ಭಾನುವಾರ, ಏಪ್ರಿಲ್ 20, 2014

ದೇಶ ವಿಭಜನೆಯ ಕಥೆಗಳು- ರಕ್ಷಕ



                                       ರಕ್ಷಕ





ದಿನ ಮತ್ತೇ ನಿನ್ನ ಕುರಿತು ಯೋಚಿಸುತ್ತಿದ್ದೇನೆ. ಯಾವಾಗಲೂ ನೀನು ಅನಿರೀಕ್ಷಿತವಾಗಿ ಹೀಗೆ ನನಗೆ ನೆನಪಾಗುತ್ತೀಯ. ನನ್ನ ಬದುಕಿನಲ್ಲಿ ಸಂಭವಿಸುವ ಪ್ರತಿ ಘಟನೆಗಳ ನಡುವೆ ನಿನ್ನನ್ನು ಪದೇ ಪದೇ ನೆನಪಿಸಿಕೊಳ್ಳುತ್ತೇನೆ. ನನ್ನ ಬದುಕಿನ ಬಾಂದಳದಲ್ಲಿ  ಸೂರ್ಯನ ಹೊಂಬೆಳಕು ಬಿದ್ದು, ಕತ್ತಲು ಮರೆಗೆ ಸರಿಯುವಾಗ, ನನ್ನ ಬದುಕೆಂಬ ಹೂವಿನ ಕಣಿವೆಯಲ್ಲಿ ತಂಗಾಳಿ ಬೀಸುವಾಗ, ಸೂರ್ಯಕಾಂತಿಯ ಹೂವುಗಳು ಸೂರ್ಯನಿಗೆ ಮುಖಮಾಡಿ ನಗುವಾಗ, ನನ್ನ ಮಗ ತನ್ನ ಶಾಲೆಯ ಚರ್ಚಾಸ್ಪರ್ಧೆಯಲ್ಲಿ ವಿಜೇತನಾಗಿ ಕೈಯಲ್ಲಿ ಪಾರಿತೋಷಕ ಹಿಡಿದು ಜಿಂಕೆ ಮರಿಯಂತೆ  ಕುಪ್ಪಳಿಸುತ್ತಾ ಮನೆಯತ್ತ ಓಡಿ ಬರುವಾಗ, ನನ್ನ ಮಗಳು, ಜಪಾನಿನ ಇಕಬಾನೆ ಕಲೆಯಲ್ಲಿ ಹೊಸದೊಂದು ಮಾದರಿಯನ್ನು ಸೃಷ್ಟಿಸಿ, ಕಿಲ ಕಿಲನೆ ನಗುವಾಗ, ನನ್ನ ಪತ್ನಿ ನನಗೆ ಇಷ್ಟವಾದ ಹಸಿ ಬಟಾಣಿ ಮತ್ತು ಆಲೂಗೆಡ್ಡೆಯ ಪಲಾವ್ ಮಾಡಿ, ನನ್ನೆದುರು ತಂದಿಟ್ಟು ತನ್ನ ಸೀರೆಯ ಸೆರಗಿನ ತುದಿಯಲ್ಲಿ ಹಣೆಯ ಬೆವರನ್ನು ಒರೆಸಿಕೊಳ್ಳುತ್ತಾ ನನ್ನತ್ತ ನೋಡಿ ಮುಗುಳು ನಗೆ ಬೀರಿದಾಗ ನೀನು ನೆನಪಾಗುತ್ತೀಯ. ನನ್ನ ಜೀವನದ ಪ್ರತಿ ಸುಖದ ಕ್ಷಣಗಳಲ್ಲಿ ನಿನ್ನನ್ನು ಹೃದಯ ತುಂಬಿ ನೆನೆಯುತ್ತೀನಿ. ಏಕೆಂದರೆ, ನಾನೀಗ ಬದುಕುತ್ತಿರುವ ಸುಂದರ ಬದುಕು ನೀನಿತ್ತ ಉಡುಗೊರೆ.
ದಿನ ನಿನ್ನನ್ನು ನೆನಪಿಸಿಕೊಳ್ಳಲು ಒಂದು ಕಾರಣವಿತ್ತು. ನನ್ನ ಮಗಳಿಗೆ ಸದಾ ಕೆಲವು ಜೋಕ್ ಗಳನ್ನು ಹೇಳಿ ಕುಟುಂಬದ ಸದಸ್ಯರನ್ನು ನಗಿಸುವ ಹವ್ಯಾಸ. ಯಾವಾಗಲೂ ಮನೆಯಲ್ಲಿ ವೈದ್ಯರ ಜೋಕುಗಳು, ವಕೀಲರ ಜೋಕುಗಳು, ಗಂಡ ಹೆಂಡತಿಯರ ನಡುವಿನ ಜೋಕುಗಳು ಹೀಗೆ ನೂರಾರು ಜೋಕುಗಳನ್ನು ನೆನಪಿನಲ್ಲಿಟ್ಟುಕೊಂಡು ಹೇಳುತ್ತಿರುತ್ತಾಳೆ. ದಿನ ಲಾರಿ ಚಾಲಕರ ಜೋಕುಗಳನ್ನು ಆಕೆ ಹೇಳಲು ಆರಂಭಿಸುತ್ತಿದ್ದಂತೆ ನನಗೆ ನಿನ್ನ ನೆನಪಾಯಿತು. ಕಣ್ಣುಗಳು ಹನಿಗೂಡಿದವು. ಅದನ್ನು ಅವಳಿಗೆ ತೋರ್ಪಡಿಸದೆ ನನ್ನ ಕೊಠಡಿಗೆ ಬಂದು ಕುಳಿತೆ. ಹಾಲ್ ನಲ್ಲಿ ತನ್ನ ಅಮ್ಮ ಮತ್ತು ಅಣ್ಣನಿಗೆ ಜೋಕುಗಳನ್ನು ಹೇಳುತ್ತಾ, ದಿನ ಪಪ್ಪಾ ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಕಥೆ ಬರೆಯುತ್ತಾರೆ ಎನ್ನುವ  ಅವಳ ಮಾತು ನನ್ನ ಕಿವಿಗೆ ಬಿದ್ದಿತು. ನನ್ನ  ಮುದ್ದಿನ ಮಗಳ  ಮಾತಿನಿಂದ ಸ್ಪೂರ್ತಿಗೊಂಡವನಂತೆ ಕಥೆ ಬರೆಯಲು ಆರಂಭಿಸಿದ್ದೇನೆ. ಎದೆಯಲ್ಲಿ ಮಡುವುಗಟ್ಟಿರುವ ನಿನ್ನ ಕುರಿತಾದ  ನೆನಪುಗಳು ಒಂದೊಂದಾಗಿ ಅಕ್ಷರ ರೂಪ ತಾಳುತ್ತಿವೆ. ಮುವತ್ತಾರು ವರ್ಷಗಳ ಹಿಂದಿನ ಘಟನೆ ಇನ್ನೂ ನನ್ನ ಮನಸ್ಸಿನಲ್ಲಿ ಅಚ್ಚ ಹಸುರಾಗಿದೆ. ಹಾಗಾಗಿ ನಿನ್ನ ಕುರಿತು  ನಾನೇಕೆ ಕಥೆ ಬರೆಯಬಾರದು?
1947 ಸೆಪ್ಟಂಬರ್ ತಿಂಗಳ ಮೋಡ ಮುಸುಕಿದ ದಿನ ನನಗಿನ್ನೂ ನೆನಪಿದೆ. ಅಂದು ಬೆಳಗಿನ ಜಾವ ನಾವೆಲ್ಲಾ ತಲ್ಲಣದಿಂದ ನಿನ್ನ ಲಾರಿಯನ್ನೇರಿ ಕುಳಿತಿದ್ದೆವು. ನೀನು ಲಾರಿಯ ಚಾಲಕನ ಸ್ಥಾನದಲ್ಲಿ ಕುಳಿತಿದ್ದೆ. ಲಾರಿ ಬದಿಯ ಕನ್ನಡಿಯಲ್ಲಿ ಒಮ್ಮೆ ನಿನ್ನನ್ನು ನೋಡಿದಾಗ ಪಠಾಣನಂತೆ ಕಾಣುತ್ತಿದ್ದೆ. ನಿನ್ನ ತಲೆಯ ಮೇಲೆ ಕಪ್ಪು ವಸ್ತ್ರದಲ್ಲಿ ಸುತ್ತಿದ ಟೋಪಿಯಂತಹ ರುಮಾಲಿತ್ತು. ಹೊರಗೆ ಮಂಜು ಮುಸುಕಿದ ವಾತಾವರಣದಲ್ಲಿ ಆಗಸ ಮೋಡಗಳಿಂದ ಕವಿದಿತ್ತು. ಲಾರಿಯ ಒಳಗೆ ಕುಳಿತಿದ್ದ ಪ್ರಯಾಣಿಕರು ಚಳಿಯಲ್ಲೂ ಬೆವರುತ್ತಿದ್ದರು. ಎಲ್ಲರ ಹೃದಯಗಳು ಜೀವ ಭಯದಿಂದ ಅವರವರ ಬಾಯಿಗೆ ಬಂದಿದ್ದವು. ಭಯದ ವಾತಾವರಣದಲ್ಲಿ ನಾನು ನನ್ನ ಭವಿಷ್ಯವನ್ನು ನಿನ್ನ ಕೈಗೆ ಒಪ್ಪಿಸಿದ್ದೆ.  ಗ್ರೀಕ್ ಯೋಧ ಮತ್ತು ಆಪ್ಘನ್ ಪಠಾಣ್ ಇವರುಗಳ ಮಿಶ್ರಣದಿಂದ ಎರಕ ಹೊಯ್ದಂತೆ ಕಾಣುತ್ತಿದ್ದ ನಿನ್ನ ಸುಂದರವಾದ ಮುಖದಲ್ಲಿ ಭಾರತದ ವಾಯುವ್ಯ ಭಾಗದ ಆಪ್ಘನ್ ಗುಡ್ಡಗಾಡು ಪ್ರದೇಶವೇ ಪತ್ರಿಬಿಂಬಿಸುತ್ತಿತ್ತು.
ಇದ್ದಕ್ಕಿಂದ್ದಂತೆ ನಾವು ಕುಳಿತಿದ್ದ ಲಾರಿಯೊಳಗಿನ ಪ್ರಯಾಣಿಕನೊಬ್ಬನಿಂದನೋಡಿ ಅಲ್ಲಿ ಬೆಳಿಗ್ಗೆ ಹೊರಟಿದ್ದ ಲಾರಿಯೊಂದು ಮತ್ತೇ ವಾಪಸ್ ಬಂದಿದೆಎಂಬ ಮಾತು ತೂರಿ ಬಂತು.
ನಾವೆಲ್ಲವೂ ಕುತೂಹಲದಿಂದ ವಾಪಸ್ ಬಂದ ಲಾರಿಯತ್ತ ಮುಖ ಮಾಡಿದೆವು. ಬೆಳಗಿನ ಜಾವ ಆರು ಗಂಟೆಗೆ ಪ್ರಯಾಣಿಕರನ್ನು ಹೊತ್ತು ರಾವಲ್ಪಿಂಡಿಯಿಂದ ಶ್ರೀನಗರಕ್ಕೆ ಹೊರಟಿದ್ದ ಲಾರಿ, ವಾಪಸ್ ಬಂದಿತ್ತು. ಭಯ ಮತ್ತು ಭೀತಿಯಿಂದ ನರಳುತ್ತಿದ್ದ ಲಾರಿಯೊಳಗಿನ ಪ್ರಯಾಣಿಕರ ಬಾಯಲ್ಲಿ ಮಾತುಗಳು ಹೂತು ಹೋಗಿದ್ದವು. ಆದರೆ ಲಾರಿ ಚಾಲಕನಾದ ಮುಸ್ಲಿಂ ವ್ಯಕ್ತಿ ನಡೆದ ಘಟನೆಯನ್ನು ನಮಗೆ ವಿವರಿಸಿದ. ರಾವಲ್ಪಿಂಡಿಯಿಂದ ಶ್ರೀನಗರಕ್ಕೆ ಹೊರಟ ಲಾರಿಯನ್ನು ಗೋರಾಗಲ್ಲಿಯ ಬಳಿ ತಡೆದು ಲಾರಿಯ ಚಕ್ರಗಳಿಗೆ  ಗುಂಡು ಹಾರಿಸಿದ ದುಷ್ಕರ್ಮಿಗಳ ಕೃತ್ಯವನ್ನು ವಿವರಿಸಿದ. ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ರಿವರ್ಸ್ ಗೇರ್ ನಲ್ಲಿ ಅತ್ಯಂತ ವೇಗವಾಗಿ ಲಾರಿಯನ್ನು ಹಿಮ್ಮುಖವಾಗಿ ನಾಲ್ಕು ಫರ್ಲಾಂಗ್ ಗಳ ದೂರ ಓಡಿಸಿಕೊಂಡು ಬಂದುದನ್ನು ನಮಗೆ ವಿವರಿಸಿದ. ಲಾರಿಯೊಳಗೆ ಬದುಕಿಳಿದು ಬಂದ ಪ್ರಯಾಣಿಕರ ಮುಖದಲ್ಲಿ ಜೀವಕಳೆಯಾಗಲಿ ಅಥವಾ ಸಂತೋಷವಾಗಲಿ ಇರಲಿಲ್ಲ. ರಾವಲ್ಪಿಂಡಿಯಿಂದ ಭಾರತದ ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ಮಾರ್ಗಗಳು ಬಂದಾಗಿದ್ದವು. ರೈಲಿನಲ್ಲಿ ಭಾರತದತ್ತ ಪ್ರಯಾಣಿಸುತ್ತಿದ್ದ ಜನರು ಜೇಲಂ ನದಿಯ ಸೇತುವೆಯನ್ನು ದಾಟುವ ಮೊದಲೇ ವಜೀರಾಬಾದ್ ಪಟ್ಟಣದ ಬಳಿ ಸಾಮೂಹಿಕ ಹತ್ಯೆಗೆ ಒಳಗಾಗಿದ್ದರು. ರಸ್ತೆಯಲ್ಲಿ, ರೈಲ್ವೆ ನಿಲ್ದಾಣದಲ್ಲಿ, ಹೊಲದಲ್ಲಿ ಎಲ್ಲೆಂದರಲ್ಲಿ ಮನುಷ್ಯರ ರುಂಡ ಮುಂಡಗಳು ಚೆಲ್ಲಾಡಿ ಬೀದಿ ನಾಯಿಗಳು ಮತ್ತು ರಣ ಹದ್ದುಗಳಿಗೆ ಆಹಾರವಾಗಿದ್ದವು. ಕಳೆದ ಹತ್ತು ದಿನಗಳಿಂದ ಯಾವೊಂದು ರೈಲೂ ಲಾಹೋರ್ ನಗರವನ್ನು ದಾಟಿ ಭಾರತದ ಅಮೃತ್ಸರದತ್ತ ಪ್ರಯಾಣ ಬೆಳಸಿರಲಿಲ್ಲ. ಸ್ಥಿತಿಯಲ್ಲಿ ನಮಗೆ ಜೀವ ಉಳಿಸಿಕೊಳ್ಳಲು ರಸ್ತೆ ಮಾರ್ಗವೇ ಏಕೈಕ ಪರಿಹಾರವಾಗಿತ್ತು. ಆದರೆ ರಸ್ತೆ ಬದಿಯುದ್ದಕ್ಕೂ  ಪೊದೆಗಳಲ್ಲಿ ಅಡಗಿ ಕುಳಿತಿದ್ದ ಬುಟಕಟ್ಟು ಜನಾಂಗದ ದ್ವೇಷದ ದಳ್ಳುರಿಗೆ ಸಿಲುಕುವ ಅಪಾಯ ನಮಗೆ ಎದುರಾಗಿತ್ತು. ರಾವಲ್ಪಿಂಡಿ ನಗರವೊಂದರಲ್ಲೇ ಚೂರಿ ಇರಿತಕ್ಕೆ ಸಾವಿರಾರು ಜನ ಬಲಿಯಾಗಿದ್ದರು. ಸಾವಿನ ಪ್ರಮಾಣ ದಿನೇ ದಿನೇ ಏರುತ್ತಿತ್ತು.





