ಬುಧವಾರ, ಮೇ 1, 2024

ಪೆರುಮಾಳ್ ಮುಗನ್ ಎಂಬ ನೆಲದ ಧ್ವನಿಯ ಲೇಖಕ

 

ಇತ್ತೀಚಿನ ವರ್ಷಗಳಲ್ಲಿ ತಮಿಳು ಭಾಷೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬರೆಯುತ್ತಿರುವ ಲೇಖಕ ಪೆರುಮಾಳ್ ಮುರುಗನ್ ತಮ್ಮ ನೆಲದ ಸೊಗಡಿನ ಭಾಷೆಯ ಮೂಲಕ ಭಾರತ ಮಾತ್ರವಲ್ಲದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರಮುಖ ಕಾದಂಬರಿಕಾರ ಎಂದು ಗುರುತಿಸಿಕೊಂಡಿದ್ದಾರೆ. ನಮ್ಮ ಕನ್ನಡದ ದೇವನೂರು ಮಹಾದೇವ ಅವರ ಮಾದರಿಯಲ್ಲಿ ತಾನು ಹುಟ್ಟಿ ಬೆಳೆದ ನಾಮಕ್ಕಲ್ ಜಿಲ್ಲೆಯ ಕೊಂಗನಾಡಿನ ಭಾಷೆ ಎಂದು ಕರೆಸಿಕೊಳ್ಳುವ ಅಲ್ಲಿನ ಉಪ ಭಾಷೆಯನ್ನು  ತಮ್ಮ ಕೃತಿಗಳಲ್ಲಿ ಬಳಸುವುದು ಪೆರುಮಾಳ್ ಮರುಗನ್ ಅವರ ಬರೆವಣಿಗೆಯ  ವಿಶೇಷವಾಗಿದೆ. ಅವರು ಏನೇ ಬರೆಯಲಿ, ಅದು ಕಾವ್ಯವಿರಲಿ, ಕಥೆಯಾಗಿರಲಿ ಅಥವಾ ಕಾದಂಬರಿಯಾಗಿರಲಿ ಅವರ ಕಥನದ ವಸ್ತುಗಳು ಅವರು ಹುಟ್ಟಿ ಬೆಳೆದ ನೆಲದ ಕಥನಗಳಾಗಿರುತ್ತವೆ.

ಇದು ನಮಗೆ ಶಾಶ್ವತವೇ? ನಾವು ಚಿಂತಾಕ್ರಾಂತರಾಗಿದ್ದೀವಿ

ಸುಟ್ಟು ಬೆಂದುಹೋದ  ಭೂಮಿ ಮಾತ್ರ ನಮಗೆ ಸಿಗುವುದೇ?

ನಾವು ಬಡವರು, ಬೇಡಿಕೊಳ್ಳುತ್ತೇವೆ ಮತ್ತೆ ಮತ್ತೆ  ಬೇಡಿಕೊಳ್ಳುತ್ತೇವೆ

ಇದು ನಮ್ಮ ಹಣೆಬರಹವೇ?

ಮಣ್ಣಿನ ವಾಸನೆಯೊಂದಿಗೆ ಮಳೆ ಬರುವುದು ಯಾವಾಗ ?

ಇಂತಹ  ಸಾಲುಗಳನ್ನು  ಪೆರುಮಾಳ್ ಮುರುಗನ್ ಮಾತ್ರ ಬರೆಯಬಲ್ಲರು.  ತಮಿಳುನಾಡಿನ  ನಾಮಕ್ಕಲ್ ಜಿಲ್ಲೆಯ ಕೂಟಪಲ್ಲಿ ಎಂಬ ಹಳ್ಳಿಯ ಬಡ ರೈತ ಕುಟುಂಬದಲ್ಲಿ ಜನಿಸಿದ ಪೆರುಮಾಳ್ ಅವರ ಬರಹಗಳು ಗ್ರಾಮೀಣ ಜಗತ್ತಿನ ಭಾಷೆಯ ಸೊಗಡಿನಿಂದ ಕೂಡಿವೆ. ಅವರ ಬಹುತೇಕ ಕವಿತೆಗಳು  ಅವರ ಗದ್ಯ ಬರವಣಿಗೆಗಿಂತ ಭಿನ್ನವಾಗಿ, ತೀವ್ರವಾಗಿ ವೈಯಕ್ತಿಕ ನೆಲೆಯಲ್ಲಿ   ಕಟುವಾಗಿರುತ್ತವೆ. ಜೊತೆಗೆ  ಕೃಷಿಕ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿರುವ ಚಿಂತನೆಗಳಿಂದ ಕೂಡಿರುತ್ತವೆ. 

ಒಣಭೂಮಿಗಳು ಒಣಗಿವೆಎಂಬ ಒಂದು ಕವಿತೆಯಲ್ಲಿ 

ಭೂಮಿ ಬಂಜರು ಬಂಡೆಗಳಂತೆ ಮಾರ್ಪಟ್ಟಿವೆ

ಬಿತ್ತಿದ ಬೀಜಗಳು ಮೊಳಕೆಯೊಡೆಯಲಿಲ್ಲ

 ಹೂವು, ಅರಳಲಿಲ್ಲ

ಮಳೆಯಿಲ್ಲದೆ, ನೀರಿಲ್ಲದೆ,

ಬರದಲ್ಲಿ ನಾವು ನಾಶವಾಗುತ್ತೇವೆ. "

ಕಾರಣದಿಂದಾಗಿ ಪೆರುಮಾಳ್ ಮುರುಗನ್ ಅವರ ಬರಹಗಳನ್ನು ವಿಶ್ಲೇಷಿಸಿರುವ ಖ್ಯಾತ ಕರ್ನಾಟಕ ಸಂಗೀತಗಾರರಾದ ಟಿ.ಎಂ. ಕೃಷ್ಣ ಅವರು ಹೇಳಿರುವ   ‘’ ಗ್ರಾಮೀಣ ಪ್ರದೇಶದಲ್ಲಿ ಬೇರೂರಿದ  ಹಾಗೂ ಭಾಷೆಯ ಸರಳತೆಯಿಂದ ಮುರುಗನ್ ವರ ಕಥೆ, ಕಾದಂಬರಿಗಳು ಓದುಗರ ಮನಸೆಳೆಯುತ್ತವೆ.   ಕಚ್ಚಾ, ಮಣ್ಣಿನ ನೈಸರ್ಗಿಕ ವಾಸ್ತವದಿಂದ ಕೂಡಿದ ಅವರ ಕಥೆಗಳನ್ನು ಸ್ಲೋ ಮೋಷನ್ ನಲ್ಲಿ ಸಿನಿಮಾ ನೋಡಿದಂತೆ. ನಾವು ಸ್ಥಳದ ಪ್ರತಿಯೊಂದು ಮೂಲೆ , ಮೂಲೆಯನ್ನು ಗಮನಿಸಬಹುದು. ಮುರುಗನ್ ಯಾವಾಗಲೂ  ವಾಸ್ತವವನ್ನು ಸ್ಪಷ್ಟವಾಗಿ ಹೇಳುವುದಿಲ್ಲ. ಆದರೆ, ಅವರು ದೃಶ್ಯವನ್ನು ಪ್ರಸ್ತುತಪಡಿಸುತ್ತಾರೆ ಮತ್ತು ಓದುಗರಾದ ನಮ್ಮನ್ನು ನಾವು ಊಹಿಸಬಹುದಾದ ಸ್ಥಳದಲ್ಲಿ ಇರಿಸುತ್ತಾರೆ.’’ ಎಂಬ ಮಾತುಗಳು ಪೆರುಮಾಳ್ ಪ್ರತಿಭೆಗೆ ಸಾಕ್ಷಿಯಾಗಿವೆ.

