ಶುಕ್ರವಾರ, ಆಗಸ್ಟ್ 28, 2015

ನಮ್ಮ ನಡುವಿನ ಸಾಕ್ಷಿ ಪ್ರಜ್ಞೆ ಕಲ್ಕುಳಿ ವಿಠಲ ಹೆಗ್ಗಡೆಯವರಿಗೆ ಸಮಾಜ ಸೇವಾ ಪ್ರಶಸ್ತಿ


ಗೆಳೆಯರೇ, ಈ ಬಾರಿ ಅಂದರೆ 2015 ರ ಸಾಲಿನ ಇಂಡುವಾಳು ಹೊನ್ನಯ್ಯ ರಾಜ್ಯ ಮಟ್ಟದ ಪ್ರಶಸ್ತಿಗೆ ನಮ್ಮ ನಡುವಿನ ಸಾಕ್ಷಿ ಪ್ರಜ್ಞೆಯಂತಿರುವ ಪರಿಸರವಾದಿ ಹಾಗೂ ಸಾಮಾಜಿಕ ಹಿರಿಯ ಹೋರಾಟಗಾರ ಶೃಂಗೇರಿಯ ಕಲ್ಕುಳಿ ವಿಠಲ ಹೆಗ್ಗಡೆಯವರು ಆಯ್ಕೆಯಾಗಿದ್ದಾರೆ. ಅದೇ ರೀತಿ ಇನ್ನೊಂದು ಸಮಾಜ ಸೇವಾ ಪ್ರಶಸ್ತಿಯಾದ ದೇವಮ್ಮ ಹೊನ್ನಯ್ಯ ಪ್ರಶಸ್ತಿಗೆ ಕೊಪ್ಪಳ ಜಿಲ್ಲೆಯ ಅಕ್ಷರ ದಾಸೋಹಿ ಶ್ರೀಮತಿ ಹುಚ್ಚಮ್ಮ ಚೌದ್ರಿ ಎಂಬ ಮಾತೆ ಆಯ್ಕೆಯಾಗಿದ್ದಾರೆ, ಮಂಡ್ಯ ಜಿಲ್ಲೆಯಲ್ಲಿ ಈಗಿನ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಬಿ. ಜಯಪ್ರಕಾಶ್ ಗೌಡ ನೇತೃತ್ವದಲ್ಲಿ ಸಮಾನ ಮನಸ್ಕ ಗೆಳೆಯರು  ಇಪ್ಪತ್ತು ವರ್ಷಗಳ ಹಿಂದೆ  ಆರಂಭಿಸಿದ ಜನದನಿ ಸಾಂಸ್ಕೃತಿಕ ಟ್ರಸ್ಟ್ ಸಂಸ್ಥೆಯು ಎಲೆ ಮರೆಯ ಕಾಯಿಯಂತೆ ಬದುಕುತ್ತಿರುವ ಹಾಗೂ ಸಮಾಜದ ಮುಖ್ಯವಾಹಿನಿಗೆ ಬಾರದಿರುವ ವ್ಯಕ್ತಿಗಳನ್ನು ಹುಡುಕಿ ಈ ಪ್ರಶಸ್ತಿಗಳನ್ನು ಕೊಡುತ್ತಾ ಬಂದಿದೆ. ಇವರಲ್ಲಿ ಪ್ರಪಥಮವಾಗಿ  ಪ್ರಶಸ್ತಿ ಪಡೆದ ಸಾಲುಮರದ ತಿಮ್ಮಕ್ಕ, ಉತ್ತರ ಕನ್ನಡ ಜಿಲ್ಲೆಯಲ್ಲಿ ಗಿಡ ಮರಗಳನ್ನು ಪೋಷಿಸುತ್ತಿರುವ ವನದೇವತೆ ಹಾಗೂ ಹಾಲಕ್ಕಿ ಹೆಣ್ಣು ಮಗಳು, ತುಳಸಿ, ಬೆಂಗಳೂರಿನಲ್ಲಿ ಅನಾಥ ಹೆಣಗಳನ್ನು ಸಾಗಿಸುವ ತ್ರಿವಿಕ್ರಮ ಮಹಾದೇವ, ಬಿಕ್ಷುಕರನ್ನು ಹಾರೈಕೆ ಮಾಡುವ ಬೆಂಗಳೂರಿನ ಆಟೋ ರಾಜು, ಜೈಲಿನಲ್ಲಿರುವ ಖೈದಿಗಳ ಮಕ್ಕಳಿಗೆ ಶಿಕ್ಷಣ ಮತ್ತು ವಸತಿ ನೀಡುತ್ತಿರುವ ರಿಸರ್ವ್ ಬ್ಯಾಂಕಿನ ಮಾಜಿ ಅಧಿಕಾರಿ ವೈದ್ಯನಾಥನ್  ಹಾಗೂ ಹೆದ್ದಾರಿಗಳಲ್ಲಿ ಅಪಘಾತವಾದರೆ ರಕ್ಷಣೆಗೆ ತಂಡ ಕಟ್ಟಿಕೊಂಡು ಓಡೋಡಿ ಬರುವ ದಾವಣಗೆರೆಯ ಸನಾವುಲ್ಲಾ ಮತ್ತು ಮಾನಸಿಕ ಅಸ್ವಸ್ಥರಿಗೆ ಆಶ್ರಮ ಸ್ಥಾಪಿಸಿ ಪೋಷಿಸುತ್ತಿರುವ ಬೆಳ್ತಂಗಡಿಯ ಕ್ರೈಸ್ತ ಪಾದ್ರಿ ಹೀಗೆ  ಹಲವರಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ಪ್ರಶಸ್ತಿ ಪಡೆದ ಬಹುತೇಕ ಮಂದಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವುದು ವಿಶೇಷ. ಎರಡನೆಯ ವರ್ಷದ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಬಂದಿದ್ದ ಆಗಿನ ಕನ್ನಡ ಸಂಸ್ಕೃತಿಯ ಇಲಾಖೆಯ ಕಾರ್ಯದರ್ಶಿ ವೈ.ಕೆ. ಮುದ್ದುಕೃಷ್ಣ ರವರು ನಮ್ಮ ಇಲಾಖೆಯು ನಿಮ್ಮ ಪ್ರಶಸ್ತಿ ವಿಜೇತರನ್ನು ಗಂಭೀರವಾಗಿ ಗಮನಿಸುತ್ತಿದೆ ಎಂದು ನುಡಿದಿದ್ದರು.
ರಾಜ್ಯ ಮಟ್ಟದಲ್ಲಿ ಹೆಸರುವಾಸಿಯಾದ ಸಮಾಜ ಸೇವೆಗೆ ಮೀಸಲಾದ ಈ ಪ್ರಶಸ್ತಿಗೆ ಈ ಬಾರಿ ಕಲ್ಕುಳಿ ವಿಠಲ ಹೆಗ್ಗಡೆಯವರನ್ನು ಆಯ್ಕೆಯಾಗಿದ್ದಾರೆ. ಈ ತಲೆಮಾರಿನ ಯುವಜನತೆಗೆ ಕಲ್ಕುಳಿಯವರ ಹೊರಾಟದ ಪರಿಚಯವಿಲ್ಲದೆ ಇರಬಹುದು. ಆದರೆ, ನನ್ನ ತಲೆಮಾರಿಗೆ ತಮ್ಮ ಸಾಮಾಜಿಕ ಬದ್ಧತೆ ಮತ್ತು ಪರಿಸರ ಕುರಿತ ಹೋರಾಟಗಳಿಂದ ಅವರು ಮಾದರಿಯಾದವರು. 1980 ರ ದಶಕದಲ್ಲಿ ನಮಗೆ ತಮ್ಮ ಅಪರೂಪದ ಚಿಂತನೆ ಹಾಗೂ ಪರಿಸರ  ಲೇಖನಗಳ ಮೂಲಕ  ಹಿರಿಯ ಪತ್ರಕರ್ತ ನಾಗೇಶ್ ಹೆಗ್ಡೆಯವರು  ನಮ್ಮಂತಹವರಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸಿದರೆ,  ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪಾಂಡುರಂಗ ಹೆಗ್ಡೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಕಲ್ಕುಳಿ ವಿಠಲ ಹೆಗ್ಗೆಡೆಯವರು ಪರಿಸರ ಹೋರಾಟಕ್ಕೆ ಸಾಂಸ್ಥಿಕ ರೂಪ ಕೊಟ್ಟವರು.
ತುಂಗಾ ಮೂಲ ಉಳಿಸಿ ಮತ್ತು ಕುದುರೆ ಮುಖ ಗಣಿಗಾರಿಕೆಯಿಂದಾದ ಪರಿಸರ ನಾಶ ಹಾಗೂ ಅರಣ್ಯಗಳಿಂದ ಅರಣ್ಯವಾಸಿಗಳ ಒಕ್ಕಲೆಬ್ಬಿಸುವಿಕೆ ವಿರುದ್ಧ ನಿರಂತರ ಮೂರೂವರೆ ದಶಕಗಳ ಕಾಲ ಹೋರಾಡುತ್ತಾ ಬಂದ ಕಲ್ಕುಳಿ ವಿಠಲ ಹೆಗ್ಗಡೆಯವರು ತಮ್ಮ ಬದುಕಿನಲ್ಲಿ ಪಡೆದುದಕ್ಕಿಂತ ಕಳೆದು ಕೊಂಡಿದ್ದೆ ಹೆಚ್ಚು.
ಇವರು ಆರಂಭಿಸಿದ ಹೋರಾಟಕ್ಕೆ ನಾಡಿನ ಮೂಲೆ ಮೂಲೆಯಿಂದ ಅನೇಕ ಪ್ರಗತಿ ಪರರು ಕೈ ಜೋಡಿಸಿದ್ದುಂಟು. ಅವರಲ್ಲಿ ಮೈಸೂರಿನ ಸಾಕೇತ್ ರಾಜನ್ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ವಾರಪತ್ರಿಕೆಯೊಂದನ್ನು ಹುಟ್ಟು ಹಾಕಿ ಪ್ರಗತಿ ಪರ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದ ಸಿರಿಮನೆ ನಾಗರಾಜ್ ಹಾಗೂ ಜನಾಂಧಲನದ ಬಂಜಗೆರೆ ಜಯಪ್ರಕಾಶ್ ಹೀಗೆ ಅನೇಕರು ಕುದುರೆ ಮುಖ ಗಣಿಗಾರಿಕೆಯಿಂದ ಆಗುತ್ತಿದ್ದ  ಪರಿಸರ ಅಸಮತೋಲನಕ್ಕೆ  ಆ ಕಾಲಘಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಿದ್ದರು.

