ಶುಕ್ರವಾರ, ಆಗಸ್ಟ್ 25, 2017

ದ್ವೇಷದ ರಾಜಕಾರಣಕ್ಕೆ ಬಲಿಯಾಗುತ್ತಿರುವ ವ್ಯಕ್ತಿತ್ವದ ಘನತೆ ಮತ್ತು ನೈತಿಕತೆ



ಇದು ಭಾರತದ ರಾಜಕಾರಣದ ದುರಂತ ಮಾತ್ರವಲ್ಲ, ಕರ್ನಾಟಕದ ರಾಜಕಾರಣದ ದುರಂತವೂ ಸಹ ಹೌದು. ರಾಜಕೀಯ ಪಕ್ಷಗಳ ಹಾಗೂ ರಾಜಕೀಯ ನೇತಾರರ ನಡುವೆ ಇರಬೇಕಾದ ಸೈದ್ಧಾಂತಿಕ ಭಿನ್ನಭಿಪ್ರಾಯ ಅಥವಾ ವೈಚಾರಿಕ ಸಂಘರ್ಷಗಳು ವೈಯಕ್ತಿಕ ಹಿತಾಸಕ್ತಿಯ  ಮಟ್ಟಕ್ಕೆ ಇಳಿಯುವುದರ ಮೂಲಕ ವ್ಯಕ್ತಿ ಚಾರಿತ್ರ್ಯದ ಹರಣ ರಾಜಾ ರೋಷವಾಗಿ ಮುಂದುವರಿದಿದೆ.
ಒಂದು ರಾಜಕೀಯ ಪಕ್ಷ ಅಥವಾ ಒಬ್ಬ ನಾಯಕನನ್ನು ಮಣಿಸಲು ಈಗ ರಾಜಕೀಯ ನಾಯಕನೊಬ್ಬ ತನ್ನ ಅಧಿಕಾರದ ಅವಧಿಯಲ್ಲಿ ಮಾಡಿರಬಹುದಾದ ಹಗರಣಗಳನ್ನು ಅವನ ವಿರುದ್ಧ ಆಯುಧಗಳನ್ನಾಗಿ ಬಳಕೆ ಮಾಡಲಾಗುತ್ತಿದೆ. ಯಾವ ಕ್ಷಣದಲ್ಲಿ ಯಾರೊಬ್ಬರ ಆರೋಪಗಳು ಅಥವಾ ಯಾವ ತನಿಖಾ ವರದಿಗಳು ಮುಂಚೂಣಿಗೆ ಬರುತ್ತವೆ ಎಂಬುದನ್ನು ಯಾರೂ ನಿರೀಕ್ಷಿಸಲಾಗದ ರೀತಿಯಲ್ಲಿ ಕ್ಷಿಪ್ರಗತಿಯಲ್ಲಿ ಎದ್ದು ನಿಲ್ಲುತ್ತಿವೆ. ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಇತ್ಯಾದಿಗಳ ತನಿಖೆಗಾಗಿ ಇರುವ ಕೇಂದ್ರದ ಸಿ.ಬಿ..ಸಂಸ್ಥೆ ಮತ್ತು ರಾಜ್ಯಮಟ್ಟದ .ಸಿ.ಬಿ. ಸಂಸ್ಥೆಗಳು ಆಳುವ ಸರ್ಕಾರಗಳ ಕೈಗೊಂಬೆಗಳಾಗಿವೆ. ಜೊತೆಗೆ ಸಂಸ್ಥೆಗಳು ನೀಡುವ ತನಿಖಾ ವರದಿಗಳಿಗಳಾಗಲಿ ಅಥವಾ ಸರ್ಕಾರ ನೇಮಿಸುವ ತನಿಖಾ ಆಯೋಗದ ವರದಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಭಾರತದಲ್ಲಿ ಜನತೆಯ ವಿಶ್ವಾಸವನ್ನು ಕಳೆದುಕೊಂಡು ಎಷ್ಟೋ ದಶಕಗಳು ಉರುಳಿ ಹೋದವು.
