಿ ಮನೆಗೂ ಕಡ್ಡಾಯ ಮಾಡಲು ಅನೇಕ ಜಾಗತಿಕ ಸಂಸ್ಥೆಗಳು ಸಲಹೆ ಸೂಚನೆ ನೀಡಿವೆ. ಇದಲ್ಲದೆ, ಅನೇಕ ಯುವ ವಿಜ್ಙಾನಿಗಳು, ಸ್ವಯಂಸೇವಾ ಸಂಸ್ಥೆಗಳು ಸಮುದಾಯಕ್ಕೆ ನೆರವಾಗುವ ನಿಟ್ಟಿನಲ್ಲಿ ಕಡಿಮೆ ವೆಚ್ಚದ ಆಧುನಿಕ ತಂತ್ರಜ್ಙಾನ ಮತ್ತು ಪರಿಸರ ಸ್ನೇಹಿಯಾದ ಶೌಚಾಲಯದ ಉಪಕರಣಗಳನ್ನು ಅವಿಷ್ಕರಿಸಿದ್ದಾರೆ.ಇದರ ಪ್ರಯೋಜನವನ್ನು ನಮ್ಮ ಸರ್ಕಾರಗಳು ಪ್ರಮಾಣಿಕವಾಗಿ ಬಳಸಿಕೊಳ್ಳಬೇಕು. ನಗರಗಳಲ್ಲಿ ವಸತಿ ಸಮಸ್ಯೆಯಿಂದಾಗಿ ಕೊಳಗೇರಿಗಳಲ್ಲಿ ವಾಸಿಸುವ ಬಡವರಿಗೆ ಸಮುದಾಯ ಶೌಚಾಲಯಗಳನ್ನು ನಿರ್ಮಿಸಿಕೊಡಬೇಕು. ಗ್ರಾಮಾಂತರ ಪ್ರದೇಶದ ಜನತೆಯಲ್ಲಿ ಬಯಲು ಮಲ ವಿಸರ್ಜನೆಯ ಪರಿಣಾಮಗಳನ್ನು ತಿಳಿಸಿ ಶೌಚಾಲಯಗಳನ್ನು ಹೊಂದುವಂತೆ ಅವರ ಮನ ಒಲಿಸಬೇಕು. ಕೆಲಸ ಮಾಡಬೇಕಾದ ಸರ್ಕಾರದ ಕಛೇರಿಗಳ ಶೌಚಾಲಯಗಳು, ಬಸ್ ನಿಲ್ದಾಣದ ಶೌಚಾಲಯಗಳು, ಮತ್ತು ನಗರ ಸಭೆ, ಮಹಾನಗರ ಪಾಲಿಕೆ ನಿರ್ಮಿತ ಶೌಚಾಲಯಗಳು ಗಬ್ಬೆದ್ದು ನಾರುತ್ತಿರುವಾಗ ಜನತೆ ಸರ್ಕಾರದ ಮಾತುಗಳನ್ನು ಕೇಳಬಲ್ಲರೆ? ಇದು ಸಧ್ಯಕ್ಕೆ ನಮ್ಮ ಮುಂದಿರುವ ಪ್ರಶ್ನೆ. ಈಗಿನ ನಮ್ಮ ಸರ್ಕಾರದ ಯೋಜನೆಗಳು ಹೇಗಿವೆಯೆಂದರೆ, ತಿಪ್ಪೆಗುಂಡಿಯ ಮೇಲೆ ನಿಂತು ಶುಚಿತ್ವದ ಪಾಠ ಹೇಳುವ ಮೂರ್ಖ ಶಿಖಾಮಣಿಯ ಚಿಂತನೆಗಳಂತಿವೆ.

