ಶನಿವಾರ, ಸೆಪ್ಟೆಂಬರ್ 3, 2022

ಲೋಕಾಯುತ ದರ್ಶನದಲ್ಲಿ ಅವೈದಿಕ ಪರಂಪರೆಯ ಬೇರುಗಳು

 

ಭಾರತದ ತತ್ವಶಾಸ್ತç ಇತಿಹಾಸದಲ್ಲಿ ವೈದಿಕ ಪರಂಪರೆಯ ವಿರುದ್ಧ ಸಿಡಿದೆದ್ದ ಚಾರ್ವಾಕನ ಸಿದ್ಧಾಂತಗಳು ನಮಗಿಂದು ಲೋಕಾಯುತ ದರ್ಶನ ಎಂಬ ಹೆಸರಿನಲ್ಲಿ ಚಿರಪರಿಚಿತವಾಗಿವೆ. ಕ್ರಿಸ್ತಪೂರ್ವ ಐದು ಅಥವಾ ನಾಲ್ಕನೆಯ ಶತಮಾನದಲ್ಲಿ ರಚನೆಯಾದವು ಎಂದು ಹೇಳಲಾಗುವ ವೈದಿಕ ಪರಂಪರೆಯ ಮೂಲ ಗ್ರಂಥಗಳಾದ ಋಗ್ವೇದ. ಸಾಮವೇದ, ಯಜುರ್ವೇದ ಮತ್ತು ಅಥರ್ವವೇದ ಇವುಗಳಿಗೆ ಪರ್ಯಾಯವಾಗಿ ಬೃಹಸ್ಪತಿ ಆಚಾರ್ಯ ಎಂಬ ವ್ಯಕ್ತಿಯು ಪ್ರತಿಪಾದಿಸಿದ ಭೌತವಾದದ ಸಿದ್ಧಾಂತವು ನಂತರದ ದಿನಗಳಲ್ಲಿ ಆತನ ಶಿಷ್ಯನಾದ ಚಾರ್ವಾಕನಿಂದ ವ್ಯಾಖ್ಯಾನಿಸಲ್ಪಟ್ಟು ಚಾರ್ವಾಕ ದರ್ಶನ ಅಥವಾ ಲೋಕಾಯುತ ದರ್ಶನ ಎಂಬ ಹೆಸರಿನಲ್ಲಿ ಪ್ರಸಿದ್ಧಿಯಾಯಿತು. ಇದನ್ನು  ವಸ್ತುನಿಷ್ಠ ಆಲೋಚನೆಯ ಫಲವಾಗಿ ಮೂಡಿಬಂದ ಮನುಕುಲದ ಶ್ರೇಷ್ಠ ಪರಿಕಲ್ಪನೆ ಅಥವಾ ಚಿಂತನೆ ಎಂದು ಹೇಳಬಹುದು. ಅಲ್ಲಿಯವರೆಗೆ ಪ್ರಚಲಿತದಲ್ಲಿದ್ದ ಬ್ರಾಹ್ಮಣ್ಯದ ಭಾವನಾವಾದವನ್ನು ಚಾರ್ವಾಕನು ತಿರಸ್ಕರಿಸುವುದರ ಮೂಲಕ  ದೇವರು, ಸೃಷ್ಟಿ, ಪುನರ್ಜನ್ಮ ಮುಂತಾದ ವಿಷಯಗಳ ಕುರಿತಂತೆ ಇದ್ದ ಪರಿಕಲ್ಪನೆಗಳಿಗೆ ಪೆಟ್ಟು ನೀಡಿದನು.  ಹಿಂದೂ ಧರ್ಮಕ್ಕೆ ಪರ್ಯಾಯವಾಗಿ ಬೌದ್ಧ ಧರ್ಮ, ಜೈನ ಧರ್ಮಗಳ ಸ್ಥಾಪನೆಗೆ ಹಾಗೂ ಅನೇಕ ಅವೈದಿಕ ಪರಂಪರೆಯ ಹುಟ್ಟಿಗೆ  ಪರೋಕ್ಷವಾಗಿ ಕಾರಣನಾದನು. ಇಂದು ನಮ್ಮೊಡನೆ ಅಸ್ತಿತ್ವದಲ್ಲಿರುವ ನಾಥ, ಸಾಂಖ್ಯ, ಸಿದ್ಧ, ಕಾಪಾಲಿಕ, ಅಜೀವಿಕ, ಶಾಕ್ತ ಹೀಗೆ ಅನೇಕ ಅವೈದಿಕ ಪರಂಪರೆಗಳು ಹಿಂದೂಧರ್ಮವು ಪ್ರತಿಪಾದಿಸುತ್ತಾ ಬಂದಿದ್ದ ಅಗ್ನಿ ಪೂಜೆಯನ್ನು  ತಿರಸ್ಕರಿಸುವುದರ ಮೂಲಕ  ಯಜ್ಞ ಯಾಗಾದಿಗಳನ್ನು ಬಹಿಷ್ಕರಿಸಿ ಹೊಸ ಚಿಂತನೆಗೆ ನಾದಿ ಹಾಡಿದವು.

ನಮಗೆ ಈವರೆಗೂ ಚಾರ್ವಾಕನ ಲೋಕಾಯುತ ದರ್ಶನದ ಪೂರ್ಣ ವಿವರಗಳು ಲಭ್ಯವಾಗಿಲ್ಲ ಆತನ ನಿಲುವುಗಳನ್ನು ಖಂಡಿಸುವ ಉದ್ದೇಶದಿಂದ ಆತನು ಎತ್ತಿದ್ದ ಪ್ರಶ್ನೆಗಳನ್ನು ಪ್ರಸ್ತಾಪಿಸಿರುವ ಬ್ರಾಹ್ಮಣ ಪಂಡಿತರು ಕ್ರಿಸ್ತಪೂರ್ವದಲ್ಲಿ ಸಂಸ್ಕೃತ ಭಾಷೆಯಲ್ಲಿ ಬರೆದ ಟಿಪ್ಪಣಿಗಳಿಂದ ಚಾರ್ವಾಕ ದರ್ಶನದ ವಿವರಗಳು ಲಭ್ಯವಾಗಿವೆ. ಬುದ್ಧನ ಮೇಲೆ ಅಪಾರ ಪ್ರಭಾವ ಬೀರಿರುವ ಲೋಕಾಯುತದ ದರ್ಶನದ ಅನೇಕ ಚಿಂತನೆಗಳನ್ನು ಬುದ್ಧನು ತನ್ನ ಧರ್ಮಕ್ಕೆ ಅಳವಡಿಸಿಕೊಂಡಿರುವ ಕಾರಣ ಪಾಲಿ ಮತ್ತು ಟಿಬೇಟ್ ಭಾಷೆಯಲ್ಲಿ ಅನೇಕ ಮಹತ್ವದ ವಿಚಾರಗಳು ಲಭ್ಯವಾಗಿವೆ. ನಮ್ಮ ಪುರಾಣ ಕೃತಿಗಳಾದ ರಾಮಾಯಣ, ಮಹಾಭಾರತ, ಬೃಹದಾರಣ್ಯಕ ಉಪನಿಷತ್ತುಗಳಲ್ಲಿ ಇದರ ಕುರಿತಾಗಿ ಪ್ರಸ್ತಾಪ ಇರುವುದರಿಂದ ಚಾರ್ವಾಕ ದರ್ಶನವನ್ನು ಭಾರತದ ಪ್ರಾಚೀನ ಗ್ರಂಥ ಎಂದು ಪರಿಗಣಿಸಲಾಗಿದೆ.  ಇದನ್ನು ಹೊರತು ಪಡಿಸಿದರೆ ಕೌಟಿಲ್ಯನ ಅರ್ಥಶಾಸ್ತçದಲ್ಲಿ ಮಾತ್ರ ಚಾರ್ವಾಕನ ಪ್ರಸ್ತಾವನೆಗಳಿರುವುದನ್ನು ನಾವು ಗಮನಿಸಬಹುದು.

ಮಗಧ ಸಾಮ್ರಾಜ್ಯದಲ್ಲಿ ಮಹಾಮಂತ್ರಿಯಾಗಿದ್ದ ಕೌಟಿಲ್ಯನು ಅರ್ಥಶಾಸ್ತç ಕೃತಿಯನ್ನು ವಾಸ್ತವವಾಗಿ ರಾಜಕುಮಾರರ ಶಿಕ್ಷಣಕ್ಕಾಗಿ ರಚನೆ ಮಾಡಿದ್ದನು. ಸಿಂಹಾಸನಕ್ಕೆ ಏರುವ ಮುನ್ನ ರಾಜಕುಮಾರರು ಕಲಿಯಲೇ ಬೇಕಾದ ನಾಲ್ಕು ವಿದ್ಯೆಗಳಲ್ಲಿ ಲೋಕಾಯುತ ದರ್ಶನದ ಕೆಲವು ಅಂಶಗಳನ್ನು ವಿಮರ್ಶಾತ್ಮಕ ವಿಚಾರಣೆ ಅಥವಾ ಶೋಧನೆ ಎಂಬ ಹೆಸರಿನಲ್ಲಿ ಅಡಕಗೊಳಿಸಿದ್ದನು. ಉಳಿದಂತೆ ವ್ಯಾಪಾರ, ವ್ಯವಹಾರವನ್ನು ತ್ರಾಯಿ ಹೆಸರಿನಲ್ಲಿ, ಕೃಷಿ ಮತ್ತು ಬೌತಿಕ ಸಂಪಾದನೆಯನ್ನು ವಿಜ್ಞಾನದ ವಾರ್ತಾ ಹೆಸರಿನಲ್ಲಿ ಹಾಗೂ ರಾಜಾಡಳಿತದ ವಿಷಂಗಳನ್ನು  ದಂಡನೀತಿ ಹೆಸರಿನಲ್ಲಿ ರೂಪಿಸಿದ್ದನು. ಜೊತೆಗೆ ನ್ಯಾಯ ಮತ್ತು ಮೀಮಾಂಸೆಯ ಅಂಶಗಳನ್ನು ಸಹ ಅಡಕಗೊಳಿಸಿದ್ದನು. ಕೌಟಿಲ್ಯನ ದೃಷ್ಟಿಕೋನದಲ್ಲಿ ಲೋಕಾಯುತ ದರ್ಶನವೆಂಬುದು ಕೇವಲ ಒಂದು ಜ್ಞಾನಶಾಖೆಯಾಗಿರಲಿಲ್ಲ ಅದು ಹಲವು ಆಯಾಮಗಳ ಚಿಂತನೆಗಳಿಗೆ ಸಾಧನೆಯ ಮಾರ್ಗವಾಗಿತ್ತು ಜೊತೆಗೆ ಬಹುತೇಕ ಬ್ರಾಹಣ ಪಂಡಿತರು ಲೋಕಾಯುತ ವಿಚಾರಗಳನ್ನು ಅನ್ವೀಕ್ಷಿಕಿ ಹೆಸರಿನಲ್ಲಿ ಚರ್ಚೆ ಮಾಡಿದ್ದರು. ಕಾರಣದಿಂದಲೇ ಕೌಟಿಲ್ಯನು ಎಲ್ಲಾ ಶಾಖೆಗಳ ಅಧ್ಯಯನಗಳಿಗೆ ವಿಚಾರಣೆಯು ( ಲೋಕಾಯುತ ದರ್ಶನ) ಕೈದೀವಿಗೆ ಎಂದು ಅಭಿಪ್ರಾಯಪಟ್ಟಿದ್ದಾನೆ. ಇದರ ಜೊತೆ ಸಾಂಖ್ಯಾ ಯೋಗ ವಿಷಯಗಳನ್ನು ಸಹ ಅವನು ಪ್ರಸ್ತಾಪಿಸಿದ್ದಾನೆ.

