ಗುರುವಾರ, ಫೆಬ್ರವರಿ 22, 2018

ರೈತ ನಾಯಕ ಕೆ.ಎಸ್. ಪುಟ್ಟಣ್ಣಯ್ಯ ಒಂದಿಷ್ಟು ನೆನಪುಗಳು


ಕರ್ನಾಟಕ ಕಂಡ ಅಪರೂಪದ ಜನಪ್ರತಿನಿಧಿರೈತ ನಾಯಕ ಹಾಗೂ ಸಜ್ಜನ ವ್ಯಕ್ತಿತ್ವದ ಹೋರಾಟಗಾರ ಕೆ.ಎಸ್. ಪುಟ್ಟಣ್ಣಯ್ಯನವರ ನಿಧನದೊಂದಿಗೆ ರಾಜ್ಯದಲ್ಲಿ ರೈತ ಸಂಘದ ಚಳುವಳಿಯ ಸೈದ್ಧಾಂತಿಕ ಹೋರಾಟವು ಒಂದು ರೀತಿಯಲ್ಲಿ ತಾರ್ಕಿಕ ಅಂತ್ಯ ಕಂಡಂತಾಗಿದೆ. ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರ ನಂತರ ಮುಂದುವರಿದಿದ್ದ ರೈತಸಂಘಟನೆಯ ಹೋರಾಟವು ಕೆ.ಎಸ್. ಪುಟ್ಟಣ್ಣಯ್ಯನಂತಹ ನಾಯಕರ ನಿರ್ಗಮನದ ನಂತರವೂ ರಾಜ್ಯದಲ್ಲಿ ಮುಂದುವರಿಯಬಹುದು ಅಥವಾ ಸಂಘಟನೆಗೆ ಹೊಸ ನಾಯಕರೂ  ಹುಟ್ಟಿ ಬರಬಹುದು. ಆದರೆ, ಇವೆಲ್ಲವೂ ನಿಸ್ವಾರ್ಥದಿಂದ ಕೂಡಿದ ಹಾಗೂ ರೈತ ಸಮುದಾಯದ ಸುಖ ದುಃಖಗಳಿಗೆ ಸ್ಪಂದಿಸಬಲ್ಲ ಹೋರಾಟಗಳಾಗುತ್ತವೆ ಎಂಬುದರ ಕುರಿತು ನನಗೆ ಯಾವುದೇ ರೀತಿಯ ನಂಬಿಕೆಯಿಲ್ಲ.  1980 ರಲ್ಲಿ ಆರಂಭವಾದ ರೈತ ಹೋರಾಟದ ದಿನಗಳಿಂದ ಹಿಡಿದು  2004 ರವರೆಗೆ ಅಂದರೆ, ಪ್ರೊ.ಎಂ.ಡಿ ನಂಜುಂಡಸ್ವಾಮಿಯವರು ನಿಧನರಾಗುವವರೆಗೆ ರೈತ ಸಂಘÀಟನೆಯ ಅನೇಕ ನಾಯಕರ ಜೊತೆ ಒಡನಾಡುತ್ತಾ, ಚಳುವಳಿಯಲ್ಲಿ ಪರೋಕ್ಷವಾಗಿ ಪಾಲ್ಗೊಳ್ಳುತ್ತಾ ಬಂದವರಲ್ಲಿ ನಾನೂ ಒಬ್ಬನಾಗಿದ್ದೆ. . ಅದೇ ರೀತಿ   ನಂತರದ ದಿನಗಳಲ್ಲಿ ರೈತಸಂಘ ಮತ್ತು ದಲಿತ ಸಂಘರ್ಷ ಸಮಿತಿ ಎರಡು ಸಂಘಟನೆಗಳ ನಾಯಕರ ಸ್ವಾರ್ಥ, ಕಪಟತನ ಇವುಗಳನ್ನು ನೋಡಿ ಬೇಸತ್ತು ಅವುಗಳ ಜೊತೆಗಿನ ಎಲ್ಲಾ ಭಾವನಾತ್ಮಕ ಸಂಬಂಧಗಳನ್ನು ಕಳೆದು ಕೊಂಡವರಲ್ಲಿ ಸಹ ನಾನೂ ಒಬ್ಬನಾಗಿದ್ದೇನೆ.
ಕರ್ನಾಟಕ ರಾಜ್ಯ ರೈತ ಸಂಘಟನೆಗೆ  ಆರಂಭದ ದಿನಗಳಿಂದಲೂ, ಆರ್ಥಿಕವಾಗಿ, ನೈತಿಕವಾಗಿ ಹೋರಾಟದ ಬಲ ತುಂಬಿದ್ದು ಮಾತ್ರವಲ್ಲದೆಇಡೀ ನಾಡು ರೈತ ಸಂಘದತ್ತ ತಿರುಗಿ ನೋಡುವಂತೆ ಮಾಡುವಲ್ಲಿ ಮಂಡ್ಯ ಜಿಲ್ಲೆಯ ರೈತನಾಯಕರು ವಹಿಸಿದ ಪಾತ್ರ ನಿರ್ಣಾಯಕವಾದುದು. ಮಂಡ್ಯ ಜಿಲ್ಲೆಗೆ ರೈತ ಹೋರಾಟವನ್ನು ವಿಸ್ತರಿಸುವಲ್ಲಿ ಶ್ರಮಿಸಿದವರೆಂದರೆ, ವಕೀಲರಾದ ಹನಕೆರೆಯ  ಹೆಚ್. ಶ್ರೀನಿವಾಸ್ಹೊಸ ಬೂದನೂರು ಗ್ರಾಮದ ಎಂ.ಶ್ರೀನಿವಾಸ್, ಕೊಪ್ಪಗ್ರಾಮದ ಕೆ.ಕೃಷ್ಣ, ಕೋಣಸಾಲೆ ಗ್ರಾಮದ ನರಸರಾಜು, ವರಗೇರಳ್ಳಿಯ ಅಶೋಕ್ ಮತ್ತು  ಬೂತನ ಹೊಸೂರು ಗ್ರಾಮದ ಎಸ್.ಡಿ. ಜಯರಾಂ ಇವರು ಪ್ರಮುಖರುಆದರೆ, ರೈತಸಂಘದ ದುರಂತವೆಂಬಂತೆ ಕಳೆದ ಮೂರೂವರೆ ದಶಕಗಳ ಕಾಲ ನಿರಂತರವಾಗಿ ದುಡಿದ ಮಂಡ್ಯ ಜಿಲ್ಲೆಯ ರೈತ ಸಂಘಟನೆಯ ಬಹುತೇಕ ನಾಯಕರು ಅಕಾಲಿಕ ಸಾವಿಗೆ ತುತ್ತಾಗಿದ್ದಾರೆ. 1981 ಡಿಸಂಬರ್ ತಿಂಗಳಿನಲ್ಲಿ ಪ್ರಥಮವಾಗಿ ನೆರೆಯ ಹಾಸನ ಮತ್ತು ಶಿವಮೊಗ್ಗ ಮೂಲಕ ರೈತ ಸಂಘದ ಹೋರಾಟವನ್ನು ಬರಮಾಡಿಕೊಂಡು ಅದರ ಸಂಘಟನಾ ಕಾರ್ಯದರ್ಶಿಯಾಗಿ ದುಡಿದ ಎಸ್.ಡಿ. ಜಯರಾಂ ಎಂಬ ನಾಯಕ ತನ್ನ 44 ನೇಯ ವಯಸ್ಸಿಗೆ ಇಪ್ಪತ್ತು ವರ್ಷಗಳ ಹಿಂದೆ ನಿಧನರಾದರು. ( ಕೆ.ಎಸ್.ಪುಟ್ಟಣ್ಣಯ್ಯನವರನ್ನು 1983 ರಲ್ಲಿ ರೈತ ಸಂಘಕ್ಕೆ ಕರೆದುಕೊಂಡು ಬಂದವರಲ್ಲಿ ಎಸ್.ಡಿ.ಜಯರಾಂ ಪ್ರಮುಖರು) ನಂತರ ಏಳೆಂಟು ವರ್ಷಗಳ ಹಿಂದೆ 1981 ರಿಂದ ಮನೆ, ಮಠವನ್ನು ತೊರೆದು ನಿರಂತರವಾಗಿ ರೈತಸಂಘದ ಚಳುವಳಿ ಹಾಗೂ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಮದ್ದೂರು ತಾಲ್ಲೂಕು ವರೆಗೇರಳ್ಳಿ ಅಶೋಕ ಎಂಬ ಗೆಳೆಯ ಮೃತಪಟ್ಟನು.
