ಮಂಗಳವಾರ, ಡಿಸೆಂಬರ್ 31, 2013

ಅಣುಲೋಕದ ವಂಚನೆಯ ಜಗತ್ತು.



ಕಳೆದ ಎರಡು  ದಶಕಗಳಲ್ಲಿ ಭಾರತದಲ್ಲಿ ಬದಲಾದ  ಸಾಮಾಜಿಕ ಬದುಕಿನ ಪಲ್ಲಟಗಳಿಂದಾಗಿ, ಮತ್ತು ಮನುಷ್ಯ ಜೀವಿಯ ಖಾಸಾಗಿ ಮತ್ತು ಸಾಮಾಜಿಕ ಬದುಕಿನೊಂದಿಗೆ ತಳುಕು ಹಾಕಿಕೊಂಡ ಆಧುನಿಕತೆಯ  ತಂತ್ರಜ್ಞಾನದ ಫಲವಾಗಿ ವಿದ್ಯುತ್ ಕೂಡ ಈಗ ಆಹಾರ, ನೀರು ಮತ್ತು ಗಾಳಿಯಂತೆ ಮೂಲಭೂತ ಬೇಡಿಕೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ದೇಶದಲ್ಲಿ ಏರುತ್ತಿರುವ ವಿದ್ಯುತ್ ಬೇಡಿಕೆ, ಆಹಾರ ಪದಾರ್ಥಗಳ ಬೆಲೆಗಳ ಜೊತೆ ಪೈಪೊಟಿಗೆ ಬಿದ್ದಂತೆ ಕಾಣುತ್ತಿದೆ.
ಭಾರತದಲ್ಲಿ ವಿದ್ಯುತ್ ಬೇಡಿಕೆ ಪೂರೈಸಲು, ಜಲವಿದ್ಯುತ್, ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆ ಹಾಗೂ ನೈಸರ್ಗಿಕವಾಗಿ ದೊರೆಯುವ ಗಾಳಿ ಮತ್ತು ಸೂರ್ಯನ ಬೆಳಕಿನಿಂದ ವಿದ್ಯುತ್ ಉತ್ಪಾದಿಸಲಾಗುತ್ತಿದ್ದರೂ ಸಹ ಪ್ರತಿ ವರ್ಷ ಶೇಕಡ ಹದಿನೈದರಿಂದ ಇಪ್ಪತ್ತರಷ್ಟು ವಿದ್ಯುತ್ ಬೇಡಿಕೆಯ ಪ್ರಮಾಣ ಹೆಚ್ಚುತ್ತಿದೆ. ಈ ನಾಲ್ಕು ಸಾಂಪ್ರದಾಯಕ ಮೂಲಗಳಲ್ಲದೆ, ಭಾರತದಲ್ಲಿ ಇಪ್ಪತ್ತು ಅಣುವಿದ್ಯುತ್ ಸ್ಥಾವರಗಳಿಂದ  ಒಟ್ಟು 5800 ಮೆಗಾವ್ಯಾಟ್ ಉತ್ಪಾದಿಸಲಾಗುತ್ತಿದ್ದು, ಸದ್ಯದಲ್ಲಿ ಮತ್ತೇ ಆರು ಸ್ಥಾವರಗಳಿಂದ 5300 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಯೋಜನೆ ಹಾಕಿಕೊಳ್ಳಲಾಗಿದೆ
.
2030 ರ ವೇಳೆಗೆ ಅಣು ವಿದ್ಯುತ್ ಸ್ಥಾವರಗಳಿಂದ ಭಾರತದಲ್ಲಿ 63 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಗುರಿ ಹಾಕಿಕೊಳ್ಳಲಾಗಿದೆ. ಅತ್ಯಂತ ಅಪಾಯಕಾರಿ ಹಾಗೂ ಪರಿಸರ ಮತ್ತು ಜೀವಜಾಲಕ್ಕೆ ಮಾರಕ ಎನ್ನಲಾದ ಅಣುವಿದ್ಯುತ್ ತಂತ್ರಜ್ಞಾನವನ್ನು ಬಹುತೇಕ ಪಾಶ್ಚಿಮಾತ್ಯ ಜಗತ್ತಿನ ರಾಷ್ಟ್ರಗಳು ತಿರಸ್ಕರಿಸಿವೆ. ಆದರೆ, ತಾವು ಅಭಿವೃದ್ಧಿ ಪಡಿಸಿದ ಹಾಗೂ ಮನು ಕುಲಕ್ಕೆ ಎರವಾಗಬಲ್ಲ ಈ ತಂತ್ರಜ್ಞಾನವನ್ನು ಅಮೇರಿಕಾ, ಕೆನಡಾ, ಪ್ರಾನ್ಸ್, ಮತ್ತು ರಷ್ಯಾ ದೇಶಗಳು ತೃತೀಯ ಜಗತ್ತಿನ ರಾಷ್ಟ್ರಗಳಿಗೆ ಧಾರೆಯೆರೆಯುತ್ತಿವೆ, ಪಶ್ಚಿಮದಿಂದ ದೊರೆಯುವ ಎಲ್ಲವನ್ನೂ ಸ್ವೀಕರಿಸುವ ಕುರುಡು ಪ್ರಜ್ಞೆಯನ್ನು ಬೆಳಸಿಕೊಂಡಿರುವ ಭಾರತ ಕೂಡ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ.
ಕಳೆದ ನಾಲ್ಕು ದಶಕಗಳಿಂದ ಈ ಅಪಾಯಕಾರಿ ತಂತ್ರಜ್ಞಾನದ ಬಗ್ಗೆ ಭಾರತದಲ್ಲಿ ಅನೇಕ ಪ್ರಜ್ಞಾವಂತರು, ಪ್ರತಿಭಟನೆ ವ್ಯಕ್ತ ಪಡಿಸಿದರೂ ಸಹ ಅದು ಅರಣ್ಯ ರೋಧನವಾಗಿ ಉಳಿದುಬಂದಿತ್ತು. ಈ ತಂತ್ರಜ್ಞಾನದ ಬಗ್ಗೆಯಾಗಲಿ, ಅಥವಾ ಅಣುಸ್ಥಾವರಗಳಲ್ಲಿ ಸಂಭವಿಸುವ ಅವಘಡ ಕುರಿತಾಗಲಿ ಜನಸಾಮಾನ್ಯರಿಗೆ ಯಾವುದೆ ಮಾಹಿತಿ ದೊರಕುತ್ತಿರಲಿಲ್ಲ. ಅದೆಲ್ಲವನ್ನೂ ದೇಶದ ರಕ್ಷಣೆಯ ನೆಪದಲ್ಲಿ ಗೌಪ್ಯವಾಗಿ ಕಾಪಾಡಿಕೊಂಡು ಬರಲಾಗುತ್ತಿತ್ತು.  ಆದರೆ. 2011 ರಲ್ಲಿ ಜಪಾನ್ ದೇಶದಲ್ಲಿ ಸಂಭವಿಸಿದ ಸುನಾಮಿ ಪ್ರಕೃತಿ ವಿಕೋಪದಲ್ಲಿ ಅಲ್ಲಿನ ಪುಕೊಶಿಮ ಅಣು ವಿದ್ಯುತ್ ಸ್ಥಾವರ ಸ್ಪೋಟಗೊಂಡು ಅದರಿಂದ ಹೊರಸೂಸಿದ ಅಣುವಿಕಿರಣಗಳು ಮತ್ತು ಅದರ ಪ್ರಭಾವ ಹೊರ ಜಗತ್ತಿಗೆ ಅನಾವರಣಗೊಳ್ಳುತ್ತಿದ್ದಂತೆ ಏಷ್ಯಾದ ಎಲ್ಲೆಡೆ ಆತಂಕ ಸೃಷ್ಟಿಯಾಗತೊಡಗಿದೆ. ಭಾರತದಲ್ಲಿ ಜನಸಾಮಾನ್ಯರೂ ಸಹ ತಮ್ಮ ತಮ್ಮ ಪ್ರದೇಶಗಳಲ್ಲಿ ಅಣುವಿದ್ಯುತ್ ಸ್ಥಾವರಗಳ ಸ್ಥಾಪನೆಗೆ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ
ಮಹಾರಾಷ್ಟ್ರದ ಜತಿಪುರ್ ಎಂಬಲ್ಲಿ ರಷ್ಯ ಸಹಯೋಗದಿಂದ ಆರಂಭವಾಗಬೇಕಿದ್ದ , 9900 ಮೆಗಾವ್ಯಾಟ್ ಅಣು ವಿದ್ಯುತ್ ಯೋಜನೆಗೆ ತಡೆ ಒಡ್ಡಲಾಗಿದೆ. ಪಶ್ಚಿಮ ಬಂಗಾಳದ ಹರಿಪುರ್ ಎಂಬಲ್ಲಿ 600 ಮೆಗಾವ್ಯಾಟ್ ಅಣು ಉತ್ಪಾದನೆ ಯೋಜನೆಗೆ ಪಶ್ಚಿಮ ಬಂಗಾಳ ಸರ್ಕಾರ ವಿರೋಧ ವ್ಯಕ್ತಪಡಿಸಿದೆ.  ಇತ್ತೀಚೆಗಿನ ದಿನಗಳಲ್ಲಿ ತಮಿಳುನಾಡಿನ ದಕ್ಷಿಣ ಭಾಗದ ಬಂಗಾಳ ಕೊಲ್ಲಿಯ ಸಮುದ್ರ ತೀರದ ಬಂದರು ಪಟ್ಟಣವಾದ ತೂತ್ತುಕುಡಿಯಲ್ಲಿ ( ಟೂಟುಕೋರಿನ್)  ರಷ್ಯಾ ಸಹಕಾರದಿಂದ ಎರಡು ಸಾವಿರ ಮೆಗಾವ್ಯಾಟ್ ಅಣು ವಿದ್ಯುತ್ ಯೋಜನೆಗೆ ಎದುರಾದ ಎಲ್ಲಾ ಅಡೆತಡೆಗಳನ್ನು ಬಗ್ಗು ಬಡಿದ ಕೇಂದ್ರ ಸರ್ಕಾರ,  ಸ್ಥಳಿಯ ಜನರ ಪ್ರತಿಭಟನೆಯನ್ನು ಲೆಕ್ಕಿಸದೆ,  ಒಂದು ಸಾವಿರ ಮೆಗಾವ್ಯಾಟ್ ಉತ್ಪಾದನೆಯ ಸ್ಥಾವರ ಕಾರ್ಯಾರಂಭಕ್ಕೆ ಅನುವು ಮಾಡಿಕೊಟ್ಟಿದೆ. ಎರಡನೆಯ ಸ್ಥಾವರದ ನಿರ್ಮಾಣ ಕಾರ್ಯ ಮುಂದುವರಿದಿದೆ. ಈ ಅಣುವಿದ್ಯುತ್ ಸ್ಥಾವರಕ್ಕೆ ಜನರನ್ನು ಸಂಘಟಿಸಿದ ಸ್ವಯಂ ಸೇವಾ ಕಾರ್ಯಕರ್ತರನ್ನು ಮತ್ತು ವಿದೇಶಿ ಪರಿಸರ ಹೋರಾಟಗಾರರು ಮತ್ತು ತಜ್ಞರನ್ನು ಸ್ಥಳಿಯ ಪ್ರದೇಶಕ್ಕೆ ಬೇಟಿ ನೀಡದಂತೆ ನಿರ್ಭಂದ ಹೇರಲಾಗಿದೆ. ಸ್ಥಳೀಯ ನಾಯಕ ಪರಪ್ಪರಾಯನ್ ಎಂಬಾತನಿಗೆ ಆತನ 
ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಪೊಲೀಸರು ಅನುಮತಿ ನಿರಾಕರಿಸಿದರು


.
ಇತ್ತೀಚೆಗಿನ ದಿನಗಳಲ್ಲಿ ನಮ್ಮನ್ನಾಳುವ ಜನಪ್ರತಿನಿಧಿಗಳು ಮತ್ತು ಆಳುವ ಸರ್ಕಾರಗಳು ಪರಿಸರ ಹೋರಾಟಗಾರರನ್ನು ಮತ್ತು ಪರಿಸರವಾದಿಗಳನ್ನು ಅಭಿವೃದ್ಧಿಯ ವಿರೋಧಿಗಳೆಂದು ಪ್ರತಿಬಿಂಬಿಸುತ್ತಾ ಬಂದಿದ್ದಾರೆ. ಮನುಕುಲಕ್ಕೆ ನೆರವಾಗುವ ಅಥವಾ ಬೆಳಕಾಗುವ ಯಾವುದೇ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ವಿರೋಧಿಸುವ ಸಿನಿಕತನವನ್ನು ಯಾವೊಬ್ಬ ಪರಿಸರವಾದಿ ಹೊಂದಿರುವುದಿಲ್ಲ. ಆದರೆ ಅದು ಯಾವುದೇ ವಿಜ್ಞಾನ, ಅಥವಾ ತಂತ್ರಜ್ಞಾನವಾಗಿರಲಿ, ಮನುಷ್ಯನಿಂದ ಅವಿಷ್ಕಾರಗೊಂಡ ಮೇಲೆ ಅದು ಅವನ ನಿಯಂತ್ರಣದಲ್ಲಿರಬೇಕು. ಆದರೆ, ಜೈವಿಕ ತಂತ್ರಜ್ಞಾನ ಕ್ರೇತ್ರದಲ್ಲಿ ಕ್ಷಿಪ್ರ ಗತಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ಮತ್ತು ಅಣು ಲೋಕದ ವಿದ್ಯಾಮಾನಗಳು ಈಗಾಗಲೇ ಮನುಷ್ಯನ ನಿಯಂತ್ರಣವನ್ನು ಮೀರಿದ ರಂಗಗಳಾಗಿವೆ. ಇವುಗಳಿಂದ ಆಗುತ್ತಿರುವ ದುರಂತಕ್ಕೆ ನಾಗರೀಕ ಜಗತ್ತು ಮೂಕಸಾಕ್ಷಿಯಾಗಿದೆ. ಅಣ್ವಸ್ತ್ರಗಳು, ಅಣು ಬಾಂಬ್ ಗಳು, ಅಣು ವಿದ್ಯುತ್ ಸ್ಥಾವರಗಳ ದುರಂತಗಳು, ಆನಂತರ ಅಣುವಿಕಿರಣದ ಪ್ರಭಾವದಿಂದ ಮಾನವ ಮತ್ತು ಪ್ರಾಣಿ ಜಗತ್ತು ಹಾಗೂ ನೈಸರ್ಗಿಕ ಜಗತ್ತಿನಲ್ಲಾದ ಪರಿಣಾಮಗಳಲ್ಲದೆ, ಕುಲಾಂತರಿ ತಳಿಗಳ ಅಡ್ಡ ಪ್ರಯೋಗದಿಂದ ಸೃಷ್ಟಿಯಾದ ದೈತ್ಯ ಕಳೆಗಳು, ಎಂತಹ ವಿಷವನ್ನೂ ಜೀರ್ಣಿಸಿಕೊಳ್ಳುವ ಹೊಸ ಕೀಟಗಳು ಇವುಗಳಿಗೆ ನಾವು ಯಾರಿಂದ ಉತ್ತರ ನಿರೀಕ್ಷಿಸೋಣ?  ಕಣ್ಣೆದುರುಗಿನ ವಾಸ್ತವವನ್ನು ಅರ್ಥಮಾಡಿಕೊಳ್ಳಲಾಗದ ಅಭಿವೃದ್ಧಿ ಭ್ರಮೆಯ ಜಗತ್ತಿಗೆ ಪರಿಸರ ಪ್ರೇಮಿಗಳು ಸಿನಿಕರಂತೆ  ಕಾಣದೆ ಬೇರೆ ತರಹ ಕಾಣಲು ಸಾದ್ಯವೆ?

