ಶುಕ್ರವಾರ, ಆಗಸ್ಟ್ 4, 2017

ಅನಾಥವಾದ ಅಕಾಡೆಮಿಗಳು ಮತ್ತು ಗರಬಡಿದ ಕನ್ನಡದ ಸಾಂಸ್ಕತಿಕ ಜಗತ್ತು


ಸುಮಾರು ಆರು ತಿಂಗಳ ಹಿಂದೆ ನನ್ನೂರಾದ ಮಂಡ್ಯದಲ್ಲಿ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಕನ್ನಡ ಸಂಸ್ಕøತಿ ಇಲಾಖೆಯ ಮಾಜಿ ನಿರ್ದೇಶಕರೊಬ್ಬರು, ಕನ್ನಡ ಸಾಹಿತ್ಯ ಮತ್ತು ಸಂಸ್ಕತಿಯ ಶ್ರೇಯೋಭಿವೃದ್ಧಿಗಾಗಿ  ಕರ್ನಾಟP ಸರ್ಕಾರವುÀ ಪ್ರತಿ ವರ್ಷ ಸುಮಾರು ಇನ್ನೂರ ಮೂವತ್ತು ಕೋಟಿ ರೂಪಾಯಿಗಳನ್ನು ವ್ಯಯ ಮಾಡುತ್ತಿರುವುದಾಗಿ ಹೆಮ್ಮೆಯಿಂದ ಹೇಳಿಕೊಂಡರು. ಜೊತೆಗೆ ದಕ್ಷಿಣ ಭಾರತದ ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರ ಮತ್ತು ಮಹಾರಾಷ್ರಗಳಲ್ಲಿ ಅಲ್ಲಿನ ಸರ್ಕಾರಗಳು ಖರ್ಚು ಮಾಡುತ್ತಿರುವ ಹಣದ ಅಂಕಿ ಅಂಶವನ್ನು ನೀಡಿ, ಯಾವ ರಾಜ್ಯದಲ್ಲೂ ಭಾಷೆ ಮತ್ತು ಸಂಸ್ಕøತಿಯ ಅಭಿವೃದ್ಧಿಗಾಗಿ ನೀಡುತ್ತಿರುವ ಅನುದಾನದ ಮೊತ್ತ ಮುವತ್ತೈದು ಕೋಟಿ ರೂಪಾಯಿಗಳನ್ನು ದಾಟುವುದಿಲ್ಲ ಎನ್ನುತ್ತಾ, ಕರ್ನಾಟಕ ಸರ್ಕಾರದ ಸಾಧನೆ ಅನನ್ಯವಾದುದು ಎಂದು ಬಣ್ಣಿಸಿದರು.
ರಾತ್ರಿ ಊಟ ಮಾಡುವಾಗ ಕೆಲವು ಮಿತ್ರರೊಂದಿಗೆ ವಿಷಯವನ್ನು ಪ್ರಸ್ತಾಪಿಸಿದ ನಾನು, ಸರ್ಕಾರ ಇಷ್ಟು ಅಗಾಧವಾಗಿ ಅನುದಾನ ನೀಡುತ್ತಿರುವುದಕ್ಕೆ ನನ್ನದೇನೂ ಅಭ್ಯಂತರವೇನಿಲ್ಲ. ಆದರೆ, ಇದರಿಂದ ಕನ್ನಡದ ಸಾಹಿತ್ಯ ಮತ್ತು ಸಾಂಸ್ಕತಿಕ ಜಗತ್ತಿಗೆ ಆಗಿರುವ ಅಥವಾ ಆಗುತ್ತಿರುವ ಲಾಭವಾದರೂ ಏನು? ಎಂದು ಪ್ರಶ್ನಿಸಿದೆ. ಕನ್ನಡ ಭಾಷೆಯು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನೆಲೆ ಕಚ್ಚುವುದರಿಂದ ಹಿಡಿದು, ಕರ್ನಾಟಕದ ಮೂಲೆ ಮೂಲೆಗಳಲ್ಲಿ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುತ್ತಿರುವುದನ್ನು ಅವರಿಗೆ ವಿವರಿಸಿದೆ. ರೀತಿಯ ಅನುದಾನದಿಂದ ಕರ್ನಾಟಕದಲ್ಲಿ ಭಾಷೆ ಮತ್ತು ಸಂಸ್ಕತಿಗೆ ನೆರವಾಗುವುದರ ಬದಲು ಕನಾಟಕದಲ್ಲಿ ಭೂ ಮಾಫಿಯಾ, ಲಿಕ್ಕರ್ ಮಾಫಿಯಾ, ಲ್ಯಾಂಡ್ ಮಾಫಿಯಾ ರೀತಿಯಲ್ಲಿ ಸಾಂಸ್ಕತಿಕ ಮಾಫಿಯಾವೊಂದು ಬೆಂಗಳೂರು ನಗರದಲ್ಲಿ ತಲೆ ಎತ್ತಲು ಕಾರಣವಾಯಿತು ಎಂದು  ನಿಷ್ಠುರವಾಗಿ ನಾನು ನುಡಿದಾಗ ಕೆಲವರಿಗೆ ಕಸಿವಿಸಿಯಾಯಿತು. ಏನನ್ನೂ ಪ್ರತಿಕ್ರಿಯಿಸದೆ  ನಕ್ಕು ಸುಮ್ಮನಾದರು.
