ಶನಿವಾರ, ನವೆಂಬರ್ 18, 2023

ವನ್ಯಜೀವಿಗಳ ಮರಣ ಮೃದಂಗ

 



ಮೂರು ವರ್ಷಗಳ ಹಿಂದೆ 2020 ಜೂನ್ ತಿಂಗಳಲ್ಲಿ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಆಹಾರವನ್ನು ಅರಸಿಕೊಂಡು ಕೃಷಿ ಭೂಮಿಗೆ ಬಂದಿದ್ದ ಗರ್ಭ ಧರಿಸಿದ್ದ ಹೆಣ್ಣಾನೆಯೊಂದು ಕೃಷಿ ಭೂಮಿಯಲ್ಲಿ ಕಾಡು ಹಂದಿಗಳಿಗಾಗಿ ಇರಿಸಿದ್ದ ಸ್ಪೋಟಕ ತುಂಬಿದ್ದ ಅನಾನಸ್ ಹಣ್ಣನ್ನು ತಿನ್ನಲು ಹೋಗಿ  ಆನೆಯ ಬಾಯಿಯು ಸ್ಟೋಟದಿಂದ ಛಿದ್ರಗೊಂಡಿತು. ನೋವನ್ನು ತಾಳಲಾರದ ಮೂಕಪ್ರಾಣಿಯು ಸಮೀಪದ ನದಿಯೊಂದರಲ್ಲಿ ನಾಲ್ಕು ದಿನಗಳ ಕಾಲ ಹಗಲು ರಾತ್ರಿ ನಿಂತು ಅಂತಿಮವಾಗಿ ಪ್ರಾಣಬಿಟ್ಟಿತು. ಆ ಮೂಕ ಪ್ರಾಣಿಯ ದಾರುಣ ಸಾವು   ನೆಲದ ಪ್ರತಿಯೊಬ್ಬ ಪ್ರಜ್ಞಾವಂತನ್ನು ಕೇವಲ ಕ್ಷಣ ಮಾತ್ರವಲ್ಲದೆ ಹಲವು ದಿನಗಳ ಕಾಲ ಕಾಡಿದ್ದು ನಿಜ. ವನ್ಯ ಜೀವಿಗಳನ್ನು ನಾಡಿನಿಂದ ಕಾಡಿಗೆ  ಓಡಿಸಲು ನಾಗರೀಕ ಸಮಾಜ ಅನುಸರಿಸುತ್ತಿರುವ  "ಅನಾಗರಿಕ ಮತ್ತು ಕ್ರೂರ ಮಾರ್ಗಗಳ" ನಡುವಳಿಯನ್ನು ನಿಷೇಧಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದು  ಇದೀಗ  ದೇಶದ  ಸರ್ವೋಚ್ಛ ನ್ಯಾಯಾಲಯವನ್ನು ತಲುಪಿದೆ. 2019 ರಲ್ಲಿ ತಮಿಳುನಾಡಿನ ನೀಲಗಿರಿಯ ಬಳಿ ಚಹಾ ತೋಟವೊಂದರಲ್ಲಿ  ನಾಲ್ಕು ವರ್ಷದ ಗಂಡಾನೆಯೊಂದನ್ನು ಇದೇ ರೀತಿ ಹತ್ಯೆ ಮಾಡಲಾಗಿತ್ತು.
 ಭಾರತದಲ್ಲಿ ಶತಮಾನಗಳದುದ್ದಕ್ಕೂ  ಮಾನವನೊಂದಿಗೆ ವಿಶೇಷ ಸಂಬಂಧವನ್ನು ಹಂಚಿಕೊಳ್ಳುತ್ತಾ  ಬಂದಿರುವ ಆನೆಯಂಬ ಅತ್ಯಂತ ಸೂಕ್ಷ್ಮ ಹಾಗೂ ಭಾವನಾತ್ಮ ಜೀವಿಯನ್ನು .ಆಧುನಿಕ ಜಗತ್ತು ಅತ್ಯಂತ ಲಘುವಾಗಿ ಪರಿಗಣಿಸಿದೆ.   ಜಗತ್ತಿನ ಇತಿಹಾಸದಲ್ಲಿ  ನಡೆದಿರುವ ಕದನಗಳಲ್ಲಿ  ಸೈನಿಕರೆಂಬ ಮನುಷ್ಯರಷ್ಟೇ ಹತರಾಗಿಲ್ಲ. ಅವರುಗಳ ಅರ್ಧದಷ್ಟು ಸಂಖ್ಯೆಯ ಆನೆಗಳು ಮತ್ತು ಕುದುರೆಗಳು ಸಹ ಮೃತಪಟ್ಟಿವೆ. ಆದರೆ, ಮೂಕ ಪ್ರಾಣಿಗಳ ಸಾವಿನ ಸಂಖ್ಯೆಯನ್ನೂ ಯಾವ ಇತಿಹಾಸಕಾರನೂ ಅಧಿಕೃತವಾಗಿ ದಾಖಲಿಸಿಲ್ಲ.  ಅಸಂಖ್ಯಾತ ವನ್ಯಮೃಗಗಳ ತೊಟ್ಟಿಲು ಎನಿಸಿಕೊಂಡ ಭಾರತದಲ್ಲಿ   ಆನೆಗಳು ಮಾತ್ರವಲ್ಲದೆ ವನ್ಯ ಲೋಕದ ಸಕಲೆಂಟು ಜೀವಗಳಿಗೆ ಮತ್ತು ಪಕ್ಷಿಲೋಕಕ್ಕೆ  ತೀರಾ ಅಗತ್ಯವೆನಿಸಿದ ಗಂಭೀರವಾದ ಸಂರಕ್ಷಣೆ ಮತ್ತು ನಿರ್ವಹಣೆಯ ಗಮನವನ್ನುಅರಣ್ಯ ಇಲಾಖೆ  ಇನ್ನೂ ನೀಡಲಾಗಿಲ್ಲ. ಘಟನೆ ಕುರಿತಂತೆ   ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಚಿವರು ‘’ ಆನೆಯನ್ನು ಅಂತಹ ಕ್ರೂರ ರೀತಿಯಲ್ಲಿ ಕೊಲ್ಲುವುದು ಖಂಡಿತವಾಗಿಯೂಭಾರತೀಯ ಸಂಸ್ಕೃತಿಯಲ್ಲಿಲ್ಲ. ಎಂದು ಹೇಳಿರುವ ಮಾತು ಲೋಕಸಭೆಯಲ್ಲಿ ಪ್ರಸ್ತಾಪವಾದರೂ ಸಹ  ವನ್ಯಜೀವಿಗಳು ಮತ್ತು ಜನರ ನಡುವಿನ ಇಂತಹ ಸಂಘರ್ಷಗಳು ಏಕೆ  ಉಲ್ಬಣಗೊಳ್ಳುತ್ತವೆ? ಎಂಬುದರ ಬಗ್ಗೆ ಈವರೆಗೆ ನಮ್ಮನ್ನಾಳುವ ಜನಪ್ರತಿನಿಧಿಗಳು ಇನ್ನೂ ಗಂಭೀರವಾಗಿ ಆಲೋಚಿಸಿಲ್ಲ.


ಆಧುನಿಕ ಭಾರತದಲ್ಲಿ ವನ್ಯಜೀವಿ ಮತ್ತು ಮನುಷ್ಯರ ನಡುವಿನ ಸಂಘರ್ಷವು ದಿನನಿತ್ಯದ ಕ್ರಿಯೆ ಎಂಬಂತಾಗಿದೆ. ಋತುಮಾನಗಳಿಗೆ  ಅನುಸಾರವಾಗಿ  ನೀರು ಮತ್ತು  ಆಹಾರವನ್ನು  ಅರಸಿಕೊಂಡು ಕಾಡಿನಿಂದ ಕಾಡಿಗೆ ಅಥವಾ ಪ್ರದೇಶದಿಂದ ಪ್ರದೇಶಕ್ಕೆ ಹೋಗುತ್ತಿದ್ದ ಹುಲಿ, ಚಿರತೆ ಮತ್ತು ಆನೆಗಳು ಇತ್ತೀಚೆಗೆ ನಾಡಿನತ್ತ ಮುಖಮಾಡಿವೆ. ನಾಡಿನಲ್ಲಿ ಇರಬೇಕಾದ ಮನುಷ್ಯ ಕಾಡಿಗೆ ಲಗ್ಗೆ ಇಟ್ಟಿದ್ದಾನೆ. ರೆಸಾರ್ಟ್, ಸಪಾರಿ, ಅರಣ್ಯ ವೀಕ್ಷಣೆ ಮುಂತಾದವುಗಳ ನೆಪದಲ್ಲಿ ಅವುಗಳ ಆವಾಸಸ್ಥಾನದಲ್ಲಿ ಬೀಡುಬಿಟ್ಟು ವನ್ಯ ಜೀವಿಗಳ ಸಹಜ ಬದುಕಿಗೆ ಧಕ್ಕೆ ತಂದಿದ್ದಾನೆ. ಇಪ್ಪತ್ತೊಂದನೆಯ ಶತಮಾನದ ಆಧುನಿಕ ಜಗತ್ತು ಮತ್ತು ತಂತ್ರಜ್ಞಾನದ ದೃಷ್ಟಿಯಲ್ಲಿ ಅಭಿವೃದ್ಧಿ ಎಂದರೆ ಮನುಷ್ಯನ ಶ್ರೇಯೋಭಿವೃದ್ಧಿಗೆ ಇರುವ ಏಕೈಕ ಸೂತ್ರ ಎಂಬ ಸ್ವಾರ್ಥದ ಪರಿಕಲ್ಪನೆ ಮುನ್ನೆಲೆಗೆ ಬಂದಿದೆ.

