ಭಾನುವಾರ, ಮೇ 18, 2014

ಜಿಮ್ ಕಾರ್ಬೆಟ್ ಎಂಬ ಕರುಣಾಳು



ಅದು 1985 ರ ಚಳಿಗಾಲ ಕಳೆದ ನಂತರದ ಮಾರ್ಚ್ ತಿಂಗಳಿನ ಬೇಸಿಗೆ ಆರಂಭದ ಒಂದು ದಿನ. ವಿಶ್ವ ವಿಖ್ಯಾತ ಶಿಕಾರಿಕಾರನೆಂದು ಪ್ರಸಿದ್ಧಿಯಾಗಿದ್ದ ಜಿಮ್ ಕಾರ್ಬೆಟ್ ಕುರಿತಂತೆ ಸಾಕ್ಷ್ಯ ಚಿತ್ರ ತಯಾರಿಸಲು ಇಂಗ್ಲೆಂಡಿನ ಬಿ.ಬಿ.ಸಿ. ಛಾನಲ್‍ನ ತಂಡ, ಉತ್ತರಕಾಂಡದ ನೈನಿತಾಲ್ ಗಿರಿಧಾಮದ ಸಮೀಪವಿರುವ  ಚೋಟಿ ಹಲ್ದಾನಿಯ ಕಾರ್ಬೆಟ್ ನಿವಾಸದಲ್ಲಿ ಬೀಡು ಬಿಟ್ಟು ಆತನ ಜೀವನ ಕಥೆ ಕುರಿತಂತೆ ಚಿತ್ರೀಕರಣ ಮಾಡುತ್ತಿತ್ತು.
ಕಾರ್ಬೆಟ್‍ನ ಶಿಕಾರಿ ಅನುಭವ ಹಾಗೂ ಆತನಿಗೆ ಕಾಡಿನ ಶಿಕಾರಿಯ ವೇಳೆ 30 ಕ್ಕೂ ಹೆಚ್ಚು ವರ್ಷಗಳ ಕಾಲ ನೆರವಾಗಿದ್ದ ಕುನ್ವರ್ ಸಿಂಗ್ ಎಂಬ ಪಾತ್ರಗಳನ್ನು ಸಾಕ್ಷ್ಯ ಚಿತ್ರಕ್ಕಾಗಿ ಮರು ಸೃಷ್ಟಿ ಮಾಡಲಾಗಿತ್ತು. ಕಾರ್ಬೆಟ್‍ನ ಪಾತ್ರಕ್ಕಾಗಿ ಆತನನ್ನು ಹೋಲುವಂತಹ, ಅದೇ ವಯಸ್ಸಿನ ವ್ಯಕ್ತಿಯೊಬ್ಬನನ್ನು ಲಂಡನ್ನಿನ ರಂಗಭೂಮಿಯಿಂದ ಕರೆತರಲಾಗಿತ್ತು. ಈ ಸಾಕ್ಷ್ಯಚಿತ್ರಕ್ಕೆ ಜಿಮ್ ಕಾರ್ಬೆಟ್ ಕುರಿತು “ಕಾರ್ಪೆಟ್ ಸಾಹೇಬ್” ಹೆಸರಿನಲ್ಲಿ ಕಾರ್ಬೆಟ್ ನ ಆತ್ಮಕಥನ ಬರೆದಿದ್ದ ಬ್ರಿಟನ್ನಿನ ಲೇಖಕ ಮಾರ್ಟಿನ್ ಬೂತ್ ಚಿತ್ರಕಥೆ ಬರೆದಿದ್ದರು.
ಚಿತ್ರೀಕರಣದ ವೇಳೆ ಸ್ಥಳೀಯರೊಂದಿಗೆ ಮಾತುಕತೆ, ಇನ್ನಿತರೆ ವ್ಯವಹಾರಗಳಿಗೆ ಅನುಕೂಲವಾಗಲೆಂದು ಮುಂಬೈನಿಂದ ತಂತ್ರಜ್ಞರು ಮತ್ತು  ಸಹಾಯಕರನ್ನು ಸಹ ಸ್ಥಳಕ್ಕೆ ಕರೆಸಲಾಗಿತ್ತು. ಅದೊಂದು ದಿನ  ಚಿತ್ರೀಕರಣ ನಡೆಯುತ್ತಿದ್ದ  ಸ್ಥಳÀಕ್ಕೆ ಬೆಳಗಿನ ವೇಳೆ ಸ್ಥಳೀಯರು ಬಂದು, ದೂರದ ಊರಿನಿಂದ ಕಾರ್ಬೆಟ್‍ನನ್ನು ನೋಡಲು ವೃದ್ಧನೊಬ್ಬ ಕಾಲ್ನಡಿಗೆಯಲ್ಲಿ ಬಂದಿದ್ದಾನೆ ಎಂದರು. ಚಿತ್ರದ ತಂಡದ ಸದಸ್ಯರುಬಹುಷಃ ಕಾರ್ಬೆಟ್‍ನ ಪಾತ್ರಧಾರಿಯನ್ನು ನೋಡಲು ಬಂದಿರಬೇಕು ಎಂದು ಊಹಿಸಿ ಆ ವೃದ್ಧನಿಗೆ ಅವಕಾಶ ಮಾಡಿಕೊಟ್ಟರು.
ಆ ವೃದ್ಧ ಕಲದೊಂಗಿ ಮತ್ತು ಚೋಟಿ ಹಲ್ದಾನಿಯಿಂದ ಸುಮಾರು 90 ಕಿಲೋಮೀಟರ್ ದೂರವಿರುವ ಹಳ್ಳಿಯಿಂದಗುಡ್ಡಗಾಡು ಪ್ರದೇಶವನ್ನು ಹತ್ತಿ ಇಳಿದು, ಮರದ ಟೊಂಗೆಯೊಂದನ್ನು ಊರುಗೋಲಾಗಿ ಮಾಡಿಕೊಂಡು ತನ್ನ ಮೊಮ್ಮಕ್ಕಳ ಜೊತೆ ನಾಲ್ಕು ದಿನಗಳ ಕಾಲ ನಡೆದು ಕಲದೊಂಗಿ ಮತ್ತು ಚೋಟಿ ಹಲ್ದಾನಿ ಗ್ರಾಮಗಳನ್ನು ತಲುಪಿದ್ದ. 

ಗೇಟಿನ ಹೊರ ಭಾಗದಲ್ಲಿ ನಿಂತಿದ್ದ ಆತನಿಗೆ ಕಾರ್ಬೆಟ್ ಪಾತ್ರಧಾರಿಯನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಲಾಯಿತು. ಮನೆಯ ವರಾಂಡದಲ್ಲಿ ನಿಂತಿದ್ದ ಆ ವೃದ್ಧ, ಪಾತ್ರಧಾರಿಯತ್ತ ನಿಧಾನವಾಗಿ ಮೈ ಬಗ್ಗಿಸಿ ನಡೆದು ಬಂದು, ಅವನ ಪಾದದ ಮೇಲೆ ಕಾಡಿನಿಂದ ಕಿತ್ತು ತಂದಿದ್ದ ಹೂವುಗಳನ್ನು ಹಾಕಿ ತನ್ನ ಹಣೆಯನ್ನು ಅವನ ಪಾದಗಳಿಗೆ ಒತ್ತಿ ತನ್ನ ಕಣ್ಣೀರಿನಿಂದ ಪಾದಗÀಳನ್ನು ತೋಯಿಸಿಬಿಟ್ಟ. ಇಡೀ ದೃಶ್ಯವನ್ನ ಅಚ್ಚರಿಯಿಂದ  ನೋಡುತ್ತಿದ್ದ ಬಿ.ಬಿ.ಸಿ. ಚಿತ್ರ ತಂಡಕ್ಕೆ ಏನು ಮಾಡಬೇಕೆಂದು ತೋಚಲಿಲ್ಲ. ನಿಧಾನವಾಗಿ ಸಾವರಿಸಿಕೊಂಡ ಆ ವೃದ್ಧ ಎದ್ದು ನಿಂತು  ಪಾತ್ರಧಾರಿಗೆ ಕೈ ಮುಗಿಯುತ್ತಾ  ತನ್ನ ಗಢವಾಲ್ ಭಾಷೆಯಲ್ಲಿ “ಸಾಬ್ ನಮ್ಮನ್ನು ಇಷ್ಟು ವರ್ಷ ಅನಾಥರನ್ನಾಗಿ ಮಾಡಿ ಎಲ್ಲಿ ಹೋಗಿದ್ದಿರಿ? ದಯಮಾಡಿ ನೀವು ಮತ್ತೇ ನಮ್ಮನ್ನು ತೊರೆದು ಹೋಗಬೇಡಿ ಎಂದು ಅಂಗಲಾಚತೊಡಗಿದ.” ಪರಿಸ್ಥಿತಿಯನ್ನು ಗ್ರಹಿಸಿದ ಚಿತ್ರ ತಂಡ, ಮುಂಬೈ ಸಹಾಯಕರ ಮೂಲಕ ಈ ವ್ಯಕ್ತಿ ಕಾರ್ಬೆಟ್ ಅಲ್ಲ, ಅವರು ತೀರಿ ಹೋಗಿ 30 ವರ್ಷಗಳಾದವು, ಅವರ ಬಗ್ಗೆ ಚಿತ್ರ ತಯಾರು ಮಾಡುತ್ತಿದ್ದೇವೆ ಎಂದು ತಿಳಿಸಿ, ಆ ವೃದ್ಧನಿಗೆ ವಾಸ್ತವ ಸಂಗತಿಯನ್ನು ಮನದಟ್ಟು ಮಾಡಿಕೊಡಲು ಅರ್ಧ ದಿನ ಸೆಣಸಾಡಬೇಕಾಯಿತು. ಇದು ಕಾರ್ಬೆಟ್ ಕುರಿತಾಗಿ ಅಲ್ಲಿನ ಜನತೆ ಹೊಂದಿದ್ದ ಅವಿನಾಭಾವ ಸಂಬಂಧಕ್ಕೆ ಒಂದು ಉದಾಹರಣೆ ಅಷ್ಟೇ.
