ಶನಿವಾರ, ಮಾರ್ಚ್ 31, 2018

ಹರಿಲಾಲ್‍ಗಾಂಧಿ ಕಥನ-ಒಂದು



ಇಡೀ ಜಗತ್ತು ಆಶ್ಚರ್ಯ ಪಡುವ ರೀತಿಯಲ್ಲಿ ಅತ್ಯಂತ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯಿಂದ ಬದುಕಿದ ಮಹಾತ್ಮ ಗಾಂಧಿ ಅವರ ಜೀವನ ಭಾರತದಲ್ಲಿ ನಿರಂತರವಾಗಿ ಚರ್ಚೆಗೆ ಒಳಗಾಗುತ್ತಲೇ ಇದೆ. “ನನ್ನ ಬದುಕೇ ಸಂದೇಶ  ಎಂದು ನುಡಿದ ಗಾಂಧೀಜಿಯವರ ಪ್ರತಿ ಕ್ಷಣದ ಜೀವನ ವಿವರಗಳ ವೃತ್ತಾಂತವನ್ನು ಹಿಡಿದುಕೊಂಡು ಕೂದಲು ಸೀಳುವ ಕಾರ್ಯ ಇಂದಿಗೂ ಸಹ  ಮುಂದುವರಿದಿದೆ. ತಮ್ಮ ಆತ್ಮ ಕಥೆಯನ್ನು  ನನ್ನ ಸತ್ಯಾನ್ವೇಷಣೆಎಂದು ಕರೆದುಕೊಂಡ ಗಾಂಧೀಜಿ ತಮ್ಮ ಇಡೀ ಬದುಕನ್ನು ಸಾರ್ವಜನಿಕ ಬದುಕಿಗೆಗೆ ಮೀಸಲಿಟ್ಟಿದ್ದರು. ಕಾರಣದಿಂದಾಗಿ ತಮ್ಮ ಕುಟುಂಬದ ಸದಸ್ಯರ ಹಿತರಕದಷಣೆಯಲ್ಲಿ ಅವರು ವಿಫಲರಾದರು. ವೈಯಕ್ತಿಕ ಹಿತಾಸಕ್ತಿಗಿಂತ ನನ್ನ ಕಣ್ಣೆದುರು ಸಮಾಜದಲ್ಲಿ  ನೋಯುವವರು ಮತ್ತು ನೊಂದವರ ಹಿತಾಸಕ್ತಿ ಮುಖ್ಯವೆಂದು ನಂಬಿದ ಅವರು; ಎಂದಿಗೂ ವೈಯಕ್ತಿಕ ನೋವನ್ನು ಒಂದು ಸಮುದಾಯದ ನೋವೆಂಬಂತೆ ಬಿಂಬಿಸಲಿಲ್ಲ. ಇವೆಲ್ಲಕ್ಕಿಂತ ಮುಖ್ಯವಾಗಿ ಸಾರ್ವಜನಿಕ ಬದುಕಿನಲ್ಲಿರುವ ವ್ಯಕ್ತಿಗೆ ತನ್ನ ಕುಟುಂಬದ ಸದಸ್ಯರ ಪ್ರತಿಯೊಂದು ವಿವರವೂ ಸಮಾಜದ ದೃಷ್ಟಿಯಲ್ಲಿ ಪಾರದರ್ಶಕವಾಗಿರಬೇಕೆಂದು ನಂಬಿದ್ದರದ್ದಿಚಿತಹ ದೃಷ್ಟಿಕೋನದಿಂದಾಗಿ ಗಾಂಧೀಜಿಯವರ ಪತ್ನಿ ಕಸ್ತೂರ ಬಾ ಮತ್ತು ತಮ್ಮ ಮಕ್ಕಳ ಜೊತೆಗಿನ ಒಡನಾಟ, ಸಂಘರ್ಷ ಇವೆಲ್ಲವೂ ಗಾಂಧೀಜಿಯವರ ಆತ್ಮಕಥನ, ಅವರು ಬರೆದ ಪತ್ರಗಳು ಮತ್ತು ಹರಿಜನ ಹಾಗೂ ಯಂಗ್ ಇಂಡಿಯಾ ಪತ್ರಿಕೆಗಳಲ್ಲಿ ನೀಡಿದ ಸೃಷ್ಟೀಕರಣದ ಲೇಖನಗಳ ಮೂಲಕ ಬಹಿರಂಗಗೊಂಡಿವೆ.
ಮಹಾತ್ಮಗಾಂಧಿ ಮತ್ತು ಅವರ ಹಿರಿಯ ಪುತ್ರ ಹರಿಲಾಲ್ ಗಾಂಧಿ ಇವರ ನಡುವೆ ಉಂಟಾದ ಭಿನ್ನಾಭಿಪ್ರಾಯಗಳು ಹಾಗೂ ನಂತರದ ದಿನಗಳಲ್ಲಿ ಸೃಷ್ಟಿಯಾದ ಸೈದ್ಧಾಂತಿಕ ಸಂಘರ್ಷಗಳಿಗೆ ಹಲವು ಆಯಾಮಗಳಿವೆ. ಆದರೆ, ಕುರಿತು ಸೂಕ್ತ ಅಧ್ಯಯನ ಅಥವಾ ಪರೀಶೀಲನೆ ಹಾಗೂ ವಿವೇಚನೆಯಿಲ್ಲದೆ ಜನಸಾಮಾನ್ಯರಲ್ಲಿ ರೋಚಕತೆಯನ್ನು ಉಂಟು ಮಾಡುವ ದೃಷ್ಟಿಕೋನದಿಂದ ತಂದೆ-ಮಗನ ಕುರಿತಂತೆ ಹಿಂದಿ ಹಾಗೂ ಗುಜರಾತಿ ಭಾಷೆಯಲ್ಲಿ ಅನೇಕ ಕಾದಂಬರಿಗಳು ಮತ್ತು ನಾಟಕಗಳು ರಚನೆಗೊಂಡವು. ಇವೆಲ್ಲವೂ ಭಾರತೀಯ ಇತರೆ ಭಾಷೆಗೂ ಕೂಡ ಅನುವಾದಗೊಳ್ಳುವುದರ ಮೂಲಕ ಗಾಂಧೀಜಿಯ ಹಿರಿಯ ಪುತ್ರ ಹರಿಲಾಲ್ ಕುರಿತಂತೆ ಜನಸಾಮಾನ್ಯರಲ್ಲಿ ಇನ್ನಿಲ್ಲದ ಕುತೂಹಲವನ್ನು ಉಂಟು ಮಾಡಿದವು. ಇಂತಹ ಅರ್ಧ ಸತ್ಯದ ಕಥೆಗಳಿಗೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಗುಜರಾತಿ ಭಾಷೆಯಲ್ಲಿ  ಚಂದೂಲಾಲ್ ದಲಾಲ್ ಅವರು ರಚಿಸಿದ ಹಾಗೂ ಸಂಪೂರ್ಣವಾದ ವಿದ್ವತ್ ಹಾಗೂ ಸಂಶೋಧನೆಯಿಂದ ಕೂಡಿದ ಹರಿಲಾಲ್ ಗಾಂಧಿಯವರ ಜೀವನ ಚರಿತ್ರೆ ಮತ್ತು ಹರಿಲಾಲ್ ಗಾಂಧಿಯವರ ಮೊಮ್ಮಗಳು ಹಾಗೂ ಮಹಾತ್ಮನ ಮರಿಮೊಮ್ಮಗಳಾದ ನೀಲಂ ಪರೀಖ್ ಎಂಬ ಹೆಣ್ಣು ಮಗಳು ರಚಿಸಿದ ತನ್ನ ಅಜ್ಜನ ಕುರಿತಾದ ನೆನಪುಗಳು ಮತ್ತು ಅಪೂರ್ವ ದಾಖಲೆಗಳನ್ನು ಒಳಗೊಂಡಗಾಂಧೀಜಿ ಕಳೆದುಕೊಂಡ ಹರಿಲಾಲ್ ಎಂಬ ರತ್ನಎಂಬ ಹೆಸರಿನ ಕೃತಿ ಇವುಗಳು ನಮಗೆ ಮಹಾತ್ಮ ಮತ್ತು ಅವರ ಪುತ್ರ ಹರಿಲಾಲ್ ಗಾಂಧಿ ಕುರಿತಂತೆ ಅಪೂರ್ವ ಒಳನೋಟಗಳನ್ನು ನೀಡಬಲ್ಲವು.
ಹರಿಲಾಲ್ ಮತ್ತು ಮಹಾತ್ಮ ಗಾಂಧಿಯವರ ನಡುವೆ ಇಪ್ಪತ್ತು ವರ್ಷಗಳಿಗೂ ಕಡಿಮೆ ಅಂತರವಿತ್ತು. ಹರಿಲಾಲ್ ದಕ್ಷಿಣಾ ಆಫ್ರಿಕಾದಲ್ಲಿ ತನ್ನ ತಂದೆಯಿಂದ ಪ್ರಭಾವಿತರಾಗಿ ಕೇವಲ ಹದಿನೈದು ವರ್ಷಕ್ಕೆ ಸತ್ಯಾಗ್ರಹಿಯಾಗಿ ರೂಪುಗೊಂಡವರು ಜೊತೆಗೆ ಆರು ಬಾರಿ ಜೈಲಿಗೆ ಹೋಗಿ ಬಂದರು. ತನ್ನ ತಾಯಿ ಹಾಗೂ ಒಡ ಹುಟ್ಟಿದ ಸಹೋದರರ ಕುರಿತಾಗಿ ಅಪಾರ ಕಾಳಜಿ ಹಾಗೂ ಕರುಣೆಯುಳ್ಳವರಾಗಿದ್ದರು. ಆದರೆ, ತಂದೆ ಮಗನ ನಡುವೆ ಭಿನ್ನಾಭಿಪ್ರಾಯ ಹುಟ್ಟಿಕೊಂಡಿದ್ದು ಏಕೆ? ಮತ್ತು ಯಾವ ಕಾರಣಕ್ಕಾಗಿ? ಇಂತಹ ಪ್ರಶ್ನೆಗಳನ್ನಿಟ್ಟುಕೊಂಡು ಹುಡುಕಾಟ ನಡೆಸಿದರೆ, ನಮಗೆ ಎರಡು ಪ್ರಮುಖ ವಿಷಯಗಳು ಎದುರಾಗುತ್ತವೆ.  ಅವುಗಳಲ್ಲಿ ಪ್ರಮುಖವಾಗಿ ಗಾಂಧೀಜಿಯವರು ಸ್ವಂತ ತಮ್ಮ ಮಕ್ಕಳಿಗಿಂತ ಇತರೆ ಮಕ್ಕಳನ್ನು ಪ್ರೀತಿಸುತ್ತಿದ್ದಾರೆ ಎಂಬ ಅಂಶವು ಹರಿಲಾಲ್ ಗಾಂಧಿಯ ಅಸಮಾಧಾನಕ್ಕೆ ಕಾರಣವಾಗಿತ್ತು. ಎರಡನೆಯದಾಗಿ ಆಧುನಿಕ ಶಿಕ್ಷಣ ಪದ್ಧತಿ ಕುರಿತಂತೆ ಗಾಂಧೀಜಿಗೆ ಇದ್ದ ಅಭಿಪ್ರಾಯಗಳ ಕುರಿತಂತೆ ಅವರ ಪುತ್ರ ಹರಿಲಾಲ್ ಗೆ ಸಹಮತವಿರಲಿಲ್ಲ. ಎರಡು ಅಂಶಗಳು ತಂದೆ ಮಗನ ಪಥವನ್ನು ಜೀವನ ಪೂರ್ತಿ ಬದಲಾಯಿಸಿದವು. ಹರಿಲಾಲ್ ತನ್ನ ತಂದೆಯ ವಿರುದ್ಧ ಬೀಸಿದ ಬಂಡಾಯದ ಬಾವುಟ ಗಾಂಧೀಜಿಯವರನ್ನು ಜೀವನದುದ್ದಕ್ಕೂ ನಲುಗಿಸಿದವು. ಆದರೆ, ಎಂತಹ ಮುಜುಗರದ ಸಂದರ್ಭದಲ್ಲಿಯೂ ತನ್ನ ಕುಟುಂಬದ ಭಿನ್ನಾಭಿಪ್ರಾಯಗಳನ್ನು ಬಚ್ಚಿಡಲು ಅವರು ಪ್ರಯತ್ನಿಸಲಿಲ್ಲ.

