ಭಾನುವಾರ, ಫೆಬ್ರವರಿ 16, 2014

ಭಾರತದ ರಾಜಕಾರಣದ ವೈಫಲ್ಯ ಮತ್ತು ವಿಷಾಧ



ಭಾರತದ ರಾಜಕಾರಣದಲ್ಲಿ ಪ್ರಜ್ಞಾವಂತ ನಾಗರೀಕರ ಆಶಾಕಿರಣದಂತೆ ಗೋಚರಿಸಿದ್ದ ಅರವಿಂದ್ ಕೇಜ್ರಿವಾಲರ ಅಮ್ ಆದ್ಮಿ ಪಕ್ಷ ಕೊನೆಗೂ ಎಲ್ಲರನ್ನೂ ನಿರಾಸೆಗೊಳಿಸಿದೆ. ಅನಿರೀಕ್ಷಿತವಾಗಿ ದೆಹಲಿಯಲ್ಲಿ ಗದ್ದೆಗೆಯೇರಿದ ರೀತಿ ನಮ್ಮನ್ನು ವಿಸ್ಮಯಗೊಳಿಸುವಷ್ಟರಲ್ಲಿ ಅಧಿಕಾರದಿಂದ ನಿರ್ಗಮಿಸುವುದರ ಮೂಲಕ ತನ್ನ ಅಸಹಾಯಕತೆ ಮತ್ತು ಅಸಮರ್ಥತೆಯನ್ನು ಅನಾವರಣಗೊಳಿಸಿದೆ.
ಕಳೆದ ಒಂದು ದಶಕದಿಂದ ಭಾರತದಲ್ಲಿ ವಿಫಲಗೊಂಡಿರುವ ಹಾಗೂ, ರಾಜಕಾರಣದ ಪ್ರಲೋಭನೆ ಮತ್ತು ಹುನ್ನಾರಗಳಿಗೆ ಬಲಿಯಾಗಿ ಘಾಸಿಗೊಂಡ ಸಾಮಾಜಿಕ ಚಳುವಳಿಗಳ ಪಟ್ಟಿಗೆ ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿದ ಅಮ್ ಆದ್ಮಿ ಪಕ್ಷ ಕೂಡ ಸೇರ್ಪಡೆಯಾಗುವುದರ ಮೂಲಕ ಇತಿಹಾಸದ ಕಸದಬುಟ್ಟಿಗೆ ಸೇರಿದೆ.
ಈ ದೇಶದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸದುದ್ದಕ್ಕೂ ಸ್ವಯಂಕೃತ ಅಪರಾಧ ಮತ್ತು ಸಂಘಟನೆಗಳ ನಾಯಕರ ಅಹಂ ನಿಂದಾಗಿ ವಿಫಲಗೊಂಡ ಚಳುವಳಿಗಳ ಪಟ್ಟಿ ಸಾಕಷ್ಟು ಉದ್ದವಾಗಿದೆ. ನಮ್ಮ ಕಣ್ಣೆದುರುಗಿನ ಈ ದುರಂತಗಳಿಗೆ ಸಾಕ್ಷಿಯಾದ ನಾವೆಲ್ಲರೂ ಈಗ ಬೇಸರಪಡುವುದರ ಬದಲಾಗಿ, ಯಾವುದೇ ಭಾವನೆಗಳಿಲ್ಲದ  ಸಂತರಾಗುವ ಕಾಲ ಇದಾಗಿದೆ.
ಸ್ವಾತಂತ್ರ್ಯಾನಂತರದ ಭಾರತದ ರಾಜಕಾರಣದಲ್ಲಿ ಆಳವಾಗಿ ಬೇರು ಬಿಟ್ಟ ಭ್ರಷ್ಟಾಚಾರ, ಮತ್ತು ಕುಟುಂಬ ರಾಜಕಾರಣ ಹಾಗೂ ರಾಜಕಾರಣಿಗಳು ಮತ್ತು ಕಾರ್ಪೋರೇಟ್ ಸಂಸ್ಥೆಗಳ ಅಪವಿತ್ರ ಮೈತ್ರಿ, ಇವುಗಳನ್ನು ಒಂದು ದಿನ, ವಾರ, ಅಥವಾ ತಿಂಗಳಲ್ಲಿ ತೊಡೆದು ಹಾಕಲು ಹೊರಡುವುದು ಸಾಹಸದ ಕ್ರಿಯೆಯಾಗಲಾರದು, ಬದಲಾಗಿ ಅದು ಹುಂಬುತನದ ಸಾಹಸವಾಗುತ್ತದೆ. ಇದೀಗ ಅರವಿಂದ್ ಕೇಜ್ರಿವಾಲ್ ಮಾಡಿದ್ದು ಇಂತಹ ಸಾಹಸವೇ ಹೊರತು ಬೇರೇನಲ್ಲ.
ಅಮೇರಿಕಾದಲ್ಲಿ ಸಮಾನ ಸ್ವಾತಂತ್ರ್ಯ ಮತ್ತು ನಾಗರೀಕ ಹಕ್ಕುಗಳಿಗಾಗಿ ಅಲ್ಲಿನ ಬಿಳಿಯರ ವಿರುದ್ಧ ಹೋರಾಡಿದ ನಿಗ್ರೋಗಳ ಪರವಾಗಿ ಧ್ವನಿ ಎತ್ತಿದ ಅನೇಕ ಕವಿಗಳು, ಬರಹಗಾರರು 1980 ರ ದಶಕದಲ್ಲಿ ಹೊರತಂದಿದ್ದ “ ಬ್ಲಾಕ್ ಪೊಯಮ್ಸ್” ಎಂಬ ಕವಿತೆಗಳ ಸಂಕಲನದಲ್ಲಿ ಮಾರ್ಗರೇಟ್ ವಾಕಲ್ ಎಂಬಾಕೆ ಬರೆದ ಕವಿತೆಯ ಸಾಲುಗಳಿವು.
              ಗೊತ್ತಿದೆ ನಮಗೆ
              ಸ್ವಾತಂತ್ರ್ಯದ ಹಾಡು
              ಹಾಡುತ್ತಾ ಎದೆಯುಬ್ಬಿಸಿ
              ನಡೆಯುವ ನಮಗೆಲ್ಲಾ
              ಸರಳ ಹಿಂದಿನ ಕ್ರೂರ
              ಕತ್ತಲ ಕರಾಳ ಬದುಕು
              ಕಾದಿದೆ ಎಂದು.
              ಗೊತ್ತಿದೆ ನಮಗೆ
              ಸ್ವಾತಂತ್ಯವೆಂಬುದು
              ಬೀದಿ ಬದಿಯ ಅಗ್ಗದ
              ಸರಕಲ್ಲವೆಂದು
              ಏಕೆಂದರೆ,
              ರೋಮ್ ಸಾಮ್ರಾಜ್ಯವನ್ನು
              ಒಂದೇ ದಿನದಲ್ಲಿ
             ನಿರ್ಮಿಸಲಿಲ್ಲವಲ್ಲಾ?
ನಾವು ಕನಸುವ ಒಂದು ಆದರ್ಶ ಸಮಾಜದ ಬಗ್ಗೆ ಇಂತಹ ತಾಳ್ಮೆ ವಿವೇಕ ಇಲ್ಲದಿದ್ದರೆ, ದುರಂತಗಳು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಅರವಿಂದ್ ಕೇಜ್ರಿವಾಲ್ ಸಾಕ್ಷಿಯಾಗಿದ್ದಾರೆ. ಭ್ರಷ್ಟಾಚಾರವನ್ನು ಗುಡಿಸಿ ಹಾಕುತ್ತೇನೆ ಎಂದು ಪೊರಕೆಯನ್ನು ತನ್ನ ಚುನಾವಣಾ ಚಿಹ್ನೆಯನ್ನಾಗಿ ಮಾಡಿಕೊಂಡ ಅರವಿಂದ್ ಕೇಜ್ರಿವಾಲ್ ತನ್ನ ನಲವತ್ತೆಂಟು ದಿನಗಳ ಅಧಿಕಾರದಲ್ಲಿ ಆಸೆ ಮೂಡಿಸಿದ್ದಕ್ಕಿಂತ ಹೆಚ್ಚಾಗಿ ಅರಾಜಕತೆಯನ್ನು ಸೃಷ್ಟಿ ಮಾಡಿದ್ದೇ ಹೆಚ್ಚು. ಸಮಸ್ಯೆಗಳ ಪರಿಹಾರಕ್ಕೆ ಸಂಘರ್ಷವೊಂದೇ ಪರಿಹಾರವಲ್ಲ, ಸಮಾಲೋಚನೆ ಕೂಡ ಪರ್ಯಾಯ ಮಾರ್ಗ ಎಂಬುದನ್ನು ಈ ಜನನಾಯಕ ಅರಿಯದೇ ಹೋದದ್ದು ನಮ್ಮಗಳ ವರ್ತಮಾನದ ದುರಂತ. ಸ್ವತಃ ಒಬ್ಬ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ, ಚಳುವಳಿಗೆ ದುಮುಕಿದ ಕೇಜ್ರಿವಾಲ್ ಗೆ, ಒಂದು ಸರ್ಕಾರದ ಆಡಳಿತ  ವ್ಯವಸ್ಥೆಯಲ್ಲಿ ಅಧಿಕಾರಿ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾನು ಕನಸಿದ್ದ ಯೋಜನೆಗಳನ್ನು ಅನುಷ್ಟಾನಗೊಳಿಸುವುದು ಮುಖ್ಯ ಎಂಬುದು ಅರ್ಥವಾಗಲೇ ಇಲ್ಲ. ಅಂತಿಮವಾಗಿ  ಮುಲಯಂಸಿಂಗ್, ಶರದ್ ಪವಾರ್, ಜಯಲಲಿತ, ಚಂದ್ರಬಾಬುನಾಯ್ಡು, ಜಗನ್ ರೆಡ್ಡಿ, ಲಾಲೂ, ದೇವೆಗೌಡ, ಕರುಣಾನಿಧಿ ಮುಂತಾದವರು ಕಾಂಗ್ರೇಸ್ ಮತ್ತು ಬಿ.ಜೆ.ಪಿ. ಪಕ್ಷಗಳ ನಡುವೆ ನಡೆಸುವ  ಚೌಕಾಶಿ ರಾಜಕಾರಣವನ್ನು, ಮುಂದಿನ ದಿನಗಳಲ್ಲಿಯೂ ನಾವು ನೋಡಬೇಕಾಗಿದೆ.

ಒಮ್ಮೆ ರೋಮ್ ನಗರದ ಬೀದಿಯ ನಡುವೆ ಏಕಾಂತದಲ್ಲಿ ಕುಳಿತಿದ್ದ ಸಾಕ್ರೇಟಿಸ್ ನ ಬಳಿ ಬಂದ ಶಿಷ್ಯನೊಬ್ಬ “ ಗುರುಗಳೆ, ನಾನು ವಿವಾಹವಾಗುತ್ತಿದ್ದೇನೆ ಹರಸಿ” ಎಂದಾಗ, ಸಾಕ್ರೇಟಿಸ್ ಶಿಷ್ಯನನ್ನು ಹರಸುತ್ತಾ” ಒಳ್ಳೆಯ ಹೆಂಡತಿ ಸಿಕ್ಕರೆ ಒಳ್ಳೆಯ ನಾಗರೀಕನಾಗಿ ಬಾಳುತ್ತಿ, ಕೆಟ್ಟ ಗಯ್ಯಾಳಿ ಹೆಂಡತಿ ಸಿಕ್ಕರೆ ನನ್ನ ಹಾಗೆ ತತ್ವಜ್ಞಾನಿಯಾಗುತ್ತಿ” ಎಂದನಂತೆ. ಈಗ ಭಾರತದ ಯುವಜನತೆ ಮತ್ತು ಪ್ರಜ್ಞಾವಂತ ನಾಗರೀಕರ ಸ್ಥಿತಿ ಕೂಡ ಇದೇ ಆಗಿದೆ. ಭಾರತದ ಪ್ರಸ್ತುತ ರಾಜಕಾರಣ ನಮ್ಮನ್ನು ಸಂತರನ್ನಾಗಿ ರೂಪಿಸುತ್ತಿದೆ. ನಮ್ಮಗಳ ಸಿಟ್ಟು, ಬೇಸರ, ಅಸಹಾಯಕತೆ ಮತ್ತು ಅಸಮರ್ಥತೆಗಳ ನಡುವೆ ತಮ್ಮ ರಾಜಕೀಯ ಚಿಂತನೆ, ದೃಷ್ಟಿಕೋನ ಹಾಗೂ ಆಲೋಚನೆಗಳಲ್ಲಿ ಎರಡು ವಿರುದ್ಧ ದಿಕ್ಕಿನ  ದ್ರುವಗಳಂತಿರುವ ಅರವಿಂದ್ ಕೇಜ್ರಿವಾಲ್ ಮತ್ತು ರಾಹುಲ್ ಗಾಂಧಿ ಇವರನ್ನು ನಾವು ಆಸೆಗಣ್ಣಿನಿಂದ ನೋಡಬಹುದು. ಇವರುಗಳು ತಮ್ಮ  ಪ್ರಯೋಗ, ಕನಸುಗಳಿಗೆ ಪ್ರಬುಧ್ಧತೆಯನ್ನು ಕಸಿಮಾಡಿಕೊಂಡರೆ, ಭವಿಷ್ಯದ ನಾಯಕರಾಗುವುದರಲ್ಲಿ ಯಾವುದೇ ಸಂಶಯವಿಲ್ಲ. 

ವೃದ್ಧಾಶ್ರಮದಂತೆ ಕಾಣುವ ಕಾಂಗ್ರೇಸ್ ಪಕ್ಷದಲ್ಲಿ ಗುಲಾಮಗಿರಿ ಸಂಸ್ಕೃತಿಯೆಂಬುದು, ಹೈಕಮಾಂಡ್ ಸಂಸ್ಕೃತಿಯ ಹೆಸರಿನಲ್ಲಿ ಚಾಲ್ತಿಯಲ್ಲಿದ್ದು, ಅಲ್ಲಿ ಆಂತರೀಕ ಪ್ರಜಾಪ್ರಭುತ್ವ ವ್ಯವಸ್ಥೆಯೆಂಬುದು ನಾಶವಾಗಿದೆ. ಹಾಗಾಗಿ ಅಲ್ಲಿನ ನಾಯಕರು ಉಸಿರು ತೆಗೆದುಕೊಳ್ಳುವುದರಿಂದ ಹಿಡಿದು, ಹೂಸು ಬಿಡುವವರೆಗೂ ಹೈ ಕಮಾಂಡ್ ಅನುಮತಿಗೆ ಕಾಯಬೇಕಿದೆ. ಪಕ್ಷದ ಇಂತಹ ಗೊಡ್ಡು ವ್ಯವಸ್ಥೆಯಿಂದ ಬೇಸತ್ತಿರುವ ರಾಹುಲ್ ಗಾಂಧಿ ಈಗ ನಮ್ಮೆದುರು ಏಳುಸುತ್ತಿನ ಕೋಟೆಯಲ್ಲಿ ಬಂಧಿಯಾಗಿರುವ ಅಸಹಾಯಕ ರಾಜಕುಮಾರನಂತೆ ಕಾಣುತ್ತಾರೆ.


ಕಳೆದ ಅರ್ಧ ಶತಮಾನದಲ್ಲಿ ಭಾರತದಲ್ಲಿ ಬೇರುಬಿಟ್ಟ ಬಡಜನರ ಅಸಹಾಯಕತೆ ಮತ್ತು ಅನಕ್ಷರತೆಯನ್ನು ಬಂಡವಾಳ ಮಾಡಿಕೊಂಡು, ಆಟವಾಡುತ್ತಿರುವ ರಾಜಕಾರಣಿಗಳನ್ನು ಮತ್ತು ಅಧಿಕಾರಿಶಾಹಿ ಹಾಗೂ ಜಡ್ಡುಗಟ್ಟಿದ ಕೊಳೆ ಮತ್ತು ವ್ಯವಸ್ಥೆಯನ್ನು ಬದಲಾಯಿಸಲು, ಕ್ರಾಂತಿಯೊಂದೇ ಸಾಲದು, ಜೊತೆ ಜೊತೆಗೆ ಬದಲಾಗುತ್ತಿರುವ ಕಾಲ ಮತ್ತು ತಂತ್ರಗಳ ಅನುಗುಣವಾಗಿ ನಮ್ಮ ಕಾರ್ಯತಂತ್ರ ರೂಪುಗೊಳ್ಳಬೇಕಿದೆ. ಈ ಕಾರಣಕ್ಕಾಗಿ ಮಾವೂ ಚೀನಾ ಕ್ರಾಂತಿಯ ಸಂದರ್ಭದಲ್ಲಿ “ ನಮ್ಮ ಪಾದಗಳ ಅಳತೆಗೆ ಅನುಗುಣವಾಗಿ ಪಾದರಕ್ಷೆಗಳು ಇರಬೇಕೇ ಹೊರತು, ಅವುಗಳ ಅಳತೆಗೆ ನಮ್ಮ ಪಾದಗಳನ್ನು ಕತ್ತರಿಸಕೊಳ್ಳಬಾರದು” ಎಂದು ನುಡಿದಿದ್ದ. ಪ್ರಸ್ತತ ಸನ್ನೀವೇಶದಲ್ಲಿ ಅರವಿಂದ್ ಕೇಜ್ರಿವಾಲ್  ಮತ್ತು ರಾಹುಲ್ ಗಾಂಧಿ ಅರಿಯಲೇ ಬೇಕಾದ ಸತ್ಯವಿದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