ಶನಿವಾರ, ಮೇ 11, 2024

ನೀಲಿ ಕೃಷಿಯಲ್ಲಿ ಅಪ್ರತಿಮ ಸಾಧನೆಗೈದ ಮಂಡ್ಯ ಮೂಲದ ಮುಸ್ಲಿಂ ಕುಟುಂಬ

 


ಹನ್ನೆರಡನೆಯ ಶತಮಾನದ  ಅಪ್ರತಿಮ  ವಚನಕಾರ  ಅಲ್ಲಮಪ್ರಭು ತನ್ನ ವಚನವೊಂದರಲ್ಲಿ ‘’ ಬೆಟ್ಟದ ನೆಲ್ಲಿಕಾಯಿಗೂ ಮತ್ತು ಸಮುದ್ರದ ಉಪ್ಪಿಗೂ ಎತ್ತಣದ ಸಂಬಂಧವಯ್ಯಾ’’ ಎಂದು ಕೇಳುತ್ತಾನೆ. ಈಗ  ಇದೇ ಪ್ರಶ್ನೆಯನ್ನು ನಾವು ಮಂಡ್ಯದ ಶ್ರೀರಂಗಪಟ್ಟಣದ ಮುಸ್ಲಿಂ ಕುಟುಂಬಕ್ಕೂ, ತಮಿಳುನಾಢಿನ ತಿಂಡಿವಣಂ ಜಿಲ್ಲೆಯ ನೀಲಿ ಅಥವಾ ಇಂಡಿಗೋ  ಕೃಷಿಗೂ ಮತ್ತು  ಸಹಜ ನೀಲಿಯ ಉತ್ಪಾದನೆಗೂ ಎಲ್ಲಿಯ ಸಂಬಂಧವಯ್ಯಾ ಎಂದು ಕೇಳಿಕೊಳ್ಳಬೇಕಾಗಿದೆ. ಇದಕ್ಕೆ ಪೂರಕವಗಿ ಅನಾಮಿಕವಾಗಿ ಉಳಿದುಕೊಂಡಿದ್ದ ಇತಿಹಾಸವೊಂದು ನಮ್ಮೆದುರು ಇರುವುದು ಆಶ್ಚರ್ಯದ ಸಂಗತಿ.

ಇತ್ತೀಚೆಗೆ ಚಂಪಾರಣ್ಯ ಸತ್ಯಾಗ್ರಹ ಕುರಿತು ಕೃತಿಯನ್ನು ರಚಿಸುತ್ತಿರುವ ಸಂದರ್ಭಧಲ್ಲಿ ನೀಲಿ ಬಣ್ಣ ಮತ್ತು ಅದರ ಸಸ್ಯ ಕುರಿತ ಇತಿಹಾಸವನ್ನು ಅಧ್ಯಯನ ಮಾಡುತ್ತಿರುವಾಗ ಈ ಕುತೂಹಲಕಾರಿ ಇತಿಹಾಸ ನನ್ನೆದುರು ತೆರೆದುಕೊಂಡಿತು. ಬಣ್ಣಗಳ ರಾಜ ಎಂದೂ ಕರೆಯಲ್ಪಡುವ ಇಂಡಿಗೋ ಅಥವಾ ನೀಲಿ ಬಣ್ಣವು  ಪ್ರಪಂಚದ ಅತ್ಯಂತ ಪ್ರಾಚೀನ ಬಣ್ಣಗಳಲ್ಲಿ ಒಂದಾಗಿದೆ. ಇದನ್ನು ಈಜಿಪ್ಟ್ ಮತ್ತು ಏಷ್ಯಾದ ಜನರು ನಾಲ್ಕು ಸಾವಿರ ವರ್ಷಗಳಿಂದ  ಬಳಸುತ್ತಿದ್ದಾರೆ. ಪಾಶ್ಚಿಮಾತ್ಯ ಜಗತ್ತಿಗೆ ಅಪರಿಚಿತವಾಗಿದ್ದ ನೀಲಿ ಬಣ್ಣಕುರಿತಾಗಿ ಇದು ಸಹಜ ಕೃಷಿಯಿಂದ ಸಸ್ಯಗಳ ಮೂಲಕ ತಯಾರಾಗುವ ಬಣ್ಣ ಎಂದು ಅವರಿಗೆ ತಿಳಿದಿರಲಿಲ್ಲ.