ಇಂದು ದೇಶಾದ್ಯಂತ ವಿಸ್ತರಿಸುತ್ತಿರುವ ರಾಷ್ಟ್ರೀಯ ಹೆದ್ದಾರಿಗಳು ಮತ್ತು ರೈಲ್ವೆ ಮಾರ್ಗಗಳು ವನ್ಯಜೀವಿಗಳ ಪಾಲಿಗೆ ಸಾವಿನ ಕೂಪಗಳಾಗಿ ಪರಿಣಮಿಸಿವೆ. ಅವುಗಳ ಸಹಜ ಕಿರುದಾರಿ ಎಂದು ಕರೆಯುವ ಆನೆಗಳ ಕಾರಿಡಾರ್ ಮಾರ್ಗವು  ಹೆದ್ದಾರಿಯಿಂದ ಮುಚ್ಚಿಹೋಗುತ್ತಿದೆ. ಇತ್ತೀಚೆಗೆ ಮೈಸೂರು ಮತ್ತು ಬೆಂಗಳೂರು ನಡುವೆ ನಿರ್ಮಿಸಲಾದ ಹೊಸ ರಾಷ್ಟ್ರೀಯ ಹೆದ್ದಾರಿಯಿಂದ ರಾಮನಗರದ  ಬಳಿ ಗುಡ್ಡಗಳಲ್ಲಿ ವಾಸಿಸುತ್ತಿದ್ದ  ಕರಡಿ, ನರಿ, ಮೊಲ, ಮುಂತಾದ ಪ್ರಾಣಿಗಳು ಆಹಾರಕ್ಕಾಗಿ ರಸ್ತೆ ದಾಠಲಾಗದೆ ಹಸಿವು ಮತ್ತು ನೀರಡಿಕೆಯಿಂದ ಅಸು ನೀಗುತ್ತಿವೆ.  ಹುಬ್ಬಳ್ಳಿ ಮತ್ತು ಗೋವಾ ನಡುವಿನ ರೈಲ್ವೆ ಮಾರ್ಗದಲ್ಲಿ ದಾಂಡೇಲಿ ಅಭಯಾರಣ್ಯದ ಕಾಡುಕೋಣಗಳ ಸ್ಥಿತಿ ಕೂಡಾ ಇದೇ ಆಗಿದೆ. ಕನಿಷ್ಠ ತಿಂಗಳಿಗೆ ಒಂದು ಅಥವಾ ಎರಡು ಪ್ರಾಣಿಗಳು ರೈಲಿಗೆ ಸಿಲುಕಿ ಸಾಯುತ್ತಿವೆ.

