ಶನಿವಾರ, ಏಪ್ರಿಲ್ 4, 2020

ಉಳ್ಳವರ ಭಾರತದಲ್ಲಿ ನರಳುತ್ತಿರುವ ಬಡ ಭಾರತ


ನಮ್ಮ ನಡುವಿನ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಹಾಗೂ ಮಾನವೀಯ ಮುಖದ ಹೃದಯವಂತ ಅಮಾರ್ತ್ಯ ಸೇನ್ ದಶಕದ ಹಿಂದೆ ಭಾರತದ ಅಭಿವೃದ್ಧಿಯನ್ನು ವ್ಯಾಖ್ಯಾನಿಸುತ್ತಾ, ಭಾರತದಲ್ಲಿ ಎರಡು ಭಾರತಗಳಿವೆ, ಒಂದು ಉಳ್ಳವರ ಭಾರತ, ಇನ್ನೊಂದು ನರಳುವವರ ಭಾರತ ಎಂದು ಹೇಳಿದ್ದರು. ಅವರ ಮಾತು ಇಂದಿನ ಭಾರತಕ್ಕೆ ಯಾವುದೇ ಅನುಮಾನವಿಲ್ಲದೆ ಅನ್ವಯಿಸಬಹುದಾಗಿದೆ.
ಜಗತ್ತಿನಾದ್ಯಂತ ಸುನಾಮಿಯಂತೆ ಅಪ್ಪಳಿಸಿರುವ ಕೋವಿಡ್-19 ಅಥವಾ ಕೊರನಾ ವೈರಸ್ ಹಾವಳಿಗೆ ಇದೀಗ ಭಾರತದಲ್ಲಿ ಶ್ರೀಮಂತರು ಅಥವಾ ಮಧ್ಯಮ ವರ್ಗದವರಿಗಿಂತ ಬಡವರನ್ನು ಬಲಿಕೊಡಲಾಗುತ್ತದೆ. ಒಂದು ದೇಶದ ಪ್ರಧಾನಿಯಾದ ವ್ಯಕ್ತಿಗೆ ದೇಶದ ಆರ್ಥಿಕ ಚಟುವಟಿಕೆಗಳ ಬಗ್ಗೆಯಾಗಲಿ, ದೇಶದ ಬಹುದೊಡ್ಡ ಅಸಂಘಟಿತ ವಲಯವಾದ ಕಾರ್ಮಿಕರ ಕುರಿತಂತೆ ಕಿಂಚಿತ್ತೂ ಕಾಳಜಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಮಧ್ಯ ಚೀನಾದ ವುಹಾನ್ ನಗರದಲ್ಲಿ ಅತಿ ದೊಡ್ಡ ಕಸಾಯಿಖಾನೆ ಕೇಂದ್ರಗಳಿದ್ದು ನಗರದಿಂದ ಪ್ರಥಮ ಬಾರಿಗೆ ಕಳೆದ ವರ್ಷದ ಕೊನೆಯಲ್ಲಿ ವುಹಾನ್ ನಗರದಲ್ಲಿ ಕೊರನಾ ವೈರಸ್ ಹಾವಳಿ ಕಾಣಿಸಿಕೊಂಡಿತು. ಅದನ್ನು ಅಲ್ಲಿಯ ಸರ್ಕಾರ ಸಮರ್ಥವಾಗಿ ಹಿಮ್ಮೆಟ್ಟಿಸಿತು. ಜೊತೆಗೆ ಅಲ್ಲಿದ್ದ ವಿದೇಶಿ ಪ್ರಜೆಗಳ ಮೂಲಕ ಜಗತ್ತಿನ ಇತರೆ ರಾಷ್ಟ್ರಗಳಿಗೂ ಹರಡಿ ಈಗ ಚೀನಾ ಕಣ್ಮುಚ್ಚಿ ಕುಳಿತಿದೆ.
ವೈರಸ್ ಬಗ್ಗೆ ಹಾಗೂ ಅವರ ಗುಣ ಲಕ್ಷಣಗಳ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ ತಮ್ಮ ವೆಬ್ ಸೈಟ್ ನಲ್ಲಿ ವಿವರವಾಗಿ ಪ್ರಕಟಿಸಿದ್ದರೂ ಕೂಡ ಇಲ್ಲಿನ ಆಳುವ ವರ್ಗ ಪುಂಖಾನುಪುಂಖವಾಗಿ ಕಟ್ಟು ಕಥೆಯನ್ನು ಹುಟ್ಟು ಹಾಕಿ ಜನತೆಯಲ್ಲಿ ಭಯ ಮತ್ತು ಭೀತಿಯನ್ನು ಹುಟ್ಟು ಹಾಕಿತು.