ಗಾಂಧೀಜಿಯವರು 1915 ರಲ್ಲಿ ಅಹಮದಾಬಾದ್ ನಗರದಲ್ಲಿ ಸಬರಮತಿ ಆಶ್ರಮವನ್ನು ಆರಂಭಿಸುವ ಮೊದಲು ದಕ್ಷಿಣ ಆಫ್ರಿಕಾದಲ್ಲಿ  ಆರಂಭಿಸಿದ್ದ  ಆಶ್ರಮದಲ್ಲಿ ಆಶ್ರಮವಾಸಿಗಳಿಗೆ  ಕೆಲವು ಷರತ್ತುಗಳನ್ನು ವಿಧಿಸಿದ್ದರು. ಅವುಗಳಲ್ಲಿ ಪ್ರಮುಖವಾಗಿ ಆಶ್ರಮದಲ್ಲಿರುವ ಕಾರ್ಯಕರ್ತರು ದೇಶ ಸೇವೆಗೆ ಸದಾ ಸಿದ್ಧರಿರಬೇಕು, ಸಾಮೂಹಿಕ ಶ್ರಮದಾನ ಹಾಗೂ ತಮ್ಮ ಕೆಲಸಗಳನ್ನು (ಕಸ ಗುಡಿಸುವುದು, ಅಡುಗೆ ಮಾಡುವುದು, ಬಟ್ಟೆ ಸ್ವಚ್ಛಗೊಳಿಸುವುದು, ಶೌಚಾಲಯಗಳನ್ನು ಶುದ್ಧಗೊಳಿಸುವುದು ಇತ್ಯಾದಿ) ತಾವೇ ಮಾಡಿಕೊಳ್ಳಬೇಕು. ಇಂತಹ ವಿಚಾರಗಳ ಕುರಿತಾಗಿ ಹರಿಲಾಲ್ ಗೆ ಭಿನ್ನಾಭಿಪ್ರಾಯವಿತ್ತು. ಜೊತೆಗೆ  ಆಧುನಿಕ ಶಿಕ್ಷಣ ಕ್ರಮವು ಮನುಷ್ಯನನ್ನು ಭೋಗಿಯನ್ನಾಗಿಸುತ್ತದೆ. ಸರಳವಾದ ಹಾಗೂ ಇತಮಿತವಾದ ಬದುಕು ಶ್ರೇಷ್ಠ ಎಂಬ ಗಾಂಧೀಜಿಯವರ ಚಿಂತನೆಗೆ ಬದಲಾಗಿ ಹರಿಲಾಲ್ ಗಾಂಧಿ ಪಶ್ಚಿಮ ಜಗತ್ತಿನ ಆಧುನಿಕ ಶಿಕ್ಷಣ ಕುರಿತಂತೆ ಒಲವು ಉಳ್ಳವರಾಗಿದ್ದರು. ಕಾರಣಕ್ಕಾಗಿ ದಕ್ಷಿಣಾ ಆಫ್ರಿಕಾದಲ್ಲಿ ಇದ್ದಾಗ, ಇಂಗ್ಲೇಂಡಿನ ಶಿಕ್ಷಣಕ್ಕಾಗಿ ಒಬ್ಬ ವಿದ್ಯಾರ್ಥಿಗೆ  ಧನ ಸಹಾಯ  ದೊರೆತ ಸಂದರ್ಭದಲ್ಲಿ ಗಾಂಧೀಜಿಯವರು ಅದನ್ನು ತಮ್ಮ ಮಕ್ಕಳಿಗೆ ಬಳಸಿಕೊಳ್ಳದೆ, ಇನ್ನೋರ್ವ ವಿದ್ಯಾರ್ಥಿಗೆ ( ತಮ್ಮ ಸಂಬಂಧಿಕರ ಪುತ್ರ) ಅವಕಾಶ ಮಾಡಿಕೊಟ್ಟಿದ್ದು ಭಿನ್ನಾಭಿಪ್ರಾಯದ ಸ್ಪೋಟಕ್ಕೆ  ಪ್ರಬಲ ಕಾರಣವಾಯಿತು.  1911 ರಲ್ಲಿ ಹರಿಲಾಲ್ ತನ್ನ ತಂದೆ, ಹಾಗೂ ಕುಟುಂಬದ ಸದಸ್ಯರನ್ನು ತೊರೆದ ಭಾರತಕ್ಕೆ ಹಿಂತಿರುಗಿದರು.
 ಹರಿಲಾಲ್ ಗಾಂಧಿ ಯವರ ಕೃತಿಯನ್ನು ಗುಜರಾತಿ ಭಾಷೆಯಲ್ಲಿ ರಚಿಸಿರುವ ಹಾಗೂ  ವೃತ್ತಿಯಲ್ಲಿ ಲೆಕ್ಕ ಪರಿಶೋಧಕರಾಗಿದ್ದ ಚಂದೂಲಾಲ್ ದಲಾಲ್ ಅವರು ಹರಿಲಾಲ್ ಗಾಂಧಿ ಕುರಿತ ಅಧ್ಯಯನಕ್ಕಾಗಿ ನಡೆಸಿರುವ ವಿಸ್ತø ಅಧ್ಯಯನ ಓದುಗರಲ್ಲಿ ಬೆರಗು ಮೂಡಿಸುತ್ತದೆ. ಗಾಂಧೀಜಿಯವರ ಬದುಕಿನ ಸಮಗ್ರ ದಿನಚರಿ ಹಾಗೂ ಬದುಕಿನ ವಿವರಗಳನ್ನು ಕಲೆ ಹಾಕಿಕೊಳ್ಳುವುದರ ಜೊತೆಗೆ  ಮಹಾತ್ಮ ಗಾಂಧೀಜಿಯವರು  ತಮ್ಮ ಜೀವಿತಾವಧಿಯಲ್ಲಿ  ಬರೆದಿರುವ ಮುವತ್ತು ನಾಲ್ಕು ಸಾವಿರ ಪತ್ರಗಳನ್ನು ಕೂಲಂಕುಶವಾಗಿ ಅಧ್ಯಯನ ನಡೆಸಿದ್ದಾರೆ. ಇದೂ ಸಾಲದೆಂಬಂತೆ ಮಹಾತ್ಮ ಗಾಂಧೀಜಿಯವರ ಆಪ್ತ ಕಾರ್ಯದರ್ಶಿಯಾಗಿದ್ದ ಮಹಾದೇವ ದೇಸಾಯಿ ಅವರು ಗುಜರಾತಿ ಭಾಷೆಯಲ್ಲಿ ಬರೆದಿರುವ ಇಪ್ಪತ್ತಮೂರು ಸಂಪುಟಗಳ ದಿನಚರಿಯ 9.300 ಮುದ್ರಿತ ಪುಟಗಳನ್ನು ಜಾಲಾಡಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ಮಹಾದೇವ ದೇಸಾಯಿ ಅವರು ಸಬರಮತಿ ಆಶ್ರಮವನ್ನು ಸೇರಿದ ದಿನದಿಂದ ಹಿಡಿದು, 1942 ಆಗಸ್ಟ್ 15 ರಂದು ಪುಣೆನಗರದ ಆಗಖಾನ್ ಅರಮನೆಯಲ್ಲಿ ಗಾಂಧೀಜಿ ಜೊತೆ ಗೃಹಬಂಧನದಲ್ಲಿದ್ದು ಹೃದಯಾಪಘಾತದಿಂದ ನಿಧನರಾಗುವ ದಿನದವರೆಗೂ ಅಂದರೆ ಸುಮಾರು ಇಪ್ಪತ್ತೈದು ವರ್ಷಗಳ ಕಾಲದ ಗಾಂಧಿಜಿಯವರ ಆಪ್ತಕಾರ್ಯದರ್ಶಿಯಾಗಿದ್ದುಕೊಂಡು ಅವರ ಜೊತೆಗಿನ ಒಡನಾಟದ ದಿನಚರಿಯನ್ನು ದಾಖಲಿಸಿದ್ದಾರೆ.
