ಸೋಮವಾರ, ಆಗಸ್ಟ್ 19, 2013

ಬಯಲು ಮಲ ವಿಸರ್ಜನೆಯ ಭಾರತ


ಇದು ದಶಕದ ಹಿಂದಿನ ಘಟನೆ. ಕರ್ನಾಟಕದ ಹಿರಿಯ ..ಎಸ್. ಅಧಿಕಾರಿಗಳಲ್ಲಿ ಒಬ್ಬರು ಹಾಗೂ ನನ್ನ ಪರಮಾಪ್ತ ಸ್ನಹಿತರಾದ ಎಲ್.ಕೆ. ಅತಿಕ್ ಅಹಮ್ಮದ್  (ತುಮಕೂರು ನಗರದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಇವರು,  ದೆಹಲಿಯ ಪ್ರಧಾನ ಮಂತ್ರಿಗಳ ಕಛೇರಿಯಲ್ಲಿ ಹಿರಿಯ ಅಧಿಕಾರಿಯಾಗಿ ಐದು ವರ್ಷ ಸೇವೆ ಸಲ್ಲಿಸಿ, ಈಗ ನ್ಯೂಯಾರ್ಕ್ ನಗರದಲ್ಲಿರುವ ವಿಶ್ವಬ್ಯಾಂಕ್ ನಲ್ಲಿ ಭಾರತದ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ) ಅವರು ಕರ್ನಾಟಕದ ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಮಾಜಿ ಹಿರಿಯ ಐ.ಪಿ.ಎಸ್ ಅಧಿಕಾರಿ ವಿ.ಪಿ.ಬಳಿಗಾರ್ ಇದೇ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ವಿಶ್ವ ಬ್ಯಾಂಕ್ ಆರ್ಥಿಕ ನೆರವಿನ ಗ್ರಾಮ ನೈರ್ಮಲ್ಯ ಯೋಜನಾ ಕಾರ್ಯಕ್ರಮದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಜನರಿಗೆ ಶೌಚಾಲಯ ಬಳಸುವುದನ್ನು ಅಭ್ಯಾಸ ಮಾಡಿಸಬೇಕು ಮತ್ತು ಬಯಲು ಮಲವಿಸರ್ಜನೆಯ ಪದ್ಧತಿಯನ್ನು ತಪ್ಪಿಸಬೇಕೆಂಬುದು ಈ ಇಬ್ಬರ ಅಧಿಕಾರಿಗಳ ಕನಸಾಗಿತ್ತು. ಈ ಯೋಜನೆಗೆ ನನ್ನ ಪತ್ರಕರ್ತ ಮಿತ್ರ ಜಿ.ಎನ್. ಮೋಹನ್ ರವರ ಪತ್ನಿ ಹಾಗೂ ಹಿರಿಯ ಪತ್ರಕರ್ತೆ ಇ.ಎಸ್.ಸತ್ಯ ಅವರು ಮಾಧ್ಯಮ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಕರ್ನಾಟಕದ ವಿವಿಧ ಕ್ರೇತ್ರಗಳ ಆಯ್ದ ವ್ಯಕ್ತಿಗಳನ್ನು ಬೆಂಗಳೂರಿನ ಕಾವೇರಿ ಭವನದಲ್ಲಿ ಒಂದು ದಿನದ ಸಮಾಲೋಚನೆಗೆ ಆಹ್ವಾನಿಸಲಾಗಿತ್ತು. ನಾನು ಸೇರಿದಂತೆ, ಬೆಂಗಳೂರು ವಿ.ವಿ. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿದ್ದ ದಿ.ಪ್ರೊ.ಬಿ.ಎ. ಶ್ರೀಧರ, ನಾಟಕಕಾರ ಕೆ.ವೈ.ನಾರಾಯಣಸ್ವಾಮಿ, ರೈತಸಂಘದ ನಾಯಕಿ ಮಂಡ್ಯದ ಸುನಂದಾ ಜಯರಾಂ, ಚಂದ್ರಶೇಖರ ಕಂಬಾರರ ಪುತ್ರ ರಾಜಶೇಖರ ಕಂಬಾರ ಒಳಗೊಂಡಂತೆ ಸುಮಾರು ಇಪ್ಪತ್ತು ಮಂದಿ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡಿದ್ದೆವು. ನಮ್ಮ ಮುಂದಿದ್ದ ಸವಾಲುಗಳೆಂದರೆ, ಕರ್ನಾಟಕದ ಸರ್ಕಾರ ಸಬ್ಸಿಡಿ ದರದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತಿ ಮನೆಗೆ ಶೌಚಾಲಯ ನಿರ್ಮಿಸಿಕೊಟ್ಟಿದ್ದರೂ ಸಹ ಜನತೆ ಅದನ್ನು ಉಪಯೋಗಿಸಿದೆ, ತಮ್ಮ ಕುರಿ ಮೇಕೆಗಳ ಕೊಟ್ಟಿಗೆಯಾಗಿ, ಇಲ್ಲವೆ ಸೌದೆ ಮತ್ತು ಜಾನುವಾರಗಳ ಮೇವಿನ ಸಂಗ್ರಹದ ಕೊಠಡಿಯಾಗಿ ಉಪಯೋಗಿಸುತ್ತಿದ್ದರು. ಇದನ್ನು ತಪ್ಪಿಸುವ ಬಗೆ ಹೇಗೆ? ಇಂತಹ ಪದ್ಧತಿ ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿತ್ತು.
