ಶನಿವಾರ, ಜೂನ್ 29, 2013

ಗಾಂಧಿಗಿರಿಯ ಫಸಲುಗಳು


ಶತಮಾನದ ಹಿಂದೆ ಗಾಂಧೀಜಿಯವರು ಬರೆದ ಹಿಂದ್ ಸ್ವರಾಜ್ ಕೃತಿಯನ್ನು ಇವೊತ್ತಿಗೂ ನಮಗೆ ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಅಲ್ಲಿನ ಗ್ರಾಮಸ್ವರಾಜ್ಯದ ಪರಿಕಲ್ಪನೆಗಳು ಮತ್ತು ಜೀವ ಪರಿಸರಕ್ಕೆ ಎರವಾಗದಂತಹ ಅವರ ಕ್ರಾಂತಿಕಾರಿ ಚಿಂತನೆಗಳು ಕುರಿತಂತೆ ಅವರ ನಿಲುವುಗಳು ಬದುಕಿನುದ್ದಕ್ಕೂ ಬದಲಾಗಲಿಲ್ಲ. ಗಾಂಧಿಯವರ ಚಿಂತನೆಗಳಲ್ಲಿ ಭಾರತದ ಬಹುಮುಖಿ ಸಂಸ್ಕೃತಿ ಮತ್ತು ಇಲ್ಲಿನ ಜನರ ವಿಶೇಷವಾಗಿ ಪೂರ್ವಿಕರ ಲೋಕವಿದ್ಯೆಯ ಜ್ಙಾನದ ಬಗ್ಗೆ ಅಪಾರ ನಂಬಿಕೆಗಳಿದ್ದವು. ನಿಸರ್ಗದ ಚಟುವಟಿಕೆಯನ್ನು ಗಹನವಾಗಿ ಅಧ್ಯಯನ ಮಾಡಿದ್ದ ಗಾಂಧೀಜಿಗೆ ಜಗತ್ತಿನ ಸಕಲೆಂಟು ಜೀವರಾಶಿಗಳಿಗೆ ಎರವಾಗದಂತೆ ಮನುಷ್ಯ ಬದುಕುವುದು ಮುಖ್ಯವಾಗಿತ್ತು. ಹಾಗಾಗಿ ಅವರು, ಸ್ವದೇಶಿ, ಚರಕ, ಅಹಿಂಸೆ ಮುಂತಾದ ಪರಿಕಲ್ಪನೆಗಳಲ್ಲಿ ತಮ್ಮ ಚಿಂತನೆಯ ಧಾರೆಗಳನ್ನು ಸಂಲಗ್ನಗೊಳಿಸಿದರು. ಅವರ ಚಿಂತನೆಗಳು ಇವೊತ್ತಿನ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಸಹ ನಮ್ಮನ್ನು  ತೀವ್ರಗತಿಯಲ್ಲಿ ಕಾಡುತ್ತಿವೆ. ಅಭಿವೃದ್ದಿಯ ವಿಕೃತಿಗಳು ಮತ್ತು ಕೊಳ್ಳುಬಾಕು ಸಂಸ್ಕೃಯಿಂದಾಗಿ ನಮ್ಮ ಕಣ್ಣೆದರುಗಿನ ನೀರು, ನೆಲ, ಬೆಟ್ಟ, ಕಾಡುಗಳು ಕರಗುತ್ತಿರುವಾಗ ಪದೇ ಪದೇ  ಗಾಂಧೀಜಿ ನೆನಪಾಗುತ್ತಾರೆ. ಗಾಂಧೀಜಿ ನಮ್ಮೆದುರು ಇಲ್ಲದಿದ್ದರೂ ಅವರ ಚಿಂತನೆಗಳು ಆಧುನಿಕ ಜಗತ್ತನ್ನು ಇದೀಗ  ಹಲವು ಬಗೆಯಲ್ಲಿ ಪ್ರೆರೇಪಿಸುತ್ತಿವೆ.
ವರ್ತಮಾನದ ಜಗತ್ತಿನ ಅರ್ಥಶಾಸ್ತ್ರಜ್ಙರ ಪಡೆಯೊಂದು ರೂಪುಗೊಂಡಿದ್ದು, ಅವರೆಲ್ಲರೂ ಜಾಗತೀಕರಣದ ಪ್ರಭಾವದಿಂದ ದಿಕ್ಕೆಟ್ಟ ಆಧುನಿಕ ಜಗತ್ತಿಗೆ ದಿಕ್ಕು ದೆಸೆ ತೋರಿಸುತ್ತಿದ್ದಾರೆ. ನೋಬಲ್ ಪ್ರಶಸ್ತಿ ವಿಜೇತರಾದ ಅಮಾರ್ತ್ಯ ಸೇನ್, ಜೋಸೆಫ್ ಸ್ಲಿಗ್ಲಿಟ್ಜ್, ಮಹಮದ್ ಯೂನಸ್, ಡೊಗ್ಲಾಸ್ ಸಿ. ನಾಥ್. ಇವರ ಚಿಂತನೆಗಳಲ್ಲಿ ಗಾಂದೀಜಿಯವರ ಪ್ರಭಾವಗಳಿವೆ. ಅಷ್ಟೆ ಏಕೆ? ಭಾರತದ ಹಿರಿಯ ಪತ್ರಕರ್ತರಾದ ಪಿ.ಸಾಯಿನಾಥ್, ಕಲ್ಪನಾ ಶರ್ಮ, ಮತ್ತು ರಜನಿ ಕೊಥಾರಿಯವರ ಕೃತಿ ಮತ್ತು ಬರಹಗಳಲ್ಲಿ ಗಾಂಧೀಜಿಯವರ ಜೀವಪರ ಚಿಂತನೆಗಳನ್ನು ನಾವು ಕಾಣಬಹುದು.
ಗಾಂಧೀಜಿ ಬದುಕಿದ್ದಾಗಲೇ ಅವರಿಂದ ಪ್ರಭಾವಿತಗೊಂಡ ಜೆ.ಸಿ. ಕುಮಾರಪ್ಪ ಮತ್ತು ಶೂಮಾಕರ್ ಅರ್ಥಶಾಸ್ತ್ರದ ವಾಖ್ಯಾನಗಳನ್ನು ಬದಲಾಯಿಸಿದ್ದರು. ಪ್ರಕೃತಿ ತನ್ನ ಎಲ್ಲಾ ಘಟಕಗಳ ಸಹಕಾರವನ್ನು ಬಯಸುತ್ತದೆ. ಪ್ರತಿಯೊಂದು ಘಟಕ ತನ್ನಷ್ಟಕ್ಕೆ ತಾನು ಕೆಲಸ ಮಾಡುತ್ತಾ, ಬೇರೆಯ ಘಟಕಗಳು ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ನಡೆದಾಡಬಲ್ಲವನು, ನಡೆಯಲಾರದವನಿಗೆ ನೆರವಾಗುವಂತೆ, ನಿಸರ್ಗದ ಪ್ರತಿಯೊಂದು ಕ್ರಿಯೆಯೂ ಇನ್ನೊಂದರ ಮೇಲೆ ಅವಲಂಬಿತವಾಗಿರುತ್ತದೆ. ಮನುಷ್ಯನ ಹಸ್ತಕ್ಷೇಪ ಅಥವಾ ಹಿಂಸೆಯ ಮೂಲಕ ಈ ಜೈವಿಕ ಸರಪಳಿಯನ್ನು ನಾವು ಕತ್ತರಿಸಬಾರದು. ಇದು ಗಾಂಧಿ ತತ್ವದ ಆಧಾರದ ಮೇಲೆ ಕುಮಾರಪ್ಪನವರು ರೂಪಿಸಿದ ಶಾಶ್ವತ ಅರ್ಥಶಾಸ್ತ್ರದ ನೀತಿಗಳು. 
ಇಂಗ್ಲೆಂಡ್ ಮೂಲದ ಶೂಮಾಕರ್ 1950 ರಿಂದ 1970 ರವರೆಗೆ ಭಾರತ ಮತ್ತು ಬರ್ಮಾ ದೇಶಗಳಲ್ಲಿ ಬ್ರಿಟೀಷ್ ಸರ್ಕಾರದ ಪರವಾಗಿ ಸೇವೆಸಲ್ಲಿಸಿದವರು. ಈ ಎರಡು ದೇಶಗಳ ಬಡತನ ಮತ್ತು ಇಲ್ಲಿನ ಜನರ ಅಸಹಾಯಕತೆಯನ್ನು ಕಣ್ಣಾರೆ ಕಂಡು ತಲ್ಲಣಿಸಿ ಹೋದವರು. 1961 ರಲ್ಲಿ ಭಾರತ ಪ್ರವಾಸ ಕೈಗೊಂಡು, ಇಲ್ಲಿನ ಜನಸಾಮಾನ್ಯರ ದುಃಖ ದುಮ್ಮಾನಗಳಿಗೆ ಕಣ್ಣು ಕಿವಿಯಾದ ಶೂಮಾಕರ್, ಭಾರತದಲ್ಲಿ ಎರಡು ಭಾರತಗಳಿವೆ. ಒಂದು ಉಳ್ಳವರ ಭಾರತ ಮತ್ತೊಂದು ಅಗೋಚರವಾದ ಹಸಿದವರ, ಕಂಗೆಟ್ಟವರ ಭಾರತ ಎಂದು ಪ್ರಥಮ ಬಾರಿಗೆ ಘೋಷಿಸಿದರು. ಬಡತನ ಮತ್ತು ಹಸಿವಿನಿಂದಾಗಿ ಆತ್ಮ ಸ್ಥೈರ್ಯವನ್ನು ಕಳೆದುಕೊಂಡಿರುವ ಭಾರತದ ಬಡ ಜನರ ಸ್ವಾವಲಂಬನೆಗೆ ಇರುವ ಏಕೈಕ ಮಾರ್ಗವೆಂದರೆ, ದುಡಿಯುವ ಕೈಗಳಿಗೆ ಕೆಲಸಕೊಡುವುದು ಎಂಬುದನ್ನು ಅವರು ಕಂಡುಕೊಂಡರು. ಇಂತಹ ಸ್ಥಿತಿಯಲ್ಲಿ ಅವರ ಚಿಂತನೆಗಳಿಗೆ ದಾರಿ ದೀಪವಾದದ್ದು ಗಾಂಧೀಜಿಯವರ ಗ್ರಾಮಸ್ವರಾಜ್ಯ ಪರಿಕಲ್ಪನೆ ಮತ್ತು ಗುಡಿ ಕೈಗಾರಿಕೆಗಳ ಪುನಶ್ಚೇತನ. ಇವುಗಳನ್ನು ಆಧಾರವಾಗಿಟ್ಟುಕೊಂಡು ಅವರು ರಚಿಸಿದ Smal is bueatifull ( ಸಣ್ಣದು ಸುಂದರ) ಎಂಬ ಕೃತಿ ಜಗತ್ ಪ್ರಸಿದ್ಧಿಯಾಯಿತು. ಆಧುನಿಕ ವಿಜ್ಙಾನವನ್ನು ಸಂಪೂರ್ಣವಾಗಿ ತಿರಸ್ಕರಿಸದೆ, ಸ್ಥಳಿಯ ಪ್ರದೇಶಗಳಿಗೆ ಮತ್ತು ಪ್ರತಿಭೆಗಳಿಗೆ ಅನುಕೂಲವಾಗುವಂತೆ ಪರಿಷ್ಕರಿಸಿ ಅವುಗಳನ್ನು ಅಳವಡಿಸಿಕೊಳ್ಳಬೇಕೆಂಬುದು ಅವರ ಧೃಡ ನಿಲುವಾಗಿತ್ತು. ಇದನ್ನು ಅವರು Inter medeiate technology ಎಂದು ಕರೆದರು. ಮಧ್ಯಂತರ ತಂತ್ರಜ್ಙಾನ ಅಥವಾ ಸೂಕ್ತ ತಂತ್ರಜ್ಙಾನ ಎಂದು ಕರೆಯಬಹುದಾದ ಈ ಪರಿಕಲ್ಪನೆಯಲ್ಲಿ ಒಂದು ಪ್ರದೇಶದಲ್ಲಿ ಅಭಿವೃದ್ಧಿಯಾದ ತಂತ್ರಜ್ಙಾನವು, ಭಿನ್ನವಾದ ಸಾಂಸ್ಕೃತಿಕ ಮತ್ತು ಸಾಮಾಜಿಕ ಹಿನ್ನಲೆಯುಳ್ಳ ಮತ್ತೊಂದು  ಪರಿಸರದಲ್ಲಿ ಅನ್ವಯವಾಗಲಾರದು. ಇಂತಹ ಸ್ಥಿತಿಯಲ್ಲಿ ಅಲ್ಲಿನ ಪರಿಸರಕ್ಕೆ ಅನುಗುಣವಾಗಿ ತಂತ್ರಜ್ಙಾನವನ್ನು ನಾವು ಅವಶ್ಯಕತೆಗೆ ತಕ್ಕಂತೆ ಪರಿಷ್ಕರಿಸಿ ಬಳಸಬೇಕು ಹಾಗೂ  ಎಲ್ಲವೂ ಬೃಹತ್ ಆಗಿರಬೇಕು ಅಥವಾ ಕಡಿಮೆ ಮಾನವ ಶಕ್ತಿಯನ್ನು ಬಳಸಿ ಅಧಿಕ ಉತ್ಪಾದನೆ ಮಾಡುವ ಬಂಡವಾಳಶಾಹಿ ಜಗತ್ತಿನ ಲಾಭಕೋರ ಆರ್ಥಿಕ ಚಿಂತನೆಗಳಿಗೆ  ಬದಲಾಗಿ ದುಡಿಯುವ ಸಮೂಹದ ಕೈಗಳಿಗೆ ಕೈ ತುಂಬಾ ಕೆಲಸ ಕೊಡುವ ಗುಡಿ ಕೈಗಾರಿಕೆಗಳು ಮಾತ್ರ ಸಮಾನ ಸ್ಥಿತಿಯಲ್ಲಿ ಸಮಾಜದ ಸ್ವಾಸ್ಥವನ್ನು ಕಾಪಾಡಬಲ್ಲದು ಎಂದು ಶೂಮಾಕರ್ ಬಲವಾಗಿ ನಂಬಿದ್ದರು. ಇಂದು ಅವರ ಮತ್ತು ಗಾಂಧೀಜಿಯವರ ಚಿಂತನೆಯ ಫಲಗಳನ್ನು ಮತ್ತು  ಅನೇಕ ಫಸಲುಗಳನ್ನು ನಾವೀಗ  ಹಲವು ರೂಪದಲ್ಲಿ ಕಾಣುತ್ತಿದ್ದೇವೆ. ಭಾರತದ ನಾಗರೀಕರಿಗೆ ಮತ್ತು ಹೊರಜಗತ್ತಿಗೆ ಅನಾಮಿಕರಂತೆ ಉಳಿದು ಹೋದ ಇಬ್ಬರು ಮಹನೀಯರೆಂದರೆ, ಒಬ್ಬರು ದಿವಂಗತ ಮನ್ಸೂರು ಹೊಡ ಮತ್ತು ಈಗ ನಮ್ಮ ನಡುವೆ ಇರುವ ಸುನಿಲ್ ಸಹಸ್ರಬುಧೆ. ಮನ್ಸೂರು ಹೊಡ, ಶೂಮಾಕರ್ ರಿಂದ ಪ್ರಭಾವಿತರಾದರೆ, ಸುನಿಲ್ ಸಹಸ್ರಬುಧೆ ಗಾಂಧೀಜಿ ಚಿಂತನೆಗಳಿಂದ ಪ್ರಭಾವಿತರಾದವರು.( ಇವರು ಕಾನ್ಪುರದ ಐ.ಐ.ಟಿ. ಸಂಸ್ಥೆಯಲ್ಲಿ ಕನ್ನಡದ ಹಿರಿಯ ರಂಗಕರ್ಮಿ ಪ್ರಸನ್ನ ಅವರ ಸಹಪಾಠಿಯಾಗಿದ್ದವರು. ಇವರ ಶ್ರೇಷ್ಟ ಕೃತಿಯೊಂದು “ ಆಧುನಿಕ ವಿಜ್ಙಾನಕ್ಕೆ ಗಾಂಧಿಯ ಸವಾಲು” ಎಂಬ ಹೆಸರಿನಲ್ಲಿ ಕನ್ನಡದಲ್ಲಿ ಪ್ರಕಟವಾಗಿದೆ. ಅನುವಾದಕರು- ಡಾ.ಕೆ.ಪುಟ್ಟಸ್ವಾಮಿ. ಪ್ರಕಾಶಕರು-ಕನ್ನಡ ಪುಸ್ತಕ ಪ್ರಾಧಿಕಾರ)
 ಮನ್ಸೂರ್ ಹೊಡ
1930 ರ ಏಪ್ರಿಲ್ 22 ರಂದು ಬಿಹಾರದ ಚೊಪ್ರಾ ಎಂಬ ಗ್ರಾಮದಲ್ಲಿ ಜನಿಸಿದ. ಮನ್ಸೂರ್ ಹೊಡ, ಅಲಿಘರ್ ವಿಶ್ವವಿದ್ಯಾನಿಲಯದಲ್ಲಿ ವಿಜ್ಙಾನದದಲ್ಲಿ ಪದವಿ ಪಡೆದು, ನಂತರ ಇಂಗ್ಲೆಂಡ್ ಗೆ ತೆರಳಿ ಅಲ್ಲಿನ ಸರ್ರೆ ವಿಶ್ವ ವಿದ್ಯಾನಿಲಯದಿಂದ ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಎಂ.ಎಸ್ಸಿ ಪದವಿ ಪಡೆದರು. ಇಂಗ್ಲೆಂಡ್ ನಲ್ಲಿ ಇದ್ದಾಗ 1968 ರಲ್ಲಿ ಶೂಮಾಕರ್ ಅವರ ಪ್ರಭಾವಕ್ಕೆ  ಒಳಗಾಗಿ, ಅವರ ಚಿಂತನೆಗಳಿಂದ ಪ್ರೇರಿತರಾದರು. ಅಲ್ಲದೆ, ಭಾರತದಲ್ಲಿ ಜನಸಾಮಾನ್ಯರಿಗೆ ನಿಲುಕುವಂತಹ ಸರಳ ತಂತ್ರಜ್ಙಾನ ರೂಪಿಸುವ ನಿಟ್ಟಿನಲ್ಲಿ ತನ್ನ ಸಹೋದರ ಸುರುರ್ ಜೊತೆಗೂಡಿ ಇಂಡಿಯನ್ ಡೆವಲಪ್ ಮೆಂಟ್ ಗ್ರೂಪ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. 1972 ರಲ್ಲಿ ಶೂಮಾಕರ್ ಜೊತೆಗೂಡಿ ಭಾರತಕ್ಕೆ ಬಂದಿದ್ದಾಗ, ಗಾಂಧಿವಾದಿ ಜಯಪ್ರಕಾಶ್ ನಾರಾಯಣ್ ಅವರ ಕರೆಯ ಮೇರೆಗೆ ಭಾರತದಲ್ಲಿ ಉಳಿದು ವಾರಾಣಾಸಿಯಲ್ಲಿ  ಗಾಂಧಿಯನ್ ಇನ್ಸ್ಟಿಟ್ಯೂಟ್  ಸ್ಥಾಪಿಸಿದರು. ಸಂಸ್ಥೆಯ ಮೂಲಕ  ರಿಕ್ಷಾವಾಲಗಳಿಗೆ ಅನುಕೂಲವಾಗುವಂತೆ ಸೈಕಲ್ ಅನ್ನು  ಸುಧಾರಿಸಿದರು, ಕೃಷಿಕರ ಬೇಸಾಯದ ಸಲಕರಣೆಗಳನ್ನು ಅಧುನಿಕ ತಂತ್ರಜ್ಙಾನದ ಮೂಲಕ ಸುಧಾರಿಸಿದರಲ್ಲದೆ, ಚರಕ ಹಾಗೂ ಸಾಂಪ್ರದಾಯಕ ನೇಯ್ಗೆ ಮಗ್ಗಗಳಿಗೆ ಹೊಸ ರೂಪ ನೀಡಿ ನೇಕಾರರಿಗೆ ನೆರವಾದರು. ಅನಂತರ 1972  ಲಕ್ನೊ ನಗರಕ್ಕೆ ತೆರಳಿ ಅಲ್ಲಿ ತಮ್ಮ ಗುರುಗಳಾದ ಶುಮಾಕರ್ ಹೆಸರಿನಲ್ಲಿ ಸಂಸ್ಥೆಯನ್ನು ಅರಂಭಿಸಿ ಸ್ಥಳಿಯ ಕರಕುಶಲಗಾರರು, ಮತ್ತು ರೈತರಿಗೆ ನೆರವಾದರು.

ಇವೊತ್ತಿಗೂ ಆ ಸಂಸ್ಥೆ ನಿರೋದ್ಯೋಗಿಗಳಿಗೆ ಮರಗೆಲಸ, ಕಟ್ಟಡನಿರ್ಮಾಣ, ವಿದ್ಯುತ್ ಉಪಕರಣ, ಮೋಟಾರ್ ದುರಸ್ತಿ, ಹೀಗೆ ಹಲವಾರು ವೃತ್ತಿ ಕೌಶಲ್ಯದ ತರಬೇತಿ ನೀಡುತ್ತಿದೆ. ಇದಕ್ಕೂ ಮುನ್ನ ಅವರು ಭಾರತದ ರೈಲ್ವೆ ಇಲಾಖೆ ಹಾಗೂ ಬಿಹಾರ್ ಕೈಗಾರಿಕೆ ಇಲಾಕೆಯಲ್ಲಿ ಹತ್ತು ವರ್ಷ ಕೆಲಸ ಮಾಡಿ. ಸಣ್ಣ ಕೈಗಾರಿಕೆಗಳಿಗೆ ತಳಹದಿ ನಿರ್ಮಿಸಿದ್ದರು. ಹಿಂದುಳಿದ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ದಿನವೊಂದಕ್ಕೆ 10 ಟನ್ ಸಿಮೆಂಟ್ ತಯಾರಿಸುವ, ಘಟಕ ಹಾಗೂ ಒಂದು ಟನ್ ಸಕ್ಕರೆ ತಯಾರಿಸಬಲ್ಲ ಯಂತ್ರೋಪಕರಣಗಳನ್ನು ಅವಿಷ್ಕಾರಗೊಳಿಸಿದ್ದರು.(ಖಂಡಸಾರಿ ಸಕ್ಕರೆ)
1983 ರಲ್ಲಿ ಮತ್ತೆ ಇಂಗ್ಲೆಂಡ್ ಗೆ ತೆರಳಿ ಲಂಡನ್ ನಗರದಲ್ಲಿ ಗಾಂಧಿ ಪ್ರತಿಷ್ಟಾನವನ್ನು ಸ್ಥಾಪಿಸಿದರು. ಈ ಮೊದಲು ಅವರು ಆರಂಭಿಸಿದ್ದ ಇಂಡಿಯನ್ ಡೆವಲಪ್ ಮೆಂಟ್ ಗ್ರೂಪ್ ಸಂಸ್ಥೆ ಜೊತೆ ಈಗ ಶೂಮಾಕರ್ ಕುಟುಂಬ ಕೂಡ ಕೈ ಜೋಡಿಸಿದೆ. ಮನ್ಸೂರ್ ಮತ್ತು ಶೂಮಾಕರ್ ಕುಟುಂಬದ ಸದಸ್ಯರು  ಭಾರತದಲ್ಲಿ  ಸ್ಥಾಪಿಸಿರುವ ಜೀವಿಕಾ ಎನ್ನುವ ಸಂಸ್ಥೆ ಕಳೆದ ಒಂದು ದಶಕದಲ್ಲಿ ಭಾರತದ ಹಲವು ರಾಜ್ಯಗಳಲ್ಲಿ ಒಂದು ಲಕ್ಷ ಕುಟುಂಬಗಳನ್ನು ಬಡತನದ ರೇಖೆಯಿಂದ ಮೇಲೆತ್ತಲು ಶ್ರಮಿಸಿದೆ. ವಿಶೇಷವಾಗಿ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ದುಡಿಯುತ್ತಿರುವ ಜೀವಿಕಾ, ಮಹಿಳೆಯರಿಗೆ ಕರ ಕುಶಲ ತರಬೇತಿ, ಅವರ ಆರೋಗ್ಯ,ಸ್ವಸಹಾಯ ಸಂಘಗಳಿಗೆ ಧನ ಸಹಾಯ ಮಾಡುವುದರ ಮೂಲಕ ಘನತೆಯ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡುತ್ತಿದೆ.
ವಾರಣಾಸಿಯಲ್ಲಿ ಮನ್ಸೂರ್ ಹೊಡ ಸ್ಥಾಪಿಸಿದ ಗಾಂಧಿಯನ್ ಇನ್ಸಿಟ್ಯೂಟ್ ಸಂಸ್ಥೆಯನ್ನು ಈಗ ಇನ್ನೊಬ್ಬ ಗಾಂಧಿವಾದಿ ಸುನಿಲ್ ಸಹಸ್ರಬುಧೆ ಮುನ್ನಡೆಸುತ್ತಿದ್ದಾರೆ, ಲೋಕವಿದ್ಯಾ ಎಂಬ ಆಂಧೋಲನದ ಮೂಲಕ ಸ್ಥಳಿಯ ಮಾರುಕಟ್ಟೆಯನ್ನು ರೂಪಿಸಿ, ಈ ಮೂಲಕ ಸ್ಥಳೀಯ ಜನರು ಉತ್ಪಾದಿಸುವ ವಸ್ತುಗಳಿಗೆ ನೆರವಾಗುತ್ತಿದ್ದಾರೆ. ಅಲ್ಲದೆ ಗಾಂಧೀಜಿಯ ಚಿಂತನೆಗಳನ್ನು ಮುರಿದು ಕಟ್ಟುವುದರ ಮೂಲಕ ಅವುಗಳಿಗೆ ಹೊಸ ವಾಖ್ಯಾನ ನೀಡುತ್ತಿದ್ದಾರೆ.

