ಗುರುವಾರ, ಅಕ್ಟೋಬರ್ 29, 2015

ಆಚಾರ್ಯ ವಿನೋಬಾ ಭಾವೆ, ನೆಹರೂ ಗೆ ಹೇಳಿದ ಮಾತು ಮೋದಿಗೂ ಅನ್ವಯಿಸುತ್ತದೆ



1948 ರಲ್ಲಿ ಗಾಂಧೀಜಿಯವರ ಹತ್ಯೆಯಾದ ನಂತರ ಆಚಾರ್ಯ ವಿನೋಬಾ ಭಾವೆಯವರಿಗೆ ಆಶ್ರಮದ ಬದುಕು ಸಾಕೆನಿಸಿತು. ತಮ್ಮ ಗುರು ಹಾಕಿಕೊಟ್ಟಿದ್ದ ಸರ್ವೋದಯ ಪರಿಕಲ್ಪನೆಯಲ್ಲಿ ಏನಾದರೂ ಗ್ರಾಮ ಸುಧಾರಣೆ ಮಾಡಲು ಸಾಧ್ಯವೆ? ಎಂದು ಯೋಚಿಸಿದ ಅವರು ಗ್ರಾಮಭಾರತದ ದರ್ಶನಕ್ಕಾಗಿ ಕಾಲ್ನಡಿಗೆ ಪ್ರವಾಸ ಹೊರಟರು. 1951 ಏಪ್ರಿಲ್ 18 ರಂದು ಆಂಧ್ರದ ತೆಲಂಗಾಣ ಪ್ರಾಂತ್ಯದ ಪೂಚಂಪಲ್ಲಿ ಎಂಬಲ್ಲಿ ಭಾಷಣ ಮಾಡುತ್ತಾ, ಶ್ರೀಮಂತ ಜಮೀನ್ದಾರರು ತಮ್ಮಲ್ಲಿರುವ ಜಮೀನುಗಳನ್ನು ಬಡವರಿಗೆ ದಾನ ಮಾಡಬೇಕು. ಇದು ಯಾವ ಕಾರಣಕ್ಕೂ ನಿಮ್ಮ ಮನಸ್ಸಿನಲ್ಲಿ ಭಿಕ್ಷೆ ಎಂಬ ಭಾವನೆ ಮೂಡಕೂಡದು, ಬಡತನ ಹೋಗಲಾಡಿಸಲು ಹಾಗೂ ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸುವ ದೀಕ್ಷೆ ಎಂದು ಭಾವಿಸಬೇಕು ಎಂದು ಕರೆಯಿತ್ತರು. ವಿನೋಬಾ ಮಾತುಗಳಿಂದ ಪ್ರಭಾವಿತನಾದ ರಾಮರೆಡ್ಡಿ ಎಂಬ ಜಮೀನ್ದಾರ ಸ್ಥಳದಲ್ಲಿ ನೂರು ಎಕರೆ ಭೂಮಿಯನ್ನು ವಿನೋಬಾರವರಿಗೆ ದಾನ ಮಾಡಿದ. ಈ ಕ್ರಿಯೆಯಿಂದ ವಿನೋಬಾ ತಕ್ಷಣಕ್ಕೆ ವಿಚಲಿತರಾದರು. ಆದರೆ, ಇದು ದೇವರು ತೋರಿದ ದಾರಿ ಎಂದು ತಿಳಿದ ಅವರು ಈ ಕ್ರಿಯೆಗೆ ಭೂದಾನ ಎಂಬ ಹೆಸರಿಟ್ಟು ಜಮೀನುಗಳನ್ನು ಸ್ವೀಕರಿಸುತ್ತಾ ಹೋದರು. ನೀವು ನೀಡುವ ಜಮೀನಿನಲ್ಲಿ ಯಾವ ಕಾರಣಕ್ಕೂ ದೇಗುಲ, ಛತ್ರ, ಅಥವಾ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುವುದಿಲ್ಲ. ಹಸಿವು ಮತ್ತು ಬಡತನದಿಂದ ಬಳಲುತ್ತಿರುವ ಭಾರತದ ಬಡವರು ನಮ್ಮ ಪಾಲಿನ ನಿಜವಾದ ದೇವರಾಗಿದ್ದಾರೆ. ನೀವು ದಾನ ನೀಡುವ ಜಮೀನು ಅವರಿಗೆ ಸಲ್ಲುತ್ತದ ಎಂದು ಘೋಷಿಸುತ್ತಾ ಹೋದರು. ಮೊದಲ 70 ದಿನಗಳ ಪ್ರವಾಸದಲ್ಲಿ 12 ಸಾವಿರ ಎಕರೆ ಭೂಮಿ ದಾನವಾಗಿ ದೊರೆತರೆ, ನಂತರದ 60 ದಿನಗಳಲ್ಲಿ 18 ಸಾವಿರ ಎಕರೆ ಭೂಮಿ ದೊರೆಯಿತು. ಮೊದಲ ಹಂತದ 800 ಕಿಲೋಮೀಟರ್ ಪಾದಯಾತ್ರೆಯಲ್ಲಿ 30 ಸಾವಿರ ಎಕರೆ ಭೂಮಿಯು ಭೂದಾನವಾಗಿ ವಿನೋಬಾರವರ ಮಡಿಲು ಸೇರಿತ್ತು.



1952 ರಲ್ಲಿ ನೆಹರೂ ರವರು ವಿನೋಬಾ ಅವರನ್ನು ದೆಹಲಿಗೆ ಆಹ್ವಾನಿಸಿ, ಪಂಚವಾರ್ಷಿಕ ಯೋಜನೆಗಳಲ್ಲಿ ಗ್ರಾಮಾಭಿವೃದ್ಧಿಯ ಕುರಿತು ಯಾವ ರೀತಿಯ ಯೋಜನೆಗಳು ಇರಬೇಕೆಂದು ಕೇಳಿದಾಗ ಆಚಾರ್ಯರು ನೀಡಿದ ಉತ್ತರ ಹೀಗಿತ್ತು. “ ಬಡವರ ಹಸಿವನ್ನು ನೀಗಿಸಿಲಾಗದ, ದುಡಿಯುವ ಕೈಗಳಿಗೆ ಕೆಲಸ ನೀಡಲಾಗದ ನಿಮ್ಮ ಪಂಚವಾರ್ಷಿಕ ಯೋಜನೆಗಳನ್ನು ಕಸದ ಬುಟ್ಟಿಗೆ ಬಿಸಾಡಿ. ಮೊದಲು ನೀವು , ನಿಮ್ಮ ಪರಿವಾರ ದೆಹಲಿ ಬಿಟ್ಟು ಹಳ್ಳಿಗಳತ್ತ ಹೊರಡಿ. ಅಲ್ಲಿ ದರ್ಶನವಾಗುವ ನರಕ ಸದೃಶ್ಯ ಬದುಕು ನಿಮಗೆ ದಾರಿ ತೋರಿಸುತ್ತದೆ” ಇಂತಹದ್ದೇ ಮಾತುಗಳನ್ನು ನಾವೀಗ ಮೇಕಿಂಗ್ ಇಂಡಿಯಾ ಮತ್ತು  ಡಿಜಿಟಲ್ ಇಂಡಿಯಾ ಎಂದು ಜಪಿಸುತ್ತಿರುವ ಮೋದಿಗೂ ಹೇಳಬೇಕಾಗಿದೆ.

ಸೋಮವಾರ, ಅಕ್ಟೋಬರ್ 26, 2015

ರೈತರ ಆತ್ಮಹತ್ಯೆ ಕುರಿತ ಸಾಕ್ಷ್ಯ ಚಿತ್ರ " ಧರೆ ಹೊತ್ತಿ ಉರಿದೊಡೆ" ಕುರಿತು ಒಂದಿಷ್ಟು ಅನಿಸಿಕೆಗಳು



