ಭಾನುವಾರ, ಅಕ್ಟೋಬರ್ 22, 2017

ಮಂಜರಿ ಖಟ್ಜು ತೆರೆದಿಟ್ಟ ದೇಶಭಕ್ತರ ಜಾತಕಗಳು


 ಭಾರತದಂತಹ ಜಾತಿ ಪ್ರಧಾನವಾದ ದೇಶದಲ್ಲಿ  ಧರ್ಮಗಳು ಅತ್ಯಂತ ಸೂಕ್ಷ್ಮವಾದ ವಿಷಯವಾಗಿರುವುದರಿಂದ  ಇವುಗಳ ವಿಶ್ಲೇಷಣೆ ಅಥವಾ ಯಾವ ಸಂದರ್ಭದಲ್ಲಿ ಇವುಗಳನ್ನು ಬಳಸಬೇಕು ಎಂಬ ಎಚ್ಚರಿಕೆ ಇರಬೇಕು.  ಎಲ್ಲಾ ರಂಗಗಳ ಮುಂಚೂಣಿಯಲ್ಲಿರುವ ನಾಯಕರಿಗೆ ಸೂಕ್ಷ್ಮತೆ ತಿಳಿದಿತ್ತು. ಜೊತೆಗೆ ಅನೇಕ ಧಾರ್ಮಿಕ ಮುಖಂಡರು, ಮಠಾಧೀಶರು,  ಸ್ವಯಂಘೋಷಿತ ದೇವಮಾನವರೆಂಬ ಸ್ವಾಮೀಜಿಗಳು ಧರ್ಮವನ್ನು ಮನುಷ್ಯನೊಬ್ಬನ ಔನ್ನತ್ಯಕ್ಕೆ ಹಾಗೂ ಸಮುದಾಯದ ಏಳಿಗೆಗೆ ಬಳಸಿಕೊಳ್ಳುತ್ತಿದ್ದರು. ಧರ್ಮ-ಧರ್ಮಗಳ ನಡುವೆ ಅನೇಕ ಭಿನ್ನಾಭಿಪ್ರಾಯಗಳಿದ್ದರೂ ಸಹ ಬಹು ಸಂಸ್ಕತಿಯ ನೆಲವಾದ ಭಾರತದ ನೆಲದಲ್ಲಿ ಒಂದು ರೀತಿಯ ಏಕರೂಪತೆ ಎದ್ದು ಕಾಣುತ್ತಿತ್ತು.
ಧರ್ಮವೆನ್ನುವುದು ಅತ್ಯಂತ ಸೂಕ್ಷ್ಮ ಮತ್ತು ಮನುಷ್ಯನೊಬ್ಬನ ಖಾಸಾಗಿ ನಂಬಿಕೆ ಅಥವಾ ನಡುವಳಿಕೆ ಎಂದು ನಂಬಿಕೊಂಡಿದ್ದ ಭಾರತದಲ್ಲಿ  ಬಹುತೇಕ ರಾಜಕೀಯ ಪಕ್ಷಗಳು ಮತ್ತು ನಾಯಕರು ಧರ್ಮವನ್ನು ಎಂದಿಗೂ ರಾಜಕೀಯದೊಂದಿಗೆ ಬೆರಸದೆ, ಅದನ್ನು ವೈಯಕ್ತಿಕ ಹಿತಾಸಕ್ತಿಗೆ ಬಳಸದೆ ಒಂದು ರೀತಿಯಲ್ಲಿ ನಿರ್ಧಿಷ್ಟ ಅಂತರವನ್ನು ಕಾಯ್ದುಕೊಂಡು ಬಂದಿದ್ದರು. ಆದರೆ, ಕಳೆದ ಕಾಲಶತಮಾನದ ಅವಧಿಯಲ್ಲಿ ಹಿಂದೂ ಧರ್ಮದ ರಕ್ಷಣೆ ಹೆಸರಿನಲ್ಲಿ, ಹಿಂದೂ ರಾಷ್ಟ್ರ ನಿರ್ಮಾಣ ನಮ್ಮ ಮೂಲಗುರಿ ಎಂದು ಹೇಳಿಕೊಳ್ಳುತ್ತಾ, ರಾಜಕೀಯಕ್ಕೆ ಧರ್ಮವನ್ನು ಮತ್ತು ಧರ್ಮಕ್ಕೆ ರಾಜಕೀಯವನ್ನು ಬೆರೆಸುವುದರ ಮೂಲಕ ಭಾರತದ ಬಹುಮುಖಿ ಸಂಸ್ಕತಿಗೆ ಅಪಾಯವನ್ನು  ಒಡ್ಡಲಾಗಿದೆ. ಜೊತೆಗೆ ಎಲ್ಲವನ್ನೂ, ಎಲ್ಲರನ್ನೂ ಏಕರೂಪತೆಗೆ ಒಗ್ಗಿಸಲು ಪ್ರಯತ್ನಿಸುತ್ತಿರುವ ವಿಶ್ವ ಹಿಂದೂ ಪರಿಷತ್, ರಾಷ್ರ್ರೀಯ ಸ್ವಯಂ ಸೇವಾ ಸಂಘಟನೆಗಳ ಇತ್ತೀಚೆಗಿನ ಕಾರ್ಯವೈಖರಿ ಮತ್ತು ಅವುಗಳ ಮರೆ ಮಾಚಿದ ಗೊತ್ತು ಗುರಿಗಳು ಧರ್ಮಾತೀತ ಹಾಗೂ ಜಾತ್ಯಾತೀತವಾಗಿ ಬದುಕುತ್ತಿರುವ ಪ್ರಜ್ಞಾವಂತ ನಾಗರೀಕರಲ್ಲಿ ಆತಂಕವನ್ನು ಸೃಷ್ಟಿ ಮಾಡಿವೆ.
ಸಂಘಟನೆಗಳು ಏನೇ ಹೇಳಿಕೊಳ್ಳಲಿ, ಅವುಗಳ ಕಾರ್ಯವೈಖರಿ ಮತ್ತು ಮರೆ ಮಾಚಿದ ಅಜೆಂಡಾಗಳನ್ನು ಸಾಕ್ಷಾಧಾರಗಳ ಸಮೇತ ದೇಶದ ಇತಿಹಾಸ ಹಾಗೂ ರಾಜಕೀಯ ತಜ್ಞರು ದಾಖಲಿಸುತ್ತಾ ಬಂದಿದ್ದಾರೆ. ಹಾಗಾಗಿ ದೇಶ ಭಕ್ತರ ಹುನ್ನಾರಗಳು ಪ್ರತಿ ಸಂದರ್ಭದಲ್ಲಿಯೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅನಾವರಣಗೊಳ್ಳುತ್ತಾ ಬಂದಿವೆ. ವಿಷಯದಲ್ಲಿ ಇತಿಹಾಸ ತಜ್ಞರಾದ ರೋಮಿಲಾ ಥಾಪೂರ್, ಕೆ, ಎಂ. ಫಣಿಕ್ಕರ್, ಇರ್ಫಾನ್ ಹಬೀಬ್ ಮತ್ತು ಸಮಾಜಶಾಸ್ತ್ರಜ್ಞರಾದ ಆಶೀಷ್ ನಂದಿ ಹಾಗೂ ರಾಜಕೀಯ ತಜ್ಞೆಯಾಗಿರುವ ಡಾ.ಮಂಜರಿ ಖಟ್ಜು, ಹಾಗೂ ಮೃದುಲಾ ಮುಖರ್ಜಿ ಮತ್ತು ಸುಚೇತಾ ಮಹಾಜನ್ ರಂತಹ ಮಹನೀಯರಿಗೆ ಭಾರತದ ನಾಗರೀಕರು ಋಣಿಯಾಗಿರಬೇಕು.
2008 ರಲ್ಲಿ ಮೃದುಲಾ ಮುಖರ್ಜಿ ಮತ್ತು ಸುಚೇತಾ ಮಹಾಜನ್ ಇವರುಗಳು ದೇಶದ ಅನೇಕ ಇತಿಹಾಸ ತಜ್ಞರ ನೆರವಿನಿಂದಆರ್.ಎಸ್.ಎಸ್. ಸ್ಕೂಲ್ ಟೆಕ್ಟ್ಸ್ ಅಂಡ್ ಮರ್ಡರ್ ಆಫ್ ಮಹಾತ್ಮಎಂಬ ಅಪರೂಪದ ಕೃತಿಯನ್ನು ಸಂಪಾದಿಸಿದ್ದರು. ಉತ್ತರ ಭಾರತದಲ್ಲಿ ಬಿ.ಜೆ.ಪಿ. ಅಧಿಕಾರವಿರುವ ರಾಜ್ಯಗಳಲ್ಲಿ ಮತ್ತು ಆರ್.ಎಸ್.ಎಸ್. ದೇಶಾದ್ಯಂತ ನಡೆಸುತ್ತಿರುವ ಶಾಲೆಗಳ ಪಠ್ಯದಲ್ಲಿ ಇತಿಹಾಸವನ್ನು ತಿರುಚುವುದರ ಮೂಲಕ ಮಕ್ಕಳ ಮನಸ್ಸಿಗೆ ವಿಷವನ್ನು ತುಂಬುತ್ತಿರುವ ಬಗೆಯನ್ನು ಕೃತಿಯಲ್ಲಿ  ತಜ್ಞರು ಹಲವು ಸಾಕ್ಷಧಾರಗಳ ಮೂಲಕ ದಾಖಲಿಸಿದ್ದಾರೆ. ಅದೇ ರೀತಿಯಲ್ಲಿ ಮಹಾತ್ಮ ಗಾಂಧಿಯವರ ಹತ್ಯೆಯಲ್ಲಿ ವೀರ್ಸಾವರ್ಕರ್ ಪಾತ್ರ ಕುರಿತು ನಾಥೂರಾಂ ಗೂಡ್ಸೆಯ ವಕೀಲರ ಹೇಳಿಕೆಯಿಂದ ಹಿಡಿದು, ಕೆಂಪುಕೋಟೆಯ ಆವರಣದಲ್ಲಿ ನಡೆದ ವಿಚಾರಣೆಯ ಮಾಹಿತಿಗಳು ಮತ್ತು ಹತ್ಯೆ ಕುರಿತು ಬಾಂಬೆ ಪೋಲಿಸರು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಸುಮಾರು 1800 ಪುಟಗಳ ದಾಖಲೆಗಳಲ್ಲಿ ಅಪರೂಪದ ಅಂಕಿ ಅಂಶಗಳನ್ನು ಹೆಕ್ಕಿ ತೆಗೆದು ಸಂಘ ಪರಿವಾರದ ನಿಜವಾದ ಗೊತ್ತು ಗುರಿಗಳನ್ನು ವಿಶ್ಲೇóಷಣೆಗೆ ಒಳಪಡಿಸಿದ್ದಾರೆ. ಇದೀಗ ಅಂತಹದ್ದೇ ಅಧ್ಯಯನದಲ್ಲಿ ನಿರತರಾಗಿರುವ ಹಾಗೂ ಹೈದರಾಬಾದಿನ ವಿಶ್ವ ವಿದ್ಯಾನಿಲಯದಲ್ಲಿ  1992 ರಿಂದ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕಿಯಾಗಿರುವ ಡಾ. ಮಂಜುಖಟ್ಜು ಅವರು ಎರಡು ಮಹತ್ವದವಿಶ್ವ ಹಿಂದೂ ಪರಿಷತ್ ಅಂಡ್ ಇಂಡಿಯನ್ ಪೊಲಿಟಿಕ್ಸ್ಹಾಗೂಹಿಂದೂಯಿಸಂ ಡೆಮಾಕ್ರಸಿ”  ಎಂಬ ಕೃತಿಗಳನ್ನು ನಮ್ಮ ಮುಂದಿರಿಸಿದ್ದಾರೆ. ಕಳೆದ ಒಂದು ದಶಕದಿಂದ ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿಪತ್ರಿಕೆಗೆ ನಿರಂತರವಾಗಿ ಬರೆಯುತ್ತಿರುವ ಮಂಜರಿಯುವರು ಧರ್ಮ ಮತ್ತು ಜಾತಿಯ ನೆಲೆಗಳಾಚೆ ನಿಂತು ನಿರುದ್ವಿಗ್ನ ಸ್ಥಿತಿಯಲ್ಲಿ ಯೋಚಿಸುತ್ತಾ, ದೇಶದ ರಾಜಕೀಯ ಮತ್ತು ಸಾಮಾಜಿಕ ಸಂಗತಿಗಳನ್ನು ವಿಶ್ಲೇಷಿಸುವ ಪರಿ ನಿಜಕ್ಕೂ ಶ್ಲಾಘನೀಯವಾದುದು. ( ಇವರಿಗೂ ಮತ್ತು ಸದಾ ವಿವಾದಾತ್ಮಕ ಹೇಳಿಕೆ ನೀಡುವ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೆಯ ಖಟ್ಜು ಅವರಿಗೂ ಯಾವುದೇ ಸಂಬಂಧವಿಲ್ಲ)