ಅಂದಿನ ಕಾಲದಲ್ಲಿ ಸಿಲ್ಕ್ ರೂಟ್ ಎಂದು ಕರೆಯಲಾಗುತ್ತಿದ್ದ ರೇಷ್ಮೇ ಮಾರ್ಗದಲ್ಲಿ ಇಂದಿನ ಟರ್ಕಿ ಮಖಾಂತರ ಭಾರತದ ಮಸಾಲೆ ಪದಾರ್ಥಗಳು ಮತ್ತು ನೀಲಿ ಬಣ್ಣವು ಪಾಶ್ಚಿಮಾತ್ಯ ಜಗತ್ತಿಗೆ ತಲುಪುತ್ತಿದ್ದವು. ಅಲ್ಲಿನ ಜನತೆ ನೀಲಿ ಬಣ್ಣವನ್ನು ಭಾರತದಲ್ಲಿ  ಖನಿಜ ಪದಾರ್ಥದಿಂದ ತಯಾರಿಸುತ್ತಾರೆ ಎಂದು ನಂಬಿದ್ದರು. ಹನ್ನೆರೆಡನೇ ಶತಮಾನದ ರೋಮನ್ ಇತಿಹಾಸಕಾರ, ಪ್ಲಿನಿ ದಿ ಎಲ್ಡರ್ ಎಂಬಾತನು "ಭಾರತದ ಉತ್ಪನ್ನವಾದ ಇಂಡಿಗೋ ಅಥವಾ ನೀಲಿಯು  ಕೆಲವು ಸಸ್ಯಗಳ ಮೇಲಿನ ಕಲ್ಮಶಕ್ಕೆ ಅಂಟಿಕೊಳ್ಳುವ ಲೋಳೆಯ ಮೂಲಕ ತಯಾರಿಸಲಾಗುವುದು ಎಂದು ದಾಖಲಿಸಿದ್ದನು. ನಂತರ 1498 ರಲ್ಲಿ ಭಾರತಕ್ಕೆ ಸಮುದ್ರಮಾರ್ಗದ ಮೂಲಕ ಪ್ರವೇಶೀಸಿದ ವಾಸ್ಕೋಡಗಾಮನು  ಭಾರತದ ನೀಲಿ ಸಸ್ಯ ಮತ್ತು ಬೀಜಗಳನ್ನು ಕೊಂಡೊಯ್ದು ಅಲ್ಲಿನ ಜನತೆಗೆ ಪರಿಚಯಿಸಿದನು.

ಹದಿನೇಳನೇ ಶತಮಾನದಲ್ಲಿ ಭಾರತಕ್ಕೆ ಕಾಲಿಟ್ಟ ಬ್ರಿಟೀಷರು ಅಲ್ಲಿನ ಜವಳಿ ಗಿರಣಿ ಗಳಿಗೆ ಭಾರತದ ಹತ್ತಿ ಮತ್ತು ನೀಲಿ ಹಾಗೂ ಮಸಾಲೆ ಪದಾರ್ಥಗಳನ್ನು ರಫ್ತು ಮಾಡುವುದರಲ್ಲಿ ಹೆಚ್ಚು ಆಸಕ್ತಿ ವಹಿಸಿದರು. ಇಂಗ್ಲೇಂಡ್ ನಲ್ಲಿ ನೀಲಿ ಕೃಷಿಯು ಅಸ್ತಿತ್ವದಲ್ಲಿತ್ತು. ಆದರೆ, ಅಲ್ಲಿನ ತಂಪು ವಾತಾವರಣದಿಂದಾಗಿ ಭಾರತದ  ಉಷ್ಣವಯಲದಲ್ಲಿ ಬೆಳೆಯುವ ನೀಲಿ ಕೃಷ್ಷಿಯಿಂದ ತಯಾರಾದ ನೀಲಿಗೆ ಇರುವ  ದಟ್ಟ ಬಣ್ಣ ಇರುತ್ತಿರಲಿಲ್ಲ. ಹಾಗಾಗಿ ಬ್ರಿಟೀಷರು ಅನೇಕ ಸಂಸ್ಥಾನಗಳ ದೊರೆಯಿಂದ ಭೂಮಿಯನ್ನು ಶಾಶ್ವತ ಗುತ್ತಿಗೆ ಪಡೆದು ನೀಲಿ ಕೃಷಿಗೆ ಮುಂದಾದರು. ಅಂದಿನ ಬಂಗಾಳ ಪ್ರಾಂತ್ಯ ಎಂದು ಕರೆಯಲಾಗುತ್ತಿದ್ದ ಇಂದಿನ ಪಶ್ಚಿಮ ಬಂಗಾಳ, ಬಿಹಾರ ಮತ್ತು ಬಾಂಗ್ಲಾ ದೇಶದಲ್ಲಿ ನೀಲಿಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತಿತ್ತು. ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೂರ್ ಅವರ ಅಜ್ಜ ದ್ವಾರಕನಾಥ ಟ್ಯಾಗೂರ್ ಬಂಗಾಳದಲ್ಲಿ ಸಾವಿರಾರು ಎಕೆರೆ ಭೂಮಿಯ ಒಡೆಯರಾಗಿದ್ದುಕೊಂಡು ನೀಲಿ ಕೃಷಿ ಮತ್ತು ನೀಲಿ ಉತ್ಪಾದನೆಯಲ್ಲಿ ಬ್ರಿಟೀಷರಿಗೆ ಮಾದರಿಯಾಗಿದ್ದರು.

ನಂತರದ ದಿನಗಳಲ್ಲಿ ಬಿಹಾರದ ಚಂಪಾರಣ್ಯ ಪ್ರದೇಶದಲ್ಲಿ ಬ್ರಿಟೀಷರು ಭೂಮಿ ಖರೀದಿಸಿ ನೀಲಿ ಕೃಷಿಯಲ್ಲಿ ತೊಡಗಿಸಿಕೊಂಡು ಅಲ್ಲಿನ ರೈತರನ್ನು ಶೋಷಿಸಿದ್ದು, ರೈತರ ಪರವಾಗಿ 1917 ರಲ್ಲಿ ಗಾಂಧಿ ಹೋರಾಟ ನಡೆಸಿ ಅವರಿಗೆ ನ್ಯಾಯ ದೊರಕಿಸಿಕೊಟ್ಟಿದ್ದು ಈಗ ಈತಿಹಾಸವಾಗಿದೆ. ಇಂತಹ ನೀಲಿ ಇತಿಹಾಸದ ಹಿನ್ನೆಲೆಯಲ್ಲಿ ಮಂಡ್ಯದ ನೆಲಕ್ಕೂ, ನೀಲಿ ಕೃಷಿಗೂ ಸಂಭಂಧವಿಲ್ಲದೆ ಇರುವಾಗ ಎರಡು ಶತಮಾನದ ಹಿಂದೆ ಶ್ರೀರಂಗಪಟ್ಟಣದಿಂದ ತಮಿಳುನಾಡಿಗೆ ಹೋದ ಮುಸ್ಲಿಂ ವ್ಯಕ್ತಿಯೊಬ್ಬರು ನೀಲಿ ಕೃಷಿಯಲ್ಲಿ ಅಪ್ರತಿಮ ಸಾಧನೆ ಮಾಡಿರುವ ಕಥನ ನಿಜಕ್ಕೂ ರೋಚಕವಾಗಿದೆ.