ಹದಿನಾಲ್ಕನೆಯ ಶತಮಾನದಲ್ಲಿ ಸರ್ವ ದರ್ಶನ ಸಂಗ್ರಹ ಎಂಬ ಹೆಸರಿನಲ್ಲಿ ಶೃಂಗೇರಿ ಮಠದ ಮುಖ್ಯಸ್ಥರಾದ ವಿದ್ಯಾರಣ್ಯ ಸ್ವಾಮಿ ಎಂಬುವರು ಮಾಧವಾಚಾರ್ಯ ಹೆಸರಿನಲ್ಲಿ ಲೋಕಾಯುತ ದರ್ಶನ ಕುರಿತಂತೆ ಪ್ರಸ್ತಾವನೆ  ಮಾಡಿದ ಫಲವಾಗಿ ಚಾರ್ವಾಕನ ವಿಚಾರಧಾರೆಗಳು ಎಲ್ಲೆಡೆ ಪ್ರಸಾರವಾದವು. ಭಾರತದ ಪ್ರಾಚೀನ ಚಿಂತನೆಗಳನ್ನು ಧರ್ಮಾತೀತ ನಿಲುವಿನಲ್ಲಿ ಮಂಡಿಸುವುದು ಅಥವಾ ವೈಚಾರಿಕವಾಗಿ ಮರು ರೂಪಿಸುವ ಬಗೆಯನ್ನು ಅವರು ಕೃತಿಯಲ್ಲಿ  ತೋರಿಸಿಕೊಟ್ಟಿದ್ದರು.ಲೋಕಾಯುತ ದರ್ಶನದ ಜೊತೆಗೆ ನ್ಯಾಯ, ವೈಶೇಷಿಕ, ಯೋಗ, ಸಾಂಖ್ಯ, ವೇದಾಂತ, ಮೀಮಾಂಸೆ ಒಳಗೊಂಡAತೆ ಹದಿನಾರು ದರ್ಶನಗಳನ್ನ ಬಗ್ಗೆಯೂ ಸಹ ವಿದ್ಯಾರಣ್ಯ ಸ್ವಾಮಿ ದಾಖಲಿಸಿದ್ದರು.

ದೇವಿಪ್ರಸಾದ್ ಚಟ್ಟೋಪಾದ್ಯಾಯ ಅವರು 1959 ರಲ್ಲಿ ರಚಿಸಿದಲೋಕಾಯುತ ಸ್ಟಡಿ ಇನ್ ಆನ್ಸಿಂಟ್ ಇಂಡಿಯನ್ ಮೆಟೀರಿಯಲಿಸಂಎಂಬ ಕೃತಿ ನಮಗೆ ಲೋಕಾಯುತ ದರ್ಶನದ ಸಮಗ್ರ ಮಾಹಿತಿ ನೀಡುವ ಆಧುನಿಕ ಕೃತಿಯಾಗಿದೆ. ಇದನ್ನು ಡಾ.ಜಿ.ಆರ್. ರಾಮಕೃಷ್ಣರವರು ಕನ್ನಡಕ್ಕೆ ಅನುವಾದಿಸಿದ್ದಾರೆ.  1960 ದಶಕದಲ್ಲಿ ಗೌರೀಶ ಕಾಯ್ಕಿಣಿ ಬರೆದ ಕೃತಿಯು ಬಹುಶಃ ಕನ್ನಡದ ಪ್ರಥಮ ಲೋಕಾಯುತ ದರ್ಶನದ  ಕೃತಿ ಎನ್ನಬಹುದು.

ತತ್ವಜ್ಞಾನ ಅಥವಾ ತತ್ವಶಾಸ್ತç ಭಾರತೀಯ ದರ್ಶನಗಳು ಎಂಬ ಹೆಸರಿನಲ್ಲಿ ವೈದಿಕ ಮತ್ತು ಅವೈದಿಕ ಜ್ಞಾನಪರಂಪರೆಗಳು ಇತಿಹಾಸದುದ್ದಕ್ಕೂ ಚರ್ಚೆಯಾಗುತ್ತಾ ಬಂದಿವೆ. ವೈದಿಕ ಮತ್ತು ಅವೈದಿಕ ಪರಂಪರೆಯ ದರ್ಶನಗಳ ಮುಖ್ಯ ತಾತ್ವಿಕ ಚರ್ಚೆಯ ನೆಲಗೆಟ್ಟು ವಿಶ್ವದ ಸೃಷ್ಟಿಯ ಕುರಿತಾಗಿರುವುದು ವಿಶೇಷ.  ಕಾರಣದಿಂದಾಗಿ ವೈದಿಕ ದರ್ಶನಗಳನ್ನು ಭಾವನಾವಾದಿ ಚಿಂತನೆಗಳೆAದು ಕರೆಯಲಾಗಿದೆ ಇವರ ದೃಷ್ಟಿಯಲ್ಲಿ ವಿಶ್ವವು ಸೃಷ್ಟಿಯಾಗಿರುವುದು ಒಂದು ಅಗೋಚರ ಶಕ್ತಿಯಿಂದ ಎಂಬ ನಂಬಿಕೆ ಇವರದಾಗಿದೆ.  ಇದನ್ನು ನಿರಾಕರಿಸುವ ಅವೈದಿಕ ಪರಂಪರೆಯು ವಾತಾವರಣದಲ್ಲಿರುವ ಸೂಕ್ಷö್ಮ  ವಸ್ತುವಿಂದ ವಿಶ್ವ ಮತ್ತು ಸಕಲೆಂಟು ಜೀವಿಗಳು ಸೃಷ್ಟಿಯಾಗಿವೆ ಅವುಗಳು ಜಗತ್ತಿನಲ್ಲಿ  ಶಾಶ್ವತವಲ್ಲ ಎಂದು ಹೇಳುವುದರ ಮೂಲಕ ವೈದಿಕ ಪರಂಪರೆಯ ಬ್ರಹ್ಮಾಂಡ, ಬ್ರಹ್ಮೋಪದೇಶ ಮುಂತಾದ ಪರಿಕಲ್ಪನೆಗಳನ್ನು ತಿರಸ್ಕರಿಸಿತು. ಹಾಗಾಗಿ ಚಿಂತನೆಯು ಬೌತವಾದಿ ಚಿಂತನೆ ಎಂದು ಪ್ರಸಿದ್ಧಿಯಾಗಿದೆ. ವಾಸ್ತವಾಗಿ ಕ್ರಿಸ್ತಪೂರ್ವದಲ್ಲಿ ಹಿಂದೂ ಧರ್ಮದಿಂದ ಸಿಡಿದೆದ್ದ ಶೈವಪರಂಪರೆ, ವೈಷ್ಣವಪರಂಪರೆ, ಬುದ್ಧ ಹಾಗೂ ಜೈನ ಪರಂಪರೆಗಳಿಗೆ ಅವುಗಳ ಹೆಸರಿನ ಹಿಂದೆ ಪೂರ್ವ ಎಂಬ ಶಬ್ದವನ್ನು ಬಳಕೆ ಮಾಡಲಾಗುತ್ತಿತ್ತು. ( ಪೂರ್ವ ಜೈನ, ಪೂರ್ವ ವೈಷ್ಣವ ಇತ್ಯಾದಿ) ನಂತರದ ದಿನಗಳಲ್ಲಿ ಅನೇಕ ಪರಂಪರೆಗಳಾಗಿ ಕವಲೊಡೆದ ಅವೈದಿಕ ಪರಂಪರೆಯು ಇಂದಿನ ದಿನಗಳಲ್ಲಿ ಗೊಂದಲದ ಗೂಡಾಗಿ ಪರಿವರ್ತನೆಗೊಂಡಿದೆ. ಭಾರತೀಯ ತತ್ವಶಾಸ್ತç ಕುರಿತ ಅಧ್ಯಯನ ಎಂದರೆ ಗೊಂದಲಮಯ ತಾತ್ವಿಕ ಪ್ರಾಚೀನ ದರ್ಶನಗಳ  ಕುರಿತಾದ ಅಧ್ಯಯನ ಎಂಬಂತಾಗಿದೆ.

ಈಗಾಗಲೇ ಪ್ರಚಲಿತದಲ್ಲಿರುವಂತೆ ಚಾರ್ವಾಕ, ಬೌದ್ಧ, ಜೈನ, ರಾಮಾನುಜಾ ಸಿದ್ಧಾಂತ, ಪೂರ್ಣ ಪ್ರಜ್ಞ, ನಕಲೀಶ, ಪಾಶುಪತ, ಶೈವ, ಪ್ರತ್ಯಭಿಜ್ಞಾನ, ರಸೇಶ್ವರ, ವೈಶೇಷಿಕ, ನ್ಯಾಯ, ಜೈಮಿನೀಯ, ಪಾಣಿನೀಯ, ಸಾಂಖ್ಯ, ಪತಾಂಜಲಿ ಅಥವಾ ಯೋಗ, ಶಂಕರಚಾರ್ಯರ ಸಿದ್ಧಾಂತ ( ವೇದಾಂತ) ಇವುಗಳನ್ನು ವಿದ್ಯಾರಣ್ಯ ಸ್ವಾಮೀಜಿ ತಮ್ಮ ಸರ್ವ ದರ್ಶನ ಸಂಗ್ರಹ ಕೃತಿಯಲ್ಲಿ ಪ್ರಸ್ತಾಪಿಸಿ ಇವುಗಳಲ್ಲಿ ಲೋಕಾಯುತ ದರ್ಶನವು ಅತ್ಯಂತ ಹೀನಾಯವಾದುದು ಎಂದು ಟೀಕಿಸಿದ್ದಾರೆ. ಲೋಕಾಯುತ ದರ್ಶನವನ್ನು ನಿರಾಕರಿಸುವ ಉದ್ದೇಶದಿಂದ ಅದರಲ್ಲಿ ಪ್ರಸ್ತಾಪಿಸಿರುವ ಅಂಶಗಳನ್ನು ಬ್ರಾಹ್ಮಣ ಪಂಡಿತರು ಉಲ್ಲೇಖಿಸಿದ ಕಾರಣಕ್ಕಾಗಿ ಇಂದು ನಮಗೆ ಚಾರ್ವಾಕನ ಸಿದ್ಧಾಂತಗಳು ಲಭ್ಯವಾಗಿವೆ. ಸರ್ವದರ್ಶನ ಸಂಗ್ರಹದಲ್ಲಿ ಪ್ರಸ್ತಾಪವಾಗಿರುವ ಮೂಲ ಅಂಶಗಳು ಈರೀತಿ ಇವೆ.

