ಸೋಮವಾರ, ಮೇ 6, 2024

ಅಂತರ್ಜಾತಿ ಮತ್ತು ಧರ್ಮದ ವಿವಾಹಗಳಿಗೆ ಸರ್ಕಾರದ ರಕ್ಷಣೆ ಅತ್ಯಗತ್ಯ.

 


ಇತ್ತೀಚೆಗೆ ಹುಬ್ಬಳ್ಳಿ ನಗರದಲ್ಲಿ ನಡೆದ ನೇಹಾ ಎಂಬ ಯುವತಿಯ ಹತ್ಯೆ ಅತ್ಯಂತ ಅಮಾನವೀಯವಾದುದು. ಫಯಾಜ್ ಎಂಬ ಯುವಕ ಹೆಣ್ಣು ಮಗಳನ್ನು ಕಾಲೇಜು ಆವರಣದಲ್ಲಿ ಇರಿದು ಕೊಂದಿರುವುದು ಇಂದಿನ ಯುವ ತಲೆಮಾರು ಪ್ರೀತಿ ಪ್ರೇಮದ ಹೆಸರಿನಲ್ಲಿ ಯಾವ ಹಂತಕ್ಕೆ ತಲುಪಿದೆ ಎಂಬುದಕ್ಕೆ ಘಟನೆಯು ನಮ್ಮೆಲ್ಲರ ಆತ್ಮ ಸಾಕ್ಷಿಗೆ ಹಲವು ಪ್ರಶ್ನೆಗಳನ್ನು ಒಡ್ಡಿದೆ.

ಪ್ರೀತಿ ಅಥವಾ ಪ್ರೇಮ ಎನ್ನುವುದು ಗಂಡು-ಹೆಣ್ಣು ಎಂಬ ಜೀವಗಳ ನಡುವೆ ಹೊಸ ವಿಚಾರ ಅಥವಾ ಸಂಗತಿಯೇನಲ್ಲ. ಅದು ಇತಿಹಾಸ ಮತ್ತು ಪುರಾಣವನ್ನು ಮೀರಿ ಜಗತ್ತಿನಾದ್ಯಂತ ಮಾನವ ಜೀವಿಗಳನ್ನು ಆವರಿಸಿದೆ. ಆದರೆ, ಇಪ್ಪತ್ತೊಂದನೆಯ ಶತಮಾನದ ಅವಧಿಯಲ್ಲಿ ವಿಶೇಷವಾಗಿ ಕಳೆದ ಹತ್ತು ವರ್ಷಗಳಲ್ಲಿ ಪ್ರೇಮ ವೈಫಲ್ಯ ಮತ್ತು ಅಂತರ್ಜಾತಿಯ ಹಾಗೂ ಭಿನ್ನ ಧರ್ಮೀಯರ ಗಂಡು - ಹೆಣ್ಣುಗಳ ನಡುವಿನ ಪ್ರೀತಿ ಅಥವಾ ವಿವಾಹಗಳು ಇಂದು  ಮೈ ನೆತ್ತರನ್ನು ಬಸಿದು ಕುಡಿಯುವ ಹಂತಕ್ಕೆ ತಲುಪಿರುವುದು ಇಂದಿನ ಸಮಾಜದ ಅಥವಾ ನಾಗರೀಕ ಜಗತ್ತಿನ ಕ್ರೌರ್ಯಕ್ಕೆ ಸಾಕ್ಷಿ ಎನಿಸಿದೆ. ಈಕಾರಣದಿಂದಾಗಿ ಗಾಂಧೀಜಿಯವರು ಜಾತಿವಿನಾಶಕ್ಕೆ ಅಂತರ್ಜಾತಿ ವಿವಾಹ ಮದ್ದು ನಂಬಿದ್ದರು. ಅದರಂತೆ ಅವರು ಸ್ವಜಾತಿಯ ವಿವಾಹಗಳಿಗೆ ಬದುಕಿರುವವರಿಗೂ ಭಾಗವಹಿಸಲಿಲ್ಲ.