ಕರ್ನಾಟಕದಲ್ಲಿ ಅದೊಂದು ಕಾಲವಿತ್ತು. ಕುವೆಂಪು, ಕಾರಂತರು, ಮೇರು ಕಲಾವಿದರಾದ  ರಾಜಕುಮಾರ್, ಅಥವಾ ಜಿ.ಎಸ್. ಶಿವರುದ್ರಪ್ಪ, ಲಂಕೇಶ್, ತೇಜಸ್ವಿಯಂತಹವರು ಸರ್ಕಾರದ ನಡಾವಳಿಗಳ ಕುರಿತು ಒಂದು ಸಣ್ಣ ಅಸಮಾಧಾನ ವ್ಯಕ್ತ ಪಡಿಸಿದರೆ ಸಾಕು, ಇಡೀ ನಾಡು ಅವರತ್ತ ತಿರುಗಿ ನೋಡುತ್ತಿತ್ತು. ಸರ್ಕಾರ ಅತ್ಯಂತ ಎಚ್ಚರಿಕೆಯಿಂದ ಅಂತಹವರ ಮಾತುಗಳನ್ನು ಗಮನಿಸುತ್ತಿತ್ತು. ಈಗ ಅಂತಹ ಮಾತುಗಳನ್ನಾಡುವ ನೈತಿಕತೆ ಇರುವ ಸಾಹಿತ್ಯ ಅಥವಾ ಸಾಂಸ್ಕøತಿಕ ಲೋಕದ ದಿಗ್ಗಜರನ್ನು ಮತ್ತು ಕೇಳಿಸಿಕೊಳ್ಳುವ ಸೂಕ್ಷ್ಮತೆಯುಳ್ಳ ಸರ್ಕಾರ ಅಥವಾ ಜನಪ್ರತಿನಿಧಿಗಳನ್ನು  ಹುಡುಕಿದರೂ ಸಿಗದಂತಹ ಅರಾಜಕತೆಯ ಸ್ಥಿತಿಯಲ್ಲಿ ನಾವಿದ್ದಿವಿ. ಸರ್ಕಾರ ಮತ್ತು ಸಾಂಸ್ಕøತಿಕ ಲೋಕದ ನಡುವೆ ಏರ್ಪಟ್ಟಿರುವ ಅನೈತಿಕ ಸಂಬಂಧದ ಪರಿಣಾಮವಾಗಿ ಕನ್ನಡ ಸಾಹಿತ್ಯ ಲೋಕವು ಪಂಚೇದ್ರಿಯಗಳನ್ನು ಕಳೆದುಕೊಂಡಂತೆ ವರ್ತಿಸುತ್ತಿದೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಂತಹ ಸೂಕ್ಷ್ಮತೆ ಇದ್ದಿದ್ದರೆಕಳೆದ ಆರು ತಿಂಗಳಿಂದ ಖಾಲಿಬಿದ್ದಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಸಂಗೀತ ಮತ್ತು ನೃತ್ಯ ಅಕಾಡೆಮಿ, ಜಾನಪದ ಅಕಾಡೆಮಿ ಹೀಗೆ ಅರ್ಧ ಡಜನ್ ಗೂ ಹೆಚ್ಚು ಅಕಾಡೆಮಿಗಳು ಅಧ್ಯಕ್ಷರಿಲ್ಲದೆ, ಸದಸ್ಯರಿಲ್ಲದೆ, ರೀತಿಯಲ್ಲಿ ನಿಷ್ಕ್ರಿಯವಾಗುತ್ತಿರಲಿಲ್ಲ.
