ಶುಕ್ರವಾರ, ನವೆಂಬರ್ 8, 2013

ಮೂಡನಂಬಿಕೆಗಳ ಮಸೂದೆ ಮತ್ತು ಅಸಹನೀಯ ಕರ್ನಾಟಕ


ಕಳೆದ ಎರಡು ಮೂರು ದಿನಗಳಿಂದ ಪತ್ರಿಕೆ ಮತ್ತು ದೃಶ್ಯಮಾಧ್ಯಮಗಲಲ್ಲಿ  ಮೂಡನಂಬಿಕೆ ಆಚರಣೆಗಳ ಕುರಿತು ಕರ್ನಾಟಕ ಸರ್ಕಾರ ತರಲು ಉದ್ದೇಶಿಸುವ ಮಸೂದೆ ಕುರಿತು, ಚರ್ಚೆಯಾಗುತ್ತಿದೆ.ತಜ್ಙರ ತಂಡ ನೀಡಿರುವ ಶಿಫಾರಸ್ಸಿನ ವರದಿ ಕುರಿತು ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ಬಗೆಯನ್ನು ಗಮನಿಸಿದರೆ, ನಾವು ಎತ್ತ ಸಾಗುತ್ತಿದ್ದೇವೆ ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಬಿಕ್ಕಟ್ಟಿನ ದಿನಗಳು ಇವು ಎಂದು ನನಗೆ ಗೋಚರಿಸತೊಡಗಿದೆ.
ಕರಡು ಮಸೂದೆ ಮತ್ತು ಶಿಫಾರಸ್ಸುಗಳ ನಡುವಿನ ವೆತ್ಯಾಸ ತಿಳಿಯದೆ ಈಗಾಗಲೇ ಜಾರಿಗೆ ಬಂದ ಕಠಿಣ ಮಸೂದೆಯೇನೋ ಎಂಬಂತೆ ಕೆಲವರು ಪತ್ರಿಕೆಗಳಲ್ಲಿ ಅವ್ಯಾಚ್ಯ ಶಬ್ಧಗಳ ಕತ್ತಿ ಜಳಪಿಸುತ್ತಿದ್ದಾರೆ.
ಈ ದೇಶದಲ್ಲಿ ಧರ್ಮದ ಹೆಸರಿನಲ್ಲಿ, ಆಚರಣೆ, ನಂಬಿಕೆ, ಶ್ರದ್ಧೆ ಇವುಗಳನ್ನು ಬಂಡವಾಳ ಮಾಡಿಕೊಂಡು, ಜನರ ಭಾವನೆ ಕೆರಳಿಸುವುದು ಅತಿ ಸುಲಭ ಎಂಬುದು ಈಗಾಗಲೇ ಇತಿಹಾಸದಲ್ಲಿ ದಾಖಲಾಗಿದೆ. ರಾಮನ ಹೆಸರಿನಲ್ಲಿ, ಇಟ್ಟಿಗೆ ಹೆಸರಿನಲ್ಲಿ ಮಣ್ಣು ಹೊತ್ತವರ ಚರಿತ್ರೆ, ಮತ್ತು ಅವರಿಗೆ ಕೊಂಬು, ಕಹಳೆ, ತುತ್ತೂರಿಯಾಗಿ ಕಾರ್ಯ ನಿರ್ವಹಿಸಿದ ಪತ್ರಿಕೆ ಹಾಗೂ ಪತ್ರಕರ್ತರನ್ನು ಗುರುತಿಸಲಾರದಷ್ಟು ಸೂಕ್ಷ್ಮತೆಯನ್ನು ಕರ್ನಾಟಕದ ಜನಸಾಮಾನ್ಯ ಇನ್ನೂ ಕಳೆದುಕೊಂಡಿಲ್ಲ.
ಒಂದು ಕಾನೂನು ಮಸೂದೆಯಾಗಿ ರಾತ್ರೋ ರಾತ್ರಿ ಜನ್ಮ ತಾಳುವುದಿಲ್ಲ. ಅದರಂತೆ ಸರ್ಕಾರ ನೇಮಿಸಿದ ತಜ್ಙರ ತಂಡ ನೀಡಿದ ಶಿಫಾರಸ್ಸು ಸರ್ಕಾರಕ್ಕೆ ಅಂತಿಮವೇನಲ್ಲ. ಅದು ಶಾಸಕಾಂಗ ಸಭೆಯಲ್ಲಿ ಚರ್ಚೆಯಾಗಿ, ಸಾರ್ವಜನಿಕ ಚರ್ಚೆಯಾಗಿ, ಮಾನವ ಹಕ್ಕು ಮತ್ತು ನಾಗರೀಕ ಹಕ್ಕುಗಳಿಗೆ ಹಾಗೂ ಜನರ ಧಾರ್ಮಿಕ ಹಕ್ಕು ಮತ್ತು ಆಚರಣೆಗಳಿಗೆ ಧಕ್ಕೆಯಾಗದಂತೆ ಸಂವಿಧಾನ ತಜ್ಙರ ಸಲಹೆ ಸೂಚನೆಗಳೊಂದಿಗೆ ಮಸೂದೆಯ ರೂಪದಲ್ಲಿ  ಹಲವು ಹಂತಗಳನ್ನು ದಾಟಿ ಅಸ್ತಿತ್ವಕ್ಕೆ ಬರುತ್ತದೆ.
ಅಸಹನೆಯ ಕರ್ನಾಟಕದ ಪ್ರತೀಕವೆಂಬಂತೆ, ಶಿಫಾರಸ್ಸಿನ ಅಂಶಗಳನ್ನು ಕೂಲಂಕುಶವಾಗಿ ಗಮನಿಸಿದೆ, ತಜ್ಙರ ತಂಡವನ್ನು ಗುರಿಯಾಗಿಸಿಕೊಂಡು ಕೆಲವು ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವುದನ್ನು ಗಮನಿಸಿದರೆ, ಇವರಿಗೆ ನಾಗರೀಕ ಸಮಾಜವೊಂದು ನಿರ್ಮಾಣವಾಗುವುದು ಬೇಕಿಲ್ಲ ಎಂಬುದು ಅವರು ಬಳಸಿರುವ ಭಾಷೆಯಲ್ಲಿ ಖಾತರಿಯಾಗುತ್ತದೆ. ಪತ್ರಕರ್ತ ಅಥವಾ ಮಾಧ್ಯಮದ ಕೆಲಸವೆಂದರೆ,ತಮ್ಮ ಮುಂದಿರುವ  ವಸ್ತು ಸ್ಥಿತಿಯನ್ನು ಜನತೆಯ ಮುಂದಿಟ್ಟು ಜನಾಭಿಪ್ರಾಯ ರೂಪಿಸುವುದೇ ಹೊರತು , ತಮ್ಮ ವ್ಯಯಕ್ತಿಕ ಅಭಿಪ್ರಾಯಗಳನ್ನು ಸಮಾಜದ ಮೇಲೆ ಹೇರಿ, ಸಮುದಾಯದ ದಿಕ್ಕು ತಪ್ಪಿಸುವುದಲ್ಲ.


ಒಬ್ಬ ಲೇಖಕ ಅಥವಾ ಒಬ್ಬ ಪತ್ರಕರ್ತನಿಗೆ ಪ್ರವಾದಿಯಂತೆ ಮಾತನಾಡುವುದು ಅಥವಾ ಉಪದೇಶ ನೀಡುವುದು ಅತಿ ಸುಲಭ. ಆದರೆ, ನಾವು ಆಡುವ ಮಾತಿಗೂ, ಬರೆಯುವ ಪ್ರತಿ ಅಕ್ಷರಕ್ಕೂ ಬದುಕಿನ  ನಡುವಳಿಕೆಗಳ ಬದ್ದತೆ ಅಥವಾ ನೈತಿಕತೆ ಇಲ್ಲದಿದ್ದರೆ, ಅದು ಆತ್ಮವಂಚನೆಯ ಕ್ರಿಯೆಯಾಗುತ್ತದೆ. ಸಮಾಜವನ್ನು ಮಾತಿನಿಂದ ಮತ್ತು ಬರೆವಣಿಗೆಯಿಂದ ನಂಬಿಸುವಷ್ಟು ಸುಲಭವಾಗಿ ನಮ್ಮೊಳಗಿನ ಆತ್ಮಸಾಕ್ಷಿಯನ್ನು ನಂಬಿಸಲು ಸಾದ್ಯವಿಲ್ಲ.
ಇಂದು ನಮ್ಮ ಕಣ್ಣೆದುರು ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ಭವಿಷ್ಯ, ವಾಸ್ತು ಕುರಿತ ಜಾಹಿರಾತು, ಹನುಮಾನ್ ತಾಯುತ, ಬಣ್ಣದ ಹರಳಿನ ಉಂಗುರ ಇವುಗಳನ್ನು ಅನ್ನ ತಿನ್ನುವ ಯಾವ ಮನುಷ್ಯನೂ ಸಮರ್ಥಿಸಲಾರ. ಇಂತಹ ಸಂಧಿಗ್ಧ ಸ್ಥಿತಿಯಲ್ಲಿ ನಂಬಿಕೆ ಮತ್ತು ಆಚರಣೆಯ ನೆಪದಲ್ಲಿ ಮಡೆಸ್ನಾನ, ಅಡ್ಡಪಲ್ಲಕಿಯಂತಹ ಅಮಾನವೀಯ ನಡುವಳಿಕೆಗಳನ್ನು ಹೇಗೆ ತಾನೆ ಸಮರ್ಥಿಸಲು ಸಾಧ್ಯ?

ಕೇವಲ ಬೆರಳಿಕೆಯಷ್ಟು ಜನರ ತಂಡ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ದೂರುತ್ತಿರುವ ಮಂದಿ, ಈ ಶಿಫಾರಸ್ಸಿನ ಟಿಪ್ಪಣಿ ಸಿದ್ಧವಾಗುವ ಮುನ್ನ  ತಜ್ಙರ ಸಮಿತಿ ಎಷ್ಟು ಜನರ ವಿಶೇಷವಾಗಿ, ವಿವಿಧ ರಂಗದ ತಜ್ಙರ ಸಲಹೆ ಕೇಳಿದೆ ಎಂಬುದನ್ನು ಮನಗಂಡಿದ್ದಾರಾ? ಅಥವಾ ಸಮಿತಿ ಯಾರ ಬಳಿ ಸಲಹೆ ಕೇಳಿದ್ದಾರೆ ಎಂಬುದನ್ನು ಧೃಡಪಡಿಸಿಕೊಂಡಿದ್ದಾರಾ? ಅದೂ ಇಲ್ಲ.
ಜನರನ್ನು ಉದ್ರೇಕಿಸುವ ಹಾಗೆ ನಾವು ಮನೆಯಲ್ಲಿ ಪೂಜೆ ಮಾಡುವಂತಿಲ್ಲ, ಮನೆ ಮುಂದೆ ರಂಗೊಲಿ ಬಿಡುವಂತಿಲ್ಲ ಎಂಬಂತಹ  ಟಿಪ್ಪಣಿಯಲ್ಲಿ ಇಲ್ಲದ ಅಂಶಗಳನ್ನು ಎತ್ತಿಕೊಂಡು ಜನರ ದಿಕ್ಕು ತಪ್ಪಿಸುವುದನ್ನು ಮಾದ್ಯಮದ ವೃತ್ತಿ  ಎಂದು ಯಾವೊಬ್ಬ ನಾಗರೀಕ ಕರೆಯುವುದಿಲ್ಲ.

ಮಾಧ್ಯಮಗಳ ಭಾಷೆ ಬದಲಾಗದಿದ್ದರೆ, ಪತ್ರಕರ್ತರಿಗೂ ಮತ್ತು ರಾಜಕಾರಣಿಗಳ ಭಾಷೆಗಳ ನಡುವೆ  ಇರುವ ಗಡಿರೇಖೆ ಅಳಿಸಿಹೋಗುತ್ತದೆ. ಈ ಎಚ್ಚರದ ಪ್ರಜ್ಙೆ ಪತ್ರಕರ್ತನಿಗೆ ಕಾಡದಿದ್ದರೆ, ಅವನನ್ನು ಸಮಾಜ ಪತ್ರಕರ್ತ ಎಂದು ಗುರುತಿಸುವುದಿಲ್ಲ, ಬದಲಾಗಿ. ಒಂದು ರಾಜಕೀಯ ಪಕ್ಷದ ಅಥವಾ ಒಂದು ಧಾರ್ಮಿಕ ಸಮುದಾಯದ ಭಟ್ಟಂಗಿ ಎಂದು ಗುರುತಿಸುತ್ತದೆ. ಓರ್ವ ಪತ್ರಕರ್ತನಾಗಿ, ಲೇಖಕನಾಗಿ ನನ್ನ ಪಾಲಿಗೆ ಇಂತಹ ಅಪವಾದ ಹೊರುವ ಬದಲು, ಹುಟ್ಟಿದೂರಿಗೆ ಹೋಗಿ ನೇಗಿಲು, ಗುದ್ದಲಿ ಹಿಡಿಯುವುದು ವಾಸಿ ಎನಿಸಿದೆ.

ಈ ಕೆಳಗೆ ತಜ್ಙರ ತಂಡದ ಶೀಫಾರಸ್ಸಿನ ಅಂಶಗಳನ್ನು ನೀಡಲಾಗಿದೆ. ಈ ಮಾಹಿತಿ ನೀಡಿದ ಕಿರಿಯ ಮಿತ್ರ ಹರ್ಷಕುಮಾರ್ ಖುಗ್ವೆಗೆ ನಾನು ಅಭಾರಿಯಾಗಿದ್ದೇನೆ.
ಪತ್ರಕರ್ತ ಮಿತ್ರ ಹರ್ಷಕುಮಾರ್ ಕುಗ್ವೆ  ನೀಡಿರುವ ಕರಡು ವಿಧೇಯಕದ ಶಿಫಾರಸ್ಸುಗಳ ಟಿಪ್ಪಣಿಯನ್ನು ಇಲ್ಲಿ ನೀಡಲಾಗಿದೆ.

