ಸೋಮವಾರ, ಸೆಪ್ಟೆಂಬರ್ 28, 2015

ಕೆ.ಎಸ್. ಭಗವಾನ್ ಮತ್ತು ಭಗವದ್ಗೀತೆ ಹಾಗೂ ಕುವೆಂಪು ವೈಚಾರಿಕತೆ






ಕಳೆದ ಆರು ತಿಂಗಳಿಂದ ಭಗವದ್ಗೀತೆ ಕುರಿತಂತೆ ಮೈಸೂರಿನಲ್ಲಿ ವಿಚಾರವಾದಿ ಹಾಗೂ ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕರಾದ ಕೆ.ಎಸ್. ಭಗವಾನ್ ರವರು ನೀಡಿದ್ದ ಪ್ರತಿಕ್ರಿಯೆ ಹಲವು ವಿಕೃತ ರೂಪ ಪಡೆದುಕೊಂಡು ಇದೀಗ ಕನ್ನಡದ ಸಾಂಸ್ಕೃತಿಕ ಜಗತ್ತನ್ನು ತಲ್ಲಣಗೊಳಿಸಿದೆ. ಐವತ್ತು ವರ್ಷಗಳ ಹಿಂದೆ ಕನ್ನಡದ ಸಾಹಿತ್ಯಕ್ಕೆ ಷೇಕ್ಸ್ ಪಿಯರ್  ಮತ್ತು ಅವನ ನಾಟಕಗಳು ಮತ್ತು ಇತರೆ ಸಾಹಿತ್ಯ ಅಪರಿಚಿತವಾಗಿದ್ದ ಸಂದರ್ಭದಲ್ಲಿ ಆತನ ದೈತ್ಯ ಪ್ರತಿಭೆಯನ್ನು ಕನ್ನಡಕ್ಕೆ ಪರಿಚಯಿಸಿದವರಲ್ಲಿ ಕೆ.ಎಸ್. ಭಗವಾನ್ ಕೂಡ ಒಬ್ಬರು. 1976 ರಲ್ಲಿ ಅವರು ಅನುವಾದಿಸಿದ “ ಜೂಲಿಯಸ್ ಸೀಜರ್ ; ನಾಟಕ ಇವೊತ್ತಿಗೂ ಅತ್ಯುತ್ತಮ ನಾಟಕಗಳಲ್ಲಿ ಒಂದು.
 ನನ್ನ  ಬಾಲ್ಯದ ಸಹಪಾಠಿಗಳಾದ ಅಪ್ಪಾಜಿಗೌಡ ಮತ್ತು ಕೆ.ಟಿ.ಶ್ರೀಕಂಠೇಗೌಡ ಎಂಬುವರು 1976 ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ತರಗತಿ ಓದುತ್ತಿದ್ದಾಗ ಅವರಿಗೆ ಭಗವಾನ್ ಇಂಗ್ಲೀಷ್ ಉಪನ್ಯಾಸಕರಾಗಿದ್ದರು.. ಆ ವರ್ಷ ಮೈಸೂರಿನ ಶತಮಾನೋತ್ಸವ ಭವನದಲ್ಲಿ ನನ್ನ ಗೆಳೆಯರು ಜೂಲಿಯಸ್ ಸೀಜರ್ ನಾಟಕ ವನ್ನು ಪ್ರದರ್ಶನ ಮಾಡಿದ ಸಂದರ್ಭದಲ್ಲಿ  ವಾರಗಟ್ಟಲೆ ಅವರ ಜೊತೆ ಇದ್ದ ನಾನು ಭಗವಾನರ ಸಂಪರ್ಕಕ್ಕೆ ಬಂದಿದ್ದೆ. ( ಈಗ  ಹಂಪಿಯ ಕನ್ನಡ ವಿ.ವಿ.ಯಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿರುವ ಲಕ್ಷ್ಮಣ ತೆಲಗಾವಿ  ನಾಟಕದಲ್ಲಿ ಬ್ರೂಟಸ್  ಪಾತ್ರ ಮಾಡಿದ್ದರು) ಅಂದಿನಿಂದ ಕೆ.ಎಸ್. ಭಗವಾನ್ ರವರು ನನಗೆ ನೇರ ಗುರುವಲ್ಲದಿದ್ದರೂ ಸಹ ಗುರು ಎಂದು ಭಾವಿಸಿ ಗೌರವಿಸಿಕೊಂಡು ಬಂದವನು ನಾನು.
ಕೆ.ಎಸ್. ಭಗವಾನ್ ರವರು ಮಂಡಿಸುತ್ತಿರುವ ವಿಚಾರಗಳಲ್ಲಿ ನನಗೆ ಸಹಮತವಿದೆ. ಆದರೆ, ಅವರು ವಿಷಯಗಳನ್ನು ಮಂಡಿಸುತ್ತಿರುವ ವೈಖರಿ ಕುರಿತಂತೆ ನನಗೆ ಸಹಮತವಿಲ್ಲ. ಒಂದು ವಿಷಯ ಕುರಿತಂತೆ ಭಿನ್ನಮತ ಅಥವಾ ಸೈದ್ಧಾಂತಿಕ ಭಿನ್ನಾಭಿಪ್ರಾಯ ಕನ್ನಡ ಸಾಹಿತ್ಯ ಜಗತ್ತಿಗೆ ಹೊಸದೇನಲ್ಲ. ಅದಕ್ಕೆ ಸಾವಿರಾರು ವರ್ಷಗಳ ಸುಧೀರ್ಘ ಇತಿಹಾಸವಿದೆ. ಆದರೆ ಒಂದು ವಿಷಯ ಕುರಿತ ಭಿನ್ನಾಭಿಪ್ರಾಯಕ್ಕೆ ಈ ರೀತಿಯ ಬೀದಿ ಜಗಳ ಅನಿವಾರ್ಯವೆ? ಇದು ಎಲ್ಲರೂ ತಮ್ಮ ತಮ್ಮ ಆತ್ಮಸಾಕ್ಷಿಯ ಪ್ರಜ್ಞೆಗೆ ಹಾಕಿಕೊಳ್ಳಬೇಕಾದ ಪ್ರಶ್ನೆ. ಭಗವದ್ಗೀತೆಯ ಅಸ್ಮಿತೆ ಕುರಿತಾದ ಪ್ರಶ್ನೆ ಇಂದು ನಿನ್ನೆಯದಲ್ಲ. ಅದನ್ನು ಸುಟ್ಟು ಹಾಕುವುದರಿಂದ ಯಾವ ಪ್ರಯೋಜನೂ ಇಲ್ಲ. ಆದರೆ. ಅದರ ಮೂಲವನ್ನು ಪ್ರಶ್ನಿಸುವಾಗ ವಾದದ ಅಥವಾ ತರ್ಕದ ಹಾದಿಯನ್ನು ನಾವು ತಪ್ಪಬಾರದು ಅಷ್ಟೇ. ಭಗವಾನ್ ಹೇಳುವ ಹಾಗೆ ಅದನ್ನು ಸುಟ್ಟು ಹಾಕುವ ಅಪಾಯ ಕೃತಿ ಏನಲ್ಲ;  ಅದೇ ರೀತಿ ಮನುಕುಲವನ್ನು ಉದ್ಧಾರ ಮಾಡುವಂತಹ ಪವಿತ್ರ ಕೃತಿಯೂ ಅದಲ್ಲ. ಮಹಾಭಾರತದ ಯುದ್ಧದ ಸಂದರ್ಭದಲ್ಲಿ ಕೃಷ್ಣನು ಅರ್ಜುನನಿಗೆ ಭೋಧಿಸಿದ ಉಪದೇಶಗಳು ಎನ್ನಲಾಗುವ ಭಗವದ್ಗೀತೆಯಲ್ಲಿರುವ ಶ್ಲೋಕಗಳನ್ನು ಸಮಗ್ರವಾಗಿ ಓದಿ, ವಾಖ್ಯಾನ ಮಾಡಲು ಕನಿಷ್ಟ ಒಂದು ದಿನವಾದರೂ ಬೇಕು. ಯುದ್ಧ ಭೂಮಿಯಲ್ಲಿ ಇದು ಸಾಧ್ಯವೆ? ಕೃಷ್ಣನು ಅರ್ಜುನಿಗೆ ಇದನ್ನು ಭೋಧಿಸುವಾಗ, ಯುದ್ಧ ಭೂಮಿಯಲ್ಲಿ ಕೌರವರು ಕಡ್ಲೆಕಾಯಿ ಬಿಡಿಸಿಕೊಂಡು ತಿನ್ನುತ್ತಾ ಕುಳಿತಿದ್ದರೊ? ಅಥವಾ ಚೌಕ ಬಾರ ಆಡುತ್ತಿದ್ದರೊ? ಗೊತ್ತಿಲ್ಲ.



