ಶುಕ್ರವಾರ, ನವೆಂಬರ್ 3, 2017

ಯರೇನಿಯಂ ಅದಿರಿನಲ್ಲಿ ದೂಳಾದವರ ದುರಂತಗಾಥೆ.


.ಹದಿನೆಂಟು ವರ್ಷಗಳ ಹಿಂದೆ ನಾನು (1999ರಲ್ಲಿ) ಅಣುಬಾಂಬ್, ಅಣ್ವಸ್ತ್ರಗಳು ಹಾಗೂ ಅಣುಶಕ್ತಿ ವಿದ್ಯುತ್ ಸ್ಥಾವರಗಳ  ದುರಂತ ಹಾಗೂ ಅವುಗಳ ಹಿಂದಿರುವ ಭಯಾನಕ ಇತಿಹಾಸ ಕುರಿತುಅಣುವೆಂಬ ಸದ್ದಿಲ್ಲದ ಸಾವ ಕುರಿತುಎಂಬ ಕೃತಿಯನ್ನು ರಚಿಸಿದ್ದೆ. ವಿಜ್ಞಾನದ ವಿದ್ಯಾರ್ಥಿಯಲ್ಲದ ನಾನು ಕೃತಿಯನ್ನು ರಚಿಸುವಾಗ, ಸುಧಾ ವಾರಪತ್ರಿಕೆಯ ಸಂಪಾದಕರಾಗಿದ್ದ ನಾಗೇಶ್ ಹೆಗ್ಡೆಯವರ ಮಾರ್ಗದರ್ಶನವನ್ನು ಪಡೆದಿದ್ದೆ. ನಂತರ ವಿಜಯಕರ್ನಾಟಕ ದಿನಪತ್ರಿಕೆಯ ಮೊದಲ ಸಂಪಾದಕರಾದ ಈಶ್ವರ ದೈತೋಟ ಅವರು ಕೃತಿಯ ಎಲ್ಲಾ ಅಧ್ಯಾಯಗಳನ್ನು ತಮ್ಮ ಪತ್ರಿಕೆಯ ಸಂಪಾದಕಿಯ ಪುಟದಲ್ಲಿ ಧಾರವಾಹಿ ರೂಪದಲ್ಲಿ ಪ್ರಕಟಿಸಿದ್ದರು. ಕೃತಿಯಲ್ಲಿ  “ಯುರೇನಿಯಂ ಅದಿರಿನಲ್ಲಿ ದೂಳಾದವರ ಕಥನಎಂಬ ಒಂದು ಅಧ್ಯಾಯವಿದೆ. ಈಗಿನ ಜಾರ್ಖಂಡ್ ರಾಜ್ಯದಲ್ಲಿರುವ ಪೂರ್ವ ಸಿಂಗಭೂಮಿ ಜಿಲ್ಲೆಯ ಜಾದೂಗಡ ಎಂಬ ಪ್ರದೇಶದಲ್ಲಿ ನಡೆಯುತ್ತಿರುವ ಯುರೇನಿಯಂ ಅದಿರು ಗಣಿಗಾರಿಕೆ ಹಾಗೂ ಇದರಿಂದಾಗಿ ಸಾವಿನ ಮನೆಯ ಕದ ತಟ್ಟುತ್ತಿರುವ ಅಲ್ಲಿನ ಮುಗ್ಧ ಅದಿವಾಸಿಗಳ ದುರಂತಗಾಥೆಯನ್ನು ದಾಖಲಿಸಿದ್ದೆ. ನೋವಿನ ಸಂಗತಿಯೆಂದರೆ, ಅಲ್ಲಿನ ಪರಿಸ್ಥಿತಿಯು ಎರಡು ದಶಕ ಕಳೆದರೂ ಇನ್ನೂ ಸುಧಾರಿಸಿಲ್ಲ. ಕಳೆದ ತಿಂಗಳು ಅಮೇರಿಕಾದಿಂದ ಬಂದಿದ್ದ ಛಾಯಾಗ್ರಾಹಕನೊಬ್ಬ ಅಲ್ಲಿನ ದುರಂತಗಳನ್ನು ಚಿತ್ರಗಳ ಮೂಲಕ ಸೆರೆ ಹಿಡಿದು ದಾಖಲಿಸಿದಾಗ ನತದೃಷ್ಟರು ಮತ್ತೇ ನನಗೆ ನೆನಪಾದರು.
ಭಾರತದಲ್ಲಿ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದರೂ ಸಹ, ನಮ್ಮ ಕಣ್ಣಿಗೆ ಕಾಣದ ಅಗೋಚರವಾದ ಹಾಗೂ  ನರಳುತ್ತಿರುವ ನತದೃಷ್ಟ ಭಾರತವೊಂದು ಇನ್ನೂ ಅಸ್ತಿತ್ವದಲ್ಲಿ ಇದೆ ಎಂಬುದನ್ನು ನಾವು ಮರೆತಿದ್ದೆವೆ. ಪಕ್ಷ ಅಥವಾ ಜಾತಿ, ಧರ್ಮ ಇಲ್ಲವೆ ಭಾಷೆಯ ಹೆಸರಿನಲ್ಲಿ ಕತ್ತಿ ಹಿಡಿದು ಹಾರಾಡುತ್ತಾ  ಪರಸ್ಪರ ಇರಿದುಕೊಳ್ಳುತ್ತಿದ್ದೇವೆ. ಆದರೆ, ಹಸಿವಿನಿಂದ ಸಾಯುತ್ತಿರುವ ನತದೃಷ್ಟರು, ತಮಗೆ ಅರಿವಿಲ್ಲದಂತೆ, ಕ್ರಿಮಿನಾಶಕಗಳಿಗೆ ಅಥವಾ ಯುರೇನಿಯಂ ಅದಿರಿನಿಂದ ಹೊರಸೂಸುವ ಅಣುವಿಕಿರಣಗಳಿಗೆ ಬಲಿಯಾಗಿ ಸಾಯುತ್ತಿರುವವರು, ಮಾನಸಿಕ ಅಸ್ವಸ್ಥರು, ಸೂರಿಲ್ಲದವರು, ದಿನನಿತ್ಯ ಕಾಮುಕರ ಅಟ್ಟಹಾಸಕ್ಕೆ ಬಲಿಯಾಗುತ್ತಿರುವ ಹೆಣ್ಣುಮಕ್ಕಳು, ಬಿತ್ತಿ ಬೆಳೆದದ್ದನ್ನು ಸೂಕ್ತ ಬೆಲೆಗೆ ಮಾರಾಟ ಮಾಡಲಾದೆ, ಮಾಡಿದ ಕೃಷಿ ಸಾಲವನ್ನು ತೀರಿಸಲಾಗದೆ ಅಸಹಾಯಕ ಸ್ಥಿತಿಗೆ ದೂಡಲ್ಪಟ್ಟು ನೇಣಿನ ಉರುಳಿಗೆ ಕೊರಳೊಡ್ಡುತ್ತಿರುವ ರೈತರು ಹೀಗೆ ಅನೇಕ ಅಸಹಾಯಕರು ಇಂದಿನ ನಮ್ಮ ಕೀಳು ದರ್ಜೆ ಸಂಸ್ಕತಿಯ ಕಾರಣದಿಂದಾಗಿ ನೆನಪಿಗೆ ಬರುತ್ತಿಲ್ಲ. ಹಾಗಾಗಿ ನಾವೀಗ ಬದುಕುತ್ತಿರುವುದು   ಪ್ರಗತಿಯತ್ತ ದಾಪುಗಾಲು ಹಾಕುತ್ತಿರುವ ಭಾರತದಲ್ಲಿಯೋ? ಅಥವಾ  ವಿಸ್ಮøತಿಯ ಭಾರತವೋಎಂಬುದಕ್ಕೆ ಉತ್ತರ ಕಂಡುಕೊಳ್ಳಬೇಕಾಗಿದೆ.