ಮುರುಗನ್ ಅವರ ತಂದೆ ಓರ್ವ ಸಾಮಾನ್ಯ ರೈತರಾಗಿದ್ದರು.  ಕೃಷಿಯಲ್ಲಿ ಕುಟುಂಬ ನಿರ್ವಹಣೆ ಕಷ್ಟವಾದಾಗ  ತಮಿಳುನಾಡಿನ ತಿರುಚೆಂಗೋಡ್ನಲ್ಲಿರುವ ಸಿನಿಮಾ ಥಿಯೇಟರ್ನಲ್ಲಿ ಸೋಡಾ ಅಂಗಡಿ ಮತ್ತು ಸೈಕಲ್ ಸ್ಟ್ಯಾಂಡ್ ನಡೆಸುತ್ತಿದ್ದರು. ಇಂತಹ ಬಡ ಕುಟುಂಬದಲ್ಲಿ ಜನಿಸಿದ ಪೆರುಮಾಳ್ ಮುರುಗನ್ ಶಿಕ್ಷಣದುದ್ದಕ್ಕೂ ತಮಿಳು ಸಾಹಿತ್ಯವನ್ನು ಅಧ್ಯಯನ ಮಾಡಿದವರು. ಅವರು ಸ್ನಾತಕೋತ್ತರ ಪದವಿಯಲ್ಲಿ ತಮಿಳು ಪ್ರಾಚೀನ ಕಾವ್ಯವನ್ನು ಆಯ್ಕೆ ಮಾಡಿಕೊಂಡ ಪರಿಣಾಮವಾಗಿ ದ್ರಾವಿಡ ಭಾಷಾ ವಿಜ್ಞಾನದ ಬಗ್ಗೆ ಮತ್ತು ತಮಿಳ್ ಸಂಗಂ ಯುಗದ ಸಾಹಿತ್ಯದ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಮತ್ತು ಬರೆಯಬಲ್ಲ ಲೇಖಕರಾಗಿ ಹೊರಹೊಮ್ಮಿದ್ದಾರೆ. ತಮಿಳುನಾಡಿನ ಸರ್ಕಾರಿ ಕಾಲೇಜಿನಲ್ಲಿ ತಮಿಳು ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಾ, ಕಥೆ, ಕಾವ್ಯ ರಚನೆಯಲ್ಲಿ ತೊಡಗಿದ್ದ ಅವರು ಹತ್ತು ವರ್ಷಗಳ ಹಿಂದೆ ತಿರುಂಚಗೋಡ್ ಪ್ರದೇಶದಲ್ಲಿ ಜಾರಿಯಲ್ಲಿದ್ದ ಬಂಜೆಯರು ಮಕ್ಕಳು ಪಡೆಯುವ ಪ್ರಾಚೀನ ಸಂಸ್ಕೃತಿಯ ಬಗ್ಗೆ ಕಾದಂಬರಿ ಬರೆಯುವುದರ ಮೂಲಕ ಓದುಗರ ಮನ ಸೆಳೆದರು ಇಷ್ಟು ಮಾತ್ರವಲ್ಲದೆ ವಿವಾದಕ್ಕೆ ಒಳಗಾದರು.

ಮಾದೂರ್ ಬಾಗನ್ ಅಂದರೆ, ದೇಹದ ಒಂದು ಭಾಗ ಹೆಣ್ಣು ಎನ್ನಬಹುದಾದ ಕಾದಂಬರಿಯಲ್ಲಿ ಮದುವೆಯಾಗಿ ಮಕ್ಕಳಾಗದ ಸ್ತ್ರೀಯರು ವರ್ಷಕ್ಕೊಮ್ಮೆ ನಡೆಯುವ ಸ್ಥಳಿಯ ಜಾತ್ರೆಯಲ್ಲಿ ಇಷ್ಟವಾದ ಪರಪುರುಷನನ್ನು ಕೂಡಿ ಮಕ್ಕಳನ್ನು ಪಡೆಯಬಹುದಾದ ಪದ್ಧತಿಯನ್ನು ಕುರಿತಾದ ವಸ್ತುವನ್ನು ಕಾದಂಬರಿ ಒಳಗೊಂಡಿದೆ. ಇದು ತಮಿಳುನಾಡು ಮಾತ್ರವಲ್ಲದೆ, ಭಾರತದ ಎಲ್ಲಾ ಭಾಗಗಳಲ್ಲಿ ಎಂಬತ್ತರ ದಶಕದವರೆಗೆ ಅಸ್ತಿತ್ವದಲ್ಲಿತ್ತು. ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ  ಚಂದ್ರಗುತ್ತಿಯ  ಜಾತ್ರೆ ಹಾಗೂ ಬೆಳಗಾವಿ ಜಿಲ್ಲೆ  ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ವರ್ಷಕ್ಕೊಮ್ಮೆ ನಡೆಯುವ ಭರತ ಹುಣ್ಣಿಮೆಯ ಜಾತ್ರೆಯಲ್ಲಿ ರೀತಿಯಲ್ಲಿ ಪರುಷ ಮತ್ತು ಸ್ತ್ರೀಯರು ಕೂಡುವ ಪದ್ಧತಿಯಿತ್ತು.  ಇದೇ ಪದ್ಧತಿಯು ಪೂರ್ವ ಭಾಗದ ಉತ್ತರ ಪ್ರದೇಶದಲ್ಲಿ ಚಾಲ್ತಿಯಲ್ಲಿ ಇದ್ದ ಸಂಗತಿಯನ್ನು ಬಿ.ಬಿ.ಸಿ. ಛಾನಲ್ ಹಿರಿಯ ವರದಿಗಾರರಾಗಿದ್ದ ಮಾರ್ಕ್ ಟುಲಿ ಅವರು ತಮ್ಮ  ‘’ಹಾರ್ಟ್ ಆಫ್ ಇಂಡಿಯಾ’’ ಕೃತಿಯ ಪ್ರಬಂಧವೊಂದರಲ್ಲಿ ಸುಧೀರ್ಘವಾಗಿ ದಾಖಲಿಸಿದ್ದಾರೆ. ಉತ್ತರ ಭಾರತದಲ್ಲಿ ದಕ್ಷಿಣ ಭಾರತಕ್ಕಿಂತ ಭಿನ್ನವಾಗಿ ಮಕ್ಕಳಿಲ್ಲದ ಮಹಿಳೆಯರನ್ನು ಊರಿನ ಹಿರಿಯ ಮಹಿಳೆಯರು ದೇವಿ ಪೂಜೆಯ ಹೆಸರಿನಲ್ಲಿ ಅವರನ್ನು ಗಂಗಾ ನದಿಯ ತೀರಕ್ಕೆ ಕರೆದೊಯ್ದು ಅವರಿಗೆ ಅಫೀಮು ಬೆರೆಸಿದ ರಾಮರಸವನ್ನು ಕುಡಿಸಿ, ಸಾಧುಗಳ ಜೊತೆಗ ಮಲಗಿಸಿ, ಬೆಳಿಗ್ಗೆ ಗಂಗಾನದಿಯಲ್ಲಿ ಸ್ನಾನ ಮಾಡಿಸಿಕೊಂಡು ಕರೆತರುತ್ತಿದ್ದ ಸಂಗತಿಯನ್ನು ವಿವರವಾಗಿ ದಾಖಲಿಸಿದ್ದಾರೆ.



