|
ಶುಕ್ರವಾರ, ಡಿಸೆಂಬರ್ 6, 2013
ವಚನ ಪಿತಾಮಹಾ ಫ.ಗು. ಹಳಕಟ್ಟಿ. ಒಂದು ನೋವಿನ ನೆನಪು
ಬುಧವಾರ, ಡಿಸೆಂಬರ್ 4, 2013
ಬುದ್ಧನಿಗೆ ಸಾಸಿವೆ ತಂದ ತಂಗಿಯೊಬ್ಬಳ ತಳಮಳಗಳು
ಕನ್ನಡದ
ಸಾಂಸ್ಕೃತಿಕ ಮತ್ತು ಸೃಜನಶೀಲ ಕ್ಷೇತ್ರದಲ್ಲಿ ವಿಶೇಷವಾಗಿ ಇತ್ತೀಚೆಗಿನ ದಿನಗಳಲ್ಲಿ ಜರುಗುತ್ತಿರುವ ಅನೇಕ ಕ್ಷಿಪ್ರ ವಿದ್ಯಾಮಾನಗಳು,
ನಿಜಕ್ಕೂ ನಮ್ಮಲ್ಲಿ ಗಾಬರಿಯನ್ನು ಹುಟ್ಟಿಸುತ್ತಿವೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಮುರಿದು
ಕಟ್ಟುವ ಸಂಪ್ರದಾಯ ಅಥವಾ ಇತಿಹಾಸ ಇಂದು ನಿನ್ನೆಯದಲ್ಲ. ಅದಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ.
ಅರಕೇಸರಿಯ ಆಸ್ಥಾನದಲ್ಲಿ ಇದ್ದುಕೊಂಡು ಅರಸೊತ್ತಿಗೆಯ ಕ್ರೌರ್ಯವನ್ನು ಟೀಕಿಸುವ ಧೈರ್ಯ ಪಂಪ, ನಿಗಿತ್ತು.
ರನ್ನ ತನ್ನ ಗಧಾಯುದ್ಧದ ಮಹಾಕಾವ್ಯದ
‘”ದುರ್ಯೋಧನ ವಿಲಾಪಂ” ಭಾಗದಲ್ಲಿ ಮಹಾಭಾರತದ ದುರ್ಯೋಧನನನ್ನು ಬುದ್ಧನಿಗೆ ಸಾಸಿವೆ ತಂದ
ತಂಗಿಯೊಬ್ಬಳ ತಳಮಳಗಳು
ಹೊಸದಾಗಿ
ಚಿತ್ರಿಸುವುದರ ಮೂಲಕ ಸೃಜನಶೀಲತೆಯ ಪರಾಕಾಷ್ಟೆಯನ್ನು ಮುಟ್ಟಿದ. ಇದರ ಮುಂದುವರಿದ ಭಾಗವಾಗಿ ಶೂದ್ರ ತಪಸ್ವಿ ಎಂಬ ನಾಟಕ
ರಚನೆ ಮಾಡುವುದರ ಜೊತೆಗೆ ಶ್ರೀ ರಾಮಾಯಣ ದರ್ಶನಂ ಎಂಬ ಮಹಾಕಾವ್ಯದ ಮೂಲಕ ಮಂಥರೆ ಪಾತ್ರಕ್ಕೆ ಹೊಸ ಜೀವ ಮತ್ತು ರೂಪ ಕೊಟ್ಟ ಕುವೆಂಪು
ನಮ್ಮ ನಡುವೆ ಇದ್ದರು. ಇಂತಹ ಮಹಾನೀಯರು ತಮ್ಮ ಸೃಜನಶೀಲತೆಯ
ಮೂಲಕ ಚರಿತ್ರೆಯನ್ನು ಮುರಿದು ಕಟ್ಟುವುದರ ಮೂಲಕ ಹೊಸದೆಂಬಂತೆ ರೂಪಿಸಿದ ವೈಖರಿ ಕನ್ನಡ ಸಾಹಿತ್ಯದಲ್ಲಿ ಇವೊತ್ತಿಗೂ ಅಜರಾಮರವಾಗಿ ಉಳಿದಿದೆ.
ನಮ್ಮ
ಪುರಾಣ ಮಹಾ ಕಾವ್ಯಗಳಾದ ಮಹಾ ಭಾರತ ಮತ್ತು ರಾಮಾಯಣ ಕೃತಿಗಳು ಇತಿಹಾಸದುದ್ದಕ್ಕೂ ಆಯಾ
ಕಾಲಘಟ್ಟಕ್ಕೆ ಅನುಗುಣವಾಗಿ ಹಲವು ರೂಪಗಳಲ್ಲಿ
ಮೈದಾಳಿವೆ. ಎ.ಕೆ. ರಾಮಾನುಜನ್ ಸಂಪಾದಿಸಿರುವ “ ಮುನ್ನೂರು ರಾಮಾಯಣಗಳು” ಕೃತಿಯಲ್ಲಿ
ದಾಖಲಾಗಿರುವ ವಿಭಿನ್ನ ರಾಮಾಯಣದ ಕಥೆಗಳು ನಮ್ಮನ್ನು ದಂಗು ಬಡಿಸುತ್ತಿವೆ. ಇಂತಹ ಪರಂಪರೆಯ ಈ
ನೆಲದಲ್ಲಿ ಕ್ಯಾನ್ಸರ್ ಕಾಯಿಲೆಯ ವಿರುದ್ಧ ಹೋರಾಡುತ್ತಿರುವ ದಿಟ್ಟ ಹೆಣ್ಣು ಮಗಳೊಬ್ಬಳು (
ಬಿ.ವಿ.ಭಾರತಿ) ತನ್ನ ಹೋರಾಟದ ಕಥನವನ್ನು ಅಕ್ಷರ ರೂಪದಲ್ಲಿ ಹಿಡಿದಿಟ್ಟು, ತಮ್ಮ ಕೃತಿಗೆ ಅರ್ಥಪೂರ್ಣವಾದ ಹಾಗೂ ರೂಪಕ ಭಾಷೆಯಲ್ಲಿ “
ಬುದ್ಧನಿಗೆ ಸಾಸಿವೆ ತಂದವಳು” ಎಂಬ ಶಿರ್ಷಿಕೆ ನೀಡಿದ್ದರು. ಆದರೆ ಅದಕ್ಕೆ ಅಡಚಣೆ ಮತ್ತು
ಬೆದರಿಕೆಯ ಮಾತುಗಳು ಕೇಳಿಬಂದವು. ಈ ಬೆಳವಣಿಗೆ ತಾಲಿಬಾನ್ ಗಳು ಕೇವಲ ಆಪ್ಘಾನಿಸ್ಥಾನ, ಅಥವಾ
ಪಾಕಿಸ್ಥಾನದಲ್ಲಿ ಮಾತ್ರವಲ್ಲ, ಕರ್ನಾಟಕದಲ್ಲಿಯೂ ಇದ್ದಾರೆ ಎಂಬ ಅಪಾಯದ ಮುನ್ಸೂಚನೆ ನೀಡಿದಂತಿದೆ.
ದೇವರ
ಅಸ್ತಿತ್ವದ ಬಗ್ಗೆ ಮೌನ ತಾಳಿದ, ಮತ್ತು ಆಸೆಯೆಂಬುದು
ದುಃಖಕ್ಕೆ ಮೂಲ ಎಂಬ ಅರ್ಥಪೂರ್ಣ ಸಂದೇಶವನ್ನು
ಜಗತ್ತಿಗೆ ಸಾರಿದ ಬುದ್ಧ ಯಾವತ್ತಿಗೂ ಯಾರ
ಆಸ್ತಿಯಾಗಿರಲಿಲ್ಲ. ಅವನ ಚಿಂತನೆಗಳು, ಯಾವೊಂದು ಸಮುದಾಯದ ಅಥವಾ ವ್ಯಕ್ತಿಯೊಬ್ಬನ
ಸ್ವತ್ತಾಗಿರಲಿಲ್ಲ. ವಿವೇಕದ ಪ್ರಜ್ಙೆಯನ್ನು
ಕಳೆದುಕೊಂಡು, ಬುದ್ಧನ ಅಮಲನ್ನು ನೆತ್ತಿಗೇರಿಸಿಕೊಂಡವರು ಮಾತ್ರ ಈ ರೀತಿಯ ಪ್ರತಿರೋಧ
ತೋರಬಲ್ಲರು. ಸಾವು ಕುರಿತ ಕಟು ವಾಸ್ತವನ್ನು ಜಗತ್ತಿಗೆ ಪರಿಚಯಿಸಲು ಬುದ್ಧ, ಸಾವಿಲ್ಲದ ಮನೆಯಿಂದ
ಸಾಸಿವೆ ತರುವಂತೆ ಕಿಸಗೌತಮಿಗೆ ಹೇಳಿರುವುದು ಕೂಡ
ರೂಪಕದ ಭಾಷೆಯಲ್ಲಿ ಎಂಬುದನ್ನು ನಾವು ಮರೆಯಬಾರದು. ಅಂತಹದೇ ರೂಪಕವನ್ನು ಬಳಸಿರುವ ಲೇಖಕಿ ಭಾರತಿ
‘ ಸಾವಿನ ಹೊಸ್ತಿಲಲ್ಲಿ ತಲೆಇಟ್ಟು ಮಲಗಿದ್ದರೂ ಸಹ ತಮ್ಮ ಮನಸ್ಸಿನ ಇಚ್ಛಾಶಕ್ತಿಯಿಂದ ಕಾಯಿಲೆಯ ವಿರುದ್ಧ
ಹೋರಾಡಿ ಗೆದ್ದು ಬಂದಿರುವುದು ವಿಶೇಷ,. ಈ ಕಾರಣಕ್ಕಾಗಿ ಅವರು ತಮ್ಮ ಅನುಭವಕ್ಕೆ ಅರ್ಥ ಪೂರ್ಣ
ಶಿರ್ಷಿಕೆ ನೀಡಿದ್ದಾರೆ. ಹಾಗೆ ನೋಡಿದರೆ, ಲೇಖಕಿ ಭಾರತಿಯವರಾಗಲಿ, ಇದನ್ನು ಈ ಕ್ಷಣದಲ್ಲಿ
ಬರೆಯುತ್ತಿರುವ ನಾನಾಗಲಿ, ಓದುತ್ತಿರುವ ನೀವಾಗಲಿ ಯಾರೂ ಈ ಭೂಮಿಯ ಮೇಲೆ ಶಾಶ್ವತವಲ್ಲ. ಆದರೂ ನಾವುಗಳು
ನಮ್ಮ ಪುರಾಣದಲ್ಲಿ, ಇತಿಹಾಸದಲ್ಲಿ, ವರ್ತಮಾನದ ದೈನಂದಿನ ಬದುಕಿನಲ್ಲಿ ಬಳಕೆಯಲ್ಲಿರುವ “
ಸಾವಿಲ್ಲದವನು” ಅಥವಾ ಚಿರಂಜಿವಿ ಎಂಬ ಪದಗಳನ್ನು ಬಳಸಿದ್ದೇವೆ, ಬಳಸುತ್ತಿದ್ದೇವೆ, ಇವುಗಳನ್ನು
ನಮ್ಮ ಶಬ್ಧಕೋಶದಿಂದ ಅಳಿಸಿ ಹಾಕಲು ಸಾಧ್ಯವೆ?
ಕಳೆದ
ಶನಿವಾರ ರಾತ್ರಿ ಹತ್ತು ಗಂಟೆ ವೇಳೆಯಲ್ಲಿ ಊಟ ಮುಗಿಸಿ, ಆತ ತಾನೆ ರಾತ್ರಿಯ ಓದಿಗೆ ಪುಸ್ತಕ
ಕೈಗೆತ್ತಿಕೊಳ್ಳುತ್ತಿದ್ದಂತೆ, ಭಾರತಿಯವರ ದೂರವಾಣಿ ಬಂತು. ಅವರು ಶಿರ್ಷಿಕೆಯ ವಿವಾದವನ್ನು ನನಗೆ
ವಿವರಿಸಿದರು. ಯಾವ ಕಾರಣಕ್ಕೂ ಶಿರ್ಷಿಕೆ ಬದಲಾಯಿಸಬಾರದು, ಭಿನ್ನ ಆಲೋಚನೆಯ ಜನರ ಅಪಸ್ವರಗಳಿಗೆ
ಬೆಲೆಕೊಡಬಾರದು, ಎಂದು ಸಮಾಧಾನ ಹೇಳಿ, ನಾವು ಸಮಾನ ಮನಸ್ಕರು ನಿಮ್ಮೊಂದಿಗೆ ಇದ್ದೀವಿ ಎಂದು
ಭರವಸೆ ನೀಡಿದೆ. ಭಾನುವಾರ ಬೆಳಿಗ್ಗೆ ಕಛೇರಿಗೆ ಹೋದವನು ಮನಸ್ಸು ತಡೆಯಲಾರದೆ, ಮತ್ತೇ ಧೈರ್ಯ
ತುಂಬಲು ಅವರಿಗೆ ಕರೆ ಮಾಡಿದಾಗ. ಅವರಿಂದ ಬಂದ ಮಾತುಗಳು ನನ್ನನ್ನು ಮೌನಕ್ಕೆ ದೂಡಿಬಿಟ್ಟವು.
ತೀರಾ ಹತಾಶರಾಗಿ ಮಾತನಾಡಿದ ಅವರು, “ ಅಣ್ಣಾ, ನನಗೆ ಬೇಕಾಗಿರುವುದು, ನೆಮ್ಮದಿ ಮತ್ತು ನಿಶ್ಚಿಂತೆ
ಮಾತ್ರ. ಇವುಗಳಿಗಾಗಿ ಏನನ್ನೂ ತ್ಯಾಗ ಮಾಡಲು ಸಿದ್ಧಳಿದ್ದೀನಿ. ಎಂದೂ ದೇವರು, ಧರ್ಮ ಮತ್ತು
ಜಾತಿಯನ್ನು ಅತಿಯಾಗಿ ಹಚ್ಚಿಕೊಳ್ಳದೆ, ಬುದ್ಧನ ಪ್ರಶಾಂತ ನಗೆ ಮತ್ತು ಮೌನದ ಮೂರ್ತಿಯಂತಿರುವ ಅವನ ಪ್ರತಿಮೆಯಲ್ಲಿ ಒಂದಿಷ್ಟು ಸುಖ ಕಂಡಿದ್ದೆ. ಅದು ಕೆಲವರ ಪಾಲಿಗೆ ನೋವು ತರುವುದಿದ್ದರೆ, ಇಂದಿನಿಂದ
ನನಗೆ ಬುದ್ದನೂ ಬೇಡ, ಬಸವನೂ ಬೇಡ. ಬೇಕಿರುವುದು ನೆಮ್ಮದಿ
ಮಾತ್ರ ಎಂದರು. ಅವರ ಮನೆಗೆ, ಅವರ ಹತ್ತಿರದ ಗೆಳತಿಯರಿಗೆ, ಬಂಧುಗಳಿಗೆ ಫೋನ್ ಕರೆ ಮಾಡಿ ಬೆದರಿಕೆ ಹಾಕುವಂತಹ ತಪ್ಪನ್ನು ಈ ಅಮಾಯಕ
ಹೆಣ್ಣು ಮಗಳು ಮಾಡಿದ್ದಾದರೂ ಏನು? ಬುದ್ಧನಿಗೆ ಮಾಡಿದ ಅಪಮಾನವಾದರೂ ಏನು?
ಇಂತಹ
ಘಟನೆಗಳ ಕುರಿತಂತೆ ಆವೇಶದ ಪ್ರತಿಭಟನೆಗಳು, ವಿರೋಧಗಳು ಭಾರತದ ನೆಲದ ಸಂಸ್ಕೃತಿಗೆ ಹೊಸ
ಸಂಗತಿಗಳೇನಲ್ಲ. ಆದರೆ, ಇದರಿಂದ ನಮ್ಮ ಸಾಂಸ್ಕೃತಿಕ ಜಗತ್ತಿಗೆ ಆದ ನಷ್ಟ ಮಾತ್ರ ಅಗಣಿತವಾದುದು.
ಇಂತಹ ಅನೇಕ ಗಂಭೀರ ಸಂಗತಿಗಳು ನಮ್ಮ ಅರಿವಿಗೆ ಬಾರದಂತೆ ಸದ್ದಿಲ್ಲದೆ ಈ ಜಗತ್ತಿನಲ್ಲಿ ಜರುಗುತ್ತಿವೆ.
ಇದಕ್ಕೆ ಈ ಉದಾಹರಣೆ ಸಾಕು.
ಕೆಲ
ದಿನಗಳ ಹಿಂದೆ ಪಠ್ಯ ಪುಸ್ತಕವೊಂದರಲ್ಲಿ
ಅಂಬೇಡ್ಕರ್ ವ್ಯಂಗ್ಯ ಚಿತ್ರದ ಕುರಿತಾಗಿ ಎದ್ದ ಪ್ರತಿಭಟನೆಯ ಸಂದರ್ಭದಲ್ಲಿ ನಮ್ಮ ಕಣ್ಣಿಗೆ ಕಾಣದ
ವಾಸ್ತವ ಸಂಗತಿಯೊಂದನ್ನು ಸಮಾಜ ವಿಜ್ಙಾನಿ ಯೋಗೇಂದ್ರ ಯಾದವ್ ಚರ್ಚೆಯ ಸಂದರ್ಭದಲ್ಲಿ ಅಂಕಿ ಅಂಶಗಳ
ಮೂಲಕ ನಮ್ಮ ಮುಂದಿಟ್ಟರು. 1980 ರ ದಶಕದಲ್ಲಿ ಮಹಾರಾಷ್ಟದಲ್ಲಿ ಹುಟ್ಟಿಕೊಂಡ ದಲಿತ ಪ್ರಜ್ಙೆ ಇಡೀ
ದೇಶವನ್ನು ಆವರಿಸಿದ ಫಲವಾಗಿ ಅಂಬೇಡ್ಕರ್ ಮತ್ತು ಅವರ ಚಿಂತನೆಗಳು ಮುಂಚೂಣಿಗೆ ಬಂದವು. ಇವುಗಳ
ಜೊತೆ ಜೊತೆಯಲ್ಲಿ ಅಂಬೇಡ್ಕರ್ ಕುರಿತಂತೆ ಯಾವೊಂದು ಟೀಕೆಯನ್ನು ಸಹಿಸಿದ ದಲಿತರ ಪ್ರತಿಭಟನೆಗೆ
ಹೆದರಿದ ಮೇಲ್ವರ್ಗದ ಜನ ಭಾರತದ ಶಾಲಾ ಕಾಲೇಜು ಮತ್ತು ವಿಶ್ವ ವಿದ್ಯಾನಿಯಗಳಲ್ಲಿ ಅಂಬೇಡ್ಕರ್ ಅವರ
ಜೀವನ ಮತ್ತು ಚಿಂತನೆಗಳು ಪಠ್ಯವಾಗದಂತೆ ನೋಡಿಕೊಂಡರು. ಇದಕ್ಕೆ ಅವರು ನೀಡಿದ ಉತ್ತರ ದಲಿತರ
ಪ್ರತಿಭಟನೆಯಾಗಿತ್ತು ಅವರ ಉತ್ತರ ನಮಗೆ ಹುನ್ನಾರದಂತೆ ತೋಚಿದರೂ ಸಹ ಅದನ್ನು ನಾವು ಸಂಪೂರ್ಣ ನಿರಾಕರಿಸುವಂತಿಲ್ಲ.
ಸ್ವಾತಂತ್ರ್ಯಾ
ನಂತರದ ಭಾರತವನ್ನು ತನ್ನ ಪ್ರಖರ ವೈಚಾರಿಕತೆಯಿಂದ
ಎಚ್ಚರಿಸಿದ ಮತ್ತು ಪ್ರಭಾವಿಸಿದ ಹಾಗೂ ಗಾಂಧೀಜಿಯ ಪಾಲಿಗೆ ನೈತಿಕ ಪ್ರಜ್ಙೆಯಂತಿದ್ದ
ಅಂಬೇಡ್ಕರ್ ಕುರಿತಾಗಲಿ ಅವರ ಚಿಂತನೆಗಳ ಕುರಿತು ವಿಮರ್ಶಾತ್ಮಕ ಕೃತಿಗಳಾಗಲಿ, ಲೇಖನಗಳಾಗಲಿ ದಲಿತ
ಹಾಗೂ ಪ್ರಗತಿಪರ ಲೇಖಕರನ್ನು ಹೊರತು ಪಡಿಸಿ ಬೇರೆ ಲೇಖಕರಿಂದ ಹೊರ ಬರಲು ಸಾಧ್ಯವಾಗಿಲ್ಲ. ಅಂಬೇಡ್ಕರ್ ಎಂದರೆ, ದಲಿತರ ಸ್ವತ್ತು ಎಂಬ ಹುಸಿ ನಂಬಿಕೆಯೊಂದನ್ನು
ಸಮಾಜದಲ್ಲಿ ವ್ಯವಸ್ಥಿತವಾಗಿ ಬಿತ್ತಿಕೊಂಡು ಬರಲಾಯಿತು. ಜೊತೆಗೆ ಬಲಪಂಥೀಯರು, ಮತ್ತು ಮೇಲಗವರ್ಗದ
ಜನ ಅಂಬೇಡ್ಕರ್ ಅವರನ್ನು ವ್ಯವಸ್ತಿತ ವಾಗಿ ಮುಂಚೂಣಿಗೆ ಬರದಂತೆ ನೊಡಿಕೊಂಡರು. ಇದರಿಂದಾಗಿ
ಗಾಂಧೀಜಿ ಸಕಲ ಸಮುದಾಯಕ್ಕೆ ತಲುಪಿದ ಹಾಗೆ ಅಂಬೇಡ್ಕರ್ ಈವರೆಗೂ ಎಲ್ಲಾ ಸಮುದಾಯಗಳಿಗೆ ತಲುಪಲು
ಸಾದ್ಯವಾಗಲಿಲ್ಲ. ಇದಕ್ಕೆ ಪರೋಕ್ಷವಾಗಿ ಅಂಬೇಡ್ಕರ್ ಅಭಿಮಾನಿಗಳ ಆರಾಧನೆಯ ಮನೋಭಾವ ಕೂಡ ಕಾರಣವಾಯಿತು.