ಮಂಗಳವಾರ, ಜೂನ್ 25, 2013

ಮೂಕ ಪ್ರಾಣಿಗಳ ಮೌನ ರೋಧನ


ಇತ್ತೀಚೆಗಿನ ದಿನಗಳಲ್ಲಿ ಅರಣ್ಯದಲ್ಲಿರಬೇಕಾದ ಪ್ರಾಣಿಗಳೆಲ್ಲವೂ ನಾಡಿನತ್ತ ಮುಖ ಮಾಡುತ್ತಿವೆ .ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕರ್ನಾಟಕಕ್ಕೆ ಆವರಿಸಿಕೊಂಡ ಬರದ ಛಾಯೆಯ ಪರಿಣಾಮ ಆಹಾರ, ನೀರು ಇಲ್ಲದೆ ದಿಕ್ಕೆಟ್ಟು ಅಲೆಯುತ್ತಿರುವ ವನ್ಯ ಮೃಗಗಳು, ನಾಡಿಗೆ ಬಂದು ಸಂಘರ್ಷ ಮತ್ತು ಸಾವಿನ ಮೂಲಕ  ದಿನ ನಿತ್ಯ ಸುದ್ಧಿಯಾಗುತ್ತಿವೆ. ಕಳೆದ ಮೂರು ದಿನಗಳಿಂದ ಬೆಂಗಳೂರಿನ ಹೊರವಲಯದಲ್ಲಿ ಕಾಣಿಸಿಕೊಂಡ ಕಾಡಾನೆಗಳ ಗುಂಪು ಸೃಷ್ಟಿಸಿದ ಆತಂಕ ಜನಸಾಮಾನ್ಯರನ್ನು ಬೆಚ್ಚಿಬೀಳಿಸಿದೆ. ಇದೊಂದು ರೋಚಕ ಸುದ್ಧಿಯೆಂಬಂತೆ ನಮ್ಮ ದೃಶ್ಯ ಮಾಧ್ಯಮಗಳು ಒಂದೇ ಸಮನೆ ಗಂಟಲು ಹರಿದುಕೊಳ್ಳುತ್ತಿವೆ. ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಲು ಹೊರಡುವ ನಮ್ಮ ಅರಣ್ಯ ಇಲಾಖೆ ಮತ್ತು ಸರ್ಕಾರ ಅಕ್ಷರಶಃ ಕಂಗೆಟ್ಟು ಕುಳಿತಿವೆ. ಮನುಷ್ಯ ಮತ್ತು ಪ್ರಾಣಿಗಳ ಈ ಸಂಘರ್ಷದ ಹಿಂದಿರುವ ಕಟುವಾಸ್ತವವನ್ನು ಗ್ರಹಿಸಲಾರದ ನಮ್ಮ ಜನಸಾಮಾನ್ಯರು ಆನೆಗಳಿಗೆ ಪಟಾಕಿ, ಸಿಡಿಮದ್ದು ಗಳ ಮೂಲಕ ಬೆದರಿಕೆ ಹಾಕಿ ಮೋಜಿನ ಮೂಲಕ ಮನರಂಜನೆ ಪಡೆಯುತ್ತಿದ್ದಾರೆ.  ಈ ದಿನ ಪ್ರಕಟವಾದ ವಿಜಯಕರ್ನಾಟಕದ ಮುಖಪುಟದ ವರದಿ ಮತ್ತು ಪ್ರಜಾವಾಣಿಯ ಸಂಪಾದಕೀಯ  ಮಾತ್ರ ವ್ಯವಸ್ಥೆಯ ಕಣ್ಣು ತೆರಸುವಂತಿವೆ.
ಕಳೆದ ಒಂದು ದಶಕದಲ್ಲಿ  ಭಾರತದ ಆನೆ, ಹುಲಿ ಮತ್ತು ಚಿರತೆಗಳ ಸಂತತಿ  ಗಣನೀಯವಾಗಿ ಕುಸಿಯುತ್ತಿದೆ. ಇವುಗಳಿಗೆ ಮೀಸಲಿಟ್ಟಿದ್ದ ಅಭಯಾರಣ್ಯಗಳು ಉಳ್ಳವರ ಪಾಲಿನ ಮೋಜಿನ ತಾಣಗಳಾಗಿ ಪರಿವರ್ತನೆಗೊಂಡಿವೆ. ಪ್ರವಾಸಿಗರಾಗಿ, ಬೇಟೆಗಾರರಾಗಿ, ನಿಸರ್ಗ ಪ್ರೇಮಿಗಳಾಗಿ ಹೀಗೆ ಹಲವು ರೂಪದಲ್ಲಿ  ಅರಣ್ಯ ಪ್ರಪಂಚಕ್ಕೆ ಕಾಲಿಡುತ್ತಿರು ಮಾನವ ಪ್ರಾಣಿಗಳ ಹಸ್ತಕ್ಷೇಪದಿಂದಾಗಿ ವನ್ಯ ಮೃಗಗಳು ತಮ್ಮ ನಿಸರ್ಗ ಸಹಜ ಬದುಕನ್ನು ಕಳೆದುಕೊಂಡಿವೆ. ಭಾರತದಲ್ಲಿ ನಿಸರ್ಗದ ಸಮತೋಲನ ತಪ್ಪಿ ದಶಕಗಳೇ ಉರುಳಿಹೋಗಿವೆ. ಆಧುನಿಕತೆ ಮತ್ತು ಅಭಿವೃದ್ಧಿ ನಮಗೆ ಎಲ್ಲವನ್ನು ವಾಣಿಜ್ಯ ಮತ್ತು ಮನರಂಜನೆಯ ದೃಷ್ಟಿಯಿಂದ ನೋಡುವುದನ್ನು ಕಲಿಸಿದೆ.

ಏಷ್ಯಾ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಆನೆಗಳನ್ನು ಪಡೆದ ಕೀರ್ತಿ ಒಂದು ಕಾಲದಲ್ಲಿ ಕರ್ನಾಟಕಕ್ಕೆ ಇತ್ತು. ( 28 ಸಾವಿರ ಆನೆಗಳು) 2010 ರ ಗಣತಿಯ ಪ್ರಕಾರ 5350 ರಿಂದ 6230 ಆನೆಗಳು ಇರಬಹುದೆಂದು ಅಂದಾಜಿಸಲಾಗಿದೆ. ಒಂದು ಸಮಾಧಾನಕರ ಸಂಗತಿಯೆಂದರೆ, 1983ರಲ್ಲಿ 3579 ಸಂಖ್ಯೆಯಲ್ಲಿದ್ದ ಆನೆಗಳ ಸಂತತಿ ವೃದ್ಧಿಸಿದೆ. 10 ನೇ ಶತಮಾನದಿಂದ ಕರ್ನಾಟಕದ  ಹೊಯ್ಸಳರು, ಚಾಲಿಕ್ಯರು, ವಿಜಯನಗರದ ಅರಸರು ಮತ್ತು ಟಿಪ್ಪುಸುಲ್ತಾನ್ ನಂತರ ಮೈಸೂರು ಅರಸರು ಇವರುಗಳ ಪ್ರೀತಿಯಿಂದಾಗಿ ರಾಜ್ಯದಲ್ಲಿ ಆನೆಗಳ ಸಂತತಿ ಈವರೆಗೆ ಉಳಿದುಕೊಂಡು ಬಂದಿದೆ.
ಕಳೆದ ಐದು ವರ್ಷಗಳಲ್ಲಿ ಆನೆಗಳು ತಮ್ಮ ವ್ಯಾಪ್ತಿ ಪ್ರದೇಶವನ್ನು  ಬಿಟ್ಟು ನಾಡಿನತ್ತ ಮುಖ ಮಾಡಿರುವುದು ನಿಜಕ್ಕೂ ಆತಂಕಕಾರಿಯಾದ ವಿಷಯ. ಆದರೆ, ಈ ಕುರಿತಂತೆ ನಮ್ಮ ಅರಣ್ಯ ಇಲಾಖೆ ತಲೆಕೆಡಿಸಿಕೊಂಡ ಉದಾಹರಣೆಗಳಿಲ್ಲ. ಹೋಗಲಿ ರಾಜ್ಯ ಹೈಕೋರ್ಟ್ ಸೂಚನೆ ಮೇರೆಗೆ 2012 ಸೆಪ್ತಂಬರ್ ತಿಂಗಳಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯ ಹಿರಿಯ ವಿಜ್ಙಾನಿ ಪ್ರೋ.ರಮಣ್ ಸುಕುಮಾರ್ ನೇತೃತ್ವದ ಹದಿಮೂರು ತಜ್ಙ ಸದಸ್ಯರುಗಳನ್ನು ಒಳಗೊಂಡ  ಆನೆ ಕಾರ್ಯಪಡೆಯ (Elephant task force ) ತಂಡವೊಂದು 141 ಪುಟಗಳ ವರದಿಯನ್ನು ಸಲ್ಲಿಸಿದೆ. 
ಈ ವರದಿಯಲ್ಲಿ ಕೂಲಂಕುಶವಾಗಿ ಕರ್ನಾಟಕದ 19 ಅರಣ್ಯವಲಯಗಳಲ್ಲಿ ಹಂಚಿಹೋಗಿರುವ ಆನೆಗಳ ಸಂತತಿ, ಮತ್ತು ಬಂಡಿಪುರ, ಮಳವಳ್ಳಿ, ಸಾವನ್ ದುರ್ಗ, ಅರಕಲಗೂಡು, ಆಲೂರು, ಸಕೇಲೇಶ್ವರ ಈ ಪ್ರದೇಶಗಳಲ್ಲಿ ಆನೆಗಳ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳು, ರೈತರ ವಿದ್ಯತ್ ಬೇಲಿಗೆ ಮತ್ತು  ದಂತಕ್ಕಾಗಿ ಬಲಿಯಾಗುತ್ತಿರುವ ಆನೆಗಳ ಸ್ಥಿತಿ ಮತ್ತು ಅಭಯಾರಣ್ಯಗಳಲ್ಲಿ ತಲೆಯೆತ್ತುತ್ತಿರುವ ರೆಸಾರ್ಟ್ ಗಳು, ಆನೆಗಳ ಸಹಜ ವಲಸೆಗೆ ಇದ್ದ ಕಾರಿಡಾರ್ ಗಳು ಮುಚ್ಚಿ ಹೋಗಿರುವ ಸಂಗತಿ ಎಲ್ಲವನ್ನೂ ಅಂಕಿ ಅಂಶಗಳ ಸಹಿತ ವಿವರಿಸಿ, ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಸೂಚಿಸಲಾಗಿದೆ. ಅಲ್ಲದೆ ಸಕಲೇಶ್ವರ ಮತ್ತು ಹಾಸನದ ಆಲೂರು ಬಳಿ ರೈತರ ಜಮೀನಿಗೆ ನುಗ್ಗಿ ಹಾನಿಯುಂಟು ಮಾಡುತ್ತಿರು ಓರ್ವ ಸಲಗ ಸೇರಿದಂತೆ 26 ಆನೆಗಳನ್ನು ಸ್ಥಳಾಂತರಿಸಲು ವರದಿಯಲ್ಲಿ ಸೂಚಿಸಲಾಗಿದೆ. ಆದರೆ ಇದನ್ನು ಓದಲಾರದಷ್ಟು ಅವಿವೇಕಿಗಳು ಮತ್ತು ಸೋಮಾರಿಗಳಾಗಿರುವ ನಮ್ಮ ಅರಣ್ಯಾಧಿಕಾರಿಗಳು, ಅರಣ್ಯದ ನಡುವೆ ಇರುವ ಐಷಾರಾಮದ ಅತಿಥಿಗೃಹದಲ್ಲಿ ತಮ್ಮ ಹೆಂಡತಿ, ಮಕ್ಕಳು ಮತ್ತು ಸ್ನಹಿತರ ಜೊತೆ ಮೋಜು ಮಸ್ತಿಯಲ್ಲಿ ತೊಡಗಿಕೊಂಡಿದ್ದಾರೆ. ವಿದ್ಯುತ್ ತಂತಿ ಬೇಲಿಗೆ ಸಿಲುಕಿ ಆನೆಗಳು ಸಾಯುತ್ತಿರುವುದನ್ನು ಗಮನಿಸಿದ ರಾಜ್ಯ ಉಚ್ಛ ನ್ಯಾಯಾಲಯ ಕಳೆದ ವಾರ ಸ್ವಯಂಪ್ರೇರಿತವಾಗಿ ಅರ್ಜಿಯೊಂದನ್ನು ದಾಖಲಿಸಿಕೊಂಡು ಅರಣ್ಯ ಇಲಾಖೆಗೆ ನೋಟೀಸ್ ಜಾರಿ ಮಾಡಿದೆ. ಈ ಕೂಡಲ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳದಿದ್ದರೆ, ಭವಿಷ್ಯದಲ್ಲಿ ದುರಂತದ ಅಧ್ಯಾಯವೊಂದು ನಮಗಾಗಿ ಕಾದಿದೆ ಎಂಬುದನ್ನು ನಾವು ಮರೆಯಬಾರದು. ಈ ನಿಟ್ಟಿನಲ್ಲಿ ನಮ್ಮ ಮಾಧ್ಯಮಗಳು ವಿಶೇಷವಾಗಿ ದೃಶ್ಯ ಮಾಧ್ಯಮಗಳು ಆನೆಗಳು ನಾಡಿಗೆ ಬಂದ ಸಂದರ್ಭದಲ್ಲಿ  ದಿನವಿಡಿ ಕಿಟಾರನೆ ಕಿರುಚಿಕೊಳ್ಳುವುದನ್ನು ಬಿಟ್ಟು ಸಮಸ್ಯೆಯ ಪರಿಹಾರಕ್ಕೆ ತಜ್ಙರ ಜೊತೆ ಕುಳಿತು ಚರ್ಚಿಸಿ ಪರಿಹಾರ ಹುಡುಕಬೇಕಿದೆ. ಕಳೆದ 2012 ರ ಜನವರಿಯಿಂದ ಡಿಸಂಬರ್ ವರೆಗೆ ಕರ್ನಾಟಕದಲ್ಲಿ 183 ಆನೆಗಳು ಮೃತಪಟ್ಟಿವೆ. ಕ್ರಮವಾಗಿ ಜನವರಿ-9, ಪೆಬ್ರವರಿ-12, ಮಾರ್ಚಿ-12, ಏಪ್ರಿಲ್-18, ಮೇ-30, ಜೂನ್-25, ಜುಲೈ-19, ಆಗಸ್ಟ್-15, ಸೆಪ್ಟಂಬರ್-16, ಅಕ್ಟೋಬರ್-12, ನವಂಬರ್-9, ಡಿಸಂಬರ್-6 ಹೀಗೆ ಸಾವನ್ನಪ್ಪಿವೆ. ಇದರಲ್ಲಿ, ದಂತಕ್ಕಾಗಿ ಬೇಟೆ, ಅಪಘಾತ, ವಿದ್ಯುತ್ ಸ್ಪರ್ಶ ಮುಂತಾದ ಅನಾಹುತಗಳಿಗಿಂತ ಬೇಸಿಗೆಯ ದಿನಗಳಲ್ಲಿ ಕಲುಷಿತ ನೀರು ಕುಡಿದು ಮೃತಪಟ್ಟ ಸಂಖ್ಯೆ ಮತ್ತು ಆಹಾರ, ನೀರಿಲ್ಲದೆ ಸತ್ತ ಆನೆಗಳ ಸಂಖ್ಯೆ ಹೆಚ್ಚಿನಾದಾಗಿದೆ. ಪ್ರತಿದಿನ ಒಂದು ಆನೆಗೆ 200 ರಿಂದ 250 ಕೆ.ಜಿ.ಯಷ್ಟು ಹಸಿರು ಹುಲ್ಲು, ಬಿದಿರು ಮತ್ತು 150 ಲೀಟರ್ ನೀರು ಬೇಕಾಗಿದೆ. ಈ ಸಂಗತಿಯನ್ನು ನಾವು ಅರ್ಥೈಸಿಕೊಂಡರೆ, ಈ ಮೂಕ ಪ್ರಾಣಿಗಳು ನಾಡಿಗೇಕೆ ನುಗ್ಗಿ ಬರುತ್ತಿವೆ ಎಂಬುದು ಮನದಟ್ಟಾಗುತ್ತದೆ. ದಕ್ಷಿಣ ಭಾರದಲ್ಲಿ ಆನೆಗಳ ದುರಂತ ಒಂದು ಬಗೆಯದಾದರೆ, ಪೂರ್ವ ಭಾರತದ ರಾಜ್ಯಗಳ ಆನೆಗಳ ದುರಂತ ಇನ್ನೊಂದು ಬಗೆಯದು.
ಒರಿಸ್ಸಾ ರಾಜ್ಯದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ 310 ಆನೆಗಳು ಮೃತಪಟ್ಟಿವೆ. ಇವುಗಳಲ್ಲಿ ಶಿಕಾರಿ, ಸಹಜ ಸಾವು, ಇವುಗಳಿಗಿಂತ, ರೈಲಿಗೆ ಸಿಕ್ಕಿ ಸಾವನ್ನಪ್ಪಿದ ಆನೆಗಳ ಸಂಖ್ಯೆ ಹೆಚ್ಚಿನಾದಾಗಿದೆ. 2012ರ ಡಿಸಂಬರ್ 29 ರಂದು ಹೌರ-ಚೆನ್ನೈ ನಡುವೆ ಸಂಚರಿಸುವ ಕೋರಮಂಡಲ್ ಎಕ್ಸ್ ಪ್ರಸ್ ರೈಲಿಗೆ ಸಿಲುಕಿ ಗಂಜಾಂ ಜಿಲ್ಲೆಯ ಅರಣ್ಯದಲ್ಲಿ 8 ಆನೆಗಳು ಮೃತಪಟ್ಟವು. ಒರಿಸ್ಸಾದಲ್ಲಿ 14 ಆನೆಗಳ ಕಾರಿಡಾರ್ ಗಳು ಇದ್ದು, ಅಲ್ಲಿರುವ ಆನೆಗಳ ಸಂಖ್ಯೆ ಕೇವಲ 1930 ಮಾತ್ರ. ಪಶ್ಚಿಮ ಬಂಗಾಳದಲ್ಲಿ ವಿಶೇಷವಾಗಿ ಸಿಲಿಗುರಿ- ಅಲಿಪುರ್ದರ್ ನಡುವಿನ  168 ಕಿ.ಮಿ. ರೈಲು ಮಾರ್ಗದಲ್ಲಿ 8 ವರ್ಷಗಳ ಅವಧಿಯಲ್ಲಿ ರೈಲಿಗೆ ಸಿಲುಕಿ 43 ಆನೆಗಳು ಮೃತಪಟ್ಟಿವೆ. ಅರಣ್ಯ ಪ್ರದೇಶದಲ್ಲಿ ಸಂಚರಿಸುವಾಗ ರೈಲಿನ ವೇಗ 40 ಕಿ.ಮಿ. ಇರಬೇಕು ಎಂಬ ನಿಯಮವನ್ನು ಭಾರತೀಯ ರೈಲ್ವೆ ಇಲಾಖೆ ಗಾಳಿಗೆ ತೂರಿದೆ. ಭಾರತದ ಅರಣ್ಯಗಳಲ್ಲಿ ಒಟ್ಟು 88 ಆನೆಗಳ ಕಾರಿಡಾರ್ ಗಳು ಇದ್ದು ಇವುಗಳ ಸುರಕ್ಷತೆಗೆ ಅರಣ್ಯ ಇಲಾಖೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಕನಿಷ್ಟ ಅರಣ್ಯ ಪ್ರಧೇಶಗಳಲ್ಲಿ ರೈಲು ಮಾರ್ಗ ಇರುವ ಇಕ್ಕೆಲಗಳಲ್ಲಿ ತಂತಿ ಬೇಲಿ ನಿರ್ಮಾಣ ಮಾಡಿ, ಪ್ರತಿ ಒಂದು ಕಿಲೋಮೀಟರ್ ದೂರದಲ್ಲಿ  ಹಳಿಗಳ ಕೆಳಗೆ 10 ಅಡಿ ಅಗಲ ಮತ್ತು 10 ಅಡಿ ಆಳದ ಸುರಂಗ ರಸ್ತೆ ನಿರ್ಮಾಣವಾದರೆ, ಪ್ರಾಣಿಗಳ ಚಲನಕ್ಕೆ ಧಕ್ಕೆ ಬರುವುದಿಲ್ಲ, ಜೊತೆಗೆ ಅವುಗಳು ಅಪಘಾತಕ್ಕೆ ಬಲಿಯಾಗುವುದನ್ನು ತಪ್ಪಿಸಬಹುದು. ಆದರೆ, ಉಳ್ಳವರು ಕುಡಿದ ನೀರು ಹೊಟ್ಟೆಯಲ್ಲಿ ಅಲುಗಾಡದ ಹಾಗೆ ಕಾರಿನಲ್ಲಿ ಚಲಿಸಲು  ಪ್ರತಿ ಕಿಲೋಮೀಟರ್ ಗೆ ನಾಲ್ಕರಿಂದ ಆರು ಕೋಟಿ ರೂಪಾಯಿ ವೆಚ್ಚದಲ್ಲಿ ಹೆದ್ದಾರಿ ನಿರ್ಮಿಸಲು ಆಸಕ್ತಿ ತೋರುವ  ನಮ್ಮ ಸರ್ಕಾರಗಳಿಗೆ ಮೂಕ ಪ್ರಾಣಿಗಳ ಪ್ರಾಣದ ಬಗ್ಗೆ ಯಾವ ಕಾಳಜಿಯೂ ಇದ್ದಂತಿಲ್ಲ. ಏಕೆಂದರೆ, ಹೆದ್ದಾರಿಯ ಶುಲ್ಕದ ನೆಪದಲ್ಲಿ ಜನರ ಮೈ ಚರ್ಮ ಸುಲಿಯುವ ಹಾಗೆ ಪ್ರಾಣಿಗಳ ಚರ್ಮ ವನ್ನು ಸುಲಿಯಲಾಗದು ಎಂಬ ಸತ್ಯವನ್ನು ನಮ್ಮ ಸರ್ಕಾರಗಳು ಕಂಡುಕೊಂಡಿವೆ.


ಸೋಮವಾರ, ಜೂನ್ 24, 2013

ಮುಂಗಾರು ಮಳೆ ಮತ್ತು ಬಿತ್ತನೆಯ ಬವಣೆಗಳು

ಅದೊಂದು ಕಾಲವಿತ್ತು. ಮೊದಲ ಮುಂಗಾರು ಹನಿ ಇಳೆಗೆ ಬಿದ್ದೊಢನೆ ರೈತನ ಎದೆಯೊಳಗೆ ಪುಳಕ, ರೋಮಾಂಚನಗಳು ಉಂಟಾಗುತ್ತಿದ್ದವು. ಮಳೆ ಬಿದ್ದ ಮಾರನೆ ದಿನ ಎತ್ತು, ನೇಗಿಲ ಜೊತೆ ಭೂಮಿಯತ್ತ ಹೊರಟ ಅವನ ನಡಿಗೆಯಲ್ಲಿ, ಯುದ್ಧರಂಗಕ್ಕೆ ಹೊರಟ ಯೋಧನೊಬ್ಬ ಗತ್ತು ಇರುತ್ತಿತ್ತು. ಈಗ ಬಿತ್ತನೆ ಬೀಜಗಳ ಪರದಾಟ, ರಸಗೊಬ್ಬರಕ್ಕಾಗಿ ಅಹಾಕಾರ, ಕೂಲಿ ಕಾರ್ಮಿಕರ ಸಮಸ್ಯೆ, ಹೀಗೆ ಹತ್ತಾರು ಸಂಕಟಗಳ ಸರಮಾಲೆ ಮುಂಗಾರಿನ ಮಳೆಯ ಜೊತೆ ಅವನ ಕೊರಳಿಗೆ ಸುತ್ತಿಕೊಳ್ಳುತ್ತಿವೆ. ಇವೆಲ್ಲವೂ ವ್ಯವಸ್ಥೆ ಸೃಷ್ಟಿಸಿದ ನರಕವೇನಲ್ಲ, ಬದಲಾಗಿ ತನ್ನ ಸ್ವಯಂಕೃತ ಅಪರಾಧದಿಂದಾಗಿ ರೈತನೂ ಸಹ ಭಾಗಿಯಾಗಿದ್ದಾನೆ.
ಪ್ರತಿ ಮುಂಗಾರು ಸಮಯದಲ್ಲಿ ಬಿತ್ತನೆ ಚಟುವಟಿಕೆ ಆರಂಭಗೊಳ್ಳುತ್ತಿದ್ದಂತೆ, ಬಿತ್ತನೆ ಬೀಜಗಳ ಕಾಳಸಂತೆಯ ಮಾರಾಟಗಾರರು ಚುರುಕಾಗುತ್ತಾರೆ. ಬೀಜಕಂಪನಿಗಳು ದಿಡೀರನರ ಬೆಲೆ ಏರಿಸಿ ರೈತ ಸಮುದಾಯದ ಸುಲಿಗೆಗೆ ಕೈಜೋಡಿಸುತ್ತವೆ. ಈ ದೇಶದಲ್ಲಿ ಕೃಷಿ ರಂಗದ ಮೇಲೆ ನಿಖರವಾದ ನಿಯಂತ್ರಣವಿಲ್ಲದ ಅಸಮರ್ಥ ಸರ್ಕಾರಗಳೂ ಇದರಲ್ಲಿ ಭಾಗಿಯಾಗಿವೆ.
ಭಾರತದಲ್ಲಿ ಪ್ರತಿವರ್ಷ 15 ಸಾವಿರ ಕೋಟಿ ರೂಪಾಯಿಗಳ ಬಿತ್ತನೆ ಬೀಜಗಳ ವ್ಯಾಪಾರ ನಡೆಯುತ್ತಿದೆ.  ಈಗಲೂ ದೇಶದ ಅರ್ಧಕ್ಕಿಂತ ಕಡಿಮೆ ರೈತರು ತಮ್ಮ ಸಾಂಪ್ರದಾಯಕ ಬಿತ್ತನೆ ಬೀಜಗಳನ್ನು ಬೇಸಾಯಕ್ಕಾಗಿ  ಬಳಸುತ್ತಿದ್ದಾರೆ. ವಿಶೇಷವಾಗಿ ಭತ್ತ, ರಾಗಿ, ಜೋಳ, ಗೋಧಿ ಮುಂತಾದ ಆಹಾರ ಧಾನ್ಯಗಳ ಬೀಜವನ್ನು ರೈತರು ತಾವೇ ಸಂಗ್ರಹಿಸಿ ಇಟ್ಟುಕೊಂಡು, ಕೃಷಿಗೆ ಉಪಯೋಗಿಸುತ್ತಿದ್ದಾರೆ.
ದೇಶದ ಹಲವಾರು ರಾಜ್ಯ ಸರ್ಕಾರಗಳು ಬೀಜ ನಿಗಮವನ್ನು ಸ್ಥಾಪಿಸಿ, ಕೈಗೆಟುಕುವ ಬೆಲೆಯಲ್ಲಿ ರೈತರಿಗೆ ವಿತರಣೆ ಮಾಡುತ್ತಿದ್ದರೂ ಸಹ,  ಅವುಗಳು ಹೈಬ್ರಿಡ್ ಬೀಜಗಳು, ಅವುಗಳ ಮರು ಬಳಕೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ರೈತರು ಅವುಗಳನ್ನು ತಿರಸ್ಕರಿಸುತ್ತಾ ಬಂದಿದ್ದರು. ಆದರೆ, ಇತ್ತೀಚೆಗೆ ಎಲ್ಲಾ ವಿಧವಾದ ಸಾಂಪ್ರದಾಯಕ ಬೀಜಗಳು ಕಲುಷಿತಗೊಳ್ಳುತ್ತಾ ಬಂದಿವೆ. ಹಾಗಾಗಿ ಅಸಲಿ ಮತ್ತ ನಕಲಿ ನಡುವಿನ ಗಡಿರೇಖೆ ಅಳಿಸಿ ಹೋಗಿದೆ.
ಭಾರತದಲ್ಲಿ ಶೇಕಡ 87 ರಷ್ಟು ಆಹಾರ ಧಾನ್ಯ ಬೆಳೆಗಳ ಬೀಜಗಳು ಮತ್ತು ಶೇಕಡ 13 ರಷ್ಟು ತರಕಾರಿ ಬೆಳೆಗಳ ಬೀಜಗಳು ರೈತರಿಂದ ಬಳಕೆಯಾಗುತ್ತಿವೆ. ಜಗತ್ತಿನಲ್ಲಿ ಎರಡನೇ  ಅತಿ ಹೆಚ್ಚು ಬೀಜ ಬಳಕೆ ಮತ್ತು ಕೃಷಿ ಚಟುವಟಿಕೆಯ ರಾಷ್ಟ್ರವಾಗಿರುವ ಭಾರತದ ಮೇಲೆ ಎಲ್ಲಾ ಬಹುರಾಷ್ಟ್ರೀಯ ಬೀಜ ಕಂಪನಿಗಳ ಕಣ್ಣು ಬಿದ್ದಿದೆ. ಈ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸುವುದರ ಮೂಲಕ  ದುಬಾರಿ ಬೆಲೆಗೆ ಬಿತ್ತನೆ ಬೀಜ ಮತ್ತು ರಸಾಯನಿಕ ಗೊಬ್ಬರಗಳನ್ನು ಮಾರುವ ಪ್ರವೃತ್ತಿಯೂ ಸಹ ಹೆಚ್ಚಾಗತೊಡಗಿದೆ.
ಹೈಬ್ರಿಡ್ ಬೀಜಗಳು ಕುರಿತಂತೆ ಯಾವುದೇ ಉತ್ತರದಾಯಕತ್ವ ಕಂಪನಿಗಳಿಗೆ ಇಲ್ಲವಾದ ಕಾರಣ ಇಂತಹ ಬೀಜಗಳ ಬಳಕಗೆ ರೈತ ಹಿಂಜರಿಯುತ್ತಾನೆ. ಇವೊತ್ತಿಗೂ ಅನೇಕ ತರಕಾರಿ, ಹತ್ತಿ, ಜೋಳ ಮುಂತಾದ ಬೆಳೆಗಳ ಫಸಲು ಕೈ ಕೊಟ್ಟ ಉದಾಹರಣೆಗಳು ದಿನ ನಿತ್ಯ ಸುದ್ಧಿಯಾಗುತ್ತಿವೆ. ಇಳುವರಿ ಸ್ವಲ್ಪ ಕಡಿಮೆಯಾದರೂ ಚಿಂತೆ ಇಲ್ಲ, ರಸಗೊಬ್ಬರ, ಕೀಟನಾಶಕದಂತಹ ದುಬಾರಿ ವೆಚ್ಚದ ತಲೆನೋವುಗಳು ಇರುವುದಿಲ್ಲ ಎಂಬ ಏಕೈಕ ಕಾರಣದಿಂದಾಗಿ ರೈತರು ದೇಶೀ ಬಿತ್ತನೆ ಬೀಜಗಳ ಮೊರೆ ಹೋಗಿದ್ದಾರೆ. ಆದರೆ, ಎಣ್ಣೆಕಾಳು ಮತ್ತು ಮುಸುಕಿನ ಜೋಳದಂತಹ ವಾಣಿಜ್ಯಬೆಳೆಗಳಿಗೆ ಮಾತ್ರ  ಹೈಬ್ರಿಡ್ ಬೀಜಗಳನ್ನು ಬಳಸುತ್ತಿದ್ದಾರೆ.