ಕಲ್ಕುಳಿ ವಿಠಲ ಹೆಗ್ಗೆಡೆಯವರು ತಮ್ಮ ಹೋರಾಟವನ್ನು ಕೇವಲ ಪರಿಸರ ಕುರಿತಾದ ಚಳುವಳಿಗೆ ಮೀಸಲಾಗಿರಿಸದೆ, ತಮ್ಮ ಸುತ್ತ ಮುತ್ತಲಿನ ಕರ್ಮಠ ಮಠ ಮಾನ್ಯಗಳ  ಅಸಮಾನತೆಯ ಧೋರಣೆಗಳಿಗೆ ಮತ್ತು ಧರ್ಮ ಹಾಗೂ ಜಾತಿಯ ಹೆಸರಿನಲ್ಲಿ ಊಳಿಗಮಾನ್ಯ ಪದ್ಧತಿಯನ್ನು ಜೀವಂತವಿಟ್ಟ್ವ ವ್ಯವಸ್ಥೆಯ ವಿರುದ್ಧ ಹೋರಾಡುತ್ತಲೇ ಸಮಾಜದಲ್ಲಿ ಸಮಾನತೆಯ ಕನಸು ಕಾಣುತ್ತಾ ಬದುಕಿದ್ದವರು. ರೈತ ಹೋರಾಟ, ದಲಿತರ ಪರವಾಗಿನ ಕಳ ಕಳಿ ಇವೆಲ್ಲವೂ ಅವರನ್ನು ಚಿಕ್ಕಮಗಳೂರು ಜಿಲ್ಲೆಯ  ಒಬ್ಬ ಅಸಮಾನ್ಯ ನಾಯಕನನ್ನಾಗಿ ರೂಪಿಸಿದ್ದವು.
2007 ರ ಜುಲೈ ತಿಂಗಳಿನಲ್ಲಿ  ಕುದುರೆ ಮುಖ ಅಭಯಾರಣ್ಯದ ಆದಿವಾಸಿಗಳು ತಮ್ಮನ್ನು ಒಕ್ಕಲೆಬ್ಬಿಸುತ್ತಿರುವುದರ ವಿರುದ್ಧ ನಡೆಸಿದ ಹೋರಾಟವು ಹಿಂಸಾ ರೂಪಕ್ಕೆ ತಿರುಗಿದಾಗ, ಪೊಲೀಸರು ನಡೆಸಿದ ಗೋಲಿಬಾರ್ ನಲ್ಲಿ ನಾಲ್ವರು ಆದಿವಾಸಿಗಳು ಮೃತಪಟ್ಟರು. ಈ ಸಂದರ್ಭದಲ್ಲಿ ವಿಠಲ ಹೆಗ್ಗಡೆಯವರು ಸ್ಥಳದಲ್ಲಿ ಇಲ್ಲದಿದ್ದರೂ ಸಹ ಹಿಂಸೆಗೆ ಪ್ರಚೋದನೆ ನೀಡಿದರು ಮತ್ತು ಸಾರ್ವಜನಿಕ ಹಾಗೂ ಸರ್ಕಾರಿ ಆಸ್ತಿಗೆ ನಷ್ಟ ಉಂಟು ಮಾಡಿದರು ಎಂಬ ಆರೋಪದಡಿಯಲ್ಲಿ ಸರ್ಕಾರವು  ಅವರ ವಿರುದ್ಧ ಮೊಕದ್ದಮೆ ದಾಖಲಿಸಿತು. ಅಲ್ಲಿಂದ ಅವರ ನೋವಿನ ಅಧ್ಯಾಯ ಸಹ ಆರಂಭವಾಯಿತು.
ಆರಂಭದಲ್ಲಿ ಕುದುರೆ ಮುಖ ಗಣಿಗಾರಿಕೆ ವಿರುದ್ಧದ  ಆಂದೋಲನಕ್ಕೆ ಕೈ ಜೋಡಿಸಿದ್ದ  ಮೈಸೂರಿನ ಸಾಕೇತ್ ರಾಜನ್ ಆಂಧ್ರಕ್ಕೆ ತೆರಳಿ ನಕ್ಸಲ್ ಹೋರಾಟವನ್ನು ಕರ್ನಾಟಕದಲ್ಲಿ ವಿಸ್ತರಿಸಬೇಕೆಂದು ಕನಸು ಕಾಣುತ್ತಾ, ಕೆಲವು ಸದಸ್ಯರ ಜೊತೆ ಕರ್ನಾಟಕಕ್ಕೆ  ಬಂದು ಚಿಕ್ಕಮಗಳೂರಿನ ಆರಣ್ಯದಲ್ಲಿ ನೆಲೆಯೂರಿದರು. ಅಲ್ಲಿನ ಗಿರಿಜನ ರಕ್ಷಣೆ ಅವರ ಮುಖ್ಯ ಧ್ಯೇಯವಾಗಿತ್ತು. ಹೀಗೆ ಕರ್ನಾಟಕದಲ್ಲಿ ನಕ್ಸಲ್ ಚಳುವಳಿ ಆರಂಭವಾಗುತ್ತಿದ್ದಂತೆ, ಕಲ್ಕುಳಿಯವರ ವಿರುದ್ಧ ಕತ್ತಿ ಮಸೆಯುತ್ತಿದ್ದ ಪಟ್ಟ ಭದ್ರ ಹಿತಾಸಕ್ತಿಗಳು ಈ ಅವಕಾಶಗಳನ್ನು ಬಳಸಿಕೊಂಡು, ಅವರನ್ನು ನಕ್ಸಲ್ ಸಂಘಟನೆಯ ಬೆಂಬಲಿಗ ಹಾಗೂ ಹಿಂಸೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬಂತೆ ಪ್ರತಿಬಿಂಬಿಸತೊಡಗಿದವು. ಬಲಪಂಥೀಯರ ಕರಪತ್ರದಂತಿರುವ ಕೆಲವು ದಿನ ಪತ್ರಿಕೆಗಳು ಸಹ  ಇದಕ್ಕೆ ಕೈ ಜೋಡಿಸಿದವು. ಇದರ ಪರಿಣಾಮವಾಗಿ ಕಲ್ಕುಳಿ ವಿಠಲ ಹೆಗ್ಗಡೆಯವರನ್ನು ಆಂಧ್ರದ ಪ್ರಜಾ ಸಮರಂ (ಪೀಪಲ್ಸ್ ವಾರ್ ಗ್ರೂಪ್ ) ನ ಸಂಸ್ಥಾಪಕ ಕೊಂಡಪಲ್ಲಿ ಸೀತಾರಾಮಯನವರಿಗೆ ಹೋಲಿಸಿ, ಸರ್ಕಾರಗಳು ಮತ್ತು ಬಲಪಮಥೀಯ ಸಂಘಟನೆಗಳು ಅವರನ್ನು ನೋಡತೊಡಗಿದವು. ಎಂದಿಗೂ ಹಿಂಸೆಯನ್ನು ಆರಾಧಿಸದ ಅಥವಾ ಪ್ರಚೋದಿಸದ ಕಲ್ಕುಳಿಯವರ ಮೇಲೆ ಒಂದಲ್ಲ, ಎರಡಲ್ಲ,  ಬರೋಬ್ಬರಿ ಒಂದು ಡಜನ್ ಕೇಸ್ ಗಳು ದಾಖಲಾದವು. ಇದರ ಜೊತೆಗೆ  ಸ್ವತಃ ಅವರು ದಲಿತರಲ್ಲದಿದ್ದರೂ ಸಹ ಒಂದು ದಶಕದ ಕಾಲ ದಲಿತ ಸಂಘಟನೆಯ ಪರವಾಗಿ ಹೋರಾಡಿದುದಕ್ಕೆ ಪ್ರತಿ ಫಲ ವೆಂಬಂತೆ ಅವರ ಮೇಲೆ ದಲಿತರ ಮೂಲಕ ಮೂರು ಜಾತಿ ನಿಂದನೆ ಮೊಕೊದ್ದಮೆಗಳು ದಾಖಲಾದವು.
ಕೃಷಿಯ ಜೊತೆ ಬದುಕು ಕಟ್ಟಿಕೊಂಡು, ಸಾಮಾಜಿಕ ಚಳುವಳಿಯಲ್ಲಿ ಗುರುತಿಸಿಕೊಂಡು  ತಮ್ಮ ನಿವೃತ್ತಿಯ ದಿನಗಳಲ್ಲಿ ನೆಮ್ಮದಿಯಿಂದ ಬದುಕಬೇಕಿದ್ದ ಕಲ್ಕುಳಿಯವರು ಈಗ ಪತ್ರಿ ವಾರ ಚಿಕ್ಕಮಗಳೂರು ಹಾಗೂ  ಬೆಂಗಳೂರು ಇಲ್ಲಿನ ನ್ಯಾಯಾಲಯಗಳ ಮೆಟ್ಟಿಲು ಹತ್ತಿ ಇಳಿಯುತ್ತಿದ್ದಾರೆ. ಒಬ್ಬ ಸಾಮಾಜಿಕ ಹೋರಾಟಗಾರನಿಗೆ ಈ ಸಮಾಜ ಮತ್ತು ಸರ್ಕಾರ ನೀಡಿರುವ ಬಳುವಳಿ ಇದು. ಶಿವಮೊಗ್ಗ ಜಿಲ್ಲೆಯ ಪೊಲಿಸ್ ವರಿಷ್ಠಾಧಿಕಾರಿಯಾಗಿದ್ದ ಮುರುಗುನ್ ಎಂಬ ಐ.ಪಿ.ಎಸ್. ಅಧಿಕಾರಿ ಇಲ್ಲಿನ ಆರಣ್ಯದ ಸಾಗುವಾನಿ ಮರಗಳನ್ನು ಕದ್ದು ಸಾಗಿಸಿ, ತಮಿಳುನಾಡಿನ ಮಧುರೈ ಜಿಲ್ಲೆಯ ತನ್ನೂರಿನಲ್ಲಿ ಭವ್ಯ ಮನೆ ನಿರ್ಮಿಸಿಕೊಂಡ. ಜೊತೆಗೆ ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಸಾಗುವಾನಿ ಮರಗಳನ್ನು ಶಿವಮೊಗ್ಗ ನಗರದ ತನ್ನ ನಿವಾಸದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟು ಅರಣ್ಯ ಇಲಾಖೆಗೆ ಸಿಕ್ಕಿಬಿದ್ದ. ಇಂತಹ ಸರ್ಕಾರಿ ಕಾಡುಗಳ್ಳನಿಗೆ ನಮ್ಮ ಸರ್ಕಾರ ಭಡ್ತಿ ನೀಡಿ ಉನ್ನತ ಹುದ್ದೆಗೆ ಏರಿಸುತ್ತದೆ. ಆದರೆ, ಅರಣ್ಯ ರಕ್ಷಣೆಗೆ ಹೋರಾಡುವ ಕಲ್ಕುಳಿ ವಿಠಲ ಹೆಗ್ಗಡೆಯಂತಹರ ಮೇಲೆ  ನಿರಂತರವಾಗಿ ಕೇಸ್ ಜಡಿಯುತ್ತದೆ. ಇದು ವರ್ತಮಾನದ ವ್ಯಂಗ್ಯವೂ ಹೌದು. ದುರಂತವೂ ಹೌದು.
ಈ ಕಾರಣಕ್ಕಾಗಿ ಘಾಸಿಗೊಂಡ ಯೋಧನಂತೆ  ಎಲ್ಲಾ ಹೋರಾಟಗಳಿಂದ ದೂರ ಉಳಿದು ನೈಪಥ್ಯಕ್ಕೆ ಸರಿದಿರುವ ಕಲ್ಲುಳಿ ವಿಠಲ ಹೆಗ್ಗಡೆಯವರನ್ನು ಈ ಸಾಮಾಜಿಕ ಸೇವಾ ಪ್ರಶಸ್ತಿಯನ್ನು ಒಪ್ಪಿಕೊಳ್ಳುವಂತೆ ಮಾಡಲು ನಾನು ಅವರ ಜೊತೆ ಸುಧೀರ್ಘವಾಗಿ ಚರ್ಚಿಸಬೇಕಾಯಿತು. ಕಲ್ಕುಳಿಯವರದು ಎಲ್ಲಾ ಪ್ರಶಸ್ತಿಗಳನ್ನು ಮೀರಿ ಬೆಳೆದ ವ್ಯಕ್ತಿತ್ವ ನಿಜ. ಆದರೆ, ನಮ್ಮ ಪಾಲಿಗೆ ಅವರ ಹೋರಾಟದ ಜೀವನವನ್ನು ಮತ್ತು ಸಾಮಾಜಿಕ ಹಾಗೂ ಸಾಂಸ್ಕತಿಕ ಬದ್ಧತೆಯನ್ನು ಗುರುತಿಸಿ ಗೌರವಿಸುದೆಂದರೆ, ಸಮಕಾಲೀನ ಸಂದರ್ಭದ ಸಾರ್ವಜನಿಕ ಬಿಕ್ಕಟ್ಟುಗಳಿಗೆ ಮುಖಾ ಮುಖಿಯಾಗುವ ಕ್ರಿಯಾಶೀಲ ಚೇತನವನ್ನು ಗೌರವಿಸುವುದೇ ಆಗಿದೆ. ಪ್ರಶಸ್ತಿಯನ್ನು ಒಪ್ಪಿಕೊಳ್ಳುವುದರ ಮೂಲಕ ಇಂಡುವಾಳು ಹೊನ್ನಯ್ಯ ಪ್ರಶಸ್ತಿಗೆ ಮೌಲ್ಯ ಹಾಗೂ ಗೌರವ  ತಂದು ಕೊಟ್ಟ ಹಿರಿಯಣ್ಣ ಹಾಗೂ ಮಾರ್ಗದರ್ಶಕರಂತಿರುವ ಕಲ್ಕುಳಿ ವಿಠಲ ಹೆಗ್ಗಡೆಯವರಿಗೆ ಅಭಿನಂದನೆಗಳು.

