ಶುಕ್ರವಾರ, ಏಪ್ರಿಲ್ 12, 2024

ಬದಲಾಗದ ಮಮತಾ ಬ್ಯಾನರ್ಜಿಯ ಮನೋಭಾವ

 


ರಾಷ್ಟ್ರಮಟ್ಟದಲ್ಲಿ ಪ್ರಧಾನಿಗೆ ದಿಟ್ಟ ಹೋರಾಟ ನೀಡಬಲ್ಲ ಛಲಗಾತಿ ಹೆಣ್ಣು ಮಗಳು ಎಂದು ಪ್ರಸಿದ್ಧರಾದ ಮಮತಾ ಬ್ಯಾನರ್ಜಿ ಇಂದಿನ ಪರಿಸ್ಥಿತಿಯಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಇಂಡಿಯಾ ಮೈತ್ರಿ ಪಕ್ಷಗಳ ಜೊತೆಯಲ್ಲಿ ಇರಬೇಕಾಗಿತ್ತು. ಇಂದು ಪ್ರಧಾನಿ ನರೇಂದ್ರಮೋದಿಗೆ ಸವಾಲುಗಳಾಗಿರುವ ರಾಜ್ಯಗಳೆದರೆ, ದಕ್ಷಿಣ ಭಾರತದಲ್ಲಿ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಹಾಗೂ ಉತ್ತರದಲ್ಲಿ ದೆಹಲಿ ಮತ್ತು ಪೂರ್ವದಲ್ಲಿ ಪಶ್ಚಿಮ ಬಂಗಾಳ ರಾಜ್ಯಗಳು ಮಾತ್ರ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಹದಿನೆಂಟು ಲೋಕಸಭಾ ಕ್ಷೇತ್ರಗಳನ್ನು ಗೆದ್ದಿದ್ದ ಬಿ.ಜೆ.ಪಿ. ಪಕ್ಷಕ್ಕೆ ಈ ವರ್ಷ ಅಷ್ಟೇ ಸ್ಥಾನಗಳು ಲಭ್ಯವಾಗುತ್ತವೆ ಎಂದು ಹೇಳಲಾಗದು. ಆದರೆ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೇಸ್ ಪಕ್ಷಕ್ಕೆ ಸರಿ ಸಮಾನಾಗಿ ಕಾಂಗ್ರೇಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳು ಬಿ.ಜೆ.ಪಿ.ಯನ್ನು ವಿರೋಧಿಸುವ ಪಕ್ಷಗಳಾಗಿರುವುದರಿಂದ ಅವುಗಳ ಜೊತೆಗೆ ಮೈತ್ರಿ ಮಾಡಿಕೊಳ್ಳುವುದು ಇಂದಿನ ಸಂದರ್ಭದಲ್ಲಿ ಅನಿವಾರ್ಯವಾಗಿತ್ತು.ಏಕೆಂದರೆ, ಬಿ.ಜೆ.ಪಿ.ಯ ವಿರೋಧಿ ಮತಗಳು ಛಿದ್ರವಾಗುವುದರ ಮೂಲಕ  ಇದು ಪರೋಕ್ಷವಾಗಿ ಬಿ.ಜೆ.ಪಿ.  ಪಕ್ಷಕ್ಕೆ ನೆರವಾಗಬಲ್ಲದು.