ಬ್ಯಾಕ್ಟಿರಿಯಾಗಿಂತ ಅತಿ ಸಣ್ಣ ಹಾಗೂ ಸೂಕ್ಮವಾಗಿರುವ ವೈರಾಣಣು ಜೀವಕೋಶಗಳ ನೆರವಿಲ್ಲದೆ ವಾತಾವರಣದಲ್ಲಿ ಹೆಚ್ಚು ಕಾಲ ಬದುಕಿರುವುದಿಲ್ಲ. ಯಾವುದೇ ವಸ್ತುವಿನ ಮೇಲೆ ಇದ್ದರೂ ಸಹ ಕೇವಲ ನಾಲ್ಕು ಗಂಟೆಯ ಅವಧಿಯಲ್ಲಿ ಇದು ಸಾಯುತ್ತದೆ ಎಂದು ವಿಶ್ಸಸಂಸ್ಥೆಯ ವರದಿಯನ್ನು ಉಲ್ಲೇಖಿಸಿ ಬೆಂಗಳೂರಿನ ಮಾನಸಿಕ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಗಿರೀಶ್ ಉಪಾಧ್ಯಾಯ ವಿವರಿಸಿದ್ದಾರೆ. ವೈರಾಣು ಬಾಯಿ ಅಥವಾ ಮೂಗಿನ ಉಸಿರಾಟದ ಮೂಲಕ ಮನುಷ್ಯನೊಳಗೆ ಪ್ರವೇಶ ಪಡೆಯುವ ಸಾಧ್ಯತೆ ಇದ್ದು, ನಿರ್ಧಿಷ್ಟ ಅಂತರ ಕಾಪಾಡಿಕೊಳ್ಳಬೇಕು ಮತ್ತು ಕೈಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು ಎಂದು ಮುನ್ನಚ್ಚೆರಿಕೆಯ ಕ್ರಮಗಳನ್ನು ವಿವರಿಸಿದ್ದಾರೆ.
ಭಾರತಕ್ಕೆ ವೈರಾಣು ಪ್ರವೇಶ ಪಡೆದದ್ದು ವಿದೇಶಗಳಲ್ಲಿದ್ದು ಭಾರತಕ್ಕೆ ಹಿಂತಿರುಗಿದ ಭಾರತೀಯರಿಂದ, ಕುರಿತಂತೆ ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ತಪಾಸಣೆಯನ್ನು ಕಳೆದ ಜನವರಿಯಲ್ಲಿ ಜಾರಿಗೆ ತರಬಹುದಿತ್ತು. ಆದರೆ, ಹೆದರಿದವರ ಮೇಲೆ ಸತ್ತ ಹಾವನ್ನು ಎಸೆದರು ಎಂಬ ಗಾದೆಯಂತೆ ಸಿರಿವಂತರನ್ನು ನಿಯಂತ್ರಿಸಲಾರದ ಪ್ರಧಾನಿಯೆಂಬ ಮಹಾನ್ ನಟರು ದೇಶದ ಎಲ್ಲಾ ಪ್ರಜೆಗಳ ಮೇಲೆ ಬರೆ ಎಳೆದರು.
ಶ್ರೀಮಂತರು ಮತ್ತು ಅವರ ಮಕ್ಕಳನ್ನು ವಿದೇಶದಿಂದ ಕರೆತರಲು ವಿಮಾನ ಯಾನ, ವಿಶೇಷ ವಿಮಾನ ವ್ಯವಸ್ಥೆ ಮಾಡಿದ ಪ್ರಧಾನಿಗೆ ದೇಶಾದ್ಯಂತ ಜಾರಿಗೆ ತಂದ ಲಾಕ್ ಡೌನ್ ವ್ಯವಸ್ಥೆಗೆ ಮುನ್ನ ದೇಶದ ಮಹಾನ್ ನಗರಗಳಲ್ಲಿ ಕಟ್ಟಡ, ರಸ್ತೆ, ಹೋಟೆಲ್ ಇತ್ಯಾದಿ ವಲಯಗಳಲ್ಲಿ ದುಡಿಯುತ್ತಿರುವ ಸೂರಿಲ್ಲದ ಬಡ ಕಾರ್ಮಿಕರಿಗೆ ಕನಿಷ್ಠ ರೈಲುಗಳ ಮೂಲಕ ಅವರನ್ನು ಊರಿಗೆ ತಲುಪಿಸುವ ಯೋಚನೆ ಹೊಳೆಯಲಿಲ್ಲ.
ಎಂತಹ ಅಯೋಗ್ಯರು ಮತ್ತು ಮುಠಾಳರು ಕೇಂದ್ರ ಸಚಿವ ಸಂಪುಟದಲ್ಲಿ ಇದ್ದಾರೆ ಎಂದರೆ, ಹಳೆಯ ರಾಮಾಯಣ, ಮಹಾಭಾರತ ಧಾರವಾಹಿಗಳನ್ನು ದೂರದರ್ಶನದಲ್ಲಿ ಮರು ಪ್ರಸಾರ ಮಾಡುತ್ತಿದ್ದೇವೆ ನೋಡಿ ಎಂದು ಪ್ರಕಾಶ್ ಜಾವೇದ್ಡ್ಕರ್ ಎಂಬ ಸಚಿವ ಹೇಳಿಕೆ ನೀಡುತ್ತಾನೆ. ಅವಿವೇಕಿಗೆ ವಲಸೆ ಕಾರ್ಮಿಕರು ಬದುಕುವ ಸೂರಿನಡಿ, ವಿದ್ಯುತ್ ಅಥವಾ ಟಿ.ವಿ. ಇಲ್ಲ ಎಂಬ ಕನಿಷ್ಠ ವಿವೇಕವೂ ಇಲ್ಲ.. ದೇಹಲಿಯಲ್ಲೇ ಇರುವ ಪ್ರಧಾನಿ ಮತ್ತು ಅವರ ನಲವತ್ತು ಮಂದಿ ಸಚಿವ ಸಂಪುಟದ ಮೂರ್ಖ ಸಚಿವರು ದೆಹಲಿಯ ಕಾಶ್ಮೀರಿ ಗೇಟ್, ಜಾಮೀಯ ಮಸೀದಿ ಪ್ರದೇಶ, ಕರೋಲ್ ಬಾಗ್ ಹಾಗೂ ಕನಾಟ್ ಸರ್ಕಲ್ ಪ್ರದೇಶಗಳಲ್ಲಿ ರಾತ್ರಿ ವೇಳೆ ಸಂಚರಿಸಿದ್ದರೆ, ವಲಸೆ ಕಾರ್ಮಿಕರು ಭೂಮಿಯನ್ನು ಹಾಸಿಗೆ ಮಾಡಿಕೊಂಡು, ಆಕಾಶವನ್ನು ಹೊದಿಕೆಯನ್ನಾಗಿಸಿಕೊಂಡು ಮಲಗಿರುವ ದೃಶ್ಯ ಕಾಣುತ್ತಿತ್ತು. ಬಡವರ ಕಷ್ಟ ಅರಿವಾಗುತ್ತಿತ್ತು. ದೇಶದ ಬಹುತೇಕ ಮಹಾನಗರಗಳಲ್ಲಿ ಲಕ್ಷಾಂತರ ಮಂದಿ ಇಂತಹ ದುಸ್ಥಿತಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.ಇಂತಹವರು, ಹಣ್ಣು, ತರಕಾರಿ, ಸೊಪ್ಪು ಮಾರುವವರು ಮತ್ತು ರೈತರ ಬವಣೆಗಳನ್ನು ಗಣನೆಗೆ ತೆಗೆದುಕೊಳ್ಳದೆ, ಪೊಲೀಸರಿಗೆ ಅಧಿಕಾರ ನೀಡಲಾಯಿತು.