ಮಹಾತ್ಮನನ್ನು ಭೇಟಿ ಮಾಡಿದವರ ಹೆಸರು ಮತ್ತು ಅವರ ಜೊತೆಗೆ ಗಾಂಧಿಜಿ ನಡೆಸಿದ ಮಾತುಕತೆಯ ವಿವರಗಳಲ್ಲದೆ,  ಗಾಂಧಿಜಿಗೆ ಬಂದ ಪತ್ರಗಳ ವಿವರಗಳು ಮತ್ತು  ಅದಕ್ಕೆ ಅವರು ಬರೆದ ಉತ್ತರ ಇವೆಲ್ಲವನ್ನೂ ಸವಿವರವಾಗಿ ದಾಖಲಿಸಿದ್ದಾರೆ. ಆದರೆ, ಮಹಾದೇವ ದೇಸಾಯಿರವರು ಗಾಂಧಿ ಮತ್ತು ಅವರ ಪುತ್ರ ಹರಿಲಾಲ್ ನಡುವಿನ  ಭೇಟಿಯ ವಿವರ ಹಾಗೂ ನಡೆದ ಪತ್ರ ವ್ಯವಹಾರ ಕುರಿತಂತೆ ಮೌನ ವಹಿಸಿದ್ದಾರೆ. ಇದೇ ರೀತಿ ಗಾಂಧಿಜಿಯವರ ಜೊತೆ ನಿಕಟ ಸಂಪರ್ಕದಲ್ಲಿದ್ದ ಜಮ್ನಲಾಲ್ ಬಜಾಜ್ ಸೇರಿದಂತೆ ಬಹುತೇಕ  ಅನುಯಾಯಿಗಳು ಮೌನಕ್ಕೆ ಶರಣಾಗಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿತು. ಕಾರಣದಿಂದಾಗಿ ಇಂತಹ ಸಂಶಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ತೆರೆದ ಪುಸ್ತಕದಂತೆ ಬದುಕಿದ ಮಾಹಾತ್ಮ ಗಾಂಧಿಯವರು  ಬರೆದ ಪತ್ರಗಳು ಹಾಗೂ ಅವರಿಗೆ ಬಂದ ಪತ್ರಗಳು ಜೊತೆಗೆ ಹರಿಲಾಲ್ ಅವರ ಸೊಸೆ ಹಾಗೂ ಮೊಮ್ಮಗಳು ಮತ್ತು ಹರಿಲಾಲ್ ಅವರ ಸಹೋದರರ ಪುತ್ರರು ದಾಖಲಿಸಿರುವ ಮಾಹಿತಿಗಳು ನಮಗೆ ಹರಿಲಾಲ್ ಗಾಂಧಿಯವರ ವ್ಯಕ್ತಿತ್ವದ ಎಲ್ಲಾ ಆಯಾಮಗಳ ಮೇಲೆ ಬೆಳಕು ಚೆಲ್ಲಲು ಸಹಾಯಕವಾಗಿವೆ.
ಗಾಂಧೀಜಿಯವರ ಚಿಂತನೆ ಮತ್ತು ಹರಿಲಾಲ್ ಚಿಂತನೆಗಳ ನಡುವೆ ಇದ್ದ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹರಿಲಾಲ್ ಗಾಂಧಿಯನ್ನು ಕುಟುಂಬದಿಂದ ದೂರ ಮಾಡಿತು. ದಕ್ಷಿಣ ಆಫ್ರಿಕಾದಿಂದ ವಾಪಸ್ ಬಂದ ಹರಿಲಾಲ್ ಹಲವಾರು ವ್ಯವಹಾರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರೂ ಸಹ ಅವರ ವಿಕ್ಷಿಪ್ತ ಮನಸ್ಸು ಮತ್ತು ಆತುರದ ಪ್ರವೃತ್ತಿಯಿಂದ ಯಾವುದರಲ್ಲಿಯೂ ಯಶಸ್ವಿಯಾಗಲಿಲ್ಲ. ಹತಾಶೆಯ ಸ್ಥಿತಿ ತಲುಪಿದ ಅವರು ಮದ್ಯಪಾನದ ದಾಸರಾದದ್ದು ದುರಂತವೇ ಸರಿ. ಭಾರತದ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸುತ್ತಿದ್ದ ನಾಯಕನೊಬ್ಬನ ಹಿರಿಯ ಪುತ್ರ ಎಂಬ ಏಕೈಕ ಕಾರಣದಿಂದ ಹರಿಲಾಲ್ ಹೋದ ಸ್ಥಳಗಳಲ್ಲಿ ಅನುಕಂಪದ ಆತಿಥ್ಯ ಸಿಗುತ್ತಿತ್ತು. ಆದರೆ, ಹಣದ ವಿಷಯದಲ್ಲಿ ತೀರಾ ಕಟ್ಟುನಿಟ್ಟಿನ ವ್ಯಕ್ತಿಯಾಗಿದ್ದ ಗಾಂಧೀಜಿಯವರು ತಮ್ಮ ಪುತ್ರನಿಗೆ ಯಾರೂ ಅತಿಯಾದ ಹಣದ ಸಹಾಚಿ ನೀಡುವುದು ಮತ್ತು ಸಾಲ ನೀಡಬಾರದೆಂದು ತಾಕೀತು ಮಾಡಿದ್ದರು. ಇಷ್ಟೆಲ್ಲಾ ಭಿನ್ನಾಭಿಪ್ರಾಯಗಳ ನಡುವೆ ತಂದೆ ಮಗನ ನಡುವೆ ನಿರಂತರ ಪತ್ರ ವ್ಯವಹಾರ ನಡೆಯುತ್ತಿತ್ತು. ಜೊತೆಗೆ ತನ್ನ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದ ತನ್ನ ನಾದಿನಿಯರಿಗೆ ( ಸಹೋದರರ ಪತ್ನಿಯರು) ಹಾಗೂ ತಾಯಿ ಕಸ್ತೂರ ಬಾ ಅವರಿಗೆ ಅತ್ಯಂತ ಕೃತಜ್ಞತೆಯಿಂದ ಹರಿಲಾಲ್ ಪತ್ರ ಬರೆಯುತ್ತಿದ್ದರು.
ವಾಸ್ತವವಾಗಿ ತಮ್ಮ ಪತ್ನಿ ಗುಲಾಬ್ ಬೆಹನ್ ನಿಧನಾನಂತರ ಮಾನಿಸಿಕ ಸ್ಥಿಮಿತ ಕಳೆದುಕೊಂಡ  ಹರಿಲಾಲ್ ಗಾಂಧಿ ದೇಶದುದ್ಧಕ್ಕೂ ತಮ್ಮ ವಿಕ್ಷಿಪ್ತ ಮನಸ್ಸನ್ನು ಹೊತ್ತು ಅಲೆದಾಡಿದರು. ಸ್ವತಂತ್ರ ಉದ್ಯೋಗ ಅಥವಾ ವ್ಯವಹಾರ ನಡೆಸಲು ಅವರು ನಡೆಸಿದ ಪ್ರಯತ್ನಗಳೆಲ್ಲ ವಿಫಲವಾದ ನಂತರ ಅವರು ಮದ್ಯ ವ್ಯಸನಿಯಾಗಿದ್ದರು. ಆದರೆ, ಹರಿಲಾಲ್ ಗಾಂಧಿಯವರನ್ನು ಓರ್ವ ಪರಮ ಕುಡುಕ ಎಂದು ಹಲವರು ಬಿಂಬಸಿಕೊಂಡು ಬಂದಿದ್ದಾರೆ. ಆದರೆ, ಹರಿಲಾಲಗ ಗಾಂಧಿಯವರ ಪುತ್ರ ಕಾಂತಿಲಾಲ್ 1944 ರಿಂದ 1948 ಅವಧಿಯಲ್ಲಿ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಾಗ, ಅನೇಕ ಬಾರಿ ಮೈಸೂರಿಗೆ ಹರಿಲಾಲ್ ಗಾಂಧಿ ಭೇಟಿ ನೀಡಿರುವ ವಿವರ ನಮಗೆ ಹರಿಲಾಲ್ ಅವರ ಮತ್ತೊಂದು ಮುಖವನ್ನು ಪರಿಚಯಿಸುತ್ತದೆ.  ಅಂದಿನ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರನ್ನು ಭೇಟಿ ಮಾಡಿ, ಅವರಿಂದ ಮೈಸೂರು ಮಲ್ಲಿಗೆ, ಮೈಸೂರು ಪಾಕ್ ಸಿಹಿ ತಿಂಡಿ ಹಾಗೂ ದರ್ಭಾರ್ ಸುವಾಸನೆಯ ಅಗರ ಬತ್ತಿ ( ಅರಮನೆಯಲ್ಲಿ ಅತಿಥಿಗಳು ಉಳಿದು ಕೊಳ್ಳುತ್ತಿದ್ದ ಕೊಠಡಿಗಳಲ್ಲಿ ಉಪಯೋಗಿಸುತ್ತಿದ್ದ ಮೂರು ಅಡಿ ಎತ್ತರದ ಅಗರಬತ್ತಿ) ಇವುಗಳಲ್ಲದೆ ಇನಾಮು ರೂಪದಲ್ಲಿ ನೀಡುತ್ತಿದ್ದ ಐನೂರು ರೂಪಾಯಿ ಇವೆಲ್ಲವನ್ನು ತಂದು ತಮ್ಮ ಸೊಸೆಯ ಕೈಯಲ್ಲಿ ಇರುಸುತ್ತಿದ್ದ ಘಟನೆಗಳನ್ನು ಡಾ.ಕಾಂತಿಲಾಲ್ ಅವರ ಪತ್ನಿ ಹಾಗೂ ಕೇರಳದ ಹೆಣ್ಣು ಮಗÀಳಾದ ಸುಶೀಲಾ ಎಂಬುವರು ತಮ್ಮ ಮಾವನ ಕುರಿತಂತೆ ಹೃದಯ ಸ್ಪರ್ಶಿಯಾಗಿ ದಾಖಲಿಸಿದ್ದಾರೆ.

ಭಾರತದ ಬಡತನ, ಅನಕ್ಷರತೆ, ಜಾತಿ ಜಾತಿಗಳ ತಾರತಮ್ಯ, ಅನಾರೋಗ್ಯ ಇವುಗಳ ಜೊತೆಗೆ ಸ್ವಾತಂತ್ರ್ಯ ಹೋರಾಟ ಹೀಗೆ ಹಲವು ರೂಪದ ಜವಬಾýರಿಗಳನ್ನು ಒಟ್ಟಿಗೆ ಹೆಗಲ ಮೇಲೆ ಹೊತ್ತು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ನಿರಂತರ ದೇಶ ಸುತ್ತುತ್ತಿದ್ದ ಗಾಂಧೀಜಿಯವರು ತನ್ನ ಕುಟುಂಬದ ಸದಸ್ಯರ ಕಾಳಜಿಯನ್ನು ಮರೆತಿರಲಿಲ್ಲ. ಅನೇಕ ಬಾರಿ ಹರಿಲಾಲ್ ಗಾಂಧಿಯ ವರ್ತನೆಯಿಂದ ತೀವ್ರವಾಗಿ ನೊಂದುಕೊಂಡಾಗನನ್ನೊಳಗಿನ ಕಾಮದ ವಿಕೃತಿಗೆ ದೇವರು ನನಗೆ ಕೊಟ್ಟ ಶಿಕ್ಷೆಎಂದುಕೊಳ್ಳುತ್ತಾ ಒಳಗೊಳಗೆ ಅತ್ತು ಕಣ್ಣಿರು ಒರೆಸಿಕೊಂಡರು. ಒಮ್ಮೆ ಅಂದಿನ ಬಾಂಬೆಯಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ನಂತರ ಮತ್ತೇ ಹಿಂದೂ ಧರ್ಮಕ್ಕೆ ಹಿಂತಿರುಗಿದ ಹರಿಲಾಲ್ ಗಾಂಧಿಯ ಚಂಚಲ ಪ್ರವೃತ್ತಿಯ ಕುರಿತಂತೆ ಮುಸ್ಲಿಂ ಬಾಂಧವರಿಗೆ ಗಾಂಧಿಜಿಯವರು ಬರೆದ ಬಹಿರಂಗ ಪತ್ರ ಅವರ ಹ್ಲದಯ ವೈಶಾಲ್ಯತೆಗೆ ಸಾಕ್ಷಿಯಾಗಿದೆ.
