ಶುಕ್ರವಾರ, ನವೆಂಬರ್ 16, 2018

.ಮಲ್ಲಿಕಾರ್ಜುನ ಖರ್ಗೆ ಎಂಬ ಧೀಮಂತ ದಲಿತ ನಾಯಕನ ಅಪೂರ್ವ ಕಥನ



1972 ರಲ್ಲಿ ಗುಲ್ಬರ್ಗಾ ಜಿಲ್ಲೆಯ ಗುರುಮಿಟ್ಕಲ್ ಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದ ಶಾಸಕನಾಗಿ ವಿಧಾನ ಸಭೆ ಪ್ರವೇಶಿಸುವುದರ ಮೂಲಕ ರಾಜ್ಯ ರಾಜಕಾರಣಕ್ಕೆ ಕಾಲಿಟ್ಟ ಮಲ್ಲಿಕಾರ್ಜುನ ಖರ್ಗೆಯವರು 46 ವರ್ಷಗಳ ತಮ್ಮ ಸುಧೀರ್ಘ ರಾಜಕಾರಣದಲ್ಲಿ ನಲವತ್ತು ವರ್ಷಗಳ ಕಾಲ ರಾಜ್ಯ ಸಚಿವ ಸಂಪುಟದಲ್ಲಿ ಮತ್ತು ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿ , ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಸುವುದರ ಮೂಲಕ ರಾಷ್ಟ್ರದ ಗಮನ ಸ ಳೆದ ಹಿರಿಯ ಮುತ್ಸದಿ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ.
ಹೈದರಾಬಾದ್ ಕರ್ನಾಟಕದಲ್ಲಿ ಸುದೀರ್ಘ ರಾಜಕಾರಣದಲ್ಲಿದ್ದುಕೊಂಡು ಒಂಬತ್ತು ಬಾರಿ ರಾಜ್ಯ ವಿಧಾನಸಭೆಗೆ ಹಾಗೂ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗುವುದರ ಮೂಲಕ ಖರ್ಗೆಯವರು ಸೋಲಿಲ್ಲದ ಸರದಾರರಾಗಿ ದಾಖಲೆ ನಿರ್ಮಿಸಿರುವುದು ಸುಲಭದ ಸಂಗತಿಯಲ್ಲ. . ರಾಜಕಾರಣವೆಂದರೆ, ಅಧಿಕಾರವನ್ನು ಅನುಭವಿಸುವುದು ಎನ್ನುವ ಮಾತು ಚಾಲ್ತಿಯಲ್ಲಿರುವ  ಈ ಕಾಲಘಟ್ಟದಲ್ಲಿ ಜನರ ಸೇವೆಯನ್ನು ಮತ್ತು ತನ್ನ ಕ್ಷೇತ್ರದ ಅಭಿವೃದ್ಧಿಯನ್ನು ಕಾಯಕವೆಂದು ಭಾವಿಸಿ, ಅದನ್ನು ಒಂದು ತಪಸ್ಸಿನಂತೆ ಧ್ಯಾನಿಸಿದ ಖರ್ಗೆಯ ಕರ್ತೃತ್ವ ಶಕ್ತಿ ನಿಜಕ್ಕೂ ಬೆರಗು ಮೂಡಿಸುವಂತಹದ್ದು.
ಸದಾ ಸುದ್ದಿಜಗತ್ತು ಮತ್ತು ಪ್ರಚಾರದಿಂದ ದೂರವಿರುವ ಮಲ್ಲಿಕಾರ್ಜುನ ಖರ್ಗೆಯವರು ಮೇಲುನೋಟಕ್ಕೆ ತೀರಾ ಗಂಭೀರವಾದ ವ್ಯಕ್ತಿತ್ವದವರು ನಿಜ.  ಆದರೆ, ಅಧಿಕಾರದ ಹಪಾಹಪಿತನವಿಲ್ಲದ, ಎಂದಿಗೂ ಗುಂಪುಗಾರಿಕೆಯನ್ನು ಮಾಡದ ಅಥವಾ ತನ್ನ ಜಾತಿಯ ಹಿನ್ನಲೆಯಲ್ಲಿ ಅಧಿಕಾರಕ್ಕಾಗಿ ಲಾಬಿ ಮಾಡದ ಖರ್ಗೆಯವರ ಸ್ವಾಭಿಮಾನದ .ಗುಣಗಳ ಹಿಂದೆ ಅವರ ಅಪಾರ ಓದು, ತಿಳುವಳಿಕೆ, ವಿದ್ವತ್ತು ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಗೌತಮ ಬುದ್ಧನ ಪ್ರಭಾವಗಳಿವೆ. ಅತ್ಯಂತ ಮಾಗಿದ ಹಾಗೂ ಪ್ರಬುದ್ಧ ಚಿಂತನೆಗಳ ವ್ಯಕ್ತಿತ್ವದ ಖರ್ಗೆಯವರ ಬಳಿ ಅರ್ಧ ಗಂಟೆ ಕುಳಿತು ಮಾತನಾಡಿದರೆ ಸಾಕು, ಅವರು ಎಂತಹ ಧೀಮಂತ ರಾಜಕಾರಣಿ ಎಂಬುವುದು ನಮ್ಮ ಅನುಭವಕ್ಕೆ ಬರುತ್ತದೆ.
ಇದೀಗ ಎಪ್ಪತ್ತೈದು ವರ್ಷಕ್ಕೆ ಕಾಲಿಟ್ಟಿರುವ ಮಲ್ಲಿಕಾರ್ಜುನ ಖರ್ಗೆಯವರ ಕುರಿತಾಗಿ ಗುಲ್ಬರ್ಗಾ ವಿಶ್ವ ವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಹೆಚ್.ಟಿ. ಪೋತೆಯವರು ಬರೆದಿರುವ “ ಬಾಬಾ ಸಾಹೇಬರೆಡೆಗೆ” ಎಂಬ  ಜೀವನ ಕಥನ ನಮಗೆ ಮಲ್ಲಿಕಾರ್ಜುನ ಖರ್ಗೆಯವರು ಬದುಕಿನ ಎಲ್ಲಾ ಮಗ್ಗುಲುಗಳನ್ನು ಸಮರ್ಥವಾಗಿ ಪರಿಚಯಿಸಿಕೊಡುವ ಮಹತ್ವದ ಕೃತಿಯಾಗಿದೆ.  ಹಲವು ವರ್ಷಗಳಿಂದ ಖರ್ಗೆಯರು ಮತ್ತು ಅವರ ಕುಟುಂಬದ ಜೊತೆ ಒಡನಾಡುತ್ತಾ ಬಂದಿರುವ ಪೋತೆಯವರು ಖರ್ಗೆಯವರ ಬಾಲ್ಯದ ಬಡತನ. ಅವರ ಅವರ ಓದಿನ ಆಕಾಂಕ್ಷೆ ಮತ್ತು ತನ್ನ ಪುತ್ರನನನ್ನು ಓದಿಸಿ ಸಾಹೇಬನನ್ನಾಗಿ ಮಾಡಬೇಕೆಂಬ ಏಕೈಕ ಆಸೆಯಿಂದ ಬೀದರ್ ಜಿಲ್ಲೆಯ ಹಳ್ಳಿಯಿಂದ ಇಟ್ಟಿಗೆ ತಯಾರಿಸುವವರ ಬಳಿ ಕೂಲಿ ಕಾರ್ಮಿಕರಾಗಿದ್ದ ಖರ್ಗೆಯವರ ತಂದೆ ಮಾಪಣ್ಣ ಖರ್ಗೆಯವರು ಗುಲ್ಬರ್ಗ ನಗರಕ್ಕೆ ಬಂದು ಅಲ್ಲಿನ ಜವಳಿ ಮಿಲ್ ನಲ್ಲಿ ಕೂಲಿ ಕಾರ್ಮಿಕನಾಗಿ ಸೇರಿ ಇಡೀ ಬದುಕನ್ನು ಗಂಧದ ಕೊರಡಿನಂತೆ ತೇಯ್ದ ಕಥೆಯನ್ನು ಲೇಖಕರು ಹೃದಯಂಗಮವಾಗಿ ಚಿತ್ರಿಸಿದ್ದಾರೆ.