ಪೆರುಮಾಳ್ ಮುರುಗನ್ ಇದನ್ನು ಒಂದು ಸಾಂಪ್ರದಾಯಿಕ ಆಚರಣೆ ಎಂದು ಹೇಳಿಕೊಂಡ ಕಾದಂಬರಿಯ  ಚಿತ್ರಣವು  2015 ರಲ್ಲಿ  ಓದುಗರ ಒಂದು ವರ್ಗವನ್ನು ಕೆರಳಿಸಿತುಅವರು ಬೇಷರತ್ತಾದ ಕ್ಷಮೆಯಾಚನೆಗೆ ಸಹಿ ಹಾಕಲು ಮತ್ತು ಅವರ ಪುಸ್ತಕದ ಮಾರಾಟವಾಗದ ಪ್ರತಿಗಳನ್ನು ಹಿಂತೆಗೆದುಕೊಳ್ಳುವಂತೆ ತಮಿಳುನಾಡಿನಲ್ಲಿ ಸಂಘಪರಿವಾರದ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಸಂದರ್ಭದಲ್ಲಿ ಮನ ನೊಂದ ಮುರುಗನ್ ಅವರು ‘’ಲೇಖಕ ಪೆರುಮಾಳ್ ಮುರುಗನ್ ನಿಧನ ಹೊಂದಿದನು’’ ಎಂದು ಘೋಷಿಸಿ   ಮೌನಕ್ಕೆ ಶರಣಾದರುಆದರೆ, 2016 ರಲ್ಲಿ ಚೆನ್ನೈ ನಗರದ ಮದ್ರಾಸ್ ಹೈಕೋರ್ಟ್ ನೀಡಿದ ತೀರ್ಪು ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಿತು. ಹೈಕೋರ್ಟಿನ ನ್ಯಾಯಾಧೀಶರು ತೀರ್ಪು ನೀಡುವ ಸಂದರ್ಭದಲ್ಲಿ ‘’ಮುರುಗನ್ ಅವರನ್ನು ಇಷ್ಟಪಡದವರಿಗೆ ಮತ್ತು ಅವರ ಪುಸ್ತಕವನ್ನು ನಿಯಂತ್ರಿಸಲು ಬಯಸಿದವರಿಗೆ ಒಂದು ಸಲಹೆಯನ್ನು ನೀಡಿದರು: “ಎಲ್ಲಾ ಬರಹಗಳು, ಒಂದು ವಿಭಾಗಕ್ಕೆ ರುಚಿಸಲಿಲ್ಲ ಎನಿಸಿದರೆ, ಸಮಾಜವನ್ನು ಅಶ್ಲೀಲ, ಅಸಭ್ಯ, ವಿಕೃತಅವಿವೇಕ ಮತ್ತು ಅನೈತಿಕ ಎಂದು ಹಣೆಪಟ್ಟಿ ಕಟ್ಟುವಂತಿಲ್ಲ. . ನಿಮಗೆ ಪುಸ್ತಕ ಇಷ್ಟವಾಗದಿದ್ದರೆ ಪಕ್ಕಕ್ಕಿಟ್ಟು ಮೌನವಾಗಿರಿಎಂದು ಛಾಟಿಏಟು ಬೀಸಿದರು. ನ್ಯಾಯಾಧೀಶರ ಆಜ್ಞೆಯು ಮುರುಗನ್ ಅವರ ಬರೆವಣಿಗೆಗೆ ಹೊಸ ಛಾಪನ್ನು ಮೂಡಿಸಿತು.

ಸಂದರ್ಭದಲ್ಲಿ ‘’ ಹೇಡಿಗಳ ಹಾಡುಗಳು ಮತ್ತು ನಿರ್ಗಮನದ ಕವಿತೆಗಳು’’ ಎಂಬ ಹೆಸರಿನಲ್ಲಿ ಕಾವ್ಯ ಸಂಕಲನವನ್ನು ಹೊರತಂದ ಪೆರುಮಾಳ್ ಮುರುಗನ್, ಕಥೆ ಮತ್ತು ಕಾದಂಬರಿಯ ರಚನೆಯತ್ತ ತೀವ್ರವಾಗಿ ತೊಡಗಿಸಿಕೊಂಡರು. ಅವರು  "ಪುಣ್ಣಾಚಿ" ಎಂಬ ಹೆಸರಿನ ಕಾದಂಬರಿಗೆ ಮುರುಗನ್ ಅವರು ಪ್ರಸ್ತಾವನೆಯನ್ನು ಬರೆಯುತ್ತಾ,  "ನಾನು ಮನುಷ್ಯರ ಬಗ್ಗೆ ಬರೆಯಲು ಹೆದರುತ್ತೇನೆ; ದೇವರುಗಳ ಬಗ್ಗೆ ಬರೆಯಲು ಇನ್ನಷ್ಟು ಭಯಪಡುತ್ತೇನೆ. ಆದ್ದರಿಂದ ಈಗ ನಾನು ಪ್ರಾಣಿಗಳ ಬಗ್ಗೆ ಬರೆಯುತ್ತೇನೆ. ಕೇವಲ ಐದು ಜಾತಿಯ ಪ್ರಾಣಿಗಳು ನನಗೆ ಆಳವಾಗಿ ಪರಿಚಿತವಾಗಿವೆ. ಅವುಗಳಲ್ಲಿ, ನಾಯಿಗಳು ಮತ್ತು ಬೆಕ್ಕುಗಳು ಕಾವ್ಯಕ್ಕೆ ಮೀಸಲಾದವು. ಹಸು ಅಥವಾ ಹಂದಿಗಳ ಬಗ್ಗೆ ಬರೆಯುವುದನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾರಣದಿಂದಾಗಿ  ಆಡು ಮತ್ತು ಕುರಿಗಳು ಮಾತ್ರ ಉಳಿದಿವೆ. ಆಡುಗಳು ಸಮಸ್ಯೆಗಳಿಂದ ಮುಕ್ತವಾಗಿವೆ ಜೊತೆಗೆ ಅವು ನಿರುಪದ್ರವ ಹಾಗೂ ಹೆಚ್ಚು ಶಕ್ತಿಯುತವಾಗಿವೆ. ಕಥೆಗೆ ನಿರೂಪಣೆಯ ವೇಗ ಬೇಕು. ಆದ್ದರಿಂದ, ನಾನು ಆಡುಗಳ ಬಗ್ಗೆ ಬರೆಯಲು ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದೇನೆ.ಎಂದು ಹೇಳಿಕೊಂಡಿದ್ದಾರೆ.