ಸ್ವಾತಂತ್ರ್ಯಾನಂತರ ಭಾರತದಲ್ಲಿ ಕೇಂದ್ರ ಸರ್ಕಾರವು ಅಣುಶಕ್ತಿ ಆಯೋಗವನ್ನು ಸ್ಥಾಪಿಸಿ, ಅಣು ವಿದ್ಯುತ್ ಉತ್ಪಾದಿಸಲು ನಿರ್ಧರಿಸಿತು. ಅಣು ವಿದ್ಯುತ್ ಉತ್ಪಾದನೆಗೆ ಬೇಕಾದ ಯುರೇನಿಯಂ ಅದಿರನ್ನು ವಿದೇಶದಿಂದ ಆಮದು ಮಾಡಿಕೊಳ್ಳುವ ಬದಲಾಗಿ ಯುರೇನಿಯಂ ಅದಿರಿನ ನಿಕ್ಷೇಪದ ಹುಡುಕಾಟ ಕುರಿತು 1951 ರಲ್ಲಿ ದೇಶಾದ್ಯಂತ ಸಮೀಕ್ಷೆ ನಡೆಸಿದಾಗ ಮೇಘಾಲಯ ರಾಜ್ಯದಲ್ಲಿ ಹಾಗೂ ಈಗಿನ ಜಾರ್ಖಂಡ್ ರಾಜ್ಯದ ಸಿಂಗಭೂಮಿ ಜಿಲ್ಲೆಯ ಭೂಮಿಯ ತಳದಲ್ಲಿ ಯುರೇನಿಯಂ ಇರುವುದು ಪತ್ತೆಯಾಯಿತು. ಜೊತೆಗೆ ಕೇರಳದ ಕಡಲ ತೀರದ ಮರಳಿನಲ್ಲಿ ಯುರೇನಿಯಂ ಹೋಲುವ ಆದರೆ, ಅದರಷ್ಟು ಪ್ರಭಾವಶಾಲಿಯಲ್ಲದ ಥೋರಿಯಂ ಸಹ ಪತ್ತೆಯಾಯಿತು.
1960 ರಲ್ಲಿ ಯುರೇನಿಯಂ ಅದಿರು ಗಣಿಗಾರಿಕೆಗಾಗಿಯುರೇನಿಯಂ ಕಾರ್ಪೋರೇಷನ್ ಲಿಮಿಟೆಡ್ಎಂಬ ಅಂಗ ಸಂಸ್ಥೆಯನ್ನು ಸ್ಥಾಪಿಸಿದ ಕೇಂದ್ರಸರ್ಕಾರವು, ಮೇಘಾಲಯ ಮತ್ತು ಜಾದೂಗಡದಲ್ಲಿ ಗಣಿಕಾರಿಕೆಯನ್ನು ಆರಂಭಿಸಿ, 1967ರಲ್ಲಿ ಹೈದರಾಬಾದಿನಲ್ಲಿ ಸಂಸ್ಕರಣಾ ಘಟಕವನ್ನು ಸ್ಥಾಪಿಸಿತುಜಾದೂಗಡ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗಾಗಿ ಸ್ಥಳಿಯ ಸಂತಾಲ್, ಮುಂಡ ಮತ್ತು ಮಹಲಿ ಎಂಬ ಬುಡಕಟ್ಟು ಆದಿವಾಸಿಗಳನ್ನು ದಿನಗೂಲಿಯ ಆಧಾರದ ಮೇಲೆ ನೇಮಿಸಿಕೊಳ್ಳಲಾಯಿತು. ಅಲ್ಲಿಯವರೆಗೆ ಅರಣ್ಯದಲ್ಲಿ ಸ್ವಚ್ಛಂzವಾಗಿ ಪರಿಸರದ ನಡುವೆ ಬದುಕಿದ್ದ ಅರಣ್ಯವಾಸಿಗಳಿಗೆ ಉದ್ಯೋಗ ಸಿಕ್ಕಿದ್ದು ಒಂದು ರೀತಿಯಲ್ಲಿ ಸಂತೋಷವಾಗಿತ್ತು. ಆದರೆ, ಅವರಿಗೆ ಯುರೇನಿಯಂ ಅದಿರು ಹೊರಸೂಸುವ ಅಣುವಿಕಿರಣಗಳ ಅಪಾಯ ಕುರಿತು ಯಾವುದೇ ರೀತಿಯ ಕಲ್ಪನೆ ಇರಲಿಲ್ಲ. ಜೊತೆಗೆ ಅಧಿಕಾರಿಗಳು ಮತ್ತು ಅಣುವಿಜ್ಞಾನಿಗಳು ತಮಗೆ ಗೊತ್ತಿದ್ದ ಸಂಗತಿಯನ್ನು ಹೊÀರಜಗತ್ತಿಗೆ ಬಿಟ್ಟುಕೊಡಲಿಲ್ಲ. ಕೇವಲ ಒಂದು ದಶಕದ ಅವಧಿಯಲ್ಲಿ ಅಲ್ಲಿನ ಗಿಡಮರ, ಪ್ರಾಣಿ ಪಕ್ಷಿಗಳು ಮತ್ತು ಜಲಮೂಲಗಳು ಅಣುವಿಕರಣದಿಂದ ತಮ್ಮ ಮೂಲಸ್ವರೂಪಗಳನ್ನು ಕಳೆದುಕೊಂಡವು. ಗಣಿಕಾರ್ಮಿಕರಿಗೆ ವಿಚಿತ್ರವಾದ ಚರ್ಮಕಾಯಿಲೆ, ಅಂಗಾಂಗ ವೈಫಲ್ಯ, ಕ್ಯಾನ್ಸರ್ ಕಾಯಿಲೆಗಳು ಕಾಣಿಸಿಕೊಳ್ಳತೊಡಗಿದವು. ಮಹಿಳೆಯರಲ್ಲಿ ಗರ್ಭಪಾತದ ಪ್ರಮಾಣ ಹೆಚ್ಚಾಗುವುದರ ಜೊತೆಗೆ ಅಂಗವಿಕಲ ಮಕ್ಕಳು ಜನಿಸತೊಡಗಿದವು. ಹಸು, ಎಮ್ಮೆ, ಕುರಿ ಮೇಕೆಯಂತಹ ಪ್ರಾಣಿಗಳಲ್ಲಿಯೂ ಸಹ ಇದೇ ಸಮಸ್ಯೆ ಕಾಡತೊಡಗಿತು. ಜಾದೂಗಡದ ಅರಣ್ಯದಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯ ಸುತ್ತಮುತ್ತಲಿನ 30 ಕಿಲೊಮೀಟರ್ ಚದುರ ವ್ಯಾಪ್ತಿಯ ಪ್ರದೇಶದ 23 ಹಳ್ಳಿಗಳ 60 ಸಾವಿರ ಜನಸಂಖ್ಯೆಯಲ್ಲಿ ಅನೇಕ ಜನರು ವಿವಿಧ ಕಾಯಿಲೆಗಳ ನೆಪದಲ್ಲಿ ಸ್ಥಳೀಯ ಜೆಮ್ಷೆಡ್ಪುರದ ಆಸ್ಪತ್ರೆಗೆ ದಾಖಲಾಗತೊಡಗಿದರು. ಕುರಿತು 1995 ರಲ್ಲಿ ಸ್ಥಳಿಯ ಪರಿಸರವಾದಿಗಳು ಸಂಘಟನೆಯೊಂದನ್ನು ಸ್ಥಾಪಿಸಿಕೊಂಡು, ಗಣಿ ಪ್ರದೇಶದ ಹತ್ತಿರವಿದ್ದ ಐದು ಹಳ್ಳಿಗಳ ಸುಮಾರು ಎರಡು ಸಾವಿರ ಮನೆಗಳಲ್ಲಿ ವಾಸಿಸುತ್ತಿದ್ದ ಒಂಬತ್ತು ಸಾವಿರ ಆದಿವಾಸಿ ಜನರನ್ನು ತಪಾಸಣೆಗೆ ಒಳಪಡಿಸಿದಾಗ ಅವರೆಲ್ಲರೂ ಅಣುವಿಕರಣಕ್ಕೆ ತುತ್ತಾಗಿದ್ದರು.
ಅಂತರಾಷ್ಟ್ರೀಯ ಮಾನದಂಡದ ಪ್ರಕಾರ 4 ರೆಮ್ಸ್ ನಷ್ಟು ( ಅಣುವಿಕಿರಣವನ್ನು ಅಳೆಯುವ ಮಾಪಕÀ) ಅಣುವಿಕಿರಣ ಮಾನವರಿಗೆ ಅಪಾಯವಲ್ಲ ಎಂದು ಹೇಳಲಾಗಿತ್ತು.ಆದರೆ, ಜಾದೂಗಡದಲ್ಲಿ ಪ್ರಮಾಣ 2.93 ರಷ್ಟು ಮೊದಲ ದಶಕದಲ್ಲಿ ಕಾಣಿಸಿಕೊಂಡು, ಆನಂತರ ಅದಿರನ್ನು ಸಂಸ್ಕರಿಸಿದ ನಂತರ ಹೊರಬಿಟ್ಟ ತ್ಯಾಜ್ಯದ ನೀರು ಸ್ಥಳಿಯ ನದಿ, ಕಾಲುವೆ ಮತ್ತು ಹೊಂಡಗಳನ್ನು ಸೇರಿ ಎಲ್ಲಾ ಜೀವಿಗಳಿಗೆ ಅಪಾಯವನ್ನು ತಂದೊಡ್ಡಿತ್ತು. ಕುರಿತು ಅಣುಶಕ್ತಿ ಆಯೋಗವು 1997 ರಲ್ಲಿ ತಜ್ಞರ ತಂಡವನ್ನು ಜಾದೂಗಡಕ್ಕೆ ಕಳುಹಿಸಿ ತನಿಖೆ ಮಾಡಿದಾಗ, ತಜ್ಞರು ಅಲ್ಲಿ ಆಗಿರುವ ಅನಾಹುತವನ್ನು ಒಪ್ಪಿಕೊಂಡರು. ಆನಂತರ ಗಣಿಕಾರ್ಮಿಕರಿಗೆ ಕೈಗವಚ, ರಕ್ಷಣಾ ವಸ್ತ್ರಗಳು, ಹೀಗೆ ಅನೇಕ ಬಗೆಯ  ಕ್ರಮಗಳನ್ನು ಕೈಗೊಳ್ಳಲಾಯಿತು. ಆದರೂ ಸಹ ಅಲ್ಲಿನ ನೈಸರ್ಗಿಕ ಪರಿಸರ ಸಂಪೂರ್ಣವಾಗಿ ಅಣುವಿಕರಣಕ್ಕೆ ಬಲಿಯಾದ ಕಾರಣ ಅದರ ಪರಿಣಾಮವನ್ನು ಅಲ್ಲಿನ ಜನತೆ ಅನುಭವಿಸಬೇಕಾಗಿದೆ.

