ಶುಕ್ರವಾರ, ಜನವರಿ 5, 2018

ರಜನಿ ರಾಜಕೀಯ ಪ್ರವೇಶ ಮತ್ತು ಕಣ್ಣ ಮುಂದಿನ ವಾಸ್ತವ


ತಮಿಳು ಚಿತ್ರ ರಂಗದ ಪ್ರಸಿದ್ಧ ನಟರಲ್ಲಿ ಒಬ್ಬರಾದ ರಜನಿಕಾಂತ್ 2017 ವರ್ಷದ ಕೊನೆಯ ದಿನದಂದು ರಾಜಕೀಯ ಪ್ರವೇಶ ಮಾಡುವುದಾಗಿ ಅಧಿಕೃತವಾಗಿ ಘೋಷಿಸುವುದರ ಮೂಲಕ ಅಲ್ಲಿನ ರಾಜಕೀಯದಲ್ಲಿ ಸಣ್ಣ ಸಂಚಲನವನ್ನುಂಟು ಮಾಡಿದ್ದಾರೆ. ಅಲ್ಲಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ನಿಧನ ಮತ್ತು ಅವರ ಕಡುವೈರಿ ಎಂ.P್ಪರುಣಾನಿಧಿಯವರ ವೃದ್ಧಾಪ್ಯದಿಂದಾಗಿ ತಮಿಳುನಾಡಿನ ರಾಜಕೀಯದಲ್ಲಿ ಸೃಷ್ಟಿಯಾಗಿರುವ ಶೂನ್ಯವನ್ನು ತುಂಬಲು ಬಹುತೇಕ ಚಿತ್ರನಟರು ತುದಿಗಾಲಲ್ಲಿ ನಿಂತಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಮತ್ತೊಬ್ಬ ಜನಪ್ರಿಯ ನಟ ಕಮಲ್ ಹಾಸನ್ ಕೂಡ ತಮ್ಮ  ರಾಜಕೀಯ ಪ್ರವೇಶ ಕುರಿತು ಘೋಷಣೆ ಮಾಡುವುದರ ಮೂಲಕ  ಈಗಾಗಲೇ ಸಕ್ರಿಯವಾಗಿದ್ದಾರೆತಮಿಳುನಾಡಿನ ರಾಜಕೀಯದಲ್ಲಿ ಇದು ಹೊಸ ವಿದ್ಯಾಮಾನವೇನಲ್ಲ. ಇಬ್ಬರು ಜನಪ್ರಿಯ ನಟರಿಗಿಂತ ಮುನ್ನ 2011 ರಲ್ಲಿ ಹಿಂದೆ ರಾಜಕೀಯ ಪಕ್ಷವನ್ನು ಸ್ಥಾಪಿಸಿದ ( ಎಂ.ಡಿ.ಎಂ.ಕೆ) ವಿಜಯಕಾಂತ್ ಎಂಬ ನಟ ಜಯಲಲಿತಾ ಅವರ ಅಣ್ಣಾ ಡಿ.ಎಂ.ಕೆ. ಪಕ್ಷದ ಮೈತ್ರಿಯಿಂದಾಗಿ ಇಪ್ಪತ್ತೊಂಬತ್ತು  ವಿಧಾನ ಸಭಾ ಕ್ಷೇತ್ರಗಳಲ್ಲಿ ಜಯಗಳಿಸಿದ್ದರು. ಆದರೆ, ಕಳೆದ ಚುನಾವಣೆಯಲ್ಲಿ ( 2016 ರಲ್ಲಿಮೈತ್ರಿ ಕಡಿದುಕೊಂಡ ಕಾರಣಕ್ಕಾಗಿ ತಾವು ಠೇವಣಿ ಕಳೆದುಕೊಳ್ಳುವುದರ ಜೊತೆಗೆ ತಮ್ಮ ಪಕ್ಷ ಒಂದು ಸ್ಥಾನವನ್ನು ಗೆಲ್ಲಲಾರದೆ ಇತಿಹಾಸದ ಕಸದ ಬುಟ್ಟಿ ಸೇರಿದ ವಾಸ್ತವ ಇದೀಗ ನಮ್ಮ ಮುಂದಿದೆ. ಇನ್ನು ಅಲ್ಲಿನ ಚಿತ್ರರಂಗದ ಶರತ್ ಕುಮಾರ್, ಸತ್ಯರಾಜ್, ವಡಿವೇಲು ಮುಂತಾದ ನಟರು ಕೆಲವು ಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಜೊತೆಗೆ ಸಿನಿಮಾ ರಂಗದಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿದ್ದಾರೆ. ಎಲ್ಲಾ ಬೆಳೆವಣಿಗಳನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿರುವ ಹಾಗೂ ಕಮಲ್ ಹಾಸನ್ ಅವರ ಹಿರಿಯ ಸಹೋದರ ಮತ್ತು ತಮಿಳು ಚಿತ್ರರಂಗದ ಗೌರವಾನ್ವಿತ ಹಿರಿಯ ನಟರಲ್ಲಿ ಒಬ್ಬರಾಗಿರುವ ಚಾರುಹಾಸನ್ ( ಇವರು ನಟಿ ಸುಹಾಸಿನಿ ಅವರ ತಂದೆ ಹಾಗೂ ಗಿರೀಶ್ ಕಾಸರವಳ್ಳಿಯವರ ತಬರನ ಕಥೆ ಸಿನಿಮಾದಲ್ಲಿ ತಬರನ ಪಾತ್ರವಹಿಸಿದವರು) ಮೂರು ತಿಂಗಳ ಹಿಂದೆ ಚೆನ್ನೈ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ  ರಜನಿ ಮತ್ತು ಕಮಲ್ ಇಬ್ಬರೂ ಸೇರಿ ತಮಿಳು ನಾಡಿನ ಮತದಾರರಲ್ಲಿ ಶೇಕಡ ಐದರಷ್ಟು ಮತವನ್ನು ಪಡೆಯಲಾರರು ಎಂಬ ಕಟುವಾದ ಸತ್ಯದ ಮಾತುಗಳನ್ನು ಆಡಿದ್ದರು.
ಚಾರುಹಾಸನ್ ಆಡಿದ ಮಾತುಗಳನ್ನು ಆಧಾರವಾಗಿ ಇಟ್ಟುಕೊಂಡು ಇತ್ತೀಚೆಗೆ ನಡೆದ ಚೆನ್ನೈ ನಗರದ ರಾಧಕೃಷ್ಣ ನಗರದ ಉಪಚುನಾವಣೆಯ ಫಲಿತಾಶವನ್ನು ವಿಶ್ಲೇಷಿಸಿದರೆ, ಸತ್ಯ ಏನೆಂದು ನಮಗೆ ಗೋಚರವಾಗುತ್ತದೆ. ಜಯಲಲಿತಾ ಅವರ ನಿಧನದಿಂದ ತೆರವಾದ ಕ್ಷೇತ್ರದಲ್ಲಿ ಆಡಳಿತಾರೂಢ ಅಣ್ಣಾ ಡಿ.ಎಂ.ಕೆ. ಮತ್ತು ಪ್ರಬಲ ಪ್ರತಿಪಕ್ಷವಾದ ಡಿ.ಎಂ.ಕೆ. ಪಕ್ಷದ ಅಭ್ಯರ್ಥಿಗಳನ್ನು ಹಿಂದಿಕ್ಕಿ ಈಗ ಜೈಲು ಸೇರಿರುವ ಶಶಿಕಲಾ ಅವರ ಸಂಬಂಧಿ ಟಿ.ವಿ.ದಿನಕರನ್ ಎಂಬಾತ ಪಕ್ಷೇತರ ಅಭ್ಯರ್ಥಿಯಾಗಿ ಜಯಗಳಿಸುವುದರ ಮೂಲಕ ಭವಿಷ್ಯದ ತಮಿಳುನಾಡು ರಾಜಕೀಯ ದುರಂತದ ಬಗ್ಗೆ ಮುನ್ನುಡಿ ಬರೆದಿದ್ದಾನೆ. ಚುನಾವಣೆಯು ಘೋಷಣೆಯಾಗುತ್ತಿದ್ದಂತೆ ಪ್ರತಿಯೊಂದು ಮತಕ್ಕೆ ಒಂದೂವರೆ ಸಾವಿರ ರೂಪಾಯಿನಿಂದ ಆರಂಭವಾಗಿ ಎರಡೂವರೆ ಸಾವಿರ ತಲುಪಿ ಅಂತಿಮವಾಗಿ ಭಾರತದ ಶೇರು ಮಾರುಕಟ್ಟೆಯ ಸೂಚ್ಯಂಕದಂತೆ ನಾಲ್ಕು ಸಾವಿರ ರೂಪಾಯಿಗೆ ತಲುಪಿತು. ಒಂದು ಕುಟುಂಬದಲ್ಲಿ ನಾಲ್ಕು ಅಥವಾ ಐದು ಮತಗಳಿರುವ ಬಡವರಿಗೆ ಇದು ಅನಿರೀಕ್ಷಿತವಾಗಿ ದೊರೆತ ಲಾಟರಿ ಬಹುಮಾನವಾಯಿತು. ಮತದಾರರ  ಎದುರು ತತ್ವ ಸಿದ್ಧಾಂತ, ಭವಿಷ್ಯದ ತಮಿಳು ಕುರಿತು ಗಂಟಲು ಶೋಷಿಸಿಕೊಂಡು ಹೊಡೆದ ಭಾಷಣಗಳೆಲ್ಲವೂ ಬಿರುಗಾಳಿಗೆ ಸಿಕ್ಕ ತರಗೆಲೆಗಳಂತೆ ತೂರಿ ಹೋದವು. ಇಂತಹ ದಯನೀಯವಾದ ರಾಜಕೀಯ ಸ್ಥಿತಿಯಲ್ಲಿ ರಜನಿ ಅಥವಾ ಕಮಲ್ ಹಾಸನ್ ಇಂತಹವರು ಸಿನಿಮಾಗಳಲ್ಲಿ ಹೊಡೆಯುವ ಡೈಲಾಗ್ ರಾಜಕೀಯ ರಂಗದಲ್ಲಿ ಚಲಾವಣೆಗೆ ಬರುತ್ತವೆ ಎಂದು ನಿರೀಕ್ಷಿಸುವುದು ಅಥವಾ ನಂಬುದು ಮೂರ್ಖತನದ ಪರಮಾವಧಿ ಎಂದರೆ, ತಪ್ಪಾಗಲಾರದು.
