ಮಂಗಳವಾರ, ನವೆಂಬರ್ 7, 2023

ರಂಗನಾಯಯಕಿ ಅಮ್ಮಾಳ್ ಎಂಬ ಲಿಂಗ ಅಸಮಾನತೆಯನ್ನು ಮುರಿದ ಮೊದಲ ಮಹಿಳಾ ವಾದ್ಯಗಾರ್ತಿ


May be an image of 1 person and musical instrument
ಇಪ್ಪತ್ತೊಂದನೆಯ ಶತಮಾನದ ಆಧುನಿಕ ಯುಗದಲ್ಲಿ ಮಹಿಳೆ ಪುರುಷ ನಸಮಾನವಾಗಿ ಬೆಳೆದು ನಿಂತಿದ್ದಾಳೆ. ಮಹಿಳೆಯರು ನಿರ್ವಹಿಸುವ ಕಾರ್ಯಗಳಲ್ಲ ಎಂದು ಪರಿಗಣಿಸಿದ್ದ ವಿಮಾನ ಚಾಲನೆ, ರೈಲು ಚಾಲನೆ ಹಾಗೂ ಟ್ರಕ್ ಮತ್ತು ಆಟೋಗಳ ಚಾಲನೆಯಲ್ಲಿ ಸರಿಸಮಾನವಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಇದಕ್ಕೆ ಪ್ರೇರಣೆಯಾಗಿ ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಕರ್ನಾಟಕ ಸಂಗೀತದ ಲೋಕದಲ್ಲಿ ಮಹಿಳೆಯರು ನುಡಿಸುವ ವಾದ್ಯಗಳಲ್ಲ ಎಂಬ ತೀರ್ಮಾನದಲ್ಲಿ ಪುರುಷ ಜಗತ್ತು ಮುಳುಗಿರುವಾಗ ನಾದಸ್ವರ ವಾದನದಲ್ಲಿ ಪೊನ್ನಮಾಳ್ ಮತ್ತು ಮೃದಂಗ ವಾದನ ಕಲೆಯಲ್ಲಿ ರಂಗನಾಯಕಿ ಅಮ್ಮಾಳ್ ಹೊಸ ಇತಿಹಾಸವನ್ನು ಬರೆದರು.
ಅವರು ಹಾಕಿಕೊಟ್ಟ ಮಾರ್ಗದಲ್ಲಿ ಇಂದಿನ ಮಹಿಳಾ ಕಲಾವಿದರು ಮೃದಂಗ, ನಾದಸ್ವರ, ತಬಲ, ಗೋಟು ವಾದ್ಯ ಮುಂತಾದ ಕಲೆಗಳಲ್ಲಿ ನೈಪುಣ್ಯತೆಯನ್ನು ಸಾಧಿಸುವುದರ ಮೂಲಕ ಪುರುಷರ ಸಮಾನವಾಗಿ ಬೆಳೆದು ನಿಂತಿದ್ದಾರೆ.
ರಂಗನಾಯಕಿ ಅಮ್ಮಾಳ್ ಸಾಧನೆಯ ಇತಿಹಾಸವು 1927 ರಿಂದ ಆರಂಭವಾಗಿ ಇತಿಹಾಸದಲ್ಲಿ ದಾಖಲಾಗಿದೆ. ರಂಗನಾಯಕಿ ಅಮ್ಮಾಳ್ ಹದಿನೇಳು ವರ್ಷ ಪ್ರಾಯದ ಯುವತಿಯಾಗಿದ್ದಾಗ ಮದ್ರಾಸ್‌ ನಗರದಲ್ಲಿ ನಡೆದ ಅಖಿಲ ಭಾರತ ಕಾಂಗ್ರಸ್ ಅಧಿವೇಶನದ ನಿಮಿತ್ತ ಆಯೋಜಿಸಿದ್ದ ಸಂಗೀತ ಸಮ್ಮೇಳನದಲ್ಲಿ ಮೃದಂಗ ವಾದಕಿಯಾಗಿ ಭಾಗವಹಿಸಿದಾಗ ಅಲ್ಲಿ ಹೊಸ ಮಹಿಳಾ ಇತಿಹಾಸ ಸೃಷ್ಟಿಯಾಯಿತು.
ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಪ್ಪತ್ಮೂರು ಮಂದಿ ಮೃದಂಗ ಕಲಾವಿದರ ಪೈಕಿ ರಂಗನಾಯಕಿಯವರು ಏಕೈಕ ಮಹಿಳಾ ಕಲಾವಿದೆಯಾಗಿದ್ದರು. ಈ ಕಾರಣದಿಂದಾಗಿ ಟಿ. ಎಸ್. ರಂಗನಾಯಕಿ ಅಮ್ಮಾಳ್ ಅವರು 1930 ರ ದಶಕದ ಹಿಂದೆಯೇ ಮೃದಂಗ ಕಲಾವಿದರಾಗಿ ಪ್ರಸಿದ್ಧಿ ಪಡೆದರು. ಕರ್ನಾಟಕ ಸಂಗೀತದ ತಾಳವಾದ್ಯದ ಪುರುಷ ಪ್ರಧಾನ ಜಗತ್ತಿನಲ್ಲಿ ಯಶಸ್ಸನ್ನು ಸಾಧಿಸಿದ ಮೊದಲ ಮಹಿಳೆ ಎಂದು ಪ್ರಸಿದ್ಧಿಯಾದರು.
ಪುರುಷರು ಮಾಡುವ ಯಾವುದನ್ನೂ ಮಹಿಳೆಯರಿಗೆ ಅನುಮತಿಸದ ಇದ್ದ ಆ ಕಾಲಘಟ್ಟದಲ್ಲಿ, ಈ ಚಿಕ್ಕ ಹುಡುಗಿಯೊಬ್ಬಳು ಮೃದಂಗವನ್ನು ನುಡಿಸುವಲ್ಲಿ ಪ್ರಯತ್ನಿಸಿ ಯಶಸ್ಸು ಸಾಧಿಸಿದ್ದು ಸಾಮಾನ್ಯ ಸಂಗತಿಯಲ್ಲ. ರಂಗನಾಯಕಿ ಅಮ್ಮಾಳ್ ಅವರ ತಂದೆ ತಿರುಕೋಕರ್ಣಂ ಶಿವರಾಮನ್ ಅವರು ಪುದುಕೋಟೈ ಸಂಸ್ಥಾನದಲ್ಲಿ ಆಸ್ಥಾನ ವಿದ್ವಾನ್ ಹಾಗೂ ಪ್ರತಿಷ್ಠಿತ ನಟುವನಾರ್ ಅಂದರೆ ನೃತ್ಯ ಶಿಕ್ಷಕ ಅಥವಾ ಗುರುವಾಗಿ ಹೆಸರು ಪಡೆದ್ದರು. ಅವಧಾನ ಪಲ್ಲವಿಗಳ ಪಾಂಡಿತ್ಯಕ್ಕಾಗಿ ಅವರು ಹೆಸರುವಾಸಿಯಾಗಿದ್ದರು. ಇದು ನೃತ್ಯದಲ್ಲಿ ಕೈಗಳನ್ನು ಮಾತ್ರವಲ್ಲದೆ ಕಾಲುಗಳು ಮತ್ತು ತಲೆಗಳನ್ನು ಬಳಸಿ ವೈವಿಧ್ಯಮಯ ತಾಳಎಂದುನು ಕೌಶಲ್ಯದಿಂದ ಪ್ರದರ್ಶಿಸುವ ಒಂದು ಕಲಾ ಪ್ರಕಾರವಾಗಿದೆ.
ದೇವದಾಸಿ ಪದ್ಧತಿಯ ವಿರುದ್ಧ ಹೋರಾಟ ನಡೆಸಿದ ಪುದುಕೋಟೈ ಮೂಲ ದ ಖ್ಯಾತವೈದ್ಯೆ ಹಾಗೂ ಸಮಾ ಜ ಸುಧಾರಕಿ ಡಾ. ಮುತ್ತುಲಕ್ಷ್ಮಿ ರೆಡ್ಡಿ ಇವರ ಹತ್ತಿರ ಸಂಬಂಧಿಯಾಗಿದ್ದರು.
ಏಳು ಮಂದಿ ಒಡಹುಟ್ಟಿದವರ ಕುಟುಂಬದಲ್ಲಿ ರಂಗನಾಯಕಿ ಅಮ್ಮಾಳ್ ಅವರು 1910 ರ ಮೇ 10 ರಂದು ಎರಡನೇ ಮಗುವಾಗಿ ಜನಿಸಿದರು. ಅವರ ಸಹೋದರ ಉಲಗನಾಥನ್ ಪಿಳ್ಳೈ, ಪಿಟೀಲು ವಾದಕರಾಗಿದ್ದರು. ಹಿರಿಯ ಸಹೋದರಿ ಶಿವ ಬೃಂದಾದೇವಿ ಎಂಬುವರು ಶೈವಪರಂಪರೆಯ ಪೀಠವೊಂದರ ಅಧ್ಯಕ್ಷೆಯಾಗಿದ್ದರು.
ರಂಗನಾಯಕಿ ಅವರು ಬಾಲ್ಯದಿಂದಲೂ ಮೃದಂಗ ತಾಳಗಳ ಲಯ ಪರಾಕ್ರಮದಿಂದ ಪ್ರೇರಿತರಾದರು, ಮೃದಂಗವನ್ನು ಆಯ್ಕೆ ಮಾಢಿಕೊಂಡರು ಮತ್ತು ಬಾಲ್ಯದಲ್ಲಿ ಭರತನಾಟ್ಯದ ಶಿಕ್ಷಣವನ್ನು ಪಡೆಯುತ್ತಾ, ಮೃದಂಗದ ಶಿಕ್ಷಣವನ್ನು ಪಡೆಯುತ್ತಿದ್ದರು. ಅವರಿಗೆ ಹದಿಮೂರು ವರ್ಷವಾಗಿದ್ದಾಗ ಭರತನಾಟ್ಯದ ಅರಂಗೇಟ್ರಂ ( ನೃತ್ಯ ಪ್ರವೇಶ) ಕಾರ್ಯಕ್ರ ಮನಡೆಯಿತು. ಅವರ ನೃತ್ಯ ಕಾರ್ಯಕ್ರಮಕ್ಕೆ ತಂದೆಯವರ ಜೊತೆ ಮೃದಂಗಕ್ಕೆ ರಾಮಚಂದ್ರಪಿಳ್ಳೈ ಮತ್ತು ವಯಲಿನ್ ವಾದನಕ್ಕೆ ಇಕಪ್ಪೂರ್ ಮುನಿಸ್ವಾಮಿ ಪಿಳ್ಳೈ ಆಗಮಿಸಿದ್ದರು. ಇವರೆಲ್ಲರೂ ಪುದುಕೋಟೈ ಸಂಸ್ಥಾನದ ಸಂಗೀತಗಾರರಾಗಿದ್ದರು.
ಪುದುಕೋಟೈ ಸಂಸ್ಥಾನದಲ್ಲಿ ಮೃದಂಗ ವಾದನದಲ್ಲಿ ಶ್ರೇಷ್ಠ ಗುರುಗಳಲ್ಲಿ ಒಬ್ಬರಾಗಿದ್ದ ಪುದುಕೊಟ್ಟೈ ದಕ್ಷಿಣಾಮೂರ್ತಿ ಪಿಳ್ಳೈ ಅವರ ಬಳಿ ಹದಿಮೂರು ವರ್ಷಗಳ ಕಾಲ ಗುರುಕುಲ ಪದ್ಧತಿಯಲ್ಲಿ ಮೃದಂಗ ವಾದನದ ಅಭ್ಯಾಸ ಮಾಡಿದರು.
ರಂಗನಾಯಕಿ ಅಮ್ಮಾಳ್ ಅವರು ತಮಗೆ ಹದಿನೈದು ವರ್ಷವಾದಾಗ, ಭರತನಾಟ್ಯವನ್ನು ನಿಲ್ಲಿಸಿ ಮೃದಂಗ ವಾದನದ ಕಲೆಯತ್ತ ತೀವ್ರ ಆಸಕ್ತಿ ತಾಳಿದರು."ರಂಗನಾಯಕಿ ಅಮ್ಮಾಳ್ ಕೇವಲ ಎರಡು ವರ್ಷಗಳಲ್ಲಿ ಅದರ ನಾದದ ಗುಣಮಟ್ಟಕ್ಕೆ ತುಂಬಾ ಹೊಳಪನ್ನು ಸೇರಿಸಿದ್ದಾರೆ ಎಂದು ಸಂಗೀತ ವಿಮರ್ಶಕರು ಕೊಂಡಾಡಿದ್ದರು. ಮತ್ತೊಬ್ಬ ವಿಮರ್ಶಕರು ತನಿ ಆವರ್ತನದಲ್ಲಿ ಮೃದಂಗದ ಮೇಲಿನ ಅವರ ಚಳಕ ಕಾರ್ಯಕ್ರಮದ ಮುಖ್ಯಾಂಶವೆಂದು ಘೋಷಿಸಿದ್ದರು. ಸಂಗೀತ ಕೃತಿಯೊಂದಿಗಿನ ಅವರ ವಿಧಾನವನ್ನು ಮತ್ತು ಅದ್ಭುತ ಅಭಿನಯವನ್ನು ಶ್ಲಾಘಿಸಿದರು ಅವರು 1930 ದಶಕದಿಂದ ಪ್ರಸಿದ್ಧ ಕಲಾವಿದರೊಂದಿಗೆ ವೇದಿಕೆಯನ್ನು ಹಂಚಿಕೊಂಡರು. ಡಿಕೆ ಪಟ್ಟಮಾಳ್ ಅವರಂತಹ ಪ್ರಮುಖ ಗಾಯಕಿರ ಸಂಗೀತ ಕಚೇರಿಯಲ್ಲಿ ರಂಗನಾಯಕಿ ಅಮ್ಮಾಳ್ ಅವರು 1936 ರಲ್ಲಿ ಮೃದಂಗವನ್ನು ನುಡಿಸಿದರು.
ನಂತರದ ದಿನಗಳಳಲ್ಲಿ ಎಂ ಎಸ್ ಸುಬ್ಬಲಕ್ಷ್ಮಿ ಅವರ ತಾಯಿ ಮಧುರೈ ಷಣ್ಮುಗವಡಿವು ಅವರ ವೀಣಾ ವಾದನಕ್ಕೆ ಮೈಸೂರಿಗೆ ಬರಲು ಸಾಧ್ಯವಾಗದ ಕಾರಣ ಬದಲಿಗೆ ಮೈಸೂರು ಅರಮನೆಯಲ್ಲಿ ಮೊದಲ ಬಾರಿಗೆ ವೇದಿಕೆಯಲ್ಲಿ ಮೃದಂಗ ವಾದನ ಪ್ರದರ್ಶನ ನೀಡಿದರು. ಅವರ ಮೃದಂಗ ವಾದನದ ಕಲೆಗೆ ಎಲ್ಲರೂ ನಿಬ್ಬೆರಗಾದರು. ರಂಗನಾಯಕಿ ಅಮ್ಮಾಳ್ ಅವರು ಅರಿಯಕುಡಿ ರಾಮಾನುಜ ಅಯ್ಯಂಗಾರ್, ಟಿ ಆರ್ ಮಹಾಲಿಂಗಂ, ಮೈಸೂರಿನ ಪಿಟಿಲು ಚೌಡಯಾ ಮತ್ತು ವೀಣಾ ಧನಮ್ಮಾಳ್ ಸೇರಿದಂತೆ ಅನೇಕ ಸಂಗೀತ ದಿಗ್ಗಜರೊಂದಿಗೆ ಮೃದಂಗ ನುಡಿಸಿದ್ದಾರೆ.
ತನಿ ಆವರ್ತನಗಳು (ಸಂಗೀತದ ಸಮಯದಲ್ಲಿ (ಏಕವ್ಯಕ್ತಿ ಪ್ರದರ್ಶನ) ಮತ್ತು ಹೆಚ್ಚು ಸಂಕೀರ್ಣವಾದ ಜಾತಿಗಳು (ಬೀಟ್ ಮಾದರಿಗಳು) ಮತ್ತು ತೀರ್ಮಾನಗಳು (ಸಾಮಾನ್ಯವಾಗಿ ಮೂರು ಬಾರಿ ಆಡುವ ಅಂತ್ಯದ ಮಾದರಿ) ಸಮಯದಲ್ಲಿ ಸಂಕೀರ್ಣವಾದ ಲಯದ ಮಾದರಿಗಳನ್ನು ನೇಯ್ಗೆ ಮಾಡುವುದರ, ಮೂಲಕ ಅವರು ತನ್ನ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತಿದ್ದರು.
ಪುದುಕೋಟೈಗೆ ಸಮೀಪದ ತಿರುಚ್ಚರಾಪಳ್ಳಿಯ ಆಕಾಶವಾಣಿಯ ಕೇಂದ್ರದಿಂದ ಅವರ ಮೃದಂಗವಾದನ ನಿರಂತರ ಪ್ರಸಾರಗೊಳ್ಳುತ್ತಿದ್ದಂತೆ ಅವರ ಜನಪ್ರಿಯತೆ ಎಲ್ಲೆಡೆ ಹಬ್ಬಿತು. ರಂಗನಾಯಕಿ ಅವರಿಗೆ ದೇಶ ವಿದೇಶಗಳಿಂದ ಆಮಂತ್ರಣಗಳು ಬರತೊಡಗಿದವು. ಅವರು ಸಿಂಗಾಪುರ, ಮಲೇಷಿಯಾ, ಶ್ರೀಲಂಕಾ ರಾಷ್ಟ್ರಗಳಿಗೆ ಕುಟುಂಬ ಸದಸ್ಯರ ಜೊತೆಗೆ ಹೋಗಿ ಪ್ರದರ್ಶನ ನೀಡಿ ಬಂದರು.
1966 ರಲ್ಲಿ ಅವರು ತಿರುಪತಿಯ ಪದ್ಮಾವತಿ ಸಂಗೀತದ ಕಾಲೇಜಿನಲ್ಲಿ ಅಧ್ಯಾಪಕರಾಗಿ .ನೇಮಕಗೊಂಡರು. ಅವರು ಏಳು ವರ್ಷಗಳ ನಂತರ ಮಧುರೈನ ಶ್ರೀ ಸದ್ಗುರು ಸಂಗೀತ ಸಭಾದಲ್ಲಿ ಅರೆಕಾಲಿಕ ಮೃದಂಗ ಶಿಕ್ಷಕಿಯಾಗಿ ಕೆಲಸ ಮಾಡಿದರು. ಅವರು ತಿರುಚ್ಚಿಯ ಆಕಾಶವಾಣಿಯ ಕೇಂದ್ರದಲ್ಲಿ ಕಾರ್ಯಕ್ರಮ ನೀಡುವುದರ ಜೊತೆಗೆ ಕಲಾವಿದರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದರು.
ಅವರು ತಿರುಪತಿಯ ಪದ್ಮಾವತಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾಗ ಭರತನಾಟ್ಯ ವಿದ್ಯಾರ್ಥಿಯಾಗಿದ್ದ ಗೊಟ್ಟುವಾದ್ಯಂ ವಾದಕಿ ಉಷಾ ವಿಜಯಕುಮಾರ್ ಎಂಬುವರು ತಮ್ಮ ಗುರುವಿನ ಬಗ್ಗೆ ‘’, ರಂಗನಾಯಕಿ ಅಮ್ಮಾಳ್ ತನ್ನ ಸಣ್ಣ ನಿಲುವಿನ ಹೊರತಾಗಿಯೂ ಪ್ರಭಾವಶಾಲಿ ಉಪಸ್ಥಿತಿಯನ್ನು ಹೇಗೆ ಹೊಂದಿದ್ದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ. ಅವರು ಸಂಕೀರ್ಣವಾದ ಲಯದ ಲೆಕ್ಕಾಚಾರಗಳನ್ನು ಸುಲಭವಾಗಿ ಓದಬಲ್ಲವರಾಗಿದ್ದರು. ಅವರಿಗೆ ನಟನೆಗಿಂತ ಕಲಿಸುವುದರಲ್ಲಿಯೇ ಹೆಚ್ಚು ಆಸಕ್ತಿ ಇತ್ತು. ಮೃದಂಗವಲ್ಲದೆ ಭರತನಾಟ್ಯವನ್ನೂ ಕಲಿಸಿದರು.
ರಂಗನಾಯಕಿ ಅಮ್ಮಾಳ್ ಅವರು ತಮ್ಮ ವಿದೇಶಿ ವಿದ್ಯಾರ್ಥಿನಿ ಕ್ಯಾರೋಲಿನ್ ಸೇರಿದಂತೆ ಅವರ ಹಲವಾರು ವಿದ್ಯಾರ್ಥಿಗಳಿಗೆ ಅರಂಗೇಟ್ರಂ ಆಯೋಜಿಸಿದ್ದರು’’ ಎಂಬುದಾಗಿ ತುಂಬು ಹೃದಯದಿಂದ ಸ್ಮರಿಸಿದ್ದಾರೆ. ರಂಗನಾಯಕಿ ಅಮ್ಮಾಳ್ ಅವರು ಸೌದಾಮಿನಿ ರಾವ್ ಸೇರಿದಂತೆ ಅನೇಕ ವಿದ್ಯಾರ್ಥಿಗಳಿಗೆ ಭರತನಾಟ್ಯ ಕಲಿಸಿದರು.
ತಮ್ಮ ಇಡೀ ಜೀವನವನ್ನು ಮೃದಂಗ ವಾದನ ಮತ್ತು ಭರತನಾಟ್ಯ ಶಿಕ್ಷಣಕ್ಕೆ ಮೀಸಲಾಗಿಟ್ಟಿದ್ದ ರಂಗನಾಯಕಿ ಅಮ್ಮಾಳ್ ತಮ್ಮ ಎಂಬತ್ತೆಂಟನೆಯ ವಯಸ್ಸಿನಲ್ಲಿ ಅಂದರೆ 1998 ರ ಆಗಸ್ಟ್ ಹದಿನೈದರೆಂದು ನಿಧನರಾದರು. ಅವರ ಹಿರಿಯ ಸಹೋದರಿ ಶಿವ ಬೃಂದಾದೇವಿಯವರ ದತ್ತು ಪುತ್ರ ಹಾಗೂ ದಯಾನಂದ ಚಂದ್ರಶೇಖರ ಸ್ವಾಮೀಜಿಯವರು ತಮ್ಮ ಚಿಕ್ಕಮ್ಮನ ಬಗ್ಗೆ ಸ್ಮರಿಸಿಕೊಳ್ಳುತ್ತಾ, ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಅವರು ಮೃದಂಗ ವಾದನ ಪ್ರದರ್ಶನವನ್ನು ನಿಲ್ಲಿಸಿದ್ದರು. ಆದರೆ, ಹದಿನಾಲ್ಕು ವರ್ಷಗಳ ನಂತರ ನನ್ನ ವಿವಾಹದ ಸಂದರ್ಭದಲ್ಲಿ ಪ್ರದರ್ಶನ ನೀಡಿ ಸಾವಿರಾರು ಪ್ರೇಕ್ಷಕರನ್ನು ರಂಜಿಸಿದರು ಎಂದು ಅವರ ಮರಣದ ಸಮಯದಲ್ಲಿ ಚಿಕ್ಕಮ್ಮನನ್ನು ನೆನಪಿಸಿಕೊಂಡಿದ್ದರು.
1972 ರಲ್ಲಿ ತಮಿಳು ಸರ್ಕಾರವು ರಂಗನಾಯಕಿ ಅಮ್ಮಾಳ್ ಅವರಿಗೆ ಪ್ರತಿಷ್ಠಿತ ಕಲೈ ಮಾಮಣಿ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಜೊತೆಗೆ ಅವರ ನಿಧನಾನಂತರ ಟಿ.ಎಸ್. ರಂಗನಾಯಕಿ ಅಮ್ಮಾಳ್ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿ, ಪ್ರತಿ ವರ್ಷ ಮೃದಂಗ ವಾದಕರಿಗೆ ನೀಡುತ್ತಾ ಬಂದಿದೆ.
ಜಗದೀಶ್ ಕೊಪ್ಪ.