1975 ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ದೇಶದ ಮೇಲೆ ಹೇರಿದ ತುರ್ತುಪರಿಸ್ಥಿತಿ ಹಾಗೂ ಅವಧಿಯಲ್ಲಿ ನಡೆಯಿತು ಎನ್ನಲಾದ ದೌರ್ಜನ್ಯಗಳು ಮತ್ತು ಅಧಿಕಾರ ದುರುಪಯೋಗ ಸ್ಭೆರಿದಂತೆ ಹಲವು ಪ್ರಕರಣಗಳಿಗೆ ನಂತರ ಬಂದ ಜನತಾ ಸರ್ಕಾರ ನೇಮಿಸಿದ  ಷಾ ಆಯೋಗದಿಂದ ಹಿಡಿದು, ಕರ್ನಾಟಕದ ದೇವರಾಜ ಅರಸು ವಿರುದ್ಧ ನೇಮಿಸಿದ ಗ್ರೋವರ್ ಆಯೋಗದವರೆಗೆ ಮುಂದುವರಿದು ನಂತರ ಇಂದಿನ ನ್ಯಾಯಮೂರ್ತಿ ಕೆಂಪಣ್ಣ ಆಯೋಗದವರೆಗೆ ಪರಾಮರ್ಶಿಸಿದರೆ, ಇದೊಂದು ರಾಜಕೀಯ ರಂಗದ ಕಣ್ಣ ಮುಚ್ಚಾಲೆಯ ಆಟ ಎನ್ನದೆ ವಿಧಿಯಿಲ್ಲ. ದೇಶದ ಇತಿಹಾಸದಲ್ಲಿ ಹರಿಯಾಣದ ಮಾಜಿ ಮುಖ್ಯ ಮಂತ್ರಿ ಚೌತಾಲ, ಬಿಹಾರದ ಲಾಲುಪ್ರಸಾದ್ ಯಾದವ್, ತಮಿಳುನಾಡಿನ ಜಯಲಲಿತಾ ಹೀಗೆ ಕೆಲವರನ್ನು ಹೊರತು ಪಡಿಸಿದರೆ, ಉಳಿದ ರಾಜಕಾರಣಿಗಳು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದ ಉದಾಹರಣೆಗಳು ತೀರಾ ಕಡಿಮೆ ಎಂದು ಹೇಳಬೇಕು.
ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಹಲವಾರು ವಿಲಕ್ಷಣ ಸಂಗತಿಗಳಿಗೆ ಸಾಕ್ಷಿಯಾಗುತ್ತಿವೆ. ಗುಜರಾತಿನ  ಕಾಂಗ್ರೇಸ್ ಶಾಸಕರಿಗೆ ಆತಿಥ್ಯ ನೀಡಿದರು ಎಂಬ ಏಕೈಕ ಕಾರಣಕ್ಕಾಗಿ ಕಾಂಗ್ರೇಸ್ ಸರ್ಕಾರದ ಪ್ರಭಾವಿ ಸಚಿವರಲ್ಲಿ ಒಬ್ಬರಾದ ಡಿ.ಕೆ.ಶಿವಕುಮಾರ್ರವರ ನಿವಾಸ, ಸಂಸ್ಥೆಗಳು ಮತ್ತು ಸಂಬಂಧಿಕರು ಹಾಗೂ ಆಪ್ತರ ನಿವಾಸಗಳ ಮೇಲೆ ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯದ ಅಡಿಯಲ್ಲಿ ತೆರಿಗೆ ದಾಳಿ ನಡೆಯಿತು. ಇದಕ್ಕೆ ಪ್ರತಿಯಾಗಿ ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಅಧಿಕಾರದ ಅವಧಿಯಲ್ಲಿ  ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆಯಲ್ಲಿ ನೂರಾರು ಎಕರೆ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಿದ್ದರು ಎನ್ನಲಾದ ಐದು ವರ್ಷದ ಹಿಂದೆ ದಾಖಲಾಗಿದ್ದ ದೂರಿಗೆ ಇದೀಗ ಮರುಜೀವ ನೀಡಲಾಗಿದೆ. ಕರ್ನಾಟಕ ಸರ್ಕಾರದ ಕ್ರಮಕ್ಕೆ ಪ್ರತಿಯಾಗಿ ರಾಜಸ್ತಾನದಲ್ಲಿರುವ ವಸುಂಧರಾ ರಾಜೆ ನೇತೃತ್ವದ ಬಿ.ಜೆ.ಪಿ. ಸರ್ಕಾರವು ಮೂರು ದಿನಗಳ ಹಿಂದೆ ಸೋನಿಯಾ ಗಾಂಧಿಯ ಅಳಿಯ ರಾಬರ್ಟ್ವಾದ್ರಾ ಅವರ ಭೂಹಗರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ. ಇವುಗಳು ಕಾಕತಾಳಿಯ ಘಟನೆಗಳು ಎಂದು ನಿರ್ಲಕ್ಷಿಸಲು ಸಾಧ್ಯವಾಗದ ರೀತಿಯಲ್ಲಿ ಅನೇಕ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳುತ್ತಿವೆ. ಹಿಂದೆ ಜನಾರ್ಧನ ರೆಡ್ಡಿ ಎಬ ಖದೀಮನ  ಗಣಿದೂಳಿನ ಹಣದಿಂದ ಆಂಧ್ರದಲ್ಲಿ ತನ್ನದೇ ಆದ ಸಾಮ್ರಾಜ್ಯ ಕಟ್ಟಿಕೊಂಡು, ತನ್ನ ತಂದೆಯ (ಮಾಜಿ ಮುಖ್ಯಮಂತ್ರಿ ಡಾ. ವೈ.ಎಸ್. ರಾಜಶೇಖರ ರೆಡ್ಡಿ) ಸಾವಿನ ನಂತರ ವೈ.ಎಸ್.ಆರ್. ಕಾಂಗ್ರೇಸ್ ಪಕ್ಷವನ್ನು ಸ್ಥಾಪಿಸಿ  ಕಾಂಗ್ರೇಸ್ ಪಕ್ಷಕ್ಕೆ ಸವಾಲೆಸದ ಜಗನ್ ರೆಡ್ಡಿಯನ್ನು ಹಿಂದಿನ ಯು.ಪಿ.. ಸರ್ಕಾರ ಅಕ್ರಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಅವನ ರೆಕ್ಕ ಪುಕ್ಕಗಳನ್ನು ಕತ್ತರಿಸಿ ಹಾಕಿತು. ಇದೀಗ, ಕಾಂಗ್ರೇಸ್ ಪಕ್ಷದ ಮಾಜಿ ಕೇಂದ್ರ ಸಚಿವ ಪಿ.ಚಿದಂರಂ ಅವರ ಪುತ್ರ ಕಾರ್ತಿಕ್ ಸಾಮ್ರಾಜ್ಯದ ಮೇಲೆ ಮೋದಿ ನೇತೃತ್ವದ ಸರ್ಕಾರ ಇಂತಹದ್ದೇ ಕ್ರಮಕ್ಕೆ ಮುಗಿಬಿದ್ದಿದೆ.
