ಶುಕ್ರವಾರ, ಮೇ 31, 2024

ಮರೆಯಲಾಗದ ಮುಸ್ಲಿಂ ಸಮುದಾಯದ ಮಹಾನುಭವರು

 


ಭಾರತವು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ರಾಷ್ಟ್ರ ಜೊತೆಗೆ  ಬಹುಸಂಸ್ಕೃತಿಯ ರಾಷ್ಟ್ರವೂ ಕೂಡಾ ಹೌದು. ಭಾರತದ ಸಂವಿಧಾನವು ಈ ನೆಲದ ಪ್ರತಿಯೊಬ್ಬ ನಾಗರೀಕನಿಗೂ ಮತದಾನ ಮಾಡುವ ಹಕ್ಕಿನ ಜೊತೆಗೆ ಚುನಾವಣೆಗೆ ಸ್ಪರ್ಧಿಸಿ ಜನಪ್ರತಿನಿಧಿಯಾಗಿ ಕಾರ್ಯನಿರ್ವಹಿಸುವ  ಹಕ್ಕನ್ನುದಯಪಾಲಿಸಿದೆ.  ಚುನಾವಣೆಗೆ ಸ್ಪರ್ಧಿಸಲು ನಾಗರೀಕರಿಗೆ ಯಾವುದೇ ಕನಿಷ್ಠ ಅರ್ಹತೆಯನ್ನು ನಿಗದಿ ಪಡಿಸಿಲ್ಲ ಇದಕ್ಕೆ ಪ್ರಮುಖ ಆ ಸಂದರ್ಭದಲ್ಲಿ ಭಾರತದಲ್ಲಿ ಸಾಕ್ಷರತೆಯ ಕೊರತೆಯಿಂದಾಗಿ ಅನಕ್ಷರತೆ ತಾಂಡವಾಡುತ್ತಿದ್ದಾಗ ಅಕ್ಷರ ಲೋಕದಿಂದ ವಂಚಿತರಾದವರು ತಮ್ಮ ಸಾರ್ವಭೌಮ ಹಕ್ಕುಗಳಿಂದ ವಂಚಿತರಾಗಬಾರದು ಎಂಬ ದೂರದೃಷ್ಟಿಯ ಆಲೋಚನೆಯು ಅಂಬೇಡ್ಕರ್ ಅವರನ್ನು ಒಳಗೊಂಡಂತೆ ಎಲ್ಲಾ ರಾಜಕೀಯ ನಾಯಕರಿಗಿತ್ತು.

ವರ್ತಮಾನದ ದುರಂತವೆಂದರೆ, ದೇಶದ ಅತ್ಯನ್ನುತ ಸ್ಥಾನವಾದ ಪ್ರಧಾನ ಮಂತ್ರಿ ಹುದ್ದೆಯಲ್ಲಿರುವ ನರೇಂದ್ರಮೋದಿ ಎಂಬ ವ್ಯಕ್ತಿಗೆ ಇಂದು ದಿನಬೆಳಗಾದರೆ, ಭಾರತದ ಮುಸ್ಲಿಂ ಸಮುದಾಯವನ್ನು ಹಿಯಾಳಿಸುವುದರ ಜೊತೆಗೆ  ಆ ಸಮುದಾಯದ ಜನತೆಯ ಬಗ್ಗೆ ಸುಳ್ಳುಗಳನ್ನು ಪುನರುಚ್ಚರಿಸುತ್ತಿದ್ದಾರೆ. ಜನತಂತ್ರ ವ್ಯೆವಸ್ಥೆಯ ದೇಶದಲ್ಲಿ ಇಂತಹ ಹುಸಿ ಮಾತುಗಳ ಮೂಲಕ ಬಿತ್ತುತ್ತಿರುವ ಕೋಮುಭಾವನೆಯು ಭವಿಷ್ಯದ ಭಾರತವನ್ನು ಬಲಿ ತೆಗೆದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.  ಭಾರತದ ವಿಶ್ವ ವಿದ್ಯಾನಿಲಯಗಳಲ್ಲಿ ಅಸ್ತಿತ್ವದಲ್ಲಿ ಇಲ್ಲದಿರುವ ಎಂಟೈರ್ ಪೊಲಟಿಕಲ್ ಸೈನ್ಸ್ ( ಸಂಪೂರ್ಣ ರಾಜ್ಯ ಶಾಸ್ತ್ರ) ಎಂಬ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ ಎಂದು ಹೇಳಿಕೊಳ್ಳುವ  ಪ್ರಧಾನಿ  ಈ ವಿಷಯದ ಜೊತೆಗೆ ಕನಿಷ್ಠ ಭಾರತದ ಇತಿಹಾಸವನ್ನ  ಓದಬೇಕಾಗಿತ್ತು.  ಪ್ರಧಾನಿ ಹುದ್ದೆಗೆ ಏರಿದ ನಂತರ ತನ್ನ ಕಾರ್ಯವೈಖರಿ ಮತ್ತು ಭಾಷೆ ಹಾಗೂ ಭಾವನೆ ಹೇಗಿರಬೇಕು ಎಂಬ ಕನಿಷ್ಠ ಪ್ರಜ್ಞೆಯಾದರೂ ನರೇಂದ್ರಮೋದಿಯವರಿಗೆ  ಇರಬೇಕಿತ್ತು. ವ್ಯಕ್ತಿಗೆ ಘನತೆ ಇಲ್ಲದಿರಬಹುದು, ಆದರೆ, ಪ್ರಧಾನಿ ಹುದ್ದೆಗೆ ಸಂವಿಧಾನದ ಮೌಲ್ಯಗಳನ್ನು ಒಳಗೊಂಡ ಒಂದು ಘನತೆಯಿದೆ.