ಸರ್ಕಾರಗಳ ಇಂತಹ ಅವಿವೇಕಗಳ ಪರಿಣಾಮವಾಗಿ ಭಾರತದ ಪ್ರಜೆ ವರ್ಷವೊಂದಕ್ಕೆ ಸರಾಸರಿ 48 ಡಾಲರ್ ಹಣವನ್ನು ( ಅಂದಾಜು ಮೂರುಸಾವಿರ ರೂಪಾಯಿ) ನೈರ್ಮಲ್ಯ ಕೊರತೆಯಿಂದಾದ ರೋಗ ರುಜಿನಗಳಿಗೆ ವ್ಯಯಮಾಡುತ್ತಿದ್ದಾನೆ. ಇದು ದೇಶದ ಒಟ್ಟು ಆಂತರಿಕ ಉತ್ಪನ್ನ ಪ್ರಮಾಣದ ಶೇಕಡ ಆರರಷ್ಟಿದೆ. ಆಫ್ರಿಕಾ ರಾಷ್ಟ್ರಗಳಲ್ಲಿ ಪ್ರಮಾಣ ಕೇವಲ ಶೇಕಡ ಒಂದರಿಂದ ಎರಡರಷ್ಟಿದೆ. ಭಾರತದ ಗ್ರಾಮಾಂತರ ಪ್ರದೇಶಗಳ ಸ್ಥಿತಿ ಗತಿ ಹಿಂದೆಂದಿಗಿಂತಲೂ ಈಗ  ಶೋಚನೀಯವಾಗಿದೆ ಎಂಬ ಕಟು ವಾಸ್ತವ ಸಂಗತಿಯನ್ನು ನಾವು ಮನಸ್ಸಿಗೆ ತೆಗೆದುಕೊಳ್ಳಲು, ಮಾನಸಿಕರಾಗಿ ಸಿದ್ದರಾಗಿಲ್ಲ. ಆದರೆ, ಗ್ರಾಮಭಾರತದ ಎಲ್ಲಾ ನೋವು, ಸಂಕಟಗಳಿಗೆ ನೇರ ಬಲಿಯಾಗುತ್ತಿರುವವರು ನಮ್ಮ ಮಹಿಳೆಯರು. JA§ÄzÀ£ÀÄß £ÁªÀÅ ªÀÄ£ÀUÁt¨ÉÃQzÉ.  ಇವೊತ್ತಿಗೂ,ನಮ್ಮ ಗ್ರಾಮಭಾರತದ  ಮಹಿಳೆಯರು ಕುಡಿಯುವ ನೀರಿಗಾಗಿ, ಮತ್ತು ಉರವಲು ಕಟ್ಟಿಗೆಗಾಗಿ ಪ್ರತಿದಿನ ಆರರಿಂದ ಎಂಟು ಕಿಲೋಮೀಟರ್ ದೂರ ಕ್ರಮಿಸುತ್ತಿದ್ದಾರೆ ಎಂಬ ಸತ್ಯವನ್ನು ವರ್ತಮಾನದ ಸಮಾಜಕ್ಕೆ ಮನದಟ್ಟು ಮಾಡಿಕೊಡುವುದು ನಿಜಕ್ಕೂ ತ್ರಾಸದಾಯಕ ಸಂಗತಿ.
 ದೇಶದ ಬಹುತೇಕ ದಲಿತರು, ಹಿಂದುಳಿದ ವರ್ಗದ ಕುಟುಂಬಗಳು, ಮತ್ತು ಆದಿವಾಸಿ ಜನಾಂಗ ನಿಸರ್ಗದಲ್ಲಿ ಸಿಗುವ ಸೌದೆ ಮತ್ತು ಜಾನುವಾರುಗಳ ಸಗಣಿಯನ್ನು ತಮ್ಮ ದಿನನಿತ್ಯದ ಅಡುಗೆಯ ಬಳಕೆಗಾಗಿ ಅವಲಂಬಿಸಿವೆ. ಇದರಿಂದಾಗಿ ಹದಗೆಟ್ಟ ಬಡವರ ಆರೋಗ್ಯ ಸಧ್ಯದ ಸ್ಥಿತಿಯಲ್ಲಿ ದೇಶದ ಅಪೌಷ್ಟಿಕತೆ ಮತ್ತು ಕಲುಷಿತ ನೀರು ಸೇವನೆ ಹಾಗೂ ಶೌಚಾಲಯ ಸಮಸ್ಯೆಯ ನಂತರ ಮೂರನೇ ಅತಿ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ.

( ಕರಾವಳಿ ಮುಂಜಾವು ದಿನ ಪತ್ರಿಕೆಯ " ಜಗದಗಲ" ಅಂಕಣಕ್ಕೆ ಬರೆದ ಲೇಖನ)