ಕಳೆದ ಮೂರುವರೆ ದಶಕ ಭಾರತದ ರಾಜಕೀಯ ಮತ್ತು ಅದರೊಂದಿಗೆ ಬೆಸೆದುಕೊಂಡ ಚಿತ್ರರಂಗದ ನಟರ ಇತಿಹಾಸವನ್ನು ಗಮನಿಸಿದರೆ ಚಿತ್ರ ನಟರ ವೈಫಲ್ಯತೆ ಎದ್ದು ಕಾಣುತ್ತದೆ. ಮೊದಲಿಗೆ ತಮಿಳುನಾಡಿನಲ್ಲಿ ಎಂ.ಜಿ.ರಾಮಚಂದ್ರನ್ ನಂತರ ಆಂಧ್ರಪ್ರದೇಶದಲ್ಲಿ ಎನ್.ಟಿ.ರಾಮರಾವ್ ಇಬ್ಬರು ನಟರು ಪಕ್ಷವನ್ನು ಸ್ಥಾಪಿಸಿ ಮುಖ್ಯಮಂತ್ರಿಯಾದ ಉದಾಹರಣೆಗಳು ನಮ್ಮಲ್ಲಿ ಇದೆಯಾದರೂ, ಅತ್ಯಂತ ಕೆಟ್ಟ ಆಡಳಿತ ನೀಡಿದ ದೋಷ ಇಬ್ಬರು ನಟರ ಬೆನ್ನಿಗೆ ಅಂಟಿಕೊಂಡಿದೆ. ಇವರಿಬ್ಬರಿಗೆ ಹೋಲಿಸಿದರೆ, ಇವರ ನಂತರ ಆಡಳಿತ ಚುಕ್ಕಾಣಿ ಹಿಡಿದ ತಮಿಳುನಾಡಿನ ಜಯಲಲಿತಾ ಮತ್ತು ಆಂಧ್ರದ ಚಂದ್ರಬಾಬು ನಾಯ್ಡು ಒಳ್ಳೆಯ ಆಡಳಿತ ನೀಡಿದ್ದಾರೆ.

ತಮಿಳುನಾಡಿನಲ್ಲಿ ಎಂ.ಜಿ.ಆರ್ ಮತ್ತು ಆಂಧ್ರದಲ್ಲಿ ಎನ್.ಟಿ.ಆರ್. ಹಾಗೂ ಕರ್ನಾಟಕದಲ್ಲಿ  ರಾಜಕುಮಾರ್ ಇವುಗಳು ಕಾಲದಲ್ಲಿ ನಟಿಸಿದ ಸದಭಿರುಚಿಯ ಚಿತ್ರಗಳು, ಆಯ್ದುಕೊಂಡ ಕಥೆಗಳು ಇವುಗಳ ಮೂಲಕ ಕಾಲಘಟ್ಟದ ಜನಮಾನಸದಲ್ಲಿ ಆದರ್ಶ ನಾಯಕರು ಎಂಬ ನಂಬಿಕೆಯೊಂದು ಬೆಳೆದು ಬಂದಿತ್ತು. ಬಹುತೇಕ ನನ್ನ ತಲೆಮಾರಿನ ಜನ ಗಂಡು ಹೆಣ್ಣು ಎಂಬ ಬೇಧ ಭಾವವಿಲ್ಲದೆ ನಾಯಕರಲ್ಲಿ ಒಬ್ಬ ಶ್ರೀರಾಮನನ್ನೊ ಅಥವಾ ಒಬ್ಬ ಸತ್ಯ ಹರಿಶ್ಚಂದ್ರನನ್ನು ಕಂಡು ಸಂಭ್ರಮಿಸಿದ್ದುಂಟು. ಕಾಲ ಬದಲಾಗಿರುವ ದಿನಮಾನಗಳಲ್ಲಿ ಚಿತ್ರ ನಟರಲ್ಲಿ ಆದರ್ಶ ನಾಯಕನನ್ನು ಕಾಣುವುದು ಮೂರ್ಖತನವೆಂಬುವುದು ಆಧುನಿಕ ಯುವ ತಲೆಮಾರಿಗೆ ಅರ್ಥವಾಗಿದೆ. ಅವರ ಪಾಲಿಗೆ ಇವರೆಲ್ಲರೂ ಮನರಂಜನೆಯ ಸರಕುಗಳು ಮಾತ್ರ. ಇಂತಹ ನಿಜಸ್ಥಿತಿಯಲ್ಲಿ ವರ್ತಮಾನ ಜಗತ್ತಿನೊಂದಿಗೆ ಎಂದಿಗೂ ಒಡನಾಡದೆ ತಮ್ಮದೇ ಆದ ಭ್ರಮಾ ಲೋಕದಲ್ಲಿರುವ ಚಿತ್ರನಟರಿಗೆ  ರಾಜಕೀಯ ಪ್ರವೇಶ ಮಾಡಿದ ನಂತರ ವಾಸ್ತವ  ಅವರಿಗೆ ಅರ್ಥವಾಗುತ್ತಿದೆ. 2008 ರಲ್ಲಿ ನೆರೆಯ ಆಚಿಧ್ರಪ್ರದೇಶದಲ್ಲಿ ಮೇಗಾಸ್ಟಾರ್ ಎಂದು ಕರೆಸಿಕೊಳ್ಳುತ್ತಿದ್ದ ಚಿರಂಜಿವಿ ಎಂಬ ನಟ ಇಂತಹದ್ದೇ ಕಸರತ್ತು ನಡೆಸಿ, ಅಂತಿಮವಾಗಿ ತನ್ನ ಪ್ರಜಾರಾಜ್ಯ ಎಂಬ ಪಕ್ಷವನ್ನು ಕಾಂಗ್ರೇಸ್ ಪಕ್ಷದಲ್ಲಿ ವಿಲೀನಗೊಳಿಸಿ ನಗಣ್ಯರಾದರು.
ಕೆಲವು ರಾಜಕೀಯ ಪಕ್ಷಗಳ ಬಾಲಂಗೋಚಿಯನ್ನು ಹಿಡಿದು ರಾಜ್ಯ ಸಭಾ ಸದಸ್ಯರು, ಲೋಕಸಭಾ ಸದಸ್ಯರಾಗಿದ್ದ ಅಥವಾ ಆಗಿರುವ ಚಿತ್ರನಟರ ಪಟ್ಟಿ ದೊಡ್ಡದಿದೆ. ಅದು ರಾಜೀವ್ ಗಾಂಧಿ ಅವಧಿಯ ಅಮಿತಾಬ್ ಬಚ್ಚನ್ ಅವರಿಂದ ಹಿಡಿದು ಸುನೀಲ್ ದತ್, ರಾಜಬಬ್ಬರ್, ವಿನೋದ್ ಖನ್ನಾ, ರೇಖಾ, ಹೇಮಾಮಾಲಿನಿ, ಅನುಪಮ್ ಖೇರ್, ಗೋವಿಂದ , ಪರೇಶ್ ರಾವಲ್, ಹೀಗೆ ಮುಂದುವರಿದು ನಮ್ಮ ಕನ್ನಡದ ರಮ್ಯ, ಜಯಮಾಲಾ, ತಾರಾ ಹಾಗೂ ಉಮಾಶ್ರಿ, ಶ್ರೀನಾಥ್, ಮುಖ್ಯಮಂತ್ರಿ ಚಂದ್ರು ಹೀಗೆ ಮುಂದುವರಿಯುತ್ತದೆ. ಇವರ ಸಾಧನೆಗಳೆನು? ಎಂದು ನೋಡಿದರೆ, ಇವರೆಲ್ಲರೂ ಆಯಾ ಪಕ್ಷಗಳ ಪ್ರದರ್ಶನದ ಬೊಂಬೆಗಳಾದರೆ ಹೊರತು; ರಾಜಕೀಯ ಕ್ಷೇತ್ರದಲ್ಲಿ ಇವರ ಸಾಧನೆಗಳು ಶೂನ್ಯ.
ಸಧ್ಯದ ತಮಿಳುನಾಡಿನ ರಾಜಕೀಯದಲ್ಲಿ ಉಂಟಾಗಿರುವ ಶೂನ್ಯವು ಕೇವಲ ತಮಿಳುನಾಡಿಗೆ ಮಾತ್ರ ಸೀಮಿತವಾಗಿಲ್ಲ. ಇಡೀ ದೇಶದ ಎಲ್ಲಾ ರಾಷ್ಟ್ರ ಹಾಗೂ ಪ್ರಾದೇಶಿಕ ಪಕ್ಷಗಳಿಗೂ ಆವರಿಸಿದೆ. ಎರಡನೆಯ ಹಂತದ ನಾಯಕರನ್ನು ರಾಷ್ಟ್ರ ಮಟ್ಟದ ಪಕ್ಷಗಳಲ್ಲಿ ಬೆಳಸಲಾಗುತ್ತಿಲ್ಲ. ಇನ್ನು ಪ್ರಾದೇಶಿಕ ಪಕ್ಷಗಳೆಂಬ ಪಾಳೇಗಾರರ ಪಕ್ಷಗಳು ತಮ್ಮ ತಮ್ಮ ಕುಟುಂಬಗಳ ವಾರಸುದಾರರ ಹಿಡಿತದಲ್ಲಿವೆ. ಆಂತರೀಕ ಪ್ರಜಾಪ್ರಭುತ್ವ ವ್ಯವಸ್ಥೆಗಳಿಲ್ಲದ ಭಾರತದ ರಾಜಕೀಯ ಮತ್ತು ರಾಜಕೀಯ ಪಕ್ಷಗಳ ಸ್ಥಿತಿಯನ್ನು ಗಮನಿಸಿದಾಗ ಇದು ಎಂದಿಗೂ ವಾಸಿಯಾಗದ ಉಲ್ಬಣಗೊಂಡಿರುವ ಕಾಯಿಲೆಯಂತೆ ಕಾಣುತ್ತಿದೆ. ಸಹಜವಾದ ಸಾವೊಂದೇ ಇದಕ್ಕೆ ನಿಜವಾದ  ಮದ್ದು. ನಾಗರೀಕತೆಗಳು ಅವಸಾನಗೊಂಡು ಮತ್ತೊಂದು   ಬೆಳೆಯುವಂತೆ  ಭಾರತದಲ್ಲಿ ಹೊಸ ರಾಜಕೀಯ ವ್ಯವಸ್ಥೆಯೊಂದು ಬೆಳೆಯ ಬೇಕಿದೆ.
