ಶುಕ್ರವಾರ, ಸೆಪ್ಟೆಂಬರ್ 28, 2018

ದಾಸ್ಯದಿಂದ ಆಚೆಗೆ: ಮಹಾನ್ ಹೋರಾಟಗಾರನೊಬ್ಬನ ಕಥನ ಕೃತಿ ಕುರಿತು

¸

ಕನ್ನಡ ವಾಜ್ಮಯ ಜಗತ್ತಿನಲ್ಲಿ ಡಾ,ಕೆ.ಪುಟ್ಟಸ್ವಾಮಿಯವರ ಹೆಸರು ಎದ್ದುಕಾಣುವಂತಹ ಹೆಸರು. ಪತ್ರಕರ್ತರಾಗಿ, ಲೇಖಕರಾಗಿ ವಿಭಿನ್ನ ಹಾಗೂ ಆಸಕ್ತಿದಾಯಕದಾಯಕ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಬರೆಯುತ್ತಾ ಬಂದವರಲ್ಲಿ ಮತ್ತು ಅನುವಾದಿಸುವವರಲ್ಲಿ ಮುಖ್ಯರಾದವರು. ಸ್ವಾತಂತ್ರ್ಯ ಪೂರ್ವದದಲ್ಲಿ ಡಿ.ವಿ. ಗುಂಡಪ್ಪ ಮತ್ತು ಸಿದ್ದವನಹಳ್ಳಿ ಕೃಷ್ಣ ಶರ್ಮ ಈ ಇಬ್ಬರು ಮಹನೀಯರು ಹುಟ್ಟು ಹಾಕಿದ ಈ ಭವ್ಯ ಪರಂಪರೆಯನ್ನು  ಪಿ.ಲಂಕೇಶರು ಎತ್ತಿ ಹಿಡಿಯುವುದರ ಮೂಲಕ ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕೆ ಬೆಸುಗೆ ಹಾಕಿದರು. ಆನಂತರದ ದಿನಗಳಲ್ಲಿ ನನ್ನ ತಲೆಮಾರಿನ ನಡುವೆ ನಮಗೆ ಎನ್.ಎಸ್.ಶಂಕರ್ ಮತ್ತು ಡಾ,ಕೆ,ಪುಟ್ಟಸ್ವಾಮಿ ಗಮನಾರ್ಹ ಬರಹಗಾರರಾಗಿ, ಅನುವಾದಕರಾಗಿ ಕಾಣುತ್ತಾರೆ.
ಮೂಲತಃ ವಿಜ್ಞಾನ ಪದವೀಧರರಾದ ಪುಟ್ಟಸ್ವಾಮಿಯವರು ಪತ್ರಕರ್ತರಾಗಿ ವೃತ್ತಿಯನ್ನು ಆರಂಭಿಸಿದ ದಿನಗಳಲ್ಲಿ ತಮ್ಮ ಕ್ರೀಡಾ ವರದಿಗಳು,  ಲೇಖನಗಳು ಹಾಗೂ ಸಿನಿಮಾ ಕುರಿತ ವಿಶ್ಲೇಷಣೆಗಳ ಮೂಲಕ  ಪ್ರಭಾವ ಬೀರಿದವರು.  ಕಥೆಗಳನ್ನು ಸಹ ಬರೆಯುತ್ತಿದ್ದ ಪುಟ್ಟಸ್ವಾಮಿಯವರು 1990 ರ ದಶಕದ ಆರಂಭದ ದಿನಗಳಲ್ಲಿ ಚಾರ್ಲ್ಸ್ ಡಾರ್ವಿನ್ನನ " ಅರಿಜನ್ ಆಫ್ ಸ್ಪೈಸಿಸ್' ಕೃತಿಯನ್ನು ಜೀವ ಸಂಕುಲಗಳ ಉಗಮ ಎಂಬ ಹೆಸರಿನಲ್ಲಿ ಅನುವಾದ ಮಾಡುವುದರ ಮೂಲಕ ತಮ್ಮಲ್ಲಿದ್ದ ದೈತ್ಯ ಪ್ರತಿಭೆಯನ್ನು ಕನ್ನಡದ ಜಗತ್ತಿನೆದುರು ಅನಾವರಣ ಮಾಡಿದರು. ಇದರ ಹಿಂದೆ ಬಂದ ಹಾಗೂ ಕೃಪಾಕರ್ ಸೇನಾನಿ ಜೊತೆಗೂಡಿ ರಚಿಸಿದ  ಕೃತಿ ಜೀವ ಜಾಲ ಪುಟ್ಟಸ್ವಾಮಿಯವರನ್ನು ಕನ್ನಡದ ಅತ್ಯುತ್ತಮ ವಿಜ್ಞಾನ ಲೇಖಕರಲ್ಲಿ ಮುಖ್ಯರು ಎಂಬುದನ್ನು ಸಾಭೀತು ಪಡಿಸಿತು. ಆರ್ಕಿಡ್ ಸಸ್ಯಗಳನ್ನು ಒಳಗೊಂಡತೆ ನಿಸರ್ಗದ ಜೀವ ಜಗತ್ತಿನ ಕುರಿತು ನೂರಾರು ಲೇಖನಗಳನ್ನು ಬರೆದಿರುವ ಇವರು, ತಾವು ಬರೆಯುತ್ತಿರುವ ಕೃತಿಗಳ ಮೂಲಕ ವೈವಿಧ್ಯತೆಯನ್ನೂ ಕಾಪಾಡಿಕೊಂಡವರು.