ಜೀವನದಲ್ಲಿ ಸಂತೋಷವೇ ಪರಮ ಗುರಿ ಜಗತ್ತನ್ನು ಹೊರತು ಪಡಿಸಿದರೆ ಸ್ವರ್ಗ ಅಥವಾ ನರಕ ಎಂಬ ಲೋಕಗಳಿಲ್ಲ, ಹುಟ್ಟು ಸಾವುಗಳಿಂದ ಬಿಡುಗಡೆ ಎಂಬುದು ಕೇವಲ ಭ್ರಮೆ, ಮನುಷ್ಯ ಜನ್ಮಕ್ಕೆ ಪುನರ್ಜನ್ಮ ಎನ್ನುವುದು ಹುಚ್ಚು ಪರಿಕಲ್ಪನೆ. ಮನುಷ್ಯ ಜೀವಿ ತಾನು ಬದುಕಿರುವ ಕಾಲಘಟ್ಟದಲ್ಲಿ ನೆಮ್ಮದಿಯಿಂದ ಬದುಕಬೇಕಾದರೆ ಸುಖ ಮತ್ತು ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಗುಣವನ್ನು ಹೊಂದಿರಬೇಕು. ಜಗತ್ತು ಯಾವೊಂದು ಅಗೋಚರ ಶಕ್ತಿಯಿಂದ ನಿರ್ಮಾಣವಾಗಿಲ್ಲ. ಇಲ್ಲಿನ ಭೂಮಿ, ಅಗ್ನಿ, ವಾಯು, ಜಲ ಎಲ್ಲವೂ ಪ್ರಕೃತಿಯ ಸೃಷ್ಟಿಯೇ ಹೊರತು ಯಾವ ದೇವರ ಸೃಷ್ಟಿಯಲ್ಲ. ವೇದಗಳು ಮತ್ತು ಯಜ್ಞಯಾಗಾದಿಗಳು ಕೆಲವು ಜನರು ಹೊಟ್ಟೆಪಾಡಿಗಾಗಿ ಸೃಷ್ಟಿಸಿದ ಕ್ರಿಯೆಗಳು ಇಂತಹ ವೈಚಾರಿಕ ಸಿದ್ಧಾಂತಗಳನ್ನು ಅರ್ಥಪೂರ್ಣವಾಗಿ ಗೌತಮ ಬುದ್ಧನು ತನ್ನ ಬೌದ್ಧ ಧರ್ಮದಲ್ಲಿ ಜಾರಿಗೆ ತಂದನು. ಜೈನ ಧರ್ಮವು ಸಹ ಜಗತ್ತು ದೇವರ ಸೃಷ್ಟಿ ಎಂಬುದನ್ನು ನಿರಾಕರಿಸಿ ವಾತಾವರಣ ಅಥವಾ ಪ್ರಕೃತಿಯ ಕಣಗಳಿಂದ ಇಲ್ಲಿನ ಪ್ರತಿಯೊಂದು ಜೀವಿಯಿಂದ ಹಿಡಿದು ಸಕಲ ವಸ್ತುಗಳು ಸೃಷ್ಟಿಯಾಗಿವೆ ಎಂಬುದನ್ನು ಸ್ವೀಕರಿಸಿತು. ಚಾರ್ವಾಕನ ಪ್ರಕಾರ ಪ್ರತ್ಯಕ್ಷವೇ ಪ್ರಮಾಣ ಅಂದರೆ ಇಂದ್ರಿಯಗಳಿಗೆ ಮತ್ತು ಅನುಭವಕ್ಕೆ ದಕ್ಕುವ ಅಥವಾ ನಿಲುಕುವ ಸಂಗತಿಗಳಷ್ಟೇ ಪ್ರಮಾಣ ಎನ್ನುವ ನಿಲುವಾಗಿತ್ತು. ಕಾರಣದಿಂದಾಗಿ ಲೋಕಾಯುತ ದರ್ಶನದಲ್ಲಿ ಭ್ರಮೆ ಅಥವಾ ಭಾವನಾತ್ಮಕ ವಿಷಯಗಳಿಗೆ ಸ್ಥಾನವಿರಲಿಲ್ಲ.

ಬುದ್ಧನು ತನಗೆ ಜ್ಞಾನೋದಯವಾದ ನಂತರ ರೂಪಿಸಿದ ಬೌದ್ಧ ಧರ್ಮದ ತತ್ವಗಳಲ್ಲಿ ಲೋಕಾಯುತ ದರ್ಶನದ ಅಂಶಗಳಿಗೆ ಹೆಚ್ಚು ಮಹತ್ವ ನೀಡಿದ್ದಾನೆ. ಎಲ್ಲಾ ಸಂಯುಕ್ತ ವಸ್ತುಗಳೂ ನಶ್ವರ ಎಂದು ನಂಬುವುದು ಧರ್ಮ ಎನ್ನುವುದು ಬುದ್ಧನ ನಿಲುವಾಗಿತ್ತು. ಬುದ್ಧನ ನಶ್ವರತೆ ಸಿದ್ಧಾಂತದಲ್ಲಿ ಮೂರು ಬಗೆಯ ದೃಷ್ಟಿಕೋನಗಳಿದ್ದವು. ಎಲ್ಲಾ ಸಂಯುಕ್ತ ವಸ್ತುಗಳು ನಶ್ವರ ಮತ್ತು ಮನುಷ್ಯನ ಅಸ್ತಿತ್ವಕ್ಕೂ ನಶ್ವರ ಮತ್ತು ಸ್ವಯಂ ಸೃಷ್ಟಿಯ ವಸ್ತುಗಳಿಗೂ ನಶ್ವರತೆ ಇದೆ. ಅತೀಂದ್ರಿಯ ಶಕ್ತಿಗಳನ್ನು ನಂಬುವುದು ಧರ್ಮವಲ್ಲ ಇದು ಗೌತಮ ಬುದ್ಧನ ನಿಶ್ಚಿತವಾದ ನಿಲುವಾಗಿತ್ತು. ದೇವರಲ್ಲಿ ನಂಬಿಕೆ ಇಡುವುದು ಬೌದ್ಧ ಧರ್ಮದ ಭಾಗವಲ್ಲ ಎಂದು ಉಪದೇಶಿಸಿದ ಬುದ್ಧನು, ಬ್ರಾಹ್ಮಣ ಸಿದ್ಧಾಂತಗಳಲ್ಲಿ ದೇವರನ್ನು ಪ್ರಜಾಪತಿ, ಭ್ರಹ್ಮ, ಈಶ್ವರ ಹೀಗೆ ಹಲವು ಹೆಸರುಗಳಲ್ಲಿ ಕರೆಯಲಾಗಿದೆ ಆದರೆ, ದೇವರು ಯಾರು? ಅವನು ಜಗತ್ತಿನಲ್ಲಿ ಹೇಗೆ ಸೃಷ್ಟಿಯಾದನು ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ ಎಂದು ನುಡಿದಿದ್ದನು. ಧರ್ಮಗ್ರಂಥಗಳನ್ನು ಓದುವುದು ಅಥವಾ ಧರ್ಮಗ್ರಂಥಗಳು ದೋಷಾತೀತವೆಂದು ನಂಬುವುದು ಧರ್ಮವಲ್ಲ ಎಂದು ಹೇಳುವುದರ ಮೂಲಕ ಲೋಕಾಯುತ ದರ್ಶನದ ಬಹುತೇಕ ಅಂಶಗಳನ್ನು ತನ್ನ ಧರ್ಮದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಪ್ರಾಚೀನ ಹಿಂದೂ ಧರ್ಮಕ್ಕೆ ಮಾರಣಾಂತಿಕ  ಪೆಟ್ಟು ನೀಡಿದ್ದನು.

ಮನುಷ್ಯ ಜೀವಿಯ ಸೃಷ್ಟಿ ಮತ್ತು ಸಾವಿನ ಕುರಿತಾಗಿ ವ್ಯಾಖ್ಯಾನಿಸಿದ ಬುದ್ಧನು ಪುನರ್ಜನ್ಮವನ್ನು ರೀತಿಯಲ್ಲಿ ಅಲ್ಲಗೆಳೆದನು. ಬುದ್ಧನ ಪಕ್ರಾರ ಮನುಷ್ಯ ದೇಹವು ನಾಲ್ಕು ದ್ರವ್ಯಗಳಿಂದ ಅಂದರೆ ಪೃಥ್ವಿ, ಅಪ () ತೇಜ(ಅಗ್ನಿ) ಮತ್ತು ವಾಯು ಇವುಗಳಿಂದ ಸೃಷ್ಟಿಯಾಗುತ್ತದೆ. ಅದೇ ರೀತಿಯಲ್ಲಿ ಮನುಷ್ಯ ಮರಣ ಹೊಂದಿದಾಗ ಶರೀರದಲ್ಲಿ ಅಥವಾ ದೇಹದಲ್ಲಿ ಇದ್ದ ಮೂಲದ್ರವ್ಯಗಳು ಮರಣ ಹೊಂದುವುದಿಲ್ಲ ಅವುಗಳು ಬಾಹ್ಯಾಕಾಶದಲ್ಲಿ ತೇಲುತ್ತಿರುವ ತಮ್ಮದೇ ರೀತಿಯ ಮೂಲ ದ್ರವ್ಯ ಸಮೂಹವನ್ನು ಸೇರಿಕೊಳ್ಳುತ್ತವೆ ಜೊತೆಗೆ ಇನ್ನೊಂದು ಜೀವಿಯ ಸೃಷ್ಟಿಗೆ ಕಾರಣವಾಗುತ್ತವೆ ಇದು ಆಧುನಿಕ ಜಗತ್ತಿನ ವೈಜ್ಞಾನಿಕ ಚಿಂತನೆಗೆ ಸಮಾನವಾದ  ಚಿಂತನೆಯಾಗಿದೆ. ಕಾರಣದಿಂದಾಗಿ ಬುದ್ಧನು ಪುನರ್ಜನ್ಮವನ್ನು ನಂಬಲಿಲ್ಲ ಮತ್ತು ಪ್ರತಿಪಾದಿಸಲಿಲ್ಲ. ಅದೇ ರೀತಿಯಲ್ಲಿ ಪೂರ್ವಜನ್ಮದ ಕರ್ಮ ಕುರಿತ ವೈದಿಕ ಜಗತ್ತಿನ ಎಲ್ಲಾ ನಂಬಿಕೆಗಳನ್ನು ಅವನು ನಿರಾಕರಿಸಿದನು. ಹುಟ್ಟು ಅನುವಂಶಿಕ ನಿಜ ಆದರೆ ಹುಟ್ಟುವ ಮಗುವಿಗೆ ಬರುವ ಎಲ್ಲಾ ಗುಣಗಳು ತಂದೆ ಅಥವಾ ತಾಯಿಯಿಂದ ಬಂದವುಗಳು ಎಂಉದನ್ನು ಅವನು ನಿರಾಕರಿಸಿ, ಅಲ್ಲಿನ ಪರಿಸರದ ಪ್ರಭಾವದ ಮಹತ್ವ ಇರುವುದನ್ನು ಪ್ರತಿಪಾದಿಸಿದನು.