ಕೃಷಿ ರಂಗದ ದುಷ್ಪಾರಿಣಾಗಳು ಮತ್ತು ಅವ್ಯವಸ್ಥೆಗಳನ್ನು ಅರಿತ ಪರಿಣಿತ ಹಾಗೂ ಪ್ರಗತಿಪರ ರೈತರು ಇತ್ತೀಚೆಗೆ ಸಾವಯವ ಕೃಷಿಗೆ ಹೊರಳುತ್ತಿದ್ದು, ದುಬಾರಿ ವೆಚ್ಚದ ಕೃಷಿಗೆ ವಿದಾಯ ಹೇಳಿದ್ದಾರೆ ಅಲ್ಲದೆ, ಏಕಬೆಳೆಯ ಪದ್ಧತಿಗೆ ಜೋತು ಬೀಳದೆ, ಮಿಶ್ರ ಬೆಳೆಗಳ ಪ್ರಯೋಗ ಮಾಡುವುದರ ಮೂಲಕ ಯಶಸ್ವಿಯಾಗಿದ್ದಾರೆ.
ರೈತರ ಸ್ವಾವಲಂಬನೆಯ ಈ ಬದುಕಿನ ಮೇಲೆ ಕಣ್ಣಿಟ್ಟಿರುವ ಬಹುರಾಷ್ಟ್ರೀಯ ಬೀಜ ಕಂಪನಿಗಳು, ಈಗಾಗಲೇ ಏಷ್ಯಾ ರಾಷ್ಟ್ರಗಳ ಬಹುತೇಕ ಆಹಾರಧಾನ್ಯ, ಮತ್ತು  ಹಣ್ಣು ಹಾಗೂ ತರಕಾರಿ ಬೀಜಗಳನ್ನು ಕುಲಾಂತರಗೊಳಿಸಿ ಅವುಗಳ ಸಂತಾನ ಶಕ್ತಿಯನ್ನು ಹರಣಗೊಳಿಸುತ್ತಿವೆ. ಈ ರೀತಿ ಕ್ರೌರ್ಯಕ್ಕೆ ತುತ್ತಾಗಿ, ಏಷ್ಯಾ ರಾಷ್ಟ್ರಗಳಲ್ಲಿ ಅವಸಾನದ ಅಂಚಿಗೆ ತಲುಪಿರುವ ಬೀಜಗಳ ವಿವರ ಈ ಕೆಳಗಿನಂತಿವೆ.

ಒಂದು- ಆಹಾರ ಧಾನ್ಯ ಬೆಳೆಗಳ ಬೀಜಗಳು
ಬಾರ್ಲಿ, ಗಿಡ್ಡಗೋಧಿ, ಭತ್ತ, ಪ್ರೋಸೊ ಎಂಬ ಒರಟು ಧಾನ್ಯ, ಇತ್ಯಾದಿ

ಎರಡು – ತರಕಾರಿ ಬೀಜಗಳು
ಕೆಂಪು ಅವರೆ, ಎಲೆಕೋಸು, ಕ್ಯಾರೆಟ್, ಕುಂಬಳ, ಚೀನಾ ಕೋಸು, ಚಿಟ್ಟೆ ಅವರೆ, ಈರುಳ್ಳಿ, ಬಟಾಣಿ, ಮೂಲಂಗಿ ಮುಂತಾದವು

ಮೂರು- ಹಣ್ಣುಗಳ ಬೀಜಗಳು
ಸೇಬು, ಅಂಜೂರ, ದ್ರಾಕ್ಷಿ, ನಿಂಬೆ, ಬಾಳೆ, ಮಾವು, ಇತ್ಯಾದಿ.
ಇನ್ನೊಂದು ದಶಕದಲ್ಲಿ ನಮ್ಮ ಸಾಂಪ್ರದಾಯಕ ಹಣ್ಣು ಮತ್ತು ತರಕಾರಿ ಹಾಗೂ ಆಹಾರ ಧಾನ್ಯಗಳ ಫಸಲನ್ನು ನಾವು ಪಠ್ಯ ಪುಸ್ತಕದಲ್ಲಿ ಮತ್ತು ಸಂಗ್ರಹಿಸಿ ಇಡಲಾದ ಚಿತ್ರಗಳಲ್ಲಿ ನೋಡುವ ಸಾಧ್ಯತೆಗಳು ಹೆಚ್ಚಾಗಿವೆ.


ಶುಕ್ರವಾರ, ಜೂನ್ 21, 2013

ಹಸಿವು, ಬಡತನ ಮತ್ತು ಆಹಾರ ಭದ್ರತೆ

ಭಾರತದ ಪ್ರಜಾಪ್ರಭುತ್ವದ ದೇಗುಲ ಎನಿಸಿಕೊಂಡಿರುವ ಸಂಸತ್ತಿನಲ್ಲಿ ಆಹಾರಭದ್ರತೆ ಕುರಿತಾದ ಮಸೂದೆ ರಾಜಕೀಯ ಪಕ್ಷಗಳ ಬೌದ್ಧಿಕ ದಿವಾಳಿತನದಿಂದಾಗಿ ಹಲವಾರು ವರ್ಷಗಳಿಂದ ನೆನಗುದಿಗೆ ಬಿದ್ದಿದೆ.  ದೇಶದ ಕೋಟ್ಯಾಂತರ ಜನ ಇಂದಿಗೂ ಹಸಿವಿನಿಂದ ಬಳಲತ್ತಾ ಖಾಲಿ ಹೊಟ್ಟೆಯಲ್ಲಿ ದಿನ ರಾತ್ರಿಮಲಗುತ್ತಿದ್ದಾರೆ. ಇಲ್ಲಿನ ಜನರ ಬಡತನ ಮತ್ತು ಅನಕ್ಷರತೆ,ಹಾಗೂ ಅಜ್ಙಾನಗಳು ಪ್ರತಿಯೊಂದು ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಯ ವಿಷಯಗಳಾಗುತ್ತಾ, ಅಧಿಕಾರ ಹಿಡಿಯುವ ಅದೃಷ್ಟದ ಬಾಗಿಲುಗಳಾಗಿವೆ.

ಒಂದೆಡೆ ಹಸಿವಿನಿಂದ ಕಂಗೆಟ್ಟ ಬಡವರು, ಇನ್ನೊಂದೆಡೆ, ಗೋದಾಮುಗಳಲ್ಲಿ ಸಮರ್ಪಕವಾಗಿ ವಿತರಣೆಯಾಗದೆ ಕೊಳೆಯುತ್ತಿರುವ ಆಹಾರ ಧಾನ್ಯಗಳು, ಕಣ್ಣಿಗೆ ರಾಚುವಂತಹ ಇಂತಹ ಕಟು ವಾಸ್ತವ ಸಂಗತಿಗಳನ್ನು ಮುಚ್ಚಿಕೊಳ್ಳಲು ಅಭಿವೃದ್ಧಿ ಕುರಿತಂತೆ ಪುಂಖಾನು ಪುಂಖವಾಗಿ ಹಸಿ ಸುಳ್ಳುಗಳನ್ನು ಹೇಳುತ್ತಿರುವ ಸರ್ಕಾರಗಳು, ಇಂತಹ ಅಯೋಮಯ ಸ್ಥಿತಿಯಲ್ಲಿ  ಅಸಮರ್ಪಕ ಆಡಳಿತವನ್ನು ನಾವು ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ.
ವಿಶ್ವ ಆಹಾರ ಯೋಜನಾ ಮಂಡಳಿಯ ಸಮೀಕ್ಷೆ ಪ್ರಕಾರ ಜಗತ್ತಿನಲ್ಲಿ ಹಸಿವಿನಿಂದ ಬಳಲುತ್ತಿರುವ ಜನಸಂಖ್ಯೆಯಲ್ಲಿ ಶೇಕಡ, 25 ರಷ್ಟು ಮಂದಿ ಭಾರತದಲ್ಲಿ ಇದ್ದಾರೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಜಗತ್ತಿನ 86 ಕೋಟಿ 80 ಲಕ್ಷ ಜನತೆಯಲ್ಲಿ, ಬಾರತದಲ್ಲಿ 27 ಕೋಟಿ, 70 ಲಕ್ಷ ಜನರಿದ್ದಾರೆ.  ಈ ಧಾರುಣ ಸ್ಥಿತಿಯಲ್ಲಿ ಜನತೆಯ ಹಸಿವನ್ನು ನೀಗಸಲು ಕೇಂದ್ರ ಸರ್ಕಾರ ಸಿದ್ಧಪಡಿಸಿದ ಆಹಾರ ಭದ್ರತೆಯ ಮಸೂದೆ ಬಡವರ ಪಾಲಿಗೆ ಸಂಜೀವಿನಿಯಾಗುವ ಎಲ್ಲಾ ಸಾಧ್ಯತೆಗಳಿದ್ದವು. ಆದರೆ, ಜನಪ್ರತಿನಿಧಿಗಳ ಇಚ್ಛಾ ಕೊರತೆ,ಮತ್ತು  ರಾಜಕೀಯ ಪಕ್ಷ ಮತ್ತು ನೇತಾರರನ್ನು ಆರಾಧಿಸುವ ಭಾರತದ ಜನ ಸಾಮಾನ್ಯರ ಬೌದ್ಧಿಕ ದಾರಿದ್ರ್ಯದ ಕಾರಣದಿಂದಾಗಿ ಮಸೂದೆಗೆ ಇನ್ನೂ ಮುಕ್ತಿ ದೊರಕಿಲ್ಲ.

ಭಾರತದ ಪಡಿತರ ವ್ಯವಸ್ಥೆಯಲ್ಲಿರುವ ದೋಷಗಳನ್ನು ಸರಿಪಡಿಸಿ ಆಹಾರ ಭದ್ರತೆಯ ಮಸೂದೆಯನ್ನು ಜಾರಿಗೆ ತಂದದ್ದೇ ಆದರೆ, ಈ ದೇಶದ 21 ಕೋಟಿ ಬಡವರು ಮತ್ತು 6 ಕೋಟಿ ಮಕ್ಕಳು ಹಸಿವೆಂಬ ನರಕದಿಂದ ಹೊರಬರಲು ಅವಕಾಶದ.ಸಾಧ್ಯತೆಗಳಿವೆ.  ಭಾರತದಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳ ಸ್ಥಿತಿ ನಿಜಕ್ಕೂ ಕಳವಳಕಾರಿಯಾಗಿದೆ. ಮಕ್ಕಳ ಈ ದುಸ್ಥಿಯಿಂದಾಗಿ ಭಾರತ ಸರ್ಕಾರ ಪ್ರತಿವರ್ಷ ಎರಡೂವರೆ ಸಾವಿರ ಕೋಟಿ ರೂಪಾಯಿಗಳನ್ನು ಆರೋಗ್ಯಕ್ಕಾಗಿ ವ್ಯಯ ಮಾಡುತ್ತಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ. ಹಸಿವು ಮತ್ತು ಅಪೌಷ್ಟಿಕತೆಯಿಂದಾಗಿ ಭಾರತದ ಅಭಿವೃದ್ಧಿ ಬೆಳವಣಿಗೆ ದರದಲ್ಲಿ ಶೇಕಡ ಮೂರರಷ್ಟು ಕುಂಟಿತವಾಗಿದೆ ಎಂದು ಸಹ ಬ್ಯಾಂಕ್  ಅಭಿಪ್ರಾಯಪಟ್ಟಿದೆ,
ಜಗತ್ತಿನಲ್ಲಿ ಅತಿ ಹೆಚ್ಚು ಶ್ರೀಮಂತರು ಇರುವ ರಾಷ್ಟ್ರಗಳಲ್ಲಿ ಭಾರತಕ್ಕೆ ಎರಡನೆಯ ಸ್ಥಾನ ಎಂಬ ರೋಚಕ ವರದಿಗಳು ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಪ್ರಕಟವಾದ ತಕ್ಷಣ ಭಾರತದ ಬಡವರ ಹಸಿವು ನೀಗುವುದಿಲ್ಲ. ಕೇವಲ ಆರ್ಥಿಕ ಅಭಿವೃದ್ಧಿಯ ಬೆಳವಣಿಗೆಯನ್ನು ಸಮಗ್ರ ಅಭಿವೃದ್ಧಿಯ ಬೆಳವಣಿಗೆ ಎಂದು ಬಿಂಬಿಸುವುದರೊಂದಿಗೆ  ಅಬಿವೃದ್ಧಿ ಕುರಿತಂತೆ  ಜನ ಸಾಮಾನ್ಯರ ದಿಕ್ಕು ತಪ್ಪಿಸುವ ಪ್ರಯತ್ನಗಳು ಇತ್ತೀಚೆಗೆ ಎಡಬಿಡದೆ ಸಾಗಿವೆ.
ಕಾರ್ಪೊರೇಟ್ ಸಂಸ್ಥೆಗಳು, ಮತ್ತು ದೇಶದ ಉಗ್ರ ಬಲಪಂಥೀಯರು, ಗುಜರಾತಿನ ನರೇಂದ್ರ ಮೋದಿಯನ್ನು ಅಭಿವೃದ್ಧಿಯ ಹರಿಕಾರ ಎಂದು ಹಾಡಿ ಹೊಗಳುವ ಮುನ್ನ ಒಮ್ಮೆ ಗುಜರಾತಿನ ಮಾನವ ಅಭಿವೃದ್ಧಿಯ ಬೆಳವಣಿಗೆ ದರವನ್ನು ಕೂಲಂಕುಶವಾಗಿ ಪರಶೀಲನೆ ಮಾಡುವುದು ಒಳಿತು.
ಗುಜರಾತ್ ರಾಜ್ಯದಲ್ಲಿ ಅಲ್ಲಿನ ಜನಸಂಖ್ಯೆಯಲ್ಲಿ(6ಕೋಟಿ,30ಲಕ್ಷ) ಶೇಕಡ 45 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಮಹಿಳೆಯರಲ್ಲಿ ಶೇಕಡ 36 ರಷ್ಟು ಪಾಲು ಇದ್ದರೆ, ಈ ಮಹಿಳೆಯರ ಪೈಕಿ ಶೇಕಡ 61 ರಷ್ಟು ಜನ ಮಹಿಳೆಯರು ಹಿಂದುಳಿದ ಜಾತಿ ಮತ್ತು ವರ್ಗಕ್ಕೆ ಸೇರಿದವರಾಗಿದ್ದಾರೆ.  ಗುಜರಾತ್ ರಾಜ್ಯ ಇತ್ತೀಚೆಗೆ ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ಬೆಳವಣಿಗೆ ಸಾಧಿಸಿದ್ದರೂ ಕೂಡ, ಗ್ರಾಮೀಣ ಪ್ರದೇಶದಲ್ಲಿ ನಿರೊದ್ಯೋಗಿಗಳ ಸಂಖ್ಯೆ ಶೇಕಡ 51 ರಷ್ಟನ್ನು ದಾಟಿದೆ. ಇದು ಗುಜರಾತ್ ಒಂದರ ಕಥೆಯಲ್ಲ, ಎಲ್ಲಾ ರಾಜ್ಯಗಳ ನೋವಿನ ಕಥೆ ಕೂಡ ಹೌದು.
 ಇಪ್ಪೊತ್ತೊಂದನ ಶತಮಾನದ ಜಗತ್ತಿನ ಅತಿಶ್ರೇಷ್ಟ ಅರ್ಥಶಾಸ್ತ್ರಜ್ಙರಲ್ಲಿ ಒಬ್ಬರಾದ ಡಾ. ಮನಮೋಹನ್ ಸಿಂಗ್ ರಂತಹ ಪ್ರಧಾನಿ ಇದ್ದರೂ ಕೂಡ ಭಾರತ ಹಸಿವು ಮತ್ತು ನಿರೂದ್ಯೋಗದಿಂದ ಮುಕ್ತವಾಗಲು ಸಾಧ್ಯವಾಗಲಿಲ್ಲ. ಆದರೆ, ಭಾರತದಂತೆ ಬ್ರೆಜಿಲ್ ಕೂಡ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಒಂದು. ಆ ರಾಷ್ಟ್ರದ ಅಧ್ಯಕ್ಷ ಲೂಲ ನಮ್ಮ ಪ್ರಧಾನಿಯಂತೆ ವಿದ್ಯಾವಂತನಲ್ಲ, ತಜ್ಙನಲ್ಲ, ಆದರೆ ಎರಡು ಬಾರಿ ಅಧ್ಯಕ್ಷನಾಗಿ ಬ್ರೆಜಿಲ್ ರಾಷ್ಟವನ್ನು ಹಸಿವಿನಿಂದ ಮುಕ್ತಗೊಳಿಸಿ, ಅಬಿವೃದ್ಧಿಯತ್ತ ಕೊಂಡೊಯ್ಯುತ್ತಿರುವ ಬಗೆ ನಿಜಕ್ಕೂ ವಿಸ್ಮಯ ಮೂಡಿಸುತ್ತದೆ.
ಕೊಳಗೇರಿಯಲ್ಲಿ ಹುಟ್ಟಿ ಬೆಳೆದು, ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು , ನಂತರ ತನ್ನ  ತಾಯಿ ಮತ್ತೊಬ್ಬ ವ್ಯಕ್ತಿಯನ್ನು ವಿವಾಹವಾದಾಗ, ಅದೇ ಕೊಳಗೇರಿಯ ಗುಡಿಸಲಿನಲ್ಲಿ ಮಲತಂದೆಯ ಜೊತೆ ವಾಸಿಸುತ್ತಾ, ತಾಮ್ರ ದ ಕುಲುಮೆಯಲ್ಲಿ ಕೂಲಿ ಕಾರ್ಮಿಕ ನಾಗಿ ದುಡಿದು ಬದುಕು ಕಟ್ಟಿಕೊಂಡ ಲೂಲಾನ ಬದುಕು ಸೋಜಿಗವಷ್ಟೇ ಅಲ್ಲ, ಒಂದು ಅಪರೂಪದ ಯಶೋಗಾಥೆ.. ಮುಂದೆ ಕಾರ್ಮಿಕ ನಾಯಕನಾಗಿ ಬೆಳೆದು, ತನ್ನದೇ ಆದ ಲೇಬರ್ ಪಕ್ಷವನ್ನು ಕಟ್ಟಿ, ಅದನ್ನು ಅಧಿಕಾರಕ್ಕೆ ತರುವುದರ ಹಿಂದೆ ಲೂಲಾ ಹೃದಯದಲ್ಲಿ ಹಲವಾರು ಕನಸುಗಳಿದ್ದವು. ಎಲ್ಲಕ್ಕಿಂತ ಹೆಚ್ಚಾಗಿ ತಾನು ಬಾಲ್ಯದಲ್ಲಿ ಎದುರಿಸಿದ ಸಂಕಷ್ಟಗಳು ಆತನ ಎದೆಯಲ್ಲಿ ಹಸಿರಾಗಿದ್ದವು. ( ತಾಮ್ರದ ಕುಲುಮೆಯಲ್ಲಿ ಕೆಲಸ ಮಾಡುವಾಗ ತನ್ನ ಎಡಗೈನ ಎರಡು ಬೆರಳುಗಳನ್ನು ಲೂಲಾ ಕಳೆದುಕೊಂಡರು) ಕೆಲಸವಿಲ್ಲದ ದಿನಗಳಲ್ಲಿ ನಗರದ ಬೀದಿಗಳಲ್ಲಿ ಶೇಂಗಾ ಬೀಜ ಮಾರಿ ಬದುಕಿದ ಲೂಲಾ ರವರಿಗೆ  ಬಡವರ ಹಸಿವು ಅರ್ಥವಾಗಿತ್ತು. ಹಾಗಾಗಿ 2003 ರಲ್ಲಿ ಅವರು, ಬ್ರೆಜಿಲ್ ದೇಶದಲ್ಲಿ  ಪರಿಣಾಮಕಾರಿಯಾಗಿ ಜಾರಿಗೆ ತಂದ ಆಹಾರ ಭದ್ರತೆಯ ಮಸೂದೆಯಿಂದಾಗಿ  ಆ ದೇಶದ ಮಕ್ಕಳು ಅಪೌಷ್ಟಿಕತೆಯ ಕಾಯಿಲೆಯಿಂದ ಪಾರಾಗಿದ್ದಾರೆ, ಬಡವರನ್ನು ಮೇಲೆತ್ತಲು ಅವರು ಆಹಾರ ಭಧ್ರತೆ ಮಸೂದೆ ಜೊತೆಗೆ ಎಲ್ಲಾ ಬಡವರಿಗೂ ಉಚಿತ ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯ ಹಾಗೂ ವಸತಿ ಯೋಜನೆಯನ್ನು ಜೋಡಿಸಿದ್ದಾರೆ. ಇದರ ಪರಿಣಾಮ ಆ ದೇಶದಲ್ಲಿ ಶೇಕಡ 67ರಷ್ಟು ಇದ್ದ ಮಕ್ಕಳ ಅಪೌಷ್ಟಿಕತೆ ಕೇವಲ ಐದು ವರ್ಷಗಳಲ್ಲಿ  ಶೇಕಡ 13 ಕ್ಕೆ ಇಳಿದಿದೆ. ಎರಡು ಕೋಟಿ ಜನ ಬಡತನದ ರೇಖೆಯಿಂದ ಮೇಲೆದ್ದು ಬಂದು ಸ್ವತಂತ್ರ ಜೀವನ ಸಾಗಿಸುತ್ತಿದ್ದಾರೆ. ಹಾಗಾಗಿ ಬ್ರೆಜಿಲ್ ದೇಶ ಚೀನಾ ಹಾಗೂ ಭಾರತವನ್ನು ಮಾನವ ಅಭಿವೃದ್ಧಿ ದರದಲ್ಲಿ ಮೀರಿಸಿ, ಜಗತ್ತಿಗೆ ಮಾದರಿ ರಾಷ್ಟ್ರವಾಗಿದೆ. ನಮ್ಮ ಜನಪ್ರತಿನಿಧಿಗಳಾದ, ಗ್ರಾಮಪಂಚಾಯಿತಿ ಸದಸ್ಯನಿಂದ ಹಿಡಿದು, ನಗರ ಸಭೆ, ಪಟ್ಟಣ ಪಂಚಾಯಿತಿ ಸಭೆಯ ಸದಸ್ಯರು ಮತ್ತು  ಶಾಸಕರುಗಳೆಂಬ   ಅಯೋಗ್ಯರು, ರಸ್ತೆ ದುರಸ್ತಿ, ಚರಂಡಿ ನಿರ್ಮಾಣ, ಕಸ ವಿಲೆವಾರಿ ಯಂತಹ ಕ್ಷುಲ್ಲಕ ಸಂಗತಿಗಳ ಅದ್ಯಯನಕ್ಕಾಗಿ ವಿದೇಶ ಪ್ರವಾಸದ ಮೂಲಕ ಮೋಜು ಮಸ್ತಿ ಮಾಡಿದರು. ಕರ್ನಾಟಕ ರಾಜ್ಯ ಸತತ ಎರಡು ವರ್ಷಗಳ ಕಾಲ ತೀವ್ರ ಬರಗಾಲದಲ್ಲಿ ನರಳಿದರೂ ಸಹ ಆತ್ಮ ಸಾಕ್ಷಿಯ ಪ್ರಜ್ಙೆ ಇಲ್ಲದವರಂತೆ, ಪೈಪೋಟಿಗೆ ಬಿದ್ದು ತಮ್ಮ ಪತ್ನಿಯರ ಸಮೇತ ವಿದೇಶ ಪ್ರವಾಸ ಮಾಡಿ ಬಂದರು. ಅದರ ಬದಲು ಇವರು  ಒಮ್ಮೆ ಬ್ರೆಜಿಲ್ ಗೆ ಬೇಟಿ ನೀಡಿ, ಅಲ್ಲಿನ   ಅಭಿವೃದ್ಧಿಯನ್ನು ಗಮನಿಸಿ ಬಂದಿದ್ದರೆ, ಇವರಿಂದ ಈ ನಾಡು ಉದ್ಧಾರವಾಗುವುದು ಇರಲಿ, ಕನಿಷ್ಟ ಇವರ ತಲೆಯಲ್ಲಿರುವ ಸಗಣಿಯ ಪ್ರಮಾಣವಾದರೂ  ಸ್ವಲ್ಪ ಕಡಿಮೆಯಾಗುತ್ತಿತ್ತು.

ಬುಧವಾರ, ಜೂನ್ 19, 2013

ಕರ್ನಾಟಕದ ಅಪ್ಪಿಕೊ ಚಳವಳಿಯ ಇತಿಹಾಸ

ಜಗತ್ತಿನ ಜೀವರಾಶಿಗಳಿಗೆ ಒಳಿತನ್ನು ಬಯಸುವ ಚಿಂತನೆಗಳಿಗೆ ಸಾವಿಲ್ಲವೆಂಬುದಕ್ಕೆ ಭಾರತದ ಅಪ್ಪಿಕೊ ಚಳವಳಿಯ ಇತಿಹಾಸ ಸಾಕ್ಷಿಯಂತಿದೆ. ಮುನ್ನೂರು ವರ್ಷಗಳ ಹಿಂದೆ ರಾಜಸ್ಥಾನದ ಈಗಿನ ಜೋಧಪುರ ಜಿಲ್ಲಾ ಕೇಂದ್ರದಿಂದ ಕೇವಲ 26 ಕಿಲೋಮೀಟರ್ ದೂರವಿರುವ ಖೇಜ್ರಾಲಿ ಎಂಬ ಸಣ್ಣ ಹಳ್ಳಿಯಲ್ಲಿ ಹುಟ್ಟಿಕೊಂಡ, ಮರಗಳನ್ನು ಉಳಿಸಿ ಕಾಪಾಡುವ ಒಂದು ಸಾಮುದಾಯಿಕ ಪ್ರಜ್ಙೆ ಮೂರು ಶತಮಾನಗಳ ನಂತರವೂ, ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಹಲವು ರೂಪ ತಾಳುತ್ತಾ ಮೈದಾಳುತ್ತಾ ಬಂದಿದೆ.ಜಗತ್ತಿನ ದಾರ್ಶನಿಕರು ನಮ್ಮ ನಡುವೆ ಇಲ್ಲದಿದ್ದರೂ ಅವರ ಚಿಂತನೆಗಳ ಮೂಲಕ ಜೀವಂತವಿದ್ದಾರೆ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಮುಂತಾದವರು ಇನ್ನೂ ನಮ್ಮಗಳ ಎದೆಯಲ್ಲಿ ಹಸಿಯಾಗಿರುವುದು ಮತ್ತು ಜೀವಂತವಾಗಿರುವುದು ಇಂತಹ ಜೀವಪರ ಚಂತನೆಗಳ ಕಾರಣಕ್ಕಾಗಿ ಎಂದರೆ. ಅತಿಶಯವಾಗಲಾರದು.
ಎಲ್ಲಿಯ ರಾಜಸ್ಥಾನ? ಎಲ್ಲಿಯ ಹಿಮಾಲಯದ ಪರ್ವತದ ಕಣಿವೆ? ಎಲ್ಲಿಯ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ? ಗಡಿ, ಭಾಷೆ, ಮತ್ತು ಸಂಸ್ಕೃತಿಗಳನ್ನು ಮೀರಿ ಬೆಳೆದ ಅಪ್ಪಿಕೊ ಚಳವಳಿಯ ವೈಶಾಲ್ಯತೆಯನ್ನು ಗಮನಿಸಿದರೆ, ಅಚ್ಚರಿಯಾಗುತ್ತದೆ. ಮೂರು ಶತಮಾನಗಳ ಕಾಲ ಗುಪ್ತ ಗಾಮಿನಿ ನದಿಯಂತೆ ಜನಮಾನಸದಲ್ಲಿ ಹರಿದು ಬಂದ ಈ ಪರಿಸರ ಪ್ರಜ್ಙೆ ನಿಜಕ್ಕೂ ಒಂದು ರೀತಿ ಸೋಜಿಗದ ಸಂಗತಿಯೆ ಸರಿ.