ಆರಂಭದಲ್ಲಿ ದಿನಕ್ಕೆ ಆರನೂರು ಟನ್ ಯುರೇನಿಯಂ ಅದಿರು ಹೊರತೆಗೆಯಲಾಗುತ್ತಿತ್ತು. ಇದೀಗ ಪ್ರಮಾಣ ಎರಡು ಸಾವಿರ ಟನ್ ಮೀರಿದೆ. ತೆಗೆದು ಅದಿರನ್ನು ನೀರಿನಲ್ಲಿ ಸಂಸ್ಕರಿಸಿ, ಆನಂತರ  ಯುರೇನಿಯಂ-235-236-238 ಎಂಬ ಹೆಸರಿನಲ್ಲಿ ಅದರ ಗುಣಮಟ್ಟದ ಆಧಾರದ ಮೇಲೆ ವಿಂಗಡಿಸಲಾಗುತ್ತದೆ. ನಂತರ ಅದನ್ನು ಲಾರಿಗಳ ಮೂಲಕ ಜೆಮ್ ಷೆಡ್ ಪುರಕ್ಕೆ ಸಾಗಿಸಿ, ಅಲ್ಲಿಂದ ಹೈದರಾಬಾದ್ ನಗರಕ್ಕೆ ಗೂಡ್ಸ್ ರೈಲುಗಳ ಮೂಲಕ ಸಾಗಿಸಲಾಗುತ್ತದೆ. ಹೈದರಾಬಾದ್ ಘಟಕದಲ್ಲಿ ಅಣುವಿದ್ಯುತ್ ಕೇಂದ್ರಗಳಲ್ಲಿ ಅದನ್ನು ಬಳಸುವ ಉದ್ದೇಶದಿಂದ ಸಣ್ಣ ಸಣ್ಣ ಮಿಲ್ಲೆಟ್ ಅಂದರೆ, ಉಂಡೆಗಳು ಅಥವಾ ಬಿಲ್ಲೆಗಳ ರೂಪ ನೀಡಲಾಗುತ್ತದೆ. ಇದು ಒಂದು ರೀತಿಯಲ್ಲಿ ಒಂದು ಟನ್ ಚಿನ್ನದ ಅದಿರಿನಲ್ಲಿ ಮೂರು ಗ್ರಾಂ ಚಿನ್ನ ತೆಗೆಯುವಂತಹ ಪ್ರಕ್ರಿಯೆಯಾಗಿದೆ. ಮಿಲ್ಲೆಟ್ ರೂಪದ ಬಿಲ್ಲೆ ಅಥವಾ ಉಂಡೆಗಳನ್ನು  ಸುರಕ್ಷಿತವಾಗಿ ಅತ್ಯಂತ ದಪ್ಪದಾದ ಉಕ್ಕಿನ ಕವಚ ಹೊಂದಿರುವ ಸಿಲಿಂಡರ್ ರೂಪದ ಡಬ್ಬಿಗಳಲ್ಲಿ ಇಟ್ಟು ಅಣುವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಸಾಗಿಸಲಾಗುತ್ತದೆ. ಅಲ್ಲಿ ಇವುಗಳನ್ನು ಉರಿಸಿದ ನಂತರ  ಉಳಿಯುವ ಅಣುತ್ಯಾಜ್ಯವನ್ನು ಮತ್ತೇ ಉಕ್ಕಿನ ಡ್ರಂ ಗಳಲ್ಲಿ ಇಟ್ಟು  ಭೂಮಿಯ ಆಳದಲ್ಲಿ ಹೂಳಲಾಗುತ್ತದೆ. ತಾಜ್ಯವು ಸುಮಾರು ಇನ್ನೂರು ವರ್ಷಗಳ ಅಣುವಿಕರಣವನ್ನು ಸೂಸುವ ಸಾಮಾರ್ಥವನ್ನು ಹೊಂದಿದೆ. ಕಾರಣಕ್ಕಾಗಿ ಜಗತ್ತಿನ ಶೇಕಡ ತೊಂಬತ್ತರಷ್ಟು ಅಣುವಿದ್ಯುತ್ ಘಟಕಗಳು ಸಮುದ್ರದ ತಡಿಯಲ್ಲಿ ಸ್ಥಾಪನೆಗೊಂಡಿವೆ. ಅಲ್ಲಿನ ನೀರನ್ನು ಸಮುದ್ರಕ್ಕೆ ಬಿಡಲಾಗುತ್ತಿದೆ. ಭೂಮಿಯೊಳಗೆ ಹೂತಿಟ್ಟ ಅಣು ತ್ಯಾಜ್ಯದ ಪರಿಣಾಮದಿಂದಲೂ ಸಹ  ಕಡಲ ಜೀವಿಗಳು ಅಣುವಿಕರಣಕ್ಕೆ ಒಳಗಾಗುತ್ತಿವೆ. ಆದರೆ, ವಂಚನೆಯ ಜಗತ್ತು ಹೊರಜಗತ್ತಿನ ಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ನಾವು ತಿನ್ನುವ ಮೀನು, ಸೀಗಡಿ ಇತ್ಯಾದಿಗಳಲ್ಲಿ ಅಣುವಿಕರಣವು ಯಾವ 
ಪ್ರಮಾಣದಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ.
ಅಣುವಿಕರಣಗಳಲ್ಲಿ ಆರು ಬಗೆಯ ವಿಕಿರಣಗಳಿದ್ದು, ಅವುಗಳಲ್ಲಿ ಮೊದಲನೆಯದು ಟಿಟಾನಿಯಂ ಎಂಬ ವಿಕಿರಣ. ಇದರ ಆಯಸ್ಸು 12 ವರ್ಷವಾಗಿದ್ದು ಇದು ಚರ್ಮ ಸಂಬಂಧಿ ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುತ್ತದೆ. ಕಾರ್ಬನ್ 14/ಬೀಟಾ ವಿಕರಣದ ಆಯಸ್ಸು 5730 ವರ್ಷಗಳಾಗಿದ್ದು, ಇದೂ ಸಹ ಕ್ಯಾನ್ಸರ್ ಕಾಯಿಗೆ ಕಾರಣವಾಗುತ್ತದೆ. ಮೂರನೆಯದು ಸ್ಟ್ರೋಂಶಿಯಂ-131/ಬೀಟಾಕಿರಣ ಇದರ ಆಯಸ್ಸು 28 ವರ್ಷವಾಗಿದ್ದು ಕ್ಯಾನ್ಸರ್ ಗೆ ಮೂಲವಾಗಿದೆ. ನಾಲ್ಕನೆಯದು ಅಯೋಡಿನ-131/ ಇದು ಬಿಟಾ ಮತ್ತು ಗಾಮ ಕಿರಣವಾಗಿದ್ದು, ಇದರ ಆಯಸ್ಸು ಕೇವಲ 8 ದಿನ ಮಾತ್ರ ಆದರೆ, ಮನುಷ್ಯರ ಥೈರಾಯಡ್ ಸಂಬಂಧಿತ ಕಾಯಿಲೆಗೆ ಇದು  ಕಾರಣವಾಗುತ್ತದೆ. ಐದನೆಯದು, ಸೀಸಿಯಂ-137/ಬೀಟಾ ಮತ್ತು ಗಾಮಕಿರಣ, ಇದರ ಆಯಸ್ಸು 30 ವರ್ಷವಾಗಿದ್ದು ಚರ್ಮ ಮತ್ತು ಮೂಳೆ ಕ್ಯಾನ್ಸರ್ ಗೆ ಕಾರಣವಾಗಬಲ್ಲದು. ಆರನೆಯದು ಪ್ಲುಟೋನಿಯಂ239/ ಇದು ಆಲ್ಫಾ ಕಿರಣವಾಗಿದ್ದು ಇದರ ಆಯಸ್ಸು ಬರೋಬ್ಬರಿ 24,100 ವರ್ಷವಾಗಿದೆ.ಇದು ಗಂಟಲು ಕ್ಯಾನ್ಸರ್ ಗೆ ಕಾರಣವಾಗುತ್ತಿದೆ. ಇಂತಹ ಸಾವಿನ ಕರೆಗಂಟೆಯನ್ನು ತಮ್ಮ ಒಡಲಲಲ್ಲಿ ಇಟ್ಟು ಬದುಕುತ್ತಿರುವ ಅಮಾಯಕ ಮುಗ್ಧ ಜನರ ನಡುವೆ ನಾವು ನಮ್ಮದೇ ಭ್ರಮಾಲೋಕದಲ್ಲಿ ತೇಲಿ, ಮುಳುಗುತ್ತಾ, “ವಾಟ್ ವಂಡರ್ಪುಲ್ ಲೈಫ್ಎಂದು  ಸಂಭ್ರಮಿಸುತ್ತಿದ್ದೇವೆ ಆದರೆ, ಸಾವು ಸದ್ದಿಲ್ಲದೆ ನಮ್ಮ ಮನೆಯ ಬಾಗಿಲಿನಾಚೆ ಬಂದು ಕುಳಿತಿದೆ.