ಇವೆರೆಡು ಸಾವುಗಳನ್ನು ಮಂಡ್ಯ ಹಾಗೂ ರಾಜ್ಯ ರೈತ ಸಂಘಟನೆಗಳು ಜೀರ್ಣಿಸಿಕೊಳ್ಳುವ ಮೊದಲೇ ಕಳೆದ ಜನವರಿ ತಿಂಗಳು 24 ರಂದು ಬೆಸಗರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನನ್ನ ಸಹಪಾಠಿಯಾಗಿದ್ದು, ರೈತ ಹೋರಾಟಕ್ಕಾಗಿ ಅವಿವಾಹಿತನಾಗಿ ಉಳಿದು ದುಡಿಯುತ್ತಿದ್ದ ಹಾಗೂ ರಾಜ್ಯ ರೈತಸಂಘದ ಉಪಾಧ್ಯಕ್ಷನಾಗಿದ್ದ ಕೋಣಸಾಲೆ ನರಸರಾಜು ಹೃದಯಾಫಘಾತದಿಂದ ನಿಧನನಾದನು. ಇದಕ್ಕೂ ಮುನ್ನ ನನ್ನೂರಿನ ಕೆ.ಕೃಷ್ಣ ಕೊಪ್ಪ ಅವರು ಕಳೆದ ನವಂಬರ್ ತಿಂಗಳಲ್ಲಿ ನಿಧನರಾದರು.. ಕೆ.ಎಸ್. ಪ್ಮಟ್ಟಣ್ಣಯ್ಯನವರ ಆಪ್ತ ಬಳಗದಲ್ಲಿ ಒಬ್ಬನಾಗಿದ್ದ ನರಸರಾಜು ನಿಧನದಿಂದ ತೀರಾ ನೊಂದಿದ್ದ ಕೆ.ಎಸ್.ಪ್ಮಟ್ಟಣ್ಣಯ್ಯ ಒಂದು ರೀತಿಯಲ್ಲಿ ಏಕಾಂಗಿತನದ ನೋವನ್ನು ಅನುಭವಿಸುತ್ತಿದ್ದರು. ಕೆ.ಎಸ್. ಪುಟ್ಟಣ್ಣಯ್ಯನವರು ರೈತ ಸಂಘಕ್ಕೆ ಬರುವ ಮುಂಚಿನ ದಿನಗಳಿಂದಲೂ ನನಗೆ ಪರಿಚಿತರು.  “ಅಣ್ಣಯ್ಯಾಎಂದು ಅವರು ನನ್ನನ್ನು ಸಂಬೋಧಿಸುತ್ತಿದ್ದರೆ, ನಾನು ಅವರನ್ನು ಪುಟ್ಟಣ್ಣ ಎಂದು ಸಂಬೋಧಿಸುತ್ತಿದ್ದೆಕಳೆದ ಮೂರು ದಶಕಗಳ ಕಾಲ ತಮ್ಮ ಜೊತೆ ಹೋರಾಟದಲ್ಲಿ ಕೈಜೋಡಿಸಿದ್ದ  ಶ್ರೀರಂಗಪಟ್ಟಣ ತಾಲ್ಲೂಕು ರೈತ ಸಂಘಟನೆಯ ನಾಯಕ ನಂಜುಂಡೇಗೌಡಇತ್ತೀಚೆಗೆ ರಾಜಕೀಯ ಆಕಾಂಕ್ಷೆಯಿಂದ ಏಕಾಏಕಿ ರೈತಸಂಘವನ್ನು ತೊರೆದು ಬಿ.ಜೆ.ಪಿ. ಪಕ್ಷವನ್ನು ಸೇರಿದ್ದು ಅವರಿಗೆ ನೋವು ತಂದಿತ್ತು. ಜೊತೆಗೆ ಗೆಳೆಯ ನರಸರಾಜುವಿನ ಅಗಲಿಕೆ ಹಾಗೂ ಇತ್ತೀಚೆಗೆ ಪದೇ ಪದೇ ಕೈ ಕೊಡುತ್ತಿದ್ದ ಅವರ ಆರೋಗ್ಯ ಇವೆಲ್ಲವೂ ಪುಟ್ಟಣ್ಣಯ್ಯನವರನ್ನು ಚಿಂತೆಗೀಡು ಮಾಡಿದ್ದವು. ಮೈಸೂರು ನಗರದ ವಿಜಯನಗರದ ಮೂರನೆಯ ಹಂತದಲ್ಲಿ ಬಸವರಾಜು ಸರ್ಕಲ್ ಹತ್ತಿರ ಅವರ ಮನೆಯ ಸಮೀಪ ಕೇವಲ ಕೂಗಳತೆಯಲ್ಲಿ ನನ್ನ ಮಗನ ಮನೆ ಇರುವುದರಿಂದ ಮೈಸೂರಿಗೆ ಹೋದ ಸಂದರ್ಭದಲ್ಲಿ  ಖಾಸಾಗಿ ಭೇಟಿಯಾಗಿ ಮಾತನಾಡುತ್ತಿದ್ದೆ. ಸಂದರ್ಭಗಳಲ್ಲಿ ಯಾವುದೇ ಮುಚ್ಚು ಮರೆಯಿಲ್ಲದೆ ತಮ್ಮ ನೋವು, ಕಷ್ಟ ಸುಖಗಳನ್ನು ಪುಟ್ಟಣ್ಣಯ್ಯನವರು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು. ಇಂತಹ  ಸಹೃದಯರ ಅನಿರೀಕ್ಷಿತ ನಿರ್ಗಮನ ನನ್ನಂತಹವರ ಪಾಲಿಗೆ ತುಂಬಲಾರದ ಶೂನ್ಯ ಎನಿಸತೊಡಗಿದೆ. ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರ ನಂತರ ಅವರಷ್ಟೇ ಪ್ರಭಾವಶಾಲಿಯಾಗಿ ರೈತಸಂಘವನ್ನು ಮುನ್ನಡೆಸಿದ ಕೀರ್ತಿ ಕೆ.ಎಸ್.ಪುಟ್ಟಣ್ಣಯ್ಯನವರದು.