ನಮ್ಮ ನಡುವಿನ ಹಿರಿಯ ಪತ್ರಕರ್ತರಾದ ಕೆ.ಜಿ. ವಾಸುಕಿ ( ಕೆಸ್ತೂರು ಗುಂಡಪ್ಪ ವಾಸುಕಿ) ಯವರು  ಹಾಗೂ ಇನ್ನೋರ್ವ ಹಿರಿಯ ಪತ್ರಕರ್ತೆ ಮಾಯಾ ಜಗದೀಪ್ ಇವರ ಜೊತೆಗೂಡಿ ನಿರ್ಮಿಸಿರುವ ರೈತರ , ವಿಶೇಷವಾಗಿ ರೈತರ ಆತ್ಮಹತ್ಯೆಯನ್ನು ಗುರಿಯಾಗಿರಿಸಿಕೊಂಡು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಯಾರಿಸಿರುವ ಸುಮಾರು 29 ನಿಮಿಷಗಳ ಸಾಕ್ಷ್ಯ ಚಿತ್ರ “ ಧರೆ ಹೊತ್ತಿ ಉರಿದೊಡೆ” ನಮ್ಮೆಲ್ಲರ ಕಣ್ಣು ತೆರೆಸುವಂತಿದೆ.
ಈ ತಲೆ ಮಾರಿನ ಪತ್ರಕರ್ತರಿಗೆ ವಾಸುಕಿಯವರು ಅಪರಿಚಿತರಾಗಿ ಉಳಿದಿದ್ದಾರೆ. ಆದರೆ ಅವರು ಕಳೆದ ಮೂರು ದಶಕಗಳಿಂದ ಪತ್ರಿಕೋದ್ಯಮದಲ್ಲಿದ್ದುಕೊಂಡು, ಸುಮಾರು ಎರಡು ದಶಕಗಳ ಕಾಲ ಏಷ್ಯಾ ನ್ಯೂಸ್ ಇಂಟರ್ ನ್ಯಾಷನಲ್ ಎಂಬ ಜಗತ್ ಪ್ರಸಿದ್ಧ ರಾಯಿಟರ್ ಸುದ್ಧಿ ಸಂಸ್ಥೆಯ  ದಕ್ಷಿಣ ಏಷ್ಯಾ ವಿಭಾಗದ ಅಂಗ ಸಂಸ್ಥೆಯಾದ ದ ಏಷ್ಯಾ ನ್ಯೂಸ್ ಇಂಟರ್ ನ್ಯಾಷನಲ್ ಸುದ್ದಿ ಸಂಸ್ಥೆಯ ದಕ್ಷಿಣ ಭಾರತದ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದವರು. (ಇದೀಗ ದೆಹಲಿಯ ಪಯೋನಿರ್ ಇಂಗ್ಲೀಷ್ ದಿನಪತ್ರಿಕೆಯ ಕರ್ನಾಟಕದ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.) ಹೀಗೆ ಅಂತರಾಷ್ರೀಯ ಮಟ್ಟದ ದೃಶ್ಯ ಮಾಧ್ಯಮದಲ್ಲಿ ಸೇವೆ ಸಲ್ಲಿಸಿರುವ ವಾಸುಕಿ ಮತ್ತು ದೂರದರ್ಶನದಲ್ಲಿ ಸೇವೆ ಸಲ್ಲಿಸಿರುವ ಮಾಯಾ ಜಗದೀಪ್ ಇಬ್ಬರೂ ತಮ್ಮ ಅನುಭವ, ಮತ್ತು ನೆಲದ ಸಂಸ್ಕೃತಿಯ ಕುರಿತು ತಮಗಿರುವ  ಅಪಾರ ಕಾಳಜಿ ಪ್ರೀತಿ ಮತ್ತು ಬದ್ಧತೆಯನ್ನು ಈ ಸಾಕ್ಷ್ಯ ಚಿತ್ರದ ಮೂಲಕ ಸಾಭೀತು ಪಡಿಸಿದ್ದಾರೆ. ಸಾಕ್ಷ್ಯ ಚಿತ್ರಕ್ಕೆ ನೀಡಿರುವ “ ಧರೆ ಹೊತ್ತಿ ಉರಿದೊಡೆ” ಎಂಬ ವಚನದ ಸಾಲೊಂದರ ಶೀರ್ಷಿಕೆ ಹಾಗೂ ಸಂದರ್ಭಾನುಸಾರವಾಗಿ ಬಳಕೆಯಾಗಿರುವ ಇತರೆ ವಚನಗಳು, ಕುವೆಂಪು ಗೀತೆ, ಕುಮಾರವ್ಯಾಸ ಕಾವ್ಯ ಹೀಗೆ ತಮ್ಮ ಕನ್ನಡದ ಮೇಲಿನ ಪ್ರೀತಿಯನ್ನು ರೈತರ ಸಮಸ್ಯೆಯನ್ನು ಕಟ್ಟಿಕೊಡುವಾಗ ಪರಿಣಾಮಕಾರಿಯಾಗಿ ಬಳಸಿದ್ದಾರೆ.
ವಾಸುಕಿ ಅಂತರಾಷ್ಟ್ರೀಯ ಮಟ್ಟದ ಇಂಗ್ಲೀಷ್ ಮಾಧ್ಯಮದ ಪತ್ರಕರ್ತರಾಗಿ ಇವೊತ್ತಿಗೂ ನನ್ನ ತಲೆ ಮಾರಿಗೆ ಮಾದರಿಯಾದವರು. ಭಾರತದ ಪತ್ರಿಕೋದ್ಯಮದಲ್ಲಿ ಗ್ರಾಮೀಣ ಭಾರತದ ಬವಣೆಗಳಿಗೆ ಅವಕಾಶ ಕಲ್ಪಿಸಿಕೊಟ್ಟು ಅದನ್ನು ಜಾಗತಿಕ ಸಮಸ್ಯೆಯಾಗಿ ಪರಿಗಣಿಸುವಂತೆ, ತಮ್ಮ ನಿರಂತರ ಅಧ್ಯಯನ ಮತ್ತು ಲೇಖನಗಳ ಮೂಲಕ ಪರೋಕ್ಷ ಒತ್ತಡ ಹೇರಿದ ಪಿ. ಸಾಯಿನಾಥ್ ರವರ ಜೊತೆ ನಿರಂತರ ಒಡನಾಡಿರುವ ಕೆ.ಜಿ. ವಾಸುಕಿಯವರಯ ಕರ್ನಾಟಕ ರೈತರ ಸಮಸ್ಯೆಗಳ ಕುರಿತಂತೆ  ಅವರ ಜೊತೆಯಲ್ಲಿ ಕರ್ನಾಟಕವನ್ನು ಸುತ್ತಿದವರು. ಹಾಗಾಗಿ ಈ ಸಾಕ್ಷ್ಯ ಚಿತ್ರದಲ್ಲಿ ನಿಖರವಾದ ಅಧ್ಯಯನ, ಆಳವಾದ ಸಂಶೋಧನೆ ಮತ್ತು ಸಮಸ್ಯೆಯನ್ನು ನಿಖರವಾಗಿ ಗುರುತಿಸುವ ಬೌದ್ಧಿಕ ಶಕ್ತಿ ಎಲ್ಲವೂ ಎದ್ದು ಕಾಣುತ್ತವೆ.

ನನಗಿನ್ನೂ ನೆನಪಿದೆ.  2002 ರ ಶ್ರಾವಣ ಮಾಸದ ಸಮಯ. ಎಸ್. ಎಂ. ಕೃಷ್ಣ ಕರ್ನಾಟಕದ ಮುಖ್ಯ ಮಂತ್ರಿಯಾಗಿದ್ದರು. ಹುಬ್ಬಳ್ಳಿಯ  ಉದಯ ಟಿ.ವಿ.ಯ ಪ್ರಾದೇಶಿಕ ಕಛೇರಿಯ ಮುಖ್ಯಸ್ಥನಾಗಿ  ವರ್ಗವಾಗಿ ಬಂದಿದ್ದೆ. ನನ್ನ ಕುಟುಂಬ ಮಂಡ್ಯ ನಗರದಲ್ಲಿ ವಾಸವಾಗಿತ್ತು. ಪ್ರತಿ ಹದಿನೈದು ದಿನ  ಅಥವಾ ತಿಂಗಳಿಗೆ ಎರಡು ದಿನ ರಜೆ ಹಾಕಿ ಮಂಡ್ಯಕ್ಕೆ ಹೋಗುತ್ತಿದ್ದೆ. ಒಂದು ದಿನ ಬೆಳಿಗ್ಗೆ ಮಂಡ್ಯ ಜಿಲ್ಲೆಯ ಈ ಟಿ.ವಿ.ಯ ವರದಿಗಾರರಾಗಿದ್ದ ಇಳೆಕಾನ್ ಶ್ರೀಕಂಠ ಎಂಬ ಹಿರಿಯ ಪತ್ರಕರ್ತರ ಜೊತೆ ಕಾಫಿ ಕುಡಿಯುತ್ತಾ  ಹರಿಪ್ರಿಯ ಹೋಟೆಲ್ ನಲ್ಲಿ ಕುಳಿತಿದ್ದೆ. ಅದು ಸುಮಾರು ಬೆಳಗಿನ ಒಂಬತ್ತು ಗಂಟೆಯ ಸಮಯ. ಆ ದಿನ ಮದ್ದೂರು ಪಟ್ಟಣದ ಸುಮಾರು ಮೂರು ಮೈಲಿ ದೂರವಿರುವ ವರಗೇರಹಳ್ಳಿ ಎಂಬ ಗ್ರಾಮದಲ್ಲಿ ಶಂಕರೇಗೌಡ ಎಂಬ ರೈತ ಆತ್ಮ ಹತ್ಯೆ ಮಾಡಿಕೊಂಡಿದ್ದ. ವಾಸುಕಿಯವರಿಂದ ಶ್ರೀಕಂಠ ರವರಿಗೆ ಪೋನ್ ಬಂತು. ನಾನು ಮಂಡ್ಯಕ್ಕೆ ಬಂದಿರುವುದಾಗಿ ಶ್ರೀಕಂಠ ವಾಸುಕಿಗೆ ತಿಳಿಸಿದರು. ನನ್ನ ಜೊತೆ ಮಾತನಾಡಿದ ಅವರು ಸಾಯಿನಾಥ್ ಬೆಂಗಳೂರಿನಲ್ಲಿದ್ದಾರೆ. ನಾವಿಬ್ಬರೂ ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ರೈತನ ಅಂತ್ಯ ಕ್ರಿಯೆಗೆ ಬರುವುದಾಗಿ ತಿಳಿಸಿದರು.
ನಾನು ಮತ್ತು ಕೂಡಲೇ ವರಗೇರಳ್ಳಿಯ ರೈತ ಮುಖಂಡನಾಗಿದ್ದ ವಿ.ಅಶೋಕ್ ಗೆ ವಿಷಯ ತಿಳಿಸಿ ಅವರು ಬರುವವರೆಗೂ ಅಂತ್ಯಕ್ರಿಯೆ ಮಾಡಬೇಡಿ ಎಂದು ವಿನಂತಿಸಿಕೊಂಡಿದ್ದೆವು. ಆ ದಿನ ಜಿಟಿ.ಜಿಟಿ ಮಳೆ. ವಾಸುಕಿ ಮತ್ತು ಸಾಯಿನಾಥ್ ಮದ್ದೂರು ತಲುಪುವುದು ಮೂರು ಗಂಟೆಯಾಯಿತು. ಆದರೆ. ಮಧ್ಯಾಹ್ನ ಎರಡು ಗಂಟೆಯವರೆಗೆ ಕಾದಿದ್ದ ಊರಿನ ಜನತೆ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ದೇಹವನ್ನು ಒಣಗಿದ ಕಟ್ಟಿಗೆಗಳ ನಡುವೆ ಇಟ್ಟು. ಮಳೆಯ ಕಾರಣ ಸೀಮೆ ಎಣ್ಣೆ, ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದರು. ವರಗೇರಹಳ್ಳಿ ಗ್ರಾಮಕ್ಕೆ ಬರುವದರೊಳಗೆ ಚಿತೆ ಹೊತ್ತಿ ಉರಿದು ಬೂದಿಯಾಗಿತ್ತು. ನಂತರ ವಾಸುಕಿ, ಸಾಯಿನಾಥ್ ಇಬ್ಬರೂ ಮೃತ ರೈತನ ಮನೆಗೆ ತೆರಳಿ, ವಿಧವೆ ಪತ್ನಿಯ ಚಿತ್ರ ತೆಗೆದುಕೊಂಡು, ರೈತನ ಜಮೀನಿನ ವಿವರ, ಮಾಡಿದ್ದ ಸಾಲದ ವಿವರ ಇವುಗಳನ್ನು ತಮ್ಮ ಡೈರಿಯಲ್ಲಿ ದಾಖಲಿಸಿಕೊಂಡು ವಾಪಸ್ ಬೆಂಗಳೂರಿಗೆ ತೆರಳಿದರು.
ಈ ಘಟನೆ ನಡೆದ ಎರಡು ವರ್ಷಗಳ ನಂತರ ಒಮ್ಮೆ ಸಾಯಿನಾಥ್ ರವರು ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿರುವಾಗ ಮದ್ದೂರಿನ ಎಳನೀರು ಮಾರುಕಟ್ಟೆಯ ಬಳಿ ಎಳನೀರು ಕುಡಿಯಲು ನಿಂತಾಗ ಅವರಿಗೆ ವರಗೇರಳ್ಳಿ ಗ್ರಾಮ ನೆನಪಾಗಿ ಮತ್ತೇ ಮೃತ ರೈತನ ಮನೆಗೆ ಬೇಟಿ ಕೊಟ್ಟರು. ಆದಿನ ಮೃತ ರೈತನ ಪತ್ನಿ ಮನೆಗೆ ಬೀಗ ಹಾಕಿ ಊರಾಚೆಗಿನ ಬಯಲಿನಲ್ಲಿ ಇದ್ದ ಹಸುವೊಂದನ್ನು ಮೇಯಿಸುತ್ತಾ ಕುಳಿತಿದ್ದಳು. ಕಾರಿನ ಚಾಲಕನ ನೆರವಿನಿಂದ ಆಕೆಯನ್ನು ಬೇಟಿಮಾಡಿ  ಸ್ಥಿತಿಗತಿ ವಿಚಾರಿಸಿಕೊಂಡಿದ್ದರು. ಸರ್ಕಾರದಿಂದ ಪರಿಹಾರದ ಹಣ ಬಂದಿರಲಿಲ್ಲ. ನ್ಯಾಯಬೆಲೆ ಅಂಗಡಿಯಲ್ಲಿ ಸಿಗುತ್ತಿದ್ದ ತಿಂಗಳಿಗೆ ಒಂದು ಕೇಜಿ ಸಕ್ಕರೆ, ಮೂರು ಕೆ,ಜಿ, ಗೋಧಿ ಮತ್ತು ಐದು ಕೆ.ಜಿ. ಅಕ್ಕಿ ಆಕೆಗೆ ಆಸರೆಯಾಗಿದ್ದವು. ಈ ಕುರಿತು ಹಿಂದೂ ಇಂಗ್ಲೀಷ್ ದಿನಪತ್ರಿಕೆಯಲ್ಲಿ ಸುಧೀರ್ಘ ಲೇಖನ ಬರೆದ ಪಿ.ಸಾಯಿನಾಥ್ ರವರು, ಮೃತ ರೈತನ ಪತ್ನಿಗೆ ಸರ್ಕಾರ ನಿಗದಿ ಪಡಿಸಿರುವ ದಿನ ನಿತ್ಯದ ಪಡಿತರ ಅಂದರೆ, ದಿನಕ್ಕೆ 33 ಗ್ರಾಂ ಸಕ್ಕರೆ, 67 ಗ್ರಾಂ ಗೋಧಿ, 167 ಗ್ರಾಂ ಅಕ್ಕಿಯ ಜೊತೆ ಜೈಲುಗಳಲ್ಲಿ ಕೊಲೆ ಸುಲಿಗೆ ಮಾಡಿರುವ ಖೈದಿಗಳಿಗೆ ನಿಗದಿ ಪಡಿಸಿರುವ ಪಡಿತರ ದಿನವೊಂದಕ್ಕೆ 60 ಗ್ರಾಂ ಬೇಳೆ, 80 ಗ್ರಾಂ ತರಕಾರಿ, 200 ಗ್ರಾಂ ಅನ್ನ, ವಾರಕ್ಕೆ 120 ಗ್ರಾಂ ಮಾಂಸ, ಮತ್ತು ಒಂದು ಮೊಟ್ಟೆ ಹಾಗೂ ತಲೆಗೆ 10 ಗ್ರಾಂ ಎಣ್ಣೆ ಈ ಸವಲತ್ತುಗಳ ಜೊತೆಗೆ ಹೋಲಿಕೆ ಮಾಡಿ ಅನ್ನದಾತನ ಪತ್ನಿ ಹೇಗೆ ನಿರ್ಗತಿಕಳಾಗಿ ಬದುಕುತ್ತಿದ್ದಾಳೆ ಎಂಬುದನ್ನು ನಾವು ಈವರೆಗೆ ಗ್ರಹಿಸಲಾಗದ ಸತ್ಯ ಸಂಗತಿಗಳೊಂದಿಗೆ ದಾಖಲಿಸಿದ್ದರು.