ಖರ್ಗೆಯವರ ಬಡವರ ಹಾಗೂ ಹಿಂದುಳಿದವರ ಮೇಲಿನ ಪ್ರೀತಿ ಮತ್ತು  ನಿಷ್ಕಳಂಕ ಕಾಳಜಿಯ ಹಿಂದೆ ಅವರ ತಂದೆಯವರ ಪ್ರಭಾವವಿದೆ. ತಾನು ಮತ್ತು ತನ್ನ ತಂದೆ ಒಂದೆ ತಟ್ಟೆಯಲ್ಲಿ ಕುಳಿತು ಊಟ ಮಾಡುತ್ತಿದ್ದನ್ನು ಹಾಗೂ ತನ್ನನ್ನು ಅಪ್ಪ ಬೆಳಿಗ್ಗೆ ಹೆಗಲ ಮೇಲೆ ಕೂರಿಸಿಕೊಂಡು ಹೋಗಿ ಶಾಲೆಗೆ ಬಿಟ್ಟು, ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಘಟನೆ ಮತ್ತು ಆನಂತರ ಕೂಲಿ ಕೆಲಸ ಮುಗಿಸಿ ಬಂದು  ಸಂಜೆ ಶಾಲೆಯಿಂದ ಹೆಗಲ ಮೇಲೆ ಕೂರಿಸಿಕೊಂಡು ಬರುತ್ತಿದ್ದದನ್ನು ಭಾವುಕರಾಗಿ ನೆನೆಯುವಾಗ ಮಲ್ಲಿಕಾರ್ಜುನ ಖರ್ಗೆಯವರ ಕಣ್ಣಾಲಿಗಳು ಒದ್ದೆಯಾಗುತ್ತವೆ. 1972 ರಲ್ಲಿ ಪ್ರಥಮವಾಗಿ ವಿಧಾನ ಸಭೆಗೆ ಶಾಸಕರಾಗಿ ಪ್ರವೇಶ ಮಾಡಿದ ದಿನದಿಂದ ಇಂದಿನವರೆಗೂ ಖರ್ಗೆಯವರು ಶಾಸಕರಾಗಿ, ಸಚಿವರಾಗಿ ಮತ್ತು ಲೋಕಸಭೆಯ ಸದಸ್ಯರಾಗಿ ಮಾಡಿರುವ ಕೆಲಸಗಳನ್ನು ಲೇಖಕರು ಈ ಕೃತಿಯಲ್ಲಿ ಸವಿವರಾಗಿ ಅಂಕಿ ಅಂಶಗಳ ಸಮೇತ ದಾಖಲಿಸಿದ್ದಾರೆ. ಜೊತೆಗೆ ಕಳೆದ ಒಂದು ದಶಕದಲ್ಲಿ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಯಲ್ಲಿ ಅದರಲ್ಲೂ ವಿಶೇಷವಾಗಿ ಗುಲ್ಬರ್ಗಾ ನಗರವನ್ನು ಅವರು ಪರಿವರ್ತಿಸಿರುವ ರೀತಿ ನಿಜಕ್ಕೂ ಬೆರಗು ಮೂಡಿಸುವಂತಹದ್ದು.
ಶ್ರೀ ಮಲ್ಲಿಕಾರ್ಜುನ ಖರ್ಗೆಯವರು ಕೇಂದ್ರದಲ್ಲಿ ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ವಿಸ್ತರಿಸಿದ ರೈಲ್ವೆ ಯೋಜನೆಗಳು, ಅಲ್ಲಿಗೆ ತಂದ ಕಛೇರಿಗಳು ಮತ್ತು ಕಾರ್ಮಿಕ ಸಚಿವರಾಗಿದ್ದ ಸಂದರ್ಭದಲ್ಲಿ ಗುಲ್ಬರ್ಗಾ ನಗರಕ್ಕೆ ಸುಸಜ್ಜಿತ ಇ.ಎಸ್.ಐ. ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು, ಅವುಗಳ ಭವ್ಯ ಕಟ್ಟಡ, ಬೆಂಗಳೂರು ಮತ್ತು ಹುಬ್ಬಳ್ಳಿ ನಗರಗಳಲ್ಲಿ ಮೇಲ್ದರ್ಜೆಗೆ ಏರಿಸಲ್ಪಟ್ಟ ಆಸ್ಪತ್ರೆಗಳು, ಗುಲ್ಬರ್ಗಾ ನಗರದಲ್ಲಿ ನಿರ್ಮಾಣವಾಗಿರುವ ರಿಂಗ್ ರಸ್ತೆ ಹಾಗೂ ಅಲ್ಲಿನ  ವಿಶಾಲವಾದ ಮುಖ್ಯ ರಸ್ತೆಗಳು ಇವೆಲ್ಲವೂ ಖರ್ಗೆಯವರ ಹೆಸರನ್ನು ಇತಿಹಾಸದ ಪುಟಗಳಲ್ಲಿ ಶಾಸ್ವತವಾಗಿ ದಾಖಲಾಗುವಂತೆ ಮಾಡಿವೆ. ಜೊತೆಗೆ ಹೈದರಾಬಾದ್ ಕರ್ನಾಟಕದ ಹರಿಕಾರನನ್ನಾಗಿ ಮಾಡಿವೆ.
ಗುಲ್ಬರ್ಗಾ ನಗರವನ್ನು ಪ್ರಸಿದ್ಧ ಪ್ರವಾಸಿ ತಾಣ ಮಾಡುವುದಲ್ಲಿ ಖರ್ಗೆಯವರ ಸಾಧನೆ ಅಪ್ರತಿಮವಾದುದು. ಸೇಡಂ ರಸ್ತೆಯಲ್ಲಿ ಗುಲ್ಬರ್ಗಾ ವಿ.ವಿ. ಗೆ ಹೊಂದಿಕೊಂಡಿರುವ ಹದಿನೆಂಟು ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಸಿದ್ಧಾರ್ಥ ವಿಹಾರ ಎಂಬ ಬುದ್ಧ ದೇಗುಲವನ್ನು ನಿರ್ಮಿಸಿ, ಅದನ್ನು ದಕ್ಷಿಣ ಭಾರತ ಮಾತ್ರವಲ್ಲದೆ, ದಕ್ಷಿಣ ಏಷ್ಯಾದ ಅತ್ಯುತ್ತಮ ಬುದ್ಧ ದೇಗುಲವನ್ನಾಗಿ ಮಾಡಿದ್ದಾರೆ. ಅಲ್ಲಿನ ಪ್ರಶಾಂತ ಮೌನ, ಸ್ವಚ್ಛತೆ ಮತ್ತು ಗಿಡಮರಗಳ ಹಸಿರು, ಎಲ್ಲವೂ ಮನಸ್ಸಿಗೆ ಮುದನೀಡುತ್ತವೆ. ಒಂದು ಸಂಸ್ಥೆ ಅಥವಾ ಒಂದು ಸರ್ಕಾರ ಮಾಡಬಹುದಾದ ಕೆಲಸವನ್ನು ಇಚ್ಛಾ ಶಕ್ತಿ ಇರುವ ಒಬ್ಬ ವ್ಯಕ್ತಿ ಕೂಡ ಮಾಡಬಲ್ಲ ಎಂಬುದನ್ನು ಈ ದೇಗುಲದ ಮೂಲಕ ಮಲ್ಲಿಕಾರ್ಜುನ ಖರ್ಗೆಯವರು ತಮ್ಮೊಳಗಿನ ದೈತ್ಯ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಬುದ್ಧನ ಕುರಿತಾಗಿ ಹಾಗೂ ಅಲ್ಲಿನ ದೇಗುಲ ಕುರಿತಾಗಿ ಅವರು ಎಷ್ಟು ಆಳವಾಗಿ ಭಾವನಾತ್ಮಕ ಸಂಬಂಧ ಹೊಂದಿದ್ದಾರೆಂದರೆ, ಈ ವರ್ಷದ ಬುದ್ಧ ಪೂರ್ಣಿಮೆಯ ದಿನದಂದು ಬೆಳಗಿನ ವೇಳೆ ಅವರೊಂದಿಗೆ ದೇಗುಲದ ಆವರಣದಲ್ಲಿ ನಾನು ಸುತ್ತಾಡುತ್ತಿದ್ದೆ. ನೆಲಕ್ಕೆ ಹಾಸಿರುವ ಕಲ್ಲುಚಪ್ಪಡಿಯ ಮೇಲೆ ಬಿದ್ದಿದ್ದ ಒಣಗಿದ ಬೇವಿನ ಮರದ ಎಲೆಗಳನ್ನು ಒಂದೊಂದಾಗಿ ಆಯ್ದು  ಅವುಗಳನ್ನು ಕಸದ ಬುಟ್ಟಿಗೆ ಹಾಕುತ್ತಾ ಅವರು ನಡೆಯುತ್ತಿದ್ದರು. ಬೇಸಿಗೆಯಲ್ಲಿ  ನಲವತ್ತೈದು  ಡಿಗ್ರಿ ಉಷ್ಣಾಂಶ ಇರುವ ಗುಲ್ಬರ್ಗಾ ನಗರದಲ್ಲಿ ಬೌದ್ಧ ವಿಹಾರದ ಬಳಿ ಸೆಕೆ ಅಥವಾ ಬಿಸಿಲು ಎನಿಸುವುದಿಲ್ಲ.