ಗುರುವಾರ, ಜನವರಿ 11, 2018

ಗಾಂಧೀಜಿಯವರ ಚರಕದ ಹಲವು ಆಯಾಮಗಳು


ಕಳೆದ ವಾರ ಮೇಲುಕೋಟೆಯಲ್ಲಿ ಜನಪದ ಸೇವಾ ಟ್ರಸ್ಟ್ ಏರ್ಪಡಿಸಿದ್ದಪರಿಸರ, ಅಭಿವೃದ್ಧಿ ಮತ್ತು ಜೀವನ ಶೈಲಿಕುರಿತ ರಾಜ್ಯಮಟ್ಟದ ಕಾರ್ಯಾಗಾರ ಶೀಬಿರಕ್ಕೆ ಅತಿಥಿ ಉಪನ್ಯಾಸಕನಾಗಿ ಹೋಗಿ ಬಂದೆ. ಮೇಲುಕೋಟೆ ನಾನು ಹುಟ್ಟಿ ಬೆಳೆದ ಮಂಡ್ಯ ಜಿಲ್ಲೆಯಲ್ಲಿ ಪುಟ್ಟ ಗಿರಿಧಾಮದಂತಿರುವ ಊರುಶ್ರೀ ಚಲುವನಾರಾಯಣಸ್ವಾಮಿ ಮತ್ತು ಯೋಗಾನರಸಿಂಹ ದೇಗುಲಗಳು, ಪ್ರಸಿದ್ಧ ಕಲ್ಯಾಣಿಯ ಜೊತೆಗೆ ಅರ್ಧಕ್ಕೆ ನಿಂತ ರಾಜಗೋಪುರದ ವಾಸ್ತು ಶಿಲ್ಪವಿರುವ ಯಾತ್ರಾಸ್ಥಳ. ಜೊತೆಗೆ ನಮ್ಮ ಕನ್ನಡದ ಹೆಮ್ಮೆಯ ಕವಿ ಪು.ತಿ.. ಹಾಗೂ ಪತ್ರಕರ್ತ ಖಾದ್ರಿ ಶಾಮಣ್ಣನವರು ಹುಟ್ಟಿದ ಊರು. ಬುದ್ಧನ ನಂತರ ಭಾರತ ಕಂಡ ಬಹುದೊಡ್ಡ ದಾರ್ಶನಿಕ ಶ್ರೀ ರಾಮಾನುಜರು ಹನ್ನೆರೆಡು ವರ್ಷಗಳ ಕಾಲ ನೆಲೆ ನಿಂತು ತಳಸಮುದಾಯದ ಜನರಿಗೆ ವೈಷ್ಣವ ದೀಕ್ಷೆ ನೀಡಿದ ಪವಿತ್ರ ಭೂಮಿ. ಇವೆಲ್ಲಕ್ಕಿಂತ ಹೆಚ್ಚಾಗಿ ಮಂಡ್ಯ ಜಿಲ್ಲೆಯ ಗಾಂಧಿ ಎಂದು ಜನಪ್ರಿಯವಾಗಿದ್ದ  ಶ್ರೀ ಸುರೇಂದ್ರ ಕೌಲಗಿಯವರ ಕರ್ಮಭೂಮಿ. ನಿರಂತರ ಅರವತ್ತು ವರ್ಷಗಳ ಕಾಲ ಗಾಂಧಿಯನ್ನು ಮತ್ತು ಅವರ ವಿಚಾರಗಳನ್ನು ಧ್ಯಾನಿಸುತ್ತಾ, ಜನಪದ ಸೇವಾ ಟ್ರಸ್ಟ್ ಸಂಸ್ಥೆಯನ್ನು ಸ್ಥಾಪಿಸಿ. ಇದರ ಮೂಲಕ ಗಾಂಧೀಜಿಯವರ ಕನಸುಗಳನ್ನು ಸಾಕಾರಗೊಳಿಸುತ್ತಾ. ಖಾದಿ ಉತ್ಪಾದನಾ ಘಟಕ, ಗ್ರಾಮೋದ್ಯೋಗ ಕೇಂದ್ರಅಂಗವಿಕಲರು ಮತ್ತು ಅನಾಥ ಮಕ್ಕಳ ಆಶ್ರಮ  ಹೀಗೆ ಹಲವು ಸಂಸ್ಥೆಗಳನ್ನು ಹುಟ್ಟುಹಾಕುವುದರ ಮೂಲಕ ಮನುಕುಲಕ್ಕೆ ಮಾದರಿಯಾಗಿ ಬದುಕಿದವರು.
ಕಳೆದ ಇಪ್ಪತ್ತು ವರ್ಷಗಳಲ್ಲಿ  ಮೇಲುಕೋಟೆಗೆ ಹಲವಾರು ಬಾರಿ ಭೇಟಿ ನೀಡಿದ್ದರೂ ಸಹ; ಜನಪದ ಸೇವಾ ಟ್ರಸ್ಟ್  ಕಛೇರಿಗೆ ಅಥವಾ  ಸುರೇಂದ್ರ ಕೌಲಗಿಯವರ ನಿವಾಸಕ್ಕೆ  ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ದೂರವಾಣಿಯಲ್ಲಿ ಮಾತನಾಡುವುದು ಇಲ್ಲವೆ ಮಂಡ್ಯ ನಗರದಲ್ಲಿ ನಡೆಯುತ್ತಿದ್ದ ಸಭೆ ಸಮಾರಂಭಗಳಲ್ಲಿ ಅವರನ್ನು ಭೇಟಿಯಾಗಿ ಯೋಗ ಕ್ಷೇಮ ವಿಚಾರಿಸುವುದರಲ್ಲಿ ತೃಪ್ತಿ ಪಟ್ಟುಕೊಳ್ಳುತ್ತಿದ್ದೆ. ಇತ್ತೀಚೆಗೆ ಸುರೇಂದ್ರ ಕೌಲಗಿ ಮತ್ತು ಅವರ ಪತ್ನಿಯವರು ನಿಧನರಾದ ನಂತರ ಅವರ ಕರ್ಮಭೂಮಿಗೆ ಒಮ್ಮೆ ಹೋಗಿಬರಬೇಕು ಎಂಬ ಹಂಬಲ ಪದೇ ಪದೆ ಕಾಡುತ್ತಿತ್ತುಅವರ ಪುತ್ರ ಸಂತೋಷ್ ಕೌಲಗಿಯವರ ಮೂಲಕ ಅದು ನೆರವೇರಿತು.