ಈ ಸಮಸ್ಯೆಯನ್ನು ಇಟ್ಟುಕೊಂಡು ದಿನವಿಡಿ ಚರ್ಚಿಸಿದ ನಾವು ಅಂತಿಮವಾಗಿ ಸರ್ಕಾರಕ್ಕೆ ಸಲಹೆ ರೂಪದಲ್ಲಿ ಒಂದಿಷ್ಟು ಮಾರ್ಗದರ್ಶನ ನೀಡಿದೆವು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ಒಂದು, ಪ್ರಾಥಮಿಕ ಹಂತದಿಂದ ಮಕ್ಕಳಿಗೆ ಶೌಚಾಲಯ ಬಳಸುವ ಪದ್ಧತಿಯನ್ನು ರೂಢಿ ಮಾಡಿಸಬೇಕು, ಇದಕ್ಕಾಗಿ ಕರ್ನಾಟಕದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಮತ್ತು ನೀರಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು, ಎರಡನೇಯದಾಗಿ ಉತ್ತರ ಕರ್ನಾಟಕದಲ್ಲಿ ಮಠಾಧೀಶರು ತಮ್ಮಪ್ರವಚನ ನೀಡುವ ಸಮಯದಲ್ಲಿ ಶೌಚಾಲಯ ಬಳಕೆ ಕುರಿತು ಅವರಿಂದ ಜನತೆಗೆ ಬುದ್ಧಿ ಹೇಳಿಸಬೇಕು. ಹಾಗೂ ಮೂರನೇಯದಾಗಿ ಸಾಧ್ಯವಾದರೆ, ಕರ್ನಾಟಕದ ಜನಪ್ರಿಯ ವ್ಯಕ್ತಿಗಳ ಸಂದೇಶಗಳನ್ನು ಒಳಗೊಂಡ, ಜಾಹಿರಾತು ಪ್ರಕಟಿಸುವುದು, ಹಾಗೂ ಜಾತ್ರೆ, ಉತ್ಸವ ಸಂದರ್ಭಗಳಲ್ಲಿ ಶೌಚಾಲಯ ಬಳಕೆ ಮತ್ತು ನೈರ್ಮಲ್ಯ ಯೋಜನೆಗಳ ಕುರಿತು ಪ್ರದರ್ಶನ, ಮಾಹಿತಿ ನೀಡುವ ಕಾರ್ಯಕ್ರಮಗಳು, ಇದಕ್ಕೆ ಪೂರಕವಾಗಿ ಬೀದಿ ನಾಟಕ, ಪರಿಸರ ಕುರಿತಾದ ಗೀತೆಗಳ ಹಾಡುಗಾರಿಕೆ ಇರಬೇಕು ಎಂದು ಸಲಹೆ ಮಾಡಿದ್ದವು. ದಶಕದ ನಂತರ ಗ್ರಾಮ ನೈರ್ಮಲ್ಯ ಯೋಜನೆಯನ್ನು ಪರಾಮರ್ಶಿಸಿದರೆ, ಯಾವುದೇ ಬದಲಾವಣೆ ಕಾಣುತ್ತಿಲ್ಲ. ಅದೇ ಉತ್ತರ ಕರ್ನಾಟಕದಲ್ಲಿ ಓಡಾಡುತ್ತಿರುವ ನನಗೆ ಅನುಭಕ್ಕೆ ಬಂದ ಸಂಗತಿಯೆಂದರೆ, ಬಯಲು ವಿಸರ್ಜನೆ, ಮತ್ತು ಶಾಚಾಲಯಗಳ ನಿರಾಕರಣೆ ಈ ಎರಡೂ ಸಂಗತಿಗಳು ಜನಗಳ ಬದಲಾಗದ ಮನಸ್ಥಿತಿಯೇನೋ ಎಂಬಂತಾಗಿದೆ. ವಯಸ್ಸಾದ ತಲೆಮಾರಿನ ಜನರನ್ನು ಅಧುನಿಕತೆಗೆ ಒಗ್ಗಿಸುವುದು ಕಷ್ಟದ ಕೆಲಸ ಎಂದು ಮನದಟ್ಟಾಗಿದೆ.