ಕೈಯಲ್ಲಿ ಸುತ್ತಿಗೆ ಹಿಡಿದವನಿಗೆ ಜಗತ್ತಿನಲ್ಲಿರುವ ವಸ್ತುಗಳು ಮೊಳೆಯಂತೆ ಕಾಣುತ್ತವೆ ಎಂಬ ಮಾತಿನಂತೆ ಪೊಲೀಸರು ಕೈಯಲ್ಲಿ ಲಾಠಿ ಹಿಡಿದು ಎಲ್ಲರ ಮೇಲೆ ಬೀಸುತ್ತಾ, ತಮ್ಮ ರಾಕ್ಷಸತನವನ್ನು ಮೆರೆಯುತ್ತಿದ್ದಾರೆ. ಮೈಸೂರಿನ ಚೆಲುವಾಂಬ ಎಂಬ ಮಕ್ಕಳ ಹಾಗೂ ಹೆರಿಗೆ ಆಸ್ಪತ್ರೆ ಹಾಗೂ ಕೆ.ಆರ್. ಆಸ್ಪತ್ರೆ ಬಳಿ ರೋಗಿಗಳಿಗೆ ತಿನ್ನಲು ಹಣ್ಣುಗಳು ದೊರೆಯುತ್ತಿಲ್ಲ. ಕುಡಿಯಲು ಒಂದು ಲೋಟ ಬಿಸಿ ಹಾಲು ಅಥವಾ ಬಿಸಿ ಬ್ರೆಡ್ ಸಿಗುತ್ತಿಲ್ಲ. ಮೈಸೂರಿನಲ್ಲಿ ಒಂದೂವರೆ ಸಾವಿರ ವಿದೇಶಿ ಪ್ರವಾಸಿಗಳು ಉಳಿದುಕೊಂಡಿದ್ದು ಅವರು ಉಪಯೋಗಿಸುವ ಲಘು ಆಹಾರವಾದ ಹಣ್ಣು, ಬ್ರೆಡ್, ಕೇಕ್, ಬಿಸ್ಕೆಟ್, ಇತ್ಯಾದಿ ವಸ್ತುಗಳಿಗಾಗಿ ಬೀದಿ ಬೀದಿಯಲ್ಲಿ ಅಲೆದಾಡುತ್ತಿದ್ದಾರೆ.. ಇದು ವ್ಯಸ್ಥೆಯ ಕ್ರೌರ್ಯವಲ್ಲದೆ ಇನ್ನೇನು?
ರೋಗ ನಿಯಂತ್ರಣಕ್ಕೆ ಸಭೆ, ಸಮಾರಂಭ, ಸಿನಿಮಾ ಹಾಲ್, ಬೃಹತ್ ಮಾಲ್ ಗಳನ್ನು ಮುಚ್ಚಿಸಿ, ನಿಗದಿತ ಮಾರ್ಗದಲ್ಲಿ ತಪಾಸಣೆ ಮಾಡಿ ಸ್ಥಳಿಯರ ಓಡಾಟಕ್ಕೆ ಅನುವು ಮಾಡಿಕೊಡಬಹುದಿತ್ತು. ಅದೇ ರೀತಿ ದಿನಸಿ ಅಂಗಡಿ ವಸ್ತುಗಳನ್ನು ಸರಬರಾಜು ಮಾಡುವ ಮಂಡಿಗಳಿಗೆ ನಿಗದಿತ ಅವಧಿಗೆ ಅವಕಾಶ ನೀಡಬಹುದಿತ್ತು., ಇವೆಲ್ಲವನ್ನೂ ಬದಿಗೆ ಸರಿಸಿ ತರಕಾರಿ, ಮತ್ತು ಹಣ್ಣಿನ ಮಾರುಕಟ್ಟೆಗಳನ್ನು ಮುಚ್ಚಿಸಿ, ಕಾರ್ಮಿಕರ ಜೊತೆಗೆ ರೈತರಿಗೂ ಸರ್ಕಾರ ಬರೆ ಎಳಿಯಿತು.

