ಶುಕ್ರವಾರ, ಜುಲೈ 14, 2017

ಆಫ್ರಿಕಾದಲ್ಲಿ ದೇಶಿ ಬಿತ್ತನೆ ಬೀಜ ಕ್ರಾಂತಿಗೆ ನಾಂದಿ ಹಾಡಿದ ಆಂಧ್ರ ರೈತರು


ಬಹುರಾಷ್ಟ್ರೀಯ ದೈತ್ಯ ಕಂಪನಿಯಾದ ಮಾನ್ಸಂಟೊ ಸಂಸ್ಥೆಯ ಕುಲಾಂತರಿ ತಳಿಗಳಿಗೆ ಜಾಗತಿಕ ಮಟ್ಟದಲ್ಲಿ ಹಂತ ಹಂತವಾಗಿ ವಿರೋಧ ವ್ಯಕ್ತವಾಗುತ್ತಿದೆ. ಪಶ್ಚಿಮ ಆಫ್ರಿಕಾ ಖಂಡದ ಪುಟ್ಟ ರಾಷ್ಟ್ರವಾದ ಬರ್ಕಿನ ಪಾಸೊ ) (ಃuಡಿಞiಟಿಚಿ Pಚಿsoಎಂಬ ಪುಟ್ಟ ರಾಷ್ಟ್ರದಲ್ಲಿ ರೈತರು ಬಿ.ಟಿ. ಹತ್ತಿಗೆ ವಿದಾಯ ಹೇಳುತ್ತಿದ್ದಾರೆ. ನೆರೆಯ ರಾಷ್ಟ್ರವಾದ ಘಾನದಲ್ಲಿ ಕುಲಾಂತರಿ ತಳಿಗಳ ಹತ್ತಿ, ಟಮೋಟೊ, ಮುಸುಕಿನ ಜೋಳ ಇತ್ಯಾದಿ ಬೆಳೆಗಳಿಗೆ ಪ್ರಾಯೋಗಿಕ ಪರೀಕ್ಷೆಗಳಿಗೆ ನೀಡಲಾಗಿದ್ದ ಅನುಮತಿಯನ್ನು ಅಲ್ಲಿನ ಸರ್ಕಾರ ಹಿಂತೆಗೆದುಕೊಂಡಿದೆ.
ಬಡರಾಷ್ರಗಳು ಮತ್ತು ಅಭಿವೃದ್ಧಿ ಶೀಲ ರಾಷ್ರಗಳ ರೈತರ ಅನಕ್ಷರತೆ ಮತ್ತು ಅಜ್ಞಾನವನ್ನು ಬಂಡವಾಳ ಮಾಡಿಕೊಂಡಿರುವ ಹಾಗೂ ಆರ್ಥಿಕ ಸಾಮಾಥ್ರ್ಯದಲ್ಲಿ ಇಡೀ ರಾಷ್ರಗಳನ್ನು ಕೊಂಡುಕೊಳ್ಳುವಷ್ಟು ಸಂಪತ್ತನ್ನು ಶೇಖರಿಸಿರುವ ಮಾನ್ಸಂಟೊ, ಬೇಯರ್, ಡುಪಾಂಟ್ ಕಂಪನಿಗಳು, ಕುಲಾಂತರಿ ಬಿತ್ತನೆ ಬೀಜಗಳು, ಈ ಬೆಳೆಗಳಿಗೆ ಬೇಕಾದ ರಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ ದುಬಾರಿ ಔಷಧಗಳ ವ್ಯೂಹ ರಚಿಸಿಕೊಂಡು, ಏಷ್ಯಾ ಮತ್ತು ಆಫ್ರಿಕಾ ಖಂಡದ ರಾಷ್ರಗಳ ಮುಗ್ಧ ರೈತರನ್ನು ತಾವು ಹೆಣೆದಿರುವ ಬಲೆಗೆ ಬೇಟೆಯ ಮಿಕಗಳಂತೆ ಕೆಡುವುತ್ತಿವೆ.
ಕಳೆದ ಒಂದೂವರೆ ದಶಕದಿಂದ ಭಾರತವು ಸೇರಿದಂತೆ ಹಲವು ರಾಷ್ರಗಳಲ್ಲಿ ವಿಶೇಷವಾಗಿ ಈಜಿಪ್ತ್, ಬಾಂಗ್ಲಾ, ಪಾಕಿಸ್ತಾನ, ಚೀನಾದ ಮುಂಗೋಲಿಯಾ ಪ್ರಾಂತ್ಯ ಈ ಪ್ರದೇಶಗಳ ರೈತರು ಬಿ.ಟಿ.ಹತ್ತಿಯನ್ನು ಬೆಳೆದು ಕೈ ಸುಟ್ಟುಕೊಂಡಿದ್ದಾರೆ. ಭಾರತದಲ್ಲಿ ಮಹಾರಾಷ್ಟ್ರದ ವಿದರ್ಭ ಮತ್ತು ಆಂಧ್ರದ ತೆಲಂಗಾಣದ ಪ್ರಾಂತ್ಯಗಳಲ್ಲಿ ಹತ್ತಿ ಬೆಳೆ ಪ್ರಯೋಗದಲ್ಲಿ ರೈತರು ವಿಫಲರಾಗಿ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶ ಈ ಮೂರು ರಾಜ್ಯಗಳಲ್ಲಿ ಕಲೆದ ಒಂದೂವರೆ ದಶಕದಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆಯು ಇಪ್ಪತ್ತು ನಾಲ್ಕು ಸಾವಿರವನ್ನು ದಾಟಿದೆ.
ಇಂತಹ ದಯನೀಯವಾದ ಸ್ಥಿತಿಯಲ್ಲಿ  ಭಾರತದ ಕೇಂದ್ರ ಸರ್ಕಾರಕ್ಕೆ ಇನ್ನೂ ಬುದ್ದಿ ಬಂದಂತೆ ಕಾಣುವುಲ್ಲ. ಇಲ್ಲಿಯವರೆಗೆ ಬಿ.ಟಿ.ಹತ್ತಿಂiÀi ಪ್ರಯೋಗವಾಯಿತು, ಬಿ.ಟಿ.ಬದನೆಯ ಪ್ರಯೋಗವಾಯಿತು. ಇದೀಗ ಬಿ.ಟಿ. ಸಾಸಿವೆಗೆ ಮಾನ್ಸಂಟೊ ಕಂಪನಿಗೆ ಅನುಮತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಭಾರತದಲ್ಲಿ ಸಾಸಿವೆ ಎಣ್ಣೆಯ ಉತ್ಪಾದನೆ ಮತ್ತು ಬೇಡಿಕೆ ನಡುವೆ ಅಜಗಜಾಂತರ ವೆತ್ಯಾಸವಿದೆ. ಗುಜರಾತ್, ರಾಜಸ್ತಾನ್ ಹೀಗೆ ಒಂದೆರೆಡು ರಾಜ್ಯಗಳನ್ನು ಹೊರತು ಪಡಿಸಿದರೆ, ಉಳಿದೆಡೆ ಸಾಸಿವೆ ಎಣ್ಣೆಯ ಬಳಕೆ ತೀರಾ ಕಡಿಮೆಯಿದೆ. ಆದರೂ ಸಹ ರಾಜಕೀಯ ಪಕ್ಷಗಳಿಗೆ ನೂರಾರು ಕೋಟಿ ರೂಪಾಯಿ ಹಣ ಬಹುರಾಷ್ಟ್ರೀಯ ಕಂಪನಿಗಳಿಂದ ದೇಣಿಗೆ ರೂಪದಲ್ಲಿ ಹರಿದು ಬರುವುದರಿಂದ ಅಧಿಕಾರಕ್ಕೆ ಬರುವ ಸರ್ಕಾರಗಳು ಬಹುರಾಷ್ಟ್ರೀಯ ಕಂಪನಿಗಳೆಗೆ ಕೆಂಪುಗಂಬಳಿ ಹಾಸುವುದನ್ನು ಹವ್ಯಾಸವನ್ನಾಗಿಸಿಕೊಂಡಿವೆ.
ಆಫ್ರಿಕಾದ ಬರ್ಕಿನ ಪಾಸೊ ಎಂಬ ಪುಟ್ಟ ರಾಷ್ಟ್ರವು ಅಲ್ಲಿನ ರೈತರ ಭವಿಷ್ಯದ ಬಗ್ಗೆ ತೆಗೆದುಕೊಂಡಿರುವ ಕಾಳಜಿ ಹಾಗೂ ಬಿ.ಟಿ.ಹತ್ತಿಯನ್ನು ನಿಷೇಧಿಸುವ ಮುನ್ನ ಅಲ್ಲಿನ ಸರ್ಕಾರ ಮತ್ತು ವಿಜ್ಞಾನಿಗಳು, ಪ್ರಗತಿಪರ ರೈತರರು, ಸ್ವಯಂ ಸೇವಾ ಸಂಘಟನೆಗಳು ನಡೆಸಿದ ವಿಸ್ತøತ ಅಧ್ಯಯನವು ಭಾರತಕ್ಕೆ ಮಾದರಿಯಾಗಿದೆ. ಬರ್ಕಿನ ಪಾಸೊ ದೇಶದಲ್ಲಿ ಹತ್ತಿ ಬೆಳೆಯು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಆ ರಾಷ್ಟ್ರದ ಒಟ್ಟು ಜಿ.ಡಿ.ಪಿ. ಬೆಳವಣಿಗೆಯಲ್ಲಿ (ಒಟ್ಟು ಆಂತರೀಕ ಉತ್ಪಾದನೆ) ಶೇಕಡ 4% ರಷ್ಟು ಪಾಲನ್ನು ಹೊಂದಿತ್ತು. ಜೊತೆಗೆ ವಿದೇಶಗಳಿಗೆ ರಫ್ತಾಗುವ ಮುಕ್ಕಾಲು ಭಾಗದ ವಸ್ತುಗಳಲ್ಲಿ ಹತ್ತಿ ಮತ್ತು ಹತ್ತಿಯಿಂದ ತಯಾರಿಸಿದ ನೂಲು, ವಸ್ತ್ರ ಇವುಗಳ ಪಾಲಿತ್ತು. ಆದರೆ, 2003 ರಲ್ಲಿ ಅಲ್ಲಿನ ದೇಶಿ ಹತ್ತಿ ಬೆಳೆಗೆ ಪರ್ಯಾಯವಾಗಿ ರೈತರಿಗೆ ಅಮೇರಿಕಾ ಮೂಲದ ಮಾನ್ಸಂಟೊ ಕಂಪನಿಯು ಹೊಸದಾಗಿ ಪರಿಚಯಿಸಿದ “ ಮಾನ್ಸಂಟೊ ಬೋಲ್ ಗಾರ್ಡ್-2” ಎಂಬ ಬಿ.ಟಿ. ಹತ್ತಿ ಬೆಳೆಯು ಅಲ್ಲಿನ ರೈತರು ಮತ್ತು ದೇಶದ ಆರ್ಥಿಕ ಚಟುವಟಿಕೆಯನ್ನು ತಲೆಕೆಳಗು ಮಾಡಿತು. ಮಾನ್ಸಂಟೊ ಕಂಪನಿಯು ಸಹ ಬರ್ಕಿನ ಪಾಸೊ ರಾಷ್ಟ್ರದಲ್ಲಿ ಬಿ.ಟಿ.ಪಾಸೊ ಎಂಬ ಸಂಸ್ಥೆಯನ್ನು ಸ್ಥಾಪಿಸಿ ರೈತರಿಗೆ ಹತ್ತಿ ಬೀಜವನ್ನು ವಿತರಣೆ ಮಾಡಿತ್ತು.