ಕೃಷಿ ಕುಟುಂಬದಿಂದ ಪೆರುಮಾಳ್ ಮುರುಗನ್, ತಮ್ಮ ಆರನೇ ವಯಸ್ಸಿನಲ್ಲಿ ಮನೆಯಲ್ಲಿದ್ದ ಕರುಪ್ಪುತಾಯಿ ಎಂಬ ಹೆಸರಿನ ಕಪ್ಪು ಬಣ್ಣದ ಹೆಣ್ಣು ಮೇಕೆಯ ಕಥನವನ್ನು ಪೂಣ್ಣಾಚಿ ಹೆಸರಿನಲ್ಲಿ ಕಾದಂಬರಿಯನ್ನಾಗಿ ಬರೆದಿದ್ದಾರೆ. ಮೇಕೆ ಮತ್ತು ಕುರಿಗಳನ್ನು ಮೇಯಿಸಿದ ಅನುಭವ ಇರುವ ಲೇಖಕರು ಮಾತ್ರ ಇಂತಹ ಕಥನಗಳನ್ನು ಬರೆಯಲು ಸಾಧ್ಯ ಎಂಬುದು ಕೃತಿಯನ್ನು ಓದಿದವರಿಗೆ ಮನವರಿಕೆಯಾಗುತ್ತದೆ. ಬಯಲಿನಲ್ಲಿ ಓತ ಎಂದು ಕರೆಯಲಾಗುವ ಗಂಡು ಮೇಕೆಯು ಹೆಣ್ಣು ಮೇಕೆಗಳನ್ನು ಒಲಿಸುವ ಪರಿಯನ್ನು ಓದುವಾಗ ಇಂತಹ ಕೃತಿಗಳು ಪೆರುಮಾಳ್ ಮುರುಗನ್ ರಂತಹ ನೆಲದ ಅಪ್ಪಟ ಲೇಖಕರಿಂದ ಮಾತ್ರ ಸಾಧ್ಯ ಎಂಬ ನಮಗೆ ಮನವರಿಕೆಯಾಗುತ್ತದೆ.  ಅಪರಿಚತನೊಬ್ಬ ಆಗತಾನೆ ಜನಿಸಿದ್ದ ಒಂದು  ಹೆಣ್ಣು ಮೇಕೆ ಮರಿಯನ್ನು ಒಣಭೂಮಿಯ ಗುಡ್ಡದ ಬಳಿ ವಾಸವಾಗಿದ್ದ  ವೃದ್ಧ ದಂಪತಿಗಳಿಗೆ ಉಡುಗರೆಯಾಗಿ ನೀಡುತ್ತಾನೆ. ಇದು ದೇವರಿಂದ ನಮಗೆ ದೊರೆತ ಉಡುಗೊರೆ ಎಂದು ಭಾವಿಸಿದ ಅವರು ಅದಕ್ಕೆ ಪೂಣ್ಣಾಚಿ ಎಂದು ಹೆಸರಿಡುತ್ತಾರೆ.  ಅದು ಸಂತಾನುಭಿವೃದ್ಧಿಯ ಮೂಲಕ ಮನೆಯ ಮಗಳಂತೆ ಬೆಳೆಯುವುದು ಹಾಗೂ  ಪೂಣ್ಣಾಚಿಯ ಪ್ರೇಮಿ ಹಾಗೂ ದಕ್ಕೆ ಜನಿಸುವ ಮರಿಗಳ ಕಥೆ ಹೇಳುವುದರ ಜೊತೆಗೆ ತೀವ್ರ ಬರಗಾಲದಲ್ಲಿ ಹಸಿವಿನಿಂದ ಪರದಾಡುವ ದುರಂತ ಕಥನವನ್ನು ಮನುಷ್ಯರ ಕಥೆಯನ್ನಾಗಿಸುವ ಬದಲಾಗಿ ಕೃತಿಯಲ್ಲಿ ಲೇಖಕರು ಪ್ರಾಣಿಗಳ ಕಥೆಯನ್ನಾಗಿಸಿದ್ದಾರೆ. ಮೇಕೆ ಮತ್ತು ಅದರ ಪ್ರೇಮಿಗೆ ಹೆಸರನ್ನು ನೀಡಿರುವುದನ್ನು ಹೊರತು ಪಡಿಸಿದರೆ, ಮನುಷ್ಯರಿಗೆ ಯಾವುದೇ ಹೆಸರನ್ನು ನೀಡಿಲ್ಲ. ಪೂಣ್ಣಾಚಿ ಎಂಬ ಮೇಕೆಯ ಕಥೆಯು  ಭೂಮಿ ಮತ್ತು ಜಾನುವಾರುಗಳ ಬಗ್ಗೆ ಅದರ ನಿಕಟ ಗಮನದ ಹೊರತಾಗಿಯೂ, ಎಲ್ಲಕ್ಕಿಂತ ಹೆಚ್ಚಾಗಿ ರಾಜಕೀಯ ಸಾಂಕೇತಿಕವಾಗಿದೆ. ಪ್ರಕೃತಿ ಮತ್ತು ಮಾರುಕಟ್ಟೆಯ ಕರುಣೆಯಲ್ಲಿರುವ ಸಮಾಜದಲ್ಲಿ ಸಾಮಾನ್ಯ ಅಥವಾ ಅಸ್ಪಷ್ಟವಾದವುಗಳು ಹೇಗೆ ಬದುಕುತ್ತವೆ ಎಂಬುದನ್ನು ಎತ್ತಿ ತೋರಿಸುವ ಪ್ರಯತ್ನವೇ   ಕಾದಂಬರಿಯಾಗಿದೆ.

ಪೆರುಮಾಳ್ ಅವರ ಆತ್ಮಕಥನದ ರೂಪದಲ್ಲಿರುವ ‘’ಅಮ್ಮಾ ‘’ ಎಂಬ ನೆನಪಿನ ಘಟನೆಗಳ ಕೃತಿಯು ಓರ್ವ ಬಡ ಕೃಷಿಕಳಾಗಿ ಅಶಿಸ್ತಿನ ಗಂಡನನ್ನು ಸಹಿಸಿಕೊಂಡು ಮಕ್ಕಳನ್ನು ಪೋಷಿಸಿದ ತನ್ನ ತಾಯಿಯ ಬದುಕನ್ನು ಹೃದಯಂಗಮವಾಗಿ ಚಿತ್ರಿಸಿದ್ದಾರೆ. ಅದೇ ರೀತಿಯಲ್ಲಿ ಇತ್ತೀಚೆಗೆ ತಮಿಳುನಾಡಿನಲ್ಲಿ ಅಂತರ್ಜಾತಿ ವಿವಾಹವಾಗುತ್ತಿರುವ ತರುಣ, ತರುಣಿಯರು ಗ್ರಾಮಾಂತರ ಪ್ರದೇಶದ ಜಾತಿಯ ಕ್ರೌರ್ಯಕ್ಕೆ ಬಲಿಯಾಗುತ್ತಿರುವ ಕಥನವನ್ನು ಬೆಂಕಿ ಅಥವಾ ಚಿತೆ ಎಂಬ ಹೆಸರಿನಲ್ಲಿ ಕಾದಂಬರಿಯನ್ನು  ಬರೆದಿದ್ದಾರೆ. ಕೊಯಮತ್ತೂರು ಸುತ್ತಮುತ್ತಲಿನ ಪ್ರದೇಶವನ್ನು ಕೊಂಗನಾಡು ಎಂದು ಕರೆಯುವುದರಿಂದ ಕೊಯಮತ್ತೂರು ನಗರದಲ್ಲಿ ಪದವಿ ಓದುತ್ತಿದ್ದಾಗಲೇ, ಕಥೆ ಬರೆಯಲು ಆರಂಭಿಸಿದ ಪೆರುಮಾಳ್ ಮುರುಗನ್ ಅಲ್ಲಿಯ ಭಾಷೆ ಮತ್ತು ಜೀವನ ಕ್ರಮವನ್ನು ಅಕ್ಷರದ ಮೂಲಕ ಅಭಿವ್ಯಕ್ತಿಗೊಳಿಸುವುದರ ಜೊತೆಗೆ ರೋಗಗ್ರಸ್ತ ಗ್ರಾಮೀಣ ಪ್ರದೇಶದಲ್ಲಿ ತಾಂಡವವಾಡುತ್ತಿರುವ ಜಾತಿಯ ಕ್ರೌರ್ಯವನ್ನು  ಅಷ್ಟೇ ಪರಿಣಾಮಕಾರಿಯಾಗಿ ಚಿತ್ರ‍್ರಿಸುತ್ತಿದ್ದಾರೆ. 





ಇತ್ತೀಚೆಗಿನ ಅವರ ‘’ಗಂಧದ ಸಾಬೂನು ಮತ್ತು ಇತರೆ ಕಥೆಗಳು’’ ಕೃತಿಯಲ್ಲಿಯೂ ಸಹ ನಾವುಗಳು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಸಾಮಾನ್ಯವಾದ  ವಿಷಯಗಳನ್ನು ಎತ್ತಿಕೊಂಡು ಕಥೆಯನ್ನಾಗಿಸಿದ್ದಾರೆ. ಸಾರ್ವಜನಿಕ ಶೌಚಾಲಯಗಳನ್ನು ಬಳಸುವ ವ್ಯಕ್ತಿಗಳನ್ನು ಶೌಚಾಲಯದ ಕೊಠಡಿಯಿಂದ ಹೊರಬರುವಂತೆ ಮಾಡುವ ಹುಡುಗನ ಕಥೆಯಿಂದ ಹಿಡಿದು, ಪಟ್ಟಣಕ್ಕೆ ಹೋಗಿ ವಿದ್ಯೆ ಕಲಿತ ಹುಡುಗನೊಬ್ಬ ತನ್ನ ವೃದ್ಧ  ತಾಯಿ ರವಿಕೆಯಿಲ್ಲದೆ ಸೀರೆ ಉಡುವುದನ್ನು ಪ್ರತಿಭಟಿಸುವ ಕಥೆಯು ಅಲ್ಲಿನ ಬದಲಾಗುತ್ತಿರುವ ಗ್ರಾಮೀಣ ಬದುಕಿನ ವಾಸ್ತವಕ್ಕೆ ಹಿಡಿದ ಕೈ ಗನ್ನಡಿಯಂತಿದೆ.