1988 ರಲ್ಲಿ ಬಂದ ಗುಜರಾತಿ ಭಾಷೆಯಬೆಳಕಿನಡಿಯ ಕತ್ತಲುಮತ್ತು ಪ್ರಖ್ಯಾತ ರಂಗನಿರ್ದೇಶಕ ಪೆರೋಜ್ ಖಾನ್ ರಚಿಸಿ ನಿರ್ದೆಶಿಸಿದಮಹಾತ್ನನ ವಿರುದ್ಧ ಗಾಂಧಿಎಂಬ ನಾಟಕ ಮತ್ತು ಕೀತ್ ಹೆಲ್ಲರ್ ಎಂಬ ಮಹಿಳಾ ಲೇಖಕಿ ರಚಿಸಿದ ಇಂಗ್ಲೀಷ್ ಕಾದಂಬರಿಗಾಂಧಿಗೆ ಗೊತ್ತಿದ್ದ ಮಹಿಳೆ  ಇಂತಹ ಕೃತಿಗಳಲ್ಲಿ ಹರಿಲಾಲ್ ಅವರನ್ನು ಶೋಚನೀಯವಾಗಿ, ವ್ಯಗ್ರ ಮನಸ್ಸಿನ ಪುತ್ರನಾಗಿ, ಚಂಚಲ ಸ್ವಭಾವದ ವ್ಯಕ್ತಿಯಾಗಿ ಚಿತ್ರಿಸಲಾಗಿದೆ. ಇಂತಹ ಅರ್ಧ ಸತ್ಯಗಳ ಮೇಲೆ ಬೆಳಕು ಚೆಲ್ಲುವಂತ ಅನೇಕ ಘಟನೆಗಳನ್ನು  ಓದುಗರು ಮುಂದಿನ ಅಧ್ಯಾಯಗಳಲ್ಲಿ  ಕಾಣಬಹುದಾಗಿದೆ.
( ಮುಂದುವರಿಯುವುದು)
(ಮೇಲುಕೋಟೆಯ ಜನಪದ ಸೇವಾ ಟ್ರಸ್ಟ್ ಹೊರ ತರುತ್ತಿರುವ “ ಜನಪದ” ಮಾಸಿಕ ಪತ್ರಿಕೆಯಲ್ಲಿ ಏಪ್ರಿಲ್ ತಿಂಗಳಿನಿಂದ ಆರಂಭವಾಗಿರುವ ಸರಣಿಯ ಕಥನ)

ಮಂಗಳವಾರ, ಮಾರ್ಚ್ 20, 2018

ಪುಗಸಟ್ಟೆಯ ಪ್ರಣಯ ಪ್ರಸಂಗ



ಶಾನುಭೋಗರಹಳ್ಳಿ ಎಂಬ ಹೆಸರಿನ ಆ ಊರು ಈ ದೇಶದ ಎಲ್ಲಾ ಹಳ್ಳಿಗಳ ಹಾಗೆ ಒಂದು ಕಾಲದಲ್ಲಿ ಸದಾ ತಣ್ಣಗೆ ಮೌನವಾಗಿ ಇದ್ದೂ ಇಲ್ಲದಂತಿತ್ತು.  ಊರಿ£ಲ್ಲಿ ಸಕಲೆಂಟು ಜಾತಿಗಳು ತಮ್ಮ ತಮ್ಮ  ಕುಲ ಕಸುಬುಗಳ ಜೊತೆ ಅಂಟಿಕೊಂಡಿದ್ದರೂ ಸಹ ಊರಿನ ಜನರೆಲ್ಲಾ ಒಬ್ಬರಿಗೊಬ್ಬರು ಆಸರೆಯಾಗಿ ಬದುಕುವ ಗುಣವನ್ನು ಕಾಪಾಡಿಕೊಂಡು ಬಂದವರಾಗಿದ್ದರು. ಇದು ಅಲ್ಲಿಯ ಜನರನ್ನು  ಬಣ್ಣದ ಚಿಂದಿಗಳನ್ನು ಆಯ್ದು ನೇಯ್ದ ಕೌದಿಯಂತೆ ಆಕಾಶದಡಿ ಕೂಡಿ ಹಾಕಿತ್ತು.
ಬೆಂಗಳೂರೆಂಬ ಮಹಾನಗರಿಗೆ ಕೇವಲ  ಮುವತ್ತು ಕಿಲೋಮೀಟರ್ ದೂರದಲ್ಲಿದ್ದ ಶಾನುಭೋಗರ ಹಳ್ಳಿಗೆ ನಗರವನ್ನು ಸಂಪರ್ಕಿಸುವ ಯಾವುದೇ ಮಜಬೂತಾದ ರಸ್ತೆಗಳಿಲ್ಲದಿದ್ದ ಕಾರಣ ಊರಿನಲ್ಲಿ ನೆಮ್ಮದಿಯು ಮನೆ ಮಾಡಿತ್ತು. ಯಾವುದೇ ನಯನಾಜೂಕನ್ನು ಕಾಣದೆ, ಮಳೆಯಾಶ್ರಯದಲ್ಲಿ ಬೆಳೆದ ರಾಗಿ, ಶೆಂಗಾ, ಅವರೆ, ಅಲಸಂದೆ, ಹುರುಳಿ ಬೆಳೆಗಳ ಜೊತೆಗೆ  ಕೆರೆಯ ಕೆಳಗಡೆ ಇರುತ್ತಿದ್ದ ಅಂಗೈ ಅಗಲದ ಭೂಮಿಯಲ್ಲಿ ಬೆಳದ ಭತ್ತ ಇವುಗಳಲ್ಲಿ ಅಲ್ಲಿನ ಜನತೆ ನೆಮ್ಮದಿ ಕಂಡುಕೊಂಡಿದ್ದರು. 
ಬಡತನ ನಡುವೆಯೂ ನೆಮ್ಮದಿಯನ್ನು ಕಂಡುಕೊಂಡಿದ್ದ ಶ್ಯಾನುಭೋಗರಹಳ್ಳಿಗೂ ಮತ್ತು  ಬೆಂಗಳೂರೆಂಬ ನಾಯಕಸಾನಿಯ ನಡುವೆ ರಸ್ತೆ ಸಂಪರ್ಕ ಏರ್ಪಟ್ಟ ದಿನದಿಂದ ಇಡೀ ಊರಿನ ಚಹರೆ  ಬದಲಾಯಿತು. ನಗರದೊಳಗೆ ಹಾಯ್ದು ಹೋಗಬೇಕಿದ್ದ ಹೆದ್ದಾರಿಯ ದಿಕ್ಕನ್ನು ಬದಲಿಸಿದ ಸರ್ಕಾರವು  ಬೈ ಪಾಸ್ ರಸ್ತೆಯೊಂದನ್ನು  ನಿರ್ಮಿಸಿತು. ಈ ಹೊಸ ಹೆದ್ದಾರಿಯು ಶ್ಯಾನುಭೋಗಹಳ್ಳಿಯ ಮಧ್ಯಭಾಗದಲ್ಲಿ ಹಾಯ್ದು ಹೋದುದರ ಫಲವಾಗಿ  ಇಡೀ ಊರನ್ನು ಉದ್ದುದ್ದವಾಗಿ ಸೀಳಿತು. ನಮ್ಮೂರಿಗೆ ರಸ್ತೆ ಬೇಡ, ಜಮೀನಿಗೆ ಪರಿಹಾರಬೇಡ ಎಂದು ಪ್ರತಿಭಟಿಸಿದ ರೈತರ ಎದುರು, ಅದೇ ಊರಿನ ಯುವಕರನ್ನು ಎತ್ತಿಕಟ್ಟಿದ ರಾಜಕಾರಣಿಗಳು  ಸರ್ಕಾರದ ಪರ ಘೋಷಣೆ ಕೂಗಿಸಿ, ರಸ್ತೆ ಬೇಕು, ಅಭಿವೃದ್ಧಿ ಬೇಕು ಎಂಬ ಫಲಕ ಹಿಡಿಸಿ ಊರಿನಲ್ಲಿ ಅಣ್ಣ ತಮ್ಮಂದಿರಂತೆ ಬದುಕಿ ಬಾಳಿದವರನ್ನು ರಾತ್ರೋರಾತ್ರಿ ವ್ಶೆರಿಗಳನ್ನಾಗಿ ಪರವರ್ತಿಸಿದರು.
ಸದಾ ತಣ್ಣಗೆ ನಿದ್ರಿಸುತ್ತಿದ್ದ ಶ್ಯಾನುಭೋಗರಹಳ್ಳಿಯು ಹೆದ್ದಾರಿಯಾಗುತ್ತಿದ್ದಂತೆ ಇಪ್ಪತ್ತು ನಾಲ್ಕು ಗಂಟೆಯೂ ಕಾರ್ಯ ಚಟುವಟಿಕೆಯ ಕೇಂದ್ರವಾಯಿತು. ರಸ್ತೆಯ ಎಡ ಬಲಗಳಲ್ಲಿ ಸ್ಪರ್ಧೆಗಳಿದಂತೆ ಚಹಾ ಅಂಗಡಿ, ಬೇಕರಿ, ಗುಟ್ಕಾ, ಪಾನ್, ಸಿಗರೇಟ್ ಅಂಗಡಿಗಳು ತಲೆ ಎತ್ತಿದವು.  ಸಂಜೆ ವೇಳೆಗೆ ಬಿಸಿ ಬಿಸಿ ಬೋಡಾ, ವಡೆ, ಪಕೋಡ, ಪಾನಿಪೂರಿ, ಅಂಗಡಿಗಳು ಕಾಣಿಸಿಕೊಂಡು ಊರು ಜನರ ನಾಲಿಗೆ ಹೊಸ ರುಚಿಯ ಹುಚ್ಚು ಹತ್ತ ತೊಡಗಿದಂತೆ ಶ್ಯಾನಭೋಗರಹಳ್ಳಿಯ ಜನರೆದುರು ಹೊಸ ಲೋಕವೊಂದು ತೆರೆದುಕೊಂಡಿತು.