ಇದೇ ಎರಡು ಸಾವಿರದ ಇಸವಿಯಲ್ಲಿ ಜಗತ್ತು ಇಪ್ಪತ್ತೊಂದನೆಯ ಶತಮಾನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ವಿಶ್ವ ಸಂಸ್ಥೆ “ ಶತಮಾನದ ಅಭಿವೃದ್ಧಿಯ ಗುರಿಗಳು” ( Millenium Devlopments Goals) ಎಂಬ ಹದಿನೈದು ವರ್ಷಗಳ ಯೋಜನೆಯನ್ನು ರೂಪಿಸಿತು. ಈ ಯೋಜನೆಯಲ್ಲಿ ಜಾಗತಿಕವಾಗಿ ಸಾಧಿಸಬೇಕಾದ  ಎಂಟು ವಿಷಯಗಳನ್ನು ಗುರಿಗಳನ್ನಾಗಿ ನಿರ್ಧರಿಸಲಾಗಿತ್ತು. ಅವುಗಳಲ್ಲಿ ಪ್ರಮಖವಾದವುಗಳೆಂದರೆ, ಬಡತನ ನಿವಾರಣೆ, ಲಿಂಗತಾರತಮ್ಯ ನಿವಾರಣೆ, ಮಹಿಳೆಯರಿಗೆ ಪುರುಷರಿಗೆ ಸಮಾನವಾಗಿ ಇರುವ ಹಕ್ಕುಗಳನ್ನು ಅಸ್ತಿತ್ವಕ್ಕೆ ತರುವುದು, ಮಕ್ಕಳ ಅಪೌಷ್ಟಿಕತೆಯನ್ನು ನಿವಾರಿಸುವುದು, ಹೆರಿಗೆ ಸಂದರ್ಭದಲ್ಲಿನ ಮಹಿಳೆಯರ ಸಾವು ತಡೆಗಟ್ಟುವುದು, ಜಗತ್ತಿನ ಎಲ್ಲಾ ಪ್ರಜೆಗಳಿಗೆ ಶುದ್ಧವಾದ ಕುಡಿಯುವ ನೀರು ಮತ್ತು ಶೌಚಾಲಯ ನಿರ್ಮಾಣ ಹಾಗೂ ವಸತಿ ನಿರ್ಮಾಣ,  ಏಡ್ಸ್, ಹೆಚ್, ಐ, ವಿ ಒಳಗೊಂಡಂತೆ ಮಲೇರಿಯಾ, ವಾಂತಿ ಬೇಧಿ ಮುಂತಾದ ಕಾಯಿಲೆಗಳನ್ನು ತಡೆಗಟ್ಟುವುದು. ಹೀಗೆ ಜಗತ್ತಿನ ಐವತ್ತಕ್ಕೂ ಹೆಚ್ಚು ರಾಷ್ಟ್ರಗಳ ವಿವಿಧ ರಂಗಗಳ ತಜ್ಙರ ನೇತೃತ್ವದಲ್ಲಿ ಯೋಜನೆಯನ್ನು ಜಾರಿಗೆ ತರಲಾಯಿತು. ಯೋಜನೆ ಜಾರಿಗೆ ಬಂದ ಏಳೂವರೆ ವರ್ಷಗಳ ನಂತರ ಕ್ರಮಿಸಿದ ಅರ್ಧ ದಾರಿಯಲ್ಲಿ ನಿಂತು, ಗುರಿಗಳ ಸಾಧನೆ ಕುರಿತು ನಡೆಸಿದ ಅಧ್ಯಯನ  ವರದಿ 2008ರಲ್ಲಿ ಪ್ರಕಟವಾಯಿತು. ವರದಿಯಲ್ಲಿ ತಜ್ಙರು ನಿರಾಸೆ ಮತ್ತು ಸಾಧಿಸಲಾಗದ ಅಸಹಾಯಕತೆಯನ್ನು ವ್ಯಕ್ತ ಪಡಿಸಿದ್ದರು. ಕೆಲವು ರಂಗಗಳಲ್ಲಿ ಈ ಯೋಜನೆ ವಿಫಲವಾಗಿತ್ತು. ( ನೋಡಿ- Mllenium Devlopment goals Report-2008)   ವಿಶೇಷವಾಗಿ ಏಷ್ಯಾ ರಾಷ್ಟ್ರಗಳಾದ ಭಾರತ, ಪಾಕಿಸ್ಥಾನ, ನೇಪಾಳ, ಬಂಗ್ಲಾ ಮುಂತಾದ ರಾಷ್ಟ್ರಗಳಲ್ಲಿ ಬಡತನ ನಿವಾರಣೆ ಮತ್ತು ಕುಡಿಯುವ ನೀರು, ಶೌಚಾಲಯ ಸಮಸ್ಯೆಗಳಲ್ಲಿ ಗಮನಾರ್ಹ ಬದಲಾವಣೆಯಾಗಿರಲಿಲ್ಲ. 2012ರ ವರದಿಯ ಪ್ರಕಾರ  ನೇಪಾಳ ಮತ್ತು ಶ್ರೀಲಂಕಾ ಒಂದಿಷ್ಟು ಪ್ರಗತಿ ಸಾಧಿಸಿವೆ. ಇಂತಹ ವೈಪಲ್ಯಗಳನ್ನು ಗುರಿಯಾಗಿಟ್ಟು ಕೊಂಡು ಭಾರತ ಸರ್ಕಾರ ಶೌಚಾಲಯ ನಿರ್ಮಾಣ ಮತ್ತು ಶುದ್ಧ ಕುಡಿಯುವ ನೀರಿನ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು “ ನಿರ್ಮಲ್ ಭಾರತ್ ಅಭಿಯಾನ್” ಎಂಬ ಆಂಧೋಲನವನ್ನು ಆರಂಭಿಸಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಬಡವರಿಗಾಗಿ ಇಪ್ಪತ್ತು ಲಕ್ಷ ಮನೆಗಳನ್ನು 35 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಿಕೊಡುವುದಾಗಿ ಕೇಂದ್ರ ಸಚಿವೆ ಗಿರಿಜಾ ವ್ಯಾಸ್ ಘೋಷಿಸಿದ್ದಾರೆ.
ಭಾರತದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ನೇತಾರರು ಬಣ್ಣ ಬಣ್ಣದ ಮಾತು ಮತ್ತು ಅಕರ್ಷಕ ಯೋಜನೆಗಳನ್ನು ಘೋಷಿಸಬಲ್ಲರೆ ಹೊರತು, ಜಾರಿಯಾದ ಯೋಜನೆಗಳನ್ನು ಸುಸ್ಥಿಯಲ್ಲಿ ಕಾಪಾಡಿಕೊಳ್ಳಲು ಅಸಮರ್ಥರು. ದೇಶದ ಎಲ್ಲಾ ಸಮಸ್ಯೆಗಳಿಗೆ ಖಾಸಾಗಿಕರಣವೇ ಮದ್ದು ಎಂದು ನಂಬಿರುವ ಈ ಮಹಾನುಭಾವರು ಆದ್ಯತೆಯ ಕ್ಷೇತ್ರಗಳಾದ ಶಿಕ್ಷಣ, ಆರೋಗ್ಯ, ವಸತಿ, ರಸ್ತೆ ಮತ್ತು ಒಳಚರಂಡಿ ನಿರ್ಮಾಣ ಮುಂತಾವುಗಳನ್ನು ಖಾಸಾಗಿ ಕ್ಷೇತ್ರಕ್ಕೆ ಒಪ್ಪಿಸಿ ಕಣ್ಮುಚ್ಚಿ ಕುಳಿತ್ತಿದ್ದಾರೆ. ಇಂತಹವರ ಅಸಮರ್ಥತೆಯಿಂದಾಗಿ ಭಾರತದಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ, ವಸತಿ, ಆರೋಗ್ಯ, ಶಿಕ್ಷಣ ಬಡವರ ಪಾಲಿಗೆ ಗಗನ ಕುಸುಮಗಳಾಗಿ ದೇಶದ ಜ್ವಲಂತ ಸಮಸ್ಯೆಗಳಾಗಿ ಉಳಿದಿವೆ, ಮುಂದಕ್ಕೂ ಉಳಿಯುತ್ತವೆ.