ಕೇವಲ ಅವದೂತನಂತೆ ಅವತರಿಸಿ ರೇಡಿಯೊ ಮತ್ತು ಟಿ.ವಿಗಳಲ್ಲಿ ಭಾಷಣ ಮಾಡುವ ಪ್ರಧಾನಿಗೆ ರಾಜ್ಯ ಸರ್ಕಾರಗಳಿಗೆ ಯಾವುದೇ ಆರ್ಥಿಕ ನೆರವು ನೀಡುವ ಮನಸ್ಸಿಲ್ಲ, ಕಳೆದ ಆಗಸ್ಟ್ ನಲ್ಲಿ ಕರ್ನಾಟಕದಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ 50 ಸಾವಿರ ಕೋಟಿ ಪರಿಹಾರಕ್ಕೆ ಮನವಿ ಸಲ್ಲಿಸಿದರೆ, ಕೇಂದ್ರದಿಂದ ದೊರೆತ ಪರಿಹಾರ ಎರಡು ಕಂತುಗಳಲ್ಲಿ ( 600+1200) ಬರ ಪರಿಹಾರವೂ ಸೇರಿ ಕೇವಲ 1800 ಕೋಟಿ ರೂಪಾಯಿಗಳು ಮಾತ್ರ. ಕರ್ನಾಟಕದಿಂದ ಆಯ್ಕೆಯಾಗಿ ಹೋಗಿರುವ ಇಪ್ಪತ್ತೈದು ಬಿ.ಜೆ.ಪಿ. ಸಂಸದರು ಬಾಯಿಗೆ ಬಗನಿ ಗೂಟ ಜಡಿದುಕೊಂಡು ಮೌನವಾಗಿದ್ದಾರೆ. ಇಡೀ ದೇಶದಲ್ಲಿ ಕೊರನಾ ಸೊಂಕಿನಲ್ಲಿ ಮೂರನೇ ಸ್ಥಾನದಲ್ಲಿರುವ ಕರ್ನಾಟಕಕ್ಕೆ ಪರಿಹಾರ ಸಿಕ್ಕಿಲ್ಲ.ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕೇಂದ್ರ ಸರ್ಕಾರ ಏನೂ ಕೊಡದಿದ್ದರೂ ಚಿಂತೆ ಇಲ್ಲ, ಅವರನ್ನು ಅಧಿಕಾರದ ಕುರ್ಚಿಯಿಂದ ಕದಲಿಸದಿದ್ದರೆ ಸಾಕು ಎಂಬ ಮನಸ್ಥಿತಿಯಲ್ಲಿದ್ದಾರೆ. ಇಂತಹವರನ್ನ ಆಯ್ಕೆ ಮಾಡಿಕಳಿಸಿದ ಗೋಮೂತ್ರ, ಸಗಣಿ, ಶಂಖ ಮತ್ತು ಜಾಗಟೆಯ ಗಿರಾಕಿಗಳು ಒಮ್ಮೆ ಎದೆಮುಟ್ಟಿಕೊಂಡು ತಮ್ಮ ಆತ್ಮಸಾಕ್ಷಿಯನ್ನು ಪರೀಕ್ಷಿಸಿಕೊಳ್ಳಬೇಕು.
ಬಿ.ಎಲ್. ಸಂತೋಷ್ ಎಂಬ ಅವಿವೇಕಿಯೊಬ್ಬನನ್ನು ಬಿ.ಜೆ.ಪಿ. ಪಕ್ಷದ ರಾಷ್ಟ್ರಮಟ್ಟದ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಈತ ಎಂತಹ ವಿಕೃತ ಮನಸ್ಥಿತಿಯವನು ಎಂದರೆ, ಬೆಂಗಳೂರು ಬಳಿಯ ಅತ್ತಿಬೆಲೆಯ ಗಡಿಯಿಂದ ತಮಿಳುನಾಡಿನ ಚೆನ್ನೈ ನಗರ ಕೇವಲ ನೂರು ಕಿಲೊಮೀಟರ್ ಗಿಂತಲೂ ಕಡಿಮೆಯಿದೆ, ಕಾರ್ಮಿಕರು ನಡೆದುಕೊಂಡು ಹೋಗಲಿ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾನೆ. ದುರಂಕಾರಿಗೆ ಬೆಂಗಳೂರು-ಚೆನ್ನೈ ನಡುವಿನ ಅಂತರ 347 ಕಿ.ಮಿ. ಎಂಬ ಕನಿಷ್ಠ ಜ್ಞಾನವೂ ಇಲ್ಲ. ಭೌಗೂಳಿಕ ಜ್ಞಾನವಿಲ್ಲದ ಇಂತಹ ಜಾತಿಯ ಕ್ರಿಮಿಗಳು ಈಗ ರಾಷ್ಟ್ರ ಮಟ್ಟದಲ್ಲಿ ನಾಯಕರಾಗಿ ಬೆಳೆಯುತ್ತಿದ್ದಾರೆ. ಇವುಗಳನ್ನು ಪ್ರಶ್ನಿಸಬೇಕಾದ ಮಾಧ್ಯಮಗಳು ಈಗ ಆರ್.ಎಸ್.ಎಸ್, ಶಾಖಾಮಠಗಳಾಗಿರುವ ಕಾರಣ ದಿವ್ಯ ಮೌನಕ್ಕೆ ಶರಣಾಗಿವೆ.
ಕಾಲ್ನಡಿಗೆಯಲ್ಲಿ ಹುಟ್ಟಿದ ಊರಿನತ್ತ ಪ್ರಯಾಣ ಹೊರಟ ನತದೃಷ್ಟರು, ಆಹಾರ, ನೀರು ಇಲ್ಲದೆ, ನಡುರಸ್ತೆಯಲ್ಲಿ ಬಸವಳಿಯುತ್ತಾ ಸಾಗುತ್ತಿದ್ದಾರೆ. ನಾವು ಮೌನ ಸಾಕ್ಷಿಗಳಾಗಿದ್ದೇವೆ.