 ಈ ನಿಟ್ಟಿನಲ್ಲಿ ಈವರೆಗೆ ನಾನು ಬಲ್ಲಂತೆ  ಭಗವದ್ಗೀತೆ ಕುರಿತಾದ ಮೌಲಿಕ ಪ್ರಶ್ನೆಗಳನ್ನು ಎತ್ತಿದವರೆಂದರೆ, ಒಬ್ಬರು ಡಾ.ಜಿ.ರಾಮಕೃಷ್ಣರವರು ಮತ್ತು ಇನ್ನೊಬ್ಬರು, ಇತ್ತೀಚೆಗೆ ಭಗವದ್ಗೀತೆಗೆ ನಮಸ್ಕಾರ ಎಂಬ ಕೃತಿ ಬರೆದ ಪ್ರೊ. ಅರವಿಂದ ಮಾಲಗತ್ತಿಯವರು. ಈ ಇಬ್ಬರೂ ಎತ್ತಿರುವ ಪ್ರಶ್ನೆಗಳಿಗೆ  ಸಮರ್ಪಕ ಉತ್ತರ ಕೊಡಲಾರದ ಮಹಾಭಾರತದ  ಉತ್ತರ ಕುಮಾರನ ಸಂತತಿಯು ಇದೀಗ ಕೆ.ಎಸ್. ಭಗವಾನರ ಮೇಲೆ ಮುಗಿಬಿದ್ದಿದೆ. ಒಂದು ವಿಷಯ ಕುರಿತು ಸಂವಾದ ನಡೆಸುವಾಗ ಅಲ್ಲಿ ಎರಡು ಗುಂಪಿನ ನಡುವೆ ಮುಖ್ಯವಾಗಿ ಇರಬೇಕಾಗಿರುವುದು , ಒಬ್ಬರಿಗೊಬ್ಬರು ವಾದಗಳನ್ನು ಕೇಳಿಸಿಕೊಳ್ಳಬೇಕಾದ ಸಹೃದಯತೆ. ಆದರೆ ಭಗವದ್ಗೀತೆ ವಿಷಯದಲ್ಲಿ ಇದು ಮಾಯವಾಗಿದೆ. ಈ ಕಾರಣಕ್ಕಾಗಿ ತಮ್ಮ ಜೀವನ ಪೂರ್ತಿ ಪುರೋಹಿತಶಾಹಿಯ ವಿರುದ್ಧ ಸೆಣಸಿದ ಕುವೆಂಪು ರವರು ಎಂದಿಗೂ  ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬೀದಿ ಜಗಳಗಳನ್ನಾಗಿ ಪರಿವರ್ತಿಸಿದವರಲ್ಲ. ಕುವೆಂಪು ಮತ್ತು ದೇವುಡು ನರಸಿಂಹ ಶಾಸ್ತ್ರಿ ನಡುವೆ 1931 ಮತ್ತು 32 ರ ನಡುವೆ ನಡೆದ ಸೈದ್ಧಾಂತಿಕ  ಜಗಳ ನಮ್ಮ ಮುಂದಿದೆ.
1931 ರಲ್ಲಿ ಕುವೆಂಪುರವರು ಶ್ರೀರಂಗಪಟ್ಟಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿಚಾರ ಕ್ರಾಂತಿಗೆ ಆಹ್ವಾನ ಎಂಬ ಉಪನ್ಯಾನ ನೀಡಿದ್ದರು. ಈ ಉಪನ್ಯಾಸ ಕುರಿತು ದೇವುಡು ನರಸಿಂಹ ಶಾಸ್ತ್ರಗಳು ಸರ್ಕಾರಕ್ಕೆ ದೂರು ಸಲ್ಲಿಸಿದರು. ಕುವೆಂಪು ಒಬ್ಬ ಸರ್ಕಾರಿ ನೌಕರನಾಗಿದ್ದು ( ಆವಾಗ ಕುವೆಂಪು ಉಪನ್ಯಾಸಕರಾಗಿದ್ದರು) ಯುವಜನತೆಯನ್ನು ಧರ್ಮದ ವಿಷಯದಲ್ಲಿ ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂಬುದು ದೇವುಡು ಆರೋಪವಾಗಿತ್ತು. ಇಂತಹ ಅವಕಾಶಕ್ಕೆ ಕಾಯುತ್ತಿದ್ದ ಅನೇಕರು “ ಗರಿಕೆ ಹುಲ್ಲುಗಳು ಗೂಟವಾದವು” ಎಂಬಂತೆ ಕುವೆಂಪು ಮೇಲೆ ತಿರುಗು ಬಿದ್ದರು. ಆದರೆ, ಕುವೆಂಪುರವರು  ತಮ್ಮ ವಿರುದ್ಧ ಕೇಳಿ ಬಂದ ಯಾವ ಆರೋಪ, ಟೀಕೆ ಟಿಪ್ಪಣಿ ಮತ್ತು  ಬೈಗುಳಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅಂತಿಮವಾಗಿ ಸರ್ಕಾರವು ಟಿ.ಎಸ್.ವೆಂಕಣ್ಣಯವರನ್ನು ಈ ವಿಷಯ ಕುರಿತಂತೆ ತನಿಖೆಗೆ ನೇಮಕ ಮಾಡಿ, ವರದಿ ಸಲ್ಲಿಸುವಂತೆ ಸೂಚಿಸಿತು. ಸರ್ಕಾರಕ್ಕೆ ಕುವೆಂಪು ಮಾಡಿದ್ದ ಉಪನ್ಯಾಸ ಕುರಿತು ಒಂದು ಸಾಲಿನ ಅಥವಾ ಒಂದು ವಾಕ್ಯದ ವರದಿಯನ್ನು ವೆಂಕಣ್ಣಯ್ಯ ಸಲ್ಲಿಸಿದರು. ಅವರ ವರದಿಯ ಸಾರಾಂಶ ಹೀಗಿತ್ತು. “ ನಾನು ನನ್ನ ಮಗನಿಗೆ ಇದಕ್ಕಿಂತ ಒಳ್ಳೆಯ ಉಪದೇಶ ನೀಡಲಾರೆ”  ನಂತರ ಗಲಾಟೆ ತಣ್ಣಗಾಯಿತು.


ವಿವಾದವೆಲ್ಲವೂ ಮುಗಿದ ನಂತರ ಕುವೆಂಪು ಶಿಷ್ಯರು ಒಮ್ಮೆ ಕುವೆಂಪು ರವರನ್ನು ಕೇಳಿದರು. “ ಸಾರ್ ನೀವು ಇಷ್ಟೆಲ್ಲಾ ಗಲಾಟೆಯಾದರೂ ಸಹ ಏಕೆ ಮೌನವಾಗಿದ್ದಿರಿ?” ಇದಕ್ಕೆ ಕುವೆಂಪು ನೀಡಿದ ಉತ್ತರ ಹೀಗಿತ್ತು.
“ ನೋಡ್ರಯ್ಯಾ, ನನ್ನ ವಿರುದ್ಧ ಸೆಣಸಾಡಲಿಕ್ಕೆ ಅಥವಾ ಕುಸ್ತಿಯಾಡಲಿಕ್ಕೆ ಬರುವ ವ್ಯಕ್ತಿ ಯಾವ ಜಾತಿಯವನು, ಅವನ ವಯಸ್ಸೆಷ್ಟು, ಅವನು ಪಂಡಿತನೆ?. ಪುರುಷೋತ್ತಮನೆ? ಇವು ನನಗೆ ಮುಖ್ಯವಲ್ಲ, ನಾನು ಅಖಾಡಕ್ಕೆ ಇಳಿಯಬೇಕಾದರೆ, ನನ್ನ ಎದುರಾಳಿಗೆ ಕನಿಷ್ಟ ಸೊಂಟದ ಮೇಲೆ ಒಂದು ಲಂಗೋಟಿ ಇರಬೇಕು. ಅದೇ ಇಲ್ಲದೆ ಬೆತ್ತಲೆ ನಿಂತು ಕುಸ್ತಿಗೆ ಕರೆಯುವನ ಜೊತೆ ನಾನು ಹೋರಾಡಲಾರೆ” ಅಂದು ಮಹಾ ಬ್ರಾಹ್ಮಣ ಎಂಬ ಕಾದಂಬರಿ ಬರೆದು ಬೀಗುತ್ತಿದ್ದ ದೇವುಡುಗೆ ಕುವೆಂಪು ಬೀಸಿದ ಚಾಟಿ ಏಟಿನಿಂದ ಆ ಕಾಲದಲ್ಲಿ  ಕುವೆಂಪು ಸಾಹಿತ್ಯವನ್ನು ದ್ವೇಷಿಸುತ್ತಿದ್ದ ಎಲ್ಲಾ ಬ್ರಾಹ್ಮಣರು ತಮ್ಮ ತಮ್ಮ ಬೆನ್ನು ಮುಟ್ಟಿ ನೋಡಿಕೊಂಡಿದ್ದರು. ಏಕೆಂದರೆ ಕುವೆಂಪು ನೀಡಿದ್ದ ಹೇಳಿಕೆಯಲ್ಲಿ ಅಂತಹ ಘನತೆಯಿತ್ತು.

ಸಧ್ಯದ  ಸ್ಥಿತಿಯಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ   ಕುವೆಂಪುರವರ ಪ್ರಖರ ವೈಚಾರಿಕತೆ ಎಲ್ಲರಿಗೂ  ಮಾರ್ಗದರ್ಶನವಾಗಬೇಕಿದೆ. 

ಬುಧವಾರ, ಸೆಪ್ಟೆಂಬರ್ 23, 2015

ಗಾಂಧಿ, ಗೋರಾ ಎಂಬ ಗುರುಶಿಷ್ಯರ ದೇವರು-ಧರ್ಮಗಳ ಕುರಿತ ಜಿಜ್ಞಾಸೆ


ಕನ್ನಡ ಪ್ರಖ್ಯಾತ ಸಂಶೋಧಕರು ಮತ್ತು ವಿದ್ವಾಂಸರಾಗಿದ್ದ ಡಾ. ಕಲ್ಬರ್ಗಿಯವರ ಹತ್ಯೆಯಾದ ನಂತರ  ಕನ್ನಡದ ಸಾಂಸ್ಕೃತಿಕ ಜಗತ್ತು ತಲುಪಿರುವ ಅಧೋಗತಿಯನ್ನು ನೆನದಾಗ ಮನಸ್ಸು  ಅಪಮಾನದಿಂದ ಮುದುಡಿಹೋಗುತ್ತಿದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಮಾತು ಮತ್ತು ಚರ್ಚೆಗಳ ಮೂಲಕ  ಈವರೆಗೆ ಬಗೆ ಹರಿಸಿಕೊಳ್ಳುತ್ತಿದ್ದ ಕನ್ನಡದ ಸಾಂಸ್ಕೃತಿಕ ಜಗತ್ತಿಗೆ ಇದೀಗ ಹೊಡಿ, ಬಡಿ ಮತ್ತು ಕೊಲ್ಲು, ಎಂಬ ಮಾತುಗಳು ಆವರಿಸಿಕೊಂಡಿವೆ. ತಮ್ಮ ಬಾಯಿಗಳನ್ನು ಗಟಾರಮಾಡಿಕೊಂಡು, ನಾಲಿಗೆಯನ್ನು ಚಪ್ಪಲಿಯನ್ನಾಗಿಸಿಕೊಂಡು ವಿದ್ವಾಂಸರ ಕುರಿತು ಸಾಹಿತ್ಯ, ಸಂಸ್ಕೃತಿಗಳ ಗಂಧ ಗಾಳಿಯಿಲ್ಲದ ತಲೆ ತಿರುಕರ ಮಾತುಗಳು ಅವರು ಪ್ರತಿನಿಧಿಸುವ ಧರ್ಮ ಮತ್ತು ಸಂಸ್ಕೃತಿಯ ಪ್ರತಿಬಿಂಬಗಳಂತೆ ಗೋಚರಿಸುತ್ತಿವೆ. ಈ ಸಂದರ್ಭದಲ್ಲಿ ದೇವರು ಮತ್ತು ಧರ್ಮ ಕುರಿತು ಅಪಾರ ಶ್ರದ್ಧೆ ಹೊಂದಿದ್ದ ಗಾಂಧೀಜಿಯವರು ತಮ್ಮ ಶಿಷ್ಯ  ಹಾಗೂ ನಾಸ್ತಿಕ ಗೋಪರಾಜು ರಾಮಚಂದ್ರರಾವ್  (ಗೋರಾ)ಎಂಬುವರೊಡನೆ ನಿರಂತರ ಹದಿನೇಳು ವರ್ಷಗಳ ಕಾಲ ನಡೆಸಿದ ಸಂವಾದ ನೆನಪಾಗುತ್ತಿದೆ.
ಗೋರಾ ರವರು 1902 ರಲ್ಲಿ ಆ ಕಾಲದಲ್ಲಿ ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿದ್ದ ಒರಿಸ್ಸಾದ ಗಂಜಾಂ ಜಿಲ್ಲೆಯ ಛತ್ರಪುರ ಎಂಬಲ್ಲಿ ಜನಿಸಿದವರು. ಅವರ ತಂದೆ ಅಂದಿನ ಸರ್ಕಾರದಲ್ಲಿ ಆಂಧ್ರದ ಕಾಕಿನಾಡದಲ್ಲಿ ಸೇವೆಯಲ್ಲಿದ್ದರು. ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಎ. ಆನರ್ಸ್ ಪದವಿ ಪಡೆದಿದ್ದ ಗೋರಾರವರು ಬಾಲ್ಯದಿಂದ ದೇವರು, ಧರ್ಮ ಮತ್ತು ಅಂಧಶ್ರದ್ಧೆಗಳ ವಿರುದ್ಧ ತಿರುಗಿ ಬಿದ್ದವರು. ತಾವು  ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ  ಮಧುರೈ ಕಾಲೇಜಿನ ಮತಾಂತರ ಕುರಿತ ಒಲವು ಹಾಗೂ ಕಾಕಿನಾಡ ಕಾಲೇಜಿನಲ್ಲಿ ಧರ್ಮ ಕುರಿತಾದ ಅಂಧ ಶ್ರದ್ಧೆಗಳನ್ನು ತಿರಸ್ಕರಿಸಿ, ಉದ್ಯೋಗಕ್ಕೆ  ರಾಜಿನಾಮೆ ನೀಡಿ ಸ್ವತಂತ್ರವಾಗಿ ಬದುಕಲು ಇಚ್ಚಿಸಿದವರು. ಇದಕ್ಕಾಗಿ ವಿಜಯವಾಡ ಸಮೀಪ ನಿರೀಶ್ವರವಾದ ಕೇಂದ್ರ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ, ಧರ್ಮ ಮತ್ತು ಧರ್ಮ ಗ್ರಂಥಗಳ ಕುರಿತಂತೆ ಧಾರ್ಮಿಕ ಮುಖಂಡರೊಡನೆ ನಿರಂತರ ಚರ್ಚೆಯಲ್ಲಿ ಇದ್ದವರು.