ಅಷ್ಟೊಂದು ಬೇವಿನ ಮರಗಳನ್ನು ಅವರು ಮಕ್ಕಳ ಹಾಗೆ ಜೋಪಾನ ಮಾಡಿ ಬೆಳಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಯವರನ್ನು  ಕಳೆದ ಐದು ವರ್ಷದಿಂದೀಚೆಗೆ  ಬಹಳ ಆಸಕ್ತಿಯಿಂದ ನಾನು  ಗಮನಿಸುತ್ತಾ ಬಂದಿದ್ದೀನಿ. ಅವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಮೋದಿ ಸರ್ಕಾರವನ್ನು ವಿಮರ್ಶೆಗೆ ಒಳಪಡಿಸುವ ರೀತಿಗೆ ಮತ್ತು ಅವರ ವಾಕ್ ಚಾತುರ್ಯಕ್ಕೆ  ನಾನು  ವಿಸ್ಮಯಗೊಂಡಿದ್ದೇನೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾದ ನಂತರ, ಲೋಕಸಭೆಯಲ್ಲಿ ಖರ್ಗೆಯವರು ಸರ್ಕಾರದ ಸಾಧನೆಯನ್ನು ಬಣ್ಣಿಸುತ್ತಾ “ ನಿಮ್ಮದು ಚಾರ್ ಆಣೆ ಕಾ ಮುರ್ಗಾ, ಬಾರ್ ಆಣೆ ಕಾ ಮಸಾಲ” ಎಂಬ ಉರ್ದು ಗಾದೆಯಂತೆ ನಾಲ್ಕಾಣೆ ಕೋಳಿಗೆ ಹನ್ನೆರೆಡಾಣೆ ಮಸಾಲೆ ಅರೆಯುವ ಸರ್ಕಾರ ಎಂದು ಜರಿದಿದ್ದರು.ವಿಧಾನ ಸಭೆಯಲ್ಲಾಗಲಿ, ಲೋಕಸಭೆಯಲ್ಲಾಗಲಿ ಎಂದಿಗೂ ಅಸಂಸದೀಯ ಪದ ಬಳಕೆ ಮಾಡದ,  ತುಟಿ ಮೀರಿ ಮಾತನಾಡದ ಖರ್ಗೆಯವರು ಚರ್ಚೆಗೆ ಮುನ್ನ ನಿಖರವಾದ ಅಂಕಿ ಅಂಶಗಳನ್ನು ಎದುರಿಗೆ ಇಟ್ಟುಕೊಂಡು ವಾದ ಮಂಡಿಸುವ ಪರಿಗೆ ಆಡಳಿತಾ ರೂಡ ಬಿ.ಜೆ.ಪಿ. ಪಕ್ಷದ ಎಲ್ಲಾ ನಾಯಕರಲ್ಲಿ ಖರ್ಗೆಯವರ ಕುರಿತಾಗಿ ಒಂದು ರೀತಿ ನೈತಿಕ ಭಯವಿದೆ.. ಇದು ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲಿ  ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕಾಂಗ್ರೇಸ್ ಪಕ್ಷಕ್ಕೆ ಖರ್ಗೆಯವರ ನಾಯಕತ್ವ ಮತ್ತು ಅವರ ನಡುವಳಿಕೆ ಹಾಗೂ ಮಾತುಗಾರಿಕೆಯಿಂದ ಒಂದಿಷ್ಟು ಘನತೆ ಮತ್ತು ಮೌಲ್ಯ ಉಳಿದುಕೊಂಡಿದೆ ಎಂದರೆ ತಪ್ಪಾಗಲಾರದು.

ಇಂತಹ ಹಿರಿಯ ಧೀಮಂತ ರಾಜಕಾರಣಿ ಮತ್ತು ರಾಜಕೀಯ ಮುತ್ಸದಿಗೆ ರಾಜ್ಯದ ಮುಖ್ಯಮಂತ್ರಿ ಪದವಿ ಇದುವರೆಗೆ  ಏಕೆ ದಕ್ಕಲಿಲ್ಲ ಎಂಬುದು ನಿಜಕ್ಕೂ ಸೋಜಿಗದ ಸಂಗತಿ. ಎಂದಿಗೂ ಕೆಳಮಟ್ಟದ ರಾಜಕಾರಣಕ್ಕೆ ಇಳಿಯಲಾರದ ಅವರ ಘನತೆಯ ರಾಜಕಾರಣ ಇದಕ್ಕೆ ಕಾರಣವಿರಬಹುದು. ಇದನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಅವರು  ತನ್ನ ನೆಲ ಹಾಗೂ ಜನರ ಪರವಾಗಿ ಅವರು ಸೇವೆ ಸಲ್ಲಿಸುತ್ತಿರುವ ಪರಿ ಅಚ್ಚರಿ ಮೂಡಿಸುತ್ತದೆ. ಇಂದಿಗೂ ಕೂಡ ತಾನು ಹುಟ್ಟಿ ಬೆಳೆದ ಬೀದರ್ ಜಿಲ್ಲೆಯ ಬಾಲ್ಕಿ ತಾಲ್ಲೂಕಿನ ವರವಟ್ಟಿ ಗ್ರಾಮವನ್ನು ಅವರು ಮರೆತಿಲ್ಲ. ತಾವು ಪ್ರತಿನಿಧಿಸುವ ಲೋಕ ಸಭಾ ಕ್ಷೇತ್ರಕ್ಕೆ ಅದು ಒಳಪಡದಿದ್ದರೂ ಸಹ, ಆ ಗ್ರಾಮವನ್ನು ಅವರು ಅಭಿವೃದ್ಧಿ ಪಡಿಸುರುವ ರೀತಿ ಪ್ರತಿಯೊಬ್ಬ ಜನಪ್ರತಿನಿಧಿಗೆ ಮಾದರಿಯಾಗಿದೆ. ಹೈಸ್ಕೂಲು, ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ವೈದ್ಯಕೀಯ ಆಸ್ಪತ್ರೆ, ಕೃಷಿ ಸಲಹಾ ಕೇಂದ್ರ, ಕುಡಿಯುವ ನೀರು, ರಸ್ತೆ ಇವೆಲ್ಲವನ್ನು ಒಳಗೊಂಡಿರುವ ವರವಟ್ಟಿ ಗ್ರಾಮದ ಜನತೆ ನಿಜಕ್ಕೂ ಪುಣ್ಯವಂತರು.ಏಕೆಂದರೆ, ಅವರು ಈ ನಾಡಿಗೆ ಒಬ್ಬ ಶ್ರೇಷ್ಠ ಜನಪ್ರತಿನಿಧಿಯನ್ನು ಹಾಗೂ , ಸ್ವಾಭಿಮಾನದ ರಾಜಕೀಯ ನಾಯಕನನ್ನು ನಾಡಿಗೆ ನೀಡಿದ ಕೀರ್ತಿ ಆ ನೆಲಕ್ಕೆ ಸಲ್ಲುತ್ತದೆ.
