ಮಂಗಳವಾರ, ಫೆಬ್ರವರಿ 17, 2015

ಭಗವದ್ಗೀತೆ ಮತ್ತು ಮತೀಯವಾದದ ವಿಕೃತಿಗಳು


ಹಿಂದೂ ಧರ್ಮದ ಅಲ್ಪ ಸಂಖ್ಯಾತ ಹಾಗೂ ಮೇಲ್ವರ್ಗದ ಸಮುದಾಯದ ಪಾಲಿಗೆ ಪವಿತ್ರ ಗ್ರಂಥವಾಗಿರುವ ಭಗವದ್ಗೀತೆ ಕೃತಿಯು ಕೇಂದ್ರದಲ್ಲಿ ಸಂಘಪರಿವಾರದ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹಲವು ರೀತಿಯ ವಿವಾದಗಳಿಗೆ ಕೇಂದ್ರ ಬಿಂದುವಾಗಿದೆ. ಮೋದಿ ಸರ್ಕಾರದಲ್ಲಿ ವಿದೇಶಾಂಗ ಖಾತೆಯ ಸಚವೆಯಾಗಿರುವ ಸುಷ್ಮಸ್ವರಾಜ್ ಭಗವದ್ಗೀತೆ ಕೃತಿಯನ್ನು ರಾಷ್ಟ್ರೀಯ ಗ್ರಂಥವನ್ನಾಗಿ ರೂಪಿಸಲು ಬಿ.ಜೆ.ಪಿ. ಸರ್ಕಾರ ಸನದ್ಧವಾಗಿರುವ ವಿಷಯವನ್ನು ಬಹಿರಂಗಗೊಳಿಸಿದ ಮೇಲೆ ಭಗವದ್ಗೀತೆ ಮೇಲಿನ ಚರ್ಚೆ ಇದೀಗ ಮುಂಚೂಣಿಗೆ ಬಂದಿದೆ,
ಇಲ್ಲಿ ಭಗವದ್ಗೀತೆ ಗ್ರಂಥ ಮೇಲಿನ ಆರೋಪ, ಅನುಮಾನಗಳನ್ನು ಒಂದು ಬದಿಗೆ ಸರಿಸಿ; ನಾವು ಮುಖ್ಯವಾಗಿ ಹಾಕಿಕೊಳ್ಳಬೇಕಾದ ಪ್ರಶ್ನೆಯೊಂದಿದೆ. ಬಹು ಸಂಸ್ಕøತಿಯ ರಾಷ್ಟ್ರವಾದ ಭಾರತದಲ್ಲಿಬಾರತೀಯ ಸಂವಿಧಾನಎಂಬ ಗ್ರಂಥವೊಂದಿದ್ದು, ಅದು ಎಲ್ಲಾ ಭಾಷಿಕರಿಗೆ, ಎಲ್ಲಾ ಧರ್ಮೀಯರಿಗೆ ಮತ್ತು ಧರ್ಮ ಅಥವಾ ಜಾತಿಯ ಕಟ್ಟುಪಾಡುಗಳಿಲ್ಲದೆ ಸಮುದಾಯದ ಗುಂಪುಗಳಾಗಿ ಅರಣ್ಯಗಳಲ್ಲಿ ಬದುಕುತ್ತಿರುವ ಬುಡಕಟ್ಟು ಜನಾಂಗಗಳಿಗೆ ತಮಗೆ ಇಷ್ಟವಾದಂತೆ ಬದುಕಲು ¸ಂವಿಧಾನ ಬದ್ಧ  ಸಮಾನ ಅವಕಾಶವನ್ನು ನೀಡಿದೆ. ಅಲ್ಪ ಸಂಖ್ಯಾತ ಸಮುದಾಯವೊಂದರ ಆಶೋತ್ತರಗಳಿಗೆ ಅನುಗುಣವಾಗಿ ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವಾಗಿಸುವ ಪ್ರಕ್ರಿಯೆಯು ಸಂವಿಧಾನ ವಿರೋಧಿಯಲ್ಲವೆ? ಒಂದು ಧರ್ಮದ ಕೃತಿಯನ್ನು ಅನ್ಯ ಧರ್ಮಿಯರ ಮೇಲೆ ಹೇರಲು ಹೊರಟಿರುವ ಪ್ರಕ್ರಿಯೆ ಧಾರ್ಮಿಕ ಭಯೋತ್ಪಾದನೆ ಅಥವಾ ಮೂಲಭೂತವಾದಿತನವೇ  ಹೊರತು ಬೇರೇನಲ್ಲ.
 ಜಾತಿ ಮತ್ತು ಧರ್ಮದ  ನೆಲೆಗಳ ಆಚೆ ನಿಂತು ಬದುಕಿದ, ವಿಶ್ವ ಮಾನವ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಚಿಂತಿಸಿದ ಅನೇಕ ಚಿಂತಕರು ಮತ್ತು ಸಾಹಿತಿಗಳು ಭಗವದ್ಗೀತೆಯನ್ನು ಪ್ರಶ್ನಿಸಿದ ಕಾರಣಕ್ಕಾಗಿ ಮತೀಯ ಭಾವನೆಗಳನ್ನು ಉದ್ದೀಪಿಸುವ ಕಾಯಕವನ್ನು ವೃತ್ತಿಯನ್ನಾಗಿ ಮಾಡಿಕೊಂಡಿರುವ ನಮ್ಮ  ಕೆಲವು ದೃಶ್ಯ ಮಾಧ್ಯಮಗಳು ಮತ್ತು ಮುದ್ರಣ ಮಾಧ್ಯಮಗಳ ಅವಹೇಳನಕ್ಕೆ ಗುರಿಯಾಗುತ್ತಿದ್ದಾರೆ. ಭಾರತದಲ್ಲೀಗ ಬಡತನ, ಹಸಿವು, ಅಜ್ಞಾನ ಮತ್ತು ಅನಕ್ಷರತೆಗಿಂತ  ಬೃಹದಾಕಾರವಾಗಿ ಬೆಳೆಯುತ್ತಿರುವ ಧಾರ್ಮಿಕ ಅಸಹನೆಯ ಭಾವನೆ ಹಾಗೂ ಮತೀಯವಾz ಇವುಗಳುÀ ಅತಿ ದೊಡ್ಡ ಸವಾಲಾಗಿವೆ. ಡಾ. ಅಂಬೇಡ್ಕರ್ ಇಲ್ಲದ ಭಾರತ ಮತ್ತು ಪಿ.ಲಂಕೇಶ್, ಪ್ರೊ. ನಂಜುಂಡಸ್ವಾಮಿ ಹಾಗೂ ಪ್ರೊ.ಕೆ. ರಾಮದಾಸ್ರಿಲ್ಲದ ಕರ್ನಾಟಕ ಇವುಗಳು ಧರ್ಮದ ಹೆಸರಿನಲ್ಲಿ ಬೆಂಕಿಯುಗುಳುವ ಮತ್ತು ಅಕ್ಷರದ ಹೆಸರಿನಲ್ಲಿ ವಿಷ ಕಕ್ಕುವ ಧಾರ್ಮಿಕ ಮೂಲಭೂತವಾದಿಗಳಿಗೆ ವೇದಿಕೆಗಳಾಗಿ ಪರಿವರ್ತನೆ ಹೊಂದಿವೆ.

ಸಾವಿರಾರು ಭಾಷೆ ಮತ್ತು ನೂರಾರು ಸಂಸ್ಕತಿ ಹಾಗೂ ಹಲವು ಧರ್ಮಗಳ ನೆಲವಾದ ಭಾರತದಲ್ಲಿ ವ್ಯಾಸ ಮುನಿ ಬರೆದ ಮಹಾಭಾರತವೊಂದೇ  ಅಂತಿಮ ಕೃತಿಯಲ್ಲ. ಅಲ್ಲದೆ, ವಾಲ್ಮೀಕಿ ಬರೆದ ರಾಮಾಯಾಣವೊಂದೇ ಪರಮ ಹಾಗೂ ಶ್ರೇಷ್ಠ ಕೃತಿಯಲ್ಲ. ಒಂದೊಂದು ಭಾಷೆಗೂ , ಒಂದೊಂದು ಸಂಸ್ಕತಿಗೂ   ಅವರದೇ ಆದ ಮಹಾಭಾರತಗಳಿವೆ. ರಾಮಾಯಣಗಳಿವೆ. ಕಾರಣಕ್ಕಾಗಿ ನಮ್ಮ ಕನ್ನಡ  ಸಾಹಿತ್ಯ ಮತ್ತು ಚಿಂತನೆಯ ಸಾಕ್ಷಿ ಪ್ರಜ್ಞೆಯಂತಿರುವ ಕುವೆಂಪು ರವರು ತಮ್ಮಕರಿಸಿದ್ಧಎಂಬ ಕಥನ ಕಾವ್ಯದಲ್ಲಿ ಹೀಗೆ ದಾಖಲಿಸಿದ್ದಾರೆ.
ಜಗಕೆಲ್ಲ ಒಂದೆ ರಾಮಾಯಣವು ಎಂಬುದದು
 ಹೆದ್ದಪ್ಪು. ಇಳೆಗೆಲ್ಲ ವಾಲ್ಮೀಕಿಯೊಬ್ಬನೇ
   ಕವಿ ಎಂಬುದು ತಪ್ಪು. ತಿರೆಗೆಲ್ಲ ಶ್ರೀರಾಮ
ನೊಬ್ಬನೇ ಎಂಬುವರು ಬೆಪ್ಪುಗಳೇ. ಹನುಮಂತ
  ರೆನಿತಿಹರು ಮಲೆಯ ಕಾಡುಗಳಲ್ಲಿ! ಒಂದೊಂದು
ಹಳ್ಳಿಯಲಿ ಒಬ್ಬೊಬ್ಬ ಜಸವಂತನಾಗದಿಹ
ವಾಲ್ಮೀಕಿ ನೆಲಸಿಹನು. ರಾಮಾಯಣಗಳಂತೂ
ಲೆಕ್ಕಕ್ಕೆ ಮಿತಿಯಿಲ್ಲ. ಕಣ್ದೆರೆದು ನೋಡಿದರೆ
ತೋರಿ ಬರುವುದು ನಿಜವು. ಒಬ್ಬೊಬ್ಬ ಗಂಡಿನಲಿ
ಶ್ರೀರಾಮನಡಗಿಹನು; ಒಬ್ಬೊಬ್ಬ ಹೆಂಡತಿಯ
ಎದೆಯೊಳಿರುವಳು ಸೀತೆ, ಇಂತಿರಲು ವಾಲ್ಮೀಕಿ
ಬರೆದಿರುವ ರಾಮಾಯಣವು ಕೋಟಿ ಕಾವ್ಯಗಳ
ಲೊಂದೆನ್ನಲತಿಶಯವೆ?
ನಮ್ಮ ಭಾರತದ ಪುರಾಣ ಕಾವ್ಯಗಳ ವಸ್ತು ಸ್ಥಿತಿ ಹೀಗಿರುವಾಗ, ನಮ್ಮ ನಡುವೆ ಬದುಕಿದ್ದ ಜಗತ್ತಿನ ಶ್ರೇಷ್ಠ ಜಾನಪದ ತಜ್ಞರಲ್ಲಿ ಒಬ್ಬರಾಗಿದ್ದ .ಕೆ. ರಾಮಾನುಜಂ ರವರು ಸಂಪಾದಿಸಿದ ದಕ್ಷಿಣ ಏಷ್ಯಾ ರಾಷ್ಟ್ರಗಳ ರಾಮಾಯಣ ಕಥನಗಳ ಕೃತಿಮುನ್ನೂರು ರಾಮಾಯಣಗಳುಎಂಬ ಕೃತಿಯು ದೆಹಲಿ ವಿಶ್ವ ವಿದ್ಯಾನಿಲಯದ ಪದವಿಗೆ ಪಠ್ಯವಾದ ಸಂದರ್ಭದಲ್ಲಿ ಪ್ರತಿಭಟಿಸಿ, ಕೃತಿಯನ್ನು ಹೊರಗಿಟ್ಟ ಧಾರ್ಮಿಕ ಮೂಲಭೂತವಾದಿ ಮನಸ್ಸುಗಳು ಇದೀಗ ಭಗವದ್ಗೀತೆ ಕುರಿತು ಮಾತನಾಡುತ್ತಿರುವುದು ವರ್ತಮಾನದ ವ್ಯಂಗ್ಯವಲ್ಲದೆ ಬೇರೇನೂ ಅಲ್ಲ.
ವ್ಯಾಸ ಮುನಿ ಬರೆದದ್ದೇ  “ಮಹಾಭಾರತಕೃತಿ ಎಂದು ನಂಬಿಕೊಂಡಿರುವ ಹಾಗೂ ಹಿಂದೂ ಧರ್ಮವನ್ನು ಗುತ್ತಿಗೆ ಪಡೆದವರಂತೆ ವರ್ತಿಸುವ ಬೃಹಸ್ಪತಿಗಳು ನಮ್ಮ ಜನಪದರ ನಡುವೆಯೂ ಮಹಾಭಾರತ ಎಂಬ ಮೌಖಿಕ ಪಠ್ಯವೊಂದು ಅನೇಕ ಶತಮಾನಗಳ ಕಾಲ ಎದೆಯಿಂದ ಎದೆಗೆ ಹರಿದು ಬಂದಿರುವ ಸಂಗತಿಯನ್ನು ಅರಿಯಬೇಕಿದೆ. ಜಾನಪದ ತಜ್ಞ ಹಾಗೂ ಸುಶ್ರಾವ್ಯ ಕಂಠದ ನನ್ನ ಹಿರಿಯ ಮಿತ್ರರಾದ ಮೈಸೂರಿನ ಡಾ.ಪಿ.ಕೆ. ರಾಜಶೇಖರ್ ಅವರು . ನಾಲ್ಕು ಡೆಮ್ಮಿ ಆಕಾರದ ಹಾಳೆಯಲ್ಲಿ 640 ಪುಟಗಳ ಅಂದರೆ ನಾವು ಓದುವ ಪುಸ್ತಕಗಳ ಹಾಳೆ ಸೈಜಿನಲ್ಲಿ 1280 ಪುಟಗಳಲ್ಲಿ ದಾಖಲಿಸಿರುವಜನಪದ ಮಹಾಭಾರತಎಂಬ ಕೃತಿ ನಮ್ಮಲ್ಲಿ ವಿಸ್ಮಯವನ್ನುಂಟು ಮಾಡುತ್ತದೆ. ಅಪರೂಪದ ಅಲಿಖಿತ ಕೃತಿ ಅಥವಾ ಮೌಖಿಕ ಪಠ್ಯವು ಚಾಮರಾಜನಗರ ಜಿಲ್ಲೆಯ ಸಿದ್ದ ಸೆಟ್ಟಿ ಎಂಬ ಗಾಣಿಗ ಜನಾಂಗಕ್ಕೆ ಸೇರಿದ ಅನಕ್ಷರಸ್ಥನೊಬ್ಬನ ಎದೆಯಲ್ಲಿ ಅಡಗಿ ಕುಳಿತಿತ್ತು. ಹಾಗಾಗಿ ನನ್ನ ಪಾಲಿಗೆ ಸಿದ್ದ ಶೆಟ್ಟಿ ಎಂಬ ಅನಕ್ಷರಸ್ತ ವಾಲ್ಮೀಕಿ, ವ್ಯಾಸರಿಗಿಂತ ದೊಡ್ಡವನು. ಇಂತಹ ಅನೇಕ ಪಠ್ಯಗಳು ನಮ್ಮ ಭಾರತದ ಅನೇಕ ಗ್ರಾಮಗಳಲ್ಲಿ ಮತ್ತು ಅರಣ್ಯಗಳಲ್ಲಿ ವಾಸಿಸುತ್ತಿರುವ ಜನಪದರ ಎದೆಯೊಳಗೆ ಅನಾಮಿಕವಾಗಿ ಅಡಗಿ ಕುಳಿತಿವೆ.


ಹಾಡಿನ ರೂಪದಲ್ಲಿರುವ ಜನಪದ ಮಹಾಭಾರತ ಕೃತಿಯಲ್ಲಿ ಗಧಾ ಯುದ್ಧ ಪರ್ವ ಭಾಗವು, ಶ್ರೀ ಕೃಷ್ಣನ ಪ್ರಾರ್ಥನೆಯೊಂದಿಗೆ ಹೀಗೆ ಆರಂಭವಾಗುತ್ತದೆ.
   ಜಯತು ಜಯ ಜಯತು ಜಯ ಜಯತು ಜಯತೋ
   ಶ್ರೀ ಕ್ರಿಷ್ಣ ( ಕೃಷ್ಣ ಅಲ್ಲ) ಪರಮಾತ್ಮ ಜಯತು ಜಯತೋ ( ಸೊಲ್ಲು)
ಕುರುಕ್ಷೇತ್ರ ಯುದ್ಧದಲ್ಲಿ ತನ್ನವರನ್ನು ಕಳೆದುಕೊಂಡು ಏಕಾಂಗಿಯಾದ ದುರ್ಯೋಧನ  ಬಾಣಗಳ ಮೇಲೆ ಮಲಗಿರುವ ಭೀಷ್ಮರ ಬಳಿ ಬಂದು ಸಲಹೆ ಕೇಳುವ ಭಾಗವು ಇಂತಿದೆ.
ಸರಳ ಮಂಚದ ಮೇಲೆ/ ಭೀಷ್ಮರು ಮನುಗಿರಲು/ ಗುರುವಾದ ದ್ರೋಣರು/ ಸೋರುಗ್ರಸ್ತರಾದರು/ ಶಲ್ಯ ಶಕುನಿ ಕರ್ಣ/ ಸೈಂಧುವ ದುಸ್ವಾಸ/ ಗಾಂಧಾರಿ ತಾಯಿಯ/ ತೊಂಬತ್ತೊಂಬತ್ತು ಮಕ್ಕಳು/ ಪರಲೋಕ ಸೇರಿದರು/ ಉಳಿದೋನೊ ಒಬ್ಬನೆ/ ಕೌರವರಾಯನು/ ಮುಂದ್ಯಾರು ನನಗೆ/ ಗತಿಯೆಂದು ಚಿಂತಿಸಿ/ವ್ಯೆತೆಗಳ ಮಾಡುತಾನೆ.ಪಾಂಡವಕುಮಾರರಲ್ಲಿ/ ಪರಮವೈರಿ ರುಕೋದ(ಭೀಮ)/ ಅವನನ್ನು ಮುಗಿಸದೆ/ನಾನು ಸಾಯುವಂತಿಲ್ಲ/ಅಲ್ಲಿಗೆ ನನ್ನ ಬದುಕು/ ಸಫಲವು ಸಾರ್ಥಕವು/ಹೀಗೆಂದು ಕೌರವನು/ ಮನದೊಳಗೆ ಯೋಚಿಸಿ/ಚಿಂತೆಗಳ ಮಾಡುತಾನೆ.
ಹೆತ್ತಯ್ಯ ಭೀಷರು/ ಸರಳು ಮಂಚದ ಮೇಲೆ/ವೆಥೆಗಳ ಪಡುವಾಗ/ ಕೌರವೇಶ್ವರನಾದ/ ದುಯೋದ ಅಲ್ಲಿಗೆ/ ಬಂದು ಹೆತ್ತಯ್ಯನ/ಪಾದಗಳ ತಬ್ಬುಕೊಂಡ/ ಹೆತ್ತಯ್ಯ ಹೆತ್ತಯ್ಯ/ನನ್ನ ಹಟಸಾದ್ನೆಯಿಂದ/ನಿಮ್ಮ ಮಾತ ಕೇಳದೆ/ಪಾಡವ ಕುಮಾರರಲ್ಲಿ/ ಹಗೆತನವ ಮಾಡಿದೆನು/ಘನವಂತರಾದ ನೀವು/ ಇಂತೆ ಪಾಡು ಪಡುವುದಕ್ಕೆ/ನಾನೇ ಕಾರ್ಣನಾದೆನು/ ಎಲ್ಲಾರು ನನ್ನೊಬ್ಬನ/ಕೈಬಿಟ್ಟು ಹೋದರು/ ಇನ್ಯಾಗೆ ನಾನೊಬ್ನೆ/ ಪಾಂಡುವರ ಜಯಿಸಲಜ್ಜ?.
  ಸಂದರ್ಭದಲ್ಲಿ ಭೀಷ್ಮ ಹೇಳುವ ಮಾತುಗಳಿವು- ಕಂದ ವೀರ ದುರ್ಯೋದ/ ಪಾಡವಕುಮಾರರಿಗೆ/ ಪರಮಾತ್ನ ಸಾಹ್ಯವುಂಟು/ಆದರೂನಿನ್ನಮನಸ/ನಾನುಕೆಡಿಸೋನಲ್ಲ/ಗೋವುಕೊಂದಪಾಪಾನ/ಕಳುಕೊಳ್ಳಬೇಕೂಂತ/ಬಲರಾಮದೇವರು/ತೀರ್ಥಯಾತ್ರೆಗಂತ/ಹೋಗಿರುವಂತಹದ್ದು/ನಿನಗೆ ಗೊತ್ತು ತಾನೆ?/ ಬಲರಾಮನಿಗೆ ಕಂದ/ನೀನಂದ್ರೆ ಪಮಚಪ್ರಾಣ/ಅವನಿಂದ ನಿನಗೇನಾದ್ರೂ/ ಸಾಹ್ಯವು ಆಗಬವುದು/ ಅವನು ಬರೀನ್ಗಂಟ/ ನೀನು ತಲೆಮರೆಸಿಕೊಂಡಿರಬೇಕು.
ಇದಕ್ಕೆ ದುಯೋಧನ ಹೀಗೆ ಆಕ್ಷೇಪವೆತ್ತುತ್ತಾನೆ
ಹೆತ್ತಯ್ಯ ನಾನು ವೀರ/ ಹೇಡಿಯಂತೆ ತಲೆ ಮರೆಸಿ/ಕೊಳ್ಳುವುದು ಯಾವ ನ್ಯಾಯ?
ದುರ್ಯೋಧನನ ಪ್ರಶ್ನೆಗೆ ಭೀಷ್ಮರು ನೀಡುವ ಉತ್ತರ ಹೀಗೆ ಮಾರ್ಮಿಕವಾಗಿದೆ.
ಕಾಲವೆಂಬ ಆನೆಯ/ ಹೊಟ್ಟೇಲಿ ನಾವುಗಳು/ ಬ್ಯಾಲದ ಹಣ್ಣುಗಳು/ ಆನೆಯ ಹೊಟ್ಟೇಗೆ/ ಹೋಗಬಾರದನ್ನೋದಾದ್ರೆ/ ತಪ್ಪಿಸಿಕೊಳ್ಳಬೇಕು/ ಒಳ್ಳೆಯ ದಿನಗಳಿಗಾಗಿ/ ಕಾದು ಕೂರಬೇಕು ಕಂದಾ?
ಜನಪದ ಮಹಾಭಾರತ ಕೃತಿಯ ಪದ್ಯದ ಸಾಲುಗಳು ಭಗವದ್ಗೀತೆಯ ಶ್ಲೋಕಗಳಿಗಿಂತ ಕಡಿಮೆ ಮೌಲ್ವವನ್ನು ಹೊಂದಿವೆ ಎಂದು ನನಗನಿಸುವುದಿಲ್ಲ. ಸ್ಥಳೀಯ ಭಾಷೆಯ ನುಡಿಗಟ್ಟನ್ನು (ಕಾಲವೆಂಬ ಆನೆಯ ಹೊಟ್ಟೆಲಿ ನಾವುಗಳು ಬ್ಯಾಲದ ಹಣ್ಣುಗಳು) ರೂಪಕ ಭಾಷೆಯಾಗಿ ಬಳಸಿರುವ ನಮ್ಮ ಜನಪದರು ಪಂಪ, ರನ್ನ, ಜನ್ನರಿಗಿಂತ ಕಡಿಮೆಯಾದ ಕವಿಗಳೆ? ಕಥನವನ್ನು ಕೇಳಿದ ನಾಡೋಜ ಹಂಪನಾ ರವರು ಸಿದ್ದಶೆಟ್ಟಿಗೆ ಮತ್ತು ಪಿ.ಕೆ. ರಾಜಶೇಖರ್ ರವನ್ನು   ಅಭಿನವ ವ್ಯಾಸನಿಗೆ, ಅಭಿನವ ಗಣಪನಿಗೆ ಉಘೇ ಉಘೇಎಂದು ಕೊಂಡಾಡಿರುವುದು ಅರ್ಥಪೂರ್ಣವಾಗಿದೆ.

ಭಗವದ್ಗೀತೆ ಹಿಂದೂ ಧರ್ಮದ ಪವಿತ್ರ ಗ್ರಂಥವಾಗಿ ಜಾಗತಿಕ ಮನ್ನಣೆ ಪಡೆದಿದೆ ನಿಜ. ಇದರ ಬಗ್ಗೆ ಎರಡು ಮಾತಿಲ್ಲ. ಭಾರತದ ಖ್ಯಾತ ತತ್ವಶಾಸ್ತ್ರಜ್ಞರಾದ ಡಾ.ಎಸ್ ರಾಧಾಕೃಷ್ಣನ್ ಮತ್ತು ಪ್ರೊ. ಹಿರಿಯಣ್ಣನವರ ಪಾಲಿಗೆ ಅದು ನೀತಿ ಗ್ರಂಥವಾಗಿ ಕಂಡರೆ, ಮಹಾತ್ಮ ಗಾಂಧಿಗೆ ಭಗವದ್ಗೀತೆ  ಮಾನವನ ಒಳಿತು ಕೆಡುಕುಗಳ ನೀತಿ ಶಾಸ್ತ್ರವಾಗಿ ಕಂಡಿದೆ. ಇವರು  ಅಥವಾ ಪಾಶ್ಚಿಮಾತ್ಯ ಜಗತ್ತಿನ ಪಂಡಿತರು ಒಪ್ಪಿಕೊಂಡರು ಎಂದ ಮಾತ್ರಕ್ಕೆ ಭಾರತದ ಎಲ್ಲಾ ನಾಗರೀಕರು ಒಪ್ಪಿಕೊಳ್ಳಬೇಕೆ ಎಂಬ ಹಠವೇಕೆ? ತಿರುಪತಿ ತಿಮ್ಮಪ್ಪನಿಗೆ ಒಪ್ಪಿಗೆಯಾದ ವಿಷಯಗಳನ್ನು ತಿಟ್ಟಮಾರನಹಳ್ಳಿ ತಿಮ್ಮೆಗೌಡ ಒಪ್ಪಿಕೊಳಬೇಕು ಎನ್ನುವುದಾದರೆ ಅದು ಸರ್ವಾಧಿಕಾರದ ಧೋರಣೆ ಮಾತ್ರ ಆದೀತು. ಭಗವದ್ಗೀತೆಯ ಅಸ್ಮಿತೆ ಕುರಿತಂತೆ ಮತ್ತು ಅದು  ರಚಿತವಾದ ಕಾಲಘಟ್ಟ ಕುರಿತಂತೆ ಹಾಗೂ  ಅದರಲ್ಲಿರುವ ಶ್ಲೋಕಗಳ ಸಂಖ್ಯೆ ಮತ್ತು ಅವುಗಳಲ್ಲಿ ಎದ್ದು ಕಾಣುವ ವೈರುಧ್ಯಗಳ ಬಗ್ಗೆ  ಕಳೆದ ಅರ್ಧ ಶತಮಾನದಿಮದ ಭಾರತದಲ್ಲಿ ಅನೇಕ ಪ್ರಶ್ನೆ ಮತ್ತು ತಕರಾರುಗಳಿವೆ. ಇವುಗಳ ಕುರಿತಂತೆ ಖಚಿತ ವಾಖ್ಯಾನಗಳಿಲ್ಲದ ದಿನಮಾನಗಳಲ್ಲಿ ಭಗವದ್ಗೀತೆಯನ್ನು ಮುಂಚೂಣಿಗೆ ತರಲು ಹೊರಟಿರುವುದು ಸಂಘಪರಿವಾರ ನೇತೃತ್ವದ ಕೇಂದ್ರಸರ್ಕಾರದ ಮರೆಮಾಚಿದ ಗುರಿಗಳಲ್ಲಿ ಅಂದರೆ ಹಿಡನ್ ಅಜೆಂಡಾಗಳಲ್ಲಿ ಒಂದು ಎಂದು ಕರೆಯಬೇಕಾಗುತ್ತದೆ.

ಭಗವದ್ಗೀತೆಯನ್ನು ಕ್ರಿಸ್ತಪೂರ್ವಕ್ಕಿಂತಲೂ ಸಾವಿರಾರು ವರ್ಷಗಳ ಹಿಂದಿನದು ಎಂದು ವಾದಿಸುತ್ತಾರೆ. ಆದರೆ, ಖ್ಯಾತ ಇತಿಹಾಸಕಾರರಾದ ಕೋಸಾಂಬಿಯವರು ಭಗವದ್ಗೀತೆಯು ಬುದ್ಧನ ಕಾಲದ ನಂತರ ಸೃಷ್ಟಿಯಾದ ಗ್ರಂಥವೆಂದು ಪುರಾವೆಗಳ ಸಹಿತ ವಾದ ಮಾಡಿದ್ದಾರೆ. ಅಂದರೆ ಕ್ರಿಶ್ತ ಪೂರ್ವ 300 ರಿಂದ 150 ವರ್ಷಗಳ ನಡುವಿನದು ಎಂದಿದ್ದಾರೆಭಗವದ್ಗೀತೆಯ ಕೃತಿಯಲ್ಲಿ ಬ್ರಹ್ಮ ಸೂತ್ರದ ಪ್ರಸ್ತಾವನೆಯಿದೆ. ( 13.4 ಬ್ರಹ್ಮಸೂತ್ರ ಪದೈಶ್ಚೇವ ಹೇತುಮದ್ಬಿಃ ವಿನಿಶ್ಚಿತೈಃ) ಬ್ರಹ್ಮ ಸೂತ್ರ ಗ್ರಂಥವು ಬುದ್ಧನ ದರ್ಶನಗಳ ವಿಚಾರಗಳನ್ನು ಒಳಗೊಂಡಿರುವುದು ಮುಖ್ಯವಾದ ಸಂಗತಿ. ಅದೇ ರೀತಿ ಭಗದ್ಗೀತೆಯ ಶ್ಲೋಕಗಳ ನಿಖರವಾದ ಸಂಖ್ಯೆಗಳು ಎಷ್ಟು. ವಿಷಯಕ್ಕೆ ಸಂಬಂಧಿಸಿದಂತೆ ಯಾರಲ್ಲೂ ಸಹಮತವಿಲ್ಲ. ಇವೆಲ್ಲಕ್ಕಿಂತ ಹೆಚ್ಚಾಗಿ ಭಗವದ್ಗೀತೆಯ ಶ್ಲೋಕಗಳಲ್ಲಿರುವ ವೈರುಧ್ಯ ಕುರಿತು ಡಾ. ಬಿ.ಆರ್. ಅಂಬೇಡ್ಕರ್ ಎತ್ತಿದ ಮೌಲಿಕ ಪ್ರಶ್ನೆಗಳಿಗೆ ಈವರೆಗೆ ಯಾರೂ ಉತ್ತರಿಸುವ ಗೋಜಿಗೆ ಹೋಗಿಲ್ಲ.


ಡಾ. ಅಂಬೇಡ್ಕರ್ ಭಗವದ್ಗೀತೆಯ ವೈರುಧ್ಯಗಳನ್ನು ರೀತಿ ಗುರುತಿಸಿದ್ದಾರೆ.
ಗೀತೆಯ ನಾಲ್ಕನೆಯ ಅಧ್ಯಾಯದಲ್ಲಿ 4.29 ಜ್ಞಾನಂ ಲಬ್ದ್ವಾ ಪರಾಂ ಶಾಂತಿ ಅಚಿರೇಣಾಧಿಗಚ್ಛತಿ ಅಂದರೆ, ಜ್ಞಾನವು ಭಕ್ತಿಗಿಂತಲೂ ದೊಡ್ಡದು. ಅದರ ಮೂಲಕ ವ್ಯಕ್ತಿಗೆ ಉನ್ನತ ಸ್ಥಾನ ಅಥವಾ ಸ್ತರ ಪ್ರಾಪ್ತಿಯಾಗುವುದೆಂದು ಹೇಳಲಾಗಿದೆ. ಆದರೆ ಅದೇ ಗೀತೆಯ ಹನ್ನೆರೆಡನೆಯ ಅಧ್ಯಾಯದಲ್ಲಿ 12.12 ಶ್ರೇಯೋ ಹಿ ಜ್ಞಾನಮುಭ್ಯಾಸಾತ್ ಜ್ಞಾನಾತ್ ಧ್ಯಾನಂ ವಿಶಿಷ್ಯತೇ ಧ್ಯಾನಾತ್ ಕರ್ಮಫಲತ್ಯಾಗಃ ತ್ಯಾಗಾತ್ ಶಾಂತಿರನಂತರಂ ಎಂದು ಹೇಳಲಾಗಿದೆ. ಅಂದರೆ ಜ್ಞಾನಕ್ಕಿಂತಲೂ ಧ್ಯಾನ ಶ್ರೇಷ್ಠವಾದುದು ಎನ್ನಲಾಗಿದೆ.
ಅಧ್ಯಾಯ 9 ರಲ್ಲಿ 9.29 ಸಮೋಹಂ ಸರ್ವಭೂತೇಷು ಮೇ ದ್ವೇಷ್ಯೋಸ್ತಿ ಪ್ರಿಯಂ ಅಂದರೆ ತನಗೆ ಯಾರೂ ಪ್ರಿಯರೂ ಅಲ್ಲ, ಅಪ್ರಿಯರೂ ಅಲ್ಲ ಎಂದು ಕೃಷ್ಣ ಹೇಳುತ್ತಾನೆ. ಮತ್ತೇ 12 ನೇ ಅಧ್ಯಾಯದಲ್ಲಿ 12.20 ರಲ್ಲಿ ಶ್ರದ್ದಧಾನಾ ಮತ್ವರಮಾ ಭಕ್ತಾಸ್ತೇ ಅತೀವ ಮೇ ಪ್ರಿಯಃ ಅಂದರೆ ಭಕ್ತರು ತನಗೆ ಪ್ರಿಯರೆಂದು ಹೇಳುತ್ತಾನೆ.
ಇಂತಹ ವೈರುಧ್ಯಗಳ ಗೂಡಾದ ಭಗವದ್ಗೀತೆಯನ್ನು ಒಪ್ಪಿಕೊಂಡವರಿಗೆ ಮತ್ತು ಅಪ್ಪಿಕೊಂಡವರನ್ನು ಹೇಗೆ  ಅರ್ಥೈಸಿಕೊಳ್ಳುವುದು?
ಇದು ಹಿಂದೂ ಧರ್ಮದ ಪವಿತ್ರ ಗಂಥಗಳಲ್ಲಿ ಒಂದಾದ ಭಗವದ್ಗೀತೆಯ ಸಮಸ್ಯೆ ಮಾತ್ರವಲ್ಲ, ಕ್ರಿಶ್ಚಿಯನ್ ರ್ಮದ ಬೈಬಲ್ ನಲ್ಲಿ ಮತ್ತು ಇಸ್ಲಾಂ ಧರ್ಮದ ಕುರಾನ್ ಗ್ರಂಥಗಳಲ್ಲಿಯು ಸಹ ಇಂತಹ  ಕುರುಡು ಆಚರಣೆಯ ಸಂಗತಿಗಳು ಸೇರಿದಂತೆ ಅನೇಕ ವೈರುಧ್ಯಗಳಿವೆ. ಸಾವಿರಾರು ವರ್ಷಗಳ ಹಿಂದೆ  ಕೆಲವು ವ್ಯಕ್ತಿಗಳು ತಾವು ದಕ್ಕಿಸಿಕೊಂಡ ತಮ್ಮ ತಮ್ಮ ಸೀಮಿತ ಜ್ಞಾನದ ಪರೀಧಿಯೊಳಗೆ ರಚಿತವಾದ ಗ್ರಂಥಗಳನ್ನು ಪರಾಮರ್ಶಿಸದೆ ಒಪ್ಪಿಕೊಳ್ಳುವುದಾದರೂ ಹೇಗೆ? ಸೂರ್ಯ ಮತ್ತು ಚಂದ್ರರನ್ನು ದೇವರೆಂದು ಕರೆದು ವ್ಯಾಖ್ಯಾನಿಸಿದ ಗ್ರಂಥಗಳನ್ನು 21 ನೇ ಶತಮಾನದಲ್ಲಿ ಸೂರ್ಯ ಮತ್ತು ಚಂದ್ರ ಎರಡೂ ಗ್ರಹಗಳು ನಾನು ಬದುಕುತ್ತಿರುವ ಭೂಮಿಯಂತಹ  ಗ್ರಹಗಳು ಎಂದು ನಂಬಿಕೊಂಡಿರುವ ವೈಜ್ಞಾನಿಕ ಮನೋಭಾವದ ವ್ಯಕ್ತಿಯ ಮೇಲೆ ಹೇರಲು ಸಾದ್ಯವೆ?
ಕೊನೆಯ ಮಾತು- ನನ್ನ ಆತ್ಮಿಯ ಮಿತ್ರರೂ ಹಾಗೂ ಕನ್ನಡ ನಾಡು ಕಂಡ ಸಂಸ್ಕತಿ ಚಿಂತಕರೂ ಆದ ಡಾ. ರಹಮತ್ ತರೀಕೆರೆಯವರು ಕಳೆದ ವಾರದ ಧಾರವಾಡದಲ್ಲಿ ನಡೆದ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಾ, ಧರ್ಮಗಳು ಎಲ್ಲರನ್ನು, ಎಲ್ಲವನ್ನೂ ತಮ್ಮ ಚೌಕಟ್ಟಿನಲ್ಲಿ ಹಿಡಿದಿಡಲು ಪ್ರಯತ್ನಿಸುತ್ತಿವೆ. ಪಾಕಿಸ್ಥಾನದ ಪೇಷಾವರದಲ್ಲಿ ಮಕ್ಕಳ ಶಾಲೆಯ ಮೇಲೆ ನಡೆದ ಕೃತ್ಯ ಇದರಲ್ಲಿ ಒಂದು ಭಾಗ ಎಂದು ವಿಶ್ಲೇಷಿಸಿದರು. ಮುಸ್ಲಿಂ ಮೂಲಭೂತವಾದಿಗಳಿಗೆ ತರೀಕೆರೆಯವರ ಮಾತುಗಳು ಧರ್ಮ ವಿರೋಧಿ ಚಟುವಟಿಕೆಯ ಹಾಗೆ ಕಂಡರೆ, ನನ್ನ ಪಾಲಿಗೆ ಧರ್ಮ ಮತ್ತು ಜಾತಿಯ ನೆಲೆಗಳಾಚೆ ನಿಂತು ಮನುಷ್ಯತ್ವ ಮತ್ತು ಮಾನವೀಯತೆಗಾಗಿ ತುಡಿಯುವ  ಸಹೃದಯಿ ಜೀವವೊಂದರ ಹಾಗೂ ಮನುಕುಲಕ್ಕೆ ಮಾದರಿಯಾಗುವ ಮಾತುಗಳಂತೆ ತೋರಿದವು.
ಧರ್ಮ ಮತ್ತು ಗ್ರಂಥಗಳ ವಿಚಾರವಾಗಿ ನಾವು ಮುಕ್ತ ಮನಸ್ಸು ಹೊಂದಲಾಗದೆ ದ್ವೀಪ ಸದೃಶ್ಯವಾಗಿ ಬದುಕುತ್ತಾ, ನಮ್ಮ ನಮ್ಮ ಮೂಗಿನ ನೇರಕ್ಕೆ ಯೋಚಿಸುತ್ತಾ ಸಾಗಿದರೆ, ನಾವು ಬದುಕುತ್ತಿರುವ ವರ್ತಮಾನದ ಜಗತ್ತು  ನಮ್ಮ ಪಾಲಿಗೆ ನೆಲದ ಮೇಲಿನ ನರಕವಾಗುವುದರಲ್ಲಿ ಸಂಶಯವಿಲ್ಲ. ಸಂದರ್ಭದಲ್ಲಿ ಕುವೆಂಪು ಅವರ ಸಾಲುಗಳು ನೆನಪಾಗುತ್ತಿವೆ,
        ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?
        ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
       ಎಂದೊ ಮನು ಬರೆದಿಟ್ಟುದಿಂದೆಮೆಗೆ ಕಟ್ಟೆನು?

(ಮಾಹಿತಿ ಸೌಜನ್ಯ- ಗುರು ಸಮಾನರಾದ ಡಾ.ಜಿ. ರಾಮಕೃಷ್ಣ ರವರ ಲೇಖನ-ಭಗವದ್ಗೀತೆಯ ಮರು ವಾಖ್ಯಾನದತ್ತ ಲೇಖನಡಾ. ವಿಜಯಾ ಸಂಪಾದಕತ್ವದಪಠ್ಯಾನುಸಂಧಾನಕೃತಿ)