ಜಗತ್ತಿನ ವನ್ಯಜೀವಿಗಳ ಲೋಕದಲ್ಲಿ  ಜಿಮ್‍ಕಾರ್ಬೆಟ್ ಎಂಬ ಹೆಸರು ಜಗದ್ವಿಖ್ಯಾತ ಮಾತ್ರವಲ್ಲದೆ, ಅಜರಾಮರವಾಗಿ ಉಳಿದುಹೋಗಿದೆ. ಭಾರತದಲ್ಲಿ ಹುಟ್ಟಿ ಬೆಳೆದು, ಸ್ಥಳಿಯ ಭಾಷೆ ಮತ್ತು ಸಂಸ್ಕøತಿಯನ್ನು ಮೈಗೂಡಿಸಿಕೊಂಡಿದ್ದ ಜಿಮ್‍ಕಾರ್ಬೆಟ್  ಹಿಮಾಲಯದ ಪರಿಸರದಲ್ಲಿ ಅನೇಕ  ನರಭಕ್ಷಕ ಹುಲಿ ಮತ್ತು ಚಿರತೆಗಳನ್ನು ಬೇಟೆಯಾಡುವುದರ ಮೂಲಕ 1930 ಮತ್ತು 40 ರ ದಶಕದಲ್ಲಿ ವಿಶ್ವಪ್ರಸಿದ್ದನಾದ. 1948 ರಲ್ಲಿ ಭಾರತವನ್ನು ತ್ಯೆಜಿಸಿ, ಕೀನ್ಯಾದಲ್ಲಿ ನೆಲೆಸಿದ್ದ   ಜಿಮ್ ಕಾರ್ಬೆಟ್, 1955ರಲ್ಲಿ  ನಿಧನ ಹೊಂದಿದಾಗ, ಟೈಮ್ಸ್ ವಾರಪತ್ರಿಕೆ ಮುಖಪುಟದಲ್ಲಿ ಆತನ ಚಿತ್ರವನ್ನು ಪ್ರಕಟಿಸಿ ಶ್ರದ್ಧಾಂಜಲಿ ಸಲ್ಲಿಸಿತು. ಭಾರತ ಸರ್ಕಾರ ಅವನು ಹುಟ್ಟಿ ಬೆಳೆದು ನಡೆದಾಡಿದ  ಉತ್ತರಕಾಂಡ್ ರಾಜ್ಯದ ರಾಮನಗರ ಪಟ್ಟಣ ಸಮೀಪದ ಚೋಟಿ ಹಲ್ದಾನಿ ಹಳ್ಳಿಯ  ಸುತ್ತಮುತ್ತಲಿನ ಹದಿನೆಂಟು ಸಾವಿರ ಚದುರ ಕಿಲೋಮೀಟರ್ ವ್ಯಾಪ್ತಿ  ಅರಣ್ಯಪ್ರದೇಶವನ್ನು “ ಜಿಮ್ ಕಾರ್ಬೆಟ್ ಅಭಯಾರಣ್ಯ” ಎಂದು ಘೊಷಿಸಿತು.


ಇಂಗ್ಲೆಂಡ್ ಮೂಲದ ಕುಟುಂಬವೊಂದರಲ್ಲಿ ಉತ್ತರಕಾಂಡದ ನೈನಿತಾಲ್ ಗಿರಿಧಾಮದಲ್ಲಿ 1875 ರಲ್ಲಿ ಜನಿಸಿದ ಜಿಮ್ ಕಾರ್ಬೆಟ್ ತನ್ನ ಇಡೀ ಬದುಕನ್ನು ಅಪ್ಪಟ ಭಾರತೀಯನಂತೆ ಬದುಕಿದ ಅಪರೂಪದ ವ್ಯಕ್ತಿ. ಇಡೀ ಜಗತ್ತು ಆತನನ್ನು ಅತ್ತ್ಯುತ್ತಮ ಬೇಟೆಗಾರ ಎಂದು ಮಾತ್ರ ಗುರುತಿಸಿತು. ಆದರೆ, ಅದಕ್ಕಿಂತ ಹೆಚ್ಚಾಗಿ ಅವನೊಬ್ಬಳಗೊಬ್ಬ  ಅಪ್ರತಿಮ ನಿಸರ್ಗದ ಆರಾಧಕನಿದ್ದ. ಅರಣ್ಯ ಮತ್ತು ಅಲ್ಲಿನ ಜೀವಜಾಲಗಳ ಚಟುವಟಿಕೆಗಳ ಕುರಿತಂತೆ ಜಿಮ್ ಕಾರ್ಬೆಟ್‍ಗಿದ್ದ ಅಳವಾದ ಜ್ಞಾನ ವಿಸ್ಮಯಪಡುವಂತಿತ್ತು. ನಿಸರ್ಗದ ಚಟುವಟಿಕೆಯ ಎಲ್ಲಾ ಸೂಕ್ಷ್ಮತೆಗಳನ್ನು ಹಾಗೂ ಅದರ ಭಾಷೆಯನ್ನು  ಬಾಲ್ಯದಿಂದಲೆ ಅರಿತಿದ್ದ ಜಿಮ್ ಕಾರ್ಬೆಟ್, ಪ್ರಾಣಿ, ಪಕ್ಷಿಗಳ ದ್ವನಿಯನ್ನು ಕರಾರುವಕ್ಕಾಗಿ ಅನುಕರಣೆ ಮಾಡುತ್ತಿದ್ದ. ಅಪಾಯಕಾರಿ ಪ್ರಾಣಿಗಳು ಮನುಷ್ಯನ ಹತ್ತಿರ ಸುಳಿದಾಗ, ಯಾವ ಯಾವ ಪ್ರಾಣಿಗಳು ಮತ್ತು ಪಕ್ಷಿಗಳು ಹೇಗೆ ಮುನ್ಸೂಚನೆಯನ್ನು ಕೊಡಬಲ್ಲವು ಎಂಬುದನ್ನು ಸಹ ಅರಿತಿದ್ದ. ಅರಣ್ಯದಲ್ಲಿ ದಿಕ್ಕು ತಪ್ಪಿದಾಗ, ಯಾವ ಹೂವುಗಳು ಸೂರ್ಯನಿಗೆ ಮುಖಮಾಡಿ ನಿಲ್ಲುತ್ತವೆ ಎಂಬುದರ ಮೇಲೆ ದಿಕ್ಕುಗಳನ್ನು ಗುರುತಿಸುವ ಪರಿಜ್ಞಾನ ಆತನಿಗಿತ್ತು. ಅಷ್ಟೇ ಅಲ್ಲದೆ, ಸೊಳ್ಳೆ ಮತ್ತು ಜಿಗಣೆಗಳ ಕಾಟದಿಂದ ತಪ್ಪಿಸಿಕೊಳ್ಳಲು, ಯಾವ  ಗಿಡದ ಸೊಪ್ಪಿನ ರಸವನ್ನು ದೇಹಕ್ಕೆ ಲೇಪಿಸಿಕೊಳ್ಳಬೇಕು, ಹಸಿವು, ನೀರಡಿಕೆಗೆ ಎಂತಹÀ ಗೆಡ್ಡೆ ಗೆಣಸುಗಳನ್ನು ತಿನ್ನಬೇಕು ಎಂಬ ಅಸಾಧಾರಣ ಜ್ಞಾನವೂ ಕಾರ್ಬೆಟ್‍ಗಿತ್ತು. ಈ ಕಾರಣಕ್ಕಾಗಿ 1944-45 ರ ಎರಡನೆಯ ಮಹಾಯುದ್ಧದ ಸಮಯದಲ್ಲಿ ಭಾರತದಲ್ಲಿದ್ದ ಬ್ರಿಟೀಷ್ ಸರ್ಕಾರ ಆತನನ್ನು ಸೇನೆಯ ಮೇಜರ್ ಹುದ್ದೆಗೆ ನೇಮಕ ಮಾಡಿಕೊಂಡಿತ್ತು. ಜಪಾನ್ ಸೈನಿಕರ ವಿರುದ್ದ ಭಾರತದ ಸೈನಿಕರು ಬ್ರಿಟೀಷ್ ಸರ್ಕಾರದ ಪರವಾಗಿ ಬರ್ಮಾದ ಅರಣ್ಯ ಪ್ರದೇಶದಲ್ಲಿ ಹೋರಾಡುತ್ತಿದ್ದ ಸಂದರ್ಭದಲ್ಲಿ ಅವರಿಗೆ ಮಾರ್ಗದರ್ಶಕನಾಗಿ ಅರಣ್ಯ ಪ್ರದೇಶದಲ್ಲಿ ಸೇವೆ ಸಲ್ಲಿಸಿದ ಖ್ಯಾತಿ ಜಿಮ್ ಕಾರ್ಬೆಟ್‍ನದು.
ಜಿಮ್ ಕಾರ್ಬೆಟ್ ನ ಈ ಎರಡು ಪ್ರತಿಭೆಗಳಿಗಿಂತ ಮಿಗಿಲಾಗಿ, ಭಾರತದ ಬಡವರ ಕುರಿತಂತೆ ಆತನಿಗಿದ್ದ ಪ್ರೀತಿ ಮತ್ತು ಅನುಕಂಪ ಹೊರಜಗತ್ತಿಗೆ ಅನಾವರಣಗೊಳ್ಳದೆ ಅನಾಮಿಕವಾಗಿ ಉಳಿದುಹೋಗಿದೆ. ಬಾಲ್ಯದ ಚಳಿಗಾಲದ ದಿನಗಳಲ್ಲಿ ತಾನು ವಾಸಿಸುತ್ತಿದ್ದ ಚೋಟಿ ಹಲ್ದಾನಿ ಹಳ್ಳಿಯ ಜನರೊಂದಿಗೆ ಉಂಟಾದ ನಿಕಟ ಸಂಪರ್ಕ, ಮುಂದೆ ಆತನ ಯವ್ವನದ ದಿನಗಳಲ್ಲಿ ರೈಲ್ವೆ ಇಲಾಖೆಯ ಉದ್ಯೋಗದಲ್ಲಿ ಇದ್ದಾಗ ಬಡವರನ್ನು ಅಪಾರವಾಗಿ ಪ್ರೀತಿಸುವಂತೆ ಮಾಡಿತು. ಸ್ಥಳಿಯ ಘಡ್ವಾಲ್ ಮತ್ತು ಹಿಂದಿ ಭಾಷೆಯನ್ನು ಅಸ್ಖಲಿತವಾಗಿ ಮಾತನಾಡುತ್ತಿದ್ದ ಜಿಮ್ ಕಾರ್ಬೆಟ್ ಯಾವಾಗಲೂ ಬ್ರಿಟೀಷ್ ಅಧಿಕಾರಿಗಳ ಜೊತೆ “ ಭಾರತದಲ್ಲಿ ಬಡತನವಿದೆ ನಿಜ ಆದರೆ ಇಲ್ಲಿನ ಬಡವರಲ್ಲಿ ಪ್ರಾಮಾಣಿಕತೆ ಮತ್ತು ಹೃದಯ ಶ್ರೀಮಂತಿಕೆ ಇದೆ” ಎಂದು ವಾದಿಸುತ್ತಿದ್ದ. ಆತನ ಹೃದಯ ಶ್ರೀಮಂತಿಕೆ ಎಂತಹದ್ದು ಎಂದರೆ, ಬ್ರಿಟೀಷ್ ಸರ್ಕಾರದಿಂದ ಚೋಟಿ ಹಲ್ದಾನಿಯ ಎರಡು ಸಾವಿರ ಎಕರೆ ಪ್ರದೇಶವನ್ನು ಎಕರೆಗೆ ಇಪ್ಪತ್ತು ರುಪಾಯಿನಂತೆ ಖರೀದಿಸಿ, ಅಲ್ಲಿನ ಜನರಿಗೆ ಜಾತಿ, ಧರ್ಮದ ತಾರತಮ್ಯವಿಲ್ಲದೆ ಸಮನಾಗಿ ಹಂಚಿದ ವ್ಯಕ್ತಿತ್ವ ಕಾರ್ಬೆಟ್‍ನದು.
