ಬುಧವಾರ, ಅಕ್ಟೋಬರ್ 18, 2017

ನೇಪಾಳದ ಜೀವಂತ ದೇವತೆಗಳ ಕ್ರೌರ್ಯದ ಕಥನ


ಜಗತ್ತಿನ ಏಕೈಕ ಪರಿಪೂರ್ಣವಾದ ಹಿಂದೂ ರಾಷ್ಟ್ರ ಎನಿಸಿರುವ ನಮ್ಮ ನೆರೆಯ ನೇಪಾಳದಲ್ಲಿ ಇಂದಿಗೂ ಆಚರಣೆಯಿರುವ ಪ್ರಾಣಿ ಬಲಿಯ ಪದ್ಧತಿ ಮತ್ತು ಋತುಮತಿಯಾಗದಿರುವ ಹೆಣ್ಣುಮಗಳನ್ನು ಜೀವಂತೆ ದೇವತೆಯಾಗಿ ಆಯ್ಕೆ ಮಾಡಿ ಅವಳನ್ನು ಕುಮಾರಿ ಎಂಬ ಹೆಸರಿನಲ್ಲಿ ಪೂಜಿಸುವ ಕ್ರಮ ಇವೆಲ್ಲವೂ ಇಪ್ಪತ್ತೊಂದನೆಯ ಶತಮಾನದ ನಾಗರೀಕ ಜಗತ್ತು ವಿಸ್ಮಯ ಪಡುವುದರ ಜೊತೆಗೆ ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದೆ.
ಕಳೆದ ಸೆಪ್ಟಂಬರ್ ಕೊನೆಯ ವಾರದಲ್ಲಿ ನೇಪಾಳದ ಕಠ್ಮಂಡು ನಗರದಲ್ಲಿ ಅಲ್ಲಿನ ಜನತೆ ಮೂರು ವರ್ಷದ ತ್ರಿಷ್ಣಾ ಶಾಕ್ಯ ಎಂಬ ಹೆಣ್ಣು ಮಗಳು ನೂತನ ಕುಮಾರಿಯಾಗಿ ಅರ್ಥಾತ್ ಜೀವಂತ ದೇವತೆಯಾಗಿ ಆಯ್ಕೆ ಮಾಡಿಕೊಂಡಿದೆ. ಇನ್ನು ಮುಂದೆ ಈಕೆ  ಋತುಮತಿಯಾಗುವವರೆಗೂ ಕಠ್ಮಂಡು ನಗರದ ಕೇಂದ್ರಭಾಗದಲ್ಲಿರುವ ದೇವಸ್ಥಾನದ ಅರಮನೆಯಲ್ಲಿ ಜೀವಂತ ದೇವತೆಯಾಗಿದ್ದುಕೊಂಡು, ತನ್ನನ್ನು ಕಾಣಲು ಬರುವ ಭಕ್ತರಿಗೆ ಹರಸಬೇಕು. ತಂದೆ,ತಾಯಿ, ಒಡಹುಟ್ಟಿದ ಸಹೋದರರನ್ನು ತ್ಯೆಜಿಸಿ ಬಂದಿರುವ ಈಕೆಗೆ ತನ್ನ ಜೊತೆ ಇರಲು ಇಬ್ಬರು ಸಹವರ್ತಿಗಳನ್ನು ಅಂದರೆ, ಗೆಳತಿಯರನ್ನು ಆಯ್ಕೆ ಮಾಡಿಕೊಳ್ಳಬಹುದು. ಒಂದು ವರ್ಷದಲ್ಲಿ ಹದಿಮೂರು ಬಾರಿ ತಾನು ಹುಟ್ಟಿ ಬೆಳೆದ ಮನೆಗೆ ಹೋಗಿಬರಬಹುದು. ಆದರೆ, ದೇವತೆಯೆಂದು ಪರಿಗಣಿಸಿರುವ ಕುಮಾರಿಯ ಪಾದಗಳು ಯಾವ ಕಾರಣಕ್ಕೂ ಭೂಮಿಯನ್ನು ಸ್ಪರ್ಶಿಸಕೂಡದು. ಇಂತಹ ವಿಚಿತ್ರ ಆಚರಣೆ ಇರುವ ನೇಪಾಳದಲ್ಲಿ ಬಾಲಕಿಯರನ್ನು ಆಯ್ಕೆ ಮಾಡಿಕೊಳ್ಳುವುದು ಜಗತ್ತಿನ ಅತಿ ದೊಡ್ಡ ದಾರ್ಶನಿಕ ಗೌತಮ ಬುದ್ಧ ಹುಟ್ಟಿ ಬೆಳೆದ ಶಾಕ್ಯ ಎಂಬ ಬುಡಕಟ್ಟು ಸಮುದಾಯದಿಂದ ಎಂಬುದು ಅಚ್ಚರಿಯ ಸಂಗತಿ.
ಇಂತಹ ಪದ್ಧತಿಯು ಹದಿಮೂರನೆಯ ಶತಮಾನದಿಂದ ಆಚರಣೆಗೆ ಬಂದಿತು ಎಂದು ಹೇಳಲಾಗಿದೆ. ಮೊದಲು ಪ್ರತಿ ವರ್ಷ ಕೆಲವು ಸಮುದಾಯಗಳಲ್ಲಿ ಪ್ರತಿ ವರ್ಷ ನವರಾತ್ರಿ ಅಥವಾ ದುರ್ಗಾ ಪೂಜೆಯ ಸಂದರ್ಭಗಳಲ್ಲಿ ಒಂದು ದಿನದ ಮಟ್ಟಿಗೆ ಬಾಲಕಿಯರನ್ನು ದೇವತೆಯನ್ನಾಗಿಸಿ ಮನೆ ಮನೆಗಳಲ್ಲಿ ಪೂಜಿಸುವ ಪದ್ಧತಿ ಇತ್ತು. ಆದರೆ, ಹದಿನೇಳೆನಯ ಶತಮಾನದಿಂದ ರಾಜಮನೆತದಿಂದ ವರ್ಷ ಪೂರ್ತಿ ದೇವತೆಯಾಗಿ ಪೂಜಿಸುವ ಪದ್ಧತಿ ಆಚರಣೆಗೆ ಬಂದಿದೆ ಎಂದು ಇತಿಹಾಸದ ದಾಖಲೆಗಳು ಹೇಳುತ್ತವೆ. ಶಾಕ್ತ ಪಂಥದದೇವಿ ಮಹಾತ್ಮೆಎಂಬ ಪುರಾಣ ಗ್ರಂಥದಲ್ಲಿ ಕುರಿತು ಒಂದಿಷ್ಟು ಮಾಹಿತಿಗಳು ದೊರೆಯುತ್ತವೆ. ಆದರೆ, ಹನ್ನೇರೆಡನೆಯ ಶತಮಾನದಿಂದ ಹದಿನೇಳನೆಯ ಶತಮಾನದವರೆಗೆ ನೇಪಾಳವನ್ನು ಮಲ್ಲ ಸಾಮ್ರಾಜ್ಯದ ಅವಧಿಯಲ್ಲಿ ರೀತಿಯ ಜೀವಂತ ದೇವತೆಗಳ ಪೂಜಾ ಪದ್ಧತಿ ಆಚರಣೆಗೆ ಬಂದಿರುವುದು ದಾಖಲಾಗಿದೆ. ಆದರೆ, ಇದಕ್ಕೆ ನೀಡಿರುವ ಕಾರಣಗಳು ಮಾತ್ರ ಹಲವು ರೂಪದಲ್ಲಿದ್ದು ಮಲ್ಲ ಸಾಮ್ರಾಜ್ಯದ ಹಲವು ದೊರೆಗಳ ಹೆಸರಿನೊಂದಿಗೆ ತಳುಕು ಹಾಕಿಕೊಂಡಿವೆ.