ಬಿ.ಟಿ. ಹತ್ತಿ ಬೆಳೆಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಬೆಳದರೂ ಸಹ, ಬಿ.ಟಿ. ಪಾಸು ಹತ್ತಿಯಲ್ಲಿ ನೂಲಿನ ಎಳೆ ತಯಾರು ಮಾಡಲು ಇರಬೇಕಾದ ಮೂಲ ಕಾಣೆಯಾಗಿದ್ದವು. ಈ ಕುರಿತು ಡೆನ್ಮಾರ್ಕ್‍ನ ವಿಜ್ಞಾನಿಗಳು ಆಳವಾದ ಅಧ್ಯಯನ ನಡೆಸಿದ ನಂತರ ಬಿ.ಟಿ.ಹತ್ತಿ ಬೀಜವೆಂಬ ಕುಲಾಂತರಿ ತಳಿಯ ಬೀಜವನ್ನು ಸೃಷ್ಟಿಸುವಾಗ ಮಾನ್ಸಂಟೊ ಕಂಪನಿಯು ಮಾಡಿರುವ ಎಡವಟ್ಟುಗಳು ಬೆಳಕಿಗೆ ಬಂದವು.
ಬರ್ಕಿನ ಪಾಸೊ ರಾಷ್ಟ್ರಕ್ಕೆ ಮತ್ತು ಅಲ್ಲಿನ ಭೂಮಿ ಮತ್ತು ಹವಾಗುಣಕ್ಕೆ ತಕ್ಕಂತೆ ಬಿ.ಟಿ. ಹತ್ತಿ ಬೀಜ ತಯಾರಿಸಲು ಹೊರಟ ಕಂಪನಿಯು ಅಮೇರಿಕಾದ ತನ್ನ ಪ್ರಯೋಗಾಲಯದಲ್ಲಿದ್ದ ಜೀವಕೋಶ ಮತ್ತು ಬರ್ಕಿನ ಪಾಸೊ ರಾಷ್ಟ್ರದ ಭೂಮಿಯಿಂದ ತೆಗೆಯಲಾಗಿದ್ದ ಜೀವಕೋಶಗಳನ್ನು ಸಂಕರಗೊಳಿಸಿ ಬೀಜವನ್ನು ಸೃಷ್ಟಿ ಮಾಡಲಾಗಿತ್ತು. ಆದರೆ, ಈ ಬೀಜದಿಂದ ಉತ್ಪಾದನೆಯಾದ ಹತ್ತಿಯಲ್ಲಿ ನಾರಿನ ಅಂಶ ಕಾಣೆಯಾಗಿತ್ತು. ಏಕೆಂದರೆ, ಕುಲಾಂತರಿಯ ಪ್ರಯೋಗದಲ್ಲಿ  ಸ್ಥಳೀಯ ರಾಷ್ಟ್ರದ ಜೀವಕೋಶಗಳು ತಮ್ಮ ಸತ್ವವನ್ನು ಕಳೆದುಕೊಂಡು ನಿರ್ಜೀವವಾಗಿದ್ದವು. ಇಂತಹ ಅಧ್ಯಯನ ಮತ್ತು ಹತ್ತಿ ಬೆಳೆಯ ಇಳುವರಿಯ ಕುಸಿತಕ್ಕೆ ಕಾರಣವಾದ ಅಂಶಗಳನ್ನು ನಿಖರವಾಗಿ ಗುರುತಿಸುವ ನಿಟ್ಟಿನಲ್ಲಿ ಅಲ್ಲಿನ ವಿಜ್ಞಾನಿಗಳು ನಿರತರಾಗಿದ್ದಾಗ, ನಮ್ಮ ತೆಲಂಗಾಣ ರೈತರ ಅನುಭವ ಕುರಿತು ಹೈದರಾಬಾದಿನ ಡೆಕ್ಕನ್ ಡೆವಲಪ್‍ಮೆಂಟ್ ಸೊಸೈಟಿ ಎಂಬ ಸಂಸ್ಥೆಯು 2007 ರಲ್ಲಿ ಇಂಗ್ಲೀಷ್ ಭಾಷೆಯಲ್ಲಿ ನಿರ್ಮಿಸಿದ “ ಎ ಡಿಸಸ್ಟೆರ್ ಇನ್ ಸರ್ಚ್ ಆಫ್ ಸಕ್ಸಸ್- ಬಿ.ಟಿ.ಕಾಟನ್- 3 ಇಯರ್ಸ್ ಪ್ರಾಡ್” (ಜಯ ಅರಸುವಲ್ಲಿ ಒದಗಿದ ಆಪತ್ತು- ಬಿ.ಟಿ.ಹತ್ತಿ: ಮೂರು ವರ್ಷಗಳ ವಂಚನೆ) ಎಂಬ ಸಾಕ್ಷ್ಯ ಚಿತ್ರ ಬರ್ಕಿನ ಪಾಸೊ ರಾಷ್ಟ್ರವಲ್ಲದೆ ಇಡೀ ಜಗತ್ತಿನ ಹಲವಾರು ರಾಷ್ರಗಳ ರೈತರ ಕಣ್ಣು ತೆರಸಿತು.
ಸುಮಾರು ಎರಡು ದಶಕದ ಹಿಂದೆ ನಮ್ಮ ಕನ್ನಡಿಗರಾದ ಹಾಗೂ ಪಿರಿಯಾಪಟ್ಟಣದ ಮೂಲದ ಪಿ.ವಿ.ಸತಿಶ್ ಎಂಬುವವರು ಹೈದರಾಬಾದ್, ಮೇಡಕ್, ಜಹಿರಾಬಾದ್, ಹೀಗೆ ಒಟ್ಟು ಐದಾರು ಜಿಲ್ಲೆಗಳಲ್ಲಿ ಸಣ್ಣ ಹಾಗೂ ಹಿಂದುಳಿದ ರೈತರ ಶ್ರೇಯೋಭಿವೃದ್ಧಿ ಮತ್ತು ಕಿರುಧಾನ್ಯ ಗಳ ಕೃಷಿಗೆ ಒತ್ತು ನೀಡಿ ಆರಂಭಿಸಿದ ಡೆಕ್ಕನ್ ಡೆವಲಪ್ ಮೆಂಟ್ ಸೊಸೈಟಿ” ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಕೇವಲ ರೈತರು ಮಾತ್ರವಲ್ಲದೆ, ದಲಿತ ಹಾಗೂ ಹಿಂದುಳಿದ ಮಹಿಳೆಯರ ಪಾಲಿಗೆ ಜೀವನಾಡಿಯಾಗಿದೆ. ಈ ಸಂಸ್ಥೆಯನ್ನು ಆರಂಭಿಸುವ ಮುನ್ನ ಸತೀಶ್ ರವರು ಸುಮಾರು ಇಪ್ಪತ್ತು ವರ್ಷಗಳ ಕಾಲ ದೂರದರ್ಶನದಲ್ಲಿ ಸೇವೆ ಸಲ್ಲಿಸಿದ್ದರು. ಹಾಗಾಗಿ ಸಾಕ್ಷ್ಯ ಚಿತ್ರಗಳ ಮೂಲಕ ವಿಷಯವನ್ನು ಆಳವಾಗಿ ಅಧ್ಯಯನ ಮಾಡಿ, ಪ್ರೇPಕÀ್ಷರಿಗೆ ಮುಟ್ಟಿಸುವಲ್ಲಿ  ನಿಪುಣರಾಗಿರುವ ಸತೀಶ್ ಇದೀಗ ತಮ್ಮ ಸಂಸ್ಥೆಯಲ್ಲಿ ನೂರಾರು ದಲಿತ ಮಹಿಳೆಯರನ್ನು ಕ್ಯಾಮರಾ ವುಮನ್‍ಗಳಾಗಿ, ಎಡಿಟರ್‍ಗಳಾಗಿ, ರೂಪಿಸಿದ್ದಾರೆ. ಈ ಚಿತ್ರದಲ್ಲಿ ಆದಿಲಾಬಾದ್, ನಲ್ಗೊಂಡ ಜಿಲ್ಲೆಗಳನ್ನು ಒಳಗೊಂಡಂತೆ ತೆಲಂಗಾಣ ಪ್ರಾಂತ್ಯದಲ್ಲಿ ಬಿ.ಟಿ. ಹತ್ತಿ ಬೆಳೆದು ಕೈ ಸುಟ್ಟುಕೊಂಡ ರೈತರ ಅನುಭವ, ಆತ್ಮಹತ್ಯೆ ಮಾಡಿಕೊಂಡ ರೈತರ ವಿಧವಾ ಪತ್ನಿಯರು ಮತ್ತು ಅನಾಥರಾದ ಅವರ ಮಕ್ಕಳ ನೋವಿನ ಕಥನವನ್ನು ದಾಖಲಿಸಲಾಗಿದೆ.
ಈ ಸಾಕ್ಷ್ಯ ಚಿತ್ರವನ್ನು ನೋಡಿದ ಅಲ್ಲಿನ ವಿಜ್ಞಾನಿಗಳು ನೇರವಾಗಿ ತೆಲಂಗಾಣಕ್ಕೆ ಬಂದು ಪಿ.ವಿ.ಸತೀಶ್ ನೆರವಿನಿಂದ ಕ್ಷೇತ್ರ ಕಾರ್ಯದ ಅಧ್ಯಯನ ಮಾಡಿದ್ದಲ್ಲದೆ, ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬದ ಅನುಭವಕ್ಕೆ ನೇರ ಸಾಕ್ಷಿಯಾದರು. ಮಳೆಯಾಶ್ರಿತ ಭೂಮಿಯಲ್ಲಿ ಭೂಮಿಯಲ್ಲಿ ಮೊದಲು ಬೆಳೆಯುತ್ತಿದ್ದ ದೇಶಿ ಹತ್ತಿ ಬೀಜಕ್ಕೆ ಪರ್ಯಾಯವಾಗಿ ಮುನ್ನೂರು ಪಟ್ಟು ಅಧಿಕ ಬೆಲೆ ತೆತ್ತು ಖರಿದಿಸಿದ ಬಿ.ಟಿ.ಹತ್ತಿಯ ಬೀಜ ಹಾಗೂ ಕಂಪನಿಯ ನಿರ್ದೇಶನದಂತೆ ಸಿಂಪಡಿಸಿದ ದುಬಾರಿ ಬೆಲೆಯ ಕೀಟನಾಶಕ ಹೀಗೆ ಅಧಿಕಗೊಂಡ ಕೃಷಿ ಉತ್ಪಾದನೆಯ ವೆಚ್ಚ, ಇದರ ಬದಲಾಗಿ ಕೈ ಕೊಟ್ಟ ಬೆಳೆ, ಕ್ಷೀಣಿಸಿದ ಉತ್ಪಾದನೆಯ ಪರಿಣಾಮ ಸಾಲಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡ ರೈತರ ಕುಟುಂಬಗಳು ಇವೆಲ್ಲಾ ಅಂಕಿ ಅಂಶಗಳನ್ನು ಕಲೆ ಹಾಕಿದ ವಿಜ್ಞಾನಿಗಳು, ಬಿ.ಟಿ. ಹತ್ತಿಯ ಉತ್ಪಾದನೆ ಅಥವಾ ಇಳುವರಿಯು ವರ್ಷ, ವರ್ಷಕ್ಕೆ ಹೇಗೆ ಕಡಿಮೆಯಾಗುತ್ತಾ ಹೋಗಿದೆ ಎಂಬ ಮಾಹಿತಿಯನ್ನು ಕಲೆ ಹಾಕಿದರು. ಮೊದಲ ವರ್ಷದಲ್ಲಿ ಹೆಕ್ಟೇರ್ ಒಂದಕ್ಕೆ ( ಎರಡೂವರೆ ಎಕರೆ ಭೂಮಿ) 3692 ಕೆ.ಜಿ. ಹತ್ತಿಯ ಇಳುವರಿಯು, ಮೂರನೇ ವರ್ಷಕ್ಕೆ 3114 ಕೆ.ಜಿ.ಹತ್ತಿಗೆ ಕುಸಿದಿತ್ತು. ಅಂದರೆ ವರ್ಷವೊಂದಕ್ಕೆ ಸರಾಸರಿ 300 ಕೆ.ಜಿ.ಯಷ್ಟು ಇಳುವರಿ ಕಡಿಮೆಯಾಗುತ್ತಾ ಬಂದಿತ್ತು. ಆದರೆ, ಉತ್ಪಾದನಾ ವೆಚ್ಚ ಮಾತ್ರ ಏರುತ್ತಾ ಹೋಗಿತ್ತು. ಎಲ್ಲಾ ವಿಧದಲ್ಲಿ ಬಿ.ಟಿ.ಹತ್ತಿ ಬೆಳೆಗಿಂತ ದೇಶಿ ಹತ್ತಿ ಬೆಳೆಯ ಕೃಷಿ ಉತ್ತಮವೆಂದು ಮನಗಂಡಿರುವ ಇಲ್ಲಿನ ರೈತರ ನಿರ್ಧಾರವು ಬರ್ಕಿನಾ ಪಾಸೊ ರಾಷ್ಟ್ರದ ವಿಜ್ಞಾನಿಗಳಿಗೆ ಮಾದರಿಯಾಗಿ ಗೋಚರಿಸಿತು.