ನೈನಿತಾಲ್ ಎಂಬ ಗಿರಿಧಾಮದಲ್ಲಿ ಕಾರ್ಬೆಟ್ ಜನಿಸಿದರೂ ಕೂಡ ತನ್ನ ಬದುಕಿನುದ್ದಕ್ಕೂ ಅವನು ಹಚ್ಚಿಕೊಂಡದ್ದು, ಸ್ಥಳೀಯ ಜನರನ್ನು ಮತ್ತು ಅರಣ್ಯವನ್ನು ಮಾತ್ರ. ಅವನ ವ್ಯಕ್ತಿತ್ವಕ್ಕೆ ಭಾರತದಲ್ಲಿ ಉದಾಹರಣೆ ನೀಡಬಹುದಾದ ಇನ್ನೊಂದು ಜೀವವೆಂದರೆ, ಅದು ಕೊಲ್ಕತ್ತಾ ನಗರದ ಬದುಕಿ ಬಾಳಿ ದಂತಕಥೆಯಾಗಿ ಹೋದ ಮದರ್ ತೆರೆಸಾ ಮಾತ್ರ. ಅಂತಹ ಮಾತೃ ಹೃದಯ ಆತನದು.


ಕಾರ್ಬೆಟ್ ಕುಟುಂಬ ನೈನಿತಾಲ್‍ನಲ್ಲಿ ವಾಸವಿತ್ತಾದರೂ, ಚಳಿಗಾಲದಲ್ಲಿ ಅಲ್ಲಿನ ಶೀತಗಾಳಿ ತಡೆಯಲಾರದೆ ಗಿರಿಧಾಮದ ತಪ್ಪಲಿನಲ್ಲಿ ಇದ್ದ ಚೋಟಿ ಹಲ್ದಾನಿ ಮತ್ತು ಕಲದೊಂಗಿ ಎಂಬ ಹಳ್ಳಿಗಳ ನಡುವೆ ಐದು ಎಕರೆ ಪ್ರದೇಶದಲ್ಲಿ ನಿರ್ಮಿಸಿಕೊಂಡಿದ್ದ ಮನೆಯಲ್ಲಿ ವಾಸ ಮಾಡುತ್ತಿತ್ತು. ನೈನಿತಾಲ್‍ನ ವಿಶಾಲವಾದ ಬಂಗಲೆಯಲ್ಲಿ ( ಗಾರ್ನಿಹೌಸ್) ಬಾಲ್ಯ ಕಳೆದು ಅಲ್ಲಿಯೇ ವಿದ್ಯಾಭ್ಯಾಸ ಮುಗಿಸಿದ ಕಾರ್ಬೆಟ್ ಆಗಿನ ಕಾಲದಲ್ಲಿ ಸುಲಭವಾಗಿ ಬ್ರಿಟೀಷರಿಗೆ ದೊರೆಯುತಿದ್ದ ಸರ್ಕಾರದ ಉದ್ಯೋಗಕ್ಕೆ ಮನಸ್ಸು ಮಾಡದೆ, ಅರಣ್ಯದÀತ್ತ ಮುಖಮಾಡಿದ. ಶಿಕಾರಿ ಎಂಬುದು ಅವನ ಪಾಲಿಗೆ ಉಸಿರಿನಷ್ಟೇ ಪ್ರಿಯವಾಗಿತ್ತು. ಒಮ್ಮೆ  ತನ್ನ ಮಧ್ಯ ವಯಸ್ಸಿನಲ್ಲಿ  ಅರಿಯದೆ, ಎರಡು ಮರಿಗಳಿಗೆ ಹಾಲುಣಿಸುತ್ತಾ ಮಲಗಿದ್ದ ಹೆಣ್ಣು ಚಿರತೆಗೆ ಗುಂಡಿಟ್ಟು ಕೊಂದು ನಂತರ ಪಶ್ಚಾತಾಪ ಪಟ್ಟ. ಅಂದಿನಿಂದ ಶಿಕಾರಿಗೆ ತಿಲಾಂಜಲಿ ನೀಡಿದ. ಆದರೆ, ಹಳ್ಳಿಗರಿಗೆ ಶಾಪವಾಗುತ್ತಿದ್ದ ಹುಲಿ ಮತ್ತು ಚಿರತೆಗಳನ್ನು ಮಾತ್ರ ಸರ್ಕಾರಗಳ ಮತ್ತು ಹಳ್ಳಿಗರ ಮನವಿಯ ಮೇರೆಗೆ ಭೇಟೆಯಾಡಿ ಕೊಲ್ಲುತ್ತಿದ್ದ. ಇದಕ್ಕಾಗಿ ಅವನು ಯಾವ ಸಂಭಾವನೆಯನ್ನೂ ಪಡೆಯುತ್ತಿರಲಿಲ್ಲ. ಅಂದಿನ ದಿನಗಳಲ್ಲಿ ನರ ಭಕ್ಷಕ ಪ್ರಾಣಿಗಳನ್ನು ಬೇಟೆಯಾಡಲು ಐದರಿಂದ ಹತ್ತು ಸಾವಿರ ಹಣವನ್ನು ಗೌರವ ಸಂಭಾವನೆಯಾಗಿ ಬ್ರಿಟೀಷ್ ಸರ್ಕಾರ ನೀಡುತ್ತಿತ್ತು. ಹೀಗೆ ಬಂದೂಕು ಬಿಟ್ಟು ಕ್ಯಾಮರಾ ಹಿಡಿದ ಕಾರ್ಬೆಟ್ ಜೀವನ ನಿರ್ವಹಣೆಗೆ ರೈಲ್ವೆ ಇಲಾಖೆಯಲ್ಲಿ ಗುತ್ತಿಗೆ ಮೆಲೆ ಕಾರ್ಮಿಕರನ್ನು ಒದಗಿಸುವ ಕಂಟ್ರಾಕ್ಟರ್ ಆಗಿ ನಂತ ರÉ್ರೈಲ್ವೆ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ. ಜೊತೆಗೆ ನೈನಿತಾಲ್ ಪಟ್ಟಣದಲ್ಲಿ ರಿಯಲ್ ಎಸ್ಟೇಟ್ ಹಾಗೂ ಕಟ್ಟಡ ಸಾಮಾಗ್ರಿ ವ್ಯವಹಾರವನ್ನು ಗೆಳೆಯನ ಜೊತೆ ನಡೆಸುತ್ತಿದ್ದ.
ತನ್ನ ಜೀವಿತದ ಕಡೆಯವರೆಗೂ ಅವಿವಾಹಿತನಾಗಿ ಉಳಿದ ಕಾರ್ಬೆಟ್ ಗೆ ತನ್ನ sಸಹೋದರಿ ಮಾರ್ಗರೇಟ್ (ಮ್ಯಾಗಿ) ಎಂದರೆ ಪ್ರಾಣ ಹಾಗಾಗಿ ಆಕೆಯೂ ಕೂಡ ವಿವಾಹವಾಗದೆ ಜೀವನಪೂರ್ತಿ ತಮ್ಮನ ಜೊತೆ ಉಳಿದಳು. ಈ ಇಬ್ಬರೂ ತಮ್ಮ ಭವಿಷ್ಯದ ಬಗ್ಗೆ ಕರಾರುವಕ್ಕಾದ ಯೋಜನೆಗಳನ್ನು ರೂಪಿಸಿಕೊಂಡು ಮುಂದುವರಿಯುತ್ತಿದ್ದರು. ಹಣ ಉಳಿತಾಯದ ಬಗ್ಗೆ ತುಂಬಾ ಎಚ್ಚರಿಕೆ ವಹಿಸುತ್ತಿದ್ದ ಅಕ್ಕ, ತಮ್ಮ ಇಬ್ಬರೂ  ಬಡವರ ಬಗ್ಗೆ ಮಾತ್ರ ತುಂಬಾ ಉಧಾರವಾಗಿ ನಡೆದುಕೊಳ್ಳುತಿದ್ದರು. ಅಂದಿನ ದಿನಗಳಲ್ಲಿ ಮಳೆ ಮತ್ತು ಚಳಿಗಾಲದಲ್ಲಿ ವಿಷಮಶೀತ ಜ್ವರದಿಂದ, ಮತ್ತು ಬೇಸಿಗೆಯಲ್ಲಿ ವಾಂತಿ ಬೇಧಿ, ಹಾವು ಮತ್ತು ಇನ್ನಿತರೆ ಅಪಾಯಕಾರಿ ಕ್ರಿಮಿ ಕೀಟಗಳು ಕಚ್ಚಿ ಜನ ಸಾಯುವುದು ಸಾಮಾನ್ಯವಾಗಿತ್ತು. ಕಾರ್ಬೆಟ್ ಕುಟುಂಬದಲ್ಲಿ ಅವನ ಮಲ ಸಹೋದರ ವೈದ್ಯನಾಗಿದ್ದುದು, ಜೊತೆಗೆ ಅವನ ಮನೆಯಲ್ಲಿ ವೈದ್ಯಕೀಯ ಚಿಕಿತ್ಸೆ ಕುರಿತಾದ ಅಪಾರ ಪುಸ್ತಕಗಳಿದ್ದ ಕಾರಣ ಅವರ ಬಳಿ ಸದಾ ಎಲ್ಲಾ ಬಗೆಯ ಔಷಧಗಳು ದೊರೆಯುತ್ತಿದ್ದವು. ಇದು ಅಲ್ಲಿನ ಸಾಮಾನ್ಯ ಜನತೆಯ ಪಾಲಿಗೆ ಸಂಜೀವಿನಿಯಾಗಿತ್ತು.