1930 ರಲ್ಲಿ ಮಹಾತ್ಮ ಗಾಂಧಿಯವರು ಪ್ರಥಮವಾಗಿ  ಆಂಧ್ರದ ಗೋದಾವರಿ, ಕಾಕಿನಾಡ, ಶ್ರೀ ಶೈಲಂ ಜಿಲ್ಲೆಗಳಿಗೆ ಬಂದು ಹೋದ ನಂತರ ಗಾಂಧಿ ಚಿಂತನೆಗಳಿಗೆ ಮಾರು ಹೋದರು. ( ಗಾಂಧೀಜಿಯವರ ಬೇಟಿ ಕುರಿತು ರಾಮಮೋಹನ ರಾವ್ ಎಂಬುವರು ತಮ್ಮ ಆತ್ಮ ಚರಿತ್ರೆಯನ್ನು ಸ್ವರಾಜ್ಯಂ ಹೆಸರಿನಲ್ಲಿ ಕಾದಂಬರಿ ರೂಪದಲ್ಲಿ ಬರೆದಿದ್ದು, ಆಕ್ಸ್ ಪರ್ಡ್ ಯೂನಿವರ್ಸಿಟಿ ಪ್ರೆಸ್ ನಿಂದ ಅದೇ ಹೆಸರಿನಲ್ಲಿ ಇಂಗ್ಲೀಷ್ ನಲ್ಲಿ ಪ್ರಕಟವಾಗಿದೆ.) ಆನಂತರದ ದಿನಗಳಲ್ಲಿ ಗೋರಾರವರು  ಗಾಂಧೀಜಿಯವರ ಜೊತೆ ದೇವರು ಧರ್ಮ ಕುರಿತಂತೆ ನಿರಂತರ ಪತ್ರ ವ್ಯವಹಾರ ನಡೆಸಿದರು. ಅದು ತೃಪ್ತಿಯಾಗದೆ, ವಾರ್ಧಾ ಆಶ್ರಮಕ್ಕೆ ಬೇಟಿ ನೀಡಿ ಗಾಂಧಿ ಜೊತೆ ಸಂವಾದ ನಡೆಸುತ್ತಿದ್ದರು. ಗಾಂಧಿಜಿಯವರನ್ನು ಪ್ರಥಮ ಬಾರಿಗೆ ಬೇಟಿಯಾದಾಗ, “ ಹೃದಯದೊಳಗೆ ದೇವರೇ ಇಲ್ಲದ ಮನುಷ್ಯನ ಜೊತೆ ನಾನು ಹೇಗೆ ಸಂವಾದ ನಡೆಸಲಿ? “ ಎಂದು ಹಾಸ್ಯ ಚಟಾಕಿಯನ್ನು ಹಾರಿಸಿದ್ದನ್ನು ಗೋರಾರವರು ತಮ್ಮ  An atheist With Gandhi ಕೃತಿಯಲ್ಲಿ ದಾಖಲಿಸಿದ್ದಾರೆ. ( ಈ ಕೃತಿಯನ್ನು ನನ್ನ ಮಿತ್ರರಾದ, ಹಾಗೂ  ನಿವೃತ್ತ ಶಿಕ್ಷಣ ಆಯುಕ್ತರಾದ ಧಾರವಾಡದ ವೆಂಕಟೇಶ್ ಮಾಚಕನೂರು ಅವರು “ ಗಾಂಧಿಯೊಂದಿಗೆ ಒಬ್ಬ ನಾಸ್ತಿಕ” ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದು, ಬಳ್ಳಾರಿಯ ಲೋಹಿಯಾ ಪ್ರಕಾಶನ ಈ ಕಿರು ಪುಸ್ತಕವನ್ನು ಪ್ರಕಟಿಸಿದೆ) ಗಾಂಧಿಯವರ ವಾರ್ಧಾ ಆಶ್ರಮಕ್ಕೆ ಬೇಟಿ ನೀಡಿ ಅಲ್ಲಿ ವಾರಗಟ್ಟಲೆ ತಂಗಿದ್ದರೂ ಸಹ ಗೋರಾ ಅವರು ಎಂದೂ ಬೆಳಿಗ್ಗೆ ಮತ್ತು ಸಂಜೆ ನಡೆಯುತ್ತಿದ್ದ ಪ್ರಾರ್ಥನಾ ಸಬೆಗಳಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ನಿರೀಶ್ವರವಾದ ಅಥವಾ ನಾಸ್ತಿಕತೆ ಎನ್ನುವುದು ಮನುಷ್ಯನೊಬ್ಬ ನಡೆಸುವ ದೈನಂದಿಕ ಜೀವನದಲ್ಲಿ ಸಕರಾತ್ಮಕ ಬೆಳವಣಿಗೆಗಳನ್ನು ತಂದು ಕೊಡುವ ಭಾವ ಅಥವಾ ವಿಶ್ವಾಸ ಎಂಬುವುದು ಗೋರಾರವರ ದೃಢ ನಿಲುವಾಗಿತ್ತು. ದೇವರ ಮೇಲಿನ ನಂಬಿಕೆ ಮನುಷ್ಯನನ್ನು ಅಧೀರನನ್ನಾಗಿ ಮಾಡಿ, ಅವನನ್ನು ಧರ್ಮ ಮತ್ತು ಕರ್ಮ ಗಳ ನಡುವೆ ಜೀತದಾಳುವನ್ನಾಗಿ ಮಾಡುತ್ತದೆ ಎಂದು ಗೋರಾ ಗಾಂಧಿಯವರ ಜೊತೆ ವಾದ ಮಾಡುತ್ತಿದ್ದರು. ಗಾಂಧಿ ಮತ್ತು ಗೋರಾ ಎಂಬ ಈ ಅಪರೂಪದ ಗುರುಶಿಷ್ಯರ ನಡುವೆ ನಿರಂತರ ಹದಿನೇಳು ವರ್ಷಗಳ ಕಾಲ ನಡೆದ ಸಂವಾದದ ಫಲವಾಗಿ ಗಾಂಧಿಯವರು ದೇವರು ಎನ್ನುವ ಶಬ್ಧವನ್ನು ಅಂತಿಮವಾಗಿ  ಸತ್ಯ ಎಂದು ಬದಲಾಯಿಸಿಕೊಂಡರು.



ಆಂದ್ರಪ್ರದೇಶದ ಉತ್ತರ ಭಾಗದ ಗೋದಾವರಿ ಪ್ರಾಂತ್ಯದಲ್ಲಿ ಮೂಲತಃ ಬ್ರಾಹ್ಮಣರಾಗಿದ್ದ ಗೋರಾ ರವರು ಪ್ರತಿ ಹದಿನೈದು ದಿನಕ್ಕೆ ಹುಣ್ಣಿಮೆಯ ದಿನದಂದು  ಬೆಳಂದಿಂಗಳ ಊಟ ಎಂಬ ಕಾರ್ಯಕ್ರಮವನ್ನು ಹರಿಜನರ ಕೇರಿಗಳಲ್ಲಿ ಏರ್ಪಡಿಸಿ, ಅವರೊಂದಿಗೆ ಸಹಭೋಜನ ನಡೆಸುತ್ತಿದ್ದರು. ಜಾತಿಯ ವಿನಾಶಕ್ಕೆ ಅಂತರ್ಜಾತಿಯ ವಿವಾಹ ಎಂದು ಮದ್ದು ಎಂದು ಬಲವಾಗಿ ನಂಬಿದ್ದ ಅವರು ತಮ್ಮ ಪುತ್ರಿಯನ್ನು ( ಮನೋರಮಾ)ಹರಿಜನ ಯುವಕನಿಗೆ ವಿವಾಹ ಮಾಡಿಕೊಡಲು ನಿರ್ಧರಿಸಿ, ಈ ವಿವಾಹವನ್ನು ವಾರ್ಧಾ ಆಶ್ರಮದಲ್ಲಿ ನಡೆಸಿಕೊಡುವಂತೆ ಗಾಂಧಿಯವರಿಗೆ ಪತ್ರ ಬರೆದರು. ಗೋರಾ ಅವರ ಪುತ್ರಿಗೆ ಹದಿನೇಳು ವರ್ಷ ಎಂದು ತಿಳಿದ ಗಾಂಧಿಯವರು “ ಹತ್ತೊಂಬತ್ತು ವರ್ಷ ತುಂಬಿದ ಮೇಲೆ ವಿವಾಹ ಮಾಡೋಣ ಅಕಸ್ಮಾತ್ ಈಗಲೇ ನೆರವೇರಬೇಕು ಎಂಬುದು ನಿನ್ನ ಇಚ್ಛೆಯಾಗಿದ್ದರೆ ಮಾಡೋಣ ಆದರೆ, ನಿನ್ನ ಪುತ್ರಿಗೆ ಹತ್ತೊಂಬತ್ತು ತುಂಬುವವರೆಗೆ ಆಕೆ ದಾಂಪತ್ಯ ಜೀವನ ನಡೆಸಬಾರದು “ ಎಂದು ಪತ್ರ ಬರೆದಿದ್ದರು. ಗಾಂಧೀಜಿಯವರ ಸಲಹೆಯನ್ನು 1947 ರಲ್ಲಿ ಒಪ್ಪಿದ ಗೋರಾರವರು ತಮ್ಮ ಭಾವಿ ಅಳಿಯನನ್ನು ( ಅರ್ಜುನ) ವಾರ್ಧಾ ಆಶ್ರಮಕ್ಕೆ ಕಾರ್ಯಕರ್ತನಾಗಿ ಸೇವೆ ಸಲ್ಲಿಸಲು ಕಳಿಸಿಕೊಟ್ಟರು. ಈ ಸಂದರ್ಭದಲ್ಲಿ ಗಾಂಧೀಜಿಯವರು ಗೋರಾರವರಿಗೆ ಪತ್ರ ಬರೆದು “ ನಿನ್ನ ಭಾವಿ ಅಳಿಯ ಆಶ್ರಮದಲ್ಲಿ ನಡೆಯುವ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲಿ, ಆದರೆ, ಅವನು ಮಂತ್ರ ಅಥವಾ ಶ್ಲೋಕ ಹೇಳುವುದು ಬೇಡ” ಎಂಬ  ನಿಲುವನ್ನು ತಾಳಿದ್ದರು.