 ಜೋಧಪುರ ಸಂಸ್ಥಾನದ ಮಹಾರಾಜ ಅಭಯಸಿಂಗ್ ಎಂಬಾತ,ತನ್ನ ಕೈ ಕೆಳಗಿನ ಮಾಂಡಲೀಕ ಖರ್ದ ಸಂಸ್ಥಾನದ ಥಾಕೂರ್ ಸೂರತ್ ಸಿಂಗ್ ಎಂಬಾತನಿಗೆ 1726 ರಲ್ಲಿ ಖೇಜ್ರಾಲಿ ಗ್ರಾಮವನ್ನು ಬಳುವಳಿಯಾಗಿ ನೀಡಿದ್ದ. ಈ ಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿಷ್ಣೋಯ್ ಎಂದು ಕರೆಸಿಕೊಳ್ಳುವ ವೈಷ್ನವ ಪಂಥದ ಅನುಯಾಯಿಗಳು ವಾಸವಾಗಿದ್ದರು. ಗುರು ಜಂಬುಕೇಶ್ವರ್ ಎಂಬ ಸಂತನ ಪರಮ ಅನುಯಾಯಿಗಳಾಗಿದ್ದ ಇವರೆಲ್ಲಾ ಅಹಿಂಸೆ ಕುರಿತಾದ 29 ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಅವುಗಳಲ್ಲಿ ಮರಗಳ ಕಡಿಯುವಿಕೆಯ ನಿಷೇಧ ಮತ್ತು ಪ್ರಾಣಿಗಳ ಬೇಟೆಯ ನಿಷೇಧಗಳು ಸೇರಿದ್ದವು.
1730 ರ ಸೆಪ್ಟಂಬರ ತಿಂಗಳಿನ ಒಂದು ಮಂಗಳವಾರ ಬೆಳಿಗ್ಗೆ ಮಾಡಲೀಕ ಥಾಕೂರ್ ಸಿಂಗ್  ತಾನು ನಿರ್ಮಿಸುತ್ತಿದ್ದ ಅರಮನೆಗಾಗಿ ಹುಲುಸಾಗಿ ಬೆಳದಿದ್ದ ಮರಗಳನ್ನು ಕಡಿಯಲು ಖೇಜ್ರಾಲಿ ಗ್ರಾಮಕ್ಕೆ ತನ್ನ ಸೇವಕರನ್ನು ಕಳುಹಿಸಿದ. ಸುದ್ದಿ ತಿಳಿದ ಗ್ರಾಮದ  ಅಮೃತಾದೇವಿ ಎಂಬ ಗೃಹಣಿ, ತನ್ನ ಮೂವರು ಹೆಣ್ಣು ಮಕ್ಕಳಾದ, ರತ್ನಿ,ಅಸು ಮತ್ತು ಬಾಗು ಇವರ ಜೊತೆಗೂಡಿ ಸ್ಥಳಕ್ಕೆ ದಾವಿಸಿಬಂದು ಮರಗಳನ್ನು ಕಡಿಯದಂತೆ, ಅವುಗಳನ್ನು ಅಪ್ಪಿಕೊಂಡು ಅಡ್ಡಿಪಡಿಸಿದರು. ಸುದ್ಧಿ ತಿಳಿದ ಮಾಂಡಲೀಕ ಥಾಕೂರ್ ಸುರತ್ ಸಿಂಗ್ ಅವರ ತಲೆ ಕಡಿದು ಮರಗಳನ್ನು ಉರುಳಿಸುವಂತೆ ಸೇವಕರಿಗೆ ಆಜ್ಙಾಪಿಸಿದ. ಸೇವಕರು ಅಮೃತಾದೇವಿ ಸೇರಿದಂತೆ ಮೂವರು ಮಕ್ಕಳ ತಲೆ ಕಡಿದು, ಮರಗಳನ್ನು ಉರುಳಿಸಿದರು. ಈ ವಿಷಯ ಸುತ್ತಮುತ್ತಲಿನ ಗ್ರಾಮಗಳಿಗೆ ಹರಡುತ್ತಿದ್ದಂತೆ, ನೂರಾರು ಮಹಿಳೆಯರು ಮುಂದೆ ಬಂದು ತಮ್ಮ ಜೀವವನ್ನು ಬಲಿಕೊಟ್ಟು ಮರಗಳನ್ನು ಸಂರಕ್ಷಿಸಲು ಮುಂದಾದರು. ಮರಗಳ ರಕ್ಷಣೆಗಾಗಿ ನಡೆದ ಮಾರಣ ಹೋಮದಲ್ಲಿ ಒಟ್ಟು 363 ಮಂದಿ ಮಹಿಳೆಯರು ಬಲಿಯಾಗಿದ್ದರು.
ವಿಷಯ ರಾಜಸ್ಥಾನದೆಲ್ಲೆಡೆ ಹರಡುತ್ತಿದ್ದಂತೆ, ಖೇಜ್ರಾಲಿ ಗ್ರಾಮಕ್ಕೆ ಸ್ವತಃ ಆಗಮಿಸಿದ ಜೋಧಪುರದ ಮಹಾರಾಜ ಅಭಯ್ ಸಿಂಗ್ ಜನತೆಯಲ್ಲಿ ನಡೆದ ಘಟನೆಗೆ ಕ್ಷಮೆ ಯಾಚಿಸಿದ. ಜೊತೆಗೆ ಖೇಜ್ರಾಲಿ ಗ್ರಾಮವೂ ಸೇರಿದಂತೆ,ಸುತ್ತ ಮುತ್ತಲಿನ ಗ್ರಾಮಗಳ ಪರಿಸರದಲ್ಲಿ ಮರಗಳನ್ನು ಕಡಿಯುವುದಕ್ಕೆ ನಿಷೇಧ ಹೇರಿದ.ಜೊತೆಗೆ, ಪ್ರಾಣಿಗಳ ಬೇಟೆಯನ್ನು ಸಹ ನಿಷೇಧಿಸಿದ. ಸ್ವತಃ ಮಾಂಸಹಾರಿಯಾಗಿದ್ದ ಮಹಾರಾಜ ಅಭಯ್ ಸಿಂಗ್ ತನ್ನ ವಂಶಸ್ಥರು ಸಹ ಎಂದಿಗೂ ಈ ಪ್ರದೇಶದಲ್ಲಿ ಪ್ರಾಣಿಗಳನ್ನು ಶಿಕಾರಿ ಮಾಡುವುದಿಲ್ಲ ಎಂದು ಪ್ರತಿಜ್ಙೆಗೈದ. ಈ ಪದ್ದತಿಯನ್ನು ಅವನ ವಂಶಸ್ಥರು ಇಂದಿಗೂ ಸಹ  ಜಾರಿಯಲ್ಲಿಟ್ಟಿದ್ದಾರೆ.

ಖೇಜ್ರಾಲ್ ಹಳ್ಳಿಯಲ್ಲಿ ಮರಗಳ ರಕ್ಷಣೆಗಾಗಿ ಅಮೃತಾದೇವಿ ಸೇರಿದಂತೆ 363 ಹುತಾತ್ಮ ಮಹಿಳೆಯರಿಗಾಗಿ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ಪ್ರತಿ ವರ್ಷ ಸೆಪ್ಟಂಬರ್ ತಿಂಗಳ ಮೊದಲ ಮಂಗಳವಾರ ಅಮೃತಾದೇವಿ ಮತ್ತು ಸಂಗಡಿಗರ ನೆನಪಿಗಾಗಿ ಜಾತ್ರೆ ನಡೆಯುತ್ತದೆ. ಆ ಮಹಿಳೆಯರು ತಮ್ಮ ಜೀವಗಳ ಬಲಿದಾನದ ಮೂಲಕ ಉಳಿಸಿದ ಮರಗಳು ಇಂದಿಗೂ ಖೇಜ್ರಾಲಿ ಗ್ರಾಮದಲ್ಲಿ ಜೀವಂತವಾಗಿವೆ.
 ಹೀಗೆ ಮರಗಳ ಸಂರಕ್ಷಣೆಗಾಗಿ 1730 ರಲ್ಲಿ ಹುಟ್ಟಿಕೊಂಡ ಅಪ್ಪಿಕೊ ಚಳವಳಿ, 1970 ರಲ್ಲಿ ಹಿಮಾಲಯದ ಗೋಪೇಶ್ವರ, ತೆಹ್ರಿ, ಘರ್ ವಾಲ್, ಚಮೋಲಿ ಜಿಲ್ಲೆಗಳಲ್ಲಿ ಮತ್ತೆ ಜನ್ಮತಾಳಿತು. ನಂತರ 1980 ರಲ್ಲಿ ಸ್ಥಗಿತಗೊಂಡ ಈ ಹೋರಾಟ, ಅಚ್ಚರಿ ಎಂಬಂತೆ 1983 ರ ಸೆಪ್ಟಂಬರ್ ಎಂಟರಂದು ದಕ್ಷಿಣ ಭಾರತದ ಕರ್ನಾಟಕದಲ್ಲಿ  ಪ್ರಥಮ ಬಾರಿಗೆ ಜನ್ಮ ತಾಳಿತು. ಇದರ ರೂವಾರಿ ಉತ್ತರ ಕನ್ನಡ ಜಿಲ್ಲೆಯ ಪಾಂಡು ರಂಗ ಹೆಗ್ಡೆ.

1956 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಅರಣ್ಯದ ನಡುವಿನ ಒಂಬತ್ತು ಮನೆಗಳ ಪುಟ್ಟ ಗ್ರಾಮವೊಂದರಲ್ಲಿ ಜನಿಸಿದ ಪಾಂಡುರಂಗ ಹೆಗ್ಡೆಯವರು ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡವರು. ಆನಂತರ ಉದ್ಯೋಗಿಯಾಗಿದ್ದ ಅಣ್ಣನ ಆಶ್ರಯದಲ್ಲಿ ಮುಂಬೈ ಮತ್ತು ನಾಗಪುರ ನಗರಗಳಲ್ಲಿ ಬೆಳೆದವರು. ಬಿ,ಕಾಂ. ಪದವಿಯ ನಂತರ 1979 ರಲ್ಲಿ ದೆಹಲಿಗೆ ತೆರಳಿದ ಹೆಗ್ಡೆಯವರು ಛಾರ್ಟಡ್ ಅಕೌಂಟೆಡ್ ಆಗಿ ವೃತ್ತಿ ಆರಂಭಿಸಿದ್ದರು. ಆದರೆ, ಹಾಳೆಗಳ ಮೇಲಿನ ಲೆಕ್ಕ, ಅವರಿಗೆ ಕೂಡಿ ಬರಲಿಲ್ಲ. ನಂತರ ವೃತ್ತಿ ತ್ಯೆಜಿಸಿ, ದೆಹಲಿಯ ಸ್ಕೂಲ್ ಆಫ್ ಸೋಷಿಯಲ್ ವರ್ಕ್ ಸಂಸ್ಥೆಗೆ ದಾಖಲಾದರು. ಮರುವರ್ಷ ಸ್ವಯಂ ಸೇವಾ ಸಂಘಟನೆಯೊಂದರ ಕಾರ್ಯಕರ್ತರಾಗಿ ಮಧ್ಯಪ್ರದೇಶಲ್ಲಿ ಕಾರ್ಯ ನಿರ್ವಹಿಸಿದರು. ಈ ವೇಳೆಗೆ ಹಿಮಾಲಯದ ಕಣಿವೆಯಲ್ಲಿ ಆರಂಭಗೊಂಡಿದ್ದ ಚಿಪ್ಕೊ ಚಳವಳಿಗೆ ಸಾಕ್ಷಿಯಾಗಿದ್ದ ಅವರು, ತನ್ನ ಹುಟ್ಟುನೆಲದಲ್ಲಿನ ಮರಗಳ ಸಂರಕ್ಷಣೆಗಾಗಿ ಇಂತಹ ಆಂಧೋಲನವನ್ನು ಆರಂಭಿಸಬೇಕೆಂದು  ನಿರ್ಧರಿಸಿ ಮತ್ತೆ ಕರ್ನಾಟಕಕ್ಕೆ ವಾಪಸ್ಸಾದರು.
1983 ರ ಸೆಪ್ಟಂಬರ್ 8 ರಂದು ಉತ್ತರ ಕನ್ನಡ ಜಿಲ್ಲೆಯ ಕಳಸೆ ಅರಣ್ಯದ ಸಾಲ್ಕುಣಿ ಎಂಬ ಪ್ರದೇಶದಲ್ಲಿ
ಉಳಿಸು, ಬೆಳಸು, ಬಳಸು, “ಎಂಬ ಪರಿಕಲ್ಪನೆಯೊಂದಿಗೆ ಅಪ್ಪಿಕೊ ಚಳವಳಿಗೆ ಪಾಂಡುರಂಗ ಹೆಗ್ಡೆ  ಚಾಲನೆ ನೀಡಿದರು. 1950 ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇಕಡ 81 ರಷ್ಟು ಭಾಗ ಅರಣ್ಯವಿದ್ದದು, ದಾಂಡೇಲಿಯಲ್ಲಿ ಆರಂಭವಾದ ಪ್ಲೈವುಡ್ ಕಾರ್ಖಾನೆ ಮತ್ತು ಕಾಳಿ ನದಿಯ ಅಣೆಕಟ್ಟು ಯೋಜನೆಗಳಿಂದಾಗಿ ಶೇಕಡ 66 ರಷ್ಟು ಭಾಗಕ್ಕೆ ಕುಸಿದಿತ್ತು. ಕೇರಳ ರಾಜ್ಯ ಪಶ್ಚಿಮಗಟ್ಟದ ವಿಸ್ತೀರ್ಣದ ಶೇಕಡ 42 ರಷ್ಟು ಭಾಗವನ್ನು ಹೊಂದಿದ್ದು, ಶೇಕಡ 44 ರಷ್ಟು ಇದ್ದ ಅರಣ್ಯ ಪ್ರದೇಶ ಕೇವಲ ಮೂರು ದಶಕಗಳ ಅವಧಿಯಲ್ಲಿ ಶೇಕಡ 9 ರಷ್ಟು ಭಾಗಕ್ಕೆ ಕುಸಿದಿತ್ತು. ದಕ್ಷಿಣ ಭಾರತದಲ್ಲಿ ಅರಣ್ಯದ ಅವಸಾನವಾಗುತ್ತಿರುವ ಕುರಿತು ಅರಿವಿದ್ದ ಪಾಂಡು ರಂಗ ಹೆಗ್ಡೆಯವರಿಗೆ ಮರಗಳ ಮಾರಣ ಹೋಮ ತಪ್ಪಿಸುವ ಬಗ್ಗೆ ಚಿಂತೆಯೊಂದು ಅವರನ್ನು ಸದಾ \ಕಾಡುತ್ತಿತ್ತು. ಅವರ ಈ ಚಿಂತನೆಯ ಫಲವಾಗಿ ಕಡಿಮೆ ಉರವಲು ಬೇಡುವ ಅತ್ಯಾಧುನಿಕ ಒಲೆಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ  ಬಳಕೆಗೆ ಬಂದವು. ತಾವೇ ಸ್ವತಃ ನಿಂತು ಹೋಟೇಲುಗಳಿಗೆ, ಚಹಾ ಅಂಗಡಿಗಳಿಗೆ, ಮನೆಗಳಿಗೆ ಹೀಗೆ ಎರಡು ಸಾವಿರ ಒಲೆಗಳನ್ನು ವಿತರಿಸಿದರ. ಮಕ್ಕಳಲ್ಲಿ, ಗ್ರಾಮಸ್ಥರಲ್ಲಿ ಜಾಗೃತಿಯನ್ನುಂಟು ಮಾಡಿ, ಸಸಿಗಳನ್ನು ಬೆಳಸಿ, ನೆಡುವಂತೆ ಪ್ರೋತ್ಸಾಹಿಸಿದರು. ಅಲ್ಲದೆ ಚಿಪ್ಕೊ ಚಳವಳಿಯ ನೇತಾರ ಸುಂದರ ಲಾಲ್ ಬಹುಗುಣರನ್ನು ಕರ್ನಾಟಕಕ್ಕೆ ಕರೆತಂದು ಪರಿಸರದ ಪ್ರಜ್ಙೆ ಮೂಡಿಸಿ
ದರು. ಕೇವಲ ಮೂರು ವರ್ಷದ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 12 ಲಕ್ಷ ಸಸಿಗಳನ್ನು ನೆಡಲು ಕಾರಣಕರ್ತರಾದರು. ಪಾಂಡುರಂಗ ಹೆಗ್ಡೆಯವರ ಈ ಪರಿಸರ ಆಂದೋಲನ ನೆರೆಯ ಕೇರಳ, ತಮಿಳುನಾಡು ಮತ್ತು ಗೋವಾ ರಾಜ್ಯಗಳಿಗೆ ವಿಸ್ತರಿಸಲು ಪ್ರೇರಣೆಯಾಯಿತು. ಅಲ್ಲದೆ, 1984 ರ ವೇಳೆಗೆ ವಿಶ್ವಬ್ಯಾಂಕ್ ನೆರವಿನಿಂದ ಕರ್ನಾಟಕದಲ್ಲಿ ಜಾರಿಗೆ ಬಂದ ಸಾಮಾಜಿಕ ಅರಣ್ಯಯೋಜನೆ ಕಾರ್ಯಕ್ರಮದಲ್ಲಿ ಕೇವಲ ನೀಲಗಿರಿ ಮತ್ತು ಅಕೇಶಿಯಾ ಗಿಡಗಳನ್ನು ನೆಡುತ್ತಿದ್ದುದನ್ನು ಸಾರ್ವಜನಿಕರು ಪ್ರತಿಭಟಿಸಲು ಕಾರಣವಾಯಿತು. ಆನಂತರ ಅರಣ್ಯ ಇಲಾಖೆ ಇತರೆ ಗಿಡಗಳನ್ನು ಬೆಳಸಿ, ನೆಡಲು ಆರಂಭಿಸಿತು.
ಹೀಗೆ ಸತತ ಮೂರು ಶತಮಾನಗಳ ಕಾಲದ ಇತಿಹಾಸವಿರುವ ಅಪ್ಪಿಕೊ ಚಳವಳಿ ಆಯಾ ಕಾಲಕ್ಕೆ ತಕ್ಕಂತೆ ವಿವಿಧ ರೂಪಗಳಲ್ಲಿ ಜನ್ಮ ತಾಳುತ್ತಲೇ ಇದೆ. ಇದಕ್ಕೆ ಇತ್ತೀಚೆಗಿನ ಉದಾಹರಣೆಯೆಂದರೆ, ಐದು ವರ್ಷದ ಹಿಂದೆ ಗೋಕರ್ಣ ಸಮೀಪದ ತದಡಿ ಬಂದರು ಪ್ರದೇಶದಲ್ಲಿ ಕಲ್ಲದ್ದಲು ಆಧಾರಿತ ವಿದ್ಯುತ್ ಸ್ಥಾವರ ಸ್ಥಾಪನೆಗೆ ಕರ್ನಾಟಕ ಸರ್ಕಾರ  ( ನಾಲ್ಕು ಸಾವಿರ ಮೆಗಾವ್ಯಾಟ್) ಮುಂದಾದಾಗ 25 ಸಾವಿರ ಮಂದಿ ಪರಿಸರ ವಾದಿಗಳ ಪ್ರತಿಭಟನೆಯಿಂದ  ಅದು ಸ್ಥಗಿತಗೊಂಡಿತು.
ಭಾರತದ ಸಂದರ್ಭದಲ್ಲಿ ಅಪ್ಪಿಕೊ ಚಳವಳಿ ಕೊಟ್ಟ ಅತಿ ದೊಡ್ಡ ಕೊಡುಗೆಯೆಂದರೆ, ಒಂದನೇಯದಾಗಿ ಜನಸಾಮಾನ್ಯರಲ್ಲಿ ಪರಿಸರ ಕುರಿತಂತೆ ಜಾಗೃತಿ ಮೂಡಿಸಿದ್ದು. ಎರಡನೇಯದಾಗಿ ಈ ದೇಶಕ್ಕೆ ಅತಿ ಮುಖ್ಯ ಹಾಗೂ ಪ್ರತಿಭಾವಂತ ಪರಿಸರ ತಜ್ಙರನ್ನು ಈ ಆಂಧೋಲನ ನೀಡಿದೆ.ಈ ದಿನ ನಮ್ಮ ನಡುವೆ ಇರುವ ಡಾ.ವಂದನಾ ಶಿವ( ಭೌತ ವಿಜ್ಙಾನಿಯಾಗಬೇಕಿದ್ದವರು) ಮತ್ತು ದೆಹಲಿಯ ಸೆಂಟರ್ ಪಾರ್ ಸೈನ್ಸ್ ಅಂಡ್ ಎನ್ವಿರಾನ್ ಮೆಂಟ್ ಸಂಸ್ಥೆಯ ಸ್ಥಾಪಕ ದಿವಂಗತ ಅನಿಲ್ ಅಗರ್ ವಾಲ್ ಹಾಗೂ ನಮ್ಮ ಕನ್ನಡಿಗರಾದ ನಾಗೇಶ್ ಹೆಗ್ಡೆ ( ಇವರಿಬ್ಬರೂ ಕಾನ್ಪರ್ ಮತ್ತು ಖರಗ್ ಪುರದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಪದವೀಧರರು, ಲಕ್ಷಾಂತರ ರೂಪಾಯಿ ಸಂಬಳ ತರುವ ಪ್ರಾಧ್ಯಾಪಕ ಹುದ್ದೆ ತ್ಯೆಜಿಸಿ ಪರಿಸರ ರಕ್ಷಣೆಗೆ ಜೀವ ಮುಡಿಪಾಗಿಟ್ಟವರು) ಹಾಗೂ  ಪಾಂಡು ರಂಗ ಹೆಗ್ಡೆ, ಸುನೀತಾ ನಾರಾಯಣ್ ( ಡೌನ್ ಟು ಅರ್ಥ್ ಪತ್ರಿಕೆ ಸಂಪಾದಕಿ) ಹೀಗೆ ಹೆಸರಿಸಲು ಸಾದ್ಯವಾಗದಷ್ಟು ಮಹನೀಯರನ್ನು ಅಪ್ಪಿಕೊ ಚಳವಳಿ ಕೊಡುಗೆ ನೀಡಿದ್ದು, ಈ ಸಂತತಿ ದೇಶದೆಲ್ಲೆಡೆ ಬೆಳೆಯುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ.

                                                                           (ಮುಗಿಯಿತು)