ಬುಧವಾರ, ಮಾರ್ಚ್ 25, 2020

ಬಡತನಕ್ಕೆ ಬಾಯಿಲ್ಲವಾಗಿ



ಕಳೆದ ಮೂವತ್ತು ವರ್ಷಗಳಿಂದ ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯಿಂದಾಗಿ ಎಂದೂ ಕೇಳರಿಯದ ರೋಗರುಜಿನಗಳು ಮತ್ತು ವೈರಸ್ ಗಳು ಆಧುನಿಕ ಜಗತ್ತನ್ನು ಕಾಡುತ್ತಿವೆ. ಇದರಿಂದಾಗಿ, ಭೂಮಂಡಲದ ಮನುಕುಲ ಮಾತ್ರವಲ್ಲದೆ, ನಾವು ಬೆಳೆಯುತ್ತಿರುವ ಬೆಳೆಗಳು ಮತ್ತು ಪ್ರಾಣಿ ಪಕ್ಷಿಗಳ ಮೇಲೆ ಅಗಾಧವಾದ ಪರಿಣಾವುಂಟಾಗಿದೆ. ಇದರ ಮೂಲ ಕಾರಣ ಮನುಷ್ಯನ ಅಪರಿತ ಆಸೆ ಮತ್ತು ಭೋಗ ಜಗತ್ತಿನ ಮೋಹ ಎಂಬ ವಾಸ್ತವ ಸತ್ಯವನ್ನು ಅರಿಯಲಾರದ ವಿಸ್ಮೃತಿಗೆ ನಾವು ದೂಡಲ್ಪಟ್ಟಿದ್ದೇವೆ.
ಮಹಾತ್ಮ ಗಾಂಧೀಜಿಯವರು “ಪ್ರಕೃತಿ ಇರುವುದು ಮನುಷ್ಯನ ಮಿತವಾದ ಬೇಡಿಕೆಗಳನ್ನು ಪೂರೈಸುವುದಕ್ಕೆ ಮಾತ್ರ, ದುರಾಸೆಗಳನ್ನು ಈಡೇರಿಸುವುದಕ್ಕೆ ಅಲ್ಲ” ಎಂದು ಶತಮಾನದ ಹಿಂದೆ ಹೇಳಿದ ಮಾತನ್ನು ಮರೆತು ನಾವು ವಿನಾಶದತ್ತ ದಾಪುಗಾಲು ಇಡುತ್ತಿದ್ದೇವೆ.
ಈಗ ಭಾರತವನ್ನು ಮಾತ್ರವಲ್ಲದೆ, ವಿಶ್ವವನ್ನು ಕಾಡುತ್ತಿರುವ ಕೊರನಾ ಅಥವಾ ಕೋವಿಡ್ 19 ಎಂಬ ವೈರಸ್ ನ ಸಮಸ್ಯೆಗೆ ಕಾರಣ ಮನುಷ್ಯನೇ ಹೊರತು ಪ್ರಕೃತಿಯಲ್ಲ. ಇದರ ನಿರ್ಮೂಲನೆ ಸ್ವಯಂ ನಿಯಂತ್ರಣ ಅತ್ಯಗತ್ಯ. ಆದರೆ, ಭಾರತದಲ್ಲಿ ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ ಹಾಕಿದರು ಎಂಬಂತೆ ಹೇರಲಾಗುತ್ತಿರುವ ಸರ್ಕಾರಿ ಪ್ರಾಯೋಜಿತ ನಿರ್ಬಂಧಗಳು ಬಡವರನ್ನು, ದೀನ ದಲಿತರನ್ನು ಸಂಕಷ್ಟಕ್ಕೆ ಗುರಿಮಾಡಿವೆ.
ಈ ದೇಶದ ಪ್ರಧಾನಿ, ನಡುರಾತ್ರಿ  ಪಾಕಿಸ್ತಾನದ ಮೇಲೆನಡೆಸಿದ ಸರ್ಜಿಕಲ್ ದಾಳಿಯ ಮಾದರಿಯಲ್ಲಿ ಮತ್ತು ರಾತ್ರೋರಾತ್ರಿ ನೋಟು ನಿಷೇಧ ಹೇರಿದ ರೀರಿಯಲ್ಲಿ ಕೊರನಾ ನಿಯಂತ್ರಣಕ್ಕೆ ಹೊಸ ಹೊಸ ನಿಯಮ ಜಾರಿಗೆ ತರುತ್ತಿದ್ದಾರೆ. ಭಾರತದಂತಹ ಪ್ರಜಾಪ್ರಭುತ್ವ ವ್ಯವಸ್ಥೆಯ ರಾಷ್ಟ್ರದಲ್ಲಿ ಗಣ ರಾಜ್ಯಗಳ ಮುಖ್ಯಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಅವರ ಸಲಹೆ ಕೇಳದೆ, ಅವತಾರ ಪುರುಷನ ಹಾಗೆ ದಿಡೀರ್ ಟಿ.ವಿ ಯಲ್ಲಿ ಕಾಣಿಸಿಕೊಂಡು ಉಪದೇಶ ಮತ್ತು ನಿರ್ದೇಶನಗಳನ್ನು ಜಾರಿ ಮಾಡುತ್ತಿದ್ದಾರೆ.