ಲಾರಿಯ ತುಂಬೆಲ್ಲಾ ಆವರಿಸಿದ ನೀರವ ಮೌನದ ನಡುವೆ ನೀನೊಮ್ಮೆ ಹಿಂತಿರುಗಿ ಕುಳಿತಿದ್ದ ನಮ್ಮತ್ತ ತಿರುಗಿ ನೋಡಿದೆ. ಎಲ್ಲರ ಮುಖದಲ್ಲಿನ ನಿಸ್ತೇಜ ಕಳೆ, ಬಾಡಿ ಹೋದ ಜೀವದ ಆಸೆ ನಮ್ಮೆಲ್ಲರ ಕಣ್ಣುಗಳಲ್ಲಿ ವ್ಯಕ್ತವಾಗುತ್ತಿತ್ತು. ಸುತ್ತಲಿನ ಭಯದ ವಾತಾವರಣ  ನಮ್ಮೆಲ್ಲರ ಎದೆಯನ್ನು ಆಕ್ರಮಿಸಿಕೊಂಡಿತ್ತು. ನೇರವಾಗಿ ನಮ್ಮನ್ನು ದೃಷ್ಟಿಸಿ ನೋಡುತ್ತಿದ್ದ ನಿನ್ನ ಕಪ್ಪಗಿನ ಕಣ್ಣ ಗುಡ್ಡೆಗಳಲ್ಲಿದ್ದ ಆತ್ಮ ವಿಶ್ವಾಸ ಎದೆಗೆ ಹರಿದು ಮಾತಾಗಿ ಹೊರಹೊಮ್ಮಿದವು.
ನನ್ನ ಜೀವವನ್ನು ಪಣಕ್ಕಿಟ್ಟು ನಿಮ್ಮನ್ನು ಶ್ರೀನಗರಕ್ಕೆ ತಲುಪಿಸುತ್ತೀನಿ ನೀವು ನನ್ನೊಡನೆ ಬರಲು ಸಿದ್ಧರಿದ್ದೀರಾ? ನಿನ್ನ ಧೈರ್ಯದ ಮಾತುಗಳಿಗೆ ನಾವ್ಯಾರು ಉತ್ತರ ನೀಡುವ ಸ್ಥಿತಿಯಲ್ಲಿರಲಿಲ್ಲ. ಓರ್ವ ಮುಸ್ಲಿಂ ವ್ಯಕ್ತಿಯಾಗಿ, ನೀನು ಚಾಚಿದ ಸಹಾಯ ಹಸ್ತಕ್ಕೆ ಉತ್ತರಿಸಲು  ಸಾವು ಬದುಕಿನ ತೂಗುಕತ್ತಿಯ ಕೆಳೆಗೆ ಕುಳಿತ ಹಿಂದೂ- ಸಿಖ್ ಪ್ರಯಾಣಿಕರಾದ ನಮ್ಮ ಬಳಿ ಏನಿತ್ತ್ತು ಹೇಳು? ನಮಗೆ ರಾವಲ್ಪಿಂಡಿಯಲ್ಲಿದ್ದು ಸಾಯುವ ಬದಲು ನಿನ್ನ ಜೊತೆ ನಮ್ಮ ಪ್ರಾಣವನ್ನು ಪಣಕ್ಕೆ ಒಡ್ಡಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿತ್ತು. ಕೂಡಲೇ ನಾವೆಲ್ಲಾ ಒಪ್ಪಿಗೆ ಸೂಚಿಸಿದೆವು.
ನಿನ್ನ ದೃಢ ನಿರ್ಧಾರ ಕೇಳಿ ಆತಂಕಗೊಂಡ ಮೊದಲ ಲಾರಿಯ ಚಾಲಕಬೇಡ ಹುಸೇನ್ ಹೋಗಬೇಡ, ನಿನಗೆ ವೃದ್ಧ ತಾಯಿಯಿದ್ದಾಳೆ, ವಿವಾಹವಾಗದ ತಂಗಿಯಿದ್ದಾಳೆಎಂದು ಎಚ್ಚರಿಸಿದ. ಆದರೆ ಅವನ ಮಾತನ್ನು ಕೇಳುವ ಸ್ಥಿತಿಯಲ್ಲಿ ನೀನಿರಲಿಲ್ಲ. ಲಾರಿಯ ಆಕ್ಸಲೇಟರ್ ಅನ್ನು ನಿನ್ನ ಪಾದ ದೃಢವಿಶ್ವಾಸದಿಂದ ತುಳಿಯತೊಡಗಿತು. ನಮ್ಮನ್ನು ಹೊತ್ತ ಲಾರಿ ಶ್ರೀನಗರದತ್ತ ಚಲಿಸತೊಡಗಿತು.
ನೂರ್ಪುರ್, ಕೊಹಮ್ರೀ, ನಾಥಿಯಗಲ್ಲಿ, ಗೋರಾಗಲ್ಲಿ, ಹೀಗೆ ಅನೇಕ ಪ್ರದೇಶಗಳನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಾವು ದಾಟಿದೆವು. ಕೊಹಲ್ಲಾ ಎಂಬ ಊರು ಗೋರಾಗಲ್ಲಿಯಿಂದ ಇಪ್ಪತ್ತೈದು ಮೈಲಿ ದೂರವಿತ್ತು. ಕೊಹಲ್ಲಾ ಬಳಿ ಇದ್ದ ಜೇಲಂ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆ ಸಮೀಪ ನೂತನವಾಗಿ ಉದಯವಾಗಿದ್ದ ಪಾಕಿಸ್ಥಾನ ಗಡಿಪ್ರದೇಶ ಮುಕ್ತಾಯವಾಗುತ್ತಿತ್ತು. ಸೇತುವೆಯ ಆಚೆಗಿನ ಭೂ ಪ್ರದೇಶದಿಂದ ಭಾರತದ ಜಮ್ಮು ಕಾಶ್ಮೀರ ರಾಜ್ಯದ ಶ್ರೀನಗರದ ಗಡಿ ಪ್ರದೇಶ ಆರಂಭವಾಗುತ್ತಿತ್ತು. ಗೋರಾಗಲ್ಲಿಯಿಂದ ಕೊಹಲ್ಲಾ ವರೆಗಿನ ರಸ್ತೆ ಇಳಿಮುಖವಾಗಿದ್ದರಿಂದ ನಾವು ಕುಳಿತ್ತಿದ್ದ ಲಾರಿಯು  ವೇಗವಾಗಿ ಚಲಿಸುತ್ತಿತ್ತು. ಲಾರಿಯ ಒಳಗಿದ್ದ ಪ್ರಯಾಣಿಕರ ಮನದಲ್ಲಿ ಮೂಡಿದ್ದ ಭಯ ಪ್ರತಿ ಕ್ಷಣವು ನಮ್ಮನ್ನು ಕುತೂಹಲ ಮತ್ತು ಅತಂಕದ ತುತ್ತ ತುದಿಯಲ್ಲಿ ಕೂರಿಸಿತ್ತು. ಗಾಂಧಿ, ನೆಹರೂರವರ ಭಾರತಕ್ಕೆ ನಾವು ಕಾಲಿಡಬಹುದೆ?ಅಥವಾ ಆಗುಂತಕರ ಗುಂಡಿಗೆ ಬಲಿಯಾಗಿ, ಗುಡ್ಡಗಾಡಿನ ಇಳಿಜಾರಿನ ಬಯಲಿನಲ್ಲಿ, ಕರುಣೆಯಿಲ್ಲದ ಆಕಾಶದ ಕೆಳೆಗೆ ರಣಹದ್ದುಗಳಿಗೆ ಆಹಾರವಾಗಬಹುದೆ? ಎಂಬ ಅತಂಕ ನಮ್ಮ ಉಸಿರನ್ನು ಬಿಗಿಯಾಗಿ ಹಿಡಿದಿಟ್ಟಿತ್ತು. ಲಾರಿ ಚಲಿಸುತ್ತಿದ್ದಂತೆ ನಮ್ಮ ಕಣ್ಣುಗಳು ರಸ್ತೆ ಬದಿಯಲ್ಲಿ ನೆಟ್ಟಿದ್ದ ಮೈಲಿಗಲ್ಲುಗಳ ಮೇಲಿದ್ದವು. ಕೊಹಲ್ಲಾ ಇನ್ನೂ ಹದಿನೇಳು ಮೈಲಿಗಳ ದೂರವಿತ್ತು.
ಇದಕ್ಕಿದ್ದಂತೆ ಗುಂಡಿನ ಸದ್ದು ನಮಗೆ ಕೇಳಿ ಬಂತು. ನಾವು ನಿನ್ನತ್ತ ನೋಡುತ್ತಿದ್ದಂತೆ ಗುಂಡೇಟು ನಿನ್ನ ಎಡತೋಳಿಗೆ ತಾಕಿ, ತೋಳಿನಿಂದ ರಕ್ತ ಸೋರುತ್ತಿತ್ತು. ನೀನು ಛಲಬಿಡದವನಂತೆ ಲಾರಿಯನ್ನು ಮತ್ತಷ್ಟು ವೇಗದಲ್ಲಿ ಚಲಾಯಿಸುತ್ತಿದ್ದೆ, ನನ್ನ ಹಿಂಬದಿಯ ಸಿಟಿನಲ್ಲಿ ಕುಳಿತಿದ್ದ ಪ್ರೀತಂ ಸಿಂಗ್ ಚೌದುರಿ ಎಂಬಾತ ಕೂಡಲೆ ನಿನ್ನ ಬಳಿ ಬಂದ. ಆತ ರಾವಲ್ಪಿಂಡಿಯ ಸಿಂಗ್ ಸಭಾ ಆಸ್ಪತ್ರೆಯಲ್ಲಿ ಕಾಂಪೌಂಡರ್ ಆಗಿ ಕಾರ್ಯನಿರ್ವಸಿದವನು. ತನ್ನ ಕೈ ಚೀಲದಲ್ಲಿದ್ದ ಹತ್ತಿ, ಒಂದಿಷ್ಟು ಔಷಧ ತೆಗೆದು ನಿನ್ನ ತೋಳಿಗೆ ಹಚ್ಚಿ, ರಕ್ತ ಸೋರದಂತೆ ಬ್ಯಾಂಡೇಜ್ ಸುತ್ತಿದ. ಬಂದೂಕಿನ ಗುಂಡು ನಿನ್ನ ತೋಳನ್ನು ಸವರಿಕೊಂಡು  ಕಿಟಕಿಯಲ್ಲಿ ಹಾಯ್ದು ಹೋಗಿದ್ದರಿಂದ ಹೆಚ್ಚಿನ ಗಾಯವೇನೂ ಆಗಿರಲಿಲ್ಲ. ನಿನ್ನೊಳಗಿನ ಆತ್ಮ ವಿಶ್ವಾಸ ಗುಂಡೇಟಿನಿಂದ ಕುಸಿದಂತೆ ಕಾಣುತ್ತಿದ್ದರೂ, ನಿನ್ನ ಮುಖದಲ್ಲಿ ನಮ್ಮನ್ನು ಗುರಿ ತಲುಪಿಸುವ ಛಲವಿತ್ತು.
ಕೊಹಲ್ಲ ಇನ್ನು ಹನ್ನೆರೆಡು ಮೈಲುಗಳ ದೂರವಿರುವಾಗ ಮತ್ತೇ ಗುಂಡಿನ ಮೊರೆತ ಕೇಳಿಬಂತು. ಲಾರಿಯ ಹಿಂಬದಿಯತ್ತ ನೋಡಿದಾಗ, ರಸ್ತೆಯಲ್ಲಿ ನಿಂತಿದ್ದ ನಾಲ್ವರು ದುಷ್ಕರ್ಮಿಗಳು, ಲಾರಿಯ ಚಕ್ರಗಳನ್ನು ಗುರಿಯಾಗಿಟ್ಟು ಗುಂಡು ಹಾರಿಸುತ್ತಿದ್ದರು
ವೇಗವಾಗಿ ಲಾರಿಯನ್ನು ಚಲಾಯಿಸುತ್ತಿದ್ದ ನೀನು ರಸ್ತೆ ಮೇಲೆ ನೆಟ್ಟಿದ್ದ  ಕಣ್ಣನ್ನು ಕೀಳದೆ, ನಿಮ್ಮಲ್ಲಿ ಯಾರಾದರೂ ಡ್ರೈವರ್ ಇದ್ದೀರಾ? ಎಂದು ಕೇಳಿದೆ. ಇದ್ದರೆ ನನ್ನ ಬಳಿ ಬೇಗ ಬನ್ನಿ ಎಂದೂ ಸಹ ಕೂಗಿದೆ.
ನಮ್ಮ ನಡುವೆ ಇದ್ದ ಜೋದ್ ಸಿಂಗ್ ಎಂಬಾತ, “ನನಗೆ ರಾವಲ್ಪಿಂಡಿ- ಲಾಹೋರ್ ನಡೆವೆ ಬಸ್ ಗಳನ್ನು ಓಡಿಸಿ ಅನುಭವವಿದೆ ಆದರೆ ಗುಡ್ಡ ಗಾಡು ಪ್ರದೇಶಗಳಲ್ಲಿ ಅನುಭವವಿಲ್ಲಎಂದ. ಪರವಾಗಿಲ್ಲ ಬಾ ಎಂದು ಆತನನ್ನು ಕರೆದು , ಅವನ ಕೈಗೆ ಸ್ಟಿಯರಿಂಗ್ ಚಕ್ರವನ್ನು ಕೊಟ್ಟು, ಇಡೀ ರಸ್ತೆ ಇಳಿಜಾರಾಗಿದೆ, ಎಲ್ಲಿಯೂ ತಿರುವುಗಳಿಲ್ಲ, ಬ್ರೇಕ್ ಮೇಲೆ ಸದಾ ನಿನ್ನ ಕಾಲಿರಲಿಎಂದು ಆತನಿಗೆ ನೀನು ಸಲಹೆಗಳನ್ನಿತ್ತೆ.. ಎಲ್ಲಿಯೂ ಯಾವ ಕಾರಣಕ್ಕೂ ವಾಹನ ನಿಲ್ಲಿಸಬೇಡ ಎಂದು ಸೂಚನೆ ನೀಡಿದೆ. ನಮ್ಮತ್ತ ತಿರುಗಿನಿಮ್ಮ  ಗುರುನಾನಕ್ ನಿಮ್ಮನ್ನು ಕಾಪಾಡುತ್ತಾನೆ” ಎಂದೆ. ಕೊಹಲ್ಲಾ ಬಳಿಯ ಜೇಲಂ ನದಿಯ ಸೇತುವೆ ಕೇವಲ ನಾಲ್ಕು ಮೈಲುಗಳ ಅಂತರದಲ್ಲಿತ್ತು.
ನೀನು ನಾವು ಕುಳಿತಿದ್ದ ಸ್ಥಳಕ್ಕೆ ಬಂದು, ಸರ್ದಾಜಿ ನಿಮ್ಮ ಖಡ್ಗವನ್ನು ನನಗೆ ಕೊಡುವಿರಾ? ಎಂದು ಪ್ರಯಾಣಿಕರೊಬ್ಬರನ್ನು ಕೇಳಿದೆ. ಸರ್ದಾರ್ ಶಂಷೀರ್ ಸಿಂಗ್ ಹಿಂದೆ ಮುಂದೆ ಯೋಚಿಸದೆ, ತನ್ನ ಕೈಯಲ್ಲಿದ್ದ ಮೂರು ಅಡಿ ಉದ್ದದ ಖಡ್ಗವನ್ನು ನಿನಗೆ ನೀಡಿದರು. ನೀನು ತಡಮಾಡದೆ ಲಾರಿಯ ಹಿಂಬದಿಯ ಮೆಟ್ಟಿಲ ಮೇಲೆ ನಿಂತು, “ನಿಮ್ಮ ಜೊತೆ ದೇವರಿದ್ದಾನೆ ಚಿಂತಿಸಬೇಡಿ” ಎನ್ನುತ್ತಾ, ಚಲಿಸುತ್ತಿದ್ದ ಲಾರಿಯಿಂದ ಕೆಳಕ್ಕೆ ದುಮುಕಿದೆ.  ನಿನ್ನ ಕ್ರಿಯೆಯಲ್ಲಿ ನಮ್ಮನ್ನು ಸುರಕ್ಷಿತವಾಗಿ ಗುರಿಮುಟ್ಟಿಸಿದ ಸಂತೃಪ್ತ ಭಾವನೆ ಎದ್ದು ಕಾಣುತ್ತಿತ್ತು.  ನೀನು ಲಾರಿಯಿಂದ ಇಳಿದು ಸೂರ್ಯನ ಬೆಳಕಿಗೆ ಹೊಳೆಯುತ್ತಿದ್ದ ಖಡ್ಗವನ್ನು ಕೈಯಲ್ಲಿ  ಹಿಡಿದು ನಡೆಯುತ್ತಿದ್ದಾಗ, ಖಡ್ಗವೆಂಬ ಆಯುಧ ಸೂಕ್ತವಾದ ವ್ಯಕ್ತಿಯ ಕೈ ಸೇರಿದೆ ಎಂಬ ತೃಪ್ತಿ ನಮ್ಮದಾಗಿತ್ತು. ಗುರುಗೋವಿಂದ ಸಿಂಗ್ ರು  ಪ್ರತಿಯೊಬ್ಬ ಸಿಖ್ ಪ್ರಜೆಯ ಕೈಗೆ  ಖಡ್ಗ ನೀಡುವಾಗ, ಇದು ನಿಮ್ಮ ಆತ್ಮ ರಕ್ಷಣೆಗೆ ಮಾತ್ರವಲ್ಲ, ದೀನ ದಲಿತರ ರಕ್ಷಣೆಗೂ ಬಳಕೆಯಾಗಬೇಕು ಎಂದಿದ್ದರು. ದಿನ ಮನುಷ್ಯತ್ವವನ್ನು ರಕ್ಷಿಸಲು ಹೊರಟ ನಿನ್ನ ಕೈಲಿ ನನ್ನ ಜನಾಂಗದ ಖಡ್ಗ ಸೇರಿದ್ದು  ಮನಸ್ಸಿನಲ್ಲಿ ಸಾರ್ಥಕ ಭಾವನೆಯನ್ನು ಮೂಡಿಸಿತು





ಲಾರಿಯು ಜೇಲಂ ಸೇತುಗೆ ಹತ್ತಿರವಾಗುತ್ತಿದ್ದಂತೆ ಮತ್ತೇ ಮೂರು ಗುಂಡಿನ ಶಬ್ದ ಕೇಳಿಬಂತು. ಅದೃಷ್ಟವಶಾತ್ ನಮ್ಮ ವಾಹನಕ್ಕೆ ಏನೂ ಆಗಿರಲಿಲ್ಲ.  ಆದರೆ, ಖಡ್ಗ ಹಿಡಿದು ಹೊರಟ ನಿನ್ನ ಸ್ಥಿತಿ ಏನಾಯಿತೊ? ನಮಗೆ ತಿಳಿಯಲಿಲ್ಲ. ಪೊದೆಯ ಹಿಂದೆ ಅವಿತು ಗುಂಡು ಹಾರಿಸುತ್ತಿದ್ದ ಆಗುಂತಕರ ಗುಂಡಿಗೆ ನೀನು ಬಲಿಯಾದೆಯಾ? ಅಥವಾ ಸುರಕ್ಷಿತವಾಗಿ ನಿನ್ನ ಮನೆ ಸೇರಿದೆಯಾ? ಇದು ನಮ್ಮ ಪಾಲಿಗೆ ಪ್ರಶ್ನೆಯಾಗಿ ಉಳಿಯಿತು. ನೀನು ಲಾರಿಯಿಂದ ನೆಗೆಯುವಾಗ, ಅಲ್ಲಾ ಎಂಬ  ದೇವರು ನಿನ್ನನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲಿ ಎಂದು ನಾವೆಲ್ಲಾ ಮನದೊಳಗೆ ನಿನಗಾಗಿ ಪ್ರಾರ್ಥಿಸುತಿದ್ದೆವು.
ನಮ್ಮ ದಿನದ ನಮ್ಮ  ಪ್ರಾರ್ಥನೆ ದೇವರಿಗೆ ತಲುಪಿತೊ? , ಇಲ್ಲವೊ? ಇವೊತ್ತಿಗೂ ನನಗೆ ತಿಳಿಯಲಿಲ್ಲ, ನೀನು ಬದುಕಿದ್ದೀಯಾ ಗೆಳೆಯಾ? ನಿನ್ನ ವೃದ್ಧ ತಾಯಿ ಏನಾದಳು? ನಿನ್ನ ಸಹೋದರಿಗೆ ವಿವಾಹವಾಯಿತೆ? ಇದು ನನ್ನ ಪಾಲಿಗೆ ಉತ್ತರವಿಲ್ಲದ ಒಗಟಿನ ಪ್ರಶ್ನೆಗಳಾಗಿ ಉಳಿದುಬಿಟ್ಟಿವೆ.
ಆದರೂ ಹುಸೇನ್,  ಯಾವಾಗಲೂ ನೀನು ನೆನಪಾಗುತ್ತಿಯಾ. ನಿನ್ನ ನೆನಪಾದಾಗಲೆಲ್ಲಾ, ನಿನ್ನ ಅರೋಗ್ಯಕ್ಕಾಗಿ, ನಿನ್ನ ತಾಯಿಯ ಧೀರ್ಘಾಯಸ್ಸಿಗಾಗಿ ಮತ್ತು  ನಿನ್ನ ಸಹೋದರಿಯ ಒಳಿತಿಗಾಗಿ ನೂರಾರು ಪ್ರಾರ್ಥನೆಗಳು ಒಮ್ಮೆಲೆ ನನ್ನ  ಹೃದಯದಿಂದ ಹೊರಡುತ್ತವೆ. ನೀನಿನ್ನು ಜೀವಂತವಾಗಿ ಪಾಕಿಸ್ಥಾನದಲ್ಲಿ ಬದುಕಿದ್ದೀಯಾ ಎಂದು ನಂಬಿಕೊಂಡಿದ್ದೇನೆ. ಅಕಸ್ಮಾತ್ ನೀನು ಮರಣ ಹೊಂದಿದ್ದರೆ, ದೇವರು ನಿನಗೆ ಸ್ವರ್ಗದಲ್ಲಿ ಸ್ಥಾನ ಕಲ್ಪಿಸಿದ್ದಾನೆ ಎಂದುಕೊಳ್ಳುತ್ತೇನೆ.  ನೀನು ಬದುಕಿದ್ದರೆ, ದೇವರು ನಿನ್ನನ್ನು ಸುಖವಾಗಿರಿಸಲಿ ಎಂದು ಪ್ರಾರ್ಥಿಸುವುದು ನನ್ನ  ಪಾಲಿನ ದಿನಚರಿಯಾಗಿದೆ ಏಕೆಂದರೆ, ದಿನ ಭಾರತದಲ್ಲಿ ನಾನು ಬದುಕುತ್ತಿರುವ ಸುಖದ ಬದುಕು ನೀನು ಕೊಟ್ಟ ಅಮೂಲ್ಯ ಕಾಣಿಕೆಯಲ್ಲದೆ ಮತ್ತೇನು?
                                                   ( ಮೋಹಿಂದರ್ ಸಿಂಗ್ ಸೆರಾನ 1983 ರಲ್ಲಿ ಬರೆದ ಕತೆ.)

