ಸೋಮವಾರ, ಜನವರಿ 13, 2014

ತ್ಯಾಗರಾಜರ ಆರಾಧನೆಯಲ್ಲಿ ನೈಪಥ್ಯಕ್ಕೆ ಸರಿದ ನಾಗರತ್ನಮ್ಮನೆಂಬ ನಾದದೇವತೆ.


ತಂಜಾವೂರು ಸಮೀಪದ ತಿರುವಯ್ಯೂರು ಎಂಬ ಪುಟ್ಟ ಗ್ರಾಮವನ್ನು ( ಈಗ ಪಟ್ಟಣವಾಗಿ ಬೆಳದಿದೆ)  ದಕ್ಷಿಣ ಭಾರತದ ಕರ್ನಾಟಕ ಸಂಗೀತದ ತೊಟ್ಟಿಲು ಎಂದು ಕರೆದರೂ ತಪ್ಪಿಲ್ಲ. ಕರ್ನಾಟಕ ಸಂಗೀತದ ಪಿತಾಮಹಾರೆಂದು ಕರೆಯಲಾಗುವ ಕರ್ನಾಟಕದ ಪುರಂದರದಾಸರು ಮತ್ತು ಆಂಧ್ರದ ಅನ್ನಮಯ್ಯ ಇವರನ್ನು ಹೊರತು ಪಡಿಸಿದರೆ, ತ್ರೀಮೂರ್ತಿಗಳೆಂದು ಖ್ಯಾತರಾದ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು  ಶ್ಯಾಮಶಾಸ್ತ್ರಿ ಈ ಮೂವರು ತಿರುವಯ್ಯೂರು ಗ್ರಾಮದವರು. ಜೊತೆಗೆ ನಮ್ಮ ಕನ್ನಡದ ಬೈರವಿ ಕೆಂಪೇಗೌಡ ಹಾಗೂ ಮೈಸೂರು ವಾಸುದೇವಾಚಾರ್ಯ ಇವರಿಗೆ ಸಂಗೀತ ಧಾರೆಯೆರೆದ ಪಟ್ಟಣಂ ಸುಬ್ರಮಣ್ಯ ಅಯ್ಯರ್ ಕೂಡ ಇದೇ ಊರಿನವರು.

 ಹೀಗೆ ಕರ್ನಾಟಕ ಸಂಗೀತಕ್ಕೆ ಅನೇಕ ಪಿತಾಮಹಾರನ್ನು ಮತ್ತು ವಿಧ್ವಾಂಸರನ್ನು ಕೊಟ್ಟ ತಿರುವಯ್ಯುರು ಕಾವೇರಿ ನದಿಯ ದಡದಲ್ಲಿದ್ದು, ತಂಜಾವೂರನ್ನು ಆಳಿದ ವಿಜಯನಗರ ಸಾಮಂತರು ಮತ್ತು ಮರಾಠ ದೊರೆಗಳ ಆಳ್ವಿಕೆಯಲ್ಲಿ  ಸಂಗೀತದ ಕಾಶಿಯೆಂದು ಪ್ರಸಿದ್ಧಿ ಪಡೆಯಿತು. ಮರಾಠ ದೊರೆ ಸರ್ಫೊಜಿ ಕಟ್ಟಿಸಿದ ಸಂಗೀತ ಮಹಲ್ ಕಟ್ಟಡ ಈಗಲೂ ಸಹ ಕಾವೇರಿಯ ದಡದಲ್ಲಿದ್ದು ತನ್ನ ಗತ ವೈಭವವನ್ನು ಸಾರುತ್ತಿದೆ.
ಕಳೆದ ಆರು ದಶಕಗಳಿಂದ ಈ ಊರಿನಲ್ಲಿ ಪ್ರತಿ ವರ್ಷ ನಡೆಯುವ ತ್ಯಾಗರಾಜರ ಆರಾಧನೆ ಎಂಬ ಐದು ದಿನಗಳ ಸಂಗೀತ ಉತ್ಸವಕ್ಕೆ ದೇಶ ವಿದೇಶಗಳಿಂದ ಸಂಗೀತ ಪ್ರೇಮಿಗಳು ಆಗಮಿಸುತ್ತಾರೆ. ಈ ಉತ್ಸವದಲ್ಲಿ ಬೆಳಿಗ್ಗೆ ಆರುಗಂಟೆಯಿಂದ ಮಧ್ಯರಾತ್ರಿ ಹನ್ನೆರೆಡು ಗಂಟೆಯವರೆಗೆ ನಿರಂತರ ಕರ್ನಾಟಕ ಸಂಗೀತದ ಗಾಯನ, ಪಿಟಿಲು, ವೀಣಾ ವಾದನ, ನಾದಸ್ವರ ಹೀಗೆ ಸಂಗೀತ ರಸದೌತಣವನ್ನು ಕಲಾವಿದರು ಉಣಬಡಿಸುತ್ತಾರೆ. ಈ ಉತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮ ನೀಡುವುದು ಕರ್ನಾಟಕ ಸಂಗೀತದ ಪ್ರತಿಯೊಬ್ಬ ಕಲಾವಿದನ/ಳ ಜೀವಮಾನದ ಕನಸು ಕೂಡ ಹೌದು
.
ಈ ವರ್ಷ ಜನವರಿ 17 ರಿಂದ 21 ರವರೆಗೆ ತಿರುವಯ್ಯೂರಿನಲ್ಲಿ ತ್ಯಾಗರಾಜರ ಆರಾಧನೆ ನಡೆಯಲಿದ್ದು ಈಗಾಗಲೇ ಭರದ ಸಿದ್ಧತೆಗಳು ನಡೆಯುತ್ತಿವೆ. ಇಡೀ ದೇಶವೇ ತಿರುಗಿ ನೋಡುವಂತ ಇಂತಹ ಉತ್ಸವದ ಹಿಂದೆ ಕನ್ನಡದ ಹೆಣ್ಣು ಮಗಳೊಬ್ಬಳ ತ್ಯಾಗ ಮತ್ತು ಸಾಧನೆಯ ಇತಿಹಾಸವಿದೆ ಎಂಬುದು ಬಹುತೇಕ ಕನ್ನಡಿಗರಿಗೆ ತಿಳಿಯದಿರುವ ವಿಚಾರ. 1910 ರ ದಶಕದಲ್ಲಿ ತನ್ನ ಗಾಯನ, ನೃತ್ಯದಿಂದ ದಕ್ಷಿಣ ಭಾರತದ  ಕರ್ನಾಟಕ ಸಂಗೀತದಲ್ಲಿ  ಅದ್ವಿತಿಯ ಕಲಾವಿದೆಯೆಂದು ಹೆಸರು ಮಾಡಿದ್ದ ದೇವದಾಸಿ ಕುಟುಂಬದಿಂದ ಬಂದ ಬೆಂಗಳೂರು ನಾಗರತ್ನಮ್ಮ 1904 ರ ಲ್ಲಿ ಬೆಂಗಳೂರಿನಿಂದ ಮದ್ರಾಸಿಗೆ ತೆರಳಿ, ಆ ಕಾಲದಲ್ಲಿ ಅರಸೊತ್ತಿಗೆ ಕಳೆದುಕೊಂಡು (ಈಸ್ಟ್ ಇಂಡಿಯ ಕಂಪನಿಗೆ) ಮದ್ರಾಸ್ ನಗರದಲ್ಲಿ ವಾಸವಾಗಿದ್ದ ದಕ್ಷಿಣ ಭಾರತದ ಅನೇಕ ರಾಜಮನೆತನಗಳು ಮತ್ತು ಶ್ರೀಮಂತ ಮೊದಲಿಯಾರ್ ಹಾಗೂ ಚೆಟ್ಟಿಯಾರರ ಅಚ್ಚು ಮೆಚ್ಚಿನ ಕಲಾವಿದೆಯಾಗಿದ್ದರು. 