ಈ ವಿಧೆಯಕದಲ್ಲಿ ಕಾಯ್ದೆಯ ಕರಡು ಮತ್ತು ಪರಿಕಲ್ಪನಾ ಟಿಪ್ಪಣಿಗಳಿವೆ. ಕಾಯ್ದೆಯ ಕರಡನ್ನು ರಾಷ್ಟ್ರೀಯ ಕಾನೂನು ಶಾಲೆಯ ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರದ ಕಾನೂನು ತಜ್ಞರು ರಚಿಸಿದ್ದರೆ ಪರಿಕಲ್ಪನಾ ಟಿಪ್ಪಣಿಯನ್ನು ಈ ಸಂಸ್ಥೆಯ ಉಪಕ್ರಮದಲ್ಲಿ ರಚಿಸಲಾದ, ರಾಜ್ಯದ ಹಿರಿಯ ಚಿಂತಕರು, ಸಾಹಿತಿಗಳು, ನ್ಯಾಯವಾದಿಗಳು, ಜಾನಪದ ತಜ್ಞರು, ವಿಚಾರವಾದಿಗಳನ್ನೊಳಗೊಂಡ ಸಮಿತಿಯಿಂದ ರೂಪಿಸಲಾಗಿದೆ. ಅಲ್ಲದೆ ನಾಡಿನ ವಿವಿಧೆಡೆಗಳಿಂದ ಬಂದ ಸಲಹೆ, ಅಭಿಪ್ರಾಯಗಳನ್ನು ಒಳಗೊಂಡಿದೆ. 
·                                                                                                                                                                                                                                                                                                                     - ವಿಧೇಯಕದ ಪ್ರಕಾರ ಮೂಢನಂಬಿಕೆ ಆಚರಣೆ ಎಂದರೆ, ಇನ್ನೊಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ ಕಾಯಿಲೆಯನ್ನು ಅಥವಾ ಸಂಕಟವನ್ನು ಪರಿಹರಿಸುವ ಭರವಸೆ ನೀಡಿ ಅಥವಾ ಅವರಿಗೆ ಲಾಭ ಉಂಟಾಗುತ್ತದೆಂದು ತಿಳಿಸಿ ಅಥವಾ ಪ್ರತಿಕೂಲ ಪರಿಣಾಮ ಉಂಟಾಗುತ್ತದೆಂದು ಹೆದರಿಸಿ ಅತಿಮಾನುಷ ಶಕ್ತಿಯನ್ನು ಆಹ್ವಾನಿಸುವ ಮೂಲಕ ಅವರಿಗೆ- ತೀವ್ರತರವಾದ ದೈಹಿಕ ಅಥವಾ ಮಾನಸಿಕ ಹಾನಿಯುಂಟು ಮಾಡುವ ಅಥವಾ (ಬಿ) ಹಣಕಾಸಿನ ಅಥವಾ ಯಾವುದೇ ಲೈಂಗಿಕ ಶೋಷಣೆಯನ್ನುಂಟು ಮಾಡುವ ಅಥವಾ (ಸಿ) ಮನುಷ್ಯನ ಘನತೆಗೆ ಘಾಸಿಯುಂಟುಮಾಡುವ ಯಾವುದೇ ಕೃತ್ಯ;
-
ಮೂಢನಂಬಿಕೆ ಆಚರಣೆಯನ್ನು ಉತ್ತೇಜಿಸುವ, ಪ್ರಸಾರ ಮಾಡುವ ಅಥವಾ ನಡೆಸುವ ಯಾರೇ ವ್ಯಕ್ತಿಯು ಒಂದು ವರ್ಷಕ್ಕೆ ಕಡಿಮೆಯಲ್ಲದ ಅವಧಿಯ ಆದರೆ ೫ ವರ್ಷಗಳಿಗೆ ವಿಸ್ತರಿಸಬಹುದಾದ ಕಾರಾವಾಸದಿಂದ ಅಥವಾ ಹತ್ತು ಸಾವಿರ ರೂಪಾಯಿಗಳಿಗೆ ಕಡಿಮೆಯಿಲ್ಲದ ಆದರೆ ಐವತ್ತು ಸಾವಿರ ರೂಪಾಯಿಗಳಿಗೆ ವಿಸ್ತರಿಸಬಹುದಾದ ಜುಲ್ಮಾನೆಯಿಂದ ಅಥವಾ
ಇವೆರಡರಿಂದಲೂ ದಂಡಿತನಾಗತಕ್ಕದ್ದು.
-
ಬಲಿಯಾದ ವ್ಯಕ್ತಿಯ ಸಮ್ಮತಿಯು ಈ ಪ್ರಕರಣದ ಅಡಿಯಲ್ಲಿ ಪ್ರತಿರಕ್ಷೆಯಾಗತಕ್ಕದ್ದಲ್ಲ.
-
ಬಲಿಯಾದ ವ್ಯಕ್ತಿ ಎಂದರೆ ಮೂಢನಂಬಿಕೆ ಆಚರಣೆಯನ್ನು ಮಾಡಿದುದರಿಂದಾಗಿ ಯಾವ ವ್ಯಕ್ತಿಗೆ ತೀವ್ರತರವಾದ ದೈಹಿಕ ಅಥವಾ ಮಾನಸಿಕ ಹಾನಿಯುಂಟಾಗಿದೆಯೋ, ಯಾರು ಆರ್ಥಿಕವಾಗಿ ಅಥವಾ ಲೈಂಗಿಕವಾಗಿ ಶೋಷಣೆಗೆ ಒಳಗಾಗಿರುವನೋ ಅಥವಾ ಯಾರ ಘನತೆಗೆ ಧಕ್ಕೆಯುಂಟಾಗಿದೆಯೋ ಅಂಥ ವ್ಯಕ್ತಿ;

ವಿಧೇಯಕವು ಕೆಳಕಂಡ ಕೃತ್ಯಗಳನ್ನು ಅಪರಾಧಗಳೆಂದು ಹೆಸರಿಸಿದೆ.
ಈ ಮುಂದಿನ ಅಪರಾಧಗಳು ಸಂಜ್ಞೇಯ ಅಪರಾಧಗಳಾಗಿರತಕ್ಕದ್ದು:
-
ಲಾಭಕ್ಕಾಗಿ ಅಥವಾ ದೈವವನ್ನು ಸಂಪ್ರೀತಗೊಳಿಸುವುದಕ್ಕಾಗಿ ನರಬಲಿ ಕೊಡುವುದು;
-
ನರಬಲಿಯಲ್ಲಿನ ನಂಬಿಕೆಯನ್ನು ಹರಡುವುದು ಅಥವಾ ನರಬಲಿ ಕೊಡುವಂತೆ
ಇತರರನ್ನು ಪ್ರೇರೇಪಿಸುವುದು.
-
ಕಾಯಿಲೆಯನ್ನು ಗುಣಪಡಿಸಲು ಪ್ರಯತ್ನಿಸುವುದು ಅಥವಾ ಹಿಂಸಾತ್ಮಕ ರೀತಿಯಿಂದ
ಭೂತೋಚ್ಚಾಟನೆಯನ್ನು ನಡೆಸುವುದು.
-
ಭಾರತ ದಂಡ ಸಂಹಿತೆ, ೧೮೬೦ರ ೨೯೭ನೇ ಪ್ರಕರಣದ ಉಲ್ಲಂಘನೆಯಲ್ಲಿ ಅಘೋರಿ,
ಸಿದ್ದುಭುಕ್ತಿ ಅಥವಾ ಸದೃಶ ಆಚರಣೆಯನ್ನು ನೆರವೇರಿಸುವುದು;
-
ಅಂಥ ಆಚರಣೆಗಳಲ್ಲಿ ತೊಡಗುವಂತೆ ಇತರರನ್ನು ಒತ್ತಾಯಿಸುವುದು; ಅಥವಾ
-
ಅಂಥ ಆಚರಣೆಗಳಿಂದ ಪಡೆಯಲಾಗಿದೆಯೆನ್ನಲಾದ ಶಕ್ತಿಯ ಭಯವನ್ನು ಉಪಯೋಗಿಸಿಕೊಂಡು
ಆರ್ಥಿಕವಾಗಿ ಮತ್ತು ಲೈಂಗಿಕವಾಗಿ ವ್ಯಕ್ತಿಗಳ ಶೋಷಣೆ ಮಾಡುವುದು;
-
ದೈವಿಕ ಅಥವಾ ಅಧ್ಯಾತ್ಮಿಕ ಶಕ್ತಿ ಸ್ವಾಧೀನವಾಗಿದೆಯೆಂದು ಘೋಷಿಸುವುದು ಮತ್ತು ಅಂಥ
ಘೋ?ಣೆಯನ್ನು ಬಳಸಿಕೊಂಡು,
-
ಹಣವನ್ನು ಪಡೆದು ಪರಿಹಾರಗಳ ಅಥವಾ ಲಾಭಗಳ ಭರವಸೆಯನ್ನು ಕೊಡುವುದು;
-
ಅಥವಾ ವೈಯಕ್ತಿಕ ಲಾಭಕ್ಕಾಗಿ ದೈವದ ಕೋಪದ ಅಥವಾ ಆತ್ಮದ ಖಂಡನೆಯ ಭಯವನ್ನು
ಹುಟ್ಟಿಸುವುದು;
-
ಹಣಕ್ಕಾಗಿ ಅಥವಾ ಇಲ್ಲವೇ ಉಚಿತವಾಗಿ ವಾಮಾಚಾರವನ್ನು (ಬ್ಲ್ಯಾಕ್ ಮ್ಯಾಜಿಕ್) ಅಥವಾ
ಮಾಟವನ್ನು ಇತರ ವ್ಯಕ್ತಿಗಳಿಗೆ ತೊಂದರೆಯುಂಟು ಮಾಡುವ ಉದ್ದೇಶದಿಂದ ಮತ್ತು ಅವರಿಗೆ
ತೀವ್ರವಾಗಿ ಭಯವುಂಟು ಮಾಡುವಂತೆ ಬಳಸುವುದು ಅಥವಾ ಮಾಡುವುದು;
-
ದೇಹದೊಳಗೆ ಚುಚ್ಚಿಕೊಳ್ಳುವ ಕೊಕ್ಕೆಯಿಂದ ನೇತಾಡುವಂತಹ (ಸಿಡಿ) ಅಥವಾ ದೇಹದೊಳಗೆ
ತೂರಿಸಿಕೊಂಡಿರುವ ಕೊಕ್ಕೆಯಿಂದ ರಥವನ್ನು ಎಳೆಯುವಂತಹ ಸ್ವ ದಂಡನೆಯಿಂದ
ಗಾಯಗೊಳ್ಳುವ ಮತಾಚರಣೆಗಳನ್ನು ಆಚರಿಸುವಂತೆ ಒತ್ತಾಯಿಸುವುದು, ಹರಡುವುದು
ಅಥವಾ ಅದಕ್ಕೆ ಅನುಕೂಲ ಕಲ್ಪಿಸುವುದು;
-
ಮಕ್ಕಳ ಕಾಯಿಲೆಯನ್ನು ವಾಸಿ ಮಾಡುವ ಹೆಸರಿನಲ್ಲಿ ಅವರನ್ನು ಮುಳ್ಳುಗಳ ಮೇಲೆ ಅಥವಾ
ಎತ್ತರದಿಂದ ಎಸೆಯುವ ಮೂಲಕ ಅವರನ್ನು ಹಾನಿಗೊಳಪಡಿಸುವಂತಹ ಆಚರಣೆಗಳನ್ನು
ಒತ್ತಾಯಿಸುವುದು, ಹರಡುವುದು ಮತ್ತು ಅಂತಹ ವಾತಾವರಣವನ್ನು ಕಲ್ಪಿಸುವುದು;
(-
ಮಹಿಳೆಯರ ವಿರುದ್ಧ ಮೂಢನಂಬಿಕೆ ಆಚರಣೆಗಳು;-
-
ಋತುಮತಿಯಾದ ಅಥವಾ ಗರ್ಭಿಣಿ ಮಹಿಳೆಯರನ್ನು ಒತ್ತಾಯಪೂರ್ವಕವಾಗಿ
ಒಂಟಿಯಾಗಿರಿಸುವುದು, ಗ್ರಾಮದೊಳಗೆ ಬಾರದಂತೆ ನಿ?ಧಿಸುವುದು ಅಥವಾ ಬೇರೆ ಇರಿಸಲು
ಅನುಕೂಲ ಕಲ್ಪಿಸುವುದು.
-
ಸಮಾಜದ ದುರ್ಬಲ ವರ್ಗಗಳ ಮಹಿಳೆಯರ ಮೇಲೆ ಬಣ್ಣದ ನೀರನ್ನು ಎರಚುವ, ಓಕುಳಿ,
ಮೂಲಕ ಅವರನ್ನು ಅವಮಾನಗೊಳಿಸುವುದು ಅಥವಾ ಅವರ ಘನತೆಗೆ ಧಕ್ಕೆಯುಂಟು
ಮಾಡುವುದು.
-
ಪೂಜೆ ಅಥವಾ ಇತರ ಯಾವುದೇ ಹೆಸರಿನಲ್ಲಿ ಅವರನ್ನು ಬೆತ್ತಲೆಯಾಗಿ ಪ್ರದರ್ಶಿಸುವುದು,
ಉದಾಹರಣೆಗೆ ಬೆತ್ತಲೆ ಸೇವೆ ಅಂಥ ಅಮಾನವೀಯ ಮತ್ತು ಅವಮಾನಗೊಳಿಸುವ
ಆಚರಣೆಗಳಿಗೆ ಮಹಿಳೆಯರನ್ನು ಒಳಪಡಿಸುವುದು.
-
ಗರ್ಭಿಣಿಯರನ್ನಾಗಿಸುವುದೂ ಸೇರಿದಂತೆ ಸಾಮಾಜಿಕ ಅಥವಾ ವೈಯಕ್ತಿಯ ಲಾಭವನ್ನು
ಉಂಟು ಮಾಡುವ ಭರವಸೆಯೊಂದಿಗೆ ಅತಿಮಾನುಷ ಶಕ್ತಿಯನ್ನು ಆಹ್ವಾನಿಸುವ ಮೂಲಕ
ಮಹಿಳೆಯರನ್ನು ಲೈಂಗಿಕವಾಗಿ ಶೋಷಣೆಗೆ ಒಳಪಡಿಸುವುದು;
-
ಸಾರ್ವಜನಿಕ ಆರೋಗ್ಯಕ್ಕೆ ಹಾನಿಯುಂಟು ಮಾಡುವಂಥ, ಕತ್ತನ್ನು ಕಚ್ಚುವ ಮೂಲಕ
ಪ್ರಾಣಿಗಳನ್ನು ಕೊಲ್ಲುವ ಆಚರಣೆಗಳನ್ನು (ಗಾವು) ನೆರವೇರಿಸುವಂತೆ ಯಾರೇ ವ್ಯಕ್ತಿಯನ್ನು
ಒತ್ತಾಯಿಸುವುದು;
-
ಮಾನವ ಘನತೆಯನ್ನು ಉಲ್ಲಂಘಿಸುವಂತಹ ಮಡೆ ಸ್ನಾನ ಅಥವ ಸದೃಶ ಆಚರಣೆಗಳಿಗೆ
ಅನುಕೂಲ ಕಲ್ಪಸುವುದು;
-
ಮೂಢನಂಬಿಕೆಯ ಹೆಸರಿನಲ್ಲಿ ಜಾತಿ ಅಥವಾ ಲಿಂಗದ ಆಧಾರದ ಮೇಲೆ ತಾರತಮ್ಯ
ಕಲ್ಪಿಸುವುದು;
-
ಪಾದರಕ್ಷೆಗಳನ್ನು ಅವನ/ ಅವಳ ತಲೆಯ ಮೇಲೆ ಒಯ್ಯುವ ಅವಮಾನಕರ ಆಚರಣೆಗಳನ್ನು
ನೆರವೇರಿಸುವಂತೆ ಸಮಾಜದ ದುರ್ಬಲ ವರ್ಗಳಿಗೆ ಸೇರಿದ ಯಾರೇ ವ್ಯಕ್ತಿಯನ್ನು
ಒತ್ತಾಯಿಸುವುದು;
-
ಆಹಾರ ವಿತರಣೆ ಮಾಡುವಾಗ ಜಾತಿಯ ಆಧಾರದ ಮೇಲೆ ಪಂಕ್ತಿ ಬೇಧ ಮಾಡುವಂತಹ
ಆಚರಣೆಗಳನ್ನು ಮಾಡುವುದು;
೨. ಈ ಮುಂದಿನ ಅಪರಾಧಗಳು ಸಂಜ್ಷೇಯವಲ್ಲದ ಅಪರಾಧಗಳಾಗಿರತಕ್ಕದ್ದು,-
-
ಯಾರೇ ವ್ಯಕ್ತಿಯ ಜನನದ ಸಮಯ, ಸ್ಥಳದ ಆಧಾರದ ಮೇಲೆ ಅವನಿಗೆ ಕಳಂಕ
ಹಚ್ಚುವುದಕ್ಕೆ ಅಥವಾ ಅವನನ್ನು ತೆಗಳುವುದಕ್ಕೆ;
-
ಭವಿ?ವಾಣಿ ನಿಜವಾಗುತ್ತದೆಂದು ನಂಬಿಸಿ ಅವಮಾನಕರ ಆಚರಣೆಗಳನ್ನು ವ್ಯಕ್ತಿಗಳಿಂದ
ಮಾಡಿಸುವುದಕ್ಕೆ, ಅಥವಾ
-
ವ್ಯಕ್ತಿಗಳಿಗೆ ತೀವ್ರ ಹಣಕಾಸು ಷ್ಟ ಉಂಟಾಗುವುದಕ್ಕೆ
ಕಾರಣವಾಗುವ ಹಾನಿಕರ ಭವಿಷ್ಯ ನುಡಿಯುವುದು
-
ಜ್ವಾಲೆಯನ್ನು ಬರೀ ಕೈಗಳಿಂದ ಮುಟ್ಟುವಂತೆ ಒತ್ತಾಯಿಸುವ ರೀತಿಯ ದೈಹಿಕ ಅಥವಾ
ಮಾನಸಿಕ ಹಾನಿಗೆ ಒಳಪಡಿಸುವ ಮೂಲಕ ಮಾಡುವ ಯಾರೇ ವ್ಯಕ್ತಿಯ ಅಪರಾಧವನ್ನು
ಅಥವಾ ನಿರಪರಾಧಿತ್ವವನ್ನು ಘೋಷಿಸುವುದು;