ವೈದಿಕ ಪರಂಪರೆಗೆ ಪರ್ಯಾಯವಾಗಿ ಹುಟ್ಟಿಕೊಂಡ ಚಾರ್ವಾಕ ಅಥವಾ ಲೋಕಾಯುತ ದರ್ಶನವು ಅತ್ಯಂತ ಪ್ರಭಾವಶಾಲಿಯಾಗಿ ಬಳಕೆಯಾಗಿರುವುದು ಬೌದ್ಧ ಧರ್ಮದಲ್ಲಿ ಮಾತ್ರ. ನಂತರ ಹುಟ್ಟಿಕೊಂಡ ಅನೇಕ ಅವೈದಿಕ ಪರಂಪರೆಗಳು ಅನೇಕ ಉಪ ಪಂಗಡ ಅಥವಾ ಶಾಖೆಗಳಾಗಿ ಛಿದ್ರಗೊಳ್ಳುವುದರ ಜೊತೆಗೆ ತಂತ್ರ, ಮಂತ್ರ, ಮಾಂಸ,, ಮದ್ಯ, ಮೈಥುನ ಹೀಗೆ ಹಲವು ನಂಬಿಕೆಗಳಿಗೆ ಜೋತು ಬಿದ್ದು ಸಮಾಜದಿಂದ ವಿಮುಖಗೊಂಡವು. ಹನ್ನೆರಡನೇ ಶತಮಾನದಲ್ಲಿ ಕಾಶ್ಮೀರದ ಅನೇಕ ಪಂಥಗಳ ವಿಕ್ಷಿಪ್ತ ಬೆಳವಣಿಗೆಯನ್ನು ನಮ್ಮ ಕನ್ನಡದ ಅಪ್ರತಿಮ ವಚನಕಾರ ಅಲ್ಲಮಪ್ರಭು ತನ್ನ ವಚನದ ಮೂಲಕ  ನಿರ್ಧಾಕ್ಷಣ್ಯವಾಗಿ ಖಂಡಿಸಿದ್ದಾನೆ.

ನಾನು ಘನ ನಾನು ಘನವೆಂಬ ಹಿರಿಯರುಂಟೆ ಜಗದೊಳಗೆ

ಹಿರಿಯರ ಹಿರಿಯತನ ಹಿಂದೇನಾಯಿತು?

ಹಿರಿಯ ಹಿರಿದೆಂಬ ಶಬ್ದವಡಗಿದೆ

ಆತನೇ ಶರಣ ಗುಹೇಶ್ವರಾ.

ಇಪ್ಪತ್ತೊಂದನೇ ಶತಮಾನದ ಆಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನದ ಯುಗದಲ್ಲಿಯೂ ಸಹ ಯಜ್ಞ ಯಾಗಾದಿಗಳು, ವಾಸ್ತು ಮತ್ತು  ಅಗ್ನಿಪೂಜೆಯಂತಹ ವೈದಿಕ ಪರಂಪರೆಯ ಧಾರ್ಮಿಕ ಕ್ರಿಯೆಗಳು ಎಲ್ಲಡೆ ಜರುಗುತ್ತಿವೆ. ದಲಿತರು ಮತ್ತು ಶೂದ್ರರು ಕ್ರಿಯೆಗಳನ್ನು ಅತ್ಯಂತ ಶ್ರದ್ಧೆಯಿಂದ ಪಾಲಿಸುವುದರ ಜೊತೆಗೆ ತಮ್ಮ ಮನೆಗಳಲ್ಲಿ ಸತ್ಯನಾರಾಯಣ ಪೂಜೆ, ರಾಘವೇಂದ್ರ ಆರಾಧನೆ, ವರಲಕ್ಷಿö್ಮಪೂಜೆ, ಗೌರಿಪೂಜೆ ಇವುಗಳ ಮೂಲಕ ನವ ಬ್ರಾಹ್ಮಣರಾಗಿ ಪರಿವರ್ತನೆ ಹೊಂದುತ್ತಿದ್ದಾರೆ. ನಮ್ಮ ದ್ರಾವಿಡ ಸಂಸ್ಕೃತಿಯ ನೆಲಮೂಲದ ಆಚರಣೆಗಳ ಬಗೆಗಿನ ತಾತ್ಸಾರ ಮತ್ತು ಅಸಡ್ಡೆ ಹಾಗೂ ಅವೈದಿಕ ಪರಂಪರೆಯ ಜ್ಞಾನದ ಕೊರತೆ ಇದಕ್ಕೆ ಮೂಲಕಾರಣವಾಗಿದೆ.

(  ಸೆಪ್ಟಂಬರ್ ತಿಂಗಳ ಸಮಾಜಮುಖಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಡಾ.ಎನ್.ಜಗದೀಶ್ ಕೊಪ್ಪ,

 

 

 

 

 

ಗುರುವಾರ, ಆಗಸ್ಟ್ 25, 2022

ಭಾರತದ ರಾಜಕಾರಣದ ಆಶಾಕಿರಣ; ತಮಿಳುನಾಡಿನ ಪಳನಿವೇಲು ತ್ಯಾಗರಾಜನ್

 


 

ಭಾರತದ ರಾಜಕೀಯ ರಂಗದಲ್ಲಿ ಇಂದು ಹಗಲು ದರೋಡೆಗಾರರು, ಸುಳ್ಳುಕೋರರು, ಕೋಮುವಾದಿಗಳು ತುಂಬಿ ತುಳುಕುತ್ತಿರುವಾಗ ವಿವಿಧ ರಂಗಗಳ ತಜ್ಞರಿಗೆ ಇದು ಸೂಕ್ತ ಕ್ಷೇತ್ರವಲ್ಲ ಎಂಬ ನಂಬಿಕೆ ಬಲವಾಗಿ ಬೇರೂರುತ್ತಿದೆ. ಇಂತಹ ನಿರಾಸೆಯ ವಾತಾವರಣದ ನಡುವೆ ನೆರೆಯ ತಮಿಳುನಾಡಿನ ಡಿ.ಎಂ.ಕೆ. ಸರ್ಕಾರದಲ್ಲಿ ಅರ್ಥಸಚಿವರಾಗಿ ಕಾರ್ಯ ನಿರ್ವಹಿಸುತ್ತಾ, ಹಲವಾರು ಜನಪರ ಯೋಜನೆಗಳ ಮೂಲಕ ಅಲ್ಲಿನ ಮುಖ್ಯಮಂತ್ರಿ ಸ್ಟಾಲಿನ್ ಗೆ ಮಾರ್ಗದರ್ಶನ ಮಾಡುತ್ತಿರುವ  ಮುಧುರೈ ಮೂಲದ ಪಳನಿವೇಲು ತ್ಯಾಗರಾಜನ್ ತಮ್ಮ ನಡೆ ನುಡಿಯ ಮೂಲಕ ಇಡೀ ರಾಷ್ಟ್ರದ ಗಮನ ಸೆಳೆದಿದ್ದಾರೆ.

ಪಳನಿವೇಲು ತ್ಯಾಗರಾಜನ್ ಇಂಜಿನಿಯರಿಂಗ್ ವಿಭಾಗದ ಎರಡು ವಿಷಯಗಳಲ್ಲಿ ಮಾಸ್ಟರ್ ಡಿಗ್ರಿ ಪಡೆದವರು ಜೊತೆಗೆ ಎಂ.ಬಿ.ಎ. ಪದವೀಧರರು ಮತ್ತು ಪಿಹೆಚ್.ಡಿ. ಪಡೆದು ಅಮೇರಿಕಾದಲ್ಲಿ ಜಾಗತಿಕ ಮಟ್ಟದ ಹಣಕಾಸು ಸಂಸ್ಥೆಯಲ್ಲಿ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. 2016 ರಲ್ಲಿ ತಮ್ಮ ಕುಟುಂಬದ ಪದ್ಧತಿಗೆ ಅನುಗುಣವಾಗಿ ಮಧುರೈನ ಮೀನಾಕ್ಷಿ ದೇವಾಲಯದ ವಾರ್ಷಿಕ ಉತ್ಸವದಲ್ಲಿ ಪ್ರಥಮ ಪೂಜೆ ಸಲ್ಲಿಸುವ ಕಾರಣಕ್ಕಾಗಿ ಹುದ್ದೆ ತೊರೆದು ಬಂದು ತಮ್ಮ ಕುಟುಂಭದ ರಾಜಕಾರಣದ ಸೇವೆ ಮತ್ತು ಸಾಮಾಜಿಕ ಸೇವೆಯನ್ನು ಮುಂದುವರಿಸಿದ್ದಾರೆ.