ತಮ್ಮ ಮೊದಲ ಕೃತಿಯಲ್ಲಿ ವಿಶ್ವ ಹಿಂದೂ ಪರಿಷತ್ ಅಂಡ್ ಇಂಡಿಯನ್ ಪೊಲಿಟಿಕ್ಸ್ ಕೃತಿಯಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾರಂಭವಾದ 1964 ರಿಂದಲೂ ಅದರ ಹೆಜ್ಜೆಯ ಗುರುತುಗಳನ್ನು ದಾಖಲಿಸಿರುವ ಲೇಖಕಿ, 1985 ರಿಂದ ಶ್ರೀರಾಮನ ಹೆಸರನ್ನು ಮುಂಚೂಣಿಗೆ ತಂದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಯೋಜನೆಯ ಕನಸನ್ನು ಜನಸಾಮಾನ್ಯರ ಎದೆಯಲ್ಲಿ ಬಿತ್ತಿದ ಪರಿಯನ್ನು ಹಾಗೂ ಅಯೋಧ್ಯೆಯಲ್ಲಿ ನಡೆದ ಬಾಬರಿ ಮಸೀದಿ ಧ್ವಂಸದ ಪ್ರಕಟರಣದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಅವರುಗಳು ದೇಶದ ಸಾಧು ಮತ್ತು ಸಂತರ ಮೇಲೆ ಬೀರಿದ ಪ್ರಭಾವಗಳನ್ನು ದಾಖಲಿಸಿದ್ದಾರೆ. ಇದರ ಮುಂದುವರಿದ ಭಾಗವಾದ; ಎರಡನೇಯ ಅಧ್ಯಯನ ಕೃತಿಯಲ್ಲಿ ಅಂದರೆ, 2017 ರಲ್ಲಿ ಪ್ರಕಟವಾದ ಹಿಂದೂಯಿಸಂ ಡೆಮಾಕ್ರಸಿ ಕೃತಿಯಲ್ಲಿ 1992 ರಿಂದ 2013 ರವರೆಗೆ ರಾಮಮಂದಿರ ನಿರ್ಮಾಣದ ಯೋಜನೆಯನ್ನು ಜೀವಂತವಾಗಿಡಲು ವಿ.ಹೆಚ್,ಪಿ. ನಡೆಸಿದ ಹೋರಾದಿಂದ ಹಿಡಿದು, 2014 ಸಾರ್ವತ್ರಿಕ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿ.ಜೆ.ಪಿ. ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಧಾರ್ಮಿಕರ ಮುಖಂಡರನ್ನು ಸಂಸತ್ತಿಗೆ ಪ್ರತಿನಿಧಿಗಳಾಗಿ ಆಯ್ಕೆ ಮಾಡುವುದರ ಮೂಲಕ ಹಿಂದೂ ರಾಷ್ಟ್ರವಾದಿಗಳು ಅಧಿಕ ಸಂಖ್ಯೆಯಲ್ಲಿ ಇರುವಂತೆ ನೋಡಿಕೊಳ್ಳುವ ಕಾರ್ಯಯೋಜನೆಯನ್ನು ಬಣ್ಣಿಸಿದ್ದಾರೆ. ಯೋಗಿ ಆದಿತ್ಯನಾಥ್, ಸಾಕ್ಷಿ ಮಹಾರಾಜ್, ಉಮಾ ಭಾರತಿ ಹೋಗೆ ಹಲವು ಹೆಸರುಗಳನ್ನು ಮಂಜರಿಯವರು ಪ್ರಸ್ತಾಪಿಸಿದ್ದಾರೆ.
ಮೇಲು ನೋಟಕ್ಕೆ ಆರ್.ಎಸ್.ಎಸ್, ಮತ್ತು ವಿ.ಹೆಚ್,ಪಿ. ಎರಡೂ ಸಂಘಟನೆಗಳು ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಘಟನೆಗಳಂತೆ ಹಾಗೂ ಭಾರತೀಯ ಜನತಾ ಪಕ್ಷವು ( ಬಿ.ಜೆ.ಪಿ.) ರಾಜಕೀಯ ಸಂಘಟನೆಯಂತೆ ಕಂಡು ಬಂದರೂ ಸಹ ಮೂರು ಸಂಘಟನೆಗಳ ಹೃದಯ ಮತ್ತು ಮಿದುಳು ಒಂದೇ ಆಗಿದ್ದು, ಯೋಜಿತ ಗುರಿ ಕೂಡ ಒಂದೇ ಆಗಿದೆ ಎನ್ನುವ ಮಂಜರಿ ಖಟ್ಜು ಅವರು, ವಿಶ್ವ ಹಿಂದೂ ಪರಿಷತ್ ದೃಷ್ಟಿಕೋನದಲ್ಲಿ  ಭಾರತಕ್ಕೆ 1947 ರಲ್ಲಿ  ಸ್ವಾತಂತ್ರ್ಯ ಬಂದಿದ್ದರೂ ಸಹ, ಅದು ಹಿಂದೂಗಳಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ. ಸಂಪೂರ್ಣ ಹಿಂದೂ ರಾಷ್ಟ್ರದ ನಿರ್ಮಾಣವಾಗಿ ರಾಮರಾಜ್ಯ ಸ್ಥಾಪನೆಯಾದಾಗ  ಮಾತ್ರ ಭಾರತದ ಹಿಂದೂಗಳಿಗೆ ಸ್ವಾತಂತ್ರ್ಯ ಸಿಗಲಿದೆ ಎಂಬ ಸಂಘ ಪರಿವಾರದ ಅಜೆಂಡಾವನ್ನು ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದಾರೆ. ಕಾರಣಕ್ಕಾಗಿ ವಿಶ್ವ ಹಿಂದೂ ಪರಿಷತ್ ದೇಶಾದ್ಯಂತ ನಡೆಸುತ್ತಿರುವ ಶಿಕ್ಷಣ ಸಂಸ್ಥೆ, ಆರೋಗ್ಯ ಸೇವಾ ಸಂಸ್ಥೆಗಳು, ಆಯೋಜಿಸುತ್ತಿರುವ ಮೇಳಗಳು, ಶಿಬಿರಗಳು, ಯಾತ್ರೆಗಳ ವಿವರನ್ನು ನೀಡುವುದರ ಜೊತೆಗೆ ಭಾರತದ ಮೇಲ್ವರ್ಗ ಮತ್ತು ಮಧ್ಯಮ ವರ್ಗದ ಮನ ಗೆದ್ದಿರುವ ಸಂಘ ಪರಿವಾರ ಇದೀಗ ಹಳ್ಳಿಗಳತ್ತ ಗಮನ ಹರಿಸಿ, ದಲಿತರು ಮತ್ತು ಆದಿವಾಸಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿರುವ ಕ್ರಮವನ್ನು ವಿವರಿಸಿದ್ದಾರೆ. ಸದಾ ಅನ್ಯ ಧರ್ಮಿಯರ ಮೇಲೆ ಕೆಂಡ ಕಾರುವುದು, ಅವರ ಆಚರಣೆಗಳನ್ನು ಬಹಿರಂಗವಾಗಿ ಖಂಡಿಸುವುದು ಹಾಗೂ ಅಧಿಕಾರದಿಂದ ದೂರ ಉಳಿದುಕೊಂಡಂತೆ ಇದ್ದರೂ ಸಹ ಆಳುವ ಸರ್ಕಾರದ ಮೇಲೆ ಒತ್ತಡ ಹೇರುವುದರ ಮೂಲಕ ಮಸೂದೆಗಳನ್ನು ಜಾರಿಗೆ ತರುವುದರ ಮೂಲಕ ಅನ್ಯ ಧರ್ಮಗಳು ಮತ್ತು ಸಂಸ್ಕತಿಯ ಮೇಲೆ ಅಧಿಕಾರ ಸ್ಥಾಪಿಸುವ ಹುನ್ನಾರವನ್ನು ಅಂಕಿ ಅಂಶಗಳು ಮತ್ತು ಘಟನೆಗಳ ಮೂಲಕ ಓದುಗರ ಮುಂದಿಟ್ಟಿದ್ದಾರೆ.
ಡಾ. ಮಂಜರಿ ಖಟ್ಜು ಅವರ ಈ ಕೃತಿಗಳು ಕೇವಲ ಸಂಘ ಪರಿವಾರಕ್ಕೆ ಮಾತ್ರವಲ್ಲ, ಜಾತ್ಯಾತೀತ ಅಥವಾ ಧರ್ಮಾತೀತ ಎಂದು ಹೇಳಿಕೊಳ್ಳುವ ಎಲ್ಲಾ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆಯ ಸಂದೇಶದಂತೆ ಇವೆ. ಜಾತಿ ಮತ್ತು ಧರ್ಮವನ್ನು ನಂಬಿ ರಾಜಕಾರಣ ಮಾಡುತ್ತಿರುವ ಇಂದಿನ ರಾಜಕೀಯ ಸನ್ನಿವೇಶದಲ್ಲಿ ಧರ್ಮದ ಅಮಲನ್ನು ಅಥವಾ ಉನ್ಮಾದವನ್ನು ಜನ ಮಾನಸದಲ್ಲಿ  ನಿರಂತರ ಕಾಯ್ದುಕೊಳ್ಳುವುದು ಕಷ್ಟ ಎಂಬುದು ಮನವರಿಕೆಯಾಗುತ್ತದೆ. ಏಕೆಂದರೆ, ಇದೊಂದು ರೀತಿಯಲ್ಲಿ ಹುಲಿಯ ಮೇಲಿನ ಸವಾರಿ ಇದ್ದಂತೆ. ವಿಷದ ಹಾವಿಗೆ ಹಾಲೆರೆದ ಮಾತ್ರಕ್ಕೆ ಅದು ನಮ್ಮನ್ನು ಕಚ್ಚುವುದಿಲ್ಲ ಎಂದು ನಂಬುವುದು ಅವಿವೇಕತನವಾಗುತ್ತದೆ. ಇದಕ್ಕೆ ಉದಾಹರಣೆಯಾಗಿ 2014 ರ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಏರಿದ ನಂತರ ಪ್ರಧಾನಿ ನರೇಂದ್ರ ಮೋದಿಯವರು ನಡೆಸುತ್ತಿರುವ ಕಸರತ್ತುಗಳು ಈಗ ನಮ್ಮೆದುರು ಸಾಕ್ಷಿಯಾಗಿವೆ.

( ಕರಾವಳಿ ಮುಂಜಾವು ಪತ್ರಿಕೆಯಲ್ಲಿ ಪ್ರಕಟವಾದ “ಜಗದಗಲ” ಅಂಕಣ ಬರಹ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