ವಿಧೇಯಕವು ದೈವನಂಬಿಕೆ, ಆಚರಣೆ ಮತ್ತು ಮೂಢನಂಬಿಕೆಗಳನ್ನು ಕೆಳಕಂಡಂತೆ ಪ್ರತ್ಯೇಕಗೊಳಿಸುತ್ತದೆ.
ಮೂಢನಂಬಿಕೆಗಳನ್ನು ವಿರೋಧಿಸುವುದೆಂದರೆ, ಜನರ ಧಾರ್ಮಿಕ ನಂಬಿಕೆಗಳನ್ನು ಅಲ್ಲಗಳೆಯುವುದಲ್ಲ, ಹೀನಾಯಿಸುವುದಲ್ಲ. ಜನಸಾಮಾನ್ಯರು ತಮ್ಮ ಬದುಕಿನ ಅನುಭವಗಳಿಂದ, ಸುತ್ತಮುತ್ತಲ ಸಾಮಾಜಿಕ ಪ್ರೇರಣೆಗಳಿಂದ ಹಾಗೂ ಪ್ರಚೋದನೆಗಳಿಂದ ಹಲವಾರು ನಂಬಿಕೆಗಳನ್ನು ಬೆಳೆಸಿಕೊಂಡಿರುತ್ತಾರೆ. ನಂಬಿಕೆಗಳಿಂದ ಆಚರಣೆಗಳು ಹುಟ್ಟಿಕೊಳ್ಳುತ್ತವೆ. ನಂಬಿಕೆಗಳು ಮೂಲ ಅಸ್ತಿತ್ವ ಕಳೆದುಕೊಂಡಾಗ ಮೂಢನಂಬಿಕೆಗಳಾಗುವುದು ಇನ್ನೊಂದು ಹಂತ. ಸಾಮಾಜಿಕ ಅಸಮಾನತೆ, ವೈಚಾರಿಕ ಜ್ಞಾನದ ಅಲಭ್ಯತೆ, ಜ್ಞಾನ ಸಂವಹನದ ಕೊರತೆ ಮುಂತಾದ ಹಲವಾರು ಕಾರಣಗಳಿಂದ ಕೆಲವು ಮೂಢಾಚಾರಗಳು ಕಾರ್ಯಕಾರಣ ಸಂಬಂಧವಿಲ್ಲದೆಯೇ ನಂಬುವಂತೆ ಮಾಡುತ್ತವೆ. ಇಂಥ ನಂಬಿಕೆಗಳ ಮೇಲೆ ರೂಢಿಗೆ ಬಂದ ಆಚರಣೆಗಳು ಅರ್ಥಹೀನವಾಗಿರುತ್ತವೆ. ಇವು ಅಜ್ಞಾನವನ್ನು, ಅಂಧಶ್ರದ್ಧೆಯನ್ನು ಹೇರುವ ಮತ್ತು ಪೋಷಿಸುವ ಶಕ್ತಿಗಳ ಕೈಯಲ್ಲಿ ದುರ್ಬಳಕೆಯಾಗುತ್ತವೆ.
ಮೂಢನಂಬಿಕೆ ಮತ್ತು ಧಾರ್ಮಿಕ ಶ್ರದ್ಧೆ ನಡುವಿನ ಅಂತರ ತೀರಾ ತೆಳುವಾದದ್ದಾದರೂ ಇವೆರಡರ ನಡುವಿನ ವ್ಯತ್ಯಾಸವನ್ನು ಗುರುತಿಸುವ ಕೆಲಸ ಅತ್ಯಂತ ಜರೂರಾಗಿ ಆಗಬೇಕಿದೆ. ಹೀಗೆ ಗರುತಿಸಲು ನಮಗೆ ಸಂವಿಧಾನಬದ್ಧವಾದ ಮೂಲಭೂತ ಕರ್ತವ್ಯಗಳು ಮತ್ತು ಮಾನವ ಹಕ್ಕುಗಳ ಪರಿಕಲ್ಪನೆಗಳು ಹಾಗೂ ನಮ್ಮ ಬಹುಮುಖಿ ಸಂಸ್ಕೃತಿಯ ನೆಲೆಗಳು ಒಂದು ವಿಶಾಲ ಭಿತ್ತಿಯನ್ನು ಒದಗಿಸಬಹುದು. ಯಾವ ಮೂಢನಂಬಿಕೆಯ ಆಚರಣೆಗಳು ದೈಹಿಕ ಮತ್ತು ಮಾನಸಿಕ ಹಿಂಸೆಗೆ ಕಾರಣವಾಗುತ್ತವಯೋ, ಮಾನವನ ಸಾಮಾಜಿಕ ಘನತೆ-ಗೌರವಕ್ಕೆ ಧಕ್ಕೆಯನ್ನುಂಟುಮಾಡುತ್ತವೆಯೋ ಹಾಗೂ ಆರ್ಥಿಕವಾಗಿ ಸಹಮಾನವರನ್ನು ಶೋಷಿಸಲು ವಂಚಕ ಶಕ್ತಿಗಳಿಂದ ಬಳಕೆಯಾಗುತ್ತವೆಯೋ, ಅವುಗಳನ್ನು ಈ ವಿಧೇಯಕದ ವ್ಯಾಪ್ತಿಯೊಳಗೆ ತರಬಹುದು.

ಜ್ಯೋತಿಷಿಗಳು, ಮುಲ್ಲಾಗಳು, ಬಾಬಾಗಳು, ಪಾದ್ರಿಗಳು, ಪುರೋಹಿತರು ಹೀಗೆ ಪಂಚಾಂಗವನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿ ಭವಿಷ್ಯ ಹೇಳುತ್ತೇವೆಂದು ಜನರನ್ನು ಶೋಷಿಸುವ ಮತ್ತು ಮೌಢ್ಯದ ಬೀಜ ಬಿತ್ತುವ ಎಲ್ಲರನ್ನೂ ಈ ಕಾಯ್ದೆಯಡಿ ಅಪರಾಧಿಗಳೆಂದು ಘೋಷಿಸಬಹುದಾಗಿದೆ.

ಶುಕ್ರವಾರ, ನವೆಂಬರ್ 1, 2013

ಪ್ರತಿಮೆ ಮತ್ತು ಭವನಗಳೆಂಬ ಹುಸಿ ಬಸುರಿನ ಸಂಭ್ರಮಗಳು


ಭಾರತದ ಮುಂದಿನ ಭಾವಿ ಪ್ರಧಾನಿ ಎಂದು ಸಂಘಪರಿವಾರದಿಂದ ಪ್ರತಿಬಿಂಬಿಸಲ್ಪಡುತ್ತಿರುವ ನರೇಂದ್ರಮೋದಿಯವರು ಕಳೆದ ಅಕ್ಟೋಬರ್ 31 ರಂದು ಭಾರತದ ಅತಿ ದೊಡ್ಡ ಪ್ರತಿಮೆಯಾಗಿ ಗುಜರಾತ್ ನರ್ಮದಾ ಸರೋವರದ ಬಳಿ ಸರ್ದಾರ್ ವಲ್ಲಬಾಯ್ ಪಟೇಲ್ ಅವರ ಪ್ರತಿಮೆ ಸ್ಥಾಪನೆಗೆ ಮುಂದಾಗಿದ್ದಾರೆ. ಇತ್ತೀಚೆಗೆ ಭಾರತದಲ್ಲಿ ಪ್ರತಿಮೆಗಳ ನಿರ್ಮಾಣದಲ್ಲೂ ಸಹ ಪೈಪೋಟಿ ಏರ್ಪಟ್ಟಿದೆ. ಗದಗ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಮುಂಭಾಗ ಇರುವ ಕೆರೆಯೊಂದರಲ್ಲಿ ಬೃಹತ್ ಬಸವೇಶ್ವರ ಪ್ರತಿಮೆ ಕೂಡ ನಿರ್ಮಾಣವಾಗುತ್ತಿದೆ. ಈಗ ಚಿತ್ರದುರ್ಗದ ಮುರುಘಾಮಠದ ಶರಣರು ಕೂಡ ಇಂತಹದ್ದೇ ಒಂದು ಕಾರ್ಯಕ್ಕೆ ಮುಂದಾಗಿದ್ದಾರೆ.

ದೇಶದ ಹಲವಾರು ನಗರಗಳಲ್ಲಿ ಈಗಾಗಲೇ ಎದ್ದು ನಿಂತಿರುವ ನಾಯಕರ ಪ್ರತಿಮೆಗಳಿಂದಾಗಿ ದಿನೇ ದಿನೇ ಸೃಷ್ಟಿಯಾಗುತ್ತಿರುವ ಬಿಕ್ಕಟ್ಟುಗಳಿಗೆ,  ಮತ್ತು ಸಂಘರ್ಷಗಳಿಗೆ  ಲೆಕ್ಕವಿಲ್ಲ. ಇಡೀ ದೇಶಾದ್ಯಂತ ಕಿಡಿಗೇಡಿಗಳ ಮತ್ತು ಮತಾಂಧರ ದುಷ್ಕøತ್ಯಕ್ಕೆ ಅತಿ ಹೆಚ್ಚು ಬಲಿಯಾದ ನಾಯಕರುಗಳ ಪ್ರತಿಮೆಗಳಿಂದರೆ, ಗಾಂಧಿ ಮತ್ತು ಅಂಬೇಡ್ಕರ್ ಪ್ರತಿಮೆಗಳು. ( ತಮಿಳುನಾಡಿನಲ್ಲಿ ಹಲವೆಡೆ ಅಂಬೇಡ್ಕರ್ ಪ್ರತಿಮೆಗೆ ಕಬ್ಬಿಣದ ಸಲಾಕೆಗಳ ಪಂಜರದ ರಕ್ಷಣೆ ಒದಗಿಸಲಾಗಿದೆ.) ನಾವು ಬದುಕುತ್ತಿರುವ ಈ ಇಪ್ಪತ್ತೊಂದನೇಯ ಶತಮಾನದಲ್ಲಿ ತಮ್ಮ ತ್ಯಾಗ ಮತ್ತು ಬಲಿದಾನಗಳ ಮೂಲಕ ಚಿರಸ್ಮರಣೀಯರಾದ ಮಹಾತ್ಮರನ್ನು ನೆನಯಲು ಪ್ರತಿಮೆಗಳು ಅವಶ್ಯಕವೆ? ಅವರನ್ನು ನೆನೆಯಲು, ಅವರ ಆದರ್ಶ ಮತ್ತು ಚಿಂತನೆಗಳನ್ನು ಜೀವಂತವಿಡಲು ನಮಗೆ ಪರ್ಯಾಯ ಮಾರ್ಗಗಳಿಲ್ಲವೆ? ಇವು ನಾವೀಗ ಪ್ರಶ್ನಿಸಿಕೊಳ್ಳಲೇಬಾಕಾದ ಪ್ರಶ್ನೆಗಳಿವು.