ಎಪ್ಪತ್ತರ ದಶಕದಲ್ಲಿ ಎಡಪಂಥೀಯ ಚಿಂತಕರಲ್ಲಿ ಒಬ್ಬರಾಗಿದ್ದ ಡಿ. ಜಯಕಾಂತನ್ ಅವರ ಕಥೆ ಮತ್ತು ಕಾದಂಬರಿಗಳು ಕಾಲಘಟ್ಟದ ತಮಿಳು ಸಾಹಿತ್ಯದಲ್ಲಿ ಹುಟ್ಟು ಹಾಕಿದ ಸಾಮಾಜಿಕ ಪ್ರಜ್ಞೆಯನ್ನು ಈಗ ಪೆರುಮಾಳ್ ಮುರುಗನ್ ತಮ್ಮ ಕಥೆ, ಕಾದಂಬರಿಗಳ ಮೂಲಕ  ಹುಟ್ಟು ಹಾಕುತ್ತಿದ್ದಾರೆ. ಕನ್ನಡದಲ್ಲಿ ಬೆಸಗರಹಳ್ಳಿ ರಾಮಣ್ಣ ಮತ್ತು ಕೃಷ್ಣ ಆಲನಹಳ್ಳಿ ಅವರ ಕಥೆಗಳಲ್ಲಿ ಇಂತಹ ಕಟು ವಾಸ್ತವದ ಚಿತ್ರಗಳನ್ನು ನಾವು ನೋಡಿದ್ದೆವು. ಡಾ. ರಾಮಣ್ಣ ಅವರ ಗಾಂಧಿ ಮತ್ತು ಚೆಲುವನ ಪರಂಗಿ ಗಿಡಗಳು ಹಾಗೂ ಮಲೆಯಾಳಂ ಭಾಷೆಯ ವೈಕಂ ಮಹಮ್ಮದ್ ಬಶೀರ್  ಅವರ ನನ್ನ ಅಜ್ಜನಿಗೊಂದು ಆನೆಯಿತ್ತು, ಮತ್ತು ಪಾತುಮ್ಮಳ ಆಡು ಇಂತಹ ಕಥನ ಪರಂಪರೆಯನ್ನು ಮುಂದುವರಿಸಿರುವ ಪೆರುಮಾಳ್ ಮುರುಗನ್ ಅವರು ಸಾಹಿತ್ಯದ ಮೂಲಕ ನಾವು ಗಂಭಿರವಾಗಿ ಆಲೋಚಿಸಬೇಕಾದ ಜಗತ್ತು ಈಗಲೂ ಸಹ   ನಮ್ಮ ಕಣ್ಣೆದುರು ಇದೆ ಎಂಬುದನ್ನು ತಮ್ಮ ಕಥೆ ಮತ್ತು ಕಾದಂಬರಿಗಳ ಮೂಲಕ ಎತ್ತಿ ತೋರಿಸುತ್ತಿದ್ದಾರೆ.

( ಹೊಸತು ಪತ್ರಿಕೆಯಲ್ಲಿ ಪ್ರಕಟವಾದ ‘’ ಬಹುಸಂಸ್ಕೃತಿ’’ ಅಂಕಣ ಬರಹ)

ಡಾ.ಎನ್.ಜಗದೀಶ್ ಕೊಪ್ಪ

 

 

ಶುಕ್ರವಾರ, ಏಪ್ರಿಲ್ 12, 2024

ಬದಲಾಗದ ಮಮತಾ ಬ್ಯಾನರ್ಜಿಯ ಮನೋಭಾವ

 


ರಾಷ್ಟ್ರಮಟ್ಟದಲ್ಲಿ ಪ್ರಧಾನಿಗೆ ದಿಟ್ಟ ಹೋರಾಟ ನೀಡಬಲ್ಲ ಛಲಗಾತಿ ಹೆಣ್ಣು ಮಗಳು ಎಂದು ಪ್ರಸಿದ್ಧರಾದ ಮಮತಾ ಬ್ಯಾನರ್ಜಿ ಇಂದಿನ ಪರಿಸ್ಥಿತಿಯಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಇಂಡಿಯಾ ಮೈತ್ರಿ ಪಕ್ಷಗಳ ಜೊತೆಯಲ್ಲಿ ಇರಬೇಕಾಗಿತ್ತು. ಇಂದು ಪ್ರಧಾನಿ ನರೇಂದ್ರಮೋದಿಗೆ ಸವಾಲುಗಳಾಗಿರುವ ರಾಜ್ಯಗಳೆದರೆ, ದಕ್ಷಿಣ ಭಾರತದಲ್ಲಿ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಹಾಗೂ ಉತ್ತರದಲ್ಲಿ ದೆಹಲಿ ಮತ್ತು ಪೂರ್ವದಲ್ಲಿ ಪಶ್ಚಿಮ ಬಂಗಾಳ ರಾಜ್ಯಗಳು ಮಾತ್ರ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಹದಿನೆಂಟು ಲೋಕಸಭಾ ಕ್ಷೇತ್ರಗಳನ್ನು ಗೆದ್ದಿದ್ದ ಬಿ.ಜೆ.ಪಿ. ಪಕ್ಷಕ್ಕೆ ಈ ವರ್ಷ ಅಷ್ಟೇ ಸ್ಥಾನಗಳು ಲಭ್ಯವಾಗುತ್ತವೆ ಎಂದು ಹೇಳಲಾಗದು. ಆದರೆ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೇಸ್ ಪಕ್ಷಕ್ಕೆ ಸರಿ ಸಮಾನಾಗಿ ಕಾಂಗ್ರೇಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳು ಬಿ.ಜೆ.ಪಿ.ಯನ್ನು ವಿರೋಧಿಸುವ ಪಕ್ಷಗಳಾಗಿರುವುದರಿಂದ ಅವುಗಳ ಜೊತೆಗೆ ಮೈತ್ರಿ ಮಾಡಿಕೊಳ್ಳುವುದು ಇಂದಿನ ಸಂದರ್ಭದಲ್ಲಿ ಅನಿವಾರ್ಯವಾಗಿತ್ತು.ಏಕೆಂದರೆ, ಬಿ.ಜೆ.ಪಿ.ಯ ವಿರೋಧಿ ಮತಗಳು ಛಿದ್ರವಾಗುವುದರ ಮೂಲಕ  ಇದು ಪರೋಕ್ಷವಾಗಿ ಬಿ.ಜೆ.ಪಿ.  ಪಕ್ಷಕ್ಕೆ ನೆರವಾಗಬಲ್ಲದು.

ಕೊಲ್ಕತ್ತ ನಗರದ ಸಾಮಾನ್ಯ ಕುಟುಂಬದಿಂದ ಬಂದಿರುವ 69 ವರ್ಷ ವಯಸ್ಸಿನ ಮಮತಾ ಬ್ಯಾನರ್ಜಿ ಅವರು ಬಾಲ್ಯದಿಂದಲೂ, ವಿಶೇಷವಾಗಿ ವಿದ್ಯಾರ್ಥಿ ಜೀವನದಿಂದಲೂ ಹೋರಾಟದ ಮನೋಭಾವವನ್ನು ಬೆಳೆಸಿಕೊಂಡು ಬಂದವರು. 1975 ರ ವೇಳೆಗೆ ಕಾಂಗ್ರೇಸ್ ಯುವ ಸಂಘಟನೆಗೆ ಸೇರಿದ ಮಮತಾ ಅವರು ಆ ಸಂಧರ್ಭದಲ್ಲಿ ಇಂದಿರಾಗಾಂಧಿ ಅವರು ದೇಶಾದ್ಯಂತ ಹೇರಿದ್ದ ತುರ್ತು ಪರಿಸ್ಥಿತಿಯ ವಿರುದ್ಧ ಜಯಪ್ರಕಾಶ ನಾರಾಯಣ್ ಅವರು ವಿದ್ಯಾರ್ಥಿ ಚಳುವಳಿ ಹೋರಾಟ ಹಮ್ಮಿಕೊಂಡಾಗ ಕೊಲ್ಕತ್ತ ನಗರದಲ್ಲಿ ಅವರ ಕಾರಿನ ಮೇಲೆ  ನಿಂತು ಕಾಳಿ ನೃತ್ಯ ಮಾಡುತ್ತಾ, ಅವರ ಹೋರಾಟವನ್ನು ವಿರೋಧಿಸುವದರ ಮೂಲಕ  ಇಡೀ  ಪಶ್ಚಿಮ ಬಂಗಾಳ ರಾಜ್ಯದ ಗಮನ ಸೆಳೆದಿದ್ದರು.

