ಗುರುವಾರ, ಮೇ 31, 2018

ರೈತರ ಪ್ರಗತಿಗೆ ಸಾಲ ಮನ್ನಾ ಯೋಜನೆ ಪರ್ಯಾಯವಲ್ಲ



ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಚುನಾವಣೆ ಹಾಗೂ ಆನಂತರ ನಡೆದ ರಾಜಕೀಯ ಬೆಳವಣಿಗೆಗಳು ಅನೇಕ ಅನಿರೀಕ್ಷಿತ ತಿರುವು ಪಡೆದುಕೊಂಡಿವೆ. ಇಷ್ಟು ಮಾತ್ರವಲ್ಲದೆ, ಚುನಾವಣಾ ಪ್ರಚಾರದ ಸಂದರ್ಭದಲ್ಲಿಪಕ್ಷ ಬೇಧವಿಲ್ಲದೆ ಎಲ್ಲಾ ರಾಜಕೀಯ ಪಕ್ಷಗಳು ಯಾವುದೇ ವಿವೇಚನೆ ಮತ್ತು ದೂರದೃಷ್ಟಿಯಿಲ್ಲದೆ  ಹೊರಡಿಸಿದ ಪ್ರಣಾಳಿಕೆಗಳು ಈಗ ರಾಜಕೀಯ ನಾಯಕರಿಗೆ ತಿರುಗುಬಾಣವಾಗಿವೆ.
ಇಡೀ ಭಾರತದುದ್ದಕ್ಕೂ ನೆಲದ ಅನ್ನದಾತ ಎನಿಸಿಕೊಂಡ ರೈತ ರಾಜಕಾರಣಿಗಳಮತ್ತು ಅವರು ಪ್ರತಿನಿಧಿಸುವ ರಾಜಕೀ ಪಕ್ಷಗಳ ಚದುರಂಗದ ದಾಳವಾಗಿ  ಬಳಕೆಯಾಗುತ್ತಿದ್ದಾನೆ. ಕಳೆದ ಕಾಲು ಇಪ್ಪತ್ತೇಳು ವರ್ಷಗಳಿಂದ ಅಂದರೆ, 1991 ರಲ್ಲಿ  ದೇಶವು ಜಾಗತೀಕರಣಕ್ಕೆ ತನ್ನ ಹೆಬ್ಬಾಗಿಲು ತೆರದ ನಂತರ ಭಾರತದ ಕೃಷಿ ರಂಗವು  ಅವನತಿಯ ಹಾದಿ ಹಿಡಿದು ಅವಸಾನದ ಅಂಚಿಗೆ ದೂಡಲ್ಪಟ್ಟಿತು.  ಕೃಷಿ ಕ್ಷೇತ್ರವನ್ನು ಹಾಗೂ ಅದನ್ನು ನಂಬಿ ಬಂದುಕಿರುವ ದೇಶದ ಜನಸಂಖ್ಯೆಯ ಶೇಕಡ ಅರವತ್ತರಷ್ಟು  ಪಾಲಿನ ರೈತರು ಮತ್ತು ಕೃಷಿ ಕಾರ್ಮಿಕರು  ಅತಂತ್ರರಾಗಿದ್ದಾರೆ. ದೇಶದುದ್ದಕ್ಕೂ ರೈತರು ಮತ್ತು ಕಾರ್ಮಿಕರು ಕೃಷಿ ಉದ್ಯೋಗವನ್ನು ತ್ಯೆಜಿಸಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ.
ನೆಲಕಚ್ಚುತ್ತಿರುವ ಕೃಷಿ ರಂಗವನ್ನು ಅಭಿವೃದ್ಧಿ ಪಡಿಸಿ, ಅನ್ನದಾತನಲ್ಲಿ ಆತ್ಮ ವಿಶ್ವಾಸ ತುಂಬ ಬೇಕಾದ ನಮ್ಮನ್ನಾಳುವ  ಸರ್ಕಾರಗಳು ಆತನ ಕೃಷಿ ಸಾಲವನ್ನು ಮನ್ನಾ ಮಾಡುವುದರ ಮೂಲಕ ಉದ್ಧಾರ ಮಾಡಬಹುದು ಎಂಬ ವಿವೇಚನಾ ರಹಿತ ಸೂತ್ರವನ್ನು ನಂಬಿಕೊಂಡು ಆಡಳಿತ ನಡೆಸುತ್ತಿವೆ. ಒಬ್ಬ ಬಡ ರೈತನ ಮಗನಾಗಿ ಹಾಗೂ ಓರ್ವ ಅರ್ಥಶಾಸ್ತ್ರದ ಸಮಶೋಧನಾ ವಿದ್ಯಾರ್ಥಿಯಾಗಿ ಹೇಳಲೇ ಬೇಕಾದ ಸತ್ಯವೆಂದರೆ, ಇಂತಹ ಸಾಲಮನ್ನಾ ಯೋಜನೆಗಳು ರೈತರ ಪಾಲಿಗೆ ನೋವಿನಿಂದ ನರಳುತ್ತಿರುವ ರೋಗಿಗೆ ತಾತ್ಕಾಲಿಕವಾಗಿ ನೀಡುವ ನೋವು ನಿವಾರಕ ಮದ್ದಾಗಬಲ್ಲವೆ ಹೊರತು,  ರೋಗ ಶಾಸ್ವತವಾಗಿ ವಾಸಿಯಾಗುವುದಿಲ್ಲ. ಯಾವುದೇ ಒಂದು ಸರ್ಕಾರ ಅದು ರಾಜ್ಯ ಸರ್ಕಾರವಿರಲಿ ಅಥವಾ ಕೇಂದ್ರ ಸರ್ಕಾರವಿರಲಿ ವಿವಿಧ ಸಂಪನ್ಮೂಲಗಳಿಂದ ಬರುವ ಆದಾಯ ಮತ್ತು ತಾನು ವ್ಯಯಿಸಬೇಕಾದ ಒಟ್ಟು ವಾರ್ಷಿಕ ವೆಚ್ಚಗಳ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಬೇಕಾಗಿರುವುದು  ಸರ್ಕಾರದ ಮತ್ತು ಪ್ರಜೆಗಳ ಹಿತದೃಷ್ಟಿಯಿಂದ ಒಳ್ಳೆಯ ನಿರ್ಧಾರವಾಗಬಲ್ಲದು.
