ಬುಧವಾರ, ಅಕ್ಟೋಬರ್ 18, 2017

ನೇಪಾಳದ ಜೀವಂತ ದೇವತೆಗಳ ಕ್ರೌರ್ಯದ ಕಥನ


ಜಗತ್ತಿನ ಏಕೈಕ ಪರಿಪೂರ್ಣವಾದ ಹಿಂದೂ ರಾಷ್ಟ್ರ ಎನಿಸಿರುವ ನಮ್ಮ ನೆರೆಯ ನೇಪಾಳದಲ್ಲಿ ಇಂದಿಗೂ ಆಚರಣೆಯಿರುವ ಪ್ರಾಣಿ ಬಲಿಯ ಪದ್ಧತಿ ಮತ್ತು ಋತುಮತಿಯಾಗದಿರುವ ಹೆಣ್ಣುಮಗಳನ್ನು ಜೀವಂತೆ ದೇವತೆಯಾಗಿ ಆಯ್ಕೆ ಮಾಡಿ ಅವಳನ್ನು ಕುಮಾರಿ ಎಂಬ ಹೆಸರಿನಲ್ಲಿ ಪೂಜಿಸುವ ಕ್ರಮ ಇವೆಲ್ಲವೂ ಇಪ್ಪತ್ತೊಂದನೆಯ ಶತಮಾನದ ನಾಗರೀಕ ಜಗತ್ತು ವಿಸ್ಮಯ ಪಡುವುದರ ಜೊತೆಗೆ ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದೆ.
ಕಳೆದ ಸೆಪ್ಟಂಬರ್ ಕೊನೆಯ ವಾರದಲ್ಲಿ ನೇಪಾಳದ ಕಠ್ಮಂಡು ನಗರದಲ್ಲಿ ಅಲ್ಲಿನ ಜನತೆ ಮೂರು ವರ್ಷದ ತ್ರಿಷ್ಣಾ ಶಾಕ್ಯ ಎಂಬ ಹೆಣ್ಣು ಮಗಳು ನೂತನ ಕುಮಾರಿಯಾಗಿ ಅರ್ಥಾತ್ ಜೀವಂತ ದೇವತೆಯಾಗಿ ಆಯ್ಕೆ ಮಾಡಿಕೊಂಡಿದೆ. ಇನ್ನು ಮುಂದೆ ಈಕೆ  ಋತುಮತಿಯಾಗುವವರೆಗೂ ಕಠ್ಮಂಡು ನಗರದ ಕೇಂದ್ರಭಾಗದಲ್ಲಿರುವ ದೇವಸ್ಥಾನದ ಅರಮನೆಯಲ್ಲಿ ಜೀವಂತ ದೇವತೆಯಾಗಿದ್ದುಕೊಂಡು, ತನ್ನನ್ನು ಕಾಣಲು ಬರುವ ಭಕ್ತರಿಗೆ ಹರಸಬೇಕು. ತಂದೆ,ತಾಯಿ, ಒಡಹುಟ್ಟಿದ ಸಹೋದರರನ್ನು ತ್ಯೆಜಿಸಿ ಬಂದಿರುವ ಈಕೆಗೆ ತನ್ನ ಜೊತೆ ಇರಲು ಇಬ್ಬರು ಸಹವರ್ತಿಗಳನ್ನು ಅಂದರೆ, ಗೆಳತಿಯರನ್ನು ಆಯ್ಕೆ ಮಾಡಿಕೊಳ್ಳಬಹುದು. ಒಂದು ವರ್ಷದಲ್ಲಿ ಹದಿಮೂರು ಬಾರಿ ತಾನು ಹುಟ್ಟಿ ಬೆಳೆದ ಮನೆಗೆ ಹೋಗಿಬರಬಹುದು. ಆದರೆ, ದೇವತೆಯೆಂದು ಪರಿಗಣಿಸಿರುವ ಕುಮಾರಿಯ ಪಾದಗಳು ಯಾವ ಕಾರಣಕ್ಕೂ ಭೂಮಿಯನ್ನು ಸ್ಪರ್ಶಿಸಕೂಡದು. ಇಂತಹ ವಿಚಿತ್ರ ಆಚರಣೆ ಇರುವ ನೇಪಾಳದಲ್ಲಿ ಬಾಲಕಿಯರನ್ನು ಆಯ್ಕೆ ಮಾಡಿಕೊಳ್ಳುವುದು ಜಗತ್ತಿನ ಅತಿ ದೊಡ್ಡ ದಾರ್ಶನಿಕ ಗೌತಮ ಬುದ್ಧ ಹುಟ್ಟಿ ಬೆಳೆದ ಶಾಕ್ಯ ಎಂಬ ಬುಡಕಟ್ಟು ಸಮುದಾಯದಿಂದ ಎಂಬುದು ಅಚ್ಚರಿಯ ಸಂಗತಿ.
ಇಂತಹ ಪದ್ಧತಿಯು ಹದಿಮೂರನೆಯ ಶತಮಾನದಿಂದ ಆಚರಣೆಗೆ ಬಂದಿತು ಎಂದು ಹೇಳಲಾಗಿದೆ. ಮೊದಲು ಪ್ರತಿ ವರ್ಷ ಕೆಲವು ಸಮುದಾಯಗಳಲ್ಲಿ ಪ್ರತಿ ವರ್ಷ ನವರಾತ್ರಿ ಅಥವಾ ದುರ್ಗಾ ಪೂಜೆಯ ಸಂದರ್ಭಗಳಲ್ಲಿ ಒಂದು ದಿನದ ಮಟ್ಟಿಗೆ ಬಾಲಕಿಯರನ್ನು ದೇವತೆಯನ್ನಾಗಿಸಿ ಮನೆ ಮನೆಗಳಲ್ಲಿ ಪೂಜಿಸುವ ಪದ್ಧತಿ ಇತ್ತು. ಆದರೆ, ಹದಿನೇಳೆನಯ ಶತಮಾನದಿಂದ ರಾಜಮನೆತದಿಂದ ವರ್ಷ ಪೂರ್ತಿ ದೇವತೆಯಾಗಿ ಪೂಜಿಸುವ ಪದ್ಧತಿ ಆಚರಣೆಗೆ ಬಂದಿದೆ ಎಂದು ಇತಿಹಾಸದ ದಾಖಲೆಗಳು ಹೇಳುತ್ತವೆ. ಶಾಕ್ತ ಪಂಥದದೇವಿ ಮಹಾತ್ಮೆಎಂಬ ಪುರಾಣ ಗ್ರಂಥದಲ್ಲಿ ಕುರಿತು ಒಂದಿಷ್ಟು ಮಾಹಿತಿಗಳು ದೊರೆಯುತ್ತವೆ. ಆದರೆ, ಹನ್ನೇರೆಡನೆಯ ಶತಮಾನದಿಂದ ಹದಿನೇಳನೆಯ ಶತಮಾನದವರೆಗೆ ನೇಪಾಳವನ್ನು ಮಲ್ಲ ಸಾಮ್ರಾಜ್ಯದ ಅವಧಿಯಲ್ಲಿ ರೀತಿಯ ಜೀವಂತ ದೇವತೆಗಳ ಪೂಜಾ ಪದ್ಧತಿ ಆಚರಣೆಗೆ ಬಂದಿರುವುದು ದಾಖಲಾಗಿದೆ. ಆದರೆ, ಇದಕ್ಕೆ ನೀಡಿರುವ ಕಾರಣಗಳು ಮಾತ್ರ ಹಲವು ರೂಪದಲ್ಲಿದ್ದು ಮಲ್ಲ ಸಾಮ್ರಾಜ್ಯದ ಹಲವು ದೊರೆಗಳ ಹೆಸರಿನೊಂದಿಗೆ ತಳುಕು ಹಾಕಿಕೊಂಡಿವೆ.