ಕೊಲ್ಕತ್ತ ನಗರದ ಸಾಮಾನ್ಯ ಕುಟುಂಬದಿಂದ ಬಂದಿರುವ 69 ವರ್ಷ ವಯಸ್ಸಿನ ಮಮತಾ ಬ್ಯಾನರ್ಜಿ ಅವರು ಬಾಲ್ಯದಿಂದಲೂ, ವಿಶೇಷವಾಗಿ ವಿದ್ಯಾರ್ಥಿ ಜೀವನದಿಂದಲೂ ಹೋರಾಟದ ಮನೋಭಾವವನ್ನು ಬೆಳೆಸಿಕೊಂಡು ಬಂದವರು. 1975 ರ ವೇಳೆಗೆ ಕಾಂಗ್ರೇಸ್ ಯುವ ಸಂಘಟನೆಗೆ ಸೇರಿದ ಮಮತಾ ಅವರು ಆ ಸಂಧರ್ಭದಲ್ಲಿ ಇಂದಿರಾಗಾಂಧಿ ಅವರು ದೇಶಾದ್ಯಂತ ಹೇರಿದ್ದ ತುರ್ತು ಪರಿಸ್ಥಿತಿಯ ವಿರುದ್ಧ ಜಯಪ್ರಕಾಶ ನಾರಾಯಣ್ ಅವರು ವಿದ್ಯಾರ್ಥಿ ಚಳುವಳಿ ಹೋರಾಟ ಹಮ್ಮಿಕೊಂಡಾಗ ಕೊಲ್ಕತ್ತ ನಗರದಲ್ಲಿ ಅವರ ಕಾರಿನ ಮೇಲೆ  ನಿಂತು ಕಾಳಿ ನೃತ್ಯ ಮಾಡುತ್ತಾ, ಅವರ ಹೋರಾಟವನ್ನು ವಿರೋಧಿಸುವದರ ಮೂಲಕ  ಇಡೀ  ಪಶ್ಚಿಮ ಬಂಗಾಳ ರಾಜ್ಯದ ಗಮನ ಸೆಳೆದಿದ್ದರು.

ಜ್ಯೋತಿ ಬಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಓರ್ವ ಬಾಲಕಿಯು ಅತ್ಯಾಚಾರಕ್ಕೆ ಒಳಗಾದಾಗ ಆ ಬಾಲಕಿಯನ್ನು ಮುಖ್ಯಮಂತ್ರಿ ಕಚೇರಿಗೆ ಕರೆದೊಯ್ದು, ಈಕೆಗೆ ನ್ಯಾಯ ಕೊಡಿಸಿ ಇಲ್ಲದಿದ್ದರೆ, ನಾವು ನಾಳೆ ಈ ರೈಟರ್ಸ್ ಬಿಲ್ದಿಂಗ್ ನಲ್ಲಿ ಅಧಿಕಾರ ನಡೆಸಬೇಕಾಗುತ್ತದೆ ಎಂದು ಸವಾಲು ಹಾಕಿದ್ದರು. ಅದರಂತೆ ಮುಂದಿನ ದಿನಗಳಲ್ಲಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಸಂಸತ್ತನ್ನು ಪ್ರವೇಶಿಸುವುದರ ಮೂಲಕ ರಾಜಕೀಯ ಪ್ರವೇಶ ಮಾಡಿದರು.  ಇಷ್ಟು ಮಾತ್ರವಲ್ಲದೆ, ಕಮ್ಯೂನಿಸ್ಟ್ ಪಕ್ಷದ ಹಿರಿಯ ನಾಯಕ ಸೋಮನಾಥ ಮುಖರ್ಜಿಯನ್ನು ಲೋಕಸಭಾ ಚುನಾವಣೆಯಲ್ಲಿ ಮಣಿಸಿದ್ದರು. ಕೇಂದ್ರ ಸರ್ಕಾರದಲ್ಲಿ  ಎರಡು ಬಾರಿ ರೈಲ್ವೆ ಸಚಿವೆ, ಒಂದು ಬಾರಿ ಕಲ್ಲಿದ್ದಲು ಖಾತೆ ಸಚಿವೆಯಾಗಿ ಕಾಂಗ್ರೇಸ್ ನಲ್ಲಿ ಭವಿಷ್ಯದ ನಾಯಕಿ ಎಂದು ಭರವಸೆ ಮೂಡಿಸಿದ್ದ ಮಮತಾ ಬ್ಯಾನರ್ಜಿ ನನಗೆ ನೆನಪಿರುವ ಹಾಗೆ 1997 ಅಥವಾ 1998 ರಲ್ಲಿ ಪಕ್ಷ ತೊರೆದು ತೃಣಮೂಲ ಕಾಂಗ್ರೇಸ್ ಪಕ್ಷವನ್ನು ಸ್ಥಾಪಿಸಿದರು.