ಮಂಡ್ಯ ಜಿಲ್ಲೆಯಜನರೆಂದರೆ. ಒರಟುತನಕ್ಕೆ ಮತ್ತು ನೇರಾವಾದ ನಡೆ ಮತ್ತು ನುಡಿಗೆ ಹೆಸರುವಾಸಿ ನಿಜ. ಆದರೆ, ಇದರ ಜೊತೆಗೆ  ಅವರು ಅದ್ದೂರಿಯ ಆತಿಥ್ಯಕ್ಕೆ ಅದರಲ್ಲೂ ವಿಶೇಷವಾಗಿ ಮಾಂಸಹಾರದ ಭೋಜನಕ್ಕೆ ಪ್ರಸಿದ್ಧಿಯಾದವರು. ಅದರಲ್ಲೂ ವಿಶೇಷವಾಗಿ ಪಾಂಡುವಪುರದ ರೈತರು ಆತಿಥ್ಯ ನೀಡುವುದರಲ್ಲಿ ಎತ್ತಿದ ಕೈ. ನಾನು ಮಂಡ್ಯದಲ್ಲಿ ಇದ್ದ ದಿನಗಳಲ್ಲಿ ಪ್ರತಿಭಾನವಾರ ಪುಟ್ಟಣ್ಣಯ್ಯನವರ ಊರಾದ ಕ್ಯಾತನಹಳ್ಳಿ ಅಥವಾ ಪಾಂಡುವಪುರಕ್ಕೆ ಹೋದ ಸಂದರ್ಭದಲ್ಲಿ ಅಲ್ಲಿನ ಜನತಾ ಕ್ಲಿನಿಕ್ ನಡೆಸುತ್ತಿದ್ದ ಕ್ಯಾತನಹಳ್ಳಿಯ ನನ್ನ ಆತ್ಮೀಯ ಮಿತ್ರರಾದ ಡಾ.ಕೆ.ಶ್ರೀನಿವಾಸ್ ಅಥವಾ ಅದೇ ಊರಿನ ಪುಟ್ಟಣ್ಣಯ್ಯನವರ ಕೈಗೆ ಸಿಕ್ಕರೆ ಭರ್ಜರಿ ಭೋಜನ ಕಟ್ಟಿಟ್ಟ ಬುತ್ತಿ ಎನ್ನುವ ಹಾಗಿತ್ತು.  ಭಾರತದ ಎಲ್ಲಾ ಪ್ರದೇಶಗಳಲ್ಲಿ ಅನ್ನ, ಚಪಾತಿಯ ಮುಖ್ಯ ಆಹಾರವಾಗಿದ್ದು, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಪಲ್ಯ ಇವುಗಳು ಸೈಡ್ ಐಟಂ ಗಳಾದರೆ, ಮಂಡ್ಯ ಗೌಡರ ಮಾಂಸಹಾರದ ಭೋಜನದಲ್ಲಿ ಅನ್ನ ಮತ್ತು ಮುದೆ ಇತ್ಯಾದ್ದಿ ಸೈಡ್ ಐಟಂಗಳಾಗಿ,  ಮಾಂಸವು ಮುಖ್ಯ ಆಹಾರವಾಗಿರುವುದು ವಿಶೇಷ. ಇಂತಹ ಪದ್ಧತಿಯ ಆತಿಥ್ಯವನ್ನು ನಿರಂತರವಾಗಿ ನೀಡುತ್ತಾ ಬಂದವರಲ್ಲಿ ಪುಟ್ಟಣ್ಣಯ್ಯ ಮತ್ತು ಗೆಳೆಯರನ್ನು ಮರೆಯಲಾಗದು. ಕ್ಯಾತನಹಳ್ಳಿಗೆ ಹೋದಾಗ ಯಾವುದೋ ಅರಳಿಕಟ್ಟೆಯ ಮೇಲೆ ಅಥವಾ ಕಾಲುವೇ ಏರಿಯ ಮೇಲೆ ಕುಳಿತು ಲೋಕಾಭಿರಾಮವಾಗಿ ಹರಟುತ್ತಾ ಕೂರುತ್ತಿದ್ದ ಪುಟ್ಟಣ್ಣಯ್ಯನವರನ್ನು ನಾವು ಕಾಣಬಹುದಿತ್ತು.
ಕೆ.ಎಸ್. ಪ್ಮಟ್ಟಣ್ಣಯ್ಯನವರು ಕ್ಯಾತನಹಳ್ಳಿಯ ಸಾಕಷ್ಟು ಸಿರಿವಂತವಾದ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಮಂಡ್ಯ ನಗರಕ್ಕಿಂತ ಮೈಸೂರು ನಗರಕ್ಕೆ ಅವರ ಹುಟ್ಟೂರು ಕ್ಯಾತನಹಳ್ಳಿ ಹತ್ತಿgವಿದ್ದುದರಿಂದ ಅವರು ಪ್ರೌಢಶಾಲೆಯ ಶಿಕ್ಷಣದ  ನಂತರ ಮೈಸೂರಿನ ಸೆಂಟ್ ಫಿಲೋಮಿನಾ ಕಾಲೇಜಿನಲ್ಲಿ ಪಿ.ಯು.ಸಿ ಹಾಗೂ ಡಿ.ಬನುಮಯ್ಯ ಕಾಲೇಜಿನಲ್ಲಿ ಬಿ.. ಪದವಿ ಗಳಿಸಿ, ವಾಪಸ್ ಊರಿಗೆ ತೆರಳಿ ವ್ಯವಸಾಯದಲ್ಲಿ ನಿರತರಾಗಿದ್ದರು.   ಪೌರಾಣಿಕ ನಾಟಕ, ಜಾನಪದ ಕಲೆಗಳು ಮತ್ತು ಕಬಡ್ಡಿ ಕ್ರೀಡೆಯ ಕುರಿತು ಅಪಾರ ಆಸಕ್ತಿ ಇದ್ದ ಪುಟ್ಟಣ್ಣಯ್ಯನವರ ತನ್ನೂರಿನಲ್ಲಿ ಯುವ ರೈತ ಸಂಘವನ್ನು ಕಟ್ಟಿಕೊಂಡು  ಸದಾ ಕ್ರಿಯಾಶೀಲರಾಗಿದ್ದರು. (ಕುರುಕ್ಷೇತ್ರ ನಾಟಕದಲ್ಲಿ ಪುಟ್ಟಣ್ಣಯ್ಯ ಅಭಿನಯಿಸುತ್ತಿದ್ದ ದುರ್ರೋಧನನ ಪಾತ್ರವನ್ನು ನಾವ್ಯಾರೂ ಮರೆಯುವಂತಿಲ್ಲ) 1970 ದಶಕದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಯುವಕರು ಸಾಮಾಜಿಕ ನಾಟಕಗಳ ಪ್ರದರ್ಶನದ ನೆಪದಲ್ಲಿ ಮಂಡ್ಯ ನಗರದಿಂದ ರಂಗಭೂಮಿಯ ನಟಿಯರನ್ನು ಕರೆತಂದು, ಸಿನಿಮಾ ಹಾಡುಗಳ ಕ್ಯಾಸೆಟ್ ಹಾಕಿಕೊಂಡು ಕುಣಿಯುತ್ತಿದ್ದ ದಿನಗಳಲ್ಲಿ ಕೆಟ್ಟ ಪರಂಪರೆಗೆ ಅಂತ್ಯ ಹಾಡಬೇಕೆಂದು ನಿರ್ಧರಿಸಿ, 1976 ರಲ್ಲಿ ನನ್ನೂರು ಕೊಪ್ಪದಲ್ಲಿ ನಾವು ಒಂದಿಷ್ಟು ಸಮಾನ ಮನಸ್ಕ ಗೆಳೆಯರು ಪ್ರತಿ ವರ್ಷ ರಾಜ್ಯ ಮಟ್ಟದ ನಾಟಕ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದೆವುಪುಟ್ಟಣ್ಣಯ್ಯನವರು ತನ್ನೂರಿನ ನಾಟಕ ತಂಡವನ್ನು ಕರೆತಂದುಅಲ್ಲೇ ಕುಂತವ್ರೆಎಂಬ ಹೆಸರಿನ ಅಸ್ಪøಶ್ಯತೆಯ ಕುರಿತು ಜಾಗೃತಿ ಮೂಡಿಸುವ ನಾಟಕವೊಂದನ್ನು ಪ್ರದರ್ಶಿಸಿ ಪ್ರಶಸ್ತಿಯನ್ನು ಪಡೆದಿದ್ದರು. ಇಂತಹ ಕ್ರಿಯಾಶೀಲ ಹಾಗೂ ಸದಾ ಜನಪರವಾಗಿ ಆಲೋಚಿಸುತ್ತಿದ್ದ ಕೆ.ಎಸ್. ಪುಟ್ಟಣ್ಣ ಎರಡು ಬಾರಿ ಶಾಸಕರಾಗಿ ವಿಧಾನ ಸಭೆಯಲ್ಲಿ ಒಬ್ಬ ಜನಪ್ರತಿನಿಧಿ ಹೇಗಿರಬೇಕು ಮತ್ತು  ಹೇಗೆ ಮಾತನಾಡಬೇಕು ಎಂಬುದರ ಕುರಿತು ಎಲ್ಲರಿಗೂ ಮಾದರಿಯಾಗಿದ್ದರು.
ನಾನು ಬಲ್ಲಂತೆ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರಲ್ಲಿ ಒಬ್ಬ ಅದ್ಭುತ ಆಲೋಚನಾಗಾರ ಮತ್ತು ಸಂಘಟನಕಾರನಿದ್ದ. ಅದೇ ರೀತಿಯಲ್ಲಿ ಅವರೊಳಗೆ ವಿಧ್ವಂಸಕನೂ ಇದ್ದ. ಒಂದು ಸಂಘಟನೆಯಲ್ಲಿ ನಾಯಕನಾದವನಿಗೆ ಇರಬೇಕಾದ ತಾಳ್ಮೆ ಅಥವಾ ವಿವೇಚನೆ ಅವರಲ್ಲಿ ಇರಲಿಲ್ಲ. ಆರಂಭದ ದಿನಗಳಲ್ಲಿ ಎಂ.ಡಿ. ಸುಂದರೇಶ್, ಹಾಸನದ ಮಂಜುನಾಥ ದತ್ತ ಮತ್ತು ಶಿವಮೊಗ್ಗದ ಕೆ.ಟಿ.ಗಂಗಾಧರ್ ಇವರ ಮಾತಿಗೆ ಮನ್ನಣೆ ನೀಡುತ್ತಿದ್ದ ನಂಜುಂಡಸ್ವಾಮಿಯವರು ನಂತರ ದಿನಗಳಲ್ಲಿ ಸುಂದರೇಶ್ ಅವರ ನಿಧನ ಮತ್ತು ದತ್ತ ಹಾಗೂ ಗಂಗಾಧರ್ ಇವರು ರೈತ ಸಂಘದಿಂದ ನಿರ್ಗಮಿಸಿದ ನಂತರ ಒಂದು ರೀತಿಯಲ್ಲಿ ಸರ್ವಾಧಿಕಾರಿ ಮನೋಭಾವ ಬೆಳಸಿಕೊಂಡಿದ್ದರು. ಚುನಾವಣೆ ವಿಷಯದಲ್ಲಿ ಹಾಗೂ ಹಣಕಾಸು ಹಾಗೂ ಇನ್ನಿತರೆ ವಿಷಯಗಳಲ್ಲಿ ಉಂಟಾದ ಬಿರುಕು ರೈತ ಸಂಘ ಒಡೆಯಲು ಕಾರಣವಾಯಿತು. ಇಂತಹ ಸ್ಥಿತಿಯಲ್ಲಿ ನಂಜುಂಡಸ್ವಾಮಿಯವರಿಂದ ಸಿಡಿದು, ಅವರಷ್ಟೇ ಪ್ರಬಲವಾಗಿ ರೈತ ಸಂಘಟನೆಯನ್ನು ಕಟ್ಟಿ ಮುನ್ನಡೆಸಿದವರಲ್ಲಿ ಪುಟ್ಟಣ್ಣಯ್ಯನವರು ಪ್ರಮುಖರು.

ಕೆ.ಎಸ್. ಪುಟ್ಟಣ್ಣಯ್ಯ ತಮ್ಮ ಗುರು ಪ್ರೊ. ನಂಜುಂಡಸ್ವಾಮಿಯವರಿಂದ ವೈಚಾರಿಕ ಭಿನ್ನಾಭಿಪ್ರಾಯದಿಂದ ದೂರವಾಗಿದ್ದರೂ ಸಹ ಎಂದಿಗೂ ಅವರ ಕುರಿತು ಖಾಸಾಗಿ, ಸಾರ್ವಜನಿಕವಾಗಿ ಕೆಟ್ಟ ಮಾತುಗಳನ್ನಾಡಿದವರಲ್ಲ. ನಂಜುಂಡಸ್ವಾಮಿ ನಿಧನರಾದ ಸಂದರ್ಭದಲ್ಲಿ ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲು ಪುಟ್ಟಣ್ಣಯ್ಯನವರು ರಾಜರಾಜೆಶ್ವರಿ ನಗರದ ಅವರ ಮನೆಗೆ ಹೋದಾಗ, ನಂಜುಂಡಸ್ವಾಮಿಯವರ ಮಕ್ಕಳು ಮತ್ತು ಅವರ ಪತ್ನಿ ನಡೆದುಕೊಂಡ ರೀತಿಯನ್ನು ಯಾವೊಬ್ಬ ರೈತ ಸಂಘದ ಕಾರ್ಯಕರ್ತ ಇವೊತ್ತಿಗೂ ಕ್ಷಮಿಸಲಾರ. ಆದರೆ, ಪುಟ್ಟಣ್ಣಯ್ಯನವರು ಅಂತಹ ಅಪಮಾನಗಳನ್ನು ಮರೆತಿದ್ದರುಪ್ರೊಪೆಸರ್  ನಿಧನಾನಂತರ ರೈತ ಸಂಘಟನೆಗಳು ಒಗ್ಗೂಡಬೇಕು, ರೈತ ಸಮುದಾಯಕ್ಕೆ ಒಳಿತಾಗಬೇಕು ಎಂದು ಹಂಬಲಿಸಿದ ಅವರು, ಎಲ್ಲಾ ಪ್ರಗತಿ ಪರ ಸಂಘಟನೆಗಳ ಜೊತೆ ಕೈ ಜೋಡಿಸುತ್ತಾ ಸಾರ್ವಜನಿಕ ಬದುಕಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಕೆಟ್ಟು ಕೆರ ಹಿಡಿದಿರುವ ಇವೊತ್ತಿನ ಸಾರ್ವಜನಿಕ ಬದುಕು, ರಾಜಕೀಯ ಅಥವಾ ಸಾಮಾಜಿಕ ಹೋರಾಟದಲ್ಲಿ ಪುಟ್ಟಣ್ಣಯ್ಯನಂತಹ ಅಸಾಮಾನ್ಯ ಹೋರಾಟಗಾರನನ್ನು ಹುಡುಕಿ ತರುವುದು ನಿಜಕ್ಕೂ ಕಷ್ಟದ ಸಂಗತಿ. ಇನ್ನು ಮುಂದೆ ಕನಾಟಕದ ಸಾಮಾಜಿಕ ಹೋರಾಟದ ಇತಿಹಾಸದಲ್ಲಿ ಪ್ರೊ.ನಂಜುಂಡಸ್ವಾಮಿ ಮತ್ತು ಪುಟ್ಟಣ್ಣಯ್ಯನಂತಹ ಹೋರಾಟಗಾರರು ದಂತೆ ಕಥೆಗಳಾಗಿ  ಉಳಿದುಕೊಳ್ಳಬಲ್ಲರು.
( ಕರಾವಳಿ ಮುಂಜಾವು ಪತ್ರಿಕೆಯ “ ಜಗದಗಲ” ಅಂಕಣ ಬರಹ)


ಶನಿವಾರ, ಫೆಬ್ರವರಿ 17, 2018

ಕಳ್ಳರ ಪಾಲಿಗೆ ತಿಜೋರಿಗಳಾಗುತ್ತಿರುವ ಭಾರತದ ಬ್ಯಾಂಕುಗಳು

ಅಂತರಾಷ್ಟ್ರೀಯ ಮಟ್ಟದ ಹಗಲು ದರೋಡೆಕೋರರ ಪಾಲಿಗೆ ಇತ್ತೀಚೆಗಿನ ದಿನಗಳಲ್ಲಿ ಭಾರತ ನಿಜವಾದ ಸ್ವರ್ಗ ಎನಿಸಿದೆ. ಉದ್ಯಮಿಗಳ ಮುಖವಾಡ ತೊಟ್ಟು, ಭಾರತದ ಯಾವುದೇ ಪ್ರಮುಖ ರಾಜಕೀಯ ಪಕ್ಷಕ್ಕೆ ದೇಣಿಗೆ ಹೆಸರಿನಲ್ಲಿ ಒಂದಿಷ್ಟು ಎಂಜಲು ಕಾಸನ್ನು ಬಿಸಾಡಿ ರಾಜಕಾರಣಿಗಳ ಸ್ನೇಹ ಸಂಪಾದಿಸಿಕೊಂಡರೆ ಸಾಕು. ದೇಶದಲ್ಲಿ ಮಾಡಬಹುದಾದ ಯಾವುದೇ ರೀತಿಯ ಅನಾಚಾರ, ಅಕ್ರಮ ವ್ಯವಹಾರ ಮತ್ತು ಬ್ಯಾಂಕುಗಳ ಹಗಲು ದರೋಡೆಗೆ ಪರವಾನಗಿ ದೊರೆಯುತ್ತದೆ. ಇಂತಹ ಪರವಾನಗಿ ನಿಮ್ಮ ಬಳಿ ಇದ್ದರೆ, ಇಲ್ಲಿನ ರಾಜಕಾರಣಿಗಳು, ಅಧಿಕಾರಿಗಳು ಸದಾ ನಿಮ್ಮ ಅಂಗಾಲುಗಳನ್ನು ಕಿಂಚಿತ್ತೂ ಕೊಳೆ ಇಲ್ಲದಂತೆ ನೆಕ್ಕಲು ಸದಾ ಸಿದ್ಧರಿರುತ್ತಾರೆ. ಇತ್ತೀಚೆಗೆ ನೀರವ್ ಮೋದಿ ಎಂಬ ಬೆಲ್ಜಿಂಯಂ ದೇಶದಲ್ಲಿ ಹುಟ್ಟಿ ಬೆಳೆದು ಅಲ್ಲಿನ ಪೌರತ್ವ ಪಡೆದಿರುವ ಗುಜರಾತ್ ಮೂಲದ ವಜ್ರದ ಉದ್ಯಮಿ ಭಾರತದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಇತರೆ ಬ್ಯಾಂಕ್ ಗಳಿಗೆ ಬರೋಬ್ಬರಿ ಹನ್ರ್ನೆಂದು ಸಾವಿರ ಕೋಟಿರೂಪಾಯಿಗಳ ಉಂಡೆ ನಾಮ ತಿಕ್ಕಿರುವ ಪರಿಯನ್ನು ಗಮನಿಸಿದರೆ, ಭಾರತದ ರಾಜಕೀಯ ಹಾಗೂ ಆರ್ಥೀಕ ವ್ಯವಸ್ಥೆಯು ಎಷ್ಟೊಂದು ಸಡಿಲವಾಗಿದೆ ಎಂಬುದು ನಮಗೆ ಅರಿವಾಗಬಲ್ಲದು. ಇದಕ್ಕೆ ಪೂರಕವಾಗಿ ದನಗಳಿರಲಿ, ಕತ್ತೆಗಳನ್ನು ಕಾಯಲು ಅನಾಲಾಯಕ್ಕಾದ ಜನರನ್ನು ನಾವು ಅಧಿಕಾರದ ಸ್ಥಾನದಲ್ಲಿ ಕೂರಿಸಿ, ಅವರನ್ನು ಇಂದ್ರ-ಚಂದ್ರ ಎಂದು  ಗುಣಗಾನ ಮಾಡುತ್ತಾ ನಮ್ಮ ಕಾಲುಗಳ ಮೇಲೆ ನಾವೇ ಕಲ್ಲು ಎತ್ತಿ ಹಾಕಿಕೊಳ್ಳುವ ಬೌದ್ಧಿಕ ದಾರಿದ್ರ್ಯಕ್ಕೆ ತಳ್ಳಲ್ಪಟ್ಟಿದ್ದೇವೆ.
 ಇಂತಹ ಅನಾಹುತದ ಹಾಗೂ ಬೌದ್ಧಿಕ ದಾರಿದ್ರ್ಯದ ದಿನಗಳಲ್ಲಿಯೂ ಸಹ ಭಾರತದ ರಾಜಕೀಯದ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದ ಯುದ್ಧೋನ್ಮಾದ ಮತ್ತು ರಾಜಕೀಯ ನಾಯಕರ ರಣೋತ್ಸಾಹ ಎಲ್ಲೆಡೆ ಕಂಡುಬರುತ್ತಿದೆಹಿಂದಿನ ದಿನಗಳಲ್ಲಿ  ದೇಶದ ಯಾವುದೇ ರಾಜ್ಯಗಳ ವಿಧಾನಸಭಾ ಚುನಾವಣೆ ಅಥವಾ ಲೋಕಸಭೆಗೆ ನಡೆಯುತ್ತಿದ್ದ ಸಾರ್ವತ್ರಿಕ ಚುನಾವಣೆಯ ದಿನಾಂಕಗಳು ಪ್ರಕಟವಾದ ನಂತರ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುತ್ತಿದ್ದವು. ರಾಜಕೀಯ ಪಕ್ಷಗಳ ಪ್ರಣಾಳಿಕೆ, ಪ್ರಚಾರ, ಕರಪತ್ರ, ಪೋಸ್ಟರ್ ಅಥವಾ ಬ್ಯಾನರ್ ಇವುಗಳಿಂದ ಹಿಡಿದು, ಪ್ರಾದೇಶಿಕ ಅಥವಾ ಜಿಲ್ಲಾಮಟ್ಟದಲ್ಲಿ ನಡೆಯುತ್ತಿದ್ದ ರಾಜಕೀಯ ಸಮಾರಂಭಗಳಿಗೆ ಪಕ್ಷದ ವತಿಯಿಂದ ಹಣವನ್ನು ಖರ್ಚು ಮಾಡಲಾಗುತ್ತಿತ್ತುಚುನಾವಣೆ ಮುಗಿದ ನಂತರ. ರಾಜಕೀಯ ಪಕ್ಷಗಳು ಸಾರ್ವಜನಿಕವಾಗಿ ಲೆಕ್ಕ ಪತ್ರವನ್ನು ಪ್ರದರ್ಶಿಸಿ, ಪುನಃ ಸಾರ್ವಜನಿಕರಿಂದ ಪಕ್ಷಕ್ಕೆ ದೇಣಿಗೆ ಕೇಳುವ ನೈತಿಕತೆಯ ಸಂಪ್ರದಾಯವಿತ್ತು. ಆದರೆ, ಈಗ ಪ್ರಜಾ ಪ್ರಭುತ್ವ ವ್ಯವಸ್ಥೆಯ ಹೆಸರಿನಲ್ಲಿ ಆಡಳಿತ ನಡೆಸುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಚುನಾವಣೆಯ ಘೋಷಣೆಗೆ ಮುನ್ನವೇ  ಸರ್ಕಾರದ ಸಾರ್ವಜನಿಕ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿರುವ ವೈಖರಿಯನ್ನು ಗಮನಿಸಿದಾಗ ಅಥವಾ ದೇಶ ತಲುಪಿರುವ ಅಧೋಗತಿಯನ್ನು ನೆನೆದಾಗ ಭವಿಷ್ಯದ ಬಗ್ಗೆ ಭಯವಾಗುತ್ತದೆ. ಏಕೆಂದರೆ, ಇತ್ತೀಚೆಗಿನ ದಿನಗಳಲ್ಲಿ ಕಾರ್ಪೋರೇಟ್ ಸಂಸ್ಥೆಗಳು, ಬೃಹತ್ ಕೈಗಾರಿಕಾ ಸಂಸ್ಥೆಗಳು ಮತ್ತು ಉದ್ಯಮಿಗಳಿಂದ ರಾಜಕೀಯ ಪಕ್ಷಗಳಿಗೆ ಹರಿದು ಬರುತ್ತಿರುವ ದೇಣಿಗೆಯ ಹಣದ ಪ್ರಮಾಣವನ್ನು ಒಮ್ಮೆ ಗಮನಿಸಿದರೆ, ಭಾರತದ ಭ್ರಷ್ಟಾಚಾರದ ಮೂಲ ಬೇರು ಎಲ್ಲಿದೆ ಎಂಬುದು ನಮಗೆ ಅರಿವಾಗುತ್ತದೆ.