ಇನ್ನು ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆಯ ಕುಣಿಕೇರಿ ಎಂಬ ಗ್ರಾಮದ ಹುಚ್ಚಮ್ಮ ಚೌದ್ರಿ ಎಂಬ ಮಹಾತಾಯಿ ನಮ್ಮ ಪಾಲಿಗೆ ಅತ್ತಿಮಬ್ಬೆ ದಾನ ಚಿಂತಾಮಣಿಯಂತೆ ಕಾಣುತ್ತಾರೆ. ಮಕ್ಕಳಿಲ್ಲದ  ಈ ವಿಧವೆ ತನ್ನ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಭೂಮಿಯನ್ನು ಸರ್ಕಾರಿ ಶಾಲೆಗೆ  ದಾನ ಮಾಡಿ, ಅದೇ ಶಾಲೆಯಲ್ಲಿ ಬಿಸಿಯೂಟದ ಕೆಲಸದಲ್ಲಿ ಸಹಾಯಾಕಿ ದುಡಿಯುತ್ತಾ ಜಗದ ಮಕ್ಕಳನ್ನು ತನ್ನ ಮಕ್ಕಳಂತೆ  ಪರಿಭಾವಿಸಿ ಬದುಕಿರುವ ಪರಿ ನಿಜಕ್ಕೂ ಮಾದರಿಯಾಗುವಂತಹದ್ದು. ಇವರಿಗೂ ಸಹ ಮಂಡ್ಯ ದ  ಜನದನಿ ಟ್ರಸ್ಟ್ ನಿಂದ ದೇವಮ್ಮ ಹೊನ್ನಯ್ಯ ಸಾಮಾಜಿಕ ಸೇವಾ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇವರಿಗೂ ಸಹ ನನ್ನ ಅಭಿನಂದನೆಗಳು.