ಸ್ಥಿತಿಯಲ್ಲಿ ಜೊತೆಗೆ ತನ್ನ ಅರವತ್ತಮೂರನೆಯ ವಯಸ್ಸಿನಲ್ಲಿ ನಾನು ರಾಜಕೀಯ ಪಕ್ಷವನ್ನು ಸ್ಥಾಪಿಸುತ್ತೇನೆ, ರಾಜಕೀಯಕ್ಕೆ ಅನುಭಾವವನ್ನು ಬೆಸೆಯುತ್ತೇನೆ ಎಂಬ ರಜನಿಯವರ ಮಾತುಗಳು ರಾಜಕೀಯ ಯೋಚನೆಗಳ ಕುರಿತಾಗಿ ಅವರ ಅಪ್ರಬುದ್ಧತೆಯನ್ನು ಎತ್ತಿ ತೋರಿಸುತ್ತವೆ. ರಜನಿಯವರು ತಮಿಳುನಾಡು ರಾಜಕೀಯದಲ್ಲಿ ಆಟವನ್ನು ಕೆಡಿಸಬಲ್ಲವರೇ ಹೊರತುಪಂದ್ಯವನ್ನು ಗೆಲ್ಲಲಾರರು. ಸಿನಿಮಾ ನಟರ ವಿಷಯದಲ್ಲಿ ಆಂಧ್ರ ಮತ್ತು ತಮಿಳುನಾಡಿನ ಜನರಿಗಿಂತ ಹೆಚ್ಚು ಪ್ರಬುದ್ಧರಾಗಿದ್ದು ಯಾವುದೇ ಸಿನಕತನವಿಲ್ಲದೆ ಯೋಚಿಸಬಲ್ಲ ಕರ್ನಾಟಕದಲ್ಲಿ ಉಪೇಂದ್ರ ಎಂಬ ನಟ ಕೂಡ ರಾಜಕೀಯ ಪಕ್ಷ ಸ್ಥಾಪಿಸುವುದರ ಮೂಲಕ ರಾಜಕೀಯಕ್ಕೆ ಪ್ರವೇಶಿಸುವ ಸೂಚನೆ ನೀಡಿದ್ದಾರೆ. ನಮ್ಮ ಮಂಡ್ಯ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜನಪ್ರಿಯ ಜೋಕ್ ಒಂದು ಅಸ್ತಿತ್ವದಲ್ಲಿದೆ. ವಿವಾಹ ಅಥವಾ ಯಾವುದೇ ಶುಭ ಸಮಾರಂಭಗಳಲ್ಲಿ ವಿಚಿತ್ರವಾಗಿ ವರ್ತಿಸುವ ವ್ಯಕ್ತಿಯನ್ನುಯಾರ್ಲಾ ಇವನು ಉಪೇಂದ್ರಾ?” ಎಂದು ಪ್ರಶ್ನಿಸುತ್ತಾರೆ. ಇದರರ್ಥ ತಿಕ್ಕಲುತನಕ್ಕೆ ಇನ್ನೊಂದು ಹೆಸರು ಉಪೇಂದ್ರ ಎಂಬಂತಾಗಿದೆ.
ರಾಜಕೀಯ ಪಕ್ಷ ಘೋಷಣೆ ಮಾಡಿದ ದಿನ ಮನೆಯಿಂದ ಬಂದು ಮಾಧ್ಯಮಗಳ ಕ್ಯಾಮರಾಗಳ ಎದುರು ಖಾಕಿ ಶರ್ಟ್ ಧರಿಸಿ ಕುಳಿತುಕೊಂಡು ನನ್ನದು ಬಡವರ ಪಕ್ಷ ಎಂದು ಉಪೇಂದ್ರ ಘೋಷಿಸಿದ ತಕ್ಷಣ, ನಟ ಬೆಳ್ಳಿ ತೆರೆಗೆ ಮೀಸಲಾಗಿದ್ದ ತನ್ನ ತಿಕ್ಕಲುತನಗಳನ್ನು ಬೀದಿಗೆ ವರ್ಗಾಯಿಸುತ್ತಿದ್ದಾನೆ ಎಂಬುದು ಮನವರಿಕೆಯಾಯಿತು. ಉಪೇಂದ್ರ ವ್ಯಯಕ್ತಿಕವಾಗಿ ಬುದ್ಧಿವಂತ ಮತ್ತು ಪ್ರಾಮಾಣಿಕವಾಗಿ ಇರಲು ಬಯಸುವ ವ್ಯಕ್ತಿ. ಹಾಗಾಗಿ ಈತ  ರಾಜ್ಯದ 224 ವಿಧಾನ ಸಭೆಯ ಕ್ಷೇತ್ರಗಳನ್ನು ಗೆಲ್ಲುವ  ಪ್ರಯತ್ನವನ್ನು ತ್ಯೆಜಿಸಿ ತಾನು ವಾಸಿಸುತ್ತಿರುವ ಬೆಂಗಳೂರು ಮಹಾ ನಗರ ಪಾಲಿಕೆಯÀಲ್ಲಿ ನಾಲ್ಕು ವಾರ್ಡ್ಗಳನ್ನು ಗೆಲ್ಲುವ ಬಗ್ಗೆ ಯೋಚಿಸುವುದು ಒಳಿತು.

(ಕರಾವಳಿ ಮುಂಜಾವು ದಿನ ಪತ್ರಿಕೆಯ “ಜಗದಗಲ” ಅಂಕಣಕ್ಕೆ ಬರೆದ ಲೇಖನ)

ಶುಕ್ರವಾರ, ಡಿಸೆಂಬರ್ 29, 2017

ಬೆತ್ತಲಾಗುತ್ತಿರುವ ಬಿ.ಜಿ.ಪಿ. ನಾಯಕರು


ವೈಚಾರಿಕತೆ ಮತ್ತು ತತ್ವ ಸಿದ್ಧಾಂತಗಳ ಕುರಿತಂತೆ ನಮ್ಮ ಭಿನ್ನಾಭಿಪ್ರಾಯಗಳು ಏನೇ ಇರಲಿ, ಕಳೆದ ಮೂರೂವರೆ ದಶಕಗಳಿಂದ ಜನಸಂಘವಾಗಿದ್ದ ರಾಷ್ಟ್ರೀಯ ಪಕ್ಷವೊಂದು ಭಾರತೀಯ ಜನತಾ ಪಕ್ಷವಾಗಿ ಪರಿವರ್ತನೆಗೊಂಡ ನಂತರ ನಾವು ಗೌರವಿಸುವ ಹಲವಾರು ನಾಯಕರು ಪಕ್ಷದಲ್ಲಿದ್ದರು. ಹಿಂದೂ ಧರ್ಮ ಮತ್ತು ಸಂಸ್ಸøತಿಯನ್ನು ಪಕ್ಷದ ಮುಖ್ಯ ಪ್ರಣಾಳಿಕೆಯನ್ನಾಗಿಟ್ಟುಕೊಂಡು ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದ ಪಕ್ಷದಲ್ಲಿ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅದ್ವಾನಿಯಂತಹ ನಾಯಕರು ಸಾರ್ವಜನಿಕ ಬದುಕಿನಲ್ಲಿ ಒಬ್ಬ ನಾಯಕನಿಗೆ ಇರಬೇಕಾz ಸಭ್ಯತೆ ಮತ್ತು ಸಂಸ್ಕತಿಯನ್ನು ಮೈಗೂಡಿಸಿಕೊಂಡಿದ್ದರುಎಂದಿಗೂ ತುಟಿ ಮೀರಿದ ಅಸಂಸ್ಕತ ಭಾಷೆಯನ್ನಾಡದೆ ತಮ್ಮ ವಿರೋಧಿಗಳಿಂದಲೂ ಗೌರವಕ್ಕೆ ಪಾತ್ರರಾಗಿದ್ದರು. ಇದೀಗ ಬೆನ್ನುಮೂಳೆಗಳಿಲ್ಲದ  ಹರಕು ಬಾಯಿ ದಾಸರಂತಿರುವ ಹಾಗೂ ಕೂಗುಮಾರಿ ಸಂಸ್ಕತಿಯ ವಾರಸುದಾರರಂತಿರುವ ಅನಂತಕುಮಾರ ಹೆಗ್ಡೆ, ಪ್ರತಾಪಸಿಂಹ, ಶೋಭಾ ಕರಂದ್ಲಾಜೆ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಮಾಜಿಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್. ಈಶ್ವರಪ್ಪ ಮುಂತಾದ ಮೂರನೆ ದರ್ಜೆಯ ಹಾಗೂ ಕೀಳು ಸಂಸ್ಕತಿಯ ನಾಯಕರಿಂದ ಭಾರತೀಯ ಜನತಾ ಪಕ್ಷವು ತುಂಬಿ ತುಳುಕಾಡುತ್ತಿದೆ. ಇವರ ಬೌದ್ಧಿಕ ದಿವಾಳಿತನ ಯಾವ ಹಂತ ತಲುಪಿದೆ ಎಂದರೆ, ಕಳೆದ ವಾರ ಹುಬ್ಬಳ್ಳಿ ನಗರಕ್ಕೆ ಯೋಗಿ ಆದಿತ್ಯನಾಥ ಸಮಾವೇಶವೊಂದರಲ್ಲಿ ಪಾಲ್ಗೊಳ್ಳುವ ಮುನ್ನಪೈರ್ ಬ್ರಾಂಡ್ ಆದಿತ್ಯನಾಥರಿಗೆ ಸ್ವಾಗತಎಂಬ ಪ್ಲೆಕ್ಸ್ ಗಳು ಎಲ್ಲೆಡೆ ರಾರಾಜಿಸುತ್ತಿದ್ದವು. ತಮ್ಮ ಬಾಯಿಯನ್ನು ಗಟಾರಿನಂತೆ ಹೊಲಸು ಮಾಡಿಕೊಂಡು ಮಾತನಾಡುವ ಅನಂತಕುಮಾರ ಹೆಗ್ಡೆ, ಆದಿತ್ಯನಾಥ ಯೋಗಿಯಂತಹ ಬೇಜವಬ್ದಾರಿಯ ವ್ಯಕ್ತಿಗಳು ಈಗಿನ ಬಿ.ಜಿ.ಪಿ. ಪಾಲಿಗೆ ಪೈರ್ ಬ್ರಾಂಡ್ ನಾಯಕರಾಗಿದ್ದಾರೆ. ಇದು ಒಂದು ರಾಷ್ಟ್ರೀಯ ಪಕ್ಷವೊಂದರ ದುರಂತವಲ್ಲದೆ ಬೇರೇನೂ ಅಲ್ಲಹಿಂದೂ ಧರ್ಮದ ಬಗ್ಗೆ ಹಾಗೂ ಭಾರತೀಯ ಸಂಸ್ಕತಿಯ ಕುರಿತಾಗಿ ಮಾತನಾಡುವ ನಾಯಕ ಮಣಿಗಳಿಗೆ ಯಾವುದು ಸಂಸ್ಕೃತಿಯಾವುದು ಅಸಂಸ್ಕತಿ? ಎಂಬುದನ್ನು ತೋರಿಸಕೊಡಬೇಕಾದ ನೈತಿಕ ಜವಾಬ್ದಾರಿ  ಪ್ರಜ್ಞಾವಂತ ನಾಗರೀಕರ ಮೇಲಿದೆ.