ರೈತರ ಜ್ವಲಂತ ಸಮಸ್ಯೆಗಳ ಕುರಿತು ಇಂತಹ  ಆಳವಾದ ಒಳನೋಟಗಳನ್ನು ಸಾಯಿನಾಥ್ ಮೂಲಕ ದಕ್ಕಿಸಿಕೊಂಡಿರುವ ಪತ್ರಕರ್ತ ವಾಸುಕಿಯವರು ಸಾಕ್ಷ್ಯ ಚಿತ್ರದಲ್ಲಿ ಸಮಸ್ಯೆಯ ಮೂಲಕ್ಕೆ ಕೈ ಹಾಕಿದ್ದಾರೆ. ರೈತ ಬೆಳೆದ ಫಸಲಿಗೆ ಸೂಕ್ತ ಬೆಲೆ ಸಿಗದೆ, ಅದರ ಪ್ರತಿಫಲವನ್ನು ಮಾರುಕಟ್ಟೆಯ ದಲ್ಲಾಳಿಗಳು ಮತ್ತು ವರ್ತಕರು ನುಂಗಿ ನೀರು ಕುಡಿಯುತ್ತಿರುವುದನ್ನು ಸಮರ್ಥವಾಗಿ ದಾಖಲಿಸಿದ್ದಾರೆ. ಇದಕ್ಕಾಗಿ ಬಾಗಲಕೋಟೆಯ ಮಹಾಲಿಂಗ ಪುರದ ಬೆಲ್ಲದ ಮಾರುಕಟ್ಟೆ, ಮದ್ದೂರಿನ ಎಳನೀರಿನ ಮಾರುಕಟ್ಟೆ, ರಾಮನಗರದ ರೇಷ್ಮೆ ಮಾರುಕಟ್ಟೆ ಇಲ್ಲಿಗೆ ಬೇಟಿ ನೀಡಿ ಎಲ್ಲಾ ಬಗೆಯ ರೈತರ ಬವಣೆಗಳನ್ನು ದಾಖಲಿಸಿದ್ದಾರೆ. ಜೊತೆಗೆ ರೈತರ ಆತ್ಮಹತ್ಯೆ ಕುರಿತಂತೆ ಮನರೋಗ ತಜ್ಞರು,  ಬೆಲೆ ಏರಿಳಿತ ಕುರಿತಂತೆ  ಮಾರುಕಟ್ಟೆಯ ತಜ್ಞರ ಸಂದರ್ಶನ ನಡೆಸಿದ್ದಾರೆ. ರೈತರ ಫಲವತ್ತಾದ ಭೂಮಿ ಅಭಿವೃದ್ಧಿಯ ನೆಪದಲ್ಲಿ ರಿಯಲ್ ಎಸ್ಟೇಟ್ ದಂಧೆಗೆ ಬಲಿಯಾಗುತ್ತಿರುವ ಸನ್ನಿವೇಶವನ್ನು ಇಲ್ಲಿ ಪ್ರಸ್ತಾಪಿಸಿರುವುದು ಈ ಸಾಕ್ಷ್ಯ ಚಿತ್ರದ ವಿಶೇಷ.
ರೈತರ ಸಮಸ್ಯೆಗೆ ಹೆಗಲಿಗೆ ಕೇವಲ  ಹಸಿರು ಟವಲ್ ಹಾಕಿಕೊಂಡು ಬೀದಿಗಿಳಿದು ಪ್ರತಿಭಟನೆ ಮಾಡಿದರೆ, ಸಾಲದು ಇಡೀ ವ್ಯವಸ್ಥೆ ಎಲ್ಲಿ ಎಡವಿದೆ ಎಂಬುದನ್ನು ಸೂಕ್ಷ್ಮವಾಗಿ ಗ್ರಹಿಸಬೇಕು ಎಂಬುದನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ.  ಇಂಗ್ಲೀಷ್ ಮತ್ತು ಕನ್ನಡ ಭಾಷೆಯಲ್ಲಿ ತಯಾರಾಗಿರುವ ಈ ಸಾಕ್ಷ್ಯ ಚಿತ್ರವನ್ನು ನಾವೆಲ್ಲರೂ ನೋಡಲೇ ಬೇಕಿದೆ. ಇಂತಹ ಒಂದು ಅಪರೂಪದ ಸಾಕ್ಷ್ಯ ಚಿತ್ರ ನಿರ್ಮಾಣ ಮಾಡಿರುವ ವಾಸುಕಿ ಮತ್ತು ಮಾಯಾ ಅವರಿಗೆ  ರೈತರ ಪರವಾಗಿ ಅಭಿನಂದನೆಗಳು ಮತ್ತು ಕೃತಜ್ಞತೆಗಳು.

 ಇದೇ ಅಕ್ಟೋಬರ್ 30 ರಂದು ಬೆಂಗಳೂರಿನ ವಿಧಾನ ಸೌಧದಲ್ಲಿ ಸ್ಪೀಕರ್ ಶ್ರೀ ಕಾಗೂಡು ತಿಮ್ಮಪ್ಪನವರಿಂದ ಈ ಸಾಕ್ಷ್ಯ ಚಿತ್ರ ಬಿಡುಗಡೆಯಾಗುತ್ತಿದೆ. ಆಸಕ್ತರು ಸಾಕ್ಷ್ಯ ಚಿತ್ರದ ಮಾಹಿತಿಗಾಗಿ ಕೆ.ಜಿ.ವಾಸುಕಿ. ಮೊಬೈಲ್. ನಂ.9845032321 ಮತ್ತು ಮಾಯಾಜಗದಿಪ್ -94484900006 ಇವರನ್ನು ಸಂಪರ್ಕಿಸಬಹುದು.