ದುರದೃಷ್ಟವಶಾತ್ 1949 ಕ್ಕೆ ನಡೆಯಬೇಕಿದ್ದ ವಿವಾಹಕ್ಕೆ ನೇತೃತ್ವ ವಹಿಸಬೇಕಿದ್ದ ಗಾಂಧಿಯವರು 1948 ರ ಜನವರಿಯಲ್ಲಿ ಮತಾಂಧನೊಬ್ಬನ ಗುಂಡಿಗೆ ಬಲಿಯಾದರು. ಕೊನೆಗೂ ಅವರ ಆಶಯದಂತೆ 1949 ರಲ್ಲಿ ವಾರ್ಧಾ ಸಮೀಪದಲ್ಲಿ ಇದ್ದ ಸೇವಾಗ್ರಾಮದಲ್ಲಿ ಗೋರಾ ಅವರ ಪುತ್ರಿಯ ಅಂತರ್ಜಾತಿಯ ವಿವಾಹ ನೆರವೇರಿತು. ತಾವು ನಂಬಿದ್ದ ತತ್ವಗಳಿಗೆ ಬದ್ಧರಾಗಿ ಬಾಳಿದ ಗೋರಾ 1975 ರಲ್ಲಿ ನಿಧನರಾದರು. ತತ್ವ ಸಿದ್ಧಾಂತಗಳ ಭಿನ್ನಾಭಿಪ್ರಾಯಗಳ ನಡುವೆ ಮಾನವೀಯತೆ ಮತ್ತು ಮನುಷ್ಯ ಸಂಬಂಧ ಮುಖ್ಯ ಎಂಬುದನ್ನು ಸಾಧಿಸಿ ತೋರಿಸಿದ ಈ ಗುರು ಶಿಷ್ಯರ ಆದರ್ಶನೀಯವಾದ  ಬದುಕು ಇದೀಗ  ಕರ್ನಾಟಕದಲ್ಲಿ  ತಾಂಡವವಾಡುತ್ತಿರುವ ವಿಕಾರಗಳಿಗೆ ಮದ್ದಾದರೆ ಎಷ್ಟು ಚೆನ್ನ? ಅಲ್ಲವೆ?

ಶನಿವಾರ, ಸೆಪ್ಟೆಂಬರ್ 19, 2015

ಮಹಾನ್ ಮಾನವತಾವಾದಿಯ ಮನುಕುಲದ ಚಿಂತನೆಗಳು



ತಮ್ಮ ಉದಾತ್ತ ಚಿಂತನೆಗಳಿಂದ ಭಾರತ ರತ್ನ ಪ್ರಶಸ್ತಿಯಿಂದ ಹಿಡಿದು ನೊಬೆಲ್ ಪ್ರಶಸ್ತಿಯವರೆಗೆ ಜಗತ್ತಿನ ಅತ್ಯುನ್ನುತ ಗೌರವಗಳನ್ನು ಪಡೆದ ಅಮಾರ್ತ್ಯ ಸೇನ್ ವರ್ತಮಾನ ಜಗತ್ತಿನ ಶ್ರೇಷ್ಠ ಅರ್ಥಶಾಸ್ತ್ರಜ್ಷರಲ್ಲಿ ಒಬ್ಬರು. ಅಭಿವೃದ್ಧಿಯ ಅರ್ಥಶಾಸ್ತ್ರಕ್ಕೆ ಮಾನವೀಯತೆಯ ಸ್ಪರ್ಶವನ್ನು ನೀಡಿ, ಅದು ಕೇವಲ ಅಂಕಿ, ಅಂಶಗಳನ್ನು ಮಾತ್ರ ಒಳಗೊಳ್ಳದೆ, ರಾಜಕೀಯ, ಇತಿಹಾಸ, ಸಮಾಜಶಾಸ್ತ್ರವೂ ಸೇರಿದಂತೆ, ಪ್ರಾಚೀನ ಭಾರತದ ತತ್ವಶಾಸ್ತ್ರಗಳ ಚಿಂತನೆಗಳನ್ನು ಎರಕ ಹೊಯ್ದು ಅರ್ಥಶಾಸ್ತ್ರವನ್ನು ಮನುಕುಲದ ಒಳಿತಿಗಾಗಿ ನಿರ್ವಚಿಸುವ ಶಾಸ್ತ್ರವನ್ನಾಗಿ ಮಾಡಿದ ಕೀರ್ತಿ ಅಮಾರ್ತ್ಯ ಸೇನರದು.
ಪಶ್ಚಿಮ ಬಂಗಾಳದ ಜಾದವ್ ಪುರ್ ವಿ.ವಿ.ಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಕರಾಗಿ ನೇಮಕಗೊಂಡ ಸೇನರು, ನಂತರದ ದಿನಗಳಲ್ಲಿ ಅರ್ಧಶತಮಾನಗಳ ಕಾಲ ದೆಹಲಿಯ ಸ್ಕೂಲ್ ಆಫ್ ಎಕಾನಾಮಿಕ್ಸ್, ಇಂಗ್ಲೇಂಡಿನ ಲಂಡನ್ ಸ್ಕೂಲ್ ಎಕಾನಾಮಿಕ್ಸ್, ಆಕ್ಸ್ ಪರ್ಡ್ ವಿಶ್ವ ವಿದ್ಯಾಲಯ, ಕೇಂಬ್ರಿಡ್ಜ್ ವಿ.ವಿ.ಯ ಟ್ರಿನಿಟಿ ಕಾಲೇಜ್, ಅಮೇರಿಕಾದ ಹಾರ್ವಡ್ ವಿ.ವಿ. ಹೀಗೆ ಜಗತ್ತಿನ ಹಲವಾರು ವಿ.ವಿ.ಗಳಲ್ಲಿ ಅರ್ಥಶಾಸ್ತ್ರ ಮತ್ತು ತತ್ವ ಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಜಗತ್ ಪ್ರಸಿದ್ಧ ಚಿಂತಕರಲ್ಲಿ ಒಬ್ಬರಾಗಿ ಹೊರ ಹೊಮ್ಮಿದವರು.
ಅಭಿವೃದ್ಧಿಯ ಅರ್ಥಶಾಸ್ತ್ರಕ್ಕೆ ಗುನ್ನಾರ್ ಮಿರ್ಡಲ್ ರವರ ನಂತರ ಮಾನವೀಯ ಗುಣ ಮತ್ತು ಚಿಂತನೆಗಳನ್ನು ಬೆಸದ ಅಮಾರ್ತ್ಯ ಸೇನರು ಕಳೆದ ಐವತ್ತು ವರ್ಷಗಳಿಂದ ಲಿಂಗತಾರಮ್ಯನೀತಿಗಳು, ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ ಇವುಗಳ ಕುರಿತು ಚಿಂತಿಸುತ್ತಾ, ಬರೆಯುತ್ತಾ. ಜಿಡ್ಡುಗಟ್ಟಿ ಹೋಗಿದ್ದ  ಜಗತ್ತಿನ ಚಿಂತನೆಗಳಿಗೆ ಹೊಸ ವಾಖ್ಯಾನಗಳನ್ನು ಬರೆದವರು.
ಕಳೆದ ತಿಂಗಳು ದೆಹಲಿಯ ಆಕ್ಸ್ ಪರ್ಡ್ ಯೂನಿರ್ವಸಿಟಿ ಪ್ರೆಸ್ ಪ್ರಕಾಶನ ಸಂಸ್ಥೆಯಿಂದ  ಪ್ರಕಟವಾಗಿರುವ ಅವರ ಹೊಸ ಕೃತಿ “The Country Of First Boys  ಎಂಬ ಪ್ರಬಂಧಗಳ ಕೃತಿಯಲ್ಲಿ ಅವರ ಮಾಗಿದ ಮನಸ್ಸಿನ ಚಿಂತನೆಗಳು, ಅನುಭವಗಳು ಅನುಭಾವದ ಮಾತಿನಂತೆ ಹೊಹೊಮ್ಮಿವೆ. ಒಂದು ಸ್ವತಂತ್ರ್ಯವಾದ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ರಾಷ್ಟ್ರವೊಂದು, ತನ್ನ ಆಂತರೀಕ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಲು ಪ್ರಥಮ ಆದ್ಯತೆ ನೀಡಬೇಕು. ಆದರೆ.  ಅವುಗಳಿಗೆ ಸ್ಪಷ್ಟವಾದ ವಿಶ್ಲೇಷಣೆ ಹಾಗೂ ವಿಮರ್ಶೆಗಳಿಲ್ಲದೆ ಯಾವೊಂದು ಸಮಸ್ಯೆಯೂ ಪರಿಹಾರವಾಗುವುದಿಲ್ಲ ಎಂದು ನಂಬಿರುವ ಅಮಾರ್ತ್ಯ ಸೇನರು, ಇಂತಹ ಸಮಸ್ಯೆಗಳಿಗೆ ಅವರು ನಮ್ಮ ಪ್ರಾಚೀನ ಭಾರತದ ಸಂಸ್ಕೃತ ಪಠ್ಯಗಳಲ್ಲಿ, ವೇದಗಳಲ್ಲಿನ ಕೆಲವು ಅಂಶಗಳನ್ನು ಎತ್ತಿ ತೋರಿಸಿ ಪರಿಹಾರ ಸೂಚಿಸುವುದು ಅಶ್ಚರ್ಯವಾಗುತ್ತದೆ. ಅವರ ಈವರೆಗಿನ ಮಹತ್ವದ ಕೃತಿಯಾದ  ಹಾಗೂ ನೊಬೆಲ್ ಪ್ರಶಸ್ತಿಗೆ ಪಾತ್ರವಾದ The Idea Of justice ಕೃತಿಯ ನಂತರ ಬಂದ  ಅತಿ ಶ್ರೇಷ್ಟ ಕೃತಿಗಳಲ್ಲಿ ಇದು ಒಂದಾಗಿದೆ.