.

ಬುಧವಾರ, ನವೆಂಬರ್ 1, 2023

ಭೂಮಿ ಎಂಬ ನೆಲದ ಮೇಲಿನ ನರಕ

 


 


ಅಕ್ಟೋಬರ್ ಎರಡನೆಯ ವಾರ ಜಾಗತಿಕ ಹಸಿವಿನ ಸೂಚ್ಯಂಕದ ವರದಿಯು ಬಿಡುಗಡೆಯಾಗಿದೆಜಾಗತಿಕವಾಗಿ 125 ರಾಷ್ಟ್ರಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಜಗತ್ತಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ ಪ್ರಬಲ ಆರ್ಥಿಕ ರಾಷ್ಟ್ರ ಎಂಬ ಹುಸಿ ಖ್ಯಾತಿಯನ್ನು ಹೊಂದಿರುವ ಭಾರತದ ಸ್ಥಾನ 111 ನೇ ಸ್ಥಾನಕ್ಕೆ ಕುಸಿದಿದೆ.ಕಳೆದವರ್ಷ 107ನೇಸ್ಥಾನದಲ್ಲಿದ್ದ ಭಾರತವು ನೆರೆಯ ನೇಪಾಳ ( 69ನೇ ಸ್ಥಾನಬಾಂಗ್ಲಾ(81 ನೇ ಸ್ಥಾನಮತ್ತು ಪಾಕಿಸ್ತಾನ( 102 ನೇ ಸ್ಥಾನ ರಾಷ್ಟ್ರಗಳಿಗಿಂದ ಶೋಚನೀಯ ಸ್ಥಿತಿಯಲ್ಲಿದೆಜಾಗತಿಕವಾಗಿ ಅರ್ಥಶಾಸ್ತ್ರಜ್ಞರ ನೇತೃತ್ವದಲ್ಲಿ ನಡೆಯುವ  ಸಮೀಕ್ಷೆಯನ್ನು ಭಾರತೀಯ ಜನತಾ ಪಕ್ಷದ ವಿರೋಧಿ ಪಕ್ಷಗಳಾದ  ಕಾಂಗ್ರೇಸ್ಸಿ.ಪಿ..( ಎಂ), ತೃಣಮೂಲ ಕಾಂಗ್ರೇಸ್ ಅಥವಾ ಡಿ.ಎಂ.ಕೆ  ಪಕ್ಷ  ಅಥವಾ ಅದರ ಕಾರ್ಯಕರ್ತರು ನಡೆಸುವುದಿಲ್ಲ.