ಇಂತಹ ವಿವಾಹಗಳು ಭಾರತಕ್ಕೆ ಹೊಸತಲ್ಲ. 1942 ಮಾರ್ಚ್ 26 ರಂದು ಮಾಜಿ ಪ್ರಧಾನಿ ಇಂಧಿರಾಗಾAಧಿ ಅವರು ಕಾಶ್ಮೀರಿ ಪಂಡಿತ ಸಮುದಾಯದಿಂದ ಬಂದ ಹೆಣ್ಣು ಮಗಳಾಗಿದ್ದರೂ ಸಹ, ಪಾರ್ಸಿ ಸಮುದಾಯದ ಫಿರೋಜ್ ಗಾಂಧಿ ಅವರನ್ನು ಪ್ರೀತಿಸಿ ವಿವಾಹವಾದರು. ಸಂದರ್ಭದಲ್ಲಿ ಅವರ ತಂದೆ ಜವಹರಲಾಲ್ ನೆಹರೂ ಅವರು ತಮ್ಮ ಏಕೈಕ ಪುತ್ರಿಗೆ  ‘’ಇನ್ನೊಮ್ಮೆ ಆಲೋಚಿಸು ಎಂದರಲ್ಲದೆ, ಹಿಂದೂ ಯುವಕರ ಬಗ್ಗೆ ಗಮನ ನೀಡು’’ ಎಂಬ ಸಲಹೆಯನ್ನು ನೀಡಿದರು.  ನನ್ನ ನಿರ್ಧಾರ ಅಂತಿಮ ಎಂದು ಇಂದಿರಾ ಅವರು ನುಡಿದಾಗ, ನೆಹರೂ ಅವರು ಮೌನಕ್ಕೆ ಜಾರಿದರು. ಇಂದಿರಾ ಮತ್ತು ಫಿರೋಜ್ ಗಾಂಧಿ ಅವರ ವಿವಾಹವನ್ನು ವಿರೋಧಿಸಿ ಹಿಂದೂ ಹಾಗೂ ಪಾರ್ಸಿ ಸಮುದಾಯದ ಸಂಘಟನೆಗಳು ಅಲಹಬಾದಿನ ನೆಹರೂ ಅವರ ನಿವಾಸ ಆನಂದ ಭವನದ ಮುಂದೆ ಪ್ರತಿಭಟನೆ ನಡೆಸಿದಾಗ, ಮಧ್ಯ ಪ್ರವೇಶಿಸಿದ ಗಾಂಧೀಜಿಯವರು ‘’ಇದು ಎರಡು ಆತ್ಮಗಳ ಮಿಲನದ ಕ್ರಿಯೆ ಇದನ್ನು ಅಡ್ಡಿ ಪಡಿಸುವ ನೈತಿಕ ಹಕ್ಕು ನಮಗಿಲ್ಲ’’ ಎಂದು ನುಡಿದಾಗ  ಇಡೀ ಸಮಾಜದ ಧ್ವನಿ ಅಡಗಿ ಹೋಯಿತು.

ಹೈದರಾಬಾದ್ ನಿಜಾಮನ ಆಳ್ವಿಕೆಯಲ್ಲಿ ಬಂಗಾಳದಿA ಪ್ರಾಧ್ಯಾಪಕರಾಗಿ ಹೈದರಾಬಾದಿಗೆ ಆಗಮಿಸಿದ್ದ ಅಘೋರೆನಾಥ ಚಟ್ಟೋಪದ್ಯಾಯ  ಅವರ ಪುತ್ರಿ ಸರೋಜಿನಿ ಅವರು 1898 ರಲ್ಲಿ  ತಮ್ಮ ಸಹಪಾಠಿ  ಮುತ್ಯಾಲಯ್ಯ ಗೋವಿಂದರಾಜುಲು ನಾಯ್ಡು ಅವರನ್ನು ವಿವಾಹವಾದಾಗ ಯಾವುದೇ ಪ್ರತಿಭಟನೆ ಎದುರಾಗಲಿಲ್ಲ. ನಂತರ ಅವರು ಸರೋಜಿನಿ ನಾಯ್ಡು ಆದರು. ಅದೇ ರೀತಿಯಲ್ಲಿ ತಮಿಳುನಾಡಿನಲ್ಲಿ   ಸ್ವತಃ ದೇವದಾಸಿ ಸಮುದಾಯದಲ್ಲಿ ಜನಿಸಿ, ದಕ್ಷಿಣ ಭಾರತದ ಪ್ರಥಮ ವೈದ್ಯೆ ಎಂಬ ಕೀರ್ತಿಗೆ ಪಾತ್ರರಾಗಿ  ದೇವದಾಸಿಯರ ವೃತ್ತಿಯ ಬಗ್ಗೆ ಹೋರಾಡುತ್ತಿದ್ದ ಮುತ್ತುಲಕ್ಷ್ಮಿಎಂಬುವರು 1914 ರಲ್ಲಿ ಸುಂದರ ರೆಡ್ಡಿ ಎಂಬ ತನ್ನ ಸಹಪಾಠಿಯನ್ನು ವಿವಾಹವಾಗಿ ಮುತ್ತುಲಕ್ಷ್ಮಿರೆಡ್ಡಿ ಎಂದು ಪರಿವರ್ತನೆಯಾದಾಗ ಯಾವ ಸಮಾಜವೂ ಧ್ವನಿ ಎತ್ತಲಿಲ್ಲ. ಪ್ರಸಿದ್ಧ ಭರತ ನಾಟ್ಯ ಕಲಾವಿದೆ ಬ್ರಾಹ್ಮಣ ಸಮುದಾಯದ ರುಕ್ಮಿಣಿ ಅವರು ಅರುಂಡೆಲ್ ಎಂಬ ಕ್ರೈಸ್ತ ಸಮಾಜ ಸೇವಕನನ್ನು 1920 ದಶಕದಲ್ಲಿ ವಿವಾಹವಾಗಿದ್ದರು.  ಅಷ್ಟೇ ಏಕೆ 1960 ದಶಕದಲ್ಲಿ ಹಿರಿಯ .ಪಿ.ಎಸ್. ಪೊಲೀಸ್ ಅಧಿಕಾರಿ ಹಾಗೂ 1980 ರ ವೇಳೆಯಲ್ಲಿ  ಬೆಂಗಳೂರು ನಗರದ  ಪೊಲೀಸ್ ಕಮೀಷನರ್ ಆಗಿದ್ದ ನಿಜಾಮುದ್ದೀನ್ ಅವರನ್ನು ಹಿಂದೂ ಹೆಣ್ಣು ಮಗಳಾದ ಲಕ್ಷ್ಮಿ ಎಂಬುವರು ವಿವಾಹವಾಗಿ ಲಕ್ಷ್ಮಿ ನಿಜಾಮುದ್ದೀನ್ ಎಂದು ಸಮಾಜದಲ್ಲಿ ಗುರುತಿಸಿಕೊಂಡಾಗ ಯಾರೊಬ್ಬರ ಮನಸ್ಸಿನಲ್ಲಿಯೂ ಕಹಿ ಭಾವನೆ ಉದ್ಭವವಾಗಲಿಲ್ಲ. ಇಂತಹ ಒಂದು ಆರೋಗ್ಯ ಪೂರ್ಣ ಸಮಾಜವು ಇಂದು ನಮ್ಮೆದುರು ಮರ್ಯಾದಾ ಹತ್ಯೆ ಮತ್ತು ಸೇಡಿನ ಹತ್ಯೆಯ ಹಂತಕ್ಕೆ ತಲುಪಿದೆ ಎಂದರೆ ಒಂದು ಧರ್ಮ ಅಥವಾ ಜಾತಿಯ ಕಡೆ ಕೈ ತೋರಿಸುವ ಬದಲು, ನಾವುಗಳು  ನಮ್ಮ ನಮ್ಮ ಎದೆಗೆ ಕೈ ತೋರಿಸಿಕೊಂಡು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.