ಹೆಚ್.ಟಿ. ಪೋತೆಯವರು ಖರ್ಗೆಯವರ ಕುರಿತಾಗಿ ಮತ್ತು ಅವರ ಶ್ರೀಮತಿಯವರಾದ ರಾಧಾ ಬಾಯಿ ಯವರ ಮಾತೃವಾತ್ಸಲ್ಯ ಕುರಿತಾಗಿ ತುಂಬು ಹೃದಯದಿಂದ  ಈ ಕೃತಿಯಲ್ಲಿ ಎಲ್ಲವನ್ನೂ ದಾಖಲಿಸಿದ್ದಾರೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬುದಕ್ಕೆ ರಾಧಾಬಾಯಿ ಅಮ್ಮ ನಮ್ಮೆದುರು ಸಾಕ್ಷಿಯಾಗಿದ್ದಾರೆ. ತಮ್ಮ ಪತ್ನಿಯ ಸಹಕಾರವನ್ನು ಖರ್ಗೆಯವರು ಪ್ರತಿ ಸಂದರ್ಭದಲ್ಲಿಯೂ ಕೃತಜ್ಞತೆಯಿಂಸ ಸ್ಮರಿಸುತ್ತಾರೆ. ಈ ಕೃತಿಯನ್ನು ಓದುತ್ತಿದ್ದಂತೆ   ನಮಗೆ ಮಲ್ಲಿಕಾರ್ಜುನ ಖರ್ಗೆಯವರ ಮೇಲಿನ ಗೌರವ ಹೆಚ್ಚಾಗಿ ಅವರು ಮತ್ತಷ್ಟು ಹತ್ತಿರವಾಗುತ್ತಾರೆ. ನಾಡಿನ ಧೀಮಂತ ರಾಜಕಾರಣಿಯೊಬ್ಬರ ಈ ಜೀವನಗಾಥೆಯ ಕೃತಿಯನ್ನು  ಕರ್ನಾಟಕ ಸರ್ಕಾರದ ವಿಧಾನಸಭಾ ಸಚಿವಾಲಯವು  ಖರೀದಿಸಿ, ಪ್ರತಿಯೊಬ್ಬ ಶಾಸಕನಿಗೂ ಉಡುಗೊರಯಾಗಿ ನೀಡಬೇಕಿದೆ.  ಏಕೆಂದರೆ, ಮಲ್ಲಿಕಾರ್ಜುನ ಖರ್ಗೆಯ ಜೀವನದ ಹೋರಾಟದ ಕಥನ  ಒಬ್ಬ ಜನಪ್ರತಿನಿಧಿ ಹೇಗಿರಬೇಕೆಂದು ತೋರಿಸಿಕೊಡುವುದರ ಜೊತೆಗೆ ಜನಪ್ರತಿಗಳು ಒಂದಿಷ್ಟು ಸುಧಾರಿಸಬಹುದು .ಅಂತಹ ಮಹತ್ವದ ಕೃತಿ ಇದಾಗಿದೆ.

ಶುಕ್ರವಾರ, ನವೆಂಬರ್ 2, 2018

ಮನುಷ್ಯನನ್ನು ದ್ವೀಪವಾಗಿಸುತ್ತಿರುವ ಸಾಮಾಜಿಕ ತಾಣಗಳು


ಇಪ್ಪತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ಜಗತ್ತಿನ ಮಾಹಿತಿ ತಂತ್ರಜ್ಞಾನದಲ್ಲಿ ಉಂಟಾದ ಕ್ಷಿಪ್ರಕ್ರಾಂತಿಯ ಫಲದಿಂದಾಗಿ ಮನುಷ್ಯ ಲೋಕದ ಸಂವಹನ ವ್ಯವಸ್ಥೆಯಲ್ಲಿ ಅಮೂಲಾಗ್ರವಾದ ಬದಲಾವಣೆಯಾಯಿತು. ಅಂತರ್ಜಾಲದ ಮೂಲಕ ಅವಿಷ್ಕಾರಗೊಂಡ -ಮೈಲ್ ಎಂದು ಕರೆಯಲಾಗುವ ಮಿಂಚಂಚೆ ಜಾರಿಗೆ ಬಂದ ಮೇಲೆ ಕ್ಷಣಾರ್ಧದಲ್ಲಿ ಏನನ್ನಾದರೂ ಕಳಿಸುವ ಅಥವಾ ಸ್ವೀಕರಿಸುವ ವ್ಯವಸ್ಥೆ ಜಾರಿಗೆ ಬಂದ ಮೇಲೆ ಇಡೀ ವಿಶ್ವದ ಕಲ್ಪನೆ ಬದಲಾಗಿ ಒಂದು ಹಳ್ಳಿಯ ಸ್ವರೂಪ ಪಡೆಯಿತು.
ಆನಂತರದ ದಿನಗಳಲ್ಲಿ ಇಪ್ಪತ್ತೊಂದನೆಯ ಶತಮಾನಕ್ಕೆ ಜಗತ್ತು ಕಾಲಿಡುತ್ತಿದ್ದಂತೆ ಬಳಕೆ ಬಂದ ಮೊಬೈಲ್ ಪೋನ್ಗಳು  ಮನುಷ್ಯರ ಸಂಪರ್ಕ ಸಾಧನಗಳಾಗುವುದವು.   ಇವುಗಳ ಉಪಯೋಗ ಹೆಚ್ಚುತ್ತಿದ್ದಂತೆ ನಡೆದ ನಿರಂತರ ಸಂಶೋಧನೆಗಳ ಫಲವಾಗಿ ಈಗ ಚಾಲ್ತಿಯಲ್ಲಿರುವ ಮೊಬೈಲ್ ಫೋನ್ ಗಳು ಕೇವಲ ಮಾತನಾಡುವ ಫೋನ್ಗಳಾಗಿರದೆ, ನಮ್ಮ ಅಂಗೈಯಲ್ಲಿರುವ ಭೂಮಂಡಲವಾಗಿ ಪರಿವರ್ತನೆ ಹೊಂದಿದವು. ರೇಡಿಯೋ, ದಿನಪತ್ರಿಕೆ, ಟೆಲಿವಿಷನ್, ಲೆಕ್ಕ ಹಾಕುವ ಕ್ಯಾಲಿಕೇಟರ್, ಚಿತ್ರಗಳನ್ನು ತೆಗೆಯುವ ಕ್ಯಾಮರಾ, ದಶದಿಕ್ಕುಗಳನ್ನು ಮಾತ್ರವಲ್ಲದೆ, ನಾವು ಚಲಿಸುವ ಮಾರ್ಗತೋರುವ ಗೈಡ್, ಶಬ್ದಕೋಶವಾಗಿ, ಭಾಷಾಂತರದ ಕೈಪಿಡಿಯಾಗಿ, ಹೀಗೆ ಮನುಷ್ಯನ ಬಹುತೇಕ ಅಗತ್ಯಗಳನ್ನು  ಪೂರೈಸುವ ಅಲ್ಲಾವುದ್ದೀನನ ಅದ್ಭುತ ದೀಪದೊಳಗಿಂದ ಎದ್ದು ಬಂದು ನಾವು ಹೇಳಿದ್ದನ್ನುಕೇಳಿದ್ದನ್ನು ಪೂರೈಸುವ  ಬೂತದಂತೆ ಕೆಲಸ ಮಾಡತೊಡಗಿದವು. ಇವುಗಳಿಗೆ ಪೂರಕವಾಗಿ ಹುಟ್ಟಿಕೊಂಡ ಫೇಸ್ ಬುಕ್, ಟ್ವಿಟ್ಟರ್, ವಾಟ್ಸ್ ಅಪ್, ಗೂಗಲ್ ಪ್ಲಸ್, ಮೆಸೆಂಜೆರ್ನಂತಹ ಹಲವಾರು ತಾಣಗಳು ಮತ್ತು ಅಂತರ್ಜಾಲದಲ್ಲಿ ಸೃಷ್ಟಿಯಾದ ವೆಬ್ ಸೈಟ್ ಹೆಸರಿನ ಮಾಹಿತಿ ಪುಟಗಳ ತಾಣಗಳು ನಾಗರೀಕರ ಪಾಲಿಗೆ ಜಗತ್ತಿನ ಜ್ಞಾನವನ್ನೂ ಒಳಗೊಂಡಂತೆ ಸರ್ವಸ್ವವನ್ನು ಬೆರಳ ತುದಿಗೆ ತಂದು ಕೂರಿಸಿದವು. ಕ್ರಿಸ್ತಪೂರ್ವದಲ್ಲಿ ಬದುಕಿದ್ದ ಗೌತಮ ಬುದ್ಧ ಕಿಸಗೌತಮಿಗೆ " ಸಾವಿಲ್ಲದ ಮನೆಯಲ್ಲಿ ಸಾಸಿವೆ ತಾ" ಎಂಬ ಮಾತು ಹೇಳಿದ್ದನು. ಈಗ ಆತ ಬದುಕಿದ್ದರೆ, "ಮೊಬೈಲ್ ಇಲ್ಲದ ಮನೆಯಲ್ಲಿ ಸಾಸಿವೆ ತಾ" ಎಂದು ಹೇಳುತ್ತಿದ್ದರಲ್ಲಿ ಆಶ್ಚರ್ಯವಿಲ್ಲಮನುಷ್ಯನೊಬ್ಬನ  ಮೂಲಭೂತ ಅಗತ್ಯಗಳು ಎಂದರೆ, ಅನ್ನ, ವಸತಿ, ವಸ್ತ್ರ ಎಂಬ ನಂಬಿಕೆ ಮತ್ತು ಪರಿಭಾಷೆ ಜಗತ್ತಿನಲ್ಲಿ ಸಾವಿರಾರು ವರ್ಷಗಳಿಂದ ಚಾಲ್ತಿಯಲ್ಲಿತ್ತು. ಈಗಿನ ಅತ್ಯಾಧುನಿಕ ತಂತ್ರಜ್ಞಾನದ ಯುಗದಲ್ಲಿ ಮೂಲಭೂತ ಅಗತ್ಯಗಳೆಂದರೆಮೊಬೈಲ್, ಅಂತರ್ಜಾಲ ಸಂಪರ್ಕ ಮತ್ತು ಸಾಮಾಜಿಕ ತಾಣಗಳು ಎಂಬ ಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ.