ಭಾರತದ ಶೌಚಾಲಯ ಸಮಸ್ಯೆಗಳನ್ನು ಕುರಿತು. 2009ರಲ್ಲಿ ಏಷ್ಯಾ ಡೆವಲಪ್ಮೆಂಟ್ ಬ್ಯಾಂಕ್ ಪ್ರಕಟಿಸಿರುವ ಅಧ್ಯಯನ ವರದಿ “ India sanitation for All” ಹಾಗೂ ವಿಶ್ವ ಬ್ಯಾಂಕ್ 2011ರಲ್ಲಿ ಪ್ರಕಟಿಸಿರುವ” Water and sanitation program-2011 ಎಂಬ ಅಧ್ಯಯನಗಳು ಇಲ್ಲಿನ ಸ್ಥಿತಿಗತಿಗಳಿಗೆ ಕನ್ನಡಿ ಹಿಡಿದಂತಿವೆ. ಜಗತ್ತಿನ ಇಪ್ಪತ್ತು ರಾಷ್ಟ್ರಗಳಲ್ಲಿ ಅಲ್ಲಿನ ಜನಸಂಖ್ಯೆಯ ಶೇಕಡ 35 ರಷ್ಟು ಜನ ಶೌಚಾಲಯದಿಂದ ವಂಚಿತರಾಗಿದ್ದರೆ, ಭಾರತದಲ್ಲಿ ಜನಸಂಖ್ಯೆಯ ಶೇಕಡ 53ರಷ್ಟು ಜನ ಶೌಚಾಲಯಗಳಲ್ಲದೆ ಬಯಲು ವಿಸರ್ಜನೆಯ ಮೊರೆ ಹೋಗುತ್ತಿದ್ದಾರೆ. ಇವರಲ್ಲಿ ಶೇಕಡ 74 ರಷ್ಟು ಜನಸಂಖ್ಯೆ ಭಾರತದ ಗ್ರಾಮಾಂತರ ಪ್ರದೇಶದ ನಿವಾಸಿಗಳಾಗಿದ್ದಾರೆ. ಭಾರತದ ಇಂತಹ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಐದು ವರ್ಷಗಳ ಕೆಳಗಿನ ಮಕ್ಕಳು ರೋಗರುಜಿನ, ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಕುತೂಹಲಕಾರಿಯಾದ ಅಧ್ಯಯನ ವರದಿಯೊಂದು ಪ್ರಕಟವಾಗಿದೆ. ಇಂಗ್ಲೆಂಡಿನ ಸಸ್ಸೆಕ್ಸ್ ವಿ.ವಿ.ಯ Institute of Devlopment studies ವಿಭಾಗದ ರಾಬರ್ಟ್ ಛೆಂಬರ್ಸ್ ಎಂಬುವರು ಈ ಕುರಿತು ಅಧ್ಯಯನ ನಡೆಸಿದ್ದಾರೆ. ಯೂನಿಸೆಫ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನಗಳು ಕೂಡ ಇದನ್ನು ದೃಢಪಡಿಸಿವೆ. ಬಯಲಿನಲ್ಲಿ ಮಲ ವಿಸರ್ಜನೆ ಮಾಡುವುದರಿಂದ , ನೈರ್ಮಲ್ಯದ ಕೊರತೆ ಹಾಗೂ ಜಲ ಮೂಲಗಳ ಶುಚಿತ್ವ ನಾಶಗೊಳ್ಳುತ್ತಿದ್ದು ಇವುಗಳ ನೇರ ಪರಿಣಾಮಕ್ಕೆ ಮಕ್ಕಳು  ಬಲಿಯಾಗುತ್ತಿದ್ದಾರೆ ಎಂದು ಅಧ್ಯಯನದಲ್ಲಿ ದೃಢಪಟ್ಟಿದೆ.