ಯಾವುದೇ ಸರ್ಕಾರವು  ಭಾಷೆ ಅಥವಾ ಸಂಸ್ಕತಿಯ ಏಳಿಗೆಗಾಗಿ ಉದಾರವಾಗಿ ಅನುದಾನ ನೀಡುವುದು ಹೆಗ್ಗಳಿಕೆಯಲ್ಲ, ಕೊಟ್ಟ ಹಣ ಸರಿಯಾಗಿ ವಿನಿಯೋಗವಾಗುವ ರೀತಿಯಲ್ಲಿ, ಅಥವಾ ಸಾಹಿತ್ಯ ಮತ್ತು ಸಾಂಸ್ಕತಿಕ ಲೋಕ ಸ್ಥಗಿತಗೊಳ್ಳದ ರೀತಿಯಲ್ಲಿ ನೋಡಿಕೊಳ್ಳಬೇಕಾದ ನೈತಿಕ ಜವಾಬ್ದಾರಿ ಕೂಡ ಇರುತ್ತದೆ. ಸರ್ಕಾರಗಳು ಬದಲಾದ ಮಾತ್ರಕ್ಕೆ ಅಕಾಡೆಮಿಯ ಅಧ್ಯಕ್ಷರುಗಳು, ಸದಸ್ಯರು ಬದಲಾಗಬೇಕು ಎಂಬ ಯಾವ ನಿಯಮವೂ ಇಲ್ಲ. ಕಲಾವಿದರು, ಬರಹಗಾರರು, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ಸಾಹಿತ್ಯ ಮತ್ತು ಇತರೆ ಕಲೆಗಳಿಗೆ ರಾಜಕೀಯ ಲೇಪನವಿರಬಾರದು. ಐದು ವರ್ಷದ ಆಳ್ವಿಕೆಯ ಸರ್ಕಾರದಲ್ಲಿ ಕೇವಲ ಮೂರು ವರ್ಷಗಳ ಕಾಲ ಅಕಾಡೆಮಿಗಳು ಕ್ರಿಯಾ ಶೀಲವಾಗಿದ್ದು, ಇನ್ನುಳಿದ ಎರಡು ವರ್ಷಗಳ ಅನಾಥವಾಗಿರುವುದು ಯಾರಿಗೂ ಶೋಭೆ ತರುವಂತಹದ್ದಲ್ಲ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಬಳಿಯ ಕನ್ನಡ ಭವನದ ನೆಲ ಮಹಡಿಯ ಕನ್ನಡ ಸಂಸ್ಕತಿ ಇಲಾಖೆ ಕಚೇರಿಗೆ ಕಾಲಿಟ್ಟರೆ ಸಾಕು, ಯಾವುದೋ ಜಾತ್ರೆಗೆ ಇಲ್ಲವೆ, ಸಂತೆಗೆ ಕಾಲಿಟ್ಟ ಅನುಭವವಾಗುತ್ತದೆ. ಸಂಘ ಸಂಸ್ಥೆಗಳಿಗೆ ಬರುವ ಅನುದಾನಕ್ಕಾಗಿ, ಅಸಂಖ್ಯಾತ ಕಲಾವಿದರು ಮತ್ತು ಬರಹಗಾರರಿಂದ ತುಂಬಿ ತುಳುಕುತ್ತದೆಒಂದು ನಿರ್ದೇಶಕ ಹುದ್ದೆಯ ಕೆಳಗೆ ಮೂರು ಜಂಟಿ ನಿರ್ದೇಶಕ ಹುದ್ದೆಗಳಿವೆ. ಪ್ರತಿ ಜಿಲ್ಲೆಗೆ ಕನ್ನಡ ಸಂಸ್ಕøತಿ ಇಲಾಖೆಯ ಒಬ್ಬರು ಅಥವಾ ಇಬ್ಬರು ಉಪ ನಿರ್ದೇಶಕರಿದ್ದಾರೆ. ಮೂವರು ಜಂಟಿ ನಿರ್ದೇಶಕರಲ್ಲಿ ಒಬ್ಬರಿಗೆ ನಾಡಿನಲ್ಲಿ ಪ್ರತಿ ವರ್ಷ ನಡೆಯುವ ಸಾಂಸ್ಕತಿಕ ಉತ್ಸವಗಳ ಜವಾಬ್ದಾರಿಯಿದ್ದರೆ, ಮತ್ತೊಬ್ಬನಿಗೆ ಪ್ರತಿ ಜಿಲ್ಲೆಗೆ ನೀಡಲಾಗುವ ಅನುದಾನ ಕುರಿತಂತೆ ಉಸ್ತುವಾರಿಯಿದೆ. ಮತ್ತೊಬ್ಬನಿಗೆ ಆಡಳಿತ, ಹಾಗೂ ರಾಜ್ಯ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿ, ಪಂಪ, ಕನಕ, ಬಸವ, ಅಂಬೇಡ್ಕರ್ ಇತ್ಯಾದಿ ಪ್ರಶಸ್ತಿಗಳ ಹೊಣೆಗಾರಿಕೆ ಹೀಗೆ ಹಲವು ಜವಾಬ್ದಾರಿಗಳು ಹಂಚಿ ಹೋಗಿವೆ. ಇವುಗಳ ಜೊತೆಗೆ ರಾಜ್ಯಾದ್ಯಂತ ಇರುವ  ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಗಳ ಅನುದಾನ, ನಿರ್ವಹಣೆ, ಇವೆಲ್ಲವೂ ನಿರ್ದೇಶಕರು ಮತ್ತು ಜಂಟಿ ನಿರ್ದೇಶಕರ ಮೇಲಿದ್ದು, ಪ್ರತಿ ಕ್ಷಣದಲ್ಲಿಯೂ ಕಛೇರಿಗೆ ಭೇಟಿ ನೀಡುವ ಲೇಖಕರು, ಕಲಾವಿದರು ಇವರನ್ನು ಸಂಭಾಳಿಸುವಲ್ಲಿ ಹೈರಾಣಾಗಿದ್ದಾರೆ.
ಇಂತಹ ಒಂದು ಇಲಾಖೆಯನ್ನು ನಿಭಾಯಿಸುವ ಜನಪ್ರತಿನಿಧಿಗೆ ಸಾಹಿತ್ಯ, ಕಲೆ, ಸಂಗೀತ, ನಾಟಕ ಇವುಗಳ ಕುರಿತು ಕೇವಲ ಅಭಿರುಚಿ ಇದ್ದರೆ ಸಾಲದು, ಅಪಾರವಾದ ಒಳನೋಟವಿರಬೇಕು. ನಾಡಿನ ದುರಂತವೆಂದರೆ, ಎಂ.ಪಿ. ಪ್ರಕಾಶ್ ರವರಂತಹ ಒಬ್ಬ ಸಜ್ಜನ ರಾಜಕಾರಣಿಯನ್ನು ಹೊರತು ಪಡಿಸಿದರೆ, ಈವರೆಗೂ  ಕನ್ನಡ ಸಂಸ್ಕøತಿ ಇಲಾಖೆಗೆ ಒಬ್ಬ ದಕ್ಷ ಸಚಿವರನ್ನು ನಾವು ನೋಡಲಾಗಲಿಲ್ಲ. ಇಲಾಖೆಗೆ ಅಂತಹ ದಕ್ಷ ಸಚಿವರಿದ್ದರೆ, ಇಂದು ರಾಜ್ಯಾದ್ಯಂತ ತಲೆ ಎತ್ತಿರುವ ಸಾಹಿತಿ, ಕಲಾವಿದರ ಹೆಸರಿನ ಸ್ಮಾರಕ ಟ್ರಸ್ಟ್ ಗಳು ಹಿರಿಯ ಸಾಹಿತಿಗಳ ವೃದ್ಧಾಶ್ರಮಗಳಾಗಿ ಬದಲಾಗುತ್ತಿರಲಿಲ್ಲ. ಸರ್ಕಾರದ ಪಾಲಿಗೆ ಕನ್ನಡ ಸಂಸ್ಕತಿ ಇಲಾಖೆ ಎಂದರೆ, ಸಾಹಿತಿಗಳು ಮತ್ತು ಕಲಾವಿದರಿಗೆ ಭಿಕ್ಷೆ ನೀಡುವ ಘಟಕ ಎಂಬ ಮನೋಭಾವ ಇದ್ದಂತಿದೆ. ಅದರಂತೆ ಲೇಖಕರು ಮತ್ತು ಕಲಾವಿದರು ಸಹ ನಡೆದುಕೊಳ್ಳುತ್ತಿದ್ದಾರೆ. ಸರ್ಕಾರಕ್ಕೆ ಕಿವಿ ಹಿಂಡಿ ನಿಷ್ಟುರವಾಗಿ ಹೇಳುವ ಮಹನೀಯರಿಗಾಗಿ ನಾವೀಗ ಎದುರುನೋಡುವಂತಹ ಸ್ಥಿತಿ.