ಕರ್ನಾಟಕ ರಾಜ್ಯದ ಬಿ.ಜೆ.ಪಿ.ಘಟಕದಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ರಾಜಕೀಯ ವಿದ್ಯಾಮಾನಗಳು ಸಂಪೂರ್ಣ ಅಯೋಮಯವಾಗಿವೆ. ಐದು ವರ್ಷದ ಹಿಂದ ಬಿ.ಜೆ.ಪಿ. ಯಿಂದ ಸಿಡಿದು, ತನ್ನದೇ ಆದ ಕೆ.ಜೆ.ಪಿ. ಪಕ್ಷವನ್ನು ಸ್ಥಾಪಿಸುವುದರ ಮೂಲಕ ಕಳೆದ ಚುನಾವಣೆಯಲ್ಲಿ ತಾನೂ ಮಣ್ಣು ಮುಕ್ಕುವುದರ ಜೊತೆಗೆ ಬಿ.ಜೆ.ಪಿ. ಪಕ್ಷಕ್ಕೂ ಮಣ್ಣು ಮುಕ್ಕಿಸಿದ ಯಡಿಯೂರಪ್ಪನವರಿಗೆ ಮತ್ತೆ  ಮಣೆ ಹಾಕಲಾಗಿದೆ. ಪಕ್ಷದಲ್ಲಿ ಜಾತಿಯ ಏಕೈಕ ಕಾರಣಕ್ಕಾಗಿ ಅಂದರೆಉತ್ತರ ಕರ್ನಾಟಕದ ಲಿಂಗಾಯಿತರ ಮತಗಳ ಮೇಲೆ ಕಣ್ಣಿಟ್ಟಿರುವ ರಾಷ್ಟ್ರ ಬಿ.ಜೆ.ಪಿ. ನಾಯಕರ ತೀರ್ಮಾನವು ರಾಜ್ಯದ ಹಲವು ಬಿ.ಜೆ.ಪಿ. ನಾಯಕರ ತೀವ್ರ ಅಸಮಾಧಾನಕ್ಕೆ  ಕಾರಣವಾಗಿದೆ.   ಒಬ್ಬ ತಿಕ್ಕಲು ದೊರೆಯ ಪ್ರತಿರೂಪದಂತಿರುವ, ಮಧುಮೇಹ, ರಕ್ತದೊತ್ತಡ, ಹೀಗೆ ಎಲ್ಲಾ ಬಗೆಯ ಕಾಯಿಲೆಗಳನ್ನು ದೇಹದಲ್ಲಿ ಹೊತ್ತುಕೊಂಡು, ಮೂಗಿನ ತುದಿಯಲ್ಲಿ ಕೋಪವಿರಿಸಿಕೊಂಡು ಮತ್ತೇ ಮುಖ್ಯಮಂತ್ರಿಯಾಗಬೇಕೆಂದು ಕನಸು ಕಾಣುತ್ತಾ, ಮೈಯಲ್ಲಾ ಬಾಯಾಗಿರಿಸಿಕೊಂಡಿರುವ  ಶೋಭಾ ಕರಂದ್ಲಾಜೆ ಎಂಬ ಹೆಂಗಸನ್ನು ಬೆನ್ನಿಗೆ ಕಟ್ಟಿಕೊಂಡು ತಿರುಗುತ್ತಿರುವ ಯಡಿಯೂರಪ್ಪನವರದು ಒಂದು ರೀತಿಯಲ್ಲಿ ತಿರುಕನ  ಕನಸುರಾಷ್ಟ್ರೀಯ ಬಿ.ಜೆ.ಪಿ. ಅಧ್ಯಕ್ಷ ಅಮಿತ್ ಷಾ ಅವರು ಯಡಿಯೂರಪ್ಪನವರನ್ನು  “ ಕರ್ನಾಟಕದ ಮುಂದಿನ ಮುಖ್ಯಮಂತ್ರಿಎಂದು ಘೋಷಿಸಿದಾಗಲೇ ಹಲವಾರು ಬಿ.ಜೆ.ಪಿ. ನಾಯಕರು ಕರ್ನಾಟಕದಲ್ಲಿ ಬಿ.ಜೆ.ಪಿ.ಪಕ್ಷವನ್ನು ಅಧಿಕಾರಕ್ಕೆ ತರುವ ಯತ್ನಕ್ಕೆ ಎಳ್ಳು ನೀರು ಬಿಟ್ಟರು. ನಾನು ವೈಯಕ್ತಿಕವಾಗಿ ಬಲ್ಲ ಮೂರು ನಾಲ್ಕು ಮಂದಿ ನಾಯಕರು ಖಾಸಾಗಿಯಾಗಿ ನನ್ನ ಜೊತೆ ಮಾತನಾಡುತ್ತಾನಮಗೆ ಇನ್ನೂ ಐದು ವರ್ಷ ಅಧಿಕಾರ ಇಲ್ಲದಿದ್ದರೂ ಚಿಂತೆಯಿಲ್ಲ, ಯಡಿಯೂರಪ್ಪನಂತಹ ಹುಂಬ  ಮಾತ್ರ ಮುಖ್ಯಮಂತ್ರಿಯಾಗುವುದು ಬೇಡಎಂಬ ಮಾತನ್ನಾಡಿದ್ದರು. ಏಕೆಂದರೆ, ಅವರಿಗೆಲ್ಲಾ ಯಡಿಯೂರಪ್ಪನವರಿಗಿಂತ ಅವರ ಹಿಂದಿರುವ ಶೋಭಾ ಕರಂದ್ಲಾಜೆಯ ಭಯ ಆವರಿಸಿಕೊಂಡಂತೆ ಕಾಣುತ್ತಿದೆ. ಅವರುಗಳ ಭಯಕ್ಕೂ ಒಂದು ಅರ್ಥವಿದೆ. ಏಕೆಂದರೆಭಾರತದ ರಾಜಕಾರಣದಲ್ಲಿ ಅಂದರೆ, ತಮಿಳುನಾಡಿನಲ್ಲಿ ಎಂ.ಜಿ.ರಾಮಚಂದ್ರನ್ ಮೂಲಕ ಮುಖ್ಯಮಂತ್ರಿಯಾದ ಜಯಲಲಿತಾ, ಕಾನ್ಸಿರಾಮ್ ಮೂಲಕ ಉತ್ತರ ಪ್ರದೇಶದಲ್ಲಿ ಮುಂಚೂಣಿಗೆ ಬಂದ ಮಾಯಾವತಿ ಹಾಗೂ ಆಂಧ್ರಪ್ರದೇಶದಲ್ಲಿ ಎನ್.ಟಿ.ಆರ್. ಮೂಲಕ ಮುಖ್ಯ ಮಂತ್ರಿ ಪದವಿಗೇರಲು ಪ್ರಯತ್ನಿಸಿದ್ದ  ಲಕ್ಷ್ಮಿ-ಶಿವಪಾರ್ವತಿ ಎಂಬಾಕೆ ಹೀಗೆ ಅನೇಕ ಮಹಿಳೆಯರ ಇತಿಹಾಸ ನಮ್ಮ ಕಣ್ಣ ಮುಂದೆ ಇರುವಾಗ ಕರ್ನಾಟಕದಲ್ಲಿ ಯಾವ ಬಿ.ಜೆ.ಪಿ. ನಾಯಕ ತಾನೆ ಯಡಿಯೂರಪ್ಪನವರನ್ನು ಬೆಂಬಲಿಸಲು ಸಾಧ್ಯ? ಅವರೆಲ್ಲರಿಗೂ ಯಡಿಯೂರಪ್ಪನವರ ಭಯಕ್ಕಿಂತ ಹೆಚ್ಚಾಗಿ ಇನ್ನೊಬ್ಬ ಜಯಲಲಿತಾ ಆಗುವ ಸಾಧ್ಯತೆಗಳಿರುವ ಶೋಭ  ಬಗ್ಗೆ ಆತಂಕವಿರುವುದು ಸುಳ್ಳಲ್ಲ. ಕಾರಣಕ್ಕಾಗಿ ಯಡಿಯೂರಪ್ಪನವರದು ಒಂದು ರೀತಿಯಲ್ಲಿ ಒನ್ ಮ್ಯಾನ್ ಆರ್ಮಿ ಎಂಬಂತಾಗಿದೆ. ಹೇಗಾದರೂ ಸರಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ನಿರ್ಧರಿಸಿರುವ ಯಡಿಯೂಪ್ಪನವರು ಈಗ ಮಹಾದಾಯಿ ನದಿ ನೀರು ವಿವಾದದಲ್ಲಿ ಎಡವಟ್ಟು ಮಾಡಿಕೊಳ್ಳುವುದರ ಮೂಲಕ ಕರ್ನಾಟಕದ ಜನತೆಯೆದುರು ಬೆತ್ತಲಾಗಿದ್ದಾರೆ.