ಶನಿವಾರ, ಆಗಸ್ಟ್ 15, 2015

ಗಾಂಧಿಗೆ ಬಾರದ ನಲವತ್ತೇಳರ ಸ್ವಾತಂತ್ರ್ಯ




ಯಾರಿಗೆ ಬಂತು?/ ಎಲ್ಲಿಗೆ ಬಂತು?/ ನಲವತ್ತೇಳರ ಸ್ವಾತಂತ್ರ್ಯ? ಇವು ನಮ್ಮ ನಡುವಿನ ಕವಿ ಸಿದ್ಧಲಿಂಗಯ್ಯನವರು ಮೂರು ದಶಕಗಳ ಹಿಂದೆ  ದೇಶದ ಅಸಮಾನತೆ ಕುರಿತು ಆಕ್ರೋಶದಿಂದ ಬರೆದ ಕವಿತೆಯ ಸಾಲುಗಳಿವು. ನಿಜದ ಮಾತೆಂದರೆ, ಯಾರಿಗೆ ನಿಜವಾದ ಸ್ವಾತಂತ್ರ್ಯ ಬರಬೇಕಿತ್ತೊ, ಅವರ ಪಾಲಿಗೆ ನಲವತ್ತೇಳರ ಸ್ವಾತಂತ್ರ್ಯ ದಕ್ಕಲಿಲ್ಲ. ನಾಡಿನ ಕಡು ಬಡವರು, ಅಸ್ಪøಶ್ಯರು, ಸೂರಿಲ್ಲದವರು, ಹಸಿದು ಭೂಮಿಯನ್ನು ಹಾಸಿಗೆ ಮಾಡಿ, ಆಕಾಶವನ್ನು ಹೊದಿಕೆ ಮಾಡಿಕೊಂಡು ಮಲಗಿದವರು ಇವರ ಪಾಲಿಗೆ ಸ್ವಾತಂತ್ರ್ಯವೆಂಬುವುದು ಗಗನ ಕುಸಮವಾಯಿತು. ಇನ್ನು ಭಾರತದ ಚರಿತ್ರೆಯ ಪುಟಗಳಲ್ಲಿ ಮಹಾತ್ಮ ಗಾಂಧೀಜಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ಎಂಬ  ಅಂಶವನ್ನು ದಾಖಲಿಸಿಕೊಂಡು ಬರಲಾಗುತ್ತಿದೆ. ಭಾರತಕ್ಕೆ ದಕ್ಕಿದ ಸ್ವಾತಂತ್ರ್ಯದ ಕುರಿತು ಗಾಂಧೀಜಿಗೆ ಸಂತೋಷವಾಗಿದ್ದರೆ ಅವರು ಪ್ರಥಮ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಬೇಕಿತ್ತಲ್ಲವೆಹಾಗಿದ್ದರೆ, 1947 ಆಗಸ್ಟ್ ಹದಿನೈದರ ಮಧ್ಯರಾತ್ರಿ ಬ್ರಿಟೀಷರು ಭಾರತಕ್ಕೆ ಸ್ವಾತಂತ್ರವನ್ನು ದಯಪಾಲಿಸಿದಾಗ ಗಾಂಧೀಜಿ ಎಲ್ಲಿದ್ದರು? ಅವರೇಕೆ ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಳ್ಳಲಿಲ್ಲ? ಇಂದಿಗೂ ಪ್ರಶ್ನೆಗಳು ಒಗಟಾಗಿ ಉಳಿದು ಹೋಗಿವೆ. ಇಡೀ ತಮ್ಮ ಬದುಕನ್ನು, ಬವಣೆಗಳನ್ನು, ತಾವು ಮಾಡಿದ ತಪ್ಪುಗಳನ್ನು ಯಾವೊಂದು ಮುಚ್ಚು ಮರೆ ಇಲ್ಲದೆ ಪಾರದರ್ಶಕ ನೆಲೆಯಲ್ಲಿ ದಾಖಲಿಸಿದ ಗಾಂಧೀಜಿಯವರು 1947 ಮೇ ಮತ್ತು ಜೂನ್ ತಿಂಗಳ ನಂತರ ಮಾನಸಿಕ ಆಘಾತಕ್ಕೆ ಒಳಗಾದವರಂತೆ ಮೌನಕ್ಕೆ ಜಾರಿ ಬಿಟ್ಟರು.