ವಾಸ್ತವಿಕ ದುರಂತವೆಂದರೆ,  ಆಡಳಿತ ಚುಕ್ಕಾಣಿ ಹಿಡಿಯುವ  ಆಸೆಯಿಂದ ರೈತರಿಗೆ  ಭರವಸೆ ನೀಡುವ ಅವಸರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಎಡವುತ್ತಿವೆ. ಕರ್ನಾಟಕದಲ್ಲಿ  ಅಧಿಕಾರಕ್ಕೆ ಬಂದ ಇಪ್ಪತ್ತು ನಾಲ್ಕು ಗಂಟೆಯ ಅವಧಿಯಲ್ಲಿ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಎಂದು ಘೋಷಿಸಿಕೊಂಡಿದ್ದ ಜಾತ್ಯಾತೀತ ಜನತಾ ದಳ ಪಕ್ಷವು ಇದೀಗ ಇಕ್ಕಟಿಗೆ ಸಿಲುಕಿದೆ. ಒಟ್ಟು ಕರ್ನಾಟಕದ ಒಟ್ಟು ವಾರ್ಷಿಕ ಆಯ-ವ್ಯಯದ ಬಜೆಟ್ ಕಳೆದ ವರ್ಷ ಅಂದರೆ 2017-18 ರಲ್ಲಿ ಒಟ್ಟು ಒಂದು ಲಕ್ಷ ಅರವತ್ಮೂರು ಸಾವಿರ ಕೋಟಿಯಷ್ಟಿದೆ. ಕರ್ನಾಟಕದ ರೈತರು ಸಹಕಾರಿ ಬ್ಯಾಂಕುಗಳಲ್ಲಿ ಮತ್ತು ರಾಷ್ರೀಕೃತ ಬ್ಯಾಂಕುಗಳಲ್ಲಿ ಮಾಡಿರುವ ಒಟ್ಟು ಸಾಲದ ಮೊತ್ತವು ಅಂದಾಜು ಐವತ್ತಮೂರು ಸಾವಿರ ಕೋಟಿಯಷ್ಟಿದ್ದು ಇದು ರಾಜ್ಯ ಸರ್ಕಾರದ ಬಜೆಟ್ ಮೂರನೇ ಒಂದು ಭಾಗದಷ್ಟಿದೆ. ಇದರ ಜೊತೆಗೆ ಸಿದ್ಧರಾಮಯ್ಯನವರ ನೇತೃತ್ವದ ಹಿಂದಿನ ಕಾಂಗ್ರೇಸ್ ಸರ್ಕಾರವು ಕಳೆದ ಬಜೆಟ್ ನಲ್ಲಿ ಸರ್ಕಾರಿ ನೌಕರರ ವೇತನವನ್ನು ಶೇಕಡ 30 ರಷ್ಟು ಹೆಚ್ಚಿಗೆ ಮಾಡಿದ್ದು ವರ್ಷದ ಏಪ್ರಿಲ್ ನಿಂದ ರಾಜ್ಯದ ಒಟ್ಟು 5ಲಕ್ಷದ 2 ಸಾವಿರ ನೌಕರರು ಮತ್ತು 5 ಲಕ್ಷದ 73 ಸಾವಿರ ನಿವೃತ್ತ ನೌಕರರಿಗೆ ವಾರ್ಷಿಕವಾಗಿ 10 ಸಾವಿರದ 600 ಕೋಟಿ ರೂಪಾಯಿಗಳನ್ನು ವ್ಯಯ ಮಾಡಬೇಕಿದೆ. ಇದಲ್ಲದೆ ಪ್ರತಿವರ್ಷ ಸರಾಸರಿ ಹತ್ತರಿಂದ ಇಪ್ಪತ್ತರ ವರೆಗೆ ವೆಚ್ಚದ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ.
ನಮ್ಮ ಕಣ್ಣಮುಂದಿನ ಇಂತಹ ಕಟು ಸತ್ಯಗಳನ್ನು ಇಟ್ಟುಕೊಂಡು, ಅನಕ್ಷರಸ್ತ  ಹಾಗೂ ಅಮಾಯಕ ರೈತ ಸಮುದಾಯದ ಮೂಗಿನ ನೇರಕ್ಕೆ  ಕೆಂಪು ಮೂಲಂಗಿ  ಕಟ್ಟುವ ಕೆಟ್ಟ ಪರಂಪರೆಯನ್ನು ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳು ಶಾಶ್ವತವಾಗಿ ತ್ಯೆಜಿಸಬೇಕಿದೆ. ಏಕೆಂದರೆ, ದೇಶದ ರೈತರ ನಿಜವಾದ ಬೇಡಿಕೆಗಳು ಸಾಲಮನ್ನಾದಂತಹ ಅಗ್ಗದ ಯೋಜನೆಗಳಲ್ಲ, ಅವರಿಗೆ ಸರಿಯಾದ ಸಮಯಕ್ಕೆ ಬಿತ್ತನೆ ಬೀಜ, ಗೊಬ್ಬರ ಸರಬರಾಜು ಮಾಡುವುದು, ನೀರಾವರಿ ಯೋಜನೆಗಳು ಮತ್ತು ಕೆರೆಗಳ ಅಭಿವೃದ್ಧಿ, ಕೃಷಿ ಹೊಂಡಕ್ಕೆ ಪ್ರೋತ್ಸಾಹ ನೀಡುವುದು, ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಮತ್ತು ಮಾರುಕಟ್ಟೆಯ ವ್ಯವಸ್ಥೆಗಳು ರೈತರ ಬೇಡಿಕೆಗಳಾಗಿವೆ. ಇತ್ತೀಚೆಗಿನ ದಿನಗಳಲ್ಲಿ ಅನಿರೀಕ್ಷಿತವಾಗಿ ಬೀಳುವ ಮಳೆಯಿಂದ ರೈತರ ಫಸಲು ಹಾಳಾಗುತ್ತಿದ್ದು ಅಂತಹ ರೈತರಿಗೆ ಕ್ಷಿಪ್ರ ಗತಿಯಲ್ಲಿ ಪರಿಹಾರ ಒದಗಿಸುವುದು ಮತ್ತು ರೈತರ ಬೆಳೆಯುವ ಬೆಳೆಗಳನ್ನು ಕಡ್ಡಾಯವಾಗಿ ಬೆಳೆ ವಿಮೆಗೆ ಒಳಪಡಿಸಿ ಸರ್ಕಾರವು ವಿಮಾಕಂಪನಿಗಳಿಗೆ ಪ್ರೀಮಿಯಂ ತುಂಬುವುವಂತಹ ಕೆಲಸ ಜರೂರಾಗಿ  ಆಗಬೇಕಿದೆ.
 ಕರ್ನಾಟಕದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಯ ಭರಾಟೆಯಲ್ಲಿ ಮುಳುಗಿರುವಾಗ ಉತ್ತರ ಹಾಗೂ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ರೈತರು ತಾವು ಬೆಳೆದ ಈರುಳ್ಳಿ ಕೃಷಿ ಮಾರುಕಟ್ಟೆಯಲ್ಲಿ  ಕ್ವಿಂಟಾಲ್ಗೆ  250 ರೂಪಾಯಿಗೆ ಮಾರಾಟ ಮಾಡಿ ಕಣ್ಣೀರಿರು ಹಾಕಿದರು. ರೈತರಿಂದ 250 ರೂಪಾಯಿಗೆ ಖರೀದಿಸಿದ ವರ್ತಕರು ಮತ್ತು ದಳ್ಳಾಳಿಗಳು ಅದೇ ಈರುಳಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಗೆ ಸಾವಿರ ರೂಪಾಯಿ ಅಂದರೆ, ಕೆ.ಜಿ. ಒಂದಕ್ಕೆ ಹತ್ತು ರೂಪಾಯಿನಂತೆ ಮಾರಾಟ ಮಾಡಿದರು. ಒಂದು ಕ್ವಿಂಟಾಲ್ ಈರುಳ್ಳಿ ಬೆಳೆಯಲು ರೈತರು ಸರಾಸರಿ 400 ರೂಪಾಯಿನಿಂದ 500  ರೂಪಾಯಿ ಖರ್ಚು ಮಾಡಿ, 250ಕ್ಕೆ ಮಾರಾಟ ಮಾಡಿ ಕಣ್ಣೀರು ಸುರಿಸುತ್ತಿದ್ದರೆ, ಅತ್ತ ದಳ್ಳಾಳಿ ಅಥವಾ ವರ್ತಕರು ಯಾವುದೇ ಶ್ರಮವಿಲ್ಲದೆ ಕೇವಲ 250 ರೂಪಾಯಿ ಬಂಡವಾಳ ಹಾಕಿ ಶೇಕಡ ಮುನ್ನೂರಷ್ಟು ಅಂದರೆ, 750 ರೂಪಾಯಿಗಳ ಲಾಭವನ್ನು ತನ್ನ ಜೇಬಿಗೆ ಇಳಿಸುತ್ತಿದ್ದರು.. ಇದೀಗ ಕೋಲಾರ, ಧಾರವಾಡ ಜಿಲ್ಲೆಗಳ ಮಾವು ಬೆಳೆಗಾರರು ಇಂತಹ ಸಂಕಷ್ಟಕ್ಕೆ ಸಿಲುಕಿದ್ದಾರೆ.  1993 ಅಕ್ಷೋಬರ್ ತಿಂಗಳಿನಲ್ಲಿ ಆಲೂಗೆಡ್ಡೆಯನ್ನು ಬೆಳೆದ ಹಾಸನ ಜಿಲ್ಲೆಯ ರೈತನೊಬ್ಬ ಟ್ರಾಕ್ಟರ್ ನಲ್ಲಿ ತಂದು ಹಾಸನದ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದಾಗ ಆತನಿಗೆ ಟ್ರಾಕ್ಟರ್ ಬಾಡಿಗೆ ಕೂಡ ದಕ್ಕಲಿಲ್ಲ. ಬಾಡಿಗೆ ನೀಡಲಾಗದ ಅಪಮಾನಕ್ಕೆ ರೈತನು ಮಾರುಕಟ್ಟೆಯ ಸಮೀಪದ ತಣ್ಣೀರು ಹಳ್ಳ ಎಂಬ ಪ್ರದೇಶದಲ್ಲಿ ಅದೇ ಹಣದಲ್ಲಿ ಕ್ರಿಮಿನಾಶಕ ಔಷಧಿ ಕೊಂಡು ಅದನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ನೆಲದ ರೈತನ ಸಂಕಷ್ಟದ ಸ್ಥಿತಿಗೆ ಸಾಕ್ಷಿಯಂತಿದೆ. ಆದರೆ, ಇಂದಿಗೂ ಕೂಡ ರೈತನ ನಸೀಬು ಬದಲಾಗಲಿಲ್ಲ.

ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಕನಿಷ್ಠ  ಬೆಂಬಲ ದರ ಹಾಗೂ ವರ್ತಕರು ಗ್ರಾಹಕರಿಗೆ  ಮಾರಾಟ ಮಾಡುವ ಚಿಲ್ಲರೆ ದರ ಇವುಗಳ ಮೇಲೆ ನಿಗಾ ವಹಿಸಿದರೆ  ಏಕಕಾಲಕ್ಕೆ ಉತ್ಪಾದಕ ಮತ್ತು ಗ್ರಾಹಕ ಇಬ್ಬರನ್ನೂ ಸರ್ಕರಗಳು ರಕ್ಷಣೆ ಮಾಡಬಹುದಾಗಿದೆ. ಇಂತಹ ಆಲೋಚನೆಗಳಿಗೆ ದೃಢ ಮನಸ್ಸು ಮಾಡದ ಸರ್ಕಾರಗಳು ಅಗ್ಗದ ಯೋಜನೆಗಳಿಗೆ ಬಲಿ ಬೀಳುತ್ತಿವೆ. ಇಂತಹ ಅಪಕ್ವ ಯೋಜನೆಗಳಿಗೆ ನಾಂದಿ ಹಾಡಿದ ಕೆಟ್ಟ ಇತಿಹಾಸವು ಕರ್ನಾಟಕಕ್ಕೆ ಸೇರಿದೆ. ಕರ್ನಾಟಕದಲ್ಲಿ 2002 ರಲ್ಲಿ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೇಸ್ ಸರ್ಕಾರವು ಸಹಕಾರಿ ಬ್ಯಾಂಕುಗಳು ಮತ್ತು ಸಂಘಗಳಿಂದ ಮಾಡಿದ್ದ ರೈತರ ಸಾಲವನ್ನು ಮನ್ನಾ ಮಾಡಲಾಯಿತು. 2007 ರಲ್ಲಿ ಜೆ.ಡಿ.ಎಸ್ ಮತ್ತು ಬಿ.ಜೆ.ಪಿ. ನೇತೃತ್ವದ ಸಮ್ಮಿಶ್ರ ಸರ್ಕಾರದಲಲ್ಲಿ 25 ಸಾವಿರದವರೆಗಿನ ಮೊತ್ತದ ಸಾಲವನ್ನು ಮನ್ನಾ ಮಾಡಲಾಗಿತ್ತು. 2012 ರಲ್ಲಿ ಬಿ.ಜೆ.ಪಿ. ನೇತೃತ್ವದ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಸಹ 25 ಸಾವಿರ ಮೊತ್ತದ ಸಹಕಾರಿ ಬ್ಯಾಂಕುಗಳ ಸಾಲವನ್ನು ಮನ್ನಾ ಮಾಡಿದ್ದರು. ಕಳೆದ ವರ್ಷ ಅಂದರೆ, 2017 ರಲ್ಲಿ ಕಾಂಗ್ರೇಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯನವರೂ ಸಹ  50 ಸಾವಿರ ರೂಪಾಯಿ ಮೊತ್ತದ ಸಹಾಕಾರಿ ಸಾಲವನ್ನು ಮನ್ನಾ ಮಾಡಿದ್ದರು. ಕರ್ನಾಟಕದಲ್ಲಿ ಹುಟ್ಟಿಕೊಂಡ ಸಾಲಮನ್ನಾ ಯೋಜನೆಯು ದೂರದ ಉತ್ತರ ಪ್ರದೇಶಕ್ಕೂ ಹಬ್ಬಿತು. ಅಲ್ಲಿನ ಮುಖ್ಯಮಂತ್ರಿ ಆದಿತ್ಯನಾಥ್ ಯೋಗಿಯವರು ರೈತರ 36 ಸಾವಿರ 359 ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿ ಮೊದಲ ಹಂತದಲ್ಲಿ 7 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರವು ಸಹ ರೈತರ ಪಾಲಿನ 34 ಸಾವಿರ ಕೋಟಿ ಮತ್ತು ಜಾಬ್ ರಾಜ್ಯವು 15 ಸಾವಿರ ಕೋಟಿ ಸಾಲವನ್ನು ಘೊಷಿಸಿವೆ.