ಯಾವುದೇ ಮುನ್ಸೂಚನೆ ನೀಡದೆ ದೇಶಾದ್ಯಂತ ರೈಲು ಮತ್ತು ವಿಮಾನ ಸಂಚಾರ ರದ್ದುಪಡಿಸಿದ್ದು ಅಲ್ಲದೆ, ರಾಜ್ಯಗಳ ನಡುವಿನ ಗಡಿಗಳನ್ನು ಬಂದ್ ಮಾಡಿ ಸಾರಿಗೆ ಸಂಚಾರವನ್ನು ರದ್ದುಗೊಳಿಸಲಾಯಿತು. ದಕ್ಷಿಣ ಭಾರತದಿಂದ ಉತ್ತರ ಭಾರತಕ್ಕೆ ಮತ್ತು ಉತ್ತರದಿಂದ ದಕ್ಷಿಣ ಭಾರತದ ತೀರ್ಥಕ್ಷೇತ್ರಗಳಿಗೆ ಪ್ರವಾಸ ಹೋದ ಯಾತ್ರಿಕರು, ಪ್ರವಾಸಿಗರು ಇದೀಗ ಊಟ, ವಸತಿ ಇಲ್ಲದೆ ಅತಂತ್ರರಾಗಿ ಹಲವು ನಗರಗಳ ಬಸ್ ಮತ್ತು ರೈಲು ನಿಲ್ದಾಣದಲ್ಲಿ ಅಲೆಮಾರಿಗಳಂತೆ, ನಿರ್ಗತಿಕರಂತೆ ಜೀವಿಸುವಂತಾಗಿದೆ.
ಪ್ರದಾನಿ ನರೇಂದ್ರ ಮೋದಿಯವರು ಕೈ ಚಪ್ಪಾಳೆ ತಟ್ಟಿ  ಕೋರನಾ ವೈರಸ್ ನಿರ್ಮೂಲಕ್ಕೆ ಶ್ರಮಿಸುತ್ತರಿವ  ವೈದ್ಯರನ್ನು ಮತ್ತು ಸ್ವಯಂ ಸೇವಕರಿಗೆ ಗೌರವ ಸೂಚಿಸಿ ಎಂದು ಕರೆ ನೀಡಿದರೆ, ಈ ದೇಶದ ಪ್ರಜ್ಞಾವಂತ ನಾಗರೀಕರೆನಿಸಿಕೊಂಡ ಜನ ಗಂಟೆ, ಜಾಗಟೆ, ತಟ್ಟೆ, ಲೋಟ ಬಾರಿಸುತ್ತಾ ಬೀದಿಗಳಿದರು.ಇಂತಹ ಅನಾಗರೀಕರ ಭಾರತವನ್ನು ಏನೆಂದು ಕರೆಯೋಣ? ಬಾಯಿ ಬಡಿದುಕೊಳ್ಳಿ ಎಂದರೆ, ತಿಕ ಬಡಿದುಕೊಳ್ಳುವ ನಾಗರೀಕರನ್ನು ತಿದ್ದಲು 21 ನೇ ಶತಮಾನವಲ್ಲ, 71 ನೇ ಶತಮಾನ ಬಂದರೂ ಸಾಧ್ಯವಿಲ್ಲ.

ನಾಗರೀಕರಲ್ಲಿ ಅನಗತ್ಯ ಭಯ ಉಂಟು ಮಾಡಿ, ಬೀದಿಯಲ್ಲಿ ಓಡಾಡಿದರೆ, ಕೇಸ್ ಹಾಕುವುದು, ಲಾಠಿ ಪ್ರಯೋಗ ಮಾಡುವುದು, ಅಗತ್ಯ ವಸ್ತುಗಳು ದೊರೆಯದ ಹಾಗೆ ಮಾಡಿ, ಕಾಳಸಂತೆಯ ದರೋಡೆಕೋರರಿಗೆ ಅನುವು ಮಾಡಿಕೊಡುವುದು ಯಾವ ನ್ಯಾಯ?
ಭಾರತಕ್ಕೆ ಅಥವಾ ಪೂರ್ವ ಜಗತ್ತಿನ ರಾಷ್ಟ್ರಗಳಿಗೆ ಇಂತಹ ಪಿಡುಗುಗಳು ಹೊಸತೇನಲ್ಲ. ಈ ದೇಶದಲ್ಲಿ ರೋಗಕ್ಕೆ ಬಲಿಯಾದವರಿಗಿಂತ ಹಸಿವಿನಿಂದ ಸತ್ತ ಬಡವರ ಅಧಿಕವಾಗಿದೆ. ಆದರೆ, ಬಡವರ ಸಾವು, ನೋವು ಇಲ್ಲಿ ಯಾವುದಕ್ಕೂ ಲೆಕ್ಕವಿಲ್ಲ. ಬಡವರು ಈ ದೇಶದಲ್ಲಿ ಬದುಕಿರುವುದು ಓಟು ಒತ್ತುವ ಮತಯಂತ್ರಗಳಾಗಿ ಮಾತ್ರ. ಇದು ಪ್ರತಿಯೊಂದ ರಾಜಕೀಯ ಪಕ್ಷದ ಅಥವಾ ನೇತಾರನ ದೃಢ ನಂಬಿಕೆಯಾಗಿದೆ.