ಸೋಮವಾರ, ಜೂನ್ 17, 2013

ಅಪ್ಪಿಕೊ (ಚಿಪ್ಕೊ) ಚಳವಳಿಯ ಕಥನ- ಮೂರು

ಹಿಮಾಲಯದ ಪರಿಸರದಲ್ಲಿ  ನಡೆಯುತ್ತಿದ್ದ ಮರಗಳ ಮಾರಣಹೋಮದ ಬಗ್ಗೆ ಅಲ್ಲಿನ ಜನರಲ್ಲಿ ನಿಜವಾದ ಕಿಚ್ಚು ಮೂಡತೊಡಗಿದ್ದು, 1972 ರಲ್ಲಿ. ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆ ಬಹುರಾಷ್ಟ್ರೀಯ ಕಂಪನಿಯಾದ ಸೈಮಂಡ್ ಎಂಬ ಕಂಪನಿಗೆ ಘರ್ ವಾಲ್, ಚಮೋಲಿ, ತೆಹ್ರಿ  ಮತ್ತು ಉತ್ತರ ಕಾಶಿ ಹೀಗೆ ಹಿಮಾಲಯದ ತಪ್ಪಲಿನ ಅರಣ್ಯದಲ್ಲಿ ಎಂಟು ಸಾವಿರ ಮರಗಳನ್ನು ಕಡಿಯಲು ಅನುಮತಿ ನೀಡಿತು. ಕ್ರಿಕೇಟ್ ಬ್ಯಾಟ್, ಟೆನ್ನಿಸ್ ರಾಕೇಟ್ ನಂತಹ ಹಲವಾರು ಕ್ರೀಡಾ ಸಾಮಾಗ್ರಿಗಳನ್ನು ತಯಾರಿಸುತ್ತಿದ್ದ ಈ ಕಂಪನಿ , ಸರ್ಕಾರದ ಲೆಕ್ಕದಲ್ಲಿ, ಎಂಟು ಸಾವಿರ ಮರಗಳು ಹಾಗೂ ಅಧಿಕಾರಿಗಳ ಜೊತೆಗಿ ಒಳ ಒಪ್ಪಂಧದಲ್ಲಿ ಅದರ ನಾಲ್ಕು ಪಟ್ಟು ಮರಗಳನ್ನು ಕಡಿಯಲು ಹವಣಿಸಿತ್ತು. ಇದು ಸಹಜವಾಗಿ ಅಲ್ಲಿನ ಜನರ ನಂಬಿಕೆ ಮತ್ತು ಅಸ್ತಿತ್ವವನ್ನು ಅಲುಗಾಡಿಸಿತ್ತು. ಏಕೆಂದರೆ, ಹಿಮಾಲಯದ ಪ್ರದೇಶದಲ್ಲಿ ವಯಸ್ಸಾದ ವೃದ್ಧ ದಂಪತಿಗಳು ತಾವು ಸಾಯುವ ಮುನ್ನ ಹಲವು ಸಸಿಗಳನ್ನು ನೆಟ್ಟು, ಅವುಗಳನ್ನು ಪೋಷಿಸಿ, ನಂತರ ಸಾಯುವುದು ಸಂಪ್ರದಾಯ. ಇಂತಹ ಅತ್ಯಮೂಲ್ಯ ಸಂಪ್ರದಾಯದ ಮೂಲಕ ಹಿರಿಯರು ಬೆಳಸಿದ ವೃಕ್ಷಗಳು ಅಲ್ಲಿನ ಜನತೆಯ ಪಾಲಿಗೆ ಅತ್ಯಮೂಲ್ಯ ಆಸ್ತಿಯಾಗಿದ್ದವು. ಇಂತಹ ನಂಬಿಕೆಗಳನ್ನು ಅಲುಗಾಡಿಸಿದ ಸರ್ಕಾರದ ವ್ಯವಸ್ಥೆ ಮತ್ತು ಸೈಮಂಡ್ ಕಂಪನಿಯ ವಿರುದ್ಧ ಜನತೆ, ತಮ್ಮ ಜೀವನ್ಮರಣದ ಪ್ರಶ್ನೆಯೆಂಬಂತೆ ಪರಿಗಣಿಸಿ ಪ್ರತಿಭಟಿಸತೊಡಗಿದರು. ವಿಶೇಷವಾಗಿ  ಮಹಿಳೆಯರು ತಿರುಗಿ ಬಿದ್ದರು.
ಅರಣ್ಯ ಇಲಾಖೆ ಮತ್ತು ಕಂಪನಿಯ ಈ ಅಪವಿತ್ರ ಮೈತ್ರಿಯಿಂದಾಗಿ ಮರಗಳು ಉರುಳುವುದು ಖಚಿತವಾದಂತೆ, ಚಾಂಡಿಪ್ರಸಾದ್ ಭಟ್ ಹಳ್ಳಿ. ಹಳ್ಳಿಗಳಲ್ಲಿ ಸಂಚರಿಸಿ ಜನ ಜಾಗೃತಿ ಮೂಡಿಸಿದರು. ಇಂತಹ ಸಮಯದಲ್ಲಿ ಅವರಿಗೆ ದೊರಕಿದ ವೀರ ಮಹಿಳೆಯೆಂದರೆ,  ಹಳ್ಳಿಯೊಂದರ ಮಧ್ಯವಯಸ್ಕಿನ ಹೆಣ್ಣು ಮಗಳು ಗೌರಾದೇವಿ.  ಈಕೆಯದು ಸಾಹಸಮಯ ಬದುಕಿನ ಜೊತೆ ದುರಂತಮಯ ಬದುಕು ಕೂಡ ಹೌದು. ಹಿಮಾಲಯಯದ ಗಿರಿಶಿಖರಗಳ ನಡುವಿನ  ಒಂದು ಹಳ್ಳಿಯಲ್ಲಿ ಅಶಿಕ್ಷಿತ ಹೆಣ್ಣುಮಗಳಾಗಿ ಜನಿಸಿದ ಗೌರಾದೇವಿ, ಅಲ್ಲಿನ ಮಹಿಳೆಯರಿಗೆ ಬದುಕು ಕಟ್ಟಿಕೊಳ್ಳುವುದು ಹೇಗೆ? ಎಂಬುದನ್ನು ಕಲಿಸುತ್ತಾ, ಎಲ್ಲಾ ಅಸಮಾನತೆ ಮತ್ತು ವ್ಯವಸ್ಥೆಯ ಭ್ರಷ್ಟಾಚಾರದ ವಿರುದ್ಧ ತಿರುಗಿ ಬಿದ್ದು, ಮಹಿಳೆಯರ ಸಾಮರ್ಥ್ಯ ಏನು ಎಂಬುದನ್ನು ಜಗತ್ತಿಗೆ ತೋರಿಸಿ, ತನ್ನ 61 ನೇ ವಯಸ್ಸಿನಲ್ಲಿ ಅನಾಮಿಕಳಾಗಿ ತೀರಿ ಹೋದಳು. ಈಕೆಯ ಜೀವನ ಕುರಿತು ದೇಶದ ಯಾವುದೇ ರಾಜ್ಯದ ಇತಿಹಾಸದ ಪಠ್ಯದಲ್ಲಾಗಲಿ, ಅಥವಾ ಪರಿಸರ ಕುರಿತ ಚರಿತ್ರೆಯಲ್ಲಾಗಲಿ, ಸಾಹಸಿ ಜೀವನ ದಾಖಲಾದಂತೆ ಕಾಣುವುದಿಲ್ಲ.
ಹಿಮಾಲಯದ ನೀಟಿ   ಕಣಿವೆಯ ಲಟ್ಟ ಎಂಬ ಹಳ್ಳಿಯಲ್ಲಿ , ಉಣ್ಣೆಯ ಕಂಬಳಿ ಮತ್ತು ಶಾಲು ನೇಯುವ ಮರ್ಚಾ ಎಂಬ ಸಮುದಾಯದ ಕುಟುಂಬದಲ್ಲಿ 1925 ರಲ್ಲಿ  ಜನಿಸಿದ ಗೌರಾದೇವಿ, ಎಂದೂ ಶಾಲೆಯ ಮುಖ ನೋಡಿದವಳಲ್ಲ. ತನ್ನ ಕುಟುಂಬದ ಕಸುಬನ್ನು ವೃತ್ತಿಯಾಗಿಸಿಕೊಂಡು, ಮನೆಯಲ್ಲಿ ಕಂಬಳಿ ನೇಯುತ್ತಿದ್ದಳು. ತನ್ನ 17 ನೇ ವಯಸ್ಸಿನಲ್ಲಿ ನೆರೆಯ ರೇಣಿ ಎಂಬ ಗ್ರಾಮಕ್ಕೆ ವಿವಾಹವಾಗಿ ಬಂದು, ಅಲ್ಲಿಯೂ ಸಹ ತನ್ನ ಪತಿಯ ಜೊತೆ ತನ್ನ ವೃತ್ತಿಯನ್ನು ಮುಂದುವರಿಸಿದ್ದಳು. ಅವಳ ದುರಾದೃಷ್ಟಕ್ಕೆ ವಿವಾಹವಾದ ಐದನೇ ವರ್ಷಕ್ಕೆ ಆಕೆಯ ಪತಿ, ಎರಡೂವರೆ ವರ್ಷದ  ಗಂಡು ಮಗುವನ್ನು ಬಳುವಳಿಯಾಗಿ ನೀಡಿ ಅಕಾಲ ಮೃತ್ಯು ಗೆ ಬಲಿಯಾದನು.  ಗೌರಾದೇವಿ ಕೇವಲ 22 ನೇ ವಯಸ್ಸಿಗೆ ವಿಧವೆಯಾದಳು. ತನ್ನ ಬದುಕಿಗೆ ಬರಸಿಡಿಲಿನಂತೆ ಎರಗಿದ ದುರಂತಕ್ಕೆ ಎದೆಗುಂದದ ಈಕೆ., ತನ್ನ ಹಸುಗೂಸನ್ನು ಬೆನ್ನಿಗೆ ಕಟ್ಟಿಕೊಂಡು, ಕಂಬಳಿ, ಶಾಲು ನೇಯುತ್ತಾ ಬದುಕತೊಡಗಿದಳು. ತನ್ನ ಈ  ಹೋರಾಟದ ಸಾಹಸಮಯ ಬದುಕಿನ ಜೊತೆ ತಾನು ಹುಟ್ಟಿ ಬೆಳೆದ ಪರಿಸರದಲ್ಲಿನ ಪುರುಷರ ದುಶ್ಚಟಗಳ ಬಗ್ಗೆ ಅವಳಿಗೆ ವಿಪರೀತ ಅಸಹನೆಯಿತ್ತು. ಅಲ್ಲಿನ ಬಹುತೇಕ ಪುರುಷರು, ಚಳಿ ತಡೆಯಲಾರದೆ, ತಂಬಾಕು ಮತ್ತು ಸ್ಥಳಿಯವಾಗಿ ತಯಾರಿಸುತ್ತಿದ್ದ ದಾರು ಎಂದು ಕರೆಯಲ್ಪಡುವ ಕಳ್ಳಭಟ್ಟಿ ಸಾರಾಯಿಗೆ ದಾಸರಾಗಿದ್ದರು. ಇಂತಹ ದುಶ್ಚಟಗಳಿಂದ ಅಲ್ಲಿನ ಬಹುತೇಕ ಪುರುಷರಿಗೆ ಮುವತ್ತಕ್ಕೆ ಮುಪ್ಪು ಆವರಿಸಿ, ನಂತರ ನಲವತ್ತಕ್ಕೆ ಚಟ್ಟ ಏರುತ್ತಿದ್ದರು. ಇಂತಹ ವ್ಯವಸ್ಥೆಯ ವಿರುದ್ಧ ಸಿಡಿಯಬೇಕು ಎಂದು ಕುದಿಯುತ್ತಿದ್ದ ಗೌರಾದೇವಿಗೆ 1965 ರ ಲ್ಲಿ ಗಾಂಧಿವಾದಿ ಸುಂದರಲಾಲ್ ಬಹುಗುಣ ಆರಂಭಿಸಿದ ಮಧ್ಯಪಾನ ವಿರೋಧ ಚಳುವಳಿ  ವೇದಿಕೆ ಒದಗಿಸಿಕೊಟ್ಟಿತು.
ಹಿಮಾಲಯದ ಪರಿಸರಕ್ಕೆ ಅಧ್ಯಾತ್ಮಿಕ ಮತ್ತು ತಾತ್ವಿಕ ನೆಲೆಗಟ್ಟನ್ನು ಅಲ್ಲಿನ ಜನಜೀವನದೊಂದಿಗೆ ಮಿಳಿತಗೊಳಿಸುವುದರಲ್ಲಿ ಗಾಂಧಿ ಅನುಯಾಯಿಗಳಾದ ಮೀರಾಬೆಹನ್ ಮತ್ತು ಬಹುಗಣ ಅವರ ಪಾತ್ರ ಬಹುದೊಡ್ಡದು. ಇವರಿಬ್ಬರಿಂದ ಪ್ರೇರಿತಗೊಂಡ ಸರಳಾ ಬೆಹನ್ ಮತ್ತು ವಿಮಲಾ ಬಹುಗುಣ ಅವರುಗಳೂ ಸಹ. ಇಂತಹ ಆದರ್ಶನೀಯ ಚಿಂತನೆಗಳನ್ನು ಗುಡ್ಡಗಾಡಿನ ಅಶಿಕ್ಷಿತ ಮಹಿಳೆಯರಿಗೆ ತಲುಪಿಸುವುದರಲ್ಲಿ ಯಶಸ್ವಿಯಾಗಿದ್ದರು. ಈ ಕಾರಣದಿಂದಾಗಿ 1965 ರಿಂದ 70 ರವರೆಗೆ ಮಹಿಳೆಯರು ಮಧ್ಯಪಾನ ವಿರುದ್ಧ ಉತ್ತರಕಾಶಿ, ಚಮೋಲಿ. ಘರ್ ವಾಲ್, ಪಿತೋರ್ ಘರ್ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸಿ ಐದು ಜಿಲ್ಲೆಗಳಲ್ಲಿ ಮಧ್ಯಪಾನ ನಿಷೇಧ ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದರು. ಇಂತಹ ಚಳವಳಿಯಲ್ಲಿ ಪಾಲ್ಗೊಂಡಿದ್ದ ಗೌರಾದೇವಿ, ವಯಸ್ಸಿಗೆ ಬಂದ ತನ್ನ ಮಗನಿಗೆ ಕುಟುಂಬದ ಜವಾಬ್ದಾರಿ ವಹಿಸಿ, ತನ್ನ ಇಡೀ ಬದುಕನ್ನು ಹಿಮಾಲಯದ  ಸ್ವಸ್ಥ ಪರಿಸರ ಮತ್ತು ಸ್ವಸ್ಥ ಸಮಾಜಕ್ಕೆ ಮುಡಿಪಾಗಿಟ್ಟಳು. ಆಕೆಯ ಹೋರಾಟದ ಗುಣ ಮತ್ತು ಬದ್ಧತೆಯನ್ನು ಅನುಭವದಿಂದ ಅರಿತಿದ್ದ ಅಲ್ಲಿನ ಮಹಿಳೆಯರು “ ಮಹಿಳಾ ಮಂಗಲ್ ದೇಶ್ “ ಎಂಬ ಸಂಘಟನೆಯನ್ನು ಸ್ಥಾಪಿಸಿ. ಗೌರಾದೇವಿಯನ್ನು ನಾಯಕಿಯನ್ನಾಗಿ ಮಾಡಿಕೊಂಡಿದ್ದರು.
ಚಾಂಡಿ ಪ್ರಸಾದ್ ಭಟ್ ಆರಂಭಿಸಿದ ಚಿಪ್ಕೊ ಆಂದೋಲನಕ್ಕೆ ಗೌರಾ ದೇವಿ ಕೈಜೋಡಿಸಿದ ನಂತರ ಹೋರಾಟದ ಸ್ವರೂಪವೇ ಬದಲಾಯಿತು. ಮರ ಕಡಿಯಲು ಬಂದ ಸೈಮಂಡ್ ಕಂಪನಿಯ ನೌಕರರನ್ನು , ಗೌರಾದೇವಿ ನೇತೃತ್ವದಲ್ಲಿ ಮಹಿಳೆಯರು, ಪೊರಕೆ ಮತ್ತು ಬಡಿಗೆ ತೆಗೆದುಕೊಂಡು ಎರಡು ಕಿಲೋಮೀಟರ್ ದೂರ ಓಡಿಸಿಕೊಂಡು ಹೋಗಿ, ಅಟ್ಟಾಡಿಸಿ ಹೊಡೆದಿದ್ದರು. ನಂತರ ಪೊಲೀಸರ ರಕ್ಷಣೆಯಲ್ಲಿ ನೌಕರರು ಮತ್ತೆ  ಬಂದಾಗ, ಪೊಲೀಸರಿಗೂ ಅಂಜದೆ, ಮರಗಳನ್ನು ಅಪ್ಪಿ ಮರಕಟುಕರಿಗೆ ಸವಾಲು ಎಸೆದಿದ್ದರು.ಹೋರಾಟ, ಪ್ರತಿಭಟನೆ, ಜಾಥಾಗಳ ಮೂಲಕ ಸಾಗುತ್ತಿದ್ದ ಚಿಪ್ಕೊ ಚಳುವಳಿಗೆ ಗಾಂಧಿ ಚಿಂತನೆಯ ಅಹಿಂಸಾ ಮಾದರಿಯ ಹೋರಾಟವನ್ನು ಕಸಿಮಾಡಿದ ಕೀರ್ತಿ ಸುಂದರ ಲಾಲ್ ಬಹುಗುಣ ರವರಿಗೆ ಸಲ್ಲುತ್ತದೆ.
1927 ರ ಜನವರಿ 9 ರಂದು ತೆಹ್ರಿ ಪ್ರಾಂತ್ಯದ ಮರೊಡ ಎಂಬ ಗ್ರಾಮದಲ್ಲಿ ಜನಿಸಿದ ಸುಂದರ ಲಾಲ್ ಬಹುಗುಣ ತಮ್ಮ ಹದಿಮೂರನೇ ವಯಸ್ಸಿಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡವರು. ಸ್ವಾತಂತ್ರ ಸಂಗ್ರಾಮ ಚಳವಳಿಯಲ್ಲಿ ಭಾಗವಹಿಸಿ, ಬ್ರಿಟೀಷರ ವಸಾಹತುಸಾಹಿ ಧೋರಣೆಗಳನ್ನು ವಿರೋಧಿಸುತ್ತಾ, ಗಾಂಧೀಜಿಯ ಪಕ್ಕಾ ಅನುಯಾಯಿಯಾಗಿದ್ದರು. ಸ್ವಾತಂತ್ರಾ ನಂತರವೂ ಕಾಂಗ್ರೆಸ್ ಪಕ್ಷದಲ್ಲಿದ್ದ ಬಹುಗುಣರನ್ನು ಪರಿಸರದತ್ತ ತಿರುಗಿಸುವಲ್ಲಿ ಅವರ ಪತ್ನಿ ವಿಮಲಾರವರ ಪಾತ್ರ ಅತಿ ಮಹತ್ವದ್ದು. ಮೀರಾ ಬೆಹನ್ ರಿಂದ ಪ್ರೇರಣೆಗೊಂಡು , ಸರಳಾ ಬೆಹನ್ ಎಂಬುವರು ಕೌಶಾಲಿಯಲ್ಲಿ ಆಶ್ರಮ ಮಾಡಿಕೊಂಡು ಗುಡ್ಡ ಗಾಡಿನ ಮಹಿಳೆಯರು ಮತ್ತು ಪರಿಸರದ ಅಭಿವೃದ್ಧಿಗೆ ದುಡಿಯುತ್ತಿದ್ದ ಸಂದರ್ಭದಲ್ಲಿ ಅವರ ಜೊತೆ ವಿಮಲಾ ಕೈ ಜೋಡಿಸಿದ್ದವರು ಒಮ್ಮೆ ಬಹುಗುಣ, ವಿಮಲಾರವರನ್ನು ಬೇಟಿಯಾಗಿ ಅವರ ಮುಂದೆ ವಿವಾಹದ ಪ್ರಸ್ತಾಪವನ್ನು ಮುಂದಿಟ್ಟಾಗ, ರಾಜಕೀಯ ಮತ್ತು ಕಾಂಗ್ರೆಸ್ ಪಕ್ಷವನ್ನು ತೊರೆದು ಬಂದು ಹಿಮಾಲಯದಲ್ಲಿ ವಾಸ ಮಾಡಿದರೆ, ವಿವಾಹವಾಗುವುದಾಗಿ ಷರತ್ತು ವಿಧಿಸಿದರು. ಅದರಂತೆ ಬಹುಗುಣ ಕಾಂಗ್ರೆಸ್ ತೊರೆದು, ಹಿಮಾಲಯದ ತಮ್ಮ ತೆಹ್ರಿ ಪ್ರಾಂತ್ಯಕ್ಕೆ ಬಂದು ವಾಸಿಸತೊಡಗಿದ 12 ವರ್ಷಗಳ ನಂತರ ಅವರನ್ನು ವಿಮಲಾ ವಿವಾಹವಾದರು. ನಂತರದ ದಿನಗಳಲ್ಲಿ ಸುಂದರಲಾಲ್ ಬಹುಗುಣ ಅವರ ಅಹಿಂಸಾ ಮಾದರಿಯ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತರು.

ಆಳುವ ಸರ್ಕಾರದ ಅರಣ್ಯ ನೀತಿಯಿಂದ ಬೇಸತ್ತಿದ್ದ ಸುಂದರಲಾಲ್ ಬಹುಗುಣ ಚಿಪ್ಕೊ ಚಳವಳಿಯನ್ನು ಇಡೀ ಹಿಮಾಲಯದ ರಾಜ್ಯಗಳಿಗೆ ವಿಸ್ತರಿಸುವ ದೃಷ್ಟಿಯಿಂದ “ ಕಾಶ್ಮೀರ ದಿಂದ ಕೊಹಿಮಾವರೆಗೆ “ ಎಂಬ ಐದು ಸಾವಿರ ಕಿಲೋಮೀಟರ್ ಉದ್ದದ ಜಾಥಾ ಕೈಗೊಳ್ಳುವುದರ ಮೂಲಕ, ಚಿಪ್ಕೊ ಹೋರಾಟವನ್ನು ಹೊಸ ಮಜಲಿಗೆ ಕೊಂಡೊಯ್ದರು. ಅಂತಿಮವಾಗಿ ಹೋರಾಟಕ್ಕೆ ಮಣಿದ, ಇಂಧಿರಾ ಗಾಂಧಿ ನೇತೃತ್ವದ  ಕೇಂದ್ರ ಸರ್ಕಾರ 1980 ರಲ್ಲಿ ಹದಿನೈದು ವರ್ಷಗಳ ಅವಧಿಯವರೆಗೆ ಹಿಮಾಲಯ ಪ್ರಾಂತ್ಯದಲ್ಲಿ  ಮರಗಳನ್ನು ಕಡಿಯುವುದಕ್ಕೆ ನಿಷೇಧ ಹೇರಿತು. ನಂತರ ಅಲ್ಲಿನ ಜನತೆ ಚಾಂಡಿ ಪ್ರಸಾದ್ ಮತ್ತು ಬಹುಗುಣ , ಹಾಗೂ ಗೌರಾದೇವಿ ನೇತೃತ್ವದಲ್ಲಿ ಹತ್ತು ಲಕ್ಷ ಸಸಿಗಳನ್ನು ನೆಟ್ಟು ಮರಗಳನ್ನು ಬೆಳಸುವುದರ ಮೂಲಕ ಹಿಮಾಲಯದ ಪರಿಸರದ ಸಮತೋಲನವನ್ನು ಕಾಪಾಡಲು ಮುಂದಾದರು..
ಹಿಮಾಲಯದ ಪರಿಸರ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಲ್ಲಿನ ಪ್ರತಿ ಕುಟುಂಬಕ್ಕೂ ಅರಣ್ಯದ ಎರಡು ಸಾವಿರ ಮರಗಳ ಜವಬ್ದಾರಿಯನ್ನು ವಹಿಸಬೇಕು ಎಂದು ಬಹುಗುಣ ಆಗ್ರಹಿಸಿದ್ದರು. ಇದರಿಂದಾಗಿ ಪ್ರತಿ ಕುಟುಂಬಕ್ಕೆ ಅವಶ್ಯಕತೆ ಇರುವ ಉರವಲು ಸೌದೆ, ಜಾನುವಾರುಗಳಿಗೆ ಮೇವು ಸಿಕ್ಕಂತಾಗಿ, ಸ್ಥಳಿಯರ ರಕ್ಷಣೆಯಲ್ಲಿ ಅರಣ್ಯ ಸುರಕ್ಷಿತವಾಗಿರುತ್ತದೆ ಎಂಬುದು ಅವರ ನಿಲುವಾಗಿತ್ತು. ಇದೀಗ ಚಿಪ್ಕೊ ಚಳವಳಿಯ ಮುಂದುವರಿದ ಭಾಗದಂತೆ ತೋರುವ ತೆಹ್ರಿ ಪ್ರಾಂತ್ಯದಲ್ಲಿ ಕೇಂದ್ರ ಸರ್ಕಾರ ಭಾಗಿರಥಿ ನದಿಗೆ ನಿರ್ಮಿಸಲಾಗುತ್ತಿರುವ ಅಣೆಕಟ್ಟಿಗೆ  ವಿರೋಧ ವ್ಯಕ್ತ ಪಡಿಸಿರುವ ಬಹುಗುಣ, ಉಪವಾಸ ಸತ್ಯಾಗ್ರಹದ ಮೂಲಕ ಪ್ರತಿರೋಧ ಒಡ್ಡಿದ್ದಾರೆ.

ಹಿಮಾಲಯ ಗುಡ್ಡಗಳ ನಡುವೆ ಅಶಿಕ್ಷಿತ ಜನಸಾಮಾನ್ಯರ ಪರಿಸರ ಕುರಿತ ಕಾಳಜಿಯಿಂದಾಗಿ ಹುಟ್ಟಿಕೊಂಡ ಚಿಪ್ಕೊ ಚಳವಳಿಯನ್ನು ಅತಿ ಎತ್ತರಕ್ಕೆ ಕೊಂಡೊಯ್ಯುವುದರ ಮೂಲಕ ದೇಶ, ವಿದೇಶಗಳಲ್ಲಿ ಪರಿಸರ ಕುರಿತು ಜಾಗೃತಿ ಮೂಡಿಸುವಲ್ಲಿ ಈ ಮಹಾನುಭಾವರು ಹಾಗೂ ಹಿಮಾಲಯದ ಗುಡ್ಡಗಾಡಿನ  ಮಹಿಳೆಯರು ನಡೆಸಿದ ಸ್ವಾರ್ಥವಿಲ್ಲದ, ನಿಷ್ಕಳಂಕ ಹೋರಾಟ ಜಾಗತಿಕ ಪರಿಸರ ಹೋರಾಟದ ಇತಿಹಾಸದಲ್ಲಿ ಅತಿ ಮುಖ್ಯ ಭಾಗವಾಗಿ ಪರಿಗಣಿಸಲ್ಪಟ್ಟಿದೆ. ಈ ಕಾರಣಕ್ಕಾಗಿ ಚಾಂಡಿ ಪ್ರಸಾದ್ ಭಟ್ ರವರಿಗೆ  1982 ರಲ್ಲಿ ರಾಮನ್ ಮ್ಯಾಗ್ಸಸೆ ಅಂತರಾಷ್ಟ್ರೀಯ ಪ್ರಶಸ್ತಿ, 1987 ರಲ್ಲಿ ವಿಶ್ವಸಂಸ್ಥೆಯ ಪರಿಸರ ಪ್ರಶಸ್ತಿ, 1986ರಲ್ಲಿ ಭಾರತ ಕೇಂದ್ರ ಸರ್ಕಾರದ ಪದ್ಮಶ್ರಿ, ಹಾಗೂ 2005 ರಲ್ಲಿ ಪದ್ಮಭೂಷಣ ಪ್ರಶಸ್ತಿಗಳು ಮತ್ತು ಕುಮಾವನ್, ವಿ.ವಿ. ಹಾಗೂ ಉತ್ತರ ಕಾಂಡದ ಗೋವಿಂದ ವಲ್ಲಭ ವಿ.ವಿ.ಗಳಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಗಳು  ದೊರಕಿದ್ದರೆ,  ಸುಂದರ ಲಾಲ್ ಬಹುಗುಣರವರಿಗೆ, 1981 ರಲ್ಲಿ ಪದ್ಮಶ್ರಿ, 1986 ರಲ್ಲಿ ಜಮ್ನಲಾಲ್ ಬಜಾಜ್ ಪ್ರಶಸ್ತಿ, 1987 ರಲ್ಲಿ ರೈಟ್ ಲಿವ್ಲಿ ಹುಡ್ ಅಂತರಾಷ್ಟ್ರೀಯ ಪ್ರಶಸ್ತಿ, 2009 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಹಾಗೂ ರೂರ್ಕಿ ಐ.ಐ.ಟಿ. ಸಂಸ್ಥೆಯಿಂದ ಗೌರವ ಡಾಕ್ಷರೇಟ್ ಪ್ರಶಸ್ತಿ ಲಭ್ಯವಾಗಿವೆ.
 ಇವರಲ್ಲಿ ಪ್ರಶಸ್ತಿ ವಂಚಿತ ದುರಾದೃಷ್ಟಠ ಮಹಿಳೆಯೆಂದರೆ, ಗೌರಾ ದೇವಿ. ಕೀನ್ಯಾದ ನೈರೋಭಿಯಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ಸಮಾವೇಶದಲ್ಲಿ ಈಕೆ ಪಾಲ್ಗೊಂಡಿದ್ದು ಬಿಟ್ಟರೆ, ಉಳಿದ ಪ್ರಶಸ್ತಿಗಳು ಲಭ್ಯವಾಗುವ ಮುನ್ನವೇ ಅಕಾಲಿಕ ಸಾವಿಗೀಡಾದ ನತದೃಷ್ಟೆ ಈಕೆ.  ಗೌರಾದೇವಿಯದು   ಭಾರತದ ಮಹಿಳಾಲೋಕದ ಇತಿಹಾಸದಲ್ಲಿ, ಅದರಲ್ಲೂ ಪರಿಸರ ಕುರಿತ ಇತಿಹಾಸದಲ್ಲಿ  ಒಂದು ನೋವಿನ ಅಧ್ಯಾಯವೆಂದರೆ, ತಪ್ಪಾಗಲಾರದು.

                                              (ಮುಂದುವರಿಯುವುದು)