ಕಾರ್ಬೆಟ್‍ನ ತಂದೆ, ತಾಯಿಯ ಮರಣಾನಂತರ, ಸಹೋದರಿಯರು ಮದುವೆಯಾಗಿ, ಇನ್ನಿತರೆ ಸಹೋದರರು ಉದ್ಯೋಗ ಅರಸಿ ವಿದೇಶಕ್ಕೆ ಹೊರಟುಹೋದ ಮೇಲೆ, ನೈನಿತಾಲ್‍ನ ಗಾರ್ನಿಹೌಸ್ ಮನೆ ಮತ್ತು ಕಲದೊಂಗಿ ಹಾಗೂ ಚೋಟಿ ಹಲ್ದಾನಿ ನಡುವೆ ಇದ್ದ ಬಂಗಲೆಗಳು ಅವಿವಾಹಿತರಾಗಿ  ಭಾರತದಲ್ಲಿ  ನೆಲೆಸಿದ ಕಾರ್ಬೆಟ್ ಹಾಗೂ ಅವನ ಅಕ್ಕ ಮಾರ್ಗರೇಟ್ ಳ ಪಾಲಿಗೆ ಬಂದಿದ್ದವು. ಹಾಗಾಗಿ ಈ ಎರಡು ಮನೆಗಳು ಹಳ್ಳಿಗರ ಪಾಲಿಗೆ ಆಸ್ಪತ್ರೆಗಳಾದವು. ಹಾವು ಕಡಿತ ಅಥವಾ ವಾಂತಿ ಬೇಧಿ, ಇಲ್ಲವೆ ಜ್ವರ ಹೀಗೆ ಚಿಕಿತ್ಸೆ ಬಯಸಿ ಬಂದವರಿಗೆ ಅಕ್ಕ ತಮ್ಮ ಪ್ರೀತಿಯಿಂದ ಉಪಚರಿಸುತ್ತಿದ್ದರು. ಎಷ್ಟೋ ವೇಳೆ ವಾರಗಟ್ಟಲೆ ತಮ್ಮ ಮನೆಯ ಜಗುಲಿಯಲ್ಲಿ ಆಶ್ರಯ ನೀಡಿ ರೋಗಿಗಳು ಚೇತರಿಸಿಕೊಂಡ ಮೇಲೆ ಅವರನ್ನು ಮನೆಗೆ ಕಳಿಸುತ್ತಿದ್ದರು. ಇವರಿಗೆ ಸ್ಥಳೀಯರ ಬಗ್ಗೆ  ಅದೆಂತಹ ಅದಮ್ಯ ಪ್ರೀತಿ ಇತ್ತೆಂದರೆ, ಕಾರ್ಬೆಟ್ ಕಾಡು ಪ್ರಾಣಿಗಳಿಂದ ತನ್ನ ಹಳ್ಳಿಯ ಜನ ಹಾಗೂ ಅವರ ಬೆಳೆಗಳನ್ನು ರಕ್ಷಿಸಲು ತನ್ನ ಸ್ವಂತ ಖರ್ಚಿನಿಂದ ಇಡೀ ಹಳ್ಳಿಗೆ ನಾಲ್ಕು ಅಡಿ ದಪ್ಪ ಹಾಗೂ ಆರು ಅಡಿ ಎತ್ತರದ ಕಲ್ಲಿನ  ಗೋಡೆಯನ್ನು ಕಟ್ಟಿಸಿಕೊಟ್ಟಿದ್ದನು. ಈ ಗೋಡೆಯ ಸುತ್ತಳತೆ ಸುಮಾರು ಒಂದೂವರೆ ಕಿಲೋಮೀಟರ್ ಉದ್ದವಿತ್ತು. ( ಈ ಕಲ್ಲಿನ ಗೋಡೆ ಈಗಲೂ ಸಹ ಅಸ್ತಿತ್ವದಲ್ಲಿದೆ)
ಇದಲ್ಲದೆ ಪ್ರತಿವರ್ಷ ಹಳ್ಳಿಯಲ್ಲಿ ನಡೆಯುತ್ತಿದ್ದ ಬೈಸಾಕಿ ಮತ್ತು ಹೋಳಿ ಹಬ್ಬದಲ್ಲಿ  ಅಕ್ಕ ತಮ್ಮ ಇಬ್ಬರೂ ಪಾಲ್ಗೊಳ್ಳುತ್ತಿದ್ದರು. ತಮ್ಮ ಮನೆಯಲ್ಲಿ ಆಚರಿಸುತ್ತಿದ್ದ ಕ್ರಿಸ್‍ಮಸ್ ಹಬ್ಬಕ್ಕೆ ಹಳ್ಳಿಯ ಜನರೆಲ್ಲರನ್ನು ಕರೆಸುತ್ತಿದ್ದರು. ಅವರಿಗೆ ಬಡವ ಬಲ್ಲಿದ. ಜಾತಿ, ಧರ್ಮ ಇವುಗಳ ಬಗ್ಗೆ ಬೇಧವಿರಲಿಲ್ಲ.


                                      ( ರುದ್ರ ಪ್ರಯಾಗದ ನರಭಕ್ಷಕ ಚಿರತೆಯನ್ನು ಜಿಮ್ ಕಾರ್ಬೆಟ್ ಕೊಂದ ಸ್ಥಳ)


ಸ್ವಾತಂತ್ರ ಪೂರ್ವ ಭಾರತದ ಎಲ್ಲಾ ಬ್ರಿಟೀಷ್ ವೈಸ್‍ರಾಯ್‍ಗಳ ಜೊತೆ ಜಿಮ್ ಕಾರ್ಬೆಟ್ ಒಳ್ಳೆಯ ಸಂಬಂಧ ಹೊಂದಿದ್ದ.  ಅವರುಗಳು ಬೇಸಿಗೆಯಲ್ಲಿ ಮಸ್ಸೂರಿ ಅಥವಾ ನೈನಿತಾಲ್ ಗಿರಿಧಾಮಗಳಿಗೆ ಬಂದಾಗ ತಪ್ಪದೇ
ಚೋಟಿ ಹಲ್ದಾನಿಯಲ್ಲಿದ್ದ ಕಾರ್ಬೆಟ್ ಮನೆಗೆ ಬೇಟಿ ನೀಡುತಿದ್ದರು. ಈ ಸಮಯದಲ್ಲಿ ವೈಸ್‍ರಾಯ್‍ಗಳಿಗೆ ಹಳ್ಳಿಗರನ್ನು ಬೇಟಿ ಮಾಡಿಸಿ ಚಹಾ ಕೂಟ ಏರ್ಪಡಿಸುತ್ತಿದ್ದ. ಇಂದಿಗೂ ಸಹ ಅಲ್ಲಿನ ಮನೆಗಳಲ್ಲಿ  ಅಪರೂಪದ  ಕಪ್ಪು ಬಿಳುಪು ಫೋಟೊಗಳನ್ನು ನೋಡಬಹುದು. ಇಂತಹ ಒಂದು ಅನನ್ಯ ಪ್ರೀತಿಯ ಕಾರಣ ಅಲ್ಲಿನ ಜನ ಕಾರ್ಬೆಟ್‍ನನ್ನು ನಡೆದಾಡುವ ದೇವರು ಎಂದು ನಂಬಿದ್ದರು.  ಅಲ್ಲಿನ ಹಳ್ಳಿಗಳಲ್ಲಿ ಇವೊತ್ತಿಗೂ ಒಂದು ನಂಬಿಕೆ ಜೀವಂತವಾಗಿದೆ. ಅವರನ್ನು ಕಾಡು ಪ್ರಾಣಿಗಳಿಂದ ರಕ್ಷಿಸುತ್ತಿರುವವರು ಹನುಮಾನ್ ಮತ್ತು ಕಾರ್ಪೆಟ್ ಸಾಹೇಬ್ ಎಂದು ನಂಬಿದ್ದಾರೆ.  ಅರ್ಧ ಶತಮಾನ ಕಳೆದರೂ ಕಾರ್ಬೆಟ್‍ನನ್ನು ನೋಡದ, ಕೇಳದ, ಈಗಿನ ತಲೆಮಾರು ಸಹ ಆತನನ್ನು ಮರೆತಿಲ್ಲ. ಕಲದೊಂಗಿ, ಚೋಟಿಹಲ್ದಾನಿ ಮತ್ತು ರಾಮನಗರ ಎಂಬ ಪಟ್ಟಣದಲ್ಲಿ ಕಾರ್ಬೆಟ್  ಹೆಸರಿನಲ್ಲಿ ಹೋಟೆಲ್, ಸೇವಿಂಗ್‍ಸೆಲೂನ್, ಟೈಲರಿಂಗ್ ಶಾಪ್ ಹಾಗೂ ಹೊಸದಾಗಿ ತಲೆ ಎತ್ತಿರುವ ಬಡಾವಣೆಗಳನ್ನು ಕಾಣಬಹುದು. ಇದು ನಮ್ಮ ಗ್ರಾಮ ಸಂಸ್ಕøತಿಯ ಜನ ತಮಗೆ ನೆರವಾದ ಒಬ್ಬ ಹೃದಯವಂತನನ್ನು ನೆನೆಯುತ್ತಿರುವ ಪರಿಗೆ ಸಾಕ್ಷಿಯಾಗಿದೆ.. ಆದರೆ ಇದೇ ಮಾತನ್ನು ನೈನಿತಾಲ್ ಗಿರಿಧಾಮದ ಪಟ್ಟಣಕ್ಕೆ ಅನ್ವಯಿಸಲಾಗದು.
ನೈನಿತಾಲ್ ಪಟ್ಟಣದ ಪುರಸಭೆಯ ಸದಸ್ಯನಾಗಿ, ನಂತರ ಉಪಾಧ್ಯಕ್ಷನಾಗಿ ಅದಕ್ಕೊಂದು ಸುಂದರ ಕಟ್ಟಡ ನಿರ್ಮಾಣ ಮಾಡಿದುದಲ್ಲದೆ ಭಾರತದಲ್ಲಿ ಪ್ರಪ್ರಥಮವಾಗಿ ಒಳಚರಂಡಿ ವ್ಯವಸ್ಥೆ ಕಲ್ಪಿಸಿದ ಕೀರ್ತಿ ಜಿಮ್ ಕಾರ್ಬೆಟ್‍ನದು. ಇಂತಹ ವ್ಯಕ್ತಿಯ ಬಗ್ಗೆ ಪುರಸಭೆಯಲ್ಲಿ ಇಂದು ಯಾವುದೇ ಮಾಹಿತಿ ಇಲ್ಲ, ಅಷ್ಟೇ ಏಕೆ? ಕಾರ್ಬೆಟ್ ಅಂದರೆ ಯಾರು ಎಂದು ಅಲ್ಲಿನ ಸಿಬ್ಬಂದಿ ನಮ್ಮನ್ನೇ ಕೇಳುತ್ತಾರೆ. ಇದು ಅವರ ತಪ್ಪಲ್ಲ ಏಕೆಂದರೆ ಈಗ ನೈನಿತಾಲ್‍ನಲ್ಲಿ ಇರುವುದು ಮೂರು ವರ್ಗದ ಜನ, ಒಂದು ನಿವೃತ್ತ ಸೇನಾಧಿಕಾರಿಗಳು ಮತ್ತು ಭಾರತದ ಪ್ರಸಿದ್ಧ ಕೈಗಾರಿಕೋದ್ಯಮಿಗಳು ಹಾಗೂ ಅವರ ಬೃಹತ್ ತೋಟದ ಮನೆಗಳು. ಇನ್ನೊಂದು ಸರ್ಕಾರಿ ಸಿಬ್ಬಂದಿ, ಮಗದೊಂದು ಪ್ರವಾಸೋದ್ಯಮವನ್ನು ನಂಬಿಕೊಂಡಿರುವ ಮಧ್ಯಮ ವರ್ಗದ ಜನ ಹಾಗಾಗಿ ಯಾರಿಗೂ ನೈನಿತಾಲ್ ಇತಿಹಾಸದ ಬಗ್ಗೆ ಯಾವುದೇ ಆಸಕ್ತಿ ಇಲ್ಲವಾಗಿದೆ.