ಜನಸಾಮಾನ್ಯರಿಗೆ ಅರ್ಥವಾಗುವ ಭಾರತದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯು ಕೇಂದ್ರದಲ್ಲಿ ನಮ್ಮನ್ನಾಳುವ ಜನಪ್ರತಿನಿಧಿಗಳಿಗೆ ಈಗ ಅರ್ಥವಾಗುವುದಿಲ್ಲ. ಹಸಿವು, ಬಡತನ, ಅಪೌಷ್ಟಿಕತೆ, ಶಿಕ್ಷಣ, ಆರೋಗ್ಯ, ನಿರುದ್ಯೋಗ, ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಇವೆಲ್ಲವೂ ಜಾಗತಿಕ ಮಟ್ಟದಲ್ಲಿ ಶೋಚನೀಯ ಸ್ಥಿತಿಯಲ್ಲಿವೆ.  ಸಂಘಪರಿವಾರದ ಪುಂಗಿದಾಸರ ದೃಷ್ಟಿಕೋನದಲ್ಲಿ ವಿಶ್ವಗುರು ಎಂದು ಅವರ ಪಾಲಿಗೆ ಆರಾಧ್ಯ ದೈವವಾಗಿರುವ  ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿಯ ಪರಿಕಲ್ಪನೆ ಮತ್ತು ಯೋಜನೆಗಳನ್ನು ಸಹಿಸಿಕೊಳ್ಳಲಾಗದ ಸಂಸ್ಥೆಗಳು ಬಿಡುಗಡೆ ಮಾಡುವ ಸುಳ್ಳಿನ ಸಮೀಕ್ಷೆ ಎಂಬ ನಂಬಿಕೆ ಬೆಳೆದು ಬಂದಿದೆ. .

ಜಾಗತಿಕ ಬಡತನದಲ್ಲಿ ಇತ್ತೀಚೆಗಿನ ದಿನಗಳಲ್ಲಿ ಭಾರತದಲ್ಲಿ ನಾಲ್ಕು ಕೋಟಿ ಇಪ್ಪತ್ತು ಲಕ್ಷದಷ್ಟು ಜನತೆ ಬಡತನದ ರೇಖೆಯಿಂದ ಹೊರಬಂದಿದ್ದಾರೆ. ಬಡತನದ ಮಾನದಂಡಕ್ಕೆ ಜಾಗತಿಕ ಮಟ್ಟದಲ್ಲಿ ಆಯಾ ಪ್ರಾದೇಶಿಕ ಅಥವಾ ರಾಷ್ಟ್ರಕ್ಕೆ ಅನುಗುಣವಾಗಿ ಪ್ರಮಾಣವನ್ನು ನಿಗದಿ ಪಡಿಸಲಾಗಿದೆ. ಭಾರತವೂ ಸೇರಿದಂತೆ ಆಗ್ನೆಯ ಏಷ್ಯಾ ರಾಷ್ಟ್ರಗಳಲ್ಲಿ ದಿನವೊಂದಕ್ಕೆ ಕನಿಷ್ಟ 140 ರೂಪಾಯಿ ಸಂಪಾದಿಸುವ ವ್ಯಕ್ತಿಯನ್ನು  ಬಡತನದ ರೇಖೆ ದಾಟಿದ್ದಾನೆ ಎಂದು ಹೇಳಲಾಗುತ್ತದೆ. ಆದರೆ, 2020 ರಲ್ಲಿ ಜಗತ್ತಿನಾದ್ಯಂತ ಸಂಭವಿಸಿದ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಬಡತನ ವ್ಯಾಖ್ಯಾನ ಬದಲಾಗಿದೆ. ಅವಶ್ಯಕ ವಸ್ತುಗಳ ಬೆಲೆಗಳು ವಿಶೇಷವಾಗಿ ಅಕ್ಕಿ,ಬೇಳೆ, ಗೋಧಿ, ತರಕಾರಿ ಹಾಗೂ ಅಡುಗೆ ಎಣ್ಣೆ ಬೆಲೆಗಳು ಗಗನಕ್ಕೇರಿವೆ ಈ ಸ್ಥಿತಿಯಲ್ಲಿ ದಿನದ 140 ರೂಪಾಯಿಗಳ  ಸಂಪಾದನೆಯಲ್ಲಿ ಕೂಲಿಕಾರನ ಒಂದು ಸಣ್ಣ ಕುಟುಂಬ ಜೀವಿಸಬಹುದು ಎಂಬುದು ನಗೆಪಾಟಲಿನ ಸಂಗತಿ.

ಈ ಕಾರಣದಿಂದಾಗಿ ಇತ್ತೀಚೆಗಿನ ವರದಿಯ ಪ್ರಕಾರ ಭಾರತದ ಜನಸಂಖ್ಯೆಯ ಶೇಕಡ 22 ರಷ್ಟು ಅಂದರೆ, ಸುಮಾರು 44 ಕೋಟಿ ಜನರು ಬಡತನದಿಂದ ನರಳುತ್ತಿದ್ದಾರೆ. ಇದು ವಾಸ್ತವಕ್ಕೆ ತೀರಾ ಹತ್ತಿರವಾಗಿದೆ.  ಮಕ್ಕಳ ಅಪೌಷ್ಟಿಕತೆಯ ಪ್ರಮಾಣ ಅತಿ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಶೇಕಡಾ 18.7 ರಷ್ಟಿದೆ. ಭಾರತದಲ್ಲಿ ವರ್ಷವೊಂದಕ್ಕೆ ಹನ್ನೆರೆಡು ತಿಂಗಳು ತುಂಬುವ ಮುನ್ನವೇ ಐದರಿಂದ ಎಂಟು ಲಕ್ಷ ಮಕ್ಕಳು ಸಾವನ್ನಪ್ಪುತ್ತಿದ್ದರೆ, ಹೆರಿಗೆ ಸಮಯದಲ್ಲಿ ಒಂದೂವರೆ ಲಕ್ಷ ತಾಯಂದಿರು ಮರಣವನ್ನಪ್ಪುತ್ತಿದ್ದಾರೆ. ಇದು ನಮ್ಮ ಕಣ್ಣೆದುರುಗಿನ ನೈಜ ಭಾರತದ ಸ್ಥಿತಿ.

ಮನುಕುಲದ ಕಾಳಜಿಯನ್ನು ತಮ್ಮ ಬದುಕಿನ ಮುಖ್ಯ ಗುರಿಯಾಗಿರಿಸಿಕೊಂಡಿರುವ ಜಗತ್ತಿನ ಹಲವಾರು ರಾಷ್ಟ್ರಗಳ ಆರ್ಥಿಕ ತಜ್ಞರು, ಹವಾಮಾನ ತಜ್ಞರು ಮತ್ತು ಆರೋಗ್ಯ ತಜ್ಞರು ಹೀಗೆ ಹಲವು ರಂಗಗಳ ನಿಪುಣರು 2020 ರಲ್ಲಿ ಕ್ಲಬ್ ಆಪ್ ರೋಮನ್ ಎಂಬ ಸಂಘಟನೆಯನ್ನು ರಚಿಸಿಕೊಂಡು, ಈ ಆಧುನಿಕ ಜಗತ್ತು ಸಾಗುತ್ತಿರುವ ಆತ್ಮಹತ್ಯೆಯ ಮಾರ್ಗವನ್ನು ವಿಶ್ಲೇಷಣೆಯ ಮೂಲಕ ನಮ್ಮ ಮುಂದಿಟ್ಟಿದ್ದಾರೆ. ಸತತ ಮೂರು ವರ್ಷಗಳ ಕಾಲ ಅಮೇರಿಕಾ, ಯುರೋಪ್, ಏಷ್ಯಾ ಮತ್ತು ಆಫ್ರಿಕಾ ಖಂಡದ ರಾಷ್ಟ್ರಗಳ ತಜ್ಞರು ಸಭೆ ಸೇರಿ ಹಲವಾರು ವಾದ, ಸಂವಾದಗಳ ಮೂಲಕ ಒಂದು ವರದಿಯನ್ನು ಸಿದ್ಧಪಡಿಸಿದ್ದಾರೆ. 2022 ರ ಸೆಪ್ಟಂಬರ್ ನಲ್ಲಿ ಸಿದ್ಧವಾದ ಈ ವರದಿ 2023 ರ ಮಾರ್ಚ್ ತಿಂಗಳಿನಿಂದ ಜಗತ್ತಿನಾದ್ಯಂತ ಪುಸ್ತಕ ರೂಪದಲ್ಲಿ ಎಲ್ಲರಿಗೂ ದೊರೆತಿದೆ. ‘’ಭೂಮಿ ಎಲ್ಲರಿಗಾಗಿ; ಬದುಕುಳಿಯುವ ಮಾನವೀಯತೆಗಾಗಿ ಮಾರ್ಗದರ್ಶನ’’ ( ಅರ್ಥ್ ಫಾರ್ ಎವರಿಬಡಿ: ದ ಸರ್ವವೈಲ್  ಗೈಡ್ ಫಾರ್ ಹುಮ್ಯಾನಿಟಿ) ಎಂಬ ಶೀರ್ಷಿಕೆಯ 208 ಪುಟಗಳ ಈ ವರದಿಯನ್ನು ಭಾರತದ ಅರ್ಥಶಾಸ್ತ್ರಜ್ಞೆಜಯತಿ ಘೋಷ್ ಸೇರಿದಂತೆ ( ಇವರು ದೆಹಲಿಯ ಜವಹರಲಾಲ್ ವಿ.ವಿ.ಯಲ್ಲಿ ಅಭಿವೃದ್ಧಿ ಅರ್ಥಶಾಸ್ತ್ರದ ಮುಖ್ಯಸ್ಥೆಯಾಗಿದ್ದರು) ಆರು ಮಂದಿ ತಜ್ಞರು  ರಚಿಸಿದ್ದಾರೆ.

ಕೈಗಾರಿಕೆಯ ಕ್ರಾಂತಿಯ ನಂತರ ಮುನ್ನೆಲೆಗೆ ಬಂದ ಬಂಡವಾಳ ಶಾಹಿ ವ್ಯವಸ್ಥೆಯು ಕಾಲಘಟ್ಟಕ್ಕೆ ತಕ್ಕಂತೆ ಅನೇಕ ಅವತಾರಗಳನ್ನುತಾಳಿತು.   1990 ರಲ್ಲಿ ಜಾಗತೀಕರಣ ಹೆಸರಿನಲ್ಲಿ ತಲೆ ಎತ್ತಿದ ಬಂಡವಾಳ ಶಾಹಿ ವ್ಯವಸ್ಥೆ ಜಗತ್ತಿನಾದ್ಯಂತ ಶ್ರೀಮಂತರನ್ನ ಸೃಷ್ಟಿಸುತ್ತಿರುವ ಇತಿಹಾಸವನ್ನು ಸಹ ಈ ವರದಿ ಒಳಗೊಂಡಿದೆ. ಕಾರ್ಪೋರೇಟ್ ಹೆಸರಿನಲ್ಲಿ ಜಗತ್ತಿನಾದ್ಯಂತ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ರಾಷ್ಟ್ರಗಳನ್ನ ತಮ್ಮ ಹಣದ ಥೈಲಿಯಿಂದ ಕುಣಿಸುತ್ತಿರುವ ಶ್ರೀಮಂತರು ಇಂದು ಜಗತ್ತಿನಲ್ಲಿ ಕೇವಲ ಶೇಕಡಾ ಐದರಷ್ಟು ಮಂದಿ ಮಾತ್ರ ಇದ್ದಾರೆ. ಆದರೆ, ಇವರು  ಜಗತ್ತಿನ ಪಾಕೃತಿಕ ಕೊಡುಗೆಗಳನ್ನು ಶೇಕಡಾ 95 ರಷ್ಟುನ್ನು ಬಳಸುತ್ತಿದ್ದಾರೆ. ಈ ಭೂಮಿಯ ಪ್ರತಿಯೊಂದು ಜೀವಿಗೂ ಪುಕ್ಕಟೆಯಾಗಿ ದೊರೆಯಬೇಕಿದ್ದ ನೀರು, ಗಾಳಿ, ಎಲ್ಲವೂ  ಈಗ ಕಲುಷಿತಗೊಂಡಿವೆ.