ತ್ಯಾಗರಾಜನ್ ಅವರ ತಾತ ಪಿ.ಕೆ.ಟಿ. ರಾಜನ್ ಎಂಬುವರು 1936 ರಲ್ಲಿ ಮದ್ರಾಸ್ ಪರೆಸಿಡೆನ್ಸಿ ಪ್ರಾತ್ಯದ ಮುಖ್ಯ ಮಂತ್ರಿಯಾಗಿದ್ದವರು. 1918ರಲ್ಲಿ ಅವರು ಇಂಗ್ಲೇಂಡಿನ ಆಕ್ಸ್ ಪರ್ಡ್ ನಲ್ಲಿ ಶಿಕ್ಷಣ ಪಡೆದು ಬಂದವರಾಗಿದ್ದರು. 1916 ರಲ್ಲಿ ತಮಿಳುನಾಡಿನಲ್ಲಿ ಬ್ರಾಹ್ಮಣರ ಪ್ರಾಬಲ್ಯ ವಿರೋಧಿಸಿ ಆರಂಭವಾದ ಜಸ್ಟೀಸ್ ಪಾರ್ಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ಹದಿಮೂರು ವರ್ಷಗಳ ಕಾಲ ಶಾಸನ ಸಭೆಯಲ್ಲಿ ಆಡಳಿತ ನಡೆಸಿದ ಜಸ್ಟೀಸ್ ಪಾರ್ಟಿಯ ಮುಖಾಂತರ ದಲಿತರಿಗೆ ಮೀಸಲಾತಿ ನಿಯಮಗಳನ್ನು ಜಾರಿಗೆ ತರುವುದಲ್ಲಿ ಶ್ರಮಿಸುವುದರ ಜೊತೆಗೆ ಆ ಕಾಲದಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಇದ್ದ ಏಕೈಕ ವಿಶ್ವವಿದ್ಯಾನಿಯ ಮದ್ರಾಸ್ ಯೂನಿರ್ವಸಿಟಿಗೆ ಪರ್ಯಾಯವಾಗಿ ಅಣ್ಣಾಮಲೈ ವಿಶ್ವ ವಿದ್ಯಾನಿಲಯ, ಆಂಧ್ರ ವಿ.ವಿ ಸ್ಥಾಪಿಸುವಲ್ಲಿ ಇತರೆ ನಾಯಕರೊಂದಿಗೆ ಶ್ರಮಿಸಿದವರು. ಜಸ್ಟೀಸ್ ಪಾರ್ಟಿಯು 1944 ರಲ್ಲಿ ಪೆರಿಯಾರ್ ರಾಮಸ್ವಾಮಿ ನೇತೃತ್ವದಲ್ಲಿ ದ್ರಾವಿಡ ಕಳಗಂ ಪಕ್ಷವಾಗಿ ಪರಿವರ್ತನೆಗೊಂಡು ದ್ರಾವಿಡ ಸಂಸ್ಕೃತಿಯ ಭಾಷೆ ಮತ್ತು ಇತರೆ ಕಲೆಗಳನ್ನು ಉಳಿಸುವತ್ತ ಮುನ್ನಡೆಯಿತು. ತ್ಯಾಗರಾಜನ್ ಅವರ ತಂದೆಯವರೂ ಸಹ ಕರುಣಾನಿಧಿ ಯವರ ಡಿ.ಎಂ.ಕೆ. ಸರ್ಕಾರದಲ್ಲಿ ಶಾಸಕರಾಗಿ ಸಚಿವರಾಗಿ ಕಾರ್ಯ ನಿರ್ವಹಸುತ್ತಿದ್ದರು.

ತಂದೆಯ ನಿಧನಾನಂತರ ಸ್ಥಳಿಯ ಜನತೆಯ ಮನವಿಗೆ ಓಗೊಟ್ಟು ತಮ್ಮ ಅಮೇರಿಕನ್ ಪತ್ನಿ ಮಾರ್ಗರೇಟ್ ಹಾಗೂ ಇಬ್ಬರು ಪುತ್ರರೊಂದಿಗೆ ಭಾರತಕ್ಕೆ ವಾಪಸ್ ಬಂದ ತ್ಯಾಗರಾಜನ್ 2016 ರಲ್ಲಿ ಡಿ.ಎಂ.ಕೆ. ಪಕ್ಷದಿಂದ ಶಾಸಕರಾದರು. ಆಡಳಿತಾರೂಢ ಜಯಲಲಿತಾರವರ ಅಣ್ಣಾ ಡಿ.ಎಂ.ಕೆ. ಪಕ್ಷಕ್ಕೆ  ಸರ್ಕಾರದ ಹಲವಾರು ಜನಪ್ರಿಯ ಯೋಜನೆಗಳಿಗೆ ತ್ಯಾಗರಾಹನ್ ಸಲಹೆ ನೀಡುವುದರ ಮೂಲಕ ಜಾರಿಗೆ ತರುವಲ್ಲಿ ಶ್ರಮಿಸಿದರು. ಇವುಗಳಲ್ಲಿ ಪ್ರಮುಖವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಉಚಿತ ಶಿಕ್ಷಣದ ಜೊತೆಗೆ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಉಚಿತ ಸೈಕಲ್, ಪಿ.ಯು.ಸಿ ಮತ್ತು ಡಿಗ್ರಿ ಓದುವ ಹೆಣ್ಣು ಮಕ್ಕಳಿಗೆ ಲ್ಯಾಪ್ ಟಾಪ್,  ವಿವಾಹಕ್ಕೆ ತಾಳಿ ಮತ್ತು ಧನ ಸಹಾಯ, ಹಾಗೂ ಉಚಿತ ಹೆರಿಗೆ ಸೌಲಭ್ಯ , ಆರ್ಥಿಕ ಸಹಾಯ ಇವೆಲ್ಲವುಗಳಿಗೆ ತ್ಯಾಗರಾಜನ್ ಸ್ಪೂರ್ತಿಯಾಗಿದ್ದರು.

ಸ್ಟಾಲಿನ್ ನೇತೃತ್ವದಲ್ಲಿ ಡಿ.ಎಂ.ಕೆ. ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಎರಡನೆಯ ಬಾರಿ ಶಾಸಕರಾಗಿದ್ದ ತ್ಯಾಗರಾಜನ್ ಸಹಜವಾಗಿ ಅವರ ವಿದ್ವತ್ ಗೆ ಅನುಗುಣವಾಗಿ ಅರ್ಥಸಚಿವರಾದರು. ಜಯಲಿಇತಾ ಸರ್ಕಾರದ ಬಹುತೇಕ ಜನಪ್ರಿಯ ಜೋಜನೆಗಳನ್ನು ಯಥಾ ಸ್ಥಿತಿಯಲ್ಲಿ ಮುಂದುವರಿಸಲು ಸಲಹೆ ನೀಡಿದರು. ನಾಡಿನ ಜನತೆಗೆ ಸೇವೆ ಸಲ್ಲಿಸುವ ವಿಚಾರದಲ್ಲಿ ರಾಜಕೀಯ ತಾರತಮ್ಯವಿರಬಾರದು ಎಂಬುದು ಅವರ ನಂಬಿಕೆ. ಇಂದು ಸ್ಟಾಲಿನ್ ಸರ್ಕಾರ ಕುರಿತಾಗಿ ಒಳ್ಳೆಯ ಅಭಿಪ್ರಾಯಗಳಿದ್ದರೆ ಅದಕ್ಕೆ ಮೂಲಕಾರಣ ತ್ಯಾಗರಾಜನ್. ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ  ನಾನ್ ಮೊದಲವನ್ ( ನಾನು ಮೊದಲಿಗ) ಎಂಬ ಹೆಸರಿನಲ್ಲಿ  ಪ್ರತಿಯೊಂದು ವೃತ್ತಿ ಅಥವಾ ಕಸಬಿಗೆ ಕೌಶಲ್ಯ ತುಂಬುವ ನಿಟ್ಟಿನಲ್ಲಿ ಕಟ್ಟಣ ನಿರ್ಮಾಣ, ಕಾರ್ಪೆಂಟರ್, ಎಲೆಕ್ಟ್ರಿಷಿಯನ್, ಮೋಟಾರು ಪಂಪ್ ರಿಪೇರಿ, ವಾಹನ ದುರಸ್ತಿ, ಹೀಗೆ ಹಲವಾರು ವೃತ್ತಿಗಳ ಕೋರ್ಸ್ ಗಳಲ್ಲಿ ಅರೆ ಶಿಕ್ಷಿತ ಹಾಗೂ ಬಡ ಯುವಕರನ್ನು ತಯಾರು ಮಾಡಲಾಗುತ್ತಿದೆ.

ಭಾರತದಲ್ಲಿ ಪ್ರಥಮ ಬಾರಿ  ಎಸ್.ಎಸ್.ಎಲ್.ಸಿ ಅಥವಾ ಪಿ.ಯು.ಸಿ. ನಂತರ ತಮ್ಮ ಅಗತ್ಯಕ್ಕೆ ಅನುಗುಣವಾಗಿ ಯಾವ ಶಿಕ್ಷಣ ಮುಂದುವರಿಸಬಹುದು. ಅವುಗಳಿಗೆ ಸರ್ಕಾರದ ಮೂಲಕ ಇರುವ  ಸಹಾಯಧನ ಮತ್ತು ಉದ್ಯೋಗದ ಅವಕಾಶಗಳು ಈ ಕುರಿತು ಸಮಗ್ರ ಮಾಹಿತಿ ಇರುವ ಕಿರು ಪುಸ್ತಕವನ್ನು ಇಡೀ ತಮಿಳುನಾಡಿನಾದ್ಯಂತ ಶಾಲೆ ಕಾಲೇಜುಗಳಿಗೆ ವಿತರಿಸಿದ್ದಾರೆ. ಜೊತೆಗೆ ತಾವು ಭೇಟಿ ನೀಡುವ ಪ್ರತಿ ಜಿಲ್ಲೆ ಅಥವಾ ತಾಲ್ಲೂಕುಗಳ ಶಾಲಾ ಕಾಲೇಜುಗಳಿಗೆ  ಹೋಗಿ ಮಕ್ಕಳಿಗೆ ಶುದ್ಧ ತಮಿಳು ಭಾಷೆಯಲ್ಲಿ ಈ ಕುರಿತು ಪಾಠ ಮಾಡಿ ಆತ್ಮವಿಶ್ವಾಸ ತುಂಬುತ್ತಿದ್ದಾರೆ. ಇತರೆ ರಾಜಕಾರಣಿಗಳಂತೆ ತಮ್ಮ ಹಿಂದೆ ಪುಡಿ ಗಿರಾಕಿಗಳು ಓಡಾಡುವುದಕ್ಕೆ ತ್ಯಾಗರಾಜನ್ ಅವಕಾಶ ನೀಡಿಲ್ಲ. ಅವರ ಕುರಿತಾಗಿ ತಮಿಳುನಾಡಿನ ಮಾಧ್ಯಮಗಳು ಮಾತ್ರವಲ್ಲದೆ ಇಡೀ ದೇಶದ ಇಂಗ್ಲೀಷ್ ಮಾಧ್ಯಮಗಳು ಗೌರವ ಭಾವನೆ ಹೊಂದಿವೆ.