ತಿಂಡಿವಣಂ ಜಿಲ್ಲೆಯ ವಗಂದೂರು ಎಂಬ ಗ್ರಾಮದಲ್ಲಿ ಕಳೆದ ಎರಡು ಶತಮಾನಗಳಿಂದ ನೀಲಿ ಕೃಷಿ ಮತ್ತು ಉತ್ಪಾದನೆಯಲ್ಲಿ ತೊಡಗಿರುವ ಅಯೂಬ್ ಅವರು ತನ್ನ ಕುಟುಂಬ ಕಥೆಯನ್ನು ಸವಿವರವಾಗಿ ಬಲ್ಲವರಾಗಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಟಿಪ್ಪುಸುಲ್ತಾನ್ ಆಸ್ಥಾನದಲ್ಲಿ ಅವರ ಮುತ್ತಜ್ಜ ಜನಾಬ್ ಮೊಹಿದೀನ್ ನೌಕರರಾಗಿದ್ದರು.  1799 ರ ಮೇ ತಿಂಗಳಿನಲ್ಲಿ ಬ್ರಿಟೀಷರು ನಾಲ್ಕನೆಯ ಮೈಸೂರು ಯುದ್ಧದಲ್ಲಿ  ಟಿಪ್ಪು ಸುಲ್ತಾನನ್ನು ಸೋಲಿಸಿ, ಹತ್ಯೆ ಮಾಡಿದ ನಂತರ, ಟಿಪ್ಪುಸುಲ್ತಾನ್  ಕುಟುಂಬದ ಮಡದಿಯರು, ಮಕ್ಕಳು ಹಾಗೂ ಐನೂರಕ್ಕೂ ಹೆಚ್ಚು ಮಂದಿ ಆತನ ನಂಬಿಕಸ್ಥ ಸೇವಕರು ಮತ್ತು ಸಿಪಾಯಿಗಳನ್ನು ತಮಿಳುನಾಢಿನ ವೆಲ್ಲೂರು ಕೋಟೆಯಲ್ಲಿ ಗೃಹಬಂಧನದಲ್ಲಿಟ್ಟಿದ್ದರು.

ಎಂಟು ವರ್ಷಗಳ ತರುವಾಯ ಟಿಪ್ಪುವಿನ ತಾಯಿ, ಮಡದಿಯರು ಮರಣ ಹೊಂದಿದ ನಂತರ ಟಿಪ್ಪುವಿನ ಮಕ್ಕಳನ್ನು ಕೊಲ್ಕತ್ತ ನಗರಕ್ಕೆ ಸ್ಥಳಾಂತರಿಸಿ, ಉಳಿದ ಸೇವಕರನ್ನು ಗೃಹಬಂಧನದಿಂದ ಬಿಡುಗಡೆ ಮಾಡಿದರು. ನಂತರ ಶ್ರೀರಂಗಪಟ್ಟಣಕ್ಕೆ ವಾಪಸ್ ಬರಲಾಗದೆ. ಅಲ್ಲಿಯೇ ಕೃಷಿ ಕೂಲಿಕಾರರಾಗಿ ನೆಲೆ ನಿಂತ ಜನಾಬ್ ಮೋಹಿದ್ದೀನ್, ತಿಂಡಿವಣಂ ಜಿಲ್ಲೆಗೆ ಹೋಗಿ ಭೂಮಿಯನ್ನು ಗುತ್ತಿಗೆಗೆ ಪಡೆದು ನೀಲಿ ಕೃಷಿಯಲ್ಲಿ ತೊಡಗಿಸಿಕೊಂಡು ಯಶಸ್ವಿಯಾದರು. ಸ್ವಂತ ಭೂಮಿಯ ಜೊತೆಗೆ  ಕಾರ್ಖಾನೆಯನ್ನು ಸ್ಥಾಪಿಸಿದರು.  ರೇಷ್ಮೆ ಗಿಡದ ಮಾದರಿಯಲ್ಲಿ ಮೂರು ತಿಂಗಳ ಅವಧಿಯ ನೀಲಿ ಗಿಡವನ್ನು ಕತ್ತರಿಸಿದ ಮೂರು ಗಂಟೆಯ ಅವಧಿಯೊಳಗೆ    ಸತತ ಹನ್ನೆರೆಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿದಾಗ, ಹಸಿರು ಎಲೆಗಳಿಂದ ನೀಲಿಯ ಬಣ್ಣವು ಬಿಡುಗಡೆಯಾಗುತ್ತದೆ. ಈ ನೀರನ್ನು ಆ ಕಾಲದಲ್ಲಿ ದೊಡ್ಡದಾದ ಮಡಕೆಗಳಲ್ಲಿ ಸೀಮಿತವಾದ ಶಾಖದಲ್ಲಿ ಕುದಿಸಿದಾಗ, ಗಟ್ಟಿಯಾದ ನೀಲಿ ದ್ರವವು ಉತ್ಪಾದನೆಯಾಗುತ್ತಿತ್ತು. ಅದನ್ನು ಬಿಸಿಲಿನಲ್ಲಿ ಒಣಗಿಸಿ, ಬೆಲ್ಲದ ಅಚ್ಚಿನ ರೂಪಕ್ಕೆ ಪರಿವರ್ತಿಸಿ ಮಾರಾಟ ಮಾಡಲಾಗುತ್ತಿತ್ತು.