ಇತಿಹಾಸದಲ್ಲಿ ತಮ್ಮ ಭೂಮಿ, ನೆಲದ ಸಂಸ್ಕøತಿ, ಅಥವಾ ತಮ್ಮನ್ನಾಳಿದ ದೊರೆಯ ರಕ್ಷಣೆಗಾಗಿ, ತಮ್ಮ ಜೀವವನ್ನು ಬಲಿದಾನ ಮಾಡಿದ ಮಹಾತ್ಮರ ನೆನಪಿಗಾಗಿ, ಅಕ್ಷರ ಸಂಸ್ಕøತಿ ಇಲ್ಲದಿದ್ದ ಆ ಕಾಲದಲ್ಲಿ ಅವರ ಸಾಧನೆಗಳನ್ನು ಕೊಂಡಾಡಲು ಮತ್ತು ನೆನಪಿನಲ್ಲಿಡಲು ವೀರಗಲ್ಲು, ಮಾಸ್ತಿ ಕಲ್ಲು ಗಳು ಅಸ್ತಿತ್ವಕ್ಕೆ ಬಂದವು. ಆನಂತರ ಸ್ಮಾರಕಗಳು, ಸಮಾಧಿಗಳ ಪರಿಕಲ್ಪನೆ ಮೂಡಿಬಂದಿತು. ಭಾರತಕ್ಕೆ ಬ್ರಿಟೀಷರು ಆಗಮನವಾದ ನಂತರ ಒಂದು ರೀತಿಯಲ್ಲಿ ಅವರ ಕೊಡುಗೆಯಂತಿರುವ ಪ್ರತಿಮೆಗಳ  ಸಂಸ್ಕøತಿ ನಮ್ಮನ್ನು ಆವರಿಸಿಕೊಂಡಿತು. ಇದು ಎಲ್ಲಿಯವರೆಗೆ ತಲುಪಿದೆಯೆಂದರೆ, ಮುಂದಿನ ದಿನಗಳಲ್ಲಿ ಇಡೀ ದೇಶದ ನಗರಗಳು ಪ್ರತಿಮೆಗಳಿಂದಾಗಿ, ಮುಸ್ಲಿಮರ ಅಥವಾ ಕ್ರೈಸ್ತ ಸಮುದಾಯದ  ರುದ್ರಭೂಮಿಯಂತೆ ಕಂಡರೂ ಆಶ್ಚರ್ಯವೇನಿಲ್ಲ.
ಇತ್ತೀಚೆಗೆ ನಮ್ಮ ಸರ್ಕಾರಗಳಿಗೆ ಮತ್ತು ರಾಜಕೀಯ ನಾಯಕರಿಗೆ ಪ್ರತಿಮೆಗಳ ಜೊತೆಗೆ, ಹಲವು ನಾಯಕರ  ನೆನಪಿನಲ್ಲಿ ಭವನಗಳನ್ನು ರೂಪಿಸುವ ಮಾನಸಿಕ ಕಾಯಿಲೆಯೊಂದು ಅಂಟಿಕೊಂಡಿದೆ. ಜಿಲ್ಲೆಗೊಂದು ಗಾಂಧಿಭವನ, ಅಂಬೇಡ್ಕರ್ ಭವನ, ಕನ್ನಡಭವನಗಳಾದವು, ಈಗ ಜಾತಿ ಸಮುದಾಯಗಳನ್ನು ಒಲೈಸುವ ನಿಟ್ಟಿನಲ್ಲಿ ಅನೇಕ ಭವನಗಳನ್ನು ನಿರ್ಮಿಸುವ ಯೋಜನೆಗಳು ಜಾತಿಯ ಸಮಾವೇಶಗಳಲ್ಲಿ ಘೋಷಿಸಲ್ಪಡುತ್ತಿವೆ. ಈವರೆಗೆ ಜಲ್ಲಾ ಕೇಂದ್ರಗಳಲ್ಲಿ ನಿರ್ಮಾಣವಾಗಿರುವ ಭವನಗಳು ಮತ್ತು ಕಲಾಭವನಗಳ ಸ್ಥಿತಿ ಗತಿ ಹೇಗಿವೆ ಎಂಬುದನ್ನು ಮತ್ತು ಅವುಗಳ ನಿರ್ವಹಣೆ ಹಾಗೂ ದುರಸ್ತಿಗಾಗಿ ಸರ್ಕಾರ ಖರ್ಚು ಮಾಡುತ್ತಿರುವ ಹಣವನ್ನು ಒಮ್ಮೆ ಗಮನಿಸಿದರೆ, ಮತ್ತೊಂದು ಸಮೃದ್ಧ ಕರ್ನಾಟಕವನ್ನು ನಾವು ನಿರ್ಮಾಣ ಮಾಡಬಹುದಿತ್ತು.



ಜಿಲ್ಲಾ ಕೇಂದ್ರಗಳಲ್ಲಿ ನಿರ್ಮಾಣವಾಗಿರುವ ಕಲಾ ಭವನಗಳು, ಅಂಬೇಡ್ಕರ್ ಭವನಗಳು, ಹಾಗೂ ಇತರೆ ಸಾಂಸ್ಕøತಿಕ ಸಮುಚ್ಛಯಗಳು ಸೂಕ್ತ ನಿರ್ವಹಣೆಯಿಲ್ಲದೆ ಪಾಳು ಬಿದ್ದಿವೆ. ಇವುಗಳ ದುರಸ್ತಿ ಕಾರ್ಯವೆಂಬುದು ಇತ್ತೀಚೆಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಲಾಭದಾಯಕ ವೃತ್ತಿಯಾಗಿ ಪರಿಣಮಿಸಿದೆ. ಧಾರವಾಡದ ಮಲ್ಲಿಕಾರ್ಜುನ ಮನ್ಸೂರು ಕಲಾಭವನ ಆರು ವರ್ಷದ ಹಿಂದೆ ಸುಮಾರು ಒಂದು ಮುಕ್ಕಾಲು ಕೋಟಿ ವೆಚ್ಚದಲ್ಲಿ ದುರಸ್ತಿಯಾಗಿತ್ತು. ಈಗ ಮತ್ತೇ ಕಳೆದ ಒಂದೂವರೆ ವರ್ಷದಿಂದ ಐದು ಕೋಟಿ ವೆಚ್ಚದಲ್ಲಿ ದುರಸ್ತಿಯಾಗುತ್ತಿದೆ. ಇದೇ ಧಾರವಾಡದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣವಾದ ಆಲೂರು ವೆಂಕಟರಾಯರ ಭವನ ಹಾಗೂ ಸುವರ್ಣ ಕರ್ನಾಟಕ ಸಾಂಸ್ಕøತಿಕ ಸಮುಚ್ಛಯ ಭವನಗಳು ವರ್ಷದಲ್ಲಿ ಮುವತ್ತು ದಿನಗಳ ಕಾಲ ಕಾರ್ಯಕ್ರಮಕ್ಕೂ ಬಳಕೆಯಾಗದೆ ಪಾಳುಬಿದ್ದಿವೆ. ಕಳೆದ ವರ್ಷ ಹುಬ್ಬಳ್ಳಿ ನಗರದಲ್ಲಿ  ಸುಮಾರು ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕನ್ನಡ ಭವನ ಇತ್ತೀಚೆಗೆ ತರಾತುರಿಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹುಬ್ಬಳ್ಳಿಗೆ ಬಂದರು ಎಂಬ ಕಾರಣಕ್ಕಾಗಿ ಉದ್ಘಾಟನೆಯಾಯಿತೆ ವಿನಃ ಯಾವುದೇ ಕಾರ್ಯಕ್ರಮಕ್ಕೆ ಬಳಕೆಯಾಗಿಲ್ಲ. ಇದು ಕೇವಲ ಹುಬ್ಬಳ್ಳಿ- ಧಾರವಾಡದ ಕಥೆ ಮಾತ್ರವಲ್ಲ.ಕರ್ನಾಟಕದ  ಎಲ್ಲಾ ಜಿಲ್ಲಾ ಕೇಂದ್ರಗಳ ಕಥೆಯೂ ಹೌದು.
ಈಗ ಪ್ರತಿ ಮಹಾನಗರ ಪಾಲಿಕೆ ಮತ್ತು ನಗರ ಸಭೆಗಳಲ್ಲಿ ಆಯಾ ನಗರಗಳು ಮತ್ತು ಜಿಲ್ಲೆಗಳ  ರಾಜಕೀಯ ನಾಯಕರ ಪ್ರತಿಮೆಗಳನ್ನು ಸ್ಥಾಪಿಸುವ ಕಾರ್ಯ ಭವಿಷ್ಯದ  ಮುಂದಾಲೋಚನೆ ಇಲ್ಲದೆ ನಡೆಯುತ್ತದೆ. ಇದು ಮುಂದಿನ ದಿನಗಳಲ್ಲಿ ಸಮುದಾಯಗಳ ನಡುವೆ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕøತಿಕ ಸಂಘóರ್ಷಕ್ಕೆ  ಹಾದಿ ಮಾಡಿಕೊಡಬಲ್ಲದು.
 ಕನ್ನಡ ಚಿತ್ರ ರಂಗದ ಮೇರು ನಟ ಡಾ. ರಾಜ್ ಕುಮಾರ್ ನಿಧನರಾದ ಸಂದರ್ಭದಲ್ಲಿ  ಅವರ ಸ್ಮಾರಕಾರ್ಥ ಕಂಠೀರವ ಸ್ಟುಡಿಯೊ ಆವರಣದಲ್ಲಿ ಸರ್ಕಾರ ಸುಮಾರು ಎರಡು ಎಕರೆ ಜಾಗ ನೀಡಿತು. ಇದು ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ಏರಿಸಿದ ಒಬ್ಬ ಶ್ರೇಷ್ಟ ಕಲಾವಿದನಿಗೆ ಸಲ್ಲಬೇಕಾದ ನಿಜವಾದ ಗೌರವ, ಇದರ ಬಗ್ಗೆ ಎರಡು ಮಾತಿಲ್ಲ. ಮುಂದಿನ ದಿನಗಳಲ್ಲಿ ಇಂತಹದ್ದೇ ಅಪೇಕ್ಷೆ ಮತ್ತು ಬೇಡಿಕೆ   ವಿಷ್ಣುವರ್ಧನ್ ನಿಧಾನಾನಂತರ ಅವರ ಅಭಿಮಾನಿಗಳಿಂದ ವ್ಯಕ್ತವಾಯಿತು. ವಿಷ್ಣು ಅಭಿಮಾನಿಗಳ ಬೇಡಿಕೆ ಕೂಡ ಅರ್ಥಪೂರ್ಣವಾಗಿದೆ. ಆದರೆ, ಕರ್ನಾಟಕ ಸರ್ಕಾಕ್ಕೆ ಈವರೆಗೆ ವಿಷ್ಣು ವರ್ಧನ್ ಸ್ಮಾರಕಕ್ಕೆ ಸೂಕ್ತ ಜಾಗ ನೀಡಲು ಅಥವಾ ಗುರುತಿಸಲು  ಸಾಧ್ಯವಾಗಿಲ್ಲ. ಈಗಲೇ ಸರ್ಕಾರಕ್ಕೆ ಇಂತಹ ಸಮಸ್ಯೆಗಳು ಎದುರಾದರೆ, ಮುಂದಿನ ದಿನಗಳಲ್ಲಿ , ರಾಜ್ ಮತ್ತು ವಿಷ್ಣು ನಂತರದ ನಟರುಗಳ  ಅಭಿಮಾನಿಗಳ ಆಸೆ ಪೂರೈಸುವ ಬಗೆ ಹೇಗೆ?



ಪಶ್ಚಿಮ ಬಂಗಾಳ ಸರ್ಕಾರ ವಿಶ್ವ ವಿಖ್ಯಾತ ಸಿನಿಮಾ ನಿರ್ಧೇಶಕ ಸತ್ಯಜಿತ್ ರಾಯ್ ತೀರಿ ಹೋದ ಸಂದರ್ಭದಲ್ಲಿ , ಕೊಲ್ಕತ್ತ ನಗರದಲ್ಲಿ ಅವರ  ಹೆಸರಿನಲ್ಲಿ ಒಂದು ಫಿಲಂ ಇನ್ಸಿಟ್ಯೂಟ್ ಸ್ಥಾಪನೆ ಮಾಡಿತು. ರಾಯ್ ಅವರ ಸಮಗ್ರ ಸಿನಿಮಾಗಳು, ಅವರ ಚಿತ್ರಕತೆ, ಸಿನಿಮಾ ದೃಶ್ಯಕ್ಕೆ ಸಿದ್ದ ಪಡಿಸಿದ್ದ ರೇಖಾ ಚಿತ್ರಗಳು ಎಲ್ಲವನ್ನೂ ಅಲ್ಲಿ ಸಂಗ್ರಹಿಸಿ ಇಡಲಾಗಿದೆ. ಇಂತಹ ಕೆಲಸಗಳು, ಯಾವುದೇ ಸಾಂಸ್ಕøತಿಕ ಅಥವಾ ಇತರೆ ವಲಯದ ಧೀಮಂತ ನಾಯಕರ ನೆನಪಿಗೆ ನಾವು ಹಾಕಿಕೊಳ್ಳಬಹುದಾದ ಯೋಜನೆಗಳಿಗೆ ಮಾರ್ಗದರ್ಶಿಯಾಗಿದೆ.

ಈ ದಿನಗಳಲ್ಲಿ ಜಾತಿಯ ಸಮಾವೇಶಗಳಿಗೆ ಹೋಗಿ  ಆವೇಶದಿಂದ ಪ್ರತಿಮೆಗಳ ಕುರಿತು ಮತ್ತು  ಭವನಗಳ ಕುರಿತು  ಮಾತನಾಡುವ ಮುನ್ನ ನಮ್ಮ ಜನಪ್ರತಿನಿಧಿಗಳು ನೂರು ಬಾರಿ ಯೋಚಿಸಬೇಕಿದೆ. ಜಾತಿಗೊಂದು, ಮಠ, ಭವನ, ಒಬ್ಬ ಮಠಾಧೀಶ ಇಂತಹ ಓಲೈಕೆ ರಾಜಕಾರಣದಿಂದ  ಯಾವುದೇ ಸಮುದಾಯ ಬೌದ್ಧಿಕವಾಗಿ, ಸಾಮಾಜಿಕವಾಗಿ ಅಥವಾ ಆರ್ಥಿಕವಾಗಿ ಉದ್ಧಾರವಾಗಲಾರದು. ಇಂತಹ ಸಮುದಾಯದ ಜನರು ರಾಜಕೀಯ ಪಕ್ಷಗಳ ಪಾಲಿಗೆ ನಡೆದಾಡುವ ಜೀವಂತ ಮತಗಳಾಗಬಲ್ಲರೆ ಹೊರತು ಮನುಷ್ಯರಾಗಲು ಸಾಧ್ಯವಿಲ್ಲ.