ಜ್ಯೋತಿ ಬಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಓರ್ವ ಬಾಲಕಿಯು ಅತ್ಯಾಚಾರಕ್ಕೆ ಒಳಗಾದಾಗ ಆ ಬಾಲಕಿಯನ್ನು ಮುಖ್ಯಮಂತ್ರಿ ಕಚೇರಿಗೆ ಕರೆದೊಯ್ದು, ಈಕೆಗೆ ನ್ಯಾಯ ಕೊಡಿಸಿ ಇಲ್ಲದಿದ್ದರೆ, ನಾವು ನಾಳೆ ಈ ರೈಟರ್ಸ್ ಬಿಲ್ದಿಂಗ್ ನಲ್ಲಿ ಅಧಿಕಾರ ನಡೆಸಬೇಕಾಗುತ್ತದೆ ಎಂದು ಸವಾಲು ಹಾಕಿದ್ದರು. ಅದರಂತೆ ಮುಂದಿನ ದಿನಗಳಲ್ಲಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಸಂಸತ್ತನ್ನು ಪ್ರವೇಶಿಸುವುದರ ಮೂಲಕ ರಾಜಕೀಯ ಪ್ರವೇಶ ಮಾಡಿದರು.  ಇಷ್ಟು ಮಾತ್ರವಲ್ಲದೆ, ಕಮ್ಯೂನಿಸ್ಟ್ ಪಕ್ಷದ ಹಿರಿಯ ನಾಯಕ ಸೋಮನಾಥ ಮುಖರ್ಜಿಯನ್ನು ಲೋಕಸಭಾ ಚುನಾವಣೆಯಲ್ಲಿ ಮಣಿಸಿದ್ದರು. ಕೇಂದ್ರ ಸರ್ಕಾರದಲ್ಲಿ  ಎರಡು ಬಾರಿ ರೈಲ್ವೆ ಸಚಿವೆ, ಒಂದು ಬಾರಿ ಕಲ್ಲಿದ್ದಲು ಖಾತೆ ಸಚಿವೆಯಾಗಿ ಕಾಂಗ್ರೇಸ್ ನಲ್ಲಿ ಭವಿಷ್ಯದ ನಾಯಕಿ ಎಂದು ಭರವಸೆ ಮೂಡಿಸಿದ್ದ ಮಮತಾ ಬ್ಯಾನರ್ಜಿ ನನಗೆ ನೆನಪಿರುವ ಹಾಗೆ 1997 ಅಥವಾ 1998 ರಲ್ಲಿ ಪಕ್ಷ ತೊರೆದು ತೃಣಮೂಲ ಕಾಂಗ್ರೇಸ್ ಪಕ್ಷವನ್ನು ಸ್ಥಾಪಿಸಿದರು.

ಮಮತಾಗೆ ಕೇಂದ್ರದಲ್ಲಿ ಇರುವುದಕ್ಕಿಂತ ಹೆಚ್ಚಾಗಿ ತನ್ನ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಕಮ್ಯೂನಿಸ್ಟ್ ಪಕ್ಷವನ್ನು ಮಣಿಸಿ ಮುಖ್ಯಮಮತ್ರಿಯಾಗಬೇಕೆಂಬ ಆಸೆ ಆ ಸಂದರ್ಭದಲ್ಲಿ ಮೂಡಿ ಬಂದಿತ್ತು. ನಂತರ ಅದು 2010 ಮತ್ತು 2011 ರ ವೇಳೆಗೆ ನೆರೆವೇರಿತು. ಜ್ಯೋತಿಬಸು ಅವರು ಸುಧೀರ್ಘ 24 ವರ್ಷಗಳ ಮುಖ್ಯಮಂತ್ರಿ ಅವದಿಯನ್ನು ಮುಗಿಸಿ, ಅಧಿಕಾರದಿಂದ ಇಳಿದಾಗ, ಅವರ ಉತ್ತರಾಧಿಕಾರಿಯಾಗಿ ಬುದ್ಧದೇವ ಭಟ್ಟಾಚಾರ್ಯ ಮುಂಖ್ಯಮಂತ್ರಿಯಾದರು. ಇವರ ಅವಧಿಯಲ್ಲಿ ಟಾಟಾ ಕಂಪನಿಯು ನ್ಯಾನೊ ಕಾರನ್ನು ತಯಾರಿಸಲು ಸಂಗೂರ್ ಎಂಬಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ಜೊತೆ ಒಪ್ಪಂಧ ಮಾಡಿಕೊಂಡಿತು. ಜೊತೆಗೆ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಭೂಮಿಗೆ ವಿನಿಯೋಗಿಸಿತು. ಇದರ ಜೊತೆಗೆ ಸರ್ಕಾರವು ನಂದಿ ಗ್ರಾಮದ ಬಳಿ ಕೈಗಾರಿಕಾ ಪ್ರದೇಶವನ್ನು ಮಾಡಲು ರೈತರ ಭೂಮಿಯನ್ನು ವಶಪಡಿಸಿಕೊಳ್ಳಲು ಹೊರಟಾಗ ಮಮತಾ ಬ್ಯಾನರ್ಜಿ ಹೋರಾಟಕ್ಕೆ ಮಹತ್ವದ ತಿರುವು ಸಿಕ್ಕಿತು.

ಪಕ್ಷದಲ್ಲಿ ಒಡಹುಟ್ಟಿದ ಸಹೋದರನಂತೆ ಇದ್ದ ಸುವೆಂದು ಅಧಿಕಾರಿ ಯ ಜೊತೆ ಹೋರಾಟ ಮಾಡಿ ನಂದಿಗ್ರಾಮ ಮತ್ತು ಸಂಗೂರ್ ಎರಡರಲ್ಲಿಯೂ ಜಯಗಳಿಸಿದ ಮಮತಾ ಅವರು 2011 ರಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತಂದರು. ಅವಿವಾಹಿತೆಯಾಗಿ ಉಳಿದುಕೊಂಡು ತನ್ನ ನೆಲದ ಜನರ ಬವಣೆಗಳಿಗೆ ಅತ್ಯಂತ ಸೂಕ್ಷ್ಮವಾಗಿ ಸ್ಪಂದಿಸಬಲ್ಲ ಗುಣವುಳ್ಳ ಈ ಹೆಣ್ಣುಮಗಳ  ಆತ್ಮಸ್ಥೈರ್ಯ ಮೆಚ್ಚುವಂತಹದ್ದು ನಿಜ. ಆದರೆ, ತಾನು ಹಿಡಿದ ಮೊಲಕ್ಕೆ ಮೂರೇ ಕಾಲು ಎಂದು ವಾದಿಸುವುದು ಈಕೆಯ ದೌರ್ಭಲ್ಯವಾಗಿದೆ.  ಈ ಕಾರಣದಿಂದಾಗಿ ಸುವೆಂದು ಅದಿಕಾರಿ ಐದು ವರ್ಷಗಳ ಹಿಂದೆ ಪಕ್ಷ ತೊರೆದು ಈಗ ಬಿ.ಜೆ.ಪಿ. ನಾಯಕನಾಗಿದ್ದಾನೆ.