ತಿಂಡಿವಣಂ ನಿಂದ ನಲವತ್ತೇರೆಡು ಕಿಲೋಮೀಟರ್ ದೂರವಿರುವ ಪಾಂಡಿಚೇರಿ ಪಟ್ಟಣಕ್ಕೆ ತೆಗೆದುಕೊಂಡು ಹೋಗಿ ಅಲ್ಲಿನ ಡಚ್ಚರಿಗೆ ಮತ್ತು ಪ್ರೆಂಚರಿಗೆ ಮಾರಾಟ ಮಾಡಿ, ಅದರಿಂದ ಬಂದ ಹಣದಲ್ಲಿ ಚೀನಾದಿಂದ ಬರುತ್ತಿದ್ದ ರೇಷ್ಮೆ ಬಟ್ಟೆಗಳು ಮತ್ತು ಪ್ರಾನ್ಸ್ ನಿಂದ ಭಾರತಕ್ಕೆ  ಆಮದಾಗುತ್ತಿದ್ದ ಸುಗಂಧ ದ್ರವ್ಯಗಳನ್ನು ಅಯೂಬ್ ಅವರ ಮುತ್ತಜ್ಜ ಜನಾಬ್ ಮೊಹಿದ್ದೀನ್ ಕೊಂಡು ತಂದು ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದರಂತೆ.  ಕಾಲಕ್ರಮೇಣ ನೀಲಿ .ಕೃಷಿ ಮತ್ತು ನೀಲಿ ಉತ್ಪಾತನೆಯು ಅವರ ತಾತ ಮತ್ತು ತಂದೆಯ ಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯಿತು. ತಿಂಡಿವಣಂ ಜಿಲ್ಲೆಯಲ್ಲಿ  ಕಳೆದ ಎರಡು ಶತಮಾನಗಳಿಂದ ಅಯೂಬ್ ಮತ್ತು ಅನ್ಬಳಗನ್ ಎಂಬುವರ ಕುಟುಂಬವು ಇಂದಿಗೂ ಶ್ರೇಷ್ಠ ಮಟ್ಟದ ಸಹಜ ನೀಲಿ ಉತ್ಪಾದನೆಯಲ್ಲಿ ಹೆಸರುವಾಸಿಯಾಗಿವೆ.


ಇಪ್ಪತ್ತನೇ ಶತಮಾನದ ಮಧ್ಯಭಾಗದಲ್ಲಿ ಜಾಗತಿಕವಾಗಿ ಜೀನ್ಸ್ ಬಟ್ಟೆಗಳು ಹೆಚ್ಚು ಪ್ರಚಾರಕ್ಕೆ ಬಂದ ನಂತರ  ಸಹಜ ನೀಲಿಗೆ  ಅಪಾರ ಬೇಡಿಕೆ ಕುದುರಿತು. 1893 ರಲ್ಲಿ ಜರ್ಮನಿಯ ರಸಾಯನಿಕ ವಿಜ್ಞಾನಿ ಕೃತಕ ನೀಲಿಯನ್ನು ಕಂಡು ಹಿಡಿದ ನಂತರ ಎರಡು ದಶಕಗಳ ಕಾಲ ಸಹಜ ನೀಲಿಗೆ ಬೇಡಿಕೆ ಕಡಿಮೆಯಾಗಿತ್ತು. ಆದರೆ, ಸಹಜ ನೀಲಿಯಿಂದ ದೊರೆಯುವ ಕಡುಬಣ್ಣವು,  ಕೃತಕ ನೀಲಿಯಿಂದ ದೊರೆಯದ ಕಾರಣ ಜೀನ್ಸ್ ಬಟ್ಟೆಯ ತಯಾರಕರಿಗೆ ಭಾರತದ ನೀಲಿಯನ್ನು ಆಶ್ರಯಿಸಿದ್ದಾರೆ. ಹಾಗಾಗಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ನೀಲಿ ಬೆಳೆಯನ್ನು ಈಗ ಚಿನ್ನದ ಬೆಳೆ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ತಮಿಳುನಾಡು, ಆಂಧ್ರ, ರಾಜಸ್ತಾನ ಮತ್ತು ಉತ್ತರಖಾಂಡದಲ್ಲಿ ನೀಲಿ ಬೆಳೆಯನ್ನು ಬೆಳೆಯಲಾಗುತ್ತಿದ್ದು, ನೆರೆಯ ಪಾಕಿಸ್ತಾನದ ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯದಲ್ಲಿಯೂ ಸಹ ಬೆಳೆಯಲಾಗುತ್ತಿದೆ. ತಮಿಳುನಾಡಿನ ತಿಂಡಿವಣಂ ಮತ್ತು ಉತ್ತರಖಾಂಡದ ಪಿತೋರ್ ಘರ್ ಪ್ರದೇಶಗಳಲ್ಲಿ ಬೆಳೆಯುವ  ಸಹಜ ನೀಲಿಗೆ ಅಪಾರ ಬೇಡಿಕೆಯಿದೆ.

ಮಂಡ್ಯ ಜಿಲ್ಲೆಯೂ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ  ವಾಣಿಜ್ಯ ಬೆಳೆಗಳಾದ ಕಬ್ಬು ಮತ್ತು ರೇಷ್ಮೆಯನ್ನು ಆಶ್ರಯಿಸಿರುವ ರೈತರಿಗೆ  ನಮ್ಮ ಕೃಷಿ ಅಧಿಕಾರಿಗಳು ಮತ್ತು  ಕೃಷಿ ವಿಜ್ಞಾನಿಗಳು ನೀಲಿ ಕೃಷಿಯನ್ನು ಪರಿಚಯಿಸಿದರೆ, ರೈತರ ಬೇಸಾಯದ ಬದುಕಿನಲ್ಲಿ ಒಂದಿಷ್ಟು ಬದಲಾವಣೆಯನ್ನು ನಾವು ಕಾಣಬಹುದಾಗಿದೆ.

ಚಿತ್ರಸೌಜನ್ಯ- ಅಲ್ ಜಜೀರಾ ಟಿ.ವಿ ಮತ್ತು ವಿಕಿಪೀಡಿಯಾ

ಡಾ.ಎನ್.ಜಗದೀಶ್ ಕೊಪ್ಪ

 

 

 

 

..

ಸೋಮವಾರ, ಮೇ 6, 2024

ಅಂತರ್ಜಾತಿ ಮತ್ತು ಧರ್ಮದ ವಿವಾಹಗಳಿಗೆ ಸರ್ಕಾರದ ರಕ್ಷಣೆ ಅತ್ಯಗತ್ಯ.

 


ಇತ್ತೀಚೆಗೆ ಹುಬ್ಬಳ್ಳಿ ನಗರದಲ್ಲಿ ನಡೆದ ನೇಹಾ ಎಂಬ ಯುವತಿಯ ಹತ್ಯೆ ಅತ್ಯಂತ ಅಮಾನವೀಯವಾದುದು. ಫಯಾಜ್ ಎಂಬ ಯುವಕ ಹೆಣ್ಣು ಮಗಳನ್ನು ಕಾಲೇಜು ಆವರಣದಲ್ಲಿ ಇರಿದು ಕೊಂದಿರುವುದು ಇಂದಿನ ಯುವ ತಲೆಮಾರು ಪ್ರೀತಿ ಪ್ರೇಮದ ಹೆಸರಿನಲ್ಲಿ ಯಾವ ಹಂತಕ್ಕೆ ತಲುಪಿದೆ ಎಂಬುದಕ್ಕೆ ಘಟನೆಯು ನಮ್ಮೆಲ್ಲರ ಆತ್ಮ ಸಾಕ್ಷಿಗೆ ಹಲವು ಪ್ರಶ್ನೆಗಳನ್ನು ಒಡ್ಡಿದೆ.

ಪ್ರೀತಿ ಅಥವಾ ಪ್ರೇಮ ಎನ್ನುವುದು ಗಂಡು-ಹೆಣ್ಣು ಎಂಬ ಜೀವಗಳ ನಡುವೆ ಹೊಸ ವಿಚಾರ ಅಥವಾ ಸಂಗತಿಯೇನಲ್ಲ. ಅದು ಇತಿಹಾಸ ಮತ್ತು ಪುರಾಣವನ್ನು ಮೀರಿ ಜಗತ್ತಿನಾದ್ಯಂತ ಮಾನವ ಜೀವಿಗಳನ್ನು ಆವರಿಸಿದೆ. ಆದರೆ, ಇಪ್ಪತ್ತೊಂದನೆಯ ಶತಮಾನದ ಅವಧಿಯಲ್ಲಿ ವಿಶೇಷವಾಗಿ ಕಳೆದ ಹತ್ತು ವರ್ಷಗಳಲ್ಲಿ ಪ್ರೇಮ ವೈಫಲ್ಯ ಮತ್ತು ಅಂತರ್ಜಾತಿಯ ಹಾಗೂ ಭಿನ್ನ ಧರ್ಮೀಯರ ಗಂಡು - ಹೆಣ್ಣುಗಳ ನಡುವಿನ ಪ್ರೀತಿ ಅಥವಾ ವಿವಾಹಗಳು ಇಂದು  ಮೈ ನೆತ್ತರನ್ನು ಬಸಿದು ಕುಡಿಯುವ ಹಂತಕ್ಕೆ ತಲುಪಿರುವುದು ಇಂದಿನ ಸಮಾಜದ ಅಥವಾ ನಾಗರೀಕ ಜಗತ್ತಿನ ಕ್ರೌರ್ಯಕ್ಕೆ ಸಾಕ್ಷಿ ಎನಿಸಿದೆ. ಈಕಾರಣದಿಂದಾಗಿ ಗಾಂಧೀಜಿಯವರು ಜಾತಿವಿನಾಶಕ್ಕೆ ಅಂತರ್ಜಾತಿ ವಿವಾಹ ಮದ್ದು ನಂಬಿದ್ದರು. ಅದರಂತೆ ಅವರು ಸ್ವಜಾತಿಯ ವಿವಾಹಗಳಿಗೆ ಬದುಕಿರುವವರಿಗೂ ಭಾಗವಹಿಸಲಿಲ್ಲ.