ಮಂಗಳವಾರ, ಅಕ್ಟೋಬರ್ 29, 2013

ರಾಮಕೃಷ್ಣ ಹೆಗ್ಡೆ ಹೇಳಿದ ಗಾಂಧಿ ಕಥನ


ಇದು ಸುಮಾರು ಹನ್ನೆರೆಡು ವರ್ಷಗಳ (2001) ಹಿಂದಿನ ಘಟನೆ. ರಾಮಕೃಷ್ಣಹೆಗ್ಡೆಯವರ ನೇತೃತ್ವದ ಜನತಾ ಸರ್ಕಾರ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡು, ಎಸ್.ಎಂ. ಕೃಷ್ಣ ನೇತೃತ್ವದಲ್ಲಿ ಕಾಂಗ್ರೇಸ್ ಸರ್ಕಾರ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಅಧಿಕಾರ ಕಳೆದುಕೊಂಡ ನಂತರ ಹೆಗಡೆಯವರು ಮೇಲಿಂದ ಮೇಲೆ ಉತ್ತರ ಕರ್ನಾಟಕ ಪ್ರವಾಸ ಕೈಗೊಳ್ಳುತ್ತಿದ್ದರು. ಅವರ ಜೊತೆಯಲ್ಲಿ ಎಂ.ಪಿ. ಪ್ರಕಾಶ್, ಭೈರೇಗೌಡ, ಪಿ.ಜಿ.ಆರ್ ಸಿಂಧ್ಯಾ ಇವರೆಲ್ಲರೂ ಸದಾ ಇರುತ್ತಿದ್ದರಿಂದ ಹುಬ್ಬಳ್ಳಿ ನಗರಕ್ಕೆ ಬಂದರೆ, ಪತ್ರಕರ್ತರ ಜೊತೆ ಒಂದು ಖಾಸಾಗಿ ಚರ್ಚೆ, ಊಟ ಇವೆಲ್ಲವೂ ಆ ದಿನಗಳಲ್ಲಿ ಸಾಮಾನ್ಯವಾಗಿತ್ತು.
ಆ ದಿನಗಳಲ್ಲಿ ಈಗಿನ ಹಾಗೆ ಪತ್ರಕರ್ತರಿಗೆ ಯಾವುದೆ ಧಾವಂತ ಇರಲಿಲ್ಲ. ಹುಬ್ಬಳ್ಳಿಯಲ್ಲಿ ಇದ್ದವರು ನಾವು ನಾಲ್ಕಾರು ಮಂದಿ. ಉದಯ ಟಿ.ವಿ.ಯಿಂದ, ನಾನು, ಈ ಟಿ.ವಿ.ಯಿಂದ ಸಿದ್ದು ಕಾಳೋಜಿ, ಪ್ರಜಾವಾಣಿಯಿಂದ ಸ್ಥಾನಿಕ ಸಂಪಾದಕರಾಗಿದ್ದ ಪ್ರೇಮ್ ಕುಮಾರ್ ಹರಿಯಬ್ಬೆ, ಸಂಯುಕ್ತ ಕರ್ನಾಟಕದಿಂದ ಮೋಹನ ಹೆಗ್ಡೆ, ಕನ್ನಡ ಪ್ರಭದಿಂದ ಮಲ್ಲಿಕಾಜುನ ಸಿದ್ದಣ್ಣ, ಹಿಂದು ಪತ್ರಿಕೆಯಿಂದ ಮತ್ತಿಹಳ್ಳಿ ಮದನ್ ಮೋಹನ್ ಹಾಗೂ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಿಂದ ನಿಂದ ಶ್ಯಾಂಸುಂದರ್‍ವಟ್ಟಂ.ಇರುತ್ತಿದ್ದೆವು.  ಯಾವುದೇ ರಾಜಕಾರಣಿ ಹುಬ್ಬಳ್ಳಿಗೆ ಬದರೆ, ಸ್ವತಃ ಫೋನ್ ಮಾಡಿ ಆಹ್ವಾನ ನೀಡುತ್ತಿದ್ದರು. ಭಟ್ಟಂಗಿಗಳ ಕಾಟವಿರಲಿಲ್ಲ. ಜೊತೆಗೆ ಈಗಿನ ಪತ್ರಿಕೋದ್ಯಮದ ಹಾಗೆ ರಾಜಕಾರಣಿ ಅಥವಾ ಸಿನಿಮಾ ನಟನ ಮನೆಗೆ ನುಗ್ಗಿ ಅವರು ಬೆಳಿಗ್ಗೆ ಎದ್ದು, ಟಾಯ್ಲೆಟ್ ರೂಮಿಗೆ ಹೋಗಿ ಬಾಗಿಲು ತೆರೆದು ಹೊರ ಬರುವವಷ್ಟರಲ್ಲಿ ಅವರ ಮುಸುಡಿಗೆ ಮೈಕ್ ಹಿಡಿದು ಅಬಿಪ್ರಾಯ ಕೇಳುವಷ್ಟು ಪತ್ರಿಕೋದ್ಯಮ ಕುಲಗೆಟ್ಟು ಹೋಗಿರಲಿಲ್ಲ. ಒಂದು ಸುದ್ದಿಗೋಷ್ಟಿಯಾಗಲಿ, ಮಾತುಕತೆಯಾಗಲಿ, ಪರಸ್ಪರ ಚರ್ಚೆಯಾಗಲಿ ಪ್ರಶಾಂತ ವಾತಾವರಣದಲ್ಲಿ ನೆರೆವೇರುತ್ತಿತ್ತು. ಎಷ್ಟೋ ಬಾರಿ ರಾಜಕೀಯ ನಾಯಕರು ತಮ್ಮ ಮನದ ಸಂಕಟಗಳನ್ನು, ಮತ್ತು ತಾವು ಅಧಿಕಾರದಲ್ಲಿ ಮಾಡಿದ ತಪ್ಪುಗಳನ್ನು ನಮ್ಮೊಂದಿಗೆ ಬಿಚ್ಚು ಮನಸ್ಸಿನಿಂದ ಹಂಚಿಕೊಳ್ಳುತ್ತಿದ್ದರು. ಸಲಹೆ ಕೇಳುತ್ತಿದ್ದರು. ಅವರು ಹೇಳಿದ ಮಾತುಗಳನ್ನು ಆಫ್ ದ ರೆಕಾರ್ಡ್ ಎಂಬ ನೈತಿಕ ಗೆರೆಯೊಳಗೆ ನಾವು ಹೊರಜಗತ್ತಿಗೆ ತಿಳಿಯದಂತೆ ಮುಚ್ಚಿ ಇಡುತ್ತಿದ್ದೆವು. ಈಗಿನ ರೀತಿ ಬ್ರೇಕಿಂಗ್ ನ್ಯೂಸ್ ಹೆಸರಿನಲ್ಲಿ ವೈಯಕ್ತಿಕ ಚಾರಿತ್ರ್ಯದ ವಧೆಗೆ ಇಳಿಯುತ್ತಿರಲಿಲ್ಲ. ಅವರು ಆತ್ಮೀಯ ಬಂಧು ಅಥವಾ  ಗೆಳೆಯ ಎಂದು ಪರಿಗಣಿಸಿ ಹೇಳಿದ ಮಾತುಗಳ ಗೌಪ್ಯ ಕಾಪಾಡಬೇಕಾದ್ದು ನಮ್ಮಗಳ ಕರ್ತವ್ಯವಾಗಿತ್ತು. ಎಂ.ಪಿ. ಪ್ರಕಾಶ್ ನನ್ನೊಂದಿಗೆ ಹಂಚಿಕೊಂಡ ಭಾವನೆಗಳು ಈಗಲೂ ನನ್ನನ್ನು ಕಾಡುತ್ತಿವೆ.
ಇಂತಹದ್ದೇ ಒಂದು ದಿನ ರಾಮಕೃಷ್ಣ ಹೆಗ್ಡೆಯವರ ಹುಬ್ಬಳ್ಳಿಗೆ ಬಂದರು. ಆ ದಿನ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಾತೃ ಸಂಸ್ಥೆಯಾದ ಲೋಕ ಶಿಕ್ಷಣ ಟ್ರಸ್ಟ್, ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆಗ ತಾನೆ ಲೇಖಕಿಯಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಹಾಗೂ ಮೂಲತಃ ಹುಬ್ಬಳ್ಳಿಯವರಾದ ಇನ್‍ಫೋಸಿಸ್ ಸಂಸ್ಥೆಯ ಸುಧಾ ಮೂರ್ತಿಯವರ ಪ್ರವಾಸ ಕಥನ ಮತ್ತು ಉತ್ತರ ಕನ್ನಡ ಜಿಲ್ಲೆಯ ಕರ ನಿರಾಕರಣೆ ಚಳುವಳಿಯ ಇತಿಹಾಸ ಕುರಿತ ಎರಡು ಪುಸ್ತಕಗಳನ್ನು ಹೆಗ್ಡೆಯವರು  ಬಿಡುಗಡೆ  ಮಾಡುವ ಕಾರ್ಯಕ್ರಮ ವಿತ್ತು. ಸಂಜೆ ಆರು ಗಂಟೆಗೆ ಇದ್ದ ಕಾರ್ಯಕ್ರಮಕ್ಕೆ . ಐದು ಗಂಟೆಗೆ ಬನ್ನಿ, ನಿಮ್ಮ ಜೊತೆ ಒಂದಿಷ್ಟು ಖಾಸಾಗಿಯಾಗಿ ಮಾತನಾಡುವ ಕಾರ್ಯಕ್ರಮವಿದೆ ಎಂದು ಹೆಗ್ಡೆಯವರು ಸ್ವತಃ ಪತ್ರಕರ್ತ ಮಿತ್ರರಿಗೆ ಸಂದೇಶ ರವಾನಿಸಿದ್ದರು. ನಾವು ಸಂಯುಕ್ತ ಕರ್ನಾಟಕ ಪತ್ರಿಕೆಯ ಕಛೇರಿಗೆ ಹೋದಾಗ, ಲೋಕಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರ ಕಛೇರಿಯಲ್ಲಿ ಹೆಗ್ಡೆಯವರು ನಮಗಾಗಿ ಕಾಯುತ್ತಿದ್ದರು. ನಾವು ಯಾವುದೋ ರಾಜಕೀಯ ಬಾಂಬ್ ಸಿಡಿಸಬಹುದೆಂದು ಲೆಕ್ಕಾಚಾರ ಹಾಕಿದ್ದೆವು. ಇದಕ್ಕೆ ತದ್ವಿರುದ್ಧವಾಗಿ ತಮ್ಮ ತಣ್ಣನೆಯ ಶಾಂತ ದ್ವನಿಯಲ್ಲಿ ಮಾತನಾಡಿದ ಹೆಗ್ಡೆಯವರು, ಈ ದಿನ ನನ್ನ ನೆಲದ ಕರ ನಿರಾಕರಣೆ ಚಳುವಳಿಯ ಪುಸ್ತಕ ಬಿಡುಗಡೆ ಮಾಡುವ ಸಂದರ್ಭದಲ್ಲಿ ನನ್ನದೊಂದು ಬಾಲ್ಯದ ನೆನಪು ಎಡಬಿಡದೆ ಕಾಡುತ್ತಿದೆ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಕರೆದೆ ಎಂದರು. ನಮಗೆ ಉಪ್ಪಿಟ್ಟು, ಕಾಫಿ ತರಿಸಿ, ಅವರು ತಮ್ಮ ಬಾಲ್ಯಕ್ಕೆ ಜಾರಿದರು. ಮುಂದಿನ ಮಾತುಗಳನ್ನು ಹೆಗ್ಡೆಯವರ ಮಾತುಗಳಲ್ಲಿ ಕೇಳಿ...


ಅವು ಸ್ವಾತಂತ್ರ್ಯ ಹೋರಾಟದ ದಿನಗಳು. 1930 ರಲ್ಲಿ ಗಾಂಧೀಜಿ ಬೆಳಗಾವಿ ನಗರಕ್ಕೆ ಬಂದು ಹೋದ ನಂತರ ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೊರಾಟದ ಕಿಚ್ಚು ಪ್ರತಿ ಮನೆ ಮತ್ತು ಮನಕ್ಕೂ ಕಾಡ್ಗಿಚ್ಚಿನಂತೆ ಹರಡಿತ್ತು. ನನಗಾಗ ಸುಮಾರು ಏಳು ಅಥವಾ ಎಂಟು ವರ್ಷ. ಸಿದ್ದಾಪುರದ ಬಳಿಯ ಗದ್ದೆಯಲ್ಲಿದ್ದ ನಮ್ಮ ಹೆಂಚಿನ ಮನೆ ಆ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಅಡಗುತಾಣವಾಗಿತ್ತು. ಶಿವಮೊಗ್ಗ ಮತ್ತು ಉತ್ತರಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿ ಇದ್ದ ಕಾರಣ, ನಮ್ಮ ಮನೆ ಏಕ ಕಾಲಕ್ಕೆ ಎರಡು ಜಿಲ್ಲೆಗಳ ಸ್ವಾತಂತ್ರ್ಯ ಹೋರಾಟಗಾರರ ಮೆಚ್ಚಿನ ತಾಣವಾಗಿತ್ತು. ಶಿವಮೊಗ್ಗ ಪೊಲೀಸರು ಬೆನ್ನಟ್ಟಿದರೆ, ಗಡಿ ದಾಟಿ ನಮ್ಮ ಮನೆಗೆ ಬರುತ್ತಿದ್ದರು. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ಬೆನ್ನಟ್ಟಿದರೆ, ನಮ್ಮ ಜಿಲ್ಲೆಯ ಹೊರಾಟಗಾರರು ನಮ್ಮ ಗದ್ದೆಯ ಬೇಲಿ ನೆಗೆದು ಶಿವಮೊಗ್ಗ ಗಡಿ ಪ್ರವೇಶ ಮಾಡಿ ಓಡಿ ಹೋಗುತ್ತಿದ್ದರು. ನಮ್ಮ ಮನೆಯ ಮೇಲೆ ಅಪ್ಪ ( ಮಹಾಬಲೇಶ್ವರ ಹೆಗ್ಡೆ) ಇವರಿಗಾಗಿ ಒಂದು ಅಟ್ಟ ಸಿದ್ಧಪಡಿಸಿದ್ದರು. ಯಾರೇ ನಮ್ಮ ಮನೆಗೆ ಬಂದರೂ ಅಟ್ಟದ ಮೇಲಿನ ಕಿಟಕಿಯಿಂದ ದೂರದಿಂದ ಅವರು ಬರುತ್ತಿರುವಾಗಲೆ ತಿಳಿದು ಹೋಗುತ್ತಿತ್ತು. ಈಗಾಗಿ ನಮ್ಮ ಮನೆ ಆಗಿನ ಬ್ರಿಟೀóಷ್ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಅಂತಿಮವಾಗಿ ಧಾರವಾಡದಲ್ಲಿ ಇದ್ದ ಬ್ರಿಟೀಷ್ ಜಿಲ್ಲಾಧಿಕಾರಿಯ ಆದೇಶದ ಮೇರೆಗೆ, ಒಂದು ದಿನ ಏಕಾ ಏಕಿ ಮನೆಗೆ ನುಗ್ಗಿದ ಪೊಲೀಸರು ಇಡೀ ಮನೆಯನ್ನು ಧ್ವಂಸಗೊಳಿಸಿ, ಧವಸ ಧಾನ್ಯಗಳನ್ನು ಹೊತ್ತೊಯ್ದರು. ನಾನು, ನನ್ನ ಅಣ್ಣ ಗಣೇಶ, ಅಪ್ಪ, ಅಮ್ಮ ( ಸರಸ್ವತಿ ಹೆಗ್ಡೆ)ಅಕ್ಷರಶಃ ಬಟಾ ಬಯಲಿನಲ್ಲಿ ಅನಾಥರಾಗಿ ನಿಂತಿದ್ದೆವು. ಸುದ್ಧಿ ತಿಳಿದ ಸುತ್ತ ಮುತ್ತಲಿನ ಊರಿನ ಜನ ಅಕ್ಕಿ, ಬೇಳೆ, ಉಪ್ಪು, ಕಾರದಪುಡಿ, ಹುಣೆಸು ಹಣ್ಣು ತಂದುಕೊಟ್ಟರು. ಅಪ್ಪ ನನ್ನನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡು ಸಿದ್ದಾಪುರದ ಸಂತೆಗೆ ಹೋಗಿ ಒಂದಿಷ್ಟು ಮಡಕೆಗಳನ್ನು ಕೊಂಡು ತಂದರು. ಅಮ್ಮ ಬಯಲಿನಲ್ಲಿ ಕಲ್ಲುಗಳ ಮೇಲೆ ಮಡಕೆಗಳನ್ನು ಇಟ್ಟು ಅನ್ನ ಬೇಯಿಸಿ, ತರಕಾರಿ ಇಲ್ಲದ ಬೇಳೆ ಸಾರು ಮಾಡಿದರು. ಆ ದಿನ ನಮ್ಮ ಇಡೀ ಕುಟುಂಬ ನಮ್ಮ ಜನ ತಂದು ಕೊಟ್ಟ ದಿನಸಿಯಲ್ಲಿ ಊಟ ಮಾಡಿ ಬಯಲಿನಲ್ಲಿ ಮಲಗಿತು. ಅಕ್ಕಿ ತಂದುಕೊಟ್ಟವರು ಯಾವ ಜಾತಿ? ಬೇಳೆ ಕೊಟ್ಟವರು ಯಾವ ಜಾತಿ? ಎಂದು ನಾವ್ಯಾರು ಪ್ರಶ್ನಿಸಿಕೊಳ್ಳಲಿಲ್ಲ, ಅಥವಾ ಚಿಂತಿಸಲಿಲ್ಲ. ನನ್ನ ಕುಟುಂಬ ಹೀಗೆ ಬೀದಿಗೆ ಬಿದ್ದು ಹೊಯಿತಲ್ಲ ಎಂದು ಅಪ್ಪನ ಮುಖದಲ್ಲಾಗಲಿ. ಅಮ್ಮನ ಮುಖದಲ್ಲಾಗಲಿ ಯಾವ ನೋವಿನ ಎಳೆಗಳಿರಲಿಲ್ಲ. ಊರಿನ ಜನ ತಂದು ಕೊಟ್ಟ ಕಂಬಳಿ ಹೊದ್ದು ಮಲಗುವಾಗ, ಅಪ್ಪ ಗಾಂಧೀಜಿ ಅರ ಬೆತ್ತಲಾಗಿ ದೇಶ ತಿರುಗುವ ಕತೆ ಹೇಳುತ್ತಾ ನಮ್ಮನ್ನು ತಟ್ಟಿ ಮಲಗಿಸುತ್ತಿದ್ದರು
ರಾಮಕೃಷ್ಣ ಹೆಗ್ಡೆಯವರು ತೀರಾ ಭಾವುಕರಾಗಿ ಈ ಕಥೆ ಹೇಳುತ್ತಿದ್ದಾಗ, ಧಾರಾಕಾರವಾಗಿ ಅವರ ಕಣ್ಣುಗಳಿಂದ ಸುರಿಯುತ್ತಿದ್ದ ಕಣ್ಣೀರು ಅವರ ಮುಖದ ಮೇಲಿನ ಗಡ್ಡದಲ್ಲಿ ಲೀನವಾಗುತ್ತಿದ್ದವು. ಅವರ ಕಥೆ ಕೇಳಿದ ನಮ್ಮ ಕಣ್ಣುಗಳಲ್ಲೂ ನೀರು ಹರಿಯುತ್ತಿದ್ದವು.