ಇಂದು ಕರ್ನಾಟಕ ರಾಜ್ಯವೂ ಸೇರಿದಂತೆ ಇಡೀ ದೇಶದಲ್ಲಿ ಆನೆ, ಹುಲಿ ಮತ್ತು ಚಿರತೆಗಳ ದಾಳಿಯಿಂದ ವರ್ಷವೊಂದಕ್ಕೆ ಕನಿಷ್ಠ ಐನೂರು ಮಂದಿ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರಾಣಿಗಳಿಗೆ ರಾಗಿಮುದ್ದೆ ಹಾಗೂ ಮಾಂಸ ಮತ್ತು  ಇತರೆ ಆಹಾರಗಳಲ್ಲಿ ವಿಷ ಬೆರಸುವುದು, ಕೃಷಿ ಭೂಮಿಗೆ ಹಾಕಲಾದ ತಂತಿಗಳಿಗೆ ವಿದ್ಯುತ್ ಹಾಯಿಸುವುದು, ಹೆದ್ದಾರಿ ಮತ್ತು ರೈಲ್ವೆ ಮಾರ್ಗದಲ್ಲಿ  ನಡೆಯುವ ಅಪಘಾತ ಇವುಗಳ ಮೂಲಕ ವರ್ಷವೊಂದಕ್ಕೆ ಕನಿಷ್ಠ ಹನ್ನೆರೆಡು ಸಾವಿರ ವನ್ಯಜೀವಿಗಳು ಸಾವನ್ನಪ್ಪುತ್ತಿವೆ.  ಭಾರತದಲ್ಲಿ ಪ್ರತಿವರ್ಷ ಅಸ್ವಾಭಾವಿಕಕವಾಗಿ  ಐವತ್ತರಿಂದ ಅರವತ್ತು ಆನೆಗಳು ಅಸುನೀಗಿದರೆ,  2017-18 ಮತ್ತು 2020-21 ನಡುವೆ  ನಾಲ್ಕು ಸಿಂಹ ಹಾಗೂ  ಎಪ್ಪತ್ಮೂರು ಆನೆಗಳು ಸೇರಿದಂತೆ  ಒಟ್ಟು 63,345 ವನ್ಯ ಜೀವಿಗಳ ಸಾವಿನ ಪ್ರಕರಣಗಳು ಸಂಭವಿಸಿವೆ ಎಂದು ಕಂಟ್ರೋಲರ್ ಆಫ್ ಆಡಿಟರ್ ಜನರಲ್ ಸಂಸ್ಥೆ (ಸಿಎಜಿ)  ತನ್ನ ವರದಿಯಲ್ಲಿ  ದಾಖಲಿಸಿದೆ.

ಹುಲಿಗಳ  ಜೀವಶಾಸ್ತ್ರಜ್ಞರಾದ ಉಲ್ಲಾಸ್ ಕಾರಂತರು ವನ್ಯ ಜೀವಿಗಳು ಮತ್ತು ಮಾನವನ ನಡುವಿನ ಸಂಘರ್ಷವನ್ನು ಕುರಿತು  2019 ರ ಜನವರಿಯ ‘’ ದ ಜರ್ನಲ್ ಆಫ್ ಗೌವರ್ನೆನ್ಸ್’’ ಪತ್ರಿಕೆಯಲ್ಲಿ ಹೀಗೆ ದಾಖಲಿಸಿದ್ದರು ‘’ಇಲ್ಲಿಯವರೆಗಿನ  ಅರಣ್ಯ ಇಲಾಖೆಯ ಕ್ರಮಗಳು ಬಹುಮಟ್ಟಿಗೆ ಪ್ರತಿಕ್ರಿಯಾತ್ಮಕವಾಗಿವೆ ಆದರೆ, ವನ್ಯಜೀವಿ ಸಂರಕ್ಷಣೆ ಮತ್ತು ಸಂಘರ್ಷ ತಡೆಗಟ್ಟುವಲ್ಲಿ ಮತ್ತು   ಸ್ಪಷ್ಟವಾದ ಗುರಿ ಸಾಧಿಸುವಲ್ಲಿ ಅವುಗಳು  ನಿಖರವಾದ ಯೋಜನೆಗಳನ್ನು ಹೊಂದಿಲ್ಲ. ಇದರ  ಪರಿಣಾಮವಾಗಿ   ಘರ್ಷಣೆಗಳು ಸಹಿಷ್ಣುತೆಯ ಮಟ್ಟವನ್ನು ಮೀರಿ  ಉಲ್ಬಣಗೊಳ್ಳುತ್ತಿವೆ.  ಈವರೆಗೆ  ವನ್ಯಜೀವಿ-ಮಾನವ ಸಂಘರ್ಷಗಳನ್ನು ಎದುರಿಸಲು ನಿರ್ವಹಣಾ ಆಯ್ಕೆಗಳ ಮಾದರಿಯನ್ನು   ತರ್ಕಬದ್ಧವಾಗಿ ಚರ್ಚಿಸಲಾಗಿಲ್ಲ, ಪ್ರಾಣಿಗಳ ಜೀವಶಾಸ್ತ್ರದ ಬಗ್ಗೆ ವಿಜ್ಞಾನವು ನಮಗೆ ಏನು ಹೇಳುತ್ತದೆ ಎಂಬುದನ್ನು ಪರಿಗಣಿಸಿ, ನಿಯಮಿತವಾಗಿ ಸಂಘರ್ಷಗಳನ್ನು ಎದುರಿಸಬೇಕಾದ ವನ್ಯಜೀವಿ ವ್ಯವಸ್ಥಾಪಕರ  ಅಗತ್ಯತೆಗಳು  ಮತ್ತು ಮಧ್ಯಸ್ಥಗಾರರ ಅಭಿಪ್ರಾಯಗಳನ್ನು  (ಸಾಮಾನ್ಯವಾಗಿ ರೈತರು, ಬುಡಕಟ್ಟು ಜನರು ಮತ್ತು ಇತರ ಗ್ರಾಮೀಣ ಜನರು)  ಸಂಗ್ರಹಿಸುವ ಅಗತ್ಯವಿದೆ ಜೊತೆಗೆ ಪ್ರತಿಯೊಂದು ವನ್ಯಜೀವಿ ಪ್ರಭೇದಗಳ ರಕ್ಷಣೆಯು ಸಾಂಸ್ಕೃತಿಕ ಮಹತ್ವ ಪಡೆಯಬೇಕಿದೆ’’