ಜಗತ್ತಿನಾದ್ಯಂತ ರಾಷ್ಟ್ರಗಳು ಜಾಗತೀಕರಣ ವ್ಯವಸ್ಥೆಗೆ ತೆರೆದುಕೊಂಡ ನಂತರ ಸರ್ಕಾರದಿಂದ ದೊರೆಯಬೇಕಾದ ಮೂಲಭೂತ ಅವಶ್ಯಕತೆಗಳು ಎನಿಸಿಕೊಂಡ ಆಹಾರ, ವಸತಿ, ಆರೋಗ್ಯ, ಶಿಕ್ಷಣ ಎಲ್ಲವುಗಳಿಂದ ನಾಗರೀಕರು  ವಂಚಿತರಾಗಿದ್ದಾರೆ.  ಈ ಎಲ್ಲಾ ಕ್ಷೇತ್ರಗಳು ಉಳ್ಳವರು ಅಥವಾ ಉದ್ಯಮಿಗಳ ಪಾಲಾಗಿವೆ.  ಕಾರ್ಖಾನೆ ಅಥವಾ ಇತರೆ ಉದ್ದಿಮೆಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರು ಈಗ ಸಂಘಟಿತರಾಗುವುದು ಅಪರಾಧ ಎಂಬಂತಾಗಿದೆ. ಅವರುಗಳ ಉದ್ಯೋಗಕ್ಕೆ ಯಾವುದೇ ಭದ್ರತೆ ಇಲ್ಲ. ದುಡಿಮೆಯ ಅವಧಿಯನ್ನು ಎಂಟು ಗಂಟೆಯಿಂದ ಹನ್ನೆರೆಡು ಗಂಟೆಗೆ ಅವಧಿಗೆ ವಿಸ್ತರಿಸುವ ಯೋಜನೆ ಜಾರಿಯಲ್ಲಿದೆ. ಲಿಂಗ ಅಸಮಾನತೆಯ  ನಡುವೆ ಈ ನೆಲದ ಮೇಲಿನ ಹೆಣ್ಣು ಜೀವಕ್ಕೆ ಇನ್ನೂ ಬಿಡುಗಡೆ ದೊರೆತಿಲ್ಲ. ಹವಾಮಾನ ಬದಲಾವಣೆ ಏಕಕಾಲಕ್ಕೆ ಎಲ್ಲರನ್ನೂ ಸಂಕಷ್ಟಕ್ಕೆ ದೂಡಿದೆ.

ಬಡತನದ ಕಾರಣಗಳು ರಾಷ್ಟ್ರ , ಪ್ರದೇಶ ಮತ್ತು ಜಾಗತಿಕ ಮಟ್ಟದಲ್ಲಿ ಇತರ ರಾಷ್ಟ್ರಗಳಿಗೆ ಹೋಲಿಸಿದಾಗ  ಬದಲಾವಣೆಗಳನ್ನು ನಾವು ಕಾಣಬಹುದು  ಆದರೂ ಸಹ ಹಲವು ಕಾರಣಗಳಲ್ಲಿ ಸಾಮಾನ್ಯತೆ ಇದೆ. ಈ ಕಾರಣಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸೂಕ್ಷ್ಮ ಮತ್ತು ಸ್ಥೂಲ ಮಟ್ಟದಲ್ಲಿ ಕೆಲವು ಅಂಶಗಳನ್ನು ಒಳಗೊಂಡಂತೆ ತಾತ್ವಿಕ ದೃಷ್ಟಿಕೋನಗಳು ಮತ್ತು ವಿಶೇಷವಾಗಿ ಐತಿಹಾಸಿಕ ದೃಷ್ಟಿಕೋನಗಳನ್ನು ನಾವು  ಪರಿಗಣಿಸಬಹುದು.

ಈ ಜಗತ್ತಿನ ಬಹುತೇಕ ಕಡೆ ಭೂಮಿಯಲ್ಲಿ ದುಡಿದು ತಿನ್ನುತ್ತಿದ್ದ ರೈತನಿಗೆ ಫಸಲು ಕೈಗೆ ಸಿಗುತ್ತದೆ ಎಂಬ ಭರವಸೆಯಿಲ್ಲ. ಕೃಷಿಯನ್ನು ನಂಬಿಕೊಂಡಿದ್ದ ಲಕ್ಷಾಂತರ ಕೂಲಿಕಾರ್ಮಿಕರು ಉದ್ಯೋಗ ಅರೆಸಿಕೊಂಡು ನಗರದತ್ತ ವಲಸೆ ಹೋಗುತ್ತಿದ್ದಾರೆ. ಶುದ್ಧವಾದ ಕುಡಿಯುವ ನೀರು, ವಸತಿ, ಶೌಚಾಲಯ ಇಲ್ಲದ ವ್ಯವಸ್ಥೆಯೊಳಗೆ ಕೊಳಚೆಗೇರಿ ಎಂಬ ಹಂದಿಗೂಡಿನಂತ ಪುಟ್ಟ ಗುಡಿಸಲಿನಲ್ಲಿ ಬದುಕುತ್ತಾ ಸಾವಿನ ಮನೆಯ ಕದ ತಟ್ಟುತ್ತಿದ್ದಾರೆ. ವಿದ್ಯತ್ ಇಲ್ಲದ ಕಾರಣ ನಲವತ್ತೈದು ಡಿಗ್ರಿ ಉಷ್ಣಾಂಷದಲ್ಲಿ ಮಲಗುತ್ತಾ, ಸೊಳ್ಳೆಗಳಿಂದ ಕಡಿಸಿಕೊಳ್ಳುತ್ತಾ, ಖಾಸಾಗಿ ಆಸ್ಪತ್ರೆಗಳ ಶುಲ್ಕ ಭರಿಸಲಾಗದೆ ತಮ್ಮ ಮಕ್ಕಳ ಹಾಗೂ ತಮ್ಮ ಜೀವಗಳನ್ನು ಆಧುನಿಕ ಜಗತ್ತಿನ ಭರಾಟೆಗೆ ಬಲಿ ಕೊಡುತ್ತಿದ್ದಾರೆ. ಈಗ ಮರಣ ಹೊಂದಿದವರ ಬಗ್ಗೆ ಯೋಚಿಸುವ ವ್ಯವಧಾನ ಈ ಜಗತ್ತಿಗೆ ಇಲ್ಲವಾಗಿದೆ. ಈಗ ಏನಿದ್ದರೂ ಕಾಸಿದ್ದವನಿಗೆ ಮತ್ತು ಬದುಕುವ ಕಲೆ ಗೊತ್ತಿದ್ದವನಿಗೆ ಮಾತ್ರ ಈ ಜಗತ್ತು ಎಂಬ ನಂಬಿಕೆ ಬಲವಾಗುತ್ತಿದೆ. ಕಡಿಮೆ ಶುದ್ಧ ಗಾಳಿ, ಸೀಮಿತ ಕುಡಿಯುವ ನೀರು ಮತ್ತು ಕಳಪೆ ನೈರ್ಮಲ್ಯವನ್ನು ಸೃಷ್ಟಿಸುವ ಮೂಲಕ ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತಿರುವ ಆಧುನಿಕ  ಜಗತ್ತಿನಲ್ಲಿ ಬಡ ಸಮುದಾಯಗಳು ಹೆಚ್ಚು ಬಳಲುತ್ತಿದ್ದಾರೆ

ಬಡತನದ ಕಾರಣಗಳ ಮೇಲೆ ವರ್ತನೆಯ, ರಚನಾತ್ಮಕ ಮತ್ತು ರಾಜಕೀಯ ಸಿದ್ಧಾಂತಗಳಿವೆ: "ನಡವಳಿಕೆಯ ಸಿದ್ಧಾಂತಗಳು ಪ್ರೋತ್ಸಾಹ ಮತ್ತು ಸಂಸ್ಕೃತಿಯಿಂದ ನಡೆಸಲ್ಪಡುವ ವೈಯಕ್ತಿಕ ನಡವಳಿಕೆಗಳ ಮೇಲೆ ಕೇಂದ್ರೀಕರಿಸುತ್ತವೆ. ರಚನಾತ್ಮಕ ಸಿದ್ಧಾಂತಗಳು ಜನಸಂಖ್ಯಾ ಮತ್ತು ಕಾರ್ಮಿಕ ಮಾರುಕಟ್ಟೆ ಸಂದರ್ಭವನ್ನು ಒತ್ತಿಹೇಳುತ್ತವೆ, ಇದು ನಡವಳಿಕೆ ಮತ್ತು ಬಡತನ ಎರಡನ್ನೂ ಉಂಟುಮಾಡುತ್ತದೆ. ರಾಜಕೀಯ ಸಿದ್ಧಾಂತಗಳು ಆ ಶಕ್ತಿಯನ್ನು ಪ್ರತಿಪಾದಿಸುತ್ತವೆ. ಮತ್ತು ಸಂಸ್ಥೆಗಳು ನೀತಿಯನ್ನು ಉಂಟುಮಾಡುತ್ತವೆ, ಇದು ಪರೋಕ್ಷವಾಗಿ  ಬಡತನವನ್ನು ಸೃಷ್ಟಿ ಮಾಡುತ್ತದೆ .

ತಾತ್ವಿಕ ದೃಷ್ಟಿಕೋನದಲ್ಲಿ ಹೇಳುವುದಾದರೆ,   ಸಮಾಜವಾದಿ ದೃಷ್ಟಿಕೋನವು ಬಡತನವನ್ನು ಬಂಡವಾಳ, ಸಂಪತ್ತು ಮತ್ತು ಸಂಪನ್ಮೂಲಗಳ ಅಸಮರ್ಪಕ ಹಂಚಿಕೆಗೆ ಕಾರಣವೆಂದು ಹೇಳುತ್ತದೆ, ಅದು "ಶ್ರೀಮಂತ ಗಣ್ಯರು" ಅಥವಾ "ಹಣಕಾಸಿನ ಶ್ರೀಮಂತರು" ಮತ್ತು ದೊಡ್ಡ ಸಮುದಾಯದ ಹಿತಾಸಕ್ತಿಗಳನ್ನು ಬೆಂಬಲಿಸುತ್ತದೆ. ಸಮಾಜವಾದಿ ಸಂಪ್ರದಾಯವು ಬಡತನಕ್ಕೆ ಪರಿಹಾರವಾಗಿ ಸಂಪತ್ತಿನ ಮರು-ಹಂಚಿಕೆಗೆ ಒತ್ತಾಯಿಸುತ್ತದೆ. ಮೂಲಭೂತವಾಗಿ, "ಆರ್ಥಿಕತೆಯ ಪ್ರಮುಖ ಮಾನದಂಡಗಳನ್ನು" ಖಾಸಗೀಕರಣಗೊಳಿಸಬೇಕು ಮತ್ತು ದುಡಿಯುವ ಸಮುದಾಯ-ವರ್ಗಕ್ಕೆ ಹಂಚಬೇಕು, ಅದು "ಶ್ರೀಮಂತ ಗಣ್ಯರ ಬದಲಿಗೆ ಸಾಮಾನ್ಯ ಜನರ ಹಿತಾಸಕ್ತಿಗಳನ್ನ ಪರಿಗಣಿಸಬೇಕು ಎಂಬುದು ಸಮಾಜವಾದಿ ಆರ್ಥಿಕ ದೃಷ್ಟಿಕೋನದ ತಿರುಳಾಗಿದೆ.

ಮಾರ್ಕ್ಸ್‌ವಾದಿ ಸಿದ್ಧಾಂತದ ಪ್ರಕಾರ, ವರ್ಗ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಅಸಮಾನತೆಯು ಬಡತನವನ್ನು ಪೋಷಿಸುತ್ತದೆ; ಎರಡೂ ಘಟಕಗಳು "ಬಂಡವಾಳಶಾಹಿ ಉತ್ಪಾದನಾ ವಿಧಾನ" ದಿಂದ "ಅಸಮಾನತಾವಾದಿ ಸಾಮಾಜಿಕ ರಚನೆಗಳಿಗೆ" ಬಂಡವಾಳಶಾಹಿ ವ್ಯವಸ್ಥೆ ಕೊಡುಗೆ ನೀಡುತ್ತವೆ. ಮಾರ್ಕ್ಸ್‌ವಾದಿಗಳು ಸಮಾಜದ ರಚನಾತ್ಮಕ ಸ್ವರೂಪವನ್ನು (ಬಡತನಕ್ಕೆ ಕಾರಣ) ಸಮಾಜದಲ್ಲಿನ ಬಡತನವನ್ನು ನಿವಾರಿಸಲು ಬದಲಾಯಿಸಬೇಕೆಂದು ನಂಬುತ್ತಾರೆ. .