ಕುಡಿಯುವ ನೀರಿಗಾಗಿ ಕರ್ನಾಟಕ ಸರ್ಕಾರವು ಕಳೆದ ಇಪ್ಪತ್ತೈದು ವರ್ಷಗಳಿಂದ ಮಹದಾಯಿ ನದಿ ವಿಚಾರವಾಗಿ ನೆರೆಯ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಜೊತೆ ಕಾನೂನು ಹೋರಾಟ ಮಾಡುತ್ತಿರುವುದು ಹೊಸ ವಿಷಯವೇನಲ್ಲ. ವಿವಾದ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ. ಅಂತರಾಜ್ಯ ಜಲವಿವಾದ ಕುರಿತಂತೆ ತೀರ್ಪು ನೀಡಬೇಕಾದ ನ್ಯಾಯಮಂಡಳಿಯು ವರ್ಷದ ಆರಂಭದಲ್ಲಿ ನ್ಯಾಯಾಲಯದ ಹೊರಗೆ ಇದನ್ನು ಬಗೆ ಹರಿಸಿಕೊಳ್ಳಿ ಎಂಬ ಸಲಹೆಯನ್ನು ನೀಡಿತ್ತು. ಅನಾವಶ್ಯಕವಾಗಿ  ಸಮುದ್ರಕ್ಕೆ ಮಹಾದಾಯಿ ನದಿ ನೀರು ಹರಿದು ಹೋಗುತ್ತಿದ್ದರೂ ಸಹ ಹಠ ಹಿಡಿದಿರುವ ಗೋವಾ ರಾಜ್ಯ ಈವರೆಗೆ  ವಿಷಯದಲ್ಲಿ ಯಾವುದೇ ಸಹಾನುಭೂತಿ ತೋರಿಸಿಲ್ಲ. ಕೇಂದ್ರದಲ್ಲಿ ಹಾಗೂ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಬಿ.ಜೆ.ಪಿ. ನೇತೃತ್ವದ ಸರ್ಕಾರಗಳು ಅಧಿಕಾರದಲ್ಲಿ ಇರುವುದರಿಂದ ಇದು ಮಾತುಕತೆಯ ಮೂಲಕ ಬಗೆಹರಿಸವುದು ಕಷ್ಟಕರ ಸಂಗತಿಯೇನಲ್ಲ. ನಿಜಕ್ಕೂ ಬಿ.ಜೆ.ಪಿ. ಪಕ್ಷಕ್ಕೆ ಕರ್ನಾಟಕದ ಬಗ್ಗೆ ಅದರಲ್ಲೂ ಉತ್ತರ ಕರ್ನಾಟಕದ ಜನತೆಯ ಬಗ್ಗೆ ನಿಜವಾದ ಕಾಳಜಿ ಇದ್ದರೆ ಮೂರು ದಿನಗಳಲ್ಲಿ ಬಗೆ ಹರಿಸಬಹುದಾದ ಸಮಸ್ಯೆ ಇದಾಗಿದೆ. ಆದರೆ, ಕಳೆದ ಎರಡೂವರೆ ವರ್ಷದಿಂದ ನಿರಂತರವಾಗಿ ಕುಡಿಯುವ ನೀರಿಗಾಗಿ ಹೋರಾಟ ಮಾಡುತ್ತಿರುವ ಉತ್ತರ ಕರ್ನಾಟಕ ರೈತಾಪಿ ಜನತೆಯನ್ನು ವಂಚಿಸುವ ಸಲುವಾಗಿ ಗೋವಾ ಮುಖ್ಯಮಂತ್ರಿಯಿಂದ ಖಾಸಾಗಿ ಪತ್ರವನ್ನು ಬರೆಯಿಸಿಕೊಂಡು ಬಂದ ಯಡಿಯೂರಪ್ಪನವರು  ಹುಬ್ಬಳ್ಳಿ ನಗರದ ಬಿ.ಜೆ.ಪಿಸಮಾವೇಶದಲ್ಲಿ ಅದನ್ನು ಪ್ರಕಟಿಸಿವುದರ ಮೂಲಕ ಇತ್ಯರ್ಥಕ್ಕೆ ಗೋವಾ ಮುಖ್ಯಮಂತ್ರಿ ಒಪ್ಪಿದ್ದಾರೆ ಎಂದು ಸುಳ್ಳು ಹೇಳಿದ್ದು ಅಕ್ಷಮ್ಯ ಅಪರಾಧವಾಗಿದೆ. ಇಂತಹ ವ್ಯವಸ್ಥಿತ ಸಂಚಿಗೆ ಕೈ ಜೋಡಿಸಿದ ರಾಷ್ಟ್ರೀಯ ಬಿ.ಜೆ.ಪಿ. ಅಧ್ಯಕ್ಷರಾದ ಅಮಿತಾ ಷಾ ಅವರು ಕೂಡ ಇದರ ನೈತಿಕ ಹೊಣೆ ಹೊರಬೇಕಿದೆ. ನದಿ ನೀರಿನ ವಿವಾದ ಇರುವುದು ಗೋವಾ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳ ನಡುವೆ ಮಾತ್ರ. ಒಂದು ವೇಳೆ ಗೋವಾ ಮುಖ್ಯ ಮಂತ್ರಿ ಇತ್ಯರ್ಥಕ್ಕೆ ಒಪ್ಪಿಗೆ ಸೂಚಿಸುವುದಿದ್ದರೆ ಅದನ್ನು ಕರ್ನಾಟಕದ ಮುಖ್ಯಮಂತ್ರಿಗೆ ಇಲ್ಲವೆ, ಸರ್ಕಾರಕ್ಕೆ ಪತ್ರ ಬರೆಯಬೇಕಿತ್ತು. ಅಥವಾ ತಮ್ಮ ವಕೀಲರ ಮೂಲಕ ನ್ಯಾಯಾಧಿಕರಣಕ್ಕೆ ಪ್ರಮಾಣ ಪತ್ರ ಸಲ್ಲಿಸಬೇಕಿತ್ತು. ಇಂತಹ ಸೂಕ್ಷ್ಮತೆಗಳ ಅರಿವಿಲ್ಲದ ಅವಿವೇಕಿಗಳಂತೆ ವರ್ತಿಸಿದ ರಾಜ್ಯ ಬಿ.ಜೆ.ಪಿ. ನಾಯಕರು ಈಗ ರಾಜ್ಯ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇವರ ವಿರುದ್ಧ ಸಿಡಿದೆದ್ದಿರುವ ಮಹಾದಾಯಿ ನದಿ ನೀರಿನ ಹೋರಾಟಗಾರರ ಹಿಂದೆ ಕಾಂಗ್ರೇಸ್ ಪಕ್ಷದ ಕೈವಾಡವಿದೆ ಎಂಬ ಅಪ್ರಬದ್ಧ ಹೇಳಿಕೆ ನೀಡುವುದರ ಮೂಲಕ ರಾಜ್ಯದ ಜನತೆ ಎದುರು ಬೆತ್ತಲಾಗುತ್ತಿದ್ದಾರೆ.