(ಕರಾವಳಿ ಮುಂಜಾವು ಪತ್ರಿಕೆಯ “ಜಗದಗಲ” ಅಂಕಣ ಬರಹ)


ವೀಣಾ ಧನಮ್ಮಾಳ್ ಎಂಬ ಕರ್ನಾಟಕ ಸಂಗೀತದ ಮೇರು ಶಿಖರ



ಇದು 1904 ರಲ್ಲಿ ನಡೆದ  ನಡೆದ ಒಂದು ಅವಿಷ್ಮರಣೀಯ ಘಟನೆ. ಅಂದಿನ ಮಲಬಾರಿನ ಅಥವಾ ಈಗಿನ ಕೇರಳದ  ಪಾಲಕ್ಕಡ್ ಜಿಲ್ಲೆಯಲ್ಲಿರುವ ಕೊಳ್ಳೆಂಗೋಡ್ ಸಂಸ್ಥಾನದÀ ದೊರೆ  ವಸುದೇವರಾಜ ಎಂಬಾತನು ತನ್ನ ಪುತ್ರಿಯ ವಿವಾಹದ ಸಂದರ್ಭದಲ್ಲಿ   ತನ್ನ ಅರಮನೆಯಲ್ಲಿ ಏಳುದಿನಗಳ ಕಾಲ ಬೆಳಿಗ್ಗೆ ಮತ್ತು ಸಂಜೆ ಕಾಲದ ದಕ್ಷಿಣ ಭಾರತದ ಪ್ರಖ್ಯಾತ ಕಲಾವಿದರಿಂದ ಸಂಗೀತ ಕಛೇರಿಯನ್ನು ಏರ್ಪಡಿಸಿದ್ದನು. ಇಡೀ ಕಾರ್ಯಕ್ರಮದ ಜವಾಬ್ದಾರಿಯನ್ನು ಪ್ರಸಿದ್ಧ ಹಿರಿಯ ಕಲಾವಿದರಾಗಿದ್ದ ಅನಂತರಾಮ ಭಾಗವತರ್ ಎಂಬುವರು ವಹಿಸಿಕೊಂಡಿದ್ದರು. ವಿವಾಹದ ಪ್ರಯುಕ್ತ ನಡೆಸಲಾದ ಸಂಗೀತ ಕಛೇರಿಗೆ ಆಹ್ವಾನಿಸಿದ ಕಲಾವಿದರ ಪೈಕಿ ಏಕೈಕ ಮಹಿಳಾ ಕಲಾವಿದೆಯಾಗಿ ವೀಣಾ ಧನಮ್ಮಾಳ್ ಇದ್ದರು. ವೀಣಾ ಧನಮ್ಮಾಳ್ ಅವರ ವೀಣಾ ಕಾರ್ಯಕ್ರಮ ಇದ್ದ ದಿನದಂದು ದೊರೆಯ ಬಳಿ ತೆರಳಿದ ಅನಂತರಾಮ ಭಾಗವತರ್, ಧನಮ್ಮಾಳ್ ಅವರ ಸಂಗೀತ ಕಾರ್ಯಕ್ರಮಕ್ಕೆ ಎಲ್ಲಾ ಕಲಾವಿದರು ತಪ್ಪದೆ ಭಾಗವಹಿಸಬೇಕೆಂದು ತಾವು ಕರೆ ನೀಡಬೇಕೆಂದು ಪ್ರಾರ್ಥಿಸಿಕೊಂಡರು. ಅದರಂತೆ ದಿನ ಸಂಜೆ ರಾಜಕುಂಟುಂಬದ ಪರಿವಾರದ ಸದಸ್ಯರೂ ಸೇರಿದಂತೆ, ದಕ್ಷಿಣ ಭಾರತದ ಪ್ರಸಿದ್ಧ ಸಂಗೀತ ಕಲಾವಿದರು ಮತ್ತು ವಿದ್ವಾಂಸರು ವೀಣಾ ಧನಮ್ಮಾಳ್ ಅವರ ಸಂಗೀತ ಕಾರ್ಯಕ್ರಮಕ್ಕೆ ಸಾಕ್ಷಿಯಾದರು ಶುದ್ಧ ಶಾಸ್ತ್ರೀಯವಾಗಿ, ಮಂದ್ರಗತಿಯ ಶೈಲಿಯಲ್ಲಿ ಅವರು ವೀಣೆಯಲ್ಲಿ ನುಡಿಸಿದ ರಾಗಗಳು, ಕೀರ್ತನೆಗಳು, ಪದಂ ಮತ್ತು ಜಾವಳಿ ಇವುಗಳನ್ನು ಕೇಳಿ ಸಂತೋಷಗೊಂಡ ದೊರೆಯು; ನೆರೆದಿದ್ದ ವಿದ್ವಾಂಸರ ನಡುವೆ ವೀಣಾ ಧನಮ್ಮಾಳ್ ಅವರಿಗೆ ಅಗ್ರ ತಾಂಬೂಲ ಹಾಗೂ ಚಿನ್ನದ ಪದಕ ನೀಡಿ ಗೌರವಿಸಿದನು. ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಇಂತಹ ಅತ್ಯುನ್ನತ ಗೌರವಕ್ಕೆ ಪಾತ್ರರಾದ ಕಲಾವಿದೆಯರಲ್ಲಿ ವೀಣಾ ಧನಮ್ಮಾಳ್ ಅತಿ ಮುಖ್ಯರು.