ಮಹಾತ್ಮ ಗಾಂಧಿಯವರ ಮೊಮ್ಮಗ  ಗೋಪಾಲ ಕೃಷ್ಣ ಗಾಂಧಿಯವರ ಮುನ್ನುಡಿಯೊಂದಿಗೆ ಪ್ರಕಟವಾಗಿರುವ ಈ ಕೃತಿಯಲ್ಲಿ ಒಟ್ಟು ಹನ್ನೊಂದು ಸುಧೀರ್ಘವಾದ ಪ್ರಬಂಧಗಳಿದ್ದು, ಇವುಗಳಲ್ಲಿ ಹಸಿವಿನ ಕುರಿತು ಬರೆದಿರುವ ಪ್ರಬಂಧ, ರವೀಂಧ್ರ ನಾಥ ಟ್ಯಾಗೂರ್ ಹಾಗೂ ನಳಂದ ವಿಶ್ವ ವಿದ್ಯಾಲಯ ಕುರಿತ ಪ್ರಬಂಧಗಳು ನಮ್ಮ ಬೌದ್ಧಿಕ ಪ್ರಜ್ಞೆಯನ್ನು ಮತ್ತಷ್ಟು ವಿಸ್ತರಿಸಬಲ್ಲವು. ಹಸಿವು ಕುರಿತಾತ ಪ್ರಬಂಧಕ್ಕೆ ಅವರು ನೀಡಿರುವ  ಶೀರ್ಷಿಕೆ  Hunger-: Old Torments and New Blunders(  ಹಸಿವು- ಭರಿಸಲಾಗದ ನೋವುಗಳು ಮತ್ತು ಹೊಸ ಬೇಜವಬ್ದಾರಿತನದ ತಪ್ಪುಗಳು) ಅವರ ಪ್ರಖರ ವೈಚಾರಿಕ ಚಿಂತನೆಗೆ ಸಾಕ್ಷಿಯಾಗಿದೆ.
ಇಲ್ಲಿನ ಬಹುತೇಕ ಪ್ರಬಂಧಗಳಿಗೆ ತಮ್ಮ ಬಾಲ್ಯ ಹಾಗೂ ಬದುಕಿನ ಹಲವಾರು ಅನುಭವಗಳನ್ನು ಸಂಲಗ್ನಗೊಳಿಸಿರುವ ಸೇನ್ ರವರು  ಅವುಗಳ ಮೂಲಕ ಓದುಗರೊಂದಿಗೆ  ಆತ್ಮೀಯವಾದ ಸಂವಾದವನ್ನು ನಡೆಸಿದ್ದಾರೆ. ತಾವು ನಂಬಿದ್ದ ತತ್ವ ಮತ್ತು ಸಿದ್ಧಾಂತಗಳಿಗೆ ಎಂದೂ ರಾಜಿಯಾಗದ ಅಮಾರ್ತ್ಯ ಸೇನ್ ನಿಷ್ಟುರ ಸತ್ಯಗಳನ್ನು ತಣ್ಣನೆಯ ಧ್ವನಿಯಲ್ಲಿ ಖಚಿತವಾಗಿ ಹೇಳಬಲ್ಲರು. ಪ್ರಾಚೀನ ಭಾರತದ ಆರ್ಯಭಟನ ಗಣಿತ ಸಿದ್ಧಾಂತ, ಶೂದ್ರಕನ ಮೃಚ್ಛಕಟಿಕ, ಕಾಳಿದಾಸ ಶಾಕುಂತಲ ಕೃತಿಗಳ ಕುರಿತು ಮಾತನಾಡುತ್ತಾ ಇವುಗಳಿಗೆ ಮೇಲ್ವರ್ಗದ ಜನ ಹಿಂದುತ್ವದ ಬಣ್ಣ ಬಳಿದದ್ದು ದುರದೃಷ್ಟಕರ ಎಂದು ಅಬಿಪ್ರಾಯ ಪಡುತ್ತಾರೆ.  ಇಂದಿನ ಮಾಧ್ಯಮಗಳು ವಿಶೇಷವಾಗಿ ಮೋದಿಮಯ ಭಾರತದ ಮಾಧ್ಯಮಗಳು ಹೇಗೆ ತಮ್ಮ ವಿವೇಚನೆ ಕಳೆದು ಕೊಂಡಿವೆ ಹಾಗೂ ವರ್ತಮಾನದ ಜ್ವಲಂತ ಸಮಸ್ಯೆಗಳಿಗೆ ಬೆನ್ನು ತಿರುಗಿಸಿ, ಕಾರ್ಪೊರೇಟ್ ಜಗತ್ತಿನ ಪಂಜರದ ಗಿಳಿಗಳಾಗಿವೆ ಎನ್ನುವುದನ್ನು ತಮ್ಮ ಒಂದು ಪ್ರಬಂಧದಲ್ಲಿ ಪ್ರಬುದ್ಧವಾಗಿ ವಿವೇಚಿಸಿದ್ದಾರೆ. ಜಾಗತಿಕ ಮಟ್ಟದ ಹಲವಾರು ರಂಗಗಳಲ್ಲಿ ಅಪ್ರತಿಮ ಸಾಧನೆ ಮಾಡಿರುವ ಪ್ರತಿಭಾವಂತರು ಭಾರತದ ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ ಸಮುದಾಯದಿಂದ ಬಂದವರಾಗಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸುವ ಅವರು, “ ದೇಶಾದ್ಯಂತ  ಕ್ರೈಸ್ತರ ಚರ್ಚುಗಳು ಹತ್ತಿ ಉರಿಯುತ್ತಿರುವಾಗ, ಘರ್ ವಾಪಸಿ ಕಾರ್ಯಕ್ರಮ ಹಮ್ಮಿಕೊಂಡಿರುವ ಸಂಘ ಪರಿವಾರದ ಕೃತ್ಯವನ್ನು ಆತ್ಮ ಸಾಕ್ಷಿ ಮತ್ತು ಪ್ರಜ್ಞೆ ಇಲ್ಲದವರ ಕೃತ್ಯ ಎಂದು  ನಿಷ್ಟುರವಾಗಿ ಬಣ್ಣಿಸಿದ್ದಾರೆ.



ಅವರೊಳಗೆ ಒಂದು ಮಾತೃ ಹೃದಯವೊಂದು ಸದಾ ಜಾಗೃತವಾಗಿದ್ದು, ಅದು ಸದಾ ಹೆಣ್ಣು ಜೀವಗಳ ಒಳಿತಿಗಾಗಿ ತುಡಿಯುತ್ತಲೇ ಇರುತ್ತದೆ. ಕೃತಿಯ ಶೀರ್ಷಿಕೆಯಾದ “ ದ ಕಂಟ್ರಿ ಆಫ್ ಪಸ್ಟ್ ಭಾಯ್ಸ್”  ಪ್ರಬಂಧದಲ್ಲಿ ಹಲವು ಸವಲತ್ತುಗಳನ್ನು ಪಡೆದ ಬಾಲಕರು ತರಗತಿಯಲ್ಲಿ ಅಥವಾ ಇನ್ಯಾವುದೇ ರಂಗದಲ್ಲಿ ಮುಂದೆ ಬರುವುದು ಸಾದನೆಯಲ್ಲ, ಅವಕಾಶ ವಂಚಿತ ಹೆಣ್ಣು ಜೀವವೊಂದು, ಈ ಸಮಾಜ ಹೇರಿರುವ ನೀತಿ ನಿಯಮಗಳ ಅಡ್ಡಗೋಡೆಗಳನ್ನು ದಾಟಿ, ಬಡತನ ಮತ್ತು ಹಸಿವುಗಳ ನಡುವೆ ಮುಂದೆ ಬರುವುದು ನಿಜವಾದ ಸಾಧನೆ ಎಂದು ಬಣ್ಣಿಸುತ್ತಾರೆ. ನೊಬೆಲ್ ಪ್ರಶಸ್ತಿ ನೀಡಿದ ಸ್ವೀಡಿಶ್ ಅಕಾಡೆಮಿಯು ತಮ್ಮ ಸಂಗ್ರಹಾಲಯಕ್ಕೆ ನಿಮ್ಮ ನೆನಪಿಗಾಗಿ ಯಾವುದಾದರೂ ವಸ್ತವನ್ನು ಕಾಣಿಕೆಯಾಗಿ ನೀಡಿ ಎಂದು ಕೇಳಿದಾಗ, ಅಮಾರ್ತ್ಯ ಸೇನರು, ಅಕಾಡೆಮಿಗೆ ಒಂದು ಆರ್ಯಭಟನ ಗಣಿತಶಾಸ್ತ್ರದ ಸಂಸ್ಕೃತ ಪಠ್ಯ ಪುಸ್ತಕ ಹಾಗೂ ತಮ್ಮ ಹಳೆಯದಾದ ಬೈಸಿಕಲ್ ಒಂದನ್ನು ಕಾಣಿಕೆಯಾಗಿ ನೀಡಿದ್ದಾರೆ. ಅದಕ್ಕೆ ಕಾರಣ ವಿವರಿಸಿರುವ ಅವರು. ಆರ್ಯಭಟನ ಗಣಿತಶಾಸ್ತ್ರದ ಮೂಲಕ ನಾನು  ಅಭಿವೃದ್ಧಿ ಅರ್ಥಶಾಸ್ತ್ರದ ಸಮಸ್ಯೆಗಳನ್ನು ಅಂಕಿ ಆಂಶಗಳ ಸಹಾಯದಿಂದ ಅರಿತುಕೊಂಡೆ. ನಂತರ ಶಾಂತಿನಿಕೇತನದ ಸುತ್ತ ಮುತ್ತಲಿನ ಹೆಣ್ಣು ಮಕ್ಕಳ ಅಧ್ಯಯನಕ್ಕೆ  ಹಳ್ಳಿಗಳನ್ನು ಸುತ್ತುವಾಗ ಈ ಬೈಸಿಕಲ್ ಅನ್ನು ಬಳಸುತ್ತಿದ್ದೆ. ನನಗೆ ನೊಬೆಲ್ ಅಕಾಡೆಮಿ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಸ್ವೀಡಿಶ್ ಅಕಾಡೆಮಿ “ ಜಗತ್ತಿನ ಮಹಿಳೆಯರ ಸ್ಥಾನ ಮಾನಗಳ ಕುರಿತು ಅಧಿಕೃತ ಅಂಕಿ ಅಂಶಗಳ ಜೊತೆ ಮಾತನಾಡಬಲ್ಲ ಅರ್ಥಶಾಸ್ತ್ರಜ್ಞ” ಎಂದು ನನ್ನನ್ನು ಬಣ್ಣಿಸಿತ್ತು. ಹಾಗಾಗಿ ಈ ಪ್ರಶಸ್ತಿಗೆ ಕಾರಣವಾದ ಈ ಎರಡು ವಸ್ತುಗಳನ್ನು ಸ್ಟಾಕ್ ಹೋಂ ನಗರದಲ್ಲಿರುವ ಸಂಗ್ರಹಾಲಯಕ್ಕೆ ಉಡುಗೊರೆ ನೀಡಿದೆ ಎನ್ನುತ್ತಾರೆ.