ದುರಂತದ ಸಂಗತಿಯೆಂದರೆ, ಈ ದೇಶದಲ್ಲಿ ವನ್ಯಜೀವಿ ಸಂರಕ್ಷಣಾ ಕಾರ್ಯಸೂಚಿಯು ಇಂದಿಗೂ ಸಹ ದೆಹಲಿಯ ಹವಾನಿಯಂತ್ರಿತ ಕೊಠಡಿಗಳಲ್ಲಿ  ಉತ್ಕೃಷ್ಟ ಮನಸ್ಥಿತಿಯಿಂದ ರೂಪಿಸಲ್ಪಡುತ್ತದೆ, ಅರಣ್ಯ ಪ್ರದೇಶಗಳ ಹೊರಗಿನ ಕೃಷಿ ಪ್ರದೇಶದಲ್ಲಿ  ಕಾಡು ಹಂದಿಗಳ ಸಂತತಿಯನ್ನು ವನ್ಯಜೀವಿ ಅಧಿಕಾರಿಗಳು ಕಾನೂನುಬದ್ಧವಾಗಿ ನಿಯಂತ್ರಣದಲ್ಲಿಟ್ಟುಕೊಂಡಿದ್ದರೆ,  ಹೆಚ್ಚು ಸಂವೇದನಾಶೀಲ ಆನೆಯಂತಹ ಜೀವಿಗಳಿಗೆ ಹಾನಿಯನ್ನುಂಟುಮಾಡುವ ಸ್ಫೋಟಕ ತುಂಬಿದ ತೆಂಗಿನಕಾಯಿ ಅಥವಾ ಅನಾನಸ್ ಮತ್ತು ಹಲಸಿನ ಹಣ್ಣುಗಳ ಬಳಕೆಯನ್ನು ರೈತರು ಆಶ್ರಯಿಸುವ ಅಗತ್ಯ ಇರುತ್ತಿರಲಿಲ್ಲ. ಒಂದು ಸಮಸ್ಯೆಯನ್ನು ವಿವಿಧ ಆಯಾಮಗಳಲ್ಲಿ ಗುರುತಿಸುವ ಹಾಗೂ ಅದಕ್ಕೆ ಶಾಶ್ವತ ಪರಿಹಾರ ಕಂಡು ಕೊಳ್ಳುವ   ಅಗತ್ಯವಿದೆ.



ಇತ್ತೀಚಿನ ದಿನಗಳಲ್ಲಿ ಆನೆಗಳನ್ನು ರೈಲ್ವೆ ಕಂಬಿಗಳನ್ನು ಅರಣ್ಯದ ಸುತ್ತ ಹಾಕುವುದರ ಮೂಲಕ ನಿಯಂತ್ರಿಸುವ ಪ್ರಯತ್ನ ನಡೆದಿದೆ. ಇತ್ತೀಚೆಗಿನ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಹುಲಿ ಮತ್ತು ಆನೆಗಳ ಸಂತತಿ ವೃದ್ಧಿಸಿದೆ. ಕೇವಲ ಅಂಕಿ ಅಂಶವನ್ನು ಪ್ರಕಟಿಸಿ ಹೆಮ್ಮೆ ಪಟ್ಟುಕೊಳ್ಳುವುದಕ್ಕಿಂತ ಅವುಗಳಿಗೆ ಬದಲಾದ  ಹವಾಮಾನದಲ್ಲಿ ಅರಣ್ಯದಲ್ಲಿ ಯಥೇಚ್ಚವಾದ ಆಹಾರ ಮತ್ತು ನೀರು ಇದೆಯಾ? ಎಂದು ಅರಣ್ಯಾಧಿಕಾರಿಗಳು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ. ಬಿಳಿಗಿರಿರಂಗನ ಬೆಟ್ಟ, ಮಹಾದೇಶ್ವರಬೆಟ್ಟ ಮತ್ತು ಬಂಡಿಪುರ ಅಭಯಾರಣ್ಯಗಳಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಲಂಟಾನ ಗಿಡದಿಂದಾಗಿ ಅರಣ್ಯದಲ್ಲಿ ಇತರೆ ಗಿಡಮರಗಳು ಇರಲಿ, ಹಸಿರು ಹುಲ್ಲು ಕೂಡಾ ಬೆಳೆಯುತ್ತಿಲ್ಲ.ಪ್ರತಿಬೇಸಿಗೆಯಲ್ಲಿ ಕಾಡ್ಗಿಚ್ಚು ಸಾಮಾನ್ಯ ಸಂಗತಿಯಾಗಿದೆ.

ಈ ವರ್ಷ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ ವರದಿಯಲ್ಲಿ  ಭಾರತದ ಹದಿನೈದು ರಾಜ್ಯಗಳಲ್ಲಿ ಆನೆಗಳು ಇರುವ  ಪ್ರದೇಶದಲ್ಲಿ  ಆನೆ ಕಾರಿಡಾರ್ಗಳಲ್ಲಿ ಶೇಕಡಾ ನಲವತ್ತರಷ್ಟು   ಹೆಚ್ಚಳವನ್ನು ತೋರಿಸಿದೆ.  2010 ರಲ್ಲಿ  ಇದ್ದ ಎಂಬತ್ತೆಂಟು ಆನೆ ಕಾರಿಡಾರ್ಗಳ ಸಂಖ್ಯೆಯನ್ನು ನೂರೈವತ್ತಕ್ಕೆ  ಏರಿಕೆ ಮಾಡಲಾಗಿದೆ ದೇಶದಲ್ಲಿ ಆನೆಗಳ ಸಂಖ್ಯೆ ಮುವತ್ತು ಸಾವಿರಕ್ಕಿಕ್ಕಿಂತ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ.  ಕರ್ನಾಟಕ ರಾಜ್ಯದಲ್ಲಿ ಒಂಬತ್ತು ಹೊಸ ಆನೆ ಕಾರಿಡಾರ್ಗಳನ್ನು ಗುರುತಿಸಲಾಗಿದ್ದು  ಅವುಗಳು ಹೀಗಿವೆ. ಕರಡಿಕಲ್-ಮಾದೇಶ್ವರ ( ಇದನ್ನು ರಾಗಿಹಳ್ಳಿ ಕಾರಿಡಾರ್ ಎಂದೂ ಸಹ ಕರೆಯುತ್ತಾರೆ), ತಾಳಿ-ಬಿಳಿಕ್ಕನ್ (ತಮಿಳುನಾಡು ಮತ್ತು ಕರ್ನಾಟಕ), ಬಿಳಿಕಲ್-ಜವಳಗಿರಿ (ತಮಿಳುನಾಡು ಮತ್ತು ಕರ್ನಾಟಕ), ಎಡಯಹಳ್ಳಿ-ಗುತ್ತಿಯಾಲತ್ತೂರು (ತಮಿಳುನಾಡು-ಕರ್ನಾಟಕ), ಎಡೆಯಹಳ್ಳಿ-ದೊಡ್ಡಸಮಳ್ಳಿ- , ಚಾಮರಾಜನಗರ-ತಲಮಲೈ ಪುಂಜೂರು (ಕರ್ನಾಟಕ ಮತ್ತು ತಮಿಳುನಾಡು), ಚಾಮರಾಜನಗರ-ತಲಮಲೈ ಮುದ್ದಹಳ್ಳಿಯಲ್ಲಿ (ತಮಿಳುನಾಡು ಮತ್ತು ಕರ್ನಾಟಕ), ಕಣಿಯನಪುರ-ಮೊಯಾರ್ (ಕರ್ನಾಟಕ) ಮತ್ತು ಬೇಗೂರು-ಬ್ರಮ್ಮನಗಿರಿ (ಕರ್ನಾಟಕ ಮತ್ತು ಕೇರಳ) ಹೊಸ ಕಾರಿಡಾರ್ ಗಳ ಜೊತೆಗೆ ಪ್ರಾಣಿಗಳ ಚಲನ ವಲನದ ಬಗ್ಗೆ ಅರಣ್ಯ ಇಲಾಖೆ  ತೀವ್ರ ನಿಗಾ ವಹಿಸುವ ಅಗತ್ಯವಿದೆ.

ಕೇರಳದ ತ್ರಿಸ್ಸೂರು ಜಿಲ್ಲೆಯಲ್ಲಿರುವ  ಅರಣ್ಯ ಸಂಶೋಧನಾ ಕೇಂದ್ರದ ಇ.ಎ. ಜಯ್ಸನ್ ಎಂಬುವರು 2018 ರಲ್ಲಿ ಮಲ್ಲಪುರಂ ಜಿಲ್ಲೆಯಲ್ಲಿ ನಡೆಸಿದ ಸಂಶೋಧನೆಯ ಫಲವಾಗಿ ವಾರ್ಷಿಕವಾಗಿ ರೈತರು ಪ್ರತಿ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಹದಿನೈದು ಸಾವಿರ ಮೌಲ್ಯದ ಫಸಲನ್ನು  ವನ್ಯ ಜೀವಿಗಳ ಹಾವಳಿಯಿಂದ ಕಳೆದುಕೊಳ್ಳುತ್ತಿದ್ದಾರೆ ಎಂಬುದು ದೃಢಪಟ್ಟಿದೆ. ಕರ್ನಾಟಕದ ಚಿಕ್ಕಮಗಳೂರು, ಸಕಲೇಶಪುರ ಮತ್ತು ಆಲ್ದೂರು, ಕೊಡಗಿನ ವಿರಾಜಪೇಟೆ ಮತ್ತು ನಾಗರಹೊಳೆಯ ಸುತ್ತಮುತ್ತಲಿನ ಗ್ರಾಮಗಳ ರೈತರು ಕಾಫಿ, ಬಾಳೆ ಹಾಗೂ ವಿವಿಧ ತರಕಾರಿಗಳ ನಷ್ಟವನ್ನು ನಿರಂತರವಾಗಿ ಅನುಭವಿಸುತ್ತಿದ್ದಾರೆ. ಈ ಕಾರಣದಿಂದ ತಂತಿ ಬೇಲಿಗೆ ವಿದ್ಯುತ್ ಹಾಯಿಸುವುದರ ಮೂಲಕ, ಆನೆ, ಚಿರತೆ, ಮಂಗ, ಜಿಂಕೆಗಳ ಸಾವಿಗೆ ಪರೋಕ್ಷವಾಗಿ ಕಾರಣರಾಗುತ್ತಿದ್ದಾರೆ.