ಮೇಲುಕೋಟೆಯಿಂದ ನಾಲ್ಕೈದು ಕಿಲೊಮೀಟರ್ ದೂರದಲ್ಲಿ ಮೇಲುಕೋಟೆ-ಚಿನಕುರಳಿ ರಸ್ತೆಯಲ್ಲಿರುವಹೊಸ ಬದುಕಿನ ದಾರಿಎಂಬ ಹೆಸರಿನ ಅವರ ತೋಟದಲ್ಲಿ ಸ್ಥಾಪಿಸಲಾಗಿರುವ ಖಾದಿ ಕೈ ಮಗ್ಗದ ಘಟಕ ಮತ್ತು ಅಲ್ಲಿ ದುಡಿಯುವ ಹೆಣ್ಣು ಮಕ್ಕಳು ಕಟ್ಟಿಕೊಂಡಿರುವ ಘನತೆಯ ಬದುಕನ್ನು ಕೂಲಂಕುಷವಾಗಿಅವಲೋಕಿಸಿದಾಗ, ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದುಡಿಯುವ ಕೈಗಳಿಗೆ ಉದ್ಯೋಗ ಮತ್ತು ಸ್ವರಾಜ್ಯ ಕಲ್ಪನೆಯ ದೃಷ್ಟಿಕೋನದಿಂದ ಅವರು ಆಯ್ಕೆ ಮಾಡಿಕೊಂಡ ಚರಕದ ಮಹತ್ವ ಈಗ ಅರಿವಾಗತೊಡಗಿದೆ. ಇಡೀ ಭಾರತದ ಆತ್ಮದಂತಿರುವ ಗ್ರಾಮಗಳ ಸ್ವರಾಜ್ಯ ಮತ್ತು ಅವುಗಳ ಉದ್ಧಾರಕ್ಕೆ  ಗುಡಿ ಕೈಗಾರಿಕೆಗಳು ಪೂರಕ ಎಂಬುದು ಮಹಾತ್ಮರ ಅಚಲವಾದ ನಂಬಿಕೆಯಾಗಿತ್ತುಗಾಂಧೀಜಿಯವರ ಪರಿಕಲ್ಪನೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆಪರಮ ಗಾಂಧಿವಾದಿಯಾಗಿದ್ದುಕೊಂಡು, ನಡೆ ಮತ್ತು ನುಡಿಯಲ್ಲಿ ಕಿಂಚಿತ್ತೂ ವ್ಯತ್ಯಾಸವಿಲ್ಲದಂತೆ ಬದುಕಿದ ಸುರೇಂದ್ರಕೌಲಗಿಯವರ ನಿಧನಾನಂತರ ಅವರ ಉದಾತ್ತ ಧ್ಯೇಯ ಮತ್ತು ಆದರ್ಶಗಳನ್ನು ಅವರ ಪುತ್ರ ಸಂತೋಷ ಕೌಲಗಿಯವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ತಾವು ಓದಿದ ಇಂಜಿನಿಯರಿಂಗ್ ಪದವಿಯನ್ನು ಬದಿಗಿಟ್ಟು ತಂದೆಯ ಜೊತೆ ಖಾದಿ ಗ್ರಾಮೋದ್ಯೋಗ ಚಟುವಟಿಕೆಗಳಿಗೆ ಕೈ ಜೋಡಿಸಿದ್ದ ಸಂತೋಷ್  ಅದನ್ನು ಹಠತೊಟ್ಟವರಂತೆ ಮುಂದುವರಿಸಿದ್ದಾರೆ. ಇಷ್ಟೇ ಅಲ್ಲದೆ; ಮಾಡುವ ಕಾಯಕದಲ್ಲಿ ನಿಷ್ಠ ಮತ್ತು ಧ್ಯೇಯಗಳಿದ್ದರೆ ಗುರಿಸಾಧಿಸಬಹುದು ಎಂಬುದಕ್ಕೆ ಅವರು ನಮ್ಮ ಕಣ್ಣ ಮುಂದಿನ ಸಾಕ್ಷಿಯಾಗಿದ್ದಾರೆಇಪ್ಪತ್ತು ವರ್ಷಗಳ ಹಿಂದೆ ಇವರು ಅನುವಾದಿಸಿದ ಶೂನ್ಯ ಬಂಡವಾಳ ಕೃಷಿ ಚಂತನೆಯ ಹಾಗೂ ಜಪಾನಿನ ನೈಸರ್ಗಿಕ ಕೃಷಿ ವಿಜ್ಞಾನಿ ಪುಕಾವೋಕ ಅವರಒಂದು ಹುಲ್ಲಿನ ಕ್ರಾಂತಿ”  ಎಂಬ ಕೃತಿ ಇಂದಿಗೂ ಸಹ ಜನಪ್ರಿಯ ಕೃತಿಗಳಲ್ಲಿ ಒಂದಾಗಿದೆ. ಮೇಲುಕೋಟೆಯ ಜನಪದ ಸೇವಾಟ್ರಸ್ಟ್ ಪ್ರಕಟ ಮಾಡಿರುವ ಎರಡು ಕೃತಿಗಳಾದ ಪುಕಾವೋಕನಒಂದು ಹುಲ್ಲಿನ ಕ್ರಾಂತಿಮತ್ತು ಗಾಂಧಿವಾದಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಜೆ.ಸಿ.ಕುಮಾರಪ್ಪನವರಶಾಶ್ವತ ಅರ್ಥಶಾಸ್ತ್ರಇವೆರೆಡೂ ಕೃತಿಗಳು ಕನ್ನಡದ ಸಾಂಸ್ಕøತಿಕ ಲೋಕಕ್ಕೆ ನೀಡಿದ ಅಪೂರ್ವ ಕೊಡುಗೆಗಳು ಎಂದು ಹೇಳಬಹುದು.
ಜನಪದ ಸೇವಾ ಟ್ರಸ್ಟ್   ತೋಟವನ್ನು ಸಹ ಸಹಜ ಕೃಷಿ ಹಾಗೂ ಶೂನ್ಯ ಬಂಡವಾಳ ಕೃಷಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿರುವ ಸಂತೋಷ್ ಕೌಲಗಿಯವರು ನನ್ನನ್ನು ಹಾಗೂ ಶಿರಸಿಯಿಂದ ಆಗಮಿಸಿದ್ದ ಅಪ್ಪಿಕೊ ಚಳುವಳಿಯ ನೇತಾರ ಮತ್ತು ಪರಿಸರ ತಜ್ಞ ಪಾಂಡು ರಂಗ ಹೆಗ್ಡೆಯವರನ್ನು ಅಲ್ಲಿ ನಿರ್ಮಿಸಲಾಗಿರುವ ಅತಿಥಿ ಗೃಹ ಕಟ್ಟಡಕ್ಕೆ ಕರೆದೊಯ್ದು ಸ್ಥಳಿಯ ಸಂಪನ್ಮೂಲಗಳನ್ನು ಬಳಸಿಕೊಂಡು ನಿರ್ಮಿಸಿರುವ ಕಟ್ಟಡವನ್ನು ತೋರಿಸಿದರು. ಕಳೆದ ವರ್ಷ ಸುರೇಂದ್ರ ಕೌಲಗಿಯವರಿಗೆ ನೀಡಿದ ಜಮ್ನಾಲಾಲ್ ಬಜಾಜ್ ರಾಷ್ಟ್ರೀಯ ಪ್ರಶಸ್ತಿಯ ಹಣವಾದ ಹತ್ತು ಲಕ್ಷ ರೂಪಾಯಿಗಳನ್ನು ಕಟ್ಟಡಕ್ಕೆ ವಿನಿಯೋಗಿಸಲಾಗಿದ್ದು, ಗಾಂಧೀಜಿಯ ವಿಚಾರಧಾರೆಗಳಿಗೆ ತೆರೆದುಕೊಳ್ಳಲು ಬಯಸುವ ಸುಮಾರು ನಲವತ್ತು ಆಸಕ್ತ ಅಭ್ಯರ್ಥಿಗಳು ಅತಿಥಿ ಗೃಹದಲ್ಲಿ ಬಂದು  ತಂಗಬಹುದಾಗಿದೆ.