ಕೇವಲ ಮೂರು ಅಥವಾ ನಾಲ್ಕು ದಶಕಗಳ ಹಿಂದೆ ತಮ್ಮ ಮನೆಯ ಪುತ್ರಿ ಪೋಷಕರಿಗೆ ತಿಳಿಸದೆ ಅಂತರ್ಜಾತಿಯ ವಿವಾಹವಾದರೆ, ನಮ್ಮ ಮಗಳು ನಮ್ಮ ಪಾಲಿಗೆ ಸತ್ತು ಹೋದಳು ಎಂಬ ನಿರ್ಧಾರಕ್ಕೆ ಬರುತ್ತಿದ್ದ ಪೋಷಕರು, ಎಂದಿಗೂ ಪ್ರೇಮಿಗಳನ್ನು ಬೆನ್ನತ್ತಿ ಹೋಗಿ ಕೊಲ್ಲುತ್ತಿರಲಿಲ್ಲ ಮತ್ತು ವಿವಾಹವಾದ ತಮ್ಮ ಪುತ್ರಿಯನ್ನು ಹತ್ಯೆ ಮಾಡುತ್ತಿರಲಿಲ್ಲ. ಪ್ರೀತಿಸಿದ ಹುಡುಗಿ ಕೈ ಕೊಟ್ಟರೆ, ಅಥವಾ ಮನೆಯವರ ಒತ್ತಾಯಕ್ಕೆ ಮಣಿದು ಆಕೆ  ಬೇರೊಂದು ವಿವಾಹವಾದರೆ, ಭಗ್ನಗೊಂಡ ಪ್ರೇಮಿ ಗಡ್ಡ ಬಿಟ್ಟುಕೊಂಡು ಮೂರು ನಾಲ್ಕು ತಿಂಗಳು ಕಾಲ ಮೌನವಾಗಿ ಒಳಗೊಳಗೆ ಅತ್ತು ಕಣ್ನೀರಿನ ಮೂಲಕ  ಎದೆಯ ಗಾಯವನ್ನು ವಾಸಿಮಾಡಿಕೊಳ್ಳುತ್ತಿದ್ದನು.  ಕತ್ತಿ ಹಿಡಿದು ಹೋಗಿ ಪ್ರೇಮಿಸಿದಾಕೆಯನ್ನು ಕೊಲ್ಲುತ್ತಿರಲಿಲ್ಲ. ನಮ್ಮ ಸಮಾಹದಲ್ಲಿ ಇತ್ತೀಚೆಗೆ ಕೇಂದ್ರೀಕತವಾಗುತ್ತಿರುವ ಜಾತಿ ಮತ್ತು ದರ್ವ್ಮಗಳು ಹಾಗೂ ಇವುಗಳಿಗೆ ನೀರೆರೆದು ಪೋಷಿಸುತ್ತಿರುವ ರಾಜಕೀಯ ಪಕ್ಷಗಳು ಮತ್ತು ನೇತಾರರು ಇಂತಹ ಅನಿಷ್ಠ ಕ್ರಿಯೆಗಳಿಗೆ ನೇರ ಹೊಣೆಗಾರರು ಎಂಬುದನ್ನು ನಾವು ಮರೆಯಬಾರದು.

ಒಬ್ಬ ಅಪ್ಪಟ ಪ್ರಜ್ಷಾವಂತ ಇಂದು ಜಾತಿ, ಧರ್ಮವನ್ನು ಮತ್ತು ಪಕ್ಷ ಹಾಗೂ ಸಂಘಟನೆಗಳನ್ನು ಮೀರಿ ಕುವೆಂಪು ಪ್ರತಿಪಾದಿಸಿದ ವಿಶ್ವ ಮಾನವ ಪ್ರಜ್ಞೆಯ ನೆಲೆಯಲ್ಲಿ ಬದುಕುವುದು ಅತ್ಯಗತ್ಯವಾಗಿದೆ. ಕಾರಣಕ್ಕಾಗಿ 1980 ದಶಕದಲ್ಲಿ ಪಿ.ಲಂಕೇಶ್ ಹಾಗೂ ತೇಜಸ್ವಿ ಅವರ ಒಡನಾಡಿಯಾಗಿದ್ದ ವಿಚಾರವಾದಿ ಪ್ರೊ. ಕೆ.ರಾಮದಾಸ್ ಅವರು ಮಾನವಮಂಟಪ ಎಂಬ ವೇದಿಕೆ ನಿರ್ಮಿಸಿಕೊಂಡು ಅಂತರ್ಜಾತಿ ವಿವಾಹವಾಗುವ ಯುವಕ-ಯುವತಿಯರಿಗೆ ರಕ್ಷಣೆ ನೀಡಿ ಸ್ವಂತ ಖರ್ಚಿನಲ್ಲಿ ವಿವಾಹ ನೆರವೇರಿಸುತ್ತಿದ್ದರು. ಇಂದಿಗೂ ಸಹ ಅವರ ಶಿಷ್ಯರಾದ ಪ್ರೊ.ಕಾಳಿಚನ್ನೇಗೌಡ, ಉಗ್ರನರಸಿಂಹಗೌಡ ಮತ್ತು ಧನಂಜಯ ಎಂಬುವರು    ಕೆಲಸವನ್ನು ಮುಂದುವರಿಸುತ್ತಿದ್ದಾರೆ.

ಇತ್ತೀಚೆಗಿನ ವರ್ಷಗಳಲ್ಲಿ ವಿಶೇಷವಾಗಿ ದಕ್ಷಿಣ ಕರ್ನಾಟಕದಲ್ಲಿ ಮರ್ಯಾದಾ ಹತ್ಯೆಗಳು ಹೆಚ್ಚು ಚಾಲ್ತಿಯಲ್ಲಿವೆ. ಕಳೆದ ವರ್ಷ ಕೋಲಾರ ಜಿಲ್ಲೆಯಲ್ಲಿ ದಲಿತ ಸಮುದಾಯದ ಎಡಗೈ ಮತ್ತು ಬಲಗೈ ಪಂಗಡದ ಯುವಕ-ಯುವತಿ ಮಾತನಾಡುತ್ತಿದ್ದರು  ಎಂಬ ಕಾರಣಕ್ಕೆ ಯುವಕನೊಬ್ಬ ಹತ್ಯೆಯಾದನು. ಘಟನೆಗಳು ನಮ್ಮನ್ನು ಮತ್ತು ಸಮಾಜವನ್ನು ಎಲ್ಲಿಗೆ ಕೊಂಡೊಯ್ಯಬಲ್ಲದು? ಎಂಬುದನ್ನು  ನೆನೆದರೆ ಆತಂಕವಾಗುತ್ತದೆ. ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಇಡೀ ಮಾಹಿತಿಯು ಬೆರಳ ತುದಿಗೆ ಬಂದು ಕುಳಿತಿರುವಾಗ ನಿಜವಾದ ಪ್ರೇಮಿಗಳನ್ನು ಅಗಲಿಸಲು ಸಾಧ್ಯವಿಲ್ಲ. ಅಂತಹ ಯುವಕ-ಯುವತಿಯರಲ್ಲಿ ಒಟ್ಟಾಗಿ ಬದುಕುವ ಬದ್ಧತೆ ಇದ್ದರೆ, ಅವರುಗಳಿಗೆ ಸಮಾಜ ಮತ್ತು ಸರ್ಕಾರ ರಕ್ಷಣೆ ನೀಡುವುದರ ಜೊತೆಗೆ ಕನಿಷ್ಠ ಎರಡು ವರ್ಷಗಳ ಕಾಲ ಅವರ ಉದ್ಯೋಗಕ್ಕೆ  ಮತ್ತು ಜೀವನ ಭದ್ರತೆಗೆ  ನೆರವಾಗಬೇಕಿದೆ. ಕೊಲೆ ಮತ್ತು ಮರ್ಯಾದಾ ಹತ್ಯೆಯಂತಹ ಅಮಾನುಷ ಕ್ರಿಯೆಗಳು ಯಾವುದೇ ಸಮಾಜಕ್ಕೆ ಒಳಿತಲ್ಲ.

ಜಗದೀಶ್ ಕೊಪ್ಪ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