2012 ರಿಂದ 2016 ರವರೆಗೆ ಭಾರತದ ಐದು ಪ್ರಮುಖ ರಾಜಕೀಯ ಪಕ್ಷಗಳು ಒಟ್ಟು 2987 ಕೈಗಾರಿಕೋದ್ಯಮಿಗಳು ಮತ್ತು ವ್ಯಾಪರಸ್ಥರಿಂದ ಪಡೆದಿರುವ ದೇಣಿಗೆಯ ಹಣದಲ್ಲಿ ಭಾರತೀಯ ಜನತಾ ಪಕ್ಷವು 705ಕೋಟಿ 81 ಲಕ್ಷ ರೂಪಾಯಿಗಳು ಸಂದಾಯವಾಗಿದ್ದರೆರಾಷ್ಟ್ರೀಯ ಕಾಂಗ್ರೇಸ್ ಪಕ್ಷಕ್ಕೆ 198 ಕೋಟಿ, 16 ಲಕ್ಷ ರೂಪಾಯಿಗಳ ಹಣ ಸಂದಾಯವಾಗಿದೆ. ಇಷ್ಟು ಮಾತ್ರವಲ್ಲದೆಭಾರತದ ಕಾರ್ಪೋರೇಟ್ ಹಾಗೂ ಬಹುರಾಷ್ಟ್ರೀಯ ಕಂಪನಿಗಳು ಒಟ್ಟು 956 ಕೋಟಿ, 77 ಲಕ್ಷ ರೂಪಾಯಿ ಹಣವನ್ನು ದೇಣಿಗೆಯಾಗಿ ನೀಡಿದ್ದು ಇದರಲ್ಲಿ ಶೇಕಡ 73.8 ರಷ್ಟು ದೇಣಿಗೆ ಹಣವನ್ನು ಭಾರತೀಯ ಜನತಾ ಪಕ್ಷಕ್ಕೆ ಸಂದಾಯವಾಗಿದೆ ಎಂಬುದು ಅಧಿಕೃತ ಅಂಕಿ ಅಂಶಗಳು ದೃಢಪಡಿಸಿವೆ. ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗವು 20 ಸಾವಿರ ರೂಪಾಯಿಗಿಂತ ಅಧಿಕ ಮೊತ್ತದ  ದೇಣಿಗೆ ನೀಡುವವರ ಹಾಗೂ ಸಂಘ ಸಂಸ್ಥೆಗಳ ವಿವರಗಳನ್ನು ಅಧಿಕೃತವಾಗಿ ರಾಜಕೀಯ ಪಕ್ಷಗಳು ಘೋಷಿಸಬೇಕು ಎಂದು ನಿಬಂಧನೆಯನ್ನು ಹಾಕಿದ್ದರೂ ಸಹ ಹಲ್ಲು ಕಿತ್ತ ಹಾವಿನಂತಿರುವ ಚುನಾವಣಾ ಆಯೋಗದ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಇಂತಹ ಅರಾಜಕತೆಯ ದೇಶದಲ್ಲಿ ಹಣದ ಮೂಲಕ ಇಡೀ ವ್ಯವಸ್ಥೆಯನ್ನು ಮಣಿಸುವ ಕಲೆಯನ್ನು ಎಲ್ಲಾ ಉದ್ಯಮ ಸಾಹಿಸಿಗಳು ಮನಗಂಡಿದ್ದಾರೆ. ಬ್ಯಾಂಕುಗಳಿಗೆ, ಸರ್ಕಾರಗಳಿಗೆ ಮತ್ತು ವ್ಯವಸ್ಥೆಗೆ ಮುಂಡಾ ಮೋಚುವುದು ಕೂಡ ಒಂದು ಯಶಸ್ವಿ ಉದ್ಯಮ ಎಂದು ಇವರೆಲ್ಲಾ ಭಾವಿಸಿದ್ದಾರೆ.
ಕಳೆದ ಐದು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ನಡೆದಿರುವ ಹಗರಣಗಳು ಮತ್ತು ಇಲ್ಲಿಂದ ತಪ್ಪಿಸಿಕೊಂಡು ಹೋಗಿ ವಿದೇಶದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿರುವವರ ಇತಿಹಾಸವನ್ನು ಗಮನಿಸಿದಾಗ  ದೇಶದ ರಾಜಕಾರಣಿಗಳ ಮತ್ತು ಅಧಿಕಾರಿಗಳ ನೈತಿಕತೆ ಮತ್ತು ಪ್ರಾಮಾಣಿಕತೆ ಎಂತಹ ಮಟ್ಟದಲ್ಲಿದೆ ಎಂಬುದು ನಮಗೆ ಅರ್ಥವಾಗುತ್ತದೆಕ್ರಿಕೇಟ್ ಪಂದ್ಯಕ್ಕೆ .ಪಿ.ಎಲ್. ಹೆಸರಿನಲ್ಲಿ ಜೂಜಾಟದ ಸ್ಪರ್ಶ ನೀಡಿ, ಪಂದ್ಯಗಳ ಮೂಲಕ ಹಣದ ಹೊಳೆ ಹರಿಯುವಂತೆ ಮಾಡಿದ ಲಲಿತ್ ಮೋದಿ ಎಂಬ ವಂಚಕನೊಬ್ಬ ಹಣ, ಹೆಂಡ ಮತ್ತು ಮಾನಿನಿಯರ ಮೂಲಕ ದೇಶದ ಬಹುತೇಕ ಕ್ರಿಕೆಟ್ ಸಂಸ್ಥೆಗಳು, ರಾಜ್ಯ ಸರ್ಕಾರಗಳು ಮತ್ತು ಭಾರತದ ಕ್ರಿಕೇಟ್ ನಿಯಂತ್ರಣ ಮಂಡಳಿಯನ್ನು ಭ್ರಷ್ಟಗೊಳಿಸಿ, ಸಾವಿರಾರು ಕೋಟಿ ರೂಪಾಯಿಗಳ  ಹಗರಣಗಳಿಂದ ತಪ್ಪಿಸಿಕೊಂಡು ಪರಾರಿಯಾದವನು ಇಂದು ಇಂಗ್ಲೇಂಡ್ ಮತ್ತು ದಕ್ಷಿಣ ಆಫ್ರಿಕಾದ ಕಡಲ ತೀರಗಳಲ್ಲಿ ಮಾನಿನಿಯರ ಜೊತೆ ಮೋಜಿನಾಟದಲ್ಲಿ ನಿರತನಾಗಿದ್ದಾನೆ.