  


 ತನ್ನ ಸಹೋದರಿಯೊಂದಿಗೆ ಚೋಟಿ ಹಲ್ದಾನಿಯ ಮನೆಯಲ್ಲಿ ಹಳ್ಳಿಯ ಯಜಮಾನನಂತೆ ಬದುಕಿದ ಜಿಮ್ ಕಾರ್ಬೆಟ್, 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದಾಗ, ಬ್ರಿಟೀಷರ ಮೇಲೆ ದಾಳಿಯಾಗಬಹುದೆಂದು ಹೆದರಿ, ಜೀವಭಯದೊಂದಿಗೆ ದೇಶವನ್ನು ತೊರೆದ. ತಾನು ಬದುಕಿದ ಹಳ್ಳಿಯ ಜನರಿಗೆ ನೋವಾಗಬಾರದೆಂದು ಗುಟ್ಟಾಗಿ, ಚಿರಂಜಿಲಾಲ್ ಷಾ ಎಂಬ ವ್ಯಾಪಾರಿಗೆ ಮನೆಯನ್ನು ಮಾರಾಟ ಮಾಡಿ,  ಇಂಗ್ಲೆಂಡ್ ಗೆ ಹೊಗಿ ಬರುತ್ತೀನಿ  ಸುಳ್ಳು ಹೇಳುವುದರ ತಾನು ಹುಟ್ಟಿ ಬೆಳೆದ ನೆಲಕ್ಕೆ ವಿದಾಯ ಹೇಳಿದ. ಹಳ್ಳಿಗರಿಗೆ ನಂಬಿಕೆ ಬರುವಂತೆ ಪ್ರತಿ ವರ್ಷ ತಾನೇ ಸ್ವತಃ ಭೂಮಿಯ ಕಂದಾಯವನ್ನು ಭಾರತ ಸರ್ಕಾರಕ್ಕೆ ಪಾವತಿಸುತ್ತಿದ್ದ. ಕಾರ್ಬೆಟ್ ನಿಧನಾನಂತರ ಅವನ ಸಹೋದರಿ ಮಾರ್ಗರೇಟ್, ಭಾರತ ಸರ್ಕಾರಕ್ಕೆ ಪತ್ರ ಬರೆದು ಜಮೀನಿನ ಹಕ್ಕುದಾರಿಕೆಯನ್ನು ಗ್ರಾಮಸ್ಥರಿಗೆ ವರ್ಗಾಯಿಸಿದಳು. 1965 ರಲ್ಲಿ ಭಾರತ ಸರ್ಕಾರ ಕಾರ್ಬೆಟ್ ವಾಸಿಸುತ್ತಿದ್ದ ಮನೆಯನ್ನು ವ್ಯಾಪಾರಿಯಿಂದ ಮತ್ತೆ ಇಪ್ಪತ್ತು ಸಾವಿರ ರುಪಾಯಿಗಳಿಗೆ ಖರೀದಿಸಿ, ಅದನ್ನು ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಿತು. ಈಗ ಚೋಟಿ ಹಲ್ದಾನಿ ಗ್ರಾಮಸ್ಥರ ಸುಪರ್ಧಿಯಲ್ಲಿರುವ  ಈ ಮನೆಯಲ್ಲಿ  ಜಿಮ್ ಕಾರ್ಬೆಟ್ ಉಪಯೋಗಿಸುತ್ತಿದ್ದ, ಕುರ್ಚಿ ಮೇಜು, ಬಂದೂಕ, ಶಿಕಾರಿಗೆ ಬಳಸುತ್ತಿದ್ದ ಟಾರ್ಚ್, ಆತನ ಖಾಕಿ ಉಡುಗೆ ತೊಡುಗೆ, ಇವುಗಳನ್ನು ಜೋಪಾನವಾಗಿರಿಸಲಾಗಿದೆ. ಸ್ಥಳಿಯರ ಭಾಷೆಯಲ್ಲಿ ಕಾರ್ಪೆಟ್ ಸಾಹೇಬ್ ಎಂದು ಕರೆಸಿಕೊಳ್ಳುತ್ತಿದ್ದ ಜಿಮ್ ಕಾರ್ಬೆಟ್ ಇವೊತ್ತಿಗೂ ಅವರ ಪಾಲಿಗೆ ದೇವರಾಗಿದ್ದರೆ, ಆತ ವಾಸಿಸುತ್ತಿದ್ದ ಬಂಗಲೆ ದೇಗುಲವಾಗಿದೆ.
( 18-5-2014 ರ ವಿಜಯವಾಣಿ ಸಾಪ್ತಾಹಿಕದಲ್ಲಿ " ಬೇಟೆಗಾರನ ಮಾನವೀಯ ಮುಖ" ಹೆಸರಿನಲ್ಲಿ ಪ್ರಕಟವಾದ ಲೇಖನ.)

ಬುಧವಾರ, ಮೇ 7, 2014

ಎಸ್.ಎಂ. ಕೃಷ್ಣ ಹೇಳಿದ ಅಂಬೇಡ್ಕರ್ ಕಥನ


ಕಳೆದ ಮೇ ಎರಡರಂದು ಶುಕ್ರವಾರ ನನ್ನ ಸಂಬಂಧಿಕರ ಮಗಳೊಬ್ಬಳ ವಿವಾಹದ ಸಲುವಾಗಿ ಬೆಂಗಳೂರು ನಗರದಲ್ಲಿದ್ದೆ.  ಆ ದಿನ ಸಂಜೆ ಬಹಳ ದಿನಗಳ ನಂತರ ಸದಾಶಿವ ನಗರದಲ್ಲಿರುವ ಎಸ್.ಎಂ. ಕೃಷ್ಣ ಅವರ ಮನೆಗೆ ತೆರಳಿ ಅವರನ್ನು ಬೇಟಿ ಮಾಡಿದೆ. ಮೇ ಒಂದರಂದು 83 ನೇ ವರ್ಷಕ್ಕೆ ಕಾಲಿಟ್ಟ ಎಸ್.ಎಂ. ಕೃಷ್ಣ ಅವರ ಜೀವನ ಮತ್ತು ಸಾಧನೆಗಳ ಕುರಿತಂತೆ  ನಿವೃತ್ತ ಸುಪ್ರಿಂಕೋರ್ಟ್ ನ್ಯಾಯಮೂರ್ತಿ ಎನ್,ವೆಂಕಟಾಚಲಯ್ಯ ಮತ್ತು ದೇ.ಜ.ಗೌ.ಇವರ ನೇತೃತ್ವದಲ್ಲಿ ಸುಮಾರು ಒಂದು ಸಾವಿರ ಪುಟಗಳ, ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಕೃತಿಗಳು ಸಿದ್ಧವಾಗುತ್ತಿವೆ. ಹಸ್ತ ಪ್ರತಿಯನ್ನು ನೋಡುವುದು ಮತ್ತು ಅವುಗಳ  ಕುರಿತು  ಕೃಷ್ಣ ಅವರ ಜೊತೆ ಮಾತನಾಡುವುದು ನನ್ನ ಉದ್ದೇಶವಾಗಿತ್ತು. ಆ ದಿನ ಸಂಜೆ ಏಳುಗಂಟೆಯಿಂದ ರಾತ್ರಿ ಒಂಬತ್ತು ಗಂಟೆಯವರೆಗೆ ನನ್ನೊಂದಿಗೆ ಏಕಾಂತದಲ್ಲಿ ಕುಳಿತ ಎಸ್.ಎಂ. ಕೃಷ್ಣ ಅವರು, ತಮ್ಮ ಬಾಲ್ಯದ  ಬದುಕಿನ ಹಲವಾರು ನೆನಪುಗಳನ್ನು ನನ್ನೊಂದಿಗೆ ಹಂಚಿಕೊಂಡರು.  ಇದಕ್ಕೆ ಪ್ರಮುಖವಾದ ಕಾರಣವೂ ಇತ್ತು..
ಮಂಡ್ಯ ಜಿಲ್ಲೆಯ ಇತಿಹಾಸ ಕುರಿತ  “ಸಿರಿನಾಡು” ಎಂಬ ಕೃತಿ ಹಾಗೂ ಅವರ ತಂದೆಯವರಾದ ಎಸ್. ಸಿ. ಮಲ್ಲಯ್ಯನವರನ್ನು  ಕುರಿತು ಮುವತ್ತು ಪುಟಗಳ “ ನೆಲದ ಸಿರಿ” ಎಂಬ ಪುಟ್ಟ ಕೃತಿಯೊಂದನ್ನು ರಚಿಸಿದ್ದ ನನಗೆ, ಅವರ ತಂದೆಯವರಿಗಿದ್ದ ಪ್ರಗತಿ ಪರ ಆಲೋಚನಾಕ್ರಮಗಳು  ಸೋಜಿಗವಾಗಿ, ವಿಸ್ಮಯದ ಸಂಗತಿಗಳಾಗಿ ಉಳಿದುಬಿಟ್ಟಿವೆ. ಹಾಗಾಗಿ  ಎಸ್.ಎಂ. ಕೃಷ್ಣರವರನ್ನು ಬೇಟಿಯಾದಾಗಲೆಲ್ಲಾ ಅವರ ತಂದೆಯವರ ಬಗ್ಗೆ  ಚರ್ಚಿಸುವುದು ನನಗೆ ಇಷ್ಟವಾದ ಸಂಗತಿ.