ವರ್ತಮಾನದ ಈ ದಿನಗಳಲ್ಲಿ ಕೃತಿಗಳ ಸಂಖ್ಯೆಯನ್ನು ಬೆನ್ನಿಗಿಟ್ಟುಕೊಂಡು ಬೀಗುವ ಟೊಳ್ಳು ಲೇಖಕರ ನಡುವೆ ಡಾ,ಕೆ,ಪುಟ್ಟಸ್ವಾಮಿ ಏಕೆ ಗಮನಾರ್ಹ ಲೇಖಕರಾಗಿ ಕಾಣುತ್ತಾರೆ ಎಂದರೆ, ಅವರು ಕನ್ನಡದ ಜಗತ್ತಿಗೆ ನೀಡಿದ ಬಹುತೇಕ ಕೃತಿಗಳು ಅಮೂಲ್ಯ ಕೃತಿಗಳಾಗಿ ಉಳಿದುಕೊಂಡಿವೆ. ಜೀವಸಂಕುಲಗಳ ಉಗಮ, ಕ್ರೀಡಾ ಲೋಕ ಕುರಿತಂತೆ ಬರೆದ " ಭುವನದ ಭಾಗ್ಯ" ಕನ್ನಡ ಸಿನಿಮಾ ಜಗತ್ತಿನ ಇತಿಹಾಸ ಕುರಿತ : ಸಿನಿಮಾ ಯಾನ" ( ಈ ಕೃತಿಗೆ ರಾಷ್ಟ್ರ ಪ್ರಶಸ್ತಿ ದೊರಕಿದೆ) ಗಾಂಧೀಜಿ ಕುರಿತಂತೆ ಕನ್ನಡ ಬಂದಿರುವ ಶ್ರೇಷ್ಟ ಕೃತಿಗಳಲ್ಲಿ ಒಂದಾಗಿರುವ ಸಹಸ್ರಬುದ್ಧೆಯವರ " ಆಧುನಿಕ ವಿಜ್ಞಾನಕ್ಕೆ ಗಾಂಧಿಯ ಸವಾಲುಗಳು" ಎಂಬ ಅನುವಾದಿತ ಕೃತಿ. ಇವೆಲ್ಲವೂ ಪುಟ್ಟಸ್ವಾಮಿಯವರ ಹೆಸರನ್ನು ಕನ್ನಡದ ಸಾಂಸ್ಕೃತಿಕ ಜಗತ್ತಿನಲ್ಲಿ ಚಿರಸ್ಥಾಯಿಗೊಳಿಸಿವೆ. ಇದೀಗ ಇದೇ ಸಾಲಿನಲ್ಲಿ ನಿಲ್ಲಬಲ್ಲ "ದಾಸ್ಯದಿಂದ ಆಚೆಗೆ" ಎಂಬ ಅಮೇರಿಕಾದ ಕಪ್ಪು ಜನಾಂಗದ ಜನನಾಯಕನೊಬ್ಬನ ಆತ್ಮ ಚರಿತ್ರೆಯ ಕೃತಿಯನ್ನು ನಮ್ಮ ಮುಂದಿರಿಸಿದ್ದಾರೆ. ( ಅಭಿನವ ಪ್ರಕಾಶನದ ಪ್ರಕಟಣೆ)  ಈವರೆಗೆ ನಾವು ಕೇಳದ, ಓದದ ಬೂಕರ್ ಟಿ.ವಾಷಿಂಗ್ ಟನ್ ಎಂಬ ದಾರ್ಶನಿಕ ಮನೋಭಾದ ವ್ಯಕ್ತಿಯ ಈ ಆತ್ಮಕಥೆ ಹಲವು ಕಾರಣಗಳಿಗಾಗಿ ಮುಖ್ಯ ಕೃತಿಯಾಗಿ ನಿಲ್ಲುತ್ತದೆ.

ಅಸಮಾನತೆ, ಲಿಂಗತಾರತಮ್ಯ, ವರ್ಣತಾರತಮ್ಯ, ಜನಾಂಗೀಯ ದ್ವೇಷ ಇವುಗಳ ನಿವಾಎರಣೆಗೆ ಸಂಘರ್ಷ, ಉಗ್ರ ಹೋರಾಟಗಳು ಆಯುಧ ಎಂದು ನಂಬಿಕೊಂಡಿದ್ದ ಕಾಲಘಟ್ಟದಲ್ಲಿ ತಮ್ಮನ್ನು ತುಳಿಯುತ್ತಿದ್ದ ಬಿಳಿಯರ ಜೊತೆ ಅನುಸಂಧಾನ ನಡೆಸುತ್ತಾ, ಮಾನವೀಯ ಗುಣವುಳ್ಳ ಬಿಳಿಯರನ್ನು ಗುರುತಿಸುತ್ತಾ, ಅವರ ನೆರವು ಪಡೆದು, ಕಪ್ಪು ಜನಾಂಗಕ್ಕೆ ದೊರಕಿಸಿಕೊಡಬಹುದಾದ ಶಿಕ್ಷಣ ಮತ್ತು ಜ್ಞಾನ ಬಹು ದೊಡ್ಡ ಆಯಧ ಎಂದು ಬದುಕಿ ತೋರಿಸಿದ ಈ ಮಹಾತ್ಮನ ಕಥೆ ಕನ್ನಡ ಲೋಕಕ್ಕೆ ಬಂದಿರುವುದು ನಿಜಕ್ಕೂ ಶ್ಲಾಘನೀಯವಾದುದು.