ಒಟ್ಟಾರೆ, ಇಂತಹ ಸೇಡಿನ ರಾಜಕಾರಣಕ್ಕೆ ತುತ್ತಾದವರಲ್ಲಿ ಯಾರೋಬ್ಬರೂ ಪ್ರಾಮಾಣಿಕರಲ್ಲ, ಸತ್ಯಹರಿಶ್ಚಂದ್ರರಂತೂ ಮೊದಲೇ ಅಲ್ಲ, ಇಂತಹ ನಿರ್ಲಜ್ಜ ರಾಜಕಾರಣಿಗಳನ್ನು ಪಕ್ಷ ಅಥವಾ ಜಾತಿಯ ಹಿನ್ನಲೆಯಲ್ಲಿ ಸಮರ್ಥಿಸಿಕೊಳ್ಳುತ್ತಿರುವ ಹಿನ್ನಲೆ, ಇಂತಹವರ ನಿವಾಸಗಳಿಗೆ ಹೋಗಿ ಅವರನ್ನು ಸಂತೈಸಿ, ಹರಸಿ ಬರುತ್ತಿರುವ ಮಠಾಧೀಶರ ಬೌದ್ಧಿಕ ಮತ್ತು ನೈತಿಕ ಪ್ರಜ್ಞೆಯ ದಿವಾಳಿತನ ಇವೆಲ್ಲವೂ ದೇಶದ ರಾಜಕೀಯ ಮತ್ತು ಸಾಮಾಜಿಕ ಹಾಗೂ ಸಾರ್ವಜನಿಕ ಬದುಕನ್ನು ಮರು ವ್ಯಾಖ್ಯಾನಕ್ಕೆ ಒಳಪಡಿಸುವಂತೆ ನಾಗರೀಕ ಸಮಾಜವನ್ನು ಒತ್ತಾಯಿಸುತ್ತಿವೆ.
ಸ್ವಾತಂತ್ರ್ಯಾನಂತರದ ಭಾರತದಲ್ಲಿ 2010 ವರೆಗೆ ರಾಜಕೀಯ ರಂಗದಲ್ಲಿದ್ದ ವ್ಯಕಿಗಳಿಗೆ  ಘನತೆ ಮತ್ತು ನೈತಿಕತೆ ಎಂಬುದು ಇರುತ್ತಿತ್ತು. ಅವರಿಗೆ ಸಾರ್ವಜನಿಕ ಲಜ್ಜೆ  ಸದಾ ಕಾಡುತ್ತಿತ್ತು. ತಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ ಮತದಾರರ ಮುಂದೆ ನಿಲ್ಲಬೇಕು ಅಥವಾ ಅವರ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂಬ ಆತಂಕವಿರುತ್ತಿತ್ತು. ಆದರೆ, ರಾಜಕೀಯ ಕ್ಷೇತ್ರಕ್ಕೆ ಕಳ್ಳರು, ಹಗಲು ದರೋಡೆಕೋರರು, ಲಾಭಕೋರ ಉದ್ಯಮಿಗಳು ಸಮಾಜ ಸೇವಕರ ಮುಖವಾಡ ಹೊತ್ತು ಲಗ್ಗೆ ಹಾಕಿದ ನಂತರ ಎಲ್ಲವೂ ತಲೆಕೆಳಗಾಯಿತು. ಹಣವೊಂದಿದ್ದರೆ ಸಾಕು ಮತದಾರರನ್ನು ಖರೀದಿಸಬಹುದು ಎಂಬುದನ್ನು ಲಫಂಗರು ಜಗತ್ತಿಗೆ ತೋರಿಸಿಕೊಟ್ಟನಂತರ, ಎಲ್ಲರೂ ಅದೇ ಹಾದಿಯನ್ನು ತುಳಿದರು.