ಮಮತಾಗೆ ಕೇಂದ್ರದಲ್ಲಿ ಇರುವುದಕ್ಕಿಂತ ಹೆಚ್ಚಾಗಿ ತನ್ನ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಕಮ್ಯೂನಿಸ್ಟ್ ಪಕ್ಷವನ್ನು ಮಣಿಸಿ ಮುಖ್ಯಮಮತ್ರಿಯಾಗಬೇಕೆಂಬ ಆಸೆ ಆ ಸಂದರ್ಭದಲ್ಲಿ ಮೂಡಿ ಬಂದಿತ್ತು. ನಂತರ ಅದು 2010 ಮತ್ತು 2011 ರ ವೇಳೆಗೆ ನೆರೆವೇರಿತು. ಜ್ಯೋತಿಬಸು ಅವರು ಸುಧೀರ್ಘ 24 ವರ್ಷಗಳ ಮುಖ್ಯಮಂತ್ರಿ ಅವದಿಯನ್ನು ಮುಗಿಸಿ, ಅಧಿಕಾರದಿಂದ ಇಳಿದಾಗ, ಅವರ ಉತ್ತರಾಧಿಕಾರಿಯಾಗಿ ಬುದ್ಧದೇವ ಭಟ್ಟಾಚಾರ್ಯ ಮುಂಖ್ಯಮಂತ್ರಿಯಾದರು. ಇವರ ಅವಧಿಯಲ್ಲಿ ಟಾಟಾ ಕಂಪನಿಯು ನ್ಯಾನೊ ಕಾರನ್ನು ತಯಾರಿಸಲು ಸಂಗೂರ್ ಎಂಬಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ಜೊತೆ ಒಪ್ಪಂಧ ಮಾಡಿಕೊಂಡಿತು. ಜೊತೆಗೆ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಭೂಮಿಗೆ ವಿನಿಯೋಗಿಸಿತು. ಇದರ ಜೊತೆಗೆ ಸರ್ಕಾರವು ನಂದಿ ಗ್ರಾಮದ ಬಳಿ ಕೈಗಾರಿಕಾ ಪ್ರದೇಶವನ್ನು ಮಾಡಲು ರೈತರ ಭೂಮಿಯನ್ನು ವಶಪಡಿಸಿಕೊಳ್ಳಲು ಹೊರಟಾಗ ಮಮತಾ ಬ್ಯಾನರ್ಜಿ ಹೋರಾಟಕ್ಕೆ ಮಹತ್ವದ ತಿರುವು ಸಿಕ್ಕಿತು.

ಪಕ್ಷದಲ್ಲಿ ಒಡಹುಟ್ಟಿದ ಸಹೋದರನಂತೆ ಇದ್ದ ಸುವೆಂದು ಅಧಿಕಾರಿ ಯ ಜೊತೆ ಹೋರಾಟ ಮಾಡಿ ನಂದಿಗ್ರಾಮ ಮತ್ತು ಸಂಗೂರ್ ಎರಡರಲ್ಲಿಯೂ ಜಯಗಳಿಸಿದ ಮಮತಾ ಅವರು 2011 ರಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತಂದರು. ಅವಿವಾಹಿತೆಯಾಗಿ ಉಳಿದುಕೊಂಡು ತನ್ನ ನೆಲದ ಜನರ ಬವಣೆಗಳಿಗೆ ಅತ್ಯಂತ ಸೂಕ್ಷ್ಮವಾಗಿ ಸ್ಪಂದಿಸಬಲ್ಲ ಗುಣವುಳ್ಳ ಈ ಹೆಣ್ಣುಮಗಳ  ಆತ್ಮಸ್ಥೈರ್ಯ ಮೆಚ್ಚುವಂತಹದ್ದು ನಿಜ. ಆದರೆ, ತಾನು ಹಿಡಿದ ಮೊಲಕ್ಕೆ ಮೂರೇ ಕಾಲು ಎಂದು ವಾದಿಸುವುದು ಈಕೆಯ ದೌರ್ಭಲ್ಯವಾಗಿದೆ.  ಈ ಕಾರಣದಿಂದಾಗಿ ಸುವೆಂದು ಅದಿಕಾರಿ ಐದು ವರ್ಷಗಳ ಹಿಂದೆ ಪಕ್ಷ ತೊರೆದು ಈಗ ಬಿ.ಜೆ.ಪಿ. ನಾಯಕನಾಗಿದ್ದಾನೆ.