ಬರ್ಕಿನ ಪೊಸೊ ರಾಷ್ಟ್ರದ ಒಂದು ಕೋಟಿ ಎಂಬತ್ತು ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ರೈತರು ಹತ್ತಿ ಬೆಳೆಯುತ್ತಿದ್ದರು. ಇವರು ಬಿ.ಟಿ.ಹತ್ತಿಯಿಂದ ಅನುಭವಿಸಿದ ನಷ್ಟವನ್ನು ಅಲ್ಲಿನ ಸರ್ಕಾರ ಯಾವುದೇ ಮುಲಾಜಿಲ್ಲದೆ ಮಾನ್ಸಂಟೊ ಕಂಪನಿಯಿಂದ ವಸೂಲಿ ಮಾಡಿ ಅದನ್ನು ಅಲ್ಲಿಂದ ಹೊರದಬ್ಬಿತು. ಮಾನ್ಸಂಟೊ ಕಂಪನಿಯು ಅಲ್ಲಿನ ಸರ್ಕಾರಕ್ಕೆ 76 ದಶಲಕ್ಷ ಡಾಲರ್ ಹಣವನ್ನು ದಂಡದ ರೂಪದಲ್ಲಿ ಪಾವತಿಸಿತು. ಆಫ್ರಿಕಾದ ಒಂದು ಪುಟ್ಟ ಗಣರಾಜ್ಯವೊಂದು ಅಮೇರಿಕಾದ ದೈತ್ಯ ಕಂಪನಿಯನ್ನು ಮಣಿಸಿ, ಅದರಿಂದ ನಷ್ಟ ಭರ್ತಿ ಮಾಡಿಕೊಳ್ಳುವುದಾದರೆ, ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ರಾಷ್ಟ್ರ ಮತ್ತು ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ರಾಷ್ಟ್ರ ಎನಿಸಿಕೊಳ್ಳುವ ಭಾರತಕ್ಕೆ ಏಕೆ ರೈತರಿಗಾದ ನಷ್ಟವನ್ನು ವಸೂಲಿ ಮಾಡಲು ಸಾಧ್ಯವಾಗಿಲ್ಲ?
ಈ ದೇಶದ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ದೇಣಿಗೆ ಹೆಸರಿನ ಎಂಜಲು ಕಾಸಿಗೆ ಕಾರ್ಪೋರೇಟ್ ಸಂಸ್ಥೆಗಳ ಮುಂದೆ ಭಿಕ್ಷಾ ಪಾತ್ರೆ ಹಿಡಿದು ನಿಲ್ಲುವ ಪದ್ಧತಿ ರದ್ದಾಗುವವರೆಗೂ ಈ ದೇಶದ ರೈತರು ಮತ್ತು ಜನಸಾಮಾನ್ಯರಿಗೆ ಭದ್ರತೆ ಸಿಗುವುದಿಲ್ಲ. ಇದು ಸಾರ್ವಕಾಲಿಕ ಸತ್ಯವಾಗಿದ್ದರೂ ಯಾರೊಬ್ಬರೂ ಮಾತನಾಡಲು ಸಿದ್ಧರಿಲ್ಲ.
 ( ಕರಾವಳಿ ಮುಂಜಾವು ಪತ್ರಿಕೆಯ “ ಜಗದಗಲ “ ಅಂಕಣಕ್ಕೆ ಬರೆದ ಲೇಖನ)
( ಮಹಿತಿ ಸೌಜನ್ಯ- ಡೌನ್ ಟು ಅರ್ಥ್ ಇಂಗ್ಲೀಷ್ ಪಾಕ್ಷಿಕ. ಚಿತ್ರಗಳು – ಡೆಕ್ಕನ್ ಡೆವಲಪ್ ಮೆಂಟ್ ಸೊಸೈಟಿ, ಹೈದರಾಬಾದ್.)


ಶುಕ್ರವಾರ, ಜುಲೈ 7, 2017

ಬಡವರ ಹೊಟ್ಟೆಗೆ ಹೊಡೆಯುತ್ತಿರುವ ಬಂದ್ ಮತ್ತು ಹರತಾಳಗಳು



ಈ ದೇಶದಲ್ಲಿ ಏನೇ ಕೊರತೆ ಇದ್ದರೂ, ಚಳುವಳಿ ಮತ್ತು  ಬಂದ್ ಗಳಿಗೆ ಮಾತ್ರ ಕೊರತೆಯಿಲ್ಲ. ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ನಮ್ಮ ಹೋರಾಟಗಳೂ ಬದಲಾಗಬೇಕು ಎಂಬ ಕನಿಷ್ಠ ವಿವೇಕವು ಯಾರಿಗೂ ಇಲ್ಲವಾದ ಕಾರಣ ದಿನ ನಿತ್ಯ ದುಡಿದು ತಿನ್ನುವ ಬಡವರ ಅನ್ನ ಕಸಿಯುವ ಇಂತಹ ಬಂದ್ ಗಳ  ಕುರಿತಂತೆ ಮರುಚಿಂತನೆ ಈಗ ಅಗತ್ಯವಿದೆ. ತಪ್ಪು ಮಾಡುವ ಸರ್ಕಾರಗಳು ಅಥವಾ ಜನವಿರೋಧಿ ಕಾನೂನು ಇತ್ಯಾದಿಗಳಿಗೆ ಪ್ರತಿಭಟನೆ ಸೂಚಿಸಲು ಇಲ್ಲವೆ ನಮ್ಮ ಬೇಡಿಕೆ ಪೂರೈಸಿಕೊಳ್ಳಲು ಪರ್ಯಾಯ ಮಾರ್ಗಗಳಿವೆ ಎಂಬ ಜ್ಞಾನವು ಇಂದು ಎಲ್ಲಾ ರಾಜಕೀಯ ಪಕ್ಷಗಳಿಂದ ಮತ್ತು ಸಂಘ ಸಂಸ್ಥೆಗಳಿಂದ ದೂರವಾಗಿದೆ.
ಸಾರ್ವಜನಿಕ ಆಸ್ತಿಗೆ ನಷ್ಟವನ್ನುಂಟು ಮಾಡುವುದು, ಸರ್ಕಾರಿ ಬಸ್ ಗಳಿಗೆ ಕಲ್ಲು ತೂರುವುದು, ಇಲ್ಲವೆ, ಬೆಂಕಿ ಹಚ್ಚಿ ಸುಡುವುದು, ರಸ್ತೆಯಲ್ಲಿ ಹಳೆಯ ಟೈರ್ ಗಳಿಗೆ ಬೆಂಕಿ ಹಚ್ಚಿ ವಿಕೃತ ಆನಂದ ಪಡುವುದು, ಇವುಗಳು ಇಂದಿನ ಬಂದ್ ಗಳ ಮಾಮೂಲಿ ಲಕ್ಷಣಗಳಾಗಿವೆ. ಇದರಿಂದ ಯಾರಿಗೆ ಉಪಯೋಗವಾಯಿತು? ಅಥವಾಯಾರಿಗೆ ನಷ್ಟವಾಯಿತು? ಈ ಕುರಿತು ಯೋಚಿಸುವ ವ್ಯವಧಾನ ಯಾರಿಗೂ ಇಲ್ಲವಾಗಿದೆ.
ಪಶ್ಚಿಮ ಬಂಗಾಳದ ಮುಕುಟ ಮಣಿಯಂತಿರುವ ಹಾಗೂ ಜಾಗತಿಕ ಮಟ್ಟದಲ್ಲಿ ಅತ್ಯಂತ ಶ್ರೇಷ್ಠ ಮಟ್ಟದ ಚಹಾ ಬೆಳೆಯುತ್ತಿರುವ ಡಾರ್ಜಿಲಿಂಗ್ ಗಿರಿಧಾಮದಲ್ಲಿ ಕಳೆದ ಜೂನ್ ತಿಂಗಳಿನಿಂದ ಪೂರಾ ಎಲ್ಲಾ ಚಟುವಟಿಕೆಗಳು ಸ್ಥಬ್ದವಾಗಿವೆ. ಪ್ರವಾಸೋದ್ಯಮವನ್ನು ನಂಬಿ ಬದುಕುತ್ತಿದ್ದ ಜನಸಾಮಾನ್ಯರು ಹಾಗೂ ಇತ್ತೀಚೆಗೆ ತಾನೆ ಆರ್ಥಿಕ ಹಿಂಜರಿತದಿಂದ ಚೇತರಿಸಿಕೊಂಡಿದ್ದ ಚಹಾ ತೋಟಗಳಲ್ಲಿ ದುಡಿಯುದ್ದ ಲಕ್ಷಾಂತರ ಕಾರ್ಮಿಕರು ಕಳೆದ ಒಂದು ತಿಂಗಳಿಂದ ದುಡಿಯಲು ಕೆಲಸವಿಲ್ಲದೆ ಬೀದಿಗೆ ಬಿದ್ದಿದ್ದಾರೆ.ಚಹಾ ಕಾರ್ಮಿಕರಲ್ಲಿ ಶೇಕಡ ಅರವತ್ತರಷ್ಟು ಮಹಿಳಾ ಕಾರ್ಮಿಕರಿದ್ದು ಈ ಕುಟುಂಬಗಳು ಉಪವಾಸದಲ್ಲಿ ನರಳುವಂತಾಗಿವೆ.
ಪಶ್ಚಿಮ ಬಂಗಾಳದ ಉತ್ತರದ ತುದಿಯಲ್ಲಿರುವ ಡಾರ್ಜಿಲಿಂಗ್ ಮತ್ತು ಕಾಲಿಪಾಂಗ್ ಗಿರಿ ಶ್ರೇಣಿಗಳಲ್ಲಿ 1816ರಿಂದ ನೇಪಾಳಿ ಭಾಷೆಯನ್ನು ಮಾತೃಭಾಷೆಯನ್ನಾಗಿ ಆಡುವ ಸುಮಾರು ಇಪ್ಪತ್ತು ಲಕ್ಷ ಜನರು ನೇಪಾಳ ಮೂಲದ ಗೂರ್ಖಾ ಜನಾಂಗದವರಾಗಿದ್ದಾರೆ. ಭಾರತದಲ್ಲಿ ಎರಡು ಕೋಟಿ ಜನರು ನೇಪಾಳಿ ಮೂಲದ ಜನರು ವಾಸಿಸುವ ಕಾರಣ, ಕೇಂದ್ರ ಸರ್ಕಾರ ನೇಪಾಳಿ ಭಾಷೆಯನ್ನು ಭಾರತದ ಅಧಿಕೃತ ಪ್ರಾದೇಶಿಕ ಭಾಷೆಗಳಲ್ಲಿ ಒಂದು ಎಂದು ಮಾನ್ಯತೆ ಮಾಡಿದೆ. ಹಾಗಾಗಿ ಇಲ್ಲಿನ ಜನತೆ ಆಡಳಿತಾತ್ಮಕವಾಗಿ ಪಶ್ಚಿಮ ಬಂಗಾಳಕ್ಕೆ ಸೇರಿದ್ದರೂ ಸಹ ಬಂಗಾಳಿ ಭಾಷೆ ಮತ್ತು ಸಂಸ್ಕೃತಿಯ ಕುರಿತಂತೆ ಯಾವುದೇ ಪ್ರೀತಿ ಅಥವಾ ಗೌರವ ಭಾವನೆ ಹೊಂದಿಲ್ಲ. 1987 ರಲ್ಲಿ ಪ್ರತೇಖ ಗೂರ್ಖಾ ಲ್ಯಾಂಡ್ ರಾಜ್ಯಕ್ಕಾಗಿ  ಎಂಬ ನಾಯಕ ನೇತೃ್ತ್ವದಲ್ಲಿ ಅಧಿಕೃತವಾಗಿ ಹೋರಾಟ ಆರಂಭವಾಗಿ ಆಗಾಗ್ಗೆ ಮೌನವಾಗಿದ್ದ ಅಗ್ನಿ ಪರ್ವತ ಸ್ಪೋಟಿಸುವಂತೆ ಭುಗಿಲೇಳುತ್ತಿದೆ.