ಯಾವ ಕಾರಣಕ್ಕೂ ಕರ್ನಾಟಕ ರಾಜ್ಯಕ್ಕೆ  ಒಂದು ಹನಿ ನೀರು ಬಿಡುವುದಿಲ್ಲ, ವಿವಾದ ನ್ಯಾಯಮಂಡಳಿಯ ತೀರ್ಪಿನ ಮುಖಾಂತರ ನಿರ್ಧಾರವಾಗಲಿ ಎಂದು ಗೋವಾ ರಾಜ್ಯದ ಪರ ವಾದ ಮಂಡಿಸುತ್ತಿರುವ ವಕೀಲ ಆತ್ಮರಾವ್ ನಾಡಕರ್ಣಿ ಎಂಬುವರು ದೆಹಲಿಯಲ್ಲಿ ಹೇಳಿಕೆ ನೀಡುವುದರ ಮೂಲಕ ರಾಜ್ಯ ಬಿ.ಜೆ.ಪಿ. ನಾಯಕರ ಕಪಟ ನಾಟಕವನ್ನು ಕರ್ನಾಟಕದ ಜನತೆಯೆದುರು ಅನಾವರಣಗೊಳಿಸಿದರು. ಇದೂ ಸಾಲದೆಂಬಂತೆ  ಗೋವಾದ ಜಲಸಂಪನ್ಮೂಲ ಸಚಿವರಾದ ವಿನೋದ್ ಪಾಲಿಯೆಂಕರ್ ಎಂಬುವರು ದಿನಾಂಕ 27 -12-17 ರಂದು ಪಣಜಿಯಲ್ಲಿ ಹೇಳಿಕೆ ನೀಡಿ, ನಮ್ಮ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಯಡಿಯೂರಪ್ಪನವರಿಗೆ ಕಾಗದ ಬರೆದಿರುವುದು ಕೇವಲರಾಜಕೀಯ ಸ್ಟಂಟ್ಎಂದು ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಮುಂದಿನ ಆಗಸ್ಟ್ ವೇಳೆಗೆ ನ್ಯಾಯಮಂಡಳಿಯಿಂದ ತೀರ್ಪು ಹೊರ ಬೀೀಳುವುದರಿಂದ ನಾವು ಕರ್ನಾಟಕ ರಾಜ್ಯದ ಜೊತೆ ಮಹದಾಯಿ ನದಿ ನೀರಿನ ಕುರಿತಂತೆ ಯಾವುದೇ ಸಂಧಾನದ ಮಾತುಕತೆಗೆ ಸಿದ್ಧರಿಲ್ಲ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

ಮುಂದಿನ ಮೇ ತಿಂಗಳಿನಲ್ಲಿ ಕರ್ನಾಟಕದಲ್ಲಿ ವಿಧಾನ ಸಭೆಯ ಚುನಾವಣೆ ನಡೆಯಲಿದ್ದು ಶತಾಯ ಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಹೋರಾಡುತ್ತಿದ್ದ ಬಿ.ಜೆ.ಪಿ. ನಾಯಕರಿಗೆ  ಉತ್ತರ ಕರ್ನಾಟಕದ  ಜಿಲ್ಲೆಗಳಿಗೆ ಕಾಲಿಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೆ ಅನಂತಕುಮಾರ ಹೆಗ್ಡೆ ಎಂಬ ಅವಿವೇಕಿ ಕೇಂದ್ರ ಸಚಿವನೊಬ್ಬ ಸಂವಿಧಾನವನ್ನು ನಾವು ಬದಲಾಯಿಸುತ್ತೇವೆ ಎಂಬ ದುರಹಂಕಾರದ ಮಾತುಗಳನ್ನಾಡಿ ಕರ್ನಾಟಕ ಮಾತ್ರವಲ್ಲದೆ, ಭಾರತದ ಹಿಂದುಳಿದ ವರ್ಗ, ಹಿಂದುಳಿದ ಜಾತಿ ಹಾಗೂ ಇತರೆ ಜನರು ಬಿ.ಜೆ.ಪಿ. ಯಿಂದ ದೂರ ಸರಿಯುವಂತೆ ಮಾಡಿದ್ದಾನೆ. ಸಂಸತ್ತಿನ ಎರಡು ಸದನಗಳಲ್ಲಿ ವಿರೋಧ ಪಕ್ಷಗಳು ಆಡಳಿತಾರೂಡ ಬಿ.ಜೆ.ಪಿ. ಸರ್ಕಾರವನ್ನು ತರಟೆಗೆ ತೆಗೆದುಕೊಂಡಾಗ ಕ್ಷಮೆ ಯಾಚಿಸುವುದರ  ಮೂಲಕ ಈತ, ತನ್ನ ಕಾಲಿನ ಹೆಬ್ಬೆಟ್ಟನ್ನು ಬಾಯಿಗೆ ಹಾಕಿಕೊಂಡು ಕೂರಬೇಕಾಯಿತು. ಇಂತಹ ಕಳಂಕಿತ ಹಾಗೂ ಸಾರ್ವಜನಿಕವಾಗಿ  ಜನಪ್ರತಿನಿಧಿಗೆ ಇರಬೇಕಾದ ಕನಿಷ್ಠ ಪ್ರಜ್ಞೆಯಿಲ್ಲ ವ್ಯಕ್ತಿಗಳಿಂದಾಗಿ ಕನಾಟಕದಲ್ಲಿ ಬಿ.ಜೆ.ಪಿ. ಪಕ್ಷವು ತನ್ನ ಸಮಾಧಿಯನ್ನು ತಾನೇ ಮುಂಚಿತವಾಗಿ ಸಿದ್ಧಪಡಿಸಿಕೊಂಡಿದೆ.
(ಕರಾವಳಿ ಮುಂಜಾವು ದಿನಪತ್ರಿಕೆಗೆ ಬರೆದ “ ಜಗದಗಲ” ಅಂಕಣ ಬರಹ)



ಗುರುವಾರ, ಡಿಸೆಂಬರ್ 14, 2017

ತತ್ವ ಸಿದ್ಧಾಂತಗಳ ಮಸಣವಾದ ರಾಜಕೀಯ ರಂಗ


1992 ರ  ಡಿಸಂಬರ್ ಆರನೇ ದಿನಾಂಕದಂದು ಅಯೋಧ್ಯೆಯ ಬಾಬರಿ ಮಸೀದಿ ಪತನಗೊಂಡ ಘಟನೆ ಮತ್ತೆ ನೆನಪಾಯಿತು. ಏಕೆಂದರೆ, ಅಲ್ಲಿನ ಪ್ರಾರ್ಥನಾ ಮಂದಿರದ ಗೋಡೆಗಳು ಉರುಳಿ ಇಪ್ಪತ್ತೈದು ವರ್ಷಗಳಾದವು. ಅಲ್ಲಿ ಕೇವಲ ಮಂದಿರದ ಗೋಡೆಗಳು ಮಾತ್ರ ನೆಲಕ್ಕೆ ಉರುಳಲಿಲ್ಲ, ಅದರ ಜೊತೆಗೆ ಭಾರತದಂತಹ ಬಹುಸಂಸ್ಕತಿಯ ನೆಲದಲ್ಲಿ ಮನುಷ್ಯ-ಮನುಷ್ಯರ ನಡುವೆ ಅನೇಕ ಶತಮಾನಗಳಿಂದ ಬೆಳದಿದ್ದ ನಂಬಿಕೆಯ ಮತ್ತು  ಸೌರ್ಹದತೆಯ ಗೋಡೆಗಳೂ ಸಹ ಉರುಳಿಬಿದ್ದವು.
ಕಳೆದವಾರ ದೆಹಲಿಯ ಪ್ರೆಸ್ ಆಫ್ ಇಂಡಿಯಾ ಸಂಸ್ಥೆಯ ಆವರಣದಲ್ಲಿ ಬಾಬರಿ ಮಸೀದಿ ಧ್ವಂಸದ ಘಟನೆಗೆ ಸಾಕ್ಷಿಯಾಗಿದ್ದ ದೇಶದ ಹಿರಿಯ ಪತ್ರಕರ್ತರು ಒಟ್ಟಾಗಿ ಆ ದಿನ ಘಟನೆಯಲ್ಲಿ ಮಾಧ್ಯಮದ ಈ ತಲೆಮಾರಿನ ಪತ್ರಕರ್ತರಿಗೆ ವಿವರಿಸುತ್ತಿದ್ದರು. ಈ ಘಟನೆಯನ್ನು ಪ್ರಥಮಬಾರಿಗೆ ಬಿತ್ತರಿಸುವುದರ ಮೂಲಕ ಅಂದಿನ ಕಾಂಗ್ರೇಸ್ ನೇತೃತ್ವದ ಕೇಂದ್ರ ಸರ್ಕಾರದ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್ ಮತ್ತು ಉತ್ತರಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬಿ.ಜೆ.ಪಿ.ನೇತೃತ್ವದ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ ಇವರ ಮುಖವಾಡವನ್ನು ಕಳಚಿಹಾಕಿದ್ದ ಬಿ.ಬಿ.ಸಿ. ಸಂಸ್ಥೆಯ ಭಾರತದ ಮುಖ್ಯ ವರದಿಗಾರ ಮಾರ್ಕ್‍ಟುಲಿ ಕೂಡ ಇದ್ದರು.
ಅಯೋಧ್ಯೆಯಲ್ಲಿ ಮಂದಿರ ಧ್ವಂಸವಾದ ದಿನದಂದು ವೈಯಕ್ತಿಕವಾಗಿ  ನಾನು ಅನುಭವಿಸಿದ ತಳಮಳ ಹಾಗೂ ಮನಸ್ಸಿನೊಳಗೆ ನನ್ನಷ್ಟಕ್ಕೆ  ನಾನು ಮಾತನಾಡಿಕೊಂಡ ಮಾತುಗಳು ಇನ್ನೂ ಹಸಿ ಹಸಿಯಾಗಿವೆ. “ಇನ್ನೆಂದೂ ಈ ದೇಶದಲ್ಲಿ ಹಿಂದು-ಮುಸ್ಲಿಂ ಧರ್ಮಗಳ ನಡುವೆ ಸಾಮರಸ್ಯ ಅಥವಾ ಸೌಹಾರ್ಧತೆ ಸಾಧ್ಯವಿಲ್ಲ” ಎಂದುಕೊಂಡಿದ್ದೆ. ದುರಂತವೆಂದರೆ, ಅದು ನನ್ನ ಪಾಲಿಗೆ ನಿಜವಾಗುತ್ತಾ ಬಂದಿತು. ಕರ್ನಾಟಕ ಪ್ರಜ್ಞಾವಂತರ ಜಿಲ್ಲೆಗಳೆಂದು ಪರುಗಣಿಸಲ್ಪಟ್ಟಿರುವ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಂಭವಿಸುತ್ತಿರುವ ಘಟನೆಗಳನ್ನು ನೋಡುತ್ತಿರುವಾಗ ನಾವು ದ್ವೇಷವನ್ನು ಬಿತ್ತಿ ದ್ವೇಷದ ಫಸಲನ್ನು ತೆಗೆಯುತ್ತಿದ್ದೆವೆ ಎನಿಸಿತು. ವಿದ್ಯಾವಂತರ ಹಾಗೂ  ಪ್ರಜ್ಞಾವಂತ ನಾಗರೀಕರ ಇಂದಿನ ಭಾರತಕ್ಕಿಂತ ಅಂದಿನ ಅಶಿಕ್ಷಿತ ಮುಗ್ದಸಮಾಜದ ಭಾರತವು ಎಷ್ಟೋ ಉತ್ತಮವಾಗಿತ್ತು ಎಂದು  ಇತ್ತೀಚೆಗೆ ಅನಿಸತೊಡಗಿದೆ.