ಕರ್ನಾಟಕದ ಸಾಹಿತ್ಯ, ಸಂಗೀತ, ಕಲೆ ಇವುಗಳಿಗೆ ಮಹತ್ವದ ಕೊಡುಗೆಯನ್ನು ನೀಡಿದ ಮಹನೀಯರಾದ ಕುವೆಂಪು, ಶಿವರಾಮಕಾರಂತರು, ಮಾಸ್ತಿ, ಪು.ತಿ.. ಕೆ.ಎಸ್. ನರಸಿಂಹಸ್ವಾಮಿ, ವಿ.ಕೃ.ಗೋಕಾಕ್, ಆಲೂರು ವೆಂಕಟರಾಯರು, ಬಸವರಾಜ ಕಟ್ಟಿಮನಿ, ಗಳಗನಾಥರು, ಸಂಗೀತ ದಿಗ್ಗಜರಾದ ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು, ಗಂಗೂಬಾಯಿ ಹಾನಗಲ್, ಹೀಗೆ ನಾಡಿನುದ್ದಕ್ಕೂ ಅನೇಕ ಮಹನೀಯರ ಹೆಸರಿನಲ್ಲಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಗಳನ್ನು ಕರ್ನಾಟಕ ಸರ್ಕಾರ ಸ್ಥಾಪಿಸಿದೆ. ಅವುಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ, ವಾರ್ಷಿಕವಾಗಿ ಪ್ರತಿ ಟ್ರಸ್ಟ್ ಗೆ ಹನ್ನೆರೆಡು ಲಕ್ಷ ರೂಪಾಯಿ ಅನುದಾನವನ್ನು ನಿಗದಿ ಪಡಿಸಿದೆ. ಜೊತೆಗೆ  ಆಯಾ ಜಿಲ್ಲೆಯ ಸಂಸ್ಕತಿ ಇಲಾಖೆಯ ಉಪನಿರ್ದೇಶಕನನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಕೈ ತೊಳೆದುಕೊಂಡಿದೆ. ಆಶ್ಚರ್ಯಕರ ಸಂಗತಿಯೆಂದರೆ, ಟ್ರಸ್ಟ್ ಗಳಿಗೆ ಅಧ್ಯಕ್ಷರಾಗುವವರಿಗೆ ಮತ್ತು ಸದಸ್ಯರಿಗೆ ಎಷ್ಟು ವರ್ಷಗಳ ಕಾಲ ಕಾರ್ಯ ನಿರ್ವಹಿಸಬೇಕೆಂದು  ಅವಧಿಯನ್ನು ನಿಗದಿ ಪಡಿಸಿಲ್ಲ. ಇದಲ್ಲದೆ ಕಳೆದ ಎಂಟತ್ತು ವರ್ಷಗಳಿಂದ ಹಲವು ಟ್ರಸ್ಟ್ ಗಳು ಪ್ರತಿ ವರ್ಷ ತಾವು ಪಡೆದ ಅನುದಾನದ ಬಗ್ಗೆ ವಾರ್ಷಿಕವಾಗಿ ಲೆಕ್ಕ ಪತ್ರದ ವರದಿಯನ್ನು ಒಪ್ಪಿಸಿಲ್ಲ. ಅದನ್ನು ಕೇಳುವ ಗೋಜಿಗೆ ಸರ್ಕಾರವೂ ಹೋಗಿಲ್ಲ