ಭಾರತದ ಕಾರ್ಪೋರೇಟ್ ವಲಯದಲ್ಲಿ ಕೌಬಾಯ್ ಎಂದು ಪ್ರಖ್ಯಾತನಾಗಿದ್ದ ವಿಜಯ್ಮಲ್ಯ ಎಂಬ ಉದ್ಯಮಿಯು ಸುಮಾರು 9 ಸಾವಿರ ಕೋಟಿ ರೂಪಾಯಿಗಳ ಸಾಲಕ್ಕೆ ಕೈ ಎತ್ತಿ, ರಾಜಾ ರೋಷವಾಗಿ ಬ್ರಿಟೀಷ್ ಏರ್ವೇಸ್ ವಿಮಾನದಲ್ಲಿ ಲಂಡನ್ ನಗರಕ್ಕೆ ಪ್ರಯಾಣ ಬೆಳಸಿದ   ಸಾಹಿಸಿ ಎಂದು ಹೇಳಬೇಕು. ಈವರೆಗೆ ಈತನನ್ನು ಭಾರತಕ್ಕೆ ಕರೆತಂದು ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ. ದಕ್ಷಿಣ ಆಫ್ರಿಕಾದಲ್ಲಿರುವ 28 ಸಾವಿರ ಎಕರೆ ಅರಣ್ಯ ಪ್ರದೇಶದ ಮಾಲಿಕತ್ವವನ್ನು ಹೊಂದಿರುವ ವಿಜಯ ಮಲ್ಯ ಇದೀಗ  ಲಂಡನ್ ನಗರದಲ್ಲಿರುವ ವೈಭವೋಪೇತ ಅರಮನೆಯಂತಹ ಬಂಗಲೆಯಲ್ಲಿ ಪತ್ನಿ ಹಾಗೂ ಪುತ್ರ ಸಿದ್ಧಾರ್ಥನೊಂದಿಗೆ ವಾಸವಾಗಿದ್ದಾನೆ. ಜೊತೆಗೆ  ಪ್ರತಿ ವಾರ ಹದಿನಾರು ಲಕ್ಷ ರೂಪಾಯಿ ಖರ್ಚು ಮಾಡಲು ಇಂಗ್ಲೆಂಡ್ ನ್ಯಾಯಾಲಯದಲ್ಲಿ ಅನುಮತಿ ಪಡೆದು ಬದುಕುತ್ತಿದ್ದಾನೆ. ಇದೇ ರೀತಿ ದೀಪಕ್ ತಲ್ವಾರ್ ಮತ್ತು ಸಂಜಯ್ ಭಂಡಾರಿ ಇಬ್ಬರು ವಂಚಕರು ದೇಶ ತೊರೆದು ವಿದೇಶದಲ್ಲಿ ಸುರಕ್ಷಿತವಾಗಿ ವಾಸವಾಗಿದ್ದಾರೆ.

ಇದೀಗ ಬೆಳಕಿಗೆ ಬಂದಿರುವ ನೀರವ್ ಮೋದಿ ಎಂಬ ವಜ್ರದ ವ್ಯಾಪಾರಿಯ ಮೋಸದ ಹಗರಣದ ಇತಿಹಾಸವನ್ನು ಗಮನಿಸಿದಾಗ ಇದು 2011 ರಿಂದ ಅಂದರೆ, ಸತತ ಏಳುವರ್ಷಗಳ ಬ್ಯಾಂಕಿನ ಸಾಲದ ಖಾತರಿ ಪತ್ರವನ್ನು ದುರುಪಯೋಗ ಪಡಿಸಿಕೊಂಡಿರುವುದು ಪತ್ತೆಯಾಗಿದೆ. ಹಗರಣದಲ್ಲಿ ಕಮಿಷನ್ ಆಸೆಗಾಗಿ ಸ್ವತಃ ಬ್ಯಾಂಕ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ಒಂದು ಖಾತೆಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಯುವಾಗ ಕುರಿತು ಪಂಜಾಂಬ್ ನ್ಯಾಷನಲ್ ಬ್ಯಾಂಕಿನ ಹಿರಿಯ ಅಧಿಕಾರಿಗಳಾಗಲಿ ಅಥವಾ ರಿಸರ್ವ್ ಬ್ಯಾಂಕಿನ ಅಧಿಕಾರಿಗಳು ಕೂಲಂಕುಶವಾಗಿ ಗಮನ ಹರಿಸಿಲ್ಲ ಅಥವಾ ನಿಗಾ ವಹಿಸಿಲ್ಲವೆಂದರೆ. ಭಾರತದ ಅರ್ಥವ್ಯವಸ್ಥೆಯ ಲೋಪ ಎಷ್ಟೊಂದು ಗಂಭಿರವಾಗಿದೆ ಎಂಬುವುದು ಜನ ಸಾಮಾನ್ಯನಿಗೂ ಅರ್ಥವಾಗುತ್ತದೆ. ಉದ್ದಿಮೆದಾರರು ವಿದೇಶದಿಂದ ಆಮದು ಮಾಡಿಕೊಂಡ ವಸ್ತುಗಳಿಗೆ ಬ್ಯಾಂಕುಗಳು ನೀಡುವ ಸಾಲದ ಖಾತರಿ ಪತ್ರದ ಅವಧಿ ಕೇವಲ 100 ದಿನಗಳು ಮಾತ್ರವಾಗಿರುತ್ತದೆ. ಅವಧಿಯಲ್ಲಿ ನಿಗದಿ ಪಡಿಸಿದ ಬಡ್ಡಿಯೊಂದಿಗೆ ಹಣವನ್ನು ಬ್ಯಾಂಕಿಗೆ ಖಾತೆದಾರನು ಸಂದಾಯ ಮಾಡಿರಬೇಕು. ಆದರೆ. ನೀರವ್ ಮೋದಿಯ ಪ್ರಕರಣದಲ್ಲಿ ಆತನ ಖಾತೆಯನ್ನು ಪರಿಶೀಲಿಸದೆ, ನಿರಂತರವಾಗಿ ಹಣವನ್ನು ಸಾಲದ ರೂಪದಲ್ಲಿ ಸಂದಾಯ ಮಾಡಿರುವುದನ್ನು ಗಮನಿಸಿದಾಗ ಈತ ಎಷ್ಟೊಂದು ಪ್ರಭಾವಶಾಲಿ ಎಂಬುದು ಅರಿವಾಗುತ್ತದೆ.