ಇಡೀ ಮನುಕುಲವೇ ನಾಚಿ ತಲೆತಗ್ಗಿಸುವಂತಹ ಗುಲಾಮರ ವ್ಯಾಪಾರ ಹಾಗೂ ಅವರ ಶೋಷಣೆಯ ಇತಿಹಾಸವು  ಜಗತ್ತಿನ ಚರಿತ್ರೆಯ ಪುಟಗಳಲ್ಲಿ  ಕರಾಳ ಹಾಗೂ ಕಪ್ಪು ಅಧ್ಯಾಯವಾಗಿ ದಾಖಲಾಗಿದೆ. 1492 ರಲ್ಲಿ ಕೊಲಂಬಸ್ ಅಮೇರಿಕಾವನ್ನು ಕಂಡು ಹಿಡಿದ ನಂತರ, ಈ ಗುಲಾಮಗಿರಿಯ ವೃತ್ತಿ  ತನ್ನ ಪರಾಕಾಷ್ಟೆಯನ್ನು ಮುಟ್ಟಿತು. ಆಫ್ರಿಕಾದ ಮುಗ್ಧ ಹಾಗೂ ಅನಕ್ಷರಸ್ತ ಕಪ್ಪು ಜನರನ್ನು ಅಮೇರಿಕಾ ಮತ್ತು ಇಂಗ್ಲೇಂಡ್ ರಾಷ್ಟ್ರಗಳು ತಮ್ಮ ಗುಲಾಮರನ್ನಾಗಿ ಮಾಡಿಕೊಂಡು ತಮ್ಮ ತೋಟಗಳಲ್ಲಿ ಪ್ರಾಣಿಗಳಂತೆ ದುಡಿಸಿಕೊಂಡಿವು. . ಇಂತಹ ನತದೃಷ್ಟರ ನಡುವೆ  ಅಮೇರಿಕಾದ ತೋಟವೊಂದರಲ್ಲಿ ಜೀತದಾಳಾಗಿದ್ದ ನತದೃಷ್ಟ ಕಪ್ಪು ಹೆಣ್ಣು ಮಗಳೊಬ್ಬಳ ಉದರಲ್ಲಿ ಜನಿಸಿದ ಬೂಕರ್ ಟಿ.ವಾಷಿಂಗ್ ಟನ್ ಮುಂದಿನ ದಿನಗಳಲ್ಲಿ  ಕಪ್ಪುಜನರ ಘನತೆ, ಸ್ವಾಭಿಮಾನ ಹಾಗೂ ಮಾನವೀತೆಯ ಪ್ರತೀಕವಾಗಿ ಬದುಕಿ ಬಾಳುವುದರ ಮೂಲಕ  ಯಾವುದೋ ಒಂದು ಪುರಾಣ ಮಹಾಕಾವ್ಯದ ನಾಯಕನಂತೆ ಗೋಚರಿಸುತ್ತಾರೆ. ಬೂಕರ್ ವಾಷಿಂಗ್ ಟನ್  ಬದುಕಿದ್ದು 1856ರಿಂದ 1915 ರವರೆಗೆ ಮಾತ್ರ. ಆದರೆ, ತನ್ನ ಐವತ್ತೊಂಬತ್ತು ವರ್ಷಗಳ  ಅವಧಿಯಲ್ಲಿ ಉಪ್ಪಿನ ಗಣಿಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ತನ್ನ ಮಲತಂದೆಯ ಆಶ್ರಯದಲ್ಲಿ ಗಣಿ ಮಾಲಿಕನೊಬ್ಬ  ತಂದೆಗೆ ನೀಡಿದ್ದ 18 ಎಂಬ ಗುಲಾಮಗಿರಿಯ ಸಂಖ್ಯೆಯ ಮೇಲೆ ಮೋಹಗೊಂಡು, ಬಾಲ್ಯದಲ್ಲಿ ತಾನು ಪತ್ರಿಕೆ ಓದುವಷ್ಟು ವಿದ್ಯಾವಂತನಾಗಬೇಕೆಂದು ಕನಸು ಕಾಣುತ್ತಾ ಅಕ್ಷರ ಲೋಕಕ್ಕೆ ಕಾಲಿರಿಸಿದವನು.ನಂತರ 1875 ರ ವೇಳೆಗೆ  ಪದವಿ ಪಡೆದು ನಿಗ್ರೋ ಜನಾಂಹಕ್ಕೆ ಹೆಮ್ಮೆಯ ಪುತ್ರ ಎನಿಸಿದವರು.
ಆ ಕಾಲಘಟ್ಟದಲ್ಲಿ ಪದವಿ ಪಡೆದವರೆಲ್ಲಾ ಅಮೇರಿಕಾದಲ್ಲಿ ಶ್ರೇಷ್ಟ ಹಾಗೂ ಉನ್ನತ ಹುದ್ದೆ ಅಲಂಕರಿಸುತ್ತ ದಿನಗಳು. ವಾಷಿಂಗ್ಟನ್ .ಮನಸ್ಸು ಮಾಡಿದ್ದರೆ, ಬಿಳಿಯರ ಮನವೊಲಿಸಿ ಉನ್ನತ ಹುದ್ದೆಯಲ್ಲಿ ವೈಭವದ ಜೀವನ ನಡೆಸಬಹುದಿತ್ತು. ಆದರೆ, ಅವರು ಹಸಿವು, ಅಪಮಾನ ಮತ್ತು ದಾರಿದ್ರ್ಯ ಕೂಪದಿಂದ ತಾನು ಮತ್ತು ತನ್ನ ಕುಟುಂಬ ಪಾರಾದರೆ ಸಾಲದು, ಇಡೀ ಸಮುದಾಯ ಗುಲಾಮಗಿರಿಯ ದಾಸ್ಯದಿಂದ ಮತ್ತು ಅಜ್ಞಾನದಿಂದ ಆಚೆಗೆ ಬರಬೇಕೆಂದು ಕನಸು ಕಾಣುವುದರ ಮೂಲಕ ತ್ಯಾಗದ ಜೀವನಕ್ಕೆ ಬದುಕನ್ನು ಮುಡಿಪಾಗಿಟ್ಟರು.
ನಿಗ್ರೊ ಮಕ್ಕಳ ಶಿಕ್ಷಣಕ್ಕೆ ಟೆಸ್ಕಜೀ ಎಂಬಲ್ಲಿ ವಸತಿ ಶಾಲೆಯನ್ನು ಸ್ಥಾಪಿಸಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸ್ವಾವಲಂಬಿ ಬದುಕನ್ನು ಬುದುಕುವ ಮಾರ್ಗವನ್ನು ತೋರಿದರು. ನಿಗ್ರೋ ಸಮುದಾಯದ ಅಭ್ಯುದಯಕ್ಕಾಗಿ ಉದಾರ ಮನಸ್ಸಿನ ಬಿಳಿಯರ ಮನವೊಲಿಸಿ ಅವರ ಸಹಕಾರದಿಂದ ಸಾವಿರಾರು ಮಕ್ಕಳಿಗೆ ಶಿಕ್ಷಣವನ್ನು ಧಾರೆಯೆರೆದರು. ದಾಸ್ಯದಿಂದ ಬಿಡುಗಡೆಗಾಗಿ ಹಿಂಸೆಯ ಹಾದಿ ತುಳಿದಿದ್ದ ಹಲ ಕಪ್ಪು ಜನಾಂಗದ ನಾಯಕರಿಗೆ ಬೂಕರ್ ವಾಷಿಂಗ್ ಟನ್ ಅವರ ನಿಲುವುಗಳ ಬಗ್ಗೆ ಸಹಮತವಿರಲಿಲ್ಲ. ಆದರೆ, ಸಂಘರ್ಷವಿದ್ದಲ್ಲಿ ಮನುಷ್ಯ-ಮನುಷ್ಯ ನಡುವೆ ಸಂವಹನ ಮತ್ತು ಸಂಬಂಧ ಸಾಧ್ಯವಿಲ್ಲ ಎಂಬಿದ್ದ ಅವರು ತಮ್ಮ ಜನಾಂಗದ ಏಳಿಗೆಗಾಗಿ ದುಡಿಯುತ್ತಾ ಶಿಕ್ಷಣ ಸಂಸ್ಥೆಯನ್ನು ಅಭಿವೃದ್ಧಿ ಪಡಿಸಿದ ಕಥನ ಈ ಕೃತಿಯಲ್ಲಿ ರೋಚಕವಾಗಿ ಮೂಡಿ ಬಂದಿದೆ.

