ಶುಕ್ರವಾರ, ನವೆಂಬರ್ 10, 2017

ನೂತನ ವೈದ್ಯಕೀಯ ಸೇವಾ ಕಾಯ್ದೆ ಕುರಿತ ಪರ ಮತ್ತು ವಿರೋಧದ ನಿಲುವುಗಳು


ಕರ್ನಾಟಕ ರಾಜ್ಯ ಸರ್ಕಾರ ಇದೇ ನವಂಬರ್ 13 ರಂದು ಬೆಳಗಾವಿಯಲ್ಲಿ ನಡೆಯುವ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿಸಿರುವ ಖಾಸಾಗಿ ವೈದ್ಯಕೀಯ ಸೇವೆಗಳ ಮೇಲಿನ ನಿಯಂತ್ರಣ ಮಸೂದೆ ಕುರಿತಂತೆ ಖಾಸಾಗಿ ವ್ಶೆದ್ಯರು ಮತ್ತು ಆಸ್ಪತ್ರೆಗಳ ಸಮೂಹದಿಂದ ತೀವ್ರತರವಾದ ವಿರೋಧ ವ್ಯಕ್ತವಾಗಿದೆ. ಈಗಾಗಲೇ ರಾಜ್ಯದ ಹಲವೆಡೆ ಅಖಿಲ ಭಾರತ ವೈದ್ಯಕೀಯ ಸಂಘದ ವತಿಯಿಂದ ವೈದ್ಯರು ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಬೆಳಗಾವಿಗೆ ತೆರಳಿ ಅಧಿವೇಶನ ನಡೆಯುವ ಸ್ಥಳದಲ್ಲಿ ಮುಷ್ಕರ ನಡೆಸುವುದಾಗಿ ಎಚ್ಚರಿಸಿದ್ದಾರೆ. ಇದಕ್ಕೆ ಮುನ್ಸೂಚನೆಯೆಂಬಂತೆ ವಾರದ ಹಿಂದೆ ರಾಜ್ಯದ ಬಹುತೇಕ ಖಾಸಾಗಿ ಆಸ್ಪತ್ರೆಗಳು ತಮ್ಮ  ಸೇವೆಯನ್ನು ಬಂದ್  ಮುಷ್ಕರ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ವೈದ್ಯರ ಪ್ರತಿಭಟನೆಗಳು ಏನೇ ಇರಲಿ, ಸಧ್ಯದ ಸ್ಥಿತಿಯಲ್ಲಿ ಜನಸಾಮಾನ್ಯರ ಹಿತದೃಷ್ಟಿಯಿಂದ ಇಂತಹದ್ದೊಂದು ಕಾಯ್ದೆ ತೀರಾ ಅವಶ್ಯಕವಾಗಿತ್ತು ಎಂಬುದು ಬಹುತೇಕ ಪ್ರಜ್ಞಾವಂತ ನಾಗರೀಕರ ಅನಿಸಿಕೆಯಾಗಿದೆ. ವೈದ್ಯ ವೃತ್ತಿಯನ್ನು ಎಂದಿಗೂ ದಂಧೆ ಅಥವಾ ಉದ್ಯಮ ಎಂದು ಭಾವಿಸದೆ ಅದೊಂದು ಪವಿತ್ರವಾದ ವೃತ್ತಿ ಅಥವಾ ಜನಾರ್ಧನ ಸೇವೆ ಎಂದು ನಂಬಿಕೊಂಡು ದುಡಿಯುತ್ತಿರುವ ಸಾವಿರಾರು ಖಾಸಾಗಿ ವೈದ್ಯರನ್ನು ಇಂದಿಗೂ ನಾವು ರಾಜ್ಯದ ಪ್ರತಿ ಪಟ್ಟಣ ಮತ್ತು ಹಳ್ಳಿಗಳಲ್ಲಿ ಕಾಣಬಹುದು. ಆದರೆ, ಇಂತಹ ಮಹಾತ್ಮರು ಎಂದು ಕರೆಯಬಹುದಾದ ಮಾನವೀಯ ಹೃದಯವುಳ್ಳ ವೈದ್ಯರು ಸುಲಿಗೆಕೋರರ ನಡುವೆ ತೀರಾ ನಗಣ್ಯರಾಗಿದ್ದಾರೆ ಎನ್ನುವುದು ಕೂಡ ಅಷ್ಟೇ ಕಟುವಾದ ವಾಸ್ತವ ಸಂಗತಿ