ಮಹಾನ್ ದಾರ್ಶನಿಕನ ವ್ಯಕ್ತಿತ್ವವನ್ನು ನಾವು ಧ್ಯಾನಿಸಬೇಕೇ
ಹೊರತು ಆರಾಧಿಸುವುದಲ್ಲ. ಆರಾಧನೆಗೂ, ಧ್ಯಾನಕ್ಕೂ ಅಜಗಜಾಂತರ ವೆತ್ಯಾಸವಿದೆ. ಆರಾಧನೆ ನಮ್ಮಲ್ಲಿ ಕುರುಡುತನವನ್ನು ಮಾತ್ರ ಬೆಳಸಬಲ್ಲದು.
ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಇವರುಗಳು ಆರಾಧಿಸುವ ವ್ಯಕ್ತಿಗಳಲ್ಲ, ಬದಲಾಗಿ ನಮ್ಮ
ಮನಸ್ಸಿನೊಳಕ್ಕೆ ಇಳಿಸಿಕೊಂಡು, ಧ್ಯಾನಿಸುವ ವ್ಯಕ್ತಿತ್ವಗಳು. ಇಂತಹ ಸಮಷ್ಟಿ ಪ್ರಜ್ಙೆಯನ್ನು
ನಾವು ಮರೆತ ಫಲವಾಗಿ ವರ್ತಮಾನದ ಜಗತ್ತಿನಲ್ಲಿ ಅನೇಕ ದುರಂತಗಳಿಗೆ ನಾವು
ಸಾಕ್ಷಿಯಾಗುತ್ತಿದ್ದೇವೆ.
ಭಾರತದ
ಬಹುತೇಕ ವಿಶ್ವ ವಿದ್ಯಾನಿಲಯಗಳ ಪಠ್ಯ ಪುಸ್ತಕ ಸಮಿತಿಗಳು, ವಿವಾದಕ್ಕೆ ಎಡೆಮಾಡಿಕೊಡುವುದು ಬೇಡ
ಎಂಬ ಕಾರಣಕ್ಕಾಗಿ ಅಂಬೇಡ್ಕರ್ ಅವರ ಚಿಂತನೆಗಳನ್ನು ದೂರವಿಡುತ್ತಿದ್ದಾರೆ. ಈ ಅವಕಾಶಗಳನ್ನು
ಸದುಪಯೋಗಪಡಿಸಿಕೊಂಡ ಬಲಪಂಥೀಯ ಮನಸ್ಸುಗಳು, ತಮ್ಮ ಮರೆ ಮಾಚಿದ ಅಜೆಂಡಾಗಳನ್ನುಸದ್ದು ಮತ್ತು
ಸುದ್ಧಿ ಮಾಡದೆ ಜಾರಿಗೆ ತರುತ್ತಿದ್ದಾರೆ, ಕಳೆದ
ವರ್ಷ ದೆಹಲಿಯ ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಪದವಿ ಕಾಲೇಜುಗಳಿಗೆ ಪಠ್ಯವಾಗಿದ್ದ ಎ.ಕೆ. ರಾಮಾನುಜನ್
ಅವರ “ ಮುನ್ನೂರು ರಾಮಾಯಣಗಳು” ಕೃತಿಯನ್ನು ನಿಷೇಧಿಸುವಲ್ಲಿ ಅವರು ಯಶಸ್ವಿಯಾದರು.
ಯಾವುದನ್ನೂ
ಹಿಂದೆ ಮುಂದೆ ಯೋಚಿಸದೆ, ಅತಾರ್ಕಿಕ ನೆಲೆಯಲ್ಲಿ ಸಾಗುವ ನಾವು ಅರಿಯಬೇಕಾದ ಇನ್ನೊಂದು
ಸಂಗತಿಯೊಂದಿದೆ. ನಮ್ಮ ಕಣ್ಣೆದುರು, ಅಂಬೇಡ್ಕರ್ ಮತ್ತು ಗಾಂಧಿಯನ್ನು ಮುಖಾ ಮುಖಿಯಾಗಿಸಿ, ಪರಸ್ಪರ
ನಿಂದಿಸುವಲ್ಲಿ ತಮ್ಮ ಆಯಸ್ಸನ್ನು ಸೆವೆಸಿ ಮಣ್ಣಾದವರ ಕಥನ ಇನ್ನೂ ಜೀವಂತವಾಗಿದೆ. ಗಾಂಧಿ ಮತ್ತು
ಅಂಬೇಡ್ಕರ್ ವಿಭಿನ್ನ ಸಂಸ್ಕೃತಿ ಮತ್ತು ನೆಲೆಗಳಿಂದ ಬಂದ ಕಾರಣಕ್ಕಾಗಿ, ಇಬ್ಬರ ಗುರಿ ಒಂದೇ
ಆಗಿದ್ದರೂ ಅವರ ಆಲೋಚನಾ ಕ್ರಮಗಳು ಬೇರೆ ಬೆರೆಯಾಗಿದ್ದವು.
ಬಡವರ
ಮೈ ಮೇಲೆ ಬಟ್ಟೆ ಬರುವವರೆಗೂ ಅರಬೆತ್ತಲೆಯಾಗಿರಲು ಗಾಂಧೀಜಿ ನಿರ್ಧರಿಸಿದರೆ, ಮೈ ತುಂಬಾ ಬಟ್ಟೆ
ಧರಿಸುವುದು, ಸ್ವಾಭಿಮಾನದ ಸಂಕೇತ ಎಂದು ಅಂಬೇಡ್ಕರ್ ಭಾವಿಸಿದರು. ಅಂತಿಮವಾಗಿ ತಮ್ಮ ಕೊನೆಯ
ದಿನಗಳಲ್ಲಿ ಈ ಇಬ್ಬರು ನಾಯಕರೂ ಬುದ್ದ ತೋರಿದ ಪಥದಲ್ಲಿ ಸಾಗಿದರು. ಇಬ್ಬರ ಕೈಯಲ್ಲಿ . ಅದೇ ಊರುಗುಲು, ಮತ್ತು ಮೈ ಮೇಲೆ
ಅದೇ ತುಂಡು ಉಡುಗೆ ಮಾತ್ರ. ಇದು ಬುದ್ದನ ಬದುಕಿನ
ಶೈಲಿ, ಬುದ್ಧನ ಚಿಂತನೆಯ ಮಾದರಿ. ಇಂತಹ ಸೂಕ್ಷ್ಮತೆಗಳನ್ನು ನಾವು ಗಮನಿಸದಿದ್ದರೆ, ಮುಂದಿನ
ದಿನಗಳಲ್ಲಿ ನಮ್ಮ ನಡುವಿನ ಬುದ್ದ, ಬಸವ, ಗಾಂಧಿ, ಅಂಬೇಡ್ಕರ್,ಮುಂತಾದ ದಾರ್ಶನಿಕರು ವಿಕ್ಷಿಪ್ತ ಮನಸ್ಸುಗಳ ಆಸ್ತಿಯಾಗುವ ಅಪಾಯವುಂಟು.
ಕೊನೆಯ
ಮಾತು- ಲೇಖಕಿ, ಬಿ.ವಿ. ಭಾರತಿಯವರು ಹಲವರ ಬೆದರಿಕೆಗೆ
ಮಣಿದು, ತಮ್ಮ ಕೃತಿಯ ಶಿರ್ಷಿಕೆಯನ್ನು ‘ ಸಾಸಿವೆ
ತಂದವಳು” ಎಂದು ಬದಲಾಯಿಸಿದ್ದಾರೆ. ಜೊತೆಗೆ ಕಳೆದ
ಎರಡೂವರೆ ವರ್ಷಗಳಿಂದ ಫೇಸ್ ಬುಕ್ ನಲ್ಲಿ ಸಕ್ರಿಯಾಗಿದ್ದ ಅವರು, ನಿನ್ನೆಯಿಂದ ತಮ್ಮ ಅಕೌಂಟ್ ಮುಚ್ಚಿಹಾಕಿದ್ದಾರೆ.
ಮುಂದಿನ ಭಾನುವಾರ ಬೆಂಗಳೂರಿನಲ್ಲಿ. ಶಿವಮೊಗ್ಗದ ಅಹರ್ನಿಶಿ ಪ್ರಕಾಶನದಿಂದ ಬಿಡುಗಡೆಯಾಗುವ ಭಾರತಿಯವರ
ಕೃತಿ ಬಿಡುಗಡೆ ಸಮಾರಂಭದಲ್ಲಿ ನಾವೆಲ್ಲರೂ ಭಾಗವಹಿಸಿ, ತನ್ನ ಒಡಲಿನಲ್ಲಿ ಸಾವಿನ
ಕರೆಗಂಟೆಯೊಂದನ್ನು ಇಟ್ಟುಕೊಂಡು ಓಡಾಡುತ್ತಿರುವ ಈ ಹೆಣ್ಣು ಮಗಳಿಗೆ ನೈತಿಕ ಸ್ಥೈರ್ಯ
ತುಂಬಬೇಕಾಗಿದೆ.ಈ ಸಹೋದರಿಯರ ಜೊತೆ ನೀವಿರುತ್ತೀರಿ ಎಂದು ನಾನು ಭಾವಿಸಿದ್ದೇನೆ,
ಶನಿವಾರ, ನವೆಂಬರ್ 30, 2013
ಕನ್ನಡ ರಂಗಭೂಮಿಯ ಭೀಷ್ಮ- ಕಂದಗಲ್ ಹನುಮಂತರಾಯರು
1993 ರಲ್ಲಿ ಬಿಜಾಪುರದಲ್ಲಿ ನಡೆದ ನವರಸಪುರ ಉತ್ಸವ ದ ಕವಿಗೋಷ್ಟಿಯಲ್ಲಿ
ಪಾಲ್ಗೊಂಡಿದ್ದೆ. ಕಂದಗಲ್ ಹನುಮಂತರಾವ್ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕವಿಗೋಷ್ಟಿಗಾಗಿ
ರಂಗಮಂದಿರಕ್ಕೆ ತೆರಳಿದ ನನಗೆ ಅಲ್ಲಿ ಹಾಕಲಾಗಿದ್ದ ಆಳೆತ್ತರದ ಭಾವಚಿತ್ರ ಗಮನೆಳೆಯಿತು. ಚಿತ್ರದ
ಕೆಳೆಗೆ ಬರೆಯಲಾಗಿದ್ದ “ ಕನ್ನಡದ ಷೆಕ್ಸ್ ಪಿಯರ್ ಕಂದಗಲ್ ಹನುಮಂತರಾವ್ “ ಎಂಬ ಶಿರ್ಷಿಕೆ
ನನ್ನಲ್ಲಿ ಕುತೂಹಲ ಉಂಟು ಮಾಡಿತು. ಏಕೆಂದರೆ, 1905 ಮತ್ತು 1910 ರ ನಡುವೆ ಕನ್ನಡದಲ್ಲಿ
ಪ್ರಥಮವಾಗಿ ಷೆಕ್ಸ್ ಪಿಯರನ ನಾಟಕಗಳನ್ನು ಕನ್ನಡಕ್ಕೆ ತಂದವರು,ಮಂಡ್ಯ ಜಿಲ್ಲೆಯ ಎಂ.ಎಲ್.
ಶ್ರೀಕಂಠೇಗೌಡರು. ಹಾಗಾಗಿ ನಾವು ಅವರನ್ನು ಕನ್ನಡದ ಷೆಕ್ಸ್ ಪಿಯರ್ ಎಂದು ಕರೆಯುತ್ತಿದ್ದೆವು. ಅಲ್ಲಿನ
ಗೆಳೆಯರನ್ನು ಈ ಕುರಿತು ವಿಚಾರಿಸಿದಾಗ, ಷೆಕ್ಸ್ ಪಿಯರನ ನಾಟಕಗಳನ್ನು ಹನುಮಂತರಾಯರು ತಮ್ಮ
ಕಂಪನಿಯಲ್ಲಿ ಪ್ರದರ್ಶನ ಮಾಡುತ್ತಿದ್ದರು. ಅದಕ್ಕಾಗಿ ಉತ್ತರ ಕರ್ನಾಟಕದ ಜನ ಪ್ರೀತಿಯಂದ ಅವರನ್ನು
ಕನ್ನಡದ ಷೆಕ್ಸ್ ಪಿಯರ್ ಎಂದು ಕರೆಯುತ್ತಾರೆ ಎಂದು ಉತ್ತರಿಸಿದರು. ಅಲ್ಲಿಯವರೆ ಅವರ ಹೆಸರನ್ನು
ಕೇಳದ ನನಗೆ, ಅವರ ಬದುಕನ್ನು ಗಮನಿಸಿದಾಗ. ರಂಗಭೂಮಿಗೆ ಅವರು ತೆತ್ತುಕೊಂಡ ಬಗೆ, ಅವರ ತ್ಯಾಗ
ಇವುಗಳನ್ನು ಗಮನಿಸಿದಾಗ ನಿಜಕ್ಕೂ ಈ ಹೆಸರು ಸಾರ್ಥಕ ಎನಿಸಿತು.
೧೮೬೬ ಜನವರಿ ೧೧ರಂದು ಕಂದಗಲ್ ಗ್ರಾಮದ ಭೀಮರಾಯ ಮತ್ತು ಗಂಗೂಬಾಯಿ ದಂಪತಿಗಳ ಮೊದಲ ಪುತ್ರನಾಗಿ ಜನಿಸಿದ ಹನುಮಂತರಾಯರು ಪ್ರಾಥಮಿಕ ಶಿಕ್ಷಣವನ್ನು ತನ್ನ ಹಳ್ಳಿಯಲ್ಲೇ ಪಡೆದರು. ಬ್ರಾಹ್ಮಣ ಮನೆತನದಲ್ಲಿ ಜನಿಸಿದ ಹನುಮಂತರಾಯರಿಗೆ ಪಕ್ಕದ ಓಣಿಯ ಶರಣ ಸಂಪ್ರದಾಯದ ಗಿರಿಮಲ್ಲಯ್ಯ ಎಂಬುವವರ ಮನೆಯಲ್ಲಿ ಜರುಗುತ್ತಿದ್ದ ಭಜನೆ ಶರಣರ ಪ್ರವಚನಗಳ ಬಗ್ಗೆ ಬಾಲ್ಯದಿಂದಲೂ ಎಲ್ಲಿಲ್ಲದ ಆಸಕ್ತಿ. ಈ ಕಾರ್ಯಕ್ರಮ ಗಳಿಗೆ ಕದ್ದು ಮುಚ್ಚಿ ಹಾಜರಾಗುತ್ತಿದ್ದ ಬಾಲಕ ಹನುಮಂತರಾಯ ಭಜನೆ ಹಾಡುವುದು, ಹಾರ್ಮೊನಿಯಂ ನುಡಿಸುವುದು ಇವುಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದ.
ಮುಂದೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತಂದೆ ಭೀಮರಾಯರು ಹನುಮಂತರಾಯ ಹಾಗೂ ತಮ್ಮ ಶ್ರೀನಿವಾಸರಾಯನನ್ನು ಬಿಜಾಪುರದಲ್ಲಿ ಮನೆಮಾಡಿ ಇರಿಸಿದಾಗ ಆ ವೇಳೆಗಾಗಲೆ ಬಿಜಾಪುರಕ್ಕೆ ಗಣೇಶೋತ್ಸವ ಕಾಲಿಟ್ಟಿತ್ತು. ಪುಣೆಯಲ್ಲಿ ತಿಲಕರು ಗಣೇಶೋತ್ಸವವನ್ನು ವಿಜೃಂಬಣೆಯಿಂದ ಆಚರಿಸುವ ಸಂಪ್ರದಾಯವನ್ನು ಹುಟ್ಟು ಹಾಕಿದ್ದರಿಂದ ಬಿಜಾಪುರದಲ್ಲೂ ಸಹ ಈ ಉತ್ಸವದಲ್ಲಿ ನಾಟಕ ಸಂಗೀತ ಕಾರ್ಯಕ್ರಮಗಳು ಜರುಗುತ್ತಿದ್ದವು. ಈ ಕಾರ್ಯಕ್ರಮಗಳು ಹನುಮಂತರಾಯರ ಆಸಕ್ತಿಯನ್ನು ಮತ್ತಷ್ಟು ಕೆರಳಿಸಿದವು.
ಪ್ರೌಢಶಾಲೆ ಶಿಕ್ಷಣದ ಅವಧಿಯಲ್ಲಿ ವಿದ್ಯಾಭ್ಯಾಸಕ್ಕಿಂತ ನಾಟಕಗಳತ್ತ ಒಲವು ತೋರಿದ ಹನುಮಂತರಾಯರು ಅನೇಕ ಏಕಾಂಕ ನಾಟಕಗಳನ್ನು ಬರೆದು ಗೆಳೆರೊಡಗೂಡಿ ಪ್ರದರ್ಶಿಸಿದರು. ಬಿಜಾಪುರದ ಪ್ರತಿಷ್ಟಿತ ವ್ಯಕ್ತಿಗಳಾದ ಫ.ಗು. ಹಳಕಟ್ಟಿ, ಶ್ರೀನಿವಾಸ ಕೌಜಲಗಿ ಮುಂತಾದವರ ಪ್ರಶಂಸೆಗೆ ಪಾತ್ರರಾಗಿದ್ದರು. ನಾಟಕದ ಆಸಕ್ತಿಯಿಂದಾಗಿ ಮುಲ್ಕಿ ಪರೀಕ್ಷೆಯಲ್ಲಿ ಫೇಲಾದ ಹನುಮಂತರಾಯರು ಮನೆಯವರ ವಿರೋಧ ಎದುರಿಸಲಾರದೆ ೧೯೧೮ರಲ್ಲಿ ಪುಣೆಗೆ ತೆರಳಿ ಮಿಲಿಟರಿ ಉದ್ಯೋಗಕ್ಕೆ ಸೇರ್ಪಡೆಯಾದರು.
೧೮೬೬ ಜನವರಿ ೧೧ರಂದು ಕಂದಗಲ್ ಗ್ರಾಮದ ಭೀಮರಾಯ ಮತ್ತು ಗಂಗೂಬಾಯಿ ದಂಪತಿಗಳ ಮೊದಲ ಪುತ್ರನಾಗಿ ಜನಿಸಿದ ಹನುಮಂತರಾಯರು ಪ್ರಾಥಮಿಕ ಶಿಕ್ಷಣವನ್ನು ತನ್ನ ಹಳ್ಳಿಯಲ್ಲೇ ಪಡೆದರು. ಬ್ರಾಹ್ಮಣ ಮನೆತನದಲ್ಲಿ ಜನಿಸಿದ ಹನುಮಂತರಾಯರಿಗೆ ಪಕ್ಕದ ಓಣಿಯ ಶರಣ ಸಂಪ್ರದಾಯದ ಗಿರಿಮಲ್ಲಯ್ಯ ಎಂಬುವವರ ಮನೆಯಲ್ಲಿ ಜರುಗುತ್ತಿದ್ದ ಭಜನೆ ಶರಣರ ಪ್ರವಚನಗಳ ಬಗ್ಗೆ ಬಾಲ್ಯದಿಂದಲೂ ಎಲ್ಲಿಲ್ಲದ ಆಸಕ್ತಿ. ಈ ಕಾರ್ಯಕ್ರಮ ಗಳಿಗೆ ಕದ್ದು ಮುಚ್ಚಿ ಹಾಜರಾಗುತ್ತಿದ್ದ ಬಾಲಕ ಹನುಮಂತರಾಯ ಭಜನೆ ಹಾಡುವುದು, ಹಾರ್ಮೊನಿಯಂ ನುಡಿಸುವುದು ಇವುಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದ.
ಮುಂದೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತಂದೆ ಭೀಮರಾಯರು ಹನುಮಂತರಾಯ ಹಾಗೂ ತಮ್ಮ ಶ್ರೀನಿವಾಸರಾಯನನ್ನು ಬಿಜಾಪುರದಲ್ಲಿ ಮನೆಮಾಡಿ ಇರಿಸಿದಾಗ ಆ ವೇಳೆಗಾಗಲೆ ಬಿಜಾಪುರಕ್ಕೆ ಗಣೇಶೋತ್ಸವ ಕಾಲಿಟ್ಟಿತ್ತು. ಪುಣೆಯಲ್ಲಿ ತಿಲಕರು ಗಣೇಶೋತ್ಸವವನ್ನು ವಿಜೃಂಬಣೆಯಿಂದ ಆಚರಿಸುವ ಸಂಪ್ರದಾಯವನ್ನು ಹುಟ್ಟು ಹಾಕಿದ್ದರಿಂದ ಬಿಜಾಪುರದಲ್ಲೂ ಸಹ ಈ ಉತ್ಸವದಲ್ಲಿ ನಾಟಕ ಸಂಗೀತ ಕಾರ್ಯಕ್ರಮಗಳು ಜರುಗುತ್ತಿದ್ದವು. ಈ ಕಾರ್ಯಕ್ರಮಗಳು ಹನುಮಂತರಾಯರ ಆಸಕ್ತಿಯನ್ನು ಮತ್ತಷ್ಟು ಕೆರಳಿಸಿದವು.
ಪ್ರೌಢಶಾಲೆ ಶಿಕ್ಷಣದ ಅವಧಿಯಲ್ಲಿ ವಿದ್ಯಾಭ್ಯಾಸಕ್ಕಿಂತ ನಾಟಕಗಳತ್ತ ಒಲವು ತೋರಿದ ಹನುಮಂತರಾಯರು ಅನೇಕ ಏಕಾಂಕ ನಾಟಕಗಳನ್ನು ಬರೆದು ಗೆಳೆರೊಡಗೂಡಿ ಪ್ರದರ್ಶಿಸಿದರು. ಬಿಜಾಪುರದ ಪ್ರತಿಷ್ಟಿತ ವ್ಯಕ್ತಿಗಳಾದ ಫ.ಗು. ಹಳಕಟ್ಟಿ, ಶ್ರೀನಿವಾಸ ಕೌಜಲಗಿ ಮುಂತಾದವರ ಪ್ರಶಂಸೆಗೆ ಪಾತ್ರರಾಗಿದ್ದರು. ನಾಟಕದ ಆಸಕ್ತಿಯಿಂದಾಗಿ ಮುಲ್ಕಿ ಪರೀಕ್ಷೆಯಲ್ಲಿ ಫೇಲಾದ ಹನುಮಂತರಾಯರು ಮನೆಯವರ ವಿರೋಧ ಎದುರಿಸಲಾರದೆ ೧೯೧೮ರಲ್ಲಿ ಪುಣೆಗೆ ತೆರಳಿ ಮಿಲಿಟರಿ ಉದ್ಯೋಗಕ್ಕೆ ಸೇರ್ಪಡೆಯಾದರು.
ನಾಟಕ ಕಂಪನಿಗಳ ತವರೂರು ಎನಿಸಿದ್ದ ಪುಣೆ ನಗರ ಹನುಮಂತರಾಯರ ನಾಟಕದ ಆಸಕ್ತಿಗೆ ಮತ್ತಷ್ಟು ನೀರೆರೆದು ಪೋಷಿಸಿತು. ಪುಣೆಯಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಮರಾಠಿ ನಾಟಕಗಳನ್ನು ನೋಡುತ್ತಾ ಅಲ್ಲಿನ ನಾಟಕಕಾರ ರೊಂದಿಗೆ ಸಂಬಂಧ ಬೆಳೆಸುತ್ತಾ ನಾಟಕ ರಚನೆಯ ತಂತ್ರಗಳನ್ನು, ನಟನೆಯ ಗುಟ್ಟುಗಳನ್ನು ಕಲಿತರು. ಕೇವಲ ಮೂರು ವರ್ಷಗಳ ಕಾಲ ಪುಣೆಯಲ್ಲಿದ್ದ ಹನುಮಂತರಾಯರು ತಾಯಿಯ ಅನಾರೋಗ್ಯದಿಂದಾಗಿ ಮಿಲಿಟರಿ ಉದ್ಯೋಗಕ್ಕೆ ರಾಜಿನಾಮೆ ನೀಡಿ ತನ್ನ ಹುಟ್ಟೂರಿಗೆ ಮರಳಬೇಕಾಯಿತು. ಚಿಕ್ಕ ಹಳ್ಳಿಯಾಗಿದ್ದ ಕಂದಗಲ್ ಗ್ರಾಮದಲ್ಲಿ ಹನುಮಂತರಾಯರ ಬದುಕು ಅಸಹನೀಯ ಎನಿಸಿದಾಗ ಮತ್ತೆ ಅವರು ತಾಯಿಯೊಂದಿಗೆ ಬಿಜಾಪುರಕ್ಕೆ ತೆರಳಿ ತಮ್ಮನ ಮನೆಯಲ್ಲಿ ವಾಸಿಸತೊಡಗಿದರು. ಜೊತೆಗೆ ಹಳೆಯ ಗೆಳೆಯರ ನೆರವಿನಿಂದ ಋದನಾಪುರ ಎಂಬುವವರ ಶಿಂಗಾರಿ ಎಂಬ ಕಂಪನಿಯಲ್ಲಿ ಹೊಲಿಗೆ ಕೆಲಸಕ್ಕೆ ಸೇರ್ಪಡೆಯಾದರು.
ಹನುಮಂತರಾಯರಿಗೆ ಉದ್ಯೋಗವೆಂಬುದು ಕೇವಲ ನಿಮಿತ್ತವಾಗಿತ್ತು. ಅವರ ಆಸಕ್ತಿಯೆಲ್ಲಾ ನಾಟಕಗಳತ್ತಲೇ ಇತ್ತು. ಹಾಗಾಗಿ ೧೯೨೧ರಲ್ಲಿ ‘ಸಂಧ್ಯಾರಾಗ’ ಎಂಬ ಐತಿಹಾಸಿಕ ನಾಟಕವನ್ನು ಬರೆದು, ಸ್ನೇಹಿತರೊಡಗೂಡಿ ‘ಶ್ರೀಕೃಷ್ಣ ನಾಟಕ ಕಂಪನಿ’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ನಾಟಕದ ಪರಿಕರಗಳನ್ನು ಬಾಡಿಗೆಗೆ ತಂದು ನಾಟಕ ಪ್ರದರ್ಶಿಸತೊಡಗಿದರು. ಆ ವೇಳೆಗಾಗಲೇ ಬಿಜಾಪುರದ ಸಿವಿಲ್ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದ ತಮ್ಮ ಶ್ರೀನಿವಾಸರಾಯ ಅಣ್ಣನ ಹವ್ಯಾಸಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದಾಗ ವಿಧಿ ಇಲ್ಲದೆ ಹನುಮಂತರಾಯರು ತಮ್ಮನ ಮನೆಯನ್ನು ಹಾಗೂ ಬಿಜಾಪುರವನ್ನು ತೊರೆಯಬೇಕಾಯಿತು.
ನಿರುದ್ಯೋಗಿಯಾಗಿದ್ದ ಹನುಮಂತರಾಯರಿಗೆ ಅವರ ಚಿಕ್ಕಪ್ಪ ಬಾಗಲಕೋಟೆಯಲ್ಲಿ ಸೊಲ್ಲಾಪುರ ಮೂಲದ ಅಶೋಕ ಸಹಕಾರಿ ಬ್ಯಾಂಕ್ನಲ್ಲಿ ಗುಮಾಸ್ತೆಯ ಹುದ್ದೆಯೊಂದನ್ನು ಕೊಡಿಸಿದರು. ಬಾಗಲಕೋಟೆಗೆ ಬಂದು ನೆಲೆಸಿದ ಹನುಮಂತರಾಯರಿಗೆ ಸಮೀಪದ ಗುಳೇದಗುಡ್ಡ ಎಂಬ ಚಿಕ್ಕ ಪಟ್ಟಣ ಆಕರ್ಷಣೆಯ ಕೇಂದ್ರವಾಯತು.
ಅಂದಿನ ಬಿಜಾಪುರ ಜಿಲ್ಲೆಯ ದಕ್ಷಿಣ ಭಾಗದ ಇಲಕಲ್, ಗುಳೇದಗುಡ್ಡ, ಕಮತಗಿ, ಗಜೇಂದ್ರಗಢ, ರಬಕವಿ, ಬನಹಟ್ಟಿ, ಬಾದಾಮಿ ಇವೆಲ್ಲವೂ ನಾಟಕಕಾರರ, ನಾಟಕ ಕಂಪನಿಗಳ, ಕಲಾವಿದರ ಕಾಶಿ ಎನಿಸಿದ್ದವು. ಅಲ್ಲದೆ ಪುರುಷರೇ ಸ್ತ್ರೀ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಸಂಪ್ರದಾಯವನ್ನು ಮುರಿದು ಹಾಕಿದ ಕೀರ್ತಿ ಈ ಪ್ರದೇಶಕ್ಕೆ ಸಲ್ಲುತ್ತದೆ. ಗುಳೇದಗುಡ್ಡದ ಯಮುನಾಬಾಯಿ ಮತ್ತು ಗಂಗೂಬಾಯಿ ಕಂಪನಿ ನಾಟಕಗಳಲ್ಲಿ ಪ್ರಥಮ ಬಾರಿಗೆ ಸ್ತ್ರೀ ಪಾತ್ರಗಳಲ್ಲಿ ಅಭಿನಯಿಸಿ ದಾಖಲೆ ಸ್ಥಾಪಿಸಿದರು.
ನಾಟಕಗಳಿಗಾಗಿ ಪ್ರತಿವಾರ ಗುಳೇದಗುಡ್ಡಕ್ಕೆ ಹೋಗುತ್ತಿದ್ದ ಹನುಮಂತರಾಯರು ನಟಿಯಾಗಿ ಹೆಸರುವಾಸಿಯಾಗಿದ್ದ ಯಮುನಾಬಾಯಿಯನ್ನು ಭೇಟಿಮಾಡಿ ಬರುತ್ತಿದ್ದರು. ಆಕೆಯ ಮೂಲಕ ಗುಳೇದಗುಡ್ಡದ ಭೀಮರಾಯರ ಪುತ್ರಿ ಅಂಬಾಬಾಯಿಯನ್ನು ೧೯೨೫ರಲ್ಲಿ ವಿವಾಹವಾಗಿ ಗುಳೇದಗುಡ್ಡದ ಜೊತೆ ಸಂಬಂಧವನ್ನು ಶಾಶ್ವತವಾಗಿರಿಸಿಕೊಂಡರು.
ರಾಯರ ನಾಟಕಗಳ ಬಗೆಗಿನ ಆಸಕ್ತಿಯನ್ನು ಗಮನಿಸಿದ ಯಮುನಾಬಾಯಿಯ ‘ನೀವೇಕೆ ನಾಟಕ ಕಂಪನಿ ಸೇರಿ ನಾಟಕಗಳನ್ನು ಬರೆದುಕೊಡಬಾರದು’ ಎಂಬ ಪ್ರಶ್ನೆಗೆ ಉತ್ತರವಾಗಿ ಪತ್ನಿ ಹಾಗೂ ಮಾವನವರ ವಿರೋಧವನ್ನು ಲೆಕ್ಕಿಸದೆ ಬ್ಯಾಂಕ್ ಉದ್ಯೋಗಕ್ಕೆ ತಿಲಾಂಜಲಿಯಿತ್ತು ನಾಟಕ ಕಂಪನಿಗೆ ಸೇರ್ಪಡೆಗೊಂಡರು.
ಯಮುನಾಬಾಯಿಯ ನಾಟಕ ಕಂಪನಿಗೆ ನಾಟಕಗಳನ್ನು ಬರೆಯುತ್ತಾ, ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಾ ಸುಮಾರು ೬ ವರ್ಷಗಳ ಕಾಲ ಕರ್ನಾಟಕವನ್ನೆಲ್ಲಾ ಸುತ್ತಿದ ರಾಯರು ಉಡುಪಿಯಲ್ಲಿದ್ದಾಗ ನಾಟಕ ಕಂಪನಿಯ ನಟರೆಲ್ಲಾ ಕೈಕೊಟ್ಟು ಕಂಪನಿ ಮುಚ್ಚಿದ ಕಾರಣ ಮತ್ತೆ ಗುಳೇದಗುಡ್ಡಕ್ಕೆ ಬರಿಗೈಯ್ಯಲ್ಲಿ ವಾಪಸಾದರು. ಈ ವೇಳೆಗೆ ಯರಾಸಿ ಬರಮಪ್ಪ ಗದುಗಿನಲ್ಲಿ ಪ್ರಾರಂಭಿಸಿದ ವಾಣಿವಿಲಾಸ ನಾಟಕ ಕಂಪನಿಗೆ ನಾಟಕಕಾರರಾಗಿ ಸೇರಿಕೊಂಡರು. ಈ ಕಂಪನಿಯಲ್ಲಿ ಹಿಂದೂಸ್ಥಾನಿ ಗಾಯಕರಾಗಿ ಹೆಸರುಮಾಡಿದ್ದ ಮಲ್ಲಿಕಾರ್ಜುನ ಮನ್ಸೂರ್, ಹೆಸರಾಂತ ನಟರಾಗಿದ್ದ ಹಂದಿಗನೂರು ಸಿದ್ದರಾಮಪ್ಪ ಮುಂತಾದವರು ನಟಿಸುತ್ತಿದ್ದರಿಂದ ರಾಯರು ಬರೆದ ವರಪ್ರಧಾನ, ಅಕ್ಷಯಾಂಭರ ನಾಟಕಗಳು ಕಂಪನಿಗೆ ಹೆಸರು ತಂದುಕೊಟ್ಟವು. ಕಂಪನಿಗೆ ಹಣ ಬರತೊಡಗಿದಂತೆ ಮಾಲೀಕ ಬರಮಪ್ಪ ಮದ್ಯ, ಮದಿರೆಯ ದಾಸನಾಗಿದ್ದರಿಂದ ಈ ಕಂಪನಿಯಲ್ಲೂ ಕೂಡ ಹನುಮಂತರಾಯರು ಬದುಕಿನ ರಥವನ್ನು ನೆಮ್ಮದಿಯಿಂದ ಎಳೆಯಲು ಸಾಧ್ಯವಾಗಲಿಲ್ಲ.