ಗುರುವಾರ, ಅಕ್ಟೋಬರ್ 22, 2015

ಭೂಮಿಗೀತ ಬ್ಲಾಗ್ ಓದುಗರಿಗೆ ಕೃತಜ್ಞತೆಗಳು





ಗೆಳೆಯರೇ, ಎರಡೂವರೆ ವರ್ಷಗಳ ಹಿಂದೆ ಅಂದರೆ, 2013 ಏಪ್ರಿಲ್ 14 ರಂದು ನಾನು ಆರಂಭಿಸಿದ ಭೂಮಿಗೀತ ಬ್ಲಾಗ್ ಗೆ ದಿನ 25 ಸಾವಿರ ಓದುಗರು ಮತ್ತು 3 ಲಕ್ಷದ 40 ಸಾವಿರ ಆಸಕ್ತರು ಬೇಟಿ ನೀಡಿದಂತಾಯಿತು. ಒಟ್ಟು 170 ಲೇಖನಗಳನ್ನು ಬರೆದಿದ್ದು ಮೊದಲ ವರ್ಷ 13-14 ನಡುವೆ 104 ಲೇಖನಗಳನ್ನು ಬರೆದು ಅಡಕಗೊಳಿಸಿದ್ದೆ. ನಂತರದ ಒಂದೂವರೆ ವರ್ಷದಲ್ಲಿ ಕೇವಲ 66 ಲೇಖನಗಳನ್ನು ಮಾತ್ರ ಬರೆಯಲು ನನಗೆ ಸಾಧ್ಯವಾಯಿತು.
ನನ್ನ ಮಗ ಅನನ್ಯ ರೂಪಿಸಿಕೊಟ್ಟಿದ್ದ ಬ್ಲಾಗ್ ನಲ್ಲಿ ಲೇಖನ ಬರೆಯುವುದು, ಚಿತ್ರಗಳನ್ನು ಅಡಕಗೊಳಿಸುವ ವಿದ್ಯೆಯನ್ನು ನನ್ನ ಮಿತ್ರ ಹಾಗೂ ಸಾಪ್ಟ್ ವೇರ್ ತಂತ್ರಜ್ಞ ರವಿ ಅರೇಹಳ್ಳಿ ಕಲಿಸಿಕೊಟ್ಟರು. ನಾನು ಬರೆದಿರುವ 170 ಲೇಖನಗಳಲ್ಲಿ ಕೃಷಿ ಮತ್ತು ಪರಿಸರಕ್ಕೆ ಹಾಗೂ ಅಭಿವೃದ್ಧಿ ಕುರಿತಂತೆ ನೂರಕ್ಕೂ ಹೆಚ್ಚು ಲೇಖನಗಳಿಗೆ. ಅವುಗಳನ್ನು ಈಗಲೂ ಓದುಗರು ಹೆಕ್ಕಿ ಓದುತ್ತಿದ್ದಾರೆ. ಹಾಗಾಗಿ ಮುಂದಿನ ಜನವರಿಯಿಂದ ಭೂಮಿಗೀತ ಬ್ಲಾಗ್ ಅನ್ನು ಪರಿಸರ ಕುರಿತ ಅಂತರ್ಜಾಲ ಪತ್ರಿಕೆಯನ್ನಾಗಿ ರೂಪಿಸುತ್ತಿದ್ದೇನೆ, ಜನವರಿಯಿಂದ ನಾನೊಬ್ಬನೇ ಅಲ್ಲದೆ, ನಾಡಿನ ಎಲ್ಲಾ ಪರಿಸರ ತಜ್ಞರು ಮತ್ತು ಕೃಷಿ ತಜ್ಞರನ್ನು ಒಳಗೊಳ್ಳುವಂತೆ ಮಾಡುತ್ತಿದ್ದೇನೆ.
ಕಳೆದ 25 ವರ್ಷಗಳಿಂದ ನಾನು ಸಂಗ್ರಹಿಸಿ ಇಟ್ಟುಕೊಂಡಿರುವ ಡೌನ್ ಟು ಅರ್ಥ್ ಪತ್ರಿಕೆಯಿಂದ ಜಗತ್ತಿನ ನೆಲ-ಜಲ-ಗಾಳಿ ಕುರಿತಂತೆ ಬಂದಿರುವ ಸಾವಿರಾರು ಲೇಖನಗಳನ್ನು ಕನ್ನಡಕ್ಕೆ ಅನುವಾದಿಸುವುದರ ಜೊತೆಗೆ ಪರಿಸರಕ್ಕೆ ಸಂಬಂಧಿಸಿದಂತೆ ಜಗತ್ತಿನಾದ್ಯಂತ ಪ್ರಕಟವಾಗಿರುವ ಕೃತಿಗಳ ಸಂಕ್ಷಿಪ್ತ ಮಾಹಿತಿಯನ್ನು ಅಡಕಗೊಳಿಸಲು ನಿರ್ಧರಿಸಿದ್ದೀನಿ. ಈವರೆಗೆ ಒನ್ ಮ್ಯಾನ್ ಆರ್ಮಿಯಾಗಿದ್ದ ತಾಣ ಜನವರಿಯಿಂದ ಕೃಷಿ ಮತ್ತು ಪರಿಸರ ತಜ್ಞರ ಚಿಂತನೆಯ ತಾಣವಾಗಿ ಹೊರ ಹೊಮ್ಮಲಿದೆ. ಎಂದಿನಂತೆ ಮಿತ್ರ ರವಿ ಅರೇಹಳ್ಳಿ ಮಾರ್ದರ್ಶನದಲ್ಲಿ ಹೊಸ ವೆಬ್ ತಾಣ ಸಿದ್ಧವಾಗಲಿದೆ. ಭೂಮಿಗೀತ ಬ್ಲಾಗ್ ಲೇಖನಗಳನ್ನು ಓದಿ ಪ್ರೋತ್ಸಾಹಿಸಿದ ಎಲ್ಲಾ ಸಮಾನ ಮನಸ್ಕ ಓದುಗರಿಗೆ ಕೃತಜ್ಞತೆಗಳು.
ಡಾ. ಎನ್. ಜಗದೀಶ್ ಕೊಪ್ಪ

ಮಂಗಳವಾರ, ಅಕ್ಟೋಬರ್ 20, 2015

ಮಹಾತ್ಮನ ಆತ್ಮ ಮತ್ತು ನೆರಳು: ಮಹಾದೇವ ದೇಸಾಯಿ


ಮಹಾತ್ಮ ಗಾಂಧೀಜಿಯವರ ಚಿಂತನೆಗಳನ್ನು ಮತ್ತು ಬದುಕನ್ನು ತಮ್ಮ ಸಶಕ್ತ ಬರೆವಣಿಗೆಯ ಮೂಲಕ ಹಿಡಿದಿಟ್ಟು, ಗಾಂಧೀಜಿಯವರಿಗೆ  ಜಗತ್ತಿನಲ್ಲಿ ದಾರ್ಶನಿಕ ಸ್ಥಾನ ಕಲ್ಪಿಸಿಕೊಟ್ಟವರಲ್ಲಿ ಮಹಾದೇವ ದೇಸಾಯಿರವರು ಬಹಳ ಮುಖ್ಯರಾದವರು. ಮಹಾತ್ಮ ಗಾಂಧಿಯವರ ಮಾನಸ ಪುತ್ರರಂತಿದ್ದ ಮಹಾದೇವ ದೇಸಾಯಿ, ಗಾಂಧಿಜಿಯವರ ಸಂಪರ್ಕಕ್ಕೆ ಬಂದದ್ದು ತಮ್ಮ ಇಪ್ಪತ್ತೈದನೆಯ ವಯಸ್ಸಿನಲ್ಲಿ. ಅವರು ಅಕಾಲಿಕ ಮರಣ ಹೊಂದಿದ್ದು ಕೇವಲ ಐವತ್ತನೆಯ ವಯಸ್ಸಿನಲ್ಲಿ. ಈ ಇಪ್ಪತ್ತೈದು ವರ್ಷಗಳ ಒಡನಾಟದಲ್ಲಿ ಗಾಂಧೀಜಿಯವರ ಹಿಂದ್ ಸ್ವರಾಜ್ ಕೃತಿ ಹಾಗೂ ಸತ್ಯದೊಂದಿಗೆ ನನ್ನ ಪ್ರಯೋಗ ಎಂಬ ಆತ್ಮಚರಿತ್ರೆಯನ್ನು ಇಂಗ್ಲೀಷ್ ಭಾಷೆಗೆ ಅನುವಾದ ಮಾಡುವುದರ ಜೊತೆಗೆ ಅವರ ಅಸಂಖ್ಯಾತ ಲೇಖನಗಳನ್ನು ಗುಜರಾತಿ ಭಾಷೆಯಿಂದ ಇಂಗ್ಲೀಷ್ ಭಾಷೆಗೆ ಅನುವಾದ ಮಾಡಿ ಯಂಗ್ ಇಂಡಿಯ ಮತ್ತು ಹರಿಜನ ಪತ್ರಿಕೆಗಳಲ್ಲಿ ಪ್ರಕಟಿಸಿದರು. ಇವುಗಳ ಜೊತೆಗೆ ಜವಹರಲಾಲ್ ನೆಹರೂರವರ ಜೀವನ ಚರಿತ್ರೆ ಹಾಗೂ ರವೀಂದ್ರ ನಾಥ್ ಟ್ಯಾಗೂರ್ ರವರ ಬಂಗಾಳಿ ಸಾಹಿತ್ಯವನ್ನು ಇಂಗ್ಲೀಷ್ ಭಾಷೆಯಲ್ಲಿ ರಚಿಸಿದ  ಶ್ರೇಷ್ಟ ಪ್ರತಿಭಾವಂತ.
ಗಾಂಧೀಜಿ ಕುರಿತಂತೆ ಅವರಿಗಿದ್ದ ನಿಷ್ಠೆ ಮತ್ತು ಬದ್ಧತೆಯನ್ನು ಅಕ್ಷರ ಮತ್ತು ಮಾತುಗಳಲ್ಲಿ ಹಿಡಿದಡಲು ಅಸಾಧ್ಯವಾದ ಸಂಗತಿ.   ಮಹಾದೇವ ದೇಸಾಯಿ ಇಪ್ಪತ್ತು ಸಂಪುಟಗಳಲ್ಲಿ ಗುಜರಾತಿಯ ಭಾಷೆಯಲ್ಲಿ   ಬರೆದಿರುವ ತಮ್ಮ ಆತ್ಮ ಚರಿತ್ರೆಯಲ್ಲಿ ಒಂದೇ ಒಂದು ಅಕ್ಷರ ಅಥವಾ ವಾಕ್ಯವನ್ನು ತಮ್ಮ ವ್ಯಯಕ್ತಿಕ ಬದುಕು ಅಥವಾ ಭಾವನೆಗಳ  ಕುರಿತು ಏನನ್ನೂ  ದಾಖಲಿಸಿಲ್ಲ. ಹಾಗಾಗಿ ಮಹಾತ್ಮ ಗಾಂಧೀಜಿಯವರ ಹೋರಾಟದ ಮುಖ್ಯ ಘಟನಾವಳಿಗಳು ಜೊತೆಗೆ  ಕೌಟುಂಬಿಕ ಬದುಕಿನ ಘಟನೆಗಳೆಲ್ಲವೂ ಸಮಗ್ರವಾಗಿ ದಿನಚರಿಯಲ್ಲಿ ದಾಖಲಾಗುವುದರ ಮೂಲಕ  ಹೊರ ಜಗತ್ತಿಗೆ ಗಾಂಧೀಜಿಯವರ ಬಹುಮುಖ ವ್ಯಕ್ತಿತ್ವವನ್ನು ಪರಿಚಯವಾಗಲು  ಸಾಧ್ಯವಾಯಿತು. 
ಮಹಾದೇವ ದೇಸಾಯಿ ಕೂಡ ಗಾಂಧೀಜಿ ಹುಟ್ಟಿ ಬೆಳೆದ ನಾಡಾದ ಗುಜರಾತಿನವರು. 1892 ಜನವರಿ ಒಂದರಂದು ಸೂರತ್ ಬಳಿಯ ಸರಸ್ ಎಂಬ ಹಳ್ಳಿಯಲ್ಲಿ ಓರ್ವ ಶಾಲಾ ಶಿಕ್ಷಕನ ಮಗನಾಗಿ ಜನಿಸಿದರು. ಇವರ ತಂದೆ ಹರಿಬಾಯಿಯವರು ಗುಜರಾತಿ ಸಾಹಿತ್ಯದಲ್ಲಿ ಹಾಗೂ ರಾಮಾಯಣ, ಮಹಾಭಾರತ, ಭಗವದ್ಗೀತೆ ಮುಂತಾದ ಪುರಾಣ ಕೃತಿಗಳಲ್ಲಿ ಪಾಂಡಿತ್ಯ ಗಳಿಸಿದವರು. ತಾಯಿ ಜಮುನಾಬೆಹನ್ ಹಳ್ಳಿಗಾಡಿನ ಹೆಣ್ಣು ಮಗಳಾಗಿದ್ದರೂ ಸಹ ಜಾನಪದ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು, ತಮ್ಮ ಪುತ್ರ ಮಹಾದೇವದೇಸಾಯಿಗೆ ಸರಳತೆ ಬದುಕನ್ನು ಧಾರೆಯೆರೆದವರು.   ಆದರೆ, ಮಹಾದೇವದೇಸಾಯಿ ತನ್ನ ಏಳನೆಯ ವಯಸ್ಸಿನಲ್ಲಿ ಹೆತ್ತ ತಾಯಿಯನ್ನು ಕಳೆದು ಕೊಂಡು, ತಂದೆಯ ಆಶ್ರಯದಲ್ಲಿ ಬೆಳೆಯಬೇಕಾಯಿತು. ಗಾಂಧೀಜಿಯವರಂತೆ  ಅವರೂ ಸಹ ತನ್ನ ಹದಿಮೂರನಯ ವಯಸ್ಸಿಗೆ, ಹನ್ನೆರೆಡು ವಯಸ್ಸಿನ ದುರ್ಗಾದೇವಿ ಎಂಬುವರನ್ನು ಬಾಲ್ಯವಿವಾಹವಾದವರು.
ತನ್ನ ಹದಿನಾಲ್ಕನೆಯ ವಯಸ್ಸಿನಲ್ಲಿ ಸೂರತ್  ಹೈಸ್ಕೂಲ್ ನಲ್ಲಿ ಓದುತ್ತಿದ್ದಾಗ, ಮೆಟ್ರಿಕ್ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. 1907 ರಲ್ಲಿ ಮುಂಬೈ ನಗರದ ಪ್ರತಿಷ್ಠಿತ ಎಲ್ಪಿನ್ ಸ್ಟೋನ್ ಕಾಲೇಜಿನಲ್ಲಿ ಇವರಿಗೆ ಸೀಟು ಲಭ್ಯವಾಯಿತು. ಆದರೆ,  ಶಿಕ್ಷಕರಾಗಿ ಕೇವಲ ಹದಿನಾಲ್ಕು ರೂಪಾಯಿ ಮಾಸಿಕ ವೇತನ ಪಡೆಯುತ್ತಿದ್ದ ಹರಿಬಾಯ್ ದೇಸಾಯಿಯವರಿಗೆ ಮುಂಬೈ ನಗರದಲ್ಲಿ ತಮ್ಮ ಮಗನಿಗೆ ಶಿಕ್ಷಣ ಕೊಡಿಸುವುದು ಕಷ್ಟವಾಗಿತ್ತು.  ಈ ಕಾರಣಕ್ಕಾಗಿ ಉಚಿತ ವಸತಿ ಮತ್ತು ಊಟ ನೀಡುತ್ತಿದ್ದ ಗೋಕುಲ್ ದಾಸ್ ತೇಜ್ ಪಾಲ್ ಬೋರ್ಡಿಂಗ್ ಹೌಸ್ ಸಂಸ್ಥೆಗೆ ಮಹದೇವಾಯಿ ಅರ್ಜಿ ಹಾಕಿದಾಗ, ಅವರಿಗೆ ಅಲ್ಲಿ ಅವಕಾಶ ಲಭ್ಯವಾಯಿತು. ಇದರ ಜೊತೆಗೆ ಕಾಲೇಜಿನಲ್ಲಿ  ಮಹಾದೇವ ದೇಸಾಯಿಯವರ ಸಹಪಾಠಿಯಾಗಿದ್ದ ವೈಕುಂಠ್ ಲಲ್ಲೂಬಾಯಿ ಮೆಹತಾ ಎಂಬುವರು ತಮಗೆ ದೊರೆತಿದ್ದ ಸ್ಕಾಲರ್ ಶಿಪ್ ಅನ್ನು ನಿರಾಕರಿಸಿ, ಅದು ಮಹಾದೇವ ದೇಸಾಯಿಯವರಿಗೆ ಲಭ್ಯವಾಗುವಂತೆ ಮಾಡಿದರು. ಹೀಗೆ ಬಡತನದ ನಡುವೆ  ಪ್ರತಿಭೆ ಮತ್ತು ಗೆಳೆಯರ ಸಹಕಾರದಿಂದ ಮಹಾದೇವ ದೇಸಾಯಿಯವರು ಶಿಕ್ಷಣ ಪಡೆಯುತ್ತಾ  ಮಿತ ವ್ಯಯ ಬದುಕಿಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು.