ಇಂದಿನ ಅಸಹ್ಯಕರವಾದ ರಾಜಕಾರಣವನ್ನು ನೋಡುವಾಗ, ದೇಶದ ರಾಜಕಾರಣದಲ್ಲಿ ಮುಖ್ಯಮಂತ್ರಿಗಳಾಗಿ ರಾಜಕೀಯಕ್ಕೆ ಘನತೆ ತಂದುಕೊಟ್ಟ ಪಶ್ಚಿಮ ಬಂಗಾಳದ ಜ್ಯೋತಿ ಬಸು, ಕೇರಳದ ,ಎಂ.ಎಸ್. ನಂಬೂದರಿಪಾಡ್, ಕರ್ನಾಟಕದ ದೇವರಾಜ ಅರಸ್, ತಮಿಳುನಾಡಿನ ಕೆ.ಕಾಮರಾಜ ನಾಡರ್ ಮತ್ತು ಸಿ.ಎಸ್. ಅಣ್ಣಾದೊರೈ ಹಾಗೂ ಈಗಿನ ತ್ರಿಪುರಾ ರಾಜ್ಯದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಇಂತಹ ಮಹನೀಯರು ನೆನಪಾಗುತ್ತಾರೆ. ಇಂದಿನ ಕುಲಗೆಟ್ಟ ರಾಜಕಾರಣಿಗಳಿಗೆ ಮಹಾನುಭಾವರ ಜೀವನವನ್ನು ಬೋಧಿಸುವ ಅಗತ್ಯವಿದೆ. ತಮಿಳುನಾಡಿನಲ್ಲಿ ಕೆ.ಕಾಮರಾಜ ನಾಡರ್ 1954 ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾದ ನಂತರ ಮಾಡಿದ ಸಾಧನೆಗಳು ಇಂದಿಗೂ ಎಲ್ಲರಿಗೂ ಮಾದರಿಯಾಗಿವೆ. ಪ್ರಾಥಮಿಕ ಶಾಲೆಗಳಿಲ್ಲದ ಹಳ್ಳಿಗಳು ಇರಕೂಡದು ಎಂಬುದು ಅವರ ನಿಲುವಾಗಿತ್ತು. ದೇಶದಲ್ಲಿ ಪ್ರಥಮ ಬಾರಿಗೆ ಶಾಲೆಯಲ್ಲಿ ಮಧ್ಯಾಹ್ನದ ಊಟವನ್ನು ಪರಿಚಯಿಸಿದರು ಅವರು. ತಮಿಳುನಾಡಿನಲ್ಲಿ ವಿವಿಧ ನದಿಗಳಿಗೆ ಎಂಟು ಜಲಾಶಯಗಳನ್ನು ನಿರ್ಮಿಸಿ ನೀರಾವರಿಯ ಮೂಲಕ ಅಲ್ಲಿನ ರೈತರಿಗೆ ಆರ್ಥಿಕ ಭದ್ರತೆ ಒದಗಿಸಿದರು. ಯಾವುದೇ ಸಮಸ್ಯೆಗಳಿಗೆ ಬೆನ್ನು ತಿರುಗಿಸಬೇಡಿ, ಧೈರ್ಯದಿಂದ ಎದುರಿಸಿ, ಇದು ಅವರು ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಹೇಳುತ್ತಿದ್ದ ಮಾತುಗಳು. ಬ್ರಹ್ಮಚಾರಿಯಾಗಿ ತೀರಾ ಸರಳವಾದ ಬದುಕನ್ನು ಬದುಕುತ್ತಿದ್ದ ಅವರು, ಶಾಲೆಯ ಮಕ್ಕಳ ಬಿಸಿಯೂಟದ ಯೋಜನೆಗೆ ತಮ್ಮ ವ್ಯಯಕ್ತಿಕ ವೆಚ್ಚವನ್ನು ಕಡಿತಗೊಳಿಸುವುದರ ಜೊತೆಗೆ ಸರ್ಕಾರದ ವೆಚ್ಚಕ್ಕೆ ಕಡಿವಾಣ ಹಾಕಿದ್ದರು. ಎರಡು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಕಾಮರಾಜರ ನೇತೃತ್ವದ ಕಾಂಗ್ರೇಸ್ ಸರ್ಕಾರ 1967 ರಲ್ಲಿ ಸಿ.