ಇಡೀ ಭಾರತದಲ್ಲಿ ಪ್ರಧಾನಿ ಮೋದಿಯಿಂದ ಹಿಡಿದು ಅರ್ಥಸಚಿವೆ ನಿರ್ಮಲಾ ಸೀತಾರಾಮನ್ ವರೆಗೆ ತ್ಯಾಗರಾಜನ್ ಎಂದರೆ ಬೆಚ್ಚಿ ಬೀಳುತ್ತಾರೆ. ಜಿ.ಎಸ್.ಟಿ. ತೆರಿಗೆಯಲ್ಲಿ ರಾಜ್ಯ ಸರ್ಕಾರದ ಪಾಲನ್ನು ಕೇಳಲಾಗದೆ ಕೈ ಕಟ್ಟಿಕೊಂಡು, ಬಾಯಿ ಮುಚ್ಚಿ ಕುಳಿತುಕೊಳ್ಳುವ ಬಸವರಾಜ ಬೊಮ್ಮಾಯಿ ಯಂತಹ ಮುಖ್ಯಂತ್ರಿಗಳ ನಡುವೆ ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯವನ್ನು ತ್ಯಾಗರಾಜನ್ ಎಳೆ ಎಳೆಯಾಗಿ ಬಿಡಿಸಿ ವಿವರಿಸುವಾಗ ನಿರ್ಮಾಲಾ ಸೀತರಾಮನ್ ಅವರಿಂದ ಉತ್ತರವಿರುವುದಿಲ್ಲ. ಏಕೆಂದರೆ, ತ್ಯಾಗರಾಜನ್ ಬಳಿ ಕೇವಲ ತಮಿಳುನಾಡಿನ ಅಂಕಿ ಅಂಶಗಳು ಮಾತ್ರವಲ್ಲದೆ, ಇಡೀ ರಾಷ್ಟ್ರದ ಅಂಕಿ ಅಂಶಗಳಿರುತ್ತವೆ. ಬಿ.ಜೆ.ಪಿ. ಸರ್ಕಾರ ಇರುವ ರಾಜ್ಯಗಳಿಗೆ ನೀಡಿರುವ ಅನುದಾನ ಮತ್ತು ಬಿ.ಜೆ.ಪಿ. ಯೇತರ ರಾಜ್ಯಗಳಿಗೆ ನೀಡಿರುವ ಅನುದಾನವನ್ನು ಕ್ಷಣಾರ್ಧದಲ್ಲಿ ಬಿಚ್ಚಿಡಬ್ಲರು. ತಮಿಳುನಾಡಿನಲ್ಲಿ ಒಂದು ಸಾವಿರ ಜನಸಂಖ್ಯೆಗೆ ನಾಲ್ವರು ವೈದ್ಯರು ಇದ್ದರು ಇದ್ದರೆ ಗುಜರಾತಿನಲ್ಲಿ ಸಾವಿರ ಸಂಖ್ಯೆಗೆ ಕೇವಲ ಒಬ್ಬ ವೈದ್ಯನಿರುವುದನ್ನು ಹೇಳುವಾಗ ಎಲ್ಲರೂ ಮೌನಕ್ಕೆ ಶರಣಆಗುತ್ತಾರೆ.

ಇಂತಹ ವಿವಿಧ ವಲಯಗಳ ತಜ್ಞರು ರಾಜಕೀಯ ಬಂದಾಗ ಮಾತ್ರ  ಈ ದೇಶ ಅಥವಾ ರಾಜ್ಯಗಳು ಸುಧಾರಿಸಬಹುದು. ಪ್ರತಿಯೊಂದು ರಾಜ್ಯದಲ್ಲಿ ಇಂತಹವರು ನಾಲ್ಕು ಮಂದಿ ಇದ್ದರೆ, ಸಾಕು. ಖಂಡಿತಾ ಭವಿಷ್ಯವನ್ನು ಬದಲಾಯಿಸಬಹುದು. ಕರ್ನಾಟಕದ ಕಾಂಗ್ರೇಸ್ ನಾಯಕರು ತ್ಯಾಗರಾಜನ್ ಅವರನ್ನು ಕರ್ನಾಟಕ್ಕೆ ಕರೆಯಿಸಿ ತಮ್ಮ ಪದಾಧಿಕಾರಿಗಳಿಗೆ ಮತ್ತು ಜಿಲ್ಲಾ ಮಟ್ಟದ ಕಾರ್ಯಕರ್ತರಿಗೆ ಉಪನ್ಯಾಸ ಕೊಡಿಸಿದರೆ ಗೆದ್ದಲು ಹಿಡಿದಿರುವ ಮಿದುಳಿಗೆ ಒಂದಿಷ್ಟು ಹೊಸ ಆಲೋಚನೆಗಳು ಬರಬಹುದು.

ಜಗದೀಶ್ ಕೊಪ್ಪ

ಮಂಡ್ಯ ನೆಲದ ಸ್ವಾತಂತ್ರ್ಯ ಹೋರಾಟದ ಒಂದು ನೆನಪು; ಶಿವಪುರ ಧ್ವಜ ಸತ್ಯಾಗ್ರಹ

 


ದೇಶದೆಲ್ಡೆಡೆ  ಎಪ್ಪತ್ತೈದನೆಯ ಸ್ವಾತಂತ್ರ್ಯದ ಆಚರಣೆಗೆ ಸಿದ್ಧತೆ ನಡೆಯುತ್ತಿದೆ. ತಮ್ಮ ಜೀವಮಾನದಲ್ಲಿ  ಎಂದಿಗೂ ತ್ರಿವರ್ಣ ಧ್ವಜ ಕುರಿತು ಒಂದಿಷ್ಟು ಗೌರವ ಮತ್ತು ಘನತೆಯ ಮಾತನಾಡದ ಜನ ಈಗ ಮನೆ ಮನೆಗೂ ತಿರಂಗ ಎಂಬ ಅಭಿಯಾನ ಪ್ರಾರಂಭಿಸಿದ್ದಾರೆ. ಇಂತಹ ಹುಸಿ ದೇಶಪ್ರೇಮಕ್ಕಾಗಿ ರಾಷ್ಟ್ರ ಧ್ವಜ ಕುರಿತಾಗಿ ಇದ್ದ ನೀತಿ ನಿಯಮಾವಳಿಗಳನ್ನು ಗಾಳಿಗೆ ತೂರಿ ರಾಷ್ಟ್ರ ಧ್ವಜವನ್ನು ರಾಜಕೀಯ ಪಕ್ಷಗಳ ಧ್ವಜದ ಸಾಲಿಗೆ ತಂದು ನಿಲ್ಲಿಸಿದ್ದಾರೆ. ಇಂತಹ ಸಂದರ್ಭದಲ್ಲಿ ರಾಷ್ಟ್ರ ಧ್ವಜ ಹಾರಿಸುವುದು ಕಾನೂನು ಬಾಹಿರ ಎಂಬ ನಿಯಮವಿದ್ದ ಕಾಲಘಟ್ಟದಲ್ಲಿ ನನ್ನ ಜಿಲ್ಲೆ ಮತ್ತು ನನ್ನ ತಾಲೂಕಿನ ನೆಲವಾದ ಮದ್ದೂರು ಸಮೀಪದ ಶಿವಪುರದಲ್ಲಿ 1938 ರ ಏಪ್ರಿಲ್ 9 ರಿಂದ 11 ರವರೆಗೆ ಮೂರು ದಿನಗಳ ಕಾಲ ಟಿ.ಸಿದ್ಧಲಿಂಗಯ್ಯನವರ ನೇತೃತ್ವದಲ್ಲಿ ಹತ್ತು ಸಾವಿರ ಮಂದಿ ರಾಷ್ಟ್ರ ಧ್ವಜ ಹಾರಿಸಿ ಬಂಧಿಯಾದ ಕಥನ  ಈ ಸಂದರ್ಭದಲ್ಲಿ ಯಾವ ಮಾಧ್ಯಮಗಳಿಗೂ ನೆನಪಾಗಲಿಲ್ಲ.

ಕರ್ನಾಟಕದ ಇತಿಹಾಸದಲ್ಲಿ  ಸ್ವಾತಂತ್ರ್ಯ ಚಳುವಳಿಗೆ ಬಾಂಬೆ ಕರ್ನಾಟಕ ಎಂದು ಕರೆಸಿಕೊಳ್ಳುತ್ತಿದ್ದ ಉತ್ತರ ಕರ್ನಾಟಕ ಮತ್ತು ಉತ್ತರ ಕನ್ನಡ ಜಿಲ್ಲೆಯ ಕೊಡುಗೆ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಅಪಾರವಾದುದು. ದಕ್ಷಿಣ ಕರ್ನಾಟಕದಲ್ಲಿ ಜಲಿಯನ್ ವಾಲಾಬಾಗ್ ಘಟನೆಯನ್ನು ನೆನಪಿಸುವ ಗೌರಿಬಿದನೂರು ಸಮೀಪದ ವಿಧುರಾಶ್ವತದ ಗೋಲಿಬಾರ್ ದುರಂತ ಮತ್ತು ಶಿವಪುರದ ಧ್ವಜ ಸತ್ಯಾಗ್ರಹ ಘಟನೆ ಕರ್ನಾಟಕದ ಇತಿಹಾಸದಲ್ಲಿ  ಅವಿಸ್ಮರಣೀಯವಾಗಿ ಉಳಿದು ಹೋಗಿವೆ. ಬೆಂಗಳೂರು ವಿ.ವಿ.ಪುರಂ ಸಂಜೆ ಕಾಲೇಜಿನ ಪ್ರಾಂಶುಪಾಲರಾಗಿದ್ದುಕೊಂಡು ನನಗೆ ಪದವಿ ತರಗತಿಗಳಲ್ಲಿ ಕನ್ನಡ ಬೋಧಿಸಿದ ಗುರುಗಳಾದ  ಪ್ರೊ.ಡಿ.ಲಿಂಗಯ್ಯನವರು 1979 ರಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ಕುರಿತಂತೆ ಬರೆದಿರುವ ಅಮೂಲ್ಯಕೃತಿ ಇಂದಿಗೂ ಸಾತಂತ್ರ್ಯ ಚಳುವಳಿ ಕುರಿತಾದ ಕೃತಿಗಳಿಗೆ ಮಾದರಿಯಾಗಿದೆ.

ಮೂಲತಃ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನವರಾದ ಡಿ.ಲಿಂಗಯ್ಯನವರು 1978 ರಲ್ಲಿ ಕ್ಷೇತ್ರಕಾರ್ಯ ಮಾಡಿ, ಶಿವಪುರ ಧ್ವಜ ಸತ್ಯಾಗ್ರಹದಲ್ಲಿ ಪಾಲ್ಗೊಡು ಉಳಿದಿದ್ದ ಮಹಾನೀಯರನ್ನು ಸಂದರ್ಶಿಸಿ, ಅಧಿಕೃತ ದಾಖಲೆಗಳ ಮೂಲಕ ಕಟ್ಟಿಕೊಟ್ಟಿರುವ ಪರಿ ನಿಜಕ್ಕೂ ಅದ್ಭುತವಾದುದು. ಈ ಕಾರ್ಯಕ್ಕಾಗಿ ಒಮ್ಮೆ ನನ್ನನ್ನೂ ಕರೆದು ಕರೆದುಕೊಂಡು, ನನ್ನೂರು ಕೊಪ್ಪ ದ ಕೆ.ಜೋಗಿಗೌಡರು, ಬ್ರಾಹ್ಮಣ ಮುಖಂಡರಾಗಿದ್ದ ಗುಂಡಪ್ಪ ನವರ ಮನೆಗೆ ಭೇಟಿ ನೀಡುವುದರ ಜೊತೆಗೆ ನನ್ನೂರು ಸಮೀಪದ ಬಿದರಕೋಟೆ, ಬೆಸಗರಳ್ಳಿ, ವಳೇಗೇರಹಳ್ಳಿ ಹೀಗೆ ಹಲವು ಊರುಗಳನ್ನು ಸುತ್ತಿದ್ದರು. 1979 ರಲ್ಲಿ ಪುಸ್ತಕ ಬಿಡುಗಡೆಯಾದಾಗ ಅವರು ನೀಡಿದ್ದ ಒಂದು ಕೃತಿ ಈಗಲೂ ನನ್ನ ಪಾಲಿಗೆ ಅಮೂಲ್ಯ  ಆಸ್ತಿಯಾಗಿ ಉಳಿದಿದೆ.


ಶಿವಪುರ ಧ್ವಜ ಸತ್ಯಾಗ್ರಹಕ್ಕೆ ಒಂದು ಇತಿಹಾಸವಿದೆ. ವಾಸ್ತವವಾಗಿ  ತಮ್ಮ  ಅರಸೊತ್ತಿಗೆಯನ್ನು ಬ್ರಿಟೀಷರಿಗೆ ಒಪ್ಪಿಸಿ ಅವರು ನೀಡುತ್ತಿದ್ದ ವಾರ್ಷಿಕ ಅನುದಾನದಲ್ಲಿ ಮೈಸೂರು ದೊರೆಗಳು ಸಂಸ್ಥಾನವನ್ನು ನಡೆಸುತ್ತಿದ್ದರು. ಜೊತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂಬ ಮುತ್ಸದಿ ಮತ್ತು ಮಾನವೀಯ ಗುಣಗಳುಳ್ಳ ದೊರೆಯಿಂದಾಗಿ ಮೈಸೂರು ಸಂಸ್ಥಾನವು  ಇಡೀ ಭಾರತಕ್ಕೆ ಮಾದರಿಯಾಗಿತ್ತು. ಶಿಕ್ಷಣ, ಆರೋಗ್ಯ, ಕೃಷಿ, ನೀರಾವರಿ ಯೋಜನೆಗಳಿಂದ ಹಿಡಿದು, ದಲಿತರಿಗೆ ಮೀಸಲಾತಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ಜೊತೆಗೆ ಪ್ರಜಾಪ್ರಭುತ್ವ ಮಾದರಿಯಲ್ಲಿ ಪ್ರಜಾ ಪ್ರತಿನಿಧಿಗಳ ಸಭೆ ಹೀಗೆ ಎಲ್ಲಾ ಆಡಳಿತ ವಿಭಾಗಗಳ ಕಾರ್ಯವೈಖರಿಗಳು  ದೇಶಕ್ಕೆ ಮಾದರಿಯಾಗಿದ್ದವು. ಹಾಗಾಗಿ ಮೈಸೂರು ಸಂಸ್ಥಾನದ ಜನತೆ ಸ್ವಾತಂತ್ಯ ಚಳುವಳಿ ಕುರಿತಾಗಿ ಗಂಭೀರವಾಗಿ ಯೋಚಿಸಿರಲಿಲ್ಲ. ಆದರೆ, 1934 ರಲ್ಲಿ ಪ್ರಥಮ ಬಾರಿಗೆ ಮಹಾತ್ಮ ಗಾಂಧಿಯವರು ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದಾಗ  ಇಲ್ಲಿನ ನಾಯಕರಾದ ಹೆಚ್.ಕೆ.ವೀರಣ್ಣಗೌಡ, ಸಾಹುಕಾರ್ ಚೆನ್ನಯ್ಯ, ಎಂ.ಎನ್.ಜೋಯಿಸ್, ಸಿ.ಬಂದೀಗೌಡ, ಹೆಚ್.ಸಿ. ದಾಸಪ್ಪ ಹೀಗೆ ಅನೇಕ ನಾಯಕರಲ್ಲಿ ಸ್ವಾತಂತ್ರ್ಯದ ಕಿಚ್ಚು ಒಡಲೊಳಗೆ ಮೊದಲ ಬಾರಿಗೆ ಸಿಡಿಯಿತು.

ಮೈಸೂರಿನಲ್ಲಿ ಕಾಂಗ್ರೇಸ್ ಅಧಿವೇಶನ ಮಾಡುವುದರ ಜೊತೆಗೆ ರಾಷ್ಟ್ರ ಧ್ವಜವನ್ನು ಹಾರಿಸಬೇಕೆಂದು ನಿರ್ಧಸಲಾಯಿತು. ಆದರೆ, ಬ್ರಿಟೀಷ್ ಸರ್ಕಾರದ ವಿರುದ್ಧ ಯಾವುದೇ ಸಭೆ ನಡೆಸಲು ಮತ್ತು ಧ್ವಜ ಹಾರಿಸಲು ಬ್ರಿಟೀಷ್ ಅಧಿಕಾರಿಗಳು ಮತ್ತು ಮೈಸೂರು ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅನುಮತಿ ನಿರಾಕರಿಸಿದರು. ಇದಕ್ಕೆ ವಿರೋಧಿಸಿದ ನಾಯಕರು ಆಗ  ಮೈಸೂರು ಜಿಲ್ಲೆಯ ಭಾಗವಾಗಿದ್ದ ಮಂಡ್ಯ ಜಿಲ್ಲೆಯ ಶಿವಪುರದಲ್ಲಿ ಕಾಂಗ್ರೆಸ್ ಅಧಿವೇಶನ ಮತ್ತು ಧ್ವಜ ಸತ್ಯಾಗ್ರಹ ಮಾಡಲು ನಿರ್ಧರಿಸಲಾಯಿತು. ( 1939 ರಲ್ಲಿ  ಮಂಡ್ಯ ಜಿಲ್ಲೆ ಪ್ರತ್ಯೇಕ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿತು)  ಇದಕ್ಕಾಗಿ ಶಿವಪುರ ರಾಷ್ಟ್ರಕೂಟ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು. ಮೈಸೂರು-ಬೆಂಗಳೂರು ರಸ್ತೆಯ ಪಕ್ಕದಲ್ಲಿದ್ದ ಈಡಿಗ ಸಮುದಾಯದ ತಿರುಮಲೇಗೌಡರ ಜಮೀನನಲ್ಲಿ ಅಧಿವೇಶನ ನಡೆಸಲು ನಿರ್ಧರಿಸಲಾಯಿತು. ಈ ಕಾರ್ಯಕ್ರಮಕ್ಕೆ ತಿರುಮಲೇ ಗೌಡರು ಶಿವಪುರದಲ್ಲಿ ಕೊಪ್ಪ ರಸ್ತೆಯಲ್ಲಿದ್ದ ತಮ್ಮ ಮನೆಯನ್ನು ಕಚೇರಿಯನ್ನಾಗಿ ಬಳಸಿಕೊಳ್ಲಲು ಅವಕಾಶ ನಿಡಿದರು.

ಟಿ.ಸಿದ್ಧಲಿಂಗಯ್ಯನವರು ಅಧ್ಯಕ್ಷರು, ಸಾಹುಕಾರ್ ಚೆನ್ನಯ್ಯ ಉಪಾಧ್ಯಕ್ಷರು, ಕೊಪ್ಪದ ಜೋಗಿಗೌಡ ಕಾರ್ಯದರ್ಶಿ ಹಾಗೂ ಸಿ.ಬಂದೀಗೌಡ, ಎಂ.ಎನ್.ಜೋಯಿಸ್, ಇಂಡವಾಳು ಹೊನ್ನಯ್ಯ, ಹೆಚ್.ಕೆ.ವೀರಣ್ಣಗೌಡ, ವೆಂಕಟಗಿರಿಗೌಡ, ಪಿ.ಲಿಂಗೇಗೌಡ, ಪಿ.ತಮ್ಮಯ್ಯ, ಶ್ರೀನಿವಾಸ ಅಯ್ಯಂಗಾರ್, ಹೆಚ್.ಸಿ.ದಾಸಪ್ಪ, ಯಶೋಧರಮ್ಮ ದಾಸಪ್ಪ ಮುಂತಾದವರು ಸದಸ್ಯರಾಗಿದ್ದ ರಾಷ್ಟ್ರಕೂಟ ಸಮಿತಿಗೆ ಬೆಳಗಾವಿ, ಧಾರವಾಡ, ಉತ್ತರ ಕನ್ನಡ ಜಿಲ್ಲೆ ಮತ್ತು ಬಳ್ಳಾರಿ ಜಿಲ್ಲೆಯ ನಾಯಕರು ಮಾರ್ಗದರ್ಶಕರಾಗಿ ದುಡಿದರು. ಇದಕ್ಕಾಗಿ  ಹದಿನೈದು ದಿನ ಮುಂಚಿತವಾಗಿ ಎಲ್ಲರೂ ಶಿವಪುರಕ್ಕೆ ಆಗಮಿಸಿದ್ದರು.