1943 ರಲ್ಲಿ ಬಂಗಾಳ ಪ್ರಾಂತ್ಯದಲ್ಲಿ ಅಂದರೆ, ಈಗಿನ ಪಶ್ಚಿಮ ಬಂಗಾಳ, ಬಂಗ್ಲಾ ದೇಶ ಮತ್ತು ಬಿಹಾರ ರಾಜ್ಯಗಳನ್ನು ಒಳಗೊಂಡ ಪ್ರದೇಶದ ಒಟ್ಟು ಆರು ಕೋಟಿ ಜನಸಂಖ್ಯೆಯಲ್ಲಿ ಮುವತ್ತು ಲಕ್ಷ ಜನತೆ ಹಸಿವು ಮತ್ತು ಸಾಂಕ್ರಾಮಿಕ ರೋಗದಿಂದ ಸತ್ತರು. ಎರಡನೆಯ ಮಹಾಯುದ್ಧ ನಡೆಯುತ್ತಿದ್ದ ಆ ಸಂದರ್ಭದಲ್ಲಿ ಜಪಾನ್ ಸೇನೆ ನಮ್ಮ ನೆರೆಯ ಬರ್ಮಾ ದೇಶಕ್ಕೆ ಕಾಲಿಟ್ಟಿತ್ತು. ಬಿಟೀಷ್ ಆಧಿಪತ್ಯಕ್ಕೆ ಒಳಪಟ್ಟಿದ್ದ ಭಾರತದ ಮೇಲೆ ಅಂದಿನ ಬ್ರಿಟನ್ ಪ್ರಧಾನಿ ಚರ್ಚಿ ಕೆಲವು ಅಮಾನವೀಯ ನಿರ್ಧಾರಗಳನ್ನು ಕೈ ಗೊಂಡನು. ಅವುಗಳಲ್ಲಿ ಪ್ರಮುಖವಾದ ನಿರ್ಧಾರವೆಂದರೆ, ಬರ್ಮಾ ದೇಶಕ್ಕೆ ಯಾವುದೇ ಪಡಿತರ ಹೋಗಭಾರದೆಂದು ಕೊಲ್ಕತ್ತ ನಗರದ ಎಲ್ಲಾ ಸಗಟು ದಿನಿಸಿ ಮಾರಾಟದ ಅಂಗಡಿಗಳನ್ನು ಬಂದ್ ಮಾಡಿಸಿದನು. ಜೊತೆಗೆ ಬಂಗಾಳದ ಗೋದಾಮುಗಳಲ್ಲಿ ದಾಸ್ತಾನು ಇಟ್ಟಿದ್ದ ಅಕ್ಕಿ ಮತ್ತು ಗೋಧಿಯನ್ನು ಬಿಡುಗಡೆ ಮಾಡದೆ, ಬ್ರಿಟಿಷ್ ಸೈನಿಕರಿಗೆ ಮೀಸಲಿಟ್ಟನು.  ಅಲ್ಲಿನ ಜನತೆ ಒಣಗಿದ ತರಗೆಲೆಗಳಂತೆ ಭೂಮಿಗೆ ಉದುರಿ ಹೋದರು. ಇಂತಹ ಅನೇಕ ಸಂಕಷ್ಟಗಳನ್ನು, ಕಾಲರಾ, ಸಿಡುಬು, ಮಲೇರಿಯಾ, ಏಡ್ಸ್ ನಂತಹ ಮಹಾಮಾರಿ ಕಾಯಿಲೆಗಳನ್ನು ಎದುರುಸಿರುವ ಭಾರತದ ಜನತೆಗೆ ಕೋವಿಡ್-19 ವೈರಸ್ ಕುರಿತಂತೆ ಈ ರೀತಿ ಅನಗತ್ಯ ಭಯ ಉಂಟು ಮಾಡುವ ಅಗತ್ಯವಿರಲಿಲ್ಲ.
ಸರ್ಕಾರದ ವತಿಯಿಂದ ಏನು ವ್ಯವಸ್ಥೆಯಾಗಿದೆ ಮತ್ತು ಸರ್ಕಾರ ಸೋಂಕನ್ನು ತಡೆಗಟ್ಟಲು ಯಾವ ರೀತಿ ಸಜ್ಜಾಗಿದೆ ಎಂದು ನೋಡಿದರೆ, ಎಲ್ಲವೂ ಶೂನ್ಯ.ಹೋಬಳಿ ಮಟ್ಟದಲ್ಲಿ ಮತ್ತು ನಗರದ ಬಡಾವಣೆಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಳೆದ ಐದಾರು ವರ್ಷಗಳಿಂದ ವೈದ್ಯರಿಲ್ಲ. ಕೊರನಾ ವೈರಸ್ ಕುರಿತು ಸ್ಪೃಷ್ಟ ಮಾಹಿಯಿಲ್ಲ. ಜನರನ್ನು ಗೃಹ ಬಂಧನದಲ್ಲಿ ಇರಿಸಿದರೆ. ಮಾತ್ರ. ರೋಗ ನಿಯಂತ್ರಿಸಬಹುದು ಎಂಬ ನಂಬಿಕೆ ಇಲ್ಲಿ ಚಾಲ್ತಿಯಲ್ಲಿದೆ. ಈ ದೇಶದ ಶೇಕಡ 52 ಮಂದಿ ದಿನ ನಿತ್ಯದ ದುಡಿಮೆಯ ಮೇಲೆ ಬೀದಿ ಬದಿಯ ಸೊಪ್ಪು, ತರಕಾರಿ, ಹಣ್ಣು, ಮಾರುವವರು, ಕೃಷಿ ಮತ್ತು ಕೂಲಿ ಕಾರ್ಮಿಕರು, ಸೈಕಲ್ ರಿಕ್ಷಾ, ಆಟೋರಿಕ್ಷಾ, ಕೈಗಾಡಿ ತಳ್ಳುವವರು ಇವರ ಕುರಿತು ನಮ್ಮನ್ನಾಳುವ ಸರ್ಕಾರಗಳು ಯೋಚಿಸಲೇ ಇಲ್ಲ.