ಪ್ರಧಾನಿಯವರ ಕಾರ್ಯವೈಖರಿಯನ್ನು ಹಿರಿಯ ಸುಪ್ರೀಂ ಕೋರ್ಟ್ ವಕೀಲರಾದ  ಪ್ರಶಾಂತ್ ಭೂಷಣ್ ಅತ್ಯಂತ ಪರಿಣಾಮಕಾರಿಯಾಗಿ ವಿಶ್ಲೇಷಿಸಿದ್ದಾರೆ.  ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಉಪನ್ಯಾಸ ನೀಡುತ್ತಾ, ಪ್ರಸಕ್ತ ಭಾರತದ ಪರಿಸ್ಥಿತಿಯನ್ನು ವ್ಯಾಖ್ಯಾನಿಸುತ್ತಾ ಪ್ರಶಾಂತ್ ಭೂಷಣ್ ಅವರು ‘’ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಈ ದೇಶದ ಬಡವರು,ಹಿಂದುಳಿದ  ಜಾತಿ ಮತ್ತು ವರ್ಗವನ್ನೊಳಗೊಂಡಂತೆ  ದೇಶದ ಪ್ರಜಾಪ್ರಭುತ್ವ ವ್ಯೆವಸ್ಥೆ, ಕಾನೂನು ಹಾಗೂ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಸ್ಥಾಪಿತವಾದ ಸಾರ್ವಜನಿಕ ಸಂಸ್ಥೆಗಳ ವಿರುದ್ಧ ಯುದ್ಧವನ್ನು ಘೋಷಿಸಿದ್ದಾರೆ’’ ಎಂದು ತುಂಬಾ ಅರ್ಥಗರ್ಭಿತವಾದ ಮಾತುಗಳಲ್ಲಿ ಮೋದಿಯವರ ವ್ಯಕ್ತಿತ್ವನ್ನು ವಿಶ್ಲೇಷಿಸಿದ್ದಾರೆ.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತಾವು ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಮಾಡಿರುವ ಸಾಧನೆಗಳು ಅಥವಾ ಅಭಿವೃದ್ಧಿ ಕುರಿತು ಮಾತನಾಡಲಾಗದ ಮೋದಿಯವರು ನಿರಂತರವಾಗಿ ದೇಶದುದ್ದಕ್ಕೂ ಮುಸ್ಲಿಂ ಸಮುದಾಯದ ಬಗ್ಗೆ ವಿಷ ಕಾರುತ್ತಾ ಬಂದರು.  ಭಾರತದ ನೆಲದಲ್ಲಿ ಹಿಂದೂ ಸಮುದಾಯದ  ರೀತಿಯಲ್ಲಿ ಇಸ್ಲಾಂ ಮತ್ತು ಕ್ರೈಸ್ತ ಸಮುದಾಯದ ಜನರು ಸಹ ಎಲ್ಲಾ ನಾಗರೀಕ ಹಕ್ಕುಗಳನ್ನು ಹೊಂದಿದ್ದಾರೆ.  ನಮ್ಮ ಹಾಗೆ ಅವರು ತಾವು ಹುಟ್ಟಿದ ಧರ್ಮದ ಹೊರತಾಗಿಯೂ ಭಾರತದ ಸಂಸ್ಕೃತಿಗೆ ವಿಶೇಷವಾಗಿ ಸಾಹಿತ್ಯ, ಸಂಗೀತ, ಕಲೆ, ವಿಜ್ಞಾನ, ಕ್ರೀಡೆ, ಶಿಕ್ಷಣ, ಆರೋಗ್ಯ  ಹೀಗೆ ಹಲವಾರು ಕ್ಷೇತ್ರಗಳಲ್ಲಿ ಮಹತ್ತರ ಕೊಡುಗೆಯನ್ನು  ನೀಡಿದ್ದಾರೆ.  ಈ ಅಂಶಗಳನ್ನು  ಮರೆತು ಓರ್ವ ಅಪಕ್ವ ರಾಜಕಾರಣಿಯಂತೆ ಮಾತನಾಡುವುದು  ಮೋದಿ ಅವರ ವ್ಯಕ್ತಿತ್ವಕ್ಕೆ ಮತ್ತು ಪ್ರಧಾನಿ ಹುದ್ದೆಗೆ ಶೋಭೆ ತರುವ ವಿಷಯವಲ್ಲ.