1910 ರ ದಶಕಲದಲ್ಲಿ ಬ್ರಿಟೀಷ್ ಸರ್ಕಾರಕ್ಕೆ ವರಮಾನ ತೆರಿಗೆ ಪಾವತಿಸಿದ ದಕ್ಷಿಣ ಭಾರತದ ಏಕೈಕ ಕಲಾವಿದೆ ನಾಗರತ್ನಮ್ಮನವರು ಎಂಬುದು ಇವೊತ್ತಿಗೂ ದಾಖಲೆಯಾಗಿ ಉಳಿದಿದೆ. ಕನ್ನಡ, ತಮಿಳು, ಮತ್ತು ತೆಲುಗು ಹಾಗೂ ಸಂಸ್ಕೃತ ಭಾಷೆಗಳ ಮೇಲೆ  ಪ್ರೌಢಿಮೆ ಸಾಧಿಸಿದ್ದ ನಾಗರತ್ನಮ್ಮ ಕನ್ನಡ ಮತ್ತು ತೆಲುಗು ಸಾಹಿತ್ಯ ಕೃತಿಗಳ ಬಗ್ಗೆ ಅಪಾರವಾದ ಒಳನೋಟಗಳನ್ನು ಒಳಗೊಂಡಿದ್ದರು. ಇವರು ಸಂಪಾದಿಸಿ , ಪ್ರಕಟಿಸಿದ ಹದಿನೆಂಟನೆಯ ಶತಮಾನದ ತೆಲುಗು ಕೃತಿ “ ರಾಧಾ ಸ್ವಾಂತನಮು” ಎಂಬ ಕೃತಿ 1920-30 ರ ದಶಕದಲ್ಲಿ ಆಂಧ್ರ, ತಮಿಳುನಾಡು ಮತ್ತು ದಕ್ಷಿಣ ಕರ್ನಾಟಕ ಹಾಗೂ ಮಂಗಳೂರನ್ನು ಒಳಗೊಂಡ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ದೊಡ್ಡ ಬಿರುಗಾಳಿಯೆಬ್ಬಿಸಿ ನ್ಯಾಯಾಲಯದ ಮೆಟ್ಟಿಲು ಏರುವಂತೆ ಮಾಡಿತ್ತು. ಈ ಸಂದರ್ಭದಲ್ಲಿ ತೆಲುಗು ಸಾಹಿತ್ಯ ದಿಗ್ಗಜರೊಂದಿಗೆ ನಾಗರತ್ನಮ್ಮ ನಡೆಸಿದ ವಾಗ್ವಾದ ಅವರಿಗೆ ಅಂತಿಮವಾಗಿ ತೆಲುಗು ಸಾಹಿತ್ಯದಲ್ಲಿ ವಿಧ್ವಾಂಸೆ ಎಂಬ ಬಿರುದು ತಂದು ಕೊಟ್ಟಿತು.
ಮೈಸೂರು ಅರಮನೆಯ ವಿಶೇಷ ಆಹ್ವಾನಿತ ಕಲಾವಿದೆ, ವೀಣೆ ಶೇಷಣ್ಣ, ಸುಬ್ಬಣ್ಣ ಇವರಿಂದ ಪ್ರತಿಭಾವಂತೆ ಹಾಗೂ ಬಿಡಾರಂ ಕೃಷ್ಣಪ್ಪ ಇವರ  ಅಚ್ಚು ಮೆಚ್ಚಿನ ಶಿಷ್ಯೆಯಾಗಿ ಸಂಗೀತವನ್ನು ತಮ್ಮ ಬದುಕಿನುದ್ದಕ್ಕೂ ಧ್ಯಾನಿಸಿದ ನಾಗರತ್ನಮ್ಮ ಎಂಬ ಈ ಮಹಾತಾಯಿ ಇವೊತ್ತಿಗೂ ತಮಿಳುನಾಡು ಮತ್ತು ಆಂಧ್ರದಲ್ಲಿ ಬೆಂಗಳೂರು ನಾಗರತ್ನಮ್ಮಾಳ್ ಎಂದು ಪ್ರಸಿದ್ದರು. ಇವರ ಕುರಿತು ತೆಲುಗು ಮತ್ತು ತಮಿಳು ಭಾಷೆಯಲ್ಲಿ ಹಾಗೂ ಇಂಗ್ಲೀಷ್ ನಲ್ಲಿ ಜೀವನ ಚರಿತ್ರೆ ಪ್ರಕಟವಾಗಿದೆ. ಕನ್ನಡದಲ್ಲಿ ಡಿ.ವಿ.ಜಿಯವರು ತಮ್ಮ ನೆನಪಿನ ಚಿತ್ರಗಳು ಕೃತಿಯಲ್ಲಿ ಒಂದು ಲೇಖನ ಮತ್ತು ಮೈಸೂರು ವಾಸುದೇವಾ ಚಾರ್ಯರು ಬರೆದಿರುವ ನಾ ಕಂಡ ಕಲಾವಿದರು ಕೃತಿಯಲ್ಲಿ ಬರೆದಿರುವ ಒಂದಿಷ್ಟು ನೆನಪುಗಳನ್ನು ಹೊರತು ಪಡಿಸಿದರೆ. ಬೇರೆಲ್ಲೂ ಪ್ರಸ್ತಾಪವಿಲ್ಲ.

ಇತಿಹಾಸದ ಗರ್ಭದೊಳಗೆ ಹೂತು ಹೋಗುತ್ತಿರುವ ಈ ಮಹಾತಾಯಿಯ ಹೆಜ್ಜೆಯ ಗುರುತುಗಳನ್ನು ಹುಡುಕಿಕೊಂಡು, ಚೆನ್ನೈ, ತಂಜಾವೂರು, ತಿರುವಯ್ಯೂರು, ಮೈಸೂರು ಹಾಗೂ ಬೆಂಗಳೂರು ನಗರಗಳನ್ನು ತಿರುಗುತ್ತಾ ಕಲೆಹಾಕಿದ ಮಾಹಿತಿಗಳ ಜೊತೆಗೆ ವರ್ತಮಾನದ ಅನೇಕ ಸಂಗತಿಗಳು ನನ್ನಲ್ಲಿ ನೋವುಂಟು ಮಾಡಿವೆ. ಇದನ್ನು ಹೇಗೆ ವಿಶ್ಲೇಷಿಸಬೇಕು ಅರ್ಥವಾಗುತ್ತಿಲ್ಲ ಏಕೆಂದರೆ, ಇತಿಹಾಸ ಹಂಗಿಲ್ಲದೆ ಬದುಕುವುದನ್ನು ರೂಢಿಸಿಕೊಂಡಿರುವ ವರ್ತಮಾನದ ಜಗತ್ತಿಗೆ ಒಬ್ಬ ಕಲಾವಿದೆಗೆ ಚರಿತ್ರೆ ಮತ್ತು ವರ್ತಮಾನ ಎಸಗಿರುವ ದ್ರೋಹ ಇವುಗಳು ವ್ಯರ್ಥ ಪ್ರಲಾಪ ಎಂದು ಅನಿಸಿಬಿಡುವ ಸಾದ್ಯತೆಗಳೇ ಹೆಚ್ಚು. ಏನೇ ಇರಲಿ “ ನಾದ ದೇವತೆ ನಾಗರತ್ನಮ್ಮ” ಎಂಬ ಶಿರ್ಷಿಕೆಯಡಿ ರಚಿಸುತ್ತಿರುವ ಕೃತಿಯಲ್ಲಿ  ನಾನು ಎಲ್ಲವನ್ನೂ ದಾಖಲಿಸಲು ತೀರ್ಮಾನಿಸಿದ್ದೇನೆ.
ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ದೇವದಾಸಿಯಾಗಿದ್ದ ಹೆಗ್ಗಡದೇವನಕೋಟೆ ಮೂಲದ ಪುಟ್ಟಲಕ್ಮಮ್ಮ ಎಂಬುವರ ಮಗಳಾಗಿ 1878 ರಲ್ಲಿ ಜನಿಸಿದ ನಾಗರತ್ನಮ್ಮ, ಮೈಸೂರಿನಲ್ಲಿ ಗಿರಿಭಟ್ಟರ ತಮ್ಮಯ್ಯ ಮತ್ತು ಬಿಡಾರಂ ಕೃಷ್ಣಪ್ಪನವರ ಬಳಿ ಸಂಗೀತ ವಿದ್ಯಾಭ್ಯಾಸ ಮಾಡಿ, ಆನಂತರ ಬೆಂಗಳೂರಿಗೆ ಬಂದು ತನ್ನ ಸಹೋದರ ಮಾವ ವೆಂಕಟಸ್ವಾಮಪ್ಪನವರ ಬಳಿ ತೆಲುಗು ಕೀರ್ತನೆ ಸೇರಿದಂತೆ, ಕರ್ನಾಟಕ ಸಂಗೀತವನ್ನು ಅಭ್ಯಾಸ ಮಾಡಿ ಕಲಾವಿದೆಯಾಗಿ ರೂಪುಗೊಂಡು,ಬೆಂಗಳೂರಿನ ಜಸ್ಟೀಸ್ ನರಹರಿರಾವ್ ಆಶ್ರಯದಲ್ಲಿ ಬೆಳೆದವರು. ಅವರ ನಿವೃತ್ತಿಯ ಸಮಯದಲ್ಲಿ ದಕ್ಷಿಣ ಭಾರತದಲ್ಲಿ ಸಂಗೀತದ ಕಾಶಿಯಾಗಿ ರೂಪುಗೊಳ್ಳುತ್ತಿದ್ದ ಮದ್ರಾಸ್ ನಗರಕ್ಕೆ ತೆರಳಿ, ತಮ್ಮ ನೃತ್ಯ, ಸೌಂದರ್ಯ, ಸಂಗೀತದ ಕಂಠಸಿರಿ ಹಾಗೂ ವಿದ್ವತ್ ಗಳಿಂದ ಅಲ್ಲಿನ ಸಂಗೀತ ಪ್ರೇಮಿಗಳ ಮನಗೆದ್ದು, ಆ ಕಾಲಕ್ಕೆ ಮದ್ರಾಸ್ ನಗರದಲ್ಲಿ ಸಂಗೀತ ಲೋಕದ ಅದ್ವಿತೀಯರು ಎನಿಸಿದ ವೀಣಾ ದಾನಮ್ಮಾಳ್ ಮತ್ತು ಲಲಿತಾಂಗಿ ( ಎಂ.ಎಲ್.ವಸಂತ ಕುಮಾರಿ ಇವರ ತಾಯಿ) ಮತ್ತು ಕೊಯಮತ್ತೂರು ತಾಯಿ ಎಂಬುವರ ಸರಿಸಮಾನಕ್ಕೆ ಬೆಳೆದು ನಿಂತವರು.