ಜಗತ್ತಿನ ಒಳಿತಿಗಾಗಿ ಕಂಡುಕೊಂಡ ವಿಜ್ಞಾನದ ಬಹುತೇಕ ಅವಿಷ್ಕಾರಗಳು ಮನುಷ್ಯನ  ಸ್ವಾರ್ಥದಿಂದ ದುರುಯೋಗವಾದಂತೆ  (ಉದಾಹರಣೆಗೆ ಅಣುಬಾಂಬ್) ತಂತ್ರಜ್ಞಾನದ ಅವಿಷ್ಕಾರಗಳು ಸಾಮಾಜಿಕ ಸ್ವಾಸ್ಥಕ್ಕೆ ಧಕ್ಕೆ ತರುವುದರ ಜೊತೆಗೆ ಮನುಷ್ಯ ಮನುಷ್ಯರ ನಡುವೆ, ಸಮುದಾಯಗಳ ನಡುವೆ ಕಲಹಕ್ಕೆ ಕಾರಣವಾಗುತ್ತಿವೆ. ಇದು ಮಾತ್ರವಲ್ಲದೆ ಮನುಷ್ಯನ ಆಲೋಚನಾ ಶಕ್ತಿಯನ್ನು ಕುಗ್ಗಿಸುವುದರ ಮೂಲಕ ಅವನ/ಳನ್ನು ಮಿಥ್ಯಾ ವಾಸ್ತವ ಜಗತ್ತಿನಲ್ಲಿ ಬದುಕುವಂತೆ ಪ್ರೇರೇಪಿಸುತ್ತಿವೆ. ನಾವು ಬದುಕುತ್ತಿರುವ ವರ್ತಮಾನದ ಸಮಾಜದಲ್ಲಿ ಹೆಚ್ಚುತ್ತಿರುವ ಲೈಂಗಿಕ ಶೋಷಣೆಗಳು, ಅತ್ಯಾಚಾರಗಳು, ಅಸಹಿಷ್ಣುತೆ ಮತ್ತು ಜಾತಿ ಕಲಹ ಮತ್ತು ಹಿಂಸಾಚಾರದಂತಹ ಘಟನೆಗಳ ಹಿಂದೆ ಸಾಮಾಜಿಕ ತಾಣಗಳ ಪರೋಕ್ಷವಾದ ಪಾತ್ರವಿರುವುದನ್ನು ತಳ್ಳಿಹಾಕಲಾಗದು. ಮನುಷ್ಯನೊಬ್ಬನ ಅಭಿವ್ಯಕ್ತಿ ಸ್ವಾತಂತ್ರ್ಯದಂತೆ ಮುಕ್ತವಾಗಿ ಅಂತರ್ಜಾಲದಲ್ಲಿ ಏನು ಬೇಕಾದರೂ ಹರಿಯಬಿಡಬಹುದು ಎಂಬ ಪರಿಕಲ್ಪನೆ  ಜಗತ್ತನ್ನು ಆವರಿಸಿಕೊಂಡ ನಂತರ ಅದು ನಮ್ಮನ್ನು  ಅನಾಗರೀಕತೆಯ ಜಗತ್ತಿನಡೆ ನಮಗೆ ಅರಿವಿಲ್ಲದೆ ಕೊಂಡೊಯ್ಯುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಎಂಬುದು ಆಧುನಿಕತೆಯ ನಾಗರೀಕ ಜಗತ್ತಿನ ಪಾಲಿನ ಹುಲಿಯ ಮೇಲಿನ ಸವಾರಿಯಾಗಿದೆ. ಕೆಳಕ್ಕೆ ಇಳಿಯಲಾಗದು ಜೊತೆಗೆ ಮೇಲೆ ಕುಳಿತು ನಿರಂತರ  ಸವಾರಿಯನ್ನೂ ಮಾಡಲಾಗದ ಇಬ್ಬಂದಿಯ ಸ್ಥಿತಿಯಲ್ಲಿ ನಾವು ಬದುಕಿದ್ದೇವೆ.

2018 ಸಮೀಕ್ಷೆಯ ಪ್ರಕಾರ ಭಾರತದ ಜನಸಂಖ್ಯೆ 135 ಕೋಟಿಯನ್ನು ಮುಟ್ಟಿದೆ. ಇದರಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ನೂರು ಕೋಟಿ ದಾಟಿದೆ. ಇವರಲ್ಲಿ ತಮ್ಮ ಮೊಬೈಲ್ಗಳಿಗೆ ಅಂತರ್ಜಾಲ ಸಂಪರ್ಕ ಹೊಂದಿರುವವರ ಸಂಖ್ಯೆ 82 ಕೋಟಿ ತಲುಪಿದೆ. ಇದರ ಪರಿಣಾಮವೆಂಬಂತೆ ನೆಟ್ ವ್ಯಸನಿಗಳ ಸಂಖ್ಯೆ ಕೂಡ ದಿನೇ ದಿನ ವೃದ್ಧಿಸುತ್ತಿದೆ. ಈವರೆಗೆ ಪ್ರಮುಖ ನಗರಗಳಲ್ಲಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಧೂಮಪಾನ ಮತ್ತು ಮದ್ಯಪಾನ ವ್ಯಸನ ಮುಕ್ತ ಕೇಂದ್ರಗಳಿದ್ದವು. ಇದೀಗ ನೋಮೊಪೋಬಿಯಾ ಎಂಬ ಮಾನಸಿಕ ಕಾಯಿಲೆಗೆ ತುತ್ತಾಗಿ ಬಳಲುತ್ತಿರುವ ನೆಟ್ ವ್ಯಸನಿಗಳಿಗೆ ವ್ಯಸನ ಮುಕ್ತ ಕೇಂದ್ರಗಳು ಆರಂಭವಾಗಿವೆ. ಈಗಾಗಲೇ ಭಾರತದ ಪ್ರಮುಖ ಮೆಟ್ರೊ ನಗರಗಳಾದ ದೆಹಲಿ, ಮುಂಬೈ, ಕೊಲ್ಕತ್ತ, ಬೆಂಗಳೂರು ಮುಂತಾದ ನಗರಗಳಲ್ಲಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು ಮೊಬೈಲ್, ವೀಡಿಯೋ ಗೇಮ್, ಹಾಗೂ ಸದಾ ಸಾಮಾಜಿಕ ತಾಣಗಳಲ್ಲಿ ಮುಳುಗಿಹೋಗಿರುವ ಮಕ್ಕಳು ಮತ್ತು ಹದಿಹರೆಯದ ಯುವಕ-ಯುವತಿಯರಿಗೆ ಚಿಕಿತ್ಸೆ ನೀಡುತ್ತಿವೆ.. ಅಂತರ್ಜಾಲದ ಅಥವಾ ಸಾಮಾಜಿಕ ತಾಣದ ವ್ಯಸನ ಕೇವಲ ಮಕ್ಕಳು ಅಥವಾ ಯುವಜನಾಂಗದ ವ್ಯಸನವಾಗಿರದೆ ಸರ್ಕಾರಿ ಮತ್ತು ಖಾಸಾಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ನೌಕರರ ಪಾಲಿಗೆ ಗೀಳಾಗಿ ಪರಿಣಮಿಸಿದೆ. ಇದರಿಂದಾಗಿ ಕಚೇರಿಯ ಕಾರ್ಯಚಟುವಟಿಕೆಯಲ್ಲಿ  ತೊಡಕನ್ನುಂಟುಮಾಡಿದೆ ಕಾರಣಕ್ಕಾಗಿ ಎಲ್ಲಾ ಕಚೇರಿಗಳು, ಬ್ಯಾಂಕುಗಳು ಹಾಗೂ ಇತರೆ ಖಾಸಾಗಿ ಸಂಸ್ಥೆಗಳಲ್ಲಿ ನೌಕರರ ಮೇಲೆ ಹದ್ದಿನ ಕಣ್ಣಿಡಲು ಸಿ.ಸಿ.ಟಿ.ವಿ. ಕ್ಯಾಮರಾಗಳನ್ನು ಅಳವಡಿಸಿ ಕಣ್ಗಾವಲು ಹಾಕಲಾಗಿದೆ.
ಕನ್ನಡದ ಪುಸ್ತಕ ಪ್ರಕಟಣೆಯಲ್ಲಿ ಅತ್ಯಂತ ಹಿರಿಯದಾದ ಹಾಗೂ 75 ವರ್ಷಗಳನ್ನು ಪೂರೈಸಿರುವ ಹುಬ್ಬಳ್ಳಿಯ  ಸಾಹಿತ್ಯ ಭಂಡಾರದ ಮುಖ್ಯಸ್ಥರಾದ  ಶ್ರೀ ಸುಬ್ರಮಣ್ಯಂ ಇತ್ತೀಚೆಗೆ ನನ್ನೆದುರು ಕುತೂಹಲಕಾರಿ ಮಾಹಿತಿಯನ್ನು ಬಿಚ್ಚಿಟ್ಟರು. ಪುಸ್ತಕಗಳ ಮಾರಾಟ ಹಾಗೂ ಓದುಗರ ಸಂಖ್ಯೆ ಕುರಿತಂತೆ ನಾನು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಎರಡು ವರ್ಷಗಳಲ್ಲಿ ಶೇಕಡ ಮುವತ್ತರಷ್ಟು ಸಾಹಿತ್ಯ ಕೃತಿಗಳ ಮಾರಾಟ ಕಡಿಮೆಯಾಗಿದೆ ಎಂದರು. ಅವರ ಅನುಭವದಲ್ಲಿ  ಯುವಕರಿಗಿಂತ ಹೆಚ್ಚಾಗಿ ಐವತ್ತು ಮೀರಿದ ಹಿರಿಯ ನಾಗರೀಕರಲ್ಲಿ ಪುಸ್ತಕ ಕೊಳ್ಳುವ ಹವ್ಯಾಸ ಹೆಚ್ಚಾಗಿತ್ತು. ಆದರೆ, ಇತ್ತೀಚೆಗೆ  ಅವರೆಲ್ಲಾ ದಿನದ ಮೂರು ಅಥವಾ ನಾಲ್ಕು ಗಂಟೆಗಳ ಕಾಲ ವಾಟ್ಸ್ ಅಪ್ ತಾಣದಲ್ಲಿ ಸಿಗುವ ವೀಡಿಯೊ ತುಣುಕುಗಳನ್ನು, ಚಿತ್ರಗಳನ್ನು ಹಾಗೂ ಸಂದೇಶ ಇತ್ಯಾದಿಗಳನ್ನು ನೋಡುತ್ತಾ ಕಾಲಕಳೆಯುತ್ತಿದ್ದಾರೆ ಎಂದರು. ಅವರ ಮಾತು ವಾಸ್ತವಕ್ಕೆ ಹತ್ತಿರದ ಮಾತಾಗಿತ್ತು. ದಿನದ ಅನೇಕ ಚಟುವಟಿಕೆಗಳ ನಡುವೆ ಮಧ್ಯ ವಯಸ್ಸಿನವರು ಮತ್ತು ಹಿರಿಯನಾಗರೀಕರು   ಒಂದೆರೆಡು ಗಂಟೆಗಳ ಕಾಲ ತಮ್ಮ ಅಬಿರುಚಿಗೆ ತಕ್ಕಂತೆ ಪುಸ್ತPಗಳನ್ನು ಓದುತ್ತಿದ್ದವರು, ಇದರ ಜೊತೆಗೆ ತಾವು ವಾಸಿಸುತ್ತಿದ್ದ ಊರುಗಳಲ್ಲಿ ನಡೆಯುತ್ತಿದ್ದ ಸಂಗೀತ ಕಛೇರಿಗಳು ಮತ್ತು  ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಈಗ ಅವರೆಲ್ಲರೂ ಕಾಣೆಯಾಗುತ್ತಿದ್ದಾರೆ. ಸಭಾಂಗಣಗಳು ಭಣಗುಡುತ್ತಿವೆ. ಸಾಮಾಜಿಕ ತಾಣಗಳ ವ್ಯಸನಕ್ಕೆ ವಯಸ್ಸು, ಲಿಂಗ, ಜಾತಿ, ಧರ್ಮ, ನಗರ, ಹಳ್ಳಿ, ಬಡವ, ಶ್ರೀಮಂತ ಎಂಬ ಬೇಧ ಭಾವವಿಲ್ಲದೆ ಎಲ್ಲರೂ ಬಲಿಯಾಗುತ್ತಿದ್ದಾರೆ. ಸಮುದ್ರಗಳು ಉಕ್ಕಿ ಹರಿಯುವ ನದಿಯನ್ನು ಸ್ವೀಕರಿಸುವ ರೀತಿಯಲ್ಲಿ ಸಾಮಾಜಿಕ ತಾಣಗಳು ಎಲ್ಲರನ್ನೂ ತಮ್ಮ  ತೆಕ್ಕೆಗೆ ತೆಗೆದುಕೊಳ್ಳುತ್ತಿವೆ. ಪೇಸ್ ಬುಕ್, ಟಿಟ್ಟರ್ ಅಥವಾ ವಾಟ್ಸ್ ಅಪ್ ಖಾತೆ ಇಲ್ಲದ ವ್ಯಕ್ತಿ ಕೀಳಮರಿಯಿಂದ ಬಳಲುವಂತೆ ಮಾಡಿವೆ.
ಖ್ಯಾತ ಮನೋವಿಜ್ಞಾನಿ ಸಿಗ್ಮಂಡ್ ಪ್ರಾಯ್ಡ್ ಮನುಷ್ಯನ ಮನಸ್ಸನ್ನು ವಿಶ್ಲೇಸಿಸುತ್ತಾ. "ಮಾನವನ ಮನಸ್ಸು ಮೂಲಭೂತವಾಗಿ ಎಷ್ಟೇ ಪ್ರಶಾಂತವಾಗಿದ್ದರೂ, ಅದರೊಳಗೆ ವಿಕೃತಿಯ ಹಾಗೂ ವಿಕ್ಷಿಪ್ತ ಭಾವನೆಗಳು ಸುಪ್ತ ಪ್ರಜ್ಞೆಯ ಭಾಗವಾಗಿ ಮನೆ ಮಾಡಿಕೊಂಡು ಹೊರಬರಲು ಹಾತೊರೆಯುತ್ತವೆ. ಆದರೆ, ಸಂಘ ಜೀವಿಯಾದ ಮಾನವನಿಗೆ ಉತ್ತಮ ನಡುವಳಿಕೆಗಾಗಿ ಸಮಾಜ ಮತ್ತು ಪ್ರಭುತ್ವ ರೂಪಿಸಿರುವ ಚೌಕಟ್ಟು ಮತ್ತು ವಿಧಿಸಿರುವ ಕಾನೂನು ಹಾಗೂ ನಿಯಮಗಳು ಅಂತಹ ಭಾವನೆಗಳನ್ನು ನಿಗ್ರಹಿಸುವಂತೆ ಮಾಡಿವೆ" ಎಂದು ವ್ಯಾಖ್ಯಾನಿಸಿದ್ದನು. ಆತನ ಮಾತಿನ ಹಿನ್ನಲೆಯಲ್ಲಿ  ಈಗಿನ ಜಗತ್ತನ್ನು ಅವಲೋಕಿಸಿದಾಗ ನೆಟ್ ಹಾಗೂ ಡಿಜಿಟಲ್  ಯುಗದಲ್ಲಿನ ಎಲ್ಲಾ ಸಂಪರ್ಕ ಸಾಧನಗಳು ಮತ್ತು ಸೌಲಭ್ಯಗಳು ಮನುಷ್ಯನ ವಿಕಾರವನ್ನು ಉದ್ದೀಪಿಸುವ ಸಾಧನಗಳಾಗಿವೆ ಎಂದು ಹೇಳಬಹುದು. ಇದರ ಪರಿಣಾವೆಂಬಂತೆ ಅತ್ಯಾಚಾರದಂತಹ ದುಷ್ಕøತ್ಯಗಳನ್ನು ಚಿತ್ರಿಸಿ ಅಂತರ್ಜಾಲದಲ್ಲಿ ಬಿಡುವುದು, ನಮ್ಮ ಕಣ್ಣ ಮುಂದೆ ಅಪಘಾತ ಸಂಭವಿಸಿದಾಗ  ಸಾವು ನೋವಿನ ನಡುವೆ ರಸ್ತೆಯಲ್ಲಿ ಬಿದ್ದು ಹೊರಳಾಡುವ ನತದೃಷ್ಟರ ನೆರವಿಗೆ ಧಾವಿಸಿದೆ, ಅಮಾನವೀಯವಾಗಿ ಅವರ ನರಳಾಟವನ್ನು ಚಿತ್ರಿಸಿಕೊಂಡು ವಾಟ್ಸ ಅಪ್ ಮತ್ತು ಫೇಸ್ ಬುಕ್ ತಾಣಗಳಲ್ಲಿ ಹಂಚಿಕೊಳ್ಳುವ ಅಪಾಯಕಾರಿ ಪ್ರವೃತ್ತಿ ಈಗ ಎಲ್ಲೆಡೆ ಹಬ್ಬಿದೆಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಧಾರವಾಡ ಜಿಲ್ಲೆಯ ಗರಗ ಎಂಬ ಗ್ರಾಮ ಪಂಚಾಯಿತಿ ಸದಸ್ಯೆಯೊಬ್ಬಳ ಪತಿ ಮಹಾಶಯನೊಬ್ಬ  ತನ್ನ ಪತ್ನಿಯ ಜೊತೆಗಿನ ಖಾಸಾಗಿ ಕ್ಷಣಗಳನ್ನು ರಹಸ್ಯವಾಗಿ ಮೊಬೈಲ್ ನಲ್ಲಿ ಚಿತ್ರಸಿಕೊಂಡು ನಂತರ ಅದನ್ನು ಕುಡಿದ ಅಮಲಿನಲ್ಲಿ ತನ್ನ ಗೆಳೆಯರಿಗೆಲ್ಲಾ ರವಾನಿಸಿದ್ದನು  ಹಸಿ ಬಿಸಿ ದೃಶ್ಯಗಳು ಜಿಲ್ಲೆಯಾದ್ಯಂತ ಸಾಮಾಜಿಕ ತಾಣಗಳಲ್ಲಿ ವೈರಲ್ ಆದ ಪರಿಣಾಮವಾಗಿ ಇಂದಿಗೂ ಹೆಣ್ಣು ಮಗಳು ಮನೆಯಿಂದ ಹೊರಬಾರದ ಸ್ಥಿತಿಯಲ್ಲಿ ಅವಮಾನದಿಂದ ಕುಗ್ಗಿ ಹೋಗಿದ್ದಾಳೆ. ಸಾಮಾಜಿಕ ತಾಣಗಳನ್ನು ಕುರಿತಂತೆ ಮತ್ತು  ಅವುಗಳ ಒಳಿತು, ಕೆಡುಕು ಕುರಿತು ವಿವೇಚನೆಗಳಿಲ್ಲದ ಅವಿವೇಕಿಗಳ ಕೈಗೆ ಈಗಿನ ಅಗ್ಗದ ಅಂತರ್ಜಾಲ ವ್ಯವಸ್ಥೆ ಸಿಕ್ಕಿರುವುದು ಮಂಗನ ಕೈಗೆ ಮಾಣಿಕ್ಯ ದೊರೆತಂತಾಗಿದೆ.

ನಿಜಕ್ಕೂ ಜ್ಞಾನದ ಭಂಡಾರವಾಗಿ, ಮಾಹಿತಿಯ ಅಗಣಿತ ಗಣಿಯಂತಿರುವ ಅಂತರ್ಜಾಲವು ಮನುಷ್ಯನ ಜ್ಞಾನ ವಿಕಾಸಕ್ಕೆ ದೊರೆತ ಹಾಗೂ ದುಬಾರಿಯಲ್ಲದ ಕ್ರಾಂತಿಕಾರಿ ವ್ಯವಸ್ಥೆ. ಇದರ ಬಗ್ಗೆ ಎರಡು ಮಾತಿಲ್ಲ. ಆದರೆ, ವವ್ಯಸ್ಥೆಯು ಉಪಯೋಗಕ್ಕಿಂತ ದುರುಪಯೋಗವಾಗುತ್ತಿರುವುದು ಹೆಚ್ಚಾಗಿದೆ. ಇದಕ್ಕೆ ಪರೋಕ್ಷವಾಗಿ ಸಾಮಾಜಿಕ ತಾಣಗಳು ಕೈ ಜೋಡಿಸಿರುವುದನ್ನು ತಳ್ಳಿಹಾಕುವಂತಿಲ್ಲ. ಜ್ಞಾನ ಪ್ರಸಾರ ಹಾಗೂ ಪರಸ್ಪರ ವಿನಿಮಯಕ್ಕೆ ಸಂವಹನದ ಮಾಧ್ಯಮವಾಗಬೇಕಿದ್ದ ಸಾಮಾಜಿಕ ತಾಣಗಳು ಪರಸ್ಪರ ದ್ವೇಷಕ್ಕೆ, ವ್ಯಕ್ತಿ ಹಾಗೂ ಸಮುದಾಯಗಳ ನಡುವಿನ ಸಂಘರ್ಷಕ್ಕೆ ಕಾರಣವಾಗುತ್ತಿವೆ. ಇಂದಿನ ಯುವಪೀಳಿಗೆ ಸೆಲ್ಪಿ ಎಂಬ ಸ್ವ-ಭಾವಚಿತ್ರಗಳ ಮೋಹಕ್ಕೆÉ್ಕ ಬಲಿಬಿದ್ದಿದ್ದಾರೆ. ಇದರಿಂದಾಗಿ ರೈಲುಗಳಲ್ಲಿ, ಸಮುದ್ರದ ದಂಡೆಗಳಲ್ಲಿ ಮತ್ತು ನದಿ ತೀರಗಳಲ್ಲಿ ಕಾಲುಜಾರಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೂ ಸಹ  ಪ್ರತಿ ದಿನ ಪ್ರತಿ ಕ್ಷಣ ಪೋಟೊಗಳನ್ನು ಕ್ಲಿಕ್ಕಿಸುವುದು, ನಂತರ ತಕ್ಷಣ ಅವುಗಳನ್ನು ಸಾಮಾಜಿಕ ತಾಣಗಳಿಗೆ ಹಾಲಿ ಲೈಕು ಮತ್ತು ಕಾಮೆಂಟುಗಳಿಗೆ ಎದುರು ನೋಡುತ್ತಾ ಕೂರುವುದು ಯುವಜನಾಂಗದ ಹವ್ಯಾಸವಾಗಿದೆ. ಕೆಲವು ಯುವಕ-ಯುವತಿಯರು ಫೇಸ್ ಬುಕ್ ಮತ್ತು ವಾಟ್ಸ್ ಅಪ್ ತಾಣಗಳಿಗಾಗಿ ತಮ್ಮ ಬದುಕಿನ ಕ್ರಮವನ್ನು ಮೀಸಲಾಗಿಟ್ಟಿರುವುದರ ಜೊತೆಗೆ ಬದಲಾಯಿಸಿಕೊಂಡಿದ್ದಾರೆ. ಇದರ ಮುಂದುವರಿದ ಹುಚ್ಚಿನಂತೆ ಕೆಲವರು  ತಾಣಗಳನ್ನು ಪೋಟೊ ಅಲ್ಬಂಗಳಾಗಿ ಪರಿವರ್ತಿಸಿಕೊಂಡಿದ್ದಾರೆ.