ಕಳೆದ ಅಕ್ಟೋಬರ್ ಹನ್ನೆರೆಡರಂದು ಕರ್ನಾಟಕ ಸರ್ಕಾರದ ಅರಣ್ಯ ಸಚಿವರು ‘’ಅಭಯಾರಣ್ಯಗಳ ವ್ಯಾಪ್ತಿ ಪ್ರದೇಶದ ಒಂದು ಕಿಲೊಮೀಟರ್ ದೂರದಲ್ಲಿ ರೆಸಾರ್ಟ್, ಫಾರಂ ಹೌಸ್, ಹಾಗೂ  ಕ್ಲಬ್ ಗಳಿಗೆ ಅನುಮತಿ ನೀಡಲಾಗುವುದು ಹಾಗೂ ನಾಗರಹೊಳೆಯ ಆರು ವಲಯಗಳ ವ್ಯಾಪ್ತಿಯಲ್ಲಿ ನೀಡುವ ಕುರಿತು ಪರಿಶೀಲಿಸಲಾಗುವುದು’’ ಎಂದು ಹೇಳಿರುವ ಮಾತು ವನ್ಯಜೀವಿಗಳ ಮಾರಣಹೋಮಕ್ಕೆ ಬರೆಯಲಾದ ಮುನ್ನುಡಿ ಎಂಬಂತಿದೆ. ಅರಣ್ಯ ರಕ್ಷಣೆ ಎಂದರೆ ವಿದೇಶಿ ತಳೀಗಳ ಕೃತಕ ಮರಗಳನ್ನು ಬೆಳೆಸಿ ಹಸಿರನ್ನು ಪ್ರತಿಬಿಂಬಿಸುವ ಕ್ರಿಯೆಯಲ್ಲ. ಅರಣ್ಯವೆಂಬುದು ಇರುವೆಯಿಂದ ಹಿಡಿದು, ಅಳಿಲು, ಮಂಗಗಳು, ಸರಿಸೃಪಗಳು , ಪಕ್ಷಿ ಸಂಕುಲ ಸೇರಿದಂತೆ ನೂರಾರು ಜೀವಿಗಳ ಅವಾಸಸ್ಥಾನ. ಅವುಗಳಿಗೆ ಬೇಕಾದ ಹಣ್ಣಿನ ಮರಗಳು, ಆನೆಗಳ ಮುಖ್ಯ ಆಹಾರವಾದ ಬಿದಿರು ಬೆಳೆಸುವುದರ ಜೊತೆಗೆ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಹೊಂಡಗಳ ನಿರ್ಮಾಣ ಇವೆಲ್ಲವೂ ತುರ್ತಾಗಿ  ಆಗಬೇಕಿದೆ.

ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಗ್ರಾಮವಾಸಿಗಳನ್ನು ಹೊರತು ಪಡಿಸಿ, ಕನಿಷ್ಠ ಹತ್ತು  ಕಿಲೊಮೀಟರ್ ದೂರದವರೆಗೆ ಯಾವುದೇ ರೀತಿಯ ಮಾನವರ ಅನ್ಯ ಚಟುವಟಿಕೆಗೆ ಅವಕಾಶವನ್ನು ನಿಷೇಧಿಸಬೇಕಿದೆ. ಇಲ್ಲದಿದ್ದರೆ, ನಮ್ಮ ಮಕ್ಕಳು ಮುಂದಿನ ದಿನಗಳಲ್ಲಿ ಚಿತ್ರಗಳ ಮೂಲಕ ವನ್ಯಪ್ರಾಣಿಗಳಣ್ನು ನೋಡುವ  ದಿನಗಳು ದೂರವಿಲ್ಲ,. ಇದು ಸಧ್ಯದ ವರ್ತಮಾನದ ನೋವಿನ ಹಾಗೂ ದುರಂತದ  ಸಂಗತಿ.

( ಪ್ರಜಾವಾಣಿ ಭಾನುವಾರದ ಸಾಪ್ತಾಹಿಕ ಪುರಣಿಗೆಯಲ್ಲಿ ಪ್ರಕಟವಾದ ಲೇಖನ.  650 ಶಬ್ದಗಳಿಗೆ ಲೇಖನವನ್ನು ಸೀಮಿತಗೊಳಿಸಿದ್ದೆ. 950 ಶಬ್ದಗಳಲ್ಲಿ ಸಿದ್ಧಪಡಿಸಲಾಗಿದ್ದ ಸಂಪೂರ್ಣ ಲೇಖನ ಇದು)

ಎನ್.ಜಗದೀಶ್ ಕೊಪ್ಪ

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