ಜಗತ್ತಿನ ಯಾವುದೇ ರಾಷ್ಟ್ರ ಅಥವಾ ರಾಜ್ಯ ಸರ್ಕಾರಗಳು ತಮ್ಮ ಪ್ರಜೆಗಳ ಬದುಕನ್ನು ಉತ್ತಮ ಸ್ಥಿತಿಯಲ್ಲಿಟ್ಟು ಕಲ್ಯಾಣ ರಾಜ್ಯ ಎನ್ನುವ ಸ್ಥಿತಿ ನಿರ್ಮಾಣ ಮಾಡಬೇಕಾದರೆ, ಅವರ ಮೂಲಭೂತ ಸೌಕರ್ಯಗಳಾದ ಅನ್ನ, ವಸತಿ, ನೀರು, ರಸ್ತೆ ಇಂತಹ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ  ಜನರ ಕೈಗೆಟುಕುವ ದರದಲ್ಲಿ ಶಿಕ್ಷಣ ಮತ್ತು ಆರೋಗ್ಯ ದೊರಕುವಂತಿರಬೇಕು. ಆದರೆ, ಜಗತ್ತಿನ ಬಹುತೇಕ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ರಾಷ್ರಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಎರಡು ಸೇವಾ ವಲಯಗಳು ಬಂಡವಾಳಶಾಹಿಗಳ ಕಪಿಮುಷ್ಟಿಯಲ್ಲಿವೆ, ಭಾರತದಲ್ಲಿ ಬಹುತೇಕ ಎನ್ನುವುದರ ಬದಲಾಗಿ ಶೇಕಡ 75 % ರಷ್ಟು  ಉನ್ನತ ಶಿಕ್ಷಣ ನೀಡುವ ಸಂಸ್ಥೆಗಳು ಮತ್ತು ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜುಗಳು ಜನಪ್ರತಿನಿಧಿಗಳು ಎನಿಸಿಕೊಂಡ ಸಚಿವರು, ಸಂಸದರು, ಶಾಸಕರು ಹಾಗೂ ಪ್ರಭಾವಿ ಮಠಗಳು ಮತ್ತು ಕೈಗಾರಿಕೋದ್ಯಮಿಗಳ ಒಡೆತನದಲ್ಲಿವೆ. ಇವರ ಸೇವಾ ಮನೋಭಾವವು ಬಡಜನರ ಪಾಲಿಗೆಕಂಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾರ್ಥಿಎಂಬಂತಿದೆ. ಸೇವೆ ಎಂಬ ಹೆಸರಿನ ಶಬ್ದದ ಜಾಗದಲ್ಲಿ  ಇದೀಗ ವ್ಯವಹಾರ ಎಂಬ ಪದ ಬಂದು ಕೂತಿದೆ. ಯಾವುದೇ ಬಡವ, ಹಳ್ಳಿಯ ರೈತ ಅಥವಾ ಮಧ್ಯಮ ವರ್ಗದ ನಾಗರೀಕ ಇಂದುಸೂಪರ್ ಸ್ಪೆಷಾಲಿಟಿ ಆಸ್ಪತ್ರೆಎಂಬ ಚರ್ಮ ಸುಲಿಯವ ಹಾಗೂ ಮೈ ನೆತ್ತರನ್ನು ಹೀರುವ ಆಧುನಿಕ ಜಗತ್ತಿನ ಮನುಷ್ಯರ ಕಸಾಯಿಖಾನೆಗೆ ಹೋಗಲಾರದವರಾಗಿದ್ದಾರೆ. ಇಂತಹ ಹೈಟೆಕ್ ಸೇವೆಗಳು ಉಳ್ಳವರಿಂದ ಉಳ್ಳವರಿಗಾಗಿ ಎಂಬ ಅಲಿಖಿತ ನಿಯಮದಡಿ ಜಾರಿಯಲ್ಲಿವೆ. ಇವುಗಳಿಗೆ ಪೂರಕವಾಗಿ ವೈದ್ಯಕೀಯ ವಿಮೆ ಎಂಬ ಹಗಲು ದರೋಡೆಯ ವ್ಯವಸ್ಥೆಯೊಂದು ವೈದ್ಯಕೀಯ ಸೇವೆಯ ಹೆಸರಿನ  ಜೊತೆ ಕೈ ಜೋಡಿಸಿದೆ. ಸ್ಥಿತಿಯಲ್ಲಿ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ನೂತನ ಕಾಯ್ದೆಗೆ ಜನಸಾಮಾನ್ಯರು ಮತ್ತು ಪ್ರಜ್ಞಾವಂತ ನಾಗರೀಕರು ಕೈಜೋಡಿಸುವ ಅಗತ್ಯವಿದೆ.
ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ಭಾರತವು ಜಾಗತೀಕರಣ ವ್ಯವಸ್ಥೆಗೆ ತೆರೆದುಕೊಂಡ ಫಲವಾಗಿ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉಂಟಾದ ಕ್ಷಿಪ್ರ ಕ್ರಾಂತಿಯಿಂದಾಗಿ ಭಾರತೀಯರು ವಿಶೇಷವಾಗಿ ಇಂಜಿನಿಯರಿಂಗ್ ಪದವೀಧರರು ಮಾಸಿಕ ಒಂದು ಲಕ್ಷರೂಪಾಯಿ ವೇತನ ಪಡೆಯುವಷ್ಟು ಪ್ರಭಾವಶಾಲಿಯಾದರು. ಆದರೆ, ಬಂಡವಾಳಶಾಹಿ ಜಗತ್ತು  ಇವರಿಗೆ ಬಲಗೈಲಿ ನೀಡಿದ ವೇತನವನ್ನು ಎಡಗೈಲಿ ಕಿತ್ತುಕೊಳ್ಳುವ ವೈದ್ಯಕೀಯ ವಿಮೆ ಎಂಬ ಹುನ್ನಾರ  ಎನ್ನಬಹುದಾದ ಯೋಜನೆಯನ್ನು ರೂಪಿಸಿತುತೆರಿಗೆ ವಿನಾಯತಿ ಪಡೆಯಲು ಉದ್ಯೋಗಿಗಳು ತನ್ನನ್ನು ಒಳಗೊಂಡಂತೆ, ತನ್ನ ಕುಟುಂಬ, ತಂದೆ, ತಾಯಿಗಳನ್ನು ವಿಮೆಗೆ ಒಳಪಡಿಸುವುದರ ಮೂಲಕ ತೆರಿಗೆ ವಿನಾಯತಿಯನ್ನು ಪಡೆದರು. ಆರೋಗ್ಯ ವಿಮಾ ಯೋಜನೆಯ ಮೂಲಕ ಖಾಸಾಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂ ಗಳ ನಸೀಬು ಬದಲಾಯಿತು. ಆಸ್ಪತ್ರೆಗೆ ದಾಖಲಾದ ರೋಗಿಗೆ ವೈದ್ಯಕೀಯ ವಿಮೆ ಇದೆ ಎಂದು ಗೊತ್ತಾದಕೂಡಲೆ, ತಮ್ಮ ವೈದ್ಯಕೀಯ ಸೇವಾ ವೆಚ್ಚವನ್ನು ದುಪ್ಪಟ್ಟು ಮಾಡಲಾಯಿತು. ಕೊಠಡಿಯ ಬಾಡಿಗೆ ದರ ಪದ್ಧತಿ ಜಾರಿಗೆ ಬಂದಿತು. ವಿಶೇಷ ಕೊಠಡಿಯ ಬಾಡಿಗೆ ದರವನ್ನು ಪಂಚತಾರ ಹೋಟೆಲ್ ಕೊಠಡಿ ದರಕ್ಕೆ ಸಮನಾಗಿ ಏರಿಸಿ, ವೈದ್ಯಕೀಯ ಸೇವಾದರವನ್ನು ಸಹ ಹೆಚ್ಚಿಸಲಾಯಿತು.ಇದೇ ಚಾಳಿಯನ್ನು ಎಲ್ಲಾ ಖಾಸಾಗಿ ವೈದ್ಯಕೀಯ ಸೇವಾ ಸಂಸ್ಥೆಗಳು ಅನುಸರಿಸತೊಡಗಿದವು. ಎಂ.ಬಿ.ಬಿ.ಎಸ್. ಕೋರ್ಸಿಗೆ ಒಂದು ಕೋಟಿ ರೂಪಾಯಿ ಮತ್ತು ಸ್ನಾತಕೋತ್ತರ ಪದವಿ ಅಥವಾ ಡಿಪ್ಲಮೋ ಕೋರ್ಸಿಗೆ ಮೂರು ಕೋಟಿ ರೂಪಾಯಿ  ಡೊನೆಷನ್ ಪಾವತಿಸಿ, ವೈದ್ಯನಾಗಿ ಪದವಿ ಪಡೆದು ಸೇವೆ ಸಲ್ಲಿಸಲು ಬರುವ ವ್ಯಕ್ತಿಯಿಂದ ಯಾವ ಆದರ್ಶವನ್ನಾಗಲಿ ಅಥವಾ ಸೇವಾ ಮನೋಭಾವವನ್ನಾಗಲಿ ನಾವು ನಿರೀಕ್ಷಿಸಲು ಸಾಧ್ಯ?

 ಈಗಾಗಲೇ ಕ್ಲಿನಿಕಲ್ ಎಸ್ಟಾಬ್ಲಿಸ್ ಮೆಂಟ್ ಕಾಯ್ದೆ-2010 ಇದನ್ನು ಜಾರಿಗೆ ತರಲು ದೇಶದ ಹನ್ರ್ನೆಂದು ರಾಜ್ಯಗಳು ಒಪ್ಪಿಗೆ ಸೂಚಿಸಿವೆ ಎಂದು ಹೇಳಿರುವ ಆರೋಗ್ಯ ಖಾತೆ ಸಚಿವ ರಮೇಶ್ ಕುಮಾರ್, ಕರ್ನಾಟಕ ಸರ್ಕಾರ ಜಾರಿಗೆ ತರಲು ಹೊರಟಿರುವ ನೂತನ ಕಾಯ್ದೆಯು ವೈದ್ಯರು ನ್ಶೆತಿಕತೆಯ ಆಧಾರದ ಮೇಲೆ ಗುಣಮಟ್ಟದ ಸೇವೆ ನೀಡಲು ಸಹಕಾರಿಯಾಗಲಿದೆ ಎಂದು ನುಡಿದಿದ್ದಾರೆ. ನೂತನ ಕಾಯ್ದೆಯಲ್ಲಿ ರೋಗಿಗೆ ಗುಣ ಮಟ್ಟದ  ಸೇವೆ ನೀಡುವಲ್ಲಿ ವಿಫಲವಾದ ವೈದ್ಯರು ಅಥವಾ ಖಾಸಾಗಿ ಆಸ್ಪತೆಗಳ ಮೇಲೆ ದಂಡ ವಿಧಿಸುವ ಅಂದರೆ, ಈಗಿರುವ ದಂಡದ ಪ್ರಮಾಣವನ್ನು ಹೆಚ್ಚಿಸುವ ಮತ್ತು ನ್ಯಾಯಾಲಯದ ಮೂಲಕ ಶಿಕ್ಷಿಸುವ ಅಧಿಕಾರವನ್ನು ರಾಜ್ಯ ಸರ್ಕಾರ ಹೊಂದಿರುತ್ತದೆ. ಜೊತೆಗೆ ನಗರ ಮತ್ತು ಪಟ್ಟಣಗಳಲ್ಲಿ ಸರ್ಕಾರಿ ಆಸ್ಪತ್ರೆಗಳ ಸನೀಹದಲ್ಲಿ ಯಾವುದೇ ಖಾಸಾಗಿ ಆಸ್ಪತ್ರೆಗಳನ್ನು ಸ್ಥಾಪಿಸಲು ನೂತನ ಮಸೂದೆಯಲ್ಲಿ ಅವಕಾಶವಿರುವುದಿಲ್ಲ.
ಪ್ರತಿಯೊಬ್ಬ ರೋಗಿಯ ಚಿಕಿತ್ಸಾ ವೆಚ್ಚದ ವಿವರ ಹಾಗೂ ನೀಡಿದ ವೈದ್ಯಕೀಯ ಸೇವೆಯ ವಿವರ ಮತ್ತು ರೋಗಿಯು ನೀಡಬಹುದಾದ ದೂರನ್ನು ಪರಾಮರ್ಶೆ ನಡೆಸಲು ನೊಂದಣಿ ಮತ್ತು ಮೇಲ್ಮನವಿ ಪ್ರಾಧಿಕಾರವನ್ನು ಪುನರ್ರಚನೆ ಮಾಡುವುದರ ಜೊತೆಗೆ ಪ್ರತಿ ಜಿಲ್ಲಾ ಮಟ್ಟದಲ್ಲಿ ವಿವಿಧ ವಲಯಗಳ ಪ್ರತಿನಿಧಿಗಳು ಇರುವಂತಹ ಕುಂದು ಕೊರತೆಗಳ ವಿಚಾರಣಾ ಸಮಿತಿಯನ್ನು ರಚಿಸಲು ಸರ್ಕಾರ ಉದ್ದೇಶಿಸಿದೆ. ತಪ್ಪು ಎಸಗಿದ ವೈದ್ಯರನ್ನು ಮತ್ತು ಸಿಬ್ಬಂದಿಯನ್ನು ಬಂಧಿಸುವ ಹಾಗೂ ನ್ಯಾಯಾಧೀಶರ ಮುಂದೆ ಹಾಜರು ಪಡಿಸುವ ಅವಕಾಶ ಇರುವುದು ಖಾಸಾಗಿ ವೈದ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ಇಲ್ಲಿ ಸರ್ಕಾರವು ಇಷ್ಟಂದು ವೀರಾವೇಶದಿಂದ ವೈದ್ಯರ ಮೇಲೆ ಕ್ರಮ ಕೈಗೊಳ್ಳಲು ಹೊರಟಿರುವ ಸಂದರ್ಭದಲ್ಲಿ ಈವರೆಗಿನ ಸರ್ಕಾರಗಳು ಎಲ್ಲಿ ಎಡವಿದೆವು ಎಂಬುದರ ಕುರಿತು ಒಮ್ಮೆ ಆತ್ಮ ವಿಮರ್ಶೇ ಮಾಡಿಕೊಳ್ಳಬೇಕಿದೆ, ಗ್ರಾಮೀಣ ಪ್ರದೇಶದಿಂದ ಹಿಡಿದು; ನಗರ ಪಟ್ಟಣ ಆಸ್ಪತ್ರೆಗಳನ್ನು ಇಲಿ ಹೆಗ್ಗಣಗಳ ಗೋದಾಮುಗಳಾಗಿ ಪರಿವರ್ತಿಸಿ ಜನಸಾಮಾನ್ಯರು ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವಂತೆ ಮಾಡಿದ್ದು, ಖಾಸಾಗಿ ಮೆಡಿಕಲ್ ಕಾಲೇಜುಗಳ ಮೇಲೆ ನಿಯಂತ್ರಣ ಸಾಧಿಸಲಾಗದೆ, ಕ್ಯಾಪಿಟೇಶನ್ ಮಾಫಿಯಾ ಎದುರು ಮಂಡಿಯೂರಿ ಕುಳಿತಿದ್ದು ಇವೆಲ್ಲವೂ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ. ಇಂತಹ ಅಯೋಮಯ ಸ್ಥಿತಿಯಲ್ಲಿ ಮದವೇರಿದ ಗೂಳಿಗೆ ಮೂಗುದಾರ ಹಾಕಲು ಹೊರಟಿರುವ ಸರ್ಕಾರದ ಉದ್ದೇಶ ಈಡೇರುವ ಕುರಿತು ಯಾರಿಗೂ  ಭರವಸೆ ಇಲ್ಲಈಗಾಗಲೇ ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಮಂಡಿಸುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಅಪಸ್ವರಗಳು ಎದ್ದಿವೆ., ಇಲ್ಲಿಯೂ ಪ್ರಭಾವಶಾಲಿಗಳ ಅಂದರೆ, ಆಸ್ಪತ್ರೆ , ಮೆಡಿಕಲ್ ಕಾಲೇಜುಗಳ ಪಿತಾಮಹಾರ ಕೈವಾಡ ಎದ್ದು ಕಾಣುತ್ತಿದೆ. ಕುರಿತು ಸರ್ಕಾರದ  ಮುಂದಿನ ಹೆಜ್ಜೆಯನ್ನು ನಾವೆಲ್ಲರೂ ಕಾದು ನೋಡಬೇಕಾಗಿದೆ.
( ಕರಾವಳಿ ಮುಂಜಾವು ದಿನಪತ್ರಿಕೆಯ “ಜಗದಗಲ” ಅಂಕಣ ಬರಹ)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