ಪ್ರಧಾನಿಯವರ  ದ್ವೇಷ ಮತ್ತು ಅಸೂಯೆಯ ಈ ಮಾತುಗಳು ದೇಶದ ಅತ್ಯುನ್ನುತ ಪ್ರಶಸ್ತಿಯಾದ  ಭಾರತ ರತ್ನ ಪ್ರಶಸ್ತಿಗೆ ಪಾತ್ರರಾದ ಡಾ.ಅಬ್ದುಲ್ ಕಲಾಂ ಹಾಗೂ ಸಂಗೀತಲೋಕದ ಸಂತ ಪಂಡಿತ್ ಬಿಸ್ಮಿಲ್ಲಾಖಾನ್ ಮತ್ತು ಡಾ.ಜಾಕೀರ್ ಹುಸೇನ್  ರಂತಹ ಅಸಾಮಾನ್ಯ ವ್ಯಕ್ತಿತ್ವಗಳಿಗೆ  ಮಸಿ ಬಳಿಯುತ್ತಿರುವ ಘಟನೆ ಎಂದು ಹೇಳಬಹುದಾಗಿದೆ.  1947 ರ ಆಗಸ್ಟ್  15 ರಂದು ಸ್ವತಂತ್ರ ಭಾರತ ಉದಯವಾದಾಗ ಶುಭ ನುಡಿಯುವ ಹಕ್ಕಿಯ ಹಾಗೆ ಪ್ರಥಮಬಾರಿಗೆ ಸ್ವಾತಂತ್ರ್ಯದ ಕಹಳೆಯನ್ನು ಬಿಸ್ಮಿಲ್ಲಾಖಾನ್ ತಮ್ಮ ಶಹನಾಯ್ ವಾದ್ಯದ ಮೂಲಕ ನುಡಿಸಿದ್ದನ್ನು ಈ ರಾಷ್ಟ್ರದ ಪ್ರಧಾನಿಗೆ ನಾವು ನೆನಪು ಮಾಡಿಕೊಡಬೇಕಾಗಿದೆ. ಇತ್ತೀಚೆಗಿನ  ವರ್ಷಗಳ ವರೆಗೆ ಭಾರತದ ಎಲ್ಲಾ ಆಕಾಶವಾಣಿ ಕೇಂದ್ರಗಳಲ್ಲಿ ಸ್ವಾತಂತ್ರ್ಯದ ದಿದಂದು ಆ ಧ್ವನಿಯು ಪ್ರಸಾರವಾಗುತ್ತಿತ್ತು.

ಇಂದು ದೇಶಾದ್ಯಂತ  ಇಂತಹ ನೂರಾರು  ಮಹನೀಯರನ್ನು ನಾವು ಗುರುತಿಸಬಹುದು. ಸಧ್ಯಕ್ಕೆ ಇಲ್ಲಿ  ಅನಾಮಿಕರಾಗಿ ಇತಿಹಾಸದಲ್ಲಿ ಉಳಿದುಹೋದ ಇಬ್ಬರು ಮಹಾನುಭವರನ್ನು ಮಾತ್ರ ಉಲ್ಲೇಖಿಸಬಯಸುತ್ತೇನೆ. ಮೊದಲನೆಯವರು ನಮ್ಮ ಕನ್ನಡ ನೆಲದಲ್ಲಿ ಜನಿಸಿದ ಜಗಳೂರಿನ  ಇಮಾಂ ಸಾಹೇಬರು ಮತ್ತು ಎರಡನೆಯವರು  ಬಿಹಾರದ ಪಾಟ್ನಾ ನಗರದ  ಮೌಲಾನ ಮುಜರಲ್ ಹಕ್. ಈ ಇಬ್ಬರು ಮಹನೀಯರ  ಸಾರ್ವಜನಿಕ ಬದುಕು ಮತ್ತು ಬದ್ಧತೆಗಳು  ಸ್ವಾತಂತ್ರ್ಯ ಪೂರ್ವದಿಂದಲೂ ಭಾರತದ ಜನಪ್ರತಿನಿಧಿಗಳಿಗೆ, ಹೋರಾಟಗಾರರಿಗೆ ಮತ್ತು ಆಗರ್ಭ ಶ್ರೀಮಂತರಿಗೆ ಮಾದರಿಯಾಗಿತ್ತು. ಈ ನಾಯಕರು ಬದುಕಿನುದ್ದಕ್ಕೂ  ಪ್ರದರ್ಶನ ಮತ್ತು ಪ್ರಚಾರಗಳಿಂದ ದೂರವಿದ್ದರು. ಈ ನೆಲದ ಮೇಲೆ ಬದುಕುವ ಮನುಷ್ಯ ಜೀವಿಗಳು ನಮ್ಮಂತೆ ಬದುಕುವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಪಡೆದಿದ್ದಾರೆ ಎಂದು ನಂಬಿ ಬದುಕಿದರು. ತಾವು ಪ್ರತಿಪಾದಿಸಿಕೊಂಡ ಬಂದ ಮೌಲ್ಯಗಳ ಮೂಲಕ  ಉಳಿದವರಿಗೆ ಮಾದರಿಯಾದರು.