ಇಂತಹ ವಿವಾಹಗಳು ಭಾರತಕ್ಕೆ ಹೊಸತಲ್ಲ. 1942 ಮಾರ್ಚ್ 26 ರಂದು ಮಾಜಿ ಪ್ರಧಾನಿ ಇಂಧಿರಾಗಾAಧಿ ಅವರು ಕಾಶ್ಮೀರಿ ಪಂಡಿತ ಸಮುದಾಯದಿಂದ ಬಂದ ಹೆಣ್ಣು ಮಗಳಾಗಿದ್ದರೂ ಸಹ, ಪಾರ್ಸಿ ಸಮುದಾಯದ ಫಿರೋಜ್ ಗಾಂಧಿ ಅವರನ್ನು ಪ್ರೀತಿಸಿ ವಿವಾಹವಾದರು. ಸಂದರ್ಭದಲ್ಲಿ ಅವರ ತಂದೆ ಜವಹರಲಾಲ್ ನೆಹರೂ ಅವರು ತಮ್ಮ ಏಕೈಕ ಪುತ್ರಿಗೆ  ‘’ಇನ್ನೊಮ್ಮೆ ಆಲೋಚಿಸು ಎಂದರಲ್ಲದೆ, ಹಿಂದೂ ಯುವಕರ ಬಗ್ಗೆ ಗಮನ ನೀಡು’’ ಎಂಬ ಸಲಹೆಯನ್ನು ನೀಡಿದರು.  ನನ್ನ ನಿರ್ಧಾರ ಅಂತಿಮ ಎಂದು ಇಂದಿರಾ ಅವರು ನುಡಿದಾಗ, ನೆಹರೂ ಅವರು ಮೌನಕ್ಕೆ ಜಾರಿದರು. ಇಂದಿರಾ ಮತ್ತು ಫಿರೋಜ್ ಗಾಂಧಿ ಅವರ ವಿವಾಹವನ್ನು ವಿರೋಧಿಸಿ ಹಿಂದೂ ಹಾಗೂ ಪಾರ್ಸಿ ಸಮುದಾಯದ ಸಂಘಟನೆಗಳು ಅಲಹಬಾದಿನ ನೆಹರೂ ಅವರ ನಿವಾಸ ಆನಂದ ಭವನದ ಮುಂದೆ ಪ್ರತಿಭಟನೆ ನಡೆಸಿದಾಗ, ಮಧ್ಯ ಪ್ರವೇಶಿಸಿದ ಗಾಂಧೀಜಿಯವರು ‘’ಇದು ಎರಡು ಆತ್ಮಗಳ ಮಿಲನದ ಕ್ರಿಯೆ ಇದನ್ನು ಅಡ್ಡಿ ಪಡಿಸುವ ನೈತಿಕ ಹಕ್ಕು ನಮಗಿಲ್ಲ’’ ಎಂದು ನುಡಿದಾಗ  ಇಡೀ ಸಮಾಜದ ಧ್ವನಿ ಅಡಗಿ ಹೋಯಿತು.