ಪದವಿ ಪಡೆದ ನಂತರ ಅವರಿಗೆ ಎಂ.ಎ. ಮಾಡುವ ಆಸೆಯಿತ್ತು. ಆದರೆ,  ಆ ವರ್ಷ ಇವರಿಗೆ ಇಷ್ಟವಾದ ವಿಷಯದಲ್ಲಿ ಸೀಟು ಧಕ್ಕಲಿಲ್ಲ. ಹಾಗಾಗಿ ತಂದೆಯವರಿಗೆ ಆರ್ಥಿಕವಾಗಿ ಹೊರೆಯಾಗಬಾರದು ಎಂಬ ದೃಷ್ಟಿಕೋನದಿಂದ ಮುಂಬೈ ನಗರದಿಂದ ಅಹಮದಾಬಾದ್ ಗೆ ತೆರಳಿ ತಂದೆಯ ಜೊತೆ ವಾಸಿಸುತ್ತಾ, ಕಾನೂನು ಪದವಿ ಶಿಕ್ಷಣಕ್ಕೆ ಸೇರ್ಪಡೆಯಾದರು. ಜೊತೆಗೆ ಬಿಡುವಿನ ವೇಳೆಯಲ್ಲಿ ಅಹಮದಾಬಾದ್ ನಗರದಲ್ಲಿದ್ದ ಗುಜರಾತ್ ಫೋರ್ಬಸ್ ಸೊಸೈಟಿಯಲ್ಲಿ ಅವರಿಗೆ ಅನುವಾದಕರಾಗಿ ಕೆಲಸ ಸಿಕ್ಕಿತು. ಇಂಗ್ಲೀಷ್ ಭಾಷೆಯ ಲಾರ್ಡ್ ಮಾರ್ಲೆಯವರ “ On Compromise”  ಎಂಬ ಕೃತಿಯನ್ನು  ಗುಜರಾತಿ ಭಾಷೆಗೆ ಅನುವಾದ ಮಾಡಿ ಆ ಕಾಲದ ಶ್ರೇಷ್ಠ ಅನುವಾದಕ್ಕಾಗಿ ನೀಡಲಾಗುತ್ತಿದ್ದ ಒಂದು ಸಾವಿರ ರೂಪಾಯಿ ಬಹುಮಾನ ಪಡೆದರು. 1913 ರ ವೇಳೆಗೆ ಅವರು ಕಾನೂನು ಪದವಿ ಪಡೆಯುವ ವೇಳೆಗೆ ಅವರ ತಂದೆ ಹರಿಬಾಯಿ ದೇಸಾಯಿ ಮುಖ್ಯ ಶಿಕ್ಷಕರಾಗಿ ಭಡ್ತಿ ಪಡೆದು ನಿವೃತ್ತರಾದರು. ಪಿ.ಯು.ಸಿ. ಪರೀಕ್ಷೆಯಲ್ಲಿ ತನ್ನ ಸಹಪಾಠಿಯಾಗಿದ್ದ ವೈಕುಂಠ್ ಲಲ್ಲೂವಾಯ್ ಮೆಹತಾ ಅವರ ಶಿಫಾರಸ್ಸಿನ ಮೇರೆಗೆ ಮಹಾದೇವ ದೇಸಾಯಿ “ ಸೆಂಟ್ರಿಲ್ ಕೊ ಆಪರೇಟಿವ್ ಬ್ಯಾಂಕ್ ಆಫ್ ಬಾಂಬೆ’ ಎಂಬ ಬ್ಯಾಂಕಿನಲ್ಲಿ ಲೆಕ್ಕ ತಪಾಸಣಾಧಿಕಾರಿಯಾಗಿ ನೇಮಕಗೊಂಡರು. ಆದರೆ, ಅವರು ಈ ಹುದ್ದೆಯಲ್ಲಿ ಕೇವಲ ಎರಡು ವರ್ಷ ಮಾತ್ರ ಅಂದರೆ, 1913 ರಿಂದ 1915 ರವರೆಗೆ ಸೇವೆ ಸಲ್ಲಿಸಲು ಸಾಧ್ಯವಾಯಿತು. 1915 ರ ಲ್ಲಿ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಹಿಂತಿರುಗಿದ ಮೇಲೆ ಅವರು ಅಹಮದಾಬಾದ್ ನಗರದ ಸಬರಮತಿ ನದಿಯ ದಂಡೆಯ ಮೇಲೆ ಸ್ಥಾಪಿಸಿದ ಆಶ್ರಮಕ್ಕೆ ಸೇರುವುದರ ಮೂಲಕ ಭಾರತ ಸ್ವಾತಂತ್ರ್ಯ ಚಳುವಳಿಗೆ ತಮ್ಮನ್ನು ಅರ್ಪಿಸಿಕೊಂಡು, ಗಾಂಧೀಜಿಯವರ ಆತ್ಮದಂತೆ ಮತ್ತು ಮಾನಸ ಪುತ್ರನಂತೆ ಬದುಕಿದರು.
1915 ರ ಮೇ ತಿಂಗಳಿನಲ್ಲಿ ಅಹಮದಾಬಾದ್ ನಗರಕ್ಕೆ ಬಂದ ಮಹಾತ್ಮ ಗಾಂಧೀಜಿ ಕೊಚರ್ಬ್ ಎಂಬ ಪ್ರದೇಶದಲ್ಲಿ ಹಳೆಯದಾದ ಬಂಗಲೆಯೊಂದನ್ನು ಬಾಡಿಗೆ ಪಡೆದುಕೊಂಡು, ಸಬರ ಮತಿ ಆಶ್ರಮ ಸ್ಥಾಪಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಈ ಸಂಬಂಧ ಆಶ್ರಮದ ಕಾರ್ಯ ಚಟುವಟಿಕೆಗಳ ವೈಖರಿ ಮತ್ತು ತಮ್ಮ ಗುರಿ ಹಾಗೂ ಕನಸುಗಳನ್ನು ವಿವರಿಸಿದ ಸಾರ್ವಜನಿಕವಾಗಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಅದಕ್ಕೆ ಸಲಹೆ ಸೂಚನೆ ನೀಡಬೇಕೆಂದು ದೇಶದ ನಾಗರೀಕರಲ್ಲಿ ವಿನಂತಿಸಿಕೊಂಡಿದ್ದರು. ಮಹಾದೇವದೇಸಾಯಿ ಹಾಗೂ ಅವರ ಗೆಳೆಯ ನರಹರಿ ಪಾರಿಕ್ ಇಬ್ಬರೂ ಸೇರಿ ಗಾಂಧೀಜಿಯವರಿಗೆ ಪತ್ರ ಬರೆದಿದ್ದರು. ಆದರೆ ಅವರಿಗೆ ಗಾಂಧಿಯವರಿಂದ ಯಾವ ಪ್ರತಿಕ್ರಿಯೆ ದೊರಕಲಿಲ್ಲ. ಈ ಘಟನೆ ಸಂಭವಿಸಿದ ಸಮಾರು ಎರಡು ತಿಂಗಳುಗಳ ನಂತರ  ಅಹಮದಾಬಾದ್ ನಗರದ ಪ್ರೇಮಾ ಬಾಯಿ ಸಭಾಂಗಣದಲ್ಲಿ ಗಾಂಧೀಜಿಯವರ ಸಾರ್ವಜನಿಕ ಸಭೆಯೊಂದನ್ನು ಏರ್ಪಡಿಸಲಾಗಿತ್ತು. ಗಾಂಧಿಜಿಯನ್ನು ನೊಡುವ ಹಾಗೂ ಅವರ ಭಾಷಣ ಕೇಳುವ ಉದ್ದೇಶದಿಂದ ಸಭೆಗೆ ಇಬ್ಬರೂ ಗೆಳೆಯರು, ಸಭೆ ಮುಗಿದ ನಂತರ ಗಾಂಧಿಜಿಯವರನ್ನು ಬೇಟಿ ಮಾಡಿ ತಮ್ಮನ್ನು ಪರಿಚಯಿಸಿಕೊಂಡರು. “ ಓಹ್ ನನಗೆ  ಜಂಟಿಯಾಗಿ ಪತ್ರ ಬರೆದಿದ್ದವರು ನೀವೆ ತಾನೆ?’ ಎಂದು ಆತ್ಮೀಯತೆಯಿಂದ ಪರಿಚಯಿಸಿಕೊಂಡ ಗಾಂಧಿಯವರು  ಮಹಾದೇವ ದೇಸಾಯಿ ಮತ್ತು ನರಹರಿ ಪಾರಿಕ್ ರವರನ್ನು ಆಶ್ರಮಕ್ಕೆ ಕರೆದುಕೊಂಡು ಹೋಗಿ, ಅವರನ್ನು ತಮ್ಮ ಮುಂದೆ ಕೂರಿಸಿಕೊಂಡು ನಿರಂತರ ಒಂದೂವರೆ ತಾಸು ತಮ್ಮ ಭವಿಷ್ಯ ಭಾರತದ ಕನಸನ್ನು ಅವರೆದುರು ಬಿಚ್ಚಿಟ್ಟಿಕೊಂಡರು. ಗಾಂಧೀಜಿಯವರ ಸ್ನೇಹಪರತೆ, ವಿಶ್ವಾಸ, ಕಿರಿಯರು ಎಂಬ ಬೇಧ ಭಾವವಿಲ್ಲದ ಅವರ ನಡೆ ನುಡಿ ಇವುಗಳಿಂದ ಪ್ರಭಾವಿತ ಇಬ್ಬರೂ ಗೆಳೆಯರು ಮೌನಕ್ಕೆ ಶರಣಾಗಿ ಗಾಂಧೀಜಿಯವರ ಆಶ್ರಮದಿಂದ ಹೊರಬಂದು ರಸ್ತೆಯಲ್ಲಿ ಹೆಜ್ಜೆ ಹಾಕತೊಡಗಿದರು. ಸಬರಮತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಎಲ್ಲಿಸ್ ಸೇತುವೆ ಬಳಿ ಬಂದ ತಕ್ಷಣ ಮೌನ ಮುರಿದ ಮಹಾದೇವ ಸೇಸಾಯಿಯವರು ಗೆಳೆಯನತ್ತ ತಿರುಗಿ, “ ನರಹರಿ ನಾನು ಮತ್ತೇ ಹೋಗಿ ಆ ಪುಣ್ಯಾತ್ಮನ ಪದ ತಲದಲ್ಲಿ ಕುಳಿತು ಮಾತು ಕೇಳಬೇಕೆನಿಸುತ್ತಿದೆ” ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನರಹರಿ ಪಾರಿಕ್ “ ನಾವಿಬ್ಬರೂ ಗಾಂಧಿಯ ಶಿಷ್ಯರಾದರೆ, ಈ ಜಗತ್ತಿನಲ್ಲಿ ನಮಗಿಂತ ಪುಣ್ಯವಂತರು ಬೇರೆ ಯಾರೂ ಇಲ್ಲ” ಎಂದು ಹೇಳುವುದರ ಮೂಲಕ ಗಾಂಧೀಜಿಯವರ ಮೋಡಿಗೆ ಒಳಗಾಗಿದ್ದರು.