ಸೋಮನಹಳ್ಳಿ ಚಿಕ್ಕೇಗೌಡ ಮಲ್ಲಯ್ಯ ಎಂಬ ಹೆಸರಿನ ಎಸ್.ಕೃಷ್ಣ ಅವರ ತಂದೆಯವರು ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಪ್ರಾಂತ್ಯದಲ್ಲಿ ಅಸ್ತಿತ್ವದಲ್ಲಿದ್ದ ಪ್ರಜಾಪ್ರತಿನಿಧಿಗಳ ಸಭೆಗೆ ಸದಸ್ಯರಾಗಿದ್ದವರು. ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಜಾಪ್ರತಿನಿಧಿ ಸಭೆಗೆ ಸ್ಪರ್ಧಿಸಬೇಕಾದರೆ, ಅಥವಾ ಮತ ಚಲಾವಣೆ ಮಾಡಬೇಕಾದರೆ, ಪದವೀಧರರಾಗಿರಬೇಕು, ಇಲ್ಲವೇ ಮೈಸೂರು ಸಂಸ್ಥಾನಕ್ಕೆ ವಾರ್ಷಿಕ ವಾಗಿ ಹನ್ನೆರೆಡು ರೂಪಾಯಿ ತೆರಿಗೆ ಕಟ್ಟುವ ವ್ಯಾಪಾರಸ್ಥ ಅಥವಾ ಜಮೀನ್ದಾರನಾಗಿರಬೇಕಿತ್ತು. ಮದ್ದೂರು ತಾಲ್ಲೋಕಿನ ಸೋಮನಹಳ್ಳಿಯ ಜಮೀನ್ದಾರರ ಕುಟುಂಬವಾದ ಚಿಕ್ಕೇಗೌಡ ಮತ್ತು ಅವರ ಮಗ ಮಲ್ಲಯ್ಯ ಅವರಿಗೆ ಈ ಅರ್ಹತೆಯಿತ್ತು. ಹಾಗಾಗಿ ಮೈಸೂರು ಪ್ರಜಾಪ್ರತಿನಿಧಿಯ ಸಭೆಯ ಸದಸ್ಯರಾಗಿ  ಆಯ್ಕೆಯಾದ ಮಲ್ಲಯ್ಯನವರು ಮದ್ದೂರು ಮತ್ತು ಮಂಡ್ಯತಾಲ್ಲೂಕಿನಲ್ಲಿ  ಮಾಡಿದ ಅನೇಕ ಅಭಿವೃದ್ಧಿ ಕೆಲಸಗಳು ಇಂದಿಗೂ ಸಾಕ್ಷಿಯಾಗಿ ನಮ್ಮೆದುರು ನಿಂತಿವೆ. ಹಣಕಾಸಿನ  ಕೊರತೆಯ ಕಾರಣದಿಂದಾಗಿ ಮದ್ದೂರು ತಾಲ್ಲೂಕಿನ ಹಳ್ಳಿಗಳಲ್ಲಿ ಪಶು ವೈದ್ಯಕೀಯ ಶಾಲೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲು ಮೈಸೂರು ಸಂಸ್ಥಾನದ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹಿಂದೇಟು ಹಾಕಿದ ಸಂದರ್ಭದಲ್ಲಿ , ತಮ್ಮ ಗೆಳೆಯರ ಮನವೊಲಿಸಿ, ಹಲವಾರು ಹಳ್ಳಿಗಳಲ್ಲಿ ಕಟ್ಟಡಗಳನ್ನು ಉಚಿತವಾಗಿ ಸರ್ಕಾರಕ್ಕೆ ಕೊಡಿಸಿದ ಕೀರ್ತಿ ಮಲ್ಲಯ್ಯನವರದು. ಇಂದಿಗೂ ಸಹ ನನ್ನೂರಾದ ಕೊಪ್ಪದಲ್ಲಿ ಚಿಕ್ಕೇಗೌಡ ಪಶು ವೈದ್ಯಶಾಲೆ ಮತ್ತು ಕಾಳೇಗೌಡ ಆಸ್ಪತ್ರೆ ಎಂಬ ಹೆಸರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇವುಗಳು ಕಾರ್ಯನಿರ್ವಹಿಸುತ್ತಿವೆ. ಕೊಪ್ಪ ಗ್ರಾಮದ ಚಿಕ್ಕೇಗೌಡ ಎಂಬುವರು ಮತ್ತು ಪಕ್ಕದ ಅವ್ವೇರಹಳ್ಳಿ ಗ್ರಾಮದ ಕಾಳೆಗೌಡ ಎಂಬುವರು ಆಸ್ಪತ್ರೆಗಳಿಗಾಗಿ ಉಚಿತವಾಗಿ ಜಮೀನು ಮತ್ತು ಕಟ್ಟಡಗಳನ್ನು ನೀಡಿದ್ದರು. ಇಂತಹ ಅನೇಕ ಕಟ್ಟಡಗಳನ್ನು ಮದ್ದೂರು ತಾಲ್ಲೂಕಿನಾದ್ಯಂತ ನಾವು ಇಂದಿಗೂ  ನೋಡಬಹುದಾಗಿದೆ. ಇವರಿಂದ ಸ್ಪೂರ್ತಿಗೊಂಡಿದ್ದ ಮಾಜಿ ಸಂಸದ ಜಿ. ಮಾದೇಗೌಡರು ಇಪ್ಪತ್ತೈದು ವರ್ಷಗಳ ಹಿಂದೆ ತಮ್ಮ ಹುಟ್ಟೂರಾದ ಮದ್ದೂರು ತಾಲ್ಲೂಕಿನ ಗುರುದೇವರಹಳ್ಳಿಯಲ್ಲಿ ತಾವು ಹುಟ್ಟಿದ ಮನೆಯನ್ನು ಸರ್ಕಾರಕ್ಕೆ ತಮ್ಮ ತಾಯಿಯ ಹೆಸರಿನಲ್ಲಿ ದಾನ ಮಾಡಿದ್ದು, ಗುರುದೇವರಹಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಯನಿರ್ವಹಿಸುತ್ತಿದೆ.
                                                   ಎಸ್.ಸಿ. ಮಲ್ಲಯ್ಯನವರು

ಆ ಕಾಲದ ಎಲ್.ಎಸ್. ಎಂದು ಕರೆಸಿಕೊಳ್ಳುತ್ತಿದ್ದ ಏಳನೇಯ ತರಗತಿಯವರಿಗೆ ಓದಿದ್ದ ಮಲ್ಲಯ್ಯನವರೊಳಗೆ ಮನೆ ಮಾಡಿದ್ದ ಸಾಮಾಜಿಕ ಸುಧಾರಣೆಯ ಕನಸುಗಳು ನಿಜಕ್ಕೂ ನಮ್ಮಲ್ಲಿ ಆಶ್ಚರ್ಯ ಮೂಡಿಸುತ್ತವೆ.. 1930 ದಶಕದಲ್ಲಿ ಹಳ್ಳಿಮಕ್ಕಳ ವಿದ್ಯಾಬ್ಯಾಸಕ್ಕಾಗಿ ತಮ್ಮೂರಿನಲ್ಲಿ “ಒಕ್ಕಲಿಗರ ವಸತಿ ನಿಲಯ” ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದ ಅವರು  ಹಳ್ಳಿಯ ಮಕ್ಕಳಿಗೆ ಜಾತಿ ಬೇಧವಿಲ್ಲದೆ ಉಚಿತ ಶಿಕ್ಷಣ ನೀಡುತ್ತಿದ್ದರು. ಸಮೀಪದ ಕೋಲೂರಿನ ವೆಂಕಟಯ್ಯ ಎಂಬ ದಲಿತ ವಿದ್ಯಾರ್ಥಿಗೆ ಮತ್ತು ನಿಡಗಟ್ಟದ ಕಾಳಯ್ಯ ಎಂಬ ಮತ್ತೊಬ್ಬ ಅಂಧ ದಲಿತ ವಿದ್ಯಾರ್ಥಿಗೆ ಹಾಸ್ಟಲ್ ನಲ್ಲಿ ಅವಕಾಶ ಕಲ್ಪಿಸಿ, ಸಾಮೂಹಿಕ ಭೋಜನ ಮತ್ತು ಸಾಮೂಹಿಕ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಕಾಳಯ್ಯ ಅಂಧ ವಿದ್ಯಾರ್ಥಿಯನ್ನು ಮೈಸೂರಿಗೆ ಕರೆದುಕೊಂಡು ಹೋಗಿ, ಅವನಿಗೆ,  ಸಂಗೀತದ ಶಿಕ್ಷಣ ಕೊಡಿಸಿದ ಅಪರೂಪದ ಹೃದಯವಂತಿಕೆ ಎಸ್.ಸಿ. ಮಲ್ಲಯ್ಯನವರದು.
1934 ರಲ್ಲಿ ಅಂದಿನ ಮೈಸೂರು ರಾಜ್ಯಕ್ಕೆ ಬೇಟಿ ನೀಡಿದ ಗಾಂಧೀಜಿಯವರು ಬೆಂಗಳೂರಿನಿಂದ ಮೈಸೂರಿಗೆ ಕಾರಿನಲ್ಲಿ ತೆರಳುವಾಗ ಮಾರ್ಗ ಮಧ್ಯೆ ರಸ್ತೆಯ ಪಕ್ಕದಲ್ಲಿರುವ ಸೋಮನಹಳ್ಳಿಯ ಮಲ್ಲಯ್ಯನವರ ಮನೆಗೆ ಮತ್ತು ವಿದ್ಯಾರ್ಥಿ ನಿಲಯಕ್ಕೆ ಬೇಟಿ ನೀಡಿದ್ದರು. ವಸತಿ ನಿಲಯದಲ್ಲಿ ಇಬ್ಬರು ಹರಿಜನ ವಿದ್ಯಾರ್ಥಿಗಳು ಇರುವುದನ್ನು ಕಂಡು ಸೋಜಿಗ ಪಟ್ಟಿದ್ದರು. ಹರಿಜನ ಫಂಡ್ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿದ್ದ ಗಾಂಧೀಜಿಯವರ ಜೋಳಿಗೆಗೆ ಮಲ್ಲಯ್ಯನವರು ತಮ್ಮ ಪುತ್ರ ಬಾಲಕನಾಗಿದ್ದ ಎಸ್.ಎಂ. ಕೃಷ್ಣ ಮೂಲಕ ಎರಡು ರೂಪಾಯಿ ಕಾಣಿಕೆ ನೀಡಲು ಹೋದಾಗ, ಗಾಂಧೀಜಿಯವರಿಗೆ ಎಸ್.ಎಂ.ಕೃಷ್ಣ  ಅವರ ಕಿವಿಯಲ್ಲಿದ್ದ ಓಲೆಗಳ ಮೇಲೆ ಕಣ್ಣು ಬಿತ್ತು. ಆಗ ಗಾಂಧಿಜಿಯವರು ಮಲ್ಲಯ್ಯನವರನ್ನು ಉದ್ದೇಶಿಸಿ ನನಗೆ ಹಣ ಬೇಡ, ನಿಮ್ಮ ಮಗನ ಕಿವಿಯಲ್ಲಿರುವ ಓಲೆಗಳು ಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದರು. ಗಾಂಧೀಜಿಯವರ ಮಾತನ್ನು ಗಂಭೀರವಾಗಿ ತೆಗೆದುಕೊಂಡ ಮಲ್ಲಯ್ಯನವರು ಕೂಡಲೇ ಮಗನ ಕಿವಿಯಲ್ಲಿದ್ದ ಓಲೆಗಳನ್ನು ಬಿಚ್ಚಿ ಎರಡು ರೂಪಾಯಿ ಹಣದ ಜೊತೆ ಓಲೆಗಳನ್ನು ಹರಿಜನ ಫಂಡ್ ಗೆ ಧಾನ ನೀಡಿದರು. ಈ ವಿಷಯ ಅಂದಿನ “ದ ಹಿಂದು” ಇಂಗ್ಲೀಷ್ ದಿನಪತ್ರಿಕೆಯಲ್ಲಿ ಮುಖಪುಟದ ಸುದ್ಧಿಯಾಗಿ ಚಿತ್ರ ಸಮೇತ ದಕ್ಷಿಣ ಭಾರತದಾತ್ಯಂತ ಪ್ರಕಟವಾಗಿತ್ತು. ( ಇಂದಿಗೂ ಈ ಚಿತ್ರವನ್ನು ಎಸ್, ಎಂ. ಕೃಷ್ಣ ಅವರ ಮನೆಯಲ್ಲಿ ನೋಡಬಹುದು)ಸ್ವಾತಂತ್ರ್ಯ ಪೂರ್ವದ ಮಂಡ್ಯ ಜಿಲ್ಲೆಯಲ್ಲಿನ ಇಂತಹ ಹಲವಾರು ಸಂಗತಿಗಳು  ಜಾತಿ, ಧರ್ಮವನ್ನು ಮೀರಿ ಘಟಿಸಿರುವುದು ನಿಜಕ್ಕೂ ಸೋಜಿಗದ ವಿಷಯ. 1938 ರಲ್ಲಿ ಮದ್ದೂರು ಬಳಿಯ ಶಿವಪುರದಲ್ಲಿ ಧ್ವಜ ಸತ್ಯಾಗ್ರಹ ನಡೆದ ಸಂದರ್ಭದಲ್ಲಿ ಹೋರಾಟಕ್ಕೆ ಮಾರ್ಗದರ್ಶನ ಮಾಡಲು ಬಂದ ಸಿದ್ಧಲಿಂಗಯ್ಯ ಮತ್ತು ಉತ್ತರ ಕರ್ನಾಟಕದ ಲಿಂಗಾಯತ ನಾಯಕರು ಹಾಗೂ ಸ್ಥಳೀಯ ಎಂ.ಎನ್. ಜೋಯಿಸ್ ಮತ್ತು ವೀರಕೇಸರಿ ಸೀತಾರಾಮಶಾಸ್ತ್ರಿ ಎಂಬ ಬ್ರಾಹ್ಮಣ ನಾಯಕರು ಇವರೆಲ್ಲರೂ ಮದ್ದೂರು ತಾಲ್ಲೂಕಿನ ಒಕ್ಕಲಿಗ ಮತ್ತು ದಲಿತ ನಾಯಕರು ಸಿದ್ಧಪಡಿಸಿದ ಆಹಾರವನ್ನು ಸಾಮೂಹಿಕ ಭೋಜನ ಕೂಟದಲ್ಲಿ ನಿರಂತರ ಹದಿನೈದು ದಿನಗಳ ಕಾಲ ಸ್ವೀಕರಿಸಿದ್ದರು. ಮಳವಳ್ಳಿಯ ಸುಬ್ಬೇಗೌಡ ಎಂಬ ಸ್ವಾತಂತ್ರ್ಯ ಹೋರಾಟಗಾರರು, ತಮ್ಮೂರಿನಲ್ಲಿದ್ದ ಕುನ್ನೀರು ಕಟ್ಟೆ ಎಂಬ ಕೆರೆಗೆ ನೂರಾರು ಹರಿಜನರನ್ನು ಕರೆದೊಯ್ದು ನೀರು ಕುಡಿಸುವುದರ ಮೂಲಕ ಉಸಿರಾಡುವ ಗಾಳಿ ಮತ್ತು ಕುಡಿಯುವ ನೀರಿಗೆ ಜಾತಿಯ ಸೋಂಕಿಲ್ಲ ಎಂದು ಪ್ರತಿಪ್ರಾದಿಸಿದ್ದರು. ಇದರ ಜೊತೆಗೆ ಮಂಡ್ಯ ನಗರದಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರವಿರುವ  ಹೊನಗಾನಹಳ್ಳಿ ಎಂಬ ಗ್ರಾಮದಲ್ಲಿ ಪುಟ್ಟಣ್ಣಯ್ಯ ಎಂಬ ಯುವ ಶಿಕ್ಷಕ ತನ್ನೂರಿನ ಹರಿಜನರನ್ನು ಕರೆದೊಯ್ದು ಕೆರೆಯಲ್ಲಿ ನೀರು ಕುಡಿಸಿದ್ದ. ಇದರಿಂದ ಸಿಟ್ಟಿಗೆದ್ದ ಊರಿನ ಜನತೆ ಹುಣಸೆಕಡ್ಡಿಗಳಿಂದ ಪುಟ್ಟಣ್ನಯ್ಯನವರನ್ನು ಮೂರ್ಚೆ ಹೋಗುವಂತೆ ಥಳಿಸಿದ್ದರು. “ಹರಿಜನರನ್ನು ಪ್ರಾಣಿಗಳಂತೆ ನೋಡುವ ನೀವು ಮನುಷ್ಯರಲ್ಲ, ಮನುಷ್ಯರಿಲ್ಲದ ಊರಿನಲ್ಲಿ ನಾನು ಇರುವುದಿಲ್ಲ” ಎಂದು ಘೋಷಿಸಿಕೊಂಡ ಪುಟ್ಟಣ್ಣಯ್ಯ ಆ ಕ್ಷಣದಲ್ಲಿ ಹುಟ್ಟಿದ ಊರನ್ನು ತೊರೆದು ಕೃಷ್ಣರಾಜಪೇಟೆಯ ಹೇಮಾವತಿ ನದಿತಿರದಲ್ಲಿರುವ ಹೇಮಗಿರಿ ಬೆಟ್ಟದಲ್ಲಿ ನೆಲೆನಿಂತರು. ಮಕ್ಕಳಿಗೆ ಪಾಠ ಹೇಳುತ್ತಾ, ಕೊನೆಗೆ ಒಂದು ಶಿಕ್ಷಣ ಸಂಸ್ಥೆಯನ್ನು ಸಹ ಸ್ಥಾಪಿಸಿದರು. ತಮ್ಮ ಕೊನೆಯ ಉಸಿರು ಇರುವವರೆಗೆ ಊರಿಗೆ ಕಾಲಿಡಲಿಲ್ಲ. ಅವರ ನಿಧನಾನಂತರ ಶಿಕ್ಷಣ ಸಂಸ್ಥೆಯನ್ನು ಆದಿಚುಂಚನಗಿರಿ ಮಠಕ್ಕೆ ವಹಿಸಿಕೊಡಲಾಯಿತು. ಹದಿನೈದು ವರ್ಷಗಳ ಹಿಂದೆ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯು ಹೊನಗಾನಹಳ್ಳಿ ಗ್ರಾಮದಲ್ಲಿ ಪುಟ್ಟಣ್ಣಯ್ಯ ಹೆಸರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಿದೆ.

ಈ ಮೇಲ್ಕಂಡ ಸಂಗತಿಗಳನ್ನು ಎಸ್.ಎಂ. ಕೃಷ್ಣ ಅವರ ಬಳಿ ಪ್ರಸ್ತಾಪಿಸಿದ ನಾನು, ಮಂಡ್ಯ ಜಿಲ್ಲೆಯಲ್ಲಿ ಇಂತಹ ಮನಸ್ಸುಗಳು ಇದ್ದುದರ ಬಗ್ಗೆ ಮತ್ತು ಅವರ ತಂದೆಯವರ ಜಾತ್ಯಾತೀತ ಮನೋಭಾವದ ಬಗ್ಗೆ ಕುತೂಹಲ ವ್ಯಕ್ತಪಡಿಸಿದೆ. ಆಗ, ಕೃಷ್ಣ ಈವರೆಗೆ ನಾನು ಕೇಳದೆ ಉಳಿದು ಹೋಗಿದ್ದ ಅಚ್ಚರಿಯ ಇತಿಹಾಸದ ಪುಟಗಳನ್ನು ನನ್ನೆದುರು ಬಿಚ್ಚಿಟ್ಟರು.
1930 ರ ದಶಕದಲ್ಲಿ ಅವರ ತಂದೆಯ ಆತ್ಮೀಯ ಸ್ನಹಿತರಾದ ಮದ್ದೂರಿನ ಸುಬ್ಬರಾವ್ ಎಂಬುವರು ಮುಂಬೈ ನಗರದಲ್ಲಿ ಬ್ರಿಟೀಷ್ ಸರ್ಕಾರದ ಒಡೆತನದಲ್ಲಿದ್ದ ಇನ್ಸೂರೆನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ತೀರಾ ಪ್ರಗತಿ ಪರ ಮನಸ್ಸಿನ ಸುಬ್ಬುರಾವ್, ಮುಂಬೈ ನಗರದಲ್ಲಿ ಅಂಬೇಡ್ಕರ್ ಅವರ ಹೋರಾಟಕ್ಕೆ ಬೆಂಬಲ ನೀಡುತ್ತಾ. ಅವರ ಆತ್ಮೀಯ ಗೆಳೆಯರಲ್ಲಿ ಒಬ್ಬರಾಗಿದ್ದರು. ಬಾಂಬೆ ಸುಬ್ಬುರಾವ್ ಎಂದು ಮಂಡ್ಯ ಜಿಲ್ಲೆಯಲ್ಲಿ  ಕರೆಸಿಕೊಳ್ಳುತ್ತಿದ್ದ  ಅವರು ಮದ್ದೂರಿಗೆ ಬಂದಾಗಲೆಲ್ಲಾ, ಅಂಬೇಡ್ಕರ್ ಚಿಂತನೆ ಮತ್ತು ಹೋರಾಟಗಳನ್ನು ಮಲ್ಲಯ್ಯನವರಿಗೆ ವಿವರಿಸುತ್ತಿದ್ದಂತೆ. ಇದು ಮಲ್ಲಯ್ಯನವರ ಮೇಲೆ ಅಗಾಧ ಪರಿಣಾಮ ಬೀರಿತು. ಕೊನೆಗೊಮ್ಮೆ ಅಂಬೇಡ್ಕರ್ ಅವರನ್ನು ಬೇಟಿ ಮಾಡುವ ಅಪೇಕ್ಷೆಯನ್ನು ಮಲ್ಲಯ್ಯನವರು ಸುಬ್ಬುರಾವ್ ಮುಂದೆ  ವ್ಯಕ್ತಪಡಿಸಿದಾಗ, ರಾವ್ ಅವರು ಅಂಬೇಡ್ಕರ್ ಅವರಿಗೆ ಪತ್ರ ಬರೆದರಂತೆ.

ಸುಬ್ಬುರಾವ್ ಮೂಲಕ ಮಲ್ಲಯ್ಯನವರ ಬಗ್ಗೆ ಕೇಳಿ ತಿಳಿದಿದ್ದ ಹಾಗೂ ಪತ್ರಿಕೆಗಳಲ್ಲಿ ಓದಿದ್ದ ಅಂಬೇಡ್ಕರ್ ಅವರು ಅಂತಹ ವ್ಯಕ್ತಿಯನ್ನು ಬೇಟಿ ಮಾಡುವುದು ನಿಜಕ್ಕೂ ಸಂತಸದ ಸಂಗತಿ. ಮಲ್ಲಯ್ಯನವರು ದೆಹಲಿಗೆ ಬಂದಾಗ, ಯಾವುದೇ ಪೂರ್ವಾನುಮತಿಯಿಲ್ಲದೆ ನನ್ನನ್ನು ಬೇಟಿ ಮಾಡಬಹುದು ಎಂದು ಪತ್ರ ಬರೆದರು. ಅಂತಿಮವಾಗಿ 1946 ರ ಮೊದಲ ದಿನಗಳಲ್ಲಿ ಪ್ರಜಾಪ್ರತಿನಿಧಿಸಭೆಯ ಪ್ರತಿನಿಧಿಯಾಗಿ ದೆಹಲಿಗೆ ತೆರಳಿದ್ದ ಮಲ್ಲಯ್ಯನವರು ಡಾ. ಅಂಬೇಡ್ಕರ್ ಅವರನ್ನು ಬೇಟಿ ಮಾಡಿ ಬಂದರು. ಆ ಬೇಟಿಯ ಘಟನೆಯನ್ನು ತುಂಬಾ ಸಂತೋಷದಿಂದ ಯುವಕನಾಗಿದ್ದ ಕೃಷ್ಣರವರ ಬಳಿ ಮಲ್ಲಯ್ಯನವರು ಹೇಳಿಕೊಳ್ಳುತ್ತಿದ್ದದನ್ನು ಕೃಷ್ಣ ಭಾವುಕರಾಗಿ ನೆನಪಿಸಿಕೊಂಡರು.