ಸ್ವತಂತ್ರ ಭಾರತಕ್ಕಾಗಿ ಇಡೀ ತನ್ನ ಬದುಕು, ಕುಟುಂಬವನ್ನು ತ್ಯಾಗಮಾಡಿದ ಗಾಂಧೀಜಿಯವರು ರಾಷ್ಟ್ರ ಪಿತ ಎನಿಸಿಕೊಂಡರೂ ಸಹ ತನ್ನ ಮಕ್ಕಳಿಗೆ ಒಳ್ಳೆಯ ಪಿತನಾಗದ, ಪತ್ನಿಗೆ ಒಳ್ಳೆಯ ಪತಿಯಾಗದೆ, ವ್ಯಯಕ್ತಿಕ ಹಾಗೂ ಕೌಟುಂಬಿಕ ಬದುಕನ್ನು ಬೀದಿಗೆ ಚೆಲ್ಲಿ, ಹೋರಾಡಿದವರು. ತಾವು ಕಂಡ ಸ್ವಾತಂತ್ರ್ಯದ ಕನಸು ಈಡೇರಿದಾಗ ಮಹಾನುಭವ ಏಕೆ ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯವನ್ನು ಸಂಭ್ರಮಿಸಲಿಲ್ಲ? ಪ್ರಶ್ನೆಗಳಿಗೆ ನಾವು ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದು ತೀರಾ ಕಡಿಮೆಗಾಂಧೀಜಿಯನ್ನು ಮಹಾತ್ಮನ ಪಟ್ಟಕ್ಕೇರಿಸಿ, ಅವರನ್ನು ಪ್ರತಿಮೆಗಳಲ್ಲಿ ಬಂಧಿಸಿ, ಆರಾಧನೆಯಲ್ಲಿ ತೊಡಗಿಕೊಂಡ ಗುಂಪು ಒಂದು ಕಡೆಯಾದರೆ, ಅವರ ದೌರ್ಬಲ್ಯಗಳನ್ನು ಎತ್ತಿ ಹಿಡಿಯುತ್ತಾ ಹಾರಾಡುವುದೇ ನಿಜವಾದ ದೇಶಭಕ್ತಿ ಎಂದು ನಂಬಿರುವವ ಗುಂಪು ಇನ್ನೊಂದು ಕಡೆ ಅಸ್ತಿತ್ವದಲ್ಲಿದೆ. ನಾವು ಗಾಂಧೀಜಿಯನ್ನು ಒಬ್ಬ ವ್ಯಕ್ತಿಯಾಗಿ ಅಥವಾ ಮೋಹನ ದಾಸ ಕರಮಚಂದ್ ಗಾಂಧಿಯಾಗಿ ನೋಡಲಾಗದ ದೃಷ್ಟಿಕೋನದ ಕೊರತೆ ಹಾಗೂ ಅವರನ್ನು ಮಹಾತ್ಮನ ಸ್ಥಾನಕ್ಕೇರಿಸಿ ವಾಸ್ತವ ಸತ್ಯಗಳನ್ನು ಗ್ರಹಿಸಲಾಗದ ಅಸಹಾಯಕತೆ ಇವೆರೆಡೂ ಗಾಂಧೀಜಿಯ ವ್ಯಕ್ತಿತ್ವವನ್ನು ಚರ್ಚೆಯ ತೂಗು ಕತ್ತಿಯ ಕೆಳಗೆ ನಿಲ್ಲಿಸಿವೆ. ಗಾಂಧೀಜಿಯ ಬದುಕೆಂದರೆ, ತನ್ನ ಗುಡಿಸಲಿಗೆ ತಾನೇ ಕೈಯ್ಯಾರ ಬೆಂಕಿ ಹಚ್ಚಿಕೊಂಡು ಊರಿಗೆ ಬೆಳಕಾದ ಪರಿ ಎಂಬ ವಾಸ್ತವ ಸತ್ಯವನ್ನು ನಾವು ಗ್ರಹಿಸುವಲ್ಲಿ ಸಂಪೂರ್ಣವಾಗಿ ಎಡವಿದ್ದೇವಿ. 2002 ರಲ್ಲಿ ಪ್ರಸಿದ್ಧ ಇಂಗ್ಲೀಷ್ ದಿನಪತ್ರಿಕೆ ಹೊರತಂದಲಾಸ್ಟ್ ಟು ಹಂಡ್ರೆಡ್ ಡೇಸ್ ಆಫ್ ಮಹಾತ್ಮ ಗಾಂಧಿಎನ್ನುವ ಅಪೂರ್ವ ಕೃತಿಯೊಂದು ಗಾಂಧೀಜಿಯ ಕೊನೆಯ ದಿನಗಳ ಒಡಲಾಳದ ಸಂಕಟಗಳನ್ನು ಅರಿತು ಕೊಳ್ಳಲು ನಮಗೆ ಸಹಕಾರಿಯಾಗಿದೆ.
ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕಾದ ಅನಿವಾರ್ಯತೆಗೆ ಸಿಲುಕಿದ ಇಂಗ್ಲೇಂಡ್ ಪ್ರಧಾನಿ ಅಟ್ಲಿಯವರು  1947   ಪೆಬ್ರವರಿ ತಿಂಗಳಿನಲ್ಲಿ ಭಾರತಕ್ಕೆ ಸ್ವಾತಂತ್ರ್ಯ ನೀಡುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದರು. ತನ್ನ ಕೊನೆಯ ಅಧಿಕಾರದ ದಿನಗಳಲ್ಲಿ ಅಂದರೆ ಮೇ ತಿಂಗಳಿನಲ್ಲಿ  ಲಾರ್ಡ್ ಮೌಂಟ್ ಬ್ಯಾಟನ್ ಅವರನ್ನು ಭಾರತದ ಕೊನೆಯ ವೈಸ್ ರಾಯ್ ಆಗಿ ನೇಮಕ ಮಾಡುವುದರ ಮೂಲಕ ಇಂಗ್ಲೆಂಡ್ ಸರ್ಕಾರ ಚಾಣಕ್ಷ ನಡೆಯೊಂದನ್ನು  ಪ್ರದರ್ಶಿಸಿತು. ಭಾರತದಲ್ಲಿ ತಾನು ಅಧಿಕಾರ ನಡೆಸಿದ ಸುಮಾರ ಎರಡು ಶತಮಾನಗಳ ಅವಧಿಯುದ್ಧಕ್ಕೂ ಒಡೆದು ಆಳುವ ನೀತಿಯನ್ನು ಅನುಸರಿಸಿದ್ದ ಇಂಗ್ಲೆಂಡ್ ತಾನು ನಿರ್ಗಮಿಸುವ ಹಂತದಲ್ಲಿಯೂ ಅದೇ ನೀತಿಯನ್ನು ಜಾರಿಗೆ ತಂದು ಅಖಂಡ ಭಾರತವನ್ನು ಇಬ್ಭಾಗವಾಗಿ ಸೀಳುವುದರ ಮೂಲಕ ಮನಸ್ಸು ಮನಸ್ಸುಗಳ ನಡುವೆ ಅಡ್ಡಗೋಡೆಯನ್ನು ನಿರ್ಮಿಸಿ ಗಾಂಧೀಜಿಯವರ ಮೇಲಿನ ಸೇಡನ್ನು ವ್ಯವಸ್ಥಿತ ರೀತಿಯಲ್ಲಿ ತೀರಿಸಿಕೊಂಡಿತು. 1930 ರಲ್ಲಿ ಉಪ್ಪಿನ ಸತ್ಯಾಗ್ರಹದ ಮೂಲಕ ಎಂದೂ ಮುಳಗದ ಸಾಮ್ರಾಜ್ಯವೆನಿಸಿದ ಇಂಗ್ಲೆಂಡಿನ ಅಡಿಪಾಯಕ್ಕೆ ಪಟ್ಟು ನೀಡಿದ ಗಾಂಧೀಜಿ ಆನಂತರ ತಮ್ಮ ಬದುಕಿನುದ್ದಕ್ಕೂ ಸ್ವದೇಶಿ ಚಳುವಳಿ, ಭಾರತ ಬಿಟ್ಟು ತೊಲಗಿ ಮುಂತಾದ ಹೋರಾಟಗಳ ಮೂಲಕ ಇಂಗ್ಲೆಂಡ್ ಪಾಲಿಗೆ ಮಗ್ಗುಲ ಮುಳ್ಳಾಗಿದ್ದರು.


