ಶುಕ್ರವಾರ, ಅಕ್ಟೋಬರ್ 27, 2017

ಮೋದಿಯವರ ಮುಂದಿರುವ ಉದ್ಯೋಗ ಸೃಷ್ಟಿಯ ಸವಾಲುಗಳು

ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಇದು ಸಂಕಷ್ಟದ ಕಾಲ ಮಾತ್ರವಲ್ಲ, ಸಂದಿಗ್ಧ ಮತ್ತು ಸವಾಲಿನ ಕಾಲವೂ ಹೌದು. ಅವರು ತಮ್ಮ ರಾಜಕೀಯ ಜೀವನದಲ್ಲಿ ಇಂತಹ ಸವಾಲುಗಳನ್ನು ನಿರೀಕ್ಷಿಸಿರಲಿಲ್ಲ. “ ಮಾತು ಬೆಳ್ಳಿ, ಮೌನ ಬಂಗಾರಎಂಬ ನಾಣ್ಣುಡಿಯನ್ನು ಮೋದಿಯವರು ಈಗಲಾದರೂ ತಮ್ಮ ಬದುಕಿಗೆ ಅಳವಡಿಸಿಕೊಳ್ಳುವುದು ಸೂಕ್ತ. 2014 ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲ್ಪಟ್ಟಿದ್ದ ನರೇಂದ್ರ ಮೋದಿಯವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹಾಗೂ ಪ್ರಧಾನಿಯಾದ ನಂತರ ನೋಟುಗಳ ಮೇಲೆ ನಿಷೇಧ ಹೇರಿದ ಸಂದರ್ಭದಲ್ಲಿ ಆಡಿದ ಮಾತುಗಳನ್ನು ದೇಶದ ಜನತೆ ಮರೆತಿರಬಹುದು. ಆದರೆ, ಅರ್ಥಶಾಸ್ತ್ರದ ವಿದ್ಯಾರ್ಥಿ ಹಾಗೂ ಸಂಶೋಧಕನಾಗಿರುವ ನಾನು ಮರೆಯಲು ಸಾಧ್ಯವಿಲ್ಲ. ಹಾಗಾಗಿ ಇಲ್ಲಿ ಮೋದಿಯವರ ಕುರಿತು ಯಾವುದೇ ರಾಗ ದ್ವೇಷವಿಲ್ಲದೆ ಅವರ ಮೂರು ವರ್ಷದ ಆಡಳಿತ ಅವಧಿಯ ಆರ್ಥಿಕ ಬೆಳವಣಿಗೆಯನ್ನು  ವಿಮರ್ಶೆಯ ಒರೆಗಲ್ಲಿಗೆ ಒಡ್ಡಿದ್ದೀನಿ.
ಭಾರತದ ಆರ್ಥಿಕ ದುಸ್ಥಿತಿಗೆ ಕಾಂಗ್ರೇಸ್ ನೇತೃತ್ವದ ಯು.ಪಿ.. ಸರ್ಕಾರ ನೇರ ಜವಬ್ದಾರಿ ಎಂದು ಆರೋಪ ಹೊರಿಸಿದ್ದ ನರೇಂದ್ರ ಮೋದಿಯವರು, ದೇಶದ ಒಳಿತಿಗಾಗಿ ನಾನು ವಿಷ ಕುಡಿಯಲು ಸಿದ್ಧ ಎಂದು ಘೋಷಿಸಿದ್ದರು. ವಾಸ್ತವವಾಗಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದ ಮೊದಲ ಅವಧಿಯಲ್ಲಿ ಇಡೀ ಜಗತ್ತು ತಿರುಗಿ ನೋಡುವಂತೆ ಭಾರತವು ಆರ್ಥಿಕವಾಗಿ ಅಭಿವೃದ್ಧಿಚಿುನ್ನು ಹೊಂದಿತ್ತು. ಆದರೆ, ಎರಡನೆಯ ಅವಧಿಯಲ್ಲಿ ಆರ್ಥಿಕ ಬೆಳವಣಿಗೆಯನ್ನು ಮತ್ತು ಪಾರದರ್ಶಕವಾದ ಆಡಳಿತವನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲಕಲ್ಲಿದ್ದಲು ಹಗರಣ, ದೂರ ಸಂಪರ್ಕ ಇಲಾಖೆಯ ಸ್ಪೆಕ್ಟ್ರಂ ಹಗರಣ, ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ವಾದ್ರಾನ ಭೂ ಹಗರಣ ಹೀಗೆ ಅನೇಕ ಭ್ರಷ್ಟಾಚಾರದಲ್ಲಿ ಯು.ಪಿ.. ಸರ್ಕಾರ ಮುಳುಗಿರುವಾಗ; ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್ ಮೌನಕ್ಕೆ ಶರಣಾಗುವುದರ ಮೂಲಕ  ದೇಶವನ್ನು ಅಧಃಪತನದತ್ತ ದೂಡಿದರುಭಾರತದ ಇಬ್ಬರು ಪ್ರಧಾನಿಗಳ ನಡುವೆ ಹೇಳಿಕೊಳ್ಳುವಂತಹ ವೆತ್ಯಾಸವೇನಿಲ್ಲ; ಅಂದಿನ ಪ್ರಧಾನಿ ಮನಮೋಹನ್ ಸಿಂಗ್  ಏನನ್ನೂ ಮಾತನಾಡದೆ ಕೆಟ್ಟರು, ಈಗಿನ ಪ್ರಧಾನಿ ಮಾತನಾಡುತ್ತಾ ಕೆಟ್ಟರು. ಎರಡೂ ಪರಿಣಾಮಗಳಿಂದ ಭಾರತದ ಜನತೆ ಮಾತ್ರ ಅತಂತ್ರರಾದರು. ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿ ಮಾಡಲಾಗುವುದೆಂದು  ತಮ್ಮ ಎದೆಯನ್ನು 56 ಇಂಚಿಗೆ ಉಬ್ಬಿಸಿ  ನರೇಂದ್ರ ಮೋದಿಯವರು ಹೇಳಿದ್ದರು. ಆದರೆ, ಈಗ ಭಾರತದಲ್ಲಿ ಪ್ರತಿ ತಿಂಗಳು ಹತ್ತು ಲಕ್ಷ ಮಂದಿ ಯುವಕರು ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದಾರೆ. ಅವರಲ್ಲಿ ಕೇವಲ ಎರಡು ಲಕ್ಷ ಮಂದಿಗೆ ಮಾತ್ರ ಉದ್ಯೋಗ ದೊರೆಯುತ್ತಿದೆ ಎಂದು ಅವರದೇ ನೃತೃತ್ವದ ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷೆಯ ವರದಿ ಹೇಳುತ್ತಿದೆ. ಶೇಕಡ 97 ರಷ್ಟು ಇಂಜಿನಿಯರ್ ಪದವೀಧರರು ನಿರುದ್ಯೋಗಿಗಳಾಗಿರುವುದು ಆತಂಕದ ಸಂಗತಿಯಾಗಿದೆ. ತಮ್ಮ ಆಡಳಿತದ ಅವಧಿಯಲ್ಲಿ ಸಾವಿರ ಮತ್ತು ಐನೂರು ಮುಖಬೆಲೆಯ  ನೋಟುಗಳನ್ನು ನಿಷೇಧಿಸಿ, ಕಪ್ಪಹಣವನ್ನು ನಿಯಂತ್ರಿಸುತ್ತೀನಿ ಎಂದು ಹೇಳಿ ಹೊರಟ ಮೋದಿಯವರ  ಯೋಜನೆಯು ಜಾಗತಿಕ ಮಟ್ಟದಲ್ಲಿ ನೆಗೆಪಾಟಲಿಗೆ ಈಡಾಯಿತು. ಜೊತೆಗೆ ಭಾರತದ ಆರ್ಥಿಕ ಬೆಳೆವಣಿಗೆಯನ್ನು ಹತ್ತು ವರ್ಷದ ಹಿಂದಕ್ಕೆ ಕೊಂಡೊಯ್ಯಿತು. ಯೋಜನೆ ವಿಫಲವಾದರೆ, ನನ್ನನ್ನು ಸುಟ್ಟು ಬಿಡಿ ಎಂದು ಆವೇಶದಿಂದ ಮಾತನಾಡಿದ್ದ ಇದೇ ಪ್ರಧಾನಿ ಮೋದಿಯವರು ಇತ್ತೀಚೆಗೆ ತಮ್ಮ ವಿವಿಧ ಇಲಾಖೆಗಳ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡುತ್ತಾ, ಆಡಳಿತದಲ್ಲಿನ ಕೆಲವು ಗುಂಪು ನಮ್ಮನ್ನು ಶಕ್ತಿ ಹೀನರನ್ನಾಗಿ ಮಾಡುತ್ತಿವೆ ಎಂಬ ಮಾತನ್ನಾಡುವುದರ ಮೂಲಕ ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ. ಅವರು ಘೋಷಿಸಿದ್ದ ಮೇಕಿಂಗ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಮಾರ್ಟ್ಸಿಟಿ, ನಮಾಮಿಗಂಗಾ, ಸ್ವಚ್ಛ ಭಾರತ್  ಎಲ್ಲಾ ಯೋಜನೆಗಳು ಆಕರ್ಷಕವಾಗಿ ಕಂಡರೂ ಸಹ  ಎಲ್ಲವೂ ಫಲ ನೀಡುವಲ್ಲಿ ವಿಫಲವಾಗಿವೆ. ಕಾರಣಕ್ಕಾಗಿ ಆರ್ಥಿಕ ತಜ್ಞ ಪ್ರವೀಣ್ ಚಕ್ರವರ್ತಿ ಎಂಬುವರುಭಾರತದ ಆರ್ಥಿಕತೆ ಸಂಪೂರ್ಣವಾಗಿ ನೆಲ ಕಚ್ಚಿದೆಎಂದು ಬಿ.ಬಿ.ಸಿ. ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ಜೊತೆಗೆ ನೋಟು ನಿಷೇಧ ಮತ್ತು ಜಿ.ಎಸ್.ಟಿ. ಇವುಗಳ ಪರಿಣಾಮವಾಗಿ ದೇಶದ ಆರ್ಥಿಕತೆಗೆ  ಹಿನ್ನಡೆಯಾಗಿದೆ ಎಂದು ಸ್ವತಃ ಅರ್ಥಸಚಿವ ಅರುಣ್ ಜೇಟ್ಲಿ ಒಪ್ಪಿಕೊಂಡಿದ್ದಾರೆ.
ಭಾರತದ ಆರ್ಥಿಕ ಅಭಿವೃದ್ಧಿ ಎನ್ನುವುದು ಸರ್ದಾರ್ ವಲ್ಲಬಾಯ್ ಪಟೇಲ್  ಪ್ರತಿಮೆ, ಶ್ರೀರಾಮನ ಪ್ರತಿಮೆ ಅಥವಾ ಮಂದಿರ ನಿರ್ಮಾಣದ ಆಮೀಷ ತೋರಿಸಿ, ಗಾಳಿಯಲ್ಲಿ ಗೋಪುರ ನಿರ್ಮಿಸುವ ಯೋಜನೆಗಳಲ್ಲ ಎಂಬ ವಾಸ್ತವ ವನ್ನು ನರೇಂದ್ರಮೋದಿಯವರು ಈಗಲಾದರೂ ಅರಿಯಬೇಕಿದೆ. ಜೊತೆಗೆ ಒಳ್ಳೆಯ ರಾಜಕೀಯ ಮತ್ತು ಆರ್ಥಿಕ ತಜ್ಞರನ್ನು ತನ್ನ ಸುತ್ತ ಮುತ್ತ ಇರಿಸಿಕೊಂಡು ವಾಸ್ತವಿಕ ನೆಲೆಗಟ್ಟಿನಿಂದ ಕೂಡಿದ ಸಲಹೆಗಳನ್ನು ಮತ್ತು ಕಾರ್ಯರೂಪಕ್ಕೆ ತರಲು ಸಾಧ್ಯವಾಗುವ ಯೋಜನೆಗಳನ್ನು ಮಾತ್ರ ಅನುಷ್ಠಾನಕ್ಕೆ ತರಲು ಗಂಭೀರವಾಗಿ ಯೋಚಿಸಬೇಕಿದೆ. ಹಿಂದಿನ ರಿಸರ್ವ್  ಬ್ಯಾಂಕಿನ ಗವರ್ನರ್ ರಘರಾಂ ರಾಜನ್ ರವರ ಸಲಹೆಗಳನ್ನು ಕೇಳಿದ್ದರೆ ಅಥವಾ ಮೋದಿಯವರು ಅವರನ್ನು ಹುದ್ದೆಯಲ್ಲಿ ಇನ್ನೊಂದು ಅವಧಿಗೆ ಮುಂದುವರಿಸಿದ್ದರೆ, ಇಂತಹ ಮುಜುಗರದ ಸಂಗತಿಗಳನ್ನು ಎದುರಿಸಬೇಕಾಗಿರಲಿಲ್ಲರಘುರಾಂ ರಾಜನ್ ರವರು ತಮ್ಮ ಇತ್ತೀಚೆಗಿನ ಡು, ವಾಟ್ ಡುಎಂಬ ಕೃತಿಯಲ್ಲಿ ಭಾರತದ ಆರ್ಥಿಕ ರಂಗದ ತಪ್ಪು ಹೆಜ್ಜೆಗಳನ್ನು ಗುರುತಿಸಿ ವ್ಯಾಖ್ಯಾನಿಸಿದ್ದಾರೆ.