ಒಂದು ಕಥೆಯ ಪ್ರಕಾರ ದೊರೆ ಜಯಪ್ರಕಾಶ ಮಲ್ಲ ಎಂಬ ದೊರೆಯ ಅರಮನೆಗೆ ಸಾಮಾನ್ಯ ಹೆಣ್ಣಿನ ರೂಪದಲ್ಲಿ ಬರುತ್ತಿದ್ದ ಟೆಲಜು ಎಂಬ ದೇವತೆಯು ಪ್ರತಿ ರಾತ್ರಿ ರಾಜನೊಂದಿಗೆ ಪಗಡೆಯಾಟದಲ್ಲಿ ನಿರತಳಾಗುತ್ತಿದ್ದಳು. ಸಂಗತಿಯನ್ನು ಯಾರಿಗೂ ಹೇಳಬಾರದೆಂದು ದೇವತೆ ರಾಜನಿಗೆ ಷರತ್ತು ವಿಧಿಸಿದ್ದಳು. ಒಂದು ರಾತ್ರಿ ರಾಣಿಯು ತನ್ನ ಪತಿಯನ್ನು ಹಿಂಬಾಲಿಸಿಕೊಂಡು ಬಂದು ಅಂತಃಪುರದಲ್ಲಿ ದೃಶ್ಯವನ್ನು ನೋಡಿದ ನಂತರ ಸಿಟ್ಟಿಗೆದ್ದ ದೇವತೆಯು ಅಲ್ಲಿನ ಸಾಮ್ರಾಜ್ಯವನ್ನು ತೊರೆದು ಹೊರಟು ಹೋದಳು. ನಂತರ ದೊರೆಯು ದೇವತೆಯನ್ನು ಸಾಮ್ರಾಜ್ಯವನ್ನು ತೊರೆಯದಂತೆ  ಪ್ರಾರ್ಥಿಸಿಕೊಂಡಾಗ, “ ನೀನು ಶಾಕ್ಯ ಕುಲದ ಒಬ್ಬ ಬಾಲಕಿಯನ್ನು ಆಯ್ಕೆ ಮಾಡಿಕೊಂಡು ಪೂಜಿಸು, ನಾನು ಆಕೆಯ ದೇಹದಲ್ಲಿ ಪ್ರವೇಶ ಪಡೆದು ಜೀವಿಸುತ್ತೇನೆಎಂದು ಅಭಯವಿತ್ತಳಂತೆ.
ಇನ್ನೊಂದು ಕಥೆಯ ಪ್ರಕಾರ, ಮಲ್ಲ ಸಾಮ್ರಾಜ್ಯದ ತ್ರಿಲೋಕ ಮಲ್ಲ ಎಂಬ ರಾಜನು ಪ್ರತಿ ರಾತ್ರಿ ಸ್ತ್ರೀ ರೂಪದ ಟೆಲಜು ಎಂಬ ದೇವತೆಯು ಜೊತೆ ಪಗಡೆಯಾಟದಲ್ಲಿ ನಿರತನಾಗಿರುತ್ತಿದ್ದ. ಒಂದು ರಾತ್ರಿ ಅವಳ ಜೊತೆ ಬಲತ್ಕಾರ ಸಂಭೋಗ ಮಾಡಿದ್ದರಿಂದ ದೇವತೆಯು ಮುನಿಸಿಕೊಂಡು ಸಾಮ್ರಾಜ್ಯವನ್ನು ತೊರೆದು ಹೋದಳು. ರಾಜನು ತಾನು ಮಾಡಿದ ತಪ್ಪನ್ನು ಮನ್ನಿಸು ಎಂದು ದೇವತೆಯಲ್ಲಿ ಪ್ರಾರ್ಥಿಸಿ ಕೊಂಡಾಗ, ಮುಂದೆ ಇಂತಹ ಅನಾಹುತಗಳು ನಡೆಯಬಾರದು ಎಂದು ತೀರ್ಮಾನಿಸಿದ ದೇವತೆಯು ಋತುಮತಿಯಾಗ ಬಾಲಕಿಯನ್ನು ನೀನು ಪೂಜಿಸು, ನಾನು ಅವಳಲ್ಲಿ ಜೀವಿಸಿರುತ್ತೇನೆ. ಆಕೆಯು ಋತುವ್ಮತಿಯಾದ ನಂತರ ಅವಳನ್ನು ತ್ಯೆಜಿಸಿ ಹೊರ ಹೋಗುತ್ತೇನೆ ಎಂದು ತಿಳಿಸಿದಳಂತೆ. ಅದರಂತೆ ಋತುಮತಿಯಾಗದ ಬಾಲಕಿಯರನ್ನು ಜೀವಂತ ದೇವತೆಯಾಗಿ ಪೂಜಿಸುವ ಆಚರಣೆ ನೇಪಾಳದಲ್ಲಿ ಜಾರಿಗೆ ಬಂದಿತು ಎಂದು ಹೇಳಲಾಗುತ್ತಿದೆ. ನೇಪಾಳದ ಹಿಂದುಗಳು ಮತ್ತು ಅಲ್ಲಿನ ಬೌದ್ಧ ಧರ್ಮಿಯರು ಕುಮಾರಿ ಎಂದು ಕರೆಯಲ್ಪಡುವ ಜೀವಂತ ದೇವತೆಯರನ್ನು ಪೂಜಿಸುತ್ತಾರೆ. ಆದರೆ. ನೆರೆಯ ಟಿಬೆಟ್ ಬೌದ್ಧ ಧರ್ಮದ ಅನುಯಾಯಿಗಳು ಇಂತಹ ಆಚರಣೆ ಮತ್ತು ನಂಬಿಕೆಗಳಿಂದ ದೂರವಾಗಿದ್ದು, ಬುದ್ಧನ ಪರಮ ಅನುಯಾಯಿಗಳಾಗಿ ಬೌದ್ಧ ಧರ್ಮಕ್ಕೆ  ನಿಷ್ಠೆಯಿಂದ ಇದ್ದಾರೆ.

ನೇಪಾಳದಲ್ಲಿ ಜೀವಂತ ದೇವತೆಯಾಗಿ ಬಾಲಕಿಯನ್ನು ಆಯ್ಕೆ ಮಾಡುವಾಗ ಹಲವಾರು ಕಟ್ಟು ನಿಟ್ಟಿನ ನಿಯಮಗಳಿವೆ. ಕುರಿತು ಒಂದು ಶೋಧನಾ ಸಮಿತಿಯನ್ನು ರಚಿಸಲಾಗುತ್ತದೆ. ಸಮಿತಿಯ ಸದಸ್ಯರು ಪ್ರಾಥಮಿಕ ಹಂತದಲ್ಲಿ ಹಲವು ಬಾಲಕಿಯರನ್ನು ಆಯ್ಕೆ ಮಾಡಿಕೊಂಡು ಅವರ ಹುಟ್ಟು ಮತ್ತು ಜಾತಕ ಹಾಗೂ ತಂದೆ ತಾಯಿ ಹಾಗೂ ಕೌಟುಂಬಿಕ ಹಿನ್ನಲೆಯನ್ನು ಪರಿಶೀಲಿಸುತ್ತಾರೆ. ಕುಮಾರಿಯಾಗುವ ಬಾಲಕಿಯು ಯಾವುದೇ ವಿಧವಾದ ಕಾಯಿಲೆ ಅಥವಾ ಸೊಂಕು ರೋಗಗಳಿಂದ ಮುಕ್ತವಾಗಿರಬೇಕು, ಆಕೆಯ ಜೀವಿತದಲ್ಲಿ ಒಮ್ಮೆಯು ದೇಹದಿಂದ ಗಾಯದ ರೂಪದಲ್ಲಿ ರಕ್ತ ನೆಲಕ್ಕೆ ಚೆಲ್ಲಿರಬಾರದು, ಆಕೆಯ ಕುತ್ತಿಗೆ ಶಂಕುವಿನ ಆಕಾರದಲ್ಲಿ ಇರಬೇಕು, ದೇಹ ಆಲದ ಮರದಂತೆ, ಕಣ್ಣುಗಳು ಹಸುವಿನ ಕಣ್ಣಿನ ಆಕಾರದಲ್ಲಿ, ತೊಡೆಗಳು ಜಿಂಕೆಯ ತೊಡೆಗಳಂತೆ, ಎದೆಯ ಸಿಂಹದ ಎದೆಯ ರೂಪದಲ್ಲಿ ಮತ್ತು ಧ್ವನಿಯು ಹಂಸ ಪಕ್ಷಿಯ ರೂಪದಲ್ಲಿ ಇರಬೇಕು. ಆಕೆಯ ಬಾಯಿಯ ಎರಡು ದವಡೆಗಳಲ್ಲಿ ಕನಿಷ್ಠ ಇಪ್ಪತ್ತು ಹಲ್ಲುಗಳಿರಬೇಕು, ಕಾರಣಕ್ಕಾಗಿ ಆಯ್ಕೆಯಾಗುವ ಬಾಲಕಿಯನ್ನು ನಗ್ನಗೊಳಿಸಿ, ಆಕೆಯ ಗುಪ್ತಾಂಗದಿಂದ ಹಿಡಿದು, ದೇಹದ ವಿವಿಧ ಅಂಗಗಳನ್ನು ಕೂಲಂಕುಶವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಇಂತಹ ಒಟ್ಟು ಮುವತ್ತಾರು ಪರೀಕ್ಷೆಗಳನ್ನು ಗೆದ್ದು ಬಂದ ಬಾಲಕಿಗೆ ದೇವತೆಯ ಪಟ್ಟವನ್ನು ಕಟ್ಟುಲಾಗುತ್ತದೆ. ಬಾಲಕಿಯು ಋತುಮತಿಯಾದ ಕೂಡಲೇ ಆಕೆಯನ್ನು ದೇವತೆಯ ಸ್ಥಾನದಿಂದ ಕೆಳಕ್ಕಿಳಿಸಲಾಗುತ್ತದೆ. 2008 ರಿಂದ 2014 ರವರೆಗೆ ಮತಿನಾ ಶಾಕ್ಯ ಎಂಬಾಕೆ ಜೀವಂತ ದೇವತೆಯಾಗಿದ್ದಳು. 2014 ರಿಂದ 2017 ರವ ಆಗಸ್ಟ್ ವರೆಗೆ ಪಟನ್ ಕುಮಾರಿ ಎಂಬಾಕೆ ದೇವತೆಯಾಗಿದ್ದು, ಈಗ ಸ್ಥಾನವನ್ನು ತ್ರಿಷ್ಣಾ ಶಾಕ್ಯ ಎಂಬ ಮೂರು ವರ್ಷದ ಬಾಲಕಿ ಅಲಂಕರಿಸಿದ್ದಾಳೆ. ದೇಗುಲದ ಸಮೀಪದಲ್ಲಿ ಇರುವ ರಾಜ್ ಘರ್ ಎಂಬ ನಿವಾಸದಲ್ಲಿ ಇಂತಹ ಜೀವಂತ ದೇವತೆಗಳು ವಾಸವಾಗಿದ್ದುಕೊಂಡು, ರಾಜಮನೆತನದ ಪರಿವಾರದ ಸದಸ್ಯರು ಸೇರಿದಂತೆಭಕ್ತರಿಗೆ ಪ್ರತಿದಿನ ದರ್ಶನ ನೀಡುತ್ತಾರೆ. ಜೀವಂತ ದೇವತೆಗಳ ವಯಸ್ಸಿಗೆ ಅನುಗುಣವಾಗಿ ಇವರನ್ನು ವಿವಿಧ ಹೆಸರಿನಲ್ಲಿ ಕರೆಯಲಾಗುತ್ತದೆ.
ಒಂದನೆಯ ವಯಸ್ಸಿನಲ್ಲಿ ಸಂಧ್ಯಾ, ಎರಡನೆಯ ವಯಸ್ಸಿನಲ್ಲಿ ಸರಸ್ವತಿ, ಮೂರನೆಯ ವಯಸ್ಸಿನಲ್ಲಿ ತ್ರಿದಮೂರ್ತಿ, ನಾಲ್ಕನೆಯ ವಯಸ್ಸಿನಲ್ಲಿ ಕಾಳಿಕಾ, ಐದನೇಯ ವಯಸ್ಸಿಗೆ, ಸುಭಂಗಾ, ಆರನೇ ವಯಸ್ಸಿಗೆ ಉಮಾ, ಏಳನೆಯ ವಯಸ್ಸಿಗೆ ಮಾಲಿನಿ, ಎಂಟಕ್ಕೆ ಕುಚ್ಛಿಕ, ಒಂಬತ್ತಕ್ಕೆ ಕಲಾ ಸಂದರ್ಭಹಾಗೂ ಹತ್ತನೆಯ ವಯಸ್ಸಿಗೆ ಅಪರಾಜಿತ, ಹನ್ನೊಂದನೆಯ ವಯಸ್ಸಿಗೆ ರುದ್ರಣಿ, ಹನ್ನೆರೆಡನೇ ವಯಸ್ಸಿನಲ್ಲಿ ಭೈರವಿ, ಹದಿಮೂರಕ್ಕೆ ಮಹಾಲಕ್ಷ್ಮಿ, ಹದಿನಾಲ್ಕಕ್ಕೆ ಪಿತಾದಾಯಿನಿ, ಹದಿನೈದಕ್ಕೆ ಕ್ಷೇತ್ರಾಗ್ಯ ಎಂತಲೂ  ಮತ್ತು ಹದಿನಾರನೆಯ ವಯಸ್ಸಿನಲ್ಲಿ ಅಂಬಿಕಾ ಎಂತಲೂ ಕರೆಯಲಾಗುತ್ತದೆ. ಆದರೆ, ಸಾಮಾನ್ಯವಾಗಿ ಜೀವಂತ ದೇವತೆಯರುಕುಮಾರಿಯರುಎಂಬ ಹೆಸರಿನಲ್ಲಿ ನೇಪಾಳದಲ್ಲಿ  ಜನಪ್ರಿಯರಾಗಿದ್ದಾರೆ. ಇವರು ಋತುಮತಿಯಾಗಿ ದೇವತೆಯ ಸ್ಥಾನದಿಂದ ಕೆಳಗಿಳಿದ ನಂತರ ಸಾಮಾನ್ಯರಂತೆ ತಮ್ಮ ಕುಟುಂಬದ ಸದಸ್ಯರ ಜೊತೆ ಬದುಕುತ್ತಾರೆ. ಆದರೆ, ವಿವಾಹವಾಗಿ ದಾಂಪತ್ಯದ ಬದುಕು ನಡೆಸುವಂತಿಲ್ಲ. ಮಾಜಿ ಕುಮಾರಿಯರಿಗೆ ದೇವಸ್ಥಾನದ ವತಿಯಿಂದ ಮಾಸಿಕವಾಗಿ ಕೇವಲ ಐವತ್ತು ರೂಪಾಯಿಗಳನ್ನು ಗೌರವ ವೇತನ ನೀಡಲಾಗುತ್ತಿತ್ತು. ಇತ್ತೀಚೆಗೆ ಇದನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಲಾಗಿದೆ. ಮಾಜಿ ಕುಮಾರಿಯರು ಇತರೆ ಪೂಜೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದಕ್ಷಿಣೆಯ ರೂಪದಲ್ಲಿ ಸಿಗುವ ಅಲ್ಪ ಸ್ವಲ್ಪ ಹಣದಲ್ಲಿ ಬದುಕುತ್ತಾರೆ.
