ಶುಕ್ರವಾರ, ನವೆಂಬರ್ 22, 2013

ತಲ್ಲಣಿಸಿ ಹೋದ ಜೀವವೊಂದರ ಮಾತುಗಳು.


ಕಳೆದ ಮೂರು ದಶಕಗಳಿಂದ ನನ್ನ ಪಾಲಿನ ಹಿರಿಯಣ್ಣನಂತಿರುವ ಮಹಾದೇವು ಜೊತೆ ಒಡನಾಡಿದ ನನಗೆ ಅವರಲ್ಲಿ ಕಂಡ ಅತ್ಯಂತ ಮಹತ್ವದ ಗುಣವೆಂದರೆ, ಬರೆದಂತೆ ಬದುಕುವುದು, ಮತ್ತು ಬದುಕಿದಂತೆ ಬರೆಯುವ ಗುಣ. ಅವರಎದೆಗೆ ಬಿದ್ದ ಅಕ್ಷರಕೃತಿಯ ಬಹುತೇಕ ಬರಹಗಳನ್ನು ಮತ್ತು ಅವರ ಮಾತುಗಳನ್ನು ಈಗಾಗಲೇ ಓದಿ, ಕೇಳಿಸಿಕೊಂಡಿದ್ದ ನನಗೆ, ಅವುಗಳನ್ನು ಮತ್ತೆ ಪುಸ್ತಕ ರೂಪದಲ್ಲಿ ಓದುವಾಗ, ಪದೇ ಪದೇ  ಕಣ್ಣಾಲಿಗಳು ತುಂಬಿ ಬಂದವು. ಇವು ಮಹಾದೇವು ಮಾತ್ರ ಬರೆಯಬಹುದಾದ ಅಕ್ಷರಗಳು ಮತ್ತು ಆಡಬಹುದಾದ ಮಾತುಗಳು ಎಂದು ಅನಿಸತೊಡಗಿದವು.
ಯಾವುದೇ ಮುಖವಾಡವಿಲ್ಲದೆ ಬದುಕುತ್ತಾ, ತಣ್ಣಗೆ ಒಳಗೊಳಗೆ ಉರಿಯುವ ಸಂತನ ಹಾಗೆ ಕಾಣುವ ಮಹಾದೇವು ಅವರ ವ್ಯಕ್ತಿತ್ವಕ್ಕೆ ಒಂದು ಪ್ರಸಂಗದ ಉದಾಹರಣೆ ಸಾಕು ನಾನು ಭಾವಿಸಿದ್ದೇನೆ. ಸುಮಾರು 26 ಅಥವಾ 27 ವರ್ಷಗಳ ಹಿಂದೆ ತಮ್ಮ ಉದ್ಯೋಗಕ್ಕೆ ರಾಜಿನಾಮೆ ನೀಡಿದ ಮಹಾದೇವು, ಕಾಲದಲ್ಲಿ ಮೈಸೂರಿನ ಹೊರವಲಯವಾಗಿದ್ದ ಆಲನಹಳ್ಳಿಯಲ್ಲಿ ಒಂದಿಷ್ಟು ಜಮೀನು ಖರೀದಿಸಿ ತೋಟ ಮಾಡಿದರು. ಪ್ರತಿ ದಿನ ತಮ್ಮ ಲೂನಾದಲ್ಲಿ ತೋಟಕ್ಕೆ ಹೋಗಿ ಆಗ ತಾನೆ ನೆಟ್ಟಿದ್ದ ತೆಂಗಿನ ಸಸಿಗಳ ನೆರಳಲ್ಲಿ ಕುಳಿತು ಸಂಜೆ ಮನೆಗೆ ಬರುತ್ತಿದ್ದರು. ಅವರನ್ನು ಬೇಟಿ ಮಾಡಲು ಫೋನ್ ಮಾಡಿದಾಗ ಅವರ ಬಾಯಿಂದ ಬರುತ್ತಿದ್ದ ಮಾತುಗಳಿವು. “ ಜಗದೀಶ್ ನಾನು ಭೂಮಿ ಹತ್ತಿರ ಹೋಗ್ತಾ ಇದ್ದೀನಿ, ಇಲ್ಲವೆ, ನಾನು ಭೂಮಿಯಲ್ಲಿ ಇದ್ದೀನಿ ಬಾಎನ್ನುತ್ತಿದ್ದರು. ಒಮ್ಮೆಯೂ ಅವರ ಬಾಯಿಂದ ತೋಟ ಎಂಬ ಶಬ್ಧವನ್ನು ನಾನು ಕೇಳಲಿಲ್ಲ. ಒಬ್ಬ ಅಪ್ಪಟ ಬೇಸಾಯಗಾರನ ಮಗನಾಗಿ ಹುಟ್ಟಿದ ನಾನು, ಭೂಮಿಯನ್ನು ಹೊಲ, ಗದ್ದೆ, ತೋಟ ಎಂದು ವಿಂಗಡಿಸಿ ನೋಡುವ ಕ್ರಮಕ್ಕೂ, ಭೂಮಿ ಕುರಿತಂತೆ ಮಹಾದೇವು ಅವರ ಆಲೋಚನಾ ಕ್ರಮಕ್ಕೂ ಎಷ್ಟೊಂದು ಅಂತರ?  ಅವರ ಇಂತಹ  ಮಾತೃಹೃದಯದ ಗುಣದಿಂದಾಗಿ  ಅವರನ್ನು ಪ್ರೀತಿಸುವಂತೆ,  ಗೌರವಿಸುವಂತೆ ಮಾಡಿದೆ.

ಪಿ.ಲಂಕೇಶ್, ತೇಜಸ್ವಿ, ರಾಮದಾಸ್, ಪ್ರೊ.ನಂಜುಂಡಸ್ವಾಮಿ ಮುಂತಾದವರ ಪ್ರಭಾವ ಮತ್ತು ಚಿಂತನೆಯ ಮೂಸೆಯಲ್ಲಿ ಬೆಳೆದ ನನ್ನ ತಲೆಮಾರಿಗೆ ಅವರೆನ್ನೆಲ್ಲಾ ಕಳೆದುಕೊಂಡ ನಂತರ ಆಸರೆಗಾಗಿ, ಮಹಾದೇವು, ಜಿ.ಹೆಚ್, ನಾಯಕರಂತಹವರನ್ನು ಅಪ್ಪಿಕೊಳ್ಳುವಂತೆ ಮಾಡಿತು. ಅಕ್ಷರದ ಹೆಸರಿನಲ್ಲಿ ತಲೆಮಾರಿನ ಎದೆಗೆ ವಿಷಬೀಜಗಳನ್ನು ಬಿತ್ತಲು ಹೊರಟಿರುವ ಅನೇಕ ಮಹಾನುಭಾವರ ನಡುವೆ, ಮಹಾದೇವುರವರಎದೆಗೆ ಬಿದ್ದ ಅಕ್ಷರಕೃತಿ, ದಿಕ್ಕೆಟ್ಟ ಯುವಜನತೆಯ ಪಾಲಿಗೆÉ ದಾರಿ ದೀಪದಂತಿದೆ. ಕೃತಿಯ ಏಳನೆಯ ಪುಟದಲ್ಲಿ ಅವರು ದಾಖಲಿಸಿರುವದಿನ ಸೆವೆಯುತ್ತಿದೆ. ದಿನ ಮುಗಿಯುವ ಕೊನೆಯಲ್ಲಿ ಎಲ್ಲವೂ ಮುಗಿದ ಮೇಲೆ ಭಾವನೆ ಮೀರಿದ ಇಥಿಯೋಪಿಯಾದ ಮಕ್ಖಳು ಬರುತ್ತವೆ. ಕ್ಷಾಮದ ಬಿಳಿ ಹಲ್ಲುಗಳು ಅವುಗಳನ್ನು ತಿನ್ನುತ್ತವೆ. ಅವುಗಳು ನನ್ನನ್ನು ತಿನ್ನುತ್ತವೆ.” ಎಂಬ ಮಾತುಗಳು ಒಬ್ಬ ಅಪ್ಪಟ ಮನುಷ್ಯ ಮಾತ್ರ ಯೋಚಿಸಬಲ್ಲ ಸಂಗತಿಗಳು ಎಂದು ನನಗನಿಸಿಬಿಟ್ಟಿವೆ.
ತಮ್ಮ ಸುಧೀರ್ಘ ನಾಲ್ಕು ದಶಕಗಳ ಬರೆವಣಿಗೆ ಮತ್ತು ಸಾರ್ವಜನಿಕ ಬದುಕನ್ನು ಕುರಿತಂತೆ ತಮ್ಮ ಅನಿಸಿಕೆಗಳನ್ನು ದಾಖಲಿಸಿರುವ ಮಹಾದೇವು ಅವರ ಚಂತನೆಗಳು ಇವೊತ್ತಿಗೂ ಪ್ರಸ್ತುತ ಎನಿಸುತ್ತವೆ. ಪೇಜಾವರ ಮಠಾಧೀಶರೆಂಬ ಎಂಬ ಆರೋಪ ಹೊತ್ತು, ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿರುವ  ಹಿರಿಯ ಮಠಾಧೀಶರೊಬ್ಬರು ಇತ್ತೀಚೆಗೆಕುರುಬರಿಗೆ ವೈಷ್ಣವ ದೀಕ್ಷೆ ನೀಡಲು ನಾನು ಸಿದ್ಧಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿ ಮಾಡಿದ್ದಾರೆ. ಅವರ ಭೌದ್ಧಿಕ ಮಿತಿಯನ್ನು ಮೊದಲೇ ಅರಿತಂತೆ ಮಾತನಾಡಿರುವ ದೇವನೂರು ಮಹಾದೇವು, ತಮ್ಮ ಕೃತಿಯ ಪುಟ ಸಂಖ್ಯೆ 113 ರಲ್ಲಿಬೇಕಾದದು- ವೈಷ್ಣವ ದೀಕ್ಷೆಯಲ್ಲ; ತ್ರಿಜ ದೀಕ್ಷೆಎಂಬ ಲೇಖನ ಬರೆದಿದ್ದಾರೆ.
ಇಡೀ ಕೃತಿಯಲ್ಲಿ ಕಾಣಬರುವ ಮಹಾದೇವು ಅವರ ಚಿಂತನೆಗಳನ್ನು ಗಮನಿಸುವಾಗ, ನೆಲದ ಸಂಸ್ಕತಿಯ ಬಗ್ಗೆ, ಬಾಯಿಲ್ಲದ ದೀನ ದಲಿತರ ಬಗ್ಗೆ ಮತ್ತು  ತಾಂಡವವಾಡುತ್ತಿರವ ಮೌಡ್ಯದ ಬಗ್ಗೆ ಹಾಗೂ ನಮ್ಮ ದೈನಂದಿನ ಬದುಕಿನ ಒಂದು ಭಾಗವೇ ಆಗಿ ಹೋಗಿರುವ ಭ್ರಷ್ಟಾಚಾರದ ಕುರಿತ ಅವರ ಸಿಟ್ಟು ಮತ್ತು ಕಾಳಜಿಗಳನ್ನು ನೋಡುತ್ತಿದ್ದರೆ, ಅವರದೇ ಒಡಲಾಳ ಕೃತಿಯ ಸಾಕವ್ವ ನೆನಪಿಗೆ ಬರುತ್ತಾಳೆ. ತನ್ನ ವೃದ್ಧಾಪ್ಯ ಮತ್ತು ಅಸಹಾಯಕತೆಗಳ ನಡುವೆ ತನ್ನ ಕುಟುಂಬದ ಮಕ್ಕಳನ್ನು, ಮೊಮ್ಮಕ್ಕಳನ್ನು ಪೊರೆಯುವ ಸಾಕಮ್ಮನಂತೆ ಮಹಾದೇವು ನನಗೆ ಕಾಣುತ್ತಾರೆ.