2020 ನೇ ವರ್ಷಕ್ಕೆ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ( ಜಿಡಿಪಿಯಲ್ಲಿ) ಉತ್ಪಾದನಾ ವಲಯದಿಂದ ಶೇಕಡ 25 ರಷ್ಟು ಪಾಲು ಇರಬೇಕೆಂದು ಮೋದಿ ನೇತೃತ್ವದ ಸರ್ಕಾರ ಗುರಿಹಾಕಿಕೊಂಡಿತ್ತು. ಆದರೆ, ಈಗಿನ ಉತ್ಪಾದನಾ ವಲಯದ ಬೆಳವಣಿಗೆ ಕೇವಲ 1.6 ರಷ್ಟು ಮಾತ್ರ ಇದೆ.  (2014 ರಿಂದ 17 ರವರೆಗೆ ಶೇಕಡ 15 ರಷ್ಟು ಗುರಿ ಸಾಧಿಸಬೇಕೆಂದು ನಿರ್ಧರಿಸಲಾಗಿತ್ತು. ಇತ್ತೀಚೆಗೆ ಜಾರಿಗೆ ತಂದ ಸರಕು ಮತ್ತು ಸೇವಾ ತೆರಿಗೆಯ ನಿಯಮದಿಂದ ಉತ್ಪಾದನಾ ವಲಯದ ಮೇಲೆ ದೊಡ್ಡ ಪೆಟ್ಟು ಬಿದ್ದಿದೆ. ವಿಶೇಷವಾಗಿ ಗುಡಿ ಕೈಗಾರಿಕೆಗಳ ಉತ್ಪನ್ನಗಳು, ನೇಕಾರಿಕೆ ಹಾಗೂ ಕಟ್ಟಡ ನಿರ್ಮಾಣ ಹಾಗೂ ಕೃಷಿ ಉತ್ಪನ್ನ ವಲಯಗಳಲ್ಲಿ ಯಾವುದೇ ರೀತಿಯ ಆಸಕ್ತಿದಾಯಕ ಬೆಳವಣಿಗೆಗಳು ಕಂಡು ಬರುತ್ತಿಲ್ಲ. ಕರಕುಶಲ ವಸ್ತುಗಳ ಮೇಲೆ ಶೇಕಡ 5 ರಷ್ಟು ಮಾತ್ರ ತೆರಿಗೆ ವಿಧಿಸಲಾಗಿದ್ದರೂ ಸಹ, ಅವುಗಳನ್ನು ತಯರಿಸುವ ಯಂತ್ರಗಳು ಅಂದರೆ, ಕೈ ಮಗ್ಗದ ಬಿಡಿಭಾಗಗಳ ಮೇಲೆ ಶೇಕಡ 12 ರಿಂದ 18 ರಷ್ಟು ತೆರಿಗೆ ವಿಧಿಸಿರುವುದರಿಂದ ಭಾರತದಲ್ಲಿ ಕೈ ಮಗ್ಗದ ಉತ್ಪನ್ನಗಳಲ್ಲಿ ಮುಂಚೂಣಿಯಲ್ಲಿದ್ದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಒಡಿಸ್ಸಾ ಮತ್ತು ಬನಾರಸ್ ರೇಷ್ಮೆ ಸೀರೆಗಳಿಗೆ ಪ್ರಸಿದ್ಧವಾಗಿದ್ದ ವಾರಣಾಸಿ ಹೀಗೆ ಅನೇಕ ರಾಜ್ಯಗಳಲ್ಲಿ ನೇಕಾರರು ಬೀದಿಗೆ ಬಿದ್ದಿದ್ದಾರೆ.
ಭಾರತದಲ್ಲಿ ಈಗ ಕೇವಲ ವಿದ್ಯಾವಂತ ನಿರುದ್ಯೋಗಿಗಳ ಸಮಸ್ಯೆ ಮಾತ್ರವಲ್ಲ, ಕರಕುಶಲಕರ್ಮಿಗಳು ಸಹ ಆರ್ಥಿಕ ಬೆಳವಣಿಗೆಯ ಹಿಂಜರಿತದಿಂದ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಜಮ್ಮು, ಕಾಶ್ಮೀರ ಅತ್ಯಂತ ಹೆಚ್ಚು ನಿರುದ್ಯೋಗಿಗಳ ರಾಜ್ಯವಾಗಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಉದ್ಯೋಗದಲ್ಲಿ ಮಹಿಳೆಯರ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಶಿಕ್ಷಣ ಹಾಗೂ ಸಂಶೋಧನಾ ಕ್ಷೇತ್ರ ಕುಂಠಿತಗೊಂಡಿದೆ. ದೇಶದ ಅತಿದೊಡ್ಡ ವಿಶ್ವ ವಿದ್ಯಾನಿಲಯವೆಂದು ಪ್ರಸಿದ್ಧಿ ಪಡೆದಿದ್ದ ದೆಹಲಿಯ ಜವಹರಲಾಲ್ ವಿ.ವಿ. ಪ್ರಾಧ್ಯಾಪಕರ ಮೇಲೆ ಕೆಲವು ನಿಯಮಗಳನ್ನು ಜಾರಿಗೊಳಿಸಿದ ಪರಿಣಾಮವಾಗಿ ವರ್ಷವೊಂದಕ್ಕೆ ಒಂದು ಸಾವಿರ ವಿದ್ಯಾರ್ಥಿಗಳು ವಿವಿಧ ವಿಷಯದ ಮೇಲೆ ಪಿ.ಹೆಚ್.ಡಿ. ಅಧ್ಯಯನ ಮಾಡುತ್ತಿದ್ದರು. ಈಗ ಅಭ್ಯರ್ಥಿಗಳ ಸಂಖ್ಯೆ ಕೇವಲ 194 ಕ್ಕೆ ಕುಸಿದಿದೆ.