ಊರಿನ ಅರಳಿಕಟ್ಟೆಯ ಬಳಿ ಅಥವಾ ಮಾರಮ್ಮನ ಗುಡಿಯ ಹಜಾರದಲ್ಲಿ ಚೌಕಾಬಾರ ಆಡುತ್ತಾ, ಬೀಡಿ ಸೇದುತ್ತಾ ಕಾಲ ಕಳೆಯುತ್ತಿದ್ದ ಪಡ್ಡೆ ಹುಡುಗರು ಹೆದ್ದಾರಿಗೆ ಬಂದು ಕಾಲ ಕಳೆಯತೊಡಗಿದರು. ಈ ನಡುವೆ ಬೆಂಗಳೂರು ನಗರದ ಹೊರವಲಯದ ಅಂಚಿನಲ್ಲಿರುವ ಸಣ್ಣ ಪುಟ್ಟ ಕೈಗಾರಿಕೆಗಳಲ್ಲಿ  ಮತ್ತು ಗಾರ್ಮೆಂಟ್  ಕಂಪನಿಗಳಲ್ಲಿ ಕೆಲಸಕ್ಕೆ ಬೇಡಿಕೆ ಹೆಚ್ಚಾಗತೊಡಗಿದಂತೆ ಕಾರ್ಮಿಕರನ್ನು ಕರೆತರುವ ವಾಹನಗಳು ಹಳ್ಳಿಯತ್ತ ಬರತೊಡಗಿದವು. ಸೊಂಟಕ್ಕೊಂದು ಲುಂಗಿ ಸುತ್ತಿಕೊಂಡು; ಹೆಗಲ ಮೇಲೊಂದು ಟವಲ್ ಹಾಕಿಕೊಂಡು ಅಂಡಲೆಯುತ್ತಿದ್ದ ಶ್ಯಾನುಬೋಗರಹಳ್ಳಿಯ ಹುಡುಗರಿಗೆ ಅದೃಷ್ಟ ಅರಸಿಕೊಂಡು ಬಂದಂತಾಗಿ ಮನೆಯ ಮೂಲೆಯಲ್ಲಿದ್ದ ಹಳೆಯ ಪ್ಯಾಂಟ್ ಗಳನ್ನು ತೆಗೆದು ಸೊಂಟಕ್ಕೇರಿಸಿಕೊಂಡು ವ್ಯಾನ್ ಹತ್ತಿ ನಗರದತ್ತ ಹೊರಟರು. ಹಲವರು ಗಾರ್ಮೆಂಟ್ ಕಂಪನಿಗಳಲ್ಲಿ ಜಮಾವಣೆಯಾದರೆ, ಇನ್ನುಳಿದವರು, ಟೈಲ್ಸ್, ಗ್ರಾನೈಟ್, ಕೆಮಿಕಲ್ಸ್ ಹೀಗೆ ಸಣ್ಣ ಪುಟ್ಟ ಉದ್ದಿಮೆಗಳಲ್ಲಿ ದುಡಿಯತೊಡಗಿದರು. ಹುಡಗರಿಗಿಂತ ನಾವೇನು ಕಡಿಮೆ ಎನ್ನುವಂತೆ ಹಳ್ಳಿಯ ಮಹಿಳೆಯರು, ಯುವತಿಯರು ಸಹ ವ್ಯಾನ್‍ಗಳನ್ನು ಹತ್ತಿ ಗಾರ್ಮೆಂಟ್  ಕಂಪನಿಗಳಲ್ಲಿ ದುಡಿಯತೊಡಗಿದರು.
ಕೇವಲ ಒಂದು ವರ್ಷದ ಅವಧಿಯಲ್ಲಿ ಇಡೀ ಶ್ಯಾನಭೋಗರಹಳ್ಳಿಯ ವಾತಾವರಣವೇ ಬದಲಾಗಿ ಹೋಯಿತು. ಎಲ್ಲರ ಕೈಯಲ್ಲಿ ಮೊಬೈಲ್ ಮಾತನಾಡತೊಡಗಿದವು. ಯುವಕರಂತೂ ತಮ್ಮ ತಲೆಕೂದಲನ್ನು ದೋನಿ ಕಟಿಂಗ್, ಕೋಯ್ಲಿ ಕಟಿಂಗ್ ಎಂಬ ವಿನ್ಯಾಸಕ್ಕೆ ಬದಲಿಸಿಕೊಂಡು, ಅಗ್ಗದ ಜೀನ್ಸ್, ಮತ್ತು ಟಿ ಶರ್ಟ್ ಹಾಗೂ ಬರ್ಮುಡಾ ಚಡ್ಡಿಯನ್ನು ತೊಟ್ಟು ಊರು ತುಂಬಾ ಓಡಾಡತೊಡಗಿದರು. ಹುಟ್ಟಿದಾಗಿನಿಂದ ಈ ಹುಡುಗರಿಗೆ ಕಟಿಂಗ್ ಮಾಡುತ್ತಿದ್ದ ಮಲ್ಲಣ್ಣ ಮತ್ತು ಅಂಗಿ ಚಡ್ಡಿ ಹೊಲೆದು ಕೊಡುತ್ತಿದ್ದ ಟೈಲರ್ ನಜೀಬಣ್ಣ ಇವರನ್ನು ಕುತೂಹಲದಿಂದ ನೋಡುತ್ತಿದ್ದರು.
“ಯಾಕೆ ಅಂಗ್ ನೊಡ್ತೀರಾ? ಇನ್ನು ಮೇಲೆ ನೀವು ಮುದುಕರಿಗೆ ಕಟಿಂಗ್ ಮಾಡ್ಕಂಡ್ ಮುದುಕಿಯರಿಗೆ ರವಿಕೆ ಹೊಲ್ಕಂಡ್ ಇರದಷ್ಟೇ ನಿಮ್ಮ ಕೆಲಸ” ಎಂದು ಹುಡುಗರು ಚುಡಾಯಿಸತೊಡಗಿದರೆ
ಇದಕ್ಕೆ ಉತ್ತರವೆಂಬಂತೆ  “ಸರಿ ಬಿಡ್ರಪ್ಪ, ನಿಮ್ಮಪ್ಪ, ನಿಮ್ಮವ್ವಂದಿರು ನಮಗೆ ಇನ್ಮೇಲೆ ಪರ್ಮೆಂಟ್ ಗಿರಾಕಿಗಳು” ಎಂದು ಹೇಳುತ್ತಾ ಬೀಡಿ ಹಚ್ಚಿಕೊಂಡು ಇಬ್ಬರೂ ಪರಸ್ಪರ ಮುಖ ನೋಡಿಕೊಂಡು ನಗಾಡುತ್ತಿದ್ದರು.
ಊರಿಗೆ ಬಂದ ಹೆದ್ದಾರಿಯು  ಹೆಮ್ಮಾರಿಯಾಗಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಹುಡುಗ ಹುಡುಗಿಯರೆಂಬ ಭೇದ ಭಾವವಿಲ್ಲದೆ ಎಲ್ಲರ ಕೈಯಲ್ಲಿ ಹಣ ಓಡಾಡತೊಡಗಿದಂತೆ ಎಲ್ಲರ ಕೈಗೆ ಮೊಬೈಲ್ ಗಳು  ಬರತೊಡಗಿದವು. ಇಂಟರ್‍ನೆಟ್ ಸಂಪರ್ಕ ಅಗ್ಗವಾದ ನಂತರ ಸಿನಿಮಾಗಳು,  ಹಾಡುಗಳು, ಅಶ್ಲೀಲ ವೆಬ್ ತಾಣಗಳು ಹುಡುಗರ ಮೆಚ್ಚಿನ ಹವ್ಯಾಸಗಳಾದವು. ಮುಗ್ದತನ ಮತ್ತು ಬಡತನದಿಂದಾಗಿ ಎದೆಯೊಳಗೆ ಕಾಲು ಮುರಿದುಕೊಂಡು ಕುಳಿತಿದ್ದ ಹದಿ ಹರೆಯದ ಕಾಮವು ಎದ್ದು ಕುಣಿಯತೊಡಗಿದಂತೆ ಹುಡುಗ ಹುಡುಗಿಯರಲ್ಲಿ ನನಗೂ ಒಂದು ಹೊಸ ಜೀವ ಬೇಕೆಂಬ ಆಸೆ ಚಿಗುರೊಡೆಯತೊಡಗಿತು. ತಾವು ಕೆಲಸ ಮಾಡುವ ಸ್ಥಳದಲ್ಲಿ ಇವಳು/ನು ನನಗೆ ಜೋಡಿಯಾಗಬಲ್ಲಳೆ/ನೆ? ಎಂದೆಲ್ಲಾ ಕಣ್ಣುಗಳು ಅರಸತೊಗಿದವು. ಇದರ ಫಲವೇನೋ ಎಂಬಂತೆ  ಹುಡುಗ ಹುಡುಗಿಯರು ಜಾತಿ, ಕುಲ ನೋಡದೆ ಪ್ರೇಮಿಸತೊಡಗಿದರು. ಮನೆಯ ಹಿರಿಯರು ಒಪ್ಪದಿದ್ದಾಗ, ಓಡಿಹೊಗುವುದು ಇಲ್ಲವೇ ಯಾವುದಾದರೊಂದು ದೇವಸ್ಥಾನದಲ್ಲಿ ತಾಳಿಕಟ್ಟಿ ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ಬದುಕಿನ ಬಂಡಿ ಹೂಡುವುದು ಸಾಮಾನ್ಯವಾಗತೊಡಗಿತು. ಇಂತಹ ಪ್ರೇಮ ಪ್ರಸಂಗಗಳು ಜರುಗಿದಾಗಲೆಲ್ಲಾ ಶ್ಯಾನುಭೋಗರಹಳ್ಳಿಯ ಹಿರೀಕರು “ ಬುಟ್ಟಾಕ್ಲಾ ಅತ್ಲಾಗೆ ಏನ್ ಮಾಡಕಾಯ್ತದೆ? ಹಾಳು ಬಸ್ತಿವು ಹುಟ್ಟುವಾಗ್ಲೇ ಹಿಂತಿರುಗಿ ಆ ಹಾಳಾದ್ ಬ್ರಹ್ಮ ರಂಧ್ರವ ನೋಡ್ಕಂಡು ಬತ್ತಾವೆ ಕಣಾ” ಎಂದು ಸಮಾಧಾನ ಹೇಳುವುದು ಸಾಮಾನ್ಯವಾಯಿತು.