ಭಾರತಕ್ಕೆ ಬಂದ ಮೌಂಟ್ ಬ್ಯಾಟನ್ ರವರು ಇಲ್ಲಿನ ರಾಜಕೀಯ ನಾಯಕರನ್ನು ಒಬ್ಬೊಬ್ಬರಾಗಿ ತಮ್ಮ ದೆಹಲಿಯ ಅಧಿಕೃತ ನಿವಾಸಕ್ಕೆ ಕರೆಸಿಕೊಂಡು ಅವರ ಮನದ ಇಂಗಿತವನ್ನು ಅರಿಯುವ ಪ್ರಯತ್ನ ಮಾಡಿದರು. ಗಾಂಧೀಜಿಯವರನ್ನು ಕರೆಸಿಕೊಂಡು, ಅವರನ್ನು ಪರಿಚಯ ಮಾಡಿಕೊಂಡು, ಅವರ ಮುಂದೆ ಇಂಡಿಯನ್ ಮುಸ್ಲಿಂ ಲೀಗ್ ಮುಂದಿಟ್ಟಿದ್ದ ಪ್ರತ್ಯೇಕ ಪಾಕಿಸ್ತಾನದ ಬೇಡಿಕೆಯನ್ನು ಪ್ರಸ್ತಾಪಿಸಿದರು. ಇದನ್ನು ನೇರವಾಗಿ ತಿರಸ್ಕರಿಸಿದ ಗಾಂಧೀಜಿಯವರು, ತಮಗೆ ಏನು ಬೇಕು ಎಂದು ಹೇಳುವ ಹಕ್ಕು ಭಾರತದ ಜನತೆಗೆ ಮಾತ್ರ ಇದೆಯೇ ಹೊರತುರಾಜಕೀಯ ನಾಯಕರಿಗೆ ಅಂತಹ ಹಕ್ಕಿಲ್ಲ ಎಂದು ಸ್ಪಷ್ಟ ಪಡಿಸಿದರು. ನಂತರ ಮಹಮದ್ ಆಲಿ ಜಿನ್ನ ಅವರನ್ನು ಮೂರು ಬಾರಿ, ಜವಹರಲಾಲ್ ನೆಹರೂ ಅವರನ್ನು ಏಳು ಬಾರಿ ಹಾಗೂ ಸರ್ದಾರ್ ವಲ್ಲಬಾಯ್ ಪಟೇಲ್ ಅವರನ್ನು ಎರಡು ಬಾರಿ ತಮ್ಮ ನಿವಾಸಕ್ಕೆ ಕರೆಸಿಕೊಳ್ಳುವುದರ ಮೂಲಕ ಅವರಿಗೆ ಪ್ರಧಾನ ಮಂತ್ರಿಯ ಆಸೆಯನ್ನು ತೋರಿಸಿದ ವೈಸ್ ರಾಯ್ ಮವಂಟ್ ಬ್ಯಾಟನ್ ಭಾರತ ಮತ್ತು ಪಾಕ್ ಇಬ್ಭಾಗವಾಗುವಂತಹ ಅನಿವಾರ್ಯತೆಯನ್ನು ಸೃಷ್ಟಿಸಿದರು. 1947 ಜೂನ್ ತಿಂಗಳಿನಲ್ಲಿ ಮಹಾತ್ಮ ಗಾಂಧೀಜಿ ದೂರದ ನೌಕಾಲಿಯಲ್ಲಿ ಇದ್ದಾಗ, ಅವರಿಗೆ ವಿಷಯವನ್ನು ತಿಳಿಯದಂತೆ ಮರೆ ಮಾಚಿ ಭಾರತ ಮತ್ತು ಪಾಕ್ ಇಬ್ಭಾಗದ ಒಡಂಬಡಿಕೆಗೆ ನೆಹರೂ ಮತ್ತು ಜಿನ್ನಾ ಅವರಿಂದ ಸಹಿ ಪಡೆಯುವಲ್ಲಿ  ಅವರು ಯಶಸ್ವಿಯಾದರು.
ಒಡಂಬಡಿಕೆಗೆ ತೀವ್ರ ಪ್ರತಿರೋಧ ಒಡ್ಡಿದ ಅಬ್ದುಲ್ ಗಫರ್ ಖಾನ್, ಮೌಲನಾ ಅಜಾದ್ ಮತ್ತು ರಾಮ್ ಮನೋಹರ್ ಲೋಹಿಯಾರವರು ವಿಷಯವನ್ನು ಗಾಂಧೀಜಿಯ ಗಮನಕ್ಕೆ ತರುವ ವೇಳೆಗೆ ಪರಿಸ್ತಿತಿ ಕೈ ಮೀರಿ ಹೋಗಿತ್ತು. ಭಾರತ ಮತ್ತು ಪಾಕ್ ಇಬ್ಭಾಗವಾಗುವುದಾದರೆ ಅದು ನನ್ನ ಶವದ ಮೇಲೆ ಎಂದು ನಿರ್ಧಾಕ್ಷಿಣ್ಯವಾಗಿ ಘೋಷಿಸಿಕೊಂಡಿದ್ದ ಗಾಂಧೀಜಿಗೆ ವರ್ತಮಾನ ನಿಜವಾದ ಶಾಕ್ ನೀಡಿತ್ತು. ತಾವು ಮಕ್ಕಳಂತೆ ನಂಬಿದ್ದ ನೆಹರೂ  ಹಾಗೂ ಪಟೇಲ್ ಅವರ ವರ್ತನೆ ಅವರನ್ನು ದಂಗು ಬಡಿಸಿತ್ತು. ಬಗ್ಗೆ ತನಗೇಕೆ ತಿಳಿಸಲಿಲ್ಲ? ಎಂಬ ಗಾಂಧೀಜಿಯವರ ಪ್ರಶ್ನೆಗೆನೀವು ದೂರದಲ್ಲಿದ್ದುದರಿಂದ ತಿಳಿಸಲು ಸಾಧ್ಯವಾಗಲಿಲ್ಲಎಂಬ ಉಢಾಪೆಯ ಉತ್ತರ ನೆಹರೂ ಬಾಯಿಯಿಂದ ಹೊರಬಿತ್ತು. ಇಬ್ಭಾಗವನ್ನು ತಡೆಯುವ ಕೊನೆಯ ಪ್ರಯತ್ನವಾಗಿ ಮೌಂಟನ್ ಬ್ಯಾಟನ್ ನಿವಾಸಕ್ಕೆ ತೀವ್ರ ಹತಾಶ ಸ್ಥಿತಿಯಲ್ಲಿ ಗಾಂಧೀಜಿ   ತೆರಳಿದರು. ಅವರ ಸ್ಥಿತಿ ರೆಕ್ಕ ಮುರಿದ ಹಕ್ಕಿಯಂತಾಗಿತ್ತು. ಆದರೆ ವ್ಯವಸ್ಥಿತ ಸಂಚಿನ ರೂವಾರಿಯಾಗಿದ್ದ ಮೌಂಟ್ ಬ್ಯಾಟನ್ ರವರು ಗಾಂಧೀಜಿ ತಲುಪುವ ವೇಳೆಗಾಗಲೆ ಒಡಂಬಡಿಕೆ ಪತ್ರವನ್ನು ಇಂಗ್ಲೆಂಡ್ ಗೆ ರವಾನಿಸಿದ್ದರು. ನಿರಾಶೆಯಿಂದ ಹಿಂತಿರುಗಿದ ಗಾಂಧಿಜಿ ಅಖಂಡ ಭಾರತದ ಪ್ರಧಾನಿಯಾಗಿ ಜಿನ್ನಾರವನ್ನು ನೇಮಕ ಮಾಡಿ ವಿಭಜನೆಯನ್ನು ತಡೆಗಟ್ಟುವ ಪ್ರಯತ್ನ ಮಾಡಿದರು. ಆದರೆ ನೆಹರೂ, ಪಟೇಲ್ ಆದಿಯಾಗಿ ಕಾಂಗ್ರೇಸ್ ಬಹುತೇಕ ನಾಯಕರು ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದರು.
ಸುಧೀರ್ಘ ಮೂರು ದಶಕಗಳ ಕಾಲ ಭಾರತದಲ್ಲಿ ಸ್ವಾತಂತ್ರ್ಯದ ಹೋರಾಟವನ್ನು ಮುನ್ನಡೆಸಿ, ಅನೇಕರ ಜನ ನಾಯಕರನ್ನು ಹುಟ್ಟು ಹಾಕಿದ್ದ ಗಾಂಧಿಜಿಯವರ ಮಾತುಗಳು ಮತ್ತು ಚಿಂತನೆಗಳು ಅವರ ಕೊನೆಯ ದಿನಗಳಲ್ಲಿ ಶಿಷ್ಯರ ಪಾಲಿಗೆ, ವಿಶೇಷವಾಗಿ ನೆಹರೂ, ಸರ್ದಾರ್ ವಲ್ಲಬಾಯ್ ಪಟೇಲ್ ರವರ ಪಾಲಿಗೆ ವೃದ್ಧನೊಬ್ಬನ ಪ್ರಲಾಪಗಳಂತೆ ತೋರ ತೊಡಗಿದವು.


ಭಾರತ ಮತ್ತು ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ನೀಡುವ ದಿನಾಂಕವನ್ನು ಆಗಸ್ಟ್ ಹದಿನೈದು ಎಂದು ನಿರ್ಧರಿಸಲಾಯಿತು. ಕಾಕತಾಳಿಯವೆಂಬಂತೆ ಆಗಸ್ಟ್ 15 ಮೌಂಟ್ ಬ್ಯಾಟನ್ ಅವರ ಪತ್ನಿ ಎಡ್ವಿನಾ ಅವರ ಹುಟ್ಟು ಹಬ್ಬವಾಗಿತ್ತು. ಸ್ವಾತಂತ್ರ್ಯ ಹತ್ತಿರವಾಗುತ್ತಿದ್ದಂತೆ ಭಾರತ ಮತ್ತು ಪಾಕ್ ವಿಭನೆಯ ಕಾಲದಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ  ಅಗ್ನಿ ಜ್ವಾಲೆಯಂತೆ ಸ್ಪೋಟಿಸಿ  ಹೊತ್ತಿಕೊಂಡ ಕೋಮು ಗಲಭೆಯ ಜ್ವಾಲೆ ಇಡೀ ದೇಶವನ್ನು ಆವರಿಸಿದಾಗ, ಘಟನೆ ಗಾಂಧೀಜಿಯವರ ಪಾಲಿಗೆ ಹಸಿ ಗಾಯದ ಮೇಲೆ ಉಪ್ಪು ಸವರಿದಂತಾಯಿತು. ಸರ್ವ ಧರ್ಮಗಳ ನಡುವಿನ ಮೈತ್ರಿ ಮತ್ತು ಜಾತ್ಯಾತೀತ ಮನೋಭಾವಗಳನ್ನು ಪ್ರೋತ್ಸಾಹಿಸುತ್ತಾ, ಅಸ್ಪøಶ್ಯತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇಡೀ ಆಯಸ್ಸನ್ನು ಸೆವೆಸಿದ್ದ ಗಾಂಧಿಯಂತಹ ಹಿರಿಯ ಜೀವಕ್ಕೆ ತಮ್ಮ ಕೊನೆಯ ದಿನಗಳಲ್ಲಿ ಕೋಮು ಗಲಭೆಯನ್ನು ಹತ್ತಿಕ್ಕುವ ಅನಿರೀಕ್ಷಿತ ಹೊಣೆಗಾರಿಕೆ ಅವರ ಹೆಗಲೇರಿತು.
ಕೊಲ್ಕತ್ತ ನಗರ ಸೇರಿಂದತೆ, ಪೂರ್ವ ಭಾರತದ ಅನೇಕ ನಗರ, ಪಟ್ಟಣಗಳÀಲ್ಲಿ ಹತ್ತಿ ಉರಿಯುತ್ತಿದ್ದ ಕೋಮು ದಳ್ಳುರಿಯನ್ನು ನಂದಿಸಲು ಗಾಂಧೀಜಿ ಆಗಸ್ಟ್ ತಿಂಗಳಿನಲ್ಲಿ ಕೊಲ್ಕತ್ತ ನಗರದತ್ತ ಹೊರಟರು. ಇತ್ತ ಧರ್ಮ, ಜಾತಿಗಳ ಹೆಸರಿನಲ್ಲಿ ಕತ್ತಿ ಹಿಡಿದು ಪರಸ್ಪರ ಇರಿದುಕೊಂಡು ನೆತ್ತರು ಸುರಿಸಿಕೊಂಡು ಹೆಣವಾದವರ ನಡುವೆ, ದೆಹಲಿಯಲ್ಲಿ, ನೆಹರೂ ಹಾಗೂ ದೂರದ ಕರಾಚಿಯಲ್ಲಿ ಜಿನ್ನಾ ಇಬ್ಬರೂ ಸ್ವಾತಂತ್ರ್ಯ ದಿನ  ಪ್ರಧಾನಿ ಪಟ್ಟಕ್ಕೇರಲು  ವಿವಾಹದ ನವ ವರರಂತೆ ಸೂಟು, ಬೂಟು ತಯಾರಿಸಿಕೊಂಡು, ಗುಲಾಬಿ ಮತ್ತು ಅತ್ತರಿನ ನಡುವೆ ಶೃಂಗಾರದಲ್ಲಿ ನಿರತರಾಗಿದ್ದರು.
 ಕೋಮು ಗಲಭೆಯಿಂದ ಹತ್ತಿ ಉರಿಯುತ್ತಿದ್ದ ಕೊಲ್ಕತ್ತ ನಗರದ ರಸ್ತೆಗಳಲ್ಲಿ ಹರಡಿಕೊಂಡಿದ್ದ ಇಟ್ಟಿಗೆ, ಕಲ್ಲು, ಗಾಜಿನ ಚೂರುಗಳ ನಡುವೆ, ಹಸಿ ನೆತ್ತರಿನ ನೆಲದಲ್ಲಿ ಬರಿಗಾಲಲ್ಲಿ ನಡೆಯುತ್ತಾ ನೊಂದವರ ಕಣ್ಣೀರು ಒರೆಸುತ್ತಾ, ಒಳಗೊಳಗೆ ಅಳುತ್ತಾ ಬದುಕಿದ್ದ ಗಾಂಧೀಜಿಯ ನೆನಪು ದೇಶಕ್ಕೆ ಸ್ವಾತಂತ್ರ್ಯ ಬಂದ ದಿನ ಯಾರಿಗೂ ಬೇಡವಾಗಿತ್ತು. ಆಗಸ್ಟ್ 14 ರಂದು ಗುರುವಾರ ತಡರಾತ್ರಿಯವರೆಗೆ ಕೊಲ್ಕತ್ತ ನಗರದಲ್ಲಿ ತಾವು ತಂಗಿದ್ದ ಹೈದರ್ ಮ್ಯಾನ್ಸನ್ ಎಂಬ ನಿವಾಸದ ಬಳಿ ನೆರದಿದ್ದ ಹಿಂದೂ, ಮುಸ್ಲಿಮರಿಗೆ ಗಾಂಧೀಜಿ ಸಾಂತ್ವನ ಹೇಳುತ್ತಿದ್ದರು. ಪ್ರತಿ ದಿನ ರಾತ್ರಿ 9 ಗಂಟೆಗೆ ನಿದ್ರೆಗೆ ಜಾರಿ ಬೆಳಗಿನ 3 ಗಂಟೆಗೆ ಏಳುತ್ತಿದ್ದ ಗಾಂಧೀಜಿ ಅಂದು ರಾತ್ರಿ ಹನ್ನೊಂದು ಗಂಟೆಯವರೆಗೂ ಮಲಗಲು ಸಾಧ್ಯವಾಗಿರಲಿಲ್ಲ. ನಿದ್ರೆ ಮಾಡಲು ಹೊರಟಾಗ, ಅವರ ಬಳಿ ಇದ್ದ ಸುಹ್ರವಾರ್ದಿ ಎಂಬುವರು ಇನ್ನೊಂದು ಗಂಟೆಯಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರಕಲಿದೆ. ಕಾಯೋಣ ಎಂದಾಗ, ಮೌನಕ್ಕೆ ಶರಣಾದ ಗಾಂಧೀಜಿ ಎಂದಿನಂತೆ  ನಿದ್ರೆಗೆ ಜಾರಿದರು. ಕೋಮು ಗಲಬೆಯ ನಡುವೆಯೂ ಮಧ್ಯರಾತ್ರಿ ಕೊಲ್ಕತ್ತ ಜನರು ತ್ರಿವರ್ಣ ಧ್ವಜ ಹಾರಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚುತ್ತಿದ್ದಾಗ, ಘಾಸಿಗೊಂಡ ಹಕ್ಕಿಯಂತೆ ಗಾಂಧೀಜಿಯವರು ಹಾಸಿಗೆಯಲ್ಲಿ ಮುದುಡಿ ಮಲಗಿದ್ದರು. ಇತ್ತ ದೆಹಲಿಯಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನೆಹರೂ ಐತಿಹಾಸಿಕ ಭಾಷಣ ಮಾಡುತ್ತಿದ್ದರು.