ಭಾರತದ ಅಭಿವೃದ್ಧಿಯ ತಳಪಾಯ ಅಥವಾ ಬೆನ್ನೆಲಬು ಎಂದು ಕರೆಯಲಾಗುತ್ತಿದ್ದ ಕೃಷಿ ವಯಲಯದ ಬಿಕ್ಕಟ್ಟಿಗೆ ಯಾವುದೇ ಪರಿಹಾರವಿಲ್ಲದಂತಾಗಿದೆ. ದೇಶದಲ್ಲಿ ಶೇಕಡ 60 ರಿಂದ 70 ರವರೆಗೆ ಪ್ರತ್ಯೇಕ್ಷವಾಗಿ ಅಥವಾ ಪರೋಕ್ಷವಾಗಿ ಉದ್ಯೋಗ ನೀಡುತ್ತಿದ್ದ ಕೃಷಿರಂಗ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಸ್ಮಶಾನ ಸದೃಶ್ಯ ರೂಪದಲ್ಲಿದೆ. ಸಧ್ಯಕ್ಕೆ ಶೋಚನೀಯ ಸ್ಥಿತಿಯಲ್ಲಿರುವ ಕೃಷಿರಂಗವನ್ನು ಸದೃಢಗೊಳಿಸಿ, ರೈತರ ಆದಾಯವನ್ನು ಇಮ್ಮುಡಿಗೊಳಿಸಬೇಕಾದರೆ, ಮುಂದಿನ ಐದು ವರ್ಷಗಳ ಅವಧಿಯಲ್ಲಿ 4 ಲಕ್ಷ 63 ಸಾವಿರ ಕೋಟಿ ರೂಪಾಯಿಗಳನ್ನು ವಿನಿಯೋಗಿಸಬೇಕೆಂದು ತಜ್ಞರು ಅಂದಾಜಿಸಿದ್ದಾರೆ. ವಿಶೇಷವಾಗಿ ನೀರಾವರಿ ಯೋಜನೆಗಳಿಗೆ ಹಾಗೂ ಕೈಗೆಟುಕುವ ಬೆಲೆಯಲ್ಲಿ ಬಿತ್ತನೆ ಬೀಜ, ಗೊಬ್ಬರ ಇವುಗಳು ದೊರೆಯುವಂತೆ ಮಾಡುವುದರ ಜೊತೆಗೆ ಸೂಕ್ತ ಮಾರುಕಟ್ಟೆಯ ವ್ಯವಸ್ಥೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ. ಆದರೆ, ವೇಗದ ರೈಲು, ಕಾರಿಡಾರ್ ರಸ್ತೆಗಳು ಮತ್ತು ಮೇಲ್ಸೇತುವೆ ಇವುಗಳಿಗೆ ನೀಡಿರುವ ಆದ್ಯತೆಯನ್ನು ಪ್ರದಾನಿಯವರು ಭಾರತದ ಗ್ರಾಮೀಣ ಭಾಗಕ್ಕೂ ನೀಡುವುದರ ಮೂಲಕ ಪಟ್ಟಣ ಮತ್ತು ನಗರಗಳತ್ತ ವಲಸೆ ಹೋಗುತ್ತಿರುವ ಜನತೆಯನ್ನು ತಡೆಯಬೇಕಿದೆ. ಇಂದಿನ ಭಾರತದ ನಗರಗಳು ಎದುರಿಸುತ್ತಿರುವ ಕಸವಿಲೆವಾರಿ, ಸಂಚಾರದ ಅವ್ಯವಸ್ಥೆ ಹಾಗೂ ಕುಡಿಯುವ ನೀರಿನ ಸಮಸ್ಯೆಗಳನ್ನು ಅವಲೋಕಿಸಿದರೆ, ಸ್ಮಾರ್ಟ್ ಸಿಟಿಗಳನ್ನಾಗಿ ಮಾಡುವುದರ ಬದಲಾಗಿ ನಗರಕ್ಕೆ ಬರುವವರ ವಲಸೆಯನ್ನು ತಡೆಯುವುದಕ್ಕೆ ಆದ್ಯತೆ ನೀಡಬೇಕು. ಕೇವಲ, ಮಾಹಿತಿ ತಂತ್ರಜ್ಞಾನ ಕ್ರೇತ್ರ, ಸೇವಾ ವಲಯ ಅಥವಾ ಉತ್ಪಾದನಾ ವಲಯಗಳಿಂದ ಮಾತ್ರ ಉದ್ಯೋಗ ಸಮಸ್ಯೆ ನಿವಾರಣೆಯಾಗುವುದಿಲ್ಲ. ಇವುಗಳಿಗೆ ನೀಡುತ್ತಿರುವ ಆದ್ಯತೆಯನ್ನು ಕೃಷಿ ಮತ್ತು ಗುಡಿ ಕೈಗಾರಿಕಾ ಕ್ರೇತ್ರಕ್ಕೆ ನೀಡಿದಾಗ ಮಾತ್ರ ನಿರುದ್ಯೋಗ ಸಮಸ್ಯೆಗೆ ಒಂದಿಷ್ಟು ಪರಿಹಾರ ದೊರಕಬಹುದು. ಇದು ಈಗ ಕೇವಲ ಭಾರತದ ಸಮಸ್ಯೆಯಾಗಿ ಉಳಿದಿಲ್ಲ, ಜಾಗತೀಕರಣ ಮತ್ತು ಮುಕ್ತ ಮಾರುಕಟ್ಟೆಯ ವ್ಯವಸ್ಥೆಯ ಫಲವಾಗಿ ಮರೆಮಾಚಿದ ಬಂಡವಾಳಶಾಹಿ ವ್ಯವಸ್ಥೆ ಮುಂಚೂಣಿಗೆ ಬಂದ ಫಲವಾಗಿ ಜಾಗತಿಕ ಸಮಸ್ಯೆಯಾಗಿ ಕಾಡುತ್ತಿದ್ದೆ. ಸಮಸ್ಯೆಯಲ್ಲಿ ಗ್ರೀಸ್ ರಾಷ್ಟ್ರ ಪ್ರಥಮ ಸ್ಥಾನದಲ್ಲಿದ್ದರೆ, ಭಾರತ ಐದನೆಯ ಸ್ಥಾನದಲ್ಲಿದೆ. ಮುಂದಿನ ವರ್ಷ ಚುನಾವಣೆ ಎದುರಿಸಬೇಕಾಗಿರುವ ಮೋದಿಯವರು ಭಾರತವನ್ನು ಯಾವ ದಿಕ್ಕಿನತ್ತ ಕೊಂಡೊಯ್ಯಬಲ್ಲರು? ಎಂಬುದಕ್ಕೆ ಯಾವುದೇ ಆಶಾದಾಯಕ ಬೆಳವಣಿಗೆಗಳು ಕಾಣುತ್ತಿಲ್ಲ.