ಚೆನ್ನೈ ನಗರದ ಮದ್ರಾಸ್ ಹೈಕೋರ್ಟ್ ನ ಉತ್ತರ ಭಾಗಕ್ಕೆ 1840 ರಲ್ಲಿ ರೂಪುಗೊಂಡ ಜಾರ್ಜ್ ಟೌನ್ ಪ್ರದೇಶದಲ್ಲಿ ನೆಲೆಗೊಂಡು, ಆನಂತರ ಅಲ್ಲಿನ ಶ್ರೀನಿವಾಸ್ ಅಯ್ಯರ್ ರಸ್ತೆಯಲ್ಲಿ ಮ್ಯಾನ್ಸನ್ ಹೌಸ್ ಗಳೆಂದು ಕರೆಯಲಾಗುತ್ತಿದ್ದ ಬೃಹತ್ ಬಂಗಲೆಯೊಂದನ್ನು ಕಟ್ಟಿಕೊಂಡು ವಾಸಿಸತೊಡಗಿದರು. ಅಲ್ಲದೆ. ಪಕ್ಕದ ತಾತ ಮುತ್ತಪ್ಪ ಚೆಟ್ಟಿಯಾರ್ ರಸ್ತೆಯಲ್ಲಿ ಆಂಜನೇಯ ದೇವಸ್ಥಾನ ನಿರ್ಮಾಣ ಮಾಡಿ, ಆ ದೇಗುಲದಲ್ಲಿ ರಾಮ, ಸೀತೆ, ಲಕ್ಷ್ಮಣ, ಆಂಜನೇಯ ವಿಗ್ರಹಗಳ ಸ್ಥಾಪಿಸಿ ಪೂಜಿಸತೊಡಗಿದರು.

 ತ್ಯಾಗರಾಜರ ಕೀರ್ತನೆಗಳನ್ನು ಅರಂಭದಿಂದಲೂ ಮನದುಂಬಿ ಹಾಡುತ್ತಿದ್ದ ನಾಗರತ್ನಮ್ಮನವರಿಗೆ ಮೊದಲಿನಿಂದಲೂ ತಮ್ಮ ಗುರು ಬಿಡಾರಂ ಕೃಷ್ಣಪ್ಪನವರ ಪ್ರಭಾವದಿಂದ ರಾಮನೆಂದರೆ, ಅಪಾರ ಪ್ರೀತಿ ಮತ್ತು ಗೌರವ. ತ್ಯಾಗರಾಜರ ಆರಾಧ್ಯ ದೈವ ಕೂಡ ಶ್ರೀರಾಮ ಹಾಗಾಗಿ ಭಾರತದ ಪುರಾಣದಲ್ಲಿ ಮರ್ಯಾದ ಪುರುಷೋತ್ತಮ ಎನಿಸಿಕೊಂಡ ಶ್ರೀರಾಮ ಅಂತಿಮವಾಗಿ ಬೆಂಗಳೂರಿನ ನಾಗರತ್ನಮ್ಮನವರನ್ನು ತ್ಯಾಗರಾಜರ ಬಳಿ ಕೊಂಡೊಯ್ದ ನಿಲ್ಲಿಸಿದ.


ಒಮ್ಮೆ ತಿರುವಯ್ಯೂರಿಗೆ ಬೇಟಿ ನೀಡಿದ ನಾಗರತ್ನಮ್ಮನವರಿಗೆ ಅಲ್ಲಿನ ಕಾವೇರಿ ನದಿತೀರದಲ್ಲಿ ಮುಳ್ಳು ಕಂಠಿಗಳಿಂದ ಮುಚ್ಚಿಹೋಗಿದ್ದ ತ್ಯಾಗರಾಜರ ಸಮಾಧಿ ನೋಡಿ ಮನಸ್ಸಿಗೆ ಬೇಸರವಾಯಿತು. ಆ ವೇಳೆಗಾಗಲೇ ಮಕ್ಕಳಿಲ್ಲದ ನಾಗರತ್ನಮ್ಮ ಅಪಾರ ಐಶ್ವರ್ಯವಿದ್ದರೂ ಕೂಡ ವೈರಾಗ್ಯದತ್ತ ವಾಲಿದ್ದರು. ಹಾಗಾಗಿ ತ್ಯಾಗರಾಜರ ಸಮಾಧಿಯನ್ನು ಅಭಿವೃದ್ಧಿಪಡಿಸಿ, ಅವರಿಗೊಂದು ಗುಡಿ ಕಟ್ಟಿಸಿ, ಜೊತೆಗೆ ಸಮಾಧಿಯ ಸುತ್ತ ಮುತ್ತ ಇದ್ದ ಸುಮಾರು ಇಪ್ಪತ್ತು ಎಕರೆ ಪ್ರದೇಶವನ್ನು ಆರ್ಕಾಟ್ ನವಾಬನಿಂದ ಖರೀದಿಸಿ ಅಭಿವೃದ್ಧಿಪಡಿಸಿದರು. ಇದಕ್ಕಾಗಿ ತಮ್ಮ ಮದ್ರಾಸಿನ ಮನೆ ಮತ್ತು ತಮ್ಮ ಬಳಿ ಇದ್ದ ವಜ್ರ ವೈಢೂರ್ಯಗಳನ್ನು ಮಾರಿ ಹಾಕಿ, ಒಬ್ಬ ವಿರಾಗಿಣಿಯಂತೆ, ಬಂದು ತಿರುವಯ್ಯೂರಿನಲ್ಲಿ ನೆಲೆ ನಿಂತರು.

ಆದರೆ, ಅವರು ತಿರುವಯ್ಯೂರಿನಲ್ಲಿ ಎದುರಿಸಿದ ಅವರು ಸವಾಲುಗಳು, ಸಂಕಟಗಳು ಅಷ್ಟಿಷ್ಟಲ್ಲ, ಒಬ್ಬ ದೇವದಾಸಿ ಹೆಣ್ಣು ಮಗಳು ಅಂದಿನ ಜಾತಿಯ ರೋಗದಿಂದ ಬಳಲುತ್ತಿದ್ದ ಸಮಾಜವನ್ನು ಎದುರಿಸಿದ ರೀತಿಯೇ ಒಂದು ಕೃತಿಯಾಗಬಲ್ಲದು. ತ್ಯಾಗರಾಜರ ಆರಾಧನೆ ಆರಂಭಿಸಿದಾಗ, ನಾಗರತ್ನಮ್ಮ ಅನೇಕ ಅಪಮಾನಗಳನ್ನೂ ಸಹ ಎದುರಿಸಬೇಕಾಯಿತು. ಎಲ್ಲವನ್ನೂ ಸಮರ್ಪಕವಾಗಿ ಎದುರಿಸಿ, ಚಿನ್ನ ಮೇಳ ಮತ್ತು ಪೆರಿಯ ಮೇಳ ಎಂಬ ಎರಡು ಪಂಗಡಗಳು ನಡೆಸುತ್ತಿದ್ದ ಎರಡು ಆರಾಧನೆಯ ಕಾರ್ಯಕ್ರಮಗಳನ್ನು ಒಟ್ಟುಗೂಡಿಸಿದರು. ಅಲ್ಲದೆ, ಹೆಣ್ಣು ಮಕ್ಕಳಿಗೆ ಸಂಗೀತಾಧನೆಯಲ್ಲಿ ಸ್ಥಳವಿಲ್ಲ ಎಂಬ ಸವಾಲನ್ನು ಸ್ವೀಕರಿಸಿ, ಪ್ರತ್ಯೇಕವಾಗಿ ಕಲಾವಿದೆಯರ ಸಮ್ಮೆಳನ ನಡೆಸಿ ಎಲ್ಲರ ಬಾಯಿ ಮುಚ್ಚಿಸಿದರು. ಕೊನೆಗೆ ಅದೇ ತಿರುವಯ್ಯೂರು ಗ್ರಾಮದಲ್ಲಿ, ತ್ಯಾಗರಾಜರ ಸ್ಮರಣೆಯಲ್ಲಿ 1952 ರಲ್ಲಿ ನಿಧನಹೊಂದಿದರು. ಇದೀಗ ತ್ಯಾಗರಾಜರ ದೇಗುಲ ಮತ್ತು ಸಮಾಧಿ ಎದುರಿಗೆ ಸುಮಾರು ನೂರು ಅಡಿ ದೂರದಲ್ಲಿ ನಾಗರತ್ನಮ್ಮನವರ ಪುಟ್ಟ ಗುಡಿ ನಿರ್ಮಾಣ ಮಾಡಿ ಅಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.

ದುರಂತವೆಂದರೆ, ಇಡೀ ತಿರುವಯ್ಯೂರು ತ್ಯಾಗರಾಜಮಯವಾಗಿರುವ ಈ ದಿನಗಳಲ್ಲಿ ಯಾರಿಗೂ ನಾಗರತ್ನಮ್ಮನವರ ನೆನಪು ಬೇಡವಾಗಿದೆ.ತ್ಯಾಗರಾಜರ ಸಮಾಧಿ ಇರುವ ದೇಗುಲದಲ್ಲಿ ನಾಗರತ್ನಮ್ಮನವರ ಒಂದು ಚಿತ್ರ ಮತ್ತು ನಾಗರತ್ನಮ್ಮಾಳ್ ಟ್ರಸ್ಟ್ ಎಂಬ ಫಲಕ ಬಿಟ್ಟರೆ, ಬೇರೇನೂ ಮಾಹಿತಿಯಿಲ್ಲ. ನಾಯಿ ಗೂಡಿನಂತಿರುವ ನಾಗರತ್ನಮ್ಮನವರ ಪುಟ್ಟ ಗುಡಿಗೆ ಬೀಗ ಹಾಕಿ ಜಡಿಯಲಾಗಿದೆ. ಅವರ ಮೂರ್ತಿಗೆ ಉಡಿಸಿದ ಸೀರೆಗೆ ದೂಳು ಆವರಿಸಿಕೊಂಡಿದೆ. ಪ್ರತಿ ಎರಡು ಮೂರು ಗಂಟೆಗೆ ತ್ಯಾಗರಾಜರ ಮೂರ್ತಿಯ ಮೇಲಿನ ವಸ್ತ್ರವನ್ನು, ರುದ್ರಾಕ್ಷಿ ಹಾರವನ್ನು ತೆಗೆದು, ಗಂದ, ವಿಭೂತಿ ಹಚ್ಚಿ, ಹೊಸ ವಸ್ತ್ರ ತೊಡಿಸುವ ಮಂದಿಗೆ ನಾಗರತ್ನಮ್ಮ ನೆನಪಾಗುವುದಿಲ್ಲ. ಅಂದು ನಾಗರತ್ನಮ್ಮ ಮನಸ್ಸು ಮಾಡದಿದ್ದರೆ, ಇಂದು ತಿರುವಯ್ಯೂರಿನಲ್ಲಿ ತ್ಯಾಗರಾಜರೂ ಇರುತ್ತಿರಲಿಲ್ಲ, ತಿರುಪತಿ ತಿಮ್ಮಪ್ಪನೂ ಇರುತ್ತಿರಲಿಲ್ಲ. ಈ ವಾಸ್ತವವನ್ನು ಮರೆತಿರುವ ಇಂದಿನ ಜನಕ್ಕೆ ತ್ಯಾಗರಾಜರ ಆರಾಧನೆ ಒಬ್ಬ ದೇವದಾಸಿ ಹೆಣ್ಣು ಮಗಳಿಂದ ಆರಂಭವಾದ ಆರಾಧನೆ ಎಂದು ಹೇಳಿಕೊಳ್ಳುವುದು ಮುಜುಗರದ ಸಂಗತಿಯಾಗಿದೆ.

ಇತ್ತೀಚೆಗೆ ಆರಂಭಗೊಂಡಿರುವ ಸಮುದಾಯ ಭವನಕ್ಕೆ ಸದ್ಗುರು ತ್ಯಾಗರಾಜರ್ ಭವನ ಎಂದು ಹೆಸರಿಟ್ಟು, ಜನರೆಟರ್ ಕೊಠಡಿಗೆ ಶ್ಯಾಮಶಾಸ್ತ್ರಿ ಹೆಸರಿಟ್ಟಿರುವ ಮನಸ್ಸುಗಳಿಗೆ ಎಲ್ಲಿಯೂ ನಾಗರತ್ನಮ್ಮನವರ ಪ್ರತಿಮೆಯನ್ನು ಬಹಿರಂಗವಾಗಿ ಸ್ಥಾಪಿಸಲು ಮನಸ್ಸು ಇದ್ದಂತಿಲ್ಲ.

 ಅಂದು ನಾಗರತ್ನಮ್ಮ ತ್ಯಾಗರಾಜರ ಸಮಾಧಿಗೆ ಸೇರ್ಪಡೆ ಮಾಡಿದ ಇಪ್ಪತ್ತು ಎಕರೆ ಭೂಮಿಯ ಇಂದಿನ ಮಾರುಕಟ್ಟೆಯ ಮೌಲ್ಯ ಸುಮಾರು ಅರವತ್ತು ಕೋಟಿ ರೂಪಾಯಿಗಳು. ಗೆದ್ದಲು ಕಟ್ಟಿದ ಹುತ್ತಕ್ಕೆ ಹಾವು ಬಂದು ಠಿಕಾಣಿ ಹೂಡಿತು ಎಂಬ ಮಾತು ಕಳೆದ ಈತಿಂಗಳ ಐದು ಮತ್ತು ಆರಂದು ತಿರುವಯ್ಯುರು ಪಟ್ಟಣದಲ್ಲಿ ಸಂಚರಿಸುತ್ತಾ, ಕಾವೇರಿ ನದಿಯ ದಡದಲ್ಲಿ ಕುಳಿತಾಗ ನೆನಪಿಗೆ ಬಂದಿತು. ಅದಕ್ಕೆ ಎರಡು ದಿನಗಳ ಹಿಂದೆ ಮದ್ರಾಸ್ ನಗರದಲ್ಲಿ ಕಷ್ಟಪಟ್ಟು ಹುಡುಕಿದ ಅವರ ಮನೆ, ದೇಗುಲ, ರಸ್ತೆ ಇವುಗಳನ್ನು ನೆನೆಸಿಕೊಂಡಾಗ ಇದನ್ನು ಸಂಶೋಧನೆ ಸುಖ ಎನ್ನಲೋ? ಸಂಕಟವೆನ್ನಲೋ? ಎಂಬುದು ಅರಿಯದಾಯಿತು.


ಮಂಗಳವಾರ, ಡಿಸೆಂಬರ್ 31, 2013

ಅಣುಲೋಕದ ವಂಚನೆಯ ಜಗತ್ತು.



ಕಳೆದ ಎರಡು  ದಶಕಗಳಲ್ಲಿ ಭಾರತದಲ್ಲಿ ಬದಲಾದ  ಸಾಮಾಜಿಕ ಬದುಕಿನ ಪಲ್ಲಟಗಳಿಂದಾಗಿ, ಮತ್ತು ಮನುಷ್ಯ ಜೀವಿಯ ಖಾಸಾಗಿ ಮತ್ತು ಸಾಮಾಜಿಕ ಬದುಕಿನೊಂದಿಗೆ ತಳುಕು ಹಾಕಿಕೊಂಡ ಆಧುನಿಕತೆಯ  ತಂತ್ರಜ್ಞಾನದ ಫಲವಾಗಿ ವಿದ್ಯುತ್ ಕೂಡ ಈಗ ಆಹಾರ, ನೀರು ಮತ್ತು ಗಾಳಿಯಂತೆ ಮೂಲಭೂತ ಬೇಡಿಕೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ದೇಶದಲ್ಲಿ ಏರುತ್ತಿರುವ ವಿದ್ಯುತ್ ಬೇಡಿಕೆ, ಆಹಾರ ಪದಾರ್ಥಗಳ ಬೆಲೆಗಳ ಜೊತೆ ಪೈಪೊಟಿಗೆ ಬಿದ್ದಂತೆ ಕಾಣುತ್ತಿದೆ.
ಭಾರತದಲ್ಲಿ ವಿದ್ಯುತ್ ಬೇಡಿಕೆ ಪೂರೈಸಲು, ಜಲವಿದ್ಯುತ್, ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆ ಹಾಗೂ ನೈಸರ್ಗಿಕವಾಗಿ ದೊರೆಯುವ ಗಾಳಿ ಮತ್ತು ಸೂರ್ಯನ ಬೆಳಕಿನಿಂದ ವಿದ್ಯುತ್ ಉತ್ಪಾದಿಸಲಾಗುತ್ತಿದ್ದರೂ ಸಹ ಪ್ರತಿ ವರ್ಷ ಶೇಕಡ ಹದಿನೈದರಿಂದ ಇಪ್ಪತ್ತರಷ್ಟು ವಿದ್ಯುತ್ ಬೇಡಿಕೆಯ ಪ್ರಮಾಣ ಹೆಚ್ಚುತ್ತಿದೆ. ಈ ನಾಲ್ಕು ಸಾಂಪ್ರದಾಯಕ ಮೂಲಗಳಲ್ಲದೆ, ಭಾರತದಲ್ಲಿ ಇಪ್ಪತ್ತು ಅಣುವಿದ್ಯುತ್ ಸ್ಥಾವರಗಳಿಂದ  ಒಟ್ಟು 5800 ಮೆಗಾವ್ಯಾಟ್ ಉತ್ಪಾದಿಸಲಾಗುತ್ತಿದ್ದು, ಸದ್ಯದಲ್ಲಿ ಮತ್ತೇ ಆರು ಸ್ಥಾವರಗಳಿಂದ 5300 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಯೋಜನೆ ಹಾಕಿಕೊಳ್ಳಲಾಗಿದೆ
.
2030 ರ ವೇಳೆಗೆ ಅಣು ವಿದ್ಯುತ್ ಸ್ಥಾವರಗಳಿಂದ ಭಾರತದಲ್ಲಿ 63 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಗುರಿ ಹಾಕಿಕೊಳ್ಳಲಾಗಿದೆ. ಅತ್ಯಂತ ಅಪಾಯಕಾರಿ ಹಾಗೂ ಪರಿಸರ ಮತ್ತು ಜೀವಜಾಲಕ್ಕೆ ಮಾರಕ ಎನ್ನಲಾದ ಅಣುವಿದ್ಯುತ್ ತಂತ್ರಜ್ಞಾನವನ್ನು ಬಹುತೇಕ ಪಾಶ್ಚಿಮಾತ್ಯ ಜಗತ್ತಿನ ರಾಷ್ಟ್ರಗಳು ತಿರಸ್ಕರಿಸಿವೆ. ಆದರೆ, ತಾವು ಅಭಿವೃದ್ಧಿ ಪಡಿಸಿದ ಹಾಗೂ ಮನು ಕುಲಕ್ಕೆ ಎರವಾಗಬಲ್ಲ ಈ ತಂತ್ರಜ್ಞಾನವನ್ನು ಅಮೇರಿಕಾ, ಕೆನಡಾ, ಪ್ರಾನ್ಸ್, ಮತ್ತು ರಷ್ಯಾ ದೇಶಗಳು ತೃತೀಯ ಜಗತ್ತಿನ ರಾಷ್ಟ್ರಗಳಿಗೆ ಧಾರೆಯೆರೆಯುತ್ತಿವೆ, ಪಶ್ಚಿಮದಿಂದ ದೊರೆಯುವ ಎಲ್ಲವನ್ನೂ ಸ್ವೀಕರಿಸುವ ಕುರುಡು ಪ್ರಜ್ಞೆಯನ್ನು ಬೆಳಸಿಕೊಂಡಿರುವ ಭಾರತ ಕೂಡ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ.
ಕಳೆದ ನಾಲ್ಕು ದಶಕಗಳಿಂದ ಈ ಅಪಾಯಕಾರಿ ತಂತ್ರಜ್ಞಾನದ ಬಗ್ಗೆ ಭಾರತದಲ್ಲಿ ಅನೇಕ ಪ್ರಜ್ಞಾವಂತರು, ಪ್ರತಿಭಟನೆ ವ್ಯಕ್ತ ಪಡಿಸಿದರೂ ಸಹ ಅದು ಅರಣ್ಯ ರೋಧನವಾಗಿ ಉಳಿದುಬಂದಿತ್ತು. ಈ ತಂತ್ರಜ್ಞಾನದ ಬಗ್ಗೆಯಾಗಲಿ, ಅಥವಾ ಅಣುಸ್ಥಾವರಗಳಲ್ಲಿ ಸಂಭವಿಸುವ ಅವಘಡ ಕುರಿತಾಗಲಿ ಜನಸಾಮಾನ್ಯರಿಗೆ ಯಾವುದೆ ಮಾಹಿತಿ ದೊರಕುತ್ತಿರಲಿಲ್ಲ. ಅದೆಲ್ಲವನ್ನೂ ದೇಶದ ರಕ್ಷಣೆಯ ನೆಪದಲ್ಲಿ ಗೌಪ್ಯವಾಗಿ ಕಾಪಾಡಿಕೊಂಡು ಬರಲಾಗುತ್ತಿತ್ತು.  ಆದರೆ. 2011 ರಲ್ಲಿ ಜಪಾನ್ ದೇಶದಲ್ಲಿ ಸಂಭವಿಸಿದ ಸುನಾಮಿ ಪ್ರಕೃತಿ ವಿಕೋಪದಲ್ಲಿ ಅಲ್ಲಿನ ಪುಕೊಶಿಮ ಅಣು ವಿದ್ಯುತ್ ಸ್ಥಾವರ ಸ್ಪೋಟಗೊಂಡು ಅದರಿಂದ ಹೊರಸೂಸಿದ ಅಣುವಿಕಿರಣಗಳು ಮತ್ತು ಅದರ ಪ್ರಭಾವ ಹೊರ ಜಗತ್ತಿಗೆ ಅನಾವರಣಗೊಳ್ಳುತ್ತಿದ್ದಂತೆ ಏಷ್ಯಾದ ಎಲ್ಲೆಡೆ ಆತಂಕ ಸೃಷ್ಟಿಯಾಗತೊಡಗಿದೆ. ಭಾರತದಲ್ಲಿ ಜನಸಾಮಾನ್ಯರೂ ಸಹ ತಮ್ಮ ತಮ್ಮ ಪ್ರದೇಶಗಳಲ್ಲಿ ಅಣುವಿದ್ಯುತ್ ಸ್ಥಾವರಗಳ ಸ್ಥಾಪನೆಗೆ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ
ಮಹಾರಾಷ್ಟ್ರದ ಜತಿಪುರ್ ಎಂಬಲ್ಲಿ ರಷ್ಯ ಸಹಯೋಗದಿಂದ ಆರಂಭವಾಗಬೇಕಿದ್ದ , 9900 ಮೆಗಾವ್ಯಾಟ್ ಅಣು ವಿದ್ಯುತ್ ಯೋಜನೆಗೆ ತಡೆ ಒಡ್ಡಲಾಗಿದೆ. ಪಶ್ಚಿಮ ಬಂಗಾಳದ ಹರಿಪುರ್ ಎಂಬಲ್ಲಿ 600 ಮೆಗಾವ್ಯಾಟ್ ಅಣು ಉತ್ಪಾದನೆ ಯೋಜನೆಗೆ ಪಶ್ಚಿಮ ಬಂಗಾಳ ಸರ್ಕಾರ ವಿರೋಧ ವ್ಯಕ್ತಪಡಿಸಿದೆ.  ಇತ್ತೀಚೆಗಿನ ದಿನಗಳಲ್ಲಿ ತಮಿಳುನಾಡಿನ ದಕ್ಷಿಣ ಭಾಗದ ಬಂಗಾಳ ಕೊಲ್ಲಿಯ ಸಮುದ್ರ ತೀರದ ಬಂದರು ಪಟ್ಟಣವಾದ ತೂತ್ತುಕುಡಿಯಲ್ಲಿ ( ಟೂಟುಕೋರಿನ್)  ರಷ್ಯಾ ಸಹಕಾರದಿಂದ ಎರಡು ಸಾವಿರ ಮೆಗಾವ್ಯಾಟ್ ಅಣು ವಿದ್ಯುತ್ ಯೋಜನೆಗೆ ಎದುರಾದ ಎಲ್ಲಾ ಅಡೆತಡೆಗಳನ್ನು ಬಗ್ಗು ಬಡಿದ ಕೇಂದ್ರ ಸರ್ಕಾರ,  ಸ್ಥಳಿಯ ಜನರ ಪ್ರತಿಭಟನೆಯನ್ನು ಲೆಕ್ಕಿಸದೆ,  ಒಂದು ಸಾವಿರ ಮೆಗಾವ್ಯಾಟ್ ಉತ್ಪಾದನೆಯ ಸ್ಥಾವರ ಕಾರ್ಯಾರಂಭಕ್ಕೆ ಅನುವು ಮಾಡಿಕೊಟ್ಟಿದೆ. ಎರಡನೆಯ ಸ್ಥಾವರದ ನಿರ್ಮಾಣ ಕಾರ್ಯ ಮುಂದುವರಿದಿದೆ. ಈ ಅಣುವಿದ್ಯುತ್ ಸ್ಥಾವರಕ್ಕೆ ಜನರನ್ನು ಸಂಘಟಿಸಿದ ಸ್ವಯಂ ಸೇವಾ ಕಾರ್ಯಕರ್ತರನ್ನು ಮತ್ತು ವಿದೇಶಿ ಪರಿಸರ ಹೋರಾಟಗಾರರು ಮತ್ತು ತಜ್ಞರನ್ನು ಸ್ಥಳಿಯ ಪ್ರದೇಶಕ್ಕೆ ಬೇಟಿ ನೀಡದಂತೆ ನಿರ್ಭಂದ ಹೇರಲಾಗಿದೆ. ಸ್ಥಳೀಯ ನಾಯಕ ಪರಪ್ಪರಾಯನ್ ಎಂಬಾತನಿಗೆ ಆತನ 
ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಪೊಲೀಸರು ಅನುಮತಿ ನಿರಾಕರಿಸಿದರು


.
ಇತ್ತೀಚೆಗಿನ ದಿನಗಳಲ್ಲಿ ನಮ್ಮನ್ನಾಳುವ ಜನಪ್ರತಿನಿಧಿಗಳು ಮತ್ತು ಆಳುವ ಸರ್ಕಾರಗಳು ಪರಿಸರ ಹೋರಾಟಗಾರರನ್ನು ಮತ್ತು ಪರಿಸರವಾದಿಗಳನ್ನು ಅಭಿವೃದ್ಧಿಯ ವಿರೋಧಿಗಳೆಂದು ಪ್ರತಿಬಿಂಬಿಸುತ್ತಾ ಬಂದಿದ್ದಾರೆ. ಮನುಕುಲಕ್ಕೆ ನೆರವಾಗುವ ಅಥವಾ ಬೆಳಕಾಗುವ ಯಾವುದೇ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ವಿರೋಧಿಸುವ ಸಿನಿಕತನವನ್ನು ಯಾವೊಬ್ಬ ಪರಿಸರವಾದಿ ಹೊಂದಿರುವುದಿಲ್ಲ. ಆದರೆ ಅದು ಯಾವುದೇ ವಿಜ್ಞಾನ, ಅಥವಾ ತಂತ್ರಜ್ಞಾನವಾಗಿರಲಿ, ಮನುಷ್ಯನಿಂದ ಅವಿಷ್ಕಾರಗೊಂಡ ಮೇಲೆ ಅದು ಅವನ ನಿಯಂತ್ರಣದಲ್ಲಿರಬೇಕು. ಆದರೆ, ಜೈವಿಕ ತಂತ್ರಜ್ಞಾನ ಕ್ರೇತ್ರದಲ್ಲಿ ಕ್ಷಿಪ್ರ ಗತಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ಮತ್ತು ಅಣು ಲೋಕದ ವಿದ್ಯಾಮಾನಗಳು ಈಗಾಗಲೇ ಮನುಷ್ಯನ ನಿಯಂತ್ರಣವನ್ನು ಮೀರಿದ ರಂಗಗಳಾಗಿವೆ. ಇವುಗಳಿಂದ ಆಗುತ್ತಿರುವ ದುರಂತಕ್ಕೆ ನಾಗರೀಕ ಜಗತ್ತು ಮೂಕಸಾಕ್ಷಿಯಾಗಿದೆ. ಅಣ್ವಸ್ತ್ರಗಳು, ಅಣು ಬಾಂಬ್ ಗಳು, ಅಣು ವಿದ್ಯುತ್ ಸ್ಥಾವರಗಳ ದುರಂತಗಳು, ಆನಂತರ ಅಣುವಿಕಿರಣದ ಪ್ರಭಾವದಿಂದ ಮಾನವ ಮತ್ತು ಪ್ರಾಣಿ ಜಗತ್ತು ಹಾಗೂ ನೈಸರ್ಗಿಕ ಜಗತ್ತಿನಲ್ಲಾದ ಪರಿಣಾಮಗಳಲ್ಲದೆ, ಕುಲಾಂತರಿ ತಳಿಗಳ ಅಡ್ಡ ಪ್ರಯೋಗದಿಂದ ಸೃಷ್ಟಿಯಾದ ದೈತ್ಯ ಕಳೆಗಳು, ಎಂತಹ ವಿಷವನ್ನೂ ಜೀರ್ಣಿಸಿಕೊಳ್ಳುವ ಹೊಸ ಕೀಟಗಳು ಇವುಗಳಿಗೆ ನಾವು ಯಾರಿಂದ ಉತ್ತರ ನಿರೀಕ್ಷಿಸೋಣ?  ಕಣ್ಣೆದುರುಗಿನ ವಾಸ್ತವವನ್ನು ಅರ್ಥಮಾಡಿಕೊಳ್ಳಲಾಗದ ಅಭಿವೃದ್ಧಿ ಭ್ರಮೆಯ ಜಗತ್ತಿಗೆ ಪರಿಸರ ಪ್ರೇಮಿಗಳು ಸಿನಿಕರಂತೆ  ಕಾಣದೆ ಬೇರೆ ತರಹ ಕಾಣಲು ಸಾದ್ಯವೆ?

1986 ರ ಏಪ್ರಿಲ್ 25 ಮತ್ತು 26 ನಡುವಿನ ಮಧ್ಯರಾತ್ರಿ ರಷ್ಯಾದ ಚೆರ್ನೋಬಿಲ್ ಅಣುವಿದ್ಯುತ್ ಸ್ಥಾವರದ ಘಟನೆಗೆ ಸಾಕ್ಷಿಯಾದ ವ್ಲಾದಿಮಿರ್ ಚೆರ್ನೆಂಕೊ ಎಂಬ ಅಣುವಿಜ್ಞಾನಿ, ಕ್ಯಾನ್ಸರ್ ಪಿಡಿತನಾಗಿ 1993 ರಲ್ಲಿ ಅಮೇರಿಕಾ ದೇಶಕ್ಕೆ ಚಿಕಿತ್ಸೆಗಾಗಿ ಬಂದ ಸಂದರ್ಭದಲ್ಲಿ ತಾನು ಸಾಯುವ ಮುನ್ನ ಜಗತ್ತಿನೆದುರು ಬಿಚ್ಚಿಟ್ಟ ವಾಸ್ತವ ಸತ್ಯ ಇದು. ವ್ಲಾದಿಮೀರ್ ಚೆರ್ನೆಂಕೋ ರಷ್ಯಾದ ಅತ್ಯಂತ ಹಿರಿಯ ಅಣುವಿಜ್ಞಾನಿ. ಅಲ್ಲಿನ ಅಣ್ವಸ್ತ್ರಗಳು ಮತ್ತು ಅಣು ವಿದ್ಯುತ್ ಸ್ಥಾವರಗಳ ಅವಿಷ್ಕಾರದಲ್ಲಿ ಸತತ ಐವತ್ತು ವರ್ಷಗಳ ಕಾಲ ತೊಡಗಿಸಿಕೊಂಡಿದ್ದ ಈ ವಿಜ್ಞಾನಿ. ತಾನು ಸಾಯುವ ಕೆಲವೇ ದಿನಗಳ ಮುನ್ನ, ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿ ಜಗತ್ತಿನ ಮಾಧ್ಯಮಗಳ ಎದುರು ಅಣುಲೋಕದ ವಂಚನೆಗಳನ್ನು ವಿವರಿಸುತ್ತಾ, ಅಮೇರಿಕಾ ರಷ್ಯಾ ಸೇರಿದಂತೆ ಎಲ್ಲಾ ರಾಷ್ಟ್ರಗಳ ಮುಖವಾಡಗಳನ್ನು ಕಳಚಿ ಹಾಕಿದ. ಅವನ ಮಾತಿನ ವಿವರಗಳು ಹೀಗಿವೆ.
“ ಚರ್ನೋಬಿಲ್ ಅಣಸ್ಥಾವರದ ಸ್ಪೋಟ ಸಂಭವಿಸಿದ್ದು 1986 ರ ಏಪ್ರಿಲ್ 25 ಮತ್ತು 26 ರ ನಡುರಾತ್ರಿ. ತನ್ನ ಮಿತಿಮೀರಿದ ಶಾಖದಿಂದ ಸ್ಪೋಟಗೊಂಡ ಅಣುಸ್ಥಾವರ ನಿರಂತರ ಹದಿನಾರು ದಿನಗಳ ಕಾಲ ಅಣುವಿಕಿರಣಗಳನ್ನು ಹೊರ ಜಗತ್ತಿಗೆ ಸೂಸುತ್ತಾ, ಹತ್ತಿ ಉರಿದರೂ ರಷ್ಯಾ ಸರ್ಕಾರ ಏನೂ ಆಗಿಲ್ಲ ಎಂಬಂತೆ ತಣ್ಣಗೆ ಕುಳಿತಿತ್ತು. ಆ ವೇಳೆಗಾಗಲೆ ದುರಂತ ನಡೆದ ಸ್ಥಳದಿಂದ 40 ಕಿಲೊಮೀಟರ್ ವ್ಯಾಪ್ತಿಯೊಳಗೆ ಅಣುವಿಕಿರಣ ಮತ್ತು ವಿಷಾನಿಲ ಪರಿಸರದ ಮೇಲೆ ತಮ್ಮ ಪರಿಣಾವನ್ನು ತೋರಿದ್ದವು.  ರಷ್ಯಾ ಸರ್ಕಾರ ದುರಂತ ನಡೆದ ಸ್ಥಳದ ಸುತ್ತಾ ಸೇನಾ ತುಕಡಿಯನ್ನು ಪಹರೆಗೆ ಇರಿಸಿ, ಏನೂ ಆಗಿಲ್ಲವೆಂಬಂತೆ ಜಗತ್ತಿನೆದುರು ಮುಖವಾಡ ಧರಿಸಿ ಕುಳಿತಿತ್ತು

ಏಪ್ರಿಲ್ 28 ರ ಬೆಳಿಗ್ಗೆ ಅಂದಿನ ಅಧ್ಯಕ್ಷ ಗೋರ್ಬಚೇವ್ ನನ್ನನ್ನು ಕರೆಸಿ, ಈ ಅಣುಸ್ಥಾವರದ ದುರಂತ ಮತ್ತು ದುರಸ್ತಿಯ ಸಾಧ್ಯತೆಗಳ ಬಗ್ಗೆ ವರದಿ ಸಲ್ಲಿಸಲು ಕೇಳಿಕೊಂಡರು. ದುರಂತವೆಂದರೆ, ಅಣುವಿಕಿರಣದ ಪ್ರಮಾಣವನ್ನು ಅಳೆಯಲು ನಮ್ಮ ಬಳಿ ಇದ್ದ ಮಾಪನಗಳು ಕೇವಲ 400 ರೆಮ್ಸ್ ಮಾತ್ರ ಅಳೆಯಬಲ್ಲ ಸಾಧನಗಳಾಗಿದ್ದವು. ಆದರೆ, ಅಣುವಿಕಿರಣ ಇದರ ಗಡಿಯನ್ನು ದಾಟಿತ್ತು. ( 5 ರೆಮ್ಸ್ ವರೆಗಿನ ಅಣುವಿಕಿರಣ ಮನುಷ್ಯರಿಗೆ ಅಪಾಯವಿಲ್ಲ ಎಂಬುದು ಅಣು ತಜ್ಞರ ಹೇಳಿಕೆ) ಚರ್ನೋಬಿಲ್ ಸ್ಥಾವರದ ಶಾಖವನ್ನು ತಣಿಸಿ, ಅಲ್ಲಿನ ಅವಶೇಷಗಳನ್ನು ಸ್ವಚ್ಚ ಮಾಡಲು 18 ರಿಂದ 25 ವರ್ಷದ ಸೇನಾ ಯೋಧರನ್ನು ಸ್ಥಳಕ್ಕೆ ಕಳಿಸಲಾಯಿತು. ಯಾವೊಂದು ರಕ್ಷಣಾ ಕವಚ ಧರಿಸಿದೆ ದುರಂತ ಸ್ಥಳಕ್ಕೆ ಬೇಟಿ ನೀಡಿದ ಈ ಅಮಾಯಕ ಸೈನಿಕರು.ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದ್ದರು. ದುರಂತ ಹಾಗೂ ಅದರ ಪರಿಣಾಮ ಹೆಚ್ಚಿನದಲ್ಲ ಎಂಬುದನ್ನು ಜಗತ್ತಿಗೆ ತೋರಿಸುವುದು ರಷ್ಯಾ ಸರ್ಕಾರದ ಹುನ್ನಾರವಾಗಿತ್ತು. ಆನಂತರ ಏಳು ಸಾವಿರ ಸೈನಿಕರ ಸಹಾಯ ಮತ್ತು ಹೆಲಿಕಾಪ್ಟರ್ ಗಳ ಮೂಲಕ ಅಣುಸ್ಥಾವರದ ಮೇಲೆ ಸಾವಿರಾರು ಟನ್ ಗಾಜಿನ ಚೂರು ಮತ್ತು ಕಾಂಕ್ರೀಟ್ ಸುರಿದು, ಅಣುಸ್ಥಾವರದ ಮೇಲೆ ಐವತ್ತು ಮೀಟರ್ ಎತ್ತರದ ಸಮಾಧಿ ಕಟ್ಟಲಾಯಿತು. ದುರಂತವೆಂದರೆ, ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಯಾವೊಬ್ಬ ಸೈನಿಕನೂ ನಂತರದ ದಿನಗಳಲ್ಲಿ ಬದುಕುಳಿಯಲಿಲ್ಲ.
ಅಧ್ಯಕ್ಷರ ಅಪ್ಪಣೆ ಮೇರೆಗೆ ನಾನು ಚರ್ನೋಬಿಲ್ ಅಣುಸ್ಥಾವರದ ದುರಂತದ ಬಗ್ಗೆ ಮೂರು ಸಂಪುಟಗಳ ವರದಿಯನ್ನು ಸಲ್ಲಿಸಿದೆ. ಕೂಡಲೆ ನನ್ನ ವರದಿ ರಷ್ಯಾ ಸರ್ಕಾರದ ರಹಸ್ಯ ಕಪಾಟಿನೊಳಕ್ಕೆ ಸೇರಿಕೊಂಡಿತು. ಆನಂತರ ಈ ವರದಿ ಕುರಿತು ರಷ್ಯಾ ಸರ್ಕಾರವಾಗಲಿ, ಅಂತರಾಷ್ಟ್ರೀಯ ಅಣು ಆಯೋಗವಾಗಲಿ ತುಟಿ ಬಿಚ್ಚಲಿಲ್ಲ. ಸರ್ಕಾರದ ಪ್ರಕಾರ ದುರಂತದಲ್ಲಿ ಸತ್ತವರ ಸಂಖ್ಯೆ ಕೇವಲ ಹದಿನಾರು ಮಾತ್ರ. ಆದರೆ ಕಾರ್ಯಾಚರಣೆ ವೇಳೆ ಸತ್ತವರ ಸೈನಿಕರ ಸಾವನ್ನು ಹೊರ ಜಗತ್ತಿನಿಂದ ಮರೆ ಮಾಚಲಾಗಿತ್ತು

ಕೀವ್ ಎಂಬ ನಲವತ್ತು ಲಕ್ಷ ಜನಸಂಖ್ಯೆಯುಳ್ಳ ನಗರ ಈ ದುರಂತದಿಂದಾಗಿ ತನ್ನೆಲ್ಲಾ ಲಕ್ಷಣಗಳನ್ನು ಕಳೆದುಕೊಂಡು ಸಾವಿನ ಮನೆಯಾಗಿ ಪರಿವರ್ತನೆಗೊಂಡಿತು. ನಾನು ಮೊದಲು ಅಣುಸ್ಥಾವರದ ದುರಂತದಿಂದ ಈ ನಗರದ ಮೇಲೆ ಕೇವಲ ಮೂರು ರೆಮ್ಸ್ ಪ್ರಮಾಣದ ಅಣುವಿಕಿರಣದ ಪ್ರಭಾವ ಬೀರಿರಬೇಕೆಂದು ಊಹಿಸಿದ್ದೆ, ಆದರೆ, ಅಲ್ಲಿ ಎಪ್ಪತ್ತು ರೆಮ್ಸ್ ನಷ್ಟು ಅಣುವಿಕಿರಣ ಹೊರಸೂಸಿತ್ತು.  ಒಟ್ಟಾರೆ, ಚರ್ನೋಬಿಲ್ ಅಣುವಿದ್ಯುತ್ ಸ್ಥಾವರದ ದುರಂತದಿಂದಾಗಿ ರಷ್ಯಾದ ಆರೂವರೆ ಕೊಟಿ ಜನ ಅಣುವಿಕಿರಣಗಳ ಪ್ರಭಾವದಿಂದ ನರಳುವಂತಾಯಿತು.ಇದರಿಂದ ಉಂಟಾದ ಹಾನಿಯ ಪ್ರಮಾಣ ಎರಡನೇಯ ಮಹಾಯುದ್ದದ ಪರಿಣಾಮವನ್ನು ಮೀರಿಸುವಂತಿತ್ತು. ರಷ್ಯಾದ ಆ ಪ್ರದೇಶದ ಸುತ್ತ ಮುತ್ತಲಿನ ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಪ್ರತಿ ತಿಂಗಳೂ ಹೆಸರಿಸಲಾಗದಷ್ಟು ಅನೇಕ ಹೊಸ ಖಾಯಿಲೆಗಳು ಹುಟ್ಟಿಕೊಂಡವು, 



ಮನುಷ್ಯರ ದೈಹಿಕ ಪ್ರಕ್ರಿಯೆಯಲ್ಲಿ ಅನೇಕ ಬದಲಾವಣೆಗಳು ಉಂಟಾದ ಪರಿಣಾಮವಾಗಿ ಅಂಗವಿಕಲ ಮಕ್ಕಳ ಜನನ ಸಾಮಾನ್ಯವಾಯಿತು. ಪ್ರಾಣಿಗಳ ಬದುಕು ಸಹ ಮನುಷ್ಯರಿಂತ ಭಿನ್ನವಾಗಿರಲಿಲ್ಲ. ಚರ್ನೋಬಿಲ್ ಅಣುಸ್ಥಾವರ ಹತ್ತಿರವಿದ್ದ ಹಳ್ಳಿಗಳ ಸುಮಾರು ಹದಿನೈದು ಲಕ್ಷ ಜನತೆ ತೀವ್ರ ವಿಕಿರಣಕ್ಕೆ ತುತ್ತಾದರು.ಇದರ ಜೊತೆಗೆ ಯುರೋಪಿನ ಗೋಧಿಯ ಕಣಜವೆನಿಸಿದ್ದ ಉಕ್ರೇನಿನ ಫಲವತ್ತಾದ ಭೂಮಿ, ಮತ್ತು ಅಲ್ಲಿನ ನೆಲಮೂಲಗಳು ಅಣು ವಿಕಿರಣಕ್ಕೆ ತುತ್ತಾದವು. ಈ ಭೂಮಿಯಲ್ಲಿ ಬೆಳೆಯಲಾದ ಗೋಧಿ, ತರಕಾರಿ, ಹಣ್ಣುಗಳನ್ನು ಸೇವಿಸಿದ ಜನರ ಜಠರದಲ್ಲಿ ಹುಣ್ಣುಗಳಾದವು. ಅನಿಮಿಯಾ ಮತ್ತು ಕ್ಯಾನ್ಸರ್ ಕಾಯಿಲೆಗೆ ತುತ್ತಾದರು.
ದುರಂತದ ಸಂಗತಿಯೆಂದರೆ, ಈ ಮೊದಲು ರಷ್ಯಾದಲ್ಲಿ 104 ಅಣುಸ್ಥಾವರಗಳ ಸಣ್ಣ ಪುಟ್ಟ ದುರಂತಗಳು ಸಂಭವಿಸಿದ್ದವು. ಅವೆಲ್ಲವನ್ನೂ ಮಿಲಿಟರಿ ರಕ್ಷಣೆಯ ನೆಪದಲ್ಲಿ ಗೌಪ್ಯವಾಗಿಡಲಾಗಿತ್ತು. ರಷ್ಯಾದಲ್ಲಿ ಅಣು ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವ ಸಂದರ್ಭದಲ್ಲಿ ಮನುಷ್ಯ ನಿರ್ಮಿತ ತಪ್ಪಿನಿಂದಾಗಿ ಇನ್ನೂರಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದವು. ನಿಜ ಹೇಳಬೇಕೆಂದರೆ, ನನ್ನ ನೆಲವಾದ ರಷ್ಯಾದಲ್ಲಿ ಒಂದಿಂಚು ಭೂಮಿ ಅಣುವಿಕಿರಣದಿಂದ ಮುಕ್ತವಾಗಿಲ್ಲ. ಈ ಮೊದಲು ಅಣುಶಕ್ತಿ ಕೇಂದ್ರ ಮತ್ತು ಅಣುಸ್ಥಾವರಗಳಲ್ಲಿ ಸ್ಪೋಟ ಸಂಭವಿಸಿದಾಗ ಮಾತ್ರ ಅಪಾಯ  ಎಂದು ಅಂದಾಜಿಸಲಾಗಿತ್ತು. ಅದು ತಪ್ಪು ಊಹೆ ಎಂದು ನನಗೆ ಮನದಟ್ಟಾಯಿತು. ಅಣು ಸ್ಥಾವರಗಳ ಚಟುವಟಿಕೆ ನಡೆಯುವ ಪ್ರದೇಶಗಳ ಸುತ್ತ ಮುತ್ತಲಿನ ನೀರಿನ ಸೆಲೆಗಳು ಅಣುವಿಕಿರಣಕ್ಕೆ ಒಳಗಾಗಿರುವುದನ್ನು ನಾನು ನನ್ನ ದೇಶದ ಹತ್ತು ಅಣುಸ್ಥಾವರಗಳ ಪ್ರದೇಶದಲ್ಲಿ ದೃಢಪಡಿಸಿಕೊಂಡೆ. 1991 ರಿಂದ 1993 ರವರೆಗೆ ಕೇವಲ ಎರಡು ವರ್ಷಗಳಲ್ಲಿ ಅಮೇರಿಕಾ ಸೇರಿದಂತೆ ಹದಿನಾಲ್ಕು ರಾಷ್ಟ್ರಗಳ 152 ಅಣು ವಿದ್ಯುತ್ ಸ್ಥಾವರಗಳಲ್ಲಿ ಸ್ಪೋಟ ಸಂಭವಿಸಿದೆ. 1989 ರ ವರೆಗೆ ಜಗತ್ತಿನಾದ್ಯಂತ ಸುರಕ್ಷತೆಯ ದೃಷ್ಟಿಯಿಂದ 860 ಅಣು ಸ್ಥಾವರಗಳನ್ನು ಮುಚ್ಚಲಾಗಿದೆ.