ಇಮಾಂ ಸಾಹೇಬರು ಅಂದಿನ ಚಿತ್ರದುರ್ಗ ಜಿಲ್ಲೆಯ ಜಗಳೂರಿನ ಶ್ರೀಮಂತ  ಜಮೀನ್ದಾರರ ಕುಟುಂಬದಲ್ಲಿ ಜನಿಸಿದವರು. 1923 ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿಯನ್ನು ಪಡೆದು ಬಂದ ಅವರು ತಮ್ಮ ತಂದೆಯವರಾದ ಬಡಸಾಹೇಬ್ ನಂತರ ಅಂದಿನ ಮೈಸೂರು ಪ್ರಜಾಪ್ರತಿನಿಧಿ ಸಭೆಗೆ 1933 ರಲ್ಲಿ ಆಯ್ಕೆಯಾಗಿ ಸೇವೆ ಸಲ್ಲಿಸಿದರು. ನಾಲ್ವಡಿ ಕೃಷ್ಣರಾಜರಾಜ ಒಡೆಯರ್ ಅವರ ಆತ್ಮೀಯ ಬಳಗದಲ್ಲಿ ಒಬ್ಬರಾಗಿದ್ದ ಇಮಾಂ ಸಾಹೇಬರು ಅಭಿವೃದ್ಧಿ ವಿಷಯದಲ್ಲಿ ಅವರ ಆಪ್ತ ಸಲಹೆಗಾರರಾಗಿದ್ದರು. ಹಂಗಾಮಿ ದಿವಾನರಾಗಿಯೂ ಕಾರ್ಯ ನಿರ್ವಹಿಸಿದ ಇಮಾಂ ಸಾಹೇಬರು  1942 ರಲ್ಲಿ ಹಲವಾರು ಖಾತೆಗಳ ಸಚಿವರಾಗಿ ಕಾರ್ಯನಿರ್ವಹಿಸುತ್ತಾ ಅತ್ಯಂತ ಜನಾನುರಾಗಿದ್ದರು. ನಂತರ 1952 ಕರ್ನಾಟಕ ವಿಧಾನ ಸಭೆಗೆ ಆಯ್ಕೆಯಾಗಿ ಕೆಂಗಲ್ ಹನುಮಂತಯ್ಯನವರ ಬೆನ್ನೆಲುಬಾಗಿ ನಿಂತ ಇಮಾಂ ಸಾಹೇಬರು ಕರ್ನಾಟಕ ಏಕೀಕರಣದಲ್ಲಿ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳನ್ನು ಅಂದಿನ ಮೈಸೂರು ರಾಜ್ಯಕ್ಕೆ ಸೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಕೆಂಗಲ್ ಹನುಮಂತಯ್ಯನವರು ವಿಧಾನಸೌಧ ನಿರ್ಮಾಣ ಮಾಡುವಾಗ ಕಟ್ಟಡದ ಹೆಬ್ಬಾಲಿಗೆ ‘’ ಸರ್ಕಾರರದ ಕೆಲದ ದೇವರ ಕೆಲಸ’’ ಎಂಬ ಸೂಕ್ತಿಯನ್ನು ಬರೆಸಲು ಸಲಹೆ ನೀಡಿದ ಮಹಾನುಭವರು ಇವರು.