ನಾವು ಬದುಕುತ್ತಿರುವ ವರ್ತಮಾನದ ಬದುಕಿನಲ್ಲಿ ಯಾವುದು ಕನಿಷ್ಟ? ಯಾವುದು ಗರಿಷ್ಟ? ಎಂಬ ತಾರತಮ್ಯವಾಗಲಿ, ಯಾವುದು ನೈತಿಕತೆ? ಯಾವುದು ಅನೈತಿಕತೆ ಎಂಬುದರ ಬಗೆಗಿನ ಗಡಿ ರೇಖೆಗಳಾಗಲಿ ಎಲ್ಲವೂ ಅಳಿಸಿ ಹೋಗಿರುವಾಗ, ಮಹಾದೇವು ಅವರ ಚಿಂತನೆಗಳು ದಿಕ್ಕೆಟ್ಟ ಮನುಷ್ಯನ ಎದೆಗೆ ಒಂದಿಷ್ಟು ತಂಪನ್ನು ಮತ್ತು ಸ್ಪಷ್ಟತೆಯನ್ನು  ತರಬಲ್ಲವು ಎಂದು ನಾನು ನಂಬಿದ್ದೇನೆ. ಒಬ್ಬ ಅಪ್ಪಟ ಅಂಬೇಡ್ಕರ್ವಾದಿಯಾಗಬೇಕಾದರೆ, ಗಾಂಧಿಯನ್ನು ನಖಶಿಖಾಂತ ದ್ವೇಷಿಸಬೇಕು, ಒಬ್ಬ ಹಿಂದೂ ರಾಷ್ಟ್ರವಾದಿಯಾಗಬೇಕಾದರೆ, ಮುಸ್ಲಿಂ ಮತ್ತು ಕ್ರೈಸ್ತ ಜನಾಂಗದ ಅಲ್ಪ ಸಂಖ್ಯಾತರನ್ನು ದ್ವೇಷಿಸಬೇಕು ಎಂಬ ಅಪಕ್ವ ಚಂತನೆಗಳು ಚಾಲ್ತಿಯಲ್ಲಿರುವ ಸಂದರ್ಭದಲ್ಲಿ ಮಹಾದೇವು ದಾಖಲಿಸಿರುವಗಾಂಧಿ- ಕಾಠಿಣ್ಯದ ತಂದೆಯಂತೆ, ಜೆ.ಪಿ.-ಅಸಹಾಯಕ ತಾಯಿಯಂತೆ, ವಿನೋಭಾ- ಮದುವೆಯಾದ ವ್ರತನಿಷ್ಠ ಅಕ್ಕನಂತೆ, ಲೋಹಿಯಾ- ಊರೂರು ಅಲೆಯುವ ಮನೆ ಸೇರದ ಅಲೆಮಾರಿ ಮಗ, ಅಂಬೇಡ್ಕರ್ ತಾರತಮ್ಯಕ್ಕೆ ಒಳಗಾಗಿ ಮನೆ ಹೊರಗೆ ಇರುವ ಮಗ. ಇದು ನಮ್ಮ ಕುಟುಂಬ. ನಾವು ಇಲ್ಲಿನ ಸಂತಾನ . ಇದನ್ನು ಹೀಗಲ್ಲದೆ ಹೇಗೆ ನೋಡಬೇಕು?” ಮಾತುಗಳನ್ನು ಗಮನಿಸುವಾಗ ಮಹಾದೇವ ಮಾತ್ರ ಆಡಬಹುದಾದ ಮಾತುಗಳು ಮತ್ತು ಬರೆಯಬಹುದಾದ ಅಕ್ಷರಗಳು ಎನಿಸಿಬಿಟ್ಟಿದೆ. ಜೊತೆಗೆ ಇವುಗಳನ್ನು ಅಳಿಸಿ ಹೋಗದ ಹಾಗೆ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಎದೆಯ ಮೇಲೆ ಶಿಲಾ ಶಾಸನದತೆ ತಾನೆ ಸ್ವತಃ ಕೆತ್ತಿಕೊಳ್ಳಬೇಕಿದೆ. ಇದನ್ನು ನೀವು ಮಹಾದೇವು ಅವರ ತಾಕತ್ತು, ಅಂತಃಶಕ್ತಿ,  ಅಥವಾ ಮಾನವೀಯ ಗುಣ, ಇಲ್ಲವೇ ಸಮಷ್ಟಿ ಪ್ರಜ್ಙೆ ಎಂದೆಲ್ಲಾ ಕರೆಯಬಹುದು.

(ಎದೆಗೆ ಬಿದ್ದ ಅಕ್ಷರ ಕೃತಿಯು ಹತ್ತನೆಯ ಮುದ್ರಣ ಕಾಣುತ್ತಿರುವ ಸಂದರ್ಭದಲ್ಲಿ ಮಿತ್ರರಾದ ಚಂದ್ರಶೇಖರ ಐಜೂರು   ಮತ್ತು ಅಭಿನವ ರವಿ ಇವರಿಗೆ  ನೀಡಿದ ಪ್ರತಿಕ್ರಿಯೆ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