ಇದು ಭಾರತದ ವೈರುಧ್ಯವೆಂದರೂ ತಪ್ಪಾಗಲಾರದು.  ಭಾರತದ ಸುಮಾರು 110ಕೋಟಿ ಜನಸಂಖ್ಯೆಗೆ 92 ಕೋಟಿ ಮೊಬೈಲ್ ಗಳಿಗೆ, ಆದರೆ, ಶೇಕಡ 50 ರಷ್ಟು ಶೌಚಾಲಯಗಳಿಲ್ಲ. ದೇಶದಲ್ಲಿ ಪ್ರತಿದಿನ ಅರ್ಥವಿಲ್ಲದ ಖಾಲಿಮಾತುಗಳಿಗೆ ಮೊಬೈಲ್ ಮೂಲಕ  ಜನ ಕೋಟ್ಯಾಂತರ ರೂಪಾಯಿ ಹಣ ವ್ಯಯಮಾಡುತ್ತಿದ್ದಾರೆ. ಆದರೆ, ಈ ಹಣದಲ್ಲಿ ತಮ್ಮ ಮನೆಗೊಂದು ಶೌಚಾಲಯ ಕಟ್ಟಿಸಬಹುದು ಎಂಬ ಜ್ಙಾನ ನಮ್ಮ ಜನರಿಗಿಲ್ಲ. ಪ್ರತಿದಿನ ಭಾರತದಲ್ಲಿ ಮೊಬೈಲ್ ಕಂಪನಿಗಳಿಗೆ ಹರಿದು ಹೋಗುತ್ತಿರುವ ಹಣದಲ್ಲಿ ಕನಿಷ್ಟ ದಿನವೊಂದಕ್ಕೆ ಒಂದು ಲಕ್ಷ ಶೌಚಾಲಯಗಳನ್ನು ನಿರ್ಮಿಸಬಹುದು. ಗ್ರಾಮಾಂತರ ಪ್ರದೇಶದಲ್ಲಿ ಬಯಲು ವಿಸರ್ಜನೆ ಗ್ರಾಮದಿಂದ ದೂರದ ಹೊಲ ಗದ್ದೆ, ಕೆರೆ ಕಟ್ಟೆ ಸಮೀಪ ನಡೆದರೆ, ನಗರಗಳಲ್ಲಿ ಮನೆಯ ಸಮೀಪ, ಅಥವಾ ರೈಲ್ವೆ ಹಳಿಗಳ ಸಮೀಪವೆ ನಡೆಯುತ್ತದೆ. ಮುಂಬೈ ನಗರಕ್ಕೆ ಬೆಳಗಿನ ಜಾವ ರೈಲಿನಲ್ಲಿ ತಲುಪುವ ಪ್ರಯಾಣಿರಿಗೆ ನಗರದ ಹಳಿಗಳುದ್ದಕ್ಕೂ ಸಾಲಾಗಿ ಅಂಡು ತೋರಿಸುತ್ತಾ ಕುಳಿತ ಜನರು ಎದುರಾಗುತ್ತಾರೆ. ಇವರು ನಮಗೆ ಸ್ವಾಗತ ಕೋರುತ್ತಿದ್ದಾರಾ? ಅಥವಾ ಧಿಕ್ಕಾರದ ಪ್ರದರ್ಶನ ಮಾಡುತ್ತಿದ್ದಾರಾ? ಎಂಬ ಗೊಂದಲ ಕ್ಷಣಕಾಲ ಪ್ರಯಾಣಕರಲ್ಲಿ ಉಂಟಾಗುವುದು ಸಹಜ. ಕೊಳಗೇರಿಯಲ್ಲಿ ವಾಸಿಸುವ ಮಂದಿ ಎಷ್ಟು ನಿರ್ಲಿಪ್ತರೆಂದರೆ, ಅವರ ಗುಪ್ತಾಂಗಗಳನ್ನು ಪ್ರದರ್ಶನಕ್ಕಿಟ್ಟು ಕುಳಿತ ಅವರ ಮುಖದಲ್ಲಿ  ದಿಗಂಬರ ಜೈನ ಮುನಿಯ ಸ್ಥಿತಿ ಪ್ರಜ್ಙತೆ ಮನೆ ಮಾಡಿರುತ್ತದೆ.
ಇಂತಹ ಅಪಮಾನ ಹಾಗು ಆತಂಕಕಾರಿ ವಿಷಯಗಳನ್ನು ಒಡಲಲ್ಲಿ ಬಚ್ಚಿಟ್ಟುಕೊಂಡು ಭಾರತ ವಿಶ್ವದ ಬಲಿಷ್ಟ ಆರ್ಥಿಕ ಬೆಳವಣಿಗೆಯ ರಾಷ್ಟ್ರ ಎಂದು ಪ್ರತಿಬಿಂಬಿಸಿಕೊಳ್ಳುವುದು ನಿಜಕ್ಕೂ ಆತ್ಮವಂಚನೆಯ ಕೆಲಸವಾಗುತ್ತದೆ.
ಭಾರತದಲ್ಲಿ ಶೌಚಾಲಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಹಾಗೂ ಪ್ರತಿ ಮನೆಗೂ ಕಡ್ಡಾಯ ಮಾಡಲು ಅನೇಕ ಜಾಗತಿಕ ಸಂಸ್ಥೆಗಳು ಸಲಹೆ ಸೂಚನೆ ನೀಡಿವೆ. ಇದಲ್ಲದೆ, ಅನೇಕ ಯುವ ವಿಜ್ಙಾನಿಗಳು, ಸ್ವಯಂಸೇವಾ ಸಂಸ್ಥೆಗಳು ಸಮುದಾಯಕ್ಕೆ ನೆರವಾಗುವ ನಿಟ್ಟಿನಲ್ಲಿ ಕಡಿಮೆ ವೆಚ್ಚದ ಆಧುನಿಕ ತಂತ್ರಜ್ಙಾನ ಮತ್ತು ಪರಿಸರ ಸ್ನೇಹಿಯಾದ ಶೌಚಾಲಯದ ಉಪಕರಣಗಳನ್ನು ಅವಿಷ್ಕರಿಸಿದ್ದಾರೆ.ಇದರ ಪ್ರಯೋಜನವನ್ನು ನಮ್ಮ ಸರ್ಕಾರಗಳು ಪ್ರಮಾಣಿಕವಾಗಿ ಬಳಸಿಕೊಳ್ಳಬೇಕು. ನಗರಗಳಲ್ಲಿ ವಸತಿ ಸಮಸ್ಯೆಯಿಂದಾಗಿ ಕೊಳಗೇರಿಗಳಲ್ಲಿ ವಾಸಿಸುವ ಬಡವರಿಗೆ ಸಮುದಾಯ ಶೌಚಾಲಯಗಳನ್ನು ನಿರ್ಮಿಸಿಕೊಡಬೇಕು. ಗ್ರಾಮಾಂತರ ಪ್ರದೇಶದ ಜನತೆಯಲ್ಲಿ ಬಯಲು ಮಲ ವಿಸರ್ಜನೆಯ ಪರಿಣಾಮಗಳನ್ನು ತಿಳಿಸಿ ಶೌಚಾಲಯಗಳನ್ನು ಹೊಂದುವಂತೆ ಅವರ ಮನ ಒಲಿಸಬೇಕು. ಈ ಕೆಲಸ ಮಾಡಬೇಕಾದ ಸರ್ಕಾರದ ಕಛೇರಿಗಳ ಶೌಚಾಲಯಗಳು, ಬಸ್ ನಿಲ್ದಾಣದ ಶೌಚಾಲಯಗಳು, ಮತ್ತು ನಗರ ಸಭೆ, ಮಹಾನಗರ ಪಾಲಿಕೆ ನಿರ್ಮಿತ ಶೌಚಾಲಯಗಳು ಗಬ್ಬೆದ್ದು ನಾರುತ್ತಿರುವಾಗ ಜನತೆ ಸರ್ಕಾರದ ಮಾತುಗಳನ್ನು ಕೇಳಬಲ್ಲರೆ? ಇದು ಸಧ್ಯಕ್ಕೆ ನಮ್ಮ ಮುಂದಿರುವ ಪ್ರಶ್ನೆ. ಈಗಿನ ನಮ್ಮ ಸರ್ಕಾರದ ಯೋಜನೆಗಳು ಹೇಗಿವೆಯೆಂದರೆ, ತಿಪ್ಪೆಗುಂಡಿಯ ಮೇಲೆ ನಿಂತು ಶುಚಿತ್ವದ ಪಾಠ ಹೇಳುವ ಮೂರ್ಖ ಶಿಖಾಮಣಿಯ ಚಿಂತನೆಗಳಂತಿವೆ.

ಸರ್ಕಾರಗಳ ಇಂತಹ ಅವಿವೇಕಗಳ ಪರಿಣಾಮವಾಗಿ ಭಾರತದ ಪ್ರಜೆ ವರ್ಷವೊಂದಕ್ಕೆ ಸರಾಸರಿ 48 ಡಾಲರ್ ಹಣವನ್ನು ( ಅಂದಾಜು ಮೂರುಸಾವಿರ ರೂಪಾಯಿ) ನೈರ್ಮಲ್ಯ ಕೊರತೆಯಿಂದಾದ ರೋಗರುಜಿನಗಳಿಗೆ ವ್ಯಯಮಾಡುತ್ತಿದ್ದಾನೆ. ಇದು ದೇಶದ ಒಟ್ಟು ಆಂತರಿಕ ಉತ್ಪನ್ನ ಪ್ರಮಾಣದ ಶೇಕಡ 6ರಷ್ಟಿದೆ. ಆಫ್ರಿಕಾ ರಾಷ್ಟ್ರಗಳಲ್ಲಿ ಈ ಪ್ರಮಾಣ ಕೇವಲ ಶೇಕಡ ಒಂದರಿಂದ ಎರಡರಷ್ಟಿದೆ.

1 ಕಾಮೆಂಟ್‌:

  1. ಮಾನ್ಯರೇ, ಬಯಲು ಶೌಚಾಲಯದ ಬಗ್ಗೆ ಸಾಕಷ್ಟು ಕೂಲಂಕಷವಾಗಿ ಪರಿಶೀಲಿಸಿ, ಸರಕಾರಕ್ಕೆ ಸಾಕಷ್ಟು ಉತ್ತಮ ಸಲಹೆ ನೀಡಿದ್ದೀರಿ. ಆರೋಗ್ಯದ ಹಿತದೃಷ್ಟಿಯಿಂದ ಒಳ್ಳೆಯ ಕಾರ್ಯಕ್ರಮ. ಗ್ರಾಮ ನೈರ್ಮಲ್ಯ, ಸಮಾಜದ ಆರೋಗ್ಯದ ಹಿತಿದೃಷ್ಟಿ ಇಲ್ಲಿ ಮುಖ್ಯ. ಮಕ್ಕಳಿಗೆ ಬರುವ ಮಾರಕ ರೋಗಗಳನ್ನು ತಡೆಯಬಹುದು ಮತ್ತು ಪ್ರಾಣವನ್ನೂ ಉಳಿಸಬಹುದು. ಅದರಲ್ಲೂ ಮುಖ್ಯವಾಗಿ ಮಕ್ಕಳ ಮತ್ತು ಹೆಣ್ಣು ಮಕ್ಕಳ ಮಾನಪ್ರಾಣಗಳ ಹಿತದೃಷ್ಟಿಯಿಂದ ಮನೆಯಬಳಿಯೇ ಶೌಚಾಲಯ ನಿರ್ಮಿಸಿಕೊಂಡು ಬಳಸುವುದು ಉತ್ತಮ. ಆದರೆ ಇಲ್ಲಿ ಒಂದನ್ನು ಗಮನಿಸಬೇಕು. ನೀರಿನ ಸಮಸ್ಯೆ ಪ್ರಮುಖವಾದುದು. ಸಾಮಾನ್ಯವಾಗಿ ಬಯಲಿಗೆ ಹೋದರೆ, ಒಂದು ತಂಬಿಗೆ ನೀರಿದ್ದರೆ ಸಾಕು. ದೇಹ ಶುದ್ದಿಯಾಗುತ್ತದೆ. ಅದೇ ಮನೆಯಲ್ಲಿದ್ದರೆ. ಶುಚಿಗೊಳಿಸಬೇಕು. ನಿರ್ವಹಿಸಬೇಕು ಅದೆಲ್ಲಾ ಏಕೆ ಎಂಬ ಸೋಮಾರಿತನ. ಇದಕ್ಕೆ ಗ್ರಾಮ ನಿವಾಸಿಗಳ ಮನಒಲಿಸಬೇಕು. ಸಾಮಾಜಿಕವಾಗಿ ಪರಸ್ಪರ ಅರಿವು ಮೂಡಿಸಿಕೊಂಡು ತಮ್ಮ ತಮ್ಮ ಮನೆಗಳಲ್ಲಿಯೇ ಶೌಚಾಲ ನಿರ್ಮಿಸಿಕೊಳ್ಳಬೇಕು. ಇದರಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯವಾದುದು.

    ಪ್ರತ್ಯುತ್ತರಅಳಿಸಿ