ಒಟ್ಟಾರೆಯಾಗಿ ಅಮಾರ್ತ್ಯ ಸೇನರ ಈ ಕೃತಿ ದ ಐಡಿಯಾ ಆಫ್ ಜಸ್ಟಿಸ್ ನಂತರ ಬಂದ ಹಾಗೂ ನಮ್ಮ ಸಂಗ್ರಹದಲ್ಲಿ ಇರಬೇಕಾದ ಅತ್ಯಮೂಲ್ಯ ಕೃತಿಯಾಗಿದೆ.

ಗುರುವಾರ, ಸೆಪ್ಟೆಂಬರ್ 17, 2015

ತಮಿಳು ಜಾನಪದ ನೃತ್ಯಗಳು ಮತ್ತು ತಳಸಮುದಾಯದ ಬದ್ಧತೆಗಳು



ಇದು ಸುಮಾರು ಐದು ವರ್ಷಗಳ ಹಿಂದಿನ ಘಟನೆ. ತಮಿಳು ಭಾಷೆಯ ಪ್ರಾಚೀನ ಕವಿತೆಗಳನ್ನು ಅನುವಾದಕ್ಕಾಗಿ ಕೈಗೆತ್ತಿಕೊಂಡಿದ್ದೆ. ಸುಮಾರು ಐವತ್ತು ಕವಿತೆಗಳನ್ನು ಅನುವಾದ ಮಾಡಿ, ಅವುಗಳಿಗೆ ಒಂದು ಸುಧೀರ್ಘವಾದ ಪ್ರಸ್ತಾವನೆ ಬರೆಯಬೇಕಿತ್ತು. ಏಕೆಂದರೆ, ಭಾರತದಲ್ಲಿ ಲಿಪಿ ಆರಂಭಗೊಂಡ ಕಾಲದಿಂದಲೂ ತಮಿಳರು ಸಂಸ್ಕೃತ ಮತ್ತು ಪಾಕೃತ ಭಾಷೆಗಳಿಗೆ ಪರ್ಯಾಯವಾಗಿ ದ್ರಾವಿಡ ಭಾಷೆಗಳಲ್ಲಿ ಒಂದಾದ ತಮಿಳು ಭಾಷೆಯನ್ನು ಮುಂಚೂಣಿಗೆ ತರುವುದರ ಜೊತೆಗೆ ಭಾರತೀಯ ಕಾವ್ಯ ಮೀಮಾಂಸೆಯ ಪರಿಕಲ್ಪನೆಯನ್ನು ಧಿಕ್ಕರಿಸಿ, ತಮ್ಮದೇ ಆದ ಕಾವ್ಯ ಮೀಮಾಂಸೆಗಳನ್ನು ಕಟ್ಟಿಕೊಂಡವರಾಗಿದ್ದರು. ಅದೇ ರೀತಿ ಭರತನ ಅಭಿನಯ ಶಾಸ್ತ್ರದ ಪಠ್ಯಕ್ಕೆ ಪರ್ಯಾಯವಾಗಿ ದೇಶಿಯಾಟಂ,, ಕೊರವಂಜಿ, ಸಾದಿರ್ ಎಂಬ ನೃತ್ಯ ಪ್ರಕಾರಗಳನ್ನುಅಸ್ತಿತ್ವಕ್ಕೆ ತಂದು ಸಂಗೀತ, ನೃತ್ಯ ಮತ್ತು ಸಾಹಿತ್ಯ ಈ ಮೂರು ಪ್ರಕಾರಗಳಲ್ಲಿ ಉತ್ತರಕ್ಕೆ ಪರ್ಯಾಯವಾಗಿ ದಕ್ಷಿಣದ ಸಂಸ್ಕೃತಿಯನ್ನು ಕಟ್ಟಿಕೊಡುವುದರ ಮೂಲಕ ಅವುಗಳಿಗೆ ಅಸ್ಮಿತೆಯನ್ನು ದೊರಕಿಸಿಕೊಟ್ಟರು ಭರತನ ನಾಟ್ಯ ಶಾಸ್ತ್ರಕ್ಕೆ ಪರ್ಯಾಯವಾಗಿ ನಮಗೆ ಶಿಲಪ್ಪದಿಗಾರಂ .ಸಾಹಿತ್ಯದಲ್ಲಿ ಎಂಟು ರಸಗಳ ಭಾವಗಳು, (ಶೃಂಗಾರ- ಇಂಬಂ, ಹಾಸ್ಯ- ನಹೈ,(ನಗೈ) ಕರುಣಾರಸ-ಅಳುಕೈ, ರೌದ್ರ-ವೆಹಲಿ, ವೀರ – ಪೆರುಮಿಟಂ, ಭಯಂಕರ- ಅಕ್ಕಂ, ಬೀಭಿತ್ಸ- ಇಳಿಯರಲ್ ಅದ್ಭುತ- ವಿಯಪ್ಪು) ಹಾಗೂ ಇವುಗಳಲ್ಲದೆ ನಾಲ್ಕು ಅಭಿನಯ, ನಾಲ್ಕು ವೃತ್ತಿ, ಎರಡು ಧರ್ಮ, ಏಳು ಬಗೆಯ ಶೌರ್ಯ ಕುರಿತಾದ ಮಾಹಿತಿಗಳಿವೆ.
ತಮಿಳಿನ ಪ್ರಾಚೀನ ಕಾವ್ಯವನ್ನು ಅವಲೋಕಿಸುವಾಗ, ವಿಶೇಷವಾಗಿ ಸಂಗಂ ಯುಗದ ಸಾಹಿತ್ಯವನ್ನು ಗಮನಿಸಿದಾಗ  ಅಲ್ಲಿನ ಅಹಂ ಮತ್ತು ಪುರಂ ಎಂಬ ಎರಡು ಪ್ರಕಾರಗಳಲ್ಲಿ ಅಥವಾ ಪರಿಕಲ್ಪನೆಯನ್ನು ಇಟ್ಟುಕೊಂಡು ಅವರು ಕವಿತೆಗಳನ್ನು ರಚನೆ ಮಾಡಿದ್ದಾರೆ. ಅಹಂ ಎನ್ನುವ ಪ್ರಕಾರದಲ್ಲಿ ಬಹುತೇಕವಾಗಿ ಪ್ರೇಯಸಿ ಮತ್ತು ಪ್ರಿಯಕರನ  ಪ್ರಣಯಗೀತೆ, ವಿರಹಗೀತೆ,ಗಳನ್ನು ಬರೆದಿದ್ದರೆ, ಪುರಂ ಪ್ರಕಾರದಲ್ಲಿ ಯುದ್ಧ, ಮತ್ತು ವೀರಗಾಥೆಗಳ ಕವಿತೆಗಳು ದಾಖಲಾಗಿವೆ, ಆಶ್ಚರ್ಯಕರ ಸಂಗತಿಯೆಂದರೆ, ತಮಿಳಿನ ಬಹುತೇಕ ಪ್ರಣಯ ಹಾಗೂ ವಿರಹ ಗೀತೆಗಳಲ್ಲಿ ಪಚ್ಚೆಕ್ಕಿಳಿ (ಹಸಿರು ಗಿಣಿ) ಪ್ರಮುಖವಾದ ಸ್ಥಾನ ಪಡೆದುಕೊಂಡಿದೆ. ಪ್ರೇಮಿಗಳು ತಮ್ಮ ವಿರಹದ ಮತ್ತು ನೋವಿನ ಭಾವನೆಗಳನ್ನು ಹಸಿರು ಗಿಣಿಗೆ ಹೇಳಿಕೊಳ್ಳುವುದರ ಮೂಲಕ ಹೊರ ಹಾಕಿರುವುದು ವಿಶೇಷವಾಗಿದೆ. ಹಾಗಾಗಿ ಭಾರತದ ಯಾವ ಭಾಷೆಯ ಕಾವ್ಯಗಳಲ್ಲೂ ಇಷ್ಟೊಂದು ಪ್ರಮಾಣದಲ್ಲಿ ಗಿಣಿಯು ಸ್ಥಾನ ಪಡೆದಿಲ್ಲ. ಈ ಕುರಿತು ಆಸಕ್ತಿ ತಾಳಿ ನಾನು ಅಧ್ಯಯನ ಮುಂದುವರಿಸಿದಾಗ ತಮಿಳಿನ ಕವಿಗಳ  ಕಾವ್ಯ ಸೃಷ್ಟಿಯ  ಹಿಂದೆ ಅಲ್ಲಿನ ಜನಪದ ಕಾವ್ಯಗಳ  ಪ್ರಭಾವ ದಟ್ಟವಾಗಿತ್ತು. ಹಾಗಾಗಿ, ತಿರುಚ್ಚನಾಪಳ್ಳಿ, ತಂಜಾವೂರು ಮತ್ತು ಮಧುರೈ ಹಾಗೂ ಸೇಲಂ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಸುಮಾರು ಎಂಟನೂರು ಜನಪದ ಗೀತೆಗಳನ್ನು ಸಂಗ್ರಹಿಸಿಕೊಂಡು  ಗಂಭೀರವಾಗಿ ಅಧ್ಯಯನ ನಡೆಸುತ್ತಿದ್ದೆ. ಇದರಲ್ಲಿ ತಮಿಳು ಜನಪದ ಸಂಸ್ಕೃತಿಯ ಒಂದು ಭಾಗವಾಗಿರುವ ಕರಗಟಂ ( ಕರಗದ ಆಟ) ಎಂಬ  ಜಾನಪದ ನೃತ್ಯ ಪ್ರಕಾರದ ಕೆಲವು ಗೀತೆಗಳು ಇದ್ದವು. ತಮಿಳು ಗ್ರಾಮೀಣ ಭಾಗದಲ್ಲಿ ನಡೆಯುವ ಹಬ್ಬ ಮತ್ತು ಜಾತ್ರೆಗಳಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದುಕೊಂಡಿರುವ ಈ ಕಲೆಯು ತಮಿಳುನಾಡಿನಲ್ಲಿ ಆದಿ ದ್ರಾವಿಡರು ಎಂದು ಕರೆಸಿಕೊಳ್ಳುವ ದಲಿತರ ಪಾರಂಪರಿಕ ಕಲೆಯಾಗಿದೆ.
ಈ ನೃತ್ಯ ಕಲೆ ಮತ್ತು ಜನಪದಗಳ ಹಾಡುಗಳ ಕುರಿತು ಒಂದು ದಿನ ನಮ್ಮ ಉದಯ ಟಿ.ವಿ. ಅಧ್ಯಕ್ಷರೂ ಹಾಗೂ ಮಾಲಿಕರಲ್ಲಿ ಒಬ್ಬರಾಗಿರುವ ಎಂ ಸೆಲ್ವಂ ಅವರಲ್ಲಿ ಪ್ರಸ್ತಾಪಿಸಿದೆ. ಮೂಲತಃ ತಂಜಾವೂರು ಜಿಲ್ಲೆಯಿಂದ ಬಂದ ಮುರುಸೋಳಿ ಸೆಲ್ವಂ ರವರು ಕರುಣಾನಿಧಿಯವರ ಸಹೋದರಿಯ ಪುತ್ರ. ಅವರ ಹಿರಿಯ ಸಹೋದರ ದಿ. ಮುರುಸೋಳಿ ಮಾರನ್ ( ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದರು) ಹಾಗೂ  ಸೆಲ್ವಂ ಇಬ್ಬರೂ ತಮ್ಮ ಸೋದರಮಾವ ಕರುಣಾ ನಿಧಿಯವರ ಪುತ್ರಿಯರನ್ನು ವಿವಾಹವಾಗಿದ್ದಾರೆ. ನಾನು 1981 ರಿಂದ 1984 ರ ವರೆಗೆ ಅಂದಿನ ಮದ್ರಾಸ್ ನಗರದಲ್ಲಿ ವಾಸವಿದ್ದ ಸಂದರ್ಭದಲ್ಲಿ ಸೆಲ್ವಂ ರವರು ತಮ್ಮ ಹಿರಿಯ ಸಹೋದರ ಮಾರನ್  ಸ್ಥಾಪಿಸಿದ್ದ ಡಿ.ಎಂ.ಕೆ. ಪಕ್ಷದ ಮುಖವಾಣಿ ಮುರುಸೋಳಿ ಎಂಬ ಪತ್ರಿಕೆಯ ಪತ್ರಿಕೆಯ ಸಂಪಾದಕರಾಗಿದ್ದರು. ಜೊತೆಗೆ ತಮಿಳು ಸಾಹಿತ್ಯ ಮತ್ತು ಕಲೆಯಲ್ಲಿ ಅಪಾರ ಪಾಂಡಿತ್ಯ ಹೊಂದಿರುವ ಅವರು,   ತಮ್ಮ ಸೋದರ ಮಾವ ಕರುಣಾನಿಧಿಯವರಿಂದ ಪ್ರಭಾವಿತರಾಗಿ,  ತಮಿಳು ಸಾಹಿತ್ಯ, ಕಲೆ ಇವುಗಳ ಕುರಿತು ಅಧಿಕೃತವಾಗಿ ಮಾತನಾಡುವ ಪಾಂಡಿತ್ಯ ಹೊಂದಿದ್ದಾರೆ. ತಮಿಳು ಭಾಷೆಯಲ್ಲಿ ಹತ್ತು ಲಕ್ಷ ಪ್ರಸಾರವಿರುವ ಕುಂಕುಮಂ ಎಂಬ ವಾರಪತ್ರಿಕೆಯ ಸಂಪಾದಕರಾಗಿ  ಬೆಂಗಳೂರಿನ ಉದಯ ಟಿ.ವಿ. ಕಛೇರಿಯಲ್ಲಿ ಕುಳಿತು ಪತ್ರಿಕೆಯನ್ನು ನಿರ್ವಹಿಸುತ್ತಿದ್ದಾರೆ.


ಕರಗಟಂ ನೃತ್ಯ ಕಲೆಯ ಬಗ್ಗೆ  ನಮ್ಮ ಅಧ್ಯಕ್ಷರ ಬಳಿ ಪ್ರಸ್ತಾಪಿಸಿದಾಗ, “ ಕೊಪ್ಪ, ನೀನು ತಂಜಾವೂರು ಸುತ್ತ ಮುತ್ತಾ ಯಾವಾಗಲೂ ಓಡಾಡ್ತಾ ಇರ್ತೀಯಾ,, ತಂಜಾವೂರು- ಕುಂಬಕೋಣಂ ನಡುವಿನ ಈ ಹಳ್ಳಿಗಳಲ್ಲಿ ಕರಗಟಂ ಕಲಾವಿದರ ಕೆಲವು  ಕುಟುಂಬಗಳಿವೆ. ಒಮ್ಮೆ ಅವರ ಮನೆಗೆ ಹೋಗಿ ಅವರ ತಲೆಯ ಮೇಲ್ಭಾಗ ಅಂದರೆ  ಕಲಾವಿದರ ನೆತ್ತಿಯನ್ನು ಪರೀಕ್ಷಿಸಿ ನೋಡು” ಎಂದರು. ನಾನು ಏಕೆ ಸರ್? ಎಂದು ಪ್ರಶ್ನಿಸಿದೆ. ಆವಾಗ ಅವರು ಹೇಳಿದ ಮಾತು ಕೇಳಿ ನನಗೆ ವಿಸ್ಮಯವಾಯಿತು. “ಕರಗಟಂ ಕುಟುಂಬದಲ್ಲಿ ಜನಿಸಿದ ಗಂಡು ಮಕ್ಕಳಿಗೆ ತಲೆಯ ಮೇಲಿನ ಕರಗ ಜಾರದಿರಲಿ ಎಂಬ ಉದ್ದೇಶದಿಂದ ಹತ್ತು ತಿಂಗಳ ವಯಸ್ಸಿನಿಂದ  ಮಕ್ಕಳ ನೆತ್ತಿಯನ್ನು ತಾಯಂದಿರು ತಮ್ಮ ಹಸ್ತ ದಲ್ಲಿ ತಟ್ಟಿ  ಸಮತಟ್ಟು ಮಾಡಲು ಆರಂಭಿಸುತ್ತಾರೆ. ಈ ಕೆಲಸ ಮಕ್ಕಳಿಗೆ ಸುಮಾರು ಹನ್ನೆರಡು ವರ್ಷವಾಗುವವರೆಗೂ ಮುಂದುವರಿಯುತ್ತದೆ” ಎಂಬ ಮಾಹಿತಿಯನ್ನು ಬಿಟ್ಟಿಟ್ಟರು. ನಾನು ಹಳ್ಳಿಗಳಿಗೆ ಹೋಗಿ ಕಲಾವಿದರನ್ನು ಪರೀಕ್ಷಿಸಿದಾಗ ಅವರ  ಮಾತು ನಿಜವಾಗಿತ್ತು. ಒಂದು ಕಲೆಗಾಗಿ ತಮ್ಮ ದೇಹವನ್ನು ಮತ್ತು ಬದುಕನ್ನು ಮುಡಿಪಾಗಿಡುವ ತಳಸಮುದಾಯದ ಬದ್ಧತೆ ನನ್ನನ್ನು ಮೂಕವಿಸ್ಮಿತನನ್ನಾಗಿ ಮಾಡಿತು. ( ಇದೀಗ ಬಹುತೇಕ ಕಲಾವಿದರ ಕುಟುಂಬಗಳು ತಂಜಾವೂರು ಹಳೆಯ ಬಸ್ ನಿಲ್ದಾಣದ ಬಳಿ ಅರಮನೆಗೆ( ಸರಸ್ವತಿ ಮಹಲ್) ಹೋಗುವ ದಾರಿಯಲ್ಲಿರುವ ಹರಿಜನ ಕೇರಿಯಲ್ಲಿ ವಾಸಿಸುತ್ತಿದ್ದಾವೆ)

ಇದು ಕಲಾವಿದರ ಬದುಕಾದರೆ, ಅವರ ಕರಗಟಂ ನೃತ್ಯಕ್ಕೆ ಪಕ್ಕವಾದ್ಯ ಅಂದರೆ, ವಾದ್ಯ, ಡೋಲು ನುಡಿಸುವ ಕಲಾವಿದರ ಮೂಲ ಹುಡುಕಿದರೆ, ಅವರೆಲ್ಲರೂ ರಾಜರ ಆಸ್ಥಾನದಲ್ಲಿದ್ದ ಚಿನ್ನ ಮೇಳಂ ( ಕಿರಿಯ ಮೇಳ) ಅಂದರೆ, ಅರಮನೆಯಲ್ಲಿ ನಡೆಯುತ್ತಿದ್ದ ರಾಜದಾಸಿಯರ ನೃತ್ಯಕ್ಕೆ ವಾದ್ಯ ಭಾರಿಸುತ್ತಿದ್ದ ಕಲಾವಿದರು ಹಾಗೂ ದೇವಸ್ಥಾನದ ಪೂಜೆ, ರಥೋತ್ಸವದಲ್ಲಿ ನೃತ್ಯ ಮಾಡುತ್ತಿದ್ದ ದೇವದಾಸಿಯರಿಗೆ ವಾದ್ಯ ನುಡಿಸುತ್ತಿದ್ದ ಪೆರಿಯ ಮೇಳಂ( ಹಿರಿಯವರ ಮೇಳ) ಕಲಾವಿದರ ಕುಟುಂಬದವರಿಂದ ಬಂದವರಾಗಿದ್ದರು. ಹೀಗೆ ಪ್ರಾಚೀನ ತಮಿಳು ಕವಿತೆಗಳ ಅಧ್ಯಯನ ಮಾಡಲು ಹೊರಟ ನನ್ನನ್ನು ಈ ಹುಡುಕಾಟ “ ದಕ್ಷಿಣ ಭಾರತದ ದೇವದಾಸಿಯರ ಇತಿಹಾಸ” ಕುರಿತ ಅಧ್ಯಯನದತ್ತ  ಕರೆದೊಯ್ದು ನಿಲ್ಲಿಸಿತು. ಹಾಗಾಗಿ ಕಳೆದ ಮೂರು ವರ್ಷಗಳಿಂದ ಗೆಳೆಯರು, ಸಮಾರಂಭಗಳು, ಹರಟೆ, ಮೋಜನ ಪ್ರವಾಸ ಎಲ್ಲವುಗಳಿಂದ ದೂರವಾಗಿ ರಾಶಿ, ರಾಶಿ ಮಾಹಿತಿಗಳನ್ನು ಮುಂದಿಟ್ಟುಕೊಂಡು ಕುಳಿತಿದ್ದೀನಿ.

ಕೊನೆಯ ಮಾತು- ಈಗ ಕರಗಟಂ ನೃತ್ಯದಲ್ಲಿ ಹಿಂದಿನ ಪರಿಶುದ್ಧತೆ ಉಳಿದಿಲ್ಲ. ಕಲಾವಿದರು ಹೊಟ್ಟೆ ಪಾಡಿಗಾಗಿ ಹಬ್ಬ ಮತ್ತು ಜಾತ್ರೆಗಳಲ್ಲಿ ಯುವಕರು ನೀಡುವ ಹಣದ ಆಮೀಷಕ್ಕೆ ಬಲಿ ಬಿದ್ದು, ತಮ್ಮ ಹೆಣ್ಣು ಮಕ್ಕಳಿಗೆ ತುಂಡು ಉಡುಗೆ ತೊಡಿಸಿ, ಅಶ್ಲೀಲವಾದ ತಮಿಳು ಸಿನಿಮಾ ಹಾಡುಗಳಿಗೆ ಕುಣಿಯುವಂತೆ ಮಾಡಿದ್ದಾರೆ.

ಬುಧವಾರ, ಸೆಪ್ಟೆಂಬರ್ 2, 2015

ಬೇಸಾಯದ ಬವಣೆಯ ಬೇರುಗಳನ್ನು ಅರಸುತ್ತಾ..

                                          (ಇತಿಹಾಸ ತಜ್ಞ ಪ್ರೊ. ಇರ್ಫಾನ್ ಹಬೀಬ್)

ನಮ್ಮ ಕರ್ನಾಟಕದಲ್ಲಿ ರೈತರು ದಿಕ್ಕೆಟ್ಟವರಂತೆ ಸಾವಿನ ಮೂಲಕ ತರಗೆಲೆಗಳಂತೆ ನೆಲಕ್ಕುರುಳುತ್ತಿದ್ದಾರೆ. ಆರಂಭದ ದಿನಗಳಲ್ಲಿ ಗಂಟಲಿನ ಪಸೆ ಆರುವಂತೆ ಲಭೊ ಲಭೋ ಎಂದು ದಿನವಿಡಿ ಬಡಿದುಕೊಂಡ ಮಾಧ್ಯಮಗಳು ಮಾತು ಮರತಂತೆ ಈಗ ತಣ್ಣಗಾಗಿವೆ. ದಿನಾ ಸಾಯುವವರಿಗೆ ಅಳುವವರು ಯಾರು? ಎಂಬಂತೆ ನಾವೆಲ್ಲಾ ತಣ್ಣಗೆ ನಮ್ಮದೇ ಆದ ಭ್ರಮಾತ್ಮಕ ಜಗತ್ತಿನಲ್ಲಿ ಹಾಗೂ ವ್ಯಯಕ್ತಿಕ ವ್ಯಸನಗಳಲ್ಲಿ ಮುಳುಗಿಹೋಗಿದ್ದೀವಿ. ರೈತರ ಆತ್ಮಹತ್ಯೆ ಎಂಬುದು ಮದ್ದಿಲ್ಲದ ಸಾವು ಎಂಬ ತೀರ್ಮಾನಕ್ಕೆ ಬಂದಂತೆ ನಾವು ಬದುಕುತ್ತಿದ್ದೀವಿ.
ಬೇಸಾಯದಲ್ಲಿ ಕಳೆದು ಹೋದ ವೃತ್ತಿ ನೈಪುಣ್ಯತೆ, ಬದ್ಧತೆ ಹಾಗೂ  ಗತಿಸಿದ ಪರಂಪರೆಯಕೊಂಡಿಗಳನ್ನು ಹುಡುಕುವ ವ್ಯವಧಾನ ಯಾರಿಗೂ ಇದ್ದಂತಿಲ್ಲ. ಕಳೆದು ಎರಡು ದಿನಗಳಿಂದ ನನ್ನ ಸಂಗ್ರಹದಲ್ಲಿದ್ದ  ಖ್ಯಾತ ಇತಿಹಾಸಕಾರ ಇರ್ಫಾನ್ ಹಬೀಬ್ ರವರ” ಪೀಪಲ್ಸ್ ಹಿಸ್ಟರಿ ಆಫ್ ಇಂಡಿಯಾ” ಎಂಬ ಮಾಲಿಕೆಯ ಕೆಲವು ಕೃತಿಗಳನ್ನು ತಿರುವು ಹಾಕುತ್ತಿದ್ದೆ.  ಭಾರತದ ಬಲಪಂಥೀಯ ಚಿಂತನೆಗಳಿಂದ ರೂಪುಗೊಂಡಿರುವ ಇತಿಹಾಸಕ್ಕೆ ಪರ್ಯಾಯವಾಗಿ ಇತಿಹಾಸವನ್ನು ವಾಸ್ತವಿಕ ಹಾಗೂ ಗಟ್ಟಿಯಾದ ಪುರಾವೆಗಳ ನೆಲೆಯಲ್ಲಿ ಭಾರತ  ಚರಿತ್ರೆಯನ್ನು ಕಟ್ಟಿಕೊಡುತ್ತಿರುವ ರೋಮಿಲಾ ಥಾಪರ್, ಕೆ. ಅಯ್ಯಪ್ಪ ಪಣೀಕರ್ ಹಾಗೂ ಇರ್ಫಾನ್ ಹಬೀಬ್ ರವರ ಕೃತಿಗಳ ಬಗ್ಗೆ ನನಗೆ ಅಪಾರ ಪ್ರೀತಿ ಮತ್ತು ಗೌರವ.
ಇಂದು ಸಂಜೆ ಇರ್ಫಾನ್ ಹಬೀಬ್ ರವರ ಇಂಡಿಯನ್ ಎಕಾನಮಿ 1858-1914 ಎಂಬ ಕೃತಿಯನ್ನು ಓದುತ್ತಿದ್ದೆ. ಆ ಕೃತಿಯಲ್ಲಿನ ಕೃಷಿ ಕುರಿತಂತೆ ಒಂದು ಅಧ್ಯಾಯವಿದ್ದು ಅದರಲ್ಲಿ 1893 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ನಿರ್ಧೇಶನದ ಮೇರೆಗೆ ಭಾರತಕ್ಕೆ ಬೇಟಿ ನೀಡಿದ ರಸಾಯನಶಾಸ್ತ್ರದ ವಿಜ್ಞಾನಿ ಜೆ.ಎ. ವೋಕರ್ ಎಂಬಾತ ಬರೆದ ಟಿಪ್ಪಣಿಯನ್ನು ಇರ್ಫಾನ್ ಹಬೀಬ್ ದಾಖಲಿಸಿದ್ದಾರೆ. ವೋಕರ್ ಭಾರತದ ಕೃಷಿ ಕುರಿತು  ಬರೆದ ಮಾತುಗಳಿವು.

“ ಅತ್ಯಂತ ಪ್ರಾಚೀನ ಉಪಕರಣಗಳು ಹಾಗೂ ಕೃಷಿ ತಂತ್ರಗಾರಿಕೆಯು ಭಾರತದಲ್ಲಿ ಉಳಿದಿರುವುದಕ್ಕೆ ಅನೇಕ ಸಕಾರಣಗಳಿವೆ. ಇಲ್ಲಿನ ರೈತರ ಸಾಂಪ್ರಾದಾಯಕವಾದ ದೇಶಿ ಜ್ಞಾನ ಮತ್ತು ಅವರು ಉಪಯೋಗಿಸುವ ಅತ್ಯಂತ ಸರಳ ಹಾಗೂ ಹಗುರವಾದ ನೇಗಿಲು, ಗುದ್ದಲಿ, ಸಲಕೆಗಳು ಅತ್ಯಂತ ಪರಿಣಾಮಕಾರಿ ಸಲಕರಣೆಗಳಾಗಿವೆ. ಇಲ್ಲಿನ ಮಿಶ್ರ ಬೆಳೆ ಪದ್ಧತಿ ಮತ್ತು ಬೆಳೆಗಳ ಆವರ್ತನೆಯ ಪದ್ಧತಿ ನಿಜಕ್ಕೂ ಜಗತ್ತಿಗೆ ಮಾದರಿಯಾಗುವಂತಹವು. ಬೆಳೆಗಳ ನಡುವೆ ಬೆಳೆಯುವ ಕಳೆಯನ್ನು ಬೇರು ಸಮೇತ ಕಿತ್ತೊಗೆಯುವ ಅವರ ದೈಹಿಕ ಶ್ರಮ ಮತ್ತು ರೈತರು ಸುಲಭವಾಗಿ ಕೊಂಡೊಯ್ಯಲು ಅನುಕೂಲವಾಗುವಂತೆ ಸಿದ್ಧಪಡಿಸಿಕೊಂಡಿರುವ ಮರದ ನೇಗಿಲುಗಳು ಅಚ್ಚರಿ ಮೂಡಿಸುತ್ತವೆ. ಈ ನೇಗಿಲುಗಳು ಫಲವತ್ತಾದ ಭೂಮಿಯ ಮೇಲ್ಪದರನ್ನು ಮಗುಚಿ ಹಾಕುವಲ್ಲಿ ಪರಿಣಾಮಕಾರಿಯಾಗಿವೆ. ಇಲ್ಲಿನ ಬೀಜ ಬಿತ್ತನೆಯ ಕ್ರಮ ಹಾಗೂ ವಿನಿಮಯ ಪದ್ಧತಿಯು ವಿಸ್ಮಯಕಾರಿಯಾಗಿದ್ದು ಜೊತೆಗೆ ದಕ್ಷತೆಯಿಂದ ಕೂಡಿದೆ.”

ಸುಮಾರು 122 ವರ್ಷಗಳ ಹಿಂದೆ  ಭಾರತದಲ್ಲಿ ಸ್ವಾವಲಂಭಿಯಾಗಿದ್ದ  ಬೇಸಾಯದ ಕ್ರಮವನ್ನು ಬ್ರಿಟೀಷ್ ವಿಜ್ಞಾನಿ ಈ  ರೀತಿ ಬಣ್ಣಿಸುತ್ತಾ, ಬ್ರಿಟೀಷ್ ಸರ್ಕಾರದ ಒತ್ತಡದ ಮೇರೆಗೆ ಭಾರತದ ರೈತರು ನೀಲಿ ಬೆಳೆ ಮತ್ತು ಎಣ್ಣೆಯ ಬೇಳೆಕಾಳುಗಳ ಬೆಳೆ ತೆಗೆಯಲು ಹೊರಟು ತಮ್ಮ ಸಾಂಪ್ರದಾಯಿಕ ಕೃಷಿಯ ಪದ್ಧತಿಯನ್ನು ಕಳೆದುಕೊಂಡರು ಎನ್ನುತ್ತಾ ಭಾರತದ ಕೃಷಿ ಲೋಕದ ಅವನತಿಯ ಅಧ್ಯಾಯವನ್ನು ನಿಖರವಾಗಿ ಗುರುತಿಸಿದ್ದಾನೆ.