ಐತಿಹಾಸಿಕ ದೃಷ್ಟಿಕೋನದಿಂದ ಬಡತನದ ಕೆಲವು ಪ್ರಮುಖ ಕಾರಣಗಳನ್ನು ಈ ಕೆಳಗಿನಂತೆ ಗುರುತಿಸಲಾಗಿದೆ:

ಆಸ್ತಿ ಮಾಲೀಕತ್ವದಲ್ಲಿ ಹೂಡಿಕೆ ಮಾಡಲು ಬಡ ಕುಟುಂಬಗಳ ಅಸಮರ್ಥತೆ. ಸೀಮಿತ ಹಾಗೂ ಕಳಪೆ ಗುಣಮಟ್ಟದ  ಶಿಕ್ಷಣವು ಕಡಿಮೆ ಅವಕಾಶಗಳಿಗೆ ಕಾರಣವಾಗುತ್ತದೆ. ಸಾಲಗಳ ವಿತರಣೆಯಲ್ಲಿ ಸೀಮಿತ ಅವಕಾಶ ಕೂಡ ಬಡತನಕ್ಕೆ ಕಾರಣವಾಗಿದೆ., ಕೆಲವು ಸಂದರ್ಭಗಳಲ್ಲಿ-ಅನುವಂಶಿಕ ಬಡತನವು ಸಹ  ಮೂಲಕ ಹೆಚ್ಚು ಬಡತನವನ್ನು ಸೃಷ್ಟಿಸುತ್ತದೆ. ಜನಾಂಗೀಯ ಅಲ್ಪಸಂಖ್ಯಾತರು, ಜನಾಂಗೀಯ ಜಾತಿಗಳು, ಬುಡಕಟ್ಟುಗಳು, ಮಹಿಳೆಯರು ಮತ್ತು ವಿಕಲಚೇತನರು ನ್ಯಾಯಯುತ ಆರ್ಥಿಕ ಉದ್ಯಮದಲ್ಲಿ ಭಾಗವಹಿಸುವುದರಿಂದ ಮತ್ತು ಸಂಸ್ಥೆಗಳು/ಮಾರುಕಟ್ಟೆಗಳಿಗೆ ಪ್ರವೇಶವನ್ನು ವ್ಯವಸ್ಥಿತವಾಗಿ ಹೊರಗಿಡುವುದು. ಈ ಹೊರಗಿಡುವಿಕೆಯು ಬಡತನದ ಚಕ್ರ ಮತ್ತು ನಿರಂತರತೆಯನ್ನು ಸೃಷ್ಟಿಸಿತು . ಇವುಗಳ ಜೊತೆಗೆ ಯುದ್ಧ, ಅಪರಾಧ ಮತ್ತು ಹಿಂಸಾಚಾರಗಳು ಬಡತನಕ್ಕೆ ಕೆಲವು ಪ್ರಾಥಮಿಕ ಕಾರಣಗಳಾಗಿವೆ.  ಕಳೆದ ಎರಡು ದಶಕಗಳ್ಲಿ ಹಲವಾರು  ರಾಷ್ಟ್ರಗಳಲ್ಲಿ  ರಾಜಕೀಯ ಹಿಂಸಾಚಾರ ಮತ್ತು ಸಂಘಟಿತ ಅಪರಾಧಗಳು ನಿರಂತರವಾಗಿ ನಡೆಯುತ್ತಿವೆ.  ಇದರ ಪರಿಣಾಮವಾಗಿ ಯುದ್ಧ, ಅಪರಾಧ ಮತ್ತು ಹಿಂಸಾಚಾರದ  ರಾಷ್ಟ್ರಗಳಲ್ಲಿ ಬಡತನದ ಮಟ್ಟವು ಎರಡು ಪಟ್ಟು ಹೆಚ್ಚಾಗಿದೆ.  ಹವಾಮಾನ ಬದಲಾವಣೆಯು ವಿಶೇಷವಾಗಿ ಹೆಚ್ಚು ಸಾಲ ಮಾಡಿರುವ  ರಾಷ್ಟ್ರಗಳಲ್ಲಿ: ಕೃಷಿ ಮತ್ತು ಆಹಾರ ಮೂಲಗಳನ್ನು ಮಿತಿಗೊಳಿಸುತ್ತದೆ.  ಬಡ ರಾಷ್ಟ್ರಗಳಲ್ಲಿ, ಸೀಮಿತ ಕೃಷಿ ಉತ್ಪನ್ನಗಳು/ಆಹಾರ ಉಳಿವಿಕೆಯ  ಸಂಪನ್ಮೂಲಗಳನ್ನು ತಗ್ಗಿಸುತ್ತದೆ,

ಹೆಚ್ಚು ಅಗತ್ಯ ಹಸ್ತಕ್ಷೇಪವಿಲ್ಲದೆ, ಹವಾಮಾನ ಬದಲಾವಣೆಯು 2030 ರ ಅಂತ್ಯದ  ವೇಳೆಗೆ ವಿಶ್ವದಾದ್ಯಂತ ಹತ್ತು ಕೋಟಿಗೂ  ಹೆಚ್ಚು ಜನರನ್ನು ಬಡತನಕ್ಕೆ ದೂಡಬಹುದು ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ. 2050 ರ ಹೊತ್ತಿಗೆ, ಲ್ಯಾಟಿನ್ ಅಮೇರಿಕಾ, ದಕ್ಷಿಣ ಏಷ್ಯಾ ಮತ್ತು ಆಫ್ರಿಕಾದಂತಹ ಪ್ರಾದೇಶಿಕ ಪ್ರದೇಶಗಳು ಅಂತ್ಯದ ಅಪಾಯಕಾರಿ ಸ್ಥಿತಿ ತಲುಪಿವೆ ಎಂದು ತಜ್ಞರು ಊಹಿಸಿದ್ದಾರೆ.  ಇವುಗಳ ಒಟ್ಟು ಪರಿಣಾಮವನ್ನು  ಈ ಭೂಮಿಯ ಮೇಲಿ ನ ಮಹಿಳೆಯರು ಮತ್ತು ಮಕ್ಕಳು ಅನುಭವಿಸಬೇಕಾಗಿದೆ. ಹಾಗಾಗಿ ಈಗ ಭೂಮಿಯೆಂಬುದು ಉಳ್ಳವರ ಪಾಲಿಗೆ ಸ್ವರ್ಗವಾಗಿ ಇಲ್ಲದವರ ಪಾಲಿಗೆ ನರಕವಾಗಿ ಮಾರ್ಪಟ್ಟಿದೆ.

ಚಿತ್ರ ಸೌಜನ್ಯ- ಉದಯ್ ಭಾನ್.

( ನವಂಬರ್  ಹೊಸತು  ಮಾಸಪತ್ರಿಕೆಯಲ್ಲಿ ಪ್ರಕಟವಾದ  ಬಹುಸಂಸ್ಕೃತಿ ಹೆಸರಿನ ಅಂಕಣ ಬರಹ)

ಡಾ.ಎನ್. ಜಗದೀಶ್ ಕೊಪ್ಪ

ಮಂಗಳವಾರ, ಅಕ್ಟೋಬರ್ 31, 2023

ಸುವರ್ಣ ಕರ್ನಾಟಕ ಸಂಭ್ರಮ ಮತ್ತು ಸವಾಲುಗಳು


 


ಸ್ವಾತಂತ್ರಾö್ಯ ನಂತರದ ಭಾರತದಲ್ಲಿ 1956 ರಿಂದ ಮೈಸೂರು ರಾಜ್ಯ ಎಂದು ಕರೆಸಿಕೊಳ್ಳುತ್ತಿದ್ದ ಕನ್ನಡನಾಡಿನ ಈ ನೆಲವು  ಸಮಸ್ತ ಕನ್ನಡಿಗರಿಗೆ ಸ್ಪೂರ್ತಿಯಾಗಬಲ್ಲ ಕರ್ನಾಟಕ ಎಂದು ನಾಮಕರಣವಾಗಿ ಇಂದಿಗೆ ಐವತ್ತು ವರ್ಷಗಳಾದವು1973   ನವಂಬರ್ ಒಂದರಂದು ಅಂದಿನ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಡಿ.ದೇವರಾಜ ಅರಸು ಅವರು ಮೈಸೂರು ರಾಜ್ಯವನ್ನು ‘’ಕರ್ನಾಟಕ’’ ಎಂದು ನಾಮಕರಣ ಮಾಡಿ ರಾಜ್ಯದ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆದರು.ಮೈಸೂರು ರಾಜ್ಯ ಎಂಬ ಹೆಸರಿನ ಕುರಿತಾಗಿ ಉತ್ತರ ಕರ್ನಾಟಕದ ಸಾಹಿತಿ ಮತ್ತು ಕಲಾವಿದರಿಗ ಅಸಮಾಧಾನವಿತ್ತುಸ್ವಾತಂತ್ರ್ಯ ಪೂರ್ವದ ಮೈಸೂರು ಸಂಸ್ಥಾನದ ಹೆಸರನ್ನು ಗಣರಾಜ್ಯವಾದ ನಂತರ ನಾಮಕರಣ ಮಾಡುವುದರ ಜೊತೆಗೆ ನಾಡಿನ ಅಭಿವೃದ್ಧಿಯ ಜೊತೆಗೆ ಸಾಹಿತ್ಯಕಲೆ ಇತ್ಯಾದಿ ಪ್ರಕಾರಗಳಲ್ಲಿ ಉತ್ತರ ಕರ್ನಾಟಕದ ಜನತೆಯನ್ನು ಕಡೆಗಣಿಸಲಾಗುತ್ತಿದೆ ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು

ವಾಸ್ತವವಾಗಿ ಅವರ ಮಾತುಗಳು ಪೂರ್ಣ ಸತ್ಯಾಂಶಗಳಿಂದ ಕೂಡಿರಲಿಲ್ಲ. ಏಕೆಂದರೆ, ಬಾಂಬೆ ಪ್ರೆಸಿಡೆನ್ಸಿ ಹಾಗೂ ಹೈದರಾಬಾದ್ ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದ ಉತ್ತರ ಕರ್ನಾಟಕ ( ಬಾಂಬೆ ಕರ್ನಾಟಕ) ಮತ್ತು ಹೈದರಾಬಾದ್ ಕರ್ನಾಟಕದ ಪ್ರದೇಶಗಳು ಅಭಿವೃದ್ಧಿಯಲ್ಲಿ ಹಿಂದುಳಿಯಲು ಕಾರಣ ಆಗಿನ ಆಡಳಿತ ವ್ಯವಸ್ಥೆ ಕಾರಣವಾಗಿತ್ತು. ಆದರೆ  ಮೈಸೂರು ಸಂಸ್ಥಾನವು ನಾಲ್ವಡಿ ಕೃಷ್ಣರಾಜ ಒಡೆಯರ್ ಎಂಬ ಅತ್ಯಂತ ಪ್ರಗತಿಶೀಲ ದೊರೆಯಿಂದಾಗಿ ಇಡೀ ಭಾರತದಲ್ಲಿ ಕೃಷಿ, ಕೈಗಾರಿಕೆ, ವಾಣಿಜ್ಯೋದ್ಯಮ, ಕಲೆ, ಸಾಹಿತ್ಯ ಮುಂತಾದ ಕ್ಷೇತ್ರಗಳಲ್ಲಿ ಇತರೆ ಸಂಸ್ಥಾನಗಳಿಗಿಂತ ಎತ್ತರದ ಸ್ಥಾನದಲ್ಲಿತ್ತು.

ಅರವತ್ತರ ದಶಕದಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ನಿಜಲಿಂಗಪ್ಪನವರ ಅವಧಿಯಲ್ಲಿ ಅಂದರೆ 1962  ರಲ್ಲಿ ಸಮಗ್ರ ರಾಜ್ಯದ ಅಭಿವೃದ್ಧಿಗೆ ಬುನಾದಿಯನ್ನು ಹಾಕಲಾಯಿತು. ನಂತರ 1972 ರಲ್ಲಿ ಮುಖ್ಯಮಂತ್ರಿ ಪದವಿಗೆ ಏರಿದ ದೇವರಾಜು ಅರಸು ಕಾಲದಲ್ಲಿ ಸಮಗ್ರ ಕನಾಟಕದ ಏಳಿಗೆಯ ಯುಗ ಆರಂಭವಾಯಿತು. ಪ್ರಾದೇಶಿಕತೆಯ ಅಸಮಾನತೆಯನ್ನು ತೊಡೆದು ಹಾಕುವುದರ ಜೊತೆಗೆ ಹಿಂದುಳಿದ ವರ್ಗ ಮತ್ತು ತಳ ಸಮುದಾಯದವರ ಧ್ವನಿಗೆ ಅರಸುರವರು ವೇದಿಕೆ ಒದಗಿಸಿಕೊಟ್ಟರು. ಜೊತೆಗೆ ಕರ್ನಾಟಕ ಎಂದು ನಾಮಕರಣ ಮಾಡಿದರು. ಇದೇ ಸಂದರ್ಭದಲ್ಲಿ ಪ್ರಸಿದ್ಧ ಕವಿ ಧಾರವಾಡದ ಚೆನ್ನವೀರ ಕಣವಿ ಅವರು ‘’ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’’ ಎಂಬ ಜನಪ್ರಿಯ ಘೋಷಣಾ ವಾಕ್ಯವನ್ನು ರಚನೆ ಮಾಡಿದರು.