ಸಾಮಾನ್ಯ ಜನರಿಗೆ ವಿಶೇಷವಾಗಿ ಮಹಿಳೆಯರಿಗೆ ಮತ್ತು ಮುಸ್ಲಿಂ ಸಮುದಾಯದ ಜನರಿಗೆ ಆಸರೆಯಾಗಿ ನಿಂತಿರುವ ಮಮತಾ ಪಶ್ಚಿಮ ಬಂಗಾಳದಲ್ಲಿ ಜಾರಿಗೆ ತಂದಿರುವ ಯೋಜನೆಗಳು ಈಗ ಕರ್ನಾಟಕದಲ್ಲಿ ಜಾರಿಗೆ ಬಂದಿರುವ ಗ್ಯಾರಂಟಿ ಯೋಜನೆಗಳನ್ನು ಮೀರಿಸುವಂತಿವೆ. ಆದರೆ, ಇತ್ತೀಚೆಗೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಸಂಭವಿಸುತ್ತಿರುವ ಅನೇಕ ಅಹಿತಕರ ಘಟನೆಗಳು (ವಿಶೇಷವಾಗಿ ಸಂದೇಶ್ ಖಾಲಿ ಘಟನೆ) ಭವಿಷ್ಯದಲ್ಲಿ ಮಮತಾ ಅವರ ಭವಿಷ್ಯವನ್ನು ಮಸುಕಾಗಿಸಬಲ್ಲವು.

ಭಾರತದ ಇತಿಹಾಸದಲ್ಲಿ ಜಯಲಲಿತಾ, ಮಾಯಾವತಿ ಇವರಿಬ್ಬರೂ ತಮ್ಮ ಪಕ್ಷಗಳನ್ನು ತಮ್ಮ ಅವನತಿಯ ಜೊತೆ ಕೊನೆಗಾಣಿಸಿದ ರೀತಿಯಲ್ಲಿ ಮಮತಾ ಬ್ಯಾನರ್ಜಿ ಕೂಡಾ ತೃಣಮೂಲ ಕಾಂಗ್ರೇಸ್ ಪಕ್ಷವನ್ನು ಕೊನೆಗಾಣಿಸಲು ತೀರ್ಮಾನಿಸಿದ ಹಾಗೆ ಕಾಣುತ್ತೆ. ಭವಿಷ್ಯದ ಭಾರತದ ದೃಷ್ಟಿಯಿಂದ ಸುಳ್ಳುಗಳ ಮೂಲಕ ದೇಶ ಆಳುತ್ತಿರುವ ನಕಲಿ ಶಾಮಣ್ಣರನ್ನು ಕಿತ್ತೊಗೆಯಲು ಮಮತಾ ಬ್ಯಾನರ್ಜಿ ತನ್ನ ಮನೋಭಾವವನ್ನು ಬದಲಿಸಿಕೊಳ್ಳುವುದು ಈಗ ಅನಿವಾರ್ಯವಾಗಿದೆ.

ಹತ್ತು ವರ್ಷಗಳ ಹಿಂದೆ ಕೊಲ್ಕತ್ತ ನಗರದಿಂದ ಮಮತಾ ಆತ್ಮಕಥೆಯನ್ನು ಕೊಂಡು ತಂದಿದ್ದೆ. ಅದರಲ್ಲಿ ಆಕೆ ಮುಖ್ಯಮಂತ್ರಿಯಾಗುವವರೆಗೂ ಹೋರಾಡದ ಕಥನ ಮತ್ತು ಬಾಲ್ಯದ ವಿವರಗಳಿದ್ದವು. ನಿರೂಪಣೆಯು ಇಂಗ್ಲೀಷ್ ಭಾಷೆಯಲ್ಲಿ ತೃಪ್ತಕರವಾಗಿರಲಿಲ್ಲ. ಹಾಗಾಗಿ ಅನುವಾದಿಸುವ ಕ್ರಿಯೆಯನ್ನು ಕೈ ಬಿಟ್ಟು ಇನ್ನಷ್ಟು ವರ್ಷ ಕಾಯೋಣ  ಎಂದು ನಿರ್ಧರಿಸಿದ್ದೆ. ಈಗ ನನ್ನ ನಿರ್ಧಾರ ಸರಿ ಎನಿಸಿದೆ.