ಕುಮಾರಿಯಾಗಿ ಆಯ್ಕೆಯಾದ ಬಾಲಕಿಯನ್ನು ದೇವತೆಯ ಸ್ಥಾನಕ್ಕೇರಿಸುವ ದಿನ ನಡೆಯುವ ಆಚರಣೆಯು ಅತ್ಯಂತ ಕ್ರೌರ್ಯ ಮತ್ತು ಭೀಕರತೆಯಿಂದ ಕೂಡಿರುತ್ತದೆ. ದಿನ ಬಾಲಕಿಗೆ ಸ್ನಾನ ಮಾಡಿಸಿ, ಹೊಸ ಉಡಿಗೆಯನ್ನು ತೊಡಿಸಿ, ಆಕೆಯ ಹಣೆಯ ಮೇಲೆ ವಿಭೂತಿಯ ಹಾಗೆ ಹಳದಿ ಪಟ್ಟೆಯನ್ನು ಬಳಿದು ಅದರ ನಡುವೆ ಕಣ್ಣಿನ ಚಿತ್ರವೊಂದನ್ನು ಬಿಡಿಸಲಾಗುತ್ತದೆ. ಅದು ದೇವಿಯ ಮೂರನೆಯ ಕಣ್ಣು ಎಂದು ಬಿಂಬಿಸಲಾಗುತ್ತದೆ. ದಿನ ದೇವತೆಯ ತೃಪ್ತಿಗಾಗಿ ನಡು ಮಧ್ಯರಾತ್ರಿ 108 ಕೋಣಗಳು, ಮೇಕೆಗಳು, ಕೋಳಿಗಳು, ಬಾತುಕೋಳಿಗಳು ಮತ್ತು 108 ಮೊಟ್ಟೆಯನ್ನು ಬಲಿಕೊಡಲಾಗುತ್ತದೆ. ನಂತರ ರಕ್ತದ ಓಕುಳಿಯ ನಡುವೆ ಸಾಲಾಗಿ ಜೋಡಿಸಿಟ್ಟ ಕೋಣ, ಮೇಕೆ, ಕೋಳಿ ಗಳ ರುಂಡಗಳ ನಡುವೆ ಹೊಸದೇವತೆಯು ನಡೆದು ಸಾಗಬೇಕು. ಆಕೆಯ ಪ್ರಾಣಿಬಲಿ, ರಕ್ತ ಇತ್ಯಾದಿ ಸಂಗತಿಗಳ ಕುರಿತಂತೆ ಹೆದರಬಾರದು ಎಂಬ ಕಾರಣಕ್ಕಾಗಿ ಆಚರಣೆಯನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ದೇವಸ್ಥಾನದ ಮುಖ್ಯ ಆರ್ಚಕ ಹೇಳುತ್ತಾನೆನಂತರ ಆಕೆಯನ್ನು ರಾಜಘರ್ ಎಂಬ ನಿವಾಸದ ಕೊಠಡಿಯಲ್ಲಿ ಸದಾ ಸಣ್ಣಗೆ ಉರಿಯುವ ಎರಡು ಹಣತೆಗಳ ನಡುವೆ ಕೂರಿಸಲಾಗುತ್ತದೆ. ಬಾಲಕಿ ದೇವತೆಯ ಸ್ಥಾನಕ್ಕೇರಿದ ನಂತರ ಅವಳ ಭವಿಷ್ಯದ ಬದುಕು ಒಂದು ರೀತಿಯಲ್ಲಿ ಮುಚ್ಚಿಹೋಗುತ್ತದೆ. ಆಕೆ ಶಿಕ್ಷಣ, ಸಹಜವಾದ ಬಾಲ್ಯದ ಆಟ-ಪಾಠ ಇವುಗಳಿಂದ ವಂಚಿತಳಾಗುತ್ತಾಳೆ.
ನೇಪಾಳದಲ್ಲಿ 2008 ರವರೆಗೆ ಅರಸೊತ್ತಿಗೆಯ ಆಳ್ವಿಕೆ ಜಾರಿಯಲ್ಲಿತ್ತು. ದೊರೆ ಬೀರೆಂದ್ರ ಹಾಗೂ ಆತನ ಕುಟುಂಬದ ಸದಸ್ಯರು ಕಗ್ಗೊಲೆಯಾದ ನಂತರ; ಅಲ್ಲಿನ ರಾಜಪ್ರಭುತ್ವ ಕೊನೆಗೊಂಡು, ಪ್ರಥಮಬಾರಿಗೆ ಮಾವೋವಾದಿಗೆ ನೇತೃತ್ವದ ಪ್ರಜಾಪ್ರಭುತ್ವ ವ್ಯವಸ್ಥೆಯ ಸರ್ಕಾರ ಅಧಿಕಾರಕ್ಕೆ ಬಂದಿತು. ಆನಂತರವೂ ಇಂತಹ ಅಮಾನುಷ ಪದ್ಧತಿ ಜಾರಿಯಲ್ಲಿರುವುದು ವರ್ತಮಾನದ ದುರಂತವೆಂದು ಬಣ್ಣಿಸಬಹುದು. ಈಗಾಗಲೇ, ಮಕ್ಕಳ ಹಕ್ಕುಗಳ ಸಂಘಟನೆಯ ಕಾರ್ಯಕರ್ತರು ಮತ್ತು ಪ್ರಾಣಿ ದಯಾ ಸಂಘದ ಕಾರ್ಯಕರ್ತರು ಇದರ ವಿರುದ್ಧ ಧ್ವನಿ ಎತ್ತಿದ್ದಾರೆ.
ಇವೆಲ್ಲವುಗಳಿಂತ ನೋವಿನ ಸಂಗತಿಯೆಂದರೆ, ಎರಡೂವರೆ ಸಾವಿರ ವರ್ಷಗಳ ಹಿಂದೆ ಕ್ರಿಸ್ತಪೂರ್ವ ಭಾರತದಲ್ಲಿ ಇಂತಹ ಪ್ರಾಣಿಬಲಿ, ಮೌಡ್ಯ, ಯಜ್ಞ ಇತ್ಯಾದಿಗಳ ಬಗ್ಗೆ ಧ್ವನಿ ಎತ್ತಿ ಲೋಕಕ್ಕೆ ಹೊಸ ಬೆಳಕಿನ ಮಾರ್ಗವನ್ನು ತೋರಿದ ಬುದ್ಧನು ಹುಟ್ಟಿ ಬೆಳೆದ ನಾಡಿನಲ್ಲಿ, ( ನೇಪಾಳದ ಕಠ್ಮಂಡು ಸಮೀಪದ ಕಪಿಲವಸ್ತು) ಜೊತೆಗೆ  ಆತನ ಬುಡಕಟ್ಟು ಸಮುದಾಯದ ಶಾಕ್ಯರ ಕುಲದಲ್ಲಿ ಇಂತಹ ಅನಿಷ್ಠ ಆಚರಣೆ ಜಾರಿಯಲ್ಲಿರುವುದು; ಗೌತಮ ಬುದ್ಧನಿಗೆ ಮಾಡುತ್ತಿರುವ ಅಪಮಾನವೆಂದರೆ, ತಪ್ಪಾಗಲಾರದು.

( ಕರಾವಳಿ ಮುಂಜಾವು ದಿನಪತ್ರಿಕೆಯ ದೀಪಾವಳಿ ವಿಶೇಷ ಸಂಚಿಕೆಗಾಗಿ  ಬರೆದಲೇಖನ)




ಗುರುವಾರ, ಅಕ್ಟೋಬರ್ 12, 2017

ವೃತ್ತಿ ವಿಲಾಸ ಮತ್ತು ಕಾಲುದಾರಿಯ ಕಥನಗಳು ಎಂಬ ಎರಡು ವಿಶಿಷ್ಟ ಆತ್ಮಕಥಾನಕಗಳು

ಕನ್ನಡಲ್ಲಿ ಪ್ರತಿ ವರ್ಷ ಸುಮಾರು ಐದು ಸಾವಿರದಿಂದ ಆರು ಸಾವಿರ ಕೃತಿಗಳು ಪ್ರಕಟವಾಗುತ್ತವೆ ಎಂದು ಹೇಳಲಾಗುತ್ತಿದೆ. ಕನಿಷ್ಠ ಶೇಕಡ ಹತ್ತರಷ್ಟು ಒಳ್ಳೆಯ ಕೃತಿಗಳು ಅಂದರೆ, ಸುಮಾರು ಐನೂರರಿಂದ ಆರನೂರು ಕೃತಿಗಳು ನಮಗೆ ಲಭ್ಯವಾಗಬೇಕಿತ್ತು. ಕನ್ನಡದ ಸಾಹಿತ್ಯ ಮತ್ತು ಸಂಸ್ಕೃತಿಎಂತಹ ಅವಸಾನದ ಅಂಚಿಗೆ ತಲುಪಿದೆ ಎಂದರೆ, ಶೇಕಡ ಒಂದರಷ್ಟು ಅಂದರೆವರ್ಷವೊಂದಕ್ಕೆ ಐವತ್ತರಿಂದ ಅರವತ್ತರಷ್ಟು ಶ್ರೇಷ್ಠ ಕನ್ನಡ ಕೃತಿಗಳು ನಮಗೆ  ಲಭ್ಯವಾಗುತ್ತಿಲ್ಲ.
2017 ಹತ್ತು ತಿಂಗಳ ಅವಧಿಲ್ಲಿ ನಾನು ಇಷ್ಟಪಟ್ಟು ಆಯ್ಕೆ ಮಾಡಿಕೊಂಡು ಓದಿದ ಕೃತಿಗಳೆಂದರೆ, ಕಾವ್ಯ ಕಡಮೆ ಎಂಬ ಹೆಣ್ಣು ಮಗಳಪುನರಪಿಎಂಬ ಕಾದಂಬರಿ, ಸಂಯುಕ್ತಾ ಪುಲಿಗಲ್ ರವರ  “ಪರ್ವತದಲ್ಲಿ ಪವಾಡಎಂಬ ಅನುವಾದ ಕೃತಿ, ವಿಜಯಮ್ಮ ನವರಕುದಿ ಎಸರುಎಂಬ ಆತ್ಮಕಥೆ, ಹೆಚ್.ಆರ್. ಸುಜಾತರವರ  “ನೀಲಿ ನತ್ತಿನ ಮೂಗುಎಂಬ ಪ್ರಬಂಧ ಸಂಕಲನ, ನಟರಾಜು ಬೂದಾಳು ಅವರಕನ್ನಡ ಕಾವ್ಯ ಮೀಮಾಂಸೆ,” ರಹಮತ್ ತರೀಕರೆಯವರಕರ್ನಾಟಕ ಶಾಕ್ತ ಪಂಥಹಾಗೂ ಕೆ.ಸತ್ಯನಾರಾಯಣ ಅವರವೃತ್ತಿವಿಲಾಸಮತ್ತು ಹನೂರು ಕೃಷ್ಣಮೂರ್ತಿಯವರಕಾಲುದಾರಿಯ ಕಥನಗಳುಕೃತಿಗಳನ್ನು ಮಾತ್ರ. ಇದರಾಚೆಗೆ ಓದಿದ ಒಂದೆರೆಡು ಕೃತಿಗಳ ಹೆಸರು ಮತ್ತು ಅವುಗಳಲ್ಲಿದ್ದ ವಸ್ತು ವಿಷಯ ಕೂಡ ನನಗೆ ನೆನಪಿಗೆ ಬರುತ್ತಿಲ್ಲ. ಇದು ನನ್ನ ಮನೋಧರ್ಮ ಅಥವಾ ಅಭಿರುಚಿ ಇಲ್ಲವೆ ಆಸಕ್ತಿಯ ಕಾರಣಗಳಿರಬೇಕು ಎಂದುಕೊಂಡೆ. ನಾನು ವಾಸಿಸುತ್ತಿರುವ ಧಾರವಾಡದ ತೇಜಸ್ವಿನಗರದಲ್ಲಿ ಪ್ರತಿದಿನ ಬೆಳಿಗ್ಗೆ ವಾಕಿಂಗ್ ಸಮಯದಲ್ಲಿ ನನಗೆ ಎದರಾಗುವ ಕನ್ನಡದ ಹಿರಿಯ ಹಾಗೂ  ಅನುಭಾವ ಪ್ರಜ್ಞೆಯ ಕವಿ ಆನಂದ ಝಂಜರವಾಡ ಅವರ ಜೊತೆ ವಿಷಯವನ್ನು ಪ್ರಸ್ತಾಪಿಸಿದೆ. ನೇರ ಹಾಗೂ ನಿಷ್ಟುರ ಅಭಿಪ್ರಾಯಗಳಿಗೆ ಹೆಸರಾಗಿರುವ ಆನಂದರುಕೊಪ್ಪ ಅವರೇ, ನಾನು ಕನ್ನಡದ ಕೃತಿಗಳನ್ನು ಓದುವುದನ್ನು ಬಿಟ್ಟಿದ್ದೀನಿ. ಏಕೆಂದರೆ, ಆತ್ಮ ತೃಪ್ತಿಗಾಗಿ ಬರೆಯುವ ಲೇಖಕರು ಕಡಿಮೆಯಾಗಿದ್ದಾರೆ ಇದಕ್ಕೆ ಬದಲಾಗಿ ಓದುಗರ ಮನರಂಜನೆಗಾಗಿ, ಬೆಸ್ಟ್ ಸೆಲ್ಲರ್ ಕೃತಿಗಳ ಲೇಖಕ ಎಂಬ ಹುಸಿತನದ ಪಟ್ಟಕ್ಕಾಗಿ ಬರೆಯುವ ತೆಲುಗಿನ ಯಂಡಮೂರಿಯಂತೆ ಕನ್ನಡದ ಯಂಡಮೂರಿಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿದ್ದಾರೆ ಇಂತಹವರ  ಆತ್ಮ ವಂಚನೆಯ ಕೃತಿಗಳನ್ನು ನಾನು ಏಕೆ ಓದಬೇಕು? ನನ್ನ ಮೇಜಿನ ಮೇಲಿರುವ ಬೇಂದ್ರೆ, ಅಡಿಗರ ಕವಿತೆಗಳು, ಕುವೆಂಪು ಕೃತಿಗಳು, ಅಭಿನವಗುಪ್ತನ ಕಾವ್ಯ ಕುರಿತ ಮೀಮಾಂಸೆ ಮತ್ತು ಮರಾಠಿ ಭಾಷೆಯ ಕೃತಿಗಳು ನನಗೆ ಸಾಕುಎಂದರು. ಅವರ ಮಾತುಗಳನ್ನು ಕೇಳಿದಾಗ ನನಗೆ ಆಶ್ಚರ್ಯವೆನಿಸಲಿಲ್ಲ. ಕನ್ನಡದಲ್ಲಿ ಸಾಹಿತ್ಯಕ್ಕಿಂತ ಕಸ ಹೆಚ್ಚಿನ ಪ್ರಮಾಣದಲ್ಲಿ  ಸೃಷ್ಟಿಯಾಗುತ್ತಿದೆ ಎಂಬುದು ಮನದಟ್ಟಾಯಿತು. ಕನ್ನಡದ ಸಾಹಿತ್ಯ ಕೃತಿಗಳನ್ನು ಹೊರತು ಪಡಿಸಿ, ಪ್ರತಿ ವರ್ಷ ಐವತ್ತಕ್ಕೂ ಹೆಚ್ಚು ಇಂಗ್ಲೀಷ್ ಕೃತಿಗಳನ್ನು ಓದುವ ನನಗೆ ಸ್ವಲ್ಪ ಸಮಾಧಾನವಾಯಿತು. (ಇದೀಗ ಅಂಡಮಾನ್- ನಿಕೋಬಾರ್ ದ್ವೀಪದಲ್ಲಿ ಪ್ರವಾಸೋದ್ಯಮ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಸ್ಥಳಿಯ ಆದಿವಾಸಿಗಳ ಹಾಗೂ ಪರಿಸರದ ಮೇಲಿನ ಮಾರಣಹೋಮದ ಕಥನವನ್ನು ಒಳಗೊಂಡಿರುವ ಹಾಗೂ  ಪಂಕಜ್ ಸೆಕ್ಷಾರಿಯ ಎಂಬ ಪರಿಸರ ವಿಜ್ಞಾನಿ ಬರೆದಐಸ್ ಲ್ಯಾಂಡ್ ಇನ್ ಪ್ಲಕ್ಷ್ಎಂಬ ಕೃತಿಯನ್ನು ಓದುತ್ತಿದ್ದೇನೆ) ಇಂತಹ ಕನ್ನಡ ಸಾಹಿತ್ಯ ಲೋಕದ ನೀರಾಸೆಯ ವಾತಾವರಣದ ನಡುವೆ ಕೆ.ಸತ್ಯನಾರಾಯಣರ ವೃತ್ತಿ ವಿಲಾಸ ಮತ್ತು ಹನೂರು ಕೃಷ್ಣಮೂರ್ತಿಯವರ ಕಾಲುದಾರಿಯ ಕಥನಗಳು ಕೃತಿಗಳು ಭರವಸೆಯ ಬೆಳ್ಳಿಯ ಕಿರಣಗಳಾಗಿ ನಮಗೆ ಗೋಚರಿಸುತ್ತವೆ.
ಕನ್ನಡದಲ್ಲಿ ಬಂದಿರುವ ಆತ್ಮಚರಿತ್ರೆಗಳಿಗಿಂತ ಭಿನ್ನವಾಗಿರುವ ಎರಡು ಕೃತಿಗಳಲ್ಲಿ ಲೇಖಕರು ಇವುಗಳನ್ನು ತಮ್ಮ ಆತ್ಮಕಥಾನಕ ಎಂದು ಕರೆದಿದ್ದರೂ ಸಹ, ಎಲ್ಲಿಯೂ ತಾವು ಮುನ್ನೆಲೆಗೆ ಬಾರದೆ, ತಮ್ಮ ಬದುಕನ್ನು ಕೇವಲ ನೆಪವಾಗಿರಿಸಿಕೊಂಡು, ತಾವು ಬದುಕಿದ ಲೋಕದಲ್ಲಿ ಕಂಡ ಘಟನೆಗಳನ್ನು, ತಮ್ಮ ಅನುಭವಗಳನ್ನು ಅತ್ಯಂತ ನಿರ್ಭಾವುಕರಾಗಿ ಬಣ್ಣಿಸುತ್ತಾ, ತಮ್ಮ ಚಿತ್ತ ಸಮಾಧಾನತೆಯನ್ನು ಕೃತಿಗಳಲ್ಲಿ ಅಭಿವ್ಯಕ್ತಿಗೊಳಿಸಿದ್ದಾರೆ. ಸತ್ಯನಾರಾಯಣರವರ ಕೃತಿಯಲ್ಲಿ ನಾವು ಬದುಕುತ್ತಿರುವ ವರ್ತಮಾನದ ಬದುಕಿನ ಸಭ್ಯ ನಾಗರೀಕರು ಮತ್ತು ಪ್ರಸಿದ್ಧರು ಎನಿಸಿಕೊಂಡ  ಮನುಷ್ಯರ ಪೊಳ್ಳು ಜೀವನದ ಕಥೆಗಳು ಹಾಗೂ  ವಿಕೃತಿಯ ಜೊತೆಗೆ ವಿಲಾಸದ ಕಥೆಗಳಿದ್ದರೆ. ಕೃಷ್ಣಮೂರ್ತಿಯವರ ಕೃತಿಯಲ್ಲಿ ನಮ್ಮ ಕಣ್ಣೆದುರು ಕಳೆದು ಹೋದ ಗ್ರಾಮೀಣ ಬದುಕಿನ ಜಾನಪದ ಜಗತ್ತಿನ ವೈಭವ, ಅಲ್ಲಿನ ನೆಲಮೂಲ ಸಂಸ್ಕತಿ, ಮನುಷ್ಯ-ಮನುಷ್ಯನ ನಡುವಿನ ಕಳ್ಳು ಬಳ್ಳಿಯ ಸಂಬಂಧ, ಪ್ರಾಣಿ ಪಕ್ಷಿಗಳ ಜಗತ್ತು, ನಿರ್ಜನ ಕಾಡು ಮತ್ತು ತೊರೆಗಳು, ತಂಬೂರಿ ಮತ್ತು ಏಕನಾದದ ನೀನಾದದ ಧ್ವನಿ, ಕೊಳಲು, ದಮ್ಮಡಿ, ತಮಟೆ, ಶಂಖ, ಕಂಸಾಳೆ, ಜಾಗಟೆಗಳ ನಾದ ವೈಭವದ ಕಥನಗಳಿವೆ.