1986 ರ ಏಪ್ರಿಲ್ 25 ಮತ್ತು 26 ನಡುವಿನ ಮಧ್ಯರಾತ್ರಿ ರಷ್ಯಾದ ಚೆರ್ನೋಬಿಲ್ ಅಣುವಿದ್ಯುತ್ ಸ್ಥಾವರದ ಘಟನೆಗೆ ಸಾಕ್ಷಿಯಾದ ವ್ಲಾದಿಮಿರ್ ಚೆರ್ನೆಂಕೊ ಎಂಬ ಅಣುವಿಜ್ಞಾನಿ, ಕ್ಯಾನ್ಸರ್ ಪಿಡಿತನಾಗಿ 1993 ರಲ್ಲಿ ಅಮೇರಿಕಾ ದೇಶಕ್ಕೆ ಚಿಕಿತ್ಸೆಗಾಗಿ ಬಂದ ಸಂದರ್ಭದಲ್ಲಿ ತಾನು ಸಾಯುವ ಮುನ್ನ ಜಗತ್ತಿನೆದುರು ಬಿಚ್ಚಿಟ್ಟ ವಾಸ್ತವ ಸತ್ಯ ಇದು. ವ್ಲಾದಿಮೀರ್ ಚೆರ್ನೆಂಕೋ ರಷ್ಯಾದ ಅತ್ಯಂತ ಹಿರಿಯ ಅಣುವಿಜ್ಞಾನಿ. ಅಲ್ಲಿನ ಅಣ್ವಸ್ತ್ರಗಳು ಮತ್ತು ಅಣು ವಿದ್ಯುತ್ ಸ್ಥಾವರಗಳ ಅವಿಷ್ಕಾರದಲ್ಲಿ ಸತತ ಐವತ್ತು ವರ್ಷಗಳ ಕಾಲ ತೊಡಗಿಸಿಕೊಂಡಿದ್ದ ಈ ವಿಜ್ಞಾನಿ. ತಾನು ಸಾಯುವ ಕೆಲವೇ ದಿನಗಳ ಮುನ್ನ, ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿ ಜಗತ್ತಿನ ಮಾಧ್ಯಮಗಳ ಎದುರು ಅಣುಲೋಕದ ವಂಚನೆಗಳನ್ನು ವಿವರಿಸುತ್ತಾ, ಅಮೇರಿಕಾ ರಷ್ಯಾ ಸೇರಿದಂತೆ ಎಲ್ಲಾ ರಾಷ್ಟ್ರಗಳ ಮುಖವಾಡಗಳನ್ನು ಕಳಚಿ ಹಾಕಿದ. ಅವನ ಮಾತಿನ ವಿವರಗಳು ಹೀಗಿವೆ.
“ ಚರ್ನೋಬಿಲ್ ಅಣಸ್ಥಾವರದ ಸ್ಪೋಟ ಸಂಭವಿಸಿದ್ದು 1986 ರ ಏಪ್ರಿಲ್ 25 ಮತ್ತು 26 ರ ನಡುರಾತ್ರಿ. ತನ್ನ ಮಿತಿಮೀರಿದ ಶಾಖದಿಂದ ಸ್ಪೋಟಗೊಂಡ ಅಣುಸ್ಥಾವರ ನಿರಂತರ ಹದಿನಾರು ದಿನಗಳ ಕಾಲ ಅಣುವಿಕಿರಣಗಳನ್ನು ಹೊರ ಜಗತ್ತಿಗೆ ಸೂಸುತ್ತಾ, ಹತ್ತಿ ಉರಿದರೂ ರಷ್ಯಾ ಸರ್ಕಾರ ಏನೂ ಆಗಿಲ್ಲ ಎಂಬಂತೆ ತಣ್ಣಗೆ ಕುಳಿತಿತ್ತು. ಆ ವೇಳೆಗಾಗಲೆ ದುರಂತ ನಡೆದ ಸ್ಥಳದಿಂದ 40 ಕಿಲೊಮೀಟರ್ ವ್ಯಾಪ್ತಿಯೊಳಗೆ ಅಣುವಿಕಿರಣ ಮತ್ತು ವಿಷಾನಿಲ ಪರಿಸರದ ಮೇಲೆ ತಮ್ಮ ಪರಿಣಾವನ್ನು ತೋರಿದ್ದವು.  ರಷ್ಯಾ ಸರ್ಕಾರ ದುರಂತ ನಡೆದ ಸ್ಥಳದ ಸುತ್ತಾ ಸೇನಾ ತುಕಡಿಯನ್ನು ಪಹರೆಗೆ ಇರಿಸಿ, ಏನೂ ಆಗಿಲ್ಲವೆಂಬಂತೆ ಜಗತ್ತಿನೆದುರು ಮುಖವಾಡ ಧರಿಸಿ ಕುಳಿತಿತ್ತು

ಏಪ್ರಿಲ್ 28 ರ ಬೆಳಿಗ್ಗೆ ಅಂದಿನ ಅಧ್ಯಕ್ಷ ಗೋರ್ಬಚೇವ್ ನನ್ನನ್ನು ಕರೆಸಿ, ಈ ಅಣುಸ್ಥಾವರದ ದುರಂತ ಮತ್ತು ದುರಸ್ತಿಯ ಸಾಧ್ಯತೆಗಳ ಬಗ್ಗೆ ವರದಿ ಸಲ್ಲಿಸಲು ಕೇಳಿಕೊಂಡರು. ದುರಂತವೆಂದರೆ, ಅಣುವಿಕಿರಣದ ಪ್ರಮಾಣವನ್ನು ಅಳೆಯಲು ನಮ್ಮ ಬಳಿ ಇದ್ದ ಮಾಪನಗಳು ಕೇವಲ 400 ರೆಮ್ಸ್ ಮಾತ್ರ ಅಳೆಯಬಲ್ಲ ಸಾಧನಗಳಾಗಿದ್ದವು. ಆದರೆ, ಅಣುವಿಕಿರಣ ಇದರ ಗಡಿಯನ್ನು ದಾಟಿತ್ತು. ( 5 ರೆಮ್ಸ್ ವರೆಗಿನ ಅಣುವಿಕಿರಣ ಮನುಷ್ಯರಿಗೆ ಅಪಾಯವಿಲ್ಲ ಎಂಬುದು ಅಣು ತಜ್ಞರ ಹೇಳಿಕೆ) ಚರ್ನೋಬಿಲ್ ಸ್ಥಾವರದ ಶಾಖವನ್ನು ತಣಿಸಿ, ಅಲ್ಲಿನ ಅವಶೇಷಗಳನ್ನು ಸ್ವಚ್ಚ ಮಾಡಲು 18 ರಿಂದ 25 ವರ್ಷದ ಸೇನಾ ಯೋಧರನ್ನು ಸ್ಥಳಕ್ಕೆ ಕಳಿಸಲಾಯಿತು. ಯಾವೊಂದು ರಕ್ಷಣಾ ಕವಚ ಧರಿಸಿದೆ ದುರಂತ ಸ್ಥಳಕ್ಕೆ ಬೇಟಿ ನೀಡಿದ ಈ ಅಮಾಯಕ ಸೈನಿಕರು.ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದ್ದರು. ದುರಂತ ಹಾಗೂ ಅದರ ಪರಿಣಾಮ ಹೆಚ್ಚಿನದಲ್ಲ ಎಂಬುದನ್ನು ಜಗತ್ತಿಗೆ ತೋರಿಸುವುದು ರಷ್ಯಾ ಸರ್ಕಾರದ ಹುನ್ನಾರವಾಗಿತ್ತು. ಆನಂತರ ಏಳು ಸಾವಿರ ಸೈನಿಕರ ಸಹಾಯ ಮತ್ತು ಹೆಲಿಕಾಪ್ಟರ್ ಗಳ ಮೂಲಕ ಅಣುಸ್ಥಾವರದ ಮೇಲೆ ಸಾವಿರಾರು ಟನ್ ಗಾಜಿನ ಚೂರು ಮತ್ತು ಕಾಂಕ್ರೀಟ್ ಸುರಿದು, ಅಣುಸ್ಥಾವರದ ಮೇಲೆ ಐವತ್ತು ಮೀಟರ್ ಎತ್ತರದ ಸಮಾಧಿ ಕಟ್ಟಲಾಯಿತು. ದುರಂತವೆಂದರೆ, ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಯಾವೊಬ್ಬ ಸೈನಿಕನೂ ನಂತರದ ದಿನಗಳಲ್ಲಿ ಬದುಕುಳಿಯಲಿಲ್ಲ.
ಅಧ್ಯಕ್ಷರ ಅಪ್ಪಣೆ ಮೇರೆಗೆ ನಾನು ಚರ್ನೋಬಿಲ್ ಅಣುಸ್ಥಾವರದ ದುರಂತದ ಬಗ್ಗೆ ಮೂರು ಸಂಪುಟಗಳ ವರದಿಯನ್ನು ಸಲ್ಲಿಸಿದೆ. ಕೂಡಲೆ ನನ್ನ ವರದಿ ರಷ್ಯಾ ಸರ್ಕಾರದ ರಹಸ್ಯ ಕಪಾಟಿನೊಳಕ್ಕೆ ಸೇರಿಕೊಂಡಿತು. ಆನಂತರ ಈ ವರದಿ ಕುರಿತು ರಷ್ಯಾ ಸರ್ಕಾರವಾಗಲಿ, ಅಂತರಾಷ್ಟ್ರೀಯ ಅಣು ಆಯೋಗವಾಗಲಿ ತುಟಿ ಬಿಚ್ಚಲಿಲ್ಲ. ಸರ್ಕಾರದ ಪ್ರಕಾರ ದುರಂತದಲ್ಲಿ ಸತ್ತವರ ಸಂಖ್ಯೆ ಕೇವಲ ಹದಿನಾರು ಮಾತ್ರ. ಆದರೆ ಕಾರ್ಯಾಚರಣೆ ವೇಳೆ ಸತ್ತವರ ಸೈನಿಕರ ಸಾವನ್ನು ಹೊರ ಜಗತ್ತಿನಿಂದ ಮರೆ ಮಾಚಲಾಗಿತ್ತು

ಕೀವ್ ಎಂಬ ನಲವತ್ತು ಲಕ್ಷ ಜನಸಂಖ್ಯೆಯುಳ್ಳ ನಗರ ಈ ದುರಂತದಿಂದಾಗಿ ತನ್ನೆಲ್ಲಾ ಲಕ್ಷಣಗಳನ್ನು ಕಳೆದುಕೊಂಡು ಸಾವಿನ ಮನೆಯಾಗಿ ಪರಿವರ್ತನೆಗೊಂಡಿತು. ನಾನು ಮೊದಲು ಅಣುಸ್ಥಾವರದ ದುರಂತದಿಂದ ಈ ನಗರದ ಮೇಲೆ ಕೇವಲ ಮೂರು ರೆಮ್ಸ್ ಪ್ರಮಾಣದ ಅಣುವಿಕಿರಣದ ಪ್ರಭಾವ ಬೀರಿರಬೇಕೆಂದು ಊಹಿಸಿದ್ದೆ, ಆದರೆ, ಅಲ್ಲಿ ಎಪ್ಪತ್ತು ರೆಮ್ಸ್ ನಷ್ಟು ಅಣುವಿಕಿರಣ ಹೊರಸೂಸಿತ್ತು.  ಒಟ್ಟಾರೆ, ಚರ್ನೋಬಿಲ್ ಅಣುವಿದ್ಯುತ್ ಸ್ಥಾವರದ ದುರಂತದಿಂದಾಗಿ ರಷ್ಯಾದ ಆರೂವರೆ ಕೊಟಿ ಜನ ಅಣುವಿಕಿರಣಗಳ ಪ್ರಭಾವದಿಂದ ನರಳುವಂತಾಯಿತು.ಇದರಿಂದ ಉಂಟಾದ ಹಾನಿಯ ಪ್ರಮಾಣ ಎರಡನೇಯ ಮಹಾಯುದ್ದದ ಪರಿಣಾಮವನ್ನು ಮೀರಿಸುವಂತಿತ್ತು. ರಷ್ಯಾದ ಆ ಪ್ರದೇಶದ ಸುತ್ತ ಮುತ್ತಲಿನ ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಪ್ರತಿ ತಿಂಗಳೂ ಹೆಸರಿಸಲಾಗದಷ್ಟು ಅನೇಕ ಹೊಸ ಖಾಯಿಲೆಗಳು ಹುಟ್ಟಿಕೊಂಡವು, 