( ಕರಾವಳಿ ಮುಂಜಾವು ದಿನಪತ್ರಿಕೆಯ “ ಜಗದಗಲ” ಅಂಕಣ ಬರಹ)

ಭಾನುವಾರ, ಅಕ್ಟೋಬರ್ 22, 2017

ಮಂಜರಿ ಖಟ್ಜು ತೆರೆದಿಟ್ಟ ದೇಶಭಕ್ತರ ಜಾತಕಗಳು


 ಭಾರತದಂತಹ ಜಾತಿ ಪ್ರಧಾನವಾದ ದೇಶದಲ್ಲಿ  ಧರ್ಮಗಳು ಅತ್ಯಂತ ಸೂಕ್ಷ್ಮವಾದ ವಿಷಯವಾಗಿರುವುದರಿಂದ  ಇವುಗಳ ವಿಶ್ಲೇಷಣೆ ಅಥವಾ ಯಾವ ಸಂದರ್ಭದಲ್ಲಿ ಇವುಗಳನ್ನು ಬಳಸಬೇಕು ಎಂಬ ಎಚ್ಚರಿಕೆ ಇರಬೇಕು.  ಎಲ್ಲಾ ರಂಗಗಳ ಮುಂಚೂಣಿಯಲ್ಲಿರುವ ನಾಯಕರಿಗೆ ಸೂಕ್ಷ್ಮತೆ ತಿಳಿದಿತ್ತು. ಜೊತೆಗೆ ಅನೇಕ ಧಾರ್ಮಿಕ ಮುಖಂಡರು, ಮಠಾಧೀಶರು,  ಸ್ವಯಂಘೋಷಿತ ದೇವಮಾನವರೆಂಬ ಸ್ವಾಮೀಜಿಗಳು ಧರ್ಮವನ್ನು ಮನುಷ್ಯನೊಬ್ಬನ ಔನ್ನತ್ಯಕ್ಕೆ ಹಾಗೂ ಸಮುದಾಯದ ಏಳಿಗೆಗೆ ಬಳಸಿಕೊಳ್ಳುತ್ತಿದ್ದರು. ಧರ್ಮ-ಧರ್ಮಗಳ ನಡುವೆ ಅನೇಕ ಭಿನ್ನಾಭಿಪ್ರಾಯಗಳಿದ್ದರೂ ಸಹ ಬಹು ಸಂಸ್ಕತಿಯ ನೆಲವಾದ ಭಾರತದ ನೆಲದಲ್ಲಿ ಒಂದು ರೀತಿಯ ಏಕರೂಪತೆ ಎದ್ದು ಕಾಣುತ್ತಿತ್ತು.
ಧರ್ಮವೆನ್ನುವುದು ಅತ್ಯಂತ ಸೂಕ್ಷ್ಮ ಮತ್ತು ಮನುಷ್ಯನೊಬ್ಬನ ಖಾಸಾಗಿ ನಂಬಿಕೆ ಅಥವಾ ನಡುವಳಿಕೆ ಎಂದು ನಂಬಿಕೊಂಡಿದ್ದ ಭಾರತದಲ್ಲಿ  ಬಹುತೇಕ ರಾಜಕೀಯ ಪಕ್ಷಗಳು ಮತ್ತು ನಾಯಕರು ಧರ್ಮವನ್ನು ಎಂದಿಗೂ ರಾಜಕೀಯದೊಂದಿಗೆ ಬೆರಸದೆ, ಅದನ್ನು ವೈಯಕ್ತಿಕ ಹಿತಾಸಕ್ತಿಗೆ ಬಳಸದೆ ಒಂದು ರೀತಿಯಲ್ಲಿ ನಿರ್ಧಿಷ್ಟ ಅಂತರವನ್ನು ಕಾಯ್ದುಕೊಂಡು ಬಂದಿದ್ದರು. ಆದರೆ, ಕಳೆದ ಕಾಲಶತಮಾನದ ಅವಧಿಯಲ್ಲಿ ಹಿಂದೂ ಧರ್ಮದ ರಕ್ಷಣೆ ಹೆಸರಿನಲ್ಲಿ, ಹಿಂದೂ ರಾಷ್ಟ್ರ ನಿರ್ಮಾಣ ನಮ್ಮ ಮೂಲಗುರಿ ಎಂದು ಹೇಳಿಕೊಳ್ಳುತ್ತಾ, ರಾಜಕೀಯಕ್ಕೆ ಧರ್ಮವನ್ನು ಮತ್ತು ಧರ್ಮಕ್ಕೆ ರಾಜಕೀಯವನ್ನು ಬೆರೆಸುವುದರ ಮೂಲಕ ಭಾರತದ ಬಹುಮುಖಿ ಸಂಸ್ಕತಿಗೆ ಅಪಾಯವನ್ನು  ಒಡ್ಡಲಾಗಿದೆ. ಜೊತೆಗೆ ಎಲ್ಲವನ್ನೂ, ಎಲ್ಲರನ್ನೂ ಏಕರೂಪತೆಗೆ ಒಗ್ಗಿಸಲು ಪ್ರಯತ್ನಿಸುತ್ತಿರುವ ವಿಶ್ವ ಹಿಂದೂ ಪರಿಷತ್, ರಾಷ್ರ್ರೀಯ ಸ್ವಯಂ ಸೇವಾ ಸಂಘಟನೆಗಳ ಇತ್ತೀಚೆಗಿನ ಕಾರ್ಯವೈಖರಿ ಮತ್ತು ಅವುಗಳ ಮರೆ ಮಾಚಿದ ಗೊತ್ತು ಗುರಿಗಳು ಧರ್ಮಾತೀತ ಹಾಗೂ ಜಾತ್ಯಾತೀತವಾಗಿ ಬದುಕುತ್ತಿರುವ ಪ್ರಜ್ಞಾವಂತ ನಾಗರೀಕರಲ್ಲಿ ಆತಂಕವನ್ನು ಸೃಷ್ಟಿ ಮಾಡಿವೆ.
ಸಂಘಟನೆಗಳು ಏನೇ ಹೇಳಿಕೊಳ್ಳಲಿ, ಅವುಗಳ ಕಾರ್ಯವೈಖರಿ ಮತ್ತು ಮರೆ ಮಾಚಿದ ಅಜೆಂಡಾಗಳನ್ನು ಸಾಕ್ಷಾಧಾರಗಳ ಸಮೇತ ದೇಶದ ಇತಿಹಾಸ ಹಾಗೂ ರಾಜಕೀಯ ತಜ್ಞರು ದಾಖಲಿಸುತ್ತಾ ಬಂದಿದ್ದಾರೆ. ಹಾಗಾಗಿ ದೇಶ ಭಕ್ತರ ಹುನ್ನಾರಗಳು ಪ್ರತಿ ಸಂದರ್ಭದಲ್ಲಿಯೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅನಾವರಣಗೊಳ್ಳುತ್ತಾ ಬಂದಿವೆ. ವಿಷಯದಲ್ಲಿ ಇತಿಹಾಸ ತಜ್ಞರಾದ ರೋಮಿಲಾ ಥಾಪೂರ್, ಕೆ, ಎಂ. ಫಣಿಕ್ಕರ್, ಇರ್ಫಾನ್ ಹಬೀಬ್ ಮತ್ತು ಸಮಾಜಶಾಸ್ತ್ರಜ್ಞರಾದ ಆಶೀಷ್ ನಂದಿ ಹಾಗೂ ರಾಜಕೀಯ ತಜ್ಞೆಯಾಗಿರುವ ಡಾ.ಮಂಜರಿ ಖಟ್ಜು, ಹಾಗೂ ಮೃದುಲಾ ಮುಖರ್ಜಿ ಮತ್ತು ಸುಚೇತಾ ಮಹಾಜನ್ ರಂತಹ ಮಹನೀಯರಿಗೆ ಭಾರತದ ನಾಗರೀಕರು ಋಣಿಯಾಗಿರಬೇಕು.
2008 ರಲ್ಲಿ ಮೃದುಲಾ ಮುಖರ್ಜಿ ಮತ್ತು ಸುಚೇತಾ ಮಹಾಜನ್ ಇವರುಗಳು ದೇಶದ ಅನೇಕ ಇತಿಹಾಸ ತಜ್ಞರ ನೆರವಿನಿಂದಆರ್.ಎಸ್.ಎಸ್. ಸ್ಕೂಲ್ ಟೆಕ್ಟ್ಸ್ ಅಂಡ್ ಮರ್ಡರ್ ಆಫ್ ಮಹಾತ್ಮಎಂಬ ಅಪರೂಪದ ಕೃತಿಯನ್ನು ಸಂಪಾದಿಸಿದ್ದರು. ಉತ್ತರ ಭಾರತದಲ್ಲಿ ಬಿ.ಜೆ.ಪಿ. ಅಧಿಕಾರವಿರುವ ರಾಜ್ಯಗಳಲ್ಲಿ ಮತ್ತು ಆರ್.ಎಸ್.ಎಸ್. ದೇಶಾದ್ಯಂತ ನಡೆಸುತ್ತಿರುವ ಶಾಲೆಗಳ ಪಠ್ಯದಲ್ಲಿ ಇತಿಹಾಸವನ್ನು ತಿರುಚುವುದರ ಮೂಲಕ ಮಕ್ಕಳ ಮನಸ್ಸಿಗೆ ವಿಷವನ್ನು ತುಂಬುತ್ತಿರುವ ಬಗೆಯನ್ನು ಕೃತಿಯಲ್ಲಿ  ತಜ್ಞರು ಹಲವು ಸಾಕ್ಷಧಾರಗಳ ಮೂಲಕ ದಾಖಲಿಸಿದ್ದಾರೆ. ಅದೇ ರೀತಿಯಲ್ಲಿ ಮಹಾತ್ಮ ಗಾಂಧಿಯವರ ಹತ್ಯೆಯಲ್ಲಿ ವೀರ್ಸಾವರ್ಕರ್ ಪಾತ್ರ ಕುರಿತು ನಾಥೂರಾಂ ಗೂಡ್ಸೆಯ ವಕೀಲರ ಹೇಳಿಕೆಯಿಂದ ಹಿಡಿದು, ಕೆಂಪುಕೋಟೆಯ ಆವರಣದಲ್ಲಿ ನಡೆದ ವಿಚಾರಣೆಯ ಮಾಹಿತಿಗಳು ಮತ್ತು ಹತ್ಯೆ ಕುರಿತು ಬಾಂಬೆ ಪೋಲಿಸರು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಸುಮಾರು 1800 ಪುಟಗಳ ದಾಖಲೆಗಳಲ್ಲಿ ಅಪರೂಪದ ಅಂಕಿ ಅಂಶಗಳನ್ನು ಹೆಕ್ಕಿ ತೆಗೆದು ಸಂಘ ಪರಿವಾರದ ನಿಜವಾದ ಗೊತ್ತು ಗುರಿಗಳನ್ನು ವಿಶ್ಲೇóಷಣೆಗೆ ಒಳಪಡಿಸಿದ್ದಾರೆ. ಇದೀಗ ಅಂತಹದ್ದೇ ಅಧ್ಯಯನದಲ್ಲಿ ನಿರತರಾಗಿರುವ ಹಾಗೂ ಹೈದರಾಬಾದಿನ ವಿಶ್ವ ವಿದ್ಯಾನಿಲಯದಲ್ಲಿ  1992 ರಿಂದ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕಿಯಾಗಿರುವ ಡಾ. ಮಂಜುಖಟ್ಜು ಅವರು ಎರಡು ಮಹತ್ವದವಿಶ್ವ ಹಿಂದೂ ಪರಿಷತ್ ಅಂಡ್ ಇಂಡಿಯನ್ ಪೊಲಿಟಿಕ್ಸ್ಹಾಗೂಹಿಂದೂಯಿಸಂ ಡೆಮಾಕ್ರಸಿ”  ಎಂಬ ಕೃತಿಗಳನ್ನು ನಮ್ಮ ಮುಂದಿರಿಸಿದ್ದಾರೆ. ಕಳೆದ ಒಂದು ದಶಕದಿಂದ ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿಪತ್ರಿಕೆಗೆ ನಿರಂತರವಾಗಿ ಬರೆಯುತ್ತಿರುವ ಮಂಜರಿಯುವರು ಧರ್ಮ ಮತ್ತು ಜಾತಿಯ ನೆಲೆಗಳಾಚೆ ನಿಂತು ನಿರುದ್ವಿಗ್ನ ಸ್ಥಿತಿಯಲ್ಲಿ ಯೋಚಿಸುತ್ತಾ, ದೇಶದ ರಾಜಕೀಯ ಮತ್ತು ಸಾಮಾಜಿಕ ಸಂಗತಿಗಳನ್ನು ವಿಶ್ಲೇಷಿಸುವ ಪರಿ ನಿಜಕ್ಕೂ ಶ್ಲಾಘನೀಯವಾದುದು. ( ಇವರಿಗೂ ಮತ್ತು ಸದಾ ವಿವಾದಾತ್ಮಕ ಹೇಳಿಕೆ ನೀಡುವ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೆಯ ಖಟ್ಜು ಅವರಿಗೂ ಯಾವುದೇ ಸಂಬಂಧವಿಲ್ಲ)
ತಮ್ಮ ಮೊದಲ ಕೃತಿಯಲ್ಲಿ ವಿಶ್ವ ಹಿಂದೂ ಪರಿಷತ್ ಅಂಡ್ ಇಂಡಿಯನ್ ಪೊಲಿಟಿಕ್ಸ್ ಕೃತಿಯಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾರಂಭವಾದ 1964 ರಿಂದಲೂ ಅದರ ಹೆಜ್ಜೆಯ ಗುರುತುಗಳನ್ನು ದಾಖಲಿಸಿರುವ ಲೇಖಕಿ, 1985 ರಿಂದ ಶ್ರೀರಾಮನ ಹೆಸರನ್ನು ಮುಂಚೂಣಿಗೆ ತಂದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಯೋಜನೆಯ ಕನಸನ್ನು ಜನಸಾಮಾನ್ಯರ ಎದೆಯಲ್ಲಿ ಬಿತ್ತಿದ ಪರಿಯನ್ನು ಹಾಗೂ ಅಯೋಧ್ಯೆಯಲ್ಲಿ ನಡೆದ ಬಾಬರಿ ಮಸೀದಿ ಧ್ವಂಸದ ಪ್ರಕಟರಣದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಅವರುಗಳು ದೇಶದ ಸಾಧು ಮತ್ತು ಸಂತರ ಮೇಲೆ ಬೀರಿದ ಪ್ರಭಾವಗಳನ್ನು ದಾಖಲಿಸಿದ್ದಾರೆ. ಇದರ ಮುಂದುವರಿದ ಭಾಗವಾದ; ಎರಡನೇಯ ಅಧ್ಯಯನ ಕೃತಿಯಲ್ಲಿ ಅಂದರೆ, 2017 ರಲ್ಲಿ ಪ್ರಕಟವಾದ ಹಿಂದೂಯಿಸಂ ಡೆಮಾಕ್ರಸಿ ಕೃತಿಯಲ್ಲಿ 1992 ರಿಂದ 2013 ರವರೆಗೆ ರಾಮಮಂದಿರ ನಿರ್ಮಾಣದ ಯೋಜನೆಯನ್ನು ಜೀವಂತವಾಗಿಡಲು ವಿ.ಹೆಚ್,ಪಿ. ನಡೆಸಿದ ಹೋರಾದಿಂದ ಹಿಡಿದು, 2014 ಸಾರ್ವತ್ರಿಕ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿ.ಜೆ.ಪಿ. ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಧಾರ್ಮಿಕರ ಮುಖಂಡರನ್ನು ಸಂಸತ್ತಿಗೆ ಪ್ರತಿನಿಧಿಗಳಾಗಿ ಆಯ್ಕೆ ಮಾಡುವುದರ ಮೂಲಕ ಹಿಂದೂ ರಾಷ್ಟ್ರವಾದಿಗಳು ಅಧಿಕ ಸಂಖ್ಯೆಯಲ್ಲಿ ಇರುವಂತೆ ನೋಡಿಕೊಳ್ಳುವ ಕಾರ್ಯಯೋಜನೆಯನ್ನು ಬಣ್ಣಿಸಿದ್ದಾರೆ. ಯೋಗಿ ಆದಿತ್ಯನಾಥ್, ಸಾಕ್ಷಿ ಮಹಾರಾಜ್, ಉಮಾ ಭಾರತಿ ಹೋಗೆ ಹಲವು ಹೆಸರುಗಳನ್ನು ಮಂಜರಿಯವರು ಪ್ರಸ್ತಾಪಿಸಿದ್ದಾರೆ.
ಮೇಲು ನೋಟಕ್ಕೆ ಆರ್.ಎಸ್.ಎಸ್, ಮತ್ತು ವಿ.ಹೆಚ್,ಪಿ. ಎರಡೂ ಸಂಘಟನೆಗಳು ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಘಟನೆಗಳಂತೆ ಹಾಗೂ ಭಾರತೀಯ ಜನತಾ ಪಕ್ಷವು ( ಬಿ.ಜೆ.ಪಿ.) ರಾಜಕೀಯ ಸಂಘಟನೆಯಂತೆ ಕಂಡು ಬಂದರೂ ಸಹ ಮೂರು ಸಂಘಟನೆಗಳ ಹೃದಯ ಮತ್ತು ಮಿದುಳು ಒಂದೇ ಆಗಿದ್ದು, ಯೋಜಿತ ಗುರಿ ಕೂಡ ಒಂದೇ ಆಗಿದೆ ಎನ್ನುವ ಮಂಜರಿ ಖಟ್ಜು ಅವರು, ವಿಶ್ವ ಹಿಂದೂ ಪರಿಷತ್ ದೃಷ್ಟಿಕೋನದಲ್ಲಿ  ಭಾರತಕ್ಕೆ 1947 ರಲ್ಲಿ  ಸ್ವಾತಂತ್ರ್ಯ ಬಂದಿದ್ದರೂ ಸಹ, ಅದು ಹಿಂದೂಗಳಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ. ಸಂಪೂರ್ಣ ಹಿಂದೂ ರಾಷ್ಟ್ರದ ನಿರ್ಮಾಣವಾಗಿ ರಾಮರಾಜ್ಯ ಸ್ಥಾಪನೆಯಾದಾಗ  ಮಾತ್ರ ಭಾರತದ ಹಿಂದೂಗಳಿಗೆ ಸ್ವಾತಂತ್ರ್ಯ ಸಿಗಲಿದೆ ಎಂಬ ಸಂಘ ಪರಿವಾರದ ಅಜೆಂಡಾವನ್ನು ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದಾರೆ. ಕಾರಣಕ್ಕಾಗಿ ವಿಶ್ವ ಹಿಂದೂ ಪರಿಷತ್ ದೇಶಾದ್ಯಂತ ನಡೆಸುತ್ತಿರುವ ಶಿಕ್ಷಣ ಸಂಸ್ಥೆ, ಆರೋಗ್ಯ ಸೇವಾ ಸಂಸ್ಥೆಗಳು, ಆಯೋಜಿಸುತ್ತಿರುವ ಮೇಳಗಳು, ಶಿಬಿರಗಳು, ಯಾತ್ರೆಗಳ ವಿವರನ್ನು ನೀಡುವುದರ ಜೊತೆಗೆ ಭಾರತದ ಮೇಲ್ವರ್ಗ ಮತ್ತು ಮಧ್ಯಮ ವರ್ಗದ ಮನ ಗೆದ್ದಿರುವ ಸಂಘ ಪರಿವಾರ ಇದೀಗ ಹಳ್ಳಿಗಳತ್ತ ಗಮನ ಹರಿಸಿ, ದಲಿತರು ಮತ್ತು ಆದಿವಾಸಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿರುವ ಕ್ರಮವನ್ನು ವಿವರಿಸಿದ್ದಾರೆ. ಸದಾ ಅನ್ಯ ಧರ್ಮಿಯರ ಮೇಲೆ ಕೆಂಡ ಕಾರುವುದು, ಅವರ ಆಚರಣೆಗಳನ್ನು ಬಹಿರಂಗವಾಗಿ ಖಂಡಿಸುವುದು ಹಾಗೂ ಅಧಿಕಾರದಿಂದ ದೂರ ಉಳಿದುಕೊಂಡಂತೆ ಇದ್ದರೂ ಸಹ ಆಳುವ ಸರ್ಕಾರದ ಮೇಲೆ ಒತ್ತಡ ಹೇರುವುದರ ಮೂಲಕ ಮಸೂದೆಗಳನ್ನು ಜಾರಿಗೆ ತರುವುದರ ಮೂಲಕ ಅನ್ಯ ಧರ್ಮಗಳು ಮತ್ತು ಸಂಸ್ಕತಿಯ ಮೇಲೆ ಅಧಿಕಾರ ಸ್ಥಾಪಿಸುವ ಹುನ್ನಾರವನ್ನು ಅಂಕಿ ಅಂಶಗಳು ಮತ್ತು ಘಟನೆಗಳ ಮೂಲಕ ಓದುಗರ ಮುಂದಿಟ್ಟಿದ್ದಾರೆ.
ಡಾ. ಮಂಜರಿ ಖಟ್ಜು ಅವರ ಈ ಕೃತಿಗಳು ಕೇವಲ ಸಂಘ ಪರಿವಾರಕ್ಕೆ ಮಾತ್ರವಲ್ಲ, ಜಾತ್ಯಾತೀತ ಅಥವಾ ಧರ್ಮಾತೀತ ಎಂದು ಹೇಳಿಕೊಳ್ಳುವ ಎಲ್ಲಾ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆಯ ಸಂದೇಶದಂತೆ ಇವೆ. ಜಾತಿ ಮತ್ತು ಧರ್ಮವನ್ನು ನಂಬಿ ರಾಜಕಾರಣ ಮಾಡುತ್ತಿರುವ ಇಂದಿನ ರಾಜಕೀಯ ಸನ್ನಿವೇಶದಲ್ಲಿ ಧರ್ಮದ ಅಮಲನ್ನು ಅಥವಾ ಉನ್ಮಾದವನ್ನು ಜನ ಮಾನಸದಲ್ಲಿ  ನಿರಂತರ ಕಾಯ್ದುಕೊಳ್ಳುವುದು ಕಷ್ಟ ಎಂಬುದು ಮನವರಿಕೆಯಾಗುತ್ತದೆ. ಏಕೆಂದರೆ, ಇದೊಂದು ರೀತಿಯಲ್ಲಿ ಹುಲಿಯ ಮೇಲಿನ ಸವಾರಿ ಇದ್ದಂತೆ. ವಿಷದ ಹಾವಿಗೆ ಹಾಲೆರೆದ ಮಾತ್ರಕ್ಕೆ ಅದು ನಮ್ಮನ್ನು ಕಚ್ಚುವುದಿಲ್ಲ ಎಂದು ನಂಬುವುದು ಅವಿವೇಕತನವಾಗುತ್ತದೆ. ಇದಕ್ಕೆ ಉದಾಹರಣೆಯಾಗಿ 2014 ರ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಏರಿದ ನಂತರ ಪ್ರಧಾನಿ ನರೇಂದ್ರ ಮೋದಿಯವರು ನಡೆಸುತ್ತಿರುವ ಕಸರತ್ತುಗಳು ಈಗ ನಮ್ಮೆದುರು ಸಾಕ್ಷಿಯಾಗಿವೆ.

( ಕರಾವಳಿ ಮುಂಜಾವು ಪತ್ರಿಕೆಯಲ್ಲಿ ಪ್ರಕಟವಾದ “ಜಗದಗಲ” ಅಂಕಣ ಬರಹ)