ಜೋಗೀಗೌಡರ ನೇತೃತ್ವದಲ್ಲಿ ಮದ್ದೂರು ಮತ್ತು ಮಂಡ್ಯ ತಾಲ್ಲೂಕಿನ ಪ್ರತಿ ಹಳ್ಳಿಗಳ ಮನೆ ಮನೆಗಳಿಂದ ಅಕ್ಕಿ, ಬೇಳೆ, ಬೆಲ್ಲ, ಬಾಳೆಹಣ್ಣು, ಬಾಳೆ ಎಲೆ, ಅಡಿಕೆ ಹಾಳೆ, ತೆಂಗಿನ ಕಾಯಿ, ಹಾಲು, ಮೊಸರು, ಬೆಣ್ಣೆ ಹೀಗೆ ಹತ್ತು ಸಾವಿರ ಮಂದಿಗೆ ಮೂರು ದಿನಗಳ ಅಧಿವೇಶನಕ್ಕೆ ಧವಸ ಧಾನ್ಯ ಮತ್ತು ಹಣವನ್ನು ಕಲೆ ಹಾಕಲಾಯಿತು. ಇದಕ್ಕಾಗಿ ಐದು ಜೊತೆ ಎತ್ತಿನ ಬಂಡಿಗಳನ್ನು ಹಳ್ಳಿಗಳಿಗೆ ಕಳಿಸಲಾಗುತ್ತಿತ್ತು. ಶಿವಪುರ ಧ್ವಜ ಸತ್ಯಾಗ್ರಹದ ಮತ್ತೊಂದು ಮಹತ್ವದ ಸಾಧನೆಯೆಂದರೆ, ರಾಜ್ಯಾದ್ಯಂತ ಬಂದಿದ್ದ ನಾಯಕರು ಮತ್ತು ಕಾರ್ಯಕರ್ತರು ತಮ್ಮ ಜಾತಿ, ಧರ್ಮವನ್ನು ಮರೆತು ಸಾಮೂಹಿಕ ಭೋಜನದಲ್ಲಿ ಪಾಲ್ಗೊಂಡರು. ಅಲ್ಲಿ  ಊಟ ಮಾಡಿದ ಯಾರೊಬ್ಬರೂ ಅಕ್ಕಿ, ಯಾರ ಮನೆಯದ್ದು? ಬೇಳೆ ಯಾರ ಮನೆಯದ್ದು ಎಂದು ಕೇಳಲಿಲ್ಲ. ಅವರುಗಳ ಈ ಜಾತ್ಯಾತೀತ ಮನೋಭಾವ ಮಂಡ್ಯ ಜಿಲ್ಲೆಯ ಜನತೆಯ ಮೇಲೆ ತೀವ್ರ ಪ್ರಭಾವ ಬೀರಿತು. ಅಸ್ಪೃಶ್ಯತೆಯನ್ನು ಹೋಗಲಾಡಿಸಲು ದಾರಿ ದೀಪವಾಯಿತು. ಮಳ್ಳವಳ್ಳಿ ತಾಲ್ಲೂಕು ಕೇಂದ್ರದಲ್ಲಿ ಈಗ ಸರ್ಕಾರಿ ಬಸ್ ನಿಲ್ದಾಣವಾಗಿರುವ ಪ್ರದೇಶದಲ್ಲಿ ಕುನ್ನೀರು ಕಟ್ಟೆ ಎಂಬ ನೀರಿನ ಸರೋವರವಿತ್ತು. ಮಳ್ಳವಳ್ಳಿಯ ವಿರೇಗೌಡರು ಹರಿಜರನ್ನು ಕರೆದುಕೊಂಡು ಹೋಗಿ ಅಲ್ಲಿ ಹರಿಜನರು ನೀರು ಕುಡಿಯಲು ಅವಕಾಶ ಮಾಡಿಕೊಡುವುದರ ಮೂಲಕ ಮಂಡ್ಯ ನೆಲದಲ್ಲಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದರು. ಮಂಡ್ಯ-ಕೊಪ್ಪ ರಸ್ತೆಯಲ್ಲಿ ಹುಲಿವಾನ ಬಳಿಯ ಹೊನಗಾನಹಳ್ಳಿ ಎಂಬ ಊರಿನ ಪುಟ್ಟಣ್ಣಯ್ಯ ಎಂಬುವರು ಊರಿನ ಕೆರೆ ನೀರು ಕುಡಿಯಲು ಹರಿಜನರಿಗೆ ಪ್ರೋತ್ಸಾಹಿಸಿ ನೀರು ಕುಡಿಸಿದರು. ಇದರಿಂದ ಸಿಟ್ಟಿಗೆದ್ದ ಊರಿನ ಜನತೆ  ಪುಟ್ಟಣ್ಣಯ್ಯನವರನ್ನು ಹುಣಸೆ ಕಟ್ಟಿಗೆಯಿಂದ ಮನಸ್ಸೋ ಇಚ್ಚೆ ಧಳಿಸಿದರು. ಇದರಿಂದ ನೊಂದ ಅವರು ಮನುಷ್ಯರು ಇಲ್ಲದ ಊರಿನಲ್ಲಿ  ನಾನು ಬದುಕುವುದಿಲ್ಲ ಎಂದು ತೀರ್ಮಾನಿಸಿ, ಹುಟ್ಟಿದ ಊರನ್ನು ತ್ಯೆಜಿಸಿ ಕೆ.ಆರ್. ತಾಲ್ಲೂಕಿನ ಹೇಮಗಿರಿ ಬೆಟ್ಟದಲ್ಲಿ ನೆಲೆ ನಿಂತು ಶಿಕ್ಷಣ ಸಂಸ್ಥೆ ಸ್ಥಾಪಿಸಿ ಜೀವನದ ಕೊನೆಯವರೆಗೂ ಅಲ್ಲಿಯೇ ಉಳಿದರು.  ಇವರ ಕುರಿತಾಗಿ ಹದಿನೈದು ವರ್ಷದ ಹಿಂದೆ ಆಂಧೋಲನ ಪತ್ರಿಕೆಯಲ್ಲಿ ನಾನು ಲೇಖನ ಬರೆದಾಗ, ಕುಮಾರಸ್ವಾಮಿ ಸರ್ಕಾರದಲ್ಲಿ ಸಚಿವರಾಗಿದ್ದ ಎನ್.ಚಲುವರಾಯಸ್ವಾಮಿ ಹೊನಗಾನಹಳ್ಳಿಯಲ್ಲಿ ಸರ್ಕಾರಿ ಆಸ್ಪತ್ರೆಯನ್ನು ಸ್ಥಾಪಿಸಿ ಅದಕ್ಕೆ ಪುಟ್ಟಣ್ಣಯ್ಯನವರ ಹೆಸರನ್ನು ನಾಮಕರಣ ಮಾಡಿದರು.

1938 ರ ಏಪ್ರಿಲ್ ತಿಂಗಳಿನಲ್ಲಿ ನಡೆದ ಶಿವಪುರದ ಅಧಿವೇಶನಲ್ಲಿ ಧ್ವಜ ಸತ್ಯಾಗ್ರಹ ಚಳುವಳಿಯನ್ನು ಅಹಿಂಸಾತ್ಮಕವಾಗಿ ನಡೆಸಲು ತೀರ್ಮಾನಿಸಲಾಯಿತು. ಏಪ್ರಿಲ್ 9 ರಂದು ಪ್ರಥಮ ಬಾರಿಗೆ ಟಿ.ಸಿದ್ಧಲಿಂಗಯ್ಯನವರು ಧ್ವಜಾರೋಹಣ ಮಾಡಿ ಬಂದಿತರಾದರು. ನಂತರ ಯಶೋಧರ ಧಾಸಪ್ಪ ಧ್ವಜಾ ರೋಹಣ ಮಾಡಿದರು. ಹೀಗೆ ಸಾಲು ಸಾಲಾಗಿ ಮೂರು ದಿನಗಳ ಕಾಲ ಧ್ವಜಾ ರೋಹಣ ಮಾಡಿ ದೇಶ ಪ್ರೇಮವನ್ನು ಮೆರೆದ ಅನೇಕ  ನಾಯಕರು ಬಂಧಿತರಾದರು. ಎಲ್ಲಿಯೂ ಹಿಂಸೆಯ ಘಟನೆ ಅಥವಾ ಪ್ರಚೋಧಿತ ಭಾಷಣ, ಮತ್ತು ಹೇಳಿಕೆಗಳು ಬರಲಿಲ್ಲ. ಗಾಂಧೀಜಿಯವರು ಕನಸಿದ್ದ ಅಹಿಂಸಾತ್ಮಕ ರೂಪದ ಸ್ವಾತಂತ್ರ್ಯ ಚಳುವಳಿಗೆ ಶಿವಪುರ ಧ್ವಜ ಸತ್ಯಾಗ್ರಹ ಮಾದರಿಯಾಯಿತು. ಜೊತೆಗೆ ಮಂಡ್ಯ ನೆಲದ ಜನರನ್ನು ವೈಚಾರಿಕತೆಯ ಹಾದಿಗೆ ದೂಡಿತು.

ಧ್ವಜ ಸತ್ಯಾಗ್ರಹ ಸ್ಥಳದಲ್ಲಿ ಭವನ ನಿರ್ಮಾಣ ಮಾಡಬೇಕೆಂಬುದು ಕೆಂಗಲ್ ಹನುಮಂತಯ್ಯನವರ  ಕನಸಾಗಿತ್ತು. ತಾವು ಪಾಲ್ಗೊಳ್ಳುತ್ತಿದ್ದ ಸಭೆ ಸಮಾರಂಭಗಳಲ್ಲಿ ಹಾಕುತ್ತಿದ್ದ ಹೂವಿನ ಹಾರವನ್ನು ಅಲ್ಲಿಯೇ ಹರಾಜು ಹಾಕಿ ಅದರಿಂದ ಬರುತ್ತಿದ್ದ  ಹಣವನ್ನು ಶೇಖರಿಸಿ ಅಂತಿಮವಾಗಿ ಐದು ಲಕ್ಷ ರೂಪಾಯಿ ಹಣವನ್ನು ದಾನ ನೀಡಿದರು. ದೇವರಾಜ ಅರಸು ಅಧಿಕಾರದಲ್ಲಿದ್ದ ಸಮಯದಲ್ಲಿ ಒಟ್ಟು ಹದಿಮೂರುವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಶಿವಪುರ ಸತ್ಯಾಗ್ರಹ ಭವನ ನಿರ್ಮಾಣವಾಯಿತು. ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹೆಚ್ಚಿನ ಅನುದಾನ ನೀಡಿ ಇಡೀ ಪ್ರದೇಶ ಮತ್ತು ಭವನವನ್ನು ಅಭಿವೃದ್ಧಿ ಪಡಿಸಲಾಯಿತು. ಬೆಂಗಳೂರು- ಮೈಸೂರು ನಡುವೆ ಓಡಾಡುವ ಜನರ ಕಣ್ಮನವನ್ನು ಇಂದಿಗೂ ಸಹ ಈ ಭವನ ಸೆಳೆಯುತ್ತಿರುವುದು ವಿಶೇಷ.

ಎನ್.ಜಗದೀಶ್ ಕೊಪ್ಪ.