ಕಥೆಗಾರರಾಗಿ, ಕಾದಂಬರಿಗಾರರಾಗಿ, ಪ್ರಬಂಧಕಾರರಾಗಿ ಗುರುತಿಸಿಕೊಂಡಿರುವ ಕೆ.ಸತ್ಯನಾರಾಯಣರು ಈಗಾಗಲೇ ತಮ್ಮ ಆತ್ಮ ಕಥನದ ಭಾಗವಾಗಿ ನಾವೇನು ಬಡವರಲ್ಲ ಮತ್ತು ಸಣ್ಣಪುಟ್ಟ ಆಸೆಗಳ ಆತ್ಮ ಚರಿತ್ರೆಯ ಎರಡು ಸಂಪುಟಗಳನ್ನು ಬರೆದು ಪ್ರಕಟಿಸಿದ್ದು, ಅಂತಿಮವಾಗಿ ವೃತ್ತಿ ವಿಲಾಸ ಹೆಸರಿನ ಕೃತಿಯಲ್ಲಿ ತಮ್ಮ ವೃತ್ತಿಯ ಘಟನೆಗಳನ್ನು ದಾಖಲಿಸಿದ್ದಾರೆ. ಲವಲವಿಕೆಯ ಬರೆವಣಿಗೆಗೆ ಹೆಸರಾದ ಸತ್ಯನಾರಾಯಣರವರು ಕೇಂದ್ರ ಆದಾಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿದ್ದುಕೊಂಡು ದೇಶದ ಅನೇಕ ನಗರಗಳಲ್ಲಿ ಸೇವೆ ಸಲ್ಲಿಸಿ, ಕರ್ನಾಟಕ ಮತ್ತು ಗೋವಾ ರಾಜ್ಯಗಳ ತೆರಿಗೆ ಆಯುಕ್ತರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದರು. ಮೂರೂವರೆ ದಶಕಗಳ ಜೀವನಾನುಭವ, ವಿವಿಧ ಸಂಸ್ಕøತಿ ಹಾಗೂ ಭಾಷೆಗಳಲ್ಲದೆ ಅಲ್ಲಿನ ಜನತೆಯ ಜೊತೆ ಒಡನಾಡಿದ ಅನುಭವ ಕೃತಿಯಲ್ಲಿ ಪ್ರೌಢ ಅಭಿವ್ಯಕ್ತಿಯಾಗಿ ಪ್ರಕಟವಾಗಿದೆ. ಸದಾ ವಾಸ್ತವಿಕ ನೆಲೆಗಟ್ಟಿನಲ್ಲಿ ಮತ್ತು ಮಾನವೀಯ ನೆಲೆಯಲ್ಲಿ ಜೀವನವನ್ನು ನೋಡುವ ಅವರ ದೃಷ್ಟಿಕೋನಕ್ಕೆ ಒಂದು ರೀತಿಯಲ್ಲಿ ಸಂತನ ಗುಣ ಪ್ರಾಪ್ತವಾಗಿದೆ. ಹಾಗಾಗಿ ಕೃತಿಯಲ್ಲಿ ದಾಖಲಾಗಿರುವ ಮೀಟಿಂಗ್ ಮಹಾತ್ಮೆ, ಅರಮನೆಯ ಕ್ರಾಂತಿಕಾರರು ಅಧ್ಯಾಯಗಳಲ್ಲಿ ಅಧಿಕಾರಿಗಳ ವರ್ತನೆ  ಕುರಿತ ಸ್ವ ವಿಮರ್ಶೆ ಹಾಗೂ ಮಂತ್ರಿ ಮಹೋದಯರ ಉದ್ಧಟತನದ ಮಾಹಿತಿಗಳಿ ದ್ದರೆ, ಜವಾನರು ಕುರಿತ ಅಧ್ಯಾಯದಲ್ಲಿ ಮಾನವೀಯ ಗುಣಗಳು ಎದ್ದು ಕಾಣುತ್ತವೆ. ತೆರಿಗೆ ದಾಳಿಅಧಿಕಾರಿಗಳ ಕೌಟುಂಬಿಕ ಜೀವನ, ವರ್ಗಪುರಾಣ, ಇವುಗಳಲ್ಲಿ ಅಧಿಕಾರ ವರ್ಗದ ಬದುಕಿನ ಕ್ರಮವನ್ನು ಅತ್ಯಂತ ನಿರ್ಭಾವುಕರಾಗಿ ಬಣ್ಣಸಿದ್ದಾರೆ. ಓರ್ವ ನಿಷ್ಟಾವಂತ ಅದಿಕಾರಿಯಾಗಿ ಮುಂಬೈ, ಚೆನ್ನೈ, ಹಾಗೂ ಬೆಂಗಳೂರು ನಗರದ ಸಿನಿಮಾ ಮಂದಿಯ ಅಹಂಕಾರವನ್ನು, ಕಪಟ ಬದುಕನ್ನು ತೀರಾ ಹತ್ತಿರದಿಂದ ನೋಡಿದ ಲೇಖಕರು ಕೃತಿಯಲ್ಲಿ ಹಲವು ನಟ ನಟಿಯರ ಇನ್ನೊಂದು ಮುಖವನ್ನು ಯಾವುದೇ ರಾಗದ್ವೇಷವಿಲ್ಲದೆ ದಾಖಲಿಸಿದ್ದಾರೆ. ಜೊತೆಗೆ ಅಧಿಕಾರಿಗಳ ಭ್ರಮೆ ಕಳಚುವಂತಹ; ಮಾಜಿ ಮುಖ್ಯಮಂತ್ರಿ ಜೆ.ಹೆಚ್. ಪಟೇಲರನಮ್ಮ ಮಾತುಗಳನ್ನು ಕೇಳವವರು, ನಮ್ಮ ಮನಸ್ಸಿನ ಮರ್ಮ ಅರಿಯುವವರು, ನಾವು ಹೇಳಿದಂತೆ ಬಾಲ ಅಲ್ಲಾಡಿಸುವವರು ಇಂತಹ ಅಧಿಕಾರಿಗಳು ಬೇಕಿದ್ದರೆ ಅವರನ್ನು ನಮ್ಮ ಕಾಲದಲ್ಲಿ ಹುಡುಕಲು ಕಷ್ಟವಾಗುತ್ತಿತ್ತು. ಏಕೆಂದರೆ, ಅಂತಹ ಅಧಿಕಾರಿಗಳು ಕಡಿಮೆ ಇದ್ದರು. ಈಗೇನು ತೊಂದರೆಯಿಲ್ಲ ರೀತಿಯ ಅಧಿಕಾರಿಗಳೇ ತುಂಬಾ ಇದ್ದು; ನಮ್ಮ ಸೇವೆ ಮಾಡಲು ಅವರಲ್ಲಿ ಪೈಪೋಟಿ ಇದೆ. ತೀರಾ ಕೆಟ್ಟವರು ಮತ್ತು ದುರ್ಬಲರು ಇವರನ್ನು ಆಯ್ಕೆ ಮಾಡಿಕೊಳ್ಳುವದಷ್ಟೇ ನಮ್ಮ ಕೆಲಸಎಂಬ ಮಾರ್ಮಿಕವಾದ ಮಾತನ್ನು ದಾಖಲಿಸಿ ತಮ್ಮೊಳಗಿನ ಪಾರದರ್ಶಕ ಗುಣವನ್ನು ಅನಾವರಣಗೊಳಿಸಿದ್ದಾರೆ.