ದಕ್ಷಿಣ ಭಾರತದಲ್ಲಿ ನೃತ್ಯ ಮತ್ತು ಸಂಗೀತ ಕುರಿತು ಮಾತನಾಡುವಾಗ ಅಥವಾ ಬರೆಯುವಾಗ ವೀಣಾ ಧನಮ್ಮಾಳ್ ಅವರ ಕುಟುಂಬದ ಸುಮಾರು ಏಳು ತಲೆಮಾರಿನ ಸದಸ್ಯರು  ವಂಶ ಪಾರಂಪರ್ಯವಾಗಿ ಕಳೆದ ನಾಲ್ಕು ಶತಮಾನಗಳಿಂದ ಕರ್ನಾಟಕ ಸಂಗೀತ  ಮತ್ತು ನೃತ್ಯಕ್ಕೆ ನೀಡಿರುವ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ವೀಣಾಧನಮ್ಮಾಳ್ ಅವರ ಮುತ್ತಜ್ಜಿ ಪಾಪಮ್ಮಾಳ್ ಎಂಬುವರು ತಂಜಾವೂರಿನ ಮರಾಠ ದೊರೆಗಳ ಆಸ್ಥಾನದಲ್ಲಿ ಸಂಗೀತ ವಿದುಷಿ ಹಾಗೂ ರಾಜ ನರ್ತಕಿಯಾಗಿ ಸೇವೆ ಸಲ್ಲಿಸಿದ್ದರು. ಅವರ ಪುತ್ರಿ ಕಾಮಾಕ್ಷಿ ಅಮ್ಮಾಳ್ ಅವರು ಕರ್ನಾಟಕ ಸಂಗೀತದ ತ್ರೀಮೂರ್ತಿ ವಾಗ್ಗೇಯಕಾರರಲ್ಲಿ ಒಬ್ಬರಾದ ಶ್ಯಾಮಾಶಾಸ್ತ್ರಿಗಳ ಶಿಷ್ಯರಲ್ಲಿ ಒಬ್ಬರಾಗಿ ಸಂಗೀತವನ್ನು ಅಭ್ಯಾಸ ಮಾಡಿದ್ದರು. ಕಾಮಾಕ್ಷಿ ಅಮ್ಮಾಳ್ ಅವರ ಪುತ್ರಿ ಅಂದರೆ, ಧನಮ್ಮಾಳ್ ಅವರ ತಾಯಿ ಸುಂದರಮ್ಮಾಳ್ ಸಹ ಶ್ಯಾಮಾಶಾಸ್ತ್ರಿಯವರ ಪುತ್ರ ಸುಬ್ಬರಾಯಶಾಸ್ತ್ರಿಯವರ ಶಿಷ್ಯೆಯಾಗಿ ಸಂಗೀತವನ್ನು ಮುಂದುವರಿಸಿ, ತಂಜಾವೂರು ಶೈಲಿಯ ಸಂಗೀತ ಮತ್ತು ನೃತ್ಯವನ್ನು ತಮ್ಮ ಮನೆತನದ ಅಮೂಲ್ಯ ಆಸ್ತಿಯನ್ನಾಗಿ ಮಾಡಿಕೊಂಡಿದ್ದರು. ಇಂತಹ ಪರಿಣಿತ ಕಲಾವಿದರ ಕುಟುಂಬದಲ್ಲಿ 1868 ರಲ್ಲಿ ವೀಣಾಧನಮ್ಮಾಳ್ ಅಂದಿನ ಮದ್ರಾಸ್ ನಗರದ ಜಾರ್ಜ್ಟೌನ್ ಪ್ರದೇಶದಲ್ಲಿ ಜನಿಸಿದರು. ಧನಮ್ಮಾಳ್ ಜನನಕ್ಕೆ ಮುನ್ನವೇ ಅವರ ಅಜ್ಜಿ ಕಾಮಾಕ್ಷಿ ಅಮ್ಮಾಳ್ ಪೋಷಕರನ್ನು ಅರಸಿಕೊಂಡು ಮದ್ರಾಸ್ ನಗರಕ್ಕೆ ವಲಸೆ ಬಂದಿದ್ದರು.
ದೇವಾಲಯಗಳಲ್ಲಿ ಹಾಗೂ ರಾಜರ ಆಸ್ಥಾನಗಳಲ್ಲಿ ನೃತ್ಯ ಮತ್ತು ಸಂಗೀತವನ್ನು ವೃತ್ತಿ ಮಾಡಿಕೊಂಡಿದ್ದ ಅನೇಕ ದೇವದಾಸಿ ಕುಟುಂಬಗಳಿಗೆ ಹತ್ತೊಂಬತ್ತನೇ ಶತಮಾನದ ಕೊನೆಯ ಭಾಗದಲ್ಲಿ ತಮಿಳುನಾಡಿನಲ್ಲಿ ಸಂಭವಿಸಿದ ಸಾಂಸ್ಕøತಿಕ ಹಾಗೂ ಸಾಮಾಜಿಕ ಪಲ್ಲಟಗಳು ನಗರದತ್ತ ವಲಸೆ ಹೋಗಲು ಪರೋಕ್ಷವಾಗಿ ಕಾರಣವಾದವು. ದೇವಾಲಯಗಳಿಗೆ ದೇವದಾಸಿ ಕುಟುಂಬದ ಹೆಣ್ಣು ಮಕ್ಕಳನ್ನು ದತ್ತು ನೀಡುವುದು ಹಾಗೂ ದೇವಾಲಯಗಳಲ್ಲಿ ಆಚರಣೆಯಲ್ಲಿದ್ದ ದೇವದಾಸಿಯರ ನೃತ್ಯ ಪದ್ಧತಿ ಇವುಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆದವು. ಬ್ರಿಟೀಷರು ಹಾಗೂ ಮಿಷನರಿಗಳು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳಿಂದ ವಿಚಾರವಂತರಾದ ಜನತೆ ಸಾಮಾಜಿಕ ಸುಧಾರಣೆಯತ್ತ ಗಮನ ಹರಿಸಿದರು. ಇದರ ಜೊತೆಗೆ ಈಸ್ಟ್ ಇಂಡಿಯಾ ಕಂಪನಿಯು ದೇಶದ ಅನೇಕ ಸಂಸ್ಥಾನಗಳನ್ನು ಕೈವಶಮಾಡಿಕೊಂಡು, ರಾಜರುಗಳಿಗೆ ವಾರ್ಷಿಕವಾಗಿ ಪರಿಹಾರ ನೀಡಲು ಆರಂಭಿಸಿದಾಗ, ಸಂಗೀತ ಮತ್ತು ನೃತ್ಯ ಕಲಾವಿದರಿಗೆ ಇದ್ದ ಆಶ್ರಯ ತಪ್ಪಿಹೋಯಿತು. ಇಂತಹ ಅತಂತ್ರ ಸ್ಥಿತಿಯಲ್ಲಿ ಧನಮಾಳ್ ಅವರ ಅಜ್ಜಿ ಕಾಮಾಕ್ಷಿ ಅಮ್ಮಾಳ್ ಸೇರಿದಂತೆ, ನೂರಾರು ದೇವದಾಸಿ ಕುಟುಂಬಗಳು