ಅಂದಿನ ಅಮೇರಿಕಾದ ಅಧ್ಯಕ್ಷ ರೂಸ್ ವೆಲ್ಟ್ ಅವರನ್ನು ತಮ್ಮ ಶಾಲೆಗೆ ಆಹ್ವಾನಿಸಿದ ವಾಷಿಂಗ್ ಟನ್ ಅಧ್ಯಕ್ಷರ ಶ್ವೇತಭವನಕ್ಕೆ ಅತಿಥಿಯಾಗಿ ಆಹ್ವಾನ ಪಡೆದ ಪ್ರಥಮ ಕರಿಯ ಜನಾಂಗದ ನಾಯಕ ಎಂಬ ಕೀರ್ತಿಗೆ ಪಾತ್ರರಾದರು. ಅತ್ಯುತ್ತಮ ವಾಗ್ಮಿಯಾಗಿದ್ದ ಅವರು ಮಾತಿನ ಮೂಲಕ ಎಲ್ಲರ ಮನಗೆದ್ದಿದ್ದರು. ವಾಷಿಂಗ್ ಟನ್ ಅವರ ಪ್ರಭಾವ ಅಮೇರಿಕಾದಲ್ಲಿ ಹೇಗಿತ್ತು ಎಂಬುದಕ್ಕೆ ಅವರು ತಮ್ಮ ಆತ್ಮಕಥೆಯ ಕೊನೆಯ ಪುಟದಲ್ಲಿ ದಾಖಲಿಸಿರುವ ಮಾತುಗಳಿವು.
" ಈಗ ರಿಚ್ಮಂಡ್ ನಗರಕ್ಕೆ ಅತಿಥಿಯಾಗಿ ಬಂದಿದ್ದೇನೆ.ನಗರದ ಅತಿ ದೊಡ್ಡ ಹಾಗೂ ಸುಂದರವಾದ ಅಕಾಡೆಮಿ ಆಫ್ ಮ್ಯೂಸಿಕ್ ಸಂಸ್ಥೆಯ ಸಭಾಂಗಣದಲ್ಲಿ ನನ್ನ ಎರಡು ಜನಾಂಗವಿದ್ದ  ಸಭೆಯನ್ನು ಉದ್ದೇಶಿಸಿ ಉಪನ್ಯಾಸ ಮಾಡಿದೆ. ಕರಿಯರಿಗೆ ಈ ಸಭಾಂಗಣಕ್ಕೆ ಪ್ರವೇಶ ದೊರೆತದ್ದು ಇದೇ ಮೊದಲ ಬಾರಿ. ನಾನು ಇಲ್ಲಿಗೆ ಬರುವ ಹಿಂದಿನ ದಿನ ನಗರ ಸಭೆಯ ಎಲ್ಲಾ ಸದಸ್ಯರೆಲ್ಲರೂ ಹಾಜರಿರಬೇಕೆಂದು ನಿರ್ಣಯವಾಗಿತ್ತು.  ಅದೇ ರೀತಿ ರಾಜ್ಯ ಶಾಸನ ಸಭೆ ಮತ್ತು ಸೆನೆಟ್ ಸದಸ್ಯರು ಭಾಗವಹಿಸಬೇಕೆಂದು ಠರಾವು ನೀಡಲಾಗಿತ್ತು. ನೂರಾರು ಕರಿಯರಿದ್ದ, ಅನೇಕ ಬಿಳಿಯ ಪ್ರತಿಷ್ಟಿತರಿದ್ದ ನಗರ ಸಭೆ, ಶಾಸನಸಭೆಯ ಸೆನೆಟ್ ನ ಸದಸ್ಯರು ಉಪಸ್ಥಿತರಿದ್ದ ಸಭೆಯಲ್ಲಿ ನಾನು ಭರವಸೆ ಮತ್ತು ಸಂತೋಷವನ್ನು ಬಿತ್ತುವ ಸಂದೇಶದ ಉಪನ್ಯಾಸ ನೀಡಿದೆ. ನನಗೆ ಜನ್ಮ ನೀಡಿದ ರಾಜ್ಯಕ್ಕೆ, ವಾಪಸ್ ಕರೆಸಿದ ಎರೆಡೂ ಜನಾಂಗದ ಸಜ್ಜನರಿಗೆ ನಾನು ಹೃದಯತುಂಬಿದ ವಂದನೆಗಳನ್ನು ಸಲ್ಲಿಸಿದೆ"

ವಾಷಿಂಗ್ ಟನ್ ತನ್ನ ಬಡತನ, ಅಪಮಾನಗಳನ್ನು ಮೀರಿ ಸಂಯಮದ ದೃಷ್ಟಿಕೋನದಿಂದ ಬದುಕನ್ನು ಸ್ವೀಕರಿಸಿ ಯಶಸ್ವಿಯಾದ ಒಂದು ಶತಮಾನದ ಹಿಂದಿನ ಆತ್ಮಕಥನವನ್ನು ಲೇಖಕ ಮಿತ್ರ ಪುಟ್ಟಸ್ವಾಮಿಯವರು ಅಷ್ಟೇ ಪರಿಣಾಮಕಾರಿಯಾಗಿ ಅನುವಾದಿಸಿದ್ದಾರೆ. ಈ ಕೃತಿ ಒಬ್ಬ ಕೇವಲ  ಕಪ್ಪು ಜನಾಂಗದ ನಾಯಕನೊಬ್ಬನ ಕಥೆಯಾಗಿರದೆ, ಅಮೇರಿಕಾದಲ್ಲಿ ನಡೆದ ಕಪ್ಪು ವರ್ಣಿಯರ ಹೋರಾಟದ ಕಥನವನ್ನು ಸಹ ಒಳಗೊಂಡಿದೆ. ಇಲ್ಲಿನ ಅನೇಕ ಮಹನೀಯರ ಭಾವಚಿತ್ರಗಳೊಂದಿಗೆ ಇರುವ ವಿವರಗಳು ಇಡೀ ಹೋರಾಟದ ಇತಿಹಾಸಕ್ಕೆ ಪೂರಕವಾಗಿವೆ. ಈ ಮಾಹಿತಿ ಕೃತಿಯ ಘನತೆಯನ್ನು ಹೆಚ್ಚಿಸಿದೆ. ಕನ್ನಡದ ಜಗತ್ತಿಗೆ ಇಂತಹ ಅಪರೂಪದ ಕೃತಿ ನೀಡಿದ ಲೇಖಕರು ನಿಜಕ್ಕೂ ಅಭಿನಂದನಾರ್ಹರು.