ಈಗಾಗಲೇ ಎರಡು ಕಂಪನಿಗಳಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿ ಅನುಭವಗಳಿಸಿದ್ದರಿಂದ ತಾನೇ ಏಕೆ ನಾಟಕ ಕಂಪನಿಯೊಂದನ್ನು ಪ್ರಾರಂಭಿಸಬಾರದು ಎಂದು ಕೊಂಡು ಎರಡನೇ ಬಾರಿಗೆ ಹೂಗಾರ ಭೀಮರಾಯರ ಜೊತೆ ‘ಭಾಗ್ಯೋದಯ ನಾಟಕ ಕಂಪನಿ’ ಯನ್ನು ಆರಂಭಿಸಿದರು. ರಾಯರ ಹೊಸ ಕಂಪನಿಗೆ ಅಮೀರ್ಬಾಯಿ ಕರ್ನಾಟಕಿ, ಹಂದಿಗನೂರು ಸಿದ್ದರಾಮಪ್ಪ ಮುಂತಾದವರು ಕಲಾವಿದರಾಗಿ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಅವರು ಬರೆದ ‘ಜ್ವಾಲೆ’, ‘ಬಡತನದ ಭೂತ’ ಎಂಬ ಸಾಮಾಜಿಕ ಹಾಗೂ ಅವರ ಹೆಸರನ್ನು ರಂಗಭೂಮಿಯಲ್ಲಿ ಚಿರಸ್ಥಾಯಿಗೊಳಿಸಿದ ‘ರಕ್ತರಾತ್ರಿ’ ಎಂಬ ಐತಿಹಾಸಿಕ ನಾಟಕಗಳನ್ನು ತಮ್ಮ ಕಂಪನಿಯ ಮೂಲಕ ಕರ್ನಾಟಕದೆಲ್ಲೆಡೆ ಪ್ರದರ್ಶಿಸಿದರು. ಹೈದರಾಬಾದಿನಲ್ಲಿ ನಾಟಕ ಕಂಪನಿ ಕ್ಯಾಂಪ್ ಹಾಕಿದ್ದ ಸಮಯದಲ್ಲಿ ಹೆಚ್ಚಿನ ಸಂಭಾವನೆ ಆಸೆಗಾಗಿ ಕಲಾವಿದರೆಲ್ಲ ರಾತ್ರೋರಾತ್ರಿ ಬೇರೊಂದು ಕಂಪನಿಗೆ ಹೋದಾಗ ಕಂಪನಿ ಮುಚ್ಚಿದ ರಾಯರು ಯಥಾಸ್ಥಿತಿಯಲ್ಲಿ ಗುಳೇದಗುಡ್ಡಕ್ಕೆ ಮರಳಿದರು.
ಕಂಪನಿ ಸ್ಥಗಿತಗೊಳಿಸಿ ಹಿಂತಿರುಗಿ ಬಂದ ರಾಯರು, ಯಾವುದೇ ನಾಟಕ ಕಂಪನಿಗೆ ಸೇರದೆ ನಾಟಕ ಕಲಿಸುವ ವೃತ್ತಿಯನ್ನು ಮುಖ್ಯವಾಗಿರಿಸಿಕೊಂಡು ಜೀವಿಸತೊಡಗಿದರು. ಇದೇ ವೇಳೆ ಜಾತ್ರೆ ಸಂದರ್ಭಗಳಲ್ಲಿ ಮಾತ್ರ ನಾಟಕವಾಡುತ್ತಿದ್ದ ಕೆರೂರಿನ ಶಾರದಾ ನಾಟಕ ಮಂಡಳಿಗೆ ‘ಬಾಣಸಿಗಭೀಮ’ ಎಂಬ ನಾಟಕವನ್ನುಬರೆದುಕೊಟ್ಟರು. ಈ ನಾಟಕ ಉತ್ತರ ಕರ್ನಾಟಕದಲ್ಲಿ ಅತ್ಯಂತ ಯಶಸ್ವಿ ನಾಟಕಗಳಲ್ಲಿ ಒಂದಾಯಿತು.
ನಾಟಕ ಕಂಪನಿ ಹುಟ್ಟುಹಾಕಿ ಕೈ ಸುಟ್ಟುಕೊಂಡಿದ್ದರೂ, ಹಳೇ ಮೈಸೂರು ಪ್ರಾಂತ್ಯದಲ್ಲಿ ತನ್ನ ಪ್ರತಿಭೆ ಪ್ರದರ್ಶಿಸಬೇಕೆಂಬ ಆಸೆ ರಾಯರನ್ನು ಕಾಡುತ್ತಲೇ ಇತ್ತು. ಅದರಂತೆ ಮೂರನೇ ಬಾರಿಗೆ ತನ್ನ ಪತ್ನಿ ಮತ್ತು ನಾದಿನಿಯ ಮೈಮೇಲಿನ ಒಡವೆ ಒತ್ತೆ ಇಟ್ಟು ಅರವಿಂದ ಸಂಗೀತ ನಾಟಕ ಮಂಡಳಿ ಕಟ್ಟಿಕೊಂಡು ದಾವಣಗೆರೆ, ಹಾವೇರಿಯಲ್ಲಿ ಯಶಸ್ವಿ ಕ್ಯಾಂಪ್ ಮುಗಿಸಿ, ಬೆಂಗಳೂರಿನ ಟೌನ್ ಹಾಲ್ನಲ್ಲಿ ಕ್ಯಾಂಪ್ ಹಾಕಿದರು. ಬೆಂಗಳೂರಿನಲ್ಲಿ ರಾಯರ ನಾಟಕಗಳಿಗೆ ಒಳ್ಳೆಯ ಹೆಸರು ಬಂದರೂ ಹಣ ಮಾತ್ರ ದಕ್ಕಲಿಲ್ಲ. ಇದೇ ಸಂದರ್ಭದಲ್ಲಿ ಮೈಸೂರು ಮಹಾರಾಜರ ಎದುರು ‘ಅದ್ಭುತ ರಾಮಾಯಣ’ ನಾಟಕ ಪ್ರದರ್ಶಿಸುವ ಅವಕಾಶ ರಾಯರಿಗೆ ದೊರೆಯಿತು.
ಮೈಸೂರು ಕ್ಯಾಂಪ್ನಲ್ಲಿ ರಾಯರ ನಾಟಕಗಳಿಗೆ ಜನರ ಪ್ರತಿಕ್ರಿಯೆ ಚೆನ್ನಾಗಿದ್ದರೂ, ಪೌರಾಣಿಕ ನಾಟಕಗಳಿಗೆ ಹಣ ನೀರಿನಂತೆ ಖರ್ಚಾಗುತ್ತಿದ್ದರಿಂದ ಕಂಪನಿಯ ಆರ್ಥಿಕ ಸ್ಥಿತಿ ಸುಧಾರಿಸಲೇ ಇಲ್ಲ. ಜೊತೆಗೆ ಮೈಸೂರು ಮಹಾರಾಜರ ಮುಂದೆ ನಾಟಕ ಪ್ರದರ್ಶಿಸುವ ಅವಕಾಶ ಕೈ ತಪ್ಪಿದ್ದರಿಂದ, ನಾಟಕದ ಪರಿಕರಗಳನ್ನೆಲ್ಲಾ ಹಾವೇರಿಯಲ್ಲಿ ಒತ್ತೆ ಇಟ್ಟು, ಕಲಾವಿದರಿಗೆ ಸಂಭಾವನೆ ಕೊಟ್ಟು, ಇನ್ನೆಂದೂ ನಾಟಕ ಕಂಪನಿ ಕಟ್ಟುವ ಕಾರ್ಯ ಮಾಡಬಾರದೆಂದು ತೀರ್ಮಾನಿಸಿ, ನಿರಾಸೆಯಿಂದ ಬಸವಳಿದ ರಾಯರು ಬರಿಗೈಲಿ ಮನೆಗೆ ಬಂದು ಹೆಂಡತಿ, ಮಕ್ಕಳೆದುರು ತಲೆತಗ್ಗಿಸಿ ನಿಂತರು.
ಹೀಗೆ ಸುದೀರ್ಘ ೩೦ ವರ್ಷಗಳ ಕಾಲ ನಾಟಕ ರಂಗದಲ್ಲಿ ತೇಲಿ ಮುಳುಗಿ ಕನ್ನಡದ ನಾಟಕ ಪ್ರಕಾರದಲ್ಲಿ ‘ರಕ್ತರಾತ್ರಿ’ ಎಂಬ ಶ್ರೇಷ್ಠ ಕೃತಿ ರಚಿಸಿದ ರಾಯರಿಗೆ ಅಂತಿಮವಾಗಿ ದೊರೆತಿದ್ದು, ಬಡತನ ಮತ್ತು ಸಾಲ ಹಾಗೂ ಎದೆಯುದ್ದ ಬೆಳೆದು ನಿಂತ ಹೆಣ್ಣುಮಕ್ಕಳು.
ಇಂತಹ ಸ್ಥಿತಿಯಲ್ಲೂ ಸಹ ಗುಳೇದಗುಡ್ಡ ಹಾಗೂ ಸುತ್ತ ಮುತ್ತಲಿನ ಹಳ್ಳಿಗಳ ಯುವಕ ಸಂಘಗಳು ಹಬ್ಬ, ಜಾತ್ರೆ ಇತ್ಯಾದಿ ಸಂದರ್ಭಗಳಲ್ಲಿ ನಾಟಕ ಕಲಿಸಲು ಆಹ್ವಾನಿಸಿದರೆ, ಯಾವುದೇ ಆಡಂಬರವಿಲ್ಲದೆ ಒಪ್ಪಿಕೊಂಡು, ಒಂದು ಕಟ್ಟು ಬೀಡಿ, ಎರಡು ಕಪ್ ಚಹಾ, ಎರಡು ಹೊತ್ತಿನ ಊಟಕ್ಕೆ ನಾಟಕ ಕಲಿಸುತ್ತಿದ್ದರು. ನಾಟಕದ ದಿನ ಕಲಾವಿದರು ಉಡುಗೊರೆಯಾಗಿ ನೀಡುತ್ತಿದ್ದ ಅಂಗಿ, ಟವೆಲ್, ಪಂಚೆ ಇವುಗಳನ್ನು ಸ್ವೀಕರಿಸಿ, ನಿರ್ಲಿಪ್ತರಾಗಿ ಕೊಡೆ ಹಿಡಿದು ತನ್ನ ಮನೆಗೆ ನಡೆದು ಬರುತ್ತಿದ್ದರು.