ಅಂಬೇಡ್ಕರ್ ಬೇಟಿಯಿಂದ ಸೋಮನಹಳ್ಳಿ ಗ್ರಾಮದಲ್ಲಿ ಆದ ಪ್ರಮುಖ ಬದಲಾವಣೆಯೆಂದರೆ, ಊರಾಚೆ ಇದ್ದ ದಲಿತರನ್ನು ಮಲ್ಲಯ್ಯನವರು, ತಮ್ಮ ಮನೆಯ ಮುಂದೆ ಇದ್ದ ಹೊಲದಲ್ಲಿ ಬಡಾವಣೆ ನಿರ್ಮಿಸಿ ವಾಸಕ್ಕೆ ಅನುಕೂಲ ಕಲ್ಪಿಸಿಕೊಟ್ಟರು. ನಾನು ಮನೆಯಿಂದ ಹೊರಬಂದಾಗ, ನನ್ನ ಕಣ್ಣ ಮುಂದೆ ಹರಿಜನರು ಇರಬೇಕು, ಅವರ ನೋವು, ನಲಿವುಗಳು ನನ್ನ ಕಣ್ಣುಗಳಿಗೆ ಕಾಣುವಂತೆ ಇರಬೇಕು ಎಂದು ಮಲ್ಲಯ್ಯ ಅಪೇಕ್ಷೆ ಪಟ್ಟ ಸಂಗತಿಯನ್ನು ಹೇಳುವಾಗ, ಕೃಷ್ಣ  ಅವರ ಗಂಟಲು ಗದ್ಗದಿತವಾಗಿತ್ತು.  ಇಂದಿಗೂ ನಾವು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಇರುವ ಸೋಮನಹಳ್ಳಿಯಲ್ಲಿ, ಬೆಂಗಳೂರಿನಿಂದ ಹೋಗುವಾಗ, ರಸ್ತೆಯ ಎಡಭಾಗಕ್ಕೆ ಕೃಷ್ಣ ಅವರು ಹುಟ್ಟಿ ಬೆಳೆದ ಮನೆ ಮತ್ತು ಅವರ ತಂದೆಯವರ ವಿದ್ಯಾಸಂಸ್ಥೆ ಮತ್ತು ಬಲಭಾಗಕ್ಕೆ ಹರಿಜನರ ಬಡಾವಣೆಯನ್ನು ಕಾಣಬಹುದು. ಹಳೆಯ ನೆನಪುಗಳ  ಭಾವುಕ ಕ್ಷಣಗಳಲ್ಲಿ ಕನ್ನಡದ ಪದಗಳಿಗೆ ತಡಕಾಡುತ್ತಿದ್ದ ಕೃಷ್ಣರವರು ನೇರವಾಗಿ ಇಂಗ್ಲೀಷ್ ಭಾಷೆಗೆ ಜಿಗಿಯುತ್ತಿದ್ದರು. ಒಮ್ಮೆಯೂ ಅವರ ಬಾಯಲ್ಲಿ ಅಂಬೇಡ್ಕರ್ ಎಂಬ ಶಬ್ಧ ಹೊರಬರಲಿಲ್ಲ. ಅಂಬೇಡ್ಕರ್ ಹೆಸರು ಹೇಳುವಾಗಲೆಲ್ಲಾ ಡಾ. ಅಂಬೇಡ್ಕರ್ ಎಂದು ನುಡಿಯುತ್ತಿದ್ದರು. ಉಳಿದ  ಒಕ್ಕಲಿಗ ಜಾತಿಯ ರಾಜಕಾರಣಿಗಳಿಗೆ ಹೋಲಿಸಿದಾಗ, ಎಸ್.ಎಂ. ಕೃಷ್ಣ ರವರು ಏಕೆ ಜಾತಿ ಸಂಘಟನೆಯೊಂದಿಗೆ ಪ್ರಬಲವಾಗಿ ಗುರುತಿಸಿಕೊಳ್ಳಲಿಲ್ಲ ಎಂಬುದಕ್ಕೆ ನನಗೆ ಇಲ್ಲಿ ಉತ್ತರ ಸಿಕ್ಕಿತ್ತು.
ವರ್ತಮಾನದ ರಾಜಕೀಯ ದ್ವೇಷ ಮತ್ತು ಚಾರಿತ್ರ್ಯ ವಧೆ ಮಾಡುವಂತಹ ರಾಜಕೀಯ ನಾಯಕರ  ಹೇಳಿಕೆಗಳ ಬಗ್ಗೆ ಪ್ರಸ್ತಾಪಿಸಿ, 1968 ರಿಂದ ಇಲ್ಲಿಯವರೆಗೆ ನಾನು ಗಮನಿಸಿದ ಹಾಗೆ ನಿಮ್ಮ ರಾಜಕೀಯ ಎದುರಾಳಿಗಳ ಕುರಿತು ನಿಮ್ಮ ಬಾಯಲ್ಲಿ ಕೆಟ್ಟ ಶಬ್ದಗಳು ಹೊರಬಂದಿಲ್ಲ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದೆ. ಇದಕ್ಕೆ ಉತ್ತರಿಸಿದ ಕೃಷ್ಣ ಅವರು, “ಇದು ನಾನು ನನ್ನ ತಂದೆಯಿಂದ ಕಲಿತ ಮೊದಲ ರಾಜಕೀಯ ಪಾಠ” ಎಂದರು. ನನ್ನ ತಂದೆ ಕೇವಲ ತೀರಾ ಚಿಕ್ಕ ವಯಸ್ಸಿಗೆ (55ವರ್ಷಕ್ಕೆ) ತೀರಿ ಹೋದರು. ಅವರ ಬಾಯಲ್ಲಿ ಎಂದೂ ರಾಜಕೀಯ ಎದುರಾಳಿಗಳ ಬಗ್ಗೆ ಕೆಟ್ಟ ಶಬ್ದವನ್ನು ನಾನು ಕೇಳಲಿಲ್ಲ. ಹಾಗಾಗಿ ನಾನೂ ಕೂಡ ಈವರೆಗೆ ರಾಜಕೀಯದಲ್ಲಿ ಸೊಂಟದ ಕೆಳಗಿನ ಭಾಷೆ ಬಳಸಿಲ್ಲ, ಮುಂದೆಯೂ ಬಳಸುವುದಿಲ್ಲ ಎಂದರು.
ಎಸ್.ಎಂ. ಕೃಷ್ಣ ಎಂಬ  ಹಿರಿಯ ಜೀವದೊಂದಿಗೆ ಎರಡು ಗಂಟೆ ಕಾಲ ಕುಳಿತು ಮಾತನಾಡಿದಾಗ. ನಮ್ಮ ಕಣ್ಣೆದುರು ಕಳೆದು ಹೋದ ಮಾನವೀಯ ಮುಖವೊಂದರ  ಸಮಾಜದ ದರ್ಶನವಾಯಿತು. ಎಲ್ಲಿಯ ಒಕ್ಕಲಿಗ ಜಾತಿಯ ಸೋಮನಹಳ್ಳಿ ಮಲ್ಲಯ್ಯ ? ಎಲ್ಲಿಯ ಬ್ರಾಹ್ಮಣ ಜಾತಿಯ ಮದ್ದೂರು ಸುಬ್ಬರಾವ್? ಎಲ್ಲಿಯ ದಲಿತ ವರ್ಗದ ಅಂಬೇಡ್ಕರ್? ಮನುಷ್ಯತ್ವ ಮತ್ತು ಮಾನವೀಯತೆ ಎಂಬುದು ಜಾತಿ-ಧರ್ಮಗಳನ್ನು ಮೀರಿದ ಸಂಗತಿ ಎಂದು ಈ ಮೂವರು  ಮಹಾನುಭಾವರು ಪರಿಭಾವಿಸಿದ ಕ್ರಮ ಈ ಕ್ಷಣಕ್ಕೂ ನನ್ನನ್ನು ತಣ್ಣಗೆ ಕುಳಿತು ಯೋಚಿಸುವಂತೆ ಮಾಡಿದೆ.
ಇಂತಹ ಘಟನೆಗಳು ಮಂಡ್ಯ ಜಿಲ್ಗೆಗೆ ಮಾತ್ರ ಸೀಮಿತ ಎಂದು ನಾನು ಭಾವಿಸಿಲ್ಲ. ಪ್ರತಿ ಜಿಲ್ಲೆಯಲ್ಲೂ ಇಂತಹ ಸಂಗತಿಗಳು ಇತಿಹಾಸದ ಗರ್ಭದಲ್ಲಿ ಹೂತು ಹೋಗಿವೆ. ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ‘ ರಾಮಕೃಷ್ಣ ಹೆಗ್ಗೆಡೆ ಹೇಳಿದ ಗಾಂಧಿ ಕಥನ” ಎಂಬ ಲೇಖನವನ್ನು ಇದೇ ಬ್ಲಾಗ್ ನಲ್ಲಿ ನಾನು ದಾಖಲಿಸಿದ್ದೇನೆ. ಆಸಕ್ತರು ಗಮನಿಸಬಹುದು. ಇಂದಿನ ಸಮಾಜದಲ್ಲಿ ವಿಷ ಕಕ್ಕುವರು ಮಾತ್ರವಲ್ಲ, ಲೇಖನಿಗಳು ಕೂಡ ವಿಷ ಕಕ್ಕುತ್ತಿರುವ ಆತಂಕದ ಸಂದರ್ಭದಲ್ಲಿ  ಇಂತಹ ಹಿರಿಯ ಜೀವಗಳ ಇಂತಹ ನೆನಪುಗಳು ಮತ್ತು ಮಾತುಗಳು ನಮ್ಮನ್ನು ಅಪ್ಪಟ ಮನುಷ್ಯರಾಗುವ ಹಾದಿಯಲ್ಲಿ ಕೊಂಡೊಯ್ಯಬಲ್ಲವು  ಎಂಬುದು ನನ್ನ ಬಲವಾದ ನಂಬಿಕೆ.