ಒಂದು ಕಥೆಯ ಪ್ರಕಾರ ದೊರೆ ಜಯಪ್ರಕಾಶ ಮಲ್ಲ ಎಂಬ ದೊರೆಯ ಅರಮನೆಗೆ ಸಾಮಾನ್ಯ ಹೆಣ್ಣಿನ ರೂಪದಲ್ಲಿ ಬರುತ್ತಿದ್ದ ಟೆಲಜು ಎಂಬ ದೇವತೆಯು ಪ್ರತಿ ರಾತ್ರಿ ರಾಜನೊಂದಿಗೆ ಪಗಡೆಯಾಟದಲ್ಲಿ ನಿರತಳಾಗುತ್ತಿದ್ದಳು. ಸಂಗತಿಯನ್ನು ಯಾರಿಗೂ ಹೇಳಬಾರದೆಂದು ದೇವತೆ ರಾಜನಿಗೆ ಷರತ್ತು ವಿಧಿಸಿದ್ದಳು. ಒಂದು ರಾತ್ರಿ ರಾಣಿಯು ತನ್ನ ಪತಿಯನ್ನು ಹಿಂಬಾಲಿಸಿಕೊಂಡು ಬಂದು ಅಂತಃಪುರದಲ್ಲಿ ದೃಶ್ಯವನ್ನು ನೋಡಿದ ನಂತರ ಸಿಟ್ಟಿಗೆದ್ದ ದೇವತೆಯು ಅಲ್ಲಿನ ಸಾಮ್ರಾಜ್ಯವನ್ನು ತೊರೆದು ಹೊರಟು ಹೋದಳು. ನಂತರ ದೊರೆಯು ದೇವತೆಯನ್ನು ಸಾಮ್ರಾಜ್ಯವನ್ನು ತೊರೆಯದಂತೆ  ಪ್ರಾರ್ಥಿಸಿಕೊಂಡಾಗ, “ ನೀನು ಶಾಕ್ಯ ಕುಲದ ಒಬ್ಬ ಬಾಲಕಿಯನ್ನು ಆಯ್ಕೆ ಮಾಡಿಕೊಂಡು ಪೂಜಿಸು, ನಾನು ಆಕೆಯ ದೇಹದಲ್ಲಿ ಪ್ರವೇಶ ಪಡೆದು ಜೀವಿಸುತ್ತೇನೆಎಂದು ಅಭಯವಿತ್ತಳಂತೆ.
ಇನ್ನೊಂದು ಕಥೆಯ ಪ್ರಕಾರ, ಮಲ್ಲ ಸಾಮ್ರಾಜ್ಯದ ತ್ರಿಲೋಕ ಮಲ್ಲ ಎಂಬ ರಾಜನು ಪ್ರತಿ ರಾತ್ರಿ ಸ್ತ್ರೀ ರೂಪದ ಟೆಲಜು ಎಂಬ ದೇವತೆಯು ಜೊತೆ ಪಗಡೆಯಾಟದಲ್ಲಿ ನಿರತನಾಗಿರುತ್ತಿದ್ದ. ಒಂದು ರಾತ್ರಿ ಅವಳ ಜೊತೆ ಬಲತ್ಕಾರ ಸಂಭೋಗ ಮಾಡಿದ್ದರಿಂದ ದೇವತೆಯು ಮುನಿಸಿಕೊಂಡು ಸಾಮ್ರಾಜ್ಯವನ್ನು ತೊರೆದು ಹೋದಳು. ರಾಜನು ತಾನು ಮಾಡಿದ ತಪ್ಪನ್ನು ಮನ್ನಿಸು ಎಂದು ದೇವತೆಯಲ್ಲಿ ಪ್ರಾರ್ಥಿಸಿ ಕೊಂಡಾಗ, ಮುಂದೆ ಇಂತಹ ಅನಾಹುತಗಳು ನಡೆಯಬಾರದು ಎಂದು ತೀರ್ಮಾನಿಸಿದ ದೇವತೆಯು ಋತುಮತಿಯಾಗ ಬಾಲಕಿಯನ್ನು ನೀನು ಪೂಜಿಸು, ನಾನು ಅವಳಲ್ಲಿ ಜೀವಿಸಿರುತ್ತೇನೆ. ಆಕೆಯು ಋತುವ್ಮತಿಯಾದ ನಂತರ ಅವಳನ್ನು ತ್ಯೆಜಿಸಿ ಹೊರ ಹೋಗುತ್ತೇನೆ ಎಂದು ತಿಳಿಸಿದಳಂತೆ. ಅದರಂತೆ ಋತುಮತಿಯಾಗದ ಬಾಲಕಿಯರನ್ನು ಜೀವಂತ ದೇವತೆಯಾಗಿ ಪೂಜಿಸುವ ಆಚರಣೆ ನೇಪಾಳದಲ್ಲಿ ಜಾರಿಗೆ ಬಂದಿತು ಎಂದು ಹೇಳಲಾಗುತ್ತಿದೆ. ನೇಪಾಳದ ಹಿಂದುಗಳು ಮತ್ತು ಅಲ್ಲಿನ ಬೌದ್ಧ ಧರ್ಮಿಯರು ಕುಮಾರಿ ಎಂದು ಕರೆಯಲ್ಪಡುವ ಜೀವಂತ ದೇವತೆಯರನ್ನು ಪೂಜಿಸುತ್ತಾರೆ. ಆದರೆ. ನೆರೆಯ ಟಿಬೆಟ್ ಬೌದ್ಧ ಧರ್ಮದ ಅನುಯಾಯಿಗಳು ಇಂತಹ ಆಚರಣೆ ಮತ್ತು ನಂಬಿಕೆಗಳಿಂದ ದೂರವಾಗಿದ್ದು, ಬುದ್ಧನ ಪರಮ ಅನುಯಾಯಿಗಳಾಗಿ ಬೌದ್ಧ ಧರ್ಮಕ್ಕೆ  ನಿಷ್ಠೆಯಿಂದ ಇದ್ದಾರೆ.

ನೇಪಾಳದಲ್ಲಿ ಜೀವಂತ ದೇವತೆಯಾಗಿ ಬಾಲಕಿಯನ್ನು ಆಯ್ಕೆ ಮಾಡುವಾಗ ಹಲವಾರು ಕಟ್ಟು ನಿಟ್ಟಿನ ನಿಯಮಗಳಿವೆ. ಕುರಿತು ಒಂದು ಶೋಧನಾ ಸಮಿತಿಯನ್ನು ರಚಿಸಲಾಗುತ್ತದೆ. ಸಮಿತಿಯ ಸದಸ್ಯರು ಪ್ರಾಥಮಿಕ ಹಂತದಲ್ಲಿ ಹಲವು ಬಾಲಕಿಯರನ್ನು ಆಯ್ಕೆ ಮಾಡಿಕೊಂಡು ಅವರ ಹುಟ್ಟು ಮತ್ತು ಜಾತಕ ಹಾಗೂ ತಂದೆ ತಾಯಿ ಹಾಗೂ ಕೌಟುಂಬಿಕ ಹಿನ್ನಲೆಯನ್ನು ಪರಿಶೀಲಿಸುತ್ತಾರೆ. ಕುಮಾರಿಯಾಗುವ ಬಾಲಕಿಯು ಯಾವುದೇ ವಿಧವಾದ ಕಾಯಿಲೆ ಅಥವಾ ಸೊಂಕು ರೋಗಗಳಿಂದ ಮುಕ್ತವಾಗಿರಬೇಕು, ಆಕೆಯ ಜೀವಿತದಲ್ಲಿ ಒಮ್ಮೆಯು ದೇಹದಿಂದ ಗಾಯದ ರೂಪದಲ್ಲಿ ರಕ್ತ ನೆಲಕ್ಕೆ ಚೆಲ್ಲಿರಬಾರದು, ಆಕೆಯ ಕುತ್ತಿಗೆ ಶಂಕುವಿನ ಆಕಾರದಲ್ಲಿ ಇರಬೇಕು, ದೇಹ ಆಲದ ಮರದಂತೆ, ಕಣ್ಣುಗಳು ಹಸುವಿನ ಕಣ್ಣಿನ ಆಕಾರದಲ್ಲಿ, ತೊಡೆಗಳು ಜಿಂಕೆಯ ತೊಡೆಗಳಂತೆ, ಎದೆಯ ಸಿಂಹದ ಎದೆಯ ರೂಪದಲ್ಲಿ ಮತ್ತು ಧ್ವನಿಯು ಹಂಸ ಪಕ್ಷಿಯ ರೂಪದಲ್ಲಿ ಇರಬೇಕು. ಆಕೆಯ ಬಾಯಿಯ ಎರಡು ದವಡೆಗಳಲ್ಲಿ ಕನಿಷ್ಠ ಇಪ್ಪತ್ತು ಹಲ್ಲುಗಳಿರಬೇಕು, ಕಾರಣಕ್ಕಾಗಿ ಆಯ್ಕೆಯಾಗುವ ಬಾಲಕಿಯನ್ನು ನಗ್ನಗೊಳಿಸಿ, ಆಕೆಯ ಗುಪ್ತಾಂಗದಿಂದ ಹಿಡಿದು, ದೇಹದ ವಿವಿಧ ಅಂಗಗಳನ್ನು ಕೂಲಂಕುಶವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಇಂತಹ ಒಟ್ಟು ಮುವತ್ತಾರು ಪರೀಕ್ಷೆಗಳನ್ನು ಗೆದ್ದು ಬಂದ ಬಾಲಕಿಗೆ ದೇವತೆಯ ಪಟ್ಟವನ್ನು ಕಟ್ಟುಲಾಗುತ್ತದೆ. ಬಾಲಕಿಯು ಋತುಮತಿಯಾದ ಕೂಡಲೇ ಆಕೆಯನ್ನು ದೇವತೆಯ ಸ್ಥಾನದಿಂದ ಕೆಳಕ್ಕಿಳಿಸಲಾಗುತ್ತದೆ. 2008 ರಿಂದ 2014 ರವರೆಗೆ ಮತಿನಾ ಶಾಕ್ಯ ಎಂಬಾಕೆ ಜೀವಂತ ದೇವತೆಯಾಗಿದ್ದಳು. 2014 ರಿಂದ 2017 ರವ ಆಗಸ್ಟ್ ವರೆಗೆ ಪಟನ್ ಕುಮಾರಿ ಎಂಬಾಕೆ ದೇವತೆಯಾಗಿದ್ದು, ಈಗ ಸ್ಥಾನವನ್ನು ತ್ರಿಷ್ಣಾ ಶಾಕ್ಯ ಎಂಬ ಮೂರು ವರ್ಷದ ಬಾಲಕಿ ಅಲಂಕರಿಸಿದ್ದಾಳೆ. ದೇಗುಲದ ಸಮೀಪದಲ್ಲಿ ಇರುವ ರಾಜ್ ಘರ್ ಎಂಬ ನಿವಾಸದಲ್ಲಿ ಇಂತಹ ಜೀವಂತ ದೇವತೆಗಳು ವಾಸವಾಗಿದ್ದುಕೊಂಡು, ರಾಜಮನೆತನದ ಪರಿವಾರದ ಸದಸ್ಯರು ಸೇರಿದಂತೆಭಕ್ತರಿಗೆ ಪ್ರತಿದಿನ ದರ್ಶನ ನೀಡುತ್ತಾರೆ. ಜೀವಂತ ದೇವತೆಗಳ ವಯಸ್ಸಿಗೆ ಅನುಗುಣವಾಗಿ ಇವರನ್ನು ವಿವಿಧ ಹೆಸರಿನಲ್ಲಿ ಕರೆಯಲಾಗುತ್ತದೆ.
ಒಂದನೆಯ ವಯಸ್ಸಿನಲ್ಲಿ ಸಂಧ್ಯಾ, ಎರಡನೆಯ ವಯಸ್ಸಿನಲ್ಲಿ ಸರಸ್ವತಿ, ಮೂರನೆಯ ವಯಸ್ಸಿನಲ್ಲಿ ತ್ರಿದಮೂರ್ತಿ, ನಾಲ್ಕನೆಯ ವಯಸ್ಸಿನಲ್ಲಿ ಕಾಳಿಕಾ, ಐದನೇಯ ವಯಸ್ಸಿಗೆ, ಸುಭಂಗಾ, ಆರನೇ ವಯಸ್ಸಿಗೆ ಉಮಾ, ಏಳನೆಯ ವಯಸ್ಸಿಗೆ ಮಾಲಿನಿ, ಎಂಟಕ್ಕೆ ಕುಚ್ಛಿಕ, ಒಂಬತ್ತಕ್ಕೆ ಕಲಾ ಸಂದರ್ಭಹಾಗೂ ಹತ್ತನೆಯ ವಯಸ್ಸಿಗೆ ಅಪರಾಜಿತ, ಹನ್ನೊಂದನೆಯ ವಯಸ್ಸಿಗೆ ರುದ್ರಣಿ, ಹನ್ನೆರೆಡನೇ ವಯಸ್ಸಿನಲ್ಲಿ ಭೈರವಿ, ಹದಿಮೂರಕ್ಕೆ ಮಹಾಲಕ್ಷ್ಮಿ, ಹದಿನಾಲ್ಕಕ್ಕೆ ಪಿತಾದಾಯಿನಿ, ಹದಿನೈದಕ್ಕೆ ಕ್ಷೇತ್ರಾಗ್ಯ ಎಂತಲೂ  ಮತ್ತು ಹದಿನಾರನೆಯ ವಯಸ್ಸಿನಲ್ಲಿ ಅಂಬಿಕಾ ಎಂತಲೂ ಕರೆಯಲಾಗುತ್ತದೆ. ಆದರೆ, ಸಾಮಾನ್ಯವಾಗಿ ಜೀವಂತ ದೇವತೆಯರುಕುಮಾರಿಯರುಎಂಬ ಹೆಸರಿನಲ್ಲಿ ನೇಪಾಳದಲ್ಲಿ  ಜನಪ್ರಿಯರಾಗಿದ್ದಾರೆ. ಇವರು ಋತುಮತಿಯಾಗಿ ದೇವತೆಯ ಸ್ಥಾನದಿಂದ ಕೆಳಗಿಳಿದ ನಂತರ ಸಾಮಾನ್ಯರಂತೆ ತಮ್ಮ ಕುಟುಂಬದ ಸದಸ್ಯರ ಜೊತೆ ಬದುಕುತ್ತಾರೆ. ಆದರೆ, ವಿವಾಹವಾಗಿ ದಾಂಪತ್ಯದ ಬದುಕು ನಡೆಸುವಂತಿಲ್ಲ. ಮಾಜಿ ಕುಮಾರಿಯರಿಗೆ ದೇವಸ್ಥಾನದ ವತಿಯಿಂದ ಮಾಸಿಕವಾಗಿ ಕೇವಲ ಐವತ್ತು ರೂಪಾಯಿಗಳನ್ನು ಗೌರವ ವೇತನ ನೀಡಲಾಗುತ್ತಿತ್ತು. ಇತ್ತೀಚೆಗೆ ಇದನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಲಾಗಿದೆ. ಮಾಜಿ ಕುಮಾರಿಯರು ಇತರೆ ಪೂಜೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದಕ್ಷಿಣೆಯ ರೂಪದಲ್ಲಿ ಸಿಗುವ ಅಲ್ಪ ಸ್ವಲ್ಪ ಹಣದಲ್ಲಿ ಬದುಕುತ್ತಾರೆ.
ಕುಮಾರಿಯಾಗಿ ಆಯ್ಕೆಯಾದ ಬಾಲಕಿಯನ್ನು ದೇವತೆಯ ಸ್ಥಾನಕ್ಕೇರಿಸುವ ದಿನ ನಡೆಯುವ ಆಚರಣೆಯು ಅತ್ಯಂತ ಕ್ರೌರ್ಯ ಮತ್ತು ಭೀಕರತೆಯಿಂದ ಕೂಡಿರುತ್ತದೆ. ದಿನ ಬಾಲಕಿಗೆ ಸ್ನಾನ ಮಾಡಿಸಿ, ಹೊಸ ಉಡಿಗೆಯನ್ನು ತೊಡಿಸಿ, ಆಕೆಯ ಹಣೆಯ ಮೇಲೆ ವಿಭೂತಿಯ ಹಾಗೆ ಹಳದಿ ಪಟ್ಟೆಯನ್ನು ಬಳಿದು ಅದರ ನಡುವೆ ಕಣ್ಣಿನ ಚಿತ್ರವೊಂದನ್ನು ಬಿಡಿಸಲಾಗುತ್ತದೆ. ಅದು ದೇವಿಯ ಮೂರನೆಯ ಕಣ್ಣು ಎಂದು ಬಿಂಬಿಸಲಾಗುತ್ತದೆ. ದಿನ ದೇವತೆಯ ತೃಪ್ತಿಗಾಗಿ ನಡು ಮಧ್ಯರಾತ್ರಿ 108 ಕೋಣಗಳು, ಮೇಕೆಗಳು, ಕೋಳಿಗಳು, ಬಾತುಕೋಳಿಗಳು ಮತ್ತು 108 ಮೊಟ್ಟೆಯನ್ನು ಬಲಿಕೊಡಲಾಗುತ್ತದೆ. ನಂತರ ರಕ್ತದ ಓಕುಳಿಯ ನಡುವೆ ಸಾಲಾಗಿ ಜೋಡಿಸಿಟ್ಟ ಕೋಣ, ಮೇಕೆ, ಕೋಳಿ ಗಳ ರುಂಡಗಳ ನಡುವೆ ಹೊಸದೇವತೆಯು ನಡೆದು ಸಾಗಬೇಕು. ಆಕೆಯ ಪ್ರಾಣಿಬಲಿ, ರಕ್ತ ಇತ್ಯಾದಿ ಸಂಗತಿಗಳ ಕುರಿತಂತೆ ಹೆದರಬಾರದು ಎಂಬ ಕಾರಣಕ್ಕಾಗಿ ಆಚರಣೆಯನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ದೇವಸ್ಥಾನದ ಮುಖ್ಯ ಆರ್ಚಕ ಹೇಳುತ್ತಾನೆನಂತರ ಆಕೆಯನ್ನು ರಾಜಘರ್ ಎಂಬ ನಿವಾಸದ ಕೊಠಡಿಯಲ್ಲಿ ಸದಾ ಸಣ್ಣಗೆ ಉರಿಯುವ ಎರಡು ಹಣತೆಗಳ ನಡುವೆ ಕೂರಿಸಲಾಗುತ್ತದೆ. ಬಾಲಕಿ ದೇವತೆಯ ಸ್ಥಾನಕ್ಕೇರಿದ ನಂತರ ಅವಳ ಭವಿಷ್ಯದ ಬದುಕು ಒಂದು ರೀತಿಯಲ್ಲಿ ಮುಚ್ಚಿಹೋಗುತ್ತದೆ. ಆಕೆ ಶಿಕ್ಷಣ, ಸಹಜವಾದ ಬಾಲ್ಯದ ಆಟ-ಪಾಠ ಇವುಗಳಿಂದ ವಂಚಿತಳಾಗುತ್ತಾಳೆ.
ನೇಪಾಳದಲ್ಲಿ 2008 ರವರೆಗೆ ಅರಸೊತ್ತಿಗೆಯ ಆಳ್ವಿಕೆ ಜಾರಿಯಲ್ಲಿತ್ತು. ದೊರೆ ಬೀರೆಂದ್ರ ಹಾಗೂ ಆತನ ಕುಟುಂಬದ ಸದಸ್ಯರು ಕಗ್ಗೊಲೆಯಾದ ನಂತರ; ಅಲ್ಲಿನ ರಾಜಪ್ರಭುತ್ವ ಕೊನೆಗೊಂಡು, ಪ್ರಥಮಬಾರಿಗೆ ಮಾವೋವಾದಿಗೆ ನೇತೃತ್ವದ ಪ್ರಜಾಪ್ರಭುತ್ವ ವ್ಯವಸ್ಥೆಯ ಸರ್ಕಾರ ಅಧಿಕಾರಕ್ಕೆ ಬಂದಿತು. ಆನಂತರವೂ ಇಂತಹ ಅಮಾನುಷ ಪದ್ಧತಿ ಜಾರಿಯಲ್ಲಿರುವುದು ವರ್ತಮಾನದ ದುರಂತವೆಂದು ಬಣ್ಣಿಸಬಹುದು. ಈಗಾಗಲೇ, ಮಕ್ಕಳ ಹಕ್ಕುಗಳ ಸಂಘಟನೆಯ ಕಾರ್ಯಕರ್ತರು ಮತ್ತು ಪ್ರಾಣಿ ದಯಾ ಸಂಘದ ಕಾರ್ಯಕರ್ತರು ಇದರ ವಿರುದ್ಧ ಧ್ವನಿ ಎತ್ತಿದ್ದಾರೆ.
ಇವೆಲ್ಲವುಗಳಿಂತ ನೋವಿನ ಸಂಗತಿಯೆಂದರೆ, ಎರಡೂವರೆ ಸಾವಿರ ವರ್ಷಗಳ ಹಿಂದೆ ಕ್ರಿಸ್ತಪೂರ್ವ ಭಾರತದಲ್ಲಿ ಇಂತಹ ಪ್ರಾಣಿಬಲಿ, ಮೌಡ್ಯ, ಯಜ್ಞ ಇತ್ಯಾದಿಗಳ ಬಗ್ಗೆ ಧ್ವನಿ ಎತ್ತಿ ಲೋಕಕ್ಕೆ ಹೊಸ ಬೆಳಕಿನ ಮಾರ್ಗವನ್ನು ತೋರಿದ ಬುದ್ಧನು ಹುಟ್ಟಿ ಬೆಳೆದ ನಾಡಿನಲ್ಲಿ, ( ನೇಪಾಳದ ಕಠ್ಮಂಡು ಸಮೀಪದ ಕಪಿಲವಸ್ತು) ಜೊತೆಗೆ  ಆತನ ಬುಡಕಟ್ಟು ಸಮುದಾಯದ ಶಾಕ್ಯರ ಕುಲದಲ್ಲಿ ಇಂತಹ ಅನಿಷ್ಠ ಆಚರಣೆ ಜಾರಿಯಲ್ಲಿರುವುದು; ಗೌತಮ ಬುದ್ಧನಿಗೆ ಮಾಡುತ್ತಿರುವ ಅಪಮಾನವೆಂದರೆ, ತಪ್ಪಾಗಲಾರದು.

( ಕರಾವಳಿ ಮುಂಜಾವು ದಿನಪತ್ರಿಕೆಯ ದೀಪಾವಳಿ ವಿಶೇಷ ಸಂಚಿಕೆಗಾಗಿ  ಬರೆದಲೇಖನ)




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