ಈ ವರ್ಷದ ಶೈಕ್ಷಣಿಕ ಅವಧಿಯಲ್ಲಿ ಪಶ್ಚಿಮ ಬಂಗಾಳ ಸರ್ಕಾರವು ಪ್ರಾಥಮಿಕ ಶಿಕ್ಷಣದಲ್ಲಿ ಬಂಗಾಳಿ ಭಾಷೆಯನ್ನು ಕಡ್ಡಾಯ ಮಾಡಿರುವುದು ಸ್ಥಳಿಯರನ್ನು ಕೆರಳಿಸಿದೆ. ಮರೆತು ಹೋಗಿದ್ದ ಗೂರ್ಖಾ ಲ್ಯಾಂಡ್ ಬೇಡಿಕೆಯು ಮತ್ತೇ ಎದ್ದು ನಿಂತಿದೆ. ಇದರ ಜೊತೆಗೆ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶದಿಂದ ಭಾರತೀಯ ಜನತಾ ಪಕ್ಷವು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಈ ಬೇಡಿಕೆಗೆ ತನ್ನ ಬೆಂಬಲವನ್ನು ಸೂಚಿಸಿತ್ತು. ಆದರೆ, ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ತನ್ನ ಧೋರಣೆಯನ್ನು ಬದಲಾಯಿಸಿಕೊಂಡು ಮೌನಕ್ಕೆ ಶರಣಾಗಿದೆ.
ಒಂದನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೆ  ಬಂಗಾಳಿ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ  ಕಡ್ಡಾಯ ಮಾಡಿರುವುದು ಗೂರ್ಖಾ ಲ್ಯಾಂಡ್ ಪ್ರತ್ಯೇಕ ರಾಜ್ಯಕ್ಕೆ ಮತ್ತ ಬೇಡಿಕೆ ಆರಂಭವಾಗಿದೆ. 1980 ರ ದಶಕದಲ್ಲಿ ಸುಭಾಷ್ ಘೀಸಿಂಗ್ ಎಂಬಾತನ ನಾಯಕತ್ವದಲ್ಲಿ ಆರಂಭವಾದ ಈ ಹೋರಾಟದಲ್ಲಿ 1980 ರಲ್ಲಿ ನಡೆದ ಭೀಕರ ಹಿಂಸಾಚಾರದಲ್ಲಿ 1200 ಮಂದಿ ಅಸು ನೀಗಿದ್ದರು. ನಂತರ ಪಶ್ಚಿಮ ಬಂಗಾಳ ಸರ್ಕಾರವು “ ಗೂರ್ಖಾ ಲ್ಯಾಂಡ್ ಗಡಿಪ್ರದೇಶಗಳ ಅಭಿವೃದ್ಧಿಗಾಗಿ  ಪ್ರತ್ಯೇಕ ಪ್ರಾಧಿಕಾರವನ್ನು ರಚನೆ ಮಾಡಿತು.
2007 ರ ಭೀಮಲ್ ಗುರಂಗ್ ಎಂಬಾತನ ನೇತೃತ್ವದಲ್ಲಿ ಯಾವುದೇ ಕಂದಾಯ, ವಿದ್ಯುತ್ ಬಾಕಿ ಪಾವತಿಸದೆ ಹೋರಾಟ ಮುಂದುವರಿದ್ದು, ಇತ್ತೀಚೆಗೆ ಭುಗಿಲೆದ್ದಿದೆ. ಡಾರ್ಜಿಲಿಂಗ್ ಪ್ರಾಂತ್ಯದಲ್ಲಿ ಬ್ರಿಟಿಷರ ಕಾಲದಲ್ಲಿ ಆರಂಭವಾದ ನೂರಾರು ಚಹಾ ತೋಟಗಳಿದ್ದು, ಅವುಗಳಲ್ಲಿ 87 ಚಹಾ ತೋಟಗಳು ಸರ್ಕಾರದ ಸ್ವಾಮ್ಯದಲ್ಲಿವೆ. ಚಹಾತೋಟದ ಕಾರ್ಮಿಕರಿಗೆ ವೇತನದ ಜೊತೆಗೆ ವಸತಿ ಮತ್ತು ವೈದ್ಯಕೀಯ ನೆರವನ್ನು ಕಡ್ಡಾಯ ಮಾಡಲಾಗಿದೆ. ಕಳೆದ ಒಂದು ದಶಕದಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಹಾ ಬೆಲೆ ಕುಸಿದಿದ್ದ ಕಾರಣ ಏಳೆಂಟು ವರ್ಷದಿಂದ ಚಹಾ ತೋಟಗಳು ಪಾಳು ಬಿದ್ದಿದ್ದವು. ನೂರಾರು ಕಾರ್ಮಿಕರು ಹಸಿವಿನಿಂದ ಸತ್ತ ವರದಿಗಳು ದಿನ ನಿತ್ಯದ ಘಟನೆ ಎಂಬಂತೆ ಸುದ್ಧಿಯಾಗುತ್ತಿದ್ದವು.
ಕಳೆದ ವರ್ಷದಿಂದ ಚಹಾ ಉದ್ಯಮ ಚೇತರಿಸಿಕೊಂಡ ಕಾರಣ ಬಹುತೇಕ ಎಲ್ಲಾ ಚಹಾ ತೋಟಗಳಲ್ಲಿ ಕಾರ್ಮಿಕರಿಗೆ ದುಡಿಯಲು ಕೆಲಸ ಸಿಕ್ಕಂತಾಗಿ ನೆಮ್ಮದಿಯ ಉಸಿರು ಬಿಟ್ಟಿದ್ದರು. ಪ್ರತಿ ವರ್ಷ ಮೇ ತಿಂಗಳಿಂದ ಜೂನ್ ತಿಂಗಳ ಅಂತ್ಯದ ಅವಧಿಯಲ್ಲಿ ಚಹಾ ಗಿಡಗಳಲ್ಲಿ ಅರಳುವ ಎರಡು ಚಿಗುರು ಎಲೆಗಳು ಮತ್ತು ಗಿಡದ ತೊಟ್ಟು ಇವುಗಳನ್ನು ಕೀಳುವುದು ವಾಡಿಕೆ. ಏಕೆಂದರೆ, ಇವುಗಳಲ್ಲಿ ಸ್ವಾದಿಷ್ಟಕರವಾದ ಮತ್ತು ಸುವಾಸನೆಯ ಗುಣವಿದೆ. ಈ ಮೊದಲ ಫಸಲು ಸಾಮಾನ್ಯವಾಗಿ ಎಲ್ಲಾ ಚಹಾ ತೋಟಗಳಿಗೆ ಪ್ರಮುಖ ಾದಾಯದ ಮೂಲವಾಗಿದೆ. ಆದರೆ, ಈ ವರ್ಷ ಡಾರ್ಜಿಲಿಂಗ್ ನ ಮುಷ್ಕರದಿಂದಾಗಿ ಚಹಾ ಉದ್ಯಮ ಮತ್ತು ಪ್ರವಾಸೋದ್ಯಮ ಎರಡೂ ಕ್ಷೇತ್ರಗಳು ನೆಲ ಕಚ್ಚಿವೆ. ಕಾಲಿಪಾಂಗ್ ಮತ್ತು ಕುರೆಸಾಂಗ್ ಪ್ರಾತ್ಯದಲ್ಲಿ ಕಳೆದ ವರ್ಷದಿಂದ ಹೋಂ ಸ್ಟೇ ಪ್ರವಾಸೋದ್ಯಮ ತಲೆ ಎತ್ತುತ್ತಿತ್ತು. ಅದಕ್ಕೆ ಈ ವರ್ಷ ಬಲವಾದ ಪೆಟ್ಟು ಬಿದ್ದಿದೆ. ಭಾರತದ ಪ್ರವಾಸೋದ್ಯಮದಲ್ಲಿ ಐದನೆಯ ಸ್ಥಾನ ಪಡೆದಿದ್ದ ಪಶ್ಚಿಮ ಬಂಗಾಳ ಈ ವರ್ಷ ಎಂಟನೆಯ ಸ್ಥಾನಕ್ಕೆ ಕುಸಿದಿದೆ. ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಮುಷ್ಕರ ಹಾಗೂ ಬಂದ್ ನಿಂದಾಗಿ ಡಾರ್ಜಿಲಿಂಗ್ ನ ಚಹಾ ಉದ್ಯಮಕ್ಕೆ ಒಟ್ಟು ನೂರಾ ಐವತ್ತು ಕೋಟಿ ರೂಪಾಯಿನಷ್ಟು ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.
ಪಶ್ಚಿಮ ಬಂಗಾಳದ ಆಡಳಿತಾತ್ಮಕ ದೃಷ್ಟಿಯಿಂದ ಈ ಪ್ರದೇಶವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡುವುದು ಒಳಿತು. ಸಧ್ಯದ ಭಾರತದಲ್ಲಿ ರಾಜಸ್ಥಾನ ಮತ್ತು ಉತ್ತರಪ್ರದೇಶ ರಾಜ್ಯಗಳನ್ನೂ ಸಹ ಪ್ರತ್ಯೇಕ ರಾಜ್ಯಗಳಾಗಿ ವಿಭಜಿಸಬೇಕಿದೆ. ರಾಜಕೀಯ ಪಕ್ಷಗಳ ಮತ ಬ್ಯಾಂಕ್ ರಾಜಕಾರಣದಿಂದ ಇಂತಹ ಸಮಸ್ಯೆಗಳು ಸದಾ ಜೀವಂತವಾಗಿವೆ. ಅಂತಿಮವಾಗಿ ಇವುಗಳಿಂದ ನರಳುವವರು ಪ್ರತಿ ದಿನ ದುಡಿದು ತಿನ್ನುವ ಕೂಲಿಕಾರ್ಮಿಕರು ಮತ್ತು ಬಡವರು ಮಾತ್ರ.


ಶುಕ್ರವಾರ, ಜೂನ್ 30, 2017

ಭಕ್ತ ಮತ್ತು ದೇವರು ಮುಖಾಮುಖಿಯ ಮಜಲುಗಳು


ಕಳೆದ ಭಾನುವಾರ ಅಂದರೆ, 25-6-17   ಹಿಂದೂ ಇಂಗ್ಲೀಷ್ ದಿನಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಎಷ್ಟು ಮಂದಿ ಓದುಗರು ಗಮನಿಸಿದರೋ ಗೊತ್ತಿಲ್ಲ. ಆದರೆ, ಮೊದಲ ನೋಟಕ್ಕೆ ಕಣ್ಣಿಗೆ ಬಿದ್ದ ಪುಟ್ಟ ವರದಿಯನ್ನು ಓದಿದ ತಕ್ಷಣ ನಾನು ಅರ್ಧ ಗಂಟೆಯ ಕಾಲ ಪತ್ರಿಕೆಯನ್ನು ಬದಿಗಿಟ್ಟು ತಣ್ಣಗೆ ಕುಳಿತು ಯೋಚಿಸತೊಡಗಿದೆ. ದೇವರು ಮತ್ತು ಭಕ್ತನ ನಡುವಿನ ಸಂಬಂಧಕ್ಕೆ ಏಷ್ಟೋಂದು ಮುಖಗಳಿವೆ ಎಂದು ಆಶ್ಚರ್ಯವಾಯಿತು.