ಶನಿವಾರ, ಜೂನ್ 15, 2013

ಅಪ್ಪಿಕೊ ( ಚಿಪ್ಕೊ) ಚಳವಳಿಯ ಕಥನ-ಎರಡು

1950 ರ ದಶಕದ ನಂತರ ಹಿಮಾಲಯದ ತಪ್ಪಲಿನ ಪ್ರದೇಶಗಳಲ್ಲಿ ನಿರ್ಮಾಣಗೊಂಡ ರಸ್ತೆಗಳು ಮತ್ತೆ  1962 ರ ಭಾರತ ಮತ್ತು ಚೀನಾ ನಡುವೆ ನಡೆದ ಯುದ್ಧ ದ ನಂತರ ಇನ್ನಷ್ಟು ವಿಸ್ತಾರಗೊಂಡವು. ಅಲ್ಲದೆ, ಭಾರತ ಸೇನಾ ಪಡೆಯು ಗಡಿ ಭಾಗದಲ್ಲಿ ಮತ್ತಷ್ಟು ಸೇನೆಯನ್ನು ಜಮಾವಣೆ ಮಾಡಿತು. ನಂತರ ಘರ್ ವಾಲ್ ಮತ್ತು ತೆಹ್ರಿ ಹಾಗೂ ಚಮೋಲಿ ಪ್ರದೇಶಗಳಲ್ಲಿ ಸೈನಿಕರ ಮತ್ತು ಅಧಿಕಾರಿಗಳ  ವಸತಿ ಬಡಾವಣೆಗಳು, ಹುಟ್ಟಿಕೊಂಡವು. ಇದರಿಂದಾಗಿ ಹಿಮಾಲಯದ ತಣ್ಣನೆಯ ಗಿರಿಶಿಖರಗಳಂತೆ , ನಿರುದ್ಯೋಗ ಮತ್ತು ಕೃಷಿ ಜಮೀನುಗಳ ಕೊರತೆಯ ನಡುವೆಯೂ ತಣ್ಣಗೆ ಬದುಕಿದ್ದ ಅಲ್ಲಿನ ಜನರ ಸಾಮಾಜಿಕ ಬದುಕಿನಲ್ಲಿ ಪಲ್ಲಟವೊಂದು ಆರಂಭಗೊಂಡಿತು. ರಸ್ತೆ ನಿರ್ಮಾಣ ಮತ್ತು ಸೇನಾ ಪಡೆಯ ಕಛೇರಿ, ವಸತಿ ನಿರ್ಮಾಣ ಕಾರ್ಯಗಳಲ್ಲಿ ದುಡಿಯಲು ಕೆಲಸ ಸಿಗತೊಡಗಿತು. ಆದರೆ, ನೀಡುತ್ತಿದ್ದ ಕೂಲಿದರದಲ್ಲಿ ಮಾತ್ರ ತಾರತಮ್ಯ ಎದ್ದು ಕಾಣುತ್ತಿತ್ತು. ಈ ಪ್ರಾಂತ್ಯದ ಜನರ ಮುಗ್ಧತನವನ್ನು ಮತ್ತು ಅನಕ್ಷರತೆಯನ್ನು ಬಂಡವಾಳ ಮಾಡಿಕೊಂಡ ಅಧಿಕಾರಿಗಳು ಹಾಗೂ ಗುತ್ತಿಗೆ ದಾರರು ಕಡಿಮೆ ಕೂಲಿ ಹಣವನ್ನು ಪಾವತಿಸಿ, ಉಳಿದ ಹಣವನ್ನು ತಮ್ಮ ಜೇಬಿಗಿಳಿಸುತ್ತಿದ್ದರು. ಇಂತಹ ಸಮಯದಲ್ಲಿ ಮುಗ್ಧ ಜನರ ಪಾಲಿಗೆ ಆಧಾರವಾಗಿ ಬಂದವರು ಚಾಂಡಿಪ್ರಸಾದ್ ಭಟ್. 
ಇವರು 1956 ರಲ್ಲಿ ಈ ಪ್ರದೇಶಕ್ಕೆ ಬೇಟಿ ನೀಡಿದ್ದ ಜಯಪ್ರಕಾಶ್ ನಾರಾಯಣರ ಚಿಂತನೆಗಳಿಂದ ಪ್ರೇರಿತರಾಗಿದ್ದವರು. ಗಾಂಧೀಜಿ  ಕನಸಿದ್ದ ಗ್ರಾಮಸ್ವರಾಜ್ಯದ ಮಾದರಿಯಲ್ಲಿ ಹಳ್ಳಿಗಳನ್ನು ರೂಪಿಸಬೇಕೆಂಬ ಕನಸು ಹೊತ್ತಿದ್ದ ಜಯಪ್ರಕಾಶ ನಾರಾಯಣರು, ಹಿಮಾಲಯದ ತಪ್ಪಲಿನ ಜನರ ಬವಣೆಗಳನ್ನು ಅರಿತುಕೊಳ್ಳಲು ಈ ಪ್ರದೇಶದಲ್ಲಿ ಒಂದು ತಿಂಗಳ ಕಾಲ ಪ್ರವಾಸ ಮಾಡಿದ್ದರು. ಈ ಸಮಯದಲ್ಲಿ, ಗೋಪೇಶ್ವರ್ ಎಂಬ ಹಳ್ಳಿಯಲ್ಲಿ ಜನಸಿದ್ದ ಯುವಕ ಚಾಂಡಿ ಪ್ರಸಾದ್ ಭಟ್ ಜೀವನ ನಿರ್ವಹಣೆಗೆ ಋಷಿಕೇಶದಲ್ಲಿ ಪ್ರವಾಸಿಗರ ಬಸ್ಸುಗಳಿಗೆ ಏಜೆಂಟ್ ಆಗಿ,ಹಾಗೂ ಅಲ್ಲಿನ ಕಚೇರಿಯೊಂದರಲ್ಲಿ ಮುಂಗಡ ಟಿಕೇಟ್ ವಿತರಿಸುವ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ಜೆ.ಪಿ. ಯವರ ಸಂಪರ್ಕಕ್ಕೆ ಬಂದ ನಂತರ, ಉದ್ಯೋಗಕ್ಕೆ ರಾಜಿನಾಮೆ ನೀಡಿ, ಗಾಂಧಿ ಪರಿಕಲ್ಪನೆಯ ಹಳ್ಳಿಗಳನ್ನು ರೂಪಿಸಲು ಪ್ರಯತ್ನಿಸುತ್ತಿದ್ದರು.
ಗ್ರಾಮಸ್ವರಾಜ್ಯದ ಮೊದಲ ಪ್ರಯತ್ನವಾಗಿ ಅಲ್ಲಿನ ಜನತೆಗೆ ಸಮಾನ ವೇತನ, ಹಾಗೂ ಎಲ್ಲರಿಗೂ ಉದ್ಯೋಗ ದೊರಕಿಸಿಕೊಡಲು, “ ದಶೋಲಿ ಗ್ರಾಮ ಸ್ವರಾಜ್ಯ ಸಂಘ” ಎಂಬ ಸಹಕಾರ ಸಂಘವನ್ನು ಸ್ಥಾಪಿಸಿದರು. ಆರಂಭದಲ್ಲಿ 30 ಮಂದಿ ಸದಸ್ಯರು ಮತ್ತು 700 ಮಂದಿ ಸದಸ್ಯರಲ್ಲದ ಅರೆ ಕೂಲಿ ಕಾರ್ಮಿಕರು ಸಂಘದ ಅಡಿಯಲ್ಲಿ ದುಡಿಯತೊಡಗಿದರು. ಸಂಘ ಸ್ಥಾಪನೆಯಾದ ನಂತರ ಸಿಗುತ್ತಿದ್ದ ಕೂಲಿದರದಲ್ಲಿ ಹೆಚ್ಚಳವಾಯಿತು. ಅಲ್ಲದೆ, ಅಧಿಕಾರಿಗಳು ಮತ್ತು ಗುತ್ತಿಗೆದಾರರ ಕೈ ಮತ್ತು ಬಾಯಿಗಳು ಬಂದ್ ಆದವು. ಇದರಿಂದ ಸ್ಪೂರ್ತಿಗೊಂಡ ಚಾಂಡಿ ಪ್ರಸಾದ್ ಭಟ್ , ಕೂಲಿ ಕೆಲಸಕ್ಕೆ ಬದಲಾಗಿ ಸೇನಾಪಡೆಯಿಂದ ಮತ್ತು ಆಗಿನ ಉತ್ತರ ಪ್ರದೇಶದ  ಸರ್ಕಾರದ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಮತ್ತು ಮನೆಗಳು, ಸೇತುವೆಗಳ ನಿರ್ಮಾಣದ ಗುತ್ತಿಗೆ ಕೆಲಸವನ್ನು ಸಂಘದ ಪರವಾಗಿ ಪಡೆದು ನಿರ್ವಹಿಸತೊಡಗಿದರು. ಈ ಪ್ರಯತ್ನದ ಫಲವಾಗಿ ಸಂಘದ ಆದಾಯ ಕೇವಲ ಮೂರು ವರ್ಷಗಳಲ್ಲಿ ದ್ವಿಗುಣಗೊಂಡಿತು. ಆನಂತರ ಸಹಕಾರಿ ಸಂಘದ ನೇತೃತ್ವದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಬೇಕಾದ ಸಲಕರಣೆಗಳು ಮತ್ತು ಮನೆ ಬಳಕೆಗೆ ಬೇಕಾದ ಮರದ ಉಪಕರಣಗಳನ್ನು ತಯಾರಿಸಲು ಮುಂದಾದರು. ದಶೋಲಿ ಗ್ರಾಮ ಸ್ವರಾಜ್ಯದ ಸಂಘದ ಚಟುವಟಿಕೆಗಳನ್ನು ಇಡೀ ಪ್ರಾಂತ್ಯಕ್ಕೆ ವಿಸ್ತರಿಸಿ, ಎಂಟು ಶಾಖಾ ಕಛೇರಿಗಳನ್ನು ತೆರೆದರು.
ಕೃಷಿ ಚಟುವಟಿಕೆಗೆ ಬೇಕಾದ ಮರಗಳನ್ನು ಪಡೆಯಲು ಸರ್ಕಾರದ ಅರಣ್ಯ ಇಲಾಖೆಯ ಬಳಿ ಹೋದಾಗ, ಅಲ್ಲಿಯವರೆಗೆ ಗುಪ್ತವಾಗಿ ನಡೆಯುತ್ತಿದ್ದ ಮರಗಳ ಮಾರಣ ಹೋಮದ ಅವ್ಯವಹಾರ ಬೆಳಕಿಗೆ ಬಂದು ಘರ್ ವಾಲ್ ನ ಜನತೆ ಎಚ್ಚೆತ್ತುಕೊಳ್ಳುವಂತೆ ಮಾಡಿತು. ಸಾಮಾನ್ಯವಾಗಿ ಭೂಸವೆತದಿಂದಾಗಿ ನೆಲಕ್ಕೆ ಉರುಳಬಹುದಾದ ಮರಗಳನ್ನು ಮಾತ್ರ ಕಡಿಯಲು ಗುತ್ತಿಗೆದಾರರಿಗೆ ಸರ್ಕಾರ ಅನುಮತಿ ನೀಡಿತ್ತು. ಆದರೆ, ಅರಣ್ಯಾಧಿಕಾರಿಗಳು ಗುತ್ತಿಗೆದಾರರ ಜೊತೆ ಶಾಮೀಲಾಗಿ ಭೂಮಿಗೆ ಬೇರು ಬಿಟ್ಟು ಭದ್ರವಾಗಿರುವ ಮರಗಳನ್ನು ಸಹ ಧರೆಗೆ ಉಳರುಳುವ ಮರಗಳು ಎಂದು ಗುರುತು ಹಾಕುವುದರ ಮೂಲಕ  ಕಡಿಯಲು ಅನುಮತಿ ನೀಡುತ್ತಿದ್ದರು.
ಇದೇ ವೇಳೆಗೆ 1970ರಲ್ಲಿ ಹಿಮಾಲಯದ ತಪ್ಪಲಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪವೊಂದು ಅಲ್ಲಿನ ಜನರಿಗೆ ಪರಿಸರ ರಕ್ಷಣೆ ಕುರಿತು ಪರೋಕ್ಷವಾಗಿ ಪಾಠ ಕಲಿಸಿತ್ತು. ಅಲ್ಲಿನ ಜನ ತಮ್ಮ ಜೀವಮಾನದಲ್ಲಿ ಎಂದೂ ಕಂಡಿರದ ದುರಂತ ಘಟನೆಗೆ ಸಾಕ್ಷಿಯಾದರು. ಸಾಮಾನ್ಯವಾಗಿ ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದ ಅಲಕಾನಂದ ನದಿ 1970 ರಲ್ಲಿ ಪ್ರವಾಹದ ರೂಪದಲ್ಲಿ ತನ್ನ ರೌದ್ರ ರೂಪವನ್ನು ಪ್ರದರ್ಶಿಸಿತು. ಸುಮಾರು 60 ಅಡಿ ಎತ್ತರದಷ್ಟು ಉಕ್ಕಿ ಹರಿದ ಅಲಕಾನಂದ ನದಿಯ ನೀರು ಒಂದು ಗ್ರಾಮವನ್ನು ಸಂಪೂರ್ಣವಾಗಿ ಕಬಳಿಸಿತು. ನೂರಾರು ಮನೆಗಳು ಕೊಚ್ಚಿ ಹೋದವು. 30 ಪ್ರಯಾಣಿಕರಿದ್ದ (ಯಾತ್ರಾರ್ಥಿಗಳು) ಬಸ್ ಹಾಗೂ 5 ಸೇತುವೆಗಳು ಗುರುತು ಸಿಗದ ರೀತಿಯಲ್ಲಿ ನದಿಯಲ್ಲಿ ಕೊಚ್ಚಿ ಹೋದವು. ಒಟ್ಟು 200 ಮಂದಿ ಪ್ರಾಣ ಕಳೆದುಕೊಳ್ಳಬೇಕಾಯಿತು. ನದಿಯ ಪ್ರವಾಹ ಇಳಿದ ನಂತರ, ಇಡೀ ಪರಿಸ್ಥಿಯನ್ನು ಅವಲೋಕಿಸಿದಾಗ ಮಾನವನ ಸ್ವಾರ್ಥ ಮತ್ತು ಹಸ್ತಕ್ಷೇಪ ಕಣ್ಣಿಗೆ ರಾಚುವಂತೆ ಗೋಚರಿಸುತ್ತಿದ್ದವು. ಪ್ರವಾಹಕ್ಕೆ ಮುನ್ನ ಒಂದು ದಶಕದ ಅವಧಿಯಲ್ಲಿ ನದಿಯ ಪಾತ್ರದ ಹಿಮಾಲಯದ ಪರ್ವತ ಪ್ರದೇಶದಲ್ಲಿ ಲಕ್ಷಾಂತರ ಮರಗಳನ್ನು ಕಡಿದು ಹಾಕಲಾಗಿತ್ತು. ಮರಗಳ ವಿರಳತೆ ಮತ್ತು ಮಣ್ಣಿನ ಸೆವೆತದಿಂದಾಗಿ, ಭೂಮಿಗೆ ಬಿದ್ದ ಮಳೆ ನೀರು, ನೆಲದಲ್ಲಿ ಇಂಗುವ ಬದಲು ಪರ್ವತಗಳ ಇಳಿಜಾರಿನ ಮೂಲಕ ಅಲಕಾನಂದಾ ನದಿಯ ಒಡಲು ಸೇರಿತ್ತು.ಈ ಘಟನೆ ಅಲ್ಲಿನ ಜನಕ್ಕೆ ಮರಗಳ ಮಹತ್ವದ ಬಗ್ಗೆ ಅರಿವು ಮೂಡಿಸಿತ್ತು.
ಸರ್ಕಾರದ ಇಂತಹ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು,  ಮತ್ತು ಕಡಿಯುವ ಮರಗಳ ಸಂಖ್ಯೆ ತಿಳಿಯಲು ನಿರ್ಧರಿಸಿದ ಸಂಘದ ಸದಸ್ಯರು, ತಾವೂ ಕೂಡ ಮರಗಳ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸತೊಡಗಿದರು. ಅಲ್ಲಿಯವರೆಗೆ ಬಿಸಾಕುವ ಬೆಲೆಯಲ್ಲಿ ಮಾರಾಟವಾಗುತ್ತಿದ್ದ ಮರಗಳ ಬೆಲೆ ದಿಡೀರನೆ ಏರತೊಡಗಿತು. ಜೊತೆಗೆ ಹರಾಜಿನಲ್ಲಿ ಭಾಗವಹಿಸಿದೆ ಇದ್ದರೆ ದಶೋಲಿ ಗ್ರಾಮಸ್ವರಾಜ್ಯ ಸಂಘಕ್ಕೆ ಪುಕ್ಕಟೆಯಾಗಿ ಮರಗಳನ್ನು ಕೊಡುವುದಾಗಿ ಆಮೀಷ ತೋರಿಸಲಾಯಿತು. ಇಂತಹ ಆಸೆಗಳಿಗೆ ಮಣಿಯದ ಚಾಂಡಿ ಪ್ರಸಾದ್ ಭಟ್ ಮರಗಳ ಮಾರಣ ಹೋಮದ ಬಗ್ಗೆ ಅಲ್ಲಿನ ಜನರಲ್ಲಿ ಜಾಗೃತಿ ಮೂಡಿಸಿದರು. ಇಂತಹ ಸಂಧರ್ಭದಲ್ಲಿ ಅವರು ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರನ್ನು ಆಶ್ರಯಿಸಿದ್ದರು.
ಇವೊತ್ತಿಗೂ ಹಿಮಾಲಯದ ತಪ್ಪಲಿನ ಪ್ರದೇಶದ ಹಳ್ಳಿಗಳಲ್ಲಿ ನಿಸರ್ಗದ ಜೊತೆ, ಮಹಿಳೆಯರಿಗೆ  ಪುರುಷರಿಗಿಂತ  ಹೆಚ್ಚು  ನಿಕಟವಾದ ಒಡನಾಟವಿದೆ. ಉರುವಲು ಸೌದೆ, ಮತ್ತು  ತಮ್ಮ  ಜಾನುವಾರುಗಳಿಗೆ ಮೇವು ಸಂಗ್ರಹಿಸಲು ಅರಣ್ಯದ ಜೊತೆ ಅವಿನಾಭಾವ ಸಂಬಂಧ ಇಟ್ಟುಕೊಂಡಿರುವವರು ಮಹಿಳೆಯರು.  ಅರಣ್ಯ ಮತ್ತು ಮರಗಳ ಬಗ್ಗೆ ಪವಿತ್ರವಾದ ಭಾವನೆ ಹೊಂದಿದ್ದಾರೆ.ಜೊತೆಗೆ ಅಲ್ಲಿನ ಪ್ರದೇಶಗಳಲ್ಲಿ ಮರಗಳ ಕುರಿತು ಜಾನಪದ ಪರಿಕಲ್ಪನೆಯೊಂದು ಆ ಜನರ ಎದೆಯಲ್ಲಿ ಜೀವಂತವಾಗಿದೆ. ಅದೇನೆಂದರೆ, “ ನಾನು ಈ ಮರದಿಂದ ಪಡೆಯುತ್ತಿರುವ ನೆರಳು, ತಿನ್ನತ್ತಿರುವ ಹಣ್ಣು, ಪಡೆಯುತ್ತಿರುವ ಉರುವಲು ಕಟ್ಟಿಗೆ ಅಥವಾ  ಜಾನುವಾರುಗಳಿಗೆ ಆಹಾರವಾಗಿ ಬಳಸುತ್ತಿರುವ ಸೊಪ್ಪು ಇವೆಲ್ಲವೂ ನನಗೆ ಮಾತ್ರ ಸೀಮಿತವಲ್ಲ. ಇವುಗಳು ನನ್ನ ಮುಂದಿನ ತಲೆಮಾರುಗಳಿಗೂ ಸಲ್ಲುತ್ತವೆ” ಇಂತಹ ಸುಂದರ  ಪರಿಕಲ್ಪನೆಯೊಂದು ಜೀವಂತ  ಇರುವ ಕಾರಣಕ್ಕಾಗಿ  ಮರಗಳನ್ನು ಕಡಿಯುವ ಗುತ್ತಿಗಾರರ ರಕ್ಷಣೆಗೆ ಬಂದ ಪೊಲೀಸರ ಬಂದೂಕಿನ ಕೊಳವೆಗೆ , ರೇಣಿ ಎಂಬ ಗ್ರಾಮದ ಅನಕ್ಷರಸ್ತ ಹೆಣ್ಣು ಮಗಳಾದ ಗೌರದೇವಿ ಎಂಬಾಕೆ ತನ್ನ ಎದೆಯ ಮೇಲಿನ ಸೆರಗು ಬಿಸಾಕಿ ಎದೆ ಕೊಟ್ಟು ನಿಲ್ಲಲು ಸಾಧ್ಯವಾಯಿತು. ಆಕೆ, ಗುತ್ತಿಗೆ ದಾರರ  ರಕ್ಸಣೆಗೆ ಬಂದ ಪೊಲೀಸರಿಗೆ ಹೇಳಿದ ಮಾತುಗಳಿವು.” ಮೊದಲು ನನ್ನನ್ನು ಉರುಳಿಸಿ ನಂತರ ಮರಗಳನ್ನು ಉರುಳಿಸಿ.”

iಇಂತಹ ಪರಿಕಲ್ಪನೆಗಳ ಸ್ಪೃಷ್ಟ ಅರಿವಿದ್ದ ಚಾಂಡಿ ಪ್ರಸಾದ್ ಭಟ್  1970 ರಿಂದ 1773 ರ ವರೆಗೆ ಹಿಮಾಲಯದ ಹಳ್ಳಿ, ಹಳ್ಳಿಗಳನ್ನು ತಿರುಗಿ ಜನತೆಯನ್ನು ಮರಗಳ ರಕ್ಷಣೆಗಾಗಿ ಸಂಘಟಿಸಿದರು, ಅವರು ಸತತ ಮೂರು ವರ್ಷಗಳ ಕಾಲ ಘರ್ ವಾಲ್, ತೆಹ್ರಿ ಪ್ರಾಂತ್ಯದಲ್ಲಿ ಸಂಚರಿಸಿ  ಬಹಿರಂಗ ಸಭೆ, ಭಾಷಣ ಮತ್ತು ಜಾಥ ನಡೆಸುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಇಂತಹ ಸಂಧರ್ಭದಲ್ಲಿ ಅವರಿಗೆ ಮಧ್ಯ ವಯಸ್ಕಿನ ಧೀರ ಮಹಿಳೆ ಗೌರದೇವಿ ದೊರಕಿದಳು.
                                             ( ಮುಂದುವರಿಯುವುದು)


ಬುಧವಾರ, ಜೂನ್ 12, 2013

ಅಪ್ಪಿಕೊ ( ಚಿಪ್ಕೊ) ಚಳವಳಿಯ ಕಥನ-ಒಂದು

ಭಾರತದ ಚಿಪ್ಕೊ ಚಳವಳಿ  ಎಂದು  ಕರೆಯಲಾಗುವ ಅಪ್ಪಿಕೊ ಚಳವಳಿಗೆ ಹಲವಾರು ಆಯಾಮಗಳಿವೆ. ಹಿಮಾಲಯದ ತಪ್ಪಲಿನ ಅರಣ್ಯ ಮತ್ತು ಅಲ್ಲಿನ ಪರಿಸರ ಉಳಿಸಲು ಸ್ಥಳಿಯರು 1970 ರ ದಶಕದಲ್ಲಿ ಆರಂಭಿಸಿದ ಅಪ್ಪಿಕೊ ಚಳವಳಿ ವಿಶ್ವವ್ಯಾಪಿ ಗಮನ ಸೆಳದಿತ್ತು. ಜೊತೆಗೆ ಭಾರತದಲ್ಲಿ ಪರಿಸರ ಪ್ರಜ್ಙೆಗೆ ಅದು ಭದ್ರ ಬುನಾದಿ ಹಾಕಿಕೊಟ್ಟಿತು. ಆದರೆ, ಈ ಚಳುವಳಿಯ ಇತಿಹಾಸ ಕುರಿತಂತೆ ಹಲವರು ಹಲವು ಬಗೆಯ ಇತಿಹಾಸವನ್ನು ವ್ಯಾಖ್ಯಾನಿಸುತ್ತಾ, ನಮ್ಮ ಮುಂದಿಡುತ್ತಾ, ಚಳವಳಿಯ ನಿಜವಾದ ಬೇರುಗಳನ್ನು ಮರೆ ಮಾಚುತ್ತಿದ್ದಾರೆ ಎನಿಸುತ್ತದೆ.
ಅಪ್ಪಿಕೊ ಚಳುವಳಿಯಲ್ಲಿ ಚಾಂಡಿ ಪ್ರಸಾದ್ ಭಟ್, ಸುಂದರ್ ಲಾಲ್ ಬಹುಗುಣ, ಧೂಮ್ ಸಿಂಗ್ ನೇಗಿ, ಘನಶ್ಯಾಮ್ ಶೈಲಾನಿ ಮುಖ್ಯ ಪಾತ್ರ ವಹಿಸಿದ್ದರು. ಇಡೀ ಹಿಮಾಲಯದ ತೆಹ್ರಿ ಮತ್ತು ಘರ್ ವಾಲ್  ಪ್ರಾಂತ್ಯದ ಸುಮಾರು ಹತ್ತು ಜಿಲ್ಲೆಗಳಲ್ಲಿ ನಡೆದ ಈ ಚಳವಳಿಗೆ ಬೇರೆ ಬೇರೆ ನಾಯಕರು ನೇತೃತ್ವ ವಹಿಸಿದ್ದರು. ಜಯಪ್ರಕಾಶ ನಾರಾಯಣ ರಿಂದ ಪ್ರೇರಿತರಾಗಿದ್ದ, ಚಾಂಡಿ ಪ್ರಸಾದ್ ಭಟ್, ಹಾಗೂ ಗಾಂಧಿ ಅನುಯಾಯಿಯಾಗಿದ್ದ ಸುಂದರ ಲಾಲ್ ಬಹುಗುಣ ಇವರ ನಡುವೆ ನಿಸರ್ಗದ ಕಾಳಜಿ ಕುರಿತಂತೆ ಭಿನ್ನ ಆಲೋಚನೆಗಳಿದ್ದರೂ  ಸಹ ಗುರಿ ಮಾತ್ರ ಒಂದೇ  ಆಗಿತ್ತು.
ಅಪ್ಪಿಕೊ ಚಳವಳಿಯ ನೇತಾರರು ಪುರುಷರೇ ಆದರೂ ಕೂಡ ಇಡೀ ಚಳವಳಿಗೆ ಭದ್ರ ಬುನಾದಿಯಾದವರು  ಹಿಮಾಲಯ ತಪ್ಪಲಿನ ತಾಯಂದಿರು ಎಂಬುದುನ್ನು ಮರೆಯಲಾಗದು. ಮುಷ್ಕರಕ್ಕೆ ಓಗೊಟ್ಟು ಮರಗಳನ್ನು ತಬ್ಬಿ ಹಿಡಿದು, ಕೊಡಲಿಗೆ, ಗರಗಸಕ್ಕೆ ತಮ್ಮ ದೇಹವನ್ನು ಒಡ್ಡಿದವರು ಮಹಿಳೆಯರು ಎಂಬುದನ್ನ  ಇತಿಹಾಸದ ಮುನ್ನೆಲೆಗೆ ತರುವಲ್ಲಿ ವಿಫಲವಾದ ಕಾರಣವನ್ನು ಹುಡುಕುತ್ತಾ ಹೋದರೆ ಕಾಣದ ಕೈಗಳ ಕೈವಾಡವಿರಬಹುದೆ? ಎಂಬ ಸಂಶಯ ಮೂಡುತ್ತದೆ..
ಭಾರತಕ್ಕೆ ಈ ಮಾದರಿಯ ಅಪ್ಪಿಕೊ ಚಳವಳಿ ಹೊಸತೇನಲ್ಲ. ಇದರ ಬೇರುಗಳು ನಮ್ಮನ್ನು ಮುನ್ನೂರು ವರ್ಷಗಳ ಹಿಂದಕ್ಕೆ ಕರೆದೊಯ್ಯುತ್ತವೆ. 17 ನೇ ಶತಮಾನದಲ್ಲಿ ರಾಜಸ್ಥಾನದ ಬಿಷ್ನೋಯ್ ಪಂಗಡಕ್ಕೆ ಸೇರಿದ ಜನಾಂಗವೊಂದು ಖೇಜರಿ ಮರಗಳನ್ನು ಉಳಿಸುವುದರ ಸಲುವಾಗಿ ಅಮೃತಾ ದೇವಿ ಎಂಬ ಮಹಿಳೆಯ ನೇತೃತ್ವದಲ್ಲಿ ಮುನ್ನೂರು ಮಹಿಳೆಯರು  ಮರಗಳನ್ನು ಅಪ್ಪಿಕೊಂಡು ಕೊಡಲಿಗೆ ಬಲಿಯಾದ ಘಟನೆ ಇತಿಹಾಸದಲ್ಲಿ ಧಾಖಲಾಗಿದೆ.
ಪರಿಸರ ಕುರಿತು ಮಾತನಾಡುವ, ಬರೆಯುವ ಮತ್ತು  ಓದುವ ನಾವೆಲ್ಲಾ ಗಮನಿಸಬೇಕಾದ ಬಹು ಮುಖ್ಯವಾದ ಸಂಗತಿಯೊಂದಿದೆ. ಅದೇನೆಂದರೆ, ಈ ದಿನ ಭೂಮಂಡಲದಲ್ಲಿ ನೀರು, ಗಾಳಿ, ಭೂಮಿ, ಮರ ಗಿಡ, ಜೀವ ಪ್ರಭೇಧಗಳು ಇನ್ನೂ ಜೀವಂತವಾಗಿದ್ದರೆ, ಅಥವಾ ಸುಸ್ಥಿತಿಯಲ್ಲಿ ಇದ್ದರೆ, ಅದರ ಹಿಂದೆ ಹೆಣ್ಣು ಸಂಕುಲದ ತಾಯ್ತನದ ಪ್ರೀತಿಯೊಂದು ಅಡಗಿದೆ ಎಂಬುದು. ಭೂಮಿಯನ್ನು ಹೆಣ್ಣಿಗೆ ಹೋಲಿಸಿ ಬಣ್ಣಿಸುವ ನಾವು, ಈ ನೆಲದ ಹೆಣ್ಣು ಮಕ್ಕಳು  ಭೂಮಿತಾಯಿಯ ವಾರಸುದಾರರು ಎಂಬುದನ್ನು ಮರೆತ್ತಿದ್ದೇವೆ. ನಾವು ಸೆವೆಸಿದ ಹೆಜ್ಜೆಯ ಗುರುತುಗಳನ್ನು ಒಮ್ಮೆ ಅವಲೋಕಿಸಿದರೆ, ಶತಮಾನಗಳುದ್ದಕ್ಕೂ ನೈಸರ್ಗಿಕ ಸಮತೋಲನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಣ್ಣು ಸಂಕುಲ  ನಿರ್ವಹಿಸಿರುವ ಪಾತ್ರ ನಮ್ಮ ಅರಿವಿಗೆ ಬರುತ್ತದೆ. ಈ ಕಾರಣಕ್ಕಾಗಿ ನಮ್ಮ ಪೂರ್ವಿಕರು ಭೂಮಿಯನ್ನು, ನೀರನ್ನು ಮತ್ತು ಪಕೃತಿಯನ್ನು ಸ್ತ್ರೀಗೆ ಹೋಲಿಸಿದ್ದರು. ನಮ್ಮ ಪ್ರಾಚೀನ ಕೃಷಿ ಜಗತ್ತು ಹೆಣ್ಣಿನ ಮುಖಂಡತ್ವದಲ್ಲಿ ಸುರಕ್ಷಿತವಾಗಿತ್ತು. ಹಾಗಾಗಿ ಪರಿಸರದ ಸರಪಳಿಯ ಕೊಂಡಿಗಳು ಎನಿಸಿಕೊಂಡ ಎಲ್ಲಾ ವಿಧವಾದ ಬೀಜ ಸಂಪತ್ತು, ಸಸ್ಯ ಸಂಪತ್ತು, ಪಕ್ಷಿ ಮತ್ತು ಪ್ರಾಣಿಗಳ ಸಂಕುಲ ಅವಳ ಕೈಲಿ ಸುರಕ್ಷಿತವಾಗಿದ್ದವು.
ತೃತೀಯ ಜಗತ್ತಿನ ಅಂದರೆ, ನಮ್ಮ  ಪೂರ್ವ ಜಗತ್ತಿನ ರಾಷ್ಟ್ರಗಳ ಮಹಿಳೆಯರ ಇತಿಹಾಸವನ್ನು ಗಮನಿಸುವಾಗ ಒಂದು ಅಂಶ ನಮಗೆ ಮನದಟ್ಟಾಗುತ್ತದೆ. ಪಶ್ಚಿಮ ಜಗತ್ತು ಅವಿಷ್ಕರಿಸಿದ ವಿಜ್ಙಾನವಾಗಲಿ ಅಥವಾ ಅಭಿವೃದ್ಧಿ ಕುರಿತ ಚಿಂತನೆಗಳಾಗಲಿ ಸಮಗ್ರ ಮನುಕುಲದ ಒಳಿತನ್ನು ಒಳಗೊಂಡಿಲ್ಲ. ಅವು ಮಹಿಳೆಯರನ್ನು ಹೊರಗಿಟ್ಟು ರೂಪಿತವಾಗಿರುವ , ಚಾರಿತ್ರಿಕವಾದ ಮತ್ತು ಸೈದ್ಧಾಂತಿಕವಾದ ಪುರುಷ ನಿರ್ಮಿತ ಯೋಜನೆ ಮತ್ತು ಪರಿಕಲ್ಪನೆಗಳು ಮಾತ್ರ. ಆದರೆ,ಅವುಗಳು ಎಲ್ಲರನ್ನೂ ಒಳಗೊಂಡಿದೆ ಎಂದು ನಮ್ಮನ್ನು ನಂಬುವಂತೆ ಮಾಡಿವೆ ಅಷ್ಟೇ. ಇವುಗಳ ಹಿಂದೆ ಪರಿಸರದ ನಾಶ ಮತ್ತು ಪಿತೃಪ್ರಧಾನ ವ್ಯವಸ್ಥೆಯ ಹುನ್ನಾರಗಳು ಅಡಗಿವೆ. 15 ಮತ್ತು 16 ನೇ ಶತಮಾನದಲ್ಲಿ ಯೋರೋಪಿನಲ್ಲಿ ತಲೆ ಎತ್ತಿದ ಪಿತೃ ಪ್ರಧಾನ ವ್ಯವಸ್ಥೆ ಮತ್ತು ಆಧುನಿಕ ವಿಜ್ಙಾನ, ಮತ್ತು ಇವುಗಳ ಜೊತೆ ಕೈಜೋಡಿಸಿದ ಕೈಗಾರಿಕಾ ಕ್ರಾಂತಿ ಇವೆಲ್ಲವೂ ಮಹಿಳೆಯನ್ನು ಪ್ರಕೃತಿಯಿಂದ ದೂರಮಾಡಿ ನಾಲ್ಕು ಗೋಡೆಯ ನಡುವೆ ಬಂಧಿಯನ್ನಾಗಿಸಿದವು.
ಇದರ ಪರಿಣಾಮವಾಗಿ ಇವೊತ್ತಿಗೂ ಏಷ್ಯಾದ ರಾಷ್ಟ್ರಗಳಲ್ಲಿ ಹೆಣ್ಣಿಗೆ ಕೋಳಿ ಮಾಂಸ, ಮೊಟ್ಟೆ, ಸಮುದ್ರದ ಸೀಗಡಿ, ಮೀನು ಮುಂತಾದ  ಪೌಷ್ಟಿಕ ಆಹಾರಗಳನ್ನು ಉಷ್ಣ ಪದಾರ್ಥಗಳು ಎಂಬ ನೆಪವೊಡ್ಡಿ ನಿರಾಕರಿಸಲಾಗುತ್ತಿದೆ. ಅತಿ ಹೆಚ್ಚು ಹಾಲು ಸೇವನೆಯಿಂದ ಬಂಜೆತನ ಬರುತ್ತದೆ ಎಂಬ ಕಾರಣಕ್ಕಾಗಿ ಹೆಣ್ಣು ಮಕ್ಕಳಿಗೆ ಹಾಲನ್ನು ನಿರಾಕರಿಸುವ ಸಮುದಾಯಗಳು ಇಂದಿಗೂ ಈ ಪೂರ್ವ ಜಗತ್ತಿನ ರಾಷ್ಟ್ರಗಳಲ್ಲಿ ಜೀವಂತವಾಗಿವೆ.
ಹಿಮಾಲಯದ ಚಿಪ್ಕೊ ಅಥವಾ ಅಪ್ಪಿಕೊ ಚಳವಳಿಗೆ ಮೂಲ ಪ್ರೇರಣೆ ಒದಗಿದ್ದು ಬಂದದ್ದು, ಸ್ತ್ರೀ ಸಮುದಾಯದಿಂದ ಎಂಬುದು ಗಮನಾರ್ಹ ಸಂಗತಿ. ಆದರೆ, ಆದರೆ, ಭಾರತದ ಪುರುಷ ಪ್ರಧಾನ ಸಮಾಜದಲ್ಲಿ ಅಪ್ಪಿಕೊ ಚಳವಳಿಯ ಇತಿಹಾಸದಲ್ಲಿ  ಮೂಲ ಕ್ರಾಂತಿಕಾರಿಗಳಾದ ಮಹಿಳೆಯರನ್ನು ನೈಪಥ್ಯಕ್ಕೆ ಸರಿಸಲಾಗಿದೆ ಎನಿಸುತ್ತದೆ.
1892 ರಲ್ಲಿ ಬ್ರಿಟೀಷ್ ಸೇನೆಯ ನೌಕಾಧಿಕಾರಿಯ ಮಗಳಾಗಿ ಬ್ರಿಟನ್ ನಲ್ಲಿ  ಜನಿಸಿದ ಮೆಡಲಿನ್ ಸ್ಲೇಡ್ ಎಂಬ ಹೆಣ್ಣು ಮಗಳು ಗಾಂಧಿ ಚಿಂತನೆಯಿಂದ ಪ್ರಭಾವಗೊಂಡು, ಭಾರತಕ್ಕೆ ಬಂದು ಮೀರಾ ಬೆಹನ್ ಎಂದು ತನ್ನ ಹೆಸರನ್ನು ಬದಲಿಸಿಕೊಂಡು, ಗಾಂಧೀಜಿಯವರ ಜೊತೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರುವುದು ಎಲ್ಲರಿಗೂ ತಿಳಿದ ಸಂಗತಿ. ಮೀರಾ ಬೆಹನ್ 1947 ರ ಭಾರತ ಸ್ವಾತಂತ್ರ್ಯಾ ನಂತರ ಋಷಿಕೇಶ ಮತ್ತು ಹರಿದ್ವಾರದ ನಡುವೆ ಪಶುಲೋಕ್ ಎಂಬ ಆಶ್ರಮವನ್ನು ತೆರೆದು ಗೋವುಗಳನ್ನು ಸಾಕುತ್ತಾ ಬದುಕುವುದಕ್ಕೆ ಆರಂಭಿಸಿದ್ದರು. ಗಾಂಧಿ ತಾವು ಸಾಯುವ ಹದಿನೈದು ದಿನಕ್ಕೆ ಮುನ್ನ ಅಂದರೆ, 1948 ರ ಜನವರಿ ಎರಡನೇ ವಾರದಲ್ಲಿ ಮೀರಾ ಬೆಹನ್ ಗೆ ಪತ್ರ ಬರೆದು ಆಶ್ರಮದ ನೆಪದಲ್ಲಿ ನಿನ್ನ ಬದುಕನ್ನು ಕಟ್ಟಿ ಹಾಕಿಕೊಳ್ಳಬೇಡ, ಭಾರತದ ಮಹಿಳೆಯರ ಸ್ಥಿತಿ ಗತಿಯ ಸುಧಾರಣೆ ಮತ್ತು ನೈಸರ್ಗಿಕ ರಕ್ಷಣೆಯಲ್ಲಿ ನೀನು ವಹಿಸಬೇಕಾದ ಪಾತ್ರ ಬಹಳಷ್ಟಿದೆ ಎಂದು ತಿಳಿಸಿದ್ದರು. ನಂತರ ಆಶ್ರಮ  ತೊರೆದು ಹಿಮಾಲಯದ ತಪ್ಪಲಿನ ಘರ್ ವಾಲ್ ಪ್ರದೇಶಕ್ಕೆ ಬಂದ ಮೀರಾ ಬೆಹನ್ ಅಲ್ಲಿನ ಮಹಿಳೆಯರ ಮತ್ತು ಪರಿಸರ ಕುರಿತು ಅಧ್ಯಯನದಲ್ಲಿ ತೊಡಗಿಕೊಂಡರು.
ಮೊದಲಿಗೆ ಮೀರಾಬೆಹನ್ ಅಲ್ಲಿನ ಜನಪದ ಕಥೆಗಳು ಮತ್ತು ಹಾಡುಗಳತ್ತ ಗಮನ ಹರಿಸಿದರು. ಅಲ್ಲಿನ ಕಥೆಗಳಲ್ಲಿ ಪದೇ ಪದೇ ಪ್ರಸ್ತಾಪವಾಗುತ್ತಿದ್ದ ಖಾರೀಕ್ ಮತ್ತು ಬಂಜ್ ಎಂಬ ಮರಗಳು ಅಲ್ಲಿನ ಪ್ರದೇಶದಲ್ಲಿ ಕಾಣಸಿಗುತ್ತಿರಲಿಲ್ಲ, ಕೇವಲ ಓಕ್ ಮರಗಳು ಮಾತ್ರ ಇದ್ದವು. ಜೊತೆಗೆ ಸಮೃದ್ಧ ಗೋವುಗಳ ಸಂಪತ್ತಾಗಲಿ, ಹಾಲು ಅಥವಾ ಮೊಸರಾಗಲಿ ಇರಲಿಲ್ಲ. ಹಿರಿಯ ಮಹಿಳೆಯರು ಹಾಡುತ್ತಿದ್ದ ಜಾನಪದ ಗೀತೆಯಲ್ಲಿನ ಪೂರ್ವ ಹಿಮಾಲಯದ ಇತಿಹಾಸಕ್ಕೂ , ವರ್ತಮಾನದ ಇತಿಹಾಸಕ್ಕೂ ಪಕೃತಿಯಲ್ಲಿ ಅಜಗಜಾಂತರ ವೆತ್ಯಾಸವಿತ್ತು. ಬ್ರಿಟೀಷರ ವಸಾಹತು ಶಾಹಿ ಆಳ್ವಿಕೆಯಲ್ಲಿ ಅಲ್ಲಿನ ಮರಗಳ ಸಂಪತ್ತು ಲೂಟಿಯಾಗಿತ್ತು. ಹಿಮಾಲಯದ ಶಿಖರಗಳು ಮರಗಳಿಲ್ಲದೆ ಬರಡಾಗಿದ್ದವು. ಈ ಅಂಶಗಳು ಮೀರಾಬೆಹನ್ ಮನದಟ್ಟಾಗುತ್ತಿದ್ದಂತೆ ಅಲ್ಲಿನ ಪರಿಸರ ರಕ್ಷಣೆಗೆ ಮಹಿಳೆಯರನ್ನು ಒಂದುಗೂಡಿಸಿ ಪ್ರಜ್ಙೆ ಮೂಡಿಸತೊಡಗಿದರು.
ಇದೇ ವೇಳೆಗೆ ಸ್ವಾತಂತ್ರ್ಯ ನಂತರ ಭಾರತ- ಚೀನಾ ಗಡಿ ಭಾಗಕ್ಕೆ ಭಾರತದ ಸೇನೆ ನೀಯೋಜಿತ ಗೊಂಡಿದ್ದರಿಂದ ಸೇನೆಯ ಚಲನ ವಲನಕ್ಕೆ  ಅನೂಕೂಲವಾಗುವಂತೆ 1950ರ ದಶಕದಲ್ಲಿ ಹಿಮಾಲಯದ  ಘರ್ ವಾಲ್ ಮತ್ತು ತೆಹ್ರಿ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ರಸ್ತೆಗಳು ಅಭಿವೃದ್ಧಿಗೊಂಡವು. ರಸ್ತೆ ಅಭಿವೃದ್ಧಿಯಾಗುತ್ತಿದ್ದಂತೆ ಭ್ರಷ್ಟ ಅರಣ್ಯಾಧಿಕಾರಿಗಳ ಜೊತೆ ಶಾಮೀಲಾದ ಮರಗಳ ಗುತ್ತಿಗೆದಾರರು ಈ ಪ್ರದೇಶಕ್ಕೆ  ಕಾಲಿಟ್ಟರು. ಅಲ್ಲಿಂದ ಮರಗಳ ಮಾರಣ ಹೋಮ ಅರಂಭವಾಗಿ ಅಪ್ಪಿಕೊ ಚಳವಳಿಗೆ ನಾಂದಿಯಾಡಿತು.
                                                                              (ಮುಂದುವರಿಯುವುದು)