ಇದು ರಾಮಕೃಷ್ಣ ಹೆಗ್ಡೆಯವರ ಕುಟುಂಬದ ಕಥೆ ಮಾತ್ರ ವಲ್ಲ, ಉತ್ತರ ಕರ್ನಾಟಕದ ಮತ್ತು ಉತ್ತರ ಕನ್ನಡ ಜಿಲ್ಲೆಯ ಪ್ರತಿ ಮನೆಗಳಲ್ಲೂ ಇಂತಹ ನೂರಾರು ಕಥನಗಳಿವೆ. ಹಿರಿಯ ವಿಮರ್ಶಕ ಪ್ರೊ. ಜಿ.ಎಚ್. ನಾಯಕರ ಬಾಳುಎಂಬ ಆತ್ಮ ಕಥನದಲ್ಲಿ ಅಂಕೋಲಾ ತಾಲ್ಲೂಕಿನಲ್ಲಿ ಅವರ ಕುಟುಂಬವೂ ಸೇರಿದಂತೆ, ನೂರಾರು ಕುಟುಂಬಗಳು ಬ್ರಿಟೀಷ್ ಸರ್ಕಾರಕ್ಕೆ ಕಂದಾಯ ಪಾವತಿಸಲು ನಿರಾಕರಿಸಿ, ಜೈಲು ಸೇರಿ, ಕುಟುಂಬವನ್ನು ಬೀದಿ ಪಾಲು ಮಾಡಿ, ತಾವು ಬೀದಿ ಪಾಲಾದ ತ್ಯಾಗಮಯ ಹೋರಾಟದ ಕಥನಗಳಿವೆ. ತಾವೆಂದೂ ನೋಡದ, ತಾವೆಂದೂ ಕೇಳದ ಗಾಂಧಿ ಎಂಬ ವ್ಯಕ್ತಿಯ ಸಂದೇಶವನ್ನು ಮತ್ತು  ಅವರ ಹೋರಾಟದ ಕರೆಯನ್ನು ತಮ್ಮ ಎದೆಗಿಳಿಸಿಕೊಂಡು ಹೋರಾಡಿದ ಈ ಮಹಾ ಮಹಿಮರನ್ನು ನೆನದಾಗ, ಗಾಂಧೀಜಿಯ ಅಂತಃಶಕ್ತಿ ಎಂತಹದ್ದು ಎಂದು ತಣ್ಣಗೆ ಕುಳಿತು ಯೋಚಿಸುತ್ತಿದ್ದೇನೆ.

ಶನಿವಾರ, ಅಕ್ಟೋಬರ್ 26, 2013

ಗಾಂಧಿ ಎಂಬ ಚುಂಬಕ ಶಕ್ತಿ



ಗಾಂಧಿಯ ವ್ಯಕ್ತಿತ್ವದಲ್ಲಿ ನಾವು ಕಾಣಬಹುದಾದ ಜಿಗಟು ಸ್ವಭಾವ, ಹಠಮಾರಿತನ, ಮತ್ತು ಪಾರದರ್ಶಕ ನಡುವಳಿಕೆಗಳ ಜೊತೆ ಅವರಲ್ಲಿ ಇದ್ದ ಅತಿ ದೊಡ್ಡ ಸಾಮರ್ಥ್ಯವೆಂದರೆ, ಅವರಲ್ಲಿದ್ದ ಚುಂಬಕ ಶಕ್ತಿ. ಅವರ ಇಂತಹ ಸಾಮರ್ಥ್ಯದಿಂದಲಲೇ ಅವರು ಅಂದಿನ ಸ್ವಾತಂತ್ರ್ಯ ಚಳುವಳಿಯಲ್ಲಿ ದೇಶವನ್ನು ಮುನ್ನೆಡೆಸಲು ಸಾಧ್ಯವಾಯಿತು. ಮತ್ತೊಂದು ಸೋಜಿಗದ ಸಂಗತಿಯೆಂದರೆ, ಅವರ ವ್ಯಕ್ತಿತ್ವಕ್ಕೆ ಮಾರು ಹೋಗಿ, ಇಡೀ ತಮ್ಮ ಬದುಕನ್ನು ಸಮಾಜ ಸೇವೆಗೆ, ದೇಶ ಭಕ್ತಿಗೆ ತಮ್ಮ ಬದುಕನ್ನು ಮುಡಿಪಾಗಿ ಇಟ್ಟ ಅನೇಕ ಜೀವಗಳು, ಭಾರತದ ಸ್ವಾತಂತ್ರ್ಯ ಇತಿಹಾಸದ ಪುಟಗಳಲ್ಲಿ ಪರಿಣಾಮಕಾರಿಯಾಗಿ ದಾಖಲಾಗದೆ, ತೆರೆಮರೆಯಲ್ಲಿ ಸರಿದುಹೋಗಿದ್ದಾರೆ. ಇವರಲ್ಲಿ ಗಾಂಧೀಜಿಯವರಿಗೆ ಆತ್ಮದಂತೆ ಇದ್ದ ಮಹದೇವ ದೇಸಾಯಿ, ಹಾಗೂ ಗಾಂಧೀಜಿ ಚಿಂತನೆಗೆ ಮಾರುಹೋಗಿ ಇಂಗ್ಲೆಂಡ್ ತೊರೆದು ಬಂದ ಮೆಡಲಿನ್ ಸ್ಲೆಡ್ ( ಮೀರಾ ಬೆಹನ್) ಭಾರತದವರೇ ಆದ ಮೌಲನಾ ಅಜಾದ್, ಆಪ್ಘಾನಿಸ್ಥಾನದ ಖಾನ್ ಅಬ್ದುಲ್ ಗಪರ್ ಖಾನ್ ಮುಖ್ಯವಾದವರು,
ವರ್ತಮಾನದ ಈ ದಿನಗಳಲ್ಲಿ  ಧರ್ಮಗಳನ್ನು ವಿಭಜಿಸಿ, ಅಲ್ಪ ಸಂಖ್ಯಾತರನ್ನು ಅನುಮಾನದಿಂದ ನೋಡುವ ಮಂದಿ, ತಾವು ಅರಿಯದ, ಓದದ ಇತಿಹಾಸವೊಂದು ಭಾರತದಲ್ಲಿ ಇನ್ನೂ ಅಸ್ತಿತ್ವದಲ್ಲಿ ಇದೆ ಎಂಬುದನ್ನು ಮೊದಲು ಮನಗಾಣಬೇಕಿದೆ. 1941 ರಲ್ಲಿ ಇಂಡಿಯನ್ ಮುಸ್ಲಿಂ ಲೀಗ್, “ನಿನಗೆ ಧರ್ಮ ಮುಖ್ಯವೊ? ಗಾಂಧೀಜಿ ಮುಖ್ಯವೋ? ಎಂಬುದನ್ನು ನಿರ್ಧರಿಸು ಎಂಬ ಸವಾಲನ್ನು ಮೌಲಾನ ಅಜಾದ್ ಮುಂದೆ ಇಟ್ಟಾಗ, ತೀವ್ರವಾಗಿ ಮಾನಸಿಕ ಕ್ಷೋಭೆಗೆ ಒಳಗಾದ ಮೌಲಾನ ಅವರು, ಅಂತಿಮವಾಗಿ ನನಗೆ ಧರ್ಮಕ್ಕಿಂತ ಗಾಂಧೀಜಿ ಮತ್ತು ಭಾರತದ ಕಾಂಗ್ರೇಸ್ ಮುಖ್ಯ ಎಂಬುದಾಗಿ ಘೋಷಿಸಿದರು.  ಇದೇ ರೀತಿ ನೆರೆಯ ಆಪ್ಘಾನಿಸ್ಥಾನದಿಂದ ಬಂದ ಖಾನ್ ಅಬ್ದುಲ್ ಗಫಾರ್ ಗಾಂಧೀಜಿ ಜೊತೆ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿ, ನಿರಂತರ ಜೈಲು ವಾಸ ಅನುಭವಿಸಿದರು. ನಿತ್ಯ ಮಾಂಸಹಾರಿಯಾಗಿದ್ದ ಹಾಗೂ ದೈತ್ಯ ದೇಹದ, ಸುಮಾರು ಆರೂವರೆ ಅಡಿ ಎತ್ತರವಿದ್ದ ಅವರು, ಜೈಲಿನಲ್ಲಿ ಎರಡು ಚಪಾತಿ ಮತ್ತು ಒಂದು ಬಟ್ಟಲು ಬೇಳೆ ಯಂತಹ ಸಾಮಾನ್ಯ ಆಹಾರದಲ್ಲಿ ಬದುಕಿದರು. ಇವರ ಸಂಕಟವನ್ನು ನೋಡಲಾರದೆ, ಗಾಂಧೀಜಿಯವರು, ಖಾನ್ ಅವರಿಗೆ ಪ್ರತಿದಿನ ಮೊಟ್ಟೆ ನೀಡುವಂತೆ ಜೈಲಿನ ಅಧಿಕಾರಿಗಳಿಗೆ ದೀನನಾಗಿ ಕೈ ಮುಗಿದು ಬೇಡಿಕೊಳ್ಳುತ್ತಿದ್ದರು. ಇಂತಹ ತ್ಯಾಗ ಜೀವಿಗಳ ಸಮರ್ಪಣ ಮನೋಭಾವವನ್ನು ಇತಿಹಾಸದ ಪುಟಗಳಲ್ಲಿ ಗಮನಿಸುವಾಗ ಕಣ್ಣುಗಳು ಒದ್ದೆಯಾಗುತ್ತವೆ.


ಪೂನಾ ನಗರದಲ್ಲಿರುವ ಆಗಖಾನ್ ಅರಮನೆ ಗಾಂಧೀಜಿಯವರ ಪಾಲಿಗೆ ಒಂದು ನೋವಿನ ಸ್ಮರಣೆ. ಏಕೆಂದರೆ, ಅವರ ಆತ್ಮ ಸಂಗಾತಿ ಕಸ್ತೂರಬಾ ಮತ್ತು ಆಪ್ತ ಸಂಗಾತಿ ಮಹದೇವ ದೇಸಾಯಿ ಇಬ್ಬರೂ ಇದೇ ಅರಮನೆಯಲ್ಲಿ ಬ್ರಿಟೀಷ್ ಸರ್ಕಾರದಿಂದ ಗೃಹ ಬಂಧನದಲ್ಲಿ ಇದ್ದ ಸಮಯದಲ್ಲಿ ಮೃತ ಪಟ್ಟರು. ಅಂತಿಮವಾಗಿ, ಗಾಂಧೀಜಿ ಇಚ್ಛೆಯಂತೆ ಅವರಿಬ್ಬರಿಗೂ ಅಲ್ಲಿಯೇ (ಅರಮನೆಯ ಹಿಂಭಾಗ) ಅಂತ್ಯ ಸಂಸ್ಕಾರ ನೆರವೇರಿಸಿ ಸಮಾಧಿ ನಿರ್ಮಿಸಲಾಗಿದೆ. ಗಾಂಧೀಜಿಯವರ ನಿಧಾನಾ ನಂತರ ಅವರ ಚಿತಾ ಭಸ್ಮವನ್ನು ತಂದು ಅವರಿಗೂ ಸಹ ಒಂದು ಸಮಾಧಿಯನ್ನು ನಿರ್ಮಿಸಲಾಗಿದೆ. ಆಗಖಾನ್ ಅರಮನೆಯಲ್ಲಿ ಗಾಂಧೀಜಿ ಮತ್ತು ಕಸ್ತೂರಬಾ ಅವರನ್ನು ಕೂಡಿ ಹಾಕಿದ್ದ ಕೋಣೆ, ಮಹದೇವ ದೇಸಾಯಿ ಇದ್ದ ಕೋಣೆ ಹೀಗೆ ಎಲ್ಲವನ್ನೂ ಯಥಾವತ್ತಾಗಿ ಕಾಪಾಡಿಕೊಂಡು ಬರಲಾಗಿದೆ. ಅರಮನೆಯನ್ನು ಮಾತ್ರ ನವೀಕರಿಸಿ, ಗಾಂಧಿ ಸ್ಮಾರಕ ಟ್ರಸ್ಟ್ ಗೆ ಒಪ್ಪಿಸಲಾಗಿದೆ.