ನಂತರ ಸನೀಹದಲ್ಲಿದ್ದ ಕೈಮಗ್ಗದ ಘಟಕ, ದೇಸಿ ಹತ್ತಿಯಿಂದ ತಯಾರಾಗುವ ನೂಲುಗಳಿಗೆ ಯಾವುದೇ ಕೃತಕ ಬಣ್ಣಗಳನ್ನು ಬಳಸದೆ, ಅಡಿಕೆ ಮತ್ತು ಕೆಲವು ಆಯ್ದ ಗಿಡಮರಗಳ ತೊಗಟೆಯನ್ನು ಬಳಸಿ ತಯಾರಿಸಲಾಗುವ ನೈಜವಾದ ಬಣ್ಣಗಳನ್ನು ಹಾಕುವ ಘಟಕಗಳಿಗೆ ಕರೆದೊಯ್ದರು. ನಂತರ ಯಂತ್ರಗಳಿಗೆ ವಿದ್ಯುತ್ ಅನ್ನು ಬಳಸದೆ ಸಂಪೂರ್ಣವಾಗಿ ಮಾನವ ಶ್ರಮದಿಂದ ಖಾದಿ ಬಟ್ಟೆಯನ್ನು ನೇಯುವ ಕೈ ಮಗ್ಗಗಳತ್ತ ತೆರಳಿದಾಗ, ಅಲ್ಲಿ ದುಡಿಯುತ್ತಿದ್ದ ಹೆಣ್ಣು ಮಕ್ಕಳು ಮತ್ತು ಅವರು ಕಟ್ಟಿಕೊಂಡಿರುವ ಘನತೆಯ ಬದುಕನ್ನು ಸಂತೋಷ್ ಕೌಲಗಿ ನಮಗೆ ವಿವರಿಸಿದರು. ಖಾದಿ ಕೈಮಗ್ಗದ ವಿವಿಧ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದ ಸುಮಾರು ಮುವತ್ತು ಮಂದಿ ಹೆಣ್ಣು ಮಕ್ಕಳು ಸುತ್ತ ಮುತ್ತ ಗ್ರಾಮಗಳಿಂದ ಬಂದ ವಿವಿಧ ವಯೋಮಾನದವರಾಗಿದ್ದರು. ಎಲ್ಲಾ ಜಾತಿಯ ಸಮುದಾಯದಿಂದ ಬಂದ ಹಾಗೂ ಎಸ್.ಎಸ್.ಎಲ್.ಸಿ. ಅಥವಾ ಪಿ.ಯು.ಸಿ. ಓದಿರುವ ಹೆಣ್ಣುಮಕ್ಕಳು ಬಡತನದ ಕುಟುಂಬದಿಂದ ಬಂದಿದ್ದು, ಕೃಷಿ ಚಟುವಟಿಯಲ್ಲಿ ಕೂಲಿಯಾಳುಗಳಾಗಿ ದುಡಿಯಲಾದೆ ಸಂಕೋಚದಿಂದ ಮುದುಡಿ ಹೋಗಿದ್ದವರು. ಜೊತೆಗೆ ಪೇಟೆ ಅಥವಾ ನಗರಗಳಿಗೆ ಹೋಗಿ ಬದುಕವ ಕೃತಕ ಕಲೆಯನ್ನು ಅರಿಯದವರಾಗಿದ್ದರು. ಇದೀಗ ನಾಲ್ಕು ಗೋಡೆಯ ನಡುವೆ ಒಂದು ಚರಕ ಅಥವಾ ಒಂದು ಕೈ ಮಗ್ಗ ಅವರಿಗೆ ಘನತೆಯ ಹಾಗೂ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ನೆರವಾಗಿದೆ. ಅತ್ಯಂತ ಆತ್ಮವಿಶ್ವಾಸದಿಂದ ಶ್ರಮಾಧಾರಿತ ಖಾದಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಹೆಣ್ಣುಮಕ್ಕಳು ಪ್ರತಿ ತಿಂಗಳೂ ಏಳು ಸಾವಿರದಿಂದ ಒಂಬತ್ತು ಸಾವಿರ ರೂಪಾಯಿಗಳನ್ನು ಸಂಪಾದಿಸುತ್ತಿದ್ದಾರೆ. ಹಾಗಾಗಿ ಅವರ ಮುಖದಲ್ಲಿ ಆತ್ಮ ವಿಶ್ವಾಸ  ತುಂಬಿ ತುಳುಕಾಡುತ್ತಿದೆ.

ನಾವು ಬಳಸ ಬಹುದಾದ ನೂರೈವತ್ತು ರೂಪಾಯಿ ಬೆಲೆಯ ಒಂದು ಖಾದಿ ಟವಲ್ ಮೂರು ಮಂದಿಗೆ, ಇನ್ನೂರೈವತ್ತು ರೂಪಾಯಿ ಬೆಲೆಯ ಒಂದು ಪಂಚೆ, ನಾಲ್ಕು ಮಂದಿಗೆ ಹಾಗೂ ಐನೂರು ರೂಪಾಯಿ ಮೌಲ್ಯದ ಒಂದು ಖಾದಿ ಹೊದಿಕೆಯು ಐದು ಮಂದಿಗೆ ದಿನದ ಹೊಟ್ಟೆ ತುಂಬಿಸಬಲ್ಲದು ಎಂಬುದು ದಿನ ನನಗೆ ಅರಿವಾಯಿತು. ಹತ್ತಿಯಿಂದ ನೂಲಾಗಿ ರೂಪಾಂತರಗೊಂಡು, ವಿವಿಧ ಹಂತದದಲ್ಲಿ ಸಂಸ್ಕರಣೆಗೊಂಡು, ರಾಟೆ ಮತ್ತು ಕೈ ಮಗ್ಗದ ಮೂಲಕ ಖಾದಿ ವಸ್ತ್ರದ ರೂಪ ಧರಿಸುವ ಒಂದು ಪ್ರಕ್ರಿಯೆ ಅಥವಾ ಒಂದು ಗುಡಿ ಕೈಗಾರಿಕೆಯ ಚಟುವಟಿಕೆ ಎಂಟತ್ತು ಮಂದಿಗೆ ಜೀವನಾಧಾರಿತ ವೃತ್ತಿಯಾಗಬಲ್ಲದು ಎಂದು ಒಂದು ಶತಮಾನದ ಹಿಂದೆ ಗ್ರಹಿಸಿದ ಗಾಂಧೀಜಿಯವರ ದೂರಾಲೋಚನಾ ಶಕ್ತಿ ಬೆರಗಾಗುವಂತಹದ್ದು.
ನಿಸರ್ಗದ ಕೊಡುಗೆಗಳು ಇರುವುದು ನಮ್ಮಗಳ ಅನುಕೂಲಕ್ಕಾಗಿ ಎಂದು ಗ್ರಹಿಸಿರುವ ಪಾಶ್ಚಿಮಾತ್ಯ ಪ್ರೇರಿತ ಆಧುನಿಕತೆ ಆಲೋಚನೆಗಳು  ಮನುಷ್ಯನನ್ನು ಕ್ರೂರಿಯಾಗಿ ಪರಿವರ್ತಿಸುತ್ತಿರುವ ಸಂಧರ್ಭದಲ್ಲಿ ಹಾಗೂ ಲಾಭಕೋರತನವನ್ನು ಧ್ಯೇಯವಾಯಿಸಿಕೊಂಡಿರುವ ಬಂಡವಾಳ ಶಾಹಿ ಜಗತ್ತಿನ ಯುಗದಲ್ಲಿ ನಮ್ಮ ಆಲೋಚನೆಗಳು ಯಾವಾಗಲೂ ವ್ಯಯಕ್ತಿಕ ನೆಲೆಯಲ್ಲಿರದೆ, ಅವುಗಳು ಸಾಮುದಾಯಿಕ ನೆಲೆಯಲ್ಲಿರಬೇಕು ಎಂದು ಗ್ರಹಿಸುವುದರ ಮೂಲಕ  ಅದನ್ನು ಜಗತ್ತಿಗೆ ತೋರಿಸಿಕೊಟ್ಟವರು ಮಹಾತ್ಮ ಗಾಂಧಿ. ಹಾಗಾಗಿ ಅವರು ಹಿಡಿದ ಅಥವಾ ಪ್ರತಿಪಾದಿಸಿದ ಒಂದು ಚರಕ ನಮಗೆ ಕೇವಲ ಒಂದು ದೇಶಿ ಯಂತ್ರವಾಗಿರದೆ, ಅದು ಭಾರತದ ಗ್ರಾಮ ಸಮುದಾಯದ ಅನ್ನದ ಬಟ್ಟಲಾಗಿ ಕಾಣುತ್ತಿದೆ. ಮೇಲುಕೋಟೆಯ ಖಾದಿ ಘಟಕದಲ್ಲಿ ಮಾತ್ರವಲ್ಲದೆ, ಊರಿನಲ್ಲಿ ಸುಮಾರು ಎಪ್ಪತ್ತಕ್ಕೂ ಹೆಚ್ಚು ಮನೆಗಳಲ್ಲಿ ಮಹಿಳೆಯರು ಚರಕದಿಂದ ತೆಗೆದ ನೂಲನ್ನು ಸಣ್ಣ ಸಣ್ಣ ಉಂಡೆಗಳಾಗಿ ಸುತ್ತಿಕೊಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಕೆಲವು ವಯಸ್ಸಾದ ಅನಕ್ಷರಸ್ತ ವೃದ್ಧರು ನೂಲಿಗೆ ಬಣ್ಣ ಹಾಕುವುದು ಮತ್ತು ಅದನ್ನು ಒಣಗಿಸುವುದರಲ್ಲಿ ತೊಡಗಿದರೆ, ಸಿದ್ಧವಾದ ಸೀರೆಗಳಿಗೆ ಕಸೂತಿ ಹಾಕುವಲ್ಲಿ ಮಹಿಳೆಯರು ಹಾಗೂ ಖಾದಿ ಸಿದ್ಧ ಉಡುಪುಗಳನ್ನು ತಯಾರಿಸುವಲ್ಲಿ ಯುವತಿಯರು ನಿರತರಾಗಿದ್ದರು. ಒಂದು ಚರಕವು ಹಸಿವು, ಬಡತನವನ್ನು ಹೋಗಲಾಡಿಸುವುದಕ್ಕೆ ಹೇಗೆ ಉಪಯೋಗವಾಗಬಲ್ಲದು ಎಂಬುದನ್ನು ನಾವು ಖಾದಿ ಘಟಕಗಳಲ್ಲಿ ಅರಿಯಬಹುದು.

ಭಾರತದಲ್ಲಿ ಕೃಷಿ ರಂಗದ ನಂತರ ಅತಿ ಹೆಚ್ಚು ಉದ್ಯೋಗ ಅವಕಾಶಗಳನ್ನು ಸೃಷ್ಟಿಯಾಗಿರುವುದು  ಗುಡಿ ಕೈಗಾರಿಕೆಗಳಲ್ಲಿ ಮಾತ್ರ. ಆದರೆ, ಜಾಗತೀಕರಣದ ಯುಗದಲ್ಲಿ ಬಳಸಿ ಬಿಸಾಡುವ ಸಂಸ್ಕøತಿಯಲ್ಲಿ ತೇಲಿ ಮುಳಗುತ್ತಿರುವ ಜನರಿಗೆ ಮತ್ತು ಜನಪ್ರತಿನಿಧಿಗಳ ಪಾಲಿಗೆ ನಗರಗಳು ಅಕ್ಷಯ ಪಾತ್ರೆಯಂತೆ ಗೋಚರವಾಗುತ್ತಿವೆ. ನೆಲದ ಮೇಲಿನ ನರಕಗಳಂತಿರುವ ನಗರಗಳ ಭ್ರಮೆಯನ್ನು ಯುವಜನರ ಎದೆಯಿಂದ ಕಳಚಿ ಹಳ್ಳಿಗಳಲ್ಲಿಯೂ ಸಹ ಗಾಂಧೀಜಿ ರೂಪಿಸಿದ ಚಿಂತನೆಗಳ ಮಾದರಿಯಲ್ಲಿ ಸರಳವಾಗಿ ನಾವು ಬದುಕಬಹುದು ಎಂಬುದನ್ನು ನಾವು ಮನವರಿಕೆ ಮಾಡಿಕೊಡಬೇಕಿದೆ. ನಿಟ್ಟಿನಲ್ಲಿ ಖ್ಯಾತ ಪತ್ರಕರ್ತೆ ಶ್ರೀಮತಿ ರಜನಿ ಭಕ್ಷಿಯವರು ಬರೆದಬಾಪು ಕುಟಿಎಂಬ ಇಂಗ್ಲೀಷ್ ಕೃತಿ ನಮ್ಮ ಪಾಲಿಗೆ ಗಾಂಧೀಜಿ ಸಂವಿಧಾನದಂತಿದೆ. ಗಾಂಧೀಜಿಯವರು ರೂಪಿಸಿದ ಗ್ರಾಮಭಾರತದ ಮಾದರಿಗಳನ್ನು ಅಳವಡಿಸಿಕೊಂಡು ಯಶಸ್ವಿಯಾದವರ ಕಥನಗಳು ಕೃತಿಯಲ್ಲಿ ದಾಖಲಾಗಿವೆ.