ಸೋಮವಾರ, ಜೂನ್ 10, 2013

ಕಾಡ್ಗಿಚ್ಚಿನ ಕರಾಳ ಕಥೆ

ಇತ್ತೀಚೆಗಿನ ದಿನಗಳಲ್ಲಿ ಅರಣ್ಯದಲ್ಲಿ ಹಬ್ಬುತ್ತಿರುವ ಕಾಡ್ಗಿಚ್ಚು ದಿನ ನಿತ್ಯದ ಸಂಗತಿಯೇನೊ ಎಂಬಂತಾಗಿ ಈ ಸಂಗತಿ ಯಾರ ಎದೆಗೂ ತಾಕದ ಮೋಕ ಜೀವಿಗಳ ಮೌನ ರೋದನವಾಗಿ,  ಒಂದರ್ಥದಲ್ಲಿ ನಿಜವಾದ ಅರಣ್ಯ ರೋದನವಾಗಿದೆ. ಹತ್ತಿ ಉರಿಯುವ ಅರಣ್ಯದ ಅಗ್ನಿಜ್ವಾಲೆಯಲ್ಲಿ ಯಾವೊಂದು ಪ್ರತಿರೋಧವಿಲ್ಲದೆ ಬೆಂದುಹೋಗುವ ಹಕ್ಕಿಗಳಗೂಡು, ಅವುಗಳಲ್ಲಿ ಆಗ ತಾನೆ ಕಣ್ಣುಬಿಡುತ್ತಿರುವ ಹಕ್ಕಿಮರಿಗಳು, ನೆಲದ ಮೇಲಿನ ಚಿಟ್ಟೆ, ಪತಂಗ, ಹಾವು, ಕಪ್ಪೆ, ಹುಳ ಉಪ್ಪಟೆಗಳು, ಇರುವೆ ಗೂಡು, ಮರದಮೇಲಿನ ಮಂಗಗಳ ಚೀರಾಟ, ದಿಕ್ಕುತಪ್ಪಿ ಅಲೆಯುವ ಹರಿಣಿ, ಆನೆ, ಹುಲಿ, ಚಿರತೆಗಳ ಗಳ ಹಿಂಡು ಹೀಗೆ ಇವುಗಳ ಆರ್ತನದಕ್ಕೆ ಕಣ್ಣಾಗುವವರು, ಕಿವಿಯಾಗುವವರು ಯಾರೂ ಜಗತ್ತಿನಲ್ಲಿ ಇಲ್ಲವೆನೋ ಎಂದೆನಿಸುತ್ತದೆ. ಅರಣ್ಯ ಹತ್ತಿ ಉರಿಯುವಾಗ ಇಂತಹ ದುರ್ಘಟನೆಗಳಿಗೆ ಹಲವಾರು  ಬಾರಿ ಸಾಕ್ಷಿಯಾಗಿರುವ  ನನ್ನಂತಹವನಿಗೆ ಇವೆಲ್ಲವೂ ಜೀವ ಹಿಂಡುವ ಸಂಗತಿಗಳು.
ಅರಣ್ಯದಲ್ಲಿ ಅಗ್ನಿ ಆಕಸ್ಮಿಕ ಎನ್ನುವುದು ಅರಣ್ಯದ ಇತಿಹಾಸದಷ್ಟು ಹಳೆಯ ಸಂಗತಿ. ಆದರೆ, ಹಿಂದಿನ ದಿನಗಳಲ್ಲಿ  ಅರಣ್ಯದಲ್ಲಿ ನೈಸರ್ಗಿಕವಾಗಿ ಅಗ್ನಿ ಆಕಸ್ಮಿಕ ಸಂಭವಿಸುತ್ತಿದ್ದುದು ಕೇವಲ ಎರಡು ಸಂದರ್ಭಗಳಲ್ಲಿ ಮಾತ್ರ. ಒಂದನೇಯದಾಗಿ, ಮರಗಳಿಗೆ ಸಿಡಿಲು ಬಡಿದಾಗ, ಎರಡನೇಯದು ಬಿದಿರು ಬೆಳೆಯುವ ಪ್ರದೇಶದಲ್ಲಿ, ಜೋರಾಗಿ ಗಾಳಿ ಬೀಸಿದ ಸಂದರ್ಭದಲ್ಲಿ  ಬಿದಿರು ಬೊಂಬುಗಳ ತಿಕ್ಕಾಟದಿಂದ ಉಂಟಾಗುತ್ತಿದ್ದ ಬೆಂಕಿಯ ಕಿಡಿಯಿಂದಾಗಿ ಮಾತ್ರ.ಈ ಎರಡು ಆಕಸ್ಮಿಕ ಅನಾಹುತಗಳಿಗೆ ಪರಿಹಾರವೂ ಕೂಡ ಆ ಕಾಲದಲ್ಲಿ ಇತ್ತು. ಸಿಡಿಲು ಬಡಿದಾಗ ಸೃಷ್ಟಿಯಾಗುತ್ತಿದ್ದ ಕಾಡ್ಗಿಚ್ಚಿಗೆ ಸುರಿಯುತ್ತಿದ್ದ ಮಳೆ ನೈಸರ್ಗಿಕವಾಗಿ ಬೆಂಕಿಯನ್ನು ನಂದಿಸುತ್ತಿತ್ತು. ಬಿದಿರು ಮರಗಳು ಇರುವ ಅರಣ್ಯ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಸುತ್ತಲೂ ಕಂದಕವನ್ನು ತೋಡುವುದರ ಮೂಲಕ  ಬೆಂಕಿ ಇತರೆ ಪ್ರದೇಶಗಳಿಗೆ ಹರಡದಂತೆ ತಡೆಯುವ ಕ್ರಮ ಜಾರಿಯಲ್ಲಿತ್ತು. ಈ ಪದ್ಧತಿಯನ್ನು 1870 ರಲ್ಲಿ ಬ್ರಿಟೀಷರು Forest Fire Line ಎಂಬ ಯೋಜನೆಯಡಿ ಜಾರಿಗೆ ತಂದಿದ್ದರು. ಈ ನಿಯಮ ಇಂದಿಗೂ ಭಾರತದ ಎಲ್ಲಾ ಅರಣ್ಯ ಪ್ರದೇಶದಲ್ಲಿ ಅಸ್ತಿತ್ವದಲ್ಲಿದೆ. ಜೊತೆಗೆ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುವ ಅರಣ್ಯಪ್ರದೇಶಗಳಲ್ಲಿ ರಸ್ತೆಯ ಇಕ್ಕೆಲಗಳಿಗೂ  ಇದನ್ನು ವಿಸ್ತರಿಸಲಾಗಿದೆ
     ಇಷ್ಟೆಲ್ಲಾ ಮುಂಜಾಗ್ರತಾ ಕ್ರಮಗಳ ನಡುವೆಯೂ ಅರಣ್ಯ ಪ್ರದೇಶಗಳಲ್ಲಿ  ಹೆಚ್ಚಿದ ಮಾನವನ ಚಟುವಟಿಕೆ ಮತ್ತು ಅನಗತ್ಯ ಹಸ್ತಕ್ಷೇಪದಿಂದಾಗಿ ಭಾರತದಲ್ಲಿ ಪ್ರತಿವರ್ಷ ಸರಾಸರಿ 33 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶ ಕಾಡ್ಗಿಚ್ಚಿಗೆ ಬಲಿಯಾಗುತ್ತಿದೆ. ಅರಣ್ಯಗಳ ಪ್ರದೇಶಗಳಲ್ಲಿ ಇರುವ ಗಿರಿಶಿಖರ, ಜಲಪಾತ ಇಲ್ಲವೇ ಇತ್ತೀಚೆಗೆ ನಾಯಿಕೊಡೆ ಅಣಬೆಗಳಂತೆ ಎಲ್ಲೆಡೆ ತಲೆ ಎತ್ತುತ್ತಿರುವ ರಿಸಾರ್ಟ್ ಗಳ ಪ್ರಭಾವದಿಂದಾಗಿ ಇಂತಹ ಜಾಗಗಳಿಗೆ ಪ್ರವಾಸಿಗರು ಹೆಚ್ಚಾಗಿ ಬೇಟಿ ನೀಡುತ್ತಿದ್ದಾರೆ. ಅವರು ಸೇದಿ ಬಿಸಾಡಿದ ಬೀಡಿ ಅಥವಾ ಸಿಗರೇಟಿನ ತುಂಡು ಬಹುತೇಕ ಅಗ್ನಿ ಅವಘಡಗಳಿಗೆ ಕಾರಣವಾಗುತ್ತಿದೆ. ಇವರ ಜೊತೆಗೆ ಅರಣ್ಯದಲ್ಲಿ ಪ್ರಾಣಿಗಳ ಬೇಟಿಗಾಗಿ ಸಂಚರಿಸುವ ಅಕ್ರಮ ಬೇಟೆಗಾರರು, ಮತ್ತು ಮರಗಳ ಕಳ್ಳಸಾಗಾಣಿಕೆದಾರರಿಗೆ  ದಟ್ಟವಾದ ಅರಣ್ಯದಲ್ಲಿ ಬೆಳೆದು ನಿಂತಿರುವ ಪೊದೆಗಳು ಅವರ ಸಂಚಾರಕ್ಕೆ ಅಡ್ಡಿಯುಂಟು ಮಾಡುವ ಹಿನ್ನಲೆಯಲ್ಲಿ ಬೆಂಕಿ ಹಾಕಿರುವ ನಿರ್ದೇಶನಗಳು ಸಾಕಷ್ಟಿವೆ. ಕಳೆದ ಒಂದು ದಶಕದಿಂದ ಭಾರತದಲ್ಲಿ ಸಂಭವಿಸುತ್ತಿರುವ ಬಹುತೇಕ ಅರಣ್ಯದ ಕಾಡ್ಗಿಚ್ಚು ಮಾನವ ನಿರ್ಮಿತ ಅನಾಹುತಗಳಾಗಿರುವುದು ವಿಶೇಷ.
ಭಾರತದ ಹಿಮಾಲಯದ ತಪ್ಪಲು ಮತ್ತು ಭಾರತ ಮತ್ತು ಬರ್ಮಾ ಗಡಿಭಾಗದಲ್ಲಿರುವ ಈಶಾನ್ಯ ರಾಜ್ಯಗಳ ಅರಣ್ಯ ಪ್ರದೇಶ ಹಾಗೂ ಪಶ್ಚಿಮಘಟ್ಟದ ಶ್ರೇಣಿಯಲ್ಲಿರುವ ಅರಣ್ಯಗಳಲ್ಲಿ ಅತಿ ಹೆಚ್ಚು ಅಗ್ನಿ ಅನಾಹುತಗಳು ಸಂಭವಿಸುತ್ತಿವೆ, ಭಾರತದಲ್ಲಿ ಅತಿ ಹೆಚ್ಚು ಕಾಡ್ಗಿಚ್ಚು ಸಂಭವಿಸಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದ್ದರೆ, ಒರಿಸ್ಸಾ ರಾಜ್ಯ ಎರಡನೆಯ ಸ್ಥಾನದಲ್ಲಿದ್ದು,ಕರ್ನಾಟಕ ರಾಜ್ಯ ಮೂರನಯ ಸ್ಥಾನದಲ್ಲಿದೆ. ಭಾರತದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಸವಿರುವ ದಂಡಕಾರಣ್ಯ ಎಂದು ಕರೆಯಲಾಗುವ ಮಧ್ಯಪ್ರದೇಶ ಮತ್ತು ಛತ್ತೀಸ್ಘಡ ಅರಣ್ಯ ಪ್ರದೇಶಗಳಲ್ಲಿ ನಕ್ಸಲರು ಬೀಡು ಬಿಟ್ಟಿರುವ ಕಾರಣ ಕಾಡ್ಗಿಚ್ಚು ಇಲ್ಲವೆನೋ ಎಂಬಂತೆ ಭಾಸವಾಗುತ್ತಿದೆ. ನಕ್ಸಲರ ಭಯದಿಂದ ಇಲ್ಲಿ ಮರಗಳ್ಳರು, ಬೇಟೆಗಾರರು ಕಾಲಿಡಲು ಸಾಧ್ಯವಾಗಿಲ್ಲ. ಕಳೆದ ವರ್ಷ ಮಧ್ಯ ಪ್ರದೇಶದಲ್ಲಿ ಅಗ್ನಿಗೆ ಕೇವಲ 35 ಹೆಕ್ಟೇರ್ ಅರಣ್ಯ ಪ್ರದೇಶ ಆಹುತಿಯಾಗಿದೆ.  ಭಾರತದಲ್ಲಿ ಸಾಮಾನ್ಯವಾಗಿ ಅರಣ್ಯದ ಕಾಡ್ಗಿಚ್ಚು ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಬೇಸಿಗೆಯ ಅವಧಿಯಲ್ಲಿ ಸಂಭವಿಸುತ್ತಿದೆ. ಆ ದಿನಗಳಲ್ಲಿ ಒಣಗಿದ ಗಿಡಗೆಂಟೆಗಳು, ಹುಲ್ಲುಗಾವಲು  ಮತ್ತು ಮರದ ತರಗೆಲೆಗಳು ಕಾಡ್ಗಿಚ್ಚು  ಹಬ್ಬಲು ಕಾರಣವಾಗುತ್ತಿವೆ.
2012 ರ ಲ್ಲಿ ಒರಿಸ್ಸಾ ರಾಜ್ಯದಲ್ಲಿ ಒಟ್ಟು 2700 ಹೆಕ್ಟೇರ್ ಅರಣ್ಯ ಪ್ರದೇಶ ಅಗ್ನಿಗೆ ಆಹುತಿಯಾಗಿದೆ. ಕೋರಾಪೆಟ್ ಜಿಲ್ಲೆಯಲ್ಲಿ 500 ಮತ್ತು ಗಂಜಾಂ ಜಿಲ್ಲೆಯಲ್ಲಿ 287 ಘಟನೆಗಳು ಜರುಗಿವೆ. ಮಹಾರಾಷ್ಟ್ರದಲ್ಲಿ 2011 ರಲ್ಲಿ ಒಟ್ಟು 72 ಸಾವಿರ ಹೆಕ್ಟೇರ್ ಪ್ರದೇಶ ಮತ್ತು 2012 ರಲ್ಲಿ 24 ಸಾವಿರ ಹೆಕ್ಟೇರ್ ಪ್ರದೇಶ ಕಾಡ್ಗಿಚ್ಚಿನಿಂದಾಗ ಹಾನಿಗೊಳಗಾಗಿದೆ. ಮಹಾರಾಷ್ಟ್ರದಲ್ಲಿ  ಹಾನಿಯಾಗಿರುವ ಬಹುತೇಕ ಅರಣ್ಯಪ್ರದೇಶ ಮುಂಬೈ- ಪೂನಾ ನಡುವಿನ ಕಣಿವೆ ಪ್ರದೇಶಗಳಲ್ಲಿ. ( ಇಲ್ಲಿ ಮಹಾಬಲೇಶ್ವರ, ಲೊಕಂಡವಾಲ ಗಿರಿಧಾಮಗಳಿದ್ದು ಸಾವಿರಕ್ಕೂ ಅಧಿಕ ರೆಸಾರ್ಟ್ ಗಳಿವೆ)
ಕರ್ನಾಟಕದ ಅರಣ್ಯದ ಸ್ಥಿತಿ ಗತಿ ಕೂಡ  ಮಹಾರಾಷ್ಟ್ರಕ್ಕಿಂತ ಭಿನ್ನವಾಗಿಲ್ಲ. ನಾಗರಹೊಳೆ ಅಭಯಾರಣ್ಯದಲ್ಲಿ 1999 ರಲ್ಲಿ 9008 ಹೆಕ್ಟೇರ್ ಅರಣ್ಯ ಮತ್ತು 2004ರಲ್ಲಿ 9505 ಹೆಕ್ಟೇರ್ ಹಾಗೂ 2012 ರಲ್ಲಿ 3912 ಹೆಕ್ಟೇರ್ ಅರಣ್ಯ ಪ್ರದೇಶ ಕಾಡ್ಗಿಚ್ಚಿಗೆ ಬಲಿಯಾಗಿದೆ. ಬಂಡಿಪುರ ಅರಣ್ಯದಲ್ಲಿ 2004ರಲ್ಲಿ ಸಂಭವಿಸಿದ ದುರಂತದಲ್ಲಿ 22 ಸಾವಿರ ದ 657 ಹೆಕ್ಟೇರ್ ಹಾಗೂ 2012 ರಲ್ಲಿ 2267 ಹೆಕ್ಟೇರ್ ಅರಣ್ಯ ಸುಟ್ಟು ಕರಕಲಾಯಿತು. ಭದ್ರಾ ಅಭಯಾರಣ್ಯದಲ್ಲಿ 1999 ರಲ್ಲಿ 2.500 ಹೆಕ್ಟೇರ್ ಮತ್ತು 2012ರಲ್ಲಿ 446 ಹೆಕ್ಟೇರ್ ಅರಣ್ಯ ಕಾಡ್ಗಿಚ್ಚಿನ ಕೆನ್ನಾಲಿಗೆಗೆ ಆಹುತಿಯಾಗಿದೆ.( ಒಂದು ಹೆಕ್ಟೇರ್= 2.5 ಎಕರೆ ಪ್ರದೇಶ) ಕರ್ನಾಟಕ ರಾಜ್ಯವೊಂದರಲ್ಲಿ ಅಗ್ನಿ ಅನಾಹುತದಿಂದ ಪ್ರತಿವರ್ಷ 55 ಕೋಟಿ ರೂಪಾಯಿ ಮೌಲ್ಯದ ಸಾಗುವಾನಿ(ತೇಗ) ನಂದಿ, ಹೊನ್ನೆ, ಸಿಲ್ವರ್ ಓಕ್ ಮುಂತಾದ ಮರಗಳ ಸಂಪತ್ತು ನಾಸವಾಗುತ್ತಿದೆ ಎಂದು ತಜ್ಙರು ಅಂದಾಜಿಸಿದ್ದಾರೆ. ಜೊತೆಗೆ  ಜಗತ್ತಿನ ಪರಿಸರ ತಜ್ಙರು Hot Spot  ಎಂದು ಕರೆಯಲಾಗುವ ಪಶ್ಚಿಮ ಘಟ್ಟದ ಜೀವ ವೈವಿಧ್ಯತೆ ತಾಣಗಳಲ್ಲಿ ಬೆಂಕಿ ಅನಾಹುತಗಳು ಹೆಚ್ಚಾಗುತ್ತಿರುವುದು ಮತ್ತು ಪಶ್ಚಿಮಘಟ್ಟಗಳಲ್ಲಿ ಶೇಕಡ 60 ರಷ್ಟು ಅಮೂಲ್ಯವಾದ ತೇಗ, ಹೊನ್ನೆ, ಮರಗಳು ಕಡಿಮೆಯಾಗಿರುವುದನ್ನು ಏಷ್ಯಾ ನೇಚರ್ ಕನ್ಸರ್ ವೇಶನ್ ಪೌಂಡೇಶನ್ ಸಂಸ್ಥೆಯ ನರೇಂದ್ರ ಕೋದಂಡ ಪಾಣಿ ಎಂಬ ತಜ್ಙರು ಗುರುತಿಸಿದ್ದಾರೆ.
ಅಭಿವೃದ್ಧಿ ಮತ್ತು ಪ್ರವಾಸೋದ್ಯಮದ ನೆಪದಲ್ಲಿ ಆಧುನಿಕತೆಯ ಕರಾಳ ಹಸ್ತ ಕ್ಷೇಪ ಹೀಗೆಯೇ ಅರಣ್ಯಪ್ರದೇಶದಲ್ಲಿ ಮುಂದುವರಿದರೆ, ನಮ್ಮ ಮುಂದಿನ ತಲೆಮಾರು ಅರಣ್ಯ, ಹಸಿರು ಮತ್ತು, ಪಕ್ಷಿ, ಪ್ರಾಣಿಗಳನ್ನು ಭೂಪಟದಲ್ಲಿ, ಚಿತ್ರಗಳಲ್ಲಿ ಮತ್ತು ಮೃಗಾಲಯಗಳಲ್ಲಿ ನೋಡುವ ದಿನಗಳು  ದೂರವಿಲ್ಲ ಎನಿಸುತ್ತಿದೆ.
ಇತ್ತೀಚೆಗೆ ಉಪಗ್ರಹದ ಮೂಲಕ ಸಂಗ್ರಹಿಸುವ  ಛಾಯಾಚಿತ್ರಗಳು ಹಾಗೂ ಅರಣ್ಯ ಪ್ರದೇಶದಲ್ಲಿ ನಿರಂತ ಗಸ್ತು ತಿರುಗುವ ಕಾವಲು ಪಡೆಗಳ ಮೂಲಕ ಕಾಡ್ಗಿಚ್ಚಿನ ನಿಯಂತ್ರಣಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಕೇಂದ್ರ ಸರ್ಕಾರ ಪ್ರತಿ ವರ್ಷ ಅರಣ್ಯ ರಕ್ಷಣೆಗಾಗಿ ನೂರು ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಆದರೆ, ಈ ಹಣ ಮತ್ತು ಯೋಜನೆ ನಮ್ಮ ಅರಣ್ಯಾಧಿಕಾರಿಗಳ ಪಾಲಿಗೆ ಚಿನ್ನದ ತತ್ತಿ ಇಡುವ ಕೋಳಿಯಂತಾಗಿದೆ.


ಶನಿವಾರ, ಜೂನ್ 8, 2013

ಧಾರಾವಿ ಎಂಬ (ಕೊಳಗೆರಿ) ವಿಸ್ಮಯ- ಭಾಗ-2


ಮುಂಬೈನ ಧಾರವಿ ಕೊಳಗೇರಿಯ ವಿಶಿಷ್ಟವೆಂದರೆ, ಬಹುಸಂಸ್ಕೃತಿಯ ಗೂಡಾದ ಈ ವಸತಿ ಪ್ರದೇಶದಲ್ಲಿ ಕಳೆದ ಅರ್ಧ ಶತಮಾನದ ಇತಿಹಾಸದಲ್ಲಿ ಯಾವುದೇ ಕೋಮುಗಲಭೆ ಏರ್ಪಟ್ಟಿಲ್ಲ. ಬಡವರಿಗೆ ಮತ್ತು ದುಡಿದು ತಿನ್ನುವ ಶ್ರಮಜೀವಿಗಳಿಗೆ ಧರ್ಮ ಮತ್ತು ಜಾತಿಗಿಂತ ಆಯಾ ದಿನದ ಬದುಕು ದೂಡುವುದು ಮುಖ್ಯವಾಗಿರುತ್ತದೆ. ತಾವು ಬದುಕುತ್ತಿರುವ ಎಂಟು- ಹತ್ತು ಅಡಿಯ ಸೂರಿನ ಎಡ ಬಲ ಯಾರು ವಾಸಿಸುತ್ತಿದ್ದಾರೆ? ಅವರ ಜಾತಿ ಅಥವಾ ಧರ್ಮ ಯಾವುದು? ಎಂಬ ಪ್ರಶ್ನೆಗಳಿಂತ ಅವರೂ ಸಹ ನಮ್ಮಂತೆ ಈ ಸಮಾಜದಿಂದ ತಿರಸ್ಕೃತಗೊಂಡವರು ಎಂಬ ಭಾವನೆ ಮತ್ತು ಪ್ರಜ್ಙೆ  ಕೊಳಗೇರಿಯ ವಾಸಿಗಳ ಎದೆಯಲ್ಲಿ ಸದಾ ಜೀವಂತವಾಗಿರುತ್ತದೆ.
1993 ರಲ್ಲಿ ಮುಂಬೈ ನಗರದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಪ್ರತಿಯಾಗಿ ಮುಂಬೈ ನಗರ ಹತ್ತಿ ಉರಿದಾಗ, ಧಾರಾವಿ ಮಾತ್ರ ತಣ್ಣಗೆ ಇತ್ತು. ಇಲ್ಲಿನ ಜನಗಳು ಪ್ರತಿ ಪ್ರದೇಶದಲ್ಲಿ ಸ್ವತಃ ಕಾವಲು ನಿಂತು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದರು. ಇತ್ತೀಚೆಗಿನ ದಿನಗಳಲ್ಲಿ ಆಯಾ ಸಮುದಾಯದ ಜನತೆ ಒಟ್ಟಿಗೆ ವಾಸಿಸುವುದು ಕಂಡು ಬಂದರೂ ಸಹ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಧರ್ಮೀಯರು ಪರಸ್ಪರ ಗೌರವ ಇಟ್ಟುಕೊಂಡು ಬಾಳುವುದು ಇಲ್ಲಿನ ವೈಶಿಷ್ಟವಾಗಿದೆ.
ಈ ಮೊದಲು ಧಾರಾವಿಯಲ್ಲಿದ್ದ ಚರ್ಮ ಹದಮಾಡುವ ಕೈಗಾರಿಕೆಗಳು ಇದೀಗ ಪಕ್ಕದ ಡಿಯನೊರ್ ಪ್ರದೇಶಕ್ಕೆ ವರ್ಗಾವಣೆಯಾಗಿದೆ. ಅಲ್ಲಿನ ಘಟಕಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶದ ಮುಸ್ಲಿಂರು, ತಮಿಳುನಾಡಿನ ಹರಿಜನರು ಹಾಗೂ ಮಹಾರಾಷ್ಟ್ರದ ದಲಿತರು ಪ್ರತ್ಯೇಕವಾಗಿ ಬೇರೆ ಬೇರೆ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಉತ್ತರ ಪ್ರದೇಶದ ಮುಸ್ಲಿಂರು ನಡೆಸುತ್ತಿರುವ ಘಟಕಗಳಲ್ಲಿ ಬಿಹಾರದ ಮುಸ್ಲಿಂರು ಜೊತೆಗೂಡಿದ್ದರೆ. ಹಿಂದುಗಳು ನಡೆಸುತ್ತಿರುವ ಚರ್ಮದ ಕೈಗಾರಿಕೆಗಳಲ್ಲಿ ತಮಿಳುನಾಡಿನ ಜನರು ಮಾತ್ರ ದುಡಿಯುತ್ತಿದ್ದಾರೆ. ಮಹಾರಾಷ್ಟ್ರದ ದಲಿತರು ಬೌದ್ಧ ಧರ್ಮಕ್ಕೆ ಮತಾಂತರ ಗೊಂಡ ಹಿನ್ನಲೆಯಲ್ಲಿ ಅವರ ಸಂಖ್ಯೆ ಇತ್ತೀಚೆಗೆ ಕಡಿಮೆಯಾಗಿದೆ.

ಧಾರಾವಿಯಲ್ಲಿ ದಕ್ಷಿಣ ಭಾರತದಿಂದ ವಿಶೇಷವಾಗಿ ಕರ್ನಾಟಕದ ಗುಲ್ಬರ್ಗಾ, ಬಿಜಾಪುರ ಹಾಗೂ ತಮಿಳುನಾಡು ಮತ್ತು ಕೇರಳದ ಮಂದಿ  ಅತಿ ಹೆಚ್ಚುಮಂದಿ ವಾಸವಾಗಿದ್ದು, ಶಿಕ್ಷಣ, ಉದ್ಯೋಗದಲ್ಲಿ ಪ್ರಗತಿ ಸಾಧಿಸಿದ್ದಾರೆ. ತಮಿಳುನಾಡಿನ ಮತ್ತು ಕೇರಳದ ಹಲವಾರು ಯುವ ಪ್ರತಿಭಾವಂತರು ಇಂಜಿನಿಯರ್ ಗಳಾಗಿ, ಛಾರ್ಟಡ್ ಅಕೌಟೆಂಟ್ ಗಳಾಗಿ , ಪೋಲಿಸ್ ಅಧಿಕಾರಿಗಳಾಗಿ ಹೊರಹೊಮ್ಮಿದ್ದಾರೆ. ತಮ್ಮ ಕುಟುಂಬವನ್ನು ಬೇರೆಡೆಗೆ ವರ್ಗಾಯಿಸಿಕೊಂಡಿದ್ದಾರೆ. ಅದೇ ರೀತಿ ಕರ್ನಾಟಕದ ಬಹುತೇಕ ಮಂದಿ ಮಹಾರಾಷ್ಟ್ದದ ಸಚಿವಾಲಯದಲ್ಲಿ. ಶಾಸಕರ ಭವನದಲ್ಲಿ, ರೈಲ್ವೆ ಇಲಾಖೆಯಲ್ಲಿ ನಾಲ್ಕನೆ ದರ್ಜೆಯ ನೌಕರರಾಗಿ ದುಡಿಯುತ್ತಿದ್ದಾರೆ,ಜೊತೆಗೆ  ಒಂದಿಷ್ಟು ಮಂದಿ ಮುಂಬೈ ಮಹಾನಗರ ಪಾಲಿಕೆಯ ಇಂಜಿನಿಯರ್ ಗಳಾಗಿ, ನೌಕರರಾಗಿ, ಪೊಲೀಸ್ ಕಾನ್ಸ್ ಟೇಬಲ್ ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂಬೈ ನಗರದ ಬಹತೇಕ ಖಾಸಾಗಿ ಕಂಪನಿಗಳಲ್ಲಿ ಮಲೆಯಾಳಿಗಳು ನೌಕರರಾಗಿ ದುಡಿಯುತ್ತಿರುವುದು ವಿಶೇಷ. ಇನ್ನೂ ಬಿಹಾರಿಗಳು, ಟ್ಯಾಕ್ಸಿ ಚಾಲಕರಾಗಿ ಮುಂಬೈ ನಗರದ ಜೀವಾಳವಾಗಿದ್ದಾರೆ. ಮುವತ್ತು ವರ್ಷಗಳ ಹಿಂದೆ ಎಲ್ಲಾ ದಕ್ಷಿಣ ಭಾರತೀಯರನ್ನು ಮದ್ರಾಸಿಗಳು ಎಂದು ಕರೆಯುತ್ತಿದ್ದ ಸಂಪ್ರದಾಯ ಈಗ ಅಳಿಸಿಹೋಗಿದೆ.
ಮರಾಠಿ ಭಾಷೆ ಮತ್ತು ಸಂಸ್ಕೃತಿಯ ನೆಪದಲ್ಲಿ ಜನತೆಯನ್ನು ಎತ್ತಿಕಟ್ಟುವ ಶಿವಸೇನೆ ಕೂಡ ಧಾರಾವಿಯಲ್ಲಿ ದಕ್ಷಿಣ ಭಾರತೀಯರನ್ನೇ ನಂಬಿಕೊಂಡಿದೆ. ಶಿವಸೇನೆಯ ಪ್ರಮುಖ ಸ್ಥಾನಗಳಲ್ಲಿ ತಮಿಳುನಾಡಿನ ತೆವರ್ ಜನಾಂಗ ಮತ್ತು ಕರ್ನಾಟಕದ ಬಂಟ ಸಮುದಾಯದ ನಾಯಕರಿದ್ದಾರೆ. ಮುಂಬೈ ನಗರದ ಸಸ್ಯಹಾರಿ ಹೋಟೆಲ್ ಗಳು ಮತ್ತು ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಅಧಿಪತ್ಯ ಸ್ಥಾಪಿಸಿರುವ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಬಂಟರು ಕಳೆದ ಎರಡು ದಶಕಗಳಿಂದ  ಮಹಾರಾಷ್ಟ್ದ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ.
ಮುಂಬೈ ನಗರ ಮತ್ತು ಧಾರಾವಿಯ ಇಂತಹ ವರ್ಣಮಯ ಮತ್ತು ವೈವಿಧ್ಯಮಯ ಬದುಕಿನಿಂದಾಗಿ ಚಿತ್ರರಂಗದ ಗಮನ ಸೆಳೆದಿವೆ. ಧಾರಾವಿಯ ಕೊಳಚೆಗೇರಿಯ ಬಡತನದ ಬದುಕು,ಮತ್ತು ಇಲ್ಲಿನ ಅಪರಾಧಗಳು, ಸಾಹಸಿ ವ್ಯಕ್ತಿಗಳ ಜೀವನವನ್ನು ಆಧಾರವಾಗಿಟ್ಟುಕೊಂಡು ಹಿಂದಿ. ತಮಿಳು, ಇಂಗ್ಲೀಷ್ ಭಾಷೆಯಲ್ಲಿ ಹಲವಾರು ಚಿತ್ರಗಳು ನಿರ್ಮಾಣವಾಗಿವೆ. 1980ರ ದಶಕದಲ್ಲಿ ಮನ್ ಮೋಹನ್ ದೇಸಾಯಿ “ದಿವಾರ್ ನಿರ್ಮಿಸಿದ್ದರು. ನಂತರ  ವಿದು ವಿನೋದ್ ಚೋಪ್ರ ಅವರ ‘ಫರಿಂದಾ”, ಮೀರಾ ನಾಯರ್ ಅವರ “ಸಲಾಂ ಬಾಂಬೆ” ಮಣಿರತ್ನಂ ಅವರ “ನಾಯಗನ್,” ರಾಂಗೋಪಾಲ್ ವರ್ಮ ಅವರ ಗ್ಯಾಂಗ್ ಸ್ಟರ್, ಮಧುಬಂಡಾರ್ಕರ್ ಅವರ ಟ್ರಾಫಿಕ್ ಸಿಗ್ನಲ್, ಬ್ಲಾಕ್ ಫ್ರೈಡೆ,ಚಿತ್ರಗಳನ್ನು ಹೆಸರಿಸಬಹುದು. ಮತ್ತು ಆಸ್ಕರ್ ಪ್ರಶಸ್ತಿಗೆ ಪಾತ್ರವಾದ “ಸ್ಲಂ ಡಾಗ್ ಮಿಲಿನಿಯರ್” ಇಂಗ್ಲೀಷ್ ಚಿತ್ರದದಲ್ಲಿ ಧಾರವಿಯ ಮಕ್ಕಳು ನಟಿಸಿರುವುದು ವಿಶೇಷ.
ಇಂದು ಭಾರತದ ಸಾಹಸಿ ಉದ್ಯಮಿಗಳು ಎಂದರೆ, ಮುಕೇಶ್ ಅಂಬಾನಿ, ಇನ್ಫೋಸಿಸ್ ನ ನಾರಾಯಣ ಮೂರ್ತಿ, ವಿಫ್ರೊ ಸಂಸ್ಥೆಯ ಅಜೀಜ್ ಪ್ರೇಮ್ ಜೀ ಇವರುಎಂದು ಕಳೆದ ಒಂದು ದಶಕದಿಂದ ಡಂಗೂರ ಸಾರುತ್ತಾ, , ತುತ್ತೂರಿ ಊದುವ ನಮ್ಮ ದೇಶದ ಮಾಧ್ಯಮರಂಗದ ಬೃಹಸ್ಪತಿಗಳು ಒಮ್ಮೆ ಧಾರಾವಿಯ ಕೊಳಗೇರಿಯತ್ತ ಕಣ್ಣು ಹಾಯಿಸಿ, ತಮ್ಮ ಬುದ್ಧಿಮತ್ತೆಯನ್ನು ದುರಸ್ತಿ ಮಾಡಿಕೊಳ್ಳುವ ಅವಶ್ಯಕತೆ ಇದೆ. 
ಹಿಂದೂಸ್ಥಾನ್ ಲಿವರ್ ಲಿಮಿಟೆಡ್ ಕಂಪನಿಯಲ್ಲಿ ರಿನ್ ಡಿಟೆರ್ಜೆಂಟ್ ಬಾರ್ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬ ಇಂದು ಧಾರಾವಿಯಲ್ಲಿ ದಿನವೊಂದಕ್ಕೆ ಎರಡು ಟನ್ ಸಾಬೂನು ಉತ್ಪಾದಿಸುತ್ತಿದ್ದಾನೆ, 150 ಮಂದಿ ಕಾರ್ಮಿಕರು ಈತನ ಬಳಿ ದುಡಿಯುತ್ತಿದ್ದಾರೆ. ಹಿಂದೆ ಧಾರಾವಿಯಲ್ಲಿ ತಮಿಳುನಾಡಿನ ವರದನಾಯ್ಕರ್ ಬಳಿ ಕಳ್ಳಬಟ್ಟಿ ಸಾರಾಯಿ ಸಾಗಾಣೆ ಮಾಡುತ್ತಿದ್ದ ತಮಿಳು ಯುವಕರೆಲ್ಲಾ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಜಿ ಮಸ್ತಾನ್ ಎಂಬ ಕುಖ್ಯಾತ ಕಳ್ಳಸಾಗಾಣಿಕೆದಾರನ ಬಳಿ ಇದ್ದ ಮುಸ್ಲಿಂಮರು ಚರ್ಮದ ವಸ್ತುಗಳ ತಯಾರಿಕೆಯಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಉತ್ಪಾದನೆಗಳಿಗೆ ಪೈಪೋಟಿ ನೀಡಿದ್ದಾರೆ. ತಾವು ಬೆಳೆಯವ ಜೊತೆಗೆ ತಮ್ಮವರನ್ನು ಬೆಳಸುವ ಉಧಾರ ಮನೋಭಾವ ಧಾರಾವಿಯ ಈ ಅನಾಮಿಕ ಉದ್ಯಮಿಗಳಲ್ಲಿದೆ.
ಕಳೆದ ಇಪ್ಪಟೆಂಟು ವರ್ಷಗಳಿಂದ ನನಗೆ ಪರಿಚಿತನಾಗಿರುವ ತಮಿಳುನಾಡಿನ ತಿರುನ್ವಾನೇಲಿ ಜಿಲ್ಲೆಯ ರಾಜು ಎಂಬಾತ ಇಂದು ಮುಂಬೈನಗರದಲ್ಲಿ ದಕ್ಷಿಣ ಭಾರತದ ನಾಲ್ಕು ಭಾಷೆಗಳ ಬಹುತೇಕ ಪತ್ರಿಕೆಗಳ ವಿತರಕನಾಗಿದ್ದಾನೆ.  ಮಾತುಂಗ ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ಗಣಪತಿ ದೇವಸ್ಥಾನದ ಹಿಂದೆ ಇರುವ ಈತನ ಮನೆಯಲ್ಲಿ ಸುಮಾರು 45 ಮಂದಿ ತಮಿಳು ಯುವಕರು ವಾಸವಾಗಿದ್ದಾರೆ.ಇವರಲ್ಲಿ ಐದು ಮಂದಿ ಷಣ್ಮುಗಾ ಹಾಲ್ ಗೆ ಹೊಂದಿಕೊಂಡಿರುವ ಪತ್ರಿಕೆಯ ಅಂಗಡಿಯಲ್ಲಿ ದುಡಿಯಿತ್ತಿದ್ದಾರೆ. ಹತ್ತು ಮಂದಿ ಪ್ರತಿದಿನ ಬೆಳಿಗ್ಗೆ ಎದ್ದು ರೈಲ್ವೆ ಅಥವಾ ಲಾರಿ ಪಾರ್ಸಲ್ ಕಛೇರಿಗೆ ಹೋಗಿ ಪತ್ರಿಕೆಗಳ ಬಂಡಲ್ ಗಳನ್ನು ತರುತ್ತಾರೆ. ಇಪ್ಪತ್ತು ಮಂದಿ ಪತ್ರಿಕೆಗಳನ್ನು ವಿತರಿಸಲು ಮುಂಬೈ ನಗರದ ವಿವಿಧ ಪ್ರದೇಶಕ್ಕೆ ತೆರಳುತ್ತಾರೆ. ಉಳಿದವರು ಲೆಕ್ಕ ಪತ್ರ ಗಮನಿಸುವುದು, ಮಾರಾಟವಾಗದೆ ಉಳಿದ ಪತ್ರಿಕೆಗಳನ್ನು ಮರಳಿ ಪತ್ರಿಕೆ ಕಛೇರಿಗಳಿಗೆ ಕಳಿಸುವ ಕೆಲಸ ಮಾಡುತ್ತಾರೆ. ಅಕ್ಷರ ಜ್ಙಾನವಿಲ್ಲದ ರಾಜುವಿನ ಪ್ರತಿದಿನದ ವ್ಯವಹಾರ ಒಂದೂವರೆ ಲಕ್ಷರೂಪಾಯಿಗಳು. ಎಲ್ಲವನ್ನೂ ಹುಡುಗರು ನಿಭಾಯಿಸುತ್ತಾರೆ. ಎಂಟತ್ತು ವರ್ಷ ರಾಜು ಬಳಿ ದುಡಿದ ಹುಡುಗರು ಇದೀಗ ಮುಂಬೈ ನಗರಗಳಲ್ಲಿ ತಮ್ಮದೆ ಸ್ವಂತ ಅಂಗಡಿ, ಚಹಾ ಹೋಟೇಲ್ ನಡೆಸುತ್ತಿದ್ದಾರೆ. ಅವರೆಲ್ಲರಿಗೂ ಇವೊತ್ತಿಗೂ ರಾಜು ತಂದೆ, ತಾಯಿ,  ಎಲ್ಲವೂ ಆಗಿದ್ದಾನೆ. ಪ್ರತಿವರ್ಷ ಊರಿಗೆ ಹೋದಾಗಲೆಲ್ಲಾ ಐದಾರು ಮಂದಿಯನ್ನು ಮುಂಬೈಗೆ ತನ್ನ ಜೊತೆಯಲ್ಲಿ ಕರೆದು ಕೊಂಡು ಬರುವುದು ರಾಜುವಿನ ವಾಡಿಕೆ.





ಐವತ್ತು ವರ್ಷ ಹಿಂದೆ ತನ್ನ ಒಂಬತ್ತನೆ ವಯಸ್ಸಿನಲ್ಲಿ ರೈಲು ಹತ್ತಿ ಮಾತುಂಗ ನಿಲ್ದಾಣಕ್ಕೆ ಬಂದು ಬಿದ್ದ ಯಾವ ಭಾಷೆಯನ್ನೂ ಅರಿಯದ ತಮಿಳು ಬಾಲಕನಿಗೆ ಅಲ್ಲಿನ ರೈಲ್ವೆ ಕೂಲಿಗಳು ಊಟ ನೀಡಿ ಸಾಕಿದ್ದರು. ನಂತರದ ದಿನಗಳಲ್ಲಿ ನಿಧಾನವಾಗಿ ಚಹಾ ಮಾರುತ್ತಾ, ಪತ್ರಿಕೆಗಳನ್ನು ಮಾರುತ್ತಾ ಜೀವನ ನಡೆಸಿ ಬೆಳದ ಬಾಲಕ ರಾಜು ಈದಿನ ಮಾತುಂಗದಲ್ಲಿ ಪ್ರಮುಖ ತಮಿಳು ಉದ್ಯಮಿಗಳಲ್ಲಿ ಒಬ್ಬ. ಇವೊತ್ತಿಗೂ ತನಗೆ ಆ ದಿನಗಳಲ್ಲಿ ಚಹಾ ಮತ್ತು ಬನ್ ಕೊಟ್ಟ ರೈಲ್ವೆ ಕೂಲಿಗಾರರನ್ನು ಮರೆತಿಲ್ಲ. ಅದೇರೀತಿ ಚಹಾ ಮತ್ತು ಪತ್ರಿಕೆ ಮಾರಲು ಅವಕಾಶ ನೀಡಿದ ರೈಲ್ವೆ ಪ್ಲಾಟ್ ಪಾರ್ಮಿನ ಚಹಾ ಅಂಗಡಿ ಮಾಲಿಕರನ್ನು ಸಹ ಮರೆತಿಲ್ಲ. ಅವರ ಮಕ್ಕಳ ವಿವಾಹಕ್ಕೆ ಆರ್ಥಿಕ ನೆರವು ನೀಡಿ ಋಣ ತೀರಿಸುತ್ತಿದ್ದಾನೆ. ನಾನು ಬೇಟಿಯಾದಾಗಲೆಲ್ಲಾ ಮಾತುಂಗದ ರೈಲ್ವೆ ನಿಲ್ದಾಣಕ್ಕೆ ಕರೆದೊಯ್ದು  ತಾನು ಮಲಗುತ್ತಿದ್ದ ಜಾಗ,, ಊಟ  ಕೊಟ್ಟು ಬೆಳಸಿದ ವೃದ್ದರಾದ ಕೂಲಿಗಳನ್ನು ತೋರಿಸಿ ಕಣ್ಣಿರು ಹಾಕುತ್ತಾನೆ.
ಬಡತನ ಮತ್ತು ಹಸಿವು ಮನುಕುಲಕ್ಕೆ ಶಾಪ ನಿಜ. ಆದರೆ ಇವುಗಳು ಮನುಷ್ಯನಿಗೆ ಮಾನವೀಯತೆಯನ್ನು ಮತ್ತು ಅಂತಃಕರಣವನ್ನು ತಂದುಕೊಡುವುದರ ಮೂಲಕ ಬದುಕಿಗೆ ಘನತೆಯನ್ನು ಹೆಚ್ಚಿಸುತ್ತಿವೆ ಎಂಬುದನ್ನು ಮರೆಯಲಾಗದು.ಈ ಕಾರಣಕ್ಕಾಗಿ   ಕೊಳಗೆರಿಗಳಲ್ಲಿ ವಾಸಿಸುವವರ ಕುರಿತಂತೆ ನಮ್ಮ ಮನೋಭಾವ ಬದಲಾಗಬೇಕಿದೆ. ಅಲ್ಲಿ ನಾವು ಕಾಣಲಾಗದ ಇನ್ನೊಂದು ಜಗತ್ತು ಕೂಡ ಇದೆ ಎಂಬುದನ್ನು ಸಹ ನಾವು ಅರಿಯ ಬೇಕಿದೆ.
                                           ( ಮುಗಿಯಿತು)
(ಕಳೆದ ಲೇಖನದಲ್ಲಿ ಮುಂಬೈನ ಜನತಾ ಕಾಲೋನಿಯ 70 ಸಾವಿರ ಬಡವರನ್ನು ಒಕ್ಕಲೆಬ್ಬಸಿದ್ದ ಎ.ಕೆ ಆಂಟನಿ ಎಂದು ಬರೆಯಲಾಗಿತ್ತು. ಅದು ಅಂತುಳೆ ಎಂದಾಗಬೇಕಿತ್ತು. ಆ ವೇಳೆಯಲ್ಲಿ ಅವರು ಮಹಾರಾಷ್ಟ್ದ ಗೃಹ ಸಚಿವರಾಗಿದ್ದರು)