ಕನ್ನಡ ನೆಲದ ಜೀವಾಳ ಮಾತ್ರವಲ್ಲದೆ, ಅದರ ಮಾಂಸ ಮತ್ತು ಮಜ್ಜೆಯಾದ ಕನ್ನಡ ಭಾಷೆಗೆ ನಾಡಿನ ನಾಹಿತಿಗಳು, ಕವಿಗಳು, ನಾಟಕಕಾರರು, ಕಲಾವಿದರು, ಗಾಯಕರು ಭಾಷೆಯು ಜೀವಂತವಾಗಿರುವಂತೆ ಹಾಗೂ ಹಸಿರಾಗಿರುವಂತೆ ನೋಡಿಕೊಂಡರುಕಳೆದ ಮೂರು ದಶಕಗಳ ಹಿಂದೆ ಜಾಗತೀಕರಣದ ಪ್ರಕ್ರಿಯೆಗೆ  ದೇಶ ಮಾತ್ರವಲ್ಲದೆ, ಇಡೀ ಜಗತ್ತೇ ತೆರೆದುಕೊಂಡಾಗ ದೇಶಗಳ ಮತ್ತು ಭಾಷೆಗಳ ನಡುವೆ ಇದ್ದ ಗಡಿರೇಖೆಗಳು ಅಳಿಸಿಹೋದವು. ಜಗತ್ತೇ ಒಂದು ಹಳ್ಳಿ ಎಂಬ ಕಲ್ಪನೆ ಮುಂಚೂಣಿಗೆ ಬರುತ್ತಿದ್ದಂತೆ ಒಂದೇ ಭಾಷೆ, ಒಂದೇ ರೀತಿಯ  ಸಂಸ್ಕೃತಿ ಮತ್ತು ರೀತಿ ನೀತಿಗಳು ಸದ್ದಿಲ್ಲದೆ ಮುನ್ನೆಲೆಗೆ ಬಂದವು. ಅಘೋಷಿತ ಯುದ್ದದಲ್ಲಿ ನಾವೆಲ್ಲಾ ಮೌನವಾಗಿ ಶರಣಾಗತರಾದ ನಂತರ ನಮ್ಮ ಮಾತೃ ಭಾಷೆ ಕನ್ನಡ ಮತ್ತು ಸಂಸ್ಕೃತಿಯ ಅಸ್ಮಿತೆಯನ್ನು ಉಳಿಸಿಕೊಳ್ಳುವ ಸವಾಲುಗಳು  ಈಗ ಎದುರಾಗಿವೆ.

ನಾವು ಬದುಕುತ್ತಿರುವ ಇಪ್ಪತ್ತೊಂದನೆಯ ಶತಮಾನದ ಕಾಲಘಟ್ಟದಲ್ಲಿ ಈವರೆಗೆ ನಾವು  ಕಾಪಾಡಿಕೊಂಡು ಬಂದಿದ್ದ ಆಹಾರ ಸಂಸ್ಕೃತಿ, ಭಾಷಾ ಸಂಸ್ಕೃತಿ ಹಾಗೂ ಬದುಕಿನ ಸಂಸ್ಕೃತಿ ಎಲ್ಲವೂ ಗಾಳಿಗೆ ತೂರಿ ಹೋದ ತರಗೆಲೆಗಳಂತಾಗಿವೆ. ಅನಕ್ಷರತೆ ತಾಂಡವಾಡುತ್ತಿದ್ದ ಶತಮಾನಗಳ ಹಿಂದಿನ ಕಾಲದಿಂದಲೂ ಅಕ್ಷರಸ್ಥರಾದ ವೈದಿಕ ಸಮುದಾಯದ ವೇದ, ಪುರಾಣಗಳ ಕಥನಗಳಿಗೆ ಪರ್ಯಾಯಾಗಿ ನಮ್ಮ ಜನಪದರು ಮೌಖಿಕ ಅಥವಾ ಅಲಿಖಿತ ಪಠ್ಯಗಳನ್ನು ತಲೆಮಾರಿನಿಂದ ತಲೆ ಮಾರಿಗೆ ಬಾಯಿಂದ ಬಾಯಿಗೆ ತಲುಪಿಸುವುದರ ಮೂಲಕ ನಮ್ಮ ಭಾಷಾ ಪರಂಪರೆಯನ್ನು ಜೀವಂತವಾಗಿಟ್ಟಿದ್ದರು. ನಾಟಕ, ಹರಿಕಥೆ, ಜಾನಪದ ಸಂಗೀತ, ಹಾಡುಗಳು, ಯಕ್ಷಗಾನ, ದೊಡ್ಡಾಟ ಹೀಗೆ ಅನೇಕ ಪ್ರಕಾರಗಳಲ್ಲಿ ಕನ್ನಡ ಭಾಷೆಯು  ದೇಶಿಯ ಪರಂಪರೆಯಲ್ಲಿ ಜೀವಂತವಾಗಿತ್ತು.

ಇಂದಿನ ದಿನಗಳಲ್ಲಿ ಇಂಗ್ಲೀಷ್ ಭಾಷೆಯು ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕುಳಿಯಲು ಇರುವ ಏಕೈಕ ಭಾಷೆ ಎಂಬುದು ಜಗತ್ತಿನಾದ್ಯಂತ ದಟ್ಟವಾಗಿ ಬೆಳೆದಿದೆ. ಮಾಹಿತಿ ತಂತ್ರಜ್ಞಾನದ ಮಾಧ್ಯಮದ ಭಾಷೆಯಾಗಿರುವ ಇಂಗ್ಲೀಷ್ ಭಾಷೆಯನ್ನು ಚೀನಾ, ಜಪಾನ್, ರಷ್ಯಾ, ಜರ್ಮನಿ ಹಾಗೂ ಪ್ರಾನ್ಸ್ ರಾಷ್ಟçಗಳೂ ಸಹ ಒಪ್ಪಿಕೊಂಡಿವೆ. ಜಗತ್ತಿನ ಸಂಪರ್ಕ ಭಾಷೆಯಾದ ಇಂಗ್ಲೀಷ್ ಇಂದು ದೇಶದ ಹಳ್ಳಿ ಹಳ್ಳಿಗೂ ಆವರಿಸಿಕೊಂಡಿದೆ. ಕಾರಣದಿಂದಾಗಿ ಇಂದಿನ ಬಹುತೇಕ ಇಪ್ಪತ್ತು ವರ್ಷದ ಒಳಗಿನ ಮಕ್ಕಳಿಗೆ ಕನ್ನಡ ಭಾಷೆ ಮಾತೃಭಾಷೆಯಾಗಿದ್ದರೂ ಸಹ ಅದು ಅವರ ಪಾಲಿಗೆ ಲೋಕೋಪಯೋಗಿ ಭಾಷೆಯಾಗಿಲ್ಲ. ಪ್ರಾಥಮಿಕ ಶಿಕ್ಷಣದಿಂದ ಅವರ ಪದವಿಯವರೆಗೂ ಅವರು ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಕಾರಣದಿಂದಾಗಿ ಕನ್ನಡದ ಸಾಹಿತ್ಯ ಅಥವಾ ಸಾಂಸ್ಕೃತಿಕ ಲೋಕಕ್ಕೆ ಅವರೆಲ್ಲರೂ ಅಪರಿಚಿತರಾಗಿದ್ದಾರೆ.

ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ ಸಾಹಿತ್ಯ ಲೋಕದ ಮುತ್ತು ರತ್ನಗಳು ಎನಿಸಿದ ಕುವೆಂಪು, ಬೇಂದ್ರೆ, ಶಿವರಾಮಕಾರಂತ, ಗೋವಿಂದ ಪೈ, ಜೆ.ಪಿ.ರಾಜರತ್ನಂ, ಬಿ.ಎಂ.ಶ್ರೀ, ಟಿ.ಎಸ್.ವೆಂಕಣ್ಣಯ್ಯ ಹೀಗೆ ನೂರಾರು ಮಹನೀಯರ ಹೆಸರು ಅಥವಾ ಪರಿಚಯವಿರಲಿ ಅವರ ಕೃತಿಗಳನ್ನು ನಾವು ನಮ್ಮ ಇಂದಿನ ಮಕ್ಕಳ ಕೈಗೆ ತಲುಪಿಸುವಲ್ಲಿ ವಿಫಲರಾಗಿದ್ದೀವಿ.  ಕನ್ನಡ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಕಲಿಸುವುದು ಅಪರಾದ ಎಂಬ ಮನೋಭಾವ ಇಂದಿನ ಪೋಷಕರಲ್ಲಿ ಮನೆ ಮಾಡಿದೆ. ಕನ್ನಡ ಮಾಧ್ಯಮದಲ್ಲೇ ಓದಿದ ಬಹುತೇಕ ನನ್ನ ತಲೆಮಾರಿನ ಅರವತ್ತು ದಾಟಿದ ಲೇಖಕರು ಮತ್ತು ಕಲಾವಿದರ ಮೇಲೆ ಕನ್ನಡದ ಭಾಷೆಯ ಮೇಲೆ ನಂಬಿಕೆಯನ್ನು ಜನಸಾಮಾನ್ಯರಲ್ಲಿ ಹುಟ್ಟು ಹಾಕುವ ನೈತಿಕ ಜವಾಬ್ದಾರಿ ಇರುವುದನ್ನು ಮರೆಯಲಾಗದು. ಇದನ್ನು ಸರ್ಕಾರಗಳ ಮೂಲಕ ಮಾಡಿಸುವುದರ ಜೊತೆಗೆ  ಸಾರ್ವಜನಿಕವಾಗಿ ನಾವು ಸಹ ಕ್ರಿಯಾಶೀಲರಾಗಬೇಕಿದೆ.

ಪ್ರಸ್ತುತ ಕನ್ನಡ ಭಾಷೆಯ ವಿದ್ಯಾಮಾನಗಳ ಕುರಿತಾಗಿ ಆಳವಾದ ಜ್ಞಾನವೊಂದಿರುವ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮತ್ತು ಪಠ್ಯ ಪುಸ್ತಕಗಳ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಪ್ರೊ. ಬರಗೂರು ರಾಮಚಂದ್ರಪ್ಪನವರು ಕನ್ನಡ ಭಾಷೆಯ ಅಭಿವೃದ್ಧಿ ಕುರಿತು ಆಡಿರುವ ಮಾತುಗಳನ್ನು ನಾವು ಗಂಭೀರವಾಗಿ ಪರಿಗಣಿಸಬೇಕಿದೆ. ಅವರು ಕನ್ನಡ ತಾತ್ವಿಕತೆ ಎಂಬ ಲೇಖನದಲ್ಲಿ ‘’ ಕನ್ನಡಾಭಿಮಾನವೆಂದರೆ, ಕೇವಲ ಗತವೈಭವದ ಕನವರಿಕೆಯಲ್ಲ; ಕನ್ನಡಾಭಿಮಾನವು ಸದಾ ಸಮಕಾಲೀನವಾಗುತ್ತಾ ಹೋಗುವ ಸಾರ್ಥಕ ಸಂವೇದನೆ. ಕನ್ನಡನಾಡು ಶ್ರೀಗಂಧದ ನಾಡು ಎಂದು ವೈಭವೀಕರಿಸಲಾಗುತ್ತದೆ. ಆದರೆ, ಬಹುಪಾಲು ಮಂದಿ ಶ್ರೀಗಂಧದ ಮರವನ್ನು ನೋಡಲು ಸಾಧ್ಯವಾಗಿಲ್ಲ ಹಾಗಾದರೆ ಶ್ರೀಗಂಧವಿಲ್ಲದ ನಾಡು ಕನ್ನಡ ನಾಡು  ನಾಡಲ್ಲವೆ? ಕನ್ನಡ ನಾಡಿನಲ್ಲಿ ಶ್ರೀಗಂಧವೂ ಇದೆ, ಗೊಬ್ಬಳಿ (ಜಾಲಿ) ಮರವೂ ಇದೆ, ಕೋಗಿಲೆಯೂ ಇದೆ ಕಾಗೆಯೂ ಇದೆ, ಹರಿಯುವ ನದಿಗಳು, ಬತ್ತಿದ ಕೆರೆಗಳು, ವೈಭವೋಪೇತ ಬಂಗಲೆಗಳು, ಗುಡಿಸಲುಗಳು, ತುಂಬಿದ ಕಡಲು, ಹಸಿದ ಒಡಲು ಎಲ್ಲವೂ ಇವೆ. ಜಡವಾಗುವ ಮನೋಧರ್ಮವನ್ನು ರೂಪಿಸುವುದು ಕನ್ನಡಾಭಿಮಾನವಲ್ಲ, ಭೇದ ಭಾವಗಳಿಲ್ಲದ ಕರ್ನಾಟಕವನ್ನು ಕಾಣುವುದು ಕನ್ನಡಾಭಿಮಾನದ ಒಳನೋಟಬಾಗಬೇಕು’’ ಎಂದು ಅರ್ಥಗರ್ಭಿತ ಮಾತುಗನ್ನು ಆಡಿದ್ದಾರೆ.