ಮಹದೇವ ದೇಸಾಯಿ ಕೂಡ ಗಾಂಧಿ ನಾಡಾದ ಗುಜರಾತಿನವರು. 1892 ರ ಜನವರಿ ಒಂದರಂದು, ಸೂರತ್ ಬಳಿಯ ಸರಸ್ ಎಂಬ ಹಳ್ಳಿಯಲ್ಲಿ ಓರ್ವ ಶಾಲಾ ಶಿಕ್ಷಕನ ಮಗನಾಗಿ ಜನಿಸಿದ ಇವರು, ತನ್ನ ಏಳನೆಯ ವಯಸ್ಸಿನಲ್ಲಿ ಹೆತ್ತ ತಾಯಿಯನ್ನು ಕಳೆದು ಕೊಂಡು, ತಂದೆಯ ಆಶ್ರಯದಲ್ಲಿ ಬೆಳೆದವರು. ಗಾಂಧೀಜಿಯವರಂತೆ ತನ್ನ ಹದಿಮೂರನೇ ವಯಸ್ಸಿಗೆ ಹನ್ನೆರೆಡು ವಯಸ್ಸಿನ ದುರ್ಗಾದೇವಿ ಎಂಬುವರನ್ನು ವಿವಾಹವಾದವರು. ಅಹಮದಾಬಾದ್ ನಗರದಲ್ಲಿ ಪದವಿ ಓದುತ್ತಿದ್ದ ಸಮಯದಲ್ಲಿ ಪ್ರತಿ ದಿನ ಸಬರಮತಿ ಅಶ್ರಮದ ಮುಂದೆ ಓಡಾಡುತ್ತಾ, ಗಾಂಧೀಜಿಯವರ ಚಟುವಟಿಕೆಗಳನ್ನು ಗಮನಿಸುತ್ತಾ, ಅಂತಿಮವಾಗಿ 1917 ರಲ್ಲಿ ಗುಜರಾತಿನ ಕೇಂದ್ರ ಸಹಕಾರ ಬ್ಯಾಂಕಿನ ಇನ್ಸ್‍ಪೆಕ್ಟರ್ ಹುದ್ದೆ ತೊರೆದು, ಗಾಂಧೀಜಿ ಜೊತೆ ಗುರುತಿಸಿಕೊಂಡು, ಮಹಾತ್ಮನ ಸೇವೆಗಾಗಿ ತಮ್ಮ ಬದುಕನ್ನು ಸಮರ್ಪಿಸಿಕೊಂಡವರು.
ಅತ್ಯುತ್ತಮ ಅನುವಾದಕರಾಗಿದ್ದ ಮಹಾದೇವ ದೇಸಾಯಿ ಗಾಂಧೀಜಿಯವರ ಆತ್ಮಕಥೆಯನ್ನು ಪ್ರಥಮವಾಗಿ ಗುಜರಾತಿ ಭಾಷೆಯಿಂದ ಇಂಗ್ಲೀಷ್ ಭಾಷೆಗೆ ಅನುವಾದಿಸಿದರು. ಜೊತೆಗೆ ನವಜೀವನ ಪತ್ರಿಕೆಯಿಂದ ಹಿಡಿದು, ಗಾಂಧೀಜಿ ಹೊರ ತರುತ್ತಿದ್ದ ಹರಿಜನ ಮತ್ತು ಯಂಗ್ ಇಂಡಿಯ ಪತ್ರಿಕೆಯನ್ನು ಗಾಂಧಿ ಅನುಪ ಸ್ಥಿತಿಯಲ್ಲಿ ಸಂಪಾದಿಸುತ್ತಿದ್ದರು. ತಮ್ಮ ಬದುಕಿನುದ್ದಕ್ಕು ಗಾಂಧೀಜಿಯನ್ನು ನೆರಳಿನಂತೆ ಹಿಂಬಾಲಿಸಿದ ಮಹದೇವ ದೇಸಾಯಿ, ಗಾಂಧೀಜಿ ಜೊತೆ ನಿರಂತರ ಸರೆಮನೆ ವಾಸ ಅನುಭವಿಸಿದರು. ಅವರಂತೆ ಬೆಳಗಿನ ಜಾವ ಮೂರು ಗಂಟೆಗೆ ಎದ್ದು ಪ್ರಾರ್ಥನೆ, ಚರಕದಲ್ಲಿ ನೂಲು ತೆಗೆಯುವ ಕ್ರಿಯೆಯಲ್ಲಿ ತಲ್ಲೀನರಾಗುತ್ತಿದ್ದರು. 1929 ರಿಂದ ಭಾರತದಲ್ಲಿ ನಡೆದ ಬಹುತೇ ಗಾಂಧೀಜಿಯವರ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಮಹದೇವದೇಸಾಯಿ, 1942 ರಲ್ಲಿ ಬ್ರಿಟೀಷರ ವಿರುದ್ಧ ಮಹಾತ್ಮ ಗಾಂಧೀಜಿü ಆರಂಭಿಸಿದ ಭಾರತ ಬಿಟ್ಟು ತೊಲಗಿಚಳುವಳಿಯಲ್ಲಿ ಪಾಲ್ಗೊಂಡು ಪೆಬ್ರವರಿ ತಿಂಗಳಿನಲ್ಲಿ ಮುಂಬೈ ನಗರದಲ್ಲಿ ಗಾಂಧೀಜಿ ಜೊತೆ ಬಂದನಕ್ಕೆ ಒಳಗಾದರು. 1942 ರ ಪೆಬ್ರವರಿ 9 ರಂದು ಗಾಂಧೀಜಿ, ಕಸ್ತೂರಬಾ, ಮಹದೇವ ದೇಸಾಯಿ ಎಲ್ಲರನ್ನೂ ಮುಂಬೈನಿಂದ ಪೂನಾದ ಆಗಖಾನ್ ಅರಮನೆಗೆ ಸ್ಥಳಾಂತರಿಸಿದ ಬ್ರಿಟೀಷ್ ಸರ್ಕಾರ ಗೃಹಬಂಧನದಲ್ಲಿರಿಸಿತು. ಅದೇ ವರ್ಷ (1942) ಆಗಸ್ಟ್ 15 ರಂದು ತಮ್ಮ ಐವತ್ತನೇಯ ವಯಸ್ಸಿನಲ್ಲಿ ಮಹದೇವ ದೇಸಾಯಿ ಆಗಖಾನ್ ಅರಮನೆಯ ಗೃಹ ಬಧನದಲ್ಲಿದ್ದಾಗ ಅಕಾಲ ಸಾವಿಗೆ ಈಡಾದರು. ಮಹಾದೇವ ದೇಸಾಯಿ ಅವರ ಸಾವು ಗಾಂಧೀಜಿಯ ಮೇಲೆ ತೀವ್ರ ಪರಿಣಾಮ ಬೀರಿತು. ಅವರು ಎಷ್ಟೊಂದು ಜರ್ಜಿತರಾದರೆಂದರೆ, ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟರು. ದೇಸಾಯಿ ಯವರ ಅಂತ್ಯ ಕ್ರಿಯೆಯನ್ನು ಅರಮನೆ ಆವರಣದಲ್ಲಿ ನೆರವೇರಿಸಿ, ತನ್ನ ಶಿಷ್ಯನನ್ನು “ “ಮಹದೇವದೇಸಾಯಿ ನನ್ನ ಗುರುಎಂದು ಕರೆದರು. ಅಲ್ಲದೆ, ಪ್ರತಿ ದಿನ ಬೆಳಿಗ್ಗೆ ಶಿಷ್ಯನ ಸಮಾಧಿ ಬಳಿ ತೆರಳಿ ಪ್ರಾರ್ಥನೆ ಸಲ್ಲಿಸಿ ಬರುತ್ತಿದ್ದರು. 1944 ರ ಪೆಬ್ರವರಿ 22 ರಂದು ತಮ್ಮ ಪತ್ನಿ ಕಸ್ತೂರಭಾ ಗಾಂಧಿ ಮೃತಪಟ್ಟಾಗ, ಅವರಿಗೂ ಸಹ  ತಮ್ಮ ಶಿಷ್ಯನ ಸಮಾಧಿ ಪಕ್ಕದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದರು.
ಮಹದೇವ ದೇಸಾಯಿಯಂತೆ ಗಾಂಧೀಜಿ ಚಿಂತನೆಗೆ ಒಳಗಾದ ವಿದೇಶದ ಹೆಣ್ಣು ಮಗಳೆಂದರೆ, ಮೆಡಲಿನ್ ಸ್ಲೆಡ್. ಇಂಗ್ಲೇಂಡಿನ ಓರ್ವ ನೌಕಾ ಅಧಿಕಾರಿಯ ಪುತ್ರಿಯಾಗಿ ಜನಿಸಿದ ಈಕೆ (1892) ಒಮ್ಮೆ ನೆರೆಯ ಪ್ರಾನ್ಸಿನ ರಾಜಧಾನಿ ಪ್ಯಾರಿಸ್ ನಗರಕ್ಕೆ ಹೋಗಿದ್ದ ಸಂದರ್ಭದಲ್ಲಿ ಗಾಂಧಿ ಕುರಿತ ಪುಸ್ತಕದಿಂದ ಪ್ರಭಾವಗೊಂಡವರು. ತನ್ನ 23 ನೆಯ ವಯಸ್ಸಿನಲ್ಲಿ  ತಾತ ಹುಟ್ಟು ಹಬ್ಬು ಉಡೂಗರೆಯಾಗಿ ನೀಡಿದ್ದ 23 ಪೌಂಡ್ ಹಣವನ್ನು ಗಾಂಧಿ ಸ್ಥಾಪಿಸಿದ್ದ ನಿಧಿಗೆ ದಾನವಾಗಿ ನೀಡಿದವರು. ಆನಂತರ 1925 ರ ನವಂಬರ್ ತಿಂಗಳಿನಲ್ಲಿ ತನ್ನ ಪಾಶ್ಚಿಮಾತ್ಯ ಸಂಸ್ಕಾರವನ್ನು ತೊರೆದು ಭಾರತಕ್ಕೆ ಬಂದು ಗಾಂಧೀಜಿ ಜೊತೆ ಗುರುತಿಸಿಕೊಂಡರು. ಗಾಂಧೀಜಿ ಇವರಿಗೆ ಮೀರಾ ಎಂದು ನಾಮಕರಣ ಮಾಡಿದರು ಆನಂತರ ಇವರು ಭಾರತದಲ್ಲಿ ಮೀರಾ ಬೆಹನ್ ಎಂದು ಪ್ರಸಿದ್ಧಿಯಾದರು. ಮಹಾದೇವ ದೇಸಾಯಿಯಂತೆ, ಗಾಂಧೀಜಿಯನ್ನು ನೆರಳಿನಂತೆ ಹಿಂಬಾಲಿಸಿದ ಇವರು, ಉಪ್ಪಿನ ಸತ್ಯಾಗ್ರಹ, ಲಂಡನ್ ನಗರದಲ್ಲಿ ನಡೆದ ದುಂಡು ಮೇಜಿನ ಪರಿಷತ್ತು, ಚಲೇ ಜಾವ್ ಚಳುವಳಿಯಲ್ಲಿ ಪಾಲ್ಗೊಂಡು ಸೆರೆಮನೆ ವಾಸ ಅನುಭವಿಸಿದರು. 1947 ರ ಲ್ಲಿ ಗಾಂಧೀಜಿ ಅಣತಿ ಮೇರೆಗೆ ಹೃಷಿಕೇಶಕ್ಕೆ ತೆರಳಿ ಪಶುಲೋಕ್ ಎಂಬ ಆಶ್ರಮ ಸ್ಥಾಪಿಸಿ, ಗೋವುಗಳ ರಕ್ಷಣೆ, ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡರು.
ಸ್ವಾತಂತ್ಯಾನಂತರ ಹೃಷಿಕೇಷದಿಂದ ಹಿಮಾಲಯಯದ ತಪ್ಪಲಿನತ್ತ ತೆರಳಿದ ಮೀರಾ ಬೆಹನ್ ತೆಹ್ರಿ ಹಾಗೂ ಚಮೋಲಿ, ಘರವಾಲ್ ಪ್ರದೇಶಗಳಲ್ಲಿ ನಡೆಯುತ್ತಿದ್ದ ಮರಗಳ ಮಾರಣ ಹೋಮದ ವಿರುದ್ಧ ಜನತೆಗೆ ಎಚ್ಚರಿಸಿದರು. ಓಕ್ ಮತ್ತು ಫೈನ್ ಮರಗಳು ನೆಲಸಮವಾಗುವುದನ್ನು ಕಂಡು, ಇದಕ್ಕೆ  ಮುಂದೆ ಬೆಲೆ ತೆರಬೇಕಾಗ ಬಹುದೆಂದು ಎಚ್ಚರಿಸಿದ್ದರು. ಅವರ ಮಾತು ಇದೇ ವರ್ಷ ನಡೆದ ಉತ್ತರಕಾಂಡ ನೈಸರ್ಗಿಕ ವಿಕೋಪದಲ್ಲಿ ನಿಜವಾಯಿತು. 1959 ರಲ್ಲಿ ಭಾರತ ಬಿಟ್ಟು ಇಂಗ್ಲೆಂಡಿಗೆ ವಾಪಾಸ್ಸಾದದ ಅವರು, ನಂತರ ವಿಯನ್ನಾ ಕ್ಕೆ ತೆರಳಿ, ಗಾಂಧೀಜಿ ಚಿಂತನೆಗಳ ಪ್ರಸಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 1982 ರ ಜುಲೈ 20 ರಂದು ನಿಧನರಾದರು.


ಗಾಂಧೀಜಿಯ ನಡುವಳಿಕೆ ಕುರಿತು ಮಾತನಾಡುವ ಅನೇಕ ಮಂದಿ ತಿಳಿಯಬೇಕಾದ ಮಹತ್ವದ ವಿಷಯವೆಂದರೆ, ಗಾಂಧಿ ಎಂಬ ವ್ಯಕ್ತಿತ್ವ ಕೇವಲ ಮಾತಿಗೆ, ಅಥವಾ ಟೀಕೆಗೆ ಅರ್ಥವಾಗುವದಂತಹದಲ್ಲ. ಅದು ಮನಸ್ಸಿನೊಳಕ್ಕೆ ಇಟ್ಟುಕೊಂಡು ಮಂಥಿಸುವಂತಹ ವ್ಯಕ್ತಿತ್ವ. ಆವಾಗ ಮಾತ್ರ ಗಾಂಧಿ ನಮಗೆ ಅರ್ಥವಾಗಬಲ್ಲರು, ಅವರ ಚಿಂತನೆಗಳು ನಮ್ಮ ಬುದ್ಧಿ ಮತ್ತೆಗೆ ನಿಲುಕಬಲ್ಲವು.