ಇಂತಹದ್ದೇ ಒಂದು ಪ್ರಕರಣದಲ್ಲಿ ಶ್ಯಾನಭೋಗರಳ್ಳಿ ಪುಗಸಟ್ಟೆ ಪುಟ್ಟರಾಜನ ಪ್ರೇಮ ಪ್ರಸಂಗವು ಹಳ್ಳಿಯಲ್ಲಿ ವಿಶೇಷ ಪ್ರಚಾರ ಪಡೆದುಕೊಂಡಿತು. ಹಿಂದೆ ಬಂದರೆ ಒದೆಯದ, ಮುಂದೆ ಬಂದರೆ ಹಾಯದ ಹಸುವಿನಂತ ಗುಣದ ಪುಗಸಟ್ಟೆ ಪುಟ್ಟರಾಜನ ಬಗ್ಗೆ ಊರಿನ ಜನರಿಗೆಲ್ಲಾ ಅಪಾರ ಪ್ರೀತಿ. ಏನೇ ಕೆಲಸ ಹೇಳಿದರೂ ಸಹ ಇಲ್ಲವೆನ್ನದೆ ಮಾಡುತ್ತಿದ್ದ ಪುಟ್ಟರಾಜ, ನೆರೆ ಹೊರೆಯ ಹಳ್ಳಿಗಳಿಗೆ ಹೋಗಿ ತೆಂಗಿನ ಮರ ಹತ್ತಿ ಕಾಯಿ ಕೀಳುವುದು, ಸುಲಿಯುವುದು, ಕಳೆ ಕೀಳುವುದು ಹೀಗೆ ನೂರೆಂಟು ಕೆಲಸಗಳನ್ನು ಪ್ರೀತಿಯಿಂದ ಮಾಡಿ ಬರುತ್ತಿದ್ದ. ಅವರ ಉಣ್ಣಲು ಅಥವಾ ಕುಡಿಯಲು ಏನಾದರೂ ಕೊಟ್ಟರೆ ಅದೇ ಅವನ ಪಾಲಿಗೆ ಪ್ರಸಾದವಾಗಿತ್ತು. “ನಮ್ಮ್ ಪುಟ್ರಾಜ ಧರ್ಮರಾಯ” ಎಂದು ಸುತ್ತಮುತ್ತಲಿನ ಹಳ್ಳಿಯ ಜನರಿಂದ ಹೊಗಳಿಸಿಕೊಳ್ಳುತ್ತಿದ್ದ ಅವನಿಗೆ ಇದರಿಂದಾಗಿ ಪುಗ್ಸಟ್ಟೆ ಎಂಬ ಬಿರುದು ಪುಕ್ಕಟೆಯಾಗಿ ಬಂದಿತ್ತು.

ಊರಿನ ಗಟ್ಟಿಗಿತ್ತಿ ಮತ್ತು ಗಯ್ಯಾಳಿ ಹೆಂಗಸು ಎಂದು ಪ್ರಸಿದ್ಧಿಯಾಗಿದ್ದ ತಿಮ್ಮಕ್ಕನ ಏಕೈಕ ಮಗನಾಗಿದ್ದ ಪುಟ್ರಾಜ ಅವ್ವನ ಬೈಗುಳದ ಕಾಟ ತಾಳಲಾರದೆ ತನ್ನ ಓರಗೆಯವರ ಜೊತೆಗೂಡಿ ಬೆಂಗಳೂರಿನ ಗಾರ್ಮಂಟ್ ಕಂಪನಿಯೊಂದರಲ್ಲಿ ದಿನಗೂಲಿ ನೌಕರನಾಗಿ ಸೇರಿಕೊಂಡು ದುಡಿಯುವನ್ನು ಕಲಿತುಕೊಂಡನು. ಅದೃಷ್ಟವೆಂಬಂತೆ ಅವನ ಹಸುವಿನಂತಹ ಗುಣ ನೋಡಿ ಮೆಚ್ಚಿಕೊಂಡ ಅಲ್ಲಿನ ಗುಣಸಾಗರಿ ಎಂಬ ತಮಿಳು ಹೆಣ್ಣು ಮಗಳ ಕಣ್ಣ ನೋಟಕ್ಕೆ ತುತ್ತಾದ ಪುಗಸಟ್ಟೆಯ ಎದೆಯೊಳಗೆ  ಅವಲಕ್ಕಿ ಕುಟ್ಟಿದಂತಾಯಿತು. ಇದರಿಂದಾಗಿ ನಿದ್ದೆಯನ್ನು ಕಳೆದುಕೊಂಡು ಒದ್ದಾಡತೊಡಗಿದನು. ಕೆತ್ತಿದ ಕಪ್ಪು ಶಿಲೆಯಂತಿದ್ದ ಗುಣಸಾಗರಿಯ ಹೊಳಪುಗಣ್ಣುಗಳು ಸದಾ ಪುಗಸಟ್ಟೆಯ ಎದೆಯನ್ನು ಚೂರಿಯಂತೆ ತಿವಿಯತೊಡಗಿದಾಗ “ ದುಡಿದು ಬದುಕುವ ತಾಕತ್ತಿರುವ ಇವಳು ನನಗೆ ಹೆಂಡತಿಯಾಗಿ ಬಂದರೆ ನನ್ನ ಪುಣ್ಯ” ಎಂದು ಕೊಂಡನು
ತನ್ನ ಪ್ರೇಮ ವಿವಾಹಕ್ಕೆ ಸದಾ ಮೌನಿಯಾದ ಬುದ್ಧನಿಂತಿದ್ದ ತನ್ನಪ್ಪ ಸಪ್ಪೆ ನಿಂಗಣ್ಣನ ಅನುಮತಿ ಪಡೆಯುವುದು ಪುಗಸಟ್ಟೆಗೆ ಕಷ್ಟವಾಗಿರಲಿಲ್ಲ ಆದರೆ, ಅವ್ವನಿಗೆ ವಿಷಯ ತಿಳಿಸುವುದು ಹೇಗೆ ಎಂದು ಒದ್ದಾಡಿದ. ಅಂತಿಮವಾಗಿ  ಗಟ್ಟಿ ಮನಸ್ಸು ಮಾಡಿದ ಅವನು  ಅವ್ವನೆದುರು ಈ ವಿಷಯ ಪ್ರಸ್ತಾಪಿಸಿದನು. ಮಗನ ಮಾತಿಗೆ ಪಟಾರನೆ ಸಿಡಿದೆದ್ದ ತಿಮ್ಮಕ್ಕ “ ಯಾವ ಜಾತಿನೋ, ಯಾವ ಕುಲನೋ ಕಾಣೆ, ಅಂತಹವಳನ್ನು ಕಟ್ಟಿಕೊಂಡು ಮನೆಗೆ ಬಂದರೆ, ಕಿತ್ತೋಗಿರೊ ಕಡ್ಡಿ ಪೊರಕೆ ತಕಂಡ್ ಮಖ ಕೆರಿತೀನಿ ನನ್ ಮಗ್ನೇ” ಎಂದು ಪೂಜೆ ಮಾಡಿದಳು. ಆ ರಾತ್ರಿ ಸದ್ದು ಮಾಡದೆ ಮಲಗಿದ ಪುಗಸಟ್ಟೆ ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋದವನು ಮತ್ತೇ  ಊರಿನತ್ತ ಮುಖ ಮಾಡಲಿಲ್ಲ. ಮಗ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ತಿಮ್ಮಕ್ಕ ಊರಿನ ಹುಡುಗರನ್ನು ಕರೆದುಕೊಂಡು ಹೋಗಿ ವಿಚಾರಿಸಿದಾಗ ಗುಣಸಾಗರಿ ಮತ್ತು ಪುಗಸಟ್ಟೆ ಇಬ್ಬರೂ ಕೆಲಸ ಬಿಟ್ಟಿರುವುದಾಗಿ ತಿಳಿಯಿತು.  ಎದೆ ಬಡಿದುಕೊಂಡು ಊರಿಗೆ ಬಂದ ತಿಮ್ಮಕ್ಕ ಮನೆ ಬಾಗಿಲಲ್ಲಿ ಕುಳಿತು ಊರು ಕೇರಿಯನ್ನು ಒಂದು ಮಾಡಿಕೊಂಡು “ ಊರಿಗೆ ಹೆದ್ದಾರಿ ತಂದವರನ್ನು ಹಾಗೂ ಕಂಪನಿಗಳ ಕೆಲಸಕ್ಕೆ ವಾಹನ ಬಿಟ್ಟವರನ್ನು, ಮೊಬೈಲ್ ಕಂಪನಿಗಳನ್ನು ಹೀಗೆ ಎಲ್ಲರನ್ನೂ ಒಂದುಗೂಡಿಸಿ  ಕೇಳುಗರ ಕಿವಿಯಲ್ಲಿ ರಕ್ತ ಬರುವಂತೆ ಕೆಟ್ಟ ಬೈಗುಳಗಳಲ್ಲಿ ಜಾಲಾಡಿದಳು.  ತಿಮ್ಮಕ್ಕನ ಗಂಡ ಸಪ್ಪೆ ನಿಂಗಣ್ಣ ಮಾತ್ರ ಅವಳ ಬಾಯಿಗೆ ಹೆದರಿ ಮೌನ ವ್ರತ ಹಿಡಿದು ಏನೊಂದನ್ನು ಹೇಳಲಾರದೆ ಕಾಣೆಯಾದ ಮಗನನ್ನು ನೆನೆದು ಒಳಗೊಳಗೆ ಅತ್ತನು.
ಬೇಸಿಗೆ ಮತ್ತು ಮಳೆಗಾಲ ಕಳೆದು ಮಾಗಿಯ ಕಾಲ ಆರಂಭವಾಗುವ ಒಂದು ದಿನ ಬೆಳಗಿನ ಜಾವ ಹೆದ್ದಾರಿಯ ಪಕ್ಕದಲ್ಲಿ ಅರೆಬೆಂದಿದ್ದ ಹಾಗೂ ಮುಖದ ಗುರುತು ಸಿಗದಂತಹ ಯುವಕನ ಶವವೊಂದು ಬಿದ್ದಿತ್ತು. ನಗರದಿಂದ ಬಂದ ವಾಹನವೊಂದು ರಾತ್ರಿ ವೇಳೆ ಊರಂಚಿನಲ್ಲಿ ಅದನ್ನು ಎಸೆದು ಹೋಗಿತ್ತು. ಮಕಾಡೆಯಾಗಿ ಮಲಗಿದ್ದ ಆ ಶವದ ಮೇಲಿದ್ದ ಬಟ್ಟೆಗಳು  ಪುಗ್ಸಟ್ಟೆ ಪುಟ್ರಾಜನು ಯಾವಾಗಲೂ ತೊಡುತ್ತಿದ್ದ ಹಸಿರು ಬಣ್ಣದ ಟಿ ಶರ್ಟ್ ಹಾಗೂ ನೀಲಿ ಜೀನ್ಸ್ ಪ್ಯಾಂಟ್ ಇವುಗಳನ್ನು ಹೋಲುತ್ತಿದ್ದರಿಂದ ಕಾಣೆಯಾಗಿದ್ದ ಪುಟ್ರಾಜುವಿನ ಶವವಿರಬೇಕೆಂದು ಕೆಲವರು ಊಹಿಸಿದರು. ಇದು  ಬಾಯಿಂದ ಬಾಯಿಗೆ ಹರಡಿ ಕೊನೆಗೆ ತಿಮ್ಮಕ್ಕನ ಕಿವಿಗೂ ತಲುಪಿತು. ಮನೆಯಿಂದ ಓಡಿ ಬಂದ ತಿಮ್ಮಕ್ಕ  ತನ್ನ ಬಾಯಿ ಹಾಗೂ ಎದೆಯನ್ನು ಬಡಿದುಕೊಳುತ್ತಾ, ಶವದ ಮೇಲೆ ಒಮ್ಮೆ ಕಣ್ಣಾಡಿಸಿದಳು. ನಂತರ ಕಾಣೆಯಾಗಿದ್ದ  ತನ್ನ ಮಗನನ್ನು ಯಾರೋ ಹೊಡೆದು ಕೊಂದು ಹಾಕಿದ್ದಾರೆಂದು ಅಧಿಕೃತವಾಗಿ ಘೋಷಿಸುವುದರ ಮೂಲಕ ಗೋಳಾಡತೊಡಗಿದಳು.
ಅರಬೆಂದಿದ್ದ ಹೆಣದ ಮೇಲೆ ಬೆಡ್ ಶೀಟ್ ಒಂದನ್ನು ತಂದು  ಹೊದಿಸಿ ನಂತರ ಅದನ್ನು ಊರಿನೊಳಕ್ಕೆ ಸಾಗಿಸಿ ತಿಮ್ಮಕ್ಕನ ಮನೆಯ ಮುಂದೆ ಇರಿಸಲಾಯಿತು.  ಪುಗ್ಸಟ್ಟೆ ಪುಟ್ರಾಜುವಿನ ಸಾವಿನ ಸುದ್ದಿ ಕಾಳ್ಗಿಚ್ಚಿನಂತೆ ಸುತ್ತ ಮುತ್ತಲ ಊರುಗಳಿಗೆ ತಲುಪಿತು. ಮನೆಗೊಬ್ಬರಂತೆ ಎಲ್ಲರೂ ಬಂದು ಗುಣಗಾನ ಮಾಡುತ್ತಾ ಅವನ ಆಕಸ್ಮಿಕ ಸಾವಿಗಾಗಿ ಶೋಕಿಸಿದರು. ಊರಿನ ಪ್ಮಡಾರಿಯೊಬ್ಬ ತಕ್ಷಣವೇ ತಮ್ಮ ಮೊಬೈಲ್ ಕೈಗೆ ತೆಗೆದುಕೊಂಡು  ಕ್ರೇತ್ರದ ಶಾಸಕನ ಜೊತೆ ಮಾತನಾಡಿ “ ಕೊಲೆ ಆಗ್ಬುಟ್ಟದೆ ಕಣಣ್ಣಾ, ಚೀಫ್ ಮಿನಿಸ್ಟರ್ ಗೆ ಹೇಳ್ಸಿ ತಕ್ಷಣ ಪರಿಹಾರ ಕೊಡಿಸಬೇಕು ಎಲೆಕ್ಷನ್ ಬೇರೆ ಹತ್ರ ಬರ್ತಾ ಇದೆ. ಪುಗಸಟ್ಟೆ ಎಲ್ಲಾ ಊರಗಳಲ್ಲೂ ಫೇಮಸ್ ಆಗಿದ್ದ ಕಣಣ್ಣೊ, ಇಲ್ಲಾಂದ್ರೆ ಕಷ್ಟ ಆಗ್ ಬುಡ್ತದೆ” ಎಂಬ ಸಂದೇಶವನ್ನು  ರವಾನಿಸಿದನು. ಈ ವಿಷಯ ವಿರೋಧ ಪಕ್ಷದ ಹಿಂಬಾಲಕರಿಗೆ ಕಿವಿಗೆ ಬಿದ್ದಿದ್ದೆ ತಡ ತಮ್ಮ ನಾಯಕನಿಗೆ ಫೋನ್ ಮಾಡಿ “ ಎಲೆಕ್ಷನ್ ಗೆಲ್ಲಕೆ ಇದು ಒಳ್ಳೇ ಛಾನ್ಸು, ಒಂದು ಹಾರ ತಕ್ಕಂಡು, ಎಲ್ಡು ಲಕ್ಷ ರೂಪಾಯಿ ಕೈಲಿ ಹಿಡ್ಕಂಡು ಬೇಗ ಬಾರಣ್ಣ” ಎಂದು ಅವಲತ್ತುಕೊಂಡರು. ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಸೋತಿದ್ದ ರಂಗೇಗೌಡ ಎಂಬ ಕಂಟ್ರಾಕ್ಟರ್ ತನ್ನ ಹಿಂಬಾಲಕರು ಹೇಳಿದ ತಕ್ಷಣ ಹಾರ ತುರಾಯಿ,  ಹಣ ಹಾಗೂ ಪತ್ರಿಕೆಗಳ ಛಾಯಾಚಿತ್ರಕಾರರೊಂದಿಗೆ ಶ್ಯಾನುಭೋಗರಹಳ್ಳಿಗೆ ಆಗಮಿಸಿ ಶವಕ್ಕೆ ಹೂವಿನ ಹಾರ ಹಾಕಿ, ಕಾಲು ಮುಟ್ಟಿ ನಮಸ್ಕರಿಸಿದನು. ನಂತರ ತಿಮ್ಮಕ್ಕನ ಕೈಗೆ ಎರಡು ಲಕ್ಷ ಹಣವನ್ನು ನೀಡುವುದರ  ಚಿತ್ರಗಳನ್ನು ತೆಗೆಸಿಕೊಂಡು, ಐನೂರು ಓಟು ಗ್ಯಾರಂಟಿ ಎಂದು ಲೆಕ್ಕ ಹಾಕುತ್ತಾ ಕಣ್ಣಿರು ಒರೆಸಿಕೊಂಡು ವಾಪಸ್ಸಾದನು.
ತನ್ನ ಎದುರಾಳಿ ಬಂದು ಹೋದ ತಿಳಿದಕೂಡಲೇ ಕಾರ್ಯಪ್ರವೃತ್ತನಾದ ಎಂ.ಎಲ್.ಎ. ಭೈರೇಗೌಡನು ಮುಖ್ಯಮಂತ್ರಿಗೆ ಫೋನಾಯಿಸಿ, ಜಿಲ್ಲಾಧಿಕಾರಿಯಿಂದ ಮೂರು ಲಕ್ಷ ರೂಪಾಯಿಯ ಚೆಕ್ ಬರೆಸಿಕೊಂಡು ತನ್ನ ಒಡ್ಡೋಲಗದ ಜೊತೆ ಹಾಜರಾದನು. ಪುಗ್ಸಟ್ಟೆಯ ಫೋಷಕರಿಗೆ ಪರಿಹಾರ ಧನ ವಿತರಿಸಿ, ಶವದ ಮುಂದೆ ನಿಂತು ಕಣ್ಣೀರು ಹಾಕಿ ಅದರ  ಫೋಟೊವೊಂದನ್ನು ತೆಗೆಸಿಕೊಂಡು ಸರ್ಕಾರದ ಎಲ್ಲಾ ಭಾಗ್ಯಗಳ ಯೋಜನೆಯನ್ನು ತಿಮ್ಮಕ್ಕನಿಗೆ ಕೊಡಿಸುವುದಾಗಿ ಆಶ್ವಾಸನೆ ಇತ್ತನು. ಮಗನ ಸಾವಿಗೆ ಹಾಜರಾಗಿ ಪರಿಹಾರದ ಮಳೆ ಸುರಿಸುತ್ತಿರುವ ರಾಜಕೀಯ ನಾಯಕರ ದಂಡನ್ನು ನೋಡಿ ಒಳಗೊಳಗೆ ಬೆರಗಾದ ತಿಮ್ಮಕ್ಕ ಯಾರೇ ಪುಡಾರಿಯು ಮನೆಯತ್ತ ಬರುತ್ತಿರುವುದನ್ನು ಕಂಡಕೂಡಲೇ ಧ್ವನಿ ಎತ್ತರಿಸಿ ರಾಗವಾಗಿ ಅಳತೊಡಗಿದಳು. ಹೆಚ್ಚೆಚ್ಚು ಅತ್ತಷ್ಟು ಲಾಭ ಎನ್ನುವುದು ಅವಳಿಗೆ ಅರಿವಾಗಿತ್ತು. ಸಂಜೆಯ ವೇಳೆಗೆ ಕೊಳೆತ ಶವದ ವಾಸನೆ ಸುತ್ತೆಲ್ಲಾ ಹರಡಲು ಆರಂಭಿಸಿದ್ದರಿಂದ, ಅದನ್ನು ಊರಿನ ಪ್ರಮುಖ ಬೀದಿಯಲ್ಲಿ ಉತ್ಸವ ಮೂರ್ತಿಯಂತೆ ಮೆರವಣಿಗೆ ಮಾಡಿ ತಿಮ್ಮಕ್ಕನ ಹೊಲದಲ್ಲಿ ಮಣ್ಣು ಮಾಡಲಾಯಿತು.
ರಾಜಕೀಯ ನಾಯಕರು ಊರಿಗೆ ಬಂದಿದ್ದ ವೇಳೆಯಲ್ಲಿ ತನ್ನ ಹಿಂಬಾಲಕರ ಕೈಗೆ ಸಾವಿರ, ಐನೂರರ ನೋಟುಗಳನ್ನು ತುರುಕಿ ಹೋಗಿದ್ದರು.  ಸಂಜೆ ಬಾರ್ ಗಳಿಗೆ ನುಗ್ಗಿದ ಅವರೆಲ್ಲರೂ  ಮನಸ್ಸೋ ಇಚ್ಚೇ  ಏಣ್ಣೆ ಏರಿಸಿಕೊಂಡು ಗತಿಸಿ ಹೋದ ಗೆಳೆಯನನ್ನು ನೆನೆದು  ಬಿಕ್ಕಿ ಬಿಕ್ಕಿ ಅತ್ತು ವಾಂತಿ ಮಾಡಿಕೊಂಡರು. ಮರು ದಿನ ಬೆಳಿಗ್ಗೆ ತಿಮ್ಮಕ್ಕನ ಮನೆಯಿಂದ ಪುಗ್ಸಟ್ಟೆಯ ಫೋಟೊ ಒಂದನ್ನು ಪಡೆದುಕೊಂಡು ಬೆಂಗಳೂರಿಗೆ ಹೋಗಿ  ಅವನ ಭಾವ ಚಿತ್ರವನ್ನು ಮುದ್ರಿಸಿ, ಅದರ ಕೆಳಗೆ “ಮತ್ತೊಮ್ಮೆ ಹುಟ್ಟಿ ಬಾ ಗೆಳೆಯ” ಎಂಬ ವಾಕ್ಯವೊಂದನ್ನು ಬರೆಸಿದರಲ್ಲದೆ, ಅದರ ಸುತ್ತ ತಮ್ಮ ಭಾವ ಚಿತ್ರಗಳನ್ನು ಎದ್ದುಕಾಣುವಂತೆ  ಹಾಕಿಸಿ ಪ್ಲೆಕ್ಸ್ ಬೋರ್ಡ್‍ಗಳನ್ನು ಸಿದ್ಧಪಡಿಸಿಕೊಂಡು ಬಂದು ಹೆದ್ದಾರಿ ಇಕ್ಕೆಲಗಳ ಲೈಟ್ ಕಂಬಗಳಿಗೆ ಕಟ್ಟಿದರು. ಪ್ಲೆಕ್ಸ್ ನೋಡಿದವರಿಗೆ ಇವರಲ್ಲಿ ಸತ್ತವನ್ಯಾರು? ಬದುಕಿರುವವರು ಯಾರು? ಎಂಬುದು ಗೊತ್ತಾಗದೆ ತಲೆ ಬಿಸಿಮಾಡಿಕೊಂಡು ಒಂದು ಪೆಗ್ ಏರಿಸಿಕೊಂಡು ಇದನ್ನು ಓದಬೇಕೆಂದು ತೀರ್ಮಾನಿಸಿಕೊಂಡರು. ಹನ್ನೊಂದನೆಯ ದಿನಕ್ಕೆ ರಾಜಕೀಯ ಪಕ್ಷಗಳ ಮೇಲಾಟದ ಸ್ಪರ್ದೆಯಿಂದಾಗಿ ಪುಗ್ಸಟ್ಟೆಯ ವೈಕುಂಠ ಸಮಾರಾಧನೆ ಕೂಡ ಭರ್ಜರಿಯಾಗಿ ನೆರವೇರಿತು. ಪುಗ್ಸಟ್ಟೆಯ ಸಾವು  ಊರಿನ ಜನರಿಂದ ಮರೆಯಾಯಿತು.  ಈ ಸಾವಿನಿಂದಾಗಿ ತಿಮ್ಮಕ್ಕನಿಗೆ.  ನಷ್ಟಕ್ಕಿಂತ ಹೆಚ್ಚು ಲಾಭವಾಯಿತು. ಒಂದು ಎಕರೆ ಹೊಲ, ಎರಡು ಎಮ್ಮೆಗಳ ಜೊತೆ ದಿನದೂಡುತ್ತಿದ್ದ ತಿಮ್ಮಕ್ಕ ಪರಿಹಾರದ ಹಣದಲ್ಲಿ ಮೈ ತುಂಬಾ ಚಿನ್ನದ ಒಡವೆಗಳು, ಕೈಗೆ ಬಳೆಗಳು ಹೀಗೆ ತರಾವರಿ ಆಭರಣಗಳನ್ನು ಮಾಡಿಸಿಕೊಂಡು ಕಂಡವರ ಕಣ್ಣು ಕುಕ್ಕತೊಡಗಿದಳು. ಊರಿನ ಕೆಲವು ಹೆಂಗಸರಂತೂ “ ನಮ್ಮನೆ ಮೂದೇವಿ ಸತ್ತಿದ್ದರೆ ಆಗಿತ್ತು, ನಾವೂ ತಿಮ್ಮಕ್ಕನಂತೆ ಮೆರಿಬಹುದಿತ್ತು” ಎಂದು ಹೊಟ್ಟೆ ಉರಿದುಕೊಂಡರು.

ಮರು ವರ್ಷದ ಸಂಕ್ರಾತಿಯ ದಿನದಂದು ಬೆಳ್ಳಂಬೆಳಿಗ್ಗೆ ಪುಗ್ಸಟ್ಟೆ ಪುಟ್ರಾಜು ತನ್ನ ಪತ್ನಿ ಗುಣಸಾಗರಿಯ ಜೊತೆ ತನ್ನ ಪುಟ್ಟ ಮಗುವನ್ನು ಎತ್ತಿಕೊಂಡು ಶ್ಯಾನುಭೋಗರ ಹಳ್ಳಿಯ ಮುಖ್ಯ ರಸ್ತೆಯಲ್ಲಿ ನಡೆದು ಬರುತ್ತಿದ್ದಂತೆ ಊರ ಜನರೆಲ್ಲಾ ಬೆಚ್ಚಿ ಬಿದ್ದರು. ತನ್ನ ಪ್ರೀತಿ ಪ್ರಣಯದ ವಿಷಯದಲ್ಲಿ ಅವ್ವನ ಮೇಲೆ ಮುನಿಸಿಕೊಂಡಿದ್ದ ಪುಗ್ಸಟ್ಟೆಯು ಗುಣಸಾಗರಿಯ ನೆರವಿನಿಂದ ಅವಳ ತಾಯಿಯ ಊರಾದ ತಮಿಳುನಾಡಿನ ತಿರುಪ್ರ್ಪರಿಗೆ ಹೋಗಿ ಆಕೆಯನ್ನು ಮದುವೆಯಾಗಿದ್ದನು. ಗಂಡ ಹೆಂಡತಿ ಇಬ್ಬರೂ ಅಲ್ಲಿನ ಸಿದ್ಧು ಉಡುಪುಗಳ ಕಾರ್ಖಾನೆಯಲ್ಲಿ ದುಡಿಯುತ್ತಾ ನೆಮ್ಮದಿಯ ಬದುಕನ್ನು ಕಟ್ಟಿಕೊಂಡಿದ್ದರು. ಹುಟ್ಟಿದ ಊರಿನ ನೆನಪಾಗಿ ಪುಗ್ಸಟ್ಟೆಯು ಧೈರ್ಯ ಮಾಡಿ ತನ್ನ ಪತ್ನಿ ಹಾಗೂ ಪುಟ್ಟ ಮಗುವಿನೊಂದಿಗೆ ಊರಿಗೆ ಕಾಲಿರಿಸಿದ್ದನು. ಯಾವುದೋ ಅನಾಥ ಶವವನ್ನು ಊರಿಗೆ ತಂದು ಶವ ಸಂಸ್ಕಾರ ಮಾಡಿರುವ ವಿಷಯ ತಿಳಿಯದ ಅವನು “ ಊರಿನ ಜನರೇಕೆ ಏನನ್ನೂ ಮಾತನಾಡದೆ ಹೀಗೆ ನನ್ನನ್ನು  ನೋಡುತ್ತಿದ್ದಾರಲ್ಲಾ?” ಎಂದು ಯೋಚಿಸುತ್ತಾ ಮನೆಯತ್ತಾ ಹೆಜ್ಜೆ ಹಾಕಿದನು.
ಮನೆಯ ಜಗುಲಿಯ ಮೇಲೆ ಕುಳಿತಿದ್ದ ತನ್ನಪ್ಪ ಸಪ್ಪೆ ನಿಂಗಣ್ಣನನ್ನು ನೋಡಿದ ಪುಗ್ಸಟ್ಟೆಯು ಅಪ್ಪಾ ಎಂದು ಕರೆಯುತ್ತಿದ್ದಂತೆ  ತನ್ನ ಮಗ ಜೀವಂತವಾಗಿರುವುದನ್ನು ನೋಡಿ ಹೇಗೆ ಪ್ರತಿಕ್ರಿಯಿಸಬೇಕು ಎಂದು ನಿಂಗಣ್ಣ ಯೋಚಿಸುತ್ತಿದ್ದಂತೆ, ಮನೆಯೊಳಗಿಂದ ಬಾಗಿಲಿಗೆ ಬಂದ ತಿಮ್ಮಕ್ಕನಿಗೆ ತನ್ನ ಮಗ ಮತ್ತು ಸೊಸೆಯನ್ನು ನೋಡಿ ಎದೆ ಧಸಕ್ಕೆಂದಿತು. ಅವಳಿಗೆ ಮಗ ಜೀವಂತವಾಗಿರುವ ಸಂತೋಷಕ್ಕಿಂತ, ತನಗೆ ದಕ್ಕಿದ ಪರಿಹಾರ ಕೈ ತಪ್ಪಿತಲ್ಲಾ ಎಂಬ ನೋವಾಗಿ “ ಥೂ ನಿನ್ನ ಎಕ್ಕುಟ್ಟು ಹೋಗ, ಬರ ಬಾರದ್ ಬಂದು ಚಾಪೆ ಸುತ್ಕಂಡು ಹೋಗ, ಯಾಕ್ ಬರೋಕೆ ಹೋದೆ” ಎಂದು ಮಗನನ್ನು ಶಪಿಸತೊಡಗಿದಳು. ತನ್ನ ಹೆತ್ತ ಅಪ್ಪ ಮತ್ತು ಅವ್ವ ಹಾಗೂ ಊರಿನ ಜನರ ವಿಚಿತ್ರ ಪ್ರತಿಕ್ರೆಯೆನ್ನು ನೋಡುತ್ತಾ ನಡುಬೀದಿಯಲ್ಲಿ ನಿಂತ ಪುಗ್ಸಟ್ಟೆ ಮತ್ತು ಗುಣಸಾಗರಿ ಇಬ್ಬರೂ ದಿಕ್ಕು ತೋಚದಂತಾದರು.
( ವಿಜಯವಾಣಿ  ದಿನಪತ್ರಿಕೆಯ ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾದ ಕಥೆ)
ಚಿತ್ರಗಳು ಸೌಜನ್ಯ- ಬಿ.ಮಾರುತಿ ಧಾರವಾಡ ಮತ್ತು ಹಮೀದ್, ಪಶ್ಚಿಮ ಬಂಗಾಳ