ತಂಜಾವೂರು, ಮಧುರೈ, ಆಂಧ್ರಪ್ರದೇಶದ ವಿವಿಧ ಸಂಸ್ಥಾನಗಳಿಂದ ಮದ್ರಾಸ್ ನಗರಕ್ಕೆ ವಲಸೆ ಬಂದವು. ಇಂತಹ ಕಲಾವಿದೆಯರಿಗೆ ನೃತ್ಯ ಮತ್ತು ಸಂಗೀತದ ಶಿಕ್ಷಣ ನೀಡುತ್ತಿದ್ದ ವಿದ್ವಾಂಸರೂ ಸಹ ಕಲಾವಿದರ ಜೊತೆ ನಗರಕ್ಕೆ ಆಗಮಿಸಿದರು. ರಾಜಾಶ್ರಯದಲ್ಲಿ ಬೆಳೆದ ತಂಜಾವೂರು ಶೈಲಿಯ ನೃತ್ಯ ಮತ್ತು ಸಂಗೀತ ಹಾಗೂ ಕರ್ನಾಟಕ ಸಂಗೀತದ  ವಾಗ್ಗೇಯಕಾರರಾದ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಶ್ಯಾಮಾಶಾಸ್ತ್ರಿಗಳ ಸಂಗೀತ ಕೃತಿಗಳಲ್ಲಿ ಪರಿಣಿತರಾಗಿದ್ದ ಧನಮ್ಮಾಳ್ ಅವರ ಕುಟುಂಬಕ್ಕೆ ಮದ್ರಾಸ್ ನಗರದಲ್ಲಿ ವಿಶೇಷ ಗೌರವಿತ್ತು. ಕಾಮಾಕ್ಷಿ ಅಮ್ಮಾಳ್ ಅವರಿಗೆ ರಂಗೂನ್ ಕೃಷ್ಣಸ್ವಾಮಿ ಮೊದಲಿಯಾರ್ ಎಂಬುವರು ಪೋಷಕರಾದರು. ಧನಮ್ಮಾಳ್ ಮತ್ತು ಅವರ ಸಹೋದರಿ ರೂಪವತಿ ಇಬ್ಬರಿಗೂ ತಾಯಿ ಸುಂದರಮ್ಮಾಳ್ ಹಾಗೂ ಅಜ್ಜಿ ಕಾಮಾಕ್ಷಿ ಅಮ್ಮಾಳ್ ಅವರು ಮನೆಯಲ್ಲಿಯೇ ಸಂಗೀತದಲ್ಲಿ ಶಿಕ್ಷಣ ಕೊಡಿಸಿದರುಅತಿ ಶೀಘ್ರದಲ್ಲಿ ಧನಮ್ಮಾಳ್ ಅವರ ಧ್ವನಿ ಗಾಯನಕ್ಕೆ ಸೂಕ್ತವಲ್ಲ, ಅದು ವೀಣಾ ವಾದನಕ್ಕೆ ಸೂಕ್ತ ಎಂಬುದನ್ನು ಅರಿತ ಅವರು ವೀಣೆಯ ತರಬೇತಿ ಕೊಡಿಸಿದರು. ಆರಂಭದ ದಿನಗಳಲ್ಲಿ ವೀಣಾ ಗಾಯನ ಕುರಿತಂತೆ ಒಲವು ತೋರಿಸದ ಧನಮ್ಮಾಳ್; ಒಮ್ಮೆ ಕಲ್ಯಾಣ ಕೃಷ್ಣ ಭಾಗವತರ ಕಚೇರಿಯನ್ನು ನೋಡಿ, ವೀಣೆಯತ್ತ ಒಲಿದರು. ನಂತರ ಅವರು ಅಳಗ ಸಿಂಗ್ರಚಾರ್ ಬಳಿ ಅಭ್ಯಾಸ ಮಾಡುವುದರ ಜೊತೆಗೆ ಸಾತ್ತನೂರ್ ಪಂಚನದಯ್ಯರ ಬಳಿ ತಾನವನ್ನು ಕಲಿತರುಅವರ ತಾಯಿ ಮತ್ತು ಅಜ್ಜಿ ಕರ್ನಾಟಕ ಸಂಗೀತದ ರಾಗಗಳು ಮತ್ತು ಅವುಗಳ P್ಪ್ಷಣಗಳು ಹಾಗೂ  ಸಂಗೀತ ಕೃತಿಗಳನ್ನು ಧಾರೆಯೆರೆದರು. ಇದರಿಂದಾಗಿ  ವರ್ಣಗಳಲ್ಲಿ ಧನಮ್ಮಾಳ್ ಅವರು ಅಪ್ರತಿಮ ಸಾಧನೆಗೈದರು. ಜೊತೆಗೆ ಪ್ರಸಿದ್ಧ ವೈಣಿಕರಾಗಿದ್ದ ಬಾಲದಾಸ್ ಮತ್ತು ಪೊನ್ನುಸ್ವಾಮಿಯವರಿಂದ ಪದಂ ಮತ್ತು ಜಾವಳಿ ಹಾಗೂ ನೈನಾಪಿಳ್ಳೆ ಹಾಗೂ ಅರಿಯಕುಡಿ ರಮಾನುಜಾ ಅಯ್ಯಮಗಾರ್ ರವರಿಂದ ಕೆಲವು ಪ್ರಸಿದ್ಧ ಕೃತಿಗಳಲ್ಲಿ ಪರಿಣತಿ ಗಳಿಸಿದರು. ಇಂತಹ ಭವ್ಯವಾದ ಹಿನ್ನಲೆಯಿಂದಾಗಿ ಕಾಲಘÀಟ್ಟದಲ್ಲಿ ಧನಮ್ಮಾಳ್ ಪುರುಷ ಸಾಮ್ರಾಜ್ಯದ ಸ್ವತ್ತಾಗಿದ್ದ ವೀಣೆಯ ವಾದನದಲ್ಲಿ ಎಲ್ಲರಿಗೂ ಸರಿಸಮಾನಾಗಿ ಬೆಳೆದು ನಿಂತರು.
ವೀಣೆಯ ನುಡಿಸಾಣಿಕೆಯಲ್ಲಿ ತಂಜಾವೂರು ಶೈಲಿಯಲ್ಲಿ ಕಾರೈಕುಡಿ ಸಹೋದರರು ( ಸಾಂಬಶಿವ ಮತ್ತು ಸುಬ್ಬರಾಯ ಅಯ್ಯರ್) ವೀಣಾ ಧನಮ್ಮಳ್, ಮೈಸೂರು ಶೈಲಿಯಲ್ಲಿ ವೀಣೆ ಶೇಷಣ್ಣ ಮತ್ತು ಸುಬ್ಬಣ್ಣ ಹಾಗೂ ಆಂಧ್ರಶೈಲಿಯಲ್ಲಿ ನುಡಿಸುತ್ತಿದ್ದ ವೆಂಕಟರಮಣ ದಾಸರು ಇಂತಹ ಶ್ರೇಷ್ಠ  ವೈಣಿಕರ ಹಾಗೆ  ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ವಿವಿಧ ಆಸ್ಥಾನಗಳಲ್ಲಿ ಕಾರ್ಯಕ್ರಮ ನೀಡಿ ಹೆಸರು ವಾಸಿಯಾದರು. ವೀಣೆಯಿಂದ ಹೊರಹೊಮ್ಮುವ ನಾದವು ಮನುಷ್ಯನ ಕಂಠದಿಂದ ಹೊರಹೊಮ್ಮುವ ನಾದಕ್ಕೆ ತಿರಾ ಹತ್ತಿರವಾದುದು ನಿಜ, ಆದರೆಸಂಗೀತದ ಕೃತಿಗಳನ್ನು ಹಲವು ರಾಗಗಳಲ್ಲಿ ಪ್ರಸ್ತುತ ಪಡಿಸುವಾಗ ನೈಪ್ಮಣ್ಯತೆಯ ಜೊತೆಗೆ ಧ್ಯಾನಸ್ಥ ಮನಸ್ಸು ವೈಣಿಕರಿಗೆ ಇರಬೇಕಾಗುತ್ತದೆ. ವಿಷಯದಲ್ಲಿ ಧನಮ್ಮಾಳ್ ಅಗ್ರಗಣ್ಯರಾಗಿದ್ದರು. ಧನಮ್ಮಾಳ್ ವಾಗ್ಗೇಯಕಾರರ ಕೃತಿಗಳನ್ನು ನುಡಿಸುವಾಗ ಕಲ್ಪನಾಸ್ವರಕ್ಕೆ ಅಥವಾ ನೆರವಲ್ ಗೆ ಹೆಚ್ಚಿನ ಆಧ್ಯತೆಯನ್ನು ನಿಡುತ್ತಿರಲಿಲ್ಲ. ರಾಗಾಲಾಪನೆಗಳಲ್ಲಿ ಮಾತ್ರ ಅವರು ತಮ್ಮ ಮನೋಧರ್ಮವನ್ನು ಅಭಿವ್ಯಕ್ತಿಗೊಳಿಸುತ್ತಿದ್ದರು. ಅವರು ಶುದ್ಧ ಶಾಸ್ತ್ರೀಯವಾಗಿ ರಾಗವನ್ನು ನಿರ್ಧಿಷ್ಟ ಮಿತಿಯಲ್ಲಿ ಮಾತ್ರ ವಿಸ್ತರಿಸುತ್ತಿದ್ದರು. ಅವರ ಆಲಾಪನೆಗಳು ಕೃತಿಗೆ ತಕ್ಕಂತೆ ಇರುತ್ತಿದ್ದವು. ಅತ್ಯಂತ ವ್ಯವಸ್ಥಿತವಾಗಿ ವಿಳಂಬ ಕಾಲದಲ್ಲಿ ನುಡಿಸುವುದು ಅವರ ಶೈಲಿಯಾಗಿತ್ತು. ಎಂದಿಗೂ ಅವರು ದ್ರುತಗತಿಯ ಸಂಗೀತ ಪ್ರಸ್ತುತಿಯನ್ನು ಇಷ್ಟ ಪಡುತ್ತಿರಲಿಲ್ಲಅವರು ವೀಣಾ ವಾದನದಲ್ಲಿ ತಂಬೂರಿಯ ಸಣ್ಣನೆಯ ಶೃತಿಯನ್ನು ಹೊರತು ಪಡಿಸಿದರೆ, ಮೃದಂಗವನ್ನು ಪಕ್ಕವಾದ್ಯವಾಗಿ ಬಳಸುವುದಕ್ಕೆ ಇಷ್ಟಪಡುತ್ತಿರಲಿಲ್ಲ. ಮೆಲುದನಿಯಲ್ಲಿ ಗುನುಗುತ್ತಾ ವೀಣೆಯನ್ನು ನುಡಿಸುವುದು ಅವರ ಹವ್ಯಾಸವಾಗಿತ್ತು.
ಪ್ರತಿ ಶುಕ್ರವಾರ ಸಂಜೆ ಅವರ ಮನೆಯಲ್ಲಿ ಸರಸ್ವತಿ ಪೂಜೆಯ ನಂತರ ಬಾಯಿಗೆ ತಾಂಬೂಲ ಹಾಕಿಕೊಂಡು, ಮಲ್ಲಿಗೆ ಮತ್ತು ಅಗರಬತ್ತಿಯ ಸುವಾಸನೆಯ ನಡುವೆ  ಧ್ಯಾನಸ್ಥ ಸ್ಥಿತಿಯಲ್ಲಿ ಅವರು ನುಡಿಸುತ್ತಿದ್ದ ವೀಣಾ ವಾದನವನ್ನು ಕೇಳಲು ಮದ್ರಾಸ್ ನಗರದ ಪ್ರತಿಷ್ಠಿತ ವ್ಯಕ್ತಿಗಳು ಅವರ ಮನೆಯಲ್ಲಿ ನೆರೆಯುತ್ತಿದ್ದರು. ಇಡೀ ಮನೆ ಮತ್ತು ಅಂಗಳ ಮಾತ್ರವಲ್ಲದೆ, ರಸ್ತೆಯಲ್ಲಿಯೂ ಸಹ ನಿಶ್ಯಬ್ದ ಮನೆ ಮಾಡಿರುತ್ತಿತ್ತುಹಿಂದೂ ಪತ್ರಿಕೆಯ ಕಸ್ತೂರಿ ಶ್ರೀನಿವಾಸ ಅಯ್ಯಂಗಾರ್, ಟಿ.ಟಿ.ಕೃಷ್ಣಮಾಚಾರಿಯಂತಹ ಪ್ರಸಿದ್ಧರು ಸೇರಿದಂತೆ ತಮಿಳುನಾಡಿನ ಸಂಗೀತಲೋಕದ ದಿಗ್ಗಜರು ಅವರ ವೀಣೆಯ ಮಾಧುರ್ಯವನ್ನು ಸವಿಯಲು ಮನೆಯಲ್ಲಿ ನೆರೆಯುತ್ತಿದ್ದರು. ಎಂದಿಗೂ ಹಣಕ್ಕಾಗಿ, ಕೀರ್ತಿಗಾಗಿ ಸಂಗೀತ ಕಾರ್ಯಕ್ರಮ ನೀಡಲು ಒಪ್ಪದ ಧನಮ್ಮಾಳ್ ಸಂಗೀತದ ಶುದ್ಧತೆ ಮತ್ತು ಪರಂಪರೆಯನ್ನು ಕಾಪಾಡಿಕೊಂಡು ಬಂದಿದ್ದರು. ಹಿಂದೂಸ್ಥಾನಿ ಸಂಗೀತದ ದಿಗ್ಗಜರಲ್ಲಿ ಒಬ್ಬರಾದ ಪಂಡಿತ್ ಅಬ್ದುಲ್ ಕರೀಂ ಖಾನ್ ಹಾಗೂ ಕರ್ನಾಟಕ ಸಂಗೀತದ ಮೈಸೂರಿನ ಟೈಗರ್ ವರದಾಚಾರ್ ಅವರ ಆತ್ಮೀಯ ಬಳಗದ ಸದಸ್ಯರಲ್ಲಿ ಮುಖ್ಯರಾಗಿದ್ದರು. ಇಂತಹ ಕರ್ನಾಟಕದ ಸಂಗೀತದ ಮಹಾನ್ ಮೇರು ಪ್ರತಿಭೆ 1938 ರಲ್ಲಿ ನಿಧನರಾದರು. ವೀಣಾ ಧನಮ್ಮಾಳ್ ತೆರವುಗೊಳಿಸಿದ ಸ್ಥಾನವನ್ನು ಈವರೆಗೆ ಯಾವೊಬ್ಬ ಮಹಿಳಾ ಕಲಾವಿದೆಯು ತುಂಬಲು ಸಾಧ್ಯವಾಗಿಲ್ಲ ಎಂದರೆ, ಇದು  ಅವರ ಅಪ್ರತಿಮ ಪ್ರತಿಭೆ ಮತ್ತು ಸಾಧನೆಗೆ ಸಾಕ್ಷಿ ಎಂದರ್ಥ.

(ವಾರ್ತಾ ಭಾರತಿ ದಿನಪತ್ರಿಕೆಯ “ ಸ್ವರ ಸನ್ನಿಧಿ” ಅಂಕಣ ಬರಹ)