( ಕರಾವಳಿ ಮುಂಜಾವು ಪತ್ರಿಕೆಯ “ ಜಗದಗಲ” ಅಂಕಣ ಬರಹ)

ಶುಕ್ರವಾರ, ಜನವರಿ 5, 2018

ರಜನಿ ರಾಜಕೀಯ ಪ್ರವೇಶ ಮತ್ತು ಕಣ್ಣ ಮುಂದಿನ ವಾಸ್ತವ


ತಮಿಳು ಚಿತ್ರ ರಂಗದ ಪ್ರಸಿದ್ಧ ನಟರಲ್ಲಿ ಒಬ್ಬರಾದ ರಜನಿಕಾಂತ್ 2017 ವರ್ಷದ ಕೊನೆಯ ದಿನದಂದು ರಾಜಕೀಯ ಪ್ರವೇಶ ಮಾಡುವುದಾಗಿ ಅಧಿಕೃತವಾಗಿ ಘೋಷಿಸುವುದರ ಮೂಲಕ ಅಲ್ಲಿನ ರಾಜಕೀಯದಲ್ಲಿ ಸಣ್ಣ ಸಂಚಲನವನ್ನುಂಟು ಮಾಡಿದ್ದಾರೆ. ಅಲ್ಲಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ನಿಧನ ಮತ್ತು ಅವರ ಕಡುವೈರಿ ಎಂ.P್ಪರುಣಾನಿಧಿಯವರ ವೃದ್ಧಾಪ್ಯದಿಂದಾಗಿ ತಮಿಳುನಾಡಿನ ರಾಜಕೀಯದಲ್ಲಿ ಸೃಷ್ಟಿಯಾಗಿರುವ ಶೂನ್ಯವನ್ನು ತುಂಬಲು ಬಹುತೇಕ ಚಿತ್ರನಟರು ತುದಿಗಾಲಲ್ಲಿ ನಿಂತಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಮತ್ತೊಬ್ಬ ಜನಪ್ರಿಯ ನಟ ಕಮಲ್ ಹಾಸನ್ ಕೂಡ ತಮ್ಮ  ರಾಜಕೀಯ ಪ್ರವೇಶ ಕುರಿತು ಘೋಷಣೆ ಮಾಡುವುದರ ಮೂಲಕ  ಈಗಾಗಲೇ ಸಕ್ರಿಯವಾಗಿದ್ದಾರೆತಮಿಳುನಾಡಿನ ರಾಜಕೀಯದಲ್ಲಿ ಇದು ಹೊಸ ವಿದ್ಯಾಮಾನವೇನಲ್ಲ. ಇಬ್ಬರು ಜನಪ್ರಿಯ ನಟರಿಗಿಂತ ಮುನ್ನ 2011 ರಲ್ಲಿ ಹಿಂದೆ ರಾಜಕೀಯ ಪಕ್ಷವನ್ನು ಸ್ಥಾಪಿಸಿದ ( ಎಂ.ಡಿ.ಎಂ.ಕೆ) ವಿಜಯಕಾಂತ್ ಎಂಬ ನಟ ಜಯಲಲಿತಾ ಅವರ ಅಣ್ಣಾ ಡಿ.ಎಂ.ಕೆ. ಪಕ್ಷದ ಮೈತ್ರಿಯಿಂದಾಗಿ ಇಪ್ಪತ್ತೊಂಬತ್ತು  ವಿಧಾನ ಸಭಾ ಕ್ಷೇತ್ರಗಳಲ್ಲಿ ಜಯಗಳಿಸಿದ್ದರು. ಆದರೆ, ಕಳೆದ ಚುನಾವಣೆಯಲ್ಲಿ ( 2016 ರಲ್ಲಿಮೈತ್ರಿ ಕಡಿದುಕೊಂಡ ಕಾರಣಕ್ಕಾಗಿ ತಾವು ಠೇವಣಿ ಕಳೆದುಕೊಳ್ಳುವುದರ ಜೊತೆಗೆ ತಮ್ಮ ಪಕ್ಷ ಒಂದು ಸ್ಥಾನವನ್ನು ಗೆಲ್ಲಲಾರದೆ ಇತಿಹಾಸದ ಕಸದ ಬುಟ್ಟಿ ಸೇರಿದ ವಾಸ್ತವ ಇದೀಗ ನಮ್ಮ ಮುಂದಿದೆ. ಇನ್ನು ಅಲ್ಲಿನ ಚಿತ್ರರಂಗದ ಶರತ್ ಕುಮಾರ್, ಸತ್ಯರಾಜ್, ವಡಿವೇಲು ಮುಂತಾದ ನಟರು ಕೆಲವು ಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಜೊತೆಗೆ ಸಿನಿಮಾ ರಂಗದಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿದ್ದಾರೆ. ಎಲ್ಲಾ ಬೆಳೆವಣಿಗಳನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿರುವ ಹಾಗೂ ಕಮಲ್ ಹಾಸನ್ ಅವರ ಹಿರಿಯ ಸಹೋದರ ಮತ್ತು ತಮಿಳು ಚಿತ್ರರಂಗದ ಗೌರವಾನ್ವಿತ ಹಿರಿಯ ನಟರಲ್ಲಿ ಒಬ್ಬರಾಗಿರುವ ಚಾರುಹಾಸನ್ ( ಇವರು ನಟಿ ಸುಹಾಸಿನಿ ಅವರ ತಂದೆ ಹಾಗೂ ಗಿರೀಶ್ ಕಾಸರವಳ್ಳಿಯವರ ತಬರನ ಕಥೆ ಸಿನಿಮಾದಲ್ಲಿ ತಬರನ ಪಾತ್ರವಹಿಸಿದವರು) ಮೂರು ತಿಂಗಳ ಹಿಂದೆ ಚೆನ್ನೈ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ  ರಜನಿ ಮತ್ತು ಕಮಲ್ ಇಬ್ಬರೂ ಸೇರಿ ತಮಿಳು ನಾಡಿನ ಮತದಾರರಲ್ಲಿ ಶೇಕಡ ಐದರಷ್ಟು ಮತವನ್ನು ಪಡೆಯಲಾರರು ಎಂಬ ಕಟುವಾದ ಸತ್ಯದ ಮಾತುಗಳನ್ನು ಆಡಿದ್ದರು.