ಜಗದೀಶ್ ಕೊಪ್ಪ.

ಬುಧವಾರ, ಏಪ್ರಿಲ್ 3, 2024

ಭಾರತ ಕಂಡ ಶ್ರೇಷ್ಠ ಅರ್ಥಶಾಸ್ತ್ರಜ್ಞ ಡಾ.ಮನಮೋಹನ ಸಿಂಗ್. ಒಂದಿಷ್ಟು ನೆನಪುಗಳು.

 

ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರ ರಾಜಕೀಯ ಬದುಕು ಅಧಿಕೃತವಾಗಿ ನಿನ್ನೆ ಕೊನೆಗೊಂಡಿತು. ಕಳೆದ 33 ವರ್ಷಗಳಿಂದ ನಿರಂತರವಾಗಿ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ ಸಿಂಗ್ ಅವರು ನನ್ನ ನಿವೃತ್ತರಾದರು.  ತಮ್ಮ ವಿದ್ವತ್, ಸೌಜನ್ಯ ಹಾಗೂ ಆರ್ಥಿಕ ಚಿಂತನೆಗಳ ಮೂಲಕ ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಗೌರವ ಗಳಿಸಿದ್ದರು.

1990 ರಲ್ಲಿ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರು ತಮಿಳು ನಾಡಿನಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಹತ್ಯೆಯಾದಾಗ, ಸಹಜವಾಗಿ ಸೋನಿಯಾ ಗಾಂಧಿ ಪ್ರಧಾನಿಯಾಗುತ್ತಾರೆ ಎಂದು ಎಲ್ಲರೂ ಊಹಿಸಿದ್ದರುಆದರೆ, ಸಂದರ್ಭದಲ್ಲಿ ಬಿ.ಜೆ.ಪಿ. ಆಡಿದ ನಾಟಕಗಳು  ತೀವ್ರ ಅಸಹ್ಯ ಮೂಡಿಸಿದವು. ವಿದೇಶಿ ಹೆಣ್ಣುಮಗಳಿಗೆ ಪ್ರಧಾನಿ ಹುದ್ದೆ ಬೇಡ ಎಂದು ಕಾರ್ಯಕರ್ತರು ಬೀದಿಗಳಿದರು. ಅಂದಿನ ಬಿ.ಜೆ.ಪಿ. ಸ್ಟಾರ್ ಪ್ರಚಾರಕಿ ಸುಷ್ಮಾ ಸ್ವರಾಜ್ ಅವರು ಸೋನಿಯಾ ಪ್ರಧಾನಿಯಾದರೆ, ನಾನು ತಲೆಬೋಳಿಸಿಕೊಂಡು ವಿಧವೆಯ ಹಾಗೆ ಬಿಳಿಸೀರೆ ಉಟ್ಟು ಬದುಕುತ್ತೇನೆ ಎಂದು ಘೋಷಿಸಿದ್ದರು.