ಎಸ್. ಅಣ್ಣಾದೊರೈ ನೇತೃತ್ವದ ಡಿ.ಎಂ.ಕೆ. ಪಕ್ಷದ ಎದುರು ಸೋತಾಗ, ಕಾಮರಾಜರು ಎದೆ ಬಡಿದುಕೊಂಡು ರೋಧಿಸಲಿಲ್ಲ. ಯಾರನ್ನೂ ದೂಷಿಸಲಿಲ್ಲ ಅತ್ಯಂತ ಘನತೆಯಿಂದ ಅಧಿಕಾರವನ್ನು ಬಿಟ್ಟುಕೊಟ್ಟು ನಿರ್ಗಮಿಸಿದರು. ಅದೇ ರೀತಿಯಲ್ಲಿ  ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ ಅಣ್ಣಾದೊರೈ ತಮಟೆ, ಡೋಲು, ನಗಾರಿ ಮತ್ತು ಅಭಿಮಾನಿಗಳ ಜೈಕಾರ ಅಥವಾ ವಿಜಯದ ಸಂಕೇತವಾಗಿ  ತಮ್ಮ ಎರಡು ಬೆರಳುಗಳನ್ನು ತೋರಿಸುತ್ತಾ ಅಧಿಕಾರದ ಗದ್ದುಗೆಯನ್ನು ಏರಲಿಲ್ಲ. ಕಾಂಚಿಪುರಂ ನೇಕಾರ ವೃತ್ತಿಯ ಬಡ ಕುಟುಂಬದಿಂದ ಬಂದ ಅಣ್ಣಾದೊರೈ ಪತ್ರಕರ್ತನಾಗಿ, ಸಿನಿಮಾಗಳಿಗೆ ಚಿತ್ರಕಥೆ ಬರೆಯುವ ಲೇಖಕನಾಗಿ ಬೆಳೆದು, ಪೆರಿಯಾರ್ ರಾಮಸ್ವಾಮಿಯವರ ಗರಡಿಯಲ್ಲಿ ಬೆಳೆದವರಾಗಿದ್ದರು. 1965 gಲ್ಲಿ ಹಿಂದಿ ಹೇರಿಕೆ ವಿರುದ್ಧ ತಮಿಳುನಾಡಿನಲ್ಲಿ ದೊಡ್ಡ ಆಂಧೋಲನವನ್ನು ನಡೆಸಿ, ಹಿಂದಿ ಭಾಷೆಯು ತಮಿಳುನಾಡಿಗೆ ಕಾಲಿಡದಂತೆ ನೊಡಿಕೊಂಡವರು. ಅವರ ಹೋರಾಟ ಅವರನ್ನು ಮುಖ್ಯಮಂತ್ರಿ ಗದ್ದುಗೆಗೆ ಏರಿಸಿತು. ಅಂತಹವರು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಕಾಮರಾಜರನ್ನು ಮತ್ತು ಅವರ ಅನುಪಮ ಸೇವೆಯನ್ನು ನೆನದು, ಅವರು ನನಗೆ ಮಾರ್ಗದರ್ಶಕರಾಗಲಿ ಎಂದು ಕೇಳಿಕೊಂಡಿದ್ದರು. ಇದು ಎರಡು ವಿಭಿನ್ನ ರಾಜಕೀಯ ಪಕ್ಷಗಳ ನಡುವಿನ ರಾಜಕೀಯ ನಾಯಕರು ಪರಸ್ಪರ ಗೌರವ ತೋರಿಸುತ್ತಿದ್ದ ಅವರ ದೊಡ್ಡ ಗುಣಕ್ಕೆ ಮಾದರಿಯಾಗಿದೆ. ಇಂತಹವರನ್ನು ಈಗ ಎಲ್ಲಿ ಹುಡುಕೊಣ?

ಇಂತಹದ್ದೇ ರೀತಿಯ ದೊಡ್ಡ ಗುಣ ನಮ್ಮ ಕರ್ನಾಟಕದ ದೇವರಾಜ ಅರಸರಿಗಿತ್ತು. 1978 ರಿಂದ 1980 ಅವಧಿಯಲಿÉುರಡನೆಯ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅರಸುರವರು ತಮ್ಮ ಸಹೋದ್ಯೋಗಿಗಳ ಕುತಂತ್ರದಿಂದ ಮುಖ್ಯ ಮಂತ್ರಿ ಪದವಿಯನ್ನು ಕಳೆದುಕೊಂಡರು. ಆದರೆ, ಎಂದಿಗೂ ಬಹಿರಂಗವಾಗಿ ತಮ್ಮ ಬೆನ್ನಿಗೆ ಚೂರಿ ಹಾಕಿದವರ ಕುರಿತು ಒಂದು ಮಾತನ್ನೂ ಆಡಿದವರಲ್ಲ. ತಾವೇ ರಾಜಕೀಯಕ್ಕೆ ಕರೆತಂದು ಬೆಳೆಸಿದ ನಾಯಕರು, ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ, ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದ್ದ ಅರಸುರವನ್ನು ಕಟು ಮಾತುಗಳ ಚೂರಿಯಿಂದ ಇರಿದರೂ ಸಹ ಅವರ ಸಾರ್ವಜನಿಕ ಬದುಕಿಗೆ ಇರಬೇಕಾದ ಸಂಯಮವನ್ನು ಅವರು ಕಳೆದುಕೊಳ್ಳಲಿಲ್ಲ. ಹೆಚ್.ಡಿ.ದೇವೇಗೌಡ, ಎಸ್.ಎಂ.ಕೃಷ್ಣ, ರಾಮಕೃಷ್ಣ ಹೆಗ್ಡೆ, ಜೆ.ಹೆಚ್.ಪಟೇಲ್, ಎಂ.ಪಿ.ಪ್ರಕಾಶ್ ರಂತಹ ಅನೇಕ ಮಹನೀಯರು ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೂ ಸಹ ಸಾರ್ವಜನಿಕ ಬದುಕಿಗೆ ಇರಬೇಕಾದ ಸಜ್ಜನಿಕೆ ಮತ್ತು ಸಭ್ಯತೆಯನ್ನು ಕಾಪಾಡಿಕೊಂಡು ಬಂದವರಾಗಿದ್ದಾರೆ. ಇಂತಹವರ ನಡುವೆ, ಈಗಿನ ರಾಜಕಾರಣದ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ. ಆರ್.ಅಶೋಕ್, ಶೋಭಾಕರಂದ್ಲಾಜೆ, ಇಂತಹವರ ತುಟಿ ಮೀರಿದ ಮಾತುಗಳು,ಹಾಗೂ ಕಾಂಗ್ರೇಸ್ ಪಕ್ಷದ ವಿ.ಎಸ್.ಉಗ್ರಪ್ಪನವರ ಭಾವಾವೇಶದ ಮಾತುಗಳನ್ನು ಕೇಳುತ್ತಿದ್ದರೆ, ನಾವು ಮೌನದಿಂದ ತಲೆ ತಗ್ಗಿಸುವಂತಾಗಿದೆ. ಘನತೆ ಮತ್ತು ನೈತಿಕತೆಯಿಲ್ಲದ ಇಂತಹ ಕುಲಗೆಟ್ಟ ರಾಜಕಾರಣ ನಿಜಕ್ಕೂ ನಮಗೆ ಅವಶ್ಯಕತೆ ಇದೆಯಾ? ಇದು ನಾಗರೀಕ ಸಮಾಜವನ್ನು ಸದಾ ಕಾಡುತ್ತಿರುವ ಪ್ರಶ್ನೆಯಾಗಿದೆ.

ಅಣ್ನಾದೊರೈ ಮತ್ತು ಕಾಮರಾಜ್ ಇವರ ಚಿತ್ರಗಳು- ಸೌಜನ್ಯ- ದಿನತಂತಿ (ತಮಿಳು ದಿನಪತ್ರಿಕೆ)

( ಕರಾವಳಿ ಮುಂಜಾವು ಪತ್ರಿಕೆಯ " ಜಗದಗಲ" ಅಂಕಣ ಬರಹ)