ಈಗಾಗಲೇ  ಕನ್ನಡವೊಂದೇ ಅಧಿಕೃತ ಆಡಳಿತ ಭಾಷೆಯೆಂದು ಕರ್ನಾಟಕ ಸರ್ಕಾರವು 1966ಅಕ್ಟೋಬರ್ 10 ರಂದು ಆದೇಶ ಹೊರಡಿಸಿ ಹಂತ ಹಂತವಾಗಿ ಆಡಳಿದಲ್ಲಿ ಕನ್ನಡವನ್ನು ಜಾರಿಗೆ ತಂದಿದೆ. ವಿಧಾನ ಮಂಡಲದ ಉಭಯ ಸದನಗಳು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ನ್ಯಾಯಾಲಯಗಳು, ಆಡಳಿತ ವಿಭಾಗದ ಎಲ್ಲಾ ಹಂತದ ಕಚೇರಿಗಳಲ್ಲಿ ಕನ್ನಡ ಭಾಷೆ ಅಧಿಕೃತವಾಗಿ ಜಾರಿಯಲ್ಲಿದೆ. ಆದರೆ, ಮಕ್ಕಳ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಭಾಷೆಯನ್ನು ಅಧಿಕೃತವಾಗಿ ಜಾರಿ ತರಲು  ಹಲವಾರು ಅಡೆತಡೆಗಳು ಎದುರಾಗಿವೆ. ಖಾಸಾಗಿ ಶಿಕ್ಷಣ ಸಂಸ್ಥೆಗಳು ಸವೋಚ್ಛ ನ್ಯಾಯಾಲಯದ ಮೊರೆಹೋಗಿವೆ. ಶಿಕ್ಷಣ ತಜ್ಞರು ಹಾಗೂ ಮಕ್ಕಳ ತಜ್ಞರ ಅಭಿಪ್ರಾಯದಲ್ಲಿ ಮಕ್ಕಳು ಮಾತೃಭಾಷೆಯಲ್ಲಿ ಶಿಕ್ಷಣ ಕಲಿಯುವುದು ಸೂಕ್ತ ಎಂದು ಸಲಹೆ ನೀಡಿದ್ದರೂ ಸಹ ಮಕ್ಕಳ ಪೋಷಕರ ಪಾಲಿಗೆ ಇಂಗ್ಲೀಷ್ ಭಾಷೆಯೊಂದೇ ಬದುಕಿಗೆ ಮಾರ್ಗ ನಂಬಿಕೆಯು ಬಲವಾಗಿ ಬೇರೂರಿದೆ.

ಕನ್ನಡದ ಮಕ್ಕಳು ಮಾತೃಭಾಷೆಯಿಂದ ವಂಚಿತವಾದರೆ, ಮುಂದಿನ ದಿನಗಳಲ್ಲಿ ಕನ್ನಡ ಭಾಷೆಯೆಂಬುದು ಕೇವಲ ಸಂವಹನ ಭಾಷೆಯಾಗಿ ಮಾತ್ರ ಉಳಿಯುವ ಸಾಧ್ಯತೆಯುಂಟು. ಕಾರಣದಿಂದಾಗಿ ನಾಡಿನ ವಿದ್ವಾಂಸರು, ಶಿಕ್ಷಣ ತಜ್ಞರು ನಿಟ್ಟಿನಲ್ಲಿ ಗಂಭೀರವಾಗಿ  ಆಲೋಚಿಸುವ ಅವಶ್ಯಕತೆ ಇದೆ. ಶತಮಾನದ ಹಿಂದೆ ನಾಡಿನ ಅನಕ್ಷರಸ್ಥರಿಗೆ ಅಲಿಖಿತ ಕಾವ್ಯಗಳು ಮತ್ತು ಪುರಾಣ ಕಥನಗಳು ಇದ್ದವು ಅವುಗಳು ಪರೋಕ್ಷವಾಗಿ ಸಾಂಸ್ಕೃತಿಕ ಬದುಕನ್ನು ಜೀವಂತವಾಗಿಟ್ಟಿದ್ದವು. ಈಗಿನ ತಂತ್ರಜ್ಞಾನದ ಯುಗದಲ್ಲಿ ರೊಬಟ್ಗಳು, ಟಾಮ್ ಅಂಡ್ ಜೆರಿ, ಮಿಕ್ಕಿಮೌಸ್ ನಂತಹ ಕಾರ್ಯಕ್ರಮಗಳು ನಮ್ಮ ಮಕ್ಕಳ ಸಾಂಸ್ಕೃತಿಕ ಅಭಿರುಚಿಯ ಕೇಂದ್ರ ಬಿಂದುಗಳಾಗುವ ಅಪಾಯವಿದೆ.

ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ವಿಶೇಷ ಸಂಚಿಕೆಯಲ್ಲಿ ಪ್ರಕಟವಾದ ಲೇಖನ)

ಡಾ.ಎನ್.ಜಗದೀಶ್ ಕೊಪ್ಪ

ಮಂಗಳವಾರ, ಅಕ್ಟೋಬರ್ 17, 2023

ಯುದ್ಧದೆದುರು ಮಂಡಿಯೂರಿದ ವಿಶ್ವ (ಅಂಗವಿಕಲ) ಸಂಸ್ಥೆ

 


ಕಳೆದ ಕಲವು ವಾರಗಳಿಂದ ನಡೆಯುತ್ತಿರುವ  ಇಸ್ರೇಲ್ ಪ್ಯಾಲೆಸ್ತೇನ್ ನಡುವಿನ ಯುದ್ಧ ಜಗತ್ತಿನ ಪ್ರಜ್ಞಾವಂತ ನಾಗರೀಕರ ನಿದ್ದೆಗೆಡಿಸಿದೆ. ಮತಿಗೆಟ್ಟವರ ಈ ಯುದ್ಧದ ಹಿಂಸೆಯಿಂದ ಮಕ್ಕಳು ಮತ್ತು ಮಹಿಳೆಯರು ಅಮಾಯಕರಾಗಿ ಅಸು ನೀಗುತ್ತಿರುವುದನ್ನು ನೋಡಿದರೆ ಮನಸ್ಸು ಮುದುಡಿ ಹೋಗುತ್ತದೆ.

ಈ ಯುದ್ಧ ಕುರಿತಾಗಿ ಭಾರತದಲ್ಲಿ ಎರಡು ಬಣಗಳಾಗಿ ಸಿಡಿದು ಹೋಗಿರುವ  ಕೆಲವರು ಇಸ್ರೇಲ್ ಪರವಾಗಿ ನಿಂತರೆ, ಮತ್ತೇ ಹಲವರು ಪ್ಯಾಲೆಸ್ತಾನ್ ಪರವಾಗಿ ನಿಂತು ತಬ್ಬಲಿಗಳಾದ ಪ್ಯಾಲೆಸ್ತೆನಿಯರು ಎಂದು ಭಾವುಕರಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಇಸ್ರೇಲ್ ಪ್ಯಾಲೆಸ್ತೇನ್ ಯುದ್ಧ ಇತಿಹಾಸ ಈ ಜಗತ್ತಿಗೆ ಹೊಸದೇನಲ್ಲ. ಆದರೆ, ಕಳೆದ ಹತ್ತು ವರ್ಷಗಳಿಂದ ತಣ್ಣಗಿದ್ದ ಈ ಯುದ್ಧವನ್ನು ಪ್ಯಾಲೆಸ್ತೇನ್ ಗಾಜಾ ಪಟ್ಟಿ ಎಂಬ ಪ್ರದೇಶದಲ್ಲಿ ಹಮಾಸ್ ಎಂಬ ಬಂಡುಕೋರರು ಮೂರು ವಾರಗಳ ಹಿಂದೆ ಇಸ್ರೇಲ್ ಮೇಲೆ ಏಕಾಏಕಿ ಐನೂರು ರಾಕೇಟ್ ಗಳ ಮೂಲಕ ದಾಳಿ ಮಾಡಿ 298 ನಾಗರೀಕರನ್ನು ಹತ್ಯೆಗೈಯ್ಯುವುದರ ಮೂಲಕ ಬಡಿದೆಬ್ಬಿಸಿದರು.

ಕಳೆದ ಮೂರು ದಶಕಗಳಲ್ಲಿ ಇಸ್ರೇಲ್ ಪುಟ್ಟ ರಾಷ್ಟ್ರವಾಗಿದ್ದರೂ ಅದು ಆಧುನಿಕ ತಂತ್ರಜ್ಞಾನದಲ್ಲಿ ಅತ್ಯಂತ ಪ್ರಬಲ ರಾಷ್ಟ್ರವಾಗಿದೆ. ಜಗತ್ತಿನ ದೊಡ್ಡಣ್ಣ ಎನಿಸಿಕೊಂಡ ಅಮೇರಿಕಾದ ಕನಸಿನ ಕೂಸಾಗಿ ಬೆಳೆದಿರುವ  ಇಸ್ರೇಲ್ ರಾಷ್ಟ್ರವನ್ನು ಇಂದು ಪ್ಯಾಲೆಸ್ತೇನ್ ಮಾತ್ರವಲ್ಲ, ಮಧ್ಯ ಪ್ರಾಚ್ಯದ ಯಾವ ರಾಷ್ಟ್ರಗಳು ಮಣಿಸುವುದು ಅಷ್ಟು ಸುಲಭವಲ್ಲ.  ಈ ವಾಸ್ತವ ಸಂಗತಿ ಇಡೀ ಜಗತ್ತಿಗೆ ಗೊತ್ತಿರುವ ಸಂಗತಿ. ಇದು ಹಮಾಸ್ ಉಗ್ರರನ್ನು ಸಾಕಿ ಸಲಹುತ್ತಿರುವ ಪ್ಯಾಲೆಸ್ತೇನ್ ಸರ್ಕಾರಕ್ಕೆ ಗೊತ್ತಿಲ್ಲವೆ? ಪ್ಯಾಲೆಸ್ತೇನಿಯರ ಮೂರ್ಖತನದಿಂದಾಗಿ ಇಂದು ಸಾವಿರಾರು ಅಮಾಯಕ ನಾಗರೀಕರು ಜೀವ ಬಲಿಕೊಡಬೇಕಿದೆ. ವಸ್ತು ಸ್ಥಿತಿ ಹೀಗಿರುವಾಗ ಇಸ್ರೇಲ್ ಅಥವಾ ಪ್ಯಾಲೆಸ್ತೇನ್ ಪರವಾಗಿ ನಿಂತು ವಾದಿಸುವುದು ಅವಿವೇಕದ ಪರಮಾವಧಿ. ಮನುಕುಲಕ್ಕೆ ಅನಿಷ್ಠವಾಗಿ ಪರಿಣಮಿಸಿರುವ ಯುದ್ಧ ಮತ್ತು ಹಿಂಸೆಯ ಕುರಿತಾಗಿ ನಾವು ಮಾತನಾಡಬೇಕಿದೆ.