ನಂತರ ದಿನಗಳಲ್ಲಿ ಗಾಮಧೀಜಿಯವರಿಗೆ ತೀರಾ ಆತ್ಮೀಯರಾಗಿದ್ದ ಮೋಹನ್ ಲಾಲ್ ಪಾಂಡ್ಯ ಮತ್ತು ದಯಾಳ್ ಜಿ ಬಾಯ್ ರವರ ಸಲಹೆ ಮತ್ತು ಶಿಫಾರಸ್ಸಿನ ಮೇರೆಗೆ ನರಹರಿ ಪಾರಿಕ್ 1917 ರಲ್ಲಿ ಸಬರ ಮತಿ ಆಶ್ರಮ ಸೇರಿಕೊಂಡರು. ಅವರು ಅಲ್ಲಿಗೆ ಹೋಗುವ ವೇಳೆಗಾಗಲೇ, ಕಾಕಾ ಕೇಲ್ಕರ್ ಆಶ್ರಮ ನಿವಾಸಿಯಾಗಿದ್ದರು. ಮಹಾದೇವ ದೇಸಾಯಿ ತಮ್ಮ ಪತ್ನಿ ಹಾಗೂ ವಯಸ್ಸಾದ ತಂದೆಯವರನ್ನು ತ್ಯಜೆಸಿ ಆಶ್ರಮಕ್ಕೆ ಸೇರಲಾಗದೆ, ಪ್ರತಿ ದಿನ ಆಶ್ರಮಕ್ಕೆ ಬೇಟಿ ನೀಡಿ ಗಾಂಧೀಜಿಯವರ ಪತ್ರ ವ್ಯವಹಾರಗಳಲ್ಲಿ ಸಹಕರಿಸಿ ಬರುತ್ತಿದ್ದರು. ಒಂದು ದಿನ ಗಾಂಧೀಜಿಯವರು ಮಹಾದೇವ ದೇಸಾಯಿಯವರನ್ನು ಏಕಾಂತದಲ್ಲಿ ಕೂರಿಸಿಕೊಂಡು, “ ನಾನು ಕಳೆದ ಎರಡು ವರ್ಷದಿಂದ ಆಶ್ರಮದ ಚಟುವಟಿಕೆಗೆ ಪ್ರಾಮಾಣಿಕ ಮತ್ತು ಪ್ರತಿಭಾವಂತ ಯುವಕನನ್ನು ಹುಡುಕುತ್ತಿದ್ದೆ, ಆ ಎಲ್ಲಾ ಗುಣಗಳು ನಿನ್ನಲ್ಲಿವೆ. ನೀನು ಪ್ರತಿ ದಿನ ಆಶ್ರಮಕ್ಕೆ ಬಂದು ಹೋಗುವ ಬದಲು ಏಕೆ ಇಲ್ಲಿಯೆ ವಾಸಿಸಬಾರದು? “ ಎಂದು ಕೇಳಿದಾಗ ಮಹಾತ್ಮನಿಗೆ ಇಲ್ಲ ಎನ್ನಲಾಗದೆ, ಆ ಕ್ಷಣದಲ್ಲಿ ತಮ್ಮ ಬದುಕನ್ನು  ಗಾಂಧೀಜಿಗಾಗಿ ಅರ್ಪಿಸಿಕೊಳ್ಳಲು  ಮಹಾದೇವ ದೇಸಾಯಿ ನಿರ್ಧರಿಸಿದರು. ಅಂತಿಮವಾಗಿ 1917 ರ ನವಂಬರ್ ಮೂರರಂದು ಮಹಾದೇವ ದೇಸಾಯಿ ತಮ್ಮ ಪತ್ನಿ ದುರ್ಗಾ ಬೆಹನ್ ಜೊತೆ  ಗುಜರಾತಿನ ಗೋದ್ರಾ ಪಟ್ಟಣದಲ್ಲಿ ನಡೆಯುತ್ತಿದ್ದ ಗಾಂಧೀಜಿಯವರ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು, ತಾವು ಆಶ್ರಮ ವಾಸಿಗಳಾಗಲು ನಿರ್ಧರಿಸಿರುವುದಾಗಿ ಪ್ರಕಟಿಸಿದರು. ಗಾಂಧೀಜಿಯವರು ಮಹಾದೇವದೇಸಾಯಿ ದಂಪತಿಗಳನ್ನು ತಮ್ಮ ಜೊತೆ ಬಿಹಾರದ ಚಂಪಾರಣ್ಯದ ಪ್ರವಾಸಕ್ಕೆ ಜೊತೆಯಲ್ಲಿ ಕರೆದೊಯ್ದರು.  ಪ್ರವಾಸದಿಂದ ಹಿಂತಿರುಗಿದ ಕೂಡಲೇ ತಮ್ಮ ತಂದೆಯವರನ್ನು ಬೇಟಿ ಮಾಡಿ, ಗಾಂಧೀಜಿಯವರ ಅನುಯಾಯಿಯಾಗುವ ತಮ್ಮ ನಿರ್ಧಾರವನ್ನು ಪ್ರಕಟಿಸಿ ಅವರ ಆರ್ಶೀವಾದವನ್ನು ಪಡೆದರು. ನವಂಬರ್ 13  1917 ರಿಂದ ಅವರು ತಮ್ಮ ದೈನಂದಿನ ಚಟುವಟಿಕೆಗಳ ದಿನಚರಿ ಬರೆಯಲು ಆರಂಭಿಸಿದರು. ಈ ಕ್ರಿಯೆ 1942 ಆಗಸ್ಟ್ 14 ರವರೆಗೆ ಅಂದರೆ, ಅವರು ಗಾಂಧೀಜಿ ಜೊತೆ ಪುಣೆಯ ಆಗಖಾನ್ ಅರಮನೆಯಲ್ಲಿ ಬಂಧನದಲ್ಲಿ ಇದ್ದ ಸಂದರ್ಭದಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗುವವರೆಗೂ ಮುಂದುವರಿದಿತ್ತು.
1918 ರಲ್ಲಿ ಅಹಮದಾಬಾದ್ ನಗರದಲ್ಲಿ ನಡೆದ ಬಟ್ಟೆ ಮಿಲ್ಲುಗಳ ಕಾರ್ಮಿಕರ ಚಳುವಳಿಯಲ್ಲಿ ಗಾಂಧೀಜಿ ಜೊತೆ ಪಾಲ್ಗೊಂಡಿದ್ದರು. 1919 ರಲ್ಲಿ ಗಾಂಧಿಯವರು ಪಂಜಾಂಬ್ ಪ್ರಾಂತ್ಯದಲ್ಲಿ ಪ್ರತಿಬಂಧಕ ಆಜ್ಞೆಯನ್ನು ಧಿಕ್ಕರಿಸಿದ ಫಲವಾಗಿ ಪ್ರಥಮ ಬಾರಿಗೆ ಬಂಧನಕ್ಕೆ ಒಳಗಾದಾಗ ಇಡೀ ಹೋರಾಟದ ಹೊಣೆಯನ್ನು ಮಹಾದೇವದೇಸಾಯಿ ಹೆಗಲಿಗೆ ವರ್ಗಾಯಿಸಿದ್ದರು. ರಾಮನ ಭಕ್ತ ಹನುಮಂತನ ಹಾಗೆ ಭಕ್ತಿ ಮತ್ತು ಗೌರವದೊಂದಿಗೆ ಈ ಹೊಣೆಯನ್ನು ಅವರು ಸಮರ್ಥವಾಗಿ ನಿಭಾಯಿಸಿದರು. ಈ ಸಂದರ್ಭದಲ್ಲಿ ಅವರಿಗೆ ಚಿತ್ತರಂಜನ್ ದಾಸ್, ರವೀಂದ್ರ ನಾಥ್ ಟ್ಯಾಗೂರ್ ಹಾಗೂ ಮೋತಿಲಾಲ್ ನೆಹರೂ ರವರ ಸಂಪರ್ಕವೇರ್ಪಟ್ಟಿತು.
1921 ರಲ್ಲಿ ಮೋತಿಲಾಲ್ ನೆಹರೂ ರವರ ಮನವಿಯ ಮೇರೆಗೆ ಮಹಾದೇವದೇಸಾಯಿರವರನ್ನು ಗಾಂಧೀಜಿಯವರು ಉತ್ತರ ಪ್ರದೇಶದ ಅಲಹಾಬಾದ್ ನಗರಕ್ಕೆ ಕಳಿಸಿಕೊಟ್ಟರು. ಅಲ್ಲಿ ಮೋತಿಲಾಲ್ ನೆಹರೂ ನಡೆಸುತ್ತಿದ್ದ ಇಂಡಿಪೆಂಡೆಂಟ್ ಎಂಬ ದಿನಪತ್ರಿಕೆಯ ಜವಬ್ದಾರಿಯನ್ನು ಅವರಿಗೆ ವಹಿಸಲಾಯಿತು. ಬ್ರಿಟೀಷ್ ಸರ್ಕಾರವು ಮೋತಿಲಾಲ್ ನೆಹರೂ, ಅವರ ಪುತ್ರ ಜವಹರಲಾಲ್ ನೆಹರೂ ಹಾಗೂ ಪತ್ರಿಕೆಯ ಸಂಪಾದಕ ಜಾರ್ಜ್ ಜೋಸೆಫ್ ರವರನ್ನು ಬಂಧಿಸಿ, ಸೆರೆಮನೆಗೆ ಹಾಕಿತ್ತು.  ಅದೇ ವೇಳೆಗೆ ಅಲಹಾಬಾದ್ ನಲ್ಲಿ ಕಾಂಗ್ರೇಸ್ ಅಧಿವೇಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಾಗಾಗಿ ಪತ್ರಿಕೆಯನ್ನು ಮುಂದುವರೆಸುವುದು ಮೋತಿಲಾಲ್ ನೆಹರೂರವರ ಆಕಾಂಕ್ಷೆಯಾಗಿತ್ತು. ಮಹಾದೇವ ದೇಸಾಯಿರವರು ಪತ್ರಿಕೆಯನ್ನು ಮುಂದುವರಿಸುತ್ತಿದ್ದಂತೆ, ಪತ್ರಿಕೆಯ ಪ್ರಕಟನೆಗೆ ನಿಗದಿ ಪಡಿಸಲಾಗಿದ್ದ ಠೇವಣಿ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಿಲ್ಲ ಎಂಬ ನೆಪವೊಡ್ಡಿ ಬ್ರಿಟೀಷ್ ಸರ್ಕಾರವು ಸಂಪಾದಕರಾಗಿದ್ದ ಮಹಾದೇವ ದೇಸಾಯಿರವನ್ನೂ ಸಹ ಬಂಧಿಸಿ, ಸೆರೆಮನೆಗೆ ನೂಕಿತು. ಈ ಸಂದರ್ಭದಲ್ಲಿ ಗಾಂಧಿಯವರ  ಕಿರಿಯ ಪುತ್ರ ದೇವದಾಸ ಗಾಂಧಿ ಪತ್ರಿಕೆಯನ್ನು ಮುನ್ನಡೆಸಿದರು. ಮಹಾದೇವದೇಸಾಯಿಯವರ ಪತ್ನಿ ದುರ್ಗಾಬೆಹನ್ ದೇವದಾಸ್ ಗಾಂಧಿಗೆ ಆಸರೆಯಾಗಿ ನಿಂತರು.
ಅಂತಿಮವಾಗಿ ಮಹಾದೇವ ದೇಸಾಯಿಯವರನ್ನು ಬ್ರಿಟೀಷ್ ಸರ್ಕಾರ 1923 ರಲ್ಲಿ ಉತ್ತರ ಪ್ರದೇಶದ ಲಕ್ನೊ ಸೆರೆಮನೆಯಿಂದ ಬಿಡುಗಡೆ ಮಾಡಿತು. 1924 ರಲ್ಲಿ ಅವರ ತಂದೆ ನಿಧನರಾದರು. ವಾಪಸ್ ಅಹಮದಾಬಾದ್ ನಗರಕ್ಕೆ ಹಿಂತಿರುಗಿದ ಮಹಾದೇವ ದೇಸಾಯಿಯವರು  ಆಶ್ರಮದಿಂದ ಹೊರಡುತ್ತಿದ್ದ ನವಜೀವನ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸತೊಡಗಿದರು. ಇದೇ ವೇಳೆಗೆ ಗಾಂಧಿಯವರು ಗುಜರಾತಿ ಭಾಷೆಯಲ್ಲಿ ಬರೆದಿದ್ದ “ ಸತ್ಯದೊಂದಿಗೆ ನನ್ನ ಪ್ರಯೋಗ” ಆತ್ಮ ಚರಿತ್ರೆಯನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸಿ, ಅದನ್ನು ಯಂಗ್ ಇಂಡಿಯ ಪತ್ರಿಕೆಯಲ್ಲಿ ಧಾರವಾಹಿ ರೂಪದಲ್ಲಿ ಪ್ರಕಟಿಸಿದರು. 1926 ರ ವೇಳೆಗೆ ಮಹಾದೇವದೇಸಾಯಿರವರನ್ನು ಆಶ್ರಮದ ಕಾರ್ಯಕರ್ತರು “ ಸತ್ಯಾಗ್ರಹ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು. 1928 ರಲ್ಲಿ ಬರ್ಡೋಲಿ ಸತ್ಯಾಗ್ರಹದಲ್ಲಿ ಸರ್ದಾರ್ ವಲ್ಲಬಾಯ್ ಜೊತೆಗೋಡಿ ಪಾಲ್ಗೊಂಡರು. 1929 ರಲ್ಲಿ ಗಾಂಧೀಜಿ ಜೊತೆಯಲ್ಲಿ ಬರ್ಮಾ ಪ್ರವಾಸ ಕೈಗೊಂಡಿದ್ದ ಅವರು, 1930 ರ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಸೆರೆಮನೆ ವಾಸ ಅನುಭವಿಸಿದರು. ಬ್ರಿಟನ್ ಸರ್ಕಾರದ ಆಹ್ವಾನದ ಮೇರೆಗೆ ಮೊದಲ ದುಂಡು ಮೇಜಿನ ಪರಷಿತ್ತಿನ ಸಭೆಗೆ ಗಾಂಧೀಜಿ ಲಂಡನ್ ನಗರಕ್ಕೆ ತೆರಳಿದಾಗ, ಸರೋಜಿನಿ ನಾಯ್ಡು ಮತ್ತು ಮಹಾದೇವದೇಸಾಯಿ ಇಬ್ಬರೂ ಗಾಂಧೀಜಿಯ ಆಪ್ತ ಸಹಾಯಕರಾಗಿ ಅವರ ಜೊತೆ ತೆರಳಿದ್ದರು.( ತಂಡದಲ್ಲಿ ಗಾಂಧಿಯವರ ಪುತ್ರ ದೇವದಾಸ್ ಗಾಂಧಿ ಮತ್ತು ಆಪ್ತ ಸಹಾಯಕ ಪ್ಯಾರಲಾಲ್ ಕೂಡ ಇದ್ದರು) 

ಸತ್ಯಾಗ್ರಹದ ಅಂಗವಾಗಿ 1932 ರಲ್ಲಿ ಸರ್ದಾರ್ ವಲ್ಲಬಾಯ್ ಪಟೇಲ್ ಹಾಗೂ ಗಾಂಧಿಯವರೊಂದಿಗೆ ಬಂಧನಕ್ಕೆ ಒಳಗಾಗಿ 1933 ರಲ್ಲಿ ಬಿಡುಗಡೆಯಾಗಿದ್ದ ಮಹಾದೇವ ದೇಸಾಯಿ ಪುನಃ ಬ್ರಿಟೀಷ್ ಸರ್ಕಾರದಿಂದ ಬಂಧಿಸಲ್ಪಟ್ಟು ಬೆಳಗಾವಿಯ ಹಿಂಡಲಗ ಜೈಲು ಸೇರಿದರು. ಬೆಳಗಾವಿಯ ಸೆರೆಮನೆಯಲ್ಲಿ ಅವರು  Gita According to Gandhi  (ಗಾಂಧಿ ದೃಷ್ಟಿಯಲ್ಲಿ ಭಗವದ್ಗೀತೆ”) ಎಂಬ ಕೃತಿಯನ್ನು ರಚಿಸಿದರು. ಗಾಂಧೀಜಿಯವರ ಆತ್ಮದಂತೆ ಬದುಕಿದ ಮಹಾದೇವ ದೇಸಾಯಿಯವರು ಸದಾ ಗಾಂಧೀಜಿಯವರನ್ನು ಅವರ ನೆರಳಿನಂತೆ ಹಿಂಬಾಲಿಸುತ್ತಿದ್ದರು. 1939 ರಲ್ಲಿ ಅಂದಿನ ಮೈಸೂರು ಹಾಗೂ ಇಂದಿನ ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳುವಳಿಯನ್ನು ಹುಟ್ಟು ಹಾಕುವಲ್ಲಿ, ಹಾಗೂ 1941 ರಲ್ಲಿ ಬಂಗಾಳ ಮತ್ತು ಪಂಜಾಬ್ ರಾಜ್ಯಗಳಲ್ಲಿ ಬ್ರಿಟೀಷ್ ಸರ್ಕಾರ ಬಂಧಿಸಿದ್ದ ಕ್ರಾಂತಿಕಾರಿ ಯುವಕರನ್ನು ಬಿಡುಗಡೆಗೊಳಿಸುವಲ್ಲಿ ಮಹದೇವದೇಸಾಯಿ ಪ್ರಮುಖ ಪಾತ್ರ ವಹಿಸಿದ್ದರು.