ಚಾರುಹಾಸನ್ ಆಡಿದ ಮಾತುಗಳನ್ನು ಆಧಾರವಾಗಿ ಇಟ್ಟುಕೊಂಡು ಇತ್ತೀಚೆಗೆ ನಡೆದ ಚೆನ್ನೈ ನಗರದ ರಾಧಕೃಷ್ಣ ನಗರದ ಉಪಚುನಾವಣೆಯ ಫಲಿತಾಶವನ್ನು ವಿಶ್ಲೇಷಿಸಿದರೆ, ಸತ್ಯ ಏನೆಂದು ನಮಗೆ ಗೋಚರವಾಗುತ್ತದೆ. ಜಯಲಲಿತಾ ಅವರ ನಿಧನದಿಂದ ತೆರವಾದ ಕ್ಷೇತ್ರದಲ್ಲಿ ಆಡಳಿತಾರೂಢ ಅಣ್ಣಾ ಡಿ.ಎಂ.ಕೆ. ಮತ್ತು ಪ್ರಬಲ ಪ್ರತಿಪಕ್ಷವಾದ ಡಿ.ಎಂ.ಕೆ. ಪಕ್ಷದ ಅಭ್ಯರ್ಥಿಗಳನ್ನು ಹಿಂದಿಕ್ಕಿ ಈಗ ಜೈಲು ಸೇರಿರುವ ಶಶಿಕಲಾ ಅವರ ಸಂಬಂಧಿ ಟಿ.ವಿ.ದಿನಕರನ್ ಎಂಬಾತ ಪಕ್ಷೇತರ ಅಭ್ಯರ್ಥಿಯಾಗಿ ಜಯಗಳಿಸುವುದರ ಮೂಲಕ ಭವಿಷ್ಯದ ತಮಿಳುನಾಡು ರಾಜಕೀಯ ದುರಂತದ ಬಗ್ಗೆ ಮುನ್ನುಡಿ ಬರೆದಿದ್ದಾನೆ. ಚುನಾವಣೆಯು ಘೋಷಣೆಯಾಗುತ್ತಿದ್ದಂತೆ ಪ್ರತಿಯೊಂದು ಮತಕ್ಕೆ ಒಂದೂವರೆ ಸಾವಿರ ರೂಪಾಯಿನಿಂದ ಆರಂಭವಾಗಿ ಎರಡೂವರೆ ಸಾವಿರ ತಲುಪಿ ಅಂತಿಮವಾಗಿ ಭಾರತದ ಶೇರು ಮಾರುಕಟ್ಟೆಯ ಸೂಚ್ಯಂಕದಂತೆ ನಾಲ್ಕು ಸಾವಿರ ರೂಪಾಯಿಗೆ ತಲುಪಿತು. ಒಂದು ಕುಟುಂಬದಲ್ಲಿ ನಾಲ್ಕು ಅಥವಾ ಐದು ಮತಗಳಿರುವ ಬಡವರಿಗೆ ಇದು ಅನಿರೀಕ್ಷಿತವಾಗಿ ದೊರೆತ ಲಾಟರಿ ಬಹುಮಾನವಾಯಿತು. ಮತದಾರರ  ಎದುರು ತತ್ವ ಸಿದ್ಧಾಂತ, ಭವಿಷ್ಯದ ತಮಿಳು ಕುರಿತು ಗಂಟಲು ಶೋಷಿಸಿಕೊಂಡು ಹೊಡೆದ ಭಾಷಣಗಳೆಲ್ಲವೂ ಬಿರುಗಾಳಿಗೆ ಸಿಕ್ಕ ತರಗೆಲೆಗಳಂತೆ ತೂರಿ ಹೋದವು. ಇಂತಹ ದಯನೀಯವಾದ ರಾಜಕೀಯ ಸ್ಥಿತಿಯಲ್ಲಿ ರಜನಿ ಅಥವಾ ಕಮಲ್ ಹಾಸನ್ ಇಂತಹವರು ಸಿನಿಮಾಗಳಲ್ಲಿ ಹೊಡೆಯುವ ಡೈಲಾಗ್ ರಾಜಕೀಯ ರಂಗದಲ್ಲಿ ಚಲಾವಣೆಗೆ ಬರುತ್ತವೆ ಎಂದು ನಿರೀಕ್ಷಿಸುವುದು ಅಥವಾ ನಂಬುದು ಮೂರ್ಖತನದ ಪರಮಾವಧಿ ಎಂದರೆ, ತಪ್ಪಾಗಲಾರದು.
ಕಳೆದ ಮೂರುವರೆ ದಶಕ ಭಾರತದ ರಾಜಕೀಯ ಮತ್ತು ಅದರೊಂದಿಗೆ ಬೆಸೆದುಕೊಂಡ ಚಿತ್ರರಂಗದ ನಟರ ಇತಿಹಾಸವನ್ನು ಗಮನಿಸಿದರೆ ಚಿತ್ರ ನಟರ ವೈಫಲ್ಯತೆ ಎದ್ದು ಕಾಣುತ್ತದೆ. ಮೊದಲಿಗೆ ತಮಿಳುನಾಡಿನಲ್ಲಿ ಎಂ.ಜಿ.ರಾಮಚಂದ್ರನ್ ನಂತರ ಆಂಧ್ರಪ್ರದೇಶದಲ್ಲಿ ಎನ್.ಟಿ.ರಾಮರಾವ್ ಇಬ್ಬರು ನಟರು ಪಕ್ಷವನ್ನು ಸ್ಥಾಪಿಸಿ ಮುಖ್ಯಮಂತ್ರಿಯಾದ ಉದಾಹರಣೆಗಳು ನಮ್ಮಲ್ಲಿ ಇದೆಯಾದರೂ, ಅತ್ಯಂತ ಕೆಟ್ಟ ಆಡಳಿತ ನೀಡಿದ ದೋಷ ಇಬ್ಬರು ನಟರ ಬೆನ್ನಿಗೆ ಅಂಟಿಕೊಂಡಿದೆ. ಇವರಿಬ್ಬರಿಗೆ ಹೋಲಿಸಿದರೆ, ಇವರ ನಂತರ ಆಡಳಿತ ಚುಕ್ಕಾಣಿ ಹಿಡಿದ ತಮಿಳುನಾಡಿನ ಜಯಲಲಿತಾ ಮತ್ತು ಆಂಧ್ರದ ಚಂದ್ರಬಾಬು ನಾಯ್ಡು ಒಳ್ಳೆಯ ಆಡಳಿತ ನೀಡಿದ್ದಾರೆ.