ಒಂದು ಕಡೆ ಉದ್ಯಮಿಗಳಿಂದ ವಸೂಲಿಯಾಗದ  ಒಂದು ಲಕ್ಷ ಕೋಟಿಗಿಂತಲೂ ಹೆಚ್ಚಿನ ಮೊತ್ತದ ಸಾಲವು ಅನುತ್ಪಾದಕ ಆಸ್ತಿಯಾಗಿ ಬೆಳೆಯುತ್ತಾ ಹೋಗುತ್ತಿದೆ. ಮತ್ತೋಂದೆಡೆ ರೈತರ ಸಾಲ ಮನ್ನಾ ಯೋಜನೆಯಡಿ ಹಣ ಕರಗುತ್ತಿದೆ. ತಾವು ಅಧಿಕಾರದಲ್ಲಿದ್ದಾಗ ಯಶಸ್ವಿಯಾಗಿ ನಡೆದರೆ ಸಾಕು, ಬರುವ ಸಂಕಷ್ಟಗಳಿಗೆ ಮುಂದಿನ ಸರ್ಕಾರಗಳು ಹೊಣೆ ಹೊರಲಿ ಎಂಬ ಮನೋಭಾವ ಹಾಗೂ ಉತ್ತರದಾಯತ್ವದಿಂದ ನುಣುಚಿಕೊಳ್ಳುವ ಬೇಜವಾಬ್ದರಿತನದಿಂದಾಗಿ ದೇಶದ ಎರಡು ಕಣ್ಣುಗಳಿಂತಿರುವ ಕೈಗಾರಿಕೆ ಮತ್ತು ಕೃಷಿ ಕ್ಷೇತ್ರಗಳು ಕಂಟಕವನ್ನು ಎದುರಿಸುತ್ತಿವೆ. ಇದರ ಅಂತಿಮ ಪರಿಣಾಮವಾದ ದುರಂತವನ್ನು ದೇಶದ ಜನಸಾಮಾನ್ಯ ತೆರಿಗೆ ಮೂಲಕ ಭರಿಸುವುದು ಅನಿವಾರ್ಯವಾಗುತ್ತದೆ. ಒಂದು ಒಳ್ಳೆಯ ಸರ್ಕಾರದ ಲಕ್ಷಣವೆಂದರೆ, ಇಂತಹ ಅಗ್ಗದ ಯೋಜನೆಗಳನ್ನು ಪ್ರಕಟಿಸುವದಲ್ಲ, ಬದಲಾಗಿ ಆರ್ಥಿಕ ಶಿಸ್ತಿನಿಂದ ಕೂಡಿದ, ಜನಸಾಮಾನ್ಯರಿಗೆ ಹೊರೆಯಾಗದ ಪಾರದರ್ಶಕವಾದ ಆಡಳಿತವನ್ನು ನೀಡಿ, ಭ್ರಷ್ಟಾಚಾರ ಮತ್ತು ಅನಗತ್ಯ ದುಂದುವೆಚ್ಚಕ್ಕೆ ಕಡಿವಾಣ ಹಾಕುವುದು  ಪ್ರತಿಯೊಂದ ಸರ್ಕಾರದ ಕರ್ತವ್ಯವಾಗಿರುತ್ತದೆ.
ಮುಂಗಾರು ಮಳೆ ಬಿದ್ದ ನೆಲವನ್ನು ಉತ್ತು ಹಸನುಮಾಡಿ, ಹದವಾದ ಭೂಮಿಗೆ ಬೀಜವನ್ನು ಚೆಲ್ಲುವ ರೈತನು ಎಂದಿಗೂ  ತಾನು ಬಿತ್ತುವ ಬೀಜದಲ್ಲಿ ಎಷ್ಟು ಕಾಳುಗಳು ಮೊಳಕೆಯೊಡೆಯಬಹುದು ಎಂದು ಲೆಕ್ಕ ಹಾಕುವುದಿಲ್ಲ. ಇಂತಹ ಉದಾತ್ತ ಪರಂಪರೆಯಿಂದ ಬಂದಿರುವ ರೈತನಿಗೆ ತಾನು ಬೆಳೆದ ಫಸಲಿಗೆ ನ್ಯಾಯಯುತವಾದ ಬೆಲೆ ದೊರೆತರೆ ಸಾಕು ತನ್ನ ನೆತ್ತರನ್ನು  ಬೆವರಿನ ಮೂಲಕ ಹರಿಸಿದ ಅವನು ತೃಪ್ತಿ ಪಡುತ್ತಾನೆ. ಅದರಾಚೆಗಿನ ಯಾವ ಮೋಹದ ಲೋಕ ಮತ್ತು ಆಮೀಷ ಅವನಿಗೆ ಬೇಕಾಗಿಲ್ಲ.

ಮಂಗಳವಾರ, ಮೇ 29, 2018

ಮೋದಿಮಯ ಭಾರತದ ಭ್ರಮೆ ಮತ್ತು ವಾಸ್ತವಗಳು



ಇದೇ ಮೇ 26 ನೇ ದಿನಾಂಕಕ್ಕೆ  ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾಗಿ ಆಡಳಿತದ ಚುಕ್ಕಾಣಿ ಹಿಡಿದು ನಾಲ್ಕು ವರ್ಷಗಳಾದವು. ನಾಲ್ಕು ವರ್ಷಗಳ ಅವರ ಆಡಳಿತವನ್ನು ವಿಮರ್ಶೆಯ ಒರೆಗಲ್ಲಿಗೆ ಹಚ್ಚಿದಾಗ, ತೃಪ್ತಿಗಿಂತ ನಿರಾಸೆ ಎಲ್ಲೆಡೆ ಎದ್ದು ಕಾಣುತ್ತಿದೆ. ಭಾರತದ ಪ್ರಜ್ಞಾವಂತ ನಾಗರೀಕರನ್ನು  ನರೇಂದ್ರ ಮೋದಿಯವರು ದೇಶದ ಪ್ರಧಾನಿ ಹುದ್ದೆಯಲ್ಲಿದ್ದಾರಾ? ಅಥವಾ ಪಕ್ಷದ ಪ್ರಚಾರಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರಾ?” ಎಂಬ ಪ್ರಶ್ನೆ ನಿರಂತರವಾಗಿ ಕಾಡುತ್ತಿದೆ. ಜೊತೆಗೆ ವಿಷಯ ಜನಸಾಮಾನ್ಯರ ನಡುವಿನ ಪದೇ ಪದೇ ಚರ್ಚೆಯಾಗುತ್ತಿದೆ.