ಪಾಕಿಸ್ತಾನದ ದಕ್ಷಿಣ ಪಂಜಾಬ್ ಪ್ರಾಂತ್ಯದ ಖಾನೆವಾಲ್ ಜಿಲ್ಲಾ ಕೇಂದ್ರದಲ್ಲಿರುವ ಜಾಮಿಚಿ ಮಸೀದಿಯಲ್ಲಿ ದಿನಾಂಕ 23-6-17 ಶುಕ್ರವಾರ ರಾತ್ರಿ ಭಕ್ರರು ದೇಣಿಗೆ ನೀಡುವ ಹುಂಡಿಯಿಂದ ಐವತ್ತು ಸಾವಿರ ರೂಪಾಯಿಗಳು ಕಳುವಾಯಿತು. ರಂಜಾನ್ ಮಾಸದ ಆಚರಣೆಯ ಸಂದರ್ಭದಲ್ಲಿ ಶ್ರೀಮಂತ ಮುಸ್ಲಿಂರು ಉಧಾರವಾಗಿ ದೇಣಿಗೆ ನೀಡುವುದರಿಂದ ಮಸೀದಿಗೆ ವಿದ್ಯುತ್ ಇಲ್ಲದ ಸಮಯದಲ್ಲಿ ವಿದ್ಯುತ್ ಒದಗಿಸುವ ಉದ್ದೇಶದಿಂದ ಜನರೇಟರ್ ಕೊಳ್ಳಲು ಹುಂಡಿಯೊಂದನ್ನು ಸ್ಥಾಪಿಸಲಾಗಿತ್ತು. ಕಳ್ಳತನ ಮಾಡಿದ ವ್ಯಕ್ತಿಯು ಹುಂಡಿಯಲ್ಲಿ ಹಣವನ್ನು ತೆಗೆದುಕೊಂಡು ಹೋಗುವುದರ ಜೊತೆಗೆ ಒಂದು ಚೀಟಿಯನ್ನು ಬರೆದಿಟ್ಟು ಹೋಗಿದ್ದಾನೆ.
ಚೀಟಿಯಲ್ಲಿ ಅವನು ಬರೆದಿರುವ ಕೆಲವು ಮುಖ್ಯಾಂಶಗಳು ಇವು. “ ಮಾನ್ಯರೇ, ಹಣವನ್ನು ಕದ್ದವನು ಯಾರು ಎಂದು ಹುಡುಕಲು ಹೋಗಬೇಡಿ. ಇದು ನನ್ನ ಮತ್ತು ದೇವರ ನಡುವಿನ ವ್ಯವಹಾರ. ಮುಂದಿನ ವಾರ ರಂಜಾನ್ ಹಬ್ಬವಿದೆ. ಸಮಾಜದಲ್ಲಿ ನಾನು ಸಾಲಕ್ಕಾಗಿ ಬೇಡದೇ ಇರುವ ಮನೆಗಳಿಲ್ಲ, ವ್ಯಕ್ತಿಗಳಿಲ್ಲ. ಅಂತಿಮವಾಗಿ  ದೇವರಿಗೆ ನನ್ನ ಕಷ್ಟವನ್ನು ವಿವರಿಸಿ, ಹಣವನ್ನು ತೆಗೆದುಕೊಂಡು ಹೋಗುತ್ತಿದ್ದೀನಿ. ನಮಸ್ಕಾರ. ಇದನ್ನು ಓದುತ್ತಿದ್ದಂತೆ ಹಿಂದೆ ನಾನು ಅನುವಾದಿಸಿದ್ದ ಹನ್ರ್ನೆಂದನೆಯ ಶತಮಾನದ ಪರ್ಷಿಯನ್ ಸೂಫಿಕವಿ ಉಮರ್ ಖಯಾಮನ ರುಬಾಯಿವೊಂದರ ಸಾಲುಗಳು ನೆನಪಾದವು.
ನಿಜ ಹೇಳಬೇಕೆಂದರೆ,
ನಾನು ಮಸೀದಿಗೆ ಬಂದದ್ದು
ದೇವರ ಪ್ರಾರ್ಥನೆಗಲ್ಲ,
ಇಲ್ಲಿಂದ ಕದ್ದೊಯ್ದ ಹಾಸುಗಂಬಳಿ
ಹಳತಾಗಿದೆ ಅದಕೆ.
ನಿಜವಾದ ಪ್ರಶ್ನೆ ಇರುವುದೇ ಇಲ್ಲಿ. ದೇವರ ಪವಾಡವನ್ನು ಅಥವಾ ಮಹಿಮೆಯನ್ನು ನಂಬುವ ವ್ಯಕ್ತಿಗಳಿಗೆ ಇದು ಹೇಗನ್ನಿಸಬಹುದು? ನಮ್ಮಲ್ಲಿಯೂ ಕೂಡ ದಿನ ನಿತ್ಯ ದೇವಸ್ಥಾನಗಳ ಹುಂಡಿಗಳನ್ನು ದೋಚುವುದು ಇಲ್ಲವೆ, ದೇವರ ವಿU್ಪ್ರಹಗಳನ್ನು ಕದ್ದೊಯ್ಯುವುದು ಸಾಮಾನ್ಯ ಸಂಗತಿಯಾಗಿದೆ. ಹಾಗಾದರೇ, ಭಕ್ತರು ನಂಬುವ ಅಥವಾ ಆಸ್ತಿಕರು ಆರಾಧಿಸುವ ದೇವರುಗಳು ಎಲ್ಲಿ ಹೋದರು? ಅವರ ಶಕ್ತಿ ಅಥವಾ ಮಹಿಮೆಗಳು ಕಳ್ಳತನ ನಡೆಯುವಾಗ ಏನಾಗಿದ್ದವು? ಪ್ರಶ್ನೆಯು ಬಾಲ್ಯದಿಂದಲೂ ನನ್ನನ್ನು ಕಾಡುತ್ತಾ ಬಂದಿರುವ ಪ್ರಶ್ನೆಯಾಗಿದೆನನ್ನ ಹನ್ನೊಂದನೆಯ ವಯಸ್ಸಿನಲ್ಲಿ ನನ್ನೂರು ಕೊಪ್ಪದ ಸರ್ಕಾರಿ ಶಾಲೆಯ ಆಟದ ಮೈದಾನದಲ್ಲಿ ಪುಟ್ಬಾಲ್ ಆಡುತ್ತಿರುವಾಗ, ಚೆಂಡಿಗೆ ಪೋಣಿಸಿದ್ದ ದಾರವು ಕಿತ್ತು ಹೋಯಿತು. ಕ್ಷಣದಲ್ಲಿ ನನ್ನ ಸೊಂಟದಲ್ಲಿದ್ದ ಉಡುದಾರವನ್ನು ಬಿಚ್ಚಿಕೊಟ್ಟ ನಾನು, ಈವರೆಗೆ ಮತ್ತೇ ಅದನ್ನು ಧರಿಸಲಿಲ್ಲ. ಅಷ್ಟೆ ಅಲ್ಲ, ನನ್ನ ಮಗನಿಗೆ ಎಂದೂ ಉಡುದಾರವನ್ನು ಹಾಕಲಿಲ್ಲ. ಮಗ ಮತ್ತು ಮಗಳು ಇಬ್ಬರನ್ನೂ ಎಂದಿಗೂ ದೇವಸ್ಥಾನಗಳಿಗೆ ಕರೆದೊಯ್ಯಲಿಲ್ಲ ಮತ್ತು ಅವರಿಗೆ ದೇವರು, ಧರ್ಮ, ಜಾತಿ ಕುರಿತಂತೆ ಏನನ್ನೂ ನಾನಾಗಲಿ ಅಥವಾ ನನ್ನ ಪತ್ನಿಯಾಗಲಿ ಬೋಧಿಸಲಿಲ್ಲ. ಜೀವನದಲ್ಲಿ ಎಂದೂ ಸುಳ್ಳು ಹೇಳಬಾರದು ಮತ್ತು ನಡುವಳಿಕೆಯಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಇರಬೇಕುಇವುಗಳನ್ನು ಮಾತ್ರ ನಾನು ನನ್ನ ಪತ್ನಿ  ಅವರಿಗೆ ಬೋಧಿಸುತ್ತಾ ಬಂದೆವು.
 ಆದರೆ,  ದೇವರ ಅಸ್ತಿತ್ವದ ಬಗ್ಗೆ ಲೇವಡಿ ಮಾಡುವುದಾಗಲಿ, ಆಸ್ತಿಕರನ್ನು ಬೈಯ್ಯುವುದಾಗಲಿ ಎಂದೂ ನನ್ನ ಹವ್ಯಾಸವಾಗಿರಲಿಲ್ಲ. ಅದು ಅವರವರ ನಂಬಿಕೆ. ಅದರಲ್ಲಿ ಅವರಿಗೆ ನೆಮ್ಮದಿ ಸಿಗುವುದಾರೆ ನನ್ನ ಅಪಸ್ವರ ಏಕೆ? ಇದು ನನ್ನ ಬದುಕಿನ ನಿಯಮವಾಗಿತ್ತು. ಅದೇ ರೀತಿ ನನ್ನ ನಂಬಿಕೆಯನ್ನು ಪ್ರಶ್ನಿಸಲು ಯಾರಿಗೂ ಅವಕಾಶ ನೀಡಿದವನಲ್ಲ.  ಜೊತೆಗೆ ಕುವೆಂಪು ವಿಚಾರಧಾರೆಯಲ್ಲಿ ಬಾಲ್ಯದಿಂದಲೂ ಬೆಳದ ಕಾರಣಕ್ಕಾಗಿ ಪುರೋಹಿತಶಾಹಿ ಮತ್ತು ಮೌಡ್ಯಗಳಿಂದ ಅಂತರವನ್ನು ಕಾಪಾಡಿಕೊಂಡು ಬಂದವನು. ಕಳೆದ ಮುವತ್ತೇಳು ವರ್ಷಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡವನಂತೆ, ಇಡೀ ದೇಶದುದ್ದಕ್ಕೂ ಹಲವಾರು ಬಾರಿ ಸುತ್ತಾಡಿದ್ದೀನಿ. ಈಗಲೂ ಸಹ ಅದನ್ನು ಮುಂದುವರಿಸಿದ್ದೀನಿ.  ಕುತೂಹಲಕ್ಕಾಗಿ ಎಲ್ಲಾ ಜಾತಿಯ, ಎಲ್ಲಾ ಧರ್ಮದ ಮಸೀದಿ, ಮಂದಿರ, ದೇವಸ್ಥಾನಗಳಿಗೆ  ಭೇಟಿ ನೀಡಿದ್ದಿನಿ. ಅಮೃತಸರದ ಸ್ವರ್ಣ ದೇವಾಲಯದ ಪ್ರಶಾಂತತೆ, ಸಿಖ್ಖರ ಧಾರ್ಮಿಕ ಭಕ್ತಿಯ ಪರವಶತೆ ಮತ್ತು  ಅಲ್ಲಿ£ ನಿರಂತರವಾಗಿ ಪ್ರಸ್ತುತ ಪಡಿಸುವ ಗುರುವಾಣಿಯನ್ನು ಕೇಳಿ ಅಚ್ಚರಿಗೊಂಡಿದ್ದೀನಿ. ದಕ್ಷಿಣ ಭಾರತದಲ್ಲಿ ತಮಿಳುನಾಡಿನ ನಾಗಪಟ್ಟಣಂ ಬಳಿ ಕಡಲ ತೀರದಲ್ಲಿರುವ ವೇಲಾಂಕಣಿ ಎಂಬ ಊರಿನಲ್ಲಿ ಇರುವ ಏಸು ಮಾತೆಯ ಬೃಹತ್ ಇಗರ್ಜಿಗಳು ಮತ್ತು ಅವುಗಳ ಒಳಗೆ ಇರುವಂತಹ ಪ್ರಶಾಂvವಾದÀ ವಾತಾವರಣ ಮತ್ತು  ಭಕ್ತರ ಮೌನ ಪ್ರಾರ್ಥನೆ, ಶುದ್ಧವಾದ ಅಸ್ಖಲಿತ ತಮಿಳು ಉಚ್ಚಾರಣೆಯಿಂದ ಕೂಡಿದ ಪಾದ್ರಿಗಳ ಉಪದೇಶ ಇವೆಲ್ಲವೂ ಕೇಳುವುದು ನನ್ನ ಇಷ್ಟದ ಸಂಗತಿಗಳಾಗಿವೆ.  ಮೇಲಿಂದ ಮೇಲೆ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇನೆ. ಅದೇ ರೀತಿಯಲ್ಲಿ ತಿರುಪತಿ, ಕೊಲ್ಲೂರು, ಧರ್ಮಸ್ಥಳ, ಮಂತ್ರಾಲಯ, ಶಿರಡಿ, ಪಂಡರಾಪುರ, ಮುಂಬೈ ನಗರದ ಸಿದ್ಧಿವಿನಾಯಕನ ದೇವಸ್ಥಾನ, ಜೈಪುರ ಸಮೀಪದ  ಅಜ್ಮೀರ್ ದರ್ಗಾ, ಸವದತ್ತಿಯ ಎಲ್ಲಮ್ಮನ ಜಾತ್ರೆ, ಪುರಿಯ ಜಗನ್ನಾಥ ದೇವಸ್ಥಾನ, ಕೊಲ್ಕತ್ತನಗರದ ಕಾಳಿಘಾಟ್ನಲ್ಲಿ ಇರುವ ಕಾಳಿಮಾತೆ ಮಂದಿರ, ಮಧುರೈನ ಮೀನಾಕ್ಷಿ ದೇಗುಲ, ಚಿಂದಂಬರಂನ ನಟರಾಜ ದೇಗುಲ, ಪಳನಿಯ ಸುಬ್ರಮಣ್ಯನ ದೇವಸ್ಥಾನ, ಕುಂಭಕೋಣಂನ ಆದಿ ಕುಂಭೇಶ್ವರ, ಸಾರಂಗಪಾಣಿ, ತಿರುವನಂತಪುರದ ಅನಂತಪದ್ಮನಾಭನ ದೇಗುಲಗಳು ಹೀಗೆ ನೂರಾರು ಪವಿತ್ರ ಕ್ಷೇತ್ರ ಎನ್ನುವ ಸ್ಳಳಗಳಿಗೆ ಭೇಟಿ ನೀಡಿ, ಭಕ್ತರ ಉನ್ಮಾದವನ್ನು, ಭಕ್ತಿಯ ಪರಾಕಾಷ್ಟೆಯನ್ನು ಮತ್ತು ಅಲ್ಲಿನ  ನೂಕು ನುಗ್ಗುಲು,  ಹಾಗೂ ದೇವಸ್ಥಾನದ ಸುತ್ತ ಮುತ್ತಲಿನ ಆವರಣದಲ್ಲಿರುವ ಕೊಳಕು,  ಶೋಷಿಸುವ ಪೂಜಾರಿಗಳ ಹಪಾಹಪಿತನ  ಇವುಗಳನ್ನು ನೋಡಿ ವಿಶ್ಲೇಷಿಸಲಾರದೆ ಕೈ ಬಿಟ್ಟಿದ್ದೀನಿ. ಏಕೆಂದರೆ, ಅದು ನನ್ನದಲ್ಲದ ಒಂದು ಜಗತ್ತು ಎಂಬ ನಂಬಿಕೆ ನನ್ನೊಳಗೆ ಬಲವಾಗಿ ಬೇರೂರಿದೆ.
ಬಹುಮುಖಿ ಸಂಸ್ಸøತಿಯ ಭಾರತದಲ್ಲಿ ಸಮಾಜದಲ್ಲಿ ವರ್ಗ ವ್ಯವಸ್ಥೆ ಇರುವಂತೆ ದೇವರುಗಳಲ್ಲಿಯೂ ಮೇಲ್ವರ್ಗದ ದೇವರು, ಕೆಳವರ್ಗದ ದೇವರು ಇರುವ ವ್ಯವಸ್ಥೆಯನ್ನು ನೋಡಿ ಬೆರಗಾಗಿದ್ದೀನಿ. ತಿರುಪತಿಯ ವೆಂಕಟೇಶ್ವರ, ಮಂತ್ರಾಲಯದ ರಾಘವೇಂದ್ರ, ಶಿರಡಿಯ ಸಾಯಿಬಾಬಾ, ಕೊಲ್ಲೂರು ಮೂಕಾಂಬಿಕೆ, ಮುಧುರೈ ಮೀನಾಕ್ಷಿ, ಪಂಡರಾಪುರದ ವಿಠಲ, ಮುಂಬೈನ ಸಿದ್ದಿವಿನಾಯಕ ಹೀಗೆ ಅನೇಕ ದೇವರುಗಳು ಶ್ರೀಮಂತ ದೇವರಾಗಿದ್ದಾರೆ. ಇವರುಗಳು ಒಂದು ರೀತಿಯಲ್ಲಿ ನಮ್ಮ ಭಾರತೀಯ ಚಿತ್ರರಂಗದ ಸೂಪರ್ಸ್ಟಾರ್ಗಳಿದ್ದಂತೆ.
ಆದರೆ, ಇಂತಹ ಸೂಪರ್ ಸ್ಟಾರ್ ದೇವರುಗಳಿಗಿಂತ, ನಮ್ಮ ಗ್ರಾಮೀಣ ಪ್ರದೇಶದ ಗ್ರಾಮ ದೇವ- ದೇವತೆಗಳು ನಿಜವಾದ ದೇವರು ಎಂದು ನನ್ನ ಬಲವಾದ ನಂಬಿಕೆ. ಏಕೆಂದರೆ, ಇವರಿಗೆ ಎಣ್ಣೆ ಮಜ್ಜನ, ಹಾಲು ತುಪ್ಪ, ಗಂಧÀ, ಎಳನೀರು, ಇತ್ಯಾದಿ ಮಜ್ಜನಗಳ ಸೇವೆಯಿಲ್ಲ. ತೂಗೂಯ್ಯಾಲೆಯ ಸೇವೆಯೂ ಇಲ್ಲ, ಸಹಸ್ರನಾಮಾವಳಿಯ ಅರ್ಚನೆ ಮೊದಲೇ ಇಲ್ಲ. ಇವೆಲ್ಲಕ್ಕಿಂತ ದೇವರುಗಳು ತಮ್ಮ ಭಕ್ತರಿಂದ ಸಾವಿರಾರು ರೂಪಾಯಿುಗಳನ್ನು ವಿಶೇಷ ದರ್ಶನ ವ್ಯವಸ್ಥೆಯಡಿ ದೋಚುವುದಿಲ್ಲ, ದರ್ಶನ ನೀಡುವುದಕ್ಕೆ ಗಂಟಗಂಟೆಲೆ ದಿನಗಟ್ಟಲೆ ಕಾಯಿಸುವುದಿಲ್ಲ. ಕಾರಣಕ್ಕಾಗಿ ನಮ್ಮ ಜನಪದರಿಗೆ ದೇವರುಗಳೆಂದರೆ, ಎಲ್ಲಿಲ್ಲದ ಪ್ರೀತಿ ಮತ್ತು ನಂಬಿಕೆ.
ಇಂತಹ ಕಾರಣಗಳಿಂದಾಗಿ ಗ್ರಾಮದೇವತೆಗಳನ್ನು ನಮ್ಮ ಜನಪದರು ದೇವತೆಗಳು ಎಮಬುವುದಕ್ಕಿಂತ ತಮ್ಮ ಆತ್ಮ ಸಂಗಾತಿಗಳು ಎಂದು ನಂಬುತ್ತಾರೆ. ಅವನ/ ಜೊತೆ ಏಕವಚನದಲ್ಲಿ ಸಂವಾದದಲ್ಲಿ ತೊಡಗುತ್ತರೆ. ಗರ್ಭ ಗುಡಿಯಲ್ಲಿ ಕೂತಿರುವ ದೇವರನ್ನು ಎಬ್ಬಿಸಿ, ವರ್ಷಕ್ಕೊಮ್ಮೆ ರಾಶಿ ರಾಶಿ ಕೆಂಡಗಳ ನಡುವೆ ಕೊಂಡ ಹಾಯಿಸಿ, ಅವರನ್ನು ಅಗ್ನಿ ಪರೀಕ್ಷೆಗೆ ಒಳಪಡಿಸುತ್ತಾರೆ. ಹೆಗಲಮೇಲೆ ಹೊತ್ತು ಮನೆಮನೆಗೆ ಹೊತ್ತೊಯ್ದು ಭಕ್ತರ ಪ್ರಶ್ನೆ ಉತ್ತರ ನೀಡು ಎಂದು ಒತ್ತಾಯಿಸುತ್ತಾರೆ. ದೇವರು ನೀಡಿದ ಅಭಯ ಅಥವಾ ಹಾರೈಕೆ ನಿಜವಾಗದಿದ್ದರೆ, ಗುಡಿಯ ಮುಂದೆ ಹಾಯ್ದು ಹೋಗುವಾಗಲೆಲ್ಲಾ “  ನಿನ್ನನ್ನ ನಂಬಿ ನಂಬಿ ಎಕ್ಕುಟ್ಟು ಹೋಗ್ ಬುಟ್ಟೆ ಎಂದು ಹೇಳುತ್ತಾ ಹಿಡಿ ಶಾಪ ಹಾಕುತ್ತಾರೆ. ಸಾರಿ ನೀ ಹೇಳಂದಂಗೆ ನಡೀದೆ ಇರಲಿ, ಆಗ ನಿನಗೆ ಮಾಡದುಮಗನೆ”.ಎಂದು ಎಲ್ಲರಿಗೂ ಕೇಳಿಸುವಂತೆ ಹೊಸ ಹರಕೆಯನ್ನು ಕಟ್ಟಿಕೊಳ್ಳುತ್ತಾರೆಏಕೆಂದರೆ, ಅವರ ಪಾಲಿಗೆ ದೇವರೆಂದರೆ ಅತೀತರಲ್ಲ, ಅವರ ಆತ್ಮ ಸಂಗಾತಿಗಳು. ಇದೇ ಅಲ್ಲವೆದೇವರು ಮತ್ತು ಭಕ್ರನ ನಡುವಿನ ನಿಜವಾದ ಸಂಬಂಧ? ಇಂತಹ ಅವಿನಾಭಾವ ಸಂಬಂಧವನ್ನು ಪಾಕಿಸ್ತಾನದ ಬಡ ಮುಸ್ಲಿಂನು ಅಲ್ಲಾನ ಜೊತೆ ಹೊಂದಿರಬೇಕೆಂದು ನನ್ನ ಊಹೆ.