ಚಿತ್ರದುರ್ಗದಿಂದ ಪ್ರಜಾಸೋಷಲಿಷ್ಟ್ ಪಕ್ಷದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಇಮಾಂಸಾಹೇಬರು ಸದಾ ಬದುಕಿನುದ್ದಕ್ಕೂ ಹಿಂದೂ-ಮುಸ್ಲಿಂ ಬಾಂಧವ್ಯದ ಹರಿಕಾರರಂತೆ ಬದುಕಿದರು. ಏಕೆಂದರೆ, ಈ ಗುಣ ಅವರ ಕುಟುಂಬದ ಪರಂಪರೆಯಾಗಿತ್ತು. ಅವರ ಅಜ್ಜ, ಅಪ್ಪ ಇವರೆಲ್ಲರೂ ನೂರಾರು ಎಕರೆ ಭೂಮಿಯ ಒಡೆಯರಾಗಿದ್ದುಕೊಂಡು ನೊಂದವರಿಗೆ ಮತ್ತು ಹಸಿದವರಿಗೆ ಆಸರೆಯಾಗಿ ಬದುಕಿದವರು. ಸಿರಿಗೆರೆ ಮಠದ ಅಭಿವೃದ್ಧಿಗೆ ಮತ್ತು ಮಠದ ಸಾಂಸ್ಕೃತಿಕ ಚಟುವಟಿಕೆಯಲ್ಲಿ  ಇಡೀ ಅವರ ಕುಟುಂಬ ಭಾಗಿಯಾಗಿರುವುದನ್ನು ಇಂದಿಗೂ ಸಹ ಅಲ್ಲಿನ ಮಠಾಧೀಶರು ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಈ ಜಗತ್ತಿನಲ್ಲಿ ಒಬ್ಬ ಅಪ್ಪಟ ಮನುಷ್ಯನಂತೆ ಬದುಕಲು ಜಾತಿ ಮತ್ತು ಧರ್ಮದ ಅವಶ್ಯಕತೆಯಿಲ್ಲ ಎಂದು ಈ ನಾಡಿಗೆ ತೋರಿಸಿಕೊಟ್ಟ ಇಮಾಂ ಸಾಹೇಬರ ಕುಟುಂಬ ಇಂದಿಗೂ ಸಹ ಮಾದರಿಯಾಗಿದೆ. ಕನ್ನಡದ ಹಿರಿಯ ವಿಜ್ಞಾನ ಲೇಖಕರಾದ ಜೆ.ಆರ್. ಲಕ್ಷ್ಮಣರಾವ್ ಬಾಲ್ಯದಿಂದಲೂ ಜಗಳೂರಿನಲ್ಲಿ ಇಮಾಂ ಸಾಹೇಬರನ್ನು ಹತ್ತಿರದಿಂದ ನೋಡಿಕೊಂಡು ಬೆಳೆದವರು. ಅವರು ತಮ್ಮ ನೆನಪಿನಲ್ಲಿ ಒಂದು ಹೃದಯ ಸ್ಪರ್ಶಿ ಘಟನೆಯನ್ನು ದಾಖಲಿಸಿದ್ದಾರೆ.

ಮೈಸೂರು ನಗರದಲ್ಲಿ ಜೆ.ಆರ್. ಲಕ್ಷ್ಮಣರಾವ್  ಓದುತ್ತಿದ್ದಾಗ, ಅವರ ಸಹಪಾಠಿಯೊಬ್ಬ ವಾರ್ಷಿಕ ಶುಲ್ಕ ಪಾವತಿಸಲಾಗದೆ, ಪರೀಕ್ಷೆಗೆ ಕೂರಲು ಅವಕಾಶದಿಂದ ವಂಚಿತನಾದನು. , ಆ ಬಡ ಬ್ರಾಹ್ಮಣ ಹುಡುಗನನ್ನು ಇಮಾಂ ಸಾಹೇಬರ ಹತ್ತಿರ ಕರೆದೊಯ್ದ ಲಕ್ಷ್ಮಣರಾವ್ ಅವರು ‘’ ಇವನು ವಾರನ್ನದಲ್ಲಿ ( ದಿನಕ್ಕೆ ಒಬ್ಬರ ಮನೆಯ ಊಟ) ಬದುಕುತ್ತಿರುವ ನನ್ನ ಮಿತ್ರ. ಪರೀಕ್ಷೆಗೆ ಶುಲ್ಕ ಕಟ್ಟಲು ಸಾಧ್ಯವಾಗಿಲ್ಲ. ನಿಧಾನವಾಗಿ ಪಾವತಿಸುತ್ತಾನೆ. ದಯಮಾಡಿ ಶಾಲೆಯ ಮುಖ್ಯಸ್ಥರಿಗೆ ಹೇಳಿ’’ ಎಂದು ವಿನಂತಿಸಿಕೊಂಡಾಗ, ಆ ಸಂದರ್ಭದಲ್ಲಿ .ಸಚಿವರಾಗಿದ್ದ ಇಮಾಂಸಾಹೇಬರು ‘’ ಮಗು, ಇಂತಹ ಸಂಗತಿಯನ್ನು ನಾನು ನಿಮ್ಮ ಶಿಕ್ಷಕರೊಂದಿಗೆ ಮಾತನಾಡನಾರದು ಎಂದು ಹೇಳಿದರು. ಜೊತೆಗೆ ಆ ಬಡ ವಿದ್ಯಾರ್ಥಿಗೆ ಪರೀಕ್ಷೆ ಶುಲ್ಕವನ್ನು  ನೀಡುವುದರ ಜೊತೆಗೆ ವಾರನ್ನದ ಬದಲಾಗಿ ಹೊಟೇಲ್ ಒಂದರಲ್ಲಿ ವರ್ಷಪೂರ್ತಿ ಊಟ ಮಾಡುವುದಕ್ಕೆ ವ್ಯೆವಸ್ಥೆ ಮಾಡಿ, ತಿಂಗಳಿಗೆ ಹದಿನೈದು ರೂಪಾಯಿನಂತೆ ಹನ್ನೆರೆಡು ತಿಂಗಳಿಗೆ 180 ರೂಪಾಯಿ ಅನ್ನು ಮುಂಗಡವಾಗಿ ಪಾವತಿಸಲು ಹಣ ನೀಡಿದರು. ಲಕ್ಷ್ಮಣರಾವ್ ಅವರತ್ತ ತಿರುಗಿ, ನಿನ್ನ ಗೆಳೆಯನ ಊಟ ಮತ್ತು ಶಿಕ್ಷಣದ ಜವಾಬ್ದಾರಿ ಇನ್ನು ಮುಂದೆ ನನ್ನದು ಎಂದು ಹೇಳಿ ಹಾರೈಸಿ ಕಳಿಸಿದ ಕಥೆಯನ್ನು ಓದುತ್ತಿದ್ದರೆ, ಇಂದಿನ ಧರ್ಮಾಧಾರಿತ ರಾಜಕೀಯದ ಬಗ್ಗೆ ಜಿಗುಪ್ಸೆ ಮೂಡುತ್ತದೆ. ಇಂತಹ ಮಹನೀಯರ ಕಥನಗಳು ನಮ್ಮ ಮಕ್ಕಳ ಶಾಲಾ ಪಠ್ಯದಲ್ಲಿ ಇರಬೇಕಾಗಿದೆ. ಇಮಾಂ ಸಾಹೇಬರು ಜಗಳೂರಿನ ತಮ್ಮ ವಾಸದ ಬಂಗಲೆಯನ್ನು ಸರ್ಕಾರಿ ಕಾಲೇಜು ಸ್ಥಾನೆಗಾಗಿ ಉದಾರವಾಗಿ ದಾನ ಮಾಡಿ, ಸಣ್ಣ ಕಟ್ಟಡವೊಂದರಲ್ಲಿ ನಿವೃತ್ತಿಯ ಜೀವನ ನಡೆಸಿ 1983 ರಲ್ಲಿ ನಿಧನರಾದರು.