ಕನ್ನಡದ ಪ್ರಾಧ್ಯಾಪಕರಾಗಿ, ಕತೆಗಾರರಾಗಿ, ಕಾದಂಬರಿಗಾರರಾಗಿ, ಮಿಗಿಲಾಗಿ ಜಾನಪದ ವಿದ್ವಾಂಸರಾಗಿ ಮಲೆ ಮಹದೇಶ್ವರ ಕಾವ್ಯ ಮತ್ತು ಮಂಟೆಸ್ವಾಮಿ ಕಾವ್ಯ ಕುರಿತು ಅಧಿಕೃತವಾಗಿ ಮಾತನಾಡುವ ಹಾಗೂ ಹಳೆಗನ್ನಡ ಕಾವ್ಯ ಕುರಿತು ಅಷ್ಟೇ ನೈಪ್ಮಣ್ಯತೆಯನ್ನು ಸಾಧಿಸಿರುವ ಕೃಷ್ಣಮೂರ್ತಿ ಹನೂರರ ಕೃತಿಯು; ಅವರ ಅಜ್ಞಾತನೊಬ್ಬನ ಆತ್ಮ ಚರಿತ್ರೆ ಎಂಬ ಶ್ರೇಷ್ಠ ಕಾದಂಬರಿಯ ನಂತರ ಬಂದ ಕೃತಿಯಾಗಿದ್ದು ಅದೇ ರೀತಿಯ ಮೌಲಿಕವಾದ ಗುಣವನ್ನು ಹೊಂದಿದೆ. ತಮ್ಮ ಸುಧೀರ್ಘ ನಾಲ್ಕು ದಶಕಗಳ  ಅಧ್ಯಾಪನದ ವೃತ್ತಿಯ ಜೊತೆಗೆ ನಾಡಿನ ಜನಪದರು, ಮೌಖಿಕ ಗಾಯಕರು, ಅವಧೂತರು, ತತ್ವಪದಗಾರರು, ಗ್ರಾಮೀಣ ಜಾನಪದ ಕಲೆಗಳ ಕಲಾವಿದರನ್ನು ಹುಡುಕಿಕೊಂಡು ಕರ್ನಾಟಕವೂ ಸೇರಿದಂತೆ ಇಡೀ ದೇಶದುದ್ದಕ್ಕೂ  ಓಡಾಡಿದ ಅನುಭವ ಕಥನ ಕೃತಿಯಲ್ಲಿ ಮುಪ್ಪುರಿಗೊಂಡಿದೆ. ಚಿತ್ರದುರ್ಗದ ಚಳ್ಳೆಕೆರೆಯಲ್ಲಿ ಆರಂಭಗೊಂಡ ತಮ್ಮ ಉಪನ್ಯಾಸಕ ವೃತ್ತಿಯ ಜೊತೆ ಜೊತೆಗೆ  ಹುಟ್ಟಿಕೊಂಡ ಜಾನಪದ ಜಗತ್ತಿನ ಓಡಾಟ ಅವರ ಜೀವನಾನುಭವವನ್ನು ದಟ್ಟಗೊಳಿಸಿದೆ. ಆದ್ದರಿಂದ ಕಲಾವಿದರ ಕಥೆ ಹೇಳುತ್ತಾ, ಅವರ ಬಾಯಲ್ಲಿ ಜಾನಪದ ಕಥೆಗಳನ್ನು, ಕಾವ್ಯಗಳನ್ನು ಹೊರಹೊಮ್ಮಿಸುತ್ತಾ, ಅವುಗಳ ಜೊತೆಗೆ ತಮ್ಮ ಬಾಲ್ಯದ ಜೀವನಕ್ಕೆ ಕೃಷ್ಣಮೂರ್ತಿಯವರು ಕೃತಿಯಲ್ಲಿ ಜಿಗಿಯುತ್ತಾರೆ. ಕೊಳ್ಳೆಗಾಲ, ಹನೂರು, ಮಲೆ ಮಹಾದೇಶ್ವರ ಬೆಟ್ಟದ ಪರಿಸರ, ಕಾಲದ ದಟ್ಟ ಹಸಿರು, ಕಾನನ, ಜಾತ್ರೆ, ಕೋರಣ್ಯ ಮಾಡುತ್ತಾ, (ಬಿಕ್ಷೆ) ಜನಪಾದ ಕಾವ್ಯಗಳನ್ನು ಹಾಡುತ್ತಾ ಎಲ್ಲರ ಮನೆ ಮತ್ತು ಮನಗಳಿಗೆ ಹಾಡುಗಳನ್ನು ದಾಟಿಸುತ್ತಿದ್ದ ಕಲಾವಿದರ ಕುರಿತು, ಏಕತಾರಿ ಮತ್ತು ಜೊಳಿಗೆ ಹಿಡಿದು ಮನೆ ಮುಂದೆ ನಿಂತು ಅನುಭಾವದ ಲೋಕವನ್ನು ತೆರೆದಿಡುತ್ತಿದ್ದ ತತ್ವಪದಕಾರರ ಬದುಕನ್ನು ಅತ್ಯಂತ ಮಾರ್ಮಿಕವಾಗಿ ಬಣ್ಣಿಸಿದ್ದಾರೆ.

ಕೃತಿಯಲ್ಲಿ ದಾಖಲಾಗಿರುವ ಬೆಳೆಗೆರೆ ಕೃಷ್ಣಶಾಸ್ತ್ರಿಯವರ ಜೊತೆಗಿನ ಓಡಾಟ, ಸಿರಿಯಜ್ಜಿಯ ಹಾಡುಗಾರಿಕೆಯ ಕಥನ, ಹಿನಕಲ್ ಮಾದೇವಯ್ಯನರ ಸಂದರ್ಶನ, ಸಂಗ್ಯಾ-ಬಾಳ್ಯ ನಾಟಕದ ಏಕವ್ಯಕ್ತಿ ಪ್ರದರ್ಶನ ನೀಡುವ ಬಿಜ್ಜೂರು ಬಸವಯ್ಯನ ಬಡತನ ಮತ್ತು ಮುಗ್ದತೆ ಹೀಗೆ ಅನೇಕ ಕಥಾ ಪ್ರಸಂಗಗಳು ಮನಮಿಡಿಯುವಂತಿವೆ. ಒಂದು ಕಡೆ ಮಲೆ ಮಹಾದೇಶ್ವರ ಕಾವ್ಯ ಹಾಡುವ ಮಾದೇವಚಿ್ಯುನವರನ್ನು ಸಂದರ್ಶಿಸುವ ಲೇಖನದಲ್ಲಿ ಮಹದೇಶ್ವರದ ಬೆಟ್ಟದ ಪರಿಸರ ನಾಶದ ಕುರಿತು ಮಾತನಾಡುತ್ತಾ, ಹನೂರು ಅವರುಹಂಗಾದ್ರೆ ಮಾದಯ್ನ ಗಿರಿಲಿ ಉಳಿದಿರದು ಇನ್ನೇನು?” ಎಂಬ ಪ್ರಶ್ನೆಗೆ ಮಾದಯ್ಯ ನೀಡುವ ಉತ್ತರ ಹೀಗಿದೆ, “ ಏನು ಉಳ್ಕಂಡಿಲ್ಲ, ಅಲ್ಲಿ ಉಳಿದಿರದು ಮಾದಯ್ಯ ಒಬ್ನೆಎಂಬ ಮಾತು ನಾವು ಬದುಕುತ್ತಿರುವ ವರ್ತಮಾನದ ಜಗತ್ತು ಆದುನಿಕತೆಯ ಕೊಡಲಿಯಿಂದ ಎಲ್ಲವನ್ನೂ ಕೊಚ್ಚಿಹಾಕುತ್ತಿರುವುದನ್ನು ಪ್ರತಿಧ್ವನಿಸುವ ಮಾತಿನಂತೆ ಕೇಳಿಬರುತ್ತಿದೆ. ವರ್ಷಕ್ಕೆ ಎಷ್ಟಾದರೂ ಕೃತಿಗಳು ಬರಲಿ, ಇಂತಹ ಒಂದು ಕೃತಿ ಓದುಗರನ್ನು ವರ್ಷವಿಡಿ ಕಾಡುವ ಗುಣವನ್ನು ಒಳಗೊಂಡಿದೆ. ಕಾರಣಕ್ಕಾಗಿ ನಾವು ಕೃಷ್ಣಮೂರ್ತಿ ಹನೂರು ಅವರನ್ನು ಅಭಿನಂದಿಸಬೇಕು.