ಆಗಿ ಹೋದ ಇತಿಹಾಸವನ್ನು ಕೆದುಕುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಅಮೇರಿಕಾದ ಮೂಲ ನಿವಾಸಿಗಳಾದ ರೆಡ್ ಇಂಡಿಯನ್ನರಿಗೆ ಮರಳಿ ಅಮೇರಿಕಾವನ್ನು ದೊರಕಿಸಿಕೊಡಲಾಗದು. ಈ ಇಪ್ಪತ್ತೊಂದನೆಯ ಶತಮಾನದ ಜಗತ್ತು ಅತ್ಯಾಧುನಿಕ ತಂತ್ರಜ್ಞಾನದ ಹೆಸರಿನಲ್ಲಿ ಆತ್ಮಹತ್ಯೆಯ ಮಾರ್ಗದಲ್ಲಿ ಶರವೇಗದಲ್ಲಿ ಚಲಿಸುತ್ತಿದೆ. ಮುಂದಿನ ಮೂರು ದಶಕಗಳ ಅವಧಿಯಲ್ಲಿ ಅಂದರೆ, 2050 ರ ಅವಧಿಗೆ ಈ ಭೂಮಂಡಲದ ಬಹು ಭಾಗ ಇರುತ್ತದೆ  ಎಂಬುವುದರ ಬಗ್ಗೆ ಹವಾಮಾನ ಹಾಗೂ ಭೂ ಗರ್ಭ ಶಾಸ್ತ್ರದ ತಜ್ಞರಿಗೆ ನಂಬಿಕೆಯಿಲ್ಲ. ಹವಾಮಾನ ಬದಲಾವಣೆಯಿಂದ ಬತ್ತಿ ಹೋದ ನದಿಗಳು, ಅಕಾಲಿಕ ಮಳೆಯಿಂದ ಅನಿರೀಕ್ಷಿತವಾಗಿ ತುಂಬಿ ಹರಿಯುವ ನದಿಗಳು, ನಿರಂತರವಾಗಿ ಜಗತ್ತಿನಾದ್ಯಂದ ಕಾಡ್ಗಿಚ್ಚಿನಿಂದಾಗಿ ಹತ್ತಿ ಉರಿಯುತ್ತಿರುವ ಅರಣ್ಯಗಳು, ಕರಗುತ್ತಿರುವ ಹಿಮಗುಡ್ಡೆಗಳು, ದಿನೇ ದಿನೇ ಸಂಭವಿಸುತ್ತಿರುವ ಭೂಕಂಪ  ಇವೆಲ್ಲವೂ ಭವಿಷ್ಯದ ಜಗತ್ತಿನ ಇತಿಹಾಸದ ಬಗ್ಗೆ ಈಗಾಗಲೇ ಸೂಚನೆ ನೀಡಿವೆ.


ಅಂತರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರಗಳ ನಡುವೆ ಸಮಸ್ಯೆಗಳು ಉದ್ಭವವಾದಾಗ  ಶಾಂತರೀತಿಯಲ್ಲಿ ಪರಿಹರಿಸಿಕೊಳ್ಳಲು ಸೃಷ್ಟಿಯಾದ ವಿಶ್ವಸಂಸ್ಥೆ ಎಂಬ ಸಂಘಟನೆ ಈಗ  ಅಂಗವಿಕಲ ಕೂಸಿನಂತಾಗಿದೆ. ಕಳೆದ  ಐವತ್ತು ವರ್ಷಗಳ ಇತಿಹಾಸದಲ್ಲಿನಾನು ಬಲ್ಲ ಹಾಗೆ ಒಂದೇ ಒಂದು ಸಮಸ್ಯೆಯನ್ನು ಬಗೆಹರಿಸಿಲ್ಲ. ಯಾವ ಯುದ್ಧಗಳನ್ನೂ ತಡೆಗಟ್ಟಲು ಇದರಿಂದ ಸಾಧ್ಯವಾಗಿಲ್ಲ. ಅಂತರಾಷ್ಟ್ರೀಯ ನ್ಯಾಯಾಲಯ ಎಂಬ ಭಾಗವು ವಿಶ್ವ ಸಂಸ್ಥೆಯಲ್ಲಿದ್ದು ಅಲ್ಲಿ ಅಣಕು ನ್ಯಾಯಾಲಯ ನಡೆಯುತ್ತದೆ. 1972 ರಲ್ಲಿ ಅಮೇರಿಕಾವು ವಿಯಟ್ನಾಂ ಮೇಲೆ ಯುದ್ಧ ಸಾರಿದ ಘಟನೆ, 2002 ರಲ್ಲಿ ಕುವೈತ್ ಮೇಲೆ ಇರಾಕ್ ದಾಳಿ ಮಾಡಿತು ಎಂ ಬ ಏಕೈಕ ಕಾರಣದಿಂದ ಮಾರಕಾಸ್ತ್ರಗಳನ್ನು ಹೊಂದಿರವ ರಾಷ್ಟ್ರ ಎಂದು  ಇರಾಕ್ ರಾಷ್ಟ್ರವನ್ನು ಘೋಷಿಸುವುದರ ಮೂಲಕ ಅಲ್ಲಿನ ಸರ್ವಾಧಿಕಾರಿ ಸದ್ದಾಂ ಹುಸೇನ್ ಅನ್ನು  ಅಮೇರಿಕಾ ಸದೆ ಬಡಿಯಿತು. ಆದರೆ, ಇರಾಕ್ ನಲ್ಲಿ ಯಾವುದೇ ರಸಾಯನಿಕ ಮಾರಕಾಸ್ತ್ರಗಳು ಪತ್ತೆಯಾಗಲಿಲ್ಲ. ಈ ಬಗ್ಗೆ ವಿಶ್ವ ಸಂಸ್ಥೆ ತುಟಿ ಬಿಚ್ಚಲಿಲ್ಲ. ನಮ್ಮ ನೆರೆಯ ಬರ್ಮಾ ರಾಷ್ಟ್ರದಲ್ಲಿ ಸೇನಾಧಿಕಾರಿಯ ಆಢಳಿತವಿದ್ದು, ಬೌದ್ಧ ಧರ್ಮದ ಬಂಡುಕೋರರಿಂದ ಲಕ್ಷಾಂತರ ಮಂಡಿ ರೋಹಿಂಗ್ಯಾ ಮುಸ್ಲಿಂ ಸಮುದಾಯದ ಜನತೆ ದೇಶ ಬಿಟ್ಟು ಬರಬೇಕಾಯಿತು. ಈ ಕುರಿತು ವಿಶ್ವ ಸಂಸ್ಥೆಯಲ್ಲಿ ಚರ್ಚೆಯಾಗಲಿಲ್ಲ. ಅಷ್ಟೇ ಏಕೆ? ಆಧುನಿಕ ಸರ್ವಾಧಿಕಾರಿ ಮತ್ತು ಹಿಟ್ಲರನ ಪ್ರತಿ ರೂಪದಂತೆ ಕಾಣುತ್ತಿರುವ ವ್ಲಾದಿಮೀರ್ ಪುಟಿನ್ ನಿರಂತರವಾಗಿ ಉಕ್ರೇನ್ ಮೇಲೆ ದಾಳಿ ನಡೆಸಿ ಸಾವಿರಾರು ಮಂದಿಗೆ ಕಾರಣನಾಗುತ್ತಿದ್ದಾನೆ. ಇದಕ್ಕೂ ವಿಶ್ವ ಸಂಸ್ಥೆಯಲ್ಲಿ ಪರಿಹಾರವಿಲ್ಲ.


ಎರಡನೆಯ ಮಹಾಯುದ್ಧದ ಸಮಯದಲ್ಲಿ ಜಗತ್ತಿನಲ್ಲಿ ಶಾಶ್ವತ ಶಾಂತಿ ನೆಲೆಸಬೇಕೆಂಬ ದೃಷ್ಟಿಕೋನದಿಂದ 1942 ರ ಲ್ಲಿ ಅಮೇರಿಕಾ. ರಷ್ಯಾ. ಇಂಗ್ಲೇಂಡ್ ಮತ್ತು ಪ್ರಾನ್ಸ್ ಹಾಗೂ ಚೀನಾ ರಾಷ್ಟçಗಳು ಒಪ್ಪಂಧಕ್ಕೆ  ಬಂದ ಫಲವಾಗಿ ರಾಷ್ಟçಗಳ ನಡುವಿನ ಕಲಹ ಮತ್ತು ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯನ್ನು ಸ್ಥಾಪಿಸಲು ನಿರ್ಧರಿಸಲಾಯಿತು. 1943 ರ ಡಿಸಂಬರ್ ತಿಂಗಳಿನಲ್ಲಿ ರಷ್ಯಾದ ಅಧ್ಯಕ್ಷ ಸ್ಟಾಲಿನ್ ಮತ್ತು ಅಮೇರಿಕಾ ಅಧ್ಯಕ್ಷ ಪ್ರಾಂಕ್ಲಿನ್ ರೂಸ್ ವೆಲ್ಟ್ ಇರಾನಿನ ರಾಜಧಾನಿ ಟೆಹರಾನ್ ನಗರದಲ್ಲಿ ಪರಸ್ಪರ ಭೇಟಿಯಾಗಿ ಸಹಿ ಹಾಕಿದರು. ಇದರ ಫಲವೆಂಬಂತೆ  1945 ರ ಅಕ್ಟೋಬರ್ ತಿಂಗಳಿನಲ್ಲಿ ಐವತ್ತು ರಾಷ್ಟçಗಳ ಸದಸ್ಯತ್ವದೊಂದಿಗೆ ಅಮೇರಿಕಾದಲ್ಲಿ ವಿಶ್ವಸಂಸ್ಥೆ ಆರಂಭಗೊಂಡಿತು. ಸಹಜವಾಗಿ ಭದ್ರತಾಮಂಡಳಿಯ ಸದಸ್ಯ ರಾಷ್ಟçಗಳಾಗಿ ಐದು ಶಕ್ತಿ ರಾಷ್ಟçಗಳಾದ ಅಮೇರಿಕಾ, ರಷ್ಯಾ, ಇಂಗ್ಲೆಂಡ್, ಪ್ರಾನ್ಸ್ ಮತ್ತು ಚೀನಾ ಆಯ್ಕೆಯಾದವು. ಈಗ ವಿಶ್ವಸಂಸ್ಥೆಯಲ್ಲಿ 193 ಸದಸ್ಯರಾಷ್ಟçಗಳಿದ್ದರೂ ಸಹ ಎಲ್ಲಾ ಅಂತಿಮ ತೀರ್ಮಾನವು ಈ ಐದು ರಾಷ್ಟಗಳ ನಿರ್ಧಾರವನ್ನು ಅವಲಂಬಿಸಿದೆ. ವಿಶ್ವಸಂಸ್ಥಾಪನೆಯ ಉದ್ದೇಶಗಳಿಗೂ ಅದರ ಕಾರ್ಯಾಚರಣೆಗೂ ಯಾವುದೇ ಸಂಬಂಧವಿಲ್ಲ.  ಇಡೀ ಜಗತ್ತಿನಲ್ಲಿ ಯುದ್ಧ ಶಸ್ತಾçಸ್ರಗಳನ್ನು ಈ ಐದು ರಾಷ್ಟçಗಳು  ಮಾತ್ರ ಉತ್ಪಾದಿಸುತ್ತಿದ್ದು. ಇತರೆ ದೇಶಗಳಿಗೆ ಮಾರಾಟ ಮಾಡುವುದು ಇವುಗಳ ಮುಖ್ಯ ಗುರಿಯಾಗಿದೆ. ಹಾಗಾಗಿ ಯಾವ ರಾಷ್ಟಗಳು ನೆಮ್ಮದಿಯಿಂದ ಇರುವುದು ಅಥವಾ ಜನತೆಯ ಯೋಗಕ್ಷೇಮ ವಿಚಾರಿಸಿಕೊಳ್ಳುವುದು ಈ ರಾಷ್ಟçಗಳಿಗೆ ಬೇಕಾಗಿಲ್ಲ. ಈ ಕಾರಣದಿಂದಾಗಿ ಇವುಗಳ ಕನಸಿನ ಕೂಸುಗಳಾದ ವಿಶ್ವಸಂಸ್ಥೆ, ವಿಶ್ವಬ್ಯಾಂಕ್ ಮತ್ತು ಅಂತರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ ಸೇರಿದಂತೆ ಬಹುತೇಕ ಜಾಗತಿಕ ಸಂಸ್ಥೆಗಳು ಅಮೇರಿಕಾ ಸೇರಿದಂತೆ ಪ್ರಬಲ ರಾಷ್ಟçಗಳ ಕಣ್ಣಳತೆಯಲ್ಲಿ ಕಾರ್ಯ ನಿರ್ವಹಿಸುವ ಗುಲಾಮಗಿರಿ ಸಂಸ್ಥೆಗಳಾಗಿವೆ.

ಈ ಸಂದರ್ಭದಲ್ಲಿ ನಾವು ಧ್ವನಿ ಎತ್ತಬೇಕಾಗಿರುವುದು ಯಾವುದೋ ಒಂದು ರಾಷ್ಟ್ರದ ಪರವಾಗಿ ಅಲ್ಲ. ಯುದ್ಧ ಮತ್ತು ಹಿಂಸೆಯ ವಿರುದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ಒಂದು ಬೃಹತ್ತಾದ ಕಹಳೆ ಇಂದಿನ ಅಗತ್ಯವಾಗಿದೆ.

ಚಿತ್ರ ಸೌಜನ್ಯ- ಸುಜಿತ್ ಕುಮಾರ್ ( ಡೆಕ್ಕನ್ ಹೆರಾಲ್ಡ್) ಮತ್ತು ಅಲೋಕ್ ( ಮುಂಬೈ) ಹಾಗೂ ರಾಯಿಟರ್ಸ್ ಸುದ್ದಿ ಸಂಸ್ಥೆ.