ಭಾನುವಾರ, ಏಪ್ರಿಲ್ 6, 2014

ಮೋದಿ ಮತ್ತು ಮುಸ್ಲಿಂ ಜಗತ್ತು


ಲೋಕ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಭಾರತೀಯ ಜನತಾ ಪಕ್ಷದಿಂದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟಿರುವ ನರೇಂದ್ರಮೋದಿಯವರ ಪರ-ವಿರೋಧ ಕುರಿತಂತೆ   ಚರ್ಚೆಗಳು ಎಲ್ಲೆಡೆ ತಾರಕಕ್ಕೇರಿವೆ. ಕಳೆದ ಒಂದು ವರ್ಷದಿಂದ ನರೇಂದ್ರಮೋದಿಯವರು ಭಾರತದ ಸುದ್ಧಿ ಮಾಧ್ಯಮ ಜಗತ್ತಿಗೆ ಜಾಹಿರಾತು ರೂಪದಲ್ಲಿ ಹರಿಸಿರುವ ಸುಮಾರು ಒಂದು ಸಾವಿರದ ಮುನ್ನೂರು ಕೋಟಿ ರೂಪಾಯಿಗಳ ಜಾಹಿರಾತು ಹಣ ನಮ್ಮ ಸುದ್ಧಿ ಮಾಧ್ಯಮದ ಜಗತ್ತನ್ನು ಕಟ್ಟಿ ಹಾಕಿದೆ. ಆದರೆ. ಇದರ ಹಂಗಿಲ್ಲದ ವಿದೇಶಿ ಮಾಧ್ಯಮಗಳು ಮಾತ್ರ ತಮ್ಮ ತಲಸ್ಪರ್ಶಿ ಅಧ್ಯಯನ ಮತ್ತು ವಿಶ್ಲೇಷಣೆಗಳ ಮೂಲಕ ನರೇಂದ್ರಮೋದಿಯವರ ನಿದ್ದೆಗೆಡಿಸಿವೆ. ಈ ವಾರ ಎಕಾನಾಮಿಸ್ಟ್ ಪತ್ರಿಕೆ ತನ್ನ ಮುಖಪುಟ ವರದಿಯಲ್ಲಿ  "ಯಾರಾದರೂ ನರೇಂದ್ರಮೋದಿಯನ್ನು ತಡೆಯಬಲ್ಲರೆ?” ಎಂಬ ಶಿರೋನಾಮೆಯ ಲೇಖನದಲ್ಲಿ ನರೇಂದ್ರಮೋದಿ ಬಹುಮುಖಿ ಸಮಾಜ ಮತ್ತು ಸಂಸ್ಕೃತಿಯ ಭಾರತಕ್ಕೆ ಪ್ರಧಾನಿಯಾಗಲು ಏಕೆ ಅನರ್ಹ ಎಂಬುದರ ಕುರಿತು ವಿಶ್ಲೇಷಣೆ ಮಾಡಿದೆ. ಗೋಧ್ರಾ ನರಮೇಧ ಪ್ರಕರಣದಲ್ಲಿ ತಮ್ಮ ಪಾತ್ರದ ಬಗ್ಗೆ ಅವರು ಭಾರತದ ಜನತೆಗೆ ಸ್ಪೃಷ್ಟ ಪಡಿಸುವ ಅಗತ್ಯವಿದೆ ಎಂದು ಪತ್ರಿಕೆ ಪ್ರತಿಪಾದಿಸಿದೆ. ಎಕಾನಾಮಿಸ್ಟ್ ಪತ್ರಿಕೆ ಕಾಂಗ್ರೇಸ್ ಪಕ್ಷದ ರಾಹುಲ್ ಗಾಂಧಿ ಕುರಿತು ಪ್ರಸ್ತಾಪಿಸಿ,  ಯು.ಪಿ.ಎ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಪ್ರಸ್ತಾಪಿಸಿ, ತನ್ನ ಅಪ್ರಬುದ್ಧತೆಯ ನಡುವೆ ಕಡಿಮೆ ಅಪಾಯಕಾರಿ ಮನುಷ್ಯ ಎಂದಿದೆ. ಇಡೀ ಭಾರತ ದೇಶದ ಯುವ ಜನತೆಯ ಮನಸ್ಸನ್ನು ವಿಶ್ಲೇಷಿಸಿರುವ ಪತ್ರಿಕೆ ಈಗ ಭಾರತಕ್ಕೆ ಬೇಕಾಗಿರುವುದು, ಪ್ರಮಾಣಿಕ, ನ್ಯಾಯಯುತವಾದ ಹಾಗೂ ಆಧುನಿಕ ಮನೋಭಾವದ ವ್ಯಕ್ತಿಗಳು ಎಂದು ಅಭಿಪ್ರಾಯ ಪಟ್ಟಿದೆ.
ಇದೇ ಪತ್ರಿಕೆ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಮೊದಿಯವರ ಬಣ್ಣವನ್ನು ಬಯಲು ಮಾಡಿತ್ತು. ಗುಜರಾತಿನ ಮುಸ್ಲಿಂರು ನನ್ನ ಪರವಾಗಿ ಇದ್ದಾರೆ ಎಂಬ ನರೇಂದ್ರ ಮೋದಿಯ ಹೇಳಿಕೆಯನ್ನು ಅಲ್ಲಗೆಳೆದು, ಕೇವಲ ನಾಲ್ಕು ಮಂದಿ ಮುಸ್ಲಿಂ ಉದ್ಯಮಿಗಳನ್ನು ಮುಂದಿಟ್ಟುಕೊಂಡು ಮೋದಿ ಮಾತನಾಡಿದ್ದನ್ನು ಅನಾವರಣ ಮಾಡುವುದರ ಜೊತೆಗೆ ಬಂಡವಾಳ ಶಾಹಿ ಜಗತ್ತಿಗೆ ಲಾಭಕೋರತನ ಮುಖ್ಯವಾಗಿರುವಾಗ ಅಲ್ಲಿ ಹಿಂದೂ- ಮುಸ್ಲಿಂ ಪ್ರಶ್ನೆ ಉದ್ಭವಿಸುದಿಲ್ಲ ಎಂದು ಪತ್ರಿಕೆ ಪ್ರತಿಪಾದಿಸಿತ್ತು.

ಇದಕ್ಕೆ ಪೂರಕವಾಗಿ ಕಳೆದ ನವಂಬರ್ ತಿಂಗಳಿನಲ್ಲಿ  ಅಂದರೆ 2013 ರ ನವಂಬರ್ 26 ರಂದು ಸಂಪಾದಕೀಯ ಬರೆದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿ, ಗುಜರಾತ್ ಅಭಿವೃದ್ದಿಯ ಬಗ್ಗೆ ಸುಳ್ಳು ಹೇಳುವ ಮೋದಿ ಭಾರತದ ಪ್ರಧಾನಿ ಹುದ್ದೆಗೆ ಅರ್ಹರಲ್ಲ ಎಂದಿತ್ತು. ಈ ಅಭಿಪ್ರಾಯಗಳು ನಮೋ ಬ್ರಿಗೇಡ್ ಗೆ ನುಂಗಲಾರದ ತುತ್ತಾಗಿವೆ. ಹಾಗಾಗಿ ಮೋದಿ ಭಜನಾ ಮಂಡಳಿಯ ಭಕ್ತರು ವಿದೇಶಿ ಮಾಧ್ಯಮಗಳ ಮೇಲೆ ಕಿಡಿ ಕಾರುತ್ತಿದ್ದಾರೆ. ಇಂದು ಭಾರತದ ಬಹುತೇಖ ಮಾಧ್ಯಮ ಸಂಸ್ಥೆಗಳು ಕಾರ್ಪೊರೇಟ್ ಜಗತ್ತಿಗೆ ಇಲ್ಲವೆ ರಾಜಕೀಯ ನಾಯಕರ ಕೈ ವಶವಾಗಿರುವುದರಿಂದ ಜನಸಾಮಾನ್ಯರ ವಿಶ್ವಾಸಾರ್ಹತೆಗೆ ಅನರ್ಹಗೊಂಡಿವೆ. ತಮ್ಮ ತಮ್ಮ ಮೂಗಿನ ನೇರಕ್ಕೆ ಒಳಪಡುವ ವಿಶ್ಲೇಷಣೆಗಳು, ಮಾಧ್ಯಮಗಳಲ್ಲಿ  ತೌಡು ಕುಟ್ಟುವ ಪ್ರಸಂಗಗಳಾಗಿ ಪರಿವರ್ತನೆ ಹೊಂದಿವೆ.
ಭಾರತದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸದಲ್ಲಿ ಎರಡು ಅತಿ ಘೋರ ದುರಂತಗಳು ಎಂದು ಬಣ್ಣಿಸುಲಾಗುವ 1948 ಜನವರಿ 30 ರಂದು ನಡೆದ ಮಹಾತ್ಮ ಗಾಂಧಿಯವರ ಹತ್ಯೆ ಮತ್ತು 1992 ರ ಡಿಸಂಬರ್ 6 ರಂದು ಅಯೋದ್ಯೆಯಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣ ಇವುಗಳನ್ನು ನಿಷ್ಪಕ್ಷಪಾತವಾಗಿ ಮತ್ತು ನಿಷ್ಟುರವಾಗಿ ಜಗತ್ತಿಗೆ ಬಿತ್ತರಿಸಿದ್ದು ವಿದೇಶಿ ಮಾಧ್ಯಮಗಳು. ಈ ಸಂಗತಿ ಬಿ.ಜೆ.ಪಿ. ಯ ಭಕ್ತರಿಗೆ ನೆನಪಿಲ್ಲ. 1948 ರ ಜನವರಿ 30 ರಂದು ಸುಮಾರು ಸಂಜೆ 4-40 ರ ವೇಳೆಗೆ ಗಾಂಧೀಜಿ ಹತ್ಯೆ ನಡೆಯಿತು. ದೆಹಲಿಯಲ್ಲಿದ್ದ ಗೌರ್ನರ್ ಜನರಲ್ ಮೌಂಟ್ ಬ್ಯಾಟನ್ ಅವರಿಗೆ 10 ನಿಮಿಷಗಳ ತರುವಾಯ ಸುದ್ಧಿಮುಟ್ಟಿತು. ಅವರು ಕೂಡಲೇ ತುರ್ತು ಸಭೆ ನಡೆಸಿ , ಗಾಂಧೀಜಿ ಕೊಲೆ ಸುದ್ಧಿಯನ್ನು ಆಕಾಶವಾಣಿಯಲ್ಲಿ ಹೇಗೆ ಪ್ರಸಾರ ಮಾಡಬೇಕು ಎಂಬುದನ್ನು ಸಿದ್ಧಪಡಿಸಲು 15 ನಿಮಿಷ ಸಮಯ ವ್ಯರ್ಥವಾಯಿತು. ಅಂತಿಮ ವಾಗಿ ಸಂಜೆ 5-15 ಕ್ಕೆ ದೆಹಲಿಯ ಆಕಾಶವಾಣಿಯಲ್ಲಿ  “ ಹಿಂದೂ ಬ್ರಾಹ್ಮಣ ಯುವಕನೊಬ್ಬನಿಂದ ಮಹಾತ್ಮ ಗಾಂಧೀಜಿ ಹತ್ಯೆಯಾಗಿದರು” ಎಂಬ ಸುದ್ಧಿ ಪ್ರಸಾರವಾಯಿತು. ಅದರೆ ಈ ವೇಳೆಗಾಗಲೇ ಲಂಡನ್ನಿನ ಬಿ.ಬಿ.ಸಿ. ರೇಡಿಯೋ ತನ್ನ ಸಂಜೆ 5 ಗಂಟೆ ಸುದ್ದಿ ಸಮಯದಲ್ಲಿ ಅಂದರೆ ಐದು ಗಂಟೆ ಮೂರು ನಿಮಿಷಕ್ಕೆ ಸರಿಯಾಗಿ ಗಾಂಧಿಜಿ ಹತ್ಯೆಯ ಸುದ್ಧಿಯನ್ನು ಜಗತ್ತಿಗೆ ತಲುಪಿಸಿತ್ತು.

ಕಳೆದ ಎರಡು ಮೂರು ದಿನಗಳಿಂದ ಕೋಬ್ರಾ ಪೋಸ್ಟ್ ಎಂಬ ಸಂಸ್ಥೆಯ ಕುಟುಕು ಕಾರ್ಯಾಚರಣೆಯ ಮೂಲಕ ಬಹಿರಂಗಡಿಸಿರುವ ವಿಷಯ, ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಯಾರು ಯಾರು ಭಾಗಿಯಾಗಿದ್ದರು ಎಂಬುದು ಬಹಿರಂಗವಾಗಿ ಚರ್ಚೆಯಾಗುತ್ತಿದೆ. ಆದರೆ, ಈ ಪ್ರಕರಣ ನಡೆದಾಗ ನನ್ನ ತಲೆಮಾರಿನ ಬಹುತೇಕ ಪತ್ರಕರ್ತರಿಗೆ,ಅಂದಿನ  ಕಾಂಗ್ರೇಸ್ ಸರ್ಕಾರದ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರಿಂದ ಹಿಡಿದು ಬಿ.ಜೆ.ಪಿ. ನಾಯಕರಾದ ಎಲ್.ಕೆ.ಅಧ್ವಾನಿ. ಉಮಾಭಾರತಿ. ಮುರಳಿ ಮನೋಹರ ಜೋಷಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ ಇವರುಗಳ ನೇರ ಪಾತ್ರವಿತ್ತು ಎಂಬುದು ಗೊತ್ತಿರುವ ಸಂಗತಿ.. ಅತ್ಯಂತ ವ್ಯವಸ್ಥಿತವಾಗಿ ನಡೆದ ಮಸೀದಿ ಧ್ವಂಸ ಕಾರ್ಯಾಚರಣೆಯಲ್ಲಿ ನರಂಸಿಂಹರಾವ್ ತಮ್ಮ ಧೀರ್ಘ ಮೌನಕ್ಕೆ ಶರಣಾಗಿದ್ದರು. 1992 ಡಿಸಂಬರ್ 6 ರ ಸಂಜೆ ಸುಮಾರು ಐದು ಗಂಟೆಗೆ ಆರಂಭವಾದ ಮಸೀದಿ ದ್ವಂಸದ ದೃಶ್ಯಗಳನ್ನು ಕೇಂದ್ರ ಸರ್ಕಾರ ಮಾಧ್ಯಮಗಳಲ್ಲಿ ಪ್ರಸಾರವಾಗದಂತೆ ತಡೆಹಿಡಿದಿತ್ತು. ಆದರೆ ಆದಿನ ಬಿ,ಬಿ,ಸಿ, ಛಾನಲ್ ಸ್ಥಳದಿಂದ ಸಂಜೆ 6 ಗಂಟೆಗೆ ನೇರ ಪ್ರಸಾರ ಮಾಡಿ ಜಗತ್ತಿನ ಎದುರು ಭಾರತದ ಒಂದು ಸಮುದಾಯ ನಡೆಸಿದ  ಪೈಶಾಚಿಕ ಕೃತ್ಯವನ್ನು ಅನಾವರಣಗೊಳಿಸಿತ್ತು.

ಆ ದಿನದ ಕಹಿ ಘಟನೆ ನನಗೆ ಇನ್ನೂ ನೆನಪಿದೆ.  ಆ ದಿನ ಸಂಜೆ ನನ್ನೂರಿನ ಮನೆಯ ಮೆಟ್ಟಲಿನ ಮೇಲೆ ನನ್ನ  ಎರಡೂವರೆ ವರ್ಷದ ಮಗನನ್ನು ಆಟವಾಡಿಸುತ್ತಾ ಕುಳಿತಿದ್ದೆ. ನನ್ನ ಮನೆಯಲ್ಲಿ 3.400 ರೂಪಾಯಿ ಕೊಟ್ಟು ಖರೀದಿಸಿದ್ದ ಪಿಲಿಪ್ಸ್ ಕಂಪನಿಯ  14 ಇಂಚಿನ ಕಪ್ಪು ಬಿಳುಪು ಟಿ.ವಿ ಯಿತ್ತು. ಬಾಬರಿ ಮಸೀದಿಯನ್ನು ಕೆಡುವುತ್ತಿರುವ ದೃಶ್ಯಗಳನ್ನು ನೋಡಿ ಮೌನಕ್ಕೆ ಶರಣಾಗಿದ್ದೆ. ನಂತರ ನಡೆಯ ಬಹುದಾದ ಕೋಮು ಗಲಭೆಗಳನ್ನು ನೆನದು ರಾತ್ರಿ 9 ಗಂಟೆಯವರೆಗೆ ಮನೆಯ ಮೆಟ್ಟಿಲ ಮೇಲೆ ಗರ ಬಡಿದವನಂತೆ ಕುಳಿತಿದ್ದೆ, ಕಣ್ಣಿನಿಂದ ಹರಿದ ನೀರು ತೊಡೆಯ ಮೇಲೆ ಕುಳಿತ್ತಿದ್ದ ನನ್ನ ಮಗನ (ಅನನ್ಯ) ನೆತ್ತಿಯನ್ನು ತೋಯಿಸಿತ್ತು.
ಇತಿಹಾಸದ ಪುಟಗಳನ್ನು ತಿರುವಿ ಹಾಕುವಾಗ, ನನಗನಿಸುವ ಭಾವನೆಯಿದು. ಜೀವ ಪರ ತುಡಿತವುಳ್ಳ ಮನುಷ್ಯನೊಬ್ಬ ಹೇಗೆ ಈ ನರೇಂದ್ರ ಮೋದಿಯನ್ನಾಗಲಿ ಅಥವಾ ಸಂಘ ಪರಿವಾರವನ್ನಾಗಲಿ ಸಮರ್ಥಿಸಲು ಸಾಧ್ಯ.?

ಭಾರತದ ಇತಿಹಾಸದಲ್ಲಿ ಅತಿ ದೊಡ್ಡ ನರಮೇಧಗಳೆಂದು ಬಣ್ಣಿಸಲಾಗುವ ಘಟನೆಗಳೆಂದರೆ, 1947 ರ ಸ್ವಾತಂತ್ರ್ಯ ಸಂದರ್ಭದಲ್ಲಿ ನಡೆದ ವಿಭಜನೆಯ ವೇಳೆ ನಡೆದ ಕೋಮು ಗಲಭೆ, ಹಾಗೂ 1984 ರ ಅಕ್ಟೋಬರ್ 30 ರಂದು ಇಂದಿರಾ ಗಾಂಧಿ ಕೊಲೆಯಾದ ನಂತರ ದೆಹಲಿಯಲ್ಲಿ ನಡೆದ ಸಿಖ್ಕರ ಮಾರಣ ಹೋಮ ಮತ್ತು 2002 ರಲ್ಲಿ ಗೋಧ್ರಾ ದಲ್ಲಿ ನಡೆದ ದುರಂತಕ್ಕೆ ಪ್ರತಿಯಾಗಿ ಗುಜರಾತ್ ರಾಜ್ಯಾದ್ಯಂತ ನಡೆದ ಮುಸ್ಲಿಂರ ಮಾರಣ ಹೋಮ. ಈ ಘಟನೆಯಲ್ಲಿ ತನ್ನದೇನು ಪಾತ್ರವಿಲ್ಲ ಎಂದು ಹೇಳಿಕೊಳ್ಳುವ ನರೇಂದ್ರಮೋದಿಗೆ, “ಈ ಘಟನೆ ಸಂಭವಿಸಿದಾಗ ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದೆ, ನನ್ನ ಸಚಿವ ಸಂಪುಟದ ಸಹೋದ್ಯೋಗಿಗಳು ಈ ಪ್ರಕರಣದಲ್ಲಿ 28 ವರ್ಷಗಳ ಜೀವಾವಧಿ ಶಿಕ್ಷೆಗೆ ( ಡಾ.ಮಾಯ ಕೊಂಡೇನಿ) ಗುರಿಯಾಗಿದ್ದಾರೆ. ಸರ್ಕಾರದ ಮುಖ್ಯಸ್ಥನಾಗಿ ನನಗೆ ನೈತಿಕವಾದ ಜವಾಬ್ದಾರಿ ಇತ್ತು . ಗೋಧ್ರಾ ಘಟನೆಯಿಂದ ತಪ್ಪಾಗಿದೆ ವಿಷಾಧಿಸುತ್ತೇನೆ” ಎಂಬ ಮಾತು ಈ ವರೆಗೆ ಮೋದಿಯ ಹೃದಯದಿಂದ ಹೊರಬಿದ್ದಿಲ್ಲ. ಕಳೆದ ವರ್ಷ ಹಿಂದೂ- ಮುಸ್ಲಿಂ ಜನಾಂಗಗಳ ಮೈತ್ರಿಗಾಗಿ ಸದ್ಭಾವನಾ ಎಂಬ ಹೆಸರಿನಲ್ಲಿ ಮೋದಿ ಒಂದು ದಿನ ಉಪವಾಸ ಮಾಡಿದರು. ಆದರೆ ಪಶ್ಚಾತಾಪದ ಉಪವಾಸ ಮಾಡಿದ್ದರೆ, ಮೋದಿಯವರ ನಡೆ ಮತ್ತು ನುಡಿಗೆ ಅರ್ಥವಿರುತ್ತಿತ್ತು. ಇಂತಹ ವ್ಯಕ್ತಿ ಭಾರತಕ್ಕೆ ಪ್ರಧಾನಿಯಾಗಲು ಯಾವ ಅರ್ಹತೆ ಮತ್ತು ನೈತಿಕತೆ ಇದೆ? ಇದು ಜಾಗತಿಕ ಮಾಧ್ಯಮಗಳು ನಾಗರೀಕ ಜಗತ್ತಿನ  ಮುಂದಿಟ್ಟಿರುವ ಪ್ರಶ್ನೆಗಳಾಗಿವೆ. ಕೆಲವು ಮೋದಿಯ ಭಕ್ತರು ಮಾಧ್ಯಮಗಳಲ್ಲಿ 2002 ರ ನಂತರ ಗುಜರಾತಿನಲ್ಲಿ ಯಾವುದೇ ಕೋಮು ಗಲಭೆಯಾಗಿಲ್ಲ ಇದನ್ನು ನೀವು ಏಕೆ ಪ್ರಸ್ತಾಪಿಸುತ್ತಿಲ್ಲ ಎಂಬ ಪ್ರಶ್ನೆ ಎತ್ತಿದ್ದಾರೆ.ಇವರ ವಾದದ ವೈಖರಿ ಹೇಗಿದೆಯೆಂದರೆ, ಒಬ್ಬ ವ್ಯಕ್ತಿ ಕೊಲೆ ಮಾಡಿದ ನಂತರ ಆತ ಮತ್ತೇ ಕೊಲೆ ಮಾಡಿಲ್ಲ ಹಾಗಾಗಿ ಆತನನ್ನು ನಾವು ಸಭ್ಯ ನಾಗರೀಕ ಎಂದು ಪರಿಗಣಿಸಬೇಕು ಎಂಬಂತಿದೆ. ಮಂದಿರವಾಯಿತು, ಇಟ್ಟಿಗೆಯಾಯಿತು, ಹಿಂದೂ ರಾಷ್ಟ್ರವಾಯಿತು, ಈಗ ಅಭಿವೃದ್ಧಿಯ ಜಪ ಮಾಡುವ ಮಂದಿಗೆ ತಮ್ಮ ಚಿಂತನೆ, ಗುರಿಗಳಲ್ಲಿ ಯಾವುದೇ ಸ್ಥಿರತೆ ಇದ್ದಂತಿಲ್ಲ.