ಬುಧವಾರ, ಅಕ್ಟೋಬರ್ 23, 2013

ಕೃಷಿ ವಿಶ್ವ ವಿದ್ಯಾನಿಲಯಕ್ಕೆ ಹೈಕೋರ್ಟ್ ಕಪಾಳ ಮೋಕ್ಷ



ಭಾರತದಲ್ಲಿ ಬಿ.ಟಿ. ಹತ್ತಿಯನ್ನು ಬೆಳೆದು ರೈತರು ಹೈರಾಣಾಗಿರುವ ಸಂದರ್ಭದಲ್ಲಿ ನಮ್ಮ ಪ್ರಮುಖ ಆಹಾರ ಬೆಳೆಗಳಲ್ಲಿ ಒಂದಾದ ಬದನೆಕಾಯಿಯನ್ನು ಬಿ.ಟಿ.ಬದನೆಯಾಗಿ ಪರಿವರ್ತಿಸಲು   ಅನೈತಿಕವಾಗಿ ಮಾನ್ಸಂಟೊ ಕಪನಿ ಜೊತೆ  ಒಪ್ಪಂಧ ಮಾಡಿಕೊಂಡಿದ್ದ ಧಾರವಾಡದ ಕೃಷಿ ವಿಶ್ವ ವಿದ್ಯಾನಿಲಯಕ್ಕೆ ರಾಜ್ಯ ಉಚ್ಛ ನ್ಯಾಯಾಲಯ ಕಪಾಳ ಮೋಕ್ಷ ಮಾಡುವುದರ ಜೊತೆಗೆ ಛಡಿ ಏಟು ಭಾರಿಸಿದೆ.
ಈ ವಿಶ್ವ ವಿದ್ಯಾನಿಲಯದ ವಿಜ್ಙಾನಿಗಳಿಗೆ ನೈತಿಕತೆ ಅಥವಾ ಪಾಪಪ್ರಜ್ಙೆ ಎಂಬುದೇನಾದರು ಇದ್ದರೆ, ಮೊದಲು ಈ ನೆಲದ ರೈತರ ಕ್ಷಮೆ ಕೋರಬೇಕು. ನಂತರ ತಮ್ಮ ತಮ್ಮ ಹುದ್ದೆಗಳನ್ನು ತೊರೆಯಬೇಕು. ತನ್ನ ಜೈವಿಕ ಕುಲಾಂತರಿ ತಳಿಗಳ ಮೂಲಕ ಜಗತ್ತಿನ ಆಹಾರ ಭದ್ರತೆಯ ಮೇಲೆ ಸ್ವಾಮ್ಯ ಸಾಧಿಸಲು ಹೊರಟಿರುವ ಮಾನ್ಸಂಟೊ ಕಂಪನಿಯ ಗುಲಾಮರಂತೆ ಎಂಜಲು ಕಾಸಿಗಾಗಿ, ಈ ನೆಲದ ಬೀಜ ಸಂಸ್ಕೃತಿಯನ್ನು ಒತ್ತೆ ಇಡಲು ಹೊರಟ ಎಲ್ಲರಿಗೂ ಇದು ಎಚ್ಚರಿಕೆಯ ಪಾಠವಾಗಿದೆ.
ಭಾರತದಲ್ಲಿ ಆಹಾರ ಬೆಳೆಗಳ ಕುರಿತ ಯಾವುದೇ ಪ್ರಯೋಗ ನಡೆಯ ಬೇಕಾದರೆ, ಕೇಂದ್ರದ ಜೈವಿಕ ವೈವಿಧ್ಯ ಮಂಡಳಿಯಿಂದ ಪೂರ್ವಾನುಮತಿ ಪಡೆಯಬೇಕು. ಆದರೆ, ಅಮೇರಿಕಾ ಮೂಲದ ಮಾನ್ಸಂಟೊ ಬಹು ರಾಷ್ರೀಯ ಕಂಪನಿಯ ಸಹಭಾಗಿತ್ವದ ಮಹಾರಾಷ್ಟ್ರ ಮೂಲದ ಮಹಿಕೋ ಕಂಪನಿಯ ಜೊತೆ ಒಪ್ಪಂಧ ಮಾಡಿಕೊಂಡ ಧಾರವಾಡದ ಕೃಷಿ ವಿಶ್ವ ವಿದ್ಯಾನಿಲಯ , ಬಿ.ಟಿ ಬದನೆ ಪ್ರಯೋಗವನ್ನು ನಡೆಸಿ ಯಶಸ್ಸು ಸಾಧಿಸಿತ್ತು. ಈ ಪ್ರಯೋಗಕ್ಕೆ ಕೃಷಿ ವಿ.ವಿ.ಯು ಕೇಂದ್ರ ಸರ್ಕಾರದ  ಅನುಮತಿಯನ್ನಾಗಲಿ, ಅಥವಾ ಯು.ಜಿ.ಸಿ.ಯ ಅನುಮತಿ ಪಡೆಯದೆ, ಪ್ರಯೋಗಕ್ಕಾಗಿ ಮಾನ್ಸಂಟೊ ಕಂಪನಿಯಿಂದ ಕೋಟ್ಯಾಂತರ ರೂಪಾಯಿ ಹಣವನ್ನೂ ಸಹ ಪಡೆದಿತ್ತು.


ಇದನ್ನು ಗಮನಿಸಿದ ಕೇಂದ್ರ ಜೈವಿಕ ವೈವಿಧ್ಯ ಮಂಡಳಿಯ ಕಾರ್ಯದರ್ಶಿ, ಶ್ರಿ. ಅಚಲೇಂದ್ರ ರೆಡ್ಡಿ ಹಾಗೂ ರಾಜ್ಯ ಜೈವಿಕ ವೈವಿಧ್ಯ ಮಂಡಳಿಯ ಸದಸ್ಯ ಮತ್ತುಉಪಅರಣ್ಯಸಂರಕ್ಷಣಾಧಿಕಾರಿ ಶ್ರಿ.ಚಕ್ರಪಾಣಿ ಇವರು 2012 ರ ನವಂಬರ್ ತಿಂಗಳಿನ ಲ್ಲಿ  ಕೃಷಿ ವಿ.ವಿ.ಯ ಉಪಕುಲಪತಿ ಆರ್.ಆರ್. ಹಂಚಿನಾಳ, ರಿಜಿಸ್ಟ್ರಾರ್ ವಿಜಯಕುಮಾರ್,  ಮತ್ತು ಮಾಜಿ ಉಪಕುಲಪತಿ ಎಸ್.ಎ. ಪಾಟೀಲ್ ಇವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು.ಏಕೆಂದರೆ, ಧಾರವಾಡ ಕೃಷಿ ವಿ.ವಿ.ಯ  ಪ್ರಯೋಗ ದೇಶದ ಜೈವಿಕ ವೈವಿಧ್ಯ ಮಸೂದೆಗೆ ವಿರುದ್ಧವಾಗಿತ್ತು. ಮೊಕದ್ದಮೆ ವಿರುದ್ಧ ಹೈ ಕೋರ್ಟ್ ಮೆಟ್ಟಿಲೇರಿದ್ದ  ಧಾರವಾಡ ಕೃಷಿ ವಿ.ವಿ. ಯ ವಿವಾದಾತ್ಮಕ ಪ್ರಯೋಗ ಕುರಿತು ವಿಚಾರಣೆ ನಡೆಸಿದ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ , ಜಸ್ಟೀಸ್ ಪಚಾಪುರೆ, ವಿ.ವಿ. ಪೂರ್ವ ಅನುಮತಿಯನ್ನು ತೆಗೆದುಕೊಳ್ಳದೆ ಪ್ರಯೋಗ ನಡೆಸಿರುವುದನ್ನು ಖಂಡಿಸಿದ್ದಾರೆ ಅಲ್ಲದೆ ವಿ.ವಿ.ಯ ಮೇಲ್ಮನವಿಯನ್ನು ಸಹ ತಳ್ಳಿ ಹಾಕಿದ್ದಾರೆ. ಈಗ ಕೃಷಿ ವಿ.ವಿ.ಯು ಕ್ರಿಮಿನಲ್ ಮೊಕದ್ದಮೆಯನ್ನು ಎದುರಿಸಬೇಕಾಗಿದೆ.

ಬಿ.ಟಿ. ಹತ್ತಿ ಬಗ್ಗೆ  ಪುಂಗಿದಾಸರು ಮತ್ತು ಮಾನ್ಸಂಟೊ ಭಜನಾ ಮಂಡಳಿಯ ಸದಸ್ಯರು ದಶಕದಿಂದ ಏನೆಲ್ಲಾ ಡಂಗೂರ ಸಾರಿದರೂ ಸಹ, ಹತ್ತಿಯ ಕಾಂಡ ಕೊರೆಯುವ ಹುಳುಗಳು ಹೊಸ ಹೊಸ ರೂಪದಲ್ಲಿ ಸೃಷ್ಟಿಯಾಗುತ್ತಿವೆ ಎಂಬುದು ದೃಢ ಪಟ್ಟಿದೆ. ಇತ್ತೀಚೆಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬಿ.ಟಿ. ಚನ್ನೇಶ್ ಎಂಬುವರು ಬಿ.ಟಿ. ಹತ್ತಿಯ ಕರ್ಮಕಾಂಡದ ಬಗ್ಗೆ ವಿವರವಾದ ಲೇಖನ ಬರೆದಿದ್ದಾರೆ. ಆದರೆ, ನಮ್ಮ ವಿಜ್ಙಾನಿಗಳಿಗೆ ಕುರುಡು ಕಾಂಚಾಣದ ಮುಂದೆ ಯಾವುದು ಲೆಕ್ಕವಿಲ್ಲದಂತಾಗಿದೆ.
ಸದ್ಯ ನಮ್ಮ ಕನ್ನಡ ಭಾಷೆಯಲ್ಲಿ ನೆಲ-ಜಲ-ಕೃಷಿ ಕುರಿತು ಬರೆಯುತ್ತಿರುವ ಪತ್ರಕರ್ತರು ಮತ್ತು ಲೇಖಕರಾದ ರಾಧಾಕೃಷ್ಣ ಭಡ್ತಿ, ಮಲ್ಲಿಕಾರ್ಜುನ ಹೊಸಪಾಳ್ಯ, ಜಿ.ಕೃಷ್ಣಪ್ರಸಾದ್, ಗಾಣದಾಳು ಶ್ರೀಕಂಠ, ಆನಂದತೀರ್ಥ ಪ್ಯಾಟಿ. ಅನಿತಾ ಪೈಲೂರು, ಮೊದಲಾದವರು ಹಾಗೂ ಇವರಿಗೆ ಬೆಂಬಲವಾಗಿ ನಿಂತಿರುವ ನಾಗೇಶ್ ಹೆಗ್ಗಡೆ, ಶ್ರೀಪಡ್ರೆ ಇಂತಹವರಿಗೆ ಇರುವ ಕಾಳಜಿಯ ಶೇಕಡ ಹತ್ತರಷ್ಟು ಭಾಗ ನಮ್ಮ ಕೃಷಿ ವಿಜ್ಙಾನಿಗಳಿಗೆ ಇದ್ದರೆ, ಈ ನೆಲದ ರೈತರು ಎಂದೋ ಉದ್ಧಾರವಾಗುತ್ತಿದ್ದರು.
ಅದೇ ಹೈಬ್ರಿಡ್ ತಳಿಗಳು, ಅದೇ ಕೀಟನಾಶಕ, ಅದೇ ರಸಾಯಿನಿಕ ಗೊಬ್ಬರಗಳ ಕುರಿತು ಗಿಳಿ ಪಾಠ ಒಪ್ಪಿಸುವ ಈ ಕೂಚುಭಟ್ಟರಿಗೆ ಅದರಿಂದಾಚೆಗೆ ಏನನ್ನೂ ಯೋಚಿಸಲು ಸಾದ್ಯವಾಗಿಲ್ಲ. ಈಗ ನಮ್ಮ ರೈತರು ತಾವಾಗಿ ಕಂಡುಕೊಂಡ  ಸುಸ್ಥಿರ ಕೃಷಿ ಕುರಿತು ಅ ಆ ಇ ಈ ಗೊತ್ತಿಲ್ಲ. ಕಳೆದ ಒಂದು ದಶಕದಿಂದ ತೆಂಗಿನ ಬೆಳೆಗೆಗೆ ಕಾಡುತ್ತಿರುವ ನುಸಿ ಪೀಡೆ ರೋಗಕ್ಕೆ ಇವರ ಬತ್ತಳಿಕೆಯಲ್ಲಿ ಯಾವ ಬಾಣಗಳಿಲ್ಲ ಎಂದ ಮೇಲೆ , ಯಾವ ಪುರುಷಾರ್ಥಕ್ಕೆ ಈ ಕೃಷಿ ವಿಶ್ವ ವಿದ್ಯಾನಿಲಯಗಳು? ಯಾರಿಗೆ ಬೇಕು ಈ ಕೃಷಿ ವಿಜ್ಙಾನಿಗಳು? ಕಡೂರು, ಬೀರೂರು, ಅರಸಿಕೆರೆ, ತಿಪಟೂರು, ತುಮಕೂರು, ಮಂಡ್ಯ, ನಾಗಮಂಗಲ ಹಾಸನ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸುಳಿ ಒಣಗಿ ನಿಂತಿರುವ ತೆಂಗಿನ ಮರಗಳನ್ನು ನೋಡಿದರೆ, ಕಣ್ಣಲ್ಲಿ ನೀರು ಬರುತ್ತದೆ. ಹತ್ತಾರು ವರ್ಷ ಬೆಳೆಸಿದ ತೆಂಗಿನ ಮರ ರೈತನ ಪಾಲಿಗೆ ಒಣಗುವುದು ಒಂದೇ, ಅದೇ ರೈತ ಎದೆಯುದ್ದ ಬೆಳೆದ ಮಗನನ್ನು ಕಳೆದುಕೊಳ್ಳುವುದೂ ಒಂದೇ. ಈ ಎರಡು ನೋವಿಗೆ ವೆತ್ಯಾಸವೇನಿಲ್ಲ.

( ಮಾನ್ಸಂಟೊ ಕಂಪನಿಯ ಹೀನ ಇತಿಹಾಸ ಕುರಿತ ಬರೆದ ಮೂರು ಲೇಖನಗಳು ಇದೇ ಬ್ಲಾಗ್ ನಲ್ಲಿ ಮೇ ತಿಂಗಳಿನಲ್ಲಿ ಪ್ರಕಟವಾಗಿವೆ. ಆಸಕ್ತರು ಗಮನಿಸಬಹುದು)