ಬಿಹಾರದ  ಮೌಲನಾ ಮಜರುಲ್ ಹಕ್ ಅವರದೂ ಸಹ ಇಂತಹದ್ದೇ ಧೀನಂತ ವ್ಯಕ್ತಿತ್ವ.  ಪಾಟ್ನಾ ಸಮೀಪದ ಬಹುಪುರದಲ್ಲಿ ಶ್ರೀಮಂತ ಜಮೀನ್ದಾರರ ಕುಟುಂಬದಲ್ಲಿ  1866 ರಲ್ಲಿ ಜನಿಸಿದ ಇವರು ಗಾಂಧಿಜಿಯವರಿಗಿಂತ ಮೂರು ವರ್ಷ ಹಿರಿಯವರು. ಲಂಡನ್ ನಗರದಲ್ಲಿ ಗಾಂಧಿಜಿಯವರ ಜೊತೆ ಬ್ಯಾರಿಸ್ಟರ್ ಪದವಿಯನ್ನು ಮುಗಿಸಿ, ಪಾಟ್ನಾ ನಗರಕ್ಕೆ ಹಿಂತಿರುಗಿ ವಕೀಲಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. 1917 ರ  ಏಪ್ರಿಲ್ ತಿಂಗಳಿನಲ್ಲಿ ಚಂಪಾರಣ್ಯ ರೈತರ ಸ್ಥಿತಿಗತಿಯನ್ನು ಅರಿಯುವ ಉದ್ದೇಶದಿಂದ ಗಾಂಧೀಜಿಯವರು ಪಾಟ್ನಾ ನಗರದಲ್ಲಿ ಅಂದಿನ ಯುವ ವಕೀಲರಾಗಿದ್ದ ಬಾಬು ರಾಜೇಂದ್ರ ಪ್ರಸಾದ್ ನಿವಾಸಕ್ಕೆ ಭೇಟಿ ನೀಡಿದರು. ಆದರೆ,  ಅವರು ಒರಿಸ್ಸಾದ ಪುರಿ ಪಟ್ಟಣಕ್ಕೆ ಹೋಗಿದ್ದರು. ರಾಜೇಂದ್ರಪ್ರಸಾದ್ ಮನೆಯ ಸೇವಕನು  ಗಾಂದಿಯವರನ್ನು ಯಾರೋ ಒಬ್ಬ ಕಕ್ಷಿದಾರ ಎಂದು ಭಾವಿಸಿ, ಮನೆಯೊಳಕ್ಕೆ ಪ್ರವೇಶ ನೀಡಲಿಲ್ಲ ಜೊತೆಗೆ ಶೌಚಾಲಯದ ಬಳಕೆಗೂ ಅವಕಾಶ ನೀಡಿರಲಿಲ್ಲ.  ಆ ವೇಳೆಗೆ  ಗಾಂಧೀಝಿ ಆಗಮನದ ಸುದ್ದಿ ತಿಳಿದು ಓಡೋಡಿ ಬಂದ ಮಜರುಲ್ ಹಕ್ ಗಾಂಧೀಜಿಯವರನ್ನು ತಮ್ಮ  ಸಿಕಂದರ್ ಮಂಜಿಲ್ ಎಂಬ ಬಂಗಲೆಗೆ ಕರೆದೊಯ್ದು ಸತ್ಕಾರ ನೀಡಿದರು.  ಮಜರುಲ್ ಹುಕ್ ಅವರು ಪಾಟ್ನಾ ನಗರದಲ್ಲಿರುವುದು ಗಾಂಧೀಜಿಯವರಿಗೆ ಗೊತ್ತಿರಲಿಲ್ಲ.