ಮರು ದಿನ ಬೆಳಿಗ್ಗೆ ಇಂಗ್ಲೆಂಡ್ ನಿಂದ ಬಂದಿದ್ದ ಕೆಲವು ಪತ್ರಗಳನ್ನು ಬಂಗಾಳದ ಗವರ್ನರ್ ಆಗಿದ್ದ ರಾಜಾಜಿಯವರು ಗಾಂಧೀಜಿಗೆ ತಲುಪಿದಿದ್ದರು. ಚರಕ ನೂಲುತ್ತಾ ಪತ್ರಗಳಿಗೆ ಉತ್ತರವನ್ನು ಬರೆಸಿದ ಗಾಂಧೀಜಿಯವರು, ಇಂಗ್ಲೆಂಡ್ ಲೋಕ ಸಭೆಯÀಲ್ಲಿ ನನ್ನ ಕುರಿತು ಏನು ಚರ್ಚೆಗಳಾದವು ಎಂಬುದರ ಕುರಿತು ನನಗೆ ಆಸಕ್ತಿಯಿಲ್ಲ ಎಂದು ಗೆಳೆಯರಿಗೆ ಉತ್ತರಿಸಿದ್ದರು.
ಸಾವಿರಾರು ಪೋಲಿಸರು ನಿಯಂತ್ರಿಸಲಾಗದ ಕೊಲ್ಕತ್ತ ನಗರದ ಕೋಮು ಗಲಭೆಯನ್ನು ಗಾಂಧೀಜಿ ನಿಯಂತ್ರಿಸಿದ ಬಗೆಯನ್ನು  ಒನ್ ಮ್ಯಾನ್ ಆರ್ಮಿ ಎಂದು ಬಣ್ಣಿಸಿದ ಅಮೇರಿಕಾದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ಇದೊಂದು ಪವಾಡ ಎಂದು ಬಣ್ಣಿಸಿತು. ಇದಕ್ಕೆ ಉತ್ತರವೇನೋ ಎಂಬಂತೆ ಗಾಂಧೀಜಿಯವರು ತಮ್ಮ ಹರಿಜನ ಪತ್ರಿಕೆಯಲ್ಲಿ ತೀರಾ ವೈರಾಗ್ಯದ ಮಾತುಗಳನ್ನಾಡಿದರು. ಅವರ ಮಾತುಗಳು ಹೀಗಿದ್ದವು. “ ನಾವೆಲ್ಲಾ ಸೃಷ್ಟಿಕರ್ತ ದೇವರ ಕೈ ಗೊಂಬೆಗಳು. ಆತನ ಕೊಳಲಿನ ನಾದಕ್ಕೆ ನರ್ತಿಸುವುದಷ್ಟೇ ನಮ್ಮ ಕರ್ತವ್ಯ.” ಗಾಂಧೀಜಿಯವರ ಮಾತುಗಳನ್ನು ಗಮನಿಸಿದರೆ, ನೆಲದ ಮೇಲಿನ ಓರ್ವ ನತದೃಷ್ಟ ಹಾಗೂ ದುರಂತ ನಾಯಕನೊಬ್ಬ ಆಡಬಹುದಾದ ನೋವಿನ ಮಾತುಗಳಂತೆ ಅವು ನಮಗೆ ಕೇಳಿ ಬರುತ್ತವೆ.