                                                       ( ಆಗಖಾನ್ ಅರಮನೆ. ಚಿತ್ರಗಳು- ಜಗದೀಶ್ ಕೊಪ್ಪ)
1942 ರಲ್ಲಿ ಬ್ರಿಟೀಷರ ವಿರುದ್ಧ ಮಹಾತ್ಮ ಗಾಂಧೀಜಿಯವರು ಆರಂಭಿಸಿದ “ಭಾರತ ಬಿಟ್ಟು ತೊಲಗಿ” ಚಳುವಳಿಯಲ್ಲಿ ಪಾಲ್ಗೊಂಡು ಪೆಬ್ರವರಿ ತಿಂಗಳಿನಲ್ಲಿ ಮುಂಬೈ ನಗರದಲ್ಲಿ ಗಾಂಧೀಜಿಯವರ ಜೊತೆ ಬಂದನಕ್ಕೆ ಒಳಗಾದರು. 1942 ಪೆಬ್ರವರಿ 9 ರಂದು ಗಾಂಧೀಜಿ, ಕಸ್ತೂರಬಾ, ಮಹದೇವ ದೇಸಾಯಿ ಎಲ್ಲರನ್ನೂ ಮುಂಬೈನಿಂದ ಪೂನಾದ ಆಗಖಾನ್ ಅರಮನೆಗೆ ಸ್ಥಳಾಂತರಿಸಿದ ಬ್ರಿಟೀಷ್ ಸರ್ಕಾರವು ಗೃಹಬಂಧನದಲ್ಲಿರಿಸಿತು. ಅದೇ ವರ್ಷ (1942) ಆಗಸ್ಟ್ 15 ರಂದು ತಮ್ಮ ಐವತ್ತನೇಯ ವಯಸ್ಸಿನಲ್ಲಿ ಮಹದೇವ ದೇಸಾಯಿ ಆಗಖಾನ್ ಅರಮನೆಯ ಗೃಹ ಬಂಧನದಲ್ಲಿದ್ದಾಗ ಹೃದಯಾಪಘಾತಕ್ಕಿಡಾಗಿ ನಿಧನ ಹೊಂದಿದರು. ಮಹಾದೇವ ದೇಸಾಯಿ ಅವರ ಸಾವು ಗಾಂಧೀಜಿಯವರ ಮೇಲೆ ತೀವ್ರ ಪರಿಣಾಮ ಬೀರಿತು. ಅವರು  ದೇಸಾಯಿ ಸಾವಿನಿಂದ ಎಷ್ಟೊಂದು ಜರ್ಜಿತರಾಗಿದ್ದರೆಂದರೆ, ತಮ್ಮ ಪಕ್ಕದ ಕೊಠಡಿಯಲ್ಲಿ ನಿಧನರಾದ ಶಿಷ್ಯನ ಶವವನ್ನು ನೋಡಿ , ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟರು. ಗಾಂಧೀಜಿಯವರ ಕುರಿತು ಮಹಾದೇವ ದೇಸಾಯಿಯವರಿಗೆ ಎಂತಹ ಅಸೀಮ ನಿಷ್ಟೆ ಇತ್ತೆಂದರೆ, ಗಾಂಧೀಜಿಯವರ ಜೊತೆ ಬೆಳಗಿನ ಜಾವ ಮೂರು ಗಂಟೆ ಅವರೂ ಸಹ ಎದ್ದು ತಮ್ಮ ದಿನಚರಿ  ಆರಂಭಿಸುತ್ತಿದ್ದರು. ಆದರೆ, ಅವರಿಗೆ ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ಚಹಾ ಬೇಕಾಗಿತ್ತು. ತಮ್ಮ ೀ ಅಭ್ಯಾಸವನ್ನು ಗುರುವಿಗೆ ಗೊತ್ತಾಗದಂತೆ ಮುಂದುವರಿಸಿದ್ದರು. ಗಾಂಧೀಜಿಗೆ ಈ ವಿಷಯ ಗೊತ್ತಿದ್ದರೂ ಸಹ ಕಾಣದಂತೆ ಇದ್ದರು. ಒಂದು ದಿನ ತಡವಾಗಿ ಮಲಗಿದ ಕಾರಣ ದೇಸಾಯಿ ಬೆಳಿಗ್ಗೆ ಏಳುವುದು ತಡವಾಯಿತು. ಅಷ್ಟರಲ್ಲಿ ಗಾಂಧಿಯವರು ಶಿಷ್ಯನಿಗೆ ಪ್ರಿಯವಾದ ಚಹಾ ಮಾಡಿಕೊಂಡು ಬಂದು ಕಾಯುತ್ತಿದ್ದರು. ಇಂತಹ ಶಿಷ್ಯನ ಮೇಲಿನ ಪ್ರೀತಿಯಿಂದಾಗಿ ಗಾಂಧೀಜಿಯವರು ತಮ್ಮ  ಅಭಿಲಾಷೆಯಂತೆ ಮಹಾದೇವ ದೇಸಾಯಿ ಯವರ ಅಂತ್ಯ ಕ್ರಿಯೆಯನ್ನು ಅರಮನೆ ಆವರಣದಲ್ಲಿ ನೆರವೇರಿಸಿದರು.., ಗಾಂಧಿಜಿಯವರು ಮಹಾದೇವ ದೇಸಾಯಿರವರನ್ನು “ಆತ ನನ್ನ ಶಿಷ್ಯನಾಗಿರಲಿಲ್ಲ,  ನನಗೆ ಗುರುವಾಗಿದ್ದ  ” ಎಂದು ಬಣ್ಣಿಸಿದರು. ಅಲ್ಲದೆ, ಪ್ರತಿ ದಿನ ಬೆಳಿಗ್ಗೆ  ಸಮಾಧಿ ಬಳಿಗೆ  ತೆರಳಿ ಪ್ರಾರ್ಥನೆ ಸಲ್ಲಿಸಿ ಬರುತ್ತಿದ್ದರು. 1944 ಪೆಬ್ರವರಿ 22 ರಂದು ತಮ್ಮ ಪತ್ನಿ ಕಸ್ತೂರಭಾ ಗಾಂಧಿ ಮೃತಪಟ್ಟಾಗ, ಅವರಿಗೂ ಸಹ  ತಮ್ಮ ಶಿಷ್ಯನ ಸಮಾಧಿ ಪಕ್ಕದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದರು. ಇಂದಿಗೂ ಸಹ ಪುಣೆಯ ಆಗಾಖಾನ್ ಅರಮನೆಯ ಹಿಂಭಾಗದಲ್ಲಿ ಮಹಾದೇವ ದೇಸಾಯಿ ಹಾಗೂ ಕಸ್ತೂರಭಾ ಸಮಾಧಿಗಳನ್ನು ಸಂರಕ್ಷಿಸಿ ಇಡಲಾಗಿದೆ.

                                ( ಮಹಾದೇವ ದೇಸಾಯಿ ಮತ್ತು ಕಸ್ತೂರ ಬಾ ಸಮಾಧಿಗಳು)

                                              (ಆಗಖಾನ್ ಅರಮನೆಯ ಪಾರ್ಶ್ವ ನೋಟ)
 ಇದೀಗ ಅರಮನೆಯು ಗಾಂಧಿ ಟ್ರಸ್ಟ್ ನ ಸುಪರ್ದಿಗೆ ಒಳ ಪಟ್ಟಿದ್ದು, ಗಾಂಧಿ ಮತ್ತು ಕಸ್ತೂರಭಾ ಗೃಹ ಬಂಧನದ ಸಮಯದಲ್ಲಿ ವಾಸಿಸುತ್ತಿದ್ದ ಕೊಠಡಿ ಹಾಗೂ ಅದರ ಪಕ್ಕದ ಕೊಠಡಿಯಲ್ಲಿ ಮಹಾದೇವ ದೇಸಾಯಿ ಬಳಸುತ್ತಿದ್ದ ಪೆನ್ನು, ಕಾಗದ, ಖಾದಿ ವಸ್ತ್ರ ಇವುಗಳನ್ನು ಯಥಾ ಸ್ಥಿತಿಯಲ್ಲಿ ಸಂರಕ್ಷಿಸಿ ಇಡಲಾಗಿದೆ. ಗಾಂಧೀಜಿಯವರ ನಿಧನಾನಂತರ  ಅವರ ಚಿತಾ ಭಸ್ಮವನ್ನು ಆಗಾಖಾನ್ ಅರಮನೆಗೆ ತಂದು    ಕಸ್ತೂರಬಾ ಮತ್ತು ದೇಸಾಯಿ ಸಮಾಧಿಯ ಬಳಿ ಸ್ಮಾರಕ ಮಾಡಿ ಇಡಲಾಗಿದೆ.