ತಮಿಳುನಾಡಿನಲ್ಲಿ ಎಂ.ಜಿ.ಆರ್ ಮತ್ತು ಆಂಧ್ರದಲ್ಲಿ ಎನ್.ಟಿ.ಆರ್. ಹಾಗೂ ಕರ್ನಾಟಕದಲ್ಲಿ  ರಾಜಕುಮಾರ್ ಇವುಗಳು ಕಾಲದಲ್ಲಿ ನಟಿಸಿದ ಸದಭಿರುಚಿಯ ಚಿತ್ರಗಳು, ಆಯ್ದುಕೊಂಡ ಕಥೆಗಳು ಇವುಗಳ ಮೂಲಕ ಕಾಲಘಟ್ಟದ ಜನಮಾನಸದಲ್ಲಿ ಆದರ್ಶ ನಾಯಕರು ಎಂಬ ನಂಬಿಕೆಯೊಂದು ಬೆಳೆದು ಬಂದಿತ್ತು. ಬಹುತೇಕ ನನ್ನ ತಲೆಮಾರಿನ ಜನ ಗಂಡು ಹೆಣ್ಣು ಎಂಬ ಬೇಧ ಭಾವವಿಲ್ಲದೆ ನಾಯಕರಲ್ಲಿ ಒಬ್ಬ ಶ್ರೀರಾಮನನ್ನೊ ಅಥವಾ ಒಬ್ಬ ಸತ್ಯ ಹರಿಶ್ಚಂದ್ರನನ್ನು ಕಂಡು ಸಂಭ್ರಮಿಸಿದ್ದುಂಟು. ಕಾಲ ಬದಲಾಗಿರುವ ದಿನಮಾನಗಳಲ್ಲಿ ಚಿತ್ರ ನಟರಲ್ಲಿ ಆದರ್ಶ ನಾಯಕನನ್ನು ಕಾಣುವುದು ಮೂರ್ಖತನವೆಂಬುವುದು ಆಧುನಿಕ ಯುವ ತಲೆಮಾರಿಗೆ ಅರ್ಥವಾಗಿದೆ. ಅವರ ಪಾಲಿಗೆ ಇವರೆಲ್ಲರೂ ಮನರಂಜನೆಯ ಸರಕುಗಳು ಮಾತ್ರ. ಇಂತಹ ನಿಜಸ್ಥಿತಿಯಲ್ಲಿ ವರ್ತಮಾನ ಜಗತ್ತಿನೊಂದಿಗೆ ಎಂದಿಗೂ ಒಡನಾಡದೆ ತಮ್ಮದೇ ಆದ ಭ್ರಮಾ ಲೋಕದಲ್ಲಿರುವ ಚಿತ್ರನಟರಿಗೆ  ರಾಜಕೀಯ ಪ್ರವೇಶ ಮಾಡಿದ ನಂತರ ವಾಸ್ತವ  ಅವರಿಗೆ ಅರ್ಥವಾಗುತ್ತಿದೆ. 2008 ರಲ್ಲಿ ನೆರೆಯ ಆಚಿಧ್ರಪ್ರದೇಶದಲ್ಲಿ ಮೇಗಾಸ್ಟಾರ್ ಎಂದು ಕರೆಸಿಕೊಳ್ಳುತ್ತಿದ್ದ ಚಿರಂಜಿವಿ ಎಂಬ ನಟ ಇಂತಹದ್ದೇ ಕಸರತ್ತು ನಡೆಸಿ, ಅಂತಿಮವಾಗಿ ತನ್ನ ಪ್ರಜಾರಾಜ್ಯ ಎಂಬ ಪಕ್ಷವನ್ನು ಕಾಂಗ್ರೇಸ್ ಪಕ್ಷದಲ್ಲಿ ವಿಲೀನಗೊಳಿಸಿ ನಗಣ್ಯರಾದರು.
ಕೆಲವು ರಾಜಕೀಯ ಪಕ್ಷಗಳ ಬಾಲಂಗೋಚಿಯನ್ನು ಹಿಡಿದು ರಾಜ್ಯ ಸಭಾ ಸದಸ್ಯರು, ಲೋಕಸಭಾ ಸದಸ್ಯರಾಗಿದ್ದ ಅಥವಾ ಆಗಿರುವ ಚಿತ್ರನಟರ ಪಟ್ಟಿ ದೊಡ್ಡದಿದೆ. ಅದು ರಾಜೀವ್ ಗಾಂಧಿ ಅವಧಿಯ ಅಮಿತಾಬ್ ಬಚ್ಚನ್ ಅವರಿಂದ ಹಿಡಿದು ಸುನೀಲ್ ದತ್, ರಾಜಬಬ್ಬರ್, ವಿನೋದ್ ಖನ್ನಾ, ರೇಖಾ, ಹೇಮಾಮಾಲಿನಿ, ಅನುಪಮ್ ಖೇರ್, ಗೋವಿಂದ , ಪರೇಶ್ ರಾವಲ್, ಹೀಗೆ ಮುಂದುವರಿದು ನಮ್ಮ ಕನ್ನಡದ ರಮ್ಯ, ಜಯಮಾಲಾ, ತಾರಾ ಹಾಗೂ ಉಮಾಶ್ರಿ, ಶ್ರೀನಾಥ್, ಮುಖ್ಯಮಂತ್ರಿ ಚಂದ್ರು ಹೀಗೆ ಮುಂದುವರಿಯುತ್ತದೆ. ಇವರ ಸಾಧನೆಗಳೆನು? ಎಂದು ನೋಡಿದರೆ, ಇವರೆಲ್ಲರೂ ಆಯಾ ಪಕ್ಷಗಳ ಪ್ರದರ್ಶನದ ಬೊಂಬೆಗಳಾದರೆ ಹೊರತು; ರಾಜಕೀಯ ಕ್ಷೇತ್ರದಲ್ಲಿ ಇವರ ಸಾಧನೆಗಳು ಶೂನ್ಯ.