ಸಾಮಾನ್ಯ ಜನರಿಗೆ ವಿಶೇಷವಾಗಿ ಮಹಿಳೆಯರಿಗೆ ಮತ್ತು ಮುಸ್ಲಿಂ ಸಮುದಾಯದ ಜನರಿಗೆ ಆಸರೆಯಾಗಿ ನಿಂತಿರುವ ಮಮತಾ ಪಶ್ಚಿಮ ಬಂಗಾಳದಲ್ಲಿ ಜಾರಿಗೆ ತಂದಿರುವ ಯೋಜನೆಗಳು ಈಗ ಕರ್ನಾಟಕದಲ್ಲಿ ಜಾರಿಗೆ ಬಂದಿರುವ ಗ್ಯಾರಂಟಿ ಯೋಜನೆಗಳನ್ನು ಮೀರಿಸುವಂತಿವೆ. ಆದರೆ, ಇತ್ತೀಚೆಗೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಸಂಭವಿಸುತ್ತಿರುವ ಅನೇಕ ಅಹಿತಕರ ಘಟನೆಗಳು (ವಿಶೇಷವಾಗಿ ಸಂದೇಶ್ ಖಾಲಿ ಘಟನೆ) ಭವಿಷ್ಯದಲ್ಲಿ ಮಮತಾ ಅವರ ಭವಿಷ್ಯವನ್ನು ಮಸುಕಾಗಿಸಬಲ್ಲವು.

ಭಾರತದ ಇತಿಹಾಸದಲ್ಲಿ ಜಯಲಲಿತಾ, ಮಾಯಾವತಿ ಇವರಿಬ್ಬರೂ ತಮ್ಮ ಪಕ್ಷಗಳನ್ನು ತಮ್ಮ ಅವನತಿಯ ಜೊತೆ ಕೊನೆಗಾಣಿಸಿದ ರೀತಿಯಲ್ಲಿ ಮಮತಾ ಬ್ಯಾನರ್ಜಿ ಕೂಡಾ ತೃಣಮೂಲ ಕಾಂಗ್ರೇಸ್ ಪಕ್ಷವನ್ನು ಕೊನೆಗಾಣಿಸಲು ತೀರ್ಮಾನಿಸಿದ ಹಾಗೆ ಕಾಣುತ್ತೆ. ಭವಿಷ್ಯದ ಭಾರತದ ದೃಷ್ಟಿಯಿಂದ ಸುಳ್ಳುಗಳ ಮೂಲಕ ದೇಶ ಆಳುತ್ತಿರುವ ನಕಲಿ ಶಾಮಣ್ಣರನ್ನು ಕಿತ್ತೊಗೆಯಲು ಮಮತಾ ಬ್ಯಾನರ್ಜಿ ತನ್ನ ಮನೋಭಾವವನ್ನು ಬದಲಿಸಿಕೊಳ್ಳುವುದು ಈಗ ಅನಿವಾರ್ಯವಾಗಿದೆ.

ಹತ್ತು ವರ್ಷಗಳ ಹಿಂದೆ ಕೊಲ್ಕತ್ತ ನಗರದಿಂದ ಮಮತಾ ಆತ್ಮಕಥೆಯನ್ನು ಕೊಂಡು ತಂದಿದ್ದೆ. ಅದರಲ್ಲಿ ಆಕೆ ಮುಖ್ಯಮಂತ್ರಿಯಾಗುವವರೆಗೂ ಹೋರಾಡದ ಕಥನ ಮತ್ತು ಬಾಲ್ಯದ ವಿವರಗಳಿದ್ದವು. ನಿರೂಪಣೆಯು ಇಂಗ್ಲೀಷ್ ಭಾಷೆಯಲ್ಲಿ ತೃಪ್ತಕರವಾಗಿರಲಿಲ್ಲ. ಹಾಗಾಗಿ ಅನುವಾದಿಸುವ ಕ್ರಿಯೆಯನ್ನು ಕೈ ಬಿಟ್ಟು ಇನ್ನಷ್ಟು ವರ್ಷ ಕಾಯೋಣ  ಎಂದು ನಿರ್ಧರಿಸಿದ್ದೆ. ಈಗ ನನ್ನ ನಿರ್ಧಾರ ಸರಿ ಎನಿಸಿದೆ.


ಜಗದೀಶ್ ಕೊಪ್ಪ.

ಬುಧವಾರ, ಏಪ್ರಿಲ್ 3, 2024

ಭಾರತ ಕಂಡ ಶ್ರೇಷ್ಠ ಅರ್ಥಶಾಸ್ತ್ರಜ್ಞ ಡಾ.ಮನಮೋಹನ ಸಿಂಗ್. ಒಂದಿಷ್ಟು ನೆನಪುಗಳು.

 

ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರ ರಾಜಕೀಯ ಬದುಕು ಅಧಿಕೃತವಾಗಿ ನಿನ್ನೆ ಕೊನೆಗೊಂಡಿತು. ಕಳೆದ 33 ವರ್ಷಗಳಿಂದ ನಿರಂತರವಾಗಿ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ ಸಿಂಗ್ ಅವರು ನನ್ನ ನಿವೃತ್ತರಾದರು.  ತಮ್ಮ ವಿದ್ವತ್, ಸೌಜನ್ಯ ಹಾಗೂ ಆರ್ಥಿಕ ಚಿಂತನೆಗಳ ಮೂಲಕ ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಗೌರವ ಗಳಿಸಿದ್ದರು.

1990 ರಲ್ಲಿ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರು ತಮಿಳು ನಾಡಿನಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಹತ್ಯೆಯಾದಾಗ, ಸಹಜವಾಗಿ ಸೋನಿಯಾ ಗಾಂಧಿ ಪ್ರಧಾನಿಯಾಗುತ್ತಾರೆ ಎಂದು ಎಲ್ಲರೂ ಊಹಿಸಿದ್ದರುಆದರೆ, ಸಂದರ್ಭದಲ್ಲಿ ಬಿ.ಜೆ.ಪಿ. ಆಡಿದ ನಾಟಕಗಳು  ತೀವ್ರ ಅಸಹ್ಯ ಮೂಡಿಸಿದವು. ವಿದೇಶಿ ಹೆಣ್ಣುಮಗಳಿಗೆ ಪ್ರಧಾನಿ ಹುದ್ದೆ ಬೇಡ ಎಂದು ಕಾರ್ಯಕರ್ತರು ಬೀದಿಗಳಿದರು. ಅಂದಿನ ಬಿ.ಜೆ.ಪಿ. ಸ್ಟಾರ್ ಪ್ರಚಾರಕಿ ಸುಷ್ಮಾ ಸ್ವರಾಜ್ ಅವರು ಸೋನಿಯಾ ಪ್ರಧಾನಿಯಾದರೆ, ನಾನು ತಲೆಬೋಳಿಸಿಕೊಂಡು ವಿಧವೆಯ ಹಾಗೆ ಬಿಳಿಸೀರೆ ಉಟ್ಟು ಬದುಕುತ್ತೇನೆ ಎಂದು ಘೋಷಿಸಿದ್ದರು.

ತನ್ನ ಪತಿಯ ಸಾವಿನ ದುಃಖದಲ್ಲಿದ್ದ ಸೋನಿಯಾ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಒಂದು ದಿನ ಅನಿರೀಕ್ಷಿತವಾಗಿ ನಾನು ಪ್ರಧಾನಿಯಾಗುವುದಿಲ್ಲ ಎಂದು ಘೋಷಿಸಿದರು.  2004 ರಲ್ಲಿ ಕಾಂಗ್ರೇಸ್ ಪಕ್ಷದಿಂದ ಭಾರತದ  ಪ್ರಧಾನಿಯಾಗಿ ಡಾ.ಮನಮೋಹನ ಸಿಂಗ್ ಹುದ್ದೆ ನಿರ್ವಹಿಸುತ್ತಾರೆ ಎಂದು ಹೇಳುವುದರ ಮೂಲಕ ಎಲ್ಲರಿಗೂ ಶಾಕ್ ನೀಡಿದರುಸೋನಿಯಾ ಗಾಂಧಿಯವರು 33 ವರ್ಷಗಳ ಹಿಂದೆ ತೆಗೆದುಕೊಂಡ ನಿರ್ಧಾರದಿಂದ ಭಾರತ ಇಂದು ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ತೀವ್ರವಾಗಿ ಬೆಳೆಯುತ್ತಿರುವ ರಾಷ್ಟ್ರ ಎಂಬ ಪ್ರಸಿದ್ಧಿಗೆ ಬರಲು ಕಾರಣವಾಯಿತು.