ತಮ್ಮ ಜೀವಿತಾವಧಿಯಲ್ಲಿ ೭ ಏಕಾಂಕ ನಾಟಕಗಳು, ೧೪ ಪೌರಾಣಿಕ ನಾಟಕಗಳು, ೪ ಐತಿಹಾಸಿಕ ನಾಟಕಗಳು ಹಾಗೂ ೧೨ ಸಾಮಾಜಿಕ ನಾಟಕಗಳನ್ನು ಬರೆದು, ಕನ್ನಡದ ಪ್ರಮುಖ ನಾಟಕಕಾರರ ಜೊತೆ ಗುರುತಿಸಿಕೊಂಡಿದ್ದ ಕಂದಗಲ್ ಹನುಮಂತರಾಯರ ಕಡೆಯ ದಿನಗಳು ಅತ್ಯಂತ ಶೋಚನೀಯವಾಗಿದ್ದವು.
ನಾಟಕ ಕಲಾವಿದರು ತಂದುಕೊಡುತ್ತಿದ್ದ ದವಸ-ದಾನ್ಯಗಳಲ್ಲಿ ಜೀವನ ಸಾಗಿಸುತ್ತಿದ್ದ ರಾಯರಿಗೆ ಕೊನೆಯ ದಿನಗಳಲ್ಲಿ ಸರ್ಕಾರ ನೀಡುತ್ತಿದ್ದ ೧೦೦ರೂ ಮಾಸಾಶನ ಏಕೈಕ ಆಸರೆಯಾಗಿತ್ತು. ಬೆಳೆದ ಹೆಣ್ಣು ಮಕ್ಕಳ ವಿವಾಹ ಮಾಡಲಾಗದೆ ಅಸಹಾಯಕರಾಗಿ ನಿಂತಾಗ, ಸುಳ್ಯದ ದೇಸಾಯಿಯವರು ತಾವೇ ಮುಂದೆ ನಿಂತು ವಿವಾಹ ಮಾಡುವುದರ ಮೂಲಕ ರಾಯರಿಗೆ ನೆರವಾದರು.
ಹೀಗೆ ತಾವು ಪ್ರೀತಿಸಿದ, ಆರಾಧಿಸಿದ ನಾಟಕ ಕ್ಷೇತ್ರಕ್ಕೆ ತಮ್ಮದೆಲ್ಲವನ್ನೂ ಧಾರೆ ಎರೆದು ಬರಿಗೈ ದಾಸರಾದ ಹನುಮಂತರಾಯರು ತಮ್ಮ ಕೊನೆಯ ದಿನಗಳಲ್ಲಿ ಬಡತನದ ಬೇಗೆಯಿಂದ ನಲುಗಿಹೋದರು. ನಾಟಕ ರಂಗದಲ್ಲಿ ಅವರಿಗೆ ಸಿಕ್ಕ ಬಳುವಳಿ ಭಿನ್ನವತ್ತಳೆಗಳು ಹಾಗೂ ಕನ್ನಡದ ಷೇಕ್ಸ್ಪಿಯರ್ ಎಂಬ ಬಿರುದು ಮಾತ್ರ. ಆದರೆ ಈ ಬಿರುದು ಬಾವಲಿಗಳು ಅವರ ಹೊಟ್ಟೆ ತುಂಬಿಸಲಿಲ್ಲ. ಅವರ ಕುಟುಂಬದ ಕಷ್ಟ ತೀರಿಸಲಿಲ್ಲ. ಇದು ಇತಿಹಾಸದ ವ್ಯಂಗ್ಯ ದುರಂತಗಳಲ್ಲಿ ಒಂದು.
ಇಂದಿಗೂ ಕೂಡ ಉತ್ತರ ಕರ್ನಾಟಕದ ಜನತೆ ರಾಯರನ್ನು ತುಂಬು ಹೃದಯದಿಂದ ನೆನಪಿಸಿಕೊಂಡು ಅವರ ಪ್ರತಿಭೆಯ ಬಗ್ಗೆ ಮಾತನಾಡುತ್ತಾರೆ. ಬಿಜಾಪುರದ ಕಲಾಮಂದಿರಕ್ಕೆ ಕನ್ನಡ ಸಂಸ್ಕೃತಿ ಇಲಾಖೆ ಕಂದಗಲ್ ಹನುಮಂತರಾಯ ಕಲಾಮಂದಿರ ಎಂದು ನಾಮಕರಣ ಮಾಡಿ ರಾಯರಿಗೆ ಗೌರವ ಸೂಚಿಸಿದೆ. ಅದೊಂದು ಸಮಾಧಾನಕರ ಸಂಗತಿ.
( ಗುಮ್ಮಟನಾಡಿನ ಕಥನ ಲೇಖನ
ಸರಣಿಯಿಂದ)
ಬುಧವಾರ, ನವೆಂಬರ್ 27, 2013
ಬೇಂದ್ರೆ ಮತ್ತು ಮಧುರ ಚನ್ನ ಗೆಳೆತನ ಒಂದು ನೆನಪು
|
ಶುಕ್ರವಾರ, ನವೆಂಬರ್ 22, 2013
ತಲ್ಲಣಿಸಿ ಹೋದ ಜೀವವೊಂದರ ಮಾತುಗಳು.
ಕಳೆದ
ಮೂರು ದಶಕಗಳಿಂದ ನನ್ನ ಪಾಲಿನ ಹಿರಿಯಣ್ಣನಂತಿರುವ
ಮಹಾದೇವು ಜೊತೆ ಒಡನಾಡಿದ ನನಗೆ
ಅವರಲ್ಲಿ ಕಂಡ ಅತ್ಯಂತ ಮಹತ್ವದ
ಗುಣವೆಂದರೆ, ಬರೆದಂತೆ ಬದುಕುವುದು, ಮತ್ತು
ಬದುಕಿದಂತೆ ಬರೆಯುವ ಗುಣ. ಅವರ
“ಎದೆಗೆ ಬಿದ್ದ ಅಕ್ಷರ’ ಕೃತಿಯ
ಬಹುತೇಕ ಬರಹಗಳನ್ನು ಮತ್ತು ಅವರ ಮಾತುಗಳನ್ನು
ಈಗಾಗಲೇ ಓದಿ, ಕೇಳಿಸಿಕೊಂಡಿದ್ದ ನನಗೆ,
ಅವುಗಳನ್ನು ಮತ್ತೆ ಪುಸ್ತಕ ರೂಪದಲ್ಲಿ
ಓದುವಾಗ, ಪದೇ ಪದೇ ಕಣ್ಣಾಲಿಗಳು ತುಂಬಿ ಬಂದವು. ಇವು
ಮಹಾದೇವು ಮಾತ್ರ ಬರೆಯಬಹುದಾದ ಅಕ್ಷರಗಳು
ಮತ್ತು ಆಡಬಹುದಾದ ಮಾತುಗಳು ಎಂದು ಅನಿಸತೊಡಗಿದವು.
ಯಾವುದೇ
ಮುಖವಾಡವಿಲ್ಲದೆ ಬದುಕುತ್ತಾ, ತಣ್ಣಗೆ ಒಳಗೊಳಗೆ ಉರಿಯುವ
ಸಂತನ ಹಾಗೆ ಕಾಣುವ ಮಹಾದೇವು
ಅವರ ವ್ಯಕ್ತಿತ್ವಕ್ಕೆ ಈ ಒಂದು ಪ್ರಸಂಗದ
ಉದಾಹರಣೆ ಸಾಕು ನಾನು ಭಾವಿಸಿದ್ದೇನೆ.
ಸುಮಾರು 26 ಅಥವಾ 27 ವರ್ಷಗಳ ಹಿಂದೆ
ತಮ್ಮ ಉದ್ಯೋಗಕ್ಕೆ ರಾಜಿನಾಮೆ ನೀಡಿದ ಮಹಾದೇವು, ಆ
ಕಾಲದಲ್ಲಿ ಮೈಸೂರಿನ ಹೊರವಲಯವಾಗಿದ್ದ ಆಲನಹಳ್ಳಿಯಲ್ಲಿ
ಒಂದಿಷ್ಟು ಜಮೀನು ಖರೀದಿಸಿ ತೋಟ
ಮಾಡಿದರು. ಪ್ರತಿ ದಿನ ತಮ್ಮ
ಲೂನಾದಲ್ಲಿ ತೋಟಕ್ಕೆ ಹೋಗಿ ಆಗ
ತಾನೆ ನೆಟ್ಟಿದ್ದ ತೆಂಗಿನ ಸಸಿಗಳ ನೆರಳಲ್ಲಿ
ಕುಳಿತು ಸಂಜೆ ಮನೆಗೆ ಬರುತ್ತಿದ್ದರು.
ಅವರನ್ನು ಬೇಟಿ ಮಾಡಲು ಫೋನ್
ಮಾಡಿದಾಗ ಅವರ ಬಾಯಿಂದ ಬರುತ್ತಿದ್ದ ಮಾತುಗಳಿವು.
“ ಜಗದೀಶ್ ನಾನು ಭೂಮಿ ಹತ್ತಿರ
ಹೋಗ್ತಾ ಇದ್ದೀನಿ, ಇಲ್ಲವೆ, ನಾನು ಭೂಮಿಯಲ್ಲಿ
ಇದ್ದೀನಿ ಬಾ’ ಎನ್ನುತ್ತಿದ್ದರು. ಒಮ್ಮೆಯೂ
ಅವರ ಬಾಯಿಂದ ತೋಟ ಎಂಬ
ಶಬ್ಧವನ್ನು ನಾನು ಕೇಳಲಿಲ್ಲ. ಒಬ್ಬ
ಅಪ್ಪಟ ಬೇಸಾಯಗಾರನ ಮಗನಾಗಿ ಹುಟ್ಟಿದ ನಾನು,
ಭೂಮಿಯನ್ನು ಹೊಲ, ಗದ್ದೆ, ತೋಟ
ಎಂದು ವಿಂಗಡಿಸಿ ನೋಡುವ ಕ್ರಮಕ್ಕೂ, ಭೂಮಿ
ಕುರಿತಂತೆ ಮಹಾದೇವು ಅವರ ಆಲೋಚನಾ
ಕ್ರಮಕ್ಕೂ ಎಷ್ಟೊಂದು ಅಂತರ? ಅವರ
ಇಂತಹ ಮಾತೃಹೃದಯದ
ಗುಣದಿಂದಾಗಿ ಅವರನ್ನು
ಪ್ರೀತಿಸುವಂತೆ, ಗೌರವಿಸುವಂತೆ
ಮಾಡಿದೆ.
ಪಿ.ಲಂಕೇಶ್, ತೇಜಸ್ವಿ, ರಾಮದಾಸ್,
ಪ್ರೊ.ನಂಜುಂಡಸ್ವಾಮಿ ಮುಂತಾದವರ ಪ್ರಭಾವ ಮತ್ತು ಚಿಂತನೆಯ
ಮೂಸೆಯಲ್ಲಿ ಬೆಳೆದ ನನ್ನ ತಲೆಮಾರಿಗೆ
ಅವರೆನ್ನೆಲ್ಲಾ ಕಳೆದುಕೊಂಡ ನಂತರ ಆಸರೆಗಾಗಿ, ಮಹಾದೇವು,
ಜಿ.ಹೆಚ್, ನಾಯಕರಂತಹವರನ್ನು ಅಪ್ಪಿಕೊಳ್ಳುವಂತೆ
ಮಾಡಿತು. ಅಕ್ಷರದ ಹೆಸರಿನಲ್ಲಿ ಈ
ತಲೆಮಾರಿನ ಎದೆಗೆ ವಿಷಬೀಜಗಳನ್ನು ಬಿತ್ತಲು
ಹೊರಟಿರುವ ಅನೇಕ ಮಹಾನುಭಾವರ ನಡುವೆ,
ಮಹಾದೇವುರವರ “ಎದೆಗೆ ಬಿದ್ದ ಅಕ್ಷರ”
ಕೃತಿ, ದಿಕ್ಕೆಟ್ಟ ಯುವಜನತೆಯ ಪಾಲಿಗೆÉ ದಾರಿ ದೀಪದಂತಿದೆ.
ಈ ಕೃತಿಯ ಏಳನೆಯ
ಪುಟದಲ್ಲಿ ಅವರು ದಾಖಲಿಸಿರುವ “ದಿನ
ಸೆವೆಯುತ್ತಿದೆ. ದಿನ ಮುಗಿಯುವ ಕೊನೆಯಲ್ಲಿ
ಎಲ್ಲವೂ ಮುಗಿದ ಮೇಲೆ ಭಾವನೆ
ಮೀರಿದ ಇಥಿಯೋಪಿಯಾದ ಮಕ್ಖಳು ಬರುತ್ತವೆ. ಕ್ಷಾಮದ
ಬಿಳಿ ಹಲ್ಲುಗಳು ಅವುಗಳನ್ನು ತಿನ್ನುತ್ತವೆ. ಅವುಗಳು ನನ್ನನ್ನು ತಿನ್ನುತ್ತವೆ.”
ಎಂಬ ಮಾತುಗಳು ಒಬ್ಬ ಅಪ್ಪಟ
ಮನುಷ್ಯ ಮಾತ್ರ ಯೋಚಿಸಬಲ್ಲ ಸಂಗತಿಗಳು
ಎಂದು ನನಗನಿಸಿಬಿಟ್ಟಿವೆ.
ತಮ್ಮ
ಸುಧೀರ್ಘ ನಾಲ್ಕು ದಶಕಗಳ ಬರೆವಣಿಗೆ
ಮತ್ತು ಸಾರ್ವಜನಿಕ ಬದುಕನ್ನು ಕುರಿತಂತೆ ತಮ್ಮ ಅನಿಸಿಕೆಗಳನ್ನು ದಾಖಲಿಸಿರುವ
ಮಹಾದೇವು ಅವರ ಚಂತನೆಗಳು ಇವೊತ್ತಿಗೂ
ಪ್ರಸ್ತುತ ಎನಿಸುತ್ತವೆ. ಪೇಜಾವರ ಮಠಾಧೀಶರೆಂಬ ಎಂಬ
ಆರೋಪ ಹೊತ್ತು, ಮಾನಸಿಕ ಅಸ್ವಸ್ಥರಂತೆ
ವರ್ತಿಸುತ್ತಿರುವ ಹಿರಿಯ
ಮಠಾಧೀಶರೊಬ್ಬರು ಇತ್ತೀಚೆಗೆ “ ಕುರುಬರಿಗೆ ವೈಷ್ಣವ ದೀಕ್ಷೆ ನೀಡಲು
ನಾನು ಸಿದ್ಧ” ಎಂಬ ಹೇಳಿಕೆ
ನೀಡಿ ವಿವಾದ ಸೃಷ್ಟಿ ಮಾಡಿದ್ದಾರೆ.
ಅವರ ಭೌದ್ಧಿಕ ಮಿತಿಯನ್ನು ಈ
ಮೊದಲೇ ಅರಿತಂತೆ ಮಾತನಾಡಿರುವ ದೇವನೂರು
ಮಹಾದೇವು, ತಮ್ಮ ಕೃತಿಯ ಪುಟ
ಸಂಖ್ಯೆ 113 ರಲ್ಲಿ “ ಬೇಕಾದದು- ವೈಷ್ಣವ
ದೀಕ್ಷೆಯಲ್ಲ; ತ್ರಿಜ ದೀಕ್ಷೆ” ಎಂಬ
ಲೇಖನ ಬರೆದಿದ್ದಾರೆ.
ಇಡೀ
ಕೃತಿಯಲ್ಲಿ ಕಾಣಬರುವ ಮಹಾದೇವು ಅವರ
ಚಿಂತನೆಗಳನ್ನು ಗಮನಿಸುವಾಗ, ಈ ನೆಲದ ಸಂಸ್ಕತಿಯ
ಬಗ್ಗೆ, ಬಾಯಿಲ್ಲದ ದೀನ ದಲಿತರ ಬಗ್ಗೆ
ಮತ್ತು ತಾಂಡವವಾಡುತ್ತಿರವ
ಮೌಡ್ಯದ ಬಗ್ಗೆ ಹಾಗೂ ನಮ್ಮ
ದೈನಂದಿನ ಬದುಕಿನ ಒಂದು ಭಾಗವೇ
ಆಗಿ ಹೋಗಿರುವ ಭ್ರಷ್ಟಾಚಾರದ ಕುರಿತ
ಅವರ ಸಿಟ್ಟು ಮತ್ತು ಕಾಳಜಿಗಳನ್ನು
ನೋಡುತ್ತಿದ್ದರೆ, ಅವರದೇ ಒಡಲಾಳ ಕೃತಿಯ
ಸಾಕವ್ವ ನೆನಪಿಗೆ ಬರುತ್ತಾಳೆ. ತನ್ನ
ವೃದ್ಧಾಪ್ಯ ಮತ್ತು ಅಸಹಾಯಕತೆಗಳ ನಡುವೆ
ತನ್ನ ಕುಟುಂಬದ ಮಕ್ಕಳನ್ನು, ಮೊಮ್ಮಕ್ಕಳನ್ನು
ಪೊರೆಯುವ ಸಾಕಮ್ಮನಂತೆ ಮಹಾದೇವು ನನಗೆ ಕಾಣುತ್ತಾರೆ.
ನಾವು
ಬದುಕುತ್ತಿರುವ ಈ ವರ್ತಮಾನದ ಬದುಕಿನಲ್ಲಿ
ಯಾವುದು ಕನಿಷ್ಟ? ಯಾವುದು ಗರಿಷ್ಟ?
ಎಂಬ ತಾರತಮ್ಯವಾಗಲಿ, ಯಾವುದು ನೈತಿಕತೆ? ಯಾವುದು
ಅನೈತಿಕತೆ ಎಂಬುದರ ಬಗೆಗಿನ ಗಡಿ
ರೇಖೆಗಳಾಗಲಿ ಎಲ್ಲವೂ ಅಳಿಸಿ ಹೋಗಿರುವಾಗ,
ಮಹಾದೇವು ಅವರ ಈ ಚಿಂತನೆಗಳು
ದಿಕ್ಕೆಟ್ಟ ಮನುಷ್ಯನ ಎದೆಗೆ ಒಂದಿಷ್ಟು
ತಂಪನ್ನು ಮತ್ತು ಸ್ಪಷ್ಟತೆಯನ್ನು
ತರಬಲ್ಲವು ಎಂದು ನಾನು ನಂಬಿದ್ದೇನೆ.
ಒಬ್ಬ ಅಪ್ಪಟ ಅಂಬೇಡ್ಕರ್ವಾದಿಯಾಗಬೇಕಾದರೆ,
ಗಾಂಧಿಯನ್ನು ನಖಶಿಖಾಂತ ದ್ವೇಷಿಸಬೇಕು, ಒಬ್ಬ ಹಿಂದೂ ರಾಷ್ಟ್ರವಾದಿಯಾಗಬೇಕಾದರೆ,
ಮುಸ್ಲಿಂ ಮತ್ತು ಕ್ರೈಸ್ತ ಜನಾಂಗದ
ಅಲ್ಪ ಸಂಖ್ಯಾತರನ್ನು ದ್ವೇಷಿಸಬೇಕು ಎಂಬ ಅಪಕ್ವ ಚಂತನೆಗಳು
ಚಾಲ್ತಿಯಲ್ಲಿರುವ ಈ ಸಂದರ್ಭದಲ್ಲಿ ಮಹಾದೇವು
ದಾಖಲಿಸಿರುವ “ ಗಾಂಧಿ- ಕಾಠಿಣ್ಯದ ತಂದೆಯಂತೆ,
ಜೆ.ಪಿ.-ಅಸಹಾಯಕ ತಾಯಿಯಂತೆ,
ವಿನೋಭಾ- ಮದುವೆಯಾದ ವ್ರತನಿಷ್ಠ ಅಕ್ಕನಂತೆ, ಲೋಹಿಯಾ- ಊರೂರು ಅಲೆಯುವ
ಮನೆ ಸೇರದ ಅಲೆಮಾರಿ ಮಗ,
ಅಂಬೇಡ್ಕರ್ ತಾರತಮ್ಯಕ್ಕೆ ಒಳಗಾಗಿ ಮನೆ ಹೊರಗೆ
ಇರುವ ಮಗ. ಇದು ನಮ್ಮ
ಕುಟುಂಬ. ನಾವು ಇಲ್ಲಿನ ಸಂತಾನ
. ಇದನ್ನು ಹೀಗಲ್ಲದೆ ಹೇಗೆ ನೋಡಬೇಕು?” ಈ
ಮಾತುಗಳನ್ನು ಗಮನಿಸುವಾಗ ಮಹಾದೇವ ಮಾತ್ರ ಆಡಬಹುದಾದ
ಮಾತುಗಳು ಮತ್ತು ಬರೆಯಬಹುದಾದ ಅಕ್ಷರಗಳು
ಎನಿಸಿಬಿಟ್ಟಿದೆ. ಜೊತೆಗೆ ಇವುಗಳನ್ನು ಅಳಿಸಿ
ಹೋಗದ ಹಾಗೆ ಪ್ರತಿಯೊಬ್ಬ ವ್ಯಕ್ತಿಯೂ
ತನ್ನ ಎದೆಯ ಮೇಲೆ ಶಿಲಾ
ಶಾಸನದಂತೆ ತಾನೆ ಸ್ವತಃ
ಕೆತ್ತಿಕೊಳ್ಳಬೇಕಿದೆ. ಇದನ್ನು ನೀವು ಮಹಾದೇವು
ಅವರ ತಾಕತ್ತು, ಅಂತಃಶಕ್ತಿ, ಅಥವಾ
ಮಾನವೀಯ ಗುಣ, ಇಲ್ಲವೇ ಸಮಷ್ಟಿ
ಪ್ರಜ್ಙೆ ಎಂದೆಲ್ಲಾ ಕರೆಯಬಹುದು.
(ಎದೆಗೆ
ಬಿದ್ದ ಅಕ್ಷರ ಕೃತಿಯು ಹತ್ತನೆಯ
ಮುದ್ರಣ ಕಾಣುತ್ತಿರುವ ಸಂದರ್ಭದಲ್ಲಿ ಮಿತ್ರರಾದ ಚಂದ್ರಶೇಖರ ಐಜೂರು ಮತ್ತು
ಅಭಿನವ ರವಿ ಇವರಿಗೆ ನೀಡಿದ ಪ್ರತಿಕ್ರಿಯೆ)
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)