ತಮ್ಮದೇ ಆದ ಪ್ರತ್ಯೇಕ ಗುಂಪುಗಳನ್ನು ಕಟ್ಟಿಕೊಂಡು ಜಗಳವಾಡುವುದು, ತಾಣದಲ್ಲಿ ಕೆಟ್ಟ ಹಾಗೂ ನಿಂದನೆಯ ಬರಹಗಳನ್ನು ಬರೆದು ಸೇಡು ತೀರಿಸಿಕೊಳ್ಳುವುದು ಇಲ್ಲವೆ, ಖಿನ್ನತೆಗೆ ಒಳಗಾಗುವುದು ಇವೆಲ್ಲವೂ ಇತ್ತೀಚೆಗಿನ ಸಾಮಾಜಿಕ ಪಿಡುಗಿನಂತೆÉ ಎಲ್ಲೆಡೆ ಹರಡುತ್ತಿದೆ. ಇವೆಲ್ಲವುಗಳ ಒಟ್ಟು ಪರಿಣಾಮ ಎಂಬಂತೆ ದೇಶದ ಬಹುದೊಡ್ಡ ಮಾನವ ಸಂಪನ್ಮೂಲ ಎಂದು ಪರಿಗಣಿಸಲ್ಪಟ್ಟ ಯುವಶಕ್ತಿಯ ಚೇತನವು ಸಾಮಾಜಿಕ ತಾಣಗಳಲ್ಲಿ ವ್ಯರ್ಥವಾಗಿ ಕರಗಿ ಹೋಗುತ್ತಿದೆ. ಸುಳ್ಳು ಸುದ್ಧಿಗಳನ್ನು ಹರಡುವುದರ ಮೂಲಕ ಕೋಮು ಪ್ರಚೋದನೆಗೆ ಪ್ರೋತ್ಸಾಹಿಸುವುದು, ತನಗೆ ಇಷ್ಟವಿಲ್ಲದ ಅನ್ಯ ಧರ್ಮಿಯರು ಮತ್ತು ದೇವರು ಹಾಗೂ ಧಾರ್ಮಿಕ ಮುಖಂಡರನ್ನು ಕೆಟ್ಟದಾಗಿ ಚಿತ್ರಿಸುವುದಕ್ಕೆ ಅಥವಾ ನಿಂದಿಸುವುದಕ್ಕೆ ಸಾಮಾಜಿಕ ತಾಣಗಳು ವೇದಿಕೆಗಳಾಗುತ್ತಿರುವುದು ದುರ್ದೈವದ ಸಂಗತಿಯಾಗಿದೆ.
ಇಪ್ಪತ್ತೊಂದನೆಯ ಶತಮಾನದಲ್ಲಿ ಅಕ್ಷರಸ್ಥರ ಯುಗದಲ್ಲಿ ಕಳೆದ ಒಂದು ವರ್ಷದಿಂದ ಸಾಮಾಜಿಕ ತಾಣದಲ್ಲಿ ಮಕ್ಕಳು ಕಳ್ಳರ ಕುರಿತಂತೆ ಹರಡಿದ ವದಂತಿಯ ಫಲವಾಗಿ ದೇಶಾದ್ಯದಂತ ನೂರಾರು ಅಮಾಯಕರು, ಮಾನಸಿಕ ಅಸ್ವಸ್ಥರು, ತಮ್ಮ ತಲೆಯ ಮೇಲೆ ಬುಟ್ಟಿ ಅಥವಾ ಬಟ್ಟೆಯ ಗಂಟುಗಳನ್ನು ಹೊತ್ತಿ ಹಳ್ಳಿ ಹಳ್ಳಿ ತಿರುಗಿ ಸಣ್ಣ ವ್ಯಾಪಾರ ಮಾಡುತ್ತಿದ್ದ ಬಡವರು ಅಮಾನುಷವಾಗಿ ಹತ್ಯೆಯಾದರು. ಸಾಮಾಜಿಕ ತಾಣಗಳಲ್ಲಿ ನಮಗೆ ಬಂದ ಸುದ್ದಿಯ ಮೂಲ ಯಾವುದುಅದಕ್ಕೆ ಆಧಾರವಾಗಿರುವ ಮಾಹಿತಿ ಏನು? ಅಥವಾ  ಘಟನೆ ಘಟಿಸಿದ ದಿನಾಂಕ ಅಥವಾ ಸ್ಥಳ ಯಾವುದು? ಇವುಗಳನ್ನು ಪರಾಮರ್ಶಿಸದೆ ಒಬ್ಬರಿಂದ ಮತ್ತೊಬ್ಬರಿಗೆ ದಾಟಿಸುವ  ಧಾವಂತವನ್ನು ಗಮನಿಸಿದರೆ, ಭವಿಷ್ಯದ ಭಾರತದ ಬಗ್ಗೆ ಭಯವಾಗತೊಡಗಿದೆ. ಅಧಿಕಾರದ ಗದ್ದುಗೆಯಲ್ಲಿ ಶಾಶ್ವತವಾಗಿ ಉಳಿಯಬೇಕೆಂಬುದನ್ನು  ಗುರಿಯಾಗಿರಿಸಿಕೊಂಡ ರಾಜಕೀಯ ಪಕ್ಷಗಳು ಅಥವಾ ಜನಪ್ರತಿನಿಧಿಗಳ ಪರವಾಗಿ ಇಲ್ಲವೆ ವಿರೋಧವಾಗಿ ಬಡಿದಾಡುವ ಗುಂಪುಗಳು ಸಾಮಾಜಿಕ ತಾಣಗಳಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ಸಕ್ರಿಯವಾಗಿವೆ. ಆಳುವ ಸರ್ಕಾರಗಳ ಭವಿಷ್ಯ ಬರೆಯಲು ಪ್ರಜಾ ಪ್ರಭುತ್ವ ವ್ಯವಸ್ಥೆ ಇರುವ ಭಾರತದಂತಹ ರಾಷ್ಟ್ರದಲ್ಲಿ ಮತದಾನದಂತಹ ಪ್ರಕ್ರಿಯೆ ಅಸ್ತಿತ್ವದಲ್ಲಿದೆ. ಭಾರತದ ಪ್ರತಿಯೊಬ್ಬ ಮತದಾರನೂ ನಿರ್ಣಾಯಕ ಪ್ರಭುವಾಗಿರುವಾಗ, ಜವಾಬ್ದಾರಿಯನ್ನು ಮರೆತು ಸಾಮಾಜಿಕ ತಾಣಗಳಲ್ಲಿ ಬೆಂಬಲಿಗರ ಹೆಸರಿನಲ್ಲಿ ಪರಸ್ಪರ ಕೆಸರು ಎರಚಾಟದಲ್ಲಿ ತೊಡಗಿಕೊಂಡಿರುವುದನ್ನು ಗಮನಿಸಿದರೆ, ಎಂತಹ ಪ್ರಜ್ಞಾವಂತ ನಾಗರೀಕರಿಗೆ ಸಾಮಾಜಿಕ ತಾಣಗಳ ಕುರಿತು ಗೌರವ ಉಂಟಾಗದು.
ಮನೆಯಲ್ಲಿ ಬೆಳೆಯುತ್ತಿರುವ ಮಕ್ಕಳು ಮೊದಲು ಅಜ್ಜ ಅಜ್ಜಿಯರ ಜೊತೆ ಮತ್ತು ನೆರೆಮನೆಯ ಮಕ್ಕಳ ಜೊತೆ ಆಟವಾಡುತ್ತಾ ಕಾಲಕಳೆಯುತ್ತಾ ಜಗತ್ತನ್ನು ಗ್ರಹಿಸುತ್ತಿದ್ದವು. ಇಂದಿನ ಪೋಷಕರು ಮಕ್ಕಳ ಕೈಗೆ ಮೊಬೈಲ್ ಫೋನ್ ಕೊಟ್ಟು ಅವುಗಳನ್ನು ಹುಟ್ಟಿನಿಂದ ಸಾಯುವವರೆಗೂ ಗ್ಯಾಜೆಟ್ ಗುಲಾಮರಾಗಿ ಬದುಕುವಂತೆ ಪ್ರೊತ್ಸಾಹಿಸುತ್ತಿದ್ದಾರೆ. ಪ್ರತಿಯೊಂದು ಕುಟುಂಬದಲ್ಲಿಯೂ ಸದಸ್ಯರು ತಮ್ಮದೇ ಆದ ಜಗತ್ತಿನಲ್ಲಿ ವಹರಿಸುತ್ತಾ ದ್ವೀಪಗಳಾಗಿ ಬದುಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜಗತ್ತನ್ನು ಕಾಡಿದ ಏಡ್ಸ್ ಕಾಯಿಲೆಯಂತೆ ನಮ್ಮ ಮಕ್ಕಳನ್ನು ಮತ್ತು ಯುವಜನತೆಯನ್ನು ನೋಮೊ ಪೋಬಿಯಾ ಕಾಡಿದರೆ ಆಶ್ಚರ್ಯವೇನಿಲ್ಲ.
( ವಿಜಯವಾಣಿ ದಿನಪತ್ರಿಕೆಯ2018 ರ ದೀಪಾವಳಿ ವಿಶೇಷಾಂಕಕ್ಕೆ ಬರೆದ ಲೇಖನ)