ಸ್ವಾತಂತ್ರ್ಯ ಪೂರ್ವದಲ್ಲಿ ಇಂದಿನ ಪಾಕಿಸ್ತಾನದಲ್ಲಿ ಜನಿಸಿದ ಡಾ.ಸಿಂಗ್ ಪಂಜಾಬ್ ವಿ.ವಿ.ಯಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದು, ನಂತರ ಇಂಗ್ಲೇಂಡಿನ ಕೇಂಬ್ರಿಡ್ಜ್ ವಿ.ವಿ.ಯಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆದರು ಅರ್ಥಶಾಸ್ತ್ರದ ಪಿತಾಮಹ ಎಂದು ಕರೆಯಲ್ಪಡುವ ಆ್ಯಡಂ ಸ್ಮಿತ್ ಸ್ಮಾರಕ ನೀಡಲಾಗುವ ಚಿನ್ನದ ಪದಕ ವನ್ನು ಪಡೆದ ಮೊದಲ ಏಷ್ಯಾದ ನಾಗರೀಕ ಎಂಬ ಗೌರವಕ್ಕೆ ಪಾತ್ರರಾಗಿದ್ದರು.

ಭಾರತದ ರಿಸರ್ವ ಬ್ಯಾಂಕ್ ಗವರ್ನರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರನ್ನು ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್  ಅರ್ಥಖಾತೆಯ ಸಚಿವರನ್ನಾಗಿ ನೇಮಕ ಮಾಡಿಕೊಂಡರು. ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿದ್ದ ಭಾರತ ಕಾಲಘಟ್ಟದಲ್ಲಿ ಜಾಗತೀಕರಣಕ್ಕೆ ತೆರೆದುಕೊಳ್ಳುವ ಅನಿವಾರ್ಯತೆಗೆ ಸಿಲುಕಿತ್ತು.

ದೇಶವನ್ನು ತಮ್ಮ ಪ್ರಖರ ಆರ್ಥಿಕ ಚಿಂತನೆಗಳ ಮೂಲಕ ಹಾಗೂ ಅನುಷ್ಠಾನಕ್ಕೆ ತಂದ ಯೋಜನೆಗಳ ಮೂಲಕ ಸಂಕಷ್ಠದಿಂದ ಪಾರುಮಾಡಿ ದೇಶದ ಅಭಿವೃದ್ಧಿಗೆ ಅಡಿಗಲ್ಲು ಹಾಕಿದ ಕೀರ್ತಿ ಡಾ.ಮನಮೋಹನ್ ಸಿಂಗ್ ಅವರಿಗೆ ಸಲ್ಲಬೇಕು.

ಅವರು ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಮೊದಲ ಐದು ವರ್ಷ ನಿಜಕ್ಕೂ ಭಾರತದ ಪಾಲಿಗೆ ಸುವರ್ಣ ಅಧ್ಯಾಯ ಎಂದು ಕರೆಯಬಹುದು. ಆದರೆ, ಎರಡನೇ ಅವಧಿಯಲ್ಲಿ ದೂರವಾಣಿಗೆ ಸಂಬಂಧಿಸಿದಂತೆ 2G ಹಗರಣ, ಕಲ್ಲಿದ್ದಲು ಹಂಚಿಕೆ ಹಗರಣದಲ್ಲಿ ಪ್ರಧಾನಿಯಾಗಿದ್ದುಕೊಂಡು ನಿಯಂತ್ರಿಸಲಾಗದ ಅಸಹಾಯಕತೆಗೆ ಒಳಗಾದರು.

ಕಾಂಗ್ರೇಸ್ ಪಕ್ಷ ತನ್ನೊಂದಿಗೆ ಅಧಿಕಾರ ಹಂಚಿಕೊಂಡಿದ್ದ ಮಿತ್ರ ಪಕ್ಷಗಳ ಭ್ರಷ್ಟಾಚಾರಕ್ಕೆ ಕಣ್ಮುಚ್ಚಿ ಕುಳಿತಿತು. ಅಂತಿಮವಾಗಿ ಸುಳ್ಳಿನ ಹರಿಶ್ಚಂದ್ರ ಅಧಿಕಾರಕ್ಕೆ ಬರಲು ಕಾರಣವಾಯಿತು.

ಅತ್ಯಂತ ಮಿತಭಾಷಿಯಾಗಿದ್ದ ಮನಮೋಹನ ಸಿಂಗ್ ಅವರು ಎಂದಿಗೂ ಮಾಧ್ಯಮಗಳಿಗೆ ಉತ್ತರ ಹೇಳದೆ ತಪ್ಪಿಸಿಕೊಂಡವರಲ್ಲ. ವರ್ಷಕ್ಕೆ ಕನಿಷ್ಠ ಹತ್ತು ಬಾರಿ ನೇರವಾಗಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.

ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶದ ಅಭಿವೃದ್ಧಿ ಚಟುವಟಿಕೆಗಾಗಿ ಇಡೀ ಭಾರತದ ಮೂಲೆ ಮೂಲೆ ಸುತ್ತಾಡಿದರೆ ಹೊರತು, ಸಾರ್ವಜನಿಕರ ಹಣದಲ್ಲಿ ಇಂದಿನ ಸುಳ್ಳಿನ ಸಾರ್ವಭೌಮನ ಮಾದರಿಯಲ್ಲಿ ಪಕ್ಷ ಕಟ್ಟಲು ತಿರುಗಾಡಲಿಲ್ಲ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೇವಲ ಮೂರು ಅಥವಾ ನಾಲ್ಕು ಬಹಿರಂಗ ಸಭೆಯಲ್ಲಿ ಭಾಗವಹಿಸುವುದನ್ನು ಹೊರತು ಪಡಿಸಿದರೆ,  ಅವರು ಬಹುತೇಕ ಸಮಯವನ್ನು ಆಡಳಿತದ ವಿಷಯದಲ್ಲಿ ತೊಡಗಿಸಿಕೊಳ್ಳುತ್ತಿದ್ದರು.

ನೇರವಾಗಿ ಏನನ್ನೂ ಹೇಳಲಾರದೆ ಇರುವ ದೌರ್ಬಲ್ಯವನ್ನು  ಹೊರತು ಪಡಿಸಿದರೆ, ಡಾ.ಸಿಂಗ್ ದೇಶ ಕಂಡ ಅತ್ಯುತ್ತಮ ಪ್ರಧಾನಿ ಕೂಡಾ ಒಬ್ಬರು. ಅವರು ನಿರ್ಮಿಸಿದ ಸೌಧದಲ್ಲಿ ಆಸೀನರಾಗಿರುವ ಇಂದಿನ ನಕಲಿ ಶಾಮಣ್ಣರಿಗೆ ದೇಶದ ಇತಿಹಾಸ ಅಥವಾ ಅರ್ಥಶಾಸ್ತ್ರದ .ಬಿ.ಸಿ.ಡಿ.ಗೊತ್ತಿಲ್ಲ.

ಅವರಿಗೆ ಗೊತ್ತಿರುವುದು ರಾಮ ಮತ್ತು ಕೃಷ್ಣ ಹಾಗೂ ಕೊಚ್ಚು ಮತ್ತು ಕೊಲ್ಲು ಎಂಬ ಶಬ್ದಗಳು ಮಾತ್ರ.