ಹೈದರಾಬಾದ್ ನಿಜಾಮನ ಆಳ್ವಿಕೆಯಲ್ಲಿ ಬಂಗಾಳದಿA ಪ್ರಾಧ್ಯಾಪಕರಾಗಿ ಹೈದರಾಬಾದಿಗೆ ಆಗಮಿಸಿದ್ದ ಅಘೋರೆನಾಥ ಚಟ್ಟೋಪದ್ಯಾಯ  ಅವರ ಪುತ್ರಿ ಸರೋಜಿನಿ ಅವರು 1898 ರಲ್ಲಿ  ತಮ್ಮ ಸಹಪಾಠಿ  ಮುತ್ಯಾಲಯ್ಯ ಗೋವಿಂದರಾಜುಲು ನಾಯ್ಡು ಅವರನ್ನು ವಿವಾಹವಾದಾಗ ಯಾವುದೇ ಪ್ರತಿಭಟನೆ ಎದುರಾಗಲಿಲ್ಲ. ನಂತರ ಅವರು ಸರೋಜಿನಿ ನಾಯ್ಡು ಆದರು. ಅದೇ ರೀತಿಯಲ್ಲಿ ತಮಿಳುನಾಡಿನಲ್ಲಿ   ಸ್ವತಃ ದೇವದಾಸಿ ಸಮುದಾಯದಲ್ಲಿ ಜನಿಸಿ, ದಕ್ಷಿಣ ಭಾರತದ ಪ್ರಥಮ ವೈದ್ಯೆ ಎಂಬ ಕೀರ್ತಿಗೆ ಪಾತ್ರರಾಗಿ  ದೇವದಾಸಿಯರ ವೃತ್ತಿಯ ಬಗ್ಗೆ ಹೋರಾಡುತ್ತಿದ್ದ ಮುತ್ತುಲಕ್ಷ್ಮಿಎಂಬುವರು 1914 ರಲ್ಲಿ ಸುಂದರ ರೆಡ್ಡಿ ಎಂಬ ತನ್ನ ಸಹಪಾಠಿಯನ್ನು ವಿವಾಹವಾಗಿ ಮುತ್ತುಲಕ್ಷ್ಮಿರೆಡ್ಡಿ ಎಂದು ಪರಿವರ್ತನೆಯಾದಾಗ ಯಾವ ಸಮಾಜವೂ ಧ್ವನಿ ಎತ್ತಲಿಲ್ಲ. ಪ್ರಸಿದ್ಧ ಭರತ ನಾಟ್ಯ ಕಲಾವಿದೆ ಬ್ರಾಹ್ಮಣ ಸಮುದಾಯದ ರುಕ್ಮಿಣಿ ಅವರು ಅರುಂಡೆಲ್ ಎಂಬ ಕ್ರೈಸ್ತ ಸಮಾಜ ಸೇವಕನನ್ನು 1920 ದಶಕದಲ್ಲಿ ವಿವಾಹವಾಗಿದ್ದರು.  ಅಷ್ಟೇ ಏಕೆ 1960 ದಶಕದಲ್ಲಿ ಹಿರಿಯ .ಪಿ.ಎಸ್. ಪೊಲೀಸ್ ಅಧಿಕಾರಿ ಹಾಗೂ 1980 ರ ವೇಳೆಯಲ್ಲಿ  ಬೆಂಗಳೂರು ನಗರದ  ಪೊಲೀಸ್ ಕಮೀಷನರ್ ಆಗಿದ್ದ ನಿಜಾಮುದ್ದೀನ್ ಅವರನ್ನು ಹಿಂದೂ ಹೆಣ್ಣು ಮಗಳಾದ ಲಕ್ಷ್ಮಿ ಎಂಬುವರು ವಿವಾಹವಾಗಿ ಲಕ್ಷ್ಮಿ ನಿಜಾಮುದ್ದೀನ್ ಎಂದು ಸಮಾಜದಲ್ಲಿ ಗುರುತಿಸಿಕೊಂಡಾಗ ಯಾರೊಬ್ಬರ ಮನಸ್ಸಿನಲ್ಲಿಯೂ ಕಹಿ ಭಾವನೆ ಉದ್ಭವವಾಗಲಿಲ್ಲ. ಇಂತಹ ಒಂದು ಆರೋಗ್ಯ ಪೂರ್ಣ ಸಮಾಜವು ಇಂದು ನಮ್ಮೆದುರು ಮರ್ಯಾದಾ ಹತ್ಯೆ ಮತ್ತು ಸೇಡಿನ ಹತ್ಯೆಯ ಹಂತಕ್ಕೆ ತಲುಪಿದೆ ಎಂದರೆ ಒಂದು ಧರ್ಮ ಅಥವಾ ಜಾತಿಯ ಕಡೆ ಕೈ ತೋರಿಸುವ ಬದಲು, ನಾವುಗಳು  ನಮ್ಮ ನಮ್ಮ ಎದೆಗೆ ಕೈ ತೋರಿಸಿಕೊಂಡು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.

ಕೇವಲ ಮೂರು ಅಥವಾ ನಾಲ್ಕು ದಶಕಗಳ ಹಿಂದೆ ತಮ್ಮ ಮನೆಯ ಪುತ್ರಿ ಪೋಷಕರಿಗೆ ತಿಳಿಸದೆ ಅಂತರ್ಜಾತಿಯ ವಿವಾಹವಾದರೆ, ನಮ್ಮ ಮಗಳು ನಮ್ಮ ಪಾಲಿಗೆ ಸತ್ತು ಹೋದಳು ಎಂಬ ನಿರ್ಧಾರಕ್ಕೆ ಬರುತ್ತಿದ್ದ ಪೋಷಕರು, ಎಂದಿಗೂ ಪ್ರೇಮಿಗಳನ್ನು ಬೆನ್ನತ್ತಿ ಹೋಗಿ ಕೊಲ್ಲುತ್ತಿರಲಿಲ್ಲ ಮತ್ತು ವಿವಾಹವಾದ ತಮ್ಮ ಪುತ್ರಿಯನ್ನು ಹತ್ಯೆ ಮಾಡುತ್ತಿರಲಿಲ್ಲ. ಪ್ರೀತಿಸಿದ ಹುಡುಗಿ ಕೈ ಕೊಟ್ಟರೆ, ಅಥವಾ ಮನೆಯವರ ಒತ್ತಾಯಕ್ಕೆ ಮಣಿದು ಆಕೆ  ಬೇರೊಂದು ವಿವಾಹವಾದರೆ, ಭಗ್ನಗೊಂಡ ಪ್ರೇಮಿ ಗಡ್ಡ ಬಿಟ್ಟುಕೊಂಡು ಮೂರು ನಾಲ್ಕು ತಿಂಗಳು ಕಾಲ ಮೌನವಾಗಿ ಒಳಗೊಳಗೆ ಅತ್ತು ಕಣ್ನೀರಿನ ಮೂಲಕ  ಎದೆಯ ಗಾಯವನ್ನು ವಾಸಿಮಾಡಿಕೊಳ್ಳುತ್ತಿದ್ದನು.  ಕತ್ತಿ ಹಿಡಿದು ಹೋಗಿ ಪ್ರೇಮಿಸಿದಾಕೆಯನ್ನು ಕೊಲ್ಲುತ್ತಿರಲಿಲ್ಲ. ನಮ್ಮ ಸಮಾಹದಲ್ಲಿ ಇತ್ತೀಚೆಗೆ ಕೇಂದ್ರೀಕತವಾಗುತ್ತಿರುವ ಜಾತಿ ಮತ್ತು ದರ್ವ್ಮಗಳು ಹಾಗೂ ಇವುಗಳಿಗೆ ನೀರೆರೆದು ಪೋಷಿಸುತ್ತಿರುವ ರಾಜಕೀಯ ಪಕ್ಷಗಳು ಮತ್ತು ನೇತಾರರು ಇಂತಹ ಅನಿಷ್ಠ ಕ್ರಿಯೆಗಳಿಗೆ ನೇರ ಹೊಣೆಗಾರರು ಎಂಬುದನ್ನು ನಾವು ಮರೆಯಬಾರದು.