ದೇಶದ ಪ್ರಧಾನಿ ಹುದ್ದೆಯಲ್ಲಿರುವ ವ್ಯಕ್ತಿಯುನಾನು  ಭಾರತದ ಎಲ್ಲಾ ಪ್ರಜೆಗಳ ಹಿತವನ್ನು ಅವರ ಭಾಷೆ, ಧರ್ಮ, ಜಾತಿ ಮತ್ತು ಪ್ರದೇಶಗಳ ಎಲ್ಲೆಯನ್ನು ಮೀರಿ ಕಾಪಾಡಬೇಕಾದ ನೈತಿಕ ಕರ್ತವ್ಯದಲ್ಲಿದ್ದೀನಿಎಂಬ ಅಂಶವನ್ನು ಮರೆತು ಎಷ್ಟೋ ವರ್ಷಗಳಾದಂತಿದೆ. ಕೇವಲ ಒಂದು ಪಕ್ಷದ ಪ್ರತಿನಿಧಿಯಂತೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವುದು ಅಥವಾ ಒಂದು ನಗರ ಸಭೆಯ ಅಧ್ಯಕ್ಷನಂತೆ ಚುನಾವಣೆಯನ್ನು ಗೆದ್ದುಕೊಡುವುದು  ಮಾತ್ರ ನನ್ನ ಕರ್ತವ್ಯ ಎಂದು ಭಾವಿಸಿರುವುದು ಭಾರತದ ಪ್ರಜಾ ಪ್ರಭುತ್ವದ ಅತಿ ದೊಡ್ಡ ದುರಂತವೆಂದರೆ ತಪ್ಪಾಗಲಾರದು. 2016 ಜುಲೈ ತಿಂಗಳಿನಲ್ಲಿ ನೀರವ್ ಮೋದಿಯ ಕುರಿತಂತೆ ಪ್ರಧಾನಿ ಕಾರ್ಯಾಲಯಕ್ಕೆ ದೂರು ದಾಖಲಾದರೂ ಸಹ ಅದನ್ನು ಗಂಭೀರವಾಗಿ ಪರಿಗಣಿಸದೆ, ಕಾರ್ಪೋರೇಟ್ ವ್ಯವಹಾರಗಳ ವಿಭಾಗಕ್ಕೆ ಒಂದು ಸಾಮಾನ್ಯ ದೂರಿನಂತೆ ವರ್ಗಾಯಿಸಿರುವುದು ಪ್ರಧಾನಿಯವರ ಬೇಜವಬ್ದಾರಿತನಕ್ಕೆ ಸಾಕ್ಷಿಯಾಗಿದೆಭಾರತದ ಸರ್ಕಾರದ ನಿಯೋಗದ ಜೊತೆ  ಪ್ರತಿನಿಧಿಯಾಗಿ ಹೋಗದಿದ್ದರೂ ಸಹನೀರವ್ ಮೋದಿ ಎಂಬಾತ ದಾವೂಸ್ ನಗರದಲ್ಲಿ ಪ್ರಧಾನಿಯನ್ನು ಭೇಟಿ ಮಾಡಲು ಹೇಗೆ ಸಾಧ್ಯವಾಯಿತು? ಇದೂ ಸಾಲದೆಂಬಂತೆ   ನಿಯೋಗದ ಸದಸ್ಯರ ಜೊತೆ ನಿಂತು  ಪೋಟೊ ತೆಗೆಸಿಕೊಂಡಿದ್ದಾನೆ. ಈ ಬಗ್ಗೆ  ನರೇಂದ್ರ ಮೋದಿಯವರು ಭಾರತದ ಜನತೆಗೆ ಉತ್ತರ ನೀಡಬೇಕಿದೆ.

ವರ್ಷಕ್ಕೆ 55 ಲಕ್ಷ ಉದ್ಯೋಗ ಸೃಷ್ಟಿ ಮಾಡುತ್ತೀನಿ ಎಂದು ತಮ್ಮ 58 ಇಂಚಿನ ಎದೆಯುಬ್ಬುಸಿ  ಹೇಳಿಕೆ ನೀಡಿದ್ದ ಪ್ರಧಾನಿ  ಈಗ ಪಕೋಡ ಮಾರಾಟ ಮಾಡಿ ಉದ್ಯೋಗ ಸಂಪಾದಿಸಿ ಎಂಬ ಆತ್ಮ ವಂಚನೆಯ ಮಾತುಗಳನ್ನಾಡುತ್ತಿರುವ ಪ್ರಧಾನಿ ಮೋದಿಯವರ   ಹಗರಣ ಕ್ಷಣಕ್ಕೆ ಏನೂ ಅಲ್ಲದಿರಬಹುದು. ಆದರೆ. ಮುಂದಿನ ದಿನಗಳಲ್ಲಿ ಇದು ಎಲ್ಲರನ್ನೂ ಸಾಮೂಹಿಕವಾಗಿ ಆಹುತಿ ತೆಗೆದುಕೊಳ್ಳುವ ಶಕ್ತಿ ಇಂತಹ ಆರ್ಥಿಕ ಹಗರಣಗಳಿಗೆ ಇರುತ್ತವೆ ಎಂಬುದನ್ನು ಅವರು ಮನಗಾಣ ಬೇಕು. ಭಾರತದ ಬ್ಯಾಂಕುಗಳಲ್ಲಿ ಅನುತ್ಪಾದಿತ ಸಾಲದ ಪ್ರಮಾಣ ( ಎನ್.ಪಿ.ಎ,) ಒಟ್ಟು 7.34 ಲಕ್ಷ ಕೋಟಿ ರೂಪಾಯಿನಷ್ಟು ಇದೆ. ಇದರಲ್ಲಿ ಕಾರ್ಪೋರೇಟ್ ಕಂಪನಿಗಳ ಪಾಲು ಅಂದರೆ ವಸೂಲಿಯಾಗಬೇಕಾದ ಸಾಲದ ಪ್ರಮಾಣ ಶೇಕಡ 77 ರಷ್ಟು ಇದೆ. ಸ್ಟೇಟ್ ಬ್ಯಾಂಕ್ ಇಂಡಿಯಾದಲ್ಲಿ 1.86 ಲಕ್ಷ ಕೋಟಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ 57 ಸಾವಿರದ 630 ಕೋಟಿ, ಬ್ಯಾಂಕ್ ಇಂಡಿಯಾದಲ್ಲಿ 49 ಸಾವಿರದ 307 ಕೋಟಿ, ಬ್ಯಾಂಕ್ ಆಫ್ ಬರೋಡದಲ್ಲಿ 46 ಸಾವಿರದ 304 ಕೋಟಿ ಮತ್ತು ಕೆನರಾ ಬ್ಯಾಂಕಿನಲ್ಲಿ 39 ಸಾವಿರದ 164 ಕೋಟಿ ರೂಪಾಯಿ ಇವೆಲ್ಲವೂ ವಸೂಲಿಯಾಗದ ಸಾಲಗಳು.  ಜನರ ಮನರಂಜನೆಗಾಗಿ ವಿಧೂಷಕನಂತೆ ವೇದಿಕೆಯಲ್ಲಿ ಅತಿಯಾಗಿ ಮಾತುನಾಡುವುದು ಹಾಗೂ ಪ್ರವಾಸ ಮಾಡುವುದನ್ನು ತ್ಯೆಜಿಸಿ  ದೇಶದ ಆರ್ಥಿಕ, ಸಾಮಾಜಿಕ ಹಾಗೂ ಔದ್ಯೋಗಿಕ ಸಮಸ್ಯೆಗಳ ಕುರಿತು ತಜ್ಞರ ಜೊತೆ ಸಮಾಲೋಚಿಸುವ ಗುಣವನ್ನು ಅತ್ಯಂತ ತುರ್ತಾಗಿ ಪ್ರಧಾನಿ ಮೋದಿಯವರು ಬೆಳಸಿಕೊಳ್ಳಬೇಕಿದೆ.


( ಕರಾವಳಿ ಮುಂಜಾವು ದಿನಪತ್ರಿಕೆಯ “ ಜಗದಗಲ” ಅಂಕಣ ಬರಹ)