ಪಾಟ್ನಾ ನಗರದಿಂದ ಸಂಜೆಯ ರೈಲಿನಲ್ಲಿ ಮುಜಾಫರ್ ಪುರದಲ್ಲಿದ್ದ ಜೆ.ಬಿ.ಕೃಪಾಲನಿ ಅವ ಬಳಿಗೆ ಕಳಿಸಿ ಕಳಿಸಿಕೊಟ್ಟ ಮುಜರುಲ್ ಹುಕ್ ನಂತರದ ದಿನಗಳಲ್ಲಿ ವಕೀಲಿ ವೃತ್ತಿಗೆ ವಿರಾಮ ಹೇಳಿ ಚಂಪಾರಣ್ಯ ಸತ್ಯಾಗ್ರಹಕ್ಕೆ ಗಾಂಧಿಜಿಯವರ ಜೊತೆ ಕೈ ಜೋಡಿಸಿದರು. ಇದಕ್ಕೂ ಮುನ್ನ ಅವರು 1910 ರಿಂದ ಎರಡು ವರ್ಷಗಳ ಕಾಲ  ಬಿಹಾರ ಪ್ರಜಾ ಪ್ರತಿನಿಧಿಗಳ ಸಭೆಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ಜೊತೆಗೆ 1916 ರಿಂದ ಬಿಹಾರದ  ರಾಷ್ಟ್ರೀಯ ಕಾಂಗ್ರೇಸ್ ಸಮಿತಿಯಲ್ಲಿ ಸಕ್ರಿಯರಾಗಿದ್ದರು.  ಚಂಪಾರಣ್ಯ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಗಾಂಧಿ ಮತ್ತು ಅವರ ಸಹಚರರ ಎಲ್ಲಾ ಖರ್ಚು ವೆಚ್ಚಗಳಿಗೆ ಸಹಾಯ ಹಸ್ತ ನೀಡಿದರು. ಗಾಂಧಿಜಿ ಆಗಮನದ ನಂತರ ಚಂಪಾರಣ್ಯದಲ್ಲಿ ನಿಷೇಧಾಜ್ಞೆ ಹೇರಿ, ಅವರನ್ನು ತಕ್ಷಣ ಚಂಪಾರಣ್ಯ ಬಿಟ್ಟು ಹೊರಹೋಗುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶ ಹೊರಡಿಸಿದಾಗ, ಗಾಂಧಿಜಿವರು ಅದನ್ನು ಧಿಕ್ಕರಿಸಿ ಹಳ್ಳಿಗಳಲ್ಲಿ ಪ್ರವಾಸ ಮಾಡಿದರು. ಒಂದು ವೇಳೆ ಬ್ರಿಟೀಷ್ ಸರ್ಕಾರವು ನನ್ನನ್ನು ಬಂಧಿಸಿದರೆ, ಇಡೀ ಹೋರಾಟವನ್ನು ಮಜರುಲ್ ಹಕ್ ಮತ್ತು ಪಂಡಿತ್ ಮದನ ಮೋಹನ ಮಾಳವೀಯ ಮುಂದುವರಿಸುತ್ತಾರೆ ಎಂದು ತಮ್ಮ ಸಹಚರರಿಗೆ ಮತ್ತು ಚಂಪಾರಣ್ಯ ರೈತರಿಗೆ ಗಾಂಧೀಜಿ ಭರವಸೆಯನ್ನು ತುಂಬಿದ್ದರು.


1916 ರಲ್ಲಿ ಅನ್ನಿಬೆಸೆಂಟ್ ಸ್ಥಾಪಿಸಿದ ಹೋಂ ರೂಲ್ ಚಳುವಳಿ, 1919 ರ ಖಿಲಾಫತ್ ಚಳುವಳಿ, 1920 ರಲ್ಲಿ ಗಾಂಧೀಜಿಯವರು ಕರೆ ನೀಡಿದ ಅಸಹಕಾರ ಚಳುವಳಿಯಲ್ಲಿ ಪಾಲ್ಗೊಂಡಿದ್ದರು. ಗಾಂಧೀಜಿಯವರಿಂದ ಪ್ರಭಾವಿತರಾಗಿ ಪಾಟ್ನಾ ನಗರದಲ್ಲಿ ಒಂಬತ್ತು ಎಕರೆ ವಿಸ್ತೀರ್ಣವಾದ ಪ್ರದೇಶದಲ್ಲಿ  ಸದಾಕತ್ ಆಶ್ರಮ (ಸತ್ಯದ ನಿವಾಸ) ಎಂಬ ಹೆಸರಿನಲ್ಲಿ ಆಶ್ರಮವನ್ನು ಸ್ಥಾಪಿಸಿ, ಮದರ್ ಲ್ಯಾಂಡ್ ಎಂಬ ವಾರ ಪತ್ರಿಕೆಯನ್ನು ಾರಂಭಿಸಿದ್ದರು. 1926 ರಲ್ಲಿ ರಾಜಕೀಯ ನಿವೃತ್ತಿ ಘೋಷಿಸಿಕೊಂಡರೂ ಸಹ ಗಾಂಧೀಜಿ ಮತ್ತು ಮೌಲಾನಾ ಅಜಾದ್ ಮತ್ತು ನೆಹರೂ ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದರು. 1930 ರಲ್ಲಿ ತಮ್ಮ 64 ನೇ ವಯಸ್ಸಿಗೆ ನಿಧನರಾದರು. ಬದುಕಿನುದ್ದಕ್ಕೂ ಹಿಂದೂ-ಮುಸ್ಲಿಂ ಬಾಂಧವ್ಯದ ಪ್ರತಿಪಾದಕರಾಗಿದ್ದ ಮಜರುಲ್ ಹಕ್  ಅವರು ಈ ದೇಶದ ಹಿಂದೂ ಹಾಗೂ ಮುಸ್ಲಿಂರು ಒಂದೇ ದೋಣಿಯ ಪಯಣಿಗರು. ಜಯಸಿದರೆ, ಒಟ್ಟಿಗೆ ಜಯಶೀಲರಾಗುತ್ತೇವೆ, ಮುಳುಗಿದರೆ ಒಟ್ಟಿಗೆ ಮುಳುಗುತ್ತೇವೆ ಎಂದು ಹೇಳುತ್ತಿದ್ದರು. ಇಂತಹ ಮಹಾನ್ ದೇಶಭಕ್ತರಿಂದ ಪ್ರಭಾವಿತರಾಗಿದ್ದ ಮಾಜಿ ರಾಷ್ಟ್ರಪತಿ ಡಾ.ಬಾಬುರಾಜೇಂದ್ರಪ್ರಸಾದ್ ತಮ್ಮ ನಿವೃತ್ತಿಯ ದಿನಗಳನ್ನು ಪಾಟ್ನಾ ನಗರಕ್ಕೆ ಆಗಮಿಸಿ ಸದಾಕತ್ ಆಶ್ರಮದಲ್ಲಿ ಕಳೆದರು. ಅವರು ಬರೆದ ಡಿವೈಡೈಡ್ ಇಂಡಿಯಾ ಕೃತಿಯನ್ನು ಮೌಲನಾ ಮಜರುಲ್ ಹಕ್ ಅವರಿಗೆ ಸಮರ್ಪಿಸಿದ್ದಾರೆ. ಇಂದು ಪಾಟ್ನಾ ನಗರದಲ್ಲಿ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ವಿಶ್ವ ವಿದ್ಯಾನಿಲಯವೊಂದು ಸ್ಥಾಪಿತವಾಗಿದೆ. ಗಾಂಧಿಜಿಯವರ ಸ್ವಾತಂತ್ರ್ಯ ಹೋರಾಟದಲ್ಲಿ ಕೈ ಜೋಡಿಸಿದ   ಖಾನ್ ಅಬ್ದುಲ್ ಗಪಾರ್ ಖಾನ್, ಮೌಲಾನ ಅಬ್ದುಲ್ ಕಲಾಂ ಅಜಾದ್ ಮತ್ತು ಡಾ,ಜಾಕೀರ್ ಹುಸೈನ್  ರಂತಹ ನೂರಾರು ಗಣ್ಯರನ್ನು ಮರೆಯಲು ಸಾಧ್ಯವೆ?

( ಜೂನ್ ತಿಂಗಳ ಹೊಸತು ಮಾಸಪತ್ರಿಕೆಯಲ್ಲಿ ಪ್ರಕಟವಾದ ಬಹುಸಂಸ್ಕೃತಿ ಅಂಕಣ ಬರಹ)

ಜಗದೀಶ್ ಕೊಪ್ಪ

 

 

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