ಶುಕ್ರವಾರ, ಸೆಪ್ಟೆಂಬರ್ 21, 2018

ಮಧ್ಯಮ ಮಾರ್ಗದ ಪ್ರತಿಪಾದಕ : ಗಿರಡ್ಡಿ ಗೋವಿಂದರಾಜರ ನೆನಪುಗಳು






ಕನ್ನಡ ಸಾಂಸ್ಕøತಿಕ ಲೋಕದ ಪರಿಚಾರಕರಂತಿದ್ದ ಡಾ.ಗಿರಡ್ಡಿ ಗೋವಿಂದರಾಜರು ನಿಧನರಾಗಿ ಐದು ತಿಂಗಳಾಯಿತು. ಅವರ ನಿರ್ಗಮನದೊಂದಿಗೆ ಧಾರವಾಡ ಮತ್ತು ಕನ್ನಡದ ಸಾಹಿತ್ಯಲೋಕದಲ್ಲಿ ಸೃಷ್ಟಿಯಾದ ಶೂನ್ಯ ಬಹುಕಾಲ ನಮ್ಮನ್ನೆಲ್ಲಾ ಕಾಡುವಂತಹದ್ದು. ಸಂಶೋಧನೆಯ ಕ್ಷೇತ್ರದಲ್ಲಿ ಮಾರ್ಗದರ್ಶಕರಂತಿದ್ದ ಡಾ.ಎಂ.ಎಂ.ಕಲ್ಬುರ್ಗಿ ಮತ್ತು ವಿಮರ್ಶೆಯ ಲೋಕದಲ್ಲಿ ಮಾದರಿಯಾಗಿದ್ದ ಗಿರಡ್ಡಿ  ಇಬ್ಬರು ದಿಗ್ಗಜರ ಅಗಲಿಕೆಯ ನೋವನ್ನು ಜೀರ್ಣಿಸಿಕೊಳ್ಳುವುದು ಅವರ ಒಡನಾಡಿಗಳ ಪಾಲಿಗೆ ಸುಲಭದ ಸಂಗತಿಯಲ್ಲ.
ಧಾರವಾಡ ಮಣ್ಣಿನ ಹಾಗೂ ಇಲ್ಲಿನ ನೆಲಮೂಲ ಸಂಸ್ಸøತಿಯ  ವಾರಸುದಾರರಂತೆ ಬದುಕಿದ್ದ ಇಂತಹ  ಮಹಾನ್ ವಿದ್ವಾಂಸರ ಜೀವನ ಮತ್ತು ಸಾಧನೆಯನ್ನು ಸ್ಮರಣೆಯ ನೆಪದಲ್ಲಿ ಜೀವಂತವಾಗಿಡಲು ಅವರ ಅನೇಕ ಒಡನಾಡಿಗಳು ಮತ್ತು ಶಿಷ್ಯರು ಶ್ರಮಿಸುತ್ತಿದ್ದಾರೆ. ನಿಟ್ಟಿನಲ್ಲಿ ಗಿರಡ್ಡಿ ಗೋವಿಂದರಾಜರ ಜನ್ಮ ದಿನವಾದ ಇಂದು (22-9-2018) ಧಾರವಾಡದಲ್ಲಿಗಿರಡ್ಡಿ ಗೋವಿಂದರಾಜ ಪ್ರತಿಷ್ಟಾನಎಂಬ ಸಾಂಸ್ಕೃತಿಕ ಸಂಸ್ಥೆ ಆರಂಭಗೊಳ್ಳುತ್ತಿದೆ. ಇದರ ಜೊತೆಗೆ ಅವರ ಆಸಕ್ತಿಯ ವಿಷಯಗಳಲ್ಲಿ ಒಂದಾದಬದಲಾಗುತ್ತಿರುವ ಜಗತ್ತುಕುರಿತು ರಾಷ್ಟ್ರೀಯ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿದೆ. ಇದಲ್ಲದೆ, ಸಂಜೆ ಅವರ ಸಾಹಿತ್ಯ ಕೃತಿಗಳ ಆಧಾರಿತಆಮುಖ- ಮುಖನಾಟಕವನ್ನು  ಸಹ ಆಯೋಜಿಸಲಾಗಿದೆ.
ಅರವತ್ತು ವರ್ಷಗಳ ಸುಧೀUರ್ಘ  ಕಾಲ ಡಾ. ಗಿರಡ್ಡಿಗೋವಿಂದರಾಜು ಕನ್ನಡ ಸಾಹಿತ್ಯ ಮತ್ತು ರಂಗಭೂಮಿ ಹಾಗೂ ಜಾನಪದ ಕ್ಷೇತ್ರದಲ್ಲಿ ಒಡನಾಟವಿರಿಸಿಕೊಂಡು ಸೃಷ್ಟಿಸಿದ ಸಾಹಿತ್ಯ, ನೀಡಿದ ಉಪನ್ಯಾಸಗಳು ಮತ್ತು ಸಂಪಾದಿಸಿಕೊಟ್ಟ ಕೃತಿಗಳು ಇವೆಲ್ಲವೂ ಕನ್ನಡದ ಸಾಂಸ್ಕತಿಕ ಲೋಕವನ್ನು ಶ್ರೀಮಂತಗೊಳಿಸಿವೆ. ಗಿರಡ್ಡಿಯವರು ಕೈ ಆಡಿಸದೆ ಇರುವ ಕ್ಷೇತ್ರಗಳಿಲ್ಲ. ಕಥೆ, ಕಾವ್ಯ, ನಾಟಕ, ವಿಮರ್ಶೆ, ಪ್ರಬಂಧ, ಸಂಪಾದನೆ, ಅನುವಾದ ಹಾಗೂ ಸಾಹಿತ್ಯ ಪತ್ರಿಕೆಯ ಸಂಪಾದಕ ಹೀಗೆ ಹಲವು ಕ್ಷೇತ್ರಗಳಲ್ಲಿ ಅವರ ದೈತ್ಯ ಪ್ರತಿಭೆಯ ಹರವು ಹರಡಿದೆ. ತಾವು ಕೈ ಆಡಿಸಿದ ಪ್ರಕಾರದಲ್ಲಿ ತಮ್ಮ ವ್ಯಕ್ತಿತ್ವ ಹಾಗೂ ಪ್ರತಿಭೆಯ ಛಾಪನ್ನು ಒತ್ತುವುದರ ಮೂಲಕ ಕನ್ನಡದ ಎಲ್ಲಾ ಕ್ಷೇತ್ರಗಳಲ್ಲೂ ಗಿರಡ್ಡಿಯವರು ತಮ್ಮ ಹೆಸರನ್ನು ಅವಿಸ್ಮರಣೀಯಗೊಳಿಸಿದ್ದಾರೆ.
ತಮ್ಮ ಸಾಹಿತ್ಯ ಕೃಷಿಯ  ಆರಂಭದ ದಿನಗಳಲ್ಲಿ  ಎರಡು ಕವನ ಸಂಕಲಗಳನ್ನು ಹೊರ ತಂದಿದ್ದ ಗಿರಡ್ಡಿಯವರು ಮರ್ಲಿನ್ ಮನ್ರೊ ಕಾವ್ಯ ಸಂಕಲನದ ಮೂಲಕ ಸಾಹಿತ್ಯ ಲೋಕದ ಗಮನ ಸೆಳೆದಿದ್ದರು. ಆನಂತರದ ದಿನಗಳಲ್ಲಿ  ಅವರು ಕಥಾ ಕ್ಷೇತ್ರದತ್ತ ಹೊರಳಿ, ಬರೆದ ಹಂಗು ಮತ್ತು ಮಣ್ಣು ಎಂಬ ನೀಳ್ಗತೆ ಇವುಗಳು ಕನ್ನಡ ಕಥಾಲೋಕದಲ್ಲಿ ಅನನ್ಯ ಕಥೆಗಳಾಗಿ ಉಳಿದುಕೊಂಡವು. ಇವುಗಳಲ್ಲಿ ಹಂಗು ಕಥೆ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲರು 1976 ರಲ್ಲಿ ನಿರ್ಮಿಸಿದ  ಕಥಾ ಸಂಗಮಎಂಬ ಸಿನಿಮಾದ ಮೂರು ಕಥೆಗಳಲ್ಲಿ ಒಂದಾಗಿರುವುದು ವಿಶೇಷ. ( ಸಿನಿಮಾ ರಜನಿಕಾಂತ್ ಅವರ ಮೊದಲ ಸಿನಿಮಾ ಕೂಡ ಹೌದು)  ಧಾರವಾಡದ ಕರ್ನಾಟಕ ವಿ.ವಿ.ಯಿಂದ ಕನ್ನಡದಲ್ಲಿ ಎಂ..  ಪದವಿ ಹಾಗೂ  ಇಂಗ್ಲೆಂಡಿನಲ್ಲಿ ಇಂಗ್ಲೀ ಷ್ ವಿಷಯದ ಭಾಷಾ ಶಾಸ್ತ್ರದಲ್ಲಿ ಎಂ.. ಪದವಿ ಪಡೆದಿದ್ದ ಗಿರಡ್ಡಿಯವರು ನಂತರ ಗುಲ್ಬರ್ಗಾ ವಿ.ವಿ.ಯಲ್ಲಿ ಶೈಲಿ ಶಾಸ್ತ್ರ ಕುರಿತಂತೆ ಪಿ.ಹೆಚ್.ಡಿ ಪದವಿ ಹಾಗೂ ಹೈದರಾಬಾದಿನ ಸೆಂಟ್ರಿಲ್ ಇನ್ಸಿಟ್ಯೂಟ್ ಆಫ್ ಇಂಗ್ಲೀಷ್ ಸಂಸ್ಥೆಯಿಂದ ಡಿಪ್ಲಮೊ ಇನ್ ಇಂಗ್ಲೀಷ್ನಲ್ಲಿ  ಪದವಿಯನ್ನು ಪಡೆದಿದ್ದರು. ಹೀಗೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಯ ಮೇಲೆ ಅವರಿಗಿದ್ದ ಆಳವಾದ ಜ್ಞಾನ ಮತ್ತು ವಿದ್ವತ್ತು ಕನ್ನಡದ ವಿಮರ್ಶೆಯ ಲೋಕಕ್ಕೆ ವರವಾಗಿ ಪರಿಣಮಿಸಿತು.
1970 ದಶಕದಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ವಿಮರ್ಶೆಯ ಪರಂಪರೆಯನ್ನು ಹುಟ್ಟು ಹಾಕಿದ ಆದ್ಯರಲ್ಲಿ ಒಬ್ಬರಾದ ಡಾ.ಗಿರಡ್ಡಿ ಗೋವಿಂದರಾಜರು ತಮ್ಮ ವಸ್ತುನಿಷ್ಟ ಶೈಲಿಯಿಂದ ಕನ್ನಡ  ಕಥೆ ಮತ್ತು ಕಾವ್ಯ ಹಾಗೂ ಕಾದಂಬರಿ ಇವುಗಳ ಕಥಾವಸ್ತು, ಭಾಷೆ ಮತ್ತು ಶೈಲಿ ಇವುಗಳನ್ನು ವಿಮರ್ಶಿಸುತ್ತಾ, ಲೇಖಕ ಮತ್ತು ಓದುಗನ ನಡುವೆ ಸಂವಹನ ಸೇತುವೆಯಾಗಿ ಕಾರ್ಯನಿರ್ವಹಿಸುವುದರ ಜೊತೆಗೆ  ಓದುಗರ ಅಭಿರುಚಿಯ ದಿಕ್ಕನ್ನು ಬದಲಿಸಿದವರಲ್ಲಿ ಮುಖ್ಯರು. 70 ಮತ್ತು 80 ದಶಕದಲ್ಲಿ ನಿರಂತರವಾಗಿ ಹದಿನೈದು ವಿಮರ್ಶಾ ಕೃತಿಗಳನ್ನು ಬರೆದ ಕೀರ್ತಿ ಗಿರಡ್ಡಿಯವರದು. ತಾವು ಇಂಗ್ಲೆಂಡಿನಲ್ಲಿದ್ದ ಸಮಯದಲ್ಲಿ ಅಲ್ಲಿನ ರಂಗಭೂಮಿ ಕುರಿತಂತೆ ಆಸಕ್ತಿ ಬೆಳೆಸಿಕೊಂಡಿದ್ದ ಅವರು ಭಾರತಕ್ಕೆ ಹಿಂತಿರುಗಿದ ನಂತರ ರಚಿಸಿದ ಇಂಗ್ಲೇಡಿನ ರಂಗಭೂಮಿಎಂಬ ಕೃತಿ ಕನ್ನಡ ರಂಗಭೂಮಿಗೆ ಅಮೂಲ್ಯ ಕೊಡುಗೆಯಾಗಿದೆ.. ವೃತ್ತಿಯಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದರೂ ಸಹ ತಮ್ಮ ಬದುಕಿನುದ್ದಕ್ಕೂ ಕನ್ನಡವನ್ನು ಧ್ಯಾನಿಸಿದ ಗಿರಡ್ಡಿಯವರು ವಚನ ಸಾಹಿತ್ಯ ಕುರಿತಂತೆ ಹಾಗೂ ಜಾನಪದ ಸಾಹಿತ್ಯ ಕುರಿತಂತೆ ಅಧಿಕಾರಯುತವಾಗಿ ಮಾತನಾಡಬಲ್ಲ, ಬರೆಯಬಲ್ಲ ವಿದ್ವಾಂಸರಲ್ಲಿ ಒಬ್ಬರಾಗಿದ್ದರು.
 ಬದುಕು, ಬರೆವಣಿಗೆ ಹಾಗೂ  ಸಾಮಾಜಿಕ ಚಟುವಟಿಕೆ ಇವುಗಳಲ್ಲಿ ನಿರಂತವಾಗಿ ಅರವತ್ತು ವರ್ಷಗಳ ಕಾಲ ತೊಡಗಿಸಿಕೊಂಡಿದ್ದರೂ ಸಹ ಗಿರಡ್ಡಿಯವರದು ಎಂದಿಗೂ  ಆರ್ಭಟ ಅಥವಾ ಅಬ್ಬರದ ನಡುವಳಿಕೆಯಲ್ಲ.  ತಮ್ಮ ವಸ್ತು ನಿಷ್ಟ ನೆಲೆಯಿಂದ ಅತ್ತ ಇತ್ತ ಕದಲದೆ ಹೇಳಬೇಕಾದ ನಿಷ್ಟುರ ಸತ್ಯಗಳನ್ನು ಅತ್ಯಂತ ಮೆದುಮಾತಿನಲ್ಲಿ ಹೇಳುತ್ತಾ ಬಂದರು. ಬೀದಿಗಳಿದು ಘೋಷಣೆ ಕೂಗಿದರೆ ಮಾತ್ರ ಪರಿವರ್ತನೆಯ ಹರಿಕಾರರು ಮತ್ತು ಕ್ರಾಂತಿಕಾರರು ಎಂದು ನಂಬಿರುವ ಕಾಲಘಟ್ಟದಲ್ಲಿ ಅವರು ತಮ್ಮ ಸಾಹಿತ್ಯ ಮತ್ತು ಸಾಂಸ್ಕøತಿಕ ಚಿಂತನೆಗಳ ಮೂಲಕ ಸಮಾಜದಲ್ಲಿ ಸದ್ದಿಲ್ಲದೆ ಮೌನ ಕ್ರಾಂತಿಯನ್ನು ಸೃಷ್ಟಿಸಿದರು. ಕಾರಣಕ್ಕಾಗಿ ಅತಿರೇಖದ ತುತ್ತ ತುದಿಗಳಂತಿರುವ ಎಡ ಮತ್ತು ಬಲಗಳ ತಾತ್ವಿಕ ಮಾರ್ಗವನ್ನು ತುಳಿಯಲು ನಿರಾಕರಿಸಿದ ಅವರು ಬುದ್ಧ ಮತ್ತು ಗಾಂಧೀಜಿಯವರು ಪ್ರತಿಪಾದಿಸಿದ ಮಧ್ಯಮ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ನನ್ನ ತಲೆ ಮಾರಿನ ಅನೇಕರಿಗೆ ಮಾಗದರ್ಶಕರಾಗಿದ್ದರು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುಬೆ ಸಂವಹನ, ಮಾತುಕತೆ ಅಥವಾ  ಚರ್ಚೆ ಇಂತಹ ಕ್ರಿಯೆಗಳು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿರುವ ಕಾಲಘಟ್ಟದಲ್ಲಿ ಅಸಹಿಷ್ಣುತೆ ಮತ್ತು ಹಿಂಸೆಯ ಹಿಂದಿನ ಕಾರಣಗಳನ್ನು ಗ್ರಹಿಸಲಾರದಷ್ಟು ಅಸೂಕ್ಷಮತೆ ನಾವು ಒಳಗಾಗಿದ್ದೆವೆ. ಈಕಾರಣದಿಂದಾಗಿ   ನಮಗಿನ್ನೂ ಗಿರಡ್ಡಿಯವರು ಪ್ರತಿಪಾದಿಸಿದ ಮಧ್ಯಮ ಮಾರ್ಗ ಸಮಗ್ರವಾಗಿ ಅರ್ಥವಾಗಿಲ್ಲ. ಧರ್ಮ ಅಥವಾ ಪಂಥಗಳ ನಡುವಿನ ಚಿಂತನೆಗ¼ ಕೊಡುಕೊಳೆಗೆ ಆಸ್ಪದವಿಲದೆ ಅನೇಕ ಬಗೆಯ ತಲ್ಲಣಗಳಿಗೆÀ ಪಲ್ಲಟಗಳಿಗೆ ಕಾರಣವಾಗುತ್ತಿರುವ ದಿನಮಾನಗಳಲ್ಲಿ ಗಿರಡ್ಡಿಯರ ಮಧ್ಯಮ ಮಾರ್ಗದ ಮಹತ್ವ  ಅರಿವಾಗತೊಡಗಿದೆ.

ಸಾಹಿತ್ಯದದಲ್ಲಿ ಅನೇಕ ಪಂಗಡಗಳಾಗಿ ದ್ವೀಪದಂತೆ ಬರಹಗಾರರು ಬದುಕುತ್ತಿದ್ದ ಸಂದರ್ಭದಲ್ಲಿ ಹಾಗೂ ಸಾಹಿತ್ಯ ಸಮ್ಮೇಳನಗಳು ಜಾತ್ರೆಯ ಸ್ವರೂಪ ಪಡೆದುಕೊಡು ಸಾಹಿತ್ಯ ಸಂವಾದ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ,  ಆರು ವರ್ಷಗಳ ಹಿಂದೆ ಧಾರವಾಡದಲ್ಲಿ ಗಿರಡ್ಡಿಯವರು ತಮ್ಮ ಸಹಪಾಠಿ ಎಂ.ಎಂ.ಕಲ್ಬುರ್ಗಿಯವರ ಜೊತೆಗೂಡಿ  ಪ್ರಜಾವಾಣಿ ಸಹಭಾಗಿತ್ವದಲ್ಲಿ ಹುಟ್ಟು ಹಾಕಿದಧಾರವಾಡ ಸಾಹಿತ್ಯ ಸಂಭ್ರಮಎಂಬ ಕಾರ್ಯಕ್ರಮ ಇದೀಗ ಸಾಹಿತ್ಯದ ಮೈಲಿಗಲ್ಲಾಗಿದೆ. ಎಲ್ಲಾ ಬಗೆಯ ನಂಬಿಕೆ ಮತ್ತು ದೃಷ್ಟಿಕೋನದ ಬರಹಗಾರರು ಹಾಗೂ ಓದುಗರು ಒಂದೆಡೆ ಕಲೆತು ಸಾಹಿತ್ಯ, Àಂಸ್ಕøತಿ ಮತ್ತು ಕಲೆ ಹೀಗೆ ವಿವಿಧ ವಿಷಯಗಳ ಕುರಿತು ಮೂರು ದಿನಗಳ ಕಾಲ  ಗಂಭೀರವಾಗಿ ಚರ್ಚಿಸುವುದು ಸುಲಭದ ಮಾತಲ್ಲ., ಇಂತಹ ಪರಂಪರೆಯನ್ನು ಹುಟ್ಟು ಹಾಕಿದ ಕೀರ್ತಿ ಗಿರಡ್ಡಿಯವರದು.
ಇತ್ತೀಚೆಗಿನ ದಿನಗಳಲ್ಲಿ ವಿಮರ್ಶೆಯಿಂದ ಕಳಚಿಕೊಂಡು ಲಲಿತ ಪ್ರಬಂಧಗಳನ್ನು ರಚಿಸುತ್ತಾ ಓದುಗರಲ್ಲಿ ಆಹ್ಲಾದಕರ ಹಾಗೂ ಪ್ರಫುಲ್ಲವಾದ ಮನಸ್ಸನ್ನು ಸೃಷ್ಟಿ ಮಾಡಿದ್ದ ಅವರು,  ದೇವದತ್ತ ಪಟ್ನಾಯಕ್ ಅವರ ಜಯ ಎಂಬ ಮಹಾಭಾರತz ಇಂಗ್ಲೀಷ್À ಕೃತಿಯನ್ನು ಕನ್ನಡಕ್ಕೆ ಅನುವಾದಿಸುವುದರ ಮೂಲಕ  ಅನುವಾದದ ಶೈಲಿ ಮತ್ತು ಕ್ರಿಯೆ ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟಿದ್ದರು. ಇದು ಅವರ ಪಾಲಿಗೆ ಕೊನೆಯ ಕೃತಿಯಾಯಿತು.
ಇಂದು ಗಿರಡ್ಡಿಗೋವಿಂದರಾಜರು ನಮ್ಮೊಡನಿಲ್ಲ ಆದರೆ, ಅವರ ಸಾಹಿತ್ಯಕೃತಿಗಳು, ಅವರ ಗಂಭೀರವಾದ ಚರ್ಚೆ, ತಿಳಿಹಾಸ್ಯ, ತನ್ನ ಶಿಷ್ಯ ಬಳಗಕ್ಕೆ ಸಾಹಿತ್ಯವನ್ನು ಉಣಬಡಿಸುತ್ತಿದ್ದ ರೀತಿ ಇವೆಲ್ಲವೂ ಅವರ ನೆನಪುಗಳ ಜೊತೆ ನಮ್ಮೊಳಗೆ ಸದಾ ಹಸಿರಾಗಿರುತ್ತವೆ.
( ಇಂದು ಡಾ.ಗಿರಡ್ಡಿ ಗೋವಿಂದರಾಜರ ಜನ್ಮದಿನ.( 22-9-2018) ಈ ದಿನ ಧಾರವಾಡದಲ್ಲಿ ಅವರ ಹೆಸರಿನಲ್ಲಿ ಪ್ರತಿಷ್ಠಾನ ಆರಂಭಗೊಳ್ಳುತ್ತಿದೆ. ಇದರ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಪ್ರಜಾವಾಣಿ ಆವೃತ್ತಿಯ ಮೆಟ್ರೊ ಪುರವಣಿಗೆಗೆ ಬರೆದ ಲೇಖನ)
ಚಿತ್ರಗಳು ಸೌಜನ್ಯ- ಡೆಕ್ಕನ್ ಹೆರಾಲ್ಡ್ ಮತ್ತು ದ.ಹಿಂದೂ