ಮನುಷ್ಯರ ದೈಹಿಕ ಪ್ರಕ್ರಿಯೆಯಲ್ಲಿ ಅನೇಕ ಬದಲಾವಣೆಗಳು ಉಂಟಾದ ಪರಿಣಾಮವಾಗಿ ಅಂಗವಿಕಲ ಮಕ್ಕಳ ಜನನ ಸಾಮಾನ್ಯವಾಯಿತು. ಪ್ರಾಣಿಗಳ ಬದುಕು ಸಹ ಮನುಷ್ಯರಿಂತ ಭಿನ್ನವಾಗಿರಲಿಲ್ಲ. ಚರ್ನೋಬಿಲ್ ಅಣುಸ್ಥಾವರ ಹತ್ತಿರವಿದ್ದ ಹಳ್ಳಿಗಳ ಸುಮಾರು ಹದಿನೈದು ಲಕ್ಷ ಜನತೆ ತೀವ್ರ ವಿಕಿರಣಕ್ಕೆ ತುತ್ತಾದರು.ಇದರ ಜೊತೆಗೆ ಯುರೋಪಿನ ಗೋಧಿಯ ಕಣಜವೆನಿಸಿದ್ದ ಉಕ್ರೇನಿನ ಫಲವತ್ತಾದ ಭೂಮಿ, ಮತ್ತು ಅಲ್ಲಿನ ನೆಲಮೂಲಗಳು ಅಣು ವಿಕಿರಣಕ್ಕೆ ತುತ್ತಾದವು. ಈ ಭೂಮಿಯಲ್ಲಿ ಬೆಳೆಯಲಾದ ಗೋಧಿ, ತರಕಾರಿ, ಹಣ್ಣುಗಳನ್ನು ಸೇವಿಸಿದ ಜನರ ಜಠರದಲ್ಲಿ ಹುಣ್ಣುಗಳಾದವು. ಅನಿಮಿಯಾ ಮತ್ತು ಕ್ಯಾನ್ಸರ್ ಕಾಯಿಲೆಗೆ ತುತ್ತಾದರು.
ದುರಂತದ ಸಂಗತಿಯೆಂದರೆ, ಈ ಮೊದಲು ರಷ್ಯಾದಲ್ಲಿ 104 ಅಣುಸ್ಥಾವರಗಳ ಸಣ್ಣ ಪುಟ್ಟ ದುರಂತಗಳು ಸಂಭವಿಸಿದ್ದವು. ಅವೆಲ್ಲವನ್ನೂ ಮಿಲಿಟರಿ ರಕ್ಷಣೆಯ ನೆಪದಲ್ಲಿ ಗೌಪ್ಯವಾಗಿಡಲಾಗಿತ್ತು. ರಷ್ಯಾದಲ್ಲಿ ಅಣು ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವ ಸಂದರ್ಭದಲ್ಲಿ ಮನುಷ್ಯ ನಿರ್ಮಿತ ತಪ್ಪಿನಿಂದಾಗಿ ಇನ್ನೂರಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದವು. ನಿಜ ಹೇಳಬೇಕೆಂದರೆ, ನನ್ನ ನೆಲವಾದ ರಷ್ಯಾದಲ್ಲಿ ಒಂದಿಂಚು ಭೂಮಿ ಅಣುವಿಕಿರಣದಿಂದ ಮುಕ್ತವಾಗಿಲ್ಲ. ಈ ಮೊದಲು ಅಣುಶಕ್ತಿ ಕೇಂದ್ರ ಮತ್ತು ಅಣುಸ್ಥಾವರಗಳಲ್ಲಿ ಸ್ಪೋಟ ಸಂಭವಿಸಿದಾಗ ಮಾತ್ರ ಅಪಾಯ  ಎಂದು ಅಂದಾಜಿಸಲಾಗಿತ್ತು. ಅದು ತಪ್ಪು ಊಹೆ ಎಂದು ನನಗೆ ಮನದಟ್ಟಾಯಿತು. ಅಣು ಸ್ಥಾವರಗಳ ಚಟುವಟಿಕೆ ನಡೆಯುವ ಪ್ರದೇಶಗಳ ಸುತ್ತ ಮುತ್ತಲಿನ ನೀರಿನ ಸೆಲೆಗಳು ಅಣುವಿಕಿರಣಕ್ಕೆ ಒಳಗಾಗಿರುವುದನ್ನು ನಾನು ನನ್ನ ದೇಶದ ಹತ್ತು ಅಣುಸ್ಥಾವರಗಳ ಪ್ರದೇಶದಲ್ಲಿ ದೃಢಪಡಿಸಿಕೊಂಡೆ. 1991 ರಿಂದ 1993 ರವರೆಗೆ ಕೇವಲ ಎರಡು ವರ್ಷಗಳಲ್ಲಿ ಅಮೇರಿಕಾ ಸೇರಿದಂತೆ ಹದಿನಾಲ್ಕು ರಾಷ್ಟ್ರಗಳ 152 ಅಣು ವಿದ್ಯುತ್ ಸ್ಥಾವರಗಳಲ್ಲಿ ಸ್ಪೋಟ ಸಂಭವಿಸಿದೆ. 1989 ರ ವರೆಗೆ ಜಗತ್ತಿನಾದ್ಯಂತ ಸುರಕ್ಷತೆಯ ದೃಷ್ಟಿಯಿಂದ 860 ಅಣು ಸ್ಥಾವರಗಳನ್ನು ಮುಚ್ಚಲಾಗಿದೆ.

ಇದು 1993 ರಲ್ಲಿ ರಷ್ಯಾ ಅಣುವಿಜ್ಞಾನಿ ಬಿಚ್ಚಿಟ್ಟ ಸತ್ಯ. ಈ ಘಟನೆಯ ನಂತರ ಇಪ್ಪತ್ತು ವರ್ಷಗಳಲ್ಲಿ ಜಗತ್ತಿನಾದ್ಯಂತ ಆಗಿರುವ ಪರಿಣಾಮಗಳನ್ನು ನೀವೆ ಊಹಿಸಿಕೊಳ್ಳಿ. 1952 ರಿಂದ 2012 ರ ವರೆಗೆ ಸಂಭವಿಸಿದ ಅಣು ವಿದ್ಯುತ್ ಸ್ಥಾವರಗಳ ದುರಂತದಲ್ಲಿ ಅಮೇರಿಕಾ ಮೊದಲ ಸ್ಥಾನದಲ್ಲಿದೆ. ಅಮೇರಿಕಾದಲ್ಲಿ ಒಟ್ಟು ನಲವತ್ತೈದು ದುರಂತಗಳು ಸಂಭವಿಸಿದ್ದು, 1979 ರಲ್ಲಿ ತ್ರೀ ಮೈಲ್ಸ್ ಐಸ್ ಲ್ಯಾಂಡ್ ಅಣುಸ್ಥಾವರದ ಸ್ಪೋಟ ಭೀಕರವಾದದ್ದು. ಕೆನಡಾದಲ್ಲಿ ಐದು, ಪಾಕಿಸ್ಥಾನದಲ್ಲಿ ಒಂದು, ಉಕ್ರೇನ್ ನಲ್ಲಿ ಒಂದು,  ಪ್ರಾನ್ಸ್ ನಲ್ಲಿ ಹನ್ನೆರೆಡು, ಜರ್ಮನಿಯಲ್ಲಿ ಮೂರು, ಭಾರತದಲ್ಲಿ ಏಳು, ಇಂಗ್ಲೇಂಡ್ ನಲ್ಲಿ ಮೂರು, ಅವಘಡಗಳು ಸಂಭವಿಸಿದ್ದು, ಇವುಗಳಲ್ಲಿ 1979 ರ ಅಮೇರಿಕಾದ ತ್ರೀ ಮೈಲ್ಸ್ ಐಸ್ ಲ್ಯಾಂಡ್, 1986 ರ ರಷ್ಯಾದ ಚರ್ನೋಬಿಲ್ ಮತ್ತು 2011 ರಲ್ಲಿ ಜಪಾನಿನಲ್ಲಿ ಸಂಭವಿಸಿದ ಪುಕೊಶಿಮಾ ಅಣುಸ್ಥಾವರದ ಸ್ಪೋಟದ ಘಟನೆಗಳು ಅಣು ಚರಿತ್ರೆಯ ಭೀಕರ ದುರಂತಗಳು ಎಂದು ದಾಖಲಾಗಿವೆ.

ಇದು ಅಣುಸ್ಥಾವರಗಳ ಸ್ಪೋಟಗಳ ದುರಂತದ ಕಥೆಯಾದರೆ, ಈಗ ಚಾಲ್ತಿಯಲ್ಲಿದ್ದು ಅಣು ವಿದ್ಯುತ್ ಉತ್ಪಾದಿಸುತ್ತಿರುವ  ಸ್ಥಾವರಗಳಿಂದ ಹೊರಬೀಳುತ್ತಿರುವ ಯುರೇನಿಯಂ ತ್ಯಾಜ್ಯ ಆಧುನಿಕ ಜಗತ್ತಿಗೆ ನುಂಗಲಾರದ ತುತ್ತಾಗಿದೆ. ಅಣು ವಿದ್ಯುತ್ ಉತ್ಪಾದನೆಗೆ ಸಂಸ್ಕರಿಸಿದ ಯುರೇನಿಯಂ ಅದಿರನ್ನು ಬಿಲ್ಲೆಗಳಾಗಿ ಪರಿವರ್ತಿಸಿ ಬಳಸಲಾಗುತ್ತಿದ್ದು, ಇದರಲ್ಲಿ ಹೊರಬೀಳುವ ತ್ಯಾಜ್ಯವನ್ನು ಆರು ಇಂಚು ದಪ್ಪದ ಉಕ್ಕಿನ ಪಿಪಾಯಿಗಳಲ್ಲಿ ತುಂಬಿಸಿ, ಭೂಮಿಯ ಕೆಳಗಡೆ ಅರವತ್ತು ಅಡಿ ಆಳದಲ್ಲಿ ಹೂಳಲಾಗುತ್ತಿದೆ. ( ಅಮೇರಿಕ, ಜಪಾನ್, ಇಂಗ್ಲೇಂಡ್, ಪ್ರಾನ್ಸ್ ದೇಶಗಳಲ್ಲಿ ಸಮುದ್ರದ ಅಡಿಯಲ್ಲಿ ಹೂಳಲಾಗುತ್ತಿದೆ.)
ಈ ಅಣು ತ್ಯಾಜ್ಯದಿಂದ ಸುಮಾರು ಇನ್ನೂರು ವರ್ಷಗಳಿಂದ ಹಿಡಿದು ನಾಲ್ಕುನೂರು ವರ್ಷಗಳ ವರೆಗೆ ಅಣುವಿಕಿರಣ ಹೊರಸೂಸುವ ಸಾಧ್ಯತೆಗಳಿದ್ದು ಈ ಕಾರಣದಿಂದಾಗಿ ಭೂಮಿಯಲ್ಲಿ ಹೂಳಲಾಗುತ್ತಿದೆ. ಭಾರತದಲ್ಲಿ ಸಧ್ಯ ವಾರ್ಷಿಕ 480 ಟನ್ ಯುರೇನಿಯಂ ಅದಿರನ್ನು ಅಣುವಿದ್ಯುತ್ ಉತ್ಪಾದನಗೆ  ಬಳಸಲಾಗುತ್ತಿದ್ದು, ಇದರಲ್ಲಿ ಶೇಕಡ ಹತ್ತರಷ್ಟು ತ್ಯಾಜ್ಯ ಲೆಕ್ಕ ಹಾಕಿದರೆ, ಪ್ರತಿ ವರ್ಷ 48 ಟನ್ ವಿಷವನ್ನು ಭೂಮಿಗೆ ಉಣಬಡಿಸಲಾಗುತ್ತಿದೆ. ಇಡೀ ಅಣುಲೋಕದ ವಿದ್ಯಾಮಾನಗಳನ್ನು ಗಮನಿಸುತ್ತಿದ್ದರೆ, ಅಧುನಿಕ ಜಗತ್ತಿನ ಮನುಷ್ಯನನ್ನು ನಾವು ಮೋಹಿನಿ ಭಸ್ಮಾಸೂರನಿಗೆ ಹೋಲಿಸಬಹುದು.
ಕೊನೆಯ ಮಾತು- ಅಣು ಲೋಕದ ದುರಂತಗಳ ಬಗ್ಗೆ ಆಸಕ್ತಿ ಇರುವ ಓದುಗರು ಈ ಕೆಳಗಿನ ಕೃತಿಗಳನ್ನು ಗಮನಿಸಬಹುದು..
http://bits.wikimedia.org/static-1.23wmf7/skins/common/images/magnify-clip.png
http://bits.wikimedia.org/static-1.23wmf7/skins/common/images/magnify-clip.pngಅಣು ವಿದ್ಯುತ್ ಸ್ಥಾವರ ಮತ್ತು ಅಣುಲೋಕದ ವಿವರ ನೀಡುವ ಕೃತಿಗಳ ಪಟ್ಟಿ
·         Britain, Australia and the Bomb (2006)
·         Carbon-Free and Nuclear-Free (2007)
·         Chernobyl. Vengeance of peaceful atom. (2006)
·         Contesting the Future of Nuclear Power (2011)
·         Fallout: An American Nuclear Tragedy (2004)
·         Fallout Protection (1961)
·         Hiroshima (1946)
·         Los Alamos Primer (1992)
·         Megawatts and Megatons (2001)
·         My Australian Story: Atomic Testing (2009)
·         Nuclear Politics in America (1997)
·         Nuclear Power and the Environment (1976)
·         Nuclear War Survival Skills (1979)
·         Nuclear Weapons: The Road to Zero (1998)
·         On Nuclear Terrorism (2007)
·         Our Friend the Atom (1957)
·         Plutopia (2013)
·         Protect and Survive (1980)
·         Smyth Report (1945)
·         Survival Under Atomic Attack (1950)
·         The Atom Besieged: Extraparliamentary Dissent in France and Germany (1981)
·         The Bells of Nagasaki (1949)
·         The Day of the Bomb (1961)
·         The Fate of the Earth (1982)
·         The Four Faces of Nuclear Terrorism (2004)
·         The Fourth Protocol (1984)
·         The Hundredth Monkey (1982)
·         The Last Train From Hiroshima (2010)
·         The Making of the Atomic Bomb (1988)
·         The Navajo People and Uranium Mining (2006)
·         The Nuclear Power Controversy (1976)
·         The People of Three Mile Island (1980)
·         The Plutonium Files: America's Secret Medical Experiments in the Cold War (1999)
·         The Psychology of Nuclear Proliferation (2006)
·         The Truth About Chernobyl (1991)
·         The Unfinished Twentieth Century (2001)
·         TORCH report (2006)
·         U.S. Nuclear Weapons: The Secret History (1988)
·         We Almost Lost Detroit (1975)
·         When Technology Fails (1994)