ಇತ್ತೀಚೆಗೆ ನಡೆದ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದೆ ಅತಂತ್ರ ಸ್ಥಿತಿ ನಿರ್ಮಾಣವಾದಾಗ, ಕಾಂಗ್ರೇಸ್ ಹಾಗೂ ಜೆ.ಡಿ.ಎಸ್. ಪಕ್ಷಗಳು ಮೈತ್ರಿ ಸರ್ಕಾರ ರಚಿಸಲು ನಾನು ಬಿಡುವುದಿಲ್ಲ ಎಂದು ಮೇ 15 ರಂದು ಫಲಿತಾಂಶ ಪ್ರಕಟವಾದಾಗ ಸಂಜೆ ನವದೆಹಲಿಯಲ್ಲಿ ಪ್ರಧಾನಿಯವರು ಗುಡುಗಿದ್ದಾರೆ. ಇದು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ರಾಷ್ಟ್ರವಾದ ಭಾರತದಲ್ಲಿ ಓರ್ವ  ಪ್ರಧಾನಿಯಾಗಿರುವ ವ್ಯಕ್ತಿ ನೀಡಬಹುದಾದ ಹೇಳಿಕೆ ಹೀಗೂ ಇರಬಹುದೆ? ಇದು ನಮ್ಮ ಮುಂದಿರುವ ಮಿಲಿಯನ್ ಡಾಲರ್ ಪ್ರಶ್ನೆ. ಕಳೆದ ನಾಲ್ಕುವರ್ಷಗಳಿಂದ ಇವೊತ್ತಿಗೂ ಮಾಧ್ಯಮವನ್ನು ನೇರವಾಗಿ ಮುಖಾ ಮುಖಿಯಾಗಿ ಎದುರಿಸಲಾಗದೆ ಅಪಕ್ವ ಮನಸ್ಥಿತಿಯ ಪುಕ್ಕಲ ಪ್ರಧಾನಿ ಎಂಬ ಬಿರುದಿಗೆ ಪಾತ್ರರಾಗಿರುವ ನರೇಂದ್ರ ಮೋದಿಯವರು ಪಕ್ಷದ ವೇದಿಕೆಗಳಲ್ಲಿ, ಚುನಾವಣಾ ಪ್ರಚಾರಗಳಲ್ಲಿ ಪುಂಖಾನುಪುಂಖವಾಗಿ ಅಣಿ ಮುತ್ತುಗಳನ್ನು ಉದುರಿಸಬಲ್ಲ ಹಾಗೂ ಅದ್ಭುತವಾಗಿ ನಟಿಸಬಲ್ಲ ಚಾಣಾಕ್ಷ ರಾಜಕಾರಣಿಯಾಗಿ ಕಾಣುತ್ತಿದ್ದಾರೆ.
ದೇಶದ ಒಬ್ಬ ಪ್ರಧಾನಿಯಾಗಿ ತಾನು ಆಡಬಹುದಾದ  ಮಾತುಗಳಲ್ಲಿ ಎಚ್ಚರಿಕೆ ವಹಿಸಬೇಕು ಮತ್ತು ತನ್ನ ಮಾತುಗಳನ್ನು ಇಡೀ ದೇಶದ ನಾಗರೀಕರು ಮಾತ್ರವಲ್ಲದೆ; ಜಗತ್ತಿನ ಮಾಧ್ಯಮಗಳು ಎಚ್ಚರಿಕೆಯಿಂದ ಗಮನಿಸುತ್ತವೆ ಎಂಬ ಕನಿಷ್ಟ ತಿಳುವಳಿಕೆಯಿಲ್ಲದ ನರೇಂದ್ರಮೋದಿಯವರು ಒಬ್ಬ ಸಾಮಾನ್ಯ ಶಾಸಕ ಅಥವಾ ಸಂಸದನಂತೆ ಭಾರತದ ರಾಜಕೀಯ ಇತಿಹಾಸ ಕುರಿತು ಅಪ್ರಭುದ್ಧತೆಯಿಂದ ಮಾತನಾಡುತ್ತಾ ನಗೆಪಾಟಲಿಗೆ ಈಡಾಗುತ್ತಿದ್ದಾರೆ. ದೆಹಲಿಯಲ್ಲಿ ಮೆಟ್ರೊ ರೈಲು ಸಂಚಾರ ಸ್ಥಾಪಿಸುವುದರ ಮೂಲಕ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದರು ಎಂಬ ಮಾತನಾಡಿದ ದೇಶದ ಪ್ರಧಾನಿಗೆ ಭಾರತದಲ್ಲಿ ಪ್ರಥಮ ಮೆಟ್ರೊ ರೈಲು ಸಂಚಾರವು ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ( 1984)ಎಡರಂಗ ಆಡಳಿತವಿದ್ದ ಅಂದರೆ, ಜ್ಯೋತಿಬಸು ಅವರು ಮುಖ್ಯಮಂತ್ರಿಯಾಗಿದ್ದ ಪಶ್ಚಿಮ ಬಂಗಾಳದ ಕೊಲ್ಕತ್ತ ನಗರದಲ್ಲಿ ಆರಂಭವಾಯಿತು ಎಂಬ ಕನಿಷ್ಠ ತಿಳುವಳಿಕೆ ಇಲ್ಲವಾಗಿದೆ. ಇದರ ಜೊತೆಗೆ  ಇತ್ತೀಚೆಗೆ ಕರ್ನಾಟಕದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನೆಹರೂ ಅವರಿಂದ ಸೇನಾ ದಂಡನಾಯರಾಗಿದ್ದ ಜನರಲ್ ಕಾರಿಯಪ್ಪನವರಿಗೆ ಅಪಮಾನವಾಗಿತ್ತು ಎಂಬ ಹೇಳಿಕೆಯನ್ನು ನೀಡುವುದರ ಮೂಲಕ ಮುಜಗರಕ್ಕೆ ಒಳಗಾದರು.
