ಗುರುವಾರ, ಆಗಸ್ಟ್ 25, 2022

ಭಾರತದ ರಾಜಕಾರಣದ ಆಶಾಕಿರಣ; ತಮಿಳುನಾಡಿನ ಪಳನಿವೇಲು ತ್ಯಾಗರಾಜನ್

 


 

ಭಾರತದ ರಾಜಕೀಯ ರಂಗದಲ್ಲಿ ಇಂದು ಹಗಲು ದರೋಡೆಗಾರರು, ಸುಳ್ಳುಕೋರರು, ಕೋಮುವಾದಿಗಳು ತುಂಬಿ ತುಳುಕುತ್ತಿರುವಾಗ ವಿವಿಧ ರಂಗಗಳ ತಜ್ಞರಿಗೆ ಇದು ಸೂಕ್ತ ಕ್ಷೇತ್ರವಲ್ಲ ಎಂಬ ನಂಬಿಕೆ ಬಲವಾಗಿ ಬೇರೂರುತ್ತಿದೆ. ಇಂತಹ ನಿರಾಸೆಯ ವಾತಾವರಣದ ನಡುವೆ ನೆರೆಯ ತಮಿಳುನಾಡಿನ ಡಿ.ಎಂ.ಕೆ. ಸರ್ಕಾರದಲ್ಲಿ ಅರ್ಥಸಚಿವರಾಗಿ ಕಾರ್ಯ ನಿರ್ವಹಿಸುತ್ತಾ, ಹಲವಾರು ಜನಪರ ಯೋಜನೆಗಳ ಮೂಲಕ ಅಲ್ಲಿನ ಮುಖ್ಯಮಂತ್ರಿ ಸ್ಟಾಲಿನ್ ಗೆ ಮಾರ್ಗದರ್ಶನ ಮಾಡುತ್ತಿರುವ  ಮುಧುರೈ ಮೂಲದ ಪಳನಿವೇಲು ತ್ಯಾಗರಾಜನ್ ತಮ್ಮ ನಡೆ ನುಡಿಯ ಮೂಲಕ ಇಡೀ ರಾಷ್ಟ್ರದ ಗಮನ ಸೆಳೆದಿದ್ದಾರೆ.

ಪಳನಿವೇಲು ತ್ಯಾಗರಾಜನ್ ಇಂಜಿನಿಯರಿಂಗ್ ವಿಭಾಗದ ಎರಡು ವಿಷಯಗಳಲ್ಲಿ ಮಾಸ್ಟರ್ ಡಿಗ್ರಿ ಪಡೆದವರು ಜೊತೆಗೆ ಎಂ.ಬಿ.ಎ. ಪದವೀಧರರು ಮತ್ತು ಪಿಹೆಚ್.ಡಿ. ಪಡೆದು ಅಮೇರಿಕಾದಲ್ಲಿ ಜಾಗತಿಕ ಮಟ್ಟದ ಹಣಕಾಸು ಸಂಸ್ಥೆಯಲ್ಲಿ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. 2016 ರಲ್ಲಿ ತಮ್ಮ ಕುಟುಂಬದ ಪದ್ಧತಿಗೆ ಅನುಗುಣವಾಗಿ ಮಧುರೈನ ಮೀನಾಕ್ಷಿ ದೇವಾಲಯದ ವಾರ್ಷಿಕ ಉತ್ಸವದಲ್ಲಿ ಪ್ರಥಮ ಪೂಜೆ ಸಲ್ಲಿಸುವ ಕಾರಣಕ್ಕಾಗಿ ಹುದ್ದೆ ತೊರೆದು ಬಂದು ತಮ್ಮ ಕುಟುಂಭದ ರಾಜಕಾರಣದ ಸೇವೆ ಮತ್ತು ಸಾಮಾಜಿಕ ಸೇವೆಯನ್ನು ಮುಂದುವರಿಸಿದ್ದಾರೆ.

ತ್ಯಾಗರಾಜನ್ ಅವರ ತಾತ ಪಿ.ಕೆ.ಟಿ. ರಾಜನ್ ಎಂಬುವರು 1936 ರಲ್ಲಿ ಮದ್ರಾಸ್ ಪರೆಸಿಡೆನ್ಸಿ ಪ್ರಾತ್ಯದ ಮುಖ್ಯ ಮಂತ್ರಿಯಾಗಿದ್ದವರು. 1918ರಲ್ಲಿ ಅವರು ಇಂಗ್ಲೇಂಡಿನ ಆಕ್ಸ್ ಪರ್ಡ್ ನಲ್ಲಿ ಶಿಕ್ಷಣ ಪಡೆದು ಬಂದವರಾಗಿದ್ದರು. 1916 ರಲ್ಲಿ ತಮಿಳುನಾಡಿನಲ್ಲಿ ಬ್ರಾಹ್ಮಣರ ಪ್ರಾಬಲ್ಯ ವಿರೋಧಿಸಿ ಆರಂಭವಾದ ಜಸ್ಟೀಸ್ ಪಾರ್ಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ಹದಿಮೂರು ವರ್ಷಗಳ ಕಾಲ ಶಾಸನ ಸಭೆಯಲ್ಲಿ ಆಡಳಿತ ನಡೆಸಿದ ಜಸ್ಟೀಸ್ ಪಾರ್ಟಿಯ ಮುಖಾಂತರ ದಲಿತರಿಗೆ ಮೀಸಲಾತಿ ನಿಯಮಗಳನ್ನು ಜಾರಿಗೆ ತರುವುದಲ್ಲಿ ಶ್ರಮಿಸುವುದರ ಜೊತೆಗೆ ಆ ಕಾಲದಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಇದ್ದ ಏಕೈಕ ವಿಶ್ವವಿದ್ಯಾನಿಯ ಮದ್ರಾಸ್ ಯೂನಿರ್ವಸಿಟಿಗೆ ಪರ್ಯಾಯವಾಗಿ ಅಣ್ಣಾಮಲೈ ವಿಶ್ವ ವಿದ್ಯಾನಿಲಯ, ಆಂಧ್ರ ವಿ.ವಿ ಸ್ಥಾಪಿಸುವಲ್ಲಿ ಇತರೆ ನಾಯಕರೊಂದಿಗೆ ಶ್ರಮಿಸಿದವರು. ಜಸ್ಟೀಸ್ ಪಾರ್ಟಿಯು 1944 ರಲ್ಲಿ ಪೆರಿಯಾರ್ ರಾಮಸ್ವಾಮಿ ನೇತೃತ್ವದಲ್ಲಿ ದ್ರಾವಿಡ ಕಳಗಂ ಪಕ್ಷವಾಗಿ ಪರಿವರ್ತನೆಗೊಂಡು ದ್ರಾವಿಡ ಸಂಸ್ಕೃತಿಯ ಭಾಷೆ ಮತ್ತು ಇತರೆ ಕಲೆಗಳನ್ನು ಉಳಿಸುವತ್ತ ಮುನ್ನಡೆಯಿತು. ತ್ಯಾಗರಾಜನ್ ಅವರ ತಂದೆಯವರೂ ಸಹ ಕರುಣಾನಿಧಿ ಯವರ ಡಿ.ಎಂ.ಕೆ. ಸರ್ಕಾರದಲ್ಲಿ ಶಾಸಕರಾಗಿ ಸಚಿವರಾಗಿ ಕಾರ್ಯ ನಿರ್ವಹಸುತ್ತಿದ್ದರು.

ತಂದೆಯ ನಿಧನಾನಂತರ ಸ್ಥಳಿಯ ಜನತೆಯ ಮನವಿಗೆ ಓಗೊಟ್ಟು ತಮ್ಮ ಅಮೇರಿಕನ್ ಪತ್ನಿ ಮಾರ್ಗರೇಟ್ ಹಾಗೂ ಇಬ್ಬರು ಪುತ್ರರೊಂದಿಗೆ ಭಾರತಕ್ಕೆ ವಾಪಸ್ ಬಂದ ತ್ಯಾಗರಾಜನ್ 2016 ರಲ್ಲಿ ಡಿ.ಎಂ.ಕೆ. ಪಕ್ಷದಿಂದ ಶಾಸಕರಾದರು. ಆಡಳಿತಾರೂಢ ಜಯಲಲಿತಾರವರ ಅಣ್ಣಾ ಡಿ.ಎಂ.ಕೆ. ಪಕ್ಷಕ್ಕೆ  ಸರ್ಕಾರದ ಹಲವಾರು ಜನಪ್ರಿಯ ಯೋಜನೆಗಳಿಗೆ ತ್ಯಾಗರಾಹನ್ ಸಲಹೆ ನೀಡುವುದರ ಮೂಲಕ ಜಾರಿಗೆ ತರುವಲ್ಲಿ ಶ್ರಮಿಸಿದರು. ಇವುಗಳಲ್ಲಿ ಪ್ರಮುಖವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಉಚಿತ ಶಿಕ್ಷಣದ ಜೊತೆಗೆ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಉಚಿತ ಸೈಕಲ್, ಪಿ.ಯು.ಸಿ ಮತ್ತು ಡಿಗ್ರಿ ಓದುವ ಹೆಣ್ಣು ಮಕ್ಕಳಿಗೆ ಲ್ಯಾಪ್ ಟಾಪ್,  ವಿವಾಹಕ್ಕೆ ತಾಳಿ ಮತ್ತು ಧನ ಸಹಾಯ, ಹಾಗೂ ಉಚಿತ ಹೆರಿಗೆ ಸೌಲಭ್ಯ , ಆರ್ಥಿಕ ಸಹಾಯ ಇವೆಲ್ಲವುಗಳಿಗೆ ತ್ಯಾಗರಾಜನ್ ಸ್ಪೂರ್ತಿಯಾಗಿದ್ದರು.

ಸ್ಟಾಲಿನ್ ನೇತೃತ್ವದಲ್ಲಿ ಡಿ.ಎಂ.ಕೆ. ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಎರಡನೆಯ ಬಾರಿ ಶಾಸಕರಾಗಿದ್ದ ತ್ಯಾಗರಾಜನ್ ಸಹಜವಾಗಿ ಅವರ ವಿದ್ವತ್ ಗೆ ಅನುಗುಣವಾಗಿ ಅರ್ಥಸಚಿವರಾದರು. ಜಯಲಿಇತಾ ಸರ್ಕಾರದ ಬಹುತೇಕ ಜನಪ್ರಿಯ ಜೋಜನೆಗಳನ್ನು ಯಥಾ ಸ್ಥಿತಿಯಲ್ಲಿ ಮುಂದುವರಿಸಲು ಸಲಹೆ ನೀಡಿದರು. ನಾಡಿನ ಜನತೆಗೆ ಸೇವೆ ಸಲ್ಲಿಸುವ ವಿಚಾರದಲ್ಲಿ ರಾಜಕೀಯ ತಾರತಮ್ಯವಿರಬಾರದು ಎಂಬುದು ಅವರ ನಂಬಿಕೆ. ಇಂದು ಸ್ಟಾಲಿನ್ ಸರ್ಕಾರ ಕುರಿತಾಗಿ ಒಳ್ಳೆಯ ಅಭಿಪ್ರಾಯಗಳಿದ್ದರೆ ಅದಕ್ಕೆ ಮೂಲಕಾರಣ ತ್ಯಾಗರಾಜನ್. ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ  ನಾನ್ ಮೊದಲವನ್ ( ನಾನು ಮೊದಲಿಗ) ಎಂಬ ಹೆಸರಿನಲ್ಲಿ  ಪ್ರತಿಯೊಂದು ವೃತ್ತಿ ಅಥವಾ ಕಸಬಿಗೆ ಕೌಶಲ್ಯ ತುಂಬುವ ನಿಟ್ಟಿನಲ್ಲಿ ಕಟ್ಟಣ ನಿರ್ಮಾಣ, ಕಾರ್ಪೆಂಟರ್, ಎಲೆಕ್ಟ್ರಿಷಿಯನ್, ಮೋಟಾರು ಪಂಪ್ ರಿಪೇರಿ, ವಾಹನ ದುರಸ್ತಿ, ಹೀಗೆ ಹಲವಾರು ವೃತ್ತಿಗಳ ಕೋರ್ಸ್ ಗಳಲ್ಲಿ ಅರೆ ಶಿಕ್ಷಿತ ಹಾಗೂ ಬಡ ಯುವಕರನ್ನು ತಯಾರು ಮಾಡಲಾಗುತ್ತಿದೆ.

ಭಾರತದಲ್ಲಿ ಪ್ರಥಮ ಬಾರಿ  ಎಸ್.ಎಸ್.ಎಲ್.ಸಿ ಅಥವಾ ಪಿ.ಯು.ಸಿ. ನಂತರ ತಮ್ಮ ಅಗತ್ಯಕ್ಕೆ ಅನುಗುಣವಾಗಿ ಯಾವ ಶಿಕ್ಷಣ ಮುಂದುವರಿಸಬಹುದು. ಅವುಗಳಿಗೆ ಸರ್ಕಾರದ ಮೂಲಕ ಇರುವ  ಸಹಾಯಧನ ಮತ್ತು ಉದ್ಯೋಗದ ಅವಕಾಶಗಳು ಈ ಕುರಿತು ಸಮಗ್ರ ಮಾಹಿತಿ ಇರುವ ಕಿರು ಪುಸ್ತಕವನ್ನು ಇಡೀ ತಮಿಳುನಾಡಿನಾದ್ಯಂತ ಶಾಲೆ ಕಾಲೇಜುಗಳಿಗೆ ವಿತರಿಸಿದ್ದಾರೆ. ಜೊತೆಗೆ ತಾವು ಭೇಟಿ ನೀಡುವ ಪ್ರತಿ ಜಿಲ್ಲೆ ಅಥವಾ ತಾಲ್ಲೂಕುಗಳ ಶಾಲಾ ಕಾಲೇಜುಗಳಿಗೆ  ಹೋಗಿ ಮಕ್ಕಳಿಗೆ ಶುದ್ಧ ತಮಿಳು ಭಾಷೆಯಲ್ಲಿ ಈ ಕುರಿತು ಪಾಠ ಮಾಡಿ ಆತ್ಮವಿಶ್ವಾಸ ತುಂಬುತ್ತಿದ್ದಾರೆ. ಇತರೆ ರಾಜಕಾರಣಿಗಳಂತೆ ತಮ್ಮ ಹಿಂದೆ ಪುಡಿ ಗಿರಾಕಿಗಳು ಓಡಾಡುವುದಕ್ಕೆ ತ್ಯಾಗರಾಜನ್ ಅವಕಾಶ ನೀಡಿಲ್ಲ. ಅವರ ಕುರಿತಾಗಿ ತಮಿಳುನಾಡಿನ ಮಾಧ್ಯಮಗಳು ಮಾತ್ರವಲ್ಲದೆ ಇಡೀ ದೇಶದ ಇಂಗ್ಲೀಷ್ ಮಾಧ್ಯಮಗಳು ಗೌರವ ಭಾವನೆ ಹೊಂದಿವೆ.


ಇಡೀ ಭಾರತದಲ್ಲಿ ಪ್ರಧಾನಿ ಮೋದಿಯಿಂದ ಹಿಡಿದು ಅರ್ಥಸಚಿವೆ ನಿರ್ಮಲಾ ಸೀತಾರಾಮನ್ ವರೆಗೆ ತ್ಯಾಗರಾಜನ್ ಎಂದರೆ ಬೆಚ್ಚಿ ಬೀಳುತ್ತಾರೆ. ಜಿ.ಎಸ್.ಟಿ. ತೆರಿಗೆಯಲ್ಲಿ ರಾಜ್ಯ ಸರ್ಕಾರದ ಪಾಲನ್ನು ಕೇಳಲಾಗದೆ ಕೈ ಕಟ್ಟಿಕೊಂಡು, ಬಾಯಿ ಮುಚ್ಚಿ ಕುಳಿತುಕೊಳ್ಳುವ ಬಸವರಾಜ ಬೊಮ್ಮಾಯಿ ಯಂತಹ ಮುಖ್ಯಂತ್ರಿಗಳ ನಡುವೆ ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯವನ್ನು ತ್ಯಾಗರಾಜನ್ ಎಳೆ ಎಳೆಯಾಗಿ ಬಿಡಿಸಿ ವಿವರಿಸುವಾಗ ನಿರ್ಮಾಲಾ ಸೀತರಾಮನ್ ಅವರಿಂದ ಉತ್ತರವಿರುವುದಿಲ್ಲ. ಏಕೆಂದರೆ, ತ್ಯಾಗರಾಜನ್ ಬಳಿ ಕೇವಲ ತಮಿಳುನಾಡಿನ ಅಂಕಿ ಅಂಶಗಳು ಮಾತ್ರವಲ್ಲದೆ, ಇಡೀ ರಾಷ್ಟ್ರದ ಅಂಕಿ ಅಂಶಗಳಿರುತ್ತವೆ. ಬಿ.ಜೆ.ಪಿ. ಸರ್ಕಾರ ಇರುವ ರಾಜ್ಯಗಳಿಗೆ ನೀಡಿರುವ ಅನುದಾನ ಮತ್ತು ಬಿ.ಜೆ.ಪಿ. ಯೇತರ ರಾಜ್ಯಗಳಿಗೆ ನೀಡಿರುವ ಅನುದಾನವನ್ನು ಕ್ಷಣಾರ್ಧದಲ್ಲಿ ಬಿಚ್ಚಿಡಬ್ಲರು. ತಮಿಳುನಾಡಿನಲ್ಲಿ ಒಂದು ಸಾವಿರ ಜನಸಂಖ್ಯೆಗೆ ನಾಲ್ವರು ವೈದ್ಯರು ಇದ್ದರು ಇದ್ದರೆ ಗುಜರಾತಿನಲ್ಲಿ ಸಾವಿರ ಸಂಖ್ಯೆಗೆ ಕೇವಲ ಒಬ್ಬ ವೈದ್ಯನಿರುವುದನ್ನು ಹೇಳುವಾಗ ಎಲ್ಲರೂ ಮೌನಕ್ಕೆ ಶರಣಆಗುತ್ತಾರೆ.

ಇಂತಹ ವಿವಿಧ ವಲಯಗಳ ತಜ್ಞರು ರಾಜಕೀಯ ಬಂದಾಗ ಮಾತ್ರ  ಈ ದೇಶ ಅಥವಾ ರಾಜ್ಯಗಳು ಸುಧಾರಿಸಬಹುದು. ಪ್ರತಿಯೊಂದು ರಾಜ್ಯದಲ್ಲಿ ಇಂತಹವರು ನಾಲ್ಕು ಮಂದಿ ಇದ್ದರೆ, ಸಾಕು. ಖಂಡಿತಾ ಭವಿಷ್ಯವನ್ನು ಬದಲಾಯಿಸಬಹುದು. ಕರ್ನಾಟಕದ ಕಾಂಗ್ರೇಸ್ ನಾಯಕರು ತ್ಯಾಗರಾಜನ್ ಅವರನ್ನು ಕರ್ನಾಟಕ್ಕೆ ಕರೆಯಿಸಿ ತಮ್ಮ ಪದಾಧಿಕಾರಿಗಳಿಗೆ ಮತ್ತು ಜಿಲ್ಲಾ ಮಟ್ಟದ ಕಾರ್ಯಕರ್ತರಿಗೆ ಉಪನ್ಯಾಸ ಕೊಡಿಸಿದರೆ ಗೆದ್ದಲು ಹಿಡಿದಿರುವ ಮಿದುಳಿಗೆ ಒಂದಿಷ್ಟು ಹೊಸ ಆಲೋಚನೆಗಳು ಬರಬಹುದು.

ಜಗದೀಶ್ ಕೊಪ್ಪ

ಮಂಡ್ಯ ನೆಲದ ಸ್ವಾತಂತ್ರ್ಯ ಹೋರಾಟದ ಒಂದು ನೆನಪು; ಶಿವಪುರ ಧ್ವಜ ಸತ್ಯಾಗ್ರಹ

 


ದೇಶದೆಲ್ಡೆಡೆ  ಎಪ್ಪತ್ತೈದನೆಯ ಸ್ವಾತಂತ್ರ್ಯದ ಆಚರಣೆಗೆ ಸಿದ್ಧತೆ ನಡೆಯುತ್ತಿದೆ. ತಮ್ಮ ಜೀವಮಾನದಲ್ಲಿ  ಎಂದಿಗೂ ತ್ರಿವರ್ಣ ಧ್ವಜ ಕುರಿತು ಒಂದಿಷ್ಟು ಗೌರವ ಮತ್ತು ಘನತೆಯ ಮಾತನಾಡದ ಜನ ಈಗ ಮನೆ ಮನೆಗೂ ತಿರಂಗ ಎಂಬ ಅಭಿಯಾನ ಪ್ರಾರಂಭಿಸಿದ್ದಾರೆ. ಇಂತಹ ಹುಸಿ ದೇಶಪ್ರೇಮಕ್ಕಾಗಿ ರಾಷ್ಟ್ರ ಧ್ವಜ ಕುರಿತಾಗಿ ಇದ್ದ ನೀತಿ ನಿಯಮಾವಳಿಗಳನ್ನು ಗಾಳಿಗೆ ತೂರಿ ರಾಷ್ಟ್ರ ಧ್ವಜವನ್ನು ರಾಜಕೀಯ ಪಕ್ಷಗಳ ಧ್ವಜದ ಸಾಲಿಗೆ ತಂದು ನಿಲ್ಲಿಸಿದ್ದಾರೆ. ಇಂತಹ ಸಂದರ್ಭದಲ್ಲಿ ರಾಷ್ಟ್ರ ಧ್ವಜ ಹಾರಿಸುವುದು ಕಾನೂನು ಬಾಹಿರ ಎಂಬ ನಿಯಮವಿದ್ದ ಕಾಲಘಟ್ಟದಲ್ಲಿ ನನ್ನ ಜಿಲ್ಲೆ ಮತ್ತು ನನ್ನ ತಾಲೂಕಿನ ನೆಲವಾದ ಮದ್ದೂರು ಸಮೀಪದ ಶಿವಪುರದಲ್ಲಿ 1938 ರ ಏಪ್ರಿಲ್ 9 ರಿಂದ 11 ರವರೆಗೆ ಮೂರು ದಿನಗಳ ಕಾಲ ಟಿ.ಸಿದ್ಧಲಿಂಗಯ್ಯನವರ ನೇತೃತ್ವದಲ್ಲಿ ಹತ್ತು ಸಾವಿರ ಮಂದಿ ರಾಷ್ಟ್ರ ಧ್ವಜ ಹಾರಿಸಿ ಬಂಧಿಯಾದ ಕಥನ  ಈ ಸಂದರ್ಭದಲ್ಲಿ ಯಾವ ಮಾಧ್ಯಮಗಳಿಗೂ ನೆನಪಾಗಲಿಲ್ಲ.

ಕರ್ನಾಟಕದ ಇತಿಹಾಸದಲ್ಲಿ  ಸ್ವಾತಂತ್ರ್ಯ ಚಳುವಳಿಗೆ ಬಾಂಬೆ ಕರ್ನಾಟಕ ಎಂದು ಕರೆಸಿಕೊಳ್ಳುತ್ತಿದ್ದ ಉತ್ತರ ಕರ್ನಾಟಕ ಮತ್ತು ಉತ್ತರ ಕನ್ನಡ ಜಿಲ್ಲೆಯ ಕೊಡುಗೆ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಅಪಾರವಾದುದು. ದಕ್ಷಿಣ ಕರ್ನಾಟಕದಲ್ಲಿ ಜಲಿಯನ್ ವಾಲಾಬಾಗ್ ಘಟನೆಯನ್ನು ನೆನಪಿಸುವ ಗೌರಿಬಿದನೂರು ಸಮೀಪದ ವಿಧುರಾಶ್ವತದ ಗೋಲಿಬಾರ್ ದುರಂತ ಮತ್ತು ಶಿವಪುರದ ಧ್ವಜ ಸತ್ಯಾಗ್ರಹ ಘಟನೆ ಕರ್ನಾಟಕದ ಇತಿಹಾಸದಲ್ಲಿ  ಅವಿಸ್ಮರಣೀಯವಾಗಿ ಉಳಿದು ಹೋಗಿವೆ. ಬೆಂಗಳೂರು ವಿ.ವಿ.ಪುರಂ ಸಂಜೆ ಕಾಲೇಜಿನ ಪ್ರಾಂಶುಪಾಲರಾಗಿದ್ದುಕೊಂಡು ನನಗೆ ಪದವಿ ತರಗತಿಗಳಲ್ಲಿ ಕನ್ನಡ ಬೋಧಿಸಿದ ಗುರುಗಳಾದ  ಪ್ರೊ.ಡಿ.ಲಿಂಗಯ್ಯನವರು 1979 ರಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ಕುರಿತಂತೆ ಬರೆದಿರುವ ಅಮೂಲ್ಯಕೃತಿ ಇಂದಿಗೂ ಸಾತಂತ್ರ್ಯ ಚಳುವಳಿ ಕುರಿತಾದ ಕೃತಿಗಳಿಗೆ ಮಾದರಿಯಾಗಿದೆ.

ಮೂಲತಃ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನವರಾದ ಡಿ.ಲಿಂಗಯ್ಯನವರು 1978 ರಲ್ಲಿ ಕ್ಷೇತ್ರಕಾರ್ಯ ಮಾಡಿ, ಶಿವಪುರ ಧ್ವಜ ಸತ್ಯಾಗ್ರಹದಲ್ಲಿ ಪಾಲ್ಗೊಡು ಉಳಿದಿದ್ದ ಮಹಾನೀಯರನ್ನು ಸಂದರ್ಶಿಸಿ, ಅಧಿಕೃತ ದಾಖಲೆಗಳ ಮೂಲಕ ಕಟ್ಟಿಕೊಟ್ಟಿರುವ ಪರಿ ನಿಜಕ್ಕೂ ಅದ್ಭುತವಾದುದು. ಈ ಕಾರ್ಯಕ್ಕಾಗಿ ಒಮ್ಮೆ ನನ್ನನ್ನೂ ಕರೆದು ಕರೆದುಕೊಂಡು, ನನ್ನೂರು ಕೊಪ್ಪ ದ ಕೆ.ಜೋಗಿಗೌಡರು, ಬ್ರಾಹ್ಮಣ ಮುಖಂಡರಾಗಿದ್ದ ಗುಂಡಪ್ಪ ನವರ ಮನೆಗೆ ಭೇಟಿ ನೀಡುವುದರ ಜೊತೆಗೆ ನನ್ನೂರು ಸಮೀಪದ ಬಿದರಕೋಟೆ, ಬೆಸಗರಳ್ಳಿ, ವಳೇಗೇರಹಳ್ಳಿ ಹೀಗೆ ಹಲವು ಊರುಗಳನ್ನು ಸುತ್ತಿದ್ದರು. 1979 ರಲ್ಲಿ ಪುಸ್ತಕ ಬಿಡುಗಡೆಯಾದಾಗ ಅವರು ನೀಡಿದ್ದ ಒಂದು ಕೃತಿ ಈಗಲೂ ನನ್ನ ಪಾಲಿಗೆ ಅಮೂಲ್ಯ  ಆಸ್ತಿಯಾಗಿ ಉಳಿದಿದೆ.


ಶಿವಪುರ ಧ್ವಜ ಸತ್ಯಾಗ್ರಹಕ್ಕೆ ಒಂದು ಇತಿಹಾಸವಿದೆ. ವಾಸ್ತವವಾಗಿ  ತಮ್ಮ  ಅರಸೊತ್ತಿಗೆಯನ್ನು ಬ್ರಿಟೀಷರಿಗೆ ಒಪ್ಪಿಸಿ ಅವರು ನೀಡುತ್ತಿದ್ದ ವಾರ್ಷಿಕ ಅನುದಾನದಲ್ಲಿ ಮೈಸೂರು ದೊರೆಗಳು ಸಂಸ್ಥಾನವನ್ನು ನಡೆಸುತ್ತಿದ್ದರು. ಜೊತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂಬ ಮುತ್ಸದಿ ಮತ್ತು ಮಾನವೀಯ ಗುಣಗಳುಳ್ಳ ದೊರೆಯಿಂದಾಗಿ ಮೈಸೂರು ಸಂಸ್ಥಾನವು  ಇಡೀ ಭಾರತಕ್ಕೆ ಮಾದರಿಯಾಗಿತ್ತು. ಶಿಕ್ಷಣ, ಆರೋಗ್ಯ, ಕೃಷಿ, ನೀರಾವರಿ ಯೋಜನೆಗಳಿಂದ ಹಿಡಿದು, ದಲಿತರಿಗೆ ಮೀಸಲಾತಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ಜೊತೆಗೆ ಪ್ರಜಾಪ್ರಭುತ್ವ ಮಾದರಿಯಲ್ಲಿ ಪ್ರಜಾ ಪ್ರತಿನಿಧಿಗಳ ಸಭೆ ಹೀಗೆ ಎಲ್ಲಾ ಆಡಳಿತ ವಿಭಾಗಗಳ ಕಾರ್ಯವೈಖರಿಗಳು  ದೇಶಕ್ಕೆ ಮಾದರಿಯಾಗಿದ್ದವು. ಹಾಗಾಗಿ ಮೈಸೂರು ಸಂಸ್ಥಾನದ ಜನತೆ ಸ್ವಾತಂತ್ಯ ಚಳುವಳಿ ಕುರಿತಾಗಿ ಗಂಭೀರವಾಗಿ ಯೋಚಿಸಿರಲಿಲ್ಲ. ಆದರೆ, 1934 ರಲ್ಲಿ ಪ್ರಥಮ ಬಾರಿಗೆ ಮಹಾತ್ಮ ಗಾಂಧಿಯವರು ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದಾಗ  ಇಲ್ಲಿನ ನಾಯಕರಾದ ಹೆಚ್.ಕೆ.ವೀರಣ್ಣಗೌಡ, ಸಾಹುಕಾರ್ ಚೆನ್ನಯ್ಯ, ಎಂ.ಎನ್.ಜೋಯಿಸ್, ಸಿ.ಬಂದೀಗೌಡ, ಹೆಚ್.ಸಿ. ದಾಸಪ್ಪ ಹೀಗೆ ಅನೇಕ ನಾಯಕರಲ್ಲಿ ಸ್ವಾತಂತ್ರ್ಯದ ಕಿಚ್ಚು ಒಡಲೊಳಗೆ ಮೊದಲ ಬಾರಿಗೆ ಸಿಡಿಯಿತು.

ಮೈಸೂರಿನಲ್ಲಿ ಕಾಂಗ್ರೇಸ್ ಅಧಿವೇಶನ ಮಾಡುವುದರ ಜೊತೆಗೆ ರಾಷ್ಟ್ರ ಧ್ವಜವನ್ನು ಹಾರಿಸಬೇಕೆಂದು ನಿರ್ಧಸಲಾಯಿತು. ಆದರೆ, ಬ್ರಿಟೀಷ್ ಸರ್ಕಾರದ ವಿರುದ್ಧ ಯಾವುದೇ ಸಭೆ ನಡೆಸಲು ಮತ್ತು ಧ್ವಜ ಹಾರಿಸಲು ಬ್ರಿಟೀಷ್ ಅಧಿಕಾರಿಗಳು ಮತ್ತು ಮೈಸೂರು ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅನುಮತಿ ನಿರಾಕರಿಸಿದರು. ಇದಕ್ಕೆ ವಿರೋಧಿಸಿದ ನಾಯಕರು ಆಗ  ಮೈಸೂರು ಜಿಲ್ಲೆಯ ಭಾಗವಾಗಿದ್ದ ಮಂಡ್ಯ ಜಿಲ್ಲೆಯ ಶಿವಪುರದಲ್ಲಿ ಕಾಂಗ್ರೆಸ್ ಅಧಿವೇಶನ ಮತ್ತು ಧ್ವಜ ಸತ್ಯಾಗ್ರಹ ಮಾಡಲು ನಿರ್ಧರಿಸಲಾಯಿತು. ( 1939 ರಲ್ಲಿ  ಮಂಡ್ಯ ಜಿಲ್ಲೆ ಪ್ರತ್ಯೇಕ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿತು)  ಇದಕ್ಕಾಗಿ ಶಿವಪುರ ರಾಷ್ಟ್ರಕೂಟ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು. ಮೈಸೂರು-ಬೆಂಗಳೂರು ರಸ್ತೆಯ ಪಕ್ಕದಲ್ಲಿದ್ದ ಈಡಿಗ ಸಮುದಾಯದ ತಿರುಮಲೇಗೌಡರ ಜಮೀನನಲ್ಲಿ ಅಧಿವೇಶನ ನಡೆಸಲು ನಿರ್ಧರಿಸಲಾಯಿತು. ಈ ಕಾರ್ಯಕ್ರಮಕ್ಕೆ ತಿರುಮಲೇ ಗೌಡರು ಶಿವಪುರದಲ್ಲಿ ಕೊಪ್ಪ ರಸ್ತೆಯಲ್ಲಿದ್ದ ತಮ್ಮ ಮನೆಯನ್ನು ಕಚೇರಿಯನ್ನಾಗಿ ಬಳಸಿಕೊಳ್ಲಲು ಅವಕಾಶ ನಿಡಿದರು.

ಟಿ.ಸಿದ್ಧಲಿಂಗಯ್ಯನವರು ಅಧ್ಯಕ್ಷರು, ಸಾಹುಕಾರ್ ಚೆನ್ನಯ್ಯ ಉಪಾಧ್ಯಕ್ಷರು, ಕೊಪ್ಪದ ಜೋಗಿಗೌಡ ಕಾರ್ಯದರ್ಶಿ ಹಾಗೂ ಸಿ.ಬಂದೀಗೌಡ, ಎಂ.ಎನ್.ಜೋಯಿಸ್, ಇಂಡವಾಳು ಹೊನ್ನಯ್ಯ, ಹೆಚ್.ಕೆ.ವೀರಣ್ಣಗೌಡ, ವೆಂಕಟಗಿರಿಗೌಡ, ಪಿ.ಲಿಂಗೇಗೌಡ, ಪಿ.ತಮ್ಮಯ್ಯ, ಶ್ರೀನಿವಾಸ ಅಯ್ಯಂಗಾರ್, ಹೆಚ್.ಸಿ.ದಾಸಪ್ಪ, ಯಶೋಧರಮ್ಮ ದಾಸಪ್ಪ ಮುಂತಾದವರು ಸದಸ್ಯರಾಗಿದ್ದ ರಾಷ್ಟ್ರಕೂಟ ಸಮಿತಿಗೆ ಬೆಳಗಾವಿ, ಧಾರವಾಡ, ಉತ್ತರ ಕನ್ನಡ ಜಿಲ್ಲೆ ಮತ್ತು ಬಳ್ಳಾರಿ ಜಿಲ್ಲೆಯ ನಾಯಕರು ಮಾರ್ಗದರ್ಶಕರಾಗಿ ದುಡಿದರು. ಇದಕ್ಕಾಗಿ  ಹದಿನೈದು ದಿನ ಮುಂಚಿತವಾಗಿ ಎಲ್ಲರೂ ಶಿವಪುರಕ್ಕೆ ಆಗಮಿಸಿದ್ದರು.

ಜೋಗೀಗೌಡರ ನೇತೃತ್ವದಲ್ಲಿ ಮದ್ದೂರು ಮತ್ತು ಮಂಡ್ಯ ತಾಲ್ಲೂಕಿನ ಪ್ರತಿ ಹಳ್ಳಿಗಳ ಮನೆ ಮನೆಗಳಿಂದ ಅಕ್ಕಿ, ಬೇಳೆ, ಬೆಲ್ಲ, ಬಾಳೆಹಣ್ಣು, ಬಾಳೆ ಎಲೆ, ಅಡಿಕೆ ಹಾಳೆ, ತೆಂಗಿನ ಕಾಯಿ, ಹಾಲು, ಮೊಸರು, ಬೆಣ್ಣೆ ಹೀಗೆ ಹತ್ತು ಸಾವಿರ ಮಂದಿಗೆ ಮೂರು ದಿನಗಳ ಅಧಿವೇಶನಕ್ಕೆ ಧವಸ ಧಾನ್ಯ ಮತ್ತು ಹಣವನ್ನು ಕಲೆ ಹಾಕಲಾಯಿತು. ಇದಕ್ಕಾಗಿ ಐದು ಜೊತೆ ಎತ್ತಿನ ಬಂಡಿಗಳನ್ನು ಹಳ್ಳಿಗಳಿಗೆ ಕಳಿಸಲಾಗುತ್ತಿತ್ತು. ಶಿವಪುರ ಧ್ವಜ ಸತ್ಯಾಗ್ರಹದ ಮತ್ತೊಂದು ಮಹತ್ವದ ಸಾಧನೆಯೆಂದರೆ, ರಾಜ್ಯಾದ್ಯಂತ ಬಂದಿದ್ದ ನಾಯಕರು ಮತ್ತು ಕಾರ್ಯಕರ್ತರು ತಮ್ಮ ಜಾತಿ, ಧರ್ಮವನ್ನು ಮರೆತು ಸಾಮೂಹಿಕ ಭೋಜನದಲ್ಲಿ ಪಾಲ್ಗೊಂಡರು. ಅಲ್ಲಿ  ಊಟ ಮಾಡಿದ ಯಾರೊಬ್ಬರೂ ಅಕ್ಕಿ, ಯಾರ ಮನೆಯದ್ದು? ಬೇಳೆ ಯಾರ ಮನೆಯದ್ದು ಎಂದು ಕೇಳಲಿಲ್ಲ. ಅವರುಗಳ ಈ ಜಾತ್ಯಾತೀತ ಮನೋಭಾವ ಮಂಡ್ಯ ಜಿಲ್ಲೆಯ ಜನತೆಯ ಮೇಲೆ ತೀವ್ರ ಪ್ರಭಾವ ಬೀರಿತು. ಅಸ್ಪೃಶ್ಯತೆಯನ್ನು ಹೋಗಲಾಡಿಸಲು ದಾರಿ ದೀಪವಾಯಿತು. ಮಳ್ಳವಳ್ಳಿ ತಾಲ್ಲೂಕು ಕೇಂದ್ರದಲ್ಲಿ ಈಗ ಸರ್ಕಾರಿ ಬಸ್ ನಿಲ್ದಾಣವಾಗಿರುವ ಪ್ರದೇಶದಲ್ಲಿ ಕುನ್ನೀರು ಕಟ್ಟೆ ಎಂಬ ನೀರಿನ ಸರೋವರವಿತ್ತು. ಮಳ್ಳವಳ್ಳಿಯ ವಿರೇಗೌಡರು ಹರಿಜರನ್ನು ಕರೆದುಕೊಂಡು ಹೋಗಿ ಅಲ್ಲಿ ಹರಿಜನರು ನೀರು ಕುಡಿಯಲು ಅವಕಾಶ ಮಾಡಿಕೊಡುವುದರ ಮೂಲಕ ಮಂಡ್ಯ ನೆಲದಲ್ಲಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದರು. ಮಂಡ್ಯ-ಕೊಪ್ಪ ರಸ್ತೆಯಲ್ಲಿ ಹುಲಿವಾನ ಬಳಿಯ ಹೊನಗಾನಹಳ್ಳಿ ಎಂಬ ಊರಿನ ಪುಟ್ಟಣ್ಣಯ್ಯ ಎಂಬುವರು ಊರಿನ ಕೆರೆ ನೀರು ಕುಡಿಯಲು ಹರಿಜನರಿಗೆ ಪ್ರೋತ್ಸಾಹಿಸಿ ನೀರು ಕುಡಿಸಿದರು. ಇದರಿಂದ ಸಿಟ್ಟಿಗೆದ್ದ ಊರಿನ ಜನತೆ  ಪುಟ್ಟಣ್ಣಯ್ಯನವರನ್ನು ಹುಣಸೆ ಕಟ್ಟಿಗೆಯಿಂದ ಮನಸ್ಸೋ ಇಚ್ಚೆ ಧಳಿಸಿದರು. ಇದರಿಂದ ನೊಂದ ಅವರು ಮನುಷ್ಯರು ಇಲ್ಲದ ಊರಿನಲ್ಲಿ  ನಾನು ಬದುಕುವುದಿಲ್ಲ ಎಂದು ತೀರ್ಮಾನಿಸಿ, ಹುಟ್ಟಿದ ಊರನ್ನು ತ್ಯೆಜಿಸಿ ಕೆ.ಆರ್. ತಾಲ್ಲೂಕಿನ ಹೇಮಗಿರಿ ಬೆಟ್ಟದಲ್ಲಿ ನೆಲೆ ನಿಂತು ಶಿಕ್ಷಣ ಸಂಸ್ಥೆ ಸ್ಥಾಪಿಸಿ ಜೀವನದ ಕೊನೆಯವರೆಗೂ ಅಲ್ಲಿಯೇ ಉಳಿದರು.  ಇವರ ಕುರಿತಾಗಿ ಹದಿನೈದು ವರ್ಷದ ಹಿಂದೆ ಆಂಧೋಲನ ಪತ್ರಿಕೆಯಲ್ಲಿ ನಾನು ಲೇಖನ ಬರೆದಾಗ, ಕುಮಾರಸ್ವಾಮಿ ಸರ್ಕಾರದಲ್ಲಿ ಸಚಿವರಾಗಿದ್ದ ಎನ್.ಚಲುವರಾಯಸ್ವಾಮಿ ಹೊನಗಾನಹಳ್ಳಿಯಲ್ಲಿ ಸರ್ಕಾರಿ ಆಸ್ಪತ್ರೆಯನ್ನು ಸ್ಥಾಪಿಸಿ ಅದಕ್ಕೆ ಪುಟ್ಟಣ್ಣಯ್ಯನವರ ಹೆಸರನ್ನು ನಾಮಕರಣ ಮಾಡಿದರು.

1938 ರ ಏಪ್ರಿಲ್ ತಿಂಗಳಿನಲ್ಲಿ ನಡೆದ ಶಿವಪುರದ ಅಧಿವೇಶನಲ್ಲಿ ಧ್ವಜ ಸತ್ಯಾಗ್ರಹ ಚಳುವಳಿಯನ್ನು ಅಹಿಂಸಾತ್ಮಕವಾಗಿ ನಡೆಸಲು ತೀರ್ಮಾನಿಸಲಾಯಿತು. ಏಪ್ರಿಲ್ 9 ರಂದು ಪ್ರಥಮ ಬಾರಿಗೆ ಟಿ.ಸಿದ್ಧಲಿಂಗಯ್ಯನವರು ಧ್ವಜಾರೋಹಣ ಮಾಡಿ ಬಂದಿತರಾದರು. ನಂತರ ಯಶೋಧರ ಧಾಸಪ್ಪ ಧ್ವಜಾ ರೋಹಣ ಮಾಡಿದರು. ಹೀಗೆ ಸಾಲು ಸಾಲಾಗಿ ಮೂರು ದಿನಗಳ ಕಾಲ ಧ್ವಜಾ ರೋಹಣ ಮಾಡಿ ದೇಶ ಪ್ರೇಮವನ್ನು ಮೆರೆದ ಅನೇಕ  ನಾಯಕರು ಬಂಧಿತರಾದರು. ಎಲ್ಲಿಯೂ ಹಿಂಸೆಯ ಘಟನೆ ಅಥವಾ ಪ್ರಚೋಧಿತ ಭಾಷಣ, ಮತ್ತು ಹೇಳಿಕೆಗಳು ಬರಲಿಲ್ಲ. ಗಾಂಧೀಜಿಯವರು ಕನಸಿದ್ದ ಅಹಿಂಸಾತ್ಮಕ ರೂಪದ ಸ್ವಾತಂತ್ರ್ಯ ಚಳುವಳಿಗೆ ಶಿವಪುರ ಧ್ವಜ ಸತ್ಯಾಗ್ರಹ ಮಾದರಿಯಾಯಿತು. ಜೊತೆಗೆ ಮಂಡ್ಯ ನೆಲದ ಜನರನ್ನು ವೈಚಾರಿಕತೆಯ ಹಾದಿಗೆ ದೂಡಿತು.

ಧ್ವಜ ಸತ್ಯಾಗ್ರಹ ಸ್ಥಳದಲ್ಲಿ ಭವನ ನಿರ್ಮಾಣ ಮಾಡಬೇಕೆಂಬುದು ಕೆಂಗಲ್ ಹನುಮಂತಯ್ಯನವರ  ಕನಸಾಗಿತ್ತು. ತಾವು ಪಾಲ್ಗೊಳ್ಳುತ್ತಿದ್ದ ಸಭೆ ಸಮಾರಂಭಗಳಲ್ಲಿ ಹಾಕುತ್ತಿದ್ದ ಹೂವಿನ ಹಾರವನ್ನು ಅಲ್ಲಿಯೇ ಹರಾಜು ಹಾಕಿ ಅದರಿಂದ ಬರುತ್ತಿದ್ದ  ಹಣವನ್ನು ಶೇಖರಿಸಿ ಅಂತಿಮವಾಗಿ ಐದು ಲಕ್ಷ ರೂಪಾಯಿ ಹಣವನ್ನು ದಾನ ನೀಡಿದರು. ದೇವರಾಜ ಅರಸು ಅಧಿಕಾರದಲ್ಲಿದ್ದ ಸಮಯದಲ್ಲಿ ಒಟ್ಟು ಹದಿಮೂರುವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಶಿವಪುರ ಸತ್ಯಾಗ್ರಹ ಭವನ ನಿರ್ಮಾಣವಾಯಿತು. ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹೆಚ್ಚಿನ ಅನುದಾನ ನೀಡಿ ಇಡೀ ಪ್ರದೇಶ ಮತ್ತು ಭವನವನ್ನು ಅಭಿವೃದ್ಧಿ ಪಡಿಸಲಾಯಿತು. ಬೆಂಗಳೂರು- ಮೈಸೂರು ನಡುವೆ ಓಡಾಡುವ ಜನರ ಕಣ್ಮನವನ್ನು ಇಂದಿಗೂ ಸಹ ಈ ಭವನ ಸೆಳೆಯುತ್ತಿರುವುದು ವಿಶೇಷ.

ಎನ್.ಜಗದೀಶ್ ಕೊಪ್ಪ.

 

ಭಾನುವಾರ, ಜುಲೈ 31, 2022

ಯಾರಿಗೆ ಬಂತು? ಎಲ್ಲಿಗೆ ಬಂತು? ಎಪ್ಪತ್ತೆöÊದರ ಸ್ವಾತಂತ್ರö್ಯ?

 


 


ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ರಾಷ್ಟ್ರ ಎಂಬ ಅರ್ಧ ಸತ್ಯದ ಬಿರುದನ್ನು ಹೊತ್ತಿರುವ ಭಾರತ ಈಗ ಎಪ್ಪತ್ತೈದರ ಸ್ವಾತಂತ್ರ್ಯದ ಸಂಭ್ರಮದಲ್ಲಿದೆ. ನನ್ನ ಹಿರಿಯ ಮಿತ್ರರಾದ ದಿ. ಸಿದ್ದಲಿಂಗಯ್ಯನವರುಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯಎಂಬ ಕವಿತೆಯನ್ನು ಬರೆದಿದ್ದರು. ಈಗ ಅದೇ ಕವಿತೆಯನ್ನು ನಾವು ಎಪ್ಪತ್ತೈದರ ಸ್ವಾತಂತ್ರ್ಯ ಸಂಭ್ರಮದ ಸಮಯದಲ್ಲಿ ಮತ್ತೇ ಹಾಡಬೇಕಾಗಿದೆ.  ನಾಡಿನೆಲ್ಲೆಡೆ, ಮನೆ ಹಾಗೂ ಕಟ್ಟಡಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಭಾರತ್ ಮಾತಾ ಕಿ ಜೈ ಎಂದು ಒಮ್ಮ ಘೋಷಣೆ ಹಾಕಿದರೆ ಸಂಭ್ರಮದ ದಿನಾಚರಣೆಯಿಂದ ನಿಜವಾದ ಸ್ಮರಣೆ ಸಾಧ್ಯವೆ? ಸ್ವಾತಂತ್ರ್ಯಕ್ಕಾಗಿ ಮನೆ ಮಠಗಳನ್ನು ಕಳೆದುಕೊಂಡು ಹೋರಾಡಿ ಅನಾಮಿಕರಂತೆ ಜೀವ ಕಳೆದುಕೊಂಡುವರ ಸ್ಮರಣೆಗಿಂತ ಇತ್ತೀಚೆಗೆ ನಮ್ಮ ಕಣ್ಣ ಮುಂದಿನ ನಕಲಿ ದೇಶಭಕ್ತರ ಭಜನೆ ಮತ್ತು ಆರಾಧನೆ ಮುಗಿಲು ಮುಟ್ಟುತ್ತಿದೆ. ಸ್ವಾತಂತ್ರ್ಯದ ಮೂಲ ಪರಿಕಲ್ಪನೆಗಳಾದ ಅಭಿವ್ಯಕ್ತಿಯ  ಸ್ವಾತಂತ್ರ್ಯ ಮತ್ತು ಧರ್ಮಾತೀತವಾಗಿ ಸ್ವತಂತ್ರವಾಗಿ ಬದುಕುವ ಸ್ವಾತಂತ್ರ್ಯ ಈಗ ಮಣ್ಣು ಪಾಲಾಗಿವೆ   ದೇಶದಲ್ಲಿ ಈಗ ಸಂವಿಧಾನ ಬದ್ಧ ಆಡಳಿತ ಇದೆಯಾ? ಎಂಬ ಪ್ರಶ್ನೆ ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕನನ್ನು ಕಾಡತೊಡಗಿದೆ. ಭಾರತಕ್ಕೆ ಸ್ವಾತಂತ್ರ ಲಭಿಸಿ ಎಪ್ಪತ್ತೈದು ವರ್ಷಗಳಾದವು ಗಮನಾರ್ಹ ಸಂಗತಿಯೆAದರೆ ಭಾರತದ ನಾಗರೀಕರ ಮೂಲಭೂತ ಸ್ವಾತಂತ್ರ್ಯವು ೧೯೭೫ ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂದಿಯವರು ಹೇರಿದ್ದ ತುರ್ತುಪರಿಸ್ಥಿತಿಯ ಅವಧಿಯಲ್ಲಿ ದಮನಗೊಂಡಿದ್ದ ಮಾದರಿಂಯಲ್ಲಿ ಈಗ ಎಪ್ಪತ್ತೈದನೆಯ ವರ್ಷದ ಸ್ವಾತಂತ್ರ್ಯದ ಆಚರಣೆಯ ಸಮಯದಲ್ಲಿ ಕೂಡ ದಮನಗೊಂಡಿದೆ.

ಭಾರತದ ಇತಿಹಾಸದಲ್ಲಿ ೧೯೭೫ ರಲ್ಲಿ  ಪ್ರಧಾನಿಯಾಗಿದದ್ದ ಇಂದಿರಾ ಗಾಂಧಿಯವರು ಜಾರಿಗೆ ತಂದಿದ್ದ ತುರ್ತುಪರಿಸ್ಥಿತಿ ಪರಿಣಾಮದಿಂದಾಗಿ ನಾಗರೀಕ ಹಕ್ಕುಗಳಿಂದ ಹಿಡಿದು, ಪತ್ರಿಕಾ ಸ್ವಾತಂತ್ರ , ಅಭಿವ್ಯಕ್ತಿ ಸ್ವಾತಂತ್ರ ಇವೆಲ್ಲವೂ ನಿಷ್ಕಿçಯವಾಗಿದ್ದ ಘಟನೆಗಳಿಗೆ ನನ್ನ ತಲೆಮಾರು ಸಾಕ್ಷಿಯಾಗಿತ್ತು. ಇಷ್ಟು ಮಾತ್ರವಲ್ಲದೆ  ಇಂದಿರಾ ಗಾಂಧಿಯವರ  ವಿರುದ್ಧ ಸಿಡಿದೆದ್ದ ಜಯಪ್ರಕಾಶ್ ನಾರಾಯಣ್ ಅವರ ಕ್ರಾಂತಿಕಾರಕ ಚಳುವಳಿಯಿಂದ ನಾವುಗಳು ಪ್ರಭಾವಿತರಾಗಿದ್ದೆವ ಜೆ.ಪಿ,ಯವರ ಚಿಂತನೆ ನಮ್ಮನ್ನು ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಉದ್ದೀಪಿಸಿತ್ತು. ಇಂದಿಗೂ ನನ್ನ ತಲೆಮಾರಿನ ಬಹುತೇಕ ಹೋರಾಟಗಾರರು ಮತ್ತು ಲೇಖಕರು ಹಾಗೂ ಪತ್ರಕರ್ತರಲ್ಲಿ ಏನಾದರೂ ಒಂದಿಷ್ಟು ಬದ್ಧತೆ ಉಳಿದುಕೊಂಡಿದ್ದರೆ ಅದಕ್ಕೆ ಜಯಪ್ರಕಾಶ್ ನಾರಾಯಣರು ಹುಟ್ಟುಹಾಕಿದ್ದ  ಚಳುವಳಿಯು ಮೂಲ ಕಾರಣ ಎಂದು ನಿಸ್ಸಂಕೋಚವಾಗಿ ಹೇಳಬಹುದು

ನಮ್ಮಗಳ ಕಾಲೇಜು  ಶಿಕ್ಷಣದ  ನಡುವೆಯೂ ತುರ್ತುಪರಿಸ್ಥಿತಿಯ ಎಲ್ಲಾ ಕಠೋರ ನಿಯಮಗಳು, ಹಿಂಸೆ ಮತ್ತು ಭಯಾನಕ ವಾತಾವರಣಕ್ಕೆ   ನೇರ ಸಾಕ್ಷಿಯಾದ ಕಾರಣ  ನೆನಪುಗಳು ಇಂದಿಗೂ ಸಹ ಮಾಯದ ಗಾಯದ ಕಲೆಗಳಂತೆ ನಮ್ಮೊಳಗೆ ಶಾಶ್ವತವಾಗಿ ಉಳಿದುಕೊಂಡಿವೆ. ಕರ್ನಾಟಕದಲ್ಲಿ ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದ ಕಾರಣದಿಂದಾಗಿ ತುರ್ತುಪರಿಸ್ಥಿತಿಯ ಕಠೋರ ನಿಯಮಗಳು ತೀರಾ ಕಡಿಮೆ ಪ್ರಮಾಣದಲ್ಲಿದ್ದವು. ಸ್ನೇಹ ಲತಾ ರೆಡ್ಡಿಯವರಿಗೆ ಸರಿಯಾದ ವೈದ್ಯರ ಸೇವೆ ಮತ್ತು ಔಷಧ ದೊರೆಯದ ಕಾರಣ ಅವರು ಸೆರೆಮನೆಯಲ್ಲಿ ಅಸು ನೀಗಿದರು. ಮಾಜಿ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರ ಸಹೋದರ ಮೈಕಲ್ ಫೆರ್ನಾಂಡಿಸ್ ಅವರು ಬೆಂಗಳೂರಿನಲ್ಲಿ  ಪೊಲೀಸರ ಚಿತ್ರಹಿಂಸೆಗೆ ಗುರಿಯಾಗಿ ಶಾಶ್ವತ ಅಂಗವಿಕಲರಾದರು. ಇಂತಹ ಘಟನೆಗಳನ್ನು ಹೊರತು ಪಡಿಸಿದರೆ, ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿದ್ದ ಎಲ್.ಕೆ.ಅದ್ವಾನಿಯಂತಹ ನಾಯಕರಿಂದ ಹಿಡಿದು ರಾಜ್ಯ ಮತ್ತು ರಾಷ್ಟç ನಾಯಕರನ್ನು ದೇವರಾಜ ಅರಸುರವರು ಅತ್ಯಂತ ಘನತೆ ಮತ್ತು ಪ್ರೀತಿಯಿಂದ ನೋಡಿಕೊಂಡಿದ್ದರು. ಇದು ಮುಂದಿನ ದಿನಗಳಲ್ಲಿ ಇಂದಿರಾ ಮತ್ತು ಅರಸು ನಡುವಿನ ವೈಮನಸ್ಸಿಗೆ ಪರೋಕ್ಷವಾಗಿ ಕಾರಣವಾಯಿತು.

ಇಂದಿನ ಪ್ರಧಾನಿ ನರೇಂದ್ರಮೋದಿಯವರು ಈಗ ಜಾರಿಗೆ ತಂದಿರುವ ಇಪ್ಪತ್ತೊಂದನೆಯ ಶತಮಾನದ ಅಗೋಚರ ತುರ್ತುಪರಿಸ್ಥಿತಿಯು ೧೯೭೫ ತುರ್ತುಪರಿಸ್ಥಿತಿಗಿಂತ ಏನೇನೂ ಭಿನ್ನವಾಗಿಲ್ಲ. ಇಂದಿರಾ ಗಾಂಧಿಯವರದು ತಮ್ಮ ಸರ್ವಾಧಿಕಾರದ ಮನೋಭಾವದಲ್ಲಿಯೂ ಕೂಡ ತಮ್ಮ ನಡೆ ಮತ್ತು ನುಡಿಗಳಲ್ಲಿ ಯಾವುದೇ ರೀತಿಯ ಮುಚ್ಚು ಮರೆ ಇರಲಿಲ್ಲ  ಈಗಿನ ಪ್ರಧಾನಿಯವರ ರೀತಿಯಲ್ಲಿ ತುಟಿಯಂಚಿನಲ್ಲಿ ಬೆಣ್ಣೆ ಮತ್ತು ಕಂಕುಳಲ್ಲಿ ದೊಣ್ಣೆ ಎನ್ನುವ ರೀತಿಯಲ್ಲಿ ಕಪಟತನ ತೋರಿಸಿರಲಿಲ್ಲ. ಅತ್ಯಂತ ವ್ಯವಸ್ಥಿತವಾಗಿ ನಾಗರೀಕ ಹಕ್ಕುಗಳನ್ನು ಮತ್ತು ಅಭಿವ್ಯಕ್ತಿ ಸ್ವಾತಂತ್ರವನ್ನು ಧಾರ್ಮಿಕ ಭಾವನೆಗೆ ಕೆಡಕನ್ನು ಉಂಟು ಮಾಡುವ ಹೇಳಿಕೆಗಳು ಎಂತಲೂ ಹಾಗೂ ರಾಜಕೀಯ ನಾಯಕನ ಕಾರ್ಯ ವೈಖರಿಯನ್ನು ಟೀಕಿಸಿದರೆ ಅದು ರಾಷ್ಟ್ರ ದ್ರೋಹವೆಂತಲೂ ಸೆರೆಮನೆಗೆ ದೂಡುವ ಈಗಿನ  ಪ್ರವೃತ್ತಿ  ನಮಗೆ ೧೯೭೫ ತುರ್ತುಪರಿಸ್ಥಿತಿಯ ದಿನಗಳನ್ನು ನೆನಪಿಗೆ ತರುತ್ತಿದೆ. ಇಂದಿರಾ ಗಾಂಧಿಯವರು ಪತ್ರಿಕಾ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದರು ನಿಜ ಆದರೆ, ಅದಕ್ಕಿಂತ ಭಿನ್ನವಾಗಿ ಈಗಿನ ಪ್ರಧಾನಿಯವರು ನಮಗೆ ಮಾಧ್ಯಮ ಸ್ವಾತಂತ್ರವನ್ನು ದಯಪಾಲಿಸಿದ್ದಾರೆ. ಏಕೆಂದರೆ, ಇಂದು ಭಾರತದಲ್ಲಿರುವ  ಶೇಕಡ ಎಂಬತ್ತರಷ್ಟು ಮಾಧ್ಯಮ ಸಂಸ್ಥೆಗಳು ಮೋದಿ ಭಜನಾ ಮಂಡಳಿಯ ಸದಸ್ಯರ ಒಡೆತನದಲ್ಲಿವೆ ಮುಖೇಶ್ ಅಂಬಾನಿ,  ಗೌತಮ್ ಅದಾನಿ,  ಟೈಮ್ಸ್ ಆಫ್ ಇಂಡಿಯಾ ಜೈನ್ ಕುಟುಂಬ ಹಾಗೂ   ಜೀ  ಸಮೂಹದ ಸುಭಾಶ್ ಚಂದ್ರ ಇಂತಹವರು ದಿನ ನಿತ್ಯದ ವಸ್ತು ಸ್ಥಿತಿಯನ್ನು ಹಾಗೂ ರಾಷ್ಟç ಜ್ವಲಂತ ಸಮಸ್ಯೆ ಮತ್ತು ಆರ್ಥಿಕ ಪರಿಸ್ಥಿತಿ ಇವುಗಳನ್ನು ಬದಿಗಿಟ್ಟು ಮೋದಿ ಸರ್ಕಾರದ ಭಜನೆಯಲ್ಲಿ  ನಿರತರಾಗಿದ್ದಾರೆ. ಅಂದು ಇಂಡಿಯನ್ ಎಕ್ಸ್ ಪ್ರೆಸ್ ಮತ್ತು ಸ್ಟೇಟ್ಮನ್ ಪತ್ರಿಕೆಗಳು ತೋರಿದ ಪತ್ರಿಕೋದ್ಯಮದ ಘನತೆಯನ್ನು ನಾವು ದಿನಗಳಲ್ಲಿ ಹಿಂದೂ ಮತ್ತು ಟೆಲಿಗ್ರಾಪ್ ಪತ್ರಿಕೆಗಳಲ್ಲಿ ಮತ್ತು ಎನ್.ಡಿ.ಟಿ.ವಿ. ದೃಶ್ಯ ಮಾಧ್ಯಮದಲ್ಲಿ  ಹಾಗೂ ಕೆಲವು ಇಂಗ್ಲೀಷ್ ಪತ್ರಕರ್ತರು ನಡೆಸುತ್ತಿರುವ  ದ ವೈರ್ ಮತ್ತು ದ ಪ್ರಿಂಟ್  ಇನ್  ಎಂಬ ಸಾಮಾಜಿಕ ರಾಣಗಳಲ್ಲಿ ಮಾತ್ರ ನೋಡಬಹುದಾಗಿದೆ.

ಭಾರತದ ಮಾಧ್ಯಮ ಕ್ಷೇತ್ರವು ನೈತಿಕವಾಗಿ ದಿವಾಳಿ ಎದ್ದು ಹೋಗಿರುವ ಈಗಿನ  ಸ್ಥಿತಿಗೆ ಜಾಗತಿಕ ಮಟ್ಟದಲ್ಲಿ ಆಶ್ಚರ್ಯದ ಜೊತೆಗೆ ಕಟುಟೀಕೆಗಳು ವ್ಯಕ್ತವಾಗುತ್ತಿವೆ. ಇಂದಿರಾ ಅವರ ಕಾಲಘಟ್ಟದಲ್ಲಿ ದೃಶ್ಯಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳು ಇರಲಿಲ್ಲ. ಇದ್ದ ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳು ಕೇಂದ್ರ ಸರ್ಕಾರ ಸಾಕಿದ ಗಿಣಿಗಳಂತೆ ಉಲಿಯುತ್ತಿದ್ದವು.  ಇಂದಿರಾ ಅವರ ಹಠಮಾರಿತನ ಮತ್ತು ಸರ್ವಾಧಿಕಾರದ ಪ್ರವೃತ್ತಿಯ ವಿರುದ್ಧ ಸಿಡಿದೆದ್ದ ಅಂದಿನ ಬಹುತೇಕ ಪತ್ರಿಕೆಗಳು ಅದರಲ್ಲೂ ವಿಶೇಷವಾಗಿ ಇಂಡಿಯನ್ ಎಕ್ಸ್ ಪ್ರಸ್ ಸಮೂಹದ ರಾಮನಾಥ ಗೋಯಂಕಾ ಅವರ ಹೋರಾಟ ಇಂದಿನ ಮಾಧ್ಯಮ ಕ್ಷೇತ್ರಕ್ಕೆ  ಮಾದರಿಯಾಗುವಂತಹದ್ದು.  ಕನ್ನಡದ ಸಂದರ್ಭದಲ್ಲಿ ಹೇಳುವುದಾದರೆ, ಕನ್ನಡದ ಬಹುತೇಕ ದಿನಪತ್ರಿಕೆಗಳು ತಮ್ಮ ಸಂಪಾದಕಿಯ ಬರೆವಣಿಗೆಯ ಸ್ಥಳವನ್ನು ಖಾಲಿಯಾಗಿ ಮುದ್ರಿಸಿ ಪ್ರತಿಭಟನೆ ತೋರಿದವು. ಕನ್ನಡ ಪ್ರಭ ಪತ್ರಿಕೆಯ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣನವರು ಪತ್ರಿಕೆಯ ಮುಖಪುಟದಲ್ಲಿ ಎರಡು ಕಾಲಂ ವಿಸ್ತಾರದಲ್ಲಿ ಮೇಲಿನಿಂದ ಕೆಳಗಿನವರೆಗೂ ಪರಿಣಾಮಕಾರಿ ಶಬ್ದಗಳಲ್ಲಿ  ಬರೆಯುತ್ತಿದ್ದ ಸಂಪಾದಕೀಯವನ್ನು ಇಂದಿನ ತಲೆಮಾರಿನ ಪತ್ರಕರ್ತರು ಒಮ್ಮ ಗಮನಿಸುವುದು ಒಳಿತು.

ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಪತ್ರಕರ್ತೆಯಾಗಿದ್ದ ಕೂಮಿ ಕಪೂರ್ ಅವರು ಬರೆದ ಎಮರ್ಜೆನ್ಸಿ, ಪರ್ಸನಲ್ ಹಿಸ್ಟರಿ ಮತ್ತು  ಅನ್ಟೋಲ್ಡ್  ಸ್ಟೋರಿ ಆಫ್ ಎಮರ್ಜೆನ್ಸಿಎಂಬ ಜೆ.ಪಿ.ಗೋಯಲ್ ಅವರ ನೆನಪುಗಳ ಕೃತಿ ಇವುಗಳು ನಮಗೆ ೧೯೭೫ ತುರ್ತುಪರಿಸ್ಥಿತಿಯ ವಿವರಗಳನ್ನು ಸಮಗ್ರವಾಗಿ ಒದಗಿಸುತ್ತವೆ. ಇಂದಿರಾಗಾಂಧಿಯವರು ತಮ್ಮ ಆಪ್ತ ಕಾರ್ಯದರ್ಶಿಯಾಗಿದ್ದ ಕೇರಳ ಮೂಲದ ಆರ್.ಕೆ.ಧವನ್ ಮೂಲಕ ಹಾಗೂ ಅವರ ಪುತ್ರ ಸಂಜಯ್ಗಾAಧಿ ದೆಹಲಿಯ ಲೆಪ್ಟಿನೆಂಟ್ ಗವರ್ನರ್ ಆಗಿದ್ದ ಜಗಮೋಹನ್ ಮೂಲಕ ನಡೆಸಿದ ದಬ್ಬಳಾಳಿಕೆಯಿಂದಾಗಿ ಪ್ರಜಾಪ್ರಭತ್ವದ ಮೌಲ್ಯಗಳು ಮತ್ತು ಜನಸಾಮಾನ್ಯರು ಅನುಭವಿಸಿದ ಯಾತನೆಗಳನ್ನು ಕೃತಿಗಳು ನಮ್ಮೆದುರು ತೆರದಿಡುತ್ತವೆ. ಸಂಧರ್ಭದಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಮಾಲಿಕ ರಾಮನಾಥ ಗೋಯೆಂಕಾ ಅವರ ಪತ್ರಿಕಾ ಕಚೇರಿಗಳ ಮೇಲೆ ನಿರಂತರ ದಾಳಿ ನಡೆದವು ಮತ್ತು ಕಂಪನಿಯ ವ್ಯವಹಾರ ಪಾರದರ್ಶಕವಾಗಿಲ್ಲ ಎಂಬ ನೆಪದಲ್ಲಿ ಮುನ್ನೂರಕ್ಕೂ ಅಧಿಕ ಮೊಕದ್ದಮೆಗಳು ದಾಖಲೆಯಾಗಿದ್ದವು ಪ್ರತಿಯೊಂದು ವಿಚಾರಣೆಗೆ ಸಂಸ್ಥೆಯ ಅಧ್ಯಕ್ಷರ  ಹಾಜರಾತಿ ಕಡ್ಡಾಯ ಎಂಬ ನಿಯಮವನ್ನು ಜಾರಿ ಮಾಡಲಾಗಿತ್ತು.  ಇಂತಹ ಸ್ಥಿತಿಯಲ್ಲಿ ವೃದ್ಧಾಪ್ಯದ ನಡುವೆಯೂ ಸಹ ರಾಮನಾಥ ಗೋಯಂಕಾ ಅವರು ಅಂದಿನ ಪ್ರಸಿದ್ಧ ವಕೀಲರಾಗಿದ್ದ ನಾರಿಮನ್ ಪಾಲ್ಕಿವಾಲ ಅವರನ್ನು ಕಟ್ಟಿಕೊಂಡು ಹೋರಾಡಿದ್ದರು. ಹಿರಿಯ ಗಾಂಧಿವಾದಿ ಹಾಗೂ ಜಯಪ್ರಕಾಶ್ ನಾರಾಯಣರ ಆಪ್ತರಾಗಿದ್ದ ಗೋಯಂಕಾರವರು ಯಾವ ಕಾರಣಕ್ಕೂ ಪ್ರಜಾ ಪ್ರಭುತ್ವದ ಮೌಲ್ಯಗಳನ್ನು ಸರ್ವಾಧಿಕಾರಿ ಮನೋಭಾವಕ್ಕೆ ಹೆದರಿ ಗಾಳಿಗೆ ತೂರಬಾರದು ಎಂಬ ನಿಲುವಿಗೆ ಅಂಟಿಕೊಂಡು ಹೋರಾಡಿದ್ದರು. ದಿನಗಳಲ್ಲಿ ಪತ್ರಿಕೆಯ ಸಂಪಾದಕರಾಗಿದ್ದ ಕುಲದೀಪ್ ನಯ್ಯರ್ ಎಂಬ  ಅಪರೂಪದ ಪ್ರಾಮಾಣಿಕ ಪತ್ರಕರ್ತರು ರಾಮನಾಥ ಗೋಯಂಕಾ ಅವರ ಬೆಂಬಲಕ್ಕೆ ನಿಂತಿದ್ದರು.

2014  ರಲ್ಲಿ ಪ್ರಧಾನಿ ಹುದ್ದೆಗೆ ಏರಿದ ನಂತರ ನರೇಂದ್ರ ಮೋದಿಯವರ ಮುಂದೆ ಇದ್ದ ಎರಡು ಪ್ರಮುಖ ಗುರಿಗಳು ಈಗ ಸಾರ್ವಜನಿಕವಾಗಿ ಅನಾವರಣಗೊಂಡಿವೆ. ಅವುಗಳಲ್ಲಿ ಮೊದಲನೆಯದು ದೇಶಾದ್ಯಂತ  ನೈತಿಕತೆ ಮತ್ತು ಅನೈತಿಕತೆ ಇವುಗಳನ್ನು ದೂರವಿಟ್ಟು ಬಿ.ಜೆ.ಪಿ.ಯನ್ನು ಅಧಿಕಾರಕ್ಕೆ ತರುವುದು  ಮೊದಲನಯ ಗುರಿಯಾದರೆ,   ಎರಡನೆಯದಾಗಿ ತಮ್ಮ ನೇತೃತ್ವದ ಆಡಳಿತವನ್ನು ಬಹಿರಂಗವಾಗಿ ವಿಮರ್ಶಿಸುವ ಅಥವಾ ಟೀಕಿಸುವ ಲೇಖಕರು, ಪತ್ರಕರ್ತರು ಮತ್ತು ಹೋರಾಟಗಾರರನ್ನು ದೇಶ ದ್ರೋಹದ ಆಪಾಧನೆಯಡಿ  ಜಾಮೀನು ದೊರಕದಂತೆ ಸೆರೆಮನೆಗೆ ದೂಡುವುದು. ಎರಡನೆಯ ಗುರಿಯಾಗಿದೆ. ನರೇಂದ್ರ ಮೋದಿ ತನ್ನ ಎಂಟು ವರ್ಷದ ಅಧಿಕಾರದ ಆಡಳಿತಾವಧಿಯಲ್ಲಿ ಒಂದು ದಿನವಾದರೂ ದೇಶದ ಸಮಸ್ಯೆ ಕುರಿತಾಗಿ ಆಲೋಚಿಸಿದ ಬಗ್ಗೆಯಾಗಲಿ ಅಥವಾ ಆರ್ಥಿಕ ಸ್ಥಿತಿ ಗತಿಯ ಕುರಿತಾಗಿ ತಜ್ಞರ ಸಲಹೆ ಕೇಳಿದ ಕುರಿತಾಗಲಿ ಮಾಹಿತಿಯಿಲ್ಲ. ಕೋವಿಡ್ ಸಂದರ್ಭದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ಮುಂಬೈ ಮತ್ತು ದೆಹಲಿಯಂತಹ ಪ್ರಮುಖ  ನಗರಗಳಿಂದ ನೂರಾರು ಕಿಲೋಮೀಟರ್ ದೂರದ ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲಿ ಪ್ರಯಾಣ ಹೊರಟಾಗ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದ ಸರ್ಕಾರವು ನ್ಯಾಯಾಲಯಕ್ಕೆ ತನ್ನ ಬಳಿ ವಲಸೆ ಕಾರ್ಮಿಕರ ಕುರಿತಾಗಿ ಅಧಿಕೃತ ಮಾಹಿತಿಗಳಿಲ್ಲ ಎಂಬ ಹೇಳಿಕೆಯನ್ನು ನೀಡಿತು. ಭಾರತದ ನೆಲದಲ್ಲಿ ದುಡಿಯುವ ಕಾರ್ಮಿಕರ ಕುರಿತಾಗಿ ತನಗಿರುವ ಅಸಹನೆಯನ್ನು ಮತ್ತು ಬೇಜಾವ್ದಾರಿತನವನ್ನು ಅನಾವರಣಗೊಳಿಸಿತು.  ನಿರುದ್ಯೋಗದಿಂದ ಹತಾಶರಾಗಿರುವ ವಿದ್ಯಾವಂತ ಯುವಕರಿಗೆ ರಸ್ತೆಯಲ್ಲಿ ಪಕೋಡ ಮಾರಿ  ಜಿವನ ಸಾಗಿಸಿ ಎಂದು ಹೇಳಬಲ್ಲ ಇಂತಹ  ಪ್ರಧಾನಿಯನ್ನು ಬಹುಶಃ ಜಗತ್ತಿನಲ್ಲಿ ಯಾವ ರಾಷ್ಟçವೂ ನೋಡಿರಲು ಸಾಧ್ಯವಿಲ್ಲ.

ಪ್ರಜಾ ಪ್ರಭುತ್ವ ವ್ಯವಸ್ತೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕೋದ್ಯಮವನ್ನು ನಾಲ್ಕು ಆಧಾರ ಸ್ಥಂಭಗಳು ಎಂದು ಗುರುತಿಸಲಾಗಿದೆ. ಶಾಸಕಾಂಗ ಮತ್ತು ಕಾರ್ಯಾಂಗದಲ್ಲಿ ಲೊಪಗಳಾದರೆ ತಿದ್ದುವ ಹೊಣೆಗಾರಿಕೆ ಈವರೆಗೆ ನ್ಯಾಯಾಂಗ ಮತ್ತು ಮಾಧ್ಯಮಗಳ ಮೇಲಿತ್ತು. ಆದರೆ ಇತ್ತೀಚೆಗಿನ ದಿನಗಳಲ್ಲಿ  ಎರಡು ಆಧಾರ ಸ್ತಂಭಗಳು ಆಳುವವರ ಗುಲಾಮರಂತೆ ವರ್ತಿಸತೊಡಗಿವೆ. ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಸವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು  ಅಧಿಕಾರಕ್ಕೆ ಹಾತೊರೆದು ನ್ಯಾಯಾಂಗದ ಘನತೆಯನ್ನು ಗಾಳಿಗೆ ತೂರುತ್ತಿದ್ದಾರೆ. ಹಿಂದೆ 2005 ರಲ್ಲಿ ಪಿ.ಸುಂದರಂ ಎಂಬ ನ್ಯಾಯಮೂರ್ತಿ ಕೇರಳದ ರಾಜ್ಯಪಾಲರಾಗಿದ್ದರು. ಈವರಗೆ  ನ್ಯಾಯಮೂರ್ತಿಗಳು ತನಿಖಾ ಆಯೋಗದ ಅಧ್ಯಕ್ಷರಾಗುವುದು ಅಥವಾ ಕಾನೂನುಗಳಿಗೆ ಸಂಬಂಧಪಟ್ಟ ಸಲಹಾ ಸಮಿತಿಗಳಿಗೆ ಅದ್ಯಕ್ಷರಾಗಿರುವುದನ್ನು  ಹೊರತು ಪಡಿಸಿದರೆ ಉಳಿದ ರಾಜಕೀಯ ಹುದ್ದೆಗಳನ್ನು ಅಲಂಕರಿಸಿದ ಉದಾಹರಣೆಗಳಿಲ್ಲ. ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಗೋಗಯ್ ಎಂಬ ವ್ಯಕ್ತಿಯು ಕಳೆದ ವರ್ಷ ಅಯೋಧ್ಯೆಯ ರಾಮಮಂದಿರದ ವಿಷಯದಲ್ಲಿ ಸರ್ಕಾರದ ಪರವಾಗಿ ತೀರ್ಪು ನೀಡಿದ್ದಕ್ಕೆ ಪ್ರತಿಫಲವಾಗಿ  ಈಗ ರಾಜ್ಯಸಭೆಗೆ ಸದಸ್ಯರಾಗಿ  ನಾಮಕರಣವಾಗುವುದರ ಮೂಲಕ  ನ್ಯಾಯಾಲಯ ಮತ್ತು ನ್ಯಾಯಮೂರ್ತಿಯ ಸ್ಥಾನದ  ಘನತೆಯನ್ನು ಕುಗ್ಗಿಸಿದ್ದಾರೆ. ಇಂತಹ ನಡುವಳಿಕೆಗಳು ಸರ್ಕಾರದ ಪರವಾಗಿ ತೀರ್ಪು ನೀಡುವುದು ಅಥವಾ ಸರ್ಕಾರದ ಅವ್ಯವಹಾರಗಳ ಕುರಿತಾಗಿ ಮೌನ ವಹಿಸಿದರೆ ಮುಂದಿನ ದಿನಗಳಲ್ಲಿ ನ್ಯಾಯಾಧೀಶರಿಗೆ  ಲಾಭವಾಗಲಿದೆ ಎಂಬ ಸಂದೇಶವನ್ನು ರವಾನಿಸುತ್ತಿವೆ.  ಹಾಗಾಗಿ ನ್ಯಾಯಾಂಗದ ಕಾರ್ಯವೈಖರಿ ಕುರಿತಂತೆ (ಕೆಲವು ನಿಷ್ಟಾವಂತ ನಾಯ್ಯಾಧೀಶರನ್ನು ಹೊರತು ಪಡಿಸಿ) ಜನಸಾಮಾನ್ಯರಿಗೆ ಇದ್ದ ನಂಬಿಕೆಯು ಕುಸಿದು ಹೋಗಿದೆ.

ಸರ್ಕಾರ ಮತ್ತು ಸಮಾಜದ ನಡುವೆ ಸಂಪರ್ಕ ಸೇತುವೆಯಾಗಬೇಕಿದ್ದ ಮಾಧ್ಯಮ ಕ್ಷೇತ್ರವು ಈಗ  ಸಂಪೂರ್ಣವಾಗಿ ಶರಣಾಗತವಾಗುವುದರ ಮೂಲಕ ಯಾವುದೇ ಸಂಕೋಚ ಅಥವಾ ಮುಜುಗರವಿಲ್ಲದೆ ಆಳುವವರ ಮತ್ತು ಉಳ್ಳವರ ತುತ್ತೂರಿಯಾಗಿದೆ. ಇಂತಹ ದುಸ್ಥಿತಿಯ ನಡುವೆ ಪ್ರಮಾಣಿಕ ಹಾಗೂ ಘನತೆಯ ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸರ್ಕಾರ ಕಸಿದುಕೊಂಡಿದೆ. ಎರಡೂವರೆ ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ದಲಿತ ಬಾಲಕಿಯ ಮೇಲೆ ನಡೆದ ಅತ್ಯಾಚಾರದ ಘಟನೆಯನ್ನು ವರದಿ ಮಾಡಲು ತೆರಳಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದಿಕಿ ಎಂಬ ಯುವಕನನ್ನು ರಾಷ್ಟç ಮತ್ತು ರಾಜ್ಯ ಸರ್ಕಾರಗಳ ವಿರುದ್ಧದ ಕಾನೂನು ಬಾಹಿರ ಚಟುವಟಿಕೆ ಎಂಬ ಆಧಾರದ ಮೇಲೆ ಬಂಧಿಸಲಾಗಿದ್ದು  ಆತ ಜಾಮೀನು ದೊರೆಯದೆ ಇಂದಿಗೂ ಸಹ ಸೆರೆಮನೆಯಲ್ಲಿ ಬಂಧಿಯಾಗಿ ಕೊಳೆಯುತ್ತಿದ್ದಾನೆ. ಇಷ್ಟು ಮಾತ್ರವಲ್ಲದೆ ದೇಶವಿರೋಧಿ, ಸಂವಿಧಾನ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಎಂಬ ಹುಸಿ ಆರೋಪಗಳ ಮೇಲೆ  ದೇಶದ ಹಲವಾರು ಚಿಂತಕರನ್ನು, ನ್ಯಾಯವಾದಿಗಳನ್ನು ಮತ್ತು ಸಾಮಾಜಿಕ ಹೋರಾಟಗಾರರನ್ನು ಕಳೆದ ನಾಲ್ಕೈದು ವರ್ಷಗಳಿಂದ ಭಿಮಾ ಕೋರೆಗಾಂವ್ ಘಟನೆಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷಾಧಾರಗಳಿಲ್ಲದಿದ್ದರೂ ಮಹಾರಾಷ್ಟ್ರದ ಜೈಲಿನಲ್ಲಿ ಬಂಧಿಸಿ ಇಡಲಾಗಿದೆ. ಪ್ರೊ.ಆನಂದ್ ತೇಲ್ದುಂಬೆ, ವರವರರಾವ್, ಸುಧಾಭಾರಧ್ವಾಜ್ ( ವರವರರಾವ್ ಮತ್ತು ಸುಧಾ ಭಾರದ್ವಾಜ್ ಇಬ್ಬರೂ ಅನಾರೋಗ್ಯದ ನಿಮಿತ್ತ ತಾತ್ಕಾಲಿಕವಾಗಿ ಜಾಮೀನು ಪಡೆದಿದ್ದಾರೆ) ಪ್ರೊ.ಹನಿಬಾಬು, ಅರುಣ್ ಫೆರಿರಾ ಸೇರಿದಂತೆ ದೆಹಲಿಯ ಜವಹರ ಲಾಲ್ ವಿಶ್ವ ವಿದ್ಯಾಲಯದ ಅನೇಕ ವಿದ್ಯಾರ್ಥಿ ಮುಖಂಡರನ್ನು ಬಂಧಿಸಿ ಸತ್ಯ ಹೇಳುವವವರಿಗೆ ಇಲ್ಲಿ ಉಳಿಗಾಲವಿಲ್ಲ ಎಂಬ ಸಂದೇಶವನ್ನು ರವಾನಿಸಲಾಗಿದೆ.  ಸುಳ್ಳು ಸುದ್ದಿಗಳನ್ನು ಬಯಲಿಗೆಳೆಯುತ್ತಿದ್ದ ಆಲ್ಟ್ ನ್ಯೂಸ್ ಎಂಬ ಅಂತರ್ಜಾಲ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬನಾಗಿದ್ದ ಬೆಂಗಳೂರು ಮೂಲದ ಮಹಮ್ಮದ್ ಜಯಬೈರ್ ಎಂಬ ಯುವ ಪ್ರತಿಭಾವಂತನನ್ನು ಈಗ ಬಂಧಿಸಲಾಗಿತ್ತು. ಇದೀಗ ಈ ಯುವಕ ಜಾಮೀನನ ಮೇಲೆ ಹೊರಬಂದಿದ್ದಾನೆ.

ನಮ್ಮ ನಡುವಿನ ಸಾಕ್ಷಿ ಪ್ರಜ್ಞೆಯಂತೆ ಬದುಕುತ್ತಾ, ಬರೆಯುತ್ತಿರುವ ಹಿರಿಯ  ಸಾಹಿತಿ ದೇವನೂರು ಮಹಾದೇವ ಅವರು ಇತ್ತೀಚೆಗೆ ಬರೆದಆರ್.ಎಸ್.ಎಸ್ ಆಳ ಅಗಲಎಂಬ ಕೃತಿಯಲ್ಲಿ ದಾಖಲಿಸಿರುವ ಮಾತುಗಳು ಹೀಗಿವೆ. ‘ ಕಾಂಗ್ರೇಸ್ ಪಕ್ಷದ ಇಂದಿರಾ ಗಾಂದಿಯವರು ಕೂಡ ಸರ್ವಾಧಿಕಾರಿಯಾಗಿದ್ದರು ಆದರೆ ಅದು ಅಲ್ಪಾವಧಿಯವರೆಗೆ ಮಾತ್ರ. ಇಂದಿರಾ ಅವರ ಸರ್ವಾಧಿಕಾರವು ಕೇವಲ  ಆಡಳಿತಾತ್ಮಕ ಸರ್ವಾಧಿಕಾರವಾಗಿತ್ತು. ಇಂದಿರಾ ಅವರ ಸರ್ವಾಧಿಕಾರದಲ್ಲಿ ಕಾರ್ಯಾಂಗ, ನ್ಯಾಯಾಂಗ  ಹಾಗೂ ಪತ್ರಿಕಾ ರಂಗ ಮುಂತಾದ ಸ್ವಾಯತ್ತ ಸಂಸ್ಥೆಗಳು ಈಗಿನಷ್ಟು ನಿತ್ರಾಣಗೊಂಡಿರಲಿಲ್ಲ ಆದರೆ, ಇಂದಿನ ಮೋದಿಯವರ ಆಳ್ವಿಕೆಯಲ್ಲಿ ನ್ಯಾಯಾಂಗ, ಕಾರ್ಯಾಂಗ ಹಾಗೂ ಮಾಧ್ಯಮ ಸಂಸ್ಥೆಗಳು  ಉಸಿರಾಡಲು ಕಷ್ಟ ಪಡುತ್ತಿವೆ.

ಆರ್ ಎಸ್.ಎಸ್. ಸಂಸ್ಥೆಯ ಕನಸಿನ ಆಳ್ವಿಕೆಯು ಸಮಾಜದ ಎಲ್ಲಾ ಕ್ಷೇತ್ರಗಳನ್ನು ಕಬ್ಜಾ ಮಾಡಿಕೊಳ್ಳತೊಡಗಿದೆ. ಅಂದರೆ, ಪಕ್ಷ, ಸಮಾಜ, ಸಂಸ್ಕೃತಿ,  ಆಡಳಿತಾತ್ಮಕ, ಎಲ್ಲವಕ್ಕೂ ಏಕ ನಾಯಕತ್ವವೇ ಅಂತಿಮ ಎಂಬಂತಾಗಿದೆ ಇದು ಸರ್ವಾಧಿಕಾರವೆಂಬುದನ್ನು ನಾವು ನೆನಪಿಟ್ಟುಕೊಳ್ಳೊಣಎಂದು ಹೇಳಿರುವ ಮಾತುಗಳನ್ನು ಗಮನಿಸಿದರೆ ಅಥವಾ ಕುರಿತು ನಾವು ಗಂಭೀರವಾಗಿ ಆಲೋಚಿಸಿದರೆ  ಭಾರತದ ಪ್ರಜೆಗಳಾದ ನಾವು ಎಪ್ಪತ್ತೈದರ ಸ್ವಾತಂತ್ರ್ಯ ಸಂಭ್ರಮದ ಆಚರಣೆಯ ಮನಸ್ಥಿತಿಯಲ್ಲಿ ನಾವು ಇರಲು ಸಾಧ್ಯವೆ? ಇದು ನಮ್ಮಗಳ ಆತ್ಮಸಾಕ್ಷಿಗೆ ಹಾಕಿಕೊಳ್ಳಬೇಕಾದ ಪ್ರಶ್ನೆ ಮಾತ್ರವಾಗಿರದೆ  ಭವಿಷ್ಯದ ಭಾರತದ ಬಗ್ಗೆ ಕೂಡ ನಾವು  ಆಲೋಚಿಸಬೇಕಿದೆ.

ಡಾ.ಎನ್.ಜಗದೀಶ್ ಕೊಪ್ಪ

( ಆಗಸ್ಟ್ ತಿಂಗಳ ಹೊಸತು ಮಾಸ ಪತ್ರಿಕೆಗೆ ಬರೆದ ಅಂಕಣ ಬರಹ)