ಶುಕ್ರವಾರ, ಡಿಸೆಂಬರ್ 20, 2013

ಮಣಿಪುರ ಮಾನಿನಿಯರ ನೋವಿನ ಕಥನ



ಸಲಿಂಗ ಕಾಮ ಅಪರಾಧ ಎಂಬ ತೀರ್ಪು ಸರ್ವೋಚ್ಚ ನ್ಯಾಯಾಲಯದಿಂದ ಹೊರಬಿದ್ದ ಮೇಲೆ ಕಳೆದ ಹದಿನೈದು ದಿನಗಳಿಂದ ದೇಶಾದ್ಯಂತ ನಡೆಯುತ್ತಿರುವ ಚರ್ಚೆ ಮತ್ತು ಪ್ರತಿಭಟನೆ ಹಾಗೂ ಈ ತೀರ್ಪಿಗೆ ಪರ್ಯಾಯ ಕಂಡುಕೊಳ್ಳುವಲ್ಲಿ ನಡೆಸುತ್ತಿರುವ ಕೇಂದ್ರ ಸರ್ಕಾರದ ಗಂಭೀರ ಚಿಂತನೆಗಳನ್ನು ನೀವೆಲ್ಲಾ ಗಮನಿಸುತ್ತಿದ್ದೀರಿ, ಈಗಾಗಲೇ  ತೀರ್ಪು ಮರಿಪರಿಶೀಲಗೆಗಾಗಿ ಸರ್ಕಾರ, ನ್ಯಾಯಾಲಯಕ್ಕೆ  ಅರ್ಜಿ ಸಲ್ಲಿಸಿದೆ
ಮನುಷ್ಯನೊಬ್ಬನ ವಿಕೃತಿಯ ಪರಮಾವಧಿಯ ಹಂತ ಎನ್ನ ಬಹುದಾದ ಈ ಅಸಹಜ ಕ್ರಿಯೆಗೆ ದೇವಾಲಯದ ಶಿಲ್ಪಗಳನ್ನು ಮತ್ತು ಪುರಾಣ, ಇತಿಹಾಸದ ಸಂಗತಿಗಳನ್ನು ಆಧಾರವಾಗಿಟ್ಟು ಸಮರ್ಥನೆ ಮಾಡುತ್ತಿರುವವರ ನಡೆವಳಿಕೆಗಳನ್ನು ಗಮನಿಸಿದರೆ, ನಾವು ಎತ್ತ ಸಾಗುತ್ತಿದ್ದೇವೆ ಎಂಬುದು ಅರ್ಥವಾಗುವುದಿಲ್ಲ. ಇತ್ತೀಚೆಗೆ ತಮಿಳುನಾಡಿನ ದೇವಾಲಯದ ಗೋಡೆಗಳಲ್ಲಿ ಯೋಧನೊಬ್ಬ ತನ್ನ ಕುದುರೆಯೊಂದಿಗೆ ಮೈಥುನದಲ್ಲಿ ತೊಡಗಿರುಕೊಂಡಿರುವ ಶಿಲ್ಪವನ್ನು ಗಮನಿಸಿದೆ. ರಾಜನೊಬ್ಬನ ಯುದ್ಧದ ದಾಹಕ್ಕೆ ಹಲವಾರು ದಿನಗಳ ಕಾಲ ಮನೆ ತೊರೆದು ಬಂದು ಯುದ್ಧ ಭೂಮಿಯಲ್ಲಿ ಹೋರಾಡುವ ಸೈನಿಕನೊಬ್ಬನ ಕಾಮದ ವಾಂಚೆ ಮತ್ತು ದುರಂತ ಇದೆಂದು ನನಗೆ ಆ ಶಿಲ್ಪ ತೋರಿತು.
ಇವೊತ್ತು ಪ್ರಗತಿಪರ ಚಿಂತಕರು ಎನಿಸಿಕೊಳ್ಳಬೇಕಾದರೆ, ಲಿಂಗ ತಾರಾತಮ್ಯ ಹೋಗಲಾಡಿಸುವುದರ ಜೊತೆಗೆ, ಸಲಿಂಗ ಕಾಮವನ್ನು ಸಮರ್ಥಿಸಿಕೊಳ್ಳಬೇಕು ಎಂಬ ಭಾವನೆ ದಟ್ಟವಾಗಿ ಸಮಾಜದಲ್ಲಿ ಬೇರೂರುತ್ತಿದೆ. ಮದುವೆಯಾದ ಗಂಡು ಹೆಣ್ಣು ಒಟ್ಟಿಗೆ ಬಾಳಿ ಬದುಕಲಾಗದೆ ದಾಂಪತ್ಯ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸುವವರ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಿರುವ ಸಂಗತಿ ಒಂದು ಕಡೆಯಾದರೆ, ಈ ವಿಕೃತ ಕಾಮಿಗಳು ಇನ್ನೊಂದು ಕಡೆ.  ಸಲಿಂಗ ಕಾಮದ ಬಗ್ಗೆ ಯಾರ ಒಲವು ಏನೇ ಆಗಿರಲಿ, ನಾನು ಆ ಕುರಿತು ಯೋಚಿಸುವುದು ಸಹ ಅಸಹ್ಯಕರ ಸಂಗತಿ ಮತ್ತು ಅದೊಂದು  ಅನೈಸರ್ಗಿಕ ಕ್ರಿಯೆ  ಎಂಬುದು ನನ್ನ ವೈಯಕ್ತಿಕ ನಿಲುವು. ಇಲ್ಲಿ ಆ ಕುರಿತು ಚರ್ಚೆ ಅನಾವಶ್ಯಕ.
ಭಾರತದ ಬಡತನ, ಹಸಿವು, ಅನಕ್ಷರತೆಯಷ್ಟೇ ಸಮನಾಗಿ ಸಲಿಂಗಕಾಮ ಕೂಡ  ಒಂದು ಜ್ವಲಂತ ಸಮಸ್ಯೆ ಎಂದು ಪರಿಗಣಿಸಿರುವ  ಈ ಸಮಾಜಕ್ಕೆ  ನನ್ನದೊಂದಿಷ್ಟು ಪ್ರಶ್ನೆಗಳಿವೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ  ಈಶಾನ್ಯ ರಾಜ್ಯಗಳ ಸಮಸ್ಯೆಗಳೇನು ಅಥವಾ  ಅಲ್ಲಿನ ಜನ ಅನುಭವಿಸುತ್ತಿರುವ ನೋವು ನಲಿವುಗಳೇನು ಎಂಬುದರ ಕುರಿತು ಚರ್ಚೆಗಳಾಗಿವೆಯೆ? ಮಣಿಪುರದ ಮಾನಿನಿಯರು ಅನುಭವಿಸುತ್ತಿರುವ ಅಪಮಾನ, ಅತ್ಯಾಚಾರ, ಹಿಂಸೆ ಮತ್ತು ಸಾವುಗಳಿಗಿಂತ  ಈ ಸಲಿಂಗ ಕಾಮ ಆದ್ಯತೆಯ ವಿಚಾರವೆ? ಅಲ್ಲಿನ ಮಹಿಳೆಯರ ಮೇಲೆ ಭಾರತದ ಮಿಲಿಟರಿ ಪಡೆಯಿಂದ  ನಡೆಯುತ್ತಿರುವ  ದೌರ್ಜನ್ಯ , ಕೊಲೆ , ಅತ್ಯಾಚಾರ ಪ್ರತಿಭಟಿಸಿ, ಕಳೆದ ಹದಿಮೂರು  ವರ್ಷಗಳಿಂದ ( 2 -11- 2000) ಅನ್ನ, ನೀರು ತ್ಯಜಿಸಿ, ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಮಣಿಪುರದ ಇವೊನ್ ಶರ್ಮಿಳಾ ಎಂಬ ಹೋರಾಟಗಾರ್ತಿಯ ನೋವು, ಸಂಕಟ ನಮ್ಮಗಳ ಎದೆಯ ಕದವೆನ್ನೇಕೆ ತಟ್ಟುತ್ತಿಲ್ಲ.?
ಈಶಾನ್ಯ ರಾಜ್ಯಗಳಾದ ಅಸ್ಸಾಂ , ಅರುಣಾಚಲಂ, ಮಣಿಪುರ, ನಾಗಲ್ಯಾಂಡ್, ಮಿಜೋರಾಂ,ರಾಜ್ಯಗಳ ಸಮಸ್ಯೆಗೆ ಹಲವು ಆಯಾಮಗಳಿವೆ. ಆದರೆ, ಅಲ್ಲಿನ ಬುಡಕಟ್ಟು ಜನಾಂಗಗಳ ಹಿಂಸೆ, ಸಂಘರ್ಷ ಮತ್ತು ಪ್ರತಿಭಟನೆಯ ಹುಟ್ಟಡಗಿಸಲು ಕೇಂದ್ರ ಸರ್ಕಾರ, 1952 ರ ಮೇ 22 ರಂದು ವಿಶೇಷ ಕಾನೂನನ್ನು ಜಾರಿಗೆ ತಂದಿತು, ಇದರ ಅನ್ವಯ ಜಮ್ಮು ಕಾಶ್ಮಿರ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಭಾರತೀಯ ಸೇನೆಗೆ ನೀಡಿದ ವಿಶೇಷ ಪರಮಾಧಿಕಾರ ( Armed forces Special powers Act)  ( AFSPA)  ಈಶಾನ್ಯ ರಾಜ್ಯಗಳ ಮಾನಿನಿಯರ ಮಾನ ಮತ್ತು ಪ್ರಾಣ ಹತ್ಯೆಗೆ ಕಾರಣವಾಗಿದೆ. ಆದರೆ, ನಮ್ಮನ್ನಾಳಿದ ಕೇಂದ್ರ ಸರ್ಕಾರಗಳು ಈಶಾನ್ಯ ರಾಜ್ಯಗಳು ಭಾರತದ ಅವಿಭಾಜ್ಯ ಅಂಗ ಎಂಬ ಅಂಶವನ್ನು ಮರೆತು ಎಷ್ಟೋ ವರ್ಷಗಳಾಗಿವೆ. ಈ ಪ್ರದೇಶಗಳು ನೆನಪಾಗುವುದು, ಚೀನಾ ಅರುಣಾಚಲ ಪ್ರದೇಶವನ್ನು ಆಕ್ರಮಿಸಿಕೊಂಡಾಗ ಮಾತ್ರ.

ಇಡೀ ನಾಗರೀಕ ಜಗತ್ತು ಬೆಚ್ಚಿ ಬೀಳುವಂತೆ 2004 ರಲ್ಲಿ ಮಣಿಪುರದ ರಾಜಧಾನಿ ಇಂಪಾಲ್ ನಗರದಲ್ಲಿ ಹನ್ನೆರೆಡು ಮಂದಿ ಮಧ್ಯ ವಯಸ್ಸಿನ ಮಹಿಳೆಯರು ಸಂಪೂರ್ಣವಾಗಿ ಬೆತ್ತಲಾಗಿ  ಭಾರತ ಸೇನಾ ಪಡೆಯ ಅಂಗವಾದ ಅಸ್ಸಾಂ ರೈಫಲ್ ತುಕುಡಿಯ ಕಛೇರಿ ಪ್ರದರ್ಶನ ನಡೆಸಿದರು. ಮಹಿಳೆಯರ  ಸಿಟ್ಟು, ಮತ್ತು ಆಕ್ರೋಶ ಅವರನ್ನು ಬೆತ್ತಲಾಗುವವರೆಗೆ ಕೊಂಡೊಯ್ದ ಅಂಶಗಳನ್ನು ಗಮನಿಸಿ, ವಿವೇಚಿಸಿದಾಗ ಮನಸ್ಸು ಮೌನವನ್ನು ಅಪ್ಪಿಕೊಳ್ಳುತ್ತದೆ. ಮಣಿಪುರದ ಒಂದೊಂದು ಮನೆ ಮತ್ತು ಊರಿನಲ್ಲಿ ಈ ವರೆಗೆ ಹೊರಜಗತ್ತಿಗೆ ಕಾಣಿಸದೆ ಉಳಿದುಕೊಂಡಿರುವ ಕ್ರೌರ್ಯಗಳು ಅನಾವರಣಗೊಳ್ಳುತ್ತವೆ. ಇವು ನಮ್ಮ ಸಾಮಾಜಿಕ ಚಳುವಳಿಗಳ ಪೊಳ್ಳತನ ಮತ್ತು ಹುಸಿ ಹೋರಾಟಗಾರರ ಮುಖವಾಡಗಳನ್ನು ಸಹ ಕಳಚಿಡುತ್ತವೆ.
ಈಶಾನ್ಯ ರಾಜ್ಯಗಳಲ್ಲಿ ತಲೆ ಎತ್ತಿರುವ ಹಿಂಸಾಚಾರ ಮತ್ತು ಜನಾಂಗೀಯ ಘರ್ಷಣೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೇನಾಪಡೆಗೆ ನೀಡಿದ ಪರಮಾಧಿಕಾರ. ಅನೇಕ  ಅಮಾಯಕ ಹೆಣ್ಣು ಮಕ್ಕಳ ಅತ್ಯಾಚಾರ ಮತ್ತು ಕೊಲೆಗೆ ಕಾರಣವಾಗಿವೆ. ಯಾವುದೇ ಅನುಮತಿಯಿಲ್ಲದೆ, ಯಾರನ್ನು ಬೇಕಾದರೂ ಬಂಧಿಸಬಹುದು, ಯಾರ ಮನೆಯನ್ನಾದರೂ ಪ್ರವೇಶಿಸಬಹುದು, ವಿಚಾರಣೆ ನಡೆಸಬಹುದು, ಬಂಧಿಸಿದ ವ್ಯಕ್ತಿ ಅಪಾಯಕಾರಿ ಎನಿಸಿದರೆ, ಗುಂಡಿಟ್ಟು ಕೊಲ್ಲಬಹುದು ಇಂತಹ ಅಧಿಕಾರ ಈಶಾನ್ಯ ರಾಜ್ಯಗಳ ಹೆಣ್ಣು ಮಕ್ಕಳ ಶೀಲಗಳ ಹರಣಕ್ಕೆ ರಹದಾರಿಯಾಗಿದೆ.
2004 ರಲ್ಲಿ ಇಮಪಾಲ್ ನಗರದ ಕೋಟೆ ಪ್ರದೇಶದ ಮನೆಯಲ್ಲಿದ್ದ ಮನೋರಮಾ ಎಂಬ ಮಹಿಳೆಯನ್ನು ಆಕೆಯ ಮನೆಗೆ ನುಗ್ಗಿ ಸಹೋದರ ಮತ್ತು ತಾಯಿಯ ಎದುರು ಮಿಲಿಟರಿ ಕ್ಯಾಂಪಿಗೆ ಎಳೆದೊಯ್ದ ಸೈನಿಕರು, ಆನಂತರ  ಅವಳ ಶವವನ್ನು ರಸ್ತೆ ಬದಿ ಬಿಸಾಡಿದ್ದರು. ಆಕೆಯನ್ನು ಗುಂಡಿಟ್ಟು ಕೊಲ್ಲುವ ಮುನ್ನ ಆಕೆಯ ಮೇಲೆ ಅನೇಕರು ಅತ್ಯಾಚಾರ ನಡೆಸಿರುವ ಸಂಗತಿ ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿತು. ಆದರೆ. ಈ ವಿಚಾರವಾಗಿ ಯಾವುದೇ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಶ್ನಿಸುವ  ಅಥವಾ ನ್ಯಾಯಾಲಯದ ಮೆಟ್ಟಿಲೇರುವ ಅವಕಾಶ ಅಲ್ಲಿನ ನಾಗರೀಕರಿಗೆ ಇಲ್ಲ.( ಮನೋರಮಾ ದುರಂತ ಕುರಿತು, 2012 ರ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸುವ ‘ಇಂಡಿಯನ್ ಲಿಟರೇಚರ್” ದ್ವೈಮಾಸಿಕ ಪತ್ರಿಕೆಯಲ್ಲಿ ವಿಶೇಷ ಲೇಖನ ಪ್ರಕಟವಾಗಿದೆ) 



ಈ ಘಟನೆಗೂ ಮುನ್ನ, ಶರ್ಮಿಳಾ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಕಾರಣವಾದ ಘಟನೆ ಕೂಡ ನಾಗರೀಕ ಜಗತ್ತು ತಲೆ ತಗ್ಗಿಸುವಂತಹದ್ದು. 1987 ರಲ್ಲಿ ಮಣಿಪುರದಲ್ಲಿ ನಡೆದ ಬಾಂಬ್ ಸ್ಪೋಟದ ಸಂದರ್ಭದಲ್ಲಿ ತನ್ನ ಜೀವವನ್ನು ಲೆಕ್ಕಿಸದೆ. ಸ್ಥಳದಲ್ಲಿ ಹಲವರ ಪ್ರಾಣ ಉಳಿಸಿದ ಬಾಲಕಿ ಚಂದ್ರಮಣಿ ಎಂಬಾಕೆಗೆ 1988 ರಲ್ಲಿ ಬಾಲಕ-ಬಾಲಕಿಯರಿಗೆ ನೀಡುವ ಶೌರ್ಯ ಪ್ರಶಸ್ತಿಯನ್ನು ನೀಡಿದ ಕೇಂದ್ರ ಸರ್ಕಾರ, ಆಕೆಯನ್ನು ಜನವರಿ 26 ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ದೆಹಲಿಯಲ್ಲಿ ಆನೆಯ ಮೇಲೆ ಕೂರಿಸಿ ಮೆರವಣಿಗೆ ಮಾಡಿತ್ತು. ಸದಾ ತನ್ನೊಂದಿಗೆ ಸರ್ಕಾರ ನೀಡಿದ್ದ ಶೌರ್ಯ ಪ್ರಶಸ್ತಿಯೊಂದಿಗೆ ಓಡಾಡುತ್ತಿದ್ದ ಈ ಅಮಾಯಕಕ ಬಾಲಕಿ 2000 ದಲ್ಲಿ  ಸೈನಿಕರ ಗುಂಡಿಗೆ ಬಲಿಯಾದಳು. 
ಈ ಯುವತಿಯ ಸಾವು ಶರ್ಮಿಳಾ ಅವರನ್ನು ಉಪವಾಸ ಸತ್ಯಾಗ್ರಹಕ್ಕೆ ನೂಕಿತು. ಇದಲ್ಲದೆ, ನೂರಾರು ಅಮಾಯಕ ನಾಗರೀಕರ ಮತ್ತು ಸರ್ಕಾರಿ ನೌಕರರ ಹತ್ಯೆಗೆ ಮಣಿಪುರದಲ್ಲಿ ಲೆಕ್ಕವಿಟ್ಟವರಿಲ್ಲ. ಈ ಕಾರಣದಿಂದಾಗಿ ಸತತ  ಐನೂರಕ್ಕೂ ಹೆಚ್ಚು ವಾರಗಳ ಕಾಲ ಅನ್ನ, ನೀರು ತ್ಯೆಜಿಸಿ, ಅಲ್ಲಿನ ಹೆಣ್ಣು ಮಕ್ಕಳ ನೆಮ್ಮದಿಯ ಬದುಕಿಗಾಗಿ ಹೋರಾಡುತ್ತಾ ಉಕ್ಕಿನ ಮಹಿಳೆ ಎಂಬ ಬಿರುದಿಗೆ ಪಾತ್ರರಾಗಿರುವ ಶರ್ಮಿಳಾ ಅವರ ಒಡಲಾಳದ ಕಿಚ್ಚು ನಮ್ಮ ನಾಗರೀಕ ಸಮಾಜಕ್ಕೆ ತಾಗಲೇ ಇಲ್ಲ. ಒಬ್ಬ ನಿಷ್ಣಾವಂತ ಅಮಾಯಕ ಹೆಣ್ಣು ಮಗಳು. ತನ್ನ ಜೀವವನ್ನು ಪಣಕ್ಕಿಟ್ಟು. ಹೋರಾಟ ಮಾಡುತ್ತಿರುವಾಗ, ಈಕೆಯ ಮೇಲೆ ಸತತವಾಗಿ ಆತ್ಮಹತ್ಯೆ ಪ್ರಯತ್ನ ಎಂಬ ಆರೋಪದಡಿ ಐ.ಪಿ.ಸಿ. ಸೆಕ್ಷನ್ 309 ರ ಅಡಿ ಮೊಕೊದ್ದಮೆ ದಾಖಲಿಸಿ ಹಲವಾರು ಬಾರಿ ಜೈಲಿಗೆ ತಳ್ಳಲಾಗಿದೆ. (2011 ರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ನ್ಯಾಯಲಯ ಈಕೆಗೆ ಮೊನ್ನೆ ಡಿಸಂಬರ್ 19 ರಂದು ನೋಟೀಸ್ ಜಾರಿ ಮಾಡಿದೆ)


ಈಶಾನ್ಯ ರಾಜ್ಯಗಳ ನಿಸರ್ಗ, ಅಲ್ಲಿನ ಪ್ರಾಕೃತಿಕ ಸೊಬಗು, ಹಸಿರು, ಜಲಪಾತ ಇವೆಲ್ಲವೂ ನೆಲದ ಮೇಲಿನ ಸ್ವರ್ಗ ಎಂಬ ಭಾವನೆ ಮೂಡಿಸುತ್ತಿದ್ದ ಕಾಲ ಒಂದಿತ್ತು. ಈಗ ಈಶಾನ್ಯ ಭಾರತ ನೆಲದ ಮೇಲಿನ ನರಕವೆಂಬಂತಾಗಿದೆ. ಅಸ್ಸಾಂ ರಾಜ್ಯದಲ್ಲಿ ಬೇರೆ ರಾಜ್ಯಗಳಿಂದ ವಲಸೆ ಬಂದ (ವಿಶೇಷವಾಗಿ ಬಿಹಾರ) ಸ್ಥಳಿಯರ ಉದ್ಯೋಗದ ಅವಕಾಶ ಕಿತ್ತುಕೊಳ್ಳುತ್ತಿದ್ದಾರೆ ಎಂಬ ಆಕ್ರೋಶ, ನಾಗಾಲ್ಯಾಂಡ್ ನಲ್ಲಿ ನಾಗ ಬುಡಕಟ್ಟು ಜನರ ಸಂಘರ್ಷ. ಅರುಣಾಚಲ ಪ್ರದೇಶ ಮಿಜೋರಾ ರಾಜ್ಯಗಳಲ್ಲಿ ಬಂಗ್ಲಾದಿಂದ ವಲಸೆ ಬಂದ ಚಕ್ಮಾ ನಿರಾಶ್ರಿತರ ಸಮಸ್ಯೆ, ಮಣಿಪುರದಲ್ಲಿ ಮಾನಿನಿಯರ ಮಾನ ಪ್ರಾಣ ದ ಹರಣಗಳ ಸಮಸ್ಯೆ ಇವುಗಳ ಕುರಿತು ನಮ್ಮ ಜನಪ್ರತಿನಿದಿಗಳು, ಅಥವಾ ಕೇಂಧ್ರ ಸರ್ಕಾರ ಇಲ್ಲವೆ, ಸಚಿವರು ಗಂಭೀರವಾಗಿ ಮಾತನಾಡಿದ್ದನ್ನು, ವಿಷಯ ಪ್ರಸ್ತಾಪಿಸಿದ್ದನ್ನು ನಾವು ನೊಡಲು ಸಾಧ್ಯವಾಗಲೇ ಇಲ್ಲ, ಏಕೆಂದರೆ, ನಮ್ಮ ಘನ ಕೇಂದ್ರ ಸರ್ಕಾರ ಈಶಾನ್ಯ ಭಾರತವನ್ನು ಭಾರತದ ಅವಿಭಾಜ್ಯ ಭಾಜ್ಯ ಅಂಗ ಎಂದು ಪರಿಗಣಿಸಿದಂತೆ ಕಾಣುವುದಿಲ್ಲ.

ಮಂಗಳವಾರ, ಡಿಸೆಂಬರ್ 17, 2013

ಕೊಟ್ಟ ಕುದುರೆಯನೇರಲಾರದ ಕೇಜ್ರಿವಾಲ್




ಭಾರತದ ಭವಿಷ್ಯದ ದಿಕ್ಸೂಜಿ ಎಂದು ಭಾವಿಸಲಾಗಿದ್ದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮಿಜೋರಾಂ ರಾಜ್ಯವೊಂದನ್ನು ಹೊರತುಪಡಿಸಿ,ಉಳಿದೆಡೆ ರಾಷ್ಟ್ರೀಯ ಕಾಂಗ್ರೇಸ್ ಪಕ್ಷ ನೆಲಕಚ್ಚಿರುವುದು, ಅನಿರೀಕ್ಷಿತ ಘಟನೆಯೇನಲ್ಲ. ತನ್ನ ದೂರದೃಷ್ಟಿಯ ಕೊರತೆ, ನಾಯಕತ್ವದ ಅರಾಜಕತೆ, ಇವೊತ್ತಿಗೂ ಪಕ್ಷದ ಸಂಘಟನೆಯೊಳಗೆ ತಳಮಟ್ಟದಲ್ಲಿ ಬೇರು ಬಿಟ್ಟಿರುವ ಗುಲಾಮಗಿರಿತನ ಮತ್ತು ವಂಶಪಾರಂಪರ್ಯ ಆಳ್ವಿಕೆಯಲ್ಲಿ ನಲುಗಿಹೋದ ಪಕ್ಷದ ರಾಜಕೀಯ ಚಟುವಟಿಕೆ ಮತ್ತು ಅಭ್ಯರ್ಥಿಯ ಆಯ್ಕೆ ಇವುಗಳಲ್ಲದೆ, ಪ್ರಧಾನಿ ಮನಮೋಹನ್ ಸಿಂಗರ ಕೊನೆಯ ಅವಧಿಯಲ್ಲಿ ಅನಾವರಣಗೊಂಡ ಅವರ ನಿಷ್ಕ್ರೀಯತೆ ಇವೆಲ್ಲವೂ ಕಾಂಗ್ರೇಸ್ ಪತನಕ್ಕೆ ಕಾರಣವಾದವು. ಇದರ ಲಾಭ ಪೂರ್ಣವಾಗಿ ಮತ್ತೊಂದು ಪ್ರಭಲ ರಾಷ್ಟ್ರೀಯ ಪಕ್ಷವಾದ ಬಿ.ಜೆ.ಪಿ. ಗೆ ದಕ್ಕಿತು. ಆದರೆ, ರಾಷ್ಟ್ರ ರಾಜಕಾರಣದ ಚದುರಂಗದ ಅಖಾಡ ಅಖಾಡ ಎಂದೇ ಬಿಂಬಿಸಲ್ಪಡುವ ದೆಹಲಿ ಚುನಾವಣಾ ಫಲಿತಾಂಶ ಮಾತ್ರ  ಕಾಂಗ್ರೇಸ್ ಮತ್ತು ಬಿ.ಜೆ.ಪಿ. ಹಾಗೂ ಪ್ರಾದೇಶಿಕ ಪಕ್ಷಗಳ ನೆಪದಲ್ಲಿ ವಂಶರಾಜಕಾರಣ ಮಾಡುತ್ತಿರುವ ಎಲ್ಲಾ ಹಿರಿಯ ರಾಜಕಾರಣಿಗಳಿಗೆ , ಮುಂದಿನ ದಿನಗಳಲ್ಲಿ ನಿಮ್ಮ ಅಡಿಪಾಯ ಕುಸಿಯಲಿದೆ ಎಂಬ ಸಂದೇಶವನ್ನು ರವಾನಿಸಿದೆ.


ಕಳೆದ ಎರಡು ದಶಕಗಳಿಂದ ದೇಶಾದ್ಯಂತ  ಚಲಾವಣೆಯಲ್ಲಿದ್ದ ನೈತಿಕತೆಯಿಲ್ಲದ ರಾಜಕಾರಣದಿಂದಾಗಿ ಭಾರತದ ಬಹುತೇಕ ಪ್ರಜ್ಙಾವಂತರು  ದೇಶದ ರಾಜಕೀಯದ ಬಗ್ಗೆ ನಂಬಿಕೆ ಕಳೆದುಕೊಂಡಿದ್ದರು. ಇದಕ್ಕೆ ಪೂರಕವಾಗಿ ದೇಶದ ಬಹುತೇಕ ಸಾಮಾಜಿಕ ಹೋರಾಟಗಳೂ ಸಹ ಸಂಘಟನೆಗಳ ನಾಯಕರ ವೈಯಕ್ತಿಕ ಹಿತಾಸಕ್ತಿಗೆ ಬಲಿಯಾಗಿ ಕಣ್ಣೆದುರು ಕರಗಿಹೋದವು.  ಬಹುತೇಕ ಸಾಮಾಜಿಕ ಹೋರಾಟಗಳು ನೆಲಕಚ್ಚುತ್ತಿದ್ದಂತೆ, ಈ ದೇಶದಲ್ಲಿ ರೂಪುಗೊಳ್ಳುವ ಕಾನೂನುಗಳಾಗಲಿ, ಅಥವಾ ಮಸೂದೆಗಳಾಗಲಿ, ಇವೆಲ್ಲವೂ, ಭಾರತದ ಸಂವಿಧಾನಕ್ಕೆ ಮತ್ತು ನಾಗರೀಕರ ಹಕ್ಕುಗಳಿಗೆ ಪೂರಕವಾಗಿ ಇರುವ ಬದಲು, ಭ್ರಷ್ಟ ರಾಜಕಾರಣಿಗಳಿಗೆ ಮತ್ತು ತಮ್ಮ ಹಣ ಹಾಗೂ ತೋಳ್ಬಲದಿಂದ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳನ್ನು ನಿಯಂತ್ರಿಸುತ್ತಿರುವ ಬಂಡವಾಳಶಾಹಿಗಳಿಗೆ ಕಾಲೊರಸುಗಳಾಗಿ (Foot Rug) ರೂಪುಗೊಂಡವು. ಇಂತಹ ನಿರಾಸೆಯ ವಾತಾವರಣದಲ್ಲಿ ಮಹಾರಾಷ್ಟ್ರದ ಅಹಮದಾಬಾದ್ ಜಿಲ್ಲೆಯ  ರಾವಳ್ಗಾಂವ್ ಸಿದ್ಧಿ ಎಂಬ ಪುಟ್ಟ ಗ್ರಾಮದಿಂದ ಎದ್ದು ಬಂದ ಗಾಂಧಿವಾಧಿ ಅಣ್ಣಾ ಹಜಾರೆ ಎಂಬ ಸಾಮಾನ್ಯ ಮನುಷ್ಯ ಭ್ರಹ್ಮಾಂಡ ಭ್ರಷ್ಟಾಚಾರದ ನಿಯಂತ್ರಣಕ್ಕಾಗಿ ಲೋಕ್ ಪಾಲ್ ಮಸೂದೆಯನ್ನು ಜಾರಿಗೆ ತರಬೇಕೆಂದು ಹುಟ್ಟು ಹಾಕಿದ ಹೋರಾಟ ದೇಶದಲ್ಲಿ, ವಿಶೇಷವಾಗಿ ವಿದ್ಯಾವಂತರು ಮತ್ತು ಯುವ ಜನರಲ್ಲಿ ಹೊಸ ಸಂಚಲನವನ್ನುಂಟು ಮಾಡಿತು