ನಿಮಗೆ ನೆನಪಿರಬಹುದು, 2005 ರಲ್ಲಿ ಬಿ.ಜೆ.ಪಿ. ಅಧ್ಯಕ್ಷರಾಗಿದ್ದ ಎಲ್.ಕೆ. ಅಧ್ವಾನಿಯವರು , ಪಾಕಿಸ್ಥಾನದ ಕರಾಚಿ ಬಳಿಯ ತಮ್ಮ ಹುಟ್ಟೂರಿಗೆ ಬೇಟಿ ನೀಡಿದ್ದರು. ಆ ಸಂದರ್ಭದಲ್ಲಿ  ಅವರು ಮಹಮ್ಮದ್ ಆಲಿ ಜಿನ್ನಾ ಅವರನ್ನು ಜಾತ್ಯಾತೀತ ಮನೋಭಾವದ ವ್ಯಕ್ತಿ ಎಂದು ಬಣ್ಣಿಸಿದ್ದರು. ಅವರ ಹೇಳಿಕೆಗೆ ಭಾರತದಲ್ಲಿ ಅವರದೇ ಪಕ್ಷವೂ ಸೇರಿದಂತೆ, ಸಂಘಪರಿವಾದಿಂದ ತೀವ್ರ ಆಕ್ಷೇಪಕ್ಕೆ ಗುರಿಯಾಗಿ, ಅಧ್ವಾನಿಯವರು ತಮ್ಮ ಅಧ್ಯಕ್ಷ ಸ್ಥಾನ ತ್ಯೆಜಿಸಬೇಕಾಯಿತು. ಆದರೆ ಅವರು ಯಾವ ಕಾರಣಕ್ಕೂ ಅವರ ಹೇಳಿಕೆಯನ್ನು ಬದಲಾಯಿಸದೆ, ಅದಕ್ಕೆ ಬದ್ಧರಾಗಿದ್ದರು. ಇವೊತ್ತಿಗೂ ಪಾಕಿಸ್ಥಾನದ ಹುಟ್ಟಿಗೆ ಕಾರಣರಾದರು ಎಂಬ ಏಕೈಕ ಕಾರಣಕ್ಕಾಗಿ ಜಿನ್ನಾ ಅವರ ಮೇಲೆ ಭಾರತೀಯರಿಗೆ ಆಕ್ರೋಶವಿದೆ. ಆದರೆ. ಜಿನ್ನಾ ಅವರ ವ್ಯಕ್ತಿತ್ವವನ್ನು ಗಮನಿಸಿದರೆ, ಅವರಿಗೆ ಪಾಕಿಸ್ಥಾನದ ಅಧ್ಯಕ್ಷಗಿರಿಗೆ ಏರಬೇಕು ಎಂಬ ಮಹತ್ವಾಂಕ್ಷೆಯನ್ನು ಹೊರತು ಪಡಿಸಿದರೆ, ಅವರು ಧರ್ಮಾತೀತ ಮತ್ತು ಜಾತ್ಯಾತೀತ ವ್ಯಕ್ತಿಯಾಗಿದ್ದರು ಎಂಬುದಕ್ಕೆ ಹಲವಾರು ದಾಖಲೆಗಳಿವೆ. ಪಾಶ್ಚಿಮಾತ್ಯ ಜಗತ್ತಿನಲ್ಲಿ( ಇಂಗ್ಲೆಂಡ್) ಪಡೆದ ಶಿಕ್ಷಣ ಅವರನ್ನು ಮುಸ್ಲಿಂ ಜಗತ್ತಿನ ಎಲ್ಲಾ ಕಟ್ಟುಪಾಡುಗಳನ್ನು ಮೀರುವಂತೆ ಮಾಡಿದ್ದವು. ಅವರ ಸಮಕಾಲೀನರು, ಗೆಳೆಯರೂ ಹಾಗೂ ಇಂಗ್ಲೆಂಡಿನಲ್ಲಿ ಶಿಕ್ಷಣ ಪಡೆದ ನಮ್ಮ ಮುಂಬೈ ಮೂಲದ ಹೆಸರಾಂತ ರಾಜತಾಂತ್ರಿಕ ಡಾ. ರಫಿಕ್ ಝಕಾರಿಯ ಅವರು ಬರೆದಿರುವ ಎರಡು ಕೃತಿಗಳು Price of the partiation ಮತ್ತು The Man Who divided India ಈ ಎರಡೂ ಕೃತಿಗಳು ನಮಗೆ ಜಿನ್ನಾ ಬಗ್ಗೆ ಅಪೂರ್ವ ಒಳನೋಟಗಳನ್ನು ನೀಡಬಲ್ಲವು. ರಫಿಕ್ ಝಕಾರಿಯವರು ತಮ್ಮ  ಕೃತಿಯಾದ ಪ್ರೈಸ್ ಆಫ್ ದ ಪಾರ್ಟೇಷನ್ ಕೃತಿಯಲ್ಲಿ ಜಿನ್ನಾ ವ್ಯಕ್ತಿತ್ವವನ್ನು ಹೀಗೆ ಕಟ್ಟಿಕೊಡುತ್ತಾರೆ.
ಭಾರತ ಪಾಕಿಸ್ಥಾನ ವಿಭಜನೆಯಾಗುವುದು ನಿರ್ಧಾರವಾದ ಮೇಲೆ ಒಂದು ರಾತ್ರಿ ಜಿನ್ನಾ ರೈಲಿನ ಮೊದಲನೆ ಬೋಗಿಯಲ್ಲಿ ಸಂಚರಿಸುತ್ತಾ ಇರುತ್ತಾರೆ. ಜಿನ್ನಾ ಪ್ರಯಾಣದ ಸುದ್ಧಿ ತಿಳಿದ ಒಂದಿಷ್ಟು ಮುಸ್ಲಿಂರು ಬೆಳಗಿನ ಜಾವ ಮೂರು ಗಂಟೆಯಲ್ಲಿ ಮಾರ್ಗ ಮಧ್ಯದ ರೈಲ್ವೆ ನಿಲ್ದಾಣವೊಂದರಲ್ಲಿ ರೈಲಿಗೆ ಅಡ್ಡ ಹಾಕಿ ಜಿನ್ನಾ ಅವರಿಗೆ ಜಯಕಾರ ಹಾಕುತ್ತಾ ಜಿನ್ನಾ ಇದ್ದ ಬೋಗಿ ಬಳಿ ಬರುತ್ತಾರೆ. ನಿದ್ರೆಯಿಂದ ತಮ್ಮನ್ನು ಎಬ್ಬಿಸಿದ ಸಿಟ್ಟಿಗೆ ಜಿನ್ನಾ ರವರು ಅವರಿಂದ ಹೂವಿನ ಹಾರ ಸ್ವೀಕರಿಸುವ ಬದಲು , ಇಡೀ ಪ್ಲಾಟ್ ಫಾರಂ ತುಂಬೆಲ್ಲಾ ಅಭಿಮಾನಿಗಳನ್ನು ಅಟ್ಟಾಡಿಸಿ ಓಡಿಸುತ್ತಾರೆ. ಇದು ಜಿನ್ನಾ ವ್ಯಕ್ತಿತ್ವಕ್ಕೆ ಒಂದು ಉದಾಹರಣೆ ಮಾತ್ರ.



ವರ್ತಮಾನದ ಭಾರತದಲ್ಲಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗುವುದು ಹಲವರ ಆತಂಕಕ್ಕೆ ಕಾರಣವಾಗಿದೆ. ಇದೊಂದು ಅರ್ಥವಿಲ್ಲದ ಭಾವನೆಗಳು ಮಾತ್ರ. ಏಕೆಂದರೆ, ಬಹುಮುಖಿ ಸಂಸ್ಕೃತಿಯ ಭಾರತೀಯ ನೆಲಕ್ಕೆ ಎಲ್ಲವನ್ನೂ, ಎಲ್ಲರನ್ನೂ ಜೀರ್ಣಿಸಿಕೊಳ್ಳುವ ಶಕ್ತಿಯಿದೆ. ಭಾರತೀಯ ನೆಲ ತನ್ನ ಇತಿಹಾಸದುದ್ದಕ್ಕೂ ಕಂಡಿರುವ ಹಿಂಸೆ, ರಕ್ತಪಾತ, ಅರಾಜಕತೆ, ಮತ್ತು  ಅಳಿದವರ ಕ್ರೌರ್ಯ ಇವೆಲ್ಲವೂ  ಅಗಣಿತವಾದವುಗಳು. 1975 ರ ಇಂದಿರಾಗಾಂಧಿಯ ಸರ್ವಾಧಿಕಾರವನ್ನು ಸಹಿಸಿಕೊಂಡ ಈ ನೆಲ ಅದೇ ಹೆಣ್ಣುಮಗಳ ದುರಂತ ಸಾವಿಗೂ ಸಾಕ್ಷಿಯಾಗಿದೆ. ಯಾವುದೇ ಒಬ್ಬ ಅಪಾಯಕಾರಿ ವ್ಯಕ್ತಿ ಅಥವಾ ವ್ಯವಸ್ಥೆ ಎನ್ನುವುದು ನಮ್ಮ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ  ನಮ್ಮ ಪಾಲಿಗೆ ಬಂದು ಅಪ್ಪಳಿಸಿ ಹೋಗುವ ಚಂಡಮಾರುತವಿದ್ದಂತೆ. ಸ್ವಾತಂತ್ರ್ಯಾನಂತರ  ಹಲವು ವ್ಯಕ್ತಿಗಳ ಸರ್ಕಾರವನ್ನು ಭಾರತದ ಮತದಾರ ನೋಡಿದ್ದಾನೆ. ಅವನಿಗೆ ವ್ಯಕ್ತಿಯನ್ನು ಅಧಿಕಾರದಲ್ಲಿ ಕೂರಿಸುವದೂ ಗೊತ್ತು. ಕಿತ್ತು ಬಿಸಾಡುವುದು ಗೊತ್ತು. ಅವನ ತೋರುಬೆರಳಿಗೆ ಅಗಾಧವಾದ  ಈ ಶಕ್ತಿಯನ್ನು ಭಾರತೀಯ ಪ್ರಜಾಪ್ರಭುತ್ವ ದಯಪಾಲಿಸಿದೆ.
ಇವುಗಳಿಗಿಂತ ಹೆಚ್ಚಾಗಿ ನನ್ನ ಜೊತೆ ವಾಸಿಸುವ ಜೀವ ನನ್ನ ಹಾಗೆ ನೋವಾದರೆ ಅತ್ತು, ನಲಿವಾದಾಗ ನಕ್ಕು, , ಹಸಿವಾದರೆ ಒದ್ದಾಡಬಲ್ಲದು, ಎಂಬ ಮಾನವೀಯ ನೆಲೆಯುಳ್ಳ ಗ್ರಹಿಕೆಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡು. ಧರ್ಮ ಮತ್ತು ಜಾತಿಯ ಪರೀಧಿಯ ಆಚೆ ಬದುಕುವಂತಹ ಜ್ನಾನವನ್ನು ಭಾರತೀಯ ಸಂಸ್ಕೃತಿ ಜನಸಾಮಾನ್ಯರಿಗೆ ಧಾರೆಯೆರೆದಿದೆ. ಈ ಕಾರಣದಿಂದಲೇ ಇವೊತ್ತಿಗೂ ಅಹಮದಾಬಾದಿನ ರಿಪ್ಲಿಕಾ ರಸ್ತೆಯ ರಾಮ ಮಂದಿರದ ಬಳಿ ಕುಳಿತು, ದೇಗುಲಕ್ಕೆ ಬರುವ ಭಕ್ತರಿಗೆ ಮಣ್ಣಿನ ಹಣತೆಯಲ್ಲಿ ಎಣ್ಣೆ ಬತ್ತಿ ಇಟ್ಟು ಮಾರುವ ಕಾಯಕವನ್ನು ಕಳೆದ 40 ವರ್ಷಗಳಿಂದ ಮುಸ್ಲಿಂ ಕುಟುಂಬ ಪಾಲಿಸಿಕೊಂಡು ಬಂದಿದೆ. ಶಿವಮೊಗ್ಗ ನಗರದ ಆಂಜನೇಯ ದೇವಸ್ಥಾನಕ್ಕೆ ಕಳೆದ 70 ವರ್ಷಗಳಿಂದ ಹೂವಿನ ಹಾರ ವನ್ನು ಬೆಳಗಿನ ಪ್ರಥಮ ಪೂಜೆಗೆ ಕಟ್ಟಿಕೊಡುವ ಕಾಯವನ್ನು ಮುಸ್ಲಿಂ ಕುಟುಂಬವೊಂದು ವ್ರತವೆಂಬತೆ ನಡೆಸಿಕೊಂಡು ಬಂದಿದೆ. ಅಷ್ಟೆ ಏಕೆ? ನಮ್ಮ ಉಡುಪಿಯ ಅಷ್ಟ ಮಠಗಳ ರಥೋತ್ಸವ ಮತ್ತು ಇತರೆ ಧಾರ್ಮಿಕ ಕಾರ್ಯಗಳಿಗೆ ಛತ್ರಿ, ಛಾಮರ, ಇವುಗಳನ್ನು ಸಿದ್ಧ ಪಡಿಸುವುದರಿಂದ ಹಿಡಿದು, ರಥಗಳ ಅಲಂಕಾರ ಇವುಗಳ ಕಾರ್ಯವನ್ನು 200 ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯ ಮುಸ್ಲಿಂ ಕುಟುಂಬಗಳು ನಡೆಸಿಕೊಂಡು ಬಂದಿವೆ. ಇವರುಗಳಿಗೆ ಧರ್ಮ, ರಾಷ್ಟ್ರಪ್ರೇಮ, ಜಾತಿ ಇತ್ಯಾದಿಗಳಿಗಿಂತ ತಾವು ನಂಬಿದ ಕಾಯಕವನ್ನು ಘನತೆಯಿಂದ ಮುಂದುವರಿಸಿಕೊಂಡು ಹೋಗುವುದು ಮಾತ್ರ ಮುಖ್ಯವಾಗಿದೆ. ಇವರಿಗೆ ಬಸವಣ್ಣ ಗೊತ್ತಿಲ್ಲ, ಬುದ್ಧ ಗೊತ್ತಿಲ್ಲ, ಗಾಂಧಿಯಂತೂ ಮೊದಲೇ ಗೊತ್ತಿಲ್ಲ . ಈ ಜನರಿಗೆ ಗೊತ್ತಿರುವುದು ಒಂದೇ ಧರ್ಮ ಅದೇನೆಂದರೆ,  ಇತರೆ ಜೀವಕ್ಕೆ ಎರವಾಗದಂತೆ ಬದುಕುವ ಮಾನವ ಧರ್ಮ.. ಇದನ್ನೆ ಖಲೀಲ್ ಗಿಬ್ರಾನ್ “ ನನ್ನ ಅಮ್ಮ ಕವಿಯಾಗಿರಲಿಲ್ಲ, ಆದರೆ ಕವಿಯಂತೆ ಬದುಕಿದಳು” ಎಂದು ಅರ್ಥಪೂರ್ಣವಾಗಿ ನುಡಿದಿದ್ದ.


ಶನಿವಾರ, ಮಾರ್ಚ್ 29, 2014

ಗುಜರಾತ್- ಅಭಿವೃದ್ಧಿಯ ಲೊಳಲೊಟ್ಟೆಗಳು


ನಮ್ಮ ಸಾಮಾಜಿಕ ತಾಣಗಳಲ್ಲಿ ವಿಶೇಷವಾಗಿ ಫೇಸ್ ಬುಕ್ ತಾಣದಲ್ಲಿ ಕೆಲವರು ನಮ್ಮ ನೆರೆಯ ಪಾಕಿಸ್ಥಾನದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 26 ರೂಪಾಯಿ, ಶ್ರೀಲಂಕಾದಲ್ಲಿ 16 ರೂಪಾಯಿ ಹೀಗೆ ಸಿದ್ಧಪಡಿಸಿದ ಕಾರ್ಡ್ ಒಂದನ್ನು ಹಂಚಿಕೊಳ್ಳುವ ಕ್ರಿಯೆ ಇತ್ತೀಚೆಗೆ ಜೋರಾಗಿ ನಡೆದಿದೆ. ಇದರ ಹಿಂದಿರುವ ಹುನ್ನಾರವಿಷ್ಟೆ. ಮೋದಿ ಭಾರತದ ಪ್ರಧಾನಿಯಾದರೆ, ಇದೇ ಬೆಲೆಗೆ ಭಾರತದಲ್ಲಿ ನಮಗೂ ಪೆಟ್ರೋಲ್ ದೊರೆಯಲಿದೆ, ಕಾಂಗ್ರೇಸ್ ಸರ್ಕಾರ ಜನಸಾಮಾನ್ಯರನ್ನು ದೋಚುತ್ತಿದೆ ಎಂಬ ಸಂದೇಶವನ್ನು ಸಾರುವುದು ಇದರ ಹಿಂದಿನ ಉದ್ದೇಶ. ಇದನ್ನು ಬಹಳ ಮಂದಿ ತಮ್ಮ ಫೇಸ್ ಬುಕ್ ಗೋಡೆಯ ಮೇಲೆ ಹಂಚಿಕೊಳ್ಳುತ್ತಿದ್ದಾರೆ. ಇದನ್ನು ಹರಡುವ ಮೊದಲು “petrol price in Pakistan  ಅಥವಾ petrol price in Srilanka ಎಂದು ಟೈಪಿಸಿ ಗೂಗ್ಲಿ ಸರ್ಚ್ ಗೆ ಹಾಕಿದ್ದರೆ, ಆಯಾ ದೇಶಗಳ ಪೆಟ್ರೋಲ್ ಬೆಲೆ ದೊರೆಯುತ್ತಿತ್ತು. 16 ರೂಪಾಯಿಗೆ ಒಂದು ಲೀಟರ್ ನೀರು ಸಹ ದೊರೆಯುವುದಿಲ್ಲ ಎಂಬ ಸತ್ಯ ಗೊತ್ತಿಲ್ಲದ ಮೂರ್ಖ ಶಿಖಾಮಣಿಗಳು ಮಾತ್ರ ಮಾಡಬಹುದಾದ ಕೆಲಸ ಇದು. ಇಂತಹದೇ ಕೆಲಸವನ್ನು ಈಗ ಗುಜರಾತ್ ಅಭಿವೃದ್ಧಿಯ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಕೆಲವರು ಹರಿಯ ಬಿಡುತ್ತಿದ್ದಾರೆ.
ಸ್ವತಃ ನರೇಂದ್ರ ಮೋದಿ ಇಂತಹ ಸುಳ್ಳಿನ ಪಿತಾಮಹಾರಾಗಿದ್ದು, ಅವರು ತಮ್ಮ ಗುಜರಾತ್ ಅಭಿವೃದ್ಧಿ ಕುರಿತು ವೆಬ್ ಸೈಟಿನಲ್ಲಿ ಹೇಳಿಕೊಂಡಿರುವ ಮಾಹಿತಿಗೂ, ವಾಸ್ತವ ರೂಪದಲ್ಲಿ ಇರುವ  ಅಂಕಿ ಅಂಶಗಳಿಗೂ ಅಜಗಜಾಂತರ ವೆತ್ಯಾಸವಿದೆ. ಅವುಗಳನ್ನು ಒಂದೊಂದಾಗಿ ಇಲ್ಲಿ ವಿಶ್ಲೇಷಿಸಲಾಗಿದೆ.
ಗುಜರಾತಿನಲ್ಲಿ ದಿನದ 24 ಗಂಟೆಯೂ ನಿರಂತರ ವಿದ್ಯುತ್ ದೊರೆಯುತ್ತಿದೆ. ಈ ಮಾತಿನಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ ನಿಜ. ಮೋದಿಯವರ ಪಾಲಿಗೆ ದಿನಕ್ಕೆ 24 ಗಂಟೆ ಅವಧಿಯಲ್ಲ, 48 ಗಂಟೆ ಇದ್ದರೂ ಸಹ ಅವರು ವಿದ್ಯುತ್ ಪೂರೈಸಬಲ್ಲರು. ಅವರು ಪೂರೈಸುವ ವಿದ್ಯುತ್ ಗುಜರಾತ್ ಸರ್ಕಾರ ಸ್ಥಾಪಿಸಿರುವ ವಿದ್ಯುತ್ ಸ್ಥಾವರಗಳಿಂದ ಉತ್ಪಾದನೆಯಾದ ವಿದ್ಯುತ್ತಾ? ಅಥವಾ ಖಾಸಾಗಿ   ಕಂಪನಿಗಳಿಂದ ಖರೀದಿಸಿದ ವಿದ್ಯುತ್ತಾ? ಎಂದು ಯಾರೂ ಪ್ರಶ್ನಿಸಲಿಲ್ಲ. ಗುಜರಾತಿನಲ್ಲಿ ಮೋದಿ ಆಳ್ವಿಕೆಯ ಹನ್ನೊಂದು ವರ್ಷಗಳ ಅವಧಿಯಲ್ಲಿ ಸರ್ಕಾರ ಎಷ್ಟು ವಿದ್ಯುತ್ ಉತ್ಪಾದನೆ ಮಾಡಿದೆ? ಯಾರ ಬಳಿಯೂ ಉತ್ತರವಿಲ್ಲ. 2001 ರಲ್ಲಿ ಕೇವಲ ಮೂರು ಸಾವಿರ ಕೋಟಿ ಬಂಡವಾಳದೊಂದಿಗೆ ಗುಜರಾತಿನಲ್ಲಿ ವಿದ್ಯುತ್ ಉತ್ಪಾದನೆ ಉಳಿದ ಅದಾನಿ  ಕಂಪನಿ ಈಗ ನಲವತ್ತೇಳು ಸಾವಿರ ಕೋಟಿ ಬಂಡವಾಳದ ಕಂಪನಿಯಾಗಿ ಬೆಳದಿದೆ. ಈ ಕಂಪನಿಯ ಮುಖ್ಯ ಉದ್ಯೋಗ  ವಿದ್ಯುತ್ ಉತ್ಪಾದಿಸಿ ಗುಜರಾತ್ ಸರ್ಕಾರಕ್ಕೆ ಮಾರುವುದಷ್ಟೇ ಕೆಲಸ.

ಇತ್ತೀಚೆಗಿನ   ದಿನಗಳಲ್ಲಿ ವರ್ಷ ವರ್ಷ ಬೇಡಿಕೆ ಹೆಚ್ಚಾಗುತ್ತಿರುವ ವಿದ್ಯುತ್ ಅನ್ನು ಸರ್ಕಾರಗಳು ಉತ್ಪಾದನೆ ಮಾಡುವ ಬದಲು ಖಾಸಾಗಿ ಕಂಪನಿಗಳಿಂದ ಖರೀದಿಸುವುದನ್ನು ಉದ್ಯೋಗ ಮಾಡಿಕೊಂಡಿವೆ. ಇದು ನಮ್ಮನ್ನು ಆಳುವ ಸರ್ಕಾರಗಳಿಗೆ, ಜನಪ್ರತಿನಿಧಿಗಳಿಗೆ, ಮತ್ತು ರಾಜಕೀಯ ಪಕ್ಷಗಳಿಗೆ ಲಾಭ ತಂದುಕೊಡುವ ದಂಧೆಯಾಗಿದೆ. ಪ್ರತಿ ಯೂನಿಟ್ ಗೆ ಯಾವ ದರದಲ್ಲಿ ಖರೀದಿಸಬೇಕೆಂಬ ಯಾವುದೇ ಮಾನದಂಡಗಳಾಗಲಿ, ನಿರ್ಭಂಧಗಳಾಗಲಿ ಇಲ್ಲ. ಕಳೆದ ಐದು ವರ್ಷಗಳಲ್ಲಿ ಕರ್ನಾಟಕ ರಾಜ್ಯ ವಿದ್ಯುತ್ ಖರೀದಿಗಾಗಿ ವ್ಯಯ ಮಾಡಿರುವ ವೆಚ್ಚ 21 ಸಾವಿರ ಕೋಟಿ ರೂಪಾಯಿ. ಈ ಹಣದಲ್ಲಿ ಮೂರು ವಿದ್ಯುತ್ ಸ್ಥಾವರಗಳನ್ನು ನಾವು ಸ್ಥಾಪಿಸಬಹುದಿತ್ತು. ಆದರೆ ಇದರ ಬಗ್ಗೆ ಯಾರಿಗೂ ಕಳ ಕಳಿಯಿಲ್ಲ. ಇಂತಹ ದಂಧೆಯನ್ನು ಭಾರತದಲ್ಲಿ ಹುಟ್ಟಿಹಾಕಿದವರು ನರೇಂದ್ರಮೋದಿ.
ಇನ್ನು ಎರಡನೆಯದಾಗಿ ಗುಜರಾತ್ ರಾಜ್ಯ ರಸ್ತೆ ಸಂಪರ್ಕ ವ್ಯವಸ್ಥೆ ಉತ್ತಮವಾಗಿದೆ ಎಂದು ಹೇಳಲಾಗುತ್ತಿದೆ. ಇದು ಅರ್ಧ ಸತ್ಯ ಮಾತ್ರ. 2010 ರ ವಿಶ್ವ ಬ್ಯಾಂಕ್ ವರದಿಯಲ್ಲಿ ಗುಜರಾತ್ ರಾಜ್ಯದ ರಸ್ತೆಗಳ ಬಗ್ಗೆ ಶ್ಲಾಘನೆ ಮಾಡಲಾಗಿದೆ. ಜೊತೆಗೆ ಶೇಕಡ 90 ರಷ್ಟು ಜನವಸತಿ ಪ್ರದೇಶಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಸಹ ಹೇಳಲಾಗಿದೆ. ಇದೆಲ್ಲವೂ ಸಂಪೂರ್ಣ ನಿಜ. ಆದರೆ, ಭಾರತದಲ್ಲಿ ರಸ್ತೆ ಸಂಪರ್ಕ ಜೋಡಣೆಯಲ್ಲಿ ಪಂಜಾಬ್ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ಕೇಂದ್ರ ಸಾರಿಗೆ ಇಲಾಖೆಯ ಹೆದ್ದಾರಿ ಕುರಿತ ವಾರ್ಷಿಕ ವರದಿಯಲ್ಲಿ ಪ್ರತಿ 100 ಚದುರ ಕಿಲೋಮೀಟರ್ ಗೆ ಗುಜರಾತ್ ರಾಜ್ಯದಲ್ಲಿ 80 ಕಿಲೋಮೀಟರ್ ಮಾತ್ರ ರಸ್ತೆಯಿದ್ದು, ಭಾರತದಲ್ಲಿ ಗುಜರಾತಿನ ಸ್ಥಾನ 19 ನೇಯ ಸ್ಥಾನವಾಗಿದೆ. ( ಭಾರತದ ಸರಾಸರಿ100 ಚದುರ ಕಿ.ಮಿ.  ಪ್ರಧೇಶಕ್ಕೆ ಇರುವ ರಸ್ತೆಯ ಉದ್ದ 143 ಕಿಲೋಮೀಟರ್ ಗಳು) ಇನ್ನು ಒಂದು ಲಕ್ಷ ಚದುರ ಕಿಲೋಮೀಟರ್ ವ್ಯಾಪ್ತಿಯ ಪ್ರದೇಶಕ್ಕೆ ಕೇರಳದಲ್ಲಿ 518 ಕಿಲೋಮೀಟರ್ ರಸ್ತೆಯಿದ್ದರೆ, ಗುಜರಾತಿನಲ್ಲಿ 259 ಕಿಲೊಮೀಟರ್ ರಸ್ತೆಯಿದ್ದು 23 ನೇ ಸ್ಥಾನದಲ್ಲಿ ಗುಜರಾತ್ ನಿಂತಿದೆ. ( ಭಾರತದ ಸರಾಸರಿ 398 ಕಿಲೊಮೀಟರ್)  2009 ರಿಂದ 2011 ರ ವರೆಗೆ ಗುಜರಾತ್ ರಾಜ್ಯದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡಿದೆ. 2013 ರ ವರದಿಯ ಪ್ರಕಾರ ಹೆದ್ದಾರಿ ಅಭಿವೃದ್ದಿಯಲ್ಲಿ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದ್ದು, ಕರ್ನಾಟಕ ಎರಡನೇಯ ಸ್ಥಾನದಲ್ಲಿದೆ, ಗುಜರಾತಿಗೆ ಮೂರನೆಯ ಸ್ಥಾನ ಲಭ್ಯವಾಗಿದೆ.

ಗುಜರಾತ್ ಅಭಿವೃದ್ಧಿಯ ಕುರಿತು ಪುಂಖಾನು ಪುಂಖವಾಗಿ ಮಿಥ್ಯೆ ಹರಡುವ ನರೇಂದ್ರ ಮೋದಿ ಭಜನಾ ಮಂಡಳಿಯ ಭಕ್ತರು, ಒಮ್ಮೆ 2013 ರ ಸೆಪ್ಟಂಬರ್ 12 ರಂದು ಗುಜರಾತ್ ಹೈಕೋರ್ಟ್ ಮೋದಿ ಸರ್ಕಾರಕ್ಕೆ ಯಾವ ರೀತಿ ಚಾಟಿ ಬೀಸಿದೆ ಎಂಬುವುದನ್ನು ಗಮನಿಸುವುದು ಒಳಿತು. ಹತ್ತು ಕಿಲೊಮಿಟರ್ ಹೆದ್ದಾರಿಯ ಗುಂಡಿಗಳನ್ನು ಮುಚ್ಚುವುದಕ್ಕೆ ಐದು ಕೋಟಿ ರೂಪಾಯಿ ಹಣ ವ್ಯಯ ಮಾಡಿರುವುದನ್ನು ಪ್ರಶ್ನಿಸಿ, ಹೈಕೋರ್ಟಿಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ಮುಖ್ಯನಾಯಮೂರ್ತಿ  ಭಾಸ್ಕರ ಭಟ್ಟಾಚಾರ್ಯ ಮತ್ತು ನ್ಯಾಯಮೂರ್ತಿ  ಪರ್ಡಿವಾಲ ರವರನ್ನು ಒಳಗೊಂಡಿದ್ದ ದ್ವಿಸದಸ್ಯ ಪೀಠ, ಗುಜರಾತ್ ಸರ್ಕಾರದ ಲೋಕೊಪಯೋಗಿ ಇಲಾಖೆಯನ್ನು ಹಿಗ್ಗಾ ಮುಗ್ಗ ತರಾಟೆಗೆ ತೆಗೆದುಕೊಂಡಿತು. ಅಲ್ಲದೆ ಹದಗೆಟ್ಟಿರುವ ಅಹಮದಾಬಾದ್ ನಗರದ ರಸ್ತೆಗಳ ಕುರಿತು ತೀವ್ರ ಅತೃಪ್ತಿ ವ್ಯಕ್ತಪಡಿಸಿತು, ಗುಜರಾತಿನ ಅಭಿವೃದ್ಧಿಯೆಂಬುದು ಬರೀ ಲೊಳಲೊಟ್ಟೆ ಎಂಬುದಕ್ಕೆ ಇದಕ್ಕಿಂತ ಬೇರೇನು ಸಾಕ್ಷಿ ಬೇಕು?
ಗುಜರಾತಿನ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಮತ್ತು ಭಾವನಗರ್ ವಿಶ್ವ ವಿದ್ಯಾಲಯದ ಮಾಜಿ ಉಪಕುಲಪತಿಗಳಾದ  ಡಾ. ವಿದ್ಯುತ್ ಜೋಷಿಯವರು ಹೇಳಿದ “ ಮೋದಿ ಅವಧಿಗೆ ಮುನ್ನ ರಾಜ್ಯದ ಜಿ.ಡಿ.ಪಿ. ಬೆಳವಣಿಗೆ ಶೇಕಡ 16% ರಷ್ಟು ಇದ್ದದ್ದು, ಈಗ ಶೋಚನೀಯ ಮಟ್ಟಕ್ಕೆ ಕುಸಿದಿದೆ” ಎಂಬ ಮಾತುಗಳನ್ನು ಆಧಾರವಾಗಿಟ್ಟುಕೊಂಡು ಇತರೆ ರಾಜ್ಯಗಳ ಜಿ.ಡಿ.ಪಿ. ಬೆಳವಣಿಗೆ ಹೋಲಿಸಿದರೆ, ಗುಜರಾತಿನ ಸ್ಥಾನ ಐದನೆಯದಾಗಿದೆ. ಭಾರತದ ರಾಜ್ಯಗಳ ಪೈಕಿ  ಒಟ್ಟು 12 ಲಕ್ಷ 48 ಸಾವಿರ ಕೋಟಿ ಮೌಲ್ಯದ ಉತ್ಪಾದನೆಯಲ್ಲಿ ಮಹಾರಾಷ್ಟ ಪ್ರಥಮ ಸ್ಥಾನದಲ್ಲಿದ್ದು, 6 ಲಕ್ಷ, 84 ಸಾವಿರ ಕೋಟಿ ಮೌಲ್ಯದ ಉತ್ಪಾದನೆಯಲ್ಲಿ ಉತ್ತರ ಪ್ರದೇಶ ಎರಡನೇಯ ಸ್ಥಾನದಲ್ಲಿದೆ. ಆನಂತರ ಕ್ರಮವಾಗಿ ಆಂದ್ರಪ್ರದೇಶ ( 6ಲಕ್ಷ 55ಸಾವಿರ ಕೋಟಿ) ತಮಿಳುನಾಡು ( 6ಲಕ್ಷ,39ಸಾವಿರಕೋಟಿ) ಹಾಗೂ ಐದನೆಯ ಸ್ಥಾನದಲ್ಲಿ ಗುಜರಾತ್ ರಾಜ್ಯವಿದೆ,( 6ಲಕ್ಷ 12 ಸಾವಿರ ಕೋಟಿ) ಹನ್ನೊಂದನೆಯ ಪಂಚವಾರ್ಷಿಕ ಯೋಜನೆಯ ( 2007-2012) ವರದಿಯ ಪ್ರಕಾರ ಅಭಿವೃದ್ಧಿಯ ಬೆಳವಣಿಯ ಸೂಚ್ಯಂಕ ಈ ರೀತಿ ಇದೆ. ಬಿಹಾರ (11.4) ಮಹಾರಾಷ್ಟ್ರ (10.8) ತಮಿಳುನಾಡು ( 10.3) ಗುಜರಾತ್ ( 8.3)
ನ್ಯಾಷನಲ್ ಸ್ಯಾಂಪಲ್ ಸರ್ವೆ ಇದರ ವರದಿಯ ಪ್ರಕಾರ ಗುಜರಾತಿನಲ್ಲಿ ಕಾರ್ಮಿಕರ ಕೂಲಿದರ ( ನಗರ ಮತ್ತು ಗ್ರಾಮಗಳ ಒಟ್ಟು ಸರಾಸರಿ ಲೆಕ್ಕದಲ್ಲಿ) 145 ರೂಪಾಯಿ ಇದ್ದರೆ, ಕೇರಳದಲ್ಲಿ 310 ರುಪಾಯಿ ಇದೆ. ರಾಜಸ್ಥಾನದಲ್ಲಿ 174 ರುಪಾಯಿ, ಬಿಹಾರದಲ್ಲಿ 157 ರೂಪಾಯಿ ಇದ್ದು ರಾಷ್ಟ್ರದ ಸರಾಸರಿ ಕೂಲಿ ವೇತನ 170 ರೂಪಾಯಿಗಳಷ್ಟಿದೆ.
ಗುಜರಾತಿನಲ್ಲಿ ಮಲಹೊರುವ ಅನಿಷ್ಟ ಪದ್ಧತಿಯನ್ನು ತೊಡೆದು ಹಾಕಿದ್ದು ಶೇಕಡ ನೂರರಷ್ಟು ಅಭಿವೃದ್ಧಿ ಸಾಧಿಸಲಾಗಿದೆ ಎಂದು ಮೋದಿ ತಮ್ಮ ವೆಬ್ ಸೈಟ್ ನಲ್ಲಿ ಹೇಳಿಕೊಂಡಿದ್ದರು. ( 2004 ರಲ್ಲಿ) ಆದರೆ 2006 ರಲ್ಲಿ ಮುಂಬೈನ  ಟಾಟಾ ಸಮಾಜ ವಿಜ್ಞಾನಗಳ ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ 12 ಸಾವಿರ ಮಂದಿ ಮಲ ಹೊರುವವರು ತಮ್ಮ ಕಾಯಕದಲ್ಲಿ ನಿರತರಾಗಿದ್ದರು. 2011ರ ಭಾರತ ಮಾನವ ಅಭಿವೃದ್ಧಿಯ ವರದಿಯ ಪ್ರಕಾರ ಗುಜರಾತಿನಲ್ಲಿ 52 ಲಕ್ಷ ಕುಟುಮಬಗಳಿಗೆ ಶೌಚಾಲಯಗಳಿಲ್ಲ, 64 ಲಕ್ಷ ಕುಟುಂಬಗಳಿಗೆ ಒಳಚರಂಡಿ ವ್ಯವಸ್ಥೆಯಿಲ್ಲ ಮತ್ತು 18 ಸಾವಿರದ 321 ಅಂಗನವಾಡಿಗಳಿಗೆ ( ಅಂದರೆ, ಗುಜರಾತ್ ಅಂಗನವಾಡಿಗಳ ಸಂಖ್ಯೆಯ ಶೇಕಡ 37% ರಷ್ಟು) ಶೌಚಗೃಹಗಳಿಲ್ಲ. ಈಗಿನ ಭಾರತೀಯ ರಿಸರ್ವ್ ಬ್ಯಾಂಕ್ ಗೌರ್ನರ್ ಆಗಿರುವ ರಘುರಾಂ ರಾಜನ್ ಸಮಿತಿ ನೀಡಿರುವ ಅಭಿವೃದ್ಧಿಯ ಸೂಚ್ಯಂಕದ ವರದಿಯಲ್ಲಿ ಗುಜರಾತ್ ಸ್ಥಾನಮಾನ ಹನ್ನೆರೆಡನೇಯದು. (2000 ದ ಇಸವಿಯಲ್ಲಿ ಗುಜರಾತ್ ಅಭಿವೃದ್ಧಿಯ ಸೂಚ್ಯಂಕ 0,466 ಇದ್ದದ್ದು 2008 ರ ವೇಳೆಗೆ 0.527 ಸೂಚ್ಯಂಕಕ್ಕೆ ಕುಸಿದು ಹತ್ತರಿಂದ ಹನ್ನೊಂದನೇಯ ಸ್ಥಾನ ಅಲಂಕರಿಸಿತ್ತು.)


ಈ ದಿನ ಅಭಿವೃದ್ದಿ ಕುರಿತಂತೆ ಹಲವು ರೀತಿಯ ಮಾನದಂಡಗಳನ್ನು ಮತ್ತು ವಿಶ್ಲೇಷಣೆಯ ಮಾದರಿಗಳನ್ನು ಬಂಡವಾಳಶಾಹಿ ಜಗತ್ತಿನಿಂದ ಪ್ರೇರಿತವಾದ ಜಾಗತೀಕರಣ ನಮ್ಮ ಮುಂದೆ ಹರಡುತ್ತಿದೆ. ಅಭಿವೃದ್ಧಿ ಕುರಿತ ವಿವೇಚನೆಗೆ ಕೇವಲ ಆರ್ಥಿಕ ದೃಷ್ಟಿಕೋನ ಮಾತ್ರ ಸಾಲದು. ಇದರ ಜೊತೆ ಸಾಮಾಜಿಕ ನ್ಯಾಯದ ಮಾನದಂಡಗಳನ್ನು ನಾವು ಅಳವಡಿಸಿಕೊಳ್ಳಬೇಕಿದೆ. ಇದನ್ನು ಅಭಿವೃದ್ದಿ ಕುರಿತಂತೆ 20 ನೇ ಶತಮಾನದಲ್ಲಿ ಜಗತ್ತಿಗೆ ಮನವರಿಕೆ ಮಾಡಿಕೊಟ್ಟವರು ನಮ್ಮವರೇ ಆದ ನೊಬಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮಾರ್ತ್ಯಸೇನ್. ( ಅವರ ಐಡಿಯ ಆಫ್ ಜಸ್ಟೀಸ್ ಕೃತಿಯನ್ನು ಆಸಕ್ತರು ಗಮನಿಸಬಹುದು)
ಯಾವುದೇ ರಾಜ್ಯದ ಅಥವಾ ರಾಷ್ಟ್ರದ ಸಮಗ್ರ ಅಭಿವೃದ್ದಿಗೆ ಸಂಪತ್ತು ಕೆಳಗಿನಿಂದ ಮೇಲ್ಮುಖವಾಗಿ ಚಲಿಸಬೇಕು ಎಂಬುದು ಅಮಾರ್ತ್ಯ ಸೇನರ ವಾದ. ಅಂದರೆ, ಕೈಗಾರಿಕೆ, ರಸ್ತೆ, ಉದ್ಯೋಗ ಸೃಷ್ಟಿ ಇವುಗಳ ಜೊತೆಗೆ ಜನಸಾಮಾನ್ಯರಿಗೆ ವಸತಿ, ಆರೋಗ್ಯ, ಶಿಕ್ಷಣ ಇವೆಲ್ಲವು ಸುಲಭವಾಗಿ ದೊರಕುವಂತಿರಬೇಕು. ಇದರಿಂದಾಗಿ ಅವರ ಜೀವನಮಟ್ಟ ಸುಧಾರಣೆಯಾಗಿ ಅವರಿಗೆ  ಕೊಳ್ಳುವ ಶಕ್ತಿ ಲಭಿಸುತ್ತದೆ. ಈ ಮೂಲಕ ಆರ್ಥಿಕ ಚಟುವಟಿಕೆ ಗರಿಗೆದರುತ್ತದೆ ಎಂಬುದು ಅಮಾರ್ತ್ಯ ಸೇನರ ನಂಬಿಕೆ. ಇದಕ್ಕೆ ವಿರುಧ್ದವಾಗಿ ಬಂಡವಾಳಶಾಹಿ ಜಗತ್ತು ಮತ್ತೊಬ್ಬ ಅರ್ಥಶಾಸ್ತ್ರಜ್ಞ ಹಾಗೂ ಭಾರತದವರೇ ಆದ ಈಗ ಅಮೇರಿಕಾದಲ್ಲಿ ನೆಲೆಸಿರುವ ಜಗದೀಶ್ ಚಂದ್ರ ಭಗವತಿ ಮೂಲಕ ಮತ್ತೊಂದು ವಾದವನ್ನು ನಮ್ಮ ಮುಂದಿಟ್ಟಿದೆ. ಭಗವತಿಯವರ ವಾದದ ಪ್ರಕಾರ, ಸರ್ಕಾರಗಳು, ಉದ್ಯಮಿಗಳಿಗೆ ವಿಶೇಷ ಸವಲತ್ತು ಅಂದರೆ, ರಿಯಾಯತಿ ದರದಲ್ಲಿ ಭೂಮಿ, ನೀರು, ವಿದ್ಯುತ್ ನೀಡಿ, ಅವರುಗಳು ಕೈಗಾರಿಕೆ ಸ್ಥಾಪಿಸಲು ಉತ್ತೇಜಿಸಬೇಕು. ಇದರಿಂದ ಉದ್ಯೊಗಗಳು ಸೃಷ್ಟಿಯಾಗುತ್ತವೆ. ಲಾಭ ಪಡೆದ ಕೈಗಾರಿಕೋದ್ಯಮಿಗಳು ಬಂದ ಲಾಭವನ್ನು ಮತ್ತೇ ಉದ್ಯಮದಲ್ಲಿ ತೊಡಗಿಸುತ್ತಾರೆ. ಹೀಗೆ ಸಂಪತ್ತು ಮೇಲಿಂದ ಕೆಳಮುಖವಾಗಿ ಚಲಿಸಿದಾಗ ಅಭಿವೃದ್ಧಿಯಾಗುತ್ತದೆ. ಇದು ಭಗವತಿಯವರ ನಂಬಿಕೆ.


ಜಗದೀಶ್ ಚಂದ್ರ ಭಗವತಿಯವರ ಅಭಿವೃದ್ದಿ ಕುರಿತ ವಾದವನ್ನು ನಾವು ಒಪ್ಪುವುದಾದರೆ, 2008 ರಲ್ಲಿ ನೂರು ಕೋಟಿ ಡಾಲರ್ ( ಡಾಲರ್ ಮೌಲ್ಯವನ್ನು 60 ರುಪಾಯಿ ದರದಲ್ಲಿ ಲೆಕ್ಕ ಹಾಕಿದರೆ, 5 ಸಾವಿರ ಕೋಟಿ ಎಂದುಕೊಳ್ಳೋಣ) ಆಸ್ತಿ ಹೊಂದಿದ್ದ ಭಾರತದ ಶ್ರೀಮಂತರ ಕೇವಲ ನಾಲ್ಕು ಇದ್ದದ್ದು, 2011 ರ ವೇಳೆಗೆ 247 ಕ್ಕೆ ಏರಿಕೆಯಾಗಿದೆ. ಈ ಸಿರಿವಂತರು ತಾವು ಸಂಪಾದಿಸಿದ ಲಾಭವನ್ನು ಬಂಡವಾಳ ರೂಪದಲ್ಲಿ ಎಲ್ಲಿ ತೊಡಗಿಸಿದ್ದಾರೆ.?ತಾವು ಮಂಡಿಸಿರುವ ಅಭಿವೃದ್ಧಿಯ ಸಿದ್ಧಾಂತ ಭಾರತದಲ್ಲಿ ಹೇಗೆ ಮಕಾಡೆ ಮಲಗಿದೆ ಎಂಬುದನ್ನು ಬಗವತಿಯವರು ಒಮ್ಮೆ ಭಾರತಕ್ಕೆ ಬಂದು ನೋಡುವುದು ಒಳಿತು.

ಬುಧವಾರ, ಮಾರ್ಚ್ 26, 2014

ನರೇಂದ್ರಮೋದಿ ಮತ್ತು ಕಾರ್ಪೊರೇಟ್ ಜಗತ್ತು




ಗುಜರಾತಿನ ಮೂರು ಸಾರ್ವತ್ರಿಕ ಚುನಾವಣೆಯಲ್ಲಿ ನರೇಂದ್ರಮೋದಿ ಜಯಗಳಿಸಿ ಮುಖ್ಯ ಮಂತ್ರಿ ಗದ್ದುಗೆ ಏರಿರುವುದು ಅವರ ಭಕ್ತರ ಪಾಲಿಗೆ ರೋಮಾಂಚಕಾರಿಯಾದ ವಿಷಯ ನಿಜ ಆದರೆ, ಭಾರತದ ಇತಿಹಾಸದಲ್ಲಿ ಪಶ್ಚಿಮ ಬಂಗಾಳದ ಜ್ಯೋತಿ ಬಸುರವರು ಆರು ಬಾರಿ ಚುನಾವಣೆಯಲ್ಲಿ ತಮ್ಮ ಸಿ.ಪಿ.ಐ.(ಎಂ) ಪಕ್ಷವನ್ನು ಮುನ್ನಡೆಸಿ ಸತತ 23 ವರ್ಷಗಳ ಕಾಲ ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿಯಾಗಿದ್ದರು. ಅಸ್ಸಾಮಿನ ತರುಣ್ ಗೋಗಯ್ ನಾಲ್ಕು ಬಾರಿ ಮತ್ತು ಅದೇ ಬಿ.ಜೆ.ಪಿ. ಪಕ್ಷದ ವತಿಯಿಂದ ಮದ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಛತ್ತೀಸ್ ಗಡದಿಂದ ಡಾ.ರಮಣ್ ಸಿಂಗ್ ತಲಾ ಮೂರು ಬಾರಿ ಮುಖ್ಯ ಮಂತ್ರಿಯಾಗಿ ಮುಂದುವರೆದಿದ್ದಾರೆ, ಇವರ ಜೊತೆಗೆ ಮಣಿಪುರದಲ್ಲಿ ಮಣಿಸರ್ಕಾರ್ ಎಂಬ ಸಜ್ಜನ ಹಾಗೂ ಅತ್ಯಂತ ಸರಳ ವ್ಯಕ್ತಿಯೊಬ್ಬರು ನಾಲ್ಕು ಬಾರಿ ಸಿ.ಪಿ.ಐ.(ಎಂ.) ಸರ್ಕಾರದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೆಹಲಿಯ ಶೀಲಾದಿಕ್ಷೀತ್ ಕೂಡ ಮೂರು ಬಾರಿ ಸತತವಾಗಿ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿದ್ದವರು.
ಮೋದಿಯವರ ಗುಜರಾತ್ ರಾಜ್ಯದ ಇತಿಹಾಸದಲ್ಲಿ ಮಾಧವಸಿಂಗ್ ಸೋಳಂಕಿ ನಾಲ್ಕು ಬಾರಿ ಮುಖ್ಯ ಮಂತ್ರಿಯಾಗಿ ಸುಧೀರ್ಘ ಸೇವೆ ಸಲ್ಲಿಸಿದ ಖ್ಯಾತಿಗೆ ಪಾತ್ರರಾಗಿದ್ದಾರೆ. ಭಾರತದ ರಾಜಕೀಯ ಇತಿಹಾಸದಲ್ಲಿ ಇಂತಹ ದಾಖಲೆಗಳಿದ್ದರೂ ಸಹ  ತಮ್ಮ ಚುನಾವಣೆಯ ಗೆಲುವುಗಳನ್ನು ಶತಮಾನದ ಸಾಧನೆ ಯೆಂಬಂತೆ ಪ್ರತಿಬಿಂಬಿಸಿಕೊಳ್ಳುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಸಂಗತಿ.
ಇಪ್ಪತ್ತೊಂದನೆ ಶತಮಾನದ ಭಾರತದ ಯುಗಪುರುಷ ಎಂಬಂತೆ ಸ್ವಯಂ ಬಿಂಬಿಸಿಕೊಳ್ಳುತ್ತಿರುವ ನರೇಂದ್ರಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗುವ ಮುನ್ನ ಇದ್ದ ಅಲ್ಲಿನ ಬೆಳವಣಿಗೆ ಮತ್ತು ಮುಖ್ಯಮಂತ್ರಿಯಾದ ನಂತರ ಆಗಿರುವ ಬೆಳವಣಿಯ ವರದಿ ಈ ಕೆಳಗಿನಂತಿದೆ. ಗಮನಿಸಿ.
ವಿಷಯ                       ಮೋದಿ ಆಳ್ವಿಕೆಗೆ ಮುನ್ನ                ಮೋದಿ ಆಳ್ವಿಕೆಯಲ್ಲಿ
ಮಾನವ ಅಭಿವೃದ್ಧಿ            10 ನೇ ಸ್ಥಾನ (ಭಾರತದಲ್ಲಿ)           11 ನೇ ಸ್ಥಾನ ( 2008 ರಲ್ಲಿ)
ಸಾಕ್ಷರತೆ                      17 ನೇ ಸ್ಥಾನ (20001)                 18 ನೇ ಸ್ಥಾನ ( 2011)
ಕುಡಿಯುವ ನೀರಿನ ಲಭ್ಯತೆ   14 ನೇ ಸ್ಥಾನ                            15ನೇ ಸ್ಥಾನ (2011)
ಕೃಷಿರಂಗದ ಬೆಳವಣಿಗೆ        ಶೇಕಡ 10%                             ಶೇಕಡ 4 %   ( 2011)
ಆರೋಗ್ಯಕ್ಕೆ ವೆಚ್ಚ              6ನೇ ಸ್ಥಾನ (ಭಾರತದಲ್ಲಿ)              17 ನೇ ಸ್ಥಾನ ( 2011ರಲ್ಲಿ)
ಕೃಷಿ ಉತ್ಪಾದನೆ               ಶೇಕಡ 4.7 %                           ಶೆಕಡ 3.4%
ಶಿಕ್ಷಣಕ್ಕೆ ಮಾಡಿದ ವೆಚ್ಚ        6ನೇ ಸ್ಥಾನ (ಭಾರತದಲ್ಲಿ)               16 ನೇ ಸ್ಥಾನ ( 2011ರಲ್ಲಿ)

ಗುಜರಾತಿನ ಬೆಳವಣಿಗೆಯ ಈ ಅಂಕಿ ಅಂಶಗಳು ಮೋದಿಯ ವಿರೋಧಿಗಳು ಸೃಷ್ಟಿ ಮಾಡಿದ ಅಂಕಿ ಅಂಶಗಳಲ್ಲ ಬದಲಾಗಿ ಕಳೆದ ಒಂದು ದಶಕದ ಭಾರತದ ವಿವಿಧ ಇಲಾಖೆಯ ಹಾಗೂ ಸಂಸ್ಥೆಗಳ ವರದಿಗಳು ಹೇಳಿರುವ ಅಂಕಿ ಅಂಶಗಳು.

ಇಂತಹ ವಿಫಲತೆಯನ್ನು ಬೆನ್ನಿಗಿಟ್ಟುಕೊಂಡು, ಕಾರ್ಪೊರೇಟ್ ಸಂಸ್ಥೆಗಳ ಲಾಭಿಯ ಮೂಲಕ ಕಳೆದ ಒಂದು ವರ್ಷದಲ್ಲಿ ಜಾಹಿರಾತಿಗಾಗಿ ಸಾವಿರಾರು ಕೋಟಿ ರೂಪಾಯಿ ಹಣವನ್ನು ಮೋದಿ ವ್ಯಯ ಮಾಡಿದ್ದಾರೆ. ಗುಜರಾತಿನ ಅಭಿವೃದ್ಧಿ ಕುರಿತು ದೇಶಾದ್ಯಂತ ಪತ್ರಿಕೆಗಳಿಗೆ ಪೂರ್ಣ ಮುಖಪುಟದ ಜಾಹಿರಾತು ನೀಡುವ ಅವಶ್ಯಕತೆ ಏನಿತ್ತು? ಕಳದ ವರ್ಷ ಗೋವಾದಲ್ಲಿ ನಡೆದ ಬಿ.ಜೆ.ಪಿ. ಕಾರ್ಯಕಾರಿಣಿ ಸಭೆಯಲ್ಲಿ ಬಿ.ಜೆ.ಪಿ. ಪ್ರಚಾರ ಸಮಿತಿಯ ಅಧ್ಯಕ್ಷರಾದ ನಂತರ ಸೂರಜ್ ಕುಂಡ್ ನಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ಮೇಲೆ ನರೇಂದ್ರ ಮೋದಿಯವರು, ದೃಶ್ಯ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಜಾಹಿರಾತುಗಳ ಮತ್ತು ಮುದ್ರಣ ಮಾಧ್ಯಮಗಳ ಜಾಹಿರಾತಿನ ವೆಚ್ಚ ಎಷ್ಟು?  ಗುಜರಾತಿನ ಜನ ನೀಡಿದ ತೆರಿಗೆ ಹಣವನ್ನು ಹೀಗೆ ತನ್ನ ವೈಯಕ್ತಿಕ ಹಿತಾಸಕ್ತಿ ಮತ್ತು ಸಾಧನೆಗೆ ಖರ್ಚು ಮಾಡುವ ನರೇಂದ್ರ ಮೋದಿ, ಇಟಲಿ ಮೂಲದ ಕನ್ನಡಕ, ಸ್ವಿಟ್ಜರ್ ಲ್ಯಾಂಡಿನ ಗಡಿಯಾರ, ಇಂಗ್ಲೆಂಡಿನ ಹತ್ತು ಸಾವಿರ ಮೌಲ್ಯದ ಪೆನ್ ಇಟ್ಟುಕೊಂಡು ಓಡಾಡುತ್ತಾ ರಾಷ್ರಪ್ರೇಮದ ಬಗ್ಗೆ ಸ್ವದೇಶಿ ಜಾಗರಣ್ ಕುರಿತು ಮಾತನಾಡುತ್ತಾರೆ.  ( ಗಮನಿಸಿ-26-3-14 ರ ಕನ್ನಡಪ್ರಭದ ಬೈಟು ಕಾಫಿ ವಿಭಾಗದಲ್ಲಿ ಮೋದಿ ಉಡುಪು ಮತ್ತು ಹವ್ಯಾಸಗಳ ಕುರಿತು ಲೇಖನ ಪ್ರಕಟವಾಗಿದೆ)
ದೇಶದ ಪ್ರಮುಖ ಮಾಧ್ಯಮ ಸಂಸ್ಥೆಗಳು ಈಗಾಗಲೇ ಕಾರ್ಪೊರೇಟ್ ಕುಳಗಳ ಹಿಡಿತಲ್ಲಿರುವುದರಿಂದ ನರೆಂದ್ರಮೋದಿಯವರು ಅವುಗಳ ಮೂಲಕ ತಮ್ಮ ಇಮೇಜ್ ವೃದ್ಧಿಸಿಕೊಳ್ಳುತ್ತಿರುವ ಜೊತೆ ಯಾವುದೇ ರೀತಿಯ ವಿರೋಧಿ ನೆಲೆಯ ಲೇಖನಗಳು ಬಾರದಂತೆ ನೋಡಿಕೊಳ್ಳುತ್ತಿದ್ದಾರೆ. ಈಗಾಗಲೇ ಮೊದಿಯ ವಿರುದ್ಧ ಧ್ವನಿ ಎತ್ತಿದ ಸಂಪಾದಕರು, ಸುದ್ಧಿ ವಿಶ್ಲೇಷಕರು ಮಾಧ್ಯಮ ಸಂಸ್ಥೆಗಳಲ್ಲಿ ತಮ್ಮ ಹುದ್ದೆ ಕಳೆದುಕೊಂಡಿದ್ದಾರೆ. ಈ ಕುರಿತು ಔಟ್ ಲುಕ್ ವಾರಪತ್ರಿಕೆ ಲೇಖನ ಪ್ರಕಟವಾಗಿದ್ದು ಹುದ್ದೆ ಕಳೆದು ಕೊಂಡ ಪತ್ರಕರ್ತರ ವಿವರಗಳಿವೆ.( ಪೆಬ್ರವರಿ 3 2014 ರ ಔಟ್ ಲುಕ್ ಇಂಗ್ಲೀಷ್ ವಾರಪತ್ರಿಕೆ ಗಮನಿಸಿ)
ಮೋದಿ ನೀಡುವ ಜಾಹಿರಾತಿಗಾಗಿ ಮಾಧ್ಯಮಗಳ ಭಟ್ಟಂಗಿತನ ಯಾವ ಹಂತ ತಲುಪಿದೆ ಎಂದರೆ, ಕಳೆದ ಅಕ್ಟೋಬರ್ 27 ರಂದು ಹಿಂದಿ ಭಾಷೆಯ “ದಿವ್ಯ ಬಾಸ್ಕರ”  ಎಂಬ ದಿನಪತ್ರಿಕೆ “ಸರ್ದಾರ್ ವಲ್ಲಬಾಯ್ ಪಟೇಲರ ಅಂತ್ಯಕ್ರಿಯೆಗೆ ನೆಹರೂ ಭಾಗವಹಿಸಿರಲಿಲ್ಲ’ ಎಂಬ ಮುಖಪುಟದ ಲೇಖನವನ್ನು ದಪ್ಪ ಶಿರೋನಾಮೆಯಡಿ  ಪ್ರಕಟಿಸಿತ್ತು. ಪ್ರಜ್ಞಾವಂತ ಓದುಗರು ಪತ್ರಿಕೆಯನ್ನು ತರಾಟೆಗೆ ತೆಗೆದುಕೊಂಡಾಗ ಎರಡು ದಿನಗಳ ನಂತರ ಪತ್ರಿಕೆಯ ಮೂಲೆಯೊಂದರಲ್ಲಿ ತನ್ನ ತಪ್ಪಿಗಾಗಿ ಸಂಪಾದಕ ಮಂಡಳಿ ವಿಷಾದ ವ್ಯಕ್ತಪಡಿಸಿತು. ಸರ್ದಾರ್ ಪ್ರತಿಮೆಗಾಗಿ ಉಕ್ಕು ಮತ್ತು ಕಬ್ಬಿಣ ಸಂಗ್ರಹಿಸುವ ಮೋದಿಯವರ ಪೂರ್ಣ ಪುಟದ ಬಣ್ಣದ ಜಾಹಿರಾತಿನ ಆಸೆಗಾಗಿ ಪತ್ರಿಕೆ ಓದುಗರೆದುರು ಹೀಗೆ  ಬೆತ್ತಲಾಯಿತು.
ಈ ಹಿಂದೆ  ಅಂದರೆ, 2003 ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ವರ್ಲ್ಡ್ ಗ್ರೆ ಎಂಬ ಜಾಗತಿಕ ಮಟ್ಟದ ಜಾಹಿರಾತು ಕಂಪನಿಯ ಮೂಲಕ  800 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಭಾರತ ಬೆಳಗುತ್ತಿದೆ ( India Shining) ಎಂಬ ಜಾಹಿರಾತು ಬಿಡುಗಡೆ ಮಾಡಿದ್ದರು. ಆದರೆ 2004ರ ಚುನಾವಣೆಯಲ್ಲಿ  ಅವರ ನೇತೃತ್ವದ ಎನ್.ಡಿ.ಎ. ಸರ್ಕಾರ ಭಾರತದ ಮತದಾರರ ಮನಗೆಲ್ಲುವಲ್ಲಿ ವಿಫಲವಾಗಿ ಮಕಾಡೆ ಮಲಗಿತು. ಈ ಇತಿಹಾಸವನ್ನು ಮೋದಿಯವರು ಒಮ್ಮೆ ಓದುವುದು ಒಳಿತು. ಹಾಗಾದರೆ, ಗುಜರಾತಿನಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲವೆ? ಹೌದು ಆಗಿದೆ. ಆದರೆ, ಅದು  ಬಂಡವಾಳಶಾಹಿಗಳ ಜಗತ್ತು ಮಾತ್ರ.
ನಮ್ಮ ಉತ್ತರ ಕರ್ನಾಟಕದ ಪ್ರಸಿದ್ಧ ರಂಗ ಕಲಾವಿದ ರಾಜು ತಾಳಿಕೋಟೆಯ ಕಂಪನಿಯ ನಾಟಕವೊಂದರಲ್ಲಿ ಹಾಸ್ಯ ಪಾತ್ರಧಾರಿಯೊಬ್ಬನ ನಾಟಕದ ಡೈಲಾಗ್ ಈ ರೀತಿ ಇದೆ. “ ನೋಡ್ರಿ ಯವ್ವಾ ನಾನು ಹೆಂಗಸರ ಕೂಡಿ (ಜೊತೆ) ಕುಸ್ತಿ ಹಿಡಿಯಕ ಹಿಂದು ಮುಂದು ನೋಡಾಂಗಿಲ್ಲ, ಯಾಕಂದ್ರ ನನಗ  ಕೆಳಕ್ಕೆ ಬಿದ್ರೂ ಲಾಭ ಆಗತೈತಿ, ಮೇಲು ಬಿದ್ದರೂ ಲಾಭ ಆಗತೈತಿ” ಇದೇ ಸೂತ್ರವನ್ನು ಅಳವಡಿಸಿಕೊಂಡಿರುವ ನಮ್ಮ ಭಾರತದ ಟಾಟಾ, ಅಂಬಾನಿ, ಅದಾನಿ ಮುಂತಾದವರು ಗುಜರಾತಿನ ಮೋದಿ ಸಾಮ್ರಾಜ್ಯಕ್ಕೆ ಲಗ್ಗೆ ಇಟ್ಟಿದ್ದಾರೆ. ಗುಜರಾತಿನಲ್ಲಿ ಉದ್ದಿಮೆ ಸ್ಥಾಪನೆಯಾಗಲಿ, ಅಥವಾ ಬಿಡಲಿ, ಬಿಸಾಡುವ ಬೆಲೆಗೆ ಸಿಗುವ ಭೂಮಿ, ಪುಕ್ಕಟೆ ನೀರು, ವಿದ್ಯುತ್ ಅವರಿಗೆ ಮುಖ್ಯವಾಗಿದೆ. ಇದರ ಪರಿಣಾಮವಾಗಿ ಗುಜರಾತಿನ ರೈತರ ಫಲವತ್ತಾದ ಭೂಮಿ ಗಳ ಮೇಲೆ ಬಂಡವಾಳ ಶಾಹಿ ಸಾಮ್ರಾಜ್ಯವೊಂದು ತಲೆ ಎತ್ತಿದೆ. ಇದಕ್ಕೆ ಗುಜರಾತಿನ ಜನ ತೆತ್ತಿರುವ ಬೆಲೆ ಮಾತ್ರ ಅಪಾರವಾದುದು. ಈ ಕುರಿತ ಕೆಲವು ವರದಿಗಳು ಹಾಗೂ  ಮೋದಿಯ ಅಧ್ವಾನಗಳು ಈ ಕೆಳಗಿನಂತಿವೆ…


2008 ರಲ್ಲಿ ಟಾಟಾ ಕಂಪನಿಯು ಪಶ್ಚಿಮ ಬಂಗಾಳದ ಸಿಂಗೂರ್ ಎಂಬಲ್ಲಿ ನ್ಯಾನೊ ಕಾರು ತಯಾರಿಕಾ ಘಟಕಕ್ಕೆ ರಿಯಾಯಿತಿ ದರದಲ್ಲಿ ಭೂಮಿ, ಹಾಗೂ ಅಲ್ಲಿನ ಸರ್ಕಾರದಿಂದ ಬಡ್ಡಿರಹಿತ ಸಾಲ ಮತ್ತು  ಇತರೆ ಸಾಲವನ್ನು ಪಡೆದಾಗ, ಅಲ್ಲಿನ ಜನರ ಆಕ್ರೋಶಕ್ಕೆ ಗುರಿಯಾಯಿತು.   ಅಂತಿಮವಾಗಿ ಟಾಟಾ ಕಂಪನಿ ಅಲ್ಲಿಂದ ಕಾಲ್ತೆಗೆಯಿತು. ಇಂತಹ ಅವಕಾಶಕ್ಕಾಗಿ ಕಾದಿದ್ದ ನರೇಂದ್ರ ಮೋದಿಯವರು ತಾನು ಮತ್ತು ತನ್ನ ಸರ್ಕಾರ ಉದ್ಯಮಸ್ನೇಹಿ ಎಂಬುದನ್ನು ತೋರ್ಪಡಿಸಿಕೊಳ್ಳಲು 2009ರಲ್ಲಿ ಗುಜರಾತಿಗೆ ಟಾಟಾ ಕಂಪನಿಯನ್ನು ಆಹ್ವಾನಿಸಿದರು. ಅಹಮದಾಬಾದ್ ಜಿಲ್ಲೆಯ ಸನದ್ ಎಂಬಲ್ಲಿ 725 ಎಕರೆ ಉತ್ಪಾದನಾ ಘಟಕಕ್ಕೆ ಮತ್ತು ಇತರೆ ವ್ಯವಸ್ಥೆಗೆ( ಕಾರ್ಮಿಕರ ಟೌನ್ ಶಿಪ್) 375 ಒಟ್ಟು 1100 ಎಕರೆ ಪ್ರದೇಶವನ್ನು ಕೇವಲ 400 ಕೋಟಿ 65 ಲಕ್ಷಕ್ಕೆ ಎಂಟು ವರ್ಷಗಳ ಅವಧಿಯಲ್ಲಿ ಕಂತಿನ ರೂಪದಲ್ಲಿ ಪಾವತಿಸುವ ಷರತ್ತಿನಡಿ ನೀಡಿದರು. ಅಲ್ಲದೆ 9,750 ಕೋಟಿ ರುಪಾಯಿ ಸಾಲವನ್ನು 20 ವರ್ಷದ ಅವಧಿಗೆ ವಾರ್ಷಿಕವಾಗಿ ಒಂದು ಕೋಟಿ ರೂಪಾಯಿಗೆ  ಕೇವಲ ನೂರು ರೂಪಾಯಿ ಬಡ್ಡಿದರದಲ್ಲಿ ನೀಡಿದರು.  ಸಿಂಗೂರ್ ನಿಂದ ಯಂತ್ರ ಸಾಮಾಗ್ರಿಗಳನ್ನು ಸಾಗಿಸಲು 700 ಕೋಟಿ ಹಣ ನೀಡಿದ್ದಲ್ಲದೆ, ರಿಯಾಯಿತಿ ದರದಲ್ಲಿ ವಿದ್ಯುತ್ ಮತ್ತು ನೀರು ಒದಗಿಸಿದರು.
ತಿಂಗಳಿಗೆ 30 ಸಾವಿರ ನ್ಯಾನೊ ಕಾರುಗಳು ಉತ್ಪಾದನೆಯಾಗುತ್ತವೆ ಮತ್ತು ಸಾವಿರಾರು ಕುಟುಂಬಗಳಿಗೆ ಉದ್ಯೋಗ ಸಿಗಲಿದೆ ಎಂದು ರತನ್ ಟಾಟ ಘೊಷಿಸಿದ್ದರು. ಆದರೆ, ಇತ್ತೀಚೆಗೆ ನ್ಯಾನೊ ಕಾರುಗಳಿಗೆ ಬೇಡಿಕೆ ಇಲ್ಲವಾದ ಪರಿಣಾಮ ತಿಂಗಳಿಗೆ  ಕೇವಲ 2400 ಕಾರುಗಳು ಮಾತ್ರ ತಯಾರಾಗುತ್ತಿವೆ. ಅವುಗಳಿಗೂ ಸಹ ಬೇಡಿಕೆ ಇಲ್ಲವಾಗಿ ಮುಂದಿನ ದಿನಗಳಲ್ಲಿ ನಾವು ಈ ಕಾರುಗಳನ್ನು ಮಕ್ಕಳ ಆಟಿಕೆ ಸಾಮಾನು ಅಂಗಡಿಗಳಲ್ಲಿ ಕಾಣಬಹುದು. ಇಂತಹ ಒಂದು ವಿಫಲ ಉದ್ದಿಮೆಗಾಗಿ ಗುಜರಾತ್ ಸರ್ಕಾರ ಕಳೆದುಕೊಂಡಿದ್ದು ಬರೋಬ್ಬರಿ 30 ಸಾವಿರ ಕೋಟಿ ರೂಪಾಯಿಗಳು.
ಇದು ನಷ್ಟದ ಕತೆಯಾದರೆ, ಮತ್ತೊಂದು ಕಂಪನಿ ಅದಾನಿ ಗ್ರೂಪ್ ಗೆ ಮೋದಿ ಮಾಡಿಕೊಟ್ಟಿರುವ ಸವಲತ್ತುಗಳು ಎಂತಹವರನ್ನು ದಂಗು ಬಡಿಸುತ್ತವೆ.


ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಗಾಗಿ, ಗುಜರಾತಿನಲ್ಲಿ ಒಂದು ಚದುರ ಮೀಟರ್ ಅಂದರೆ ಮೂರು ಚದುರ ಅಡಿಯ ಭೂಮಿಯನ್ನು ಒಂದು ರೂಪಾಯಿನಿಂದ ಮುವತ್ತೆರೆಡು ರೂಪಾಯಿ ಬೆಲೆಯಲ್ಲಿ ವಿದ್ಯುತ್ ಘಟಕ ಮತ್ತು ಮುಂಡ್ರಾ ಎಂಬಲ್ಲಿ ಖಾಸಾಗಿ ಬಂದರು ಸ್ಥಾಪನೆಗೆ ನೀಡಲಾಗಿದೆ. 2011 ಮತ್ತು 2012 ರಲ್ಲಿ ಈ ಕಂಪನಿಯಿಂದ ಮೋದಿಯ ಸರ್ಕಾರ ಪ್ರತಿ ಯೂನಿಟ್ ಗೆ 63 ಪೈಸೆ ಹೆಚ್ಚಿನ ದರ ನೀಡಿ 20 ದಶಲಕ್ಷ್ ಯೂನಿಟ್ ಖರೀದಿಸಿದ ಫಲವಾಗಿ ಸರ್ಕಾರದ ಬೊಕ್ಕಸಕ್ಕೆ 1347 ಕೋಟಿ ರೂಪಾಯಿ ನಷ್ಟು ನಷ್ಟ ಉಂಟಾಗಿದೆ ಎಂದು ಸಿ.ಎ.ಜಿ. (Controler and Auditor General of India) ವರದಿಯಲ್ಲಿ ದಾಖಲಾಗಿದೆ. 2002 ರಲ್ಲಿ ಕೇವಲ ಮೂರು ಸಾವಿರ ಕೋಟಿ ರೂಪಾಯಿ ಒಡೆತನದ ಅದಾನಿ ಗ್ರೂಪ್ ಸಂಸ್ಥೆಯ ಆಸ್ತಿ 2013 ರ ವೇಳೆಗೆ 47 ಸಾವಿರ ಕೋಟಿ ರೂಪಾಯಿ ತಲುಪಿದೆ. ಈ ದಿನ ಮೋದಿಯ ಪ್ರಚಾರದ  ವೆಚ್ಚವನ್ನು ಈ ಕಂಪನಿಯು ಭರಿಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಮೇರಿಕಾದ ಅನಿವಾಸಿ ಭಾರತೀಯರ ಜೊತೆ ಮೋದಿ ನಡೆಸಲು ಉದ್ದೇಶಿಸಿದ್ದ ವಿಡಿಯೋ ಕಾನ್ಪರೆನ್ಸ್ ಸಮಾವೇಶಕ್ಕೆ ಅದಾನಿ ಕಂಪನಿ ಪ್ರಾಯೊಜಕತ್ವ ವಹಿಸಿರುವುದು ಪತ್ತೆಯಾದ, ನಂತರ ನಡೆದ ಪ್ರತಿಭಟನೆಯ ಫಲವಾಗಿ ಕಾರ್ಯಕ್ರಮ ರದ್ದಾಯಿತು.

ಇದೀಗ ದೆಹಲಿ- ಮುಂಬೈ ನಡುವಿನ ಇಂಡಸ್ಟ್ರೀಯಲ್ ಕಾರಿಡಾರ್ ಮಾರ್ಗ ಗುಜರಾತನ್ನು ಹಾಯ್ದು ಹೋಗುವುದರಿಂದ ಅಹಮದಾಬಾದಿನಿಂದ ನೂರು ಕಿಲೊಮೀಟರ್ ದೂರದಲ್ಲಿ ದೊಲಿರಾ ಎಂಬ ಪ್ರದೇಶದಲ್ಲಿ 925 ಚದುರ ಕಿ.ಮಿ. ವ್ಯಾಪ್ತಿಯ 22 ಹಳ್ಳಿಗಳ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ. ( ವಿವರಗಳಿಗೆ ನೋಡಿ- ಸಿಮೆಂಟ್ ಪಾರ್ ಗ್ರೈನ್? ಲೇಖನ- ಫ್ರಂಟ್ ಲೈನ್ ಪಾಕ್ಷಿಕ ಏಪ್ರಿಲ್ 4-2014) ನರ್ಮದಾ ನದಿಯ ಅಚ್ಚುಕಟ್ಟು ಪ್ರದೇಶಕ್ಕೆ ಓಳಪಡುವ ಈ ಪ್ರದೇಶದ 9.225 ಹೆಕ್ಟೇರ್ ಪ್ರದೇಶದಲ್ಲಿ ರೈತರು ಜೋಳ, ಗೋಧಿ, ಸಾಸಿವೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇತ್ತೀಚೆಗೆ ರೈತರ ಪ್ರತಿಭಟನೆ ತೀವ್ರಗೊಂಡ ಪರಿಣಾಮವಾಗಿ ಗುಜರಾತ್ ಸರ್ಕಾರ ರೈತರಿಗೆ ಹೊಸ ಆದೇಶ ನೀಡಿದೆ. ಸರ್ಕಾರ ರೈತರ ಭೂಮಿಯನ್ನು ವಶಪಡಿಸಿಕೊಳ್ಳುವುದಿಲ್ಲ. ಬದಲಾಗಿ ತಮ್ಮ ಬಳಿ ಇರುವ ಅರ್ಧದಷ್ಟು ಭೂಮಿಯನ್ನು ರೈತರು ತಾವಾಗಿಯೇ ಸರ್ಕಾರಕ್ಕೆ ಒಪ್ಪಿಸಬೇಕು.

ಇಂತಹ ಅಭದ್ರತೆಯ ನಡುವೆ ಗುಜರಾತ್ ರಾಜ್ಯದಲ್ಲಿ ರೈತರ ಮತ್ತು ಜನಸಾಮಾನ್ಯರ ಬದುಕು ದುಸ್ತರವಾಗಿದ್ದು ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ನ್ಯಾಷನಲ್ ಕ್ರೈಮ್ಸ್ ರೆಕಾರ್ಡ್ ಬ್ಯೂರೊ ಸಂಸ್ಥೆಯ 2012 ರ ಅಂಕಿ ಅಂಶಗಳ ಪ್ರಕಾರ, ಆತ್ಮಹತ್ಯೆಯ ಪ್ರಮಾಣ ರಾಷ್ರಮಟ್ಟದಲ್ಲಿ ಸರಾಸಿ 11.2% ಇದ್ದರೆ, ಗುಜರಾತ್ ರಾಜ್ಯದಲ್ಲಿ 11.8% ಇದೆ. ಕಳೆದ ಮೂರು ವರ್ಷಗಳಿಂದ  ಗುಜರಾತಿನಲ್ಲಿ ಪ್ರತಿದಿನ 12 ಆತ್ಮಹತ್ಯೆಗಳು ಜರುಗುತ್ತಿವೆ. ಭಾರತದ ಪ್ರಮುಖ ಮೂರು ನಗರಗಳಲ್ಲಿ ಗುಜರಾತಿನ ರಾಜ್ ಕೋಟ್ ನಗರ ಕೂಡ ಒಂದು.
ಕಳೆದ ಒಂದು ದಶಕದಲ್ಲಿ 641 ರೈತರ ಆತ್ಮಹತ್ಯೆಗಳು ನಡೆದಿವೆ. ಆದರೆ. ಗುಜರಾತಿನ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಮಗನ್ ಪಟೇಲ್ ಹೇಳುವ ಪ್ರಕಾರ ಗುಜರಾತ್ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಪೊಲೀಸರು ದಾಖಲೆ ಮಾಡಿಕೊಳ್ಳುತ್ತಿಲ್ಲ.
ಗುಜರಾತ್ ರಾಜ್ಯದ ವಾಸ್ತವ ಅಭಿವೃದ್ಧಿಯ ಚಿತ್ರಣ ಈ ರೀತಿ ಇರುವಾಗ ಅಭಿವೃದ್ಧಿ ಕುರಿತಂತೆ  ಗುಜರಾತ್ ಮಾದರಿ ಎಂದು ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ? ಇದು ಪ್ರಜ್ಞಾವಂತರನ್ನು ಕಾಡುವ ಪ್ರಶ್ನೆ. 


                 

ಮಂಗಳವಾರ, ಮಾರ್ಚ್ 25, 2014

ಗುಜರಾತ್ ಅಭಿವೃದ್ಧಿಯೆಂಬ ಹುಸಿ ಬಸಿರಿನ ಸಂಬ್ರಮ- ಒಂದು


ಕಳೆದ ಒಂದು ವರ್ಷದಿಂದ ಭಾರತವಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿ ತೀವ್ರವಾಗಿ ಚರ್ಚೆಗೆ ಒಳಪಟ್ಟ ರಾಜಕೀಯ ವ್ಯಕ್ತಿ ಎಂದರೆ, ನರೇಂದ್ರಮೋದಿಯವರು. ಈಗಾಗಲೇ ಭಾರತದ ಭಾವಿ ಪ್ರಧಾನಿ ಎಂದು ಮಾಧ್ಯಮಗಳಲ್ಲಿ ಗುರುತಿಸಿಕೊಮಡಿದ್ದಾರೆ. ಇದಲ್ಲದೆ ವ್ಯವಸ್ಥಿತವಾಗಿ ಸೃಷ್ಟಿಯಾಗಿರುವ ಮೋದಿಯ ಭಜನಾ ಮಂಡಳಿಯಲ್ಲಿ ಏಕಮುಖವಾಗಿ ಹರಿದು ಬರುತ್ತಿರುವ ವಾಕ್ ಪ್ರವಾಹವೆಂದರೆ, ಗುಜರಾತಿನ ಅಭಿವೃದ್ಧಿಯ ಮಂತ್ರ. ಕಳೆದ ಒಂದು ದಶಕದಲ್ಲಿ ಪ್ರಕಟವಾಗಿರುವ ದೇಶದ ಹಾಗೂ ಜಾಗತಿಕ ಮಟ್ಟದ ಅಭಿವೃದ್ಧಿಯ ಸಮೀಕ್ಷಾ ವರದಿಗಳಲ್ಲಾಗಲಿ, ವಿಶ್ವಬ್ಯಾಂಕ್ ಮತ್ತು ಭಾರತದ ಯೋಜನಾ ಮಂಡಳಿಯ ಪರಾಮರ್ಶನ ವರದಿಗಳಲ್ಲಿ ಅಥವಾ ಭಾರತದ ಆರ್ಥಿಕ ಸಮೀಕ್ಷಾ ವರದಿ, ಮಾನವ ಅಭಿವೃಧ್ಧಿಯ ವರದಿಗಳು, ಇವುಗಳಲ್ಲದೆ, ವಿಶ್ವಸಂಸ್ಥೆಯ ಮಕ್ಕಳ ಅಥವಾ ಮಹಿಳಾ ವಿಭಾಗದ ಯಾವ ವರದಿಗಳಲ್ಲೂ ಗುಜರಾತ್ ಅಭಿವೃದ್ಧಿ ಕುರಿತು ಯಾವುದೇ ಪ್ರಸ್ತಾಪವಿಲ್ಲ. ಜೊತೆಗೆ ಸಾಕ್ಷರತೆ, ಆರೋಗ್ಯ, ಶಿಕ್ಷಣ, ಸಾಮಾಜಿಕ ನ್ಯಾಯ , ಬಡತನ ನಿವಾರಣೆ, ಗ್ರಾಮೀಣಾಭಿವೃದ್ಧಿ ಇವುಗಳಲ್ಲಿ ಗುಜರಾತ್ ರಾಜ್ಯವು ಎಲ್ಲಿಯೂ ಮೊದಲನೆಯ ಸ್ಥಾನ ಪಡೆದಿಲ್ಲ ಬದಲಾಗಿ 2001 ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯ ಹದಿಮೂರು ವರ್ಷಗಳ ಆಳ್ವಿಕೆಯ ಅವಧಿಯಲ್ಲಿ ಗುಜರಾತಿನ ಬಹುತೇಕ ರಂಗಗಳ ಅಭಿವೃದ್ದಿಯ ಸೂಚ್ಯಂಕ ಕುಸಿದಿದೆ, ಇಲ್ಲವೆ, ಇವರಿಗೂ ಮುನ್ನ ಮುಖ್ಯಮಂತ್ರಿಯಾಗಿದ್ದ ಕೇಶುಪಟೇಲ್ ಆಳ್ವಿಕೆಯಲ್ಲಿ ಸಾಧಿಸಲಾಗಿದ್ದ ಅಭಿವೃದ್ಧಿ ಸೂಚ್ಯಂಕದ ಹಂತಕ್ಕೆ ಸ್ಥಗಿತಗೊಂಡಿವೆ.
ಹಾಗಾದರೆ, ಗುಜರಾತಿನಲ್ಲಿ ಅಭಿವೃದ್ಧಿಯಾಗಿರುವುದು ಏನು? ಮೋದಿಯ ಭಜನಾ ಮಂಡಳಿಯ ಅಥವಾ ಈ ದಿನಗಳಲ್ಲಿ ಸಂಘಪರಿವಾರದ ಭಕ್ತರು ಜಪಿಸುತ್ತಿರುವ “ಗುಜರಾತ್ ಅಭಿವೃದ್ಧಿಯೊಂದೇ ದೇಶಕ್ಕೆ ಮಾದರಿ, ಅದೇ ಆದಿ, ಅದೇ ಅಂತ್ಯ” ಎನ್ನುವ ಮಾತುಗಳು ಸುಳ್ಳಿನ ಕತೆಗಳೆ? ಹೌದು ಇದು ಸುಳ್ಳು ಸೃಷ್ಟಿಗಳ ಸರಮಾಲೆಯ ಕಥನ. ಗುಜರಾತಿನಲ್ಲಿ ಅಭಿವೃದ್ಧಿ ಎಂಬುದು ಸಾಕಾರಗೊಂಡಿದ್ದರೆ, ಅದು ರೈತರ ಫಲವತ್ತಾದ ಭೂಮಿಯ ಮೇಲೆ ವಿಶೇಷ ಬಂಡವಾಳ ಹೂಡಿಕೆ ವಲಯ( Special Investment Region) ಖಾಸಾಗಿರಂಗದ ಕೈಗಾರಿಕೆಗಳು, ಮತ್ತು ಬಂಡವಾಳಶಾಹಿಗಳ ಸಾಮ್ರಾಜ್ಯದ ವಿಸ್ತರಣೆ ಮಾತ್ರ.
2011-12 ರ ಭಾರತದ ಆರ್ಥಿಕ ಸಮೀಕ್ಷಾ ವರದಿಯ ಪ್ರಕಾರ, ದೇಶದಲ್ಲಿ ಬಡತನ ನಿವಾರಣೆಯಲ್ಲಿ ತಮಿಳುನಾಡು ಎಲ್ಲಾ ರಾಜ್ಯಗಳಿಗಿಂತ ಮುಂದಿದೆ. ಸಾಕ್ಷರತೆ ಮತ್ತು ಸಾಮಾಜಿಕ ನ್ಯಾಯ , ಪ್ರವಾಸೊದ್ಯಮ ಅಭಿವೃದ್ಧಿ ಇವುಗಳಲ್ಲಿ ಕೇರಳ ಪ್ರಥಮಸ್ಥಾನದಲ್ಲಿದೆ. ಸಮಗ್ರ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ ಪಂಜಾಬ್ ಪ್ರಥಮ ಸ್ಥಾನದಲ್ಲಿದೆ. ನಂತರ ಗೋವಾ ರಾಜ್ಯವಿದೆ. 2005 ರಲ್ಲಿ ಬಿಹಾರದ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ತನ್ನ ಎಂಟು ವರ್ಷಗಳ ಆಳ್ವಿಕೆಯಲ್ಲಿ ಸಾಧಿಸಿರುವ ಅಭಿವೃದ್ಧಿಯ ಯೋಜನೆಗಳು ಪಂಚವಾರ್ಷಿಕ ಯೋಜನೆಯ ಪರಾಮರ್ಶನ ವರದಿಯಲ್ಲಿ ಪ್ರಶಂಸೆಗೆ ಒಳಪಟ್ಟಿವೆ. ರಾಜ್ಯದ ಒಟ್ಟು ಆಂತರೀಕ ಉತ್ಪಾದನಾ ಬೆಳವಣಿಗೆಯಲ್ಲಿ ಶೇಕಡ 12 ರಷ್ಟು ಬೆಳವಣಿಗೆ ಸಾಧಿಸಿ ದೇಶದ ಪ್ರಗತಿಯ ರಾಜ್ಯಗಳಲ್ಲಿ  ಮುಂಚೂಣಿಯಲ್ಲಿದೆ. 2005 ರಿಂದ 2013 ರ ಅವಧಿಯಲ್ಲಿ ತ್ವರಿತಗತಿಯ ನ್ಯಾಯಾಲಯ ಮತ್ತು ತೀರ್ಪು ಗಳ ಮೂಲಕ ಬಿಹಾರ ರಾಜ್ಯದಲ್ಲಿ 83 ಸಾವಿರ ಗೂಂಡಾಗಳು, ಕ್ರಿಮಿನಲ್ ಗಳು ಸೆರೆಮನೆಗೆ ನೂಕಲ್ಪಟ್ಟಿದ್ದಾರೆ. ಇದು ಸ್ವಾತಂತ್ರ್ಯಾನಂತರದ ಭಾರತದಲ್ಲಿ ರಾಜ್ಯವೊಂದರ ನೂತನ ದಾಖಲೆ. ಅಷ್ಟೇ ಅಲ್ಲ, ಅಲ್ಲಿನ ಜಮೀನ್ದಾರಿ ಪದ್ಧತಿ, ಮತ್ತು ಪಂಚಾಯಿತಿ ಮಟ್ಟದ ಅಮಾನವೀಯ ನೆಲೆಯ ನ್ಯಾಯ ತೀರ್ಪುಗಳನ್ನು ನಿಷೇಧಿಸಿದ್ದಲ್ಲದೆ, ಅಧಿಕಾರ ವಿಕೇಂದ್ರಿಕರಣವನ್ನು ಸ್ಥಾಪಿಸುವ ಸಲುವಾಗಿ ಪರಿಣಾಮಕಾರಿಯಾಗಿ ಜಾರಿಗೆ ಬಂದ ಪಂಚಾಯತ್ ರಾಜ್ ವ್ಯವಸ್ಥೆಯಿಂದಾಗಿ ತಳಮಟ್ಟದ ದೀನ ದಲಿತರಿಗೆ ಅಧಿಕಾರದಲ್ಲಿ ಪಾಲ್ಗೊಳ್ಳುವ ಹಕ್ಕು ದೊರೆತಿದೆ. ಇವೆಲ್ಲವೂ ಜಾಗತಿಕ ಮಟ್ಟದ ಸಮೀಕ್ಷಾ ವರದಿಯಲ್ಲಿ ದಾಖಲಾಗಿವೆ.( ಈ ಕುರಿತು ಮುಂದೆ ಚರ್ಚಿಸಲಾಗುವುದು.) ಯಾವುದೇ ಒಂದು ಅಭಿವೃದ್ಧಿ ಯೋಜನೆ ಅಥವಾ ಸಾಧನೆ ಕಣ್ಣಿಗೆ ಕಾಣುವಂತಿರಬೇಕು. ನಾನು ಈ ಮೇಲೆ ಪ್ರಸ್ತಾಪಿಸಿರುವ ಸಂಗತಿಗಳು ನಮ್ಮ ಕಣ್ಣ ಮುಂದೆ ವಾಸ್ತವ ರೂಪದಲ್ಲಿ ಇವೆ. ಹಾಗಾದರೆ, ಮೋದಿ ಸಾಧಿಸಿದ ಅಭಿವೃದ್ಧಿಯೋಜನೆಗಳು ಯಾವುವು? ಅವು ಎಲ್ಲಿವೆ? ಗುಜರಾತ್ ರಾಜ್ಯದಲ್ಲಿ ಪ್ರತಿಯೊಂದು ಹಳ್ಳಿಗೂ ವಿದ್ಯುತ್ ಸಂಪರ್ಕ ಇದೆ ನಿಜ. ಅದೇ ರೀತಿ ಅಲ್ಲಿನ ರಸ್ತೆಗಳು ಇತರೆ ರಾಜ್ಯಗಳಿಗೆ ಹೋಲಿಸಿದರೆ ಉತ್ತಮ ಗುಣಮಟ್ಟದಲ್ಲಿವೆ. ಆದರೆ ಇದನ್ನು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಕೇಶುಬಾಯ್ ಪಟೇಲ್ ಅವಧಿಯಲ್ಲಿ ಅವರು ಸಾಧಿಸಿದ್ದ ಯಶೋಗಾಥೆಯ ಯೋಜನೆಗಳು. ಈಗ  ಗುಜರಾತಿನ ಅಭಿವೃದ್ಧಿಯ ಕುರಿತು  ತುತ್ತೂರಿ ಊದುತ್ತಿರುವುದನ್ನು ನೋಡಿದರೆ,ಯಾರದೋ ಬಸಿರಿನ ಮೂಲವನ್ನು ತನ್ನದೆಂದು ಹೇಳಿಕೊಳ್ಳುವ ಹುಂಬುತನಕ್ಕೆ ನರೇಂದ್ರ ಮೋದಿ ಇಳಿದಿದ್ದಾರೆ ಎಂದು ಅನಿಸತೊಡಗಿದೆ. ಕೇಂದ್ರ ಸರ್ಕಾರದ ನೆಹರೂ ನಗರೀಕರಣ ಯೋಜನೆಯಡಿ ಸಾವಿರಾರು ಕೋಟಿ ರೂಪಾಯಿಗಳ ಅನುದಾನದಲ್ಲಿ ಅಭಿವೃದ್ಧಿಪಡಿಸಲಾದ ಅಹಮದಾಬಾದ್ ನಗರದ ಸಾರಿಗೆ. ರಸ್ತೆ, ಮೇಲ್ ಸೇತುವೆ ಇವುಗಳನ್ನು ಧರೆಯ ಮೇಲಿನ ಸ್ವರ್ಗದಂತೆ ಪ್ರತಿಬಿಂಬಿಸಲಾಗುತ್ತಿದೆ. ಅಲ್ಲಿನ ಚೌಕಗಳು, ಮತ್ತು ಸೀಮೆಂಟ್ ರಸ್ತೆ ಇವುಗಳನ್ನು ತಮ್ಮ ತಮ್ಮ ಸಾಮಾಜಿಕ ತಾಣಗಳಲ್ಲಿ ಪ್ರದರ್ಶಿಕೊಂಡು ಹೆಮ್ಮೆ ಪಡುವ ನ.ಮೊ. ಬ್ರಿಗೇಡ್ ಎಂಬ ಭಜನಾ ಮಂಡಳಿಯ ಭಕ್ತರು ಒಮ್ಮೆ ಅಹಮದಾಬಾದಿನ ಲಾಲ್ ಪುರ್, ಜುಹಾ ಪುರ್ ಹಾಗೂ ಇತರೆ ಪ್ರದೇಶಗಳಲ್ಲಿ ಮುಸ್ಲಿಂ ಜನಾಂಗ ಯಾವ ರೀತಿಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಬದುಕುತ್ತಿದ್ದಾರೆ ಎಂಬುದನ್ನು ನೋಡಬೇಕಿದೆ.



ಒಂದು ಸುಳ್ಳನ್ನು ನೂರು ಬಾರಿ ಪುನರುಚ್ಛರಿಸಿದರೆ, ಅದು ವಾಸ್ತವವಾಗುತ್ತದೆ ಮತ್ತು ಸತ್ಯವಾಗುತ್ತದೆ ಎಂಬ ಗೊಬೆಲ್ ನ ಸಿದ್ಧಾಂತವನ್ನು ಮಾಧ್ಯಮಗಳ ಮೂಲಕ ಮತ್ತು ಜಾಹಿರಾತಿನಲ್ಲಿ ಬಿತ್ತುವ ಭ್ರಮೆಗಳ ಮೂಲಕ ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿರುವವರಲ್ಲಿ ನರೇಂದ್ರಮೋದಿ ಅಗ್ರ ಗಣ್ಯರು.
ಜಾಹಿರಾತಿನ ಪಿತಾಮಹಾ ಎಂದು ಕರೆಸಿಕೊಳ್ಳುವ ಎಡ್ವರ್ಡ್ ಬೆರ್ನೆಸ್ ( ಈತ ಸಿಗ್ಮಂಡ್ ಪ್ರಾಯ್ಡ್ ನ ಸಂಬಂಧಿ) 1925 ರಲ್ಲಿ Propaganda ಎಂಬ ಕೃತಿಯನ್ನು ರಚಿಸಿದ. ಇದರ ಅರ್ಥ ವ್ಯವಸ್ಥಿತ ಪ್ರಚಾರ ಎನ್ನಬಹುದು. ಈ ಕೃತಿಯ ಕುರಿತು 1997 ರಲ್ಲಿ ಮಾತನಾಡಿರುವ ನಮ್ಮ ನಡುವಿನ ಮನುಕುಲದ ಚಿಂತಕರಲ್ಲಿ ಒಬ್ಬರಾಗಿರುವ ನೋಮ್ ಚೊಮ್ ಸ್ಕಿ  ಈ ಕೃತಿಯ ಮೂಲ ಪಠ್ಯವನ್ನು History Of wepon  ಎಂದು ಕರೆದಿದ್ದಾರೆ. ಈ ಕೃತಿಯ ನಂತರ ಇದೇ ಮಾದರಿಯಲ್ಲಿ ಅನೇಕ ಹೊಸ ಹೊಸ ಚಿಂತನೆಗಳು ಹುಟ್ಟಿಕೊಂಡಿವೆ. ಲೇಖಕ ಎಡ್ವರ್ಡ್ ತನ್ನ ಕೃತಿಯ ಮೊದಲ ಅಧ್ಯಾಯದ ಮೊದಲ ಪ್ಯಾರದಲ್ಲಿ ವ್ಯವಸ್ಥಿತ ಪ್ರಚಾರ ಎಂದರೆ ಏನು? ಅದರ ಪರಿಣಾಮವೇನು? ಎಂಬುದನ್ನು ಹೀಗೆ ವಿವರಿಸುತ್ತಾನೆ.
The conscious and intelligent manipulation of the organized habits and opinions of the masses is an important element in democratic society. Those who manipulate this unseen mechanism of society constitute an invisible government which is the true ruling power of our country.
We are governed, our minds are molded, our tastes formed, our ideas suggested, largely by men we never heard of.  This is a logical result of the way in which our  democratic society is organized.  Vast numbers of human beings must cooperate in this manner if they are to live together as a smoothly functioning society.
Our invisible governer are , in many cases, unaware of the identity of their fellow members in the inner cabinet’


ಈ ವ್ಯವಸ್ಥಿತ ಪ್ರಚಾರದ ಮೂಲ ಮಂತ್ರಗಳನ್ನು ಅರೆದು ಕುಡಿದಂತೆ ಕಾಣುತ್ತಿರುವ ನರೇಂದ್ರ ಮೋದಿ. ತಮ್ಮ ಕುರಿತು ಮತ್ತು ತಮ್ಮ ಅಗೋಚರ ಅಭಿವೃದ್ಧಿ ಕುರಿತು ಸಾಮಾಜಿಕ ತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಬಿಂಬಿಸಿಕೊಳ್ಳುತ್ತಿದ್ದಾರೆ. ಇವರ ನಡೆಗಳು, ಇವರು ಸೃಷ್ಟಿಸಿರುವ ನಕಲಿ ಫೆಸ್ ಬುಕ್ ಖಾತೆಗಳು, ಇ-ಮೈಲ್ ಖಾತೆಗಳು, ಟ್ವಿಟ್ಟರ್ ಫಾಲೊಹರ್ಸ್ ಎಂಬ ಅದೃಶ್ಯ ಹಿಂಬಾಲಕರು ಎಲ್ಲವೂ ಗೋಲ್ ಮಾಲ್ ಎಂಬುದನ್ನು ಕೊಲ್ಕತ್ತ ನಗರದ ಪ್ರಕಾಶನ ಸಂಸ್ಥೆಯ ಶಂಕರ್ ಘೋಸ್ ಎಂಬುವರು ಪ್ರಕಟಿಸಿರುವ “ ಗುಜರಾತ್ ಡೆವಲಪ್ ಮೆಂಟ್ ಮಾಡೆಲ್  ಎ ರಿಯಾಲಿಟಿ ಚೆಕ್” ಎಂಬ ಕೃತಿಯಲ್ಲಿ ಲೇಖಕ ಸಂತೋಷ್ ಕುಮಾರ್ ನೀಡಿರುವ ವಿವರಗಳು ಇವು.
ಗುಜರಾತ್ ಸರ್ಕಾರದ ಮಾಹಿತಿ ತಂತ್ರಜ್ಞಾನದ ಮುಖ್ಯಸ್ಥೆ ರಾಜೀಖ ಕಚೀರಿಯ ಎಂಬಾಕೆ. ನರೇಂದ್ರ ಮೋದಿಯವರಿಗೆ ದೇಶ್ಯಾದ್ಯಂತ 25ಲಕ್ಷ ಟ್ವಿಟ್ಟರ್ ನಲ್ಲಿ ಹಿಂಬಾಲಕರಿದ್ದಾರೆ ಜೊತೆಗೆ ಮೋದಿ ಹೇಳಿಕೆಗಳನ್ನು ಸುಮಾರು ನಾಲ್ಕರಿಂದ ಐದು ಸಾವಿರ ಮಂದಿ ಪುನಃ ಟ್ವಿಟ್ಟರ್ ನಲ್ಲಿ ಪ್ರಕಟಿಸುತ್ತಾರೆ ಎಂದು ಹೇಳಿದ್ದಾರೆ.( ಅಕ್ಟೋಬರ್ 2013ರ ವೇಳೆಗೆ) ಆದರೆ, ಅದೇ ವಿಭಾಗದ ಹೆಸರು ಬಹಿರಂಗ ಪಡಿಸಿದ ಉದ್ಯೋಗಿಯೊಬ್ಬರ ಪ್ರಕಾರ ಶೇಕಡ 40 ರಷ್ಟು ಹಿಂಬಾಲಕರು ನಕಲಿರೂಪದಲ್ಲಿ  ಸೃಷ್ಟಿಯಾದವರು. ಇದನ್ನು ಆಧಾರವಾಗಿ ಇಟ್ಟುಕೊಂಡು, ಅದೇ ತಿಂಗಳಿನಲ್ಲಿ  twitteraudit.com, socialbakers.com, statuspeople.com ಮುಂತಾದ ಸಂಸ್ಥೆಗಳ ಮೂಲಕ ತನಿಖೆಗೆ ಒಳಪಡಿಸಿದಾಗ, ಶೇಕಡ 76 ರಷ್ಟು ನಕಲಿ ಅಕೌಂಟ್ ಗಳೆಂದು , ಶೇಕಡ 18 ರಷ್ಟು ಚಾಲ್ತಿಯಲ್ಲಿ ಇಲ್ಲದ ಅಕೌಂಟ್ ಗಳು ಮತ್ತು ಶೇಕಡ 6 ರಷ್ಟು ಮಾತ್ರ ನಿಜವಾದ ಅಕೌಂಟ್ ಎಂಬುದು ಸಾಭೀತಾಯಿತು.
ಈದಿನಗಳಲ್ಲಿ ಭಾರತದಲ್ಲಿ ನಕಲಿ ಹಿಂಬಾಲಕರು, ನಕಲಿ ಲೈಕ್ ಒತ್ತುವವರು, ಇವುಗಳ ಸೃಷ್ಟಿ ಮತ್ತು ಮಾರಾಟ 18 ಲಕ್ಷ ಡಾಲರ್ ಗಳ ವ್ಯವಹಾರವಾಗಿ ಪರಿವರ್ತನೆ ಹೊಂದಿದೆ. ಉದಾಹರಣೆಗೆ fiverr.com  ಎಂಬ ಕಂಪನಿಯು 300 ರೂಪಾಯಿಗಳಿಗೆ ಒಂದು ಸಾವಿರ ಟ್ವಿಟ್ಟರ್ ನಕಲಿ ಹಿಂಬಾಲಕರನ್ನು ಮಾರಾಟ ಮಾಡುತ್ತಿದೆ.firststeppromotions.com ಎಂಬ ಸಂಸ್ಥೆಯೊಂದು 900 ರುಪಾಯಿಗಳಿಗೆ 500 ಫೇಸ್ ಬುಕ್ ಲೈಕ್ ಗಳನ್ನು ಅಥವಾ ಒಂದು ಸಾವಿರ ಯೂಟ್ಯೂಬ್ ನಕಲಿ ವೀಕ್ಷಕರನ್ನು ಸೃಷ್ಟಿ ಮಾಡಿಕೊಡುತ್ತದೆ. ಭಾರತದ ಕೆಲವು ಕಂಪನಿಗಳು ಸಹ 650 ರೂಪಾಯಿಗೆ ಒಂದು ಸಾವಿರ ಫೇಸ್ ಬುಕ್ ಲೈಕ್ ಗಳು, ಅಥವಾ ಹತ್ತು ಸಾವಿರ ಟ್ವಿಟ್ಟರ್ ಹಿಂಬಾಲಕರನ್ನು ಸೃಷ್ಟಿಸಿ ಕೊಡುತ್ತಿವೆ.ನರೇಂದ್ರ ಮೋದಿಯ ಜನಪ್ರಿಯತೆಯ ರಹಸ್ಯ ಅಡಗಿರುವುದು ಇಂತಹ ಕಾರ್ಯಾಚರಣೆಯಲ್ಲಿ.



ಮೋದಿಯ ಜನಪ್ರಿಯತೆಯನ್ನು ವೃದ್ಧಿಸಲು ಆಪ್ಕೊ ಎಂಬ ಅಂತರಾಷ್ಟ್ರೀಯ ಮಟ್ಟದ ಜಾಹಿರಾತು ಏಜನ್ಸಿ ಕೆಲಸ ಮಾಡುತ್ತಿದೆ. ಈ ಸಂಸ್ಥೆಗೆ ಜಾಹಿರಾತು ದರದ ಶೇಕಡ ಹತ್ತರಿಂದ ಹದಿನೈದರಷ್ಟು ಕಮೀಷನ್ ಹಣವಲ್ಲದೆ, ಸಲಹಾ ಶುಲ್ಕವಾಗಿ ಗುಜರಾತ್ ಸರ್ಕಾರ ಪ್ರತಿ ತಿಂಗಳು ಹದಿನೈದು ಲಕ್ಷ ಹಣವನ್ನು ಪಾವತಿಸುತ್ತಿದೆ. ಈ ಸಂಸ್ಥೆ ಮತ್ತು ಮೋದಿ ಜನಪ್ರಿಯತೆ ಕುಸಿಯದಂತೆ ನಿಗಾ ವಹಿಸಲು ನೇಮಕವಾಗಿರುವ ಸದಸ್ಯರ ಸಮಿತಿ, ಅದರ ಕಾರ್ಯವೈಖರಿ ಇವುಗಳನ್ನು ಗಮನಿಸಿದಾಗ, ಮೋದಿಗೆ ಇಷ್ಟೊಂದು ಕಾಣದ ಕೈಗಳಿವೆಯಾ? ಎಂದು ಆಶ್ಚರ್ಯವಾಗುತ್ತದೆ.

                                                                    (ಮುಂದುವರಿಯುವುದು)