ಬುಧವಾರ, ಆಗಸ್ಟ್ 12, 2015

ಕರ್ನಾಟಕ ಸಂಗೀತದ ದೇವತೆ ಬೆಂಗಳೂರು ನಾಗರತ್ನಮ್ಮನವರ ದುರಂತದ ನೆನಪುಗಳು



ಕರ್ನಾಟಕ ಸಂಗೀತ ಮತ್ತು ನೃತ್ಯ ಕುರಿತ ನಾಲ್ಕು ಸಂಪುಟಗಳ ಮಾಲಿಕೆಯಲ್ಲಿ ಮೊದಲಿಗೆ ದೇವದಾಸಿ ಸಮುದಾಯದಿಂದ ಬಂದು ದೇವತೆಗಳ ಸ್ಥಾನಕ್ಕೇರಿದ  ಕನ್ನಡತಿ ಬೆಂಗಳೂರು ನಾಗರತ್ನಮ್ಮ ಮತ್ತು ಎಂ.ಎಸ್. ಸುಬ್ಬುಲಕ್ಷ್ಮಿ ಈ ಎರಡು ಕೃತಿಗಳನ್ನು ಕಳೆದ ಮೇ ತಿಂಗಳಿನಲ್ಲಿ ಬರೆದು ಮುಗಿಸಿದೆ. ಜೂನ್ ತಿಂಗಳಿನಲ್ಲಿ  ಈ ಕೃತಿಗಳು ಬಿಡುಗಡೆಯಾಗ ಬೇಕಿತ್ತು. ಪ್ರಕಟಣೆಗೆ ಮುಂದಾಗಿದ್ದ ಡಾ. ಆರ್ .ಪೂರ್ಣಿಮಾ ಮೇಡಂ ಅನಿರೀಕ್ಷಿತವಾಗಿ ಮೂರು ತಿಂಗಳ ಕಾಲ ಅಮೇರಿಕಾಕ್ಕೆ ಹೋದುದರಿಂದ ಬಿಡುಗಡೆ ಸೆಪ್ಟಂಬರ್ ತಿಂಗಳಿಗೆ ಮುಂದೂಡಿತು.
ನಾಗರತ್ನಮ್ಮನವರ ಕೃತಿಯ ಮೊದಲ ಅಧ್ಯಾಯದಲ್ಲಿ ಕೆಲವು ಕಟು ವಾಸ್ತವ ಸಂಗತಿಗಳನ್ನು ದಾಖಲಿಸಿದ್ದೆ. ಏಕೆಂದರೆ, 1920 ರ ದಶಕದಲ್ಲಿ ತನ್ನ ಸಂಪಾದನೆಯಾದ 26 ಲಕ್ಷ ರೂಪಾಯಿಗಳನ್ನು ವಿನಿಯೋಗಿಸಿ, ಅನಾಥವಾಗಿದ್ದ ತ್ಯಾಗರಾಜ ಸಮಾಧಿಗೆ ದೇಗುಲ ಕಟ್ಟಿಸಿ, 20 ಎಕರೆ ಭೂಮಿಯನ್ನು ಧಾನ ಮಾಡಿ, ಕರ್ನಾಟಕ ಸಂಗೀತದಲ್ಲಿ ಅತಿ ದೊಡ್ಡ ಸಂಗೀತ ಉತ್ಸವವಾದ “ ತ್ಯಾಗರಾಜರ ಸಂಗೀತ ಆರಾಧನೆಗೆ ಸಾಂಸ್ಥಿಕ ರೂಪ ಕೊಟ್ಟ ಕನ್ನಡತಿ ಬೆಂಗಳೂರು ನಾಗರತ್ನಮ್ಮನವರ ದುಸ್ಥಿತಿಯನ್ನು ಈ ಕೆಳಗಿನ ಮಾತುಗಳಲ್ಲಿ ಈ ರೀತಿ ದಾಖಲಿಸಿದ್ದೆ.
“ದುರಂತವೆಂದರೆ, ಇಡೀ ತಿರುವಯ್ಯೂರು  ತ್ಯಾಗರಾಜಮಯವಾಗಿರುವ ದಿನಗಳಲ್ಲಿ ಯಾರಿಗೂ ಬೆಂಗಳೂರು  ನಾಗರತ್ನಮ್ಮನವರ ನೆನಪು ಬೇಡವಾಗಿದೆ.ತ್ಯಾಗರಾಜರ ಸಮಾಧಿ ಇರುವ ದೇಗುಲದಲ್ಲಿ ನಾಗರತ್ನಮ್ಮನವರ ಒಂದು ಚಿತ್ರ ಮತ್ತು ನಾಗರತ್ನಮ್ಮಾಳ್ ಟ್ರಸ್ಟ್ ಎಂಬ ಫಲಕ ಬಿಟ್ಟರೆ, ಬೇರೇನೂ ಮಾಹಿತಿಯಿಲ್ಲ. ನಾಯಿ ಗೂಡಿನಂತಿರುವ ನಾಗರತ್ನಮ್ಮನವರ ಪುಟ್ಟ ಗುಡಿಗೆ ಬೀಗ ಹಾಕಿ ಜಡಿಯಲಾಗಿದೆ. ಅವರ ಮೂರ್ತಿಗೆ ಉಡಿಸಿದ ಸೀರೆಗೆ ದೂಳು ಆವರಿಸಿಕೊಂಡಿದೆ. ಪ್ರತಿ ಎರಡು ಮೂರು ಗಂಟೆಗೆ ತ್ಯಾಗರಾಜರ ಮೂರ್ತಿಯ ಮೇಲಿನ ವಸ್ತ್ರವನ್ನು, ರುದ್ರಾಕ್ಷಿ ಹಾರವನ್ನು ತೆಗೆದು, ಗಂದ, ವಿಭೂತಿ ಹಚ್ಚಿ, ಹೊಸ ವಸ್ತ್ರ ತೊಡಿಸುವ ಮಂದಿಗೆ ನಾಗರತ್ನಮ್ಮ ನೆನಪಾಗುವುದಿಲ್ಲ. ಅಂದು ನಾಗರತ್ನಮ್ಮ ಮನಸ್ಸು ಮಾಡದಿದ್ದರೆ, ಇಂದು ತಿರುವಯ್ಯೂರಿನಲ್ಲಿ ತ್ಯಾಗರಾಜರೂ ಇರುತ್ತಿರಲಿಲ್ಲ, ತಿರುಪತಿ ತಿಮ್ಮಪ್ಪನೂ ಇರುತ್ತಿರಲಿಲ್ಲ. ವಾಸ್ತವವನ್ನು ಮರೆತಿರುವ ಇಂದಿನ ಜನಕ್ಕೆ ತ್ಯಾಗರಾಜರ ಆರಾಧನೆ ಒಬ್ಬ ದೇವದಾಸಿ ಹೆಣ್ಣು ಮಗಳಿಂದ ಆರಂಭವಾದ ಆರಾಧನೆ ಎಂದು ಹೇಳಿಕೊಳ್ಳುವುದು ಮುಜುಗರದ ಸಂಗತಿಯಾಗಿದೆ.”
                         (ನಾಗರತ್ನಮ್ಮನವರ ಸಮಾಧಿಯ ಮೇಲೆ ಕಟ್ಟಿಸಲಾಗಿರುವ ಪುಟ್ಟ ದೇಗುಲ)
                                         (ನಾಗರತ್ನಮ್ಮನವರ ದೇಗುಲಕ್ಕೆ ಹಾಕಿರುವ ಬೀಗಗಳು)

                                    (ಗುಡಿಯೊಳಗೆ ಅನಾಥವಾಗಿರುವ ನಾಗರತ್ನಮ್ಮನವರ ಮೂರ್ತಿ)

ಕಳೆದ ವಾರ ತಂಜಾವೂರು, ತಿರುವರೂರು ಹಾಗೂ ಕುಂಬಕೋಣಂ ಸುತ್ತ ಮುತ್ತಲಿನ 27 ದೇವಾಲಯಗಳಲ್ಲಿ ಆಚರಣೆಯಲ್ಲಿದ್ದ ಹಾಗೂ ಆಗಮ ಶಾಸ್ತ್ರದ ಹಿನ್ನಲೆಯಲ್ಲಿ ರೂಪುಗೊಂಡಿದ್ದ ಸಂಗೀತ, ನೃತ್ಯ ಮತ್ತು ಪೂಜೆಯ ವಿವರಗಳನ್ನು ದಾಖಲಿಸಿತ್ತಾ ಓಡಾಡುತ್ತಿದ್ದೆ. ಈ ವೇಳೆ ಮತ್ತೇ ತಿರುವಯ್ಯಾರಿಗೆ ಬೇಟಿ ನೀಡಿ, ನಾಗರತ್ನಮ್ಮನವರ ಸಮಾಧಿ ಅಥವಾ ಪುಟ್ಟ ಗುಡಿ, ಅದಕ್ಕೆ ಹಾಕಲಾಗಿರುವ ಬೀಗ, ದೂಳು ಹಿಡಿದ ಪ್ರತಿಮೆ ಇವುಗಳನ್ನು ಚಿತ್ರಿಸಿಕೊಂಡು ಬಂದೆ.
ನಾಗರತ್ನಮನ್ನವರ ಸಮಾಧಿಯ ಮುಂದೆ 


(ನಾಗರತ್ನಮ್ಮನವರು  ತಿರುವಯ್ನಿಯಾರಿನ ಕಾವೇರಿ ನದಿ ತೀರದಲ್ಲಿ ನಿರ್ಮಿಸಿದ ತ್ಯಾಗರಾಜರ ದೇವಸ್ಥಾನ)


ಕೊನೆಯ ಮಾತು- ನಾಗರತ್ನಮ್ಮನವರಿಗೆ ರೇಷ್ಮೆ ಸೀರೆ ಉಡಿಸಿ ಪೂಜೆ ಮಾಡಿರುವ ಚಿತ್ರ ಮೂರು ವರ್ಷದ ಹಿಂದಿನದು. ಈಗಲೂ ದೂಳು ಹಿಡಿದ ಸೀರೆ ಅವರ ಮೂರ್ತಿಯ ಮೇಲಿದೆ.