ಇಂತಹ ಜ್ವಲಂತ ಸಮಸ್ಯೆಗಳತ್ತ ಗಮನ ಹರಿಸಬೇಕಾದ ನಮ್ಮ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಸಿನಿಮಾ ನಟ, ನಟಿಯರ ಬೆನ್ನು ಹತ್ತಿವೆ. ಯಾವ ನಟ ಅಥವಾ ನಟಿ ಏನು ತಿಂದರು? ಹೇಗೆ ವಿಸರ್ಜಿಸಿದರು. ಮನೆಯಲ್ಲಿ ಹೇಗೆ ವ್ಯಾಯಾಮ ಮಾಡುತ್ತಿದ್ದಾರೆ ಇಂತಹ ಸುದ್ದಿಯನ್ನು ಲದ್ದಿಯ ರೂಪದಲ್ಲಿ ನಮ್ಮ ಮನೆ ಬಾಗಿಲಿಗೆ ತಲುಪಿಸುವಲ್ಲಿ ನಿರತವಾಗಿವೆ. ರಾಜಕೀಯ ಪಕ್ಷಗಳು ಮತ್ತು ಕಾರ್ಪೋರೇಟ್ ಜಗತ್ತಿನ ಎದುರು ಕಾಲಿಗೆ ಗೆಜ್ಜೆ ಕಟ್ಟಿಕೊಂಡು  ಬೆತ್ತಲೆಯಾಗಿ ಕುಣಿಯುತ್ತಿರುವ ಮಾಧ್ಯಮ ಸಂಸ್ಥೆಗಳಲ್ಲಿ ದುಡಿಯುವ ಜೀತದಾಳುಗಳಿಗೆ ಕನಿಷ್ಟ ಮಾನವೀಯತೆ ಇದ್ದರೆ, ಬಡವರ ಕೇರಿಗಳಿಗೆ ಮತ್ತು ಬಡಾವಣೆಗಳಿಗೆ ಹೋಗಬಹುದಿತ್ತು. ಆದರೆ, ಸಿನಿಮಾ ನಟ, ನಟಿ ಮತ್ತು ಕ್ರಿಕೇಟ್ ತಾರೆಯರಿಂದ ಈ ಜಗತ್ತು ಬದುಕಿದೆ ಮತ್ತು ಬೆಳಕಾಗುತ್ತಿದೆ ಎಂದು ನಂಬಿರುವ ಬೃಹಸ್ಪತಿಗಳಿಗೆ ಜ್ಞಾನೋದಯವಾಗುವ ಸಂಭವ ತೀರಾ ಕಡಿಮೆ.

ಇನ್ನು ಹೊಟ್ಟೆ ತುಂಬಿದ ನಮ್ಮ ಕೆಲವು ಬುದ್ದಿ ಜೀವಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ದಿನಕ್ಕೊಂದು ಉಪದೇಶ ಹೊರಡಿಸುತ್ತಿದ್ದಾರೆ. ತಣ್ಣನೆಯ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು, ಸ್ಕಾಚ್ ವಿಸ್ಕಿ ಹೀರುತ್ತಾ, ಗೋಡಂಬಿ ಮೆಲ್ಲುತ್ತಾ  ಪ್ರಧಾನಿಯವರ ಆದೇಶವನ್ನು ಪಾಲಿಸೋಣ ಎನ್ನುವ ಮಹನೀಯರಿಗೆ ನನ್ನದೊಂದು ಕಿವಿಮಾತು.
ದಯವಿಟ್ಟು ನಿಮ್ಮ ಎ.ಸಿ.ಯನ್ನು ಸ್ವಿಚ್ ಆಫ್ ಮಾಡಿ. ಮನೆಯ ಕಿಟಕಿ, ಬಾಗಿಲು ತೆರೆದು ಹೊರ ಜಗತ್ತನ್ನು ನೋಡಿ, ನಿಮ್ಮ ಮನೆಯಾಚೆಯ ಗುಡಿಸಲಿನಲ್ಲಿ ಹೊಲೆ ಉರಿಯದೆ ಇರುವುದು, ದೀಪ ಬೆಳಗದೆ ಇರುವುದನ್ನು ಗಮನಿಸಿ. ಹಸಿವಿನಿಂದ ಅಳುತ್ತಿರುವ ಕಂದಮ್ಮಗಳ ಆಕ್ರಂದನ ನಿಮಗೆ ಕೇಳಿಸದಿದ್ದರೆ, ಆ ಕ್ಷಣದಲ್ಲಿ ನೀವು ಮನುಷ್ಯರಲ್ಲ ಎಂದು ತೀರ್ಮಾನಿಸಿಕೊಳ್ಳಿ, ಏಕೆಂದರೆ, ನೀವು ನಮ್ಮ ನಡುವಿನ ನಕಲಿ ದೇವ ಮಾನವರಂತೆ ಒಣ ವೇದಾಂತದ ಉಪದೇಶ ಮಾಡುವುದಕ್ಕೆ ಮಾತ್ರ ಲಾಯಕ್ಕು. ಇದರಾಚೆಗೆ ನಿಮ್ಮಿಂದ ಏನನ್ನು ನಿರೀಕ್ಷಿಸಲಾಗದು. “ನೊಂದವರ ನೋವ ನೋಯದವರೆತ್ತ ಬಲ್ಲರೋ?” ಎಂದು ಅಕ್ಕ ಮಾಹಾದೇವಿ ಹಾಡಿರುವುದು ನಿಮಗಾಗಿ ಎಂದು ಈಗಲಾದರೂ ಅರ್ಥ ಮಾಡಿಕೊಳ್ಳಿ. ನಮಸ್ತೆ.