ಕಳೆದ ಎಂಟು-ಹತ್ತು ವರ್ಷಗಳಿಂದಲೂ, ಅಷ್ಟೇಕೆ? ಆರಂಭದ ದಿನಗಳಿಂದಲೂ  ಟ್ರಸ್ಟ್ ಗಳಲ್ಲಿ ಅನೇಕ ಮಂದಿ ಅಧ್ಯಕ್ಷರು ಮತ್ತು ಸದಸ್ಯರುಗಳು ಜೀವಾವಧಿ ಟ್ರಸ್ಟಿಗಳಂತೆ ಮುಂದುವರಿದಿದ್ದಾರೆ. ಅಧ್ಯಕ್ಷರ ಅಥವಾ ಸದಸ್ಯರ ನಿಧಾನನಂತರ ಮಾತ್ರ ಹುದ್ದೆಗಳು ಖಾಲಿಯಾಗುತ್ತಿವೆ. ಜೊತೆಗೆ ಅನೇಕ  ಟ್ರಸ್ಟ್ ಗಳು ಕಾರ್ಯನಿರ್ವಹಿಸುತ್ತಿರುವ ಸ್ಥಳಗಳಿಗೂ, ಅಧ್ಯಕ್ಷರು ವಾಸಿಸುವ  ಸ್ಥಳಗಳಿಗೂ ಯಾವುದೇ ಸಂಬಂಧವಿಲ್ಲ.. ಪಾಟೀಲ ಪುಟ್ಟಪ್ಪ ಅಧ್ಯಕ್ಷರಾಗಿರುವ ವಿ.ಕೃ.ಗೋಕಾಕ್ ಟ್ರಸ್ಟ್ ಇರುವುದು ಹಾವೇರಿಯಲ್ಲಿ. ಪುಟ್ಟಪ್ಪನವರು ವಾಸಿಸುತ್ತಿರುವುದು ಹುಬ್ಬಳ್ಳಿ ನಗರದಲ್ಲಿ. ಟ್ರಸ್ಟ್ ಆರಂಭವಾದ ಹತ್ತು ವರ್ಷಗಳ ಅವಧಿಯಲ್ಲಿ ಪುಟ್ಟಪ್ಪನವರು ಹಾವೇರಿಯ ಟ್ರಸ್ಟ್  ಕಛೇರಿಗೆ ಹೋದ ಉದಾಹರಣೆಗಳಿಲ್ಲ. ವಿ.ಕೃ. ಗೋಕಾಕರ ಕಂಚಿನ ಪ್ರತಿಮೆ ಉದ್ಘಾಟನಾ ಸಮಾರಂಭಕ್ಕೆ ಒಮ್ಮೆ ಹೋಗಿದ್ದನ್ನು ಹೊರತು ಪಡಿಸಿದರೆ, ಗಾಲಿ ಕುರ್ಚಿಯ ಮೇಲೆ ಓಡಾಡುವ ಪುಟ್ಟಪ್ಪನವರ ಮನೆಗೆ ಸದಸ್ಯರು ಮತ್ತು ಕಾರ್ಯದರ್ಶಿಗಳು ಹಾವೇರಿಯಿಂದ ಹುಬ್ಬಳ್ಳಿ ನಗರಕ್ಕೆ ಬಂದು ಸಭೆ ನಡೆಸಿಹೋಗುವುದಕ್ಕೆ ನಾನೇ ಹಲವಾರು ಬಾರಿ ಸಾಕ್ಷಿಯಾಗಿದ್ದೀನಿ. ಮಂಡ್ಯ ಜಿಲ್ಲೆಯ ಕವಿಗಳಾದ ಪು.ತಿ.. ಹಾಗೂ ಕೆ.ಎಸ್. . ಇವರುಗಳ ಟ್ರಸ್ಟ್ ಕಚೇರಿಗಳಿರುವುದು ಬೆಂಗಳೂರಿನಲ್ಲಿ, ಅಧ್ಯಕ್ಷರು, ಸದಸ್ಯರು ಇರುವುದು ಬೆಂಗಳೂರಿನಲ್ಲಿ, ಅವರುಗಳ ಹೆಸರಿನಲ್ಲಿ ಪ್ರಶಸ್ತಿ ವಿತರಣೆಯಾಗುವುದು ಬೆಂಗಳೂರಿನಲ್ಲಿ. ಆದರೆ,   ಹುಟ್ಟೂರುಗಳಾದ ಮೇಲುಕೋಟೆ ಮತ್ತು ಕಿಕ್ಕೇರಿಯಲ್ಲಿ ಕವಿಗಳ ಸ್ಮಾರಕವಾಗಲಿ, ಹುಟ್ಟಿದ ಮನೆಗಳ ರಕ್ಷಣೆ ಕುರಿತಾದ ಕಾಳಜಿಯಾಗಲಿ ಏನೂ ಇಲ್ಲ. ಬಹುತೇಕ ಟ್ರಸ್ಟ್ಗಳು ಸಂಪ್ರದಾಯನಿಷ್ಠ ಬ್ರಾಹಣರು ವಾರ್ಷಿಕವಾಗಿ ಆಚರಿಸುವ ಶ್ರಾಧ್ಧದ ರೂಪದಲ್ಲಿ  ತಮಗೆ ಬೇಕಾದವರಿಗೆ ವಾರ್ಷಿಕ ಪ್ರಶಸ್ತಿಯನ್ನು ಕೊಟ್ಟು, ಕಾರ್ಯಕ್ರಮ ಮಾಡಿ  ಕೈ ತೊಳೆದುಕೊಳ್ಳುತ್ತಿವೆ. ಯಾವ ವ್ಯಕ್ತಿಗಳ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆಯಾಗಿದೆಯೋ ಅಂತಹ  ಮಹನೀಯರ  ಜೀವನ, ಸಾಧನೆ ಕುರಿತು ರಾಜ್ಯದ ವಿವಿಧ ನಗರ ಅಥವಾ ವಿ.ವಿ.ಗಳಲ್ಲಿ ಉಪನ್ಯಾಸ ಏರ್ಪಡಿಸುವ ಆಸಕ್ತಿ ಯಾರಿಗೂ ಇದ್ದಂತಿಲ್ಲ. ಏಕೆಂದರೆ ಟ್ರಸ್ಟ್ ಗಳ ಅಧ್ಯಕ್ಷರಾಗಿರುವ ಮಹನೀಯರೆಲ್ಲಾ  ಸರಾಸರಿ 70 ವರ್ಷದಿಂದ 98 ವರ್ಷಗಳ ನಡುವಿನ ವೃದ್ಧರಾಗಿದ್ದಾರೆ. ಹಾಗಾಗಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಗಳು ಒಂದು ರೀತಿಯ  ಸಾಹಿತಿ ಮತ್ತು ಕಲಾವಿದರ ವೃದ್ಧಾಶ್ರಮಗಳಂತೆ ಗೋಚರಿಸುತ್ತಿವೆ, ಇವುಗಳಿಗೆ ಸರ್ಕಾರ ಅಥವಾ ಕನ್ನಡ ಸಂಸ್ಕøತಿ ಇಲಾಖೆಯು. ಅಕಾಡೆಮಿಗಳಿ ಇರುವಂತೆ ನಿಂiÀiಮಾವಳಿಗಳನ್ನು ರೂಪಿಸಿ, ಹೊಸ ಕಾಯಕಲ್ಪ ನೀಡಲು ಸಾಧ್ಯವಾಗದಿದ್ದರೆ ಇವುಗಳನ್ನು ಮುಚ್ಚುವುದು ಒಳಿತು.
ಇಂತಹ ಉದಾರವಾದ ಹಣದ ನೀತಿಯಿಂದಾಗಿ ಒಂದು ಶತಮಾನದ ಇತಿಹಾಸವಿರುವ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಈಗ ಸಾಹಿತ್ಯ ಚಟುವಟಿಕೆಗಳನ್ನು ಬದಿಗಿರಿಸಿ, ಸಾಹಿತ್ಯ ಸಮ್ಮೇಳನಗಳೆಂಬ ಜಾತ್ರೆಗಳನ್ನು ನಡೆಸುವ ಉದ್ಯಮವಾಗಿ ಪರಿವರ್ತನೆ ಹೊಂದಿದೆ. ಸಾಹಿತ್ಯ ಕೃತಿಗಳ ಪ್ರಕಟಣೆ, ಉಪನ್ಯಾಸಗಳು, ವಿಚಾರ ಸಂಕಿರಣಗಳು ಇವುಗಳನ್ನು ಬದಿಗಿಟ್ಟು, ವರ್ಷಪೂರ್ತಿ ನಡೆಸಬೇಕಾದ ಸಾಹಿತ್ಯ ಸಮ್ಮೇಳನದ ಸಿದ್ಧತೆಯಲ್ಲಿ ತೊಡಗಿಕೊಂಡಿದೆ. ಶಿಕ್ಷಣದಲ್ಲಿ ಕನ್ನಡ ಭಾಷೆಯನ್ನು ಬೊಧಿಸುವ ಕುರಿತು ಸರ್ಕಾರದ ಮೇಲೆ ಯಾವೊಂದು ಒತ್ತಡವನ್ನು ಹೇರಲಾಗದ ಅಥವಾ ಭಾಷೆಯ ಕುರಿತಂತೆ ಜನಜಾಗೃತಿಯನ್ನು ಮೂಡಿಸಲಾಗದ ಕನ್ನಡ ಸಾಹಿತ್ಯ ಪರಿಷತ್ತು, “ ಯಾರದೋ ರೊಕ್ಕ, ಯಲ್ಲಮ್ಮನ ಜಾತ್ರಿ ಉಘೇ ಉಘೇಎಂಬಂತೆ ಹುಡಿ ಹಾರಿಸುವುದರಲ್ಲಿ ನಿರತವಾಗಿದೆ. ಇನ್ನೂ ರಾಜ್ಯಾದ್ಯಂತ ಸಂಸ್ಕತಿ ಇಲಾಖೆ ಮತ್ತು ಮಹಾನಗರ ಪಾಲಿಕೆಗಳ ಅಧೀನದಲ್ಲಿರುವ ಭವನಗಳು ಸ್ಥಿತಿಯಂತೂ ಹೇಳ ತೀರದಂತಾಗಿದೆ. ಇವುಗಳು ಪ್ರತಿ ವರ್ಷ ನವೀಕರಣ ಅಥವಾ ರಿಪೇರಿ ಹೆಸರಿನಲ್ಲಿ ಲೋಕೋಪಯೋಗ ಇಲಾಖೆಯ ಅಧಿಕಾರಿಗಳಿಗೆ ಹಣ ತಂದುಕೊಡುವ ಚಿನ್ನದ ಗಣಿಗಳಾಗಿವೆ. ನವೀಕರಣದ ನಂತರ ಜನಸಾಮಾನ್ಯರ ಅಥವಾ ಕನ್ನಡ ಸಾಹಿತ್ಯ ಸಂಸ್ಕತಿಗೆ ಸಂಬಂಧ ಪಟ್ಟಂತೆ ಯಾವುದೇ ಕಾರ್ಯಕ್ರಮಕ್ಕೂ ದಕ್ಕದ ಹಾಗೆ ಇವುಗಳ ದರವನ್ನು ಹೆಚ್ಚಿಸಲಾಗಿದೆ. ಧಾರವಾಡದ ಕಲಾ ಭವನದ ಬಾಡಿಗೆ ದರವನ್ನು 8 ಸಾವಿರ ದಿಂದ  52 ಸಾವಿರ ರೂಪಾಯಿಗೆ ಏರಿಸಲಾಗಿದೆ. ಇದೇ ರೀತಿಯಲ್ಲಿ ಹುಬ್ಬಳ್ಳಿ ನಗರದಲ್ಲಿ ಹೊಸದಾಗಿ ನಿರ್ಮಿಸಿದ ಕನ್ನಡ ಭವನದ ದರವನ್ನು ಏಕಾಏಕಿ 22 ಸಾವಿರಕ್ಕೆ ನಿಗದಿ ಪಡಿಸಲಾಗಿದೆ. ಇಂತಹ ದುಬಾರಿ ಬಾಡಿಗೆಯನ್ನು ನೀಡಿ ಕಾರ್ಯಕ್ರಮ ನಡೆಸುವವರು ಯಾರು? ಇದಕ್ಕೆ ಕನ್ನಡ ಸಂಸ್ಕತಿ ಇಲಾಖೆ ಉತ್ತರ ನೀಡಬೇಕು. ಇದು ಇವೊತ್ತಿನ ಕನ್ನಡ ಸಾಹಿತ್ಯ ಮತ್ತು ಸಾಂಸ್ಕತಿಕ ಜಗತ್ತಿನ ಕಥೆ ಮತ್ತು ವ್ಯಥೆ ಎರಡೂ ಆಗಿದೆ.
( ಕರಾವಳಿ ಮುಂಜಾವು ದಿನಪತ್ರಿಕೆಯ “ಜಗದಗಲ” ಅಂಕಣ ಬರಹ)




2 ಕಾಮೆಂಟ್‌ಗಳು: