ಶನಿವಾರ, ಸೆಪ್ಟೆಂಬರ್ 3, 2022

ಖಾದಿ ಎಂದರೆ ವಸ್ತ್ರವಲ್ಲ, ಅದು ನಿಜ ಭಾರತದ ಅಸ್ಮಿತೆ


ಭಾರತ ಈ ವರ್ಷ ತನ್ನ ಎಪ್ಪತ್ತೈದನೆಯ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸಿಕೊಂಡಿತು. ದುರಂತದ ಸಂಗತಿಯೆಂದರೆ, ಬ್ರಿಟೀಷರ ಪರವಾಗಿ ನಿಂತು ವಕಾಲತ್ತು ವಹಿಸುವುದರ ಜೊತೆಗೆ ಗಾಂಧೀಜಿಯನ್ನು ಸೇರಿದಂತೆ ಸಕಲ ಸ್ವಾತಂತ್ರ ಹೋರಾಟಗಾರರನ್ನು ದ್ವೇಷಿಸುತ್ತಾ ಬಂದವರು ಹಾಗೂ ತ್ರಿವರ್ಣ ಧ್ವಜವನ್ನು ಸ್ವಾತಂತ್ರ್ಯಾನಂತರ ಸತತ ಐವತ್ತರೆಡು ವರ್ಷಗಳ ಕಾಲ ತಮ್ಮ ಸಂಸ್ಥೆಗಳ ಕಟ್ಟಡಗಳ ಮೇಲೆ ಧ್ವಜ ಹಾರಿಸಲು ನಿರಾಕರಿಸಿದವರು ಈ ವರ್ಷ ಧ್ವಜ ಹಾರಿಸುವುದರ ಮೂಲಕ ತಮ್ಮ ಹುಸಿ ದೇಶ ಪ್ರೇಮವನ್ನು ಸಾಬೀತು ಮಾಡಲು ಪ್ರಯತ್ನಿಸಿದ್ದಾರೆ. ಮಾತನಾಡುವ ಪ್ರತಿ ಶಬ್ದಗಳಲ್ಲಿ ಸುಳ್ಳುಗಳು ಮತ್ತು ದೇಶಾಭಿಮಾನದ ಹೆಸರಿನಲ್ಲಿ ಕೋಮುದ್ವೇಷ ಬಿತ್ತುವವರು ನಾಡಿನ ಪ್ರತಿ ಮನೆ ಮನೆಗಳ ಮೇಲೆ ಧ್ವಜ ಹಾರಾಡಬೇಕೆಂದು ಕರೆ ನೀಡಿದರು ಜೊತೆಗೆ ಎಲ್ಲರಿಗೂ ಧ್ವಜ ವಿತರಿಸುವ ನಿಟ್ಟಿನಲ್ಲಿ ಚೀನಾದಿಂದ ಆಮದಾದ ಕಳಪೆ ಗುಣಮಟ್ಟದ ಪಾಲಿಯೆಸ್ಟರ್ ವಸ್ತ್ರಗಳಿಂದ ತಯಾರಾದ ಧ್ವಜಗಳಿಗೆ ಅನುಮತಿ ನೀಡುವುದರ ಮೂಲಕ ರಾಷ್ಟ್ರ ಧ್ವಜದ ನಿಯಮಾವಳಿಗಳನ್ನು ಗಾಳಿಗೆ ತೂರಿದರು.
ತ್ರಿವರ್ಣ ಧ್ವಜವನ್ನು 1947 ರ ಜುಲೈ ತಿಂಗಳ 22 ರಂದು ರಾಷ್ಟ್ರ ಧ್ವಜ ಎಂದು ಅಂಗೀಕರಿಸಿದ ನಂತರ ಭಾರತದ ರಾಷ್ಟ್ರ ಧ್ವಜಕ್ಕೆ ಕೆಲವು ನಿಯಮಾವಳಿಗಳನ್ನು ರೂಪಿಸಲಾಯಿತು. ಶುದ್ಧವಾದ ದೇಶಿ ಹತ್ತಿ ನೂಲಿನಿಂದ ತಯಾರಾದ ವಸ್ತçಗಳಿಂದ ಮಾತ್ರ ಅದನ್ನು ತಯಾರಿಸಬೇಕಿತ್ತು. ಈ ಕಾರಣದಿಂದಾಗಿ ದೇಶದ ವಿವಿಧ ಭಾಗಗಳೂ ಸೇರಿದಂತೆ ನಮ್ಮ ಕರ್ನಾಟಕದ ಧಾರವಾಡ ಜಿಲ್ಲೆಯ ಗರಗ ಗ್ರಾಮ ಮತ್ತು ಹುಬ್ಬಳ್ಳಿ ನಗರದ ಬೆಂಗೇರಿಯಲ್ಲಿದ್ದ ಖಾದಿ ಗ್ರಾಮೋದ್ಯೋಗ ಘಟಕಗಳಲ್ಲಿದ್ದ ನೂರಾರು ಮಹಿಳೆಯರು ಮತ್ತು ಪುರುಷರು ಶುದ್ಧ ಹತ್ತಿಯಿಂದ ನೂಲು ತೆಗೆಯುವುದು, ವಸ್ತç ತಯಾರಿಸುವುದು ನಂತರ ವಿವಿಧ ಆಕಾರಗಳಲ್ಲಿ ಸರ್ಕಾರದ ನಿಯಮಾವಳಿ ಪ್ರಕಾರ ತ್ರಿವರ್ಣ ಧ್ವಜಗಳನ್ನು ಸಿದ್ಧ ಪಡಿಸುತ್ತಿದ್ದರು.
ಗಾಂಧೀಜಿಯವರ ಕನಸಿನ ಯೋಜನೆಯಾದ ಹಾಗೂ ಪ್ರತಿ ಮನುಷ್ಯನಿಗೂ ಅಥವಾ ದುಡಿಯುವ ಕೈಗಳಿಗೆ ಕೆಲಸ ನೀಡಬೇಕು ಎಂಬ ಗೃಹ ಕೈಗಾರಿಕೆಯ ಯೋಜನೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾದಿ ಗ್ರಾಮೋದ್ಯೋಗ ಕೇಂದ್ರಗಳಿಗೆ ಇದರಿಂದಾಗಿ ವರ್ಷ ಪೂರ್ತಿ ಕೆಲಸ ದೊರೆಯುತ್ತಿತ್ತು. ಈಗ ಹುಸಿ ದೇಶಭಕ್ತರ ಕುರುಡು ತೀರ್ಮಾನದಿಂದಾಗಿ ಗುಡಿ ಕೈಗಾರಿಕೆಗಳು ನೆಲ ಕಚ್ಚುವಂತಾಯಿತು ಜೊತೆಗೆ ಈವರೆಗೆ ರಾಷ್ಟç ಧ್ವಜವನ್ನು ಸಂಜೆ ಆರು ಗಂಟೆಯ ನಂತರ ಹಾರಾಡಬಾರದು ಎಂಬ ನಿರ್ಬಂಧ ಹೇರಲಾಗಿತ್ತು ಈಗ ಈ ನಿಯಮಾವಳಿಯನ್ನು ರದ್ದುಪಡಿಸಿ ರಾಷ್ಟç ಧ್ವಜದ ಘನತೆ ಮತ್ತು ಗೌರವವನ್ನು ಗಾಳಿಗೆ ತೂರುವುದರ ಮೂಲಕ ಅದರ ಸ್ಥಾನಮಾನವನ್ನು ರಾಜಕೀಯ ಪಕ್ಷಗಳ ಧ್ವಜಗಳ ಸಮಾನಕ್ಕೆ ಇಳಿಸಲಾಗಿದೆ
. ತಮ್ಮ ಜೀವಮಾನದಲ್ಲಿ ಭಾರತದ ಸ್ವಾತಂತ್ರö್ಯ ಹೋರಾಟದ ಬಗ್ಗೆ ಒಂದಿನಿತು ಕಾಳಜಿ ತೋರದ ಮತ್ತು ಇತಿಹಾಸವನ್ನು ಗಂಭೀರವಾಗಿ ಅಧ್ಯಯನ ಮಾಡಲಾಗದ ಮತ್ತು ಅಭಿನಯವನ್ನು ಬಂಡವಾಳ ಮಾಡಿಕೊಂಡ ನಾಯಕರಿಗೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರು ಉಪ್ಪು ಮತ್ತು ಖಾದಿಯನ್ನು ಹೋರಾಟದ ಭಾಗವಾಗಿ ಏಕೆ ಆಯ್ಕೆ ಮಾಡಿಕೊಂಡರು ಎಂಬುದನ್ನು ನಾವು ಈಗ ಮನನ ಮಾಡಿಕೊಡಬೇಕಿದೆ.
ಮಹಾತ್ಮ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹ ಕೈಗೊಳ್ಳುವುದರ ಮೂಲಕ ಬ್ರಿಟೀಷ್ ಸಾಮ್ರಾಜ್ಯದ ಬುಡಕ್ಕೆ ಪ್ರಥಮಬಾಗಿ ಕೊಡಲಿ ಪೆಟ್ಟು ನೀಡುವುದರ ಮೂಲಕ ಭಾರತದ ಸ್ವಾತಂತ್ರö್ಯ ಹೋರಾಟವು ಅಹಿಂಸಾ ಮಾರ್ಗದಲ್ಲಿ ಸಾಗುತ್ತಿರುವುದನ್ನು ಜಗತ್ತಿಗೆ ಪರಿಚಯ ಮಾಡಿಕೊಟ್ಟರು. ಬಡವ ಬಲ್ಲಿದ ಎಂಬ ತಾರತಮ್ಯವಿಲ್ಲದೆ ಎಲ್ಲರೂ ಬಳಸಬೇಕಾದ ಅವಶ್ಯಕ ವಸ್ತುಗಳಲ್ಲಿ ಉಪ್ಪು ಮತ್ತು ಖಾದಿ ವಸ್ತç ಅಂದರೆ ಹತ್ತಿಯಿಂದ ತಯಾರಾದ ವಸ್ತçಗಳು ಎಂಬುದು ಅವರಿಗೆ ಮನವರಿಕೆಯಾಗಿತ್ತು. ಅನಕ್ಷರತೆ ತಾಂಡವಾಡುತ್ತಿದ್ದ ಆ ಕಾಲಘಟ್ಟದಲ್ಲಿ ಭಾರತದಲ್ಲಿದ್ದ ಮುವತ್ತು ಕೋಟಿ ಜನರನ್ನು ಭಾವನಾತ್ಮಕವಾಗಿ ಮತ್ತು ಸೈದ್ಧಾಂತಿಕವಾಗಿ ತೊಡಗಿಸಿಕೊಳ್ಳಲು ಕರೆ ನೀಡಲು ಮಹಾತ್ಮನಿಗೆ ಉಪ್ಪು ಮತ್ತು ಖಾದಿ ಎರಡೂ ಪ್ರಬಲ ಅಸ್ತçಗಳಾದವು. ಭಾರತದಲ್ಲಿ ನಡೆಯುತ್ತಿದ್ದ ಸ್ವಾತಂತ್ರö್ಯ ಹೋರಾಟ ಮತ್ತು ಅದನ್ನು ಬಗ್ಗು ಬಡಿಯಲು ಬ್ರಿಟೀಷರು ಅನುಸರಿಸುತ್ತಿದ್ದ ದಬ್ಬಾಳಿಕೆಯು ಹೊರಜಗತ್ತಿಗೆ ತಿಳಿಯದಂತೆ ಬ್ರಿಟೀಷ್ ಸರ್ಕಾರವು ವ್ಯವಸ್ಥಿತ ಜಾಲವನ್ನು ಹೆಣೆದಿತ್ತು.
ಇಂಗ್ಲೇಂಡ್ ಹೊರತು ಪಡಿಸಿ ಇತರೆ ರಾಷ್ಟ್ರಗಳಿಗೆ ಭಾರತದ ಸುದ್ದಿಗಳು ತಲುಪುತ್ತಿರಲಿಲ್ಲ. 1930 ರ ಮಾರ್ಚ್ ತಿಂಗಳಲ್ಲಿ ನಡೆದ ದಂಡಿ ಸತ್ಯಾಗ್ರಹದ ಸಂಸರ್ಭದಲ್ಲಿ ಅಮೇರಿಕಾದಿಂದ ಆಗಮಿಸಿದ್ದ ವೆಬ್ ಮಿಲ್ಲರ್ ಎಂಬ ಪತ್ರಕರ್ತನಿಗೆ ಸುದ್ದಿ ಮಾಡಲು ಬ್ರಿಟೀಷ್ ಸರ್ಕಾರವು ಅವಕಾಶ ನೀಡಿತ್ತು. ವೆಬ್ ಮಿಲ್ಲರ್ ದಂಡಿ ಸಮುದ್ರ ತೀರವನ್ನು ತಲುಪುವುದರ ವೇಳೆಗೆ ಮಹಾತ್ಮ ಗಾಂಧಿಯವರು ಬಂಧನವಾಗಿದ್ದರು. ದರುಸನ ಎಂಬ ಪ್ರದೇಶದಲ್ಲಿ ಸರೋಜಿನಿ ನಾಯ್ಡು ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹಿಗಳು ಮುಂದೆ ಸಾಗುತ್ತಾ ಪೊಲೀಸರಿಂದ ಲಾಠಿ ಏಟು ತಿಂದು ತಲೆ ಬುರುಡೆ ಹೊಡೆಸಿಕೊಂಡು ನೆಲಕ್ಕೆ ಬೀಳುವ ಸ್ಥಿತಿಯನ್ನು ನೋಡಿದ ಪತ್ರಕರ್ತ ವೆಬ್ ಮಿಲ್ಲರ್‌ಗೆ ಅಹಿಂಸಾ ಸತ್ಯಾಗ್ರಹ ಈ ರೀತಿಯಲ್ಲಿ ಇರಬಹುದೆಂಬ ಕಲ್ಪನೆ ಇರಲಿಲ್ಲ. ಆತನು ಆ ದೃಶ್ಯವನ್ನು ನೋಡಿ ಅಕ್ಷರಶಃ ನಡುಗಿ ಹೋಗಿದ್ದನು.
ತಲ್ಲಣಗೊಂಡ ವೆಬ್ ಮಿಲ್ಲರ್ ಕೂಡಲೇ ಬಾಂಬೆ ನಗರಕ್ಕೆ ಆಗಮಿಸಿ ತಾನು ಕಾರ್ಯನಿರ್ವಹಿಸುತ್ತಿದ್ದ ಯುನೈಟೈಡ್ ಪ್ರೆಸ್ ಆಪ್ ಅಮೇರಿಕಾ ಎಂಬ ಸಂಸ್ಥೆಗೆ ಸುದ್ದಿ ರವಾನಿಸಿದನು. ಅಮೇರಿಕಾದಲ್ಲಿ ಪ್ರಕಟವಾದ ಈ ಸುದ್ಧಿಯನ್ನು ನೋಡಿ ಬೆಚ್ಚಿಬಿದ್ದ ಅಲ್ಲಿನ ನಾಗರೀಕರು ಎರಡೂವರೆ ಲಕ್ಷ ಕರಪತ್ರಗಳ ಮೂಲಕ ವೆಬ್ ಮಿಲ್ಲರ್ ನ ಸುದ್ದಿಯನ್ನು ಪುನರ್ ಮುದ್ರಸಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಪ್ರಥಮ ಬಾರಿಗೆ ಭಾರತದ ಅಹಿಂಸಾತ್ಮಕ ಹೋರಾಟ ಹಾಗೂ ಬ್ರಿಟೀಷರ ಕ್ರೌರ್ಯವು ಜಗತ್ತಿಗೆ ಪರಿಚಯವಾಯಿತು. ಕಳೆದ ನಲವತ್ತೈದು ವರ್ಷಗಳಿಂದ ಗಾಂಧೀಜಿಯವರ ಕುರಿತಾಗಿ ಅಧ್ಯಯನ ಮಾಡುತ್ತಿರುವ ಆಸ್ಟ್ರೇಲಿಯಾದ ವಿದ್ವಾಂಸ ಥಾಮಸ್ ವೆಬ್ಬರ್ ಎಂಬುವರು ಬರೆದಿರುವ ‘ ದ ಹಿಸ್ಟೋರಿಯಾಗ್ರಫಿ ಆಫ್ ಗಾಂಧೀಸ್ ಮಾರ್ಚ್ ಟು ದಂಡಿ’ ಎಂಬ ಮಹತ್ವದ ಕೃತಿಯಲ್ಲಿ ದಂಡಿ ಸತ್ಯಾಗ್ರಹದ ಅಪರೂಪದ ಸಮಗ್ರ ವಿವರಗಳು ನಮಗೆ ಲಭ್ಯವಾಗುತ್ತಿವೆ
. ಈ ರೀತಿಯಲ್ಲಿ ಗಾಂಧೀಜಿಯವರು ಉಪ್ಪಿನ ಮೂಲಕ ಭಾರತದ ಮೂಲೆ ಮೂಲೆಗೂ ಭಾಷೆಯ ಗಡಿಗಳಿಲ್ಲದೆ ಜನ ಸಾಮಾನ್ಯದ ಎದೆಗೆ ತಲುಪಿದ್ದರು. ಇದು ಅವರ ದೂರದರ್ಶಿತ್ವಕ್ಕೆ ಒಂದು ಸಾಕ್ಷಿ.
ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ನತರ ಗೋಖಲೆಯವರ ನಿಧನಾನಂತರ ಸ್ವಾತಂತ್ರö್ಯ ಚಳುವಳಿಯನ್ನು ಕೈಗೆತ್ತಿಕೊಳ್ಳುವ ಮುನ್ನ ಅವರು ಇಡೀ ಭಾರತವನ್ನು ಸುತ್ತಿ ಇಲ್ಲಿನ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳನ್ನು ಅವಲೋಕನ ನಡೆಸಿದ್ದರು. ಇದೇ ವೇಳೆಗೆ 1915 ರಲ್ಲಿ ನಡೆದ ಚಂಪಾರಣ್ಯ ಸತ್ಯಾಗ್ರಹ ಅವರ ಹೋರಾಟಕ್ಕೆ ಒಂದು ರೀತಿಯ ತಾತ್ವಿಕ ಹಾಗೂ ಸೈದ್ಧಾಂತಿಕ ನೆಲೆಯನ್ನು ಒದಗಿಸಿಕೊಟ್ಟಿತು. ಬಿಹಾರದ ಮಳೆಯಾಶ್ರಿತ ಭೂಮಿಯಲ್ಲಿ ಹತ್ತಿ ಬೆಳೆದು ಜೀವನ ನಿರ್ವಹಣೆ ಮಾಡುತ್ತಿದ್ದ ರೈತರನ್ನು ಬ್ರಿಟೀಷ್ ಸರ್ಕಾರ ನೀಲಿ ಬೆಳೆಯನ್ನು ಆಶ್ರಯಿಸುವಂತೆ ಒತ್ತಾಯಿಸತೊಡಗಿತು. ಅರಿಶಿನ ಮಾದರಿಯಲ್ಲಿ ನೀಲಿಯನ್ನು ಬೆಳೆಯಲಾಗುತ್ತಿತ್ತು. ನೀಲಿ ಗೆಡ್ಡೆಗಳನ್ನು ಒಣಗಿಸಿ ನಂತರ ಪುಡಿ ಮಾಡಿ ಅದರ ನೀರಿನಲ್ಲಿ ಹತ್ತಿ ಬಟ್ಟೆಗಳನ್ನು ಅದ್ದಿ ಶುಭ್ರವಾಗಿ ಕಾಣುವಂತೆ ಮಾಡಲಾಗುತ್ತಿತ್ತು. ಈ ಕಾರಣಕ್ಕಾಗಿ ಇಂಗ್ಲೇಂಡಿನ ಹತ್ತಿ ಬಟ್ಟೆಯ ಮಿಲ್ ಗಳಿಗೆ ಹತ್ತಿಯ ಜೊತೆಗೆ ನೀಲಿಯ ಅವಶ್ಯಕತೆ ಕೂಡ ಇತ್ತು. ಆ ವೇಳೆಗಾಗಲೇ ಭಾರತದಲ್ಲಿ ಬೆಳೆಯಲಾಗುತ್ತಿದ್ದ ದೇಶಿ ಹತ್ತಿ ಬೆಳೆಯಿಂದ ಕೇವಲ ರೈತರು ಮಾತ್ರವಲ್ಲದ, ನೂಲು ಮಾಡುವವರು, ನೇಕಾರರು, ಹತ್ತಿ ಬಟ್ಟೆಯ ವ್ಯಾಪಾರಗಾರು ಹೀಗೆ ಹಲವಾರು ಮಂದಿಗೆ ಆಶ್ರಯವಾಗಿದ್ದ ಹತ್ತಿಯ ಮಹತ್ವವನ್ನು ಅರಿತ ಗಾಂಧೀಯವರು ದುಡಿಯುವ ಕೈಗಳಿಗೆ ಕೈ ತುಂಬಾ ಕೆಲಸ ನೀಡುವ ಖಾದಿ ಗ್ರಾಮೋದ್ಯೋಗ ಚಟುವಟಿಕೆಗೆ ಹೆಚ್ಚಿನ ಆದ್ಯತೆ ನೀಡಿದರು. ಜೊತೆಗೆ ತಾವು ಜನಿಸಿದ ಗುಜರಾತಿನಲ್ಲಿ ಆ ವೇಳೆಗಾಗಲೇ ಅಸ್ತಿತ್ವದಲ್ಲಿದ್ದ ಹತ್ತಿ ನೂಲು ಮತ್ತು ಬಟ್ಟೆ ತಯಾರಿಕೆಯ ಗುಡಿ ಕೈಗಾರಿಕೆಗಳನ್ನು ಹತ್ತಿರದಿಂದ ನೊಡಿದ್ದ ಅವರಿಗೆ ಭಾರತದ ಅಭಿವೃದ್ಧಿಯ ಮೂಲ ಬೇರುಗಳು ಗುಡಿ ಕೈಗಾರಿಕೆಗಳಲ್ಲಿವೆ ಎಂಬುದು ಅವರಿಗೆ ದೃಢವಾಗಿತ್ತು. ಈ ಕಾರಣಕ್ಕಾಗಿ ಗಂಗಾ ಬೆಹನ್ ಎಂಬ ದಲಿತ ಮಹಿಳೆಯ ಮೂಲಕ ದೇಶಿ ಹತ್ತಿ ಚರಕಗಳನ್ನು ಪತ್ತೆ ಮಾಡಿಸಿ, ಬರೋಡ ಸಮೀಪದ ಹಳ್ಳಿಯೊಂದರಲ್ಲಿ ಹತ್ತಿ ಬಟ್ಟೆ ತಯಾರಿಸುತ್ತಿದ್ದ ಆದಿವಾಸಿ ಕುಟುಂಬವನ್ನು ಸಬರಮತಿ ಆಶ್ರಮಕ್ಕೆ ಕರೆಸಿಕೊಂಡು ಖಾದಿ ಚಟುವಟಿಕೆಗೆ ನಾಂದಿಹಾಡಿದರು. ಮಗನ್ ಲಾಲ್ ಮತ್ತು ಜೆ.ಸಿ.ಕುಮಾರಪ್ಪನವರು ಮುಂದಿನ ದಿನಗಳಲ್ಲಿ ದೇಸಿ ಚರಕಗಳಿಗೆ ಆಧುನಿಕ ಸ್ಪರ್ಶ ನೀಡುವುದರ ಮೂಲಕ ಎಲ್ಲರಿಗೂ ದೊರೆಯುವಂತೆ ಮಾಡಿದರು.
ಭಾರತದಲ್ಲಿ ಹತ್ತಿ ಬೆಳೆ ಮತ್ತು ಬಟ್ಟೆ ತಯಾರಿಕೆಗೆ ಕ್ರಿಸ್ತ ಪೂರ್ವದ ಕಾಲದಿಂದಲೂ ಭವ್ಯವಾದ ಇತಿಹಾಸವಿದೆ. ಕ್ರಿಸ್ತಪೂರ್ವ 482 ರಲ್ಲಿ ಗೌತಮ ಬುದ್ಧನು ಕುಶೀನಾರ ಎಂಬ ಸ್ಥಳದಲ್ಲಿ ಮಲ್ಲರ ಬುಡಕಟ್ಟು ಸಮುದಾಯಕ್ಕೆ ಸೇರಿದ ಸಾಲ ವೃಕ್ಷಗಳ ತೋಪಿನಲ್ಲಿ ತನ್ನ ಎಂಬತ್ತನೆಯ ವಯಸ್ಸಿನಲ್ಲಿ ನಿಧನ ಹೊಂದಿದಾಗ ಆತನ ಪರಮ ಶಿಷ್ಯನಾದ ಆನಂದನು ಅಂತ್ಯ ಕ್ರಿಯೆ ನೆರವೇರಿಸುವ ಕುರಿತು ವಿವರ ನೀಡಿದ್ದಾನೆ. ಮಲ್ಲ ಸಮುದಾಯದ ನಾಯಕರು ಬಂದು ಮಹಾತ್ಮನ ಅಂತ್ಯಕ್ರಿಯೆ ಹೇಗೆ ನೆರವೇರಿಸೋಣ ಎಂದು ಕೇಳಿದಾಗ ಒಬ್ಬ ಚಕ್ರವರ್ತಿಗೆ ಅಂತ್ಯಕ್ರಿಯೆ ಮಾಡುವ ರೀತಿಯಲ್ಲಿ ಮಾಡೋಣ ಎಂದು ಆನಂದನು ಹೇಳುತ್ತಾನೆ. ಮೃತ ಶರೀರವನ್ನು ಶುದ್ಧವಾದ ಹತ್ತಿ ಬಟ್ಟೆಯಲ್ಲಿ ಹಲವು ಪದರುಗಳಲ್ಲಿ ಸುತ್ತಿ ನಂತರ ಹತ್ತಿಯ ದಾರದಿಂದ ಐದನೂರು ಬಾರಿ ಬಿಗಿದು ಕಟ್ಟಬೇಕು. ನಂತರ ಎಣ್ಣೆ ತುಂಬಿದ ದೊಡ್ಡ ಕಡಾಯಿ ಅಥವಾ ಪಾತ್ರೆಯಲ್ಲಿ ಶವವನ್ನು ಮುಳುಗಿಸಬೇಕು. ಆನಂತರ ಶವವನ್ನು ಕೊಂಡೊಯ್ದು ಒಣಗಿದ ಕಟ್ಟಿಗೆಗಳ ಮೇಲೆ ಇರಿಸಿ ಅಗ್ನಿ ಸ್ಪರ್ಶ ಮಾಡಬೇಕು ಎಂದು ಅಂದಿನ ಈಶಾನ್ಯ ಭಾರತದ ಬುಡಕಟ್ಟು ಗಣ ರಾಜ್ಯಗಳಲ್ಲಿ ಜಾರಿಯಲ್ಲಿದ್ದ ದೊರೆಗಳ ಅಂತ್ಯಕ್ರಿಯೆಯ ವಿವರವನ್ನು ನೀಡುತ್ತಾನೆ. ಅದೇ ರೀತಿಯಲ್ಲಿ ಆರು ದಿನಗಳ ಕಾಲ ಬುದ್ಧನ ಶವವನ್ನು ಕಾಯ್ದಿಟ್ಟು ಏಳನೆಯ ದಿನ ಕುಶೀನಾರದಲ್ಲಿ ಅಂತ್ಯ ಕ್ರಿಯೆಯನ್ನು ನೆರವೇರಿಸಲಾಗುತ್ತದೆ. ಆ ವೇಳೆಗಾಗಲೇ ಭಾರತದಲ್ಲಿ ಹತ್ತಿ ವಸ್ತ್ರ ಚಾಲ್ತಿಯಲ್ಲಿತ್ತು ಎಂಬುದಕ್ಕೆ ಬುದ್ಧನ ಅಂತ್ಯ ಸಂಸ್ಕಾರವು ನಮಗೆ ದಾಖಲೆಯನ್ನು ಒದಗಿಸುತ್ತದೆ.
ಇಂದಿನ ಏಷ್ಯಾ ರಾಷ್ಟçಗಳಾದ ಭಾರತ, ಪಾಕಿಸ್ತಾನ, ಆಫ್ಘಾನಿಸ್ಥಾನ, ಚೀನಾ ಮತ್ತು ಪರ್ಷಿಯ ಎಂದು ಕರೆಯಲಾಗುತ್ತಿದ್ದ ಇರಾಕ್, ಇರಾನ್. ಟರ್ಕಿ ಮೂಲಕ ಯುರೂಪ್ ರಾಷ್ಟçಗಳಾದ ಗ್ರೀಸ್ ಮತ್ತು ಇಟಲಿ ರಾಷ್ಟçಗಳಿಗೆ ರೇಷ್ಮೆ ಮಾರ್ಗ ಅಥವಾ ಸಿಲ್ಕ್ ರೂಟ್ ಹೆಸರಿನಲ್ಲಿ ಇದ್ದ ಆರು ಸಾವಿರದ ನಾಲ್ಕನೂರು ಕಿಲೊಮೀಟರ್ ಉದ್ದದ ರಸ್ತೆ ಮಾರ್ಗದಲ್ಲಿ ಕ್ರಿಸ್ತಶಕ ಎರಡನೆಯ ಶತಮಾನದಿಂದ ಹದಿನಾಲ್ಕನೆಯ ಶತಮಾನದವರೆಗೆ ರಾಷ್ಟç ರಾಷ್ಟçಗಳ ನಡುವೆ ಹತ್ತಿ, ರೇಷ್ಮೆ ಮತ್ತು ಸಾಂಬಾರು ಪದಾರ್ಥಗಳ ವಿನಿಮಯ ಹಾಗೂ ವ್ಯವಹಾರ ನಡೆಯುತ್ತಿತ್ತು. ಹನ್ನೆರೆಡನೆಯ ಶತಮಾನದಲ್ಲಿ ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಭೇಟಿ ನೀಡಿದ ಮಾರ್ಕ್ ಪೋಲೊ ಎಂಬ ನಾವಿಕನು ಇಲ್ಲಿನ ನುಣುಪಾದ ರೇಷ್ಮೆ ಮತ್ತು ಹತ್ತಿಯ ಸೀರೆಗಳನ್ನು ನೋಡಿ ಬೆರಗಾಗಿರುವ ಸಂಗತಿ ಇತಿಹಾಸದಲ್ಲಿ ದಾಖಲಾಗಿದೆ. ಇಂಗ್ಲೇಂಡಿನಲ್ಲಿ ಹತ್ತಿ ಬೇಸಾಯ ಮತ್ತು ಕೈಗಾರಿಕೆಗಳು ಅಸ್ತಿತ್ವದಲ್ಲಿದ್ದರೂ ಸಹ ಭಾರತದ ದೇಶಿ ಹತ್ತಿಗೆ ಮತ್ತು ನೂಲಿಗೆ ಇರುವ ತಾಜಾತನ ಇರಲಿಲ್ಲ. ಅಲ್ಲಿ ಹತ್ತಿಯನ್ನು ನಮ್ಮ ಹಾಗೆ ಮಳೆಯಾಶ್ರಯದ ಭೂಮಿಯಲ್ಲಿ ವಾರ್ಷಿಕ ಬೆಳೆಯಾಗಿ ಬೆಳೆಯುವುದರ ಬದಲು ಹತ್ತಿ ಮರಗಳನ್ನು ಬೆಳೆಸಿ ಹತ್ತಿಯನ್ನು ಪಡೆಯುತ್ತಿದ್ದರು. ಭಾರತಕ್ಕೆ ಲಗ್ಗೆ ಇಟ್ಟ ಈಸ್ಟ್ ಇಂಡಿಯಾ ಕಂಪನಿಯು ಮೊದಲಿಗೆ ತನ್ನ ವ್ಯವಹಾರದಲ್ಲಿ ಹತ್ತಿ ಮತ್ತು ಸಾಂಬಾರ ಪದಾರ್ಥಗಳಿಗೆ ಹೆಚ್ಚಿನ ಆದ್ಯತೆ ನೀಡಿತು. ನಂತರ ದಿನಗಳಲ್ಲಿ ಬ್ರಿಟೀಷರು ಭಾರತದಲ್ಲಿ ಅಧಿಕಾರ ಸ್ಥಾಪಿಸಿದ ಮೇಲೆ ಇಲ್ಲಿ ಬೆಳೆಯಲಾಗುತ್ತಿದ್ದ ಶೇಕಡಾ ಎಂಬತ್ತರಷ್ಟು ಹತ್ತಿಯನ್ನು ಹಡಗುಗಳ ಮೂಲಕ ಅಲ್ಲಿನ ಲಂಕಾಷೈರ್ ಮಿಲ್ಲುಗಳಿಗೆ ಸಾಗಿಸುತ್ತಿತ್ತು..
ಲಂಡನ್ ನಗರದಲ್ಲಿ ಬ್ಯಾರಿಸ್ಟರ್ ಪದವಿ ಶಿಕ್ಷಣ ಮುಗಿಸಿ ಬಂದಿದ್ದ ಗಾಂಧೀಜಿ ಬ್ರಿಟೀಷರನ್ನು ಹತ್ತಿಕ್ಕಲು ಖಾದಿಯನ್ನು ಆಯುಧವಾಗಿ ಬಳಸಲು ನಿರ್ಧರಿಸಿದರು. ಭಾರತದಲ್ಲಿ ಖಾದಿ ಗೃಹ ಚಟುವಟಿಕೆಗಳಿಗೆ ಹೆಚ್ಚು ಆದ್ಯತೆ ನೀಡುವುದರ ಜೊತೆಗೆ ರೈತರು ಮತ್ತು ನೇಕಾರರಿಗೆ ಏಕ ಕಾಲಕ್ಕೆ ಆಸರೆಯಾಗಿ ನಿಲ್ಲುವುದು ಮತ್ತು ವಿದೇಶಗಳಿಗೆ ರಫ್ತು ಮಾಡುವ ಹತ್ತಿಯನ್ನು ಇಲ್ಲಿಯೇ ಸಮಗ್ರವಾಗಿ ಬಳಸಿಕೊಳ್ಳುವುದರ ಮೂಲಕ ಉದ್ಯೋಗ ಚಟುವಟಿಕೆಯನ್ನು ವಿಸ್ತರಿಸುವುದು ಹಾಗೂ ವಿದೇಶಿ ವಸ್ತ್ರಗಳನ್ನು ಬಹಿಷ್ಕರಿಸಿ ಸ್ವದೇಶಿ ವಸ್ತ್ರಗಳನ್ನು ಬಳಸುವಂತೆ ಜನತೆ ಕರೆ ನೀಡುವುದರ ಮೂಲಕ ಭಾರತದ ಸ್ವಾತಂತ್ರö್ಯ ಹೋರಾಟಕ್ಕೆ ಸ್ವಾಭಿಮಾನದ ಸ್ವರೂಪವನ್ನು ನೀಡಿದರು.
ಗಾಂಧಿಯವರ ಈ ಪರಿಕಲ್ಪನೆ ದೇಶದ ಬಹುತೇಕ ಕಡೆ ಪರಿಣಾಮಕಾರಿಯಾಗಿ ಜಾರಿಗೆ ಬಂತು. ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಮಹಾರಾಷ್ಟç, ಗುಜರಾತ್, ಪಂಜಾಬ್ ಮುಂತದ ರಾಜ್ಯಗಳಲ್ಲಿ ಖಾದಿ ಚಟುವಟಿಕೆಗಳು ಪುನಶ್ಚೇತನಗೊಂಡು ಎಲ್ಲಾ ವರ್ಗದ ಜನತೆ ಕನಿಷ್ಠ ಘನತೆಯ ಬದುಕನ್ನು ಸರಳವಾಗಿ ಬದುಕಲು ಪ್ರೇರೇಪಿಸಿತು. ಸ್ವಾತಂತ್ರ್ಯ ಹೋರಾಟದಲ್ಲಿ ಭಗಿಯಾದ ಕಾರ್ಯಕರ್ತರಿಂದ ಹಿಡಿದು ಸ್ವತಃ ತಾವು ಕೂಡ ಖಾದಿ ವಸ್ತçಗಳನ್ನು ಧರಿಸುವುದರ ಮೂಲಕ ಇತರರಿಗೆ ಮಾದರಿಯಾದರು. ಇಂತಹ ಐತಿಹಾಸಿಕ ಹಿನ್ನಲೆಯ ಬಗ್ಗೆ ಅರಿವಿದ್ದ ಜವಹರಲಾಲ್, ಸರ್ದಾರ್ ವಲ್ಲಬಾಯಿ ಪಟೇಲ್ ಮುಂತಾದವರು ಸ್ವಾತಂತ್ರ್ಯದ ಸಮಯದಲ್ಲಿ ಆಯ್ಕೆ ಮಾಡಿಕೊಂಡ ತ್ರಿವರ್ಣ ಧ್ವಜಕ್ಕೆ ಖಾದಿ ಬಟ್ಟೆಯನ್ನು ಮಾತ್ರ ಬಳಸಬೇಕೆಂದು ನಿಯಮ ರೂಪಿಸಿದರು. ಏಕೆಂದರೆ ರಾಷ್ಟ್ರಧ್ವಜ ಕೇವಲ ವಸ್ತ್ರಮಾತ್ರವಲ್ಲ, ಅದರ ಹಿಂದೆ ಭಾರತದ ಸಕಲ ಜನತೆಯ ಭರವಸೆ, ನಿಟ್ಟುಸಿರು, ಶ್ರಮ, ಬೆವರು, ಹೋರಾಟದ ಸ್ಮೃತಿಗಳಿವೆ ಜೊತೆಗೆ ಬಹುಸಂಸ್ಕೃತಿಯ ನಾಡಾದ ಭಾರತದ ಎಲ್ಲಾ ಜಾತಿ ಮತ್ತು ಧರ್ಮದ ಜನರನ್ನು ಒಗ್ಗೂಡಿಸುವ ಅಂಶಗಳಿವೆ. ಈ ಕಾರಣದಿಂದಾಗಿ ಭಾರತದಲ್ಲಿ ಖಾದಿ ಎಬುದು ಕೇವಲ ಹತ್ತಿಯ ವಸ್ತ್ರ ಮಾತ್ರವಲ್ಲ, ಅದು ನಿಜಭಾರತದ ಅಸ್ಮಿತೆಯಾಗಿದೆ.
ಇಂದಿನ ಜಾಗತೀಕರಣದ ಯುಗದಲ್ಲಿ ಗೃಹ ಕೈಗಾರಿಕೆಗಳು ನೆಲಕಚ್ಚುತ್ತಿವೆ. ಸಣ್ಣದು ಸುಂದರ ಎಂಬ ಪರಿಕಲ್ಪನೆ ಅಳಿದು ಹೋಗಿ ಎಲ್ಲವೂ ಬೃಹತ್ ಆಗಿರಬೇಕೆಂಬ ಹುಚ್ಚು ಕಲ್ಪನೆ ನಮ್ಮನ್ನು ಆವರಿಸಿಕೊಂಡಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ದೇಶಿ ಹತ್ತಿ ಬೆಳೆಯುತ್ತಿದ್ದ ರೈತನಿಗೆ ಅಪಾರ ಲಾಭದ ಆಸೆ ತೋರಿಸಿ ದುಬಾರಿಯಾದ ಬಿ.ಟಿ. ಹತ್ತಿಬೀಜ ಮತ್ತು ಅತ್ಯಂತ ಅಪಾಯಕಾರಿ ರಸಾಯನಿಕ ಗೊಬ್ಬರಗಳನ್ನು ಅವನ ತಲೆ ಕಟ್ಟಲಾಗಿದೆ. ತನ್ನ ಮನೆಯ ಕೊಟ್ಟಿಗೆ ಗೊಬ್ಬರ ಮತ್ತು ದೇಶಿ ಹತ್ತಿ ಬೀಜದಿಂದ ಒಂದು ಎಕರೆಗೆ ಕೇವಲ ಐನೂರು ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದ ರೈತನನನ್ನು ಇಂದು ಎಕರೆಯೊಂದಕ್ಕೆ ಇಪ್ಪತ್ತು ಸಾವಿರ ಖರ್ಚು ಮಾಡುವ ರೀತಿಯಲ್ಲಿ ಉದ್ದೀಪಿಸಲಾಗಿದೆ. ಅನಾವೃಷ್ಟಿಯಿಂದ ಒಂದು ವರ್ಷ ಅಥವಾ ಎರಡು ವರ್ಷ ಬೆಳೆ ವಿಫಲವಾದರೂ ದೇಶಿ ಹತ್ತಿ ಬೆಳೆಯ ಕೃಷಿಯಲ್ಲಿ ತಡೆದು ಕೊಳ್ಳುವ ಶಕ್ತಿ ಇದ್ದ ರೈತ ಇಂದು ಬಿ.ಟಿ.ಹತ್ತಿಯ ಕೃಷಿಯಲ್ಲಿ ಬೆಳೆ ವಿಫಲವಾದರೆ ಸಾಲ ತೀರಿಸಲಾರದೆ ಸಾವಿನ ಕುಣಿಕೆಗೆ ತಲೆಯೊಡ್ಡುತ್ತಿದ್ದಾನೆ. ಇದು ನಮ್ಮ ನೆಲದ ನೈಜ ಕೃಷಿಗೆ ಬಹುರಾಷ್ಟ್ರೀಯ ಕಂಪನಿಗಳು ಸೃಷ್ಟಿಸಿದ ಸಾವಿನ ಹೊಂಡವಲ್ಲದೆ ಬೇರೇನೂ ಅಲ್ಲ.
ಇಂದು ಜಗತ್ತಿನಾದ್ಯಂತ ಬಿ.ಟಿ. ಹತ್ತಿ ಬೆಳೆಯನ್ನು ರೈತರು ನಿರಾಕರಿಸಿದ್ದಾರೆ. ಆದರೆ, ಭಾರತದಲ್ಲಿ ಇದರ ಮೇಲಿನ ಮೋಹ ಇನ್ನು ನಿಂತಿಲ್ಲ. 2017ರಿಂದ 2021 ರವರೆಗೆ ಮಹಾರಾಷ್ಟçದ ವಿzರ್ಭ ಪ್ರಾಂತ್ಯ ಹಾಗೂ ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಹತ್ತಿ ಬೆಳೆದು ಸಾವಿಗೀಡಾದ ರೈತರ ಸಂಖ್ಯೆ ಮೂರು ಲಕ್ಷ ಸಂಖ್ಯೆಯನ್ನು ದಾಟಿದೆ. ಭಾರತದ ಇತಿಹಾಸದಲ್ಲಿ ದೇಶಿ ಹತ್ತಿ ಬೆಳೆದ ರೈತ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿಲ್ಲ. ಹಿಂದೂ ಇಂಗ್ಲೀಷ್ ದಿನ ಪತ್ರಿಕೆಯ ಹಿರಿಯ ಸಂಪಾದಕಿ ಮೀನಾ ಮೆನನ್ ಮತ್ತು ಆಂಧ್ರಪ್ರದೇಶದ ಅದಿಲಾಬಾದ್ ನಲ್ಲಿ ಖಾದಿ ಗೃಹ ಉದ್ಯೋಗ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿರುವ ಮಲ್ಕಾ ಪ್ರತಿಷ್ಠಾನದ ಸದಸ್ಯೆ ಶ್ರೀಮತಿ ಉಜ್ರಮ್ಮ ಇವರುಗಳು ಭಾರತದ ಹತ್ತಿ ಉದ್ಯಮದ ಏಳುಬೀಳಿನ ಕಥೆಯನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ ‘ ಎ ಪ್ರೈಯಡ್ ಹಿಸ್ಟರಿ’ ಎಂಬ ಕೃತಿಯನ್ನು ರಚಿಸಿದ್ದು ಆಕ್ಸ್ಪರ್ಡ್ ಯೂನಿವಸಿಟಿ ಪ್ರೆಸ್ ನಿಂದ ಪ್ರಕಟವಾಗಿದೆ
. ಇಡೀ ದೇಶದ ಹತ್ತಿ ಬೆಳೆ ಮತ್ತು ಉದ್ಯಮದ ಇತಿಹಾಸ ಈ ಕೃತಿಯಲ್ಲಿ ಅಡಕವಾಗಿದೆ. ದೇಶಿ ಹತ್ತಿಯಿಂದ ತಯಾರಾಗುತ್ತಿದ್ದ ಖಾದಿ ವಸ್ತçಗಳು ನಮ್ಮ ಗ್ರಾಮೀಣ ಭಾರತದ ಬಡವರ ಮೈ ಮುಚ್ಚುವುದರ ಜೊತೆಗೆ ಅವರನ್ನು ಚಳಿ ಮತ್ತು ಮಳೆಯಿಂದ ರಕ್ಷಣೆ ನೀಡುತ್ತಿದ್ದವು. ಈ ಶಾನ್ಯ ಭಾರತದ ಕೆಲವು ದೇಶಿ ಹತ್ತಿಯಲ್ಲಿ ದಪ್ಪ ಎಳೆಯ ನೂಲನ್ನು ತಯಾರಿಸಿ ಅದರಿಂದ ದಪ್ಪನೆಯ ಒರಟಾದ ಹಾಸು ಮತ್ತು ಹೊದಿಕೆಗಳನ್ನು ತಯಾರಿಸುತ್ತಿದ್ದ ಮಾಹಿತಿಯನ್ನು ಲೇಖಕಿಯರು ಈ ಕೃತಿಯಲ್ಲಿ ದಾಖಲಿಸಿದ್ದಾರೆ.
ಇಂತಹ ನೋವಿನ ಮತ್ತು ಸಂಕಷ್ಟದ ಸಮಯದಲ್ಲಿ ರಾಷ್ಟ್ರಧ್ವಜಗಳ ನಿಯಮಾವಳಿಗಳನ್ನು ಗಾಳಿಗೆ ತೂರಿ ಪಾಲಿಯೆಸ್ಟರ್ ಧ್ವಜಗಳಿಗೆ ಅವಕಾಶ ನೀಡುವುದರ ಮೂಲಕ ಕಳಪೆ ಧ್ವಜಗಳನ್ನು ಜನರು ಕರವಸ್ತ್ರದಂತೆ ಬಳಸಲು ಅವಕಾಶ ಮಾಡಿಕೊಟ್ಟ ಈ ದೇಶದ ಆಡಳಿತದ ಚುಕ್ಕಾಣಿ ಹಿಡಿದ ಅವಿವೇಕಿಗಳಿಗೆ ನಾವಿಂದು ಖಾದಿಯ ಇತಿಹಾಸ ಕುರಿತು ಪಾಠ ಹೇಳಿಕೊಡಬೇಕಿದೆ.
ಡಾ.ಎನ್.ಜಗದೀಶ್ ಕೊಪ್ಪ
(ಸೆಪ್ಟಂಬರ್ ತಿಂಗಳ ಹೊಸತು ಮಾಸಪತ್ರಿಕೆಯ ಅಂಕಣ ಬರಹ)




Share


 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