ಶುಕ್ರವಾರ, ಜೂನ್ 23, 2017

ಮಾತೃ ಭಾಷೆಯ ಶಿಕ್ಷಣದ ಅವಸಾನದ ಅಂಚಿನಲ್ಲಿ ನಿಂತು…


ನಮ್ಮೆಲ್ಲರ ಮಾತೃಭಾಷೆಯಾದ ಕನ್ನಡ ಈಗ ಯಾರಿಗೂ ಬೇಡವಾಗಿದೆ. ಇದನ್ನು ಪ್ರಾಥಮಿಕ ಶಿಕ್ಷಣದ ಮೂಲಕ ಪೋಷಿಸಿ ಬೆಳಸಬೇಕಾದ ಸರ್ಕಾರಗಳು ಇತಿಹಾಸದುದ್ದಕ್ಕೂ ತಮ್ಮ ದಿವ್ಯ ನಿರ್ಲಕ್ಷ್ಯವನ್ನು ತೋರಿಸುತ್ತಾ ಬಂದಿವೆ. ಇನ್ನು ಕನ್ನಡ ಸಾಹಿತ್ಯ, ಸಂಸ್ಕೃತಿ,, ಭಾಷೆ ಇವುಗಳ ಕುರಿತಾಗಿ ಧ್ವನಿ ಎತ್ತಬೇಕಾದ ನಾಡಿನ ಹಿರಿಯ ಸಾಹಿತಿಗಳೆಲ್ಲಾ ಮೌನಕ್ಕೆ ಶರಣು ಹೋಗಿದ್ದಾರೆ. ತಮಗೆ ಅರವತ್ತು ವರ್ಷ ತುಂಬುತ್ತಿದ್ದಂತೆ, ಪಂಪ, ನೃಪತುಂಗ, ಬಸವ, ಕನಕ,  ಹೀಗೆ ಹಲವು ಪ್ರಶಸ್ತಿಗಳನ್ನು ಕನವರಿಸುತ್ತಾ, ಸರ್ಕಾರದ ವಿರುದ್ಧ ಧ್ವನಿ ಎತ್ತಿದರೆ, ಪ್ರಶಸ್ತಿ ಕೈ ತಪ್ಪಿ ಹೋಗುವ ಭಯ ಅವರನ್ನು ಆವರಿಸಿಕೊಂಡಿದೆ..
ಇವೆಲ್ಲವುಗಳ ಮೇಲೆ ಗಾಯದ ಮೇಲೆಬರೆ ಎಳೆದಂತೆ. ದೇಶದ ಸರ್ವೋಚ್ಚ ನ್ಯಾಯಾಲಯ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆಯ ಶಿಕ್ಷಣ ಕಡ್ಡಾಯವಲ್ಲ ಎಂಬ ತಪ್ಪು ತೀರ್ಪು ನೀಡುವುದರ ಮೂಲಕ ಖಾಸಾಗಿ ಶಿಕ್ಷಣ ಸಂಸ್ಥೆಗಳು ಇಂಗ್ಲೀಷ್ ಶಿಕ್ಷಣದ ಹೆಸರಿನಲ್ಲಿ ಅಂಗಡಿಗಳನ್ನು ತೆರದಿಟ್ಟು ಪೋಷಕರನ್ನು ದೋಚಲು ಅವಕಾಶ ಮಾಡಿಕೊಟ್ಟಿದೆ. ಮಗು ತಾನು ಬೆಳೆದಂತೆ ತನ್ನ ಸುತ್ತ ಮುತ್ತಲಿನ ಜಗತ್ತನ್ನು ಗ್ರಹಿಸುವುದು ಮತ್ತು ಮಾತುಗಳನ್ನು ಅರ್ಥಮಾಡಿಕೊಳ್ಳುವುದು ಮಾತೃಭಾಷೆಯ ಮೂಲಕ ಎಂಬ ಮಕ್ಕಳ ತಜ್ಞರ ಹಾಗೂ ಶಿಕ್ಷಣ ತಜ್ಞರ. ಮಾನಸಿಕ ತಜ್ಞರ ಸಲಹೆಗಳನ್ನು ಈ ದೇಶದಲ್ಲಿ ಯಾವೊಂದು ನ್ಯಾಯಾಲಯವಾಗಲಿ ಅಥವಾ ಸರ್ಕಾರವಾಗಲಿ ಅರ್ಥಮಾಡಿಕೊಳ್ಳಲಿಲ್ಲ. ಇದು ಭಾರತದ ದೇಶಿ ಭಾಷೆ ಮತ್ತು ಸಂಸ್ಕೃತಿಗೆ ಒದಗಿ ಬಂದ ಆಪತ್ತು.
ಮಕ್ಕಳಿಗೆ ನೀಡಬೇಕಾದ ಶಿಕ್ಷಣದಲ್ಲಿ ನ್ಯಾಯಾಲಯಗಳು ಮಧ್ಯ ಪ್ರವೇಶ ಮಾಡದಂತೆ ರಾಜ್ಯಗಳ ವಿಧಾನ ಸಭೆಯಲ್ಲಿ ಅಥವಾ ಲೋಕ ಸಭೆಯಲ್ಲಿ ಮಸೂದೆಯೊಂದನ್ನು ಮಂಡಿಸಿ, ಶಿಕ್ಷಣದಲ್ಲಿ  ಮಾತೃಭಾಷೆಯನ್ನು ಪ್ರಥಮ ಭಾಷೆಯಾಗಿ ಬೋಧಿಸುವುದು ಕಡ್ಡಾಯ ಎಂಬ ಕಾನೂನನ್ನು ಜಾರಿಗೆ ತರಬಹುದಾದ ಅವಕಾಶಗಳಿವೆ. ಆದರೆ, ಅಂತಹ ಇಚ್ಚಾಶಕ್ತಿ ಯಾವೊಬ್ಬ ಜನಪ್ರತಿನಿಧಿಗೆ ಅಥವಾ ಸರ್ಕಾರಕ್ಕೆ ಇಲ್ಲವಾಗಿದೆ. ನಮ್ಮ ನೆರೆಯ ತಮಿಳುನಾಡಿನಲ್ಲಿ ಇಂದಿಗೂ ಶಿಕ್ಷಣದಲ್ಲಿ ಮೂರನೆಯ ಭಾಷೆಯಾಗಿ ಹಿಂದಿ ಭಾಷೆಯು ಬಳಕೆಯಲ್ಲಿಲ್ಲ. ಅಲ್ಲಿ ಪ್ರಥಮ ಭಾಷೆಯಾಗಿ ತಮಿಳನ್ನು ಕಡ್ಡಾಯ ಮಾಡಲಾಗಿದೆ. ದ್ವಿತೀಯ ಭಾಷೆಯನ್ನಾಗಿ ಯಾವ ಭಾಷೆಯನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ಹಾಗಾಗಿ ಅಲ್ಲಿನ ಇಂಗ್ಲೀಷ್ ಶಿಕ್ಷಣ ಸಂಸ್ಥೆಗಳಲ್ಲಿ ತಮಿಳು ಭಾಷೆಯನ್ನು ಅಲ್ಲಿನ ಸರ್ಕಾರಿ ಶಾಲೆಗಳ ಮಕ್ಕಳು ಕಲಿಯುತ್ತಿದ್ದಾರೆ.
ತಮಿಳುನಾಡಿನ ಮಾದರಿಯಲ್ಲಿ ಶಿಕ್ಷಣ ನೀತಿಯನ್ನು ಜಾರಿ ಮಾಡಬೇಕಾದ ಕರ್ನಾಟಕ ಸರ್ಕಾರ  ತನ್ನ ಪಂಚೇಂದ್ರಿಯಗಳನ್ನು ಕಳೆದುಕೊಂಡಂತೆ ವರ್ತಿಸುತ್ತಿದೆ. ಇದರ ಜೊತೆಗೆ ಇಲ್ಲಿನ ದಲಿತರು, ಹಿಂದುಳಿದ ವರ್ಗದವರು ಮತ್ತು ಶೂದ್ರರಿಗೆ ಇಂಗ್ಲೀಷ್ ಶಿಕ್ಷಣದಿಂದ ಮಾತ್ರ ನಮ್ಮ ಮಕ್ಕಳಿಗೆ ಮುಕ್ತಿ ಮತ್ತು ಮೋಕ್ಷ ಎಂದು ನಂಬಿರುವುದು. ಬಹು ದೊಡ್ಡ ದುರಂತ.ಕರ್ನಾಟಕ ಸರ್ಕಾರವು ಶಿಕ್ಷಣದ ಹಕ್ಕು ಕಾಯ್ದೆಯಡಿ ( ಆರ್.ಟಿ.ಇ.) ಖಾಸಾಗಿ ಇಂಗ್ಲೀಷ್ ಶಿಕ್ಷಣ ಸಂಸ್ಥೆಗಳಿಗೆ ಬಡ ಮತ್ತು ಮಧ್ಯಮ ವರ್ಗದ ಮಕ್ಕಳನ್ನು ಬಲವಂತವಾಗಿ ನೂಕುತ್ತಿದೆ. ಜೊತೆಗೆ ವಾರ್ಷಿಕವಾಗಿ ಸುಮಾರು ಮುನ್ನೂರು ಕೋಟಿ ರೂಪಾಯಿ ಹಣವನ್ನು ಶುಲ್ಕದ ರೂಪದಲ್ಲಿ ಖಾಸಾಗಿ ಸಂಸ್ಥೆಗಳಿಗೆ ಪಾವತಿಸುತ್ತಾ ಬಂದಿದೆ. ಮಾತೃ ಭಾಷೆಯ ಕುರಿತು ಜ್ಞಾನ ವಿರುವ, ಅಥವಾ ಕನಿಷ್ಠ ವಿವೇಕವಿರುವ ಯಾವೊಬ್ಬ ವ್ಯಕ್ತಿಯೂ ಮಾಡುವ ಕೆಲಸ ಇದಲ್ಲ.
2013 ರಿಂದ 2017 ರವರೆಗೆ ಕರ್ನಾಟಕ ರಾಜ್ಯದಲ್ಲಿ ಎಂಟು ಲಕ್ಷ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಿಂದ ಇಂಗ್ಲೀಷ್ ಮಾಧ್ಯಮಕ್ಕೆ ವಲಸೆ ಹೋಗಿದ್ದಾರೆ. ಅಂದರೆ, ಸರಾಸರಿ ವರ್ಷವೊಂದಕ್ಕೆ ಎರಡು ಲಕ್ಷ ಮಕಳ್ಳು ಕನ್ನಡ ಶಾಲೆಯನ್ನು ತೊರೆಯುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ, ಇನ್ನೊಂದು ದಶಕದಲ್ಲಿ ಕನ್ನಡ ಶಾಲೆಗಳು ಸಂಪೂರ್ಣ ಮುಚ್ಚಿ ಹೋದರೂ ಆಶ್ಚರ್ಯವಿಲ್ಲ. ಇತ್ತೀಚೆಗೆ ಕನ್ನಡ ಅಬಿವೃದ್ಧಿ ಪ್ರಾಧಿಕಾರ ನಡೆಸಿದ ಅಧ್ಯಯನ ವರದಿಯ ಪ್ರಕಾರ ಒಂದು ವರ್ಷದ ಅವಧಿಯಲ್ಲಿ  ಸರಿಸುಮಾರು ಹತ್ತು ಸಾವಿರ ಕನ್ನಡ ಶಾಲೆಗಳು ಮುಚ್ಚಿ ಹೋಗಿದ್ದರೆ, ಅಷ್ಟೇ  ಸಂಖ್ಯೆಯಲ್ಲಿ ಇಂಗ್ಲೀಷ್ ಶಾಲೆಗಳು ಆರಂಭಗೊಂಡಿವೆ. ಸರ್ಕಾರವೇ ನಡೆಸಿರುವ ಈ ಅಧಿಕೃತ ವರದಿಯು, ನಮ್ಮ ಪೋಷಕರ ಮನಸ್ಥಿತಿಗೆ ಮತ್ತು ಸರ್ಕಾರಗಳ ಇಚ್ಚಾಶಕ್ತಿಯ ಕೊರತೆಗೆ ಕನ್ನಡಿ ಹಿಡಿದಂತಿದೆ. ಕನ್ನಡ ಶಾಲೆಯಿಂದ ಹೋಗುವ ಮಕ್ಕಳ ವಲಸೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಕ್ಕಳಿಗೆ ಒಂದನೆಯ ತರಗತಿಯಿಂದ ಇಂಗ್ಲೀಷ್ ಕಲಿಸಲಾಗುವುದು ಎಂಬ ಅವಿವೇಕದ ಮಾತನ್ನು ಸರ್ಕಾರ ಆಡುತ್ತಿದೆ. ಈಗ ಇರುವ ಶಿಕ್ಷಕರಿಗೆ ಮಾತೃಭಾಷೆಯನ್ನು ಪರಿಣಾಮಕಾರಿಯಾಗಿ ಬೋಧನೆ ಮಾಡಲು ಬರುವುದಿಲ್ಲ, ಇನ್ನೂಇಂಗ್ಲೀಷ್ ಭಾಷೆಯನ್ನು ಹೇಗೆ ಕಲಿಸುತ್ತಾರೆ. ಇಂಗ್ಲೀಷ್ ನಲ್ಲಿ ಪದವಿ, ಮತ್ತು ಬಿ.ಎಡ್. ಮಾಡಿರುವ ಶಿಕ್ಷಕರು ಪ್ರಾಥಮಿಕ ಶಾಲೆಯಲ್ಲಿ ಪಾಠ ಮಾಡಲು ಬರುತ್ತಾರಾ? ಹೋಗಲಿ ಅವರು ಬರಲು ಸಿದ್ದರಿದ್ದರೂ ಸಹ ಅವರ ಶಿಕ್ಷಣದ ಅರ್ಹತೆಗೆ ತಕ್ಕಂತೆ ಸರ್ಕಾರ ವೇತನ ನೀಡಲು ಸಿದ್ಧವಿದೆಯಾ? ಕಳೆದ ಐದಾರು ವರ್ಷಗಳಿಂದ ಕರ್ನಾಟಕದ ಪ್ರಾಥಮಿಕ ಶಾಲೆಗಳು ಹದಿನಾರು ಸಾವಿರ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿವೆ. ಹತ್ತು ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದು ಈ ಸರ್ಕಾರ ಕಳೆದ ಒಂದು ವರ್ಷದಿಂದ ಹೇಳುತ್ತಲೇ ಬಂದಿದೆ. ಆದರೆ ಅದು ಇನ್ನೂ ಜಾರಿಯಾಗಿಲ್ಲ. ಇನ್ನುಇಂಗ್ಲೀಷ್ ಭಾಷೆಯನ್ನು ಕಲಿಸುತ್ತೇವೆ ಎಂಬ ಮಾತು ಕನ್ನಡಿಗರ ಕಿವಿಯ ಮೇಲೆ ಹೂವು ಇಡುವ ಪ್ರಸ್ತಾಪದಂತೆ ಕೇಳಿಸುತ್ತಿದೆ.
ಮಾತೃಭಾಷೆ  ಕುರಿತಂತೆ ಸರ್ಕಾರದ ಅಥವಾ ಸಮಾಜದ ನಿರ್ಲಕ್ಷ್ಯ ಇದೇ ರೀತಿ ಮುಂದುವರಿದರೆ,ಭವಿಷ್ಯದ ಕನ್ನಡದ ಸಾಹಿತ್ಯ ಮತ್ತು ಸಂಸ್ಕೃತಿಯ ಅಸ್ತಿತ್ವದ ಪ್ರಶ್ನೆಯನ್ನು ನಾವು ಎದುರಿಸಬೇಕಾಗುತ್ತದೆ. ಈಗಾಗಲೇ ಕನ್ನಡ ಮಾಧ್ಯಮ ಶಿಕ್ಷಣ ಕುರಿತಂತೆ ಈ ನಾಡಿನ ಶಿಕ್ಷಣ ತಜ್ಞರು ಹಾಗೂ ಚಿಂತಕರು ಅನೇಕ ಸಲಹೆಗಳನ್ನು ನೀಡಿದ್ದಾರೆ. ಶ್ರೀ ಚಂದ್ರಶೇಖರ್ ದಾಮ್ಲೆ, ಶ್ರೀ ವೆಂಕಟೇಶ್ ಮಾಚಕನೂರು ಹಾಗೂ ಕವಿ ಜಿ.ಎಸ್.ಶಿವರುದ್ರಪ್ಪನವರ ಪುತ್ರರಾದ ಜಯದೇವ್ ಹಾಗೂ ಡಿ.ಎಸ್.ನಾಗಭೂಷಣ್, ದೇವನೂರು ಮಹಾದೇವ ಹೀಗೆ ಹಲವಾರು ಚಿಂತಕರು ಕಳೆದ ಎರಡು –ಮೂರು ವರ್ಷಗಳಿಂದ ನಿರಂತರವಾಗಿ ಪತ್ರಿಕೆಗಳಲ್ಲಿ ಬರೆಯುತ್ತಾ, ಮಾತನಾಡುತ್ತಾ ಬಂದಿದ್ದಾರೆ. ಇವರುಗಳ ಜೊತೆಗೆ ಕಳೆದ ಒಂದು ದಶಕದಿಂದ ಬೆಂಗಳೂರಿನಲ್ಲಿ ಬನವಾಸಿ ಬಳಗ ಎಂಬ ತಂಡವನ್ನು ರಚಿಸಿಕೊಂಡು ಕನ್ನಡದ ಅಸ್ಮಿತೆ ಯನ್ನು ಉಳಿಸಿಕೊಳ್ಳಲು ವಸಂತ್ ಶೆಟ್ಟಿ, ಜಿ.ಆನಂದ್ ಮತ್ತು ಕಿರಣ್ ಹಾಗೂ ಗೆಳೆಯ ಶ್ರಮವನ್ನು ನೋಡಿದರೆ  ಆಶ್ಚರ್ಯವಾಗುತ್ತದೆ.
 ಕನ್ನಡ ಪರ ಹೋರಾಟವೆಂದರೆ,  ದಂಧೆಯಾಗಿರುವ, ವಸೂಲಿವೀರರ ಉದ್ಯಮವಾಗಿರುವ ಈ ದಿನಗಳಲ್ಲಿ ತಮ್ಮ ದಿನನಿತ್ಯದ ವೃತ್ತಿ ಹಾಗೂ ವ್ಯವಹಾರಗಳ ಜೊತೆ ಅವರು ಕನ್ನಡವನ್ನು ಉಳಿಸಿಕೊಳ್ಳುವಲ್ಲಿ ಅವರು ಶ್ರಮಿಸುತ್ತಿರುವ ಪರಿ ಅಚ್ಚರಿ ಮೂಡಿಸುತ್ತದೆ. 2007 ರಿಂದ ಸತತವಾಗಿ “ ಏನ್ ಗುರು? ಕಾಫಿ ಆಯ್ತಾ? ಎಂಬ ಹೆಸರಿನಲ್ಲಿ ಬ್ಲಾಗ್ ಆರಂಭಿಸಿ ಕನ್ನಡದ ಬಗ್ಗೆ ಬರೆಯುತ್ತಾ ಬಂದಿರುವ ಈ ಗೆಳೆಯರು  ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ ಹಲವು ಕಿರುಚಿತ್ರಗಳನ್ನು ನಿರ್ಮಿಸಿ ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುತ್ತಾ ಬಂದಿದ್ದಾರೆ.
                                                  ಜಿ.ಆನಂದ್
ಜಿ.ಆನಂದ್ ಬರೆದಿರುವ “ ಬಾರಿಸು ಕನ್ನಡ ಡಿಂಡಿಮ” ಶೀರ್ಷಿಕೆಯಡಿ ಐದು ಕೃತಿಗಳನ್ನು ಹೊರತಂದಿದ್ದು ಕನ್ನಡ ನಾಡು ನುಡಿ ಕುರಿತು ದಾಖಲಿಸಿರುವ ಅನೇಕ ಚಿಂತನೆಗಳು ಕನ್ನಡಿಗರನ್ನು ಉದ್ದೀಪಿಸುವಂತಿವೆ. ಹಿಂದಿ ಹೇರಿಕೆ ಕುರಿತಂತೆ ಬರೆದಿರುವ ಕೃತಿಯು ಭಾಷೆ ಕುರಿತಂತೆ ಸರ್ಕಾರದ ಎಡವಟ್ಟುಗಳನ್ನು ನಮ್ಮ ಮುಂದೆ ತೆರದಿಡುತ್ತದೆ.
                                                       ವಸಂತ್  ಶೆಟ್ಟಿ
ವಸಂತ ಶೆಟ್ಟಿಯವರು ತಮ್ಮ ಬ್ಲಾಗಿನಲ್ಲಿ, ಒನ್ ಇಂಡಿಯಾ, ಅಂತರ್ಜಾಲ ಪತ್ರಿಕೆಯಲ್ಲಿ ಮತ್ತು ಕನ್ನಡದ ಸಂಜೆ ದಿನಪತ್ರಿಕೆಯೊಂದರಲ್ಲಿ ಬರೆದ ಅಂಕಣ ಬರಹವು “ ಏನ್ ಗುರು ಕಾಫಿ ಆಯ್ತಾ? ಹೆಸರಿನಲ್ಲಿ ಕೃತಿಯ ರೂಪದಲ್ಲಿ ಪ್ರಕಟವಾಗಿದೆ. 420 ಪುಟಗಳಷ್ಟಿರುವ ಈ ಕೃತಿಯ ಬರಹಗಳು  ಕನ್ನಡ ಭಾಷೆಯ ಹಲವಾರು ಮಗ್ಗಲುಗಳನ್ನು ಗಂಭೀರವಾಗಿ ಚರ್ಚಿಸಿವೆ. ವಸಂತ್ ಶೆಟ್ಟಿಯವರು ಕನ್ನಡ –ಸಂಸ್ಕೃತ ನಡುವಿನ ಸಂಬಂಧ, ಆಡು ಭಾಷೆಯ ಕನ್ನಡ, ವ್ಯಾಕರಣ ಇತ್ಯಾದಿಗಳ ಕುರಿತು ವಿದ್ವತ್ ಪೂರ್ಣವಾಗಿ ಚರ್ಚಿಸಿದ್ದಾರೆ.

ಕನ್ನಡ ಭಾಷೆಯನ್ನು ಉಳಿಸಿಕೊಳ್ಳಬೇಕು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಇರಬೇಕು ಎಂದು ಶ್ರಮಿಸುತ್ತಿರುವ ಈ ಗೆಳೆಯರ ಪ್ರೀತಿಯು  ನಮ್ಮ ಕನ್ನಡ ನಾಡಿನ ಮಕ್ಕಳ ಪೋಷಕರಿಗೆ ಮತ್ತು ಸರ್ಕಾರಕ್ಕೆ  ಹಾಗೂ ಜನಪ್ರತಿನಿಧಿಗಳಿಗೆ  ಏಕಿಲ್ಲ ಎಂಬ ಪ್ರಶ್ನೆಯು ನಿರಂತರವಾಗಿ ನನನ್ನು ಕಾಡುತ್ತಿದೆ. ಜೊತೆಗೆ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ವಾಸವಾಗಿರುವ ಸರ್ಕಾರಿ ಕನ್ನಡ ಶಾಲೆಯ ಶಿಕ್ಷಕರು ತಮ್ಮ ಮಕ್ಕಳನ್ನು ಇಂಗ್ಲೀಷ್ ಶಾಲೆಗೆ ಬಿಟ್ಟು ನಂತರ ಮೋಟಾರ್ ಬೈಕ್ ಏರಿ ಹಳ್ಳಿಗಳ ಶಾಲೆಯತ್ತ ಹೋಗುವುದನ್ನು ನೋಡಿದಾಗ ಮನಸ್ಸು ಮುದುಡಿ ಹೋಗುತ್ತದೆ. ಏಕೆಂದರೆ, ಹರ ಕೊಲ್ಲಲ್ ಪರ ಕಾಯ್ವನೆ? ಎಂಬಂತಿದೆ ಕನ್ನಡದ ಸ್ಥಿತಿ.
( ಕರಾವಳಿ ಮುಂಜಾವು ದಿನಪತ್ರಿಕೆಯ " ಜಗದಗಲ" ಅಂಕಣ ಬರಹ)