ಅಣ್ಣಾ ಹಜಾರೆ ಹುಟ್ಟು ಹಾಕಿದ ಈ ಕ್ರಾಂತಿಯಲ್ಲಿ ಉದಯಿಸಿದ ಮತ್ತೊಂದು ಪ್ರತಿಭೆ ಅರವಿಂದ್ ಕೇಜ್ರಿವಾಲ್. ಮೂಲತಃ ಕೇಂದ್ರ ಸರ್ಕಾರದಲ್ಲಿ ಕಂದಾಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು ವ್ಯವಸ್ಥೆಯ ಲೋಪದೋಷಗಳನ್ನು ತಿದ್ದಲಾಗದ ಅಸಹಾಯಕತೆಯಿಂದ ತಮ್ಮ  ಹುದ್ದೆ ತೊರೆದು ಬಂದರು. ದೆಹಲಿಯಲ್ಲಿ ತನ್ನದೇ ಆದ ಒಂದು ಸ್ವಯಂ ಸೇವಾ ಸಂಘಟನೆಯನ್ನು ಕಟ್ಟಿಕೊಂಡು, ಮಾಹಿತಿ ಹಕ್ಕುಗಳ ಮೂಲಕ ದೆಹಲಿ ಆಢಳಿತ ಹುಳುಕುಗಳನ್ನು ಹೊರತೆಗೆದು, ಅಧಿಕಾರಿಶಾಹಿ ವ್ಯವಸ್ಥೆಗೆ ಮೈ ಚಳಿ ಬಿಡಿಸಿದರು. ಇವರ ಈ ಸಾಮಾಜಿಕ ಸೇವೆಗೆ ಪ್ರತಿಷ್ಟಿತ ಏಷ್ಯಾದ ಮ್ಯಾಗ್ಸಸೆ  ಪ್ರಶಸ್ತಿ ದೊರೆತಾಗ, ಅರವಿಂದ್ ಕೇಜ್ರಿವಾಲ್ ದೇಶದ ಗಮನ ಸೆಳೆದರು. ಅಣ್ಣಾ ಹಜಾರೆಯ ಹೋರಾಟ ತನ್ನ ಹಳ್ಳಿಯಿಂದ ದೆಹಲಿಗೆ ವರ್ಗಾವಣೆಗೊಂಡಾಗ, ಇಡೀ ಹೋರಾಟದ ರೂಪು ರೇಶೆಗಳ ಹೊಣೆ ಹೊತ್ತ ಅರವಿಂದ ಕೇಜ್ರಿವಾಲ್, ರಾಜಕೀಯ ವ್ಯವಸ್ಥೆಯ ಒಂದು ಭಾಗವೇ ಆಗಿ ಹೋಗಿದ್ದ  ಭ್ರಷ್ಠಾಚಾರಕ್ಕೆ ಅಣ್ಣಾ ಹಜಾರೆ ಮೂಲಕ ದೊಡ್ಡ ಪೆಟ್ಟುಕೊಟ್ಟರು. ಅಲ್ಲದೆ ರಾಜಕೀಯ ಪಕ್ಷಗಳ ಪಾಲಿಗೆ ನುಂಗಲಾರದ ತುತ್ತಾದರು.
ದೇಶಾದ್ಯಂತ ಲೋಕ ಪಾಲ್ ಮಸೂದೆ ಜಾರಿಗೆ ತರಬೇಕೆಂಬ ಅಣ್ಣಾ ಹಜಾರೆಯವರ ಹೋರಾಟ ತಾರ್ಕಿಕ ಅಂತ್ಯದ ಘಟ್ಟ ತಲುಪುವ ವೇಳೆಗೆ ಭ್ರಷ್ಟ ವ್ಯವಸ್ಥೆಯಿಂದ  ಮುಕ್ತವಾದ ಸಮಾಜದ  ಮತ್ತು ರಾಜ್ಯ ನಿರ್ಮಾಣದ ಕನಸು ಹೊತ್ತ ಅರವಿಂದ ಕೇಜ್ರಿವಾಲ್ ‘ ಅಮ್ ಆದ್ಮಿ “ ಎಂಬ ಪಕ್ಷ ಕಟ್ಟಿದಾಗ, ಪಕ್ಷ ರಾಜಕಾರಣದಿಂದ ದೂರವಿರುವ ತಮ್ಮ ನಿರ್ಧಾರಕ್ಕೆ ಅಂಟಿಕೊಂಡ ಅಣ್ಣ ಹಜಾರೆ, ಸಹಜವಾಗಿ ಕೇಜ್ರಿವಾಲ್ ಅವರಿಂದ ಮತ್ತು  ಅವರ ಅಮ್ ಆದ್ಮಿ ಪಕ್ಷದಿಂದ ತಮ್ಮ ಅಂತರ ಕಾಪಾಡಿಕೊಂಡರು

ದೆಹಲಿ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿ, ಕಳೆದ ಒಂದು ವರ್ಷದಿಂದ ಅಮ್ ಆದ್ಮಿ ಪಕ್ಷವನ್ನು ಕೇಜ್ರಿವಾಲ್ ತಮ್ಮ ತಂಡದ ಸದಸ್ಯರೊಂದಿಗೆ , ಜನಸಾಮಾನ್ಯರ ಬಳಿ ಕೊಂಡೊಯ್ದಾಗ ಮಾಧ್ಯಮ ಪಂಡಿತರು ಮತ್ತು ರಾಜಕೀಯ ಪಕ್ಷಗಳನ್ನು ಒಳಗೊಂಡಂತೆ ಯಾರೊಬ್ಬರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ, ದೆಹಲಿಯ ಚುನಾವಣೆಯ ಫಲಿತಾಂಶ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ರಾಷ್ರೀಯ ಕಾಂಗ್ರೇಸ್ ಪಕ್ವವನ್ನು, ಮತ್ತು ಕಳೆದ ಮೂರು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತರನ್ನು, ಅಮ್ ಆದ್ಮಿ ಪಕ್ದ ಚಿಹ್ನೆಯಾದ ಪೊರಕೆ ಗುಡಿಸಿ ಹಾಕಿತ್ತು. ಆದರೆ ಯಾರಿಗೂ ಸ್ಪೃಷ್ಟ ಬಹುಮತ ದೊರಕದೆ, ಅತಂತ್ರ ಸ್ಥಿತಿ ನಿರ್ಮಾಣವಾಯಿತು. ಮಾಧ್ಯಮಗಳ ಮೊರೆ ಹೋಗದೆ, ಸುದ್ಧಿ ಛಾನಲ್ ಗಳ ತೌಡು ಕುಟ್ಟುವ ಚರ್ಚೆಯಲ್ಲಿ ಭಾಗವಹಿಸದೆ, ನೇರವಾಗಿ ಕೂಲಿ ಕಾರ್ಮಿಕರು, ಆಟೋರಿಕ್ಷಾ ಚಾಲಕರು, ಮಧ್ಯಮ ವರ್ಗದ ಜನ ಮತ್ತು ಯುವಜನತೆಯ ಬಳಿ ಹೋಗಿ ತಮ್ಮ ಪಕ್ಷದ ಆಶಯ ಮತ್ತು ತಮ್ಮ ಕನಸುಗಳನ್ನು ಬಿಚ್ಚಿಟ್ಟರು. ಅವರ ಪ್ರಯತ್ನ ನಿರೀಕ್ಷೆಗೆ ಮೀರಿ ಯಶಸ್ಸು ತಂದುಕೊಟ್ಟಿತು
70 ಸ್ಥಾನಗಳ ದೆಹಲಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿ.ಜೆ.ಪಿ. 32 ಅಮ್ ಆದ್ಮಿ ಪಕ್ಷ 28 ಕಾಂಗ್ರೇಸ್ 8 ಸ್ಥಾನ ಗಳಿಸಿದರೆ,ಉಳಿದ 2 ಸ್ಥಾನಗಳು ಪಕ್ಷೇತರರ ಪಾಲಾದವು. ಸ್ಪೃಷ್ಟ ಬಹುಮತಕ್ಕೆ 36 ಸದಸ್ಯರ ಬಲದ  ಅವಶ್ಯಕತೆ ಇದ್ದ ಕಾರಣ ಬಿ.ಜೆ.ಪಿ. ಸರ್ಕಾರ ರಚಿಸುವ ಕ್ರಿಯೆಯಿಂದ ದೂರ ಉಳಿಯಿತು. ಈ ಸಂದರ್ಭದಲ್ಲಿ ಪಕ್ಷೇತತರು ಮತ್ತು ಕಾಂಗ್ರೇಸ್ ಪಕ್ಷ ಯಾವುದೇ ಪೂರ್ವ ಷರತ್ತುಗಳಿಲ್ಲದೆ, ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ  ಅಮ್ ಆದ್ಮಿ ಪಕ್ಷಕ್ಕೆ ಬೆಂಬಲ ಘೋಷಿಸಿದವು. ಆದರೆ, ಈ ಸಂದರ್ಭದಲ್ಲಿ ಅರವಿಂದ ಕೇಜ್ರಿವಾಲರ ನಡುವಳಿಕೆ ಅವರ  ಅಭಿಮಾನಿಗಳಿಗೆ ಮತ್ತು ಆಸೆಗಣ್ಣಿನಿಂದ ನೋಡುತ್ತಿದ್ದವರಿಗೆ ತೀವ್ರ ಬೇಸರ ಮತ್ತು ಜಿಗುಪ್ಸೆ ಮೂಡಿಸಿದವು.



ಆದರ್ಶಗಳು ಬೇರೆ, ವಾಸ್ತವಗಳು ಬೇರೆ. ನಾವು ಆದರ್ಶಗಳನ್ನು ವಾಸ್ತವದ ಒರೆಗಲ್ಲಿಗೆ ಹಚ್ಚಿದಾಗ ಮಾತ್ರ ನಿಜವಾದ ಫಲಿತಾಂಶಗಳು ದೊರೆಯುವುದು. ದಿಲ್ಲಿಯ ಜನತೆಯಿಂದ ಸಂಪೂರ್ಣ ಬೆಂಬಲ ಸಿಗದ ಹಿನ್ನಲೆಯಲ್ಲಿ ಜೊತೆಗೆ ಯಾವುದೇ ಷರತ್ತುಗಳಿಲ್ಲದೆ ಕಾಂಗ್ರೇಸ್ ಪಕ್ಷ, ಅಮ್ ಆದ್ಮಿ ಪಕ್ಷಕ್ಕೆ  ಬೆಂಬಲ ಘೊಷಿರುವಾಗ, ಅಧಿಕಾರದ ಚುಕ್ಕಾಣಿಯನ್ನು ಕೈಗೆ ತೆಗೆದುಕೊಂಡು, ತಾನು ಏನು ಕನಸು ಕಂಡಿದ್ದಾರೋ ಅದನ್ನು ಸಾಕಾರಗೊಳಿಸಬೇಕಾದ್ದು ಕೇಜ್ರಿವಾಲರ ನೈತಿಕ ಕರ್ತವ್ಯ,  ದಿಲ್ಲಿಯ ಜನತೆಯ ಮನಸ್ಸಿನಲ್ಲಿ ಸಂಪೂರ್ಣ ವಿಶ್ವಾಸ ಹುಟ್ಟಿಸುವ ಕೆಲಸ ಮಾಡುವುದನ್ನು ಬಿಟ್ಟು , ಮತ್ತೇ ಚುನಾವಣೆಯನ್ನು ಜನತೆಯ ಮೇಲೆ ಹೇರುವುದು ತರವಲ್ಲ. ಇದು ಭವಿಷ್ಯದಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ನಿರಾಸಕ್ತಿ ಮೂಡಿಸಬಹುದು, ಏಕೆಂದರೆ, ದಿಲ್ಲಿಯ ನಗರದಲ್ಲಿ ಹಗಲಿರಳು ದುಡಿದ ಕಾರ್ಯಕರ್ತರು, ಕಾಂಗ್ರೇಸ್ ಅಥವಾ ಬಿ.ಜೆ.ಪಿ. ಪಕ್ಷಗಳ  ಬಾಡಿಗೆ ಕಾರ್ಯಕರ್ತರ ಹಾಗೆ ದಿನಗೂಲಿ ಲೆಕ್ಕದಲ್ಲಿ ಬಂದು ಘೋಷಣೆ ಕೂಗಿದವರಲ್ಲ. ವ್ಯವಸ್ಥೆಯ ವಿರುದ್ಧ, ರೋಸಿ ಹೋದ ಜನ ಸಾಮಾನ್ಯರು, ಬದಲಾವಣೆಗಾಗಿ ಮತ್ತು ರಾಜಕೀಯದಲ್ಲಿ ಹೊಸಗಾಳಿಗಾಗಿ ಆಸೆ ಕಣ್ಣುಗಳಿಂದ ಅರವಿಂದ್ ಕೇಜ್ರಿವಾಲರತ್ತ ನೋಡುತ್ತಾ ಅವರ ಜೊತೆ ಕೈಜೋಡಿಸಿದ್ದಾರೆ,


ಅತಿಯಾದರೆ, ಹಾಲು ಕೂಡ ವಿಷವಾಗುತ್ತೆ ಎಂಬ ಅಂಶವನ್ನು ಕೇಜ್ರಿವಾಲ್ ಮೊದಲು ಗ್ರಹಿಸಬೇಕಾಗಿದೆ. ಒಂದು ರಾತ್ರಿಯಲ್ಲಿ, ಒಂದು ದಿನದಲ್ಲಿ, ಅಥವಾ ಒಂದು ವಾರ, ತಿಂಗಳಳಗೆ ಸಮಾಜದಲ್ಲಿ  ಬದಲಾವಣೆ ತರಲು ಸಾಧ್ಯವಿಲ್ಲ. ಸಿಕ್ಕ ಅವಕಾಶದಲ್ಲಿ ಮೊದಲು ಅವರ ತಾಕತ್ತು, ಪ್ರತಿಭೆ, ಆಡಳಿತ ನಡೆಸುವ ಗುಣ ಇವುಗಳನ್ನು ದೆಹಲಿ ಜನತೆ ಎದುರು ಸಾಭೀತು ಪಡಿಸಬೇಕಿದೆ. ಒಬ್ಬ ನಾಯಕನಾದವನಿಗೆ ತನ್ನ ಸಹಚರ ಮತ್ತು ಸಮುದಾಯದ ಆಶೋತ್ತರಗಳಿಗೆ ಕಣ್ಣಾಗುವ, ಕಿವಿಯಾಗುವ ಹೃದಯವಿರಬೇಕು. ಎಲ್ಲಾ ವಿಷಯಗಳಲ್ಲಿ ತಾನು ನಂಬಿದ ತತ್ವಗಳನ್ನು ಹೇರಲು ಹೊರಟರೆ, ಅದು ನಾಯಕತ್ವದ ಗುಣ ಎನಿಸಿಕೊಳ್ಳುವುದಿಲ್ಲ,ಬದಲಾಗಿ ಸರ್ವಾಧಿಕಾರಿಯ ವ್ಯಕ್ತಿತ್ವವಾಗಿಬಿಡುವ ಅಪಾಯವಿರುತ್ತದೆ. ಈ ಸತ್ಯವನ್ನು ಅರವಿಂದ ಕೇಜ್ರಿವಾಲ್ ಅರಿಯದಿದ್ದರೆ, ಇವರು ಕೂಡ ಇತಿಹಾಸದ ಕಸದಬುಟ್ಟಿ ಸೇರುವ ದಿನ ದೂರವಿಲ್ಲ.

ಕೊನೆಯ ಮಾತು- ಇದನ್ನು ಬರೆಯುವ ವೇಳೆ ದೆಹಲಿಯಲ್ಲಿ ಪತ್ರಿಕಾ ಘೋಷ್ಠಿ ನಡೆಸಿದ ಅರವಿಂದ ಕೇಜ್ರಿವಾಲ್ 25 ಲಕ್ಷ ಕರಪತ್ರಗಳ ಮೂಲಕ ದೆಹಲಿ ಜನರ ಅಭಿಪ್ರಾಯ ಕೇಳಿದ್ದಾರೆ.

ಬುಧವಾರ, ಡಿಸೆಂಬರ್ 11, 2013

ಡಾ.ವಿವೇಕ್ ರೈ ಎಂಬ ಸಾಕ್ಷಿ ಪ್ರಜ್ಙೆಯ ನೆಪದಲ್ಲಿ ಕನ್ನಡದ ಪ್ರಶ್ನೆಗಳು




ಕನ್ನಡದ ಹಿರಿಯ ವಿಧ್ವಾಂಸ ಮತ್ತು ಸಾಕ್ಷಿ ಪ್ರಜ್ಙೆಯಂತಿರುವ ಡಾ.ವಿವೇಕ್ ರೈ ಈ ಬಾರಿಯ ಆಳ್ವಾಸ್ ಸಿರಿನುಡಿಯ ಆಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಹು ದೊಡ್ಡ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾಗಿರುವ ಮೋಹನ್ ಆಳ್ವ ಅವರು ಕಳೆದ ಒಂಬತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಆಳ್ವಾಸ್ ಸಿರಿನುಡಿ ಕಾರ್ಯಕ್ರಮ ಈ ಬಾರಿ ದಶಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ತಮ್ಮ ತುಳುನಾಡಿನವರೇ ಆದ ವಿವೇಕ್ ರೈ ಅವರನ್ನು ಈ ಬಾರಿಯ ಸಿರಿನುಡಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ದ್ರಾವಿಡ ಭಾಷೆಗಳ ಉಪಭಾಷೆಗಳಲ್ಲಿ ಒಂದಾದ ತುಳು ಭಾಷೆ ಮತ್ತು ಸಂಸ್ಕೃತಿ ಕುರಿತು ಅಪಾರ ಒಳನೋಟಗಳಿರುವ ವಿವೇಕ್ ರೈ ಕನ್ನಡದ ಹಿರಿಯ ಜಾನಪದ ವಿಧ್ವಾಂಸರು ಕೂಡ ಹೌದು. ತುಳುನಾಡಿನ ಗೋವಿಂದ ಪೈ,ಮತ್ತು ಕು.ಶಿ. ಹರಿದಾಸಭಟ್ಟರ ನಂತರ, ಕನ್ನಡನಾಡಿನ ( ತುಳುನಾಡು ಸೇರಿದಂತೆ) ಜಾನಪದ ಸಂಸ್ಕೃತಿಯನ್ನು ತಮ್ಮ ಅದ್ಯಯನದ ಉಸಿರಾಗಿಸಿಕೊಂಡವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದ ಪ್ರಮುಖ ವಿಧ್ವಾಂಸರಲ್ಲಿ ಡಾ.ವಿವೇಕ್ ರೈ ಮತ್ತು ಡಾ.ಪುರುಷೋತ್ತಮ ಬಿಳಿಮಲೆ ಪ್ರಮುಖರು.
1970 ರ ದಶಕದಲ್ಲಿ ಮಂಗಳೂರಿನಲ್ಲಿ ವಿಶ್ವವಿದ್ಯಾನಿಲಯ ಆರಂಭಗೊಂಡಾಗ ಕನ್ನಡ ಉಪನ್ಯಾಸಕ ವೃತ್ತಿಯೊಂದಿಗೆ ನೆಲದ ಸಂಸ್ಕೃತಿಯ ಚಿಂತನೆಯನ್ನು  ಆರಂಭಿಸಿದ ವಿವೇಕ್ ರೈ ಅವರು ಆರಂಭದಿಂದಲೂ ಸಾಕ್ಷಿ ಪ್ರಜ್ಙೆಯಂತೆ ನಮ್ಮ ನಡುವೆ ಬದುಕಿದವರು. ಪುತ್ತೂರು ತಾಲ್ಲೂಕಿನ ಪುಣಜೆ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ವಿವೇಕ್ ರೈ ರವರ ತಂದೆ ಪುರಂಧರ ರೈ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ ಕಂಡ ಮತ್ತೊಬ್ಬ ದಿಗ್ಗಜ ಶಿವರಾಮ ಕಾರಂತರ ಪರಮ ಶಿಷ್ಯರು. ಹಾಗೂ ಆರಾಧಕರು. ಹಾಗಾಗಿ ಬಾಲ್ಯದಿಂದಲೂ ಕಾರಂತರ ಹೆಜ್ಜೆ ಗುರುತುಗಳನ್ನು ಅವಲೋಕಿಸುತ್ತಾ ಬಂದ ಇವರು, ತಮ್ಮ ಬದುಕಿನುದ್ದಕ್ಕೂ ಕಾರಂತರ ದೃಷ್ಟಿಕೋನವನ್ನು ಬೆಳಸಿಕೊಂಡವರು.
ನಲವತ್ತು ವರ್ಷಗಳ ಹಿಂದೆ ಮಂಗಳೂರಿನ ವಿ.ವಿಯ. ಪ್ರಥಮ ಎಂ.ಎ. ಬ್ಯಾಚಿನ ವಿದ್ಯಾರ್ಥಿಗಳಲ್ಲಿ ನನ್ನ ಮಂಡ್ಯದ ಆತ್ಮೀಯ ಗೆಳೆಯ ಹಾಗೂ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಬಿ.ಜಯಪ್ರಕಾಶಗೌಡ ಮತ್ತು ಲೇಖಕಿ ಸಂಧ್ಯಾರೆಡ್ಡಿ  ಇವರ ಶಿಷ್ಯರು. ಇವರಿಬ್ಬರ ಬಾಯಿಂದ ಸದಾ ವಿವೇಕ್ ರೈ ಅವರ ಗುಣಗಾನಗಳನ್ನು ಕೇಳುತ್ತಿದ್ದ ನಾನು, ದಶಕದ ಹಿಂದೆ ಮೇಲಿಂದ ಮೇಲೆ ಶಿಷ್ಯನ ಆಹ್ವಾನದ ಮಂಡ್ಯಕ್ಕೆ ಬರುತ್ತಿದ್ದ ಸಂದರ್ಭದಲ್ಲಿ  ಇವರ ಗುಣ,  ಮತ್ತು ಪ್ರತಿಭೆಯನ್ನು  ತೀರಾ ಹತ್ತಿರದಿಂದ ಪರಿಚಯ ಮಾಡಿಕೊಳ್ಳಲು ಸಾಧ್ಯವಾಯಿತು.
ಕಿರಿಯರು ಎಂಬ ಬೇಧ ಭಾವವಿಲ್ಲದೆ ಬೆರೆಯುವ ಇವರ ದೊಡ್ಡತನ ಮತ್ತು ಈ ನೆಲದ ಸಂಸ್ಕೃತಿಯ ಕುರಿತಂತೆ ಇವರಿಗಿದ್ದ  ಅಪಾರ ಒಳನೋಟಗಳ ಉಪನ್ಯಾಸಕ್ಕೆ  ನಾನು ಮತ್ತು ಜಯಪ್ರಕಾಶಗೌಡ ಬೆಳಗಿನ ಜಾವ ಎರಡು ಗಂಟೆಯ ವರೆಗೂ ಮೈಯನ್ನು ಕಿವಿಯಾಗಿಸಿಕೊಂಡು ಕೂರುತ್ತಿದ್ದೆವು.( ಕಳೆದ ಎಂಟು ವರ್ಷಗಳಿಂದ ಅವರನ್ನು ಬೇಟಿಯಾಗಲು, ಮಾತನಾಡಲು  ಸಾಧ್ಯವಾಗಿಲ್ಲ)
 2004 ರಿಂದ 2007 ರಲ್ಲಿ ಹಂಪಿಯ ಕನ್ನಡ ವಿಶ್ವ ವಿದ್ಯಾನಿಯದ ಉಪಕುಲಪತಿಗಳಾದ ಸಂದರ್ಭದಲ್ಲಿ . ವಿ.ವಿಯ ಆವರಣದೊಳಕ್ಕೆ ರೈತರ ಸಮಸ್ಯೆಯನ್ನು  ಪ್ರಪಥಮವಾಗಿ ಆಹ್ವಾನಿಸಿಕೊಂಡವರು. ಬೀಜ ಮೇಳವನ್ನು ಏರ್ಪಡಿಸಿ, ರೈತರ ನಡುವೆ ಬೇಸಾಯ ಕುರಿತ ಮಾಹಿತಿ ವಿನಿಮಯ ಮತ್ತು ಬೀಜ ವಿನಿಮಯಕ್ಕೆ ಅನುವು ಮಾಡಿಕೊಡುವುದರ ಮೂಲಕ ತಮ್ಮ ನೆಲದ ಸಂಸ್ಕೃತಿಯ ಕಾಳಜಿಯನ್ನು ಅನಾವರಣಗೊಳಿಸಿದರು. 2007 ರಲ್ಲಿ ಮೈಸೂರು ಮುಕ್ತ ವಿ.ವಿ.ಯ ಉಪಕುಲಪತಿ ಸ್ಥಾನ ಅಲಂಕರಿಸಿ, ಅವಧಿ ಮುಗಿಯುವ ಮುನ್ನವೇ ಜರ್ಮನಿಯ ವೂತ್ ಬರ್ಗ್ಸ್ ಎಂಬ ವಿ.ವಿಯ ಇಂಡಾಲಜಿ ವಿಭಾಗಕ್ಕೆ ಕನ್ನಡ ಪ್ರಾಧ್ಯಾಪಕರಾಗಿ ಹೊರಟರು. ವಿವೇಕ್ ರೈ ಅವರಿಗೆ ಒಂದು ಅತಿ ದೊಡ್ಡ ಮುಕ್ತ ವಿಶ್ವ ವಿದ್ಯಾನಿಲಯದ ಉಪಕುಲಪತಿ ಹುದ್ದೆಗಿಂತ, ಜರ್ಮನಿಯಲ್ಲಿ ವಿದೇಶಿಯರಿಗೆ ಕನ್ನಡ ಕಲಿಸುವ ಹುದ್ದೆ ಇಷ್ಟವಾಯಿತು. ಇದು ಅವರೊಳಗಿದ್ದ ಕನ್ನಡದ ಬಗೆಗಿನ  ಪ್ರೀತಿಗೆ ಸಾಕ್ಷಿ

.
ಇಂತಹ  ಹಲವು ಸಾಧನೆಗಳ ಸಾಧಕರಿಂತಿರುವ ಕನ್ನಡದ ಹಿರಿಯ ಈ ಹಿರಿಯ ಜೀವಕ್ಕೆ ಅಪರೂಪಕ್ಕೆ ತಾನಾಗಿಯ ಹುಡುಕಿಕೊಂಡು ಬಂದ  ಸಿರಿನುಡಿ ಹಬ್ಬದ ಅಧ್ಯಕ್ಷ ಪದವಿ ಈಗ ತೀರಾ ಬೇಸರ ಮತ್ತು ಜಿಜ್ಙಾಸೆಗೆ ದೂಡಿಬಿಟ್ಟಿದೆ. ತನ್ನದೇ ನೆಲದಲ್ಲಿ ಅತಾರ್ಕಿಕ ನೆಲೆಯಲ್ಲಿ ಹುಟ್ಟಿಕೊಂಡ ಅನಿರೀಕ್ಷಿತ ಪ್ರತಿರೋಧ, ನಾಡಿನ ಪ್ರಜ್ಙಾವಂತರಲ್ಲಿ ಹಲವು ಜಿಜ್ಙಾಸೆಗಳನ್ನು ಮತ್ತು ಪ್ರಶ್ನೆಗಳನ್ನು ಸಹ ಹುಟ್ಟು ಹಾಕಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಕಾಣದ ಪ್ರತಿಭಟನೆ ಈ ವರ್ಷ ಮಾತ್ರ ಏಕೆ? ಈವರೆಗೆ ಸಿರಿನುಡಿಗೆ ಹೋದ ಲೇಖಕರು, ಕವಿಗಳಾಗಲಿ, ಅಥವಾ ಹಿರಿಯ ಸಾಹಿತಿಗಳು ಯಾರು ಎಂಬ ಪ್ರಶ್ನೆಗಿಂತ, ಈಗ ಹೋಗದೆ ಉಳಿದುಕೊಂಡ ಮಹಾನುಭಾವರು ಯಾರು ಎಂಬ ಪ್ರಶ್ನೆ ಮುಖ್ಯವಾಗಿದೆ. ವಿವೇಕ್ ರೈ ನಿಯೋಜಿತರಾಗಿರುವ ಅಧ್ಯಕ್ಷತೆ ಪಟ್ಟದ ಬಗ್ಗೆಯಾಗಲಿ ಅಥವಾ ನೀವು ಪಲ್ಲಕ್ಕಿಯಲ್ಲಿ ಹೂಗುತ್ತೀರಾ ಎಂಬ ಅಸಂಬದ್ಧ ಪ್ರಶ್ನೆಗಳನ್ನು ಕೇಳುವ ಮೊದಲು ಈ ಪ್ರಶ್ನೆಗಳನ್ನು ಎತ್ತುತ್ತಿರುವವರು ಯಾರು? ಎಂಬುದನ್ನು  ಗಮನಿಸಿದಾಗ,  ಮನಸ್ಸಿಗೆ ತೀರಾ ನಿರಾಸೆಯಾಗುತ್ತದೆ.. ಯಾರು ಇವರನ್ನು ನೈತಿಕವಾಗಿ ಪ್ರಶ್ನಿಸುತ್ತಿದ್ದಾರೋ, ಅದೇ ವ್ಯಕ್ತಿಗಳು  ಆಳ್ವರ ಆಸ್ಥಾನದಲ್ಲಿ ಸಲಹೆಗಾರರಾಗಿ ಇದ್ದವರು, ಸಿರಿನುಡಿಯಲ್ಲಿ ಪಾಲ್ಗೊಂಡು, ಆಳ್ವರಿಂದ ತಾಂಬೂಲ, ಸಂಭಾವನೆ ಪಡೆದವರಾಗಿದ್ದಾರೆ. ಜೊತೆಗೆ  ಈಗ ತಾತ್ವಿಕವಾಗಿ ವಿರೋಧಿಸಿ ಮಂಗಳೂರಿನಲ್ಲಿ  ನಡೆಯುತ್ತಿರುವ ಜನನುಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಮೇಜು ಕುಟ್ಟಿ ಮಾತನಾಡುವವರಿದ್ದಾರೆ.
ಆಳ್ವರ ಬಂಡವಾಳಶಾಹಿ ನೀತಿ ಅರಿಯಲು ಈ ಪ್ರಜ್ಙಾವಂತ ಸಮಾಜಕ್ಕೆ ಹತ್ತು ವರ್ಷ ಬೇಕಾಯಿತೆ? ಅಳ್ವರ ಶಿಕ್ಷಣ ಸಂಸ್ಥೆಯ ವ್ಯಾಪಾರೀಕರಣದ ಬಗ್ಗೆ ನಮಗೆ ಅಸಮಾಧಾನವಿದ್ದರೆ, ಅದನ್ನು ವಿರೋಧಿಸಲು ಪರ್ಯಾಯ ಮಾರ್ಗಗಳಿರಲಿಲ್ಲವೆ?
ಈ ದಿನ  ಆಳ್ವರ ಬಂಡವಾಳಶಾಹಿತನ ಕುರಿತು ಪ್ರಶ್ನಿಸುವ ಜರೂರಿಗಿಂತ, ಆದ್ಯತೆಗಳಿಗಳಿರುವ ಕನ್ನಡದ ಬಗೆಗಿನ ಪ್ರಶ್ನೆಗಳು ನಮ್ಮ ಅಂಗೈನ ಕೆಂಡದುಂಡೆಗಳಾಗಿವೆ. ಅಂತಹ ಪ್ರಶ್ನೆಗಳು ಏಕೆ ನಮ್ಮನ್ನು ಕಾಡುತ್ತಿಲ್ಲ? ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನ ದೊರೆತು, ಮೂರು ವರ್ಷಗಳಾದವು. ಕೇಂದ್ರ ಸರ್ಕಾರದ ಅನುದಾನ ಬಳಸಿಕೊಳ್ಳುವಲ್ಲಿ ನಾವು ಏನು ಮಾಡಿದ್ದೀವಿ? ನನ್ನ ಹಿರಿಯಣ್ಣನಂತಿದ್ದ ಲಿಂಗದೇವರು ಹಳೆಮನೆ ನಿಧನರಾದ ನಂತರ ಯಾವ ಕನ್ನಡ ಸಂಸ್ಕೃತಿ ಚಿಂತಕರು ಈ ಕುರಿತು ಯೋಚಿಸಿದ್ದಾರೆ? ಯೋಜನೆ ರೂಪಿಸಿದ್ದಾರೆ?  ಯಾವ ಯೋಜನೆಗಳು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿವೆ? ಯಾರಾದರೂ  ಈ ಬಗ್ಗೆ ಮಾಹಿತಿ ನೀಡಿದರೆ, ಅವರ ಪದತಲದಲ್ಲಿ ಕುಳಿತು ಮಾಹಿತಿ ಸ್ವೀಕರಿಸಬಲ್ಲೆ. ನಮ್ಮ ನೆರೆಯ ತಮಿಳುನಾಡು ಸರ್ಕಾರ  ಈವರೆಗೆ ಹದಿಮೂರು ಸಾವಿರ ಕೋಟಿ ರೂಪಾಯಿಗಳ ಕೇಂದ್ರ ಸರ್ಕಾರದ ಅನುದಾನವನ್ನು ತಮಿಳು ಭಾಷೆಗಾಗಿ, ತಂಜಾವೂರಿನ ತಮಿಳು ವಿ.ವಿ. ಮಧುರೈನ ಕಾಮರಾಜ್ ವಿ.ವಿ. ಮತ್ತು ನಮ್ಮ ಬಂಗಾರ ಪೇಟೆ ಸಮೀಪದ ಕುಪ್ಪಂ ನಲ್ಲಿ ( ಆಂಧ್ರ ಮಾಜಿ ಮುಖ್ಯ ಮಂತ್ರಿ ಚಂದ್ರ ಬಾಬು ನಾಯ್ಡು ಅವರ ವಿಧಾನಸಭಾ ಕ್ಷೇತ್ರ)ಸ್ಥಾಪಿಸಲಾಗಿರುವ ದ್ರಾವಿಡ ವಿಶ್ವ ವಿದ್ಯಾಲಯದಲ್ಲಿ ಹೇಗೆ ವಿನಿಯೋಗಿಸಿದೆ ಎಂಬುದನ್ನು ನಮ್ಮ ಕನ್ನಡದ ವಿಧ್ವಾಂಸರು ಒಮ್ಮೆ 
ನೋಡಿ ಬರುವುದು ಒಳಿತು.

ಯಾವುದೇ ಒಂದು ರಂಗದಲ್ಲಿ ಇಂತಹ ಆರೋಗ್ಯ ಚರ್ಚೆಗಳು ಅವಶ್ಯಕ ನಿಜ. ಆದರೆ, ಅವುಗಳಿಗೆ ತಾರ್ಕಿಕ ನೆಲೆಯ ಚೌಕಟ್ಟುಗಳಿದ್ದಾಗ, ಮಾತ್ರ ಅವುಗಳಿಗೆ  ಅರ್ಥ ಸಿಗಬಲ್ಲದು.  ನಮ್ಮ ಬಳ್ಳಾರಿ ಜಿಲ್ಲೆಯ ಹಿರಿಯ ನಾಟಕಕಾರ ಮತ್ತು ಕಲಾವಿದ ಜೋಳದ ರಾಶಿ ದೊಡ್ಡನಗೌಡರ ಸಮಗ್ರ ಸಾಹಿತ್ಯವನ್ನು ತಿರುಪತಿಯ ವೆಂಕೇಟೇಶ್ಚರ ವಿಶ್ವ ವಿದ್ಯಾನಿಲಯ ಕೊಂಡಯ್ದು ತೆಲುಗು ಭಾಷೆಗೆ ತರ್ಜುಮೆ ಮಾಡುತ್ತಿದೆ. ಇಂತಹ ಸತ್ಯಗಳ ಅರಿವಿಲ್ಲದ ನಾವು, ಕನ್ನಡ ಪರ ಸಂಘಟನೆಗಳ ಬೀದಿ ಬದಿಯ ಪ್ರತಿಭಟನೆಗಳ  ಮುಂದುವರಿದ ಮಾದರಿಯಂತೆ ಹೆಜ್ಜೆ ಹಾಕುತ್ತಿದ್ದೇವೆ.ಸಿರಿನುಡಿಯ ಕನ್ನಡದ ಹಬ್ಬ ಕುರಿತು ಚಕಾರವೆತ್ತುವ ನಮಗೆ  ಕನ್ನಡ ಸಾಹಿತ್ಯ ಪರಿಷತ್ತು ಭ್ರಷ್ಟ ರಾಜಕಾರಣಿಗಳ ಕೃಪಾಕಟಾಕ್ಷದಲ್ಲಿ ನಡೆಸುವ ಸಾಹಿತ್ಯ ಸಮ್ಮೇಳನವೆಂಬ ಎಲ್ಲಮ್ಮನ ಜಾತ್ರೆ ಎಂಬ  ಅಸಹನೆ ಏಕಿಲ್ಲ?  ಆಳ್ವಾ ಅಷ್ಟೇ ಅಲ್ಲ,  ಬೆಂಗಳೂರಿನಲ್ಲಿ ನಡೆಯುವ ಬೆಂಗಳೂರು ಹಬ್ಬದ ಬಗ್ಗೆ ನಾವು ಎಂದಾದರೂ ಈ ಪ್ರಶ್ನೆಗಳನ್ನು ಎತ್ತಿದ ಉದಾಹರಣೆಗಳುಂಟಾ? ಕಳೆದ ಏಳೆಂಟು ವರ್ಷಗಳಲ್ಲಿ ಕರ್ನಾಟಕದಲ್ಲಿ ನಡೆದಿರುವ ಸಾಹಿತ್ಯ ಸಮ್ಮೆಳನಗಳ ಮಾಹಿತಿಯನ್ನು ಇಲ್ಲಿ ಕೊಡಬಲ್ಲೆ. ಅದಕ್ಕೆ ಹಣ ಹಾಕಿದವರು ಯಾರು? ಹೈರಾಣಾದವರು ಯಾರು? ಎಂಬುದನ್ನು ಗಮನಿಸಿದಾಗ, ಇಡೀ ಕನ್ನಡದ ಮನಸ್ಸುಗಳು ಭ್ರಷ್ಟಗೊಂಡಿವೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ?
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ, ಉಪಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ( ನಿಸಾರ್ ಆಹಮದ್ ಅಧ್ಯಕ್ಷರು) ಯಡಿಯೂರಪ್ಪನವರು ವೈಯಕ್ತಿವಾಗಿ ಹೆಚ್ಚವರಿಯಾಗಿ ಭರಿಸಿದ ಮೊತ್ತ, ಎರಡು ಕೋಟಿ ತೊಂಬತ್ತು ಲಕ್ಷರೂಪಾಯಿಗಳು. ಆನಂತರ ಜಿ.ಎಸ್ ವೆಂಕಟಸುಬ್ಬಯ್ಯ ಅಧ್ಯಕ್ಷರಾಗಿ ಆಯ್ಕೆಯಾಗಿ ಬೆಂಗಳೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಹೆಚ್ಚವರಿ ನಾಲ್ಕೂವರೆ ಕೋಟಿ ರೂಪಾಯಿಗಳ ಸಾಲವನ್ನು ಆರ್.ಅಶೋಕ್ ಒಂದು ವರ್ಷಗಳ ಅವಧಿಯಲ್ಲಿ ತೀರಿಸಿದರು.ಯಡಿಯೂರಪ್ಪನವರ ಮಂತ್ರಿ ಮಂಡಲದಲ್ಲಿ ಗೃಹ ಸಚಿವ ಮತ್ತು ಸಾರಿಗೆ ಸಚಿವರಾಗಿದ್ದ ಅಶೋಕ್ ತಮ್ಮ ಮನೆಯಿಂದ ಹಣ ತಂದು ಸಾಲ ತೀರಿಸಿದರು ಎಂದು ನಾವು ನಂಬಲು ಸಾಧ್ಯವೆ? ಗದಗದಲ್ಲಿ ಗೀತಾ ನಾಗಭೂಷಣ್ ಅಧ್ಯಕ್ಷರಾಗಿದ್ದ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಗಣಿದಣಿ ರಾಮುಲು ; ಗೀತಾ ನಾಗಭೂಷಣ್  ಅವರಿಗೆ ಹನ್ನೊಂದು ಲಕ್ಷ ರೂಪಾಯಿ ದೇಣಿಗೆ ನೀಡಿದಾಗ ನಮಗ್ಯಾಕೆ ನೈತಿಕ ಪ್ರಜ್ಙೆ ಕಾಡಲಿಲ್ಲ? ರಾಮುಲು ಖರ್ಚು ಮಾಡಿದ ಏಳು ಕೋಟಿ ರೂಪಾಯಿ ಯಾವ ಮೂಲದಿಂದ ಬಂದಿದ್ದು ಎಂಬುದನ್ನು ತಿಳಿಯಲಾರದಷ್ಟು ಅಜ್ಙಾನ ನಮ್ಮನ್ನು ಆವರಿಸಿಕೊಂಡಿತ್ತೆ? ಮುಂದಿನ ಜನವರಿಯ ಮಡಕೇರಿಯ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರದಿಂದ ಬಿಡುಗಡೆಯಾದ ಹಣ ಕೇವಲ ಒಂದು ಕೋಟಿ ಮಾತ್ರ. ಇನ್ನುಳಿದ ಮೂರು ಕೋಟಿ ಹಣದ ಉಸ್ತುವಾರಿಯನ್ನು  ಈಗಿನ ಲೋಕೋಪಯೋಗಿ  ಸಚಿವ ಡಾ.ಮಹಾದೇವಪ್ಪ ಹೊತ್ತಿದ್ದಾರೆ. ಅವರು ಎಲ್ಲಿಂದ ಹಣ ತರುತ್ತಾರೆ? ಸಾಹಿತ್ಯ ಸಮ್ಮೇಳನಕ್ಕೆ ಹಣ ನೀಡುವ ಕಂಟ್ರಾಕ್ಟರುಗಳು, ಭ್ರಷ್ಟ ಇಂಜಿನೀಯರ್ ಗಳು, ಇವರೆಲ್ಲಾ  ಬಂಡವಾಳ ಶಾಹಿಯ ಪ್ರತಿನಿಧಿ ನಾವು ಆರೋಪ ಹೊರಿಸುತ್ತಿರುವ ಆಳ್ವರಿಗಿಂತ ಶ್ರೇಷ್ಟರೆ?

?
ಜನನುಡಿ ಪರಿವಾರ ಎತ್ತಿರುವ  ಪ್ರಶ್ನೆಗಳು ಸ್ವಸ್ಥ ಸಮಾಜದ ಪುನರ್ ನಿರ್ಮಾಣಕ್ಕೆ  ಪೂರಕವಾಗಿರುವಂತೆ ಕಂಡರೂ , ವಾಸ್ತವ ನೆಲೆಗಟ್ಟಿನಲ್ಲಿ ಗಮನಿಸಿದಾಗ, ಅಥವಾ  ಅವರದೇ ದೃಷ್ಟಿಕೋನದಲ್ಲಿ ಅವಲೋಕಿಸಿದಾಗ  ಇಡೀ ಕನ್ನಡದ ಸಾಹಿತ್ಯ ಜಗತ್ತಿನ  ಲೇಖಕರನ್ನು ನಾವು ತಿರಸ್ಕರಿಸಬೇಕಾಗುತ್ತೆ.  ಅದು ಸಾಧ್ಯವೆ? ಆಳ್ವರ ಪ್ರಶ್ನೆಗಿಂತ,ಮುಖ್ಯವಾಗಿ ಕನ್ನಡದ ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತನ್ನು ವ್ಯಾಪಾರೀಕರಣ ಮತ್ತು ಅದ್ದೂರಿನತನ ಹುಚ್ಚಿನಿಂದ ಬಿಡಿಸಬೇಕಿದೆ . ಆದರೆ, ಅವುಗಳ ಬಗ್ಗೆ ಪ್ರಶ್ನೆ ಎತ್ತುವ ವ್ಯಕ್ತಿಯ ನೈತಿಕತೆಯನ್ನೂ ಸಹ ನಮ್ಮ ಪ್ರಜ್ಙಾವಂತ ಓದುಗರ ಜಗತ್ತು ಅವಲೋಕಿಸುತ್ತಿದೆ ಎಂಬ ಎಚ್ಚರ ನಮ್ಮಲ್ಲಿರ ಬೇಕು. . ಯಾವುದೇ ಆತ್ಮ ಸಾಕ್ಷಿಯ ಪ್ರಜ್ಙೆಯಿಲ್ಲದೆ ಮಡೆ ಸ್ನಾನ ದಂತಹ ಅನಿಷ್ಟ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡ ವೈದೇಹಿಯವರ ಮಾತುಗಳನ್ನು ಸಹಿಸಿಕೊಳ್ಳುವುದರ ಜೊತೆಗೆ, ಅವರು 2010 ರಲ್ಲಿ ಆಳ್ವಾಸ್ ಸಿರಿನುಡಿಗೆ ಅಧ್ಯಕ್ಷರಾದಾಗ ಕಾಣದಿದ್ದ ಅಸಹನೆ, ದಿಡೀರನೆ  ಮಂಗಳೂರಿನಲ್ಲಿ ಈಗ ಹೇಗೆ ಹುಟ್ಟಿಕೊಂಡಿತು? ಯಾರದೋ ಹೆಗಲ ಮೇಲೆ, ಮತ್ಯಾರೋ ಬಂದೂಕವಿಟ್ಟು ಗುಂಡು ಹಾರಿಸುತ್ತಿರವ ಹುನ್ನಾರವೆ?     ಅನುಮಾನ ನನ್ನನ್ನು ತೀವ್ರವಾಗಿ ಕಾಡುತ್ತಿದೆ. ಏಕೆಂದರೆ, ಕಳೆದ ವರ್ಷ ಧಾರವಾಡದಲ್ಲಿ ನಡೆದ ಜನಸಾಹಿತ್ಯ ಸಮ್ಮೇಳನದಲ್ಲಿ ಹಲವರ ಹುನ್ನಾರಗಳಿಗೆ ಬಲಿಯಾಗಿ, ಹುಂಬನಂತೆ ಇಂತಹದ್ದೇ ಪ್ರಕ್ರಿಯೆಗೆ ಹೆಗಲು ಕೊಟ್ಟು   ಬಲಿಯಾದ ಉದಾಹರಣೆಗೆ ನಾನೇ ಸ್ವತಃ ಸಾಕ್ಷಿಯಾಗಿದ್ದೀನಿ. ಈ ಅನುಭವದಿಂದಾಗಿ “ನಮ್ಮ ಎದೆಯೊಳಗಿನ ವಿಷ ಮತ್ತು ತಲೆಯೊಳಗಿನ ಕಸ ಕಡಿಮೆಯಾದಾಗ ಮಾತ್ರ  ನಮ್ಮ ಚಿಂತನೆಗೆ ಒಂದಿಷ್ಟು ಸ್ಪೃಷ್ಟತೆ ಸಿಗಬಲ್ಲದು” ಎಂದು ನಂಬಿಕೊಂಡಿದ್ದೇನೆ.
(ಕೊನೆಯ ಮಾತು – ಇದು  ನನ್ನ ಆತ್ಮಕ್ಕೆ ನಾನೇ ಹಾಕಿಕೊಂಡ ಪ್ರಶ್ನೆಗಳು ಮತ್ತು ಕಂಡುಕೊಂಡ ಉತ್ತರಗಳು. ಹಾಗಾಗಿ ಇವು ವೈಯಕ್ತಿಕ ಅನಿಸಿಕೆ ಮಾತುಗಳು ಮಾತ್ರ.)