1992 ರಲ್ಲಿ ನಾನು ಪತ್ರಿಕೋದ್ಯಮ ತೊರೆದು ಊರಿನಲ್ಲಿ ವಾಸವಾಗಿದ್ದೆ. ಅದಕ್ಕೊಂದು ಪ್ರಭಲವಾದ ಕಾರಣವೂ ಇತ್ತು. ನಮ್ಮದು ಅವಿಭಕ್ತ ಬೇಸಾಯ ಕುಟುಂಬವಾದ್ದರಿಂದ ನನ್ನಪ್ಪ ನನಗೆ ಬೇರೆ ಮನೆ ಮಾಡಿಕೊಟ್ಟಿದ್ದರು. ನನ್ನ ಪತ್ನಿ ಆಗರ್ಭ ಕುಟುಂಬಕ್ಕೆ ಸೇರಿದ ಹೆಣ್ಣು ಮಗಳಾಗಿ, ನನ್ನನ್ನು ಇಷ್ಟಪಟ್ಟು  ಹದಿನಾಲ್ಕು ವರ್ಷಗಳ ಕಾಲ ಹೋರಾಟ ಮಾಡಡುವುದರೊಂದಿಗೆ ತನ್ನ ಕುಟುಂಬದವರನ್ನು ಒಪ್ಪಿಸಿ, 1989ರಲ್ಲಿ  ಕುವೆಂಪು ಮಂತ್ರ ಮಾಂಗಲ್ಯದ ಮೂಲಕ ನನ್ನನ್ನು ಕೈ ಹಿಡಿದು ನನ್ನ ಮನೆಯ ಹೊಸ್ತಿಲು ತುಳಿದಿದ್ದಳು. ನಮ್ಮ ಸಾಮಾನ್ಯ ರೈತ ಕುಟುಂಬದಲ್ಲಿ ಸೊಸೆಗೆ ತೊಂದರೆಯಾಗಬಾರದೆಂದು ತೀರ್ಮಾನಿಸಿದ್ದ ನನ್ನಪ್ಪ ನನಗೆ ಬೇರೆ ಮನೆ ಮಾಡಿಕೊಟ್ಟಿದ್ದರು. ನನ್ನ ಮನೆಯಲ್ಲಿ ಸ್ಥಿರ ದೂರವಾಣಿ, ಬಿ.ಪಿ.ಎಲ್, ಸ್ಯಾನ್ಯೊ ಎಂಬ ಟೇಪ್ ರೆಕಾರ್ಡರ್ ಹಾಗೂ ಆಗ ತಾನೆ ನನ್ನೂರಿಗೆ ಕೇವಲ್ ಜಾಲದ ಕಾಲಿಟ್ಟಿದ್ದ ಟಿ.ವಿ. ಸಂಪರ್ಕದಿಂದಾಗಿ ಕಪ್ಪು ಬಿಳುಪಿನ ಫಿಲಿಪ್ಸ್ ಕಂಪನಿಯ ಪುಟ್ಟದಾದ ಟಿ.ವಿ. ಹಾಗೂ ಪುಸ್ತಕ ಭಂಡಾರವನ್ನು ಇಟ್ಟುಕೊಂಡಿದ್ದೆ. ಕೇಬಲ್ ನಲ್ಲಿ ಹೆಚ್ಚು ಛಾನಲ್ ಗಳು ಇರದಿದ್ದ ಕಾರಣ ದೂರದರ್ಶನ, ಕಾರ್ಟೂನ್ ನೆಟ್‍ವರ್ಕ್, ನ್ಯಾಷನಲ್ ಜಿಯಾಗ್ರಪಿ, ಡಿಸ್ಕವರಿ ಮತ್ತು ಬಿ.ಬಿ.ಸಿ ಛಾನಲ್‍ಗಳು ಮಾತ್ರ ದೊರೆಯುತ್ತಿದ್ದವು.

1992 ರ ಡಿಸಂಬರ್ ನಾಲ್ಕರಂದು ಭಾರತೀಯ ಜನತಾ ಪಕ್ಷದ ನಾಯಕರಾದ ಎಲ್.ಕೆ.ಅಧ್ವಾನಿ, ಮುರಳಿಮನೋಹರ ಜೋಷಿ, ಉಮಾ ಭಾರತಿ ನೇತೃತ್ವದಲ್ಲಿ ನೆರೆಯ ರಾಜ್ಯಗಳಿಂದ ಅಯೋಧ್ಯೆಗೆ ಆಗಮಿಸಿದ್ದ ಸಾವಿರಾರು ಕರಸೇವಕರಿಂದ ಮಸೀದಿ ಧ್ವಂಸವಾಗುವ ಎಲ್ಲಾ ಸೂಚನೆಗಳು ದೊರೆತಿದ್ದವು. ಆಗಿನ ಕಾಂಗ್ರೇಸ್ ನಾಯಕರಾದ ಅರ್ಜುನ್ ಸಿಂಗ್ ಕೂಡ ಇದೇ ಸಂಶಯವನ್ನು ವ್ಯಕ್ತ ಪಡಿಸಿದ್ದರು. ( ಅವರು ಕೇಂದ್ರ ಗೃಹ ಸಚಿವರಾಗಿದ್ದರೆಂದು ನೆನಪು) ಆದರೆ, ಮಹಾ ಮೌನಕ್ಕೆ ಹೆಸರಾಗಿದ್ದ ಪ್ರಧಾನಿ ಪಿ.ವಿ.ನರಸಿಂಹರಾವ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಕಲ್ಯಾಣ್ ಸಿಂಣ್ ಅವರ ಮಾತನ್ನು ನಂಬಿ ಮೌನಕ್ಕೆ ಶರಣಾದರು. ಅವರ ನಡುವಳಿಕೆ ಮಸೀದಿ ಧ್ವಂಸಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದಂತಿತ್ತು. ಕೇಂದ್ರ ಸರ್ಕಾರವು  ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ನಿಷ್ಕ್ರಿಯಗೊಂಡಿದ್ದ ಕಾರಣದಿಂದ ಡಿಸಂಬರ್ 6 ರಂದು ಬಿ.ಜೆ.ಪಿ. ನಾಯಕರ ಕಣ್ಣೆದುರು ಪ್ರಾರ್ಥನಾ ಮಂದಿರದ ಸುತ್ತ ಹಾಕಲಾಗಿದ್ದ ರಕ್ಷಣಾ ಬೇಲಿಯನ್ನು ಕಿತ್ತು ಹಾಕಿದ ಕರಸೇವಕರು ಮಧ್ಯಾಹ್ನದ ವೇಳೆಗೆ ಮಸೀದಿಯ ಕಟ್ಟಡವನ್ನು ಸುತ್ತುವರಿದು ಸಂಜೆ ನಾಲ್ಕು ಗಂಟೆಯೊಳಗೆ ದ್ವಂಸಗೊಳಿಸಿದರು. ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದ ಛಾಯಾಗ್ರಾಹಕರನ್ನು ಮತ್ತು ಪತ್ರಕರ್ತರನ್ನು ಪುರುಷ-ಮಹಿಳೆ ಎಂಬ ಬೇಧ ಭಾವವಿಲ್ಲದೆ ಮನ ಬಂದಂತೆ ಥಳಿಸಿದರು. ಅಯೋಧ್ಯೆಯಲ್ಲಿ ಏನೋ ದುರಂತ ಘಟನೆ ಸಂಭವಿಸುತ್ತಿದೆ ಎಂದು ಭಾರತದ ನಾಗರೀಕರಿಗೆ ಸುಳಿವು ದೊರೆತಿದ್ದರೂ ಸಹ ಕೇಂದ್ರ ಸರ್ಕಾರದ ಸ್ವಾಮ್ಯದ ಆಕಾಶವಾಣಿ ಮತ್ತು ದೂರದರ್ಶನಗಳು ವಿಷಯವನ್ನು ಮುಚ್ಚಿಟ್ಟು ಕಥೆ ಹೇಳತೊಡಗಿದ್ದವು. ಆದರೆ ಸಂಜೆ 5 ಗಂಟೆ ವೇಳೆಗೆ ಬಿ.ಬಿ.ಸಿ. ಛಾನಲ್ ಮಸೀದಿ ಧ್ವಂಸವಾಗುತ್ತಿರುವ ದೃಶ್ಯಗಳನ್ನು ಪ್ರಸಾರ ಮಾಡಿ ಭಾರತದ ದುರಂತದ ಕಥೆಯನ್ನು ಜಗತ್ತಿನೆದುರು ಅನಾವರಣಗೊಳಿಸಿತ್ತು. ಆ ಘಟನೆಯ ಕುರಿತು ಬಿ.ಬಿ.ಸಿ.ಛಾನಲ್ ಗೆ ವರದಿ ನೀಡುತ್ತಿದ್ದ ಮುಖ್ಯವರದಿಗಾರರಾಗಿದ್ದ ಮಾರ್ಕ್‍ಟುಲಿಯವರು “ ಈ ದಿನ ಉತ್ತರ ಪ್ರದೇಶದ ಅಯೋಧ್ಯೆ ಎಂಬ ಧಾರ್ಮಿಕ ಸ್ಥಳದಲ್ಲಿ ಬಾಬರಿ ಮಸೀದಿ ಧ್ವಂಸಗೊಳ್ಳುವುದರ ಜೊತೆಗೆ ಬಹುಮುಖಿ ಭಾರತದ ಆತ್ಮವು ಸಹ ಕುಸಿದು ಬಿದ್ದಿತು” ಎಂದು ಆಡಿದ ಮಾತುಗಳು ಈಗಲೂ ನನ್ನ ಕಿವಿಯೊಳಗೆ ಅನುರಣಿಸುತ್ತಿವೆ.
ಮಸೀದಿ ಧ್ವಂಸದ ದೃಶ್ಯಗಳನ್ನು ನೋಡಿ ದಿಗ್ಭ್ರಾಂತನಾದ ನಾನು ನನ್ನ ಎರಡೂವರೆ ವರ್ಷದ ಮಗನನ್ನು ಎತ್ತಿಕೊಂಡು ಬಂದು ಮನೆಯ ಮುಂಬಾಗಿಲಿನ ಮೆಟ್ಟಿನ ಮೇಲೆ ತೊಡೆಯ ಮೇಲೆ ಕೂರಿಸಿಕೊಂಡು  ಕುಳಿತಿದ್ದೆ. ಆಗ ಸಂಜೆ ಆರೂವರೆ ಸಮಯ. ಅದು ಡಿಸಂಬರಿನ ಚಳಿಗಾಲವಾದ್ದರಿಂದ ಬೇಗನೆ ಕತ್ತಲು ಆವರಿಸಿಕೊಳ್ಳುತ್ತಿತ್ತು.  ಆಗತಾನೆ ಗದ್ದೆಯ ಕೂಲಿ ಕೆಲಸ ಮುಗಿಸಿ ಮನೆಗೆ ಹಿಂತಿರುಗಿ ಬರುತ್ತಿದ್ದ ನನ್ನೂರಿನ ಅನಕ್ಷರಸ್ತ ವಜೀರಣ್ಣ ಗುದ್ದಲಿಯನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ನಿಧಾನವಾಗಿ ಕಾಲೆಳೆಯುತ್ತಾ ಬರುತ್ತಿದ್ದ. ಮನೆ ಬಾಗಿಲ ಬಂದವನು ನನ್ನನ್ನು ಉದ್ದೇಶಿಸಿ “ ಜಗಣ್ಣಾ ಸಂತೆ ಮೈದಾನದಲ್ಲಿ ಜನ ಗುಂಪು ಸೇರಿ ಏನೇನೊ ಮಾತನಾಡ್ತಾ ಅವ್ರೆ, ಮಸೀದಿ ಬಿದ್ದೋಯ್ತುಂತೆ ಅಂತಾ ನಿಜವಾ?” ಎಂದು ಕೇಳಿದ. ಅವನಿಗೆ ಅವನಿಗೆ ಅಯೋಧ್ಯೆಯ ಹಳೆಯ ಮಸೀದಿಯೊಂದನ್ನು ಕೆಡವಿ ಹಾಕಿದ ವಿಷಯ ತಿಳಿಸಿದೆ. “ ಬುಡಣ್ಣಾ, ದೇವರು ಇರುವ ನಮ್ಮೂರು ಮಸೀದಿಗೆ ನಾನು ಒಂದು ದಿನಾನೂ ಹೋಗ್ಲಿಲ್ಲ, ಇನ್ನು ದೇವರಿಲ್ಲದ ಮಸೀದಿ ಕೆಡವಿದ್ರೆ ನಾನ್ಯಾಕೆ ತಲೆ ಕೆಡಿಸಿಕೊಳ್ಳಬೇಕು?” ಎನ್ನುತ್ತಾ ಸಂತನೊಬ್ಬ ಆಡುವಂತಹ ಮಾತನ್ನು ನನ್ನ ಮುಂದೆ ಬಿಸಾಡಿ, ಏನೂ ಆಗದವನಂತೆ ನಡೆದು ಹೋದ. ನಾನು ಬೆಳೆದು ಬುದ್ದಿ ಕಂಡ ದಿನಗಳಿಂದಲೂ ಕೂಲಿ ಮಾಡಿ ಬದುಕುತ್ತಿದ್ದ ನನ್ನೂರಿನ ಅನಕ್ಷರಸ್ತ ವಜೀರಣ್ಣನಿಗೆ ( ವಜೀರ್ ಸಾಬ್) ಇದ್ದ ಪ್ರಜ್ಞೆ ನಮ್ಮ ಹಿಂದೂ ದೇಶ ಭಕ್ತರಿಗೆ ಇದ್ದಿದ್ದರೆ, ಈ ದೇಶ ಮತ್ತು ಈ ಜಗತ್ತು ಇಂದು ಭಯೋತ್ಪಾದನೆಯ ಹೆಸರಿನ ರಕ್ತದೋಕುಳಿಯಲ್ಲಿ ಮೀಯಬೇಕಾದ ಪ್ರಸಂಗ ಉದ್ಭವವಾಗುತ್ತಿರಲಿಲ್ಲ ಎಂದು ಆ ಕ್ಷಣದಲ್ಲಿ ಅನಿಸತೊಡಗಿತು.

ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆ ಜಾತಿ, ಧರ್ಮ, ಭಾಷೆಯ ಆಧಾರದ ಮೇಲೆ ಜನರನ್ನು ಉನ್ಮಾದಗೊಳಿಸುವುದು ಸುಲಭ. ಆದರೆ, ಅದೇ ಉನ್ಮಾದವನ್ನು ಅಥವಾ ಆವೇಶವನ್ನು ಸದಾ ಕಾಯಿಟ್ಟುಕೊಳ್ಳುವುದು ಕಷ್ಟ. ಜನರ ತಲೆಗೇರಿಸಿದ ಅಮಲು ಇಳಿಯದಂತೆ ಸದಾ ಸುಳ್ಳಿನ ಸರಮಾಲೆಯನ್ನು ಹೆಣೆಯಬೇಕಾಗುತ್ತದೆ. ಈಗ ಐವತ್ತಾರು ಇಂಚು ಎದೆಯಳತೆಯ ಪ್ರಧಾನಿ ನರೇಂದ್ರಮೋದಿಯವರು ಮಾಡುತ್ತಿರುವುದು  ಇದೇ ಕೆಲಸವಲ್ಲದೆ ಬೇರೇನಲ್ಲ. ಅವರ ಸಚಿವ ಸಂಪುಟದ ಸಹೋದ್ಯೋಗಿ ಅನಂತ ಕುಮಾರ ಹೆಗ್ಡೆ ಎಂಬ ಕೇಂದ್ರ ಸಚಿವ ಕೂಡ ತನ್ನ ನಾಲಿಗೆ ಮೇಲಿನ ಹಿಡಿತ ಕಳೆದುಕೊಂಡಿದ್ದಾರೆ. ಒಬ್ಬ ಅವಿವೇಕಿ ಮನುಷ್ಯನಂತೆ ಬೆಂಕಿಯುಗುಳುವುದರ ಮೂಲಕ ತಾನು ಹೋದ ಕಡೆ ಬೆಂಕಿ ಹಚ್ಚುವ ಕೆಲಸದಲ್ಲಿ ನಿರತನಾಗಿದ್ದಾರೆ. ಒಬ್ಬ ಜನಪ್ರತಿನಿಧಿಯ ಸಾರ್ವಜನಿಕ ಬದುಕಿಗೆ ಇರಬೇಕಾದ  ಸಂಯಮವಾಗಲಿ, ಲಜ್ಜೆಯಾಗಲಿ ಇದ್ದಂತಿಲ್ಲ. ಇಂತಹ ವ್ಯಕ್ತಿಯನ್ನು  ಜಾತಿ ಅಥವಾ ಧರ್ಮದ ಕಾರಣಕ್ಕಾಗಿ ನಿರಂತರವಾಗಿ ಸಂಸದನಾಗಿ ಆಯ್ಕೆ ಮಾಡಿಕೊಳಿಸುತ್ತಿರುವ ಕೆನರಾ ಕ್ಷೇತ್ರದ ಮತದಾರರು ಒಮ್ಮೆ ತಮ್ಮ ಆತ್ಮಸಾಕ್ಷಿಯನ್ನು ಪರೀಕ್ಷಿಸಿಕೊಳ್ಳುವುದು ಒಳಿತು.
ಇದು ಕೇವಲ ಅನಂತಕುಮಾರ ಹೆಗ್ಡೆ ಗೆ ಮಾತ್ರ ಸೀಮಿತವಾದ ಮಾತಲ್ಲ, ಬಿ.ಜೆ.ಪಿ. ಯಡಿಯೂರಪ್ಪ, ಈಶ್ವರಪ್ಪ, ಶೋಭಾ ಕರಂದ್ಲಾಜೆ, ಪ್ರತಾಪ ಸಿಂಹ, ಕಾಂಗ್ರೆಸ್ ಪಕ್ಷದ ವಿ.ಎಸ್.ಉಗ್ರಪ್ಪ, ಹೆಚ್.ಆಂಜನೇಯ, ಮಾಲಿಕಯ್ಯ ಗುತ್ತೆದಾರ್,  ಜಿ.ಡಿ.ಎಸ್. ಪಕ್ಷದ ಹೆಚ್.ಡಿ.ಕುಮಾರಸ್ವಾಮಿ, ಮಾಗಡಿ ಕ್ಷೇತ್ರದ ಶಾಸಕ ಬಾಲಕೃಷ್ಣ , ಜಮೀರ್ ಅಹಮ್ಮದ್ ಇವರಿಗೂ ಸಹ ಅನ್ವಯವಾಗುತ್ತದೆ.
ತತ್ವ ಸಿದ್ಧಾಂತಗಳ ನೆಲೆಯಿಲ್ಲದ ಅಧಿಕಾರವು ಮಂಜಿನ ಅರಮನೆ ಎಂಬುದನ್ನು  ರಾಜಕೀಯ ಪಕ್ಷಗಳು ಮತ್ತು ಅವುಗಳ ನೇತಾರರು  ಅರಿಯಬೇಕು. ಖಾಲಿಯಾದ ಕೊಡಗಳು ಹೆಚ್ಚು ಸದ್ದು ಮಾಡುತ್ತವೆ ಎನ್ನುವ ಹಾಗೆ ಇವರಾಡುವ ಮಾತುಗಳು ಇವರೊಳಗಿನ ಖಾಲಿತನವನ್ನು ತೋರುತ್ತಿವೆ. ಇಂತಹವರನ್ನು ನಿಯಂತ್ರಣದಲ್ಲಿಡಬೇಕಾದ ಮಾಧ್ಯಮಗಳು ನಿಶ್ಯಕ್ತಗೊಂಡಿದ್ದರೆ, ಕಿವಿ ಹಿಂಡಿ ಬುದ್ದಿ ಹೇಳಬೇಕಾದ ಲೇಖಕರು, ಚಿಂತಕರು ಮತ್ತು ಬುದ್ದಿಜೀವಿಗಳು ಎಂದು ಸಾರ್ವಜನಿಕವಾಗಿ ಆರೋಪ ಹೊತ್ತವರು ಆಳುವವರ ಆಸ್ಥಾನದಲ್ಲಿ ನಿದ್ದೆ ಹೋಗಿದ್ದಾರೆ. ಇಂದು ಮಂಗಳೂರು, ಹೊನ್ನಾವರ, ಕುಮಟಾ, ಶಿರಸಿ ನಗರಕ್ಕೆ ಬೆಚ್ಚಿ ಹಚ್ಚಲಾಗಿದೆ. ನಾಳೆ ಯಾವ ಊರಿಗೆ? ಯಾವ ಪಟ್ಟಣಕ್ಕೆ?  ಯಾರಿಗೂ ಗೊತ್ತಿಲ್ಲ.  ತತ್ವ ಮತ್ತು ಸಿದ್ಧಾಂತಗಳಿಲ್ಲದ ರಾಜಕೀಯ ನಮ್ಮನ್ನು ಎಲ್ಲಿಗೆ ಕೊಂಡೊಯ್ಯಬಲ್ಲದು? ಎಂಬುದನ್ನು ನೆನದರೆ ಭಯವಾಗುತ್ತದೆ.