ತನ್ನ ಪತಿಯ ಸಾವಿನ ದುಃಖದಲ್ಲಿದ್ದ ಸೋನಿಯಾ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಒಂದು ದಿನ ಅನಿರೀಕ್ಷಿತವಾಗಿ ನಾನು ಪ್ರಧಾನಿಯಾಗುವುದಿಲ್ಲ ಎಂದು ಘೋಷಿಸಿದರು.  2004 ರಲ್ಲಿ ಕಾಂಗ್ರೇಸ್ ಪಕ್ಷದಿಂದ ಭಾರತದ  ಪ್ರಧಾನಿಯಾಗಿ ಡಾ.ಮನಮೋಹನ ಸಿಂಗ್ ಹುದ್ದೆ ನಿರ್ವಹಿಸುತ್ತಾರೆ ಎಂದು ಹೇಳುವುದರ ಮೂಲಕ ಎಲ್ಲರಿಗೂ ಶಾಕ್ ನೀಡಿದರುಸೋನಿಯಾ ಗಾಂಧಿಯವರು 33 ವರ್ಷಗಳ ಹಿಂದೆ ತೆಗೆದುಕೊಂಡ ನಿರ್ಧಾರದಿಂದ ಭಾರತ ಇಂದು ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ತೀವ್ರವಾಗಿ ಬೆಳೆಯುತ್ತಿರುವ ರಾಷ್ಟ್ರ ಎಂಬ ಪ್ರಸಿದ್ಧಿಗೆ ಬರಲು ಕಾರಣವಾಯಿತು.


ಸ್ವಾತಂತ್ರ್ಯ ಪೂರ್ವದಲ್ಲಿ ಇಂದಿನ ಪಾಕಿಸ್ತಾನದಲ್ಲಿ ಜನಿಸಿದ ಡಾ.ಸಿಂಗ್ ಪಂಜಾಬ್ ವಿ.ವಿ.ಯಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದು, ನಂತರ ಇಂಗ್ಲೇಂಡಿನ ಕೇಂಬ್ರಿಡ್ಜ್ ವಿ.ವಿ.ಯಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆದರು ಅರ್ಥಶಾಸ್ತ್ರದ ಪಿತಾಮಹ ಎಂದು ಕರೆಯಲ್ಪಡುವ ಆ್ಯಡಂ ಸ್ಮಿತ್ ಸ್ಮಾರಕ ನೀಡಲಾಗುವ ಚಿನ್ನದ ಪದಕ ವನ್ನು ಪಡೆದ ಮೊದಲ ಏಷ್ಯಾದ ನಾಗರೀಕ ಎಂಬ ಗೌರವಕ್ಕೆ ಪಾತ್ರರಾಗಿದ್ದರು.

ಭಾರತದ ರಿಸರ್ವ ಬ್ಯಾಂಕ್ ಗವರ್ನರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರನ್ನು ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್  ಅರ್ಥಖಾತೆಯ ಸಚಿವರನ್ನಾಗಿ ನೇಮಕ ಮಾಡಿಕೊಂಡರು. ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿದ್ದ ಭಾರತ ಕಾಲಘಟ್ಟದಲ್ಲಿ ಜಾಗತೀಕರಣಕ್ಕೆ ತೆರೆದುಕೊಳ್ಳುವ ಅನಿವಾರ್ಯತೆಗೆ ಸಿಲುಕಿತ್ತು.

ದೇಶವನ್ನು ತಮ್ಮ ಪ್ರಖರ ಆರ್ಥಿಕ ಚಿಂತನೆಗಳ ಮೂಲಕ ಹಾಗೂ ಅನುಷ್ಠಾನಕ್ಕೆ ತಂದ ಯೋಜನೆಗಳ ಮೂಲಕ ಸಂಕಷ್ಠದಿಂದ ಪಾರುಮಾಡಿ ದೇಶದ ಅಭಿವೃದ್ಧಿಗೆ ಅಡಿಗಲ್ಲು ಹಾಕಿದ ಕೀರ್ತಿ ಡಾ.ಮನಮೋಹನ್ ಸಿಂಗ್ ಅವರಿಗೆ ಸಲ್ಲಬೇಕು.

ಅವರು ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಮೊದಲ ಐದು ವರ್ಷ ನಿಜಕ್ಕೂ ಭಾರತದ ಪಾಲಿಗೆ ಸುವರ್ಣ ಅಧ್ಯಾಯ ಎಂದು ಕರೆಯಬಹುದು. ಆದರೆ, ಎರಡನೇ ಅವಧಿಯಲ್ಲಿ ದೂರವಾಣಿಗೆ ಸಂಬಂಧಿಸಿದಂತೆ 2G ಹಗರಣ, ಕಲ್ಲಿದ್ದಲು ಹಂಚಿಕೆ ಹಗರಣದಲ್ಲಿ ಪ್ರಧಾನಿಯಾಗಿದ್ದುಕೊಂಡು ನಿಯಂತ್ರಿಸಲಾಗದ ಅಸಹಾಯಕತೆಗೆ ಒಳಗಾದರು.