ಸಧ್ಯದ ತಮಿಳುನಾಡಿನ ರಾಜಕೀಯದಲ್ಲಿ ಉಂಟಾಗಿರುವ ಶೂನ್ಯವು ಕೇವಲ ತಮಿಳುನಾಡಿಗೆ ಮಾತ್ರ ಸೀಮಿತವಾಗಿಲ್ಲ. ಇಡೀ ದೇಶದ ಎಲ್ಲಾ ರಾಷ್ಟ್ರ ಹಾಗೂ ಪ್ರಾದೇಶಿಕ ಪಕ್ಷಗಳಿಗೂ ಆವರಿಸಿದೆ. ಎರಡನೆಯ ಹಂತದ ನಾಯಕರನ್ನು ರಾಷ್ಟ್ರ ಮಟ್ಟದ ಪಕ್ಷಗಳಲ್ಲಿ ಬೆಳಸಲಾಗುತ್ತಿಲ್ಲ. ಇನ್ನು ಪ್ರಾದೇಶಿಕ ಪಕ್ಷಗಳೆಂಬ ಪಾಳೇಗಾರರ ಪಕ್ಷಗಳು ತಮ್ಮ ತಮ್ಮ ಕುಟುಂಬಗಳ ವಾರಸುದಾರರ ಹಿಡಿತದಲ್ಲಿವೆ. ಆಂತರೀಕ ಪ್ರಜಾಪ್ರಭುತ್ವ ವ್ಯವಸ್ಥೆಗಳಿಲ್ಲದ ಭಾರತದ ರಾಜಕೀಯ ಮತ್ತು ರಾಜಕೀಯ ಪಕ್ಷಗಳ ಸ್ಥಿತಿಯನ್ನು ಗಮನಿಸಿದಾಗ ಇದು ಎಂದಿಗೂ ವಾಸಿಯಾಗದ ಉಲ್ಬಣಗೊಂಡಿರುವ ಕಾಯಿಲೆಯಂತೆ ಕಾಣುತ್ತಿದೆ. ಸಹಜವಾದ ಸಾವೊಂದೇ ಇದಕ್ಕೆ ನಿಜವಾದ  ಮದ್ದು. ನಾಗರೀಕತೆಗಳು ಅವಸಾನಗೊಂಡು ಮತ್ತೊಂದು   ಬೆಳೆಯುವಂತೆ  ಭಾರತದಲ್ಲಿ ಹೊಸ ರಾಜಕೀಯ ವ್ಯವಸ್ಥೆಯೊಂದು ಬೆಳೆಯ ಬೇಕಿದೆ.
ಸ್ಥಿತಿಯಲ್ಲಿ ಜೊತೆಗೆ ತನ್ನ ಅರವತ್ತಮೂರನೆಯ ವಯಸ್ಸಿನಲ್ಲಿ ನಾನು ರಾಜಕೀಯ ಪಕ್ಷವನ್ನು ಸ್ಥಾಪಿಸುತ್ತೇನೆ, ರಾಜಕೀಯಕ್ಕೆ ಅನುಭಾವವನ್ನು ಬೆಸೆಯುತ್ತೇನೆ ಎಂಬ ರಜನಿಯವರ ಮಾತುಗಳು ರಾಜಕೀಯ ಯೋಚನೆಗಳ ಕುರಿತಾಗಿ ಅವರ ಅಪ್ರಬುದ್ಧತೆಯನ್ನು ಎತ್ತಿ ತೋರಿಸುತ್ತವೆ. ರಜನಿಯವರು ತಮಿಳುನಾಡು ರಾಜಕೀಯದಲ್ಲಿ ಆಟವನ್ನು ಕೆಡಿಸಬಲ್ಲವರೇ ಹೊರತುಪಂದ್ಯವನ್ನು ಗೆಲ್ಲಲಾರರು. ಸಿನಿಮಾ ನಟರ ವಿಷಯದಲ್ಲಿ ಆಂಧ್ರ ಮತ್ತು ತಮಿಳುನಾಡಿನ ಜನರಿಗಿಂತ ಹೆಚ್ಚು ಪ್ರಬುದ್ಧರಾಗಿದ್ದು ಯಾವುದೇ ಸಿನಕತನವಿಲ್ಲದೆ ಯೋಚಿಸಬಲ್ಲ ಕರ್ನಾಟಕದಲ್ಲಿ ಉಪೇಂದ್ರ ಎಂಬ ನಟ ಕೂಡ ರಾಜಕೀಯ ಪಕ್ಷ ಸ್ಥಾಪಿಸುವುದರ ಮೂಲಕ ರಾಜಕೀಯಕ್ಕೆ ಪ್ರವೇಶಿಸುವ ಸೂಚನೆ ನೀಡಿದ್ದಾರೆ. ನಮ್ಮ ಮಂಡ್ಯ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜನಪ್ರಿಯ ಜೋಕ್ ಒಂದು ಅಸ್ತಿತ್ವದಲ್ಲಿದೆ. ವಿವಾಹ ಅಥವಾ ಯಾವುದೇ ಶುಭ ಸಮಾರಂಭಗಳಲ್ಲಿ ವಿಚಿತ್ರವಾಗಿ ವರ್ತಿಸುವ ವ್ಯಕ್ತಿಯನ್ನುಯಾರ್ಲಾ ಇವನು ಉಪೇಂದ್ರಾ?” ಎಂದು ಪ್ರಶ್ನಿಸುತ್ತಾರೆ. ಇದರರ್ಥ ತಿಕ್ಕಲುತನಕ್ಕೆ ಇನ್ನೊಂದು ಹೆಸರು ಉಪೇಂದ್ರ ಎಂಬಂತಾಗಿದೆ.
ರಾಜಕೀಯ ಪಕ್ಷ ಘೋಷಣೆ ಮಾಡಿದ ದಿನ ಮನೆಯಿಂದ ಬಂದು ಮಾಧ್ಯಮಗಳ ಕ್ಯಾಮರಾಗಳ ಎದುರು ಖಾಕಿ ಶರ್ಟ್ ಧರಿಸಿ ಕುಳಿತುಕೊಂಡು ನನ್ನದು ಬಡವರ ಪಕ್ಷ ಎಂದು ಉಪೇಂದ್ರ ಘೋಷಿಸಿದ ತಕ್ಷಣ, ನಟ ಬೆಳ್ಳಿ ತೆರೆಗೆ ಮೀಸಲಾಗಿದ್ದ ತನ್ನ ತಿಕ್ಕಲುತನಗಳನ್ನು ಬೀದಿಗೆ ವರ್ಗಾಯಿಸುತ್ತಿದ್ದಾನೆ ಎಂಬುದು ಮನವರಿಕೆಯಾಯಿತು. ಉಪೇಂದ್ರ ವ್ಯಯಕ್ತಿಕವಾಗಿ ಬುದ್ಧಿವಂತ ಮತ್ತು ಪ್ರಾಮಾಣಿಕವಾಗಿ ಇರಲು ಬಯಸುವ ವ್ಯಕ್ತಿ. ಹಾಗಾಗಿ ಈತ  ರಾಜ್ಯದ 224 ವಿಧಾನ ಸಭೆಯ ಕ್ಷೇತ್ರಗಳನ್ನು ಗೆಲ್ಲುವ  ಪ್ರಯತ್ನವನ್ನು ತ್ಯೆಜಿಸಿ ತಾನು ವಾಸಿಸುತ್ತಿರುವ ಬೆಂಗಳೂರು ಮಹಾ ನಗರ ಪಾಲಿಕೆಯÀಲ್ಲಿ ನಾಲ್ಕು ವಾರ್ಡ್ಗಳನ್ನು ಗೆಲ್ಲುವ ಬಗ್ಗೆ ಯೋಚಿಸುವುದು ಒಳಿತು.

(ಕರಾವಳಿ ಮುಂಜಾವು ದಿನ ಪತ್ರಿಕೆಯ “ಜಗದಗಲ” ಅಂಕಣಕ್ಕೆ ಬರೆದ ಲೇಖನ)