ಇದು 1993 ರಲ್ಲಿ ರಷ್ಯಾ ಅಣುವಿಜ್ಞಾನಿ ಬಿಚ್ಚಿಟ್ಟ ಸತ್ಯ. ಈ ಘಟನೆಯ ನಂತರ ಇಪ್ಪತ್ತು ವರ್ಷಗಳಲ್ಲಿ ಜಗತ್ತಿನಾದ್ಯಂತ ಆಗಿರುವ ಪರಿಣಾಮಗಳನ್ನು ನೀವೆ ಊಹಿಸಿಕೊಳ್ಳಿ. 1952 ರಿಂದ 2012 ರ ವರೆಗೆ ಸಂಭವಿಸಿದ ಅಣು ವಿದ್ಯುತ್ ಸ್ಥಾವರಗಳ ದುರಂತದಲ್ಲಿ ಅಮೇರಿಕಾ ಮೊದಲ ಸ್ಥಾನದಲ್ಲಿದೆ. ಅಮೇರಿಕಾದಲ್ಲಿ ಒಟ್ಟು ನಲವತ್ತೈದು ದುರಂತಗಳು ಸಂಭವಿಸಿದ್ದು, 1979 ರಲ್ಲಿ ತ್ರೀ ಮೈಲ್ಸ್ ಐಸ್ ಲ್ಯಾಂಡ್ ಅಣುಸ್ಥಾವರದ ಸ್ಪೋಟ ಭೀಕರವಾದದ್ದು. ಕೆನಡಾದಲ್ಲಿ ಐದು, ಪಾಕಿಸ್ಥಾನದಲ್ಲಿ ಒಂದು, ಉಕ್ರೇನ್ ನಲ್ಲಿ ಒಂದು,  ಪ್ರಾನ್ಸ್ ನಲ್ಲಿ ಹನ್ನೆರೆಡು, ಜರ್ಮನಿಯಲ್ಲಿ ಮೂರು, ಭಾರತದಲ್ಲಿ ಏಳು, ಇಂಗ್ಲೇಂಡ್ ನಲ್ಲಿ ಮೂರು, ಅವಘಡಗಳು ಸಂಭವಿಸಿದ್ದು, ಇವುಗಳಲ್ಲಿ 1979 ರ ಅಮೇರಿಕಾದ ತ್ರೀ ಮೈಲ್ಸ್ ಐಸ್ ಲ್ಯಾಂಡ್, 1986 ರ ರಷ್ಯಾದ ಚರ್ನೋಬಿಲ್ ಮತ್ತು 2011 ರಲ್ಲಿ ಜಪಾನಿನಲ್ಲಿ ಸಂಭವಿಸಿದ ಪುಕೊಶಿಮಾ ಅಣುಸ್ಥಾವರದ ಸ್ಪೋಟದ ಘಟನೆಗಳು ಅಣು ಚರಿತ್ರೆಯ ಭೀಕರ ದುರಂತಗಳು ಎಂದು ದಾಖಲಾಗಿವೆ.

ಇದು ಅಣುಸ್ಥಾವರಗಳ ಸ್ಪೋಟಗಳ ದುರಂತದ ಕಥೆಯಾದರೆ, ಈಗ ಚಾಲ್ತಿಯಲ್ಲಿದ್ದು ಅಣು ವಿದ್ಯುತ್ ಉತ್ಪಾದಿಸುತ್ತಿರುವ  ಸ್ಥಾವರಗಳಿಂದ ಹೊರಬೀಳುತ್ತಿರುವ ಯುರೇನಿಯಂ ತ್ಯಾಜ್ಯ ಆಧುನಿಕ ಜಗತ್ತಿಗೆ ನುಂಗಲಾರದ ತುತ್ತಾಗಿದೆ. ಅಣು ವಿದ್ಯುತ್ ಉತ್ಪಾದನೆಗೆ ಸಂಸ್ಕರಿಸಿದ ಯುರೇನಿಯಂ ಅದಿರನ್ನು ಬಿಲ್ಲೆಗಳಾಗಿ ಪರಿವರ್ತಿಸಿ ಬಳಸಲಾಗುತ್ತಿದ್ದು, ಇದರಲ್ಲಿ ಹೊರಬೀಳುವ ತ್ಯಾಜ್ಯವನ್ನು ಆರು ಇಂಚು ದಪ್ಪದ ಉಕ್ಕಿನ ಪಿಪಾಯಿಗಳಲ್ಲಿ ತುಂಬಿಸಿ, ಭೂಮಿಯ ಕೆಳಗಡೆ ಅರವತ್ತು ಅಡಿ ಆಳದಲ್ಲಿ ಹೂಳಲಾಗುತ್ತಿದೆ. ( ಅಮೇರಿಕ, ಜಪಾನ್, ಇಂಗ್ಲೇಂಡ್, ಪ್ರಾನ್ಸ್ ದೇಶಗಳಲ್ಲಿ ಸಮುದ್ರದ ಅಡಿಯಲ್ಲಿ ಹೂಳಲಾಗುತ್ತಿದೆ.)
ಈ ಅಣು ತ್ಯಾಜ್ಯದಿಂದ ಸುಮಾರು ಇನ್ನೂರು ವರ್ಷಗಳಿಂದ ಹಿಡಿದು ನಾಲ್ಕುನೂರು ವರ್ಷಗಳ ವರೆಗೆ ಅಣುವಿಕಿರಣ ಹೊರಸೂಸುವ ಸಾಧ್ಯತೆಗಳಿದ್ದು ಈ ಕಾರಣದಿಂದಾಗಿ ಭೂಮಿಯಲ್ಲಿ ಹೂಳಲಾಗುತ್ತಿದೆ. ಭಾರತದಲ್ಲಿ ಸಧ್ಯ ವಾರ್ಷಿಕ 480 ಟನ್ ಯುರೇನಿಯಂ ಅದಿರನ್ನು ಅಣುವಿದ್ಯುತ್ ಉತ್ಪಾದನಗೆ  ಬಳಸಲಾಗುತ್ತಿದ್ದು, ಇದರಲ್ಲಿ ಶೇಕಡ ಹತ್ತರಷ್ಟು ತ್ಯಾಜ್ಯ ಲೆಕ್ಕ ಹಾಕಿದರೆ, ಪ್ರತಿ ವರ್ಷ 48 ಟನ್ ವಿಷವನ್ನು ಭೂಮಿಗೆ ಉಣಬಡಿಸಲಾಗುತ್ತಿದೆ. ಇಡೀ ಅಣುಲೋಕದ ವಿದ್ಯಾಮಾನಗಳನ್ನು ಗಮನಿಸುತ್ತಿದ್ದರೆ, ಅಧುನಿಕ ಜಗತ್ತಿನ ಮನುಷ್ಯನನ್ನು ನಾವು ಮೋಹಿನಿ ಭಸ್ಮಾಸೂರನಿಗೆ ಹೋಲಿಸಬಹುದು.
ಕೊನೆಯ ಮಾತು- ಅಣು ಲೋಕದ ದುರಂತಗಳ ಬಗ್ಗೆ ಆಸಕ್ತಿ ಇರುವ ಓದುಗರು ಈ ಕೆಳಗಿನ ಕೃತಿಗಳನ್ನು ಗಮನಿಸಬಹುದು..
http://bits.wikimedia.org/static-1.23wmf7/skins/common/images/magnify-clip.png
http://bits.wikimedia.org/static-1.23wmf7/skins/common/images/magnify-clip.pngಅಣು ವಿದ್ಯುತ್ ಸ್ಥಾವರ ಮತ್ತು ಅಣುಲೋಕದ ವಿವರ ನೀಡುವ ಕೃತಿಗಳ ಪಟ್ಟಿ
·         Britain, Australia and the Bomb (2006)
·         Carbon-Free and Nuclear-Free (2007)
·         Chernobyl. Vengeance of peaceful atom. (2006)
·         Contesting the Future of Nuclear Power (2011)
·         Fallout: An American Nuclear Tragedy (2004)
·         Fallout Protection (1961)
·         Hiroshima (1946)
·         Los Alamos Primer (1992)
·         Megawatts and Megatons (2001)
·         My Australian Story: Atomic Testing (2009)
·         Nuclear Politics in America (1997)
·         Nuclear Power and the Environment (1976)
·         Nuclear War Survival Skills (1979)
·         Nuclear Weapons: The Road to Zero (1998)
·         On Nuclear Terrorism (2007)
·         Our Friend the Atom (1957)
·         Plutopia (2013)
·         Protect and Survive (1980)
·         Smyth Report (1945)
·         Survival Under Atomic Attack (1950)
·         The Atom Besieged: Extraparliamentary Dissent in France and Germany (1981)
·         The Bells of Nagasaki (1949)
·         The Day of the Bomb (1961)
·         The Fate of the Earth (1982)
·         The Four Faces of Nuclear Terrorism (2004)
·         The Fourth Protocol (1984)
·         The Hundredth Monkey (1982)
·         The Last Train From Hiroshima (2010)
·         The Making of the Atomic Bomb (1988)
·         The Navajo People and Uranium Mining (2006)
·         The Nuclear Power Controversy (1976)
·         The People of Three Mile Island (1980)
·         The Plutonium Files: America's Secret Medical Experiments in the Cold War (1999)
·         The Psychology of Nuclear Proliferation (2006)
·         The Truth About Chernobyl (1991)
·         The Unfinished Twentieth Century (2001)
·         TORCH report (2006)
·         U.S. Nuclear Weapons: The Secret History (1988)
·         We Almost Lost Detroit (1975)
·         When Technology Fails (1994)