ಕಾಂಗ್ರೇಸ್ ಪಕ್ಷ ತನ್ನೊಂದಿಗೆ ಅಧಿಕಾರ ಹಂಚಿಕೊಂಡಿದ್ದ ಮಿತ್ರ ಪಕ್ಷಗಳ ಭ್ರಷ್ಟಾಚಾರಕ್ಕೆ ಕಣ್ಮುಚ್ಚಿ ಕುಳಿತಿತು. ಅಂತಿಮವಾಗಿ ಸುಳ್ಳಿನ ಹರಿಶ್ಚಂದ್ರ ಅಧಿಕಾರಕ್ಕೆ ಬರಲು ಕಾರಣವಾಯಿತು.

ಅತ್ಯಂತ ಮಿತಭಾಷಿಯಾಗಿದ್ದ ಮನಮೋಹನ ಸಿಂಗ್ ಅವರು ಎಂದಿಗೂ ಮಾಧ್ಯಮಗಳಿಗೆ ಉತ್ತರ ಹೇಳದೆ ತಪ್ಪಿಸಿಕೊಂಡವರಲ್ಲ. ವರ್ಷಕ್ಕೆ ಕನಿಷ್ಠ ಹತ್ತು ಬಾರಿ ನೇರವಾಗಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.

ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶದ ಅಭಿವೃದ್ಧಿ ಚಟುವಟಿಕೆಗಾಗಿ ಇಡೀ ಭಾರತದ ಮೂಲೆ ಮೂಲೆ ಸುತ್ತಾಡಿದರೆ ಹೊರತು, ಸಾರ್ವಜನಿಕರ ಹಣದಲ್ಲಿ ಇಂದಿನ ಸುಳ್ಳಿನ ಸಾರ್ವಭೌಮನ ಮಾದರಿಯಲ್ಲಿ ಪಕ್ಷ ಕಟ್ಟಲು ತಿರುಗಾಡಲಿಲ್ಲ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೇವಲ ಮೂರು ಅಥವಾ ನಾಲ್ಕು ಬಹಿರಂಗ ಸಭೆಯಲ್ಲಿ ಭಾಗವಹಿಸುವುದನ್ನು ಹೊರತು ಪಡಿಸಿದರೆ,  ಅವರು ಬಹುತೇಕ ಸಮಯವನ್ನು ಆಡಳಿತದ ವಿಷಯದಲ್ಲಿ ತೊಡಗಿಸಿಕೊಳ್ಳುತ್ತಿದ್ದರು.

ನೇರವಾಗಿ ಏನನ್ನೂ ಹೇಳಲಾರದೆ ಇರುವ ದೌರ್ಬಲ್ಯವನ್ನು  ಹೊರತು ಪಡಿಸಿದರೆ, ಡಾ.ಸಿಂಗ್ ದೇಶ ಕಂಡ ಅತ್ಯುತ್ತಮ ಪ್ರಧಾನಿ ಕೂಡಾ ಒಬ್ಬರು. ಅವರು ನಿರ್ಮಿಸಿದ ಸೌಧದಲ್ಲಿ ಆಸೀನರಾಗಿರುವ ಇಂದಿನ ನಕಲಿ ಶಾಮಣ್ಣರಿಗೆ ದೇಶದ ಇತಿಹಾಸ ಅಥವಾ ಅರ್ಥಶಾಸ್ತ್ರದ .ಬಿ.ಸಿ.ಡಿ.ಗೊತ್ತಿಲ್ಲ.

ಅವರಿಗೆ ಗೊತ್ತಿರುವುದು ರಾಮ ಮತ್ತು ಕೃಷ್ಣ ಹಾಗೂ ಕೊಚ್ಚು ಮತ್ತು ಕೊಲ್ಲು ಎಂಬ ಶಬ್ದಗಳು ಮಾತ್ರ.