ಒಬ್ಬ ಅಪ್ಪಟ ಪ್ರಜ್ಷಾವಂತ ಇಂದು ಜಾತಿ, ಧರ್ಮವನ್ನು ಮತ್ತು ಪಕ್ಷ ಹಾಗೂ ಸಂಘಟನೆಗಳನ್ನು ಮೀರಿ ಕುವೆಂಪು ಪ್ರತಿಪಾದಿಸಿದ ವಿಶ್ವ ಮಾನವ ಪ್ರಜ್ಞೆಯ ನೆಲೆಯಲ್ಲಿ ಬದುಕುವುದು ಅತ್ಯಗತ್ಯವಾಗಿದೆ. ಕಾರಣಕ್ಕಾಗಿ 1980 ದಶಕದಲ್ಲಿ ಪಿ.ಲಂಕೇಶ್ ಹಾಗೂ ತೇಜಸ್ವಿ ಅವರ ಒಡನಾಡಿಯಾಗಿದ್ದ ವಿಚಾರವಾದಿ ಪ್ರೊ. ಕೆ.ರಾಮದಾಸ್ ಅವರು ಮಾನವಮಂಟಪ ಎಂಬ ವೇದಿಕೆ ನಿರ್ಮಿಸಿಕೊಂಡು ಅಂತರ್ಜಾತಿ ವಿವಾಹವಾಗುವ ಯುವಕ-ಯುವತಿಯರಿಗೆ ರಕ್ಷಣೆ ನೀಡಿ ಸ್ವಂತ ಖರ್ಚಿನಲ್ಲಿ ವಿವಾಹ ನೆರವೇರಿಸುತ್ತಿದ್ದರು. ಇಂದಿಗೂ ಸಹ ಅವರ ಶಿಷ್ಯರಾದ ಪ್ರೊ.ಕಾಳಿಚನ್ನೇಗೌಡ, ಉಗ್ರನರಸಿಂಹಗೌಡ ಮತ್ತು ಧನಂಜಯ ಎಂಬುವರು    ಕೆಲಸವನ್ನು ಮುಂದುವರಿಸುತ್ತಿದ್ದಾರೆ.

ಇತ್ತೀಚೆಗಿನ ವರ್ಷಗಳಲ್ಲಿ ವಿಶೇಷವಾಗಿ ದಕ್ಷಿಣ ಕರ್ನಾಟಕದಲ್ಲಿ ಮರ್ಯಾದಾ ಹತ್ಯೆಗಳು ಹೆಚ್ಚು ಚಾಲ್ತಿಯಲ್ಲಿವೆ. ಕಳೆದ ವರ್ಷ ಕೋಲಾರ ಜಿಲ್ಲೆಯಲ್ಲಿ ದಲಿತ ಸಮುದಾಯದ ಎಡಗೈ ಮತ್ತು ಬಲಗೈ ಪಂಗಡದ ಯುವಕ-ಯುವತಿ ಮಾತನಾಡುತ್ತಿದ್ದರು  ಎಂಬ ಕಾರಣಕ್ಕೆ ಯುವಕನೊಬ್ಬ ಹತ್ಯೆಯಾದನು. ಘಟನೆಗಳು ನಮ್ಮನ್ನು ಮತ್ತು ಸಮಾಜವನ್ನು ಎಲ್ಲಿಗೆ ಕೊಂಡೊಯ್ಯಬಲ್ಲದು? ಎಂಬುದನ್ನು  ನೆನೆದರೆ ಆತಂಕವಾಗುತ್ತದೆ. ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಇಡೀ ಮಾಹಿತಿಯು ಬೆರಳ ತುದಿಗೆ ಬಂದು ಕುಳಿತಿರುವಾಗ ನಿಜವಾದ ಪ್ರೇಮಿಗಳನ್ನು ಅಗಲಿಸಲು ಸಾಧ್ಯವಿಲ್ಲ. ಅಂತಹ ಯುವಕ-ಯುವತಿಯರಲ್ಲಿ ಒಟ್ಟಾಗಿ ಬದುಕುವ ಬದ್ಧತೆ ಇದ್ದರೆ, ಅವರುಗಳಿಗೆ ಸಮಾಜ ಮತ್ತು ಸರ್ಕಾರ ರಕ್ಷಣೆ ನೀಡುವುದರ ಜೊತೆಗೆ ಕನಿಷ್ಠ ಎರಡು ವರ್ಷಗಳ ಕಾಲ ಅವರ ಉದ್ಯೋಗಕ್ಕೆ  ಮತ್ತು ಜೀವನ ಭದ್ರತೆಗೆ  ನೆರವಾಗಬೇಕಿದೆ. ಕೊಲೆ ಮತ್ತು ಮರ್ಯಾದಾ ಹತ್ಯೆಯಂತಹ ಅಮಾನುಷ ಕ್ರಿಯೆಗಳು ಯಾವುದೇ ಸಮಾಜಕ್ಕೆ ಒಳಿತಲ್ಲ.

ಜಗದೀಶ್ ಕೊಪ್ಪ