ಯಾವುದೇ ಒಬ್ಬ ಜನನಾಯಕ ಒಳ್ಳೆಯ ಆಡಳಿಗಾರನಾಗಬೇಕಾದರೆ, ಆತನಿಗೆ ಸ್ಥಿತಪ್ರಜ್ಞೆ ಇರಬೇಕು.  ತನ್ನ ಬಳಿ ವಿವಿಧ ರಂಗಗಳ ತಜ್ಞರನ್ನು ಇಟ್ಟುಕೊಂಡು ಅವರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಮುಂದುವರಿಯಬೇಕು. ಆದರೆ ಅಂತಹ ಯಾವುದೇ ಲಕ್ಷಣಗಳು ಮೋದಿಯವರಲ್ಲಿ ಕಂಡು ಬರುವುದಿಲ್ಲ. ಅವರದೇ ಆದ  ಪಕ್ಷದ ಹಿರಿಯ ಸಂಸದ ಹಾಗೂ ಹಿಂದಿ ಚಿತ್ರರಂಗದ ಹಿರಿಯ ನಟ ಶತೃಘ್ನಸಿನಾ ಅವರು ಹೇಳುವ ಹಾಗೆ ಇದೀಗ ಭಾರತೀಯ ಜನತಾ ಪಕ್ಷವು ಇಬ್ಬರು ಸೈನಿಕರ ಸೇನೆಯಾಗಿದೆ. ( ಒಬ್ಬರು ಮೋದಿ, ಮತ್ತೊಬ್ಬರು ಅವರ ಭಂಟ ಅಮಿತ್ ಶಾ) ಪಕ್ಷದಲ್ಲಿ ಆಂತರೀಕ ಪ್ರಜಾಪ್ರಭುತ್ವ ವ್ಯವಸ್ಥೆಯಿಲ್ಲದ ಕಾರಣದಿಂದಾಗಿ ಮತ್ತು ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿದ ಪರಿಣಾಮವಾಗಿ ಎಲ್ಲಾ ತತ್ವಸಿದ್ಧಾಂತಗಳನ್ನು ಗಾಳಿಗೆ ತೂರಿ ದೇಶಾದ್ಯಂತ ಬಿ.ಜೆ.ಪಿ. ಆಡಳಿತವನ್ನು ಪ್ರತಿಷ್ಠಾಪಿಸುವುದು ನಮ್ಮ ಗುರಿ ಎಂಬಂತೆ ಗುಜರಾತಿನ ಗುರು ಶಿಷ್ಯರು ವರ್ತಿಸುವುದರ ಮೂಲಕ ಪಕ್ಷದ ಹಿರಿಯ ನಾಯಕರಾದ ಯಶವಂತಸಿನಾ ಹಾಗೂ ಅರುಣ್ ಶೌರಿಯವರ ಕಟು ಟೀಕೆಗೆ ಗುರಿಯಾಗಿದ್ದಾರೆ.
ಮೋದಿಯ ಆಳ್ವಿಕೆಯ ನಾಲ್ಕು ವರ್ಷಗಳ ಅವಧಿಯಲ್ಲಿ ಭಾರತದ ಸಾಮಾಜಿಕ, ಆರ್ಥಿಕ ವಲಯವೂ ಸೇರಿದಂತೆ  ಔದ್ಯೋಗಿಕ ವಲಯಗಳಲ್ಲಿ ಅಲ್ಲೋಲ ಕಲ್ಲೋಲವೇರ್ಪಟ್ಟಿದೆ. ಇವುಗಳ ನಡುವೆಯೂ ತಿಂಗಳಿಗೊಂದು ಆಕರ್ಷಕ ಶೀರ್ಷಿಕೆಯ ಯೋಜನೆಗಳನ್ನು ಘೋಷಿಸುವುದು ಮೋದಿಯವರ ಹವ್ಯಾಸವಾಗಿದೆ. ಹಿಂದೆ ಘೋಷಿಸಲಾಗಿದ್ದ ಸ್ವಚ್ಛ ಭಾರತ್ ಆಂಧೋಲನ, ನಮಾಮಿ ಗಂಗಾ ಯೋಜನಾ, ಸ್ಮಾರ್ಟ್ ಸಿಟೀಸ್ ( ಪರಿಪೂರ್ಣ ನಗರಗಳು) ಮೇಕಿಂಗ್ ಇಂಡಿಯಾ, ಡಿಜಿಟಲ್ ಇಂಡಿಯಾ, ಬೇಟಿ ಬಚಾವ್, ಮುದ್ರಾ  ಯೋಜನೆ  ಹೀಗೆ ಡಜನ್ ಗಟ್ಟಲೆ ಯೋಜನೆಗಳಲ್ಲಿ ಕೆಲವು ಕಾಲು ಮುರಿದುಕೊಂಡು ಸ್ಥಗಿತವಾಗಿದ್ದರೆ, ಇನ್ನು ಹಲವು ಯೋಜನೆಗಳು ನಿಧಾನವಾಗಿ ತೆವಳುತ್ತಿವೆ.
2014 ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮತ್ತು ಪ್ರಧಾನಿಯಾದ ನಂತರ ನರೇಂದ್ರಮೋದಿಯವರು ತುಂಬಾ ಆವೇಶಭರಿತ ಮಾತುಗಳಲ್ಲಿ ಹೇಳಿದ ಮಾತುಗಳೆಂದರೆ, ವಿದೇಶಗಳಲ್ಲಿರುವ ಭಾರತದ ಕಪ್ಪು ಹಣವನ್ನು ವಾಪಸ್ ತರುತ್ತೇನೆ. ಎಲ್ಲಾ ಭಾರತೀಯರ ಖಾತೆಗೆ ತಲಾ ಹದಿನೈದು ಲಕ್ಷ ರೂಪಾಯಿನಂತೆ ಜಮಾ ಮಾಡುತ್ತಿನಿ ಎನ್ನುವುದು ಮೊದಲ ಭರವಸೆ. ಎರಡನೆಯದು ಭಾರತದಲ್ಲಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೀನಿ ಎಂಬ ಮಾತು. ಭಾರತದ ವಾಸ್ತವವನ್ನು ಅರ್ಥಮಾಡಿಕೊಳ್ಳಲಾರದ ಒಬ್ಬ ಅನನುಭವಿ ರಾಜಕಾರಣಿಯಂತೆ ಮಾತನಾಡಿದ ನರೇಂದ್ರ ಮೋದಿಯವರು ತಾವು ನೀಡಿದ ತಪ್ಪು ಭರವಸೆಗಳ ಪ್ರತಿಫಲವೆಂಬಂತೆ ಈಗ ಮಾಧ್ಯಮಗಳನ್ನು ಎದುರಿಸಲಾರದೆ ಕಣ್ಣು ತಪ್ಪಿಸಿಕೊಂಡು ಓಡಾಡುವಂತಾಗಿದೆ. ಮೋದಿಯವರು ಕಪ್ಪು ಹಣವನ್ನು ಭಾರತಕ್ಕೆ ವಾಪಸ್ ತರುವುದು ಬೇಡ, ಸಧ್ಯಕ್ಕೆ ಕೋಟಿಗಟ್ಟಲೆ ಸಾಲಪಡೆದು ಇಲ್ಲಿನ ಬ್ಯಾಂಕಿಗಳಿಗೆ  ವಂಚಿಸಿ ಓಡಿ ಹೋಗುತ್ತಿರುವ  ಉದ್ಯಮಿಗಳಿಗೆ ಕಡಿವಾಣ ಹಾಕಿದರೆ ಸಾಕಾಗಿದೆ. ಭಾರತದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅನುತ್ಪಾದಕ ಆಸ್ತಿ ಅಂದರೆ ವಸೂಲಿಯಾಗದ ಸಾಲದ ಪ್ರಮಾಣ ಬರೋಬ್ಬರಿ ಒಂಬತ್ತು ಲಕ್ಷ ಕೋಟಿ ರೂಪಾಯಿಗೆ ಏರಿದೆ. ಈಗಾಗಲೇ ಸ್ಟೇಟ್ ಬ್ಯಾಂಕ್ ಇಂಡಿಯಾ ಸೇರಿದಂತೆ ಹಲವು ಪ್ರಮುಖ ಬ್ಯಾಂಕ್ಗಳು ತಮ್ಮ ಆಯ ವ್ಯಯ ಪತ್ರದಲ್ಲಿ ಕೆಲವು ಸಾಕದ ಖಾತೆಗಳನ್ನು ಎಂದಿಗೂ ವಸೂಲಿಯಾಗದ ಸಾಲ ಎಂದು ಪರಿಗಣಿಸಿ ಎರಡು ಲಕ್ಷ ಕೋಟಿ ರೂಪಾಯಿ ಲೆಕ್ಕವನ್ನು ಅಳಿಸಿ ಹಾಕಿವೆ. ( ಇದನ್ನು ಬ್ಯಾಂಕಿಂಗ್ ಪರಿಭಾಷೆಯಲ್ಲಿ ಟ್ರಿಮ್ಮಿಂಗ್ ಮತ್ತು ಬುಕ್ ಕ್ಲೀನಿಂಗ್ ಎಂದು ಕರೆಯಲಾಗುತ್ತದೆ)

ಮೋದಿಯವರ ಆಡಳಿತದಲ್ಲಿ ಬ್ಯಾಂಕುಗಳ ಕಾರ್ಯ ವೈಖರಿ  ಹೇಗಿದೆಯೆಂದರೆ, ಬ್ಯಾಂಕುಗಳ ಮೇಲಿನ ನಿಗಾ ವಹಿಸುವುದು ಸೇರಿದಂತೆ, ದೇಶದ ಆರ್ಥಿಕ ಚಟುವಟಿಕೆಯನ್ನು ನಿಯಂತ್ರಿಸುವ ಕೇಂದ್ರ ಬ್ಯಾಂಕ್ ಎಂದು ಕರೆಯಲಾಗುವ  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ದೇಶದಲ್ಲಿ ರೈತರಿಗೆ ನೀಡಲಾಗಿರುವ ಸಬ್ಸಿಡಿ ವಿವರಗಳ ಅಂಕಿ ಅಂಶಗಳು ತನ್ನ ಬಳಿ ಇಲ್ಲ ಎಂದು ತಿಳಿಸಿದೆ. 2016 ನವಂಬರ್ ತಿಂಗಳಿನಲ್ಲಿ ಕೇಂದ್ರ ಸರ್ಕಾರವು ನೋಟು ನಿಷೇಧ ಆಜ್ಞೆಯನ್ನು ಜಾರಿಗೆ ತಂದಾಗ ಹಳೆಯ ನೋಟುಗಳ ಬದಲಿಗೆ ಹೊಸ ಐನೂರು ಹಾಗೂ ಎರಡು ಸಾವಿರ ಮೌಲ್ಯದ ಹೊಸ ನೋಟುಗಳನ್ನು ರಿಸರ್ವ್ ಬ್ಯಾಂಕ್ ವಿತರಿಸಿತು.  ಒಂದು ವರ್ಷದ ನಂತರವೂ ಹಳೆಯ ನೋಟುಗಳ ಸಂಗ್ರಹ ಕುರಿತು ಮಾಹಿತಿ ನೀಡಲಾರದೆ, ಇನ್ನೂ ಎಣಿಕೆ ಕಾರ್ಯ ಮುಂದುವರಿಯುತ್ತಿದೆ ಎಂಬ ಬೇಜವಾಬ್ದರಿ ಹೇಳಿಕೆಯನ್ನು ನೀಡಿ ದೇಶದೆದುರು ಬೆತ್ತಲಾಗಿತ್ತು. ಕೆಟ್ಟ ಪರಂಪರೆ ಇಂದಿಗೂ ಸಹ ಮುದುವರಿದಿದೆ. ರಿಸರ್ವ್ ಬ್ಯಾಂಕಿನ ನಿಷ್ಕ್ರಿಯತೆಯಿಂದಾಗಿ ಭಾರತದ ಬ್ಯಾಂಕುಗಳು ದಿವಾಳಿಯ ಅಂಚಿನತ್ತ ದೂಡಲ್ಪಟ್ಟಿವೆ.
ಇನ್ನು ಉದ್ಯೋಗ ಸೃಷ್ಟಿಯ ಕುರಿತು ಪ್ರಧಾನಿ ಆಡಿದ ಮಾತುಗಳು ಅವರಿಗೆ ತಿರುಗು ಬಾಣವಾದವು. ದೇಶದ ಬಡವರು ಮತ್ತು ಬಡ ನಿರುದ್ಯೋಗಿಗಳು ಬದುಕುವ ಕಲೆಯನ್ನು ಪ್ರಧಾನಿಯಿಂದ ಕಲಿಯಬೇಕಿಲ್ಲ. ಪಕೋಡ ಮಾರಾಟ ಮಾಡಿ ದಿನಕ್ಕೆ ನೂರು ಅಥವಾ ಇನ್ನೂರು ಸಂಪಾದಿಸಬಹುದು ಎಂಬ ಪ್ರಧಾನಿಯ ಮಾತು ಅವಿವೇಕತನದ ಪರಮಾವಧಿ ಎಂದು ಬಣ್ಣಿಸಬಹುದು. ದೇಶದಲ್ಲಿರುವ ಜನಸಂಖ್ಯೆಯ ಪ್ರಮಾಣದಲ್ಲಿ ಶೇಕಡ 65% ರಷ್ಟು ಮಂದಿ 35 ವರ್ಷದ ಒಳಗಿನ ಯುವಕರಾಗಿದ್ದಾರೆ. ಇವರಲ್ಲಿ ಪ್ರತಿ ವರ್ಷ ಮೂರು ಕೋಟಿ ಮಂದಿ ಉದ್ಯೋಗ ಮಾರುಕಟ್ಟೆಗೆ ಬರುತ್ತಿದ್ದಾರೆ. ಆದರೆ, ಭಾರತದ ಮಾಹಿತಿ ತಂತ್ರಜ್ಞಾನ, ಸೇವಾ ವಲಯ, ಕಟ್ಟಡ ನಿರ್ಮಾಣ ಇತ್ಯಾದಿ ವಲಯಗಳಿಂದ ಸೃಷ್ಟಿಯಾಗುತ್ತಿರುವ ಉದ್ಯೋಗದ ಪ್ರಮಾಣ ಕೇವಲ 60 ಲಕ್ಷ ಮಾತ್ರ.  ಉಳಿದವರು ಅತಂತ್ರರಾಗಿದ್ದಾರೆ. ಜೊತೆಗೆ ಹಿಂಸಾಚಾರ ಮತ್ತು ಅಪರಾಧದಂತಹ ಕ್ರಿಯೆಗಳಲ್ಲಿ ತಮಗರಿವಿಲ್ಲದಂತೆ ತೊಡಗಿಕೊಂಡಿದ್ದಾರೆ. ಭಾರತದಲ್ಲಿ ತ್ರಿಪುರಾದಲ್ಲಿನ ಶೇಕಡ 30.3% ರಷ್ಟು, ಹರ್ಯಾಣದಲ್ಲಿ ಶೇಕಡ 15.3 ರಷ್ಟು ಇದ್ದರೆ, ಕೇರಳದಲ್ಲಿ 10.7, ಗುಜರಾತಿನಲ್ಲಿ 9.7 ಅಸ್ಸಾಂ ರಾಜ್ಯದಲ್ಲಿ 9.8  ರಷ್ಟು ನಿರುದ್ಯೋಗಿಗಳಿದ್ದಾರೆ. ಈಶಾನ್ಯ ರಾಜ್ಯಗಳ ಮೇಲೆ ದಂಡೆತ್ತಿ ಹೋಗಿ ಬಿ.ಜೆ.ಪಿ. ಸರ್ಕಾರಗಳನ್ನು ಸ್ಥಾಪಿಸಿ ಬಂದ ಮಾನ್ಯ ಪ್ರಧಾನಿಯವರ ಬಳಿ ನಿರುದ್ಯೋಗ ನಿವಾರಣೆಗೆ ಯಾವುದೇ ಮಂತ್ರದಂಡವಿಲ್ಲದೆ  ಪಕೋಡ ಮಂತ್ರಕ್ಕೆ ಮೊರೆ ಹೋಗಿದ್ದಾರೆ.
ಯಾವುದೇ ಅಂಜಿಕೆ ಇಲ್ಲದೆ, ಇತಿಹಾಸದ ಪ್ರಜ್ಞೆ ಅಥವಾ ಕಣ್ಣಮುಂದಿನ ವಾಸ್ತವ ಅಂಕಿ ಅಂಶಗಳನ್ನು ಪರಿಗಣಿಸದೆ, ಮಾತನಾಡುವ ಪ್ರಧಾನಿಯವರು ಕರ್ನಾಟP ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಬೆಂಗಳೂರು ನಗರ ಕಸದ ನಗರವಾಗಿದೆ ಎಂದು ಟೀಕಿಸಿದರು. ಆದರೆ. ದೇಶದ ಅತ್ಯಂತ ಕೊಳಚೆ ಹಾಗೂ ಕಸದ ನಗರಗಳೆಂದು ಪರಿಗಣಿಸಿರುವ ನಲವತ್ತು ನಗರಗಳಲ್ಲಿ ಅವರು ಪ್ರತಿನಿಧಿಸುವ ವಾರಣಾಸಿ ನಗರವು ಹದಿನಾಲ್ಕನೆಯ ಸ್ಥಾನ ಪಡೆದಿದೆ. ಇಡೀ ದೇಶದಲ್ಲಿ ವಾಯು ಮಾಲಿನ್ಯಕ್ಕೆ ಕುಖ್ಯಾತಿ ಪಡೆದಿರುವ ದೆಹಲಿ ನಗರವನ್ನು ಸುಧಾರಿಸಲಾರದ ಪ್ರಧಾನಿಯವರ ಮಾತುಗಳನ್ನು ಯಾರೊಬ್ಬರೂ ಗಂಭಿರವಾಗಿ ಪರಿಗಣಿಸುತ್ತಿಲ್ಲ. ಇತ್ತೀಚೆಗೆ ಆಡಲಾದ ಭಾರತz ಹಳ್ಳಿಗಳು ಸಂಪೂರ್ಣ ವಿದ್ಯುತ್ಮಯವಾಗಿವೆ  ಎಂಬ ಅವರ ಮಾತುಗಳು ಸಹ ಹಾಸ್ಯಕ್ಕೆ ಗುರಿಯಾದವು. 2015 ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಒಂದು ಸಾವಿರದ ದಿನಗಳಲ್ಲಿ ದೇಶದ 18. 452 ಹಳ್ಳಿಗಳನ್ನು ಕತ್ತಲು ಮುಕ್ತ ಹಳ್ಳಿಗಳನ್ನಾಗಿ ಮಾಡುತ್ತೆವೆ ಎಂದು ಘೋಷಿಸಿದ್ದರು. ಆದರೆ, 15, 183 ಹಳ್ಳಿಗಳಿಗೆ ಮಾತ್ರ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಯಿತು. ಅಂದರೆ, ಶೇಕಡ 78% ರಷ್ಟು ಸಾಧನೆ ಸಾಧ್ಯವಾಯಿತು. ದೇಶದ ಆರು ಲಕ್ಷ ಹಳ್ಳಿಗಳಲ್ಲಿ ನೂರಕ್ಕೆ ನೂರರಷ್ಟು ವಿದ್ಯುತ್ ಸಂಪರ್ಕ ಇರುವ ಮನೆಗಳ ಸಂಖ್ಯೆ ಕೇವಲ 1301 ಹಳ್ಳಿಗಳಲ್ಲಿ ಮಾತ್ರ. ಅಂದರೆ, ಶೇಕಡ 0.21 % ಪ್ರಮಾಣ ಮಾತ್ರ. ಇನ್ನೂ ಭಾರತದಲ್ಲಿ ಸಾವಿರಾರು ಹಳ್ಳಿಗಳು, ವಿದ್ಯುತ್, ಸಾರಿಗೆ, ರಸ್ತೆ ಯಂತಹ ಸೌಲಭ್ಯಗಳಿಂದ ವಂಚಿತವಾಗಿವೆ.

ಇಂತಹ ಮೂಲಭೂತ ಸೌಕರ್ಯಗಳ ಜೊತೆಗೆ ಮನುಷ್ಯನ ಮೂಲಬೂತ ಬೇಡಿಕೆಗಳಾದ ಶಿಕ್ಷಣ, ಆರೋಗ್ಯ, ವಸತಿ ಮುಂತಾದ ರಂಗಗಳಲ್ಲಿ ಪ್ರಗತಿಗಿಂತ ಶೂನ್ಯವೇ ಎದ್ದು ಕಾಣುತ್ತಿದೆ. ಪ್ರಧಾನಿ ಹುದ್ದೆಗೇರಿದ ವ್ಯಕ್ತಿ, ಪಕ್ಷ ಅಥವಾ   ಪ್ರಾದೇಶಿಕ ತಾರತಮ್ಯ ಮಾಡದೆ ಎಲ್ಲರನ್ನೂ, ಎಲ್ಲವನ್ನೂ ಸಮಾನ ಭಾವದಿಂದ ಕಾಣುತ್ತಾ ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು. ಆದರೆ, ಕಾಂಗ್ರೇಸ್ ಮುಕ್ತ ಭಾರತ ತನ್ನ ಏಕೈಕ ಉದ್ದೇಶವೆಂಬಂತೆ ಹೊರಟಿರುವ ಪ್ರಧಾನಿಗೆ ಉಳಿದೆಲ್ಲವೂ ಈಗ ನಗಣ್ಯವಾಗಿದೆ. ಮುಂದೆ ಎದುರಾಗಲಿರುವ ಲೋಕಸಭಾ ಚುನಾವಣೆಯಲ್ಲಿ ಮೋದಿಯವರು ಇದಕ್ಕೆ ತಕ್ಕ ಪ್ರತಿಫಲವನ್ನು ಉಣ್ಣುವ ದಿನಗಳು ದೂರವಿಲ್ಲ.

( ಹೊಸತು ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ)